ಆಗ 14, 2015

ಸುಂದರ ಮಲೆಕುಡಿಯನಿಗೆ ಆರ್ಥಿಕ ಸಹಾಯ ಬೇಕಾಗಿದೆ.

ಮುನೀರ್ ಕಾಟಿಪಳ್ಳ
ನಾಡು ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ತೆರೆದು ಕೊಳ್ಳುತ್ತಿದೆ. ಆದರೆ ಮಂಗಳೂರಿನ ಆಸ್ಪತ್ರೆಯ ಜನರಲ್ ವಾರ್ಡಲ್ಲಿ ಮಲಗಿರುವ ಸುಂದರ ಮಲೆಕುಡಿಯರ ಮುಖದಲ್ಲಿ, ನೆರಿಯ ಅರಣ್ಯದ ಅವರ ಮನೆಯೆಂಬ ಮುರಕಲು ನಾಲ್ಕು ಗೋಡೆಯಲ್ಲಿ ನೋವು ಮಡುಗಟ್ಟಿದೆ. ಭೂಮಾಲಕ ಕೈ ಕತ್ತರಿಸಿ ಇಪ್ಪತ್ತು ದಿನಗಳ ನಂತರವೂ ಸುಂದರ ಮಲೆಕುಡಿಯ ಎದ್ದು ಕೂತಿಲ್ಲ. ಗೋಪಾಲ ಗೌಡನ ಹತ್ತಿರ ಪೊಲೀಸರು ಸುಳಿದಿಲ್ಲ.

ಮೊನ್ನೆ ಮತ್ತೆ ಸುಂದರ ಮಲೆಕುಡಿಯರನ್ನು ಭೇಟಿಯಾಗಿದ್ದೆವು. ಎರಡೂ ಕೈಗಳು ಅಲುಗಾಡದಂತೆ ಬ್ಯಾಂಡೇಜು ಸುತ್ತಿ ಹತ್ತಾರು ರೋಗಿಗಳ ಮದ್ಯೆ ಜನರಲ್ ವಾರ್ಡಿನಲ್ಲಿ ಮಲಗಿದ್ದ ಸುಂದರ ಮಲೆಕುಡಿಯರನ್ನು, ಹದಿನೆಂಟು ವರ್ಷಗಳ ಹಿಂದೆ ಭೂಮಾಲಕರ ಮಚ್ಚಿನೇಟಿಗೆ ಕೈಬೆರಳು ಕಳಕೊಂಡಿದ್ದ ಅವರ ಪತ್ನಿ ನೋಡಿಕೊಳ್ಳುತ್ತಿದ್ದರು.

ತನ್ನ ಸ್ಥಿತಿಗೆ ಮರುಗುತ್ತಿದ್ದ ಸುಂದರ, ಜನಪರ ಸಂಘಟನೆಗಳ ನೈತಿಕ ಬೆಂಬಲಕ್ಕೆ ಕಣ್ಣೀರಾದರು. ಪೂರ್ಣ ತುಂಡಾದ ಕೈ ಕನಿಷ್ಟ ಉಳಿಯಬೇಕಾದರೆ ನಾಲ್ಕೈದು ಪ್ಲಾಸ್ಟಿಕ್ ಸರ್ಜರಿ ನಡೆಸಬೇಕಿದ್ದು ಐದಾರು ಲಕ್ಷ ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ ಎಂದು ದುಃಖತೋಡಿ ಕೊಂಡರು. ಸುಂದರ ಮಲೆಕುಡಿಯರಿಗೆ ಉದರ ಕ್ಯಾನ್ಸರ್ ನ ಚಿಕಿತ್ಸೆಯೂ ನಡೆಯುತ್ತಿದ್ದು ಇನ್ನಷ್ಟು ಖರ್ಚು ಹೆಚ್ಚಾಗಬಹುದು.

