ಆಗ 17, 2016

ಡಿಜಿಟಲ್ ಇಂಡಿಯಾ - ಘೋಷಣೆಗೆ ಮಾತ್ರ ಸೀಮಿತ

ಸಾಂದರ್ಭಿಕ ಚಿತ್ರ
ಆನಂದ ಪ್ರಸಾದ್
17/08/2016
ಭಾರತದಲ್ಲಿ ಅಂತರ್ಜಾಲ ಮೂಲಕ ವಿವಿಧ ಸೇವೆ, ಮನರಂಜನೆ, ಆರೋಗ್ಯ, ಶಿಕ್ಷಣ ನೀಡುವ ಮೋದಿಯವರ ಡಿಜಿಟಲ್ ಇಂಡಿಯಾ ಯೋಜನೆ ಕೇವಲ ಘೋಷಣೆಗೆ ಸೀಮಿತವಾಗಿದೆ. ಭಾರತವು ತನ್ನ ಜನಸಂಖ್ಯೆಯ 34% ಶೇಕಡಾ ಜನರಿಗೆ ಮಾತ್ರ ಅಂತರ್ಜಾಲ ಸೌಲಭ್ಯ ಒದಗಿಸಲು ಶಕ್ತವಾಗಿದೆ. ಉಳಿದ 66% ಶೇಕಡಾ ಜನ ಅಂತರ್ಜಾಲ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಏಷಿಯಾ -ಪ್ಯಾಸಿಫಿಕ್ ವಲಯದಲ್ಲಿ ಭಾರತವು ಅತ್ಯಂತ ಕಡಿಮೆ ವೇಗದ ಅಂತರ್ಜಾಲ ಸೌಲಭ್ಯ ನೀಡುವ ದೇಶ ಎನಿಸಿಕೊಂಡಿದೆ. ಮೋದಿಯವರ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಉರುಳಿದರೂ ಭಾರತದ ಗ್ರಾಮೀಣ ಭಾಗಗಳಲ್ಲಿ ಅಂತರ್ಜಾಲ ಸೌಲಭ್ಯ ಲಭ್ಯತೆಯಲ್ಲಿ ಯಾವುದೇ ಸುಧಾರಣೆಯೂ ಆಗಿಲ್ಲ. ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಬಹುತೇಕ ತೆವಳುವ ವೇಗದ 2ಜಿ ಮೊಬೈಲ್ ಇಂಟರ್ನೆಟ್ ಮಾತ್ರ ಲಭ್ಯವಿದೆ. ಭಾರತದ ನಗರಗಳು 4ಜಿ ಮೊಬೈಲ್ ಇಂಟರ್ನೆಟ್ ಸೌಲಭ್ಯವನ್ನು ಪಡೆಯುತ್ತಿರುವಾಗ ಗ್ರಾಮೀಣ ಭಾಗಗಳು ಇಂದಿಗೂ ತೆವಳುವ ವೇಗದ 2ಜಿ ಮೊಬೈಲ್ ಇಂಟರ್ನೆಟ್ ಪಡೆಯುತ್ತಾ ನಗರ ಹಾಗೂ ಹಳ್ಳಿಗಳ ಡಿಜಿಟಲ್ ಕಂದಕ ಮತ್ತಷ್ಟು ಅಗಲವಾಗುತ್ತಿದೆ.

ಖಾಸಗಿ ಬಂಡವಾಳ ಹಾಗೂ ಖಾಸಗಿ ಉದ್ಯಮಗಳು ಬರುವುದರಿಂದ ಮೂಲಭೂತ ಸೌಲಭ್ಯಗಳು ಹೆಚ್ಚುತ್ತವೆ ಎಂಬ ಮಾತಿದೆ. ಈ ವಿಷಯ ಗ್ರಾಮೀಣ ಭಾಗಗಳಲ್ಲಿ ನಿಜವಾಗಿಲ್ಲ. ಭಾರತದ ಖಾಸಗಿ ಮೊಬೈಲ್ ಕಂಪನಿಗಳು ಶೇಕಡಾ 60ಕ್ಕೂ ದೇಶದ ಶೇಕಡಾ 60ಕ್ಕೂ ಹೆಚ್ಚು ಜನ ವಾಸಿಸುವ ಗ್ರಾಮೀಣ ಭಾಗಗಳಿಗೆ ಸೂಕ್ತ ವೇಗದ ಮೊಬೈಲ್ ಇಂಟರ್ನೆಟ್ ಸೇವೆ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಲಾಭದ ಮೇಲೆ ಮಾತ್ರ ಕಣ್ಣಿಟ್ಟಿರುವ ಖಾಸಗಿ ಕಂಪನಿಗಳು ಹೆಚ್ಚು ಲಾಭವಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ 3ಜಿ ಇಂಟರ್ನೆಟ್ ಸೇವೆ ಒದಗಿಸುವಲ್ಲಿ ಆಸಕ್ತಿ ವಹಿಸುತ್ತಿಲ್ಲ. ಏರ್ಟೆಲ್ ಕಂಪನಿ ತನ್ನ 'ಓಪನ್ ನೆಟ್ವರ್ಕ್' ವೆಬ್ ಸೈಟ್ ಮೂಲಕ ಕರ್ನಾಟಕದ ಹಲವು ಗ್ರಾಮೀಣ ಭಾಗಗಳಲ್ಲಿ 3ಜಿ ಸೇವೆ ಒದಗಿಸುತ್ತಿದ್ದೇನೆ ಎಂದು ಭೂಪಟದಲ್ಲಿ ತೋರಿಸುತ್ತಿದ್ದರೂ ಅದರ 3ಜಿ ಸೇವೆ ಟವರಿನ ಒಂದೆರಡು ಕಿ.ಮೀ. ದೂರಕ್ಕೂ ಲಭ್ಯವಾಗುವುದಿಲ್ಲ. ಇದರಿಂದಾಗಿ ಟವರಿನ ಬುಡದ ಸ್ವಲ್ಪ ದೂರದವರೆಗೆ ಮಾತ್ರ 3ಜಿ ಮೊಬೈಲ್ ಇಂಟರ್ನೆಟ್ ಲಭ್ಯವೇ ಹೊರತು ದೂರದ ಪ್ರದೇಶಗಳಿಗೆ 3ಜಿ ಮೊಬೈಲ್ ಇಂಟರ್ನೆಟ್ ಲಭ್ಯವಿಲ್ಲ. 3ಜಿ ತರಂಗಾಂತರ ಹರಾಜು ನಡೆದು ಆರು ವರ್ಷಗಳೇ ಉರುಳಿದರೂ ಅದನ್ನು ಪಡೆದ ಖಾಸಗಿ ಮೊಬೈಲ್ ಕಂಪನಿಗಳು ಇನ್ನೂ ದೇಶಾದ್ಯಂತ 3ಜಿ ಮೊಬೈಲ್ ಸೇವೆ ಒದಗಿಸಲು ಹಿಂದೇಟು ಹಾಕುತ್ತಿವೆ. ಸರ್ಕಾರದ ಯೋಜನೆಗಳು ಆರಂಭವಾಗಿ ಮುಗಿಯಲು ಹಲವಾರು ವರ್ಷಗಳೇ ಬೇಕಾಗುತ್ತವೆ. ಈಗ ಆ ಜಾಡ್ಯ ಖಾಸಗಿ ಕಂಪನಿಗಳಿಗೂ ಅಂಟಿಕೊಂಡಿದೆ. ರಿಲಯನ್ಸ್ ಜಿಯೋ ಕಂಪನಿ ಕಳೆದ ವರ್ಷದಿಂದಲೇ ದೇಶಾದ್ಯಂತ ತನ್ನ 4ಜಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸದ್ಯದಲ್ಲಿಯೇ ಆರಂಭಿಸುತ್ತೇನೆ ಎಂದು ಹೇಳುತ್ತಿದ್ದರೂ ಇನ್ನೂ ಅದನ್ನು ಆರಂಭಿಸಿಲ್ಲ. ಅದು ದೇಶಾದ್ಯಂತ ನಗರಗಳಲ್ಲಿ ತನ್ನ ಸೇವೆ ಆರಂಭಿಸಬಹುದಾದರೂ ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಸೇವೆಯನ್ನು ಆರಂಭಿಸಲು ಇನ್ನೂ ಕೆಲವು ವರ್ಷಗಳು ಬೇಕಾಗಬಹುದು.

ಭಾರತದಲ್ಲಿ ವೇಗದ ಮೊಬೈಲ್ ಇಂಟರ್ನೆಟ್ ಸೇವೆಯ ವಿಸ್ತರಣೆಗೆ ಅಡ್ಡಿಯಾಗಿರುವುದು ಅದರ ದುಬಾರಿ ದರ. ಒಂದು ಜಿಬಿ 3ಜಿ ಇಂಟರ್ನೆಟ್ 250 ರೂಪಾಯಿಗಳಷ್ಟು ದುಬಾರಿಯಾಗಿದ್ದು ಇದು ಜನಸಾಮಾನ್ಯರು ಉಪಯೋಗಿಸಲು ಹಿಂಜರಿಯುವಂತಿದೆ ಏಕೆಂದರೆ ಗ್ರಾಮೀಣ ಹಾಗೂ ನಗರವಾಸಿ ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಜನ ಇಷ್ಟು ಹಣ ಕೊಟ್ಟು ಇಂಟರ್ನೆಟ್ ಉಪಯೋಗಿಸುವ ಪರಿಸ್ಥಿತಿಯಲ್ಲಿ ಇಲ್ಲ. ಈ ರೀತಿಯ ದುಬಾರಿ ಇಂಟರ್ನೆಟ್ ದರಕ್ಕೆ ಖಾಸಗಿ ಕಂಪನಿಗಳು ದುಬಾರಿ ಹಣ ನೀಡಿ ತರಂಗಾಂತರ ಖರೀದಿಸಿರುವುದೂ ಒಂದು ಪ್ರಧಾನ ಕಾರಣವಾಗಿದೆ. 'ಮದುವೆಯಾಗದೆ ಹುಚ್ಚು ಬಿಡದು, ಹುಚ್ಚು ಬಿಡದೆ ಮದುವೆಯಾಗದು' ಎಂಬ ನಾಣ್ಣುಡಿಯಂತೆ ಹೆಚ್ಚು ಜನ ಹೆಚ್ಚು ಮೊಬೈಲ್ ಇಂಟರ್ನೆಟ್ ಬಳಸದೆ ದರ ಇಳಿಯದು, ದರ ಇಳಿಯದೆ ಹೆಚ್ಚು ಜನ ಹೆಚ್ಚು ಇಂಟರ್ನೆಟ್ ಬಳಸಲಾರರು ಎಂಬ ಪರಿಸ್ಥಿತಿ ದೇಶದಲ್ಲಿದೆ. ಮೊಬೈಲ್ ಕಂಪನಿಗಳು ವೇಗದ ಇಂಟರ್ನೆಟ್ ದರವನ್ನು ಜಿಬಿ ಒಂದಕ್ಕೆ ಐವತ್ತು ರೂಪಾಯಿಗಳಿಗಿಂಥ ಕಡಿಮೆ ಮಾಡದೆ ಹೋದರೆ ಇದು ಜನಸಾಮಾನ್ಯರಿಗೆ ಎಟುಕಲಾರದು.

ಭಾರತ ಸರ್ಕಾರವು ರಾಷ್ಟ್ರೀಯ ಆಪ್ಟಿಕ್ ಫೈಬರ್ ಜಾಲ ರೂಪಿಸಿ ದೇಶದ ಎಲ್ಲ ಗ್ರಾಮಗಳಿಗೆ ವೇಗದ ಇಂಟರ್ನೆಟ್ ಸೇವೆಯನ್ನು ವಿಸ್ತರಿಸುವ ಯೋಜನೆಯನ್ನು 2010ರಲ್ಲಿಯೇ ರೂಪಿಸಿದ್ದರೂ ಅದು ಆರು ವರ್ಷಗಳ ನಂತರವೂ ಕುಂಟುತ್ತಾ ಸಾಗಿದೆ. ಈ ಯೋಜನೆಯನ್ವಯ ಕರ್ನಾಟಕದಲ್ಲಿ 5500 ಗ್ರಾಮ ಪಂಚಾಯತಿಗಳ ಪೈಕಿ ಅಂದಾಜು 3000 ಗ್ರಾಮಪಂಚಾಯತಿಗಳಿಗೆ ಆಪ್ಟಿಕ್ ಫೈಬರ್ ಅಳವಡಿಸುವ ಕಾಮಗಾರಿ ಮುಗಿದಿದ್ದರೂ ಗ್ರಾಮೀಣ ಜನರಿಗೆ ಅದರ ಪ್ರಯೋಜನ ಲಭ್ಯವಾಗುವಂತೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಗ್ರಾಮ ಪಂಚಾಯತಿಗಳಲ್ಲಿ ಮಾತ್ರ ವೇಗದ ಇಂಟರ್ನೆಟ್ ಲಭ್ಯವಾಗಿದೆಯೇ ಹೊರತು ಈ ಆಪ್ಟಿಕ್ ಫೈಬರ್ ಜಾಲವನ್ನು ಉಪಯೋಗಿಸಿ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಎಟಕುವ ದರದಲ್ಲಿ 3ಜಿ ಅಥವಾ 4ಜಿ ಮೊಬೈಲ್ ಸೇವೆ ರೂಪಿಸಲು ಬಿಎಸ್ಸೆನ್ನೆಲ್ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ. ಹೀಗಾಗಿ ಆಪ್ಟಿಕ್ ಫೈಬರ್ ಜಾಲ ಅಳವಡಿಸಿದರೂ ಅದು ಜನಸಾಮಾನ್ಯರ ಪಾಲಿಗೆ ವ್ಯರ್ಥವೇ ಸರಿ. ಕೇಂದ್ರ ಸರ್ಕಾರಕ್ಕೆ ವೈಜ್ಞಾನಿಕ ಸಲಹೆ ನೀಡುವ ಯಾವುದೇ ಯೋಗ್ಯ ವ್ಯಕ್ತಿಗಳು ಇಂದು ಇಲ್ಲದಿರುವುದೇ ಇದಕ್ಕೆ ಕಾರಣವಾಗಿರುವಂತೆ ಕಾಣುತ್ತದೆ. ರಾಜೀವ ಗಾಂಧಿಯವರು ಪ್ರಧಾನಿಯಾಗಿದ್ದಾಗ ಸ್ಯಾಮ್ ಪಿಟ್ರೋಡಾ ಅವರು ಸೂಕ್ತ ಯೋಜನೆ ಹಾಗೂ ಸಲಹೆ ನೀಡಿ ದೇಶದಲ್ಲಿ ಟೆಲಿಕಾಂ ಸೌಲಭ್ಯ ಬೆಳೆಯಲು ಕಾರಣರಾದರು. ಇಂದು ಮೋದಿಯವರಿಗೆ ಗ್ರಾಮೀಣ ಜನರ ಬಗ್ಗೆ ಕಾಳಜಿ ಉಳ್ಳ ಸೂಕ್ತ ಸಲಹೆ ನೀಡುವ ವೈಜ್ಞಾನಿಕ ಸಲಹೆಗಾರರು ಇಲ್ಲದಿರುವುದು ದುರಂತವೇ ಸರಿ. ಇದರಿಂದಾಗಿ ಡಿಜಿಟಲ್ ಇಂಡಿಯಾ ಎಂಬ ಯೋಜನೆ ಕುಂಟುತ್ತಾ ಸಾಗುತ್ತಿದೆ. ಬಿಎಸ್ಸೆನ್ನೆಲ್ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ 2ಜಿ ಮೊಬೈಲ್ ಟವರುಗಳನ್ನು ಈಗಾಗಲೇ ಹೊಂದಿದ್ದು ಇವುಗಳನ್ನು ಮೇಲ್ದರ್ಜೆಗೆ ಏರಿಸುವುದು ಸರ್ಕಾರದ ಸಹಾಯದಿಂದ ಶೀಘ್ರವಾಗಿ ಸಾಧ್ಯ.

ಖಾಸಗಿ ಕಂಪನಿಗಳು ಸೌಲಭ್ಯ ಒದಗಿಸಲು ಹಿಂಜರಿಯುವ ಗ್ರಾಮೀಣ ಪ್ರದೇಶಗಳಲ್ಲಿ ಸೌಲಭ್ಯ ಒದಗಿಸುವುದು ಸರ್ಕಾರದ ಬಾಧ್ಯತೆ ಆಗಿದೆ. ಉದಾಹರಣೆಗೆ ಹೆಚ್ಚು ಕಲೆಕ್ಷನ್ ಇಲ್ಲದ ಕಡೆ ಖಾಸಗಿಯವರು ಬಸ್ಸು ಓಡಿಸುವುದಿಲ್ಲ. ಇಂಥಲ್ಲಿ ಸರ್ಕಾರವು ಸರ್ಕಾರೀ ಬಸ್ಸುಗಳನ್ನು ಓಡಿಸುತ್ತದೆ. ಸರ್ಕಾರೀ ಬಸ್ಸುಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಪೇಟೆಗೆ ಹೋಗಿ ಬರಲು ರಿಯಾಯತಿ ದರದ ಪಾಸ್ ಸೌಲಭ್ಯ ಒದಗಿಸುತ್ತದೆ. ಅದೇ ರೀತಿ ಗ್ರಾಮೀಣ ರಸ್ತೆ, ಗ್ರಾಮೀಣ ವಿದ್ಯುದೀಕರಣ ಮೊದಲಾದವುಗಳನ್ನು ಹೆಸರಿಸಬಹುದು. ಇದು ಸರಕಾರಕ್ಕೆ ಇರಬೇಕಾದ ಬಾಧ್ಯತೆ. ಅದೇ ರೀತಿ ಖಾಸಗಿ ಮೊಬೈಲ್ ಕಂಪನಿಗಳು ಬರಲು ಹಿಂಜರಿಯುವ ಗ್ರಾಮೀಣ ಪ್ರದೇಶಗಳಿಗೆ ಬಿಎಸ್ಸೆನ್ನೆಲ್ ಮೂಲಕ 3ಜಿ ಅಥವಾ 4ಜಿಯಂಥ ವೇಗದ ಅಂತರ್ಜಾಲ ಸೌಲಭ್ಯ ಒದಗಿಸುವುದು ಸರ್ಕಾರದ ಬಾಧ್ಯತೆ ಆಗಿದೆ. ಇದಕ್ಕೆ ತರಂಗಾಂತರ ಹರಾಜಿನಲ್ಲಿ ಸರ್ಕಾರ ಸಂಗ್ರಹಿಸಿದ ಲಕ್ಷಾಂತರ ರೂಪಾಯಿಗಳ ಒಂದು ಅಂಶವನ್ನು ಬಿಎಸ್ಸೆನ್ನೆಲ್ ಸಂಸ್ಥೆಗೆ ಒದಗಿಸಿದರೆ ಸಾಕು. ಇಂದು 4ಜಿ ಮೊಬೈಲ್ಗಳು ರೂಪಾಯಿ 3000ಕ್ಕೆ ಲಭ್ಯ ಇವೆ. ಇದು ಒಂದು ಮಿನಿ ಕಂಪ್ಯೂಟರಿಗೆ ಸಮ. ಇದರ ಮೂಲಕ 20,000 ರೂಪಾಯಿ ಕೊಟ್ಟು ಕಂಪ್ಯೂಟರ್ ಕೊಳ್ಳಲಾಗದವರು ಕೂಡ ವೇಗದ ಇಂಟರ್ನೆಟ್ ಸೌಲಭ್ಯ ಇದ್ದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ನಗರಗಳಲ್ಲಿ ಲಭ್ಯವಾಗುವ ಮಾಹಿತಿ, ಶಿಕ್ಷಣ, ಆರೋಗ್ಯ ಮಾಹಿತಿಗಳನ್ನು ಪಡೆಯಬಹುದು. ಗ್ರಾಮೀಣ ವಿದ್ಯಾರ್ಥಿಗಳು 3ಜಿ/4ಜಿ ಮೊಬೈಲ್ ಮೂಲಕ ವೇಗದ ಇಂಟರ್ನೆಟ್ ಸೌಲಭ್ಯ ಇದ್ದಲ್ಲಿ ಸೂಕ್ತ ಮಾಹಿತಿ, ಪಠ್ಯ, ಇಂಗ್ಲೀಷ್ ಶಿಕ್ಷಣವನ್ನು ವಿಡಿಯೋಗಳನ್ನು ನೋಡುವುದರ ಮೂಲಕ ಪಡೆಯಬಹುದು. ಇಂದು ಯುಟ್ಯೂಬ್, ಫೇಸ್ಬುಕ್ಗಳಲ್ಲಿ ಕೃಷಿಗೆ ಸಂಬಂಧಿಸಿದ ಬೇರೆ ಬೇರೆ ದೇಶಗಳ, ಬೇರೆ ಬೇರೆ ರಾಜ್ಯಗಳ ಕೃಷಿಗೆ ಸಂಬಂಧಿಸಿದ ಲಕ್ಷಾಂತರ ವಿಡಿಯೋಗಳು ಲಭ್ಯ ಇವೆ. ಇವುಗಳನ್ನು ವೇಗದ ಇಂಟರ್ನೆಟ್ ಸೌಲಭ್ಯ ಲಭ್ಯವಿದ್ದಲ್ಲಿ ನೋಡಿ ಪರಸ್ಪರ ಸಂವಹನದ ಮೂಲಕ ತಮ್ಮ ಕೃಷಿ ಪದ್ಧತಿಯನ್ನು ಬದಲಾಯಿಸಿಕೊಳ್ಳಬಹುದು. ಟಿವಿ, ಪತ್ರಿಕೆಗಳಂತಲ್ಲದೆ ಅಂತರ್ಜಾಲದಲ್ಲಿ ಪರಸ್ಪರ ಸಂವಹನಕ್ಕೆ ಅವಕಾಶ ಇರುವುದು ಹಾಗೂ ಕೂಡಲೇ ಪ್ರತಿಕ್ರಿಯೆ ಲಭ್ಯವಾಗುವುದು ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರಿ. ಪತ್ರಿಕೆಗಳು ಗ್ರಾಮೀಣ ಜನರನ್ನು ಬಹಳ ಕಡಿಮೆ ಪ್ರಮಾಣದಲ್ಲಿ ತಲುಪುತ್ತವೆ. ಅಂತರ್ಜಾಲದಲ್ಲಿ ಮೊಬೈಲ್ ಹಾಗೂ ಇ-ಆವೃತ್ತಿ ಲಭ್ಯವಿರುವುದರಿಂದ ವೇಗದ ಅಂತರ್ಜಾಲ ಸೌಲಭ್ಯ ಇದ್ದಲ್ಲಿ ಯಾವುದೇ ಹಳ್ಳಿ ಮೂಲೆಗೂ ಪತ್ರಿಕೆಗಳ ಮಾಹಿತಿ ತಲುಪಲು ಸಾಧ್ಯ. ಅದೇ ರೀತಿ ವೇಗದ ಅಂತರ್ಜಾಲ ಲಭ್ಯವಿದ್ದರೆ ಅಂತರ್ಜಾಲ ಪತ್ರಿಕೆಗಳು, ಬ್ಲಾಗುಗಳು ಹೆಚ್ಚು ಹೆಚ್ಚು ಜನರನ್ನು ತಲುಪಲು ತನ್ಮೂಲಕ ಪರಸ್ಪರ ಚರ್ಚೆ, ಸಂವಹನದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾಗೃತಿ ರೂಪುಗೊಳ್ಳಲು ಸಹಾಯಕ.

