ಅಕ್ಟೋ 25, 2025

ಜಾತಿ ವ್ಯವಸ್ಥೆಯ ವಿಕಾರಗಳಿಗೆ ಕನ್ನಡಿ ಹಿಡಿಯುವ "ಹೆಬ್ಬುಲಿ ಕಟ್"


ಡಾ. ಅಶೋಕ್. ಕೆ. ಆರ್.

ಸಮಾಜದ ವಿಕಾರಗಳಿಗೆ ಕನ್ನಡಿ ಹಿಡಿಯುವ ಇಂತಹ ಚಿತ್ರಗಳನ್ನು "ಚೆನ್ನಾಗಿದೆ" "ಅದ್ಭುತವಾಗಿದೆ" ಎಂದು ಹೇಗೆ ಹೇಳುವುದು? 

ಬಹಳ ದಿನಗಳಿಂದ ನೋಡಬೇಕೆಂದುಕೊಂಡಿದ್ದ ʼಹೆಬ್ಬುಲಿ ಕಟ್‌ʼ ಸಿನಿಮಾವನ್ನು ಇವತ್ತು ನೋಡಲು ಸಮಯವಾಯಿತು. ಹದಿಹರೆಯದ ಹುಡುಗನ ಹುಡುಗಿಯೆಡೆಗಿನ ವಯೋಸಹಜ ಆಕರ್ಷಣೆ, ಅದಕ್ಕಿಂತಲೂ ಹೆಚ್ಚಾಗಿ ಒಂದು ಚೆಂದದ ಹೇರ್‌ ಕಟ್‌ ಮಾಡಿಸಿಕೊಳ್ಳಬೇಕೆಂಬ ಚಡಪಡಿಕೆಯೇ ತಳಪಾಯವಾದ ಸಿನಿಮಾ ಲವಲವಿಕೆಯಿಂದ ನೋಡುಗರನ್ನು ನಗಿಸುತ್ತ ನಗಿಸುತ್ತ ಕೊನೆಗೆ ಬೇಸರಕ್ಕೆ, ಎಂತ ಮಾಡಿದರೂ ಸರಿ ಹೋಗದ ನಮ್ಮ ಸಮಾಜದ ಕುರಿತು ಅಸಹನೆ ಮೂಡಿಸಿಬಿಡುತ್ತದೆ. ಬೇಸರ - ಅಸಹನೆ ಮೂಡದೇ ಹೋದರೆ ಅದು ನಮ್ಮಲ್ಲಿರುವ ಜಾತಿ ಮೇಲ್ಮೆಯ ಸೂಚಕ.

ʼಹಿಂದೂ ನಾವೆಲ್ಲ ಒಂದುʼ ಎನ್ನುವ ಘೋಷಣೆ ಈ ಮುಂಚೆಗಿಂತಲೂ ಅತ್ಯುಗ್ರವಾಗಿ ಕೇಳಿಬರುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೀವಿ. ಆ ಘೋಷಣೆ ಕೂಡ ಈ ಚಿತ್ರದ ಒಂದು ಪ್ರಮುಖ ಪಾತ್ರಧಾರಿ. ಜೊತೆಗೆ ಐದು ಸಲದ ನಮಾಜಿಗೆ ಕೂಡ ಚಿತ್ರದಲ್ಲೊಂದು ಕ್ಯಾಮಿಯೋ ಪಾತ್ರವಿದೆ.

ಅಕ್ಟೋ 24, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 10: ಕಿತನಾಮಂಗಲ ಕೆರೆ

ಚಮಚದ ಕೊಕ್ಕುಗಳು
ಡಾ. ಅಶೋಕ್.‌ ಕೆ. ಆರ್
ಹೋಗೋದೋ ಬೇಡ್ವೋ ಅಂದುಕೊಂಡೇ ಕಿತನಾಮಂಗಲದ ಕೆರೆಯ ಕಡೆಗೆ ಹೊರಟೆ. ಕಳೆದ ಬಾರಿ, ತಿಂಗಳಿಂದೆ ನೋಡಿಕೊಂಡು ಬರಲು ಹೋಗಿದ್ದಾಗ ಒಂದಷ್ಟು ಚಮಚದ ಕೊಕ್ಕುಗಳು (ಸ್ಪೂನ್ ಬಿಲ್) ಕಾಣಿಸಿದ್ದವು, ವರ್ಷಪೂರ್ತಿ ಇರುವ ಪಕ್ಷಿಗಳನ್ನು ಹೊರತುಪಡಿಸಿ. ಬಹಳಷ್ಟು ವರ್ಷಗಳಿಂದೆ ಇಲ್ಲಿ ನೂರಾರು ಸಂಖೈಯಲ್ಲಿ ಕರಿಕೊಕ್ಕಿನ ರೀವ (ಕಾಮನ್ ಟರ್ನ್)ಗಳನ್ನು ನೋಡಿದ್ದೆ. ಇನ್ನೊಮ್ಮೆ ನೀರು ಹೆಚ್ಚಿದ್ದ ಸಮಯದಲ್ಲಿ ನೂರಾರು ಸೂಜಿಬಾಲದ ಬಾತುಗಳನ್ನು ಕಂಡಿದ್ದೆ. ಆ ವರ್ಷ ಬಿಟ್ಟರೆ ಬೇರ್ಯಾವ ವರುಷವೂ ನಾ ಭೇಟಿ ಕೊಟ್ಟಾಗ ಅಷ್ಟು ಸಂಖ್ಯೆಯ ಸೂಜಿಬಾಲದ ಬಾತುಗಳು ಕಾಣಿಸಿರಲಿಲ್ಲ.