ಇನ್ನು ಸುಂದರ ಮಲೆಕುಡಿಯರ ನರಿಯ ಅರಣ್ಯದ ಮನೆ ಶಿಥಿಲಗೊಂಡಿದ್ದು, ಮಳೆಗಾಳಿಗೆ ಅದರಲ್ಲಿ ವಾಸಿಸುವುದು ದುಸ್ಸಾದ್ಯ. ಅಂತಹ ಮುರುಕಲು ಮನೆಯಲ್ಲಿ ಶಾಲೆಗೆ ಹೋಗುವ ಮೂವರು ಹೆಣ್ಣುಮಕ್ಕಳು, ಮನೆಯಲ್ಲೇ ಉಳಿದಿರುವ ಹದಿಹರೆಯದ ಮಗ ಪೂರ್ಣೇಶ ಅನಾಥರಂತೆ ಬದುಕುತ್ತಿದ್ದಾರೆ. ಒಂದೆಡೆ ಮಾರಣಾಂತಿಕ ದಾಳಿ, ಭಯದ ಬದುಕು, ಇನ್ನೊಂದೆಡೆ ಆಸ್ಪತ್ರೆ ಓಡಾಟದ ಖರ್ಚು, ದುಡಿಯುವ ಕೈಗಳಿಲ್ಲದ ಕುಟುಂಬ. ಅಕ್ಷರಷಃ ಈ ಆದಿವಾಸಿ ಕುಟುಂಬ ಬೀದಿಗೆ ಬಂದಿದೆ.

ಕೈ ಕತ್ತರಿಸಿದ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಲೇ ಈ ಕುಟುಂಬಕ್ಕೆ ಆಸರೆಯಾಗೋದು ಮನುಷ್ಯಪರರ ಜವಾಬ್ದಾರಿ. ನಾವೆಲ್ಲ ಕುಟುಂಬಕ್ಕೆ ಇಪ್ಪತ್ತು ಲಕ್ಷ ಪರಿಹಾರಕ್ಕೆ ಆಗ್ರಹಿಸುತ್ತಿದ್ದರೂ, ಅಹಿಂದ ಸರಕಾರ ಕಿವಿ ತೆರೆಯುತ್ತಿಲ್ಲ, ಕನಿಷ್ಟ ಉಸ್ತುವಾರಿ ಸಚಿವರು ಸುಂದರ ಮಲೆಕುಡಿಯರ ಮುಖನೋಡಿಲ್ಲ. ಹೋರಾಟ, ಬೆಂಬಲದ ಜೊತೆಗೆ ಆರ್ಥಿಕ ಸಹಾಯವನ್ನೂ ಸಾಧ್ಯವಾದಷ್ಟು ಈ ಆದಿವಾಸಿ ಕುಟುಂಬಕ್ಕೆ ನಾವೆಲ್ಲ ಸೇರಿ ಮಾಡಬೇಕಿದೆ. ಶೋಷಿತ ಜನತೆ ಅಸಹಾಯಕರು ಅಲ್ಲ ಅನ್ನುವುದನ್ನು ಸಾರಿ ಹೇಳಬೇಕಿದೆ.

ಸಹಾಯ ಮಾಡ ಬಯಸುವವರು ನೇರವಾಗಿ, ಸುಂದರ ಮಲೆಕುಡಿಯರ ಮಗ ಪೂರ್ಣೇಶನ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಬಹುದು.
Poornesh.
State Bank of india, 
Branch: ujire. 
Account no: 32479910949
IFSC code: SBIN0015317

ಆಗ 7, 2015

ವೀಡಿಯೋ: ಮುನೀರ್ ಕಾಟಿಪಳ್ಳ ಮಾತುಗಳು.

ಆಗಸ್ಟ್ ನಾಲ್ಕರಂದು ಬೆಂಗಳೂರಿನ ಟೌನ್ ಹಾಲ್ ಎದುರಿಗೆ ಸುಂದರ ಮಲೆಕುಡಿಯನಿಗೆ ನ್ಯಾಯ ಒದಗಿಸಲು ನಡೆದ ಪ್ರತಿಭಟನೆಯಲ್ಲಿ ಪ್ರಕರಣದ ಬಗ್ಗೆ ವಿವರ ನೀಡಿದ ಮುನೀರ್ ಕಾಟಿಪಳ್ಳ.


ವೀಡಿಯೋ: ಸುಂದರ ಮಲೆಕುಡಿಯನ ಪರವಾಗಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ.

