ಸೆಪ್ಟೆಂ 9, 2015

ಶೈಕ್ಷಣಿಕ ಸಾಲಕ್ಕೆ ಸರಕಾರವೇ ಗ್ಯಾರಂಟಿ: ದೆಹಲಿ ಸರಕಾರದ ಯೋಜನೆ

ಉನ್ನತ ಶಿಕ್ಷಣವೀಗ ಖರ್ಚಿನ ಬಾಬತ್ತು. ಸರಕಾರೀ ಸಂಸ್ಥೆಗಳಲ್ಲಿರುವ ಶುಲ್ಕವನ್ನು ಭರಿಸುವುದೇ ಅನೇಕರಿಗೆ ಕಷ್ಟವಾಗಿರುವಾಗ ಖಾಸಗಿ ಸಂಸ್ಥೆಗಳಲ್ಲಿನ ಶುಲ್ಕವನ್ನು ಭರಿಸಿ ಓದುವುದು ದೂರದ ಮಾತೇ ಸರಿ. ಬ್ಯಾಂಕುಗಳೇನೋ 12ರಿಂದ 14% ಬಡ್ಡಿಗೆ ಸಾಲ ನೀಡುತ್ತವೆ. ಆದರೆ ಈ ಸಾಲ ಪಡೆಯಲು ವಿದ್ಯಾರ್ಥಿಯ ಪೋಷಕರ ಬಳಿ ಖಾತರಿಯಾಗಿಡಲು ಆಸ್ತಿ ಪಾಸ್ತಿ ಇರಬೇಕು. ಇಲ್ಲವಾದಲ್ಲಿ ಬ್ಯಾಂಕುಗಳು ಸಾಲ ನೀಡುವುದಿಲ್ಲ. ಎಷ್ಟು ಜನರ ಬಳಿ ಈ ರೀತಿ ಆಸ್ತಿ ಇರಲು ಸಾಧ್ಯ. ಆಸ್ತಿ ವಂಚಿತರು ಕೊನೆಗೆ ಉನ್ನತ ಶಿಕ್ಷಣದಿಂದಲೂ ವಂಚಿತರಾಗುವ ಸಾಧ್ಯತೆ ಅಧಿಕ. 

ಇಂತವರಿಗೆ ಸಹಾಯವಾಗಲೆಂಬ ಉದ್ದೇಶದಿಂದ ದೆಹಲಿ ಸರಕಾರ ಹೊಸತೊಂದು ಯೋಜನೆಯನ್ನು ಜಾರಿಗೆ ತಂದಿದೆ. ಪೋಷಕರ ಬಳಿ ಖಾತರಿಯಾಗಿಡಲು ಆಸ್ತಿ ಪಾಸ್ತಿ ಇರದಿದ್ದರೂ ಪರವಾಗಿಲ್ಲ, ವಿದ್ಯಾರ್ಥಿಯ ಸಾಲಕ್ಕೆ ಸರಕಾರವೇ ಗ್ಯಾರಂಟಿ ಕೊಡುತ್ತದೆ! ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಯನ್ನು ಈಡೇರಿಸಿರುವ ದೆಹಲಿಯ ಆಪ್ ಸರಕಾರ ಹತ್ತು ಲಕ್ಷದವರೆಗಿನ ಸಾಲಕ್ಕೆ ಬ್ಯಾಂಕಿಗೆ ಖಾತರಿಯಾಗುತ್ತಾರೆ. ಆರ್ಥಿಕವಾಗಿ ಹಿಂದುಳಿದು ದುಡ್ಡಿನ ಕೊರತೆಯ ಕಾರಣದಿಂದ ಉನ್ನತ ಶಿಕ್ಷಣಕ್ಕೆ ಸೇರಲಾಗದವರಿಗೆಲ್ಲರಿಗೂ ಈ ಯೋಜನೆಯಿಂದ ಪ್ರಯೋಜನವಾಗಲಿದೆ.

ಈ ಯೋಜನೆ ಸರಕಾರೀ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಓದುತ್ತಿರುವ/ಓದಲು ಬಯಸುವ ವಿದ್ಯಾರ್ಥಿಗಳೆಲ್ಲರಿಗೂ ಲಭ್ಯವಿದೆ. ಸರಕಾರವೇ ಹೇಳುವಂತೆ ಈ ಯೋಜನೆಯ ಯಶಸ್ಸು ಓದು ಮುಗಿಸಿ ಕೆಲಸಕ್ಕೆ ಸೇರುವ ವಿದ್ಯಾರ್ಥಿಗಳ ಮೇಲಿದೆ. ಕೆಲಸ ಸಿಕ್ಕ ಮೇಲೆ ಸಮಯಕ್ಕೆ ಸರಿಯಾಗಿ ಸಾಲ ತೀರಿಸಿದರಷ್ಟೇ ಈ ಯೋಜನೆ ಮುಂದಿನ ವಿದ್ಯಾರ್ಥಿಗಳಿಗೂ ಯಶಸ್ವಿಯಾಗಿ ಮುಂದುವರೆಯುತ್ತದೆ. ಇಲ್ಲವಾದರೆ ಆರ್ಥಿಕ ಹೊರೆಯ ನೆಪವೊಡ್ಡಿ ಮುಂದಿನ ಸರಕಾರಗಳು ಹಂತಹಂತವಾಗಿ ಯೋಜನೆಯನ್ನೇ ಸ್ಥಗಿತಗೊಳಿಸಿಬಿಡಬಹುದು. ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸರಕಾರವೇ ಉತ್ತಮವಾಗಿ ನಡೆಸುವುದು ಅತ್ಯುತ್ತಮ ವ್ಯವಸ್ಥೆ, ಖಾಸಗೀಕರಣವನ್ನು ಸದ್ಯಕ್ಕೆ ತಡೆಯುವ ಉಪಾಯ ಇಲ್ಲದ ಕಾರಣ ಖಾಸಗೀಕರಣದಿಂದ ಹೆಚ್ಚಳವಾದ ಶುಲ್ಕ ಬಡವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ತೊಂದರೆಯುಂಟುಮಾಡಬಾರದೆಂಬ ಉದ್ದೇಶದ ಈ ಯೋಜನೆ ದೆಹಲಿಯಲ್ಲಿ ಯಶಸ್ವಿಯಾಗಲಿ, ದೇಶದೆಲ್ಲೆಡೆ ಇಂತಹ ಯೋಜನೆಗಳು ಜಾರಿಯಾಗಲಿ.

ಮಂಗಳೂರಿನ ಮತಿಗೆಟ್ಟ 'ಯುವಕರು'


Ashok K R
ದಕ್ಷಿಣ ಕನ್ನಡದಲ್ಲಿ ಬಿಜೆಪಿಯದೇ ಪಾರುಪತ್ಯವಿತ್ತು. ಬಿಜೆಪಿ ಬೆಂಬಲಿತ ಸಂಘಪರಿವಾರದ ವಿವಿಧ ಶಾಖೆಗಳ ಆಟೋಟಾಪಗಳು, ಸಾಮಾನ್ಯ ಜನರಿಗೆ ವಿನಾಕಾರಣವಾಗಿ ಅವರು ನೀಡಿದ ತೊಂದರೆ, ಅದರ ಜೊತೆಜೊತೆಗೇ ಬೆಳೆದ ಮುಸ್ಲಿಂ ಮೂಲಭೂತವಾದಿಗಳ ಕಾಟವೆಲ್ಲವೂ ಸೇರಿ ಜನರನ್ನು ಜಿಗುಪ್ಸೆಗೆ ತಳ್ಳಿತ್ತು. ಆ ಜಿಗುಪ್ಸೆಯ ಫಲವೆಂಬಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಡೀ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು, ಸುಳ್ಯ ಕ್ಷೇತ್ರವೊಂದನ್ನು ಹೊರತುಪಡಿಸಿ. ಓ! ಕಾಂಗ್ರೆಸ್ ಬಂತು, ಅದರಲ್ಲೂ ಸಿದ್ಧರಾಮಯ್ಯನಂತಹ 'ಸಮಾಜವಾದಿ' 'ಅಹಿಂದ' ನಾಯಕ ಈಗ ಮುಖ್ಯಮಂತ್ರಿ. ಇನ್ನೇನು ಇಡೀ ದಕ್ಷಿಣ ಕನ್ನಡ ಶಾಂತಿಯ ಬೀಡಾಗಿಬಿಡುತ್ತದೆ ಎಂದುಕೊಂಡಿರಾದರೆ ಅದು ಖಂಡಿತ ತಪ್ಪು. ತಪ್ಪೆಂದು ನಿರೂಪಿಸಲು ಮತ್ತೆ ಮತ್ತೆ ಅನೈತಿಕ ಪೋಲೀಸ್ ಗಿರಿಯಂತಹ ಕಾರ್ಯಗಳು ನಡೆಯುತ್ತಲೇ ಇವೆ. 
ಮುಸ್ಲಿಮನೊಬ್ಬ ಪರಿಚಯದ ಹಿಂದೂ ಹುಡುಗಿಯೊಂದಿಗೆ ಹೋಗುವುದು, ಹಿಂದೂವೊಬ್ಬ ಪರಿಚಯದ ಮುಸ್ಲಿಂ ಹುಡುಗಿಯೊಟ್ಟಿಗೆ ಹೋಗುವುದು ಇಲ್ಲಿ ಧರ್ಮದ್ರೋಹದ ಅಪರಾಧ! ಇಂತವರ ವಿರುದ್ಧ ಮಾತನಾಡಿದರೆ ಅದು ದೇಶದ್ರೋಹಕ್ಕೆ ಸಮ! ನಿನ್ನೆ ದಿನ ಹಿಂದೂ ಯುವಕೊನೊಬ್ಬನನ್ನು ನಡುಬೀದಿಯಲ್ಲಿ ಹೊಡೆಯಲಾಗಿದೆ. ಕಾರಣ ಆತ ಮುಸ್ಲಿಂ ಹುಡುಗಿಯೊಟ್ಟಿಗೆ ಹೋಗುತ್ತಿದ್ದ. ಹೆಣ್ಣುಮಕ್ಕಳ 'ರಕ್ಷಣೆಯ' ನೆಪದಲ್ಲಿ ಮುಸ್ಲಿಂ ಮೂಲಭೂತವಾದಿಗಳು ಇಂತಹ ಕೃತ್ಯವೆಸಗಿದ್ದಾರೆ! ಸಹಪಾಠಿಗಳೂ ಮಾತನಾಡದಂತಹ ಸ್ಥಿತಿಗೆ ಮಂಗಳೂರು ತಲುಪಿರುವುದಾದರೂ ಯಾಕೆ?
ಮೇಲಿನ ಚಿತ್ರ ಗಮನಿಸಿ, ಆ ಹಿಂದೂ ಹುಡುಗನ ಎದುರಿಗೆ ನಿಂತು ಬಹುಶಃ 'ಸಂಸ್ಕೃತಿ'ಯ ಪಾಠ ಮಾಡುತ್ತಿರುವವರೆಲ್ಲರೂ ಯುವಕರು. ಇಂತಹ ಯುವಕರಿಗೆ ಕೋಮುನಂಜನ್ನು ತುಂಬುತ್ತಿರುವವರಾರು? ಆ ಕೋಮು ವಿಷವನ್ನು ತುಂಬುವ ವ್ಯಕ್ತಿಗಳು ದೊಡ್ಡ ದೊಡ್ಡ ಭಾಷಣ ಬಿಗಿದು ಬೆಚ್ಚಗೆ ಮನೆ ಸೇರುತ್ತಾರೆ. ವಿಷದ ನಂಜೇರಿದ ಈ ಯುವಕರು ಬೀದಿಯಲ್ಲಿ ಓಡಾಡುತ್ತಿದ್ದ ಗೆಳೆಯರಿಬ್ಬರನ್ನೂ ಹಿಡಿದು ಚಚ್ಚುತ್ತಾರೆ. ಕೊನೆಗೆ ಜೈಲು ಪಾಲಾಗುವ ಸಂದರ್ಭ ಬಂದರೆ ಅದು ಈ ಹುಡುಗರಿಗೇ ಹೊರತು ಭೀಕರ ಭಾಷಣ ಕುಟ್ಟುವವರಿಗಲ್ಲ.
ಅಂದಹಾಗೆ ಕಾಂಗ್ರೆಸ್ ಸರಕಾರ ಬಂದ ಮೇಲೂ ಇದು ಯಾಕೆ ನಡೆಯುತ್ತಿದೆ ಎಂದಿರಾ? ಬಿಜೆಪಿ ಮಂಗಳೂರಿನಲ್ಲಿ ಉಗ್ರ ಹಿಂದೂ ಮೂಲಭೂತವಾದ ನಡೆಸಿದರೆ ಕಾಂಗ್ರೆಸ್ ನಡೆಸುವುದು ಸೌಮ್ಯ ಹಿಂದೂ ಮೂಲಭೂತವಾದ.... ಹಿಂದೂ ಮೂಲಭೂತ ಅಸ್ತಿತ್ವದಲ್ಲಿರಬೇಕಾದರೆ ಮುಸ್ಲಿಂ ಮೂಲಭೂತವಿಲ್ಲದಿದ್ದರೆ 'ಇಸ್ಲಾಮಿಗೆ' ಅವಮಾನವೆಂದು ಈ ಯುವಕರು ತಿಳಿದಿರಬೇಕು! ತನ್ನಲ್ಲಿರುವ ಅಪಾರ ಪ್ರಮಾಣದ ನೈಸರ್ಗಿಕ ಸೌಂದರ್ಯದಿಂದ ಗಮನ ಸೆಳೆಯಬೇಕಿದ್ದ ಮಂಗಳೂರು ಮತಿಗೆಟ್ಟವರ ಕಾರಣದಿಂದಲೇ ಸುದ್ದಿಯಾಗುತ್ತಿರುವುದು ಬೇಸರದ ಸಂಗತಿ.

ಈ ಇಡೀ ಲೇಖನವನ್ನು ಹೊಸದಾಗಿ ಬರೆದಿಲ್ಲ. ಅತ್ತಾವರದಲ್ಲಿ ಹಿಂದೂ ಮೂಲಭೂತವಾದಿಗಳು ನಡೆಸಿದ ದಾಂಧಲೆಯ ಸಂದರ್ಭದಲ್ಲಿ ಬರೆದ "ಮಂಗಳೂರಿನ ಮತಿಗೆಟ್ಟ ಹುಡುಗರು "ಲೇಖನವನ್ನೇ ಕಾಪಿ ಪೇಸ್ಟ್ ಮಾಡಲಾಗಿದೆ! ಹಿಂದೂ ಎನ್ನುವ ಜಾಗದಲ್ಲಿ ಮುಸ್ಲಿಂ ಎಂದು ಮುಸ್ಲಿಂ ಎಂದು ಬರೆದಿದ್ದ ಜಾಗದಲ್ಲಿ ಹಿಂದೂ ಎಂದು ತಿದ್ದಿದರೆ ಈ ಲೇಖನ ಸಿದ್ಧವಾಗಿಬಿಟ್ಟಿತು. ಮೂಲಭೂತವಾದಿಗಳ ಕಾರ್ಯವೈಖರಿಯಲ್ಲಿ ಅಷ್ಟರಮಟ್ಟಿಗೆ ಹೋಲಿಕೆಗಳಿವೆ.

ಸೆಪ್ಟೆಂ 8, 2015

ಅಡ್ಡಡ್ಡ ಮಲಗಲು ಅಡ್ಡದಾರಿ ಹಿಡಿದವರು.

Dr Ashok K R
ಯಾವ ಚುನಾವಣೆಯೇ ಆದರೂ ಬಹುಮತ ಬರದಿದ್ದರೆ ರಾಜಕೀಯ ನಾಟಕಗಳು ಉತ್ತುಂಗಕ್ಕೇರಿಬಿಡುತ್ತವೆ. ಬಿಬಿಎಂಪಿ ಚುನಾವಣೆ ಕೂಡ ರಾಜಕೀಯ ನಾಟಕಗಳಿಗೆ ರೆಸಾರ್ಟ್ ರಾಜಕೀಯಕ್ಕೆ ಕಾರಣವಾಗಿದೆ. ಯಾವ ಪಕ್ಷಕ್ಕೂ ಸರಳ ಬಹುಮತ ಪಡೆಯಲು ಸಾಧ್ಯವಾಗಿಲ್ಲ. 100 ಸ್ಥಾನಗಳನ್ನು ಪಡೆದ ಬಿಜೆಪಿ ಪ್ರಥಮ ಸ್ಥಾನದಲ್ಲಿದ್ದರೆ ಕಾಂಗ್ರೆಸ್ 76 ಸ್ಥಾನಗಳನ್ನು ಗಿಟ್ಟಿಸಿಕೊಂಡಿದೆ. ಜೆಡಿಎಸ್ 14ರಲ್ಲಿ ಮತ್ತು ಪಕ್ಷೇತರರು 8 ರಲ್ಲಿ ಜಯ ಗಳಿಸಿದ್ದಾರೆ. ಕಳೆದ ಬಾರಿಯ ಬಿಬಿಎಂಪಿ ಚುನಾವಣಾ ಫಲಿತಾಂಶ ಗಮನಿಸಿದರೆ ಬಿಜೆಪಿ ಕಳೆದ ಬಾರಿಗಿಂತ ಹನ್ನೆರಡು ಸ್ಥಾನಗಳನ್ನು ಕಡಿಮೆ ಗಳಿಸಿದ್ದರೆ, ಕಾಂಗ್ರೆಸ್ ಹನ್ನೊಂದು ಸ್ಥಾನಗಳನ್ನು ಹೆಚ್ಚು ಗಳಿಸಿದೆ. ಜೆಡಿಎಸ್ ಕಳೆದ ಬಾರಿಯೂ ಹದಿನಾಲ್ಕು ಸ್ಥಾನಗಳನ್ನೇ ಗಳಿಸಿತ್ತು. ಇನ್ನು 8 ಪಕ್ಷೇತರರಲ್ಲಿ ಮೂವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾದರೆ ಮೂವರು ಬಿಜೆಪಿಯ ಬಂಡಾಯ ಅಭ್ಯರ್ಥಿಗಳು. ಕಳೆದ ಬಾರಿಗಿಂತ ಹೆಚ್ಚು ಮತ, ಸ್ಥಾನಗಳನ್ನು ಪಡೆದಿದ್ದರೂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಪರಿಸ್ಥಿತಿ ಕಾಂಗ್ರೆಸ್ಸಿನದು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಇದ್ದು ಬೆಂಗಳೂರಿನ ಚುನಾವಣೆ ಸೋತಿರುವುದು ಆ ಪಕ್ಷದ ಬೆಂಗಳೂರು ನಾಯಕರಿಗೆ, ಚುನಾವಣೆಗೆ ಮುಂಚೆ ಊರು ಸುತ್ತಿದ ಸಿದ್ಧರಾಮಯ್ಯರಿಗಾದ ಸೋಲೆಂದೇ ಹೇಳಬೇಕು.