ಉನ್ನತ ಶಿಕ್ಷಣದ ಮೋಹದಲ್ಲಿ ದುರ್ಗತಿ ಕಾಣುತ್ತಿರುವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ!

ಸಾಂದರ್ಭಿಕ ಚಿತ್ರ; ದಿ ಹಿಂದೂ
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
17/08/2016
ಇಂಡಿಯಾದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿನ ಸರಕಾರವೊಂದಕ್ಕಿರಬಹುದಾದ ಜನಪರ ಕಾಳಜಿಯನ್ನು ಅರ್ಥ ಮಾಡಿಕೊಳ್ಳಲು ಆ ಸರಕಾರ ಸೇವಾ ಕ್ಷೇತ್ರಗಳಿಗೆ ನೀಡಿರುವ ಆಧ್ಯತೆಯನ್ನು, ಕೊಡಮಾಡಿರುವ ಅನುದಾನದ ಪ್ರಮಾಣಗಳನ್ನು ಅವಲೋಕಿಸಬೇಕಾಗುತ್ತದೆ. ಕರ್ನಾಟಕದಂತಹ ಕಲ್ಯಾಣರಾಜ್ಯದ ಮಟ್ಟಿಗೆ ಇಲ್ಲಿನ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಸರಕಾರ ನೀಡುತ್ತಿರುವ ಪ್ರಾಮುಖ್ಯತೆಯ ಆಧಾರದ ಮೇಲೆ ಸರಕಾರವೊಂದಕ್ಕಿರುವ ಜನಪರ ಕಾಳಜಿಯ ಪ್ರಮಾಣ ಅನಾವರಣವಾಗುತ್ತದೆ. ಕರ್ನಾಟಕದ ಶಿಕ್ಷಣ ಕ್ಷೇತ್ರದ ಬಗ್ಗೆ ಅದ್ಯಯನ ಮಾಡುತ್ತಾ ಹೋದರೆ ತೀರಾ ವಿಚಿತ್ರವಾದ ಅಂಶವೊಂದು ಬೆಳಕಿಗೆ ಬರುತ್ತದೆ, ಯಾವುದೇ ರಾಜ್ಯವೊಂದು ಶೈಕ್ಷಣಿಕವಾಗಿ ನಿಜವಾದ ಪ್ರಗತಿ ಸಾದಿಸಲು ಅದು ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಭದ್ರ ಬುನಾದಿಯ ಪ್ರಾಥಮಿಕ ಶಿಕ್ಷಣವನ್ನು ತನ್ನ ಜನಸಮುದಾಯಕ್ಕೆ ನೀಡುವ ಮೂಲಕ ಅದು ಇತರೇ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾದಿಸಬಹುದಾಗಿದೆ. ಇಂದು ನಾಡನ್ನು ಆಧುನಿಕವಾಗಿ ಕಟ್ಟಲು ಬೇಕಾದ ಉನ್ನತ ಶಿಕ್ಷಣವನ್ನು ನೀಡುವ ಮುನ್ನ ಪ್ರಾಥಮಿಕ ಶಿಕ್ಷಣವನ್ನು ಗುಣಮಟ್ಟದ ಆಧಾರದಲ್ಲಿ ನೀಡಬೇಕಾಗುತ್ತದೆ. ಕರ್ನಾಟಕದ ಮಟ್ಟಿಗೆ ನಮ್ಮ ಪ್ರಾಥಮಿಕ ಶಿಕ್ಷಣಕ್ಕೆ ನಮ್ಮ ರಾಜ್ಯ ಸರಕಾರ ನೀಡಿರುವ ಪ್ರಾಮುಖ್ಯತೆಯನ್ನು ಗಮನಿಸುತ್ತಾ ಹೋದರೆ ನಮ್ಮ ಎದೆ ಒಡೆಯುವಂತಹ ಆಂಶಗಳು ಬೆಳಕಿಗೆ ಬರುತ್ತವೆ.

ಇವತ್ತು ಕರ್ನಾಟಕದ ಶಿಕ್ಷಣ ನೀತಿ ಸಂಪೂರ್ಣವಾಗಿ ಉನ್ನತ ಶಿಕ್ಷಣ ನೀತಿಯಾಗಿ ಮಾತ್ರ ಕೆಲಸ ಮಾಡುತ್ತಿದೆ. ಯಾವ ಸರಕಾರ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಬೇಕಾಗಿತ್ತೊ ಆ ಸರಕಾರ ಇಂದು ಪ್ರಾಥಮಿಕ ಶಿಕ್ಷಣವನ್ನು ಸಂಪೂರ್ಣವಾಗಿ ಕಡೆಗಣಿಸಿ ಉನ್ನತ ಶಿಕ್ಷಣ ನೀಡುವ ದಲ್ಲಾಳಿಯಂತೆ ಕೆಲಸ ಮಾಡುತ್ತಿದೆ. ಸರಕಾರಿ ಕನ್ನಡ ಶಾಲೆಗಳನ್ನು ನಡೆಸಲು ಬೇಕಾದ ಇಚ್ಚಾಶಕ್ತಿಯನ್ನೆಂದೊ ಕಳೆದುಕೊಂಡಿರುವ ಸರಕಾರ ಕೇವಲ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಗಳಿಗೆ ಪ್ರಾದಾನ್ಯತೆ ನೀಡುತ್ತಿದೆ. ಇದರಿಂದಾಗಿ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕವೆಂದರೆ ಉನ್ನತ ಶಿಕ್ಷಣದ ದಂದೆ ನಡೆಸುವ ರಾಜ್ಯವೆಂಬಂತಾಗಿ ಹೋಗಿದೆ. 1980ರವರೆಗು ಇದ್ದ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದವು ಹಾಗಾಗಿ ಹೊರಗಿನವರು ಕರ್ನಾಟಕದಲ್ಲಿ ಶಿಕ್ಷಣ ಪಡೆಯಲು ಹಾತೊರೆಯುತಿದ್ದರು. ಇದನ್ನು ಬಳಸಿಕೊಂಡ ಸರಕಾರಗಳು ತದನಂತರದಲ್ಲಿ ನೂರಾರು ಖಾಸಗಿ ಇಂಜಿನಿಯರಿಂಗ್ ಹಾಗು ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಬಿಸಲು ಅನುಮತಿ ನೀಡಿದವು. ಎಂಬತ್ತರ ದಶಕದ ನಂತರ ಎಲ್ಲ ಸರಕಾರಗಳು ರಾಜಕಾರಣಿಗಳಿಗೆ, ಹಲವು ಜಾತಿಯ ಮಠಗಳಿಗೆ, ಇತರೇ ಕ್ಷೇತ್ರಗಳ ಉದ್ಯಮಪತಿಗಳಿಗೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಕಾಲೇಜು ಶುರು ಮಾಡಲು ಅನುಮತಿ ನೀಡುವ ಮೂಲಕ ಉನ್ನತ ಶಿಕ್ಷಣದ ವ್ಯಾಪಾರಿಕರಣಕ್ಕೆ ರಹದಾರಿ ನೀಡಿದವು ಇವತ್ತು ನೋಡಿ: ಬಹುತೇಕ ಮೇಲ್ಜಾತಿಗಳ ಮಠಗಳು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ನಡೆಸುತ್ತಿವೆ. ಇನ್ನು ಎಲ್ಲಾ ಪಕ್ಷಗಳಲ್ಲಿರುವ ಬಲಿಷ್ಠ ರಾಜಕಾರಣಿಗಳು ಕೂಡ ಇದೇ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ಗಂಧಗಾಳಿಯೂ ಇಲ್ಲದ ಹತ್ತಾರು ಉದ್ಯಮಿಗಳು ಸಹ ಇವತ್ತು ಉನ್ನತ ಶಿಕ್ಷಣದ ಕಾಲೇಜುಗಳ ಒಡೆಯರಾಗಿ ತಮ್ಮ ಕಪ್ಪು ಹಣವನ್ನು ಬಿಳಿಯನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇವತ್ತು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳನ್ನು ನಡೆಸುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಬಗ್ಗೆ ಒಂದಷ್ಟು ಅಂಕಿಅಂಶಗಳನ್ನು ಗಮನಿಸಿದರೆ ಮಾತ್ರ ನಿಮಗೆ ನಿಜಸ್ಥಿತಿ ಅರ್ಥವಾಗುತ್ತದೆ.

ಇವತ್ತು ಕರ್ನಾಟಕದಲ್ಲಿ ಸರಿಸುಮಾರು 205 ಇಂಜಿನಿಯರಿಂಗ್ ಕಾಲೇಜುಗಳಿವೆ. ಅಚ್ಚರಿಯ ಸಂಗತಿಯೆಂದರೆ ಇವುಗಳಲ್ಲಿ ಕೇವಕ 8 ಕಾಲೇಜುಗಳು ಮಾತ್ರ ಸರಕಾರಿ ಒಡೆತನದ್ದಾಗಿದ್ದು, ಉಳಿದವು ಖಾಸಗಿಯವರ ಕೈಲಿವೆ. ಇನ್ನು ನಮ್ಮ ರಾಜ್ಯ ಪ್ರತಿವರ್ಷ ಸುಮಾರು 83 ಸಾವಿರ ಇಂಜಿನಯರಿಂಗ್ ಪದವೀಧರರನ್ನು ತಯಾರು ಮಾಡುತ್ತಿದೆ. ದೇಶದ ಒಟ್ಟು ಜನಸಂಖ್ಯೆಯ ಶೇಕಡಾ ಎಂಟರಷ್ಟನ್ನು ಮಾತ್ರ ಹೊಂದಿರುವ ಕರ್ನಾಟಕ ರಾಷ್ಟ್ರದ ಒಟ್ಟು ಇಂಜಿನಿಯರಿಂಗ್ ಪದವೀಧರರಲ್ಲಿ ಶೇಕಡಾ 40ರಷ್ಟನ್ನು ಉತ್ಪಾದಿಸುತ್ತಿದೆ. ಇನ್ನು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಬಂದರೆ 47 ವೈದ್ಯಕೀಯ ಕಾಲೇಜುಗಳಿದ್ದು ಪ್ರತಿವರ್ಷ 7 ಸಾವಿರದಷ್ಟು ವೈದ್ಯರು ಪದವಿ ಪಡೆದು ಹೊರಬರುತ್ತಿದ್ದಾರೆ.

ಯಾಕೆ ಹೀಗೆ? ಹೇಳುತ್ತಾ ಹೋದರೆ ಅದೇ ಒಂದು ಸುದೀರ್ಘ ಪ್ರಬಂದ ಬರೆಯಬೇಕಾಗುತ್ತದೆ. ಇಂತಹ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಅದರ ಮಾಲೀಕರಿಗೆ ಅಪಾರ ಲಾಭವಿದೆ. ಸರಕಾರದ ಕೋಟಾ ಕಳೆದು ಉಳಿಯುವ ಆಡಳಿತ ಮಂಡಳಿಯ ಸೀಟುಗಳನ್ನು ಹಣಕ್ಕಾಗಿ ಮಾರಿಕೊಳ್ಳಲಾಗುತ್ತಿದೆ. ಜೊತೆಗೆ ಸರಕಾರದ ಯಾವುದೇ ನಿಯಮಗಳಿಗು ಬೆಲೆ ಕೊಡದೆಖಾಸಗಿ ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕವನ್ನು ಸುಲಿಗೆ ಮಾಡಲಾಗುತ್ತಿದೆ.ಖಾಸಗಿ ಕಾಲೇಜುಗಳ ಕ್ಯಾಪಿಟೇಶನ್ ದಂದೆ ತಡೆಯಲು ಯಾವ ಸರಕಾರಗಳಿಗುಸಾದ್ಯವಿಲ್ಲ ಮತ್ತು ಮನಸ್ಸೂ ಇಲ್ಲ. ಯಾಕೆಂದರೆ ಎಲ್ಲ ಪಕ್ಷಗಳಲ್ಲೂ ಖಾಸಗಿ ಸಂಸ್ಥೆಗಳ ಮಾಲೀಕರು ಶಾಸಕರಾಗಿಯೊ ಸಚಿವರಾಗಿಯೊ ಇದ್ದೇ ಇರುತ್ತಾರೆ. ಹೇಗೆ ಸರಕಾರದ ವ್ಯವಸ್ಥೆಯಲ್ಲಿ ಈಗಿರುವ ಸಕ್ಕರೆ ಲಾಬಿ ಸರಕಾರವನ್ನು ನಿಯಂತ್ರಿಸುತ್ತಿದೆಯೊ ಅದೇ ರೀತಿ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿ ಸಹ ಕೆಲಸ ಮಾಡುತ್ತಿದೆ, ಕಳೆದ ಎರಡು ದಶಕಗಳಿಂದಲೂ ನಮ್ಮನ್ನಾಳುತ್ತ ಬಂದಿರುವ ಎಲ್ಲ ಸರಕಾರಗಳು ಈ ಉನ್ನತ ಶಿಕ್ಷಣ ದಂದೆಯ ನೆರವಿಗೆ ನಿಂತು ಪ್ರಾಥಮಿಕ ಶಿಕ್ಷಣವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಎದ್ದು ಕಾಣುತ್ತಿದೆ. ಪ್ರತಿವರ್ಷದ ಆಯವ್ಯಯದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಶೇಕಡಾ ಹತ್ತಕ್ಕಿಂತ ಹೆಚ್ಚು ಅನುದಾನ ದೊರೆಯುತ್ತಿಲ್ಲ. ಮತ್ತು ಹೀಗೆ ದೊರೆತ ಅನುದಾನ ಕೂಡ ಸಿಬ್ಬಂದಿಯ ಸಂಬಳ ಇತ್ಯಾದಿಗಳಿಗೆ ಬಹುಪಾಲು ಖರ್ಚಾಗುತ್ತಿದೆ.ಸರಿ ಸುಮಾರು 57 ಸಾವಿರದಷ್ಟಿರುವ ಸರಕಾರಿ ಪ್ರಾಥಮಿಕ ಶಾಲೆಗಳ ದುಸ್ಥಿತಿಯನ್ನು ತಿಳಿಯಲುಅವುಗಳ ಕಟ್ಟಡಗಳನ್ನು ನೋಡಿದರೆ ಸಾಕು. ಬಹಳಷ್ಟು ಶಾಲೆಗಳು ದಶಕಗಳ ಹಿಂದೆ ಕಟ್ಟಲ್ಪಟ್ಟವಾಗಿದ್ದು ಅವುಗಳ ಒಳ ಹೋಗುವ ಯಾವ ಆಕರ್ಷಣೆಯು ಮಕ್ಕಳಿಗೆ ಉಳಿದಿರುವಂತೆ ಕಾಣುವುದಿಲ್ಲ. ಸುಸ್ಥಿತಿಯಲ್ಲಿರುವ, ಮಕ್ಕಳಿಗೆ ಆಕರ್ಷಕವಾಗಿರುವ ಕಟ್ಟಡಗಳನ್ನು ಹೊಂದಿರದ ಶಾಲೆಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೋಲಿಸಿ ನೋಡಿ. ಇವತ್ತು ಬಹುತೇಕ ಖಾಸಗಿ ಸಂಸ್ಥೆಗಳ ಕಾಲೇಜುಗಳು ಪಂಚತಾರಾ ಹೋಟೆಲುಗಳ ರೀತಿಯಲ್ಲಿ ವಿನ್ಯಾಸಗೊಂಡಿರುತ್ತವೆ. ನಮ್ಮ ಸರಕಾರಿ ಶಾಲೆಗಳ ಹೆಂಚಿನ ಕಟ್ಟಡಗಳು ಸುಣ್ಣಬಣ್ಣ ಕಾಣದೆ, ಮಳೆ ಬಂದರೆ ಸೋರುವ ಸ್ಥಿತಿಯಲ್ಲೇ ಇರುತ್ತವೆ. ಮಕ್ಕಳು ಸ್ವಯಂಆಕರ್ಷಣೆಯಿಂದ ಶಾಲೆಗೆ ಬಂದು ಕಲಿಯುವಂತಹ ಕಟ್ಟಡಗಳನ್ನಾಗಲಿ, ಅವರ ಪಠ್ಯಕ್ಕೆ ಪೂರಕಾದ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಬೇಕಾದ ಉಪಕರಣಗಳ ಸೌಲಭ್ಯಗಳಾಗಲಿ ಇರದ ಸರಕಾರಿ ಶಾಲೆಗಳನ್ನು ಸರಕಾರ ತನ್ನ ಅನಿವಾರ್ಯ ಕರ್ಮವೆಂಬಂತೆ ನಡೆಸುತ್ತಿದೆ. ಪ್ರಾಥಮಿಕ ಶಿಕ್ಷಣ ಸೃಜನಶೀಲವಾಗಿದ್ದರೆ ಮಾತ್ರ ಮಕ್ಕಳ ಬೌದ್ದಿಕ ಬದುಕು ಚೆನ್ನಾಗಿರುತ್ತದೆ. ಆದರೆ ನಾನು ಕಂಡಂತೆ ಸರಕಾರಿ ಶಾಲೆಗಳಲ್ಲಿರುವ ಅವ್ಯವಸ್ಥೆಗಳು ಮಕ್ಕಳು ಶಾಲೆಯಿಂದ ವಿಮುಖರಾಗುವಂತೆ ಮಾಡುತ್ತಿವೆ. ಇದರ ಜೊತೆಗೆ ಇವತ್ತಿಗೂ ಬಹಳಷ್ಟು ಶಾಲೆಗಳು ಏಕೋಪಾದ್ಯಾಯ ಶಾಲೆಗಳಾಗಿದ್ದು ಅವುಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕನೊಬ್ಬ ಶಿಕ್ಷಕ ವೃತ್ತಿಯ ಜೊತೆಜೊತೆಗೆ ಆಡಳಿತದ ವಿಷಯಗಳನ್ನೂ , ಈಗೀಗ ಬಿಸಿಯೂಟದ ಜವಾಬ್ದಾರಿಗಳನ್ನು ನಿಬಾಯಿಸಬೇಕಾಗಿದ್ದು ಆತ ಕ್ರಿಯಾಶೀಲನಾಗಿ ಮಕ್ಕಳಿಗೆ ಪಾಠಮಾಡುವ ಉತ್ಸಾಹವನ್ನೇ ಕಳೆದುಕೊಂಡಿರುತ್ತಾನೆ. ಇನ್ನು ಶಿಕ್ಷಕರುಗಳ ಪಾಡು ಹೇಳ ತೀರದು ಯಾವುದೇ ಗಣತಿಯ ಕಾರ್ಯವಿರಲಿ, ಚುನಾವಣೆಯ ಕಾರ್ಯವಾಗಲಿ ಆತನೇ ಮಾಡಬೇಕಾದ ಒತ್ತಡಗಳಿವೆ. ಒಂದು ಹಳ್ಳಿಯಲ್ಲಿ ಏಕ ಉಪಾದ್ಯಾಯ ಶಾಲೆಯಿದೆ ಅಂದುಕೊಂಡರೆ, ಆ ಶಾಲೆಯ ಶಿಕ್ಷಕಬೆಳಿಗ್ಗೆ ಎದ್ದು ಶಾಲೆಗೆ ಬಂದು, ಮೊದಲಿಗೆ ಬಿಸಿಯೂಟದ ಸಿಬ್ಬಂದಿಗೆ ದವಸದಾನ್ಯ ನೀಡಿ ಅದರ ಉಸ್ತುವಾರಿಯನ್ನು ನೋಡುತ್ತಲೇ ಪಾಠ ಮಾಡಬೇಕು. ಇನ್ನು ವರ್ಷದ ಆರಂಭದಲ್ಲಿ ಮಕ್ಕಳನ್ನು ದಾಖಲಾತಿ ಮಾಡುವ ಮತ್ತು ಉತ್ತೀರ್ಣರಾಗಿ ಹೊರಹೋಗುವ ಮಕ್ಕಳಿಗೆ ಟಿ.ಸಿ. ನೀಡುವುದನ್ನೂ ಮಾಡಬೇಕು. ಇದೆಲ್ಲದರ ಜೊತೆಗೆ ತಾಲ್ಲೂಕು ಕೇಂದ್ರಕ್ಕೆ ಹೋಗಿ ಮಕ್ಕಳಿಗೆ ಬಂದಿರುವ ಉಚಿತ ಪುಸ್ತಕಗಳನ್ನು ಸಮವಸ್ತ್ರಗಳನ್ನು ಹೊತ್ತು ತರಬೇಕು. ಒಮ್ಮೊಮ್ಮೆ ಇಂತಹ ಕೆಲಸಗಳಿಗಾಗಿ ಆತ ಬಹಳಷ್ಟು ಸಾರಿ ಅಲೆದಾಡಬೇಕು. ಈ ಅವಧಿಯಲ್ಲಿ ಆತ ಲಭ್ಯವಿರುವ ಪಕ್ಕದ ಶಾಲೆಯ ಶಿಕ್ಷಕನನ್ನು ಓಓಡಿ ಹಾಕಿಸಿಕೊಳ್ಳಬೇಕು ಇದು ಸಾದ್ಯವಾಗದೇ ಹೋದರೆ ಶಾಲೆಯನ್ನು ಆ ದಿನ ಮುಚ್ಚ ಬೇಕು. ಇದರ ಅರಿವಿರದ ಪೋಷಕರಿಂದ ಆತ ಬಯ್ಗುಳಗಳನ್ನು ಕೇಳಬೇಕಾಗುತ್ತದೆ. ಹೀಗೆ 21ನೇ ಶತಮಾನದಲ್ಲೂ ನಮ್ಮ ಸರಕಾರಗಳು ಏಕೋಪಾದ್ಯಾಯ ಶಾಲೆಗಳನ್ನು ನಡೆಸುತ್ತಿವೆಯೆಂದರೆ ಅದಕ್ಕಿಂತ ನಾಚಿಕೆಗೇಡಿನ ಮಾತು ಬೇರಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶಿಕ್ಷಕರನ್ನು ನೇಮಿಸದೆ ಕಾಲಕಳೆಯುವ ಸರಕಾರ ಇಲಾಖೆಗೆ ಹೊಸದಾಗಿ ಬರುವ ಶಿಕ್ಷಣ ಮಂತ್ರಿಯ ಮರ್ಜಿಗನುಗುಣವಾಗಿ ಬದಲಿಸುವ ಪರೀಕ್ಷಾಕ್ರಮಗಳಿಂದ ಶಿಕ್ಷಕರು ಮತ್ತು ಮಕ್ಕಳಿಗೆ ತೊಂದರೆಯಾಗುತ್ತಿದೆ. ಇವತ್ತಿಗು ಶಾಲೆಗಳಲ್ಲಿ ಅಗತ್ಯ ಪೀಠೋಪಕರಣಗಳಾಗಲಿ, ಶೌಚಾಲಯಗಳಾಗಲಿ, ಆಟದ ಮೈದಾನಗಳಾಗಲಿ ಇಲ್ಲ. ಮನಸ್ಸು ಮಾಡಿದ್ದರೆ ಕಳೆದ ಅರವತ್ತು ವರ್ಷಗಳಲ್ಲಿ ಪ್ರಾಥಮನಿಕ ಶಿಕ್ಷಣವನ್ನು ವಿಶ್ವ ದರ್ಜೆಗೇರಿಸಬಹುದಾಗಿದ್ದ ಸರಕಾರಗಳು ಕೇವಲ ಉನ್ನತ ಶಿಕ್ಷಣಕ್ಕೆ ಮಹತ್ವ ನೀಡುತ್ತ ಪದವೀಧರರನ್ನು ಉತ್ಪಾದಿಸುವ ಕಾರ್ಖಾನೆಗಳನ್ನು ಪ್ರಾರಂಬಿಸಿದೆಯಷ್ಟೆ!