ಜುಲೈ ನಾಲ್ಕರಂದು ಬೆಂಗಳೂರಿನ ಟೌನ್ ಹಾಲ್ ಎದುರು ಆದಿವಾಸಿ ಸುಂದರ ಮಲೆಕುಡಿಯನಿಗೆ ನ್ಯಾಯ ಒದಗಿಸಲು "ಮನುಜಮತ" ಮತ್ತು ಸಮಾನ ಮನಸ್ಕರು ನಡೆಸಿದ ಪ್ರತಿಭಟನೆ. ಸಿ.ಎಸ್.ದ್ವಾರಕಾನಾಥರ ಕೆಲವು ಮಾತುಗಳಿವೆ.

ಆಗ 5, 2015

ಸುಂದರ ಮಲೆಕುಡಿಯನಿಗೆ ನ್ಯಾಯ ಒದಗಿಸಲು ಬೆಂಗಳೂರಿನಲ್ಲಿ ಪ್ರತಿಭಟನೆ

ಬೆಳ್ತಂಗಡಿ ಮಲೆಕುಡಿಯ ಆದಿವಾಸಿಗಳ ಕೈ ಕತ್ತರಿಸಿದ ಭೂಮಾಲೀಕ ಅರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಆಗಸ್ಟ್‌ 4, ಮಂಗಳವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ಎದುರು ನಡೆದ ಪ್ರತಿಭಟನೆಯಲ್ಲಿ ಸಾಹಿತಿಗಳು, ಚಳುವಳಿಗಾರರು, ಇಂಜಿನಿಯರ್ರುಗಳು, ವೈದ್ಯರು, ರಂಗಕರ್ಮಿಗಳು, ದಲಿತ ಮುಖಂಡರು, ಸಿನಿಮಾ ರಂಗದವರೆಲ್ಲರೂ ಭಾಗವಹಿಸಿದ್ದರು. ಅನ್ಯಾಯವೆಸಗಿದ ಭೂಮಾಲೀಕನನ್ನು ಬಂಧಿಸಲು ಒತ್ತಾಯಿಸಲಾಯಿತು. 