ಕಾಂಗ್ರೆಸ್ ಸೋಲಿಗೆ ಬಿಬಿಎಂಪಿ ಚುನಾವಣೆಯನ್ನು ಪದೇ ಪದೇ ಮುಂದೂಡಲು ಪ್ರಯತ್ನಿಸಿದ್ದು, ಬಿಬಿಎಂಪಿಯನ್ನು ವಿಭಜಿಸಲು ಪ್ರಯತ್ನಿಸಿದ್ದು ಹೇಗೆ ಪ್ರಮುಖ ಕಾರಣವೋ ಬೆಂಗಳೂರಿನ ಜನತೆ ಹಲವು ವರುಷಗಳಿಂದ ಯಾವ ಚುನಾವಣೆಯೇ ಆದರೂ ಬಿಜೆಪಿಯ ಕಡೆಗೆ ಹೆಚ್ಚು ವಾಲುತ್ತಿರುವುದೂ ಸತ್ಯ. ಆ ವಾಲುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ಸಿನ ಪ್ರಯತ್ನ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಿತ್ತು. ಜೊತೆಗೆ ಕಾಂಗ್ರೆಸ್ಸಿನೊಳಗಡೆಯೇ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರ ನಡುವಿನ ಮುಸುಕಿನ ಗುದ್ದಾಟ ಚುನಾವಣೆಗೆ ಕೆಲವೇ ದಿನಗಳ ಮುಂಚೆ ಬಹಿರಂಗವಾಗಿಯೇ ಸ್ಪೋಟಗೊಂಡಿತ್ತು. ಬೆಂಗಳೂರಿಗರು ಇವತ್ತಿಗೂ ನೆನೆಯುವ ಎಸ್.ಎಂ.ಕೃಷ್ಣ ಮತ್ತು ಬಿ.ಕೆ.ಹರಿಪ್ರಸಾದ್ ನೇರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಮಾತನಾಡಿದರು. ಇವೆಲ್ಲವೂ ಕಾಂಗ್ರೆಸ್ಸಿನ ಸೋಲಿಗೆ ಪ್ರಮುಖ ಕಾರಣಗಳಾಯಿತು. ಭ್ರಷ್ಟಾಚಾರದ ಆರೋಪಗಳನ್ನು ಹೊತ್ತರೂ ಬಿಜೆಪಿ ಮತ್ತೆ ಹೆಚ್ಚು ಸ್ಥಾನ ಪಡೆಯುವಲ್ಲಿ ಅದರ ನಾಯಕ ಅಶೋಕ್ ರ ಪಾತ್ರ ದೊಡ್ಡದು. ಒಂದು ಹಂತದಲ್ಲಿ ಅಶೋಕ್ ಮತ್ತು ಯಡಿಯೂರಪ್ಪ ನಡುವಿನ ತಿಕ್ಕಾಟಗಳು ಬಿಜೆಪಿಯನ್ನು ದಯನೀಯ ಸೋಲಿಗೆ ದೂಡುತ್ತವೆ ಎಂದು ಎಣಿಸಲಾಗಿತ್ತು. ಸಮೀಕ್ಷೆಗಳೂ ಕಾಂಗ್ರೆಸ್ಸಿಗೆ ಅಧಿಕ ಸ್ಥಾನ ಸಿಗುವುದೆಂದೇ ಹೇಳಿತ್ತು. ಮತದಾರ ಆ ಊಹಾ ಪೋಹಗಳಿಗೆಲ್ಲಾ ತಿಲಾಂಜಲಿ ಕೊಟ್ಟು ಬಿಜೆಪಿಗೇ ಅಧಿಕ ಸ್ಥಾನ ಸಿಗುವಂತೆ ಮಾಡಿದ. ಸೋತ ಕಾಂಗ್ರೆಸ್ ಏನು ಮಾಡಬೇಕಿತ್ತು?

ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದ ಕಾಂಗ್ರೆಸ್ ಸ್ವಾಭಾವಿಕವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ ಸರಿಯಾದ ದಿಕ್ಕಿನಲ್ಲಿ ನಡೆಯುವಂತೆ ವರ್ತಿಸಬೇಕಿತ್ತು. ಕಳೆದ ಬಾರಿ ಬಿಜೆಪಿ ಬಿಬಿಎಂಪಿಯಲ್ಲಿ ನಡೆಸಿದ ಭ್ರಷ್ಟಾಚಾರ ಮತ್ತೆ ಪುನಾರವರ್ತನೆಯಾಗದಂತೆ ನೋಡಿಕೊಳ್ಳಬೇಕಿತ್ತು. ಅದರ ಬಗ್ಗೆ ಯೋಚನೆಯನ್ನೇ ಮಾಡದ ಕಾಂಗ್ರೆಸ್ ಬಿಜೆಪಿ ಗೆಲುವಿನ ಸಂಭ್ರಮದಲ್ಲಿರುವಾಗ ಒಳಗೊಳಗೇ ಬಿಬಿಎಂಪಿಯ ಅಧಿಕಾರ ಹಿಡಿಯಲಿರುವ ಎಲ್ಲಾ ಅಡ್ಡದಾರಿಗಳನ್ನು ಹುಡುಕಲಾರಂಭಿಸಿತ್ತು. ಬಿಜೆಪಿಗೂ ಸರಳ ಬಹುಮತವಿರಲಿಲ್ಲ. ಪಕ್ಷೇತರರ ಬೆಂಬಲ ಅದಕ್ಕೆ ಅಗತ್ಯವಾಗಿ ಬೇಕಿತ್ತು. ಜೊತೆಗೆ ಬಿಬಿಎಂಪಿ ಮೇಯರ್ ಆಯ್ಕೆಯಲ್ಲಿ ಬೆಂಗಳೂರಿನ ಶಾಸಕರು, ಸಂಸದರು, ರಾಜ್ಯಸಭೆ ಸದಸ್ಯರು, ಸಂಸದರೆಲ್ಲರ ಮತಗಳೂ ಅವಶ್ಯಕ. ಕಾಂಗ್ರೆಸ್ ಪಕ್ಷೇತರರನ್ನು ಸೆಳೆದರೆ ಸಾಕಾಗುತ್ತಿರಲಿಲ್ಲ. ಅಡ್ಡದಾರಿಯಿಂದ ಗೆಲ್ಲಲು ಅದಕ್ಕೆ ಜೆಡಿಎಸ್ಸಿನ ಬೆಂಬಲವೂ ಬೇಕಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೂ ಜೆಡಿಎಸ್ಸಿನ ಒಡೆಯರಾದ ದೇವೇಗೌಡರ ಕುಟುಂಬಕ್ಕೂ ಇರುವ ತಿಕ್ಕಾಟಗಳು ಎಲ್ಲರಿಗೂ ತಿಳಿದಿರುವಂತದ್ದೇ. ಬಹುಶಃ ಈ ತಿಕ್ಕಾಟವಿರುವ ಕಾರಣದಿಂದಲೇ ಏನೋ ಬಿಜೆಪಿ ಕಾಂಗ್ರೆಸ್-ಜೆಡಿಎಸ್ ಸೇರಿ ಬಿಬಿಎಂಪಿ ಅಧಿಕಾರ ಹಿಡಿಯುವುದರ ಬಗ್ಗೆ ಚಿಂತಿಸಲೇ ಇಲ್ಲ. ಕಳೆದ ಬಾರಿಯ ಬಿಜೆಪಿ ಸರಕಾರದಲ್ಲಿ, ಅದಕ್ಕೂ ಹಿಂದಿನ ಬಿಜೆಪಿ-ಜೆಡಿಎಸ್ ದೋಸ್ತಿ ಸರಕಾರದ ಸಮಯದಲ್ಲಿ ಕರ್ನಾಟಕದ ಹೆಸರನ್ನು ದೇಶದೆಲ್ಲೆಡೆ ಹಾಳುಗೆಡವಿದ್ದ ರೆಸಾರ್ಟ್ ರಾಜಕೀಯ ಈಗ ಬಿಬಿಎಂಪಿಯಲ್ಲೂ ಕಾಲಿಟ್ಟುಬಿಟ್ಟಿದೆ. ಪಕ್ಷೇತರರನ್ನು ಕೇರಳಕ್ಕೆ ರವಾನಿಸಲಾಗಿದೆ. ನಾವು ಬಂದಿರೋದು ಆಡಳಿತ ಹೇಗೆ ನಡೆಸಬೇಕು ಎಂದು ಕಲಿಯಲು ಎನ್ನುವ ಜೋಕುಗಳನ್ನು ಬಿಬಿಎಂಪಿ ಕಾರ್ಪೊರೇಟರ್ರುಗಳು ಮಾಡುತ್ತಿದ್ದಾರೆ. ಜೆಡಿಎಸ್ ಕೂಡ ತನ್ನವರನ್ನು ರೆಸಾರ್ಟುಗಳಿಗೆ ಅಟ್ಟುತ್ತಿದೆ! ಒಟ್ಟಿನಲ್ಲಿ ಕುದುರೆ ವ್ಯಾಪಾರ ಜೋರಾಗಿರುವಂತೆ ಕಾಣುತ್ತಿದೆ. ‘ಅಭಿವೃದ್ಧಿ’ಗಾಗಿ ಜೆಡಿಎಸ್ ಕಾಂಗ್ರೆಸ್ಸಿನ ಜೊತೆಗೆ ಕೈಜೋಡಿಸುತ್ತಿದೆಯಂತೆ! ಬಿಬಿಎಂಪಿಯಲ್ಲೊಂದು ರಾಜ್ಯದಲ್ಲೊಂದು ಪಕ್ಷ ಅಧಿಕಾರವಿದ್ದರೆ ಬೆಂಗಳೂರು ಅಭಿವೃದ್ಧಿಯಾಗುವುದಿಲ್ಲವೇ? 

ಸಿದ್ಧರಾಮಯ್ಯ ಸರಕಾರದ ಎಲ್ಲಾ ನೂನ್ಯತೆಗಳ ನಡುವೆ ಕಳೆದ ಬಾರಿಯಂತೆ ಅಸಹ್ಯದ ರಾಜಕಾರಣವಿಲ್ಲ ಎಂದು ಸಮಾಧಾನಪಟ್ಟುಕೊಳ್ಳಬಹುದಿತ್ತು. ಇನ್ನು ಮುಂದೆ ಆ ಸಮಾಧಾನವೂ ಇಲ್ಲದಂತಾಗಿದೆ ಬಿಬಿಎಂಪಿಯ ರೆಸಾರ್ಟ್ ರಾಜಕೀಯದ ದೆಸೆಯಿಂದ. ಬಿಬಿಎಂಪಿಯ ವಿಚಾರವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಸೇರಿ ಅಧಿಕಾರ ಹಿಡಿದರೆ ಅಚ್ಚರಿಪಡಬೇಕಿಲ್ಲ. ಕೆಲವು ಗ್ರಾಮ ಪಂಚಾಯತ್ ಜಿಲ್ಲಾ ಪಂಚಾಯತ್ ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಟ್ಟಾಗಿ ಅಧಿಕಾರ ಹಿಡಿದಿರುವುದೂ ಇದೆ! ‘ಸ್ಥಳೀಯ ಅನುಕೂಲಗಳಿಗಾಗಿ’! ಇನ್ನು ಹಲವು ಸಲ ರಾಜ್ಯ ರಾಷ್ಟ್ರ ಮಟ್ಟದಲ್ಲೇ ಜೊತೆಗಿದ್ದ ಕಾಂಗ್ರೆಸ್ – ಜೆಡಿಎಸ್ ಬಿಬಿಎಂಪಿಯಲ್ಲಿ ಒಂದಾಗುವುದು ಸಹಜ, ಆದರೆ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿರುವಾಗ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವುದು ಅನೈತಿಕ. ಈ ಅನೈತಿಕತೆಯನ್ನು ಬಿಜೆಪಿ ಬೀದಿಗಿಳಿದು ವಿರೋಧಿಸುತ್ತಿದೆ. ಕೆಲವೇ ವರುಷಗಳ ಹಿಂದೆ ಅವರೇ ಉತ್ಸಾಹದಿಂದ ಮಾಡುತ್ತಿದ್ದ ಆಪರೇಷನ್ ಕಮಲವನ್ನು ಅವರು ಮರೆತುಬಿಟ್ಟಿದ್ದಾರೆ! ಆಪರೇಷನ್ ಕಮಲ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಸೋಲಲು ಮಹತ್ತರ ಪಾತ್ರ ವಹಿಸಿತು ಎಂಬಂಶವನ್ನು ಆಪರೇಷನ್ ಕೈ ಆಪರೇಷನ್ ಬಿಬಿಎಂಪಿ ಮಾಡುತ್ತಿರುವ ಕಾಂಗ್ರೆಸ್ ಕೂಡ ಮರೆತುಬಿಟ್ಟಿದೆ! ಮತ್ತೆ ರಾಜಕೀಯ ಮನರಂಜನೆಯಾಗಿಬಿಡುವ ಎಲ್ಲಾ ಅಪಾಯಗಳೂ ಕಾಣುತ್ತಿವೆ…

ಸೆಪ್ಟೆಂ 5, 2015

ಸಂಶೋಧಕನ ಹತ್ಯೆ ಕಾಣಿಸಿದ ಸತ್ಯಗಳು

Dr Ashok K R
ಸಂಶೋಧಕ ಎಂ.ಎಂ.ಕಲ್ಬುರ್ಗಿಯವರ ಹತ್ಯೆ ತಲ್ಲಣ ಮೂಡಿಸಿದೆ ಜೊತೆಜೊತೆಗೆ ಅನೇಕ ಗೊಂದಲಗಳನ್ನೂ ಸೃಷ್ಟಿಸಿಬಿಟ್ಟಿದೆ. ಜನ, ಮಾಧ್ಯಮ ಒಟ್ಟಾರೆಯಾಗಿ ಇಡೀ ಸಮಾಜ ಕಲಬುರ್ಗಿಯವರ ಹತ್ಯೆಗೆ ಪ್ರತಿಕ್ರಿಯಿಸಿದ ರೀತಿ ನಿರಾಶೆಯನ್ನು ಮೂಡಿಸುತ್ತದೆ. ಕಲಬುರ್ಗಿಯವರ ಸಾವು ಮನಕಲಕಲು ಒಂದು ಹಿರಿಯ ಜೀವಿಯ ಹತ್ಯೆ ಎಂಬ ಕಾರಣವೇ ಸಾಕಿತ್ತು. ಆದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು, ತಾತ್ವಿಕ ವಿರೋಧಗಳು ಸಾವನ್ನೂ ಸಂಭ್ರಮಿಸುವ ಸರಕಾಗಿಸಿಬಿಟ್ಟಿದೆ. ಅನಂತಮೂರ್ತಿಯವರ ಸಾವಿನ ಸಮಯದಲ್ಲಿ ಪಟಾಕಿ ಹೊಡೆದು ಸಂಭ್ರಮಿಸಿದ ಮನಸ್ಥಿತಿ ಮತ್ತಷ್ಟು ಹೆಚ್ಚಾಗುತ್ತಿದೆ. ವಿರೋಧಗಳಿಲ್ಲದೆ ಯಾವ ಧರ್ಮ ತಾನೇ ಉತ್ತಮಗೊಂಡಿದೆ? ಯಥಾಸ್ಥಿತಿವಾದಿಗಳಷ್ಟೇ ಪ್ರತಿರೋಧವನ್ನು ವಿರೋಧಿಸುತ್ತಾರೆ. ಇದರ ನಡುವೆ ಅರ್ಧ ಸತ್ಯವನ್ನಾಡುವವರು ಸಮಾಜದ ಬಗ್ಗೆಯೇ ರೇಜಿಗೆ ಹುಟ್ಟಿಸುವಂತೆ ಮಾಡುತ್ತಾರೆ.

ಒಂದು ಹತ್ಯೆ ನಡೆದ ತಕ್ಷಣ ಅದು ಇಂತವರದ್ದೇ ಕೃತ್ಯ ಎಂದು ಇದಮಿತ್ಥಂ ಹೇಳಿಬಿಡುವುದು ತನಿಖೆಯ ದಾರಿ ತಪ್ಪಿಸುವುದರ ಜೊತೆಗೆ ಜನರನ್ನೂ ತಪ್ಪು ದಾರಿಗೆ ಎಳೆದುಬಿಡುತ್ತದೆ. ಡಾ.ಎಂ.ಎಂ.ಕಲಬುರ್ಗಿಯವರಿಗಿದ್ದ ಜೀವ ಬೆದರಿಕೆಗಳು, ಅವರ ಮೇಲಾಗಿದ್ದ ಕಲ್ಲು ತೂರಾಟಗಳನ್ನೆಲ್ಲಾ ಗಮನಿಸಿದ್ದ ಕೆಲವು ಪ್ರಗತಿಪರರು ಅವರು ಹತರಾದ ದಿನ ಇದು ಬಲಪಂಥೀಯರದೇ ಕೃತ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ, ಕೆಲವು ಮಾಧ್ಯಮಗಳಲ್ಲಿ ಹೇಳಿಕೆ ಕೊಟ್ಟುಬಿಟ್ಟರು. ಬಹುತೇಕ ಪ್ರಗತಿಪರರೇ ಅದನ್ನು ವಿರೋಧಿಸಿ ಒಂದೆರಡು ದಿನ ತಾಳ್ಮೆಯಿಂದ ಕಾಯುವ ಕೆಲಸವಾಗಬೇಕೀಗ, ಆತುರದ ತೀರ್ಮಾನಗಳೇಕೆ ಎಂದು ಪ್ರಶ್ನಿಸಿದರು. ನನ್ನದೂ ವೈಯಕ್ತಿಕವಾಗಿ ಅದೇ ಅಭಿಪ್ರಾಯವಾಗಿತ್ತು. ಬಲಪಂಥೀಯರಾಗಲೇ ಕೆಲವು ಪ್ರಗತಿಪರರ ಹೇಳಿಕೆಗಳನ್ನಿಡಿದುಕೊಂಡು ‘ನೋಡಿ ನೋಡಿ. ಹಿಂದೂ ಸಂಘಟನೆಯ ಮೇಲೆ ಗೂಬೆ ಕೂರಿಸಿಬಿಡ್ತಾರೆ’ ಎಂದು ಹೇಳುವುದೂ ಪ್ರಾರಂಭವಾಯಿತು. ಹಿರಿಯ ಸಾಹಿತಿ – ಸಂಶೋಧಕರೊಬ್ಬರ ಹತ್ಯೆ ಇತರೆ ಸಾಹಿತಿ ಸಂಶೋಧಕರಿಗೆ ಭಯ ಮೂಡಿಸಿದರೆ ಅದು ಸಹಜ. ಆ ರೀತಿಯೆಲ್ಲ ಭಯಪಡಬೇಡಿ ಎಂದು ಹೇಳಬೇಕಾದ ಸಮಾಜ, ಆ ಭಯ ವ್ಯಕ್ತಪಡಿಸಿದವರನ್ನೇ ಗೇಲಿ ಮಾಡುವ ಮಟ್ಟಕ್ಕೆ ಇಳಿದುಬಿಟ್ಟಿರುವುದು ಬೇಸರ ಮೂಡಿಸುತ್ತದೆ. 

