ಕು.ಸ.ಮಧುಸೂದನ ರಂಗೇನಹಳ್ಳಿ
ಅಂತೂ ವಿವಿದ ರಾಜಕೀಯ ಪಕ್ಷಗಳ ಮತ್ತು ರಾಜಕೀಯ ಪಂಡಿತರುಗಳ ವಿರೋಧಗಳ ನಡುವೆಯೂ ದೇಶದಲ್ಲಿ ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿದಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ತನ್ನ ನಿಲುವಿಗೆ ಬದ್ದವಾಗಿರುವ ಬಾಜಪ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಂತೆ ಕಾಣುತ್ತಿದೆ. ಇದೀಗ ಅದು ಮುಂದಿನ ವರ್ಷದ ಮೇ ತಿಂಗಳಲ್ಲಿ ನಡೆಯಬಹುದಾದ ಲೋಕಸಭಾ ಚುನಾವಣೆಗಳ ಜೊತೆಗೆ ದೇಶದ ಇತರೆ ಹನ್ನೊಂದು ರಾಜ್ಯಗಳ ವಿದಾನಸಭೆಗಳಿಗೂ ಚುನಾವಣೆ ನಡೆಸುವ ಶಿಫಾರಸ್ಸೊಂದನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳಿಸುವ ಬಗ್ಗೆ ಚಿಂತಿಸುತ್ತಿದೆ. ಈ ಹಿನ್ನೆಲೆಯಲ್ಲಿಯೇ ಬಾಜಪದ ರಾಷ್ಟ್ರೀಯ ಅದ್ಯಕ್ಷರಾದ ಶ್ರೀ ಅಮಿತ್ ಷಾರವರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ಇನ್ನು ಕೇಂದ್ರ ಸರಕಾರ ಅಧಿಕೃತವಾಗಿ ಈ ಬಗ್ಗೆ ಚುನಾವಣಾ ಅಯೋಗಕ್ಕೆ ಶಿಫಾರಸ್ಸು ಮಾಡುವ ಸಾದ್ಯತೆ ಹೆಚ್ಚಿದೆ.
ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಬೇಕಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಡ್, ಮಿಜೋರಾಂ ರಾಜ್ಯಗಳಲ್ಲಿ ಮುಂದಿನ ಮೆ ತಿಂಗಳವರೆಗು ರಾಜ್ಯಪಾಲರ ಆಡಳಿತವನ್ನು ಹೇರುವುದು. 2019ರ ಅಂತ್ಯಕ್ಕೆ ಅವಧಿ ಮುಗಿಯಲಿರುವ ತಮ್ಮದೇ ಆಡಳಿತ ಇರುವ ಮಹಾರಾಷ್ಟ್ರ,ಹರಿಯಾಣ, ಜಾರ್ಖಂಡ್ ರಾಜ್ಯಗಳ ಸರಕಾರಗಳನ್ನು ಅವಧಿಗೆ ಮುಂಚಿತವಾಗಿಯೇ ವಿದಾನಸಭೆ ವಿಸರ್ಜಿಸಿ ಲೋಕಸಭಾ ಚುನಾವಣೆಯ ಜೊತೆಗೆ ಸದರಿ ರಾಜ್ಯಗಳಿಗೂ ಚುನಾವಣೆ ನಡೆಸುವಂತೆ ಆಯೋಗವನ್ನು ಕೋರುವ ನಿರ್ಣಯವನ್ನು ಅಂಗೀಕರಿಸುವಂತೆ ಮಾಡುವುದು. 2020ಕ್ಕೆ ಚುನಾವಣೆಗೆ ಹೋಗಬೇಕಿರುವ ಬಿಹಾರದಲ್ಲಿ ತಮ್ಮ ಮೈತ್ರಿ ಸರಕಾರದ ನೇತೃತ್ವ ವಹಿಸಿರುವ ಸಂಯುಕ್ತ ಜನತಾದಳದ ಶ್ರೀ ನಿತೀಶ್ ಕುಮಾರ್ ಅವರ ಮನವೊಲಿಸಿ ಬಿಹಾರದ ವಿದಾನಸಭೆಯನ್ನೂ ಅವಧಿಗೆ ಮುನ್ನವೇ ವಿಸರ್ಜಿಸಿ ಲೋಕಸಭೆಯ ಜೊತೆಗೇನೆ ಚುನಾವಣೆಗೆ ಹೋಗುವಂತೆ ಮಾಡುವುದು. ಅಲ್ಲಿಗೆ ತಮ್ಮ ಹಿಡಿತದಲ್ಲಿರುವ ಎಂಟು ರಾಜ್ಯಗಳನ್ನು ಚುನಾವಣೆಗೆ ಸಿದ್ದಪಡಿಸಿದಂತಾಗುತ್ತದೆ. ಇದರ ಜೊತೆಗೆ ಹೇಗಿದ್ದರೂ ಮುಂದಿನ ಮೇ ತಿಂಗಳ ಹೊತ್ತಿಗೆ ಸಹಜವಾಗಿಯೆ ಚುನಾವಣೆ ನಡೆಯಬೇಕಿರುವ ಆಂದ್ರ ಪ್ರದೇಶ, ತೆಲಂಗಾಣ, ಒಡಿಶ್ಸಾ ರಾಜ್ಯಗಳೂ ಸೇರಿಕೊಂಡರೆ ದೇಶದ ಮುವತ್ತು ರಾಜ್ಯಗಳ ಪೈಕಿ ಸುಮಾರು ಹನ್ನೊಂದು ರಾಜ್ಯಗಳು ಲೋಕಸಭೆಯ ಜೊತೆಗೆಯೇ ಚುನಾವಣೆ ಎದುರಿಸುವಂತಾಗುತ್ತದೆ. ಇದು ಸದ್ಯದಲ್ಲಿ ಬಾಜಪ ಮಾಡಲಿರುವ ಶಿಫಾರಸ್ಸಿನ ಹಿಂದಿರುವ ಚಾಣಾಕ್ಷ್ಯ ನಡೆಯಾಗಿದೆ.