ಆಗ 3, 2016

ಅಧಿಕಾರಿಯ ಪರ ವಕಾಲತ್ತು ವಹಿಸುವುದರಲ್ಲಿ ಯಾವ ಸುಧಾರಣೆ ಇದೆ?

ಎಸ್. ಅಭಿ ಹನಕೆರೆ
03/08/2016
ಮೊನ್ನೆ ನಿರಂತರವಾಗಿ ಚಾನೆಲ್ ಛೇಂಜ್ ಮಾಡುತ್ತಾ ಇರುವಾಗ ಕೆಲವು ಮಕ್ಕಳು ತಮ್ಮ ಮೇಷ್ಟ್ರು ವರ್ಗಾವಣೆಯನ್ನು ಅಳುತ್ತಾ ವಿರೋಧಿಸುತ್ತಿದ್ದರು. ಸೂಪರ್! ಮೇಷ್ಟ್ರು ಈ ರೀತಿಯ ಪ್ರಭಾವವನ್ನು ಮಕ್ಕಳ ಮೇಲೆ ಬೀರಿದ್ದಾರಲ್ಲ ಎಂದು ಆಶ್ಚರ್ಯಪಟ್ಟೆ. ಹಾಗೆ ಚಾನೆಲ್ ಛೇಂಜ್ ಮಾಡುತ್ತಿರುವಾಗ ಹಾಸನದ ಮಹಿಳಾ ಅಧಿಕಾರಿಯೊಬ್ಬರು ತಮ್ಮನ್ನು ವರ್ಗಾವಣೆ ಮಾಡಿರುವುದನ್ನು ತಪ್ಪಿಸಿಕೊಳ್ಳುವ ಭಾಗವಾಗಿ ಆತ್ಮಹತ್ಯೆ ಪ್ರಯತ್ನ ಮಾಡಿರುವ ಸುದ್ದಿ ಪ್ರಕಟವಾಗುತ್ತಿತ್ತು. ಅಷ್ಟರಲ್ಲಾಗಲೇ ಪ್ರಮುಖ ರಾಜಕೀಯ ಪಕ್ಷದ ಮುಖಂಡರು ಆತ್ಮಹತ್ಯೆಗೆ ತಮ್ಮ ಎದುರಾಳಿ ಪಕ್ಷದ ದುರೀಣರೇ ಕಾರಣರೆಂದು ಟಿವಿ ಚಾನೆಲ್ ಗಳಿಗೆ ಬೈಟ್ ಕೊಡುತ್ತಿದ್ದರು. ಆ ಧುರೀಣರ ಹೇಳಿಕೆಯನ್ನೇ ಆಧರಿಸಿಕೊಂಡು ಟಿವಿ ಚಾನೆಲ್ ಗಳು ಅಧಿಕಾರಿಗೆ ಕಿರುಕುಳ, ಆತ್ಮಹತ್ಯೆಗೆ ಯತ್ನ ಎಂದು ಸುದ್ದಿ ಬಿತ್ತರಿಸುತ್ತಿದ್ದವು. ಇದೇನು ಈಗ ಇದ್ದಕ್ಕಿದ್ದಂತೆ ರಾಜ್ಯದಲ್ಲಿ ಅಧಿಕಾರಿಗಳ ಆತ್ಮಹತ್ಯೆ ಸರಣಿ ಸುರುವಾದಂತಿದೆಯಲ್ಲ ಎನ್ನಿಸಿತು. (ಅದು ಎಷ್ಟೇ ಅನುಕಂಪದಿಂದ ನೋಡಿದರೂ ಈ ಚಾನೆಲ್ಲುಗಳನ್ನು ಹತ್ತು ನಿಮಿಷಕ್ಕಿಂತ ಹೆಚ್ಚು ಕಾಲ ನೋಡುವುದಕ್ಕಾಗುವುದಿಲ್ಲ ಎಂಬುದು ಬೇರೆ ಮಾತು!) ಸದರಿ ಅಧಿಕಾರಿ ಹಾಸನದ ಎಸಿ ಆಗಿದ್ದವರು. ಸರ್ಕಾರ ತನ್ನಷ್ಟಕ್ಕೇ ಅವರನ್ನು ವರ್ಗಾವಣೆ ಮಾಡಿದೆ. ಆ ಸ್ಥಾನಕ್ಕೆ ದಕ್ಷ ಎಂದೇ ಖ್ಯಾತವಾಗಿರುವ ನಾಗರಾಜ್ ರನ್ನು ನಿಯೋಜಿಸಿದೆ. ಆದರೆ ಆ ಮಹಿಳಾ ಅಧಿಕಾರಿಗೆ ಸ್ಥಾನೊಪಲ್ಲಟ ಇಷ್ಟವಿಲ್ಲದ ಸಂಗತಿ. ಇನ್ನು ಅದಾಗಲೇ ಸಂಘಟನೆಗಳು ಬೀದಿಗಿಳಿದಿವೆ. ಆ ಅಧಿಕಾರಿಯ ಅಧಿಕಾರವನ್ನು ಹಸ್ತಾಂತರಿಸಲೆಂದು. ಮಹಿಳಾ ಅಧಿಕಾರಿಯು ಸುಮ್ಮನೆ ಕುಳಿತಿಲ್ಲ. ಕೆಎಟಿ ಮೊರೆ ಹೋಗಿ ವರ್ಗಾವಣೆ ರದ್ದು ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸಂಘಟನೆಗಳು ಸುಮ್ಮನಿರುತ್ತಿಲ್ಲ. ಕಡೆಗೆ ಕಡೆ ಅಸ್ತ್ರವಾಗಿ ಆಕೆ ಆತ್ಮಹತ್ಯೆಯ ಮೂಲಕ ಎದುರಿಸಲು ಹೊರಟಿದ್ದಾರೆ. ಇದಿಷ್ಟು ಕಥೆಯ ಹೂರಣ. 
ಆದರೆ ನಮ್ಮ ಜನರು ಯಾರೋ ಒಬ್ಬ ಅಧಿಕಾರಿ ದಕ್ಷ ಎಂದ ಮಾತ್ರಕ್ಕೆ ನಮ್ಮ ಜಿಲ್ಲೆಗೇ ಇರಲಿ ಎಂದು ಹಠಕ್ಕೆ ಬೀಳುವುದು ಯಾಕೆ? ಅವರ ಜಾಗಕ್ಕೆ ಬರುವ ಮತ್ತೊಬ್ಬ ಅಧಿಕಾರಿಯನ್ನು ಈ ಹಿಂದಿನ ಅಧಿಕಾರಿಯಂತೆ ದಕ್ಷತೆಯಿಂದ ಕೆಲಸ ಮಾಡುವಂತಹ ಸಾಮಾಜಿಕ ಒತ್ತಡ ಸೃಷ್ಟಿಸಲು ಯಾಕೆ ಸಾಧ್ಯವಿಲ್ಲ ಎನ್ನಿಸಿತು. ಯಾವುದೇ ಸಂಘಟನೆಯಾಗಲೀ ಅಥವಾ ಜನಸಾಮಾನ್ಯರಾಗಲೀ ನಮ್ಮ ಸುತ್ತಲಿನ ಸಾಮಾಜಿಕ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳುವ ಅಧಿಕಾರ ನಮ್ಮಲ್ಲಿಯೇ ಇದೆ. ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ದಕ್ಷತೆಯಿಂದ ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸಲೇಬೇಕಾದ ಅನಿವಾರ್ಯತೆಯನ್ನು ನಾವುಗಳೇ ಸೃಷ್ಟಿಸಬಹುದಾಗಿದೆ. ಆದರೆ ನಮ್ಮ ಆಲೋಚನೆಗಳು ವ್ಯಕ್ತಿ ಕೇಂದ್ರಿತವಾಗಿರುವುದರಿಂದ, ಕುಟುಂಬ ಕೇಂದ್ರಿತವಾಗಿರುವುದರಿಂದ, ಹೆಚ್ಚೆಂದರೆ ಗುಂಪು ಕೇಂದ್ರಿತವಾಗಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ. ಯಾವುದೋ ಪಕ್ಷಕ್ಕೊ ಎಮ್ಮೆಲ್ಲೆಗೋ ನಮ್ಮ ನಿಷ್ಠೆ ಮುಡಿಪಾಗಿರುತ್ತದೆ. ಆದ್ದರಿಂದ ಜನರಿಗೆ ಎಲ್ಲಾ ಸರಕಾರೀ ಅಧಿಕಾರಿಗಳು ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕೆಲಸ ಮಾಡಲೇಬೇಕು ಎಂದೆನ್ನಿಸುವುದಿಲ್ಲ. ನನ್ನ ಸ್ನೇಹಿತನೊಬ್ಬ ರಾಯಚೂರಿನಲ್ಲಿ ಸರಕಾರೀ ಕೆಲಸದಲ್ಲಿದ್ದಾನೆ. 'ಯಾವಾಗಪ್ಪ ನೀನು ಮಂಡ್ಯಕ್ಕೆ ಅಧಿಕಾರಿಯಾಗಿ ಬರೋದು' ಅಂದರೆ 'ಸುಮ್ನಿರಪ್ಪ ನೀನು. ಅಲ್ಲಿ ಹಾದೀ ಬೀದೀಲಿ ಹೋಗೋರೆಲ್ಲ ಅದು ಏನಾಯಿತು ಇದು ಏನಾಯಿತು ಎಂದು ಸರಕಾರೀ ಯೋಜನೆಗಳ ಬಗ್ಗೆ ಪ್ರಶ್ನೆ ಮಾಡ್ತಾರಂತೆ. ಆದರೆ ಇಲ್ಲಿ ಜನಪ್ರತಿನಿಧಿಗಳು ಮಾತ್ರ ಪ್ರಶ್ನೆ ಮಾಡೋದು' ಎಂದು ಹೇಳಿದ! ನಿಜವಾದ ಪರಿಸ್ಥಿತಿ ಮಂಡ್ಯದಲ್ಲಿ ಆ ಪ್ರಮಾಣಕ್ಕೆ ಇಲ್ಲವಾದರೂ ಹೊರ ಜಿಲ್ಲೆಗಳಲ್ಲಿ ಮಂಡ್ಯ ಜಿಲ್ಲೆಯ ಬಗ್ಗೆ ಇರುವ ಬಿಲ್ಡಪ್ ನೋಡಿ ಖುಸಿಯಾಯಿತು. ಎಲ್ಲಿ ದುಡ್ಡು ಹರಿದಾಡುತ್ತೋ ಅಲ್ಲಿ ಭ್ರಷ್ಟಾಚಾರ ಮಾಡಲು ಮನುಷ್ಯ ಮುಂದಾಗುತ್ತಾನೆ. ಏಕೆಂದರೆ ಮನುಷ್ಯ ಮೊದಲು ಅಗತ್ಯಕ್ಕೆ ನಂತರ ಲಾಭಕ್ಕೆ ಆಮೇಲೆ ದೋಚುವುದಕ್ಕಾಗಿಯೇ ಬದುಕಲು ಶುರು ಮಾಡುತ್ತಾನೆ. ಕಂಟ್ರೋಲ್ ಆಗಿ ಬದುಕಲೆಂದೇ ಮನುಷ್ಯರಾದ ನಾವುಗಳು ಕೆಲವು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದಕ್ಕೆ ನೈತಿಕತೆ, ಮಾನವೀಯತೆಯನ್ನು ಆಧಾರವಾಗಿಸಿಕೊಂಡಿದ್ದೇವೆ. ಮನುಷ್ಯ ಹೊಸ ಹೊಸ ವ್ಯವಸ್ಥೆಗೆ ಹೋದಂತೆ ಇನ್ನಷ್ಟು ಪ್ರಬುದ್ಧನಾಗಬೇಕು, ಬದಲಿಗೆ ನಾವು ವ್ಯತಿರಿಕ್ತ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಒಬ್ಬ ಸರಕಾರಿ ಅಧಿಕಾರಿ ವರ್ಗವಾದರೆ, ಆತನಿಗಾಗಿ ನಾವು ಧರಣಿ ಕೂರಬೇಕಿಲ್ಲ. ಬದಲಿಗೆ ಬರುವ ಮತ್ತೊಬ್ಬ ದಕ್ಷತೆಯಿಂದ ಕೆಲಸ ಮಾಡಬೇಕಾದ ಅನಿವಾರ್ಯತೆಯನ್ನು ನಾವು ಸೃಷ್ಟಿಸಬೇಕಿದೆ. ಆ ಅಧಿಕಾರಿಗಳ ವರ್ಗಾವರ್ಗಿ ವಿಚಾರದಲ್ಲೂ ನನ್ನದು ಇದೇ ಅಭಿಮತ. ಶಾಲಾ ಮಕ್ಕಳು ಮೇಷ್ಟರಿಗಾಗಿ ಅಳುವುದರಲ್ಲಿ ಮುಗ್ದತೆ ಇದೆ. ಮಮಕಾರವಿದೆ. ಕೆಲವರು ಸಂಘಟನೆಗಳ ಹೆಸರಿನಲ್ಲಿ ಅಧಿಕಾರಿಗಳ ವರ್ಗಾವಣೆ ತಡೆಯುವುದರಲ್ಲಿ ಯಾವು ಮುಗ್ಧತೆಯಿದೆ? ಸಮಾಜವನ್ನು ಸರಿಪಡಿಸುವವರು, ಅದಕ್ಕಾಗಿ ಸಂಘಟನೆ ಕಟ್ಟಿಕೊಂಡಿರುವವರು ಒಬ್ಬ ಅಧಿಕಾರಿಯ ವರ್ಗಾವಣೆ ತಡೆಯುವುದರಿಂದ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವೇ? ಅದರಲ್ಲೂ ಇಂತಹ ಘಟನೆಗಳು ಜರುಗಲಿ ಎಂದು ಕಾಯುವ ನಮ್ಮ ರಾಜಕೀಯ ಪಕ್ಷಗಳ ಮುಖಂಡರು, ಈ ಪುಡಾರಿಗಳ ಹೇಳಿಕೆಗಳನ್ನೇ ಮುಂದಿಟ್ಟುಕೊಂಡು ಸುದ್ದಿ ಪಸಾರ ಮಾಡುವ ಮಾಧ್ಯಮಗಳು ಸಮಾಜಕ್ಕೆ ಇನ್ನಷ್ಟು ಅಪಾಯಕಾರಿಯಾಗುತ್ತಿರುವ ಸನ್ನಿವೇಶದಲ್ಲಿ ನಾವು ಬದುಕುತ್ತಿದ್ದೇವೆ. ಇಂತಹ ಅಧಿಕಾರಿಗಳ ಪರ ವಿರೋಧವಾಗಿ ಪ್ರತಿಭಟನೆ ಮಾಡುವವರನ್ನೇ ಕರೆದು ಕರೆದು ಪ್ರಚಾರ ನೀಡುವ ವ್ಯವಸ್ಥೆ ಎಲ್ಲವೂ ಸೇರಿ ಸಮಾಜವನ್ನು ಇನ್ನಷ್ಟು ಕಲುಷಿತಗೊಳಿಸುವ ಮುನ್ನಾ ಜನರದ್ದೇ ಆದ ಪರ್ಯಾಯ ರಾಜಕಾರಣದ ನಿರ್ಮಾಣಕ್ಕೆ ಮುಂದಡಿ ಇಡೋಣ.

ಆಗ 2, 2016

ನೀರು ತಿರುಗಿಸುವುದು ತಪ್ಪಾಗಲಾರದು - ಒಂದು ಪ್ರತಿಕ್ರಿಯೆ

'ಕೆಸರೆರಚಾಟದ ಮಧ್ಯೆ ಕೇಳಿಕೊಳ್ಳದ ಪ್ರಶ್ನೆಗಳು' ಲೇಖನಕ್ಕೆ ಬಂದಿರುವ ಒಂದು ಪ್ರತಿಕ್ರಿಯೆ. 
ಆನಂದ ಪ್ರಸಾದ್ 
02/08/2016
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯ ಬದಲು ಅದೇ ಮೊತ್ತದ ಹಣವನ್ನು (12,000 ಕೋಟಿಗೂ ಮೇಲ್ಪಟ್ಟು) ಬಳಸಿ ಆ ಜಿಲ್ಲೆಗಳಲ್ಲಿ ಬೀಳುವ ಮಳೆಯ ನೀರನ್ನು ಹಿಡಿದಿಡುವ ಹಾಗೂ ನೀರಿಂಗಿಸುವ ಕೆರೆಗಳು, ಹೊಂಡಗಳು, ಬದುಗಳು, ತಡೆಗಟ್ಟಗಳನ್ನು ನಿರ್ಮಿಸಿ ಮಳೆಯ ನೀರು ಹರಿದು ಹೋಗದಂತೆ ಮಾಡಿದರೆ ಕುಡಿಯುವ ನೀರಿನ ಕೊರತೆ ಉಂಟಾಗಲಾರದು. ಇದರ ಜೊತೆಗೆ ಬರಡು ಭೂಮಿಯಲ್ಲಿ ಕಾಡು ಬೆಳೆಸುವ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದರೆ ಮಳೆಯ ಪ್ರಮಾಣ ಹೆಚ್ಚುವ ಸಂಭವ ಇದೆ. ಹೀಗೆ ಮಾಡಿದರೆ ದೂರದಿಂದ ನೀರು ತರುವ ಯೋಜನೆಗಳ ಅಗತ್ಯ ಬೀಳಲಾರದು. ಇಂಥ ಯೋಜನೆ ಹಾಗೂ ಚಿಂತನೆಯನ್ನು ನೀರಾವರಿ ತಜ್ಞರು, ರಾಜಕಾರಣಿಗಳು ಬೆಳೆಸದೆ ಕೋಲಾರ, ಚಿಕ್ಕಬಳ್ಳಾಪುರ ಇತ್ಯಾದಿ ಜಿಲ್ಲೆಗಳ ಜನರಲ್ಲಿ ದೂರದಿಂದ ನೀರು ತರುವುದೇ ಪರಿಹಾರ ಎಂಬ ಕಲ್ಪನೆಯನ್ನು ಹುಟ್ಟುಹಾಕಿ ಬೆಳೆಸಿದ್ದಾರೆ. ಇದರಿಂದಾಗಿ ಸ್ಥಳೀಯ ನೀರಿಂಗಿಸುವ ಯೋಜನೆಗಳು, ಪರಿಹಾರಗಳಿಗಾಗಿ ಜನರಾಗಲೀ, ಸಂಘಟನೆಗಳಾಗಲೀ ಒತ್ತಾಯಿಸುತ್ತಿಲ್ಲ. ಅವರ ಒತ್ತಾಯವೇನಿದ್ದರೂ ದೂರದಿಂದ ನೀರು ತರುವ ತೀರಾ ತ್ರಾಸದಾಯಕ ಎತ್ತಿನಹೊಳೆಯಂಥ ಯೋಜನೆಗಳ ಕಡೆಗೇ ಇದೆ.

ಎತ್ತಿನ ಹೊಳೆ ಯೋಜನೆಯನ್ನು ಜಾರಿಗೊಳಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನರ ವಿರೋಧ ವೈಚಾರಿಕ ನೆಲೆಗಿಂತ ಹೆಚ್ಚು ಭಾವನಾತ್ಮಕವಾದದ್ದು. ದಕ್ಷಿಣ ಕನ್ನಡ ಜಿಲ್ಲೆಯು ಸಾಕಷ್ಟು ಮಳೆ ಬೀಳುವ ಪ್ರದೇಶ. ಇದು ಸಾಕಷ್ಟು ಹಸುರಿನಿಂದ ಕೂಡಿರುವ ಹಾಗೂ ಘಟ್ಟದ ಹಾಗೂ ಕರಾವಳಿಯ ನಡುವೆ ಇರುವ ಕಾರಣ ಇಲ್ಲಿ ಬರಗಾಲ (ಘಟ್ಟದ ಮೇಲಣ ಜಿಲ್ಲೆಗಳಂತೆ) ಬಂದ ಅಥವಾ ಬರುವ ಸಂಭವ ಇಲ್ಲ. ನೇತ್ರಾವತಿಯ ಅಥವಾ ಅದರ ಉಪನದಿಯಾದ ಎತ್ತಿನಹೊಳೆ ಹಳ್ಳದ ನೀರನ್ನು ಮಳೆಗಾಲದಲ್ಲಿ ಅಥವಾ ಡಿಸೆಂಬರ್ ಕೊನೆಯವರೆಗೂ ಬೇರೆ ಕಡೆ ತಿರುಗಿಸಿದರೂ ಅದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಯಾವ ತೊಂದರೆಯೂ ಆಗುವ ಸಂಭವ ಇಲ್ಲವೇ ಇಲ್ಲ. ಏಕೆಂದರೆ ಈ ಸಮಯದಲ್ಲಿ ನದಿಯಲ್ಲಿ ಸಾಕಷ್ಟು ನೀರು ಹರಿದು ಸಮುದ್ರ ಸೇರುತ್ತಿರುತ್ತದೆ. ನೇತ್ರಾವತಿಯ ನೀರು ಪುತ್ತೂರು ಹಾಗೂ ಉಪ್ಪಿನಂಗಡಿ ಪೇಟೆ ವ್ಯಾಪ್ತಿಯ ಜನತೆಗೆ ಕುಡಿಯುವ ನೀರು ಹಾಗೂ ಮಂಗಳೂರು ನಗರದ ಕುಡಿಯುವ ನೀರು ಹಾಗೂ ಮಂಗಳೂರಿನ ಕೆಲವು ಬೃಹತ್ ಕೈಗಾರಿಕೆಗಳಿಗೆ ಬೇಕಾದ ನೀರನ್ನು ಒದಗಿಸುವ ಮೂಲ. ಇದನ್ನು ಬಿಟ್ಟರೆ ನೇತ್ರಾವತಿ ನದಿಯ ನೀರು ಪುತ್ತೂರು, ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗಗಳಿಗೆ, ಬೆಳ್ತಂಗಡಿ ತಾಲೂಕಿನ ಪೇಟೆ ಅಥವಾ ಗ್ರಾಮೀಣ ಭಾಗಗಳಿಗೆ ಹಾಗೂ ಸುಳ್ಯ ತಾಲೂಕಿನ ಪೇಟೆ ಹಾಗೂ ಗ್ರಾಮೀಣ ಭಾಗಗಳಿಗೆ ಬಳಕೆ ಆಗುವುದಿಲ್ಲ. ಸುಳ್ಯ ತಾಲೂಕಿನ ಜನರಿಗಂತೂ ನೇತ್ರಾವತಿಯ ಸಂಬಂಧವೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಮಳೆ ಬೀಳುವ ಕಾರಣ ಪೇಟೆ ಹಾಗೂ ಕೈಗಾರಿಕೆಗಳಿಗೆ ಹೊರತುಪಡಿಸಿ ಗ್ರಾಮೀಣ ದಕ್ಷಿಣ ಕನ್ನಡ ಭಾಗಗಳಲ್ಲಿ ನೇತ್ರಾವತಿ ನದಿ ನೀರಿನ ಅವಶ್ಯಕತೆ ಕೂಡ ಇಲ್ಲ. ಹೀಗಾಗಿ ದಕ್ಷಿಣ ಕನ್ನಡದ ಜನ ಈ ಯೋಜನೆಯ ಬಗ್ಗೆ ವಿರೋಧ ವ್ಯಕ್ತಪಡಿಸಬೇಕಾದ ಅಗತ್ಯ ಇಲ್ಲ. ಇಲ್ಲಿ ಜನರನ್ನು ಈ ಯೋಜನೆಯ ವಿಷಯದಲ್ಲಿ ಭಾವನಾತ್ಮಕವಾಗಿ ಅಪಪ್ರಚಾರ ಮಾಡಿ ಎತ್ತಿ ಕಟ್ಟಲಾಗುತ್ತಿದೆಯೇ ಹೊರತು ಈ ವಿರೋಧಕ್ಕೆ ವೈಜ್ಞಾನಿಕ ನೆಲೆಗಟ್ಟು ಇಲ್ಲ. ಕೋಲಾರ, ಚಿಕ್ಕಬಳ್ಳಾಪುರ ಇತ್ಯಾದಿ ಬಯಲುಸೀಮೆಗೆ ಹೋಲಿಸಿದರೆ ದಕ್ಷಿಣ ಕನ್ನಡದ ಜನ ಪ್ರಾಕೃತಿಕವಾಗಿ ಪುಣ್ಯವಂತರು ಏಕೆಂದರೆ ಇಲ್ಲಿ ಎಂದೂ ಬರಗಾಲ ಎಂಬ ಪರಿಸ್ಥಿತಿ ಬರುವುದಿಲ್ಲ. ಎಲ್ಲಿ ಎಷ್ಟೇ ಕಡಿಮೆ ಎಂದರೂ 200 ಸೆ.ಮೀ.ಗಿಂಥ ಹೆಚ್ಚು ಮಳೆ ಬಂದೇ ಬರುತ್ತದೆ. ಇಷ್ಟು ಮಳೆಯನ್ನು ಪ್ರಾಕೃತಿಕವಾಗಿ ಪಡೆದೂ ಎತ್ತಿನಹೊಳೆಯ ನೀರನ್ನು ಮಳೆಗಾಲದಲ್ಲಿ ಮಳೆ ಹಾಗೂನೀರಿನ ಕೊರತೆ ಇರುವ ಬೇರೆ ಕಡೆ ಕೊಂಡೊಯ್ಯಲು ದಕ್ಷಿಣ ಕನ್ನಡದ ಜನ ವಿರೋಧಿಸುತ್ತಾರೆ ಎಂದರೆ ಅದು ಸಮಂಜಸ ಆಗಲಾರದು.

ಎತ್ತಿನ ಹೊಳೆ ಪರಿಸರದಲ್ಲಿ ನೀರನ್ನು ಶೇಖರಿಸಲು ಕಟ್ಟುವ ಸಣ್ಣ ಅಣೆಕಟ್ಟುಗಳಿಂದ ಸ್ವಲ್ಪ ಮಟ್ಟಿಗೆ ಕಾಡು ಹಾಗೂ ಪರಿಸರ ನಾಶ ಆಗಬಹುದು ಆದರೆ ದೊಡ್ಡ ಮಟ್ಟದ ನಾಶ ಸಣ್ಣ ಸಣ್ಣ ಆಣೆಕಟ್ಟು ಕಟ್ಟುವುದರಿಂದ ಆಗಲಿಕ್ಕಿಲ್ಲ. ನೀರು ಸಾಗಿಸುವ ಕೊಳವೆ ಮಾರ್ಗಕ್ಕೆ ಒಂದು ರಾಷ್ಟ್ರೀಯ ಹೆದ್ದಾರಿಗೆ ಬೇಕಾಗುವುದಕ್ಕಿಂತ ಹೆಚ್ಚು ಜಾಗ ಬೇಕಾಗಲಿಕ್ಕಿಲ್ಲ. ಹೀಗಾಗಿ ಎತ್ತಿನ ಹೊಳೆ ಯೋಜನೆ ಜಾರಿಗೊಳಿಸುವುದರಿಂದ ದೊಡ್ಡ ಮಟ್ಟದ ಪರಿಸರ ನಾಶ ಆಗುವ ಸಂಭವ ಕಾಣುವುದಿಲ್ಲ. ಎತ್ತಿನಹೊಳೆ ಯೋಜನೆ ಕುಡಿಯುವ ನೀರಿಗೆ ಮಾತ್ರ ಮತ್ತು ಎತ್ತಿನಹೊಳೆ ಪರಿಸರದ ಮಳೆಗಾಲದ ನೀರನ್ನು ಮಾತ್ರ ಕೊಂಡೊಯ್ಯುವ ಯೋಜನೆ ಆದ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಜನರ ವಿರೋಧ ಕೂಡ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಇಲ್ಲ ಎಂದು ಹೇಳಬೇಕಾಗಿದೆ. ಕುಡಿಯುವ ನೀರಿನ ಯೋಜನೆಗೆ ಒಂದೇ ರಾಜ್ಯದಲ್ಲಿ ಇದ್ದುಕೊಂಡು ಇನ್ನೊಂದು ಭಾಗದ ಜನರಿಗೆ ವಿರೋಧ ವ್ಯಕ್ತಪಡಿಸುವುದು ಅದೂ ತಮ್ಮ ಜಿಲ್ಲೆಗೆ ಯಾವುದೇ ಹಾನಿ ಆಗದೇ ಇರುವ ಸಂದರ್ಭದಲ್ಲಿ ಸರಿ ಎಂದು ಅನಿಸುವುದಿಲ್ಲ. 

