ಚಿಕ್ಕ ಸಂದೇಶವೊಂದನ್ನು ಚೊಕ್ಕವಾಗಿ ನಿರ್ದೇಶಿಸಿದ್ದಾರೆ ನಿರ್ದೇಶಕ ಅರಸು. ಭಿಕ್ಷುಕನ ಪಾತ್ರವನ್ನೂ ಅವಾಹಿಸಿಕೊಂಡಿರುವ ಅರಸುರವರ ಅಭಿನಯವೂ ಮನಮುಟ್ಟುವಂತಿದೆ.
ಆಗ 19, 2015
ಆಗ 14, 2015
ಚೌಕಟ್ಟಿಲ್ಲದ ಉಪ್ಪಿ2 ರುಚಿಯಾಗಿದೆಯಾ?
Ashok K R
ಉಪೇಂದ್ರ ನಿರ್ದೇಶನದ ಸಿನಿಮಾಗಳೆಂದರೆ ಒಂದಷ್ಟು ವಿಚಿತ್ರ ವೇಷಭೂಷಣಗಳು, ಮೊದಲಿನಿಂದ ಖಳರಂತೆ ಚಿತ್ರಿತವಾಗುವ ನಾಯಕಿ, ಹಸಿ ಬಿಸಿ ದೃಶ್ಯಗಳು, ಚಿತ್ರವಿಚಿತ್ರವಾಗಿ ಆಡುವ ನಾಯಕ, ಈ ಎಲ್ಲದರ ಮಧ್ಯೆ ಅಲ್ಲೊಂಚೂರು ಇಲ್ಲೊಂಚೂರು ಎಂಬಂತೆ ಫಿಲಾಸಫಿ! ಗಲ್ಲಾಪೆಟ್ಟಿಗೆಯಲ್ಲಿ ಕೆಲವೊಂದು ಗೆದ್ದಿವೆ, ಕೆಲವೊಂದು ಸಾಧಾರಣ ಯಶಸ್ಸು ಕಂಡಿವೆ, ಕೆಲವೊಂದು ಸೋತಿವೆ; ಆದರೆ ನಿರ್ದೇಶಕನಾಗಿ ಉಪೇಂದ್ರ ಪ್ರತಿ ಸಿನಿಮಾದಲ್ಲೂ ಗೆದ್ದಿದ್ದಾರೆ. ಕಥೆ ಮಾಮೂಲಿದ್ದರೂ ಚಿತ್ರಕಥೆಯಲ್ಲಿ ಪ್ರೇಕ್ಷಕನನ್ನು ತುದಿಗಾಲಲ್ಲಿ ನಿಲ್ಲಿಸುವ ಕಲೆ ಉಪೇಂದ್ರನಿಗಿದೆ. ಆ ಕಲೆ ಇನ್ನೂ ಜೀವಂತವಾಗಿದೆಯಾ ಎಂಬ ಕುತೂಹಲದೊಂದಿಗೆ Uppi2 ಚಿತ್ರ ನೋಡಲು ಪ್ರವೇಶಿಸಿದರೆ ಚೂರೇ ಚೂರು ನಿರಾಸೆಯಾಗುತ್ತದೆ, ಉಪೇಂದ್ರನೆಂಬ ನಿರ್ದೇಶಕನನ್ನು ಮೊದಲಿನಿಂದಲೂ ಮೆಚ್ಚಿದವರು ಮತ್ತಷ್ಟು ಮೆಚ್ಚುತ್ತಾರೆ, ಮೊದಲಿನಿಂದಲೂ ಮೆಚ್ಚದವರು ಅದನ್ನೇ ಮುಂದುವರೆಸುತ್ತಾರೆ!
ಹದಿನೈದು ವರುಷಗಳ ಹಿಂದೆ ತೆರೆಕಂಡಿದ್ದ ‘ಉಪೇಂದ್ರ’ ಚಿತ್ರದ ಮುಂದುವರಿದ ಭಾಗವಿದು. ನಾಯಕನನ್ನೂ ಸೇರಿ ಅಲ್ಲಿನವೇ ಅನೇಕ ಪಾತ್ರಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ. ‘ಉಪೇಂದ್ರ’ ಅಷ್ಟೇ ಅಲ್ಲದೆ ‘ಶ್’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದ ಬ್ಯಾಂಕ್ ಜನಾರ್ಧನ್ ಮತ್ತು ಬಿರಾದಾರ್ ಇಲ್ಲೂ ಪೋಲೀಸರಾಗಿ ಕಾಣಿಸಿಕೊಂಡಿದ್ದಾರೆ. ‘ಉಪೇಂದ್ರ’ ಚಿತ್ರದಲ್ಲಿ ‘ನಾನು’ ಎಂಬ ಪಾತ್ರದ ಸುತ್ತ ಕಥೆ ಹೆಣೆಯಲಾಗಿತ್ತು, ಆ ‘ನಾನು’ಗೆ ರತಿ, ಸ್ವಾತಿ, ಕೀರ್ತಿ ಎಂಬ ಮೂವರು ನಾಯಕಿಯರ ಮೇಲೆ ಕಣ್ಣು, ಅವನಿಗೆ ಮೂವರೂ ಬೇಕು. ರತಿ, ಸ್ವಾತಿ, ಕೀರ್ತಿ ಪ್ರತಿ ಗಂಡಸು ಆಸೆ ಪಡುವ ಮೂರು ಗುಣಗಳೆಂಬಂತೆ ಚಿತ್ರಿಸಲಾಗಿತ್ತು. ಕೊನೆಗೆ ಮೂವರನ್ನೂ ತೊರೆದ ‘ನಾನು’ ಎಲ್ಲವನ್ನೂ ಬಿಟ್ಟು ಹೊರಟುಬಿಡುತ್ತಾನೆ. ಅಲ್ಲಿಂದ ಹೊರಟ ‘ನಾನು’ ಇಲ್ಲಿ ‘ನೀನಾಗಿ’ ಬದಲಾಗಿದ್ದಾನೆ! ಉಪೇಂದ್ರ ‘ನಾನು ಯಾರು?’ ಎಂದು ಪ್ರಶ್ನಿಸಿದರೆ ಉಪ್ಪಿ2 ‘ನೀನು ಯಾರು?’ ಎಂದು ಪ್ರಶ್ನಿಸುತ್ತದೆ.
ಫಿಲಾಸಫಿ ಹೇಳೋದಕ್ಕೆ ಉಪೇಂದ್ರ ಆಯ್ದುಕೊಳ್ಳುವುದು ಗದ್ದಲದ ಹಾದಿ. ‘ಉಪೇಂದ್ರ’ ಚಿತ್ರದಲ್ಲಿ ಹೆಚ್ಚಾಗಿದ್ದ ಗದ್ದಲ, ದ್ವಂದಾರ್ಥ ‘ಉಪ್ಪಿ2’ ಚಿತ್ರದಲ್ಲಿ ಕಡಿಮೆಯಾಗಿದೆ. ಉಪೇಂದ್ರನಿಗೂ ಹದಿನೈದು ವರ್ಷ ವಯಸ್ಸಾಯಿತಲ್ಲವೇ?! ಉಪ್ಪಿ2 ಚಿತ್ರ ಮೂರು ಕಾಲಗಳ ಬಗೆಗಿನ ಜಿಜ್ಞಾಸೆಯ ಚಿತ್ರ. ಭೂತ – ವರ್ತಮಾನ – ಭವಿಷ್ಯ ಕಾಲದಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು ಎಂಬುದರ ಬಗೆಗಿನ ಚಿತ್ರ. ಯೋಚನೆ ಮಾಡುವುದೇ ತಪ್ಪು ಎಂದು ಹೇಳುತ್ತಲೇ ನೋಡುಗರನ್ನು ಯೋಚನೆಗೆ ಹಚ್ಚುವ ಚಿತ್ರ! ಫಿಲಾಸಫಿಗಳನ್ನೆಲ್ಲಾ ವಾಚ್ಯವಾಗಿ ಹೇಳುವ ಪ್ರಯತ್ನ ಕೆಲವೆಡೆ ಯಶಸ್ವಿಯಾಗಿದೆ, ಕೆಲವೆಡೆ ಹಾಸ್ಯಾಸ್ಪದವಾಗಿದೆ. ‘ನಾನು’ ಹುಡುಗಿಯ ಹಿಂದೆ ಓಡಿದರೆ ‘ನೀನು’ವನ್ನು ಹುಡುಗಿಯೇ ಅಟ್ಟಿಸಿಕೊಂಡು ಬರುತ್ತಾಳೆ. ಯಾವುದರ ಬಗ್ಗೆಯೂ ಯೋಚನೆಯೇ ಮಾಡದ ‘ನೀನು’ ಮುಗ್ದನಾ ದಡ್ಡನಾ ಎಂಬ ಪ್ರಶ್ನೆಗೆ ‘ಯೋಚ್ನೆ ಮಾಡಲ್ಲ ಅಂದೆ ತಲೆ ಇಲ್ಲ ಅನ್ನಲಿಲ್ಲ’ ಎಂಬ ಉತ್ತರ ಚಿತ್ರದಲ್ಲಿಯೇ ಇದೆ. ಯೋಚನೆ ಮಾಡದ ಕಾರಣಕ್ಕೆ ನಾಯಕನಿಗೆ ನೆಮ್ಮದಿ, ಸಂಪತ್ತು, ‘ಖುಷಿ’ ಸಿಗುತ್ತದೆ. ಯಾವುದಕ್ಕೂ ಯೋಚನೆ ಮಾಡದೆ, ಭಯ ಪಡದೆ, ಮಾಡಿದ ಕೆಲಸಕ್ಕೆ ಹಣ ಪಡೆಯದೆ ಇದ್ದುಬಿಡುವ ‘ನೀನು’ ನಿಜವಾಗಿಯೂ ಬದಲಾದ ‘ನಾನು’ನಾ ಅಥವಾ ನಾಟಕವಾ ಎಂಬ ಗೊಂದಲಗಳೊಂದಿಗೆ ಮೊದಲರ್ಧ ಮುಗಿಯುತ್ತದೆ.
