ಡಿಸೆಂ 3, 2018

ಡ್ರಾಫ್ಟ್ ಮೇಲ್: ಭಾಗ 5 - ಒಂದು ಮಡಚಿಟ್ಟ ಪುಟ


ಚೇತನ ತೀರ್ಥಹಳ್ಳಿ.

ಚಿನ್ಮಯಿ ನಿರಾಳವಾಗಿದ್ದಾಳೆ. ಬೆಳಕು ಬಾಗಿಲಿನಾಚೆ ಹೋಗುತ್ತಿದ್ದರೂ ಒಳಗಿನ ಕತ್ತಲು ಮಾಯವಾಗಿದೆ. ಅವಳ ಒಳಗಿನ ಕತ್ತಲು…

ಆಡದೆ ಉಳಿಸಿಕೊಳ್ಳುವ ಮಾತು ಹೇಗೆಲ್ಲ ಜೀವ ಹಿಂಡುತ್ತೆ!
ಡ್ರಾಫ್ಟ್ ಮೇಲ್ ಕಳಿಸುವವರೆಗೂ ಅವಳಿಗೆ ತಾನು ಹೊತ್ತುಕೊಂಡಿದ್ದ ಭಾರ ಗೊತ್ತೇ ಆಗಿರಲಿಲ್ಲ!!
ಹಾಗಂತ ಎಲ್ಲ ಮಾತುಗಳು ಹೊರೆಯಾಗೋದಿಲ್ಲ. ಕೆಲವು ಯೋಗ್ಯತೆಯಲ್ಲಿ ಅದೆಷ್ಟು ಹಗುರವಾಗಿರುತ್ತವೆ ಅಂದರೆ…
ಅವುಗಳನ್ನು ನೆನೆದು ದುಃಖ ಪಡಲಿಕ್ಕೂ ಅಸಹ್ಯ ಅನ್ನಿಸಿಬಿಡುತ್ತೆ.

ಚಿನ್ಮಯಿಗೆ ಗೊತ್ತಿದೆ.
ಕಾಲ ಮೀರಿದ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲವೆಂದು.
ಕೆಲವೊಮ್ಮೆ ಅಂಥ ಮಾತುಗಳು ವ್ಯಾಲಿಡಿಟಿ ಮುಗಿದ ಮಾತ್ರೆಗಳಂತೆ ದುಷ್ಟಪರಿಣಾಮ ಬೀರೋದೇ ಹೆಚ್ಚು!

“ಬೋಲ್ ಕೆ ಲಬ್ ಆಜಾದ್ ಹೈ ತೇರೇ ಜಬಾನ್ ಅಬ್ ತಕ್ ತೇರೀ ಹೈ…” ಅವಳಿಷ್ಟದ ಫೈಜ್ ಪದ್ಯ.
ತಾನು ಕಳಿಸದೇ ಬಿಟ್ಟ ಮೇಲ್’ಗಳನ್ನು ಓದುತ್ತ ಕುಳಿತಿದ್ದಾಳೆ. ಅವನ್ನು ಈಗಲೂ ಯಾರಿಗೂ ಕಳಿಸಲಾರಳು. ಕೆಲವಂತೂ ತನಗೇನೇ ಓದಿಕೊಳ್ಳಲು ಅಸಹ್ಯ!
ತಾನು ಹಾಗೆಲ್ಲ ಇರುವ ಅನಿವಾರ್ಯತೆ ಯಾಕಿತ್ತು? ಯಾಕೆ ಮಾತಾಡಬೇಕಿದ್ದಾಗ ಸದ್ದುಸುರಲಿಲ್ಲ?
ಆಗೆಲ್ಲ ನನ್ನ ತುಟಿಗಳ ಸ್ವಾತಂತ್ರ್ಯ ಕಸಿದಿದ್ದು ಯಾರು? ನನ್ನ ನಾಲಿಗೆ ನನ್ನದಲ್ಲವೆನ್ನುವಂತೆ ಮಾಡಿದ್ದು ಯಾರು!?
ಕೊನೆಪಕ್ಷ ಗೌತಮನ ಬಳಿಯೂ ಹೇಳಿಕೊಳ್ಳಲಿಲ್ಲ!
ಹಳೆಯ ಕಂತುಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 
ಎಷ್ಟು ತೆರೆದ ಪುಸ್ತಕವಾಗಿದ್ದರೂ, ಚಿನ್ಮಯಿಯ ಬದುಕಲ್ಲಿ ಮಡಚಿಟ್ಟ ಪುಟ ಸಾಕಷ್ಟಿವೆ.

