ಜನ 24, 2016

ಸ್ಟಾರ್ಟಾದ ಇಂಡಿಯಾದಲ್ಲಿ ಕಾರ್ಮಿಕರಿಗೆ ಬೆಲೆಯಿಲ್ಲ?

labour law
Supreeth K S
ಇತ್ತೀಚೆಗೆ ಭಾರತದಲ್ಲಿ ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸುವುದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿರುವ ಯೋಜನೆಗಳು ಸುದ್ದಿಯಲ್ಲಿವೆ. ಒಂದು ಸಾವಿರ ಕೋಟಿ ಸರಕಾರಿ ಫಂಡ್ ಜೊತೆಗೆ ತೆರಿಗೆ ವಿನಾಯಿತಿ, ಪರಿಸರ ಸಂರಕ್ಷಣೆಯ ಕಾಯ್ದೆಗಳಿಂದ ವಿನಾಯಿತಿ ಅಲ್ಲದೆ ಕಾರ್ಮಿಕ ಕಾಯ್ದೆಗಳಿಂದಲೂ ವಿನಾಯಿತಿ ಸ್ಟಾರ್ಟ್ ಅಪ್ ಗಳಿಗೆ ದೊರಕಲಿದೆ. 

ಇವುಗಳಲ್ಲಿ ನನಗೆ ಹೆಚ್ಚಿನ ಆಘಾತವುಂಟು ಮಾಡಿದ್ದು ಭಾರತದಂತಹ ದೇಶದಲ್ಲಿ ಕಾರ್ಮಿಕ ಕಾಯ್ದೆಗಳಿಂದ ವಿನಾಯಿತಿ ನೀಡುವ ನಿರ್ಧಾರ. ನಾಲ್ಕು ವರ್ಷಗಳ ಹಿಂದೆ ನಾನು ಹರಿಪ್ರಸಾದ್ ನಾಡಿಗ್ ಎನ್ನುವವರು ಪ್ರಾರಂಭಿಸಿದ್ದ ಸಾರಂಗ ಇನ್ಫೋಟೆಕ್ ಎಂಬ ಸ್ಟಾರ್ಟ್ ಅಪ್ ಒಂದರಲ್ಲಿ ನನ್ನ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದೆ. ಕ್ಯಾಂಪಸ್ ನಲ್ಲಿರುವಾಗಲೇ ಮಲ್ಟಿ ನ್ಯಾಶನಲ್ ಕಂಪೆನಿಯೊಂದರಲ್ಲಿ ಕೆಲಸ ಸಿಕ್ಕಿತ್ತಾದರೂ ಸ್ಟಾರ್ಟ್ ಅಪ್ ಗಳಲ್ಲಿ ಕೆಲಸ ಮಾಡಬೇಕೆಂಬ ನನ್ನ ಹಂಬಲದಿಂದ ಅವರ ಕಂಪೆನಿಯನ್ನು ಸೇರಿದೆ. 

ಆ ಕಂಪೆನಿಯಲ್ಲಿ ನನ್ನ ಗೆಳೆಯರನ್ನೂ ಸೇರಿಸಿದೆ. ಕಾಲಕ್ರಮೇಣ ಹರಿ ಪ್ರಸಾದ್ ನಾಡಿಗ್ ವರ್ತನೆಯಿಂದ ಬೇಸತ್ತು ಕೆಲವರು ಕೆಲಸ ಬಿಟ್ಟರು. ನನ್ನ ಮೇಲೆ ನಂಬಿಕೆಯಿಟ್ಟು ಕೆಲಸಕ್ಕೆ ಸೇರಿದವರನ್ನು ನಾನಾ ರೀತಿಯಲ್ಲಿ ಪೀಡಿಸಲಾಯ್ತು. ಇದನ್ನು ಪ್ರಶ್ನಿಸಿದಕ್ಕೆ ನನ್ನನ್ನು ಅಪರಾಧಿಯೆಂಬಂತೆ ನೋಡಿಕೊಳ್ಳಲಾಯ್ತು, ವಿಪರೀತ ಮಾನಸಿಕ ಕಿರುಕುಳ ನೀಡಲಾಯ್ತು. ಸಂಬಳ, ಅನುಭವ ಪತ್ರಗಳನ್ನು ನೀಡದೆ ಹೊರಹಾಕಲಾಯ್ತು. 

ವಿಪರ್ಯಾಸವೆಂದರೆ ಈ ಕಂಪೆನಿಯ ಡೈರೆಕ್ಟರ್ ಗಳಲ್ಲಿ ಒಬ್ಬರಾದ ಅಡ್ಡೂರು ಕೃಷ್ಣರಾವ್ ಹೆಸರಾಂತ ಆರ್ಟಿಐ ಹೋರಾಟಗಾರರು, ಗ್ರಾಹಕ ಹಾಗೂ ಕಾರ್ಮಿಕ ಹಕ್ಕು ಸಂರಕ್ಷಣೆಯ ಹೋರಾಟಗಾರರು.

ಕಂಪೆನಿ ಹಾಗೂ ಅದರ ನಿರ್ವಾಹಕರ ವರ್ತನೆಯನ್ನು ಸಹಿಸದೆ ನ್ಯಾಯ ಕೋರಿ ನಾನು ಕಾರ್ಮಿಕ ಇಲಾಖೆಗೆ ಅಲೆದಾಯ್ತು. ಡೈರಿ ಸರ್ಕಲ್ ನಲ್ಲಿರುವ ಕಾರ್ಮಿಕ ಇಲಾಖೆಯಲ್ಲಿ ವಿಚಾರಣೆ ನಡೆದು ಕಂಪೆನಿ ನನ್ನ ದೂರನ್ನು ಇತ್ಯರ್ಥಗೊಳಿಸಲು ಸಹಕರಿಸುತ್ತಿಲ್ಲ ಎಂದು ಕಾರ್ಮಿಕ ಇಲಾಖೆಯ ಅಧೀಕ್ಷಕರು ಕೈಚೆಲ್ಲಿದರು. ದೂರನ್ನು ಸಿವಿಲ್ ನ್ಯಾಯಾಲಯಕ್ಕೆ ಕೊಂಡೊಯ್ಯುವಂತೆ ಸೂಚಿಸಿದರು. ನ್ಯಾಯಾಲಯದಲ್ಲಿಯೂ ಸಹ ದೂರನ್ನು ಸಲ್ಲಿಸಯಾಯ್ತು. ಇದೆಲ್ಲ ಶುರುವಾಗಿ ಮೂರು ವರ್ಷಗಳು ಕಳೆದಿವೆ. ನ್ಯಾಯಾಲಯದಲ್ಲಿ ಸಾರಂಗ ಇನ್ಫೋಟೆಕ್ ಸಂಸ್ಥೆಯ ಹರಿಪ್ರಸಾದ್ ನಾಡಿಗ್ ಹಾಗೂ ಸುಮ ಅಡ್ಡೂರು ವಿರುದ್ಧ ಮೊಕದ್ದಮೆ ನಡೆಯುತ್ತಿದೆ. 

ನ್ಯಾಯಾಲಯದೆದುರು ನಡೆಯುತ್ತಿರುವ ನಾಟಕಗಳು, ಮೊಕದ್ದಮೆ ವಿಳಂಬವಾಗಿಸುವ ತಂತ್ರಗಳು ಇವೆಲ್ಲವನ್ನು ದಾಖಲಿಸಿದರೆ ದೊಡ್ದ ಪುಸ್ತಕವೇ ಆದೀತು. 

ಇದನ್ನು ಇಂದು ನೆನಪಿಸಿಕೊಳ್ಳುವುದಕ್ಕೆ ಈ ಮೊದಲು ಉಲ್ಲೇಖಿಸಿದ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯ ಕಾರ್ಮಿಕ ಕಾಯ್ದೆಗಳ ವಿನಾಯಿತಿ ಕಾರಣ. ಅಸಮಾನ ಅಧಿಕಾರವಿರುವ ಯಾವುದೇ ಸಂಬಂಧದಲ್ಲಿ ಸರ್ಕಾರದ ಜವಾಬ್ದಾರಿ ದುರ್ಬಲರ ಪರವಾಗಿ ನಿಲ್ಲುವುದರಲ್ಲಿ ಇರಬೇಕು. ಐಟಿ ವಲಯದ ನೌಕರರಲ್ಲಿ ಸಂಘಟನೆ ಎಂಬುದೇ ಇಲ್ಲ. ವ್ಯಾಜ್ಯಗಳಲ್ಲಿ ನೌಕರರನ್ನು ಸಿಂಗಲ್ ಔಟ್ ಮಾಡಿ ಕಿರುಕುಳ ನೀಡಲಾಗುತ್ತೆ. ಈಗಿರುವ ಹಲ್ಲಿಲ್ಲದ ಕಾಯ್ದೆಗಳನ್ನು ಜೇಬು ಭದ್ರವಾಗಿರುವ ಕಂಪೆನಿಗಳು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ಕಾನೂನು ಹೋರಾಟವನ್ನು "ಬಿಸಿನೆಸ್ ಕಾಸ್ಟ್" ಎಂದು ಎಷ್ಟು ವರ್ಷಗಳವರೆಗಾದರೂ ಎಳೆದಾಡಬಹುದು. 

ಇಷ್ಟಲ್ಲದೆ ಸ್ಟಾರ್ಟ್ ಅಪ್ ಗಳಲ್ಲಿ ಕೆಲಸ ಮಾಡುವ ನೌಕರರು ಎಷ್ಟು ವಲ್ನರಬಲ್ ಆಗಿರುತ್ತಾರೆಂದರೆ ಅವರಿಗೆ ಪಿ ಎಫ್ ಇರುವುದಿಲ್ಲ, ಆರೋಗ್ಯ ವಿಮೆ ಇರುವುದಿಲ್ಲ, ಉದ್ಯೋಗ ಭದ್ರತೆಯಿರುವುದಿಲ್ಲ. ಮೇಲಾಗಿ ಪುಡಿಗಾಸಿಗೆ ಕತ್ತೆ ಚಾಕರಿ ಮಾಡಿಸಿಕೊಳ್ಳುವ "ಆಂತ್ರಪ್ರಿನರ್" ಉದ್ಯೋಗದಾತರು! ಇಂತಹ ಪರಿಸ್ಥಿತಿಯಲ್ಲಿ ನೆರವಾಗಬಹುದಾದ ಕಾಯ್ದೆಗಳಿಂದಲೂ ಈ ಕಂಪೆನಿಗಳಿಗೆ ವಿನಾಯಿತಿ ಕೊಟ್ಟುಬಿಟ್ಟರೆ ನೌಕರರ ಜುಟ್ಟು ಹಿಡಿದು ಕ್ಯಾಪಿಟಲಿಸ್ಟರ ಕೈಗೆ ಕೊಟ್ಟಂತೆಯೇ! ನಷ್ಟವಾದ ಕಂಪೆನಿ ದಿವಾಳಿ ಘೋಷಿಸಬಹುದು ಆದರೆ ಕೆಲಸ ಕಳೆದುಕೊಂಡು, ಮಾನಸಿಕ (ಕೆಲವೊಮ್ಮೆ ದೈಹಿಕ)ಕಿರುಕುಳ ಅನುಭವಿಸಿ ಬೀದಿಗೆ ಬೀಳುವ ನೌಕರರು ಸ್ಟಾರ್ಟ್ ಅಪ್ ಇರಲಿ ಸ್ಟ್ಯಾಂಡ್ ಅಪ್ ಆಗುವುದು ಕನಸಿನ ಮಾತಾಗುವುದು

ಜನ 22, 2016

ಮೇಕಿಂಗ್ ಹಿಸ್ಟರಿ: ನಿಗ್ರಹಕ್ಕಾಗಿ ಸಹಕಾರಿ ಒಪ್ಪಂದ!

saketh rajan
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

ಟಿಪ್ಪು ಸಾಮ್ರಾಜ್ಯದ ಪತನದ ಎರಡು ತಿಂಗಳ ನಂತರ ಬ್ರಿಟೀಷರು ಮತ್ತು ಎರಡನೆ ಕೃಷ್ಣರಾಜ ಒಡೆಯರ್ ನಡುವೆ ಆದ ಹದಿನಾರು ಕಲಮುಗಳ ಒಪ್ಪಂದ ಸ್ವತಂತ್ರವಾಗಿದ್ದ ಕರ್ನಾಟಕವನ್ನು ವಸಾಹತುಶಾಹಿಯ ಸರಪಳಿಗಳಿಂದ ಬಂಧಿಸಿತು. ಈ ಒಪ್ಪಂದವು ನಿಜಾರ್ಥದಲ್ಲಿ ದಾಸ್ಯ ಮನೋಭಾವಕ್ಕೆ ಶರಣಾದುದನ್ನು ಸೂಚಿಸುತ್ತಿತ್ತು. ಹೆಸರೇ ಸೂಚಿಸುವಂತೆ ಈ ಒಪ್ಪಂದವು ಮೈಸೂರಿನ ಸ್ವತಂತ್ರವನ್ನು ಕಸಿದುಕೊಂಡು ಬ್ರಿಟೀಷರ ವಸಾಹತಿನ ಒಂದು ಹೆಚ್ಚುವರಿ ರಾಜ್ಯವಾಗಿ ಮಾಡಿತು. ಈ ಒಪ್ಪಂದದಲ್ಲಿನ ಪ್ರಮುಖಾಂಶಗಳ ಬಗ್ಗೆ ಗಮನ ಹರಿಸೋಣ.

ಎರಡನೇ ಕಲಮಿನ ಪ್ರಕಾರ ಸ್ವತಂತ್ರ ಸೇನೆಯನ್ನು ಕಟ್ಟುವ ಹಕ್ಕನ್ನು ಕಸಿಯಲಾಯಿತು. ಬ್ರಿಟೀಷರು ‘ಪ್ರಭುತ್ವದ ರಕ್ಷಣೆಗೆ ಮತ್ತು ಭದ್ರತೆಗೆ’ ಸೇನೆಯನ್ನು ನಿಯೋಜಿಸುತ್ತದೆ. ಒಂದೇ ಏಟಿನಲ್ಲಿ ಮೈಸೂರಿನ ಸ್ವತಂತ್ರವೂ ಹೋಯಿತು ಮತ್ತು ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಶಕ್ತಿಹೀನವೂ ಆಯಿತು. ಬ್ರಿಟೀಷರ ಸೈನ್ಯವನ್ನು ಬೆಂಗಳೂರಿನ ಕಂಟೋನ್ ಮೆಂಟ್ ಪ್ರದೇಶದಲ್ಲಿ ಸ್ಥಾಪಿಸಲಾಯಿತು ಮತ್ತು ಈ ಜಾಗದಲ್ಲಿ ಮೈಸೂರು ಸರಕಾರದ ಆಡಳಿತವಿರದೆ ನೇರವಾಗಿ ಬ್ರಿಟೀಷರ ಆಡಳಿತವಿತ್ತು. ಆದರೂ ಮೈಸೂರಿಗೆ ಒಂದು ಪುಟ್ಟ ಸೇನೆಯನ್ನು ಬ್ರಿಟೀಷರ ಮೇಲ್ವಿಚಾರಣೆಯಲ್ಲಿ ಇಟ್ಟುಕೊಳ್ಳುವ ಭಿಕ್ಷೆ ಲಭಿಸಿತು; ಸಂಸ್ಥಾನದೊಳಗೆ ಕಾನೂನು ಸುವ್ಯವಸ್ಥೆಯನ್ನು ಕಾಪಿಡಲು ಮತ್ತು ಬ್ರಿಟೀಷರ ಇನ್ನಿತರೆ ಯುದ್ಧಗಳಿಗೆ ಸೈನಿಕರನ್ನು ಪೂರೈಸಲು.

“1807ರಲ್ಲಿ ಗವರ್ನರ್ ಜೆನರಲ್ ಸರ್ ಜಾರ್ಜ್ ಬಾರ್ಲವ್ ಈ ರೀತಿಯ ನಿರ್ಣಯ ಕೈಗೊಂಡರು….. ಮೈಸೂರಿನ ರಾಜ ಯುದ್ಧ ಮತ್ತು ಶಾಂತಿಯ ಸಮಯದಲ್ಲಿ ನಾಲ್ಕು ಸಾವಿರ ಕುದುರೆಗಳನ್ನು ತನ್ನ ಸ್ವಂತ ಖರ್ಚಿನಿಂದ ಸಾಕಬೇಕು. ಕಂಪನಿಯ ಅಧಿಕಾರಿಗಳು ಈ ವ್ಯವಸ್ಥೆಯನ್ನು ಆಗಾಗ್ಗೆ ಪರಿಶೀಲಿಸುತ್ತಾರೆ ಮತ್ತು ಅವರ ಮರ್ಜಿಯಲ್ಲಿ ಈ ಸಾಕಾಣಿಕೆ ಚಾಲ್ತಿಯಲ್ಲಿರುತ್ತದೆ……”  – ಲಷಿಂಗ್ ಟನ್, ಮದ್ರಾಸಿನ ಗವರ್ನರ್ (10).

ಮೈಸೂರಿನ ಹಣಕಾಸು ಒಪ್ಪಂದದ ಬಗ್ಗೆಯೂ ಅದೇ ಕಲಮಿನಲ್ಲಿ ವಿವರಿಸಲಾಗಿದೆ. ಅದರ ಪ್ರಕಾರ ಮುಂದಿನ ತಿಂಗಳಿನಿಂದಲೇ ವರುಷಕ್ಕೆ 24.5 ಲಕ್ಷ ರುಪಾಯಿಗಳನ್ನು ಹನ್ನೆರಡು ಕಂತುಗಳಲ್ಲಿ ಮೈಸೂರು ಸಂಸ್ಥಾನ ಕಕ್ಕಬೇಕು. 1896ರಲ್ಲಿ ಈ ಮೊತ್ತವನ್ನು 35 ಲಕ್ಷ ರುಪಾಯಿಗಳಿಗೆ ಏರಿಸಲಾಯಿತು ಮತ್ತು 1928ರಲ್ಲಿ ಮತ್ತೆ ಹಳೆಯ ಮೊತ್ತಕ್ಕೇ ಇಳಿಸಲಾಯಿತು. ಇಷ್ಟು ದೊಡ್ಡ ಖರ್ಚು ಮೈಸೂರು ಸಾಮ್ರಾಜ್ಯದ ಮೇಲುಂಟು ಮಾಡಿದ ಅನಾಹುತಗಳನ್ನು ಮೂರನೇ ಅಧ್ಯಾಯದ ಕೊನೆಯ ಪುಟಗಳಲ್ಲಿ ಚರ್ಚಿಸೋಣ. ಸದ್ಯಕ್ಕೆ ನೆನಪಿಡಬೇಕಾದ ವಿಷಯವೆಂದರೆ ಮುಂದಿನ ನೂರು ವರುಷಗಳ ಕಾಲ ಬ್ರಿಟೀಷರಿಗೆ ಕೊಡಬೇಕಾದ ಈ ಹಣ ಮೈಸೂರು ಸಂಸ್ಥಾನದ ಅತಿ ದೊಡ್ಡ ಖರ್ಚಿನ ಬಾಬತ್ತಾಗಿತ್ತು. 1809 – 10ರ ಸಮಯದಲ್ಲಿ ಮೈಸೂರು ಸಂಸ್ಥಾನದ ವಾರ್ಷಿಕ ಆದಾಯವಿದ್ದಿದ್ದು ಕೇವಲ 28,24,646 (11).

ಮುಂದಿನ ಕಲಮು ಮೈಸೂರನ್ನು ಬ್ರಿಟೀಷರ ಮುಂದಿನ ಆಕ್ರಮಣಕ್ಕೆ ಬೇಕಾದ ಭೌಗೋಳಿಕ ಮತ್ತು ವಾಣಿಜ್ಯಕ ಚಿಮ್ಮುಹಲಗೆಯನ್ನಾಗಿ ಮಾಡಿಬಿಟ್ಟಿತು. ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ನಡೆಯಬಹುದಾದ ಯಾವುದೇ ಆಕ್ರಮಣವನ್ನು ಮೈಸೂರಿನ ಭೂಗೋಳ, ಸೈನ್ಯ ಮತ್ತು ಆದಾಯ ತಡೆಯುವಂತೆ ಯೋಜನೆಗಳನ್ನು ರೂಪಿಸಲಾಯಿತು. ಒಡೆಯರ್ “ಸೈನಿಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಮತ್ತು ಅನಿರೀಕ್ಷಿತ ಯುದ್ಧಗಳಿಂದುಟಾಗುವ ಖರ್ಚನ್ನು ಭರಿಸಬೇಕು” ಎಂದು ಸ್ಪಷ್ಟವಾಗಿ ತಿಳಿಸಲಾಯಿತು.

ನಾಲ್ಕನೇ ಕಲಮು ಬ್ರಿಟೀಷರಿಗೆ ಆದಾಯ ತೆರಿಗೆಯ ಸಂಗ್ರಹ ಮತ್ತು ಎಲ್ಲಾ ರೀತಿಯ ಆರ್ಥಿಕ ವ್ಯವಹಾರಗಳನ್ನು ನಿಯಂತ್ರಿಸುವ ಹಕ್ಕನ್ನು ನೀಡಿತು. ಅಲ್ಲಿಗೆ ಮೈಸೂರಿನ ಆರ್ಥಿಕ ಸ್ವಾತಂತ್ರ್ಯವನ್ನೂ ಮೊಟಕುಗೊಳಿಸಲಾಯಿತು.

ಆರ್ಥಿಕ ಮತ್ತು ರಾಜಕೀಯ ಸಂಕಷ್ಟದ ಸಮಯದಲ್ಲಿ ಮೈಸೂರು ಸಂಸ್ಥಾನವನ್ನು ಭಾಗಶಃ ಅಥವಾ ಪೂರ್ಣವಾಗಿ ವಶಪಡಿಸಿಕೊಳ್ಳುವ ಅಧಿಕಾರವನ್ನು ಐದನೇ ಕಲಮು ನೀಡಿತು. ರಾಜ್ಯದ ಸ್ವಾಯತ್ತತೆ ಹೆಸರಿಗೆ ಮಾತ್ರ ಉಳಿಯಿತು. ಇದೇ ಕಲಮು ರಾಜನಿಗೆ ವಾರ್ಷಿಕ ಆದಾಯದ ಇಪ್ಪತ್ತು ಪರ್ಸೆಂಟಿನಷ್ಟು (ನಂತರದ ದಿನಗಳಲ್ಲಿ ಇದನ್ನು 5%ಗೆ ಇಳಿಸಲಾಯಿತು) ಮತ್ತು ವಾರ್ಷಿಕ 3 ಲಕ್ಷ ರುಪಾಯಿಗಳನ್ನು ನೀಡಿತು. ಸಾರ್ವಜನಿಕರ ಹಣ ರಾಜರ ಮನೆಯ ಎಲ್ಲಾ ಖರ್ಚುಗಳಿಗೆ ವಿನಿಯೋಗವಾಗುತ್ತಿದ್ದರಿಂದ ಈ ಕಲಮು ನೀಡಿದ ಪ್ರತ್ಯೇಕ ಮೊತ್ತ ರಾಜನ ಪಾಕೆಟ್ ಮನಿಯಾಗಿತ್ತು. ಇದೇ ರೀತಿ ಮೈಸೂರಿನ ದಿವಾನರಿಗೆ ನಿಯಮಿತ ಸಂಬಳದ ಜೊತೆಗೆ ಒಟ್ಟು ಆದಾಯದ 1% ಮೊತ್ತವನ್ನು ನೀಡಲಾಗುತ್ತಿತ್ತು. ಈ ರೀತಿಯಾಗಿ ಮೈಸೂರಿನ ರಾಜ ಮತ್ತವನ ಪ್ರಧಾನ ಮಂತ್ರಿ ವಸಾಹತುಶಾಹಿಯ ನಾಚಿಕೆಗೆಟ್ಟ ಮಧ್ಯವರ್ತಿಗಳಾದರು, ಮೈಸೂರಿನ ಜನಸಮೂಹದ ಶ್ರಮದ ಹಣದಲ್ಲಿ ಐಷಾರಾಮಿ ಜೀವನ ನಡೆಸುವವರಾದರು.

ಒಪ್ಪಂದದ ಹದಿಮೂರನೇ ಕಲಮು ಮೈಸೂರು ರಾಜ್ಯವನ್ನು ಬ್ರಿಟೀಷ್ ಬಂಡವಾಳದ ಮಾರುಕಟ್ಟೆಯನ್ನಾಗಿ ಪರಿವರ್ತಿಸಿತು.

ಈ ಒಪ್ಪಂದವು ಬ್ರಿಟೀಷ್ ಸರಕಾರ ವ್ಯಕ್ತಿಯೊಬ್ಬನನ್ನು ಮೈಸೂರು ಸಂಸ್ಥಾನದ ಏಜೆಂಟನನ್ನಾಗಿ ಬಲವಂತದಿಂದ ನೇಮಿಸಿತು. ವಸಾಹತುಶಾಹಿಯ ಕಾಣದ ಕೈಯಾದ ಈ ಏಜೆಂಟನಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇನೇ ಸಾಮ್ರಾಜ್ಯದೊಳಗೆ ನಡೆಯುವ ಪ್ರತೀ ಸಂಗತಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಮೇಲ್ವಿಚಾರಿಸಿ, ‘ಸಲಹೆ’ ನೀಡುವ ಅಧಿಕಾರವಿತ್ತು. ರಾಜನ ವೈಯಕ್ತಿಕ ವಿಷಯದಲ್ಲಿಯೂ ‘ಸಲಹೆ’ ನೀಡಬಹುದಾಗಿತ್ತು ಮತ್ತು ಈ ಎಲ್ಲಾ ಸಲಹೆಗಳನ್ನೂ ರಾಜ ಒಂದು ನಗುವಿನೊಂದಿಗೆ ತಲೆದೂಗಿ ಒಪ್ಪಿ ಜಾರಿಗೊಳಿಸಬೇಕಿತ್ತು. 14ನೇ ಕಲಮಿನ ಪ್ರಕಾರ “ಅಗತ್ಯವಿರುವಾಗ ಕಂಪನಿ ಸರಕಾರ ರಾಜನ ವ್ಯವಹಾರ, ನ್ಯಾಯಪಾಲನೆ, ವಹಿವಾಟು ವಿಸ್ತರಣೆ, ಕೃಷಿ, ರಫ್ತು – ಆಮದು, ಕೈಗಾರಿಕೆಗೆ ನೀಡಬೇಕಾದ ಪ್ರೋತ್ಸಾಹ ಮತ್ತು ಇನ್ನಿತರೆ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತಿಳಿಸುತ್ತದೆ. ಕಂಪನಿ ಸರ್ಕಾರದ ಎಲ್ಲಾ ನಿರ್ಧಾರಗಳನ್ನೂ ಗಮನವಿಟ್ಟು ಆಲಿಸಿ ಪಾಲಿಸುತ್ತೇನೆಂದು” ಮಹಾರಾಜ ಪ್ರಮಾಣ ಮಾಡಬೇಕಿತ್ತು.

ಈ ಒಪ್ಪಂದದ ಬಗ್ಗೆ ಬರೆಯುತ್ತಾ, ವೆಲ್ಲೆಸ್ಲಿ: “ಈ ಒಪ್ಪಂದವನ್ನು ರಚಿಸುವಾಗ ಮೈಸೂರು ಸರಕಾರ ಮತ್ತು ಕಂಪನಿಯ ನಡುವೆ ಅಸಮತೋಲನದ ಉದ್ದಿಶ್ಯಗಳಿರಬೇಕು ಎನ್ನುವುದು ನನ್ನ ನಿರ್ಧಾರವಾಗಿತ್ತು. ಮತ್ತು ರಾಜ ಉತ್ತರ ದಿಕ್ಕನ್ನು ನಮ್ಮ ಸಶಕ್ತ ಬೇಲಿಯನ್ನಾಗಿ ಕೊಡುವಂತೆ ಮಾಡುವುದಾಗಿತ್ತು.

ಈ ದೃಷ್ಟಿಕೋನದಿಂದ ರಾಜನ ದೇಶದ ರಕ್ಷಣೆಗಾಗಿ ವಾರ್ಷಿಕ ಏಳು ಲಕ್ಷ ಪಗೋಡಾಗಳನ್ನು ಪಡೆಯುವ ಬಗ್ಗೆ ಚರ್ಚೆ ನಡೆಸಿದೆ. ದುರದೃಷ್ಟವಶಾತ್ ಎರಡೆರಡು ಸರಕಾರ ಮತ್ತು ಆಡಳಿತಗಾರರಲ್ಲಿನ ದ್ವಂದ್ವಗಳು ಔಧ್, ಕರ್ನಾಟಿಕ್ ಮತ್ತು ತಂಜಾವೂರಿನಲ್ಲಿ ಅಸ್ತಿತ್ವಕ್ಕೆ ಬಂದು ಎಲ್ಲರಿಗೂ ಮುಜುಗರ ಉಂಟುಮಾಡಿದ್ದನ್ನು ನೆನಪಿಗೆ ತಂದುಕೊಂಡು ಮೈಸೂರಿನ ಆಂತರಿಕ ವ್ಯವಹಾರವನ್ನು ನಿಯಂತ್ರಿಸುವ ಸರ್ವ – ಶಕ್ತ ಅಧಿಕಾರವನ್ನು ಕಂಪನಿಗೆ ನೀಡಬೇಕೆಂದು ದೃಡ ನಿಶ್ಚಯ ಮಾಡಿದೆ. ಮೈಸೂರಿನ ಮೇಲೆ ಅಗತ್ಯ ಬಿದ್ದಾಗ ನೇರ ಆಡಳಿತ ನಡೆಸುವ ಹಕ್ಕನ್ನು ಉಳಿಸಿಕೊಳ್ಳಬೇಕು. ಯುದ್ಧದ ಸಮಯದಲ್ಲಿ ಮತ್ತು ಕಂಪನಿಯ ವಿರುದ್ಧ ದ್ರೋಹ ನಡೆದಲ್ಲಿ ನಿಗದಿತ ಮೊತ್ತಕ್ಕಿಂತ ಅಧಿಕ ಮೊತ್ತವನ್ನು ಪಡೆಯಬಹುದಾಗಿದೆ.

ಈ ವ್ಯವಸ್ಥೆಯಿಂದ ರಾಜನ ಸಂಸ್ಥಾನದ ಎಲ್ಲಾ ಸಂಪನ್ಮೂಲಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದು ನನ್ನ ನಂಬುಗೆ…. ನನ್ನ ದೃಷ್ಟಿಯಲ್ಲಿದು ಅತ್ಯಂತ ಸರಳ, ಮುಕ್ತ ಮತ್ತು ಚಾಣಾಕ್ಷ ನಡೆ. ರಾಜನನ್ನು ಪಟ್ಟಕ್ಕೇರಿಸುವ ಸಂದರ್ಭದಲ್ಲಿ ಕಂಪನಿಯ ಮೇಲಿನ ಆತನ ಅವಲಂಬನೆಯನ್ನು ಸ್ಪಷ್ಟವಾಗಿ ತಿಳಿಯಪಡಿಸುವುದು ಭವಿಷ್ಯದಲ್ಲಿನ ಅನುಮಾನ ಮತ್ತು ಅನವಶ್ಯಕ ಚರ್ಚೆಗಳಿಗಿಂತ ಉತ್ತಮ” (12).

ಇದು ಅವತ್ತಿನ ಒಪ್ಪಂದದ ಬಹುಮುಖ್ಯ ಅಂಶವಾಗಿತ್ತು, ಉಳಿದೆಲ್ಲ ಕಲಮುಗಳು ಈ ಶರತ್ತುಗಳ ಆಧಾರದ ಮೇಲೆ ರೂಪಿಸಲಾಗಿದ್ದ ಅಲ್ಪ ಸ್ವಲ್ಪ ಬದಲಾವಣೆಗಳಷ್ಟೇ. ಕೀರಿಟಧಾರಿ ಹುಳುವಿಗೆ ಮುಲುಕಲೂ ಆಗದಷ್ಟು ಸ್ಥಳವಷ್ಟೇ ಕೊನೆಗೆ ಉಳಿದಿದ್ದು. ಕರ್ನಾಟಕದ ಇತಿಹಾಸದಲ್ಲಿಯೇ ಯಾವೊಬ್ಬ ರಾಜನೂ ತನ್ನ ಅಧಿಕಾರದ ವ್ಯಾಪ್ತಿಯನ್ನು ಇಷ್ಟೊಂದು ಶರತ್ತುಗಳಿಗೆ ಒಪ್ಪಿಸಿರಲಿಲ್ಲ. ಮೈಸೂರಿನ ಈ ಕೈಗೊಂಬೆಗಳು ತಮ್ಮ ಕೆಲಸವನ್ನು ‘ನಿಷ್ಟೆಯಿಂದ’ ನಿರ್ವಹಿಸಿದರು. ಸಕಲ ಅವಮಾನಗಳನ್ನೂ ನುಂಗಿಕೊಂಡು. ಈ ರಾಜರು ಬ್ರಿಟೀಷರ ಮುಖಸ್ತುತಿ ಮಾಡಿದ್ದ ರೀತಿಯನ್ನು ನಂತರ ನೋಡೋಣ. ಕೊಳೆಯಲಾರಂಭಿಸಿದ್ದ ಫ್ಯೂಡಲ್ ಸಮುಚ್ಛಯದಿಂದ ಬಂದ ಈ ಸೋತ ರಾಜರಿಗೆ ಅಚಾನಕ್ಕಾಗಿ ನೆನಪಾಗಬಹುದಾಗಿದ್ದ ‘ಫ್ಯೂಡಲ್ ಪ್ರತಿಷ್ಟೆಯ’ ನೆವವೂ ಬ್ರಿಟೀಷರ ವಿರುದ್ಧ ಪ್ರಚೋದಿಸಲಿಲ್ಲ.

ಈ ಒಪ್ಪಂದದಲ್ಲಿದ್ದ ಅವಮಾನಕಾರಿ ಅಂಶಗಳಿಂದ ಸಮಾಧಾನಗೊಳ್ಳದ ಬ್ರಿಟೀಷರು 1807ರಲ್ಲಿ ಪೂರಕ ಒಪ್ಪಂದದ ಮೂಲಕ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸಿದರು (13).

ಕರ್ನಾಟಕವನ್ನು ವಸಾಹತು ಶಕ್ತಿಗಳಿಗೆ ಒಪ್ಪಿಸಲು ಈ ಪೂರಕ ಒಪ್ಪಂದದ ಪಾತ್ರ ಹಿರಿದು. ಹತ್ತು ಜಿಲ್ಲೆಯ ಸಂಸ್ಥಾನ ಹೊಂದಿದ್ದ ಮೈಸೂರು ಒಡೆಯರ್ ಗಳ ಜೊತೆಗೆ ಬ್ರಿಟೀಷರು ಇನ್ನೂ ಹಲವು ರಾಜರು, ಪಾಳೇಗಾರರೊಂದಿಗೆ ಇದೇ ತರಹದ ಹೊಂದಾಣಿಕೆಯನ್ನು ಮಾಡಿಕೊಂಡರು. 

