ಆಗ 10, 2016

ಗೋವಾ ವಿದಾನಸಭಾ ಚುನಾವಣೆಗಳು: ಅಖಾಡಕ್ಕಿಳಿಯಲಿರುವ ಆಮ್ ಆದ್ಮಿ ಪಕ್ಷ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
10/08/2016
ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿದಾನಸಭೆಗಳ ಚುನಾವಣೆಗಳು ತಮ್ಮದೇ ಆದ ರಾಜಕೀಯ ಕಾರಣಗಳಿಗಾಗಿ ಮಾಧ್ಯಮಗಳಲ್ಲಿ ಪ್ರಾಮುಖ್ಯತೆ ಪಡೆದು ಚರ್ಚಿತವಾಗುತ್ತಿದ್ದರೆ, ಗೋವಾದಂತಹ ಪುಟ್ಟ ರಾಜ್ಯಗಳಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆಯಾಗಲಿ ಅವು ರಾಷ್ಟ್ರ ರಾಜಕಾರಣಕ್ಕೆ ನೀಡಬಲ್ಲ ಕೊಡುಗೆಗಳ ಬಗ್ಗೆಯಾಗಲಿ ನಾವ್ಯಾರು ಗಂಭೀರವಾಗಿ ಯೋಚಿಸುತ್ತಿಲ್ಲವೆಂಬುದು ವಿಷಾದದ ಸಂಗತಿ. ರಾಷ್ಟ್ರದ ಸಂಸತ್ತಿಗೆ ಅತಿ ಹೆಚ್ಚು ಸಂಸದರನ್ನು ನೀಡುವ ಉತ್ತರಪ್ರದೇಶಕ್ಕಾಗಲಿ, ಪ್ರದಾನಿಯವರ ತವರು ರಾಜ್ಯ ಗುಜರಾತಿಗಾಗಲಿ, ದೆಹಲಿಯ ಸನಿಹದಲ್ಲಿರುವ ಪಂಜಾಬಿಗಾಗಲಿ ನೀಡುವ ರಾಜಕೀಯ ಪ್ರಾದಾನ್ಯತೆಯಲ್ಲಿ ಒಂದಿಷ್ಟನ್ನಾದರು ನಾವು ಗೋವಾದಂತಹ ಪುಟ್ಟ ರಾಜ್ಯಗಳಿಗೆ ನೀಡದೇ ಹೋದರೆ ‘ಭಿನ್ನತೆಯಲ್ಲಿ ಏಕತೆ’ ಎನ್ನುವ ನಮ್ಮ ಘೋಷವಾಕ್ಯಕ್ಕೆ ಯಾವ ಅರ್ಥವೂ ಇರುವುದಿಲ್ಲ. ಅದರಲ್ಲೂ ಈಗ ರಾಷ್ಟ್ರದ ರಕ್ಷಣಾ ಮಂತ್ರಿಯಾಗಿರುವವರು ಗೋವಾದವರು ಎಂಬ ಹಿನ್ನೆಲೆಯಲ್ಲಾದರು ಗೋವಾದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಹೊಂದಿರುವುದು ಅಗತ್ಯವಾಗಿದೆ. ಗೋವಾ ಮತ್ತು ಕರ್ನಾಟಕದ ನಡುವೆ ಭುಗಿಲೆದ್ದಿರುವ ಮಹಾದಾಯಿ ನದಿನೀರಿನ ಹಂಚಿಕೆಯ ವಿವಾದದ (ಕಳಸಾ ಬಂಡೂರಿ ಹೋರಾಟ) ಈ ಸನ್ನಿವೇಶದಲ್ಲಿ ಗೋವಾದ ರಾಜಕಾರಣದಲ್ಲಾಗಬಹುದಾದ ಸಣ್ಣಪುಟ್ಟ ಕದಲಿಕೆಗಳು ಕರ್ನಾಟಕದ ಮಟ್ಟಿಗೆ ಮುಖ್ಯವಾಗುವ ದೃಷ್ಠಿಯಿಂದಲಾದರು ನಾವು ಕನ್ನಡಿಗರು ಗೋವಾದ ಪ್ರಸಕ್ತ ರಾಜಕೀಯದ ಬೆಳವಣಿಗೆ ಮತ್ತು ಬದಲಾವಣೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುವುದು ಅಗತ್ಯವೆಂಬ ನನ್ನ ಆಶಯವೇ ಈ ಬರಹಕ್ಕೆ ಮುಖ್ಯ ಕಾರಣವೆಂದರೆ ತಪ್ಪಾಗಲಾರದು.

1985 ರ ನಂತರ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನಗಳನ್ನು ಪಡೆದ ನಂತರ ಗೋವಾದ ರಾಜಕೀಯ ಚಿತ್ರಣ ಬದಲಾಗುತ್ತ ಹೋಯಿತು. ಅಲ್ಲಿಯವರೆಗಿದ್ದ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಅಧಿಪತ್ಯ ಇಲ್ಲವಾಗುತ್ತ ಕಾಂಗ್ರೆಸ್ ಮತ್ತು ಬಾಜಪಗಳ ನಡುವೆ ನೇರ ಹಣಾಹಣಿಯ ಚುನಾವಣಾ ಕಾಳಗ ಶುರುವಾಯಿತು. ಈ ಎರಡೂ ರಾಷ್ಟ್ರೀಯ ಪಕ್ಷಗಳು ಒಂದೊಂದು ಮೈತ್ರಿಕೂಟವನ್ನು ರಚಿಸಿಕೊಂಡೇ ಚುನಾವಣೆ ಎದುರಿಸುತ್ತ ಬಂದವು. ತನ್ನ ಮೊದಲಿನ ಪ್ರಾಬಲ್ಯ ಕಳೆದುಕೊಂಡ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ಆಗಾಗ ತನ್ನ ಮೈತ್ರಿಕೂಟವನ್ನು ಬದಲಾಯಿಸುತ್ತ ಗೋವಾ ರಾಜಕಾರಣದ ಏಳು ಬೀಳುಗಳನ್ನು ನಿಯಂತ್ರಿಸತೊಡಗಿತು. ಇವುಗಳ ಜೊತೆಗೆ ಶರದ್‍ಪವಾರರ ಎನ್.ಸಿ.ಪಿ. ಗೋವಾ ವಿಕಾಸ್ ಪಕ್ಷಗಳು ಕೂಡ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದವು.

ಇನ್ನು 2005ರಿಂದ 2012ರವರೆಗು ಅಧಿಕಾರ ನಡೆಸಿದ ಕಾಂಗ್ರೆಸ್ 2012 ರಲ್ಲಿ ಬಾಜಪ ಮೈತ್ರಿಕೂಟದ ಎದುರು ಸೋಲನ್ನಪ್ಪಿ ಕೂರಬೇಕಾಯಿತು. ಗೋವಾದ ಒಟ್ಟು 40 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳನ್ನು( ಬಾಜಪ-21, ಗೋಮಾಂತಕ್ ಪಕ್ಷ-3) ಗೆದ್ದ ಬಾಜಪ ಇಂದಿನ ರಕ್ಷಣಾ ಮಂತ್ರಿಯಾಗಿರುವ ಶ್ರೀ ಮನೋಹರ್ ಪರಿಕ್ಕರ್ ಅವರನ್ನು ತನ್ನ ಮುಖ್ಯಮಂತ್ರಿಯನ್ನಾಗಿಸಿತು. ಕೇವಲ 9 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕೂರಬೇಕಾಗಿ ಬಂತು. ನಂತರ 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ದಿಸಿ ಗೆದ್ದ ಮನೋಹರ್ ಪಣಿಕ್ಕರ್ ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಆಗ ತೆರವಾದ ಮುಖ್ಯಮಂತ್ರಿಯ ಕುರ್ಚಿಯನ್ನು ಅಲಂಕರಿಸಿದವರು ಮನೋಹರ್ ಅವರ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ಶ್ರೀ ಲಕ್ಷಿಕಾಂತ್ ಪರೇಸ್ಕರ್. ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಜಿ ಪ್ರಚಾರಕರಾಗಿದ್ದವರು. 

ಮುಂದಿನ ವರ್ಷದ ಚುನಾವಣೆಯನ್ನು ಎದುರಿಸಲು ಬಾಜಪ ತಮ್ಮ ಮುಖ್ಯಮಂತ್ರಿಯಾದ ಲಕ್ಷ್ಮಿಕಾಂತ್ ಅವರನ್ನೇ ಅವಲಂಬಿಸುವ ಪರಿಸ್ಥಿತಿಯಿದೆ. ಆದರೆ ಪಕ್ಷದ ಆಂತರಿಕ ವಲಯದಲ್ಲಿ ಇವತ್ತಿಗೂ ಮನೋಹರ್ ಪಣಿಕ್ಕರ್ ಅವರ ಬಗ್ಗೆಯೇ ಹೆಚ್ಚು ಒಲವಿದ್ದರೂ, ಅವರು ಹಿಂದಿರುಗಿ ರಾಜ್ಯ ರಾಜಕಾರಣಕ್ಕೆ ಬರುವುದನ್ನು ಪಕ್ಷವಾಗಲಿ, ಅವರಾಗಲಿ ಒಪ್ಪಲು ಸಾದ್ಯವಿಲ್ಲ. ಹೀಗಾಗಿ ಕಳೆದೆರಡು ವರ್ಷಗಳಿಂದ ಮುಖ್ಯಮಂತ್ರಿಯಾಗಿರುವ ಪರೇಸ್ಕರ್ ಅವರೇ ಬಾಜಪವನ್ನು ಮುನ್ನಡೆಸಲಿದ್ದು ಸ್ವತ: ಮನೋಹರ್ ಪಣಿಕ್ಕರ್ ಅವರೇ ಇದನ್ನು ಖಚಿತ ಪಡಿಸಿದ್ದಾರೆ. ಇನ್ನು ಬಾಜಪದ ಮೈತ್ರಿಕೂಟದಲ್ಲಿ ಯಾವ ಬದಲಾವಣೆಯೂ ಆಗುವ ಸಾದ್ಯತೆಗಳಿಲ್ಲವಾಗಿ ಅದು ಯಾವುದೆ ಭಿನ್ನಮತಗಳಿಲ್ಲದೆ ಚುನಾವಣೆ ಎದುರಿಸಲು ಸಜ್ಜಾಗಿದೆ. ಸದ್ಯಕ್ಕೆ ಅದಕ್ಕಿರುವ ದೊಡ್ಡ ತೊಡಕೆಂದರೆ ಆಡಳಿತ ವಿರೋಧಿ ಅಲೆಯ ಭಯವಷ್ಟೆ!

ಇನ್ನು ಕಾಂಗ್ರೆಸ್ ಕೂಡ ತನ್ನ ಚುನಾವಣಾ ಸಿದ್ದತೆಗಳನ್ನು ಮಾಡಿಕೊಳ್ಳಲು ಪ್ರಾರಂಬಿಸಿದ್ದು, ಈ ಬಾರಿ ಅದು ಯಾವ ಪಕ್ಷಗಳ ಜೊತೆಗು ಮೈತ್ರಿ ಮಾಡಿಕೊಳ್ಳದಿರಲು ನಿರ್ದರಿಸಿದೆ. ಹಾಗೊಂದು ವೇಳೆ ಮೈತ್ರಿಯ ಅನಿವಾರ್ಯತೆ ಎದುರಾದರೆ ಬ್ಲಾಕ್ ಮಟ್ಟದಲ್ಲಿ ಪಕ್ಷದ ನಾಯಕರು ತೆಗೆದುಕೊಳ್ಳಬಹುದಾದ ತೀರ್ಮಾನಗಳನ್ನು ಆಧರಿಸಿಯೇ ತೆಗೆದುಕೊಳ್ಳಲಾಗುವುದೆಂದು ಅದರ ಕೇಂದ್ರ ನಾಯಕರು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಮಾಂಡೋವಿ ನದಿಯಿಂದ ಕ್ಯಾಸೀನೊಗಳನ್ನು ಸ್ಥಳಾಂತರಿಸುವ ವಿವಾದವನ್ನು ಕೈಗೆತ್ತಿಕೊಂಡಿರುವ ಕಾಂಗ್ರೆಸ್ ಬಾಜಪವು ಗೋವಾದ ಕ್ಯಾಸಿನೋ ಮಾಲೀಕರ ಜೊತೆ ಕೈ ಜೋಡಿಸಿ ಸರಕಾರ ನಡೆಸುತ್ತಿದ್ದಾರೆಂಬ ಗಂಭೀರ ಆರೋಪವನ್ನು ಸಹ ಮಾಡಿದೆ. ಗೋವಾ ಪ್ರದೇಶ ಕಾಂಗ್ರೆಸ್ ಅದ್ಯಕ್ಷ ಲೂಸಿನೊ ಫೆಲೆರೋ ಈ ಬಗ್ಗೆ ಮಾಧ್ಯಮಗಳ ಮೂಲಕ ತಮ್ಮ ಹೋರಾಟವನ್ನು ನಡೆಸುತ್ತಿದ್ದಾರೆ.

ಇವೆಲ್ಲಕ್ಕಿಂತ ಈ ಬಾರಿ ಗೋವಾ ಚುನಾವಣೆಗಳ ಮುಖ್ಯವಾದ ಅಂಶವೆಂದರೆ ದೆಹಲಿಯ ಗದ್ದುಗೆಯನ್ನು ಹಿಡಿದು ಕೂತಿರುವ ಆಮ್ ಆದ್ಮಿ ಪಕ್ಷದ ಶ್ರೀ ಅರವಿಂದ್ ಕೇಜ್ರೀವಾಲ್ ಗೋವಾದ ವಿದಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಭ್ಯರ್ಥಿಗಳನ್ನು ಹಾಕುವುದಾಗಿ ಘೋಷಿಸಿರುವುದಾಗಿದೆ. ಬಹುಶ: ಅಧಿಕಾರ ರೂಢ ಬಾಜಪಕ್ಕೆ ತಲೆ ನೋವಾಗಿರುವುದೇ ಇದು. ಇತ್ತೀಚೆಗೆ ಈ ಸಂಬಂದವಾಗಿ ಗೋವಾದಲ್ಲಿ ಒಂದು ರ್ಯಾಲಿಯನ್ನು ಉದ್ದೇಶಿಸಿ ಮಾತಾಡಿದ ಅರವಿಂದ್ ಕೇಜ್ರೀವಾಲರು 40 ಕ್ಷೇತ್ರಗಳ ಪೈಕಿ 35 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿ, ಹಿಂದೆ ದೆಹಲಿಯಲ್ಲಿ ಮಾಡಿದಂತೆ ಮನೆಮನೆಗೆ ತೆರಳಿ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ನೀಡುವ ಪ್ರಚಾರ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಗೋವಾದ ಸ್ಥಳೀಯ ಸಮಸ್ಯೆಗಳ ಕುರಿತಾದ ಗೋವಾ ಸಂವಾದ್ ಎನ್ನುವ ಕೈಪಿಡಿಯನ್ನೂ ಈಗಾಗಲೇ ಸಿದ್ದಪಡಿಸುವ ಕಾರ್ಯ ನಡೆಯುತ್ತಿದೆ. ಗೋವಾದ ಸಾಕ್ಷರತೆ ಪ್ರಮಾಣ ಶೇಕಡಾ 88.70 ಇದ್ದು ಆಮ್ ಆದ್ಮಿ ಪಕ್ಷ ತನ್ನ ಪ್ರಣಾಳಿಕೆಗಳ ಮೂಲಕ ಹೆಚ್ಚು ಜನರನ್ನು ತಲುಪುವ ಸಾದ್ಯತೆ ಹೆಚ್ಚಾಗಿದೆ. ಆಮ್ ಆದ್ಮಿ ಪಕ್ಷದ ನಿಲುವನ್ನು ಮೆಚ್ಚಬಲ್ಲ ಜನರು ಗೋವಾದಲ್ಲಿ ಹೆಚ್ಚಿದ್ದರು, ಅದು ಈವರೆಗೆ ದೆಹಲಿಯಲ್ಲಿ ನಡೆಸಿದ ಆಡಳಿತದ ವೈಖರಿಯನ್ನು ಗಮನಿಸಿರುವ ಗೋವಾದ ಮತದಾರರು ಬಹಳ ಯೋಚಿಸಿಯೇ ಈ ತೀರ್ಮಾನಕ್ಕೆ ಬರಲಿದ್ದಾರೆ. 2017 ರಲ್ಲಿಯೇ ಅಧಿಕಾರ ಹಿಡಿಯಲು ಕಷ್ಟವೆಂಬುದನ್ನು ಅರಿತಿರುವ ಕೇಜ್ರೀವಾಲರು 2019ರ ಲೋಕಸಭಾ ಚುನಾವಣೆಗಾಗಿ ಈ ಚುನಾವಣೆಯನ್ನು ಪೂರ್ವಬಾವಿ ಸಿದ್ದತಾ ಚುನಾವಣೆಯನ್ನಾಗಿ ಬಳಸಿಕೊಳ್ಳಲು ನಿರ್ದರಿಸಿದಂತಿದೆ. ಆದರೆ ರಾಜಕಾರಣದಲ್ಲಿ ಒಂದು ವರ್ಷದ ಅವಧಿ ದೊಡ್ಡದು. ಹಾಗಾಗಿ ಮುಂದಿನ ಚುನಾವಣೆಯ ಹೊತ್ತಿಗೆ ಗೋವಾದ ರಾಜಕಾರಣದಲ್ಲಿ ಆಗಬಹುದಾದ ಬೆಳವಣಿಗೆಗಳನ್ನಾಗಲಿ, ಬೀಸಬಹುದಾದ ಹೊಸಗಾಳಿಯ ಬಗೆಗಾಗಲಿ ನಾವೀಗಲೇ ಭವಿಷ್ಯ ನುಡಿಯಲಾಗುವುದಿಲ್ಲ.

ಕೊನೆಯದಾಗಿ: ಕರ್ನಾಟಕದ ಉತ್ತರ ಭಾಗದಲ್ಲಿ ನಡೆಯುತ್ತಿರುವ ಕಳಸಾ ಬಂಡೂರಿ ಹೋರಾಟದ ಹಿನ್ನೆಲೆಯಲ್ಲಿ ನೋಡಿದರೆ ಬಾಜಪ ಅಥವಾ ಕಾಂಗ್ರೆಸ್ ಯಾವುದೇ ಪಕ್ಷ ಅಲ್ಲಿ ಅಧಿಕಾರಕ್ಕೆ ಬಂದರೂ ಮಹಾದಾಯಿ ನದಿ ನೀರಿನ ಹಂಚಿಕೆಗೆ ನ್ಯಾಯಾಧಿಕರಣದ ಆಚೆಗೊಂದು ಪರಿಹಾರ ಸಿಗುತ್ತದೆಯೆಂದು ನಂಬಲು ಸಾದ್ಯವಿಲ್ಲ. ಯಾಕೆಂದರೆ ಬಾಜಪವಾಗಲಿ, ಕಾಂಗ್ರೆಸ್ಸಾಗಲಿ ಮಹದಾಯಿ ನದಿಯನ್ನು ಮುಂದಿನ ಚುನಾವಣೆಯ ಮುಖ್ಯ ವಿಷಯವನ್ನಾಗಿ ಮಾಡಿ ಗೋವಾ ಜನರ ಮತಗಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಗೋವಾದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೇರಿದರೂ ನಾವು ನ್ಯಾಯಾಲಯದ ಮೂಲಕವೇ ಹೋರಾಡಿ ನೀರು ಪಡೆಯಬೇಕಾಗಿದೆ. ಗೋವಾ ಕನ್ನಡಿಗರು ತಮ್ಮದೇ ಆದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ರಾಜ್ಯದ ಹಿತಕಾಯುವ ಪಕ್ಷಕ್ಕೆ ನಮ್ಮ ಮತವೆಂದು ಘೋಷಿಸುವ ಸ್ಥಿತಿಯಲ್ಲಿ ಇಲ್ಲ. ಗೋವಾದ ಕನ್ನಡಿಗರಿಗೆ ಇವತ್ತಿಗೂ ಶಾಶ್ವತ ವಸತಿ ಸೌಲಭ್ಯವಾಗಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಲಭ್ಯತೆಯಾಗಲಿ ಇಲ್ಲದೆ ಅತಂತ್ರ ಸ್ತಿತಿಯಲ್ಲಿರುವುದರಿಂದ ನಾವು ಅವರಿಂದ ಅಂತಹದೊಂದು ನಿರೀಕ್ಷೆ ಇಟ್ಟುಕೊಳ್ಳುವುದು ಕೂಡ ತಪ್ಪಾಗುತ್ತದೆ. ಹಾಗಾಗಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಗಳ ನಂತರ ಮಹಾದಾಯಿ ಸಮಸ್ಯೆ ಬಗೆ ಹರಿದು ಬಿಡುತ್ತದೆಯೆಂದು ನಂಬುವುದು ಮೂರ್ಖತನವಗುತ್ತದೆ. 

ಆಗ 9, 2016

ದಲಿತರು ತೋರಿದ ‘ಗುಜರಾತ್ ಮಾದರಿ’

ಡಾ. ಅಶೋಕ್. ಕೆ. ಆರ್
09/08/2016
ಕಳೆದ ಐದಾರು ವರುಷಗಳಿಂದ ‘ಗುಜರಾತ್ ಮಾದರಿ’ ಎಂಬ ಪದವನ್ನು ತೀರ ಸವಕಲಾಗುವಷ್ಟು ಬಳಸಲಾಗಿದೆ. ಕರ್ನಾಟಕದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೂ ಗುಜರಾತ್ ಮಾದರಿಯನ್ನು ಅಳವಡಿಸಿಕೊಳ್ಳಲಾಗುವುದು ಎಂದಿದ್ದರು. ನಂತರದಲ್ಲಿ ಕಳೆದ ಲೋಕಸಭಾ ಚುನಾವಣೆಯ ಕಾಲದಲ್ಲಿ ‘ಗುಜರಾತ್ ಮಾದರಿ’ ಎನ್ನುವುದು ಬಿಜೆಪಿಯ ಪ್ರಚಾರದ ಪ್ರಮುಖ ಅಸ್ತ್ರವಾಗಿತ್ತು. ಬಿಜೆಪಿ ಮತ್ತು ಮೋದಿ ಬೆಂಬಲಿಗರ ದೃಷ್ಟಿಯಲ್ಲಿ ‘ಗುಜರಾತ್ ಮಾದರಿ’ ಎನ್ನುವುದು ಕೈಗಾರಿಕೆಗಳಿಗೆ ವಿಪರೀತವಾಗಿ ಸಹಾಯಹಸ್ತ ಚಾಚುವ ಉದ್ಯಮಿಗಳನ್ನು ಆಹ್ವಾನಿಸುವ ಮಾದರಿಯಾಗಿದ್ದರೆ ಬಿಜೆಪಿ ಮತ್ತು ಮೋದಿ ವಿರೋಧಿಗಳ ದೃಷ್ಟಿಯಲ್ಲಿ ‘ಗುಜರಾತ್ ಮಾದರಿ’ ಎಂದರೆ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಮಾದರಿಯಾಗಿತ್ತು. ಈ ಎಲ್ಲಾ ಗುಜರಾತಿನ ಮಾದರಿಗಳನ್ನು ಹಿಂದಿಕ್ಕಿ ಈಗ ಗುಜರಾತ್ ರಾಜ್ಯದ ದಲಿತರು ಹೊಸ ರೀತಿಯ ಹೋರಾಟದ, ಚಳುವಳಿಯ, ಪ್ರತಿಭಟನೆಯ ಮಾರ್ಗವನ್ನು ತೋರಿದ್ದಾರೆ. ಗುಜರಾತಿನ ಎಲ್ಲಾ ಮಾದರಿಗಳಿಗಿಂತಲೂ ಇದು ವಿಭಿನ್ನವಾಗಿದೆ.

