ಮಾರ್ಚ್ 10, 2016

ಬ್ರಾಹ್ಮಣ್ಯವ್ಯಾಧಿಗಳ ಸಾಂಸ್ಕೃತಿಕ ರಾಜಕಾರಣ

ಡಾ. ಅಶೋಕ್ ಕೆ ಆರ್
10/03/2016
ಬ್ರಾಹ್ಮಣ್ಯವ್ಯಾಧಿಗಳಿಂದ ನೀವು ಏನನ್ನಾದರೂ ಕಲಿಯಬೇಕೆಂದರೆ ಅದು ಅವರು ನಡೆಸುವ ಸಾಂಸ್ಕೃತಿಕ ರಾಜಕಾರಣವನ್ನು. ಕ್ರಿಮಿನಲ್ಲುಗಳನ್ನು ಹಿಡಿಯಲು ಕ್ರಿಮಿನಲ್ಲಿನಂತೆಯೇ ಯೋಚಿಸಬೇಕಂತೆ. ಬ್ರಾಹ್ಮಣ್ಯದ ಕುಟಿಲ ಮಾರ್ಗವನ್ನೆದುರಿಸಲು ಕುಟಿಲ ಮಾರ್ಗಗಳನ್ನೇ ಹಿಡಿಯುವ ಅನಿವಾರ್ಯತೆ ಖಂಡಿತವಾಗಿಯೂ ಇದೆ. ಇದನ್ನೆಲ್ಲ ಹೇಳುವುದಕ್ಕೆ ಕಾರಣ ನಿನ್ನೆ ದಿನ ಬೆಂಗಳೂರಿನ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನೋಡಿದ ಯಕ್ಷಗಾನ ಪ್ರಸಂಗದ ಕೆಲವು ಮಾತುಗಳು.

ಮನೆಗೆ ಕೂಗಳತೆಯಲ್ಲೇ ಇರುವ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಒಮ್ಮೆಯೂ ಕಾಲಿರಿಸಿರಲಿಲ್ಲ. ನಿನ್ನೆ ದಿನ ದೇವಸ್ಥಾನದಿಂದ ಮೈಕಿನ ದನಿ ಜೋರಾಗಿಯೇ ಕೇಳಿಬರುತ್ತಿತ್ತು. ಏನೋ ಕಾರ್ಯಕ್ರಮವಿರಬೇಕು ನೋಡಿ ಬರೋಣವೆಂದು ದೇವಸ್ಥಾನದ ಕಡೆಗೆ ಹೆಜ್ಜೆ ಹಾಕಿದರೆ ಅರೆರೆ! ಯಕ್ಷಗಾನ ನಡೆಯುತ್ತಿದೆ. ಸುಳ್ಯದಲ್ಲಿ ಕೆಲ ಸಮಯ ಕೆಲಸದಲ್ಲಿದ್ದಾಗ ಯಕ್ಷಗಾನವನ್ನು ನೋಡಿದ್ದೆ. ಟೆನ್ ಬೈ ಟೆನ್ ಸ್ಟೇಜಿನಲ್ಲಿ ನಡೆಯುವ ಯಕ್ಷಗಾನದಾಟ ಆಕರ್ಷಣೀಯ. ಹೊಸದಾಗಿ ನೋಡುವವರಿಗೆ ಶುರುವಿನಲ್ಲಿ ಒಂದಷ್ಟು ಬೇಸರವಾಗಬಹುದಾದರೂ ನೋಡುತ್ತ ನೋಡುತ್ತ ಕತೆಯೊಳಗೆ, ಭಾಗವತರ ದನಿಯೊಳಗೆ, ರಂಗದ ಮೇಲಿನ ನಟ – ನಟಿಯರ ಕುಣಿತದೊಳಗೆ ಕಳೆದುಹೋಗುವುದು ಗ್ಯಾರಂಟಿ. ಇಂತಹ ಯಕ್ಷಗಾನ ಮೂಡಿಸುವ ಅಸಹ್ಯವೆಂದರೆ ಸನಾತನ ಧರ್ಮ ರಕ್ಷಣೆಯ ಹೆಸರಿನಲ್ಲಿ ಪಾತ್ರಧಾರಿಗಳ ಕೈಲಿ ವರ್ಣಾಶ್ರಮ, ಜಾತಿ ವ್ಯವಸ್ಥೆಯನ್ನು ಬಲಪಡಿಸುವಂತಹ ಸಂಭಾಷಣೆಗಳನ್ನು ಹೇಳಿಸುವುದು. 

ನಿನ್ನೆ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಡೆದ ಯಕ್ಷಗಾನದ ಪ್ರಾರಂಭದಲ್ಲಿ ನಾರದ ಮುನಿ ಮತ್ತು ಹರಿಯ ನಡುವೆ ನಡೆವ ಮಾತುಕತೆಯಲ್ಲಿ ಹೇಗೆ ಭೂಮಿ ಮೇಲಿನ ಜನರು ವರ್ಣಾಶ್ರಮ ವ್ಯವಸ್ಥೆಯನ್ನು ಪಾಲಿಸದೆ ದುರುಳರಾಗಿದ್ದಾರೆ ಎನ್ನುವುದನ್ನು ವರ್ಣಿಸುವುದರಿಂದಲೇ ಪ್ರಾರಂಭವಾಯಿತು. ಮೊದಲು ನಾರದ ಮುನಿಯ ಪಾತ್ರಧಾರಿ ಅದನ್ನು ಹರಿಗೆ ತಿಳಿಸಿದರೆ ಮುಂದಿನ ದೃಶ್ಯದಲ್ಲಿ ಹರಿಯ ಬಾಯಿಂದ ವರ್ಣಾಶ್ರಮವನ್ನು ಹೇಗೆ ನಾಲ್ಕೂ ವರ್ಣದ ಜನರು ಹಾಳುಗೆಡವಿದ್ದಾರೆ ಎಂದು ವರ್ಣಿಸಲಾಯಿತು. ಹೆಚ್ಚಿನ ಆರೋಪ ಕೇಳಿಬಂದಿದ್ದು ಶೂದ್ರರ ಮೇಲೆಯೇ ಬಿಡಿ! ಹೋಮ ಯಜ್ಞ ನಡೆಸಿ ಹವಿಸ್ಸನ್ನು ಸಮರ್ಪಿಸಬೇಕಾದ ಬ್ರಾಹ್ಮಣರು ಆ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ, ಭಕ್ತಾಧಿಗಳು ಕೊಡುವ ದುಡ್ಡಿನ ಮೇಲೆಯೇ ಅವರ ಆಸಕ್ತಿಯೆಲ್ಲ; ಇನ್ನು ದೇಶ ರಕ್ಷಿಸಬೇಕಾದ ಕ್ಷತ್ರಿಯರು ತಮ್ಮ ರಕ್ಷಣೆ ತಾವು ಮಾಡಿಕೊಳ್ಳುತ್ತ ಕಾಲ ತಳ್ಳುತ್ತಿದ್ದಾರೆ; ವ್ಯಾಪಾರ ಮಾಡಬೇಕಾದ ವೈಶ್ಯರು ಹದಿನೇಳನೇ ಒಂದಂಶದಷ್ಟನ್ನು ತಾವು ಇಟ್ಟುಕೊಂಡು ಉಳಿದಿದ್ದನ್ನು ಭಂಡಾರಕ್ಕೆ ಒಪ್ಪಿಸಬೇಕಿತ್ತು, ಆದರೆ ಎಲ್ಲವನ್ನ ತಾವೇ ಇಟ್ಟುಕೊಳ್ಳುತ್ತಿದ್ದಾರೆ; ಇನ್ನು ಶೂದ್ರರು ಮೇಲಿನ ಮೂರು ಪಂಗಡಗಳ ಸೇವೆ ಮಾಡಬೇಕಿತ್ತು, ಕೃಷಿ ನಡೆಸಿ ಜೀವನ ನಡೆಸಬೇಕಿತ್ತು ಆದರವರು ಅದನ್ನು ಮಾಡದೆ ಅಹಂಕಾರದಿಂದ ಬದುಕುತ್ತಿದ್ದಾರೆ ಎನ್ನುವಂತಹ ಮಾತುಗಳನ್ನು ಪಾತ್ರಧಾರಿಗಳಿಂದ ಉದುರಿಸಿ ನೋಡುಗರಲ್ಲಿ ವರ್ಣಾಶ್ರಮ ಎಷ್ಟು ಶ್ರೇಷ್ಟವಾದದ್ದು ಎಂಬ ಭ್ರಮೆ ಹುಟ್ಟಿಸುವ ಕೆಲಸ ಮಾಡುವುದೇ ಬ್ರಾಹ್ಮಣ್ಯದ ಸಾಂಸ್ಕ್ರತಿಕ ರಾಜಕಾರಣ. ಕೆಲವೇ ಕಡೆ ಇಂತಹ ಮಾತುಗಳನ್ನು ಆಡಿ ಇನ್ನುಳಿದ ಭಾಗದಲ್ಲೆಲ್ಲ ಪೌರಾಣಿಕ ಕತೆಯನ್ನು ಅಚ್ಚುಕಟ್ಟಾಗ ನಿರ್ವಹಿಸಿಬಿಟ್ಟು ಆ ಮಾತುಗಳು ಜನರ ಮನದಲ್ಲುಳಿಯುವಂತೆ, ಆದರದವರಲ್ಲಿ ವಿರೋಧಿಸಬೇಕೆನ್ನುವ ಕಿಚ್ಚು ಮೂಡಿಸದಂತೆ ನೋಡಿಕೊಳ್ಳುವಲ್ಲಿ ವರ್ಣಾಶ್ರಮದ, ಬ್ರಾಹ್ಮಣ್ಯದ ವಾದಿಗಳು ಯಶಸ್ಸು ಕಾಣುತ್ತಾರೆ. 

ಯಕ್ಷಗಾನದಲ್ಲಿ ಇದೊಂದು ಅಪರೂಪದ ಘಟನೆಯೇನಲ್ಲ. ನಿನ್ನೆಯ ನಾಟಕದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು ತಮ್ಮ ಕೆಲಸವನ್ನೇ ಮಾಡುತ್ತ ‘ಚೂರು ಹಾದಿ ತಪ್ಪಿದ್ದಾರೆ’ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದರೆ ಕೃಷಿ ಬಿಟ್ಟ, ಅದಕ್ಕೂ ಮಿಗಿಲಾಗಿ ಬ್ರಾಹ್ಮಣ – ಕ್ಷತ್ರಿಯ – ವೈಶ್ಯರ ಸೇವೆ ಮಾಡುವುದನ್ನು ಮರೆತ ಶೂದ್ರರದ್ದು ಘೋರ ಅಪರಾಧದಂತೆ ಚಿತ್ರಿಸಲಾಗುತ್ತದೆ. ವರ್ಣಾಶ್ರಮದೊಳಗೂ ಬಿಟ್ಟುಕೊಳ್ಳದ ‘ದಲಿತ – ಅಸ್ಪೃಶ್ಯ’ರ ಬಗ್ಗೆ ಯಕ್ಷಗಾನದಲ್ಲಿ ಕೀಳಾಗಿ ಮಾತನಾಡುವುದು ಕೂಡ ಬಹಳಷ್ಟು ನಡೆಯುತ್ತದೆ. ಸುಳ್ಯದಲ್ಲಿ ನಡೆದ ನಾಟಕಗಳಲ್ಲಿ ಅದನ್ನು ಕೇಳಿಸಿಕೊಂಡಿದ್ದೆ. ಯಕ್ಷಗಾನ ಎಷ್ಟೇ ಉತ್ತಾನು ಉತ್ತಮ ಕಲೆಯಾದರೂ, ಯಕ್ಷಗಾನ ಸುಳ್ಯದ ದಿನಗಳನ್ನು ನನಗೆ ನೆನಪಿಸಿದರೂ ಕೊನೆಗೆ ಈ ಮೇಲು ಕೀಳಿನ ವ್ಯವಸ್ಥೆಯನ್ನು ಉಳಿಸುವ ಸಾಂಸ್ಕೃತಿಕ ರಾಜಕಾರಣದ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವ ಯಕ್ಷಗಾನವೆಂದರೆ ನನಗೊಂದಷ್ಟು ಅಸಹ್ಯ ಮೂಡಿಬಿಡುವುದು ಸುಳ್ಳಲ್ಲ.

ಮಾರ್ಚ್ 8, 2016

ಮುಖ್ಯಮಂತ್ರಿ ಸಾಂತ್ವನ 'ಹರೀಶ್' ಯೋಜನೆ.

ಕರ್ನಾಟಕ ಸರಕಾರ ಆರೋಗ್ಯ ಕ್ಷೇತ್ರಗಳಲ್ಲಿ ಜಾರಿ ಮಾಡಿದ ಮತ್ತೊಂದು ಉತ್ತಮ ಯೋಜನೆಯಿದು. ತಿಂಗಳುಗಳ ಕೆಳಗೆ ಬೈಕ್ ಆ್ಯಂಬುಲೆನ್ಸನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು. ಟ್ರಾಫಿಕ್ಕಿನಲ್ಲೇ ಆ್ಯಂಬುಲೆನ್ಸ್ ಸಿಕ್ಕಿಕೊಳ್ಳುವ ಸಂದರ್ಭದಲ್ಲಿ ತುರ್ತು ಪ್ರಥಮ ಚಿಕಿತ್ಸೆಯನ್ನು ನೀಡಲು ಬೈಕ್ ಆ್ಯಂಬುಲೆನ್ಸ್ ಸಹಕಾರಿಯಾಗುತ್ತಿತ್ತು. ಈಗ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ತ್ವರಿತವಾಗಿ ಉಚಿತವಾಗಿ ಸಿಗಲು ಈ ಯೋಜನೆ ಸಹಕಾರಿಯಾಗಲಿದೆ. ಯಾವುದೇ ಅಪಘಾತದಲ್ಲೂ ತೀರ್ವವಾಗಿ ಗಾಯಗೊಂಡಿದ್ದಾಗ ಮೊದಲ ಕೆಲ ಘಂಟೆಗಳಲ್ಲಿ ಸಿಗುವ ಚಿಕಿತ್ಸೆಗೆ ಪ್ರಾಮುಖ್ಯತೆ ಹೆಚ್ಚು. 108 ಆ್ಯಂಬುಲೆನ್ಸುಗಳು ಅತ್ಯಂತ ತ್ವರಿತವಾಗಿ ಪೆಟ್ಟು ಬಿದ್ದವರನ್ನು ಆಸ್ಪತ್ರೆಗೆ ದಾಖಲಿಸಲು ಸಹಕಾರ ನೀಡುತ್ತಿವೆ. ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ಹಣದ ಕೊರತೆಯಿಂದ ಚಿಕಿತ್ಸೆ ತಡವಾಗಿಬಿಡುತ್ತದೆ. ಸರಕಾರದ ಈ ಹೊಸ ಯೋಜನೆ ಅಪಘಾತದಲ್ಲಿ ಗಾಯಗೊಂಡವರಿಗೆ ಇಪ್ಪತ್ತೈದು ಸಾವಿರ ರುಪಾಯಿಗಳಷ್ಟು ಸಹಾಯಧನ ನೀಡುವುದಾಗಿ ಘೋಷಿಸಿದೆ. ಸರಕಾರೀ ಆಸ್ಪತ್ರೆಗಳ ಮೂಲಭೂತ ಸೌಲಭ್ಯಗಳನ್ನು ಉತ್ತಮಗೊಳಿಸುವುದು ಈ ಯೋಜನೆಯಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಪ್ರಯೋಜನಕಾರಿ. ಸರಕಾರದ ಯೋಜನೆಯಾಗಷ್ಟೇ ಹೆಸರಾಗಿಬಿಡಬಹುದಾಗಿದ್ದ ಈ ಮುಖ್ಯಮಂತ್ರಿ ಸಾಂತ್ವನ ಯೋಜನೆಗೆ ಒಂದು ಮಾನವೀಯತೆಯ ಸ್ಪರ್ಶ ಸಿಕ್ಕಿದ್ದು 'ಹರೀಶ್' ಎಂಬ ಯುವಕನಿಂದ. ಈ ಯೋಜನೆಯ ಪೂರ್ಣ ಹೆಸರು "ಮುಖ್ಯಮಂತ್ರಿ ಸಾಂತ್ವನ 'ಹರೀಶ್' ಯೋಜನೆ".

ನಿಮ್ಮಲ್ಲಿ ಬಹಳಷ್ಟು ಜನರು ಆ ವೀಡಿಯೋ ನೋಡಿರುತ್ತೀರಿ. ಲಾರಿಯೊಂದು ಹರಿದ ಪರಿಣಾಮ ಹರೀಶ್ ಎಂಬ ಯುವಕನ ದೇಹ  ಎರಡು ತುಂಡಾಗಿತ್ತು. ದೇಹ ತುಂಡಾದರೂ, ರಕ್ತ ಹರಿಯುತ್ತಿದ್ದರೂ ಹರೀಶ ಇನ್ನೂ ಜೀವಂತವಾಗಿದ್ದ. ಕೈಯಾಡಿಸುತ್ತಿದ್ದ, ಮಾತನಾಡುತ್ತಿದ್ದ. ಕ್ಷಣದ ನಂತರ ತನ್ನ ದೇಹ ತುಂಡಾಗಿರುವುದು ಗಮನಕ್ಕೆ ಬಂದಾಗ ತಲೆ ತಲೆ ಚೆಚ್ಚಿಕೊಳ್ಳುತ್ತಿದ್ದ, ನೀರು ಕೇಳುತ್ತಿದ್ದ. ಹೈವೇಯಲ್ಲಿ ವಾಹನಗಳು ತಮ್ಮ ಪಾಡಿಗೆ ತಾವು ಹೋಗುತ್ತಿದ್ದರು. ವೀಡಿಯೋ ಮಾಡುತ್ತಿದ್ದ ಜನರು ದೂರದಲ್ಲೇ ನಿಂತಿದ್ದರು; ಯಾರೊಬ್ಬರೂ ಅವನಿಗೆ ನೀರು ನೀಡಲಿಲ್ಲ. ಇಂತಹ ಭೀಭತ್ಸ ದೃಶ್ಯ ನೋಡಿದ ಜನರು ಗಾಬರಿಯಾಗಿ ದೂರದಲ್ಲೇ ನಿಂತುಬಿಟ್ಟರು ಎಂದೇ ಅಂದುಕೊಳ್ಳೋಣ. ಪುಣ್ಯಕ್ಕೆ ಒಬ್ಬರ್ಯಾರೋ ಆ್ಯಂಬುಲೆನ್ಸಿಗೆ ಫೋನಾಯಿಸಿದ್ದರು. ಆ್ಯಂಬುಲೆನ್ಸ್ ಶೀಘ್ರದಲ್ಲೇ ಬಂತು. ಜನರ ಮಾನವೀಯತೆ ಎಷ್ಟರಮಟ್ಟಿಗೆ ಕುಲಗೆಟ್ಟುಹೋಗಿತ್ತೆಂದರೆ ಕೊನೆಗೆ ಆ್ಯಂಬುಲೆನ್ಸ್ ಚಾಲಕ ಗೋಗರೆದರೂ ಹೆಚ್ಚಿನವರು ಹರೀಶನನ್ನು ಮೇಲೆತ್ತಿ ಆ್ಯಂಬುಲೆನ್ಸಿಗೆ ಹಾಕಲು ಮುಂದೆ ಬರಲಿಲ್ಲ. ಮಾನವೀಯತೆಯ ಮೇಲಿನ ನಂಬುಗೆಯನ್ನೇ ಅಲುಗಾಡಿಸಬಹುದಾದ ಇಂತಹ ಘಟನೆಯಲ್ಲಿ ಮಾನವೀಯತೆಯನ್ನು ಸೃಜಿಸಿದ್ದು ಕಾಲುಗಳೆರಡನ್ನೂ ಕಳೆದುಕೊಂಡು ಲೀಟರುಗಟ್ಟಲೆ ರಕ್ತವನ್ನು ಕಳೆದುಕೊಂಡು ಒದ್ದಾಡುತ್ತಿದ್ದ ಹರೀಶ. ಸಾಯುವುದು ಗೊತ್ತಾಗಿಬಿಟ್ಟಿತ್ತವನಿಗೆ. ಸಾಯುವ ಮುಂಚೆ ನನ್ನ ದೇಹದ ಅಂಗಾಂಗಗಳನ್ನು ಉಪಯೋಗವಾಗುವವರಿಗೆ ದಾನವಾಗಿ ಕೊಟ್ಟುಬಿಡಿ ಎಂದು ಹೇಳಿ ಸತ್ತುಹೋದ. ಲಾರಿ ಹರಿದಿದ್ದ ಪರಿಣಾಮವಾಗಿ ಉಳಿದ ಅಂಗಗಳ್ಯಾವುವೂ ಉಪಯೋಗಿಸುವ ಪರಿಸ್ಥಿತಿಯಿರಲಿಲ್ಲ. ಕೊನೆಗಾತನ ಎರಡು ಕಣ್ಣುಗಳನ್ನು ದಾನವಾಗಿ ನೀಡಲಾಯಿತು. ನಂತರದ ದಿನದಲ್ಲಿ ಹರೀಶನ ಊರಿನವರೆಲ್ಲರೂ ಕಣ್ಣುದಾನ ಮಾಡಲು ಮುಂದಾದ ಬಗ್ಗೆ ವರದಿಯಾಯಿತು. ಮುಖ್ಯಮಂತ್ರಿ ಸಾಂತ್ವನ ಯೋಜನೆ ಎಂದಷ್ಟೇ ಇದ್ದ ಹೆಸರಿಗೆ 'ಹರೀಶನ' ಹೆಸರು ಸೇರಿಸಲು ಸಲಹೆ ನೀಡಿದ್ದು ಆರೋಗ್ಯ ಸಚಿವ ಯು.ಟಿ.ಖಾದರ್. ಸಾವು ಕದ ತಟ್ಟುವಾಗಲೂ ಅಂಗ ದಾನದ ಬಗ್ಗೆ ಯೋಚಿಸಿದ 'ಹರೀಶ'ನ ಹೆಸರನ್ನು ಇಂತಹ ಯೋಜನೆಗೆ ಇಟ್ಟಿರುವುದು ಅತ್ಯಂತ ಸೂಕ್ತವಾದ ನಿರ್ಧಾರ. 

ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯ ಹೆಸರು ಕೇಳಿದಾಗಲೆಲ್ಲ ಹರೀಶನೆಂಬ ಯುವಕನ ಕೊನೆಯ ಕ್ಷಣಗಳಲ್ಲಿ ನಮ್ಮ ಜನ ತೋರಿದ ಅಮಾನವೀಯತೆಯ ನೆನಪೂ ಆಗಲಿ, ನಾಳೆ ದಿನ ನಮ್ಮ ಕಣ್ಣ ಮುಂದೆಯೇ ಯಾರೋ ಅಪಘಾತದಲ್ಲಿ ನೋವುಣ್ಣುತ್ತಿರುವಾಗ ಕೊನೆ ಪಕ್ಷ ಒಂದು ಗುಟುಕು ನೀರನ್ನು ಕೊಡುವ ಮಾನವೀಯತೆಯನ್ನಾದರೂ ನಮ್ಮಲ್ಲಿ ಮೂಡಿಸಲಿ........