ಕಿತನಾಮಂಗಲ ಕೆರೆ ಬಹಳ ಅಂದರೆ ಬಹಳ ವಿಶಾಲವಾದುದು. ಆರೇಳು ವರ್ಷದಿಂದೀಚೆಗೆ ಒಂದೇ ಒಂದು ಬಾರಿ ಪೂರ್ತಿ ಕೆರೆ ತುಂಬಿದ್ದನ್ನು ನೋಡಿದ್ದೆ. ಇಲ್ಲವಾದರೆ ಹುಲ್ಲುಗಾವಲಿನಂತೆ ಕಾಣಿಸುತ್ತದೆ. ರಸ್ತೆಗೆ ಹೊಂದಿಕೊಂಡಂತೆ ಬಹಳಷ್ಟು ಒಣಗಿದ ಮರಗಳಿವೆ. ಒಂಥವಾ ದೆವ್ವದ ಸಿನಿಮಾದ ದೃಶ್ಯದಂತೆ ಗೋಚರವಾಗ್ತದೆ. ಜೆಸಿಬಿ ಬಳಸಿ ಕೆರೆಯ ಮಣ್ಣನ್ನು ಸುತ್ತಮುತ್ತಲಿನವರು ತೆಗೆದುಕೊಂಡು ಹೋಗಿರುವುದರಿಂದ ಬಹಳಷ್ಟು ಹಳ್ಳ ದಿಣ‌್ಣೆಗಳು ನಿರ್ಮಾಣವಾಗಿದೆ. ಮೆತ್ತಗಿನ ಮಣ್ಣಿನ ದಿಬ್ಬಗಳನ್ನು ಸಾಮಾನ್ಯ ಮಿಂಚುಳ್ಳಿ, ಕಳ್ಳಿಪೀರಗಳು ಗೂಡು ಕಟ್ಟಲು ಅಪರೂಪಕ್ಕೆ ಬಳಸಿಕೊಳ್ಳುತ್ತವೆ. ಈ ಸಲ ಹಸಿರು ಕಳ್ಳಿಪೀರಗಳು ಅಲ್ಲೊಂದು ಇಲ್ಲೊಂದು ಕಾಣಿಸಿದವಷ್ಟೇ.
ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ

ಸೆಪ್ಟೆಂ 11, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 9: ಮುತ್ತುರಾಯನ ಕೆರೆ

ಕವಲುಬಾಲದ ಚಿಟವ
ಡಾ. ಅಶೋಕ್.‌ ಕೆ. ಆರ್
ಬೆಂಗಳೂರಿನಿಂದ ಹೊರಟಿದ್ದು ಹುಲಿಯೂರುದುರ್ಗದ ಬಳಿಯಿರುವ ದೀಪಾಂಬುಧಿ ಕೆರೆಗೆ. ಕೆರೆಯ ತುಂಬಾ ನೀರಿತ್ತು. ಹಾಗಾಗಿ ನೀರ ಪಕ್ಷಿಗಳ ಸಂಖೈ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಿತ್ತು. ನೀಲಿಬಾಲದ ಕಳ್ಳಿಪೀರಗಳು ಅಲ್ಲಲ್ಲಿ ಹಾರಾಡುತ್ತಿದ್ದವು. ಇನ್ನಿಲ್ಲಿ ಅಷ್ಟು ಫೋಟೋಗ್ರಫಿ ಆಗುವುದಿಲ್ಲವೆಂದುಕೊಂಡು ಹುಲಿಯೂರುದುರ್ಗ - ನಾಗಮಂಗಲ ರಸ್ತೆಯಲ್ಲಿರುವ ಮುತ್ತುರಾಯನ ಕೆರೆಯ ಕಡೆಗೆ ಹೋಗೋಣವೆಂದುಕೊಂಡೆ. ದೀಪಾಂಬುಧಿ ಕೆರೆಯಿಂದ ಹತ್ತದಿನೈದು ನಿಮಿಷದ ಪಯಣ. ಮುತ್ತುರಾಯನ ಕೆರೆಯಲ್ಲಿ ಈ ಮುಂಚೆ ಸೂಜಿಬಾಲದ ಬಾತು (ನಾರ್ತನ್ ಪಿನ್ ಟೈಲ್) ಪಕ್ಷಿಗಳನ್ನು ಕಂಡಿದ್ದೆ. ಹದಿನೈದು ಇಪ್ಪತ್ತು ಪಕ್ಷಿಗಳನ್ನು ನೋಡಿದ್ದ ನೆನಪಿತ್ತು. ಜೊತೆಗೆ ಅಲ್ಲೇ ಇರುವ ದೇಗುಲದ ಬಳಿ ಕರಿ ಎದೆಯ ನೆಲಗುಬ್ಬಿ (ಆ್ಯಶಿ ಕ್ರೌನ್ಡ್ ಸ್ಪ್ಯಾರೋ ಲಾರ್ಕ್) ಇದ್ದವು. ಈ ಬಾರಿಯೂ ಅವುಗಳೆಲ್ಲಾ ಕಾಣಸಿಬಹುದಾ ಎಂದುಕೊಳ್ಳುತ್ತಾ ಕೆಂಕರೆ ಊರು ದಾಟಿದ ನಂತರ ಸಿಗುವ ಕೆರೆಯಂಗಳವನ್ನು ತಲುಪಿದೆ. ಕೆರೆಯ ಪಕ್ಕ ನಡೆದು ಹೋಗುವ ದಡದಲ್ಲಿದ್ದ ಒಂದು ಜೋಡಿ ಸೂಜಿಬಾಲದ ಬಾತುಗಳು, ಮೂರ್ನಾಲ್ಕು ಬಿಳಿಹುಬ್ಬಿನ ಬಾತುಗಳು (ಗಾರ್ಗನೆ), ಐದಾರು ವರಟೆಗಳು (ಸ್ಪಾಟ್ ಬಿಲ್ಡ್ ಡಕ್) ನೀರಿಗಿಳಿದು ಎದುರಿನ ದೂರದ ದಡದ ಕಡೆಗೆ ಸಾಗಿಬಿಟ್ಟವು. ಒಂದಷ್ಟು ಗುಳುಮುಳುಕಗಳು ನನ್ನ ಆಗಮನಕ್ಕೆ ಭಯ ಬೀಳದೆ ಅಲ್ಲೇ ದಡದ ಬಳಿಯಲ್ಲೇ ಮುಳುಗೇಳುತ್ತಿದ್ದವು. ನದಿ ರೀವಗಳು (ರಿವರ್ ಟರ್ನ್) ಗದ್ದಲವೆಬ್ಬಿಸುತ್ತ ಜಗಳವಾಡುತ್ತ ಹಾರಾಡುತ್ತಿದ್ದವು. ಅಲ್ಲೇ ಒಂದು ಬದಿಯಲ್ಲಿ ಶೇಖರಣೆಯಾಗಿದ್ದ ನೀರಿನಲ್ಲಿ ಕೆಂಪು ಟಿಟ್ಟಿಭ ನಿಂತಿತ್ತು. ಜನರನ್ನು ಕಂಡೊಡನೆಯೇ ದೊಡ್ಡ ದನಿಯಲ್ಲಿ ಶಬ್ದ ಮಾಡುತ್ತ ಇತರೆ ಪಕ್ಷಿಗಳಿಗೆ ಎಚ್ಚರಿಕೆಯ ಸಂದೇಶ ನೀಡುವ ಟಿಟ್ಟಿಭ ಇಂದ್ಯಾಕೋ ಮೌನದಿಂದಿತ್ತು. 
ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ
ಅದರದೊಂದು ಸಾಧಾರಣ ಎನ್ನಿಸುವ ಫೋಟೋ ತೆಗೆದುಕೊಂಡು ಮುಂದೆ ಸಾಗಿದವನಿಗೆ ಕೆರೆಯಿಂದ ನೀರನ್ನೆತ್ತಲು ಹಾಕಿದ್ದ ಹಳೆಯ ಪೈಪೊಂದರ ಬಳಿಯಿದ್ದ ಮರಳಿನಲ್ಲಿ ಮರಳಿನದೇ ಬಣ್ಣದ ಪುಟ್ಟ ಪಕ್ಷಿಗಳು ಕಂಡಂತಾಯಿತು. ಗಮನವಿಟ್ಟು ನೋಡಿದಾಗ ಸರಿಸುಮಾರು ಮೂವತ್ತು ಕವಲುಬಾಲದ ಚಿಟವಗಳು (ಸ್ಮಾಲ್ ಪ್ರಾಟಿನ್ ಕೋಲ್) ಕಂಡವು. ಅಲ್ಲೇ ಇದ್ದ ವಿದ್ಯುತ್ ತಂತಿಯ ಮೇಲೆ ಕುಳಿತಿದ್ದ ಅಂಬರಗುಬ್ಬಿಗಳು (ಸ್ವಿವ್ಟ್) ಹಾರಿ ಹೋದವು. ಕೆಲವು ಕ್ಷಣದ ನಂತರ ಒಂದರ ಹಿಂದೊಂದು ಬಂದು ಮತ್ತದೇ ತಂತಿಯ ಮೇಲೆ ಕುಳಿತವು. ಚಿಟವಗಳ ಚಿತ್ರವನ್ನು ದೂರದಿಂದ ತೆಗೆದು ಅಲ್ಲೇ ಕುಳಿತು. ಒಂದೈವತ್ತು ಅರವತ್ತು ಅಡಿಯಷ್ಟು ಅಂತರವಿತ್ತು ನನಗೂ ಆ ಪಕ್ಷಿಗಳಿಗೂ. ಸೂಕ್ಷ್ಮವಾಗಿ ಗಮನಿಸದೇ ಹೋದರೆ ಈ ಪಕ್ಷಿಗಳ ಇರುವಿಕೆಯೇ ತಿಳಿಯುವುದಿಲ್ಲ.