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮಲೆಕುಡಿಯ ಆದಿವಾಸಿಗಳ ಮೇಲೆ ನಿತ್ಯ ನಿರಂತರ ದೌರ್ಜನ್ಯ ನಡೆಸುತ್ತಿರುವ ಭೂಮಾಲೀಕ ಗೋಪಾಲಗೌಡನು ಇತ್ತೀಚೆಗೆ ಸುಂದರ ಮಲೆಕುಡಿಯನ ಎರಡೂ ಕೈಗಳನ್ನು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಪ್ರಗತಿಪರ ಸಾಹಿತಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಬೆಂಗಳೂರಿನ ಟೌನ್ ಹಾಲಿನಲ್ಲಿ ನಡೆಸಿದ ಪ್ರತಿಭಟನಾ ಕಾರ್ಯಕ್ರಮದ ಪತ್ರಿಕಾ ಹೇಳಿಕೆ. 
muneer katipalla
ಮುನೀರ್ ಕಾಟಿಪಳ್ಳ
dwarakanath
ದ್ವಾರಕಾನಾಥ್
ಕಳೆದ 25 ವರ್ಷಗಳಿಂದ ಅಕ್ರಮವಾಗಿ ನೂರಾರು ಎಕರೆ ಭೂಮಿಯನ್ನು ಹೊಂದಿರುವ ಭೂಮಾಲೀಕ ಬೆಳ್ತಂಗಡಿಯ ಗೋಪಾಲಗೌಡನು ಈಗಲೂ ತನ್ನ ಜಮೀನನ್ನು ವಿಸ್ತಿರಿಸುವ ಕಾಯಕದಲ್ಲಿ ತೊಡಗಿದ್ದಾನೆ. ಭೂಮಾಲೀಕ ಗೋಪಾಲಗೌಡನ ಕುಟುಂಬ ಬ್ರಿಟೀಷರ ಆಡಳಿತಾವಧಿ ಕಾಲದಲ್ಲಿ ಬ್ರಿಟೀಷರಿಗಾಗಿ ಕರವಸೂಲಿ ಮಾಡುವ ಶೇಣವರಾಗಿ ಕೆಲಸ ನಿರ್ವಹಿಸುತ್ತಿದ್ದು, ಕ್ರಮೇಣ ಜಮೀನ್ದಾರರಾಗಿದ್ದಾರೆ. ಸ್ವಾತಂತ್ರ್ಯ ಬಂದ ನಂತರವೂ ಭೂಮಾಲೀಕ ಪ್ರವೃತ್ತಿಯನ್ನು ಮುಂದುವರೆಸಿದ್ದು, ಈಗಲೂ ಆದಿವಾಸಿಗಳು, ದಲಿತರ ಮೇಲೆ ನಿರಂತರ ಹಲ್ಲೆಗಳನ್ನು ನಡೆಸುತ್ತಲೇ ಬಂದಿದ್ದಾನೆ.
protest in bangalore
ಟೌನ್ ಹಾಲ್ ಮುಂದೆ ನಡೆದ ಪ್ರತಿಭಟನೆ
director giriraj
ಗಿರಿರಾಜ್
bhaskar prasad
ಭಾಸ್ಕರ್ ಪ್ರಸಾದ್
mounakke hattu varsha
ಮೌನಕ್ಕೆ ಹತ್ತು ವರ್ಷ
vimala
ವಿಮಲಾ
ಸುಂದರ ಮಲೆಕುಡಿಯರು ಗೋಪಾಲಗೌಡನ ಜಮೀನಿನ ಪಕ್ಕದಲ್ಲಿ ಜಮೀನನ್ನು ಹೊಂದಿದ್ದು, ಸುಂದರ ಮಲೆಕುಡಿಯನು ಅಲ್ಲಿ ಕೃಷಿ ಮಾಡಬಾರದೆಂದು ಸುಮಾರು 25 ವರ್ಷಗಳ ಆದೇಶ ಹೊರಡಿಸಿದ್ದ. ಆದರೆ ಸುಂದರ ಮಲೆಕುಡಿಯ ಕೃಷಿ ಚಟುವಟಿಕೆ ಮುಂದುವರೆಸಿದಾಗ ಗೋಪಾಲಗೌಡನ ಸಹಚರರು ಸುಂದರ ಮಲೆಕುಡಿಯನ ಮನೆಗೆ ನುಗ್ಗಿ ಮಗು ಪೂರ್ಣೇಶ ಮಲಗಿದ್ದ ತೊಟ್ಟಿಲನ್ನು ಕಡಿದಿದ್ದರು. ಆಗ ಅಡ್ಡ ಬಂದ ಸುಂದರ ಮಲೆಕುಡಿಯನ ಪತ್ನಿಯ ಕೈ ಬೆರಳುಗಳನ್ನು ಗೋಪಾಲಗೌಡನ ಸಹಚರರು ತುಂಡರಿಸಿದ್ದರು. ಇಂತಹ ಹಲವಾರು ಘಟನೆಗಳು ಆ ಸಂದರ್ಭದಲ್ಲಿ ನಡೆದಿತ್ತು. 25 ವರ್ಷಗಳ ಹಿಂದೆ ಮುಖ್ಯವಾಹಿನಿಯಲ್ಲಿ ನಡೆಯುತ್ತಿರೋ ಹೋರಾಟಗಳ ಸಂಪರ್ಕ ಇಲ್ಲದಿದ್ದ ಮಲೆಕುಡಿಯರು ಬೆರಳು, ಕೈಗಳನ್ನು ಕಳೆದುಕೊಂಡು ಸುಮ್ಮನಿದ್ದರು. 
manujamatha
"ಮನುಜಮತ"
ananth naik
ಅನಂತನಾಯ್ಕ್
manujamatha
ಕೊನೆಗೊಂದು ಹಾಡು....
ಇತ್ತೀಚೆಗೆ ಮತ್ತೆ ಸುಂದರ ಮಲೆಕುಡಿಯನ ಜಮೀನಿಗೆ ನುಗ್ಗಿದ ಗೋಪಾಲಗೌಡ ಮತ್ತು ಸಹಚರರು ಮರಗಳನ್ನು ಮಿಷಿನ್ನಿನ ಮೂಲಕ ಕಡಿಯಲಾರಂಭಿಸಿದ್ದರು. ಅದನ್ನು ವಿರೋಧಿಸಿದ ಸುಂದರ ಮಲೆಕುಡಿಯ ಮತ್ತು ಪತ್ನಿ, ಮಗ ಪೂರ್ಣೇಶನಿಗೆ ಮೆಣಸಿನ ಹುಡಿ ಎರಚಿದ್ದಾರೆ. ನಂತರ ಸುಂದರ ಮಲೆಕುಡಿಯ ಕೈಗಳನ್ನು ಪ್ರಜ್ಞಾಪೂರ್ವಕವಾಗಿ ಹಿಡಿದು ಎರಡೂ ಕೈಗಳನ್ನು ಪ್ರತ್ಯೇಕವಾಗಿ ಮೆಷಿನ್ನಿನಿಂದ ತುಂಡರಿಸಿದ್ದಾರೆ. 