ಇನ್ನು ಸಾಗರ ಸೇರುವ ನೀರು ವ್ಯರ್ಥ ಅಲ್ಲ ಎಂಬ ಒಂದು ವಾದ ಕೂಡ ಇದೆ. ಇದರಿಂದ ನೀರಿನ ಜೊತೆಗೆ ಪೋಷಕಾಂಶಗಳು ಸಾಗರ ಸೇರಿ ಮೀನುಗಳ ಸಂತತಿ ಬೆಳೆಯಲು ಸಹಕಾರಿ ಎಂಬುದು ವಾದ. ನೇತ್ರಾವತಿಯ ವಿಷಯದಲ್ಲಿ ಈ ವಾದ ಕೂಡ ಅಪ್ರಸುಸ್ತುತ ಏಕೆಂದರೆ ಎತ್ತಿನ ಹೊಳೆಗಿಂಥ ಕೆಳಗಿನ ಭಾಗದಲ್ಲಿ ಭಾರೀ ಮಳೆಯಾಗುತ್ತದೆ. ಹೀಗಾಗಿ ಸಾಗರ ಸೇರುವ ನೀರಿನ ಪ್ರಮಾಣದಲ್ಲಿ ಎತ್ತಿನಹೊಳೆಯಿಂದ ನೀರನ್ನು ಮಳೆಗಾಲದಲ್ಲಿ ತೆಗೆದು ಬೇರೆ ಕಡೆ ತಿರುಗಿಸಿದರೂ ದೊಡ್ಡ ಮಟ್ಟದ ಇಳಿಕೆ ಆಗುವ ಸಾಧ್ಯತೆ ಇಲ್ಲ. ಇನ್ನು ಜಲಚಕ್ರದ ಬಗ್ಗೆ ಹೇಳುವುದಾದರೆ ನದಿಯ ನೀರು ಸಮುದ್ರ ಸೇರದೆ ಇದ್ದರೂ ಜಲಚಕ್ರ ಪೂರ್ತಿ ಆಗಿಯೇ ಆಗುತ್ತದೆ. ನೀರು ಎಲ್ಲಿದ್ದರೂ ಸೂರ್ಯನ ಬಿಸಿಲಿಗೆ ಆವಿ ಆಗಲೇಬೇಕು. ಇದನ್ನು ತಡೆಯಲು ಸಾಧ್ಯವಿಲ್ಲ. ಹೀಗೆ ಆವಿಯಾದ ನೀರು ಮತ್ತೆ ಮಳೆಯಾಗಿ ಭುವಿಗೆ ಬೀಳಲೇ ಬೇಕು. ಇದನ್ನು ಕೂಡ ತಡೆಯಲು ಸಾಧ್ಯವಿಲ್ಲ.

ಕಳಸಾ ಬಂಡೂರಿ ವಿಷಯದಲ್ಲಿ ಕೂಡ ಗೋವಾದ ವಾದ ಹುರುಳಿಲ್ಲದ್ದು. ಗೋವಾದ ಪರಿಸರ ಕೂಡ ಹೆಚ್ಚು ಕಡಿಮೆ ದಕ್ಷಿಣ ಕನ್ನಡದ ಪರಿಸರದಂತೆಯೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯಂತೆಯೇ ಅಲ್ಲಿ ಕೂಡ ಸಾಕಷ್ಟು ಮಳೆಯಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ವಿಸ್ತೀರ್ಣ 4559 ಚದರ ಕಿ.ಮೀ. ಆದರೆ ಗೋವಾ ರಾಜ್ಯದ ವಿಸ್ತೀರ್ಣ 3702 ಚದರ ಕಿ.ಮೀ. . ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ 2011 ಜನಗಣತಿ ಪ್ರಕಾರ 20,83,625; ಗೋವಾ ರಾಜ್ಯದ ಜನಸಂಖ್ಯೆ 14,57,723. ಹಾಗೆ ನೋಡಿದರೆ ಗೋವಾ ರಾಜ್ಯ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗಿಂಥ ಜನಸಂಖ್ಯೆ ಹಾಗೂ ವಿಸ್ತೀರ್ಣ ಎರಡರಲ್ಲಿಯೂ ಸಣ್ಣದು. ಗೋವಾ ರಾಜ್ಯದಲ್ಲಿ ಬೀಳುವ ಮಳೆ ನೀರು ಗೋವಾ ರಾಜ್ಯಕ್ಕೆ ಧಾರಾಳ ಸಾಕು. ಕಳಸಾ ಬಂಡೂರಿಯಿಂದ 7 ಟಿಎಂಸಿ ನೀರನ್ನು ಮಳೆಗಾಲದಲ್ಲಿ ತೆಗೆದು ಬೇರೆ ಕಡೆ ತಿರುಗಿಸುವುದರಿಂದ ಗೋವಾದ ಮೇಲೆ ಯಾವ ತೊಂದರೆಯೂ ಆಗಲಾರದು. ಗೋವಾದ ವಿರೋಧ ಕೂಡ ಭಾವನಾತ್ಮಕ ಹಿನ್ನೆಲೆಯ ರಾಜಕಾರಣಿಗಳಿಂದ ಪ್ರಚೋದಿಸಲ್ಪಟ್ಟ ವಿರೋಧವೇ ಹೊರತು ಅದಕ್ಕೆ ವೈಜ್ಞಾನಿಕ ಕಾರಣಗಳು ಇಲ್ಲ. ನ್ಯಾಯಾಲಯವು ತನ್ನ ಮಧ್ಯಂತರ ತೀರ್ಪಿನಲ್ಲಿ ಜಲಚಕ್ರದ ಬಗ್ಗೆ ಪಾಠ ಮಾಡಿದೆ. ಆದರೆ ಅದು ಸಮಂಜಸವೇನೂ ಅಲ್ಲ. ನದಿಯ ನೀರು 7 ಟಿಎಂಸಿ ಪ್ರಮಾಣದಲ್ಲಿ ಬೇರೆ ಕಡೆ ತಿರುಗಿಸುವುದರಿಂದ ಜಲಚಕ್ರದ ಮೇಲೆ ಒಂದು ಎಳ್ಳುಕಾಳಿನಷ್ಟು ಕೂಡ ಪರಿಣಾಮ ಆಗುವುದಿಲ್ಲ ಏಕೆಂದರೆ ಸಮುದ್ರದ ನೀರಿನ ಮಟ್ಟ ಎಂದೂ ಇಳಿಯಲಾರದು. ವಾಸ್ತವವಾಗಿ ಪಳೆಯುಳಿಕೆ ಇಂಧನ ದಹನದಿಂದ ಭೂತಾಪಮಾನ ಏರಿಕೆಯ ಪರಿಣಾಮವಾಗಿ ಧ್ರುವ ಪ್ರದೇಶದ ಹಿಮ ಕರಗಿ ಸಮುದ್ರದ ಮಟ್ಟ ಹೆಚ್ಚುತ್ತಿದೆ ಎಂದು ವಿಜ್ಞಾನಿಗಳು ಬೊಬ್ಬೆ ಹಾಕುತ್ತಿದ್ದಾರೆ. ಇದು ನ್ಯಾಯಾಧೀಶರಿಗೆ ತಿಳಿಯದೆ ಇರುವುದು ಆಶ್ಚರ್ಯವೇ ಸರಿ.

ಕೊನೆಯದಾಗಿ ಪ್ರಧಾನಿ ಮೋದಿ ಈ ವಿಷಯದಲ್ಲಿ ಸಂಬಂಧಿತ ರಾಜ್ಯಗಳ ರಾಜಕಾರಣಿಗಳನ್ನು ಕರೆದು ಈ ವಿಚಾರವನ್ನು ಪರಿಹರಿಸುವುದು ದೊಡ್ಡ ವಿಷಯವೇ ಅಲ್ಲ. ಪ್ರಧಾನಿ ಮೋದಿ ಹಾಗೂ ಸಂಘ ಪರಿವಾರದವರು ಮಾತಿನಲ್ಲಿ ರಾಷ್ಟ್ರೀಯತೆ ಎಂದು ಬುರುಡೆ ಬಿಡುತ್ತಾರೆ, ಆದರೆ ಪಾಲನೆಯಲ್ಲಿ ಅದನ್ನು ತೋರಿಸುವುದಿಲ್ಲ. ರಾಷ್ಟ್ರೀಯತೆ ಬಗ್ಗೆ ನಿಜವಾಗಿ ಕಾಳಜಿ ಇದ್ದರೆ ಕುಡಿಯುವ ನೀರಿನ ಯೋಜನೆಗೆ ಉದ್ಧೇಶಿಸಿದ ಕಳಸ ಬಂಡೂರಿ ಯೋಜನೆಗೆ ಇರುವ ತೊಡಕನ್ನು ಪ್ರಧಾನಿ ಮೋದಿ ಹಾಗೂ ಸಂಘ ಪರಿವಾರದವರು ಸಂಬಂಧಿತ ರಾಜ್ಯಗಳ ಎಲ್ಲ ರಾಜ್ಯಗಳ ರಾಜಕೀಯ ಪಕ್ಷಗಳ ಸಭೆಯನ್ನು ಕರೆದು ಗೋವಾದ ವಿರೋಧ ಅರ್ಥಹೀನ ಹಾಗೂ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ನಿಂತ ವಿರೋಧ ಅಲ್ಲ ಎಂದು ಮನವರಿಕೆ ಮಾಡಿಕೊಡಲು ಸಾಧ್ಯವಿದೆ. ಇದು ಒಬ್ಬ ರಾಜಕೀಯ ಮುತ್ಸದ್ಧಿ ಹಾಗೂ ರಾಷ್ಟ್ರೀಯ ಸಂಘಟನೆ ಮಾಡಬೇಕಾದ ಕೆಲಸ. ಮೋದಿ ಸಂಬಂಧಿತ ರಾಜ್ಯಗಳ ಎಲ್ಲ ಪಕ್ಷಗಳ ರಾಜಕಾರಣಿಗಳ ಸಭೆ ಕರೆಯದೆ ತೆಪ್ಪಗೆ ಕುಳಿತಿರುವುದು ಅವರಿಗೆ ನಿಜವಾಗಿ ರಾಷ್ಟ್ರೀಯತೆಯ ಬಗ್ಗೆ ಕಾಳಜಿ ಇಲ್ಲ ಎಂಬುದನ್ನು ತೋರಿಸುತ್ತದೆ. ಅದೇ ರೀತಿ ಸಂಘ ಪರಿವಾರವು ಕೂಡ ಈ ವಿಷಯದಲ್ಲಿ ಗೋವಾ ಜನರಿಗೆ ಅವರ ವಿರೋಧ ಅರ್ಥಹೀನ ಎಂದು ಮನವರಿಕೆ ಮಾಡಿಕೊಡದೆ ಇರುವುದು ಕೂಡ ಒಂದು ಲೋಪವೇ ಸರಿ.

ಆಗ 1, 2016

ಸಾವೂ ಸಂಭ್ರಮದ ಸಂಗತಿಯಾದಾಗ…………..

ಕು.ಸ.ಮಧುಸೂದನನಾಯರ್
ಮುಖ್ಯಮಂತ್ರಿಯವರ ಮಗ ಸತ್ತ ಸುದ್ದಿ ಕೇಳಿ ಸಂಭ್ರಮಿಸುವ ಮನಸ್ಸುಗಳನ್ನು ನೋಡಿ ಈ ಹಿಂದೆ ಬರೆದ ಲೇಖನವೊಂದು ನೆನಪಾಗಿ ನಿಮ್ಮ ಓದಿಗಾಗಿ ಇಲ್ಲಿ ಮತ್ತೆ ಹಾಕಿರುವೆ:

ಧರ್ಮಗಳ ನಡುವಿನ ಅಸಹನೆ, ಕೋಮುವಾದ ಹುಟ್ಟು ಹಾಕಿದ ಭಯೋತ್ಪಾದಕತೆ, ಮಾನವೀಯ ಮೌಲ್ಯಗಳನ್ನೆಲ್ಲ ಗುಡಿಸಿ ಗುಂಡಿಗೆ ಹಾಕಿರುವ ಜಾಗತೀಕರಣದೀ ಸಮಯದಲ್ಲಿ ವ್ಯಕ್ತಿಯೊಬ್ಬನ ಸಾವಿಗೆ ಮಿಡಿಯಬಲ್ಲ ಅಂತ:ಕರಣ ಮನುಷ್ಯನಲ್ಲಿನ್ನೂ ಉಳಿದಿರಬಹುದೆಂಬ ನನ್ನ ನಂಬಿಕೆ ಹುಸಿಯಾಗತೊಡಗಿದೆ.

ಅದಕ್ಕೆ ಕಾರಣ ಮೊನ್ನಿನ ಕೆಲವು ಘಟನೆಗಳು: ಜಾಗತಿಕ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಅಮೇರಿಕಾ ಸೇನೆಯಿಂದ ಹತನಾದ ನಂತರ ಆ ದೇಶದ ಜನತೆ ತಡರಾತ್ರಿಯವರೆಗು ಕುಡಿದು-ಕುಪ್ಪಳಿಸಿ ವಿಶ್ವವನ್ನೇ ಗೆದ್ದಂತೆ ವಿಜಯೋತ್ಸವ ಆಚರಿಸಿದರು. ಸರಿ ಸುಮಾರು ಅದೇ ಸಮಯದಲ್ಲಿ ಬೆಂಗಳೂರಿನ ಶ್ರೀರಾಮಸೇನೆಯ ಕೆಲ ಕಾರ್ಯಕರ್ತರು ಉದ್ದುದ್ದನೆಯ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಮ್ಮ ಗೌರವಾನ್ವಿತ ಮಠಾಧೀಶರೊಬ್ಬರು ತಮ್ಮ ಕೈಯಾರೆ ಭಕ್ತರಿಗೆ ಸಿಹಿ ಹಂಚಿ ,ಅವನ ಸಾವಿನಸಂತಸಹಂಚಿಕೊಂಡರು.

ವ್ಯಕ್ತಿಯೊಬ್ಬನ ಸಾವನ್ನು (ಅವನು ಸಂತನಾಗಿರಲಿ - ಹಂತಕನಾಗಿರಲಿ, ನಕ್ಸಲನಾಗಿರಲಿ-ಪೋಲಿಸನಾಗಿರಲಿ, ರಾಜನಾಗಿರಲಿ - ರಾಜದ್ರೋಹಿಯಾಗಿರಲಿ) ಸಿಹಿ ತಿಂದು ಸಂಭ್ರಮಿಸುವುದಿದೆಯಲ್ಲ ಅದಕ್ಕಿಂತ ಅಮಾನವೀಯವಾದ್ದು ಬೇರೊಂದಿದೆ ಅಂತನ್ನಿಸುವುದಿಲ್ಲ. ಹಾಗಾದರೆ ಅಮಾಯಕರನ್ನು ಹತ್ಯೆಗೆಯ್ಯುತ್ತ,ಭಯೋತ್ಪಾದಕತೆಯ ಬೀಜಗಳನ್ನು ಭೂಮಿಯೆಲ್ಲೆಡೆ ಬಿತ್ತುತ್ತಿದ್ದ ಲಾಡೆನ್ನಿನ ಸಾವನ್ನು ನಾವು ಹೇಗೆ ಸ್ವೀಕರಿಸ ಬಹುದಿತ್ತು?

" ಅಬ್ಬಾ! ಇನ್ನು ಮೇಲಾದರು ಬಯೋತ್ಪಾದಕನೊಬ್ಬನ ಹಾಳಿ ನಿಂತು, ಜಗತ್ತಿನಲ್ಲಿ ಶಾಂತಿ ನೆಲೆಸಲಿ" ಎಂದು ಹಾರೈಸುತ್ತ ನಿರಾಳತೆಯ ನಿಟ್ಟುಸಿರು ಬಿಡಬಹುದಿತ್ತು.

ಇಲ್ಲಿ ಇನ್ನೊಂದು ವಿಷಯದತ್ತ ನೋಡೋಣ: ಹಾಗೆ ನೋಡಿದರೆ ಅಮೇರಿಕಾಕ್ಕೆ ಈ ಹತ್ಯೆ ವಿಷಯದಲ್ಲಿ ಸಂತೋಷ ಪಡುವ ಯಾವ ಅಧಿಕಾರವೂ ಇರಲಿಲ್ಲ! ಯಾಕೆಂದರೆ: ಆಧುನಿಕ ಜಗತ್ತಿನ ಮೊದಲ ಮತ್ತು ಅತಿ ದೊಡ್ಡ ಭಯೋತ್ಪಾದಕನೆಂದರೆ ಅದು ಸ್ವತ: ಅಮೇರಿಕಾ ಆಗಿದೆ.

ಎರಡನೇ ಮಹಾ ಯುದ್ದದಲ್ಲಿ ಸೋತು ಸುಣ್ಣವಾಗಿದ್ದ ಜಪಾನಿನ ಹಿರೋಷಿಮಾ ನಾಗಸಾಕಿಗಳ ಮೇಲೆ ಅಣು ಬಾಂಬುಗಳನ್ನು ಹಾಕಿ ಮಿಲಿಯನ್ ಗಟ್ಟಲೆ ಮುಗ್ದ ಜನರನ್ನು ಕ್ಷಣಾರ್ದದಲ್ಲಿ ಇನ್ನಿಲ್ಲವಾಗಿಸಿದ ಅಮೇರಿಕಾದ ಕೃತ್ಯ ಭಯೋತ್ಪಾದಕತೆಯಲ್ಲದಿದ್ದರೆ ಇನ್ಯಾವುದು? ಅರವತ್ತರ ದಶಕದಲ್ಲಿ ಅದು ವಿಯೆಟ್ನಾಂನಂತ ಪುಟ್ಟ ರಾಷ್ಟ್ರದ ಮೇಲೆ ನಡೆಸಿದ ದೌರ್ಜನ್ಯ,ಪ್ರಜಾಪ್ರಬುತ್ವ ಸ್ಥಾಪನೆಯ ಹೆಸರಲ್ಲಿ ಇರಾಕ್ ಮುಂತಾದ ದೇಶಗಳ ಮೇಲೆ ನಡೆಸಿದ ಯುದ್ದಗಳು ಅಮೇರಿಕಾದ ಕರಾಳ ಮುಖಕ್ಕೆ ಸಾಕ್ಷಿಯಾಗಿವೆ.ಸೋವಿಯತ್ ಯೂನಿಯನ್ ಹಿಡಿತದಿಂದ ಆಫ್ಗಘಾನಿಸ್ಥಾನವನ್ನು ಮುಕ್ತಗೊಳಿಸುವ ನೆಪದಲ್ಲಿಅಲ್ಲಿನ ಬುಡಕಟ್ಟು ಜನರಿಗೆಹಣ-ಆಯುಧಗಳನ್ನು ಪೂರೈಸುತ್ತ,ಅವರನ್ನು ಉಗ್ರಗಾಮಿಗಳನ್ನಾಗಿ ಮಾಡಿದ ಕುಖ್ಯಾತಿ ಅಮೇರಿಕಾದ್ದು. ಇಸ್ರೇಲ್ ಎಂಬ ರಾಜ್ಯವನ್ನು ರಾತ್ರೋರಾತ್ರಿ ಸೃಷ್ಠಿಸಿ,ಮದ್ಯಪ್ರಾಚ್ಯದಲ್ಲಿ ನಿರಂತರವಾಗಿ ರಕ್ತ ಹರಿಯುವಂತೆ ಮಾಡಿದ್ದು ಸಹ ಇದೇ ಅಮೇರಿಕ.

ಇಷ್ಟಲ್ಲದೆ ಇವತ್ತು ಲಾಡೆನ್ ಹತ್ಯೆ ಮಾಡಿ ತಾನೇನೋ ಮಹಾಸಾಧನೆ ಮಾಡಿದ್ದೇನೆಂದು ಬಿಂಬಿಸಿಕೊಳ್ಳುತ್ತಿರುವ ಅಮೇರಿಕಾ,ಬಿನ್ ಲಾಡೆನ್ ಅಂತಹ ಭಯೋತ್ಪಾದಕನನ್ನು ತಾನೇ ಸೃಷ್ಠಿಸಿದ ಭೂತವೆಂಬುದನ್ನು ಒಪ್ಪಿಕೊಳ್ಳಲು ಸಹ ತಯಾರಿಲ್ಲ.

ಇವೆಲ್ಲವನ್ನೂ ಅರ್ಥಮಾಡಿಕೊಳ್ಳಲಾಗದಷ್ಟು ಮುಗ್ದರೇನಲ್ಲ ಅಮೇರಿಕನ್ನರು.ಸಾಮ್ರಾಜ್ಯಶಾಹಿ ಮನೋಬಾವನೆಯ ಅವರಿಗೆ ತಮ್ಮ ದೇಶ ಮಾಡಿದ ನರಮೇಧಗಳ ಬಗ್ಗೆ ,ಅದು ಹುಟ್ಟು ಹಾಕಿದ ಬಯೋತ್ಪಾದಕತೆಯ ಬಗ್ಗೆ ನಾಚಿಕೆಯಾಗ ಬೇಕಿತ್ತೆ ಹೊರತು ಸಂಭ್ರಮಾಚರಣೆಯ ಅಗತ್ಯವಿರಲಿಲ್ಲ.
ಇನ್ನು ನಮ್ಮ ಶ್ರೀರಾಮ ಸೇನೆಯ ಮತ್ತು ಗೌರವಾನ್ವಿತ ಮಠಾಧೀಶರು ಸಂಭ್ರಮಿಸಿದ್ದರ ಹಿಂದೆ ಇರುವ ಮನಸ್ಥಿತಿಯಾದರು ಲಾಡೆನ್ ಒಬ್ಬ ಮುಸ್ಲಿಂ ಎಂಬುದೇ ಹೊರತು ಅವನೊಬ್ಬ ಜೀವ ವಿರೋಧಿ ಭಯೋತ್ಪಾಕ ಎಂದೇನು ಅಲ್ಲ.

ನಕ್ಸಲರ ನೆಲಬಾಂಬಿಗೆ ಬಲಿಯಾಗುವ ಪೋಲಿಸರ ಸಾವುಗಳಿಗೆ, ಪೋಲಿಸರ ಗುಂಡಿಗೆ ಬಲಿಯಾಗುವ ನಕ್ಸಲರ ಸಾವುಗಳಿಗೆ, ಮನುಷ್ಯರು ಸಂಭ್ರಮಿಸುತ್ತ ಹೋದರೆ ಮಾನವೀಯತೆ ಎಲ್ಲಿ ಉಳಿಯುತ್ತದೆ?

ಸಾವನ್ನು ಸಂಭ್ರಮಿಸುವ ಮನಸ್ಸುಗಳ ಹಿಂದಿರುವ ಕ್ರೌರ್ಯವನ್ನು ನೆನೆಸಿಕೊಂಡರೆ ನಾಳೆಗಳ ಬಗ್ಗೆ ಭಯವಾಗುತ್ತದೆ!

ಹುಟ್ಟಿನ ಮನೆಯಲ್ಲಿ ಅಳುವ-ಸಾವಿನ ಮನೆಯಲ್ಲಿ ನಗುವ ಮನುಷ್ಯನೊಳಗಿನ ರಾಕ್ಷಸತ್ವದ ಮುಂದೆ ಜಗತ್ತಿನೆಲ್ಲ ಆಯುಧಗಳೂ ಹರಿತವಾದವೇನಲ್ಲ ಅನಿಸುತ್ತಿದೆ. 

ಜುಲೈ 30, 2016

ಕೆಸರೆರಚಾಟದ ಮಧ್ಯೆ ಕೇಳಿಕೊಳ್ಳದ ಪ್ರಶ್ನೆಗಳು.

ಡಾ. ಅಶೋಕ್. ಕೆ. ಆರ್
30/07/2016
ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ, 7.56 ಟಿ.ಎಂ.ಸಿ ನೀರನ್ನು ಕುಡಿಯಲು ಮಾತ್ರ ಬಳಸಿಕೊಳ್ಳಬೇಕೆಂದಿದ್ದ ಕರ್ನಾಟಕದ ಆಸೆಗೆ ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪು ತಣ್ಣೀರೆರಚಿದೆ. ಮಧ್ಯಂತರ ತೀರ್ಪು ಕರ್ನಾಟಕದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಬಂದಿರುವುದಕ್ಕೆ ಅಚ್ಚರಿ ಪಡುವ ಅವಶ್ಯಕತೆಯಿದೆಯಾ? ಈ ತೀರ್ಪಿಗೆ ಕಾಂಗ್ರೆಸ್ ಕಾರಣವಾ? ಬಿಜೆಪಿ ಕಾರಣವಾ? ‘ನಿಮ್ಮ ತಪ್ಪು, ನಿಮ್ದೇ ತಪ್ಪು’ ಎಂದು ಎರಡೂ ರಾಷ್ಟ್ರೀಯ ಪಕ್ಷಗಳು ಕೆಸರೆರಚಾಡುತ್ತಿವೆ. ನಿಜವಾಗಿ ತಪ್ಪು ಯಾರದ್ದು?

ಜಲದ ವಿಷಯದಲ್ಲಿ ನಮ್ಮಲ್ಲಿರುವ ರಾಜಕೀಯ ಪಕ್ಷಗಳಷ್ಟೇ ಅಲ್ಲ ಜನರಿಗೂ ಭರ್ಜರಿ ಆಲಸ್ಯ. ಜನರ ಆಲಸ್ಯ ರಾಜಕೀಯದಲ್ಲಿ ಪ್ರತಿಫಲಿಸುತ್ತಿದೆಯೋ ರಾಜಕಾರಣಿಗಳ ಆಲಸ್ಯ ಜನರಲ್ಲಿ ಪ್ರತಿಫಲಿಸುತ್ತಿದೆಯೋ ಹೇಳುವುದು ಕಷ್ಟ. ಪರರಾಜ್ಯಗಳ ರಾಜಕಾರಣಿಗಳು ಕೇಂದ್ರದಲ್ಲಿ ‘ಪವರ್ಫುಲ್’ ಎಂದು ಉದ್ಗರಿಸುವ ನಾವು ನಮ್ಮ ಸಂಸದರ್ಯಾಕೆ ಕೇಂದ್ರದಲ್ಲಿ ‘ವೀಕು’ ಎಂಬ ಪ್ರಶ್ನೆಯನ್ನೇ ಕೇಳುವುದಿಲ್ಲ. ನಮ್ಮ ಸಂಸದರು ಕರ್ನಾಟಕದ ವಿಷಯವಾಗಿ ಅದೆಷ್ಟು ಸಲ ಪಕ್ಷಭೇದ ಮರೆತು ಸಂಸತ್ತಿನಲ್ಲಿ ದನಿಯೆತ್ತಿದ್ದಾರೆ ಎಂದು ಗಮನಿಸುವುದಿಲ್ಲ. ಕರ್ನಾಟಕದಲ್ಲೊಂದು ಸಶಕ್ತ ಪ್ರಾದೇಶಿಕ ರಾಜಕೀಯ ಪಕ್ಷವಿಲ್ಲದಿರುವುದು ಇದಕ್ಕೊಂದು ಕಾರಣ. ಗೋವಾದಲ್ಲೂ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಇರುವುದರಿಂದ ಪ್ರಾದೇಶಿಕ ಪಕ್ಷದ ಕೊರತೆಯಷ್ಟೇ ಕಾರಣವೆಂದೂ ಹೇಳಲಾಗದು. ಇರುವ ರಾಷ್ಟ್ರೀಯ ಪಕ್ಷಗಳ ನಾಯಕರಿಗೂ ಇಚ್ಛಾಶಕ್ತಿ ಕಡಿಮೆ. ನಮ್ಮಲ್ಲಿರುವ ರಾಜಕೀಯ ನೇತಾರರು / ಸರಕಾರಗಳು ಬೀದಿಯಲ್ಲಿ ನಿಂತು ಕರ್ನಾಟಕದ ಪರವಾಗಿ, ಇಲ್ಲಿನ ನದಿಗಳ ಪರವಾಗಿ ವೀರಾವೇಷದ ಮಾತುಗಳನ್ನಾಡುವ ಅವಶ್ಯಕತೆಯೇನೂ ಇಲ್ಲ. ಕಾರಣ ಕಾವೇರಿಯಿರಲಿ, ಕಳಸಾ ಬಂಡೂರಿಯಿರಲಿ ಬೀದಿಯಲ್ಲಿ ನಿಂತು ಗೆಲ್ಲುವ ಸಂಗತಿಗಳಲ್ಲ. ಈ ಸಂಗತಿಗಳನ್ನು ಗೆಲ್ಲುವುದಕ್ಕಿರುವುದು ಎರಡೇ ದಾರಿ, ಒಂದು ನಮ್ಮ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರುವುದು; ರಾಜಕೀಯ ಕಾರಣಗಳಿಗಾಗಿ ಅದನ್ನಂತೂ ನಮ್ಮ ಸಂಸದರಿಂದ ನಿರೀಕ್ಷಿಸುವುದು ಬೇಡ. ಎರಡು ನ್ಯಾಯಾಧೀಕರಣದ ಮೆಟ್ಟಿಲೇರಿದ ಪ್ರಕರಣಗಳಲ್ಲಿ ಕರ್ನಾಟಕದ ವಾದವನ್ನು ಸಮರ್ಥವಾಗಿ ಮಂಡಿಸುವಂತೆ ಮಾಡುವುದು. ನ್ಯಾಯಾಲಯಗಳಲ್ಲಿ ಕರ್ನಾಟಕದ ಹಿತಾಸಕ್ತಿಯ ವಿರುದ್ಧ ತೀರ್ಪು ಬರುವುದು ನಮ್ಮ ವಕೀಲರು ಸಮರ್ಪಕವಾಗಿ ವಾದ ಮಂಡಿಸದೇ ಇರುವುದರಿಂದ, ಸರಕಾರಗಳು ನ್ಯಾಯಾಲಯ ಕೇಳಿದ ದಾಖಲೆಗಳನ್ನು ಸರಿಯಾಗಿ ನೀಡದೇ ಇರುವುದರಿಂದ ಎಂದು ತಮ್ಮ ಎಫ್.ಬಿ ಪೋಸ್ಟಿನಲ್ಲಿ ಬರೆದಿದ್ದಾರೆ ಸಿ.ಎಸ್.ದ್ವಾರಕಾನಾಥ್. ಕರ್ನಾಟಕದ ನೆಲ ಜಲದ ವಿಷಯದಲ್ಲಿ ಪರರಾಜ್ಯದ ವಕೀಲರನ್ನೇ ಎಲ್ಲಾ ಸರಕಾರಗಳೂ ನೇಮಿಸುವುದ್ಯಾಕೆ ಎಂದವರು ಪ್ರಶ್ನಿಸುತ್ತಾರೆ. ಮಹದಾಯಿಯ ಸಂದರ್ಭದಲ್ಲೂ ನಮ್ಮ ವಾದಕ್ಕೆ ಸೋಲಾಗಿದ್ದಕ್ಕೆ ದಾಖಲೆಗಳನ್ನು ಸರಿಯಾಗಿ ಮಂಡಿಸದೇ ಇರುವುದು ಕಾರಣ, ನಮ್ಮ ಹುಳುಕುಗಳನ್ನು ಮರೆತು ನ್ಯಾಯಾಧೀಕರಣವನ್ನು ದೂರುವುದರಲ್ಲಿ ಪ್ರಯೋಜನವಿದೆಯೇ? ಕರ್ನಾಟಕ ಸರಕಾರಗಳ ನಡೆಗಳು, ಸರಕಾರ ನೇಮಿಸುವ ವಕೀಲರು, ನ್ಯಾಯಾಲಯದಲ್ಲಿ ನಮ್ಮವರು ನಡೆಸುವ ದುರ್ಬಲ ವಾದಗಳಿಗೆಲ್ಲ ದೊಡ್ಡ ಇತಿಹಾಸವೇ ಇರುವಾಗ ಕಳಸಾ ಬಂಡೂರಿ ನಾಲೆಯ ವಿಷಯದಲ್ಲಿ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ತೀರ್ಪು ಬಂದಿರುವುದರ ಬಗ್ಗೆ ಅಚ್ಚರಿ ಪಡುವ ಅವಶ್ಯಕತೆ ಖಂಡಿತ ಇಲ್ಲ.

ಇನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರು ‘ನಿಮ್ಮಿಂದಾಯ್ತು’ ‘ನಿಮ್ಮಿಂದಾಯ್ತು’ ಎಂದು ಕೆಸರೆರಚಾಟದಲ್ಲಿ ತೊಡಗಿರುವುದು ಮುಂದಿನ ಚುನಾವಣೆಗಳ ದೃಷ್ಟಿಯಿಂದಷ್ಟೇ ಹೊರತು ಮತ್ತೇನಕ್ಕೂ ಅಲ್ಲ. ‘ನೀವು ಗೋವಾದ ಕಾಂಗ್ರೆಸ್ಸಿಗರನ್ನು ಒಪ್ಪಿಸಿ, ನಾವು ಬಿಜೆಪಿಯವರನ್ನು ಒಪ್ಪಿಸುತ್ತೇವೆ’ ‘ನೀವು ಗೋವಾದ ಬಿಜೆಪಿಯವರನ್ನು ಒಪ್ಪಿಸಿ, ನಾವು ಕಾಂಗ್ರೆಸ್ಸಿಗರನ್ನು ಒಪ್ಪಿಸುತ್ತೇವೆ’ ಎಂಬ ಬೂಟಾಟಿಕೆಯ ಮಾತುಗಳೂ ಕೂಡ ಇವರ ರಾಜಕಾರಣದ ಭಾಗವಷ್ಟೇ. ಎರಡೂ ಪಕ್ಷದವರ ರಾಜಕಾರಣ ನಮಗರ್ಥವಾಗಿಬಿಟ್ಟಿದೆ, ಮುಂದಿನ ಸಲ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬ ಆವೇಶದ ಮಾತುಗಳು ಚುನಾವಣೆ ಬರುತ್ತಿದ್ದಂತೆಯೇ ನಮ್ಮೆಲ್ಲರಿಗೂ ಖಂಡಿತವಾಗಿ ಮರೆತುಹೋಗಿರುತ್ತದೆ, ಮತ್ತದೇ ಜಾತಿಯ ಮುಖ ನೋಡಿಕೊಂಡು ಹೈಕಮ್ಯಾಂಡಿನಲ್ಲಿರುವ ನಾಯಕರ ಮುಖ ನೋಡಿಕೊಂಡು ಮತ ಹಾಕುತ್ತೇವೆ, ಆಮೇಲೆ ಕೈಕೈ ಹಿಸುಕಿಕೊಳ್ಳೋಣ ಬಿಡಿ.

ಇವೆಲ್ಲಾ ರಾಜಕೀಯ ಪ್ರಶ್ನೆಗಳನ್ನು ಪಕ್ಕಕ್ಕೆ ಸರಿಸಿ ನೋಡಿದರೆ ‘ಕಳಸಾ ಬಂಡೂರಿಯ’ ಹೆಸರಿನಲ್ಲಿ ಭಾವನಾತ್ಮಕವಾಗಿ ನಮ್ಮನ್ನು ಮೂರ್ಖರನ್ನಾಗಿಸುತ್ತಿದ್ದಾರೆಯೇ ಎಂಬ ಅನುಮಾನ ಬರುತ್ತದೆ. (ಕಳಸಾ ಬಂಡೂರಿಯ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಮುನ್ನೋಟದಲ್ಲಿ ಓದಿ). ಕಳಸಾ ಬಂಡೂರಿ ಯೋಜನೆ 1978ರಲ್ಲೇ ರೂಪುಗೊಂಡಿತ್ತು, 2002ರಲ್ಲಿ ಅದಕ್ಕೆ ಚಾಲನೆ ಕೊಡಬೇಕೆಂದು ನಿರ್ಧರಿಸಲಾಯಿತು. ಈಗ 2016ರಲ್ಲಿದ್ದೇವೆ. ಅಂದರೆ ಹತ್ತಿರತ್ತಿರ ನಲವತ್ತು ವರುಷಗಳಿಂದ ಕಳಸಾ ಬಂಡೂರಿ ಯೋಜನೆ ಕಾರ್ಯಗತವಾಗದೆಯೇ ಉಳಿದಿದೆ. ಇಷ್ಟು ದೀರ್ಘ ವರುಷಗಳಿಂದ ನಿದ್ರಾವಸ್ಥೆಯಲ್ಲಿರುವ ಯೋಜನೆಯಿಂದಷ್ಟೇ ಕುಡಿಯುವ ನೀರು ಸಿಗಲು ಸಾಧ್ಯ ಎಂದ್ಯಾಕೆ ಜನರನ್ನು ನಂಬಿಸಲಾಗಿದೆ. ಸ್ಥಳೀಯ ಮಟ್ಟದ ಯೋಜನೆಗಳನ್ಯಾಕೆ ನಮ್ಮ ಸರಕಾರ ರೂಪಿಸಲಿಲ್ಲ? ಅಥವಾ ರೂಪಿಸಿ ಅವುಗಳು ವಿಫಲವಾದವೇ? ಒಂದೆಡೆ ಕರ್ನಾಟಕದೊಳಗೇ ಎರಡು ಪ್ರದೇಶಗಳ ನಡುವೆ ನೀರಿಗಾಗಿ ಮುನಿಸು ಶುರುವಾಗಿದೆ. ನೇತ್ರಾವತಿ ನದಿ ಸೇರುವ ಎತ್ತಿನಹೊಳೆಯನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ‘ಕುಡಿಯುವ ನೀರಿನ’ ಸಲುವಾಗಿ ತಿರುಗಿಸುವ ಸಾಹಸಕ್ಕೆ ಕರ್ನಾಟಕ ಸರಕಾರ ಕೈ ಹಾಕಿದೆ. ಈ ರೀತಿ ಹಳ್ಳವೊಂದನ್ನು ತಿರುಗಿಸುವುದು ಪ್ರಕೃತಿಗೆ ಮಾರಕ, ಪಶ್ಚಿಮಘಟ್ಟಕ್ಕೆ ಮಾರಕ ಎಂದು ದಕ್ಷಿಣ ಕನ್ನಡದಲ್ಲಿ ವಿರೋಧಗಳೆದ್ದವು. ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಮಳೆಗೇನು ತುಂಬಾ ಕೊರತೆಯಿಲ್ಲ, ಮಳೆನೀರಿನ ನಿರ್ವಹಣೆ ಸರಿಯಾಗಿ ಮಾಡಿದರೆ, ಕೆರೆ ಕಟ್ಟೆಗಳನ್ನು ತುಂಬಿಸುವತ್ತ ಆಸಕ್ತಿ ತೋರಿಸಿದರೆ ನದಿ ತಿರುಗಿಸುವ ದುಸ್ಸಾಹಸ ಮಾಡುವುದೇ ಬೇಕಿಲ್ಲ ಎಂಬ ವಾದಗಳಿವೆ. ಕೆರೆ ಕಟ್ಟೆಗಳನ್ನು ನುಂಗಲಷ್ಟೇ ಆಸಕ್ತಿ ತೋರಿಸುವ ನಮಗೆ ಸ್ಥಳೀಯ ಮಟ್ಟದ ಪರಿಹಾರಗಳೆಡೆಗೆ ತುಂಬಾ ಆಸಕ್ತಿಯೇನಿಲ್ಲ. ಮಂಡ್ಯ ಮದ್ದೂರಿನ ಕೆರೆಗಳೆಲ್ಲ ನೀರಿಲ್ಲದೇ ಭಣಗುಡುತ್ತಿರುವಾಗ, ನೀರಿಲ್ಲದ ಕೆರೆಗಳು ಚಿಕ್ಕದಾಗುತ್ತಿರುವಾಗ ಅದು ಹೇಗೆ ಚನ್ನಪಟ್ಟಣದ ಕೆರೆಗಳಲ್ಲಿ ನೀರಿರುತ್ತದೆ ಎಂದು ನಾವು ಯೋಚಿಸುವುದಿಲ್ಲ. ಚನ್ನಪಟ್ಟಣದ ಶಾಸಕ ಯೋಗೇಶ್ವರ್ ಅದೇನು ಮಾಡಿದರೋ ಬಿಟ್ಟರೋ ಅವರಿಗೆ ನೀರಿನ ಮಹತ್ವದ ಅರಿವಾಗಿದೆ, ಕೆರೆಗಳು ತುಂಬುವುದರಿಂದ ಅಂತರ್ಜಲದ ವೃದ್ಧಿಯಾಗುತ್ತದೆ ಎಂದರಿವಾಗಿದೆ. ಬೆಂಗಳೂರಿನ ಉದಾಹರಣೆಯನ್ನೇ ನೋಡಿ. ಇಲ್ಲಿ ನೀರು ಬರುವುದಕ್ಕಿಂತ ವೇಗವಾಗಿ ಜನರು ಬಂದು ಸೇರುತ್ತಿದ್ದೇವೆ. ನಮಗೆಲ್ಲರಿಗೂ ನೀರು ಒದಗಿಸಲು ಕಾವೇರಿಯೇ ಬೇಕಾಗಿದೆ. ಇಲ್ಲಿನ ಕೆರೆ ಕಟ್ಟೆಗಳು ಜೀವಂತವಾಗಿದ್ದರೆ ಅಂತರ್ಜಲದಿಂದಾದರೂ ನಗರದ ಕುಡಿಯುವ ನೀರಿನ ಅಗತ್ಯತೆಯನ್ನು ಪೂರೈಸಬಹುದಿತ್ತು. ಆದರಿಲ್ಲಿ ಆಗುವುದೇನು? ಮೊದಲು ‘ಲೇಕ್ ವ್ಯೀವ್ ಅಪಾರ್ಟ್ ಮೆಂಟ್’ ತಲೆಯೆತ್ತುತ್ತೆ, ಕೆರೆಗೆ ತಲುಪಬೇಕಾದ ನೀರಿನ ಹಾದಿಗಳನ್ನೆಲ್ಲ ಮುಚ್ಚಲಾಗುತ್ತೆ. ನೀರು ಖಾಲಿಯಾದ ಕೆರೆಗೆ ಮಣ್ಣು ಸುರಿದು ಮತ್ತೊಂದು ಕಟ್ಟಡ ನಿರ್ಮಾಣವಾಗುತ್ತೆ. ಹೀಗೇ ಆದರೆ ಈಗ ಕಾವೇರಿ ನದಿಯಿಂದ ಪೈಪಿನಲ್ಲಿ ಬೆಂಗಳೂರಿಗೆ ನೀರು ಸಾಗಿಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ಇಡೀ ಕಾವೇರಿ ನದಿಯನ್ನೇ ಬೆಂಗಳೂರಿನ ಕಡೆಗೆ ತಿರುಗಿಸಿದರೂ ಬೆಂಗಳೂರು ವಾಸಿಗಳ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಲಾಗುವುದಿಲ್ಲ. 

ಎತ್ತಿನಹೊಳೆ ಯೋಜನೆಯ ವಿರೋಧಕ್ಕೆ ಸಹಮತ ವ್ಯಕ್ತಪಡಿಸುತ್ತಾ ನದಿಗೆ ಸೇರುವ ಹೊಳೆಯನ್ನು ತಿರುಗಿಸುವ ಕಳಸಾ ಬಂಡೂರಿ ಯೋಜನೆಗೆ ಬೆಂಬಲ ವ್ಯಕ್ತಪಡಿಸುವುದು ಸರಿಯಾಗುವುದಾದರೂ ಹೇಗೆ ಎನ್ನುವ ಪ್ರಶ್ನೆ ಅನೇಕ ಸಲ ನನ್ನನ್ನು ಕಾಡಿದೆ. ಈ ಯೋಜನೆಯಿಂದ ‘ಕುಡಿಯುವ ನೀರು’ ತಲುಪುವ ಜಿಲ್ಲೆಗಳಲ್ಲಿ ನಾನು ಓಡಾಡಿಲ್ಲ. ಎತ್ತಿನಹೊಳೆ ಮತ್ತು ಕಳಸಾ ಬಂಡೂರಿ ಯೋಜನೆಗಳ ರೂಪುರೇಷೆಗಳು ಬೇರೆಯೇ ಇರಬಹುದು, ಅದು ನನ್ನರಿವಿಗೆ ಬಾರದೇ ಹೋಗಿರಬಹುದು. ಆದರೆ ನನ್ನ ಪ್ರಶ್ನೆಯೆಂದರೆ ಕಳೆದ ನಲವತ್ತು ವರುಷಗಳಿಂದ ಈ ಯೋಜನೆಗೆ ಬದಲಿಯಾಗಿ ಮತ್ತೊಂದು ಕುಡಿಯುವ ನೀರಿನ ಯೋಜನೆಯನ್ನು ಯಾಕೆ ನಮ್ಮ ಘನ ಸರಕಾರಗಳು ರೂಪಿಸಿಲ್ಲ? ಕುಡಿಯುವ ನೀರು ತಲುಪುತ್ತದೆ ಎನ್ನಲಾದ ಹುಬ್ಬಳ್ಳಿ, ಬೆಳಗಾವಿ ಮತ್ತು ಗದಗ ಜಿಲ್ಲೆಗಳಲ್ಲಿ ಕಳೆದ ನಲವತ್ತು ವರುಷಗಳಲ್ಲಿ ಎಷ್ಟು ಕೆರೆಗಳು ನಿರ್ಮಾಣಗೊಂಡಿವೆ? ಇದು ಮಳೆಯೇ ಆಗದ ಮರುಭೂಮಿ ಪ್ರದೇಶವಾ? ಬೀಳುತ್ತಿರುವ ಮಳೆಯನ್ನು ಹಿಡಿದಿಡಲಾಗದೇ ಈ ತಾಪತ್ರಯವಾ? ಎತ್ತಿನಹೊಳೆಯನ್ನು ತಿರುಗಿಸಿದರೂ ಸರಕಾರಗಳು ಹೇಳುವಷ್ಟು ನೀರು ಸಿಗುವುದಿಲ್ಲ ಎನ್ನಲಾಗುತ್ತದೆ, ಮುಂದೆ ನ್ಯಾಯಾಧೀಕರಣದ ಅಂತಿಮ ತೀರ್ಪು ನಮ್ಮ ಪರವಾಗಿ ಬಂದು ಕಳಸಾ ಬಂಡೂರಿ ಯೋಜನೆ ಕಾರ್ಯರೂಪಕ್ಕೆ ಬಂದಾಗ ಸರಕಾರ ಹೇಳುವಷ್ಟು ನೀರು ಸಿಗುತ್ತದಾ? ಹಳ್ಳದ ನೀರನ್ನು ಇತ್ಲಾಕಡೆ ತಿರುಗಿಸಿದ ನಂತರ ಅತ್ಲಾಕಡೆ ಮಳೆಯೇ ಆಗದಿದ್ದರೆ ಗತಿಯೇನು? ಈ ಪ್ರಶ್ನೆಗಳನ್ಯಾಕೆ ನಾವು ಕೇಳಿಕೊಳ್ಳುತ್ತಿಲ್ಲ? ‘ಕುಡಿಯುವ ನೀರೆಂಬುದು’ ಭಾವನಾತ್ಮಕ ವಿಚಾರ, ಮಾನವೀಯತೆಯ ವಿಷಯ. ‘ಮನುಷ್ಯರಿಗೇ ಕುಡಿಯಲು ನೀರಿಲ್ಲದಾಗ ಯಾವ ಪ್ರಕೃತಿಯ ಬಗ್ಗೆ ಮಾತಾಡ್ತಿ ಎದ್ದು ನಡಿಯಯ್ಯಾ’ ಎಂದು ಬಯ್ಯಸಿಕೊಳ್ಳುವ ಸಾಧ್ಯತೆಗಳು ಇಂತಹ ಪ್ರಶ್ನೆಗಳನ್ನು ಕೇಳಿದಾಗ ಹೆಚ್ಚಿರುತ್ತವೆ. ಬೆಂಗಳೂರಿನಲ್ಲಿ ಕುಳಿತು ದೂರದ ಕಾವೇರಿ ನದಿಯಿಂದ ಬರುವ ನೀರನ್ನು ಕುಡಿದು ಇಂತಹ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸುಲಭವಲ್ಲವೇ ಎಂಬ ಪಾಪಪ್ರಜ್ಞೆಯೂ ನನ್ನನ್ನು ಕಾಡುತ್ತದೆ. ಭಾವನಾತ್ಮಕ ವಿಚಾರದಲ್ಲಿ ಸ್ಥಳೀಯ ಪರಿಹಾರಗಳ ಬಗ್ಗೆ ಜನರಿಗೆ ಪ್ರಶ್ನೆಗಳು ಮೂಡದಿದ್ದರೂ ಬೇಡ, ಯೋಜನೆ ರೂಪಿಸುವ ಅಧಿಕಾರಿಗಳಿಗೆ, ಸರಕಾರದವರಿಗಾದರೂ ಈ ಪ್ರಶ್ನೆಗಳು ಮೂಡಬೇಕಲ್ಲವೇ? ಕಳಸಾ ಬಂಡೂರಿ ಯೋಜನೆಯ ತೀರ್ಪು ನಮ್ಮ ಪರವಾಗಿ ಬರದೇ ಹೋದ್ರೆ ಅಷ್ಟೇ ಹೋಯ್ತು, ಅದರ ಹತ್ತರಷ್ಟು ನೀರನ್ನು ಸ್ಥಳೀಯವಾಗಿ ಉಳಿಸಿಕೊಳ್ಳುವ ನೂರು ಯೋಜನೆಗಳು ನಮ್ಮಲ್ಲಿವೆ, ಬನ್ನಿ ಮೊದ್ಲು ಕೆರೆ ಕಟ್ಟೋಣ ಎಂದು ಒಬ್ಬನಾದರೂ ರಾಜಕಾರಣಿ ಕನಿಷ್ಟ ಪಕ್ಷ 2002ರಲ್ಲಿ ಹೇಳಿದ್ದರೂ ಕಳಸಾ ಬಂಡೂರಿಯ ವಿಚಾರವಾಗಿ ನಮ್ಮ ಜನರು ತಿಂಗಳುಗಟ್ಟಲೇ ಪ್ರತಿಭಟನೆ ನಡೆಸಬೇಕಿರಲಿಲ್ಲ ಎಂದನ್ನಿಸುವುದು ತಪ್ಪೇ?

ಬಾಜಪದ ಓಟಕ್ಕೆ ಕಡಿವಾಣ ಹಾಕಲಿರುವ ಕಾಂಗ್ರೆಸ್ಸೇತರ ಪಕ್ಷಗಳು

ಕು.ಸ.ಮಧುಸೂದನರಂಗೇನಹಳ್ಳಿ
30/07/2016
ರಾಜಕಾರಣದಲ್ಲಿ ಸತತ ಗೆಲುವೆಂಬುದಾಗಲಿ, ಸೋಲೆಂಬುದಾಗಲಿ ಇರುವುದಿಲ್ಲ. ಅದರಲ್ಲೂ ಇಂಡಿಯಾದಂತಹ ಬಹುಸಂಸ್ಕೃತಿಯ, ಬಹುಬಾಷೆಯ, ವಿಶಾಲ ರಾಷ್ಟ್ರದಲ್ಲಿ ಕಾಲದಿಂದ ಕಾಲಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಜನರ ರಾಜಕೀಯ ಒಲವುಗಳು ಬದಲಾಗುತ್ತಲೇ ಇರುತ್ತವೆ. ಇಲ್ಲಿ ಒಬ್ಬ ರಾಜಕಾರಣಿಯನ್ನು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಲು ಜನ ರಾಜಕಾರಣದ ಒಂದೇ ಮಾನದಂಡವನ್ನು ಅನುಸರಿಸುವುದಿಲ್ಲ. ಬದಲಿಗೆ ಜನಪ್ರತಿನಿದಿಯೊಬ್ಬನ ಆಯ್ಕೆಯ ಮೆಲೆ ಆತನ ಜಾತಿ, ಧರ್ಮ, ಆರ್ಥಿಕ ಹಿನ್ನೆಲೆಗಳೂ ಪ್ರಬಾವ ಬೀರುವುದರಿಂದ ಎಲ್ಲವೂ ಪೂರ್ವನಿರ್ದಾರಿತವಾಗಿ ನಡೆಯುವುದು ಕಷ್ಟ. ಹಾಗಾಗಿಯೇ ಗೆಲ್ಲುವ ಆತ್ಮವಿಶ್ವಾಸದಿಂದ ಬೀಗುವ ಪಕ್ಷಗಳು ಅವಮಾನಕಾರಿಯಗಿ ಸೋಲನ್ನಪ್ಪುವುದು, ಸೋಲುತ್ತವೆಯೆಂದು ನಾವು ತೀರ್ಮಾನಿಸಿದ ಪಕ್ಷಗಳು ಬಾರಿ ಗೆಲುವು ಸಾದಿಸುವುದು ಇಂಡಿಯಾದ ಪ್ರಜಾಸತ್ತೆಯಲ್ಲಿ ಮಾಮೂಲಾಗಿದೆ. ಅದರ ಎಲ್ಲ ದೌರ್ಬಲ್ಯಗಳ ಹೊರತಾಗಿಯೂ ಇಂಡಿಯಾದ ಪ್ರಜಾಪ್ರಭುತ್ವದ ಸೌಂದರ್ಯ ಅಡಗಿರುವುದೆ ಇಂತಹ ಆಕಸ್ಮಿಕಗಳಲ್ಲಿ. 2015ರ ಮೊದಲಿಗೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಗಳಿಸಿದ ಅಭೂತಪೂರ್ವ ಗೆಲುವು ಅಂತಹ ಅಚ್ಚರಿಗಳಲ್ಲಿ ಒಂದು, ಇರಲಿ.

2014ರ ಲೋಕಸಭಾ ಚುನಾವಣೆಯ ಹೊತ್ತಿಗೆ ಇಡೀ ದೇಶ ನರೇಂದ್ರ ಮೋದಿಯವರ ಜಪ ಮಾಡುವಷ್ಟರ ಮಟ್ಟಿಗೆ ಅವರ ಜನಪ್ರಿಯತೆ ಉತ್ತುಂಗದಲ್ಲಿತ್ತು. ಬಾಜಪೇತರ ಪಕ್ಷಗಳ ನಾಯಕರುಗಳು ಸಹ ಮೋದಿ ಅಲೆಯ ಪ್ರಬಾವವನ್ನು ತಳ್ಳಿ ಹಾಕಲಾಗದಷ್ಟು ಬಲವಾಗಿ ಮೋದಿ ಪರ ಗಾಳಿ ಬೀಸ ತೊಡಗಿತ್ತು. ಆದರೆ ಚುನಾವಣೆಯ ಪಲಿತಾಂಶ ಬಂದಾಗ ಚಿತ್ರಣವೇ ಬೇರೆಯಾಗಿತ್ತು. ಕಾರಣ, ಸುಮಾರು 200 ರಿಂದ 240 ಸ್ಥಾನಗಳನ್ನು ಗೆಲ್ಲಬುದೆಂದು ಅಂದಾಜು ಮಾಡಲಾಗಿದ್ದ ಬಾಜಪ ಸ್ಪಷ್ಟ ಬಹುಮತ ಪಡೆದು ಒಂದು ರೀತಿಯ ಅಚ್ಚರಿಗೆ ಕಾರಣವಾಗಿತ್ತು. ಇನ್ನೊಂದೆಡೆ ದೇಶದಾದ್ಯಂತ ಬಾಜಪದ ಪರ ಒಲವಿದೆಯೆಂದು ಊಹಿಸಿದ್ದವರಿಗೆ ಅಚ್ಚರಿಯಾಗುವಂತೆ ಬಾಜಪ ದೇಶದ ಕೆಲವು ಪ್ರದೇಶಗಳಲ್ಲಿ ಶೂನ್ಯ ಸಾಧನೆ ಮಾಡಿ ಇನ್ನೊಂದು ತೆರನಾದ ಅಚ್ಚರಿಗೆ ಕಾರಣವಾಯಿತು. ದೇಶದ ಉತ್ತರ ಮತ್ತು ಪಶ್ಚಿಮದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರ ಮೂಲಕ ಬಹುಮತ ಪಡೆದಿದ್ದ ಬಾಜಪ ದೇಶದ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ-ಕರ್ನಾಟಕ ಹೊರತು ಪಡಿಸಿ ಹೇಳಿಕೊಳ್ಳುವಂತಹ ಸಾಧನೆಯನ್ನೇನು ಮಾಡಲಿಲ್ಲ. ಬಾಜಪದ ಬೆಂಬಲಿಗರು ಏನೇ ಹೇಳಿಕೊಂಡರೂ ಬಾಜಪ ಪಕ್ಷ ಹಿಂದಿ ಮಾತನಾಡುವ ಹೃದಯ ಭಾಗದಲ್ಲಿ ಮಾತ್ರವೇ ಮನ್ನಣೆ ಪಡೆದ ಪಕ್ಷವೆಂಬುದನ್ನು ಸದರಿ ಚುನಾವಣೆ ಸಾಬೀತು ಮಾಡಿತು.

ಇದಕ್ಕೆ ಪೂರಕವೆಂಬಂತೆ ದಕ್ಷಿಣದ ಕೇರಳ, ತಮಿಳುನಾಡು, ಪುದುಚೇರಿ, ತೆಲಂಗಾಣ, ಆಂದ್ರ ಪ್ರದೇಶಗಳಲ್ಲಿ ಬಾಜಪದ ಸಾಧನೆಯೇನು ಹೇಳಿ ಕೊಳ್ಳುವಂತಿರಲಿಲ್ಲ. ಅದೇ ರೀತಿ ಪೂರ್ವದ ಪಶ್ಚಿಮ ಬಂಗಾಳ, ಒಡಿಸ್ಸಾ, ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮುಂತಾದೆಡೆಗಳಲ್ಲಿ ಬಾಜಪ ಯಾವ ಪ್ರಬಾವವನ್ನೂ ಬೀರಲಾಗಿರಲಿಲ್ಲ. ಇದರಿಂದ ಅರ್ಥವಾಗುವುದೇನೆಂದರೆ ಲೋಕಸಭೆಯಲ್ಲಿ ಬಹುಮತ ಪಡೆದ ಬಾಜಪ ಒಂದು ರಾಷ್ಟ್ರೀಯ ಪಕ್ಷವಾಗಿ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ತನ್ನ ಅಸ್ಥಿತ್ವವನ್ನು ತೋರಿಸುವಲ್ಲಿಯಂತು ವಿಫಲವಾಯಿತು.