ಪ್ರಾಥಮಿಕ ಶಾಲೆಗಳು ಮಕ್ಕಳ ವಯೋಸಹಜ ಕುತೂಹಲಗಳನ್ನು ತಣಿಸಿ, ಅವರ ಬೌದ್ದಿಕ ಬೆಳವಣಿಗೆಗಳಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸಬೇಕಾಗಿದ್ದ ನಮ್ಮಲ್ಲಿರುವ ಶಾಲೆಗಳು ಸೂಕ್ತ ಕಟ್ಟಡಗಳಿರದೆ, ಸಾಕಷ್ಟು ಶಿಕ್ಷಕರುಗಳಿರದೆ- ಶಿಕ್ಷಕರುಗಳ ಮೇಲಿರುವ ಪಠ್ಯೇತರ ಚಟುವಟಿಕೆಗಳ ಒತ್ತಡಗಳಿಂದಾಗಿ ಅಂತಹ ಮಹತ್ವಪೂರ್ಣ ಕೆಲಸಗಳಾಗುತ್ತಿಲ್ಲ. ಇದಕ್ಕೆ ಪೂರಕವೆಂಬಂತೆ ಶಾಲೆಗಳು ಪ್ರಾರಂಬವಾಗಿ ಮೂರು ತಿಂಗಳಾದರು ಮಕ್ಕಳ ಕೈ ತಲುಪಬೇಕಾದ ಪಠ್ಯಪುಸ್ತಕಗಳು ತಲುಪಿಯೇ ಇರುವುದಿಲ್ಲ. ಇನ್ನು ಸರಕಾರ ನೀಡುವ ಸಮವಸ್ತ್ರ ತಲುಪುವಾಗ ಕನಿಷ್ಠ ಐದಾರು ತಿಂಗಳಾದರು ಆಗಿರುತ್ತದೆ.

ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿನ ಸರಕಾರದ ಇಂತಹ ವೈಫಲ್ಯಗಳನ್ನು ತಮ್ಮ ಬಂಡವಾಳ ಮಾಡಿಕೊಂಡ ಖಾಸಗಿಯವರು ಕಾನ್ವೆಂಟುಗಳೆಂಬ ಅಂಗಡಿಗಳನ್ನು ತೆಗೆದು ಶಿಸ್ತಿನ ಹೆಸರಲ್ಲಿ, ಉತ್ತಮ ಇಂಗ್ಲೀಷ್ ಶಿಕ್ಷಣದ ಹೆಸರಲ್ಲಿ ಪೋಷಕರನ್ನು ಸುಲಿಗೆ ಮಾಡುತ್ತಿವೆ. ಇದನ್ನು ಕಂಡು ಪ್ರಭಾವಿತರಾದ ಮದ್ಯಮವರ್ಗ ಮತ್ತು ಬಡವರು ಸಾಲಸೋಲ ಮಾಡಿ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇವತ್ತು ಹಳ್ಳಿಗಳ ಬಹಳಷ್ಟು ಜನರು ಇಂತಹ ಖಾಸಗಿ ಶಾಲೆಗಳ ಆಕರ್ಷಣೆಗೆ ಬಲಿಯಾಗಿ ತಮ್ಮ ಮಕ್ಕಳನ್ನು ಪಟ್ಟಣಗಳ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಹೀಗಾಗಿ ಬಹುತೇಕ ಸರಕಾರಿ ಶಾಲೆಗಳಲ್ಲಿನ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಇದನ್ನೇ ಕಾಯುತ್ತಿದ್ದವರಂತೆ ಸರಕಾರ ಕಡಿಮೆ ಮಕ್ಕಳ ನೆಪ ಹೇಳಿ ಸರಕಾರಿ ಶಾಲೆಗಳನ್ನು ಮುಚ್ಚುತ್ತಿವೆ. ಅಥವಾ ಸಚಿವರ ಬಾಷೆಯಲ್ಲಿಯೇ ಹೇಳುವುದಾದರೆ ವಿಲೀನಗೊಳಿಸುತ್ತಿವೆ.

ಒಟ್ಟಿನಲ್ಲಿ ನಮ್ಮ ಸರಕಾರಗಳು ಉನ್ನತ ಶಿಕ್ಷಣಕ್ಕೆ ನೀಡುತ್ತಿರುವ ಪ್ರದಾನ್ಯತೆಯನ್ನು ಪ್ರಾಥಮಿಕ ಶಿಕ್ಷಣಕ್ಕೆ ನೀಡದೆ ನಮ್ಮ ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ.

ಆಗ 15, 2016

ಬಲಪಂಥೀಯರ ಕಪಟ ದೇಶಭಕ್ತಿಯೂ ನಮ್ಮ ಯುವ ಪೀಳಿಗೆಯೂ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
15/08/2016
ಕಳೆದ ಇಪ್ಪತ್ತೆಂಟು ತಿಂಗಳ ಬಾಜಪದ ಆಡಳಿತ ನನ್ನಲ್ಲಿ ತೀವ್ರವಾದ ಭ್ರಮನಿರಸನವನ್ನಾಗಲಿ, ನಿರಾಸೆಯನ್ನಾಗಲಿ ಉಂಟುಮಾಡಿಲ್ಲ, ವಿಷಾದದ ಹೊರತಾಗಿ! ಇವತ್ತೇನು ರಾಷ್ಟ್ರದಾದ್ಯಂತ ದಲಿತರ, ಅಲ್ಪಸಂಖ್ಯಾತರ ಮೇಲೆ ಅಮಾನವೀಯ ಹಲ್ಲೆಗಳು ನಡೆಯುತ್ತಿವೆಯೊ ಅವೆಲ್ಲವೂ ನಿರೀಕ್ಷಿತವೇ ಆಗಿದ್ದವು. ಇನ್ನು ಅಸಹಿಷ್ಣುತೆಯ ವಿಚಾರದಲ್ಲಿ ಬಾಜಪದಿಂದ ಇದಕ್ಕಿಂತ ಭಿನ್ನ ನಡೆಗಳನ್ನೇನಾದರು ಯಾರಾದರು ನಿರೀಕ್ಷಿಸಿದ್ದೇ ಆಗಿದ್ದರೆ ಅವರು ಇತಿಹಾಸದ ಗಂಧಗಾಳಿ ಗೊತ್ತಿಲ್ಲದವರೇ ಇರಬೇಕು. ಯಾಕೆಂದರೆ ಬಲಪಂಥೀಯ ನಿಲುವಿನ ಫ್ಯಾಸಿಸ್ಟ್ ಪಕ್ಷವೊಂದು ಹೇಗೆಲ್ಲ ನಡೆದುಕೊಳ್ಳಬಹುದೋ ಹಾಗೆಯೇ ಅದು ನಡೆದುಕೊಳ್ಳುತ್ತಿದೆ.

2014ರವರೆಗು ಅಂಬೇಡ್ಕರ್ ಬಗೆಗೆ ಯಾವುದೇ ಪ್ರೀತಿ, ಗೌರವಗಳನ್ನು ಇಟ್ಟುಕೊಂಡಿರದ ಬಾಜಪ ದಿಡೀರನೆ ಅವರ ಬಗ್ಗೆ ತೋರಿಸುವ ಕಾಳಜಿಯ ಹಿಂದಿರುವ ನೈಜ ಕಾರಣಗಳನ್ನೂ ಹಾಗು ಇದೀಗ ಎಚ್ಚೆತ್ತವರಂತೆ ಪ್ರದಾನಿ ಮೋದಿಯವರು ದಲಿತರ ಮೀಸಲಾತಿ ಹಕ್ಕುಗಳ ಬಗ್ಗೆ ಮಾತಾಡುತ್ತಿರುವುದರ ಹಿಂದಿನ ತಂತ್ರಗಾರಿಕೆಯ ಕುಟಿಲತೆಗಳನ್ನು ನಾವು ಸೂಕ್ಷ್ಮವಾಗಿ ಆದರೆ ತಣ್ಣಗಿನ ಮನಸ್ಥಿತಿಯಲ್ಲಿ ವಿಶ್ಲೇಷಿಸಿ ನೋಡಬೇಕಾದ ಐತಿಹಾಸಿಕ ಅನಿವಾರ್ಯತೆಯಿದೆ. ಸ್ವಲ್ಪ ಹಿಂದಕ್ಕೆ ಹೋಗಿ ನೋಡಿ:

ವಸಾಹತುಶಾಹಿಗಳ ವಿರುದ್ದ ನಡೆದ ನಮ್ಮ ಸುದೀರ್ಘ ಸ್ವಾತಂತ್ರ ಹೋರಾಟದಲ್ಲಿ ಬಾಜಪದ ಹಿಂದಿನ ತಲೆಮಾರಿನ ನಾಯಕರುಗಳಾಗಲಿ, ಅದರ ಸೋದರ ಸಂಘಟನೆಗಳಾಗಲಿ ಯಾವತ್ತೂ ಪಾಲ್ಗೊಂಡಿರಲಿಲ್ಲ. ಹೀಗಾಗಿ ಇವತ್ತು ಅದಕ್ಕೆ ಸ್ವಾತಂತ್ರ ಹೋರಾಟದ ಬಗ್ಗೆ ಮಾತನಾಡುವ ಹಕ್ಕಾಗಲಿ ಹಾಗು ಅದರ ನೇತೃತ್ವ ವಹಿಸಿದ್ದರು ಎಂದು ಹೇಳಿಕೊಳ್ಳಲು ಬೇಕಾದ ಒಬ್ಬನೇ ಒಬ್ಬ ನಾಯಕನೂ ಇಲ್ಲ. ಆದರೆ ಈ ಪೀಳಿಗೆಯ ಮುಂದೆ ಅದನ್ನು ಒಪ್ಪಿಕೊಳ್ಳಲು ತಯಾರಿರದ ಸಂಘಪರಿವಾರ ಒಂದಷ್ಟು ಐತಿಹಾಸಿಕ ವ್ಯಕ್ತಿಗಳನ್ನು ಹೈಜಾಕ್ ಮಾಡಿ ಅವರುಗಳು ತಮ್ಮ ಸಿದ್ದಾಂತಕ್ಕೆ ಪೂರಕ ನಿಲುವು ತಳೆದಿದ್ದರೆಂಬ ಭ್ರಮೆ ಹುಟ್ಟಿಸಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿಯೇ ಹಿಂದಿನಿಂದಲೂ ಅದು ಹುತಾತ್ಮ ಶ್ರೀ ಭಗತ್ ಸಿಂಗ್ ಅವರನ್ನು, ಸ್ವಾಮಿ ವಿವೇಕಾನಂದ ಅವರನ್ನು ತನ್ನ ಪಕ್ಷದ ವ್ಯಾಪ್ತಿಯೊಳಗೆ ಸೇರಿಸಿಕೊಳ್ಳುವ ಎಲ್ಲ ನಾಟಕಗಳನ್ನೂ ಮಾಡಿದೆ. ಭಗತ್ ಸಿಂಗ್ ಒಬ್ಬ ಅಪ್ಪಟ ದೇಶಪ್ರೇಮಿಯಾಗಿದ್ದು ಅವನ ಹೆಸರನ್ನು ಬಳಸಿಕೊಂಡು ಯುವಜನೆಗೆ ಹಿಂದುತ್ವದ ಮತಾಂಧತೆಯ ಪಾಠ ಹೇಳುತ್ತ ಬಂದಿದೆ. ಹಾಗೆ ನೋಡಿದರೆ ಕ್ರಾಂತಿಕಾರಿ ಭಗತ್ ಸಿಂಗ್ ಸಮಾಜವಾದಿ ಆಶಯಗಳನ್ನು ಹೊಂದಿದ್ದ ದೇಶಪ್ರೇಮಿ ಯುವಕನಾಗಿದ್ದು ಸಮಾಜವಾದಿ ಗಣವಾದಿ ಸಂಘಟನೆಯ ಮೂಲಕ ಮಾರ್ಕ್ಸ್ ವಾದಿ ತತ್ವಗಳನ್ನು ಆಧರಿಸಿದ ರೈತ-ಕಾರ್ಮಿಕ ಹೋರಾಟಗಳ ಮೂಲಕ ಬ್ರಿಟೀಶರಿಂದ ಸ್ವಾತಂತ್ರ ಪಡೆಯಲು ಕ್ರಾಂತಿಯ ಹಾದಿ ಹಿಡಿದು ಹುತಾತ್ಮನಾದವನು. ಬಾಜಪದ ಹಿಂದುತ್ವದ ತತ್ವಗಳಿಗಾಗಲಿ, ಬಲಪಂಥೀಯ ಶಕ್ತಿಗಳ ಪ್ರಭಾವವಾಗಲಿ ಆತನ ಮೇಲಿರಲಿಲ್ಲ. ಆದರೆ ಇವತ್ತು ಬಾಜಪದವರು ಅವನ ಪೋಟೋಗೆ ಕುಂಕುಮ ಹಚ್ಚಿ ಇವನು ಹಿಂದು ರಾಷ್ಟ್ರದ ಕನಸು ಕಂಡವನೆಂದು, ಈತನ ಕನಸು ನನಸು ಮಾಡುವುದು ಇಂದಿನ ಯುವಕರ ಗುರಿಯಾಗಬೇಕೆಂದು ಹೇಳಿಕೊಳ್ಳುತ್ತ ತನ್ನ ವಿದ್ಯಾರ್ಥಿ ಸಂಘಟನೆಗಳ ಮೂಲಕ ಕಾಲೇಜು ಯುವಕ ಯುವತಿಯರನ್ನು ದಾರಿತಪ್ಪಿಸುತ್ತ ಬಂದಿದೆ. ಇನ್ನು ಈ ನೆಲದ ಕೆಳವರ್ಗಗಳನ್ನು ಶೋಷಿಸುತ್ತ ಬಂದ ಪುರೋಹಿತಶಾಹಿ ಶಕ್ತಿಗಳ ವಿರುದ್ದದ ನಿಲುವುಗಳನ್ನು ಹೊಂದಿದ್ದ ಸ್ವಾಮಿ ವಿವೇಕಾನಂದರವರನ್ನು ಬಾಜಪ ತನ್ನ ಪಕ್ಷದ ಪರಿಧಿಯೊಳಗೆ ಎಳೆತಂದು, ಅವರನ್ನು ಹಿಂದುತ್ವದ ಪುನರುಥ್ಥಾನದ ಪ್ರವರಕರೆಂದು ಘೋಷಿಸಿ ಯುವ ಜನತೆಯ ದಿಕ್ಕು ತಪ್ಪಿಸುತ್ತಲೇ ಬಂದಿದೆ. ಇದರಿಂದ ಪ್ರಭಾವಿತರಾದ ನಮ್ಮ ನೆಲದ ಲಕ್ಷಾಂತರ ತಳಜಾತಿಯ ಯುವಕರು ಸಂಘಪರಿವಾರದ ಮತಾಂಧ ಚಿಂತನೆಗಳನ್ನು ಅನುಷ್ಠಾನಗೊಳಿಸುವ ಆಯುಧಗಳಾಗಿ ಬಳಕೆಯಾಗುತ್ತಿದ್ದಾರೆ. ಎಷ್ಟರ ಮಟ್ಟಿಗೆ ಅಂತಹ ಯುವಕರು ಬಾಜಪದ ಹಿಂದುತ್ವವನ್ನು ನಂಬಿದ್ದಾರೆಂದರೆ ನಮ್ಮ ಹಳ್ಳಿಗಳ ಯುವಕರಿಗೆ ವಿವೇಕಾನಂದರ, ಭಗತ್ ಸಿಂಗ್ ಅವರುಗಳ ನೈಜ ಚಿಂತನೆಯ ಪುಸ್ತಕಗಳನ್ನು ಕೊಟ್ಟು ಓದಿಸಿದರೂ, ಇವುಗಳು ಎಡಪಂಥೀಯರು ಬರೆದ ಕಪೋಲಕಲ್ಪಿತ ಇತಿಹಾಸದ ಸೃಷ್ಠಿಯೆಂದು ವಾದಿಸುತ್ತಾರೆ. ಬಾಜಪ ಮತ್ತದರ ಸಂಘಪರಿವಾರದವರ ಇಂತಹ ಸುಳ್ಳುಗಳು ಒಂದು ಪೀಳಿಗೆಯ ಯೋಚನಾದಾಟಿಯನ್ನೇ ಬದಲಾಯಿಸಿರುವುದನ್ನು, ಅದರ ಪರಿಣಾಮಗಳನ್ನು ನಾವೀಗಾಗಲೇ ಗಮನಿಸಿದ್ದೇವೆ.

ಇನ್ನು ಅಂಬೇಡ್ಕರ್ ವಿಷಯಕ್ಕೆ ಬರುವ ಮುಂಚೆ, ಮಹಾತ್ಮಗಾಂದಿಯವರ ಬಗೆಗಿನ ಇವರುಗಳ ನಿಲುವುಗಳನ್ನೇ ನೋಡಿ ಇವರೆಂದೂ ಗಾಂದಿಯನ್ನು ರಾಷ್ಟ್ರಪಿತ ಎಂದು ಒಪ್ಪಿಕೊಂಡವರಲ್ಲ. ಬದಲಿಗೆ ಅವರು ಮುಸ್ಲಿಮರನ್ನು ಓಲೈಸುತ್ತಾರೆಂದೂ, ದೇಶವಿಭಜನೆಗೆ ಅವರೇ ಕಾರಣವೆಂದು ಇವತ್ತಿಗೂ ಆರೋಪಿಸುತ್ತಾರೆ. ನನಗೆ ತಿಳಿದ ಹಾಗೆ ಬಾಜಪದ ಹಿಂದಿನ ಅವತಾರವಾದ ಜನಸಂಘ ಇರುವವರೆಗೂ ಇವರುಗಳು ತಮ್ಮ ಚುನಾವಣೆಗಳಲ್ಲಾಗಲಿ, ಪ್ರಚಾರ-ಪ್ರಣಾಳಿಕೆಗಳಲ್ಲಾಗಲಿ ಗಾಂದಿಯವರನ್ನ ಪ್ರಸ್ತಾಪಿಸಿದವರೇ ಅಲ್ಲ. ಎಂಭತ್ತರ ದಶಕದಲ್ಲಿ ಬಾಜಪದ ಉದಯವಾದ ನಂತರವೇ 1984 ರಲ್ಲಿ ಇವರು ಮೊತ್ತಮೊದಲಬಾರಿಗೆ ಗಾಂದಿವಾದಿ ಸಮಾಜವಾದಿ ಚಿಂತನೆಗಳನ ಬಗ್ಗೆ ಮಾತಾಡಿದ್ದರು. ಹೀಗೆ ಕಾಲಕಾಲಕ್ಕೆ ದೇಶದ ಹಿರಿಯ ಐತಿಹಾಸಿಕ ವ್ಯಕ್ತಿಗಳನ್ನು ತಮ್ಮವರೆಂದು ಬಿಂಬಿಸಿಕೊಳ್ಳುವ ಪ್ರಯುತ್ನ ನಡೆಸುತ್ತ ಬಂದಿರುವ ಬಾಜಪದವರು ನರೇಂದ್ರ ಮೋದಿಯವರ ಕಾಲದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಆರ್.ಎಸ್.ಎಸ್. ಅನ್ನು ನಿಷೇಧಿಸಿದ್ದ ಅಂದಿನ ಗೃಹ ಮಂತ್ರಿ ಸರದಾರ್ ವಲ್ಲಬಾಯಿ ಪಟೇಲರನ್ನು ತಮ್ಮವರೆಂದು ಬಿಂಬಿಸಿ, ಗುಜರಾತಿನ ನರ್ಮದಾ ಸರೋವರದಲ್ಲಿ ಅವರ ಬೃಹತ್ ಪ್ರತಿಮೆಯೊಂದನ್ನು ಸ್ಥಾಪಿಸಿ, ತಾವು ಮಾತ್ರ ದೇಶಭಕ್ತರೆಂಬ ಭ್ರಮೆಯೊಂದನ್ನು ಭಾರತೀಯರಲ್ಲಿ ಹುಟ್ಟು ಹಾಕಲು ಪ್ರಯತ್ನಿಸಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರನ್ನೇ ಬಿಡದ ಬಾಜಪದವರಿನ್ನು ಕಾಂಗ್ರೆಸ್ಸನ್ನು ಕಠೋರವಾಗಿ ಟೀಕಿಸುತ್ತಿದ್ದ ಬಿ.ಆರ್.ಅಂಬೇಡ್ಕರ್ ಅವರನ್ನು ಬಿಟ್ಟಾರೆಯೇ? ಅದರ ವರಸೆಯನ್ನೂ ಒಂದಿಷ್ಟು ನೋಡಿ:

