ಮಾರ್ಚ್ 19, 2013

ನವಸಮಾಜವಾದದ ಹರಿಕಾರ ಹ್ಯುಗೋ ಷಾವೇಜ್!



ಡಾ ಅಶೋಕ್ ಕೆ ಆರ್

ಹ್ಯುಗೋ ಷಾವೆಜ್! ಇಪ್ಪತ್ತೊಂದನೇ ಶತಮಾನದ ಸಮಾಜವಾದಿ ನಾಯಕ, ಲ್ಯಾಟಿನ್ ಅಮೆರಿಕಾದಲ್ಲಿ ಸಮಾಜವಾದದ ಉದಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವ, ಸಮಾಜವಾದದ ಹೆಸರಿನಲ್ಲಿ ಡಿಕ್ಟೇಟರ್ ಆಗಲು ಹೊರಟವ, ಪ್ರತಿಯೊಂದೂ ತನ್ನ ಆಣತಿಯಂತೆಯೇ ನಡೆಯಬೇಕು ಎಂಬ ಹಟದವ...... ಹ್ಯುಗೋ ಷಾವೆಜ್ ಬಗೆಗೆ ತಿಳಿಯಲು ಪುಸ್ತಕಗಳನ್ನೋ ಅಂತರ್ಜಾಲವನ್ನೋ ತೆರೆದು ಕುಳಿತರೆ ವಿವಿಧ ರೀತಿಯ ವ್ಯಕ್ತಿಕ್ವ ವರ್ಣನೆ ನಮ್ಮನ್ನು ತಬ್ಬಿಬ್ಬುಗೊಳಿಸುವುದು ಸಹಜ! ಉಳಿದ ದೇಶದವರ ಮಾತು ಬಿಡಿ ವೆನೆಜುವೆಲಾದ ನಾಗರೀಕರೇ ಅಂತರ್ಜಾಲದಲ್ಲಿ ಅಗಲಿದ ತಮ್ಮ ನಾಯಕನ ಬಗ್ಗೆ ವಿಷ ಕಾರಿದ್ದಾರೆ! ಹಾಗಿದ್ದರೆ ಹ್ಯುಗೋ ಷಾವೆಜ್ ಕೇವಲ ಸರ್ವಾಧಿಕಾರಿಯಾ? ವೆನೆಜುವೆಲಾಗೆ ಏನು ಕೊಡುಗೆಯನ್ನೇ ನೀಡಲಿಲ್ಲವಾ? ತನ್ನ ಅಹಂ ತೃಪ್ತಿಪಡಿಸಿಕೊಳ್ಳಲಷ್ಟೇ ಸಮಾಜವಾದದ ಹೆಸರು ಉಪಯೋಗಿಸಿಕೊಂಡ ನಾಯಕನಾ?!

ಮಾರ್ಚ್ 13, 2013

ಭಾರತದ ಮಾಣಿಕ್ಯ – ಮಾಣಿಕ್ ಸರ್ಕಾರ್.