ಬಾಜಪದ ಈ ಭಾಗಶ: ಯಶಸ್ಸಿಗೆ ಕಾರಣವೇನೇ ಇದ್ದರೂ ಅದು 2019ರ ಚುನಾವಣೆಯ ವೇಳೆಗೆ ರಾಷ್ಟ್ರದಾದ್ಯಂತ ವ್ಯಾಪಿಸಿ ಎಲ್ಲ ರಾಜ್ಯಗಳಲ್ಲಿಯೂ ಗೆಲುವು ಸಾಧಿಸುತ್ತದೆಯೆಂಬ ಅಭಿಪ್ರಾಯವನ್ನು ಅದರ ರಾಷ್ಟ್ರಾದ್ಯಕ್ಚರಾದಿಯಾಗಿ ಬಹುತೇಕ ನಾಯಕರುಗಳು ವ್ಯಕ್ತ ಪಡಿಸಿದರೂ ಅದು ಅಷ್ಟು ಸುಲಭದ ಕೆಲಸವೇನು ಅಲ್ಲ. ಬಾಜಪದ ಯಶಸ್ಸಿನಲ್ಲಿಯೇ ಅದರ ವಿಫಲತೆಯ ಕಾರಣಗಳೂ ಇವೆಯೆಂಬುದನ್ನು ನಾವು ಮರೆಯಬಾರದು. ಬಾಜಪದ ಗೆಲುವಿನ ಓಟ ಶಾಶ್ವತವೂ ಅಲ್ಲ, ನಿರಂತರವೂ ಅಲ್ಲ ಎಂಬುದನ್ನು ಕಳೆದ ಎರಡು ವರ್ಷಗಳಲ್ಲಿ ನಡೆದ ರಾಜ್ಯಗಳ ವಿದಾನಸಭೆಯ ಚುನಾವಣೆಗಳು ತೋರಿಸಿಕೊಟ್ಟಿವೆ, ಬಾಜಪ ಮಾತೆತ್ತಿದರೆ ಕಾಂಗ್ರೆಸ್ ಮುಕ್ತ ಭಾರತದ ಅಹಮ್ಮಿನ ಮಾತುಗಳನ್ನಾಡುತ್ತಲೇ ಕಾಂಗ್ರೆಸ್ಸನ್ನು ಜೀವಂತವಾಗಿಡುತ್ತಿದೆ. ಯಾಕೆಂದರೆ ಅಧಿಕಾರದಲ್ಲಿರುವ ಪಕ್ಷವೊಂದು ಇನ್ನೊಂದು ಪಕ್ಷವನ್ನು ಮುಗಿಸಿ ಬಿಡುವ ಮಾತಾಡತೊಡಗಿದೊಡನೆ ಮತದಾರರ ಮನಸಿನಲ್ಲಿ ಅನುಮಾನವೊಂದು ಹೆಡೆಯೆತ್ತುದೆ. ಸರ್ವಾಧಿಕಾರಿ ಧೋರಣೆಯನ್ನು ಸಹಿಸಿಕೊಳ್ಳದ ಭಾರತೀಯ ಮನಸ್ಥಿತಿ ಇಂತಹ ಹೇಳಿಕೆಗಳನ್ನು ನೀಡುವ ಪಕ್ಷವನ್ನು ದೀರ್ಘಕಾಲದಲ್ಲಿ ತಿರಸ್ಕರಿಸಲು ಪ್ರಯತ್ನಿಸುತ್ತದೆ. ಕಾಂಗ್ರೆಸ್ ಮುಕ್ತ ಭಾರತದ ಮಾತಾಡುವ ಬಾಜಪದ ಬಗ್ಗೆ ಪ್ರಾದೇಶಿಕ ಪಕ್ಷಗಳಿಗೂ ಸಹಜವಾದ ಭಯ ಪ್ರಾರಂಭವಾಗಿ ಅವು ಇನ್ನಷ್ಟು ಗಟ್ಟಿಯಾಗಿ ಬೆಳೆಯಲು ತಯಾರಾಗತೊಡಗುತ್ತವೆ. ಯಾಕೆಂದರೆ ಇವತ್ತು ಒಂದು ರಾಷ್ಟ್ರೀಯ ಪಕ್ಷವನ್ನೇ ಇಲ್ಲವಾಗಿಸಲು ಪ್ರಯತ್ನಿಸುವ ಪಕ್ಷವೊಂದು ಪ್ರಾದೇಶಿಕ ಪಕ್ಷಗಳನ್ನು ಉಳಿಯಲು ಬಿಡುವುದಿಲ್ಲ ಎಂಬ ಸತ್ಯ ಅವುಗಳಿಗೂ ಮನವರಿಕೆಯಾಗುತ್ತ ಹೋಗುತ್ತದೆ. ಇಂತಹ ಅಹಮ್ಮಿನ ಮಾತುಗಳ ಪ್ರಬಾವ ಈಗಾಗಲೇ ಆಗತೊಡಗಿರುವುದನ್ನು ಕೆಲವು ರಾಜ್ಯಗಳಲ್ಲಿ ನಾವು ನೋಡಿಯಾಗಿದೆ. ಸ್ವಲ್ಪ ಅವುಗಳತ್ತ ಗಮನ ಹರಿಸೋಣ:

2014ರ ಲೋಕಸಭಾ ಚುನಾವಣೆಗಳು ಮುಗಿದ ಕೆಲವೇ ತಿಂಗಳುಗಳಲ್ಲಿ ದೆಹಲಿ ವಿದಾನಸಭೆಗೆ ನಡೆದ ಚುನಾವಣೆಗಳು ಮೊಟ್ಟ ಮೊದಲಬಾರಿಗೆ ಮೋದಿಯ ಅಲೆಗೆ, ಬಾಜಪದ ನಾಗಾಲೋಟಕ್ಕೆ ಕಡಿವಾಣ ಹಾಕಿದವು. ಅರವಿಂದ್ ಕೇಜ್ರೀವಾಲಾರ ಆಮ್ ಆದ್ಮಿ ಪಕ್ಷ ಒಟ್ಟು 70ಸ್ಥಾನಗಳ ಪೈಕಿ 67ನ್ನು ಗೆಲ್ಲುವ ಮೂಲಕ ಮೋದಿ ಅಲೆಯ ಮಿಥ್ಯೆಯನ್ನು ಜಗಜ್ಜಾಹೀರು ಮಾಡಿತು. ಕೇವಲ 3 ಸ್ಥಾನಗಳನ್ನು ಗೆಲ್ಲುವ ಮೂಲಕ ಬಾಜಪ ದೆಹಲಿಯಲ್ಲಿ ಸೋಲು ಕಾಣುವುದರ ಮೂಲಕ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕಾಗಿತ್ತು.

ಆದರೆ ಹಾಗಾಗಲಿಲ್ಲ, ನಂತರ ನಡೆದ ಬಿಹಾರ ವಿದಾನಸಭಾ ಚುನಾವಣೆಯಲ್ಲಿಯೂ ಬಾಜಪ ಮೈತ್ರಿಕೂಟ, ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ಕಾಂಗ್ರೆಸ್ಸಿನ ಜೊತೆ ಸೇರಿ ರಚಿಸಿಕೊಂಡ ಮಹಾಘಟಬಂದನ್ ವಿರುದ್ದ ಸೋಲನ್ನಪ್ಪಬೇಕಾಯಿತು. ಖುದ್ದು ಮೋದಿಯವರೇ ಅಖಾಡಕ್ಕಿಳಿದು ಪ್ರಚಾರ ಮಾಡಿದರೂ ಅಲ್ಲಿ ತೀವ್ರವಾದ ಮುಖಭಂಗ ಅನುಭವಿಸಿತು. ಅಲ್ಲಿಗೆ ಮೋದಿಯ ಅಲೆಯೆಂಬುದು ಬಾಜಪವು ಮಾಧ್ಯಮಗಳನ್ನು ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸೃಷ್ಠಿಸಿದ ಹುಸಿ ಅಲೆಯೆಂಬುದು ಕಣ್ಣಿಗೆ ರಾಚ ತೊಡಗಿತ್ತು. ಇದಾದ ನಂತರ ಮೋದಿಯವರ ತವರು ರಾಜ್ಯವಾದ ಗುಜರಾತಿನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳಲ್ಲಿಯೂ ಬಾಜಪ ಸೋಲು ಕಂಡಿತು.

ಇನ್ನು ಮೊನ್ನೆಮೊನ್ನೆ ನಡೆದ ಐದು ರಾಜ್ಯಗಳ ವಿದಾನಸಭೆಯ ಚುನಾವಣೆಯಲ್ಲಿಯೂ ವೈಯುಕ್ತಿಕವಾಗಿ ಬಾಜಪದ ಸಾಧನೆ ಮಹತ್ತರವಾದುದೇನಲ್ಲ. ಐದು ರಾಜ್ಯಗಳ ಪೈಕಿ ಅಸ್ಸಾಮಿನಲ್ಲಿ ಅದು ಅಧಿಕಾರಕ್ಕೆ ಬಂದರೂ ಅದೇನು ಅದರ ಸ್ವಂತ ಬಲದಿಂದಲ್ಲ. ಬದಲಿಗೆ ಅಸ್ಸಾಂ ಗಣಪರಿಷತ್ ಮತ್ತು ಬೋಡೋ ಪೀಪಲ್ಸ್ ಪಕ್ಷಗಳ ಮೈತ್ರಿಯಿಂದಾಗಿ ಅದು ಅಧಿಕಾರ ಪಡೆಯುವಲ್ಲಿ ಸಫಲತೆ ಸಾದಿಸಿತು. ಅಲ್ಲಿ ಅದು ಕಾಂಗ್ರೆಸ್ಸಿಗಿಂತ ಕಡಿಮೆ ಮತಗಳನ್ನು ಪಡೆದಿತ್ತು. ಅಕಸ್ಮಾತ್ ಕಾಂಗ್ರೆಸ್ ಏ.ಐ.ಯು.ಡಿ.ಎಫ್. ಜೊತೆ ಮೈತ್ರಿ ಮಾಡಿಕೊಂಡಿದ್ದರೆ ಬಾಜಪ ಇವತ್ತು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಿತ್ತು. ಇನ್ನು ಪಶ್ಚಿಮ ಬಂಗಾಳ, ಕೇರಳ, ಪುದುಚೇರಿ, ತಮಿಳುನಾಡುಗಳಲ್ಲಿ ಗಣನೀಯ ಸಾಧನೆಯನ್ನೇನು ಬಾಜಪ ಮಾಡಲಗಲಿಲ್ಲ. ಹಾಗೆ ನೋಡಿದರೆ ಐದೂ ರಾಜ್ಯಗಳಿಂದ ಅದು ಪಡೆದ ಒಟ್ಟು ಸ್ಥಾನಗಳು ಕೇವಲ 66 ಮಾತ್ರ, ಆದರೆ ಕಾಂಗ್ರೆಸ್ 145 ಸ್ಥಾನಗಳನ್ನು ಪಡೆದು ಎಲ್ಲ ರಾಜ್ಯಗಳಲ್ಲಿಯೂ ತನ್ನ ಅಸ್ಥಿತ್ವವನ್ನು ತೋರಿಸಿಕೊಟ್ಟಿದೆ.

ಇದರಿಂದ ಅರ್ಥವಾಗುವುದೇನೆಂದರೆ ಬಾಜಪವನ್ನು ಎದುರಿಸುವಲ್ಲಿ ಕಾಂಗ್ರೆಸ್ ವಿಫಲವಾದರೂ ಪ್ರಾದೇಶಿಕ ಪಕ್ಷಗಳು ಮಾತ್ರ ಗಟ್ಟಿಯಾಗಿ ನೆಲೆ ನಿಂತು ಬಾಜಪವನ್ನು ಹಿಮ್ಮೆಟ್ಟಿಸುತ್ತಿವೆ. ಕಾಂಗ್ರೆಸ್ ಬಾಜಪದ ಮತಾಂಧ ರಾಜಕಾರಣದ ಮತ್ತು ಸಾಂಸ್ಕೃತಿಕ ರಾಜಕಾರಣದ ತಂತ್ರಗಾರಿಕೆಗೆ ಉತ್ತರ ನೀಡುವಲ್ಲಿ ಸೋತ ಕಡೆ ಪ್ರಾದೇಶಿಕ ಪಕ್ಷಗಳು ಖಡಕ್ಕಾಗಿ ಉತ್ತರ ನೀಡುತ್ತಿವೆ.. ಸ್ಥಳೀಯವಾಗಿ ಬಿಹಾರದ ನಿತೀಶ್ ಕುಮಾರ್ ರಾಷ್ಟ್ರೀಯ ನಾಯಕರಾಗಿ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅದೇ ರೀತಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯವರು ಸಹ ಹಿಂದೆ ರೈಲ್ವೇ ಮಂತ್ರಿಯಾಗಿ ರಾಷ್ಟ್ರೀಯ ಐಡೆಂಟಿಟಿಯನ್ನು ಪಡೆದವರಾಗಿದ್ದಾರೆ. ಹಾಗೆಯೇ ತಮಿಳುನಾಡಿನ ಕುಮಾರಿ ಜಯಲಲಿತಾರವರು ಸಹ ರಾಷ್ಟ್ರದ ರಾಜಕಾರಣದಲ್ಲಿ ಚಿರಪರಿಚಿತರೇ ಆಗಿದ್ದಾರೆ. ಇನ್ನು ದೆಹಲಿಯ ಅರವಿಂದ್ ಕೇಜ್ರೀವಾಲ್ ಸಹ ರಾಷ್ಟ್ರ ಮಟ್ಟದ ನಾಯಕರಾಗಿ ಗುರುತಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಕಾಂಗ್ರೆಸ್ಸನ್ನು ಹೊರತು ಪಡಿಸಿಯೂ ಪ್ರಾದೇಶಿಕ ಪಕ್ಷಗಳು ಬಾಜಪವನ್ನು ಎದುರಿಸುವ ಬಹುದೊಡ್ಡ ಶಕ್ತಿಯನ್ನು ಹೊಂದಿವೆ. ಇನ್ನುಳಿದ ರಾಜ್ಯಗಳಲ್ಲಿಯೂ ಪ್ರಾದೇಶಿಕ ನಾಯಕರುಗಳು ಇದ್ದು ಮುಂದಿನ ದಿನಗಳಲ್ಲಿ ಅವರ ರಾಜ್ಯಗಳ್ಲಿ ನಡೆಯುವ ವಿದಾನಸಭೆಯ ಚುನಾವಣೆಗಳು ಅವರ ಬಲಪ್ರದರ್ಶನಕ್ಕೆ ಸಾಕ್ಷಿಯಾಗಲಿವೆ.

ಈ ಸಾಲಿನಲ್ಲಿ 2017ಕ್ಕೆ ಉತ್ತರಪ್ರದೇಶ, ಉತ್ತರಾಕಾಂಡ್, ಪಂಜಾಬ್, ಗೋವಾ, ಮಣಿಪುರಗಳಲ್ಲಿ ಚುನಾವಣೆಗಳು ನಡೆಯ ಬೇಕಾಗಿದ್ದು ಬಾಜಪದ ಶಕ್ತಿಯನ್ನು ಅವು ಮತ್ತೊಮ್ಮೆ ಒರೆಹಚ್ಚಲಿವೆ. ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶದ ವಿದಾನಸಭಾ ಚುನಾವಣೆಗಳು ತೀವ್ರ ಕುತೂಹಲ ಮೂಡಿಸಿವೆ. ಕಾರಣ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಜಪ ಬಾರಿ ಜಯಗಳಿಸಿದ್ದು, ಅಲ್ಲೀಗ ಸಮಾಜವಾದಿ ಪಕ್ಷ ಅಧಿಕಾರದಲ್ಲಿರುವುದು. ಜೊತೆಗೆ ಮುಲಾಯಂಸಿಂಗ್ ಯಾದವ್ ಮತ್ತು ಮಾಯಾವತಿಯವರಂತಹ ಘಟಾನುಘಟಿ ನಾಯಕರುಗಳು ಎರಡು ಪ್ರಾದೇಶಿಕ ಪಕ್ಷಗಳನ್ನು ಮುನ್ನಡೆಸುತ್ತಿರುವುದಾಗಿದೆ. ಬಹುಜನಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಬಾಜಪವನ್ನು ಹೇಗೆ ಎದುರಿಸಿ ನಿಲ್ಲುತ್ತವೆಯೆಂಬುದೇ ಸದ್ಯಕ್ಕಿರುವ ಪ್ರಶ್ನೆ. ಬಾಜಪದ ಮತಾಂಧ ರಾಜಕಾರಣದ ವಿರುದ್ದ ಈ ಎರಡೂ ಪಕ್ಷಗಳ ಜಾತಿ ಸಮೀಕರಣದ ರಾಜಕೀಯ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ನೋಡಬೇಕಿದೆ.

ಇನ್ನು ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷ ಆಳವಾಗಿ ಬೇರು ಬಿಡುತ್ತಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿತ್ತು. ಇದೀಗ ಅಲ್ಲಿನ ಅಕಾಲಿದಳ ಮತ್ತು ಬಾಜಪ ಮೈತ್ರಿಕೂಟಕ್ಕೆ ಗೆಲುವು ಸುಲಭ ಸಾದ್ಯವೇನಲ್ಲ. ಇದುವರೆಗು ಕಾಂಗ್ರೆಸ್ ಮತ್ತು ಅಕಾಲಿದಳ ಮೈತ್ರಿಕೂಟದ ನಡುವೆ ನಡೆಯುತ್ತಿದ್ದ ನೇರ ಹಣಾಹಣಿಯ ಬದಲು ತ್ರಿಕೋನ ಸ್ಪರ್ದೆ ಏರ್ಪಡಲಿದ್ದು ಅಕಾಲಿದಳದ ಮೈತ್ರಿಕೂಟ ಗೆಲ್ಲಲು ಕಷ್ಟಪಡಬೇಕಾಗಿದೆ.

ಇನ್ನು ಉತ್ತರಕಾಂಡದಲ್ಲಿ ಸದ್ಯ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿದ್ದು ಇತ್ತೀಚೆಗೆ ಬಾಜಪ ಅಲ್ಲಿ ಕಾಂಗ್ರೆಸ್ ಶಾಸಕರನ್ನು ಪಕ್ಷಾಂತರಕ್ಕೆ ಪ್ರಚೋದಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಿದ್ದನ್ನು ನ್ಯಾಯಾಲಯ ಅನೂರ್ಜಿತಗೊಳಿಸಿದ ಪ್ರಕರಣ ಮತದಾರರ ಮನಸಿನಲ್ಲಿ ಬಾಜಪದ ಬಗ್ಗೆ ಬೇಸರವುಂಟು ಮಾಡಿದ್ದು. ಕಾಂಗ್ರೆಸ್ಸಿಗೆ ಅನುಕಂಪದ ಆಸರೆ ದೊರೆಯಬಹುದಾಗಿದೆ. ಇನ್ನು ಗೋವಾದಲ್ಲಿ ಬಾಜಪ ಅಧಿಕಾರದಲ್ಲಿದ್ದರೂ ಮನೋಹರ್ ಪಣಿಕ್ಕರ್ ರಾಷ್ಟ್ರ ರಾಜಕೀಯಕ್ಕೆ ಬಂದ ನಂತರ ಅಲ್ಲಿನ ಬಾಜಪ ಶಕ್ತಿಕಳೆದುಕೊಂಡಂತೆ ಕಾಣುತ್ತದೆ. ಆಡಳಿತ ವಿರೋಧಿ ಅಲೆಯೇನಾದರು ಅಲ್ಲಿ ಬೀಸಿದರೆ ಬಾಜಪ ಗೆಲ್ಲುವುದು ಕಷ್ಟವಾಗಲಿದೆ. ಮಣಿಪುರದಲ್ಲಿ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿದ್ದು ಸ್ಥಳೀಯ ಪಕ್ಷಗಳು ಸಹ ಬಲಾಡ್ಯವಾಗಿವೆ. ಅಲ್ಲಿ ಬಾಜಪ ಏನಾದರು ಮಾಡಬೇಕಿದ್ದಲ್ಲಿ ಸ್ಥಳೀಯ ಪಕ್ಷಗಳ ನೆರವನ್ನು ಪಡೆಯ ಬೇಕಾಗುತ್ತದೆ.

ಇವೆಲ್ಲವನ್ನೂ ಸೂಕ್ಷ್ಮವಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ನೋಡಿದರೆ ಮುಂದಿನ ದಿನಗಳಲ್ಲಿ ಬಾಜಪ ತಾನಂದು ಕೊಂಡಂತೆ ಸಲೀಸಾಗಿ ಗೆಲ್ಲುತ್ತಾ ಹೋಗುವುದು ಅಸಾದ್ಯದ ಮಾತು. ಮುಂದೆ ನಡೆಯಲಿರುವ ವಿದಾನಸಭಾ ಚುನಾವಣೆಗಳ ಪಲಿತಾಂಶಗಳೇನೇ ಆಗಿರಲಿ, ಪ್ರಾದೇಶಿಕ ಪಕ್ಷಗಳ ಕಾರ್ಯತಂತ್ರದ ಆಧಾರದ ಮೇಲೆ 2019ರ ಲೋಕಸಭಾ ಚುನಾವಣೆಯಲ್ಲಿ ಬಾಜಪದ ಸೋಲು ಗೆಲುವು ನಿರ್ದಾರವಾಗಲಿದೆ.

ಬಿಹಾರದಲ್ಲಿ ನಡೆದ ಮಹಾಘಟಬಂದನ್ ರಾಷ್ಟ್ರ ಮಟ್ಟದಲ್ಲೇನಾದರು ನಡೆದರೆ ಮುಂದಿನ ಚುನಾವಣೆಯ ದಿಕ್ಕೇ ಬದಲಾಗುವ ಸಂಭವವಿದೆ. ಆದರೆ ಈ ಮೈತ್ರಿ ಬಾಜಪ ಮತ್ತು ಕಾಂಗ್ರೆಸ್ ಎರಡರಿಂದಲೂ ಸಮಾನಾಂತರ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಏಕೆಂದರೆ ತಮ್ಮನ್ನು ಕಳೆದ ವಿದಾನಸಭೆ ಚುನಾವಣೆಯಲ್ಲಿ ಶತಾಯ ಗತಾಯ ವಿರೋದಿಸಿದ ಕಾಂಗ್ರೆಸ್ಸನ್ನು ಮಮತಾ ಬ್ಯಾನರ್ಜಿಯಾಗಲಿ ಜಯಲಲಿತಾ ಆಗಲಿ ಒಪ್ಪಿಕೊಳ್ಳಲಾರರು. ಈ ದಿಸೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗನ್ನು ದೂರವಿಟ್ಟು ಪ್ರಾದೇಶಿಕ ಪಕ್ಷಗಳು ಒಂದು ಮಹಾಮೈತ್ರಿಕೂಟವನ್ನು ರಚಿಸಿಕೊಂಡದ್ದೇ ಆದಲ್ಲಿ ಪ್ರದಾನಮಂತ್ರಿ ನರೇಂದ್ರ ಮೋದಿಯವರ ಮುಂದಿನ ಹಾದಿ ಕಠಿಣವಾಗಲಿದೆ.

ನಿತೀಶ್ ಕುಮಾರ್, ಜಯಲಲಿತಾ ಹಾಗು ಮಮತಾ ಬ್ಯಾನರ್ಜಿಯವರು ಸದ್ಯದ ಮಟ್ಟಿಗೆ ತಮ್ಮ ರಾಜ್ಯಗಳಲ್ಲಿ ಬಾಜಪ ಮತ್ತು ಕಾಂಗ್ರೆಸ್ ಎನ್ನುವ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿಯೂ ಅವರುಗಳು ಒಂದಾಗಿ ಕಾರ್ಯನಿರ್ವಹಿಸುವ ಸಾದ್ಯತೆ ಹೆಚ್ಚಿದೆ. ಯಾಕೆಂದರೆ ಎಲ್ಲಿಯವರಗು ಈ ರಾಷ್ಟ್ರೀಯ ಪಕ್ಷಗಳು ಬಲಾಢ್ಯವಾಗಿರುತ್ತವೆಯೊ ಅಲ್ಲಿಯವರೆಗು ಪ್ರಾದೇಶಿಕ ಪಕ್ಷಗಳನ್ನು ನೆಮ್ಮದಿಯಾಗಿರಲು ಅವು ಬಿಡಲಾರವು ಎನ್ನುವ ಸತ್ಯ ಅವರಿಗೆ ಗೊತ್ತಿದೆ. ಇದರಲ್ಲಿ ಬಹಳ ಮುಖ್ಯವಾಗಿ ನಿತೀಶ್‍ಕುಮಾರ್ ಬಹಳ ಆಕ್ರಮಣಕಾರಿಯಾಗಿ ಎರಡೂ ಪಕ್ಷಗಳನ್ನು ಎದುರಿಸಿ ನಿಂತು ರಾಷ್ಟ್ರ ಮಟ್ಟದಲ್ಲಿ ಬೆಳೆಯುವ ಇರಾದೆ ಹೊದಿದ್ದಾರೆ. ಬಿಹಾರದ ಆಚೆಗೂ ಅವರ ಆಸಕ್ತಿ ಇರುವುದರಿಂದಲೇ ಅವು ಮೊನ್ನೆ ನಡೆದ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗಳಲ್ಲಿ ತಮ್ಮ ಉಮೇದುವಾರರನ್ನು ಹಾಕಿದ್ದರು. ಇನ್ನು ಸಮಯ ಸರಿಯೆನ್ನಿಸಿದರೆ ಜಯಲಲಿತಾ ಸಹ ರಾಷ್ಟ್ರ ರಾಜಕಾರಣಕ್ಕೆ ದುಮುಕಲು ಸಿದ್ದರಾಗಿದ್ದಾರೆ. ಇನ್ನು ಮಮತಾ ಬ್ಯಾನರ್ಜಿ ಕೇಂದ್ರ ಸಚಿವೆಯಾಗಿದ್ದು ಇಡೀ ರಾಷ್ಟ್ರವನ್ನೇ ಸುತ್ತಿದವರು, ಅವರಿಗೂ ರಾಷ್ಟ್ರ ರಾಜಕಾರಣ ಹೊಸದೇನಲ್ಲ. ಇನ್ನು ಉತ್ತರ ಪ್ರದೇಶದಲ್ಲಿ ಮುಂದಿನ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದೇ ಆದರೆ ಮಾಯಾವತಿಯವರೂ ಸಹ ಇವರೊಂದಿಗೆ ಕೈ ಜೋಡಿಸಬಹುದಾಗಿದೆ. ಈ ಪಟ್ಟಿಗೆ ನಾನು ಮುಲಾಯಂಸಿಂಗವರನ್ನು ಸೇರಿಸಲು ಹಿಂಜರಿಯುತ್ತೇನೆ. ಏಕೆಂದರೆ ಅವರ ಇತ್ತೀಚೆಗಿನ ನಡವಳಿಕೆ ಚಂಚಲವಾಗಿದೆ. ಬಾಜಪವನ್ನು ವಿರೋಧಿಸುವ ಮಾತಾಡುತ್ತಲೇ ಜಾತ್ಯಾತೀತ ಶಕ್ತಿಗಳ ಒಗ್ಗೂಡುವಿಕೆಗೆ ಅಡ್ಡಗಾಲು ಹಾಕುತ್ತಾರೆ. ಬಿಹಾರದ ಮಹಾಘಟಬಂದನ್ ಸಮಯದಲ್ಲಿ ನಿತೀಶರಿಗೆ ಕೊನೆ ಗಳಿಗೆಯಲ್ಲಿ ಕೈಕೊಟ್ಟು ನಡೆದದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

ಇಂತಹದೊಂದು ಮೈತ್ರಿಕೂಟ ಸೃಷ್ಠಿಯಾಗುವುದೇ ಆದಲ್ಲಿ ಅದಕ್ಕೆ ರಾಷ್ಟ್ರದ ಇತರೇ ರಾಜ್ಯಗಳ ಹಲವಾರು ಬಲಾಢ್ಯ ನಾಯಕರುಗಳ ಪ್ರದೇಶಿಕ ಪಕ್ಷಗಳೂ ಸೇರಬಹುದಾದ ಸಾದ್ಯತೆಯಿದೆ. ಅವು ಯಾವುವೆಂದರೆ ಒಡಿಸ್ಸಾದ ಬಿಜುಜನತಾದಳ (ನವೀನ್‍ಪಟ್ನಾಯಕ್), ಜನತಾದಳ ಜಾತ್ಯಾತೀತ (ಹೆಚ್.ಡಿ.ದೇವೇಗೌಡ), ವೈ.ಎಸ್.ಆರ್. ಕಾಂಗ್ರೆಸ್(ಜಗನ್ಮೋಹನ ರೆಡ್ಡಿ), ತೆಲಂಗಾಣ ರಾಷ್ಟ್ರೀಯ ಸಮಿತಿ (ಚಂದ್ರಶೇಖರ ರಾವ್), ನ್ಯಾಷನಲ್ ಕಾನ್ಫರೆನ್ಸ್ (ಉಮರ್ ಅಬ್ದುಲ್ಲಾ), ಆಮ್ ಆದ್ಮಿ (ಅರವಿಂದ್‍ಕೇಜ್ರೀವಾಲ್), ಎನ್.ಸಿ.ಪಿ (ಶರದ್‍ಪವಾರ್), ರಾಷ್ಟ್ರೀಯ ಜನತಾದಳ್(ಲಾಲೂಪ್ರಸಾದ್ ಯಾದವ್) ಬಹುಜನಪಕ್ಷ( ಮಾಯಾವತಿ), ಅಸ್ಸಾಮಿನ ಏ.ಐ.ಯು.ಡಿ.ಎಫ್ ಹಾಗು ಕೇರಳದ ಕೆಲವು ಸಣ್ಣಪುಟ್ಟ ಪಕ್ಷಗಳು ಇಂತಹದೊಂದು ಮೈತ್ರಿಯಾಗುವುದಾದರೆ ಅದರ ಪಾಲುದಾರರಾಗಬಹುದಾದ ಸಾದ್ಯತೆಗಳಿವೆ.