~

To: nationalpbhouse@gml.com

Subject: ವಾಸಿಮ್ ಅಕ್ರಮ್ ಅವರು ನೀಡುವ ಕಿರುಕುಳದ ಕುರಿತು

ಖಾಸಿಂ ಸಾಬ್ ಅವರಿಗೆ,
ನಮಸ್ಕಾರ

ನಾನು ಪಬ್ಲಿಶಿಂಗ್ ಹೌಸ್ ತೊರೆಯಲು ನಿರ್ಧರಿಸಿದ್ದೇನೆ. ನಾಳೆ ರಾಜೀನಾಮೆ ಪತ್ರ ನೀಡಲಿದ್ದೇನೆ.
ನಾನು ಕೆಲಸ ಬಿಡಲು ಮುಖ್ಯ ಕಾರಣವನ್ನು ನಿಮ್ಮ ಬಳಿ ತಿಳಿಸಬೇಕೆಂದು ಈ ಮೇಲ್ ಬರೆಯುತ್ತಿದ್ದೇನೆ.
ನನಗೆ ಈ ಸಂಸ್ಥೆ, ಕೆಲಸ, ಸಹೋದ್ಯೋಗಿಗಳು ಯಾವುದರಿಂದಲೂ ಸಮಸ್ಯೆ ಇಲ್ಲ. ನೀವು ಕೂಡಾ ಪ್ರೋತ್ಸಾಹ ನೀಡುತ್ತಿದ್ದೀರಿ.
ಆದರೆ, ನನಗೆ ನಮ್ಮ ವಿಭಾಗದ ಮುಖ್ಯಸ್ಥ ವಾಸಿಮ್ ಅಕ್ರಮ್ ಅವರಿಂದ ತೊಂದರೆಯಾಗುತ್ತಿದೆ. ಅವರು ನನ್ನ ವೈಯಕ್ತಿಕ ಜೀವನದಲ್ಲಿ ಅನಗತ್ಯವಾಗಿ ತಲೆ ಹಾಕುತ್ತಾ ಕಿರುಕುಳ ನೀಡುತ್ತಿದ್ದಾರೆ.
ನನ್ನ ಉಡುಗೆ ತೊಡುಗೆಗಳ ಬಗ್ಗೆ ಕಮೆಂಟ್ ಮಾಡುವುದು, ಅಸಭ್ಯವಾಗಿ ಸ್ಪರ್ಶಿಸುವುದು, ಮತ್ತು ನಾನು ಇಲ್ಲಿ ಹೇಳಲು ಸಾಧ್ಯವಾಗದ, ನನಗೆ ಅಸಹ್ಯ ಅನ್ನಿಸುವಂಥ ವರ್ತನೆ ತೋರುತ್ತಾರೆ.
ನಾನು ನೇರವಾಗಿ ಹೇಳಿದರೂ ಪ್ರಯೋಜನವಾಗಿಲ್ಲ. ನಿಮಗೆ ನೇರವಾಗಿ ದೂರು ನೀಡೋಣ ಅಂದುಕೊಂಡರೆ, ಹಿರಿಯರಾದ ನಿಮ್ಮೆದುರು ಇದನ್ನು ವಿವರಿಸಿ ಹೇಳಲು ಸಾಧ್ಯವಾಗುತ್ತಿಲ್ಲ.
ನನ್ನ ಹಾಗೆ ಮತ್ತೆ ಯಾವ ಸಿಬ್ಬಂದಿಯೂ ಮಾನಸಿಕ ಹಿಂಸೆ ಅನುಭವಿಸಬಾರದು. ಆದ್ದರಿಂದ, ದಯವಿಟ್ಟು ಅಕ್ರಮ್ ಅವರ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿ.