ಆಗ 13, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 8: ಕೊಮ್ಮಘಟ್ಟ ಕೆರೆ

AI generated image

ಡಾ. ಅಶೋಕ್.‌ ಕೆ. ಆರ್
ಇವತ್ತು ಕ್ಯಾಮೆರಾ ಇಲ್ಲದೆ ಬಂದಿದ್ದೆ. ಕ್ಯಾಮೆರಾ ಇದ್ದರೆ ತಲೆಯಲ್ಲಿ ಚೆಂದದ ಫೋಟೋ ಬಗ್ಗೆಯಷ್ಟೇ ಯೋಚನೆ ಇರ್ತದೆ. ಬಹಳಷ್ಟು ಬಾರಿ ಈ ಯೋಚನೆ - ಯೋಜನೆಯ ನಡುವೆ ಮನಸ್ಸು ಮುದಗೊಳ್ಳುವುದನ್ನೇ ಮರೆತುಬಿಡುತ್ತದೆ. ಜೊತೆಗೆ ಕ್ಯಾಮೆರಾದ ಮೂಲಕ ಪಕ್ಷಿಗಳನ್ನು ನೋಡುವಾಗ ಗಮನವೆಲ್ಲ ಒಂದೆರಡು ಪಕ್ಷಿಗಳ ಮೇಲಷ್ಟೇ ಇರುತ್ತದೆಯೇ ಹೊರತು ಪೂರ್ತಿ ಪರಿಸರದ ಮೇಲಲ್ಲ. ಹೀಗಾಗಿ ಆವಾಗಿವಾಗ ಕ್ಯಾಮೆರಾ ಇಲ್ಲದಿದ್ದಾಗಲೂ ಪಕ್ಷಿಗಳನ್ನು ಗಮನಿಸಬೇಕು!

ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ

ನಿನ್ನೆ ಬೆಳಿಗ್ಗೆ ಕಾಣೆಯಾಗಿದ್ದ ಹೆಜ್ಜಾರ್ಲೆಗಳೆಲ್ಲ ಇವತ್ತು ಹಾಜರಿ ಹಾಕಿದ್ದವು. ಅಲ್ಲಿಗೆ ಹೆಜ್ಜಾರ್ಲೆಗಳು ಕೊಮ್ಮಘಟ್ಟದಿಂದ ದೂರಾಗಿರಲಿಲ್ಲ ಎನ್ನುವುದು ಖಚಿತವಾಯಿತು. ಬೆಳಗಾಗುವುದಕ್ಕೆ ಮುನ್ನವೇ ಆಹಾರವನ್ನರಿಸಿ ಹೋಗಿ ಸಂಜೆ ಕೊಮ್ಮಘಟ್ಟಕ್ಕೆ ಹಿಂದಿರುಗುತ್ತಿದ್ದವು. ಸಂಖೈ ಮೂರು ದಿನದ ಹಿಂದಿನಷ್ಟಿರಲಿಲ್ಲ. ಸ್ಥಳದ ಅಭಾವವಿರುವುದಕ್ಕೆ ಬೇರೆ ಜಾಗಕ್ಕೆ ಹೋಗಿರಬಹುದು.

ಜುಲೈ 30, 2025

ಜಾತಿಯೆಂಬ ವಾಸ್ತವ ಮತ್ತು ಒಂದು ಸ್ವೀಕೃತಿಗೆ ಕಾಯುತ್ತಿರುವ ಜನರು...