This Green v/s That Green

Narasimhan Khadri
08/03/2015
"If someone had collected teardrops of all of us, our irrigation problems would have been solved" A farmer from the vidharba region had once said to a reporter. Vidharbha is notoriously called the suicide capital of India. .It is also a biological mystery as to how the people of this intensely water scarce region secrete so much of tears. 'Great' leader Ajit Pawar gave a novel solution to the water woes of vidharba. He said " Lets all urinate in the dams" ( I pray to god that he gets dysuria and every time he pees it burns).

Recent protests by farmers in karnataka when they blocked major highways leading to Bengaluru brought to the fore water problems in our own state. Our farmers might be lacking in land, credit, fertilizers, seeds, water, support prices etc, but one thing they have is highways that they can block. This is at least the case with the farmers of south Karnataka. Their unlucky counterparts of North Karnataka do not have even that. If they block Kushtagi- Kalburgi highway it would make hardly any difference to anyone. CM Siddu would not lose even a wink of sleep. 


On a serious note, these recent protests poses a serious dilemma among our policy framers. Farmers are demanding the expeditious completion of Yettinahole project- which in a nutshell is to block the west flowing river of Netravati and through lift irrigation divert it to the water scarce regions of Kolar and chickballapur. This is only a part of the comprehensive irrigation project recommended by G.S. Paramashivaiah report, which goes on to suggest the diversion of 11 more rivers flowing through the water surplus regions to the water scare region. All sounds hunky dory. But here lies the catch. All these rivers flow in the most ecologically fragile region of the Western Ghats( It is a biological hotspot and also extremely critical for the survival of the entire human race in the Indian subcontinent). For this reason Yettinahole is still to get a 'green' signal from National Green Tribunal( Which is like a supreme court for all environmental litigations in India).
ಸಾಂದರ್ಭಿಕ ಚಿತ್ರ
This classical case of farmer interests on one side and ecological interests on the other , has tore even the 'left' political groups asunder. Our brothers from the left would normally jump to brand anything and everything as anti-poor and anti-environment. ( Just like our brothers from 'right' brand everything and everyone as anti national). Now even they are confused as to what stand they must take.

So what must one do? One thing all the stakeholders ( farmers , civil society, journalists, policy makers) must understand is that there is no quick fix to this tactical conundrum. It takes leaders with farsightedness, vision and patience to find a golden mean. Of coarse it is clear that CM Siddu is not at all equipped with any of these traits.

This problem hence is a 'fertile ground' ( pun intended) for future leaders.

It remains to be seen as to which green will win this battle- Green of the environment or the Green of the raitha sangha. Although it seems More likely that both the greens will lose the battle.

ದೇಶಭಕ್ತಿಯ ನೆಪದಲ್ಲಿ!

ಕು.ಸ.ಮಧುಸೂದನ
08/03/2016
ಅವತ್ತಿನಿಂದ ಇವತ್ತಿನೀ ಕ್ಷಣದವರೆಗೂ
ಹೊಡೆದಾಡುತ್ತಲೇ ಇದ್ದೇವೆ:
ಮೊದಮೊದಲು ಭರ್ಜಿಗಳ ಬಳಸಿ
ಆಮೇಲೆ ಕತ್ತಿ ಕೋವಿಗಳ
ಆಮೇಲಾಮೇಲೆ ರಾಕೆಟ್ಟು ಬಾಂಬುಗಳ!
ಈಗಂತೂ
ಅದೂ ಇದೂ ಅಂತೇನೂ ಇಲ್ಲ:
ಕೈಗಳಿಗೆ ಸಿಕ್ಕದ್ದನ್ನೆಲ್ಲ ಆಯುಧ ಮಾಡಿಕೊಳ್ಳುವ ಕಲೆ
ಕರಗತ ಮಾಡಿಕೊಂಡಿದ್ದೇವೆ!
ಕಂಪ್ಯೂಟರಿನ ಚಿಪ್ಪಿನಿಂದ ಹಿಡಿದೆ
ಮೊಬೈಲಿನ ಸಂದೇಶದವರೆಗೂ
ಎಲ್ಲವನೂ ಉಪಯೋಗಿಸಿ ಬಡಿದಾಡುತ್ತಿದ್ದೇವೆ
ಯಾರೇ ಕೇಳಿದರೂ ಯಾಕೆಂದು
ಕೊಡುತ್ತೇವೆ ಇಬ್ಬರೂ ಒಂದೇ ಉತ್ತರ:
ಇದರಲ್ಲೇನು ಇಲ್ಲ ಸ್ವಹಿತಾಸಕ್ತಿ
ಕಾಪಾಡಬೇಕಿದೆ ರಾಷ್ಟ್ರದ ಹಿತಾಸಕ್ತಿ!

ಮಾರ್ಚ್ 4, 2016

ಮಾರ್ಚ್ 3ರಂದು ಜೆ ಎನ್ ಯು ಕ್ಯಾಂಪಸ್ಸಿನಲ್ಲಿ ಕನ್ಹಯ್ಯ ಕುಮಾರ್ ಮಾಡಿದ ಭಾಷಣ.

ಸಾಂದರ್ಭಿಕ ಚಿತ್ರ
ಮಧ್ಯಂತರ ಜಾಮೀನು ಪಡೆದು ಹೊರಬಂದ ಕನ್ಹಯ್ಯಕುಮಾರ್ ಜೆ.ಎನ್.ಯು ಆವರಣದಲ್ಲಿ ಸಹವಿದ್ಯಾರ್ಥಿಗಳನ್ನುದ್ದೇಶಿಸಿ ಮಾಡಿದ ಭಾಷಣ.
ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ
04/03/2016(updated)
ಸಂಗಾತಿಗಳೇ,
ಜೆ ಎನ್ ಯು ಎಸ್ ಯು ಅಧ್ಯಕ್ಷನಾಗಿ ನಾನು, ನಮ್ಮನ್ನು ಬೆಂಬಲಿಸಿದ ಈ ದೇಶದ ಸಮಸ್ತ ಜನತೆಗೆ ನಿಮ್ಮೆಲ್ಲರ ಪರವಾಗಿ ಇಲ್ಲಿ ನೆರೆದಿರುವ ಮಾಧ್ಯಮಗಳ ಮೂಲಕ ಧನ್ಯವಾದ ಸಮರ್ಪಿಸುತ್ತೇನೆ. ನಮ್ಮ ಜೊತೆ ನಿಂತ ಪ್ರತಿಯೊಬ್ಬರಿಗೂ ನನ್ನ ಸಲಾಮ್. 

ಜಗತ್ತಿನ ಬೇರೆ ಬೇರೆ ಭಾಗಗಳ ಜನ ಕೂಡ ಜೆ ಎನ್ ಯು ಜೊತೆ, ಬಂಧಿತರಾದವರ ಜೊತೆ ನಿಂತು, ನಮಗಾಗಿ ದನಿ ಎತ್ತಿದ್ದಾರೆ. ಅವರೆಲ್ಲರಿಗೂ ನಿಮ್ಮ ಪರವಾಗಿ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. 

ಮೀಡಿಯಾದ ಮೂಲಕ ನಮಗೆ ಬೆಂಬಲ ಸೂಚಿಸಿದ ಎಲ್ಲರಿಗೂ, ಪತ್ರಕರ್ತರು, ಸಾಹಿತಿಗಳು, ರಾಜಕಾರಣಿಗಳು, ರಾಜಕಾರಣದಿಂದ ಹೊರತಾಗಿರುವವರು – ಹೀಗೆ ಯಾರೆಲ್ಲ ಜೆ ಎನ್ ಯು ಗೆ ನ್ಯಾಯ ದೊರಕಿಸಿಕೊಡಲು ಹೋರಾಡ್ತಿದ್ದಾರೋ, ರೋಹಿತ್ ವೇಮುಲನ ಸಾವಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿದ್ದಾರೋ ಅವರೆಲ್ಲರಿಗೂ ಲಾಲ್ ಸಲಾಮ್ ಸಲ್ಲಿಸುವ ಮೂಲಕ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. 

ಹಾಗೇ ಪಾರ್ಲಿಮೆಂಟಿನಲ್ಲಿ ಕುಳಿತು ಯಾವುದು ಸರಿ, ಯಾವುದು ತಪ್ಪು ಅಂತ ನಿಶ್ಚಯಿಸುವ ಈ ದೇಶದ ದೊಡ್ಡ ದೊಡ್ಡ ಮಹಾನುಭಾವರಿಗೆ ಧನ್ಯವಾದ, ಅವರ ಪೊಲೀಸರಿಗೆ ಧನ್ಯವಾದ, ಅವರ ಮುಖವಾಣಿಯಂತಿರುವ ಮೀಡಿಯಾದ ಆ ಚಾನೆಲ್ಲುಗಳಿಗೂ ನನ್ನ ಧನ್ಯವಾದ. ನಮ್ಮ ಕಡೆ ಒಂದು ಮಾತಿದೆ. ಹೆಸರು ಹಾಳಾದರೇನು ಹೋಯ್ತು? ಹೆಸರಂತೂ ಬಂತು!! ಜೆ ಎನ್ ಯುವಿನ ಹೆಸರುಗೆಡಿಸೋಕೆಂದೇ ಅವರು ಪ್ರೈಮ್ ಟೈಮಿನಲ್ಲಿ ಜಾಗ ಕೊಟ್ಟರು. ಅವರಿಗೂ ನನ್ನ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. 

ನಮಗೆ ಯಾರ ಕುರಿತೂ ದ್ವೇಷವಿಲ್ಲ. ಅದರಲ್ಲೂ ಎಬಿವಿಪಿ ಕುರಿತು ಇಲ್ಲವೇ ಇಲ್ಲ. ಬದಲಿಗೆ ಸಹಾನುಭೂತಿಯಿದೆ. ನಮ್ಮ ಕ್ಯಾಂಪಸ್ಸಿನಲ್ಲಿರುವ ಎಬಿವಿಪಿ ಹೊರಗಿನ ಎಬಿವಿಪಿಗಿಂತ ಹೆಚ್ಚು ರ್ಯಾಷನಲ್ ಆಗಿದೆ. ಚರ್ಚೆಯಲ್ಲಿ ನಾವು ಹೇಗೆ ಅವರ ನೀರಿಳಿಸಿದೆವೆಂದು ನೀವು ನೋಡಿದ್ದೀರಿ. ಅವರ ಬಗ್ಗೆ ನಮಗೆ ಯಾವುದೇ ಕೆಟ್ಟ ಭಾವನೆ ಇಲ್ಲ. ಅವರಿಗಿಂತ ಹೆಚ್ಚು ನಾವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿದ್ದೀವಿ. ನಾವು ನಿಜಕ್ಕೂ ಸಂವಿಧಾನದಲ್ಲಿ ನಂಬಿಕೆ ಇರಿಸಿದ್ದೀವಿ. ಆದ್ದರಿಂದ ಎಬಿವಿಪಿಯನ್ನು ಶತ್ರುವಿನಂತೆ ನೋಡದೆ ವಿರೋಧ ಪಕ್ಷವೆಂದು ಪರಿಗಣಿಸ್ತೀವಿ. ಎಬಿವಿಪಿ ಗೆಳೆಯರೇ, ನಾನು ನಿಮ್ಮನ್ನು ಬೇಟೆಯಾಡೋದಿಲ್ಲ. ಶಿಕಾರಿಗೆ ಲಾಯಕ್ಕಾದವರನ್ನು ಮಾತ್ರ ಶಿಕಾರಿ ಮಾಡಲಾಗ್ತದೆ. 

ಜೆ ಎನ್ ಯು ಮೊದಲ ಬಾರಿಗೆ ಇಷ್ಟು ದೊಡ್ಡ ದನಿಯಾಗಿ ಎದ್ದು ನಿಂತಿದೆ. ಸರಿಯನ್ನು ಸರಿಯೆಂದೂ ತಪ್ಪನ್ನು ತಪ್ಪೆಂದೂ ಗಟ್ಟಿಯಾಗಿ ಕೂಗಿ ಹೇಳುವ ಎದೆಗಾರಿಕೆ ತೋರಿದೆ. ಇದು ಜೆ ಎನ್ ಯುವಿನ ತಾಖತ್ತು. ನಮಗೆ ಆಜಾದಿ ಬೇಕು. ಹೌದು. ಆಜಾದಿ ಬೇಕು ಅಂತ ಕೇಳೋದು ತಪ್ಪೇನು? ಈ ದೇಶದ ನೆಲದಲ್ಲಿ ನಿಂತು ಸರಿಯನ್ನು ಸರಿ ತಪ್ಪನ್ನು ತಪ್ಪು ಅಂತ ಹೆಳುವ ಆಜಾದಿ ನಮಗೆ ಬೇಕು. ಒಂದು ಮಜದ ವಿಷಯ ಗೊತ್ತಾ? ನಮ್ಮದು ಆಯಾ ಕ್ಷಣದ ಪ್ರತಿಕ್ರಿಯೆ. ಆಯಾ ಸಂದರ್ಭಗಳಿಗೆ ತಕ್ಕಂಥ ಸ್ಪಾಂಟೆನಸ್ ಆದ ಪ್ರತಿಕ್ರಿಯೆ. ಆದರೆ ಅವರದ್ದು ಪೂರ್ತಿ ಉಲ್ಟಾ. ಅವರದ್ದೆಲ್ಲ ಪೂರ್ವ ನಿಯೋಜಿತೆ. ಆದರೆ ನಮ್ಮದು ಆಯಾ ಹೊತ್ತಿಗೆ ನಮ್ಮ ಒಳಗಿನಿಂದ ಹೊಮ್ಮುವ ಪ್ರತಿಕ್ರಿಯೆ. ಅದಕ್ಕೇ ನಮ್ಮ ದನಿ ಗಟ್ಟಿಯಾಗಿದೆ. ನ್ಯಾಯವಾಗಿದೆ. ಈ ದೇಶದ ಸಂವಿಧಾನದಲ್ಲಿ, ದೇಶದ ಕಾನೂನಿನಲ್ಲಿ, ಈ ದೇಶದ ನ್ಯಾಯ ಪ್ರಕ್ರಿಯೆಯಲ್ಲಿ ನಮಗೆ ಭರವಸೆ ಇದೆ. ಹಾಗೇ, ಬದಲಾವಣೆಯೇ ಸತ್ಯ ಅನ್ನೋ ಮಾತಿನಲ್ಲೂ ಭರವಸೆ ಇದೆ. ಎಲ್ಲವೂ ಬದಲಾಗುತ್ತವೆ. ನಾವು ಬದಲಾವಣೆಯ ಪಕ್ಷದಲ್ಲಿ ನಿಂತಿದ್ದೀವಿ. ಬದಲಾವಣೆ ಸಾಧಿಸಿ ತೋರಿಸ್ತೀವಿ. ಸಂವಿಧಾನದ ಮೇಲೆ ನಮಗೆ ಸಂಫೂರ್ಣ ಭರವಸೆ ಇದೆ. ಸಂವಿಧಾನದ ಆಶಯಗಳ ಜೊತೆ ನಾವು ಗಟ್ಟಿಯಾಗಿ ನಿಲ್ತೀವಿ. ಪ್ರಸ್ತಾವನೆಯಲ್ಲಿ ಹೇಳಲಾಗಿರುವ ಅದರ ಎಲ್ಲ ಧಾರೆಗಳ ಜೊತೆ ಪ್ರವಹಿಸ್ತೀವಿ. ಸಮಾಜವಾದ, ಧರ್ಮನಿರಪೇಕ್ಷತೆ, ಸಮಾನತೆ – ಇವುಗಳ ಜೊತೆ ಬೆಸೆದುಕೊಂಡಿದ್ದೀವಿ. 

ನಾನು ಈ ಹಿಂದೆಲ್ಲ ಸಾಕಷ್ಟು ಪ್ರಶ್ನೆಗಳನ್ನ ಕೇಳ್ತಿದ್ದೆ. ನಾನಿವತ್ತು ಭಾಷಣ ಮಾಡೋದಿಲ್ಲ. ನನ್ನ ಅನುಭವಗಳನ್ನ ನಿಮ್ಮ ಜೊತೆ ಹಂಚಿಕೊಳ್ತೀನಿ. ಮೊದಲು ಭಾಷಣಕ್ಕೆ ಮುಂಚೆ ಸಿಕ್ಕಾಪಟ್ಟೆ ಓದ್ತಾ ಇದ್ದೆ, ವ್ಯವಸ್ಥೆಯನ್ನು ಛೇಡಿಸ್ತಿದ್ದೆ. ಈ ಸಲ ಓದಿದ್ದು ಕಡಿಮೆಯಾಗಿದೆ ಮತ್ತು ಛೇಡಿಸೋಕೆ ಸಾಕಷ್ಟಿದೆ. ಒಬ್ರು ಹೇಳ್ತಾರೆ, ಜೆ ಎನ್ ಯು ನ ಜಾಲಾಡಿದೀನಿ ಅಂತ. ಅವರೊಂದಷ್ಟು ದಾಖಲೆ ಕೊಡ್ತಾರೆ. ಫಸ್ಟ್ ಹ್ಯಾಂಡ್ ಇನ್ಫರ್ಮೇಷನ್ ಇದೆ ಅಂತ ಹೇಳ್ತಾರೆ! ಈಗ ನ್ಯಾಯಾಲಯದ ಅಧೀನದಲ್ಲಿರೋ ಸಂಗತಿ ಬಗ್ಗೆ ನಾನು ಏನೂ ಹೇಳೋದಿಲ್ಲ. ಆಂದ್ರೆ ಒಂದು ಮಾತು, ಸಂವಿಧಾನವನ್ನ ನಿಜಕ್ಕೂ ಪ್ರೀತಿಸುವ, ಬಾಬಾ ಸಾಹೇಬರ ಕನಸುಗಳನ್ನ ಸಾಕಾರಗೊಳಿಸಲು ಬಯಸುವ ಈ ದೇಶದ ಜನತೆ, ನಾನು ಏನು ಹೇಳಬಯಸ್ತಿದ್ದೀನಿ ಅನ್ನೋದನ್ನ ಇಷಾರೆಗಳಲ್ಲೇ ಅರ್ಥ ಮಾಡಿಕೊಂಡಿರುತ್ತೆ.

ಪ್ರಧಾನ ಮಂತ್ರಿ ಟ್ವೀಟ್ ಮಾಡಿದಾರೆ; ಹೇಳಿದಾರೆ, “ಸತ್ಯಮೇವ ಜಯತೆ!”. ನಾನೂ ಹೇಳ್ತೀನಿ, “ಪ್ರಧಾನ ಮಂತ್ರೀ ಜೀ, ನಿಮ್ಮ ಜೊತೆ ಬಹಳವೇ ಮತಭೇದವಿದೆ. ಆದ್ರೆ ಸತ್ಯಮೇವ ಜಯತೆಯ ಘೋಷ ಬರೀ ನಿಮ್ಮ ಪಾಲಿಗಲ್ಲ, ಈ ದೇಶದ ಪಾಲಿಗೂ ಇದೆ, ಸಂವಿಧಾನದ ಪಾಲಿಗೂ ಇದೆ. ನಾನೂ ಕೂಡ ಹೇಳ್ತೀನಿ, ಸತ್ಯಮೇವ ಜಯತೇ!” ಮತ್ತು ಸತ್ಯಕ್ಕೆ ಜಯವಾಗುತ್ತೆ, ಮತ್ತು ಈ ಹೋರಾಟದಲ್ಲಿ ತೊಡಗಿಕೊಂಡಿರುವ ಸಮಸ್ತ ಜನತೆಗಾಗಿ ನನ್ನ ಅನುಭವಗಳನ್ನ ಹಂಚಿಕೊಳ್ತೀನಷ್ಟೆ.  

ಮೊದಲನೆಯದಾಗಿ, ಕೆಲವು ವಿದ್ಯಾರ್ಥಿಗಳ ಮೇಲೆ ಒಂದು ರಾಜಕೀಯ ಅಸ್ತ್ರವಾಗಿ ದೇಶದ್ರೋಹದ ಆಪಾದನೆ ಹೊರಿಸಲಾಗಿದೆ ಅಂತ ಅಂದುಕೊಳ್ಬೇಡಿ. ಅದನ್ನ ತಿಳಿಯಬೇಕಿರೋದು ಹೀಗೆ. ನಾನಿದನ್ನ ಈ ಹಿಂದೆಯೂ ಬಹಳ ಸಲ ಹೇಳಿದೀನಿ. ನಾವು ಹಳ್ಳಿಯಿಂದ ಬಂದವರು. ನಿಮಗೆ ಈಗಾಗ್ಲೇ ನನ್ನ ಮನೆಜನರ ಪರಿಚಯವಾಗಿರಬೇಕು. ನಮ್ಮ ಕಡೆ ರೈಲ್ವೇ ಸ್ಟೇಷನ್ ಹತ್ರ ಆಗಾಗ ಜಾದೂ ಪ್ರದರ್ಶನ ನಡೀತಾ ಇರತ್ತೆ. ಜಾದೂಗಾರ ಜಾದೂ ತೋರಿಸ್ತಾನೆ, ಹೆಬ್ಬೆಟ್ಟಿನ ಮಂದಿ ಅದನ್ನ ನೋಡ್ತಾರೆ. ಜಾದೂ ತೋರಿಸಲು ಅವರು ಬಳಸೋದು ನಮ್ಮೆಲ್ಲರ ಮೆಚ್ಚಿನ ಉಂಗುರವನ್ನ. ಉಂಗುರ ಮುಷ್ಟಿಯಲ್ಲಿ ಹಿಡಿದು ಛೂಮಂತರ್ ಅಂದ್ರೆ ಅದು ಮಾಯವಾಗುತ್ತೆ. ಇಲ್ಲಾ, ಮಾಯವಾದ ುಂಗುರ ಬಂದುಬಿಡತ್ತೆ. ಈ ದೇಶ ಆಳೋರ ಕಥೆಯೂ ಹೀಗೇನೇ. ಅವ್ರು ಹೇಳ್ತಿದ್ರು, ಕಪ್ಪು ಹಣ ಬರುತ್ತೆ ಅಂತ. “ಹರ ಹರ ಮೋದಿ!! ಬೆಲೆ ಏರಿಕೆ ಗಗನ ಮುಟ್ಟಿದೆ. ಎಷ್ಟೂಂತ ಸಹಿಸ್ತೀರಿ? ಈ ಸಲ ಮೋದಿಯನ್ನ ಆರಿಸಿ” “ಸಬ್ ಕಾ ಸಾಥ್ ಸಬ್ ಕ ವಿಕಾಸ್” ಅಂತೆಲ್ಲ. ಆ ಎಲ್ಲ ಆಶ್ವಾಸನೆಗಳನ್ನ ಜನ ಇನ್ನೂ ನೆನಪಿಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ನಾವು ಭಾರತೀಯರು ಬಹಳ ಬೇಗ ಮರೀತೇವೆ. ಆದ್ರೆ ಈಸಲದ ತಮಾಷೆ ಎಷ್ಟು ಜೋರಿತ್ತು ಅಂದ್ರೆ, ಅದನ್ನ ಮರೆಯೋದಕ್ಕೇ ಆಗ್ತಿಲ್ಲ. ಈ ಜುಮ್ಲಾಗಳನ್ನ ಜನ ಮರೆಯುವಂತೆ ಮಾಡೋಕೆ ಅವರು ಪ್ರಯತ್ನಿಸ್ತಿದ್ದಾರೆ. ಮೊದಲು ಸುಳ್ಳುಗಳನ್ನ ಸೃಷ್ಟಿಸೋದು. ಆಮೇಲೆ ಈ ದೇಶದಲ್ಲಿ ಯಾರೆಲ್ಲ ರಿಸರ್ಚ್ ಸ್ಕಾಲರುಗಳಿದ್ದಾರೋ ಅವರ ಫೆಲೋಷಿಪ್ ನಿಲ್ಲಿಸಿಬಿಡೋದು. ಜನ ಆಗ ಏನ್ಮಾಡ್ತಾರೆ? “ಫೆಲೋಷಿಪ್ ಕೊಟ್ಬಿಡಿ, ಫೆಲೋಷಿಪ್ ಕೊಟ್ಬಿಡಿ” ಅಂತ ಬೆನ್ನು ಬೀಳ್ತಾರೆ. ಇವ್ರು ಹೇಳ್ತಾರೆ, ಮೊದಲೇನು ಕೊಡ್ತಿದ್ವೋ ಐದರಿಂದ ಎಂಟು ಸಾವಿರ… ಅಷ್ಟನ್ನೇ ಮುಂದುವರೆಸ್ತೀವಿ ಅಂತ. ಇದರರ್ಥ, ಹೆಚ್ಚಿಸೋ ಮಾತಿಗೆ ಅವಕಾಶವೇ ಇಲ್ಲ ಅಂತ. ಈಗಯಾರು ಮಾತಾಡೋದು? ಜೆ ಎನ್ ಯು! 