1798ರಲ್ಲಿ ಬ್ರಿಟೀಷರು ಹೈದರಾಬಾದಿನ ನಿಜಾಮರೊಡನೆ ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದರು; ಬ್ರಿಟೀಷ್ ಸೈನ್ಯದ ಖರ್ಚಿಗೆ ವಾರ್ಷಿಕ ಹದಿನಾಲ್ಕು ಲಕ್ಷ ರುಪಾಯಿಗಳನ್ನು ಕಪ್ಪವಾಗಿ ನೀಡುವ ಅಂಶ ಒಪ್ಪಂದದಲ್ಲಿತ್ತು (14). ಕಂಪನಿಯ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಸ್ವತಃ ಗವರ್ನರ್ ಜೆನರಲ್ ತಿಳಿಸಿದಂತೆ ಮೈಸೂರಿನ ಒಡೆಯರ್ ಜೊತೆ ಮಾಡಿಕೊಂಡ ಒಪ್ಪಂದ ನಿಜಾಮರು ಸಹಿ ಮಾಡಿದ ಒಪ್ಪಂದದ ಸ್ವಲ್ಪ ಬದಲಾದ ರೂಪವಾಗಿತ್ತಷ್ಟೆ (15). ಬೀದರ್, ರಾಯಚೂರು ಮತ್ತು ಗುಲ್ಬರ್ಗಾ ವಸಾಹತುಶಾಹಿಯ ಪರೋಕ್ಷ ಆಳ್ವಿಕೆಗೆ ಒಳಪಟ್ಟಿತು.

ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡದ ಭಾಗಗಳ ಆಳ್ವಿಕೆ ನಡೆಸುತ್ತಿದ್ದ ಕಿತ್ತೂರಿನ ದೇಸಾಯಿ ಕೂಡ ಈ ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದವರಲ್ಲಿ ಒಬ್ಬ. 1792ರಲ್ಲಿ ಪೇಶ್ವೆಗಳಿಗೆ ಎಪ್ಪತ್ತು ಸಾವಿರ ರುಪಾಯಿಗಳನ್ನು ಕಾಣ್ಕೆಯಾಗಿ ನೀಡುತ್ತಿದ್ದ ದೇಸಾಯಿ 1818ರಲ್ಲಿ ಬ್ರಿಟೀಷರಿಗೆ 1,70,000 ರುಪಾಯಿಗಳನ್ನು ನೀಡಲು ಒಪ್ಪಿದ. ಆಗ ದೇಸಾಯಿ ಸಂಸ್ಥಾನದ ವಾರ್ಷಿಕ ಆದಾಯ ನಾಲ್ಕು ಲಕ್ಷವಿತ್ತು (16).

ವಿವಿಧ ಪಾಳೇಗಾರರು ಹಾಗು ದೇಶಗತಿಗಳು ವಿದೇಶಿ ಆಳ್ವಿಕೆಯ ಮುಂದೆ ಸಾಲುಗಟ್ಟಿ ನಿಂತು ತಮ್ಮ ಚಿಕ್ಕಪುಟ್ಟ ಆದರ್ಶಗಳನ್ನೆಲ್ಲ ಮೂಟೆಕಟ್ಟಿಟ್ಟು ಇದೇ ರೀತಿಯ ಒಪ್ಪಂದಗಳಿಗೆ ನಾಮುಂದು ತಾಮುಂದು ಎಂಬಂತೆ ಸಹಿ ಮಾಡಿದರು. ಕರ್ನಾಟಕ ದೇಶ ಗುಲಾಮತ್ವವನ್ನಪ್ಪಿಕೊಳ್ಳುವುದಕ್ಕೆ ಈ ಸಹಕಾರಿ ಒಪ್ಪಂದಗಳು ಕೀಲಿಕೈ ಆಯಿತು.


ಜನ 21, 2016

ಅಂತರರಾಷ್ಟ್ರೀಯ ಚಿತ್ರೋತ್ಸವ ಕೂಡ ಮಾಲುಗಳಿಗೆ ಸೀಮಿತವೇ?

S Abhi Hanakere
ಬೇರೆ ಇನ್ಯಾವುದೇ ಕಲಾ ಪ್ರಕಾರಗಳಿಗೆ ಸೆನ್ಸಾರ್‍ ಇಲ್ಲ! ಸಿನಿಮಾಗೆ ಮಾತ್ರ ಇದೆ? ಯಾಕೆಂದರೆ ಸಿನಿಮಾ ಒಂದು (ಟಾಕೀಸ್‍ನಲ್ಲಿ ನೋಡೋ) ಬೆಳಕಿನಿಂದ ಕತ್ತಲೆಗೆ ಕರೆದುಕೊಂಡು ಬಂದು, ಯಾವುದೇ ಜಾತಿ-ಮತ-ಲಿಂಗ ಭೇದವಿಲ್ಲದೆ ಅಕ್ಕ-ಪಕ್ಕದಲ್ಲಿ ಕುಳ್ಳಿರಿಸಿ, ಪರದೆಯ ಮುಖಾಂತರ ಹೃದಯ ಮತ್ತು ಮನಸ್ಸಿನಲ್ಲಿ ಬೆಳಕು ಚೆಲ್ಲುವ ಮಾಧ್ಯಮ ಮತ್ತು ಪರಿಣಾಮಕಾರಿಯಾಗಿ ಮನುಷ್ಯನನ್ನು ಆಕರ್ಷಿಸಿ ಆಕ್ರಮಿಸಿಕೊಳ್ಳುವಂತದ್ದು. ಆದರೆ ವ್ಯಾಪಾರದ ದೃಷ್ಠಿಯಿಂದ ಬರೀ ಕೊಳಕನ್ನೇ ನೀಡುವ ಅಪಾಯವಿರುವ ಕಾರಣ ಸೆನ್ಸಾರ್‍ ಇದೆ. ಇಂಥ ಸಿನಿಮಾ ಟಾಕೀಸ್‍ಗಳ ಸ್ಥಿತಿ ದುರ್ಗತಿಗೆ ತಲುಪುತ್ತಿರುವ ಸಮಯದಲ್ಲಿ ಅದನ್ನ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಮೊದಲೆಲ್ಲಾ ಚಿಕ್ಕ-ಪುಟ್ಟ ಊರುಗಳಲ್ಲಿದ್ದ ಟೆಂಟುಗಳನ್ನು ಟಿ.ವಿ ನುಂಗಿ ಹಾಕಿತು. ಈಗ ಸಿ.ಡಿಗಳು, ಮೊಬೈಲ್ ಚಿಪ್‍ಗಳು ಸಣ್ಣ-ಪುಟ್ಟ ನಗರಗಳ ಟಾಕೀಸ್‍ಗಳನ್ನು ನುಂಗಿ ಹಾಕ್ತಿವೆ. ಒಮ್ಮೆ ಮಾಲ್‍ಗಳಲ್ಲಿ ಚಿತ್ರ ವೀಕ್ಷಿಸಿದ ಪ್ರೇಕ್ಷಕ ತನ್ನೂರಿನ ಟಾಕೀಸ್‍ ಕಡೆ ಮುಖ ಕೂಡ ಮಾಡದೆ ಹಿಂತಿರುಗುತ್ತಿರುವ ಈ ಸಂದರ್ಭದಲ್ಲಿ, ಸರ್ಕಾರದ ವತಿಯಿಂದ ನಡೆಯುತ್ತಿರುವ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವವನ್ನು “ಕರ್ನಾಟಕ ಅಂತರರಾಷ್ಟ್ರೀಯ ಚಿತ್ರೋತ್ಸವ” ಎಂದು ಮರುನಾಮಕರಣ ಮಾಡಿ, ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ವರ್ಷ-ವರ್ಷವು ಅಭಿವೃದ್ಧಿ ವಂಚಿತ ಊರುಗಳಲ್ಲಿ ಆಯೋಜಿಸಿದರೆ ಈ ನೆಪದಲ್ಲಿ ಅಂಥ ಊರಿನ ಭೌತಿಕ ಮತ್ತು ಆ ಊರಿನ ಸುತ್ತ-ಮುತ್ತಾ ಜನರ ಬೌದ್ಧಿಕ ಅಭಿವೃದ್ಧಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ.

ಒಂದು ಮಾತು ನೆನಪಿರಲಿ, ನಾವು ಟಿ.ವಿ, ಮೊಬೈಲ್, ಲ್ಯಾಪ್‍ಟಾಪ್‍ ಇತ್ಯಾದಿ ವಯಕ್ತಿಕ ಡಿವೈಸ್‍ಗಳಲ್ಲಿ ಸಿನಿಮಾ ವೀಕ್ಷಿಸುವುದರಿಂದ ಮನುಷ್ಯ ಸಂಬಂಧಗಳು ಕ್ಷೀಣಿಸುತ್ತವೆ ಅದೇ ಟಾಕೀಸ್‍ನಲ್ಲಿ ಮಾನವೀಯ ಸಂಬಂಧಗಳು ಗಟ್ಟಿಗೊಳ್ಳುತ್ತವೆ ಮತ್ತು ಹೊಸ ಸಂಬಂಧಗಳಾಗುತ್ತದೆ ಮತ್ತೆ ಪರಿಣಾಮಕಾರಿಯಾಗಿ ಕಲೆಯ ಮುಖೇನ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು.

ಈ ಒಂದು ಕ್ರಮದಿಂದ ನಿಶ್ಚಿತವಾಗಿ ಕನ್ನಡ ಚಿತ್ರರಂಗದ ಅಭಿವೃದ್ಧಿ, ಕರ್ನಾಟಕದಾದ್ಯಂತ ಟಾಕೀಸ್‍ಗಳ ಅಭಿವೃದ್ಧಿ, ಕರ್ನಾಟಕದಾದ್ಯಂತ ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಎಲ್ಲರಿಗೂ, ಮುಖ್ಯವಾಗಿ ಸಣ್ಣ-ಪುಟ್ಟ ಊರಿನಲ್ಲಿ ವಾಸಿಸುತ್ತಿರುವವರಿಗೆ ಅಂತರರಾಷ್ಟ್ರೀಯ ಸಿನಿಮಾಗಳು ತಲುಪುತ್ತವೆ. ಅದರಲ್ಲು ಅಂತರರಾಷ್ಟ್ರೀಯ ಚಿತ್ರೋತ್ಸವ ಅಂದರೆ ಮನರಂಜನೆಯೇ ಪ್ರಧಾನವಾಗಿರೋ, ಹೀರೋ-ಹೀರೋಯಿನ್ ಪ್ರಧಾನವಾಗಿರೋ ಚಿತ್ರಗಳು ಇರೋದಿಲ್ಲ. ಇಂಥ ಚಿತ್ರೋತ್ಸವದಲ್ಲಿ ಮನಷ್ಯನ ಮನಸ್ಸು ಮತ್ತು ಹೃದಯಕ್ಕೆ ನಾಟಿ, ವಿಮರ್ಶೆ ಮಾಡಿಸುವಂತಹ ಚಿತ್ರಗಳೇ ಪ್ರದರ್ಶನವಾಗುವುದರಿಂದ ಇದು ಸಣ್ಣ-ಪುಟ್ಟ ಊರುಗಳಲ್ಲಿ ನಡೆದರೆ ಹೆಚ್ಚು ಪರಿಣಾಮಕಾರಿ.

ಈಗಾಗಲೇ ಜನಸಂಖ್ಯೆ ಮತ್ತು ಭೌತಿಕ ಅಭಿವೃದ್ಧಿ ಅತೀ ಅನಿಸಿರುವ ಬೆಂಗಳೂರು-ಮೈಸೂರಿಗೆ ಅಂತರರಾಷ್ಟ್ರೀಯ ಚಿತ್ರೋತ್ಸವ ಸೀಮಿತ ಮಾಡದೆ, ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಸಣ್ಣ-ಪುಟ್ಟ ಊರುಗಳಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವ ಆಯೋಜಿಸಿದರೆ ಹೇಗೆ? ಎಂದು ನಿಮ್ಮೆಲ್ಲರ ಅಭಿಪ್ರಾಯವನ್ನು ಕೇಳುತ್ತಿದ್ದೇನೆ?

ನಿಮ್ಮೆಲ್ಲರ ಪ್ರತಿಕ್ರಿಯೆ ಮತ್ತು ಚರ್ಚೆಯ ನಂತರ ಸರಿ-ತಪ್ಪುಗಳ ಆಧಾರದ ಮೇಲೆ ಮುಂದಿನ ನಡೆ ಬಗ್ಗೆ ಯೋಚಿಸೋಣ. ಕಡೆ ಪಕ್ಷ ಆಚರಣೆಗಳನ್ನಾದರು ಮಾಡುವ ಮುಖೇನ ಬೆಂಗಳೂರಿನ ದಟ್ಟಣೆಯನ್ನ ಕಡಿಮೆ ಮಾಡೋಣ.

ಜನ 19, 2016

ದನಕ್ಕಿರುವ ಬೆಲೆ ದಲಿತನಿಗಿಲ್ಲದ ದೇಶದಲ್ಲಿ....

(ಈ ಲೇಖನ ಓದಿದ ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಕೋಪ ಮತ್ತು ಬೇಸರ ವ್ಯಕ್ತಪಡಿಸಿರುವುದರಿಂದ ಈ ಸ್ಪಷ್ಟೀಕರಣ. ನಮ್ಮ ನಡುವೆ ಮಾನವೀಯತೆ ಮರೆತ ಮನುವಾದಿ ಮನಸ್ಥಿತಿಯವರು ಹೀಗೂ ಯೋಚಿಸಬಹುದು ಎನ್ನುವ ವಿಡಂಬನಾತ್ಮಕ ಲೇಖನವೇ ಹೊರತು ರೋಹಿತ್ ವೇಮುಲನ ಕುರಿತಾಗಲೀ ಅಥವಾ ದಲಿತರ ಕುರಿತಾಗಲೀ ಅವಹೇಳನ ಮಾಡುವ ಉದ್ದೇಶದ ಲೇಖನವಲ್ಲ. ಸತ್ಯ ಶೋಧನಾ ವರದಿ ಮತ್ತೊಂದು ಮಗದೊಂದು ಎಂಬ ನಾಟಕಗಳಿಂದ ಮೂಡಿದ ವಿಡಂಬನೆಯಿದು. ಆಗಸ್ಟಿನಿಂದ ಇಲ್ಲಿಯವರೆಗೆ ರೋಹಿತ್ ವೇಮುಲ ಮತ್ತವನ ಗೆಳೆಯರ ಸುತ್ತ ನಡೆದ ರಾಜಕೀಯಗಳ ಬಗ್ಗೆ ವಿವರವಾಗಿ ಹಿಂದಿನ ಬರಹದಲ್ಲಿ ದಾಖಲೆಗಳ ಸಮೇತ ಬರೆಯಲಾಗಿದೆ. ಅದನ್ನೋದಲು ಇಲ್ಲಿ ಕ್ಲಿಕ್ಕಿಸಿ - ಹಿಂಗ್ಯಾಕೆ?)
ಡಾ. ಅಶೋಕ್. ಕೆ. ಆರ್
ಭಾನುವಾರ ರಾತ್ರಿ ಒಂದು ಭಾವಪೂರ್ಣ ಪತ್ರ ಬರೆದಿಟ್ಟು ನೇಣಿಗೆ ಶರಣಾಗಿಬಿಟ್ಟವನು ರೋಹಿತ್ ವೇಮುಲ. ಇಂಗ್ಲೀಷಿನಲ್ಲಿದ್ದ ಆ ಪತ್ರವನ್ನು ಕನ್ನಡಕ್ಕೆ ಅನುವಾದಿಸಿ ಜೊತೆಗೆ ಹೈದರಾಬಾದಿನಲ್ಲಿ ಕಳೆದ ಆಗಸ್ಟಿನಿಂದ ನಡೆದಿದ್ದೇನು ಎನ್ನುವುದನ್ನು ನಿನ್ನೆ ಪ್ರಕಟಿಸಲಾಗಿತ್ತು. ಕಿರಣ್ ಗಾಜನೂರು ಕೂಡ ಆ ಪತ್ರವನ್ನು ಕನ್ನಡಕ್ಕೆ ಅನುವಾದಿಸಿ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದರು. ಹಿಂಗ್ಯಾಕೆಯಲ್ಲಿ ಬಂದಿದ್ದ ಅನುವಾದ, ಕಿರಣ್ ಗಾಜನೂರು ಮಾಡಿದ್ದ ಅನುವಾದ ಉಳಿದ ವೆಬ್ ಪುಟಗಳಲ್ಲಿ, ಫೇಸ್ ಬುಕ್ಕಿನಲ್ಲಿ, ವಾಟ್ಸ್ ಅಪ್ಪಿನಲ್ಲಿ ಹರಿದಾಡುತ್ತಲೇ ಇದೆ. ನನ್ನ ವಾಟ್ಸಪ್ಪಿಗೆ ಹಲವು ಸಲ ಬಂದಿದೆ. ಎಷ್ಟೇ ಸಲ ಬಂದರೂ ಮತ್ತೆ ಮತ್ತೆ ಓದಬೇಕೆನ್ನಿಸುತ್ತಿತ್ತು. ಓದಿ ಓದಿ ಈಗ ರೋಹಿತನ ಮೇಲೆ ಕೋಪ ಬಂದಿದೆ. ಹೈದರಾಬಾದಿನ ಉಪಕುಲಪತಿ ಅಪ್ಪಾರಾವ್, ಈ ಐದು ಹುಡುಗರ ಜಾತಿವಾದಿ, ದೇಶದ್ರೋಹಿ ಕೆಲಸಗಳಿಗೆ ತಡೆ ಹಾಕಬೇಕೆಂದು ಸ್ಮೃತಿ ಇರಾನಿಗೆ ಪತ್ರ ಬರೆದ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯರ ವಿರುದ್ಧ ಆತ್ಮಹತ್ಯಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೇಸು ದಾಖಲಾಗಿದೆ. ಸಚಿವೆ ಸ್ಮೃತಿ ಇರಾನಿಯವರು ಸತ್ಯ ಶೋಧನಾ ಸಮಿತಿಯನ್ನು ಕಳುಹಿಸಲಾಗುವುದೆಂದು ಹೇಳಿದ್ದಾರೆ. ಸತ್ಯ ಕಣ್ಣಿಗೆ ಕಾಣುವಾಗ ಶೋಧನಾ ಸಮಿತಿ ಯಾಕೆ? ಮೊದಲಿಗೆ ಮಾಡಬೇಕಾದ ಕೆಲಸವೆಂದರೆ ಅಮಾಯಕರಾದ ಬಂಡಾರು ದತ್ತಾತ್ರೇಯ ಮತ್ತು ಅಪ್ಪಾರಾವರ ವಿರುದ್ಧ ಹಾಕಿರುವ ಕೇಸುಗಳನ್ನು ಹಿಂತೆಗೆದುಕೊಳ್ಳಬೇಕು. ಯಾರ್ಯಾರು ಈ ಪ್ರಕರಣದಲ್ಲಿ ಅಪರಾಧಿಗಳೆಂದು ನೋಡೋಣ.
ಮೊದಲ ಅಪರಾಧಿಯ ಸ್ಥಾನದಲ್ಲಿ ಅಂಬೇಡ್ಕರರನ್ನು ನಿಲ್ಲಿಸಬೇಕು. ಚಾತುರ್ವರ್ಣ ನೀತಿಯೊಳಗೂ ಇಲ್ಲದ ದಲಿತರಿಗೊಂದು ಆತ್ಮಾಭಿಮಾನ ಮೂಡಿಸುವ ಕೆಲಸಕ್ಕಿಂತ ದೊಡ್ಡ ಅಪರಾಧ ಯಾವುದಾದರೂ ಇದೆಯೇ? ದಲಿತರು ಓದಬೇಕು, ದಲಿತರಿಗೆ ಸಮಾನತೆ ಸಿಗಬೇಕು ಎಂಬ ಕೆಟ್ಟ ಬುದ್ಧಿಯನ್ನೆಲ್ಲ ಅವರು ಪ್ರಚುರಪಡಿಸದಿದ್ದರೆ ಎಲ್ಲಾ ದಲಿತರು ಊರಾಚೆ ಬದುಕಿ ದೊಡ್ಡ ಜಾತಿಯವರ ಮಲ ಬಳಿದು, ಸತ್ತ ದನದ ಚರ್ಮ ಸುಲಿದು, ಊರೊಳಗೆ ಬರುವಾಗ ತಮಟೆ ಬಡಿಯುತ್ತ, ತಮ್ಮ ನೆರಳು ಮೇಲ್ಜಾತಿಯವರಿಗೆ ತಗುಲದಂತೆ ಎಚ್ಚರ ವಹಿಸುತ್ತ ಅಕ್ಷರ ಭಯೋತ್ಪಾದಕರ ಹಂಗಿಲ್ಲದೆ ನೆಮ್ಮದಿಯಾಗಿ ಇದ್ದುಬಿಡಬಹುದಿತ್ತಲ್ಲ. ಸುಖಾಸುಮ್ಮನೆ ಹದಿನೆಂಟು ಪರ್ಸೆಂಟು, ರಿಸರ್ವೆಷನ್ನು ಅಂತೆಲ್ಲ ಹೀಯಾಳಿಸಿಕೊಂಡು ಓದಿ ಉದ್ಧಾರವಾಗಬೇಕಾದ ದರ್ದೇನಿತ್ತಿವರಿಗೆ? ಇಂತ ಕೆಟ್ಟ ಬುದ್ಧಿಯನ್ನೆಲ್ಲ ಹೇಳಿಕೊಟ್ಟು ಸ್ವಾಭಿಮಾನ ತುಂಬಿದ್ದು ಆ ಅಂಬೇಡ್ಕರ್ ತಾನೇ? ಅದಿಕ್ಕೆ ಅವರ ಮೇಲೆ ಮೊದಲು ಕೇಸು ಹಾಕಬೇಕು. ಜೊತೆಗೆ ಎಲ್ಲರಿಗೂ ಶಿಕ್ಷಣ ನೀಡಲು ಶ್ರಮಿಸಿದ ಜ್ಯೋತಿಭಾ ಪುಲೆ, ಸಾವಿತ್ರಿಭಾಯಿ ಪುಲೆಯವರ ಮೇಲೆ ಕೇಸು ಜಡಿಯುವುದನ್ನು ಮರೆಯಬಾರದು. ಸತ್ತೋರ ಮೇಲೆ ಹಾಕುವ ಕೇಸಿನಿಂದ ಉಪಯೋಗ ಜಾಸ್ತಿ ಇಲ್ಲ ಅಲ್ಲವೇ.
ಮುಂದಿನ ಕೇಸನ್ನು ರೋಹಿತ್ ವೇಮುಲನ ತಂದೆ ತಾಯಿಯ ಮೇಲೆ ಹಾಕಬೇಕು. ಆಂಧ್ರದಲ್ಲೇನು ಜಮೀನುದಾರರಿಗೆ, ಭೂಮಾಲೀಕರಿಗೆ ಕೊರತೆಯೇ? ಅಂತವರ ಬಳಿಗೆ ತಮ್ಮ ಮಗನನ್ನು ಜೀತಕ್ಕೋ ಕೂಲಿಗೋ ಕಳುಹಿಸಿ ಚಾತುರ್ವರ್ಣ ಪದ್ಧತಿಯ ಉಳಿವಿಗೆ ಶ್ರಮಿಸುವುದನ್ನು ಬಿಟ್ಟು ಹೈದರಾಬಾದಿನ ವಿಶ್ವವಿದ್ಯಾಲಯಕ್ಕೆ ಓದಲು ಕಳುಹಿಸುವ ದುರಹಂಕಾರದ ಕೆಲಸವನ್ಯಾಕೆ ಮಾಡಬೇಕಿತ್ತವರು. ಓದಲಾತ ಇಲ್ಲಿಗೆ ಬರದಿದ್ದರೆ ಹೋರಾಟ ಮಣ್ಣು ಮಸಿ ಅಂತೆಲ್ಲ ಅವನ ತಲೆಗೆ ಹೋಗುತ್ತಲೇ ಇರಲಿಲ್ಲ. ನೆಮ್ಮದಿಯಾಗಿ ತಂಗಳನ್ನ ತಿಂದುಕೊಂಡು ಮೈಮುರಿದು ದುಡಿದು, ದಲಿತರ ಮೇಲಿನ ಅನ್ಯಾಯ ಕಣ್ಣಿಗೆ ಬಿದ್ದಾಗ 'ಎಲ್ಲಾ ನಮ್ ಪೂರ್ವಜನ್ಮದ ಪಾಪದ ಫಲ' ಎಂಬ ಅಯ್ನೋರ ಹೇಳಿಕೆಯನ್ನು ನೆನಪಿಸಿಕೊಂಡು ತಲೆ ತಗ್ಗಿಸಿ ಹೋಗಿಬಿಡಬಹುದಾಗಿದ್ದ ಯುವಕನನ್ನು ಓದಿಸಿ ಅವನ ಸಾವಿಗೆ ಕಾರಣವಾಗಿದ್ದು ವೇಮುಲನ ತಂದೆ ತಾಯಿಯೇ ಅಲ್ಲವೇ?
ಹೋಗ್ಲಿ ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ಓದಲು ಬಂದ ಮೇಲೆ ರಾಜಕೀಯ ಪ್ರಜ್ಞೆಯನ್ನು ಚೂರೂ ಬೆಳೆಸಿಕೊಳ್ಳದೇ ಓದಿಕೊಂಡು, ನಲಿದಾಡಿಕೊಂಡು, ಪಿಚ್ಚರ್ರು, ಮಾಲೂ ಅಂತ ತಿರುಗಾಡಿಕೊಂಡು ಇರುವುದನ್ನು ಬಿಟ್ಟು ಅದ್ಯಾಕೆ ಅಂಬೇಡ್ಕರ್ ವಿದ್ಯಾರ್ಥಿ ಸಂಘಕ್ಕೆಲ್ಲ ಸೇರಬೇಕಿತ್ತು? (ನೋಡಿ ಮತ್ತೆ ಇಲ್ಲಿ ಅಂಬೇಡ್ಕರ್ ಅಪರಾಧಿ). ಮುಜಾಫರ್ ನಗರದಲ್ಲಿ ನಡೆದ ಘಟನೆ ಕಟ್ಟಿಕೊಂಡು ಇವರಿಗೇನಾಬೇಕು? ಅಲ್ಲಿನ ಗಲಭೆಯ ಬಗೆಗಿನ ಡಾಕ್ಯುಮೆಂಟರಿಯನ್ನು ದೆಹಲಿಯಲ್ಲಿ ಪ್ರದರ್ಶನ ಮಾಡಲು ಬಿಡದಿದ್ದರೆ ಇವರಿಗೇನು ಹೋಗಬೇಕು? ಓ! ಅಲ್ಲಿನ ಕೋಮುಗಲಭೆಯಲ್ಲಿ ಹಿಂಸೆಗೊಳಗಾಗಿದ್ದು ಮುಸ್ಲಿಮರು, ಇದ್ದ ಹೆಚ್ಚು ಕಡಿಮೆ ಎಲ್ಲಾ ನಿರಾಶ್ರಿತ ಶಿಬಿರಗಳು ಮುಸ್ಲಿಮರದು, ಎರಡೇ ಎರಡು ನಿರಾಶ್ರಿತ ಶಿಬಿರಗಳು ಹಿಂದೂಗಳದ್ದಿತ್ತು. ಹಿಂದೂ ಧರ್ಮ ಅಸಹ್ಯಿಸುವ ದಲಿತರ ನಿರಾಶ್ತಿತ ಶಿಬಿರಗಳು. ದಲಿತರ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ ಬಗ್ಗೆಯೂ ಸಾಕ್ಷ್ಯಚಿತ್ರದಲ್ಲಿತ್ತು
(ಮುಜಾಫರ್ ನಗರದ ಕೋಮುಗಲಭೆಯಲ್ಲಿ ನಲುಗಿದ ಧರ್ಮವ್ಯಾವುದು?

ಅದರ ಬಗ್ಗೆಯೆಲ್ಲ ಇವರ್ಯಾಕೆ ತಲೆಕೆಡಿಸಿಕೊಳ್ಳಬೇಕಿತ್ತು. ದೇಶದಲ್ಲಿ ಹಿಂದೂ ಧರ್ಮವನ್ನು ರಕ್ಷಿಸಲು ಬಹುದೊಡ್ಡ ಪಡೆ ಸಿದ್ಧವಾಗಿರುವಾಗ ಅಂತವರ ಜೊತೆ ಕೈಜೋಡಿಸುವ ಕೆಲಸ ಮಾಡುವುದನ್ನು ಬಿಟ್ಟು ಸತ್ಯ - ಧರ್ಮ - ನ್ಯಾಯ ಎಂದೆಲ್ಲ ಬೊಬ್ಬೆ ಹೊಡೆಯುವುದ್ಯಾಕೆ? ಇಂತಹ ಚಿಂತನೆಗಳನ್ನೆಲ್ಲ ತಲೆಗೆ ತುಂಬಿದ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಮೇಲೂ ಮರೆಯದೆ ಪ್ರಕರಣ ದಾಖಲಾಗಬೇಕು.
ರೋಹಿತನ ತಲೆಕೆಡಿಸಿದ ಅಂಬೇಡ್ಕರ್, ಜ್ಯೋತಿಭಾ ಪುಲೆ, ಶಿಕ್ಷಣ ಕೊಡಿಸಿದ ತಂದೆ ತಾಯಿ, ವಿಚಾರಗಳನ್ನು ತುಂಬಿದ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಮೇಲೆ ಕೇಸುಗಳನ್ನು ದಾಖಲಿಸುವುದನ್ನು ಬಿಟ್ಟು ಹಿಂದೂ ಧರ್ಮ ರಕ್ಷಕರ ಮೇಲೆ ಕೇಸು ಹಾಕಿರುವುದು ಸರಿಯಲ್ಲ. ಮತ್ತು ದನ ಸಾಯಿಸಿದಾಗ ಮಾತನಾಡದವರೆಲ್ಲರೂ ಯಕಶ್ಚಿತ್ ಒಬ್ಬ ದಲಿತ ಸತ್ತಾಗ ದೇಶವೇ ಹಾಳಾಯಿತೆಂದು ಬೊಬ್ಬೆ ಹೊಡೆಯುವ ದುರ್ವಿಧಿ ಈ ದೇಶಕ್ಕೆ ಬರಬಾರದಿತ್ತು. ಅಲ್ಲರೀ ದನದೊಳಗೆ ಮೂವತ್ತುಮೂರು ಕೋಟಿ ದೇವತೆಗಳು ಬದುಕಿ ಬಾಳುತ್ತಿವೆ, ಈ ಹಾಳಾದ ದಲಿತರಲ್ಲೇನಿದೆ? ಅವರ ಮುಖ ಕಂಡ್ರೆ ನಮ್ ದೇವ್ರಿಗೇ ಮೈಲಿಯಾಗಿಬಿಡುತ್ತೆ ಅನ್ನೋ ಕಾಮನ್ ಸೆನ್ಸ್ ಕೂಡ ನಮ್ ಜನರಲ್ಲಿ ಕಾಣೆಯಾಗಿಬಿಟ್ಟಿದೆಯಲ್ಲ. ಸಮಾನ ಆಹಾರದ ಹಕ್ಕಿನ ಕುರಿತು ಮಾಂಸ ತಿನ್ನೋರು ತಿನ್ದೇ ಇರೋರೆಲ್ಲ ಸೇರ್ಕಂಡು ವಡೆ, ಬೀಫು ತಿಂದು ಪ್ರತಿಭಟನೆ ನಡೆಸಿದಾಗ ಅಂಡು ಬಡ್ಕೊಂಡು ಅರಚಿಕೊಂಡವರೆಲ್ಲ ನೋಡಿ ಎಷ್ಟೊಂದು ಮೌನದಿಂದಿದ್ದಾರೆ. ಅವರಿಗೆ ಗೊತ್ತು ಇಂತಹ ಘಟನೆಗಳು ಸನಾತನ ಧರ್ಮ ಮರುಪ್ರತಿಷ್ಟಾಪನೆಯಾಗುತ್ತಿರುವ ಲಕ್ಷಣಗಳೆಂದು. ಅವರ ಮೌನವನ್ನು ನೋಡಿಯೂ ಕಲಿಯದ ಈ ದೇಶದ ದ್ರೋಹಿಗಳು ರೋಹಿತನ ಆತ್ಮಹತ್ಯೆಯನ್ನು ಪ್ರತಿಭಟಿಸಿ ಇವತ್ತು (19/01/2015) ಅದೇ ಬೆಂಗಳೂರಿನ ಟೌನ್ ಹಾಲಿನ ಮುಂದೆ ಸಂಜೆ ನಾಲ್ಕೂವರೆಗೆ ನಾಲಕ್ಕು ಫೋಟೋ ಇಟ್ಕೊಂಡು, ಹತ್ತು ಬ್ಯಾನರ್ ಕಟ್ಕೊಂಡು ಕೂಗುವ ಕಾರ್ಯಕ್ರಮ ಇಟ್ಕೊಂಡಿದ್ದಾರಂತೆ. ಬಿಡುವಾಗಿದ್ದರೆ ನೀವು ಅತ್ತ ಕಡೆ ಒಮ್ಮೆ ಬಂದು ದೇಶದ್ರೋಹಿಗಳನ್ನು ಕಣ್ತುಂಬ ನೋಡಿಕೊಂಡು ಹೋಗಬೇಕಾಗಿ ವಿನಂತಿ

ಜನ 18, 2016

ರೋಹಿತ್ ವೇಮುಲನ ಸಾವಿಗೆ ಹೊಣೆಯಾರು?

“ಶುಭ ಮುಂಜಾನೆ,
ಈ ಪತ್ರವನ್ನು ನೀವು ಓದುವಾಗ ನಾನಿರುವುದಿಲ್ಲ. ಕೋಪ ಮಾಡಿಕೊಳ್ಳಬೇಡಿ. ನನಗೆ ಗೊತ್ತು, ನಿಮ್ಮಲ್ಲಿ ಹಲವರು ನನ್ನ ಒಳಿತು ಬಯಸಿದಿರಿ, ಪ್ರೀತಿಸಿದಿರಿ ಮತ್ತು ಚೆಂದ ನೋಡಿಕೊಂಡಿರಿ. ಯಾರ ಮೇಲೂ ನನಗೆ ದೂರುಗಳಿಲ್ಲ. ಯಾವಾಗಲೂ ನಾನೇ ನನ್ನ ಸಮಸ್ಯೆಗಳಿಗೆ ಕಾರಣ. ನನ್ನ ದೇಹ ಮತ್ತು ಆತ್ಮದ ನಡುನಿನ ಕಂದಕ ದೊಡ್ಡದಾಗುತ್ತಿರುವ ಭಾವನೆ. ಮತ್ತು ನಾನು ರಾಕ್ಷಸನಾಗಿಬಿಟ್ಟಿದ್ದೇನೆ. ನನಗೆ ಬರಹಗಾರನಾಗಬೇಕೆಂದಿತ್ತು. ವಿಜ್ಞಾನ ಲೇಖಕ ಕಾರ್ಲ್ ಸಗಾನಿನ ಹಾಗೆ. ಕೊನಗೆ, ಇದೊಂದೇ ಪತ್ರವನ್ನಷ್ಟೇ ಬರೆಯಲು ನನ್ನಿಂದಾದದ್ದು.

