Aug 2, 2015

ಸುಂದರ ಮಲೆಕುಡಿಯನ ಕೈಕತ್ತರಿಸಿದ ಗೋಪಾಲ ಕೃಷ್ಣಗೌಡ.

ಮುನೀರ್ ಕಾಟಿಪಳ್ಳ
ದ ಕ ಜಿಲ್ಲೆಯ ಬೆಳ್ತಂಗಡಿಯ, ನೆರಿಯಾ ಎಂವ ಕುಗ್ರಾಮದಲ್ಲಿ ಆದಿವಾಸಿ ಸುಂದರ ಮಲೆಕುಡಿಯರ ಒಂದು ಕೈ, ಇನ್ನೊಂದು ಕೈಯ ನಾಲ್ಕು ಬೆರಳುಗಳನ್ನು ಸ್ಥಳೀಯ ಭೂಮಾಲೀಕ ಗೋಪಾಲ ಕೃಷ್ಣ ಗೌಡ ಮರ ಕತ್ತರಿಸುವ ಯಂತ್ರದ ಮೂಲಕ ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಹಾಕಿದ್ದಾನೆ.

ತನ್ನ ತುಂಡು ಭೂಮಿಯನ್ನು ಬಿಜೆಪಿಗೆ ಸೇರಿರುವ ಭೂಮಾಲಿಕನಿಗೆ ಬಿಟ್ಟುಕೊಡದ್ದು ಸುಂದರ ಮಲೆಕುಡಿಯ ಮಾಡಿರುವ ಮಹಾ ಅಪರಾಧ. ಕತ್ತರಿಸಲ್ಪಟ್ಟ ನಾಲ್ಕು ಬೆರಳುಗಳಲ್ಲಿ ಒಂದು ಮಾತ್ರ ಮರು ದಿವಸ ಪೊಲೀಸರಿಗೆ ಸಿಕ್ಕಿದೆ ಅನ್ನುವುದೇ ಘಟನೆಯ ಬರ್ಬರತೆಯನ್ನು ಸಾರುತ್ತದೆ. ಸರಕಾರಿ ಆಸ್ಪತ್ರೆಯಲ್ಲಿ ತುಂಡಾದ ಎರಡೂ ಕೈಗಳನ್ನು ಅಪರೇಷನ್ ಮಾಡಿ ಜೋಡಿಸಿದ್ದರೂ, ಕೈ ಮೊದಲಿನಂತೆ ಕೆಲಸ ಮಾಡೋದು ಅಸಾಧ್ಯ ಎಂದು ವೈದ್ಯರು ಕೈಚೆಲ್ಲಿದ್ದಾರೆ.

ಆದಿವಾಸಿ ಮಲೆಕುಡಿಯರು ಇದೇ ಪ್ರಥಮ ಬಾರಿ ಇಷ್ಡೊಂದು ಆಕ್ರೋಶಗೊಂಡಿದ್ದರು. ನ್ಯಾಷನಲ್ ಪಾರ್ಕ್ ಹೆಸರಲ್ಲಿ ತಮ್ಮ ಭೂಮಿಯ ಹಕ್ಕನ್ನು ಕಿತ್ತುಕೊಂಡಾಗ, ಕಾಡುತ್ಪತ್ತಿಗಳನ್ನು ಸಂಗ್ರಹಿಸದಂತೆ ತಡೆದಾಗ, ನಕ್ಸಲ್ ಹೆಸರಲ್ಲಿ ಪೊಲೀಸರು ಮನೆನುಗ್ಗಿದಾಗ, ಜೈಲಿಗಟ್ಟಿದಾಗ, ಎನ್ಕೌಂಟರ್ ಹೆಸರಲ್ಲಿ ತಮ್ಮ ಯುವಕರನ್ನು ಗುಂಡಿಟ್ಟು ಕೊಂದಾಗ... ಮೌನವಾಗಿಯೇ ಸಹಿಸಿಕೊಂಡಿದ್ದ ಮಲೆಯ ಮಕ್ಕಳು ಈ ಬಾರಿ ಮಾತ್ರ ತಿರುಗಿ ಬಿದ್ದಿದ್ದಾರೆ.