ಊನಾ ಎಂಬ ಊರಿನಲ್ಲಿ ಸತ್ತ ದನದ ಚರ್ಮ ಸುಲಿಯುತ್ತಿದ್ದ ದಲಿತರನ್ನು ‘ಗೋರಕ್ಷಕ’ ಪಡೆಯವರು ಹಿಡಿದು, ಬಟ್ಟೆ ಬಿಚ್ಚಿ ಬಡಿದಿದ್ದರು. ಅದರ ದೃಶ್ಯಾವಳಿಗಳು ಅಂತರ್ಜಾಲದ ಮೂಲಕ ಎಲ್ಲೆಡೆಯೂ ವ್ಯಾಪಕವಾಗಿ ಹರಡಿ ‘ಗೋರಕ್ಷಕರ’ ವಿರುದ್ಧದಲೆಯನ್ನು ಸೃಷ್ಟಿಸಿತು. ಇಲ್ಲಿಯವರೆಗೂ ಗೋರಕ್ಷಣೆಯ ನೆಪದಲ್ಲಿ ಮುಸ್ಲಿಮರನ್ನಷ್ಟೇ ಹಿಡಿದು ಬಡಿಯುತ್ತಿದ್ದ ಗೋರಕ್ಷಕರು ಪ್ರಥಮ ಬಾರಿಗೆ ಬಹಿರಂಗವಾಗಿ ದಲಿತರ ಮೇಲೆ ಹಲ್ಲೆ ನಡೆಸಿದ್ದರು. ಗುಜರಾತಿನ ದಲಿತರು ಪ್ರತಿಭಟನೆಗೆ ಇಳಿದರು. ಅವರು ಪ್ರತಿಭಟನೆಗೆ ಆಯ್ದುಕೊಂಡ ದಾರಿ ಭಿನ್ನವಾಗಿತ್ತು. ಸಾವಿರಾರು ಸಂಖೈಯಲ್ಲಿ ಜನರು ಸೇರಿದರು, ಮೆರವಣಿಗೆ ಮಾಡಿದರು ಇವೆಲ್ಲವೂ ಮಾಮೂಲು ರೀತಿಯ ಪ್ರತಿಭಟನೆಗಳೇ. ಆದರೆ ಪ್ರತಿಭಟನೆಯ ಸಂದರ್ಭದಲ್ಲಿ ‘ಇನ್ನು ಮೇಲೆ ಸತ್ತ ದನಗಳನ್ನು ನಾವು ಎತ್ತುವುದಿಲ್ಲ. ನಿಮ್ಮ ಮಾತೆಯನ್ನು ನೀವೇ ಎತ್ತಿ ಸಂಸ್ಕಾರ ಮಾಡಿಕೊಳ್ಳಿ’ ಎಂದು ಘೋಷಿಸಿದ್ದು ಜಾತಿ ವ್ಯವಸ್ಥೆಯನ್ನು ಅಪ್ಪಿ ಮಲಗಿರುವ ಸಮಾಜಕ್ಕೆ ದಿಗ್ಭ್ರಮೆ ಮೂಡಿಸಿಬಿಟ್ಟಿತು. ಸತ್ತ ದನಗಳ ಮೂಳೆಗಳನ್ನು ಕಳೇಬರವನ್ನು ಹೊತ್ತು ತಂದು ಸರಕಾರಿ ಕಛೇರಿಗಳ ಮುಂದೆ ಎಸೆದು ಪ್ರತಿಭಟಿಸಿದರು. ಸತ್ತ ದನಗಳನ್ನು ವಿಲೇವಾರಿ ಮಾಡುವುದೇಗೆಂದು ತಿಳಿಯದೆ ಗುಜರಾತಿನ ಅಧಿಕಾರಿ ವರ್ಗ ಕಕ್ಕಾಬಿಕ್ಕಿಯಾಯಿತು. ‘ನಮ್ಮ ಕೆಲಸ ನಾವು ಮಾಡಿದ್ರೆ ಹಲ್ಲೆ ಮಾಡಿ ಧರ್ಮ ರಕ್ಷಿಸುವ ಮಾತಾಡ್ತೀರಲ್ವಾ? ನಮ್ಮ ಕೆಲಸಾನೇ ಮಾಡಲ್ಲ, ನೀವೇ ಮಾಡ್ಕಳ್ಳಿ’ ಅನ್ನೋ ಪ್ರತಿಭಟನೆಯ ರೀತಿ ಅಸಂಘಟಿತ ವಲಯದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಕಾಣಿಸಿದೆ. ಸಣ್ಣ ಮಟ್ಟದಲ್ಲಿ ದಲಿತರು ಊರಿನ ಜಾತ್ರೆಯಲ್ಲಿ ತಮಟೆ ಬಾರಿಸುವುದಿಲ್ಲ ಎಂದಾಗಲೋ, ಹೆಣದ ಮುಂದೆ ತಮಟೆ ಬಾರಿಸುವುದಿಲ್ಲ ಎಂದಾಗಲೋ ದಲಿತರ ಮೇಲೆ ಹಲ್ಲೆ ನಡೆಯುವ ಸುದ್ದಿಗಳು ಆಗಾಗ ಬರುತ್ತಲೇ ಇರುತ್ತದೆ. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡದೆ ಅಸಹಕಾರ ತೋರಿದ್ದು ಇದೇ ಮೊದಲಿರರಬೇಕು.

ಸಂಘಟಿತ ವಲಯದಲ್ಲಿ ಬೇಡಿಕೆಗಳನ್ನೀಡೇರಿಸಿಕೊಳ್ಳಲು ಇಂತಹ ಪ್ರತಿಭಟನೆಗಳು ಸರ್ವೇ ಸಾಮಾನ್ಯ. ಇತ್ತೀಚೆಗಷ್ಟೇ ಕರ್ನಾಟಕದ ಸಾರಿಗೆ ನಿಗಮದ ನೌಕರರು ಮುಷ್ಕರ ಹೂಡಿ ಸಾರಿಗೆ ವ್ಯವಸ್ಥೆಯನ್ನೇ ಅಸ್ತವ್ಯಸ್ತ ಮಾಡಿ ತಮ್ಮ ಬೇಡಿಕೆಗಳಲ್ಲಿ ಹಲವನ್ನಾದರೂ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಎಲ್ಲೆಡೆಯೂ ಚದುರಿ ಹೋಗಿರುವ, ಸಂಘಟನೆಗಳಿಲ್ಲದ, ಅವತ್ತಿನ ಕೂಲಿಯಲ್ಲೇ ಅವತ್ತಿನ ಅನ್ನ ಸಂಪಾದಿಸಬೇಕಾದ ಅಸಂಘಟಿತ ವಲಯದ ಜನರಿಗೆ ಈ ರೀತಿ ಮುಷ್ಕರ ಹೂಡುವುದು ಸುಲಭವಲ್ಲ. ಕರ್ನಾಟಕದಲ್ಲೇ ಕೆಲವು ವರುಷಗಳ ಹಿಂದೆ ಪೌರ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಲೆಯ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದ್ದರು. ತಮ್ಮ ತಲೆಯ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸುವ ಬದಲು, ‘ಇನ್ನು ಮುಂದೆ ನಿಮ್ಮ ಊರಿನ ಒಂದು ಚಿಕ್ಕ ಕಸದ ಚೂರನ್ನೂ ನಾವು ಎತ್ತಿಹಾಕುವುದಿಲ್ಲ’ ಎಂದವರು ಪ್ರತಿಭಟಿಸಿದ್ದರೆ ಊರುಗಳ ಕತೆ ನೆನಪಿಸಿಕೊಳ್ಳಿ…… ಗುಜರಾತಿನ ದಲಿತರು ಇಂತಹುದೊಂದು ಪ್ರತಿಭಟನೆ ಅಸಂಘಟಿತ ವಲಯದಲ್ಲೂ ಸಾಧ್ಯವಿದೆ ಎಂದು ತೋರಿಸಿಕೊಟ್ಟಿದ್ದಾರೆ. ಈ ‘ಗುಜರಾತ್ ಮಾದರಿ’ಯ ಪರಿಣಾಮ ಎಷ್ಟಿತ್ತೆಂದರೆ ದೇಶದೊಳಗಿನ ಆಗುಹೋಗುಗಳ ಬಗ್ಗೆ ಮೌನವಾಗಿದ್ದುಬಿಡುವ ಅಭ್ಯಾಸವನ್ನು ಬೆಳೆಸಿಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಸಹಿತ ಮೊದಲ ಬಾರಿಗೆ ‘ಗೋರಕ್ಷಕರ’ ವಿರುದ್ಧ, ದಲಿತರ ಪರವಾಗಿ ಹರಿಹಾಯ್ದಿದ್ದಾರೆ. ಅವರ ದೃಷ್ಟಿ ದಲಿತರ ಮತಗಳೆಡೆಗೇ ಇರಬಹುದು, ಮುಂದಿನ ಉತ್ತರ ಪ್ರದೇಶದ ಚುನಾವಣೆಗಳೆಡೆಗೇ ಇರಬಹುದು ಆದರೆ ಅವರ ಮಾತುಗಳಿಗೆ ಕಾರಣ ಗುಜರಾತ್ ದಲಿತರ ಪ್ರತಿಭಟನೆ. ಅವರ ಮಾತುಗಳಲ್ಲಿ ಗೋರಕ್ಷಕರಿಂದ ಅತಿ ಹೆಚ್ಚು ತೊಂದರೆಗೀಡಾದ ಮುಸ್ಲಿಮರ ಬಗ್ಗೆ ಯಾವ ಮಾತೂ ಇರಲಿಲ್ಲ ಎನ್ನುವುದನ್ನೂ ಗಮನಿಸಬಹುದು. ಇದಕ್ಕೆ ಮೋದಿಯವರ ಮತ್ತವರ ರಾಜಕೀಯ ಸಿದ್ಧಾಂತದ ಮನಸ್ಥಿತಿ ಎಷ್ಟು ಕಾರಣವೋ ಪ್ರತಿಭಟಿಸದ ಮುಸ್ಲಿಮರೂ ಅಷ್ಟೇ ಕಾರಣ.

ದಲಿತರು ಹಾಕಿಕೊಟ್ಟ ‘ಗುಜರಾತ್ ಮಾದರಿಯಿಂದ’ ಅತಿ ದೊಡ್ಡ ಪಾಠ ಕಲಿಯಬೇಕಿರುವುದು ನಮ್ಮ ದೇಶದ ಮುಸ್ಲಿಮರು. ಗೋರಕ್ಷಣೆಯ ನೆಪದಲ್ಲಿ ಅತಿ ಹೆಚ್ಚು ಹಿಂಸೆಗೀಡಾಗಿರುವುದು ಮುಸ್ಲಿಮರೇ. ಆದರೆ ಅಸಂಘಟಿತ ವಲಯದ ಮುಸ್ಲಿಮರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ ನಿದರ್ಶನಗಳು ತುಂಬಾ ಕಡಿಮೆ. ಪ್ರವಾದಿಗ್ಯಾರೋ ಏನೋ ಅಂದ್ರು ಅಂದಾಗ ಗುಂಪುಗೂಡುವ ಜನರಲ್ಲಿ ಹತ್ತು ಪರ್ಸೆಂಟಷ್ಟಾದರೂ ತಮ್ಮ ಕೆಲಸಕ್ಕೆ ಅಡ್ಡಿಯುಂಟುಮಾಡುವ ಜನರ ವಿರುದ್ಧದ ಪ್ರತಿಭಟನೆಯಲ್ಲಿ ಸೇರಿದ್ದರೆ ಮುಸ್ಲಿಮರ ಮೇಲೆ ಗೋರಕ್ಷಣೆಯ ನೆಪದಲ್ಲಿ, ಕದ್ದು ದನ ಸಾಗಿಸುತ್ತಾರೆ ಎಂಬ ನೆಪದಲ್ಲಿ ಹಲ್ಲೆಗಳು ನಿರಂತರವಾಗಿ ನಡೆಯುತ್ತಿರಲಿಲ್ಲ. ‘ಸತ್ತ ನಿಮ್ಮ ಮಾತೆಯನ್ನು ನೀವೇ ಎತ್ತಿ ಹೂತು ಹಾಕಿ’ ಎಂದ ಗುಜರಾತಿನ ದಲಿತರ ಮಾದರಿಯಲ್ಲೇ ಸುಖಾಸುಮ್ಮನೆ ಗೋರಕ್ಷಕರಿಂದ ಹೊಡೆತ ತಿಂದ ಮುಸ್ಲಿಮರು ಒಟ್ಟಾಗಿ ‘ಸರಿ ಬಿಡಿ ದನ, ಎಮ್ಮೆ, ಕೋಣ ಅಷ್ಟೇ ಅಲ್ಲ ಕುರಿ ಕೋಳೀನೂ ನಾವು ಕತ್ತರಿಸಿ ಮಾರುವುದಿಲ್ಲ. ನೀವೇ ಮಾಡ್ಕಳ್ಳಿ’ ಎಂದು ಘೋಷಿಸಿಬಿಟ್ಟಿದ್ದರೆ ಬಹುತೇಕ ಊರುಗಳ ಮಾಂಸಾಹಾರದ ವ್ಯಾಪಾರವೇ ಅಲ್ಲೋಲಕಲ್ಲೋಲವಾಗಿಬಿಡುತ್ತಿತ್ತು. ಪ್ರಭುತ್ವ ಏನನ್ನಾದರೂ ಸಹಿಸಿಕೊಳ್ಳುತ್ತದೆ, ಯಾವುದರ ಬಗ್ಗೆಯಾದರೂ ಮೌನವಾಗುಳಿದುಬಿಡುತ್ತದೆ. ಆದರೆ ವ್ಯಾಪಾರ - ವ್ಯವಹಾರ - ಆದಾಯದ ವಿಷಯದಲ್ಲಿ ಏರುಪೇರಾಗಿಬಿಟ್ಟರೆ ಸಹಿಸಿಕೊಳ್ಳುವುದಿಲ್ಲ. 
ಗುಜರಾತ್ ಮಾದರಿಯ ಹೋರಾಟ ಗುಜರಾತಿಗಷ್ಟೇ ಸೀಮಿತವಾಗುತ್ತದಾ ಅಥವಾ ಬೇರೆಡೆಗೂ ಹಬ್ಬುತ್ತದಾ? ಕಾದು ನೋಡಬೇಕು.

ಉತ್ತರಪ್ರದೇಶದ ಜಾತಿ ರಾಜಕಾರಣ: ದಲಿತರು ವರ್ಸಸ್ ಸವರ್ಣೀಯರು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
09/08/2016
ನಾನು ಈ ಹಿಂದೆಯೇ ಬಹಳಷ್ಟು ಬಾರಿ ಬರೆದಂತೆ ಜಾತಿ ರಾಜಕಾರಣ ಈ ದೇಶದ ಕ್ರೂರ ವಾಸ್ತವವಾಗಿದ್ದು ಅದನ್ನು ಕಡೆಗಣಿಸಿ ಚುನಾವಣಾ ರಾಜಕೀಯ ಮಾಡುವುದು ಕಷ್ಟಸಾದ್ಯದ ಮಾತಾಗಿದೆ. ಅದರಲ್ಲೂ ಉತ್ತರಪ್ರದೇಶದಂತಹ ರಾಜ್ಯದ ಸಮಾಜದಲ್ಲಿ ಜಾತಿ ಎನ್ನುವುದು ಆಳವಾಗಿ ಬೇರು ಬಿಟ್ಟಿದ್ದು ಅದನ್ನು ಮೀರಿ ರಾಜಕಾರಣ ಮಾಡಲು ಇದುವರೆಗೂ ಯಾವ ಪಕ್ಷಕ್ಕೂ ಸಾದ್ಯವಾಗಿಲ್ಲ. ಇನ್ನೇನು ಮುಂದಿನ ವರ್ಷ ಈ ರಾಜ್ಯದಲ್ಲಿ ವಿದಾನಸಭಾ ಚುನಾವಣೆಗಳು ನಡೆಯುತ್ತಿದ್ದು, ಜಾತಿಸಮೀಕರಣಗಳ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿ, ತಮ್ಮ ಪರಾಕಾಷ್ಠೆ ತಲುಪಿವೆ. ಮೊನ್ನಿನ ಮಾಯಾವತಿಯವರ ಪ್ರಕರಣವಾದ ನಂತರ ಈ ಜಾತಿ ಲೆಕ್ಕಾಚಾರಗಳು ಇನ್ನಷ್ಟು ತೀವ್ರಗೊಂಡು ಸ್ವಲ್ಪ ಬದಲಾವಣೆಯೊಂದಿಗೆ ದಲಿತ ವರ್ಸಸ್ ಸವರ್ಣೀಯ ಎನ್ನುವ ಮಟ್ಟಕ್ಕೆ ಹೋಗಿ ನಿಂತಿದೆ.

ಕಳೆದ ತಿಂಗಳು ಉತ್ತರಪ್ರದೇಶದ ಬಾಜಪ ಪಕ್ಷದ ರಾಜ್ಯ ಘಟಕದ ಉಪಾದ್ಯಕ್ಷರಾದ ಶ್ರೀ ದಯಾಶಂಕರ್ ಸಿಂಗ್ ಅವರು ಮಾಯಾವತಿಯವರು ಚುನಾವಣಾ ಟಿಕೇಟುಗಳನ್ನು ಮಾರಾಟ ಮಾಡುತ್ತಿದ್ದಾರೆಂಬ ಅವರ ಪಕ್ಷದ ನಾಯಕರುಗಳ ಆರೋಪವನ್ನು ಪ್ರಸ್ತಾಪಿಸುತ್ತ. ಹೀಗೆ ಟಿಕೇಟು ಮಾರುವ ಮಾಯಾವತಿಯವರನ್ನು ವೇಶ್ಯೆಗೆ ಹೋಲಿಸಿದ್ದರು. ಈ ಮಾತು ಉತ್ತರಪ್ರದೇಶ ಮಾತ್ರವಲ್ಲದೆ ಇಡಿ ರಾಷ್ಟ್ರದಾದ್ಯಂತ ಅಲ್ಲೋಲ ಕಲ್ಲೋಲವನ್ನೇ ಸೃಷ್ಠಿಸಿತು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮಾಯಾವತಿಯವರು ದಯಾಶಂಕರ್ ಅವರನ್ನು ಬಂದಿಸಿ ಕ್ರಮ ತೆಗೆದುಕೊಳ್ಳಬೇಕೆಂದೂ, ಹಾಗು ಬಾಜಪ ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು. ಇಷ್ಟರಲ್ಲಿ ಬಾಜಪಕ್ಕೆ ಆದ ಅನಾಹುತದ ಅರಿವಾಗಿದ್ದಂತಿತ್ತು. ಅದು ದಯಾಶಂಕರ್ ಅವರನ್ನು ಉಪಾದ್ಯಕ್ಷ ಹುದ್ದೆಯಿಂದ ವಜಾ ಮಾಡಿತು. ಆದರೆ ಇಷ್ಟಕ್ಕೆ ತೃಪ್ತರಾಗದ ಬಹುಜನ ಪಕ್ಷದ ನಾಯಕರುಗಳು ರಾಜ್ಯದೆಲ್ಲೆಡೆ ಪ್ರತಿಭಟನೆಗಳನ್ನು ಶುರು ಮಾಡಿದ್ದರು. ದೇಶದಲ್ಲಿ ಹೆಚ್ಚಾಗುತ್ತಿರುವ ದಲಿತರ ಮೇಲಿನ ಹಲ್ಲೆಗಳ ಬಗ್ಗೆ ರಾಷ್ಟ್ರದಲ್ಲಿ ಚರ್ಚೆಯಾಗುತ್ತಿರುವಾಗಲೇ ನಡೆದ ಈ ಘಟನೆ ಬಾಜಪದ ಮಟ್ಟಿಗೆ ದೊಡ್ಡ ಹೊಡೆತವಾಗಿತ್ತು. ಮುಂದಿನ ವರ್ಷ ನಡೆಯಲಿರುವ ವಿದಾನಸಭಾ ಚುನಾವಣೆಗಳ ಮೇಲೆ ದಯಾಶಂಕರ್ ಅವರ ಹೇಳಿಕೆ ಪ್ರತಿಕೂಲ ಪರಿಣಾಮ ಬೀರುವ ಸಾದ್ಯತೆಗಳನ್ನು ಗಮನಿಸಿದ ಬಾಜಪ ಅವರನ್ನು ಪಕ್ಷದಿಂದ ಆರು ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಿತು. ಉತ್ತರಪ್ರದೇಶದ ಪೋಲಿಸರು ಅವರ ಮೇಲೆ ಕೇಸು ದಾಖಲಿಸಿ ಬಂದಿಸಲು ಪ್ರಯತ್ನಿಸಿದರು. ಆದರೆ ಈ ನಡುವೆ ದಯಾಶಂಕರ್ ಸಿಂಗ್ ಯಾರ ಕೈಗೂ ಸಿಗದೆ ನಾಪತ್ತೆಯಾಗಿದ್ದರು. ಗುಜರಾತಿನಲ್ಲಿ ನಡೆದ ದಲಿತ ಯುವಕರ ಮೇಲಿನ ಹಲ್ಲೆಯ ವಿಚಾರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ವಿರೋಧಪಕ್ಷಗಳ ಟೀಕೆಯನ್ನು ಎದುರಿಸುತ್ತಿರುವಾಗಲೇ ದಯಾಶಂಕರ್ ಮಾಡಿಕೊಂಡ ಈ ಎಡವಟ್ಟು ಮುಂದಿನ ಚುನಾವಣೆಯಲ್ಲಿ ದಲಿತರ ಬೆಂಬಲ ಗಳಿಸುವ ಬಾಜಪದ ಪ್ರಯತ್ನಕ್ಕೆ ತಣ್ಣೀರೆರಚಿದಂತಾಯಿತು. ಬಹುತೇಕ ಬಾಜಪೇತರ ಪಕ್ಷಗಳು ಮಾಯಾವತಿಯವರ ಬೆಂಬಲಕ್ಕೆ ನಿಂತಿದ್ದು ಬಾಜಪದ ಮಟ್ಟಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿತು. ಇನ್ನೇನು ಉತ್ತರಪ್ರದೇಶದಲ್ಲಿ ಬಹುಜನ ಪಕ್ಷಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದೆಯೆಂದು ಅಂದುಕೊಳ್ಳುವಷ್ಟರಲ್ಲಿ ಮಾಯಾವತಿಯವರ ಬೆಂಬಲಿಗರು ಬಹುಜನ ಪಕ್ಷದ ಮಾಜಿ ಸಚಿವ ನಸೀಮುದ್ದೀನ್ ಸಿದ್ದೀಕಿ ನೇತೃತ್ವದಲ್ಲಿ ಲಕ್ನೋವಿನ ಹಜರತ್‍ಗಂಜಿನಲ್ಲಿ ನಡೆಸಿದ ಪ್ರತಿಭಟನಾ ಧರಣಿಯಲ್ಲಿ ಎಲ್ಲ ಮಿತಿಗಳನ್ನು, ಮರ್ಯಾದೆಗಳನ್ನೂ ಮೀರಿ, ದಯಾಶಂಕರ್ ಅವರ ಪತ್ನಿ ಸ್ವಾತಿ ಸಿಂಗ್ ಮತ್ತು ಅವರ ಹದಿಮೂರು ವರ್ಷ ವಯಸ್ಸಿನ ಅಪ್ರಾಪ್ತ ಮಗಳ ಬಗ್ಗೆ ಕೂಗಿದ ಘೋಷಣೆಗಳು ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಿದವು. ತಮ್ಮ ಪಕ್ಷದ ಮೇಲಾದ ಈ ಆಘಾತದಿಂದ ಚೇತರಿಸಿಕೊಳ್ಳದ ಬಾಜಪ ನಾಯಕರುಗಳು ಮೌನಕ್ಕೆ ಶರಣಾಗಿ ಬಿಟ್ಟಿದ್ದರು. 