ವಿಜ್ಞಾನ, ನಕ್ಷತ್ರ, ಪ್ರಕೃತಿಯನ್ನು ಪ್ರೀತಿಸಿದೆ; ಪ್ರಕೃತಿಯಿಂದ ಮನುಷ್ಯರು ವಿಚ್ಛೇದನ ಪಡೆದು ಬಹಳ ದಿನಗಳಾಯಿತು ಎಂಬುದನ್ನು ಅರಿಯದೆ ಮನುಷ್ಯರನ್ನು ಪ್ರೀತಿಸಿದೆ. ನಮ್ಮ ಭಾವನೆಗಳೆಲ್ಲ ಸೆಕೆಂಡ್ ಹ್ಯಾಂಡು. ಪ್ರೀತಿಯನ್ನಿಲ್ಲಿ ‘ಕಟ್ಟಲಾಗಿದೆ’. ನಂಬಿಕೆಗಳಿಗೆ ಬಣ್ಣ ಬಳಿಯಲಾಗಿದೆ. ನಮ್ಮ ಸ್ವಂತಿಕೆಗೆ ಬೆಲೆ ಬರುವುದು ಕೃತಕ ಕಲೆಯಿಂದ. ನೋವುಣ್ಣದೆ ಪ್ರೀತಿಸುವುದು ನಿಜಕ್ಕೂ ಕಷ್ಟಕರವಾಗಿಬಿಟ್ಟಿದೆ.

ಮನುಷ್ಯನ ಮೌಲ್ಯ ಅವನ ತತ್ ಕ್ಷಣದ ಗುರುತು ಮತ್ತು ಸಾಧ್ಯತೆಗಳಿಗೆ ಇಳಿದುಬಿಟ್ಟಿದೆ. ಒಂದು ವೋಟಿಗೆ. ಒಂದು ನಂಬರ್ರಿಗೆ. ಒಂದು ವಸ್ತುವಿಗೆ. ನಕ್ಷತ್ರದ ಧೂಳಿನಿಂದ ಉದ್ಭವವಾದ ಅತ್ಯದ್ಭುತ ವಸ್ತುವಿನಂತಹ ಬುದ್ಧಿವಂತಿಕೆ ಮೂಲಕ ಎಂದೂ ಮನುಷ್ಯನನ್ನು ಗುರುತಿಸಲಿಲ್ಲ. ಬೀದಿಯಲ್ಲಿ, ಓದಿನಲ್ಲಿ, ರಾಜಕೀಯದಲ್ಲಿ, ಸಾವಿನಲ್ಲಿ, ಬದುಕಿನಲ್ಲಿ.

ಈ ರೀತಿಯ ಪತ್ರವನ್ನು ಮೊದಲ ಬಾರಿಗೆ ಬರೆಯುತ್ತಿದ್ದೇನೆ. ಮೊದಲ ಬಾರಿಗೆ ಕೊನೆಯ ಪತ್ರ. ಸರಿಯಿರದಿದ್ದರೆ ಕ್ಷಮಿಸಿ.

ಬಹುಶಃ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನು ತಪ್ಪಿದೆ. ಪ್ರೀತಿ, ನೋವು, ಬದುಕು, ಸಾವು ಅರ್ಥ ಮಾಡಿಕೊಳ್ಳುವಲ್ಲಿ ಸೋತೆ. ಆತುರವೇನಿರಲಿಲ್ಲ, ನಾನು ಓಡುತ್ತಲೇ ಇದ್ದೆ. ಬದುಕು ಪ್ರಾರಂಭಿಸುವ ಅವಸರವಿತ್ತು. ಕೆಲವರಿಗೆ ಬದುಕೇ ಶಾಪ. ನನಗೆ, ನನ್ನ ಹುಟ್ಟೇ ಮಾರಾಣಾಂತಿಕ ಅಪಘಾತ. ಬಾಲ್ಯದ ಒಂಟಿತನದಿಂದ ನಾನೆಂದೂ ಹೊರಬರಲಾರೆ. ಹೊಗಳಿಕೆ ಪಡೆಯದ ಮಗುವಿನ ಭೂತ.

ಈ ಕ್ಷಣದಲ್ಲಿ ನನಗೆ ನೋವಾಗುತ್ತಿಲ್ಲ, ದುಃಖವಾಗುತ್ತಿಲ್ಲ; ಖಾಲಿಯಾಗಿದ್ದೀನಷ್ಟೇ. ನನ್ನ ಬಗ್ಗೆ ನನಗೇ ಕ್ಯಾರೆಯಿಲ್ಲ. ಇದು ಅಸಹ್ಯ. ಹಾಗಾಗಿ ಈ ಕೆಲಸ ಮಾಡುತ್ತಿದ್ದೇನೆ.

ಜನರು ನನ್ನನ್ನು ಹೇಡಿಯೆಂದು ಜರಿಯಬಹುದು. ನಾನು ಹೋದ ಮೇಲೆ ಮೂರ್ಖ, ಸ್ವಾರ್ಥಿ ಎನ್ನಬಹುದು. ನನ್ನನ್ನು ಹೇಗೆ ಕರೆಯುತ್ತಾರೋ ಎನ್ನುವುದರ ಬಗ್ಗೆ ನನಗೆ ಚಿಂತೆಯಿಲ್ಲ. ಮರಣಾನಂತರದ ಕತೆಗಳಲ್ಲಿ, ದೆವ್ವಗಳಲ್ಲಿ ನನಗೆ ನಂಬಿಕೆಯಿಲ್ಲ. ಏನನ್ನಾದರೂ ನಂಬಬಹುದೆಂದರೆ, ನಕ್ಷತ್ರಗಳ ಜೊತೆ ಪಯಣಿಸುವುದನ್ನು ನಂಬುತ್ತೇನೆ. ಮತ್ತು ಇತರೆ ವಿಶ್ವಗಳ ಬಗ್ಗೆ ತಿಳಿದುಕೊಳ್ಳಬಯಸುತ್ತೇನೆ.

ಈ ಪತ್ರ ಓದುತ್ತಿರುವ ನೀವು ನನಗೇನಾದರೂ ಮಾಡಬಹುದಾದರೆ, ಕಳೆದ ಏಳು ತಿಂಗಳಿನ ಫೆಲ್ಲೋಶಿಪ್ ಹಣ ಒಂದು ಲಕ್ಷದ ಎಪ್ಪತ್ತೈದು ಸಾವಿರ ರುಪಾಯಿ ಇನ್ನೂ ಬರಬೇಕಿದೆ. ನನ್ನ ಕುಟುಂಬದವರಿಗೆ ಆ ಹಣ ತಲುಪುವುದನ್ನು ಖಾತ್ರಿ ಪಡಿಸಿಕೊಳ್ಳಿ. ರಾಮ್ಜಿಗೆ ನಲವತ್ತು ಸಾವಿರದತ್ತಿರ ಕೊಡಬೇಕಿದೆ. ಅವನದ್ಯಾವತ್ತನ್ನೂ ವಾಪಸ್ಸು ಕೇಳಿಲ್ಲ. ದಯವಿಟ್ಟು ನನಗೆ ಬರುವ ಹಣದಲ್ಲಿ ಅವನ ಹಣವನ್ನು ಕೊಟ್ಟುಬಿಡಿ.

ನನ್ನ ಅಂತ್ಯಕ್ರಿಯೆ ಶಾಂತವಾಗಿ ಸರಾಗವಾಗಿ ನಡೆಯಲಿ. ಹಿಂಗೆ ಕಾಣಿಸಿಕೊಂಡು ಹಂಗೆ ಮರೆಯಾಗಿಬಿಟ್ಟ ಎನ್ನುವಂತೆ ವರ್ತಿಸಿ. ನನಗಾಗಿ ಕಣ್ಣೀರು ಬೇಡ. ಬದುಕಿಗಿಂತ ಸಾವಿನಲ್ಲೇ ನನಗೆ ಹೆಚ್ಚು ಖುಷಿಯಿದೆ ಎನ್ನುವುದು ಗೊತ್ತಿರಲಿ.

ಉಮಾ ಅಣ್ಣ, ಈ ಕೆಲಸಕ್ಕೆ ನಿಮ್ಮ ರೂಮನ್ನು ಉಪಯೋಗಿಸಿದ್ದಕ್ಕೆ ಕ್ಷಮೆ ಇರಲಿ.

ನಿರಾಸೆ ಮೂಡಿಸಿದ್ದಕ್ಕೆ ಎ.ಎಸ್.ಎ ಕುಟುಂಬದ (ASA: Ambedkar Students Association) ಕ್ಷಮೆ ಕೇಳುತ್ತೇನೆ. ನೀವೆಲ್ಲರೂ ನನ್ನನ್ನು ತುಂಬಾ ಪ್ರೀತಿಸಿದಿರಿ. ಎ.ಎಸ್.ಎನ ಭವಿಷ್ಯಕ್ಕೆ ಶುಭ ಕೋರುತ್ತೇನೆ.
ಕೊನೆಯ ಬಾರಿಗೆ,
ಜೈ ಭೀಮ್.

ಫಾರ್ಮಾಲಿಟಿಗಳನ್ನು ಬರೆಯುವುದನ್ನು ಮರೆತುಬಿಟ್ಟೆ. ಈ ಆತ್ಮಹತ್ಯೆಗೆ ಯಾರೂ ಜವಾಬ್ದಾರರಲ್ಲ. 
ತಮ್ಮ ಕಾರ್ಯ ಅಥವಾ ತಮ್ಮ ಮಾತಿನಿಂದ ಯಾರೂ ಪ್ರೇರೇಪಿಸಲಿಲ್ಲ.
ಇದು ನನ್ನ ನಿರ್ಧಾರ ಮತ್ತು ಇದಕ್ಕೆ ನಾನೊಬ್ಬನೇ ಜವಾಬ್ದಾರ.
ನಾನು ಹೋದ ಮೇಲೆ ಈ ವಿಷಯವಾಗಿ ನನ್ನ ಸ್ನೇಹಿತರಿಗೆ ಮತ್ತು ಶತ್ರುಗಳಿಗೆ ತೊಂದರೆ ಕೊಡಬೇಡಿ.”

ಇಂತಹುದೊಂದು ಮನಕಲಕುವ ಪತ್ರವನ್ನು ಬರೆದು ಭಾನುವಾರ ರಾತ್ರಿ ನೇಣಿನ ಕುಣಿಕೆಗೆ ಕುತ್ತಿಗೆಯನ್ನೊಡ್ಡಿದವನು ರೋಹಿತ್ ವೇಮುಲಾ, ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಪೂರ್ಣವಾಗಿ ಹೇಳಬೇಕೆಂದರೆ Dalit Research scholar. ಮರಣ ಪತ್ರ ಸಾವಿಗೆ ಹತ್ತಲವು ಕಾರಣಗಳಿದ್ದಿರಬಹುದೆಂಬ ಅನುಮಾನ ಮೂಡಿಸುತ್ತದೆ. ಹತ್ತಲವು ಕಾರಣಗಳಲ್ಲಿ ಕಳೆದೈದು ತಿಂಗಳುಗಳಿಂದ ರೋಹಿತ್ ವೇಮುಲ ಮತ್ತವನ ಸ್ನೇಹಿತರ ಮೇಲಾದ ಮಾನಸಿಕ ಕ್ರೌರ್ಯ ಪ್ರಮುಖವಾದುದು. ಉಳಿದ ಕಾರಣಗಳನ್ನು ಪ್ರಮುಖವಾಗಿಸಿ ಮೂಲಕಾರಣವನ್ನು ಮರೆಮಾಚುವ ಮುನ್ನ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ನಡೆದಿದ್ದರ ಕಡೆಗೆ ಗಮನಹರಿಸೋಣ.

ದೆಹಲಿ ವಿಶ್ವವಿದ್ಯಾಲಯದಲ್ಲಿ ‘ಮುಝಾಫರ್ ನಗರ್ ಬಾಕೀ ಹೈ’ ಸಾಕ್ಷ್ಯಚಿತ್ರದ ಪ್ರದರ್ಶನದ ವೇಳೆ ಎಬಿವಿಪಿಯ ಕಾರ್ಯಕರ್ತರು ನುಗ್ಗಿ ದಾಂಧಲೆ ಮಾಡಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ನಿಲ್ಲಿಸಿಬಿಟ್ಟರು. ಎಬಿವಿಪಿಯ ಈ ಕೃತ್ಯವನ್ನು ವಿರೋಧಿಸಿ ಹೈದರಾಬಾದ್ ವಿಶ್ವವಿದ್ಯಾಲಯದ ಅಂಬೇಡ್ಕರ್ ವಿದ್ಯಾರ್ಥಿ ಸಂಘ (ಎ.ಎಸ್.ಎ: Ambedkar student association) 2015ರ ಆಗಸ್ಟ್ ಮೂರರಂದು ಪ್ರತಿಭಟನೆ ಆಯೋಜಿಸುತ್ತಾರೆ. 
ಪ್ರತಿಭಟಿಸುವುದು ತಪ್ಪೇ?
ಹೈದರಾಬಾದ್ ವಿಶ್ವವಿದ್ಯಾಲಯದ ಎಬಿವಿಪಿಯ ಮುಖಂಡ ನಂದನಂ ಸುಶೀಲ್ ಕುಮಾರ್ ಈ ಪ್ರತಿಭಟನೆಯ ಕುರಿತಂತೆ ಕೆಳಗಿನಂತೆ ಫೇಸ್ ಬುಕ್ಕಿನಲ್ಲೊಂದು ಪೋಸ್ಟ್ ಹಾಕುತ್ತಾನೆ. 
ಸುಶೀಲ್ ಕುಮಾರನ ಫೇಸ್ ಬುಕ್ ಪೋಸ್ಟ್
ಕೆರಳಿದ ಎ.ಎಸ್.ಎ ಹುಡುಗರು ಗುಂಪು ಕಟ್ಟಿಕೊಂಡು ಸುಶೀಲ್ ಕುಮಾರನ ರೂಮಿಗೆ ನುಗ್ಗುತ್ತಾರೆ. ಅಲ್ಲವನು ಸೆಕ್ಯುರಿಟಿಯವರ ಮುಂದೆ ಒಂದು ಕ್ಷಮಾಪಣೆ ಪತ್ರ ಬರೆದುಕೊಡುತ್ತಾನೆ. ಸಂಘಟನೆಗಳ ಗಲಾಟೆ, ಹುಡುಗರ ಗಲಾಟೆ ಅಲ್ಲಿಗೆ ಮುಗಿಯಬೇಕಿತ್ತು. ಮುಗಿಯಲಿಲ್ಲ. 
ಸುಶೀಲ್ ಕುಮಾರ್ ಬರೆದುಕೊಟ್ಟ ಕ್ಷಮಾಪಣಾ ಪತ್ರ
ಸುಶೀಲ್ ಕುಮಾರ್ ಎ.ಎಸ್.ಎ ಹುಡುಗರಿಂದ ಪೆಟ್ಟು ತಿಂದಿದ್ದಾನೆ ಎಂದು ಆಸ್ಪತ್ರೆಗೆ ಸೇರುತ್ತಾನೆ. ಬಿಜೆಪಿಯಲ್ಲಿರುವ ಸುಶೀಲನ ಅಣ್ಣ, ಬಿಜೆಪಿಯ ಎಂ.ಎಲ್.ಸಿ ರಾಮಚಂದ್ರ ರಾವ್ ಹೀಗೆ ರಾಜಕೀಯ ಪಕ್ಷದ ಪ್ರವೇಶವಾಗುತ್ತದೆ. ದಲಿತ ಹುಡುಗರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗುತ್ತದೆ.

ನಡೆದಿದ್ದೇನು ಎನ್ನುವುದನ್ನು ವಿಚಾರಿಸಲು ಆಗಿದ್ದ ಉಪಕುಲಪತಿ ಪ್ರೊಫೆಸರ್ ಆರ್.ಪಿ.ಶರ್ಮಾ, ಪ್ರೊಫೆಸರ್ ಅಲೋಕ್ ಪಾಂಡೆಯವರ ನೇತೃತ್ವದಲ್ಲೊಂದು ಸಮಿತಿ ರಚಿಸುತ್ತಾರೆ. ಈ ಸಮಿತಿ ಕೊಟ್ಟ ವರದಿ ಅವರೇ ಕಂಡುಕೊಂಡೆವೆಂದು ಬರೆದಿದ್ದ ಸಂಗತಿಗಳಿಂತ ಸಂಪೂರ್ಣ ಭಿನ್ನವಾಗಿತ್ತು! 



ಸಮಿತಿಯ ಮೊದಲ ನಿರ್ಧಾರಗಳು

ಸಮಿತಿ ಕಂಡುಕೊಂಡ ಸಂಗತಿಗಳಲ್ಲಿ ಸುಶೀಲ್ ಕುಮಾರ್ ಮೇಲೆ ಹಲ್ಲೆಯಾಗಿದ್ದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಸುಶೀಲ್ ಕುಮಾರರನ್ನು ನೋಡಿಕೊಳ್ಳುತ್ತದ್ದ ಡಾ. ಅನುಪಮಾ ಕೊಟ್ಟ ವರದಿಯಲ್ಲೂ ಹಲ್ಲೆಗೂ ಸುಶೀಲ್ ಕುಮಾರನ ಪರಿಸ್ಥಿತಿಗೂ ಸಂಬಂಧವಿಲ್ಲವೆಂದೇ ಹೇಳುತ್ತಿತ್ತು. (ಸುಶೀಲ್ ಕುಮಾರನಿಗೆ ಅಪೆಂಡಿಸೈಟಿಸ್ ಆಗಿತ್ತು). ಎಡ ತೋಳಿನ ಮೇಲೆ ಕೆಲವು ಗೀರು ಗಾಯಗಳಿದ್ದವು ಎಂದಷ್ಟೇ ವೈದ್ಯೆ ಹೇಳಿದ್ದರು. ಸೆಕ್ಯುರಿಟಿ ಆಫೀಸರ್ ದಿಲೀಪ್ ಸಿಂಗ್ ಕೂಡ ಎ.ಎಸ್.ಎ ಹುಡುಗರು ಸುಶೀಲ್ ಕುಮಾರನನ್ನು ಹೊಡೆದಿದ್ದನ್ನು ನಾನು ನೋಡಲಿಲ್ಲ ಎಂದು ತಿಳಿಸಿದರು. ಸುಶೀಲ್ ಕುಮಾರ್ ಆಸ್ಪತ್ರೆಯಲ್ಲಿದ್ದರಿಂದ ಆತನ ಹೇಳಿಕೆಯನ್ನು ಪಡೆದಿರಲಿಲ್ಲ. ಎ.ಎಸ್.ಎ ಬಗ್ಗೆ ಸುಶೀಲ್ ಕುಮಾರ್ ಬರೆದ ಫೇಸ್ ಬುಕ್ ಪೋಸ್ಟು, ಅದರಿಂದಾಗಿ ಉಂಟಾದ ವಾಗ್ವಾದ ಮತ್ತು ಕೊನೆಯಲ್ಲಿ ಬರೆದುಕೊಟ್ಟ ಕ್ಷಮಾಪಣಾ ಪತ್ರದ ಬಗ್ಗೆ ಪ್ರಸ್ತಾಪಿಸುತ್ತಾರೆ. ಗಮನಿಸಬೇಕಾದ್ದೆಂದರೆ ವಿಚಾರಣೆಯನ್ನು ಮೂರ್ನಾಲ್ಕು ದಿನದಲ್ಲೇ ಕೊಡಬೇಕೆಂಬ ಒತ್ತಡದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಸಮಿತಿ ತನ್ನ ಮೊದಲ ನಿರ್ಧಾರದಲ್ಲಿ ಫೇಸ್ ಬುಕ್ಕಿನಲ್ಲಿ ಆ ರೀತಿ ಬರೆದ ಸುಶೀಲ್ ಕುಮಾರನಿಗೆ ಎಚ್ಚರಿಕೆ ಕೊಡಬೇಕು ಮತ್ತು ಸಂಬಂಧಪಟ್ಟವರಲ್ಲಿ ದೂರು ನೀಡದೆ ಸುಶೀಲ್ ಕುಮಾರನ ರೂಮಿಗೆ ಹೋಗಿ ಕ್ಷಮೆ ಕೋರುವಂತೆ ಮಾಡಿದ ಡಿ.ಪ್ರಶಾಂತ್, ವಿನ್ಸೆಂಟ್, ರೋಹಿತ್ ವೆಮುಲ, ಪಿ.ವಿಜಯ್, ಸುಂಕನ್ನ, ಸೇಶು ಚೆಮುದುಗುಂಟರಿಗೆಲ್ಲ ಎಚ್ಚರಿಕೆ ನೀಡಬೇಕು ಎಂದು ಹೇಳುತ್ತಾರೆ. ಜೊತೆಗೆ ರಾಜಕೀಯ ಸಂಘಟನೆಗಳು ಹೇಗೆ ವಿಶ್ವವಿದ್ಯಾಲಯದ ಗೌರವವನ್ನು ಮಣ್ಣುಪಾಲು ಮಾಡುತ್ತಿವೆ, ಮತ್ತಿದನ್ನು ತಡೆಯಲು ಮಾಡಬೇಕಾದ ಕೆಲಸಗಳ್ಯಾವುವು ಎಂದು ವಿವರಿಸುತ್ತಾರೆ. ಆದರೆ ಕೊನೆಯ ನಿರ್ಣಯದಲ್ಲಿ ಎರಡೂ ಕಡೆಯವರಿಗೆ ಎಚ್ಚರಿಕೆ ಕೊಡುವ ನಿರ್ಧಾರ ದಲಿತ ಹುಡುಗರನ್ನೆಲ್ಲರನ್ನೂ ವಿಶ್ವವಿದ್ಯಾಲಯದಿಂದ ಹೊರಹಾಕಬೇಕೆಂದು ಬರೆದುಬಿಡುತ್ತಾರೆ! ಸುಂಕನ್ನ ವಿದ್ಯಾರ್ಥಿಯಲ್ಲ, ಹೊರಗಿನವರ ಪ್ರವೇಶದ ಮೇಲೆ ನಿಗಾ ಇಡಬೇಕು ಎಂಬ ಸಮಿತಿಯ ನಿರ್ಧಾರವನ್ನೇನೋ ಒಪ್ಪಬಹುದು. ಆದರೆ ಹೊರಗಿನವರ ಒತ್ತಾಯಕ್ಕೆ ಇಡೀ ವರದಿಯನ್ನೇ ಬದಲಿಸುವುದನ್ನು ಹೇಗೆ ಒಪ್ಪುವುದು? 
ಸಮಿತಿಯ ಅಂತಿಮ ನಿರ್ಧಾರ
ವರದಿಯಲ್ಲಿನ ಅಂತಿಮ ವಿಷಯಗಳನ್ನು ತಿಳಿಯುತ್ತಿದ್ದಂತೆ ಎ.ಎಸ್.ಎ ಪ್ರತಿಭಟನೆ ನಡೆಸುತ್ತದೆ. ಆಗಿನ ಉಪಕುಲಪತಿ ಆರ್.ಪಿ.ಶರ್ಮಾರವರೊಡನೆ ಚರ್ಚೆ ನಡೆಸುತ್ತದೆ. ಅಮಾನತ್ತಿನ ಆದೇಶವನ್ನು ಹಿಂಪಡೆದು ತನಿಖೆ ನಡೆಸಲು ಮತ್ತೊಂದು ಸಮಿತಿ ರಚಿಸಲವರು ಒಪ್ಪುತ್ತಾರೆ. 
ಹೊಸ ತನಿಖೆ ನಡೆಸಲು ಮಾಡಿದ ಆದೇಶ
ಆದರೆ ಈಗಿನ ಉಪಕುಲಪತಿ ಪ್ರೊಫೆಸರ್ ಪೋಡಿಲೇ ಅಪ್ಪಾರಾವ್ ಹೊಸ ತನಿಖೆಗೆ ಆದೇಶಿಸುವುದಿಲ್ಲ. ಐದೂ ಜನ ಹುಡುಗರನ್ನು ಹಾಸ್ಟೆಲಿನ ರೂಮು ಖಾಲಿ ಮಾಡುವಂತೆ ಆದೇಶ ಹೊರಡಿಸುತ್ತಾರೆ.
ಹಾಸ್ಟೆಲ್ಲಿನಿಂದ ಹೊರಹಾಕಿದ ಆದೇಶ
ಮೇಲ್ನೋಟಕ್ಕೆ ಎರಡೂ ಕಡೆಯಿಂದ ಒಂದಷ್ಟಷ್ಟು ತಪ್ಪುಗಳಾಗಿರುವುದು ಎದ್ದು ಕಾಣುತ್ತಿರುವ ಪ್ರಕರಣದಲ್ಲಿ ಎರಡೂ ಕಡೆಯವರನ್ನು ಕರೆಸಿ ಕೂರಿಸಿ ಮಾತನಾಡಿ ಬಗೆಹರಿಸಬೇಕಾದ ವಿಷಯವಿಲ್ಲಿ ಬಿಜೆಪಿ ಮತ್ತು ಹಿಂದೂ ಬಲಪಂಥೀಯ ಸಂಘಟನೆಗಳ ಒತ್ತಡದಿಂದ ದಲಿತ ಹುಡುಗರಷ್ಟೇ ಬಲಿಪಶುವಾಗುವಂತಹ ಸಂದರ್ಭವನ್ನು ಸೃಷ್ಟಿಸಿದೆ.
ಹಾಸ್ಟೆಲ್ಲಿನಿಂದ ಹೊರಗಡಿಯಿಟ್ಟಾಗ (ಅಂಬೇಡ್ಕರ್ ಫೋಟೋ ಇಟ್ಟುಕೊಂಡಿರುವವನು ರೋಹಿತ್ ವೇಮುಲ
ಹಾಸ್ಟೆಲ್ಲಿನಿಂದ ಹೊರಹಾಕಲ್ಪಟ್ಟ ಹುಡುಗರು ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದ್ದಾರೆ. ಪ್ರತಿಭಟನೆ ಮುಂದುವರೆಯುತ್ತಿರುವ ಹೊತ್ತಿನಲ್ಲೇ ರೋಹಿತ್ ವೆಮುಲ ನೇಣಿಗೆ ಶರಣಾಗಿದ್ದಾನೆ. ಈ ಸಾವಿಗೆ ಹೊಣೆಯಾರು?
ಮೂಲ: ಎ.ಎಸ್.ಎ, ಸ್ಕ್ರಾಲ್, ದಿ ಹಿಂದೂ ಮತ್ತು ಇತರೆ ನ್ಯೂಸ್ ತಾಣಗಳು.

ಜನ 15, 2016

ಮೇಕಿಂಗ್ ಹಿಸ್ಟರಿ: ಒಡೆಯರ್-ಕರ್ನಾಟಕದ ಮೊದಲ ಕೈಗೊಂಬೆ

saketh rajan
ಕೈಗೊಂಬೆಯ ತಯಾರಿಕೆ.
ಸಾಕೇತ್ ರಾಜನ್
ಕನ್ನಡಕ್ಕೆ: ಡಾ ಅಶೋಕ್ ಕೆ ಆರ್
ಒಂದು ಶತಮಾನದ ಪ್ರಭುತ್ವ ಬ್ರಿಟೀಷರಿಗೆ ತಮ್ಮ ವಸಾಹತು ನೀತಿಗಳನ್ನು ರೂಪಿಸಲು ಸಹಕರಿಸಿತ್ತು. 1799ರಲ್ಲಿ ಟಿಪ್ಪು ಸುಲ್ತಾನನ ಸೋಲಿನ ನಂತರ ಒಡೆಯರ್ ವಂಶವನ್ನು ಪೀಠದ ಮೇಲೆ ವಿಜ್ರಂಭಿಸುವಂತೆ ಮಾಡುವಲ್ಲಿ ಬ್ರಿಟೀಷ್ ವಸಾಹತು ನೀತಿ ಮಹತ್ತರ ಪಾತ್ರ ವಹಿಸಿತು. ಒಡೆಯರ್ ಆಡಳಿತದ ಉನ್ನತಿಯ ಹಿಂದಿನ ಕಾರಣಗಳ ಬಗ್ಗೆ ಅಂದಿನ ಗವರ್ನರ್ ಜೆನರಲ್ ವೆಲ್ಲೆಸ್ಲಿ ಹೇಳಿದ ಮಾತುಗಳನ್ನು ಗಮನಿಸುವುದಕ್ಕೆ ಮುಂಚೆ ಮೈಸೂರಿನ ರಾಣಿ ಲಕ್ಷ್ಮಿ ಅಮ್ಮಣ್ಣಿ ವಸಾಹತು ಶಕ್ತಿಯ ಮುಂದೆ ತಲೆಬಾಗಿ ಶರಣಾಗಿ ಒಡೆಯರನ್ನು ಬ್ರಿಟೀಷರ ಕೈಗೊಂಬೆಯಾಗಿ ತಯಾರಿಸುವುದರಲ್ಲಿ ವಹಿಸಿದ ಪಾತ್ರವನ್ನು ಅರಿಯೋಣ.

1766ರಲ್ಲಿ ಮರಣಹೊಂದಿದ ಎರಡನೇ ಕೃಷ್ಣರಾಜ ಒಡೆಯರನ ಹೆಂಡತಿ ಲಕ್ಷ್ಮಿ ಅಮ್ಮಣ್ಣಿ. ನಂಜರಾಜ ಮತ್ತು ಚಾಮರಾಜ ಅವರ ಮಕ್ಕಳು. ಈರ್ವರನ್ನೂ ಹೈದರಾಲಿ ಅರಮನೆಯಲ್ಲೇ ಬಂಧಿಯಾಗಿಸಿದ್ದ. ಕೆಲವು ವರುಷಗಳ ನಂತರ ಮಕ್ಕಳಿಬ್ಬರ ಮರಣವಾಗಿ ಲಕ್ಷ್ಮಿ ಅಮ್ಮಣ್ಣಿ ಮೊಮ್ಮಗನಾದ ಮೂರನೇ ಕೃಷ್ಣರಾಜ ಒಡೆಯರನನ್ನು ದತ್ತಕಕ್ಕೆ ತೆಗೆದುಕೊಳ್ಳುತ್ತಾರೆ. ಆತ ಹುಟ್ಟಿದ್ದು 1792ರಲ್ಲಿ.

1770ರ ಸಮಯದಲ್ಲೇ ಮದ್ರಾಸಿನ ಬ್ರಿಟೀಷ್ ಗವರ್ನರನ್ನು ಸಂಪರ್ಕಿಸಿದ್ದ ಲಕ್ಷ್ಮಿ ಅಮ್ಮಣ್ಣಿ ಹೈದರಾಲಿಯ ಪತನಕ್ಕೆ ಬ್ರಿಟೀಷರು ಶ್ರಮಪಟ್ಟರೆ ಬ್ರಿಟೀಷರಿಗೆ ವಿಧೇಯಳಾಗಿರುವುದಾಗಿ ತಿಳಿಸಿದರು. “ಬ್ರಿಟೀಷರ ಕ್ಯಾಂಪಿನ ಖರ್ಚಿಗೆ ಒಂದು ಕೋಟಿ ರುಪಾಯಿ; ಕಂಪನಿಗೆ ವರುಷಕ್ಕೆ ಹದಿನೈದು ಲಕ್ಷ; ಜೊತೆಗೆ ಮೈಸೂರು ರಾಜ್ಯದ ರಕ್ಷಣೆಗೆ ನಿಲ್ಲುವ ಬ್ರಿಟೀಷ್ ಸೈನಿಕರ ಖರ್ಚಿಗೆ ವಾರ್ಷಿಕ ಮೂವತ್ತಾರು ಲಕ್ಷ ಹಣವನ್ನು ನೀಡುವುದಾಗಿ” ಲಕ್ಷ್ಮಿ ಅಮ್ಮಣ್ಣಿ 1782ರ ಮೇ ತಿಂಗಳಲ್ಲಿ ಮದ್ರಾಸಿನ ಗವರ್ನರ್ ಮೆಕ್ ಕಾರ್ಟ್ನಿಗೆ ಪತ್ರ ಬರೆಯುತ್ತಾರೆ (1).

ಬಹಳಷ್ಟು ಚರ್ಚೆ, ಸಂಧಾನದ ನಂತರ ರಾಣಿ ಲಕ್ಷ್ಮಿ ಅಮ್ಮಣ್ಣಿ ಮತ್ತು ಬ್ರಿಟೀಷ್ ಸಾಮ್ರಾಜ್ಯ 1782ರಲ್ಲಿ ರಹಸ್ಯ ಒಪ್ಪಂದವೊಂದಕ್ಕೆ ಸಹಿ ಹಾಕುತ್ತಾರೆ. ಅದು ‘ಮೈಸೂರಿನ ಹಿಂದೂ ಸಾಮ್ರಾಜ್ಯವನ್ನು ಪುನರ್ ಸ್ಥಾಪಿಸುವ ರಾಣಾ ಒಪ್ಪಂದ’(2). ಹೈದರಾಲಿಯನ್ನು ಸೋಲಿಸಿ ಒಡೆಯರ್ ಸಾಮ್ರಾಜ್ಯವನ್ನು ಮರುಸ್ಥಾಪಿಸುವುದಕ್ಕೆ ಬ್ರಿಟೀಷರು ಒಪ್ಪಿದರಾದರೂ ಬ್ರಿಟೀಷರಿಡುವ ಪ್ರತಿ ಹೆಜ್ಜೆಗೂ ಇಂತಿಷ್ಟು ಬೆಲೆ ನಿಗದಿ ಮಾಡಿದರು. ಕೊಯಮತ್ತೂರನ್ನು ಆಕ್ರಮಿಸಲು ಮೂರು ಲಕ್ಷ ಪಗೋಡಾ, ಬಾಲಘಟಕ್ಕೆ ಏರಲು ಒಂದು ಲಕ್ಷ, ಮೈಸೂರನ್ನು ಆಕ್ರಮಿಸಲು ಒಂದು ಲಕ್ಷ ಮತ್ತು ಕೊನೆಯದಾಗಿ ಶ್ರೀರಂಗಪಟ್ಟಣಕ್ಕೆ ಪ್ರವೇಶಿಲು ಐದು ಲಕ್ಷ ಪಗೋಡಾ (3). ಲಕ್ಷ್ಮಿ ಅಮ್ಮಣ್ಣಿ ಬ್ರಿಟೀಷರಿಗೆ ಒಟ್ಟು ಹತ್ತು ಲಕ್ಷ ಪಗೋಡಾಗಳನ್ನು ನೀಡುವ ಆಶ್ವಾಸನೆ ಕೊಟ್ಟಳು.

