![]() |
ಡಾ.
ಅಶೋಕ್. ಕೆ. ಆರ್
ಹತ್ತದಿನೈದು ಸಾಲಿನಲ್ಲೇ ಮುಗಿದುಹೋಗುವ ಸಣ್ಣ ಸಣ್ಣ ಕಥೆಗಳು ಮನಸ್ಸನ್ನು ತಟ್ಟುವಷ್ಟು ದೊಡ್ಡ ಕತೆಗಳು ತಲುಪುವುದು ಕಷ್ಟ. ಹನಿಗಥೆಗಳ ಪ್ರಭಾವದ ಅರಿವಾಗಿದ್ದು ಸದತ್ ಹಸನ್ ಮಾಂಟೋ ಭಾರತ ವಿಭಜನೆಯ ಸಂದರ್ಭದಲ್ಲಿ ಬರೆದ ಕಥೆಗಳನ್ನು ಓದಿದಾಗ. ಕೆಲವೇ ಕೆಲವು ಸಾಲುಗಳಲ್ಲಿ ಜೀವನ ದರ್ಶನದ ಅನುಭವ ಮಾಡಿಸುವುದು ಕಷ್ಟವೇ ಸರಿ. ಆದರೂ ಓದಿ ಮುಗಿಸಿದ ಕೆಲವು ವರುಷಗಳ ನಂತರವೂ ನೆನಪಿನಲ್ಲುಳಿಯುವುದು ದೊಡ್ಡ ಕತೆಗಳೇ! ದೊಡ್ಡ ಕತೆಗಳು ಕಟ್ಟಿಕೊಡುವ ವ್ಯಕ್ತಿ – ಪ್ರದೇಶ – ವಿಷಯದ ವಿವರಗಳೇ ಆ ಕಥೆಗಳನ್ನು ಬಹುಕಾಲ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುತ್ತದೆ. ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಸುದ್ದಿ ಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿರುವ ಬಿ. ಎಂ. ಬಶೀರರ ಹನಿ ಹನಿ ಕತೆಗಳ ಸಂಕಲನ ‘ಅಂಗೈಯಲ್ಲೇ ಆಕಾಶ’ ಸಣ್ಣ ಕತೆಗಳ ಮಿತಿಗಳನ್ನೂ ದಾಟಿ ಬಹುದಿನಗಳವರೆಗೆ ಕಾಡುವುದು ಆ ಕತೆಗಳಲ್ಲಿನ ವಿಷಯ ವೈವಿಧ್ಯದಿಂದ; ಇಂದಿಗೂ ಮತ್ತು ಮುಂದಿಗೂ ಪ್ರಸ್ತುತವಾಗಿ ಉಳಿಯುವ ಸಂಗತಿಗಳಿಂದ.