AI generated representative image
ಡಾ. ಅಶೋಕ್.‌ ಕೆ. ಆರ್
ಊರ ಹೊರಗಿದ್ದ ಕಾಲೋನಿಯ ಆಚೆ ಊರಂಚಿನಲ್ಲಿ ಅಲ್ಲೊಂದಿಲ್ಲೊಂದಂತೆ ಇದ್ದ ಮನೆ ಖರೀದಿಸಿ ಆವಾಗಿವಾಗ ಬರುವುದಕ್ಕೆ ಶುರುಮಾಡಿ ಕೆಲವು ತಿಂಗಳುಗಳಾಗಿತ್ತು. ಮನೆಯಂಗಳದಲ್ಲಿ ಪುಸ್ತಕವೊಂದನ್ನು ಓದುತ್ತಾ ಕುಳಿತಿದ್ದಾಗ ಆ ವ್ಯಕ್ತಿ ಬಂದರು. ಗರಿಗರಿಯಾದ ಹೊಸ ಬಟ್ಟೆ ತೊಟ್ಟುಕೊಂಡಿದ್ದರು. ಅವರ ಅಣ್ಣನ ಮಗನದು ಮದುವೆ – ಕೊಳ್ಳೇಗಾಲದಲ್ಲಿ. ಊರಿಂದಾಗ ಬಸ್ಸು ಹೊರಡುವುದರಲ್ಲಿತ್ತು. ಅಷ್ಟು ದೂರದ ಮದುವೆಗೆ ಕರೆಯಲು ಬಂದಿರಲಿಲ್ಲ. ಮುಂದಿನ ಭಾನುವಾರ ಇಲ್ಲೇ ಇನ್ನೂರು ಅಡಿ ದೂರದಲ್ಲಿ ಅವರ ಅಣ್ಣ ಕಟ್ಟಿಸಿರುವ ಹೊಸ ಮನೆಯೊಂದರ ಮುಂದೆ ಕರ್ನರೆ – ಬೀಗರ ಊಟಕ್ಕೆ ಹೇಳಿ ಹೋಗಲು ಬಂದಿದ್ದರು. ಮುಂದಿನ ವಾರ ಊರಿಗೆ ಬಂದರೆ ಖಂಡಿತ ಬರ್ತೀನಿ ಅಂತೇಳಿದೆ.

ಕರ್ನೆರೆಯ ದಿನ ಹನ್ನೊಂದು ಘಂಟೆಯಷ್ಟೊತ್ತಿಗೆ ಮತ್ತೆ ಬಂದು ನೆನಪಿಸಿದರು. ಬರ್ತೀನಿ ಬಿಡಿ ನೆನಪಿತ್ತು ಅಂತೇಳಿದೆ. ಮಧ್ಯಾಹ್ನದ ಮೇಲೆ ಒಂದಷ್ಟು ಬೇರೆ ಕೆಲಸವಿತ್ತು, ಹಂಗಾಗಿ ಒಂದೂಕಾಲರಷ್ಟೊತ್ತಿಗೆ ಕರ್ನರೆಗೆ ಹೋಗಿ ಊಟ ಮಾಡಿಕೊಂಡು ಹೊರಟುಬಿಡುವ ಎಂದುಕೊಂಡೆ. ಅವರ ಮನೆಯ ಬಳಿ ಹೋದೆ, ಇನ್ನೂ ಮುದ್ದೆ ತಿರುವುತ್ತಿದ್ದದ್ದು ರಸ್ತೆಯಿಂದಲೇ ಕಾಣಿಸುತ್ತಿತ್ತು. ಊಟಕ್ಕಿನ್ನೂ ಕುಳಿತಿರಲಿಲ್ಲ. ಹಂಗೇ ಕಣ್ಣಾಡಿಸಿದೆ. ನನ್ನನ್ನು ಎರಡೆರಡು ಸಲ ಕರೆದು ಹೋಗಿದ್ದವರೂ ಕಾಣಿಸಲಿಲ್ಲ. ಅವರನ್ನು ಬಿಟ್ಟರೆ ಅಲ್ಲಿದ್ದ ಇನ್ಯಾರ ಮುಖ ಪರಿಚಯವೂ ಇಲ್ಲ. ಏನೋ ಊಟ ಈಗಾಗಲೇ ಶುರುವಾಗಿಬಿಟ್ಟಿದ್ದರೆ ಹೋಗಿ ಕುಳಿತು ಊಟ ಮಾಡಿಕೊಂಡು ಹೊರಡಬಹುದಿತ್ತು. ಅವರಲ್ಲಿ ಇದ್ದರೋ ಇಲ್ಲವೋ ಅನ್ನೋದು ಮುಖ್ಯವಾಗಿರಲಿಲ್ಲ! ಈಗಲ್ಲಿ ಹೋಗಿ ಶಾಮಿಯಾನದ ಕೆಳಗೆ ಕೂರಬೇಕು. ಇದ್ಯಾರು ಅಂತ ಗಮನಿಸೋ ಕುತೂಹಲದ ಕಣ್ಣುಗಳಿಗೆ ಆಹಾರವಾಗಬೇಕು. ಯಾಕ್‌ ಬೇಕಪ್ಪ ಸಾವಾಸ ಅಂತ ಹಂಗೇ ಕಾರಿಂದಿಳಿದು ಹೊರಟುಬಿಟ್ಟೆ.

ಜುಲೈ 16, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 7: ಕೊಮ್ಮಘಟ್ಟ ಕೆರೆ ಮತ್ತು ಉಲ್ಲಾಳ ಕೆರೆ

ಹೊಂಬೆಳಕಿನಲ್ಲಿ ಕಂಡ ಚಲುಕದ ಬಾತುಗಳು
ಡಾ. ಅಶೋಕ್.‌ ಕೆ. ಆರ್
ಕೊಮ್ಮಘಟ್ಟ ಕೆರೆಯಲ್ಲಿ ಬೆಳಗಿನ ಸಮಯ ಬೆಳಕು ಯಾವ ಕಡೆಯಿಂದ ಬರುತ್ತದೆಂಬ ಅಂದಾಜಾಗಿದ್ದರಿಂದ ಆರೂವರೆಯಷ್ಟೊತ್ತಿಗೆ ಕೆರೆಯಂಗಳ ತಲುಪಿದೆ. ಸೂರ್ಯ ಮೂಡಲು ಇನ್ನೂ ಹತ್ತದಿನೈದು ನಿಮಿಷವಿತ್ತು. ಕೊಮ್ಮಘಟ್ಟ ರಸ್ತೆಗೆ ತಿರುಗುತ್ತಿದ್ದಂತೆಯೇ ವಿಪರೀತ ಮಂಜು, ಚಳಿ.

ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ


ಕೆರೆಯಂಗಳಕ್ಕೆ ಕಾಲಿಟ್ಟರೆ ಅಚ್ಚರಿ. ಹೆಜ್ಜಾರ್ಲೆ(ಪೆಲಿಕಾನ್)ಗಳ ಸುಳಿವೇ ಇಲ್ಲ! ಅಲ್ಲೆಲ್ಲೋ ಒಂದೆರಡು ದೂರದಲ್ಲಿ ಕಂಡವು. ಬಹುಶಃ ಹೆಜ್ಜಾರ್ಲೆಗಳು ಸಂಜೆಯ ಸಮಯದಲ್ಲಿ ವಿರಮಿಸಲಷ್ಟೇ (ರೂಷ್ಟಿಂಗ್) ಇಲ್ಲಿಗೆ ಬರುತ್ತಿರಬೇಕು. ಅಥವಾ ಪಾಚಿ ತುಂಬಿರುವ ಕೆರೆಯಲ್ಲಿ ಮೀನುಗಳ ಸಂಖೈ ಹೆಚ್ಚಿಲ್ಲದ ಕಾರಣ ಇಲ್ಲಿಂದ ಜಾಗ ಖಾಲಿ ಮಾಡಿರಬೇಕು ಎಂದುಕೊಂಡೆ. ಚಲುಕದ ಬಾತುಗಳು ಕೆಲವು ಮಾತ್ರ ನೀರಿನಲ್ಲಿದ್ದವು. ಉಳಿದವಿನ್ನೂ ನಡುಗಡ್ಡೆಯ ಅಂಚಿನಲ್ಲಿ ವಿರಮಿಸುತ್ತಿದ್ದವು.

ಜುಲೈ 5, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 6: ಕೊಮ್ಮಘಟ್ಟ ಕೆರೆ - 3

ಹೆಜ್ಜಾರ್ಲೆ (ಪೆಲಿಕಾನ್)
ಡಾ. ಅಶೋಕ್.‌ ಕೆ. ಆರ್
ಕೆರೆಯ ಬಳಿ ಹೆಚ್ಚು ಸಮಯ ಕಳೆಯಬೇಕಿತ್ತು. ಸಂಜೆ ಮನೆಗೆ ಬರೋದು ತಡವಾಗ್ತದೆ ಎಂದು ಹೇಳಿಯೇ ಹೊರಟಿದ್ದೆ. ಸೂರ್ಯಾಸ್ತದ ಜೊತೆ ಹೆಜ್ಜಾರ್ಲೆಯ ಫೋಟೋ ತೆಗೆಯಬೇಕೆಂಬ ಆಸೆ. ಕೆರೆಯಲ್ಲಿ ಹೆಜ್ಜಾರ್ಲೆಗಳ ಸಂಖೈ ಹೆಚ್ಚಾಗಿತ್ತು. ಮರದ ಮೇಲಿದ್ದಷ್ಟೇ ಪಕ್ಷಿಗಳು ನೀರಿನಲ್ಲೂ ಇದ್ದವು.
ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ
ಕೆರೆಯ ಉತ್ತರಭಾಗದಲ್ಲಿದ್ದ ಮತ್ತೊಂದು ಮರದ ಮೇಲೂ ಒಂದೆರಡು ಹೆಜ್ಜಾರ್ಲೆಗಳು ಕಂಡವು. ಆ ಮರದಲ್ಲಿ ಈ ಮುಂಚೆ ಬೆಳ್ಳಕ್ಕಿಗಳು ಹಾಗು ಒಂದೆರಡು ಬೂದು ಬಕಗಳಷ್ಟೇ ಕಾಣಿಸಿದ್ದವು. ಚಲುಕದ ಬಾತುಗಳ ಸಂಖೈ ಸ್ವಲ್ಪ ಮಟ್ಟಿಗೆ ಕಡಿಮೆಯಾದಂತೆ ಅನಿಸಿತು. ಅವುಗಳಿನ್ನೂ ಕ್ಯಾಮೆರಾದ ಲೆನ್ಸಿಗೆ ಸಿಲುಕದಷ್ಟು ದೂರದಲ್ಲಿಯೇ ಇದ್ದವು. ಅರ್ಧ ತಲೆಯನ್ನು ನೀರಿನಲ್ಲಿ ಮುಳುಗಿಸಿ ಸಲಿಕೆ ಆಕಾರದ ಕೊಕ್ಕನ್ನು ತೆರೆದು ಆಹಾರದ ಹುಡುಕಾಟದಲ್ಲಿ ಇರುತ್ತಿದ್ದವು. ಗಂಡು ಪಕ್ಷಿಯ ಹಸಿರು - ಹಳದಿ ಬಣ್ಣದ ಕಣ್ಣಿನ ಪ್ರತಿಬಿಂಬ ಚೆಂದವಾಗಿ ಕಾಣಿಸುತ್ತಿತ್ತು.

ಜೂನ್ 16, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 5: ಕೊಮ್ಮಘಟ್ಟ ಕೆರೆ - 2

ಹೆಜ್ಜಾರ್ಲೆ (ಪೆಲಿಕಾನ್)
ಡಾ. ಅಶೋಕ್.‌ ಕೆ. ಆರ್
ಇಂದು ಕ್ಯಾಮೆರಾ, ದೊಡ್ಡ ಲೆನ್ಸುಗಳೆರಡನ್ನೂ ತಂದಿದ್ದೆ. ಚಲುಕದ ಬಾತುಗಳು ಕೆರೆಯ ಮಧ್ಯಭಾಗದಲ್ಲಿದ್ದವು. ಕ್ಯಾಮೆರಾಗೆ ಅಷ್ಟು ಚೆನ್ನಾಗಿ ಸಿಗುತ್ತಿರಲಿಲ್ಲ. ಜೊತೆಗೆ ಸಂಜೆಯ ಸಮಯವಾದ್ದರಿಂದ ಕೆರೆಯ ನೀರು ಗಾಳಿಗೆ ತುಯ್ದಾಡುತ್ತಿತ್ತು. ಪ್ರತಿಬಿಂಬದ ಚಿತ್ರಗಳನ್ನು ತೆಗೆಯೋದಿಕ್ಕೆ ನನಗೆ ಹೆಚ್ಚು ಆಸಕ್ತಿ. ಬೆಳಗಿನ ಜಾವದಲ್ಲಿ ಸೂರ್ಯಕಿರಣಗಳಿನ್ನೂ ತಣ್ಣನೆಯ ಬೆಳಕನ್ನು ಹೊರಸೂಸುವಾಗ ಗಾಳಿಯ ತುಯ್ದಾಟ ಇಲ್ಲದೇ ಇದ್ದಾಗ ಕೆರೆಯ ನೀರು ಕನ್ನಡಿಯಂತಿರುತ್ತದೆ. ಎಂಟು, ಒಂಭತ್ತು ಘಂಟೆಯೊಳಗಷ್ಟೇ ಆ ಪ್ರತಿಬಿಂಬದ ಚಿತ್ರಗಳನ್ನು ತೆಗೆಯಬಹುದು.