ಎರಡನೇ ಭಾಗದಲ್ಲಿ ‘ಉಪೇಂದ್ರ’ ಚಿತ್ರದ ‘ನಾನು’, ಉಪ್ಪಿ2 ಚಿತ್ರದ ‘ನೀನು’ ಮತ್ತು ಇವೆರಡೂ ಚಿತ್ರದಲ್ಲಿಲ್ಲದ ‘ಅವನು’ ಕಾಣಿಸಿಕೊಳ್ಳುತ್ತಾರೆ. ‘ನಾನು’ ನೀನಾಗಿ ನಾಟಕವಾಡುತ್ತಿದ್ದಾನೆ ಎಂಬ ಸಂಗತಿಯಿಂದ ಖುಷಿ ವಿಚಲಿತಳಾಗುತ್ತಾಳೆ. ಈ ನಾನು, ನೀನು, ಅವನು ನಿಜವಾಗಿ ಒಬ್ಬನೇನಾ ಅಥವಾ ಮೂರು ಮೂರು ಮಂದಿಯಾ ಎಂಬ ಗೊಂದಲ ಚಿತ್ರ ಮುಗಿದ ಮೇಲೂ (ಅಸಲಿಗೆ ಚಿತ್ರ ಮುಗಿಯುವುದೇ ಇಲ್ಲ!) ಉಳಿದುಬಿಡುತ್ತದೆ. ‘ನಾನು’ ಎಂಬ ಭೂತಕಾಲ, ‘ನೀನು’ ಎಂಬ ವರ್ತಮಾನ, ‘ಅವನು’ ಎಂಬ ಕಲ್ಪನಾತ್ಮಕ ಭವಿಷ್ಯದ ತಂತ್ರ ಉಪಯೋಗಿಸಿದ್ದಾರೆ ಉಪೇಂದ್ರ. ಭೂತಕಾಲದ ‘ನಾನು’ ನೆನಪಿನಲ್ಲಿರುವ ಯಾವ ಪಾತ್ರಧಾರಿಗಳೂ ಚಿತ್ರದಲ್ಲಿ ಸಂತಸದಿಂದಿರುವುದಿಲ್ಲ. ‘ಅವನು’ ಎಂಬ ಕಲ್ಪನೆಯನ್ನು ನಂಬಿಕೊಂಡವರು ಗೊಂದಲದಲ್ಲಿರುತ್ತಾರೆ. ವರ್ತಮಾನದ ‘ನೀನು’ ಜೊತೆ ಇರುವ ನಾಯಕಿ ಮಾತ್ರ ‘ಖುಷಿ’ಯಾಗಿರುತ್ತಾಳೆ!
ಭೂತವನ್ನು ಮರೆಯಿರಿ ಎಂದ್ಹೇಳುವ ಉಪ್ಪಿ2 ಚಿತ್ರದಲ್ಲಿ ಉಪೇಂದ್ರ ನಿರ್ದೇಶನದ ಶ್, ಓಂ ಚಿತ್ರಗಳ ನೆನಪುಗಳು ಬರುವುದು ಬೇಕಿರಲಿಲ್ಲ! ಉಪೇಂದ್ರನ ವೇಷಭೂಷಣ ಕೂಡ ಅವರ ಅಭಿನಯದ ರೀಮೇಕ್ ಚಿತ್ರ ‘ಬುದ್ಧಿವಂತ’ನನ್ನು ನೆನಪಿಸುತ್ತದೆ. ಉಪೇಂದ್ರ ಎಂಬ ನಿರ್ದೇಶಕನ ಬತ್ತಳಿಕೆ ನಿಧಾನಕ್ಕೆ ಖಾಲಿಯಾಗುತ್ತಿರುವ ಸೂಚನೆಯಾ? ಚಿತ್ರದ ಶುರುವಿನಲ್ಲಿ ಹೊಸ ಹೊಸ ಕೋನಗಳಿಂದ ಗಮನ ಸೆಳೆಯುವ ಛಾಯಾಗ್ರಹಣ ನಂತರದಲ್ಲಿ ಮಾಮೂಲಿಯಾಗಿದೆ. ಹಾಡುಗಳನ್ನು ಕೇಳಬಹುದೇ ಹೊರತು ಮತ್ತೆ ಮತ್ತೆ ಗುನುಗುವಂತಿಲ್ಲ. ‘ಎಲ್ಲರ ಕಾಲೆಳೀತದೆ ಕಾಲ’ ಹಾಡು ಚಿತ್ರಕ್ಕೆ ಬೇಕಾಗಿಯೇ ಇರಲಿಲ್ಲ. ತನ್ನ ಶಕ್ತಿಯ ಬಗ್ಗೆ ಸ್ವತಃ ಅರಿವಿಲ್ಲದೇ ಹೊಸಬರನ್ನು ಹಳಬರನ್ನು ಆಡಿಕೊಳ್ಳುವ ಹಾಡು ಉಪ್ಪಿ2 ಚಿತ್ರಕ್ಕೆ ಬೇಕಿರಲಿಲ್ಲ. ಆ ಇಡೀ ಹಾಡನ್ನೇ ತೆಗೆದುಹಾಕಿದರೂ ಚಿತ್ರಕ್ಕೇನು ಅಡ್ಡಪರಿಣಾಮವಾಗುತ್ತಿರಲಿಲ್ಲ. ಹಿಮಾಲಯದ ಚಳಿಯಲ್ಲಿ ತುಂಡುಡುಗೆ ಧರಿಸುವ ಅಸಂಬದ್ಧಗಳೂ ಚಿತ್ರದಲ್ಲಿವೆ! ನಟನೆಯ ವಿಚಾರಕ್ಕೆ ಬಂದರೆ ಉಪೇಂದ್ರ, ಅಕೀವಾ ಕ್ರಿಷ್ಟೀನಾ, ಪಾರುಲ್, ಟೆನ್ನಿಸ್ ಕೃಷ್ಣ, ಶೋಭರಾಜ್, ನಾಸಿರ್ ಮತ್ತಿತರರು ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ಚೆನ್ನಾಗಿ ಮಾಡಿದ್ದಾರೆ. ಚಿತ್ರಕಥೆಯ ಗೊಂದಲಗಳು ಉಳಿದೆಲ್ಲಾ ವಿಷಯವನ್ನು ಮಬ್ಬು ಮಾಡಿಸಿಬಿಡುತ್ತದೆ ಎನ್ನುವುದು ಸತ್ಯ. ‘ಫಿಲ್ಮ್ ಚೆನ್ನಾಗಿದೆ ಏನು ಅರ್ಥಾನೇ ಆಗ್ಲಿಲ್ಲ’ ‘ಏನೋ ಹುಳಾ ಇದೆ ಅರ್ಥ ಆಗ್ತಿಲ್ಲ’ ಎನ್ನುವ ಮಾತುಗಳು ಚಿತ್ರ ನೋಡಿದವರದು! ಇಂಥದ್ದೇ ಒಂದು ಕಥೆಯಿದೆ, ತತ್ವವಿದೆ, ಸಿದ್ಧಾಂತವಿದೆ ಎಂದು ಹೇಳಲಾಗದ ಸಿನಿಮಾವಿದು. ಸಿನಿಮಾದಲ್ಲೇ ಹೇಳಿದಂತೆ ‘ಯೋಚ್ನೆ ಮಾಡ್ಬೇಡ’!