ಆಗಲೇ ಕೇಳಿಬಂದಿದ್ದು ದಯಾಶಂಕರ್ ಅವರ ಪತ್ನಿ ಸ್ವಾತಿ ಸಿಂಗ್ ಅವರ ಮರು ಪ್ರತಿಭಟನೆಯ ದ್ವನಿ! ತನ್ನ ಹಾಗು ತನ್ನ ಮಗಳ ವಿರುದ್ದ ಕೇಳಿಬಂದ ಅಸಭ್ಯ ಘೋಷಣೆಗಳನ್ನು ಗಂಭೀರವಾಗಿ ತೆಗೆದುಕೊಂಡ ಆಕೆ ಈ ಬಗ್ಗೆ ಮಾಯಾವತಿಯವರನ್ನು, ಅವರ ಪಕ್ಷವನ್ನು ಬಹಿರಂಗವಾಗಿ ಎದುರಿಸಲು ಸಿದ್ದರಾಗಿ ಬಿಟ್ಟಿದ್ದರು. ಈ ಕುರಿತಂತೆ ಆಕೆ ಮಾಯಾವತಿ ಮತ್ತು ಉಳಿದವರ ಮೇಲೆ ಪೋಲಿಸ್ ಠಾಣೆಗೆ ದೂರನ್ನು ಕೂಡ ಸಲ್ಲಿಸಿದರು. ಸ್ವಾತಿಯವರ ಈ ಒಂದು ನಡೆ ಹಿಂಜರಿಕೆಯಲ್ಲಿದ್ದ ಬಾಜಪಕ್ಕೆ ಹೊಸ ಚೈತನ್ಯ ನೀಡಿತು, ಅದುವರೆಗು ಮೌನವಾಗಿದ್ದ ಬಾಜಪ ಈ ಅವಕಾಶವನ್ನೂ, ಸ್ವಾತಿಯವರ ಪ್ರತಿ ಆಕ್ರಮಣಕಾರಿ ನಿಲುವನ್ನೂ ಬಳಸಿಕೊಂಡು ಬಹುಜನ ಪಕ್ಷದ ದಯಾಶಂಕರ್ ಕುಟುಂಬದ ಹೆಣ್ಣು ಮಕ್ಕಳ ಬಗೆಗಿನ ಅಸಭ್ಯ ಮಾತುಗಳನ್ನು ಠಾಕೂರ್ ಸಮಾಜದ ವಿರುದ್ದದ ದಲಿತರ ಉದ್ದಟತನದ ಹೇಳಿಕೆಗಳೆಂದು ಬಿಂಬಿಸಿ ಎರಡೂ ಪಕ್ಷಗಳ ಇಬ್ಬರು ನಾಯಕರುಗಳ ಜಟಾಪಟಿಯನ್ನು ಎರಡು ಜಾತಿಗಳ ಜಗಳವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು. ಸ್ವಾತಿಸಿಂಗ್ ಮೇಲಿನ ಅಸಭ್ಯತನದ ಮಾತುಗಳು ತಮ್ಮ ಠಾಕೂರ್ ಸಮುದಾಯದ ಆತ್ಮಗೌರವಕ್ಕೆ ಬಿದ್ದ ಪೆಟ್ಟೆಂಬಂತೆ ಆ ಸಮುದಾಯದ ನಾಯಕರುಗಳು ಹೇಳಿಕೆ ನೀಡತೊಡಗಿದರು. ಇದರ ನಡುವೆ ಮೊದಲಿಂದಲು ದಲಿತರ ಮೇಲೆ ಅಸಹನೆ ಹೊಂದಿದ್ದ ಉಳಿದೆಲ್ಲ ಮೇಲ್ಜಾತಿಗಳು ಸಹ ಸ್ವಾತಿ ಸಿಂಗ್ ಬೆಂಬಲಕ್ಕೆ ನಿಂತು ಬಿಟ್ಟವು. ಇದೇ ಸಮಯದಲ್ಲಿ ಸ್ವಾತಿಸಿಂಗ್‍ರವರು ಮಾಯಾವತಿ, ಸಿದ್ದೀಕಿ,ಮತ್ತು ಇನ್ನಿತರೇ ಬಹುಜನ ಪಕ್ಷದ ನಾಯಕರುಗಳ ಮೇಲೆ ಎಫ್.ಐ.ಆರ್.ದಾಖಲಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅಲ್ಲಿಯವರೆಗು ರಕ್ಷಣಾತ್ಮಕವಾಗಿ ತನ್ನ ನಡೆಗಳನ್ನು ನಡೆಸುತ್ತಿದ್ದ ಬಾಜಪ ಪ್ರತಿ ಆಕ್ರಮಣದ ತೀವ್ರತೆಯನ್ನು ಹೆಚ್ಚಿಸಿ, ಇಡೀ ಘಟನೆಯನ್ನು ದಲಿತರು ವರ್ಸಸ್ ಸವರ್ಣೀಯರು ಎನ್ನುವ ಮಟ್ಟಕ್ಕೆ ತಂದು ನಿಲ್ಲಿಸಿತು. ಇದರಿಂದ ವಿಚಲಿತರಾದ ಮಾಯಾವತಿ ಪ್ರತಿಭಟನೆಗಳ ತೀವ್ರತೆಯನ್ನು ಕಡಿಮೆ ಮಾಡಿ ಸಾರ್ವಜನಿಕ ಹೇಳಿಕೆಗಳನ್ನು ನೀಡದಂತೆ ತಮ್ಮ ಪಕ್ಷದವರಿಗೆ ತಾಕೀತು ಮಾಡಬೇಕಾಯಿತು. ಈ ಹಂತದಲ್ಲಿ ಮಾಯಾವತಿಯವರಿಗೆ ವಾಸ್ತವದ ಅರಿವಾಗಿತ್ತು. ಅವರಿಗೆ ಕೇವಲ ಠಾಕೂರ್ ಸಮುದಾಯದ ಮತಗಳ ಅಗತ್ಯಕ್ಕಿಂತ ಹೆಚ್ಚಾಗಿ ಬೇರೆ ಸವರ್ಣೀಯರ ಮತಗಳೂ ಬಹುಮುಖ್ಯವೆಂದು ಗೊತ್ತಿತ್ತು. ಯಾಕೆಂದರೆ ಶೇಕಡಾ 22 ರಷ್ಟಿರುವ ದಲಿತ ಮತಗಳು ಸಂಪೂರ್ಣವಾಗಿ ಬಹುಜನ ಪಕ್ಷಕ್ಕೆ ಬಂದರೂ ಅಧಿಕಾರ ಹಿಡಿಯಲು ಉಳಿದ ಸುಮಾರು ಶೇಕಡಾ 12ರಿಂದ 14 ರಷ್ಟು ಮತಗಳು ಬೇರೆ ಸಮುದಾಯಗಳಿಂದಲೇ ಬರಬೇಕಾಗಿತ್ತು. ಇನ್ನು ಕಳೆದಬಾರಿ ಸಮಾಜವಾದಿ ಪಕ್ಷವನ್ನು ಬೆಂಬಲಿಸಿದ್ದ ಮುಸ್ಲಿಮರು ಈ ಬಾರಿ ಯಾವ ಪಕ್ಷವನ್ನು ಬೆಂಬಲಿಸಬಹುದೆಂಬ ಬಗ್ಗೆ ಯಾರಿಗೂ ನಿಖರ ಮಾಹಿತಿಯಿಲ್ಲ. ಹೀಗಾಗಿ ಶೇಕಡಾ ಹತ್ತರಷ್ಟಿರುವ ಬ್ರಾಹ್ಮಣ ಸಮುದಾಯದ ಮತಗಳು ಸಹ ದಲಿತ-ಸವರ್ಣೀಯರ ಜಟಾಪಟಿಯಲ್ಲಿ ಬೇರೆ ಪಕ್ಷಗಳಿಗೆ ಹೋದರೆ ತಮ್ಮ ಪಕ್ಷ ಬಹುಮತ ಗಳಿಸಿವುದು ಕಷ್ಟವೆಂಬುದು ಅವರಿಗೆ ಗೊತ್ತಾಗಿದೆ. ಅವರ ಇಂತಹ ಸಂಕಷ್ಟ ಸಮಯದಲ್ಲಿಯೇ ಇಬ್ಬರು ಶಾಸಕರು ಮಾಯಾವತಿಯವರು ಟಿಕೇಟುಗಳನ್ನು ಮಾರುತ್ತಿದ್ದಾರೆಂದು ಆರೋಪಿಸಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದಾರೆ. ಇವರಿಬ್ಬರನ್ನೂ ಸೇರಿಸಿದರೆ ಇದುವರೆಗೂ ಸುಮಾರು ಆರುಜನ ನಾಯಕರು ಬಹುಜನ ಪಕ್ಷ ತೊರೆದಿದ್ದಾರೆಂಬುದು ಮಾಯಾವತಿಯವರ ಆತಂಕಕ್ಕೆ ಕಾರಣವಾಗಿದೆ.

ತಮ್ಮ ಪಕ್ಷಗಳ ನಾಯಕರುಗಳನ್ನು, ಕಾರ್ಯಕರ್ತರುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೇ ಹೋದರೆ ಎಂತೆಂತಹ ದುಷ್ಪರಿಣಾಮಗಳು ಸಂಭವಿಸುತ್ತವೆಯೆಂಬುದನ್ನು ಉತ್ತರಪ್ರದೇಶದ ಬಾಜಪ ಮತ್ತು ಬಹುಜನ ಪಕ್ಷಗಳ ನಡವಳಿಕೆಗಳೀಗ ತೋರಿಸಿಕೊಟ್ಟಿವೆ. ಎರಡು ಪಕ್ಷಗಳ ಇಬ್ಬರು ನಾಯಕರುಗಳ ವಾಕ್ ಸಮರ ಉತ್ತರಪ್ರದೇಶದ ಸಮಾಜವನ್ನು ನಿಖರವಾಗಿ ಎರಡು ಹೋಳಾಗಿ ಮಾಡಿದೆ. ಉತ್ತರಪ್ರದೇಶ ಬಾಜಪದ ರಾಜ್ಯಘಟಕದ ಉಪಾದ್ಯಕ್ಷ ಶ್ರೀ ದಯಾಶಂಕರ್ ಸಿಂಗ್ ಆಡಿದ ಒಂದು ಮಾತು ಮತ್ತು ಅದಕ್ಕೆ ಪ್ರತ್ಯುತ್ತರವಾಗಿ ಮಾಯಾವತಿ ಮತ್ತವರ ಹಿಂಬಾಲಕರು ನೀಡಿದ ಸಾರ್ವಜನಿಕ ಹೇಳಿಕೆಗಳಿಂದಾಗಿ ದಲಿತರ ಮತ್ತು ಸವರ್ಣೀಯರ ನಡುವಿನ ಬಿರುಕು ಒಂದು ಹೆಜ್ಜೆ ಮುಂದೆ ಹೋಗಿ ಮಾಯಾವತಿ( ದಲಿತರ ಮಗಳು) ಮತ್ತು ಸ್ವಾತಿಸಿಂಗ್ (ಮಾನವತೆಯ ಮಗಳು) ಎಂಬಲ್ಲಿಗೆ ಬಂದು ನಿಂತಿದೆ.

ಮುಂದಿನ ದಿನಗಳಲ್ಲಿ ಇಂತಹ ಜಾತಿ ರಾಜಕಾರಣದ ಒಳಸುಳಿಗಳು ಇನ್ನಷ್ಟು ಹೆಚ್ಚಾಗಲಿದ್ದು ಮತಗಳಿಕೆಗಾಗಿ ಎಂತಹ ಕೃತ್ಯಗಳಿಗು ಸಿದ್ದವಾಗುವ ರಾಜಕೀಯ ಪಕ್ಷಗಳ ಭವಿಷ್ಯದ ನಡೆಗಳು ಗಾಬರಿಗೊಳಿಸುವಂತಿವೆ.

ಆಗ 6, 2016

ಯಾರೂ ಅಷ್ಟು ಸುಲಭಾಗಿ ಅಪರಿಚಿತರನ್ನು ಸಾಯಿಸುವುದಿಲ್ಲ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಯಾರೂ ಅಷ್ಟು ಸುಲಭವಾಗಿ 
ಅಪರಿಚಿತರನ್ನು
ಸಾಯಿಸುವುದಿಲ್ಲ

ನಿಮ್ಮ ಹಾಗೆ!
ನೀವು ನಂಬಿದ ದೇವರೂ ನಿಮ್ಮನ್ನು
ಕ್ಷಮಿಸಲಾರ ನೆನಪಿಡಿ.
ಅಮಾಯಕರ ಗುಂಡಿಗೆಗೆ ಹೊಡೆದ ಪ್ರತಿ ಗುಂಡೂ
ತಾಯಿಯೊಬ್ಬಳ ಎದೆಗೇನೇ ತಗುಲುವುದು
ಅಸಂಖ್ಯಾತ ಅನಾಥ ಹಸುಗೂಸುಗಳನ್ನು ಬೀದಿಯಲ್ಲಿ ಬಿಡುವುದು
ನಿಮಗೂ ಗೊತ್ತಿದೆ ಯಾವ ಧರ್ಮವೂ ಕೊಲ್ಲುವುದ ಅನುಮತಿಸುವುದಿಲ್ಲ
ಯಾವ ಗ್ರಂಥವೂ ರಕ್ತದ ಶಾಯಿಯಲ್ಲಿ ಬರೆಯಲ್ಪಟ್ಟಿರುವುದಿಲ್ಲ
ನೀವು ಕೊಂದ ಪ್ರತಿಯೊಬ್ಬನಿಗೂ
ಒಂದು ಗೂಡು
ಅದರೊಳಗಷ್ಟು ಅವನ ನಂಬಿದ ಜನರು
ಇರುವರು
ಸತ್ತವನೆದೆಯಲ್ಲಿ ಉಕ್ಕಿದ ನೆತ್ತರು
ತರುತ್ತದೆ ಬದುಕಿದವರ ಕಣ್ಣೊಳಗೆ ಕಣ್ಣೀರು
ಯಾವ ಹತ್ಯೆಯೂ ನಿಮ್ಮನ್ನು ಸ್ವರ್ಗದತ್ತ ಕರೆದೊಯ್ಯುವುದಿಲ್ಲ
ಯಾವ ಪ್ರಾರ್ಥನೆಯೂ ನಿಮ್ಮನ್ನು ಕ್ಷಮಿಸುವುದಿಲ್ಲ
ನಡೆದ ಹತ್ಯೆಗಳಿಗೆ ಪ್ರತಿಯಾಗಿ ನಿಮ್ಮನ್ನು ಕೊಲ್ಲುವುದು ಕಷ್ಟವೇನಲ್ಲ
ವ್ಯತ್ಯಾಸವಿಷ್ಟೆ ಕೊಲ್ಲುವವನನ್ನೂ ಕ್ಷಮಿಸುವ ಧಾರಿಣಿಯ ಮೇಲೆ
ನಿಮ್ಮಂತವರ ರಕ್ತ ಚೆಲ್ಲುವುದು ಬೇಡ
ಹಾಗೆ ನೋಡಿದರೆ ನಿಮ್ಮನ್ನು ಮನುಷ್ಯರೆಂದೇ ನಾವು ತಿಳಿದಿಲ್ಲ!

2.

ಮೊನ್ನೆಯವರೆಗು ಸಹನೆಯ ಮಾತಾಡುತ್ತಿದ್ದವರಿಂದು
ಸ್ವರ್ಗದ ಮಾತಾಡುತ್ತಿದ್ದಾರೆ
ಮೊನ್ನೆಯವರೆಗು ಶಾಂತಿಯ ಮಾತಾಡುತ್ತಿದ್ದವರಿಂದು
ಯುದ್ದದ ಮಾತಾಡುತ್ತಿದ್ದಾರೆ
ಮೊನ್ನೆಯವರೆಗು ಬದುಕಿಸುವ ಮಾತಾಡುತ್ತಿದ್ದವರಿಂದು
ಮುಗಿಸುವ ಮಾತಾಡುತ್ತಿದ್ದಾರೆ
ಮೊನ್ನೆಯವರೆಗು ಮೌನವಾಗಿದ್ದ ಹುಡುಗನಿಂದು
ಬೀಕರ ಬಾಷಣಕೋರನಾಗಿದ್ದಾನೆ
ಮೊನ್ನೆವರೆಗು ರಕ್ತ ಕಂಡರೆ ಚೀರುತ್ತಿದ್ದವನಿಂದು
ರಕ್ತ ಪಿಪಾಸುವಾಗಿದ್ದಾನೆ.
ಮೊನ್ನೆವರೆಗು ಭೂಲೋಕವೇ ಸ್ವರ್ಗವೆಂದು ಹೆಮ್ಮೆಯಿಂದ ಹೇಳುತ್ತಿದ್ದವನಿಂದು
ನೆಲವ ನರಕ ಮಾಡಿ ಸ್ವರ್ಗ ಸೇರುವ ಮಾತಾಡುತ್ತಿದ್ದಾನೆ.
ಮೊನ್ನೆವರೆಗು ಮನೆ ಮಗನಂತಿದ್ದವನಿಂದು
ಮನೆಮುರುಕನಂತಾಗಿದ್ದಾನೆ. 

ಆಗ 5, 2016

ಮೇಕಿಂಗ್ ಹಿಸ್ಟರಿ: ಕ್ಞಾಮ, ಕಾಲರ ಮತ್ತು ಪ್ಲೇಗ್: ಬಿಳಿ ದೇವರ ಶಾಪ

ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
05/08/2016
ಕ್ಷಾಮವೆಂಬುದು ‘ಪ್ರಾಕೃತಿಕ’ ಸಂಗತಿ ಎಂಬುದು ನಮ್ಮಲ್ಲಿರುವ ಒಂದು ತಪ್ಪು ಗ್ರಹಿಕೆ. ಆದರೂ ಐತಿಹಾಸಿಕ ನೆನಪುಗಳು ತಿಳಿಸುವುದೇನೆಂದರೆ ಭಾರತದಲ್ಲಿ ಅತ್ಯಂತ ಹಳೆಯ ಕ್ಷಾಮ ಕಂಡುಬಂದದ್ದು ಬ್ರಿಟೀಷ್ ವಸಾಹತುಶಾಹಿಯ ದಿನಗಳಲ್ಲಿ. ಕರ್ನಾಟಕ ವಸಾಹತುಶಾಹಿಗೆ ಒಳಪಡುವ ಸಮಯದಲ್ಲಿ ಕರ್ನಾಟಕದ ಭೂಭಾಗ ಅರಣ್ಯವಾಗಿತ್ತು. ನೀರು ಕಡಿಮೆಯಿದ್ದ ಪ್ರದೇಶದಲ್ಲೂ ಸಹಿತ ಮರಗಳ ಸೂರು ಅಧಿಕವಾಗಿತ್ತು ಎನ್ನುವುದನ್ನು ಬುಚನನ್ನಿನ ವರದಿಗಳು ತಿಳಿಸುತ್ತವೆ. ಇದು ನದಿ ಮತ್ತು ಹೊಳೆಗಳರಿವನ್ನು ಧೀರ್ಘಕಾಲೀನವಾಗಿಸಿದ್ದವು. ಪರಿಣಾಮವಾಗಿ, ಅಂತರ್ಜಲ ಸಮೃದ್ಧವಾಗಿತ್ತು ಮತ್ತು ನೀರಾವರಿ ಕೆರೆಕಟ್ಟೆಗಳು ಹರಿದೋಡುತ್ತಿದ್ದ ನೀರಿಗೆ ತಡೆಯೊಡ್ಡಿ, ಭೂಮಿಗಿಂಗುವಂತೆ ಮಾಡಿ ಅಂತರ್ಜಲವನ್ನು ವೃದ್ಧಿಯಾಗಿಸುವುದಷ್ಟೇ ಅಲ್ಲದೇ ಭೂಮಿ ತೇವಾಂಶವನ್ನು ಹೆಚ್ಚಿಸುತ್ತಿತ್ತು; ಇದಕ್ಕೆ ಸಾಕ್ಷಿ ಎಂದರೆ ಮಳೆ ಕಡಿಮೆ ಬೀಳುವ ಪ್ರದೇಶದಲ್ಲೂ ಬಂಪರ್ ಬೆಳೆ ತೆಗೆಯುತ್ತಿದ್ದುದು ಮತ್ತು ಆರ್ದ್ರ ಬೆಳೆಗಳನ್ನೂ ಬೆಳೆಯುತ್ತಿದ್ದುದು. ಕರಾವಳಿ, ಮಲೆನಾಡು ಮತ್ತು ಅರೆ ಮಲೆನಾಡು ನೀರು ಹೆಚ್ಚಾಗಿದ್ದ ಪ್ರದೇಶಗಳು; ಕರಾವಳಿ ಮೂರು ಆರ್ದ್ರ ಬೆಳೆಗಳನ್ನು ವರುಷಕ್ಕೆ ಉತ್ಪಾದಿಸುತ್ತಿತ್ತು ಮತ್ತೀ ಪ್ರದೇಶ ಭಾರತ ಉಪಖಂಡದಲ್ಲಿ ಅತಿ ಹೆಚ್ಚು ಮಳೆ ಬೀಳುವ ಎರಡನೇ ಪ್ರದೇಶವಾಗಿತ್ತು. ಹಾಗಾಗಿ ಕರ್ನಾಟಕ ‘ಕಡಿಮೆ’ ಅಥವಾ ‘ಹೆಚ್ಚು’ ಮಳೆಯನ್ನನುಭವಿಸುತ್ತಿತ್ತೇ ಹೊರತು ಕ್ಷಾಮದ ದಿನಗಳಲ್ಲ. ಮಳೆ ಕಡಿಮೆಯಾದ ಬರದ ವರುಷಗಳಿದ್ದವೇ ಹೊರತು ಕ್ಞಾಮವಿರಲಿಲ್ಲ. ಈ ಬರವೂ ಕೂಡ ಅಲ್ಲಲ್ಲಿ ಕಂಡು ಬರುತ್ತಿತ್ತೇ ಹೊರತು ಇಡೀ ಕರ್ನಾಟಕದಲ್ಲಲ್ಲ, ಹೆಚ್ಚು ಆಹಾರಧಾನ್ಯ ಉತ್ಪಾದನೆಯಾದ ಪ್ರದೇಶದಿಂದ ಬರದ ಪ್ರದೇಶಕ್ಕೆ ಆಹಾರ ರವಾನೆಯಾಗುತ್ತಿತ್ತು. ಕ್ಷಾಮದ ಕಾರಣದಿಂದಾಗಿ ಹಸಿವಿನಿಂದ ಜನರು ಸಾಯುವುದನ್ನು ಮತ್ತು ರೋಗಪೀಡಿತರಾಗುವುದನ್ನು ಈ ರವಾನೆಯಾಗುವ ಆಹಾರ ತಡೆಯುತ್ತಿತ್ತು.

ಕರ್ನಾಟಕದಲ್ಲಿ ಕೃಷಿ ಕ್ಷೇತ್ರ ಉತ್ತುಂಗದಲ್ಲಿದ್ದಾಗ ಬಂದ ಮನ್ರೋ, ರಾಜ್ಯ ಕೃಷಿಯನ್ನು ಬಲವಂತವಾಗಿ ವಶಪಡಿಸಿಕೊಂಡಿರುವುದು ಮತ್ತು ಲೂಟಿ ಮಾಡುತ್ತಿರುವುದನ್ನು ಪರಿಶೀಲಿಸಿದರು. ಕ್ಷಾಮ ಹವಾಮಾನದಿಂದಾಗಿರುವುದಲ್ಲ, ಪ್ರಾಕೃತಿಕವಲ್ಲ ಬದಲಿಗೆ ಮನುಷ್ಯ ನಿರ್ಮಿತ ಎಂಬಂಶವನ್ನು ತಮ್ಮ ಬರಹದಲ್ಲಿ ಸಾದರಪಡಿಸಿದರು. ಕ್ಷಾಮ, ಅವರ ಬರಹಗಳಲ್ಲಿ ನಾವು ಓದಿದಂತೆ, ಸಾಮಾಜಿಕ ವ್ಯವಸ್ಥೆಯಲ್ಲಿನ ಹಸ್ತಕ್ಷೇಪದಿಂದುಂಟಾದದ್ದು, ಮತ್ತು ಈ ಹಸ್ತಕ್ಷೇಪವನ್ನು ಆ ಕಾಲಘಟ್ಟದಲ್ಲಿ ಮಾಡಿದ್ದು ವಸಾಹತುಶಾಹಿ.

1805ರಲ್ಲಿ ಮನ್ರೋ The course to be taken by government in dealing with the security of grainನಲ್ಲಿ ಬರೆಯುತ್ತಾರೆ: “ಕರ್ನಾಟಕದಲ್ಲಿ ಹವಾಮಾನ ವೈಪರೀತ್ಯ ಎಷ್ಟಾದರೂ ಇರಲಿ, ಸೇವಿಸಲೆಷ್ಟು ಆಹಾರ ಬೇಕೋ ಅಷ್ಟು ಬಹುಶಃ ಉತ್ಪಾದನೆಯಾಗುತ್ತದೆ; ಬೆಳೆಯ ಸಂಪೂರ್ಣ ವೈಫಲ್ಯವೆಂಬುದು ಇಲ್ಲಿ ಕೇಳಿಯೇ ಗೊತ್ತಿಲ್ಲ, ಕೆಲವೊಂದು ಸಣ್ಣ ಪುಟ್ಟ ಹಳ್ಳಿಗಳಲ್ಲಿ ಅಥವಾ ಚಿಕ್ಕ ಜಿಲ್ಲೆಗಳಲ್ಲಿ ಆಗಿರಬಹುದಷ್ಟೇ. ಎಲ್ಲೆಡೆಯೂ ಬೆಳೆ ಕಡಿಮೆಯಾಗಿಬಿಟ್ಟ ಮತ್ತು ಪೂರ್ತಿ ಹಳ್ಳಿಗಳೇ ನಾಶವಾಗಿಬಿಟ್ಟ ತೀರ ಕೆಟ್ಟ ವರ್ಷಗಳಲ್ಲೂ ಸಹ, ಉತ್ಪಾದನೆಯಾದ ಆಹಾರ ಎಂಟತ್ತು ತಿಂಗಳುವರೆಗೆ ಸಾಕಾಗುತ್ತೆ; ಕೊರತೆಯನ್ನು ಕೂಡಿಟ್ಟ ಕಳೆದ ವರುಷದ ಆಹಾರ ಧಾನ್ಯ ಪೂರೈಸುತ್ತಿತ್ತು ಮತ್ತು ಹವಾಮಾನ ಉತ್ತಮವಿದ್ದು ಆಹಾರಧಾನ್ಯ ಚೆನ್ನಾಗಿ ಬೆಳೆದ ನೆರೆಹೊರೆಯ ಪ್ರಾಂತ್ಯಗಳಿಂದ ಆಮದಾಗುತ್ತಿತ್ತು. ಬೀಜ ಸಮಯ ಭಾರತದಲ್ಲಿ ಎಷ್ಟು ಸುದೀರ್ಘವಾಗಿದೆಯೆಂದರೆ – ಒಂದು ರೀತಿಯ ಕಾಳು ಬೆಳೆಯದೇ ಹೋದರೆ, ಮತ್ತೊಮ್ಮೆ ಭೂಮಿಯನ್ನು ಉತ್ತು ಬೇರೊಂದು ಬೀಜವನ್ನು ನೆಡಬಹುದಿತ್ತು; ಸಾಮಾನ್ಯವಾಗಿ ಉತ್ಪಾದನೆ ಎಷ್ಟು ಸಮೃದ್ಧವಾಗಿ ಹೆಚ್ಚುವರಿ ಬೆಳೆಯನ್ನು ಕಳೆದ ವರುಷಗಳಲ್ಲಿ ರೈತರಿಗೆ ಮತ್ತು ವರ್ತಕರಿಗೆ ನೀಡಿರುತ್ತದೆಯೆಂದರೆ ಈ ದೇಶದಲ್ಲಿ ಹವಾಮಾನ ವೈಪರೀತ್ಯದ ಒಂದೇ ಕಾರಣಕ್ಕೆ ಕ್ಷಾಮ ಉಂಟಾಗುವುದು ಅಸಾಧ್ಯ. ಹವಾಮಾನ ವೈಪರೀತ್ಯದ ಕಾರಣದಿಂದ ಉಂಟಾಗುವ ಆಹಾರಧಾನ್ಯದ ಕೊರತೆಯನ್ನು ಕ್ಷಾಮವಾಗಿ ಪರಿವರ್ತಿಸುವುದು ಪ್ರಾಂತ್ಯಗಳ ನಡುವೆ ನಡೆಯುವ ಯುದ್ಧಗಳು, ಕಂದಾಯ ವಸೂಲು ಮಾಡಲು ಸರಕಾರ ತೋರುವ ಸುಲಿಗೆಯ ಸ್ವಭಾವ, ಬೆಲೆಯನ್ನು ನಿಯಂತ್ರಿಸಿ ದೊಡ್ಡ ಪಟ್ಟಣಗಳಿಗೆ ಪೂರೈಸುವ ನಿರ್ಧಾರಗಳು ಮತ್ತಿವೆಲ್ಲಕ್ಕಿಂತಲೂ ಹೆಚ್ಚಾಗಿ ಜಮೀನುದಾರರು ನಡೆಸುವ ದರೋಡೆ ಕ್ಷಾಮಕ್ಕೆ ಕಾರಣ”. (258)

ಮನ್ರೋ ಪಟ್ಟಿ ಮಾಡುವ ಈ ಎಲ್ಲಾ ಅಪರಾಧಗಳು ಕೊರತೆಯನ್ನು ಕ್ಷಾಮವನ್ನಾಗಿ ಪರಿವರ್ತಿಸುತ್ತವೆ; ಇವೆಲ್ಲವನ್ನೂ ಬ್ರಿಟೀಷ್ ವಸಾಹತುಶಾಹಿ ಮಾಡಿತು, ಪ್ರೋತ್ಸಾಹಿಸಿತು. ‘ಅನಾಗರೀಕ’ ಪ್ರಪಂಚಕ್ಕೆ ಬ್ರಿಟೀಷ್ ವಸಾಹತುಶಾಹಿ ಕ್ಷಾಮವನ್ನು ಉಡುಗೊರೆಯಾಗಿ ನೀಡಿತು.