ವಂದೇ,
ಚಿನ್ಮಯಿ ಕೆಸ್ತೂರ್

~

2006 ಜೂನ್ 29ರಂದು ಬರೆದಿಟ್ಟ ಮೇಲ್!
ಚಿನ್ಮಯಿ ಯೋಚಿಸುತ್ತಿದ್ದಾಳೆ.
ತನ್ನ ಆಗಿನ ಪರಿಸ್ಥಿತಿಯಲ್ಲಿ, ಅಸಹಾಯಕತೆಯಲ್ಲಿ ಖಾಸಿಂ ಸಾಹೇಬರ ಎದುರು ನಿಂತು ದೂರು ಹೇಳುವುದು ಕಷ್ಟವಿತ್ತು. ಕೊನೆಪಕ್ಷ ಮೇಲ್ ಮೂಲಕವೂ ಅವರಿಗೆ ರಾಜೀನಾಮೆಯ ನಿಜ ಕಾರಣ ಹೇಳಲಾರದೆ ಹೋದಳು.

ಆದರೆ, ಗೌತಮನಿಗೇಕೆ ಹೇಳಲಿಲ್ಲ!?
ಚಿನ್ಮಯಿ ಅದಕ್ಕೆ ಕಾರಣವೇನಿತ್ತೆಂದು ನೆನೆದು ನಗಾಡುತ್ತಿದ್ದಾಳೆ. ಗೌತಮ ಕೆಲವೊಮ್ಮೆ ದೆವ್ವ ಬಡಿದ ಹಾಗೆ ಆಡುತ್ತಾನೆ!
ಅವಳೇನಾದರೂ ಅದನ್ನು ಅವನ ಬಳಿ ಹೇಳಿಕೊಂಡಿದ್ದರೆ ಖಂಡಿತಾ “ತುರ್ಕ ನನ್ನ ಮಕ್ಕಳು…” ಅಂತ ಶುರು ಮಾಡಿರುತ್ತಿದ್ದ. ಇಸ್ಲಾಂ ಹೇಗೆ ಸೆಕ್ಸ್ ಆಧಾರಿತ ಪಂಥ, ಅಲ್ಲಿ ಹೇಗೆ ಹೆಣ್ಣುಗಳನ್ನು ಕೀಳಾಗಿ ಕಾಣುತ್ತಾರೆ, ಹೇಗೆಲ್ಲ ಬಳಸಿಕೊಳ್ತಾರೆ ಅಂತ ಭಾಷಣ ಬಿಗಿಯುತ್ತಿದ್ದ!

ಚಿನ್ಮಯಿಗೆ ಚೆನ್ನಾಗಿ ಗೊತ್ತಿದೆ. ಅದು ವಾಸಿಮ್ ಅಕ್ರಮ್ ಅಲ್ಲದೆ ವಸಿಷ್ಠ ಆತ್ರೇಯನಾಗಿದ್ದರೂ ಅಂಥ ಅನುಭವ ಖಾತ್ರಿ ಇತ್ತೆಂದು. ಬೇರೆ ಸಂದರ್ಭಗಳಲ್ಲಿ ಅವಳು ಅದನ್ನು ಅನುಭವಿಸಿದ್ದಳು. ಮುಂದೆಯೂ ಸಾಕಷ್ಟು ಇಂಥಾ ಅನುಭವಗಳು ಕಾದಿದೆ ಎಂದೂ ಅವಳಿಗೆ ತಿಳಿದಿತ್ತು.
ಗಂಡಸರ ಅಸೂಕ್ಷ್ಮತೆಯನ್ನು ಒಂದು ಧರ್ಮಕ್ಕೆ ಹಚ್ಚಲು ಚಿನ್ಮಯಿ ತಯಾರಿರಲಿಲ್ಲ. ಗೌತಮ ಅದನ್ನು ಮುಂದಿಟ್ಟುಕೊಂಡು ಏನೆಲ್ಲಾ ಮಾತಾಡುತ್ತಾನೆಂದು ಅವಳಿಗೆ ಗೊತ್ತಿತ್ತು. ಈ ಬಗೆಯ ನಡತೆಗೆ ಕಾಮವಿಕೃತಿಗಿಂತಲು ಗಂಡಸುತನದ ಅಹಮಿಕೆ ಮುಖ್ಯ ಕಾರಣ ಅನ್ನೋದು ಚಿನ್ಮಯಿಯ ನಂಬಿಕೆ. ಹೀಗಿರುವಾಗ ಅಲ್ಲಿ ಧರ್ಮಕ್ಕೇನು ಕೆಲಸ?