ಈ ಮೇಲಿನ ವಿಮರ್ಶೆಯನ್ನು ಓದಿದ ನಂತರ ನಿಮ್ಮಲ್ಲಿ ಗೊಂದಲ ಮೂಡಿದರೆ ಅದಕ್ಕೆ ‘ನೀನು’ ಕಾರಣವೇ ಹೊರತು ನಾನಲ್ಲ!
Uppi2, kannada film directed by Upendra revolves around Past, Present and Future ideas of a person.
ಸುಂದರ ಮಲೆಕುಡಿಯನಿಗೆ ಆರ್ಥಿಕ ಸಹಾಯ ಬೇಕಾಗಿದೆ.
ಮುನೀರ್ ಕಾಟಿಪಳ್ಳ
ನಾಡು ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ತೆರೆದು ಕೊಳ್ಳುತ್ತಿದೆ. ಆದರೆ ಮಂಗಳೂರಿನ ಆಸ್ಪತ್ರೆಯ ಜನರಲ್ ವಾರ್ಡಲ್ಲಿ ಮಲಗಿರುವ ಸುಂದರ ಮಲೆಕುಡಿಯರ ಮುಖದಲ್ಲಿ, ನೆರಿಯ ಅರಣ್ಯದ ಅವರ ಮನೆಯೆಂಬ ಮುರಕಲು ನಾಲ್ಕು ಗೋಡೆಯಲ್ಲಿ ನೋವು ಮಡುಗಟ್ಟಿದೆ. ಭೂಮಾಲಕ ಕೈ ಕತ್ತರಿಸಿ ಇಪ್ಪತ್ತು ದಿನಗಳ ನಂತರವೂ ಸುಂದರ ಮಲೆಕುಡಿಯ ಎದ್ದು ಕೂತಿಲ್ಲ. ಗೋಪಾಲ ಗೌಡನ ಹತ್ತಿರ ಪೊಲೀಸರು ಸುಳಿದಿಲ್ಲ.
ಮೊನ್ನೆ ಮತ್ತೆ ಸುಂದರ ಮಲೆಕುಡಿಯರನ್ನು ಭೇಟಿಯಾಗಿದ್ದೆವು. ಎರಡೂ ಕೈಗಳು ಅಲುಗಾಡದಂತೆ ಬ್ಯಾಂಡೇಜು ಸುತ್ತಿ ಹತ್ತಾರು ರೋಗಿಗಳ ಮದ್ಯೆ ಜನರಲ್ ವಾರ್ಡಿನಲ್ಲಿ ಮಲಗಿದ್ದ ಸುಂದರ ಮಲೆಕುಡಿಯರನ್ನು, ಹದಿನೆಂಟು ವರ್ಷಗಳ ಹಿಂದೆ ಭೂಮಾಲಕರ ಮಚ್ಚಿನೇಟಿಗೆ ಕೈಬೆರಳು ಕಳಕೊಂಡಿದ್ದ ಅವರ ಪತ್ನಿ ನೋಡಿಕೊಳ್ಳುತ್ತಿದ್ದರು.
ತನ್ನ ಸ್ಥಿತಿಗೆ ಮರುಗುತ್ತಿದ್ದ ಸುಂದರ, ಜನಪರ ಸಂಘಟನೆಗಳ ನೈತಿಕ ಬೆಂಬಲಕ್ಕೆ ಕಣ್ಣೀರಾದರು. ಪೂರ್ಣ ತುಂಡಾದ ಕೈ ಕನಿಷ್ಟ ಉಳಿಯಬೇಕಾದರೆ ನಾಲ್ಕೈದು ಪ್ಲಾಸ್ಟಿಕ್ ಸರ್ಜರಿ ನಡೆಸಬೇಕಿದ್ದು ಐದಾರು ಲಕ್ಷ ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ ಎಂದು ದುಃಖತೋಡಿ ಕೊಂಡರು. ಸುಂದರ ಮಲೆಕುಡಿಯರಿಗೆ ಉದರ ಕ್ಯಾನ್ಸರ್ ನ ಚಿಕಿತ್ಸೆಯೂ ನಡೆಯುತ್ತಿದ್ದು ಇನ್ನಷ್ಟು ಖರ್ಚು ಹೆಚ್ಚಾಗಬಹುದು.
ಇನ್ನು ಸುಂದರ ಮಲೆಕುಡಿಯರ ನರಿಯ ಅರಣ್ಯದ ಮನೆ ಶಿಥಿಲಗೊಂಡಿದ್ದು, ಮಳೆಗಾಳಿಗೆ ಅದರಲ್ಲಿ ವಾಸಿಸುವುದು ದುಸ್ಸಾದ್ಯ. ಅಂತಹ ಮುರುಕಲು ಮನೆಯಲ್ಲಿ ಶಾಲೆಗೆ ಹೋಗುವ ಮೂವರು ಹೆಣ್ಣುಮಕ್ಕಳು, ಮನೆಯಲ್ಲೇ ಉಳಿದಿರುವ ಹದಿಹರೆಯದ ಮಗ ಪೂರ್ಣೇಶ ಅನಾಥರಂತೆ ಬದುಕುತ್ತಿದ್ದಾರೆ. ಒಂದೆಡೆ ಮಾರಣಾಂತಿಕ ದಾಳಿ, ಭಯದ ಬದುಕು, ಇನ್ನೊಂದೆಡೆ ಆಸ್ಪತ್ರೆ ಓಡಾಟದ ಖರ್ಚು, ದುಡಿಯುವ ಕೈಗಳಿಲ್ಲದ ಕುಟುಂಬ. ಅಕ್ಷರಷಃ ಈ ಆದಿವಾಸಿ ಕುಟುಂಬ ಬೀದಿಗೆ ಬಂದಿದೆ.
ಕೈ ಕತ್ತರಿಸಿದ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಲೇ ಈ ಕುಟುಂಬಕ್ಕೆ ಆಸರೆಯಾಗೋದು ಮನುಷ್ಯಪರರ ಜವಾಬ್ದಾರಿ. ನಾವೆಲ್ಲ ಕುಟುಂಬಕ್ಕೆ ಇಪ್ಪತ್ತು ಲಕ್ಷ ಪರಿಹಾರಕ್ಕೆ ಆಗ್ರಹಿಸುತ್ತಿದ್ದರೂ, ಅಹಿಂದ ಸರಕಾರ ಕಿವಿ ತೆರೆಯುತ್ತಿಲ್ಲ, ಕನಿಷ್ಟ ಉಸ್ತುವಾರಿ ಸಚಿವರು ಸುಂದರ ಮಲೆಕುಡಿಯರ ಮುಖನೋಡಿಲ್ಲ. ಹೋರಾಟ, ಬೆಂಬಲದ ಜೊತೆಗೆ ಆರ್ಥಿಕ ಸಹಾಯವನ್ನೂ ಸಾಧ್ಯವಾದಷ್ಟು ಈ ಆದಿವಾಸಿ ಕುಟುಂಬಕ್ಕೆ ನಾವೆಲ್ಲ ಸೇರಿ ಮಾಡಬೇಕಿದೆ. ಶೋಷಿತ ಜನತೆ ಅಸಹಾಯಕರು ಅಲ್ಲ ಅನ್ನುವುದನ್ನು ಸಾರಿ ಹೇಳಬೇಕಿದೆ.
ಸಹಾಯ ಮಾಡ ಬಯಸುವವರು ನೇರವಾಗಿ, ಸುಂದರ ಮಲೆಕುಡಿಯರ ಮಗ ಪೂರ್ಣೇಶನ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಬಹುದು.
Poornesh.
State Bank of india,
Branch: ujire.
Account no: 32479910949
IFSC code: SBIN0015317
IFSC code: SBIN0015317
ಆಗ 11, 2015
ಲಜ್ಜೆಗೆಟ್ಟ ಕಾಂಗ್ರೆಸ್ಸಿನಿಂದ ಪಂಚ ಭಾಷಾ ಪ್ರಣಾಳಿಕೆ.
