ಏಪ್ರಿ 11, 2015

ಬಿ.ಬಿ.ಎಂ.ಪಿ ವಿಭಜನೆಗೆ ಸುಗ್ರೀವಾಜ್ಞೆ ಪ್ರಹಸನ!

bbmp division
ಹೂವಿನಹಿಪ್ಪರಗಿಯ ಕಾಂಗ್ರೆಸ್ ಶಾಸಕ ಎ.ಎಸ್.ನಡಹಳ್ಳಿ ತಮ್ಮದೇ ಕಾಂಗ್ರೆಸ್ ಸರಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಉತ್ತರ ಕರ್ನಾಟಕಕ್ಕೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಪದೇ ಪದೇ ಮಾಡುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಿರುವ ನಡಹಳ್ಳಿಯವರು ಪೂರ್ಣ ಕರ್ನಾಟಕವನ್ನು ಅಭಿವೃದ್ಧಪಡಿಸುವುದು ನಿಮಗೆ ಸಾಧ್ಯವಾಗದೇ ಇದ್ದರೆ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿಯಾದರೂ ಮಾಡಿಬಿಡಿ ಎಂದಿದ್ದಾರೆ. ಅದನ್ನೇನು ಅವರು ಸಿಟ್ಟಿನಿಂದ, ಬೇಸರದಿಂದ ಹೇಳಿದರೋ ಅಥವಾ ಪ್ರತ್ಯೇಕ ರಾಜ್ಯವಾದರೆ ತಪ್ಪೇನು ಎಂಬರ್ಥದಲ್ಲಿ ಹೇಳಿದರೋ ಗೊತ್ತಿಲ್ಲ. ಎಂಟು ವರುಷಗಳ ಹಿಂದೆ ‘ಬೃಹತ್ತಾಗಿಸಿದ್ದ’ ಬೆಂಗಳೂರು ಮಹಾನಗರ ಪಾಲಿಕೆಯನ್ನು ಬಲವಂತದಿಂದ ಮತ್ತೆ ಚಿಕ್ಕದು ಮಾಡಲು ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹೊರಟಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರ ಪ್ರತ್ಯೇಕ ರಾಜ್ಯ ಬೇಡಿಕೆಯೂ ಸರಿಯೇ ಅಲ್ಲವೇ?!

ಒಂದು ವರದಿಯ ಪ್ರಕಾರ 1949ರಲ್ಲಿ ಬೆಂಗಳೂರು ನಗರ ಪಾಲಿಕೆ ಅರವತ್ತೊಂಭತ್ತು ಚದರ ಕಿ.ಮಿಗಳಷ್ಟು ಮಾತ್ರವಿತ್ತು. ರಾಜಧಾನಿಯೆಂಬ ಕಾರಣ, ಆರ್ಥಿಕತೆ ಇಲ್ಲೇ ಕೇಂದ್ರೀಕೃತವಾದಂತೆ ಉದ್ಯೋಗಗಳನ್ನರಸಿ ವಿವಿಧ ಜಿಲ್ಲೆಗಳಿಂದಷ್ಟೇ ಅಲ್ಲದೆ ದೇಶದ ವಿವಿದೆಡೆಯಿಂದಲೂ ಬೆಂಗಳೂರಿಗೆ ವಲಸೆ ಬರುವವರ ಸಂಖೈ ಹೆಚ್ಚುತ್ತಲೇ ಸಾಗಿತು. 2007ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿದ್ದಿದ್ದು ನೂರು ವಾರ್ಡುಗಳು. ‘ಅಭಿವೃದ್ಧಿ’ಗೆ ಪೂರಕವಾಗಲಿ ಎಂಬ ಕಾರಣದಿಂದ ಈ ನೂರು ವಾರ್ಡುಗಳ ಜೊತೆಗೆ ಬೊಮ್ಮನಹಳ್ಳಿ, ಬ್ಯಾಟರಾಯನಪುರ, ದಾಸರಹಳ್ಳಿ, ಎಲೆಕ್ಟ್ರಾನಿಕ್ಸ್ ಸಿಟಿ, ಕೃಷ್ಣರಾಜಪುರ, ಮಹದೇವಪುರ, ರಾಜರಾಜೇಶ್ವರಿ ನಗರ, ಯಲಹಂಕ ಮತ್ತು ಕೆಂಗೇರಿ ನಗರ/ಪಟ್ಟಣ ಪಂಚಾಯತ್ ಗಳನ್ನು ಬೆಂಗಳೂರು ಪಾಲಿಕೆಯ ವ್ಯಾಪ್ತಿಗೆ ತರಲಾಯಿತು. ಇದರ ಜೊತೆಜೊತೆಗೆ ನಗರಕ್ಕೆ ಹೊಂದಿಕೊಂಡ ನೂರಹನ್ನೊಂದು ಹಳ್ಳಿಗಳನ್ನೂ ಸೇರಿಸಿಕೊಂಡು ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ ಅಸ್ತಿತ್ವಕ್ಕೆ ಬಂತು. ಅರವತ್ತೊಂಭತ್ತು ಚದರ ಕಿ.ಮಿ ಇದ್ದ ಬೆಂಗಳೂರು ಈಗ 716 ಚದರ ಕಿ.ಮಿಗಳವರೆಗೆ ಬೆಳೆದು ನಿಂತಿತು! ಮಾಗಡಿ ಕೆಂಪೇಗೌಡರು ಕಟ್ಟಿದ ಬೆಂಗಳೂರು ಮಾಗಡಿಯವರೆಗೂ ಚಾಚಿಕೊಳ್ಳುತ್ತಿದೆ ಎಂದರೆ ತಪ್ಪಲ್ಲ.

ಈಗ ಬೃಹತ್ ಬೆಂಗಳೂರಿಗೆ ಹೊಂದಿಕೊಂಡಂತಿರುವ ಹಳ್ಳಿಗಳು ತಾವ್ಯಾವಾಗ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುತ್ತೇವೆ ಎಂದು ಕಾಯುತ್ತಿವೆ! ‘ಮಹಾನಗರ ಪಾಲಿಕೆ’ ಎಂಬ ಬೋರ್ಡು ಬಿದ್ದಾಗ ನಡೆಯುವ ರಸ್ತೆ, ಕುಡಿಯುವ ನೀರಿನ ಅಭಿವೃದ್ಧಿ ಕೆಲಸಗಳು ನಗರ/ಪಟ್ಟಣ/ಗ್ರಾಮ ಪಂಚಾಯ್ತಿ ಎಂಬ ಬೋರ್ಡು ಬಿದ್ದಾಗ ನಡೆಯುವುದಿಲ್ಲ ಎಂಬುದು ಇದಕ್ಕೆ ಒಂದು ಕಾರಣವಾದರೆ ‘ಬಿ.ಬಿ.ಎಂ.ಪಿ’ ವ್ಯಾಪ್ತಿಕೆ ಒಳಪಟ್ಟ ಕ್ಷಣದಿಂದಲೇ ಭೂಮಿಯ ಬೆಲೆ ಆಕಾಶಕ್ಕೇರುವುದು ಮತ್ತೊಂದು ಕಾರಣ. ‘ಮಹಾನಗರ ಪಾಲಿಕೆ’ಯ ವ್ಯಾಪ್ತಿಯಲ್ಲಿ ನಡೆಯುವ ‘ಅಭಿವೃದ್ಧಿ’ ಕೆಲಸಗಳನ್ನು ಇತರ ಬೋರ್ಡುಗಳಡಿಯಲ್ಲೂ ಮಾಡಿದ್ದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅವಶ್ಯಕತೆಯೇ ಇರಲಿಲ್ಲವಲ್ಲವೇ? ಇಷ್ಟಗಲವಿದ್ದ ಊರನ್ನು ಊರಗಲ ಮಾಡಿ ಒಂದು ಸರಕಾರ ತಪ್ಪು ಮಾಡಿದರೆ ‘ಇಲ್ಲಾರೀ ಇದ್ಯಾಕೋ ಸರಿ ಕಾಣ್ತಿಲ್ಲ’ ಎಂದು ಬಿ.ಬಿ.ಎಂ.ಪಿಯನ್ನೇ ಮೂರು ಭಾಗ ಮಾಡಲೊರಟು ಈಗಿನ ಸರಕಾರ ಮತ್ತೊಂದು ತಪ್ಪು ಮಾಡುತ್ತಿದೆ. ಆಗಿನ ಮತ್ತು ಈಗಿನ ಸರಕಾರ ಮತ್ತು ಮುಖ್ಯಮಂತ್ರಿಗಳು ಬೇರೆ ಬೇರೆಯಾದರೂ ಒಟ್ಟಿನಲ್ಲಿ ಇವರೆಲ್ಲರ ಆಡಳಿತ ನೀತಿ ತುಘಲಕ್ಕನ ತಿಕ್ಕಲುತನವನ್ನು ತೋರುತ್ತಿದೆಯಲ್ಲವೇ?

ಎಲ್ಲವೂ ಅಂತರ್ಜಾಲಮಯವಾಗಿರುವಾಗ ಬಿ.ಬಿ.ಎಂ.ಪಿಯನ್ನು ಒಂದಾಗಿಯೇ ಇಟ್ಟು ಅಧಿಕಾರವನ್ನು ವಿಕೇಂದ್ರೀಕರಣಗೊಳಿಸುವುದು ಕಷ್ಟದ ಮಾತೇನಲ್ಲ. ವಿಭಜನೆಗೆ ಸರಕಾರ ಅಭಿವೃದ್ಧಿಗೆ ಪೂರಕವಾದ ನಿರ್ಧಾರವಿದು ಎಂಬ ಸಮರ್ಥನೆ ಕೊಟ್ಟುಕೊಳ್ಳಲು ಪ್ರಯತ್ನಿಸುತ್ತಿದೆಯಾದರೂ ಈ ವಿಭಜನೆಯನ್ನು ಜಾರಿಗೆ ತರಲು ಸುಗ್ರೀವಾಜ್ಞೆಯ ಮೊರೆ ಹೊಕ್ಕಿರುವುದು ಇದು ರಾಜಕೀಯ ಕಾರಣದ ವಿಭಜನೆ ಎಂಬ ಅನುಮಾನಕ್ಕೆ ಪುಷ್ಟಿ ನೀಡುತ್ತದೆ. ವಿಭಜನೆಯ ನೆಪದಲ್ಲಿ ಬಿ.ಬಿ.ಎಂ.ಪಿ ಚುನಾವಣೆಯನ್ನು ಮತ್ತಷ್ಟು ಮುಂದೂಡಲು ಸಾಧ್ಯವೇ ಎಂಬ ಯೋಚನೆ ಕೂಡ ಸರಕಾರಕ್ಕಿರುವಂತಿದೆ. ಮೂರು ಭಾಗಗಳನ್ನಾಗಿ ವಿಂಗಡಿಸಿದ ನಂತರ ಮೂವರು ಮೇಯರ್ರುಗಳು, ಮತ್ತಷ್ಟು ಹುದ್ದೆಗಳು, ಮತ್ತಷ್ಟು ಹೊರೆ, ಆ ಮೂರು ಭಾಗಗಳಿಗೆ ಮತ್ತಷ್ಟು ಹಳ್ಳಿಗಳ ಸೇರ್ಪಡೆ, ನಂತರ ಮತ್ತೆ ಆ ಮೂರು ಭಾಗಗಳನ್ನು ಆರು ಭಾಗಗಳನ್ನಾಗಿ………. ಇವೆಲ್ಲ ಕೊನೆಗಾಣುವುದಾದರೂ ಯಾವಾಗ? ಬೆಂಗಳೂರಿನಲ್ಲೇ ಠಿಕಾಣಿ ಹಾಕಬಯಸುವ ಉದ್ದಿಮೆಗಳನ್ನು ಮತ್ತೊಂದು ನಗರದತ್ತ ಹೋಗುವಂತೆ ಮಾಡುವವರೆಗೂ ಈ ಯಾವ ಸಮಸ್ಯೆಗೂ ಪರಿಹಾರ ದೊರಕುವುದಿಲ್ಲ.

ಸತ್ಯಕ್ಕೆ ಹತ್ತಿರವಾದ ಮತ್ತೊಂದು ಭಯವೆಂದರೆ ಈಗಾಗಲೇ ಸೊರಗಿರುವ ಬೆಂಗಳೂರಿನ ಕನ್ನಡ ಮತ್ತಷ್ಟು ನಿಶ್ಯಕ್ತವಾಗಿಬಿಡಬಹುದು. ಪರಭಾಷಿಕರನ್ನು ಬಿಡಿ ಕನ್ನಡಿಗ ಉದ್ಯಮಿಗಳನೇಕರು ಬೆಂಗಳೂರನ್ನು ಕೇಂದ್ರಾಡಳಿತ ಮಾಡಬೇಕೆಂದು ಆಗೀಗ ಮಾತನಾಡಿದ್ದಿದೆ. ಕರ್ನಾಟಕಕ್ಕೇ ಸೇರಿದ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಅಲ್ಲಿನ ಸ್ಥಳೀಯ ಆಡಳಿತದಲ್ಲಿ ಬಹುಮತ ಸಿಕ್ಕಿದಾಗಲೆಲ್ಲ ಕನ್ನಡ, ಕರ್ನಾಟಕದ ವಿರುದ್ಧ ನಿರ್ಣಯ ಜಾರಿಗೊಳಿಸುತ್ತಾರೆ. ಜನರ ಭಾವನೆಗಳನ್ನು ಕೆರಳಿಸಿ ಮುಂದಿನ ಸಲದ ಮತ ಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯ ಶಾಸಕರು, ಸಂಸದರು ಪಕ್ಷಾತೀತವಾಗಿ ಸುಮ್ಮಗಿದ್ದುಬಿಡುತ್ತಾರೆ! ಕಾರಣ ಮರಾಠಿ ಭಾಷಿಕರ ಮತಗಳು ತಮ್ಮ ಕೈತಪ್ಪಿ ಹೋದರೆ ಎಂಬ ಭಯ!. ಅನ್ಯಭಾಷಿಕರ ಸಂಖೈ ಹೆಚ್ಚುತ್ತಿರುವ ಬೆಂಗಳೂರನ್ನು ಈಗ ವಿಭಜಿಸಿದರೆ ಬೆಳಗಾವಿಯಲ್ಲಿ ನಡೆದದ್ದು ಬೆಂಗಳೂರಿನಲ್ಲಿ ನಡೆಯದೇ ಇದ್ದೀತೆ? ತಮಿಳು, ತೆಲುಗು, ಹಿಂದಿ ಭಾಷಿಕರ ಮತಗಳನ್ನು ಕಳೆದುಕೊಳ್ಳಲಿಚ್ಛಿಸದ ಬೆಂಗಳೂರಿನ ಶಾಸಕ – ಸಂಸದರು ಮೌನವಾಗಿದ್ದುಬಿಟ್ಟರೆ ಕನ್ನಡದ ಗತಿಯೇನಾಗಬೇಕು? ಇವ್ಯಾವುದನ್ನೂ ಯೋಚಿಸದೆ ತತ್ ಕ್ಷಣದ ರಾಜಕೀಯ ಲಾಭಕ್ಕಾಗಿ ಬೆಂಗಳೂರನ್ನು ವಿಭಜಿಸುವ ನಿರ್ಧಾರವನ್ನು ಅತ್ಯಾತುರದಿಂದ ತೆಗೆದುಕೊಳ್ಳುತ್ತಿರುವ ಸಿದ್ಧರಾಮಯ್ಯ ಬೆಂಗಳೂರಿನ ಭವಿಷ್ಯದ ಭಾಷಾ ಕಲಹಕ್ಕೆ ಮುನ್ನುಡಿ ಬರೆಯುತ್ತಿದ್ದಾರಾ?

ಏಪ್ರಿ 10, 2015

ಯೆಮೆನ್ನಿನ ಆಂತರಿಕ ಯುದ್ಧದಲ್ಲಿ ಪರದೇಶಗಳದ್ದೇ ಕಾರುಬಾರು

indian army in yemen
Dr Ashok K R
ಯೆಮೆನ್ ದೇಶದಲ್ಲಿ ಭಾರತೀಯ ಸೈನಿಕರು ಪರಾಕ್ರಮ ಮೆರೆದಿದ್ದಾರೆ. ಆಂತರಿಕ ಯುದ್ಧ ಮತ್ತು ಬಾಹ್ಯ ಶಕ್ತಿಗಳ ಕೈವಾಡದಿಂದ ಭುಗಿಲೆದ್ದಿರುವ ಹಿಂಸೆಯಲ್ಲಿ ವಿವಿಧ ದೇಶದ ನಾಗರೀಕರು ಸಿಕ್ಕಿಹಾಕಿಕೊಂಡಿದ್ದಾರೆ. ಮೂರು ಸಾವಿರಕ್ಕೂ ಅಧಿಕ ಭಾರತೀಯರನ್ನು ನಮ್ಮ ಸೈನಿಕರು ಸುರಕ್ಷಿತವಾಗಿ ವಾಪಸ್ಸು ತರುವಲ್ಲಿ ಯಶಸ್ಸು ಕಂಡಿದ್ದಾರೆ. ಜೊತೆ ಜೊತೆಗೇ ಅನ್ಯದೇಶದ ಪ್ರಜೆಗಳನ್ನು ಕಾಪಾಡಿದ್ದಾರೆ. ಮಾಜಿ ಜೆನರಲ್ ಆದ ಕೇಂದ್ರ ಸಚಿವ ವಿ.ಕೆ.ಸಿಂಗ್ ಗಲಭೆಗ್ರಸ್ಥ ದೇಶದ ಸಮೀಪದಲ್ಲೇ ಇದ್ದು ಕಾರ್ಯಾಚರಣೆಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಭಾರತೀಯ ಸೈನಿಕರ ಈ ಸಾಹಸದ ಕಾರ್ಯವನ್ನು ಮೆಚ್ಚಿದ ಅನೇಕ ದೇಶಗಳು ಭಾರತದ ವಿದೇಶಾಂಗ ಕಛೇರಿಗೆ ತಮ್ಮ ದೇಶವಾಸಿಗಳನ್ನೂ ಪಾರು ಮಾಡಬೇಕೆಂದು ಕೇಳಿದ್ದಾರೆಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ದೇಶ ನಿವಾಸಿಗಳನ್ನು ಕಾಪಾಡಲು ಯೆಮೆನ್ನಿಗೆ ತೆರಳಿದ್ದ ಪಾಕಿಸ್ತಾನಿ ಸೈನಿಕರು ಭಾರತದ ಕೆಲವು ಪ್ರಜೆಗಳನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಲೇ ಸಾಗುತ್ತಿದ್ದ ಪಾಕ್ – ಭಾರತ ನಡುವಿನ ಸಂಬಂಧ ಯೆಮೆನ್ನಿನ ಹಿಂಸೆ ಮತ್ತಾ ಹಿಂಸೆ ಮೂಡಿಸಿದ ಮಾನವೀಯತೆಯ ಅನುಭವದಿಂದ ಒಂದಷ್ಟು ಸುಧಾರಣೆಗೊಳ್ಳಬಹುದೇ?

ಮಧ್ಯ ಪ್ರಾಚ್ಯದಲ್ಲಿ ಒಂದಾದ ನಂತರ ಮತ್ತೊಂದು ದೇಶಕ್ಕೆ ಹಿಂಸೆ ಹರಡುತ್ತಲೇ ಇದೆ. ಬಹುತೇಕ ಕಡೆಗಳಲ್ಲಿ ಹಿಂಸೆಗೆ – ಯುದ್ಧಕ್ಕೆ ಕಾರಣವಾಗುವ ಅನೇಕ ಅಂಶಗಳು ಪುನರಾವರ್ತನೆಯಾಗುತ್ತಿದೆ. ತೈಲಭರಿತ ದೇಶಗಳು, ಸರ್ವಾಧಿಕಾರಿ, ಮುಸ್ಲಿಂ ಮೂಲಭೂತವಾದಿಗಳು, ಸುನ್ನಿ – ಶಿಯಾ ಮುಸ್ಲಿಮರ ನಡುವಿನ ಕಿತ್ತಾಟ, ಪ್ರಭಾವಿ ದೇಶಗಳ ತೈಲ ದಾಹ – ಇವಿಷ್ಟು ಕಾರಣಗಳು ಮಧ್ಯ ಪ್ರಾಚ್ಯದ ಅನೇಕ ದೇಶಗಳಲ್ಲಿ ಆಂತರಿಕ ಹಿಂಸೆಗೆ ಪ್ರೇರಣೆಯಾಗಿವೆ. ದೇಶವೊಂದರ ಆಂತರಿಕ ಹಿಂಸೆಯನ್ನು ಹತ್ತಿಕ್ಕಿ, ಮಾನವ ಹಕ್ಕು ಉಲ್ಲಂಘನೆಯನ್ನು ತಡೆದು, ‘ಪ್ರಜಾಪ್ರಭುತ್ವ’ವನ್ನು ಸ್ಥಾಪಿಸುವ ಸಲುವಾಗಿ ಅನ್ಯ ದೇಶಗಳು ಹಿಂಸೆಯನ್ನು ಪ್ರಿಯವಾಗಿಸಿಕೊಂಡ ಒಂದು ಗುಂಪನ್ನು ಪರೋಕ್ಷವಾಗಿ ಬೆಂಬಲಿಸುವ ಮತ್ತು ಅನೇಕ ಬಾರಿ ಪ್ರತ್ಯಕ್ಷವಾಗಿಯೇ ಯುದ್ಧದಲ್ಲಿ ತೊಡಗಿಕೊಳ್ಳುತ್ತಿವೆ. ಸಾಮಾಜಿಕ ಜಾಲತಾಣಗಳ ನೆರವಿನಿಂದ, ಸ್ಪೂರ್ತಿಯಿಂದ ಶುರುವಾದ ‘ಅರಬ್ ಕ್ರಾಂತಿ’ ಕ್ರಾಂತಿಗಿಂತ ಹೆಚ್ಚಾಗಿ ಹಿಂಸಾವಿನೋದದಲ್ಲೇ ಅಂತ್ಯವಾಗುತ್ತಿರುವುದು ‘ಕ್ರಾಂತಿ’ಯ ಅಪಹಾಸ್ಯವಲ್ಲದೇ ಮತ್ತೇನೂ ಅಲ್ಲ. ಸರ್ವಾಧಿಕಾರಿ ಹೊಸ್ನಿ ಮುಬಾರಕ್ ವಿರುದ್ಧ ನಡೆದ ಇಜಿಪ್ಟ್ ಕ್ರಾಂತಿ ಪ್ರಜಾಪ್ರಭುತ್ವಕ್ಕಾಗಿ ನಡೆದ ಹೋರಾಟವೇ ಆಗಿತ್ತಾದರೂ ಕೊನೆಗದು ಪರ್ಯಾವಸನಗೊಂಡದ್ದು ಮಿಲಿಟರಿ ಮತ್ತು ಮುಸ್ಲಿಂ ಮೂಲಭೂತವಾದಿಗಳ ಅಟ್ಟಹಾಸದಲ್ಲಿ. ಗದಾಫಿಯ ಸರ್ವಾಧಿಕಾರತನವಿದ್ದ ಲಿಬಿಯಾದಲ್ಲಿ ನಡೆದ ಹೋರಾಟ ಮತ್ತು ಅಲ್ಲಿನ ರೆಬೆಲ್ ಗಳಿಗೆ ಅಮೆರಿಕಾ ನೀಡಿದ ಸರಕಾರದಿಂದ ಗದಾಫಿಯ ಆಡಳಿತವೇನೋ ಅಂತ್ಯಗೊಂಡಿತು, ಆದರೆ ಪ್ರಜಾಪ್ರಭುತ್ವ ಸ್ಥಾಪನೆಯಾಯಿತಾ? ಇನ್ನು ಇರಾಕಿನ ವಿಷಯವಂತೂ ಹೇಳುವುದೇ ಬೇಡ. ಭಯಂಕರ ಯುದ್ಧಾಸ್ತ್ರಗಳನ್ನು ಸದ್ದಾಂ ಹುಸೇನ್ ಅಡಗಿಸಿಕೊಂಡಿದ್ದಾನೆ ಎಂದು ನೂರು ಸಲ ಹೇಳಿ ಅದನ್ನೇ ಸತ್ಯವೆಂದು ನಂಬಿಸಿಬಿಟ್ಟಿತು ಅಮೆರಿಕಾ. ಪ್ರಜಾಪ್ರಭುತ್ವದ ಸ್ಥಾಪನೆಯೇ ನಮ್ಮ ಗುರಿ ಎಂದು ಯುದ್ಧ ಪ್ರಾರಂಭಿಸಿಬಿಟ್ಟಿತು. ಸದ್ದಾಂ ಬಂಧಿತನಾಗಿ ನೇಣಿಗೇರಿ ವರುಷಗಳು ಕಳೆದರೂ ಯಾವ ಭಯಂಕರ ಯುದ್ಧಾಸ್ತ್ರವೂ ಯಾರಿಗೂ ಸಿಗಲಿಲ್ಲ! ಬಹುಶಃ ಇರಾಕಿನ ಜನತೆ ಸದ್ದಾಮಿನ ಆಡಳಿತದಲ್ಲೇ ಈಗಿರುವುದಕ್ಕಿಂತ ನೆಮ್ಮದಿಯಾಗಿದ್ದರೇನೋ! ಸುನ್ನಿ ಪಂಗಡಕ್ಕೆ ಸೇರಿದ್ದ ಸದ್ದಾಂ ಹುಸೇನ್ ಶಿಯಾ ಪಂಗಡದವರ ಮೇಲೆ ನಡೆಸಿದ ದೌರ್ಜನ್ಯಗಳಿಗೆ ಲೆಕ್ಕವಿಲ್ಲ. ಕಾಲಚಕ್ರ ತಿರುಗಿದೆ. ಆಡಳಿತದಲ್ಲಿ ಶಿಯಾಗಳಿದ್ದಾರೆ, ಶಿಯಾಗಳ ಪ್ರಾಬಲ್ಯವನ್ನು ಅಂತ್ಯಗೊಳಿಸುವ ಸಲುವಾಗಿ ಸುನ್ನಿ ಮುಸ್ಲಿಮರು ಉಗ್ರರಾಗಿದ್ದಾರೆ. ಇರಾಕ್ ಮತ್ತು ಸಿರಿಯಾದ ಸುನ್ನಿ ಮುಸ್ಲಿಂ ಉಗ್ರರು ‘ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ’ (ISIS) ಕಟ್ಟಿಕೊಂಡು ಅವೆರಡು ದೇಶಗಳಿಗೇ ಅಲ್ಲದೇ ಪ್ರಪಂಚದ ಅನೇಕ ದೇಶಗಳ ನಿದ್ದೆಗೆಡಿಸುತ್ತಿದ್ದಾರೆ. ನಮ್ಮ ಬೆಂಗಳೂರಿನಲ್ಲೇ ಐ. ಎಸ್. ಐ. ಎಸ್ ಸಂಘಟನೆಯನ್ನು ಬೆಂಬಲಿಸಿ ಟ್ವೀಟುಗಳನ್ನು ಮಾಡುತ್ತಿದ್ದ ಮೆಹದಿ ಬಂಧಿತನಾಗಿರುವುದು ಮುಸ್ಲಿಂ ಮೂಲಭೂತವಾದಿಗಳು ನಿಧಾನಕ್ಕೆ ಆಲ್ ಖೈದಾದ ಪ್ರಭಾವದಿಂದ ಐ.ಎಸ್.ಐ.ಎಸ್ ನ ಕಡೆಗೆ ಹೋಗುತ್ತಿರುವುದರ ಸಂಕೇತ. ಈಗ ಯೆಮೆನ್ ದೇಶದ ಸರದಿ. ಆಂತರಿಕ ಹಿಂಸೆಯಿಂದ ಸೊರಗಿ ಹೋಗಿದ್ದ ದೇಶದಲ್ಲೀಗ ಅನ್ಯದೇಶಗಳ ವಿಮಾನ – ಗುಂಡುಗಳು ಸದ್ದು ಮಾಡಲು ಪ್ರಾರಂಭಿಸಿದೆ. 