1792ರಲ್ಲಿ ವಸಾಹತುವಿನ ವಿರುದ್ಧ ಪ್ರಾರಂಭವಾದ ಮೂರನೇ ಯುದ್ಧದ ಸಮಯದಲ್ಲಿ ಮೈಸೂರು ವಸಾಹತುವಿಗೆ ಒಳಪಡುವ ಸಾಧ್ಯತೆಗಳು ರಾಣಿಯನ್ನು ಉತ್ಸುಕಗೊಳಿಸಿದ್ದವು! ಬ್ರಿಟೀಷರಿಗೆ ಕೊಡುವ ಪಗೋಡಗಳನ್ನು ಮತ್ತಷ್ಟು ಹೆಚ್ಚಿಸುವಂತೆ ಈ ಉತ್ಸುಕತೆ ಪ್ರೇರೇಪಿಸಿತು. “ದೇವರ ದಯೆಯಿಂದ ನಾವು ಬದುಕುಳಿದು ಆಂಗ್ಲರು ಟಿಪ್ಪುವನ್ನು ಸೋಲಿಸಿ ನಮ್ಮ ರಾಜ್ಯವನ್ನು ಮರಳಿಸಿದರೆ ಬ್ರಿಟೀಷ್ ಸೈನಿಕರ ಖರ್ಚಿಗಾಗಿ ಒಂದು ಕೋಟಿ ಪಗೋಡಾವರೆಗೂ ನೀಡುತ್ತೇವೆ” ಎಂದು ಬರೆದರು (4).

“……..ನಮ್ಮ ಸಾಮ್ರಾಜ್ಯವನ್ನು ಮರಳಿ ಗಳಿಸಲು ಸಹಾಯ ಮಾಡಲೆಂದೇ ನಿಮ್ಮನ್ನು ಈ ಭೂಮಿಗೆ ಕಳುಹಿಸಲಾಗಿದೆ ಎನ್ನುವ ಅರಿವು ನಮಗುಂಟಾಗಿದೆ. ನಿಮ್ಮ ಮನಸ್ಸಿನ ಶುದ್ಧತೆ ಮತ್ತು ವ್ಯಕ್ತಿತ್ವದ ಘನತೆಯ ಬಗ್ಗೆ ಕೇಳಿ ತಿಳಿದಿದ್ದೀವಿ. ನಿಮ್ಮಲ್ಲಿ ಸಂಪೂರ್ಣ ನಂಬಿಕೆಯಿಟ್ಟು ನಮ್ಮನ್ನು ರಕ್ಷಿಸಬೇಕು, ನಮಗೆ ಸಹಾಯ ಮಾಡಬೇಕು ಎಂದು ಬೇಡಿಕೊಳ್ಳುತ್ತೇವೆ. ನ್ಯಾಯಾನ್ಯಾಯಗಳನ್ನು ಪರಿಶೀಲಿಸಿ ದೇವರ ಚಿತ್ತ ಮತ್ತು ನಿಮ್ಮ ಅಚ್ಚಳಿಯದ ಖ್ಯಾತಿಯನ್ನು ನೆನಪಿಟ್ಟುಕೊಂಡು ನಿಮ್ಮ ಎಂದಿನ ಒಳ್ಳೆಯತನದ ಮೂಲಕ ಶತ್ರುಗಳನ್ನು ಬೇರುಸಹಿತ ಕಿತ್ತು ನಮ್ಮ ಸಾಮ್ರಾಜ್ಯದ ಮರುಸ್ಥಾಪನೆಗೆ ಕಾರಣಕರ್ತರಾಗಬೇಕು. ಕಳೆದ ಬಾರಿಯ ಒಪ್ಪಂದದ ಪ್ರಕಾರ ನಡೆದುಕೊಳ್ಳಬೇಕು. ಒಂದು ಕೋಟಿ ಪಗೋಡಾಗಳನ್ನು ಯುದ್ಧದ ಖರ್ಚು – ವೆಚ್ಚಕ್ಕಾಗಿ ನೀಡುತ್ತೇವೆ” ವಸಾಹುತಿನ ಜೀತ ರಾಣಿ ಲಕ್ಷ್ಮಿ ಅಮ್ಮಣ್ಣಿ 1798ರಲ್ಲಿ ಮದ್ರಾಸಿನ ಗವರ್ನರ್ರಿಗೆ ಬರೆದ ಪತ್ರವಿದು (5).

ಬ್ರಿಟೀಷ್ ಸುಲಿಗೆಕೋರರು ದೇಶ ರಕ್ಷಿಸಲು ಬಂದಿರುವ ದೇವದೂತರು ಎಂಬ ರಾಣಿಯ ನಂಬಿಕೆಯ ಪ್ರದರ್ಶನ ಮತ್ತೆ 1799ರ ಫೆಬ್ರವರಿಯಲ್ಲಿ ಜಾಹೀರಾಯಿತು. ಈ ಬಾರಿಯ ಪತ್ರ ಮುಖ್ಯ ದೇವರಾದ ಗವರ್ನರ್ ಜೆನರಲ್ ಗೆ! “ನಾವು ಇತ್ತೀಚೆಗೆ ಕೇಳಿದ ಪ್ರಕಾರ ದಯಾಮಯನಾದ ದೇವರು ಅಪಾರ ಶಕ್ತಿಯನ್ನು ನಿಮಗೆ ಕರುಣಿಸಿ ಈ ದೇಶಕ್ಕೆ ಕಳುಹಿಸಿರುವುದು ನಮ್ಮನ್ನು ದುಃಖ ಸಂಕಟಗಳಿಂದ ಪಾರು ಮಾಡಲು. ಅನುಮಾನವೇ ಇಲ್ಲ. ನೀವು ಉದಾರವಾದಿ, ಸದುದ್ದೇಶದ ಧರ್ಮಬೀರು ಎಂದು ಕೇಳಿದ್ದೇವೆ. ಈ ಕಾರಣದಿಂದ ನಮ್ಮನ್ನು ರಕ್ಷಿಸಬೇಕೆಂದು ಕೋರುತ್ತೇನೆ” ಎಂದು ವಿನಮ್ರವಾಗಿ ತಲೆಬಾಗುತ್ತಾರೆ ಲಕ್ಷ್ಮಿ ಅಮ್ಮಣ್ಣಿ (6).

ಇದರ ನಂತರ ಬ್ರಿಟೀಷ್ ಸಾಮ್ರಾಜ್ಯ ಕಾರ್ಯತತ್ಪರವಾಗಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ಕೈಗೊಂಬೆ ರಾಣಿಯ ಪ್ರಾರ್ಥನೆಗೆ ಒಲಿದು ಬಂದ ಬ್ರಿಟೀಷರು ಎರಡನೇ ಕೃಷ್ಣರಾಜ ಒಡೆಯರ್ ರವರ ರಂಗ ಪ್ರವೇಶ ನೆರವೇರಿಸಿದರು. ಒಂದು ಶತಮಾನದವರೆಗೆ ಯುದ್ಧ – ಆಕ್ರಮಣ – ನೇರ ವಸಾಹತು ಆಡಳಿತ ನೀತಿಯನ್ನು ಪಾಲಿಸಿದ್ದ ಬ್ರಿಟೀಷರು ಔಧಿನ ಆಕ್ರಮಣದ ನಂತರ ಕೈಗೊಂಬೆ ರಾಜರ ಮೂಲಕ ಆಡಳಿತ ನಡೆಸುವ – ದೇಶವನ್ನು ನಿಯಂತ್ರಿಸುವ ನೀತಿಯನ್ನು ಅಪ್ಪಿಕೊಂಡಿದ್ದರು.

“ಹೇಸ್ಟಿಂಗ್ಸಿನ ನಿರ್ಬಿಡೆಯ ನಿರ್ಧಾರ ಸ್ಥಳೀಯ ರಾಜರಿಗೆ ಯಾವುದೇ ಸ್ವತಂತ್ರ ನಿರ್ಣಯದ ಹಕ್ಕನ್ನು ನೀಡದೆ ಬ್ರಿಟೀಷರ ಅಧೀರರನ್ನಾಗಿ ಮಾಡಿತು. ಈ ಅಧೀನ ರಾಜ್ಯದ ಪರಿಕಲ್ಪನೆಯನ್ನು ಔಧಿನಲ್ಲಿ ಮೊದಲು ಪರಿಚಯಿಸಿದ್ದು ಹೇಸ್ಟಿಂಗ್ಸ್” – ಜಾರ್ಜ್ ಫಾರೆಸ್ಟ್.

ಈ ಕೈಗೊಂಬೆ ರಾಜರು ಬ್ರಿಟೀಷರಿಗೆ ಅನುಕೂಲ ಮಾಡಿಕೊಟ್ಟರು. ಪ್ರತ್ಯಕ್ಷ ಆಡಳಿತ ನೀತಿಯಿಂದ ಈ ರೀತಿಯ ಪರೋಕ್ಷ ಆಡಳಿತವನ್ನು ಅಪ್ಪಿಕೊಳ್ಳಲು ಬ್ರಿಟೀಷರಿಗೆ ಅನೇಕ ಕಾರಣಗಳಿದ್ದವು.

ಬಹುಮುಖ್ಯ ಕಾರಣವೆಂದರೆ – ಫ್ಯೂಡಲ್ ಮನಸ್ಥಿತಿಯಲ್ಲೇ ಇದ್ದ ಜನ ಸಮೂಹ, ನಮ್ಮನ್ನು ಆಳುತ್ತಿರುವುದು ನಮ್ಮದೇ ರಾಜ; ಬಣ್ಣ – ಭಾಷೆ – ಸಂಸ್ಕೃತಿಯಲ್ಲಿ ಚೂರೂ ಸಾಮ್ಯತೆಯಿರದ ಹೊರಗಿನವರಲ್ಲ ಎಂಬ ಭಾವನಾತ್ಮಕ ಭ್ರಮೆಯಲ್ಲಿ ಉಳಿಯಲು ಈ ಹೊಸ ನೀತಿ ಸಹಕಾರಿಯಾಗುತ್ತಿತ್ತು.

ಆಕ್ರಮಣಕಾರ ಸಮೂಹದ ದೃಷ್ಟಿಯಿಂದ ಅಡಗಿಕೊಂಡಿದ್ದ ಬ್ರಿಟೀಷ್ ನಾಗರೀಕತೆಯ ಬೆತ್ತಲನ್ನು ಫ್ಯೂಡಲ್ ಎಲೆ ಮುಚ್ಚುತ್ತಿತ್ತು. ಮೇಲಾಗಿ ಜನಸಮೂಹ ರಾಜನ ವಿರುದ್ಧವೋ ಸಮಾಜದ ವಿರುದ್ಧವೋ ಅಸಹನೆಯಿಂದ ರೊಚ್ಚಿಗೆದ್ದಾಗ ‘ಜನರಿಗಾಗಿ’ ಎಂಬ ನೆಪವೊಡ್ಡಿ ಬ್ರಿಟೀಷರು ಕೈಯಾಡಿಸಬಹುದಿತ್ತು. ಸಮೂಹದ ದೃಷ್ಟಿಯಲ್ಲಿ ಬ್ರಿಟೀಷರು ಔದಾರ್ಯ ತುಂಬಿದ ಅಧಿಪತಿಗಳಾದರು, ಅಂತಿಮ ತೀರ್ಪು ಹೇಳುವ ನ್ಯಾಯಾಧೀಶರಾದರು. ಈ ಅಂಶ ಅವರ ಲೂಟಿಯ ನಡವಳಿಕೆಯ ಮೇಲೊಂದು ಪರದೆ ಎಳೆದಿತ್ತು. ಕೈಗೊಂಬೆ ರಾಜರ ಮೂಲಕ ಹತ್ತೊಂಬತ್ತನೇ ಶತಮಾನವನ್ನು ಆಳುವ ಬ್ರಿಟೀಷರ ನಿರ್ಧಾರ ವಸಾಹತುಶಾಹಿ ವಿರೋಧಿ ಪ್ರಜ್ಞೆಯ ಬೆಳವಣಿಗೆಯನ್ನು ಮೊಟಕುಗೊಳಿಸಿತು.

ಟಿಪ್ಪುವಿನ ಸೋಲು ಭಾರತವನ್ನು ಸಂಪೂರ್ಣವಾಗಿ ಆಕ್ರಮಿಸುವುದರ ಸಂಕೇತವಾಯಿತು. ಈಗಷ್ಟೇ ಲಕ್ಷ್ಮಿ ಅಮ್ಮಣ್ಣಿಯ ಪ್ರಕರಣದಲ್ಲಿ ನೋಡಿದಂತೆ ಕರ್ನಾಟಕದ ಇನ್ನಿತರ ಸಣ್ಣ ಪುಟ್ಟ ರಾಜರು ಮತ್ತು ಮುಖ್ಯಸ್ಥರು ಸ್ವಇಚ್ಛೆಯಿಂದ ಬ್ರಿಟೀಷರಿಗೆ ಶರಣಾಗಿ ದಾಸ್ಯಕ್ಕೊಳಪಟ್ಟರು.

ಒಂದು ಶತಮಾನದ ಹಿಂದೆ ಬ್ರಿಟೀಷರ ಆಳ್ವಿಕೆಗೆ ಬಹುದೊಡ್ಡ ಭೂಪ್ರದೇಶ ಒಳಗಾಗಬಹುದೆಂಬ ಕಲ್ಪನೆ ಮೂಡುವುದೂ ಶಕ್ಯವಿರಲಿಲ್ಲ. ಕಾರಣ ಬ್ರಿಟೀಷರ ವಸಾಹತುಶಾಹಿ ನೆಲೆ ಕಂಡಿರಲಿಲ್ಲ ಮತ್ತವರು ತಮ್ಮ ಶಕ್ತಿ ಪ್ರದರ್ಶನ ಮಾಡಿರಲಿಲ್ಲ. ಹದಿನೆಂಟನೆಯ ಶತಮಾನದ ಪ್ರಾರಂಭದಲ್ಲಿ ಕೈಗೊಂಬೆ ರಾಜರು ತಮ್ಮ ನಿಯತ್ತನ್ನು ಬ್ರಿಟೀಷರಿಗೆ ಒತ್ತೆ ಇಡಲಾರಂಭಿಸುತ್ತಿದ್ದಂತೆ ವಸಾಹತುಶಾಹಿಯ ವ್ಯಾಪ್ತಿ ವಿಸ್ತಾರಗೊಳ್ಳಲಾರಂಭಿಸಿತು. ಈ ‘ನಿಯತ್ತಿನ’ ರಾಜರು ಇರದಿದ್ದರೆ ಪರೋಕ್ಷ ಆಳ್ವಿಕೆಯನ್ನು ಪ್ರಾಯೋಗಿಕವಾಗಿಯಾದರೂ ಪ್ರಾರಂಭಿಸಲು ಬ್ರಿಟೀಷರು ಮನಸ್ಸು ಮಾಡುತ್ತಿರಲಿಲ್ಲ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಭಾರತದ ಉದ್ದಗಲಕ್ಕೂ ಬ್ರಿಟೀಷ್ ಸಾಮ್ರಾಜ್ಯ ತಳವೂರಿದಾಗ ದೇಶದ ಎರಡನೇ ಮೂರರಷ್ಟು ಭೂಪ್ರದೇಶದಲ್ಲಿ ದೇಶೀಯ ರಾಜರೇ ಆಳ್ವಿಕೆ ನಡೆಸುತ್ತಿದ್ದರು. ಉಳಿಕೆ ಒಂದನೇ ಮೂರರಷ್ಟು ಭಾಗ ಮಾತ್ರ ನೇರವಾಗಿ ಬ್ರಿಟೀಷರ ಆಡಳಿತದಲ್ಲಿತ್ತು.

ಈ ಪರೋಕ್ಷ ಆಡಳಿತಕ್ಕೆ ಮತ್ತೊಂದು ಕಾರಣ ಆಡಳಿತಗಾರರ ಕೊರತೆ ಬ್ರಿಟೀಷರಿಗೆ ಎದುರಾಗಿದ್ದು. ಭಾರತ ಮತ್ತು ಪ್ರಪಂಚದ ಇತರೆ ಭಾಗಗಳ ಮೇಲಿನ ಅತಿಕ್ರಮಣ ಮುಂದುವರೆದಂತೆ ದೊಡ್ಡದಾಗುತ್ತಲೇ ಸಾಗಿದ್ದ ಸಾಮ್ರಾಜ್ಯದ ರಕ್ಷಣೆಗೆ ತನ್ನ ದೇಶದ ಪ್ರಜೆಗಳನ್ನೇ ನೇಮಿಸುವುದು ತಲೆನೋವಿನ ಕೆಲಸವಾಯಿತು. ಈ ಕೊರತೆಯಿಂದಾಗಿಯೇ ಬ್ರಿಟೀಷರಷ್ಟೇ ಆಸೆಬುರುಕುರಾದ ಪೋರ್ಚುಗೀಸರು ದೇಶದಿಂದ ದೇಶಕ್ಕೆ ಅತಿಕ್ರಮಿಸುವುದನ್ನು ಕಡಿಮೆ ಮಾಡಿಬಿಟ್ಟಿದ್ದರು. ಈ ಸಮಸ್ಯೆಗೆ ಪರಿಹಾರವೆಂಬಂತೆ ಬ್ರಿಟೀಷರು ಕೈಗೊಂಬೆ ರಾಜರ ಮೂಲಕ ಆಡಳಿತ ನಡೆಸಲಾರಂಭಿಸಿದರು. ಕೈಗೊಂಬೆ ರಾಜರ ಸಹಾಯವಿಲ್ಲದಿದ್ದರೆ ಬ್ರಿಟೀಷ್ ಸಾಮ್ರಾಜ್ಯ ಇಷ್ಟರಮಟ್ಟಿಗೆ ವಿಸ್ತಾರಗೊಳ್ಳುವ ಸಾಧ್ಯತೆಯೇ ಇರಲಿಲ್ಲ.

ಮತ್ತು ಕೊನೆಯದಾಗಿ ಇಂಗ್ಲೆಂಡಿನ ಕೈಗಾರಿಕಾ ಬಂಡವಾಳದಲ್ಲಾದ ಏರಿಕೆ ಹದಿನೆಂಟನೆ ಶತಮಾನದ ಕೊನೆಗೆ ವಸಾಹತುಶಾಹಿಯ ಬುಡವನ್ನು ಗಟ್ಟಿಗೊಳಿಸಿತು. ಊಳಿಗಮಾನ್ಯ, ಕೈಗೊಂಬೆ ರಾಜರ ದೌರ್ಬಲ್ಯಗಳನ್ನು ಉಪಯೋಗಿಸಿಕೊಂಡು ಬಂಡವಾಳಶಾಹಿತನ ಮತ್ತು ವಸಾಹತುಶಾಹಿ ತಳವೂರಿತು.

1799ರ ಜೂನ್ 7ರಂದು ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕ ಹೆನ್ರಿ ದುಂಡಾಸ್ ಗೆ ಬರೆದ ಪತ್ರದಲ್ಲಿ ಗವರ್ನರ್ ಜೆನರಲ್ ವೆಲ್ಲೆಸ್ಲಿ ಪರೋಕ್ಷವಾಗಿ ಈ ಎಲ್ಲಾ ಅಂಶಗಳನ್ನು ಪ್ರಸ್ತಾಪಿಸಿದ್ದರು. ಕರ್ನಾಟಕದಲ್ಲಿ ಆಕ್ರಮಿಸಿದ ಪ್ರಾಂತ್ಯಗಳಲ್ಲಿ ಯಾವ ರೀತಿಯ ಆಡಳಿತವನ್ನು ಸ್ಥಾಪಿಸಬೇಕೆಂದು ಆತ ಚಿಂತಿಸುತ್ತಿದ್ದ. ರಾಣಾ ಒಪ್ಪಂದದ ಬಗ್ಗೆ ತಿಳಿಸುವ ಶ್ರಮವನ್ನಾತ ತೆಗೆದುಕೊಳ್ಳಲಿಲ್ಲ. ಆ ಒಪ್ಪಂದ ಪತ್ರ ರದ್ದಿ ಕಾಗದಕ್ಕಿಂತ ಹೆಚ್ಚಿನದ್ದಾಗಿರಲಿಲ್ಲ. 

ಅಷ್ಟರಲ್ಲಾಗಲೇ ಬ್ರಿಟೀಷರು ಅಂತಹ ಹಲವು ಒಪ್ಪಂದಗಳನ್ನು ಬರೆದು – ಸಹಿ ಹಾಕಿ – ಬಿಸಾಡಿದ್ದರು. ರಾಣಾ ಒಪ್ಪಂದಕ್ಕೆ ಬದ್ಧವಾಗಿರುವ ಅನಿವಾರ್ಯತೆ ಕಂಪನಿಗಿಲ್ಲವೆಂಬ ಅರಿವು ವೆಲ್ಲೆಸ್ಲಿಗಿತ್ತು. 

“ಘನತೆವೆತ್ತ ನಿರ್ದೇಶಕರ ಗಮನಕ್ಕೆ, ಟಿಪ್ಪು ಸುಲ್ತಾನನ ಪ್ರಾಂತ್ಯವನ್ನು ವಿಂಗಡಿಸಲು ಇರುವ ಹಲವು ಯೋಜನೆಗಳ ಸಾಧಕ ಭಾದಕಗಳ ವರದಿಯನ್ನು ಈ ಪತ್ರದ ಜೊತೆಗೆ ಲಗತ್ತಿಸಲಾಗಿದೆ. ಈ ವಿಂಗಡನೆಯನ್ನು ನಿಜಾಮರಿಗೆ, ಮರಾಠರಿಗೆ ಮತ್ತು ಕಂಪನಿಗೆ ಅನುಕೂಲಕರವಾಗುವಂತೆ ಮಾಡಲಾಗಿದೆ. ಈ ಭಾಗದ ಭೂಪ್ರದೇಶ, ಸಂಪನ್ಮೂಲ ಮತ್ತು ಹಲವು ಕೋಟೆಗಳ ಮತ್ತು ಆಳ್ವಿಕೆಗಳ ಶಕ್ತಿ ಹಾಗು ಸ್ಥಳವನ್ನು ಪರಿಶೀಲಿಸಿ ಈ ವರದಿ ತಯಾರಿಸಲಾಗಿದೆ. ನನ್ನ ನಿರ್ಧಾರದ ಪ್ರಕಾರ ಬ್ರಿಟೀಷರ ಮೇಲ್ವಿಚಾರಣೆಯಲ್ಲಿ ಮೈಸೂರಿನಲ್ಲೊಂದು ಸರಕಾರ ರಚಿಸಿ, ಟಿಪ್ಪು ರಾಜ್ಯದ ವಿಂಗಡಣೆಯಲ್ಲಿ ಒಂದು ಹಂತದವರೆಗೆ ಮರಾಠಾರನ್ನು ಒಳಗೊಳ್ಳುವುದು ಉತ್ತಮ. ಎಲ್ಲರ ಒಳಿತುಗಳನ್ನೂ ಲೆಕ್ಕ ಹಾಕಿ, ಕಂಪನಿಯನ್ನು ಮತ್ತಷ್ಟು ಸುಭದ್ರವಾಗಿಸಬೇಕು. ಆದಾಯ, ಸಂಪನ್ಮೂಲ, ಲಾಭ ಮತ್ತು ಮಿಲಿಟರಿ ಮೇಲುಗೈ ಪಡೆಯಲು ಈ ರೀತಿಯ ವಿಂಗಡಣೆ ಸಹಾಯಕ. ಜೊತೆಗೆ ಭಾರತ ನಿದ್ರಾವಸ್ಥೆಗೆ ಜಾರುವುದಕ್ಕೂ ಈ ವರದಿಯ ಅನುಷ್ಠಾನದ ಅಗತ್ಯವಿದೆ” ಎಂದು ಬರೆಯುತ್ತಾರೆ ವೆಲ್ಲೆಸ್ಲಿ (8).

ನೀರಿನಿಂದ ಸುತ್ತುವರಿದ ದೇಶದಿಂದ ಬಂದ, ಸಮುದ್ರ ವ್ಯಾಪಾರದಲ್ಲಿ ಏಕಸ್ವಾಮ್ಯ ಮೆರೆದಿರುವ ಕಂಪನಿಯೊಂದರ ಪರವಾಗಿ ಕಾರ್ಯನಿರ್ವಹಿಸುವ, ಆಕ್ರಮಣಕಾರಿ ಯೋಧರ ಪಡೆಯನ್ನು ಹೊಂದಿರುವ ವೆಲ್ಲೆಸ್ಲಿ ಈ ರೀತಿಯಲ್ಲಿಯೇ ಯೋಚಿಸಬೇಕಿತ್ತು. ಕಣ್ರೆಪ್ಪೆ ಬಡಿಯುವಷ್ಟರ ಶ್ರಮವನ್ನೂ ಪಡದೆ ಮೈಸೂರು ಸಂಸ್ಥಾನವನ್ನು ಲಂಡನ್ನಿನಲ್ಲಿದ್ದ ನಿರ್ದೇಶಕರ ಜೇಬಿಗೆ ಸೇರಿಸಿಬಿಡುತ್ತಾರೆ. ಬ್ರಿಟೀಷರಿಂದ ಗುತ್ತಿಗೆ ಪಡೆದ ಆಧಾರದ ಮೇಲೆ ಭಾರತವನ್ನಾಳುತ್ತಿದ್ದ 568 ರಾಜರಲ್ಲಿ ಕೆಲವೇ ಕೆಲವರಿಗೆ ಮಾತ್ರ ಕಡಲ ತೀರದ ಭಾಗ್ಯ ದಕ್ಕಿತ್ತು. ಮೈಸೂರು ಸಾಮ್ರಾಜ್ಯ ಭೂಪ್ರದೇಶದಿಂದ ಸುತ್ತುವರಿದಿತ್ತು, ಕಡಲ ತೀರಕ್ಕೆ ಸಂಪರ್ಕವಿರಲಿಲ್ಲ.

ಒಡೆಯರ್ ಸೂಕ್ತ ಕೈಗೊಂಬೆ ಎನ್ನುವುದನ್ನು ಸಾಬೀತುಪಡಿಸಲು ತನ್ನ ವಾದಗಳನ್ನು ಮುಂದಿಡುತ್ತಾನೆ ವೆಲ್ಲೆಸ್ಲಿ “ಮೈಸೂರಿನ ಹೊಸ ಸರಕಾರವನ್ನು ಯಾರ ಕೈಯಲ್ಲಿಡಬೇಕು ಎಂದು ನಿರ್ಧರಿಸುವ ಅನಿವಾರ್ಯತೆ ಎದುರಾಗಿದೆ. ಪಟ್ಟಕ್ಕೆ ಸರಿಯಾದ ವ್ಯಕ್ತಿ ಯಾವ ಪಕ್ಷದಲ್ಲೂ ಇಲ್ಲದಿದ್ದಾಗ್ಯೂ ನನ್ನ ಪ್ರಕಾರ ಟಿಪ್ಪುವಿನ ಕುಟುಂಬ ಮತ್ತು ಮೈಸೂರಿನ ಹಳೆಯ ರಾಜ ಕುಟುಂಬದಿಂದ ಆಯ್ಕೆ ಮಾಡಬೇಕು.

1796ರ ನಂತರ ಭಾರತದಲ್ಲಿ ಬ್ರಿಟೀಷರ ಶಕ್ತಿಯನ್ನು ಕುಂದಿಸುವುದೇ ಟಿಪ್ಪುವಿನ ಆಸೆ – ಆಶಯವಾಗಿತ್ತು. ಅವನ ಕೆಲಸಗಳೆಲ್ಲವೂ ಆ ನಿಟ್ಟಿನಲ್ಲಿಯೇ ಇದ್ದವು…. ಅಚಲ ಉದ್ದೇಶ ಕಾರ್ಯತತ್ಪರವಾಗಲೆಂದು ಟಿಪ್ಪು ಅತ್ಯುತ್ಸಾಹದಿಂದ ಉಗ್ರತೆಯಿಂದ ಹಗೆಕಾರುತ್ತಿದ್ದ…. ಶ್ರೀರಂಗಪಟ್ಟಣದಲ್ಲಿ ಲಭ್ಯವಾಗಿರುವ ಅನೇಕ ಸಾಕ್ಷ್ಯಾಧಾರಗಳು ಇಂಗ್ಲೀಷರ ವಿರುದ್ಧ ಆತನಿಗಿದ್ದ ಅಸಹನೆಯನ್ನು ತೋರಿಸುತ್ತದೆ. ಆಡಳಿತ ನಡೆಸಲು ಬೇಕಾದ ಉತ್ಸಾಹ ಆತನ ಹೃದಯದಲ್ಲಿ ಚಿಮ್ಮುತ್ತಿದ್ದುದೇ ಈ ಅಸಹನೆಯಿಂದ. ಅವನ ನೀತಿ ನಿಯಮಗಳು, ಅವನ ಸರಕಾರದ ರೂಪುರೇಷೆಗಳೆಲ್ಲವುದರಲ್ಲೂ ಬ್ರಿಟೀಷರ ವಿರುದ್ಧದ ದ್ವೇಷ ಎದ್ದು ಕಾಣಿಸುತ್ತದೆ.

ಟಿಪ್ಪುವಿನ ವಂಶಜರೂ ಕೂಡ ಈ ನೀತಿ ನಿಯಮಾವಳಿಗಳ ಪ್ರಕಾರವೇ ಶಿಕ್ಷಣ ಪಡೆದಿರುತ್ತಾರೆ. ಮತ್ತು ಅದೇ ಪೂರ್ವಾಗ್ರಹದಿಂದ ಮೈಸೂರಿನ ರಾಜಪೀಠದಿಂದ ಕಾರ್ಯನಿರ್ವಹಿಸುತ್ತಾರೆ. ಈ ಭಾವನೆಗಳು ಯುದ್ಧದ ಕಾರಣದಿಂದ ಮತ್ತಷ್ಟು ಹೆಚ್ಚಾದರೆ ಅಚ್ಚರಿಯಿಲ್ಲ. ನಮ್ಮ ಯಶಸ್ಸು ಅವನ ತಂದೆಯ ಸಾಮ್ರಾಜ್ಯವನ್ನು ಅಲುಗಾಡಿಸಿದೆ…. ಅವನು ಪಟ್ಟದ ಮೇಲೆ ಕೂರುವುದು ನಮ್ಮ ಕೃಪೆಯಿಂದ…. ನಮ್ಮ ನಿಯಂತ್ರಣದಲ್ಲಾತ ಇರಬೇಕು….. ಈ ಎಲ್ಲಾ ಅಂಶಗಳು ಅವನನ್ನು ಅಪಮಾನಿತನನ್ನಾಗಿಸುತ್ತದೆ….. ಆತ್ಮಸಾಕ್ಷಿಯ ರಾಜನಾರೂ ಇದನ್ನು ಒಪ್ಪಿಕೊಳ್ಳಲಾರರು…. ಸಾಮ್ರಾಜ್ಯ ಮತ್ತು ಸಂಪನ್ಮೂಲದಲ್ಲಿ ಕಡಿತವಾದಾಗ ಅವನು ತಂದೆಯ ಸಾಮ್ರಾಜ್ಯವನ್ನು ಮರಳಿ ಗಳಿಸಲು ನಮ್ಮೊಡನೆ ಯುದ್ಧದಲ್ಲಿ ತೊಡಗಿದರೂ ಕಳೆದುಕೊಳ್ಳುವುದಕ್ಕಿಂತ ಗಳಿಸುವುದೇ ಹೆಚ್ಚು. ಹೆತ್ತವರ ಬತ್ತದ ಉತ್ಸಾಹ ಮತ್ತವರ ಭಯರಹಿತ ಶಕ್ತಿಯನ್ನು ನೋಡಿಯೇ ಬೆಳೆದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ವಂಶಸ್ಥರು ಸ್ವತಂತ್ರ ಆಡಳಿತದ ಅಧಿಕಾರಯುತ ನಡವಳಿಕೆಗೆ ಒಗ್ಗಿಹೋಗಿರುವವರು ಮತ್ತು ಮಿಲಿಟರಿ ಶಕ್ತಿಯ ವೈಭವವನ್ನು ಕಂಡವರು. ಉದ್ದೇಶಪೂರ್ವಕವಾಗಿ ವಿಸ್ತಾರವಾದ ಶಕ್ತಿಯುತ ಸಾಮ್ರಾಜ್ಯವನ್ನು ಮರಳಿಗಳಿಸಲು ಅವರು ಪ್ರಯತ್ನಿಸಬಹುದು.

ಹಾಗಾಗಿ ಅವರ ವಂಶಸ್ಥರನ್ನು ಮೈಸೂರು ಸಾಮ್ರಾಜ್ಯದ ಪಟ್ಟದಲ್ಲಿ ಕೂರಿಸುವುದು ಕುಸಿದುಬಿಡಬಹುದಾದ ತಳಪಾಯವನ್ನು ನಾವೇ ಹಾಕಿದಂತೆ.

ಮೈಸೂರಿನ ಈ ವಿಚ್ಛಿದ್ರಕಾರಿ ಶಕ್ತಿ ದುರ್ಬಲಗೊಂಡಿದೆಯೇ ಹೊರತು ನಿರ್ನಾಮವಾಗಿಲ್ಲ.

ಬ್ರಿಟೀಷ್ ಸರಕಾರ ಮತ್ತು ಒಡೆಯರ್ ಕುಟುಂಬದ ಮಧ್ಯೆ ಸ್ನೇಹ – ಕಾರುಣ್ಯ ಅವರ ದುರ್ವಿಧಿಯ ದೆಸೆಯಿಂದಾಗಿ ಇದ್ದೇ ಇದೆ. ನಮ್ಮ ಶತ್ರುಗಳೊಡನೆ ಅವರಿಗೆ ಯಾವುದೇ ಸಂಬಂಧವಿಲ್ಲ. ಅವರ ಸ್ಥಾನದ ಉನ್ನತೀಕರಣ ನಿಮ್ಮ ಕೃಪೆಯ ಫಲವಾಗಿರುತ್ತದೆ ಮತ್ತು ನಿಮ್ಮ ಬೆಂಬಲದಿಂದ ಮಾತ್ರ ಅವರು ಪೀಠದ ಮೇಲೆ ಉಳಿಯಬಲ್ಲರು.

ಮೈಸೂರಿನ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಈ ವ್ಯವಸ್ಥೆ ನಮ್ಮ ಸುರಕ್ಷತೆಗೆ ಅಪಾಯವೊಡ್ಡಿದ ಶತ್ರುಗಳನ್ನು ನಾಶಪಡಿಸುವುದಕ್ಕೆ ಸಹಾಯ ಮಾಡುವುದರ ಜೊತೆಗೆ ಅಧಿಕಾರವನ್ನು ನಮ್ಮ ಅನುಕೂಲಗಳಿಗೆ ತಕ್ಕಂತೆ ಸಂಪನ್ಮೂಲ ಒದಗಿಸುವವರಿಗೆ ಹಸ್ತಾಂತರಿಸಿದಂತಾಗುತ್ತದೆ. ಇಲ್ಲಿಯವರೆಗೂ ಅಶಾಂತಿಗೆ ಮತ್ತು ಎಚ್ಚರಿಕೆಗೆ ಕಾರಣವಾಗಿದ್ದ ಮೈಸೂರು ಸಂಸ್ಥಾನ ಬಹುಶಃ ಇನ್ನು ಮುಂದೆ ನಮ್ಮ ಹೊಸ ರಕ್ಷಣಾ ಕವಚವಾಗಬಹುದು. ಜೊತೆಗೆ ಕಂಪನಿಗೆ ಹಣ ಮತ್ತು ಶಕ್ತಿಯ ಹೊಸ ಮೂಲವಾಗಬಹುದು.