ಅವರ ಹತ್ಯೆಯಾದ ದಿನ ರಾಜ್ಯದ ವಿವಿದೆಡೆ ಚಿಕ್ಕ ಪುಟ್ಟ ಸಂತಾಪ ಸಭೆಗಳು, ಕೊಲೆಗಾರರನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸುವ ಪ್ರತಿಭಟನೆಗಳು ನಡೆದವು. ಬೆಂಗಳೂರಿನಲ್ಲೂ ಟೌನ್ ಹಾಲ್ ಎದುರಿಗೆ ಅಂತಹುದೊಂದು ಸಭೆ ನಡೆಯಿತು. ಆ ಸಭೆಯನ್ನು ಬಲಪಂಥೀಯರಿಂದ ಹಿಡಿದು ಪ್ರಗತಿಪರರೆನ್ನಿಸಿಕೊಂಡ ಕೆಲವರೂ ಆಡಿಕೊಂಡರು. ಅವರ ಪ್ರಕಾರ ಅದು ಕಲಬುರ್ಗಿಯವರ ಹತ್ಯೆಯನ್ನು ಬಲಪಂಥೀಯರ ತಲೆಗೆ ವಿನಾಕಾರಣ ಕಟ್ಟುವ ಪ್ರಯತ್ನವಾಗಿತ್ತಂತೆ! ಸಿಂಪಥಿ ಬರಲೆಂಬ ಕಾರಣಕ್ಕೆ ಪ್ರಗತಿಪರರೇ ಯಾಕೆ ಈ ಕೊಲೆ ಮಾಡಿಸಿರಬಾರದು ಎಂದು ಕಥೆ ಹೆಣೆಯುವುದರಲ್ಲೂ ಅನೇಕರು ಬ್ಯುಸಿಯಾಗಿಬಿಟ್ಟರು! ನಿಲುಮೆಯೆಂಬ ವೆಬ್ ಪುಟದಲ್ಲಿ, ಅಗ್ನಿ ಪತ್ರಿಕೆಯ ಸಂಪಾದಕೀಯದಲ್ಲಿ ಅಂದು ಸೇರಿದ್ದ ಜನರನ್ನೇ ಹೀಗಳೆಯುವ ಕೆಲಸ ನಡೆದಿದೆ. ಅವರುಗಳು ಬರೆದಿರುವುದರಲ್ಲಿ ಬಹುತೇಕ ಸುಳ್ಳೇ ಸೇರಿದೆ! ಅನೇಕರು ಬರೆದಂತೆ ಅದು ಪ್ರತಿಭಟನಾ ಸಭೆಯೇನು ಆಗಿರಲಿಲ್ಲ. ನಾಲ್ಕೂ ಮೂವತ್ತರ ಸಮಯಕ್ಕೆ ನಿಗದಿಯಾಗಿದ್ದ ಸಭೆಗೆ ನಾಲ್ಕು ಘಂಟೆಯಿಂದಲೇ ಜನರು ಬರಲಾರಂಭಿಸಿದ್ದರು. ಅದು ಯಾವ ಸಂಘಟನೆಯೂ ಸೇರಿಸಿದ ಸಭೆಯಾಗಿರಲಿಲ್ಲ. ವಾಟ್ಸಪ್ಪಿನಲ್ಲಿ, ಫೇಸ್ ಬುಕ್ಕಿನಲ್ಲಿ ನಾಲ್ಕೂವರೆಗೆ ಟೌನ್ ಹಾಲ್ ಬಳಿ ಹೀಗೊಂದು ಸಂತಾಪ ಸೂಚಕ ಸಭೆ ನಡೆಸೋಣ ಎಂಬ ಮೆಸೇಜು ಹರಿದಾಡಿ ಇನ್ನೂರೈವತ್ತು ಮುನ್ನೂರು ಜನರು ಅಲ್ಲಿ ನೆರೆದಿದ್ದರು. ಬರಗೂರು, ಸುರೇಂದ್ರನಾಥ್, ಜಿ.ರಾಮಕೃಷ್ಣ, ಬೋಳುವಾರು, ಗೌರಿ ಲಂಕೇಶ್, ವಡ್ಡಗೆರೆ ನಾಗರಾಜಯ್ಯ, ಗಿರೀಶ್ ಕಾರ್ನಾಡ್, ಅನಂತ ನಾಯಕ್, ಕುಮಾರ ರೈತ ಹೀಗೆ ಅನೇಕರು ಅಲ್ಲಿ ಸೇರಿದ್ದರು. ವಿವಿಧ ಸಂಘಟನೆಗಳಿಗೆ ಸೇರಿದವರೂ ನೆರೆದಿದ್ದರು, ಯಾವ ಸಂಘಟನೆಗೂ ಸೇರದ ನನ್ನಂತವರ ಸಂಖೈ ಅಲ್ಲಿ ಜಾಸ್ತಿ ಇತ್ತು. ತಾಂತ್ರಿಕವಾಗಿ ಸರಕಾರದ ಭಾಗವೇ ಆಗಿರುವ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಕೂಡ ಆ ಸಭೆಯಲ್ಲಿ ಭಾಗವಹಿಸಿದ್ದರು. ಅದು ಸಂತಾಪ ಸೂಚಕ ಸಭೆಯೆಂದು ಭಾಗವಹಿಸಿದವರ ಸಂಖೈ ಹೆಚ್ಚಿತ್ತೇ ಹೊರತು ಅದು ಪ್ರತಿಭಟನೆಯ ಸಭೆಯೆಂದಲ್ಲ. ಹಂತಕರನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಿದ್ದು ತಪ್ಪೇ?. ಹಿರಿಯರೊಬ್ಬರ ಸಾವಿಗೆ ಸಂಭ್ರಮ ಸೂಚಿಸುವ, ಪಟಾಕಿ ಹೊಡೆಯುವ ಮನಸ್ಥಿತಿ ಇರುವವರ ಸಂಖೈ ಹೆಚ್ಚುತ್ತಿರುವ ಸಂದರ್ಭದಲ್ಲಿ ಸಂತಾಪ ಸೂಚಿಸುವವರೇ ಅಪರಾಧಿಗಳೇನೋ?

ಕಲಬುರ್ಗಿಯವರ ಹತ್ಯೆ ನಡೆದ ನಂತರ ಟ್ವಿಟರಿನಲ್ಲಿ ಭುವಿತ್ ಶೆಟ್ಟಿ ಎಂಬ ಯುವಕ ಆಗ ಅನಂತಮೂರ್ತಿ ಈಗ ಕಲಬುರ್ಗಿ ಕೆ.ಎಸ್.ಭಗವಾನ್ ಮುಂದಿನ ಸರದಿ ನಿನ್ನದು ಎಂಬ ದಾಟಿಯ ಬೆದರಿಕೆ ಒಡ್ಡುತ್ತಾನೆ. ಆತನ ಮೇಲೆ ಪೋಲೀಸರು ಕೇಸು ದಾಖಲಿಸಿಕೊಂಡು ಬಂಧಿಸುತ್ತಾರೆ. ನಂತರ ಏನು ನಡೆಯುತ್ತದೆ ಎನ್ನುವುದು ಸಮಾಜ ಸಾಗುತ್ತಿರುವ ಹಾದಿಯ ಸ್ಪಷ್ಟ ಚಿತ್ರಣ ನೀಡುತ್ತದೆ. ಹೆಚ್ಚೇನಿಲ್ಲ ಕಳೆದ ಡಿಸೆಂಬರಿನಲ್ಲಿ ಪೋಲೀಸರು ಮೆಹದಿಯೆಂಬ ವ್ಯಕ್ತಿಯನ್ನು ಬಂಧಿಸುತ್ತಾರೆ. ಕಾರಣ? ಆತ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಪರವಾಗಿ ಟ್ವೀಟುಗಳನ್ನು ಮಾಡುತ್ತಿದ್ದ. ಅವರ ಉಗ್ರಗಾಮಿತವನ್ನು ಬೆಂಬಲಿಸುತ್ತಿದ್ದ. ನೇರವಾಗಿ ಆತನೇನೂ ಇಸ್ಲಾಮಿಕ್ ಸ್ಟೇಟ್ ಜೊತೆಗೆ ಕಾರ್ಯನಿರ್ವಹಿಸುತ್ತಿರಲಿಲ್ಲ ಆದರೆ ಅವರ ತತ್ವ ಸಿದ್ಧಾಂತಗಳನ್ನು ಬೆಂಬಲಿಸುತ್ತಿದ್ದ. ಬೆಂಬಲದ ಟ್ವೀಟುಗಳನ್ನು ಹಂಚಿಕೊಳ್ಳುತ್ತಿದ್ದ, ಜನರನ್ನು ಆ ತತ್ವ ಸಿದ್ಧಾಂತಗಳೆಡೆಗೆ ಆಕರ್ಷಿತರಾಗುವಂತೆ ಮಾಡುತ್ತಿದ್ದ. ಅವನನ್ನು ಬಂಧಿಸಿದ ಪೋಲೀಸರು ‘Waging war against Asiatic Powers’ – ‘ಏಷಿಯಾ ದೇಶಗಳ ವಿರುದ್ಧ ಯುದ್ಧ ಸಾರಿದಾತ’ ಎಂಬ ಆರೋಪ ಹೊರಿಸುತ್ತದೆ. ಹತ್ತು ತಿಂಗಳ ನಂತರವೂ ಆತ ಜೈಲಿನಲ್ಲಿದ್ದಾನೆ. ಈಗ ಮತ್ತೆ ಭುವಿತ್ ಶೆಟ್ಟಿಯ ಪ್ರಕರಣ ಗಮನಿಸಿದರೆ ಆತನೇನು ಅನಂತಮೂರ್ತಿಯವರ ಸ್ವಾಭಾವಿಕ ಮೃತ್ಯುವಿಗೆ ಕಾರಣಕರ್ತನಲ್ಲ, ಕಲಬುರ್ಗಿಯವರನ್ನು ಕೊಂದವನೂ ಅಲ್ಲ; ಆದರೆ ಆ ಕೊಲ್ಲುವ ಉಗ್ರ ಸಿದ್ಧಾಂತದ ಸಮರ್ಥಕ, ಆ ಕೊಲ್ಲುವಿಕೆಯ ಸಮರ್ಥಕ, ಮುಂದೆ ಇತರರನ್ನೂ ಕೊಲ್ಲುವುದಕ್ಕೆ ಪ್ರೇರೇಪಿಸುವಂತಹ ಟ್ವೀಟುಗಳನ್ನು ಹಾಕಿದಾತ. ತಾಂತ್ರಿಕವಾಗಿ ನೋಡಿದರೆ ಭುವಿತ್ ಶೆಟ್ಟಿಯ ಮೇಲೂ ಕಠಿಣ ಕಾಯ್ದೆಗಳನ್ನು ಹಾಕಬೇಕಿತ್ತು, ಆತ ಇನ್ನೂ ಜೈಲಿನಲ್ಲಿರಬೇಕಿತ್ತು. ಕ್ಷಮಿಸಿ, ಆತ ಮುಸ್ಲಿಮನಲ್ಲ; ದಿನದೊಳಗೇ ಜಾಮೀನು ಪಡೆದು ಹಿಂದಿರುಗಿದ್ದಾನೆ. ಸದ್ಯದ ಭವಿಷ್ಯದಲ್ಲಿ ಮಂಗಳೂರಿನ ಹಿಂದೂ ಸಂಘಟನೆಗಳು ಆತನಿಗೆ ಸನ್ಮಾನ ಮಾಡಿದರೂ ಅಚ್ಚರಿಯಿಲ್ಲ. ಜೈಭಜರಂಗಿ ಹೆಸರಿನಲ್ಲಿ ಉಗ್ರ ಹೇಳಿಕೆಗಳನ್ನು ಕೊಟ್ಟ, ಅನೇಕ ಕೇಸುಗಳಲ್ಲಿ ಆರೋಪಿಯಾಗಿರುವ ಪ್ರಸಾದ್ ಅತ್ತಾವರನನ್ನು ಕಲಬುರ್ಗಿಯವರ ಹತ್ಯೆ ಸಂಬಂಧ ವಿಚಾರಣೆಗಾಗಿ ಬಂಧಿಸುತ್ತಾರೆ. ಆತನೂ ಜಾಮೀನಿನ ಮೇಲೆ ಹೊರಬರುತ್ತಾನೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಹೆಸರಿಸಲಾಗದ ಮೂಲಗಳಿಂದ ಒಂದು ಸುದ್ದಿ ಪ್ರಕಟಿಸುತ್ತಾರೆ. ಪ್ರಸಾದ್ ಅತ್ತಾವರನ ಬಂಧನದಿಂದ ಪೋಲೀಸರಿಗೆ ಹೊಸ ವಿಷಯ ತಿಳಿದಿದೆ. ಕೆ.ಎಸ್.ಭಗವಾನರನ್ನು ಹತ್ಯೆ ಮಾಡಲು ಇಬ್ಬರು ಮೈಸೂರಿಗೆ ಬಂದಿದ್ದರು, ಆದರೆ ವಿವಿಧ ಕಾರಣಗಳಿಂದ ಅವರು ವಾಪಸ್ಸಾದರು ಎಂದು. ಟೈಮ್ಸ್ ಬಿಟ್ಟು ಬೇರೆ ಯಾವ ಪತ್ರಿಕೆಯಲ್ಲೂ ಈ ಸುದ್ದಿ ಬರುವುದಿಲ್ಲ. ಸುಮ್ಮನೆ ಯೋಚಿಸಿ, ಮುಸ್ಲಿಂ ಸಾಹಿತಿಯೊಬ್ಬ ಹತನಾಗಿ ಮುಸ್ಲಿಂ ಮೂಲಭೂತವಾದಿಯೊಬ್ಬ ಈ ರೀತಿಯಾಗಿ ಟ್ವೀಟಿಸಿದ್ದರೆ ಪೋಲೀಸರ ಸಮಾಜದ ಮಾಧ್ಯಮಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು? ಇದೊಂದೇ ಪ್ರಕರಣವಲ್ಲ, ಧರ್ಮಾಧಾರಿತವಾಗಿ ಪೋಲೀಸರು ಕಾರ್ಯನಿರ್ವಹಿಸುವ ಅನೇಕ ಸಂದರ್ಭಗಳನ್ನು ಪದೇ ಪದೇ ಕಾಣುತ್ತೇವೆ. ಕಳೆದ ದಸರೆಯ ಸಮಯದಲ್ಲಿ ಮೈಸೂರು ಪೋಲೀಸರಿಗೆ ಕರೆ ಮಾಡಿ ಅರಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ, ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಸೇರಿದವನೆಂದು ಹೇಳಿಕೊಂಡಿದ್ದ. ಮೈಸೂರಿನ ಮೇಲೆ ಉಗ್ರರ ದಾಳಿ ಎಂದೇ ಸುದ್ದಿ ಬಿತ್ತರವಾಗಿತ್ತು. ಮೈಸೂರು ಪೋಲೀಸರ ಶೀಘ್ರ ಕಾರ್ಯಾಚರಣೆಯಿಂದ ಕರೆ ಮಾಡಿದ್ದವನ ಬಂಧನವೂ ಆಯಿತು. ‘ಉಗ್ರನ ಬಂಧನ’ ಎಂದು ದೊಡ್ಡ ಸುದ್ದಿಯಾಯಿತಾ? ದಿನಗಟ್ಟಲೇ ಚರ್ಚೆ ನಡೆಯಿತಾ? ಪತ್ರಿಕೆಗಳು ಮುಖಪುಟದಲ್ಲಿ ಆ ಸುದ್ದಿ ಪ್ರಕಟಿಸಿದವಾ? ಸಾಮಾಜಿಕ ಜಾಲತಾಣಗಳಲ್ಲಿ ಆ ‘ಉಗ್ರನನ್ನು’ ಹೀನಾಮಾನ ಟೀಕಿಸಲಾಯಿತಾ? ಇಲ್ಲ. ಯಾಕೆಂದರೆ ಕರೆ ಮಾಡಿ ಬೆದರಿಸಿದ್ದು ಮುಸ್ಲಿಮನಾಗದೇ ಹಿಂದೂ ಆಗಿದ್ದ! ಹಿಂದೂವೊಬ್ಬ ಉಗ್ರನಾಗಲು ಹೇಗೆ ಸಾಧ್ಯ?! ಮಾನಸಿಕ ಸ್ಥಿಮಿತವಿಲ್ಲದ ಬಾಲಕನಾಗಿ ಆ ಹಿಂದೂ ವರದಿಯಾಗಿದ್ದ! ಅದೂ ನಿಜವೇ ಇರಬಹುದು. ಆದರೆ ಮಾನಸಿಕ ಸ್ಥಿಮಿತವಿಲ್ಲದ ಮುಸ್ಲಿಂ ಹುಡುಗನೊಬ್ಬ ಇದೇ ರೀತಿ ಮಾಡಿದ್ದರೂ ಸಮಾಜ ಹೀಗೆಯೇ ಪ್ರತಿಕ್ರಿಯಿಸುತ್ತಿತ್ತಾ? ಉತ್ತರ ನಿಮ್ಮಲ್ಲೇ ಇದೆ.

ಒಂದು ವಾರ ಕಳೆದಿದೆ ಕಲಬುರ್ಗಿಯವರ ಹತ್ಯೆಯಾಗಿ. ಹೆಚ್ಚಿನ ಸುಳಿವುಗಳೇನೂ ದಕ್ಕಿಲ್ಲ. ಪತ್ರಿಕಾ ವರದಿಗಳ ಪ್ರಕಾರ ಪೋಲೀಸರೇನೋ ವಿವಿಧ ದಿಕ್ಕುಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆಸ್ತಿ ವಿಚಾರವಾಗಿ ಗಲಾಟೆಗಳಿತ್ತಾ, ವೈಯಕ್ತಿಕ ಜೀವನದಲ್ಲಿ ತೊಂದರೆಗಳಿತ್ತಾ, ಇವತ್ತಿನ ವರದಿಯಂತೆ ಬಸವರಾಜ ಕಟ್ಟೀಮನಿ ಪ್ರತಿಷ್ಟಾಪನೆಯ ಸಂಬಂಧ ತೊಂದರೆಯಿತ್ತಾ, ಹಿಂದೂ ಬಲಪಂಥೀಯರ ಕೃತ್ಯವಾ ಇದು, ಲಿಂಗಾಯತ ಮೂಲಭೂತವಾದಿಗಳ ಕೃತ್ಯವಾ ಇದು ಎಂದು ಅನೇಕ ದಿಕ್ಕುಗಳಲ್ಲಿ ತನಿಖೆ ಸಾಗುತ್ತಿದೆ. ರಾಜ್ಯ ಸರಕಾರ ಈಗಾಗಲೇ ಪ್ರಕರಣವನ್ನು ಸಿಬಿಐಗೆ ವಹಿಸಲು ಸಿದ್ಧತೆ ಮಾಡಿಕೊಂಡಿದೆ. ನಿಜವಾದ ಕಾರಣ ಏನೂ ಇರಬಹುದು, ಆದರೆ ಆ ಕಾರಣ ತಿಳಿಯುತ್ತದಾ ಎಂದು ಗಮನಿಸಿದಾಗ ಒಂದಷ್ಟು ಬೇಸರವಾಗುತ್ತದೆ, ಜೊತೆಗೊಂದಷ್ಟು ಭಯವೂ. ಇದೇ ರೀತಿ ಹತ್ಯೆಯಾದ ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್, ಕಮ್ಯುನಿಷ್ಟ್ ಮುಖಂಡ ಗೋವಿಂದ ಪನ್ಸಾರೆಯ ಹಂತಕರು ಇದುವರೆಗೆ ಪತ್ತೆಯಾಗಿಲ್ಲ. ಅವರನ್ನು ಸಾಯಿಸಿದ ರೀತಿಗೂ ಕಲಬುರ್ಗಿಯವರನ್ನು ಸಾಯಿಸಿದ ರೀತಿಗೂ ತುಂಬಾ ಸಾಮ್ಯತೆಯಿದೆ. ದಾಬೋಲ್ಕರ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ, ಪ್ರಕರಣದ ತನಿಖೆ ಅಷ್ಟೇನೂ ವೇಗದಲ್ಲಿ ನಡೆಯದಿರುವುದಕ್ಕೆ ನ್ಯಾಯಾಲಯವೇ ಆಕ್ಷೇಪ ವ್ಯಕ್ತಪಡಿಸಿದೆ. ಅವರ ಸಾಲಿಗೇ ಕಲಬುರ್ಗಿಯವರ ಹತ್ಯೆಯೂ ಸೇರಿಹೋಗುತ್ತದಾ ಎಂಬ ಭೀತಿ ಕಾಡಿದರದು ತಪ್ಪೇ?