ಬಳ್ಳಾರಿ ಮತ್ತು ನೆರೆಹೊರೆ ಜಿಲ್ಲೆಗಳು 1804ರಲ್ಲಿ ಕ್ಷಾಮದಿಂದ ತತ್ತರಿಸಿತು, ಇದಕ್ಕೆ ಮನ್ರೋ ಪ್ರತಿಕ್ರಯಿಸಿದ್ದನ್ನು ನಾವು ನೋಡಿದ್ದೇವೆ. ಈ ಕ್ಷಾಮದ ಉಪಟಳವನ್ನು ಮೈಸೂರು ಸಾಮ್ರಾಜ್ಯದಲ್ಲಿ ಕೈಯಳತೆ ದೂರದಲ್ಲಿರಿಸಿದ್ದಕ್ಕೆ ಕಾರಣ ವಸಾಹತುಶಾಹಿ ಆ ಸಮಯದಲ್ಲಿ ನೀರಾವರಿನ್ನಿನ್ನೂ ನಾಶ ಪಡಿಸಿರಲಿಲ್ಲ ಮತ್ತು ಬೇಳೆ ಕಾಳುಗಳ ವ್ಯಾಪಾರದಲ್ಲಿ ತನ್ನ ಕೈಯಾಡಿಸಿರಲಿಲ್ಲ. ಒಡೆಯರರಾಸ್ಥಾನದ ಇತಿಹಾಸಕಾರ ಶಾಮ ರಾವ್ ಹಿಗ್ಗಿನೊಂದಿಗೆ ನೆನಪಿಸಿಕೊಳ್ಳುತ್ತಾರೆ: “1804 ಕ್ಷಾಮದ ಸಂದರ್ಭದಲ್ಲಿ…… ಕ್ಷಾಮಪೀಡಿತ ಪ್ರದೇಶದ ಜನರು ದೊಡ್ಡ ಸಂಖೈಯಲ್ಲಿ ಮೈಸೂರಿಗೆ ವಲಸೆ ಬಂದರು. ಆ ಸಮಯದಲ್ಲಿ ಬೇಳೆ ಕಾಳುಗಳು ಎಷ್ಟು ಸಮೃದ್ಧವಾಗಿದ್ದವೆಂದರೆ, ವಲಸೆಗಾರರ ಹಸಿವನ್ನು ನೀಗಿಸುವುದಷ್ಟೇ ಅಲ್ಲದೆ ದೊಡ್ಡ ಪ್ರಮಾಣದ ಆಹಾರಧಾನ್ಯವನ್ನು ಬ್ರಿಟೀಷರಾಡಳಿತವಿದ್ದ ಜಿಲ್ಲೆಗಳಿಗೂ ರಫ್ತು ಮಾಡಲಾಯಿತು. ಆ ಸಮಯದಲ್ಲಿ ಮದ್ರಾಸಿನ ಗವರ್ನರ್ ಆಗಿದ್ದ ಲಾರ್ಡ್ ವಿಲಿಯಂ ಬೆಂಟಿಕ್ 4ನೇ ಜುಲೈ 1804ರಂದು ಪೂರ್ಣಯ್ಯನವರಿಗೆ ಬರೆದ ಪತ್ರದಲ್ಲಿ ಭಾರತದ ಇತರೆ ಭಾಗದಲ್ಲಿ ಕ್ಷಾಮದಿಂದಾದ ಆಹಾರ ಧಾನ್ಯ ಕೊರತೆಯಿಂದಾದ ಹಾನಿಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತ, ಮೈಸೂರು ರಾಜ್ಯ ಇಂತಹ ದುರಂತದಿಂದ ಪಾರಾಗುವಂತೆ ಮಾಡಿದ್ದಕ್ಕೆ ಧನ್ಯವಾದಗಳನ್ನರ್ಪಿಸುತ್ತಾನೆ. ಮೈಸೂರು ಮುಂದಕ್ಕೂ ಹೀಗೇ ಸಮೃದ್ಧವಾಗಿರಲಿ, ನೆರೆಯ ಜನರ ಅವಶ್ಯಕತೆಗಳನ್ನು ಪೂರೈಸುವಂತಾಗಿ ಮತ್ತು ಕ್ಷಾಮ ಪೀಡಿತ ಜನರಿಗೆ ಆಸರೆಯಾಗಲಿ ಎಂದು ಹಾರೈಸುತ್ತಾನೆ”. (259)

ಹೆಚ್ಚುವರಿ ಆಹಾರಧಾನ್ಯಗಳು ಕಡಿಮೆ ಸಮಯಾವಧಿಯದ್ದು. ಚಿನ್ನದ ಮೊಟ್ಟೆಯಿಡುವ ಬಾತುಕೋಳಿಯ ಕತೆಯಂತೆ, ವಸಾಹತುಶಾಹಿ ಮೈಸೂರಿನ ಕೃಷಿ ವ್ಯವಸ್ಥೆಯನ್ನು ಲೂಟಿ ಹೊಡೆಯಲಾರಂಭಿಸಿತು. ಮತ್ತು ಶಾಮ ರಾವ್ ಸ್ವತಃ ಒಪ್ಪಿಕೊಂಡಂತೆ, 1816-17ರಲ್ಲಿ ಮೈಸೂರಿಗೆ ಭೇಟಿ ಕೊಟ್ಟ ಬರಗಾಲ, 1823-24ರಷ್ಟರಲ್ಲಿ ಕ್ಷಾಮವಾಗಿ ಕಾಡಿತು. (260) ಮತ್ತೆ 1831 ಹಾಗೂ 1833ರಲ್ಲಿ ಕ್ಷಾಮ ಉಂಟಾಯಿತು. (261)

ಈ ಬಾರಿ ಸಾಮ್ರಾಜ್ಯದ ನೆರವಿಗೆ ಬರುವ ಯಾವ ಪ್ರದೇಶವೂ ಭಾರತದಲ್ಲಿ ಇರಲಿಲ್ಲ. ಬಹುಶಃ ಟಿಪ್ಪುವಿನ ಮೈಸೂರೇ ಕೊನೆಯ ಅನ್ನದ ಬಟ್ಟಲಾಗಿತ್ತು, ಡೆಕ್ಕನ್ನಿನ ಕೃಷಿ ವ್ಯವಸ್ಥೆಯನ್ನೀಗಾಗಲೇ ಅತ್ಯಾಚಾರ ಮಾಡಲಾಗಿತ್ತು ಮತ್ತು ಸಂಪೂರ್ಣ ನಾಶ ಮಾಡಿಬಿಡಲಾಗಿತ್ತು. ಕ್ಷಾಮ ಮೈಸೂರಿಗೆ ಭೇಟಿ ಕೊಟ್ಟಾಗ, ಒಬ್ಬಂಟಿಯಾಗಿ ಬಂದಿರಲಿಲ್ಲ; ರೋಗ ರುಜಿನಗಳನ್ನು, ಜೊತೆಗೂಡಿಸಿಕೊಂಡೇ ಭೇಟಿ ಕೊಟ್ಟಿತ್ತು. ಶಾಮ ರಾವ್ ಹೇಳುತ್ತಾರೆ: “ಹವಾಮಾನದ ಅನಿಶ್ಚಿತತೆಯನ್ನು ಹೊರತುಪಡಿಸಿ, ದೇಶದಲ್ಲೇ ಮೊದಲ ಬಾರಿಗೆ….. ಈಗ ಕಾಲರಾ ಎಂದು ಹೆಸರಿಸಲಾಗಿರುವ ಸಾಂಕ್ರಮಿಕ ರೋಗ ಜನರನ್ನು ಧೃತಿಗೆಡಿಸುತ್ತಿದೆ, ಕೃಷಿ ಕೆಲಸಕ್ಕೆ ಹೊಡೆತ ಕೊಡುತ್ತಿದೆ”. (262)

ಶಾಮ ರಾವ್ ಸಾಂಕ್ರಮಿಕ ರೋಗದ ಬಗ್ಗೆ “ಈಗ ಕಾಲರಾ ಎಂದು ಹೆಸರಿಸಲಾಗಿರುವ” ಎಂದು ಅವಲೋಕಿಸಿರುವುದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಕಾಲರಾ ಎಂಬ ಹೆಸರು ತೀರ ಇತ್ತೀಚೆನದು. ಇದು ಆ ಖಾಯಿಲೆಯೂ ಇತ್ತೀಚೆನದೇ ಎನ್ನುವುದನ್ನು ತೋರಿಸುತ್ತದೆಯಲ್ಲವೇ?

ಕಾರ್ಲ್ ಮಾರ್ಕ್ಸನ ಟಿಪ್ಪಣಿಗಳು ಈ ಸಂಗತಿಯನ್ನು ಸ್ಪಷ್ಟಪಡಿಸುತ್ತದೆ. ಆಗಷ್ಟ್ 1817ರಲ್ಲಿ ಆತ “the first outbreak of cholera with terrible vehemence in India” ನಲ್ಲಿ ಅವರಿದನ್ನು ತಿಳಿಸುತ್ತಾರೆ. “ಮೊದಲಿದಿದು ಕಲ್ಕತ್ತಾ ಸಮೀಪದ ಜೆಸ್ಸೋರ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿತು. ಇಡೀ ಏಷ್ಯಾಕ್ಕೆ ಹಬ್ಬಿ ಯುರೋಪ್ ಖಂಡವನ್ನು ತಲುಪಿತು, ಅಲ್ಲಿ ಬಲಿಯಾಕಿ ಇಂಗ್ಲೆಂಡಿಗೆ ಹೋಗಿ ನಂತರ ಅಮೆರಿಕಾಕ್ಕೆ ತಲುಪಿಕೊಂಡಿತು”. ಅಂದರೆ ಭಾರತದ ಕಾಲರಾ ಕಾಮನ್ ವೆಲ್ತ್ ದೇಶಗಳಿಗೆಲ್ಲ ಹೋಗಿ ರಾಣಿಯನ್ನು ಭೇಟಿಯಾಗಲು ಲಂಡನ್ನಿಗೂ ಭೇಟಿ ಕೊಟ್ಟಿತು. ಮಾರ್ಕ್ಸ್ ನಂತರ ನವೆಂಬರ್ 1817ರಲ್ಲಿ ಹ್ಯಾಸ್ಟಿಂಗ್ಸ್ ಸೈನ್ಯದ ಮೇಲೆ ದಾಳಿ ಮಾಡಿದ ಕಾಲರಾದ ಬಗ್ಗೆ ಹೇಳುತ್ತಾ, ಅದು ಬುಂದೇಲ್ ಖಂಡವನ್ನು ದಾಟುವಾಗ “ವಾರಗಟ್ಟಲೇ ದಾರಿಯಲ್ಲಿ ಸತ್ತ ಮತ್ತು ಸಾಯುತ್ತಿದ್ದ ಜನರ ದೇಹಗಳಿತ್ತು” ಎಂದು ತಿಳಿಸುತ್ತಾರೆ. (263) ಬ್ರಿಟೀಷ್ ಸೈನ್ಯ ಹೊಸ ಹೊಸ ಪ್ರದೇಶಗಳನ್ನು ಆಕ್ರಮಿಸುವ ಸಲುವಾಗಿ ಪ್ರದೇಶದಿಂದ ಪ್ರದೇಶಕ್ಕೆ ಹೋಗುತ್ತಿದ್ದಂತೆಯೇ ಅವರಲ್ಲಿದ್ದ ಖಾಯಿಲೆ ಪೀಡಿತರು ಈ ಮಾರಣಾಂತಿಕ ರೋಗವನ್ನು ಇಡೀ ಭೂಮಿಯ ತುಂಬೆಲ್ಲ ಹರಡಿಬಿಟ್ಟರು.

ಸಾಂಕ್ರಮಿಕ ರೋಗವಾದ ಪ್ಲೇಗಿಗೆ ಕನ್ನಡದಲ್ಲಿ ಸಮನಾರ್ಥಕ ಪದವೇ ಇರಲಿಲ್ಲವೆಂಬುದು ಅಚ್ಚರಿಯ ಸಂಗತಿಯೇನಲ್ಲ. ಕನ್ನಡೀಕರಣಗೊಂಡು ಪಿಲ್ಲೇಕಮ್ಮ ಎಂದು ಕರೆಸಿಕೊಂಡ ಪ್ಲೇಗ್ ಅಮ್ಮ, ಜನರರ್ಪಿಸುವ ಕಾಣಿಕೆಗಳನ್ನು ಸ್ವೀಕರಿಸಿ ತನ್ನ ಆಕ್ರಮಣವನ್ನು ನಿಲ್ಲಿಸುವ ತಾಯಿ ದೇವತೆ. ಬ್ರಿಟೀಷ್ ಆಳ್ವಿಕೆ ಕನ್ನಡ ನಿಘಂಟಿಗೆ ಹೊಸ ಹೊಸ ಪದಗಳನ್ನು ಸೇರಿಸಿದ್ದೇ ಅಲ್ಲದೆ, ಈಗಾಗಲೇ ದೈವಸಂದಣಿ ಹೆಚ್ಚಿರುವ ಹಿಂದೂ ಧರ್ಮದಲ್ಲಿ ಮತ್ತಷ್ಟು ಹೊಸ ಭೀತಿ ಮೂಡಿಸುವ ದೇವರನ್ನು ದೇವತೆಯರನ್ನು ಪರಿಚಯಿಸಿತು.

ಕ್ಷಾಮ, ಕಾಲರ ಮತ್ತು ಪ್ಲೇಗ್ ವಸಾಹತುಶಾಹಿ ಜನಸಮೂಹವನ್ನು ಬಿಕ್ಕಟ್ಟಿಗೆ ದೂಡಿಬಿಟ್ಟಿರುವ ಸ್ಪಷ್ಟ ಸೂಚನೆಗಳು. ಇದು ಲೂಟಿಕೋರ ಊಳಿಗಮಾನ್ಯ ದೊರೆಗಳ, ಹಣ ಬಾಕ ಬಡ್ಡಿವ್ಯಾಪಾರಿಗಳ ಮತ್ತು ದರೋಡೆ ಮಾಡುವ ಬಿಳಿ ವಸಾಹತುಶಾಹಿಗಳ ಒಟ್ಟಾರೆ ಪರಿಣಾಮ. ಸಾಮಾಜಿಕ ರಚನೆಯಲ್ಲಿ ಆಳವಾದ ಬಿಕ್ಕಟ್ಟನ್ನು ಪ್ರತಿಫಲಿಸುವ ಈ ಪರಿಣಾಮಗಳು ಶತ್ರುಗಳಲ್ಲಿ ಅಮಾನವೀಯತೆಯನ್ನು ಮತ್ತಷ್ಟು ಹೆಚ್ಚಿಸಿ ಅವರ ಕೋರೆ ಹಲ್ಲುಗಳು ಕರ್ನಾಟಕದ ಜನಸಮೂಹದ ಮಾಂಸದಾಳಕ್ಕೆ ಇಳಿಸಿ ಕ್ಷಾಮದಿಂದೆಷ್ಟು ಲಾಭವೋ ಅಷ್ಟನ್ನೂ ಮಾಡಿಕೊಳ್ಳಲು ಕಾರಣವಾಯಿತು. ಪರಿಣಾಮಗಳು ಮತ್ತಷ್ಟು ಬಿಕ್ಕಟ್ಟುಗಳುದ್ಭವವಾಗಲು ಕಾರಣವಾಯಿತು, ಜನರನ್ನು ದುಃಖಸಾಗರದಲ್ಲಿ ಮುಳುಗಿಸಿಬಿಟ್ಟಿತು.

ಮುಂದಿನ ವಾರ: ಬಲವಂತ ಮತ್ತು ಲೂಟಿ

ಆಗ 4, 2016

ದಲಿತ ದಂಪತಿಗಳ ಹತ್ಯೆಯೂ ಉತ್ತರ ಪ್ರದೇಶದ ರಾಜಕೀಯವೂ

ಹದಿನೈದು ರುಪಾಯಿಗೆ ಹತ್ಯೆಯಾದ ದಲಿತ ದಂಪತಿ
(ಚಿತ್ರ ಕೃಪೆ: ಎನ್ ಡಿ ಟಿ ವಿ)
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
04/08/2016
ಸ್ವಾತಂತ್ರ ದೊರೆತ ಎಪ್ಪತ್ತು ವರ್ಷಗಳ ನಂತರವೂ ಈ ದೇಶದಲ್ಲಿ ದಲಿತರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿವೆ ಮತ್ತು ಅವುಗಳನ್ನು ತಡೆಯಬೇಕಾದ ಪ್ರಭುತ್ವಗಳು ಮೊಸಳೆ ಕಣ್ಣೀರು ಸುರಿಸಿ ಮೇಲ್ಜಾತಿಯವರಿಗೆ ತೊಂದರೆಯಾಗದ ರೀತಿಯಲ್ಲಿ ಅಂತಹ ಪ್ರಕರಣಗಳನ್ನು ನಿಬಾಯಿಸುತ್ತಿವೆಯೆನ್ನುವು
ದೇ ನಮ್ಮ ನಾಡಿನ ಬಹು ದೊಡ್ಡ ದುರಂತ. ಎರಡು ದಿನದ ಹಿಂದೆ ಉತ್ತರಪ್ರದೇಶದಲ್ಲಿ ನಡೆದ ಈ ಘಟನೆಯನ್ನೇ ನೋಡಿ:

ಈ ತಿಂಗಳ 21ನೇ ತಾರೀಖು ಗುರುವಾರ ಉತ್ತರಪ್ರದೇಶದ ಕುರಾ ವ್ಯಾಪ್ತಿಯ ಲಕ್ಷ್ಮಿಪುರ ಎಂಬ ಹಳ್ಳಿಯಲ್ಲಿ ದಲಿತ ದಂಪತಿಗಳಾದ ಶ್ರೀಭರತ್ ನಾಥ್(48), ಮಮತಾ(45)ರವರನ್ನು ಮೇಲ್ಜಾತಿಯ ಅಂಗಡಿ ಮಾಲೀಕನೊಬ್ಬ ಕೊಡಲಿಯಿಂದ ಕತ್ತರಿಸಿ ಕೊಂದಿದ್ದಾನೆ. ಕೆಲ ದಿನಗಳ ಹಿಂದೆ ಈ ದಂಪತಿಗಳು ಬಿಸ್ಕೆಟ್ ಖರೀದಿಸಿದ 15 ರೂಪಾಯಿಗಳ ಸಾಲವನ್ನು ಹಿಂದಿರುಗಿಸಲು ಇನ್ನಷ್ಟು ಸಮಯಾವಕಾಶ ಕೇಳಿದ್ದೇ ಈ ಕೊಲೆಗೆ ಕಾರಣವೆನ್ನಲಾಗಿದೆ. ಹತ್ಯೆಯಾದ ದಂಪತಿಗಳು ನಾತ್ (ದೊಂಬರ ಜಾತಿ) ಸಮುದಾಯಕ್ಕೆ ಸೇರಿದ್ದು ಕೂಲಿ ಮಾಡಲು ಜಮೀನಿಗೆ ಹೋಗುತ್ತಿದ್ದ (ಬೆಳಗಿನ 6ಗಂಟೆ ಸುಮಾರಿಗೆ) ಸಂದರ್ಭದಲ್ಲಿ ಈ ಹತ್ಯೆ ನಡೆದಿದೆ. ಗಮನಿಸಬೇಕಾದ ಅಂಶವೆಂದರೆ ಉತ್ತರ ಪ್ರದೇಶದಲ್ಲಿರುವ ನಾತ್ ಸಮುದಾಯದವರು ಪಾರಂಪರಿಕವಾಗಿ ದೊಂಬರ ಆಟ ಆಡಿ ಜನರಿಗೆ ಮನೋರಂಜನೆ ಒದಗಿಸುವ ಕಸುಬಿನವರು ಮತ್ತು ಹೆಚ್ಚಿನ ಭಾಗದಲ್ಲಿ ಅಲೆಮಾರಿ ಪ್ರವೃತ್ತಿಯವರು. ಈ ಸಮುದಾಯದ ಶೇಕಡಾ 99ರಷ್ಟು ಜನರಿಗೆ ಉಳುಮೆ ಮಾಡಲು ಸ್ವಂತದ ಭೂಮಿಯಿಲ್ಲವಾಗಿದ್ದು ತಮ್ಮ ಕುಲಕಸುಬನ್ನೇ ನಂಬಿ ಕೊಂಡು ಬದುಕುವವರು. ಕೊಲೆಯಾದ ಈ ದಂಪತಿಗಳು ತಮ್ಮ ಕುಲಕಸುಬನ್ನು ಮುಂದುವರೆಸಲಾಗದೆ ಹಳ್ಳಿಯಲ್ಲಿ ನೆಲೆಸಿ ಭೂಮಾಲೀಕರ ಜಮೀನುಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರಾಗಿದ್ದರು. ಈ ಹತ್ಯೆ ನಡೆದ ಲಕ್ಷ್ಮಿಪುರ ಮಿಯಾಪುರ ಕ್ಷೇತ್ರಕ್ಕೆ ಸೇರಿದ್ದು ಇಲ್ಲಿ ಮುಲಾಯಂಸಿಂಗ್ ಯಾದವರ ಸೋದರ ಸಂಬಂದಿ ಸಂಸದರಾಗಿದ್ದಾರೆ. ಉತ್ತರ ಪ್ರದೇಶದ ಮಟ್ಟಿಗೆ ದಲಿತನೊಬ್ಬನ ಜೀವದ ಬೆಲೆ ಕೇವಲ 15 ರೂಪಾಯಿಗಳೆಂಬ ಕಠೋರ ಸತ್ಯವನ್ನು ಅರಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ.

ಕಳೆದ ಕೆಲ ವಾರಗಳಿಂದಲೂ ದೇಶದ ವಿವಿದ ಭಾಗಗಳಲ್ಲಿ, ಅದರಲ್ಲೂ ಹೆಚ್ಚಾಗಿ ಉತ್ತರಭಾರತದಲ್ಲಿ ದಲಿತರ ಮೇಲಿನ ಹಲ್ಲೆಗಳು ಸರಣಿ ರೂಪದಲ್ಲಿ ನಡೆಯುತ್ತಿವೆ 

ಈ ಘಟನೆಗೆ ಕೆಲದಿನಗಳ ಮೊದಲು ಮೇಲ್ವರ್ಗಕ್ಕೆ ಸೇರಿದ ಉತ್ತರಪ್ರದೇಶ ಬಾಜಪದ ಉಪಾದ್ಯಕ್ಷರಾದ ದಯಾಶಂಕರ್ ಎಂಬುವವರು ಬಹುಜನ ಪಕ್ಷದ ನಾಯಕಿ ಮಾಯಾವತಿಯವರನ್ನು (?)ಗೆ( ಸದರಿ ಪದವನ್ನು ಬಳಸಲು ನಾನು ಬಯಸುವುದಿಲ್ಲ) ಹೋಲಿಸಿ ಬಾಷಣ ಮಾಡಿ ದಲಿತರ ಮೇಲೆ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಹಲ್ಲೆ ಮಾಡುವ ತಮ್ಮ ಮೇಲ್ಜಾತಿಗಳ ಚಾಳಿಯನ್ನು ಬಹಿರಂಗಗೊಳಿಸಿದರು. ಉತ್ತರ ಪ್ರದೇಶದ ಮಟ್ಟಿಗೆ ದಲಿತರ ಮೇಲಿನ ಇಂತಹ ಹಲ್ಲೆಗಳು ಹೊಸವೇನು ಅಲ್ಲ. ಜೊತೆಗೆ ಅಪರೂಪಕ್ಕೊಮ್ಮೆ ಆಗುವಂತಹವು ಅಲ್ಲ. ನ್ಯಾಷನಲ್ ಕ್ರೈಂ ಬ್ಯೂರೊದ ವರದಿಗಳ ಪ್ರಕಾರ ಅಲ್ಲಿ ದಲಿತರ ಮೇಲಿನ ಹಲ್ಲೆಗಳು ಕನಿಷ್ಠ ವಾರಕ್ಕೊಂದಾದರು ನಡೆಯುತ್ತಿವೆಯಂತೆ. ಆದರೆ ಶೇಕಡಾ 50ರಷ್ಟು ಪ್ರಕರಣಗಳನ್ನು ಮೇಲ್ಜಾತಿಯವರ ಭಯದ ಕಾರಣದಿಂದಾಗಿ ದಲಿತರು ಹೊರಜಗತ್ತಿಗೆ ಬಾಯಿ ಬಿಡುವುದೇ ಇಲ್ಲ. ರಾಷ್ಟ್ರ ರಾಜದಾನಿಗೆ ಬಹಳ ಸಮೀಪವಿರುವ ರಾಜ್ಯದಲ್ಲೇ ದಲಿತರ ಮೇಲಿನ ಹಲ್ಲೆಗಳು ಸತತವಾಗಿ, ಯಾವ ಭಯವೂ ಇಲ್ಲದೆ ನಡೆಯುತ್ತಿರುವುದು ನಿಜಕ್ಕೂ ಖಂಡನೀಯ.