ಜೂನ್ 10, 2025

ಬೆಚ್ಚಿ ಬೀಳಿಸದ "ಸ್ಟೋಲನ್"

ಸ್ಟೋಲನ್ ಚಿತ್ರದ ಒಂದು ದೃಶ್ಯ 
ಡಾ. ಅಶೋಕ್. ಕೆ. ಆರ್
ರೈಲು ನಿಲ್ದಾಣದಲ್ಲಿ ಯುವತಿಯೊಬ್ಬಳ ಮಗು ಕಳ್ಳತನವಾಗ್ತದೆ. ಮಗು ಕದ್ದು ಓಡುತ್ತಿದ್ದವಳು ಅದೇ ತಾನೇ ರೈಲಿನಿಂದ ಇಳಿದ ಯುವಕನೊಬ್ಬನಿಗೆ ಡಿಕ್ಕಿ ಹೊಡೆಯುತ್ತಾಳೆ. ಆ ಯುವಕನ ಮೇಲೇ ಮೊದಲ‌ ಅನುಮಾನ. ಕೊನೆಗೆ ಆ ಯುವಕ ಕಳ್ಳತನಕ್ಕೆ ಸಾಕ್ಷಿಯಾಗುತ್ತಾನೆ. ಮಗು ಕಳೆದುಕೊಂಡ ಯುವತಿ, ಸಾಕ್ಷೀದಾರ ಯುವಕ, ಯುವಕನನ್ನು ಮನೆಗೆ ಕರೆದೊಯ್ಯಲು ಬಂದ ಅವನಣ್ಣ ಕೂಡ ಇಷ್ಟವಿದ್ದೊ ಇಷ್ಟವಿಲ್ಲದೆಯೋ ಮಗುವನ್ನು ಹುಡುಕುವುದರಲ್ಲಿ ತೊಡಗಿಕೊಳ್ಳುತ್ತಾರೆ.

ಜೂನ್ 6, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 4: ಕೊಮ್ಮಘಟ್ಟ ಕೆರೆ – 1

ಚಲುಕದ ಬಾತು (ನಾರ್ಥರ್ನ್‌ ಶೆವಲರ್‌)
ಡಾ. ಅಶೋಕ್.‌ ಕೆ. ಆರ್
ಕೊಮ್ಮಘಟ್ಟ ಕೆರೆಗೆ ಫೋಟೋಗ್ರಫಿಗೆ ಹೋಗಿ ಬಹಳವೇ ಕಾಲವಾಗಿತ್ತು
. ಇ – ಬರ್ಡ್‌ ತಂತ್ರಾಂಶದಲ್ಲಿ ಚಲುಕದ ಬಾತು (ನಾರ್ಥರ್ನ್‌ ಶೆವಲರ್‌ಗಳು) ಬಂದಿದ್ದಾವೆ ಎಂಬ ಮಾಹಿತಿಯಿತ್ತು. ಏಳು ವರ್ಷಗಳ ಹಿಂದೆ ಉಲ್ಲಾಳ ಕೆರೆಯಲ್ಲಿ ಚಲುಕದ ಬಾತುಗಳನ್ನು ಕಂಡು ಫೋಟೋಗ್ರಫಿ ಮಾಡಿದ್ದೆ. ಅಲ್ಲೇ ಕೆರೆಯ ಬಳಿ ಪರಿಚಯವಾಗಿದ್ದ ದೇವೆಂದ್ರ ಕುಮಾರ್‌ ಮತ್ತವರ ಸ್ನೇಹಿತರಾದ ಸದಾಶಿವ ಪೂಜಾರಿಯವರ ಜೊತೆಯಲ್ಲಿ.

ಮೇ 20, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 3: ಆಗರ ಕೆರೆಯಲ್ಲಿನ್ನೊಂದು ದಿನ - 31/12/2024

Egret
ಸಾಮಾನ್ಯ ಪಕ್ಷಿಯ ವಿಶೇಷ ನೋಟ - ಬೆಳ್ಳಕ್ಕಿ
ಡಾ. ಅಶೋಕ್.‌ ಕೆ. ಆರ್
ವರುಷದ ಕೊನೆಯ ದಿನ ಆಗರ ಕೆರೆಗೆ ಮತ್ತೊಂದು ಸುತ್ತು ಹೋಗುವ ಮನಸ್ಸಾಯಿತು. ಕಳೆದ ಬಾರಿ ಅಲ್ಲಿಗೆ ಹೋಗಿದ್ದಾಗಲೂ‌  ಹೆಚ್ಚೇನು ಪಕ್ಷಿಗಳು ಅಲ್ಲಿ ಸಿಕ್ಕಿರಲಿಲ್ಲವಾದರೂ ಅಲ್ಲಿನ ಪರಿಸರ ಚೆಂದಿತ್ತು.
ಹಿಂದಿನ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ
ಜೊತೆಗೆ ಮೀನು ಹಿಡಿದು ದಡದಲ್ಲಿ ಅದನ್ನು ಸ್ವಚ್ಛಗೊಳಿಸಿದರೆ ಅಂದಿನಂತೆ ಒಂದಷ್ಟು ಗರುಡಗಳ (ಬ್ರಾಮಿಣಿ ಕೈಟ್) ಫೋಟೋ ತೆಗೆಯಲಂತೂ ಮೋಸವಿರಲಿಲ್ಲ. ಉಳಿದಿದ್ದ ಕೊನೆಯೆರಡು ರಜೆಗಳ ಸದುಪಯೋಗ ಈ ರೀತಿಯೇ ಆಗಬೇಕಲ್ಲವೇ?!

ನಿರೀಕ್ಷಿಸಿದಂತೆ ಹೆಚ್ಚಿನ ಪಕ್ಷಿಗಳಿರಲಿಲ್ಲ. ಮೀನು ಹಿಡಿಯುವವರಿದ್ದರು. ಕಳೆದ ಬಾರಿ ಹಳದಿ ಹೂವುಗಳ ಪ್ರತಿಬಿಂಬ ತೆಗೆದ ಸ್ಥಳಕ್ಕೆ ಹೋದೆ. ದೂರದಲ್ಲೊಂದು ಬೂದು ಬಕ (ಗ್ರೆ ಹೆರಾನ್) ಕುಳಿತಿತ್ತು. ಪ್ರತಿಬಿಂಬ ಪೂರ್ತಿ ಕಾಣಿಸುತ್ತಿರಲಿಲ್ಲವಾದರೂ ಮುಂಜಾನೆಯ ಬೆಳಕಿಗೆ ಚೆಂದವಾಗೇನೋ ಕಾಣುತ್ತಿತ್ತು. ಅದರ ಫೋಟೋ ತೆಗೆಯಲು ಪ್ರಯತ್ನಿಸುವಾಗ ಒಂದು ಜೋಡಿ ಗುಳುಮುಳುಕಗಳು ಕೂಡ ಆಟವಾಡುತ್ತಾ, ತಿಂಡಿ ತಿನ್ನುತ್ತಾ ಬೂದು ಬಕದ ಬಳಿಯೇ ಬಂದವು. ಹೇಳಿಕೊಳ್ಳುವಂತಹ ಫೋಟೋ ಸಿಗಲಿಲ್ಲವಾದರೂ ಮನಸಿಗೆ ಮುದ ನೀಡುವ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾ ಮುಂದೆ ಸಾಗಿದೆ.