2014ರಲ್ಲಿ ಬಹುಮತಗಳಿಸಿ ಅಧಿಕಾರಕ್ಕೇರಿದ ಬಾಜಪ ತಾನು ಅಖಿಲ ಭಾರತೀಯ ಮಟ್ಟದಲ್ಲಿ ಬೇರು ಬಿಡಲು ದಲಿತ ಮತ್ತು ಆದಿವಾಸಿ ಸಮುದಾಯಗಳ ಮತ ಪಡೆಯುವುದು ಸಹ ಮುಖ್ಯವೆಂದು ಬಾವಿಸಿ ಆ ದಿಸೆಯಲ್ಲಿ ತನ್ನ ಕಾರ್ಯ ಪ್ರಾರಂಬಿಸಿತು. ಇದರ ಒಂದು ಭಾಗವಾಗಿಯೇ ಮೋದಿಯವರು ಕಳೆದ ಮಾರ್ಚ ತಿಂಗಳಲ್ಲಿ ತಾನು ಸಹ ಅಂಬೇಡ್ಕರ್ ಅವರ ಅನುಯಾಯಿಯೆಂದೂ, ಅವರ ಆದರ್ಶಗಳನ್ನು ಅನುಷ್ಠಾನಗೊಳಿಸುವುದೇ ತನ್ನ ಪರಮ ಕರ್ತವ್ಯವೆಂದು ಬಾಷಣ ಮಾಡಿ, ಈ ನಾಡಿನ ಶೇಕಡಾ 25ರಷ್ಟಿರುವ ದಲಿತರನ್ನು ಓಲೈಸುವ ಕ್ರಮಕ್ಕೆ ನಾಂದಿ ಹಾಡಿದ್ದರು. ಯಾರೇ ಹೇಳಿದರೂ ದಲಿತರ ಮೀಸಲಾತಿಯನ್ನು ನಿಲ್ಲಿಸುವುದಿಲ್ಲ, ಸ್ವತ: ಅಂಬೇಡ್ಕರವರೇ ಮತ್ತೆ ಹುಟ್ಟಿ ಬಂದು ಹೇಳಿದರೂ ತಾವು ಮಾತ್ರ ಮೀಸಲಾತಿಯನ್ನು ಸ್ಥಗಿತಗೊಳಿಸುವುದಿಲ್ಲವೆಂಬ ಉಗ್ರ ಹೇಳಿಕೆಯನ್ನು ನೀಡಿ ದಲಿತರ ಕಣ್ಣಲ್ಲಿ ಹೀರೋ ಆಗಲು ಹೊರಟಿದ್ದರು. ಇದಕ್ಕೆ ಕಾರಣ ಕೆಲವೇ ದಿನಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೋಹನ್ ಬಾಗವತ್ ಅವರು ಮೀಸಲಾತಿಯನ್ನು ಪುನರ್ ಪರಿಶೀಲಿಸುವ ಅಗತ್ಯವಿದೆಯೆಂದು ಹೇಳಿ ದಲಿತರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಾಗಲೇ ಬಿಹಾರದಲ್ಲಿ ವಿದಾನಸಭಾ ಚುನಾವಣೆಗಳು ಘೋಷಣೆಯಾಗಿದ್ದ ಹಿನ್ನೆಲೆಯಲ್ಲಿ, ಇಂತಹ ಹೇಳಿಕೆಯಿಂದ ಪಕ್ಷಕ್ಕೆ ಹಿನ್ನಡೆಯಾಗುವ ಬೀತಿಯಿಂದಷ್ಟೇ ಮೋದಿಯವರು ಅಂಬೇಡ್ಕರರ ಭಕ್ತರಾಗಿ ಪರಿವರ್ತನೆಯಾಗಿದ್ದರು. ಅಂಬೇಡ್ಕರ್ ಅವರು ಬದುಕಿದ್ದಾಗಲು ಅವರೆಂದು ಹಿಂದೂ ಧರ್ಮದ ಪುರೋಹಿತಶಾಹಿಯನ್ನ ಮೆಚ್ಚಿದವರಲ್ಲ, ಬದಲಿಗೆ ಹಿಂದೂಧರ್ಮದ ಜಾತಿ ವ್ಯವಸ್ಥೆಯ ಹಾಗು ಅದರು ಅವಮಾನಗಳನ್ನು ತಿರಸ್ಕರಿಸಿ ಬೌದ್ದ ಧರ್ಮಕ್ಕೆ ಮತಾಂತರವಾಗಿದ್ದವರು. ಅಂತಹ ಅಂಬೇಡ್ಕರ್ ಅವರನ್ನೂ ಬಿಡದ ಬಾಜಪ ಇದೀಗ ತಾನು ಅಂಬೇಡ್ಕರ್ ಅವರ ಆಶಯಗಳನ್ನು, ಆದರ್ಶಗಳನ್ನು ಅನುಸರಿಸಲು ಬದ್ದವಾಗಿದ್ದೇನೆಂದು ಹೇಳಿಕೊಂಡರೆ ಅದನ್ನು ನಂಬಿ ಮತ ಕೊಡಲು ಇವತ್ತು ದಲಿತರೇನು ದಡ್ಡರಾಗಿ ಉಳಿದಿಲ್ಲ. ಹೀಗೆ ಅಧಿಕಾರದಾಸೆಗಾಗಿ ಎಂತಹ ಸುಳ್ಳುಗಳನ್ನಾದರು ಹೇಳಬಲ್ಲ ಬಾಜಪ ಇದೀಗ ಮತ್ತೊಂದು ಸುಳ್ಳನ್ನು ಹೇಳಿದೆ. ಇತ್ತೀಚೆಗೆ ಗುಜರಾತಿನ ಊನಾದಲ್ಲಿ ನಡೆದ ದಲಿತ ಯುವಕರ ಮೇಲಿನ ಹಲ್ಲೆಯ ತರುವಾಯ ದೇಶದಾದ್ಯಂತ ಹೆಚ್ಚುತ್ತಾ ಹೋದ ಪ್ರತಿಭಟನೆಗಳಿಂದಾಗಿ ಮುಂದಿನ ವರ್ಷದ ರಾಜ್ಯ ವಿದಾನಸಭೆಗಳ ಚುನಾವಣೆಗಳಲ್ಲಿ ಎಲ್ಲಿ ದಲಿತರು ತಮ್ಮ ವಿರುದ್ದವಾಗಿ ನಿಲ್ಲುತ್ತಾರೊ ಎಂಬ ಭಯದಿಂದ ಮೋದಿಯವರ ಸರಕಾರ ದಲಿತರ ಬಗ್ಗೆ ಇನ್ನಷ್ಟು ಮೊಸಳೆ ಕಣ್ಣೀರು ಸುರಿಸಲು ತೊಡಗಿದೆ. ಇದರ ಭಾಗವಾಗಿಯೇ ಅದೀಗ, ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಖಾಸಗಿ ಕ್ಷೇತ್ರದ ಮೀಸಲಾತಿಯ ಮಸೂದೆಯನ್ನು, ಮತ್ತು ಸರಕಾರಿ ನೌಕರಿಯಲ್ಲಿ ಪದೋನ್ನತಿಯಲ್ಲಿನ ಮೀಸಲಾತಿಯ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮಾತಾಡುತ್ತಿದೆ. ಜೊತೆಗೆ ಕಳೆದೊಂದು ವರ್ಷದಿಂದ ಕೇಂದ್ರದ ಅಸಹಿಷ್ಣುತೆಯ ನೀತಿಯನ್ನು ವಿರೋಧಿಸುತ್ತಲೇ ಬಂದ ಕಲಾವಿದರ,ಬರಹಗಾರರನ್ನು ಸಮಾದಾನ ಪಡಿಸಲು ಅಖಿಲ ಭಾರತೀಯ ದಲಿತ ಬರಹಗಾರರ ಸಮಾವೇಶವೊಂದನ್ನು ಆಯೋಜಿಸುವ ಬಗ್ಗೆ ಹೇಳಿಕೆ ನೀಡಲಾಗಿದೆ. 

ಇಷ್ಟಲ್ಲದೆ ಸ್ವಯಂಘೋಷಿತ ಹಿಂದುತ್ವದ ವಕ್ತಾರ ಸಂಘಟನೆಗಳ ಸದಸ್ಯರುಗಳು ಗೋರಕ್ಷಣೆಯ ನೆಪದಲ್ಲಿ ದಲಿತರ ಅಲ್ಪಸಂಖ್ಯಾತರ ಮಲೆ ನಡೆಸುತ್ತಿರುವ ಅಮಾನವೀಯ ಹಲ್ಲೆಗಳ ವಿರುದ್ದ ದೇಶದಾದ್ಯಂತ ರೂಪುಗೊಳ್ಳುತ್ತಿರುವ ಜನಾಭಿಪ್ರಾಯದಿಂದ ಬೆದರಿದ ಮೋದಿಯವರು ಇದೀಗ ಕಪಟ ಗೋರಕ್ಷಕರ ವಿರುದ್ದ ಕಠಿಣಕ್ರಮ ಕೈಗೊಳ್ಳುವುದಾಗಿ ಹೇಳಿದ್ದು, ಈ ಸಂಬಂದ ರಾಜ್ಯಸರಕಾರಗಳಿಗೆ ಪತ್ರ ಬರೆದಿದ್ದಾರೆ. ಮೇಲ್ನೋಟಕ್ಕೆ ಇದೊಂದು ಒಳ್ಳೆಯ ಬೆಳವಣಿಗೆಯೆನಿಸಿದರೂ ಆಳದಲ್ಲಿ ಗೂಡಾರ್ಥವೇ ಬೇರೆ ಇದೆ. ಗೋರಕ್ಷಣೆಯ ಬಗ್ಗೆ ಮಾತಾಡುವ ನಾಯಕರು ದಲಿತರ ಆಹಾರ ಹಕ್ಕುಗಳನ್ನು ಸಂರಕ್ಷಿಸುವ ಮಾತಾಡುವುದಿಲ್ಲ. ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕಿರುವ ಆಹಾರ ಸೇವನೆಯ ಮೂಲಭೂತ ಹಕ್ಕಿನ ಬಗ್ಗೆ ಮಾತಾಡದೆ ಕಪಟ ಗೋರಕ್ಷಕರ ಬಗ್ಗೆ ಮಾತಾಡುವ ಮೋದಿ ತಾವು ದಲಿತರ ಮೇಲಿನ ಹಲ್ಲೆಯನ್ನು ತಡೆಯುವಲ್ಲಿ ನೂರಕ್ಕೆ ನೂರರಷ್ಟು ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಲು ವಿಫಲರಾಗಿದ್ದಾರೆ. ಜೊತೆಗೆ ದಲಿತರ ಮೇಲಿನ ಹಲ್ಲೆಗೆ ಗೋರಕ್ಷಣೆಯೊಂದೇ ಕಾರಣವೆಂಬಂತೆ ಮಾತಾಡಿದ್ದಾರೆ. ಅದರ ಹೊರತಾಗಿಯೂ ದಲಿತರ ಮೇಲೆ ನಿತ್ಯ ನಡೆಯುತ್ತಿರುವ ಇತರೇ ಕಾರಣಗಳ ಹಲ್ಲೆಗಳ ಬಗ್ಗೆ ಮೋದಿಯವರು ಮಾತಾಡುತ್ತಿಲ್ಲ. 

ಬಾಜಪ ತಾನು ಗಳಿಸಿರುವ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ಇಡೀ ರಾಷ್ಟ್ರದಾದ್ಯಂತ ತನ್ನ ಬೇರುಗಳನ್ನು ಬಿಡಲು ಬೇಕಾದ ಮತಗಳನ್ನು ಸೆಳೆಯಲು ಅಗತ್ಯವಿರುವ ಎಲ್ಲ ತಂತ್ರಗಳನ್ನೂ ಹೆಣೆಯುತ್ತಿದೆ. ಅದರ ಒಂದು ಭಾಗವಾಗಿಯೇ ಇವತ್ತು ಬಾಜಪ ಅಂಬೇಡ್ಕರ್ ಅವರನ್ನು ತನ್ನ ಆದರ್ಶವೆಂದು ಹೇಳುತ್ತಿರುವುದು ಮತ್ತು ದಲಿತ ಮೀಸಲಾತಿಯನ್ನು ಮುಂದುವರೆಸುವ ನಾಟಕದ ಮಾತಾಡುತ್ತಿರುವುದು. ಅದರ ಇಂತಹ ಗುಪ್ತಕಾರ್ಯಸೂಚಿಗಳ್ನು ವಿಫಲಗೊಳಿಸಲು ಇರುವ ದಾರಿಯೆಂದರೆ: ನನಗನಿಸಿದ ಹಾಗೆ ನಮ್ಮ ತಳಜಾತಿಯ ಯುವಕರುಗಳು ಬಲಪಂಥೀಯ ಸಂಘಟನೆಗಳ ತೆಕ್ಕೆಗೆ ಜಾರದಂತೆ ನೋಡಿಕೊಳ್ಳುವುದಾಗಿದೆ. ನಮ್ಮೆಲ್ಲ ಪ್ರಗತಿಪರ ಸಂಘಟನೆಗಳು ನಿರ್ದಿಷ್ಠ ಗುರಿಯೊಂದಿಗೆ ನಮ್ಮ ಯುವ ಪೀಳಿಗೆಯನ್ನು ಈ ದಿಸೆಯಲ್ಲಿ ತಯಾರು ಮಾಡಬೇಕಾಗಿದೆ. ಯಾಕೆಂದರೆ ಇವತ್ತಿನ ದೇಶದ ಒಟ್ಟು ಮತದಾರರ ಪೈಕಿ ಶೇಕಡಾ 50ರಷ್ಟಿರುವ ಯುವಜನತೆಯನ್ನು ಬಳಸಿಕೊಳ್ಳುತ್ತಿರುವ ಬಾಜಪವನ್ನು ತಡೆಯಲು ಇದೊಂದೇ ಮಾರ್ಗವೆಂದು ನನ್ನ ನಂಬಿಕೆ.

ಆಗ 12, 2016

ಮೇಕಿಂಗ್ ಹಿಸ್ಟರಿ: ಬಲವಂತ ಮತ್ತು ಲೂಟಿ

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
12/08/2016
ಬಿಕ್ಕಟ್ಟನ್ನು ಮತ್ತಷ್ಟು ತೀವ್ರವಾಗಿಸಿದ ಮತ್ತು ಬ್ರಿಟೀಷ್ ಆಳ್ವಿಕೆಯ ವಿರುದ್ಧ ಜನಸಮೂಹದ ಧಿಕ್ಕಾರವನ್ನಾಹ್ವಾನಿಸಿದ ಮತ್ತೊಂದು ಅಂಶವೆಂದರೆ, ಬ್ರಿಟೀಷರು ತಮಗೆ ಬೇಕಾಗಿದ್ದನ್ನು ತೆಗೆದುಕೊಳ್ಳುತ್ತಿದ್ದ ರೀತಿ. ಜನಸಮೂಹದ ಅತ್ಯಮೂಲ್ಯ ಚಿಕ್ಕ ಪುಟ್ಟ ಸಂಪನ್ಮೂಲಗಳನ್ನು ಅವರು ದೈಹಿಕವಾಗಿ ಲೂಟಿ ಮಾಡಿದ್ದಷ್ಟೇ ಅಲ್ಲದೆ, ಅದೇ ಸಮಯದಲ್ಲೆ ತಮಗೆ ಬೇಕಾದ ಕೂಲಿಯನ್ನೂ ಸಹಿತ ಬಲವಂತದಿಂದ ಮಾಡಿಸಿಕೊಳ್ಳುತ್ತಿದ್ದರು. 

ಮೈಸೂರು ಕುಸಿತ ಕಂಡ ಕೆಲದಿನಗಳಲ್ಲಿ ವೆಲ್ಲೆಸ್ಲಿ ಬರೆಯುತ್ತಾನೆ: “ಸೈನ್ಯದ ಅಧಿಕಾರಿಗಳು ದೇಶದ ಜನರನ್ನು ಕೂಲಿಯಾಳುಗಳಾಗಿ ಕೆಲಸ ಮಾಡುವಂತೆ ಒತ್ತಾಯಿಸುತ್ತಾರೆ, ಸೈನಿಕರು ಅಟ್ಟಾಡಿಸುತ್ತಾರೆ, ಕೆಲಸವಾದ ನಂತರ ಕೂಲಿ ಕಾಸನ್ನೂ ಕೊಡದೆ ಕಳಿಸಿಬಿಡುತ್ತಾರೆ ಎಂದು ಪೂರ್ಣಯ್ಯ ಹಲವಾರು ದೂರುಗಳನ್ನು ನೀಡಿದ್ದರು”. (264) 

ಕೆಲ ವರುಷಗಳ ನಂತರ ಮನ್ರೋ ಬರೆಯುತ್ತಾರೆ: “….ಕ್ಯಾಂಪಿನವರಲ್ಲಷ್ಟೇ ಅಲ್ಲ, ಎತ್ತು ಸಾಕಿದ ಎಲ್ಲರೂ ಮಾಡುತ್ತಿದ್ದ ಸಾಮಾನ್ಯ ಕೆಲಸವೆಂದರೆ ಕಂಪನಿಯ ಹೆಸರಿನಲ್ಲಿ ಸ್ಥಳೀಯರ ಬಳಿ ಬಲವಂತದಿಂದ ಹುಲ್ಲನ್ನು ತೆಗೆದುಕೊಳ್ಳುತ್ತಿದ್ದು, ಕೆಲವೊಮ್ಮೆ ಏನೂ ಹಣ ಕೊಡದೆ ತೆಗೆದುಕೊಳ್ಳುತ್ತಿದ್ದರು ಅಥವಾ ಹಣ ಕೊಟ್ಟರೂ ಅದು ಹುಲ್ಲಿನ ಬೆಲೆಗಿಂತ ಕಡಿಮೆಯಿರುತ್ತಿತ್ತು….” (265) 

ಮತ್ತೆ ಮನ್ರೋ ಬರೆಯುತ್ತಾನೆ “ಸ್ಥಳೀಯ ವ್ಯಕ್ತಿಗಳು ಮತ್ತವರ ಸಂಪತ್ತನ್ನು” ವಸಾಹತು ಸೈನ್ಯದ ತುಕಡಿಗಳು ಬಲವಂತದಿಂದ ವಶಕ್ಕೆ ತೆಗೆದುಕೊಳ್ಳುತ್ತಿದ್ದರು. “ಈ ಪಾಪದ ಕೆಲಸದ ಬಗ್ಗೆ ಬಹಳ ಹಿಂದಿನಿಂದಲೇ ದೂರುಗಳು ಬರುತ್ತಿದ್ದವು, ನಮ್ಮ ಶಕ್ತಿ ಹೆಚ್ಚಿದಂತೆ ಇದು ಹೆಚ್ಚುತ್ತಾ ಹೋಯಿತು….ಬಹಳಷ್ಟು ದೇಶಗಳಲ್ಲಿ ಒಂದು ಉತ್ತಮ ರಸ್ತೆಯು, ಅದರ ಹತ್ತಿರವಿರುವ ಹಳ್ಳಿಗಳಿಗೆ ಅನುಕೂಲಕರವಾಗಿದ್ದರೆ, ಈ ದೇಶದಲ್ಲದು ತದ್ವಿರುದ್ಧವಾಗಿಬಿಟ್ಟಿದೆ. ರಸ್ತೆಗೆ ಹತ್ತಿರವಿರುವ ಹಳ್ಳಿಗಳು ಸಾಮಾನ್ಯವಾಗಿ ತನ್ನ ಕೆಲವು ನಿವಾಸಿಗಳನ್ನು ಕಳೆದುಕೊಳ್ಳುತ್ತದೆ ಅಥವಾ ಅಲ್ಲಿನ ಕೆಲಸಗಾರರು ಕೂಲಿಗಳಾಗಿ ನೇಮಕವಾಗುತ್ತಾರೆ ಮತ್ತು ಕೆಲವು ಸಂದರ್ಭದಲ್ಲಿ ಇಡೀ ರೈತಾಪಿ ವರ್ಗ ಈ ಉಪಟಳದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಳ್ಳಿಯನ್ನು ತೊರೆದು ರಸ್ತೆಯಿಂದ ತುಂಬ ದೂರವಿರುವ ಹೊಸ ಜಾಗದಲ್ಲಿ ಬದುಕು ಕಟ್ಟಿಕೊಳ್ಳುತ್ತಾರೆ”. (266) 

ಈ ನೀತಿಗಳು ಟಿಪ್ಪು ಮತ್ತು ಹೈದರನ ನೀತಿಗಳಿಗಿಂತ ಸಂಪೂರ್ಣ ಭಿನ್ನವಾಗಿತ್ತು. ಈ ಇಬ್ಬರೂ ರಾಜರು ತಮ್ಮಾಳ್ವಿಕೆಯ ಬಹುಕಾಲವನ್ನು ಯುದ್ಧದಲ್ಲೇ ಕಳೆದರೂ ಕೂಡ, ತಮ್ಮ ಸೈನಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಜನರ ಮೇಲೆ ಶೋಷಣೆ ನಡೆಸಿದ ಉದಾಹರಣೆಗಳಿಲ್ಲ. 

ಮೇವು ಮತ್ತು ಗಂಡಸರನ್ನು ಇಷ್ಟು ಸುಲಭವಾಗಿ ದಕ್ಕಿಸಿಕೊಳ್ಳುವುದು ಸಾಧ್ಯವಾದ ಮೇಲೆ, ರಣಹದ್ದಿನಂತಹ ಬಿಳಿ ಗಂಡಸರ ಸೈನ್ಯ ಮಹಿಳೆಯರನ್ನು ಬಿಟ್ಟೀತೆ? 

ಭಾರತದ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದವರೊಬ್ಬರು 1858ರಲ್ಲಿ ಬರೆಯುತ್ತಾರೆ: “ವಾಸ್ತವವೆಂದರೆ, ಇಡೀ ಯುರೋಪಿನಲ್ಲಾಗಲೀ ಅಥವಾ ಅಮೆರಿಕಾದಲ್ಲಾಗಲೀ ಬ್ರಿಟೀಷ್ ಸೈನ್ಯದಷ್ಟು ಕ್ರೂರವಾದ ಸೈನ್ಯವಿಲ್ಲ. ಉಳಿದೆಡೆ ಶಿಸ್ತಾಗಿ ಮತ್ತು ಸಂಪೂರ್ಣವಾಗಿ ರದ್ದು ಮಾಡಲಾಗಿರುವ - ಲೂಟಿ, ಹಿಂಸೆ, ಸಾಮೂಹಿಕ ಹತ್ಯೆ – ಬ್ರಿಟೀಷ್ ಸೈನಿಕನ ಹೆಮ್ಮೆಯ ವಿಶೇಷಾಧಿಕಾರ, ಜನ್ಮದಾತ ಹಕ್ಕಾಗಿತ್ತು.” (267) 

ಋ. ರಾಜಕೀಯ ರೂಪ ಪಡೆದುಕೊಂಡ ಬಿಕ್ಕಟ್ಟು

ಹತ್ತೊಂಭತ್ತನೇ ಶತಮಾನದ ಎರಡನೇ ದಶಕದಲ್ಲಿ ಸರ್ವವ್ಯಾಪಿಯಾಗಿಬಿಟ್ಟಿದ್ದ ಬಿಕ್ಕಟ್ಟು ರಾಜಕೀಯ ರೂಪ ಪಡೆದುಕೊಳ್ಳುವುದಕ್ಕೆ ತಡವಾಗಲಿಲ್ಲ. 

ಜನರು, ಅದರಲ್ಲೂ ರೈತರು, ಈ ಶತ್ರುಗಳ ವಿರುದ್ಧ ಸಶಸ್ತ್ರ ಹೋರಾಟ ಕೈಗೊಂಡರು, ಮೂರನೇ ದಶಕದ ಪ್ರಾರಂಭದೊಂದಿಗೆ, ಗೆರಿಲ್ಲಾ ಯುದ್ಧ ಪ್ರಾರಂಭವಾಗಿಬಿಟ್ಟಿತು; ವಸಾಹತು ಶಕ್ತಿಗಳ ಮತ್ತವರ ಊಳಿಗಮಾನ್ಯ ಆಳುಗಳ ವಿರುದ್ಧ ಇದರ ತೀರ್ವತೆ ಮತ್ತು ಛಲ ಎಷ್ಟಿತ್ತೆಂದರೆ ಇದು ಆ ಸಮಯದಲ್ಲಿ ಭಾರತ ಕಂಡ ಅತಿ ದೊಡ್ಡ ಬಂಡಾಯ ಹೋರಾಟವಾಗಿತ್ತು, ಬಹುಶಃ ಬ್ರಿಟೀಷರು ಭಾರತದ ಮಣ್ಣ ಮೇಲೆ ಕಾಲಿಟ್ಟ ನಂತರ ಕಂಡ ಅತಿ ದೊಡ್ಡ ಬಂಡಾಯ. ಇದನ್ನು ನಗರ ಬಂಡಾಯ ಎಂದು ಕರೆಯಲಾಗುತ್ತದೆ, ಕಾರಣ ಈ ಬಂಡಾಯದ ಕೇಂದ್ರಬಿಂದು ಮಲೆನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರನ್ನೊಳಗೊಂಡ ನಗರ ಕಂದಾಯ ವಿಭಾಗವಾಗಿತ್ತು. 