ಅಕಸ್ಮಾತ್ ಇಂತಹ ಮಹಾಮೈತ್ರಿ ಸಾಕಾರಗೊಳ್ಳುವುದಾದಲ್ಲಿ ಅದರ ಪ್ರದಾನಮಂತ್ರಿ ಅಭ್ಯರ್ಥಿ ಯಾರಾಗಬೇಕೆಂಬುದು ತೀವ್ರವಾಗಿ ಚರ್ಚೆಯಾಗುವ ವಿಷಯವಾಗಿದೆ. ಈ ಸಾಲಿನಲ್ಲಿ ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ, ಜಯಲಲಿತಾ, ಮಾಯಾವತಿಯವರ ಹೆಸರುಗಳು ಬಹುಮುಖ್ಯವಾಗಿ ಕೇಳಿ ಬರಲಿವೆ. ಈ ನಾಲ್ವರಲ್ಲಿ ರಾಷ್ಟ್ರವ್ಯಾಪಿಯಾಗಿ ಜನ ಸ್ವೀಕರಿಸಬಹುದಾದ ಹೆಸರ್ಯಾವುದು ಎಂಬುದೇ ಕುತೂಹಲಕಾರಿಯಾದುದು. ಈ ನಾಲ್ಕೂ ಜನಗಳ ಬಗ್ಗೆ ಒಂದಿಷ್ಟು ನೋಡುವುದಾದರೆ:

ನಿತೀಶ್ ಕುಮಾರ್ ಬಿಹಾರದಲ್ಲಿ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ನಡೆಸಿದ ಸ್ವಚ್ಚ ಮತ್ತು ಪಾರದರ್ಶಕ ಆಡಳಿತದ ಬಗ್ಗೆ ಇಡೀ ದೇಶ ಮೆಚ್ಚುಗೆ ವ್ಯಕ್ತಪಡಿಸಿದೆ. ಜೊತೆಗೆ ನಿತೀಶರ ಸರಳತೆ ಮತ್ತು ಪ್ರಾಮಾಣಿಕತೆಯನ್ನು ಅವರ ವಿರೋಧಿಗಳೂ ಅಲ್ಲಗೆಳೆಯುವುದಿಲ್ಲ. ಉಳಿದಂತೆ ಕೇಂದ್ರದ ರೈಲ್ವೆ ಮಂತ್ರಿಯಾಗಿ ಜನರಿಗೆ ಚಿರಪರಿಚಿತರಾಗಿದ್ದಾರೆ. 2014ರ ಚುನಾವಣಾ ಪ್ರಚಾರಕ್ಕೆ ಬಿಹಾರಕ್ಕೆ ನರೇಂದ್ರ ಮೋದಿಯವರು ಬರುವ ಅಗತ್ಯವಿಲ್ಲವೆಂದು ನೇರವಾಗಿ ಬಾಜಪಕ್ಕೆ ಹೇಳಿದ್ದು ಅವರ ಜಾತ್ಯಾತೀತ ನಿಲುವಿಗೆ ಸಾಕ್ಷಿಯಾಗಿದೆ ಮತ್ತು ಕೋಮುವಾದವನ್ನು ವಿರೋಧಿಸುವ ಜನರ ದೃಷ್ಠಿಯಲ್ಲಿ ಗಟ್ಟಿನಾಯಕರಾಗಿ ಹೊರಹೊಮ್ಮಿದವರು. ಇವೆಲ್ಲವೂ ಅವರನ್ನು ಮುಂದಿನ ಪ್ರದಾನಿ ಎಂದು ಬಿಂಬಿಸವುದಕ್ಕೆ ಪೂರಕವಿಷಯಗಳಾಗಿವೆ.

ಇನ್ನು ಮಮತಾಬ್ಯಾನರ್ಜಿಯ ವಿಷಯಕ್ಕೆ ಬಂದರೆ ಅವರು ಕಾಂಗ್ರೆಸ್ ನಲ್ಲಿದ್ದಾಗಿನಿಂದಲೂ ತಮ್ಮ ಬಂಡಾಯದ ಗುಣಕ್ಕೆ, ನೇರಾನೇರಾ ಮಾತುಗಳಿಗೆ ಹೆಸರಾದವರು. ಕೆಲವು ಕಪ್ಪು ಚುಕ್ಕಿಗಳ ಹೊರತಾಗಿಯೂ ಎಡರಂಗದವರೆದುರು ಶಕ್ತಿಯುತವಾಗಿ ನಿಂತು ಐದು ವರ್ಷಗಳ ಕಾಲ ಬಂಗಾಳವನ್ನು ಮುನ್ನಡೆಸಿದ ಕೀರ್ತಿ ಆಕೆಗಿದೆ. ಅವರೂ ಕೇಂದ್ರದಲ್ಲಿ ಸಚಿವೆಯಾಗಿ ಕೆಲಸ ಮಾಡಿದ್ದು ರಾಷ್ಟ್ರವ್ಯಾಪಿಯಾಗಿ ಪರಿಚಿತವಾದ ಹೆಸರಾಗಿದೆ. ಆಕೆಗಿರುವ ಒಂದು ಹಿನ್ನಡೆಯ ವಿಷಯವೆಂದರೆ ಕೆಲವೊಮ್ಮೆ ಆಕೆ ತೀರಾ ಹಟಮಾರಿಯಂತೆ ವರ್ತಿಸಿ, ಮಿತ್ರ ಪಕ್ಷಗಳಿಗೆ ಕಿರಿಕಿರಿ ಉಂಟುಮಾಡುತ್ತಾರೆಂಬುದಾಗಿದೆ.

ಜಯಲಲಿತಾರವರು ಒಬ್ಬಂಟಿ ಹೆಣ್ಣುಮಗಳಾಗಿ ರಾಜಕೀಯ ಮಾಡುತ್ತಾ ಒಂದಿಡೀ ಪಕ್ಷವನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡು ತಮಿಳುನಾಡಂತಹ ರಾಜ್ಯವನ್ನು ಎರಡನೇ ಅವಧಿಯಲ್ಲೂ ಮುನ್ನಡೆಸುವ ಎದೆಗಾರಿಕೆಯುಳ್ಳ ಹೆಣ್ಣುಮಗಳು. ರಾಷ್ಟ್ರಮಟ್ಟದಲ್ಲಿ ಯಾವ ಅಧಿಕಾರವನ್ನೂ ಹೊಂದಿ ಕೆಲಸ ಮಾಡದೇ ಇದ್ದರೂ ನಿಪುಣ ಆಡಳಿತಗಾರ್ತಿಯೆಂದು ಹೆಸರು ಮಾಡಿರುವ ಜನಪ್ರಿಯ ನಾಯಕಿ. ಅವರಿಗಿರುವ ಒಂದು ಕೊರತೆಯೆಂದರೆ ರಾಷ್ಟ್ರ ಮಟ್ಟದಲ್ಲಿ ಅವರ ಹೆಸರನ್ನು ಜನತೆ ಕೇಳದೇ ಇರುವುದಾಗಿದೆ.

ದಲಿತ ಸಮುದಾಯಕ್ಕೆ ಸೇರಿದ ಮಾಯಾವತಿಯವರು ಸಹ ಏಕಾಂಗಿಯಾಗಿ ಒಂದು ಪಕ್ಷವನ್ನು ಮುನ್ನಡೆಸುತ್ತಿದ್ದು ಗಟ್ಟಿ ನಾಯಕತ್ವದ ಹೆಣ್ಣು ಮಗಳು. ದಲಿತೆಯಾಗಿರುವುದರಿಂದ ಇಡೀ ರಾಷ್ಟ್ರದ ದಲಿತರ ಒಲವು ಅವರಿಗೆ ಸಿಗುವ ಸಾದ್ಯತೆಯಿದೆ. ಉಳಿದಂತೆ ಈಗಾಗಲೇ ಬಹುಜನ ಪಕ್ಷ ಅನೇಕ ರಾಜ್ಯಗಳಲ್ಲಿ ಚುನಾವಣಾ ರಾಜಕೀಯ ಮಾಡುತ್ತ ಸಾಕಷ್ಟು ಬೆಂಬಲಿಗರನ್ನು ಹೊಂದಿದೆ. ಆದರೆ ಅವರ ಮೇಲಿರವ ಸಿ.ಬಿ.ಐ ಕೇಸುಗಳು ಅವರ ಪ್ರದಾನಿಯ ಕನಸಿಗೆ ಸಂಚಕಾರ ತರಬಲ್ಲವು ಎಂಬುದಂತು ಸತ್ಯ.

ಈ ಪಟ್ಟಿಗೆ ಸೇರಿಸಬಹುದಾದ ಇನ್ನೊಂದು ಹೆಸರು ಒಡಿಸ್ಸಾದ ಬಿಜು ಜನತಾಪಕ್ಷದ ನವೀನ್ ಪಟ್ನಾಯಿಕ್ ಅವರದು. ಉತ್ತಮ ಆಡಳಿತಗಾರರಾಗಿ ಹೆಸರು ಮಾಡಿ ಯಾವುದೇ ವಿವಾದಗಳಿಂದ ದೂರವಿದ್ದು ರಾಜ್ಯಬಾರ ನಡೆಸುತ್ತಿರುವ ನವೀನ್ ಪಟ್ನಾಯಿಕ್ ಸೂಕ್ತ ವ್ಯಕ್ತಿಯಾದರೂ ಅಖಿಲ ಭಾರತ ಮಟ್ಟದಲ್ಲಿ ಅವರ ಪರಿಚಯವಿಲ್ಲದಿರುವುದು ಅವರ ಹಿನ್ನಡೆಗೆ ಕಾರಣವಾಗುವುದು ನಿಜ.

ಇಲ್ಲಿಯವರೆಗೂ ನಾನು ಹೇಳಿದ್ದೆಲ್ಲ ಒಂದು ರಾಜಕೀಯ ಬದಲಾವಣೆಯ, ದೃವೀಕರಣದ ಸಾದ್ಯತೆಯ ಬಗ್ಗೆಯೇ ಹೊರತು ಬೇರೇನಲ್ಲ. ಯಾಕೆಂದರೆ ಇದುವರೆಗೂ ಅಧಿಕೃತವಾಗಿ ಯಾವೊಂದು ಪಕ್ಷವೂ, ಯಾರೊಬ್ಬ ನಾಯಕರೂ ಈ ಬಗ್ಗೆ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ. ಆದರೆ ತಮ್ಮಗಳ ಪಕ್ಷಗಳನ್ನು ಉಳಿಸಿಕೊಳ್ಳುವ ಮತ್ತು ತಮ್ಮ ರಾಜ್ಯಗಳಲ್ಲಿ ತಮಗಿರುವ ನೆಲೆಯನ್ನು ಉಳಿಸಿಕೊಳ್ಳುವ ದಿಕ್ಕಿನಲ್ಲಿ ಪ್ರಾದೇಶಿಕ ಪಕ್ಷಗಳು ಇಂದಲ್ಲಾ ನಾಳೆ ಇಂತಹದೊಂದು ಪ್ರಯೋಗಕ್ಕೆ ಮುಂದಾದರೆ ಅಚ್ಚರಿಯೇನಿಲ್ಲ. ಇಂತಹದೊಂದು ಮಾತುಕತೆ ಶುರುವಾದರೆ ಪ್ರದಾನಿ ಹುದ್ದೆಯ ಅಭ್ಯರ್ಥಿಯ ಹೆಸರು ಬಂದಾಗ ನಾನು ಉಲ್ಲೇಖಿಸಿದವರನ್ನು ಬಿಟ್ಟು ಸರ್ವಸಮ್ಮತವಾದ ವ್ಯಕ್ತಿಯೊಬ್ಬರ ಹೆಸರು ಕಂಡು ಬಂದರೂ ಆಶ್ಚರ್ಯವೇನಿಲ್ಲ. ಇಂತಹದೊಂದು ಮೈತ್ರಿಯೇನಾದರು ಉಂಟಾದರೆ ಕಾಂಗ್ರೆಸ್ ಇರಲಿ ಬಾಜಪ ಮತ್ತು ಮೋದಿಯವರಿಗೆ ಬಹಳಷ್ಟು ಹಿನ್ನಡೆಯುಂಟಾಗುವುದು ಖಚಿತ. ಏಕೆಂದರೆ ಬಾಜಪ ನಡೆಸುತ್ತಿರುವ ಸಾಂಸ್ಕೃತಿಕ ಮತ್ತು ಮತಾಂಧ ರಾಜಕಾರಣಕ್ಕೆ ಪರ್ಯಾಯವಾದ ರಾಜಕೀಯ ಮಾಡುವ ಶಕ್ತಿಯೊಂದನ್ನು ಜನತೆ ಬಯಸುತ್ತಿದೆ. ಆದರೆ ಮೋದಿ ಮತ್ತು ಅಮಿತ್ ಷಾರವರ ತಂತ್ರಗಾರಿಕೆಗಳನ್ನು, ಸಂಘಪರಿವಾರದ ರಹಸ್ಯ ಕಾರ್ಯಸೂಚಿಗಳನ್ನೂ ಎದುರಿಸಲು ಬೇಕಾದ ತನ್ನದೇ ಆದ ಕಾರ್ಯತಂತ್ರವನ್ನು ರೂಪಿಸಲು ಇಲ್ಲಿಯವರೆಗು ಕಾಂಗ್ರೆಸ್ ವಿಫಲವಾಗಿದ್ದು ಜನರಿಗೆ ಅದರ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತಿದೆ. ಹೀಗಾಗಿ ಪ್ರಾದೇಶಿಕ ಪಕ್ಷಗಳು ಎಲ್ಲಿಯವರೆಗು ಬಲವಾದ ರಾಜಕೀಯ ಶಕ್ತಿಗಳಾಗಿರುತ್ತವೆಯೊ ಅಲ್ಲಿಯವರೆಗೂ ಬಾಜಪ ರಾಷ್ಟ್ರದಾದ್ಯಂದ ಬೆಳೆಯುವುದು ಕಷ್ಟದ ಕೆಲಸ.

ಆದರೆ ಅಧಿಕಾರದ ರುಚಿ ಕಂಡಿರುವ ಕಾಂಗ್ರೆಸ್ಸಾಗಲಿ, ಬಾಜಪವಾಗಲಿ ಇಂತಹದೊಂದು ಮೈತ್ರಿಕೂಟ ರಚನೆಯಾಗದಂತೆ ನೋಡಿಕೊಳ್ಳಲು ತಾವು ಕಲಿತ ವಿದ್ಯೆಯನ್ನೆಲ್ಲ ಖರ್ಚು ಮಾಡುವುದು ಖಂಡಿತಾ.

ಮೂರನೇ ರಾಜಕೀಯ ರಂಗದ ಅನಿವಾರ್ಯತೆಯ ಹಿಂದಿರುವ

ನೈಜ ಕಾರಣಗಳು!

ಕಾಂಗ್ರೆಸ್ ಮತ್ತು ಬಾಜಪಗಳ ಹೊರತಾಗಿ ರಚನೆಯಾಗಬಹುದಾದ ಒಂದು ವಿಶಾಲ ರಾಜಕೀಯ ವೇದಿಕೆಯ ಸಾದ್ಯತೆಗಳ ಕುರಿತಾಗಿ ಮಾತನಾಡಿದ ಮೇಲೂ ನಮ್ಮಲ್ಲಿ ಉಳಿಯುವ ಪ್ರಶ್ನೆ: ಇಂತಹದೊಂದು ರಾಜಕೀಯ ಶಕ್ತಿಯ ಅಗತ್ಯವೇನಿದೆ? ಎಂಬುದಾಗಿದೆ. ಈ ಪ್ರಶ್ನೆಗೆ ಸ್ಪಷ್ಟವಾದ ಮತ್ತು ನಿಖರವಾದ ಉತ್ತರ ಕಂಡುಕೊಂಡು ಜನರಿಗೆ ತಲುಪಿಸದ ಹೊರತು ಇಂತಹ ನಡೆ ಯಶಸ್ವಿಯಾಗಲಾರದು!

ಇವತ್ತು ಶತಮಾನಗಳಷ್ಟು ಹಳೆಯದಾದ ಕಾಂಗ್ರೆಸ್ ಪಕ್ಷ ತನ್ನ ಅಗಾಧಪ್ರಮಾಣದ ಭ್ರಷ್ಟಾಚಾರ ಪ್ರಕರಣಗಳಿಂದ, ಜಡಗಟ್ಟಿದ ನಾಯಕರುಗಳಿಂದ, ತಳ ಮಟ್ಟದಲ್ಲಿ ಜನಸಂಪರ್ಕ ಹೊಂದಿರದ ಭಟ್ಟಂಗಿ ರಾಜಕಾರಣಿಗಳ ಕಾರಣದಿಂದಾಗಿ ದಿನೇದಿನೇ ದುರ್ಬಲಗೊಳ್ಳುತ್ತ ಬರುತ್ತಿದೆ. ಇವೆಲ್ಲದರಿಂದ ಅದು ಬಾಜಪಕ್ಕೆ ಪರ್ಯಾಯವಾಗಿ ನಿಲ್ಲುವ ತ್ರಾಣ ಕಳೆದುಕೊಂಡಂತೆ ಕಾಣುತ್ತಿದೆ. ಅದರ ಅದ್ಯಕ್ಷರಾದ ಶ್ರೀಮತಿ ಸೋನಿಯಾಗಾಂದಿಯವರು ಸಹ ಆಯಾಸಗೊಂಡವರಂತೆ ಕಾಣುತ್ತಿದ್ದಾರೆ. ಅವರ ಸ್ಥಾನ ತುಂಬಲು ಸಿದ್ದವಾಗಿರುವ ಕಾಂಗ್ರೆಸ್ಸಿನ ಉಪಾದ್ಯಕ್ಷರಾದ ರಾಹುಲ್ ಗಾಂದಿಯವರಿಗೆ ಕಾಂಗ್ರೆಸ್ಸನ್ನು ಸಶಕ್ತವಾಗಿ ಮುನ್ನಡೆಸಬಲ್ಲ ಸಾಮರ್ಥ್ಯವಿದೆಯೆಂಬುದನ್ನು ಅವರು ತೋರಿಸಿಕೊಟ್ಟಿಲ್ಲ. ಸೋನಿಯಾರ ತಂತ್ರಗಾರಿಕೆಯಾಗಲಿ, ಖಡಕ್ ನಿರ್ದಾರ ತೆಗದುಕೊಳ್ಳಬಹುದಾದ ಪ್ರಬುದ್ದತೆಯನ್ನು ಅವರಿಲ್ಲಿಯವರೆಗೂ ತೋರಿಸಿಲ್ಲ. ಅಕಸ್ಮಾತ್ ಸೋನಿಯಾರವರೇನಾದರು ರಾಹುಲರ ಕೈಗೆ ಪಕ್ಷವನ್ನು ನೀಡಿದರೆ ಇವತ್ತಿರುವ ಕಾಂಗ್ರೆಸ್ ಇನ್ನಷ್ಟು ದುರ್ಬಲಗೊಳ್ಳಬಹುದಾದ ಸಾದ್ಯತೆಯೇ ಹೆಚ್ಚು. ಇಂತಹ ಸನ್ನಿವೇಶವೊಂದು ಎದುರಾದರೆ ಬಾಜಪದ ಮುಂದಿನ ಹಾದಿ ಸುಗಮವಾಗಲಿದ್ದು, ಅದಕ್ಕೆ ರಾಷ್ಟ್ರ ಮಟ್ಟದಲ್ಲಿ ಎದುರಾಳಿಯೇ ಇಲ್ಲದಂತಾಗಿ ಬಿಡುತ್ತದೆ. ಇದು ಬಾಜಪ ನಾಯಕತ್ವವನ್ನು ಸರ್ವಾಧಿಕಾರದತ್ತ ಕರೆದೊಯ್ದರೆ ಅಚ್ಚರಿಯೇನಿಲ್ಲ. ಸದ್ಯದಲ್ಲಿ ಪ್ರದಾನಿ ನರೇಂದ್ರ ಮೋದಿಯವರ ನಡವಳಿಕೆಗಳು ಅಂತಹದೊಂದು ಅನುಮಾನಕ್ಕೆ ಪುಷ್ಠಿ ಕೊಡುವಂತೆಯೇ ಇವೆ.

ಮತಾಂಧ ರಾಜಕಾರಣದ ಚುಂಗು ಹಿಡಿದು ಕೊಂಡು, ಸಂಘಪರಿವಾರದ ಗುಪ್ತ ಕಾರ್ಯಸೂಚಿಯ ಆಣತಿಯಂತೆ ರಾಜಕಾರಣ ಮಾಡುತ್ತ ಬಂದಿರುವ ಬಾಜಪದ ಸಿದ್ದಾಂತಗಳು ನಮ್ಮ ಬಹು ಸಂಸ್ಕೃತಿಯ ಸಮಾಜದ ಮಟ್ಟಿಗೆ ಪ್ರತಿಗಾಮಿಯಾಗಿರುತ್ತವೆ. ಪಶ್ಚಿಮದ ಏಕಧರ್ಮ, ಏಕಬಾಷೆ, ಏಕರಾಷ್ಟ ಎಂಬ ಸಿದ್ದಾಂತಗಳಿಗೆ ಪೂರಕವಾಗಿ ತನ್ನ ಮತಾಂಧ ರಾಜಕಾರಣವನ್ನು ಮಾಡುತ್ತಿರುವ ಬಾಜಪ ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಇಂತಹ ಸನ್ನಿವೇಶವನ್ನು ಸೂಕ್ತವಾಗಿ ಬಳಸಿಕೊಳ್ಳಲು ಯತ್ನಿಸುವುದು ಖಚಿತ. ಯಾವುದೇ ಬಲಪಂಥೀಯ ರಾಜಕೀಯ ಕೂಟವೂ ವಿರೋಧಿಗಳ ಇರುವಿಕೆಯನ್ನು ಬಯಸುವುದಿಲ್ಲ. ಆದರಿಂದ ಅದು ದುರ್ಬಲಗೊಂಡ ಕಾಂಗ್ರೆಸ್ಸಿನ ಜೊತೆಜೊತೆಗೆ ಪ್ರಾದೇಶಿಕ ಪಕ್ಷಗಳನ್ನೂ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತ ಹೋಗುತ್ತದೆ. ಅದರ ಇಂತಹ ಸಂಚಿಗೆ ಬಲಿಯಾದ ಪ್ರಾದೇಶಿಕ ಪಕ್ಷಗಳು ಅನಿವಾರ್ಯವಾಗಿ ರಾಷ್ಟ್ರ ಮಟ್ಟದಲ್ಲಿ ಅದರ ನೇತೃತ್ವವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇಂತಹ ಬೆಳವಣಿಗೆಯಿಂದ ಪ್ರಾದೇಶಿಕ ಹಿತಾಸಕ್ತಿಗಳು ನಗಣ್ಯವಾಗಿ ಐಕ್ಯತೆ ಮತ್ತು ಬಲಿಷ್ಠ ರಾಷ್ಟ್ರದ ಹೆಸರಲ್ಲಿ ಸ್ಥಳೀಯವಾದ ಎಲ್ಲ ಪ್ರಜಾತಂತ್ರದ ವ್ಯವಸ್ಥೆಗಳನ್ನು ಅದು ನಾಶಪಡಿಸುತ್ತ ಹೋಗುತ್ತದೆ. ಇಂತಹದೊಂದು ಅಪಾಯ ಒಂದೆರಡು ದಿನಗಳಲ್ಲಿ ವರ್ಷಗಳಲ್ಲಿ ಆಗದಿvರಬಹುದು. ಆದರೆ ಒಂದು ರಾಷ್ಟ್ರದ ಇತಿಹಾಸದಲ್ಲಿ ತೀರಾ ದೀರ್ಘವೆನಿಸದ ಐದರಿಂದ ಹತ್ತು ವರ್ಷಗಳಲ್ಲಿ ಈ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ನಡೆದು ಬಿಡಬಹುದು.

ಆದ್ದರಿಂದ ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು, ಇಂಡಿಯಾದ ಎಲ್ಲ ಸಮುದಾಯ -ಸಂಸ್ಕೃತಿಗಳ ಉಳಿವಿಗಾಗಿ ಬಾಜಪಕ್ಕೆ ಸವಾಲೊಡ್ಡಬಲ್ಲ ಒಂದು ಪ್ರಬಲ ಶಕ್ತಿಯ ಅಗತ್ಯ ಇವತ್ತು ಹಿಂದೆಂದಿಗಿಂತಲೂ ಹೆಚ್ಚಿದೆ. ಹೀಗಾಗಿಯೇ ಇವತ್ತು ಪ್ರಾದೇಶಿಕ ಪಕ್ಷಗಳು ಸಮಾನಮನಸ್ಕ ರಾಜಕೀಯ ವೇದಿಕೆಯೊಂದನ್ನು ರಚಿಸಿಕೊಂಡು ತಮ್ಮತಮ್ಮ ರಾಜ್ಯಗಳಲ್ಲಿ ಬಾಜಪವನ್ನು ಎದುರಿಸಿ ನಿಲ್ಲುವ ಸವಾಲನ್ನು ಸ್ವೀಕರಿಸಬೇಕಾಗಿದೆ. ಬಾಜಪ ಸಹ ಪ್ರಜಾಪ್ರಭತ್ವದಲ್ಲಿ ನಂಬಿಕೆಯನ್ನಿಟ್ಟುಕೊಂಡ ಒಂದು ರಾಷ್ಟ್ರೀಯ ಪಕ್ಷವಾಗಿ ಉಳಿಯಲು ಸಹ ಇದು ಸಹಕಾರಿಯಾಗುತ್ತದೆ.

ಆದರೆ ಇದು ಸಾದ್ಯವಾಗಲು ಪ್ರಾದೇಶಿಕ ಪಕ್ಷಗಳ ನಾಯಕರುಗಳು ತಮ್ಮ ಪಾಳೆಗಾರಿಕೆಯ ಅಹಮ್ಮನ್ನು ಬದಿಗೊತ್ತಿ, ಒಳಜಗಳಗಳನ್ನು ಕೈಬಿಟ್ಟು ಮುಕ್ತ ಮನಸ್ಸಿನಿಂದ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ.