yemen crisis
ಯೆಮೆನ್ನಿನ ಇತಿಹಾಸವನ್ನು ಗಮನಿಸಿದರೆ ಅನಕ್ಷರತೆ, ಭ್ರಷ್ಟಾಚಾರ, ಬಡತನ, ಅಪೌಷ್ಟಿಕತೆಯ ವಿವರಗಳೇ ಹೆಚ್ಚಾಗಿ ದೊರಕುತ್ತದೆ. ಸಮುದ್ರ ತೀರದ ಯೆಮೆನ್ ದೇಶ ಒಮನ್ ಮತ್ತು ಸೌದಿ ಅರೇಬಿಯಾದೊಡನೆ ಗಡಿಯನ್ನು ಹಂಚಿಕೊಂಡಿದೆ. ಭಾರತಕ್ಕೆ ಬರುವ ಸಮುದ್ರದ ಹಾದಿಯಲ್ಲಿ ಯೆಮೆನ್ ಬರುವುದರಿಂದ ಬ್ರಿಟೀಷರು ಹಡಗುಯಾನಕ್ಕೆ ಬೇಕಾದ ಕಲ್ಲಿದ್ದಲ್ಲನ್ನು ಶೇಖರಿಸಲು ಯೆಮೆನ್ ದೇಶವನ್ನು ಆಯ್ದುಕೊಂಡಿತ್ತಂತೆ. ಬ್ರಿಟೀಷರ ಆಡಳಿತ, ರಷ್ಯಾದ ಆಕ್ರಮಣಕಾರಿ ನೀತಿಗಳನ್ನೆಲ್ಲಾ ಸಹಿಸಿ ಬಿಡುಗಡೆ ಹೊಂದಿ ಸ್ವಾತಂತ್ರ್ಯ ಪಡೆದಿದ್ದ ಯೆಮೆನ್ ದೇಶದ ಆಧುನಿಕ ಇತಿಹಾಸದುದ್ದಕ್ಕೂ ಹಿಂಸಾ ಕ್ರಾಂತಿಗಳೇ ತುಂಬಿಕೊಂಡಿವೆ. ಯಾರ ಪರ ನಿಮ್ಮ ಅಭಿಪ್ರಾಯ ಮೂಡುತ್ತದೆ ಎಂಬುದರ ಆಧಾರದ ಮೇಲೆ ಹಿಂಸೆ ನಡೆಸಿದವರು ಕ್ರಾಂತಿಕಾರಿಗಳೋ ವಿಧ್ವಂಸಕ ಕೃತ್ಯ ಎಸಗುವ ಭಯೋತ್ಪಾದಕರೋ ಎಂಬುದು ನಿರ್ಧರಿತವಾಗುತ್ತದೆ. ಸೈದ್ಧಾಂತಿಕ ಭಿನ್ನತೆಯನ್ನು ತಳೆದ ಕಾರಣ ಯೆಮೆನ್ ದೇಶ ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ಒಡೆದು ಹೋಗಿದ್ದು 1967ರಲ್ಲಿ. ಅನೇಕ ಆಂತರಿಕ ಕಲಹಗಳು, ಎರಡು ದೇಶಗಳ ನಡುವೆ ನಡೆದ ಅನೇಕ ಯುದ್ಧಗಳ ತರುವಾಯ ಯೆಮೆನ್ ಮತ್ತೆ ಒಂದಾಗಿದ್ದು 1990ರಲ್ಲಿ. 1978ರಿಂದಲೇ ಉತ್ತರ ಯೆಮೆನ್ನಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಅಲಿ ಮೊಹಮದ್ ಸಲ್ಹೇ ಒಂದಾದ ದೇಶದ ಅಧ್ಯಕ್ಷರಾಗಿ ಮುಂದುವರೆದರು. 2011ರ ಟ್ಯುನೀಷಿಯ ಮತ್ತು ಇಜಿಪ್ಟಿನ ಕ್ರಾಂತಿಯ ಸಂದರ್ಭದಲ್ಲಿಯೇ ಯೆಮೆನ್ನಿನಲ್ಲೂ ಕ್ರಾಂತಿಯ ಕಿಡಿಗಳು ಹೊತ್ತಿಕೊಂಡಿತು. ನಿರುದ್ಯೋಗ, ಭ್ರಷ್ಟಾಚಾರ, ಬಡತನ ವಿರುದ್ಧ ನಡೆಯಲಾರಂಭಿಸಿದ ಪ್ರತಿಭಟನೆಗಳು ಭಗ್ಗನೆ ಉರಿಯಲಾರಂಭಿಸಿದ್ದು ಅಲಿ ಮೊಹಮದ್ ಸಲ್ಹೇ ಸಾಯುವವರೆಗೂ ಅಧ್ಯಕ್ಷನಾಗಿ ಮರಣಾನಂತರ ಆ ಅಧ್ಯಕ್ಷ ಪದವಿ ತನ್ನ ಮನೆತನದಲ್ಲೇ ಉಳಿಯುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಲು ಪ್ರಯತ್ನಿಸಿದಾಗ. ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದು ಸಲ್ಹೇನನ್ನು ವಿರೋಧಿಸಿದವರನ್ನು ಹತ್ಯೆಗೈಯ್ಯಲಾಯಿತು. ಕೊನೆಗೂ ಪ್ರತಿಭಟನೆಗೆ ಮಣಿದ ಅಲಿ ಮೊಹಮದ್ ಸಲ್ಹೇ 2011ರ ನವೆಂಬರಿನಲ್ಲಿ ಉಪಾಧ್ಯಕ್ಷ ಅಬ್ದುಲ್ ರಬ್ಬೋ ಮನ್ಸೂರ್ ಅಲ್ ಹದಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಮೂವತ್ತಮೂರು ವರುಷದ ಸಲ್ಹೇ ಆಡಳಿತ ಕೊನೆಗಂಡಿತ್ತು. ಇಷ್ಟರಲ್ಲಾಗಲೇ ಮೊಹಮದ್ ಸಲ್ಹೇ ರಿಯಾದಿಗೆ ಪರಾರಿಯಾಗಿದ್ದರು. ಜನರ ಪ್ರತಿಭಟನೆಗೆ ಒಂದು ಹಂತದ ಗೆಲುವು ಸಿಕ್ಕಿತ್ತು. ಆದರೆ ಆ ಗೆಲುವಿಗೆ ಜನರ ಬದುಕನ್ನು ಬದಲಿಸುವಷ್ಟು ಶಕ್ತಿಯಿರಲಿಲ್ಲ.

ವಿಶ್ವ ಬ್ಯಾಂಕಿನ ಒತ್ತಾಯದ ಮೇರೆಗೆ 2014ರ ಜುಲೈ ತಿಂಗಳಲ್ಲಿ ಹದಿ ನೇತೃತ್ವದ ಯೆಮೆನ್ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸಬ್ಸಿಡಿಯನ್ನು ನಿಲ್ಲಿಸಿದ್ದು ಮತ್ತೊಂದು ಆಂತರಿಕ ಯುದ್ಧಕ್ಕೆ ಮುನ್ನುಡಿ ಬರೆಯತೊಡಗಿತು. ಅಬ್ದುಲ್ ಮಲಿಕ್ ಹಲ್ ಹುತಿ ನೇತೃತದ ತಂಡ ಸೆಪ್ಟೆಂಬರ್ ಕ್ರಾಂತಿಯನ್ನು ಪ್ರಾರಂಭಿಸಿತು. ಶಿಯಾ ಪಂಗಡಕ್ಕೆ ಸೇರಿದ ಈ ಹುತಿ ತಂಡವನ್ನು ಭಯೋತ್ಪಾದಕರು ಅಥವಾ ಕ್ರಾಂತಿಕಾರಿಗಳೆಂದು ಕರೆಯಲು ನೀವು ಯಾರ ಪರ ಎಂಬುದೇ ಮುಖ್ಯವಾಗುತ್ತದೆ! ಪ್ರಧಾನಿ ಮಂತ್ರಿಯ ರಾಜೀನಾಮೆ ಪಡೆದ ಈ ಹುತಿಗಳು ಯೆಮೆನ್ನಿನ ರಾಜಧಾನಿ ‘ಸನಾ’ವನ್ನು ಎರಡೇ ದಿನದೊಳಗೆ ತಮ್ಮ ಕೈವಶ ಮಾಡಿಕೊಂಡುಬಿಡುತ್ತಾರೆ. ಉತ್ತರ ಯೆಮೆನ್ನಿನ ಈ ಹುತಿಗಳ ತಂಡ ಅಲ್ ಖೈದಾ ಪ್ರೇರಿತ ಅನ್ಸಾರ್ ಅಲ್ ಶರಿಯಾ ಗುಂಪಿನ ವಿರುದ್ಧವೂ ಆಂತರಿಕ ಯುದ್ಧದಲ್ಲಿ ತೊಡಗಿದೆ. ಆಲ್ ಖೈದಾದ ವಿರುದ್ಧ ಹೋರಾಡುತ್ತಿದ್ದೇವೆಂದು ಹೇಳುವ ಅಮೆರಿಕಾ ಮತ್ತದಕ್ಕೆ ಬೆಂಬಲ ಸೂಚಿಸುವ ಮಾತನಾಡುವ ಸೌದಿ ಅರೇಬಿಯಾ ದೇಶಗಳು ಈಗ ಅಲ್ ಖೈದಾದ ಅನ್ಸಾರ್ ಅಲ್ ಶರಿಯಾ ಗುಂಪಿನ ವಿರುದ್ಧ ಹೋರಾಡುತ್ತಿರುವ ಹುತಿಯ ಮೇಲೇಕೆ ಯುದ್ಧ ಸಾರಿದೆ?

saudi airstrike in yemen
ಯೆಮೆನ್ನಿನ ಮಾನವ ಹಕ್ಕು ಹೋರಾಟಗಾರ ಬರಾ ಶಿಬಾನ್ ಹೇಳುವ ಪ್ರಕಾರ ‘ಇದು ಇರಾನ್ ಮತ್ತು ಸೌದಿ ಅರೇಬಿಯಾ ನಡುವೆ ನಡೆಯುತ್ತಿರುವ ಪರೋಕ್ಷ ಯುದ್ಧ. ಈ ಯುದ್ಧ ಇರಾನ್ ಅಥವಾ ಸೌದಿ ಅರೇಬಿಯಾದಲ್ಲಿ ನಡೆಯದೆ ಯೆಮೆನ್ನಿನಲ್ಲಿ ನಡೆಯುತ್ತಿದೆ. ಯಾರನ್ನು ಬೆಂಬಲಿಸಿದರೆ ಯೆಮೆನ್ನಿಗೆ ಏನುಪಯೋಗ ಎಂದು ಅನೇಕರು ಕೇಳುತ್ತಿದ್ದಾರೆ. ಯುದ್ಧದ ಪರಿಣಾಮ ಏನೇ ಆದರೂ ಅದರ ಲಾಭ, ನಷ್ಟ ಉಂಟಾಗುವುದು ಇರಾನ್ ಅಥವಾ ಸೌದಿ ಅರೇಬಿಯಾ ದೇಶಗಳಿಗೆ; ಯೆಮೆನ್ ಸೋಲುತ್ತದೆ’. ಅಲ್ ಹುತಿ ಹೋರಾಟಗಾರರಿಗೆ ಬೆಂಬಲ ನೀಡುವವರ ಪಟ್ಟಿಯಲ್ಲಿ ಮೊದಲು ಇರಾನ್ ದೇಶವಿದ್ದರೆ ನಂತರದ ಸ್ಥಾನದಲ್ಲಿ ಯೆಮೆನ್ನಿನ ಪದಚ್ಯುತ ಅಧ್ಯಕ್ಷ ಅಲ್ ಮೊಹಮದ್ ಸಲ್ಹೇ ಇದ್ದಾರೆ. ಜನರ ಬೆಂಬಲ ಗಳಿಸಿಕೊಳ್ಳುವುದಕ್ಕಾಗಿ ಸಲ್ಹೇ ಅಗತ್ಯವಾದರೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒಟ್ಟುಮಾಡಿಕೊಳ್ಳಲು ಅಲ್ ಹುತಿ ಉಗ್ರರಿಗೆ ಇರಾನ್ ಅತ್ಯಗತ್ಯ. ಇನ್ನು ವಿರೋಧಿ ಹೋರಾಟಗಾರರಿಗೆ / ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಲು ಸೌದಿ ಅರೇಬಿಯಾ ಮತ್ತು ಅಮೆರಿಕಾ ಕೈಚಾಚಿದೆ. ಇಷ್ಟಕ್ಕೂ ಯೆಮೆನ್ನಿನಲ್ಲಿ ಪರೋಕ್ಷ ಯುದ್ಧ ಮಾಡಬೇಕಾದ ಅವಶ್ಯಕತೆ ಇರಾನ್ ಮತ್ತು ಸೌದಿ ಅರೇಬಿಯಾಕ್ಕೆ ಏನಿದೆ ಎಂದು ಗಮನಿಸಿದಾಗ ಇಡೀ ಮಧ್ಯ ಪ್ರಾಚ್ಯದಲ್ಲಿ ತಾವು ನಂಬಿದ ‘ನೈಜ’ ಇಸ್ಲಾಮೇ ವಿಜೃಂಬಿಸಬೇಕು ಎಂಬ ಹಪಾಹಪಿ ಕಾಣುತ್ತದೆ. ಶ್ರೇಷ್ಟತೆಯ ವ್ಯಸನ ಲಕ್ಷಾಂತರ ಜನರ ಹತ್ಯೆಯಲ್ಲಿ ಪರ್ಯಾಯವಸನವಾಗುತ್ತಿದೆ. ಸೌದಿ ಅರೇಬಿಯಾ ಯೆಮೆನ್ನಿನ ಮೇಲೆ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸಮರ್ಥಿಸಿಕೊಳ್ಳುತ್ತ ಅಮೆರಿಕಾದ ಸೆನೇಟರ್ ಜಾನ್ ಮೆಕ್ ಕೇನ್ ‘ಇರಾನಿನ ಬೆಂಬಲ ಹೊಂದಿರುವ ಅಲ್ ಹುತಿ ಉಗ್ರರ ಮೇಲೆ ದಾಳಿ ಮಾಡುತ್ತಿರುವ ಸೌದಿ ಅರೇಬಿಯಾದ ನಿರ್ಧಾರ ಸರಿಯಾಗಿದೆ’ ಎಂದು ಹೇಳಿರುವುದು ಅಮೆರಿಕಾಕ್ಕೆ ‘ಪ್ರಜಾಪ್ರಭುತ್ವ’ ಜಾರಿಗೆ ತರಲು ಮತ್ತೊಂದು ತೈಲ ದೇಶ ಸಿಕ್ಕಿರುವ ಖುಷಿ ಎದ್ದು ಕಾಣುತ್ತಿದೆ. 

ಅಲ್ ಹುತಿ ಉಗ್ರರು ಶಿಯಾ ಪಂಗಡಕ್ಕೆ ಸೇರಿದವರು. ಇರಾನ್ ಹೇಳಿಕೇಳಿ ಶಿಯಾ ಪಂಗಡದ ಪ್ರಾಬಲ್ಯದ ದೇಶ. ಮತ್ತೊಂದೆಡೆ ಸೌದಿ ಅರೇಬಿಯಾದಲ್ಲಿರುವುದು ಸುನ್ನಿ ಇಸ್ಲಾಂ. ಸುನ್ನಿ ಇಸ್ಲಾಂ ಅನ್ನು ಮತ್ತಷ್ಟು ಮೂಲಭೂತವಾದವನ್ನಾಗಿ ಪರಿವರ್ತಿಸಿ ವಹಾಬಿಸಂ ಅನ್ನು ಹುಟ್ಟು ಹಾಕಿರುವುದು ಇದೇ ಸೌದಿ ಅರೇಬಿಯಾ ದೇಶ. ತನ್ನ ಗಡಿ ಭಾಗದ ಯೆಮೆನ್ ದೇಶದಲ್ಲಿ ಇರಾನ್ ಪ್ರೇರಿತ ಶಿಯಾ ಉಗ್ರರು ಮೇಲುಗೈ ಸಾಧಿಸುವುದು ಸೌದಿಗೆ ಬೇಕಿಲ್ಲ. ಸೌದಿಯ ವಹಾಬಿ ಪಂಥ ಯೆಮೆನ್ನಿನಲ್ಲಿ ಬೇರೂರುವುದು ಇರಾನಿಗೆ ಬೇಕಿಲ್ಲ. ಯೆಮೆನ್ನಿನ ಜನತೆಯ ಆಯ್ಕೆಯೇನೆಂಬುದು ಬಹುಶಃ ಯಾರಿಗೂ ಬೇಕಾಗಿಲ್ಲ. ಸ್ವತಃ ತಮ್ಮ ದೇಶದಲ್ಲೇ ಪ್ರಜಾಪ್ರಭುತ್ವಕ್ಕೆ ಅವಕಾಶ ಕೊಡದ ದೇಶವೊಂದು ನೆರೆದೇಶದ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತೇನೆ ಎಂದು ಹೇಳುವ ಮಾತುಗಳನ್ನು ನಂಬಲಾದೀತೆ. ಲೆಬನಾನಿನ ಹೆಜ್ಬೊಲ್ಲಾ, ಸಿರಿಯಾದ ಬಶರ್ – ಅಲ್ – ಅಸ್ಸಾದ್, ಐ.ಎಸ್.ಐ.ಎಸ್ ವಿರುದ್ಧದ ಹೋರಾಟಕ್ಕೆ ನೆರವು ನೀಡುತ್ತಿರುವ ಇರಾನ್ ಯೆಮೆನ್ನಿನ ಅಲ್ – ಹುತಿ ಉಗ್ರರನ್ನು ಬೆಂಬಲಿಸುತ್ತಿರುವುದರಲ್ಲಿ ಹೆಚ್ಚಿನ ಅನುಮಾನವಿಲ್ಲ. ಇರಾನ್ ಈ ಎಲ್ಲಾ ತಂಡಗಳಿಗೆ ನೀಡುತ್ತಿರುವ ಬೆಂಬಲ ನ್ಯಾಯದ ಪರವಾಗೂ ಅಲ್ಲ, ಪ್ರಜಾಪ್ರಭುತ್ವದ ಪರವಾಗೂ ಅಲ್ಲ, ಅನ್ಯದೇಶದ ಆಕ್ರಮಣದ ವಿರುದ್ಧದ ಹೋರಾಟಕ್ಕೆ ಕೊಡುತ್ತಿರುವ ನೈತಿಕ ಬೆಂಬಲವೂ ಅಲ್ಲ; ಶಿಯಾ ಮುಸ್ಲಿಮರ ವಿವಿಧ ಸಂಘಟನೆಗಳು ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಪ್ರಬಲವಾದರೆ ತಾನೂ ಪ್ರಬಲನಾಗುತ್ತೇನೆ ಎಂಬ ದುರಾಸೆ ಮಾತ್ರ ಈ ಬೆಂಬಲಕ್ಕೆ ಕಾರಣ. ಇನ್ನು ಸೌದಿ ಅರೇಬಿಯಾದ ದಾಳಿಯನ್ನು ಬಹ್ರೇನ್, ಕತಾರ್, ಯು.ಎ.ಇ, ಪಾಕಿಸ್ತಾನ, ಟರ್ಕಿ, ಸೂಡಾನ್, ಮೊರಕ್ಕೋ, ಜೋರ್ಡಾನ್, ಇಜಿಪ್ಟ್, ಕುವೈತ್ ದೇಶಗಳು ಬೆಂಬಲಿಸುತ್ತಿರುವುದು ಸುನ್ನಿ ಇಸ್ಲಾಮಿನ ಮೇಲಿನ ಪ್ರೀತಿಯಿಂದ ಮಾತ್ರ. ಸೌದಿ ನೇತೃತ್ವದ ತಂಡವನ್ನು ಅಮೆರಿಕಾ ಬೆಂಬಲಿಸುತ್ತಿರುವುದಕ್ಕೆ ಇರಾನ್ ಮೇಲಿನ ಮುಗಿಯದ ದ್ವೇಷ ಮತ್ತು ಯೆಮೆನ್ ಕೂಡ ಒಂದು ಪ್ರಮುಖ ತೈಲ ಉತ್ಪಾದಕ ರಾಷ್ಟ್ರವಾಗಿರುವುದು ಕಾರಣ. ಸೌದಿ ಅರೇಬಿಯಾ ತನ್ನ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವುದು ಅಮೆರಿಕಾದಿಂದ. ಯುದ್ಧದಂತಹ ಅತ್ಯುತ್ತಮ ವ್ಯಾಪಾರದ ಸ್ಥಳವನ್ನು ಕಳೆದುಕೊಳ್ಳಲು ಅಮೆರಿಕ ಏನು ‘ದಡ್ಡ’ರ ದೇಶವೇ? ಮತ್ತಷ್ಟು ಮಗದಷ್ಟು ಯುದ್ಧ ನಡೆಯುವಂತಾದರೆ ಶಸ್ತ್ರ ವ್ಯಾಪಾರಿಗಳಿಗೆ ಖುಷಿಯೋ ಖುಷಿ. ಸಿರಿಯಾ, ಇರಾಕ್, ಐ.ಎಸ್.ಐ.ಎಸ್, ಲಿಬಿಯಾದ ಬಗ್ಗೆ ಸೊಲ್ಲೆತ್ತದ ಸೌದಿ ಅರೇಬಿಯಾಗೆ ಪಕ್ಕದ ಯೆಮೆನ್ ದೇಶದ ಬಗ್ಗೆ ಅಪರಿಮಿತ ಉತ್ಸಾಹ; ಶಿಯಾ ಹೋರಾಟಗಳನ್ನೇ ಬೆಂಬಲಿಸುವ ಇರಾನಿಗೆ ಅಲ್-ಹುತಿಗಳೆಂದರೆ ತೀರದ ಪ್ರೀತಿ. ಮೊದಲೇ ಬಡತನದ ಕೂಪದಲ್ಲಿ ತೊಳಲಾಡುತ್ತಿದ್ದ ಯೆಮೆನ್ ದೇಶ; ತಿನ್ನುವ ಗೋಧಿ ಮತ್ತು ಅಕ್ಕಿಯಲ್ಲಿ ತೊಂಭತ್ತು ಪ್ರತಿಶತಃದಷ್ಟನ್ನು ಆಮದು ಮಾಡಿಕೊಳ್ಳುವ ಯೆಮೆನ್ ದೇಶದ ಪರಿಸ್ಥಿತಿ ಅನ್ಯದೇಶಗಳ ಆಟದಲ್ಲಿ ಏನಾಗಿ ಹೋಗಬಹುದು? ಯುದ್ಧದಾಚೆಯೇ ಉಳಿದುಹೋದ ಯೆಮೆನ್ ದೇಶದ ಲಕ್ಷಾಂತರ ಜನತೆ ಹಸಿವಿನಿಂದಲೇ ನಿರ್ನಾಮ ಹೋದರೆ ಅದಕ್ಯಾರು ಹೊಣೆ? ಮಾನವೀಯತೆ ಕಳೆದುಕೊಂಡ ಮನುಷ್ಯರಿಂದ, ಮನುಷ್ಯತ್ವ ಕಲಿಸಲು ಮರೆತುಹೋದ ಧರ್ಮಗಳಿಂದಲೇ ಮಾನವ ಸಂತತಿ ಈ ಭೂಮಿಯಿಂದ ನಶಿಸಿಹೋಗಬಹುದೇ?
ಪೂರಕ ಮಾಹಿತಿ: ವಿಕಿಪೀಡಿಯಾ, ಎಫ್.ಎಸ್.ಆರ್.ಎನ್, ಮುಫ್ತಾ, ಟೈಮ್ಸ್ ಆಫ್ ಇಂಡಿಯಾ, ಆರ್.ಟಿ ಮತ್ತಿತರ ಅಂತರ್ಜಾಲ ತಾಣಗಳು

ಏಪ್ರಿ 7, 2015

ಗುಳಕಮಲೆಯ ಗೆಳೆಯರ ಬಳಗ

gulakamale thottikallu falls map
ಗುಳಕಮಲೆ
Dr Ashok K R
ನಗರಗಳು ‘ಅಭಿವೃದ್ಧಿ’ಯಾಗುತ್ತ ಜನವಸತಿ ಹೆಚ್ಚುತ್ತಿದ್ದಂತೆ ಕ್ರಿಮಿ ಕೀಟ ಪ್ರಾಣಿ ಪಕ್ಷಿಗಳೆಲ್ಲವೂ ವಿಧಿಯಿಲ್ಲದೆ ಊರ ಹೊರಗೆ ಸಾಗುತ್ತವೆ. ಊರು ಊರ ಹೊರಗೂ ಹಬ್ಬಲಾರಂಭಿಸಿದಾಗ ನಶಿಸಿಹೋಗಲೇಬೇಕಾದ ಅನಿವಾರ್ಯಕ್ಕೆ ಸಿಲುಕುತ್ತವೆ. ಕೆರೆಗಳ ನಗರಿ ಬೆಂಗಳೂರು ಕೂಡ ಇದಕ್ಕೆ ಹೊರತಲ್ಲ. ಬಹಳಷ್ಟು ಕೆರೆಗಳನ್ನೀಗಾಗಲೇ ಮುಚ್ಚಿ ಹಾಕಲಾಗಿದೆ, ಅಧಿಕೃತವಾಗಿ ಮತ್ತು ಅನಧಿಕೃತವಾಗಿ! ಇರುವ ಕೆಲವು ಕೆರೆಗಳನ್ನು ಸಂರಕ್ಷಿಸುವುದಕ್ಕೆ ಈಗೀಗ ಪ್ರಾಮುಖ್ಯತೆ ಸಿಗುತ್ತಿದೆಯಾದರೂ ಆ ಸಂರಕ್ಷಣೆ ಕೆರೆಯ ಮೂಲ ಉದ್ದೇಶಕ್ಕೆ ಧಕ್ಕೆ ಕೊಡುವ ರೀತಿಯಲ್ಲಿ ಸಾಗುತ್ತಿದೆ. ಕೆರೆಗಳೆಂದರೆ ನಗರವಾಸಿಗಳು ವಾಕಿಂಗ್ ಮಾಡಲಿರುವ ಜಾಗವೆಂಬಂತೆ ಕೆರೆಯಂಚಿನಲ್ಲಿ ಬೇಲಿ ಸುತ್ತಿ ಪ್ರಾಣಿ ಪಕ್ಷಿಗಳ ಓಡಾಟಕ್ಕೆ ಅಡ್ಡಿಯುಂಟು ಮಾಡಿದ್ದೇವೆ. ಜನರ ನಿರಂತರ ಓಡಾಟ ಮತ್ತು ಸುತ್ತಲಿನ ರಸ್ತೆಯ ಗೌಜು ಗದ್ದಲಗಳ ನಡುವೆ ಊರೊಳಗಿನ ಬಹುತೇಕ ಕೆರೆಗಳಲ್ಲೀಗ ಒಂದಿಷ್ಟು ಗಲೀಜು ನೀರು, ಅಲ್ಲೊಂದಿಲ್ಲೊಂದು ಪಕ್ಷಿಗಳಿವೆ ಅಷ್ಟೇ. ಕಮರ್ಷಿಯಲ್ ಅಲ್ಲದ, ಬೇಲಿಗಳಿಲ್ಲದ ಕೆರೆಯನ್ನು ನೋಡಲು ನಗರದಿಂದಾಚೆಗೇ ಹೋಗಬೇಕು. ಅಂತಹುದೊಂದು ಕೆರೆ ಬೆಂಗಳೂರು ಹೊರವಲಯದಿಂದ ಅರ್ಧ ಘಂಟೆ ಹಾದಿಯ ಗುಳಕಮಲೆ ಕೆರೆ.