ಆದ್ರಿಂದ ನಿಮಗೆ ಬೈಗುಳ ಬೀಳ್ತಾ ಇದ್ರೆ ಚಿಂತೆ ಮಾಡ್ಬೇಡಿ. ಏನನ್ನ ಗಳಿಸಿದೀವೋ ಅದನ್ನೇ ತಿನ್ತಾ ಇದ್ದೀವಿ ನಾವಿವತ್ತು. ಈ ದೇಶದಲ್ಲಿ ಜನವಿರೋಧಿ ಸರ್ಕಾರವಿದೆ. ಈ ಜನವಿರೋಧಿ ಸರ್ಕಾರ ಆದೇಶ ಕೊಟ್ರೆ ಸಾಕು, ಅದರ ಸೈಬರ್ ಸೆಲ್ ಏನ್ಮಾಡತ್ತೆ ಹೇಳಿ? ಅದು ಡಾಕ್ಟರ್ಡ್ ವಿಡಿಯೋ ತಯಾರಿಸುತ್ತೆ!! ನಿಮ್ಮ ಮೇಲೆ ಬೈಗುಳಗಳ ಮಳೆ ಸುರಿಸುತ್ತೆ. ಮತ್ತು ಅದು ನಿಮ್ಮ ಡಸ್ಟ್ ಬಿನ್ನಿನಲ್ಲಿ ಎಷ್ಟು ಕಾಂಡೋಮ್ ಇವೆ ಅಂತ ಗಣತಿಗೆ ಶುರುವಿಡತ್ತೆ!

ಈಗ ಸಮಯ ಬಹಳ ಗಂಭೀರವಾಗಿದೆ. ಈ ಗಂಭೀರ ಸಮಯದಲ್ಲಿ ನಾವು ಯೋಚಿಸಬೇಕಿರೋದು ಬಹಳ ಇದೆ. ಜೆ ಎನ್ ಯು ಮೇಲೆ ನಡೆಸಿದ ದಾಳಿ ಒಂದು ನಿಯೋಜಿತ ದಾಳಿಯಾಗಿತ್ತು ಅನ್ನೋದನ್ನ ನಾವು ಅರ್ಥ ಮಾಡಿಕೊಳ್ಳಬೇಕಿದೆ. ನಾವು ಅಕ್ಯುಪೈ ಯುಜಿಸಿ ಚಳವಳಿಯನ್ನ ಮುಂದುವರೆಸೋಕೆ ಬಯಸಿದ್ದರಿಂದಲೇ ಈ ದಾಳಿ ರೂಪುಗೊಳಿಸಲಾಗಿದೆ. ರೋಹಿತ್ ವೇಮುಲನ ಸಾವಿಗೆ ನ್ಯಾಯ ದೊರಕಿಸುವ ಹೋರಾಟವನ್ನ ಕೈಗೆತ್ತಿಕೊಂಡಿದ್ದೇವಲ್ಲ, ಈ ಹೋರಾಟವನ್ನ ಮುಗಿಸಿಬಿಡುವ ಉದ್ದೇಶದಿಂದ ಈ ದಾಳಿ ರೂಪಿಸಲಾಗಿದೆ. 

ನೀವು ಜೆ ಎನ್ ಯು ಸಂಗತಿಯನ್ನು ಪ್ರೈಮ್ ಟೈಮಿಗೆ ತಂದಿರೋದೇ ಈ ಕಾರಣಕ್ಕೆ ಅಂತ ನಮಗೆ ಗೊತ್ತಿದೆ ಮಾನನೀಯ ಎಕ್ಸ್ ಆರೆಸ್ಸೆಸ್… ನೀವು ಈ ದೇಶದ ಜನರ ಮನಸಿನಿಂದ ಸಾಕಷ್ಟು ವಿಷಯಗಳನ್ನ ಅಳಿಸಿಹಾಕುವ ಹುನ್ನಾರದಲ್ಲಿದ್ದೀರಿ. ಈ ದೇಶದ ಪ್ರಧಾನಿ ಪ್ರತಿಯೊಬ್ಬರ ಖಾತೆಯಲ್ಲಿ ಹದಿನೈದು ಲಕ್ಷ ರುಪಾಯಿ ಜಮೆ ಮಾಡುವ ಮಾತಾಡಿದ್ದರು. ಆದರೆ ಒಂದು ಮಾತು ಹೇಳೋಕೆ ಬಯಸ್ತೀನಿ. ಜೆ ಎನ್ ಯು ನಲ್ಲಿ ಪ್ರವೇಶ ಪಡೆಯೋದು ಸುಲಭದ ಮಾತಲ್ಲ. ಜೆ ಎನ್ ಯು ನಲ್ಲಿರುವವರ ಬಳಿ ಮಾತು ಮರೆಸೋದು ಕೂಡ ಸುಲಭವಲ್ಲ. ನೀವು ಬಯಸೋದಾದ್ರೆ ನಾವು ಮರೆತುಹೋಗ್ತೀವಿ. ಆದ್ರೆ ನಾವೂ ನಿಮಗೆ ಮತ್ತೆ ಮತ್ತೆ ನೆನಪಿಸೋಕೆ ಇಷ್ಟಪಡ್ತೀವಿ, ಯಾವಾಗೆಲ್ಲ ಈ ದೇಶದ ಆಡಳಿತ ಯಂತ್ರ ಅತ್ಯಾಚಾರ ನಡೆಸಿದೆಯೋ ಆಗೆಲ್ಲ ಜೆ ಎನ್ ಯು ನಿಂದ ಗಟ್ಟಿಯಾದ ದನಿ ಮೊಳಗಿದೆ. ಮತ್ತು ನಾವು ಈಗ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ, ಈ ಮಾತನ್ನು ನಾನು ಮತ್ತೆಮತ್ತೆ ಹೇಳಲು ಬಯಸ್ತೀನಿ. ನೀವು ನಮ್ಮ ಹೋರಾಟವನ್ನ ದುರ್ಬಲಗೊಳಿಸೋಕೆ ಸಾಧ್ಯವಿಲ್ಲ. 

ನೀವೇನು ಹೇಳ್ತೀರಿ? ಒಂದು ಕಡೆ ದೇಶದ ಯುವಕರು ಗಡಿಗಳಲ್ಲಿ ಕಾದಾಡಿ ಜೀವ ಕೊಡ್ತಿದ್ದಾರೆ. ಅವರೆಲ್ಲರಿಗೆ ನನ್ನ ವಂದನೆಗಳನ್ನ ಸಲ್ಲಿಸ್ತೀನಿ. ನನ್ನದೊಂದು ಪ್ರಶ್ನೆಯಿದೆ. ನಾನು ಜೈಲಲ್ಲಿ ಒಂದು ಪಾಠ ಕಲಿತುಬಂದೆ. ವಿಚಾರಧಾರೆಯ ಸವಾಲುಗಳನ್ನು ಎತ್ತುವಾಗ ಸುಖಾಸುಮ್ಮನೆ ಯಾರೊಬ್ಬ ವ್ಯಕ್ತಿಗೂ ಪಬ್ಲಿಸಿಟಿ ಕೊಡಕೂಡದು ಅಂತ. ಆದ್ದರಿಂದ ನಾನು ಆ ಲೀಡರ್ ನ ಹೆಸರು ಹೇಳೋದಿಲ್ಲ. ಬಿಜೆಪಿಯ ಒಬ್ಬ ನೇತಾ ಲೋಕಸಭೆಯಲ್ಲಿ ಹೇಳಿದ್ರು ಈ ದೇಶದ ಗಡಿಗಳಲ್ಲಿ ಯುವಕರು ಸಾಯ್ತಿದ್ದಾರೆ ಅಂತ. ಅವರಿಗೆ ನಾನು ಕೇಳ್ತೀನಿ, ಅವರು ನಿಮ್ಮ ತಮ್ಮಂದಿರೇನು? ಈ ದೇಶದೊಳಗೆ ಕೋಟ್ಯಂತರ ರೈತರು ಸಂಕಟ ಪಡ್ತಿದ್ದಾರೆ. ನಮಗಾಗಿ ಅನ್ನ ಬೆಳೆಯುವವರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಗಡಿಯಲ್ಲಿ ನಿಂತಿರುವ ಆ ಯುವಕರ ತಂದೆಯಂದಿರೂ ಅಂಥವರಲ್ಲಿ ಸೇರಿದ್ದಾರೆ. ಈ ಜನರ ಬಗ್ಗೆ ನೀವು ಏನು ಹೇಳ್ತೀರಿ? ಹೊಲದಲ್ಲಿ ದುಡಿಯುವ ರೈತ ನನ್ನಪ್ಪ. ನನ್ನ ಅಣ್ಣ ಸೇನೆಗೆ ಸೇರಿಕೊಳ್ತಾನೆ. ರೈತನಾದ ನನ್ನಪ್ಪನೂ ಸಾಯುತ್ತಾನೆ, ಗಡಿಯಲ್ಲಿ ನಿಂತ ಅಣ್ಣನೂ ಸಾಯ್ತಾನೆ. ಇದ್ಯಾವುದಕ್ಕೂ ಸಂಬಂಧವೇ ಇಲ್ಲದ ನೀವು ಇದನ್ನೊಂದು ಸರಕಾಗಿಸ್ಕೊಂಡು ವಾಗ್ವಾದ ಶುರುಹಚ್ಚಬೇಡಿ. ನನ್ನ ಜನರು ದೇಶದ ಒಳಗೂ ಸಾಯ್ತಾರೆ. ನನ್ನ ಜನರು ದೇಶದ ಗಡಿಯಲ್ಲೂ ಸಾಯ್ತಾರೆ. ನನ್ನ ಪ್ರಶ್ನೆ ಇದೆ ನಿಮಗೆ, ಪಾರ್ಲಿಮೆಂಟಿನಲ್ಲಿ ನಿಂತು ಯಾರಿಗೋಸ್ಕರ ರಾಜಕೀಯ ಮಾಡ್ತಿದ್ದೀರಿ? ಅಲ್ಲಿ ಸಾಯ್ತಿರುವವರ ಜವಾಬ್ದಾರಿ ಯಾರು ಹೊರುತ್ತಾರೆ? ಸಾಯುವವರು ಜವಾಬ್ದಾರರಲ್ಲ, ಯುದ್ಧಕ್ಕೆ ಹಚ್ಚುವವರು ಜವಾಬ್ದಾರರು. ನನ್ನ ತಂದೆ, ನನ್ನ ಅಣ್ಣ ಇವರೆಲ್ಲ ಹೇಗೆ ಸಾಯ್ತಿದ್ದಾರೆ ನೋಡಿ. ಪ್ರೈಮ್ ಟೈಮಿನಲ್ಲಿ ಕೂತವರು ಎರಡು ಕಾಸಿನ ಸ್ಪೀಕರ್ ಮುಂದೆ ಕಿರುಚಾಡುತ್ತಾರಷ್ಟೆ. ಇಂಥವರಿಗೆ ನನ್ನ ಪ್ರಶ್ನೆಗಳಿವೆ. 

ದೇಶದೊಳಗೆ ಸಮಸ್ಯೆಗಳಿವೆ. ಈ ಸಮಸ್ಯೆಗಳಿಂದ ಮುಕ್ತಿ ಬಯಸೋದು ತಪ್ಪಾ? ಅವರು ಕೇಳ್ತಾರೆ, “ಯಾರಿಂದ ಆಜಾದಿ (ಸ್ವಾತಂತ್ರ್ಯ) ಕೇಳ್ತಿದ್ದೀಯ?” ಅಂತ. “ನೀನೇ ಹೇಳು, ಭಾರತ ಯಾರನ್ನಾದ್ರೂ ಗುಲಾಮರನ್ನಾಗಿ ಮಾಡಿಟ್ಟುಕೊಂಡಿದೆಯೇನು? ಹೇಳು ನೋಡೋಣ?” ಇಲ್ಲ… ನಾವು ಭಾರತದಿಂದ ಸ್ವಾತಂತ್ರ್ಯ ಕೇಳ್ತಿಲ್ಲ. ಸರಿಯಾಗಿ ಕೆಳಿಸ್ಕೊಳ್ಳಿ, ನಾವು ಭಾರತದಿಂದ ಸ್ವಾತಂತ್ರ್ಯ ಕೇಳ್ತಿಲ್ಲ… ಭಾರತದಲ್ಲಿ ಸ್ವಾತಂತ್ರ್ಯ ಕೆಳ್ತಿದ್ದೀವಿ. ಇಂದ ಮತ್ತು ಅಲ್ಲಿ – ಈ ಪ್ರತ್ಯಯಗಳಲ್ಲಿ ವ್ಯತ್ಯಾಸವಿದೆ. ಬ್ರಿಟಿಷರಿಂದ ಸ್ವಾತಂತ್ರ್ಯ ಕೇಳ್ತಿಲ್ಲ. ಈ ದೇಶದ ಜನ ಅದನ್ನು ಹೋರಾಡಿ ಪಡೆದಿದ್ದಾರೆ. 

ಈಗ ನಾನು ನನ್ನ ಅನುಭವ ಹೇಳ್ತೀನಿ ಕೇಳಿ. ಪೊಲೀಸರು ಕೇಳಿದ್ರು, “ನೀವು ಲಾಲ್ ಸಲಾಮ್, ಲಾಲ್ ಸಲಾಮ್ ಅಂತ ಕೂಗ್ತಿದ್ರಲ್ಲ ಯಾಕೆ?” ಅದೇನೂ ಔಪಚಾರಿಕ ವಿಚಾರಣೆಯಾಗಿರಲಿಲ್ಲ. ನನ್ನನ್ನ ಊಟ ತಿಂಡಿಗೆ, ಮೆಡಿಕಲ್ ಚೆಕಪ್ಪಿಗೆ ಕರೆದ್ಕೊಂಡು ಹೋಗುವಾಗ ಅವೆಲ್ಲ ಮಾತಾಡ್ತಿದ್ವಿ. ನನಗಂತೂ ಸುಮ್ಮನಿರೋಕೇ ಬರೋದಿಲ್ಲ. ನಾವು ಜೆ ಎನ್ ಯು ನವರು ಸುಮ್ಮನೆ ಇರಬಲ್ಲೆವಾದ್ರೂ ಹೇಗೆ!? ನಾನು ಅವರೊಂದಿಗೆ ಹರಟುತ್ತಿದ್ದೆ. ಮಾತುಮಾತಲ್ಲೆ ನನಗೆ ಗೊತ್ತಾಯ್ತು, ಆ ಮನುಷ್ಯನೂ ನನ್ನ ಥರದವರೇ ಅಂತ. ಪೊಲೀಸ್ ಇಲಾಖೆಯಲ್ಲಿ ಯಾರು ಕೆಲಸ ಮಾಡ್ತಾರೆ ಹೇಳಿ? ರೈತರ ಮಕ್ಕಳು, ಕಾರ್ಮಿಕರ ಮಕ್ಕಳು, ಹಿಂದುಳಿದ ವರ್ಗಗಳಿಂದ ಬಂದವರು – ಇಂಥವರೇ ಪೊಲೀಸ್ ನೌಕರಿಗೆ ಸೇರೋದು. ನಾನು ಕೂಡ ಈ ದೇಶದ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಒಂದಾದ ಬಿಹಾರದಿಂದ ಬಂದವನು. ನಾನೂ ಬಡ, ರೈತ ಕುಟುಂಬದಿಂದ ಬಂದವನು. ಪೊಲೀಸ್ ಇಲಾಖೆಯಲ್ಲೂ ಬಡ ಪರಿವಾರದ ಜನರೇ ಹೆಚ್ಚು ಕೆಲಸ ಮಾಡೋದು. ನಾನು ಕಾನ್ಸ್ಟೆಬಲ್, ಹೆಡ್ ಕಾನ್ಸ್ಟೆಬಲ್, ಇನ್ಸ್ಪೆಕ್ಟರ್ ವರೆಗಿನವರ ಬಗ್ಗೆ ಹೇಳ್ತಿದೀನಿ. ಐಪಿಎಸ್ ಮಾಡಿದ ಸಾಹೇಬರೊಂದಿಗೆ ನನಗೆ ಹೆಚ್ಚು ಮಾತುಕತೆಯಿಲ್ಲ. ಅಲ್ಲಿದ್ದ ಸಿಪಾಯಿಗಳೊಂದಿಗೆ ನಾನು ಮಾತಾಡಿದೆ. ನಾನು ಹೇಳೋಕೆ ಹೊರಟಿರೋದು ಆ ಮಾತುಕತೆಯ ತುಣುಕುಗಳನ್ನೇ. 

ಒಬ್ಬ ಸಿಪಾಯಿ ಕೇಳಿದ, “ಈ ಲಾಲ್ ಸಲಾಮ್ ಲಾಲ್ ಸಲಾಮ್ ಏನು!?” ನಾನೇಳಿದೆ, “ಲಾಲ್ ಅಂದ್ರೆ ಕ್ರಾಂತಿ. ಸಲಾಮ್ ಅಂದ್ರೆ ಕ್ರಾಂತಿಗೊಂದು ಸಲಾಮು” ಅಂತ. ಅವನಿಗೆ ಅರ್ಥವಾಗ್ಲಿಲ್ಲ. “ನಿಮಗೆ ಇಂಕ್ವಿಲಾಬ್ ಜಿಂದಾಬಾದ್ ಗೊತ್ತಾ?” ಅಂತ ಕೇಳಿದೆ. ಅವನು ತಲೆಯಾಡಿಸ್ತಾ ಹೇಳಿದ, “ಕ್ರಾಂತಿಯನ್ನ ಉರ್ದುವಿನಲ್ಲಿ ಇಂಕ್ವಿಲಾಬ್ ಅಂತಾರೆ ಅಲ್ವ? ಈ ಸ್ಲೋಗನ್ ಎಬಿವಿಪಿಯವ್ರೂ ಹಿಡ್ಕೊಂಡಿರ್ತಾರೆ!” ನಾನು ಹೇಳಿದೆ, “ಅದು ನಕಲಿ ಇಂಕ್ವಿಲಾಬ್. ನಮ್ಮದು ಅಸಲಿ ಇಂಕ್ವಿಲಾಬ್!!” 

ಅವನು ಮತ್ತೂ ವಿಚಾರಿಸಿದ, “ಜೆ ಎನ್ ಯು ನಲ್ಲಿ ನಿಮಗೆ ಎಲ್ಲವೂ ಸಸ್ತಾದಲ್ಲಿ ಸಿಗ್ತವೆ ತಾನೆ?” ಅಂತ. ಅವನು ದಿನಕ್ಕೆ ಹದಿನೆಂಟು ಗಂಟೆ ಡ್ಯೂಟಿ ಮಾಡ್ತಿದ್ದನ್ನು ನಾನು ಗಮನಿಸಿದ್ದೆ. ಆದ್ರೂ ಓಟಿ ಪಡೆಯೋಕೆ ಪರದಾಡಬೇಕಿತ್ತು. ನಿನಗ್ಯಾಕೆ ಸಸ್ತಾದಲ್ಲಿ ಯಾವುದೂ ಸಿಗೋದಿಲ್ಲ ಅಂತ ನಾನು ಕೇಳಿದೆ. ಆತ ಅಷ್ಟು ಕೆಲಸ ಮಾಡಿಯೂ ಬಡ್ತಿ ಬೇಕು ಅಂದ್ರೆ, ಸವಲತ್ತುಗಳು ಬೇಕು ಅಂದ್ರೆ ಭ್ರಷ್ಟಾಚಾರಕ್ಕೆ ಒಳಗಾಗಬೇಕಿತ್ತು. ನಾನು ಅದನ್ನೇ ಹೇಳಿದೆ. “ಈ ಕಾರಣಗಳಿಗಾಗಿಯೇ ನಾವು ಆಜಾದಿ ಬೇಕು ಅಂತ ಕೆಳ್ತಿರೋದು. ಹಸಿವಿನಿಂದ ಆಜಾದಿ, ಭ್ರಷ್ಟಾಚಾರದಿಂದ ಆಜಾದಿ… ಇವುಗಳ ಬೇಡಿಕೆಯಿಂದಲೇ ಒಂದು ಆಂದೋಲನ ಶುರುವಾಗಿಬಿಡ್ತು. ನಿಮಗ್ಗೊತ್ತಾ, ದೆಹಲಿಯ ಬಹಳಷ್ಟು ಪೊಲೀಸರು ಹರ್ಯಾಣಾದಿಂದ ಬಂದವರಾಗಿರ್ತಾರೆ. ಅವ್ರು ತುಂಬಾ ಶ್ರಮಜೀವಿಗಳು. ಅವನು ಮಾತಾಡ್ತಾ ಹೇಳಿದ, “ಜಾತಿವಾದ ಬಹಳ ಕೆಟ್ಟದ್ದು”. ನಾನು ಹೇಳಿದೆ, “ನಾವು ಕೇಳ್ತಿರೋದು ಈ ಜಾತಿವಾದದಿಂದ ಆಜಾದಿ ಬೇಕು ಅಂತಲೇ!” ಅವನು ಹೇಳಿದ, ಇದೇನೂ ತಪ್ಪಲ್ವಲ್ಲ! ಇದು ದೇಶದ್ರೋಹ ಹೇಗಾಗತ್ತೆ? ನಾನು ಕೇಳಿದೆ, “ಹೇಳಿ ನೋಡೋಣ, ವ್ಯವಸ್ಥೆಯಲ್ಲಿ ಅತಿ ಹೆಚ್ಚು ಅಧಿಕಾರ ಇರೋದು ಯಾರಿಗೆ?” ಅವನು ಠೀವಿಯಿಂದ ಹೇಳಿದ “ನಮ್ಮ ದಂಡಕ್ಕೆ”. “ಸರಿಯೇ ಸರಿ. ನೀನು ಈ ದಂಡವನ್ನು ನಿಮ್ಮ ಇಚ್ಛೆಯಿಂದ ಚಲಾಯಿಸಬಲ್ಲೆಯೇನು?” “ಇಲ್ಲ” “ಹಾಗಾದ್ರೆ ಅಧಿಕಾರವೆಲ್ಲ ಯಾರ ಬಳಿ ಹೋಯ್ತು?” “ಭರ್ಜಿ, ಟ್ವೀಟ್ ಗಳ ಮೂಲಕ ಸ್ಟೇಟ್ಮೆಂಟ್ ಕೊಡೋರ ಹತ್ತಿರ!!” “ ಈ ಭರ್ಜಿ ಇಟ್ಕೊಂಡು, ಟ್ವೀಟ್ ಮಾಡಿಕೊಂಡು ಇರೋ ಸಂಘಿಗಳಿಂದ ಆಜಾದಿ ಬೇಕಂತಲೇ ನಮ್ಮ ಹೋರಾಟ ಇರೋದು!” ಅವನಂದ, “ಹಾಗಾದ್ರೆ ನಾನೂ ನೀನೂ ಈಗ ಒಂದೇ ಕಡೆ ನಿಂತಿದ್ದೀವಿ ಅಂತಾಯ್ತು!”. 