ಕಲಬುರ್ಗಿಯವರು ಸಾವಿನಲ್ಲಿ ನಿಜಕ್ಕೂ ಅನಾಥರಾಗಿಬಿಟ್ಟರು ಎಂದರೆ ತಪ್ಪಲ್ಲ. ಅವರನ್ನು ಬೆಂಬಲಿಸಿ ಮಾತನಾಡಿದವರ ಪ್ರಗತಿಪರರ ಸಂಖೈ ಎಷ್ಟಿತ್ತೋ, ಯಾರು ಸಾಯಿಸಿದರೋ ಏತಕ್ಕೆ ಸಾಯಿಸಿದರೋ ಸುಖಾಸುಮ್ಮನೆ ಅವರನ್ನು ಬೆಂಬಲಿಸಿ ಸಮಾಜದ ಪ್ರಮುಖ ವಾಹಿನಿಯ ವಿರೋಧವನ್ನು ಯಾಕೆ ಕಟ್ಟಿಕೊಳ್ಳಬೇಕು ಎಂದು ಮೌನ ವಹಿಸಿದ ಪ್ರಗತಿಪರರ ಸಂಖೈಯೂ ಹೆಚ್ಚಿದೆ. ಇಂತಹ ಅಪಾಯಗಳನ್ನು ಎದುರಿಸಲು ಒಂದು ಸ್ಟ್ರ್ಯಾಟಜಿ ಇರಬೇಕು ಎಂದ ಮಾತುಗಳನ್ನು ತಿರುಚಿ ‘ಸಾವಿನಲ್ಲೂ ಸ್ಟ್ರ್ಯಾಟಜಿ’ ಹುಡುಕುವವರು ಎಂದು ನಟರಾಜ್ ಹುಳಿಯಾರರಂತವರೂ ಬರೆದುಬಿಡುತ್ತಾರೆ! ಅರ್ಧ ಸತ್ಯಗಳಿಗೆ ಅವರೂ ತಲೆದೂಗಲಾರಂಭಿಸುತ್ತಾರೆ! ಕಲಬುರ್ಗಿಯವರು ಹಿಂದೂ ಧರ್ಮದ ವಿರುದ್ಧ ಮಾತನಾಡಿದರು ಎಂಬ ಕಾರಣಕ್ಕೆ ಹಿಂದೂ ಬಲಪಂಥೀಯ ಸಂಘಟನೆಯವರು ಅವರ ಹತ್ಯೆಯನ್ನು ಖಂಡಿಸುವುದಿಲ್ಲ, ಬದಲಿಗೆ ಸಂಭ್ರಮಿಸುತ್ತಾರೆ. ಲಿಂಗಾಯತವೆಂಬುದು ಪ್ರತ್ಯೇಕ ಧರ್ಮ, ಹಿಂದೂ ಧರ್ಮದ ಭಾಗವಲ್ಲ ಅದು ಎಂಬುದು ಕಲಬುರ್ಗಿಯವರ ನಿಲುವಾಗಿತ್ತು. ಹಿಂದೂ ಧರ್ಮಪದ್ಧತಿಯಲ್ಲಿದ್ದ ಅನಾಚಾರಗಳನ್ನು ವಿರೋಧಿಸಿ ಮೂಡಿದ್ದೇ ಲಿಂಗಾಯತ ಧರ್ಮವಲ್ಲವೇ? ಇದೇ ರೀತಿ ಹಿಂದೂ ಧರ್ಮದಿಂದ ಸಿಡಿದೆದ್ದ ಬುದ್ಧನ ಹಾದಿ ಬೌದ್ಧ ಧರ್ಮದ ಹುಟ್ಟಿಗೆ ಕಾರಣವಾಗಿರಬೇಕಾದರೆ, ಬಸವಣ್ಣನ ಹಾದಿ ಲಿಂಗಾಯತ ಧರ್ಮದ ಹುಟ್ಟಿಗೆ ಕಾರಣವೆಂದು ಅವರು ಹೇಳಿದ್ದು ಸರಿ ಅಲ್ಲವೇ. ಲಿಂಗಾಯತ ಧರ್ಮದೊಳಗಿನ ವೈದಿಕ ಪರಂಪರೆಯನ್ನು ವಿರೋಧಿಸಿದ ಕಾರಣಕ್ಕೆ ಲಿಂಗಾಯತರ ಬೆಂಬಲವೂ ಅವರಿಗಿರಲಿಲ್ಲ. ಒಟ್ಟಿನಲ್ಲಿ ಅವರ ಸಾವಿಗೆ ನ್ಯಾಯ ಸಿಗಬೇಕೆಂದು ವಾದಿಸುವವರ ಸಂಖೈ ಕ್ಷೀಣವಾಗಿದೆ. ಪ್ರವಾಹದ ವಿರುದ್ಧ ಈಜುವವರಲ್ಲಿ ಸತ್ಯವಿದ್ದರೂ ಆ ಸತ್ಯವನ್ನು ಸಮಾಜ ಒಪ್ಪುವುದಿಲ್ಲವೆನ್ನುವುದು ಕಲಬುರ್ಗಿಯವರ ವಿಷಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. 

ಹಿಂದೂ ಎಂಬುದು ಧರ್ಮವೇ ಅಲ್ಲ ಎನ್ನುವ ಕಲಬುರ್ಗಿ, ಭಗವಾನರ ಮಾತುಗಳು ಎಷ್ಟು ಸರಿ, ಒಂದು ಬಹುಸಂಖ್ಯಾತ ಮನಸ್ಥಿತಿಯನ್ನು ಟೀಕಿಸಿ ನೋಯಿಸುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ಕೇಳಿಬರುತ್ತಿರುತ್ತದೆ. ಬಹುತೇಕ ಪತ್ರಿಕೆಗಳೂ ಅದೇ ದಾಟಿಯಲ್ಲಿ ಬರೆಯುತ್ತವೆ. ನೀವು ನಂಬದಿದ್ದರೆ ಬೇಡ, ಹೀಗಳೆಯುವುದ್ಯಾಕೆ ಎಂದು ಪ್ರಶ್ನಿಸುವವರು ಯಥಾಸ್ಥಿತಿವಾದಿಗಳು. ಧರ್ಮ ಹೇಗಿದೆಯೋ ಹಾಗೆಯೇ ಇರಲಿ, ಸಾಧ್ಯವಾದರೆ ಉತ್ತಾಮ ಉತ್ತಮ ಸನಾತನ ಧರ್ಮಕ್ಕೆ ಹೋಗೋಣ, ಧರ್ಮಾಚರಣೆಗಳನ್ನು ಪ್ರಶ್ನಿಸದಿರೋಣ ಎನ್ನುವ ಅಭಿಪ್ರಾಯ ಹೆಚ್ಚುತ್ತಿದೆ. ಒಂದು ಧರ್ಮದೊಳಗೆ ಪ್ರಶ್ನೆಗಳೇಳದಿದ್ದರೆ ಆ ಧರ್ಮ ಸತ್ತಂತಾಗುತ್ತದೆ. ಗಾಂಧೀಜಿ, ಅಂಬೇಡ್ಕರ್ ಹಿಂದೂ ಧರ್ಮದ ಆಚರಣೆಗಳ, ಅವಮಾನಕರ ಶ್ರೇಣೀಕೃತ ಪದ್ಧತಿಯ ವಿರುದ್ಧ ದನಿಯೆತ್ತದಿದ್ದರೆ, ನೆನಪಿರಲಿ ಇವತ್ತು ಯಾವ ಸಮುದಾಯಗಳು ‘ಹಿಂದೂ’ ಧರ್ಮದ ಪರ ಪುಂಖಾನುಪುಂಖವಾಗಿ ಬರೆಯುತ್ತಿವೆಯೋ ಅವುಗಳಲ್ಲನೇಕ ಸಮುದಾಯಗಳಿಗೆ ಶಿಕ್ಷಣದ ಹಕ್ಕೂ ಸಿಗುತ್ತಿರಲಿಲ್ಲ. ಹಿಂದೂ ಧರ್ಮವನ್ನು ಉಗ್ರವಾಗಿ ಟೀಕಿಸಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಅಂಬೇಡ್ಕರ್ ಕೂಡ ಇವತ್ತಿನ ಮನಸ್ಥಿತಿಯ ಪ್ರಕಾರ ಹತ್ಯೆಗೊಳಗಾಗಲು ಅರ್ಹರು. ಧರ್ಮದ ಯಥಾಸ್ಥಿತಿಯನ್ನೇ ಕಾದುಕೊಳ್ಳಬೇಕೆಂದು ಕೊಳ್ಳುವವರ ಪ್ರಕಾರ ಸತಿ ಪದ್ಧತಿಯನ್ನು ವಿರೋಧಿಸಿದ, ದೇವದಾಸಿ ಪದ್ಧತಿಯನ್ನು ವಿರೋಧಿಸಿದವರೆಲ್ಲರ ಸಾವಿಗೂ ಸಂಭ್ರಮ ಪಡಬೇಕು! ಟೀಕೆಯನ್ನೊಪ್ಪಿಕೊಳ್ಳದ ಧರ್ಮ ಮುಂದೆ ಸಾಗಲಾರದು. ಈ ಅನಂತಮೂರ್ತಿ, ಭಗವಾನ್, ಕಲಬುರ್ಗಿಯವರ ಮೇಲೆ ದ್ವೇಷ ಹೆಚ್ಚಿಸುವುದರಲ್ಲಿ ಮಾಧ್ಯಮಗಳ ಪಾತ್ರವೂ ಪ್ರಮುಖವಾಗಿದೆ. ಇಡೀ ಭಾಷಣದಲ್ಲಿ ಬರುವ ಒಂದೋ ಎರಡೋ ಸಾಲುಗಳನ್ನಿಟ್ಟುಕೊಂಡು ಅದನ್ನೇ ಪ್ರಮಖವಾಗಿಸಿ ಉದ್ವಿಗ್ನ ಭಾವನೆಗಳನ್ನು ಪ್ರೇರೇಪಿಸುತ್ತವೆ. ಕಲಬುರ್ಗಿಯವರು ಅನಂತಮೂರ್ತಿಯವರ ವಿರುದ್ಧ ಮಾತನಾಡುತ್ತಾ ದೈವದ ಮೂರ್ತಿಗೆ ಉಚ್ಛೆ ಹುಯ್ದಿದ್ದ ಎಂದಿದ್ದರು. ಅದು ಅನೇಕ ದಿನಗಳ ಕಾಲ ಚರ್ಚೆಯ ವಿಷಯವಾಗಿತ್ತು. ಅನಂತಮೂರ್ತಿಯವರು ಪುಸ್ತಕವೊಂದರಲ್ಲಿ ದೆವ್ವ ಬಂದಾಗ ಸುತ್ತಲೂ ಉಚ್ಛೆ ಹುಯ್ದರೆ ದೆವ್ವ ಹತ್ತಿರ ಸುಳಿಯುವುದಿಲ್ಲ ಎಂದು ಬರೆದಿದ್ದರು. ಅದನ್ನು ಯಾವ ಮಾಧ್ಯಮದವರೂ ಸುದ್ದಿ ಮಾಡಲಿಲ್ಲ. ಅವರಿಗೆ ಸೆನ್ಶೇಷನ್ ಮೂಡಿಸುವುದು ಬೇಕಾಗಿತ್ತು. ಅದನ್ನವರು ಮಾಡಿದರು. ನಿಜ ವಿಷಯವನ್ನು ತಿಳಿಸದೆ ದ್ವೇಷದ ಭಾವನೆಯನ್ನು ಬೆಳೆಸುವಲ್ಲಿ ಸಹಕರಿಸಿದರು. ಕಲಬುರ್ಗಿಯವರು ಸತ್ತಾಗ ಫೇಸ್ ಬುಕ್ಕಿನ ಪೇಜೊಂದರಲ್ಲಿ ಅವರೇ ದೇವರ ಮೂರ್ತಿಯ ಮೇಲೆ ಉಚ್ಛೆ ಹುಯ್ದಿದ್ದರು ಎಂಬ ಸಾಲುಗಳು ಕಾಣಿಸಿದವು. ಅದನ್ನು ನೂರಾರು ಜನ ಲೈಕ್ ಮಾಡಿ ನೂರಾರು ಜನ ಶೇರ್ ಮಾಡಿದ್ದರು. ಮತ್ತೊಂದು ಸುಳ್ಳು ಸತ್ತ ಕಲಬುರ್ಗಿಯ ಮೇಲೆ ದ್ವೇಷ ಸಾಧಿಸಲು ನೆರವಾದವು. ಸುಳ್ಳಿನ ಜಾತ್ರೆಯಲ್ಲಿ ಸತ್ಯದ ಮೆರವಣಿಗೆ ಮಾಡುವುದೇ ತಪ್ಪೇನೋ?

ದಿನೇಶ್ ಅಮೀನ್ ಮಟ್ಟು ವಿವಿಧ ಜಾಲತಾಣಗಳಲ್ಲಿ ಬಂದ ಬೆದರಿಕೆಯ ಸಂದೇಶಗಳನ್ನು ಪರಿಗಣಿಸಿ ನನ್ನ ಹೆಸರೂ ಲಿಸ್ಟಿನಲ್ಲಿದೆ ಎಂದು ಹೇಳಿಕೊಂಡಿದ್ದೂ ಅಪಹಾಸ್ಯದ ವಿಷಯವಾಯಿತು. ನಮ್ಮ ದೇಶದ ಪರಿಸ್ಥಿತಿ ಅಷ್ಟೇನೂ ಹದಗೆಟ್ಟಿಲ್ಲ, ಈ ರೀತಿಯ ಹತ್ಯೆಗಳು ಪದೇ ಪದೇ ನಡೆಯುವುದಿಲ್ಲ ಎಂದು ನಂಬಬಯಸಿದರೂ ಹತ್ಯೆಯನ್ನು ಸಂಭ್ರಮಿಸುವ ಜನರಿರುವಾಗ ಏನೂ ಕೂಡ ಇಲ್ಲಿ ಸಾಧ್ಯ ಎನ್ನುವುದು ಸತ್ಯ. ದಿನೇಶ್ ಅಮೀನರಿಗೆ ಬೆದರಿಕೆಯ ಕರೆಗಳು ಪುಂಖಾನುಪುಂಖವಾಗಿ ಬರುತ್ತಿದ್ದುದು ಸುಳ್ಳಲ್ಲವಲ್ಲ. ಬೆದರಿಕೆಯ ಕರೆಗಳನ್ನು ಉಪೇಕ್ಷಿಸಿ, ಇದ್ದ ಪೋಲೀಸ್ ಬೆಂಗಾವಲನ್ನು ವಾಪಸ್ಸು ಕಳುಹಿಸಿದ ಕಾರಣಕ್ಕೇ ತಾನೇ ಕಲಬುರ್ಗಿಯವರ ಹತ್ಯೆಯಾಗಿರುವುದು. ಪೋಲೀಸ್ ಬೆಂಗಾವಲು ಇದ್ದಿದ್ದರೆ ಹತ್ಯೆ (ಮಾಡಿದವರ್ಯಾರೇ ಇರಲಿ) ನಡೆಯುತ್ತಿರಲಿಲ್ಲ. ದಿನೇಶ್ ಅಮೀನ್ ಪ್ರಗತಿಪರರೋ ವಿಚಾರವಂತರೋ ಮತ್ತೊಂದೋ ಮಗದೊಂದೋ ಮೊದಲಿಗೆ ಅವರೂ ಮನುಷ್ಯ, ಮನುಷ್ಯನಲ್ಲಿ ಸಹಜವಾಗಿರುವ ಭಯದ ಯೋಚನೆ ಅವರಲ್ಲೂ ಇದೆ. ಬೆದರಿಕೆಯ ಕರೆ ಸ್ವೀಕರಿಸುತ್ತಿದ್ದ, ಹಲ್ಲೆ ಎದುರಿಸಿದ್ದ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ಅದೇ ರೀತಿಯ ಬೆದರಿಕೆಗಳನ್ನು, ಹಲ್ಲೆಯನ್ನು ಎದುರಿಸಿದ ದಿನೇಶ್ ಅಮೀನ್ ಮಟ್ಟುರವರಿಗೆ ನಾನು ಇದೇ ರೀತಿ ಹತ್ಯೆಯಾಗಿಬಿಡಬಹುದಾ ಎಂಬ ಯೋಚನೆ ಬಂದರೆ ಅದು ಯಾರ ತಪ್ಪು? ಆ ಯೋಚನೆಯನ್ನೂ ಅಪಹಾಸ್ಯ ಮಾಡಬೇಕೆ?