ಗೌತಮ ಅದನ್ನು ಒಪ್ಪುತ್ತಿರಲಿಲ್ಲ. ‘ತುರ್ಕರ ಆಕ್ರಮಣ ಕಾಲದಲ್ಲಿ…’ ಅಂತ ಇತಿಹಾಸ ಪಾಠ ಹೇಳುತ್ತಿದ್ದ. ಚಿನ್ಮಯಿಯ ಬಳಿ ದೇಶದೊಳಗಿನ ರಾಜರುಗಳ, ಜನಸಾಮಾನ್ಯರ ಕತೆಗಳೇ ಕೌಂಟರ್ ಕೊಡಲು ಸಾಕಷ್ಟಿದ್ದವು. ಆದರೆ ಈ ವಾಗ್ವಾದ ಕೊನೆಗೆ ದೌರ್ಜನ್ಯವನ್ನು ವಿರೋಧಿಸುತ್ತಿಲ್ಲ ಅನ್ನುವ ಅರ್ಥ ಕೊಡುವಂತಾದರೆ… ಇದನ್ನು ಮುಂದಿಟ್ಟು ಅದನ್ನು ಸಮರ್ಥಿಸುವಂತೆ ಭಾಸವಾದರೆ… ಎಂದೆಲ್ಲ ಗಲಿಬಿಲಿಯಾಗಿ ಮಾತು ನುಂಗುತ್ತಿದ್ದಳು. 

ತುಟಿಗಳನ್ನು ಹೊಲಿಯುವುದು ದೌರ್ಜನ್ಯ ಮಾತ್ರವಲ್ಲ, ಪ್ರೀತಿ ಕೂಡಾ. ನಾಲಿಗೆ ಕಸಿಯುವುದು ದಬ್ಬಾಳಿಕೆ ಮಾತ್ರವಲ್ಲ, ಅತಿಯಾದ ಕಾಳಜಿ ಕೂಡಾ…

~

ಇಷ್ಟಕ್ಕೂ ಅಕ್ರಮ್ ಮಾಡಿದ್ದೇನು?
“ಪಿಜಿ ಗೆ ಹೋಗಿ ಏನು ಮಾಡ್ತೀರಿ…” ಅಂದವ ದನಿ ಬದಲಿಸಿ “ಒಬ್ರೇ…?” ಅನ್ನುತ್ತಿದ್ದ.
“ಎರಡು ವರ್ಷದ ಮೇಲಾಯ್ತಲ್ವ, ಹಸ್ಬೆಂಡ್ ತೀರಿಕೊಂಡು…” ಅಂತ ಒಂದಷ್ಟು ತಿಂಗಳು ಕೇಳಿದವ, ಹತ್ತನೇ ತಿಂಗಳು ಪಾಯಿಂಟಿಗೆ ಬಂದಿದ್ದ; “ನಿಮಗೆ ಅದು ಬೇಕು ಅನ್ಸಲ್ವ?” ಅಂತ ಕೇಳಿದ್ದ.
ಅವನ ದನಿಯಲ್ಲಿದ್ದ ಅಸಹ್ಯವನ್ನು ಬಗೆದು ಕೊಚ್ಚೆಗುಂಡಿಗೆ ಎಸೆಯಬೇಕು ಅನ್ನಿಸಿಬಿಟ್ಟಿತ್ತು ಚಿನ್ಮಯಿಗೆ.
ಒಮ್ಮೆಯಂತೂ… ಆ ಸೀರೆ ನೆನಪಿದೆ. ಹಸಿರು ಪಾಲಿಸ್ಟರ್… ತೆಳ್ಳಗಿತ್ತು ಸ್ವಲ್ಪ. ಎದುರು ಬಂದು ಕೂತವನ ದೃಷ್ಟಿ ಅವಳನ್ನು ಸುಟ್ಟು ಹಾಕುತ್ತಿತ್ತು. ಎದ್ದು ಹೊರಡುವಾಗ ಸವರಿಕೊಂಡೇ ಹೋಗಿದ್ದ, ತನ್ನ ಇಂಗಿತ ಸ್ಪಷ್ಟಪಡಿಸುವಂತೆ.