ಬೆಂಗಳೂರಿನಿಂದ ಕನಕಪುರ ರಸ್ತೆಯಲ್ಲಿ ಸಾಗಿದರೆ ಕಗ್ಗಲಿಪುರ ಸಿಗುತ್ತದೆ. ಕಗ್ಗಲಿಪುರದೊಳಗೆ ಎಡಗಡೆಗೆ ಬನ್ನೇರುಘಟ್ಟಕ್ಕೆ ಸಾಗುವ ರಸ್ತೆ ಹಿಡಿದು ಎರಡು ಮೂರು ಕಿಮಿ ಕ್ರಮಿಸಿದರೆ ಗುಳಕಮಲೆ ಊರು ಸಿಗುತ್ತದೆ. ಊರು ದಾಟಿದ ನಂತರ ರಸ್ತೆ ಕವಲಾಗಿ ಒಡೆದು ಬಲಗಡೆಯದು ಬನ್ನೇರುಘಟ್ಟಕ್ಕೆ ಹೋಗುತ್ತದೆ. ಎಡಗಡೆಯ ತೊಟ್ಟಿಕಲ್ಲಿಗೆ ಸಾಗುವ ರಸ್ತೆಯಲ್ಲಿ ಒಂದು ಕಿಮಿ ಸವೆಸಿದರೆ ಗುಳಕಮಲೆ ಕೆರೆಯ ಏರಿಯ ದರ್ಶನವಾಗುತ್ತದೆ. ಬೇಸಿಗೆಯಲ್ಲಿ ಕೆರೆಯಲ್ಲಿ ಹೆಚ್ಚು ನೀರಿರುವುದಿಲ್ಲವಾದರೂ ಇರುವ ಸ್ವಲ್ಪ ನೀರಿನಲ್ಲಿ ತರತರದ ಪಕ್ಷಿಸಂಕುಲಗಳನ್ನು ವೀಕ್ಷಿಸಬಹುದು. ಸೂರ್ಯೋದಯವನ್ನು ವೀಕ್ಷಿಸಲೂ ತಕ್ಕ ಸ್ಥಳ ಈ ಗುಳಕಮಲೆ. ನಾನು ಹೋದ ದಿವಸ ಮೋಡವಿದ್ದ ಕಾರಣ ಸೂರ್ಯೋದಯ ಕಾಣಿಸಲಿಲ್ಲ.

Pied Kingfisher
ಬಿಳಿ ಮಿಂಚುಳ್ಳಿ
ಕೆರೆಗಳಲ್ಲಿ ಸಾಧಾರಣವಾಗಿ ಕಾಣಸಿಗುವ ಬೆಳ್ಳಕ್ಕಿ(ಎಗ್ರೆಟ್), ಬಿಳಿ ಮತ್ತು ಹಳದಿ ಕುಂಡೆಕುಸ್ಕ (ವ್ಯಾಗ್ ಟೈಲ್), ತೇನೆ ಹಕ್ಕಿ (ರೆಡ್ ವ್ಯಾಟಲ್ಟ್ ಲ್ಯಾಪ್ ವಿಂಗ್), ನೆಲಗುಬ್ಬಿ (ಕ್ರೆಸ್ಟೆಡ್ ಲಾರ್ಕ್) , ಇಂಡಿಯನ್ ಪಾಂಡ್ ಹೆರಾನ್, ಪಿಕಳಾರ (ಬುಲ್ ಬುಲ್), ಕರಿ ಹೂಗುಬ್ಬಿ (ಪರ್ಪಲ್ ಸನ್ ಬರ್ಡ್), ಕೆಮ್ಮಂಡೆ ಗಣಿಗಾರ್ಲ ಹಕ್ಕಿ (ಗ್ರೀನ್ ಬೀ ಈಟರ್) ಪಕ್ಷಿಗಳನ್ನು ಇಲ್ಲೂ ಕಾಣಬಹುದು. ನಗರದ ಸುತ್ತಮುತ್ತ ಒಂದಷ್ಟು ಅಪರೂಪವಾಗಿರುವ ಬಿಳಿ ಮಿಂಚುಳ್ಳಿ (ಪೈಡ್ ಕಿಂಗ್ ಫಿಷರ್) ಪಕ್ಷಿಗಳಿಲ್ಲಿ ಯಥೇಚ್ಛವಾಗಿವೆ. ಬಣ್ಣಬಣ್ಣದ ರೆಕ್ಕೆಯ ಕಾಮನ್ ಕಿಂಗ್ ಫಿಷರ್ ವಿದ್ಯುತ್ ತಂತಿಯ ಮೇಲೆ ಎತ್ತರದ ಮರದ ಮೇಲೆ ಕುಳಿತು ಬೇಟೆಗೆ ಹೊಂಚುಹಾಕಿದರೆ ಕಪ್ಪು ಬಿಳುಪು ಬಣ್ಣದ ಬಿಳಿ ಮಿಂಚುಳ್ಳಿ ಕೆರೆಯ ಮೇಲೆ ಒಂದೇ ಜಾಗದಲ್ಲಿ ಪಟ ಪಟ ರೆಕ್ಕೆ ಬಡಿಯುತ್ತ ಕೆಳಗಿನ ನೀರಿನಲ್ಲಿ ಈಜಾಡುವ ಪುಟ್ಟ ಪುಟ್ಟ ಮೀನುಗಳನ್ನು ಗಮನಿಸುತ್ತ, ಒಂದ್ಯಾವುದೋ ಮೀನನ್ನು ಗುರಿಯಾಗಿಸಿಕೊಂಡು ಬಾಣದಂತೆ ನೀರಿನೊಳಗೆ ಮುಳುಗಿ ಮೀನಿನೊಡನೆ ಮೇಲೇಳುವ, ಕೆಲವೊಮ್ಮೆ ಬರಿ ಬಾಯಿಯಲ್ಲಿ ಹೊರಬರುತ್ತದೆ. ಬಿಳಿ ಮಿಂಚುಳ್ಳಿಯ ಬೇಟೆಯ ಚಾತುರ್ಯವನ್ನು ಕಂಡೇ ಅನುಭವಿಸಬೇಕು.

River Tern
ಮೀನು ಗುಟುರ
ಕಾವೇರಿ ನದಿ ತೀರದ ರಂಗನತಿಟ್ಟಿನಲ್ಲಿ ಯಥೇಚ್ಛವಾಗಿ ಕಂಡು ಬರುವ ವಲಸೆ ಹಕ್ಕಿ ಮೀನುಗುಟುರ (ರಿವರ್ ಟರ್ನ್). ರಿವರ್ ಟರ್ನ್ ಪಕ್ಷಿಯನ್ನು ಎರಡು ವರುಷದ ಫೋಟೋಗ್ರಫಿ ಅಭ್ಯಾಸದಲ್ಲಿ ಕಂಡಿರಲಿಲ್ಲ. ಗುಬ್ಬಿ ತಾಲ್ಲೂಕಿನ ಕೆರೆಯೊಂದರ ಬಳಿ ಓರಿಯೆಂಟಲ್ ಟರ್ನ್ ನೋಡಿದ್ದೆ. ಈ ಬಾರಿ ರಿವರ್ ಟರ್ನ್ ವೀಕ್ಷಿಸಲು ರಂಗನತಿಟ್ಟಿಗೆ ಹೋಗಬೇಕೆಂದುಕೊಂಡಿದ್ದೆ. ಗುಳಕಮಲೆಯಲ್ಲಿಯೇ ರಿವರ್ ಟರ್ನಿನ ದರುಶನವಾಯಿತು! ಎರಡೇ ಎರಡು ರಿವರ್ ಟರ್ನುಗಳಿದ್ದವು. ಇಡೀ ಕೆರೆಯನ್ನು ಸತತವಾಗಿ ಸುತ್ತುತ್ತ ಸರ್ವೆ ಮಾಡುತ್ತಲೇ ಇರುತ್ತವೆ ಈ ಪಕ್ಷಿಗಳು. ಕೊನೆಗೊಂದೆಡೆ ಸ್ಥಗಿತವಾಗಿ ಸುಯ್ಯನೆ ನೀರಿಗೆ ಬಿದ್ದು ಬೇಟೆಯೊಡನೆ ಹೊರಬರುತ್ತವೆ. 

Asian Open Billed Stork
ಬಾಯ್ಕಳಕ
ಗುಳಕಮಲೆ ಕೆರೆಗೆ ಈ ಬಾರಿ ದೊಡ್ಡ ಗುಂಪಿನಲ್ಲಿ ಬಂದಿದ್ದ ಗೆಳೆಯರು ಬಾಯ್ಕಳಕ (ಏಷಿಯನ್ ಓಪನ್ ಬಿಲ್ ಸ್ಟಾರ್ಕ್). ಬೂದು ಬಣ್ಣದ, ತೆರೆದ ಕೊಕ್ಕಿನ ಈ ಪಕ್ಷಿಗಳು ದಾಸ ಕೊಕ್ಕರೆ (ಪೈಯಿಂಟೆಡ್ ಸ್ಟಾರ್ಕ್)ಯಷ್ಟು ಆಕರ್ಷಕವಲ್ಲ. ಕ್ಯಾಮೆರಾ ಭಾಷೆಯಲ್ಲಿ ಹೇಳಬೇಕೆಂದರೆ ಫೋಟೋಜೆನಿಕ್ ಅಲ್ಲ! ಮೇಲಾಗಿ ಮನುಷ್ಯರ ಇರುವನ್ನು ಅಷ್ಟಾಗಿ ಸಹಿಸುವುದಿಲ್ಲವೆನ್ನಿಸುತ್ತೆ. ದೂರದಿಂದ ಬರುತ್ತಿರುವ ಮನುಷ್ಯನ ಹೆಜ್ಜೆ ಸದ್ದನ್ನು ಗುರುತಿಸಿ ಜಾಗ ಬದಲಿಸಿಬಿಡುತ್ತವೆ. ಒಂದೈದು ದಾಸ ಕೊಕ್ಕರೆಗಳು ಕೆರೆಯಂಚಿನ ಮರದ ಮೇಲೆ ಕುಳಿತಿದ್ದವು. ಗೂಡು ಕಟ್ಟಲು, ಆಹಾರ ಹುಡುಕಲು ಈ ಜಾಗ ಸೂಕ್ತವಾ ಎಂದು ಸರ್ವೆ ಮಾಡುತ್ತಿದ್ದವು. ಬಾಯ್ಕಳಕಕ್ಕೆ ಹೋಲಿಸಿದರೆ ಈ ಕೊಕ್ಕರೆ ಮನುಷ್ಯನ ಇರುವಿಕೆಗೆ ಭಯ ಬೀಳುವುದಿಲ್ಲ. 

tottikallu falls
ತೊಟ್ಟಿಕಲ್ಲು
ಸೂರ್ಯ ತೀಕ್ಷ್ಣವಾಗುವವರೆಗೆ ಪಕ್ಷಿಗಳನ್ನು ವೀಕ್ಷಿಸಿ ನಂತರ ಹತ್ತಿರದಲ್ಲೇ, ಹತ್ತು ನಿಮಿಷದ ಹಾದಿಯಲ್ಲಿ ಇರುವ ತೊಟ್ಟಿಕಲ್ಲಿಗೆ ಹೋಗಬಹುದು. ಸಾಗುವ ದಾರಿ ಚಿಕ್ಕಪುಟ್ಟ ಹಳ್ಳಿಗಳೊಳಗೆ ಮತ್ತು ಒಂದಷ್ಟು ಕಗ್ಗಲಿಪುರ ಕಾಡಿನೊಳಗೆ ಸಾಗುತ್ತದೆ. ತೊಟ್ಟಿಕಲ್ಲಿನಲ್ಲೊಂದು ಮುನೇಶ್ವರ ದೇವಸ್ಥಾನವಿದೆ. ದೇವಸ್ಥಾನ ದಾಟಿ ನಡೆದರೆ ಮಳೆಗಾಲದಲ್ಲಿ ಜಲಪಾತ ಮೂಡಬಹುದಾದ ಜಾಗ ಸಿಗುತ್ತದೆ. ಮಳೆಗಾಲದಲ್ಲೂ ಜಲಪಾತದ ದರ್ಶನ ಸಿಗದಷ್ಟು ಮಳೆಯಾಗುತ್ತಿದೆಂತೆ ಆ ಪ್ರದೇಶದಲ್ಲಿ. ಎಂದಿನಂತೆ ಮನುಷ್ಯರ ಪ್ಲಾಸ್ಟಿಕ್ ಪ್ರೇಮಕ್ಕೆ ಎರಡೂ ಜಾಗಗಳು ಬಲಿಯಾಗಿವೆ.
Muneshwara Temple, tottikallu
ಮುನೇಶ್ವರ ದೇವಸ್ಥಾನ
ಬೆಳಿಗ್ಗೆ ಹೊರಟರೆ ಮಧ್ಯಾಹ್ನದೊಳಗೆ ಎರಡೂ ಸ್ಥಳಗಳನ್ನು ನೋಡಿ ಬರಬಹುದು. ಪಕ್ಷಿ ಪ್ರೇಮಿಗಳು ಗುಳಕಮಲೆಯಲ್ಲಿ ಹೆಚ್ಚು ಸಮಯ ಕಳೆಯಬಹುದು, ಇಲ್ಲವಾದರೆ ತೊಟ್ಟಿಕಲ್ಲಿನ ಸುತ್ತಲಿನ ಕಾಡಿನಲ್ಲಿ ವಿಶ್ರಾಂತಿ ಪಡೆದು ವಾಪಸ್ಸಾಗಬಹುದು. ಗುಳಕಮಲೆ ಊರಿನಲ್ಲಿ ಮತ್ತು ಊರ ಹೊರವಲಯದಲ್ಲಿರುವ ಆಸ್ಪತ್ರೆಗಳ ಬಳಿ ತಿನ್ನಲು ಕುಡಿಯಲು ಅಂಗಡಿಗಳಿವೆ. ಕೆರೆ ಮತ್ತು ತೊಟ್ಟಿಕಲ್ಲಿನ ಬಳಿ ಅಂಗಡಿಗಳಿಲ್ಲ. ತಿನ್ನಲೊಂದಷ್ಟನ್ನು ಮನೆಯಿಂದಲೇ ಕೊಂಡೊಯ್ಯುವುದು ಒಳಿತು.
yellow bulbul
ಪಿಕಳಾರ
Egret
ಬೆಳ್ಳಕ್ಕಿ
green bee eater
ಗಣಿಗಾರ್ಲ
red wattled lapwing
ತೇನೆ ಹಕ್ಕಿ
painted stork
ದಾಸ ಕೊಕ್ಕರೆ
purple sunbird
ಹೂಗುಬ್ಬಿ
white browed wagtail
ಬಿಳಿ ಕುಂಡೆಕುಸ್ಕ
yellow wagtail
ಹಳದಿ ಕುಂಡೆಕುಸ್ಕ
ಪೂರಕ ಮಾಹಿತಿ: ಹಕ್ಕಿಪುಕ್ಕ, ಪೂರ್ಣಚಂದ್ರ ತೇಜಸ್ವಿ

ಏಪ್ರಿ 4, 2015

ಅಸಹಾಯಕ ಆತ್ಮಗಳು - ಬಾಣಲೆಯಿಂದ ಬೆಂಕಿಗೆ.

asahayaka aatmagalu
ಕು.ಸ.ಮಧುಸೂದನ
ನಾನು ಹುಟ್ಟಿದ್ದು ಉತ್ತರ ಕರ್ನಾಟಕದ ಒಂದು ಹಳ್ಳಿ. ಈಗ ಹೆಸರು ಹೇಳಿ ಅದಕ್ಯಾಕೆ ಮಸಿ ಬಳೀಲಿ? ನಮ್ಮಪ್ಪ ಊರಿನ ಸಾಹುಕಾರನ ಹತ್ತಿರ ಜೀತ ಮಾಡ್ತಿದ್ದ. ನಮ್ಮ ತಾತನಿಗೆ ಐದು ಜನ ಹೆಣ್ಣುಮಕ್ಕಳಂತೆ.ಅಷ್ಟೂ ಜನರ ಮದುವೆಗೆ ಅಂತ ಅವನು ಮಾಡಿದ ಸಾಲಕ್ಕೆ ಅಪ್ಪ ಒಬ್ಬನೇ ಅಲ್ಲದೇ ನಮ್ಮಮ್ಮನೂ ಸಾಹುಕಾರನ ಹೊಲದಲ್ಲಿ,ಮತ್ತವನ ಮನೇಲಿ ಹಗಲುರಾತ್ರಿ ದುಡಿಬೇಕಾಗಿತ್ತು.ವರ್ಷಕ್ಕೊಂದು ಸಾರಿ ಅವರು ಕೊಡೊ ಕಾಳು ಕಡ್ಡಿ, ಹಬ್ಬ ಹುಣ್ಣಿಮೆಗಳಿಗೆ ಬಟ್ಟೆಬರೆ ಬಿಟ್ರೆ ಬೇರೇನು ಕೊಡ್ತಿರಲಿಲ್ಲ. ನನಗೆ ಎಂಟೊಂಭತ್ತು ವರ್ಷವಾಗೋತನಕ ನಮ್ಮ ಕೇರಿಯಲ್ಲೇ ಆಟ ಆಡಿಕೊಂಡು ನೆಮ್ಮದಿಯಾಗಿದ್ದೆ. ಬಹುಶ: ನನಗೆ ಹತ್ತೊ ಹನ್ನೊಂದೋ ವರ್ಷವಾದಾಗ ಅಮ್ಮ ನನ್ನ ಸಾಹುಕಾರನ ಮನೆಗೆ ಕರೆದುಕೊಂಡು ಹೋದಳು. ಅಲ್ಲಿ ನಾನು ಮನೆಗೆಲಸದವಳಾಗಿ ಹೆಂಗಸರು ಹೇಳೊ ಕೆಲಸ ಮಾಡಿಕೊಂಡು ಇರಬೇಕಾಯಿತು. ಊಟ,ತಿಂಡಿ ಕೊನೆಗೆ ಮಲಗೋದು ಸಹ ಅಲ್ಲೇ ಆಗ್ತಿತ್ತು.ನಮ್ಮೂರಲಿ ಸ್ಕೂಲ್ ಇಲ್ದೇ ಇದ್ದಿದ್ದರಿಂದ ಅವರ ಮಕ್ಕಳೆಲ್ಲ ಹತ್ತಿರದ ಪಟ್ಟಣದಲ್ಲಿ ಓದ್ತಾ ಇದ್ದರು.

ಹೀಗೇ ಒಂದು ವರ್ಷ ಕಳೆದ ಮೇಲೆ ಬೇಸಿಗೆ ರಜಕ್ಕೆ ಅಂತ ಸಾಹುಕಾರನ ಮಕ್ಕಳು ಊರಿಗೆ ಬಂದರು. ಅದರಲ್ಲಿ ದೊಡ್ಡವನಿಗಾಗಲೆ ಮೀಸೆ ಬಂದು ಕಾಲೇಜಲ್ಲಿ ಓದ್ತಾ ಇದ್ದ. ಒಂದು ಮದ್ಯಾಹ್ನ ನಾನು ಅಟ್ಟದ ಮೇಲೆ ದೂಳು ಹೊಡೆಯುತ್ತ ಇರಬೇಕಾದರೆ ಅವನು ಮೇಲೆ ಬಂದ. ನಾನು ಏನು ಬೇಕು ಅಂತ ಕೇಳುವಷ್ಟರಲ್ಲಿ ನನ್ನ ಗಟ್ಟಿಯಾಗಿ ತಬ್ಬಿಕೊಂಡು ಬಾಯಿ ಮುಚ್ಚಿ ಬಟ್ಟೆಗಳನ್ನೆಲ್ಲ ಕಿತ್ತು ಹಾಕಿದ.ಕೂಗೋಕೆ ಅಂತ ಬಾಯಿ ತೆಗೆದರೆ ಬಾಯಿಮುಚ್ಚಿಕೊಂಡು ಹೇಳಿದ ಹಾಗೆ ಕೇಳು ಇಲ್ಲಾಂದರೆ ಸಾಯಿಸಿಬಿಡ್ತೀನಿ ಅಂತ ನನ್ನ ಕೆಳಗೆ ತಳ್ಳಿ ಮೇಲೆ ಬಿದ್ದ. ಪ್ರಾಣಭಯದಿಂದ ಹಲ್ಲುಕಚ್ಚಿಕೊಂಡು ಸುಮ್ಮನೇ ಬಿದ್ದಿದ್ದೆ. ಅವನೇನು ಮಾಡಿದನೊ ಗೊತ್ತಾಗಲಿಲ್ಲ. ಅರ್ದ ಗಂಟೆಯ ನಂತರ ಅವನು ಎದ್ದು ಹೋದಾಗ ಮೈಯೆಲ್ಲ ಗಾಯದಂತೆ ನೋಯ್ತಾ ಇತ್ತು. ಇನ್ನೂ ಮೈ ನೆರೆಯದ ನನ್ನ ಮೀಸಲು ಮುರಿದಿದ್ದ. ಎಲ್ಲಿ ಯಾರಿಗಾದರು ಹೇಳಿದರೆ ನನಗೇ ಹೊಡೆದು ಬಡಿದೂ ಮಾಡುತ್ತಾರೋ ಅನ್ನೋ ಭಯದಲ್ಲಿ ನಾನು ಯಾರಿಗೂ ಹೇಳೋಕೆ ಹೋಗಲಿಲ್ಲ.

ಆಮೇಲೆ ಎರಡು ಮೂರು ತಿಂಗಳಿಗೊಮ್ಮೆ ಊರಿಗೆ ಬರ್ತಿದ್ದ ಅವನು ಬಂದಾಲೆಲ್ಲ ನನ್ನ ಮೇಲೆ ದಾಳಿ ಮಾಡ್ತಿದ್ದ. ಆಮೇಲೆ ಮತ್ತೊಂದು ವರ್ಷಕ್ಕೆ ನಾನು ಮೈನೆರೆದೆ. ನನ್ನಂತ ಕೆಲಸದಾಳುಗಳಿಗೆ ಆರೈಕೆ ಮಾಡೋರ್ಯಾರು? ಅಮ್ಮ ಮನೆಗೆ ಕರಕೊಂಡು ಹೋಗಿ ಅರಿಶಿನದ ನೀರಿನ ಸ್ನಾನ ಮಾಡಿಸಿ, ಗುಡಿಯಿಂದ ತಂದ ಭಂಡಾರ ಬಳಿದು ಮೂಲೆಯಲ್ಲಿ ಕೂರಿಸಿದಳು. ಆಮೇಲೆ ಒಂದು ಹದಿನೈದು ದಿನ ಸಾಹುಕಾರನ ಮನೆಯ ಕಡೆ ತಲೆ ಹಾಕದೆ ಸುಖವಾಗಿದ್ದೆ. ಆಮೇಲಾದರು ಹೋಗದೇ ಇರೋಕೆಲ್ಲಿ ಸಾದ್ಯವಿತ್ತು? ಹದಿನಾರನೆ ದಿನ ಸಾಹುಕಾರನ ಮನೆಗೆ ಹೋಗಿ ಯಥಾಪ್ರಕಾರ ಕೆಲಸ ಮಾಡೋಕೆ ಶುರು ಮಾಡಿದೆ. ಅದೇನು ಬಡವರ ಹೆಣ್ಣುಮಕ್ಕಳ ಗ್ರಹಚಾರನೋ ದೊಡ್ಡವಳಾದ ಮೂರೇ ತಿಂಗಳಿಗೆ ದೊಡ್ಡ ಹೆಂಗಸಿನ ತರ ಬೆಳೆದು ಬಿಟ್ಟೆ. ಸಾಹುಕಾರನ ಮಗಳ ಹಳೆ ಲಂಗ ಜಾಕೀಟಲ್ಲೂ ಚೆನ್ನಾಗೇ ಕಾಣ್ತಿದ್ದೆ. ನನ್ನ ಪುಣ್ಯಕ್ಕೆ ಮೈನೆರದು ನಾಲ್ಕು ತಿಂಗಳಾಗಿದ್ದರೂ ಸಾಹುಕಾರನ ಮಗ ಊರಿನ ಕಡೆ ತಲೆ ಹಾಕಲಿಲ್ಲ. ಸದ್ಯ ಬದುಕಿದೆ ಅಂತ ಅಂದು ಕೊಂಡು ಸುಮ್ಮನಾಗಿ ನೆಮ್ಮದಿಯಾಗಿದ್ದೆ.

ಆದರೆ ನಮ್ಮಂತೋರಿಗೆ ದೇವರು ಕರುಣೆ ತೋರಿಸಲ್ಲ. ಒಂದು ದಿನ ಯಾರೋ ತೀರಿಕೊಂಡರು ಅಂತ ಸಾಹುಕಾರನ ಹೆಂಡತಿ ಆಕೆಯ ತವರಿಗೆ ಹೋಗಿದ್ದಳು. ಅವತ್ತು ರಾತ್ರಿ ಅಷ್ಟು ದೊಡ್ಡ ಮನೆಯಲ್ಲಿ ನಾನು ಸಾಹುಕಾರ ಇಬ್ಬರೇ ಇರಬೇಕಾಗಿ ಬಂತು. ಗಂಡಾಳುಗಳೆಲ್ಲ ಮನೆ ಹಿಂದಿನ ಕೊಟ್ಟಿಗೆಯಲ್ಲಿ, ಅದರ ಪಕ್ಕದ ಶೆಡ್ಡಿನಲ್ಲಿ ಮಲಗ್ತಾ ಇದ್ದರು. ಇನ್ನು ಅಡುಗೆ ಮಾಡುವ ರಾಮಕ್ಕ ರಾತ್ರಿ ಎಂಟುಗಂಟೆಗೆಲ್ಲ ಅಡುಗೆ ಮುಗಿಸಿ ಸಾಹುಕಾರನಿಗೂ ಬಡಿಸಿ ಅವಳ ಕೇರಿಗೆ ಹೋಗಿಬಿಡೋಳು. ಮತ್ತವಳು ಬರೋದು ಬೆಳಗಿನ ಜಾವ ಐದು ಗಂಟೆಗೆ.