ದೂರದ ಬಾಂಗ್ಲಾದೇಶದಲ್ಲಿ ನಡೆದ ಪ್ರಗತಿಪರ ಬ್ಲಾಗರುಗಳನ್ನು ಮುಸ್ಲಿಂ ಮೂಲಭೂತವಾದಿಗಳು ಸಾಯಿಸುತ್ತಿದ್ದಾರೆ, ಆ ಹತ್ಯೆಗಳು ನಮ್ಮನ್ನು ವಿಚಲಿತಗೊಳಿಸುವುದಿಲ್ಲ, ಪಕ್ಕದ ಮಹಾರಾಷ್ಟ್ರದಲ್ಲಿ ವಿಚಾರವಾದಿಯ ಹತ್ಯೆಯಾಗುತ್ತದೆ, ಎರಡು ವರುಷವಾದರೂ ಕೊಲೆಗಾರರ ಸುಳಿವು ಸಿಗುವುದಿಲ್ಲ. ಅದೂ ನಮ್ಮನ್ನು ವಿಚಲಿತಗೊಳಿಸುವುದಿಲ್ಲ. ನಮ್ಮ ಪಕ್ಕದ ಊರಿನ ವಿಚಾರವಾದಿಯ ಕೊಲೆಯೂ ನಮ್ಮನ್ನು ವಿಚಲಿತಗೊಳಿಸುವುದಿಲ್ಲ ಎಂದರೆ ನಮ್ಮನ್ನು ವಿಚಲಿತಗೊಳಿಸುವ ಸಂಗತಿ ಯಾವುದು? ನಮ್ಮ ವಿಚಾರಗಳನ್ನು ಒಪ್ಪದ ವ್ಯಕ್ತಿ ಮನೆಗೆ ನುಗ್ಗಿ ನಮ್ಮ ಹಣೆಗೇ ಗುರಿಯಿಟ್ಟಾಗಲಾದರೂ ನಾವು ವಿಚಲಿತಗೊಳ್ಳುತ್ತೇವಾ? ಸಮಾಜದ ಆತ್ಮಸಾಕ್ಷಿಯನ್ನು ಪ್ರತಿದಿನ ಕೊಲೆ ಮಾಡಲಾಗುತ್ತಿದೆ.……

ಸೆಪ್ಟೆಂ 4, 2015

ಸ್ವಾಮ್ಗಳ್ ಮಾತ್ಗಳು!

raghaweshwara swamy rape case
ರಾಘವೇಶ್ವರ ಭಾರತಿ ಸ್ವಾಮಿಗಳ ಮೇಲೆ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಆ ಪ್ರಕರಣ ದಾಖಲಿಸಿದ ಮಹಿಳೆಯ ವೈದ್ಯಕೀಯ ಪರೀಕ್ಷೆ ಇತ್ಯಾದಿ ಇತ್ಯಾದಿಗಳೆಲ್ಲವೂ ನಡೆಯುತ್ತಿದೆ. ಸ್ವಾಮಿಗಳ ಹೆಸರು ಕೆಡಿಸಲು ಮತ್ತೊಂದು ಪ್ರಯತ್ನವಿದು ಎಂಬ ಅಭಿಪ್ರಾಯಕ್ಕೇನೂ ಕೊರತೆಯಿಲ್ಲ. ಆ ಮಹಿಳೆಯ ಜೊತೆ ದೂರು ಕೊಡಲು ಹೋಗಿದ್ದ ಜನವಾದಿ ಸಂಘಟನೆಯ ವಿಮಲಾ “ರಾಘವೇಶ್ವರ ಸ್ವಾಮಿಗಳ ಮೇಲೆ ಮೊದಲು ಕೇಸು ಹಾಕಿದ್ದು ಪ್ರೇಮಲತಾ. ಅವರಿಗೆ ನ್ಯಾಯ ಸಿಕ್ಕಿದೆಯಾ? ಸಾಕ್ಷಿ ಸಂಗ್ರಹ ಅದೂ ಇದೂ ಅಂತ ದೇಶ ಪೂರ್ತಿ ತಿರುಗಿಸುತ್ತಿದ್ದಾರೆ. ಅವರ ಮನೆಯವರಿಗೆ ಕೊಡಬಾರದ ಕಷ್ಟಗಳನ್ನೆಲ್ಲ ಕೊಡುತ್ತಿದ್ದಾರೆ. ಇವೆಲ್ಲವನ್ನೂ ಕೇಳಿ ನೋಡಿದ ಮೇಲೆಯೂ ಒಂದು ಹೆಣ್ಣುಮಗಳು ಸುಖಾಸುಮ್ಮನೆ ಸ್ವಾಮಿಗಳ ಮೇಲೆ ಕಂಪ್ಲೇಂಟ್ ಕೊಟ್ಟು ತೊಂದರೆಗ್ಯಾಕೆ ಒಳಗಾಗುತ್ತಾಳೆ?” ಎಂದು ಪ್ರಶ್ನಿಸುತ್ತಾರೆ. ಅತ್ಯಾಚಾರದ ದೂರು ನೀಡಿದಾಕ್ಷಣ ಪೋಲೀಸರೇನು ಇತರೆ ಅತ್ಯಾಚಾರ ಪ್ರಕರಣಗಳಲ್ಲಿ ಮಾಡುವಂತೆ ಓಡಿಹೋಗಿ ಸ್ವಾಮೀಜಿಯನ್ನು ಬಂಧಿಸಿಲ್ಲ. ಕಾರಣ ಇಲ್ಲಿ ಎಲ್ಲರೂ ಸಮಾನರು ಕೆಲವರು ಹೆಚ್ಚು ಸಮಾನರು!

ಇವೆಲ್ಲದರ ಮಧ್ಯೆ ವಾಟ್ಸಪ್ಪಿನಲ್ಲಿ ರಾಘವೇಶ್ವರ ಸ್ವಾಮೀಜಿಗಳದ್ದು ಎನ್ನಲಾದ ಧ್ವನಿಮುದ್ರಿಕೆಯೊಂದು ಹರಿದಾಡುತ್ತಿದೆ. ತಮ್ಮ ಶಿಷ್ಯ ರಾಮಚಂದ್ರ ಎಂಬುವವರೊಡನೆ ಅವರಾಡಿರುವ ಮಾತುಗಳು ಸ್ವಾಮೀಜಿಯೆಂದರೆ ದೈವಾಂಶ ಸಂಭೂತವೆಂದುಕೊಂಡವರಿಗೆ ಕಪಾಳ ಮೋಕ್ಷ ಮಾಡಿದಂತಿದೆ. ಅವರಿಗೂ ಭಯವಿದೆ, ತಮ್ಮ ಸ್ಥಾನ ಗಟ್ಟಿಯಾಗಿಲ್ಲವೆಂಬ ಗಾಬರಿಯಿದೆ, ಕೋಪ – ತಾಪವಿದೆ, ತಮ್ಮ ಪ್ರಭಾವ ಬಳಸಿ ಏನನ್ನಾದರೂ ಅರಗಿಸಿಕೊಳ್ಳುವೆನೆಂಬ ಅಹಂಭಾವವೂ ಇದೆ. ಆ ಧ್ವನಿಮುದ್ರಿಕೆಯ ಮಾತುಗಳಿವು:

“ವಿರೋಧ ಮಾಡುವವರ ಬಗ್ಗೆ ನಮಗೆ ಭಿನ್ನಾಭಿಪ್ರಾಯ ಇಲ್ಲ…. ಈ ದಾರಿ ನಾವೇ ನಿಮಗೆ ಹೇಳಿಕೊಟ್ಟಿದ್ದೀವಿ. ವಿರೋಧ ಮಾಡುವವರ ಬಗ್ಗೆ ನಮಗೆ ಭಿನ್ನಾಭಿಪ್ರಾಯ ಇಲ್ಲ. ಇರಲಿ. 

ಅದು ಅವರ ಜಾತಿ ಸ್ವಭಾವ ಅದು ಜನ್ಮ ಸ್ವಭಾವ ಅದು.

ನಮ್ಮ ಸಮಸ್ಯೆ ಇರೋದು ನಮ್ಮ ಜೊತೆಗೆ ಇರೋರ ಬಗ್ಗೆ. ಬಸ್ ಸ್ಟ್ಯಾಂಡಿನಲ್ಲಿ ಬಾಯಿಗೆ ಬಂದಂತೆ ಮಾತಾಡ್ತಿರೋವಾಗ ನಿಮ್ಮ ಪೌರುಷ ಎಲ್ಲಿತ್ತು. ಶಿಷ್ಯರುಗಳ ಪೌರುಷ ಎಲ್ಲಿತ್ತು ಅಂತ. ನಮ್ಮ. . . . ನಮ್ಮ ಧ್ವನಿ ಅರ್ಥ ಮಾಡ್ಕೋ ರಾಮಚಂದ್ರ.

ಸಮಾಜವನ್ನ ಉದ್ಧಾರ ಮಾಡೋ ಕೆಲ್ಸ ನಮ್ದು. ಆದರೆ ಗುರುಪೀಠ ಕಾದುಕೊಳ್ಳೋ ಕೆಲ್ಸ ನಿಮ್ದು. ಧರ್ಮೋ ರಕ್ಷತಿ ರಕ್ಷಿತಃ.

ಲಂಕೇಶ್ ಪತ್ರಿಕೆ ಜೊತೆಗೆ ನಾವ್ ಹೋರಾಟ ಮಾಡೋಕೆ ಸಾಧ್ಯ ಇಲ್ಲಾ. ಬೀದಿ ಬಸವರಿಗೆ ನಾವ್ ಉತ್ತರ ಕೊಡ್ಲಿಕ್ಕೆ ಸಾಧ್ಯ ಇಲ್ಲ. ನೀನ್ ಉತ್ರ ಕೊಡ್ಬೇಕು ಅದಕ್ಕೆ.

ಎಲ್ಲಿದ್ರೀ ನೀವು? ನಿಮ್ಮ ಗುರುವನ್ನು ವಾಚಾಮಾಗೋಚರವಾಗಿ ನಿಂದೆ ಮಾಡುವಾಗ ಸಾಮೂಹಿಕ ನಾಶ ಮಾಡೋ ರೀತಿಯಲ್ಲಿ ಸಮಾಜದಲ್ಲಿ ಒಂದು …. ಈ ರೀತಿ ಅಡೆತಡೆ……ಎಲ್ಲಿದ್ರಿ ನೀವು?

ನಾವ್ ಕೇಳ್ತಿರೋ ಪ್ರಶ್ನೆ ಅದು. ನಮಗೆ….ನಮ್ ಸಾಮರ್ಥ್ಯ ಕಡಿಮೆ ಆಗಲಿಲ್ಲ. ನಿನಗ್ ಹೇಳ್ತೇನ್ ಕೇಳು.

ಜೀವನಪರ್ಯಂತ ಇಂಥಾ ಸಂಗ್ರಾಮಗಳನ್ನ ಎದುರಿಸ್ತೇವೆ ನಾವು. ಇಡೀ ಜಗತ್ತು ಮುಗಿದು …. ಮುರಿದುಬಿದ್ರೂ ಕೂಡ ಎದುರಿಸ್ತೇವೆ ನಾವು. ಆ ಛಾತಿ ಇದೆ ನಮಗೆ ಇವತ್ತೂ ಕೂಡ. ಯಾರಿಗಾಗಿ ಅನ್ನೋ ಪ್ರಶ್ನೆ ನಮಗೆ. ಯಾರಿಗಾಗಿ? ಯಾರ ಜೊತೆ ಮಾಡಬೇಕು ಸಂಗ್ರಾಮವನ್ನು? ನಾವಾಗ್ಲೇ ಹೇಳಿದ್ವು. ಹೊರಗಿನವರ್ಯಾರ ಜೊತೇನೂ ಸಂಗ್ರಾಮ ಮಾಡೋ ಸಂದರ್ಭ ಅಲ್ಲ ಇದು. ಒಳಗಿನವರ ಜೊತೆ ಮಾಡಬೇಕಾದ ಸಂಗ್ರಾಮ ಉದ್ಭವವಾಗಿಬಿಟ್ಟಿದೆ.

ನಿನಗೆ ಬೇಕು ಅಂತ ನಮಗ್ ಗೊತ್ತಾಗೋದ್ ಹ್ಯಾಗೆ? ಗುರು ಪೀಠ ಬೇಕು ಅಂತ ಗೊತ್ತಾಗೋದ್ ಹ್ಯಾಗೆ?

ಹಾಗಾಗಿ ಒಂದು ವಿಷಯ ಪುನಃ ಸ್ಪಷ್ಟಪಡಿಸುತ್ತೇನೆ. ಯಾರೋ ವಿರೋಧ ಮಾಡಿದ್ರು ನಿಂದನೆ ಮಾಡಿದ್ರು ಅಂತ ನಾವ್ ಹೆದರಿ ಹೊರಡ್ತಾ ಇರೋದ್ ಅಲ್ಲ. ಸಾಮರ್ಥ್ಯ ಕಡಿಮೆ ಆಗಿಲ್ಲ ಅಥವಾ ಅನುಭವ ಕಡಿಮೆ ಆಗಿಲ್ಲ. ಅವತ್ತು ನಮಗೇನ್ ಅನುಭವ ಇತ್ತೋ ಅದಕ್ಕಿಂತ ಹೆಚ್ಚೆಚ್ಚು ಅನುಭವ ಇದೆ, ಇವತ್ತಿದೆ.

ಇಂಥದನ್ ನಿಭಾಯಿಸಕ್ಕೆ ಬೇಕಾದಂತಹ ಎಲ್ಲವೂ ನಮ್ಮತ್ರ ಇದೆ. ಮಾಡಬೇಕಾ? ಯಾರಿಗಾಗಿ ಮಾಡಬೇಕು? ಯಾರಿಗಾಗ್ ಮಾಡಬೇಕೋ ಅವರೆಲ್ಲಾ ಕೂತ್ಕೊಂಡಿದ್ದಾರೆ ಅವರ ಜೊತೆಗೆ ….. ಅಲ್ಲ ಸುಮ್ನಿದ್ದಾರೆ”

‘ಎರಡನೇದ್ ಸತ್ಯ’

“ಉಳಿಸಿಕೊಳ್ಳುವ ಪ್ರಯತ್ನ ನೀವ್ ಮಾಡದಿದ್ರೆ ಉಳಿಯೋದಿಲ್ಲ. ನೀವ್ ಉಳಿಸ್ಕೊಂಡ್ರೆ ಉಳೀತದೆ ಇದು. ಒಂದು ನಿಮಗೆ ನಾವ್ ಪುನಃ ಪುನಃ ಸ್ಪಷ್ಟಪಡಿಸ್ತೀನಿ. ಇವತ್ತಿನವರೆಗೂ ಸಾರಥ್ಯವನ್ನು ನಾವೇ ಮಾಡಿದ್ದೇವೆ. ಸಂಗ್ರಾಮವನ್ನೂ ನಾವೇ ಮಾಡಿದ್ದೇವೆ. ಇನ್ನು ಎರಡೂ ಆಗ್ಲಿಕ್ಕಿಲ್ಲ. ನಿಮ್ ಕೆಲ್ಸ ನೀವ್ ಮಾಡಿ. ಪುನಃ ಹೇಳ್ತೇವೆ. ಸಮಾಜಕ್ಕೆ ಬೇಕಾದ್ ಎಲ್ಲಾನೂ ನಾವ್ ಮಾಡ್ತೇವೆ. ಆದ್ರೆ ಈ ವಿರೋಧದ ಅಲೆಗಳು ಏಳ್ತಾವಲ್ಲ ನೀವದನ್ನ ಎದುರಿಸಿ. ಅದು ನಿಮ್ ಕೆಲ್ಸ ಅದು. ನಿಮಗ್ ಬಂದ್ರೆ ನಾವ್ ನೋಡ್ಕೊಳ್ತೇವೆ. ಈ ಸಮಾಜದ ಕೊನೆಯ ಮಗುವಿಗೆ ಒಂದ್ ಆಪತ್ತು ಬಂದ್ರೆ ನಾವ್ ನಿಂತು ಮೊದಲು, ಆ ಮಗುವಿಗಿಂತ ಮೊದ್ಲು, ಏಟು ನಮಗ್ ಬೀಳ್ಬೇಕು. ಮುಂದೆ ನಿಂತು ಮಾತಾಡ್ತೇವೆ. ಆದ್ರೆ ಪೀಠ ಕಾಪಾಡೋ ಕೆಲ್ಸ ಯಾರದ್ದು? ಪೀಠದ ಮರ್ಯಾದೆ ಕಾಪಾಡೋ ಕೆಲ್ಸ ಯಾರದ್ದು? ಬರ್ತಾ ಬರ್ತಾ ನಮಗ್ ಅಭ್ಯಾಸ ಆಗೋಯ್ತಲ್ಲ ಅಂತ.

ಅದೇನ್ ವಿಷಯ ಲಂಕೇಶಲ್ಲಿ ಬಂದ್ರೇನು, ಹಾಯ್ ಬೆಂಗಳೂರಲ್ಲಿ ಬಂದ್ರೇನು ಇವನ್ ಮಾತಾಡಿದ್ರೇನು ಅವನ್ ಮಾತಾಡಿದ್ರೇನು ಅನ್ನೋ ತರಹ ಆದ್ರೆ…..ನೋಡು ರಾಮಚಂದ್ರ ಕೆಲ್ಸ ಮಾಡೋಕ್ ಒಂದ್ ವಾತಾವರಣ ಬೇಕು. ಆ ವಾತಾವರಣ ಇಲ್ದೆ ಕೆಲ್ಸ ಮಾಡ್ಲಿಕ್ಕೆ ಸಾಧ್ಯ ಇಲ್ಲ.

ನಾವೆಲ್ಲೂ ಕೆಲ್ಸ ಮಾಡೋದಿಲ್ಲಾ ಅಂತ ಹೇಳ್ತಾ ಇಲ್ಲ. ಎಲ್ಲೂ ಕೆಲ್ಸ ಮಾಡೋದಿಲ್ಲಾ ಅಂತ ಹೇಳ್ತಾ ಇಲ್ಲ. ನಾವೆಲ್ಲಿರ್ತೇವೆ ಅಲ್ಲಿ ಕೆಲ್ಸ ಆಗತ್ತೆ ತಮ್ಮಷ್ಟಕ್ಕೆ.

ಇಂಥದೇ ಸಾಮ್ರಾಜ್ಯಾನ ರಾಜಸ್ಥಾನದಲ್ಲಿ ಕಟ್ಬೋದು. ನೆನಪಿರಲಿ. ಸವಾಲಾಗಿ ಹೇಳ್ತಿದ್ದೇವೆ ನಾವು. ಇವತ್ತೇನ್ ಸಾಮ್ರಾಜ್ಯ ಇದೆ ನಮ್ದು ಇಂಥದೇ ಸಾಮ್ರಾಜ್ಯವನ್ನ ರಾಜಸ್ಥಾನಕ್ಕೆ ಹೋಗಿ ಕಟ್ತೇವೆ ನಾವು ಬೇಕಿದ್ರೆ. ಬಿಹಾರಕ್ಕೆ ಹೋಗಿ ಕಟ್ತೇವೆ ಬೇಕಿದ್ರೆ. ಬಂಗಾಳಕ್ಕೆ ಹೋಗಿ ಕಟ್ತೇವೆ ಬೇಕಿದ್ರೆ. ನಿಮಗ್ ಗೊತ್ತಿರ್ಲಿ, ಬೆಂಗ್ಳೂರಲ್ಲಿ ಎಷ್ಟು ದೊಡ್ಡ ಒಂದು ವಲಯ ಇದೆ ನಮ್ದು ಅದಕ್ಕಿಂತ ದೊಡ್ಡ ವಲಯ ಕಲ್ಕತ್ತಾದಲ್ಲಿದೆ ಇವತ್ತು. ಶ್ರೀಮಂತರಲ್ಲಿ ಶ್ರೀಮಂತರಿಂದ ಬಡವರಲ್ಲಿ ಬಡವರವರೆಗೆ ಬೆಂಗ್ಳೂರಿಗಿಂತ ಪೀಠಕ್ಕೆ ಶರಣಾಗಿರುವಂತಹ ವಲಯ ಕಲ್ಕತ್ತಾದಲ್ಲಿದೆ ಇವತ್ತು. ಸಾಮರ್ಥ್ಯ ಕಡಿಮೆಯಾಗಿ ಅಧ್ಯೆರ್ಯದಿಂದ ಆಡ್ತಿರೋ ಮಾತಲ್ಲ ಇದು. ನಿಮಗೆ ಬೇಕಾ ಅಂತಾ?”