ಡಾ ಅಶೋಕ್ ಕೆ ಆರ್

ಭಾರತ ಬಡದೇಶವೇ? ನಮ್ಮ ರಾಜಕಾರಣಿಗಳು ಅಧಿಕೃತವಾಗಿಯೇ ಘೋಷಿಸಿಕೊಂಡಿರುವ ಆಸ್ತಿ ವಿವರಗಳನ್ನು ನೋಡಿದರೆ ಭಾರತದಲ್ಲಿ ಬಡವರ ಅಸ್ತಿತ್ವವೇ ಇಲ್ಲವೇನೋ ಎಂಬ ಭಾವನೆ ಮೂಡಿದರೆ ತಪ್ಪಲ್ಲ. ಎಲ್ಲೋ ಕೆಲವರನ್ನು ಹೊರತುಪಡಿಸಿ ನಮ್ಮ ಸಂಸದರು ಸಚಿವರು ಶಾಸಕರು ಮುಖ್ಯಮಂತ್ರಿಗಳೆಲ್ಲ ಕೋಟಿಗೂ ಅಧಿಕ ಬೆಲೆಬಾಳುವವರೇ! ಶಾಸನಸಭೆಯಲ್ಲಿ ಯಾರದೂ ವಿರೋಧವಿಲ್ಲದೆ ಅಂಗೀಕೃತವಾಗುವ ಮಸೂದೆ “ಶಾಸಕ – ಸಚಿವರ” ವೇತನ ಹೆಚ್ಚಳ ಮಾತ್ರ! ರಾಜಕಾರಣಿಗಳ ಬಗ್ಗೆ ರಾಜಕೀಯದ ಬಗ್ಗೆ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿರುವ ಸಿನಿಕತೆಯ ನಡುವೆ ರಾಜಕಾರಣವೆಂದರೆ ಕೇವಲ ಹಣ ಮಾಡುವ, ಅನೈತಿಕ ರೀತಿಯಲ್ಲಿ ಜನರ ಮಧ್ಯೆಯೇ ವಿರೋಧ ಬೆಳೆಸುವ ದಂಧೆಯಲ್ಲ ಎಂಬುದನ್ನು ನಿರೂಪಿಸುವ ರಾಜಕಾರಣಿಗಳೂ ಇದ್ದಾರೆ ಎಂದರೆ ನಂಬುವುದು ಕೊಂಚ ಕಷ್ಟದ ಕೆಲಸವೇ ಸರಿ! ಅದರಲ್ಲೂ ಕರ್ನಾಟಕದ ರಾಜಕಾರಣ ಹಿಂದೆಂದೂ ಕಾಣದ ರೀತಿಯಲ್ಲಿ ಅಧಃಪತನಕ್ಕೊಳಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರನ್ನು ಅಪಹಾಸ್ಯದ ಸರಕನ್ನಾಗಿಸಿರುವುದು ಸುಳ್ಳಲ್ಲ.  ಈ ವಿಷಮ ಪರಿಸ್ಥಿತಿಯಲ್ಲಿ ರಾಜಕಾರಣವೆಂದರೆ ಪ್ರಚಾರಕ್ಕಾಗಿ ಹಪಹಪಿಸುವುದಲ್ಲ, ವೋಟಿಗಾಗಿ ನೈತಿಕತೆ ತೊರೆಯುವುದಲ್ಲ, ಇವೆಲ್ಲಕ್ಕಿಂತ ಹೆಚ್ಚಾಗಿ ತನ್ನತನ ಕಳೆದುಕೊಳ್ಳುವುದಲ್ಲ ಎಂಬುದನ್ನು ನಿರೂಪಿಸುತ್ತ ತನ್ನ ಸಾಮರ್ಥ್ಯದ ಮಟ್ಟಿಗೆ ಜನರಿಗೆ ಅನುಕೂಲವನ್ನು ಮಾಡಿಕೊಡುತ್ತಿರುವ ಮಾಣಿಕ್ ಸರ್ಕಾರ್ ಬಗ್ಗೆ ತಿಳಿದುಕೊಳ್ಳುವುದು ರಾಜಕಾರಣಿಗಳಿಗೆ ಮತ್ತವರಿಗೆ ಮತ ನೀಡುವ ಜನರಿಗೂ ಅವಶ್ಯಕ.