Dr Ashok K R
ಬಿಬಿಎಂಪಿ ಚುನಾವಣೆಯನ್ನು ಮುಂದಕ್ಕಾಕುವ ಸರಕಾರದ ಎಲ್ಲಾ ಪ್ರಯತ್ನಗಳನ್ನೂ ನ್ಯಾಯಾಲಯಗಳು ತಳ್ಳಿಹಾಕಿದ ಪರಿಣಾಮವಾಗಿ ಈ ತಿಂಗಳಾಂತ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಪಕ್ಷಗಳ ರಾಜಕೀಯ ಚಟುವಟಿಕೆಯೂ ಹೆಚ್ಚಾಗಿದೆ. ನಿನ್ನೆ ಕಾಂಗ್ರೆಸ್ ಪಕ್ಷವು ಬಿಬಿಎಂಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಬಿಬಿಎಂಪಿಯನ್ನು ಮೂರಾಗಿ ಐದಾಗಿ ವಿಭಜಿಸಲು ವಿಪರೀತವಾಗಿ ಪ್ರಯತ್ನಪಟ್ಟು ಸದ್ಯಕ್ಕೆ ವಿಫಲವಾಗಿರುವ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯನ್ನು ಕನ್ನಡ, ಇಂಗ್ಲೀಷ್, ಉರ್ದು, ತಮಿಳು, ತೆಲುಗು ಭಾಷೆಗಳಲ್ಲಿ ಪ್ರಕಟಮಾಡಿ ವೋಟುಗಳಿಗೋಸ್ಕರ ಬೆಂಗಳೂರಿನಲ್ಲಿ ಕನ್ನಡವನ್ನು ಇಲ್ಲವಾಗಿಸುವುದಕ್ಕೂ ತಾನು ಹೇಸುವುದಿಲ್ಲ ಎಂದು ತೋರಿಸಿಕೊಟ್ಟಿದೆ. ಸಾಮಾನ್ಯವಾಗಿ ಪ್ರಣಾಳಿಕೆಯನ್ನು ಕನ್ನಡದಲ್ಲಿ ಮತ್ತು ನಮಗೆ ಬೇಕೋ ಬೇಡವೋ ಅನಿವಾರ್ಯವಾಗಿಬಿಟ್ಟಿರುವ ಇಂಗ್ಲೀಷಿನಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಸಿಲಿಕಾನ್ ವ್ಯಾಲಿ ಎಂದು ಹೆಸರು ಗಳಿಸಿಕೊಂಡ ಕರ್ನಾಟಕದಲ್ಲಿ ಅನ್ಯಭಾಷಿಕರ ಸಂಖೈ ಹೆಚ್ಚುತ್ತಲೇ ಇರುವುದು ಸತ್ಯ. ಜೊತೆಗೆ ಬೆಂಗಳೂರು ತಮಿಳುನಾಡು ಮತ್ತು ಆಂಧ್ರ ಗಡಿಗಳಿಗೆ ಹೊಂದಿಕೊಂಡಂತೆಯೇ ಇರುವುದರಿಂದ ಸಹಜವಾಗಿ ಅನೇಕ ಪ್ರದೇಶಗಳಲ್ಲಿ ತೆಲುಗು ಮತ್ತು ತಮಿಳು ಭಾಷಿಕರು ನೆಲೆಸಿದ್ದಾರೆ. ಅನ್ಯ ರಾಜ್ಯಗಳಿಂದ ಬಂದವರು ಕನ್ನಡ ಕಲಿಯುವಂತೆ ಪ್ರೇರೇಪಿಸಬೇಕಾದ ಕರ್ನಾಟಕ ಸರಕಾರ ಅವರ ವೋಟುಗಳನ್ನು ಪಡೆಯಲೋಸುಗ ಅವರ ಭಾಷೆಯಲ್ಲಿಯೇ ಪ್ರಣಾಳಿಕೆ ಬಿಡುಗಡೆ ಮಾಡುವಂತಹ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿರುವುದು ಸರಿಯೇ?
ಬಿಬಿಎಂಪಿ ಚುನಾವಣೆಯನ್ನು ಮುಂದಕ್ಕಾಕುವ ಸರಕಾರದ ಎಲ್ಲಾ ಪ್ರಯತ್ನಗಳನ್ನೂ ನ್ಯಾಯಾಲಯಗಳು ತಳ್ಳಿಹಾಕಿದ ಪರಿಣಾಮವಾಗಿ ಈ ತಿಂಗಳಾಂತ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಪಕ್ಷಗಳ ರಾಜಕೀಯ ಚಟುವಟಿಕೆಯೂ ಹೆಚ್ಚಾಗಿದೆ. ನಿನ್ನೆ ಕಾಂಗ್ರೆಸ್ ಪಕ್ಷವು ಬಿಬಿಎಂಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಬಿಬಿಎಂಪಿಯನ್ನು ಮೂರಾಗಿ ಐದಾಗಿ ವಿಭಜಿಸಲು ವಿಪರೀತವಾಗಿ ಪ್ರಯತ್ನಪಟ್ಟು ಸದ್ಯಕ್ಕೆ ವಿಫಲವಾಗಿರುವ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯನ್ನು ಕನ್ನಡ, ಇಂಗ್ಲೀಷ್, ಉರ್ದು, ತಮಿಳು, ತೆಲುಗು ಭಾಷೆಗಳಲ್ಲಿ ಪ್ರಕಟಮಾಡಿ ವೋಟುಗಳಿಗೋಸ್ಕರ ಬೆಂಗಳೂರಿನಲ್ಲಿ ಕನ್ನಡವನ್ನು ಇಲ್ಲವಾಗಿಸುವುದಕ್ಕೂ ತಾನು ಹೇಸುವುದಿಲ್ಲ ಎಂದು ತೋರಿಸಿಕೊಟ್ಟಿದೆ. ಸಾಮಾನ್ಯವಾಗಿ ಪ್ರಣಾಳಿಕೆಯನ್ನು ಕನ್ನಡದಲ್ಲಿ ಮತ್ತು ನಮಗೆ ಬೇಕೋ ಬೇಡವೋ ಅನಿವಾರ್ಯವಾಗಿಬಿಟ್ಟಿರುವ ಇಂಗ್ಲೀಷಿನಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಸಿಲಿಕಾನ್ ವ್ಯಾಲಿ ಎಂದು ಹೆಸರು ಗಳಿಸಿಕೊಂಡ ಕರ್ನಾಟಕದಲ್ಲಿ ಅನ್ಯಭಾಷಿಕರ ಸಂಖೈ ಹೆಚ್ಚುತ್ತಲೇ ಇರುವುದು ಸತ್ಯ. ಜೊತೆಗೆ ಬೆಂಗಳೂರು ತಮಿಳುನಾಡು ಮತ್ತು ಆಂಧ್ರ ಗಡಿಗಳಿಗೆ ಹೊಂದಿಕೊಂಡಂತೆಯೇ ಇರುವುದರಿಂದ ಸಹಜವಾಗಿ ಅನೇಕ ಪ್ರದೇಶಗಳಲ್ಲಿ ತೆಲುಗು ಮತ್ತು ತಮಿಳು ಭಾಷಿಕರು ನೆಲೆಸಿದ್ದಾರೆ. ಅನ್ಯ ರಾಜ್ಯಗಳಿಂದ ಬಂದವರು ಕನ್ನಡ ಕಲಿಯುವಂತೆ ಪ್ರೇರೇಪಿಸಬೇಕಾದ ಕರ್ನಾಟಕ ಸರಕಾರ ಅವರ ವೋಟುಗಳನ್ನು ಪಡೆಯಲೋಸುಗ ಅವರ ಭಾಷೆಯಲ್ಲಿಯೇ ಪ್ರಣಾಳಿಕೆ ಬಿಡುಗಡೆ ಮಾಡುವಂತಹ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿರುವುದು ಸರಿಯೇ?