ಜನಸಮೂಹದ ಸಶಸ್ತ್ರ ಹೋರಾಟ ವ್ಯಾಪಕವಾಗುತ್ತಿದ್ದಂತೆ ಆಳುವ ವರ್ಗಗಳಲ್ಲಿ ತೀರ್ವತರವಾದ ಬಿಕ್ಕಟ್ಟು ಪ್ರಾರಂಭವಾಯಿತು ಮತ್ತಿದು ವಸಾಹತುಶಾಹಿಗೆ ಕೈಗೊಂಬೆ ರಾಜರೊಂದಿಗಿನ ತನ್ನ ಮೈತ್ರಿಯನ್ನು ಮತ್ತಷ್ಟು ತೀಕ್ಷ್ಣ ದೃಷ್ಟಿಯೊಂದಿಗೆ ವಿಮರ್ಶಿಸುವಂತೆ ಮಾಡಿತು. 1831ರಲ್ಲಿ ಜನಸಮೂಹ ದಂಗೆಯೆದ್ದ ಕೆಲವೇ ವಾರಗಳಲ್ಲಿ, ಮೈಸೂರು ರಾಜನ ಆಳ್ವಿಕೆಯನ್ನು ಕೊನೆಗಾಣಿಸಿದ ಕಂಪನಿ, ಬೆಂಗಳೂರಿನಲ್ಲಿದ್ದ ತನ್ನ ಕಮಿಷನರ್ರುಗಳ ಮೂಲಕ ಇಡೀ ಸಾಮ್ರಾಜ್ಯದ ಆಳ್ವಿಕೆಯನ್ನು ವಹಿಸಿಕೊಂಡಿತು. ಹೀಗೆ ಮಾಡುವುದರ ಮೂಲಕ, ಜನರ ಒಳಿತಿಗಾಗಿ ಕೆಟ್ಟ ಆಳ್ವಿಕೆ ನೀಡಿದ ಕೈಗೊಂಬೆ ರಾಜನನ್ನು ನಾವು ಶಿಕ್ಷಿಸಿದ್ದೇವೆ ಎನ್ನುವ ಅಭಿಪ್ರಾಯ ಮೂಡುವಂತೆ ಮಾಡಿದರು. ವೆಲ್ಲೆಸ್ಲಿ 1799ರಲ್ಲಿ ಮಾಡಿದ ವ್ಯವಸ್ಥೆಗಳನ್ನು ಈಗ ಜಾರಿಗೆ ತರಲಾಗಿತ್ತು ಮತ್ತದನ್ನು ವಸಾಹತುಶಾಹಿ ಪರೀಕ್ಷಿಸುತ್ತಿತ್ತು. ಈ ‘ಸರಕಾರದ ಬದಲಾವಣೆಯ’ ಹಿಂದಿದ್ದ ಸಂಗತಿಗಳಲ್ಲೊಂದರ ಹಿಂದಿದ್ದ ವಾಸ್ತವದ ಬಗ್ಗೆ ಮನ್ರೋ ಚೆನ್ನಾಗಿ ವಿವರಿಸುತ್ತಾನೆ: “ಯುರೋಪಿಯನ್ನರಲ್ಲಿ ಭ್ರಷ್ಟಾಚಾರದ ಕೆಲವೊಂದು ಸಂದರ್ಭಗಳಿದ್ದವು…. ಭ್ರಷ್ಟಾಚಾರವಿದ್ದರೆ ಅದು ನಮ್ಮಲ್ಲಿರುವುದೇ ಸೊಗಸು (ಅಂದರೆ ರಹಸ್ಯವಾಗಿ) ಯಾಕೆಂದರೆ ಜನರು ಆ ಪಾಪದ ಆರೋಪವನ್ನು ಸ್ಥಳೀಯರ ಮೇಲೆಯೇ ಹೊರಿಸಿಬಿಡುತ್ತಾರೆ: ನಮ್ಮ ಬಗ್ಗೆ, ನಮ್ಮ ವ್ಯಕ್ತಿತ್ವದ ಬಗ್ಗೆ ಆ ಜನರಲ್ಲಿ ಉನ್ನತ ಉತ್ತಮ ಭಾವವೇ ನೆಲೆಸಿರುತ್ತದೆ, ಈ ಭಾವವೇ ನಮ್ಮಧಿಕಾರವನ್ನುಳಿಸಲು ಇರುವ ಶಕ್ತಿಯುತವಾದ ಬೆಂಬಲ”. (268) 

ನಿಗ್ರಹಕ್ಕಾಗಿ ಒಪ್ಪಂದದ ಮತ್ತೊಂದು ಕಲಮನ್ನು ಜಾರಿಗೊಳಿಸಲಾಯಿತು. ಆದರೆ ಹಾಗೆ ಮಾಡುವಾಗ, ಕೇಂದ್ರೀಕೃತ ಬ್ರಿಟೀಷ್ ಸರಕಾರ ಮತ್ತು ವಿವಿಧ ರಾಜ್ಯದ ರಾಜವಂಶಸ್ಥರ ನಡುವೆ ನಿಗ್ರಹಕ್ಕಾಗಿ ಒಪ್ಪಂದವನ್ನು ಜೀವಂತವಾಗಿಡಲಾಯಿತು. ಇದು 150 ವರುಷಗಳಿಗೂ ಹೆಚ್ಚು ಕಾಲ ಅಸ್ತಿತ್ವದಲ್ಲಿತ್ತು ಮತ್ತಿದನ್ನು ‘ಸ್ವತಂತ್ರ’ ಭಾರತದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ನಡುವಿನ ಸಂಬಂಧಕ್ಕಾಗಿ ಉಳಿಸಿಕೊಳ್ಳಲಾಯಿತು ಎಂದು ಹೇಳಲಾಯಿತು. ಸ್ವತಂತ್ರ ಭಾರತದ ರಾಜ್ಯಗಳ ರಾಜ್ಯಪಾಲರು ಹಳೆಯ ಬ್ರಿಟೀಷ್ ರೆಸಿಡೆಂಟರ ಪಾತ್ರವನ್ನಭಿನಯಿಸುತ್ತಿದ್ದಾರೆ ಮತ್ತು ಕೇಂದ್ರ ಸರಕಾರ ಅತಿ ದೊಡ್ಡ ಮಧ್ಯವರ್ತಿಯಾಗಿ ಕೆಲಸ ಮಾಡುತ್ತ ಭಾರತದ ಬ್ರಿಟೀಷ್ ಸರಕಾರದ ಬೂಟಿನಲ್ಲಿ ಕಾಲಿರಿಸಿದೆ. ನಿಗ್ರಹಕ್ಕಾಗಿ ಒಪ್ಪಂದ ಈಗಲೂ ಭಾರತದ ಸಂವಿಧಾನದ ಮೂಲಕ ಜಾರಿಯಲ್ಲಿದೆ, ಅದನ್ನು ಸಂಪೂರ್ಣವಾಗಿ ಮರೆತಿಲ್ಲ. ಅದು ಜೀವಂತವಿದೆ, ಭಾರತೀಯರ ಮೇಲೆ ಛಡಿ ಏಟು ನೀಡುತ್ತಿದೆ, ಕೇಂದ್ರ ಮತ್ತು ರಾಜ್ಯ ಸರಕಾರದ ನಡುವಿನ ಸಂಬಂಧದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಮೇಕಿಂಗ್ ಹಿಸ್ಟರಿಯ ಮೂರನೇ ಸಂಫುಟದಲ್ಲ ನೋಡೋಣ. 

ವರುಷಗಳ ಕಾಲದಿಂದ ಈ ಬಿಕ್ಕಟ್ಟನ್ನು ಸೃಷ್ಟಿಸಲು ನೆರವಾದ ಶತ್ರುವೇ ಮೈಸೂರಿನ ಸ್ವಾತಂತ್ರ್ಯ ಹರಣದಿಂದ ಹೆಚ್ಚಿನ ಲಾಭವನ್ನು ಮಾಡಿಕೊಂಡಿದ್ದು; ಪ್ರತಿಯೊಂದನ್ನೂ ರೆಸಿಡೆಂಟ್ ಮುಖಾಂತರ ನಿರ್ದೇಶಿಸಲಾಗುತ್ತಿತ್ತು, ರೆಸೆಡೆಂಟ್ ಪ್ರಮುಖ ಪಾತ್ರಧಾರಿಯಾಗಿದ್ದ. ಈಗ ರೆಸಿಡೆಂಟ್ ಬ್ರಿಟೀಷ್ ಲೂಟಿಯನ್ನು ಮರೆಮಾಚಿದ, ಕೈಗೊಂಬೆ ರಾಜನ ಕಡೆ ಕೈ ತೋರಿದ, ತನ್ನ ರಕ್ತವಂಟಿದ ಕೈಗಳನ್ನು ಮರೆಮಾಚುತ್ತ. ಆದರೂ ಬಂಡಾಯವನ್ನೆದುರಿಸಿದ ಬಿಳಿ ಅಧಿಕಾರಿಗಳು, ರೈತ ಸಮೂಹವನ್ನು ಶೋಷಿಸುತ್ತ, ನೂರಾರು ಸಂಖೈಯಲ್ಲಿ ಕೊಲ್ಲುತ್ತ, ರೆಸಿಡೆಂಟರು ಕಾಪಾಡಿದ್ದ ರಹಸ್ಯಕ್ಕೆ ದ್ರೋಹ ಮಾಡುತ್ತ, ರಾಜ್ಯದ ನಿಜವಾದ ವ್ಯಕ್ತಿತ್ವವನ್ನು ಮತ್ತು ವಸಾಹತು ಆಳ್ವಿಕೆಯ ಪ್ರೇತಕಳೆಯನ್ನು ಬಹಿರಂಗಗೊಳಿಸಿದರು.

ಮೇಕಿಂಗ್ ಹಿಸ್ಟರಿ ಎರಡನೇ ಸಂಪುಟದ ಮೊದಲನೇ ಭಾಗದ ಮುಕ್ತಾಯ

ಮುಂದಿನ ವಾರ: 
ಎರಡನೇ ಭಾಗ - ವಸಾಹತುಶಾಹಿಯ ವಿರುದ್ಧ ನಡೆದ ಖ್ಯಾತ ಸಶಸ್ತ್ರ ಹೋರಾಟ

ಆಗ 11, 2016

ಶಹಜನಾಪುರದಲ್ಲೊಂದು Snow Plough!

ಸಾಂದರ್ಭಿಕ ಚಿತ್ರ
11/08/2016
ಈ ಚಿತ್ರದಲ್ಲಿ ಕಾಣುತ್ತಿರುವ ವಾಹನದ ಹೆಸರು ‘ಸ್ನೋ ಪ್ಲೋ’ (Snow Plough). ಇದರ ಕೆಲಸವೇನೆಂದರೆ ಹಿಮ ಬೀಳುವ ಸಮಯದಲ್ಲಿ ರಸ್ತೆಯ ಮೇಲೆ ಬಿದ್ದಿರುವ ಹಿಮವನ್ನು ಬದಿಗೆ ಸರಿಸಿ ವಾಹನಗಳು ಓಡಾಡುವಂತೆ ಅನುವು ಮಾಡಿಕೊಡುವುದು. ಹಿಮ ಬೀಳುವ ಕೆನಡಾದಂತಹ ದೇಶಗಳಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಡುವ ಇಂತಹ ವಾಹನವನ್ನು ಭಾರತದಲ್ಲೂ ತರಿಸಲಾಗಿದೆ. ಎಲ್ಲೋ ಹಿಮಾಲಯದ ಕಡೆಗೆ ಉಪಯೋಗಿಸೋಕೆ ತರಿಸಿದ್ದಾರೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ನಲವತ್ತೈದು ಡಿಗ್ರಿಗಳಿಗಿಂತಲೂ ಅಧಿಕ ತಾಪಮಾನವಿರುವ ಹಿಮವೆಂದರೇನೆಂದೇ ಗೊತ್ತಿರದ ಉತ್ತರಪ್ರದೇಶದ ಶಹಜನಾಪುರದ ಮುನಿಸಿಪಾಲಿಟಿಯವರು ಇಂತಹ ವಾಹನವನ್ನು ತರಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯಾಗಿದೆ!

ಇಂತಹ ವಾಹನವನ್ನು ದೂರದೃಷ್ಟಿಯನ್ನು ನಿಜಕ್ಕೂ ಮೆಚ್ಚಬೇಕು! ಜಾಗತಿಕವಾಗಿ ತಾಪಮಾನ ಏರಿಕೆಯಾಗುತ್ತಿದೆ, ಮುಂದೊಂದು ದಿನ ‘ice age’ ಬರುವ ಸಾಧ್ಯತೆಗಳು ಹೆಚ್ಚಾಗುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಮುಂದೆಂದೋ ಬರುವ ‘ice age’ ದಿನಗಳಿಗೆ ಈಗಲೇ ತಯಾರಾಗಿಬಿಟ್ಟಿದೆ ಶಹಜನಾಪುರದ ಮುನಿಸಿಪಾಲಿಟಿ! ಅಷ್ಟರಳೊಗೆ ಈ ವಾಹನ ತುಕ್ಕು ಹಿಡಿದು ಬಿಡುವುದಿಲ್ಲವೋ ಎಂದೆಲ್ಲ ನೀವು ಪ್ರಶ್ನೆ ಮಾಡುವಂತಿಲ್ಲ!

ನಗರ ಪಾಲಿಕೆಯ ಇಂಜಿನಿಯರ್ ವರದಿಗಾರರು ಕೇಳಿದ ಪ್ರಶ್ನೆಗೆ ‘ಎಲ್ಲಾ ರೀತಿಯ ಸವಾಲುಗಳನ್ನೂ ಎದುರಿಸಲು ನಾವು ಸಿದ್ಧರಾಗಿರಬೇಕು’ ಎಂದು ಉತ್ತರ ಕೊಟ್ಟಿದ್ದಾರೆಂದು ವರದಿಯಾಗಿದೆ!

ಮುಂದಿನ ಟೆಂಡರಿನಲ್ಲಿ ಇನ್ಯಾವ್ಯಾವ ವಸ್ತುಗಳನ್ನು ತಂದು ಮುಂದಿನ ಜನಾಂಗವನ್ನು ‘ರಕ್ಷಿಸುತ್ತಾರೋ’ ಕಾದು ನೋಡಬೇಕಿದೆ.


ಸುಳ್ ಸುದ್ದಿ: ಜನರ ಹಣವನ್ನು ಹೆಂಗೆಲ್ಲ ನುಂಗಿ ಅರಗಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ವಿಶೇಷ ತರಬೇತಿಯನ್ನು ಶಹಜನಾಪುರ ನಗರ ಪಾಲಿಕೆ ಹಮ್ಮಿಕೊಂಡಿದೆ. ಆಸಕ್ತರು ನೇರವಾಗಿ ಪಾಲಿಕೆಯವರನ್ನು ಸಂಪರ್ಕಿಸಬೇಕು.

ಆಗ 10, 2016

ರಾಷ್ಟ್ರೀಯತೆ ಸಾಂಸ್ಕೃತಿಕ ರಾಜಕಾರಣ: ವಿಚಾರ ಸಂಕಿರಣ.

10/08/2016
ಮೂರು ವರುಷದಿಂದ ಮಂಗಳೂರಿನಲ್ಲಿ "ಜನನುಡಿ", ನುಡಿಯು ಸಿರಿಯಲ್ಲ ಬದುಕು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಅಭಿಮತ ಬಳಗವು ಈಗ ಬೆಂಗಳೂರಿಗೆ ಆಗಮಿಸಿದೆ! ಸ್ವಾತಂತ್ರೋತ್ಸವಕ್ಕೂ ಎರಡು ದಿನ ಮುಂಚೆ ಆಗಷ್ಟ್ ಹದಿಮೂರರಂದು ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ "ರಾಷ್ಟ್ರೀಯತೆ ಸಾಂಸ್ಕೃತಿಕ ರಾಜಕಾರಣ"ದ ಬಗ್ಗೆ ವಿಚಾರ ಸಂಕೀರ್ಣವನ್ನೇರ್ಪಡಿಸಿದೆ


ಹಿವ್ರೆ ಬಜಾರ್ ಗ್ರಾಮ - ಮಳೆನೆರಳಿನ ಗ್ರಾಮಗಳಿಗೆ ಒಂದು ಮಾದರಿ

ಹಿವ್ರೆ ಬಜಾರಿನಲ್ಲಿರುವ ಇಂಗುಗುಂಡಿ
ಆನಂದ ಪ್ರಸಾದ್
10/08/2016
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಒಂದು ಗ್ರಾಮ ಹಿವ್ರೆ ಬಜಾರ್. ಇಲ್ಲಿ ಬೀಳುವ ಮಳೆಯ ಪ್ರಮಾಣ ವಾರ್ಷಿಕ 300-400 ಮಿ. ಮೀ. ಇಷ್ಟು ಕಡಿಮೆ ಪ್ರಮಾಣದ ಮಳೆಯನ್ನು ಪಡೆದರೂ ಈ ಗ್ರಾಮ ಈ ವರ್ಷದ ಭೀಕರ ಬರಗಾಲದಲ್ಲಿಯೂ ಕುಡಿಯುವ ನೀರಿಗಾಗಿ ಟ್ಯಾಂಕರ್ ನೀರನ್ನು ಅವಲಂಬಿಸಲಿಲ್ಲ. ಈ ಪವಾಡ ಸಾಧ್ಯವಾದದ್ದು ಮಳೆ ನೀರಿನ ಕೊಯ್ಲು ಹಾಗೂ ಸಮರ್ಪಕ ಬೆಳೆ ಪದ್ಧತಿ ಅಳವಡಿಸಿಕೊಂಡಿರುವುದರಿಂದ. ಇಲ್ಲಿ ಪ್ರತಿ ವರ್ಷ ಡಿಸೆಂಬರ್ 31ರಂದು ಆ ವರ್ಷದ ಮಳೆಯ ಪ್ರಮಾಣ ಹಾಗೂ ನೀರಿನ ಲಭ್ಯತೆಯನ್ನು ಪರಾಮರ್ಶಿಸಲು ಗ್ರಾಮಸ್ಥರ ಸಭೆ ನಡೆಸಲಾಗುತ್ತದೆ. ಕಳೆದ ವರ್ಷ ಇಂಥ ಸಭೆಯಲ್ಲಿ ಬರಗಾಲದ ಪರಿಸ್ಥಿತಿಯನ್ನು ಮನಗಂಡು ಮುಂದಿನ ಮಳೆಗಾಲದವರೆಗೆ ಯಾವುದೇ ಬೆಳೆಯನ್ನು ಬೆಳೆಯದೇ ಇರುವ ತೀರ್ಮಾನ ತೆಗೆದುಕೊಳ್ಳಲಾಯಿತು. ಇದರಿಂದಾಗಿಯೇ ಇಡೀ ಔರಂಗಾಬಾದ್ ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ಆದರೂ ಹಿವ್ರೆ ಬಜಾರ್ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಆಗಲಿಲ್ಲ. ಈ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಯುವುದನ್ನು ನಿಷೇಧಿಸಲಾಗಿದೆ. ಹೀಗಾಗಿ 20ರಿಂದ 40 ಆಳದಲ್ಲಿ ತೆರೆದ ಬಾವಿಗಳಲ್ಲಿ ಬರಗಾಲದಲ್ಲಿಯೂ ಕುಡಿಯುವ ನೀರು ಲಭ್ಯ.

