ಮಾರ್ಚ್ 13, 2013

ಭಾರತದ ಮಾಣಿಕ್ಯ – ಮಾಣಿಕ್ ಸರ್ಕಾರ್.



ಡಾ ಅಶೋಕ್ ಕೆ ಆರ್

ಭಾರತ ಬಡದೇಶವೇ? ನಮ್ಮ ರಾಜಕಾರಣಿಗಳು ಅಧಿಕೃತವಾಗಿಯೇ ಘೋಷಿಸಿಕೊಂಡಿರುವ ಆಸ್ತಿ ವಿವರಗಳನ್ನು ನೋಡಿದರೆ ಭಾರತದಲ್ಲಿ ಬಡವರ ಅಸ್ತಿತ್ವವೇ ಇಲ್ಲವೇನೋ ಎಂಬ ಭಾವನೆ ಮೂಡಿದರೆ ತಪ್ಪಲ್ಲ. ಎಲ್ಲೋ ಕೆಲವರನ್ನು ಹೊರತುಪಡಿಸಿ ನಮ್ಮ ಸಂಸದರು ಸಚಿವರು ಶಾಸಕರು ಮುಖ್ಯಮಂತ್ರಿಗಳೆಲ್ಲ ಕೋಟಿಗೂ ಅಧಿಕ ಬೆಲೆಬಾಳುವವರೇ! ಶಾಸನಸಭೆಯಲ್ಲಿ ಯಾರದೂ ವಿರೋಧವಿಲ್ಲದೆ ಅಂಗೀಕೃತವಾಗುವ ಮಸೂದೆ “ಶಾಸಕ – ಸಚಿವರ” ವೇತನ ಹೆಚ್ಚಳ ಮಾತ್ರ! ರಾಜಕಾರಣಿಗಳ ಬಗ್ಗೆ ರಾಜಕೀಯದ ಬಗ್ಗೆ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿರುವ ಸಿನಿಕತೆಯ ನಡುವೆ ರಾಜಕಾರಣವೆಂದರೆ ಕೇವಲ ಹಣ ಮಾಡುವ, ಅನೈತಿಕ ರೀತಿಯಲ್ಲಿ ಜನರ ಮಧ್ಯೆಯೇ ವಿರೋಧ ಬೆಳೆಸುವ ದಂಧೆಯಲ್ಲ ಎಂಬುದನ್ನು ನಿರೂಪಿಸುವ ರಾಜಕಾರಣಿಗಳೂ ಇದ್ದಾರೆ ಎಂದರೆ ನಂಬುವುದು ಕೊಂಚ ಕಷ್ಟದ ಕೆಲಸವೇ ಸರಿ! ಅದರಲ್ಲೂ ಕರ್ನಾಟಕದ ರಾಜಕಾರಣ ಹಿಂದೆಂದೂ ಕಾಣದ ರೀತಿಯಲ್ಲಿ ಅಧಃಪತನಕ್ಕೊಳಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರನ್ನು ಅಪಹಾಸ್ಯದ ಸರಕನ್ನಾಗಿಸಿರುವುದು ಸುಳ್ಳಲ್ಲ.  ಈ ವಿಷಮ ಪರಿಸ್ಥಿತಿಯಲ್ಲಿ ರಾಜಕಾರಣವೆಂದರೆ ಪ್ರಚಾರಕ್ಕಾಗಿ ಹಪಹಪಿಸುವುದಲ್ಲ, ವೋಟಿಗಾಗಿ ನೈತಿಕತೆ ತೊರೆಯುವುದಲ್ಲ, ಇವೆಲ್ಲಕ್ಕಿಂತ ಹೆಚ್ಚಾಗಿ ತನ್ನತನ ಕಳೆದುಕೊಳ್ಳುವುದಲ್ಲ ಎಂಬುದನ್ನು ನಿರೂಪಿಸುತ್ತ ತನ್ನ ಸಾಮರ್ಥ್ಯದ ಮಟ್ಟಿಗೆ ಜನರಿಗೆ ಅನುಕೂಲವನ್ನು ಮಾಡಿಕೊಡುತ್ತಿರುವ ಮಾಣಿಕ್ ಸರ್ಕಾರ್ ಬಗ್ಗೆ ತಿಳಿದುಕೊಳ್ಳುವುದು ರಾಜಕಾರಣಿಗಳಿಗೆ ಮತ್ತವರಿಗೆ ಮತ ನೀಡುವ ಜನರಿಗೂ ಅವಶ್ಯಕ.