ಆಂಧ್ರದ ಒವೈಸಿ, ಚಂದ್ರಬಾಬು ನಾಯ್ಡು ತಮಿಳುನಾಡಿನ ಜಯಲಲಿತಾ ತಮ್ಮ ತಮ್ಮ ಪಕ್ಷವನ್ನು ಬಿಬಿಎಂಪಿ ಚುನಾವಣೆಗೆ ಅಣಿಗೊಳಿಸುತ್ತಿದೆಯಂತೆ ಎಂಬ ಸುದ್ದಿಗಳು ಕಾಂಗ್ರೆಸ್ಸಿನ ಈ ನಿರ್ಧಾರಕ್ಕೆ ಕಾರಣವಾಯಿತಾ? ಕನ್ನಡಿಗರ ರಾಷ್ಟ್ರೀಯ ಪಕ್ಷಗಳ ಮೇಲಿನ ಪ್ರೇಮದಿಂದ ಹಿಂದಿ ಹೇರಿಕೆಯೆಂಬುದು ನಿರಂತರವಾಗಿಬಿಟ್ಟಿದೆ. ಈಗ ಬೆಂಗಳೂರಿನಲ್ಲಿ ಅನ್ಯಭಾಷಾ ಪ್ರಣಾಳಿಕೆಯನ್ನು ಕಣ್ಣು ಕಣ್ಣು ಬಿಟ್ಟು ನೋಡುವ ಸರದಿ ಬೆಂಗಳೂರಿಗರದು. ಬಿಬಿಎಂಪಿ ವಿಭಜನೆಯಾಗುವ ಮುನ್ನವೇ ಭಾಷಾ ವಿರೋಧಿಯಾಗಿ ವರ್ತಿಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಪ್ಪಿತಪ್ಪಿ 'ಆಡಳಿತದ' ಹೆಸರಿನಲ್ಲಿ ಬಿಬಿಎಂಪಿಯನ್ನು ವಿಭಜನಗೊಳಿಸಿಬಿಟ್ಟರೆ ಯಾವ ರೀತಿ ವರ್ತಿಸಬಹುದು? ತೆಲುಗು ಭಾಷಿಕರು ಹೆಚ್ಚಿರುವ ಪ್ರದೇಶದಲ್ಲಿ ಕೇವಲ ತೆಲುಗು ಪ್ರಣಾಳಿಕೆ, ತಮಿಳರು ಹೆಚ್ಚಿರುವ ಕಡೆ ತಮಿಳು ಪ್ರಣಾಳಿಕೆ, ಉರ್ದು ಭಾಷಿಕರಿರುವ ಕಡೆ (ಇಲ್ಲಿರುವ ಮುಸ್ಲಿಮರು ಮಾತನಾಡುವುದು ಉರ್ದುವಾ?) ಉರ್ದು ಪ್ರಣಾಳಿಕೆಯನ್ನಷ್ಟೇ ಪ್ರಕಟಿಸಿ ಕನ್ನಡವನ್ನೇ ಮೂಲೆಗುಂಪು ಮಾಡಿಬಿಡುವ ದಿನಗಳು ದೂರವಿಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮರಾಠಿ ಪಕ್ಷಗಳು ನಗರಸಭೆಗಳಲ್ಲಿ ನಿರ್ಣಯ ತೆಗೆದುಕೊಂಡಂತೆ ಮುಂದೊಂದು ದಿನ ಬೆಂಗಳೂರಿನ ಈ ಭಾಗವನ್ನು ಆಂಧ್ರಕ್ಕೆ ತಮಿಳುನಾಡಿಗೆ ಸೇರಿಸಿಬಿಡಿ ಎಂಬ ನಿರ್ಣಯಗಳೂ ಕೇಳಿ ಬರಬಹುದು.
ಒಟ್ಟಿನಲ್ಲಿ ಕನ್ನಡ, ಕರ್ನಾಟಕ ಎಂದು ಎದೆತಟ್ಟಿ ಹೇಳುತ್ತಾ ದೇಶವನ್ನೇ ಎದುರುಹಾಕಿಕೊಳ್ಳುವ ಪಕ್ಷವೊಂದು ಕರ್ನಾಟಕದಲ್ಲಿ ಇಲ್ಲದ ಫಲಗಳನ್ನು ನಾವೀಗ ನೋಡುತ್ತಿದ್ದೇವೆ. ದೇಶ ಮೊದಲು ಎಂಬ 'ವಿಶಾಲ ಮನೋಭಾವವನ್ನು' ತೊರೆದು ರಾಜ್ಯ ಮೊದಲು ಭಾಷೆ ಮೊದಲು ಎಂಬ 'ಸಂಕುಚಿತ ಮನೋಭಾವವನ್ನು' ಬೆಳೆಸಿಕೊಳ್ಳದಿದ್ದರೆ ಈ ರಾಜಕಾರಣಿಗಳ ಸೋಗಲಾಡಿತನದಿಂದ ಕನ್ನಡಕ್ಕೆ ಚೇತರಿಸಿಕೊಳ್ಳಲಾಗದ ಪೆಟ್ಟು ಬೀಳುತ್ತದೆ.
ಆಗ 10, 2015
ಅಹಂ ನಾನೇಶ್ವರ!
ಒಂದಷ್ಟು ಗಿಮಿಕ್ಕು, ಬಹಳಷ್ಟು ವಿಚಿತ್ರ ವಿಕ್ಷಿಪ್ತತೆಗೆ ಹೆಸರಾಗಿರೋ ಉಪೇಂದ್ರ ನಿರ್ದೇಶನದ ಹೊಸ ಚಿತ್ರ ಉಪ್ಪಿ 2 ಟೀಸರ್ ಸದ್ದು ಮಾಡುತ್ತಿದೆ. ಮೈಮೇಲೆಲ್ಲಾ ಬೂದಿ ಬಳಿದುಕೊಂಡು ಉಲ್ಟಾ ನಿಂತಿರೋ ಉಪೇಂದ್ರ ತಮ್ಮ ಉಲ್ಟುಲ್ಟಾ ಸ್ಟೈಲುಗಳಿಂದಲೇ ಮತ್ತೆ ಜನರ ಮನ ಗೆಲ್ಲುತ್ತಾರಾ? ಆಗಸ್ಟ್ ಹದಿನಾಲ್ಕಕ್ಕೆ ಗೊತ್ತಾಗುತ್ತದೆ. ಉಪೇಂದ್ರನೆಂಬ ನಿರ್ದೇಶಕ ಗೆಲ್ಲಬೇಕು.
ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಿಗೊಂದು ಬಹಿರಂಗ ಪತ್ರ!
ಸನ್ಮಾನ್ಯ ಅಧ್ಯಕ್ಷರಿಗೆ ನಮಸ್ಕಾರಗಳು,
ಮೊದಲಿಗೆ ನಿಮ್ಮ ಕ್ಷಮೆ ಕೋರುತ್ತೇನೆ: ಹೀಗೊಂದು ಬಹಿರಂಗ ಪತ್ರ ಬರೆದು ಬಿಡುವಿರದ ತಮ್ಮ ಸಮಯವನ್ನು ಹಾಳು ಮಾಡುತ್ತಿರುವುದಕ್ಕೆ.
ವಿಷಯ ನಿಮಗೆ ಗೊತ್ತಿಲ್ಲದ್ದೇನೂ ಅಲ್ಲ! ನಮ್ಮ ಅರ್ಧ ನಾಡು ಮಳೆಯಿರದೆ ಬರದಿಂದ ತತ್ತರಿಸುತ್ತಿದೆ. ಈಗಾಗಲೇ ತಮಗಾದ ಬೆಳೆನಷ್ಟ ಮತ್ತು ತೀರಿಸಲಾಗದ ಸಾಲಭಾದೆಯಿಂದ ಬಹಳಷ್ಟು ರೈತರು ಆತ್ಮಹತ್ಯೆಯ ಹಾದಿ ಹಿಡಿದು ನಡೆದು ಹೋಗಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಬಹುದೆಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಇದುವರೆಗು ಎಷ್ಟು ಜನ ಆತ್ಮಹತ್ಯೆ ಮಾಡಿಕೊಂಡರು ಎಂಬ ಅಂಕಿ ಅಂಶಗಳ ಒಣಪಾಠವನ್ನು ನಾನಿಲ್ಲಿ ಒಪ್ಪಿಸಹೋಗುವುದಿಲ್ಲ ಮತ್ತು ಅದು ನನ್ನ ಉದ್ದೇಶವೂ ಅಲ್ಲ.