ಇಲ್ಲೊಂದು ಅಡ್ಡಿ ಇದೆ. ನಾನು ಎಲ್ಲ ಮೀಡಿಯಾದವರಿಗೂ ಈ ಮಾತು ಹೇಳ್ತಿಲ್ಲ. ಎಲ್ಲರಿಗೂ ಅಲ್ಲಿಂದ ಕಪ್ಪ ಕಾಣಿಕೆ ಬರೋದಿಲ್ಲ. ಕೆಲವ್ರಿಗೆ ಮಾತ್ರ ಅದು ಬರೋದು. ಕೆಲವರು ಕುಳಿತಲ್ಲಿಯೆ ಕತೆ ಹೆಣೆದು ನನ್ನನ್ನು ಹೇಗೆ ಬಿಂಬಿಸಿದ್ರು ಅಂದ್ರೆ, ಆ ಸಿಪಾಯಿ ನನ್ನನ್ನು ಜೈಲಿಗೆ ಹಾಕಿದಾಗ ನನಗೆ ಸರಿಯಾಗಿ ಬಾರಿಸಬೇಕು ಅಂದ್ಕೊಂಡಿದ್ನಂತೆ. ಅದಕ್ಕಾಗೇ ನನ್ನ ಹೆಸರನ್ನ ಎಲ್ಲಕ್ಕಿಂತ ಮೇಲೆ ಬರೆದಿಟ್ಟುಕೊಂಡಿದ್ನಂತೆ. ನನ್ನ ಜೊತೆ ಮಾತುಕತೆಯಾಡಿದ ಮೇಲೆ ಅವನು ಹೇಳಿದ್ದನ್ನ ನಿಮಗೆ ಹೇಳ್ತೀನಿ ಕೇಳಿ. ಅವನೀಗ ಹಾಗೆಲ್ಲ ನನ್ನನ್ನು ಬಿಂಬಿಸಿದವನಿಗೆ ಒಂದು ಗತಿ ಕಾಣಿಸ್ಬೇಕು ಅಂತ ಯೋಚಿಸತೊಡಗಿದ್ದ. ಆ ಸಿಪಾಯಿ ನನ್ನ ಹಾಗೇ ಬಡ ಹಿಂದುಳಿದ ವರ್ಗದಿಂದ ಬಂದವನು. ಒಂದು ಕಾಲದಲ್ಲಿ ತಾನೂ ಉನ್ನತ ಶಿಕ್ಷಣ ಪಡೀಬೇಕು ಅನ್ನೋ ಆಸೆ ಇದ್ದವನು. ಆದರೆ ಹಣದ ಅಭಾವ ಅವನ ಆಸೆಯನ್ನ ಪೂರೈಸಲಿಲ್ಲ. ಅವನಲ್ಲಿ ಸಾಮರ್ಥ್ಯವಿತ್ತು ಆದರೆ ಅದನ್ನು ಪೂರೈಸಿಕೊಳ್ಳುವ ಹಣಬಲವಿರಲಿಲ್ಲ. ಈ ಜನ ಇಂಥವರು ಉನ್ನತ ಶಿಕ್ಷಣ ಪಡೆಯೋದನ್ನ ತಡೀತಾರೆ. ಇವರಿಗೆ ನನ್ನ ಸಮುದಾಯದವರು, ಹಿಂದುಳಿದವರು ಪಿಎಚ್ಡಿ ಮಾಡೋದು ಬೇಕಿಲ್ಲ. ಯಾಕಂದ್ರೆ ನಮ್ಮ ಬಳಿ ವಿದ್ಯೆಯನ್ನ ಕೊಳ್ಳೋಕೆ ಹಣವಿರೋದಿಲ್ಲ. ಇಂಥವರಿಗಾಗಿ ಜೆ ಎನ್ ಯು ದನಿ ಎತ್ತಿದೆ, ಎತ್ತುತ್ತಲೇ ಇರುತ್ತೆ. ಅದು ರೈತನಿರಲಿ, ಕಾರ್ಮಿಕ…. ಜೆ ಎನ್ ಯು ಅವರಿಗಾಗಿ ಹೋರಾಡುತ್ತೆ. ಬಾಬಾ ಸಾಹೇಬರು ಹೇಳಿದ್ದರು, ರಾಜನೈತಿಕ ಲೋಕತಂತ್ರದಿಂದಷ್ಟೆ ಕೆಲಸ ಆಗೋದಿಲ್ಲ, ನಾವು ಸಾಮಾಜಿಕ ಲೋಕತಂತ್ರವನ್ನ ಸ್ಥಾಪಿಸೋಣ ಅಂತ. ಆದ್ದರಿಂದಲೇ ನಾನು ಮತ್ತೆ ಮತ್ತೆ ಸಂವಿಧಾನದ ಮಾತಾಡೋದು. ‘ಡೆಮಾಕ್ರಸಿ ಇಸ್ ಇನ್ಡಿಸ್ಪೆನ್ಸಬಲ್ ಟು ಸೋಷಿಯಲಿಸಮ್’ ಅಂತಾನೆ ಲೆನಿನ್. ಆದ್ರಿಂದ್ಲೇ ನಾವು ಸಮಾಜವಾದದ ಮಾತಾಡ್ತೀವಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಮಾತಾಡ್ತೀವಿ. ಸಮಾನತೆಯ ಮಾತಾಡ್ತೀವಿ. ಒಬ್ಬ ಚಪ್ರಾಸಿಯ ಮಗ, ಒಬ್ಬ ರಾಷ್ಟ್ರಪತಿಯ ಮಗ – ಇಬ್ರೂ ಒಂದೇ ಸ್ಕೂಲಲ್ಲಿ ಜೊತೆಯಾಗಿ ವಿದ್ಯೆ ಪಡೆಯುವಂತಾಗಬೇಕು ಅನ್ನೋದು ನಮ್ಮ ಬಯಕೆ. ಅದಕ್ಕಾಗಿ ನಾವು ದನಿ ಎತ್ತುತ್ತೇವೆ. ಆದ್ರೆ ನೀವು, ನಮ್ಮ ಸದ್ದಡಗಿಸೋಕೆ ಯತ್ನಿಸ್ತಿದ್ದೀರಿ. ಆದರೆ ಎಂಥಾ ಪವಾಡ ನೋಡಿ! ವಿಜ್ಞಾನ ಹೆಳುತ್ತೆ, ನೀವು ಎಷ್ಟು ದಬಾಯಿಸಿ ತಳ್ತೀರೋ ಅಷ್ಟು ಹೆಚ್ಚಿನದಾಗಿ ಪುಟಿದೇಳುತ್ತೆ ಅಂತ. ವಿಜ್ಞಾನ ಓದೋದು ಒಂದು ಥರವಾದ್ರೆ, ವೈಜ್ಞಾನಿಕವಾಗಿರೋದು ಇನ್ನೊಂಥರ. ಎರಡೂ ಬೇರೆಬೇರೆ. ಯಾರು ವೈಜ್ಞಾನಿಕವಾಗಿ ಆಲೋಚಿಸಬಲ್ಲರೋ ಅವರಿಗೆ ಇವೆಲ್ಲ ಅರ್ಥವಾಗುತ್ತೆ. ಹಸಿವು ಮತ್ತು ಬಡತನಗಳಿಂದ ಆಜಾದಿ, ಭ್ರಷ್ಟಾಚಾರ ಮತ್ತು ಅತ್ಯಾಚಾರಗಳಿಂದ ಆಜಾದಿ ಹಾಗೂ ಬಡವರು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಅಧಿಕಾರಕ್ಕಾಗಿ ನಾವು ಆ ಆಜಾದಿಯನ್ನ ಪಡೆದೇ ತೀರುತ್ತೀವಿ. ಮತ್ತು ಅದನ್ನು ಇದೇ ಸಂವಿಧಾನದ ಅಡಿಯಲ್ಲಿ. ಇದೇ ಕಾನೂನಿನ ಅಡಿಯಲ್ಲಿ, ಇದೇ ನ್ಯಾಯ ಪ್ರಕ್ರಿಯೆಯ ಮೂಲಕ ಪಡೆದು ಈ ದೇಶಕ್ಕೆ ತೋರಿಸ್ತೀವಿ. ಇದು ನಮ್ಮ ದೃಢನಿಶ್ಚಯ. 

ಇದು ನಮ್ಮ ರೋಹಿತನ ಕನಸೂ ಆಗಿತ್ತು. ಒಬ್ಬ ರೋಹಿತನನ್ನು ಕೊಂದಿರಿ. ಹೋರಾಟದ ಉಸಿರುಗಟ್ಟಿಸಲು ನೋಡಿದಿರಿ. ಅದೇ ಹೋರಾಟ ಈಗ ಎಷ್ಟು ವಿಸ್ತಾರವಾಗಿ ಹರಡಿಕೊಂಡಿದೆ ನೋಡಿ. ನನ್ನ ಜೈಲುವಾಸದ ಅನುಭವದಿಂದ ಹೇಳ್ತೀನಿ ಕೇಳಿ. ಇದನ್ನ ಸ್ವವಿಮರ್ಶೆ ಅಂದ್ಕೊಳ್ಳಿ. ನಾವು ಜೆ ಎನ್ ಯು ನವರು ತಳಮಟ್ಟದ ಸಂಗತಿಗಳಿಗಾಗಿ ಹೋರಾಡ್ತೀವಿ ಅನ್ನೋದೇನೋ ನಿಜವೇ. ಆದರೆ ನಾವು ಬಳಸುವ ಭಾಷೆ ಭಾರವಾಗಿರುತ್ತದೆ. ಇದು ದೇಶದ ಜನಸಾಮಾನ್ಯರನ್ನ ತಲುಪೋದಿಲ್ಲ. ಅವರಿಗೆ ಅರ್ಥವಾಗೋದಿಲ್ಲ. ಇದು ಅವರ ದೋಷವಲ್ಲ. ಅವರು ಸಜ್ಜನ, ಪ್ರಾಮಾಣಿಕ, ಬುದ್ಧಿವಂತ ಜನ. ಅವರ ಪರಿಕರಗಳ ಮೂಲಕವೇ ನಮ್ಮ ಮಾತುಗಳನ್ನ ಅವರಿಗೆ ತಲುಪಿಸಬೇಕಾಗುತ್ತೆ. ಅವರನ್ನು ಎಂಥವು ತಲುಪುತ್ತವೆ ಹೇಳಿ? “ಬೇಗ ಬೇಗ ಫಾರ್ವರ್ಡ್ ಮಾಡಿ, ಲೈನ್ ಉದ್ದವಾಗಿಬಿಡತ್ತೆ” ಅನ್ನುವಂಥ ಜಾಹೀರಾತುಗಳು. “ಬೇಗ ಬೇಗ ವಿಷಯ ಹರಡಿ, ಗ್ರೂಪ್ ಫಾರ್ವರ್ಡ್ ಮಾಡಿ” – ಇಂಥವು. ಆನ್ ಲೈನ್ ಮಾರಾಟ ಮಾಡ್ತಾರೆ, ಓಎಲೆಕ್ಸ್ ಮೂಲಕ ಮಾರಾಟ ಮಾಡ್ತಾರೆ. ನಮ್ಮ ದೇಶದಲ್ಲಿ ಮಾರಾಟ ಮಾಡುವುದೊಂದು ವ್ಯಸನ ಶುರುವಾಗಿದೆ. ಅಂಥ ಜನರೊಂದಿಗೆ ನಮಗೆ ಸಂವಾದ ಸಾಧ್ಯವಾಗಬೇಕು. 

ಜೈಲಿನಲ್ಲಿರುವಾಗ ನನಗೆ ಇನ್ನೊಂದು ಅನುಭವವಾಯ್ತು. ಅಲ್ಲಿ ಊಟದ ತಟ್ಟೆಯಲ್ಲಿ ಎರಡು ಕಟೋರಿಗಳನ್ನ ಇಡುತ್ತಿದ್ದರು. ಒಂದರ ಬಣ್ಣ ನೀಲಿ, ಒಂದರ ಬಣ್ಣ ಕೆಂಪು. ನನಗೆ ಅದೃಷ್ಟದ ಮೇಲೆ ನಂಬಿಕೆಯಿಲ್ಲ. ದೇವರ ವಿಷಯ ನನಗೆ ಗೊತ್ತಿಲ್ಲ. ಆದರೆ ಆ ತಟ್ಟೆ ಮತ್ತು ಬಟ್ಟಲುಗಳನ್ನ ನೋಡಿ ನನಗೆ ಮತ್ತೆ ಮತ್ತೆ ಅನ್ನಿಸ್ತಾ ಇತ್ತು. ಈ ತಟ್ಟೆ – ಬಟ್ಟಲುಗಳು ಭಾರತದ ಒಳಿತನ್ನ ಸೂಚಿಸ್ತಿವೆಯೇನೋ ಅನಿಸುತ್ತಿತ್ತು. ನನಗೆ ತಟ್ಟೆ ಭಾರತದಂತೆಯೂ ನೀಲಿ ಬಟ್ಟಲು ಅಂಬೇಡ್ಕರ್ ಸೇನೆಯಂತೆಯೂ ಕೆಂಪು ಬಟ್ಟಲು ಕಮ್ಯುನಿಸ್ಟರಂತೆ. ಈ ಎರಡು ಶಕ್ತಿಗಳು ಈ ದೇಶದಲ್ಲಿ ಒಗ್ಗೂಡಿಬಿಟ್ಟರೆ ಅದರ ಕಥೆಯೇ ಬೇರೆ. ನಮ್ಮ ದೇಶಕ್ಕೆ ಮಾರಾಟಮಾಡುವವರು ಬೇಡ. ಮಾರಾಟಗಾರರನ್ನ ಕಳಿಸಬಿಡೋಣ. ಕೊಡುಕೊಳ್ಳುವಿಕೆಯ ಸೌಹಾರ್ದವನ್ನ ಮೂಡಿಸೋಣ. ಅಂಥ ಸರಕಾರವನ್ನ ರಚಿಸೋಣ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅನ್ನುವ ಮಾತನ್ನ ನಾವು ವಾಸ್ತವದಲ್ಲೂ ನಿಜಗೊಳಿಸೋಣ. ನನಗೆ ಬಲವಾಗಿ ಅನಿಸ್ತಿದೆ, ನಾವಿದನ್ನ ಸಾಧಿಸ್ತೀವಿ. ಖಂಡಿತಾ ಮಾಡಿಯೇಮಾಡ್ತೀವಿ. 

ಬಹಳ ಕಾಲದ ನಂತರ ಜೆ ಎನ್ ಯು ವಿದ್ಯಾರ್ಥಿಯನ್ನ ಜೈಲಿಗೆ ಕಳಿಸಲಾಗಿದೆ. ಹೆಳಿಕೊಳ್ಳುವಂಥ ಅನುಭವಗಳು ಸಾಕಷ್ಟಿದೆ. ಆದರಣೀಯ ಮಾನನೀಯ ಪ್ರಧಾನ ಮಂತ್ರಿಯವರು… ಹಾಗೆಲ್ಲ ಹೇಳಲೇಬೇಕು ತಾನೆ? ನಮ್ಮ ಪ್ರಧಾನಮಂತ್ರಿಯವರು ದೊಡ್ಡ ದೊಡ್ಡ ಮಾತಾಡ್ತಿದ್ದರು. ಒಳ್ಳೆಯ ದಿನಗಳ ಬಗ್ಗೆ ಹೇಳ್ತಿದ್ದರು. ನನಗೆ ಹಾಗೇ ಟೀವಿಯೊಳಗೆ ನುಗ್ಗಿಬಿಡೋಣ ಅನ್ನಿಸ್ತಿತ್ತು. ಮತ್ತು ಅವರ ಸೂಟ್ ಹಿಡಿದೆಳೆದು ಕೆಳಬೇಕನ್ನಿಸ್ತು, “ಮೋದಿ ಜೀ, ಸ್ವಲ್ಪ ಹಿಟ್ಲರನ ಮಾತುಗಳನ್ನಾಡಿ ನೋಡೋಣ!” “ಹಿಟ್ಲರನದು ಬಿಡಿ, ಕರಿ ಟೊಪ್ಪಿ ತೊಡುತ್ತಿದ್ದ ಮುಸೋಲಿನಿಯದಾದರೂ ಮಾತುಗಳನ್ನಾಡಿ ನೋಡೋಣ!! ಅವರನ್ನ ನಿಮ್ಮ ಗುರೂಜಿ ಗೋಳವಾಲ್ಕರ್ ಭೇಟಿ ಮಾಡಲು ಹೋಗಿದ್ದರಲ್ವಾ? ಮತ್ತು ಭಾರತೀಯ ಪರಿಭಾಷೆಯನ್ನು ಜರ್ಮನರಿಂದ ಕಲಿಯಲು ಹೊರಟಿದ್ದರಲ್ವಾ?” ಅಂತೆಲ್ಲ. ಈ ಹಿಟ್ಲರನ ಮಾತು, ಮುಸೋಲಿನಿಯ ಮಾತು, ಪ್ರಧಾನಮಂತ್ರಿಯ ಮಾತು ಇವೆಲ್ಲ ಒಂದೇ ಥರ ಅನಿಸ್ತಿತ್ತು. ಮೋದಿ ಮನ್ ಕಿ ಬಾತ್ - ಮನದ ಮಾತುಗಳನ್ನ ಆಡ್ತಾರೆ ಹೊರತು ಕೇಳಿಸ್ಕೊಳೋದಿಲ್ಲ. 
ಒಂದು ಖಾಸಗಿ ವಿಷಯ. ಇವತ್ತು ಸುಮಾರು ಮೂರು ತಿಂಗಳ ನಂತರ ನನ್ನ ಅಮ್ಮನ ಜೊತೆ ಮಾತಾಡಿದೆ. ಜೆ ಎನ್ ಯುನಲ್ಲಿ ಇರುವಾಗ ನಾನು ಮನೆಗೆ ಕಾಲ್ ಮಾಡೋದು ಕಡಿಮೆ ಇತ್ತು. ಜೈಲಿಗೆ ಹೋದಾಗ ಅನ್ನಿಸ್ತು, ಇನ್ಮೇಲೆ ಆಗಾಗ ಮಾತಾಡ್ತಾ ಇರಬೇಕು ಅಂತ! ನೀವೆಲ್ಲರೂ ಕೂಡ ನಿಮ್ಮ ಮನೆಜನಗಳ ಜೊತೆ ಆಗಾಗ ಮಾತಾಡ್ತಾ ಇರಿ. ನಾನು ಅಮ್ಮಂಗೆ ಹೇಳಿದೆ, ನೀನು ಮೋದಿಯನ್ನ ಒಳ್ಳೆ ಪೀಕಲಾಟಕ್ಕೆ ತಳ್ಳಿದೆ ಅಂತ ಅಮ್ಮ ಹೇಳಿದ್ಲು, “ನಾನು ಪೀಕಲಾಟಕ್ಕೆ ನೂಕಿಲ್ಲ. ಅಂಥ ಕೆಲಸ ಮಾಡೋದು ವಿದೂಷಕರು. ನಗೋದು ನಗಿಸೋದು ಅವರ ಕೆಲಸ. ನಾವು ನಮ್ಮ ನೋವು ಹೇಳಿಕೊಳ್ತೀವಷ್ಟೆ. ಅವರಿಗೆ ನಮ್ಮ ಮಾತು ಅರ್ಥವಾಗೋದಿಲ್ಲ, ಆದ್ದರಿಂದ ನಕ್ಕು ಹಾರಿಸ್ತಾರೆ. ನನ್ನಲ್ಲಿ ನೋವಿತ್ತು. ಆದ್ರಿಂದ್ಲೇ ನಾನು ಹಾಗೆ ಮಾತಾಡಿದೆ. ಮೋದಿ ಕೂಡ ಒಬ್ಬ ತಾಯಿಯ ಮಗ. ನನ್ನ ಮಗನನ್ನು ದೇಶದ್ರೋಹದ ಆಪಾದನೆ ಹೊರೆಸಿ ಜೈಲಿಗೆ ಹಾಕಲಾಗಿದೆ. ಯಾವಾಗಲೂ ಮನದ ಮಾತಾಡ್ತಾರೆ, ಈಗಲಾದರೂ ಒಮ್ಮೆ ಮಾತೆಯ ಮಾತಾಡಲಿ…” ಅಂತ. 