‘ಶ್ರೀಗಳೋರು ಕ್ಷಮಿಸಬೇಕು. ನನಗರ್ಥ ಆಯ್ತು ಧಣಿ. ನನಗರ್ಥ ಆಯ್ತು ಧಣಿ’

ಸೆಪ್ಟೆಂ 3, 2015

ಮುಜಾಫರ್ ನಗರದ ಕೋಮುಗಲಭೆಯಲ್ಲಿ ನಲುಗಿದ ಧರ್ಮವ್ಯಾವುದು?

Muzaffarnagar baaqi hai
Dr Ashok K R
ದೃಶ್ಯ 1: 
ಪುಟ್ಟ ಹುಡುಗನನ್ನು ಸಂದರ್ಶನಕಾರರು ಮಾತನಾಡಿಸುತ್ತಿರುತ್ತಾರೆ. ಬಾಗಿಲ ಹೊರಗೆ ಗೋಡೆಗೊರಗಿಕೊಂಡು ನಿಂತಿರುತ್ತಾನೆ ಹುಡುಗ. ನಿಮ್ಮ ಊರು ಬಿಟ್ಟು ಇಲ್ಲಿಗ್ಯಾಕೆ ಬಂದೆ ಎನ್ನುತ್ತಾನೆ ಸಂದರ್ಶಕ. ‘ನಮ್ಮ ಮನೆ ಅಂಗಡಿಗೆಲ್ಲ ಬೆಂಕಿ ಹಚ್ಚಿಬಿಟ್ಟಿದ್ದರು. ಅದಕ್ಕೆ ಇಲ್ಲಿಗೆ ಬಂದೆ’.
‘ಶಾಲೆಗೆ ಹೋಗುತ್ತಿದ್ದಾ ಅಲ್ಲಿ’
‘ಹ್ಞೂ’
‘ಈಗ ಹೋಗ್ತಿಲ್ವಾ ಶಾಲೆಗೆ’
‘ಇಲ್ಲ’
‘ಯಾಕೆ’
ಹುಡುಗ ಒಂದರೆಕ್ಷಣ ಯೋಚಿಸುತ್ತಾನೆ ‘ಹೋಗ್ತೀನಿ ಇನ್ಮೇಲೆ’ ಎಂದ್ಹೇಳಿ ಒಳಗೋಡುತ್ತಾನೆ. ಒಂದೇ ಕೋಣೆಯ ಮನೆಯಲ್ಲಿ ಅಡುಗೆ ಮಾಡುತ್ತಿರುತ್ತಾಳೆ ಅಮ್ಮ. ‘ಅಮ್ಮ ಅಮ್ಮ ನಾನು ಶಾಲೆಗೆ ಹೋಗ್ತೀನಲ್ವಾ’ ಎಂದು ಕೇಳುತ್ತಾನೆ. ಅಮ್ಮನ ಬಳಿ ಸರಿಯಾದ ಉತ್ತರವಿರುವುದಿಲ್ಲ.
ದೃಶ್ಯ 2:
ರೈತರ ಸಂಘಟನೆಯ ಮುಖಂಡನೊಡನೆ ಮಾತುಕತೆ. ‘ಕಬ್ಬಿಗೆ ಬೆಲೆ ಸಿಕ್ಕಿಲ್ಲವಲ್ಲ ಯಾಕೆ?’
‘ಪ್ರತಿ ವರ್ಷ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ಹೋರಾಟ ಮಾಡುತ್ತಿದ್ದೋ. ಕಾರ್ಖಾನೆಯವರು ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುತ್ತಿದ್ದರು’
‘ಈಗ’
‘ಈಗೆಲ್ಲಿ ಗಲಭೆ ನಡೆದ ನಂತರ ರೈತರೆಲ್ಲ ಮುಸ್ಲಿಂ ಜಾಟ್, ಹಿಂದೂ ಜಾಟ್ ಆಗಿಬಿಟ್ಟಿದ್ದಾರೆ. ರೈತ ಹೋರಾಟ ಹಳ್ಳಹಿಡಿದಿದೆ. ಮೊದಲು ಮುಸ್ಲಿಮರು ಅಲ್ಲಾಹೋ ಅಕ್ಬರ್ ಅಂದ್ರೆ ಹಿಂದೂ ಹರಹರ ಮಹಾದೇವ್ ಅಂತ ಪ್ರತಿಕ್ರಿಯಿಸುತ್ತಿದ್ದ. ಈಗ ಹರಹರ ಮಹಾದೇವ್ ಅಷ್ಟೇ ಉಳಿದಿದೆ. ಅದೂ ಇಲ್ಲ ಹರಹರ ಮೋದಿ ಅಷ್ಟೇ ಉಳಿದಿದೆ.
Muzaffarnagar baaqi hai
ಗಲಭೆಗೆ ಬಲಿಯಾದ ಬಾಲ್ಯ
ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಕೋಮುಗಲಭೆಯ ಬಗ್ಗೆ ನಕುಲ್ ಸಿಂಗ್ ಸಾಹ್ನಿ ತೆಗೆದಿರುವ ‘ಮುಜಾಫರ್ ನಗರ್ ಬಾಕೀ ಹೈ’ ಸಾಕ್ಷ್ಯಚಿತ್ರದ ಎರಡು ದೃಶ್ಯಗಳಿವು. ಇಡೀ ಕೋಮುಗಲಭೆಯಿಂದ ಅನ್ಯಾಯಕ್ಕೊಳಗಾದವರಾರೆಂದು ಈ ಎರಡೇ ದೃಶ್ಯದಲ್ಲಿ ತೋರಿಸಿಬಿಡುತ್ತಾರೆ. ಬಾಲ್ಯ ಕಳೆದುಕೊಂಡ ಮಕ್ಕಳು, ಹಕ್ಕಿನ ಹೋರಾಟ ಕಳೆದುಕೊಂಡ ರೈತರು ಇಡೀ ಕೋಮುಗಲಭೆಯೆಂಬ ಪೂರ್ವನಿಯೋಜಿತ ಹಿಂಸಾ ನಾಟಕದಿಂದ ನೊಂದವರು. ಕೋಮುಗಲಭೆಯ ಸಂದರ್ಭವನ್ನನುಸರಿಸಿ ತೆಗೆಯುವ ಸಾಕ್ಷ್ಯಚಿತ್ರಗಳು ಒಂದು ಧರ್ಮದ ಪರವಾಗಿ ಮತ್ತೊಂದು ಧರ್ಮದ ವಿರುದ್ಧವಾಗಿ ವಾದ ಮಂಡಿಸಿಬಿಡುವ ಸಾಧ್ಯತೆಗಳೇ ಹೆಚ್ಚು. ತಮಗೆ ಬೇಕಾದವರ ಮಾತುಗಳನ್ನಷ್ಟೇ ಚಿತ್ರೀಕರಿಸಿಕೊಂಡು ತಮ್ಮಲ್ಲಿರುವ ಸ್ಥಾಪಿತ ಸತ್ಯಕ್ಕೆ ಮತ್ತಷ್ಟು ಪುರಾವೆಗಳನ್ನು ಸೃಷ್ಟಿಸಿಕೊಳ್ಳುವುದು ಸುಲಭದ ಕೆಲಸ. ಮನಸ್ಸಿನಲ್ಲಿ ಸ್ಥಾಪಿತವಾದ ಸತ್ಯಗಳನ್ನೆಲ್ಲ ತೊಡೆದುಹಾಕಿ ಹೊಡೆದವರ ಹೊಡೆಸಿಕೊಂಡವರನ್ನೆಲ್ಲಾ ಚಿತ್ರಿಸಿ ಕಣ್ಣಿಗೆ ಕಾಣಿಸುವ ಸತ್ಯದ ಹಿಂದಿರುವ ಸತ್ಯಗಳನ್ನು ಹುಡುಕಿ ತೆಗೆಯುವ ಕೆಲಸವನ್ನು ಈ ಸಾಕ್ಷ್ಯಚಿತ್ರ ಮಾಡಿದೆ. 
Muzaffarnagar riots documentary
ಧರ್ಮ ರಕ್ಷಿಸುವ ಕೆಲಸ...

ಮುಜಾಫರ್ ನಗರ ಗಲಭೆಯಲ್ಲಿ ಹಿಂದೂಗಳು ಹೊಡೆಯುವವರಾಗಿದ್ದರು, ಮುಸ್ಲಿಮರು ಹೊಡೆಸಿಕೊಂಡವರಾಗಿದ್ದರು. ಬಹುತೇಕ ಎಲ್ಲಾ ನಿರಾಶ್ರಿತರ ಶಿಬಿರಗಳು ಮುಸ್ಲಿಮರದೇ ಆಗಿತ್ತು. ಒಂದೇ ಒಂದು ನಿರಾಶ್ರಿತ ಶಿಬಿರ ಹಿಂದೂಗಳಿಗಿತ್ತು. ಅಲ್ಲಿಗೆ ಮುಸ್ಲಿಮರು ತಮ್ಮ ಕೈಲಾದ ಮಟ್ಟಿಗೆ ಹಿಂಸೆಯಲ್ಲಿ ಪಾಲ್ಗೊಂಡಿದ್ದು ನಿಚ್ಚಳವಾಗಿತ್ತು. ಆ ಹಿಂದೂ ನಿರಾಶ್ರಿತ ಶಿಬಿರದಲ್ಲಿದ್ದವರೆಲ್ಲ ಕೂಲಿ ನಾಲಿ ಮಾಡುತ್ತಿದ್ದ ದಲಿತರು. ಇನ್ನು ಮುಸ್ಲಿಂ ನಿರಾಶ್ರಿತ ಶಿಬಿರಗಳಲ್ಲೂ ಹೆಚ್ಚಿನ ಸಂಖೈಯಲ್ಲಿದ್ದಿದ್ದು ಕೂಲಿ ಕಾರ್ಮಿಕರೇ. ಐವತ್ತು ಚಿಲ್ಲರೆ ಬಾಗಿಲಿದ್ದ ಮನೆಯ ಒಡೆಯರು, ಸಣ್ಣ ಪುಟ್ಟ ಅಂಗಡಿ ನಡೆಸುತ್ತಿದ್ದವರು ಕೂಡ ಬೀದಿಗೆ ಬಿದ್ದಿದ್ದರು. ಒಂದು ಕೋಮುಗಲಭೆಗೆ ಎರಡೂ ಕೋಮಿನ ಜನರ ತಪ್ಪುಗಳಿರುವುದೇ ಅಧಿಕ. ಮುಜಾಫರ್ ನಗರದಲ್ಲೂ ಹಾಗೆಯೇ ಆಗಿತ್ತೆ? 

ಎಳೆಎಳೆಯಾಗಿ ಕೋಮುರಾಜಕಾರಣದ ಬಿಡಿಸುತ್ತಾ ಸಾಗುತ್ತದೆ ಸಾಕ್ಷ್ಯಚಿತ್ರ. ಮುಜಾಫರ್ ನಗರದ ಗಲಭೆಗೆ ಆರು ತಿಂಗಳ ಹಿಂದೆಯವರೆಗೂ ಆ ಪ್ರದೇಶದಲ್ಲಿನ ಪ್ರಮುಖ ಪತ್ರಿಕೆಗಳು ರಾಜಕೀಯದ, ಸಮಾಜದ ಸಂಕಟಗಳ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸುತ್ತಿರುತ್ತವೆ. ಆರು ತಿಂಗಳಿನಿಂದ ಬಹುತೇಕ ಪತ್ರಿಕೆಗಳಲ್ಲಿ ‘ಒಂದು ಕೋಮಿನ ಹುಡುಗ ಮತ್ತೊಂದು ಕೋಮಿನ ಹುಡುಗಿಯನ್ನು ಚುಡಾಯಿಸಿದ’ ಎನ್ನುವುದೇ ವಿವಿಧ ರೀತಿಯಲ್ಲಿ ಮರುಪ್ರಕಟವಾಗುತ್ತಿರುತ್ತದೆ. ಅಷ್ಟೊಂದು ಪ್ರಕರಣಗಳು ನಡೆದವಾ ಎಂದು ಗಮನಿಸಿದರೆ ಇಲ್ಲವೆಂಬ ಉತ್ತರ ಸಿಗುತ್ತದೆ. ಇದರ ಜೊತೆಜೊತೆಗೆ ಲವ್ ಜಿಹಾದ್ ಎಂಬ ಭೂತವನ್ನು ತೋರಿಸಿ ಬೆದರಿಸಲಾಗುತ್ತದೆ. ಹಿಂದೂ ಸಂಘಟನೆಯೊಂದರ ಮುಖಂಡನನ್ನು ಇದರ ಬಗ್ಗೆ ಸಂದರ್ಶಿಸಿದಾಗ ಆತ ಲವ್ ಜಿಹಾದ್ ಇದೆ ಎನ್ನುತ್ತಾನೆ. ‘ಸರಿ. ಲವ್ ಜಿಹಾದ್ ಇಂದ ತೊಂದರೆಗೊಳಗಾದ ಒಂದು ಹುಡುಗಿಯ ಕುಟುಂಬವನ್ನು ಪರಿಚಯಿಸಿ’ ಎಂದು ಸಂದರ್ಶನಕಾರ ಕೇಳಿಕೊಂಡಾಗ ತನ್ನ ಶಿಷ್ಯರಿಗೆ ಹಲವು ಫೋನ್ ಮಾಡುತ್ತಾನೆ. ಆ ಹುಡುಗಿ ಈಗ ಇಲ್ಲ, ಅವರ ಕುಟುಂಬ ಊರು ಬಿಟ್ಟಿದೆ, ಅವರು ಮಾತನಾಡಲು ತಯಾರಿಲ್ಲ ಎಂಬಂತಹ ಉತ್ತರಗಳೇ ದೊರಕುತ್ತವೆ. ಒಟ್ಟಿನಲ್ಲಿ ಒಂದು ಗಲಭೆಗೆ ಬೇಕಾದ ಎಲ್ಲಾ ಪೂರ್ವ ತಯಾರಿ ಮುಜಾಫರ್ ನಗರದ ವಿವಿಧ ಭಾಗಗಳಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ. ರಾಜಕೀಯ ಭಾಷಣಗಳಲ್ಲಿ ಎಲ್ಲರೂ ಪರಧರ್ಮ ನಿಂದನೆಯನ್ನೇ ಪ್ರಮುಖವಾಗಿಸಿಕೊಂಡುಬಿಡುತ್ತಾರೆ. ಕೊನೆಗೆ ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿಯನ್ನು ಚುಡಾಯಿಸಿದ್ದನ್ನು ನೆಪವಾಗಿಸಿಕೊಂಡು ಮುಸ್ಲಿಂ ಹುಡುಗನನ್ನು ಸಾಯುವವರೆಗೆ ಹೊಡೆಯುತ್ತಾರೆ. ಇತ್ತ ಮುಸ್ಲಿಮರು ಆ ಹಿಂದೂ ಹುಡುಗರಲ್ಲಿಬ್ಬರನ್ನು ಹೊಡೆದು ಸಾಯಿಸುತ್ತಾರೆ. ಕೋಮುಗಲಭೆ ಹೊತ್ತಿಕೊಳ್ಳಲು ಇದಕ್ಕಿಂತ ಹೆಚ್ಚು ಕಾರಣ ಬೇಕೆ? ಅದೂ ಗಲಭೆಯ ಆಟವಾಡಲು ಭೂಮಿಕೆ ಸಿದ್ಧವಾಗಿರುವಾಗ? ಕೋಮುಗಲಭೆಯ ಜ್ವಾಲೆಗಳು ಎಲ್ಲೆಡೆ ಹರಡಲು ವಾಟ್ಸಪ್ಪು ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಹುಡುಗರಿಬ್ಬರನ್ನು ಸಾಯಿಸಿದ ವೀಡಿಯೋ ಕೂಡ ಪ್ರಮುಖ ಕಾರಣ. ಬಿಜೆಪಿಯ ನಾಯಕರೂ ಈ ವೀಡಿಯೋವನ್ನು ಹಂಚುತ್ತಾರೆ. ಅಸಲಿಗೆ ಆ ವೀಡಿಯೋ ಪಾಕಿಸ್ತಾನದಲ್ಯಾವಗಲೋ ಚಿತ್ರಿತವಾಗಿದ್ದು ಎಂಬ ಸಂಗತಿ ತಿಳಿಯುವುದರೊಳಗೆ ಹಿಂಸೆ ವ್ಯಾಪಕವಾಗಿ ಸಾವಿರಾರು ಜನರು ನಿರಾಶ್ರಿತರಾಗುತ್ತಾರೆ. ಒಂದು ಊರಿನ ಬೀದಿಯಲ್ಲಿನ ಎರಡು ಅಂಗಡಿಯ ಮೇಲೆ ಹಿಂದೂ ಹೆಸರಿದೆ. ಮಧ್ಯದ ಅಂಗಡಿಯ ಮೇಲೆ ಮುಸ್ಲಿಂ ಹೆಸರಿದೆ. ಹಿಂದೂ ಅಂಗಡಿಗಳು ಸುರಕ್ಷಿತವಾಗಿದ್ದರೆ ಮುಸ್ಲಿಂ ಅಂಗಡಿ ಸುಟ್ಟು ಕರಕಾಲಗಿರುವ ದೃಶ್ಯ ಇಡೀ ಮುಜಾಫರ್ ನಗರ ಗಲಭೆಯಲ್ಲಿ ಹಾನಿಗೀಡಾದವರು ಯಾರು ಎನ್ನುವುದನ್ನು ತಿಳಿಸಿಬಿಡುತ್ತದೆ. 
muzaffarnagar baaqi hai
ಒಂದು ಬದಲಾವಣೆಗೆ ಪ್ರಯತ್ನಿಸುವವರು.....
ಸಂತ್ರಸ್ತರ ಗೋಳು, ರಾಜಕಾರಣಿಗಳ ಕಪಟ ಮಾತುಗಳು, ಮತಾಂಧ ಸಂಘಟನೆಯ ಕಾರ್ಯಕರ್ತರ ಅಟ್ಟಹಾಸದ ನಡುವೆ ಅಲ್ಲಲ್ಲಿ ಇದ್ದಕ್ಕಿದ್ದಂತೆ ರೈತ, ಕಬ್ಬು, ಆಲೆಮನೆ, ಸಕ್ಕರೆ ಕಾರ್ಖಾನೆಗಳನ್ನು ತೋರಿಸುತ್ತಾರೆ. ಕೋಮುಗಲಭೆಯಲ್ಲಿ ರೈತನ ಚಿತ್ರಣವ್ಯಾಕೆ ಎನ್ನುವುದಕ್ಕೆ ಉತ್ತರ ಸಾಕ್ಷ್ಯಚಿತ್ರ ಸಾಗಿದಂತೆ ತಿಳಿಯುತ್ತದೆ. ರೈತನಾಗಿದ್ದ ರೈತನಲ್ಲಿ ಮುಸ್ಲಿಂ ರೈತ ಹಿಂದೂ ರೈತ ಎಂಬ ಭಿನ್ನಾಭಿಪ್ರಾಯ ಮೂಡುತ್ತದೆ. ಜೊತೆಜೊತೆಯಾಗಿದ್ದವರೇ ಹೊಡೆದಾಡಿಕೊಳ್ಳುತ್ತಾರೆ. ಧರ್ಮಭೇದವಿಲ್ಲದೇ ಒಂದಾಗಿದ್ದ ರೈತ ಸಂಘಟನೆಗಳು ಧರ್ಮಾಧಾರಿತವಾಗಿ ವಿಭಜಿತವಾಗಿ ಬಿಟ್ಟ ಮೇಲೆ ಎಲ್ಲಿಯ ರೈತ ಹೋರಾಟ? ‘ಗಲಭೆಯಿಂದ ಹೆಚ್ಚು ಲಾಭ ಪಡೆದುಕೊಂಡಿದ್ದು ಸಕ್ಕರೆ ಕಾರ್ಖಾನೆಗಳು. ಅವರು ಕೊಟ್ಟಷ್ಟೇ ದುಡ್ಡಿಗೆ ನಾವೀಗ ಕಬ್ಬು ಹೊಡೆಯಬೇಕು. ಯಾಕೆಂದರೆ ನಮ್ಮಲ್ಲೀಗ ಹೋರಾಟವಿಲ್ಲ. ಮುಸ್ಲಿಂ ರೈತ ಬಂದರೆ ಹಿಂದೂ ಬರೋದಿಲ್ಲ, ಹಿಂದೂ ಬಂದರೆ ಮುಸ್ಲಿಂ ಬರೋದಿಲ್ಲ’ ಎಂದೊಬ್ಬ ಬೆಳೆಗಾರ ಹೇಳುವ ದೃಶ್ಯ ಒಂದು ಗಲಭೆಯ ದುರ್ಬಾಹುಗಳು ಎಲ್ಲಿಯವರೆಗೆ ಚಾಚಲು ಸಾಧ್ಯ ಎಂದು ತಿಳಿಸುತ್ತದೆ. ಅಯೋಧ್ಯಾ ಗಲಭೆಯ ಸಂದರ್ಭದಲ್ಲೂ ಶಾಂತವಾಗಿದ್ದ ಹಳ್ಳಿಗಳಲ್ಲಿ ಈ ಬಾರಿ ಗಲಭೆ ನಡೆಯಿತು. ಇದೆಲ್ಲದರ ಲಾಭ ಪಡೆದಿದ್ಯಾರು? 