ಮೇ 2, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 2: ಆಗರ ಕೆರೆಯಲ್ಲೊಂದು ದಿನ…

ಮಂಜಾವರಿಸಿದ ಕೆರೆಯಲ್ಲಿ ಗುಳುಮುಳುಕ
ಡಾ. ಅಶೋಕ್. ಕೆ. ಆರ್.  
ಕನಕಪುರದ ಬಳಿ ಒಂದು ಕಾರ್ಯಕ್ರಮಕ್ಕೆ ಹೋಗುವುದಿತ್ತು. ನೈಸ್‌ ರಸ್ತೆಯ ಕನಕಪುರ ಜಂಕ್ಷನ್ನಿನ ಹತ್ತಿರದಲ್ಲೇ ಇರುವ ಆಗರ ಕೆರೆಗೆ ಬಹಳ ವರುಷಗಳ ಹಿಂದೆ ಒಂದು ಬಾರಿ ಹೋಗಿದ್ದೆ. ಆ ಕೆರೆ ಈಗ ಹೇಗಿದೆ, ಪಕ್ಷಿಗಳಿದ್ದಾವೋ ಇಲ್ಲವೋ ನೋಡೋಣವೆಂದುಕೊಂಡು ಬೆಳಗಿನ ಆರರ ಸಮಯದಷ್ಟೊತ್ತಿಗೆ ಆಗರ ಕೆರೆಯನ್ನು ತಲುಪಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದ ಕಾರಣ ಆಗರ ಕೆರೆ ತುಂಬಿ ನಿಂತಿತ್ತು. ಕೆರೆಯ ಒಂದು ಬದಿಯಲ್ಲಿ ನಮ್ಮ ಅಭಿವೃದ್ಧಿಯ ಕುರುಹಾಗಿ ಕೆಲವು ಹೊಸ ಕಟ್ಟಡಗಳು ನಿರ್ಮಾಣವಾಗುತ್ತಿದ್ದವು. ಮತ್ತೊಂದು ತುದಿಯಲ್ಲಿ ಕಿರು ಅರಣ್ಯ ಹರಡಿಕೊಂಡಿತ್ತು. ಭಾನುವಾರವಾಗಿದ್ದರಿಂದ ಜನರ ಸಂಖ್ಯೆ ಹೆಚ್ಚಾಗಿಯೇ ಇತ್ತು.

ಬೆಳಗಿನ ಕಾಯಕ

ಕೆರೆಗಳು ನೀರು ತುಂಬಿಕೊಂಡಿರುವಾಗ ಪಕ್ಷಿಗಳ ಸಂಖೈ ಒಂದಷ್ಟು ಕಡಿಮೆಯೆಂದೇ ಹೇಳಬೇಕು. ಒಂದಷ್ಟು ಗುಳುಕಮುಳುಕ, ಬೆಳ್ಳಕ್ಕಿ, ಬೂದು ಕೊಕ್ಕರೆ, ನೀರುಕಾಗೆ ಬಿಟ್ಟರೆ ಹೆಚ್ಚಿನ ಪಕ್ಷಿಗಳು ಕಾಣಿಸಲಿಲ್ಲ. ಮಂಜು ಕೆರೆಯ ಮೇಲ್ಮೈಯನ್ನು ಆವರಿಸಿತ್ತು. ಮಂಜಿನ ಹಿನ್ನಲೆಯಲ್ಲಿ ಗುಳುಕಮುಳುಕದ ಫೋಟೋ ತೆಗೆಯುವಷ್ಟರಲ್ಲಿ ಮಂಜಿನ ಹೊದಿಕೆ ಮತ್ತಷ್ಟು ದಟ್ಟವಾಯಿತು. ಎದುರಿನ ಅರಣ್ಯದ ಭಾಗ ಕಾಣಿಸದಂತಾಯಿತು. ಬೆಳಕರಿಯುವ ಮುನ್ನವೇ ತೆಪ್ಪದಲ್ಲಿ ಮೀನಿಡಿಯಲು ಅತ್ತ ಕಡೆಗೆ ಸಾಗಿದ್ದವರು ಮಂಜಿನ ಹೊದಿಕೆಯಲ್ಲಿ ಇತ್ತ ಕಡೆಯ ತೀರಕ್ಕೆ ಸಾಗಿ ಬರುತ್ತಿದ್ದ ದೃಶ್ಯ ವೈಭವಯುತವಾಗಿತ್ತು. ಗಿಡಮರಗಳ ಪ್ರತಿಬಿಂಬದ ಚಿತ್ರಗಳನ್ನು ಕ್ಯಾಮೆರಾಗೆ ತುಂಬಿಕೊಂಡೆ. ಕೊಂಚ ಸಮಯದ ಕಳೆದ ನಂತರ ಮಂಜಿನ ಹೊದಿಕೆ ನಿಧಾನವಾಗಿ ಸರಿದುಕೊಳ್ಳಲಾರಂಭಿಸಿತಾದರೂ ರವಿಯು ಮೋಡದ ನಡುವಿನಿಂದ ಹೊರಬರಲು ಉತ್ಸಾಹ ತೋರಲಿಲ್ಲ.

ಜನ 16, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 1: ಬಿಬಿಎಂಪಿ ಪಾರ್ಕಿನಲ್ಲಿ ಸಿಕ್ಕ ನೊಣಹಿಡುಕಗಳು.