ಅವಳಿಗೆ ಉತ್ತರಿಸಲು ನನ್ನಲ್ಲಿ ಶಬ್ದಗಳಿರಲಿಲ್ಲ. ಈ ದೇಶದಲ್ಲಿ ಬಹಳ ಆತಂಕಕಾರಿಯಾದ ಸಂಗತಿಗಳು ಘಟಿಸ್ತಿವೆ. ಬಹಳ ಸೂಕ್ಷ್ಮವಾಗಿ ಅದು ನಡೀತಿದೆ. ಆದ್ದರಿಂದ ನಾನಿಲ್ಲಿ ಯಾವುದೋ ಒಂದು ಮೀಡಿಯಾ ಚಾನಲ್ ಬಗ್ಗೆ ಮಾತಾಡ್ತಿಲ್ಲ. ಸೈನಿಕರ ಬಗ್ಗೆ ಮಾತಾಡ್ತಿಲ್ಲ. ನಾನು ಇಡೀ ದೇಶದ ಬಗ್ಗೆ ಹೇಳ್ತಿದ್ದೀನಿ. ಇದು ಹೀಗೇ ನಡೆದರೆ ಈ ದೇಶ ಹೇಗಾಗುತ್ತೆ? ಈ ದೇಶದ ಜನ ಏನಾಗ್ತಾರೆ? ಜೆ ಎನ್ ಯು ಜೊತೆ ಯಾರೆಲ್ಲ ನಿಲ್ಲುತ್ತಿದ್ದಾರೋ ಅವರ ಹೆಜ್ಜೆಹೆಜ್ಜೆಗೂ ಸೆಲ್ಯೂಟ್ ಹೊಡೆಯಬೇಕಿದೆ. ಏಕೆಂದರೆ ಅವರಿಗೆ ಒಂದು ಮಾತು ಅರ್ಥವಾಗಿದೆ. ಜೆ ಎನ್ ಯುವಿಗೆ ಎಂಥವರು ಬರುತ್ತಾರೆ ಅನ್ನೋದನ್ನ ಅವರು ಅರ್ಥ ಮಾಡಿಕೊಂಡಿದ್ದಾರೆ. ಇಲ್ಲಿ ಶೇ.60ರಷ್ಟು ಹೆಣ್ಮಕ್ಕಳು ಇದ್ದಾರೆ. ಇಲ್ಲಿ ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗ್ತಿದೆ. ಇಂಥ ಸಂಸ್ಥೆ ಅಪರೂಪದ್ದು. ನನ್ನ ಪರಿವಾರ 3 ಸಾವಿರ ರುಪಾಯಿಗಳಷ್ಟು ದುಡಿಯುತ್ತದೆ. ನನ್ನಂಥವರು ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವಷ್ಟು ಅರ್ಹತೆ ಪಡೆಯಲು ಸಾಧ್ಯವಾ? ಹಾಗಿದ್ದೂ ನಾನಿಲ್ಲಿ ಓದಲು ಸಾಧ್ಯವಾಗಿದೆ. ಆದ್ದರಿಂದಲೇ ನಾನು ದೇಶದ್ರೋಹಿ ಅನ್ನಿಸಿಕೊಳ್ತಿದ್ದೀನಿ. ನನ್ನ ಬೆಂಬಲಕ್ಕೆ ನಿಂತ ಸಿತಾರಾಮ್ ಯೆಚೂರಿಯವರನ್ನೂ ದೇಶದ್ರೋಹಿ ಅನ್ನಲಾಗ್ತಿದೆ. ರಾಹುಲ್ ಗಾಂಧಿ, ರಾಜಾ ಮೊದಲಾದವರನ್ನೂ ನನ್ನ ಜೊತೆ ದೇಶದ್ರೋಹಿ ಅಂತ ಕರೆಯಲಾಗ್ತಿದೆ. ಜೆ ಎನ್ ಯು ಪರವಾಗಿ ನಿಂತವರೆಲ್ಲರನ್ನೂ, ಮೀಡಿಯಾದವರನ್ನೂ… ನಮ್ಮ ಪರವಾಗಿ ನಿಂತವರು ಅನ್ನೋದಕ್ಕಿಂತ ಸರಿಯಾದುದರ ಪರ ನಿಂತವರನ್ನು ಮತ್ತು ತಪ್ಪನ್ನು ತಪ್ಪೆಂದು ಖಂಡಿಸಿದವರನ್ನು ದೇಶದ್ರೋಹಿಗಳೆಂದು ಕರೆಯಲಾಗ್ತಿದೆ, ನಿಂದಿಸಿ ಬೆದರಿಕೆ ಹಾಕಲಾಗ್ತಿದೆ. 

ನೀನು ನಿಜವಾಗಿ ಘೋಷಣೆ ಕೂಗಿದೆಯೇನು ಅಂತ ಸಿಪಾಯಿ ಕೇಳಿದ. ನಾನು ಹೌದು ಅಂದೆ. ಅದರಲ್ಲಿ ತಪ್ಪೇನಿದೆ ಅಂತ ಕೇಳಿದೆ. ಹಾಗೇ ನಾನು ಘೋಷಣೆ ಕೂಗಿದ್ದೇನು ಅಂತಲೂ ವಿವರಿಸಿದೆ. ಈ ಸರ್ಕಾರ ಬಂದು 2 ವರ್ಷಗಳಾದವು. ಇನ್ನೂ 3 ವರ್ಷ ಸಹಿಸಬೇಕು. ಅಷ್ಟು ಬೇಗ ಸಹನೆ ಕಳೆದುಕೊಳ್ಳುವಂತಿಲ್ಲ. ಈ ದೇಶದ 69% ಜನ ಅವರ ವಿರುದ್ಧ ಮತ ನೀಡಿದ್ದಾರೆ. ಇದನ್ನ ನಾವು ನೆನಪಿಟ್ಟುಕೊಳ್ಬೇಕು. 

ನೂರು ಸಲ ಸುಳ್ಳನ್ನ ಸುಳ್ಳು ಅಂದು ಸಾಧಿಸಬಹುದು. ಆದರೆ ಇದು ಸುಳ್ಳಿನ ಜೊತೆ ಮಾತ್ರ ಸಾಧ್ಯ, ನಿಜದ ಜೊತೆ ಸಾಧ್ಯವಾಗೋದಿಲ್ಲ. ನೂರು ಸಲ ಸೂರ್ಯನನ್ನ ಚಂದ್ರ ಚಂದ್ರ ಅನ್ತಾ ಇದ್ದರೆ ಅದು ಚಂದ್ರವಾಗಿಬಿಡುತ್ತೇನು? ಸಾವಿರ ಸಲ ಹೇಳಿದರೂ ಅದು ಸೂರ್ಯನಾಗೇ ಇರುತ್ತೆ. ನೀವು ಸುಳ್ಳನ್ನಷ್ಟೆ ಸುಳ್ಳಾಗಿರಿಸಬಲ್ಲಿರಿ ಹೊರತು ಸತ್ಯವನ್ನು ಸುಳ್ಳಾಗಿಸಲಾರಿರಿ. ನೀವು ಸಂಸತ್ತಿನ ಒಳಗೆ ಏನೆಲ್ಲ ಪ್ರಸ್ತಾಪಗಳನ್ನಿಡ್ತೀರಿ, ಜನರ ಮನಸ್ಸು ಅತ್ತ ತಿರುಗದಂತೆ ಮಾಡಲು ಸುಳ್ಳುಗಳನ್ನ ಹೇರುತ್ತೀರಿ. ಇಲ್ಲಿ ಆಕ್ಯುಪೈ ಯುಜಿಸಿ ಚಳವಳಿ ನಡೀತಿತ್ತು, ಅಲ್ಲಿ ರೋಹಿತನ ಹತ್ಯೆಯಾಯ್ತು. ರೋಹಿತನಿಗಾಗಿ ಜೆ ಎನ್ ಯು ದನಿ ಎತ್ತಿದರೆ, “ನೋಡಿ! ನೋಡಿ!! ಎಂಥಾ ದೇಶದ್ರೋಹ! ಜೆ ಎನ್ ಯು ರಾಷ್ಟ್ರದ್ರೋಹಿಗಳ ಅಡ್ಡೆಯಾಗ್ಬಿಟ್ಟಿದೆ” ಅಂತ ಕಥೆ ಕಟ್ಟಲಾಯ್ತು. ಇದು ಕೂಡ ಜಾಸ್ತಿ ದಿನ ನಡೆಯೋದಿಲ್ಲ. ಹೊಸ ತಯಾರಿ ಮಾಡ್ಕೊಳ್ಳಿ. ರಾಮಮಂದಿರ ಮಾಡಿ. 

ಇವತ್ತಿನ ಕತೆ ಹೇಳ್ತೀನಿ. ಜೈಲಿಂದ ಹೊರಡೋ ಮುಂಚೆ ಒಬ್ಬ ಸಿಪಾಯಿ ಮಾತಿಗೆ ಸಿಕ್ಕ. “ಧರ್ಮವನ್ನ ನಂಬ್ತೀಯಾ?” ನಾನೇಳಿದೆ, “ನನಗೆ ಹಾಗೆಂದರೇನು ಅಂತಲೇ ಗೊತ್ತಿಲ್ಲ”. ಮೊದಲು ಹಾಗಂದರೇನು ಅಂತ ಗೊತ್ತಾದರೆ ತಾನೆ ನಂಬುವ ಕೆಲಸ? “ಯಾವುದಾದ್ರೂ ಪರಿವಾರದಲ್ಲಂತೂ ಹುಟ್ಟೀರ್ತೀಯ!?” “ಹೌದು. ಪವಾಡವೆಂಬಂತೆ ಹಿಂದೂ ಪರಿವಾರದಲ್ಲಿ ಹುಟ್ಟಿಕೊಂಡಿದ್ದೀನಿ”. “ಈ ಬ್ರಹ್ಮಾಂಡವನ್ನ ಭಗವಂತ ಸೃಷ್ಟಿ ಮಾಡಿದಾನೆ. ಸೃಷ್ಟಿಯ ಕಣಕಣದಲ್ಲೂ ಭಗವಂತ ಇದ್ದಾನೆ. ಈ ಮಾತಿಗೆ ನೀನೇನು ಹೆಳ್ತೀ?” “ಖಂಡಿತಾ. ಎಲ್ಲರಲ್ಲೂ ಎಲ್ಲದರಲ್ಲೂ ಭಗವಂತ ಇರಬಹುದು. ಆದರೆ ಇಂಥಾ ಭಗವಂತನಿಗೂ ಒಂದು ಮಂದಿರ ಕಟ್ಟಿಸಿ ಇಡೋಕೆ ಕೆಲವರು ಪರದಾಡ್ತಿದ್ದಾರೆ. ಅಂಥವರ ಬಗ್ಗೆ ನೀನೇನು ಹೇಳ್ತೀ?” “ಬಹಳ ಕೆಟ್ಟ ಯೋಚನೆ ಇದು!” ಅವನಂದ. ಹೀಗೆ ಯೋಚಿಸುವ ಜನರನ್ನೂ ಅವರು ಪ್ರಚೋದಿಸ್ತಾರೆ. ಈ ದೇಶದೊಳಗೆ ಸದಾ ಪ್ರಕ್ಷುಬ್ಧತೆ ಇರಲೆಂದು ಅವರ ಬಯಸುತ್ತಾರೆ. 

ನೀವಿವತ್ತು ಇಲ್ಲಿ ಕುಳಿತಿದ್ದೀರಲ್ಲ, ನಿಮಗನ್ನಿಸ್ತಿದೆ ತಾನೆ, ನಿಮ್ಮ ಮೇಲೆ ದೊಡ್ಡದೊಂದು ದಾಳಿ ನಡೆದಿದೆ ಅಂತ? ಆದರೆ ಈ ದಾಳಿ ಹೊಸತಲ್ಲ. ಇದು ಈಗಿನದ್ದೂ ಅಲ್ಲ. ನಿಮಗೆ ನೆನಪಿದೆಯಾ, ಆರೆಸ್ಸೆಸ್ಸಿನ ಮುಖವಾಣಿ ಆರ್ಗನೈಸರಿನಲ್ಲಿ ಜೆ ಎನ್ ಯು ಕುರಿತು ಕವರ್ ಸ್ಟೋರಿ ಮಾಡಲಾಗಿತ್ತು. ಸ್ವಾಮೀಜಿ ಜೆ ಎನ್ ಯು ಕುರಿತು ಸಾಕ್ಷ್ಯ ಹೆಳಿದ್ದರು. ಆದರೆ ನನಗೆ ಸಂವಿಧಾನದ ಮೇಲೆ ಭರವಸೆ ಇದೆ. ನನ್ನ ಎಬಿವಿಪಿ ಗೆಳೆಯರಿದ್ದರೆ ಕೇಳಿಸಿಕೊಳ್ಳಲಿ, ಒಂದು ಬಾರಿ ಆ ಸ್ವಾಮೀಜಿಯನ್ನು ಕರೆತರಲಿ. ಮುಖಾಮುಖಿಯಾಗಿ ಮಾತಿಗೆ ಕೂರಿಸಲಿ. ನಾವು ಸೋಲಿಸ್ತೀವಿ. ತಾರ್ಕಿಕವಾಗಿಯೇ ಸೋಲಿಸ್ತೀವಿ, ಕುತರ್ಕದಿಂದಲ್ಲ. ಹಾಗೇ ಅವರು ಕೂಡ ಜೆ ಎನ್ ಯುವನ್ನು ನಾಲ್ಕು ತಿಂಗಳ ಕಾಲ ಬಂದ್ ಮಾಡಬೇಕು ಅಂತ ತಾರ್ಕಿಕವಾಗಿಯೇ ಒಪ್ಪಿಸಲು ಸಫಲರಾದರೆ, ನಾನು ಅವರ ಪಾದಸೇವಕನಾಗ್ತೀನಿ. ಅವರಿಂದ ಸಾಧ್ಯವಾಗದೆ ಹೋದರೆ, ನಾನು ಅವರಲ್ಲಿ ಬಿನ್ನವಿಸಿಕೊಳ್ತೀನಿ, “ಮೊದಲು ಹೇಗೆ ನೀವು ಈ ದೇಶದಿಂದ ಹೊರಗಿರ್ತಿದ್ದರೋ ಈಗಲೂ ಹಾಗೇ ಹೊರಟುಹೋಗಿ” ಅಂತ. 

ನಿಮಗೆ ಇನ್ನೊಂದು ಮಜದ ವಿಷಯ ಹೇಳಲಿಕ್ಕಿದೆ. ನೀವೆಲ್ಲ ಕ್ಯಾಂಪಸ್ಸಿನ ಒಳಗಿದ್ದುದರಿಂದ ನಿಮ್ಮ ಕಣ್ಣಿಗೆ ಬೀಳದೆ ಹೋಗಿರಬಹುದು. ಎಂಥಾ ಯೋಜನೆ ರೂಪಿಸ್ಕೊಂಡಿದ್ದರು… ಮೊದಲ ದಿನದಿಂದಲೂ ಪ್ರತಿಯೊಂದನ್ನೂ ಯೋಜಿತವಾಗಿಯೇ ನಡೆಸಿದ್ದರು. ಇಷ್ಟೆಲ್ಲ ತಲೆಕೆಡಿಸಿಕೊಂಡು ಪ್ಲಾನ್ ಮಾಡಬಾರದಿತ್ತು ಗೆಳೆಯರೇ! ಪೋಸ್ಟರ್ ಕೂಡ ಬದಲಿಸೊದಿಲ್ಲ ನೀವು!ಯಾವ ಸ್ಲೋಗನ್ ಇಟ್ಟುಕೊಂಡು, ಹ್ಯಾಂಡ್ ಬಿಲ್ ಇಟ್ಟುಕೊಂಡು ಹಿಂದೂಕ್ರಾಂತಿ ಸೇನೆ ಗಲಭೆ ನಡೆಸುತ್ತದೆಯೋ ಅದೇ ಸ್ಲೋಗನ್ ಇಟ್ಟುಕೊಂಡು ಎಬಿವಿಪಿ ಕೂಡ ಹೋರಾಡುತ್ತದೆ. ಅವೇ ಎಲ್ಲ ಪರಿಕರಗಳನ್ನು, ಘೋಷಣೆಗಳನ್ನು ಇಟ್ಟುಕೊಂಡು ಮಾಜಿ ಯೋಧರೊಂದಷ್ಟು ಜನ ಪ್ರತಿಭಟನೆಗೆ ಇಳಿಯುತ್ತಾರೆ. ಇದರರ್ಥ ಇವರೆಲ್ಲರ ಕಾರ್ಯಕ್ರಮಗಳನ್ನು ಒಮ್ಮೆಗೇ ನಾಗ್ಪುರದಲ್ಲಿ ಯೋಜಿಸಲಾಗಿರುತ್ತದೆ! ಅವರಾಡೋದೆಲ್ಲ ದೊಡ್ಡ ದೊಡ್ಡ ಮಾತುಗಳು. ಅಬ್ಬರದ ಮಾತುಗಳು. ಈ ದೇಶದ ಸಂಘರ್ಷವನ್ನ, ಪ್ರತಿಭಟನೆಯ ದನಿಯನ್ನ ಹೊಸಕಿಹಾಕುವಂಥ ಮಾತುಗಳು. ಈ ದೇಶದ ಜನರು ತಮ್ಮ ಜೀವನದ ಅಗತ್ಯಗಳಿಗಾಗಿ ಎತ್ತುವ ಪ್ರಶ್ನೆಗಳ, ನಡೆಸುವ ಚಿಂತನೆಗಳ ದಿಕ್ಕುತಪ್ಪಿಸುವ ಮಾತುಗಳು. ಅದೇ ಜೆ ಎನ್ ಯುನಲ್ಲಿಯೂ ದೊಡ್ಡ ದೊಡ್ಡ ಪ್ರಶ್ನೆಗಳಿವೆ. ನಾವು ಈ ಹೇರಲಾಗುವ ಭಾರದ ಮಾತುಗಳನ್ನ ಪ್ರಶ್ನಿಸ್ತೀವಿ. ನನ್ನ, ಉಮರನ, ಅನಿರ್ಬಾಣ್, ಆಶುತೋಶ್, ನಾಗ, ಶೆಹ್ಲಾ, ಯಾರೇ ಇರಲಿ ನಮ್ಮೆಲ್ಲರ ಗಂಟಲೊತ್ತುವ ಪ್ರಯತ್ನ ಅದೆಷ್ಟು ಮಾಡಿದರೂ ಅಷ್ಟೇ, ನಮ್ಮ ಸಂಘರ್ಷ ಮುಗಿಸಿಬಿಡಲು ಎಷ್ಟು ಹೆಣಗಾಡಿದರೂ ಅಷ್ಟೇ, ನಾವು ಹೋರಾಟದಿಂದ ಹಿಂದೆ ಸರಿಯೋದಿಲ್ಲ. ಸರಿಯಾಗಿ ಕೇಳಿಸಿಕೊಳ್ಳಿ, ನೀವೆಷ್ಟೋ ದಬ್ಬಿದರೂ ನಾವು ಮತ್ತೆಮತ್ತೆ ಎದ್ದುಬರುತ್ತೀವಿ. ನಮ್ಮ ಸಂಘರ್ಷವನ್ನು ನೀವು ಅದುಮಿಹಾಕಲು ಸಾಧ್ಯವಿಲ್ಲ. ನೀವೆಷ್ಟು ದಬ್ಬುತ್ತೀರೋ ನಾವು ಅಷ್ಟೇ ಪುಟಿದು ಬರುತ್ತೇವೆ. ಅಷ್ಟೇ ತೀವ್ರವಾಗಿ ಹೋರಾಟ ಮುಂದುವರೆಸುತ್ತೇವೆ. 

ಇದು ಸುದೀರ್ಘ ಕದನ. ಎಲ್ಲಿಯೂ ನಿಲ್ಲದೆ, ಯಾರಿಗೂ ಬಾಗದೆ, ಉಸಿರು ಬಿಗಿಹಿಡಿದು ನಾವು ಇದನ್ನು ಮುನ್ನಡೆಸಬೇಕು. ಮತ್ತು ಈ ಕ್ಯಾಂಪಸ್ ಒಳಗಿನ ವಿಧ್ವಂಸಕ ಚಿಂತನೆಯ ಎಬಿವಿಪಿ ಜನರು, ಕ್ಯಾಂಪಸ್ ಹೊರಗಿನ ಈ ದೇಶವನ್ನು ಬರಬಾದ್ ಮಾಡಲು ಹವಣಿಸ್ತಿರುವ ಭಾಜಪದ ಜನರು ಅದ್ಯಾರೇ ಇದ್ದರೂ ನಾವು ಅವರೆಲ್ಲರ ವಿರುದ್ಧ ಒಗ್ಗಟ್ಟಿನಿಂದ ಎದ್ದು ನಿಲ್ಲುತ್ತೇವೆ. ಜೆ ಎನ್ ಯು ಎದ್ದು ನಿಲ್ಲುತ್ತದೆ. ಜೆ ಎನ್ ಯು ಗಾಗಿ ಶುರುವಾದ ಈ ಹೋರಾಟ, ರೋಹಿತ್ ವೇಮುಲಾನ ಸಾವಿನ ನ್ಯಾಯಕ್ಕಾಗಿ ಶುರುವಾದ ಈ ಹೋರಾಟ, ನಿಮ್ಮೆಲ್ಲರ ಕಳಕಳಿಯಿಂದ ಶುರುವಾದ ಈ ಹೋರಾಟ, ಈ ದೇಶದ ಸೌಹಾರ್ದ ಜೀವಿಗಳು, ಪ್ರಗತಿಪರರು ಶುರುಮಾಡಿದ ಈ ಹೋರಾಟವೇನಿದೆ, ಈ ಹೋರಾಟವನ್ನು ನಾವು ನಡೆಸ್ತೀವಿ, ಗೆದ್ದೇಗೆಲ್ತೀವಿ. ಇದು ನಮ್ಮ ವಿಶ್ವಾಸ. 