ಈ ಎಲ್ಲಾ ವಿಚಾರಗಳು ಮೈಸೂರು ಸಾಮ್ರಾಜ್ಯಕ್ಕೆ ಟಿಪ್ಪು ವಂಶಸ್ಥರಿಗಿಂತ ಮೈಸೂರು ರಾಜರ ವಂಶಸ್ಥರು ಸೂಕ್ತವೆಂಬ ನನ್ನ ನಿರ್ಧಾರಕ್ಕೆ ಪೂರಕವಾದವು” (9)

ವೆಲ್ಲೆಸ್ಲಿ ಇದಕ್ಕಿಂತ ಉತ್ತಮ ಆಯ್ಕೆಯನ್ನು ಮಾಡಲು ಸಾಧ್ಯವಿರಲಿಲ್ಲ. ನಾವು ಮುಂದೆ ನೋಡುವಂತೆ ಕರ್ನಾಟಕದಲ್ಲಿ ಒಡೆಯರ್ ಗಳು ಬ್ರಿಟೀಷರ ಮೊದಲ ಕೈಗೊಂಬೆ ರಾಜರಾದರು ಮತ್ತು ಬ್ರಿಟೀಷರಿಗೆ ಅತ್ಯಂತ ವಿಷಮ ಪರಿಸ್ಥಿತಿ ಎದುರಾದಾಗಲೂ ತಮ್ಮ ನಿಷ್ಠೆಯನ್ನು ಬದಲಿಸಲಿಲ್ಲ.

ಕರುನಾಡ ಇತಿಹಾಸದ ವ್ಯಂಗ್ಯವೆಂದರೆ ಕೆಲವೇ ದಿನಗಳ ಅಂತರದಲ್ಲಿ ಸಂಪೂರ್ಣ ವಿರುದ್ಧ ಅಭಿಪ್ರಾಯದ ರಾಜರು ಮೈಸೂರು ಸಂಸ್ಥಾನದ ಪೀಠವನ್ನು ಅಲಂಕರಿಸಿದ್ದು – ಟಿಪ್ಪು ಸುಲ್ತಾನ್ ಮತ್ತು ಎರಡನೆ ಕೃಷ್ಣರಾಜ ಒಡೆಯರ್. ವಸಾಹತುಶಾಹಿಯ ವಿರುದ್ಧ ಉಗ್ರ ದೇಶಪ್ರೇಮದಿಂದ ಹುಲಿಯಂತೆ ಘರ್ಜಿಸಿದ ಟಿಪ್ಪು ಒಂದೆಡೆಯಿದ್ದರೆ ಮತ್ತೊಂದೆಡೆ ವಸಾಹತುಶಾಹಿಯ ಅಂಗಿಯ ಚುಂಗಿಡಿದು ನೇತಾಡುತ್ತಿರುವ ದುರ್ಬಲ ಇಲಿ.

ಜನ 14, 2016

ಚಿತ್ರ ವಿಮರ್ಶೆ: The Day i became a woman

Dr Ashok K R
ಮಾರ್ಜಿಯೆ ಮೆಶ್ಕಿನ್ ನಿರ್ದೇಶನದ ಪರ್ಷಿಯನ್ ಭಾಷೆಯ ಚಿತ್ರ ‘ದಿ ಡೇ ಐ ಬಿಕೇಮ್ ಎ ವಿಮೆನ್’ (The day I became a woman). ಇರಾನ್ ದೇಶದ ಈ ಚಿತ್ರ ಹೆಣ್ಣಿನ ಸ್ವಂತಿಕೆಯನ್ನು ಕಿತ್ತುಕೊಳ್ಳಬಯಸುವ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಜೀವಂತಿಕೆ ಮೆರೆಯುವ ಮೂರು ನಾಯಕಿಯರ ಕತೆ. ಪುಟ್ಟ ಹುಡುಗಿ ಹವಾ, ಮದುವೆಯಾಗಿರುವ ಯುವತಿ ಆಹೂ ಮತ್ತು ಸಾಯಲು ಸಿದ್ಧವಾಗಿರುವ ವಯಸ್ಸಿನ ಹೂರಾ ಚಿತ್ರದ ನಾಯಕಿಯರು. ಮೂವರಿಗೂ ಚಿತ್ರದಲ್ಲಿ ನೇರಾನೇರ ಸಂಬಂಧವಿಲ್ಲ, ಕನ್ನಡದ ಕಥಾಸಂಗಮದಂತೆ ಮೂರು ಭಿನ್ನ ಕತೆಗಳಿವೆ; ಇಲ್ಲಿ ಮೂರು ಕತೆಗಳ ಆಶಯದಲ್ಲಿ ಸಾಮ್ಯತೆಯಿದೆ, ಚಿತ್ರದ ಕೊನೆಗೆ ಮೂರೂ ಕತೆಗಳು ಒಂದುಗೂಡಲು ಪ್ರಯತ್ನಿಸುತ್ತವೆ.

ಬಾಲಕಿ ಹವಾಗೊಬ್ಬ ಕರಿಯ ಅನಾಥ ಗೆಳೆಯ. ದಿನಾ ಬರುವಂತೆ ಅವತ್ತೂ ಅವನು ಹವಾಳ ಮನೆಯ ಬಳಿಗೆ ಬರುತ್ತಾನೆ. ಅವತ್ತವಳಿಗೆ ಒಂಭತ್ತು ವರ್ಷ ತುಂಬುತ್ತಿರುತ್ತದೆ. ದೊಡ್ಡವಳಾದ (ವಯಸ್ಸಿನಲ್ಲಿ) ಹುಡುಗಿ ಹುಡುಗರೊಟ್ಟಿಗೆ ಆಡುವಂತಿಲ್ಲ. ತಲೆಯ ಮೇಲೊಂದು ಹೊದಿಕೆ ಹಾಕಿಕೊಳ್ಳಬೇಕು. ಹವಾಳ ಅಮ್ಮ ಮತ್ತು ಅಜ್ಜಿ ಹೊಸ ಹೊದಿಕೆಯನ್ನು ತಯಾರು ಮಾಡುವುದರಲ್ಲಿ ನಿರತರು. ಗೆಳೆಯನೊಟ್ಟಿಗೆ ಆಡುವುದರ ಹೊರತಾಗಿ ಮತ್ತೇನೂ ಯೋಚನೆ ಬಾರದ ಹುಡುಗಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಈ ಹೊಸ ರೀತಿ ನೀತಿಗಳೆಲ್ಲ ಹನ್ನೆರಡು ಘಂಟೆಯ ನಂತರ ಎಂದು ತಿಳಿದುಕೊಂಡು ಅಲ್ಲಿಯವರೆಗಾದರೂ ಹೋಗಿ ಆಡಿ ಬರುತ್ತೇನೆ ಕೊನೆಯ ಸಲ ಎಂದು ಬೇಡಿಕೊಂಡು ತಲೆಯ ಮೇಲೊಂದು ಬಟ್ಟೆ ಹಾಕಿಕೊಂಡು ನೆರಳಿನ ಮೂಲಕ ಸಮಯ ತಿಳಿಯಲು ಕಡ್ಡಿಯೊಂದನ್ನು ತೆಗೆದುಕೊಂಡು ಕರಿಯ ಗೆಳೆಯನ ಮನೆಯ ಕಡೆಗೆ ಓಡಿ ಹೋಗುತ್ತಾಳೆ. ಕರಿಯ ಗೆಳೆಯನೀಗ ಬಂಧಿತನಾಗಿದ್ದಾನೆ! ಅವನ ಅಕ್ಕ ಓದಿಕೋ ಎಂದವನನ್ನು ಕೂಡಿ ಹಾಕಿರುತ್ತಾಳೆ. ಕಿಟಕಿಯ ಮೂಲಕ ಇಬ್ಬರ ಸಂಭಾಷಣೆ, ಚಾಕಲೇಟಿನ ವಿನಿಮಯ ನಡೆಯುತ್ತದೆ. ಕಿಟಕಿಯ ಒಂದು ಬದಿಯಲ್ಲಿ ಅವನು, ಮತ್ತೊಂದು ಬದಿಯಲ್ಲಿ ಇವಳು. ಒಂದು ಕಡೆಯಿಂದ ನೋಡಿದರೆ ಹುಡುಗ ಬಂಧಿತನಂತೆ ಕಾಣುತ್ತಾನೆ ಮತ್ತೊಂದು ಕಡೆಯಿಂದ ಹುಡುಗಿ ಬಂಧಿತಳಂತೆ ಕಾಣುತ್ತಾಳೆ. ಪುರುಷ ಪ್ರಧಾನ ವ್ಯವಸ್ಥೆ ಇಬ್ಬರನ್ನೂ ಬಂಧಿಸಿದೆಯಲ್ಲವೇ?

ಮದುವೆಯಾಗಿರುವ ಯುವತಿ ಆಹೂಗೆ ಸೈಕಲ್ ರೇಸಿನಲ್ಲಿ ಭಾಗವಹಿಸಿ ಜಯಗಳಿಸುವ ಆಸೆ. ರೇಸಿನಲ್ಲಿ ಭಾಗವಹಿಸುವುದು ಗಂಡನಿಗೆ ಇಷ್ಟವಿಲ್ಲ. ಕಣ್ತಪ್ಪಿಸಿ ಬಂದು ರೇಸಿನಲ್ಲಿ ಉತ್ಸುಕತೆಯಿಂದ ಸೈಕಲ್ಲು ತುಳಿಯುತ್ತಿರುತ್ತಾಳೆ. ಕುದುರೆಯೇರಿ ಇವಳನ್ನು ಹುಡುಕಿ ಬರುವ ಗಂಡ ರೇಸು ನಿಲ್ಲಿಸಿ ನಡಿ ಮನೆಗೆ ಎಂದು ಬೆದರಿಸುತ್ತಾನೆ. ಆಹೂ ನಿಲ್ಲುವುದಿಲ್ಲ. ವಾಪಸ್ಸು ಹೋದ ಗಂಡ ಹಿರೀಕರನ್ನು ಕರೆತರುತ್ತಾನೆ. ಆಹೂ ನಿಲ್ಲುವುದಿಲ್ಲ. ವಿಚ್ಛೇದನ ಕೊಟ್ಟುಬಿಡ್ತೀನಿ ಎಂಬ ಬೆದರಿಕೆಗೂ ಜಗ್ಗುವುದಿಲ್ಲ. ವಾಪಸ್ಸು ಹೋದ ಗಂಡ ಮೌಲ್ವಿಯನ್ನು ಕರೆತಂದು ವಿಚ್ಛೇದನ ಕೊಟ್ಟುಬಿಡುತ್ತಾನೆ. ಆಹೂಳ ಸೈಕಲ್ಲಿನ ವೇಗ ತಗ್ಗುವುದಿಲ್ಲ. ಆಹೂಳ ತವರು ಮನೆಯವರು ಬಂದು ಹೀಯಾಳಿಸುತ್ತಾರೆ, ರೇಸು ನಿಲ್ಲಿಸಿ ನಡಿ ಮನೆಗೆ ಎನ್ನುತ್ತಾರೆ. ಆಹೂ ನಿಲ್ಲುವುದಿಲ್ಲ. ಕೊನೆಗವಳ ಅಣ್ಣಂದಿರು ಬಂದು ಗೆಲುವಿನ ಹಂತದಲ್ಲಿದ್ದ ಆಹೂಳ ಸೈಕಲ್ ತಡೆದು ಹೊಡೆಯಲಾರಂಭಿಸುತ್ತಾರೆ. ಕ್ಯಾಮೆರಾ ನಿಧಾನಕ್ಕೆ ಹಿಂದಾಗುತ್ತದೆ. ಆಹೂ ಸೈಕಲ್ ರೇಸಿನಿಂದ ಹಿಂದೆ ಸರಿದುಬಿಟ್ಟಳಾ? 

ಹಣ್ಣು ಹಣ್ಣು ಮುದುಕಿ ಹೂರಾಳ ಪ್ರತೀ ಬೆರಳಿನಲ್ಲೂ ಬಣ್ಣ ಬಣ್ಣದ ಬಟ್ಟೆಯ ತುಂಡು. ಪ್ರತೀ ತುಂಡು ಖರೀದಿಸಬೇಕಾದ ಒಂದೊಂದು ವಸ್ತುವಿನ ಸಂಕೇತ. ಯಾವ ತುಂಡು ಯಾವುದಕ್ಕೆ ಎಂದು ಮರೆತುಹೋದರೆ ಎಂಬ ಕಾರಣಕ್ಕೆ ಮತ್ತೊಂದು ಚೀಟಿ! ಯೌವನದಲ್ಲಿ ಆಸೆಪಟ್ಟ, ಖರೀದಿಸಲಾಗದ ವಸ್ತುಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಸಾಮಾನು ಸಾಗಿಸುವ ಬಡ ಹುಡುಗರ ನೆರವಿನಿಂದ ಸಮುದ್ರ ತೀರಕ್ಕೆ ಬಂದು ಸಾಮಾನುಗಳನ್ನೆಲ್ಲ ಸ್ವಚ್ಛಂದ ಆಕಾಶದ ಕೆಳಗೆ ಜೋಡಿಸಿ ಸಂತಸಪಡುತ್ತಾಳೆ ಹೂರ. ಕರಿ ಹುಡುಗನೊಬ್ಬನನ್ನು ದತ್ತು ತೆಗೆದಿಕೊಳ್ತೀನಿ ಬರ್ತೀಯಾ ನನ್ನ ಜೊತೆಗೆ ಈ ಸಾಮಾನುಗಳೆಲ್ಲ ನಿನ್ನದೇ ಆಗುತ್ತೆ ಎಂದು ಕೇಳುತ್ತಾಳೆ, ಇಲ್ಲಪ್ಪ ನನಗೆ ಅಮ್ಮ ಇದ್ದಾಳೆ ಎಂದು ನಿರಾಕರಿಸುತ್ತಾನೆ ಹುಡುಗ. ಅಫ್ಘನ್ ಬಾಲಕನೊಬ್ಬನಿಗೆ ಅದೇ ಪ್ರಶ್ನೆ ಕೇಳುತ್ತಾಳೆ, ಅವನೂ ಇಲ್ಲವೆನ್ನುತ್ತಾನೆ. ಆ ಸಾಮಾನುಗಳನ್ನೆಲ್ಲ ಖಾಲಿ ಆಯಿಲ್ ಡ್ರಮ್ಮಿನಿಂದ ಮಾಡಿದ ದಿಡೀರ್ ದೋಣಿಗಳ ಮೇಲೆ ಹುಡುಗರು ಹೇರುತ್ತಿದ್ದಾಗ ಉಳಿದೆರಡು ಕತೆಗಳು ಸಂಧಿಸುತ್ತವೆ. ಮಧ್ಯಾಹ್ನವಾಗಿದ್ದರಿಂದ ‘ದೊಡ್ಡವಳಾಗಿ’ ಬಿಟ್ಟಿರುವ ಹವಾ ತಲೆಹೊದಿಕೆಯೊಂದಿಗೆ ಅಮ್ಮನ ಕೈಹಿಡಿದು ಹೂರಾಳನ್ನು ಆಸೆ ಕಂಗಳಿಂದ ನೋಡುತ್ತಿದ್ದಾಳೆ. ಸೈಕಲ್ ರೇಸಿನಲ್ಲಿ ಭಾಗವಹಿಸಿದ್ದ ಇಬ್ಬರು ಯುವತಿಯರು, ಇಷ್ಟೆಲ್ಲ ಆಸ್ತಿ ನಮ್ಮ ಬಳಿ ಇದ್ದಿದ್ದರೆ ಮದುವೆಯಾಗಿಬಿಡುತ್ತಿತ್ತು ಎಂದು ಹೂರಾಳ ಬಳಿ ನಗುತ್ತಾ ಹೇಳುತ್ತಾರೆ. ಮಾತಿನ ನಡುವೆ ಆಹೂಳ ವಿಷಯ ಪ್ರಸ್ತಾಪವಾಗುತ್ತದೆ. ಒಬ್ಬ ಯುವತಿ ಆಹೂ ರೇಸನ್ನು ಪೂರ್ಣಗೊಳಿಸಿದಳು ಎಂದರೆ ಮತ್ತೊಬ್ಬಳು ಇಲ್ಲ ವಾಪಸ್ಸು ಕರೆದುಕೊಂಡು ಹೋಗಿಬಿಟ್ಟರು ಎಂದಳು. ಆಹೂ ರೇಸನ್ನು ಪೂರೈಸಿದಳಾ? ದಿಡೀರ್ ದೋಣಿಗಳ ಮೇಲೆ ಕುಳಿತ ಹೂರಾ ಸಮುದ್ರದ ಮೇಲೆ ತೇಲುತ್ತಾ ಚೂರು ಚೂರೇ ಮುಂದೆ ಸಾಗುತ್ತಾಳೆ, ಹುಯ್ದಾಡುತ್ತಾಳೆ…..

ಓ! ಮೂರು ಕತೆಗಳಲ್ಲೂ ಪ್ರಮುಖವಾದ ಪಾತ್ರವೊಂದರ ಬಗ್ಗೆ ಹೇಳುವುದನ್ನೇ ಮರೆತಿದ್ದೆ. ಸಮುದ್ರವೇ ಮೂರು ಕತೆಗಳಲ್ಲಿನ ಬಂಧ, ಸಮುದ್ರವೇ ಇಲ್ಲಿ ಪ್ರಮುಖ ಪಾತ್ರ. ಬಾಲಕಿಯ ಕತೆ ನಡೆಯುವಾಗ ಸಮುದ್ರದ ಅಲೆಗಳು ದಡ ತಲುಪಿ ಮತ್ತೆ ವಾಪಸ್ಸಾಗುತ್ತಿರುವ ದೃಶ್ಯಗಳಿವೆ, ರೇಸು ನಡೆಯುವಾಗ ರಸ್ತೆ ಪಕ್ಕದಲ್ಲಿ ಮೈಚಾಚಿ ಮಲಗಿರುವ ಸಮುದ್ರ ಆಹೂಳ ಗಂಡ ವಿಚ್ಛೇದನ ಕೊಟ್ಟಾಗ ಮತ್ತವಳ ಅಣ್ಣಂದಿರು ಸಾಯ ಬಡಿಯುವಾಗ ರೊಚ್ಚಿಗೆದ್ದು ದಡಕ್ಕಪ್ಪಳಿಸುತ್ತದೆ – ದಡ ದಾಟುವುದಿಲ್ಲ ಮತ್ತು ಹೂರಾಳ ಕತೆ ಸಾಗುವಾಗ ಸಮುದ್ರ ಸಂಪೂರ್ಣ ಶಾಂತವಾಗಿದೆ. ಮೂರು ಕತೆಗಳಲ್ಲಿ ಮನಸ್ಸಿನ ಚಲನಶೀಲತೆಗೆ ಸಂಬಂಧಿಸಿದಂತೆ ಮೂರು ವಸ್ತುಗಳನ್ನು ಉಪಯೋಗಿಸಿಕೊಳ್ಳಲಾಗಿದೆ. ಮೊದಲ ಕತೆಯಲ್ಲಿ ಸಮುದ್ರ ತೀರದಲ್ಲಿರುವ ಹುಡುಗರು ಹವಾಳಿಗೊಂದು ಪ್ಲಾಸ್ಟಿಕ್ ಮೀನು ಕೊಡುತ್ತಾರೆ, ಸಮುದ್ರದ ನೀರಿನಲ್ಲಿ ಮೀನು ಬಿಟ್ಟರೆ ರವಷ್ಟು ದೂರ ಮುಂದೆ ಸಾಗಿ ಮತ್ತೆ ದಡಕ್ಕೇ ಬಂದುಬಿಡುತ್ತದೆ. ಚಲನಶೀಲತೆ ಇದೆ ಆದರೆ ಹಿಂದಕ್ಕೂ ಮುಂದಕ್ಕೂ ಸಾಗುತ್ತಿದೆಯಷ್ಟೆ. ಎರಡನೆಯ ಕತೆಯಲ್ಲಿ ಸೈಕಲ್ಲು ಚೈನಿನ ಶಬ್ದವೇ ಚಲನಶೀಲತೆ. ಕತೆ ಸಾಗುವ ಇಡೀ ಸಮಯ ಹಿನ್ನೆಲೆ ಸಂಗೀತದಲ್ಲಿ ಚೈನು ತಿರುಗುವ ಶಬ್ದವಿದೆ. ಅಡೆತಡೆಗಳು ಬಂದರೂ ಚಲನಶೀಲತೆ ಮುಂದಾಗಿಯೇ ಸಾಗುತ್ತಿದೆ. ಇನ್ನು ಮೂರನೇ ಕತೆಯಲ್ಲಿ ಹೂರಾಳ ಸ್ವತಂತ್ರ ಮನಸ್ಸಿನ ಚಲನಶೀಲತೆಯ ಸಂಕೇತವಾಗಿ ಶಾಂತ ಸಮುದ್ರದಲ್ಲಿ ಅತ್ತಿಂದಿತ್ತ ಭರ್ರನೆ ಓಡಾಡುವ ಸ್ಪೀಡು ಬೋಟುಗಳಿವೆ. 

ದೃಶ್ಯಗಳಲ್ಲೇ ಭಾವನೆಗಳನ್ನು ದಾಟಿಸುವ, ಸಮುದ್ರವನ್ನು ಪಾತ್ರವನ್ನಾಗಿ ಸೃಷ್ಟಿಸಿರುವ ಸೌಂದರ್ಯವನ್ನು ಕಾಣಲಿಕ್ಕೆ ಈ ಸಿನಿಮಾವನ್ನು ನೋಡಲೇಬೇಕು.

(ಈ ಸಿನಿಮಾ ನೋಡುವ ಅವಕಾಶ ಸಿಕ್ಕಿದ್ದು ಮನುಜಮತ ಮತ್ತು ಸಹಮತ, ಹಾಸನ ಆಯೋಜಿಸಿದ್ದ ‘ಸ್ತ್ರೀಮತ’ ಸಿನಿಮಾ ಹಬ್ಬದ ಸಂದರ್ಭದಲ್ಲಿ)

ಅಸಹಾಯಕ ಆತ್ಮಗಳು - ಅಲಮೇಲಮ್ಮನ ಮನೆಯೊಳಗಿನ ಅಬಲೆ!

madhusudan rangenahalli
ಕು.ಸ.ಮಧುಸೂದನ ರಂಗೇನಹಳ್ಳಿ
ನನಗೆ ಮದುವೆಯಾದಾಗ ಕೇವಲ ಹದಿನಾಲ್ಕು ವರ್ಷ ವಯಸ್ಸು. ಮೈನೆರೆದ ಆರೇ ತಿಂಗಳಿಗೆ ಮದುವೆ ಮಾಡಿದರು. ಮದುವೆ ಅಂದ್ರೇನು ಮನೆ ಮುಂದೆ ಚಪ್ಪರ ಹಾಕಿ ಊರಿಗೆಲ್ಲ ಊಟ ಹಾಕಿ ಮಾಡಿದ್ದಲ್ಲ. ಬಸ್ಸಿನಲ್ಲಿ ಧರ್ಮಸ್ಥಳಕ್ಕೆ ಹೋಗಿ ತಾಳಿಕಟ್ಟಿಸಿಕೊಂಡು ಬಂದಿದ್ದಷ್ಟೇ ನಮ್ಮ ಮದುವೆಯ ಸಂಭ್ರಮ. ಮದುವೆಯಾಗಿ ನೇರವಾಗಿ ಗಂಡನ ಮನೆಗೆ ಹೋದೆ. ನಮ್ಮೂರಿಂದ ಎಂಭತ್ತು ಮೈಲಿ ದೂರದ ಸಣ್ಣ ಊರದು. ಗಂಡನ ಮನೇಲಿ ಇದ್ದದ್ದು ಅಂದರೆ ನನ್ನ ಗಂಡ ಮತ್ತೆ ನಮ್ಮ ಅತ್ತೆ ಅಷ್ಟೇ. ಅತ್ತೆಗೂ ವಯಸ್ಸಾಗಿ ಕಣ್ಣು ಸರಿಯಾಗಿ ಕಾಣ್ತಿರಲಿಲ್ಲ. ಅಪ್ಪನ ಮನೆಯಂತೆ ಗಂಡನ ಮನೇಲೂ ಕಿತ್ತು ತಿನ್ನೊ ಬಡತನ. ಸಾಲಾಗಿ ಹುಟ್ಟಿದ ಏಳು ಹೆಣ್ಣು ಮಕ್ಕಳನ್ನು ದಾಟಿಸೋಕೆ ತುಂಬ ಕಷ್ಟ ಅಂತ ಗೊತ್ತಿದ್ದ ನಮ್ಮಪ್ಪ ಮೊದಲ ಮೂರೂ ಜನವನ್ನೂ ಅದೆಂಗೊ ಮಾಡಿ ನಮ್ಮಷ್ಟೇ ದರಿದ್ರರಾಗಿದ್ದ ಮನೆಗಳಿಗೆ ದಾಟಿಸಿದ್ದ. ಇನ್ನು ನಾಲ್ಕನೆಯವಳಾಗಿದ್ದ ನನಗೇನು ವಿಶೇಷವಾಗಿ ಮಾಡ್ತಾನೆ? ಕೈಗೆ ಸಿಕ್ಕ ಒಬ್ಬನಿಗೆ ಮದುವೆ ಮಾಡಿಕೊಟ್ಟು ಬಿಟ್ಟ. ನನ್ನ ಗಂಡನಿಗೆ ಪೋಲಿಯೊ ಆಗಿ ಕಾಲು ಎಳೆದು ನಡೆಯುತ್ತಿದ್ದ. ಹೇಳಿಕೊಳ್ಳೋ ಮಾತಲ್ಲ, ನಾನು ನೋಡೋಕೆ ಬೆಳ್ಳಗೆ ಮೈಕೈ ತುಂಬಿಕೊಂಡು ಲಕ್ಷಣವಾಗಿದ್ದೆ. ಇಷ್ಟು ಬೆಳ್ಳಗೆ ಚೆನ್ನಾಗಿರೊ ಹುಡುಗೀನಾ ಈ ಕುಂಟನಿಗೆ ಕೊಟ್ಟಿದಾರೆ ಅಂದರೆ ಹುಡುಗಿ ಏನೋ ಸರಿಯಿಲ್ಲ ಅನಿಸುತ್ತೆ ಅಂತ ಗಂಡನೂರಿನ ಜನ ಮಾತಾಡಿಕೊಳ್ಳಿದ್ದರು. ನಾನು ಅಂತಹುದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಇದ್ದೆ. ನಮ್ಮ ಮನೆಯಲ್ಲಿ ಬಡತನವಿದ್ದರು ನನ್ನ ಹೊರಗೆ ಕೂಲಿಗೆ ಅಂತ ಕಳಿಸ್ತಿರಲಿಲ್ಲ. ಹಾಗಾಗಿ ರೈತರ ಯಾವ ಕೆಲಸವು ಗೊತ್ತಿರಲಿಲ್ಲ. ಮೈ ನೆರೆಯೊತನಕ ಹಳ್ಳೀಲೆ ಇದ್ದ ಸ್ಕೂಲಲ್ಲಿ ಆರನೆ ಕ್ಲಾಸು ಮಾತ್ರ ಓದಿದ್ದೆ. 

ನನ್ನ ಗಂಡ ಅದೆ ಊರಲ್ಲಿದ್ದ ಒಂದು ಸಣ್ಣ ಹೋಟೆಲ್ಲಿನಲ್ಲಿ ಕೆಲಸ ಮಾಡ್ತಿದ್ದ. ಕೆಲಸ ಅಂದರೆ ಪಾತ್ರೆ ತೊಳೆಯೋದು, ಕ್ಲೀನ್ ಮಾಡೋದು ಹಿಟ್ಟು ರುಬ್ಬೋದು ಹೀಗೆ. ಅವರೇನು ಸಂಬಳ ಕೊಡ್ತಿದ್ದರು ನನಗಂತು ಗೊತ್ತಿರಲಿಲ್ಲ. ವಾರಕ್ಕೊಂದು ಸಾರಿ ಸಾಮಾನು ತಂದು ಹಾಕೋನು. ಬೆಳಿಗ್ಗೆ ಐದು ಗಂಟೆಗೆ ಎದ್ದು ಹೋಟೆಲಿಗೆ ಹೋದರೆ ರಾತ್ರಿ ಹನ್ನೆರಡು ಗಂಟೆಗೆ ಮನೆಗೆ ಬರೋನು. ಹಾಗೆ ಬರಬೇಕಾದರೆ ಹೊಟ್ಟೆ ತುಂಬ ಕುಡಿದೇ ಬರೋನು. ಇನ್ನು ಅತ್ತೆ ಪಾಪ ಯಾವಾಗಲು ಒಂದು ಮೂಲೇಲಿ ಕೂತು ಎಲೆ ಅಡಿಕೆ ಜಗೀತಾ ಗೊಣಗ್ತಾ ಕೂತಿರೋಳು. ಪಾಪ ಆಕೆ ಒಂದು ದಿನಾನು ದನಿಯೆತ್ತಿ ಮಾತಾಡಿದವಳಲ್ಲ. ಹೀಗೆ ಒಂದೂವರೆ ವರ್ಷ ಕಳೆದವು. ಅಷ್ಟರಲ್ಲಿ ಊರಿನ ಎಲ್ಲ ಗಂಡಸರ ಕಣ್ಣು ನನ್ನ ಮೇಲೆ ಬಿದ್ದಿರೋದು ನನಗೆ ಗೊತ್ತಾಗಿತ್ತು. ನನ್ನ ಗಂಡ ಅನಿಸಿಕೊಂಡ ಸೂಳೆಮಗನಿಗೆ ಕುಡಿಯೋದು ಮಾತ್ರವಲ್ಲ, ಓಸಿ ಆಡೋದು, ಅಂದರ್ ಬಾಹರ್ ಆಡೋದು ಸೇರಿದಂತೆ ಪ್ರಪಂಚದಾಗೆ ಇರೊ ಎಲ್ಲ ಚಟಗಳು ಇದ್ದವು. ಹಂಗಾಗಿ ಊರತುಂಬಾ ಸಾಲ ಮಾಡಿಕೊಂಡಿದ್ದ. ಅದರಲ್ಲೂ ಅವನ ದಾಯಾದಿಯೊಬ್ಬ ಇದ್ದ ಚನ್ನೇಗೌಡ ಅಂತ. ಅವನು ನಾವಿದ್ದ ಮನೆಯ ಪತ್ರ ಇಟ್ಟುಕೊಂಡು ಕೇಳಿದಾಗೆಲ್ಲ ಐವತ್ತು ನೂರು ಸಾಲ ಕೊಟ್ಟು ಹಾಳು ಮಾಡಿದ್ದ. 


ನಾನು ಮದುವೆಯಾಗಿ ಹೋದಮೇಲೆ ಅವನ ಕಣ್ಣು ನನ್ನ ಮೇಲೂ ಬಿತ್ತು. ಆ ಹಳ್ಳೀಲಿ ಒಬ್ಬಳು ಸಾವಿತ್ರಮ್ಮ ಅಂತ ಇದ್ದಳು. ಗಂಡ ಇದ್ದರು ಈ ಚನ್ನೇಗೌಡನ್ನ ಇಟ್ಟುಕೊಡಿದ್ದಳು. ಜೊತೆಗೆ ಮನೆಗೆಲಸಕ್ಕೆ ಅಂತ ಸುತ್ತಮುತ್ತ ಹತ್ತು ಹಳ್ಳಿಯ ಬಡಹುಡುಗಿಯರನ್ನು ಸಿಟಿಗಳಿಗೆ ಕಳಿಸೊ ದಲ್ಲಾಳಿ ಕೆಲಸ ಕೂಡಾ ಮಾಡ್ತಿದ್ದಳು. ನಾನು ಮದುವೆಯಾಗಿ ಹೋಗಿ ಮೂರೇ ತಿಂಗಳಿಗೆ ಆ ಸಾವಿತ್ರಮ್ಮ ಬಂದು ನೀನು ಹೂ ಅಂದರೆ ನಿನ್ನ ಗಂಡನ ಸಾಲಾನೆಲ್ಲ ವಜಾ ಮಾಡಿ ಮನೆ ಕಾಗದ ವಾಪಾಸು ಕೊಡ್ತಾನಂತೆ ಜೊತೆಗೆ ನಿನಗೇನು ಬೇಕಾದರು ಸಹಾಯ ಮಾಡ್ತಾನಂತೆ, ಏನು ಹೇಳ್ತೀಯಾ? ಅಂತ ಕೇಳಿ ನನ್ನ ಹತ್ತಿರ ಬಯಿಸ್ಕೊಂಡು ಹೋಗಿದ್ದಳು. ನಾನು ಥೂ ಅಂತ ಉಗಿದು ಕಳಿಸಿದ ಮೇಲೂ ಅವನು ಬಿಟ್ಟಿರಲಿಲ್ಲ. ಆಗಾಗ ಮನೆಗೆ ಬರೋದು ಆ ಕುಂಟನ ಜೊತೆ ಏನಿರ್ತಿಯಾ. ನನ್ನ ಜೊತೆ ಬಾ ತೋಟದ ಮನೇಲಿ ಇಟ್ಟು ಸಂಸಾರ ಮಾಡ್ತೀನಿ. ಅಂತೆಲ್ಲ ತಲೆ ಕೆಡಿಸೋಕೆ ನೋಡಿದ್ದ. ಆದರೆ ನಾನು ಅದಕ್ಕೆಲ್ಲ ಸೊಪ್ಪು ಹಾಕಿರಲಿಲ್ಲ.