ಫೆಬ್ರ 6, 2013

ಕಾಡತೊರೆಯ ಜಾಡಿನಲ್ಲಿ ಜೀವನ ಪ್ರೀತಿಯ ಚಿಲುಮೆ…

ಡಾ ಅಶೋಕ್ ಕೆ ಆರ್
ಕಡಿದಾಳು ಶಾಮಣ್ಣನವರ ಬಗ್ಗೆ ತೇಜಸ್ವಿಯವರ ಪುಸ್ತಕಗಳಲ್ಲಿ, ಆವಾಗಿವಾಗ ಪತ್ರಿಕೆಗಳಲ್ಲಿ ಓದಿದ್ದೆನಷ್ಟೇ. ಅವರ ಆತ್ಮಕಥೆಯ ಕೆಲವು ಭಾಗಗಳನ್ನು ಮಯೂರ ಮಾಸಪತ್ರಿಕೆಯಲ್ಲಿ ಓದಿ ಆಸಕ್ತಗೊಂಡಿದ್ದೆನಾದರೂ ಪುಸ್ತಕ ಖರೀದಿಸಿರಲಿಲ್ಲ. ಕುಪ್ಪಳ್ಳಿಯಲ್ಲಿ ‘ನಾವು ನಮ್ಮಲ್ಲಿ’ ತಂಡ ಏರ್ಪಡಿಸಿದ್ದ ‘ಕರ್ನಾಟಕ ಕಂಡ ಚಳುವಳಿಗಳು’ ಸಂವಾದಗೋಷ್ಠಿಯಲ್ಲಿ ಕಡಿದಾಳು ಶಾಮಣ್ಣನವರನ್ನು ಮುಖತಃ ಭೇಟಿಯಾದಾಗ ಅವರಲ್ಲಿದ್ದ ಲವಲವಿಕೆ, ಉತ್ಸಾಹ ಕಂಡು ಅಚ್ಚರಿಪಟ್ಟಿದ್ದೆ. ಚಳುವಳಿಗಳ ಬಗ್ಗೆ ಬಹುತೇಕರಲ್ಲಿ ಸಿನಿಕತೆಯ ಭಾವವೇ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಯಾವ ನ್ಯಾಯಯುತ ಹೋರಾಟವೂ ವ್ಯರ್ಥವಾಗುವುದಿಲ್ಲ ಎಂಬ ಶಾಮಣ್ಣನವರ ಮನಸ್ಥಿತಿ ಮೆಚ್ಚುಗೆಯಾಗಿತ್ತು. ಅವರ ಜೀವನಗಾಥೆಯನ್ನು ಸಂಪೂರ್ಣ ಓದುವಂತೆಯೂ ಪ್ರೇರೇಪಿಸಿತು.

ಜನ 28, 2013

ಜಾಹ್ನವಿ



ಅನ್ಸಿಲಾ ಫಿಲಿಪ್ ವಾಸ್.
“ಜಾಹ್ನವಿ ಮತ್ತು ಸತೀಶರನ್ನು ಬೇರೆ ಬೇರೆ ಮಾಡ್ಬೇಡಿ ಪ್ಲೀಸ್” ರಾಧಿಕಾ ಬೇಡಿಕೊಳ್ಳುವವಳಂತೆ ಕೇಳಿದಾಗ
“ಆದರೆ ....ಶಿಲ್ಪಳ ಸಂತೃಪ್ತ ಜೀವನಕ್ಕಾಗಿ ಜಾಹ್ನವಿ...” ನಿತಿನ್ ತನ್ನ ಮಾತುಗಳನ್ನು ಮುಗಿಸುವ ಮುನ್ನವೇ ತಡೆದ ರಾಧಿಕಾ ರೋಷದಿಂದ ಕೇಳಿದಳು
“ಜಾಹ್ನವಿ... ಸಾಯಬೇಕೇನು?”
“ಅದೂ ಸಹ ಆಗುತ್ತದೆ” ಶಾಂತತೆಗೆ ಉದಾಸೀನದ ಲೇಪನ ಮಾಡಿ ನುಡಿದಿದ್ದ ಆತ.

ಜನ 2, 2013

ಅಪರಾಧ ಮತ್ತು ಸ್ಥಳದ ಮಹಿಮೆ.

ಡಾ ಅಶೋಕ್ ಕೆ ಆರ್
ಆ ದೌರ್ಭಾಗ್ಯೆಯ ಹೆಸರು ಸೋನಿ ಸೋರಿ. ಛತ್ತೀಸಗಢದ ಆದಿವಾಸಿ ಹಳ್ಳಿಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆದಿವಾಸಿ ಮಹಿಳೆ. ಪಾಠ ಹೇಳಿಕೊಡುವುದಕ್ಕಷ್ಟೇ ಮೀಸಲಾಗದೆ ಆದಿವಾಸಿ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾಕೆ. ಆಕೆಯ ಬಂಧನವಾಗುತ್ತದೆ. ನಕ್ಸಲರಿಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆಂಬ ಆರೋಪ. ಛತ್ತೀಸಗಢದ ಆದಿವಾಸಿ, ಮೇಲಾಗಿ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದವಳು ಎಂದ ಮೇಲೆ ನಕ್ಸಲಳೇ ಇರಬಹುದೆಂದು ಸರಕಾರದ ಅಂದಾಜು! ಕ್ರೂರ ವ್ಯಂಗ್ಯವೆಂದರೆ ಆಕೆಯ ತಂದೆಯ ಮೇಲೆ ಪೋಲೀಸ್ ಮಾಹಿತಿದಾರನೆಂಬ ಶಂಕೆಯಿಂದ ನಕ್ಸಲರು ಗುಂಡು ಹಾರಿಸಿದ್ದರು!