ಜುಲೈ 29, 2016

ಮೇಕಿಂಗ್ ಹಿಸ್ಟರಿ: ಪರಾವಲಂಬಿ ಖರ್ಚುಗಳು, ಅಸ್ತವ್ಯಸ್ತಗೊಂಡ ಆರ್ಥಿಕತೆ

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
29/07/2016
ಬಿಕ್ಕಟ್ಟಿಗೆ ಕಾರಣವಾದ ಮತ್ತೊಂದು ಪ್ರಮುಖ ಅಂಶವೆಂದರೆ ಗೊತ್ತುಗುರಿಯಿಲ್ಲದೆ ನಡೆಯುತ್ತಿದ್ದ ರಾಜ್ಯದ ಖರ್ಚುಗಳು. ಹತ್ತೊಂಭತ್ತನೇ ಶತಮಾನದ ಮೊದಲರ್ಧದಲ್ಲಿ, ಹತ್ತಿರತ್ತಿರ ಮೈಸೂರು ಸರಕಾರದ ಅರ್ಧದಷ್ಟು ಆದಾಯ ಬ್ರಿಟೀಷ್ ರಾಜ್ ಗೆ ಕೊಡಬೇಕಿದ್ದ ಕಪ್ಪ ಕಾಣಿಕೆಗೇ ಹೋಗಿಬಿಡುತ್ತಿತ್ತು. ಮತ್ತವರು ಮೈಸೂರಿನ ತೆಗೆದುಕೊಂಡದ್ದನ್ನು ಮತ್ತೆ ವಾಪಸ್ಸು ತಂದದ್ದಿಲ್ಲ. ಹಾಗಾಗಿ ಅರ್ಧದಷ್ಟು ಮೊತ್ತ ಪರಿಗಣನೆಗೇ ಬರುವುದಿಲ್ಲ. ರಾಜನಿಗೆ ಐದು ಪ್ರತಿಶತಃದಷ್ಟು ಮತ್ತು ದಿವಾನನಿಗೆ ಒಂದು ಪ್ರತಿಶತಃದಷ್ಟು ನೀಡುವ ಕಮಿಷನ್ನಿನಿಂದ ಕೆಲವು ಲಕ್ಷ ರುಪಾಯಿಗಳು ಸಾರ್ವಜನಿಕ ಉಪಯೋಗಕ್ಕೆ ಬರದೇ ಹೋಗಿಬಿಡುತ್ತಿತ್ತು. ಇನ್ನುಳಿದ ನಲವತ್ತು ಚಿಲ್ಲರೆ ಪ್ರತಿಶತಃದಷ್ಟು ಹಣದಲ್ಲಿ, ಒಂದು ದೊಡ್ಡ ಮೊತ್ತ ಕೆ.ಆರ್.ಒಡೆಯರರ ರಾಜಸ್ವವನ್ನು ಉಳಿಸಲಿಕ್ಕೆ ಸುಟ್ಟು ಹೋಗುತ್ತಿತ್ತು, ಅದರಲ್ಲಲವನ್ನು ಹಿಂದಿನ ಪುಟಗಳಲ್ಲಿ ಹೀಗಾಗಲೇ ನಾವು ನೋಡಿದ್ದೇವೆ. ಮೈಸೂರಿನ ರೆಸೆಡೆಂಟಾಗಿದ್ದ ಕಾಸಾಮೈಯೂರ್, ಫೋರ್ಟ್ ಸೆಂಟ್ ಜಾರ್ಜಿನ ಕಾರ್ಯದರ್ಶಿಯಾಗಿದ್ದ ರಿಚರ್ಡ್ ಕ್ಲೈವ್ ಗೆ 1831ರಲ್ಲಿ ಬರೆದ ಪತ್ರದಲ್ಲಿ ರಾಜನ ಈ ವೈಭವೋಪೇತ ಖರ್ಚುಗಳ ಬಗ್ಗೆ ಬರೆಯುತ್ತಾನೆ. ರಾಜ ರಾಜ್ಯದ ಹಣವನ್ನು ಉಪಯೋಗಿಸುವುದರ ಜೊತೆಗೆ ವಿಪರೀತವಾಗಿ ಸಾಲ ಮಾಡಿಕೊಂಡು “ಅನಗತ್ಯ ಮತ್ತು ದುಬಾರಿ ವಸ್ತುಗಳನ್ನು ಸಾಹುಕಾರರಿಂದ ಖರೀದಿಸಿ ಬ್ರಾಹ್ಮಣ ವಿಧಿವಿಧಾನಗಳಲ್ಲಿ ಪೋಲುಮಾಡಿಬಿಡುತ್ತಾನೆ….ರಾಜ ಮತ್ತೆ ತನ್ನ ಹಿಂದಿನ ಅಭ್ಯಾಸವಾದ ಅನವಶ್ಯಕ ಪ್ರದರ್ಶನಕಾರಕ ವೈಭವಕ್ಕೆ ಮರಳುತ್ತಿದ್ದಾನೆ” ಎಂದು ಬರೆಯುತ್ತಾನೆ ಕಾಸಾಮೈಯೂರ್. (252) 

ಮತ್ತೆ, ಕೆಲವು ದಿನಗಳ ನಂತರ, ಮೈಸೂರು ಸಾಮ್ರಾಜ್ಯದಲ್ಲಿ ಕಂಪನಿಯ ನೇರ ಆಡಳಿತವನ್ನು ಹೇರಿದಾಗ, ಮದ್ರಾಸಿನ ಗವರ್ನರ್ ಲಷಿಂಗ್ಟನ್, ಕೈಗೊಂಬೆ ರಾಜನಿಗೆ ಬರೆದ ಪತ್ರದಲ್ಲಿ ಅವನ ತಪ್ಪುಗಳನ್ನು ತೋರಿಸುತ್ತ ಎಚ್ಚರಿಸುತ್ತಾನೆ: “ಘನತೆವೆತ್ತ ನಿಮ್ಮ ಸಮಸ್ಯೆಯ ಮೂಲವೆಂದರೆ ನೀವು ಹೊಂದಿರುವ ಖಜಾನೆಯ ಹಣವನ್ನು ಪೋಲು ಮಾಡುತ್ತಿರುವ ನಿಮ್ಮ ದುಬಾರಿ ಖರ್ಚುವೆಚ್ಚಗಳು; ಸರಿಯಾದ ಅಧಿಕಾರಿಗಳನ್ನು ನೇಮಿಸಿ ಖಜಾನೆಯ ಹಣವನ್ನು ದೇಶದ ಒಳಿತಿಗಾಗಿ ಉಪಯೋಗಿಸದ ನಿಮ್ಮ ನಿರ್ಧಾರಗಳು…. 

….ನೀವು ಸಾಹುಕಾರರ ಬಳಿ ಮಾಡಿರುವ ಸಾಲದ ಮೊತ್ತವನ್ನು ಸರಿಪಡಿಸಲಿಕ್ಕಾಗಿ, ನನಗೆ ತಿಳಿದಂತೆ ನಿಮ್ಮ ಆದಾಯವನ್ನು ಬಹಳಷ್ಟು ಸಂದರ್ಭದಲ್ಲಿ ಅದರ ಮೂಲ ಉದ್ದೇಶದಿಂದ ತಿರುಗಿಸಿಬಿಡುತ್ತೀರಿ. ನಿಮ್ಮ ಸೈನ್ಯಕ್ಕೆ ಕೊಡಬೇಕಾಗಿರುವ ಹಣಕ್ಕೆ, ನಿಮ್ಮ ಖಾಸಗಿ ಖರ್ಚುವೆಚ್ಚಗಳಿಗೆ ಯಾವಾಗೆಲ್ಲ ಹಣದ ಅಭಾವ ಉಂಟಾಗುತ್ತದೋ ಆಗೆಲ್ಲ ನೀವು ಸಾಹುಕಾರರಿಗೆ ಭೂಮಿಯನ್ನು ದಾನವಾಗಿ ನೀಡೋ ಮತ್ತೊಂದು ಮಾಡಿಯೋ ಹಣ ಪಡೆದುಬಿಡುತ್ತೀರಿ. ನಿಮ್ಮಾದಾಯದ ಹೆಚ್ಚಿನ ಭಾಗವನ್ನು ವಿಪರೀತವಾಗಿ ಇನಾಮು ಕೊಡುತ್ತ ಕಳೆದಿದ್ದೀರಿ, ಬಹಳಷ್ಟು ಸಂದರ್ಭದಲ್ಲಿ ಇಂತಹ ಇನಾಮು ಪಡೆದ ವ್ಯಕ್ತಿ ನಿಮ್ಮಿಂದ ಅದನ್ನು ಪಡೆಯಲು ಯೋಗ್ಯನಾಗಿಯೇ ಇರುವುದಿಲ್ಲ. 

ವಿಪರೀತವಾಗಿ ಇನಾಮು ಭೂಮಿಯನ್ನು ಕೊಟ್ಟಿದ್ದು ಘನತೆವೆತ್ತವರ ಆರ್ಥಿಕ ಬಿಕ್ಕಟ್ಟಿಗೆ ಮತ್ತೊಂದು ಕಾರಣ; ಇದು ಹೆಚ್ಚು ಎಚ್ಚರಿಕೆಯ ವಿಷಯ ಯಾಕೆಂದರೆ ವಾರ್ಷಿಕ ಆದಾಯದಲ್ಲಾಗುವ ಕುಸಿತವನ್ನು ಇದು ಹೆಚ್ಚು ಮಾಡುತ್ತದೆ. ದಿವಾನ್ ಪೂರ್ಣಯ್ಯನವರ ಸಮಯದಲ್ಲಿ ಇನಾಮಿನ ಮೊತ್ತ 1,84,766, 3.14 3/4 ಕಾಂತರೇಯ ಪಗೋಡಾದಷ್ಟಿತ್ತು. 1828ರಲ್ಲಿ ಅದು 3,53,165 ರಷ್ಟಾಗಿದೆ, ಪೂರ್ಣಯ್ಯನವರ ಸಮಯಕ್ಕೆ ಹೋಲಿಸಿದರೆ 1,68,998, 3.9 ಜಾಸ್ತಿಯಾಗಿದೆ. 1828 ಮತ್ತು 1830 ನಡುವೆ ಇದು ಮತ್ತಷ್ಟು ಹೆಚ್ಚಾಗಿ 4,34,346, 5.4 ಕಾಂತರೇಯ ಪಗೋಡಾದಷ್ಟಾಗಿದೆ. ಇದು ರಾಜ್ಯದ ಸಂಪತ್ತಿನಿಂದ ತೆಗೆದುಕೊಂಡ ಸಂಪತ್ತು. 

ಭೂಮಿಯನ್ನು ದಾನ ನೀಡುವುದರಿಂದ ನಿಮ್ಮಾದಾಯದಲ್ಲಾದ ಕುಸಿತ, ನಿಮ್ಮ ಮತ್ತು ಕಂಪನಿಯ ಸರಕಾರದ ನಡುವೆ ನಡೆದ ಪರಸ್ಪರ ಒಪ್ಪಂದಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ ಎಂದು ನಿಮಗೆ ತುಂಬ ನೋವಿನೊಡನೆ ತಿಳಿಸಬೇಕಾಗಿದೆ ಮತ್ತು ನಾನು ಘನತೆವೆತ್ತವರಿಗೆ ನೀಡುವ ಸಲಹೆಯಂದರೆ……ಭವಿಷ್ಯದಲ್ಲಿ ಇಂತಹ ಅನುದಾನ ನೀಡುವುದರಿಂದ ದೂರವಿದ್ದುಬಿಡಿ….” (253) 

ಮತ್ತು ಕೊನೆಯಲ್ಲಿ ಲಷಿಂಗ್ಟನ್ ಬ್ರಿಟೀಷರು ದತ್ತು ಪಡೆದ ಮಗನಿಗೆ ತಂದೆ ನೀಡುವ ಸಲಹೆಯನ್ನು ಕಾಠಿಣ್ಯದಿಂದ ತಿಳಿಸುತ್ತಾರೆ: “…..ನೀವು ನಿಮ್ಮ ದಿನದ ಒಂದಷ್ಟು ಸಮಯವನ್ನು ನಿಗದಿತವಾಗಿ ನಿಮ್ಮ ಕರ್ತವ್ಯಗಳನ್ನು ಪೂರೈಸಲು ಮೀಸಲಿಡಬೇಕಾಗಿರುವುದು ಅತ್ಯವಶ್ಯಕವಾಗಿದೆ, ಆಗ ನಿಮ್ಮ ಆರ್ಥಿಕತೆ ಒಂದು ಉತ್ತಮ ರೂಪಕ್ಕೆ ಮರಳುತ್ತದೆ….” (254) 

ಮೈಸೂರು ಸಾಮ್ರಾಜ್ಯದ ಪ್ರಮುಖ ಖರ್ಚುಗಳಲ್ಲಿ ವಸಾಹತು ದೊರೆಯ ಸೈನ್ಯದ ನಿರ್ವಹಣೆಯೂ ಒಂದು ಎಂದು ಮೀರಾ ನಮಗೆ ತಿಳಿಸುತ್ತಾರೆ. 1830ರಲ್ಲೇ, ಮೈಸೂರಿನಲ್ಲಿ ಬೀಡುಬಿಟ್ಟಿದ್ದ ಚಿಕ್ಕ ಸೈನ್ಯದ ನಿರ್ವಹಣೆಗೆ 1,50,156 ರುಪಾಯಿಗಳು ಬೇಕಾಗಿತ್ತು. ಹೀಗಾಗಿ “ರಾಜನಿಗೆ ಹತ್ತಲವು ರೂಪದ ಜವಾಬ್ದಾರಿಗಳಿತ್ತು, ಮತ್ತಿದರಿಂದ ದೇಶ ಅಭಿವೃದ್ಧಿವಂಚಿತವಾಯಿತು”. (255) 

ಇಡೀ ಮೂವತ್ತು ವರುಷಗಳ ಅವಧಿಯಲ್ಲಿ ಬ್ರಿಟೀಷರು ಅತ್ಯಮೂಲ್ಯ ಸಂಪತ್ತನ್ನು ದೋಚಿದರು, ಇಡೀ ಭಾರತವನ್ನು ಆಕ್ರಮಿಸುವ ಸಲುವಾಗಿ ಇಲ್ಲಿಂದಲೇ ಹತ್ತಾರು ಲಕ್ಷ ರುಪಾಯಿಗಳನ್ನು ಲೂಟಿ ಹೊಡೆದರು. ಮೀರಾ ಸೆಬಾಸ್ಟಿಯನ್ ಹೇಳುತ್ತಾರೆ: “ವೆಲ್ಲೆಸ್ಲಿ ನಡೆಸಿದ ಸತತ ಯುದ್ಧಗಳಲ್ಲಿ ಮೈಸೂರು ಸಾಮ್ರಾಜ್ಯವನ್ನು ಎಳೆದ ಕಾರಣದಿಂದಾಗಿ ರಾಜ್ಯದ ಬೊಕ್ಕಸದ ಹಣ ಪೋಲಾಯಿತು. ಹಾಗಾಗಿ ದಿವಾನ್ ಪೂರ್ಣಯ್ಯನವರ ಆಡಳಿತಾವಧಿಯಲ್ಲಿ, ಆರ್ಥಿಕತೆಯನ್ನುಳಿಸುವ ಅವರ ತೀವ್ರವಾದ ಪ್ರಯತ್ನಗಳ ನಡುವೆಯೂ ಸೈನ್ಯದ ಖರ್ಚಿಗೆ 1809-10ರಲ್ಲಿ 20.7 ಲಕ್ಷ ರುಪಾಯಿಗಳಷ್ಟು ಖರ್ಚಾಗಿತ್ತು. ಈ ದುಬಾರಿ ನಿರ್ವಹಣೆಯ ಕಾರಣದಿಂದಾಗಿ ಮಹಾರಾಜರ ನೇರ ಆಳ್ವಿಕೆಯ ಸಮಯದಲ್ಲಿ ಸೈನ್ಯಕ್ಕೆ ಕೊಡಬೇಕಾದ ಮೊತ್ತ ಬಾಕಿ ಉಳಿಯುತ್ತಿತ್ತು ಎನ್ನುವುದರ ಕುರಿತು ಯಾವುದೇ ಅನುಮಾನಗಳಿಲ್ಲ. ಕಂದಾಚಾರದ ಗುಮಾಸ್ತರಿಗೆ 1824-25ರಲ್ಲಿ ಕೊಡಬೇಕಿದ್ದ ಮೊತ್ತವೇ 7,03,181 ರುಪಾಯಿಗಳಷ್ಟಿತ್ತು. ಈ ನಿರಂತರ ಯುದ್ಧಗಳ ಕಾರಣದಿಂದಾಗಿ ಸೊವಾರ್ ಕಛೇರಿಗಳಿಗೆ ಮತ್ತು ಬರ್ಗೀರಿಗೆ 10.5 ಲಕ್ಷ ರುಪಾಯಿ ವೆಚ್ಚವಾಗಿತ್ತು, 1824-25ರಲ್ಲಿ”. (256) 

ಮೈಸೂರಿಗೆ ಭೇಟಿ ಕೊಟ್ಟ ಬ್ರಿಟೀಷ್ ವರ್ತಕರು ಮತ್ತು ಅಧಿಕಾರಿಗಳ ಹತ್ತಿರ ತನ್ನ ಉದಾರತನ ತೋರಿದ ಮೈಸೂರು ರಾಜ. ಬ್ರಿಟಿಷ್ ಕಮಿಷನರ್ರುಗಳು ಲೆಕ್ಕಹಾಕಿದಂತೆ 1830ರ ದಶಕದಲ್ಲಿ ಬ್ರಿಟನ್ನಿಗೆ ವಾರ್ಷಿಕವಾಗಿ 20 ಲಕ್ಷ ರುಪಾಯಿಗಳಷ್ಟು ಮೌಲ್ಯದ ಉಡುಗೊರೆಗಳು ಮೈಸೂರಿನ ವಿದೂಷಕನಿಂದ ತಲುಪುತ್ತಿದ್ದವು. (257) 

ಆ ಕಾಲದಲ್ಲಿದ್ದ ಪ್ರಮುಖ ಖರ್ಚುಗಳೆಂದರೆ, ಬ್ರಿಟೀಷ್ ರಾಜ್ ಗೆ ಕೊಡಬೇಕಿದ್ದ ಕಪ್ಪಕಾಣಿಕೆ, ಕೈಗೊಂಬೆ ರಾಜ ಮತ್ತವನ ದಿವಾನನಿಗೆ ಕೊಡಬೇಕಿದ್ದ ಕಮಿಷನ್, ತಿಕ್ಕಲು ರಾಜನ ಊಳಿಗಮಾನ್ಯ ಖರ್ಚುಗಳಾದ ಬ್ರಿಟೀಷ್ ವರ್ತಕರಿಗೆ, ಅಧಿಕಾರಿಗಳಿಗೆ, ಮಠಗಳಿಗೆ, ದೇವಸ್ಥಾನಗಳಿಗೆ ಕೊಡುವ ಉಡುಗೊರೆ ಮತ್ತು ಕೊನೆಯದಾಗಿ ಭಾರತವನ್ನು ಮತ್ತಷ್ಟು ದುರ್ಬಲಗೊಳಿಸಲು ಬ್ರಿಟೀಷ್ ಸೈನ್ಯಕ್ಕೆ ನೀಡುವ ಮೊತ್ತ. ಪ್ರತಿ ಆರ್ಥಿಕ ವರ್ಷದ ಕೊನೆಯಲ್ಲೂ ಈ ನಾಲ್ಕು ತಲೆಗಳಿಗೆ ಮತ್ತಷ್ಟು ಮಗದಷ್ಟು ಹಣದ ಅವಶ್ಯಕತೆ ಬೀಳುತ್ತಿತ್ತು. ಪರಿಣಾಮವಾಗಿ, 1822ರಲ್ಲಿ, ತಿಂಗಳು ತಿಂಗಳು ಕಟ್ಟಬೇಕಿದ್ದ ಕಪ್ಪಕಾಣಿಕೆಯಲ್ಲಿ ವ್ಯತ್ಯಾಸವಾಗುತ್ತಿತ್ತು, ಮತ್ತು ಹಲವು ಸಂದರ್ಭದಲ್ಲಿ, ಮೈಸೂರು ರಾಜನಡಿಯಿದ್ದ ಸೈನಿಕರ ಸಂಬಳ ಬಾಕಿಯುಳಿಯುತ್ತಿತ್ತು, ಇದು ಸೈನಿಕರಲ್ಲೂ ಬಿಕ್ಕಟ್ಟನ್ನು ಹೆಚ್ಚಿಸಿತು. 

ರಾಜ್ಯದ ಖರ್ಚು ವೆಚ್ಚಗಳನ್ನು ಗಮನಿಸುವುದು ಅಂತಿಮವಾಗಿ ಒಂದಷ್ಟು ಆಘಾತಕಾರಿ ಮಾಹಿತಿಗಳನ್ನು ಹೊರಹಾಕುತ್ತದೆ. ಅರೆ ಊಳಿಗಮಾನ್ಯ ಮತ್ತು ವಸಾಹತು ಅಚ್ಚಿನಿಂದ ತಯಾರಾದ ಅಸಹ್ಯ ಮೂಡಿಸುವ ಕೈಗೊಂಬೆ ರಾಜನ ಸರಕಾರ ಸಾಮಾಜಿಕ ಕಾರ್ಯಗಳಿಗೆ ಮಾಡಬೇಕಾದ ಖರ್ಚುಗಳೆಡೆಗೆ ಅಪಾರ ನಿರ್ಲಕ್ಷ್ಯ ತೋರಿಸುತ್ತದೆ. ಈ ದಿಕ್ಕಿನಲ್ಲಿ ಖರ್ಚು ಮಾಡಿದ ಚಿಕ್ಕ ಪುಟ್ಟ ಮೊತ್ತ ಕೂಡ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನನ ಕಾಲದಲ್ಲಿದ್ದ ಪರಂಪರೆಯ ಮುಂದುವರಿಕೆಯಷ್ಟೇ. ಹೈದರ್ ಮತ್ತು ಟಿಪ್ಪು ಸರಕಾರ ಸಂಪನ್ಮೂಲ ಮತ್ತು ಸಾಮಾಜಿಕ ಆಸ್ತಿಯನ್ನು ಸೃಷ್ಟಿಸುವ ಸಲುವಾಗಿ ಹೂಡಿದ ದೊಡ್ಡ ಮೊತ್ತದ ಬಂಡವಾಳವನ್ನು ಕಾಪಿಡುವ ಸಲುವಾಗಿ ಅದನ್ನು ಮುಂದುವರೆಸಲೇಬೇಕಿತ್ತು. ಹಿಂದಿನ ಕಾಲದ ಊಳಿಗಮಾನ್ಯ ಸರಕಾರದಲ್ಲಿದ್ದಂತೆ, ವಸಾಹತುಶಾಹಿ ಮಧ್ಯಯುಗದ ಕಾಲಕ್ಕೆ ಸಮಾಜ ಜಾರಿಹೋಗಲು ಅನುವು ಮಾಡಿಕೊಟ್ಟಿತು. ಬ್ರಿಟೀಷ್ ಕೈಗೊಂಬೆ ಪರಾವಲಂಬತನ ಒರಟಾಗಿತ್ತು, ಪರಿಪೂರ್ಣವಾಗಿತ್ತು.

ಮುಂದಿನ ವಾರ
ಕ್ಞಾಮ, ಕಾಲರ ಮತ್ತು ಪ್ಲೇಗ್: ಬಿಳಿ ದೇವರ ಶಾಪ

ಜುಲೈ 28, 2016

ಹೆಚ್ಚಾಗುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳು: ಮೋದಿಯವರ ಮೌನ ಮತ್ತು ರಾಜಧರ್ಮ! ಒಂದು ಟಿಪ್ಪಣಿ.

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
28/07/2016
ಇತ್ತೀಚೆಗೆ ಗುಜರಾತಿನಲ್ಲಿ ಸತ್ತ ದನದ ಚರ್ಮ ಸುಲಿದರೆಂಬ ಕಾರಣಕ್ಕೆ ದಲಿತ ಯುವಕರ ಮೇಲೆ ಸವರ್ಣಿಯರು ನಡೆಸಿದ ಅಮಾನುಷ ಹಲ್ಲೆಗಳ ಬಗ್ಗೆ ಹಾಗು ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರುವ ದಲಿತರ-ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳ ಬಗ್ಗೆ ಪ್ರದಾನಿ ನರೇಂದ್ರಮೋದಿಯವರು ಮೌನ ಮುರಿದು ಮಾತಾಡಬೇಕೆಂದು ಬಹುಜನ ಪಕ್ಷದ ನಾಯಕಿ ಮಾಯಾವತಿಯವರು ಒತ್ತಾಯಿಸಿದ್ದಾರೆ. ಇದು ಕೇವಲ ಮಾಯಾವತಿಯವರ ಒತ್ತಾಯ ಮಾತ್ರವಾಗಿರದೆ ಈ ರಾಷ್ಟ್ರದ ಎಲ್ಲ ದಲಿತರ ಒತ್ತಾಯವೂ ಆಗಿದೆ. ಚುನಾವಣಾ ರ್ಯಾಲಿಗಳ ಬಾಷಣಗಳಲ್ಲಿ, ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ, ಅನಿವಾಸಿ ಭಾರತೀಯರ ಸಭೆಗಳಲ್ಲಿ ಉಸಿರು ಎಳೆದುಕೊಳ್ಳಲು ಬಿಡುವು ಸಿಗದಂತೆ ಪುಂಕಾನುಪುಂಖವಾಗಿ ಮಾತಾಡುವ ಪ್ರದಾನಿಯವರದು ರಾಷ್ಟ್ರದ ಆಂತರಿಕ ವಿಚಾರಗಳಲ್ಲಿ, ಅದೂ ತಳ ಮಟ್ಟದವರ ಮೇಲೆ ನಡೆಯುವ ಇಂತಹ ದೌರ್ಜನ್ಯಗಳ ವಿಚಾರದಲ್ಲಿ ಮಾತ್ರ ದಿವ್ಯಮೌನ. ಇಂತಹ ವಿಷಯಗಳಲ್ಲಿ ಸರಕಾರದ ಕ್ರಮಗಳನ್ನು ಸಮರ್ಥಿಸಿಕೊಳ್ಳುವ ಮತ್ತು ವಿರೋಧಪಕ್ಷಗಳ ಆರೋಪಗಳನ್ನು ನಿರಾಕರಿಸುವ ಸಂಪೂರ್ಣ ಹೊಣೆಗಾರಿಕೆ ಬಾಜಪದ ಎರಡನೇ ಸಾಲಿನ ನಾಯಕರುಗಳಿಗೆ ನೀಡಿರುವ ಪ್ರದಾನಿಯವರು ಮಾತ್ರ ಯಾವ ಪ್ರತಿಕ್ರಿಯೆಯನ್ನು ನೀಡದೆ ಮೌನಕ್ಕೆ ಶರಣಾಗುವುದನ್ನು ಅವರ ಅಭಿಮಾನಿ ದೇವರುಗಳು ಪ್ರದಾನಿಯವರದು ಮೌನ ಮಾತ್ರವಲ್ಲ ದೇಶದ ಅಭಿವೃದ್ದಿಯ ಬಗೆಗಿನ ಏಕಾಗ್ರಚಿತ್ತದ ದ್ಯಾನವೆಂದು ಇನ್ನೂ ವರ್ಣಿಸದಿರುವುದು ನಮ್ಮ ಪುಣ್ಯ!

ದಲಿತರ ಮೇಲಾಗುತ್ತಿರುವ ಹಲ್ಲೆಗಳಿಗಿರುವ ಕಾರಣಗಳ ಬಗ್ಗೆ ಅದ್ಯಯನ ಮಾಡಿದರೆ ಸವರ್ಣಿಯರ ಕ್ರೂರತೆ ಮತ್ತು ಪ್ರಭುತ್ವದ ಮೌನದ ಹಿಂದಿರುವ ತಣ್ಣಗಿನ ಕ್ರೌರ್ಯ ಅರಿವಾಗುತ್ತದೆ. ಕೆಳಗಿನ ಕೆಲ ಘಟನೆಗಳನ್ನು ನೀವು ಓದಿದರೆ ದೌರ್ಜನ್ಯಗಳಿಗೆ ಕಾರಣವಾಗಿರುವ ತೀರಾ ಬಾಲೀಶ ಕಾರಣಗಳು ಗೊತ್ತಾಗುತ್ತವೆ:

ಮೇಲ್ಜಾತಿಯ ಹುಡುಗಿಯೊಬ್ಬಳನ್ನು ಪ್ರೀತಿಸಿದ ತಪ್ಪಿಗೆ ದಲಿತ ಯುವಕನನ್ನು ತುಂಡುತುಂಡಾಗಿ ಕತ್ತರಿಸಿ ಎಸೆಯಲಾಗುತ್ತದೆ.

ದಲಿತ ಕುಟುಂಬದ ಮೇಕೆಯೊಂದು ಸವರ್ಣಿಯರ ಜಮೀನಿನಲ್ಲಿ ಓಡಾಡಿದ ಕಾರಣಕ್ಕೆ ಆಡು ಕಾಯುವ ದಲಿತ ಹುಡುಗನನ್ನು ಜೀವಂತವಾಗಿ ಸುಡಲಾಗುತ್ತದೆ.

ದಲಿತ ಅಪ್ರಾಪ್ತೆಯನ್ನು ಅತ್ಯಚಾರ ಮಾಡಿ, ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಾಗದಂತೆ ನೋಡಿಕೊಳ್ಳಲಾಗುತ್ತದೆ.

ಭೂಮಾಲೀಕನ ಬಂಧನದಲ್ಲಿದ್ದ ಇಬ್ಬರು ದಲಿತ ಜೀತದಾಳುಗಳು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಕ್ಕೆ ಅವರಿಬ್ಬರ ಕೈಗಳನ್ನು ಕತ್ತರಿಸಿ ಎಸೆಯಲಾಗುತ್ತದೆ.

ದೇವಸ್ಥಾನದ ಪ್ರಸಾದವನ್ನು ಕೇಳಿದ್ದಕ್ಕೆ ಎಂಟು ವರ್ಷದ ದಲಿತ ಬಾಲಕನಿಗೆ ರಕ್ತಸ್ರಾವವಾಗುವಂತೆ ಥಳಿಸಲಾಗುತ್ತದೆ.

ಹೀಗೆ ನಾಗರೀಕ ಸಮಾಜವೊಂದರಲ್ಲಿ ತೀರಾ ಕ್ಷುಲ್ಲಕವಾದ ಕಾರಣಗಳಿಗಾಗಿ ನಡೆಯುತ್ತಿರುವ ದಲಿತರ ಮೇಲಿನ ಹಲ್ಲೆಗಳ ಹಿಂದೆ ಮೇಲ್ಜಾತಿಗಳ ಶತಮಾನಗಳ ಕ್ರೌರ್ಯವಿರುವಂತೆ ಪ್ರಭುತ್ವದ ಮೌನ ಸಮ್ಮತಿಯ ಕಾರಣವೂ ಅಡಗಿದೆಯೆಂಬುದನ್ನು ನಾವು ಮರೆಯಬಾರದು. ದಲಿತರ ಮೇಲಿನ ದೌರ್ಜನ್ಯಗಳಲ್ಲಿ ಬಹಳ ಸುಲಭವಾಗಿ ತುತ್ತಾಗಿ ಸಿಕ್ಕಿ ಬೀಳುವವರು ದಲಿತ ಮಹಿಳೆಯರು. ಅತ್ಯಾಚಾರಗಳಂತಹ ಕ್ರೂರ ಕೃತ್ಯಗಳು ಬಹಳಷ್ಟು ಸಾರಿ ಬೆಳಕಿಗೆ ಬಾರದಂತೆ ತಡೆಯಲು ಮೇಲ್ಜಾತಿಗಳ ರಾಜಕೀಯ ಶಕ್ತಿಗಳು ತಾವು ಬೆಂಬಲಿಸುವ ಪ್ರಭುತ್ವದ ನೆರವನ್ನು ಪಡೆಯುವುದು ಮಾಮೂಲಿಯಾಗಿದೆ. ಯಾವುದೇ ಪಕ್ಷದ ಯಾವುದೇ ಸರಕಾರಗಳಿದ್ದರು ಪ್ರಭುತ್ವದ ಮೇಲಿನ ತಮ್ಮ ಪರೋಕ್ಷ ಹಿಡಿತವನ್ನು ಸಡಿಲಿಸದ ಮೇಲ್ಜಾತಿಗಳು ದಲಿತರ ದಮನಕಾರ್ಯವನ್ನು ಯಾವುದೆ ಎಗ್ಗಿಲ್ಲದೆ ಮುಂದುವರೆಸುತ್ತ ಬರುತ್ತಿವೆ.