ನಮ್ಮಪ್ಪನ ಮನೆಯಿಂದ ಯಾರೂ ಬರ್ತಿರಲಲ್ಲ. ಇಲ್ಲಿಗೆ ಬರೊ ಬಸ್ ಚಾರ್ಜ ದುಡ್ಡಿದ್ದರೆ ಮೂರು ದಿನದ ಊಟಕ್ಕಾಗುತ್ತೆ ಅನ್ನೋ ಸ್ಥಿತಿಲಿದ್ದ ಕುಟುಂಬ ಅದು. ಹಾಗಾಗಿ ಗಂಡನ ಮನೆಯ ಯಾವ ಸಂಕಟಾನು ಹೇಳಿಕೊಳ್ಳೋಕೆ ಅಂತ ನನಗ್ಯಾರು ಇರಲಿಲ್ಲ. ಬರ್ತಾ ಬರ್ತಾ ನನ್ನ ಗಂಡನ ಕುಡಿತ ಜಾಸ್ತಿಯಾಗ್ತಾ ಹೋಯ್ತು. ರಾತ್ರಿ ಕೆಲಸ ಮುಗಿದ ಮೇಲೆ ಯಾವುದಾದರು ತೋಟದಲ್ಲಿ ಕೂತು ಇಸ್ಪೀಟ್ ಆಡೋದು ಮಾಡ್ತಿದ್ದ. ವಾರಕ್ಕೊಮ್ಮೆ ಸಾಮಾನು ತಂದು ಹಾಕ್ತಾ ಇದ್ದವನು ಈಗ ತಿಂಗಳಾದರು ಸಾಮಾನು ತರ್ತಾ ಇರಲಿಲ್ಲ. ನಿದಾನಕ್ಕೆ ನಾನು ಮನೆ ಹೊಸಿಲು ದಾಟಬೇಕಾಯಿತು. ಹೋಟೆಲಿನ ಕೆಲಸದ ಟೈಮಲ್ಲೂ ಕುಡಿತಾನೆ ಅಂತ ಆ ಕೆಲಸದಿಂದ ಅವನನ್ನ ಬಿಡಿಸಿದರು. ಅಲ್ಲಿಗೆ ಅವನನ್ನು ನಂಬಿ ಕೂರೋ ಕಾಲ ಹೋಯ್ತು ಅಂತ ಗೊತ್ತಾಯ್ತು. ಒಂದೆರಡು ವಾರ ಕಳೆದ ಮೇಲೆ ಅವನು ಕೆಲಸ ಮಾಡ್ತಿದ್ದ ಹೋಟೆಲಿಗೆ ಹೋಗಿ ತೊಳೆಯೊ ಬಳಿಯೊ ಕೆಲಸ ಇದ್ರೆ ನನಗೆ ಕೊಡಿ ನಾನು ಮಾಡ್ತೀನಿ ಅಂದೆ. ಸರಿ ಅಂದರು. ಮಾರನೇ ದಿನದಿಂದ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಅಡಿಗೆ ಮಾಡಿಟ್ಟು ಹೋಟೆಲಿಗೆ ಹೋಗೋಕೆ ಶುರು ಮಾಡಿದೆ. ನಾನು ದುಡಿದು ತರ್ತಿದ್ದ ದುಡ್ಡಲ್ಲು ಗಂಡ ಪಾಲು ಕೇಳ ತೊಡಗಿದ. ನಾನು ಕೊಡದೆ ಹೋದಾಗ ಅವನ ಸಿಟ್ಟು ಜಾಸ್ತಿಯಾಗಿ ರಸ್ತೆಯಲ್ಲಿ ನಿಂತುಕೊಂಡು, “ಇವಳು ಪಾತ್ರೆ ತೊಳೆಯೊಕೆ ಹೋಗ್ತಿಲ್ಲ. ಅಲ್ಲಿಗೆ ಬರೊ ಗಿರಾಕಿಗಳ ಜೊತೆ ಮಲಗೋಕೆ ಹೋಗ್ತಿದಾಳೆ” ಅಂತ ಕೂಗಾಡ್ತಿದ್ದ. ಆ ಹಳ್ಳಿಯ ಜನ ಎಷ್ಟು ಕೆಟ್ಟವರಾಗಿದ್ರು ಅಂದರೆ ಒಬ್ಬರಾದರು ಬಂದು ಅವನಿಗೆ ಬುದ್ದಿ ಹೇಳ್ತಾ ಇರಲಿಲ್ಲ. ಹೀಗೇ ನಡೀತಾ ನಡೀತಾ ಇರಬೇಕಾದರೆ ಒಂದು ದಿನ ಹೋಟೆಲಿಗೆ ರಜಾ ಇತ್ತು. ಮದ್ಯಾಹ್ನದ ಹೊತ್ತಿಗೆ ಮನೇಲಿ ನಾನು ಅಡಿಗೆ ಮಾಡ್ತಿರುವಾಗ ಕುಡಿದು ಬಂದ ಗಂಡ ಜಗಳ ತೆಗೆದು ಹೊಡೆಯೋಕೆ ಶುರು ಮಾಡಿದ. ತಡೆಯುವಷ್ಟು ತಡೆದ ನಾನು ಅವನನ್ನು ರಸ್ತೆಗೆ ಎಳೆದು ಕೊಂಡು ಬಂದು ಬಿಟ್ಟು ಮನೆಯ ಬಾಗಿಲು ಹಾಕಿಕೊಂಡೆ. ಎಷ್ಟೊ ಹೊತ್ತಿನವರೆಗು ಅವನು ಕೂಗಾಡ್ತಲೇ ಇದ್ದ. ಒಳಗೆ ಬಂದೋಳು ಅಡಿಗೆ ಮುಗಿಸಿ ಅಳ್ತಾ ಕೂತಿದ್ದ ಮುದುಕಿಗೆ ಊಟ ಹಾಕಿ ಬಟ್ಟೆ ಒಗೆಯೋಕೆ ಅಂತ ಕೆರೆಗೆ ಹೊರಟೆ. ಬಾಗಿಲು ತೆಗೆದು ನೋಡಿದರೆ ಗಂಡ ಕಾಣಲಿಲ್ಲ. ಮತ್ತೆ ಕುಡಿಯೋಕೆ ಹೋಗಿರಬೇಕು ಅಂತನ್ನಿಸಿ ಬಾಗಿಲು ಮುಂದಕ್ಕೆಳೆದು ಕೊಂಡು ಕೆರೆಗೆಹೋದೆ. ಬಟ್ಟೆ ಒಗೆದು ಒಣಗಿಸಿಕೊಂಡು ಸಾಯಂಕಾಲ ಆರು ಗಂಟೆ ಹೊತ್ತಿಗೆ ಮನೆಗೆ ಬಂದೆ ಒಳಗೆ ಹೋಗಿ ನೋಡಿದರೆ ಅಡುಗೆಮನೆಯ ಸೂರಿಗೆ ನನ್ನ ಗಂಡ ನೇತಾಡ್ತಾ ಇದ್ದ. ನನಗೆ ಗಾಬರಿಯಾಗಿ ಹೊರಗೆ ಬಂದು ಬಾಯಿ ಬಾಯಿ ಬಡಿದುಕೊಂಡೆ. ಅಕ್ಕಪಕ್ಕದ ಜನ ಸೇರಿ ಹೆಣ ಇಳಿಸಿ ನೋಡಿದರೆ ಅವನಾಗಲೆ ಸತ್ತು ತುಂಬಾ ಹೊತ್ತಾಗಿತ್ತು. ಜಗುಲಿಯ ಮೇಲೆ ಹೆಣ ಮಲಗಿಸಿ ನೆಂಟರಿಷ್ಟರಿಗೆಲ್ಲ ಹೇಳಿಕಳಿಸಲಾಯಿತು. ಅವನ ದಾಯಾದಿ ಚನ್ನೇಗೌಡನೆ ಇದನ್ನೆಲ್ಲ ಮಾಡಿದ. ಅಷ್ಟೆಲ್ಲಾ ಮಾಡುತ್ತಿದ್ದರು ಅವನ ಕಣ್ಣೆಲ್ಲ ನನ್ನ ಮೇಲೇ ಇತ್ತು. ಸರಿ ಮಾರನೇ ದಿನ ಬೆಳಿಗ್ಗೆ ಮಣ್ಣು ಮಾಡೋದು ಅಂತ ತೀರ್ಮಾನ ಮಾಡಿದರು ಬೆಳಿಗ್ಗೆ ಆರು ಗಂಟೆಗೇನೆ ಪೋಲಿಸರು ಮನೆ ಮುಂದೆ ಬಂದು ನಿಂತು ಪಂಚನಾಮೆಯೆಲ್ಲ ಮಾಡಿದರು. ಮದ್ಯಾಹ್ನದೊತ್ತಿಗೆ ಮಣ್ಣು ಮುಗಿದರೂ ನನಗೆ ಮಾತ್ರ ಪೋಲಿಸರು ಪ್ರಶ್ನೆ ಮಾಡೋದು ನಿಲ್ಲಿಸಲಲ್ಲ. ಸಾಯಂಕಾಲದ ಹೊತ್ತಿಗೆ ಅವರು ನೀನೆ ಗಂಡನನ್ನು ನೇಣು ಹಾಕಿದಿಯಾ ಅಲ್ವಾ ಅಂತ ಕೇಳೋ ಮಟ್ಟಿಗೆ ಬಂದಿದ್ದರು. ನಾನು ಸತ್ಯ ಹೇಳಿದರು ಅವರು ಬಿಡಲಿಲ್ಲ. ನಿನ್ನ ಮೇಲೆ ನಮಗೆ ಕಂಪ್ಲೇಂಟ್ ಬಂದಿದೆ. ಅದಕ್ಕೇ ವಿಚಾರಣೆ ಮಾಡ್ತಾ ಇದೀವಿ. ಇವತ್ತು ನಿನ್ನ ಬಿಟ್ಟು ಹೋಗ್ತೀವಿ. ನಾಳೆ ಬೆಳಿಗ್ಗೆ ವಿಚಾರಣೆ ಮುಂದುವರೆಸ್ತೀವಿ ಅಂತ ಹೇಳಿ ಹೋದರು. ಮನುಷ್ಯರು ಎಷ್ಟು ಕ್ರೂರಿಗಳು ನೋಡಿ, ಮಣ್ಣಿಗೆ ಬಂದ ಅಪ್ಪ ಅಮ್ಮ ನನಗೂ ಹೇಳದೆ ವಾಪಾಸು ಹೋಗಿಬಿಟ್ಟಿದ್ದರು. ಅವತ್ತು ರಾತ್ರಿ ಹತ್ತುಗಂಟೆ ಸುಮಾರಿಗೆ ಸಾವಿತ್ರಮ್ಮ ಮನೆಗೆ ಬಂದವಳು, ನೋಡು ಈಗಲೇ ಹೇಳಿಬಿಡ್ತೀನಿ ನೀನು ಚನ್ನೇಗೌಡ ಹೇಳಿದ್ದಕ್ಕೆ ಹೂ ಅಂದರೆ ಯಾವ ಪೋಲಿಸಿನೋರು ಬೆಳಿಗ್ಗೆ ಬರಲ್ಲ. ಇಲ್ಲ ಅಂದರೆ ಕೊಲೆ ಕೇಸಲ್ಲಿ ನಿನ್ನ ಒಳಗೆ ಹಾಕ್ತಾರೆ ಅಂತ ಹೆದರಿಸಿದಳು. ಆಗ ನನಗೆ ಇದೆಲ್ಲ ಚನ್ನೇಗೌಡನದೇ ಕುತಂತ್ರ ಅನಿಸಿಬಿಟ್ಟಿತು. ಸಾವಿತ್ರಮ್ಮನನ್ನು ಇಲ್ಲ ಅಂತೇಳಿ ವಾಪಾಸು ಕಳಿಸಿ, ಮಾರನೆ ದಿನ ಪೋಲಿಸರಿಗೆ ನಿಜ ಹೇಳಿ ಬಿಟ್ರೆ ಆಯ್ತು. ಚನ್ನೇಗೌಡನ ಕಿತಾಪತಿಯನ್ನು ಹೇಳಿದರೆ ನನ್ನ ಕಷ್ಟ ಅರ್ಥವಾಗುತ್ತೆ ಅನಿಸಿ ಮಲಗಿದೆ. ಬೆಳಿಗ್ಗೆ ಬಂದ ಪೋಲಿಸನೊಬ್ಬ ನನ್ನನ್ನು ಮೂರುಮೈಲಿ ದೂರದ ಪಕ್ಕದೂರಿನ ಸ್ಟೇಷನ್ನಿಗೆ ಕರೆದುಕೊಂಡು ಹೋದ. ಅಲ್ಲಿದ್ದ ಸಬ್ ಇನ್ಸಫೆಕ್ಟರ್ ವಿಷಯವನ್ನೆಲ್ಲ ಕೇಳಿ ನನ್ನ ವಿಚಾರನೆ ಮಾಡಿ, ಆಯ್ತು ಎರಡು ದಿನ ನೀನಿಲ್ಲೆ ಇರು ನಾವು ನಿಮ್ಮ ಹಳ್ಳಿಗೆ ಹೋಗಿ ಸತ್ಯ ಏನು ಅಂತ ವಿಚಾರಿಸ್ತೀವಿ ಅಂದ. ಸಾಯಂಕಾಲದ ತನಕ ನಾನು ಅಲ್ಲೇ ಕೂತಿದ್ದೆ. ಅಲ್ಲಿದ್ದ ಇಬ್ಬರು ಮೂರು ಜನ ಪೋಲಿಸಿನವರು ನನ್ನ ನೋಡಿ ಕೆಟ್ಟದಾಗಿ ಮಾತಾಡೋದು ಕೇಳಿಸಿದರೂ ಏನೂ ಮಾಡೋಕಾಗದೆ ಸುಮ್ಮನಿದ್ದೆ. ಮದ್ಯಾಹ್ನ ಮಾತ್ರ ಪೋಲಿಸಿನವರೆ ಊಟ ತಂದುಕೊಟ್ಟಿದ್ದರು. ಸರಿ ಕತ್ತಲಾದ ಮೇಲೆ ಒಬ್ಬ ಪೋಲಿಸಿನವನು ಬಂದು, ನಡಿ ಸಾಹೇಬರು ನಿನ್ನ ವಿಚಾರಣೆ ಮಾಡಬೇಕಂತೆ ಅಂತ ಸ್ಟೇಷನ್ ಹಿಂದಿದ್ದ ಕ್ವಾಟ್ರಸ್ಸಿಗೆ ಕರೆದುಕೊಂಡು ಹೋದ. ನನ್ನ ಒಳಗೆ ಬಿಟ್ಟು ಅವನು ಮುಂದಿನಿಂದ ಬಾಗಿಲು ಹಾಕಿಕೊಂಡು ಹೋದ. ಅಲ್ಲಿದ್ದ ಇನ್ಸಪೆಕ್ಟರ್ ನನಗೆ ಕೂರೋಕೆ ಹೇಳಿ ಮತ್ತೊಂದು ಸಾರಿ ನೀನು ನಿಜ ಹೇಳಿದರೆ ನಾನು ಏನಾದರು ಸಹಾಯ ಮಾಡಬಹುದು, ಮಾಡಿರೋದನ್ನ ಒಪ್ಪಿಕೊಂಡು ಬಿಡು ಅಂತ ಹೆದರಿಸಿದ. ನಾನು ನಡೆದ ವಿಷಯವನ್ನೆಲ್ಲ ಬಿಡಿಸಿ ಬಿಡಿಸಿ ಹೇಳಿದರೂ ಅವನು ಕೇಳಲಿಲ್ಲ. ಹೀಗೆ ಸ್ವಲ್ಪ ಹೊತ್ತು ಆದಮೇಲೆ ಆಯಿತು ನಾನು ಹೇಳಿದ ಹಾಗೆ ಕೇಳಿದರೆ ನಿನ್ನ ಈ ಕೇಸಿಂದ ಬಿಡ್ತೀನಿ ಅಂತ ಹೇಳಿ ನನ್ನ ತೋಳುಹಿಡಿದು ಒಳಗಿನ ರೂಮಿಗೆ ಕರೆದುಕೊಂಡು ಹೋದ; ಅಲ್ಲಿದ್ದ ಮಂಚದ ಮೇಲೆ ಕೂರಿಸಿ ಇವತ್ತೊಂದು ರಾತ್ರಿ ಹೇಳಿದ ಹಾಗೆ ಕೇಳಿಕೊಂಡು ಸುಮ್ಮನಿದ್ದು ಬಿಡು ನಾಳೆಯಿಂದ ಆ ಚನ್ನೇಗೌಡ ನಿನ್ನ ಕಂಡರೆ ನಡುಗ ಬೇಕು ಹಾಗೆ ಮಾಡ್ತೀನಿ ಅಂದ. ಹಳ್ಳಿಯಲ್ಲಿ ಚನ್ನೇಗೌಡನಿಗೆ ತಿರುಗಿ ನಿಂತ ಹಾಗೆ ಇಲ್ಲಿ ನನಗೆ ನಿಲ್ಲೋಕೆ ಆಗಲಿಲ್ಲ. ಎಂದೂ ಸ್ಟೇಷನ್ನಿನ ಮುಖ ನೋಡದ ನಾನು ಗಡಗಡ ನಡುಗುತ್ತಲೇ ಅದೊಂದು ಬೇಡ ಅಂದೆ. ಆದರವನು ನನಗೆ ಅದೊಂದೇ ಸಾಕು ಅಂತ ನನ್ನ ಮೇಲೆ ಬಿದ್ದ. ಪೋಲಿಸ್ ಇನ್ಸಪೆಕ್ಟರೊಬ್ಬನನ್ನು ಎದುರಿಸಿನಿಲ್ಲುವ ದೈರ್ಯವಾಗಲಿ ಶಕ್ತಿಯಾಗಲಿ ನನಗಾಕ್ಷಣಕ್ಕೆ ಬರಲಿಲ್ಲ. ಸುಮ್ನಾಗಿಬಿಟ್ಟೆ. ಆ ಇಡೀರಾತ್ರಿ ಅವನು ನನ್ನನ್ನು ಪ್ರಾಣಿಗಿಂತ ಕಡೆಯಾಗಿ ಉಪಯೋಗಿಸಿಕೊಂಡ. ಬೆಳಿಗ್ಗೆ ಎದ್ದ ಮೇಲೆ ನನ್ನ ಕೈಗೆ ಒಂದಿಷ್ಟು ದುಡ್ಡು ಕೊಟ್ಟು ನೀನೀಗ ಊರಿಗೆ ಹೋಗು, ಯಾರಿಗೂ ಹೆದರಬೇಡ. ಆದರೆ ನಾನು ವಿಚಾರಣೆಗೆ ಕರೆಸಿದಾಗ ಬರಬೇಕು ಅಂತೇಳಿ ಕಳಿಸಿಕೊಟ್ಟ. ಹೊರಡುವ ಮುಂಚೆ ಖಾಲಿ ಬಿಳಿ ಹಾಳೆಯಲ್ಲಿ ನನ್ನ ಹತ್ತಿರ ಸೈನು ಮಾಡಿಸಿದ್ದಲ್ಲದೆ ಹೆಬ್ಬೆಟ್ಟನ್ನೂ ಹಾಕಿಸಿಕೊಂಡ.

ವಾಪಾಸು ಊರಿಗೆ ಬಂದವಳು ಯಾರ ಹತ್ತಿರಾನು ಮಾಡದೆ ಅಡುಗೆ ಮಾಡಿ ಅತ್ತೆಗೆ ಊಟ ಹಾಕಿ ಸುಮ್ಮನೆ ಕೂತುಕೊಂಡೆ. ರಾತ್ರಿಯಾದ ಘಟನೆ ಬಗ್ಗೆ ಯೋಚನೆ ಮಾಡೋಕೇ ಹೋಗಲಿಲ್ಲ. ಸದ್ಯ ಇಷ್ಟಕ್ಕೆ ಬಿಟ್ಟು ಕಳಿಸಿದನಲ್ಲ ಅನ್ನೋ ಸಮಾದಾನದಲ್ಲಿ ನಾನಿದ್ದೆ. ನೋಡೋದಿಕ್ಕೆ ಚೆನ್ನಾಗಿದ್ದು ಒಂಟಿ ಹೆಣ್ಣಾಗಿದ್ದೆ ನನ್ನ ತಪ್ಪಾಗಿತ್ತು. ಏನೊ ಒಂದು ದಿನದ ಹಿಂಸೆ ಅನ್ಕೊಂಡೇ ನಾನು ಸುಮ್ಮನಾಗಿ ಮತ್ತೆ ಕೆಲಸಕ್ಕೆ ಅಂತ ಹೋಟೆಲಿಗೆ ಹೋದರೆ ಅವರು ಬೇರೆಯವರು ಬಂದಿದಾರೆ ನೀನೇನು ಬರೋದು ಬೇಡ ಅಂತೇಳಿ ವಾಪಾಸು ಕಳಿಸಿಬಿಟ್ಟರು. ಮನೆಗೆ ವಾಪಾಸು ಬಂದವಳು ತಲೆ ಮೇಲೆ ಕೈ ಹೊತ್ತು ಕೂತುಬಿಟ್ಟೆ. ಮನೆಯಲ್ಲಿ ಏನೇನು ಇರಲಿಲ್ಲ. ಇನ್ಸಪೆಕ್ಟರ್ ಕೊಟ್ಟಿದ್ದ ದುಡ್ಡಲ್ಲಿ ಹದಿನೈದು ದಿನಕ್ಕಾಗುವಷ್ಟು ದಿನಸಿ ತಂದುಕೊಂಡೆ. ಇದಾದ ಮೂರನೇ ದಿನಕ್ಕೆ ಊರಲ್ಲಿ ಚನ್ನೇಗೌಡನಿಗು ಅವನಿಟ್ಟುಕೊಂಡಿದ್ದ ಸಾವಿತ್ರಮ್ಮನಿಗು ದೊಡ್ಡ ಗಲಾಟೆಯೊಂದು ನಡೆದು ಹೋಯಿತು. ಅದ್ಯಾವುದೊ ಆಸ್ತಿಯ ವಿಚಾರ ಅನ್ನೋದಷ್ಟೆ ಕಿವಿಗೆ ಬಿತ್ತು.

ಒಂದು ದಿನ ಪೋಲಿಸಿನವನೊಬ್ಬ ಬಂದು ಸಾಹೇಬರು ಕರೀತಾ ಇದಾರೆ ಸಾಯಂಕಾಲ ಬರಬೇಕಂತೆ ಅಂತ ಹೇಳಿ ಹೋದ. ಇದೇನಪ್ಪಾ ನನ್ನ ಗ್ರಹಚಾರ ಅಂದುಕೊಂಡು ವಿಧಿಯಿಲ್ಲದೆ ಸಾಯಂಕಾಲ ಹೋದರೆ. ಯತಾಪ್ರಕಾರ ರಾತ್ರಿ ಇನ್ಸಪೆಕ್ಟರ್ ಜೊತೆ ಮಲಗಬೇಕಾಯಿತು. ಏನೊ ಒಂದು ದಿನದ ನರಕ ಅಂದುಕೊಂಡಿದ್ದರೆ ಇದ್ಯಾಕೊ ಅಸಹ್ಯವೆನಿಸ ತೊಡಗಿತು. ಸರಿ ಬೆಳಗ್ಗೆ ಹೊರಟಾಗ ಸಾರ್, ಪದೇ ಪದೇ ಹೀಗೆ ಬಂದರೆ ಊರಲ್ಲಿ ಜನಕ್ಕೆ ಗೊತ್ತಾಗುತ್ತೆ. ದಯವಿಟ್ಟು ಬೇಡ ಸಾರ್. ಅಂತವನ ಕಾಲಿಗೆ ಬಿದ್ದು ಬೇಡಿಕೊಂಡೆ. ಆದರವನು ಕರಗಲಿಲ್ಲ. ಮುಚ್ಕೊಳ್ಳೇ ನಾನಿಲ್ಲ ಅಂದರೆ ಚನ್ನ ಗವಡನಂತ ಹಲ್ಕಟ್ಟ ಜೊತೆ ಮಲಗಬೇಕಾಗ್ತಿತ್ತು, ಸುಮ್ಮನೆ ಬರೋದು ಕಲಿ ಅಂತೇಳಿ ಒಂದಿಷ್ಟು ಕೊಟ್ಟು ಕಳಿಸಿದ. ಮತ್ತೆ ಸ್ಟೇಷನ್ನಿಗೆ ಹೋಗಿ ರಾತ್ರಿ ಇದ್ದು ಬಂದಿದ್ದು ಊರ ಜನಕ್ಕೆಲ್ಲ ಗೊತ್ತಾಗಿ ತಲೆ ಎತ್ತದಂತಾಗಿತ್ತು. ಹಲ್ಲು ಕಚ್ಚಕೊಂಡು ಮನೇಯಲ್ಲೇ ಇರೋಕೆ ತೊಡಗಿದೆ ಆದರೆ ಆ ರಾಕ್ಷಸ ಹಾಗಿರೋಕು ಬಿಡಲಿಲ್ಲ. ಪ್ರತಿ ಎರಡು ಮೂರು ದಿನಕ್ಕೆ ನನ್ನ ರಾತ್ರಿ ಹೊತ್ತು ಕರೆಸತೊಡಗಿದ. 

ಹಾಗೆ ಒಂದು ದಿನ ಹೋದಾಗ ಕ್ವಾಟ್ರಸ್ಸಿನಲ್ಲಿ ಅವನ ಜೊತೆ ಮೂರು ಜನ ಸ್ನೇಹಿತರೂ ಇದ್ದರು. ನನ್ನ ಕರ್ಮ ನೋಡಿ, ಆ ರಾತ್ರಿ ಇನ್ಸಪೆಕ್ಟರ್ ಸೇರಿದಂತೆ ಒಟ್ಟು ನಾಲ್ಕು ಜನರೂ ನನ್ನ ಹರಿದು ಹಂಚಿಕೊಂಡು ತಿಂದರು. ಬೆಳಿಗ್ಗೆಯಾಗುವಷ್ಟರಲ್ಲಿ ನಾನೊಂದು ನಿರ್ದಾರಕ್ಕೆ ಬಂದುಬಿಟ್ಟಿದ್ದೆ. ಇದೇ ಕೊನೆಯ ದಿನ. ಅದು ಏನಾದರು ಆಗಲಿ ಮತ್ಯಾವತ್ತು ಇಲ್ಲಿಗೆ ಬರಬಾರದು ಅಂತ. ವಾಪಾಸು ಊರಿಗೆ ಹೋದವಳು ಮೊದಲ ಬಾರಿಗೆ ಸಾವಿತ್ರಮ್ಮನ ಮನೆಗೆ ನಾಚಿಕೆ ಬಿಟ್ಟು ಹೋದೆ. ಅವಳೂ ಯಾವುದು ಸಿಟ್ಟು ತೋರಿಸದೆ ನಗುನಗುತ್ತಲೇ ಮಾತಾಡಿದಳು. ಅಷ್ಟು ದಿನ ತಡೆದಿಟ್ಟುಕೊಂಡ ದು:ಖವನ್ನೆಲ್ಲ ಅವಳ ಎದುರು ತೋಡಿಕೊಂಡು ಅತ್ತು ಬಿಟ್ಟೆ. ಸುಮಾರು ಮೂರುವರೆ ವರ್ಷಗಳ ಕಾಲ ಯಾವುದನ್ನು ಯಾರ ಬಳಿಯೂ ಹೇಳಕೊಳ್ಳಲಾಗದ ಎಲ್ಲವನ್ನು ಅವಳೆದರು ಹೇಳಿಕೊಂಡು ಹಗುರಾಗಿಬಿಟ್ಟೆ. ಕೇಳಿಸಿಕೊಂಡ ಅವಳು ಸಮಾದಾನ ಮಾಡಿ ಮುಂದೇನು ಮಾಡಬೇಕು ಅಂತಿದಿಯಾ ಅಂತ ಕೇಳಿದಳು. ಮುಂದೇನು ಅನ್ನೊ ಬಗ್ಗೆ ನನಗೇನೂ ಹೊಳೆದಿರಲಿಲ್ಲ. ಅದನ್ನೇ ಅವಳ ಬಳಿ ಹೇಳಿದೆ. ಏನು ಹೆದರಬೇಡ, ದೇವರಿದ್ದಾನೆ ಹೇಗೊ ಆಗುತ್ತೆ. ನೀನು ಯಾವ ಸುಖಕ್ಕೆ ಅಂತ ಇಲ್ಲಿರ್ತೀಯಾ? ಸುಮ್ಮನೆ ಬೆಂಗಳೂರಿಗೆ ಹೋಗಿಬಿಡು. ನೀನು ಹೋಗೋದಾದರೆ ಅಲ್ಲಿ ನಾನು ನಿನಗೇನಾದರು ಕೆಲಸದ ವ್ಯವಸ್ಥೆ ಮಾಡ್ತೀನಿ. ಇಲ್ಲ ತವರುಮನೆಗೆ ಬೇಕಾದರೆ ಹೋಗು ಅಂದಳು. ತವರು ಮನಗೆ ಹೋದರೆ ಏನಾಗುತ್ತೆ ಅಂತ ನನಗೆ ಗೊತ್ತಿತ್ತು. ಗಂಡ ಸತ್ತಾಗಲೆ ಒಂದೂ ಮಾತಾಡದೇ ಹೋದವರು ಈಗ ಹೋದರೆ, ಅವರು ನನಗೆ ಸಾಕೋದು ಕಷ್ಟ ಅಂತ ಯೋಚಿಸಿದವಳು ಇಲ್ಲ ಸಾವಿತ್ರಕ್ಕ ನಾನು ಬೆಂಗಳೂರಿಗೆ ಹೋಗ್ತೀನಿ. ಆದರೆ ಅಲ್ಲೇನು ಕೆಲಸ ಅಂತ ಹೇಳು ಅಂದೆ. ಯೋಚನೆ ಮಾಡಿದ ಸಾವಿತ್ರಮ್ಮ ನನಗೆ ಒಬ್ಬಳು ಪರಿಚಯದವಳಿದ್ದಾಳೆ, ಅವರ ಮನೆಗೆ ಕಳಿಸ್ತೀನಿ. ಅಲ್ಲಿ ಹೋದ ಮೇಲೆ ಏನು ಕೆಲಸ ಕೊಡ್ತಾಳೋ ಅದನ್ನು ನಿಷ್ಠೆಯಿಂದ ಮಾಡು ಅಂದಳು. ಆದರೆ ಇಲ್ಲಿನ ಪೋಲಿಸಿನವರು ಬಿಡ್ತಾರಾ? ಎಂದೆ. ಅದಕ್ಕವಳು “ಅಯ್ಯೋ ದಡ್ಡಿ ಆ ಇನ್ಸಪೆಕ್ಟರ್ ಕತೆ ನಂಗೊತ್ತಿಲ್ವಾ. ನಿನ್ನ ಮೇಲೆ ಯಾರೂ ಕಂಪ್ಲೇಂಟು ಕೊಟ್ಟಿಲ್ಲ, ಯಾವ ಕೇಸೂ ಹಾಕಿಲ್ಲ. ನಿನ್ನ ಜೊತೆ ಮಲಗೋಕೆ ಅವನು ಆಡಿರೋ ನಾಟಕ ಅದು. ಅವನು ನಂಗೆ ಚೆನ್ನಾಗಿ ಗೊತ್ತು. ಅವನಿಗೆ ಬೇಕಾದಾಗೆಲ್ಲ ನಾನು ಸಹಾಯ ಮಾಡಿದೀನಿ. ಅವನು ಆಸೆ ಪಟ್ಟಿದ್ದನ್ನೆಲ್ಲ ನಾನು ಈಡೇರಿಸಿದ್ದೀನಿ. ಬಿಡು ಅವನಿಗೆ ನಾನು ಹೇಳ್ತೀನಿ” ಅಂದಳು. ಅವಳು ಅಷ್ಟು ಹೇಳಿದ ಮೇಲೆ ನನಗೆ ಸಮಾದಾನವಾದರೂ ಅತ್ತೆಯ ಗತಿಯೇನು ಅಂತ ಯೋಚಿಸಿ ಕೇಳಿದೆ. ಅಯ್ಯೊ ಮಂಕೆ ನೀನ್ಯಾಕೆ ಯೋಚನೆ ಮಾಡ್ತೀಯಾ ಏನೇ ದಾಯಾದಿಗಳಾದರು ಅವಳಿಗೆ ಚನ್ನೇಗೌಡನ ಮನೆಯವರು ಅನ್ನ ಹಾಕ್ತಾರೆ. ಇವತ್ತೊ ನಾಳೆ ಸಾಯೊ ವಯಸ್ಸು ಅವಳಿಗೆ. ಅವಳ ಚಿಂತೆ ಬಿಟ್ಟು ನೀನು ಹೊರಡು ಅಂದಳು.

ಸರಿ ಅವಳು ಹೇಳಿದಂತೆ ಕೇಳುವುದೆ ಒಳ್ಳೆಯದು ಅಂತ ಆ ಸಮಯಕ್ಕೆ ಅನಿಸಿತು. ಹಾಗಾಗಿ ಬೇರೇನು ಯೋಚಿಸದೆ ಹೊರಟುಬಿಟ್ಟೆ. ಒಟ್ಟಿನಲ್ಲಿ ಅವಳ ಸಹಾಯದಿಂದ ಬೆಂಗಳೂರಿನ ಅಲಮೇಲಮ್ಮನ ಮನೆಗೆ ತಲುಪಿದೆ. ಹೋಗಿ ಒಂದೆರಡು ದಿನ ಅವಳು ನನಗೇನೂ ಹೇಳಲಿಲ್ಲ. ನಾಲ್ಕನೆ ದಿನಕ್ಕೆ ನನ್ನ ಒಬ್ಬಳೇ ಕೂರಿಸಿಕೊಂಡು ಸಾವಿತ್ರಿ ನನಗೆ ನಿನ್ನ ಕಷ್ಟಾನೆಲ್ಲ ಹೇಳಿದಾಳೆ. ಪಾಪ ಈ ವಯಸ್ಸಿಗೆ ಇಷ್ಟೊಂದು ಅನುಭವಿಸದಿಯಾ ಅಂದರೆ ನಂಗೆ ಬೇಜಾರಾಗುತ್ತೆ. ಏನೂ ಗೊತ್ತಿರದ ಪಾಪದ ಹುಡುಗಿ, ನೀನು ಆ ಪೋಲಿಸಿನವನ ದಮಕಿಗೆ ಹೆದರಿ ಮಲಗಿದ್ದಕ್ಕೆ ನಿಂಗೇನು ಸಹಾಯವಾಗಲಿಲ್ಲವಲ್ಲ. ಯಾರದೊ ಹೆದರಿಕೆ, ಮುಲಾಜಿಗೆ ಮಲಗಿ ಕಷ್ಟ ಪಡೋದಿಕ್ಕಿಂತ ನಮ್ಮ ಖುಶಿಗೆ ನಮಗೆ ಬೇಕಾದ ದುಡ್ಡಿಗೆ ಬೇರೆಯವರ ಜೊತೆ ಮಲಗೋದು ವಾಸಿ ಅಂತ ಉಪದೇಶ ಮಾಡಿದಳು. “ನೋಡು ಈಗಾಗಲೆ ನಿನಗೀ ಮನೆಯ ವ್ಯವಹಾರ ಅರ್ಥವಾಗಿರಬಹುದು. ನಾನು ಜಾಸ್ತಿಯೇನು ಹೇಳಲ್ಲ. ನಿನಗಿಷ್ಟ ಬಂದಾಗ ನಿನಗೆ ಸರಿಯೆನಿಸದವನ ಜೊತೆ ಮಲಗು. ಅದನ್ನೇ ಇಷ್ಟಪಟ್ಟು ಮಾಡು, ದುಡ್ಡೂ ಸಿಗುತ್ತೆ ಸುಖಾನು ಸಿಗುತ್ತೆ ಅಂದಳು. ಇವತ್ತು ಸಾಯಂಕಾಲ ರೆಡಿಯಾಗಿರು. ಒಬ್ಬ ಒಳ್ಳೆ ಗಿರಾಕಿ ಬರ್ತಾನೆ. ತುಂಬ ಗೌರವಸ್ಥ. ಸಾಕಷ್ಟು ದುಡ್ಡು ಕೊಡ್ತಾನೆ. ಕಡೆಯದಾಗಿ ಹೇಳ್ತೀನಿ ನಿನಗೆ ನಾನು ಬಲವಂತ ಮಾಡ್ತಿಲ್ಲ. ನೀನಾಗೆ ಈ ಮನೆಗೆ ಬಂದಿದಿಯಾ. ನಿನಗಿಷ್ಟ ಬಂದ ತೀರ್ಮಾನ ತಗೊ. ಆದರೆ ಒಂದು ನನಪಿಡು. ನೀನೆಲ್ಲೇ ಹೋದರು ಯಾವನ ಜೊತೆಗೂ ಮಲಗದೆ ಜೀವನ ಮಾಡೋಕೆ ಬೇಕಾದ ದುಡ್ಡು ಸಿಗಲ್ಲ. ಆದರೆ ಅಲಮೇಲಮ್ಮನ ಮನೆಯಲ್ಲಿ ಸಿಗೊ ಮರ್ಯಾದೆಯಾಗಲಿ, ರಕ್ಷಣೆಯಾಗಲಿ ನಿನಗೆ ಬೇರೆಲ್ಲೂ ಸಿಗಲ್ಲ ಅಂತ ಹೇಳಿ ಎದ್ದು ಹೋದಳು. ಸಾಯಂಕಾಲದವರೆಗು ಕೂತು ಯೋಚಿಸಿದೆ. ಬೇರ್ಯಾವ ದಾರಿಯೂ ನನಗೆ ಕಾಣಲಿಲ್ಲ. ಇನ್ನು ಗಂಡಸಿನ ಜೊತ ಮಲಗುವ ಸುಖದ ಬಗ್ಗೆ ನನಗೆ ಆಸಕ್ತಿಯೇ ಹೊರಟು ಹೋಗಿತ್ತು. ಅದು ಆ ಪೋಲಿಸಿನವನ ಜೊತೆ ಬಲವಂತಕ್ಕೆ ಮಲಗಿದ ದಿನವೇ ಅಸಹ್ಯವೆನಿಸಿ ಬಟ್ಟಿತು.