ಡಿಸೆಂ 26, 2012

ಆದರ್ಶವೇ ಬೆನ್ನು ಹತ್ತಿ....ಭಾಗ 13



ಡಾ ಅಶೋಕ್ ಕೆ ಆರ್

ಕಾಂತರಾಜ್ ಸರ್ ಹೇಳಿದಂತೆ ನಡೆದುಕೊಂಡರು. ಪ್ರಿನ್ಸಿಪಾಲರು, ಇತರೆ ಸಿಬ್ಬಂದಿಗಳು ಎಷ್ಟು ಹೇಳಿದರೂ ಕೇಳಲಿಲ್ಲ. ‘ನಾನಿದನ್ನು ಮುಂಚೆಯೇ ನಿರ್ಧರಿಸಿದ್ದೆ. ಇದೇನು ಆತುರದ ತೀರ್ಮಾನವಲ್ಲ’ ಎಂದ್ಹೇಳಿ ರಾಜೀನಾಮೆ ಕೊಟ್ಟುಬಿಟ್ಟರು. ಕಾಲೇಜಿನ ಪರವಾಗಿ ಅವರಿಗೊಂದು ಬೀಳ್ಗೊಡುಗೆ ಸಮಾರಂಭ ಇಟ್ಟುಕೊಳ್ಳಬೇಕೆಂಬ ವಿದ್ಯಾರ್ಥಿಗಳ ಆಸೆಗೂ ಬೇಡವೆಂದುಬಿಟ್ಟರು. ರಾಜೇಶ್ ಮತ್ತು ಎಂ.ಎಸ್.ಎ ಮೇಲೆ ದೂರೂ ನೀಡಲಿಲ್ಲ, ರೇಗಲೂ ಇಲ್ಲ, ಅನ್ಯರ ಬಳಿ ಕೆಟ್ಟಮಾತುಗಳನ್ನೂ ಆಡಲಿಲ್ಲ. ನಿಜಕ್ಕೂ ಈ ವ್ಯಕ್ತಿಗೆ ಹುಚ್ಚಿರಬೇಕೆಂಬ ಅನುಮಾನ ಎಲ್ಲರಿಗೂ ಬಂತು! ಒಬ್ಬ ಕಾಂತರಾಜರ ಹೊರತಾಗಿ!

ನವೆಂ 21, 2012

ಶಮೀನ



ಅನ್ಸಿಲಾ ಫಿಲಿಪ್ ವಾಸ್

ಛೇ! ನಾನೇನ್ಮಾಡ್ಲಿ? ಶಮೀನಾಗಿಂತ ತಾನು ಚೆನ್ನಾಗಿರುವುದು ನನ್ನ ತಪ್ಪೇ? ತನಗೆ ಹೇರಳವಾಗಿ ದೊರೆತ ಸೌಂದರ್ಯದ ಕುರಿತು ಚಿಂತಿಸುತ್ತಾಳೆ ಸೀಮ.

ಸೀಮ, ಶಮೀನರ ಮನೆಯ ಇಬ್ಬರು ಅಣ್ಣಂದಿರು ಸೌದಿಯಲ್ಲಿರುವುದರಿಂದ ಆಧುನಿಕ ಸಾಮಗ್ರಿಗಳನ್ನೊಳಗೊಂಡು ಸುಂದರವಾಗೇ ಇದ್ದಿತು ಶಮೀನಾಳಿಗಿಂತ ಸೀಮ ಚೆನ್ನಾಗಿದ್ದಾಳೆ ಎಂದು ಎಲ್ಲರೂ ಹೇಳುವಾಗ ಸೀಮಳಿಗೇಕೋ ವೇದನೆಯಾಗುತ್ತಿತ್ತು. “ಶಮೀನಾ ತನ್ನ ಅಕ್ಕ ಅವಳು ಚೆನ್ನಾಗಿ ಕಾಣಬೇಕು” ಇದು ಸೀಮಳ ಯೋಚನೆ.