ಇವೆಲ್ಲದರ ಆಯೋಜಕ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ಎಂದು ನಿಸ್ಸಂಶಯವಾಗಿ ಹೇಳಬಹುದು. ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶಕ್ಕೆ ಪ್ರಾಮುಖ್ಯತೆ ಜಾಸ್ತಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಹತ್ತು ಸ್ಥಾನಗಳನ್ನಷ್ಟೇ ಗಳಿಸಿದ್ದ ಬಿಜೆಪಿ ಈ ಎಲ್ಲ ಗಲಭೆಯ ನಂತರ ನಡೆದ ಚುನಾವಣೆಯಲ್ಲಿ ಬರೋಬ್ಬರಿ ಎಪ್ಪತ್ತು ಸ್ಥಾನಗಳಲ್ಲಿ ಗೆದ್ದು ಬೀಗಿತು. ಅದು ನಡೆಸಿದ ಕೋಮುಗಲಭೆಯ ರಾಜಕೀಯ ಧರ್ಮಾಧಾರಿತವಾಗಿ ಹಿಂದೂಗಳೆಲ್ಲರೂ ಬಿಜೆಪಿಗೆ ಮತ ಹಾಕುವಂತೆ ಮಾಡಿತು. ಮುಸ್ಲಿಮರ ಪರ ಎಂಬ ಸೋಗಿನ ಸಮಾಜವಾದಿ ಪಕ್ಷ ನಿರಾಶ್ರಿತ ಶಿಬಿರಗಳಲ್ಲಿರುವ ಜನರ ಸಂಕಷ್ಟಗಳನ್ನು ಪರಿಹರಿಸುವ ಕೆಲಸ ಮಾಡುವುದನ್ನು ಬಿಟ್ಟು ನಿರಾಶ್ರಿತ ಶಿಬಿರಗಳನ್ನೇ ರಾತ್ರೋರಾತ್ರಿ ಬೀಳಿಸಿ ನಿರಾಶ್ರಿತರನ್ನು ಮತ್ತೊಮ್ಮೆ ಬೀದಿಗೆ ತಳ್ಳಿದರು. ‘ದೀದಿ ಒಮ್ಮೆ ಗಲಭೆಯಲ್ಲಿ ತೊಂದರೆಗೊಳಗಾದವರನ್ನು ಭೇಟಿಯಾಗಿಬಿಟ್ಟಿದ್ದರೆ ಎಲ್ಲೆಡೆಯೂ ಅವರೇ ಗೆಲ್ಲುತ್ತಿದ್ದರು. ಅವರ ಸುತ್ತಲಿರುವ ಮೂವರು ಬ್ರಾಹ್ಮಣರು ನಮ್ಮನ್ನವರು ಭೇಟಿಯಾಗಲು ಬಿಡಲಿಲ್ಲ’ ಎಂದು ಮಾಯವತಿಯ ಬಿ.ಎಸ್.ಪಿಯ ಸೋಲನ್ನು ಅಲ್ಲಿಯವರು ವಿಶ್ಲೇಷಿಸುತ್ತಾರೆ. ಒಂದು ಅಪಾಯಕಾರಿ ಗಲಭೆಯನ್ನು ಪ್ರಾಯೋಜಿಸಿ ದೊಡ್ಡ ಮಟ್ಟದಲ್ಲಿ ಗೆದ್ದು ಬೀಗುತ್ತದೆ ಬಿಜೆಪಿ. ಈ ಎಲ್ಲಾ ರಾಜಕಾರಣಿಗಳ ನಡುವೆ ಭಗತ್ ಸಿಂಗನ ಒಂದು ಫೋಟೋ ಹಿಡಿದುಕೊಂಡು ಐದು ಹುಡುಗರು ಹಳ್ಳಿ ಹಳ್ಳಿ ತಿರುಗುತ್ತಾರೆ. ವಸ್ತುಸ್ಥಿತಿಯನ್ನು ವಿವರಿಸುತ್ತಾರೆ. ಗಲಭೆಯ ದೆಸೆಯಿಂದ, ಕೋಮು ರಾಜಕಾರಣದ ದೆಸೆಯಿಂದ ಹೇಗೆ ಊರಿನ ನಿಜವಾದ ಸಮಸ್ಯೆಗಳು ಚರ್ಚೆಗೇ ಬರದೆ ಹೋಗುತ್ತಿದೆ ಎಂದು ವಿವರಿಸಿ ಹೇಳುತ್ತಾರೆ. ಹೌದೆಂದು ತಲೆಯಾಡಿಸುವ ಜನ ಧರ್ಮಾಧಾರಿತವಾಗಿ ಮತ ಚಲಾಯಿಸುತ್ತಾರೆ....... ಉಳುವುದಕ್ಕೆ ಭೂಮಿಗೆ ಕಾಲಿಟ್ಟ ರೈತನಿಗೆ ಧರ್ಮವಿಲ್ಲ; ಕೋಮುಗಲಭೆಯ ದೆಸೆಯಿಂದ ಈಗಾತ ಒಬ್ಬಂಟಿ......

ಒಂದು ಸಶಕ್ತ ಸಾಕ್ಷ್ಯಚಿತ್ರವಿದು. ಪ್ರಮುಖ ಅಂಶಗಳ ಬಗ್ಗೆಯಷ್ಟೇ ಇಲ್ಲಿ ಬರೆದಿದ್ದೇನೆ. ಇಡೀ ಸಾಕ್ಷ್ಯಚಿತ್ರದಲ್ಲಿ ಸತ್ಯದ ಮಾತನಾಡುವವರು ಮಹಿಳೆಯರು. ಗಂಡಸರ ದ್ವಂದ್ವಗಳನ್ನವರು ಈಚೆಗೆಳೆಯುತ್ತಾರೆ! ಭಯೋತ್ಪಾದನೆ, ಉಗ್ರತೆಗಳೆಲ್ಲವೂ ಮುಸ್ಲಿಮರದೇ ಕೃತ್ಯ, ಹಿಂದೂಗಳು ಎಂದಿಗೂ ಭಯೋತ್ಪಾದಕರಾಗಲು, ಉಗ್ರಗಾಮಿಗಳಾಗಲು ಸಾಧ್ಯವೇ ಇಲ್ಲ ಎಂದಿನ್ನೂ ನಂಬುವವರು ಈ ಸಾಕ್ಷ್ಯಚಿತ್ರವನ್ನು ನೋಡಲೇಬೇಕು. ಕೈಯಲ್ಲಿ ಬಂದೂಕು ಹಿಡಿದವ ಮಾತ್ರ ಭಯೋತ್ಪಾದಕನಲ್ಲ, ಮನಸ್ಸಿನ ತುಂಬ ನಂಜು ತುಂಬಿಕೊಂಡು ಅನ್ಯಧರ್ಮದವನ ಮನೆ ಸುಡಲೆಂದೇ ಜೇಬಿನಲ್ಲೊಂದು ಬೆಂಕಿಪಟ್ಟಣ ಇಟ್ಟುಕೊಂಡವನೂ ಭಯೋತ್ಪಾದಕನೇ ಎಂಬ ಸತ್ಯದ ಅರಿವಾಗುತ್ತದೆ.
ಟ್ರೇಲರ್ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

ಬರ

ಮೌನಯೋಗಿ
ಬಿಸಿದ ಬುವಿಗೆ
ಮೋಡ ಬಸಿದು ಹನಿಯಾಗದೆ
ಕಾರ್ಮೋಡ ಕಗ್ಗತ್ತಲು ಕವಿಯುವ ಮುನ್ನ


ಕನಸ ಕಡಲೋಳ್
ನವೆ ನೂಕುವ ಭಾರ
ಹನಿ ನೀರಿಗೂ ಇಲ್ಲಿ ತತ್ವಾರ

ಮುಸುಕು ತೆಗೆ ತಾಯೆ
ಹಸಿವೆಯ ಹದ್ದು
ಹರಿದು ನುಂಗುವ ಮುನ್ನ

ಶೋಷಣೆಯ ಮುಸುಕ ಸರಿಸಲು
ಬುದ್ಧ, ಬಸವರ ಪ್ರಯತ್ನವೆಷ್ಟೊ
ಕಷ್ಟಕೂಟಲೆಗಳ ಜೀವಿತ

ವ್ಯರ್ಥವಾಗಿ ಹೋಯಿತೆ
ದಾಸ ಶ್ರೇಷ್ಠರ ಹೋರಾಟ
ಸಂಘಟನೆಗಳ ಹಮ್ಮೀರರ ಹಾರಾಟ ಚೀರಾಟ

ಸ್ನೇಹ ಸೌಹಾರ್ದತೆಯ ಬೀಜ
ಬಿದ್ದು ಬೆಳೆಯಲಿ ಇಲ್ಲಿ
ಶೋಷಣೆ ರಹಿತ ಸಮಾಜ ನಿರ್ಮಾಣವಾಗಲಿ.
ಸಾಂದರ್ಭಿಕ ಚಿತ್ರ: ಅಂತರ್ಜಾಲ

ಸೆಪ್ಟೆಂ 1, 2015

ದುಡ್ಡಿನರಮನೆಯಲ್ಲಿ ಕಳೆದುಹೋಗಿರುವ ಮಾಧ್ಯಮ ಸಂವೇದನೆ ಮೂಡಿಸುವುದೆಂತು?

Dr Ashok K R
ಮೊನ್ನೆ ಭಾನುವಾರ ಬೆಳಿಗ್ಗೆ ಹತರಾದ ಡಾ.ಎಂ.ಎಂ.ಕಲಬುರ್ಗಿಯವರ ಸಾವಿಗೆ ಸಂತಾಪ ಸೂಚಿಸಲು ಮತ್ತು ಕೊಲೆಗಾರರನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಲು ಬೆಂಗಳೂರಿನ ಟೌನ್ ಹಾಲ್ ಬಳಿ ಹೋಗಿದ್ದಾಗ ಆಕಸ್ಮಿಕವಾಗಿ ಬೋಳುವಾರು ಮೊಹಮದ್ ರವರ ಪರಿಚಯವಾಯಿತು. ಹೊಸಬನೊಡನೆ ಸರಾಗವಾಗಿ ಮಾತನಾಡುತ್ತಿದ್ದರು. ಎಸ್.ಡಿ.ಪಿ.ಐ ಸಂಘಟನೆಯ ಕಾರ್ಯಕರ್ತರು ಅವರ ಧ್ವಜವನ್ನು ಹೊರತೆಗೆದಾಗ ‘ಯಾವ ಸಂಘದ ಕಾರ್ಯಕ್ರಮವೂ ಅಲ್ಲ. ಇಲ್ಲಿ ಫ್ಲ್ಯಾಗ್ ಇಟ್ಕೊಂಡು ಪ್ರಚಾರ ಮಾಡ್ಕೊಳ್ಳೋದ್ಯಾಕೆ’ ಎಂದು ರೇಗಿದರು. ಉಳಿದವರೂ ಧ್ವಜಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಧ್ವಜಗಳನ್ನು ಮಡಿಚಿಟ್ಟರು. ‘ಏನ್ ಕರ್ಮಾರೀ ಇವರ್ದು, ಅರವತ್ತು ವರ್ಷ ವಯಸ್ಸಾದ್ರೆ ಏನೋ ಮುತ್ಸದ್ಧಿ ಅಂತ ತೋರಿಸ್ಕೊ‍ಳ್ಳೋ ಚಟಕ್ಕೆ ಗಡ್ಡ ಬಿಟ್ಕೊಳ್ಲಿ. ಇಪ್ಪತ್ತು ವರ್ಷಕ್ಕೆ ಗಡ್ಡ ಬಿಟ್ಕೊಂಡು ಅಸಹ್ಯವಾಗಿ ಕಾಣ್ತಾರಪ್ಪ’ ಎಂದು ಗೊಣಗಿದರು. ನನ್ನ ಕುರುಚಲು ಗಡ್ಡ ಕೆರೆದುಕೊಂಡೆ. ಜಿ.ರಾಮಕೃಷ್ಣರವರನ್ನು ನೆರೆದಿದ್ದ ಜನಸಮೂಹವನ್ನುದ್ದೇಶಿಸಿ ಮಾತನಾಡಬೇಕೆಂದು ಮುಂದಕ್ಕೆ ಕರೆದರು. ಆ ವಯಸ್ಸಿನಲ್ಲೂ ಸಾಹಿತಿ – ಸಂಶೋಧಕನ ಹತ್ಯೆಗೆ ಪ್ರತಿಭಟನೆ ಸೂಚಿಸಲು ಬಂದಿದ್ದ ಜಿ.ಆರ್ ಟೌನ್ ಹಾಲಿನ ಮೆಟ್ಟಲಿಳಿದು ಮೈಕ್ ಕೈಗೆತ್ತಿಕೊಳ್ಳುವಷ್ಟರಲ್ಲಿ ಗಿರೀಶ್ ಕಾರ್ನಾಡ್ ಆಗಮಿಸಿದರು. ಟಿವಿ ವಾಹಿನಿಯವರೆಲ್ಲರೂ ಮೈಕು ಕ್ಯಾಮೆರಾಗಳೊಂದಿಗೆ ಗಿರೀಶ್ ಕಾರ್ನಾಡರತ್ತ ಧಾವಿಸಿದರು. ಜಿ.ಆರ್ ಮಾತನಾಡಲಿ ಮೊದಲು ಎಂದು ಕೆಲವರು ಕೂಗಿದರೂ ವಾಹಿನಿಯವರದು ಜಾಣ ಕಿವುಡು. ಮೈಕ್ ಹಿಡಿದುಕೊಂಡ ಜಿ.ಆರ್ ಮೌನದಿಂದ ನಿಂತಿದ್ದರು. ಬಿಡಿ, ಸಾಮಾನ್ಯರಿಗೆ ಗಿರೀಶ್ ಕಾರ್ನಾಡರನ್ನಷ್ಟೇ ಗುರುತಿಸುವುದು ಸಾಧ್ಯ, ಕಾರಣ ಅವರೊಬ್ಬ ನಟರಾದ್ದರಿಂದ ಅಲ್ಲಿಲ್ಲಿ ನೋಡಿರುತ್ತೇವೆ. ಮಾಧ್ಯಮದವರಿಗಾದರೂ ಯಾರ ಮಾತಿಗೆ ನಾವು ಅಡ್ಡಿಪಡಿಸುತ್ತಿದ್ದೇವೆ, ಯಾರು ನಮ್ಮಿಂದ ಕಾಯುವಂತಾಗಿದ್ದಾರೆ ಎಂಬ ಪ್ರಜ್ಞೆಯೂ ಇರಬೇಡವೇ? ಗಿರೀಶ್ ಕಾರ್ನಾಡ್ ಅವರನ್ನು ಗುರುತಿಸುವವರ ಸಂಖೈ ಹೆಚ್ಚು, ಅವರ ಮಾತಿಗೆ ಕೊನೇಪಕ್ಷ ಟಿವಿಯಲ್ಲಿ ಟಿ.ಆರ್.ಪಿ ಹೆಚ್ಚು ಎನ್ನುವುದನ್ನು ಒಪ್ಪೋಣ. ಗಿರೀಶ್ ಕಾರ್ನಾಡರದ್ದೇ ಬೈಟ್ ತೆಗೆದುಕೊಳ್ಳಲಿ; ಆದರೆ ಆ ಬೈಟಿಗಾಗಿ ಒಂದರೆಕ್ಷಣ ಕಾಯುವಷ್ಟೂ ಪುರುಸೊತ್ತಿಲ್ಲದಂತಾಯಿತೇ ನಮ್ಮ ಮಾಧ್ಯಮ ಮಿತ್ರರಿಗೆ? ಇಷ್ಟೊಂದು ಸಂವೇದನಾರಹಿತರಾಗಿ ಕಾರ್ಯನಿರ್ವಹಿಸುವ ಅನಿವಾರ್ಯವಾದರೂ ಏನು? ‘ಆ ಟಿವಿಯವರು ಬೈಟ್ ತೆಗೆದುಕೊಂಡಿದ್ದಾರೆ. ನೀನ್ಯಾಕೆ ತೆಗೆದುಕೊಂಡಿಲ್ಲ’ ಎಂದವರ ಮಾಲೀಕರು ಬೈಯ್ಯುತ್ತಾರಾ?