ಗಟ್ಟಿ ಮನಸು ಮಾಡಿದವಳಂತೆ ಸಾಯಂಕಾಲದ ಹೊತ್ತಿಗೆ ಸಿದ್ದವಾಗಿ ನಿಂತಿದ್ದೆ. ಗಿರಾಕಿಯಾಗಿ ಬಂದವನು ಆ ಮನೆಗೆ ಹಳಬ ಅನಿಸುತ್ತೆ. ನನ್ನ ಹೊರಗೆ ಕರೆದುಕೊಂಡು ಹೋಗ್ತೀನಿ ಅಂದಾಗ ಅಲಮೇಲಮ್ಮ ಬೇಡವೆನ್ನಲಿಲ್ಲ. ಅವನು ಯಾವುದೊ ಲಾಡ್ಜಿಗೆ ನನ್ನ ಕರೆದುಕೊಂಡು ಹೋದ. ನಿಜ ಹೇಳಬೇಕೆಂದರೆ ಅವತ್ತು ರಾತ್ರಿ ನನಗೆ ಅಸಹ್ಯವೂ ಅನಿಸಲಿಲ್ಲ ಜೊತೆಗೆ ತಪ್ಪು ಮಾಡ್ತಿದಿನಿ ಅಂತಾನು ಅನಿಸಲಿಲ್ಲ. ಅವನೂ ಅಷ್ಟೆ ಬಹಳ ಒಳ್ಳೆ ಮನುಷ್ಯ .ನನ್ನ ಜೊತೆ ಒರಟಾಗಿ ನಡೆದುಕೊಳ್ಳಲಿಲ್ಲ. ಅವತ್ತು ಶುರುವಾದ ನನ್ನ ರಾತ್ರಿಯ ಜೀವನ ಸುಮಾರು ಹದಿನೆಂಟು ವರ್ಷಗಳು ಯಾವುದೇ ಅಡೆತಡೆಯಿಲ್ಲದೆ ನಡೆಯಿತು. ತಿಂಗಳು ಕಳೆಯುವಷ್ಟರಲ್ಲಿ ನಾನು ಪಕ್ಕಾ ಕಸುಬುದಾರಳಾಗಿಬಿಟ್ಟೆ. ಆ ಕೆಲಸಕ್ಕೆ ಬೇಕಾದ ನಾಜೂಕು ವಯ್ಯಾರ ಒರಟುತನ ಎಲ್ಲವನ್ನು ಕಲಿತು ಅಲಮೇಲಮ್ಮನ ಪ್ರೀತಿಗೆ ಪಾತ್ರವಾದೆ.

ಕಸುಬಲ್ಲಿ ನೋವೇ ಇರಲಿಲ್ಲ ಅಂತೇನೂ ಅಲ್ಲ. ಆದರೆ ಪ್ರತಿಕೆಲಸದಲ್ಲೂ ಇರುವಂತೆ ಅದರಲ್ಲು ಕಷ್ಟಗಳಿದ್ದವು. ಕುಡಿದು ಪ್ರಾಣಿಯ ಹಾಗೆಲ್ಲ ನಡೆಸಿಕೊಳ್ಳುತ್ತಿದ್ದ ಗಿರಾಕಿಗಳು, ಎಲ್ಲ ಮುಗಿದ ಮೇಲೆ ಕೊಟ್ಟ ದುಡ್ಡನ್ನೇ ಕಿತ್ತು ಕೊಂಡು ಹೋಗುವ ಚಂಡಾಲರು ಇವರನ್ನೆಲ್ಲ ಸಂಬಾಳಿಸಬೇಕಾಗುತ್ತಿತ್ತು. ಇದರ ಜೊತೆಗೆ ಬಹಳಷ್ಟು ದುರಭ್ಯಾಸಗಳು ಜೊತೆಯಾದವು. ಹೊಗೆಸೊಪ್ಪು ಹಾಕೋದು ಕುಡಿಯೋದು ಅಭ್ಯಾಸವಾಯಿತು. ಹನ್ನೆರಡು ವರ್ಷ ದಂದೆಯ ದೆಸೆಯಿಂದ ನನ್ನ ಮೈ ಬಣ್ಣ ಕಪ್ಪಾಗತೊಡಗಿ ಆರೋಗ್ಯ ಹಾಳಗೋಕ್ಕೆ ಶುರುವಾಯಿತು. ಇನ್ನು ಇದನ್ನು ಮಾಡಲಾಗುವುದಿಲ್ಲ ಅನಿಸಿದಾಗ ದಂದೆ ನಿಲ್ಲಿಸಿ ಎಲ್ಲಿ ಹೋಗೋದು ಅನಿಸಿ ಯೋಚಿಸಿದೆ. ಅಲಮೇಲಮ್ಮನ ಮನೆಗೆ ಬಂದ ಎರಡು ವರ್ಷಗಳ ನಂತರ ಒಂದು ಸಾರಿ ನನ್ನ ತವರು ಮನೆಗೆ ಹೋಗಿಬಂದೆ. ಎಲ್ಲ ಹೆಣ್ಣುಮಕ್ಕಳ ಮದುವೆ ಮಾಡಿಕೊಟ್ಟ ಅಪ್ಪ ಟಿ.ಬಿ ಕಾಯಿಲೆಯಿಂದ ಸತ್ತುಹೋಗಿದ್ದ. ಇದ್ದ ಅಮ್ಮನಿಗೆ ಬೆಂಗಳೂರಲ್ಲಿ ಮನೆಕೆಲಸ ಮಾಡಿಕೊಂಡು ಬದುಕುತ್ತಿರೋದಾಗಿ ಹೇಳಿದ್ದೆ. ಆಮೇಲೆ ವರ್ಷಕ್ಕೊಂದು ಸಾರಿ ಹೋಗಿ ಅಮ್ಮನಿಗೆ ಬೇಕಾದಷ್ಟು ದುಡ್ಡು ಕೊಟ್ಟು ಬರ್ತಿದ್ದೆ.ಹಾಗಾಗಿ ಈ ಕಸುಬು ನಿಲ್ಲಿಸಬೇಕೆಂದು ಅನಿಸಿದಾಗ ಅಲಮೇಲಮ್ಮನಿಗೆ ಹೇಳಿ ನಾನು ದುಡಿದು ಕೂಡಿಟ್ಟ ಹಣವನ್ನು ಅವಳ ಹತ್ತಿರ ಇಸಗೊಂಡು ತವರು ಮನಗೆ ಬಂದು ಬಿಟ್ಟೆ. ಈಗ ಇಲ್ಲಿ ಸಣ್ಣದೊಂದು ಪೆಟ್ಟಿಗೆ ಅಂಗಡಿ ಹಾಕಿಕೊಂಡಿದೀನಿ. ತಮಾಷೆ ನೋಡಿ ನನ್ನ ಅಂಗಡಿ ಇರೋದೇ ಪೋಲಿಸ್ ಸ್ಟೇಷನ್ ಮುಂದೆ. ಪೋಲಿಸರನ್ನು ನೋಡಿದಾಗೆಲ್ಲ ಸಾಯಿಸುವಷ್ಟು ಕೋಪ ಬರುತ್ತೆ. ಆದರೆ ಪಾಪ ಯಾವನೊ ಒಬ್ಬ ಮಾಡಿದ ತಪ್ಪಿಗೆ ಎಲ್ರನ್ನೂ ಯಾಕೆ ದ್ವೇಷಿಸಬೇಕೆಂದುಕೊಂಡು ಸುಮ್ಮನಾಗುತ್ತೇನೆ. ಕಷ್ಟದಲ್ಲಿರೊ ಹೆಂಗಸರನ್ನು ನೋಡಿದಾಗ ಬೇಜಾರಾಗುತ್ತೆ. ತೀರಾ ಏನೂ ಮಾಡೋಕಾಗದೆ ಇರೊ ಅಂತ ಹೆಣ್ಣುಮಕ್ಕಳಿಗೆ ಈ ಸಮಾಜ ಏನು ಮಾಡಲ್ಲ. ಎಲ್ಲ ಬೂಟಾಟಿಕೆಯ ಮಾತುಗಳು. ಇವತ್ತು ತೀರಾ ಕಷ್ಟದಲ್ಲಿದ್ದು, ಬೇರೇನು ದಾರೀನೇ ಇಲ್ಲ ಅಂದುಕೊಂಡ ಹೆಣ್ಣುಮಕ್ಕಳಿಗೆ, ಮೊದಲೇ ಇರೋ ವಿಷಯ ಹೇಳಿ ಅಲಮೇಲಮ್ಮನ ಮನೆ ಅಡ್ರೆಸ್ ಕೊಡ್ತೀನಿ. ನೀವು ತಪ್ಪು ಅನ್ನಬಹುದು ಸಾರ್, ಆದರೆ ತಪ್ಪು ಅನ್ನೋ ನೀವು ಅವರಿಗೆ ಅವಳ ಜೊತೆ ಮಲಗದೆ ಹತ್ತು ರೂಪಾಯಿ ಕೊಡೋಕೆ ತಯಾರಿದ್ದೀರಾ? ಇಲ್ಲಸಾರ್ ಏನೂ ಉಪಯೋಗವಿಲ್ಲದೆ ಈ ಪ್ರಪಂಚದಲ್ಲಿ ಯಾರು ಯಾರಿಗೂ ಸಹಾಯ ಮಾಡಲ್ಲ. ರಾತ್ರಿ ಪಕ್ಕದಲ್ಲಿ ಮಲಗಿದ್ರೇನೆ ಹೆಂಡತಿಗೆ ಅನ್ನ ಹಾಕೊ ಪ್ರಪಂಚ ಇದು. ಅದಕ್ಕೆ ನಾನು ತಪ್ಪು ಮಾಡ್ತೀನಿ ಅಂತ ಅನಿಸಿಲ್ಲ. ಆದರೆ ಯಾರಿಗು ಇವತ್ತನವರೆಗು ಬಲವಂತ ಮಾಡಿಲ್ಲ.

ನೀವು ಸಾವಿತ್ರಕ್ಕನಿಗೆ ಪರಿಚಯದೋರು ಅಂತ ಇಲ್ಲೀತನಕ ಬಂದು ನನ್ನ ಕಥೆ ಹೇಳಿದ್ದೀನಿ. ನಾನಿನ್ನು ಹೋಗ್ತೀನಿ ಸಾರ್ ಅಂತ ಎದ್ದವಳಿಗೆ ನಿನಗೇನಾದರು ಸಹಾಯ ಬೇಕಾದರೆ ನನಗೆ ಕೇಳಿ. ಆದರೆ ಯಾರಿಗೂ ಇನ್ನುಮುಂದೆ ಅಲಮೇಲಮ್ಮನ ಮನೆ ಅಡ್ರೆಸ್ ಕೊಡಬೇಡಿ ಅಂದೆ. ಕಿಸಕ್ಕನೆ ನಕ್ಕ ಅವಳು ನನ್ನ ಜೊತೆ ಮಲಗ್ದೇನೆ ಸಹಾಯ ಬೇಕಾದೆ ಕೇಳು ಅಂದ್ರಲ್ಲ ಅದೇದೊಡ್ಡ ಸಹಾಯ ಸಾರ್. ಅಲಮೇಲಮ್ಮನ ಬದಲಿಗೆ ನಿಮ್ಮ ಅಡ್ರೆಸ್ ಕೊಡಲಾ? ದಯವಿಟ್ಟು ಬೇಜಾರಾಗಬೇಡಿ ಸುಮ್ಮನೆ ತಮಾಷೆಗೆ ಅಂದೆ ಅಂತ ಹೊರಟು ಹೋದಳು. ಅವಳು ಮಾಡಿದ್ದು ತಮಾಷೆಯೇ ಆದರು ನನಗಂತು ಅದು ಹೃದಯಕ್ಕೆ ನಾಟಿದ್ದು ಸುಳ್ಳಲ್ಲ!

ಜನ 13, 2016

ಮತ್ತೆ ಮತ್ತೆ ಕೇಳಿಸಿಕೊಳ್ಳುವ ರಿಕ್ಕಿ ಚಿತ್ರದ ಹಾಡುಗಳು.

ರಿಷಬ್ ಶೆಟ್ಟಿ ನಿರ್ದೇಶನದ ರಕ್ಷಿತ್ ಶೆಟ್ಟಿ, ಹರಿಪ್ರಿಯಾ, ಅಚ್ಯುತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ರಿಕ್ಕಿ' ಚಿತ್ರ ಆಕರ್ಷಿಸುವ ಟ್ರೇಲರ್ರಿನಿಂದ ಗಮನ ಸೆಳೆದಿತ್ತು. ಒಂದಷ್ಟು ಪ್ರೀತಿ, ವಿರಹ, ಸರಕಾರೀ ಕ್ರೌರ್ಯ, ನಕ್ಸಲರ ಹಿಂಸೆ, ನಾಯಕನ ವಿರೋಧದ ತುಣುಕುಗಳಿದ್ದ ಟ್ರೇಲರ್ ಕನ್ನಡಕ್ಕೆ ಮತ್ತೊಂದು ಹೊಸ ಬಗೆಯ ಚಿತ್ರವನ್ನು ನೀಡುವ ಸೂಚನೆ ನೀಡಿತ್ತು. 

ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಹೊಸ ಕನ್ನಡ ಸಿನಿಮಾಗಳ ಹಾಡುಗಳೆಂದರೆ ಅಬ್ಬರವೇ ಅತಿಯಾಗಿ ಆ ಕ್ಷಣಕ್ಕೆ ಇಷ್ಟವಾದರೂ ಮೂರು ತಿಂಗಳ ನಂತರ ಕೇಳುವುದು ಕಷ್ಟ ಕಷ್ಟ ಎಂಬ ಪರಿಸ್ಥಿತಿ. ಮತ್ತೆ ಮತ್ತೆ ಕೇಳಬೇಕೆನ್ನಿಸುವ ಹಾಡುಗಳು ಅಲ್ಲೊಂದು ಇಲ್ಲೊಂದು ಇರುತ್ತದಷ್ಟೆ. ರಿಕ್ಕಿ ಚಿತ್ರಗಳ ಎಲ್ಲಾ ಹಾಡುಗಳು ಇಷ್ಟವಾಗುವುದರಲ್ಲಿ ಸಂದೇಹವಿಲ್ಲ. ಅರ್ಜುನ್ ಜನ್ಯರವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಗಮನಸೆಳೆಯಲು ಸಾಹಿತ್ಯವೂ ಕಾರಣ.

ಹರುಷ ತಾಳದೆ, ಓ ಬೇಬೆ, ಎಲೆ ಮರೆಯಲಿ, ಜೀವ ನೀನು ಹಾಡುಗಳು ಮತ್ತೆ ಮತ್ತೆ ಕೇಳುವಂತಿವೆ. ಇನ್ನು ಝೀ ವಾಹಿನಿಯ ಸಾರೆಗಾಮಪ ಕಾರ್ಯಕ್ರಮದಲ್ಲಿ ಗಮನ ಸೆಳೆದಿದ್ದ ಅಂಕಿತಾ ಕುಂದು ಹಾಡಿರುವ ಮಲಗೆ ಮಲಗೆ ಹಾಡು ಈಗಾಗಲೇ ಜನಪ್ರಿಯವಾಗಿದೆ. ಹಾಡಿನ ವೀಡಿಯೋ ಹಾಡಿನಷ್ಟು ಚೆನ್ನಾಗಿಲ್ಲ ಎನ್ನಿಸುವುದು ಹಾಡಿನ ಹೆಚ್ಚುಗಾರಿಕೆ! ಕೇಳಿ ಆನಂದಿಸಿ, ಗೆಳೆಯರಿಗೂ ಕೇಳಿಸಿ.

ಜನ 9, 2016

ಅಸಹಾಯಕ ಆತ್ಮಗಳು - ಮದುವೆಯ ಕನಸ ಮರೆತು ಮಾರಿಕೊಂಡವಳು....

ಕು. ಸ. ಮಧುಸೂದನ್ 
ಅಪ್ಪ ಅದೇನು ಕೆಲಸ ಮಾಡ್ತಿದ್ದ ಅಂತ ನನಗಾಗ ಗೊತ್ತಿರಲಿಲ್ಲ. ಅಮ್ಮ ಮಾತ್ರ ಅಕ್ಕಪಕ್ಕದವರ ಮನೇಲಿ ಕೆಲಸ ಮಾಡಿ ಸಂಸಾರ ಸಾಗಿಸ್ತಿದ್ದಳು. ನಾನು ಹತ್ತಿರದಲ್ಲೆ ಇದ್ದ ಗವರ್ನಮೆಂಟ್ ಶಾಲೆಗೆ ಒಂದು ಬಟ್ಟೆ ಚೀಲ ನೇತಾಕಿಕೊಂಡು ಹೋಗ್ತಿದ್ದೆ. ಒಂದು ದಿನ ಸ್ಕೂಲಿಂದ ಮನೆಗೆ ಬರೊ ಹೊತ್ತಿಗೆ ಅಮ್ಮ ಸತ್ತೋಗಿದ್ದಳು. ಬೆಳಿಗ್ಗೆ ಸ್ಕೂಲಿಗೆ ಹೋಗಬೇಕಾದರೆ ಚೆನ್ನಾಗೆ ಇದ್ದ ಅವಳಿಗೆ ಸಾಯೊ ಅಂತಾದ್ದು ಏನಾಗಿತ್ತು ಅನ್ನೋದು ಎಂಟು ವರ್ಷದ ನನಗೆ ಅರ್ಥವಾಗಿರಲಿಲ್ಲ. ಹಳ್ಳಿಯಿಂದ ಅಮ್ಮನ ಅಪ್ಪ ಅಮ್ಮ ಅಂದರೆ ನಮ್ಮ ಅಜ್ಜ ಅಜ್ಜಿ ಬಂದರು . ಮಣ್ಣು ಮುಗಿಸಿ ತಿಥಿ ಕಾರ್ಯವನ್ನೆಲ್ಲ ಮುಗಿಸಿದ ಮೇಲೆ ಮಗೂನ ನಾವೇ ಕರಕೊಂಡು ಹೋಗ್ತೀವಿ ಅಂದಾಗ ಅಪ್ಪ “ಹು ಹಂಗೇ ಮಾಡಿ ನಾನು ಅಗಾಗ ಹಳ್ಳಿಗೆ ಬಂದು ನೋಡ್ಕೊಂಡು ಹೋಗ್ತಾ ಇರ್ತೀನಿ” ಅಂದು ನನ್ನ ಕೈಗೆ ಒಂದಿಷ್ಟು ಚಿಲ್ಲರೆ ತುರುಕಿದ. ಅಲ್ಲಿಗೆ ನನ್ನ ಓದು ಕೂಡ ಮುಗಿದು ಹೋಯ್ತು. ಹಳ್ಳೀಲಿ ಅಜ್ಜ ಅಜ್ಜಿಗೆ ಇದ್ದ ಒಂದರ್ದ ಏಕರೆ ಹೊಲವನ್ನು ರಾಗಿ ಬೆಳೆಯೋಕೆ ಗುತ್ತಿಗೆ ನೀಡಿದ್ರು. ಅದರಿಂದ ಬರೋ ದುಡ್ಡಲ್ಲೇ ನಾವು ಮೂರು ಜನದ ಜೀವನ ಸಾಗ ಬೇಕಿತ್ತು. ಮನೇಲಿ ಒಂದೆರಡು ಕುರಿಗಳಿದ್ದವು. ನಾನು ಬೆಳಿಗ್ಗೆ ಊಟ ಮಾಡಿ ಕುರಿ ಹೊಡ್ಕೊಂಡು ಹೋಗ್ತಾ ಇದ್ದೆ. ಮದ್ಯಾಹ್ನದ ಊಟ ಇರ್ತಾ ಇರ್ಲಿಲ್ಲ.ಸಾಯಂಕಾಲ ಮನೆಗೆ ಬಂದು ಕುರಿ ಕಟ್ಟಿ ಹಾಕಿ ಮನೆಗೆಲಸ ಮಾಡಿ ರಾತ್ರಿ ಊಟ ಮಾಡಿ ಮಲಗ್ತಾ ಇದ್ದೆ.ವರ್ಷದಲ್ಲಿ ಒಂದೆರಡು ಸಾರಿ ಅಪ್ಪ ಬರೋನು. ಬೆಳಿಗ್ಗೆ ಬಸ್ಸಿಗೆ ಬಂದು ಸಾಯಂಕಾಲದ ಹೊತ್ತಿಗೆ ವಾಪಸು ಹೋಗಿಬಿಡೋನು. ಯಾವತ್ತಿಗು ಅವನು ನನ್ನ ಅಷ್ಟೇನು ಪ್ರೀತಿಯಿಂದ ಮಾತಾಡಿಸ್ತಾ ಇರಲಿಲ್ಲ.ಚೆನ್ನಾಗಿದಿಯಾ ಅಂತ ಕೇಳಿ ತಂದ ಒಂದಷ್ಟು ಮಿಠಾಯಿ ಕೈಗಿಟ್ಟರೆ ಅವನ ಕೆಲಸ ಮುಗೀತು ಅಂತಹೊರಟುಹೋಗೋನು. ಹಾಗಾಗಿ ನನಗೂ ಅವನ ಮೇಲೆ ಅಪ್ಪ ಅನ್ನೋ ಮಮಕಾರ ಬೆಳಿಲೇ ಇಲ್ಲ.

ಹಂಗೇ ಒಂದೆರಡು ವರ್ಷ ಆದಮೇಲೆ ಒಂದು ಸಾರಿ ಬಂದಾಗ ಒಬ್ಬ ಹೆಂಗಸನ್ನು ಕರೆದುಕೊಂಡು ಬಂದಿದ್ದ. ಅವನು ಅದಾಗಲೆ ಮತ್ತೆ ಮದುವೆಯಾಗಿದ್ದ. ಅವನು ಇವಳೇ ನಿನ್ನ ಚಿಕ್ಕಮ್ಮ ಅಂತ ಹೇಳಿದ್ದ. ಅವನು ಹಾಗೆ ಮದುವೆಯಾಗಿದ್ದು ಅಜ್ಜ ಅಜ್ಜಿಯರಿಗೆ ಇಷ್ಟವಾಗದಿದ್ದರು ಪಾಪ ಒಂಟಿ ಗಂಡಸು ಒಂದು ಹೆಣ್ಣು ದಿಕ್ಕು ಬೇಕಲ್ವ ಅಂತ ಅವರವರೇ ಮಾತಾಡಿಕೊಂಡು ಸಮಾದಾನ ಮಾಡಿಕೊಂಡಿದ್ದರು. ಅದಾಗಿ ವರ್ಷಕ್ಕೆ ನಾನು ಮೈನೆರೆದೆ. ಪೇಟೇಲಿದ್ದ ಅಪ್ಪನಿಗೆ ಅಜ್ಜ ಅಜ್ಜಿ ಹೇಳಿ ಕಳಿಸಿದರು. ಒಂಭತ್ತನೇ ದಿನದ ಆರತಿ ಶಾಸ್ತ್ರದ ದಿನ ಅಪ್ಪ ಮತ್ತೆ ಚಿಕ್ಕಮ್ಮ ಬಂದರು. ಬರೋವಾಗ ನನಗೆ ಹೊಸ ಬಟ್ಟೆ, ಹೂವು, ಹಣ್ಣು ಎಲ್ಲ ತಂದಿದ್ದರು. ಅಷ್ಟು ವರ್ಷದಲ್ಲಿ ಮೊದಲ ಬಾರಿಗೆ ಅಪ್ಪ ನನಗಾಗಿ ಅಷ್ಟು ಖರ್ಚು ಮಾಡಿದ್ದ. ಅವನೀಗ ಮೊದಲಿನಂತಿರಲಿಲ್ಲ. ಬದಲಿಗೆ ಸಾಕಷ್ಟು ದುಡ್ಡು ಮಾಡಿದವನ ಹಾಗೆ ಕಾಣ್ತಿದ್ದ. ಚಿಕ್ಕಮ್ಮನ ಮೈಮೇಲೂ ಒಡವೆಗಳು ತುಂಬಾ ಇದ್ದವು ಅವತ್ತು ಸಾಯಂಕಾಲ ಶಾಸ್ತ್ರ ಮುಗಿಸಿ ಮಾರನೇ ದಿನ ಬೆಳಿಗ್ಗೆ ಅವರು ಹೊರಟು ಹೋದರು. ಅದಾಗಿ ಒಂದು ವರ್ಷದ ತನಕ, ತಿಂಗಳು ಎರಡು ತಿಂಗಳಿಗೊಮ್ಮೆ ಚಿಕ್ಕಮ್ಮ ಮಾತ್ರ ಬಂದು ಹೋಗಿ ಮಾಡೋದಿಕ್ಕೆ ಶುರು ಮಾಡಿದಳು. ಕೇಳಿದರೆ ಅಪ್ಪನಿಗೆ ಹುಷಾರಿಲ್ಲ. ಹಾಗಾಗಿ ಅವನಿಗೆ ಇಷ್ಟು ದೂರ ಬಸ್ಸಲ್ಲಿ ಬರೋಕೆ ಕಷ್ಟವಾಗುತ್ತೆ ಅಂತ ಹೇಳೋಳು. ಕೊನೆಗೆ ನಾನು ಮೈನೆರೆದ ಎರಡನೇ ವರ್ಷಕ್ಕೆ ಅಪ್ಪ ಸತ್ತು ಹೋದ ಸುದ್ದಿ ಬಂತು. ನಾವು ಪೇಟೆಗೆ ಹೋಗೊ ಅಷ್ಟರಲ್ಲಿ ಮಣ್ಣಾಗಿಬಿಟ್ಟಿತ್ತು. ಆ ದು:ಖದಲ್ಲೂ ಚಿಕ್ಕಮ್ಮ ನನ್ನ ಮದುವೆ ಮಾತಾಡಿದಳು. ನಿಮ್ಮ ಅಳಿಯ ಇಲ್ಲ ಅಂತ ಕೊರಗಬೇಡಿ ಇವಳು ನನ್ನ ಮಗಳಿದ್ದ ಹಾಗೇನೆ, ಇವಳಿಗೊಂದು ಗಂಡು ನೋಡಿ ಮದುವೆ ಮಾಡೋದು ನನ್ನಕರ್ತವ್ಯ, ನೀವೇನು ಚಿಂತೆ ಮಾಡಬೇಡಿ ಅಂತೆಲ್ಲ ಹೇಳಿದಳು. ಮೂರನೆ ದಿನದ ಕಾರ್ಯ ಮುಗಿಸಿ ನಾವು ಊರಿಗೆ ಹೊರಟಾಗ ಮಾತ್ರ ಇವಳು ಇಲ್ಲೇ ಇರಲಿ, ಪೇಟೇಲಿದ್ದರೆ ನಾಲ್ಕು ಗಂಡುಗಳಿಗೆ ಇವಳನ್ನು ತೋರಿಸಬಹುದು. ಯಾರಾದರು ಒಳ್ಳೆ ಹುಡುಗ ಸಿಕ್ಕರೆ ಮದುವೆ ಮಾಡೋಣ. ಇವಳನ್ನು ಸದ್ಯಕ್ಕೆ ಇಲ್ಲೇ ಬಿಟ್ಟು ಹೋಗಿ ಅಂತ ಅಜ್ಜ ಅಜ್ಜಿನ ಕೇಳಿದಾಗ ಪಾಪ ಅವರಿಗೂ ಸರಿಯೆನಿಸಿರಬೇಕು. ಮಲತಾಯಿ ಆದೋಳೇ ಇಷ್ಟು ಪ್ರೀತಿ ತೋರಿಸ್ತಿರಬೇಕಾದ್ರೆ ನಮ್ಮ ಮೊಮ್ಮಗಳು ತುಂಬಾ ಅದೃಷ್ಟವಂತೆ ಅನ್ಕೊಂಡು ನಾವು ಆಗಾಗ ಬಂದು ನೋಡ್ಕೊಂಡು ಹೋಗ್ತೀವಿ ಅಂತ ಹೇಳಿ ನನಗೊಂದಿಷ್ಟು ಬುದ್ದಿಮಾತು ಹೇಳಿ ಹಳ್ಳಿಗೆ ವಾಪಾಸು ಹೋದರು. 

ಚಿಕ್ಕಮ್ಮ ಈಗಿದ್ದಮನೆ ತುಂಬಾ ದೊಡ್ಡದಾಗಿ, ಎರಡು ಮೂರು ರೂಮುಗಳಿದ್ದವು. ಇಷ್ಟು ವರ್ಷಗಳಲ್ಲಿ ಅಪ್ಪ ಸಾಕಷ್ಟು ದುಡಿಮೆ ಮಾಡಿದ್ದಾನೆ ಅನಿಸ್ತು. ಚಿಕ್ಕಮ್ಮನಿಗೆ ಹತ್ತುವರ್ಷದ ಮಗಳೊಬ್ಬಳಿದ್ದು, ಅವಳು ಬೇರೆ ಊರಿನ ಹಾಸ್ಟೆಲ್ಲಿನಲ್ಲಿದ್ದಾಳೆ ಅಂತ ಅಲ್ಲಿ ಹೋದ ಮೇಲೇನೆ ನನಗೆ ಗೊತ್ತಾಗಿದ್ದು. ಹೀಗೆ ಒಂದಷ್ಟು ವಾರ ಅಲ್ಲಿದ್ದಾಗ ನನಗ್ಯಾಕೊ ಆ ಮನೆಯ ವ್ಯವಹಾರಗಳು ವಿಚಿತ್ರ ಅನಿಸತೊಡಗಿತು. ಬೆಳಿಗ್ಗೆ ತಿಂಡಿ ತಿಂದಮೇಲೆ ನಾನು ಮನೆಯ ಹಿಂದಿದ್ದ ಕೊನೆ ರೂಮಲ್ಲೇ ಇರಬೇಕು. ಏನಾದ್ರು ಬೇಕಿದ್ದರೆ ಮಾತ್ರ ಹೊರಗೆ ಬರಬೇಕು. ಅದು ಇದು ವ್ಯವಹಾರ ಅಂತ ಗಂಡಸರು ಬರ್ತಿರ್ತಾರೆ, ನೀನು ಅವರೆದುರಲ್ಲಿ ಓಡಾಡೋದು ಸರಿಯಲ್ಲ ಅಂತ ಚಿಕ್ಕಮ್ಮ ಹೇಳಿದಾಗ ಅದರಲ್ಲಿ ನಂಗೇನು ತಪ್ಪು ಕಂಡಿರಲಿಲ್ಲ. ಆದರೆ ಹಾಗೆ ಬಂದ ಗಂಡಸರು ಮನೆಯ ಬೇರೆ ರೂಮುಗಳಿಗೆ ಹೋಗಿ ಬಾಗಿಲು ಹಾಕಿಕೊಂಡು ಗಂಟೆಗಟ್ಟಲೆ ಇರೋದು ನನಗೆ ಆಶ್ಚರ್ಯವಾಗುತ್ತಿತ್ತು. ಬರಿ ಗಂಡಸರಲ್ಲದೆ ಬಹಳ ಹುಡುಗಿಯರು ಹೆಂಗಸರು ಸಹ ಆ ಮನೆಗೆ ಬರ್ತಿದ್ದರು. ಹಾಗೆ ಬಂದ ಹೆಂಗಸರ ಜೊತೆ ಗಂಡಸರು ರೂಮಿಗೆ ಹೋಗೋದನ್ನು ನೋಡಿದ ಮೇಲೆ ಮನಸ್ಸಿಗೊಂದು ಥರಾ ಕಸಿವಿಸಿ ಆಗತೊಡಗಿತು. ಗಂಡುಹೆಣ್ಣಿನ ಸಂಬಂದವಾಗಲಿ, ಈ ಸೆಕ್ಸ್ ಆಗಲಿ ಗೊತ್ತಾಗದಷ್ಟು ನಾನು ದಡ್ಡಿಯಾಗಿದ್ದೆ, ಈ ನಡುವೆ ಆಗಾಗ ನನ್ನನ್ನ ಮಾತನಾಡಿಸುತ್ತಿದ್ದ ಚಿಕ್ಕಮ್ಮ ಚೆನ್ನಾಗೇ ನೋಡಿಕೊಳ್ತಾ ಇದ್ದಳು. ನಾನೂ ಅವಳಿಗೆ ಬೇಜಾರಾಗದಂತೆ ಯಾವ ಪ್ರಶ್ನೆಗಳನ್ನು ಕೇಳದೆ ಇರತೊಡಗಿದ್ದೆ. ಏನೇ ಆದರು ನಾನು ವಯಸ್ಸಿಗೆ ಬಂದಿದ್ದ ಹುಡುಗಿ ಅಲ್ವಾ ನಿದಾನಾಗಿ ಅಲ್ಲೇನು ನಡೀತಾ ಇದೆ ಅನ್ನೋದು ಅರ್ಥವಾಗತೊಡಗಿತು.