ಆ ಸಂಜೆ ಪಿಜಿಗೆ ಹೋದವಳೇ ಚಿನ್ಮಯಿ ಸೀರೆಯನ್ನು ಹರಿದು ಚೂರು ಚೂರು ಮಾಡಿದ್ದಳು. ಆಕಾಶ ನೋಡುತ್ತಾ ದಪ್ಪನೆ ಕುಳಿತಿದ್ದ ಮೊಲೆಗಳನ್ನು ಕತ್ತರಿಸಿ ಹಾಕಬೇಕು ಅನ್ನಿಸಿಬಿಟ್ಟಿತ್ತು. ಅವನ ಸ್ಪರ್ಶ ನೆನೆಸಿಕೊಂಡಾಗೆಲ್ಲ ಕಂಬಳಿ ಹುಳು ಹರಿದಂತೆ ಕನಲಿದಳು.

ಇದನ್ನೆಲ್ಲ ಗೌತಮನ ಬಳಿ ಹೇಳುವುದು ಸಾಧ್ಯವಿತ್ತೆ?
ಅವನ ಬಳಿ ಸಂಕೋಚ ಅಂತಲ್ಲ… ಅದನ್ನೆಲ್ಲ ಅವರು ಬಹಳ ನಿರ್ಲಿಪ್ತ ಮತ್ತು ಮುಕ್ತವಾಗಿ ಮಾತಾಡುತ್ತಿದ್ದರು.

ಈ ಪ್ರಕರಣದಲ್ಲೂ ಅವನ ಉತ್ತರ ಏನಿರುತ್ತದೆ ಎಂದು ಚಿನ್ಮಯಿಗೆ ತಿಳಿದಿತ್ತು.
“ನೀನ್ಯಾಕೆ ಮೈ ಕಾಣೋಹಾಗೆ ತೆಳ್ಳನೆ ಸೀರೆ ಉಟ್ಕೊಂಡು ಹೋಗಿದ್ದೆ?” ಅಂತ ಶುರು ಮಾಡಿ, “ಯೋಗ್ಯತೆ ಇಲ್ಲದವರಷ್ಟೆ ಮೈತೋರಿಸುವ ಬಟ್ಟೆ ಹಾಕ್ಕೊಳ್ಳೋದು” ಅನ್ನುವವರೆಗೆ ಪಾಠ ಮಾಡುತ್ತಿದ್ದ.
ಚಿನ್ಮಯಿಗೆ ಅದನ್ನು ನೆನೆಸಿಕೊಂಡರೇ ರೇಜಿಗೆಯಾಗುತ್ತಿತ್ತು.
ಗಂಡಸಿನ ಕರ್ಮಕ್ಕೆ ಧರ್ಮವನ್ನು ಮುಂದೆ ತಂದು, ಕೊನೆಗೆ ನನ್ನ ಬಟ್ಟೆಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಾನೆ ಅಂದುಕೊಂಡು ಸುಮ್ಮನಾಗಿದ್ದಳು.

~

ಅಷ್ಟಾದರೂ ಗೌತಮನಿಗೆ ನನ್ನ ಬಗ್ಗೆ ಕಾಳಜಿ ಇರಲಿಲ್ಲ ಅಂದುಕೊಳ್ಳಬಹುದೆ?
ಅವನು ಬಟ್ಟೆಯಾಚೆಗೆ ನನ್ನ ಬಗ್ಗೆ ಆಲೋಚಿಸುತ್ತಿರಲಿಲ್ಲವೆ?
ನನ್ನ ಜೊತೆ ಒಬ್ಬ ಗಂಡಸು ಅಸಹ್ಯವಾಗಿ ನಡೆದುಕೊಂಡರೆ ಅವನಿಗೆ ಏನೂ ಅನ್ನಿಸುತ್ತಲೇ ಇರಲಿಲ್ಲವೆ?