ಹಾಗಿದ್ದರೆ ಇಂತಹ ಹಲ್ಲೆಗಳನ್ನು ನಡೆಸುವಲ್ಲಿ ಮತ್ತು ನಿಲ್ಲಿಸುವಲ್ಲಿ ರಾಜಕಾರಣಿಗಳ ಪಾತ್ರವೇನೂ ಇಲ್ಲವೇ ಎನ್ನುವುದೇ ಅತ್ಯಂತ ಮುಖ್ಯ ಪ್ರಶ್ನೆಯಾಗಿದೆ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಸಿಗುವುದು ಹಲ್ಲೆಗಳ ಹಿಂದೆ ಮತ್ತು ಅದನ್ನು ತಡೆಯುವ ಯತ್ನದ ಹಿಂದೆ ಇರುವ ರಾಜಕೀಯದ ಚದುರಂಗದಾಟಗಳು. ತೀರಾ ಕ್ಷುಲ್ಲಕ ಕಾರಣಕ್ಕೂ ದಲಿತರ ಮೇಲೆ ಹಲ್ಲೆ ನಡೆಸುವ ಮೇಲ್ಜಾತಿಗಳ ಮನಸಿನಲ್ಲಿರುವ ಶ್ರೇಷ್ಠತೆಯನ್ನು ಬಡಿದೆಬ್ಬಿಸಿ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳುವಲ್ಲಿ ನಮ್ಮ ರಾಜಕೀಯ ಪಕ್ಷಗಳು ಅವುಗಳ ನಾಯಕರುಗಳು ಬಹುಮುಖ್ಯಪಾತ್ರ ವಹಿಸುತ್ತಿವೆ. ತಾವು ಬೆಂಬಲಿಸುವ ರಾಜಕಾರಣಿಗಳ ಅಭಯಹಸ್ತ ತಮಗಿದೆಯೆಂಬ ನಂಬಿಕೆಯೇ ಮೇಲ್ಜಾತಿಗಳ ಈ ಕ್ರೌರ್ಯಕ್ಕೆ ಮೂಲಭೂತ ಕಾರಣವಾಗಿವೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಸರಕಾರದ ವ್ಯವಸ್ಥೆಯೊಳಗಿರುವ ಮೇಲ್ಜಾತಿಗಳ ಪಟ್ಟಭದ್ರ ಹಿತಾಸಕ್ತಿಗಳು ತಮ್ಮನ್ನು ಕಾಪಾಡಬಲ್ಲವೆಂಬ ಆತ್ಮವಿಶ್ವಾಸದಿಂದಲೇ ಇವತ್ತು ದಲಿತರ ಮೇಲಿನ ಹಲ್ಲೆಗಳು ಹೆಚ್ಚುತ್ತಿವೆ. ಅದರಲ್ಲೂ ಜಾತಿ ಆಧಾರಿತ ರಾಜಕಾರಣವೇ ಪರಾಕಷ್ಠೆಯಲ್ಲಿರುವ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಇಂತಹವುಗಳು ಹೆಚ್ಚಿವೆ, ಇಂತಹ ಘಟನೆಗಳು ನಡೆದ ತಕ್ಷಣ ಸ್ಪರ್ದೆಗೆ ಬಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸುವ ರಾಜಕಾರಣಿಗಳು ತಮ್ಮ ವಿಷಾದದ ಹೇಳಿಕೆಗಳನ್ನು, ತಪ್ಪು ಮಾಡಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕೆಂಬ ಆಕ್ರೋಶಭರಿತ ಹೇಳಿಕೆಗಳನ್ನು, ತಕ್ಷಣಕ್ಕೆ ಒಂದಿಷ್ಟು ಪರಿಹಾರದ ಹಣವನ್ನು ನೀಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಬಹುತೇಕ ಪಕ್ಷಗಳ ರಾಜಕಾರಣಿಗಳು ಇಂತಹ ನಾಟಕಗಳಲ್ಲಿ ಪಳಗಿದವರಾಗಿದ್ದು, ಅವರಿಗೆ ಜಾತಿ ರಾಜಕಾರಣದ ಒಳಸುಳಿಗಳು ಗೊತ್ತಿರುವುದರಿಂದಲೇ ಯಾವ ಪ್ರಕರಣಕ್ಕೆ ಎಷ್ಟು ಕಣ್ಣೀರು ಸುರಿಸಬೇಕು, ಯಾವ ಪ್ರಕರಣಕ್ಕೆ ತಮ್ಮ ದನಿ ಎತ್ತರಿಸಬೇಕು ಎನ್ನುವ ಲೆಕ್ಕಾಚಾರದಲ್ಲಿ ಪಳಗಿ ಹೋಗಿದ್ದಾರೆ. ಬಹುಶ: ಇಂಡಿಯಾದ ವೃತ್ತಿಪರ ರಾಜಕಾರಣಿಗಳನ್ನು ಮೀರಿಸಲು ಬೇರಿನ್ಯಾವ ದೇಶದ ರಾಜಕಾರಣಿಗಳಿಂದಲೂ ಸಾದ್ಯವಿಲ್ಲವೇನೊ?

ಇವತ್ತು ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಘಟನೆಯ ಲಾಭವನ್ನು ಪಡೆಯಲು, ಮತ್ತು ಇದರಿಂದ ತನಗಾಗುವ ನಷ್ಟವನ್ನು ಸರಿದೂಗಿಸಲು ರಾಜಕೀಯ ಪಕ್ಷಗಳು ಪ್ರಯತ್ನ ನಡೆಸಿವೆ. ಯಾಕೆಂದರೆ ಇನ್ನೊಂದು ವರ್ಷದಲ್ಲಿ ಅಲ್ಲಿ ರಾಜ್ಯವಿದಾನಸಭಾ ಚುನಾವಣೆಗಳು ನಡೆಯಲಿದ್ದು ಚುನಾವಣೆ ಗೆಲ್ಲಲು ಎಲ್ಲ ಪಕ್ಷಗಳು ಒಂದೊಂದು ಜಾತಿಯನ್ನು ಅವಲಂಬಿಸಿವೆ. ಕೊಲೆಯಾದ ದಂಪತಿಗಳು ದಲಿತರಾಗಿದ್ದು ಶೇಕಡಾ 21ರಿಂದ 22ರಷ್ಟಿರುವ ದಲಿತ ಮತಗಳನ್ನು ಪಡೆಯಲು ಎಲ್ಲ ಪಕ್ಷಗಳೂ ಪ್ರಯತ್ನಿಸಿದರೆ, ಹಲ್ಲೆ ಮಾಡಿದವನು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು ಶೇಕಡಾ 13ರಷ್ಟಿರುವ ಬ್ರಾಹ್ಮಣ ಮತಗಳನ್ನು ಕಳೆದುಕೊಳ್ಳಲು ಉಳಿದ ಯಾವ ಪಕ್ಷಗಳೂ ತಯಾರಿರುವುದಿಲ್ಲ. ದಲಿತರ ಮತಗಳು ಬಹುಜನಪಕ್ಷಕ್ಕೆ ಹೋಗುತ್ತವೆಯೆಂಬ ಕಾರಣಕ್ಕೆ ಮತ್ತು ಬ್ರಾಹ್ಮಣ ಮತಗಳು ತಮ್ಮ ಕೈತಪ್ಪ ಬಹುದೆಂಬ ಕಾರಣಕ್ಕೆ ಕಾಂಗ್ರೆಸ್ ಮತ್ತು ಬಾಜಪಗಳು ಈ ಘಟನೆಯನ್ನು ತೀರಾ ಹೆಚ್ಚು ಪ್ರಸ್ತಾಪಿಸಲಾರವು. ಇನ್ನು ಸಮಾಜವಾದಿ ಪಕ್ಷ ಈ ಎರಡೂ ಸಮುದಾಯಗಳ ಮತ ತನಗೆ ದೊರೆಯಲಾರದೆಂಬ ನಂಬಿಕೆಯಿಂದ ಈ ಪ್ರಕರಣದ ಬಗ್ಗೆ ಹೆಚ್ಚು ಆಸಕಿ ವಹಿಸಲಾರದು. ಹೀಗಾಗಿ ಇದೂ ಕೂಡ ಮತ್ತೊಮದು ಪ್ರಕರಣವಾಗಿ ಮುಚ್ಚಿಹೋಗಬಲ್ಲದು. ಆದ್ದರಿಂದ ಈ ಘಟನೆಯನ್ನು ತೀವ್ರವಾಗಿ ಖಂಡಿಸುವಲ್ಲಿಯೂ ರಾಜಕೀಯ ಪಕ್ಷಗಳು ಅಗಾಧವಾದ ತಾಳ್ಮೆಯಿಂದಲೇ ಕೆಲಸ ಮಾಡುವುದು ನಿಶ್ಚಿತ. ಹೀಗಾಗಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ.

ಸಾಮಾಜಿಕ ಪರಿವರ್ತನೆ, ರಾಜಕೀಯ ಇಚ್ಚಾ ಶಕ್ತಿ, ದಲಿತರಿಗೆ ರಾಜಕೀಯ ಬಲ ನೀಡುವುದು ಮುಂತಾದ ಮಾತುಗಳೆಲ್ಲ ಸದ್ಯದ ಮಟ್ಟಿಗೆ ಬೊಗಳೆಗಳಂತೆ ಕಂಡರೆ ಅಚ್ಚರಿಯೇನಿಲ್ಲ. ಯಾಕೆಂದರೆ ಜಾತಿಯ ಆಧಾರದಲ್ಲಿ ಈಗಾಗಲೇ ಒಡೆದು ಹೋಗಿರುವ ಭಾರತೀಯ ಸಮಾಜವನ್ನು ಅಷ್ಟು ಸುಲಭವಾಗಿ ಬದಲಾಯಿಸುವುದು ಸಾದ್ಯವಿಲ್ಲ. ಹಾಗೆ ಬದಲಾಗಿಬಿಟ್ಟರೆ ರಾಜಕೀಯ ಮಾಡಲಾಗುವುದಿಲ್ಲವೆಂಬ ಸತ್ಯ ನಮ್ಮ ರಾಜಕೀಯ ಪಕ್ಷಗಳಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ಈ ಜಾತಿವ್ಯವಸ್ಥೆಯ ಕರಾಳ ಮುಖವನ್ನು, ಆಂತರೀಕವಾಗಿರುವ ದ್ವೇಷದ ದಳ್ಳುರಿಯನ್ನು ಯಥಾ ಸ್ಥಿತಿಯಲ್ಲಿಡಲು ಶಕ್ತಿಮೀರಿ ಪ್ರಯತ್ನ ನಡೆಸುತ್ತಿವೆ, ಮುಂದೆಯೂ ನಡೆಸುತ್ತಲಿರುತ್ತವೆ.

ರೈತರ ಆತ್ಮಹತ್ಯೆಯ ನೈಜ ಕಾರಣಗಳು ಮತ್ತು ಪರಿಹಾರಗಳು

ಸಾಂದರ್ಭಿಕ ಚಿತ್ರ
ಕು.ಸ.ಮಧುಸೂದನನಾಯರ್
04/08/2016
ನಮ್ಮ ಶಾಲಾಕಾಲೇಜುಗಳ ಪಠ್ಯಪುಸ್ತಕಗಳಿಂದ ಹಿಡಿದು, ಕತೆ ಕಾದಂಬರಿಗಳ ಯಾವುದೇ ಪುಸ್ತಕಗಳನ್ನು ತೆರೆದು ನೋಡಿದರೂ ನಿಮಗೆ ಮೊದಲಿಗೆ ಕಂಡು ಬರುವುದು, ಇಂಡಿಯಾ ಒಂದು ಕೃಷಿ ಪ್ರಧಾನ ರಾಷ್ಟ್ರವೆಂಬ ಹಳಸಲು ಮಾತೇ! ಅದನ್ನೇನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆಯೋ ಇಲ್ಲ ವಿಷಾದದಿಂದ ಹೇಳಿಕೊಳ್ಳುತ್ತೇವೆಯೊ ನನಗಂತು ತಿಳಿದಿಲ್ಲ. ಆದರೆ ಇತ್ತೀಚೆಗೆ ಯಾವತ್ತಿಗಾದರು ನಮ್ಮದು ಕೃಷಿ ಪ್ರಧಾನ ದೇಶವೆಂದು ಹೇಳಿಕೊಳ್ಳುವ ಸಂದರ್ಭ ಬಂದಾಗೆಲ್ಲ ನಾನು ವಿಷಾದ ಮತ್ತು ನೋವನ್ನು ಅನುಭವಿಸುತ್ತೇನೆ. ಅಂಕಿಸಂಖ್ಯೆಗಳ ದೃಷ್ಠಿಯಿಂದ ಇದು ನಿಜವೂ ಹೌದು: ಇವತ್ತಿಗೂ ಇಂಡಿಯಾದ ಪ್ರತಿಶತ ಶೇಕಡಾ 68ಕ್ಕಿಂತ ಹೆಚ್ಚು ಜನ ತಮ್ಮ ಜೀವನೋಪಾಯಕ್ಕೆ ಕೃಷಿಯನ್ನೇ ಅವಲಂಬಿಸಿದ್ದಾರೆ. ತೊಂಭತ್ತರ ದಶಕದ ಜಾಗತೀಕರಣದ ನಂತರ ದೇಶದಲ್ಲಿ ಕೈಗಾರಿಕೋದ್ಯಮಗಳು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದರೂ ಅವುಗಳು ತಮ್ಮ ಸರಕು ಸೇವೆಗಳನ್ನು ಗುರಿಯಾಗಿಸಿಕೊಂಡಿರುವುದು ಈ ಶೇಕಡಾ 68 ಮಂದಿಯನ್ನೇ.

ಸ್ವಾತಂತ್ರ ಸಿಕ್ಕ ನಂತರದ ಪಂಚವಾರ್ಷಿಕ ಯೋಜನೆಗಳ ಮುಖ್ಯ ಆಧ್ಯತಾ ಕ್ಷೇತ್ರ ಕೃಷಿಯಾಗಿದ್ದು, ಹಸಿರು ಕ್ರಾಂತಿಯ ದುಷ್ಪರಿಣಾಮಗಳೇನೇ ಇದ್ದರು ದೇಶ ಆಹಾರ ಸ್ವಾವಲಂಬನೆ ಸಾಧಿಸಲು ಸಾದ್ಯವಾಯಿತು. ಆದರೆ ಆ ಆಹಾರವನ್ನು ಉತ್ಪಾದಿಸುವ ರೈತನ ಬದುಕು ಸ್ವಾವಲಂಬನತೆಯತ್ತ ಸಾಗಿತೇ ಎಂದು ಕೇಳಿದರೆ ಸಿಗುವ ಉತ್ತರ: ಇಲ್ಲ! ನಂತರದ ದಶಕಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಒಂದಿಷ್ಟು ಬದಲಾವಣೆಗಳಾಗಿ ಆಧುನಿಕ ಯಂತ್ರಗಳ ಪ್ರವೇಶವಾದರೂ ಅದು ದೊಡ್ಡ ರೈತರಿಗೆ ಮಾತ್ರ ಸೀಮಿತವಾಗಿತ್ತು. ಬದಲಿಗೆ 1990ರ ನಂತರ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗ ತೊಡಗಿದವು. ಇತ್ತೀಚೆಗಂತು ಇದು ಸರಣಿ ಆತ್ಮಹತ್ಯೆಗಳ ದಾರಿಯನ್ನು ಹಿಡಿಯಿತು. ಈ ನಿಟ್ಟಿನಲ್ಲಿ ನಾವು ನಮ್ಮ ರೈತರ ಆತ್ಮಹತ್ಯೆಗಳಿಗಿರಬಹುದಾದ ಕಾರಣಗಳನ್ನೂ, ಕಂಡುಕೊಳ್ಳಬಹುದಾದ ಪರಿಹಾರ ಕ್ರಮಗಳ ಬಗ್ಗೆಯೂ ಒಂದಷ್ಟು ಗಂಬೀರವಾಗಿ ಚಿಂತಿಸಬೇಕಾದುದು ಅನಿವಾರ್ಯವೆನಿಸುತ್ತದೆ:

1.ನೀರಾವರಿ ಸೌಲಭ್ಯಗಳ ಕೊರತೆ:

ಸಾಂದರ್ಭಿಕ ಚಿತ್ರ
ನಾವು ಕೃಷಿಗೆ ನಿಜವಾಗಿಯೂ ಆಧ್ಯತೆ ನೀಡುವುದೇ ಆಗಿದ್ದರೆ ನಮ್ಮ ಮೊದಲ ಆಧ್ಯತೆಯಾಗಬೇಕಿದ್ದುದು ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವುದಾಗಿತ್ತು. 

ಈ ನಿಟ್ಟಿನಲ್ಲಿ ನಮ್ಮ ಪಂಚವಾರ್ಷಿಕ ಯೋಜನೆಗಳು ಹೆಜ್ಜೆ ಇಟ್ಟರೂ ಅದು ಕೂಡ ಇನ್ನೊಂದು ತಪ್ಪು ಹೆಜ್ಜೆಯಾಗಿತ್ತು. ಕೃಷಿಗೆ ನೀರಾವರಿ ಕಲ್ಪಿಸುವುದೆಂದರೆ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸುವುದು ಮಾತ್ರವೆಂದು ನಂಬಿಕೊಂಡಿದ್ದ ಅವತ್ತಿನ ರಾಜಕಾರಣಿಗಳು, ಯೋಜನಾ ತಜ್ಞರುಗಳು ಬಾರೀ ಅಣೆಕಟ್ಟುಗಳನ್ನು ನಿರ್ಮಿಸಿ ಕೈ ಬಿಟ್ಟರು. ಅವರುಗಳಿಗೆ ಸಣ್ಣ ನೀರಾವರಿ ಯೋಜನೆಗಳಾದ ಚೆಕ್ ಡ್ಯಾಂ ನಿರ್ಮಾಣ, ಹನಿ ನೀರಾವರಿ, ಏತ ನೀರಾವರಿ, ಕೆರೆಗಳ ಕಾಯಕಲ್ಪದಂತಹ ವಿಷಯಗಳು ಮುಖ್ಯವೆನಿಸಲೇ ಇಲ್ಲ. ಯಾಕೆಂದರೆ ಗುತ್ತಿಗೆದಾರರಿಗೆ ಮತ್ತು ರಾಜಕಾರಣಿಗಳಿಗೆ ಬಾರೀ ಯೋಜನೆಗಳು ತಂದು ಕೊಡುವ ಲಾಭದ ಪ್ರಮಾಣದ ಮುಂದೆ ಸಣ್ಣಪುಟ್ಟ ಯೋಜನೆಗಳು ನಿರುಪಯುಕ್ತವೆನಿಸಿದ್ದವು. ಹೀಗಾಗಿ ಬಾರೀ ನೀರಾವರಿ ಯೋಜನೆಗಳ ನಂತರವೂ ದೇಶದ ಶೇಕಡಾ 60 ಕ್ಕಿಂತ ಹೆಚ್ಚು ಕೃಷಿಭೂಮಿ ಮಳೆಯನ್ನೇ ಅವಲಂಬಿಸಿ ನಡೆಯಬೇಕಾಯಿತು. ಕಳೆದ ಮೂವತ್ತು ವರ್ಷಗಳಲ್ಲಿ ಮಳೆಯೆನ್ನುವುದು ಅದೃಷ್ಟದಾಟವಾದಂತಾಗಿದೆ. ಬದಲಾಗುತ್ತಿರುವ ಭೂಮಿಯ ಉಷ್ಣಾಂಶ, ಪರಿಸರದಲ್ಲಾಗುತ್ತಿರುವ ಏರುಪೇರುಗಳು ಮಳೆ ಬರುವ ಸಮಯ ಮತ್ತು ಪ್ರಮಾಣವನ್ನು ನಿಶ್ಚಯಿಸುವಂತಾಗಿ, ಒಂದು ವರ್ಷ ತೀವ್ರ ಅತಿವೃಷ್ಠಿಯಾದರೆ, ಇನ್ನೊಂದು ವರ್ಷ ತೀವ್ರ ಅನಾವೃಷ್ಠಿ ತಲೆದೋರುತ್ತಿದೆ. ಮಳೆಯನ್ನು ನಂಬಿ ಕೃಷಿ ಮಾಡುತ್ತಿರುವ ರೈತನಿಗೆ ಇದು ಬಹಳ ಮುಖ್ಯವಾದ ಸಮಸ್ಯೆಯಾಗಿದೆ. ಅದರಲ್ಲೂ ಕೃಷಿಯೇ ಬಹುಮುಖ್ಯ ಕಸುಬಾಗಿರುವ ಮದ್ಯಭಾರತದಲ್ಲಂತು ನೀರಾವರಿಯ ಸಮಸ್ಯೆ ತೀವ್ರವಾಗಿದೆ. ಇದರಿಂದಾಗಿ ನಿಗದಿತ ಸಮಯದಲ್ಲಿ ಬಿತ್ತನೆ ಮಾಡಲಾಗದೆ, ಸರಿಯಾದ ಸಮಯದಲ್ಲಿ ಕಟಾವು ಮಾಡಲಾಗದೆ ರೈತ ತೀವ್ರ ಸಂಕಷ್ಟಕ್ಕೀಡಾಗುತ್ತಿದ್ದಾನೆ.

ಪರಿಹಾರ:

ಮಳೆಯ ವಿಚಾರದಲ್ಲಿ ಮಾನವ ಅಸಹಾಯಕನಾಗಿದ್ದು ಬೀಳುವ ಮಳೆಯ ನೀರನ್ನು ಸಂಗ್ರಹಿಸಿಟ್ಟುಕೊಂಡು ಬೇಕಾದಾಗ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವುದನ್ನೇ ನಾವು ಕೃಷಿ ನೀರಾವರಿ ಎನ್ನುತ್ತೇವೆ. ನಾನು ಮೊದಲಿಗೆ ಹೇಳಿದಂತೆ ಇಂಡಿಯಾದಂತಹ ವಿಶಾಲವಾದ ಕೃಷಿ ದೇಶದಲ್ಲಿ ಬಾರೀ ನೀರಾವರಿ ಯೋಜನೆಗಳು ಉಪಯೋಗಕ್ಕೆ ಬರುವುದಿಲ್ಲ. ಈಗಾಗಲೇ ಕಟ್ಟಲಾಗಿರುವ ದೊಡ್ಡ ಅಣೆಕಟ್ಟುಗಳ ಅನೇಕ ಕಾಲುವೆಗಳ ಕೊನೆಯವರೆಗು ನೀರು ತಲುಪದಿರುವುದನ್ನು ನಾವು ಗಮನಿಸುತ್ತಿದ್ದೇವೆ. ಹಾಗಾಗಿ ಸಣ್ಣ ನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದೊಂದೆ ನಮಗಿರುವ ದಾರಿ. ನದಿಗಳಿಗೆ ಸಣ್ಣಸಣ್ಣ ಚೆಕ್ ಡ್ಯಾಂಗಳನ್ನು ಕಟ್ಟುವುದು, ಏತ ನೀರಾವರಿ, ಹನಿ ನೀರಾವರಿಯಂತಹ ಯೋಜನೆಗಳನ್ನು ಜಾರಿಗೆ ತರುವುದು, ಕೆರೆಗಳಲ್ಲಿ ಹೂಳು ತೆಗೆದು ಅವುಗಳಲ್ಲಿ ಸಾಕಷ್ಟು ನೀರು ಸಂಗ್ರಹಿಸಿ ಕೆರೆ ಅಚ್ಚುಕಟ್ಟು ಪ್ರದೇಶಗಳನ್ನು ಗುರುತಿಸಿ ಅವು ಒತ್ತುವರಿಯಾಗದಂತೆ ನೋಡಿಕೊಳ್ಳುವುದನ್ನು ಮಾಡಬೇಕಾಗಿದೆ. ಇದರ ಜೊತೆಗೆ ಮಳೆ ನೀರು ಸಂಗ್ರಹಿಸುವ ವೈಜ್ಞಾನಿಕ ವಿಧಾನಗಳ ಬಗ್ಗೆ ರೈತರಿಗೆ ಶಿಕ್ಷಣ ನೀಡಬೇಕು. ಪ್ರತಿ ಹಳ್ಳಿಗಳಲ್ಲಿಯೂ ಸಾಮಾಜಿಕ ಅರಣ್ಯಗಳನ್ನು ಬೆಳೆಸುವುದು( ಈಗ ಇರುವ ಈ ಯೋಜನೆಯಲ್ಲಿ ಅರಣ್ಯ ಇಲಾಖೆಯವರು ಕೇವಲ ನೀಲಗಿರಿ ಅಕೇಶಿಯಾಗಳನ್ನು ಬೆಳೆಸಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿರುವುದನ್ನು ತಡೆಯಬೇಕಾಗಿದೆ)

2. ಗುಣಮಟ್ಟದ ಬೀಜ, ಗೊಬ್ಬರ, ನ್ಯಾಯಯುತ ಬೆಲೆಯಲ್ಲಿ ಲಭ್ಯವಾಗದೇ ಇರುವುದು:

ಸಾಂದರ್ಭಿಕ ಚಿತ್ರ
ನೀರಾವರಿಯ ನಂತರದಲ್ಲಿ ನಮ್ಮ ರೈತರು ಎದುರಿಸುತ್ತಿರುವ ಬಹುಮುಖ್ಯವಾದ ಸಮಸ್ಯೆಯೆಂದರೆ ಉತ್ತಮ ಗುಣಮಟ್ಟದ ಬೀಜ ಮತ್ತು ಗೊಬ್ಬರಗಳು ನಿಗದಿತ ಸಮಯಕ್ಕೆ ದೊರೆಯದೆ ಇರುವುದಾಗಿದೆ. ಇವತ್ತು ದೇಶದಲ್ಲಿ ಹಲವಾರು ಬೀಜೋತ್ಪಾದನೆಯ ಕಂಪನಿಗಳಿದ್ದು ಅವು ಒಳ್ಳೆಯ ಬೀಜಗಳನ್ನು ಸರಬರಾಜು ಮಾಡುವ ಯಾವ ಭರವಸೆಯೂ ಇಲ್ಲದಂತಾಗಿದೆ ಉತ್ತರ ಕರ್ನಾಟಕದಲ್ಲಿ ಕಳಪೆ ಬೀಜಗಳಿಂದಲೇ ನೂರಾರು ರೈತರು ಬೆಳೆನಷ್ಟ ಮಾಡಿಕೊಂಡು ಸಾಲಕ್ಕೆ ತುತ್ತಾಗಿರುವುದನ್ನು ನಾವು ಪ್ರತಿವರ್ಷವೂ ಕೇಳುತ್ತಿದ್ದೇವೆ. ನಮ್ಮ ಸರಕಾರಗಳು ಇಂತಹ ಬೀಜೋತ್ಪಾದಕ ಕಂಪನಿಗಳ ಮೇಲೆ ಯಾವ ನಿಯಂತ್ರಣವನ್ನು ಹೇರದೆ ಬೀಜ ಉತ್ಪಾದನೆಯಲ್ಲಿ ಯಾವ ಅನುಭವಗಳು ಇರದ ಕಂಪನಿಗಳೆಲ್ಲ ಬೀಜ ತಯಾರಿಸಿ ಬಾರಿ ಜಾಹಿರಾತುಗಳೊಂದಿಗೆ ಮಾರುಕಟ್ಟೆಗೆ ಬಿಡುತ್ತಿವೆ. ತೀರಾ ವಿದ್ಯಾವಂತರಲ್ಲದ ರೈತರು ಹಿಂದೆಮುಂದೆ ನೋಡದೆ ಇಂತಹ ಬೀಜಗಳನ್ನು ಖರೀದಿಸಿ ಮೂರ್ಖರಾಗುತ್ತಿದ್ದಾರೆ. ಅದೇ ರೀತಿ ಗೊಬ್ಬರದಲ್ಲೂ ಇತ್ತೀಚೆಗೆ ಗುಣಮಟ್ಟ ಕಡಿಮೆಯಾಗುತ್ತಿದೆ. ಇನ್ನೇನು ಬಿತ್ತನೆ ಮಾಡುವ ಸಮಯಕ್ಕೆ ಮಾರುಕಟ್ಟೆಯಲ್ಲಿ ಬೀಜಗಳ ಅಭಾವ ಸೃಷ್ಠಿಸುವ ಕಾಳಸಂತೇಕೋರರು ಹೆಚ್ಚಾಗಿದ್ದಾರೆ. ಬಿತ್ತನೆಗೆ ನೆಲ ಹದಗೊಳಿಸುವ ಕೆಲಸವನ್ನು ಬಿಟ್ಟು ರೈತ ಪೇಟೆಗಳಲ್ಲಿ ಬೀಜ ಮತ್ತು ಗೊಬ್ಬರಗಳಿಗಾಗಿ ದಿನಗಟ್ಟಲೆ ಅಲೆಯುವ ಸ್ಥಿತಿಯಿದೆ. ಇಂತಹ ಸನ್ನಿವೇಶದಲ್ಲಿ ವರ್ತಕರು ಒಂದಕ್ಕೆರಡು ಬೆಲೆಯಲ್ಲಿ ಕಾಳಸಂತೆಯ ದಂದೆ ನಡೆಸುವುದು ಸಾಮಾನ್ಯವಾಗಿ ಬಿಟ್ಟಿದೆ. ಇವನ್ನೆಲ್ಲ ನಿಯಂತ್ರಿಸಬೇಕಾದ ಸರಕಾರದ ಇಲಾಖೆಗಳು ಭ್ರಷ್ಟರಿಂದ ತುಂಬಿದ್ದು ಅವರ ತಿಜೋರಿಗಳು ಮಾತ್ರ ಭರ್ತಿಯಾಗುತ್ತಿವೆ.

ಪರಿಹಾರಗಳು:

ಸರಕಾರ ಬೀಜೋತ್ಪನ್ನ ಕಂಪನಿಗಳನ್ನು ನಿಯಂತ್ರಿಸುವ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು. ಅಕಸ್ಮಾತ್ ಕಳಪೆ ಬೀಜಗಳಿಂದ ಬೆಳೆನಷ್ಟ ಉಂಟಾದರೆ ಸದರಿ ಕಂಪನಿಗಳೇ ರೈತರಿಗೆ ಪರಿಹಾರ ಕೊಡಬಲ್ಲಂತಹ ಕಾನೂನುಗಳನ್ನು ಜಾರಿಗೆ ತರಬೇಕು. ಇಲ್ಲದೇ ಹೋದಲ್ಲಿ ಬೀಜ ಮತ್ತು ಗೊಬ್ಬರ ತಯಾರಿಕೆಗಳನ್ನು ರಾಷ್ಟ್ರೀಕರಣಗೊಳಿಸಿ ತಾನೇ ನೇರವಾಗಿ ರೈತರಿಗೆ ಸುಲಭದರದಲ್ಲಿ ತಲುಪಿಸುವ ಹೊಸ ವ್ಯವಸ್ಥೆಯೊಂದನ್ನು ರೂಪಿಸಬೇಕು. ಯಾವ ಪ್ರದೇಶ ಯಾವ ಬೆಳೆಗೆ ಅನುಕೂಲಕರವಾಗಿದೆಯೊ ಅಂತಹ ಬೆಳೆಯ ಬೀಜಗಳನ್ನು ಆಯಾ ಪ್ರದೇಶಗಳಲ್ಲಿ ಸರಕಾರವೇ ಒದಗಿಸುವ ವ್ಯವಸ್ಥೆಯೊಂದನ್ನು ಮಾಡಿದರೆ ರೈತರು ಖಾಸಗಿಯವರಿಂದ ಮೋಸ ಹೋಗುವ ಸಂದರ್ಭಗಳು ಕಡಿಮೆಯಾಗುತ್ತವೆ. ಕೃಷಿಬಜೆಟ್ ಎನ್ನುವ ನಾಟಕ ಮಾಡುತ್ತ ಲಕ್ಷಾಂತರ ರೂಪಾಯಿಗಳನ್ನು ಕೃಷಿಗೆ ನೀಡಲಾಗಿದೆಯೆಂದು ಜನರನ್ನು ನಂಬಿಸಿ ಕತ್ತು ಕುಯ್ಯುವ ನೀತಿಯನ್ನು ಬಿಟ್ಟು ಇಂತಹ ಕ್ರಮಗಳನ್ನು ಕೈಗೊಂಡರೆ ಮಾತ್ರ ನಮ್ಮ ರೈತರಿಗೆ ಉತ್ತಮ ಬೀಜ, ಗುಣಮಟ್ಟದ ಗೊಬ್ಬರಗಳು ದೊರೆಯಬಲ್ಲವು.

3.ಬೆಳೆದ ಬೆಳೆಗೆ ಸಿಗದ ನ್ಯಾಯಯುತ ಬೆಲೆ:

ಬಹುಶ: ನಮ್ಮ ರೈತರು ನಿಜವಾಗಿಯೂ ಎದುರಿಸುತ್ತಿರುವ ಬೀಕರ ಸಮಸ್ಯೆ ಎಂದರೆ ಇದೇ ಇರಬೇಕು. ಮೇಲೆ ನಾನು ಹೇಳಿದ ಎಲ್ಲ ಸಮಸ್ಯೆಗಳನ್ನು ಎದುರಿಸಿಯೂ ಒಂದಷ್ಟು ಬೆಳೆ ಕೈಗೆ ಬಂದರೆ ಅದನ್ನು ಮಾರುವಲ್ಲಿ ಆತ ಎದುರಿಸಬೇಕಾದ ತೊಂದರೆಗಳು ಅಗಾಧ ಮತ್ತು ಕ್ರೂರವೆನ್ನಬಹುದು. ಯಾಕೆಂದರೆ ಒಬ್ಬ ಸಣ್ಣ ಉದ್ಯಮಿ ಕೂಡ ತಾನು ಉತ್ಪಾದಿಸಿದ ಉತ್ಪನ್ನಕ್ಕೆ ತಾನೇ ಬೆಲೆ ಕಟ್ಟುವ ಕಾನೂನು ಬದ್ದ ಅಧಿಕಾರ ಹೊಂದಿದ್ದಾನೆ. ಇಡೀ ದೇಶದಲ್ಲಿ ಇಂತಹದೊಂದು ಹಕ್ಕು ಇಲ್ಲದಿರುವುದು ನಮ್ಮ ರೈತನಿಗೆ ಮಾತ್ರ.. ರೈತನೊಬ್ಬ ತಾನು ಬೆಳೆದ ಬೆಳೆಗೆ ತಾನು ಖರ್ಚು ಮಾಡಿರುವ ಹಣವನ್ನು, ತಾನು ನೀಡಿದ ಶ್ರಮವನ್ನು ಲೆಕ್ಕ ಹಾಕಿ ಬೆಲೆ ನಿಗದಿಪಡಿಸುವಷ್ಟು ವಿದ್ಯಾವಂತನು ಬುದ್ದಿವಂತನೂ ಆಗಿಲ್ಲ. ಹೋಗಲಿ ಆಯಾ ಪ್ರದೇಶಗಳ ಕೃಷಿ ಅಧಿಕಾರಿಗಳಾದರು ಇದನ್ನು ಮಾಡುತ್ತಾರೆ ಎಂದರೆ ಇಲ್ಲ. ಉದಾಹರಣೆಗೆ ಕಬ್ಬಿನ ಬೆಲೆ ನಿಗದಿ ಮಾಡುವವರು ಸಕ್ಕರೆ ಕಾರ್ಖಾನೆಯವರು ಇಲ್ಲ ಆಲೆಮನೆಯವರು. ಇನ್ನು ಬತ್ತದ ಬೆಲೆ ನಿಗದಿ ಮಾಡುವವರು ರೈಸ್ ಮಿಲ್ ಮಾಲೀಕರು ಇಲ್ಲ ಬತ್ತದ ವ್ಯಾಪಾರಿಗಳು. ಹೀಗೆ ರೈತ ಬೆಳೆಯುವ ಎಲ್ಲ ಬೆಳೆಗಳ ಬೆಲೆಯನ್ನೂ ಯಾವುದೇ ಶ್ರಮ ಹಾಕದ ಬಿಳಿ ಬಟ್ಟೆಯ ವರ್ತಕರು ನಿಗದಿ ಮಾಡುವುದರಿಂದ ರೈತನಿಗೆ ದೊರೆಯಬೇಕಾದ ನ್ಯಾಯಯುತ ಬೆಲೆ ದೊರೆಯುತ್ತಿಲ್ಲ. ಇನ್ನು ಸರಕಾರ ರಚಿಸಿರುವ ರೆಗ್ಯುಲೇಟೆಡ್ ಮಾರುಕಟ್ಟೆಗಳ ಹಣೇಬರಹವೂ ಇದೇ ಆಗಿದೆ. ಅಲ್ಲಿ ಠಳಾಯಿಸುವ ಮದ್ಯವರ್ತಿಗಳು ರೈತರ ಬೆಳೆಗೆ ಕಡಿಮೆ ಬೆಲೆ ಕಟ್ಟಿ ಖರೀಧಿಸಿ ದುಪ್ಪಟ್ಟು ಲಾಭ ಮಾಡಿಕೊಳ್ಳುತ್ತಾರೆ. ಒಬ್ಬ ದಲ್ಲಾಳಿ ಕಟ್ಟಿದ ಬೆಲೆಯನ್ನು ಮೀರಿ ಇನ್ನೊಬ್ಬ ದಲ್ಲಾಳಿ ಬೆಲೆ ಕಟ್ಟುವುದಿಲ್ಲ. ಅಂತಹದೊಂದು ಮಾಫಿಯಾ ರಚಿಸಿಕೊಂಡಿರುವ ವರ್ತಕರು ಮತ್ತು ದಲ್ಲಾಳಿಗಳು ರೈತರನ್ನು ನಿರಂತರವಾಗಿ ಸುಲಿಗೆಗೆ ಒಳಪಡಿಸುತ್ತಿದ್ದಾರೆ. ಹೀಗೆ ತಾನು ಕಷ್ಟಪಟ್ಟು ಬೆಳೆದ ಬೆಳೆಗೆ ತಾನೇ ಬೆಲೆ ಕಟ್ಟಿ ಮಾರಲಾಗದ ರೈತ ನಷ್ಟವನ್ನನುಭವಿಸುತ್ತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. 

ಪರಿಹಾರ:

ತಾನು ಬೆಳೆದ ಬೆಳೆಗೆ ತಾನೇ ಬೆಲೆ ಕಟ್ಟಿ ಮಾರುವ ಹಕ್ಕು ರೈತನಿಗೆ ದೊರೆಯುವವರೆಗೂ ರೈತನ ಈ ಬವಣೆ ತಪ್ಪಿದ್ದಲ್ಲ. ಆದ್ದರಿಂದ ರೈತನೊಬ್ಬ ಬೆಳೆದ ಬೆಳೆಗೆ ಆ ವರ್ಷದ ಮಾರುಕಟ್ಟೆಯ ಸೂಚ್ಯಂಕವನ್ನು ಆಧರಿಸಿ, ರೈತ ಖರ್ಚು ಮಾಡಿರಬಹುದಾದ ಹಣ ಮತ್ತು ಶ್ರಮವನ್ನು ಲೆಕ್ಕ ಹಾಕಿ ಸರಕಾರವೇ ಒಂದು ನ್ಯಾಯಯುತ ಬೆಲೆಯನ್ನು ನಿಗದಿಪಡಿಸುವ ವ್ಯವಸ್ಥೆ ರೂಪುಗೊಳ್ಳಬೇಕು. ಸರಕಾರ ತಾನೇ ಪ್ರಾರಂಭಿಸಿರುವ ರೆಗ್ಯುಲೇಟೆಡ್ ಮಾರುಕಟ್ಟೆಯಲ್ಲಿನ ದಲ್ಲಾಳಿಗಳನ್ನು ಹೊರ ಹಾಕಿ, ಇತ್ತೀಚೆಗೆ ಕೆಲವು ಕಡೆ ಜಾರಿಗೆ ತಂದಿರುವ ಆನ್ ಲೈನ್ ಮಾರುಕಟ್ಟೆಯ ವ್ಯವಸ್ಥೆಯನ್ನು ರೂಪಿಸಬೇಕು. ಹೀಗಾದಾಗ ಮಾತ್ರ ರೈತನಿಗೆ ನ್ಯಾಯಯುತ ಬೆಲೆ ದೊರೆಯುವ ಸಾದ್ಯತೆ ಇದೆ.

4. ದಾಸ್ತಾನುಗಾರಗಳ ಕೊರತೆ.

ಇನ್ನು ರೈತರು ಬೆಳೆದ ಹಲವು ಬೆಳೆಗಳು ಬೇಗನೇ ಹಾಳಾಗುವ ಸಾದ್ಯತೆಗಳಿದ್ದು( ಉದಾಹರಣೆಗೆ ತರಕಾರಿ,ಹಣ್ಣುಗಳು) ಅವನ್ನು ಸಂಗ್ರಹಿಸಿಡಲು ಶಾಶ್ವತವಾದ ಶೈತ್ಯಾಗಾರಗಳಾಗಲಿ ದಾಸ್ತಾನುಮಳಿಗೆಗಳಾಗಲಿ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿರುವುದರಿಂದ ರೈತರು ಬೆಳೆದ ಹೆಚ್ಚುವರಿ ಬೆಳೆಯನ್ನು ಅವನೇ ಸ್ವತ: ನಾಶ ಮಾಡಬೇಕಾದ ಪರಿಸ್ಥಿತಿ ಇದೆ. ಸರಕಾರದ ಅಂಕಿಅಂಶಗಳೇ ಹೇಳುವಂತೆ ರೈತರು ಬೆಳೆದ ಶೇಕಡಾ 40ರಿಂದ 45 ರಷ್ಟು ಬೆಳೆಗಳು ಸಾಕಷ್ಟು ಶೈತ್ಯಾಗಾರಗಳ ಕೊರತೆಯಿಂದಲೇ ನಾಶವಾಗುತ್ತಿವೆ.ಕೆಲವು ಹೆಚ್ಚು ಬತ್ತ ಬೆಳೆಯುವ ಪ್ರದೇಶಗಳಲ್ಲಿರುವ ಸರಕಾರಿ ಗೊಡೌನುಗಳು ವ್ಯಾಪಾರಿಗಳ ಮಾಲುಗಳ ಸಂಗ್ರಹಣೆಗಾಗಿ ಮಾತ್ರ ಬಳಕೆಯಾಗುತ್ತಿದ್ದು ಸಣ್ಣ ರೈತರ ಬೆಳೆಗಳನ್ನು ಸಂಗ್ರಹಿಸಿಡಲು ದೊರೆಯುತ್ತಿಲ್ಲ

ಪರಿಹಾರಗಳು:

ಸರಕಾರಗಳು ಪ್ರತಿ ತಾಲ್ಲೂಕಿನಲ್ಲೂ ಅಲ್ಲಿ ಬೆಳೆಯುವ ಬೆಳೆಗಳಿಗೆ ಅನುಗುಣವಾಗಿ ದಾಸ್ತಾನು ಮಳಿಗೆಗಳನ್ನೂ ಶೈತ್ಯಾಗಾರಗಳನ್ನೂ ಕಟ್ಟಿ ಕಡಿಮೆದರದಲ್ಲಿ ರೈತರಿಗೆ ನೀಡುವ ಕಾರ್ಯ ಮಾಡಬೇಕಿದೆ. ಉದಾಹರಣೆಗೆ ಹೆಚ್ಚಾಗಿ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುವ ತಾಲ್ಲೂಕುಗಳಲ್ಲಿ ಶೈತ್ಯಾಗಾರಗಳನ್ನು, ಕೊಳೆತುಹೋಗದ ಬೆಳೆಗಳನ್ನು ಬೆಳೆಯುವ ತಾಲ್ಲೂಕುಗಳಲ್ಲಿ ಗೋಡೌನುಗಳನ್ನು ನಿರ್ಮಾಣ ಮಾಡಬೇಕು.

4. ಕೃಷಿಗೆ ಪೂರಕವಾದ ಉದ್ದಿಮೆಗಳು:

ನಮ್ಮ ದೇಶದ ದೊಡ್ಡ ದುರಂತವೆಂದರೆ ಕೃಷಿಗೆ ಪೂರಕವಾದ ಉದ್ಯಮಗಳ ಸಂಖ್ಯೆ ತೀರಾ ಅಲ್ಪಪ್ರಮಾಣದಲ್ಲಿರುವುದು. ಡೆನ್ಮಾರ್ಕ ಅಂತಹ ದೇಶಗಳಲ್ಲಿ ಹಾಲು ಉತ್ಪಾದನೆಗೆ ಪೂರಕವಾದ ಹಲವಾರು ಡೈರಿ ಉದ್ಯಮಗಳಿದ್ದು, ಅದೇ ದೊಡ್ಡ ಉದ್ಯಮವಾಗಿ ಇಂದು ಬೆಳೆದು ನಿಂತಿದೆ. ಆದರೆ ಇಂಡಿಯಾದಲ್ಲಿ ವಿಮಾನ ತಯಾರಿಕಾ ಉದ್ಯಮಗಳಿಗೆ, ಕಂಪ್ಯೂಟರ್ ಉದ್ಯಮಗಳಿಗೆ ಆಧ್ಯತೆ ನೀಡಲಾಗಿದೆಯೇ ಹೊರತು ಕೃಷಿಗೆ ಪೂರಕವಾದ ಯಾವುದೇ ಉದ್ಯಮಗಳನ್ನು ಸ್ಥಾಪಿಸುವಲ್ಲಿ ಸರಕಾರಗಳು ವಿಫಲವಾಗಿವೆ.

ಪರಿಹಾರಗಳು:

ಸರಕಾರಗಳು ಇನ್ನಾದರು ಮನಸ್ಸು ಮಾಡಿ ನಮ್ಮ ಕೃಷಿಗೆ ಸಹಾಯಕವಾಗಬಲ್ಲಂತಹ ಉದ್ದಿಮೆಗಳನ್ನು ಸ್ಥಾಪಿಸಬೇಕಿದೆ. ಹೆಚ್ಚು ಟೊಮೋಟೊ ಬೆಳೆಯುವ ತಾಲ್ಲೂಕಿನಲ್ಲಿ ಜಾಮ್ ತಯಾರಿಸಬಲ್ಲಂತಹ ಘಟಕಗಳನ್ನೂ, ಹೆಚ್ಚು ಹಣ್ಣುಗಳನ್ನು ಬೆಳೆಯುವ ತಾಲ್ಲೂಕುಗಳಲ್ಲಿ ಹಣ್ಣಿನರಸ ತಯಾರಿಸುವ ಉದ್ದಿಮೆಗಳನ್ನು ಸ್ಥಾಪಿಸಬೇಕು. ತನ್ಮೂಲಕ ಹೆಚ್ಚುವರಿಯಾದ ಈ ಬೆಳೆಗಳನ್ನು ಕಾರ್ಖಾನೆಗಳು ಖರೀಧಿಸಿ ರೈತರಿಗೆ ಸಹಾಯಕವಾಗಬಲ್ಲವು. ಇಂತಹ ಉದ್ದಿಮೆಗಳನ್ನು ಪ್ರಾರಂಬಿಸಲು ಮುಂದೆ ಬರುವ ಖಾಸಗಿಯವರಿಗೆ ಪ್ರೋತ್ಸಾಹ ನೀಡಿ ಉತ್ತೇಜಿಸುವ ಕ್ರಮಗಳನ್ನು ಕೈಗೊಳ್ಳುವುದರಿಂದ ಸರಕಾರಕ್ಕೆ ತೆರಿಗೆ ಸಂಗ್ರಹವೂ ರೈತರಿಗೆ ಆರ್ಥಿಕ ಲಾಭವೂ ಆಗುವುದು ಖಚಿತ.

5. ರಿಯಲ್ ಎಸ್ಟೇಟ್ ಮಾಫಿಯ ಮತ್ತು ಕೃಷಿಭೂಮಿ:

ಇವತ್ತು ಜನಸಂಖ್ಯೆ ಜಾಸ್ತಿಯಾದಂತೆ ಭೂಮಿಗಾಗಿ ಬೇಡಿಕೆಯೂ ಜಾಸ್ತಿಯಾಗುತ್ತಿದೆ. ಹೀಗಾಗಿ ನಗರಗಳ ಸುತ್ತಮುತ್ತಲಿನ ಕೃಷಿ ಭೂಮಿಯನ್ನು ನಿವೇಶನಗಳನ್ನಾಗಿ ಪರಿವರ್ತಿಸಲು ರಿಯಲ್ ಎಸ್ಟೇಟ್ ದಂದೇ ಕೋರರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಇದರಿಂದಾಗಿ ತಾಲ್ಲೂಕು ಕೇಂದ್ರಗಳ ಸುತ್ತಮುತ್ತಲಿನ ಫಲವತ್ತಾದ ಕೃಷಿ ಭೂಮಿಗಳು ಅನ್ಯ ಉದ್ದೇಶಕ್ಕಾಗಿ ಬಳಕೆಯಾಗುತ್ತ ರೈತರು ಭೂರಹಿತರಾಗಿ ಕೃಷಿ ಉತ್ಪಾದನೆ ದಿನೇ ದಿನೇ ಕುಸಿಯುತ್ತಿದೆ. 

ಪರಿಹಾರ:

ಆದ್ದರಿಂದ ಪ್ರತಿ ನಗರ ಮತ್ತು ಪಟ್ಟಣಗಳಲ್ಲಿ ಹಸಿರು ಪಟ್ಟಿಯನ್ನು ಗುರುತಿಸಿ ಅದರಿಂದ ಹೊರಗಿರುವ ಕೃಷಿ ಭೂಮಿಯನ್ನು ಅನ್ಯ ಉದ್ದೇಶಗಳಿಗೆ ಬಳಸಲಾಗದಂತೆ ಕಾನೂನು ರಚಿಸಬೇಕು. ಇದರಿಂದ ವ್ಯಾಪ್ತಿ ಮೀರಿ ನಗರಗಳು ಬೆಳೆಯುವುದನ್ನು ಹಾಗು ಕೃಷಿ ಭೂಮಿಯ ದುರ್ಬಳಕೆಯನ್ನೂ ತಡೆದಂತಾಗುತ್ತದೆ. 

ರೈತರ ಸರಣಿ ಆತ್ಮಹತ್ಯೆಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಸರಕಾರಗಳು ಇಂತಹ ಯೋಜನೆಗಳನ್ನು ನಾಳೆ ಬೆಳಿಗ್ಗೆಯೇ ಜಾರಿಗೆ ತರುತ್ತವೆಯೆಂಬ ನಂಬಿಕೆ ನನಗಿಲ್ಲ. ಆದರೆ ಆ ದಿಕ್ಕಿನಲ್ಲಿ ಯೋಚಿಸಿ ಹೋರಾಟ ನಡೆಸಬಹುದಾದ ರೈತಪರ ಸಂಘಟನೆಗಳು ಇಂತಹ ನಿರ್ದಿಷ್ಟ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಡಲು ಇದು ಸಹಕಾರಿಯಾಗಬಲ್ಲೆದೆಂಬುದು ನನ್ನ ಆಶಯ.

ಆಗ 3, 2016

ಅಧಿಕಾರಿಯ ಪರ ವಕಾಲತ್ತು ವಹಿಸುವುದರಲ್ಲಿ ಯಾವ ಸುಧಾರಣೆ ಇದೆ?