Indian paradise flycatcher/ ಬಾಲದಂಡೆ/ ರಾಜಹಕ್ಕಿ 
ಡಾ. ಅಶೋಕ್.‌ ಕೆ. ಆರ್

ಹೆಂಡ್ರುಗೆ ಆರ್‌.ಆರ್.‌ ನಗರದಲ್ಲಿ ಒಂದಷ್ಟು ಕೆಲಸವಿತ್ತು. ಅವಳನ್ನು ಬಿಟ್ಟು ನಾನು ಮಕ್ಕಳು ಹತ್ತಿರದ ಹೋಟೆಲ್ಲಿಗೆ ಹೋಗಿ ತಿಂಡಿ ತಿಂದೆವು. ಎರಡು ತಾಸು ಸಮಯ ಕಳೆಯಬೇಕಿತ್ತು. ಗೂಗಲ್ಲಿನಲ್ಲಿ ಹತ್ತಿರದಲ್ಲಿರುವ ಪಾರ್ಕಿನ ಪಟ್ಟಿ ತೋರಿಸಲು ಕೇಳಿದೆ. ಎಲ್ಲದಕ್ಕಿಂತ ಸಮೀಪವಿದ್ದ ಹೆಸರಿಲ್ಲದ ಬಿಬಿಎಂಪಿ ಪಾರ್ಕಿಗೆ ಹೋದೆವು. ಮಕ್ಕಳಿಗೆ ಆಟವಾಡಲಿದ್ದ ಜಾಗದ ಹಿಂದೆ ಬಿದಿರಿನ ಪುಟ್ಟ ಮೆಳೆಯಿತ್ತು. ಬಿದಿರಿನ ಮೆಳೆಯ ಹಿಂದೆ ಎರಡು ಗಸಗಸೆ (ಸಿಂಗಾಪೂರ್‌ ಚೆರ್ರಿ) ಹಣ್ಣಿನ ಮರಗಳಿದ್ದವು. ಗಾತ್ರ ನೋಡಿದರೆ ಐದಾರು ವರ್ಷಗಳ ಆಯಸ್ಸು. ಅಳಿಲುಗಳು ಚಿಂವ್‌ಗುಟ್ಟುತ್ತಿದ್ದವು. ಗಸಗಸೆ ಮರದ ಬಳಿ ಇದ್ದಕ್ಕಿದ್ದಂತೆ ಅಚ್ಚ ಬಿಳುಪಿನ ಹಾಳೆಯೊಂದು ಮಣ್ಣಿನಿಂದ ಗಿಡದ ಕಡೆಗೆ ತೂರಿಹೋದಂತೆನ್ನಿಸಿತು. ಏನದು ಎಂದು ಕತ್ತೆತ್ತಿ ನೋಡಿದವನಿಗೆ ಕಂಡದ್ದು ಇಂಡಿಯನ್‌ ಪ್ಯಾರಡೈಸ್‌ ಫ್ಲೈಕ್ಯಾಚರ್‌ (ಬಾಲದಂಡೆ, ರಾಜಹಕ್ಕಿ). ಅರೆರೆ ಈ ಪಕ್ಷಿ ನೋಡಲೆಂದೇ ಒಮ್ಮೆ ನಂದಿ ಬೆಟ್ಟಕ್ಕೆ ಹೋಗಿದ್ದೆನಲ್ಲವೇ? ದೂರದಲ್ಲಿ ಕಾಣಿಸಿತ್ತಷ್ಟೇ. ಕುಣಿಗಲ್ಲಿನ ಬಳಿ ಒಮ್ಮೆ ಕಂದು ಬಣ್ಣದಲ್ಲಿದ್ದ ನೊಣಹಿಡುಕ ಸಿಕ್ಕಿತ್ತು, ಸುಮಾರಾಗಿ ಹತ್ತಿರದಲ್ಲಿ. ಕುಕ್ಕರಹಳ್ಳಿ ಕೆರೆ, ಕಣ್ವ ಜಲಾಶಯದ ಬಳಿ ಹತ್ತಿರದಲ್ಲೇ ಸಿಕ್ಕಿತ್ತು, ಕ್ಯಾಮೆರಾ ಕೈಯಲ್ಲಿರಲಿಲ್ಲ. ಇವತ್ತೂ ಕ್ಯಾಮೆರಾ ಕೈಯಲ್ಲಿಲ್ಲದಾಗಲೇ ಇಷ್ಟು ಹತ್ತಿರದಲ್ಲಿ ಬಂದು ಕೂರಬೇಕಾ?! ಮಕ್ಕಳಿತ್ತ ಆಟವಾಡುತ್ತಿದ್ದರು. ನಾನು ಪಕ್ಷಿಯ ದಿನಚರಿಯನ್ನು ವೀಕ್ಷಿಸುತ್ತಿದ್ದೆ. ಅದರ ಉದ್ದನೆಯ ಬಾಲ ಗಾಳಿಯಲ್ಲಿ ತುಯ್ದಾಡುವುದನ್ನು ಕಾಣುವುದೇ ಒಂದು ಸೊಗಸು. ಅಷ್ಟು ಉದ್ದನೆಯ ಬಾಲವನ್ನೊತ್ತುಕೊಂಡು ಗಸಗಸೆ ಮರದ ಪೀಚು ಹಣ್ಣುಗಳು, ಎಲೆಗಳ ನಡುವಿದ್ದ ಸಣ್ಣ ಪುಟ್ಟ ಹುಳ – ನೊಣಗಳನ್ನು ಹಿಡಿಯಲು ಆಗೊಮ್ಮೆ ಈಗೊಮ್ಮೆ ನೆಲದ ಬಳಿ ಬಂದು ಮತ್ತೆ ಹಿಂದಿರುಗಿ ಗಸಗಸೆ ಮರ ಹಾಗು ಸುತ್ತಮುತ್ತಲಿದ್ದ ಇತರೆ ಮರಗಳ ಮೇಲೆ ಕುಳಿತು ವಿರಮಿಸಿಕೊಳ್ಳುತ್ತಿತ್ತು. ಸುತ್ತಮುತ್ತಲೆಲ್ಲ ಮನೆಗಳೇ ಇರುವ ಜಾಗದಲ್ಲಿ ಇಂತಹ ಪಕ್ಷಿ ನೋಡಿದೆನೆಂದು ಹೇಳಿದರೆ ಯಾರಾದರೂ ನಂಬದೇ ಹೋದರೆ ಎಂಬ ನೆಪದಲ್ಲಿ ನನ್ನ ಸಮಾಧಾನಕ್ಕೆ ಮೊಬೈಲಿನಲ್ಲೇ ಸುಮ್ಮನೊಂದು ವೀಡಿಯೋ ತೆಗೆದೆ! ಈ ಉದ್ದ ಬಾಲದ ನೊಣಹಿಡುಕನ ಜೊತೆಯೇ ಕೆಂಪುಕೊರಳಿನ ನೊಣಹಿಡುಕುಗಳ (ಟಿಕೆಲ್ಸ್‌ ಬ್ಲೂ ಫ್ಲೈಕ್ಯಾಚರ್) ದರ್ಶನವೂ ಆಯಿತು. ʻಕ್ಯಾಮೆರಾ ಇಲ್ಲದಾಗಲೇ ಎಲ್ಲ ಬಂದು ಕುಣೀರಪ್ಪʼ ಎಂದು ಬಯ್ದುಕೊಂಡೆ!