ಈ ಹಿನ್ನೆಲೆಯಲ್ಲಿಯೇ ನಾವು ದಲಿತರ ಮೇಲಿನ ಹಲ್ಲೆಗಳನ್ನು ನೋಡಬೇಕಾಗುತ್ತದೆ. ಬಲಿಷ್ಠ ಶಾಸಕಾಂಗ ಮತ್ತು ಕಾರ್ಯಾಂಗಗಳ ಜಂಟಿ ಕಾರ್ಯಾಚರಣೆಗಳ ಮೂಲಕ ದಲಿತರನ್ನು ಹತ್ತಿಕ್ಕುವ ಕಾರ್ಯ ಮುಂದುವರೆಯುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಲೇ ಹೋಗುತ್ತಿವೆ.

ಅದರಲ್ಲೂ 2014ರ ನಂತರವಂತು ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ 2014ರಲ್ಲಿ ದಲಿತರ ಮೇಲಿನ ಹಲ್ಲೆ ಪ್ರಕರಣಗಳು ಶೇಕಡಾ 19 ರಷ್ಟು ಹೆಚ್ಚಾಗಿದ್ದು, 2013ರಲ್ಲಿ ದಲಿತರ ಕೊಲೆಗಳು 676 ಆಗಿದ್ದರೆ, 2014ರಲ್ಲಿ ಅದು 744 ಕ್ಕೆ ಏರಿವೆ. ಉತ್ತರ ಇಂಡಿಯಾದ ಹರಿಯಾಣ ಮತ್ತು ಉತ್ತರಪ್ರದೇಶಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚಿದ್ದರೆ, ದಕ್ಷಿಣದಲ್ಲಿ ತಮಿಳುನಾಡು ಇಂತಹ ದೌರ್ಜನ್ಯಗಳಗೆ ಹೆಸರಾಗಿದೆ.

ವಿಷಾದವೆಂದರೆ, ಹಿಂದೂಗಳೆಲ್ಲ ಒಂದು ಎಂಬ ಹುಸಿಘೋಷಣೆಯೊಂದಿಗೆ, ಹಿಂದೂ ಮತಗಳ ದೃವೀಕರಣದೊಂದಿಗೆ ಅಧಿಕಾರಕ್ಕೆ ಬಂದ ಪಕ್ಷವೊಂದು ಆಡಳಿತ ನಡೆಸುವಾಗ ಹೆಚ್ಚಾಗುತ್ತಿರುವ ಇಂತಹ ದಲಿತ ದೌರ್ಜನ್ಯ ಪ್ರಕರಣಗಳು ಹಿಂದುತ್ವದ ಪೊಳ್ಳುತನವನ್ನು ಬಯಲು ಮಾಡುತ್ತಿವೆ, ಈಗಾಗಲೇ ಬಾಹ್ಯದ ಭಯೋತ್ಪಾದಕ ಶಕ್ತಿಗಳು ನಮ್ಮ ರಾಷ್ಟ್ರವನ್ನು ವಿಭಜಿಸಲು ಯತ್ನಿಸುತ್ತಿವೆ. ಜಾತ್ಯಾತೀತವಾಗಿ ಬದುಕುತ್ತಿರುವ ಬಹುಸಂಸ್ಕೃತಿಯ ಈ ರಾಷ್ಟ್ರವನ್ನು ಅದರ ಉದಾತ್ತತೆಯನ್ನು ಸರ್ವನಾಶಗೊಳಿಸಲು ಹೊರಗಿನ ಶಕ್ತಿಗಳು ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ ಜಾತಿಯ ಹೆಸರಲ್ಲಿ ನಡೆಯುವ ಇಂತಹ ದೌರ್ಜನ್ಯಗಳು ನಮ್ಮ ಸಮಾಜವನ್ನು ವಿಚ್ಛಿದ್ರಗೊಳಿಸುತ್ತ ಹೋಗುತ್ತವೆ. ದೇಶದ ಜಾತಿಗಳ ನಡುವಿನ ಸೌಹಾರ್ದತೆ, ಕೋಮುಸೌಹಾರ್ದತೆಗೆ ಭಂಗ ತರುವ ಇಂತಹ ಘಟನೆಗಳ ಬಗ್ಗೆ ಗಟ್ಟಿಯಾಗಿ ಮಾತಾಡಿ ಅವನ್ನು ಖಂಡಿಸುವುದು ಈ ರಾಷ್ಟ್ರದ ಜನತೆಯ ಕರ್ತವ್ಯವಾಗಿದೆ. ಅದರಲ್ಲೂ ಒಂದು ದೇಶದ ಪ್ರದಾನಿಯಾಗಿ ಮೋದಿಯವರು ಇಂತಹ ಪ್ರಕರಣಗಳನ್ನು ಖಡಾಖಂಡಿತವಾಗಿ ಖಂಡಿಸಿ ದಲಿತರಲ್ಲಿ ಆತ್ಮವಿಶ್ವಾಸವನ್ನು ತುಂಬ ಬೇಕಿರುವುದು ಅಗತ್ಯವಾಗಿದೆ. ಆದರೆ ನಮ್ಮ ಪ್ರದಾನಿಯವರದು ಮಾತ್ರ ದೀರ್ಘ ಮೌನ.

ಹಿಂದೆ ಅವರು ಗುಜರಾತಿನ ಪ್ರದಾನಿಯಾಗಿದ್ದಾಗ, ಅಲ್ಲಿ ನಡೆದ ಕೋಮು ಗಲಭೆಗಳ ಬಗ್ಗೆ ಮಾತಾಡುತ್ತ ಅಂದಿನ ಪ್ರದಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರು ಮೋದಿಯವರಿಗೆ ರಾಜಧರ್ಮ ಪಾಲಿಸುವ ಸಲಹೆ ನೀಡಿದ್ದರು. ಈಗ ಅದೇ ಕುರ್ಚಿಯಲ್ಲಿ ಕುಳಿತಿರುವ ಮೋದಿಯವರು ತಮ್ಮ ಮೌನವನ್ನು ತೊರೆದು ರಾಜಧರ್ಮವನ್ನು ಪಾಲಿಸಬೇಕಾಗಿದೆ. ಇಲ್ಲದೇ ಹೋದರೆ ಮೋದಿಯವರ ಮೌನಕ್ಕೆ ಅಪಾರ್ಥಗಳು ಸೃಷ್ಠಿಯಾಗುವ ಸಾದ್ಯತೆಗಳಿವೆ.

ಮೌನಂ ಸಮ್ಮತಿ ಲಕ್ಷಣಂ ಎಂಬ ಮಾತು ಅವರಿಗೂ ತಿಳಿದಿರಬಹುದೆಂದು ಬಾವಿಸುತ್ತೇನೆ!

ಜುಲೈ 26, 2016

ಮುಗಿದ ಮಧುಚಂದ್ರದ ಅವಧಿ: ಬಾಜಪಕ್ಕೆ ಸಿದ್ದು ಬೈ! ಸರತಿಯಲ್ಲಿ ಕೀರ್ತಿ ಆಜಾದ್, ಶತ್ರುಘ್ನಸಿನ್ಹಾ?

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
26/07/2016
ತಾನು ಬಹಳ ಶಿಸ್ತಿನ ಪಕ್ಷವೆಂದೂ, ತನ್ನೆಲ್ಲ ಸದಸ್ಯರುಗಳೂ ಪಕ್ಷದ ಸಿದ್ದಾಂತಗಳಿಗೆ ಬದ್ದವಾಗಿದ್ದು ಪಕ್ಷಾಂತರದಂತಹ ಕೆಲಸಗಳನ್ನು ಮಾಡಲಾರರೆಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಬಾಜಪದ ಬಣ್ಣ ಮತ್ತೊಮ್ಮೆ ಬಯಲಾಗಿದೆ. ಇಂಡಿಯಾದ ಮತ್ತೆಲ್ಲ ಪಕ್ಷಗಳಂತೆ ಅದರ ಸದಸ್ಯರುಗಳು ಸಹ ಅಧಿಕಾರದ ಹಸಿವು ನೀಗಿಸಿಕೊಳ್ಳಲೆಂದೇ ರಾಜಕಾರಣ ಮಾಡುತ್ತಿರುವವರು ಹಾಗು ಅಂತಹ ಅವಕಾಶ ಸಿಗದೇ ಹೋದಾಗ ಸಿದ್ದಾಂತಗಳ ಮುಖವಾಡ ಕಿತ್ತೆಸೆದು ಅನ್ಯ ಪಕ್ಷಗಳಿಗೆ ಪಲಾಯನ ಮಾಡುವವರೆಂದು ಅದರೊಳಗೆ ನಡೆಯುತ್ತಿರುವ ವಿದ್ಯಾಮಾನಗಳು ತೋರಿಸಿಕೊಡುತ್ತಿವೆ. ಅದರಲ್ಲಿ ಪಂಜಾಬಿನ ಹಿರಿಯ ಸಂಸದ ಶ್ರೀ ನವಜೋತ್ ಸಿಂಗ್ ಮೊನ್ನೆ ಬಾಜಪದ ರಾಜ್ಯಸಭಾ ಸದಸ್ಯತ್ವಕ್ಕೆ ರಾಜಿನಾಮೆ ಕೊಟ್ಟದ್ದೂ ಒಂದು. ಇತ್ತೀಚೆಗಷ್ಟೇ ಬಾಜಪ ರಾಜ್ಯಸಭೆಗೆ ಸಿದ್ದೂರವರನ್ನು ಆರಿಸಿ ಕಳಿಸಿದಾಗ ಅಂತೂ ಸಿದ್ದೂರವರಿಗು ಬಾಜಪದಲ್ಲಿ ಮನ್ನಣೆ ದೊರೆತಂತಾಯಿತೆಂದು ಎಲ್ಲರೂ ನಂಬಿದ್ದರು. ಹಾಗು ಬಾಜಪದ ಹೈಕಮ್ಯಾಂಡ್ ಜೊತೆಗಿನ ಅವರ ಭಿನ್ನಾಭಿಪ್ರಾಯಗಳು ಮುಕ್ತಾಯವಾದವೆಂದೇ ಜನ ಬಾವಿಸಿದ್ದರು. ಯಾಕೆಂದರೆ 2004ರಿಂದ 2014ರವರೆಗೆ ಪಂಜಾಬಿನ ಅಮೃತಸರದಿಂದ ಸತತವಾಗಿ ಸಂಸದರಾಗಿ ಆಯ್ಕೆಯಾಗಿ ಬರುತ್ತಿದ್ದ ನವಜೋತ್ ಸಿಂಗ್ ಅವರನ್ನು ಬಾಜಪ ಮನಸ್ಸು ಮಾಡಿದ್ದರೆ ಪಂಜಾಬಿನ ರಾಜ್ಯ ರಾಜಕೀಯದಲ್ಲಿ ತನ್ನ ಮುಖ್ಯ ದಂಡನಾಯಕನನ್ನಾಗಿ ಬಿಂಬಿಸಿ ಬೆಳೆಸಿ ಅಕಾಲಿದಳದ ನೆರಳಿಂದ ಹೊರಬಂದು ಸ್ವತಂತ್ರವಾಗಿ ರಾಜಕಾರಣ ಮಾಡಬಹುದಿತ್ತು. ಆದರೆ ಸಿದ್ದುವನ್ನು ಕಂಡರಾಗದ ಅಕಾಲಿದಳದ ಒತ್ತಡಕ್ಕೆ ಮಣಿದ ಬಾಜಪ ಸಿದ್ದುರವರಿಗೆ ರಾಜ್ಯ ರಾಜಕೀಯದಲ್ಲಿ ಪ್ರಮುಖಪಾತ್ರ ವಹಿಸುವ ಯಾವ ಅವಕಾಶವನ್ನೂ ನೀಡಲೇ ಇಲ್ಲ. ಈ ಬಗ್ಗೆ ಸಿದ್ದೂರವರಿಗೆ ಆಂತರೀಕವಾಗಿ ತೀವ್ರ ಅಸಮಾದಾನವಿದ್ದುದು ಸುಳ್ಳಲ್ಲ. 

ಗಾಯದ ಮೇಲೆ ಬರೆ ಎಳೆದಂತೆ 2014ರ ಲೋಕಸಭಾ ಚುನಾವಣೆಯಲ್ಲಿ ಅಮೃತಸರದಿಂದ ಸಿದ್ದೂಗೆ ಪಕ್ಷದ ಟಿಕೇಟ್ ನೀಡದೆ ಅರುಣ್ ಜೈಟ್ಲಿಯವರಿಗೆ ಟಿಕೇಟ್ ನೀಡಲಾಯಿತು. ಆದರೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಎದುರು ಸೋತ ಜೇಟ್ಲಿಯನ್ನು ತದನಂತರ ಸಂಪುಟದ ಅತ್ಯಂತ ಪ್ರಮುಖವಾದ ಹಣಕಾಸು ಖಾತೆಗೆ ಸಚಿವರನ್ನಾಗಿ ಮಾಡಲಾಯಿತು. ಪಕ್ಷದ ಇಂತಹ ನಡೆಗಳಿಂದ ತೀವ್ರ ಅಸಮಾದಾನಗೊಂಡಿದ್ದ ಸಿದ್ದೂರವರನ್ನು ಸಮಾದಾನ ಮಾಡಲು ಇತ್ತೀಚೆಗೆ ಅವರನ್ನು ರಾಜ್ಯಸಭೆಗೆ ಕಳಿಸಲಾಯಿತು. ಆದರೆ ಪಂಜಾಬಿನ ರಾಜ್ಯ ರಾಜಕೀಯದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಸಿದ್ದೂರವರಿಗೆ ಇದರಿಂದ ತೃಪ್ತಿಯೇನೂ ಆಗಲಿಲ್ಲ. ಯಾಕೆಂದರೆ ಅವರ ಆಪ್ತರು ಹೇಳುವಂತೆ, ಮೊದಲಿನಿಂದಲು ಸಿದ್ದೂರವರಿಗೆ ರಾಜ್ಯ ರಾಜಕಾರಣದಲ್ಲಿಯೇ ಆಸಕ್ತಿಯಿದ್ದು ಪಂಜಾಬಿನ ಮುಖ್ಯಮಂತ್ರಿಯಾಗುವ ಹಂಬಲ ಹೊಂದಿದ್ದರು. ಹಾಗಾಗಿಯೇ ಅವರು ಅರುಣ್ ಜೇಟ್ಲಿಯ ಪರವಾಗಿ ಚುನಾವಣಾ ಪ್ರಚಾರವನ್ನೂ ಮಾಡಲಿಲ್ಲ. ಜೊತೆಗೆ ಒಂದಷ್ಟು ಕಾಲ ಸಕ್ರಿಯ ರಾಜಕಾರಣದಿಂದ ದೂರವಿದ್ದು ಎಂದಿನಂತೆ ಕ್ರಿಕೇಟ್ ವೀಕ್ಷಕ ವಿವರಣೆಯಲ್ಲಿ ಮತ್ತು ಕಪಿಲ್ ಶರ್ಮಾರವರ ಜನಪ್ರಿಯ ಕಾಮೆಡಿ ಶೋನಲ್ಲಿ ನಿರತರಾಗಿ ಬಿಟ್ಟರು.

ಆದರೆ ಮತ್ತೆ ಸಿದ್ದೂರವರನ್ನು ರಾಜ್ಯಸಭೆಗೆ ನೇಮಕ ಮಾಡಿದಾಗ ಎಲ್ಲವೂ ಸರಿಯಾಯಿತೆಂದು ಜನತೆ ಬಾವಿಸಿದ್ದರು. ಅದಕ್ಕೆ ತಕ್ಕ ಹಾಗೆ ಪಂಜಾಬಿನ ರಾಜಕಾರಣದ ಮಟ್ಟಿಗೆ ಸಿದ್ದೂರವರ ಅಗತ್ಯವನ್ನು ಮನಗಂಡಿತೇನೋ ಎಂಬಂತೆ ಅವರನ್ನು ರಾಜ್ಯ ಬಾಜಪದ ಕೋರ್ ಕಮಿಟಿಗೆ ಸೇರಿಸಲಾಯಿತು. ಇದು ಸಿದ್ದುರವರು ರಾಜ್ಯ ರಾಜಕೀಯಕ್ಕೆ ಎಷ್ಟು ಅನಿವಾರ್ಯವೆಂಬುದನ್ನು ಬಾಜಪ ಅರ್ಥ ಮಾಡಿಕೊಂಡಿದೆಯೆಂದು ಜನ ಬಾವಿಸಿದ್ದರು. ಸ್ವತ: ಸಿದ್ದು ಸಹ ಹಾಗೇ ಅಂದುಕೊಂಡಿದ್ದರು. ಆದರೆ ಮುಂದಿನ ವರ್ಷ ನಡೆಯಲಿರುವ ವಿದಾನಸಭೆಯ ಚುನಾವಣೆಗಳಿಗೆ ಪಕ್ಷದೊಳಗೆ ನಡೆಯುತ್ತಿರುವ ಸಿದ್ದತೆಗಳಲ್ಲಿ ಸಿದ್ದೂರವರನ್ನು ಸೇರಿಸಿಕೊಳ್ಳುವ ಯಾವ ಕ್ರಮವನ್ನು ಬಾಜಪ ಮಾಡಲಿಲ್ಲ. ಹೀಗಾಗಿ ಸಿದ್ದೂರವರು ಅನಿವಾರ್ಯವಾಗಿ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದರು. ಇದನ್ನೇ ಕಾದು ಕೂತಂತೆ ಕಂಡ ಬಾಜಪದ ನಾಯಕರುಗಳು ಸಿದ್ದೂರವರನ್ನು ಸಂಪರ್ಕಿಸುವ ಯಾವ ಪ್ರಯತ್ನವನ್ನೂ ಮಾಡದೆ ತಕ್ಷಣವೇ ಅವರ ರಾಜಿನಾಮೆಯನ್ನು ಸ್ಪೀಕರ್ ಅಂಗೀಕರಿಸುವಂತೆ ನೋಡಿಕೊಂಡರು.

ತನ್ನ ರಾಜೀನಾಮೆಯ ಬಗ್ಗೆ ವಿವರಣೆ ನೀಡಿದ ಸಿದ್ದು ಪಂಜಾಬಿನ ಅಭಿವೃದ್ದಿಯ ಕಿಟಕಿಗಳನ್ನು ಮುಚ್ಚಿದವರ ಜೊತೆಗೆ ತಾವು ಇರಲು ಸಾದ್ಯವಿಲ್ಲ. ಮನುಷ್ಯ ಸರಿ ತಪ್ಪುಗಳ ನಡುವೆ ಆಯ್ಕೆ ಬಂದಾಗ ಸರಿಯನ್ನು ಆಯ್ಕೆ ಮಾಡಿಕೊಳ್ಳಬೇಕೇ ಹೊರತು, ತಟಸ್ಥವಾಗಿರುವುದು ಸರಿಯಲ್ಲ. ನಾನು ಸ್ವಪ್ರತಿಷ್ಠೆಗಿಂತ ಪಂಜಾಬಿನ ಕಲ್ಯಾಣವೇ ಮುಖ್ಯವೆಂದು ಬಾವಿಸಿದವನು ಎಂದಿದ್ದಾರೆ. ಆದರೆ ಬಾಜಪದ ನಾಯಕರುಗಳು ಮಾತ್ರ ಸಿದ್ದುವಿನ ಈ ನಡೆ ಅವಕಾಶವಾದಿತನದಿಂದ ಕೂಡಿದ್ದು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಸಿದ್ದು ಆಮ್‍ಆದ್ಮಿ ಪಕ್ಷವನ್ನು ಸೇರುತ್ತಾರೆಂಬ ವದಂತಿಗಳಿಂದ ಸಂತಸಗೊಂಡಿರುವ ಆಪ್ ಮಾತ್ರ ರಾಜ್ಯದ ಹಿತದೃಷ್ಠಿಗಾಗಿ ತನ್ನÀ ಸಂಸತ್ ಸ್ಥಾನವನ್ನು ತೊರೆದಿರುವ ಸಿದ್ದುರವರ ನಡೆ ನಿಜಕ್ಕೂ ಹೊಗಳಿಕೆಗೆ ಅರ್ಹವಾದುದೆಂದು ಹೇಳಿದೆ. ಆದರೆ ಬಾಜಪ ಮತ್ತು ಅಕಾಲಿದಳದ ಮೈತ್ರಿಕೂಟ ಮಾತ್ರ ಸಿದ್ದುರವರ ಈ ನಡೆಯನ್ನು ವಿಶ್ವಾಶಘಾತುಕತನವೆಂದು ಬಣ್ಣಿಸಿದ್ದಾರೆ.

ಒಟ್ಟಿನಲ್ಲಿ ಸಿದ್ದುರವರು ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಇದೀಗ ಪಂಜಾಬಿನಲ್ಲಿ ಬಾಜಪದ ಶಾಸಕಿಯಾಗಿರುವ ಅವರ ಪತ್ನಿ ಶ್ರೀಮತಿ ನವಜೋತ್ ಕೌರ್ ಅವರು ಕೂಡ ಬಾಜಪವನ್ನು ತೊರೆಯುತ್ತಾರೆಯೇ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಕೌರ್ ಅವರು ಹಿಂದಿನಿಂದಲೂ ತಮ್ಮದೇ ಮೈತ್ರಿ ಸರಕಾರದ ಹಲವು ತಪ್ಪು ನಡೆಗಳ ಬಗ್ಗೆ ಸಾರ್ವಜನಿಕವಾಗಿ ಟೀಕಿಸಿ ಪಕ್ಷದ ಕೆಂಗಣ್ಣಿಗೆ ತುತ್ತಾದವರಾಗಿದ್ದಾರೆ. ಸಿದ್ದು ರಾಜಿನಾಮೆಯ ನಂತರ ಆಕೆಯೂ ಪಕ್ಷವನ್ನು ತೊರೆಯಬಹುದೆಂಬ ನಿರೀಕ್ಷೆ ಸದ್ಯಕ್ಕಂತು ಹುಸಿಯಾಗಿದೆ. ಬಾಜಪದ ನಾಯಕರುಗಳು ಕೌರ್ ಜೊತೆ ಕೆಲವು ಸುತ್ತುಗಳ ಮಾತುಕತೆ ನಡೆಸಿದ ನಂತರ ತಾನಿನ್ನು ಪಕ್ಷ ತೊರೆದಿಲ್ಲ, ಬಾಜಪ ಅಕಾಲಿದಳದೊಂದಿಗಿನ ಮೈತ್ರಿಗಾಗಿ ಸಿದ್ದುವನ್ನು ಕಳೆದುಕೊಂಡಿದ್ದು, ಮುಂದಿನ ಚುನಾವಣೆಯಲ್ಲಿದು ಪಕ್ಷಕ್ಕೆ ಪ್ರತಿಕೂಲ ಪರಿಣಾಮ ಉಂಟುಮಾಡಬಹುದೆಂದು ಸೂಚ್ಯವಾಗಿ ಹೇಳಿದ್ದಾರೆ.ಸಿದ್ದು ಯಾವತ್ತಿಗೂ ತಮ್ಮ ನಿರ್ದಾರವನ್ನು ಬದಲಾಯಿಸುವುದಿಲ್ಲವೆಂದೂ ಅಭಿಪ್ರಾಯ ನೀಡಿದ್ದಾರೆ.

ಇಲ್ಲಿ ನಿಜವಾದ ಲಾಭವಾಗುತ್ತಿರುವುದು ಆಪ್ ಪಕ್ಷಕ್ಕೆ. ಈ ನಿಟ್ಟಿನಲ್ಲಿ ಅರವಿಂದ್ ಕೇಜ್ರೀವಾಲ್ ಸಿದ್ದುರವರೊಂದಿಗೆ ಹಲವು ಸುತ್ತುಗಳ ರಹಸ್ಯ ಮಾತುಕತೆಯನ್ನು ನಡೆಸಿದ್ದಾರೆಂಬ ವದಂತಿ ಹಬ್ಬಿದ್ದು ಮುಂದಿನ ವಿದಾನಸಭಾ ಚುನಾವಣೆ ಎದುರಿಸಲು ಕ್ಲೀನ್ ಇಮೇಜ್ ಇರುವ ಮತ್ತು ಗ್ರಾಮೀಣ ಪಂಜಾಬಿನಲ್ಲಿ ಜನಪ್ರಿಯತೆ ಪಡೆದಿರುವ ಸಿದ್ದುರವರಿಂದ ಆಪ್ ಪಕ್ಷಕ್ಕೆ ಹೆಚ್ಚು ಲಾಭವಾಗಲಿದೆಯೆಂದು ಹೇಳಲಾಗುತ್ತಿದೆ.

ಇದರಿಂದ ಈಗಾಗಲೇ ಆಡಳಿತ ವಿರೋದಿ ಅಲೆಯ ನಡುವೆಯೇ ಚುನಾವಣೆ ಎದುರಿಸಬೇಕಾಗಿ ಬಂದಿರುವ ಬಾಜಪ ಮತ್ತು ಅಕಾಲಿದಳದ ಮೈತ್ರಿಕೂಟಕ್ಕೆ ನವಜೋತ್ ಸಿಂಗ್ ಸಿದ್ದುರವರ ರಾಜಿನಾಮೆಯಿಂದಾಗಿ ಮತ್ತಷ್ಟು ಸಂಕಷ್ಟ ಎದುರಾಗಿರುವುದಂತು ಸತ್ಯ.

======

ಇದರ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಅವರು ಇನ್ನೊಂದು ಸ್ಪೋಟಕ ಸುದ್ದಿಯನ್ನು ಬಹಿರಂಗ ಗೊಳಿಸಿದ್ದಾರೆ: ಈಗ ಬಾಜಪದಿಂದ ಅಮಾನತಾಗಿರುವ ಮಾಜಿ ಕ್ರಿಕೇಟಿಗ  ಕೀರ್ತಿ ಆಜಾದ್ ಮತ್ತು ಶತ್ರುಘ್ನ ಸಿನ್ಹಾ ರವರು ಸಹ ಆದಷ್ಟು ಬೇಗ ಬಾಜಪ ತೊರೆದು ಆಪ್ ಸೇರಲಿದ್ದಾರೆಂದು ಟ್ವೀಟ್ ಮಾಡಿದ್ದಾರೆ.

ಇದರಲ್ಲಿ ಮುಖ್ಯವಾಗಿರುವುದು ಕೀರ್ತಿ ಆಜಾದ್ ಅವರ ಮುಂದಿನ ನಡೆ. ಯಾಕೆಂದರೆ ದೆಹಲಿ ಕ್ರಿಕೇಟ್ ಸಂಸ್ಥೆಯ ಆಡಳಿತಕ್ಕೆ ಸಂಬಂದಿಸಿದಂತೆ ಕೀರ್ತಿಯವರು ಕೇಂದ್ರ ಹಣಕಾಸು ಸಚಿವರಾದ ಅರುಣ್ ಜೇಟ್ಲಿಯವರ ವಿರುದ್ದ ಹಣ ದುರುಪಯೋಗದ ಆರಂಭ ಮಾಡಿದ್ದರು. ಈ ಕಾರಣಕ್ಕಾಗಿ ಕೀರ್ತಿಯವರನ್ನು ಪಕ್ಷದಿಂದ ಅಮಾನತ್ತು ಮಾಡಲಾಗಿತ್ತು. ಇದೀಗ ಅವರ ಪತ್ನಿ ಶ್ರೀಮತಿ ಪೂನಂ ಆಜಾದ್ ಸಹ ಪಕ್ಷ ತೊರೆದು ಆಪ್ ಸೇರಲಿದ್ದಾರೆಂಬುದು ಸುದ್ದಿಯಾಗಿದೆ. ಪೂನಂ ಸಹ ಬಾಜಪ ದೆಹಲಿ ಘಟಕದ ಮಾಜಿ ಉಪಾದ್ಯಕ್ಷೆಯಾಗಿದ್ದು ಮೂರು ಬಾರಿ ಬಾಜಪದ ರಾಷ್ಟ್ರೀಯ ಕಾರ್ಯಕಾರಿಯ ಸದಸ್ಯೆಯಾಗಿ ಕೆಲಸ ನಿರ್ವಹಿಸಿದ್ದು ಇದೀಗ ದೆಹಲಿಯ ಬಾಜಪದ ವಕ್ತಾರರಾಗಿ ಕೆಲಸ ಮಾಡುತ್ತಿದ್ದು ದೆಹಲಿಯ ಬಾಜಪದ ಮಹಿಳಾ ಕಾರ್ಯಕರ್ತರಲ್ಲಿ ಜನಪ್ರಿಯರಾಗಿದ್ದಾರೆ. ಕೀರ್ತಿ ಆಜಾದರ ಅಮಾನತಿನ ನಂತರ ಪೂನಂ ಅವರನ್ನು ಸಹ ಪಕ್ಷ ಕಡೆಗಣಿಸುತ್ತಿದೆಯೆಂಬ ಆರೋಪ ಬಾಜಪ ನಾಯಕರ ಮೇಲಿದ್ದು ಇದರಿಂದ ಬೇಸರಗೊಂಡಿರುವ ಪೂನಂ ಬಾಜಪ ತೊರೆದು ಆಪ್ ಸೇರುವ ಸಾದ್ಯತೆ ಹೆಚ್ಚಿದೆ. 