ಎರಡು ತಿಂಗಳಾದ ಮೇಲೊಂದು ದಿನ ನನ್ನ ರೂಮಿಗೆ ಬಂದ ಚಿಕ್ಕಮ್ಮ ನೋಡು ಇವತ್ತು ಮದ್ಯಾಹ್ನ ನಿನ್ನ ನೋಡೋಕೆ ಒಬ್ಬ ಹುಡುಗ ಬರ್ತಾನೆ. ಒಳ್ಳೆ ಕೆಲಸದಲ್ಲಿದ್ದಾನೆ. ನೀನು ಮದ್ಯಾಹ್ನದ ಹೊತ್ತಿಗೆ ರೆಡಿಯಾಗಿರು. ನೀನು ಹೊರಗೇನು ಬರೋದು ಬೇಡ. ನಿನ್ನ ರೂಮಿಗೆ ಅವನನ್ನು ಕರಕೊಂಡು ಬರ್ತೀನಿ. ನಾಚಿಕೆ ಪಡದೆ ಅವನ ಜೊತೆ ಮಾತಾಡು. ಅವನು ಹೇಳಿದ ಹಾಗೆ ಕೇಳು. ಅವನು ಒಪ್ಪಿದರೆ ನಿನ್ನ ಪುಣ್ಯ ಅಂತ ಹೇಳಿ ಹೊರಟು ಹೋದಳು. ಮದುವೆ ಅನ್ನೋ ಮಾತು ಕೇಳಿ ನನಗೂ ಸಂತೋಷವಾಯ್ತು. ಸರಿ ಅಂತ ಎದ್ದು ಹನ್ನೆರಡು ಗಂಟೆಗೆಲ್ಲ ಸ್ನಾನ ಮಾಡಿ ಕೂತೆ. ಮತ್ತೆ ಬಂದ ಚಿಕ್ಕಮ್ಮ ನಾನು ಹಾಕಿದ್ದ ಲಂಗ ಜಾಕೀಟು ನೋಡಿ ಥೂ ಇದೇನೆ ಇದನ್ನು ಹಾಕಿಕೊಂಡಿದಿಯಾ ಅಂತೇಳಿ ಒಂದು ಒಳ್ಳೆ ಸೀರೆತಂದು ಕೊಟ್ಟಳು. ನನಗೆ ಉಡೋದಿಕ್ಕೆ ಬರಲ್ಲ ಅಂದಾಗ ಅವಳೇ ಉಡಿಸಿ, ನೋಡು ಹುಡುಗ ತುಂಬಾ ಒಳ್ಳೇನು. ಅವನೇನೇ ಕೇಳಿದರು ಸರಿಯಾಗಿ ಉತ್ತರ ಕೊಡು ಪ್ರೀತಿಯಿಂದ ಮಾತಾಡು. ಹಳ್ಳಿ ಹುಡುಗಿತರಾ ನಾಚಿಕೆ ಪಡಬೇಡ ಅಂತ ಹೇಳಿ ಹೋದಳು. ಅದಾಗಿ ಒಂದು ಗಂಟೆ ಆದ ಮೇಲೆ ಸುಮಾರು ಸುಮಾರು ಮುವತ್ತು ವರ್ಷದ ಒಬ್ಬ ಗಂಡಸು ಒಳಗೆ ಬಂದ. ಬಂದವನು ಮಂಚದ ಮೇಲೆ ಕೂತುಕೊಂಡು ಹೆಸರು ಕೇಳಿದ. ನಾನು ಹೇಳಿದಾಗ ಬಾ ಇಲ್ಲೆ ಮಂಚದ ಮೇಲೆ ಕೂರು ಅಂತ ತನ್ನ ಪಕ್ಕ ಕೂರುವಂತೆ ಹೇಳಿದ. ಚಿಕ್ಕಮ್ಮ ಹೇಳಿದ ಮಾತಿನಂತೆ ನಾನು ಅವನ ಪಕ್ಕ ಕೂತುಕೊಂಡೆ. ಅವನು ಅದು ಇದು ಮಾತಾಡುತ್ತ ನನ್ನ ಹೆಗಲ ಮೇಲೆ ಕೈ ಹಾಕಿದ. ನನಗೆ ಒಂಥರಾ ನಾಚಿಕೆ ಆಗಿ ಅವನ ಕೈ ತೆಗಿಯೋಕೆ ಹೇಳಿದೆ. ಅದಕ್ಕವನು ನಿಮ್ಮ ಚಿಕ್ಕಮ್ಮ ನೀನು ತುಂಬಾ ಒಳ್ಳೆ ಹುಡುಗಿ ಅಂತ ಹೇಳಿದಾಳೆ ಅಂತ ಹೇಳುತ್ತಾ ನನ್ನ ತಬ್ಬಿಕೊಂಡ. ನಾನು ಅವನಿಂದ ಬಿಡಿಸಿಕೊಳ್ಳಲು ಕೊಸರಾಡಿದೆ. ಆದರವನ ಕೈನಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಏನಾಗುತ್ತಿದೆ ಅಂತ ನನಗರ್ಥವಾಗುವಷ್ಟರಲ್ಲಿ ನನ್ನೆಲ್ಲ ಬಟ್ಟೆಗಳ್ನು ಬಿಚ್ಚಿ ಬೆತ್ತಲು ಮಾಡಿಬಿಟಿದ್ದ. ಜೋರಾಗಿಕೂಗಲು ಚಿಕ್ಕಮ್ಮನ ಭಯ. ಹಾಗಾಗಿ ಇದೆಲ್ಲ ಬೇಡ ಅಂತೇಳಿ ದೂರ ಹೋಗಲು ನೋಡಿದೆ. ಆದರವನು ಬಲವಂತದಿಂದ ನನ್ನನ್ನು ಹಾಳು ಮಾಡಿಬಿಟ್ಟ. ರಾತ್ರಿ ಎಂಟುಗಂಟೆಯವರೆಗು ಅವನು ರೂಮಿಂದ ಆಚೆ ಹೋಗದೆ ನನ್ನ ಹರಿದು ಮುಕ್ಕಿಬಿಟ್ಟ. ರಾತ್ರಿ ಹೋಗುವಾಗ ಮತ್ತೆ ನಾಳೆ ಬರುತ್ತೇನೆ ಅಂತೇಳಿ ಹೋದ. ನಾನು ಏನೋ ಕಳೆದುಕೊಂಡಂತೆ ಅಳುತ್ತಾ ಕೂತೆ. ಆಮೇಲೆ ಬಂದ ಚಿಕ್ಕಮ್ಮ ನನ್ನನ್ನು ಸಮಾದಾನ ಮಾಡುತ್ತಾ ಅವನಿಗೆ ತುಂಬ ಅವಸರ ನೋಡು, ಮದುವೆಗೆ ಮುಂಚೇನೆ ಇದೆಲ್ಲ ಮಾಡಿಬಿಟ್ಟಿದ್ದಾನೆ. ಹೋಗಲಿ ಬಿಡು ಅಳಬೇಡ. ಸಮಾದಾನ ಮಾಡಿಕೊ ಅಂದು ಅಲ್ಲಿಗೇ ಊಟ ತಂದು ಕೊಟ್ಟಳು. ಮೊದಲ ದಿನವೇ ಅವನು ನನ್ನ ಹಿಂಡಿ ಹಿಪ್ಪೆಮಾಡಿದ್ದ. ಮೈಯೆಲ್ಲ ನೋವಾಗಿದ್ದು ಅವನು ಮದುವೆಯಾಗುವ ಹುಡುಗ ಅಂತ ಅನ್ನಿಸಿ ಒಂಥರಾ ಸಮಾದಾನವೂ ಆಗಿತ್ತು.

ಮಾರನೇ ದಿನ ರಾತ್ರಿಯಾದರು ಅವನು ಮತ್ತೆ ಬರಲಿಲ್ಲ. ಯಾಕೊ ಗೊತ್ತಿಲ್ಲ ಅವನು ಬರಲಿಲ್ಲವೆಂಬುದು ಮನಸ್ಸಿಗೆ ಬೇಜಾರೆನಿಸಿತು. ಅದಾಗಿ ಮೂರನೆ ದಿನಕ್ಕೆ ನನ್ನ ರೂಮಿಗೆ ಬಂದ ಚಿಕ್ಕಮ್ಮ ರಾತ್ರಿ ಎಂಟುಗಂಟೆ ಹೊತ್ತಿಗೆ ರೆಡಿಯಾಗಿರು ಹುಡುಗ ಬರ್ತಾನೆ ಅಂತ ಹೇಳಿದಾಗ ನಾನು ಅವನೇ ಬರ್ತಾನೆ ಅಂತ ಆಸೆಯಿಂದ ಕಾಯ್ತಿದ್ದೆ. ಆದರೆ ರಾತ್ರಿ ಬೇರೊಬ್ಬ ಗಂಡಸು ಬಂದು ನನ್ನ ರೂಮಿನ ಬಾಗಿಲು ಹಾಕಿದಾಗ ಮಾತ್ರ ದಿಗ್ಬ್ರಮೆಯಾಯಿತು. ಬಂದವನು ನನ್ನ ಮೇಲೆರಗಿದಾಗ ನಾನು ವಿರೋಧಿಸಿ ಕೂಗಾಡಿದಾಗ ರೂಮಿಗೆ ಬಂದ ಚಿಕ್ಕಮ್ಮ ಬಾಯಿ ಮಚ್ಚಿಕೊಂಡಿರೆ ಸಾಕು ಅಂತ ನನ್ನ ಕೆನ್ನಗೆ ಎರಡು ಹೊಡೆದಳು. ಆ ಮೇಲೆ ನಾನು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವತ್ತು ಎರಡನೆಯ ವ್ಯಕ್ತಿ ನನ್ನನ್ನು ಉಪಯೋಗಿಸಿಕೊಂಡ. ಅವತ್ತು ಇಡೀರಾತ್ರಿ ನಾನು ಊಟ ಮಾಡದೆ ಅಳುತ್ತಾ ಮಲಗಿದೆ. ಆದರೆ ಚಿಕ್ಕಮ್ಮ ನನ್ನ ಅಳುವಿಗೆಲ್ಲ ಕೇರ್ ಮಾಡೊ ಹೆಂಗಸಾಗಿರಲಿಲ್ಲ. ನಾನಾ ಹಿಂಸೆಗಳನ್ನು ಕೊಟ್ಟು, ಉಪವಾಸ ಹಾಕಿ ಅವಳ ಮಾತಿಗೆ ನಾನು ಹೂ ಅನ್ನುವಂತೆ ಮಾಡಿಬಿಟ್ಟಳು. ಆಮೇಲಾಮೇಲೆ ಅದು ಮಾಮೂಲಿಯಾಗತೊಡಗಿತು. ಎರಡು ಮೂರು ದಿನಕ್ಕೊಮೆ ಬರುತ್ತಿದ್ದವರು ಆಮೇಲೆ ದಿನಾ ಬರತೊಡಗಿದ್ದರು. ಒಟ್ಟಿನಲ್ಲಿ ಒಂದೇ ತಿಂಗಳಿಗೆ ನಾನು ಚಿಕ್ಕಮ್ಮನ ಅಡ್ಡೆಯೊಳಗೆ ಸೂಳೆಯಾಗಿ ಬದಲಾಗಿಬಿಟ್ಟಿದ್ದೆ. ಈ ನಡುವೆ ಒಂದು ಸಾರಿ ಅಜ್ಜ ಒಬ್ಬನೇ ಹಳ್ಳಿಯಿಂದ ನನ್ನ ನೋಡಲು ಬಂದಿದ್ದ. ಅವನು ಬಂದ ತಕ್ಷಣ ಚಿಕ್ಕಮ್ಮ ಏನೂ ಹೇಳಬಾರದೆಂಬಂತೆ ನನಗೆ ಪರೋಕ್ಷ ಎಚ್ಚರಿಕೆ ಕೊಟ್ಟಿದ್ದಳು. ಬಂದ ಅಜ್ಜನಿಗೆ ನಾನು ಚೆನ್ನಾಗಿರುವುದಾಗಿ ಹೇಳಿ ಕಳಿಸಿಕೊಟ್ಟೆ. ಅವನು ಹೋಗುವಾಗ ನನಗೆ ಗಿರಾಕಿಗಳು ಕೊಟ್ಟಿದ್ದ ಒಂದಿಷ್ಟು ದುಡ್ಡನ್ನೂ ಕೊಟ್ಟು ಕಳಿಸಿದೆ. ಇದ್ಯಾವ ದುಡ್ಡು ಅಂತ ಕೇಳಿದವನಿಗೆ ಚಿಕ್ಕಮ್ಮ ಕೊಟ್ಟಿದ್ದು ಅಂತೇಳಿದೆ.

ಮತ್ಯಾವತ್ತು ಚಿಕ್ಕಮ್ಮ ನನ್ನ ಮದುವೆಯ ಮಾತೆತ್ತಲಿಲ್ಲ. ನನಗೂ ಪರಿಸ್ಥಿತಿ ಅರ್ಥವಾಗಿತ್ತು. ನಿದಾನಕ್ಕೆ ಅವಳೊಂದಿಗೆ ಹೊಂದಿಕೊಂಡು ಬಿಟ್ಟೆ. ಹೀಗೇ ಮೂರು ವರ್ಷಗಳು ಕಳೆದು ಹೋದವು. ಹಾಸ್ಟೆಲ್ಲಿನಲಿದ್ದ ಚಿಕ್ಕಮ್ಮನ ಮಗಳು ವರ್ಷಕ್ಕೊಂದು ಸಾರಿ ಬಂದಾಗ ಮನೆಯ ಎಲ್ಲ ವ್ಯವಹಾರಗಳು ಬಂದ್ ಆಗುತ್ತಿದ್ದವು. ಆದರೆ ಆಕೆಗೆ ಇಲ್ಲಿಯ ಎಲ್ಲವೂ ಗೊತ್ತಿದ್ದವು ಅಂತ ಅವಳು ನನ್ನ ಹತ್ತಿರ ಮಾತನಾಡುವಾಗ ನನಗೆ ಗೊತ್ತಾಗುತ್ತಿತ್ತು. ಹೀಗಾಗಿಯೇ ಅವಳು ರಜಕ್ಕೆ ಅಂತ ಬಂದರೂ ಎರಡು ದಿನದ ಮೇಲೆ ಇರುತ್ತಿರಲಿಲ್ಲ. ಬರಬರುತ್ತ ಚಿಕ್ಕಮ್ಮನಿಗೆ ನನ್ನ ಮೇಲೆ ನಂಬಿಕೆ ಬರುತ್ತಿದ್ದಂತೆ ತಿಂಗಳಿಗೊಂದು ಸರಿ ಹಳ್ಳಿಗೆ ಹೋಗಿ ಅಜ್ಜ ಅಜ್ಜಿಯರನ್ನು ಮಾತಾಡಿಸಿಕೊಂಡು ಬರುತ್ತಿದ್ದೆ. ಅವರು ಮದುವೆಯ ಮಾತು ಎತ್ತಿದಾಗೆಲ್ಲ ಏನಾದರು ಒಂದು ಕಥೆ ಕಟ್ಟಿ ಮಾತು ಬದಲಾಯಿಸುತ್ತಿದ್ದೆ. ಅವರ ಜೀವನಕ್ಕಾಗುವಷ್ಟು ದುಡ್ಡನ್ನು ಕೊಟ್ಟು ಬರುತ್ತಿದ್ದೆ. 

ದಿನಗಳು ಉರುಳುತ್ತಾ ಹೋದವು ಈ ನಡುವೆ ಅಜ್ಜ ಅಜ್ಜಿ ಇಬ್ಬರು ತೀರಿಕೊಂಡರು. ಚಿಕ್ಕಮ್ಮನ ಮಗಳ ಓದು ಮುಗಿದು ಕಾಲೇಜಲ್ಲೇ ಯಾರನ್ನೊ ಪ್ರೀತಿಸಿ ಮದುವೆಯಾಗಿಬಿಟ್ಟಳು. ಮತ್ಯಾವತ್ತು ಆಕೆ ಮನೆ ಕಡೆ ತಲೆ ಹಾಕಲಿಲ್ಲ.. ಮೊದಲೆ ಕುಡಿಯುತ್ತಿದ್ದ ಚಿಕ್ಕಮ್ಮ ಮಗಳು ಕೈಬಿಟ್ಟು ಹೋದ ಮೇಲೆ ಬೆಳಿಗ್ಗೆ ಬೆಳಿಗ್ಗೆಯೇ ಕುಡಿಯೋಕೆ ಶುರು ಮಾಡಿದ್ದಳು. ಮಗಳ ಮದುವೆಯಾದ ಎರಡೇ ವರ್ಷಕ್ಕೆ ಚಿಕ್ಕಮ್ಮನಿಗೆ ಲಕ್ವಾ ಹೊಡೆದು ಹಾಸಿಗೆ ಹಿಡಿದಳು. ಮಲಗಿದಲ್ಲೆ ಮಲಗಿರುತ್ತಿದ್ದವಳು ಮನೆಯ ಎಲ್ಲ ವ್ಯವಹಾರವನ್ನೂ ನನಗೆ ಕೊಟ್ಟಿದ್ದಳು. ಚಿಕ್ಕಮ್ಮನ ದಂದೆಯ ವಾರಸುದಾರಳಾಗಿ ನಾನು ಗಿರಾಕಿಗಳನ್ನು ಸಂಬಾಳಿಸುವ, ಹೊಸ ಹುಡುಗಿಯರನ್ನು ಹೊಂದಿಸುವ ಕೆಲಸವನ್ನು ಮಾಡಬೇಕಾಗಿತ್ತು. ಇದರ ನಡುವೆ ಆಗಾಗ ಕಾಟ ಕೊಡುತ್ತಿದ್ದ ರೌಡಿಗಳನ್ನು, ಸ್ಥಳೀಯ ರಾಜಕಾರಣಿಗಳನ್ನು ಮಾಮೂಲಿ ಕೊಟ್ಟು ಸಮಾದಾನ ಮಾಡಬೇಕಾಗಿತ್ತು. ಇನ್ನು ಪೋಲಿಸರಿಗೆ ತಿಂಗಳು ತಿಂಗಳು ಮಾಮೂಲಿಕೊಟ್ಟರೂ ಅವಾಗವಾಗ ರೇಡು ಮಾಡುವುದನ್ನು ತಪ್ಪಿಸುತ್ತಿರಲಿಲ್ಲ. ಆಗೆಲ್ಲ ಪೋಲಿಸ್ ಸ್ಟೇಷನ್ನಿಗೆ ಹೋಗಿ ಅವರಿಗೆ ದುಡ್ಡು ಕೊಡಬೇಕಾಗಿತ್ತು. ಹೀಗೆ ಮನೆಯ ಎಲ್ಲ ವ್ಯವಹಾರಗಳನ್ನು ಕೈಗೆ ತೆಗೆದುಕೊಂಡ ಮೇಲೆ ತೀರಾ ಸುಸ್ತೆನಿಸುತ್ತಿತ್ತು. ಬರೋಬರಿ 21 ವರ್ಷ ಇದನ್ನೆಲ್ಲ ನಿಬಾಯಿಸಿದೆ. ಅಂದರೆ 16ನೇ ವಯಸ್ಸಿಗೆ ಶುರುವಾದ ಈ ಕಸುಬು ಮತ್ತು ಮನೆ ವ್ಯವಹಾರವನ್ನು ನನಗೆ ಮುವತ್ತೆಂಟು ಮುವತ್ತೊಂಭತ್ತು ವರ್ಷಗಳಾಗುವವರೆಗು ನೋಡಿಕೊಂಡೆ.

ನರಳಿ ನರಳಿ ಚಿಕ್ಕಮ್ಮ ಒಂದು ದಿನ ಸತ್ತು ಹೋದಳು. ಆದರೆ ಸಾಯುವ ಮುಂಚೆ ನಾವಿದ್ದ ಮನೆಯನ್ನು ತನ್ನ ಮಗಳ ಹೆಸರಿಗೆ ಬರೆದಿಟ್ಟು ಹೋಗಿದ್ದಳು. ತಾಯಿ ಸತ್ತಾಗಲು ಬರದ ಮಗಳು ಮನೆಯ ವಿಚಾರ ಗೊತ್ತದ ಕೂಡಲೆ ಬಂದು ನೀನಿದನ್ನು ಈ ಕೂಡಲೆ ಖಾಲಿಮಾಡಿ ಹೋಗು ನಾನಿದನ್ನು ಮಾರಬೇಕೆಂದು ಹಟ ಹಿಡಿದು ಕುಂತಳು. ಈ ವಿಷಯವಾಗಿ ನನಗೂ ಅವಳಿಗೂ ಜಗಳವಾಗಿ ಪೋಲಿಸ್ ಸ್ಟೇಷನ್ ಮೆಟ್ಟಿಲೂ ಹತ್ತಿದೆವು. ನಾನವಳಿಗೆ ಮನೆ ಕೊಡಲ್ಲ ಅಂತ ಹೇಳಿರಲಿಲ್ಲ. ಬದಲಿಗೆ ಬೇಕಾದರೆ ಬಾಡಿಗೆ ಕೊಡುತ್ತೇನೆ. ಮಾರಿದ ಮೇಲೆ ಅದನ್ನು ತಗೊಂಡೋರನ್ನು ಕೇಳಿಕೊಂಡು, ಅವರು ಹು ಅಂದರೆ ಮುಂದುವರೆಯುತ್ತೇನೆ ಇಲ್ಲವೆಂದರೆ ಬೇರೆ ಕಡೆ ಹೋಗುತ್ತೇನೆ ಅಂತ ಮಾತ್ರ ಹೇಳಿದ್ದೆ. ಆದರವಳಿಗೆ ನನ್ನ ಮೇಲೆ ಅದ್ಯಾವ ಸಿಟ್ಟೊ ಕಾಣೆ ನಿಂತ ಕಾಲಲ್ಲೇ ಮನೆ ಬಿಟ್ಟು ಹೋಗಲು ಹೇಳಿದಳು. ಪೋಲಿಸರು ಸಹ ಅವಳ ಪರವಾಗೇ ನಿಂತು ನನಗೆ ಹೆದರಿಸತೊಡಗಿದ್ದರು. ಆಯಿತು ಅಂತೇಳಿ ಎರಡು ತಿಂಗಳ ಟೈಮು ತಗೊಂಡೆ. 

ಪುಸ್ತಕ ಖರೀದಿಸಿ ವೆಬ್ ಸೈಟ್ ಬೆಂಬಲಿಸಿ! ಇಲ್ಲಿ ಕ್ಲಿಕ್ಕಿಸಿ
ಆದರೆ ವಿಧಿಯಾಟ ನೋಡಿ ಅವತ್ತೊಂದು ದಿನ ರಾತ್ರಿ ನನ್ನ ಮನೆಯಲ್ಲಿದ್ದ ಗಿರಾಕಿಗಳ ನಡುವೆ ಅದೇನೊ ಗಲಾಟೆಯಾಗಿ ಬಂದಿದ್ದ ಗಿರಾಕಿಯೊಬ್ಬ ಇನ್ನೊಬ್ಬನನ್ನು ಚಾಕುವಿನಿಂದ ತಿವಿದು ಸಾಯಿಸಿಬಿಟ್ಟ. ಇನ್ನೇನಾಗುತ್ತೆ? ಪೋಲಿಸರು ಬಂದು ನಮ್ಮನ್ನೆಲ್ಲ ಅರೆಸ್ಟ್ ಮಾಡಿದರು. ತಿಂಗಳುಗಟ್ಟಲೇ ಕೇಸು ನಡೆದು ನನಗೆ ಮೂರೂವರೆ ವರ್ಷಗಳ ಶಿಕ್ಷೆಯಾಯಿತು. 

ಶಿಕ್ಷೆಮಗಿಸಿಕೊಂಡು ಹೊರಗೆ ಬಂದಾಗ ನನಗೆ ಅಂತ ಯಾರೂ ಇರಲಿಲ್ಲ, ಏನೂ ಇರಲಿಲ್ಲ. ಇದ್ದಿದ್ದು ಹಳ್ಳಿಯಲಿದ್ದ ಅಜ್ಜನ ಒಂದು ಕರಿ ಹೆಂಚಿನ ಮುರುಕಲು ಮನೆ ಮತ್ತು ಅರ್ದ ಏಕರೆ ಹೊಲ. ಸರಿ, ಇನ್ನೇನು ವಯಸ್ಸಾಗುತ್ತಾ ಬಂತು ಅಂತ ಹಳ್ಳಿಗೇ ಹೋಗಿಬಿಡೋಣ ಅಂತ ಹಳ್ಳಿಗೆಹೋದೆ. ಪಾಳುಬಿದ್ದ ಮನೆಯನ್ನೆ ಒಂದಿಷ್ಟು ರಿಪೇರಿ ಮಾಡಿಕೊಂಡು ಇರೋಣವೆಂದರೆ ಹಳ್ಳಿಯವರಿಗೆಲ್ಲ ನನ್ನ ಕಥೆ ಗೊತ್ತಾಗಿತ್ತು. ಯಾರೂ ಅದಕ್ಕೆ ಅವಕಾಶ ಕೊಡಲಿಲ್ಲ. ಇನ್ನು ಹೊಲವನ್ನು ಗುತ್ತಿಗೆ ಮಾಡುತ್ತಿದ್ದವನೇ ಯಾವಾಗಲೊ ಅಜ್ಜನಿಂದ ಅದನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದ. ಹಾಗಾಗಿ ಆ ಹಳ್ಳಿಯು ನನಗೆ ಇಲ್ಲವಾಯಿತು. ಹಾಗಾಗಿ ಮತ್ತೆ ಅದೇ ಹಳೆಪೇಟೆಗೆ ಬಂದೆ. ಅಲ್ಲಿ ಎಲ್ಲವೂ ಬದಲಾಗಿ ಹೋಗಿತ್ತು. ದಂದೆಗೆ ಹೊಸ ಹೊಸ ಹೆಂಗಸರು ಇಳಿದಿದ್ದರು. ವಿದಿಯಿಲ್ಲದೆ ಅಂತಹ ದಂದೆ ಮಾಡುವ ಒಬ್ಬ ಹೆಂಗಸಿನ ಮನೆಗೆ ಹೋದೆ. ಅವಳಿಗೆ ನನ್ನ ಕತೆಯೆಲ್ಲ ಹೇಳಿ ಆಶ್ರಯ ಕೇಳಿದೆ. ಆಯಿತೆಂದ ಅವಳು ತನ್ನ ಮನೆಕೆಲಸ ಮಾಡಲು ನನ್ನನ್ನು ಇಟ್ಟುಕೊಂಡಳು. ಸರಿ ಅಲ್ಲಿಯೂ ಸುಮಾರು ಐದು ವರ್ಷ ಕೆಲಸ ಮಾಡಿದೆ. ಆದರೆ ಮಾಡಿದ ಪಾಪ ಬಿಡಬೇಕಲ್ಲ. ನನ್ನ ಆರೋಗ್ಯ ಕೆಟ್ಟಿತು. ಆ ಮನೆಯ ಯಜಮಾನಿ ಸರಕಾರಿ ಆಸ್ಪತ್ರೆಗೆ ಸೇರಿಸಿದಳು. ಅವಳು ಎಷ್ಟು ದಿನ ಅಂತ ನೋಡಿಕೊಳ್ತಾಳೆ. ತಿಂಗಳಾದರು ಗುಣವಾಗಲಿಲ್ಲ. ಸರಿ ಒಂದು ದಿನ ಡಾಕ್ಟರ್ ನಿನಗೆ ಏಡ್ಸ್ ಕಾಯಿಲೆ ಬಂದಿದೆ, ನಾವು ಏನು ಮಾಡಕಾಗಲ್ಲ ಅಂತೇಳಿ ಡಿಸ್ ಚಾರ್ಜ್ ಮಾಡಿದರು. ಹೊರಗೆ ಬಂದು ಮನೆಗೆ ಹೋದರೆ ನನಗೆ ಆ ಕಾಯಿಲೆ ಇರುವ ವಿಷಯ ಗೊತ್ತಾಗಿದ್ದವಳು ಮನೆಗೆ ಸೇರಿಸಲಿಲ್ಲ. ಸರಿ ಇನ್ನೇನು ಮಾಡೋದು ಅಂತ ಪೇಟೆಯ ಬೀದಿ ತಿರುಗ ತೊಡಗಿದೆ. ಮೈಲಿ ಶಕ್ತಿಯಿರಲಿಲ್ಲ ತೀರಾ ಗುರುತು ಹಿಡಿಯಲಾರದಷ್ಟು ಸಣ್ಣವಾಗಿದ್ದೆ. ಮುಖ ಕಪ್ಪಿಟ್ಟು ವಿಕಾರವಾಗ ತೊಡಗಿದ್ದೆ. ಹೀಗೆ ಪೇಟೆಯ ಬೀದಿಗಳನ್ನು ತಿರುಗುವಾಗ ಜನರು ತಾವೇನೆ ನನಗೆ ಬಿಕ್ಷುಕಿ ಅಂತ ಹೆಸರಿಟ್ಟು ಬಿಕ್ಷೆ ಹಾಕತೊಡಗಿದರು. ಹೀಗೆ ಪೇಟೆಯ ಎರಡು ಮಾರ್ಕೆಟ್ ಬೀದಿಗಳಲ್ಲಿ ಎರಡು ಬಾರಿ ಅಡ್ಡಾಡಿದರೆ ಮೂರು ಹೊತ್ತು ಊಟಕ್ಕಾಗುವಷ್ಟು ದುಡ್ಡು ಸಿಗುತ್ತಿದೆ. 

ಇವತ್ತಿಗೂ ಹಾಗೇನೆ ಜೀವನ ಕಳೆಯುತ್ತಿದ್ದೇನೆ. ವ್ಯತ್ಯಾಸ ಏನೆಂದರೆ ಈಗ ಬೀದಿಗಳಲ್ಲಿ ತಿರುಗೊವಷ್ಟು ಶಕ್ತಿಯಿಲ್ಲ. ಹಾಗಾಗಿ ಈ ಬಸ್ ಸ್ಟ್ಯಾಂಡನ್ನು ಖಾಯಂ ಮಾಡಿಕೊಂಡಿದ್ದೇನೆ. ಇಲ್ಲೇ ಬಿಕ್ಷೆ ಬೇಡಿ ಇಲ್ಲೆ ತಿಂದು ಇಲ್ಲೇ ಮಲಗುತ್ತೇನೆ. 

ಇಷ್ಟೇ ಸರ್ ನನ್ನ ಜೀವನದ ಕಥೆ. ಹಳೆಯದನೆಲ್ಲ ನೆನೆಸಿಕೊಂಡರೆ ಒಂದಂತು ಬೇಜಾರಾಗುತ್ತೆ. ಅದೇನೆಂದರೆ ಚಿಕ್ಕಮ್ಮನ ಮನೇಲಿ ಮೊದಲ ದಿನ ನಾನು ಹಾಳಾದ ಕೂಡಲೆ ಹೇಳದೆ ಕೇಳದೆ ಹಳ್ಳಿಗೆ ಓಡಿ ಹೋಗಬೇಕಿತ್ತು ಅನಿಸುತ್ತೆ. ಆದರವತ್ತು ಯಾವುದನ್ನು ಯೋಚಿಸೋ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಬಿಡಿ ಸರ್, ಈಗ ಯೋಚಿಸಿ ಏನೂ ಮಾಡೋಕ್ಕಾಗಲ್ಲ. ನಿಮ್ಮ ಹತ್ತಿರ ಎರಡು ಗಂಟೆ ಮಾತಾಡಿದ್ದಕ್ಕೆ ನನ್ನ ಮನಸ್ಸು ಹಗುರವಾಯ್ತು. ನಿಮಗೆ ಕೊಡಬೇಕೆನಿಸಿದರೆ ಒಂದು ನೂರುರೂಪಾಯಿ ಕೊಡಿ ಸರ್. ಯಾಕೊ ಹಳೆದೆಲ್ಲ ನೆನಪಾಗಿ ಬೇಜಾರಾಗ್ತಿದೆ. ಇವತ್ತು ಸಾಯಂಕಾಲ ಹೊಟ್ಟೆ ತುಂಬಾ ಕುಡಿಯಬೇಕು ಅನಿಸ್ತಿದೆ ಎಂದುಮಾತು ಮುಗಿಸಿದವಳ ದ್ವನಿಯಲ್ಲಿದ್ದ ಯಾತನೆ ನನಗರ್ಥವಾಯಿತು. ಪರ್ಸಿನಿಂದ ನೂರು ರೂಪಾಯಿಗಳ ಎರಡು ನೋಟುಗಳನ್ನು ಅವಳ ಕೈಲಿಟ್ಟು ಎದ್ದೆ.

ಸೀದಾ ಹೋಟೆಲಿನ ರೂಮಿಗೆ ಹೋಗಿ ಮಲಗಿದವನು ಮಾರನೆ ದಿನ ಬೆಳಿಗ್ಗೆ ಊರಿಗೆ ಹೋಗಲು ಬಸ್ ಸ್ಟ್ಯಾಂಡಿಗೆ ಬಂದೆ. ಒಂದು ಮೂಲೆಯಲ್ಲಿ ಸಾಕಷ್ಟು ಜನರ ಗುಂಪು ಸೇರಿದ್ದು, ಪೋಲಿಸರು ನಿಂತಿರುವುದನ್ನು ನೋಡಿ ಆ ಕಡೆ ನಡೆದೆ. ಗುಂಪನ್ನು ಸೀಳಿಕೊಂಡು ನೋಡಿದರೆ ಹಿಂದಿನ ದಿನ ಮದ್ಯಾಹ್ನ ನಾನು ಮಾತಾಡಿಸಿದ ಹೆಂಗಸು ಹೆಣವಾಗಿ ಬಿದ್ದಿದ್ದಳು. ಪಕ್ಕದಲ್ಲಿದ್ದವನಿಗೆ ಏನಾಯ್ತು ಅಂತ ಕೇಳಿದೆ. “ಯಾವಳೋ ಬೇವಾರ್ಸಿ ಸರ್. ಚೆನ್ನಾಗಿ ಶರಾಪು ಕುಡಿದು, ಜಾಸ್ತಿಯಾಗಿ ಸತ್ತಿದ್ದಾಳೆ” ಅಂದ. ಜಾಸ್ತಿ ದುಡ್ಡು ಕೊಟ್ಟು ಅವಳ ಸಾವಿಗೆ ನಾನೇ ಕಾರಣವಾಗಿಬಿಟ್ಟೆನಾ ಎಂಬ ಅಪರಾಧಿಪ್ರಜ್ಞೆ ಕಾಡತೊಡಗಿತು.ಹೊಟ್ಟೆ ತೊಳೆಸಿದಂತಾಗಿ ಅಲ್ಲಿಂದ ಬಾತ್ ರೂಮಿನ ಕಡೆಗೆ ಓಡಿದೆ.