ಇನ್ನೇನು ನಾನೂ ಊಟ ಮುಗಿಸಿ ಮಲಗಬೇಕು ಅನ್ನುವಷ್ಟರಲ್ಲಿ ಸಾಹುಕಾರ ಕರೆದದ್ದು ಕೇಳಿಸಿತು. ಹೆದರಿಕೊಂಡೆ ಅವನ ರೂಮಿಗೆ ಹೋದೆ. ಹೋದ ಕೂಡಲೇ ರೂಮಿನ ಬಾಗಿಲು ಹಾಕು ಅಂದ. ನನಗೇನು ಮಾಡಲು ಗೊತ್ತಾಗದೆ ಗಾಬರಿಯಿಂದ ಆ ಕಡೆ ಈ ಕಡೆ ನೋಡ ತೊಡಗಿದೆ. ಸಿಟ್ಟಿಗೆದ್ದ ಸಾಹುಕಾರ ಎದ್ದು ಬಂದವನೇ ನನ್ನ ಕಪಾಳಕ್ಕೊಂದು ಹೊಡೆದು ನನ್ನ ಮೈಮೇಲಿನ ಬಟ್ಟೆಯನ್ನೆಲ್ಲ ಬಿಚ್ಚಿ ಎಸೆದು ಹಾಸಿಗೆಗೆ ಎಳೆದೊಯ್ದು ಇಡೀ ರಾತ್ರಿ ನನ್ನ ಹೇಗೆ ಬೇಕೋ ಹಾಗೆಲ್ಲ ಉಪಯೋಗಿಸಿಕೊಂಡ. ಬೆಳಗಿನ ಜಾವ ಇದನ್ನ ಹೊರಗೆ ಯಾರಿಗಾದರು ಹೇಳಿದರೆ ನಿಮ್ಮ ಮನೆಯವರನ್ನೆಲ್ಲ ಕೊಂದು ಹಾಕಿಬಿಡ್ತೀನಿ ಅಂತ ಹೆದರಿಸಿ ಅವನ ರೂಮಿನಿಂದಾಚೆ ಕಳಿಸಿದ. ನಾನು ಸೀದಾ ಅಲ್ಲಿಂದ ನಮ್ಮ ಕೇರಿಗೆ ಬಂದು ಮನೆಯಲ್ಲಿ ಅಮ್ಮನಿಗೆ ನಡೆದದ್ದನ್ನೆಲ್ಲ ಹೇಳಿದೆ. ಇದನ್ನು ಕೇಳಿ ಅಮ್ಮ ಅಳೋಕೆ ಶುರು ಮಾಡಿದರೆ ಅಪ್ಪ ದೆವ್ವ ಬಡಿದವನಂತೆ ಕೂತಿದ್ದ. ಬೆಳಗಾದ ಮೇಲೆ ಅಮ್ಮ ನನಗೆ ಸ್ನಾನ ಊಟ ಮಾಡಿಸಿ,ಮಗಳಿಗೆ ಹುಷಾರಿಲ್ಲ ಎರಡು ದಿನ ಕೆಲಸಕ್ಕೆ ಬರಲ್ಲ ಅಂತ ಸಾಹುಕಾರನ ಮನೆಗೆ ಹೋಗಿ ಹೇಳಿಬಂದಳು. ಆದರೆ ಮಾರನೇ ದಿನ ಮದ್ಯಾಹ್ನಕ್ಕೇ ಊರಿಗೆ ಬಂದ ಸಾಹುಕಾರನ ಹೆಂಡತಿ ನನ್ನ ಕರೆಸಿಕೊಂಡಳು.ಮತ್ತೆ ಆ ಮನೆಗೆ ಕಾಲಿಡಬೇಕಾದ ನನ್ನ ಅವಸ್ಥೆಗೆ ಅಪ್ಪ ಅಮ್ಮನ ಮೇಲೆ ಸಿಟ್ಟು ಬಂದರೂ ಅವರ ಕೈಲಿ ಏನೂ ಮಾಡೋಕ್ಕಾಗಲ್ಲ ಅನ್ನೋದು ಗೊತ್ತಿದ್ದರಿಂದ ದು:ಖಾನೆಲ್ಲ ನುಂಗಿಕೊಂಡು ಕೆಲಸ ಮಾಡತೊಡಗಿದೆ.

ಗ್ರಹಚಾರ ನೋಡಿ ಇದೆಲ್ಲ ಆಗಿ ಒಂದೇ ವಾರಕ್ಕೆ ಸಾಹುಕಾರನ ಮಗ ಊರಿಂದ ಬಂದುಬಿಟ್ಟ.ಹೇಗೋ ಮಾಡಿ ಒಂದೆರಡು ದಿನ ಅವನಿಂದ ತಪ್ಪಿಸಿಕೊಂಡು ಓಡಾಡಿದರೂ ಮೂರನೇ ದಿನ ಅವನ ಕೈಗೆ ಸಿಕ್ಕಿ ಹಾಕಿಕೊಂಡೆ.ಮತ್ತದೇ ನರಕ, ಕಣ್ಣಿಗೇ ಕಾಣಿಸುವ ಯಾತನೆ ಅನುಭವಿಸಿದೆ. ಒಂದು ರೀತಿಯಲ್ಲಿ ನನ್ನದು ನಾಯಿಪಾಡಾಗಿತ್ತು. ಏನೂ ಮಾಡಲಾಗದ ಅಪ್ಪ ಅಮ್ಮ, ಸಾಹುಕಾರನ ಎದುರು ನಿಂತು ಮಾತಾಡೋಕು ಹೆದರೋ ಜನಗಳ ನಡುವೆ ಬಂದಿದ್ದನ್ನೆಲ್ಲ ಅನುಭವಿಸಲೇ ಬೇಕಾಗಿತ್ತು. ಹೇಗೋ ದಿನ ದೂಡ್ತಾ ಇರಬೇಕಾದರೆ ಎರಡು ತಿಂಗಳು ನಾನು ಮುಟ್ಟಾಗಲಿಲ್ಲ. ಅಪ್ಪನದೋ ಮಗನದೋ ಒಟ್ಟಿನಲ್ಲಿ ಅವರ ಪಾಪದ ಪಿಂಡ ನನ್ನ ಹೊಟ್ಟೇಲಿ ಬೆಳೆಯೋಕೆ ಶುರುವಾಗಿತ್ತು. ಇದು ಗೊತ್ತಾದ ಸಾಹುಕಾರನ ಹೆಂಡತಿ ನನ್ನ ಜುಟ್ಟು ಹಿಡಿದು ಇದಕ್ಕೆ ಯಾರು ಕಾರಣ ಹೇಳು ಅಂದಾಗ, ಅವಳಿಗೆ ಹೇಳಿದರೆ ನನ್ನ ಕಷ್ಟ ಪರಿಹಾರವಾಗಬಹುದೇನೊ ಅನ್ನೊ ನಂಬಿಕೆಯಿಂದ ಅವಳ ಗಂಡ ಮಗ ಮಾಡಿದ್ದನ್ನೆಲ್ಲ ಹೇಳಿಬಿಟ್ಟೆ. ಆದರೆ ನನ್ನ ಲೆಕ್ಕಾಚಾರ ತಪ್ಪಿತ್ತು. ಅದನ್ನು ಕೇಳಿ ರಾಕ್ಷಸಿಯಂತಾದ ಅವಳು ಇದನ್ನ ಯಾರಿಗಾದರು ಹೇಳಿದರೆ ಸಾಯಿಸಿಬಿಡ್ತೀನಿ, ಬಾಯಿಮುಚ್ಕೊಂಡು ಕೆಲಸ ಮಾಡಿಕೊಂಡಿರು ಅಂತ ನಾಲ್ಕು ಹೊಡೆದು ಸುಮ್ಮನಾದಳು. ಆಮೇಲೆರಡು ದಿನದಲ್ಲಿ ಅಪ್ಪ ಅಮ್ಮನ್ನ ಕರೆದು ಕೂರಿಸಿ ಗುಟ್ಟಾಗಿ ಮಾತಾಡಿ, ಅದೇ ಸಾಹುಕಾರನ ಮನೇಲಿ ಜೀತಕ್ಕಿದ್ದ ಹನುಮಂತ ಅನ್ನೋ ಅರವತ್ತು ವರ್ಷದ ಮುದುಕನ ಜೊತೆ ನನ್ನ ಮದುವೆ ಮಾಡಿಸಿಬಿಟ್ಟರು. ಊರಾಚೆಯಿದ್ದ ಹಳೇ ದೇವಸ್ಥಾನದಲ್ಲಿ ನನಗೆ ತಾಳಿ ಕಟ್ಟಿದ ಮುದುಕ ಹನುಮಂತನಿಗೆ ಇದು ಮೂರನೇ ಮದುವೆಯಾಗಿತ್ತು. ಮೊದಲಿನಿಬ್ಬರೂ ಸತ್ತು ಹೋಗಿದ್ದರು.

ಸಾಹುಕಾರನ ಅಪ್ಪಣೆಯಂತೆ ಅವನ ಮನೆ ಹಿಂದಿನ ಶೆಡ್ಡಿನಲ್ಲಿ ನನ್ನ ಹೊಸ ಸಂಸಾರ ಶುರುವಾಯಿತು.ನಾನು ಬೆಳಿಗ್ಗೆಯಿಂದ ರಾತ್ರಿಯವರೆಗೂ ಸಾಹುಕಾರನ ಮನೆಯಲ್ಲಿ ಕೆಲಸ ಮಾಡಿ ಶೆಡ್ಡಿಗೆ ಬಂದರೆ ಗಂಡ ಅನಿಸಿಕೊಂಡೋನು ಹೊಟ್ಟೆತಂಬಾ ಕುಡಿದು ಪ್ರಜ್ಞೆ ಇಲ್ಲದೆ ಬಿದ್ದಿರುತ್ತಿದ್ದ. ಒಂದು ದಿನವೂ ಅವನು ನನ್ನ ಮೈ ಮುಟ್ಟಲಿಲ್ಲ.ಅದೇನು ವಿದಿಯಾಟವೋ ನನ್ನ ಮದುವೆಯಾದ ಮೂರೇ ವಾರಕ್ಕೆ ನನ್ನ ಬಸಿರು ಕಲಸಿ ಹೋಯಿತು.

ಹೀಗೇ ಎಲ್ಲ ನೋವು ನುಂಗಿಕೊಂಡು ಕೆಲಸ ಮಾಡ್ಕೊಂಡು ನನ್ನ ಪಾಡಿಗೆ ನಾನು ಬದುಕ್ತಾ ಇರಬೇಕಾದರೂ ಸಾಹುಕಾರನ ಕಾಟ ತಪ್ಪಲಿಲ್ಲ. ಆರೋಗ್ಯ ಸುದಾರಿಸಿಕೊಳ್ಳುವಷ್ಟರಲ್ಲಿ ಬಲವಂತವಾಗಿ, ನನ್ನ ಗಂಡನ ಸಹಕಾರದಿಂದ ನಾನು ಇನ್ನುಮುಂದೆ ರಾತ್ರಿ ಸಾಹುಕಾರನ ಮನೇಲೇ ಮಲಗಬೇಕು ಅನ್ನೊ ಅಪ್ಪಣೆಯಾಯಿತು. ಅವತ್ತಿಂದ ಮತ್ತೆ ನರಕ ಶುರುವಾಯಿತು. ರಾತ್ರಿ ಯಾವಾಗೆಂದರೆ ಅವಾಗ ಸಾಹುಕರನ ರೂಮಿಗೆ ಹೋಗಬೇಕಾಗಿತ್ತು. ನಾನು ಹೋದ ತಕ್ಷಣ ಸಾಹುಕಾರನ ಹೆಂಡತಿ ರೂಮಿನಿಂದ ಹೊರಗೆ ಹೋಗಿಬಿಡೋಳು. ಇದೆಲ್ಲ ಅಸಹ್ಯ ಅನಿಸಿದರೂ ಏನೂ ಮಾಡೋಕೆ ಗೊತ್ತಾಗಲಿಲ್ಲ.

ಇಂತ ಟೈಮಲ್ಲೇ ಮತ್ತೊಂದು ಕೇಡುಗಾಲ ಎದುರಾಯಿತು. ಓದು ಮುಗಿಸಿದ ಸಾಹುಕಾರನ ಮಗ ಶಾಶ್ವತವಾಗಿ ಊರಿಗೇ ಬಂದುಬಿಟ್ಟ. ಅಲ್ಲಿಂದ ನಾನು ಅಪ್ಪ ಮಕ್ಕಳಿಬ್ಬರ ಕಾಮದಾಟಕ್ಕೆ ಗೊಂಬೆಯಾಗಿಬಿಟ್ಟೆ. ರಾತ್ರಿಯ ಹೊತ್ತು ಸಾಹುಕಾರನ ಮಗ ಅದೇ ಊರಲ್ಲಿದ್ದ ಇನ್ನೊಂದು ಹೊಸಮನೆಯಲ್ಲಿ ಮಲಗ್ತಿದ್ದ. ಹೀಗಾಗಿ ಹಗಲು ಮಗನ ಜೊತೆ ಮಲಗಿದರೆ, ರಾತ್ರಿ ಅಪ್ಪನ ಜೊತೆ ಮಲಗಬೇಕಾಗ್ತಿತ್ತು. ಸಾಹುಕಾರನ ಹೆಂಡತಿಗೆ ಇದೆಲ್ಲ ಗೊತ್ತಿದ್ದರು, ಗೊತ್ತಿಲ್ಲದವರ ತರ ಇರ್ತಿದ್ದಳು. ಹೀಗೆ ಒಂದು ವರ್ಷ ಪ್ರಾಣಿಯ ತರ ಬದುಕಿದೆ.

ಆಮೇಲೊಂದು ದಿನ ದೈರ್ಯಮಾಡಿ ಸಾಹುಕಾರ ಊರಲ್ಲಿಲ್ಲದ ರಾತ್ರಿ ಯಾರಿಗೂ ಕಾಣದಂತೆ ಮನೆ ಬಿಟ್ಟು ಓಡಿಬಂದುಬಿಟ್ಟೆ. ಊರಿಂದಾಚೆ ಇದ್ದ ಪಟ್ಟಣದ ರಸ್ತೇಲಿ ನಿಂತವಳು ಬಂದ ಯಾವುದೋ ಲಾರಿಗೆ ಕೈ ಅಡ್ಡಹಾಕಿ ನಿಲ್ಲಿಸಿ,ಹತ್ತಿಕೊಂಡೆ.ಹುಬ್ಬಳ್ಳಿ ಕಡೆ ಹೋಗುತ್ತಿದ್ದ ಲಾರಿಯ ಡ್ರೈವರ್ ದುಡ್ಡು ಕೇಳಿದಾಗ ನನಗೇ ಗೊತ್ತಾಗದ ಹಾಗೆ ನನ್ನ ಕಥೆಯನ್ನೆಲ್ಲ ಹೇಳಿ ಹಗುರಾಗಿ ಬಿಟ್ಟೆ. ಅದು ನಾನು ಮಾಡಿಕೊಂಡ ತಪ್ಪು ಅಂತ ಆಮೇಲೆ ಗೊತ್ತಾಯಿತು. ಬೆಳಗಿನ ಜಾವ ಹುಬ್ಬಳ್ಳಿ ತಲುಪುತ್ತಲೇ ಅವನು ನನ್ನ ಮನೇಲಿ ಬಂದು ಇರ್ತಿಯಾ ನಾನು ನೋಡಿಕೊಳ್ಳೀನಿ ಅಂದಾಗ ವಿದಿಯಿಲ್ಲದೆ ಒಪ್ಪಿಕೊಂಡುಬಿಟ್ಟೆ. ಊರಾಚೆಯ ಯಾವುದೋ ದೇವಸ್ಥಾನದಲ್ಲಿ ನನ್ನ ಕೂರಿಸಿ ಹೋದವನು, ಲಾರಿಯನ್ನು ಅದರ ಓನರ್ ಮನೆಗೆ ಬಿಟ್ಟು ಎರಡು ಹೂವಿನ ಹಾರ ತೆಗೆದುಕೊಂಡು ಬಂದ. ದೇವರ ಎದುರು ಹಾರ ಬದಲಾಯಿಸಿ ನಾವು ಗಂಡ ಹೆಂಡತಿಯರಾದೆವು. ಆಮೇಲೆ ಊರೊಳಗಿನ ಯಾವುದೊ ಗಲ್ಲಿಯಲ್ಲಿದ್ದ ತನ್ನ ಸಣ್ಣ ಮನೆಯೊಂದಕ್ಕೆ ಕರೆದುಕೊಂಡು ಹೋದ. ನಮ್ಮ ಅಪ್ಪ ಅಮ್ಮ ಹಳ್ಳಿಯಲ್ಲಿದ್ದಾರೆ ಇಲ್ಲಿ ನಾನೊಬ್ಬನೇ ಇರೋದು ಅಂತ ಹೇಳಿದವನು, ರಾತ್ರಿಗೂ ಕಾಯದೆ, ಆಗಲೇ ಅವನೊಂದಿಗೆ ಮಲಗುವಂತೆ ಬಲವಂತ ಮಾಡಿದ. ಅದಕ್ಕೂ ಮೊದಲು ಗಂಡಸರ ಜೊತೆ ಮಲಗಿದ್ದರೂ ನಿಜವಾದ ಸುಖದ ಅರಿವಾಗಿದ್ದು ಅವತ್ತೇ!

ಆಮೇಲವನು ಮನೆಗೆ ಬೇಕಾದ ಸಾಮಾನುಗಳನ್ನು ಸ್ವಲ್ಪಸ್ವಲ್ಪವೇ ತಂದು ಹಾಕಲು ಶುರು ಮಾಡಿದ. ಅವನು ಬೆಳಿಗ್ಗೆ ಏಳು ಗಂಟೆಗೇ ಲಾರಿಗೆ ಹೋಗಬೇಕಾಗುತ್ತಿತ್ತು. ನಾನು ಐದು ಗಂಟೆಗೆಲ್ಲ ಎದ್ದು ಅಡುಗೆ ಮಾಡಿ ಕೊಡುತ್ತಿದ್ದೆ. ರಾತ್ರಿ ಮಾತ್ರ ಅವನು ಬರೋಕೆ ಒಂದು ಟೈಮ್ ಅಂತ ಇರಲಿಲ್ಲ. ವಾರಕ್ಕೊಂದು ರಜಾಮಾಡಿ ಸಿನಿಮಾ ದೇವಸ್ಥಾನ ಅಂತ ತಿರುಗಾಡುತ್ತಿದ್ದೆವು. ನನಗೆ ಊರಿನ ನೆನಪೇ ಆಗುತ್ತಿರಲಿಲ್ಲ. ಬಹುಶ: ಸ್ವರ್ಗ ಅಂದರೆ ಅದೇ ಅಂದುಕೊಂಡಿದ್ದೆ. ಅವನ ವಿಷಯದಲ್ಲಿ ನನಗಿದ್ದ ಒಂದೇ ಬೇಜಾರೆಂದರೆ ಅವನು ದಿನವೂ ಕುಡಿದು ಬರುತ್ತಿದ್ದ. ಹಾಗೆ ಕುಡಿದಾಗೆಲ್ಲ ತೀರಾ ಒರಟಾಗಿ ನಡೆದುಕೊಳ್ಳುತ್ತಿದ್ದ. ಒಂದೈದಾರು ತಿಂಗಳು ಕಳೆದ ಮೇಲೆ ಅವನು ಇದ್ದಕ್ಕಿದಂತೆ ಲಾರಿಗೆ ಹೋಗೋದನ್ನು ನಿಲ್ಲಿಸಿದ. ಕೇಳಿದರೆ ಓನರ್ ಲಾರಿ ಮಾರಿ ಬಿಟ್ಟರು ಬೇರೆ ಕೆಲಸ ನೋಡಬೇಕು ಅನ್ನುತ್ತಿದ್ದ. ದಿನ ಕಳೆದಂತೆ ಅದೆಲ್ಲ ಸುಳ್ಳು ಅಂತ ನನಗೆ ಗೊತ್ತಾಗತೊಡಗಿತು. ಕೆಲಸ ಮಾಡಲು ಇಷ್ಟವಿಲ್ಲದೆ ಸೋಮಾರಿಯಾಗಿ ಇರೋದ್ರಲ್ಲಿ ಸಂತೋಷ ಪಡೋ ಅವನ ನಡತೆ ಬಗ್ಗೆ ನಮ್ಮ ನಡುವೆ ಬೇಕಾದಷ್ಟು ಸಾರಿ ಜಗಳಗಳೂ ಆದವು. ಅವನು ಯಾಕೋ ಬದಲಾಗಿದ್ದ. ಮುಂಚೆ ರಾತ್ರಿ ಮಾತ್ರ ಕುಡೀತಾ ಇದ್ದೋನು ಈಗ ಹಗಲೂ ಕುಡಿಯೋಕೆ ಶುರು ಮಾಡಿದ್ದ. ಮನೆ ಸಾಮಾನಿಗೆ,ಕುಡಿಯೋಕೆ ಅಂತಾ ಊರೆಲ್ಲ ಸಾಲಮಾಡಿಕೊಂಡಿದ್ದ. ಸಾಲ ಕೊಟ್ಟವರು ಮನೆಗೆ ಬಂದರೆ ಜಗಳವಾಡಿ ಕಳಿಸೋನು. ಅವರ ಮೇಲಿನ ಎಲ್ಲ ಸಿಟ್ಟನ್ನೂ ನನ್ನ ಮೇಲೆ ತೋರಿಸುತ್ತ ದಿನಾ ಹೊಡೆಯೋನು. ಕೊನೆಕೊನೆಗೆ ಊಟಕ್ಕೂ ಗತಿಯಿಲ್ಲದಂತ ದಿನವೂ ಬಂದು ಬಿಡ್ತು. ಅಂತ ಒಂದಿನ ಸಾಯಂಕಾಲ ಮನೆಗೆ ಬರುವಾಗ ಜೊತೆಗೆ ಯಾರೊ ಒಬ್ಬನ್ನು ಕರೆದುಕೊಂಡು ಬಂದಿದ್ದ. ಬಂದವನನ್ನು ಮನೆಯೊಳಗೆ ಕೂರಿಸಿ, ನನ್ನ ಹಿತ್ತಲಿಗೆ ಕರೆದುಕೊಂಡು ಹೋಗಿ, ನೋಡು ಇವತ್ತು ರಾತ್ರಿ ನೀನು ಅವನ ಜೊತೆಯಿರಬೇಕು. ನಮ್ಮ ಸಾಲ ಎಲ್ಲ ತೀರಿಸೋವಷ್ಟು ದುಡ್ಡು ಕೊಟ್ಟಿದ್ದಾನೆ ಅಂದಾಗ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು. ನನ್ನ ಕಷ್ಟ ತೀರಿತು ಅನ್ನೋವಾಗಲೇ ದುಡ್ಡಿಗಾಗಿ ಬೇರೊಬ್ಬನೊಡನೆ ಮಲಗೋಕ್ಕೆ ಗಂಡನಾದವನೇ ಹೇಳ್ತಿದಾನಲ್ಲ ಅನ್ನುವ ದು:ಖದಲ್ಲಿ ನಾನೂ ಜೋರು ದನಿಯಲ್ಲೇ ಆಗಲ್ಲ ಅಂದೆ. ಅದಕ್ಕವನು ನಿನಗೇನಿದು,ಹೊಸದಾ? ಮುಚ್ಕೊಂಡು ಹೇಳಿದ ಹಾಗೆ ಕೇಳು ಅಂತ ಹೇಳಿ ಬಂದವನನ್ನು ಮನೇಲೆ ಬಿಟ್ಟು ಹೊರಗೆಲ್ಲೊ ಹೊರಟುಹೋದ. ಆ ರಾತ್ರಿ ಸಾಹುಕಾರನ ಮನೆಗೂ ಈ ಮನೆಗೂ ವ್ಯತ್ಯಾಸವಿಲ್ಲ ಅನಿಸಿತು.

ಮುಂದೆ ಇದು ಮಾಮೂಲಿಯಾಗಿ ಬಿಡ್ತು. ಅವನು ದುಡ್ಡು ತಗೊಂಡು ಕರಕೊಂಡು ಬರೋರ ಜೊತೆ ನಾನು ಮಲಗಲೇ ಬೇಕಾಗಿತ್ತು. ಹೀಗಿರುವಾಗ ಒಂದು ದಿನ ಪೂನಾದವನೊಬ್ಬನನ್ನು ಕರೆದುಕೊಂಡ ಬಂದ. ಬಂದವನು ನನ್ನ ವಯಸ್ಸಿನವನು ತುಂಬಾ ಒಳ್ಳೆಯ ಹುಡುಗ. ಅವತ್ತು ರಾತ್ರಿ ನನ್ನ ಜೊತೆಯಿದ್ದವನು ಬೆಳಿಗ್ಗೆ ಹೋಗುವಾಗ ನೀನು ದುಡಿದು ಈ ಕುಡುಕನಿಗ್ಯಾಕೆ ಕೊಡ್ತೀಯಾ? ನನ್ನ ಜೊತೆ ಪೂನಾಗೆ ಬಂದು ಬಿಡು. ಅಲ್ಲಿ ನನ್ನ ಪರಿಚಯದವಳೊಬ್ಬಳಿದ್ದಾಳೆ. ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿರಬಹುದು ಅಂತ ಆಸೆ ಹುಟ್ಟಿಸಿದ. ಸರಿ, ಅವನ ಮಾತು ಕೇಳಿ ಅವತ್ತು ಮದ್ಯಾಹ್ನವೇ ಅವನ ಜೊತೆ ಗಂಡನಿಗೆ ಗೊತ್ತಾಗದ ಹಾಗೆ ಪೂನಾ ಬಸ್ಸು ಹತ್ತಿಬಿಟ್ಟೆ. ಪೂನಾ ತಲುಪಿದ ಮೇಲೆ ಅವನು ಕನ್ನಡ ಬರ್ತಿದ್ದ ಸುಮಿತ್ರಾಬಾಯಿ ಅನ್ನುವವಳ ಮನೆಯಲ್ಲಿ ನನ್ನನ್ನು ಬಿಟ್ಟು ಹೋದ. ಆಮೇಲೆ ಗೊತ್ತಾಗಿದ್ದು ನನ್ನ ಕರೆದುಕೊಂಡು ಹೋಗಿದ್ದು ಅವಳ ಮನೆಯಲ್ಲಿ ಕೆಲಸ ಮಾಡೋಕ್ಕಲ್ಲ,ದಂದೆ ಮಾಡೋಕೆ ಅಂತ. ಅಲ್ಲಿಗೆ ಅಂದುಕೊಂಡೆ ,ಇಲ್ಲ ಇನ್ನು ನನ್ನ ಜೀವನ ಮುಗಿಯಿತು. ಎಲ್ಲಿ ಹೋದರು ಇದೇ ಕಸುಬು ಮಾಡಬೇಕಾಗುತ್ತೆ ಅಂತ. ಹಾಗಂದುಕೊಂಡವಳು ದೈರ್ಯವಾಗಿ ಕಲ್ಲಿನಂತೆ ನಿಂತುಬಿಟ್ಟೆ. ದಂದೇನೇ ಮಾಡೋದಾದ್ರೆ ನನಗೋಸ್ಕರ ಸಂತೋಷದಿಂದ ಮಾಡೋಣ ಅನಿಸಿ ಅದಕ್ಕೆ ದುಮುಕಿಬಿಟ್ಟೆ.

ಏನೇ ಅಗಲಿ, ದಂದೇಲಿದ್ದರೂ ಸುಮಿತ್ರಾ ಬಾಯಿ ಮನುಷ್ಯತ್ವ ಇದ್ದ ಒಳ್ಳೆ ಹೆಂಗಸು! ಅವಳ ಮನೆಯಲಿದ್ದ ನಾವು ಐದಾರು ಹೆಂಗಸರು ದುಡಿದ ದುಡ್ಡಲ್ಲಿ ಮನೆ ಖರ್ಚನ್ನೆಲ್ಲ ಕಳೆದು ಉಳಿದದ್ದನ್ನು ಅವರವರ ಹೆಸರಲ್ಲಿ ಹತ್ತಿರದ ಬ್ಯಾಂಕಿಗೆ ಹಾಕಿಡುತ್ತಿದ್ದಳು. ಉಳಿದವರೆಲ್ಲ ವರ್ಷಕ್ಕೊಂದು ಸಾರಿಯಾದರು ಅವರವರ ಊರಿಗೆ ಹೋಗಿ ಬರೋರು. ನಾನು ಮಾತ್ರ ಎಲ್ಲಿಗೂ ಹೋಗದೆ ಅವಳ ಆಪ್ತಳಾಗಿಬಿಟ್ಟೆ. ಆ ಮನೆಯಲ್ಲಿ ಸುಮಾರು ಹದಿನಾಲ್ಕು ವರ್ಷ ಕಳೆದೆ. ಆಮೇಲೊಂದು ದಿನ ಅದೆಂತಹುದೋ ಕಾಯಿಲೆ ಬಂದು ಸುಮಿತ್ರಾಬಾಯಿ ಸತ್ತುಹೋದಳು. ಸಾಯುವ ಮುಂಚೆ ನನ್ನ ಹತ್ತಿರ ಕರೆದು, ನಿನಗಿಷ್ಟವಿದ್ದರೆ ನೀನೇ ಈ ಮನೆ ನಡೆಸಿಕೊಂಡು ಹೋಗು. ಇಲ್ಲ ಅಂದ್ರೆ ಅವರವರ ದುಡ್ಡು ಅವರವರಿಗೆ ಕೊಟ್ಟು ಅವರೆಲ್ಲಿಗೆ ಹೋಗುತ್ತಾರೊ ಅಲ್ಲಿಗೆ ಹೋಗಲು ಬಿಡು ಅಂತ ಹೇಳಿದ್ದಳು. ಆಕೆ ಸತ್ತಮೇಲೆ ಆಕೆಯ ಕಾರ್ಯವನ್ನೆಲ್ಲ ನಾವೇ ಹೆಂಗಸರು ಸೇರಿ ಮಾಡಿದೆವು. ನಂತರ ಅವರವರ ದುಡ್ಡನ್ನೆಲ್ಲ ಅವರವರಿಗೆ ಕೊಟ್ಟು ನಿಮಗೆ ಇಷ್ಟಬಂದ ಕಡೆ ಹೋಗಿ ಅಂತ ಕಳಿಸಿಬಿಟ್ಟೆ. ನಾನು ದುಡಿದ ದುಡ್ಡನ್ನು ತೆಗೆದುಕೊಂಡು ಅಲ್ಲಿ ಯಾರಿಗೂ ಹೇಳದೆ ಈ ಊರಿಗೆ ಬಂದುಬಿಟ್ಟೆ.