*** 

ಕನ್ಹಯ್ಯನ ‘ಆಜಾದಿ ಕಾ ನಾರಾ’:

ಮನುವಾದದಿಂದ ಆಜಾದಿ

ಬ್ರಾಹ್ಮಣ್ಯವಾದದಿಂದ ಆಜಾದಿ

ಸಾಮ್ರಾಜ್ಯವಾದದಿಂದ ಆಜಾದಿ

ಅಸ್ಪೃಶ್ಯತೆಯಿಂದ ಆಜಾದಿ
ಜಾತಿಪದ್ಧತಿಯಿಂದ ಆಜಾದಿ

ಕೋಮುವಾದದಿಂದ ಆಜಾದಿ
ಭಯೋತ್ಪಾದನೆಯಿಂದ ಆಜಾದಿ
ಫ್ಯಾಸಿಸ್ಟ್ ವಾದದಿಂದ ಆಜಾದಿ
ಬಂಡವಾಳಶಾಹಿಯಿಂದ ಆಜಾದಿ
ಹಸಿವಿನಿಂದ ಆಜಾದಿ

ಅನಾರೋಗ್ಯದಿಂದ ಆಜಾದಿ
ಅನಕ್ಷರತೆಯಿಂದ ಆಜಾದಿ

ನಿರುದ್ಯೋಗದಿಂದ ಆಜಾದಿ
ಲಿಂಗ ಅಸಮಾನತೆಯಿಂದ ಆಜಾದಿ
ಶೋಷಣೆ-ವಂಚನೆ ಅನ್ಯಾಯಗಳಿಂದ ಆಜಾದಿ

ಮೇಕಿಂಗ್ ಹಿಸ್ಟರಿ: ಬ್ರಿಟೀಷ್ ರಾಜ್ ನ ಸಾಮಾಜಿಕ ಸ್ಥಂಭಗಳು

making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

04/03/2016
ಹದಿನೇಳನೇ ಶತಮಾನದಲ್ಲಿ ಬ್ರಿಟನ್ನಿನ ಮಧ್ಯಮವರ್ಗದ ಪ್ರಜಾಪ್ರಭುತ್ವ ಕ್ರಾಂತಿ ಪೂರ್ಣವಾಗಿದ್ದು ಊಳಿಗಮಾನ್ಯ ಪದ್ಧತಿಯ ವಿರುದ್ಧ ನಿಂತ ರೈತರಿಗೆ ಮಧ್ಯಮವರ್ಗದ ಮುಂದಾಳತ್ವ ಜೊತೆಯಾದಾಗ. ಬ್ರಿಟನ್ನಿನಲ್ಲಿ ಬಂಡವಾಳಶಾಹಿತನ ಪ್ರಾರಂಭವಾಗಿದ್ದು ಇದೇ ಕ್ರಾಂತಿಯಿಂದ. ಆದರೆ ನಾವು ನೋಡುವಂತೆ ಕರ್ನಾಟಕ ಮತ್ತು ಭಾರತದಲ್ಲಿ ಇದೇ ಬ್ರಿಟೀಷ್ ಬಂಡವಾಳ ಊಳಿಗಮಾನ್ಯ ಪದ್ಧತಿಯ ಜೊತೆಗೆ ಸಖ್ಯ ಬೆಳೆಸಿಕೊಂಡ ಊಳಿಗಮಾನ್ಯ ಪದ್ಧತಿ ಕೊಳೆಯುವಿಕೆಯಿಂದ ಜೀವಂತಿಕೆಯತ್ತ ಹೊರಳಿತು. ಇದು ನಮ್ಮ ದೇಶದ ಬಂಡವಾಳಶಾಹಿತನದ ಅಭಿವೃದ್ಧಿಯ ಇತಿಹಾಸದಲ್ಲಿನ ಅತಿ ಮುಖ್ಯ ಘಟ್ಟ ಮತ್ತು ನಮ್ಮ ನೆಲದಲ್ಲಿ ಹೂಡಲಾದ ವಿದೇಶಿ ಬಂಡವಾಳದ ವಿಶಿಷ್ಟ ಲಕ್ಷಣ. ಸಾಮಾಜಿಕ ಪರಿಸ್ಥಿತಿ ಮತ್ತಷ್ಟು ಜಟಿಲವಾಯಿತು. ಈ ಅಂಶ ಮಾರ್ಕ್ಸ್ – ಲೆನಿನ್ – ಮಾವೋವಾದಿಗಳನ್ನು ವಿಚಲಿಸಿದ ಕಾರಣಕ್ಕೆ ರಿವಿಷನಿಸ್ಟ್ ಇತಿಹಾಸ ಮುಕ್ಕಾಯಿತು. ಈ ಅಂಶ ಮೂಡಲು ಕಾರಣರಾದವರ ಬಗ್ಗೆ ಮೊದಲು ತಿಳಿದು ನಂತರ ಇತಿಹಾಸಕಾರರೊಡನೆ ಚರ್ಚೆಗೆ ಮರಳೋಣ.

ಮೈಸೂರನ್ನು ವಶಕ್ಕೆ ತೆಗೆದುಕೊಳ್ಳುವಾಗ ಮದ್ರಾಸ್ ಸರಕಾರಕ್ಕೆ ಗವರ್ನರ್ ಜೆನರಲ್ ಎರಡು ಮುಖ್ಯ ಸೂಚನೆಗಳನ್ನು ನೀಡುತ್ತಾನೆ. ಅವುಗಳಲ್ಲೊಂದು “ಅಸ್ತಿತ್ವದಲ್ಲಿರುವ ಸ್ಥಳೀಯ ಸಂಸ್ಥೆಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳಬೇಕು” ಎನ್ನುವುದಾಗಿತ್ತು. (62) ಗವರ್ನರ್ ಜೆನರಲ್ ಈ ಸಲಹೆಗೆ ಯಾವುದೇ ವಿವರಣೆ ನೀಡಿರಲಿಲ್ಲ; ಬಹುಶಃ ವಸಾಹತು ಕಟ್ಟುವ ಮನ್ರೋರಂತವರಿಗೆ ಇದರ ಬಗೆಗಿನ ಮಾಹಿತಿ ಮೊದಲೇ ಇತ್ತು.

1812-13ರಲ್ಲಿ ಬರೆದ ಪತ್ರವೊಂದರಲ್ಲಿ ಮನ್ರೋ: “ವ್ಯವಸ್ಥೆಯ ಒಳಚೌಕಟ್ಟನ್ನು ಹಿಡಿದಿಡುವ ರಾಜಕಾರಣದ ವಸ್ತುಗಳಾಗಿ ಪ್ರತೀ ಹಳ್ಳಿಯ ಪಟೇಲರು ಮತ್ತು ಶಾನುಭೋಗರು ಸರಕಾರಕ್ಕೆ ತುಂಬಾ ಉಪಯುಕ್ತರು.”(63) ಇದು ತುಂಬ ಸಂಕ್ಷಿಪ್ತ ನೋಟವಾದರೂ ನ್ಯಾಯಸಮ್ಮತವಾದದ್ದು! ಬ್ರಿಟೀಷ್ ವಸಾಹತುಶಾಹಿ, ಊಳಿಗಮಾನ್ಯ ವರ್ಗವನ್ನು ಅತಿಯಾಗಿ ಮುದ್ದಿಸುವ ಹಿಂದಿನ ಪ್ರೇರಣೆಯನ್ನು ಇದು ಹೊರಹಾಕಿತ್ತು.

ಮನ್ರೋನ ವಾದಗಳನ್ನು ಹೆಚ್ಚಿನ ವಿವರಗಳೊಂದಿಗೆ ನೋಡೋಣ. ಜಮೀನ್ದಾರರು ಮತ್ತು ಊಳಿಗಮಾನ್ಯ ಪದ್ಧತಿಯ ಉಳಿಯುವಿಕೆಯ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತಾನೆ. “ನಮ್ಮ ಅಧಿಕಾರ ಶೈಶಾವಸ್ಥೆಯಲ್ಲಿದ್ದಾಗ, ದೊಡ್ಡ ಜಮೀನ್ದಾರರು ಒಡ್ಡುತ್ತಿದ್ದ ಸಶಕ್ತ ಪ್ರತಿರೋಧವನ್ನು ಕುಗ್ಗಿಸಲು ಅವರ ಸಾಮ್ರಾಜ್ಯದ ವ್ಯಾಪ್ತಿಯನ್ನು ಕಿರಿದುಗೊಳಿಸುವುದು ಸರಿಯಾದ ಮಾರ್ಗವಾಗಿತ್ತು. ನಮ್ಮ ಇವತ್ತಿನ ಅಧಿಕಾರ ಶಕ್ತವಾಗಿರುವ ಪರಿಸ್ಥಿತಿಯಲ್ಲಿ ಅವರನ್ನು ಎಷ್ಟು ಸಾಧ್ಯವೋ ಅಷ್ಟು ಪೂರ್ಣವಾಗಿ ಉಳಿಸಿಕೊಳ್ಳುವುದು ನಮ್ಮ ಗುರಿಯಾಗಬೇಕು. ಜಮೀನ್ದಾರರ ಸಂತತಿ ಪೂರ್ಣ ನಾಶವಾಗಿಬಿಟ್ಟರೆ, ದೇಶದ ಆಳ್ವಿಕೆಯಲ್ಲಿ ಸ್ಥಳೀಯರಾರೂ ಇರುವುದಿಲ್ಲ. ಎಲ್ಲಾ ಉದ್ಯೋಗ ಮತ್ತು ಅಧಿಕಾರ ಕೆಲವೇ ಕೆಲವು ಯುರೋಪಿಯನ್ನರ ಜವಾಬ್ದಾರಿಯಾಗುತ್ತದೆ. ಆ ರೀತಿಯ ಪರಿಸ್ಥಿತಿ ಸರಕಾರದ ಭದ್ರತೆಗೆ ಅಪಾಯಕಾರಿ; ಸ್ಥಳೀಯರು, ಆಳುವ ವಿದೇಶಿ ಜನರ ಐಷಾರಾಮಿತನ ಮತ್ತು ತಮ್ಮ ಹೀನ ಸ್ಥಿತಿಯನ್ನು ತುಲನೆ ಮಾಡದೆ ಇರಲಾರರು. ಎಲ್ಲಾದರೂ ಒಂದೆಡೆ ಅಸಹನೆ ಪ್ರತಿಭಟನೆಯ ಸ್ವರೂಪ ಪಡೆದುಕೊಂಡರೆ, ಅದು ಶೀಘ್ರವಾಗಿ ಇತರೆಡೆಗೂ ಹರಡುತ್ತದೆ. ಒಂದೆಡೆ ಪ್ರತಿಭಟನೆಯನ್ನು ಹತ್ತಿಕ್ಕುವುದು ಮತ್ತೊಂದೆಡೆ ಪ್ರತಿಭಟನೆಗೆ ಪ್ರಚೋದನೆ ನೀಡುತ್ತದೆ. ನಮ್ಮೆಡೆಗೆ ಅವರಿಗೆ ಕರುಣೆಯೇನಿಲ್ಲ. ತಮ್ಮ ಬದುಕಿನ ನಿರ್ವಹಣೆಗೆ ಕೆಲವರು ನಮ್ಮ ಮೇಲೆ ಅವಲಂಬಿತರಾಗಿರುವುದನ್ನು ಬಿಟ್ಟರೆ ಉಳಿದವರಿಗೆ ಸರಕಾರದ ಜೊತೆಗೆ ಯಾವುದೇ ಬಂಧವಿಲ್ಲ. ಕೆಳವರ್ಗದ ಅಧಿಕಾರಿಗಳಿಗೆ, ಮತ್ತಿತರ ಅವಲಂಬಿತ ಯುರೋಪಿಯನ್ನರಿಗೆ ಪುರಾತನ ಕುಟುಂಬಗಳ ಆಸ್ತಿಪಾಸ್ತಿ ಸಿಕ್ಕುಬಿಟ್ಟಿದೆ ಎನ್ನುವ ಅಂಶವಷ್ಟೇ ಸಾಕು ಅವರು ನಮ್ಮ ವಿರುದ್ಧ ಸಿಡಿದೇಳಲು.

ಜಮೀನ್ದಾರರಿಂದ ಏನನ್ನಾದರೂ ದಸ್ತಗಿರಿ ಮಾಡುವಷ್ಟು ನಮ್ಮ ಶಕ್ತಿ ಬೆಳೆದಿದೆ. ವಿರೋಧಿಸಲಾಗುವುದಿಲ್ಲ ಎನ್ನುವುದವರಿಗೆ ಗೊತ್ತಿದೆ; ಅವರಿಗಿರುವ ಸಂತಸದ ಹಕ್ಕುಗಳನ್ನು ಮೊಟಕುಗೊಳಿಸುವ ಕೆಲಸಗಳನ್ನು ನಾವು ಮಾಡುವುದಿಲ್ಲ ಎನ್ನುವುದೂ ಅವರಿಗೆ ಗೊತ್ತಿದೆ. ಜಮೀನ್ದಾರಿ ಆಸ್ತಿಯನ್ನು ತಮ್ಮ ಪುಟ್ಟ ಅಥವಾ ದೊಡ್ಡ ಸೈನಿಕ ಶಕ್ತಿಯ ಮೂಲಕ ಅವರು ರಕ್ಷಿಸಿಕೊಳ್ಳಲು ಬೇಕಾದ ಭದ್ರತೆ ಸಿಗುತ್ತದೆ. ಈ ಸುರಕ್ಷಾ ಭಾವದ ಬಗ್ಗೆ ಸ್ವಲ್ಪ ಸ್ವಲ್ಪವಾಗಿ ಅವರಿಗೆ ನಂಬಿಕೆ ಮೂಡುತ್ತಿದ್ದಂತೆ ಸೈನ್ಯ ಸಾಕುವ ಅಭ್ಯಾಸಗಳನ್ನು ಮರೆತು ಆಸ್ತಿ ಪಾಸ್ತಿಯನ್ನು ಹೆಚ್ಚಿಸುವ ಕಡೆಗೆ ಗಮನಹರಿಸುತ್ತಾರೆ. ಮತ್ತು ಅವರ ಒಳಿತಿಗಾಗಿ ಬೇರೆಲ್ಲಾ ವರ್ಗಗಳಿಗಿಂತಲೂ ಹೆಚ್ಚಾಗಿ ಯಾವುದೇ ಆತಂಕದ ಸಮಯದಲ್ಲಿ ಸರಕಾರದ ನೆರವಿಗೆ ಬರುತ್ತಾರೆ. ದೂರದ ಬೆಟ್ಟದ ಮೇಲಿನ ಮುಖ್ಯಸ್ಥರಲ್ಲಿ ಈ ರೀತಿಯ ಬದಲಾವಣೆ ಕೊನೆಗೆ ಬರಬಹುದು, ಆದರೆ ಎಲ್ಲರಲ್ಲೂ ಈ ಬದಲಾವಣೆ ಆಗೇ ಆಗುತ್ತದೆ. ನಮ್ಮ ಪ್ರಭಾವಳಿಯಿಂದ ಈ ಬದಲಾವಣೆ ವೇಗ ಪಡೆಯುತ್ತದೆ…..ನಮ್ಮ ಸಂಯಮದ ನಡವಳಿಕೆ ಪ್ರಭಾವಳಿಗಿಂತಲೂ ಮುಖ್ಯವಾದುದು.

ಜಮೀನುದಾರರ ಭೂಮಿಯಷ್ಟೇ ಅಲ್ಲ, ಹಳ್ಳಿಯಲ್ಲಿರುವ ಸೇವಕರ ಅಧಿಕೃತ ಜಮೀನನ್ನು ವಿಭಾಗಿಸಿ ಹಂಚಲಾಗುತ್ತಿದೆ. ಈ ಪಾಪ ಕಾರ್ಯವನ್ನು ತಡೆಯುವ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳದಿದ್ದರೆ ಪ್ರತೀ ಭೂಮಾಲೀಕನೂ ಸಾಮಾನ್ಯ ಕೃಷಿಕನ ಸ್ಥಾನಕ್ಕೆ ಇಳಿದುಬಿಡುತ್ತಾನೆ. ಮೇಲ್ವರ್ಗದ ಪತನದೊಂದಿಗೆ ಜನರ ವ್ಯಕ್ತಿತ್ವವೂ ಕುಗ್ಗಿ ಹೋಗುತ್ತದೆ; ಸರಕಾರದ ಜೊತೆಗಿನ ಬಂಧ ಸಡಿಲವಾಗುತ್ತದೆ, ಅವರನ್ನು ಉದ್ಧರಿಸುವ ನಮ್ಮ ಕಾರ್ಯಕ್ರಮಗಳ ಬಗೆಗಿನ ಆಸಕ್ತಿಯನ್ನು ಅವರು ಕಳೆದುಕೊಂಡುಬಿಡುತ್ತಾರೆ ಮತ್ತು ಸರಕಾರ ನಡೆಸುವುದು ದಿನೇ ದಿನೇ ಕಷ್ಟಕರವಾಗುತ್ತದೆ. ಈ ಕಾರಣಗಳಿಂದ ಪುರಾತನ ಜಮೀನುದಾರರನ್ನು ಉಳಿಸಲು ನಮ್ಮ ಅಧಿಕಾರಶಕ್ತಿಯಲ್ಲಿ ಸಾಧ್ಯವಾದದ್ದೆಲ್ಲವನ್ನೂ ಮಾಡಬೇಕು ಮತ್ತು ಅಧಿಕೃತ ಎಸ್ಟೇಟುಗಳು ಮುರಿದು ಬೀಳದಂತೆ ನೋಡಿಕೊಳ್ಳಬೇಕು. ಇದು ಸಮಾಜದಲ್ಲಿ ಉನ್ನತ ಮತ್ತು ಕೆಳ ವರ್ಗವನ್ನು ಉಳಿಸುತ್ತದೆ ಮತ್ತು ಈ ಉಳಿಯುವಿಕೆಯಿಂದಷ್ಟೇ ಇಲ್ಲಿನ ಪರಿಸ್ಥಿತಿಯನ್ನು ಸುಧಾರಿಸಬಹುದಾಗಿದೆ.

ಆ ನಿಯಮಗಳ ಪ್ರಕಾರ ಭೂಮಿ ಹೊಂದದ ಭೂಮಾಲೀಕರಿಗೆ ಅಥವಾ ಹಳೆಯ ಜಮೀನುದಾರರಿಂದ ಭೂಮಿ ಖರೀದಿಸಿರುವ ಅಪರಿಚಿತರಿಗೆ ಇದು ಅನ್ವಯವಾಗದು.

ಬಾಕಿ ತೆರಿಗೆಯ ವಸೂಲಿಗಾಗಿ ಜಮೀನುದಾರರ ಭೂಮಿಯನ್ನು ಮಾರಾಟ ಮಾಡುವುದನ್ನು ಗೌರವಾನ್ವಿತ ನಿರ್ದೇಶಕ ಮಂಡಳಿ ಈಗಾಗಲೇ ನಿಷೇಧಿಸಿದೆ.”(64)

ಪುರಾತನ ಊಳಿಗಮಾನ್ಯ ಪದ್ಧತಿಯ ಆಸ್ತಿ ಮತ್ತದನ್ನು ಹೊಂದಿದ್ದ ಜಮೀನ್ದಾರ ವರ್ಗವನ್ನು ರಕ್ಷಿಸುವಾಗ ಮನ್ರೋ ಮೇಲ್ಮಟ್ಟದ ಅಧಿಕಾರಸ್ಥರ ಒಪ್ಪಿಗೆಗೆ ಮಾತ್ರ ಕಾಯುತ್ತಿದ್ದ. ಬ್ರಿಟೀಷ್ ರಾಜ್ ನ ಆಳ್ವಿಕೆಗೊಳಪಟ್ಟಿದ್ದ ಒಂದು ದೊಡ್ಡ ರಾಜಸಮೂಹ ಶಿರಸಾವಹಿಸಿ ಒಪ್ಪಿಬಿಡುತ್ತದೆ.

ಇಲ್ಲಿಯವರೆಗೆ ಊಳಿಗಮಾನ್ಯ ಪದ್ಧತಿಯ ಆರ್ಥಿಕ ಬುನಾದಿಯನ್ನು ತಲುಪುವ ಮನ್ರೋನ ವಿಧಾನವನ್ನು ನೋಡಿದೆವು. ಬ್ರಿಟೀಷ್ ಸಾಮ್ರಾಜ್ಯದ ಅನುಕೂಲಕ್ಕೆ ತಕ್ಕಂತೆ ಅವನದನ್ನು ಅಭ್ಯಸಿಸಿದ್ದನ್ನು ಈಗ ನೋಡೋಣ.

ಭಾರತದಲ್ಲಿ ಕೆಲಸ ಮಾಡಲು ಬ್ರಿಟೀಷ್ ಸಿವಿಲ್ ಸರ್ವೀಸಿಗೆ ಹೊಸತಾಗಿ ಸೇರಿದವರಿಗೆ ತಮಗೆ ಎದುರಾದ ಫ್ಯೂಡಲ್ ಮೂರ್ಖರನ್ನು ಬದಲಿಸುವ ಉತ್ಸುಕತೆಯಿತ್ತು. ಇದಕ್ಕಿದ್ದ ಕಾರಣ ಸರಳ ಸಾಂಸ್ಕೃತಿಕ ದ್ವೇಷ. ಮದ್ರಾಸ್ ಪ್ರಾಂತ್ಯದ ಗವರ್ನರಾಗಿದ್ದ ಮನ್ರೋ ಇವರು ಸಾಗಬೇಕಾದ ದಾರಿಯನ್ನು ಹಾಕಿಕೊಟ್ಟಿದ್ದರು. 