ಮನೆಗೆ ವಾಪಸ್ಸಾದ ನಂತರ ಟಿವಿ ಹಾಕಿದರೆ ವಾಹಿನಿಯೊಂದರಲ್ಲಿ ಶಿವರಾಜ್ ಕುಮಾರ್ ತನ್ನ ಭಾವೀ ಅಳಿಯನಿಗೆ ಗಿಫ್ಟಾಗಿ (ಇದು ವರದಕ್ಷಿಣೆಯೇ ಅಲ್ಲವೇ?!) ಕೊಡುವ ಕಾರಿನ ಬಗೆಗಿನ ಚರ್ಚೆ! ಭಾವೀ ಅಳಿಯನ ಸಂದರ್ಶನ ಬೇರೆ... ಥೂ ಇವರ ಯೋಗ್ಯತೆಗೆ ಎಂದುಕೊಂಡೆ. ಸಹೋದ್ಯೋಗಿಯ ಬಗ್ಗೆ ಇದೇ ವಿಷಯ ಚರ್ಚಿಸುವಾಗ ‘ರೀ. ಅಳಿಯನ ಸಂದರ್ಶನವೇ ವಾಸಿ. ಅಡುಗೆ ಮಾಡೋರತ್ರ, ಡೆಕೊರೇಷನ್ ಮಾಡೋರ್ ಮುಖದ್ ಮುಂದೆ ಮೈಕಿಡ್ದು ಶಿವಣ್ಣನ ಮಗಳ ಮದುವೆ ಕೆಲಸ ಮಾಡ್ತಿದ್ದೀರಲ್ಲ ನಿಮಗೇನನ್ಸುತ್ತೆ? ಗೀತಕ್ಕ ನಿಮಗೇ ಇಂತಿಂತದೇ ಮಾಡ್ಬೇಕು ಅಂದ್ರಾ? ಅಂತೆಲ್ಲ ಕೇಳ್ತಿದ್ರು’ ಅಂದರು. ಮದುವೆ ಹಿಂದಿನ ದಿನದ ಸಮಾರಂಭ, ಮದುವೆ ದಿನದ ಸಂಪೂರ್ಣ ಲೈವ್ ಪ್ರಸಾರ....... ಮಾಧ್ಯಮ ಉದ್ಯಮವೆಂಬುದು ಸತ್ಯ, ಲಾಭದಲ್ಲಿದ್ದರಷ್ಟೇ ಮುಂದುವರೆಯಲು ಸಾಧ್ಯ ಎಂಬುದೂ ಸತ್ಯ.... ಆ ಕಾರಣಕ್ಕೆ ಇಷ್ಟೊಂದು ಕೆಳ ಮಟ್ಟಕ್ಕಿಳಿಯಬೇಕೆ? 

ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ನಟನಾಗಿ ದೊಡ್ಡ ಹೆಸರು. ತಂದೆ ರಾಜ್ ಕುಮಾರ್ ಪ್ರಭಾವಳಿಯಿಂದ ಚಿತ್ರರಂಗಕ್ಕೆ ಅವರ ಮಕ್ಕಳು ಬಂದವರಾದರೂ ತಮ್ಮದೇ ಪ್ರತಿಭೆ, ಶ್ರಮದಿಂದ ಚಿತ್ರರಂಗದಲ್ಲಿ ನೆಲೆನಿಂತವರು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರರೆಲ್ಲರೂ ಗೌರವಕ್ಕೆ, ಆದರಕ್ಕೆ ಅರ್ಹರು. ಅವರ ಮಕ್ಕಳು ಯಾವ ರೀತಿಯ ಸಾಧಕರು? ಅವರ ಮದುವೆಗ್ಯಾಕೆ ಅಷ್ಟೊಂದು ಪ್ರಾಮುಖ್ಯತೆ. ಓಕ್ಕೋಳ್ಳಿ, ಮದುವೆ ಸಮಾರಂಭವನ್ನು ಬಹುತೇಕ ಪತ್ರಿಕೆಗಳು ಚಿಕ್ಕದಾಗಿ ಪ್ರಕಟಿಸಿರುವಂತೆ ಒಂದೈದು ನಿಮಿಷದ ಸುದ್ದಿ ಮಾಡಿದರೆ ಒಪ್ಕೋಬಹುದು. ದಿನವಿಡೀ ಲೈವ್ ಆಗಿ ತೋರಿಸೋ ದರ್ದೇನು ಮಾಧ್ಯಮದವರಿಗೆ? ‘ಸಿದ್ಧರಾಮಯ್ಯ ಬಂದ್ರು, ಸಿದ್ಧರಾಮಯ್ಯ ಸ್ಟೇಜ್ ಹತ್ತುದ್ರು, ಸಿದ್ಧರಾಮಯ್ಯ ಕೈ ಕೊಟ್ರು, ಸಿದ್ಧರಾಮಯ್ಯ ಕೆಳಗಿಳಿದ್ರು’ ಅಂತ ರನ್ನಿಂಗ್ ಕಾಮೆಂಟ್ರಿ ಬೇರೆ! ಹೋಗ್ಲಿ ಮದುವೆಯೇನಾದ್ರೂ ತುಂಬ ವಿಭಿನ್ನವಾಗಿ, ಸಮಾಜಕ್ಕೆ ಮಾದರಿಯಾಗಿ ನಡೆಯಿತಾ? ಇಲ್ಲವಲ್ಲ. ಅದೊಂದು ಐಷಾರಾಮಿ ಮದುವೆ. ಅವರ ದುಡ್ಡು ಅವರ ಐಷಾರಾಮಿತನ ಅವರಿಷ್ಟ. ಖಾಸಗಿ ಐಷಾರಾಮಿತನವನ್ನು ಲೈವ್ ತೋರಿಸಿ ಸಮಾಜಕ್ಕೆ ಯಾವ ರೀತಿಯ ಸಂದೇಶವನ್ನು ಕೊಡುತ್ತಿವೆ ಮಾಧ್ಯಮಗಳು? ಇದೆಲ್ಲಕ್ಕಿಂತಲೂ ಅಸಹ್ಯವೆಂದರೆ ‘ದೊಡ್ಮನೆ ಮದುವೆ ದೊಡ್ಮನೆ ಮದುವೆ’ ಅಂತ ಬಡಕೊಂಡಿದ್ದು. ದೊಡ್ಮನೆ ಚಿಕ್ಮನೆಗಳೆಲ್ಲವೂ ಊಳಿಗಮಾನ್ಯ ಪದ್ಧತಿಯ ಸಂಕೇತವಲ್ಲವೇ? ಯಾವ ದೊಡ್ಮನೆಯಲ್ಲಿ ರಾಜ್ ಕುಮಾರ್ ಕುಟುಂಬ ಒಟ್ಟಿಗಿದೆ ಎಂಬುದನ್ನು ಅರಿಯದಷ್ಟು ದಡ್ಡರೇ ಮಾಧ್ಯಮದವರು. ‘ಲೈವ್ ಪ್ರೋಗ್ರಾಮ್ ಮಾಡಬೇಡಿ’ ಎಂದು ಹೇಳುವ ಮೂಲಕ ಶಿವರಾಜ್ ಕುಮಾರ್ ಆದರೂ ‘ದೊಡ್ಡ’ತನ ತೋರಿಸಬಹುದಿತ್ತು. ಈ ಅಪಸವ್ಯಗಳೆಲ್ಲ ಮದುವೆಗೇ ಮುಗಿದು ಕ್ಯಾಮೆರಾ ಎತ್ತಿಕೊಂಡು ಹನಿಮೂನು ಪ್ರಸ್ಥದ ಮನೆ ಅಂಥ ತೋರಿಸದಿದ್ದರೆ ಕನ್ನಡಿಗರ ಪುಣ್ಯ.

ಆಗ 31, 2015

ಭೂಮಿಗೀತೆ ಮತ್ತು ಜೀವತಲ್ಲಣಗಳ ಆತ್ಮಕಥನ ಪುಸ್ತಕಗಳ ಬಿಡುಗಡೆ ಸಮಾರಂಭದ ಚಿತ್ರಗಳು.

ಆಗಸ್ಟ್ 30ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಟಿ.ಎಸ್.ವಿವೇಕಾನಂದರ ಭೂಮಿಗೀತೆ ಮತ್ತು ಜೀವತಲ್ಲಣಗಳ ಆತ್ಮಕಥನ ಪುಸ್ತಕಗಳ ಬಿಡುಗಡೆಯಾಯಿತು. ಡಾ.ಎಲ್.ಹನುಮಂತಯ್ಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಮತ್ತು ದಿನೇಶ್ ಅಮೀನ್ ಮಟ್ಟು ಮುಖ್ಯ ಅತಿಥಿಗಳಾಗಿದ್ದರು. ಭೂಮಿಗೀತೆ ಪುಸ್ತಕದ ಬಗ್ಗೆ ಪ್ರೊ.ಎಲ್.ಮುಕುಂದರಾಜ್ ಮಾತನಾಡಿದರೆ ಜೀವತಲ್ಲಣಗಳ ಆತ್ಮಕಥನದ ಬಗ್ಗೆ ಮಾತನಾಡಿದ್ದು ಪ್ರೊ.ಪ್ರದೀಪ್ ರಮಾವತ್. ತೇಜಸ್ವಿ ಪ್ರಕಾಶನದ ಮೊದಲ ಪ್ರಕಟಣೆಯಿದು.

ಭೂಮಿಗೀತೆಯ ಬಗ್ಗೆ ಪ್ರೊ.ಮುಕುಂದರಾಜ್ ಮಾತುಗಳು.
 ಇದನ್ನೂ ಓದಿ: ಪ್ಲಾಚಿಮಡದ ಜಲ ಪಿಶಾಚಿಗಳು ಮತ್ತು ಇಸ್ಲಾಮಿಕ್ ಪರಿಸರ ವಿವೇಕ
ಜೀವತಲ್ಲಣಗಳ ಆತ್ಮಕಥನ ಕುರಿತು ಪ್ರದೀಪ್ ರಮಾವತ್
 ಇದನ್ನೂ ಓದಿ: ಕಚರನೇ ಸಿಕ್ಸರ್ ಹೊಡೆದಿದ್ದರೆ ‘ಲಗಾನ್’ಗೆ ಏನಾಗುತ್ತಿತ್ತು?
ಕೋಟಿಗಾನಹಳ್ಳಿ ರಾಮಯ್ಯ 

ದಿನೇಶ್ ಅಮೀನ್ ಮಟ್ಟು

ಟಿ.ಎಸ್.ವಿವೇಕಾನಂದ

ಡಾ.ಎಲ್. ಹನುಮಂತಯ್ಯ

ಆಗ 30, 2015

ಆತುರದ ತೀರ್ಮಾನಗಳೇಕೆ?

MM Kalburgi
ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ವರದಿಗಳ ಪ್ರಕಾರ ಇಪ್ಪತ್ತರ ಆಸುಪಾಸಿನ ಯುವಕ ಅವರ ಮನೆ ಪ್ರವೇಶಿಸಿ ಗುಂಡಿಕ್ಕಿ ಕೊಂದಿದ್ದಾನೆ. ಕಾರಣಗಳು ಇನ್ನೂ ಪತ್ತೆಯಾಗಿಲ್ಲವಷ್ಟೇ. ತನಿಖೆ ಪ್ರಾರಂಭವಾಗಿ prima facie ಇಂತಹ ಕಾರಣಕ್ಕೆ ಕೊಲೆಯಾಗಿರಬಹುದು ಎಂದು ಪೋಲೀಸರು ನಿರ್ಧರಿಸುವವರೆಗೂ ಕಾಯು ತಾಳ್ಮೆ ನಮ್ಮಲ್ಲಿಲ್ಲವೇ? ಎಂಬ ಬೇಸರ ಮೂಡುವುದು ಸಾಮಾಜಿಕ ಜಾಲತಾಣಗಳಲ್ಲಿನ ಜನರ ವರ್ತನೆಯನ್ನು ಗಮನಿಸಿದಾಗ.
ಕಲಬುರ್ಗಿಯವರನ್ನು ನಮ್ಮಂತವರು ಓದಿಕೊಂಡಿರುವುದು ಪತ್ರಿಕೆಗಳಲ್ಲಿನ ಅವರ ಅಂಕಣಗಳ ಮುಖಾಂತರ ಮಾತ್ರ. ಹಿಂದೂ ಧರ್ಮದ ಸೋಗಲಾಡಿತನಗಳ ವಿರುದ್ಧ ಬರೆಯುತ್ತಿದ್ದರು, ಮಾತನಾಡುತ್ತಿದ್ದರು. ಆ ಕಾರಣಕ್ಕಾಗಿ ಬಲಪಂಥೀಯ ಸಂಘಟನೆಗಳು ಅವರ ಮೇಲೆ ಕೋಪಗೊಂಡಿದ್ದು, ಆ ಕೋಪ ಅವರ ಮೇಲಿನ ಹಲ್ಲೆಗೂ ಪ್ರೇರೇಪಿಸಿದ್ದು, ಕಲಬುರ್ಗಿಯವರಿಗೆ ಪೋಲೀಸ್ ಬೆಂಗಾವಲು ನೀಡಿದ್ದೆಲ್ಲವೂ ಸತ್ಯವೇ. (ಬೆಂಗಾವಲು ಸಾಕೆಂದು ಇತ್ತೀಚೆಗೆ ಅವರು ಹೇಳಿದ್ದರಂತೆ). ಅಲ್ಲಿಗೆ ಬಲಪಂಥೀಯರಿಂದ ಹತ್ಯೆಗೊಳಗಾಗಿರಬಹುದಾದು ಒಂದು ಸಾಧ್ಯತೆಯೇ ಹೊರತು ಅದೇ ಕಾರಣ ಎಂದು ಖಡಾಖಂಡಿತವಾಗಿ ಹೇಳಲು ಸದ್ಯಕ್ಕೆ ಸಾಧ್ಯವಿಲ್ಲ. 
ಇದು ಉಗ್ರ ಬಲಪಂಥೀಯರದೇ ಕೃತ್ಯ ಎಂದು ನೋಡಿ ಬಂದವರಂತೆ ಹೇಳುತ್ತಿರುವವರ ನಡುವೆ, 'ನೋಡಿ, ಈ ವಿಚಾರವಾದಿಗಳು ಈ ಘಟನೆಯನ್ನು ಬಲಪಂಥೀಯರ ತಲೆಗೆ ಕಟ್ಟಿಬಿಡುತ್ತಾರೆ. ವೈಯಕ್ತಿಕ ಕಾರಣಕ್ಕಾಗಿ ಕೊಲೆ ನಡೆದಿದ್ದರೂ ಬಲಪಂಥೀಯರದೇ ಕೃತ್ಯ ಎಂದು ಗೂಬೆ ಕೂರಿಸುತ್ತಾರೆ' ಎಂದು ಹೇಳುವವರ ಸಂಖೈಯೂ ಕಡಿಮೆಯಿಲ್ಲ. ಬಲಪಂಥೀಯರು ಮಾಡೇ ಇಲ್ಲ ಎನ್ನುವ ಖಚಿತತೆ ಅವರಲ್ಲಿದೆಯಾ? ಉಹ್ಞೂ. ಫೇಸ್ ಬುಕ್ನಂತಹ ಒಂದು ವೇದಿಕೆಯಿದೆ ಒದರಿಕೊಂಡುಬಿಡೋಣ ಎಂಬ ಮನಸ್ಥಿತಿಯಷ್ಟೇ. 'ಹಿಂದೂಗಳನ್ನು ಟೀಕಿಸುತ್ತಿದ್ದ. ಹಿಂಗೇ ಸಾಯ್ಬೇಕು. ವಿಚಾರವಾದಿಗಳೆಲ್ಲರಿಗೂ ಇದೇ ಗತಿ' ಎಂದು ಅಟ್ಟಹಾಸ ಮಾಡುತ್ತಿರುವವರೂ ಇದ್ದಾರೆ! 
ಈ ತರಹದ ಅನಗತ್ಯ ಆತುರದ ತೀರ್ಮಾನಗಳಿಂದ ಆಗುವ ಅನಾಹುತಗಳೇನು ಅನ್ನುವುದನ್ನು ಕರ್ನಾಟಕದಲ್ಲೇ ಕಂಡಿದ್ದೇವೆ. ಡಿ.ಕೆ.ರವಿಯ ಸಾವಿನಲ್ಲಿ. ಅದು ಆತ್ಮಹತ್ಯೆಯೆಂದೇ ತೀರ್ಮಾನಿಸಿಬಿಟ್ಟ ಜನರು ಪೋಲೀಸ್ ಅಧಿಕಾರಿಗಳು prima facie ಹೇಳಿದ್ದನ್ನೂ ನಂಬಲಿಲ್ಲ, ಪ್ರಾಥಮಿಕ ತನಿಖೆಯ ನಂತರ ನಮ್ಮ ಪೋಲೀಸರು ಹೇಳಿದ್ದನ್ನೂ ನಂಬಲಿಲ್ಲ. ಕೊನೆಗೆ ಸಿಬಿಐ ಇದು ಹತ್ಯೆ ಎಂದು ಹೇಳಿತಾ? ಒಂದು ಕೊಲೆಗೆ/ಸಾವಿಗೆ ಹತ್ತಾರು ಕೋನಗಳಿರುತ್ತವೆ. ಬಹುತೇಕ ಪ್ರಕರಣಗಳಲ್ಲಿ ಒಂದೆರಡು ದಿನಗಳಲ್ಲೇ ಅಸಲೀ ಕಾರಣ ಪೋಲೀಸರಿಗೆ ತಿಳಿಯುತ್ತದೆ. ತುಂಬ ಬುದ್ಧಿವಂತಿಕೆಯ ಕೊಲೆ ಪ್ರಕರಣಗಳಲ್ಲಿ ಒಂದಷ್ಟು ತಡವಾಗಬಹುದು. ಒಂದೆರಡು ದಿನ ಕಾಯುವ ತಾಳ್ಮೆಯೂ ನಮ್ಮಲ್ಲಿ ಸತ್ತುಹೋಗಿದೆಯೇ?
ಸಂಶೋಧಕರೊಬ್ಬರ ಹತ್ಯೆಯ ಸಂದರ್ಭದಲ್ಲಿ ನಿಜ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ಆಶಿಸೋಣ, ಪೋಲೀಸರು, ಸರಕಾರ ನಿಷ್ಕ್ರಿಯತೆ ತೋರಿಸಿದರೆ ಪ್ರತಿಭಟಿಸೋಣ. ಊಹೆಗಳೊಂದಿಗೆ, ನಮ್ಮದೇ ಕಥೆಗಳೊಂದಿಗೆ, ದ್ವೇಷದೊಂದಿಗೆ ಸತ್ತ ಜೀವಕ್ಕೆ ಅವಮಾನ ಮಾಡದಿದ್ದರದೇ ಪುಣ್ಯ.