ಇಲ್ಲಿಗೆ ಬಂದಾಗ ನನಗೆ ಮೊದಲು ಪರಿಚಯವಾದವರೇ ನಿಮ್ಮನ್ನು ಈ ಮನೆಗೆ ಕರೆದುಕೊಂಡುಬಂದ ಬಾಲಣ್ಣ. ಸಮಾಜಸೇವೆ ಅದೂ ಇದೂ ಅಂತ ಮಾಡಿಕೊಂಡಿದ್ದ ಅವರೇ ನನಗೀ ಮನೆ ಕೊಡಿಸಿದರು. ಜೊತೆಗೆ ಇಲ್ಲಿಂದ ಎರಡು ಮೈಲಿ ದೂರವಿರೊ ಒಂದು ಬುದ್ದಿಮಾಂದ್ಯ ಮಕ್ಕಳ ಶಾಲೆಯಲ್ಲಿ ಆಯಾ ಕೆಲಸವನ್ನೂ ಕೊಡಿಸಿದರು. ಆ ಶಾಲೆಯಲ್ಲಿ ಸುಮಾರು ಆರು ವರ್ಷ ಕೆಲಸ ಮಾಡಿ ಕೊನೆಗೆ ಆರೋಗ್ಯ ಸರಿಯಿರದೆ ಕೆಲಸ ಬಿಟ್ಟೆ. ಈಗ ಈ ಮನೆಯನ್ನು ಎರಡು ಪೋಷನ್ ಮಾಡಿ ಹಿಂದುಗಡೆಯದನ್ನು ಬಾಡಿಗೆಗೆ ಕೊಟ್ಟಿದೀನಿ. ಬ್ಯಾಂಕಲ್ಲಿರೋ ಒಂದಷ್ಟು ದುಡ್ಡಿಂದ ಬಡ್ಡಿ ಬರುತ್ತೆ, ನನ್ನೊಬ್ಬಳ ಜೀವನಕ್ಕೆ ಇಷ್ಟು ಸಾಕು. ಒಂದು ಸಾರಿ ನನಗೆ ಆರೋಗ್ಯ ಸರಿಯಿರದೆ ಮಲಗಿದಾಗ ಈ ಬೀದಿಯ ಹೆಣ್ಣುಮಕ್ಕಳು ನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿ, ಗಂಜಿಯೆಲ್ಲ ಮಾಡಿಕೊಟ್ಟು ಉಪಚಾರ ಮಾಡಿದ್ದರು. ಪಾಪ ಅವರಿಗೆ ನಾನೆಂತ ಕಸುಬು ಮಾಡ್ತಿದ್ದೆ ಅಂತ ಗೊತ್ತಿಲ್ಲ.ಪಾಪ ಯಾರೋ ಗಂಡ ಸತ್ತ ಹೆಂಗಸು ಅನಾಥೆ ಅಂದುಕೊಂಡಿದ್ದಾರೆ. ಅವರ ಒಳ್ಳೆಯತನ ನನ್ನ ಮನಸ್ಸಿಗೆ ನಾಟಿ ಹೋಯಿತು. ಅವತ್ತಿಂದ ಈ ಬೀದೀಲಿ ಯಾರಿಗೇ ಆರೋಗ್ಯ ಸರಿಯಿಲ್ಲ ಅಂದ್ರು ನಾನವರ ಮನೆಗೊ ಆಸ್ಪತ್ರೆಗೊ ಹೋಗಿ ಅವರ ಉಪಚಾರ ಮಾಡ್ತೀನಿ. ಈಗ ಈ ಬೀದಿಯ ಎಪ್ಪತ್ತು ಎಂಭತ್ತು ಕುಟುಂಬಗಳೂ ನನ್ನದೇ ಅನಿಸಿಬಿಟ್ಟಿದೆ. ದೊಡ್ಡವರು ಚಿಕ್ಕವರು ಅನ್ನದೆ ಎಲ್ಲರ ಜೊತೆ ಹೊಂದಿಕೊಂಡು ಬದುಕ್ತಾ ಇದೀನಿ. ಅವರ ಮನೆಯ ಮದುವೆ ಮುಂಜಿ ನಾಮಕರಣಗಳಿಗೆ ನನಗೊಂದು ಆಮಂತ್ರಣವಿದ್ದೇ ಇರುತ್ತೆ. ದಿನಾ ಸಾಯಂಕಾಲ ನನ್ನ ವಯಸ್ಸಿನ ಹೆಂಗಸರೆಲ್ಲ ಸೇರಿ ಈ ಮನೆಯಲ್ಲೇ ಸಾಯಿಭಜನೆ ಮಾಡ್ತೀವಿ.

ಹೀಗೇ ಕಾಲ ನೂಕ್ತಾ ಇದೀನಿ. ಮರೆತೇ ಹೋಗಿದ್ದ ಕಥೆ ಇವತ್ತು ನಿಮ್ಮಿಂದ ಮತ್ತೆ ನೆನಪಾಯಿತು. ನನ್ನಂತೋರು ಈ ಭೂಮಿ ಮೇಲೆ ಬಹಳ ಜನ ಇದಾರೆ. ಆದರೆ ಅವರೆಲ್ಲ ನನ್ನ ಹಾಗೆ ಕೊನೆಗಾಲದಲ್ಲಿ ನೆಮ್ಮದಿಯಾಗಿರೋದು ತುಂಬಾ ಕಷ್ಟ. ಈ ವಿಚಾರದಲ್ಲಿ ನಾನು ಪುಣ್ಯವಂತಳು. ನನ್ನ ಕಥೆಯನ್ನ ನೀವು ಪುಸ್ತಕ ಬರೀತೀರೊ ಸಿನಿಮಾ ಮಾಡ್ತೀರೋ ನನಗೆ ಗೊತ್ತಿಲ್ಲ. ಆದರೆ ಇದರಿಂದ ಬೇರೆ ಹೆಣ್ಣುಮಕ್ಕಳು ಇಂತ ನರಕಕ್ಕೆ ಬಂದುಬೀಳೋದು ನಿಂತರೆ ಸಾಕು. 

ಪೂರಾ ಕಥೆ ಹೇಳಿದರೆ ಒಂದಿಷ್ಟು ದುಡ್ಡು ಕೊಡ್ತೀನಿ ಅಂತ ಬಾಲಣ್ಣನಿಗೆ ಹೇಳಿದ್ರಂತೆ.ನಿಮ್ಮ ದುಡ್ಡು ನನಗೆ ಬೇಡ. ನೀವು ಕೊಡಬೇಕು ಅಂತಿರೋ ದುಡ್ಡನ್ನು ಆಗಲೆ ಹೇಳಿದ್ನಲ್ಲ ಆ ಬುದ್ದಿಮಾಂದ್ಯ ಮಕ್ಕಳ ಶಾಲೆಗೆ ಕೊಟ್ಟುಬಿಡಿ.ಅವರು ಬಹಳ ಕಷ್ಟಪಟ್ಟು ಆ ಶಾಲೆ ನಡೆಸ್ತಾ ಇದಾರೆ. ಪಾಪ ಯಾರೂ ದಿಕ್ಕಿರದ ಮಕ್ಕಳನ್ನು ನೋಡಿಕೊಳ್ತಿರೊ ಆ ಕಮಿಟಿಯವರಿಗಾದರು ಸಹಾಯವಾಗುತ್ತೆ.

ಎದುರಿಗೆ ಕೂತಿದ್ದವಳು ಮಾತು ನಿಲ್ಲಿಸಿ ಮೇಲೆದ್ದು, ಮನೆಗೆ ಬಂದವರನ್ನು ಬರೀ ಹೊಟ್ಟೇಲಿ ಕಳಿಸಬಾರದಂತೆ ಅನ್ನುತ್ತ ಒಳಗೆ ಹೋಗಿ ಒಂದು ಲೋಟ ಹಾಲು ತಂದು ಕೊಟ್ಟಳು.ಹಾಲು ಕುಡಿದ ನಾನು,ನಿಮ್ಮದೊಂದು ಫೋಟೊ ತೆಗೆಯಲಾ ಎಂದದ್ದಕ್ಕೆ, ಅದೊಂದು ಮಾತ್ರ ಬೇಡ. ಇನ್ನೊಂದ್ಸಲ ಈ ಕಡೆ ಬಂದ್ರೆ ನಿಮ್ಮ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬನ್ನಿ. ಒಂದು ದಿನವಿದ್ದು ಊಟ ಮಾಡಿಕೊಂಡು ಹೋಗಬಹುದು ಅಂದಳು.

ಗೇಟಿನ ಬಾಗಿಲು ದಾಟಿದವನಿಗೆ ಯಾಕೊ ಮನಸ್ಸು ಬಾರವಾದಂತಾಯಿತು. ಶಾಲೆಗೆ ದುಡ್ಡು ಕೊಡಲು ಕೇಳಿಕೊಂಡ ಅವಳ ಮುಂದೆ ನಾನು ತುಂಬ ಸಣ್ಣವನೆನಿಸಿ ನಾಚಿಕೆಯಾಯಿತು.ನಂತರ ಅವಳು ಹೇಳಿದ ಶಾಲೆಗೆ ಹೋಗಿ ಒಂದಿಷ್ಟುದುಡ್ಡು ಕೊಟ್ಟು ಊರಿಗೆ ಬಂದರೂ ಬಹಳ ದಿನ ಅವಳು ನೆನಪಾಗುತ್ತಲೇ ಇರುತ್ತಿದ್ದಳು.

ಮಾರ್ಚ್ 30, 2015

ಸ್ಮಾರ್ಟ್ ಫೋನ್ ತೊರೆದು ‘ಸ್ಮಾರ್ಟ್ ಆಗಿ’

smartphone mania
Dr Ashok K R
ಹೆಚ್ಚೇನಲ್ಲ, ಕೇವಲ ಹದಿನೈದಿಪ್ಪತ್ತು ವರುಷಗಳ ಹಿಂದೆ ಲ್ಯಾಂಡ್‍ಲೈನ್ ಫೋನು ಮನೆಯಲ್ಲಿದ್ದರೆ ಅದು ಮೇಲ್ಮಧ್ಯಮ ವರ್ಗದ್ದೋ ಶ್ರೀಮಂತರ ಮನೆಯೆಂದೋ ಊಹಿಸಿಬಿಡುತ್ತಿದ್ದೆವು. ಹತ್ತಿಪ್ಪತ್ತು ಮೀಟರ್ ದೂರದವರೆಗೆ ಓಡಾಡುತ್ತಾ ಮಾತನಾಡಲು ಅನುವು ಮಾಡಿಕೊಡುವ ವೈರ್‍ಲೆಸ್ ಫೋನನ್ನಂತೂ ಬಾಯ್ಬಾಯಿ ಬಿಟ್ಟುಕೊಂಡು ನೋಡಿದ್ದೆವು. ತಂತ್ರಜ್ಞಾನ ಯಾವ ಪರಿ ವೇಗ ಪಡೆದುಕೊಂಡಿತೆಂದರೆ ಅಪರೂಪಕ್ಕೊಮ್ಮೆ ದರುಶನ ಕೊಟ್ಟು ಬೆಚ್ಚಿ ಬೀಳಿಸುತ್ತಿದ್ದ ಮೊಬೈಲು ಫೋನುಗಳು ಎಲ್ಲರ ಜೇಬಿನೊಳಗೂ ನಲಿದಾಡಲಾರಂಭಿಸಿತು. ಕಪ್ಪು ಬಿಳುಪು ಸ್ಕ್ರೀನ್ ಕಲರ್ ಆಗಿ ಇಂಟರ್ನೆಟ್ ಕೂಡ ಉಪಯೋಗಿಸಬಹುದು ಎಂಬ ಅಚ್ಚರಿ ಟಚ್ ಸ್ಕ್ರೀನ್ ಬಂದು ಮೊಬೈಲುಗಳೆಲ್ಲ ಸ್ಮಾರ್ಟ್ ಆಗುವಲ್ಲಿಗೆ ಸದ್ಯಕ್ಕೆ ನಿಂತಿದೆ. ಮೊಬೈಲುಗಳು ಸ್ಮಾರ್ಟಾದ ವೇಗದಲ್ಲೇ ಜನರೂ ಸ್ಮಾರ್ಟ್ ಆಗಿದ್ದಾರಾ? ಸತತ ಎರಡು ವರುಷಗಳ ತನಕ ಸ್ಮಾರ್ಟ್ ಫೋನ್ ಉಪಯೋಗಿಸಿದ ಅನುಭವದಲ್ಲಿ ಹೇಳುವುದಾದರೆ ಇಲ್ಲ!

ಮಾರ್ಚ್ 28, 2015

ಅಸಹಾಯಕ ಆತ್ಮಗಳು - ಮನೆಯವರಿಗಾಗಿ ಮಾರಿಕೊಂಡವಳು

Asahayaka Aatmagalu

ಕು.ಸ.ಮಧುಸೂದನ್

ಮದುವೆಯಾಗಿ ಬೆಂಗಳೂರಿಗೆ ಬಂದಾಗ ನನಗೆ ಕೇವಲ ಹದಿನೈದು ವರ್ಷ. ಅಕ್ಕನ ಮದುವೆ ನಿಶ್ಚಯ ಮಾಡಿದ್ದ ಅಪ್ಪ ಮದುವೆ ಖರ್ಚಿಗಾಗಿ ಇದ್ದ ಒಂದೂವರೆ ಏಕರೆ ಜಮೀನು ಮಾರಬೇಕಾಗಿ ಬಂತು. ಹಾಗೆ ಜಮೀನು ಮಾರಿದರೆ ಎರಡನೆಯವಳ ಮದುವೆಗೇನು ಮಾಡೋದು ಅನ್ನೋ ಲೆಕ್ಕಾಚಾರದಲ್ಲಿ, ಆಗಿನ್ನೂ ಎಸ್.ಎಸ್.ಎಲ್.ಸಿ ಓದುತ್ತಿದ್ದ ನನಗೂ ಮದುವೆ ಮಾಡಿ ತಲೆತೊಳೆದುಕೊಂಡು ಬಿಟ್ಟ. ಹಾಗೇನೆ ನನ್ನ ಮದುವೆಯಾದ ನಾಲ್ಕೇ ತಿಂಗಳಿಗೆ ವಿಷ ಕುಡಿದು ಸತ್ತು ಹೋದ.
ನನ್ನ ಮದುವೆಯಾದವನು ದೊಡ್ಡ ಕುಳವೇನಲ್ಲ. ಬೆಂಗಳೂರಿನಲ್ಲಿ ಸಣ್ಣ ವರ್ಕಶಾಪೊಂದರಲ್ಲಿ ಕೆಲಸ ಮಾಡುತ್ತಿದ್ದ. ಒಂದೇ ರೂಮಿನ ತಗಡು ಶೀಟಿನ ಬಾಡಿಗೆ ಮನೆಯಲ್ಲಿ ನಾವು ಸಂಸಾರ ಮಾಡುತ್ತಿದ್ದೆವು. ಬಡತನಕ್ಕೆ ಮಕ್ಕಳು ಜಾಸ್ತಿ ಎಂಬಂತೆ, ಮದುವೆಯಾದ ಎರಡು ವರ್ಷಕ್ಕೆ ಎರಡು ಮಕ್ಕಳನ್ನು ಹೆತ್ತುಬಿಟ್ಟೆ. ನನ್ನ ಗಂಡ ಹತ್ತು ಕಾಸು ದುಡಿದರೆ ಹನ್ನೆರಡು ಕಾಸು ಕುಡಿಯೋನು. ಕುಡಿತಕ್ಕಾಗಿ ಊರ ತುಂಬಾ ಸಾಲ ಮಾಡಿಕೊಂಡಿದ್ದ. ಒಂದು ಕಡೆಯ ಸಾಲ ತೀರಿಸಲು ಮತ್ತೊಂದು ಕಡೆ ಸಾಲ ಮಾಡೋದು ಅವನ ಚಾಳಿ. ಕೆಲಸ ಮಾಡುತ್ತಿದ್ದ ವರ್ಕ್‍ಶಾಪಿನಲ್ಲೂ ವರ್ಷಕ್ಕಾಗುವಷ್ಟು ಅಡ್ವಾನ್ಸ್ ತೆಗೆದುಕೊಂಡಿದ್ದರೂ, ಒಳ್ಳೆಯ ಕೆಲಸಗಾರ ಅನ್ನೋ ಕಾರಣಕ್ಕವನನ್ನು ಇಟ್ಟುಕೊಂಡಿದ್ದರು. ಹೀಗೆ ತನಗಿಷ್ಟ ಬಂದಾಗ ದಿನಸಿ ತಂದು ಹಾಕುತ್ತಿದ್ದವನ ಕಾಟ ಸಹಿಸಿಕೊಂಡು ಹೇಗೋ ಜೀವನ ಮಾಡುತ್ತಿದ್ದೆ. ಅಪ್ಪ ಸತ್ತ ಮೇಲೆ ತವರು ಮನೆ ಸೇರಿ, ಅಣ್ಣನ ಮಕ್ಕಳನ್ನು ನೋಡಿಕೊಂಡು ಜೀವನ ಮಾಡುತ್ತಿದ್ದ ಅಮ್ಮನಿಂದ ನನಗೇನೂ ಸಹಾಯವಾಗುವಂತಿರಲಿಲ್ಲ. ಇನ್ನು ನನ್ನ ಗಂಡನ ಮನೆಯವರ ಕಥೆಯಂತೂ ಕೇಳುವುದೇ ಬೇಡ. ಅದು ಕುಡಿದು ಸಾಯಲೆಂದೇ ಹುಟ್ಟಿದ ವಂಶವಾಗಿತ್ತು. ಅವರ ಮನೆಯ ಬಹಳಷ್ಟು ಗಂಡಸರ್ಯಾರು ಆಯಸ್ಸು ಪೂರಾ ಮಾಡಿ ಸಾಯಲೇ ಇಲ್ಲ. ಹೀಗಿರುವಾಗ ನನ್ನ ದೊಡ್ಡ ಮಗಳಿಗೆ ಆರು ವರ್ಷವಾದಾಗ ಹತ್ತಿರದ ಕಾರ್ಪೋರೇಷನ್ ಸ್ಕೂಲಿಗೆ ಸೇರಿಸಿದ್ದೆ. ಸೇರಿಸಿ ಒಂದು ವಾರವಾಗುವ ಹೊತ್ತಿಗೆ, ನನ್ನ ಬದುಕು ಬೀದಿಪಾಲಾಗಿ ಹೋಯಿತು. ಕುಡಿದ ಮತ್ತಿನಲ್ಲಿ ವರ್ಕ್‍ಶಾಪಿನಲ್ಲಿ ಕೆಲಸ ಮಾಡುತ್ತಿದ್ದಾಗ, ಕಾಲುಗಳು ಮಿಷಿನ್ನಿಗೆ ಸಿಕ್ಕು ತುಂಡಾಗಿ ಹೋದವು. ಅವನನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ ವರ್ಕ್‍ಶಾಪ್‍ನವರು ಮತ್ತಾಕಡೆ ತಲೆ ಹಾಕಲೇ ಇಲ್ಲ. ಮದುವೆಯಾಗುವ ತನಕ ಬೆಂಗಳೂರನ್ನು ನೋಡದೆ ಇದ್ದ ನನಗೆ ಅಂತ ಪ್ರಪಂಚ ಜ್ಞಾನವೂ ಇರಲಿಲ್ಲ. ಸರಿ ಅಂತ ಇದ್ದ ತಾಳಿ, ಮೂಗುಬಟ್ಟು ಮಾರಿ ಅವನನ್ನು ನೋಡಿಕೊಂಡೆ. ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದವನಿಗೆ ಕುಡಿಸಲು ಗಂಜಿಯೂ ಇರದ ಸ್ಥಿತಿಯಿತ್ತು. ನಮ್ಮ ಪಕ್ಕದ ಮನೆಯಲ್ಲಿ ರಾಮಣ್ಣ ಅನ್ನೋರಿದ್ದರು. ಅವರು ಮತ್ತು ಅವರ ಹೆಂಡತಿ ಮಾರ್ಕೆಟ್‍ನಲ್ಲಿ ಹೂ ಮಾರುತ್ತಿದ್ದರು. ಪಾಪ ಅವರು ನಮ್ಮ ಮನೆಗೆ ಒಂದು ತಿಂಗಳಿಗಾಗುವಷ್ಟು ರೇಷನ್ ತಂದು ಹಾಕಿ ನಾವು ಉಪವಾಸದಿಂದ ಸಾಯುವುದನ್ನು ತಪ್ಪಿಸಿದಳು. ಜೊತೆಗೆ ಅವಳಿಗೆ ಪರಿಚಯದವರೊಬ್ಬರಿಗೆ ಮನೆಕೆಲಸದವಳು ಬೇಕಾಗಿದ್ದು ಆ ಕೆಲಸ ಮಾಡುತ್ತೀಯ ಎಂದು ಕೇಳಿದರು. ಬೇರೆ ದಾರಿಯಿಲ್ಲದೆ ಕಂಡವರ ಮನೆ ಮುಸುರೆ ತಿಕ್ಕಲು ಶುರು ಮಾಡಿದೆ. ಇದಾಗಿ ಆರು ತಿಂಗಳು ಕಳೆಯುವಷ್ಟರಲ್ಲಿ ಇನ್ನೊಂದು ಕಷ್ಟ ಎದುರಾಯ್ತು. ಮನೆಯಲ್ಲೇ ಇರುತ್ತಿದ್ದ ನನ್ನ ಗಂಡನಿಗೆ ಪಾಶ್ರ್ವವಾಯು ಹೊಡೆಯಿತು. ಅವನ ಬಲಗೈ ಸ್ವಾಧೀನ ಕಳೆದುಕೊಂಡು ಅವನ ಉಪಚಾರದಲ್ಲಿ ಕೆಲಸಕ್ಕೆ ಸರಿಯಾಗಿ ಹೋಗದಂತಾದ್ದರಿಂದ ಆ ಕೆಲ¸ವನ್ನÀ ಕಳೆದುಕೊಂಡೆ. ಈ ಸಮಯದಲ್ಲೇ ನನ್ನ ಎರಡನೇ ಮಗಳಿಗೆ ಟೈಫಾಯಿಡ್ ಆಗಿ ಆಸ್ಪತ್ರೆಗೆ ಸೇರಿಸಬೇಕಾಯ್ತು. ಕೈಯಲ್ಲೀ ಕವಡೆಕಾಸೂ ಇಲ್ಲ. ಸಾಲದಕ್ಕೆ ಕಷ್ಟಕ್ಕಾಗುತ್ತಿದ್ದ, ರಾಮಣ್ಣನವರ ಸಂಸಾರ, ಯಾವುದೋ ಚೀಟಿ ವ್ಯವಹಾರದಲ್ಲಿ ಸಿಲುಕಿ ಹೇಳದೆ ಕೇಳದೆ ಊರು ಬಿಟ್ಟು ಹೋಗಿದ್ದರು. 

ಇಂತಹ ಸಂದರ್ಭದಲ್ಲಿ ನನಗೆ ಆಸ್ಪತ್ರೆಯಲ್ಲಿ ಪರಿಚಯವಾದವಳೆ ಪಾರ್ವತಿ. ಹುಷಾರಿಲ್ಲ ಎಂದು ಆಸ್ಪತ್ರೆಗೆ ಬಂದವಳು ಪರಿಚಯವಾದ ದಿನವೇ ಹತ್ತಿರವಾದಳು. ನನ್ನ ನೋವನ್ನು ಯಾರ ಹತ್ತಿರವಾದರೂ ಹೇಳಿ, ಅತ್ತು ಹಗುರವಾಗುವ ಮನಸ್ಸಿನಲ್ಲಿ, ಎರಡು ಮೂರು ದಿನದಲ್ಲಿ ಅವಳ ಬಳಿ ನನ್ನ ಕಥೆಯನ್ನೆಲ್ಲಾ ಹೇಳಿಕೊಂಡೆ. ನನ್ನ ಕಥೆ ಕೇಳಿ ಮರುಗಿದ ಅವಳು ಏನು ಹೆದರಬೇಡ ದೇವರಿದ್ದಾನೆ, ದಾರಿ ತೋರಿಸುತ್ತಾನೆ ಅಂದು, ನನ್ನ ಮನೆಯ ಅಡ್ರೆಸ್ ತೆಗೆದುಕೊಂಡು ಹುಷಾರಾದ ಮೇಲೆ ನಿನ್ನ ಮನೆಗೆ ಬರುತ್ತೇನೆ ಎಂದು ಹೊರಟು ಹೋದಳು. ಮಗಳು ಹುಷಾರಾಗಿ ಮನೆಗೆ ಬಂದ ಮೇಲೆ ಪಾರ್ವತಿಯನ್ನು ಮರೆತುಬಿಟ್ಟಿದ್ದೆ. ನನ್ನ ಕಷ್ಟದಲ್ಲಿ ಅವಳ ನೆನಪಿಟ್ಟುಕೊಂಡು ಏನು ಮಾಡಲಿ? ಆದರೆ ಅದಾದ ಒಂದೇ ವಾರಕ್ಕೆ ಅವಳು ಮನೆಗೇ ಬಂದುಬಿಟ್ಟಳು. 