ಈ ಹಿವ್ರೆ ಬಜಾರ್ ಗ್ರಾಮದಲ್ಲಿ ಇಂಥ ಪವಾಡ ನಡೆಸಿದ ರೂವಾರಿ ಪೋಪಟ್ ರಾವ್ ಪವಾರ್. ಇವರ ಮುತುವರ್ಜಿ ಹಾಗೂ ಮಾರ್ಗದರ್ಶನದಿಂದ 20 ವರ್ಷಗಳ ಅವಧಿಯಲ್ಲಿ ಒಣಗಿ ಬೆಂಗಾಡಾಗಿದ್ದ ಹಿವ್ರೆ ಬಜಾರ್ ನಂದನವನವಾಗಿ ಹಸುರಿನಿಂದ ತುಂಬಿ ಕಂಗೊಳಿಸುತ್ತಿದೆ. ಹಿವ್ರೆ ಬಜಾರ್ ಇಂದು ಇಡೀ ದೇಶದಲ್ಲಿಯೇ ಇಂದು ಮಾದರಿ ಗ್ರಾಮವಾಗಿ ಗುರುತಿಸಿಕೊಂಡಿದೆ ಹಾಗೂ ಗಾಂಧೀಜಿಯವರ ಗ್ರಾಮ ಸ್ವರಾಜ್ಯವನ್ನು ನನಸಾಗಿಸಿದೆ. ಇಂದು ಹಿವ್ರೆ ಬಜಾರ್ ಗ್ರಾಮದಲ್ಲಿ 60 ಜನ ಮಿಲಿಯಾಧೀಶ್ವರ ರೈತರು ಇದ್ದಾರೆ. 1994ಕ್ಕೂ ಮೊದಲು ಈ ಗ್ರಾಮ ಬರಗಾಲ ಹಾಗೂ ನೀರಿನ ಕೊರತೆಯಿಂದ ಬಳಲಿ ಜನ ಕೆಲಸ ಅರಸಿ ನಗರಗಳಿಗೆ ಹೋಗುತ್ತಿದ್ದರು. ಹಾಗೆ ವಲಸೆ ಹೋದ ಸಾಕಷ್ಟು ಮಂದಿ ಇಂದು ನಗರಗಳಿಂದ ವಾಪಸ್ ಬಂದು ಗ್ರಾಮದಲ್ಲಿ ನೆಲೆಸಿದ್ದಾರೆ. ಪೋಪಟ್ ರಾವ್ ಅವರು ನಗರದಲ್ಲಿ ವಾಣಿಜ್ಯ ಸ್ನಾತಕೋತ್ತರ ಪದವಿ ಪಡೆದರೂ ನಗರ ಜೀವನದ ಆರಾಮ ಬದುಕಿನ ಸಾಧ್ಯತೆ ಇದ್ದರೂ ಮರಳಿ ಗ್ರಾಮಕ್ಕೆ ಬಂದು ಇಡೀ ಗ್ರಾಮದ ಚಿತ್ರಣವನ್ನೇ ಬದಲಿಸಿದರು. ಸರಕಾರಿ ಯೋಜನೆಯನ್ನು ಉಪಯೋಗಿಸಿಕೊಂಡು ಹಾಗೂ ಗ್ರಾಮಸ್ಥರ ಶ್ರಮದಾನದ ಮೂಲಕ ಗ್ರಾಮದಲ್ಲಿ ೪೦,೦೦೦ ಮಳೆ ನೀರು ತಡೆ ಹಿಡಿಯುವ ಕಣಿ ಹಾಗೂ ಬದುಗಳನ್ನು ನಿರ್ಮಿಸಲು ಮುಂದಾಳತ್ವ ವಹಿಸಿದರು. ಗ್ರಾಮದಲ್ಲಿ 10 ಲಕ್ಷಕ್ಕೂ ಅಧಿಕ ಮರಗಳನ್ನು ಬೆಳೆಸಿದರು. ಮಳೆನೀರು ತಡೆಹಿಡಿದು ನೀರಿಂಗಿಸುವ ತಡೆಗಟ್ಟ, ಇಂಗು ಗುಂಡಿ, ಕೆರೆಗಳ ಹೂಳೆತ್ತಿ ನೀರು ನಿಲ್ಲುವಂತೆ ಮಾಡಿ ಅಂತರ್ಜಲ ಹೆಚ್ಚುವಂತೆ ಮಾಡಿದರು. ಇದರ ಪರಿಣಾಮಾವಾಗಿ ಮೊದಲು ಬಹಳ ಆಳದಲ್ಲಿದ್ದ ನೀರಿನ ಮಟ್ಟ 15-20 ಅಡಿಗೆ ಏರಿತು. ಗ್ರಾಮದಲ್ಲಿ ಹೆಚ್ಚು ನೀರು ಬೇಡುವ ಭತ್ತ, ಬಾಳೆ, ಕಬ್ಬು ಮೊದಲಾದ ಬೆಳೆ ಬೆಳೆಯುವುದನ್ನು ನಿಷೇಧಿಸಿದರು. ಕಡಿಮೆ ನೀರು ಬಳಸಿ ಅಥವಾ ಹನಿ ನೀರಾವರಿ ಬಳಸಿ ಬೆಳೆಯುವ ಜೋಳ, ಬಾಜ್ರಾ, ನೀರುಳ್ಳಿ, ದ್ವಿದಳ ಧಾನ್ಯಗಳು, ಹೂವು, ಹಣ್ಣು, ತರಕಾರಿ ಬೆಳೆಗಳನ್ನು ಬೆಳೆಯುವ ಯೋಜನೆ ರೂಪಿಸಿ ಗ್ರಾಮಸ್ಥರ ಆದಾಯ ಹೆಚ್ಚುವಂತೆ ಮಾಡಿದರು. ಜೊತೆಗೇ ಹೈನುಗಾರಿಕೆ ಅಭಿವೃದ್ಧಿಪಡಿಸಿ ಇಂದು ಗ್ರಾಮದಲ್ಲಿ ಬರಗಾಲದ ಪರಿಸ್ಥಿತಿಯಲ್ಲಿಯೂ ದೈನಿಕ 4000 ಲೀ. ಹಾಲು ಉತ್ಪಾದನೆ ಆಗುವಂತೆ ಆಗಿದೆ. ಹೈನುಗಾರಿಕೆಗೆ ಬೇಕಾಗುವ ಹುಲ್ಲು ಗ್ರಾಮದಲ್ಲಿಯೇ ಉತ್ಪಾದನೆಯಾಗುತ್ತದೆ.

ಇಷ್ಟೆಲ್ಲಾ ಆಗಿರುವುದು ಕೇವಲ 300-400 ಮಿ. ಮೀ. ವಾರ್ಷಿಕ ಮಳೆಯ ನೀರನ್ನು ಇಂಗಿಸಿ ತೆರೆದ ಬಾವಿ, ಕೆರೆಗಳಲ್ಲಿ ಲಭ್ಯವಾಗುವ ನೀರಿನಿಂದ ಮಾತ್ರವೇ ಹೊರತು ಯಾವುದೇ ಅಣೆಕಟ್ಟಿನ ನೀರು ಅಥವಾ ಕಾಲುವೆಗಳ ನೀರಿನಿಂದ ಅಥವಾ ಕೊಳವೆ ಬಾವಿ ನೀರಿನಿಂದ ಅಲ್ಲ. ಇದನ್ನೆಲ್ಲ ಸಾಧಿಸಲು ಪೋಪಟ್ ರಾವ್ ಪವಾರ್ ಅವರಿಗೆ ಸ್ಫೂರ್ತಿ ಹಾಗೂ ಮಾದರಿ ಹಿವ್ರೆ ಬಜಾರ್ ಗ್ರಾಮದಿಂದ 35 ಕಿ.ಮೀ. ದೂರದಲ್ಲಿರುವ ಅಣ್ಣಾ ಹಜಾರೆಯವರ ರಾಲೇಗಾವ್ ಸಿದ್ಧಿ ಗ್ರಾಮದಲ್ಲಿ ಅವರು ನೀರಿಂಗಿಸುವಿಕೆ ಹಾಗೂ ಮರ ಬೆಳೆಸಿ ಸಾಧಿಸಿದ ಯಶಸ್ಸು. ಕರ್ನಾಟಕದಲ್ಲಿ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಇರುವ ತಡೆ, ನೀರಿಗಾಗಿ ಹೋರಾಟ, ನ್ಯಾಯಾಧಿಕರಣದ ಕರ್ನಾಟಕಕ್ಕೆ ಅನುಕೂಲಕರವಲ್ಲದ ಮಧ್ಯಂತರ ತೀರ್ಪು, ಎತ್ತಿನ ಹೊಳೆ ಯೋಜನೆಗಾಗಿ ನಡೆಯುತ್ತಿರುವ ಹೋರಾಟ, ಅದಕ್ಕಾಗಿ ವೆಚ್ಚವಾಗುವ ಅಪಾರ ಹಣ ಇವುಗಳನ್ನೆಲ್ಲ ನೋಡಿದಾಗ ನಮ್ಮ ರಾಜ್ಯದ ಮಳೆ ಕಡಿಮೆ ಬೀಳುವ ಹಾಗೂ ಆಣೆಕಟ್ಟು ಹಾಗೂ ಕಾಲುವೆ ನೀರು ಲಭ್ಯವಿಲ್ಲದ ಪ್ರದೇಶಗಳಿಗೆ ಮಹಾರಾಷ್ಟ್ರದ ರಾಲೇಗಾವ್ ಸಿದ್ಧಿ ಹಾಗೂ ಹಿವ್ರೆ ಬಜಾರ್ ಗ್ರಾಮಗಳು 300-500 ಮೀ.ಮೀ. ವಾರ್ಷಿಕ ಮಳೆಯನ್ನು ಪಡೆದೂ ನೀರಿನ ಮಿತವ್ಯಯ ಹಾಗೂ ಮರ ಬೆಳೆಸಿ ಸಾಧಿಸಿದ ಯಶಸ್ಸು ಮಾದರಿಯೆನಿಸುತ್ತದೆ. ಏಕೆಂದರೆ ಕರ್ನಾಟಕದಲ್ಲಿ 500 ಮಿ.ಮೀ.ಗಿಂಥ ಕಡಿಮೆ ಮಳೆಯಾಗುವ ಜಿಲ್ಲೆಗಳು ಇಲ್ಲ (ಬರಗಾಲದ ವರ್ಷಗಳನ್ನು ಹೊರತುಪಡಿಸಿ).

ರಾಲೇಗಾವ್ ಸಿದ್ಧಿ ಹಾಗೂ ಹಿವ್ರೆ ಬಜಾರ್ ಗ್ರಾಮಗಳಲ್ಲಿ ನಡೆದ ಮಳೆ ನೀರಿಂಗಿಸುವ ಹಾಗೂ ಹಸುರು ಬೆಳೆಸುವ ಯೋಜನೆಯನ್ನು ಅನುಸರಿಸಲು ಕೋಟ್ಯಂತರ ರೂಪಾಯಿಗಳ ಅಗತ್ಯವಿಲ್ಲ. ಸರಕಾರದ ಯೋಜನೆಗಳನ್ನು ಬಳಸಿಕೊಂಡು ಮತ್ತು ಗ್ರಾಮೀಣ ಜನರ ಶ್ರಮದಾನದಿಂದ ಇಂಥ ಯೋಜನೆಗಳನ್ನು ಗ್ರಾಮಸ್ಥರೇ ನಡೆಸಲು ಸಾಧ್ಯವಿದೆ. ನೂರಾರು ಅಥವಾ ಸಾವಿರಾರು ಕೋಟಿ ರೂಪಾಯಿಗಳ ಯೋಜನೆ ಮುಗಿಯಲು ಹಲವಾರು ವರ್ಷಗಳನ್ನೇ ತೆಗೆದುಕೊಳ್ಳುವ ಕಾಮಗಾರಿಗಳ ಬದಲು ಅಥವಾ ನ್ಯಾಯಾಧಿಕರಣದ ತೀರ್ಪಿಗಾಗಿ ಕಾಯುತ್ತಾ ಹಲವಾರು ವರ್ಷಗಳನ್ನೇ ವ್ಯರ್ಥ ಮಾಡುವ ಬದಲು ಹಿವ್ರೆ ಬಜಾರ್ ಗ್ರಾಮದ ಯಶಸ್ಸನ್ನು ನಮ್ಮ ರಾಜ್ಯದ ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ನಮ್ಮ ರೈತ ಸಂಘಟನೆಗಳು, ಕನ್ನಡ ಸಂಘಟನೆಗಳು ಜನರಲ್ಲಿ ಅರಿವನ್ನು ಮೂಡಿಸುವ ಅಗತ್ಯ ಇದೆ. ನಮ್ಮ ಮಾಧ್ಯಮಗಳು ಈ ವಿಚಾರವಾಗಿ ನಿರಂತರವಾಗಿ ಜಾಗೃತಿ ರೂಪಿಸುವ ಅಗತ್ಯ ಇದೆ.

ಗೋವಾ ವಿದಾನಸಭಾ ಚುನಾವಣೆಗಳು: ಅಖಾಡಕ್ಕಿಳಿಯಲಿರುವ ಆಮ್ ಆದ್ಮಿ ಪಕ್ಷ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
10/08/2016
ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿದಾನಸಭೆಗಳ ಚುನಾವಣೆಗಳು ತಮ್ಮದೇ ಆದ ರಾಜಕೀಯ ಕಾರಣಗಳಿಗಾಗಿ ಮಾಧ್ಯಮಗಳಲ್ಲಿ ಪ್ರಾಮುಖ್ಯತೆ ಪಡೆದು ಚರ್ಚಿತವಾಗುತ್ತಿದ್ದರೆ, ಗೋವಾದಂತಹ ಪುಟ್ಟ ರಾಜ್ಯಗಳಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆಯಾಗಲಿ ಅವು ರಾಷ್ಟ್ರ ರಾಜಕಾರಣಕ್ಕೆ ನೀಡಬಲ್ಲ ಕೊಡುಗೆಗಳ ಬಗ್ಗೆಯಾಗಲಿ ನಾವ್ಯಾರು ಗಂಭೀರವಾಗಿ ಯೋಚಿಸುತ್ತಿಲ್ಲವೆಂಬುದು ವಿಷಾದದ ಸಂಗತಿ. ರಾಷ್ಟ್ರದ ಸಂಸತ್ತಿಗೆ ಅತಿ ಹೆಚ್ಚು ಸಂಸದರನ್ನು ನೀಡುವ ಉತ್ತರಪ್ರದೇಶಕ್ಕಾಗಲಿ, ಪ್ರದಾನಿಯವರ ತವರು ರಾಜ್ಯ ಗುಜರಾತಿಗಾಗಲಿ, ದೆಹಲಿಯ ಸನಿಹದಲ್ಲಿರುವ ಪಂಜಾಬಿಗಾಗಲಿ ನೀಡುವ ರಾಜಕೀಯ ಪ್ರಾದಾನ್ಯತೆಯಲ್ಲಿ ಒಂದಿಷ್ಟನ್ನಾದರು ನಾವು ಗೋವಾದಂತಹ ಪುಟ್ಟ ರಾಜ್ಯಗಳಿಗೆ ನೀಡದೇ ಹೋದರೆ ‘ಭಿನ್ನತೆಯಲ್ಲಿ ಏಕತೆ’ ಎನ್ನುವ ನಮ್ಮ ಘೋಷವಾಕ್ಯಕ್ಕೆ ಯಾವ ಅರ್ಥವೂ ಇರುವುದಿಲ್ಲ. ಅದರಲ್ಲೂ ಈಗ ರಾಷ್ಟ್ರದ ರಕ್ಷಣಾ ಮಂತ್ರಿಯಾಗಿರುವವರು ಗೋವಾದವರು ಎಂಬ ಹಿನ್ನೆಲೆಯಲ್ಲಾದರು ಗೋವಾದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಹೊಂದಿರುವುದು ಅಗತ್ಯವಾಗಿದೆ. ಗೋವಾ ಮತ್ತು ಕರ್ನಾಟಕದ ನಡುವೆ ಭುಗಿಲೆದ್ದಿರುವ ಮಹಾದಾಯಿ ನದಿನೀರಿನ ಹಂಚಿಕೆಯ ವಿವಾದದ (ಕಳಸಾ ಬಂಡೂರಿ ಹೋರಾಟ) ಈ ಸನ್ನಿವೇಶದಲ್ಲಿ ಗೋವಾದ ರಾಜಕಾರಣದಲ್ಲಾಗಬಹುದಾದ ಸಣ್ಣಪುಟ್ಟ ಕದಲಿಕೆಗಳು ಕರ್ನಾಟಕದ ಮಟ್ಟಿಗೆ ಮುಖ್ಯವಾಗುವ ದೃಷ್ಠಿಯಿಂದಲಾದರು ನಾವು ಕನ್ನಡಿಗರು ಗೋವಾದ ಪ್ರಸಕ್ತ ರಾಜಕೀಯದ ಬೆಳವಣಿಗೆ ಮತ್ತು ಬದಲಾವಣೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುವುದು ಅಗತ್ಯವೆಂಬ ನನ್ನ ಆಶಯವೇ ಈ ಬರಹಕ್ಕೆ ಮುಖ್ಯ ಕಾರಣವೆಂದರೆ ತಪ್ಪಾಗಲಾರದು.

1985 ರ ನಂತರ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನಗಳನ್ನು ಪಡೆದ ನಂತರ ಗೋವಾದ ರಾಜಕೀಯ ಚಿತ್ರಣ ಬದಲಾಗುತ್ತ ಹೋಯಿತು. ಅಲ್ಲಿಯವರೆಗಿದ್ದ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಅಧಿಪತ್ಯ ಇಲ್ಲವಾಗುತ್ತ ಕಾಂಗ್ರೆಸ್ ಮತ್ತು ಬಾಜಪಗಳ ನಡುವೆ ನೇರ ಹಣಾಹಣಿಯ ಚುನಾವಣಾ ಕಾಳಗ ಶುರುವಾಯಿತು. ಈ ಎರಡೂ ರಾಷ್ಟ್ರೀಯ ಪಕ್ಷಗಳು ಒಂದೊಂದು ಮೈತ್ರಿಕೂಟವನ್ನು ರಚಿಸಿಕೊಂಡೇ ಚುನಾವಣೆ ಎದುರಿಸುತ್ತ ಬಂದವು. ತನ್ನ ಮೊದಲಿನ ಪ್ರಾಬಲ್ಯ ಕಳೆದುಕೊಂಡ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ಆಗಾಗ ತನ್ನ ಮೈತ್ರಿಕೂಟವನ್ನು ಬದಲಾಯಿಸುತ್ತ ಗೋವಾ ರಾಜಕಾರಣದ ಏಳು ಬೀಳುಗಳನ್ನು ನಿಯಂತ್ರಿಸತೊಡಗಿತು. ಇವುಗಳ ಜೊತೆಗೆ ಶರದ್‍ಪವಾರರ ಎನ್.ಸಿ.ಪಿ. ಗೋವಾ ವಿಕಾಸ್ ಪಕ್ಷಗಳು ಕೂಡ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದವು.

ಇನ್ನು 2005ರಿಂದ 2012ರವರೆಗು ಅಧಿಕಾರ ನಡೆಸಿದ ಕಾಂಗ್ರೆಸ್ 2012 ರಲ್ಲಿ ಬಾಜಪ ಮೈತ್ರಿಕೂಟದ ಎದುರು ಸೋಲನ್ನಪ್ಪಿ ಕೂರಬೇಕಾಯಿತು. ಗೋವಾದ ಒಟ್ಟು 40 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳನ್ನು( ಬಾಜಪ-21, ಗೋಮಾಂತಕ್ ಪಕ್ಷ-3) ಗೆದ್ದ ಬಾಜಪ ಇಂದಿನ ರಕ್ಷಣಾ ಮಂತ್ರಿಯಾಗಿರುವ ಶ್ರೀ ಮನೋಹರ್ ಪರಿಕ್ಕರ್ ಅವರನ್ನು ತನ್ನ ಮುಖ್ಯಮಂತ್ರಿಯನ್ನಾಗಿಸಿತು. ಕೇವಲ 9 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕೂರಬೇಕಾಗಿ ಬಂತು. ನಂತರ 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ದಿಸಿ ಗೆದ್ದ ಮನೋಹರ್ ಪಣಿಕ್ಕರ್ ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಆಗ ತೆರವಾದ ಮುಖ್ಯಮಂತ್ರಿಯ ಕುರ್ಚಿಯನ್ನು ಅಲಂಕರಿಸಿದವರು ಮನೋಹರ್ ಅವರ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ಶ್ರೀ ಲಕ್ಷಿಕಾಂತ್ ಪರೇಸ್ಕರ್. ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಜಿ ಪ್ರಚಾರಕರಾಗಿದ್ದವರು. 

ಮುಂದಿನ ವರ್ಷದ ಚುನಾವಣೆಯನ್ನು ಎದುರಿಸಲು ಬಾಜಪ ತಮ್ಮ ಮುಖ್ಯಮಂತ್ರಿಯಾದ ಲಕ್ಷ್ಮಿಕಾಂತ್ ಅವರನ್ನೇ ಅವಲಂಬಿಸುವ ಪರಿಸ್ಥಿತಿಯಿದೆ. ಆದರೆ ಪಕ್ಷದ ಆಂತರಿಕ ವಲಯದಲ್ಲಿ ಇವತ್ತಿಗೂ ಮನೋಹರ್ ಪಣಿಕ್ಕರ್ ಅವರ ಬಗ್ಗೆಯೇ ಹೆಚ್ಚು ಒಲವಿದ್ದರೂ, ಅವರು ಹಿಂದಿರುಗಿ ರಾಜ್ಯ ರಾಜಕಾರಣಕ್ಕೆ ಬರುವುದನ್ನು ಪಕ್ಷವಾಗಲಿ, ಅವರಾಗಲಿ ಒಪ್ಪಲು ಸಾದ್ಯವಿಲ್ಲ. ಹೀಗಾಗಿ ಕಳೆದೆರಡು ವರ್ಷಗಳಿಂದ ಮುಖ್ಯಮಂತ್ರಿಯಾಗಿರುವ ಪರೇಸ್ಕರ್ ಅವರೇ ಬಾಜಪವನ್ನು ಮುನ್ನಡೆಸಲಿದ್ದು ಸ್ವತ: ಮನೋಹರ್ ಪಣಿಕ್ಕರ್ ಅವರೇ ಇದನ್ನು ಖಚಿತ ಪಡಿಸಿದ್ದಾರೆ. ಇನ್ನು ಬಾಜಪದ ಮೈತ್ರಿಕೂಟದಲ್ಲಿ ಯಾವ ಬದಲಾವಣೆಯೂ ಆಗುವ ಸಾದ್ಯತೆಗಳಿಲ್ಲವಾಗಿ ಅದು ಯಾವುದೆ ಭಿನ್ನಮತಗಳಿಲ್ಲದೆ ಚುನಾವಣೆ ಎದುರಿಸಲು ಸಜ್ಜಾಗಿದೆ. ಸದ್ಯಕ್ಕೆ ಅದಕ್ಕಿರುವ ದೊಡ್ಡ ತೊಡಕೆಂದರೆ ಆಡಳಿತ ವಿರೋಧಿ ಅಲೆಯ ಭಯವಷ್ಟೆ!

ಇನ್ನು ಕಾಂಗ್ರೆಸ್ ಕೂಡ ತನ್ನ ಚುನಾವಣಾ ಸಿದ್ದತೆಗಳನ್ನು ಮಾಡಿಕೊಳ್ಳಲು ಪ್ರಾರಂಬಿಸಿದ್ದು, ಈ ಬಾರಿ ಅದು ಯಾವ ಪಕ್ಷಗಳ ಜೊತೆಗು ಮೈತ್ರಿ ಮಾಡಿಕೊಳ್ಳದಿರಲು ನಿರ್ದರಿಸಿದೆ. ಹಾಗೊಂದು ವೇಳೆ ಮೈತ್ರಿಯ ಅನಿವಾರ್ಯತೆ ಎದುರಾದರೆ ಬ್ಲಾಕ್ ಮಟ್ಟದಲ್ಲಿ ಪಕ್ಷದ ನಾಯಕರು ತೆಗೆದುಕೊಳ್ಳಬಹುದಾದ ತೀರ್ಮಾನಗಳನ್ನು ಆಧರಿಸಿಯೇ ತೆಗೆದುಕೊಳ್ಳಲಾಗುವುದೆಂದು ಅದರ ಕೇಂದ್ರ ನಾಯಕರು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಮಾಂಡೋವಿ ನದಿಯಿಂದ ಕ್ಯಾಸೀನೊಗಳನ್ನು ಸ್ಥಳಾಂತರಿಸುವ ವಿವಾದವನ್ನು ಕೈಗೆತ್ತಿಕೊಂಡಿರುವ ಕಾಂಗ್ರೆಸ್ ಬಾಜಪವು ಗೋವಾದ ಕ್ಯಾಸಿನೋ ಮಾಲೀಕರ ಜೊತೆ ಕೈ ಜೋಡಿಸಿ ಸರಕಾರ ನಡೆಸುತ್ತಿದ್ದಾರೆಂಬ ಗಂಭೀರ ಆರೋಪವನ್ನು ಸಹ ಮಾಡಿದೆ. ಗೋವಾ ಪ್ರದೇಶ ಕಾಂಗ್ರೆಸ್ ಅದ್ಯಕ್ಷ ಲೂಸಿನೊ ಫೆಲೆರೋ ಈ ಬಗ್ಗೆ ಮಾಧ್ಯಮಗಳ ಮೂಲಕ ತಮ್ಮ ಹೋರಾಟವನ್ನು ನಡೆಸುತ್ತಿದ್ದಾರೆ.