ಇರಲಿ ವಿಷಯಕ್ಕೆ ಬರುತ್ತೇನೆ: ಈಗಾಗಲೇ ಕೆಲವು ಜನಪರ ಸಂಘಟನೆಗಳು ಅಕ್ಟೋಬರಿನಲ್ಲಿ ರಾಯಚೂರಿನಲ್ಲಿ ನಡೆಯಲಿರುವ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನವನ್ನು ಮುಂದೂಡಬೇಕೆಂಬ ಬೇಡಿಕೆ ಇಟ್ಟಿರುವುದು ತಮಗೆ ತಿಳಿದ ವಿಚಾರವಾಗಿದೆ. ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ವರ್ಷದ ಸಮ್ಮೇಳನವನ್ನೇ ರದ್ದು ಮಾಡಬೇಕೆಂದು ಕೋರುತ್ತೇನೆ. ಕ್ಷಮಿಸಿ, ಹೀಗೆ ಹೇಳದೆ ವಿಧಿಯಿಲ್ಲ. ಯಾಕೆಂದರೆ ಬರಗಾಲದ ಇಂತಹ ಸನ್ನಿವೇಶದಲ್ಲಿ, ಜೊತೆಗೆ ಸಾಲು ಸಾಲಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ನಾವುಗಳು ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಸರಕಾರದ ಹಣವನ್ನು ಖರ್ಚು ಮಾಡಿ ಹಬ್ಬದ ಸಡಗರವನ್ನು ಆಚರಿಸುವುದು ಸೂಕ್ತವಲ್ಲವೆಂದು ನನ್ನ ಅನಿಸಿಕೆಯಾಗಿದೆ. ಇದರಲ್ಲಿ ಹಣದ ವಿಷಯ ಮಾತ್ರ ಅಡಕವಾಗಿಲ್ಲ. ಬದಲಿಗೆ ಸೂಕ್ಷ್ಮ ಮನಸ್ಸಿನವರೆನಿಸಿಕೊಂಡ ಸಾಹಿತಿಗಳ ಮತ್ತು ಸಾಹಿತ್ಯಾಸಕ್ತರ ನೈತಿಕ ಹೊಣೆಗಾರಿಕೆಯಾಗಿದೆ. ಸಾಹಿತಿಯಾದವನು ಕೊನೆಗೂ ಹೊಣೆಗಾರನಾಗುವುದು ತಾನು ಬದುಕುವ, ಬರೆಯುವ ಸಮಾಜಕ್ಕೆ ತಾನೆ? ಈ ವಿಚಾರವನ್ನು ನಾನು ಬಹಳಷ್ಟು ಜನರ ಜೊತೆ ಚರ್ಚಿಸಿದಾಗ ಕೇಳಿಬಂದ ಅಭಿಪ್ರಾಯಗಳು ಆಘಾತಕಾರಿಯಾಗಿದ್ದವು. ಅವುಗಳಲ್ಲಿ ಕೆಲವನ್ನು ನಾನಿಲ್ಲಿ ಹೇಳಬಯಸುತ್ತೇನೆ: ಮೊದಲ ಅನಿಸಿಕೆ ಒಂದು ಊರಲ್ಲಿ ಯಾರಾದರು ಸತ್ತರೆ ಆ ಊರಿನವರೇನು ಉಪವಾಸ ಇರುವುದಿಲ್ಲ. ಹೌದು ನಾನು ಒಪ್ಪುತ್ತೇನೆ, ಊರವರಿರಲಿ ಆ ಮನೆಯವರೆ ಯಾರೂ ಉಪವಾಸ ಇರುವುದಿಲ್ಲ. ಮಣ್ಣು ಮುಗಿದ ಮೇಲೆ ಅವರೂ ಉಣ್ಣುತ್ತಾರೆ, ಯಥಾ ಪ್ರಕಾರ ಜೀವನ ಸಾಗುತ್ತದೆ. ಆದರೆ ಸತ್ತವರ ಸೂತಕದ ಮನೆಯಲ್ಯಾರು ಹಬ್ಬದ ಅಡುಗೆ ಮಾಡಿ ಚಪ್ಪರ ಹಾಕಿ ಉಂಡು ನಲಿಯುವುದಿಲ್ಲ. ಇನ್ನೊಂದು ಅನಿಸಿಕೆ: ಸಮ್ಮೇಳನ ರದ್ದು ಮಾಡಿದರೆ ರಾಯಚೂರು ಭಾಗದ ಜನರ ಬಾವನೆಗಳಿಗೆ ಧಕ್ಕೆ ಯಾಗುತ್ತದೆ. ಇದನ್ನು ಖಂಡಿತಾ ಒಪ್ಪಲು ಸಾದ್ಯವಿಲ್ಲ .ಸಮ್ಮೇಳನದಿಂದ ಲಾಭ ಮಾಡಿಕೊಳ್ಳುವ ಕೆಲವರಿಗೆ ಬೇಸರವಾಗಬಹುದೇನೊ ಆದರೆ ತಮ್ಮ ರೈತ ಬಂದುಗಳನ್ನು ಕಳೆದುಕೊಂಡು ಬರದಿಂದ ತತ್ತರಿಸುತ್ತಿರುವ ಆ ಭಾಗದ ಜನರು ಇದನ್ನವರು ಮನಪೂರ್ವಕವಾಗಿಯೇ ಸ್ವಾಗತಿಸುತ್ತಾರೆ. ನನಗೆ ಅರಿವಿರುವಂತೆ ನಮ್ಮ ಜನ ಸಾವಿನ ಮನೆಯಲ್ಲಿ ಸಂಭ್ರಮ ಆಚರಿಸುವವರಲ್ಲ. ಇನ್ನು ಕೆಲವರ ಪ್ರಶ್ನೆ ರಾಜಕಾರಣಿಗಳು ಯಾವುದನ್ನು ನಿಲ್ಲಿಸಿದ್ದಾರೆಂಬುದು? ಇದು ಎಲ್ಲದಕ್ಕೂ ರಾಜಕಾರಣವನ್ನು ಹೊಣೆ ಮಾಡುವ ಪ್ರಶ್ನೆ. ಒಂದು ಸಾಹಿತ್ಯ ಸಮ್ಮೇಳನ ನಡೆಸುವುದು ಬಿಡುವುದು ಪರಿಷತ್ತು ಮತ್ತು ಸಾಹಿತ್ಯಾಸಕ್ತರ ಕೆಲಸವೇ ಹೊರತು ರಾಜಕಾರಣಿಗಳದ್ದಲ್ಲ. ಹಾಗಾಗಿ ನಾವು ಎಲ್ಲದಕ್ಕೂ ರಾಜಕಾರಣಿಗಳನ್ನು ದೂರುವುದು ತರವಲ್ಲ. ಸಾಹಿತ್ಯ ಸಮ್ಮೇಳನವೆನ್ನುವುದು ಕನ್ನಡಿಗರ ಕೆಲಸ. ಅದನ್ನು ಮಾಡುವುದು ಬೇಡವೆನ್ನುವುದು ಅವರದೇ ನಿರ್ಧಾರ. ಇನ್ನು ಕನ್ನಡಿಗರ ಅಭಿಮಾನಕ್ಕೆ ಬರಬಂದಿಲ್ಲ. ದುಡ್ಡು ಕೊಡುವವರು ಇದ್ದಾರೆ . ಸಮ್ಮೇಳನ ನಡೆಯಲಿ. ಎನ್ನುವವರೂ ಇದ್ದಾರೆ. ಹೌದು ಕನ್ನಡಿಗರ ಅಭಿಮಾನವಿರಬೇಕಾಗಿದ್ದು: ಮೊದಲು ಅನ್ನ ಕೊಡುವ ಮಣ್ಣಿನ ಮಕ್ಕಳ ಬಗ್ಗೆ. ಅದರ ತರುವಾಯವೇ ಸಾಹಿತ್ಯ ಕಲೆಗಳೆಲ್ಲ. ಹೀಗೆ ವಾದ ಮಾಡುತ್ತಾ ಹೋದರೆ ಮಾಡುತ್ತಲೇ ಹೋಗಬಹುದು. ಆದರೆ ನನ್ನ ವಿಚಾರ ಅದಲ್ಲ. ಒಂದು ಸಾಹಿತ್ಯ ಸಮ್ಮೇಳನವನ್ನು ರದ್ದು ಮಾಡುವುದರಿಂದ ಕನ್ನಡ ಸಾಹಿತ್ಯವೇನೂ ಸತ್ತು ಹೋಗುವುದಿಲ್ಲ. ಹಾಗೆಯೇ ರದ್ದು ಮಾಡುವುದರಿಂದ ಸತ್ತವರೂ ಎದ್ದು ಬರುವುದಿಲ್ಲ. ಹಾಗಾಗಿ ಸಮ್ಮೇಳನವನ್ನು ರದ್ದು ಮಾಡಬೇಕೆನ್ನುವ ನನ್ನ ಉದ್ದೇಶ: ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ನಾವು ನಿಮ್ಮೊಂದಿಗಿದ್ದೇವೆ, ನಿಮ್ಮ ದು:ಖದಲ್ಲಿ ನಾವುಗಳು ಪಾಲುದಾರರು ಎಂಬ ಭಾವನೆ ಮೂಡಿಸಿ, ಆತ್ಮಹತ್ಯೆಯಂತಹ ವಿಚಾರಗಳಿಂದ ಅವರುಗಳನ್ನು ಹೊರತರುವ ಮಾನವೀಯ ಕಾಳಜಿಮಾತ್ರವಾಗಿದೆ. ಇಂತಹದೊಂದು ಕನಿಷ್ಠ ಸೌಜನ್ಯವನ್ನೂ ನಾವು ತೋರಿಸದೇ ಹೋದಲ್ಲಿ ನಾವು ರಚಿಸುವ ಸಾಹಿತ್ಯಕ್ಕೆ ಅರ್ಥವಿರುವುದಿಲ್ಲ.