ಪ್ರತಿಭಟನಾಕಾರರ ಬೇಡಿಕೆಗಳು: 

  1. ಪೋಲೀಸರು ಭೂಮಾಲೀಕ ಗೋಪಾಲಗೌಡನನ್ನು ಇನ್ನೂ ಬಂಧಿಸಿಲ್ಲ. ಗೋಪಾಲಗೌಡನ ಬಂಧನವಾಗಬೇಕು. ಭೂಮಾಲೀಕನಿಂದ ಕೈಗಳನ್ನು ಕಳೆದುಕೊಂಡಿರುವ ಸುಂದರ ಮಲೆಕುಡಿಯನಿಗೆ 25 ಲಕ್ಷ ಪರಿಹಾರ ನೀಡಬೇಕು. 
  2. ಸುಂದರ ಮಲೆಕುಡಿಯನ ಪುತ್ರ ಪೂರ್ಣೇಶನಿಗೆ ಸರಕಾರಿ ಉದ್ಯೋಗ ನೀಡಬೇಕು. 
  3. ಇನ್ನೂ ಅಸ್ತಿತ್ವದಲ್ಲಿ ಇರುವ ಭೂಮಾಲೀಕ ಪದ್ಧತಿಯನ್ನು ಹತ್ತಿಕ್ಕಲು ಸರಕಾರ ನಿರ್ಧಾರ ಕೈಗೊಳ್ಳಬೇಕು. 
  4. ಭೂಮಾಲೀಕರು ಅಥವಾ ಜಮೀನ್ದಾರರ ಹೆಚ್ಚುವರಿ ಭೂಮಿಯನ್ನು ಗುರುತಿಸಿ ಅವರ ಭೂಮಿಯನ್ನು ಸರಕಾರ ವಶಪಡಿಸಿಕೊಂಡು ಗ್ರಾಮದ ಭೂ ರಹಿತರಿಗೆ ವಿತರಿಸಬೇಕು. 
  5. ಭೂಸುಧಾರಣಾ ಕಾಯ್ದೆಗೆ ಮತ್ತೆ ತಿದ್ದುಪಡಿ ತಂದು ನೂರಾರು ಎಕರೆ ಕೃಷಿ ಭೂಮಿಯನ್ನು ಹೊಂದಿ ಗ್ರಾಮದಲ್ಲಿ ಪ್ರತ್ಯೇಕ ಸರಕಾರವನ್ನು ಹೊಂದಿರುವ ಭೂಮಾಲೀಕರ ನಿಗ್ರಹಕ್ಕೆ ಕ್ರಮ ಕೈಗೊಳ್ಳಬೇಕು
Update: ದಿನಾಂಕ 23/08/2015ರಂದು ಗೋಪಾಲಕೃಷ್ಣಗೌಡನನ್ನು ಬಂಧಿಸಲಾಗಿದೆ.

ಆಗ 2, 2015

ಸುಂದರ ಮಲೆಕುಡಿಯನ ಕೈಕತ್ತರಿಸಿದ ಗೋಪಾಲ ಕೃಷ್ಣಗೌಡ.

ಮುನೀರ್ ಕಾಟಿಪಳ್ಳ
ದ ಕ ಜಿಲ್ಲೆಯ ಬೆಳ್ತಂಗಡಿಯ, ನೆರಿಯಾ ಎಂವ ಕುಗ್ರಾಮದಲ್ಲಿ ಆದಿವಾಸಿ ಸುಂದರ ಮಲೆಕುಡಿಯರ ಒಂದು ಕೈ, ಇನ್ನೊಂದು ಕೈಯ ನಾಲ್ಕು ಬೆರಳುಗಳನ್ನು ಸ್ಥಳೀಯ ಭೂಮಾಲೀಕ ಗೋಪಾಲ ಕೃಷ್ಣ ಗೌಡ ಮರ ಕತ್ತರಿಸುವ ಯಂತ್ರದ ಮೂಲಕ ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಹಾಕಿದ್ದಾನೆ.