ಇವೆಲ್ಲಕ್ಕಿಂತ ಈ ಬಾರಿ ಗೋವಾ ಚುನಾವಣೆಗಳ ಮುಖ್ಯವಾದ ಅಂಶವೆಂದರೆ ದೆಹಲಿಯ ಗದ್ದುಗೆಯನ್ನು ಹಿಡಿದು ಕೂತಿರುವ ಆಮ್ ಆದ್ಮಿ ಪಕ್ಷದ ಶ್ರೀ ಅರವಿಂದ್ ಕೇಜ್ರೀವಾಲ್ ಗೋವಾದ ವಿದಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಭ್ಯರ್ಥಿಗಳನ್ನು ಹಾಕುವುದಾಗಿ ಘೋಷಿಸಿರುವುದಾಗಿದೆ. ಬಹುಶ: ಅಧಿಕಾರ ರೂಢ ಬಾಜಪಕ್ಕೆ ತಲೆ ನೋವಾಗಿರುವುದೇ ಇದು. ಇತ್ತೀಚೆಗೆ ಈ ಸಂಬಂದವಾಗಿ ಗೋವಾದಲ್ಲಿ ಒಂದು ರ್ಯಾಲಿಯನ್ನು ಉದ್ದೇಶಿಸಿ ಮಾತಾಡಿದ ಅರವಿಂದ್ ಕೇಜ್ರೀವಾಲರು 40 ಕ್ಷೇತ್ರಗಳ ಪೈಕಿ 35 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿ, ಹಿಂದೆ ದೆಹಲಿಯಲ್ಲಿ ಮಾಡಿದಂತೆ ಮನೆಮನೆಗೆ ತೆರಳಿ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ನೀಡುವ ಪ್ರಚಾರ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಗೋವಾದ ಸ್ಥಳೀಯ ಸಮಸ್ಯೆಗಳ ಕುರಿತಾದ ಗೋವಾ ಸಂವಾದ್ ಎನ್ನುವ ಕೈಪಿಡಿಯನ್ನೂ ಈಗಾಗಲೇ ಸಿದ್ದಪಡಿಸುವ ಕಾರ್ಯ ನಡೆಯುತ್ತಿದೆ. ಗೋವಾದ ಸಾಕ್ಷರತೆ ಪ್ರಮಾಣ ಶೇಕಡಾ 88.70 ಇದ್ದು ಆಮ್ ಆದ್ಮಿ ಪಕ್ಷ ತನ್ನ ಪ್ರಣಾಳಿಕೆಗಳ ಮೂಲಕ ಹೆಚ್ಚು ಜನರನ್ನು ತಲುಪುವ ಸಾದ್ಯತೆ ಹೆಚ್ಚಾಗಿದೆ. ಆಮ್ ಆದ್ಮಿ ಪಕ್ಷದ ನಿಲುವನ್ನು ಮೆಚ್ಚಬಲ್ಲ ಜನರು ಗೋವಾದಲ್ಲಿ ಹೆಚ್ಚಿದ್ದರು, ಅದು ಈವರೆಗೆ ದೆಹಲಿಯಲ್ಲಿ ನಡೆಸಿದ ಆಡಳಿತದ ವೈಖರಿಯನ್ನು ಗಮನಿಸಿರುವ ಗೋವಾದ ಮತದಾರರು ಬಹಳ ಯೋಚಿಸಿಯೇ ಈ ತೀರ್ಮಾನಕ್ಕೆ ಬರಲಿದ್ದಾರೆ. 2017 ರಲ್ಲಿಯೇ ಅಧಿಕಾರ ಹಿಡಿಯಲು ಕಷ್ಟವೆಂಬುದನ್ನು ಅರಿತಿರುವ ಕೇಜ್ರೀವಾಲರು 2019ರ ಲೋಕಸಭಾ ಚುನಾವಣೆಗಾಗಿ ಈ ಚುನಾವಣೆಯನ್ನು ಪೂರ್ವಬಾವಿ ಸಿದ್ದತಾ ಚುನಾವಣೆಯನ್ನಾಗಿ ಬಳಸಿಕೊಳ್ಳಲು ನಿರ್ದರಿಸಿದಂತಿದೆ. ಆದರೆ ರಾಜಕಾರಣದಲ್ಲಿ ಒಂದು ವರ್ಷದ ಅವಧಿ ದೊಡ್ಡದು. ಹಾಗಾಗಿ ಮುಂದಿನ ಚುನಾವಣೆಯ ಹೊತ್ತಿಗೆ ಗೋವಾದ ರಾಜಕಾರಣದಲ್ಲಿ ಆಗಬಹುದಾದ ಬೆಳವಣಿಗೆಗಳನ್ನಾಗಲಿ, ಬೀಸಬಹುದಾದ ಹೊಸಗಾಳಿಯ ಬಗೆಗಾಗಲಿ ನಾವೀಗಲೇ ಭವಿಷ್ಯ ನುಡಿಯಲಾಗುವುದಿಲ್ಲ.

ಕೊನೆಯದಾಗಿ: ಕರ್ನಾಟಕದ ಉತ್ತರ ಭಾಗದಲ್ಲಿ ನಡೆಯುತ್ತಿರುವ ಕಳಸಾ ಬಂಡೂರಿ ಹೋರಾಟದ ಹಿನ್ನೆಲೆಯಲ್ಲಿ ನೋಡಿದರೆ ಬಾಜಪ ಅಥವಾ ಕಾಂಗ್ರೆಸ್ ಯಾವುದೇ ಪಕ್ಷ ಅಲ್ಲಿ ಅಧಿಕಾರಕ್ಕೆ ಬಂದರೂ ಮಹಾದಾಯಿ ನದಿ ನೀರಿನ ಹಂಚಿಕೆಗೆ ನ್ಯಾಯಾಧಿಕರಣದ ಆಚೆಗೊಂದು ಪರಿಹಾರ ಸಿಗುತ್ತದೆಯೆಂದು ನಂಬಲು ಸಾದ್ಯವಿಲ್ಲ. ಯಾಕೆಂದರೆ ಬಾಜಪವಾಗಲಿ, ಕಾಂಗ್ರೆಸ್ಸಾಗಲಿ ಮಹದಾಯಿ ನದಿಯನ್ನು ಮುಂದಿನ ಚುನಾವಣೆಯ ಮುಖ್ಯ ವಿಷಯವನ್ನಾಗಿ ಮಾಡಿ ಗೋವಾ ಜನರ ಮತಗಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಗೋವಾದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೇರಿದರೂ ನಾವು ನ್ಯಾಯಾಲಯದ ಮೂಲಕವೇ ಹೋರಾಡಿ ನೀರು ಪಡೆಯಬೇಕಾಗಿದೆ. ಗೋವಾ ಕನ್ನಡಿಗರು ತಮ್ಮದೇ ಆದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ರಾಜ್ಯದ ಹಿತಕಾಯುವ ಪಕ್ಷಕ್ಕೆ ನಮ್ಮ ಮತವೆಂದು ಘೋಷಿಸುವ ಸ್ಥಿತಿಯಲ್ಲಿ ಇಲ್ಲ. ಗೋವಾದ ಕನ್ನಡಿಗರಿಗೆ ಇವತ್ತಿಗೂ ಶಾಶ್ವತ ವಸತಿ ಸೌಲಭ್ಯವಾಗಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಲಭ್ಯತೆಯಾಗಲಿ ಇಲ್ಲದೆ ಅತಂತ್ರ ಸ್ತಿತಿಯಲ್ಲಿರುವುದರಿಂದ ನಾವು ಅವರಿಂದ ಅಂತಹದೊಂದು ನಿರೀಕ್ಷೆ ಇಟ್ಟುಕೊಳ್ಳುವುದು ಕೂಡ ತಪ್ಪಾಗುತ್ತದೆ. ಹಾಗಾಗಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಗಳ ನಂತರ ಮಹಾದಾಯಿ ಸಮಸ್ಯೆ ಬಗೆ ಹರಿದು ಬಿಡುತ್ತದೆಯೆಂದು ನಂಬುವುದು ಮೂರ್ಖತನವಗುತ್ತದೆ. 

ಆಗ 9, 2016

ದಲಿತರು ತೋರಿದ ‘ಗುಜರಾತ್ ಮಾದರಿ’

ಡಾ. ಅಶೋಕ್. ಕೆ. ಆರ್
09/08/2016
ಕಳೆದ ಐದಾರು ವರುಷಗಳಿಂದ ‘ಗುಜರಾತ್ ಮಾದರಿ’ ಎಂಬ ಪದವನ್ನು ತೀರ ಸವಕಲಾಗುವಷ್ಟು ಬಳಸಲಾಗಿದೆ. ಕರ್ನಾಟಕದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೂ ಗುಜರಾತ್ ಮಾದರಿಯನ್ನು ಅಳವಡಿಸಿಕೊಳ್ಳಲಾಗುವುದು ಎಂದಿದ್ದರು. ನಂತರದಲ್ಲಿ ಕಳೆದ ಲೋಕಸಭಾ ಚುನಾವಣೆಯ ಕಾಲದಲ್ಲಿ ‘ಗುಜರಾತ್ ಮಾದರಿ’ ಎನ್ನುವುದು ಬಿಜೆಪಿಯ ಪ್ರಚಾರದ ಪ್ರಮುಖ ಅಸ್ತ್ರವಾಗಿತ್ತು. ಬಿಜೆಪಿ ಮತ್ತು ಮೋದಿ ಬೆಂಬಲಿಗರ ದೃಷ್ಟಿಯಲ್ಲಿ ‘ಗುಜರಾತ್ ಮಾದರಿ’ ಎನ್ನುವುದು ಕೈಗಾರಿಕೆಗಳಿಗೆ ವಿಪರೀತವಾಗಿ ಸಹಾಯಹಸ್ತ ಚಾಚುವ ಉದ್ಯಮಿಗಳನ್ನು ಆಹ್ವಾನಿಸುವ ಮಾದರಿಯಾಗಿದ್ದರೆ ಬಿಜೆಪಿ ಮತ್ತು ಮೋದಿ ವಿರೋಧಿಗಳ ದೃಷ್ಟಿಯಲ್ಲಿ ‘ಗುಜರಾತ್ ಮಾದರಿ’ ಎಂದರೆ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಮಾದರಿಯಾಗಿತ್ತು. ಈ ಎಲ್ಲಾ ಗುಜರಾತಿನ ಮಾದರಿಗಳನ್ನು ಹಿಂದಿಕ್ಕಿ ಈಗ ಗುಜರಾತ್ ರಾಜ್ಯದ ದಲಿತರು ಹೊಸ ರೀತಿಯ ಹೋರಾಟದ, ಚಳುವಳಿಯ, ಪ್ರತಿಭಟನೆಯ ಮಾರ್ಗವನ್ನು ತೋರಿದ್ದಾರೆ. ಗುಜರಾತಿನ ಎಲ್ಲಾ ಮಾದರಿಗಳಿಗಿಂತಲೂ ಇದು ವಿಭಿನ್ನವಾಗಿದೆ.

ಊನಾ ಎಂಬ ಊರಿನಲ್ಲಿ ಸತ್ತ ದನದ ಚರ್ಮ ಸುಲಿಯುತ್ತಿದ್ದ ದಲಿತರನ್ನು ‘ಗೋರಕ್ಷಕ’ ಪಡೆಯವರು ಹಿಡಿದು, ಬಟ್ಟೆ ಬಿಚ್ಚಿ ಬಡಿದಿದ್ದರು. ಅದರ ದೃಶ್ಯಾವಳಿಗಳು ಅಂತರ್ಜಾಲದ ಮೂಲಕ ಎಲ್ಲೆಡೆಯೂ ವ್ಯಾಪಕವಾಗಿ ಹರಡಿ ‘ಗೋರಕ್ಷಕರ’ ವಿರುದ್ಧದಲೆಯನ್ನು ಸೃಷ್ಟಿಸಿತು. ಇಲ್ಲಿಯವರೆಗೂ ಗೋರಕ್ಷಣೆಯ ನೆಪದಲ್ಲಿ ಮುಸ್ಲಿಮರನ್ನಷ್ಟೇ ಹಿಡಿದು ಬಡಿಯುತ್ತಿದ್ದ ಗೋರಕ್ಷಕರು ಪ್ರಥಮ ಬಾರಿಗೆ ಬಹಿರಂಗವಾಗಿ ದಲಿತರ ಮೇಲೆ ಹಲ್ಲೆ ನಡೆಸಿದ್ದರು. ಗುಜರಾತಿನ ದಲಿತರು ಪ್ರತಿಭಟನೆಗೆ ಇಳಿದರು. ಅವರು ಪ್ರತಿಭಟನೆಗೆ ಆಯ್ದುಕೊಂಡ ದಾರಿ ಭಿನ್ನವಾಗಿತ್ತು. ಸಾವಿರಾರು ಸಂಖೈಯಲ್ಲಿ ಜನರು ಸೇರಿದರು, ಮೆರವಣಿಗೆ ಮಾಡಿದರು ಇವೆಲ್ಲವೂ ಮಾಮೂಲು ರೀತಿಯ ಪ್ರತಿಭಟನೆಗಳೇ. ಆದರೆ ಪ್ರತಿಭಟನೆಯ ಸಂದರ್ಭದಲ್ಲಿ ‘ಇನ್ನು ಮೇಲೆ ಸತ್ತ ದನಗಳನ್ನು ನಾವು ಎತ್ತುವುದಿಲ್ಲ. ನಿಮ್ಮ ಮಾತೆಯನ್ನು ನೀವೇ ಎತ್ತಿ ಸಂಸ್ಕಾರ ಮಾಡಿಕೊಳ್ಳಿ’ ಎಂದು ಘೋಷಿಸಿದ್ದು ಜಾತಿ ವ್ಯವಸ್ಥೆಯನ್ನು ಅಪ್ಪಿ ಮಲಗಿರುವ ಸಮಾಜಕ್ಕೆ ದಿಗ್ಭ್ರಮೆ ಮೂಡಿಸಿಬಿಟ್ಟಿತು. ಸತ್ತ ದನಗಳ ಮೂಳೆಗಳನ್ನು ಕಳೇಬರವನ್ನು ಹೊತ್ತು ತಂದು ಸರಕಾರಿ ಕಛೇರಿಗಳ ಮುಂದೆ ಎಸೆದು ಪ್ರತಿಭಟಿಸಿದರು. ಸತ್ತ ದನಗಳನ್ನು ವಿಲೇವಾರಿ ಮಾಡುವುದೇಗೆಂದು ತಿಳಿಯದೆ ಗುಜರಾತಿನ ಅಧಿಕಾರಿ ವರ್ಗ ಕಕ್ಕಾಬಿಕ್ಕಿಯಾಯಿತು. ‘ನಮ್ಮ ಕೆಲಸ ನಾವು ಮಾಡಿದ್ರೆ ಹಲ್ಲೆ ಮಾಡಿ ಧರ್ಮ ರಕ್ಷಿಸುವ ಮಾತಾಡ್ತೀರಲ್ವಾ? ನಮ್ಮ ಕೆಲಸಾನೇ ಮಾಡಲ್ಲ, ನೀವೇ ಮಾಡ್ಕಳ್ಳಿ’ ಅನ್ನೋ ಪ್ರತಿಭಟನೆಯ ರೀತಿ ಅಸಂಘಟಿತ ವಲಯದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಕಾಣಿಸಿದೆ. ಸಣ್ಣ ಮಟ್ಟದಲ್ಲಿ ದಲಿತರು ಊರಿನ ಜಾತ್ರೆಯಲ್ಲಿ ತಮಟೆ ಬಾರಿಸುವುದಿಲ್ಲ ಎಂದಾಗಲೋ, ಹೆಣದ ಮುಂದೆ ತಮಟೆ ಬಾರಿಸುವುದಿಲ್ಲ ಎಂದಾಗಲೋ ದಲಿತರ ಮೇಲೆ ಹಲ್ಲೆ ನಡೆಯುವ ಸುದ್ದಿಗಳು ಆಗಾಗ ಬರುತ್ತಲೇ ಇರುತ್ತದೆ. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡದೆ ಅಸಹಕಾರ ತೋರಿದ್ದು ಇದೇ ಮೊದಲಿರರಬೇಕು.

ಸಂಘಟಿತ ವಲಯದಲ್ಲಿ ಬೇಡಿಕೆಗಳನ್ನೀಡೇರಿಸಿಕೊಳ್ಳಲು ಇಂತಹ ಪ್ರತಿಭಟನೆಗಳು ಸರ್ವೇ ಸಾಮಾನ್ಯ. ಇತ್ತೀಚೆಗಷ್ಟೇ ಕರ್ನಾಟಕದ ಸಾರಿಗೆ ನಿಗಮದ ನೌಕರರು ಮುಷ್ಕರ ಹೂಡಿ ಸಾರಿಗೆ ವ್ಯವಸ್ಥೆಯನ್ನೇ ಅಸ್ತವ್ಯಸ್ತ ಮಾಡಿ ತಮ್ಮ ಬೇಡಿಕೆಗಳಲ್ಲಿ ಹಲವನ್ನಾದರೂ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಎಲ್ಲೆಡೆಯೂ ಚದುರಿ ಹೋಗಿರುವ, ಸಂಘಟನೆಗಳಿಲ್ಲದ, ಅವತ್ತಿನ ಕೂಲಿಯಲ್ಲೇ ಅವತ್ತಿನ ಅನ್ನ ಸಂಪಾದಿಸಬೇಕಾದ ಅಸಂಘಟಿತ ವಲಯದ ಜನರಿಗೆ ಈ ರೀತಿ ಮುಷ್ಕರ ಹೂಡುವುದು ಸುಲಭವಲ್ಲ. ಕರ್ನಾಟಕದಲ್ಲೇ ಕೆಲವು ವರುಷಗಳ ಹಿಂದೆ ಪೌರ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಲೆಯ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದ್ದರು. ತಮ್ಮ ತಲೆಯ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸುವ ಬದಲು, ‘ಇನ್ನು ಮುಂದೆ ನಿಮ್ಮ ಊರಿನ ಒಂದು ಚಿಕ್ಕ ಕಸದ ಚೂರನ್ನೂ ನಾವು ಎತ್ತಿಹಾಕುವುದಿಲ್ಲ’ ಎಂದವರು ಪ್ರತಿಭಟಿಸಿದ್ದರೆ ಊರುಗಳ ಕತೆ ನೆನಪಿಸಿಕೊಳ್ಳಿ…… ಗುಜರಾತಿನ ದಲಿತರು ಇಂತಹುದೊಂದು ಪ್ರತಿಭಟನೆ ಅಸಂಘಟಿತ ವಲಯದಲ್ಲೂ ಸಾಧ್ಯವಿದೆ ಎಂದು ತೋರಿಸಿಕೊಟ್ಟಿದ್ದಾರೆ. ಈ ‘ಗುಜರಾತ್ ಮಾದರಿ’ಯ ಪರಿಣಾಮ ಎಷ್ಟಿತ್ತೆಂದರೆ ದೇಶದೊಳಗಿನ ಆಗುಹೋಗುಗಳ ಬಗ್ಗೆ ಮೌನವಾಗಿದ್ದುಬಿಡುವ ಅಭ್ಯಾಸವನ್ನು ಬೆಳೆಸಿಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಸಹಿತ ಮೊದಲ ಬಾರಿಗೆ ‘ಗೋರಕ್ಷಕರ’ ವಿರುದ್ಧ, ದಲಿತರ ಪರವಾಗಿ ಹರಿಹಾಯ್ದಿದ್ದಾರೆ. ಅವರ ದೃಷ್ಟಿ ದಲಿತರ ಮತಗಳೆಡೆಗೇ ಇರಬಹುದು, ಮುಂದಿನ ಉತ್ತರ ಪ್ರದೇಶದ ಚುನಾವಣೆಗಳೆಡೆಗೇ ಇರಬಹುದು ಆದರೆ ಅವರ ಮಾತುಗಳಿಗೆ ಕಾರಣ ಗುಜರಾತ್ ದಲಿತರ ಪ್ರತಿಭಟನೆ. ಅವರ ಮಾತುಗಳಲ್ಲಿ ಗೋರಕ್ಷಕರಿಂದ ಅತಿ ಹೆಚ್ಚು ತೊಂದರೆಗೀಡಾದ ಮುಸ್ಲಿಮರ ಬಗ್ಗೆ ಯಾವ ಮಾತೂ ಇರಲಿಲ್ಲ ಎನ್ನುವುದನ್ನೂ ಗಮನಿಸಬಹುದು. ಇದಕ್ಕೆ ಮೋದಿಯವರ ಮತ್ತವರ ರಾಜಕೀಯ ಸಿದ್ಧಾಂತದ ಮನಸ್ಥಿತಿ ಎಷ್ಟು ಕಾರಣವೋ ಪ್ರತಿಭಟಿಸದ ಮುಸ್ಲಿಮರೂ ಅಷ್ಟೇ ಕಾರಣ.

ದಲಿತರು ಹಾಕಿಕೊಟ್ಟ ‘ಗುಜರಾತ್ ಮಾದರಿಯಿಂದ’ ಅತಿ ದೊಡ್ಡ ಪಾಠ ಕಲಿಯಬೇಕಿರುವುದು ನಮ್ಮ ದೇಶದ ಮುಸ್ಲಿಮರು. ಗೋರಕ್ಷಣೆಯ ನೆಪದಲ್ಲಿ ಅತಿ ಹೆಚ್ಚು ಹಿಂಸೆಗೀಡಾಗಿರುವುದು ಮುಸ್ಲಿಮರೇ. ಆದರೆ ಅಸಂಘಟಿತ ವಲಯದ ಮುಸ್ಲಿಮರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ ನಿದರ್ಶನಗಳು ತುಂಬಾ ಕಡಿಮೆ. ಪ್ರವಾದಿಗ್ಯಾರೋ ಏನೋ ಅಂದ್ರು ಅಂದಾಗ ಗುಂಪುಗೂಡುವ ಜನರಲ್ಲಿ ಹತ್ತು ಪರ್ಸೆಂಟಷ್ಟಾದರೂ ತಮ್ಮ ಕೆಲಸಕ್ಕೆ ಅಡ್ಡಿಯುಂಟುಮಾಡುವ ಜನರ ವಿರುದ್ಧದ ಪ್ರತಿಭಟನೆಯಲ್ಲಿ ಸೇರಿದ್ದರೆ ಮುಸ್ಲಿಮರ ಮೇಲೆ ಗೋರಕ್ಷಣೆಯ ನೆಪದಲ್ಲಿ, ಕದ್ದು ದನ ಸಾಗಿಸುತ್ತಾರೆ ಎಂಬ ನೆಪದಲ್ಲಿ ಹಲ್ಲೆಗಳು ನಿರಂತರವಾಗಿ ನಡೆಯುತ್ತಿರಲಿಲ್ಲ. ‘ಸತ್ತ ನಿಮ್ಮ ಮಾತೆಯನ್ನು ನೀವೇ ಎತ್ತಿ ಹೂತು ಹಾಕಿ’ ಎಂದ ಗುಜರಾತಿನ ದಲಿತರ ಮಾದರಿಯಲ್ಲೇ ಸುಖಾಸುಮ್ಮನೆ ಗೋರಕ್ಷಕರಿಂದ ಹೊಡೆತ ತಿಂದ ಮುಸ್ಲಿಮರು ಒಟ್ಟಾಗಿ ‘ಸರಿ ಬಿಡಿ ದನ, ಎಮ್ಮೆ, ಕೋಣ ಅಷ್ಟೇ ಅಲ್ಲ ಕುರಿ ಕೋಳೀನೂ ನಾವು ಕತ್ತರಿಸಿ ಮಾರುವುದಿಲ್ಲ. ನೀವೇ ಮಾಡ್ಕಳ್ಳಿ’ ಎಂದು ಘೋಷಿಸಿಬಿಟ್ಟಿದ್ದರೆ ಬಹುತೇಕ ಊರುಗಳ ಮಾಂಸಾಹಾರದ ವ್ಯಾಪಾರವೇ ಅಲ್ಲೋಲಕಲ್ಲೋಲವಾಗಿಬಿಡುತ್ತಿತ್ತು. ಪ್ರಭುತ್ವ ಏನನ್ನಾದರೂ ಸಹಿಸಿಕೊಳ್ಳುತ್ತದೆ, ಯಾವುದರ ಬಗ್ಗೆಯಾದರೂ ಮೌನವಾಗುಳಿದುಬಿಡುತ್ತದೆ. ಆದರೆ ವ್ಯಾಪಾರ - ವ್ಯವಹಾರ - ಆದಾಯದ ವಿಷಯದಲ್ಲಿ ಏರುಪೇರಾಗಿಬಿಟ್ಟರೆ ಸಹಿಸಿಕೊಳ್ಳುವುದಿಲ್ಲ. 
ಗುಜರಾತ್ ಮಾದರಿಯ ಹೋರಾಟ ಗುಜರಾತಿಗಷ್ಟೇ ಸೀಮಿತವಾಗುತ್ತದಾ ಅಥವಾ ಬೇರೆಡೆಗೂ ಹಬ್ಬುತ್ತದಾ? ಕಾದು ನೋಡಬೇಕು.