ಬಂದವಳು ಅದೂ ಇದೂ ಮಾತನಾಡುತ್ತಾ ಮುಂದೇನು ಮಾಡ್ತೀಯ ಅಂತ ಕೇಳಿದಳು. ಅಳೋದು ಬಿಟ್ಟು ನನಗೇನು ಗೊತ್ತಾಗ್ತಿಲ್ಲ ಅಂದಾಗ ಸಮಾಧಾನ ಮಾಡಿದವಳು, ನೀನು ತಪ್ಪು ತಿಳಿಯಲ್ಲ ಅಂದರೆ ನಾನು ಮಾಡೋದನ್ನೇ ನೀನು ಮಾಡಬಹುದು ಅಂತ ತನ್ನ ಕೆಲಸ, ಜೀವನದ ಬಗ್ಗೆ ಹೇಳಿದಳು. ಅಂತವನ್ನೆಲ್ಲಾ ಕನಸು ಮನಸಲ್ಲೂ ಯೋಚಿಸಿರದ ನಾನು ಇಂಥಾ ಹಲ್ಕಾ ಕೆಲಸ ಮಾಡೋದ ಅಂತ ಬೈದುಬಿಟ್ಟೆ. ತಾಳ್ಮೆ ಕಳೆದುಕೊಳ್ಳದ ಅವಳು ಸಮಾಧಾನದಿಂದ ಆಯಿತು. ನೀನೀಗ ಅರ್ಥ ಮಾಡಿಕೊಳ್ಳೋ ಸ್ಥಿತಿಯಲ್ಲಿಲ್ಲ. ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಶಾಂತಿ ಟಾಕೀಸಿನ ಹತ್ತಿರ ಸಿಗು ಅಂತ ಹೇಳಿ ಎದ್ದು ಹೋದಳು. ಅವತ್ತೆಲ್ಲಾ ಅಳುತ್ತಲೇ ಅದರ ಬಗ್ಗೆ ಯೋಚಿಸಿದೆ. ತಪ್ಪು ಅನಿಸಿತ್ತು. ಗಂಡನ ಖಾಯಿಲೆ, ಮಕ್ಕಳ ಆರೈಕೆಗೆ ಬೇರೆ ದಾರಿಯೇ ಇರಲಿಲ್ಲ. ಭಿಕ್ಷೆ ಬೇಡುವುದೋ ಇಲ್ಲ ಸಾಯುವುದೋ ದಾರಿಯಾಗಿತ್ತು. ಮಕ್ಕಳನ್ನು ಅನಾಥರನ್ನಾಗಿ ಮಾಡಿ ಸಾಯುವುದು ಪಾಪ ಅನಿಸ್ತು. ಕೈಲಾಗದ ಗಂಡನನ್ನು ನೋಡಿಕೊಳ್ಳೋರು ಯಾರು ಅನಿಸ್ತು. ಅವತ್ತಿಡೀ ರಾತ್ರಿ ಕಣ್ಣಿಗೆ ನಿದ್ದೆ ಹತ್ತಲಿಲ್ಲ. 

ಬೆಳಗ್ಗೆ ಎದ್ದಾಗ ಮನಸ್ಸು ಸ್ವಲ್ಪ ತಿಳಿಯಾಗಿತ್ತು. ಮಕ್ಕಳಿಗೋಸ್ಕರ ಏನು ಮಾಡಿದರೂ ಪಾಪವಲ್ಲ ಅಂತಂದುಕೊಂಡು ಹತ್ತುಗಂಟೆಗೆ ಶಾಂತಿ ಟಾಕೀಸಿನ ಬಳಿ ಹೋಗಿ ಪಾರ್ವತಿಯನ್ನು ಭೇಟಿ ಮಾಡಿದೆ. ಆಗವಳು ಹತ್ತಿರದ ಪಾರ್ಕಿನಲ್ಲಿ ಕೂರಿಸಿಕೊಂಡು ಎಲ್ಲವನ್ನೂ ವಿವರವಾಗಿ ಬಿಡಿಸಿ ಹೇಳಿದಳು. ನಿನಗೇನಾದರೂ ತೊಂದರೆಯಾದರೆ ನಾನಿದ್ದೀನಿ, ಯೋಚನೆ ಮಾಡಬೇಡ ಬಾ ಅಂದು ಯಾವುದೋ ಒಂದು ಮನೆಗೆ ಕರೆದೊಯ್ದಳು. ಅಲ್ಲಿದ್ದ ಹೆಂಗಸಿಗೆ ನನ್ನ ಪರಿಚಯ ಮಾಡಿಕೊಟ್ಟು, ನಾಳೆಯಿಂದ ಇವಳು ಬರ್ತಾಳೆ. ಗಿರಾಕಿಗಳು ಕೋಡೋದ್ರಲ್ಲಿ ಅವಳ ಪಾಲಿನದನ್ನು ಸರಿಯಾಗಿ ಕೊಟ್ಟು ಬಿಡು. ಪಾಪದವಳು ಒಳ್ಳೆ ಹುಡುಗಿ ಯಾರ್ಯಾರೊ ಅಪಾಪೋಲಿಗಳನ್ನು, ಕುಡುಕರನ್ನು ಅವಳ ಹತ್ತಿರ ಕಳಿಸಬೇಡ ಅಂತ ಹೇಳಿ ನನ್ನನ್ನು ವಾಪಾಸು ಕರೆದುಕೊಂಡು ನನ್ನ ಮನೆಗೆ ಬಂದಳು. ಸಂಜೆಯ ತನಕ ಜೊತೆಯಲ್ಲಿದ್ದು ನಾನು ಅಲ್ಲಿಗೂ ಇಲ್ಲಿಗೂ ಬರ್ತಾ ಇರ್ತೀನಿ ಹೆದರಬೇಡ ದೇವರಿಟ್ಟ ಹಾಗಾಗುತ್ತೆ. ಮಕ್ಕಳನ್ನು ಚೆನ್ನಾಗಿ ಓದಿಸು, ಗಂಡನ್ನ ಮಕ್ಕಳನ್ನ ಚನ್ನಾಗಿ ನೋಡಿಕೋ ಅಂತ ಹೇಳಿ ಹೋದಳು.

ಆಮೇಲಿನದನ್ನು ಹೇಳೋದೇನಿದೆ. ಬೆಳಗೆದ್ದು ಮನೆಕೆಲಸ ಮಾಡಿ, ತಿಂಡಿ ಅಡುಗೆ ಮಾಡಿಟ್ಟು, ಮಕ್ಕಳನ್ನು ಸ್ಕೂಲಿಗೆ ಕಳಿಸಿ, ಗಂಡನಿಗೆ ಬೇಕಾದ್ದನ್ನೆಲ್ಲಾ ಅವನ ಪಕ್ಕದಲ್ಲಿಟ್ಟು ಪಾರ್ವತಿ ಪರಿಚಯಿಸಿದ ಮನೆಗೆ ಹೋಗುತ್ತಿದ್ದೆ. ಆ ಮನೆಯಲ್ಲಿ ನನ್ನ ಮತ್ತೊಂದು ಬದುಕು ಶುರುವಾಯ್ತು. ಮೊದಮೊದಲು ಪ್ರಾಣಕಳೆದುಕೊಳ್ಳುವಷ್ಟು ಅವಮಾನವಾದಂತಾಗುತ್ತಿತ್ತು. ಆದರೆ ಕಾಲ ಎಲ್ಲವನ್ನೂ ಮರೆಸುತ್ತೆ ನೋಡಿ. ನಿದಾನವಾಗಿ ಆ ಕಸುಬಿಗೆ ಒಗ್ಗಿಕೊಳ್ಳುತ್ತಾ ಹೋದೆ. ನಿಜ ಹೇಳ್ತೀನಿ ನಾನು ಎರಡು ಮಕ್ಕಳ ತಾಯಯಾಗಿದ್ರೂ ಮೊದಲ ಸಲ ನೋಡಿದ ಯಾರಿಗೂ ಹಾಗನ್ನಿಸುತ್ತಿರಲಿಲ್ಲ. ಹಾಗಾಗಿ ನನ್ನ ವ್ಯವಹಾರ ಚನ್ನಾಗಿ ನಡೆಯತೊಡಗಿತು. ಸತತ ಮೂರು ವರ್ಷಗಳ ಕಾಲ ಆ ಮನೆಯಲ್ಲೇ ದುಡಿದೆ. ಆಮೇಲೊಂದು ದಿನ ಯಾವುದೋ ವಿಷಯಕ್ಕೆ ಮನಸ್ತಾಪ ಬಂದು ಹೋಗುವುದು ನಿಲ್ಲಿಸಿದೆ. 

ಆದರೆ ಅಷ್ಟರಲ್ಲಾಗಲೇ ಈ ದಂಧೆಯ ಆಳ ಅಗಲಗಳು ಅದರಲ್ಲಿರುವ ಹೆಂಗಸರ ಪರಿಚಯವಾಗಿತ್ತು. ಹಾಗೆ ಪರಿಚಯವಾಗಿದ್ದ ಬೇರೆಬೇರೆ ಹೆಂಗಸರ ಮನೆಗಳಿಗೆ ಹೋಗುತ್ತಿದ್ದೆ. ದಿನಕ್ಕೊಂದು ಏರಿಯಾದಲ್ಲಿ ದಿನಕ್ಕೊಂದು ಗಿರಾಕಿ ಒಟ್ಟಿನಲ್ಲಿ ಸ್ವತಂತ್ರವಾಗಿ ಕೆಲಸಮಾಡತೊಡಗಿದೆ. ಸುಳ್ಯಾಕೆ ಹೇಳಲಿ ಕೈತುಂಬಾ ಸಂಪಾದಿಸಿದೆ. ಹೆಚ್ಚು ಖರ್ಚು ಮಾಡದೆ ಮುಂದಕ್ಕಿರಲಿ ಅಂತ ಆದಷ್ಟೂ ದುಡ್ಡು ಕೂಡಿಡುತ್ತಿದ್ದೆ.

ಇಷ್ಟರಲ್ಲಿ ನಾನು ಬೇರೆ ಏರಿಯಾದ ಒಳ್ಳೆ ಮನೆಗೆ ಶಿಫ್ಟ್ ಆಗಿದ್ದೆ. ಆ ಮನೆಯ ಪಕ್ಕದಲ್ಲೇ ಇದ್ದ ಅಂಗಡಿ ಮಳಿಗೆಯ ಅಂಗಡಿಯೊಂದನ್ನು ಬಾಡಿಗೆಗೆ ತಗೊಂಡು ಗಂಡನಿಗೆ ಝೆರಾಕ್ಸ್ ಮತ್ತು ಎಸ್.ಟಿ.ಡಿ ಹಾಕಿಕೊಟ್ಟೆ. ಹತ್ತಿರದಲ್ಲಿ ಒಂದು ಸ್ಕೂಲ್ ಬೇರೆ ಇತ್ತು. ಹಾಗಾಗಿ ಮಕ್ಕಳಿಗೆ ಬೇಕಾಗುವ ಪೆನ್ನು,ಪೆನ್ಸಿಲ್,ಎಕ್ಸೈಜ್ ಮುಂತಾದ ವಸ್ತುಗಳನ್ನು ತಂದು ಜೋಡಿಸಿದೆ. ಅದೃಷ್ಟಕ್ಕೆ ವ್ಯಾಪಾರ ಚನ್ನಾಗಿ ನಡೆಯತೊಡಗಿತು. ಮಂಕಾಗಿ ಮಲಗಿರುತ್ತಿದ್ದ ಗಂಡನೂ ಲವಲವಿಕೆಯಿಂದ ಇರಲು ಶುರು ಮಾಡಿದ. ಮೊದಲ ಮಗಳು ಎರಡನೇ ಬಿಎಸ್ಸ್‍ಸಿ ಓದುತ್ತಿದ್ದಳು. ಎರಡನೆಯವಳ್ಯಾಕೋ ಪಿ,ಯು,ಸಿ ಮುಗಿಸಿ ಮುಂದೆ ಓದಲ್ಲ ಅಂತ ಹೇಳಿ ಅಪ್ಪನ ಜೊತೆ ಅಂಗಡಿಯಲ್ಲಿ ಕೂರುತ್ತಿದ್ದಳು. ಸದ್ಯ ಬದುಕು ಒಂದು ಹಂತಕ್ಕೆ ಬಂತಲ್ಲ ಅಂತ ನೆಮ್ಮದಿಯ ನಿಟ್ಟುಸಿರು ಬಿಟ್ಟು ಇನ್ನು ಈ ಕಸುಬು ಬಿಟ್ಟು ಆರಾಮಾಗಿರೋಣ ಅಂದುಕೊಳ್ಳುವಷ್ಟರಲ್ಲಿ ಮತೊಂದು ಆಘಾತ ಕಾದಿತ್ತು. 

ಇದ್ದಕ್ಕಿದ್ದಂತೆ ನನ್ನ ಆರೋಗ್ಯ ಕೆಟ್ಟು, ಕೆಮ್ಮುಜ್ವರ ತಿಂಗಳಾದರೂ ಬಿಡಲಿಲ್ಲ. ಕೊನೆಗೆ ವಿಧಿಯಿಲ್ಲದೆ ದೊಡ್ಡಮಗಳು ಆಸ್ಪತ್ರೆಗೆ ಅಡ್ಮಿಟ್ ಮಾಡಿದಳು. ಅಲ್ಲಿ ರಕ್ತ ಪರೀಕ್ಷೆ, ಎಕ್ಸರೆ ಮಾಡಿದ ಡಾಕ್ಟರು ನನಗೆ ಹೆಚ್.ಐ.ವಿ. ಇದೆ ಅಂತ ಹೇಳಿಬಿಟ್ಟರು. ಜೊತೆಯಲ್ಲಿದ್ದ ಮಗಳು ಅವರು ಹೇಳಿದ್ದಕ್ಕೆಲ್ಲ ಹೂ ಅಂದು ಕೊಂಡು ಮನೆಗೆ ಬಂದವಳು ಅವರಪ್ಪನಿಗೆ, ತಂಗಿಗೆ ವಿಷಯ ಹೇಳಿದಳು. ಗಂಡನಂತೂ “ನಿನ್ನ ಮುಟ್ಟಿ ಇಪ್ಪತ್ತು ವರ್ಷವಾಯ್ತು. ಹೇಳು, ಈ ಕಾಯಿಲೆ ಹೇಗೆ ಬಂತು” ಅಂತ ಕೆಂಡಮಂಡಲವಾಗಿಬಿಟ್ಟ. ಅವನ ಅರಚಾಟದಿಂದ ಇರೋ ವಿಷಯವನ್ನು ಹೇಳಿ ತಪ್ಪು ಮಾಡಿಬಿಟ್ಟೆ, ಸಂಸಾರ ಸಾಕೋಕೆ ನಾನೀ ಕೆಲಸ ಮಾಡಿದೆ. ದಯವಿಟ್ಟು ಕ್ಷಮಿಸಿಬಿಡಿ ಅಂತ ಗಂಡನಿರಲಿ ಹೆಣ್ಣುಮಕ್ಕಳ ಕಾಲನ್ನೂ ಹಿಡಿದು ಬೇಡಿಕೊಂಡೆ. ಉಹುಂ ಯಾರೂ ಕರಗಲಿಲ್ಲ. ಇಂತ ಕೆಲಸ ಮಾಡೋ ಬದಲು ಅವತ್ತೇ ನಮ್ಮನ್ನೆಲ್ಲ ಸಾಯಿಸಿಬಿಡ್ಬೇಕಿತ್ತು ಅಂದು ಕೂಗಾಡಿ ಮನೆಯಿಂದ ಹೊರಹಾಕಿಬಿಟ್ಟರು. ಬೆಳಿಗ್ಗೆಯ ಹೊತ್ತಿಗಾದರೂ ಅವರ ಕೋಪ ಕಡಿಮೆಯಾಗಿ ನನ್ನ ಸೇರಿಸಬಹುದು ಅನ್ನೊ ನಂಬಿಕೆಯಿಂದ ಇಡೀ ರಾತ್ರಿ ಮನೆ ಬಾಗಿಲಲ್ಲೇ ಕೂತಿದ್ದೆ. ಆದರೆ ಬೆಳಿಗ್ಗೆ ಬಾಗಿಲು ತೆಗೆದ ಹೆಣ್ಣುಮಕ್ಕಳು ನನ್ನನ್ನು ಎಳೆದುಕೊಂಡು ಬಂದು ರಸ್ತೆಗೆ ಎಸೆದುಬಿಟ್ಟರು. ಅವತ್ತಿಗೆ ನನ್ನ ಅವರ ಋಣ ಮುಗಿದು ಹೋಯಿತು. 

ಬೇರೆ ದಾರಿಯಿಲ್ಲದೆ ಸಾಯುವ ತೀರ್ಮಾನಕ್ಕೆ ಬಂದ ನಾನು ಹುಚ್ಚಿಯಂತೆ ಬೀದಿಬೀದಿ ಅಲೆದೆ. ಆದರೆ ಯಾರಿಗಾಗಿ ನಾನು ಇಷ್ಟೆಲ್ಲಾ ಕಷ್ಟಪಟ್ಟೆನೋ ಅವರೇ ಆರಾಮಾಗಿರಬೇಕಾದರೆ, ಬದುಕು ಒತ್ತೆಯಿಟ್ಟ ನಾನ್ಯಾಕೆ ಸಾಯಬೇಕು ಅನ್ನಿಸಿ ನನ್ನನ್ನು ಪರೀಕ್ಷಿಸಿದ ಡಾಕ್ಟರ ಹತ್ತಿರ ಹೋಗಿ ಮನೆಯಿಂದ ಹೊರಹಾಕಿರುವ ವಿಷಯ ಹೇಳಿದೆ. ಆಗವರು ಈಗ ನಾನಿರುವ ಈ ಸಂಸ್ಥೆಯ ಅಡ್ರೆಸ್ ಕೊಟ್ಟು ಅಲ್ಲಿಗೆ ಹೋಗು ಅಂದರು. ಜೊತೆಗೆ ನನ್ನೆದುರಿಗೇನೆ ಇಂತಹ ಹೆಣ್ಣುಮಗಳೊಬ್ಬಳನ್ನು ಕಳುಹಿಸುತ್ತಿದ್ದೇನೆ ಎಂದು ಸಹ ಹೇಳಿ ಉಪಕಾರÀ ಮಾಡಿದರು. ನನ್ನಂತಹ ಹೆಚ್.ಐ.ವಿ. ರೋಗಿಗಳ ಪುನರ್ವಸತಿಗಾಗಿರುವ ಈ ಸಂಸ್ಥೆಯಲ್ಲಿ ನಾವುಬಹಳಷ್ಟು ಮಕ್ಕಳು ಹೆಣ್ಣುಮಕ್ಕಳು ಇದ್ದೇವೆ. ಮಕ್ಕಳಿಗೆ ಇಲ್ಲೇ ಶಾಲೆಯಿದೆ. ಸ್ವಲ್ಪ ಗಟ್ಟಿಮುಟ್ಟಾಗಿರೋ ನನ್ನಂತಹ ಹೆಂಗಸರಿಗೆ ಕೈ ಕೆಲಸ ಹೇಳಿಕೊಟ್ಟಿದ್ದಾರೆ. ನಿರ್ವಂಚನೆಯಿಂದ ಅದನ್ನು ಮಾಡುತ್ತಾ, ನಮ್ಮ ಅನ್ನ ನಾವೇ ದುಡಿದು ತಿನ್ನುತ್ತಿದ್ದೇವೆ. ಇಲ್ಲಿ ಬಂದು ಒಂದು ತಿಂಗಳಾದ ಮೇಲೆ ಇಲ್ಲಿಯ ಒಬ್ಬ ಸ್ವಯಂಸೇವಕಿಯ ಹತ್ತಿರ, ನಮ್ಮ ಮನೆ ಅಡ್ರೆಸ್ ಕೊಟ್ಟು ನಾನಿಲ್ಲಿರುವ ವಿಚಾರ ಮನೆಗೆ ತಿಳಿಸುವಂತೆ ಹೇಳಿದೆ. ನನ್ನ ಗಂಡ ಮಕ್ಕಳಲ್ಲವೇ, ಎಂದಾದರೊಂದು ಇನ ಮನೆಗೆ ಕರೆದುಕೊಂಡು ಹೋಗಬಹುದೆಂಬ ಹುಚ್ಚು ಆಸೆ. ಆದರೇನು ಪ್ರಯೋಜನವಾಗಲಿಲ್ಲ. ಮನೆಗೆ ಹೋದ ಆಕೆಗೆ ಅವಳ್ಯಾರು ಅಂತ ಗೊತ್ತಿಲ್ಲ. ನೀವು ಇನ್ನೊಂದು ಸಾರಿ ಬಂದ್ರೆ ಪೋಲೀಸಿಗೆ ಕಂಪ್ಲೇಟ್ ಕೊಡುತ್ತೇವೆಂದು ಹೇಳಿ ಹೆದರಿಸಿ ಓಡಿಸಿದರಂತೆ. ನನಗೆ ಯಾರೂ ಇಲ್ಲ ಎಂದು ಅವತ್ತಿಂದ ಗಟ್ಟಿ ಮನಸ್ಸು ಮಾಡಿಕೊಂಡೆ. 

ಐದು ವರ್ಷವಾಯ್ತು. ಇವತ್ತಿನವರೆಗೂ ಅವರುಗಳ ವಿಚಾರ ಗೊತ್ತಾಗಿಲ್ಲ. ಇಷ್ಟೇ ಸರ್ ನನ್ನ ಕಥೆ ಅಂತ ಮುಗಿಸಿದವಳಿಗೆ ಕೈಮುಗಿದು ಹೊರಡಲು ಅನುವಾದವನಿಗೆ, ಸರ್ ನನಗೊಂದು ಸಹಾಯ ಮಾಡುತ್ತೀರ? ಏನೂ ಇಲ್ಲ, ಈಗ ನನ್ನ ಮಕ್ಕಳು ಏನು ಮಾಡ್ತಿದಾರೆ ಅಂತ ತಿಳಿದುಕೊಂಡು ನನಗೆ ತಿಳ್ಸೋಕೆ ಆಗುತ್ತಾ? 

ಆಯ್ತು ಖಂಡಿತಾ ಮಾಡ್ತೇನೆ ಎಂದು ಹೊರಗೆ ಬಂದವನಿಗೆ ಯಾಕೋ ಅಂತಹ ಕೃತಘ್ಞರ ಮುಖ ನೋಡಬೇಕೆನಿಸಲಿಲ್ಲ. ಜೊತೆಗೆ ಹೋಟೆಲ್ಲಿನ ರೂಮಿಗೆ ಬಂದವನಿಗೆ ಆಕೆಯಿಂದ ವಿಳಾಸವನ್ನೇ ಪಡೆಯದೇ ಬಂದದ್ದು ಅರಿವಿಗೆ ಬಂದು ಬೇಸರವಾಯಿತು!

ಮಾರ್ಚ್ 26, 2015

ಆರಂಭ ಚಿತ್ರಕ್ಕೆ ಎಮ್ಮೆ ಬಲಿ!

ರಸಗವಳ ನಾರಾಯಣ
ಇದು ಪಟ್ಟು ಬಿಡದ ನಿರ್ದೇಶಕ ಮತ್ತು ನಟನೊಬ್ಬನ ಕಲಾನಿಷ್ಠೆಯ ಪರಿ! ಆರಂಭ ಚಿತ್ರದ ಹಾಡುಗಳು ಮತ್ತು ಟೀಸರ್ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಚಿತ್ರದಲ್ಲಿ ಸದ್ದು ಮಾಡುವ ತಮಟೆಯೊಂದರ ಹಿಂದಿನ ಕಥೆಯಿದು! ಕಥೆಯಲ್ಲ, ನೈಜ ಘಟನೆ! ಎಸ್. ಅಭಿ ಹನಕೆರೆ ನಿರ್ದೇಶನದ ‘ಆರಂಭ ಚಿತ್ರದ ಒಂದು ಪ್ರಮುಖ ಪಾತ್ರ ಕುಂಟು ಬೋರನದು. ಚಿತ್ರದ ಹಲವೆಡೆ ಕುಂಟು ಬೋರ ತಮಟೆ ಬಡಿಯುವ ದೃಶ್ಯಗಳಿತ್ತು. ತಮಟೆ ಮೇಲೆ ಕೈ ಆಡಿಸುವ ರೀತಿಯನ್ನು, ದೇಹಭಾಷೆಯ ವ್ಯತ್ಯಾಸವನ್ನು ಅಧ್ಯಯನ ಮಾಡಲು ಕುಂಟು ಬೋರನ ಪಾತ್ರ ನಿರ್ವಹಿಸಿರುವ ‘ರಸಗವಳ ನಾರಾಯಣ’ರವರನ್ನು ತಮಟೆ ಬಡಿಯುವವರ ಹತ್ತಿರವೇ ಕಳುಹಿಸಿದ್ದರಂತೆ.

ಕಲಿತು ವಾಪಸ್ಸಾದ ರಸಗವಳ ನಾರಾಯಣರಿಗೆ ‘ಎಲ್ಲಾದ್ರೂ ಹುಡುಕಿಕೊಂಡು ಒಂದು ಚರ್ಮದ ತಮಟೆಯನ್ನೇ ತರಬೇಕು’ ಎಂದು ನಿರ್ದೇಶಕರು ತಾಕೀತು ಮಾಡಿದ್ದರು. ಎಲ್ಲೆಡೆಯೂ ಪ್ಲಾಸ್ಟಿಕ್ಕು, ಫೈಬರ್ರಿನ ತಮಟೆಯನ್ನೇ ನೋಡಿ ಕಂಗೆಟ್ಟರು ರಸಗವಳ ನಾರಾಯಣ! ಅಲ್ಲೊಂದಿಲ್ಲೊಂದಿದ್ದ ಚರ್ಮದ ತಮಟೆಯನ್ನು ಕೊಡಲು ಅದರ ಯಜಮಾನರು ಒಪ್ಪುತ್ತಿರಲಿಲ್ಲ! ಕೊನೆಗೆ ಕುಂಟು ಬೋರ ಒಂದು ಎಮ್ಮೆಯನ್ನು ಬಲಿಕೊಟ್ಟು ಅದರ ಚರ್ಮದಿಂದ ಹೊಸತೊಂದು ತಮಟೆಯನ್ನೇ ಮಾಡಿಸಿಕೊಂಡು ಚಿತ್ರೀಕರಣಕ್ಕೆ ಹಾಜರಾದರು!

ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ, ಹಿನ್ನೆಲೆ ಸಂಗೀತ ನುಡಿಸುವಾಗ ನೈಜತೆಗಾಗಿ ಆ ಚರ್ಮದ ತಮಟೆಯನ್ನೇ ಬಳಸಿದರೆ ಒಳ್ಳೆಯದು ಎಂದು ತಮ್ಮ ಹಂಬಲವನ್ನು ಸಂಗೀತನಿರ್ದೇಶಕರಾದ ಗುರುಕಿರಣ್ ಹತ್ತಿರ ಅಭಿ ಹನಕೆರೆ ಹೇಳಿಕೊಂಡಾಗ, ಮತ್ತೆ ಅದೇತಮಟೆಯನ್ನು ತರಿಸಿ, ಲೈವ್ ರೆಕಾರ್ಡ್ ಮಾಡಿಸಿದ್ದಾರೆ.

ರಸಗವಳ ನಾರಾಯಣನಿಗೆ ಮತ್ತೆ,ತಮಟೆ ತರಲು ಹೇಳಿದಾಗೆ,"ಮನೆಯಲ್ಲಿ ತಮಟೆಯನ್ನುಇಟ್ಟುಕೊಂಡರೆ,ಕೆಟ್ಟಾದಾಗಬಹುದು ಎಂದು ಭಾವಿಸಿ, ಮದ್ದೂರಿನ ದೇವಸ್ತಾನದಲ್ಲಿಇರಿಸಿದ್ದನ್ನು ಕೇಳಿ,ನಿರ್ದೇಶಕರು "ಚಿತ್ರ ಚೆನ್ನಾಗಿ ಮೂಡಿಬರಲು,ನಮ್ಮ ಕೈಯಲ್ಲಿ ಎಷ್ಟುಸಾಧ್ಯ,ಅಷ್ಟು ನೈಜವಾಗಿ ಮಾಡ್ಬೇಕು,ಇಲ್ಲಿ ಎಲ್ಲಾನೂ ಒಳ್ಳೇದಾಗುತ್ತೆ,ಕೆಟ್ಟದಾಗೋ ಮಾತೆಇಲ್ಲ"ಅಂತ ಅವರಿಗೆ ಹೇಳಿ,ಅವರಿಗೆ ಅದೇ ತಮಟೆಯಿಂದ ಬ್ಯಾಕ್ ಗ್ರೌಂಡ್ ಮ್ಯೂಸಿಕ್ಮಾಡೋಣವೆಂದು,ಮತ್ತೆ ಅದೇ ತಮಟೆ ತರಿಸಿದ್ದಾರೆ.