ತನ್ನ ತುಂಡು ಭೂಮಿಯನ್ನು ಬಿಜೆಪಿಗೆ ಸೇರಿರುವ ಭೂಮಾಲಿಕನಿಗೆ ಬಿಟ್ಟುಕೊಡದ್ದು ಸುಂದರ ಮಲೆಕುಡಿಯ ಮಾಡಿರುವ ಮಹಾ ಅಪರಾಧ. ಕತ್ತರಿಸಲ್ಪಟ್ಟ ನಾಲ್ಕು ಬೆರಳುಗಳಲ್ಲಿ ಒಂದು ಮಾತ್ರ ಮರು ದಿವಸ ಪೊಲೀಸರಿಗೆ ಸಿಕ್ಕಿದೆ ಅನ್ನುವುದೇ ಘಟನೆಯ ಬರ್ಬರತೆಯನ್ನು ಸಾರುತ್ತದೆ. ಸರಕಾರಿ ಆಸ್ಪತ್ರೆಯಲ್ಲಿ ತುಂಡಾದ ಎರಡೂ ಕೈಗಳನ್ನು ಅಪರೇಷನ್ ಮಾಡಿ ಜೋಡಿಸಿದ್ದರೂ, ಕೈ ಮೊದಲಿನಂತೆ ಕೆಲಸ ಮಾಡೋದು ಅಸಾಧ್ಯ ಎಂದು ವೈದ್ಯರು ಕೈಚೆಲ್ಲಿದ್ದಾರೆ.

ಆದಿವಾಸಿ ಮಲೆಕುಡಿಯರು ಇದೇ ಪ್ರಥಮ ಬಾರಿ ಇಷ್ಡೊಂದು ಆಕ್ರೋಶಗೊಂಡಿದ್ದರು. ನ್ಯಾಷನಲ್ ಪಾರ್ಕ್ ಹೆಸರಲ್ಲಿ ತಮ್ಮ ಭೂಮಿಯ ಹಕ್ಕನ್ನು ಕಿತ್ತುಕೊಂಡಾಗ, ಕಾಡುತ್ಪತ್ತಿಗಳನ್ನು ಸಂಗ್ರಹಿಸದಂತೆ ತಡೆದಾಗ, ನಕ್ಸಲ್ ಹೆಸರಲ್ಲಿ ಪೊಲೀಸರು ಮನೆನುಗ್ಗಿದಾಗ, ಜೈಲಿಗಟ್ಟಿದಾಗ, ಎನ್ಕೌಂಟರ್ ಹೆಸರಲ್ಲಿ ತಮ್ಮ ಯುವಕರನ್ನು ಗುಂಡಿಟ್ಟು ಕೊಂದಾಗ... ಮೌನವಾಗಿಯೇ ಸಹಿಸಿಕೊಂಡಿದ್ದ ಮಲೆಯ ಮಕ್ಕಳು ಈ ಬಾರಿ ಮಾತ್ರ ತಿರುಗಿ ಬಿದ್ದಿದ್ದಾರೆ.