ಅದರ ಬದಲಿಗೆ ಅದೇ ಅಕ್ಟೋಬರ್ ತಿಂಗಳಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿ ಜಿಲ್ಲೆಯಲ್ಲೂ, ಏಕಕಾಲಕ್ಕೆ ರೈತರ ಸಮಸ್ಯೆಗಳು ಮತ್ತು ಪರಿಹಾರಗಳ ಹುಡುಕಾಟ ಎಂಬ ವಿಚಾರವನ್ನಿಟ್ಟುಕೊಂಡು ಹೆಚ್ಚು ಖರ್ಚಿಲ್ಲದೆ ವಿಚಾರಸಂಕಿರಣಗಳನ್ನು ನಡೆಸಬಹುದಾಗಿದೆ. ಇಂತಹ ಸಂಕಿರಣಗಳಲ್ಲಿ ಆಯಾ ಜಿಲ್ಲೆಯ ಸಾಹಿತಿಗಳು ಕೃಷಿ ತಜ್ಞರು, ಪ್ರಗತಿಪರರು ಬಾಗವಹಿಸುವಂತೆ ನೋಡಿಕೊಳ್ಳಬಹುದಾಗಿದೆ. ತದನಂತರ ಸಂಕಿರಣದಲ್ಲಿ ಹೊರಹೊಮ್ಮಿದ ಮುಖ್ಯ ಅಂಶಗಳನ್ನು ಕ್ರೋಢೀಕರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬಹುದು. ಇದು ನನ್ನ ವಿನಮ್ರ ಸಲಹೆ ಮಾತ್ರ.
ಇದರೊಂದಿಗೆ ಸರಕಾರ ಕೊಡುವ ಒಂದೆರಡು ಕೋಟಿ ಅನುದಾನವನ್ನು ರೈತರಿಗೆ ನಿಜಕ್ಕೂ ಅನುಕೂಲವಾಗುವ ಯಾವುದಾದರು ಯೋಜನೆಗೆ ಬಳಸಲು,ಪರಿಷತ್ತು ಸರಕಾರಕ್ಕೆ ಒತ್ತಾಯಿಸಬೇಕು.
ಆದ್ದರಿಂದ ಸಾಹಿತ್ಯಪರಿಷತ್ತಿನ ಅದ್ಯಕ್ಷರಿಗೆ ನಾನು ಮನವಿ ಮಾಡಿಕೊಳ್ಳುವುದೇನೆಂದರೆ ದಯಮಾಡಿ ಸಾಹಿತ್ಯ ಸಮ್ಮೇಳವನ್ನು ಈವರ್ಷ ರದ್ದು ಮಾಡಿ. ನಿಮ್ಮ ಅವಧಿ ಮುಗಿದ ನಂತರ- ಬರವಿದ್ದರೂ ಸಮ್ಮೇಳನ ನಡೆಸಿದವರು ಅನಿಸಿಕೊಳ್ಳುವುದಕ್ಕಿಂತ ಬರದ ಕಾರಣದಿಂದ ಸಮ್ಮೇಳನವನ್ನು ರದ್ದು ಮಾಡಿ ರೈತಪರ ಕಾಳಜಿಯನ್ನು ಮೆರೆದವರೆಂದು ಗುರುತಿಸಿಕೊಳ್ಳುವುದು ಹೆಮ್ಮೆಯ ವಿಷಯವೆಂದು ನನಗನ್ನಿಸುತ್ತದೆ. ಇತಿಹಾಸದ ಪುಟಗಳನ್ನು ಸೇರುವುದು ಮುಖ್ಯವಲ್ಲ, ಯಾಕೆ ಸೇರಲಾಯಿತು ಅನ್ನುವುದೇ ಮುಖ್ಯವಲ್ಲವೇ ಸರ್. ದಯಮಾಡಿ ಯೋಚಿಸಿ , ನಿಮ್ಮ ಪದಾಧಿಕಾರಿಗಳನ್ನು ನನಗಿಂತ ಹಿರಿಯರಾದ ಸಾಹಿತಿಗಳನ್ನು, ಬುದ್ದಿಜೀವಿಗಳನ್ನು ಸಂಪರ್ಕಿಸಿ ಒಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಕೋರುತ್ತೇನೆ.
ಕು.ಸ.ಮಧುಸೂದನ್ ನಾಯರ್
ಮಂಡ್ಯದಲ್ಲಿ ಎರಡು ದಿನ ನಡೆದ 'ಬೀಜ ಮೇಳ'
ವ್ಯವಸಾಯ ಬಿಡಿ, ಮನೆಯಲ್ಲಿ ಪುಟ್ಟ ಕುಂಡದಲ್ಲಿ ಒಂದು ಗಿಡ ಬೆಳೆಸುವ ಆಸಕ್ತಿ ನಿಮ್ಮಲ್ಲಿದ್ದರೆ ಮೊದಲ ಹಂತದಲ್ಲೇ ನಿರಾಶೆಯಾಗಿಬಿಡುತ್ತೀರಿ. ಕಾರಣ, ದುಡ್ಡು ಕೊಟ್ಟು ಕೊಂಡು ತಂದ ಬೀಜಗಳು ಮೊಳಕೆಯೊಡೆಯುವ ಆಸಕ್ತಿ ತೋರಿಸದೆ ಮಣ್ಣಿನಲ್ಲೊಂದಾಗಿ ಗೊಬ್ಬರವಾಗಿಬಿಡುವುದು! ಬೀಜವೆಂಬುದು ದೊಡ್ಡ ಉದ್ಯಮವಾಗಿಬಿಟ್ಟಿದೆ. ಬಹಳಷ್ಟು ಬೀಜಗಳ ಮೇಲೆ 'ವಿಷ ಸಿಂಪಡಿಸಲಾಗಿದೆ' ಎಂದು ದೊಡ್ಡಕ್ಷರಗಳಲ್ಲಿ ಬರೆದಿರುತ್ತಾರೆ. ವಿಷದ ಬೀಜ ಬಿತ್ತಿ ವಿಷವಿಲ್ಲದೆ ಬೆಳೆದು ವಿಷಮುಕ್ತ ಆಹಾರ ತಿನ್ನಲು ಸಾಧ್ಯವಾಗುವುದಿಲ್ಲ. ಬೀಜ ಶೇಖರಿಸುವ, ಶೇಖರಿಸಿಕೊಂಡ ಬೀಜವನ್ನು ನೆರೆಹೊರೆಯವರಲ್ಲಿ ಹಂಚಿಕೊಳ್ಳುವ ಪ್ರವೃತ್ತಿ ಮಾಯವಾಗುವುದಕ್ಕೆ ಉದ್ದಿಮೆದಾರರು ಎಷ್ಟು ಕಾರಣರೋ ರೈತರೂ ಅಷ್ಟೇ ಕಾರಣ. ಬೀಜ ಶೇಖರಿಸುವ, ಒಣಗಿಸುವ, ಕೆಡದಂತೆ ನೈಸರ್ಗಿಕವಾಗಿ ಸಂಗ್ರಹಿಸಿಡುವ ಶ್ರಮಕ್ಕಿಂತ ಹಣ ಕೊಟ್ಟು ಬೀಜ ತರುವುದು ಸುಲಭದ ಕೆಲಸ. ಹೀಗೆ ಹಣ ಕೊಟ್ಟು ತರುವ ಬೀಜದ ಗುಣಮಟ್ಟದ ಅರಿವಿರುವುದಿಲ್ಲ, ಅದು ಬೆಳೆಯುವಾಗ ಅನುಭವಿಸುವ ತೊಂದರೆಗಳ ಅರಿವಿರುವುದಿಲ್ಲ.