“ಸ್ವತಂತ್ರ ದೇಶದಲ್ಲಿನ ಬುನಾದಿಯ ಮೇಲೆ ನಮ್ಮ ಸಂಸ್ಥೆಗಳು ನಿಂತಿಲ್ಲವಾದ್ದರಿಂದ ಸ್ವತಂತ್ರ ದೇಶದಲ್ಲಿ ಕಾರ್ಯನಿರ್ವಹಿಸಿದಂತೆಯೇ ಕೆಲಸ ಮಾಡುವುದು ಸಾಧ್ಯವಿಲ್ಲ. ಸತ್ತ ಹೆಣದಿಂದ ಜೀವಂತ ದೇಹದ ಕೆಲಸಗಳನ್ನು ಮಾಡಿಸುವುದು ಅಸಾಧ್ಯ. ಹಾಗಾಗಿ ನೀತಿ ನಿಯಮಗಳನ್ನಿಲ್ಲಿ ರಚಿಸುವಾಗ ಈ ದೇಶದ ಮೇಲೆ ಅದರ ಸಂಭಾವ್ಯ ಪರಿಣಾಮಗಳೇನು ಎನ್ನುವುದರ ಬಗ್ಗೆ ಯೋಚಿಸಬೇಕೇ ಹೊರತು ಈ ರೀತಿಯ ನೀತಿ – ನಿಯಮಗಳು ಇಂಗ್ಲೆಂಡಿನ ಮೇಲೆ ಯಾವ ಪರಿಣಾಮಗಳನ್ನುಂಟುಮಾಡುತ್ತಿತ್ತು ಎಂಬುದನ್ನಲ್ಲ…….”(65)

ಬ್ರಿಟೀಷ್ ಅಧಿಕಾರಿಗಳು ಮನ್ರೋಗೆ ಪತ್ರದ ಮೇಲೆ ಪತ್ರ ಬರೆದು ಜನರಿಗೆ ಆತ ತೆರೆದುಕೊಂಡ ರೀತಿ ಉಂಟುಮಾಡಬಹುದಾದ ದಾಳಿಯ ಬಗ್ಗೆ ಕೇಳುತ್ತಿದ್ದಾಗ 1801ರ ಡಿಸೆಂಬರಿನಲ್ಲಿ ಊಳಿಗಮಾನ್ಯ ಪದ್ಧತಿ ವಸಾಹತುಶಾಹಿ ಆಳ್ವಿಕೆಯ ಸುಭದ್ರತೆಗೆ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುತ್ತ: “ಗುರ್ರಂಕೊಂಡದ ಎಲ್ಲಾ ಪಾಳೇಗಾರರು ಮತ್ತವರ ಹಿಂಬಾಲಕರು ಸೇರಿದ್ದ ಸಭೆಗೆ ಹೋದಾಗ ನನ್ನ ಜೊತೆ ಒಬ್ಬೇ ಒಬ್ಬ ವ್ಯಕ್ತಿ ಇರಲಿಲ್ಲ, ಕಳೆದ ವರ್ಷ ಹೋದಾಗಲೂ ಇರಲಿಲ್ಲ. ಅವರಿಗೆ ಸಿಗುವ ತೆರಿಗೆಯ ಹಣವನ್ನು (cowle) ನಾನು ಕಡಿತಗೊಳಿಸಿದ್ದೆ ಮತ್ತು ನಾನವರನ್ನು ಪಟೇಲರ ಮಟ್ಟಕ್ಕೆ ಇಳಿಸುತ್ತೇನೆನ್ನುವುದೂ ಅವರಿಗೆ ಗೊತ್ತಿತ್ತು. ಆದರೂ ಒಂದಿನಿತೂ ಅಗೌರವ ತೋರಲಿಲ್ಲ. ಸಾಮಾನ್ಯವಾಗಿ ಭಾರತೀಯ ಸಂಜಾತರು ಸಾರ್ವಜನಿಕ ಅಧಿಕಾರಿಗಳೆಡೆಗೆ ಭಯ ಭಕ್ತಿಯಿಂದ ಕೂಡಿದ ಪೂಜ್ಯ ಭಾವನೆ ಹೊಂದಿರುತ್ತಾರೆ.” (66)

ಮಧ್ಯಮವರ್ಗದ ಪ್ರಜಾಪ್ರಭುತ್ವ ಇಂಗ್ಲೆಂಡ್ ಮತ್ತು ಅರೆಊಳಿಗಮಾನ್ಯ ಭಾರತದ ನಡುವಿನ ಗೆರೆಯನ್ನು ಮನ್ರೋ ಗುರುತಿಸಿದ್ದ. ಅವನಿಗೆ ಊಳಿಗಮಾನ್ಯ ಪದ್ಧತಿ ಮುಂದುವರೆಯಬೇಕಿತ್ತು. ಅದರ ಬಗ್ಗೆ ಅನುಮಾನ ಬೇಡ. ವರ್ಗ, ಜಾತಿ, ಲಿಂಗ ಮತ್ತಿನ್ಯಾವ ಭೇದಗಳಿವೆಯೋ ಹೆಸರಿಸಿ – ಅವೆಲ್ಲವೂ ಮುಂದುವರಿಯುವುದು ಆತನಿಗೆ ಬೇಕಿತ್ತು. ಸ್ಥಿರಾಸ್ಥಿಯ ಹಕ್ಕುಗಳನ್ನು ಕೀಲಿಕೈಯಾಗಿ ಬಳಸಿ ಊಳಿಗಮಾನ್ಯತೆಯ ಉಳಿವಿಗಾಗಿ ಆತ ಕೆಲಸ ಮಾಡಿದ. ಈ ಉಳಿಯುವಿಕೆಯನ್ನು ಸಾಧಿಸಲು ವಸಾಹತುಶಾಹಿಯಡಿಯ ನಿಯಮಗಳನ್ನು ಉಪಯೋಗಿಸಿಕೊಂಡ. ಊಳಿಗಮಾನ್ಯ ಪದ್ಧತಿ ವಸಾಹತುಶಾಹಿಯ ಸೇವೆ ಮಾಡಿಕೊಂಡಿರಬೇಕೆಂಬುದು ಆತನ ಆಸೆಯಾಗಿತ್ತು. ಊಳಿಗಮಾನ್ಯ ಪದ್ಧತಿಯು ಭಾರತವನ್ನು ಒಂದು ತಟ್ಟೆಯಲ್ಲಿಟ್ಟು ಬ್ರಿಟೀಷರಿಗೆ ಲೂಟಿ ಮಾಡಲು ಕೊಡುವುದನ್ನು ಆತ ನೋಡಬೇಕಿತ್ತು. ಕೆಲವು ಬದಲಾವಣೆಗಳೊಂದಿಗೆ ಊಳಿಗಮಾನ್ಯ ಪದ್ಧತಿ ಮುಂದುವರಿಯಬೇಕಿತ್ತೆಂದು ಹೇಳಬಹುದು. ಅರೆಊಳಿಗಮಾನ್ಯ ಪದ್ಧತಿಯನ್ನು ಪ್ರತಿಷ್ಠಾಪಿಸಬೇಕಿತ್ತು.

ಒಂದೆಡೆ ದೊಡ್ಡ ದೊಡ್ಡ ಭೂಮಾಲೀಕತ್ವ ಒಡೆದು ಹೋಗುವುದನ್ನು ತಡೆದು ಊಳಿಗಮಾನ್ಯ ಪದ್ಧತಿಯ ಆರ್ಥಿಕತೆಯನ್ನು ಉಳಿಸಿದ ವಸಾಹತುಶಾಹಿಗಳು ಮತ್ತೊಂದೆಡೆ ವೈಯಕ್ತಿಕವಾಗಿ ಅವರಿಗೆ ಅಸಹ್ಯವೇ ಹುಟ್ಟಿಸಿದ್ದ ಅಸ್ಪ್ರಶ್ಯತೆ, ಮೂಢನಂಬಿಕೆ, ನಿರಕ್ಷರತೆ, ಬಾಲ್ಯವಿವಾಹ, ವಿಧವಾ ಹತ್ಯೆ, ಬಸದಿ ಬಿಡುವುದು ಮತ್ತು ಇನ್ನಿತರೆ ಸನಾತನ ಪದ್ಧತಿಗಳನ್ನು ತಡೆಯುವುದಕ್ಕೆ ಬೇಕಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳನ್ನು ಜಾರಿಗೊಳಿಸುವುದಕ್ಕೆ ಹಿಂದೇಟು ಹಾಕಿದರು. ಬದಲಿಗೆ ಈ ಪ್ರತಿಗಾಮಿ ಮೂಢನಂಬಿಕೆಗಳ ಮುಂದುವರಿಕೆಗೆ ತಮ್ಮ ಪೂರ್ಣ ಸಹಕಾರ ನೀಡಿದರು; ವಸಾಹತು ಆಳ್ವಿಕೆಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ. ವರುಷಗಳ ಆಡಳಿತದಿಂದ ಬ್ರಿಟೀಷ್ ಆಳ್ವಿಕೆ ಪ್ರಬುದ್ಧತೆ ಪಡೆದುಕೊಂಡಾಗ, ಜನಪ್ರಿಯ ಹೋರಾಟಗಳ ದೆಸೆಯಿಂದ ಸಾಮಾಜಿಕ ಅನಿಷ್ಟಗಳ ವಿರುದ್ಧ ಕಾನೂನು ಜಾರಿಗೊಳಿಸುವುದನ್ನು ಕಲಿತುಕೊಂಡರು. ಆದರೆ ಅವುಗಳ ಜಾರಿಗೆ ತಮ್ಮ ರೆಟ್ಟೆಗೆ ಶ್ರಮ ಕೊಡಲಿಲ್ಲ. ಇದನ್ನು ಬ್ರಿಟೀಷರ ಹಗ್ಗದ ಮೇಲಿನ ನಡಿಗೆ ಎಂದು ಕರೆಯಬಹುದೇನೋ?! ಆದರಿದು ಭಾರತದ ಫಕೀರರು ಮತ್ತು ದೊಂಬರಾಟದವರ ಆಟಕ್ಕಿಂತ ಹೆಚ್ಚು ಕೃತ್ರಿಮವಾಗಿತ್ತು. ಇದು ಭಾರತದ ಜನ ಸಮುದಾಯದ ಮೇಲೆ ಮಾಡಿದ ಮೋಡಿ – ಈ ಮೋಡಿಯನ್ನು ಇವತ್ತು ಭಾರತವನ್ನಾಳುತ್ತಿರುವವರು ಕೊಂಚ ಉತ್ತಮಪಡಿಸಿಕೊಂಡು ಮುಂದುವರೆಸಿದ್ದಾರೆ. ಈ ರಾಜಕೀಯ ಯುಕ್ತಿಯ ನಡೆ ಸಂವಿಧಾನದ ಬದಲಾವಣೆ ಬಯಸಿದವರು ಮತ್ತು ಪ್ರಗತಿಪರರು ವೈಯಕ್ತಿಕವಾಗಿ ಬ್ರಿಟೀಷ್ ರಾಜ್ ಅನ್ನು ಹೊಗಳುವಂತೆ ಮಾಡಿತು. ಸಾರ್ವಜನಿಕ ಬೆಂಬಲ ಸಿಗುವಂತೆ ಮಾಡಿತು.

ಊಳಿಗಮಾನ್ಯ ಪದ್ಧತಿಯ ಬುಡ ತಲುಪಿದ ಬ್ರಿಟೀಷರು, ಭಾರತದ ಜನಸಮೂಹದ ವಿರುದ್ಧ ಅವರು ಉಪಯೋಗಿಸುತ್ತಿದ್ದ ಕಬ್ಬಿಣದ ಕೈಗವಸನ್ನು ತಾವು ಧರಿಸಿದರು. ಊಳಿಗಮಾನ್ಯ ಪದ್ಧತಿಯ ಮೇಲ್ರಚನೆಯನ್ನು ಉಳಿಸಿ ನೆಲೆ ನಿಂತರು.

ಊಳಿಗಮಾನ್ಯ ಪದ್ಧತಿಯ ಅಸ್ತಿತ್ವ, ಶ್ರಮಿಕ ವರ್ಗವನ್ನು ದಮನಿಸಲು ಮತ್ತು ಆಕ್ರಮಿಸಿಕೊಂಡ ದೇಶವನ್ನಾಳಲು ನೀಡುತ್ತಿದ್ದ ರಾಜಕೀಯ ಅನುಕೂಲ ಉಳಿದೆಲ್ಲಕ್ಕಿಂತಲೂ ದೊಡ್ಡದು. ಊಳಿಗಮಾನ್ಯ ಆರ್ಥಿಕತೆಯಲ್ಲಿ ನೇರ ಸಂಬಂಧ, ವಲಸೆಗೆ ಅವಕಾಶವಿಲ್ಲದಿರುವುದು ಮತ್ತು ಜೀತದ ಕಾರಣದಿಂದ ಕೂಲಿಯವನನ್ನು ಯಜಮಾನನಿಗೆ ಬಂಧಿಸುತ್ತಿತ್ತು ಮತ್ತು ಇಬ್ಬರೂ ಜಮೀನಿನ ಬಂಧಿಗಳಾಗಿದ್ದರು; ಇದು ವಸಾಹತುಶಾಹಿ ಸರಾಗವಾಗಿ ತನ್ನ ಯೋಜನೆಗಳನ್ನು ಜಾರಿಗೊಳಿಸಲು, ಬದಲಿಸಲು ಅವಕಾಶ ನೀಡುತ್ತಿತ್ತು. ಊಳಿಗಮಾನ್ಯ ಪದ್ಧತಿಯನ್ನು ಭೂಹಂಚಿಕೆಯ ಮೂಲಕ ನಾಶಗೊಳಿಸಿದ್ದರೆ ಬಂಡವಾಳಶಾಹಿತನದ ಪ್ರವೇಶವಾಗುತ್ತಿತ್ತು, ಮತ್ತಿದು ಕೂಲಿಕಾರ್ಮಿಕರಲ್ಲಿ ರಾಜಕೀಯ ಹಕ್ಕಿನ ಪ್ರಜ್ಞೆಯನ್ನು ಜಾಗ್ರತಗೊಳಿಸುತ್ತಿತ್ತು. ಇದಕ್ಕೆ ಜಪಾನ್ ದೇಶ ಉದಾಹರಣೆಯಾಗಿದೆ. ವಸಾಹತುಶಾಹಿಯ ಆಕ್ರಮಣ ಮತ್ತು ಜಪಾನ್ ಮಾರುಕಟ್ಟೆಯ ದೋಚುವಿಕೆ ಹೆಚ್ಚು ಕಾಲ ನಡೆಯಲಿಲ್ಲ; ಕಾರಣ, ಜಾಗ್ರತ ಕಾರ್ಮಿಕರು ನಗರ ಪ್ರದೇಶದ ಬಡವರ ಜೊತೆಗೆ ಕೈಜೋಡಿಸಿ ಊಳಿಗಮಾನ್ಯ ಪದ್ಧತಿಯ ವಿರುದ್ಧ ಹೋರಾಡಲಾರಂಭಿಸಿದ್ದರು. ಪಾಶ್ಚಿಮಾತ್ಯ ವಸಾಹತುಶಾಹಿಗಳು ಜಪಾನಿಗೆ ಕಾಲಿಟ್ಟು ಅಲ್ಲಿನ ಊಳಿಗಮಾನ್ಯ ದೊರೆಗಳು ಮತ್ತವರ ಹಿಂಬಾಲಕರ ಜೊತೆಗೆ ಒಪ್ಪಂದ ಮಾಡಿಕೊಂಡರೂ ಹೋರಾಟವನ್ನು ಹತ್ತಿಕ್ಕಲಾಗಲಿಲ್ಲ, ಊಳಿಗಮಾನ್ಯ ಪದ್ಧತಿಯ ವಿರುದ್ಧ ಪ್ರಾರಂಭವಾದ ಸಣ್ಣ ಮಟ್ಟದ ಹೋರಾಟ ರಾಷ್ಟ್ರೀಯತೆಯ ಭಾವನೆಯ ಜಾಗ್ರತಿಯೊಂದಿಗೆ ವೇಗ ಪಡೆದುಕೊಂಡು ಊಳಿಗಮಾನ್ಯ ಪದ್ಧತಿಯನ್ನು ಉಳಿಸಿ – ಬೆಳೆಸಿ ಜಪಾನ್ ದೇಶವನ್ನು ವಶಪಡಿಸಿಕೊಳ್ಳಬೇಕೆಂದಿದ್ದ ವಸಾಹತುಶಾಹಿಗಳನ್ನು ಹೊಡೆದೋಡಿಸಿದರು. (67)

ಮಸುದ್ ದನ್ಮೋಲೆಯ ಪುಸ್ತಕ ‘The Heritage of Imperialism’ ಎರಡು ಭಿನ್ನ ಸಾಮಾಜಿಕ ವ್ಯವಸ್ಥೆಗಳಾದ ಊಳಿಗಮಾನ್ಯತೆ ಮತ್ತು ವಸಾಹತುಶಾಹಿ ಹೇಗೆ ಮೇಲ್ಮಟ್ಟದಲ್ಲಿ ಒಂದಕ್ಕೊಂದು ಹೊಂದಿಕೊಂಡವು ಎನ್ನುವುದನ್ನು ವಿಶ್ಲೇಷಿಸುತ್ತದೆ. “ಭಾರತದ ಮಟ್ಟಿಗೆ…..ಸಾಮಾಜಿಕ ಹೋರಾಟದ ತಿರಸ್ಕಾರದ ಬೇರುಗಳು ಹಿಂದೂ ಧರ್ಮದ ಸಾಂಸ್ಕೃತಿಕ ರಚನೆಯಲ್ಲಿದೆ. ಒಂದು ಜಾತಿ ಮತ್ತೊಂದರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದಕ್ಕೆ ಅಥವಾ ಕೆಳ ಜಾತಿಯನ್ನು ಮೇಲ್ಜಾತಿ ಲೂಟಿ ಮಾಡುವುದಕ್ಕೆ ಹಿಂದೂ ಧರ್ಮದಲ್ಲೇ ಅವಕಾಶವಿದೆ! ಆದಕಾರಣ ವಸಾಹತುಶಾಹಿ ಸಾಮಾಜಿಕ ಸಂಬಂಧಗಳಲ್ಲಿ ಮೇಲು ಕೀಳಿನ ವ್ಯವಸ್ಥೆಯನ್ನು ಪರಿಚಯಿಸಿದ್ದು ಜನರಲ್ಲಿ ಅದಾಗಲೇ ಇದ್ದ ಮಾನಸಿಕ ಸಮ್ಮತಿ ಮತ್ತು ಆ ವ್ಯವಸ್ಥೆಯನ್ನು ಒಪ್ಪಿಕೊಳ್ಳುವ ಸಾಮಾಜಿಕ ರಚನೆ ಅಸ್ತಿತ್ವದಲ್ಲಿದ್ದದ್ದು ವಸಾಹತುಶಾಹಿಗೆ ಅನುಕೂಲವನ್ನೇ ಮಾಡಿತು.” (68)

ಎಲ್ಫಿನ್ ಸ್ಟೋನ್ ದೇವಾಲಯಗಳಿಗೆ ದತ್ತಿ ಕೊಟ್ಟದ್ದು ಮತ್ತು ಮನ್ರೋ ಮಠಗಳ ಬಗ್ಗೆ ಆದರದ ಭಾವನೆ ಹೊಂದಿದ್ದರ ಹಿಂದಿನ ಉದ್ದೇಶಗಳನ್ನು ವಿಶ್ಲೇಷಿಸಿದ ದನ್ಮೋಲೆ: “ವಸಾಹತುಶಾಹಿಯ ದಬ್ಬಾಳಿಕೆಯ ಶಕ್ತಿಗಳು ಸನಾತದ ದೊರೆ ಮತ್ತವನ ವ್ಯವಸ್ಥೆಯ ಮಾಯಾಪರದೆಯ ಹಿಂದವಿತು ರಕ್ಷಣೆ ಪಡೆಯಿತು.”(69)

“……ಪುರಾತನ ಸಿದ್ಧಾಂತಗಳು ಸಮುದಾಯದ ಸಾಮಾಜಿಕ ಮೌಲ್ಯಗಳ ಮುಂದುವರಿಕೆಗೆ ಮತ್ತು ಅದರಿಂದ ಸಾಮಾಜಿಕ ಸಮತೋಲನವನ್ನು ಕಾಪಿಡುವುದಕ್ಕೆ ಸಹಕಾರಿ ಎಂದು ಮೇಲ್ನೋಟಕ್ಕೆ ಕಾಣಿಸುತ್ತಾದರೂ, ವರ್ಗ ಪಕ್ಷಪಾತವಿರುವಾಗ ದಬ್ಬಾಳಿಕೆ ಶಕ್ತಿಯಾಗಿ ಬೆಳೆಯುತ್ತದೆ. ಪ್ರಶ್ನಿಸುವ ಹಕ್ಕನ್ನು ಕಿತ್ತುಕೊಳ್ಳಲಾಗುತ್ತದೆ. ಮೌಡ್ಯತೆಯನ್ನು ಮುಂದುವರೆಸಲಾಗುತ್ತದೆ. ಶೋಷಕ ವಿದೇಶೀ ಶಕ್ತಿಗಳು ಪುರಾತನ ಸಿದ್ಧಾಂತಗಳ ಜೊತೆ ಹೊಂದಿಕೊಂಡಿದ್ದು ವಸಾಹತಶಾಹಿ ಸಿದ್ಧಾಂತ ಸಶಕ್ತವಾಗಿ ಕಾರ್ಯನಿರ್ವಹಿಸಲೆಂದು. ಈ ಕಾರ್ಯನಿರ್ವಹಣೆಗೆ ಪುರಾತನ ಸಿದ್ಧಾಂತಗಳು ಒಂದು ಚೌಕಟ್ಟು ನಿರ್ಮಿಸಿಕೊಟ್ಟಿದೆ” ಎಂದು ತಮ್ಮ ಮಾತು ಮುಗಿಸುತ್ತಾರೆ ದನ್ಮೋಲೆ. (70)

ಕರ್ನಾಟಕ ಮತ್ತು ಭಾರತದ ಜನಸಮೂಹ, ಅದರಲ್ಲೂ ರೈತ – ಕಾರ್ಮಿಕರನ್ನು ಉಸಿರೆತ್ತದಂತೆ ಮಾಡುವ ಸಲುವಾಗಿ ಬ್ರಿಟೀಷರು ಊಳಿಗಮಾನ್ಯ ಪದ್ಧತಿಯೊಂದಿಗೆ ಜೊತೆಯಾದರು ಮತ್ತು ಅವಸಾನದತ್ತ ಸಾಗುತ್ತಿದ್ದ ಫ್ಯೂಡಲಿಸಂ ಮತ್ತೆ ಪುಟಿದೇಳುವಂತೆ ಮಾಡಿದರು. ವಸಾಹತುಶಾಹಿ ತನ್ನೆಲ್ಲಾ ಆರ್ಥಿಕ ಮತ್ತು ಸೈನಿಕ ಶಕ್ತಿಯೊಂದಿಗೆ ಅರೆ ಊಳಿಗಮಾನ್ಯ ಪದ್ಧತಿಯನ್ನು ಬೆಳೆಸಿ – ಉಳಿಸಿ, ಬೆಂಬಲಿಸಿ ವಿಸ್ತರಿಸಿತು.

ಇಂಗ್ಲೆಂಡಿನಲ್ಲಿ ಡಾ. ಜೆಕಿಲ್, ಭಾರತದಲ್ಲಿ ಮಿ.ಹೈಡ್ ಈ ವಿರೋಧಾತ್ಮಕ ವಿಭಾಗವನ್ನು ಮಧ್ಯಮವರ್ಗದ ವಸಾಹತುಶಾಹಿ ದುರಾಸೆ ಮತ್ತು ಬೂಟಾಟಿಕೆಯನ್ನು ಪೋಷಿಸಿದವು.

ಮುಂದಿನ ವಾರ: 
ತಲ್ಲೂರು ದೇಶಗತಿಯ ಸೂಕ್ಷ್ಮಜಗತ್ತು

Disclaimer: ಮೇಕಿಂಗ್ ಹಿಸ್ಟರಿ ಆಂಗ್ಲ ಪುಸ್ತಕದ ಅನುವಾದಿಸಲು ಬೇಕಾದ ಅಧಿಕೃತ ಹಕ್ಕುಗಳು ನನ್ನಲ್ಲಿಲ್ಲ. ಅನುವಾದದ ಹಕ್ಕನ್ನು ಕೊಡುವವರಲ್ಲನೇಕರು ಜೈಲಿನಲ್ಲಿದ್ದಾರಂತೆ. ಯಾರಲ್ಲಾದರೂ ಅಧಿಕೃತ ಅನುವಾದದ ಹಕ್ಕುಗಳು ಇದ್ದು ಆಕ್ಷೇಪಣೆ ಎತ್ತಿದರೆ ಕ್ಷಮಾಪಣೆಯೊಂದಿಗೆ ಅನುವಾದದ ಕಾರ್ಯವನ್ನು ನಿಲ್ಲಿಸಲಾಗುವುದು. ಸಾಕೇತ್ ರಾಜನ್ ದೃಷ್ಟಿಯ ಕರ್ನಾಟಕದ ಇತಿಹಾಸ ಕನ್ನಡ ಬಲ್ಲವರಿಗೂ ತಲುಪಲಿ ಎಂಬ ಉದ್ದೇಶದಿಂದ ಇದನ್ನು ಪ್ರಕಟಿಸಲಾಗುತ್ತಿದೆಯೇ ಹೊರತು ಯಾವುದೇ ವಾಣಿಜ್ಯ ಉದ್ದೇಶದಿಂದಲ್ಲ - ಡಾ. ಅಶೋಕ್. ಕೆ. ಆರ್.

ಮಾರ್ಚ್ 3, 2016

ಕನ್ಹಯ್ಯನಿಗೆ ಜಾಮೀನು ಕೊಟ್ಟ ಹೈಕೋರ್ಟ್ ಹೇಳಿದ್ದೇನು?