ಚಿತ್ರದಲ್ಲಿ ಉಪಯೋಗಿಸಿದ ಚರ್ಮದ ತಮಟೆಯನ್ನೇ ಬ್ಯಾಕ್ ಗ್ರೌಂಡ್ ಮ್ಯೂಸಿಕ್ಕಿನಲ್ಲೂ ಉಪಯೋಗಿಸಿರುವುದಕ್ಕೆ ಗುರುಕಿರಣ್ ಹರ್ಷ ವ್ಯಕ್ತ ಪಡಿಸುತ್ತಾ ಈ ರೀತಿಯ ಅನುಭವ ಇದೇ ಮೊದಲು ಎಂದಿದ್ದಾರೆ. ಕುಂಟು ಬೋರನ ಪಾತ್ರದ ಅಭಿನಯಕ್ಕೆ ‘ರಸಗವಳನಾರಾಯಣ’ರಿಗೆ ಪ್ರಶಸ್ತಿಗಳ ಸುರಿಮಳೆಯೇ ಬಂದರೂ ಅಚ್ಚರಿ ಪಡಬೇಕಿಲ್ಲ ಎಂದು ಅಭಿಹೇಳುತ್ತಾರೆ.

ಹಿನ್ನೆಲೆ ಸಂಗೀತವನ್ನು ಮುಗಿಸಿರುವ ಚಿತ್ರವು ಸೆನ್ಸಾರಿಗೆ ತೆರಳಲು ತಯಾರಾಗಿದ್ದು,ಶೀಘ್ರದಲ್ಲೇ ತೆರೆ ಕಾಣಲಿದೆ.

ಶರ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಡಿ. ಗಣೇಶ್ ವಿ ನಾಗೇನಹಳ್ಳಿ ನಿರ್ಮಿಸಿ ಎಸ್ ಅಭಿ ಹನಕೆರೆ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ.

ಮಾರ್ಚ್ 25, 2015

ದಲಿತ ಕೂಲಿಗಳ ಶಿರಚ್ಛೇಧ ಪ್ರಕರಣ : ದಿಕ್ಕುತಪ್ಪಿಸುವ ಯತ್ನ?

dalits beheaded in chamrajnagar
ರಘೋತ್ತಮ ಹೊ.ಬರವರ ಫೇಸ್‍ಬುಕ್ ಪುಟದಿಂದ

ಡಿ.ಕೆ.ರವಿ ಸಾವಿನ ಪ್ರಕರಣದ ನಡುವೆಯೇ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬರ್ಬರ ಕೃತ್ಯವೊಂದು ನಡೆದುಹೋಗಿದೆ. ಕಳೆದ ಗುರುವಾರ ಮಾರ್ಚಿ 19, ಚಾಮರಾಜನಗರ ತಾಲ್ಲೂಕಿನ ಸಂತೆಮರಹಳ್ಳಿಯಲ್ಲಿ ತೋಟವೊಂದಕ್ಕೆ ಕೂಲಿಗೆಂದು ಹೋಗಿದ್ದ ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಕೂಲಿಗಳನ್ನು ಆ ತೋಟದ ಮಾಲೀಕನೇ ಶಿರಚ್ಛೇಧಗೈದಿದ್ದಾನೆ. ನಿಜಕ್ಕೂ ಈ ಘಟನೆ ಹೈಟೆಕ್ ಯುಗದಲ್ಲೂ ದಲಿತರ ಸ್ಥಿತಿ ಯಾವ ಪರಿ ದಾರುಣವಾಗಿದೆ ಎಂಬುದನ್ನು ಜಗಜ್ಜಾಹೀರುಗೊಳಿಸಿದೆ ಹಾಗೆಯೇ ಕೊಂದ ಆ ಸವರ್ಣೀಯನ ಕ್ರೌರ್ಯವನ್ನೂ ಕೂಡ.
ಘಟನೆಯ ಭೀಭತ್ಸತೆಯನ್ನೇ ದಾಖಲಿಸುವುದಾದರೆ ಬಲಿಯಾದ ದಲಿತ ಕೂಲಿಗಳಾದ ಸಂತೆಮರಹಳ್ಳಿ ಸಮೀಪದ ಕಾವುದವಾಡಿ ಗ್ರಾಮದ ನಂಜಯ್ಯ (50) ಬಿನ್ ಮರಸಯ್ಯ, ದೇಶವಳ್ಳಿ ಗ್ರಾಮದ ಕೃಷ್ಣಯ್ಯ(60) ಬಿನ್ ನಂಜಯ್ಯ ಅಂದು ಅದೇ ಸಂತೇಮರಹಳ್ಳಿ ಸಮೀಪದ ದೇಶವಳ್ಳಿ ಗ್ರಾಮದ ಆರೋಪಿ ಮಹದೇವ(38) ಬಿನ್ ಶಿವಪ್ಪನವರ ಬಾಳೆ ತೋಟಕ್ಕೆ ಕೂಲಿಗೆಂದು ಆಗಮಿಸಿದ್ದಾರೆ. ಕೂಲಿಗೆಂದು ಇವರನ್ನು ಕರೆತಂದದ್ದು ಆರೋಪಿಯ ಅಣ್ಣ ನಾಗಪ್ಪ. ನಾಗಪ್ಪ ಕೂಲಿಯಾಳುಗಳಿಗೆಂದು ಟೀ ತರಲು ಹೋಗಿದ್ದಾಗ ಮಹದೇವ ಜಮೀನಿಗೆ ಆಗಮಿಸಿದ್ದಾನೆ ಹಾಗೆಯೇ ದಲಿತ ಕೂಲಿಗಳಿಗೆ ಆತ ಇಂತಿಂಥ ಕೆಲಸ ಮಾಡಿ ಎಂದು ತಾಕೀತುಮಾಡಿದ್ದಾನೆ. ಪರಿಣಾಮ ಮಾತಿಗೆ ಮಾತು ಬೆಳೆದು ಆರೋಪಿ ಮಹದೇವ ತನ್ನ ಕೈಯಲ್ಲಿದ್ದ ಮಚ್ಚಿನಿಂದ ಒಬ್ಬ ಕೂಲಿಯವನಿಗೆ ಬಲವಾಗಿ ಹೊಡೆದಿದ್ದಾನೆ ತಡೆಯಲು ಬಂದ ಮತ್ತೊಬ್ಬನಿಗೂ ಆತ ಮಚ್ಚು ಬೀಸಿದ್ದಾನೆ. ಪೊಲೀಸರ ಪ್ರಕಾರ ಮಚ್ಚು ಹರಿತವಿದ್ದರಿಂದ ಒಮ್ಮೆಯೇ ಆ ಇಬ್ಬರು ದಲಿತ ಕೂಲಿಗಳ ಶಿರಚ್ಛೇಧನವಾಗಿದೆ.

ದುರಂತವೆಂದರೆ ಇಲ್ಲಿ ಕಗ್ಗೊಲೆ ನಡೆದಿರುವುದಲ್ಲ, ಆದರೆ ಆ ಕಗ್ಗೊಲೆಯನ್ನು ದಿಕ್ಕುತಪ್ಪಿಸುವ ಯತ್ನ ನಡೆದಿರುವುದು. ಹೇಗೆಂದರೆ ಸವರ್ಣೀಯ ಸಮುದಾಯಕ್ಕೆ ಸೇರಿದ ಆ ಕೊಲೆಗಾರ ಮಹದೇವನನ್ನು ಮಾನಸಿಕ ಅಸ್ವಸ್ಥನೆಂದು ಬಿಂಬಿಸಲಾಗುತ್ತಿದೆ! ಆ ಮೂಲಕ ಆತನನ್ನು ರಕ್ಷಿಸುವ, ಆತನಿಗೆ ವಿಧಿಸಲ್ಪಡುವ ಶಿಕ್ಷೆಯನ್ನು ತಗ್ಗಿಸುವ ಕುತಂತ್ರ ಎಗ್ಗಿಲ್ಲದೆ ನಡೆದಿದೆ. ಯಾವ ಪರಿ ಎಂದರೆ ಮಾರನೇ ದಿನದ ಸ್ಥಳೀಯ ಪತ್ರಿಕೆಗಳ ವರದಿಯಂತೆ ದಲಿತ ಕೂಲಿಗಳನ್ನು ಹೀಗೆ ಬರ್ಬರವಾಗಿ ಕೊಂದ “ಆರೋಪಿ ಮಾನಸಿಕ ಅಸ್ವಸ್ಥನೇ?” ಎಂದು ಪೊಲೀಸರ ಕೈಯಲ್ಲಿ ಹೇಳಿಸಲಾಗುತ್ತದೆಯೆಂದರೆ... ಅದನ್ನು ತನಿಖೆಯನ್ನು ಹಳ್ಳಹಿಡಿಸುವ ಹಾದಿಯೆನ್ನದೆ ಬೇರೇನೆನ್ನಬಹುದು? ಇನ್ನು ಸಮೂಹ ಮಾಧ್ಯಮಗಳಲ್ಲಿ ಈ ಸಂಬಂಧ ಆರೋಪಿ ಮಹದೇವನಿಗೆ ‘ಸ್ಪ್ಲಿಟ್ ಪರ್ಸನಾಲಿಟಿ’ ಇತ್ತು, ‘ಬೈಪೋಲಾರ್ ಡಿಸೀಸ್’ ಇತ್ತು, ‘ಅನ್ನಿಯನ್’ ಚಿತ್ರದ ನಾಯಕನಿಗೆ ಇದ್ದಂತಹ ಕಾಯಿಲೆ ಇತ್ತು ಎಂಬ ವ್ಯವಸ್ಥಿತ ಪ್ರಚಾರ! ಆದರೆ ವಾಸ್ತವ? ಆತ ಮಾಡಿದ ದಲಿತರ ಕಗ್ಗೊಲೆ? ದಲಿತ ಕಾರ್ಮಿಕರ ಆ ರುಂಡಗಳನ್ನು ಕತ್ತರಿಸಿ ಅವುಗಳನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿಟ್ಟು ರುಂಡವೊಂದೆಡೆ ಮುಂಡವೊಂದೆಡೆ ಎಂಬಂತೆ ಅವುಗಳನ್ನು ಅಡಗಿಸಿ ಇಟ್ಟ ಆತನ ಕ್ರೂರತನ? ಅದಕ್ಕೆ ಬಲಿಯಾದ ದಲಿತ ಕೂಲಿಗಳ ದುರಂತ ಅಂತ್ಯ? ಆ ಕುಟುಂಬಗಳ ಆಕ್ರಂಧನ?

ಖಂಡಿತ, ಸದರಿ ದಲಿತ ಕೂಲಿಗಳ ಈ ಹತ್ಯೆಯನ್ನು ಅವರೆಡೆಗಿನ ವ್ಯವಸ್ಥೆಯ ನಿರ್ಲಕ್ಷ್ಯವನ್ನು ನಾವು ಡಿ.ಕೆ.ರವಿಯವರ ಪ್ರಕರಣದೊಡನೆ ಹೋಲಿಸಬಹುದು. ಡಿ.ಕೆ.ರವಿ ಮೇಲ್ವರ್ಗದವರು ಅವರ ಸಾವಿಗೆ ಇಡೀ ವ್ಯವಸ್ಥೆಯೇ ದನಿ ಎತ್ತರಿಸುತ್ತದೆ. ಆದರೆ ದಲಿತರ ಸಾವು? ದಲಿತ ಕೂಲಿಗಳಿಬ್ಬರ ದಾರುಣ ಹತ್ಯೆ? ವ್ಯವಸ್ಥೆ ಅವರ ಪರ ದನಿ ಇರಲಿ, ಕಾನೂನು ಮತ್ತು ನ್ಯಾಯವೇ ಅವರ ಪರ ಇರದಂತೆ ನೋಡಕೊಳ್ಳಲೆತ್ನಿಸುತ್ತದೆ! ಇದನ್ನು ತಮಾಷೆಗೆ ಹೇಳುತ್ತಿಲ್ಲ. ಹದಿನೈದು ವರ್ಷಗಳ ಹಿಂದೆ(2000) ಇದೇ ಮಾರ್ಚ್ ತಿಂಗಳ ಸಮಯದಲ್ಲಿ ಕೋಲಾರ ಜಿಲ್ಲೆಯ ಕಂಬಾಲಪಲ್ಲಿ ಎಂಬ ಗ್ರಾಮದಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ 7 ಜನ ದಲಿತರನ್ನು ಮನೆಯೊಂದಕ್ಕೆ ಕೂಡಿಹಾಕಿ ಹಾಡಹಗಲೇ ಭಸ್ಮಮಾಡಲಾಯಿತು. ದುರಂತವೆಂದರೆ ಕಳೆದ ವರ್ಷ ಸದರಿ ಕಂಬಾಲಪಲ್ಲಿಯ ಆರೋಪಿಗಳು ಹೈಕೋರ್ಟ್ ತೀರ್ಪೊಂದರಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಮುಕ್ತರಾಗಿ ಹೊರಬಂದಿದ್ದಾರೆ. ಇನ್ನು ಬಿಹಾರದ ಲಕ್ಮಣ್ ಪುರ್‍ಬಾಥೆ ಘಟನೆ ಇಲ್ಲಿ ದಾಖಲಿಸುವುದಾದರೆ 1997ರ ಡಿಸೆಂಬರ್ 1ರ ಮಧ್ಯರಾತ್ರಿ 11 ಗಂಟೆಯಲ್ಲಿ ರಣವೀರ ಸೇನೆ ಎಂಬ ಮೇಲ್ಜಾತಿ ಭೂಮಿಹಾರ್ ಸಮುದಾಯದ ದೌರ್ಜನ್ಯಕೋರ ಗುಂಪು 27 ಮಹಿಳೆಯರು, 16 ಮಕ್ಕಳನ್ನೂ ಒಳಗೊಂಡಂತೆ ಲಕ್ಷ್ಮಣ್‍ಪುರ್‍ಬಾಥೆ ಗ್ರಾಮದ 58 ದಲಿತರನ್ನು ಸಾಮೂಹಿಕವಾಗಿ ಕೊಂದಿತ್ತು. ಅಂದಹಾಗೆ ಅಂತಹ ಗುಂಪುಕೊಲೆಯಲ್ಲಿ ಒಂದು ವರ್ಷದ ಹಾಲುಗಲ್ಲದ ಕಂದನೂ ಇತ್ತೆಂದರೆ ಹಂತಕರಿಗೆ ನೀಡಬಹುದಾದ ಶಿಕ್ಷೆಯ ಪ್ರಮಾಣವನ್ನು ಎಂಥವರಾದರೂ ಊಹಿಸಬಹುದು. ದುಂರಂತವೆಂದರೆ 2013 ಅಕ್ಟೋಬರ್ 9ರಂದು ನೀಡಿದ ತೀರ್ಪಿನಲ್ಲಿ ಪಾಟ್ನಾ ಉಚ್ಛ ನ್ಯಾಯಾಲಯ ಲಕ್ಷ್ಮಣ್‍ಪುರ್ ಬಾಥೆ ಹತ್ಯಾಕಾಂಡದ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿತು! ಇಲ್ಲಿಯೂ ಅಷ್ಟೆ ನ್ಯಾಯಾಲಯ ಹೇಳಿದ್ದು ಸಾಕ್ಷ್ಯಾಧಾರಗಳ ಕೊರತೆ ಎಂದು. ಇನ್ನು ಸ್ವತಂತ್ರ ಭಾರತದಲ್ಲೇ ಅತಿ ಭಯಂಕರ ಎನಿಸುವ ಮಹಾರಾಷ್ಟ್ರದ ಖೈರ್ಲಾಂಜಿ ಘಟನೆಯೂ ಕೂಡ ಇಲ್ಲಿ ಉಲ್ಲೇಖನೀಯ. 2006 ಸೆಪ್ಟೆಂಬರ್ 29 ರಂದು ಖೈರ್ಲಾಂಜಿಯಲ್ಲಿ ದಲಿತ ಕುಟುಂಬದ ನಾಲ್ವರನ್ನು ಊರ ತುಂಬಾ ಅಟ್ಟಾಡಿಸಿದ ಸವರ್ಣೀಯರ ಗುಂಪು ಆ ನಾಲ್ವರನ್ನು ಬಹಿರಂಗವಾಗಿ ಕೊಲೆಗೈದಿತ್ತು. ಹಾಗೇ ಕೊಲೆಗೂ ಮುನ್ನ ಹತ ಆ ಕುಟುಂಬದ ಪ್ರಿಯಾಂಕ ಭೂತ್‍ಮಾಂಗೆ ಎಂಬ ಹೆಣ್ಣುಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಕೂಡ ನಡೆದಿತ್ತು. ದುರಂತವೆಂದರೆ ಇಲ್ಲಿಯೂ ಇಷ್ಟೆ ಕೆಳ ಹಂತದ ನ್ಯಾಯಾಲಯವೊಂದು ಆರೋಪಿಗಳಿಗೆ ಮರಣದಂಡನೆ ವಿಧಿಸಿದ್ದರೆ ನಾಗಪುರದ ಹೈಕೋರ್ಟ್ ಪೀಠ 2010 ಜುಲೈ 12ರಂದು ತೀರ್ಪು ನೀಡಿ ಖೈರ್ಲಾಂಜಿ ಆ ಆರೋಪಿಗಳ ಮರಣದಂಡನೆಯನ್ನು ರದ್ದುಗೊಳಿಸಿ ಶಿಕ್ಷೆಯನ್ನು ಜೀವಾವಧಿಗಿಳಿಸಿತು. ಒಟ್ಟಾರೆ ಹೇಳುವುದಾದರೆ ದಲಿತರ ಹತ್ಯಾಕಾಂಡದ ಬಹುತೇಕ ಪ್ರಕರಣಗಳಲ್ಲಿ ದಲಿತರಿಗೆ ನ್ಯಾಯ ದೊರಕಿಲ್ಲ.

ದುರಂತವೆಂದರೆ ಸಂತೇಮರಹಳ್ಳಿಯ ಸದ್ಯದ ದಲಿತರ ಶಿರಚ್ಛೇಧನ ಪ್ರಕರಣ? ಆರೋಪಿಗೆ ಮಾನಸಿಕ ಅಸ್ವಸ್ಥ ಪಟ್ಟಕಟ್ಟುವ ಹುನ್ನಾರ ನಡೆದಿದೆಯೆಂದರೆ ಇದೂ ಕೂಡ ಕಂಬಾಲಪಲ್ಲಿಯ ಹಾಗೆ ಹಳ್ಳ ಹಿಡಿಯುವ ಸಾಧ್ಯತೆಯಿದೆ. ಅಂದಹಾಗೆ ಘಟನೆ ನಡೆದ ಒಂದೆರಡು ದಿನದ ನಂತರ ಕೇಳಿಬರುತ್ತಿರುವ ಮಾತೆಂದರೆ ಇದೊಂದು ನರಬಲಿ ಯಾಗಿರುವ ಸಾಧ್ಯತೆ ಇದೆ ಎಂದು! ಯಾಕೆಂದರೆ ಘಟನಾ ಸ್ಥಳದ ಪಕ್ಕದಲ್ಲೇ ಹೊಸದೊಂದು ಕಲ್ಯಾಣಮಂಟಪ ನಿರ್ಮಾಣವಾಗಿದೆ. ಅದಕ್ಕಾಗಿ ಈ ಬಲಿ ನಡೆದಿದೆ ಎಂದು. ಹಾಗೆಯೇ ಹತರಾದ ಈರ್ವರನ್ನು ಓರ್ವನೇ ಕೊಂದಿದ್ದಾನೆ ಎಂಬುದನ್ನೂ ಕೂಡ ನಂಬುವುದು ಕಷ್ಟ ಮತ್ತು ಆರೋಪಿ ಮತ್ತು ಹತರಾದ ಕೂಲಿಗಳ ನಡುವೆ ಹಳೆಯ ದ್ವೇಷವಾಗಲೀ ಮತ್ತೊಂದಾಗಲೀ ಇರಲಿಲ್ಲ! ಖಂಡಿತ ಇದರ ಹಿಂದೆ ಒಂದು ತಂಡ, ಮತ್ತು ಒಂದು ಸಂಚು ಇದ್ದೇ ಇರುವಂತೆ ಕಾಣುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಸಂತೇಮರಹಳ್ಳಿಯಲ್ಲಿ ಸದ್ಯ ನಡೆದಿರುವ ದಲಿತ ಕೂಲಿಗಳಿಬ್ಬರ ಅಮಾನುಷ ಹತ್ಯೆಯನ್ನು ಅದು ಸಿಐಡಿಗೆ ವಹಿಸಿ ಘಟನೆಯ ಹಿನ್ನೆಲೆಯನ್ನು ಪತ್ತೆ ಹಚ್ಚಿ ಎಲ್ಲಾ ಸಂಚುಕೋರರನ್ನು ಬಂಧಿಸಲಿ. ತನ್ಮೂಲಕ ಅಮಾನುಷ ಈ ಹತ್ಯೆಯಲ್ಲಿ ದಲಿತರಿಗೆ ನ್ಯಾಯ ದೊರಕಿಸಿಕೊಡಲಿ.

ಮಾರ್ಚ್ 23, 2015

ಸೇವಾಬದ್ದ ಸಾಲು!

ಕು.ಸ.ಮಧುಸೂದನ್

ಪ್ರತಿ ಪ್ರಭುತ್ವದ
ಹಿಂದೆ
ಒಂದು ಉದ್ದ ಸಾಲು
ಸದಾ ಸಿದ್ದವಾಗಿರುತ್ತದೆ
ಕಾಯಕಕ್ಕೆ
ಕಟಿಬದ್ದವಾಗಿರುತ್ತದೆ;
ಕಾಲೆಗೆರಗಿ
ಮುಜುರೆ ಒಪ್ಪಿಸಿ
ಅಡುಗೆ ಮನೆ ಮುಸುರೆ ತಿಕ್ಕಿ
ಅವರ ಹೆಂಡಿರ ಸೀರೆ ಒಗೆದು
ಮಕ್ಕಳ ಹೆಲಿನ ಡೈಪರ್ ತೊಳೆದು
ಉಳಿದ ಅನ್ನಸಾರು ಕಲೆಸಿ ತಿಂದು
ಡರ್ರನೆ ತೇಗಿ
ಬೋಪರಾಕು ಹಾಕಲು
ಒಂದು ಉದ್ದನೇ ಸಾಲು
ಸದಾ ಸಿದ್ದವಾಗಿರುತ್ತದೆ
ಸೇವೆಗೆ ಕಟಿಬದ್ದವಾಗಿರುತ್ತದೆ!

ಮಾರ್ಚ್ 20, 2015

ಸೂತಕದ ಮನೆಯಲ್ಲಿ ಸಾವಿಗೂ ಸಂಭ್ರಮ

D K Ravi
Dr Ashok K R
‘ನೀನ್ಯಾಕೆ ಅವರ ಸಾವಿನ ಬಗ್ಗೆ ಒಂದು ಲೇಖನ ಬರೆಯಲಿಲ್ಲ? ಕೊನೇಪಕ್ಷ ಒಂದು ಫೇಸ್ಬುಕ್ ಸ್ಟೇಟಸ್ಸನ್ನೂ ಹಾಕಲಿಲ್ಲವಲ್ಲ ಯಾಕೆ?’ ಎಂಬ ಪ್ರಶ್ನೆ ಕೆಲವು ಗೆಳೆಯರಿಂದ ಬಂತು. ಸತ್ತುಹೋದವರ ಬಗ್ಗೆ ಏನನ್ನು ಬರೆಯಬೇಕು? ‘ಇವರ ಸಾವು ಸಮಾಜಕ್ಕೆ ತುಂಬಲಾರದ ನಷ್ಟವೆಂದು ಬರೆಯಬೇಕೆ?’ ಅಥವಾ ಸಾವಿನ ಬಗ್ಗೆ ಯಾರಿಗೂ ಏನೊಂದೂ ಸರಿಯಾದ ಮಾಹಿತಿಯಿಲ್ಲದಿರುವಾಗ ಪುಂಖಾನುಪುಂಖವಾಗಿ ಹಬ್ಬುತ್ತಿರುವ ಗಾಳಿ ಸುದ್ದಿಗಳನ್ನೇ ನಿಜವೆಂದು ಹಬ್ಬಿಸಬೇಕೆ? ಇಪ್ಪತ್ತನಾಲ್ಕು ಘಂಟೆಗಳ ಸುದ್ದಿವಾಹಿನಿಗಳಿಗೆ ಸುದ್ದಿಯನ್ನು ತುಂಬಿಸಲು ಅದು ಅನಿವಾರ್ಯ. ಸಮಯ ತುಂಬಿಸಬೇಕಾದ ಅನಿವಾರ್ಯತೆಯಲ್ಲೂ ಅವರು ವಾಹಿನಿಗೆ ಬಂದು ಬೀಳುತ್ತಿರುವ ಎಲ್ಲಾ ಗಾಳಿಸುದ್ದಿಗಳನ್ನು ಪ್ರಸಾರ ಮಾಡುತ್ತಿಲ್ಲ ಎನ್ನುವುದು ಮೆಚ್ಚಬೇಕಾದ ವಿಷಯ. ಜೊತೆಜೊತೆಗೆ ‘ಇದೇ ಡಿ.ಕೆ.ರವಿಯವರ ಸಾವಿಗಿರುವ ಕಾರಣ’ ಎಂಬ ಸತ್ಯವೆನ್ನಲಾದ ಮಾಹಿತಿಯನ್ನೂ ಪ್ರಸಾರ ಮಾಡುತ್ತಿಲ್ಲ. ದಿನಪತ್ರಿಕೆಗಳಿಗೆ, ಸುದ್ದಿವಾಹಿನಿಗಳಿಗೆ ಪತ್ರಿಕೆ ತುಂಬಿಸುವ ಸಮಯ ತುಂಬಿಸುವ ಅನಿವಾರ್ಯ ಕರ್ಮವಿರುತ್ತದೆ, ವಿವೇಚನೆಯನ್ನು ಪಕ್ಕಕ್ಕಿಟ್ಟು ‘ಹೋರಾಟ’ ನಡೆಸಬೇಕಾದ ಅನಿವಾರ್ಯತೆ ರಾಜಕಾರಣಿಗಳಿಗೂ ಇರುತ್ತದೆ. ಆದರೆ ಫೇಸ್ ಬುಕ್, ಟ್ವಿಟರ್, ಅಂತರ್ಜಾಲದಲ್ಲಿ ಬರೆದುಕೊಳ್ಳುವವರಿಗೆ ಯಾವ ಅನಿವಾರ್ಯತೆ ಇರುತ್ತದೆ? ಸಮಕಾಲೀನ ಘಟನೆಯೊಂದಕ್ಕೆ ನಾನೂ ಪ್ರತಿಕ್ರಿಯಿಸುತ್ತಿದ್ದೀನಿ, ಕೊಂಚವೂ ತಡಮಾಡದೆ ಪ್ರತಿಕ್ರಿಯಿಸುತ್ತಿದ್ದೀನಿ ನೋಡು ಎಂಬ ತೋರ್ಪಡಿಸುವುದಕ್ಕಾಗಿ ಕಾರಣಕ್ಕೆ ಪ್ರತಿಕ್ರಿಯಿಸುವವರ ಸಂಖೈ ಜಾಸ್ತಿಯಾಗುತ್ತಿದೆಯಾ?