ನವೆಂ 20, 2012

ಸತ್ತ ನಂತರ ‘ಒಳ್ಳೆಯವರಾಗಿಬಿಡುವ’ ಪರಿಗೆ ಅಚ್ಚರಿಗೊಳ್ಳುತ್ತ....


ಡಾ ಅಶೋಕ್ ಕೆ ಆರ್
 
‘ಸತ್ತವರ ಬಗ್ಗೆ ಕೆಟ್ಟದ್ದಾಡಬಾರದಂತೆ’; ಅವರು ಬದುಕಿದ್ದಾಗ ಕೆಟ್ಟವರಾಗಿದ್ದಾಗಲೂ ಸಹ! ವ್ಯಕ್ತಿಯೇ ಸತ್ತು ಹೋದ ಮೇಲೆ ಆತನ ಹಳೆಯ ಪುರಾಣಗಳನ್ನು ಕೆದಕುವುದು ಬೇಡವೆಂಬ ಭಾವನೆಯನ್ನೇನೋ ಒಪ್ಪಬಹುದು ಆದರೆ ಇದ್ದ – ಇರದ – ಸೃಷ್ಟಿಸಲ್ಪಟ್ಟ ವಿಶೇಷಣಗಳನ್ನೆಲ್ಲ ಸತ್ತ ವ್ಯಕ್ತಿಯ ವ್ಯಕ್ತಿತ್ವಕ್ಕೆ ಆರೋಪಿಸಿ ಸತ್ತವರಿಗೇ ಬೇಸರ ಬರಿಸುವಷ್ಟು ಹೊಗಳುವುದು ಎಷ್ಟರಮಟ್ಟಿಗೆ ಸರಿ?! ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆಯ ಮರಣದ ನಂತರ ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ ಬಾಳ ಠಾಕ್ರೆಯ ಬಗ್ಗೆ ಬರುತ್ತಿರುವ ವರದಿಗಳನ್ನು ಓದಿದರೆ ನಮ್ಮ ಸಮಾಜದ ಅಧಃಪತನದ ಮನಸ್ಥಿತಿಯ ಪ್ರತಿಬಿಂಬದಂತೆಯೇ ಕಾಣಿಸುತ್ತಿದೆ.

ನವೆಂ 18, 2012

ಆದರ್ಶವೇ ಬೆನ್ನು ಹತ್ತಿ ... ಭಾಗ 12



ಡಾ ಅಶೋಕ್ ಕೆ ಆರ್
ಬೆಳಿಗ್ಗೆ ಎದ್ದ ಕೂಡಲೇ ಲೋಕಿಗೆ ಸಯ್ಯದನ ನೆನಪಾಯಿತು. ‘ನಿನ್ನೆ ನಡೆದ ವಿಷಯಗಳ್ಯಾವುದನ್ನೂ ಆತನಿಗೆ ತಿಳಿಸಲೇ ಇಲ್ಲವಲ್ಲ. ಕಾಂತರಾಜ್ ಸರ್ ನ ಅಮಾನತ್ತು ಮಾಡಿದ ದಿನ ಆತ ನನಗೋಸ್ಕರ ಕಾಲೇಜೆಲ್ಲ ಹುಡುಕಾಡಿದನಂತೆ. ಅಂತಹದ್ರಲ್ಲಿ ನಿನ್ನೆ ನಾನು ಅವನಿಗೆ ಒಂದು ಮಾತೂ ತಿಳಿಸಲಿಲ್ಲವಲ್ಲ. ಪೂರ್ಣಿಯೊಡನೆ ಮಾತನಾಡಿದ ಖುಷಿಯಲ್ಲಿ ಸಯ್ಯದನನ್ನೇ ಮರೆತು ಬಿಟ್ಟೆ’ ಒಂದಷ್ಟು ಬೇಸರವಾಯಿತು ತನ್ನ ವರ್ತನೆಯ ಬಗ್ಗೆ. ಅವನ ಮನೆಗೆ ಹೋಗಿ ವಿಷಯ ತಿಳಿಸಿ ಕಾಲೇಜಿಗೆ ಅವನೊಡನೆಯೇ ಹೋದರಾಯಿತು ಎಂದುಕೊಂಡು ಸ್ನಾನ ಮಾಡಿ ‘ತಿಂಡಿ ಕ್ಯಾಂಟೀನಿನಲ್ಲೇ ತಿಂತೀನಿ’ ಎಂದು ಸ್ನೇಹಳಿಗೆ ತಿಳಿಸಿ ಸಯ್ಯದ್ ಮನೆ ಕಡೆ ಹೊರಟ. ಬಸ್ಸಿನಲ್ಲಿ ಹೋದರೆ ಮೂರು ನಿಮಿಷದ ಪಯಣ, ನಡಿಗೆಯಲ್ಲಿ ಹದಿನೈದು ನಿಮಿಷ ಸಾಕು. ನಡೆದೇ ಹೊರಟ. ಮನೆಯ ಆವರಣದಲ್ಲಿದ್ದ ತೆಂಗಿನಮರದ ಕೆಳಗೆ ಕುರ್ಚಿ ಹಾಕಿಕೊಂಡು ಕುಳಿತಿದ್ದ ಸಯ್ಯದ್. ಕಾಫಿ ಹೀರುತ್ತ ಪತ್ರಿಕೆ ಓದುತ್ತಿದ್ದ. ಗೇಟಿನ ಶಬ್ದವಾದಾಗ ತಿರುಗಿ ನೋಡಿದ.