ಇನ್ನು ಮಾಜಿ ಸಿನಿಮಾ ನಟರೂ ಬಾಜಪದ ಬಿಹಾರದ ಮುಖ್ಯ ನಾಯಕರೂ ಆದ ಶತ್ರುಘ್ನಸಿನ್ಹಾರವರು ಸಹ ಬಾಜಪದ ನಾಯಕರುಗಳಿಂದ ನಿಲ್ರ್ಯಕ್ಷಕ್ಕೆ ಗುರಿಯಾಗಿದ್ದಾರೆ. ಕಳೆದ ಬಾರಿ ನಡೆದ ಬಿಹಾರದ ವಿದಾನಸಭಾ ಚುನಾವಣೆಗಳಲ್ಲಿ ಸಿನ್ಹಾರವರನ್ನು ಸರಿಯಾಗಿ ಬಳಸಿಕೊಳ್ಳದೆ ಪ್ರಚಾರದಿಂದ ದೂರವಿಟ್ಟು ಅದಕ್ಕೆ ಪ್ರತಿಯಾಗಿ ಸೋಲನ್ನಪ್ಪಿತು. ನಂತರವೂ ಸಿನ್ಹಾರವರಿಗೆ ಸೂಕ್ತವಾದ ಸ್ಥಾನಮಾನಗಳನ್ನು ಬಾಜಪ ನೀಡಿಲ್ಲವೆಂಬ ಹಿನ್ನೆಲೆಯಲ್ಲಿ ಸದ್ಯಕ್ಕೆ ಪಕ್ಷದ ಚಟುವಟಿಕೆಗಳಿಂದ ದೂರವಿರುವ ಅವರು ಸಹ ಕೆಲವೇ ದಿನಗಳಲ್ಲಿ ಆಪ್ ಸೇರಲಿದ್ದಾರೆಂಬ ಮಾತು ಕೇಳಿ ಬರುತ್ತಿದ್ದು, ಬಾಜಪದ ಮಟ್ಟಿಗಿದು ಸಿಹಿ ಸುದ್ದಿಯೇನಲ್ಲ.

ಒಟ್ಟಿನಲ್ಲಿ 2014 ರಲ್ಲಿ ಅಭೂತಪೂರ್ವ ಜಯಗಳಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಾಜಪದ ಮಧುಚಂದ್ರದ ದಿನಗಳು ಮುಗಿಯುತ್ತಿರುವಂತೆ ಕಾಣುತ್ತಿವೆ. ಆಡಳಿತ ಪಕ್ಷವೊಂದು ಎದುರಿಸಬೇಕಾದ ಎಲ್ಲ ರೀತಿಯ ಆಂತರೀಕ ಬಿರುಕುಗಳೂ ಆಪಕ್ಷದಲ್ಲಿ ಕಾಣತೊಡಗಿವೆ. ಆದರೆ ಇಂತಹ ಬಿರುಕುಗಳು ಮುಂದಿನ ವರ್ಷ ನಡೆಯಲಿರುವ ಹಲವು ರಾಜ್ಯವಿದಾನಸಭಾ ಚುನಾವಣೆಗಳ ಮೇಲೆ ಯಾವ ರೀತಿಯ ವ್ಯತಿರಿಕ್ತ ಪರಿಣಾಮಗಳು ಬೀರಬಹುದೆನ್ನುವುದನ್ನು ನಾವು ಕಾದು ನೋಡ ಬೇಕಾಗಿದೆ,

ಜುಲೈ 25, 2016

ಮಧುಸೂದನ್ ನಾಯರ್ ಕವಿತೆ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
25/07/2016
ಯಾರೂ ಅಷ್ಟು ಸುಲಭವಾಗಿ ಅಪರಿಚಿತರ
ಸಾಯಿಸುವುದಿಲ್ಲ,ನಿಮ್ಮ ಹಾಗೆ!
ನೀವು ನಂಬಿದ ದೇವರೂ ನಿಮ್ಮನ್ನು
ಕ್ಷಮಿಸಲಾರ ನೆನಪಿಡಿ.
ಅಮಾಯಕರ ಗುಂಡಿಗೆಗೆ ಹೊಡೆದ ಪ್ರತಿ ಗುಂಡೂ
ತಾಯಿಯೊಬ್ಬಳ ಎದೆಗೇನೇ ತಗುಲುವುದು
ಅಸಂಖ್ಯಾತ ಅನಾಥ ಹಸುಗೂಸುಗಳನ್ನು ಬೀದಿಯಲ್ಲಿ ಬಿಡುವುದು
ನಿಮಗೂ ಗೊತ್ತಿದೆ ಯಾವ ಧರ್ಮವೂ ಕೊಲ್ಲುವುದ ಅನುಮತಿಸುವುದಿಲ್ಲ
ಯಾವ ಗ್ರಂಥವೂ ರಕ್ತದ ಶಾಯಿಯಲ್ಲಿ ಬರೆಯಲ್ಪಟ್ಟಿರುವುದಿಲ್ಲ
ನೀವು ಕೊಂದ ಪ್ರತಿಯೊಬ್ಬನಿಗೂ
ಒಂದು ಗೂಡು
ಅದರೊಳಗಷ್ಟು ಅವನ ನಂಬಿದ ಜನರು
ಇದ್ದರು
ಸತ್ತವನೆದೆಯಲ್ಲಿ ಉಕ್ಕಿದ ನೆತ್ತರು
ತರುತ್ತದೆ ಬದುಕಿದವರ ಕಣ್ಣೊಳಗೆ ಕಣ್ಣೀರು
ಯಾವ ಹತ್ಯೆಯೂ ನಿಮ್ಮನ್ನು ಸ್ವರ್ಗದತ್ತ ಕರೆದೊಯ್ಯುವುದಿಲ್ಲ
ಯಾವ ಪ್ರಾರ್ಥನೆಯೂ ನಿಮ್ಮನ್ನು ಕ್ಷಮಿಸುವುದಿಲ್ಲ
ನಡೆದ ಹತ್ಯೆಗಳಿಗೆ ಪ್ರತಿಯಾಗಿ ನಿಮ್ಮನ್ನು ಕೊಲ್ಲುವುದು ಕಷ್ಟವೇನಲ್ಲ
ವ್ಯತ್ಯಾಸವಿಷ್ಟೆ ಕೊಲ್ಲುವವನನ್ನೂ ಕ್ಷಮಿಸುವ ನನ್ನ ನೆಲದಲ್ಲಿ
ನಿಮ್ಮಂತವರ ರಕ್ತ ಚೆಲ್ಲುವುದು ಬೇಡ
ಹಾಗೆ ನೋಡಿದರೆ ನಿಮ್ಮನ್ನು ಮನುಷ್ಯರೆಂದೇ ನಾವು ತಿಳಿದಿಲ್ಲ

ಜುಲೈ 22, 2016

ಮೇಕಿಂಗ್ ಹಿಸ್ಟರಿ: ಉತ್ಪಾದನೆಯ ನಾಶ

ಸಾಕೇತ್ ರಾಜನ್
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
22/07/2016
ನಾವೀಗಾಗಲೇ ನೋಡಿರುವಂತೆ, ಹತ್ತೊಂಭತ್ತನೇ ಶತಮಾನದ ಮೊದಲರ್ಧದಲ್ಲಿ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ನಾಶ ಮಾಡಲಾಯಿತು. ಇಡೀ ನೀರಾವರಿ ವ್ಯವಸ್ಥೆ, ಕೃಷಿ ಉತ್ಪನ್ನವನ್ನು ಸಂಸ್ಕರಿಸಲಿದ್ದ ನವೀನ ಉಪಕರಣಗಳು, ಶಸ್ತ್ರಾಸ್ತ್ರ ತಯಾರಿಸಲಿದ್ದ ಆಧುನಿಕ ಯಂತ್ರಗಳು, ನೂರಾರು ನೇಕಾರಿಕೆಗಳು, ಹಲವಾರು ಕುಲುಮೆಗಳು, ಅಸಂಖ್ಯಾತ ಭಟ್ಟಿಗಳು, ಅಸಂಖ್ಯಾತ ಎಣ್ಣೆ ಉತ್ಪಾದನಾ ಕೇಂದ್ರಗಳು – ಶತಮಾನಗಳಿಂದ ಜನಸಮೂಹದ ಶ್ರಮದಿಂದ ರೂಪಿಸಲ್ಪಟ್ಟ ವ್ಯವಸ್ಥೆಯನ್ನು ವಸಾಹತು ಚಂಡಮಾರುತ ಸೀಳಿ ಹಾಕಿತು. ಕನ್ನಡ ದೇಶದ ಸಂಪತ್ತಾಗಿದ್ದ ಈ ಉತ್ಪಾದನಾ ಮೂಲಗಳು ನಾಶವಾದವು. ಕಾರ್ಮಿಕರ, ಕಸುಬುದಾರರ, ರೂಪುಗೊಳ್ಳುತ್ತಿದ್ದ ಬಂಡವಾಳಶಾಯಿಗಳು ಮತ್ತು ವರ್ತಕರ ಕಾರ್ಯಕ್ಷೇತ್ರ, ಕಾರ್ಖಾನೆ ಮತ್ತು ವ್ಯಾಪಾರಸ್ಥಳಗಳೆಲ್ಲವೂ ಲೂಟಿಯಾದವು, ಗುಜರಿ ಸೇರಿದವು. ರೈತರ ಭೂಮಿ ಬಡ್ಡಿವ್ಯಾಪಾರಸ್ಥರ ಕೈವಶವಾಯಿತು ಮತ್ತವರು ಹೊಸ ಮಾಲೀಕರಾದರು. ಈ ಕಾಲಘಟ್ಟದಲ್ಲಿ ಉತ್ಪಾದನೆ ಕುಸಿತ ಕಂಡಿತು. ಸಾಮಾಜಿಕ ಸಂಪತ್ತಿನ ಈ ವ್ಯಾಪಕ ನಾಶ, ವಸಾಹತುಶಾಹಿ ಉದ್ಘಾಟಿಸಿದ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿತ್ತು. ಕಾರ್ಲ್ ಮಾರ್ಕ್ಸ್ ಈ ವಿನಾಶ ಉಂಟುಮಾಡುವ ಪರಿಣಾಮಗಳನ್ನು ಗ್ರಹಿಸಿದ್ದ. ತನ್ನ ಕಣ್ಣಮುಂದೆ ತೆರೆದುಕೊಂಡ ಅಪಾರ ಹಿಂಸೆಗೆ ಸಾಕ್ಷಿಯಾಗಿದ್ದ ಕಾರ್ಲ್ ಮಾರ್ಕ್ಸ್ ಬರೆಯುತತಾರೆ: “ಇಂಗ್ಲೆಂಡ್ ಭಾರತ ಸಮಾಜದ ಚೌಕಟ್ಟನ್ನು ಸಂಪೂರ್ಣವಾಗಿ ಮುರಿದು ಹಾಕಿದೆ. ಪುನರ್ ನಿರ್ಮಿಸುವ ಯಾವುದೇ ಚಿನ್ಹೆಯೂ ಸದ್ಯಕ್ಕೆ ಕಾಣಿಸುತ್ತಿಲ್ಲ. ಮುಂಚಿನ ದಿನಗಳ ಸರ್ವನಾಶ ಮತ್ತು ಹೊಸತೇನೂ ಸೃಷ್ಟಿಯಾಗದ ಕಾರಣ, ತನ್ನಳೆಯ ಪರಂಪರೆಯನ್ನು ಕಳೆದುಕೊಂಡ ಮತ್ತು ತನ್ನಡೀ ಇತಿಹಾಸವನ್ನು ಕಳೆದುಕೊಂಡ ಬ್ರಿಟನ್ನಿನ ಆಳ್ವಿಕೆಯಲ್ಲಿರುವ ಹಿಂದೂಸ್ತಾನದಲ್ಲಿ ಪ್ರಸ್ತುತ ದುಃಖದ ಜೊತೆಗೆ ವ್ಯಾಕುಲತೆಯೂ ಸೇರಿಕೊಂಡಿದೆ. 

ಬ್ರಿಟೀಷರು ಹಿಂದೂಸ್ಥಾನದ ಮೇಲೆ ಹೇರಿರುವ ಈ ದುಃಖಾವಸ್ಥೆ, ವಿಭಿನ್ನವಾಗಿದೆ ಮತ್ತು ಇದುವರೆಗೆ ಹಿಂದೂಸ್ಥಾನ ಅನುಭವಿಸಿದ ಎಲ್ಲಾ ದುಃಖಕ್ಕಿಂತಲೂ ಭೀಕರವಾಗಿದೆ ಎನ್ನುವುದರ ಬಗ್ಗೆ ಯಾವುದೇ ಅನುಮಾನವಿಲ್ಲ”. (248) 

ಈ ವಿನಾಶದ ಒಂದು ಪ್ರಮುಖ ಪರಿಣಾಮವೆಂದರೆ ಉತ್ಪಾದನೆಗೊಂಡ ವಸ್ತುಗಳ ಬೆಲೆ ಕುಸಿತ ಕಂಡಿದ್ದು, ಇದು ಉತ್ಪಾನೆಯಲ್ಲಿದ್ದ ಎಲ್ಲಾ ವರ್ಗದವರ ಮೇಲೂ ಗಂಭೀರ ಪರಿಣಾಮ ಉಂಟುಮಾಡಿತು ಮತ್ತು ಅಗತ್ಯವಸ್ತುಗಳ ಉತ್ಪಾದನೆಯ ಹೋರಾಟಕ್ಕೆ ತಡೆ ಹಾಕಿತು. ಶಾಮ ರಾವ್ ಈ ಬಿಕ್ಕಟ್ಟಿನ ಒಂದು ವಾಸ್ತವವನ್ನು ವಿವರಿಸುತ್ತಾರೆ. ಅವರು ಬರೆಯುತ್ತಾರೆ: “ಕೆಲವು ಆರ್ಥಿಕ ವಿಚಾರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದ್ದು ಕೂಡ ಈ ಸಮಯದಲ್ಲಿ ಮುಜುಗರ ಮೂಡಿಸಲು ಕಾರಣವಾಯಿತು. ಹೈದರ್ ಮತ್ತು ಟಿಪ್ಪುವಿನ ಕಾಲದಲ್ಲಿ ದೊಡ್ಡ ಮಟ್ಟದ ಸೈನ್ಯವನ್ನು ನಿರ್ವಹಿಸಲಾಗುತ್ತಿತ್ತು, ಇವರ ಸಲುವಾಗಿ ಹೆಚ್ಚಿನ ಪ್ರಮಾಣದ ಧಾನ್ಯ ಕಾಳುಗಳು ಮತ್ತು ಇತರೆ ವಸ್ತುಗಳಿಗೆ ಬೇಡಿಕೆಯಿರುತ್ತಿತ್ತು. ದೇಶದಲ್ಲಲ್ಲಿ ಶಾಂತಿಯ ವಾತಾವರಣ ಇಲ್ಲದೇ ಹೋದರೂ ನಿರುದ್ಯೋಗದ ಕುರಿತು ದೂರುಗಳಿರಲಿಲ್ಲ, ಹಣ ಖರ್ಚಾಗುತ್ತಿತ್ತು, ಎಲ್ಲ ವರ್ಗದ ಜನರಿಗೆ ಅನುಕೂಲಕರವಾಗುತ್ತಿತ್ತು. ಪೂರ್ಣಯ್ಯರ ದಿನಗಳಲ್ಲೂ ಕೂಡ ದೊಡ್ಡ ಬ್ರಿಟೀಷ್ ಸೈನ್ಯವಿತ್ತು, ರಾಜ್ಯದ ವಿವಿಧ ಭಾಗಗಳಲ್ಲಿ ಚಿಕ್ಕ ಚಿಕ್ಕ ತುಕಡಿಗಳಾಗಿ ಕಾರ್ಯನಿರ್ವಹಿಸುತ್ತಿತ್ತು, ಇದೇ ರೀತಿ ಹಂಚಿಹೋಗಿದ್ದ ದೊಡ್ಡ ಸಂಖೈಯ ಮೈಸೂರು ಸೈನ್ಯದ ಕಾರಣದಿಂದ, ಕೃಷಿಕರು, ಉತ್ಪಾದಕರು, ಕಲಾವಿದರು, ವರ್ತಕರು ಮತ್ತು ಇತರೆ ವರ್ಗದವರಿಗೆ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಲಭ್ಯವಿತ್ತು. ಆದರೆ 1810ರಷ್ಟರಲ್ಲಿ, ಬ್ರಿಟೀಷ್ ಸೈನ್ಯವಿದ್ದ ಪ್ರದೇಶಗಳ ಸಂಖೈ ಗಣನೀಯವಾಗಿ ಕಡಿಮೆಯಾಯಿತು ಮತ್ತು ಬ್ರಿಟೀಷ್ ಸೈನಿಕರ ಸಂಖೈಯೂ ಕಡಿಮೆಯಾಯಿತು. ತತ್ಪರಿಣಾಮವಾಗಿ, ಉತ್ಪನ್ನಗಳಿಗಿದ್ದ ಬೇಡಿಕೆಯೂ ಕಡಿಮೆಯಾಯಿತು, ವೆಚ್ಚವಾಗುವ ಹಣದಲ್ಲೂ ಕುಸಿತವಾಯಿತು. ಜೊತೆಜೊತೆಗೆ, ಉತ್ಪನ್ನಗಳಿಗಿದ್ದ ಬೇಡಿಕೆ ಕಡಿಮೆಯಾದಾಗ ಕೃಷಿಯಲ್ಲಿ ಹೆಚ್ಚಳವಾಯಿತು, ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಹೆಚ್ಚೆಚ್ಚು ಲಗ್ಗೆಯಿಟ್ಟಂತೆ ಅವುಗಳ ಬೆಲೆಯಲ್ಲೂ ಇಳಿತವಾಯಿತು. ವಾರ್ಷಿಕ ಸಬ್ಸಿಡಿಯನ್ನು ಮಾಸಿಕ ಕಂತುಗಳಲ್ಲಿ ಕಟ್ಟಬೇಕಿದ್ದದ್ದು ಕೂಡ ಈ ಬೆಲೆ ಕುಸಿತಕ್ಕೆ ಕಾರಣ…. 

ಮೈಸೂರು ಸರಕಾರ ಕಂಪನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರವೇ ನಿಯಮಿತವಾಗಿ ದುಡ್ಡು ಕಟ್ಟಲು ಯೋಗ್ಯವಾಗಿದೆಯಾ ಎಂದು ಗಮನಿಸುವುದು ಬ್ರಿಟೀಷ್ ರೆಸಿಡೆಂಟರಿಗಿದ್ದ ಆತಂಕವಾಗಿತ್ತು. ವ್ಯಾಪಾರದ ಇಳಿಮುಖದಿಂದಾಗಿ ಕಂದಾಯದ ಮೂಲವಾದ ಸೇಯರ್, ಅಬಕಾರಿ ಮತ್ತಿತರೆ ಆದಾಯ ಮೂಲಗಳಲ್ಲೂ ಕುಸಿತವಾಯಿತು ಮತ್ತು ಉಳಿದ ಏಕೈಕ ಮೂಲವೆಂದರೆ ಅದು ಭೂಮಿ….”(249) 

ಬೆಲೆ ಕುಸಿತದ ಕಾರಣದಿಂದಾಗಿ ಬಾಕಿಯಾದ ಮೊತ್ತವನ್ನು ತುಂಬುವ ಸಲುವಾಗಿ ಶರಾತ್ ವ್ಯವಸ್ಥೆ ಹೊರಹೊಮ್ಮಿತು ಎಂದು ಶಾಮ ರಾವ್ ಅಭಿಪ್ರಾಯ ಪಡುತ್ತಾರೆ. 

ಉತ್ಪಾದನೆಯ ಮೂಲಗಳಿಗಾದ ಹಾನಿ ಮತ್ತದರ ಜೊತೆಜೊತೆಗೆ ಕುಸಿದ ಬೆಲೆಗಳು ಉತ್ಪಾದನಾ ವರ್ಗವನ್ನು ಹೆಚ್ಚುಕಡಿಮೆ ಇಲ್ಲವಾಗಿಸಿಬಿಟ್ಟಿತ್ತು. ಸಾಲ ಮಾಡುವುದು, ವಸಾಹತು ಪೂರ್ವ ದಿನಗಳಲ್ಲೂ ಇದ್ದ ಸಂಗತಿಯೇ ಆಗಿತ್ತು; ಆದರೆ ಬಡತನ ಮತ್ತು ಉತ್ಪಾದನೆಯಿಂದ ದೂರ ಉಳಿಯುವಿಕೆಯ ಕಾರಣದಿಂದ ಈಗದ ಪೈಶಾಚಿಕ ರೂಪ ಪಡೆದುಕೊಂಡಿತ್ತು, ದಿವಾಳಿಯಾಗುವುದು ದ್ವಿಗುಣಗೊಂಡುಬಿಟ್ಟಿತ್ತು. ನಗರ ಮತ್ತು ಹಳ್ಳಿಯ ದೊಡ್ಡ ಜನಸಮೂಹ ಮೊದಲ ಬಾರಿಗೆ ಬಡ್ಡಿವ್ಯಾಪಾರಿಗಳ ಮತ್ತು ಕರ್ನಾಟಕದ ಮಾರುಕಟ್ಟೆಗೆ ಲಗ್ಗೆ ಇಟ್ಟ ಮಾರವಾಡಿ, ಸಿಂಧಿಯಾ ಮತ್ತು ಬನಿಯಾಗಳ ಕಾಲಿಗೆ ಸಿಕ್ಕ ಚೆಂಡಿನಂತಾದರು. ಅಮಿನಾ ಘೋಷ್ ಹೇಳುವಂತೆ “ಬ್ರಿಟೀಷರು ಹೇರಿದ ಹೊಸ ಪರಿಸ್ಥಿತಿಯಲ್ಲಿ…..ಬಡ್ಡಿವ್ಯಾಪಾರಿಗಳ ಬೆಳವಣಿಗೆ ಗಮನಾರ್ಹವಾಗಿತ್ತು”. (250) 

ಈ ಪರವಾಲಂಬಿ ಬಂಡವಾಳಶಾಹಿಗಳನ್ನು ಮೈಸೂರಿನ ಕಮಿಷನರ್ ಆಗುತ್ತಿದ್ದಂತೆ ಮಾರ್ಕ್ ಕಬ್ಬನ್ ಪ್ರೋತ್ಸಾಹ ನೀಡಿದರು, ಈ ಬೇಟೆಗಾರ ಸಮಾಜಕ್ಕೆ ರಾಜ್ಯವೇ ಬೆನ್ನೆಲುಬಾಗುವಂತೆ ನೋಡಿಕೊಂಡರು. ಫಣಿ ಮತ್ತಿತರರು ಕಬ್ಬನ್ ಪರಿಚಯಿಸಿದ ಈ ವಿಧಾನವನ್ನು ಮತ್ತು ತೆಗೆದುಕೊಂಡ ದುರಾಡಳಿತದ ಕ್ರಮಗಳನ್ನು ವಿವರಿಸಿದರು. 

“…..ಸಾಲ ಮಾಡುವುದು ಮತ್ತು ಸಾಲಗಾರರೊಂದಿಗೆ ನಡೆದುಕೊಳ್ಳುವ ರೀತಿಯಲ್ಲಿ ಅಪಾರ ಬದಲಾವಣೆಗಳಾಯಿತು… 

ಸರಕಾರದ ಹೊಸ ಕಾನೂನು ಹೇಳುತ್ತದೆ: ‘ಪೇಶ್ಕಾರ್ ಬಂದ ಅರ್ಜಿಯ ಆಧಾರದ ಮೇಲೆ ಒಂದು ಪುಸ್ತಕದಲ್ಲಿ ಸಾಲ ವಸೂಲಾತಿಗಾಗಿ ಅರ್ಜಿ ಹಾಕಿದವನ ಹೆಸರು ಬರೆದುಕೊಂಡು, ಸಾಲಗಾರನ ಹೆಸರು, ಸಾಲದ ಮೊತ್ತ, ಯಾವಾಗ ಮತ್ತು ಯಾಕಾಗಿ ಸಾಲ ನೀಡಲಾಗಿತ್ತು ಎನ್ನುವುದನ್ನು ನಮೂದಿಸಿಕೊಂಡ ನಂತರ ವಿಚಾರಣೆಗೆ ಒಂದು ದಿನವನ್ನು ಗೊತ್ತು ಮಾಡಬೇಕು. ವಿಚಾರಣೆಯನ್ನು ದೂರು ಸ್ವೀಕರಿಸಿದ ಎಂಟನೇ ದಿನಕ್ಕೆ ನಿಗದಿಪಡಿಸಲಾಗುತ್ತಿತ್ತು ಮತ್ತು ತೀರ್ಪು ಹೇಳಿದ ನಂತರ ತೀರ್ಪು ಜಾರಿಗೆ ಬರಲು 35 ದಿನಗಳ ಕಾಲಾವಕಾಶವಿರುತ್ತಿತ್ತು’. ಸಾಲ ಮರುಪಾವತಿಸಲಾಗದವರನ್ನು ಜೈಲಿಗೆ ನೂಕುವ ಕಾನೂನನ್ನು ಪ್ರಥಮ ಬಾರಿಗೆ ಪರಿಚಯಿಸಲಾಯಿತು ಮತ್ತು ಮುಂದಿನ ಹೆಜ್ಜೆಯಂತೆ, ‘ಸಾಲಗಾರ ಒಂದಾದರೂ ಕಂತನ್ನು ಕಟ್ಟಲು ವಿಫಲನಾದರೆ, ಸಾಲ ನೀಡಿದವನ ಅರ್ಜಿಯ ಆಧಾರದ ಮೇಲೆ ಸಾಲಗಾರನ ಆಸ್ತಿಯನ್ನು ಜಫ್ತಿ ಮಾಡಿ ನ್ಯಾಯಾಲಯದ ಮೂಲಕ ಹರಾಜು ಹಾಕಲಾಗುವುದು’. ನಿರೀಕ್ಷೆಯಂತೆ ಇದಕ್ಕೆ ಹೆಚ್ಚಿನ ವಿರೋಧವಿತ್ತು…..ಪ್ರತಿಭಟನೆಯ ನಡುವೆಯೂ ಸಾಲ ಮಾಡಿದ್ದಕ್ಕಾಗಿ ಜೈಲಿಗೆ ಹಾಕುವ ವ್ಯವಸ್ಥೆಯನ್ನು ಬ್ರಿಟೀಷರು ಪರಿಚಯಿಸಿದರು”. (251) 

ಈ ರೀತಿಯಾಗಿ ಕರ್ನಾಟಕದ ನ್ಯಾಯ ಮತ್ತು ಕಾನೂನು ವ್ಯವಸ್ಥೆ ಜಾರಿಗೆ ಬಂತು. ಕಾನೂನಿನ ರಚನೆ ನಡೆದಿದ್ದು ತೀರ್ವವಾದ ಬಿಕ್ಕಟ್ಟಿನ ನಡುವೆ, ಪ್ರತಿಭಟನೆಯ ನಡುವೆ ಮತ್ತು ಬಡವರು, ಸಾಲಗಾರ ಸಮೂಹದ ಆಸಕ್ತಿಗಳಿಗೆ ವಿರುದ್ಧವಾಗಿ. ರಕ್ತ ಹೀರುವ ಜೊತೆಗಾರರಿಗೆ ಅನುಕೂಲಕರವಾಗುವಂತಹ ವ್ಯವಸ್ಥೆಯನ್ನು ವಸಾಹತುಶಾಹಿ ಸ್ಥಾಪಿಸಿತು. 

ಕಾನೂನು ಭವನದೊಂದಿಗೆ ಗುರಿಯೂ ಬಂತು. ಕರಿ ಕೋಟು ಧರಿಸಿ ನ್ಯಾಯ ನೀಡಲು ಕುಳಿತ ವ್ಯಕ್ತಿ, ಜನಸಮೂಹದ ದೃಷ್ಟಿಯಿಂದ ತಮ್ಮನ್ನು ಸೆರೆಮನೆಗೆ ದೂಡುವ ಜೈಲರ್ ಮಾತ್ರ.

ಮುಂದಿನ ವಾರ
ಪರಾವಲಂಬಿ ಖರ್ಚುಗಳು, ಅಸ್ತವ್ಯಸ್ತಗೊಂಡ ಆರ್ಥಿಕತೆ