ಚಿನ್ಮಯಿಗೆ ಈ ಪ್ರಶ್ನೆಗಳನ್ನು ಕೇಳಿಕೊಳ್ಳಲು ಬಹಳ ಇಷ್ಟ.
ಅವೆಲ್ಲದರ ಉತ್ತರ ಅವಳಿಗೆ ಗೊತ್ತಿದೆ.
ಗೌತಮ ಚಿನ್ಮಯಿಯ ನೆಮ್ಮದಿಗಾಗಿ ಏನು ಮಾಡಲಿಕ್ಕೂ ಸಿದ್ಧನಿದ್ದ. ಎಷ್ಟೆಂದರೆ, ಅವನ ಕಡೆಯ ‘ಹುಡುಗರನ್ನು’ ಅಕ್ರಮ್ ಮೇಲೆ ಬಿಟ್ಟು ‘ಬುದ್ಧಿ ಕಲಿಸಲಿಕ್ಕೆ’ ಕೂಡಾ!

ಆದರೆ ಚಿನ್ಮಯಿಗೆ ಅವನು ಬಡಿದಾಡುವುದು ಕೂಡಾ ಬೇಡವಿತ್ತು.
ಚಿನ್ಮಯಿಗೆ ಗೌತಮ ತನಗಾಗಿ ಏನೆಲ್ಲ ಮಾಡಬಲ್ಲ ಅಂತ ಊಹಿಸುವುದೇ ಒಂದು ಸುಖ.
ಅವನು ಖಂಡಿತವಾಗಿ ಮಾಡುತ್ತಾನೆ ಅಂತ ಗೊತ್ತಿರುವುದರಿಂದಲೇ ತಾನು ಏನೆಲ್ಲವನ್ನೂ ಕೇಳದೆ ಬಿಟ್ಟಿದ್ದಳು!

~

“ವೇರ್ ಆರ್ ಯು?” ಚಿನ್ಮಯಿ ಗೌತಮನಿಗೆ ವಾಟ್ಸಪ್ ಮಾಡುತ್ತಿದ್ದಾಳೆ.
ಅವಳೀಗ ನಿರಾಳ.
ತನ್ನ ಹೊಸ ಘನಕಾರ್ಯವನ್ನು ಅವನಿಗೆ ಹೇಳಬೇಕು ಅನ್ನಿಸಿದೆ.
ಎರಡೇ ನಿಮಿಷದಲ್ಲಿ ‘ಅಟ್ಲಾಂಟ’ ಅನ್ನುವ ಉತ್ತರ.
‘ದುಷ್ಟ’ ಅಂತ ರಿಪ್ಲೆ ಕಳಿಸಿ ಸುಮ್ಮನಾಗುತ್ತಾಳೆ.
‘ಆಯುರ್ವೇದ ಉದ್ಧಾರ ಮಾಡಲಿಕ್ಕೋ ಅಥವಾ ಧನ್ವಂತರಿಯನ್ನೋ!?” ಕೇಳಬೇಕೆಂದು ಕೈ ಕಡಿಯುತ್ತದೆ. ಕಷ್ಟಪಟ್ಟು ತಡೆದುಕೊಳ್ಳುತ್ತಾಳೆ.

“ಅರೆ! ನಾನು ಮೂರನೆ ಕೆಲಸಕ್ಕೆ ಸೇರುವಾಗಲೂ ಗೌತಮ ವಿದೇಶದಲ್ಲಿದ್ದ. ಅದು ಅವನ ಮೊದಲ ವಿದೇಶ ಪ್ರಯಾಣವಾಗಿತ್ತು…”
ಚಿನ್ಮಯಿಗೆ ನೆನಪಾಗುತ್ತದೆ.

ಆಗಲೂ ಧನ್ವಂತರಿಯ ಕೆಲಸಕ್ಕೇ ಅಲ್ಲವೆ ಅವನು ಹೋಗಿದ್ದು! 

ಧನ್ವಂತರಿಯ ನೆನಪಾಗುತ್ತಲೇ ಅವಳಿಗೆ ಮೈಯುರಿ. ಶಿವಾನಿ ಕೂಡಾ ಗೌತಮ ಮತ್ತು ಚಿನ್ಮಯಿಯನ್ನು ದೂರ ಮಾಡಿರಲಿಲ್ಲ. ಆದರೆ ಧನ್ವಂತರಿ…!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