ಸುಂದರ ಮಲೆಕುಡಿಯರ ಎರಡು ಕೈಗಳನ್ನು ಮರ ಕತ್ತರಿಸುವ ಯಂತ್ರದಲ್ಲಿ ಭೂಮಾಲಿಕ ಗೋಪಾಲಕೃಷ್ಣ ಗೌಡ ನಿಷ್ಕರುಣೆಯಿಂದ ಕತ್ತರಿಸಿಹಾಕಿ, ಆತನ ಮನೆಯ ಹೆಣ್ಣುಮಕ್ಕಳು ಕತ್ತರಿಸಿದ ಕೈಗೆ ಮೆಣಸಿನ ಹುಡಿ ಸುರಿದಿದ್ದನ್ನು ಕಂಡು ಮಲೆಕುಡಿಯರು ಕೆರಳಿ ನಿಂತಿದ್ದಾರೆ. ಇಂದು dyfi, cpm, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಕೈಯಲ್ಲಿ ಕೆಂಪು, ಬಿಳಿ ಬಾವುಟ ಹಿಡಿದು ಸಾವಿರ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಕ್ರೂರಿ ಭೂಮಾಲಕನ ಫೋಟೊಗಳಿಗೆ ಚಪ್ಪಲಿಹಾರ ಹಾಕಿ, ಆತನ ಶವದ ಪ್ರತಿಕೃತಿಯನ್ನು ಹೊತ್ತುಕೊಂಡು ಬೆಳ್ತಂಗಡಿ ಪೇಟೆ ಇಡೀ ಮೆರವಣಿಗೆ ನಡೆಸಿದ್ದಾರೆ. ಅವರ ಘೋಷಣೆಯ ಆವೇಶ, ನಡಿಗೆಯ ಬಿರುಸಿಗೆ ಬೆಳ್ತಂಗಡಿಯ "ನಾಗರಿಕರು" ದಂಗಾಗಿಹೋಗಿದ್ದರು. ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ, ಮುಖಂಡರ ಭಾಷಣಗಳಿಗೆ ಮಲೆಮಕ್ಕಳು ತೋರುತ್ತಿದ್ದ ಪ್ರತಿಕ್ರಿಯೆಗೆ ಮಂಗಳೂರಿನಲ್ಲಿದ್ದ ಜಿಲ್ಲಾಧಿಕಾರಿಯೂ ಕಂಪಿಸಿದ್ದು ಸ್ಥಳಕ್ಕೆ ಬಂದ ತಹಶೀಲ್ದಾರ್ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಈ ವರಗೆ ಕೈಕಳಕೊಂಡ ನತದೃಷ್ಟನನ್ನು ಸಂದರ್ಶಿಸದ ಶಾಸಕ, ಮಂತ್ರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು, ಆದಿವಾಸಿಗಳ ಬೇಡಿಕೆಯಂತೆ ತಕ್ಷಣ ಭೂಮಾಲಕ ಗೋಪಾಲಕೃಷ್ಣ ಗೌಡನನ್ನು ಬಂಧಿಸಬೇಕು, ಬೀದಿಗೆ ಬಿದ್ದಿರುವ ಸುಂದರ ಮಲೆಕುಡಿಯರ ಕುಟುಂಬಕ್ಕೆ ಪೂರ್ಣ ಪರಿಹಾರ ನೀಡಬೇಕು, ಭೂಮಾಲಕನ ಅಪಾರ ಒತ್ತುವರಿಗಳನ್ನು ತೆರವುಗೊಳಿಸಿ ಬಡ ಮಲೆಕುಡಿಯರಿಗೆ ಹಂಚಬೇಕು. ಇಲ್ಲದಿದ್ದಲ್ಲಿ ಆದಿವಾಸಿಗಳ ಹೋರಾಟ ತೀವ್ರ ಸ್ವರೂಪ ಪಡಕೊಳ್ಳುವುದು ನಿಶ್ಚಿತ...

ಹೊಟ್ಟೆಯ ಸಿಟ್ಟು ರಟ್ಟೆಗೆ ಬಂದರೆ ಭವ್ಯ ಮಹಲುಗಳು ನಿಲ್ಲೋದಿಲ್ಲ, ಇದಕ್ಕೆ ದಕ್ಷಿಣ ಕನ್ನಡವೂ ಹೊರತಲ್ಲ.

ಬೆಳ್ತಂಗಡಿ ಮಲೆಕುಡಿಯ ಆದಿವಾಸಿಗಳ ಕೈ ಕತ್ತರಿಸಿದ ಭೂಮಾಲಕ ಅರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಆಗಸ್ಟ್‌ 4, ಮಂಗಳವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ಎದುರು ಪ್ರತಿಭಟನೆ. ಗೆಳೆಯರೊಂದಿಗೆ ಬನ್ನಿ. 
'ಮನುಜಮತ' ವಾಟ್ಸ್ ಅಪ್ ಗ್ರೂಪ್. 9008055958
ಪೂರಕ ಮಾಹಿತಿ: ಅನಂತ್ ನಾಯ್ಕ್

No comments:

Post a Comment