ಸುಂದರ ಮಲೆಕುಡಿಯರ ಎರಡು ಕೈಗಳನ್ನು ಮರ ಕತ್ತರಿಸುವ ಯಂತ್ರದಲ್ಲಿ ಭೂಮಾಲಿಕ ಗೋಪಾಲಕೃಷ್ಣ ಗೌಡ ನಿಷ್ಕರುಣೆಯಿಂದ ಕತ್ತರಿಸಿಹಾಕಿ, ಆತನ ಮನೆಯ ಹೆಣ್ಣುಮಕ್ಕಳು ಕತ್ತರಿಸಿದ ಕೈಗೆ ಮೆಣಸಿನ ಹುಡಿ ಸುರಿದಿದ್ದನ್ನು ಕಂಡು ಮಲೆಕುಡಿಯರು ಕೆರಳಿ ನಿಂತಿದ್ದಾರೆ. ಇಂದು dyfi, cpm, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಕೈಯಲ್ಲಿ ಕೆಂಪು, ಬಿಳಿ ಬಾವುಟ ಹಿಡಿದು ಸಾವಿರ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಕ್ರೂರಿ ಭೂಮಾಲಕನ ಫೋಟೊಗಳಿಗೆ ಚಪ್ಪಲಿಹಾರ ಹಾಕಿ, ಆತನ ಶವದ ಪ್ರತಿಕೃತಿಯನ್ನು ಹೊತ್ತುಕೊಂಡು ಬೆಳ್ತಂಗಡಿ ಪೇಟೆ ಇಡೀ ಮೆರವಣಿಗೆ ನಡೆಸಿದ್ದಾರೆ. ಅವರ ಘೋಷಣೆಯ ಆವೇಶ, ನಡಿಗೆಯ ಬಿರುಸಿಗೆ ಬೆಳ್ತಂಗಡಿಯ "ನಾಗರಿಕರು" ದಂಗಾಗಿಹೋಗಿದ್ದರು. ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ, ಮುಖಂಡರ ಭಾಷಣಗಳಿಗೆ ಮಲೆಮಕ್ಕಳು ತೋರುತ್ತಿದ್ದ ಪ್ರತಿಕ್ರಿಯೆಗೆ ಮಂಗಳೂರಿನಲ್ಲಿದ್ದ ಜಿಲ್ಲಾಧಿಕಾರಿಯೂ ಕಂಪಿಸಿದ್ದು ಸ್ಥಳಕ್ಕೆ ಬಂದ ತಹಶೀಲ್ದಾರ್ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಈ ವರಗೆ ಕೈಕಳಕೊಂಡ ನತದೃಷ್ಟನನ್ನು ಸಂದರ್ಶಿಸದ ಶಾಸಕ, ಮಂತ್ರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು, ಆದಿವಾಸಿಗಳ ಬೇಡಿಕೆಯಂತೆ ತಕ್ಷಣ ಭೂಮಾಲಕ ಗೋಪಾಲಕೃಷ್ಣ ಗೌಡನನ್ನು ಬಂಧಿಸಬೇಕು, ಬೀದಿಗೆ ಬಿದ್ದಿರುವ ಸುಂದರ ಮಲೆಕುಡಿಯರ ಕುಟುಂಬಕ್ಕೆ ಪೂರ್ಣ ಪರಿಹಾರ ನೀಡಬೇಕು, ಭೂಮಾಲಕನ ಅಪಾರ ಒತ್ತುವರಿಗಳನ್ನು ತೆರವುಗೊಳಿಸಿ ಬಡ ಮಲೆಕುಡಿಯರಿಗೆ ಹಂಚಬೇಕು. ಇಲ್ಲದಿದ್ದಲ್ಲಿ ಆದಿವಾಸಿಗಳ ಹೋರಾಟ ತೀವ್ರ ಸ್ವರೂಪ ಪಡಕೊಳ್ಳುವುದು ನಿಶ್ಚಿತ...

ಹೊಟ್ಟೆಯ ಸಿಟ್ಟು ರಟ್ಟೆಗೆ ಬಂದರೆ ಭವ್ಯ ಮಹಲುಗಳು ನಿಲ್ಲೋದಿಲ್ಲ, ಇದಕ್ಕೆ ದಕ್ಷಿಣ ಕನ್ನಡವೂ ಹೊರತಲ್ಲ.

ಬೆಳ್ತಂಗಡಿ ಮಲೆಕುಡಿಯ ಆದಿವಾಸಿಗಳ ಕೈ ಕತ್ತರಿಸಿದ ಭೂಮಾಲಕ ಅರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಆಗಸ್ಟ್‌ 4, ಮಂಗಳವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ಎದುರು ಪ್ರತಿಭಟನೆ. ಗೆಳೆಯರೊಂದಿಗೆ ಬನ್ನಿ. 
'ಮನುಜಮತ' ವಾಟ್ಸ್ ಅಪ್ ಗ್ರೂಪ್. 9008055958
ಪೂರಕ ಮಾಹಿತಿ: ಅನಂತ್ ನಾಯ್ಕ್