ಡಿ.ಕೆ.ರವಿಯವರ ಬಗ್ಗೆ ಮೊದಲು ಕೇಳಿದ್ದು ಕೋಲಾರದ ಐಎಎಸ್ ಆಫೀಸರ್ರೊಬ್ಬರು ಶನಿವಾರ ಭಾನುವಾರ ಐಎಎಸ್ ಕೆಎಎಸ್ ಪರೀಕ್ಷೆ ಕಟ್ಟುವವರಿಗೆ ಉಚಿತ ತರಬೇತಿ ನೀಡುತ್ತಾರೆ ಎಂಬ ಸುದ್ದಿಯ ಮೂಲಕ. ಡಿಸಿ ಅಂದ್ರೆ ಬ್ಯುಸಿ ಪರ್ಸನ್, ಇಲ್ಯಾರೋ ಆಸಾಮಿ ಅಂಥ ಬ್ಯುಸಿ ಶೆಡ್ಯೂಲಿನಲ್ಲೂ ಬಿಡುವು ಮಾಡಿಕೊಂಡು ಇಂತವೆಲ್ಲ ಮಾಡೋದು ಗ್ರೇಟ್ ಎಂದುಕೊಂಡಿದ್ದೆವು. ದಲಿತರ ಮನೆಗೆ ಭೇಟಿ ಕೊಟ್ಟದ್ದು ಒಂದಷ್ಟು ಸುದ್ದಿಯಾಗಿತ್ತು. ಕೋಲಾರದಿಂದ ಅವರನ್ನು ವರ್ಗ ಮಾಡಿದ ನಂತರ ಅಲ್ಲಿನ ಜನರ ಹೋರಾಟ ಮತ್ತೆ ಅವರ ಹೆಸರನ್ನು ಮತ್ತು ಪ್ರಾಮಾಣಿಕತೆಯನ್ನು ಮುಖ್ಯಸುದ್ದಿಯನ್ನಾಗಿಸಿತ್ತು. ನಂತರ ಅವರ ಬಗ್ಗೆ ಹೆಚ್ಚು ಸುದ್ದಿಯಿರಲಿಲ್ಲ. ಅವರ ಬಗೆಗಿನ ಅಷ್ಟೂ ಡೀಟೇಲ್ಸ್ ಹೊರಬಂದಿದ್ದು ಅವರ ಸಾವಿನ ನಂತರ. ಹುಲಿಯೂರುದುರ್ಗದ ಪುಟ್ಟ ಹಳ್ಳಿಯ ಬಡಕುಟುಂಬದಿಂದ ಕಷ್ಟಪಟ್ಟು ಬೆಳೆದು ಐಎಎಸ್ ಮಾಡುವುದು ಸಾಧನೆ, ಆ ಸಾಧನೆ ವಿರಳವೇನಲ್ಲ. ಐಎಎಸ್ ಆಫೀಸರ್ ಆದ ನಂತರ ಬೆಳೆದು ಬಂದ ಬಡಪರಿಸ್ಥಿತಿಯನ್ನು ಮರೆಯದೆ ಬಡಜನರ ಪರವಾಗಿ ಕೆಲಸ ಮಾಡುತ್ತ ಪ್ರಾಮಾಣಿಕನಾಗಿ ಕಾರ್ಯನಿರ್ವಹಿಸುವುದು ಇವತ್ತಿನ ದಿನಮಾನದಲ್ಲಿ ವಿರಳಾತಿ ವಿರಳ. ಇಂಥ ಒಬ್ಬ ಪ್ರಾಮಾಣಿಕ ಅಧಿಕಾರಿಯ ಸಾವು ಜನಮಾನಸವನ್ನು ಕಲಕಿ ಹೋರಾಟಕ್ಕೆ ಪ್ರಚೋದಿಸಿರುವುದು ಸರಿಯಾಗಿಯೇ ಇದೆ. 

ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಬಿಲ್ಡರುಗಳ ಮೇಲೆ ಮುರಕೊಂಡು ಬಿದ್ದಿದ್ದರು ಡಿ.ಕೆ.ರವಿ. ನಾಲ್ಕು ತಿಂಗಳಲ್ಲಿ 129 ಕೋಟಿ ತೆರಿಗೆ ಬಾಕಿಯನ್ನು ವಸೂಲು ಮಾಡಿರುವುದು ಕಡಿಮೆ ಸಾಧನೆಯೇನಲ್ಲ. ಬೆಂಗಳೂರಿನ ಬಿಲ್ಡರುಗಳಿಗೆ, ರಿಯಲ್ ಎಸ್ಟೇಟಿನವರಿಗೆ ರಾಜಕಾರಣಿಗಳ ಜೊತೆ ಸಂಬಂಧವಿರುವುದು ಸುಳ್ಳೇನಲ್ಲ. ಅನೇಕ ರಾಜಕಾರಣಿಗಳೂ ರಿಯಲ್ ಎಸ್ಟೇಟಿನವರೇ. ಸಹಜವಾಗಿ ಅನೈತಿಕ ಮಾರ್ಗದಲ್ಲಿ ರವಿಯವರ ಮೇಲೆ ಒತ್ತಡಗಳಿದ್ದೇ ಇರುತ್ತದೆ. ಡಿ.ಕೆ.ರವಿ ದಾಳಿ ನಡೆಸಿದ ಒಂದು ಕಂಪನಿಯ ಹೆಸರು ಎಂಬೆಸ್ಸಿ - ಗಲ್ಫ್ ಲಿಂಕ್. ಗಲ್ಫ್ ಲಿಂಕ್ಸ್ ಕರ್ನಾಟಕದ ಗೃಹಸಚಿವರಾದ ಜಾರ್ಜ್ ರವರ ಕಂಪನಿ. ಮಾಧ್ಯಮದ ಮುಂದೆ ಅವರೇ ಹೇಳಿಕೆ ನೀಡಿರುವಂತೆ ‘ಎಂಬೆಸ್ಸಿ ಎಂಬುದು ಬಹುದೊಡ್ಡ ಕಂಪನಿ. ಅವರದು ಅನೇಕ ಉದ್ಯಮಗಳಿವೆ. ಒಂದು ಉದ್ಯಮಕ್ಕೆ ನಮ್ಮ ಜೊತೆ ಟೈಅಪ್ ಮಾಡಿಕೊಂಡಿದ್ದಾರೆ’. ಒಬ್ಬ ಪ್ರಾಮಾಣಿಕ ಅಧಿಕಾರಿಯ ಅಕಾಲಿಕ ಅನೈಸರ್ಗಿಕ ಮರಣ (ಅದು ಆತ್ಮಹತ್ಯೆಯೋ ಕೊಲೆಯೋ ಎಂಬುದನ್ನು ಮರೆಯೋಣ) ನಡೆದು ಜನರು ಆಕ್ರೋಶಗೊಂಡಿರುವಾಗ ‘ನನ್ನ ಪಾಲುದಾರಿಕೆಯ ಕಂಪನಿಯ ಮೇಲೆ ರವಿ ದಾಳಿ ನಡೆಸಿದ್ದಾರೆ. ಸಿಐಡಿ ತನಿಖೆ ನಡೆಯುವ ಈ ಸಂದರ್ಭದಲ್ಲಿ ಗೃಹಸಚಿವನಾಗಿ ನಾನು ಮುಂದುವರೆಯುವುದು ನೈತಿಕವಾಗಿ ಸರಿಯಲ್ಲ’ ಎಂದು ಜಾರ್ಜ್ ರಾಜೀನಾಮೆ ನೀಡಬೇಕಿತ್ತಲ್ಲವೇ? ತನಿಖೆಯಲ್ಲಿ ನಾನು ಮೂಗು ತೂರಿಸುವುದಿಲ್ಲ ಎಂದುಬಿಟ್ಟರೆ ನಂಬುವಷ್ಟು ಮೂರ್ಖರೇ ನಮ್ಮ ಜನ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ರಾಜಕಾರಣಿಗಳ ತಳಿಯೇ ನಶಿಸಿಹೋಗಿರಬೇಕು.

ಸಿಬಿಐ ತನಿಖೆ ಅವಶ್ಯಕವೇ?

ಈ ಹೋರಾಟದಲ್ಲಿ ಪಾಲ್ಗೊಂಡಿರುವ ಬಹುತೇಕರು ರಾಜ್ಯ ಸರಕಾರದ ಅಧೀನದಲ್ಲಿರುವ ಸಿಐಡಿ ತನಿಖೆಗಿಂತ ಸಿಬಿಐ ತನಿಖೆ ಉತ್ತಮ ಎನ್ನುತ್ತಾರೆ. ಡಿ.ಕೆ.ರವಿಯವರ ತಂದೆ ತಾಯಿ ಕೂಡ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಸಿಬಿಐ ಅಷ್ಟೊಂದು ಶ್ರೇಷ್ಟವಾದ ಸಂಸ್ಥೆಯೇ ಎಂದು ನೋಡಿದರೆ ನಿರಾಶೆಯಾಗುತ್ತದೆ. ಹೆಸರಿಗೆ ಸ್ವಾಯತ್ತ ಸಂಸ್ಥೆಯಾದ ಸಿಬಿಐ ಕಾಲದಿಂದಲೂ ಕೇಂದ್ರ ಸರಕಾರದ ಕೈಗೊಂಬೆಯಾಗಿಯಷ್ಟೇ ಕೆಲಸ ಮಾಡಿದೆ. ತನ್ನ ಆಡಳಿತವಿಲ್ಲದ ರಾಜ್ಯಗಳಲ್ಲಿ ಹಸ್ತಕ್ಷೇಪ ನಡೆಸುವುದಕ್ಕೆ ಸಿಬಿಐ ಉಪಯೋಗಿಸಲಾಗುತ್ತಿದೆ. ಈ ಕಾರಣದಿಂದಾಗಿಯೇ ಮಹಂತೇಶ್ ಸಾವಿಗೀಡಾದಾಗ ಬಿಜೆಪಿ ಸರಕಾರ ಸಿಬಿಐಗೆ ಪ್ರಕರಣವನ್ನು ಒಪ್ಪಿಸಲು ಒಪ್ಪಲಿಲ್ಲ. ಆಗ ಕೇಂದ್ರದಲ್ಲಿದ್ದಿದ್ದು ಕಾಂಗ್ರೆಸ್! ಸಿದ್ಧರಾಮಯ್ಯ ಡಿ.ಕೆ.ರವಿಯ ಸಾವನ್ನು ಸಿಬಿಐಗೆ ವಹಿಸಲು ಒಪ್ಪದಿರುವುದಕ್ಕೂ ಇದೇ ಪ್ರಮುಖ ಕಾರಣ. ಕೇಂದ್ರದಲ್ಲೇನಾದರೂ ಈಗ ಕಾಂಗ್ರೆಸ್ ಸರಕಾರವೇ ಇದ್ದಿದ್ದರೆ ಕಣ್ಣುಮುಚ್ಚಿ ಸಿಬಿಐಗೆ ಕೇಸನ್ನು ವರ್ಗ ಮಾಡಿಬಿಡುತ್ತಿದ್ದರು. ಈಗ ಕೇಂದ್ರದಲ್ಲಿರುವುದು ಬಿಜೆಪಿ ಸರಕಾರ. ಡಿ.ಕೆ.ರವಿಯವರ ಸಾವಿನ ತನಿಖೆಯ ನೆಪದಲ್ಲಿ ಯಾವಯಾವ ರಿಯಲ್ ಎಸ್ಟೇಟ್ ಹುತ್ತಕ್ಕೆ ಕೈ ಹಾಕಿ ತಮ್ಮ ಶಾಸಕರ, ಸಚಿವರ ಕುತ್ತಿಗೆಗೆ ತರುತ್ತಾರೋ ಎಂಬ ಭಯವೂ ಇದೆ. ಸಿಐಡಿ ತನಿಖೆಯನ್ನು ರವಿಯ ಸಾವಿಗಷ್ಟೇ ಸೀಮಿತವನ್ನಾಗಿ ಮಾಡಬಹುದು. ಸಿಬಿಐ ಶ್ರೇಷ್ಟ ಸಂಸ್ಥೆಯಲ್ಲ ಎನ್ನುವುದುನ್ನು ಒಪ್ಪುತ್ತಲೇ ಗೃಹಸಚಿವರ ಮೇಲೆ ಆರೋಪ ಬಂದ ಕಾರಣಕ್ಕಾದರೂ ಸಿಬಿಐಗೆ ಈ ಪ್ರಕರಣವನ್ನು ಒಪ್ಪಿಸಬೇಕಿತ್ತು. ಆಡಳಿತಾತ್ಮಕವಾಗಿ ಮತ್ತು ರಾಜಕೀಯವಾಗಿ ರಾಜ್ಯ ಸರಕಾರದ ಬಹುದೊಡ್ಡ ಎಡವಟ್ಟಿದು. ಪ್ರತಿಪಕ್ಷ – ಆಡಳಿತ ಪಕ್ಷಗಳ ಗದ್ದಲದ ರಾಜಕೀಯ, ಭಾವನೆಗಳನ್ನು ಪಕ್ಕಕ್ಕಿಟ್ಟು ಯೋಚಿಸದ ಜನತೆ, ಜನರ ಭಾವನೆಗಳನ್ನು ಟಿ.ಆರ್.ಪಿಗಾಗಿ, ಪ್ರಸಾರದಲ್ಲಿ ಏರಿಕೆಗಾಗಿ ಉಪಯೋಗಿಸುವ ಮಾಧ್ಯಮಗಳ ಮಧ್ಯೆ ಡಿ.ಕೆ.ರವಿಯವರ ಸಾವಿನ ನಿಜವಾದ ಸತ್ಯ ಹೊರಬರುತ್ತದಾ? 

ಪ್ರಾಮಾಣಿಕ ಅಧಿಕಾರಿಯೊಬ್ಬನ ಸಾವು ಜನಮಾನಸವನ್ನು ಕಲಕಿರುವುದೇನೋ ಸರಿ. ಆದರೆ ಭಾವನೆಗಳನ್ನೇ ಮುಂದಾಗಿಸಿ ವಿವೇಕವನ್ನು ಕಳೆದುಕೊಂಡುಬಿಡಬೇಕೆ ಎಂಬ ಪ್ರಶ್ನೆ ಕಾಡುತ್ತದೆ. ಬೆಂಗಳೂರಿನ ಕಮಿಷನರ್ ರೆಡ್ಡಿಯವರು ಡಿ.ಕೆ.ರವಿಯವರ ಮನೆಯ ಪರಿಶೀಲನೆಯ ನಂತರ ‘ಪ್ರೈಮಾ ಫೇಸಿ ಇದು ಆತ್ಮಹತ್ಯೆಯೆಂದು ತೋರುತ್ತದೆ’ ಎಂಬ ಹೇಳಿಕೆ ಕೂಡ ತಪ್ಪೆಂದು ಅನ್ನಿಸುವುದು ಇದೇ ಕಾರಣಕ್ಕೆ. ಪೋಸ್ಟ್ ಮಾರ್ಟಮ್ ವರದಿ ಬರುವ ಮುಂಚೆ ಆತ್ಮಹತ್ಯೆಯೆಂದು ಹೇಳಿದ್ದೇಗೆ? ಎಂಬ ಪ್ರಶ್ನೆ ಹುಟ್ಟುವುದು ತನಿಖೆಯೊಂದು ಹೇಗೆ ನಡೆಯುತ್ತದೆ ಮತ್ತು ಪೋಸ್ಟ್ ಮಾರ್ಟಮ್ ವರದಿಯ ಪ್ರಾಮುಖ್ಯತೆ ಏನು ಎನ್ನುವುದು ತಿಳಿಯದಿದ್ದಾಗ. ಪೋಸ್ಟ್ ಮಾರ್ಟಮ್ ವರದಿ ತನಿಖೆಗೆ ಪೂರಕವಾಗಿರುತ್ತದೆಯೇ ಹೊರತು ಅದೇ ತನಿಖೆಯ ಜಾಡನ್ನು ನಿರ್ಧರಿಸಿಬಿಡುವುದಿಲ್ಲ. ಜನರಿಗೆ ಗೊತ್ತಿರುವುದಿಲ್ಲ ಸರಿ, ಮಾಧ್ಯಮಗಳಿಗೂ ಗೊತ್ತಿರುವುದಿಲ್ಲವೇ? ಸತ್ತ ವ್ಯಕ್ತಿಯ ಮನೆಯ ಪರಿಸರ, ವಸ್ತುಗಳು ಇರುವ ರೀತಿ, ಬಾಗಿಲು ಕಿಟಕಿಗಳು ತೆರೆದಿದ್ದವೋ ಹಾಕಿದ್ದವೋ ಎಂಬ ಅನೇಕಾನೇಕ ಸಂಗತಿಗಳನ್ನು ಪರಿಶೀಲಿಸಿ ‘ಮೇಲ್ನೊಟಕ್ಕೆ ಇದು ಕೊಲೆ / ಆತ್ಮಹತ್ಯೆ’ ಎಂದು ಅಂದಾಜಿಸುವುದು ಪೋಲೀಸರ ಕೆಲಸವೇ ಅಲ್ಲವೇ? ಇದು ಸೂಕ್ಷ್ಮ ಪ್ರಕರಣವಾದ ಕಾರಣ ತಮ್ಮ ಅಂದಾಜನ್ನು ಮಾಧ್ಯಮದ ಮುಂದೆ ಹೇಳಿದ್ದು ರೆಡ್ಡಿಯವರ ತಪ್ಪು. ಪೋಸ್ಟ್ ಮಾರ್ಟಮ್ ವರದಿ ಬರುವವರೆಗಾದರೂ ಕಾಯುವ ತಾಳ್ಮೆ ಅವರಲ್ಲಿರಬೇಕಿತ್ತು. ಅದೇ ವಾಕ್ಯವನ್ನು ಮುಖ್ಯಮಂತ್ರಿ ಮತ್ತು ಗೃಹಸಚಿವರೂ ಹೇಳಿ ಪ್ರೈಮಾ ಫೇಸಿಗೆ ಇರುವ ಬೆಲೆಯನ್ನೇ ಕಳೆದುಬಿಟ್ಟಿದ್ದಾರೆ. ಜನರಲ್ಲಿಲ್ಲದ ತಾಳ್ಮೆಯನ್ನು ಅಧಿಕಾರಿಗಳಲ್ಲಿ, ರಾಜಕಾರಣಿಗಳಲ್ಲಿ ಹುಡುಕುವುದೇ ತಪ್ಪೇನೋ.

ಈ ಎಲ್ಲಾ ಚರ್ಚೆಗಳ ನಡುವೆ ಡಿ.ಕೆ.ರವಿ ಎಂಬ ಪ್ರಾಮಾಣಿಕ ಐಎಎಸ್ ಅಧಿಕಾರಿ ಮನುಷ್ಯನೂ ಹೌದು ಎಂಬುದನ್ನೇ ನಾವು ಮರೆತುಬಿಟ್ಟಿದ್ದೀವಿ. ಪ್ರೊಫೆಶನಲಿ ಕರೆಕ್ಟಾದ ವ್ಯಕ್ತಿಗೆ ಒಂದು ಪರ್ಸನಲ್ ಲೈಫು ಕೂಡ ಇತ್ತು, ಕಷ್ಟ ಸುಖಗಳಿತ್ತು, ಸಂತಸ ಬೇಸರಗಳಿದ್ದವು ಎಂಬುದನ್ನು ಮರೆತುಬಿಡುತ್ತೇವೆ. ದೊಡ್ಡದೊಡ್ಡ ರಾಜಕಾರಣಿಗಳನ್ನೆಲ್ಲಾ ಎದುರುಹಾಕಿಕೊಂಡ ಅಧಿಕಾರಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಮ್ಮ ಮನಸ್ಸು ಒಪ್ಪದಿರುವುದಕ್ಕೇ ಈ ಮರೆವೇ ಕಾರಣ. ಅವರ ಅಧಿಕಾರದ ವೈಖರಿಯನ್ನು ನೋಡಿದ ಜನರು ಇದು ಖಂಡಿತವಾಗಿಯೂ ಕೊಲೆಯೇ, ಸರಕಾರದ ಒಳಗಿರುವವರೇ ಮಾಡಿಸಿದ್ದಾರೆ ಎಂದು ಅಚಲವಾಗಿ ನಂಬುತ್ತಾರೆ. ಮೂರು ಜನ ಐಟಿ ಆಫೀಸರ್ರಿನ ನೆಪದಲ್ಲಿ ಅವರನ್ನು ಮನೆಗೆ ಕರೆಸಿ ಕಾರ್ಬನ್ ಮೊನಾಕ್ಸೈಡ್ ಬಳಸಿ ಕೊಲೆ ಮಾಡಿ ನಂತರ ನೇಣು ಹಾಕಿದ್ದಾರೆ, ಅವರ ಕತ್ತಿಗೆ ಸುತ್ತಿರುವ ತೆಳು ಬಟ್ಟೆಯಿಂದ ಸಾಯಲು ಸಾಧ್ಯವೇ ಎಂಬ ಮೆಸೇಜು ವಾಟ್ಸಪ್ಪಿನಲ್ಲಿ ಹರಿಯುವುದಕ್ಕೆ ಈ ನಂಬಿಕೆ ಕಾರಣ. ಇನ್ನು ಡಿ.ಕೆ.ರವಿಯವರ ಮಾವನ ಮನೆಯಿರುವ ನಾಗರಬಾವಿಯ ಜನರು ಇದು ಆತ್ಮಹತ್ಯೆ; ಕಾಂಗ್ರೆಸ್ಸಿನವರಾದ ಅವರ ಮಾವನವರೇ ಈ ಸಾವಿಗೆ ಕಾರಣ ಎಂದು ನಂಬಿದ್ದಾರೆ. ಮಾವನವರ ಒತ್ತಡ ತಡೆಯಲಾರದೇ ಈ ಕೃತ್ಯ ಮಾಡಿಕೊಂಡಿದ್ದಾರೆ ಎಂದವರ ನಂಬಿಕೆ. ಮಂಡ್ಯದ ಕಡೆ ಈ ಸಾವಿಗೆ ಪ್ರೊಫೆಶನಲಿ ಕರೆಕ್ಟಾದ ವ್ಯಕ್ತಿಯ ಪರ್ಸನಲ್ ಇಮ್ಮೆಚ್ಯುರಿಟಿಯ ಬಗ್ಗೆ ಮಾತನಾಡುತ್ತಾರೆ. ಪ್ರೇಮ ಪ್ರಸಂಗ ಕಾರಣ, ಆ ಪ್ರೇಮ ಪ್ರಸಂಗದಿಂದ ರವಿಯನ್ನು ಹೊರತರಲು ದೊಡ್ಡ ದೊಡ್ಡ ಐಎಎಸ್ ಅಧಿಕಾರಿಗಳು ರವಿಗೆ ಬುದ್ಧಿ ಹೇಳಿದ್ದರು; ಅವರು ಕೊನೆಯದಾಗಿ ಕಳುಹಿಸಿದ ಮೆಸೇಜು ಆ ಹೆಣ್ಣಿಗೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಪ್ರತಿಯೊಬ್ಬರು ತಮಗೆ ತೋಚಿದ, ಅನುಕೂಲ ಕಂಡ ಕತೆಯನ್ನು ಕಟ್ಟಿಕೊಂಡಿದ್ದಾರೆ. ಅವರ ಪ್ರಕಾರ ಅವರ ಕತೆಯೇ ಸರಿ. ಅವರ ಸಾವು ಕೊಲೆಯಾಗಿದ್ದರೆ ಜನರು ನಡೆಸುತ್ತಿರುವ ಅಷ್ಟೂ ಹೋರಾಟಗಳಿಗೊಂದು ಅರ್ಥ ಬರುತ್ತದೆ. ಆತ್ಮಹತ್ಯೆಯಾಗಿದ್ದರೆ? ಪ್ರೊಫೆಶನಲ್ ಒತ್ತಡಕ್ಕೆ ಬಗ್ಗುವ ವ್ಯಕ್ತಿಯಂತೂ ಅಲ್ಲ ಡಿ.ಕೆ.ರವಿ. ಪರ್ಸನಲ್ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡುಬಿಟ್ಟಿದ್ದರೆ ಅದರ ನಿಜವಾದ ಕಾರಣ ತಿಳಿಯುವುದು ಕಷ್ಟಸಾಧ್ಯ – ಅದು ರವಿ ಸಮಾಜಕ್ಕೆ ಮತ್ತದಕ್ಕಿಂತ ಹೆಚ್ಚಾಗಿ ಕುಟುಂಬಸ್ಥರಿಗೆ ಮಾಡಿದ ಅನ್ಯಾಯ. 

ಪ್ರತಿಯೊಬ್ಬರೂ ತಮ್ಮ ತಮ್ಮ ಅನುಕೂಲಕ್ಕೆ ಕತೆಯನ್ನು ಹೆಣೆದು ಕುಳಿತುಕೊಂಡಿರುವಾಗ ಸತ್ಯವೇನೆಂದು ತಿಳಿಯುವುದು ಸಾಧ್ಯವೇ? ತನಿಖಾ ಸಂಸ್ಥೆ ಯಾವುದೇ ಆಗಿರಲಿ ಅದು ನೀಡುವ ವರದಿಯನ್ನು ಒಪ್ಪುವುದು ಅವರ ವರದಿ ನಮ್ಮ ಕತೆಗೆ ಒಪ್ಪುವಂತೆ ಇದೆಯಾ ಎಂಬುದರ ಮೇಲೆ. ನಿಜವಾದ ಸತ್ಯವನ್ನೇ ತನಿಖಾ ಸಂಸ್ಥೆ ಹೇಳಿದರೂ ಆ ಸತ್ಯವನ್ನು ಒಪ್ಪಲಾಗದ ಮನಸ್ಥಿತಿಯನ್ನು ಬೆಳೆಸಿಕೊಂಡುಬಿಟ್ಟಿದ್ದೇವೆ. ನಮಗೆ ಸಿಐಡಿ ಮೇಲೆ ನಂಬಿಕೆಯಿಲ್ಲ, ನಮ್ಮ ಪೋಲೀಸರ ಮೇಲೆ ನಂಬಿಕೆಯಿಲ್ಲ, ನಮ್ಮ ಸಿಬಿಐ ಮೇಲೆ ನಂಬಿಕೆಯಿಲ್ಲ, ನಮ್ಮ ರಾಜಕಾರಣಿಗಳ ಮೇಲೆ ನಂಬಿಕೆಯಿಲ್ಲ – ನಮಗ್ಯಾಕೆ ಯಾರ ಮೇಲೂ ನಿಜವಾದ ಪ್ರಾಮಾಣಿಕರ ಮೇಲೂ ನಂಬಿಕೆ ಬರುವುದಿಲ್ಲವೆಂದರೆ ನಮಗೆ ನಮ್ಮ ಮೇಲೆಯೇ ನಂಬುಗೆಯಿಲ್ಲ. ನಮ್ಮ ಪ್ರಾಮಾಣಿಕತೆಯ ಮೇಲೆ ನಮಗೇ ಅಪನಂಬುಗೆ. ಅನಿಷ್ಟಕ್ಕೆಲ್ಲ ರಾಜಕಾರಣಿಗಳೇ ಕಾರಣ ಎಂದು ಬೈಯುವ ಸಂತಸದಲ್ಲಿ ಸೈಟು ಕೊಳ್ಳುವಾಗ ಮನೆ ಖರೀದಿಸುವಾಗ ಕೊಟ್ಟ ಹಣಕ್ಕೂ ರಿಜಿಷ್ಟ್ರೇಶನ್ ವ್ಯಾಲ್ಯೂವಿಗೂ ಇರುವ ವ್ಯತ್ಯಾಸವನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳುವ ನಮ್ಮ ಮನಸ್ಥಿತಿ ನಮಗೆ ನೆನಪೇ ಆಗುವುದಿಲ್ಲ. ಅಷ್ಟರಮಟ್ಟಿಗೆ ನಾವು ಆತ್ಮವಂಚಕರು.