ಕು.ಸ.ಮಧುಸೂದನ
'ಆಪರೇಷನ್ ಕಮಲ' ಮತ್ತೊಮ್ಮೆ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಮೈತ್ರಿ ಸರಕಾರ ಆರು ತಿಂಗಳು ಪೂರೈಸುತ್ತಿರುವ ಈ ಸಮಯದಲ್ಲಿ ಬಿಡುಗಡೆಯಾಗಿರುವ ಆಡಿಯೋ ತುಣುಕೊಂದು ಹೀಗೊಂದು ಸಂಶಯವನ್ನು ಹುಟ್ಟು ಹಾಕಿದೆ. ಈ ಆಡಿಯೋ ತುಣುಕಿನ ಸತ್ಯಾಸತ್ಯತೆಯೇನೇ ಇರಲಿ ಈ ಸರಕಾರವನ್ನು ಕೆಡವಿ ಅಧಿಕಾರಕ್ಕೇರಲು ಬಾಜಪ ಪ್ರಯತ್ನಿಸುತ್ತಿರುವುದೇನು ಹೊಸತಲ್ಲ.
ಚುನಾವಣೆಗಳು ಮುಗಿದ ನಂತರ ನೂರಾ ನಾಲ್ಕು ಸ್ಥಾನಗಳನ್ನು ಗೆದ್ದ ಶ್ರೀ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಲೇ ವಿಶ್ವಾಸ ಮತ ಸಾಬೀತಿಗೆ ಬೇಕಾದ ಸಂಖ್ಯೆ ಹೊಂದಲು ಆಪರೇಷನ್ ಕಮಲ ನಡೆಸಲು ಪ್ರಯತ್ನಗಳು ನಡೆದಿದ್ದವು. ವಿಶ್ವಾಸ ಮತದ ಮೇಲಿನ ಚರ್ಚೆಯಲ್ಲಿ ಮಾತಾಡುತ್ತ ಸ್ವತ: ಯಡಿಯೂರಪ್ಪನವರೇ ತಾವು ಕಾಂಗ್ರೆಸ್ ಮತ್ತು ಜನತಾದಳದ ಶಾಸಕರುಗಳನ್ನು ಸಂಪರ್ಕಿಸಿದ್ದು ನಿಜವೆಂದು ಹೇಳಿಕೊಂಡಿದ್ದರು. ಅದಾದ ನಂತರ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರವೂ ಆಪರೇಷನ್ ಕಮಲ ನಡೆಸುವ ನಂಬಿಕೆಯಿಂದಲೇ ಬಾಜಪದ ಬಹುತೇಕ ನಾಯಕರುಗಳು ಈ ಸರಕಾರ ಇನ್ನು ಒಂದು ವಾರದಲ್ಲಿ ಬೀಳುತ್ತದೆ, ಇನ್ನು ಎರಡು ವಾರದಲ್ಲಿ ಬೀಳುತ್ತದೆಯೆಂದು ಭವಿಷ್ಯ ನುಡಿಯುತ್ತ ನಗೆಪಾಟಲಿಗೀಡಾಗುತ್ತ ಹೋಗಿದ್ದು ನಮ್ಮ ಮುಂದಿದೆ. ಇದೀಗ ಚಳಿಗಾಲದ ಅಧಿವೇಶನ ಈ ತಿಂಗಳು ಹತ್ತನೇ ತಾರೀಖು ಪ್ರಾರಂಭವಾಗಲಿದ್ದು, ಅದಕ್ಕೂ ಮುಂಚೆ ಸಂಪುಟ ವಿಸ್ತರಣೆ ಮಾಡುವ ತರಾತುರಿಯಲ್ಲಿರುವ ಮೈತ್ರಿ ಸರಕಾರಕ್ಕೆ ಈಗ ಮತ್ತೆ ಆಪರೇಷನ್ ಕಮಲದ ಭೀತಿ ಎದುರಾಗಿದೆ. ಯಥಾ ಪ್ರಕಾರ ಬಾಜಪ ಈ ಆಡಿಯೋದ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದು ತಮ್ಮ ಪಕ್ಷ ಆಪರೇಷನ್ ಕಮಲ ಮಾಡಲು ಹೊರಟಿಲ್ಲ. ತಾವಾಗಿಯೇ ಪಕ್ಷ ಸೇರಲು ಬಯಸುವ ಶಾಸಕರುಗಳಿಗೆ ಬೇಡ ಎನ್ನುವುದಿಲ್ಲ ಎಂದು ಹೇಳಿಕೆ ನೀಡಿದೆ. ಈ ಆಡಿಯೋದ ಅಧಿಕೃತತೆಯನ್ನು ಮತ್ತು ಇದರ ಮೂಲದ ಬಗ್ಗೆ ಚರ್ಚಿಸುವುದಕ್ಕಿಂತ ಮುಖ್ಯವಾಗಿ ಈಗ ಈ ಆಪರೇಷನ್ ಕಮಲ ಯಾರಿಗೆ ಹೆಚ್ಚು ಅನಿವಾರ್ಯವಾಗಿದೆ ಎಂಬುದನ್ನು ನಾವು ವಿಶ್ಲೇಷಿಸಿ ನೋಡಬೇಕಾಗಿದೆ.