ಎಸ್. ಅಭಿ ಹನಕೆರೆ
03/08/2016
ಮೊನ್ನೆ ನಿರಂತರವಾಗಿ ಚಾನೆಲ್ ಛೇಂಜ್ ಮಾಡುತ್ತಾ ಇರುವಾಗ ಕೆಲವು ಮಕ್ಕಳು ತಮ್ಮ ಮೇಷ್ಟ್ರು ವರ್ಗಾವಣೆಯನ್ನು ಅಳುತ್ತಾ ವಿರೋಧಿಸುತ್ತಿದ್ದರು. ಸೂಪರ್! ಮೇಷ್ಟ್ರು ಈ ರೀತಿಯ ಪ್ರಭಾವವನ್ನು ಮಕ್ಕಳ ಮೇಲೆ ಬೀರಿದ್ದಾರಲ್ಲ ಎಂದು ಆಶ್ಚರ್ಯಪಟ್ಟೆ. ಹಾಗೆ ಚಾನೆಲ್ ಛೇಂಜ್ ಮಾಡುತ್ತಿರುವಾಗ ಹಾಸನದ ಮಹಿಳಾ ಅಧಿಕಾರಿಯೊಬ್ಬರು ತಮ್ಮನ್ನು ವರ್ಗಾವಣೆ ಮಾಡಿರುವುದನ್ನು ತಪ್ಪಿಸಿಕೊಳ್ಳುವ ಭಾಗವಾಗಿ ಆತ್ಮಹತ್ಯೆ ಪ್ರಯತ್ನ ಮಾಡಿರುವ ಸುದ್ದಿ ಪ್ರಕಟವಾಗುತ್ತಿತ್ತು. ಅಷ್ಟರಲ್ಲಾಗಲೇ ಪ್ರಮುಖ ರಾಜಕೀಯ ಪಕ್ಷದ ಮುಖಂಡರು ಆತ್ಮಹತ್ಯೆಗೆ ತಮ್ಮ ಎದುರಾಳಿ ಪಕ್ಷದ ದುರೀಣರೇ ಕಾರಣರೆಂದು ಟಿವಿ ಚಾನೆಲ್ ಗಳಿಗೆ ಬೈಟ್ ಕೊಡುತ್ತಿದ್ದರು. ಆ ಧುರೀಣರ ಹೇಳಿಕೆಯನ್ನೇ ಆಧರಿಸಿಕೊಂಡು ಟಿವಿ ಚಾನೆಲ್ ಗಳು ಅಧಿಕಾರಿಗೆ ಕಿರುಕುಳ, ಆತ್ಮಹತ್ಯೆಗೆ ಯತ್ನ ಎಂದು ಸುದ್ದಿ ಬಿತ್ತರಿಸುತ್ತಿದ್ದವು. ಇದೇನು ಈಗ ಇದ್ದಕ್ಕಿದ್ದಂತೆ ರಾಜ್ಯದಲ್ಲಿ ಅಧಿಕಾರಿಗಳ ಆತ್ಮಹತ್ಯೆ ಸರಣಿ ಸುರುವಾದಂತಿದೆಯಲ್ಲ ಎನ್ನಿಸಿತು. (ಅದು ಎಷ್ಟೇ ಅನುಕಂಪದಿಂದ ನೋಡಿದರೂ ಈ ಚಾನೆಲ್ಲುಗಳನ್ನು ಹತ್ತು ನಿಮಿಷಕ್ಕಿಂತ ಹೆಚ್ಚು ಕಾಲ ನೋಡುವುದಕ್ಕಾಗುವುದಿಲ್ಲ ಎಂಬುದು ಬೇರೆ ಮಾತು!) ಸದರಿ ಅಧಿಕಾರಿ ಹಾಸನದ ಎಸಿ ಆಗಿದ್ದವರು. ಸರ್ಕಾರ ತನ್ನಷ್ಟಕ್ಕೇ ಅವರನ್ನು ವರ್ಗಾವಣೆ ಮಾಡಿದೆ. ಆ ಸ್ಥಾನಕ್ಕೆ ದಕ್ಷ ಎಂದೇ ಖ್ಯಾತವಾಗಿರುವ ನಾಗರಾಜ್ ರನ್ನು ನಿಯೋಜಿಸಿದೆ. ಆದರೆ ಆ ಮಹಿಳಾ ಅಧಿಕಾರಿಗೆ ಸ್ಥಾನೊಪಲ್ಲಟ ಇಷ್ಟವಿಲ್ಲದ ಸಂಗತಿ. ಇನ್ನು ಅದಾಗಲೇ ಸಂಘಟನೆಗಳು ಬೀದಿಗಿಳಿದಿವೆ. ಆ ಅಧಿಕಾರಿಯ ಅಧಿಕಾರವನ್ನು ಹಸ್ತಾಂತರಿಸಲೆಂದು. ಮಹಿಳಾ ಅಧಿಕಾರಿಯು ಸುಮ್ಮನೆ ಕುಳಿತಿಲ್ಲ. ಕೆಎಟಿ ಮೊರೆ ಹೋಗಿ ವರ್ಗಾವಣೆ ರದ್ದು ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸಂಘಟನೆಗಳು ಸುಮ್ಮನಿರುತ್ತಿಲ್ಲ. ಕಡೆಗೆ ಕಡೆ ಅಸ್ತ್ರವಾಗಿ ಆಕೆ ಆತ್ಮಹತ್ಯೆಯ ಮೂಲಕ ಎದುರಿಸಲು ಹೊರಟಿದ್ದಾರೆ. ಇದಿಷ್ಟು ಕಥೆಯ ಹೂರಣ. 
ಆದರೆ ನಮ್ಮ ಜನರು ಯಾರೋ ಒಬ್ಬ ಅಧಿಕಾರಿ ದಕ್ಷ ಎಂದ ಮಾತ್ರಕ್ಕೆ ನಮ್ಮ ಜಿಲ್ಲೆಗೇ ಇರಲಿ ಎಂದು ಹಠಕ್ಕೆ ಬೀಳುವುದು ಯಾಕೆ? ಅವರ ಜಾಗಕ್ಕೆ ಬರುವ ಮತ್ತೊಬ್ಬ ಅಧಿಕಾರಿಯನ್ನು ಈ ಹಿಂದಿನ ಅಧಿಕಾರಿಯಂತೆ ದಕ್ಷತೆಯಿಂದ ಕೆಲಸ ಮಾಡುವಂತಹ ಸಾಮಾಜಿಕ ಒತ್ತಡ ಸೃಷ್ಟಿಸಲು ಯಾಕೆ ಸಾಧ್ಯವಿಲ್ಲ ಎನ್ನಿಸಿತು. ಯಾವುದೇ ಸಂಘಟನೆಯಾಗಲೀ ಅಥವಾ ಜನಸಾಮಾನ್ಯರಾಗಲೀ ನಮ್ಮ ಸುತ್ತಲಿನ ಸಾಮಾಜಿಕ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳುವ ಅಧಿಕಾರ ನಮ್ಮಲ್ಲಿಯೇ ಇದೆ. ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ದಕ್ಷತೆಯಿಂದ ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸಲೇಬೇಕಾದ ಅನಿವಾರ್ಯತೆಯನ್ನು ನಾವುಗಳೇ ಸೃಷ್ಟಿಸಬಹುದಾಗಿದೆ. ಆದರೆ ನಮ್ಮ ಆಲೋಚನೆಗಳು ವ್ಯಕ್ತಿ ಕೇಂದ್ರಿತವಾಗಿರುವುದರಿಂದ, ಕುಟುಂಬ ಕೇಂದ್ರಿತವಾಗಿರುವುದರಿಂದ, ಹೆಚ್ಚೆಂದರೆ ಗುಂಪು ಕೇಂದ್ರಿತವಾಗಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ. ಯಾವುದೋ ಪಕ್ಷಕ್ಕೊ ಎಮ್ಮೆಲ್ಲೆಗೋ ನಮ್ಮ ನಿಷ್ಠೆ ಮುಡಿಪಾಗಿರುತ್ತದೆ. ಆದ್ದರಿಂದ ಜನರಿಗೆ ಎಲ್ಲಾ ಸರಕಾರೀ ಅಧಿಕಾರಿಗಳು ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕೆಲಸ ಮಾಡಲೇಬೇಕು ಎಂದೆನ್ನಿಸುವುದಿಲ್ಲ. ನನ್ನ ಸ್ನೇಹಿತನೊಬ್ಬ ರಾಯಚೂರಿನಲ್ಲಿ ಸರಕಾರೀ ಕೆಲಸದಲ್ಲಿದ್ದಾನೆ. 'ಯಾವಾಗಪ್ಪ ನೀನು ಮಂಡ್ಯಕ್ಕೆ ಅಧಿಕಾರಿಯಾಗಿ ಬರೋದು' ಅಂದರೆ 'ಸುಮ್ನಿರಪ್ಪ ನೀನು. ಅಲ್ಲಿ ಹಾದೀ ಬೀದೀಲಿ ಹೋಗೋರೆಲ್ಲ ಅದು ಏನಾಯಿತು ಇದು ಏನಾಯಿತು ಎಂದು ಸರಕಾರೀ ಯೋಜನೆಗಳ ಬಗ್ಗೆ ಪ್ರಶ್ನೆ ಮಾಡ್ತಾರಂತೆ. ಆದರೆ ಇಲ್ಲಿ ಜನಪ್ರತಿನಿಧಿಗಳು ಮಾತ್ರ ಪ್ರಶ್ನೆ ಮಾಡೋದು' ಎಂದು ಹೇಳಿದ! ನಿಜವಾದ ಪರಿಸ್ಥಿತಿ ಮಂಡ್ಯದಲ್ಲಿ ಆ ಪ್ರಮಾಣಕ್ಕೆ ಇಲ್ಲವಾದರೂ ಹೊರ ಜಿಲ್ಲೆಗಳಲ್ಲಿ ಮಂಡ್ಯ ಜಿಲ್ಲೆಯ ಬಗ್ಗೆ ಇರುವ ಬಿಲ್ಡಪ್ ನೋಡಿ ಖುಸಿಯಾಯಿತು. ಎಲ್ಲಿ ದುಡ್ಡು ಹರಿದಾಡುತ್ತೋ ಅಲ್ಲಿ ಭ್ರಷ್ಟಾಚಾರ ಮಾಡಲು ಮನುಷ್ಯ ಮುಂದಾಗುತ್ತಾನೆ. ಏಕೆಂದರೆ ಮನುಷ್ಯ ಮೊದಲು ಅಗತ್ಯಕ್ಕೆ ನಂತರ ಲಾಭಕ್ಕೆ ಆಮೇಲೆ ದೋಚುವುದಕ್ಕಾಗಿಯೇ ಬದುಕಲು ಶುರು ಮಾಡುತ್ತಾನೆ. ಕಂಟ್ರೋಲ್ ಆಗಿ ಬದುಕಲೆಂದೇ ಮನುಷ್ಯರಾದ ನಾವುಗಳು ಕೆಲವು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದಕ್ಕೆ ನೈತಿಕತೆ, ಮಾನವೀಯತೆಯನ್ನು ಆಧಾರವಾಗಿಸಿಕೊಂಡಿದ್ದೇವೆ. ಮನುಷ್ಯ ಹೊಸ ಹೊಸ ವ್ಯವಸ್ಥೆಗೆ ಹೋದಂತೆ ಇನ್ನಷ್ಟು ಪ್ರಬುದ್ಧನಾಗಬೇಕು, ಬದಲಿಗೆ ನಾವು ವ್ಯತಿರಿಕ್ತ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಒಬ್ಬ ಸರಕಾರಿ ಅಧಿಕಾರಿ ವರ್ಗವಾದರೆ, ಆತನಿಗಾಗಿ ನಾವು ಧರಣಿ ಕೂರಬೇಕಿಲ್ಲ. ಬದಲಿಗೆ ಬರುವ ಮತ್ತೊಬ್ಬ ದಕ್ಷತೆಯಿಂದ ಕೆಲಸ ಮಾಡಬೇಕಾದ ಅನಿವಾರ್ಯತೆಯನ್ನು ನಾವು ಸೃಷ್ಟಿಸಬೇಕಿದೆ. ಆ ಅಧಿಕಾರಿಗಳ ವರ್ಗಾವರ್ಗಿ ವಿಚಾರದಲ್ಲೂ ನನ್ನದು ಇದೇ ಅಭಿಮತ. ಶಾಲಾ ಮಕ್ಕಳು ಮೇಷ್ಟರಿಗಾಗಿ ಅಳುವುದರಲ್ಲಿ ಮುಗ್ದತೆ ಇದೆ. ಮಮಕಾರವಿದೆ. ಕೆಲವರು ಸಂಘಟನೆಗಳ ಹೆಸರಿನಲ್ಲಿ ಅಧಿಕಾರಿಗಳ ವರ್ಗಾವಣೆ ತಡೆಯುವುದರಲ್ಲಿ ಯಾವು ಮುಗ್ಧತೆಯಿದೆ? ಸಮಾಜವನ್ನು ಸರಿಪಡಿಸುವವರು, ಅದಕ್ಕಾಗಿ ಸಂಘಟನೆ ಕಟ್ಟಿಕೊಂಡಿರುವವರು ಒಬ್ಬ ಅಧಿಕಾರಿಯ ವರ್ಗಾವಣೆ ತಡೆಯುವುದರಿಂದ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವೇ? ಅದರಲ್ಲೂ ಇಂತಹ ಘಟನೆಗಳು ಜರುಗಲಿ ಎಂದು ಕಾಯುವ ನಮ್ಮ ರಾಜಕೀಯ ಪಕ್ಷಗಳ ಮುಖಂಡರು, ಈ ಪುಡಾರಿಗಳ ಹೇಳಿಕೆಗಳನ್ನೇ ಮುಂದಿಟ್ಟುಕೊಂಡು ಸುದ್ದಿ ಪಸಾರ ಮಾಡುವ ಮಾಧ್ಯಮಗಳು ಸಮಾಜಕ್ಕೆ ಇನ್ನಷ್ಟು ಅಪಾಯಕಾರಿಯಾಗುತ್ತಿರುವ ಸನ್ನಿವೇಶದಲ್ಲಿ ನಾವು ಬದುಕುತ್ತಿದ್ದೇವೆ. ಇಂತಹ ಅಧಿಕಾರಿಗಳ ಪರ ವಿರೋಧವಾಗಿ ಪ್ರತಿಭಟನೆ ಮಾಡುವವರನ್ನೇ ಕರೆದು ಕರೆದು ಪ್ರಚಾರ ನೀಡುವ ವ್ಯವಸ್ಥೆ ಎಲ್ಲವೂ ಸೇರಿ ಸಮಾಜವನ್ನು ಇನ್ನಷ್ಟು ಕಲುಷಿತಗೊಳಿಸುವ ಮುನ್ನಾ ಜನರದ್ದೇ ಆದ ಪರ್ಯಾಯ ರಾಜಕಾರಣದ ನಿರ್ಮಾಣಕ್ಕೆ ಮುಂದಡಿ ಇಡೋಣ.

ಆಗ 2, 2016

ನೀರು ತಿರುಗಿಸುವುದು ತಪ್ಪಾಗಲಾರದು - ಒಂದು ಪ್ರತಿಕ್ರಿಯೆ

'ಕೆಸರೆರಚಾಟದ ಮಧ್ಯೆ ಕೇಳಿಕೊಳ್ಳದ ಪ್ರಶ್ನೆಗಳು' ಲೇಖನಕ್ಕೆ ಬಂದಿರುವ ಒಂದು ಪ್ರತಿಕ್ರಿಯೆ. 
ಆನಂದ ಪ್ರಸಾದ್ 
02/08/2016
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯ ಬದಲು ಅದೇ ಮೊತ್ತದ ಹಣವನ್ನು (12,000 ಕೋಟಿಗೂ ಮೇಲ್ಪಟ್ಟು) ಬಳಸಿ ಆ ಜಿಲ್ಲೆಗಳಲ್ಲಿ ಬೀಳುವ ಮಳೆಯ ನೀರನ್ನು ಹಿಡಿದಿಡುವ ಹಾಗೂ ನೀರಿಂಗಿಸುವ ಕೆರೆಗಳು, ಹೊಂಡಗಳು, ಬದುಗಳು, ತಡೆಗಟ್ಟಗಳನ್ನು ನಿರ್ಮಿಸಿ ಮಳೆಯ ನೀರು ಹರಿದು ಹೋಗದಂತೆ ಮಾಡಿದರೆ ಕುಡಿಯುವ ನೀರಿನ ಕೊರತೆ ಉಂಟಾಗಲಾರದು. ಇದರ ಜೊತೆಗೆ ಬರಡು ಭೂಮಿಯಲ್ಲಿ ಕಾಡು ಬೆಳೆಸುವ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದರೆ ಮಳೆಯ ಪ್ರಮಾಣ ಹೆಚ್ಚುವ ಸಂಭವ ಇದೆ. ಹೀಗೆ ಮಾಡಿದರೆ ದೂರದಿಂದ ನೀರು ತರುವ ಯೋಜನೆಗಳ ಅಗತ್ಯ ಬೀಳಲಾರದು. ಇಂಥ ಯೋಜನೆ ಹಾಗೂ ಚಿಂತನೆಯನ್ನು ನೀರಾವರಿ ತಜ್ಞರು, ರಾಜಕಾರಣಿಗಳು ಬೆಳೆಸದೆ ಕೋಲಾರ, ಚಿಕ್ಕಬಳ್ಳಾಪುರ ಇತ್ಯಾದಿ ಜಿಲ್ಲೆಗಳ ಜನರಲ್ಲಿ ದೂರದಿಂದ ನೀರು ತರುವುದೇ ಪರಿಹಾರ ಎಂಬ ಕಲ್ಪನೆಯನ್ನು ಹುಟ್ಟುಹಾಕಿ ಬೆಳೆಸಿದ್ದಾರೆ. ಇದರಿಂದಾಗಿ ಸ್ಥಳೀಯ ನೀರಿಂಗಿಸುವ ಯೋಜನೆಗಳು, ಪರಿಹಾರಗಳಿಗಾಗಿ ಜನರಾಗಲೀ, ಸಂಘಟನೆಗಳಾಗಲೀ ಒತ್ತಾಯಿಸುತ್ತಿಲ್ಲ. ಅವರ ಒತ್ತಾಯವೇನಿದ್ದರೂ ದೂರದಿಂದ ನೀರು ತರುವ ತೀರಾ ತ್ರಾಸದಾಯಕ ಎತ್ತಿನಹೊಳೆಯಂಥ ಯೋಜನೆಗಳ ಕಡೆಗೇ ಇದೆ.

ಎತ್ತಿನ ಹೊಳೆ ಯೋಜನೆಯನ್ನು ಜಾರಿಗೊಳಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನರ ವಿರೋಧ ವೈಚಾರಿಕ ನೆಲೆಗಿಂತ ಹೆಚ್ಚು ಭಾವನಾತ್ಮಕವಾದದ್ದು. ದಕ್ಷಿಣ ಕನ್ನಡ ಜಿಲ್ಲೆಯು ಸಾಕಷ್ಟು ಮಳೆ ಬೀಳುವ ಪ್ರದೇಶ. ಇದು ಸಾಕಷ್ಟು ಹಸುರಿನಿಂದ ಕೂಡಿರುವ ಹಾಗೂ ಘಟ್ಟದ ಹಾಗೂ ಕರಾವಳಿಯ ನಡುವೆ ಇರುವ ಕಾರಣ ಇಲ್ಲಿ ಬರಗಾಲ (ಘಟ್ಟದ ಮೇಲಣ ಜಿಲ್ಲೆಗಳಂತೆ) ಬಂದ ಅಥವಾ ಬರುವ ಸಂಭವ ಇಲ್ಲ. ನೇತ್ರಾವತಿಯ ಅಥವಾ ಅದರ ಉಪನದಿಯಾದ ಎತ್ತಿನಹೊಳೆ ಹಳ್ಳದ ನೀರನ್ನು ಮಳೆಗಾಲದಲ್ಲಿ ಅಥವಾ ಡಿಸೆಂಬರ್ ಕೊನೆಯವರೆಗೂ ಬೇರೆ ಕಡೆ ತಿರುಗಿಸಿದರೂ ಅದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಯಾವ ತೊಂದರೆಯೂ ಆಗುವ ಸಂಭವ ಇಲ್ಲವೇ ಇಲ್ಲ. ಏಕೆಂದರೆ ಈ ಸಮಯದಲ್ಲಿ ನದಿಯಲ್ಲಿ ಸಾಕಷ್ಟು ನೀರು ಹರಿದು ಸಮುದ್ರ ಸೇರುತ್ತಿರುತ್ತದೆ. ನೇತ್ರಾವತಿಯ ನೀರು ಪುತ್ತೂರು ಹಾಗೂ ಉಪ್ಪಿನಂಗಡಿ ಪೇಟೆ ವ್ಯಾಪ್ತಿಯ ಜನತೆಗೆ ಕುಡಿಯುವ ನೀರು ಹಾಗೂ ಮಂಗಳೂರು ನಗರದ ಕುಡಿಯುವ ನೀರು ಹಾಗೂ ಮಂಗಳೂರಿನ ಕೆಲವು ಬೃಹತ್ ಕೈಗಾರಿಕೆಗಳಿಗೆ ಬೇಕಾದ ನೀರನ್ನು ಒದಗಿಸುವ ಮೂಲ. ಇದನ್ನು ಬಿಟ್ಟರೆ ನೇತ್ರಾವತಿ ನದಿಯ ನೀರು ಪುತ್ತೂರು, ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗಗಳಿಗೆ, ಬೆಳ್ತಂಗಡಿ ತಾಲೂಕಿನ ಪೇಟೆ ಅಥವಾ ಗ್ರಾಮೀಣ ಭಾಗಗಳಿಗೆ ಹಾಗೂ ಸುಳ್ಯ ತಾಲೂಕಿನ ಪೇಟೆ ಹಾಗೂ ಗ್ರಾಮೀಣ ಭಾಗಗಳಿಗೆ ಬಳಕೆ ಆಗುವುದಿಲ್ಲ. ಸುಳ್ಯ ತಾಲೂಕಿನ ಜನರಿಗಂತೂ ನೇತ್ರಾವತಿಯ ಸಂಬಂಧವೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಮಳೆ ಬೀಳುವ ಕಾರಣ ಪೇಟೆ ಹಾಗೂ ಕೈಗಾರಿಕೆಗಳಿಗೆ ಹೊರತುಪಡಿಸಿ ಗ್ರಾಮೀಣ ದಕ್ಷಿಣ ಕನ್ನಡ ಭಾಗಗಳಲ್ಲಿ ನೇತ್ರಾವತಿ ನದಿ ನೀರಿನ ಅವಶ್ಯಕತೆ ಕೂಡ ಇಲ್ಲ. ಹೀಗಾಗಿ ದಕ್ಷಿಣ ಕನ್ನಡದ ಜನ ಈ ಯೋಜನೆಯ ಬಗ್ಗೆ ವಿರೋಧ ವ್ಯಕ್ತಪಡಿಸಬೇಕಾದ ಅಗತ್ಯ ಇಲ್ಲ. ಇಲ್ಲಿ ಜನರನ್ನು ಈ ಯೋಜನೆಯ ವಿಷಯದಲ್ಲಿ ಭಾವನಾತ್ಮಕವಾಗಿ ಅಪಪ್ರಚಾರ ಮಾಡಿ ಎತ್ತಿ ಕಟ್ಟಲಾಗುತ್ತಿದೆಯೇ ಹೊರತು ಈ ವಿರೋಧಕ್ಕೆ ವೈಜ್ಞಾನಿಕ ನೆಲೆಗಟ್ಟು ಇಲ್ಲ. ಕೋಲಾರ, ಚಿಕ್ಕಬಳ್ಳಾಪುರ ಇತ್ಯಾದಿ ಬಯಲುಸೀಮೆಗೆ ಹೋಲಿಸಿದರೆ ದಕ್ಷಿಣ ಕನ್ನಡದ ಜನ ಪ್ರಾಕೃತಿಕವಾಗಿ ಪುಣ್ಯವಂತರು ಏಕೆಂದರೆ ಇಲ್ಲಿ ಎಂದೂ ಬರಗಾಲ ಎಂಬ ಪರಿಸ್ಥಿತಿ ಬರುವುದಿಲ್ಲ. ಎಲ್ಲಿ ಎಷ್ಟೇ ಕಡಿಮೆ ಎಂದರೂ 200 ಸೆ.ಮೀ.ಗಿಂಥ ಹೆಚ್ಚು ಮಳೆ ಬಂದೇ ಬರುತ್ತದೆ. ಇಷ್ಟು ಮಳೆಯನ್ನು ಪ್ರಾಕೃತಿಕವಾಗಿ ಪಡೆದೂ ಎತ್ತಿನಹೊಳೆಯ ನೀರನ್ನು ಮಳೆಗಾಲದಲ್ಲಿ ಮಳೆ ಹಾಗೂನೀರಿನ ಕೊರತೆ ಇರುವ ಬೇರೆ ಕಡೆ ಕೊಂಡೊಯ್ಯಲು ದಕ್ಷಿಣ ಕನ್ನಡದ ಜನ ವಿರೋಧಿಸುತ್ತಾರೆ ಎಂದರೆ ಅದು ಸಮಂಜಸ ಆಗಲಾರದು.