![]() |
ಮಂಡ್ಯದಲ್ಲಿ ನಡೆದ ಬೀಜ ಜಾತ್ರೆ |
ಹಳೆಯ ಪದ್ಧತಿಯ ಬೀಜ ಹಂಚುವಿಕೆಯನ್ನು, ವಿಷಮುಕ್ತವಾದ ಬೀಜಗಳನ್ನು ಸಂಗ್ರಹಿಸುವ, ಕಡಿಮೆ ಬೆಲೆಗೆ ಮಾರುವ ವೇದಿಕೆ ಸೃಷ್ಟಿಸುತ್ತಿರುವುದು 'ಸಹಜ ಸಮೃದ್ಧಿ' ಬಳಗ. ಹದಿನೈದು ವರುಷಗಳಿಂದ ವಿಧವಿಧದ ತಳಿಗಳನ್ನು ಉಳಿಸಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡುತ್ತಾ ವರುಷವಿಡೀ ದೇಶದ ಹತ್ತಲವು ಭಾಗಗಳಲ್ಲಿ ಬೀಜ ಮೇಳ ನಡೆಸುತ್ತಿದೆ. ಆಗಸ್ಟ್ 8 ಮತ್ತು 9ರಂದು ಮಂಡ್ಯದ ಗುರುಭವನದಲ್ಲಿ ಬೀಜ ಮೇಳ ಆಯೋಜಿಸಲಾಗಿತ್ತು. ಸಾವಯವ ಬೀಜಗಳು ಮತ್ತು ಸಾವಯವ ಪದ್ಧತಿಯಿಂದ ಬೆಳೆದ ಬೆಳೆಗಳನ್ನು ಮಾರಲು ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ಜೊತೆಗೆ ಸಾವಯವ ರೈತರು ತಮ್ಮ ತಮ್ಮ ಅನುಭವಗಳನ್ನು ಸಹೋದ್ಯೋಗಿಗಳೊಡನೆ ಹಂಚಿಕೊಳ್ಳುತ್ತಿದ್ದರು. ಪಿರಿಯಾಪಟ್ಟಣ, ಬೆಳಗಾವಿ, ಹುಬ್ಬಳ್ಳಿಯ ಕಡೆಯಿಂದೆಲ್ಲ ಬಂದಿದ್ದ ರೈತರು ಸಾವಯವ ಉತ್ಪನ್ನಗಳನ್ನು ಮಾರುತ್ತಿದ್ದರು. ಮಂಡ್ಯದ ಕಿರುಗಾವಲಿನ ಘನಿ ಬರೋಬ್ಬರಿ ಏಳೂನೂರ ಐವತ್ತಕ್ಕೂ ಅಧಿಕ ರೀತಿಯ ಭತ್ತದ ತಳಿಗಳೊಡನೆ ಮಿಂಚುತ್ತಿದ್ದರು. ಭಾರತದಷ್ಟೇ ಅಲ್ಲದೇ ವಿದೇಶೀ ತಳಿ ಭತ್ತಗಳೂ ಅವರ ಬತ್ತಳಿಕೆಯಲ್ಲಿವೆ. ವಿದೇಶಿ ತಳಿಗಳೆಂದರೆ ಹೈಬ್ರಿಡ್ ಅಲ್ಲ! ವಿದೇಶಿ ಸಾವಯವ ತಳಿಗಳು.
![]() |
ಉತ್ಸಾಹದಿಂದ ಅನುಭವ ಹಂಚಿಕೊಳ್ಳುತ್ತಿದ್ದ ರೈತರು |
ಇನ್ನು ಆವರಣದಲ್ಲಿ ಎಲ್ಲಾ ರೀತಿಯ ಸೊಪ್ಪು, ತರಕಾರಿ ಬೀಜಗಳು ಲಭ್ಯವಿದ್ದವು, ಹೊರಗೆ ಸಿಗುವ ಹೈಬ್ರಿಡ್ಡಿಗಿಂತ ಕಡಿಮೆ ಬೆಲೆಗೆ. ಜನರು ಹೆಚ್ಚು ಮುತ್ತಿಕೊಂಡಿದ್ದು ಮಾತ್ರ ಹಪ್ಪಳ, ಸಂಡಿಗೆ ಮಾರಾಟ ಮಾಡುತ್ತಿದ್ದ ಅಂಗಡಿಯ ಮುಂದೆ! ಅಂಗಡಿಗಳಲ್ಲಿ ಕಾಣಸಿಗದ ಕಪ್ಪು ಬೆಲ್ಲಗಳು ಇಲ್ಲಿ ಲಕಲಕ ಹೊಳೆಯುತ್ತಿದ್ದವು. ಅಂಗಡಿಯ ಬಿಳಿ ಬೆಲ್ಲಗಳು ರಾಸಾಯನಿಕಗಳ ಮುದ್ದೆ ಎಂಬುದು ತಿಳಿದಿದ್ದರೂ ಅದಕ್ಕೇ ಮಾರು ಹೋಗುತ್ತೇವೆ ನಾವು.
ಸಾವಯವ ಪದ್ಧತಿಯ ಬಗೆಗೆ ವಿವಿಧ ರೈತರು ಬರೆದ ಪುಸ್ತಕಗಳೂ ಲಭ್ಯವಿದ್ದವು. ವಿಷದ ಉಪಯೋಗವನ್ನು ಕಡಿಮೆಗೊಳಿಸಿ ಸಾವಯವ ಪದ್ಧತಿಯ ಕೃಷಿ ಹೆಚ್ಚಾಗುವುದಕ್ಕೆ ರೈತರ ಶ್ರಮವೊಂದೇ ಸಾಲದು. ಕಂಪನಿಗಳ ವಕ್ತಾರನಂತೆ ವರ್ತಿಸುವ ಕೃಷಿ ಇಲಾಖೆ ತನ್ನ ನೀತಿ ನಿಯಮಗಳನ್ನು ಅಮೂಲಾಗ್ರವಾಗಿ ಬದಲಿಸಿಕೊಳ್ಳಬೇಕು. ಗ್ರಾಹಕರು ಸಾವಯವ ಪದ್ಧತಿಯಲ್ಲಿ ಬೆಳೆದ ಉತ್ಪನ್ನಗಳನ್ನು ಉಪಯೋಗಿಸುವುದನ್ನು ಹೆಚ್ಚು ಮಾಡಬೇಕು. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಸಹಜವಾಗಿ ಕೃಷಿಕರೂ ಕೂಡ ಸಾವಯವ ಪದ್ಧತಿಯತ್ತ ಆಸಕ್ತಿ ವಹಿಸುತ್ತಾರೆ. ಇವೆಲ್ಲದರ ಜೊತೆಗೆ ಸಾವಯವದ ಹೆಸರಿನಲ್ಲಿ ಹೆಚ್ಚುತ್ತಿರುವ ನಕಲಿಗಳನ್ನು ಕಂಡು ಹಿಡಿಯುವ ಕೆಲಸವೂ ದೊಡ್ಡ ಮಟ್ಟದಲ್ಲಿ ಆಗಬೇಕು.
![]() |
750ಕ್ಕೂ ಅಧಿಕ ಭತ್ತದ ತಳಿಯೊಂದಿಗೆ ಘನಿ ಮತ್ತು ತಂಡ. |
ಆಗ 8, 2015
'Seed Mela' at Mandya on Aug 8,9.
Organised by: Sahaja Samruddhi.
Venue: Gurubhavana, Mandya.
Timings: 10:00am to 8:00pm
Exhibition :
- Display of a spectacular diversity of Paddy. Millets and Vegetables
- Photographs, posters and other visual matter
- Uncultivated Food Crops
Stalls
- Traditional Rice - Medicinal Rice, Biriyani Rice, Black Rice, Red Rice....
- Magic of Millets - Foxtail, Little, Brown top, Barnyard. Finger, Kodo Millet
- Fruits and Vegetables
- Organic seeds for sale
- Books, CDs and craft item
Workshop : Searching Organic Alternates
Seed conservation, Cultivation of traditional paddy and millets. value addition and marketing of organic produce. Special talk on legume culture, diversification of sugar cane and marketing of traditional rice and millets.
Image Source and information: Krishna Prasad Govindaiah's facebook page.
Image Source and information: Krishna Prasad Govindaiah's facebook page.
ಆಗ 7, 2015
ವೀಡಿಯೋ: ಮುನೀರ್ ಕಾಟಿಪಳ್ಳ ಮಾತುಗಳು.
ಆಗಸ್ಟ್ ನಾಲ್ಕರಂದು ಬೆಂಗಳೂರಿನ ಟೌನ್ ಹಾಲ್ ಎದುರಿಗೆ ಸುಂದರ ಮಲೆಕುಡಿಯನಿಗೆ ನ್ಯಾಯ ಒದಗಿಸಲು ನಡೆದ ಪ್ರತಿಭಟನೆಯಲ್ಲಿ ಪ್ರಕರಣದ ಬಗ್ಗೆ ವಿವರ ನೀಡಿದ ಮುನೀರ್ ಕಾಟಿಪಳ್ಳ.
ವೀಡಿಯೋ: ಸುಂದರ ಮಲೆಕುಡಿಯನ ಪರವಾಗಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ.
ಜುಲೈ ನಾಲ್ಕರಂದು ಬೆಂಗಳೂರಿನ ಟೌನ್ ಹಾಲ್ ಎದುರು ಆದಿವಾಸಿ ಸುಂದರ ಮಲೆಕುಡಿಯನಿಗೆ ನ್ಯಾಯ ಒದಗಿಸಲು "ಮನುಜಮತ" ಮತ್ತು ಸಮಾನ ಮನಸ್ಕರು ನಡೆಸಿದ ಪ್ರತಿಭಟನೆ. ಸಿ.ಎಸ್.ದ್ವಾರಕಾನಾಥರ ಕೆಲವು ಮಾತುಗಳಿವೆ.