ಉತ್ತರಪ್ರದೇಶದ ಜಾತಿ ರಾಜಕಾರಣ: ದಲಿತರು ವರ್ಸಸ್ ಸವರ್ಣೀಯರು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
09/08/2016
ನಾನು ಈ ಹಿಂದೆಯೇ ಬಹಳಷ್ಟು ಬಾರಿ ಬರೆದಂತೆ ಜಾತಿ ರಾಜಕಾರಣ ಈ ದೇಶದ ಕ್ರೂರ ವಾಸ್ತವವಾಗಿದ್ದು ಅದನ್ನು ಕಡೆಗಣಿಸಿ ಚುನಾವಣಾ ರಾಜಕೀಯ ಮಾಡುವುದು ಕಷ್ಟಸಾದ್ಯದ ಮಾತಾಗಿದೆ. ಅದರಲ್ಲೂ ಉತ್ತರಪ್ರದೇಶದಂತಹ ರಾಜ್ಯದ ಸಮಾಜದಲ್ಲಿ ಜಾತಿ ಎನ್ನುವುದು ಆಳವಾಗಿ ಬೇರು ಬಿಟ್ಟಿದ್ದು ಅದನ್ನು ಮೀರಿ ರಾಜಕಾರಣ ಮಾಡಲು ಇದುವರೆಗೂ ಯಾವ ಪಕ್ಷಕ್ಕೂ ಸಾದ್ಯವಾಗಿಲ್ಲ. ಇನ್ನೇನು ಮುಂದಿನ ವರ್ಷ ಈ ರಾಜ್ಯದಲ್ಲಿ ವಿದಾನಸಭಾ ಚುನಾವಣೆಗಳು ನಡೆಯುತ್ತಿದ್ದು, ಜಾತಿಸಮೀಕರಣಗಳ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿ, ತಮ್ಮ ಪರಾಕಾಷ್ಠೆ ತಲುಪಿವೆ. ಮೊನ್ನಿನ ಮಾಯಾವತಿಯವರ ಪ್ರಕರಣವಾದ ನಂತರ ಈ ಜಾತಿ ಲೆಕ್ಕಾಚಾರಗಳು ಇನ್ನಷ್ಟು ತೀವ್ರಗೊಂಡು ಸ್ವಲ್ಪ ಬದಲಾವಣೆಯೊಂದಿಗೆ ದಲಿತ ವರ್ಸಸ್ ಸವರ್ಣೀಯ ಎನ್ನುವ ಮಟ್ಟಕ್ಕೆ ಹೋಗಿ ನಿಂತಿದೆ.

ಕಳೆದ ತಿಂಗಳು ಉತ್ತರಪ್ರದೇಶದ ಬಾಜಪ ಪಕ್ಷದ ರಾಜ್ಯ ಘಟಕದ ಉಪಾದ್ಯಕ್ಷರಾದ ಶ್ರೀ ದಯಾಶಂಕರ್ ಸಿಂಗ್ ಅವರು ಮಾಯಾವತಿಯವರು ಚುನಾವಣಾ ಟಿಕೇಟುಗಳನ್ನು ಮಾರಾಟ ಮಾಡುತ್ತಿದ್ದಾರೆಂಬ ಅವರ ಪಕ್ಷದ ನಾಯಕರುಗಳ ಆರೋಪವನ್ನು ಪ್ರಸ್ತಾಪಿಸುತ್ತ. ಹೀಗೆ ಟಿಕೇಟು ಮಾರುವ ಮಾಯಾವತಿಯವರನ್ನು ವೇಶ್ಯೆಗೆ ಹೋಲಿಸಿದ್ದರು. ಈ ಮಾತು ಉತ್ತರಪ್ರದೇಶ ಮಾತ್ರವಲ್ಲದೆ ಇಡಿ ರಾಷ್ಟ್ರದಾದ್ಯಂತ ಅಲ್ಲೋಲ ಕಲ್ಲೋಲವನ್ನೇ ಸೃಷ್ಠಿಸಿತು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮಾಯಾವತಿಯವರು ದಯಾಶಂಕರ್ ಅವರನ್ನು ಬಂದಿಸಿ ಕ್ರಮ ತೆಗೆದುಕೊಳ್ಳಬೇಕೆಂದೂ, ಹಾಗು ಬಾಜಪ ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು. ಇಷ್ಟರಲ್ಲಿ ಬಾಜಪಕ್ಕೆ ಆದ ಅನಾಹುತದ ಅರಿವಾಗಿದ್ದಂತಿತ್ತು. ಅದು ದಯಾಶಂಕರ್ ಅವರನ್ನು ಉಪಾದ್ಯಕ್ಷ ಹುದ್ದೆಯಿಂದ ವಜಾ ಮಾಡಿತು. ಆದರೆ ಇಷ್ಟಕ್ಕೆ ತೃಪ್ತರಾಗದ ಬಹುಜನ ಪಕ್ಷದ ನಾಯಕರುಗಳು ರಾಜ್ಯದೆಲ್ಲೆಡೆ ಪ್ರತಿಭಟನೆಗಳನ್ನು ಶುರು ಮಾಡಿದ್ದರು. ದೇಶದಲ್ಲಿ ಹೆಚ್ಚಾಗುತ್ತಿರುವ ದಲಿತರ ಮೇಲಿನ ಹಲ್ಲೆಗಳ ಬಗ್ಗೆ ರಾಷ್ಟ್ರದಲ್ಲಿ ಚರ್ಚೆಯಾಗುತ್ತಿರುವಾಗಲೇ ನಡೆದ ಈ ಘಟನೆ ಬಾಜಪದ ಮಟ್ಟಿಗೆ ದೊಡ್ಡ ಹೊಡೆತವಾಗಿತ್ತು. ಮುಂದಿನ ವರ್ಷ ನಡೆಯಲಿರುವ ವಿದಾನಸಭಾ ಚುನಾವಣೆಗಳ ಮೇಲೆ ದಯಾಶಂಕರ್ ಅವರ ಹೇಳಿಕೆ ಪ್ರತಿಕೂಲ ಪರಿಣಾಮ ಬೀರುವ ಸಾದ್ಯತೆಗಳನ್ನು ಗಮನಿಸಿದ ಬಾಜಪ ಅವರನ್ನು ಪಕ್ಷದಿಂದ ಆರು ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಿತು. ಉತ್ತರಪ್ರದೇಶದ ಪೋಲಿಸರು ಅವರ ಮೇಲೆ ಕೇಸು ದಾಖಲಿಸಿ ಬಂದಿಸಲು ಪ್ರಯತ್ನಿಸಿದರು. ಆದರೆ ಈ ನಡುವೆ ದಯಾಶಂಕರ್ ಸಿಂಗ್ ಯಾರ ಕೈಗೂ ಸಿಗದೆ ನಾಪತ್ತೆಯಾಗಿದ್ದರು. ಗುಜರಾತಿನಲ್ಲಿ ನಡೆದ ದಲಿತ ಯುವಕರ ಮೇಲಿನ ಹಲ್ಲೆಯ ವಿಚಾರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ವಿರೋಧಪಕ್ಷಗಳ ಟೀಕೆಯನ್ನು ಎದುರಿಸುತ್ತಿರುವಾಗಲೇ ದಯಾಶಂಕರ್ ಮಾಡಿಕೊಂಡ ಈ ಎಡವಟ್ಟು ಮುಂದಿನ ಚುನಾವಣೆಯಲ್ಲಿ ದಲಿತರ ಬೆಂಬಲ ಗಳಿಸುವ ಬಾಜಪದ ಪ್ರಯತ್ನಕ್ಕೆ ತಣ್ಣೀರೆರಚಿದಂತಾಯಿತು. ಬಹುತೇಕ ಬಾಜಪೇತರ ಪಕ್ಷಗಳು ಮಾಯಾವತಿಯವರ ಬೆಂಬಲಕ್ಕೆ ನಿಂತಿದ್ದು ಬಾಜಪದ ಮಟ್ಟಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿತು. ಇನ್ನೇನು ಉತ್ತರಪ್ರದೇಶದಲ್ಲಿ ಬಹುಜನ ಪಕ್ಷಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದೆಯೆಂದು ಅಂದುಕೊಳ್ಳುವಷ್ಟರಲ್ಲಿ ಮಾಯಾವತಿಯವರ ಬೆಂಬಲಿಗರು ಬಹುಜನ ಪಕ್ಷದ ಮಾಜಿ ಸಚಿವ ನಸೀಮುದ್ದೀನ್ ಸಿದ್ದೀಕಿ ನೇತೃತ್ವದಲ್ಲಿ ಲಕ್ನೋವಿನ ಹಜರತ್‍ಗಂಜಿನಲ್ಲಿ ನಡೆಸಿದ ಪ್ರತಿಭಟನಾ ಧರಣಿಯಲ್ಲಿ ಎಲ್ಲ ಮಿತಿಗಳನ್ನು, ಮರ್ಯಾದೆಗಳನ್ನೂ ಮೀರಿ, ದಯಾಶಂಕರ್ ಅವರ ಪತ್ನಿ ಸ್ವಾತಿ ಸಿಂಗ್ ಮತ್ತು ಅವರ ಹದಿಮೂರು ವರ್ಷ ವಯಸ್ಸಿನ ಅಪ್ರಾಪ್ತ ಮಗಳ ಬಗ್ಗೆ ಕೂಗಿದ ಘೋಷಣೆಗಳು ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಿದವು. ತಮ್ಮ ಪಕ್ಷದ ಮೇಲಾದ ಈ ಆಘಾತದಿಂದ ಚೇತರಿಸಿಕೊಳ್ಳದ ಬಾಜಪ ನಾಯಕರುಗಳು ಮೌನಕ್ಕೆ ಶರಣಾಗಿ ಬಿಟ್ಟಿದ್ದರು. 

ಆಗಲೇ ಕೇಳಿಬಂದಿದ್ದು ದಯಾಶಂಕರ್ ಅವರ ಪತ್ನಿ ಸ್ವಾತಿ ಸಿಂಗ್ ಅವರ ಮರು ಪ್ರತಿಭಟನೆಯ ದ್ವನಿ! ತನ್ನ ಹಾಗು ತನ್ನ ಮಗಳ ವಿರುದ್ದ ಕೇಳಿಬಂದ ಅಸಭ್ಯ ಘೋಷಣೆಗಳನ್ನು ಗಂಭೀರವಾಗಿ ತೆಗೆದುಕೊಂಡ ಆಕೆ ಈ ಬಗ್ಗೆ ಮಾಯಾವತಿಯವರನ್ನು, ಅವರ ಪಕ್ಷವನ್ನು ಬಹಿರಂಗವಾಗಿ ಎದುರಿಸಲು ಸಿದ್ದರಾಗಿ ಬಿಟ್ಟಿದ್ದರು. ಈ ಕುರಿತಂತೆ ಆಕೆ ಮಾಯಾವತಿ ಮತ್ತು ಉಳಿದವರ ಮೇಲೆ ಪೋಲಿಸ್ ಠಾಣೆಗೆ ದೂರನ್ನು ಕೂಡ ಸಲ್ಲಿಸಿದರು. ಸ್ವಾತಿಯವರ ಈ ಒಂದು ನಡೆ ಹಿಂಜರಿಕೆಯಲ್ಲಿದ್ದ ಬಾಜಪಕ್ಕೆ ಹೊಸ ಚೈತನ್ಯ ನೀಡಿತು, ಅದುವರೆಗು ಮೌನವಾಗಿದ್ದ ಬಾಜಪ ಈ ಅವಕಾಶವನ್ನೂ, ಸ್ವಾತಿಯವರ ಪ್ರತಿ ಆಕ್ರಮಣಕಾರಿ ನಿಲುವನ್ನೂ ಬಳಸಿಕೊಂಡು ಬಹುಜನ ಪಕ್ಷದ ದಯಾಶಂಕರ್ ಕುಟುಂಬದ ಹೆಣ್ಣು ಮಕ್ಕಳ ಬಗೆಗಿನ ಅಸಭ್ಯ ಮಾತುಗಳನ್ನು ಠಾಕೂರ್ ಸಮಾಜದ ವಿರುದ್ದದ ದಲಿತರ ಉದ್ದಟತನದ ಹೇಳಿಕೆಗಳೆಂದು ಬಿಂಬಿಸಿ ಎರಡೂ ಪಕ್ಷಗಳ ಇಬ್ಬರು ನಾಯಕರುಗಳ ಜಟಾಪಟಿಯನ್ನು ಎರಡು ಜಾತಿಗಳ ಜಗಳವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು. ಸ್ವಾತಿಸಿಂಗ್ ಮೇಲಿನ ಅಸಭ್ಯತನದ ಮಾತುಗಳು ತಮ್ಮ ಠಾಕೂರ್ ಸಮುದಾಯದ ಆತ್ಮಗೌರವಕ್ಕೆ ಬಿದ್ದ ಪೆಟ್ಟೆಂಬಂತೆ ಆ ಸಮುದಾಯದ ನಾಯಕರುಗಳು ಹೇಳಿಕೆ ನೀಡತೊಡಗಿದರು. ಇದರ ನಡುವೆ ಮೊದಲಿಂದಲು ದಲಿತರ ಮೇಲೆ ಅಸಹನೆ ಹೊಂದಿದ್ದ ಉಳಿದೆಲ್ಲ ಮೇಲ್ಜಾತಿಗಳು ಸಹ ಸ್ವಾತಿ ಸಿಂಗ್ ಬೆಂಬಲಕ್ಕೆ ನಿಂತು ಬಿಟ್ಟವು. ಇದೇ ಸಮಯದಲ್ಲಿ ಸ್ವಾತಿಸಿಂಗ್‍ರವರು ಮಾಯಾವತಿ, ಸಿದ್ದೀಕಿ,ಮತ್ತು ಇನ್ನಿತರೇ ಬಹುಜನ ಪಕ್ಷದ ನಾಯಕರುಗಳ ಮೇಲೆ ಎಫ್.ಐ.ಆರ್.ದಾಖಲಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅಲ್ಲಿಯವರೆಗು ರಕ್ಷಣಾತ್ಮಕವಾಗಿ ತನ್ನ ನಡೆಗಳನ್ನು ನಡೆಸುತ್ತಿದ್ದ ಬಾಜಪ ಪ್ರತಿ ಆಕ್ರಮಣದ ತೀವ್ರತೆಯನ್ನು ಹೆಚ್ಚಿಸಿ, ಇಡೀ ಘಟನೆಯನ್ನು ದಲಿತರು ವರ್ಸಸ್ ಸವರ್ಣೀಯರು ಎನ್ನುವ ಮಟ್ಟಕ್ಕೆ ತಂದು ನಿಲ್ಲಿಸಿತು. ಇದರಿಂದ ವಿಚಲಿತರಾದ ಮಾಯಾವತಿ ಪ್ರತಿಭಟನೆಗಳ ತೀವ್ರತೆಯನ್ನು ಕಡಿಮೆ ಮಾಡಿ ಸಾರ್ವಜನಿಕ ಹೇಳಿಕೆಗಳನ್ನು ನೀಡದಂತೆ ತಮ್ಮ ಪಕ್ಷದವರಿಗೆ ತಾಕೀತು ಮಾಡಬೇಕಾಯಿತು. ಈ ಹಂತದಲ್ಲಿ ಮಾಯಾವತಿಯವರಿಗೆ ವಾಸ್ತವದ ಅರಿವಾಗಿತ್ತು. ಅವರಿಗೆ ಕೇವಲ ಠಾಕೂರ್ ಸಮುದಾಯದ ಮತಗಳ ಅಗತ್ಯಕ್ಕಿಂತ ಹೆಚ್ಚಾಗಿ ಬೇರೆ ಸವರ್ಣೀಯರ ಮತಗಳೂ ಬಹುಮುಖ್ಯವೆಂದು ಗೊತ್ತಿತ್ತು. ಯಾಕೆಂದರೆ ಶೇಕಡಾ 22 ರಷ್ಟಿರುವ ದಲಿತ ಮತಗಳು ಸಂಪೂರ್ಣವಾಗಿ ಬಹುಜನ ಪಕ್ಷಕ್ಕೆ ಬಂದರೂ ಅಧಿಕಾರ ಹಿಡಿಯಲು ಉಳಿದ ಸುಮಾರು ಶೇಕಡಾ 12ರಿಂದ 14 ರಷ್ಟು ಮತಗಳು ಬೇರೆ ಸಮುದಾಯಗಳಿಂದಲೇ ಬರಬೇಕಾಗಿತ್ತು. ಇನ್ನು ಕಳೆದಬಾರಿ ಸಮಾಜವಾದಿ ಪಕ್ಷವನ್ನು ಬೆಂಬಲಿಸಿದ್ದ ಮುಸ್ಲಿಮರು ಈ ಬಾರಿ ಯಾವ ಪಕ್ಷವನ್ನು ಬೆಂಬಲಿಸಬಹುದೆಂಬ ಬಗ್ಗೆ ಯಾರಿಗೂ ನಿಖರ ಮಾಹಿತಿಯಿಲ್ಲ. ಹೀಗಾಗಿ ಶೇಕಡಾ ಹತ್ತರಷ್ಟಿರುವ ಬ್ರಾಹ್ಮಣ ಸಮುದಾಯದ ಮತಗಳು ಸಹ ದಲಿತ-ಸವರ್ಣೀಯರ ಜಟಾಪಟಿಯಲ್ಲಿ ಬೇರೆ ಪಕ್ಷಗಳಿಗೆ ಹೋದರೆ ತಮ್ಮ ಪಕ್ಷ ಬಹುಮತ ಗಳಿಸಿವುದು ಕಷ್ಟವೆಂಬುದು ಅವರಿಗೆ ಗೊತ್ತಾಗಿದೆ. ಅವರ ಇಂತಹ ಸಂಕಷ್ಟ ಸಮಯದಲ್ಲಿಯೇ ಇಬ್ಬರು ಶಾಸಕರು ಮಾಯಾವತಿಯವರು ಟಿಕೇಟುಗಳನ್ನು ಮಾರುತ್ತಿದ್ದಾರೆಂದು ಆರೋಪಿಸಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದಾರೆ. ಇವರಿಬ್ಬರನ್ನೂ ಸೇರಿಸಿದರೆ ಇದುವರೆಗೂ ಸುಮಾರು ಆರುಜನ ನಾಯಕರು ಬಹುಜನ ಪಕ್ಷ ತೊರೆದಿದ್ದಾರೆಂಬುದು ಮಾಯಾವತಿಯವರ ಆತಂಕಕ್ಕೆ ಕಾರಣವಾಗಿದೆ.

ತಮ್ಮ ಪಕ್ಷಗಳ ನಾಯಕರುಗಳನ್ನು, ಕಾರ್ಯಕರ್ತರುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೇ ಹೋದರೆ ಎಂತೆಂತಹ ದುಷ್ಪರಿಣಾಮಗಳು ಸಂಭವಿಸುತ್ತವೆಯೆಂಬುದನ್ನು ಉತ್ತರಪ್ರದೇಶದ ಬಾಜಪ ಮತ್ತು ಬಹುಜನ ಪಕ್ಷಗಳ ನಡವಳಿಕೆಗಳೀಗ ತೋರಿಸಿಕೊಟ್ಟಿವೆ. ಎರಡು ಪಕ್ಷಗಳ ಇಬ್ಬರು ನಾಯಕರುಗಳ ವಾಕ್ ಸಮರ ಉತ್ತರಪ್ರದೇಶದ ಸಮಾಜವನ್ನು ನಿಖರವಾಗಿ ಎರಡು ಹೋಳಾಗಿ ಮಾಡಿದೆ. ಉತ್ತರಪ್ರದೇಶ ಬಾಜಪದ ರಾಜ್ಯಘಟಕದ ಉಪಾದ್ಯಕ್ಷ ಶ್ರೀ ದಯಾಶಂಕರ್ ಸಿಂಗ್ ಆಡಿದ ಒಂದು ಮಾತು ಮತ್ತು ಅದಕ್ಕೆ ಪ್ರತ್ಯುತ್ತರವಾಗಿ ಮಾಯಾವತಿ ಮತ್ತವರ ಹಿಂಬಾಲಕರು ನೀಡಿದ ಸಾರ್ವಜನಿಕ ಹೇಳಿಕೆಗಳಿಂದಾಗಿ ದಲಿತರ ಮತ್ತು ಸವರ್ಣೀಯರ ನಡುವಿನ ಬಿರುಕು ಒಂದು ಹೆಜ್ಜೆ ಮುಂದೆ ಹೋಗಿ ಮಾಯಾವತಿ( ದಲಿತರ ಮಗಳು) ಮತ್ತು ಸ್ವಾತಿಸಿಂಗ್ (ಮಾನವತೆಯ ಮಗಳು) ಎಂಬಲ್ಲಿಗೆ ಬಂದು ನಿಂತಿದೆ.

ಮುಂದಿನ ದಿನಗಳಲ್ಲಿ ಇಂತಹ ಜಾತಿ ರಾಜಕಾರಣದ ಒಳಸುಳಿಗಳು ಇನ್ನಷ್ಟು ಹೆಚ್ಚಾಗಲಿದ್ದು ಮತಗಳಿಕೆಗಾಗಿ ಎಂತಹ ಕೃತ್ಯಗಳಿಗು ಸಿದ್ದವಾಗುವ ರಾಜಕೀಯ ಪಕ್ಷಗಳ ಭವಿಷ್ಯದ ನಡೆಗಳು ಗಾಬರಿಗೊಳಿಸುವಂತಿವೆ.