ನವೆಂ 15, 2012

ರಿಮೋಟಿಗಿಂದು ನಾನೇ ಒಡತಿ!

ಡಾ ಅಶೋಕ್ ಕೆ ಆರ್
ಇವರು ನಿನ್ನೆ ರಾತ್ರಿ ಚಿತ್ರದುರ್ಗಕ್ಕೆ ಹೊರಟರು, ಇವರ ಅಕ್ಕನ ಮಗಳಿಗೆ ಹೆರಿಗೆಯಾಗಿತ್ತು. ವಾರದಿಂದ ಬೆನ್ನು ನೋವು ನನಗೆ, ಮಗನೊಟ್ಟಿಗೆ ಇನ್ನೊಂದು ದಿನ ಹೋದರಾಯಿತೆಂದು ಸುಮ್ಮನಾಗಿದ್ದೆ. ಹಿರಿಮಗ ಹುಣಸೂರಿಗೆ ಸ್ನೇಹಿತನ ಮದುವೆಗೆಂದು ಇವತ್ತು ಬೆಳಿಗ್ಗೆ ಹೊರಟ. ಸೊಸೆ, ಮೊಮ್ಮಗಳು ಅವನೊಂದಿಗೆ ಹೋಗಿದ್ದಾರೆ. ಗೆಳೆಯರೆಲ್ಲಾ ಬಂದಿದ್ದಾರೆ ಅನ್ನೋ ನೆಪ ಮಾಡಿಕೊಂಡು ಬೆಳಗಿನ ಜಾವ ಐದು ಘಂಟೆಗೇ ಬೈಕನ್ನೇರಿ ಕಿರಿಯವನು ಗೋಪಾಲಸ್ವಾಮಿ ಬೆಟ್ಟಕ್ಕೆ ಹೋದ. ಎಂಟು ಘಂಟೆಯವರೆಗೆ ಪತ್ರಿಕೆ ತಿರುವಿ ಹಾಕಿ ಸ್ನಾನಕ್ಕೆ ಹೋದೆ. ಹಂಡೆಯಿಂದ ಬಕೇಟಿಗೆ ನೀರು ವರ್ಗಾಯಿಸುವುದರಲ್ಲಿ ‘ಸ್ನಾನ ಯಾಕೆ ಮಾಡಬೇಕಿವತ್ತು?’ ಎಂದೆನ್ನಿಸಿ ಕೈಕಾಲಿಗೊಂದು ಮುಖ ತೊಳೆಯಲೊಂದು ಚೊಂಬು ನೀರು ಖರ್ಚು ಮಾಡಿ ಉಳಿದದ್ದನ್ನು ಬಚ್ಚಲಿಗೆ ಚೆಲ್ಲಿ ಹೊರಬಂದೆ.