ಎತ್ತಿನ ಹೊಳೆ ಪರಿಸರದಲ್ಲಿ ನೀರನ್ನು ಶೇಖರಿಸಲು ಕಟ್ಟುವ ಸಣ್ಣ ಅಣೆಕಟ್ಟುಗಳಿಂದ ಸ್ವಲ್ಪ ಮಟ್ಟಿಗೆ ಕಾಡು ಹಾಗೂ ಪರಿಸರ ನಾಶ ಆಗಬಹುದು ಆದರೆ ದೊಡ್ಡ ಮಟ್ಟದ ನಾಶ ಸಣ್ಣ ಸಣ್ಣ ಆಣೆಕಟ್ಟು ಕಟ್ಟುವುದರಿಂದ ಆಗಲಿಕ್ಕಿಲ್ಲ. ನೀರು ಸಾಗಿಸುವ ಕೊಳವೆ ಮಾರ್ಗಕ್ಕೆ ಒಂದು ರಾಷ್ಟ್ರೀಯ ಹೆದ್ದಾರಿಗೆ ಬೇಕಾಗುವುದಕ್ಕಿಂತ ಹೆಚ್ಚು ಜಾಗ ಬೇಕಾಗಲಿಕ್ಕಿಲ್ಲ. ಹೀಗಾಗಿ ಎತ್ತಿನ ಹೊಳೆ ಯೋಜನೆ ಜಾರಿಗೊಳಿಸುವುದರಿಂದ ದೊಡ್ಡ ಮಟ್ಟದ ಪರಿಸರ ನಾಶ ಆಗುವ ಸಂಭವ ಕಾಣುವುದಿಲ್ಲ. ಎತ್ತಿನಹೊಳೆ ಯೋಜನೆ ಕುಡಿಯುವ ನೀರಿಗೆ ಮಾತ್ರ ಮತ್ತು ಎತ್ತಿನಹೊಳೆ ಪರಿಸರದ ಮಳೆಗಾಲದ ನೀರನ್ನು ಮಾತ್ರ ಕೊಂಡೊಯ್ಯುವ ಯೋಜನೆ ಆದ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಜನರ ವಿರೋಧ ಕೂಡ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಇಲ್ಲ ಎಂದು ಹೇಳಬೇಕಾಗಿದೆ. ಕುಡಿಯುವ ನೀರಿನ ಯೋಜನೆಗೆ ಒಂದೇ ರಾಜ್ಯದಲ್ಲಿ ಇದ್ದುಕೊಂಡು ಇನ್ನೊಂದು ಭಾಗದ ಜನರಿಗೆ ವಿರೋಧ ವ್ಯಕ್ತಪಡಿಸುವುದು ಅದೂ ತಮ್ಮ ಜಿಲ್ಲೆಗೆ ಯಾವುದೇ ಹಾನಿ ಆಗದೇ ಇರುವ ಸಂದರ್ಭದಲ್ಲಿ ಸರಿ ಎಂದು ಅನಿಸುವುದಿಲ್ಲ. 

ಇನ್ನು ಸಾಗರ ಸೇರುವ ನೀರು ವ್ಯರ್ಥ ಅಲ್ಲ ಎಂಬ ಒಂದು ವಾದ ಕೂಡ ಇದೆ. ಇದರಿಂದ ನೀರಿನ ಜೊತೆಗೆ ಪೋಷಕಾಂಶಗಳು ಸಾಗರ ಸೇರಿ ಮೀನುಗಳ ಸಂತತಿ ಬೆಳೆಯಲು ಸಹಕಾರಿ ಎಂಬುದು ವಾದ. ನೇತ್ರಾವತಿಯ ವಿಷಯದಲ್ಲಿ ಈ ವಾದ ಕೂಡ ಅಪ್ರಸುಸ್ತುತ ಏಕೆಂದರೆ ಎತ್ತಿನ ಹೊಳೆಗಿಂಥ ಕೆಳಗಿನ ಭಾಗದಲ್ಲಿ ಭಾರೀ ಮಳೆಯಾಗುತ್ತದೆ. ಹೀಗಾಗಿ ಸಾಗರ ಸೇರುವ ನೀರಿನ ಪ್ರಮಾಣದಲ್ಲಿ ಎತ್ತಿನಹೊಳೆಯಿಂದ ನೀರನ್ನು ಮಳೆಗಾಲದಲ್ಲಿ ತೆಗೆದು ಬೇರೆ ಕಡೆ ತಿರುಗಿಸಿದರೂ ದೊಡ್ಡ ಮಟ್ಟದ ಇಳಿಕೆ ಆಗುವ ಸಾಧ್ಯತೆ ಇಲ್ಲ. ಇನ್ನು ಜಲಚಕ್ರದ ಬಗ್ಗೆ ಹೇಳುವುದಾದರೆ ನದಿಯ ನೀರು ಸಮುದ್ರ ಸೇರದೆ ಇದ್ದರೂ ಜಲಚಕ್ರ ಪೂರ್ತಿ ಆಗಿಯೇ ಆಗುತ್ತದೆ. ನೀರು ಎಲ್ಲಿದ್ದರೂ ಸೂರ್ಯನ ಬಿಸಿಲಿಗೆ ಆವಿ ಆಗಲೇಬೇಕು. ಇದನ್ನು ತಡೆಯಲು ಸಾಧ್ಯವಿಲ್ಲ. ಹೀಗೆ ಆವಿಯಾದ ನೀರು ಮತ್ತೆ ಮಳೆಯಾಗಿ ಭುವಿಗೆ ಬೀಳಲೇ ಬೇಕು. ಇದನ್ನು ಕೂಡ ತಡೆಯಲು ಸಾಧ್ಯವಿಲ್ಲ.

ಕಳಸಾ ಬಂಡೂರಿ ವಿಷಯದಲ್ಲಿ ಕೂಡ ಗೋವಾದ ವಾದ ಹುರುಳಿಲ್ಲದ್ದು. ಗೋವಾದ ಪರಿಸರ ಕೂಡ ಹೆಚ್ಚು ಕಡಿಮೆ ದಕ್ಷಿಣ ಕನ್ನಡದ ಪರಿಸರದಂತೆಯೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯಂತೆಯೇ ಅಲ್ಲಿ ಕೂಡ ಸಾಕಷ್ಟು ಮಳೆಯಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ವಿಸ್ತೀರ್ಣ 4559 ಚದರ ಕಿ.ಮೀ. ಆದರೆ ಗೋವಾ ರಾಜ್ಯದ ವಿಸ್ತೀರ್ಣ 3702 ಚದರ ಕಿ.ಮೀ. . ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ 2011 ಜನಗಣತಿ ಪ್ರಕಾರ 20,83,625; ಗೋವಾ ರಾಜ್ಯದ ಜನಸಂಖ್ಯೆ 14,57,723. ಹಾಗೆ ನೋಡಿದರೆ ಗೋವಾ ರಾಜ್ಯ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗಿಂಥ ಜನಸಂಖ್ಯೆ ಹಾಗೂ ವಿಸ್ತೀರ್ಣ ಎರಡರಲ್ಲಿಯೂ ಸಣ್ಣದು. ಗೋವಾ ರಾಜ್ಯದಲ್ಲಿ ಬೀಳುವ ಮಳೆ ನೀರು ಗೋವಾ ರಾಜ್ಯಕ್ಕೆ ಧಾರಾಳ ಸಾಕು. ಕಳಸಾ ಬಂಡೂರಿಯಿಂದ 7 ಟಿಎಂಸಿ ನೀರನ್ನು ಮಳೆಗಾಲದಲ್ಲಿ ತೆಗೆದು ಬೇರೆ ಕಡೆ ತಿರುಗಿಸುವುದರಿಂದ ಗೋವಾದ ಮೇಲೆ ಯಾವ ತೊಂದರೆಯೂ ಆಗಲಾರದು. ಗೋವಾದ ವಿರೋಧ ಕೂಡ ಭಾವನಾತ್ಮಕ ಹಿನ್ನೆಲೆಯ ರಾಜಕಾರಣಿಗಳಿಂದ ಪ್ರಚೋದಿಸಲ್ಪಟ್ಟ ವಿರೋಧವೇ ಹೊರತು ಅದಕ್ಕೆ ವೈಜ್ಞಾನಿಕ ಕಾರಣಗಳು ಇಲ್ಲ. ನ್ಯಾಯಾಲಯವು ತನ್ನ ಮಧ್ಯಂತರ ತೀರ್ಪಿನಲ್ಲಿ ಜಲಚಕ್ರದ ಬಗ್ಗೆ ಪಾಠ ಮಾಡಿದೆ. ಆದರೆ ಅದು ಸಮಂಜಸವೇನೂ ಅಲ್ಲ. ನದಿಯ ನೀರು 7 ಟಿಎಂಸಿ ಪ್ರಮಾಣದಲ್ಲಿ ಬೇರೆ ಕಡೆ ತಿರುಗಿಸುವುದರಿಂದ ಜಲಚಕ್ರದ ಮೇಲೆ ಒಂದು ಎಳ್ಳುಕಾಳಿನಷ್ಟು ಕೂಡ ಪರಿಣಾಮ ಆಗುವುದಿಲ್ಲ ಏಕೆಂದರೆ ಸಮುದ್ರದ ನೀರಿನ ಮಟ್ಟ ಎಂದೂ ಇಳಿಯಲಾರದು. ವಾಸ್ತವವಾಗಿ ಪಳೆಯುಳಿಕೆ ಇಂಧನ ದಹನದಿಂದ ಭೂತಾಪಮಾನ ಏರಿಕೆಯ ಪರಿಣಾಮವಾಗಿ ಧ್ರುವ ಪ್ರದೇಶದ ಹಿಮ ಕರಗಿ ಸಮುದ್ರದ ಮಟ್ಟ ಹೆಚ್ಚುತ್ತಿದೆ ಎಂದು ವಿಜ್ಞಾನಿಗಳು ಬೊಬ್ಬೆ ಹಾಕುತ್ತಿದ್ದಾರೆ. ಇದು ನ್ಯಾಯಾಧೀಶರಿಗೆ ತಿಳಿಯದೆ ಇರುವುದು ಆಶ್ಚರ್ಯವೇ ಸರಿ.

ಕೊನೆಯದಾಗಿ ಪ್ರಧಾನಿ ಮೋದಿ ಈ ವಿಷಯದಲ್ಲಿ ಸಂಬಂಧಿತ ರಾಜ್ಯಗಳ ರಾಜಕಾರಣಿಗಳನ್ನು ಕರೆದು ಈ ವಿಚಾರವನ್ನು ಪರಿಹರಿಸುವುದು ದೊಡ್ಡ ವಿಷಯವೇ ಅಲ್ಲ. ಪ್ರಧಾನಿ ಮೋದಿ ಹಾಗೂ ಸಂಘ ಪರಿವಾರದವರು ಮಾತಿನಲ್ಲಿ ರಾಷ್ಟ್ರೀಯತೆ ಎಂದು ಬುರುಡೆ ಬಿಡುತ್ತಾರೆ, ಆದರೆ ಪಾಲನೆಯಲ್ಲಿ ಅದನ್ನು ತೋರಿಸುವುದಿಲ್ಲ. ರಾಷ್ಟ್ರೀಯತೆ ಬಗ್ಗೆ ನಿಜವಾಗಿ ಕಾಳಜಿ ಇದ್ದರೆ ಕುಡಿಯುವ ನೀರಿನ ಯೋಜನೆಗೆ ಉದ್ಧೇಶಿಸಿದ ಕಳಸ ಬಂಡೂರಿ ಯೋಜನೆಗೆ ಇರುವ ತೊಡಕನ್ನು ಪ್ರಧಾನಿ ಮೋದಿ ಹಾಗೂ ಸಂಘ ಪರಿವಾರದವರು ಸಂಬಂಧಿತ ರಾಜ್ಯಗಳ ಎಲ್ಲ ರಾಜ್ಯಗಳ ರಾಜಕೀಯ ಪಕ್ಷಗಳ ಸಭೆಯನ್ನು ಕರೆದು ಗೋವಾದ ವಿರೋಧ ಅರ್ಥಹೀನ ಹಾಗೂ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ನಿಂತ ವಿರೋಧ ಅಲ್ಲ ಎಂದು ಮನವರಿಕೆ ಮಾಡಿಕೊಡಲು ಸಾಧ್ಯವಿದೆ. ಇದು ಒಬ್ಬ ರಾಜಕೀಯ ಮುತ್ಸದ್ಧಿ ಹಾಗೂ ರಾಷ್ಟ್ರೀಯ ಸಂಘಟನೆ ಮಾಡಬೇಕಾದ ಕೆಲಸ. ಮೋದಿ ಸಂಬಂಧಿತ ರಾಜ್ಯಗಳ ಎಲ್ಲ ಪಕ್ಷಗಳ ರಾಜಕಾರಣಿಗಳ ಸಭೆ ಕರೆಯದೆ ತೆಪ್ಪಗೆ ಕುಳಿತಿರುವುದು ಅವರಿಗೆ ನಿಜವಾಗಿ ರಾಷ್ಟ್ರೀಯತೆಯ ಬಗ್ಗೆ ಕಾಳಜಿ ಇಲ್ಲ ಎಂಬುದನ್ನು ತೋರಿಸುತ್ತದೆ. ಅದೇ ರೀತಿ ಸಂಘ ಪರಿವಾರವು ಕೂಡ ಈ ವಿಷಯದಲ್ಲಿ ಗೋವಾ ಜನರಿಗೆ ಅವರ ವಿರೋಧ ಅರ್ಥಹೀನ ಎಂದು ಮನವರಿಕೆ ಮಾಡಿಕೊಡದೆ ಇರುವುದು ಕೂಡ ಒಂದು ಲೋಪವೇ ಸರಿ.

ಆಗ 1, 2016

ಸಾವೂ ಸಂಭ್ರಮದ ಸಂಗತಿಯಾದಾಗ…………..

ಕು.ಸ.ಮಧುಸೂದನನಾಯರ್
ಮುಖ್ಯಮಂತ್ರಿಯವರ ಮಗ ಸತ್ತ ಸುದ್ದಿ ಕೇಳಿ ಸಂಭ್ರಮಿಸುವ ಮನಸ್ಸುಗಳನ್ನು ನೋಡಿ ಈ ಹಿಂದೆ ಬರೆದ ಲೇಖನವೊಂದು ನೆನಪಾಗಿ ನಿಮ್ಮ ಓದಿಗಾಗಿ ಇಲ್ಲಿ ಮತ್ತೆ ಹಾಕಿರುವೆ:

ಧರ್ಮಗಳ ನಡುವಿನ ಅಸಹನೆ, ಕೋಮುವಾದ ಹುಟ್ಟು ಹಾಕಿದ ಭಯೋತ್ಪಾದಕತೆ, ಮಾನವೀಯ ಮೌಲ್ಯಗಳನ್ನೆಲ್ಲ ಗುಡಿಸಿ ಗುಂಡಿಗೆ ಹಾಕಿರುವ ಜಾಗತೀಕರಣದೀ ಸಮಯದಲ್ಲಿ ವ್ಯಕ್ತಿಯೊಬ್ಬನ ಸಾವಿಗೆ ಮಿಡಿಯಬಲ್ಲ ಅಂತ:ಕರಣ ಮನುಷ್ಯನಲ್ಲಿನ್ನೂ ಉಳಿದಿರಬಹುದೆಂಬ ನನ್ನ ನಂಬಿಕೆ ಹುಸಿಯಾಗತೊಡಗಿದೆ.

ಅದಕ್ಕೆ ಕಾರಣ ಮೊನ್ನಿನ ಕೆಲವು ಘಟನೆಗಳು: ಜಾಗತಿಕ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಅಮೇರಿಕಾ ಸೇನೆಯಿಂದ ಹತನಾದ ನಂತರ ಆ ದೇಶದ ಜನತೆ ತಡರಾತ್ರಿಯವರೆಗು ಕುಡಿದು-ಕುಪ್ಪಳಿಸಿ ವಿಶ್ವವನ್ನೇ ಗೆದ್ದಂತೆ ವಿಜಯೋತ್ಸವ ಆಚರಿಸಿದರು. ಸರಿ ಸುಮಾರು ಅದೇ ಸಮಯದಲ್ಲಿ ಬೆಂಗಳೂರಿನ ಶ್ರೀರಾಮಸೇನೆಯ ಕೆಲ ಕಾರ್ಯಕರ್ತರು ಉದ್ದುದ್ದನೆಯ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಮ್ಮ ಗೌರವಾನ್ವಿತ ಮಠಾಧೀಶರೊಬ್ಬರು ತಮ್ಮ ಕೈಯಾರೆ ಭಕ್ತರಿಗೆ ಸಿಹಿ ಹಂಚಿ ,ಅವನ ಸಾವಿನಸಂತಸಹಂಚಿಕೊಂಡರು.

ವ್ಯಕ್ತಿಯೊಬ್ಬನ ಸಾವನ್ನು (ಅವನು ಸಂತನಾಗಿರಲಿ - ಹಂತಕನಾಗಿರಲಿ, ನಕ್ಸಲನಾಗಿರಲಿ-ಪೋಲಿಸನಾಗಿರಲಿ, ರಾಜನಾಗಿರಲಿ - ರಾಜದ್ರೋಹಿಯಾಗಿರಲಿ) ಸಿಹಿ ತಿಂದು ಸಂಭ್ರಮಿಸುವುದಿದೆಯಲ್ಲ ಅದಕ್ಕಿಂತ ಅಮಾನವೀಯವಾದ್ದು ಬೇರೊಂದಿದೆ ಅಂತನ್ನಿಸುವುದಿಲ್ಲ. ಹಾಗಾದರೆ ಅಮಾಯಕರನ್ನು ಹತ್ಯೆಗೆಯ್ಯುತ್ತ,ಭಯೋತ್ಪಾದಕತೆಯ ಬೀಜಗಳನ್ನು ಭೂಮಿಯೆಲ್ಲೆಡೆ ಬಿತ್ತುತ್ತಿದ್ದ ಲಾಡೆನ್ನಿನ ಸಾವನ್ನು ನಾವು ಹೇಗೆ ಸ್ವೀಕರಿಸ ಬಹುದಿತ್ತು?

" ಅಬ್ಬಾ! ಇನ್ನು ಮೇಲಾದರು ಬಯೋತ್ಪಾದಕನೊಬ್ಬನ ಹಾಳಿ ನಿಂತು, ಜಗತ್ತಿನಲ್ಲಿ ಶಾಂತಿ ನೆಲೆಸಲಿ" ಎಂದು ಹಾರೈಸುತ್ತ ನಿರಾಳತೆಯ ನಿಟ್ಟುಸಿರು ಬಿಡಬಹುದಿತ್ತು.

ಇಲ್ಲಿ ಇನ್ನೊಂದು ವಿಷಯದತ್ತ ನೋಡೋಣ: ಹಾಗೆ ನೋಡಿದರೆ ಅಮೇರಿಕಾಕ್ಕೆ ಈ ಹತ್ಯೆ ವಿಷಯದಲ್ಲಿ ಸಂತೋಷ ಪಡುವ ಯಾವ ಅಧಿಕಾರವೂ ಇರಲಿಲ್ಲ! ಯಾಕೆಂದರೆ: ಆಧುನಿಕ ಜಗತ್ತಿನ ಮೊದಲ ಮತ್ತು ಅತಿ ದೊಡ್ಡ ಭಯೋತ್ಪಾದಕನೆಂದರೆ ಅದು ಸ್ವತ: ಅಮೇರಿಕಾ ಆಗಿದೆ.

ಎರಡನೇ ಮಹಾ ಯುದ್ದದಲ್ಲಿ ಸೋತು ಸುಣ್ಣವಾಗಿದ್ದ ಜಪಾನಿನ ಹಿರೋಷಿಮಾ ನಾಗಸಾಕಿಗಳ ಮೇಲೆ ಅಣು ಬಾಂಬುಗಳನ್ನು ಹಾಕಿ ಮಿಲಿಯನ್ ಗಟ್ಟಲೆ ಮುಗ್ದ ಜನರನ್ನು ಕ್ಷಣಾರ್ದದಲ್ಲಿ ಇನ್ನಿಲ್ಲವಾಗಿಸಿದ ಅಮೇರಿಕಾದ ಕೃತ್ಯ ಭಯೋತ್ಪಾದಕತೆಯಲ್ಲದಿದ್ದರೆ ಇನ್ಯಾವುದು? ಅರವತ್ತರ ದಶಕದಲ್ಲಿ ಅದು ವಿಯೆಟ್ನಾಂನಂತ ಪುಟ್ಟ ರಾಷ್ಟ್ರದ ಮೇಲೆ ನಡೆಸಿದ ದೌರ್ಜನ್ಯ,ಪ್ರಜಾಪ್ರಬುತ್ವ ಸ್ಥಾಪನೆಯ ಹೆಸರಲ್ಲಿ ಇರಾಕ್ ಮುಂತಾದ ದೇಶಗಳ ಮೇಲೆ ನಡೆಸಿದ ಯುದ್ದಗಳು ಅಮೇರಿಕಾದ ಕರಾಳ ಮುಖಕ್ಕೆ ಸಾಕ್ಷಿಯಾಗಿವೆ.ಸೋವಿಯತ್ ಯೂನಿಯನ್ ಹಿಡಿತದಿಂದ ಆಫ್ಗಘಾನಿಸ್ಥಾನವನ್ನು ಮುಕ್ತಗೊಳಿಸುವ ನೆಪದಲ್ಲಿಅಲ್ಲಿನ ಬುಡಕಟ್ಟು ಜನರಿಗೆಹಣ-ಆಯುಧಗಳನ್ನು ಪೂರೈಸುತ್ತ,ಅವರನ್ನು ಉಗ್ರಗಾಮಿಗಳನ್ನಾಗಿ ಮಾಡಿದ ಕುಖ್ಯಾತಿ ಅಮೇರಿಕಾದ್ದು. ಇಸ್ರೇಲ್ ಎಂಬ ರಾಜ್ಯವನ್ನು ರಾತ್ರೋರಾತ್ರಿ ಸೃಷ್ಠಿಸಿ,ಮದ್ಯಪ್ರಾಚ್ಯದಲ್ಲಿ ನಿರಂತರವಾಗಿ ರಕ್ತ ಹರಿಯುವಂತೆ ಮಾಡಿದ್ದು ಸಹ ಇದೇ ಅಮೇರಿಕ.

ಇಷ್ಟಲ್ಲದೆ ಇವತ್ತು ಲಾಡೆನ್ ಹತ್ಯೆ ಮಾಡಿ ತಾನೇನೋ ಮಹಾಸಾಧನೆ ಮಾಡಿದ್ದೇನೆಂದು ಬಿಂಬಿಸಿಕೊಳ್ಳುತ್ತಿರುವ ಅಮೇರಿಕಾ,ಬಿನ್ ಲಾಡೆನ್ ಅಂತಹ ಭಯೋತ್ಪಾದಕನನ್ನು ತಾನೇ ಸೃಷ್ಠಿಸಿದ ಭೂತವೆಂಬುದನ್ನು ಒಪ್ಪಿಕೊಳ್ಳಲು ಸಹ ತಯಾರಿಲ್ಲ.

ಇವೆಲ್ಲವನ್ನೂ ಅರ್ಥಮಾಡಿಕೊಳ್ಳಲಾಗದಷ್ಟು ಮುಗ್ದರೇನಲ್ಲ ಅಮೇರಿಕನ್ನರು.ಸಾಮ್ರಾಜ್ಯಶಾಹಿ ಮನೋಬಾವನೆಯ ಅವರಿಗೆ ತಮ್ಮ ದೇಶ ಮಾಡಿದ ನರಮೇಧಗಳ ಬಗ್ಗೆ ,ಅದು ಹುಟ್ಟು ಹಾಕಿದ ಬಯೋತ್ಪಾದಕತೆಯ ಬಗ್ಗೆ ನಾಚಿಕೆಯಾಗ ಬೇಕಿತ್ತೆ ಹೊರತು ಸಂಭ್ರಮಾಚರಣೆಯ ಅಗತ್ಯವಿರಲಿಲ್ಲ.
ಇನ್ನು ನಮ್ಮ ಶ್ರೀರಾಮ ಸೇನೆಯ ಮತ್ತು ಗೌರವಾನ್ವಿತ ಮಠಾಧೀಶರು ಸಂಭ್ರಮಿಸಿದ್ದರ ಹಿಂದೆ ಇರುವ ಮನಸ್ಥಿತಿಯಾದರು ಲಾಡೆನ್ ಒಬ್ಬ ಮುಸ್ಲಿಂ ಎಂಬುದೇ ಹೊರತು ಅವನೊಬ್ಬ ಜೀವ ವಿರೋಧಿ ಭಯೋತ್ಪಾಕ ಎಂದೇನು ಅಲ್ಲ.

ನಕ್ಸಲರ ನೆಲಬಾಂಬಿಗೆ ಬಲಿಯಾಗುವ ಪೋಲಿಸರ ಸಾವುಗಳಿಗೆ, ಪೋಲಿಸರ ಗುಂಡಿಗೆ ಬಲಿಯಾಗುವ ನಕ್ಸಲರ ಸಾವುಗಳಿಗೆ, ಮನುಷ್ಯರು ಸಂಭ್ರಮಿಸುತ್ತ ಹೋದರೆ ಮಾನವೀಯತೆ ಎಲ್ಲಿ ಉಳಿಯುತ್ತದೆ?

ಸಾವನ್ನು ಸಂಭ್ರಮಿಸುವ ಮನಸ್ಸುಗಳ ಹಿಂದಿರುವ ಕ್ರೌರ್ಯವನ್ನು ನೆನೆಸಿಕೊಂಡರೆ ನಾಳೆಗಳ ಬಗ್ಗೆ ಭಯವಾಗುತ್ತದೆ!

ಹುಟ್ಟಿನ ಮನೆಯಲ್ಲಿ ಅಳುವ-ಸಾವಿನ ಮನೆಯಲ್ಲಿ ನಗುವ ಮನುಷ್ಯನೊಳಗಿನ ರಾಕ್ಷಸತ್ವದ ಮುಂದೆ ಜಗತ್ತಿನೆಲ್ಲ ಆಯುಧಗಳೂ ಹರಿತವಾದವೇನಲ್ಲ ಅನಿಸುತ್ತಿದೆ.