ಡಾ. ಅಶೋಕ್.ಕೆ.ಆರ್
03/03/2016
ದಿನದಿನಕ್ಕೂ ಹೊಸ ತಿರುವು ಪಡೆಯುತ್ತಲೇ ಇದ್ದ ಕನ್ಹಯ್ಯ ಬಂಧನ ಪ್ರಕರಣ ಒಂದು ಹಂತಕ್ಕೆ ಬಂದು ನಿಂತಿದೆ. ‘ದೇಶದ್ರೋಹ’ದ ಆರೋಪ ಎದುರಿಸುತ್ತಿದ್ದ ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರನಿಗೆ ಹೈಕೋರ್ಟ್ ಆರು ತಿಂಗಳ ಜಾಮೀನು ನೀಡಿದೆ. ಬಡತನದ ಕುಟುಂಬದಿಂದ ಬಂದವನೆಂಬ ಕಾರಣದಿಂದ ಹತ್ತು ಸಾವಿರ ರುಪಾಯಿಗಳ ವೈಯಕ್ತಿಕ ಬಾಂಡ್ ಕಟ್ಟಲು ಸೂಚಿಸಿದೆ. ಕನ್ಹಯ್ಯನೇ ದೇಶದ್ರೋಹಿ ಘೋಷಣೆಗಳು ಕೂಗಿದನೆಂಬ ವೀಡಿಯೋಗಳು ಮೊದಲೆರಡು ದಿನ ಹರಿದಾಡಿದವು, ವಾಹಿನಿಗಳಲ್ಲೂ ಅದೇ ಪ್ರಸಾರವಾಯಿತು. ಕನ್ಹಯ್ಯನ ಪರವಾಗಿ ಮಾತನಾಡಿದವರಿಗೆಲ್ಲ ‘ದೇಶದ್ರೋಹಿ’ ಸರ್ಟಿಫಿಕೇಟುಗಳನ್ನು ಹಂಚುವಲ್ಲಿ ‘ದೇಶಪ್ರೇಮಿ’ಗಳು ಬ್ಯುಸಿಯಾಗಿಬಿಟ್ಟರು. ನಂತರದ ದಿನಗಳಲ್ಲಿ ಘೋಷಣೆ ಕೂಗಿದ್ದು ಎಬಿವಿಪಿಯವರು ಎಂದರು, ಇಲ್ಲ ಘೋಷಣೆ ಕೂಗಿದ್ದು ಕಾಶ್ಮೀರಿಗಳು ಎಂದರು. ಕನ್ಹಯ್ಯನ ವೀಡಿಯೋ ನಕಲಿ, ಅವನು ಮನುವಾದದ ವಿರುದ್ಧ ಬ್ರಾಹ್ಮಣವಾದದ ವಿರುದ್ಧ ಬಡತನದ ವಿರುದ್ಧ ಜಾತೀಯತೆಯ ವಿರುದ್ಧ ಕೂಗಿದ್ದ ಘೋಷಣೆಗಳ ವೀಡಿಯೋದ ಧ್ವನಿ ಬದಲಿಸಿ ದೇಶದ್ರೋಹಿಯಾಗಿ ಬಿಂಬಿಸಲು ಝೀ ನ್ಯೂಸಿನಂತಹ ಕೆಲವು ಮಾಧ್ಯಮಗಳು ನಡೆಸಿದ್ದ ಪ್ರಯತ್ನವನ್ನು ಇಂಡಿಯಾ ಟುಡೇ ಬಯಲಿಗೆಳೆಯಿತು. ಫೊರೆನ್ಸಿಕ್ ವರದಿಗಳು ಕೂಡ ಏಳು ವೀಡಿಯೋಗಳಲ್ಲಿ ಎರಡು ನಕಲಿ ಎಂದ್ಹೇಳಿತು. ಝೀ ನ್ಯೂಸಿನ ವರದಿಗಾರ ಘಟನೆ ನಡೆಯುವ ಒಂದು ಘಂಟೆ ಮೊದಲೇ ಎಬಿವಿಪಿ ಮುಖಂಡನ ಆಹ್ವಾನದ ಮೇರೆಗೆ ಜೆ.ಎನ್.ಯು ಒಳಗೆ ಹೋಗಿದ್ದರು ಎಂಬಂಶ ಜೆ.ಎನ್.ಯು entry bookನಿಂದ ಪತ್ತೆಯಾಯಿತು. ಹಿಂಗೆ ದಿನಕ್ಕೊಂದು ತಿರುವು ಪಡೆಯುತ್ತಿದ್ದ, ‘ದೇಶದ್ರೋಹ’ದ ಕೆಲಸವನ್ನು ಕನ್ಹಯ್ಯ ಮಾಡಿದ್ದನೇ ಇಲ್ಲವೇ ಎಂಬ ಗೊಂದಲಗಳು ಚಾಲ್ತಿಯಲ್ಲಿರುವಾಗಲೇ ಹೈಕೋರ್ಟ್ ಕನ್ಹಯ್ಯನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ನಮ್ಮ ಚರ್ಚೆಗಳು ವಾದಗಳು ಏನೇ ಇರಲಿ ನ್ಯಾಯಾಲಯ ಕನ್ಹಯ್ಯನ ಬಿಡುಗಡೆಯ ಸಂದರ್ಭದಲ್ಲಿ ಹೇಳಿದ ಪ್ರಮುಖ ಅಂಶಗಳೇನು ಎನ್ನುವುದನ್ನು ನೋಡೋಣ.

ಎಫ್ ಐ ಆರಿನ ಪ್ರಕಾರವೇ ಜೆ.ಎನ್.ಯುನಲ್ಲಿ ದೇಶವಿರೋಧಿ ಹೇಳಿಕೆಗಳನ್ನು ಕೂಗಿದರೆನ್ನಲಾದ ದಿನ ಯಾವುದೇ ರೀತಿಯ ಹಿಂಸೆ ನಡೆದಿಲ್ಲ. ಕನ್ಹಯ್ಯ ಕುಮಾರ್ ತನಿಖೆಗೆ ಪೂರ್ಣ ಸಹಕರಿಸಿದ್ದಾನೆ, ಸದ್ಯಕ್ಕೆ ಈ ಪ್ರಕರಣದ ತನಿಖೆಗೆ ಅವನ ಅವಶ್ಯಕತೆಯಿಲ್ಲ ಎಂದು ಕನ್ಹಯ್ಯನ ಪರ ವಕೀಲರಾದ ಕಪಿಲ್ ಸಿಬಲ್ ವಾದಿಸಿದರು. ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದ ಕನ್ಹಯ್ಯನ ಮೇಲೆ ಆರೋಪ ಹೊರಿಸಲಾಗಿದೆ. ದಿನಾಂಕ 11ರಂದು (ಘಟನೆ ನಡೆದ ಎರಡು ದಿನಗಳ ನಂತರ) ಮಾಡಿದ ಭಾಷಣದಲ್ಲಿ ಕನ್ಹಯ್ಯಕುಮಾರ್ ದೇಶದ ಸಂವಿಧಾನದ ಪರವಾಗಿ ಮಾತನಾಡಿದ್ದಾನೆ. ಕಾರ್ಯಕ್ರಮದ ಆಯೋಜನೆಯಲ್ಲಿ ಕನ್ಹಯ್ಯನ ಪಾತ್ರವಿರಲಿಲ್ಲ, ಆ ಕಾರ್ಯಕ್ರಮದ ಪೋಸ್ಟರುಗಳಲ್ಲಿ ಕನ್ಹಯ್ಯನ ಹೆಸರಿರಲಿಲ್ಲ. ಕನ್ಹಯ್ಯನಿಗೂ ಅವತ್ತಿನ ಘಟನೆಗೂ ಯಾವುದೇ ರೀತಿಯ ಸಂಬಂಧವೂ ಇರಲಿಲ್ಲ. ಝೀ ವಾಹಿನಿ ಹತ್ತನೇ ಫೆಬ್ರವರಿಯಂದು ಪ್ರಸಾರ ಮಾಡಿದ ವೀಡಿಯೋದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳಿದ್ದವು. ಆದರೆ ಅದನ್ನೇ ಆಧಾರವಾಗಿಟ್ಟುಕೊಂಡು ಪ್ರಕರಣ ದಾಖಲಿಸಿದ ಪೋಲೀಸರ ಎಫ್.ಐ.ಆರಿನಲ್ಲಿ ನಮೂದಾಗಿರುವ ಮೂವತ್ತು ಘೋಷಣೆಗಳಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಯೇ ಇಲ್ಲ! ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಬಹುದೆಂಬ ಕಾರಣದಿಂದ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದ ಕನ್ಹಯ್ಯ ಗಲಭೆ ತಪ್ಪಿಸುವ ಸಲುವಾಗಿ ಘಟನಾ ಸ್ಥಳಕ್ಕೆ ಹೋಗಿ ಪರಿಸ್ಥಿತಿ ಶಾಂತವಾದ ಮೇಲೆ ವಾಪಸ್ಸಾದ. ಮತ್ತು ದಿನಾಂಕ 11ರಂದು ಕನ್ಹಯ್ಯ ಮಾಡಿದ ಭಾಷಣ ದೇಶದ ಸಂವಿಧಾನ ಕೊಟ್ಟ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಧಿಯೊಳಗೇ ಇತ್ತು, ಅದನ್ನು ದೇಶದ್ರೋಹವೆಂದು ಕರೆಯಲು ಬರುವುದಿಲ್ಲವೆಂಬುದು ಕನ್ಹಯ್ಯ ಪರ ವಕೀಲರ ವಾದವಾಗಿತ್ತು.

ಇನ್ನು ಸರಕಾರವನ್ನು ಪ್ರತಿನಿಧಿಸುತ್ತಿದ್ದ ವಕೀಲರಾದ ತುಷಾರ್ ಮೆಹ್ತಾ ದಿನಾಂಕ 9ರಂದು ಎರಡು ಗುಂಪುಗಳ ನಡುವೆ ಘರ್ಷಣೆ, ಸಣ್ಣಪುಟ್ಟ ತಳ್ಳಾಟ ಮತ್ತು ಘೋಷಣೆಗಳು ನಡೆದವು. ಪೋಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಣ್ಣಗಾದ ನಂತರ ಎಲ್ಲರೂ ವಾಪಸ್ಸಾದರು ಎಂದು ತಿಳಿಸಿದರು. ಝೀ ವಾಹಿನಿ ಪ್ರಸಾರ ಮಾಡಿದ ವೀಡೀಯೋವನ್ನು ಪಡೆದ ನಂತರ ಪೋಲೀಸರು ಎಫ್.ಐ.ಆರ್ ದಾಖಲಿಸಿದರು (ಈಗ ಆ ವೀಡಿಯೋದ ಅಸಲಿಯತ್ತೇ ಪ್ರಶ್ನಾರ್ಹವಾಗಿಬಿಟ್ಟಿದೆ!). ಅಫ್ಜಲ್ ಗುರು ಮತ್ತು ಮಕ್ಬೂಲ್ ಭಟ್ ನ ಫೋಟೋಗಳನ್ನು ಹಿಡಿದುಕೊಂಡಿದ್ದ ಕೆಲವು ವಿದ್ಯಾರ್ಥಿಗಳು ಅವರ ಪರವಾಗಿ ಘೋಷಣೆ ಕೂಗುತ್ತಿದ್ದರು ಎಂಬಂಶವನ್ನು ತಿಳಿಸಿದರು. ಕಾರ್ಯಕ್ರಮಕ್ಕೆ ಕೊಟ್ಟ ಅನುಮತಿಯನ್ನು ಜೆ.ಎನ್.ಯು ವಾಪಸ್ಸು ತೆಗೆದುಕೊಂಡದ್ದರ ಬಗ್ಗೆ ಕನ್ಹಯ್ಯ ಕುಮಾರ್ ಅಸಂತೋಷ ವ್ಯಕ್ತಪಡಿಸಿದ್ದರ ಬಗ್ಗೆ ಸಾಕ್ಷಿದಾರರು ಹೇಳಿದ್ದನ್ನು ನ್ಯಾಯಾಲಯದ ಗಮನಕ್ಕೆ ತಂದರು ತುಷಾರ್ ಮೆಹ್ತಾ. ತುಷಾರ್ ಮೆಹ್ತಾರ ಪ್ರಕಾರ ದಿನಾಂಕ 11ರಂದು ಕನ್ಹಯ್ಯ ಮಾಡಿದ ಭಾಷಣ ಘಟನೆ ನಡೆದ ನಂತರ ತನ್ನನ್ನು ತಾನು ರಕ್ಷಿಸಿಕೊಳ್ಳಲು ನಡೆಸಿದ ಯೋಜನೆಯ ಭಾಗವಾಗಿತ್ತು. ವೀಡಿಯೋದ ಜೊತೆಗೆ ಸಾಕ್ಷಿಗಳ ಹೇಳಿಕೆಗಳನ್ನು ಆಧಾರವಾಗಿಟ್ಟುಕೊಂಡು ಮತ್ತು ಗಂಭೀರ ಕಾಯಿದೆಗಳಡಿಯಲ್ಲಿ ಕನ್ಹಯ್ಯನನ್ನು ಬಂಧಿಸಿರುವುದರಿಂದ ಆತನಿಗೆ ಜಾಮೀನು ಕೊಡಬಾರದೆಂಬುದು ಸರಕಾರೀ ವಕೀಲರ ವಾದವಾಗಿತ್ತು.

ವಾದ ಪ್ರತಿವಾದಗಳನ್ನೆಲ್ಲವನ್ನೂ ಆಲಿಸಿದ ನ್ಯಾಯಾಲಯ ಘಟನೆ ನಡೆದ ದಿನ ಕನ್ಹಯ್ಯ ಅದೇ ಜಾಗದಲ್ಲಿದ್ದುದನ್ನು ಯಾರೂ ನಿರಾಕರಿಸುತ್ತಿಲ್ಲ, ಆದರಾತ ಇದ್ದದ್ದು ಸಂಭವನೀಯ ಗಲಭೆ ನಡೆಯದಂತೆ ನೋಡಿಕೊಳ್ಳಲೇ ಹೊರತು ದೇಶವಿರೋಧಿ ಘೋಷಣೆ ಕೂಗಲಲ್ಲ. ಅಫ್ಝಲ್ ಗುರು, ಮಕ್ಬೂಲ್ ಭಟ್ ನ ಪರವಾಗಿ ಘೋಷಣೆ ಕೂಗಿದ್ದು, ಭಾರತವನ್ನು ವಿಭಜಿಸುವ ಘೋಷಣೆ ಕೂಗಿದ್ದೆಲ್ಲವೂ ಎಫ್.ಐ.ಆರ್ ನಲ್ಲಿ ದಾಖಲಾಗಿದೆ. ಆ ದಿನ ಕನ್ಹಯ್ಯ ಅದೇ ಜಾಗದಲ್ಲಿದ್ದ ಎನ್ನುವುದಕ್ಕೆ ಫೋಟೋ ದಾಖಲೆಗಳಿವೆ. ಆದರೆ ಸರಕಾರೀ ವಕೀಲರು ಕೂಡ ಅವತ್ತಿನ ವೀಡಿಯೋದಲ್ಲಿ ಕನ್ಹಯ್ಯಕುಮಾರ್ ದೇಶವಿರೋಧಿ ಘೋಷಣೆ ಕೂಗಿಲ್ಲ ಎಂಬಂಶದ ಬಗ್ಗೆ ತಕರಾರು ಎತ್ತಿಲ್ಲ. ಸ್ವತಂತ್ರ ಸಾಕ್ಷಿಗಳು ಆತನೂ ಅದರಲ್ಲಿ ಭಾಗವಹಿಸಿದ್ದ ಎಂದಿದ್ದಾರೆ, ಅದರ ಬಗ್ಗೆ ತನಿಖೆಯಾಗಬೇಕಷ್ಟೇ. ಇನ್ನು ದಿನಾಂಕ ಹನ್ನೊಂದರಂದು ಕನ್ಹಯ್ಯ ಕುಮಾರ್ ಮಾಡಿದ ಭಾಷಣ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೂಡಿದ ಯೋಜನೆಯಾಗಿತ್ತು ಎನ್ನುವುದನ್ನು ಈ ಸಂದರ್ಭದಲ್ಲಿ ನ್ಯಾಯಾಲಯ ಪರೀಕ್ಷಿಸಲು ಸಾಧ್ಯವಾಗುವುದಿಲ್ಲ. ತನಿಖೆ ಪೂರ್ಣವಾದ ಮೇಲಷ್ಟೇ ಕನ್ಹಯ್ಯ ಕುಮಾರನ ಮೇಲಿನ ದೇಶದ್ರೋಹದ ಆರೋಪ ಸರಿಯೋ ತಪ್ಪೋ ಎಂದು ನಿರ್ಧರಿತವಾಗುವುದು. ತನಿಖೆ ಈಗಷ್ಟೇ ಪ್ರಾರಂಭವಾಗಿದೆ, ವಿಡೀಯೋ ಆಧಾರಗಳು ಕನ್ಹಯ್ಯ ಘಟನಾ ಸ್ಥಳದಲ್ಲಿದ್ದ ಎನ್ನುತ್ತಿವೆ, ಗಂಭೀರ ಆಪಾದನೆ ಆತನ ಮೇಲಿದೆ, ಇದರ ಮೇಲೆ ಆತನನ್ನು ಜೈಲಿನಲ್ಲಿಡುವುದೇ ಸೂಕ್ತವೆಂಬ ಭಾವನೆ ಬರುತ್ತದೆ. ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿರುವ ಕಾರಣ ಕ್ಯಾಂಪಸ್ಸಿನಲ್ಲಿ ನಡೆಯುವ ಘಟನೆಗಳಿಗೆ ಕನ್ಹಯ್ಯ ಜವಾಬ್ದಾರಿಯಾಗುತ್ತಾನೆ. ಸಂವಿಧಾನದ ಚೌಕಟ್ಟಿನೊಳಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಪ್ರತಿಯೊಬ್ಬರೂ ತಮ್ಮ ಇಷ್ಟಾನಿಷ್ಟದ ಸಿದ್ಧಾಂತವನ್ನು ಸಂವಿಧಾನದ ಚೌಕಟ್ಟಿನೊಳಗೆ ಪಾಲಿಸಲು ಸ್ವತಂತ್ರರು. ಈ ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿದಿರುವುದು ನಮ್ಮ ಗಡಿಗಳಲ್ಲಿ ಸೈನಿಕರು ಮಳೆ ಚಳಿ ಹಿಮವೆನ್ನದೆ ಕಾಯುತ್ತಿರುವ ಕಾರಣದಿಂದ ಎನ್ನುವುದನ್ನು ಮರೆಯದಿರೋಣ. ಅಫ್ಜಲ್ ಗುರು, ಮಕ್ಬೂಲ್ ಭಟ್ ಪರವಾಗಿ ಕೂಗುವ ಘೋಷಣೆಗಳು, ದೇಶವಿರೋಧಿ ಕೂಗುಗಳು ದೇಶದ ಸಮಗ್ರತೆಗೆ ಅಪಾಯ ತರುತ್ತವೆಂದು ಹೇಳಿದ ನ್ಯಾಯಾಧೀಶರು ಇಂತಹ ಕೂಗುಗಳು ನಮ್ಮನ್ನು ಕಾಯುವ ಸಲುವಾಗಿ ಹುತಾತ್ಮರಾದವರ ಕುಟುಂಬಗಳಲ್ಲಿ ಮೂಡಿಸುವ ಭಾವನೆಗಳೇನು ಎನ್ನುವುದರ ಕುರಿತು ಕಳವಳ ವ್ಯಕ್ತಪಡಿಸಿದರು. ಸಂವಿಧಾನ ಕೊಟ್ಟ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೇಳಿರುವ ಕನ್ಹಯ್ಯಕುಮಾರನಿಗೆ ಅದೇ ಸಂವಿಧಾನ ಹೇಳಿರುವ ಕರ್ತವ್ಯಗಳ ಬಗ್ಗೆಯೂ ನೆನಪಿಸಲು ಬಯಸುತ್ತೇನೆ. ಅಫ್ಜಲ್ ಗುರು, ಮಕ್ಬೂಲ್ ಭಟ್ ನ ಫೋಟೋಗಳನ್ನು ಹಿಡಿದು ನಿಂತಿರುವ ಚಿತ್ರಗಳು ನಮ್ಮ ಮುಂದಿವೆ, ಇಂತಹ ವಿದ್ಯಾರ್ಥಿ ಸಮುದಾಯ ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂತಹ ಘಟನೆಗಳು ಮತ್ತೆ ನಡೆಯದಂತೆ ಜೆ.ಎನ್.ಯು ಆಡಳಿತ ಮಂಡಳಿ ನೋಡಿಕೊಳ್ಳಬೇಕು. ತನಿಖೆ ಪ್ರಾರಂಭಿಕ ಹಂತದಲ್ಲಿದೆ. ಕೆಲವು ವಿದ್ಯಾರ್ಥಿಗಳು ಕೂಗಿದ ಘೋಷಣೆಗಳು ಸರ್ವವ್ಯಾಪಿಯಾಗದಂತೆ ತಡೆಯುವ ಕೆಲಸಗಳಾಗಬೇಕು. ಕಾಲಿಗೆ ಗಾಯವಾಗಿದೆ, ಗಾಯ ಮಾಯಲು ಮೊದಲು ಔಷಧ ಕೊಡಬೇಕು; ಮಾಯದಿದ್ದರೆ ಶಸ್ತ್ರಚಿಕಿತ್ಸೆಯ ಮೂಲಕವೇ ತೆಗೆಯಬೇಕಾಗುತ್ತದೆ. ಬಂಧನದ ದಿನಗಳಲ್ಲಿ ಕನ್ಹಯ್ಯಕುಮಾರ್ ಘಟನೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಿರಬಹುದು. ಆತ ಮುಖ್ಯವಾಹಿನಿಯಲ್ಲಿ ಉಳಿಯಲಿ ಎಂಬುದ್ದೇಶದಿಂದ ಔಷಧ ಕೊಡುವ ಕೆಲಸವನ್ನು ಮಾಡಬಯಸುತ್ತೇನೆ. ಹಾಗಾಗಿ ಕನ್ಹಯ್ಯನಿಗೆ ಆರು ತಿಂಗಳ ಮಧ್ಯಂತರ ಜಾಮೀನನ್ನು ಮಂಜೂರು ಮಾಡುತ್ತಿದ್ದೇನೆ. ಕನ್ಹಯ್ಯ ಹನ್ನೊಂದರದು ಮಾಡಿದ ಭಾಷಣದಲ್ಲಿ ತನ್ನ ಮನೆ ನಡೆಯುತ್ತಿರುವುದು ಮೂರು ಸಾವಿರ ರುಪಾಯಿಯ ಸಂಬಳದಿಂದ ಎಂದು ತಿಳಿಸಿದ್ದಾನೆ. ಹಾಗಾಗಿ ಬಾಂಡಿನ ಮೊತ್ತವನ್ನು ಕಡಿಮೆ ಇಡುವುದಕ್ಕೆ ನಿರ್ಧರಿಸಿದ್ದೇನೆ. ಯಾವುದೇ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕಾಗಬಹುದು. ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ತನ್ನ ಕೈಲಾದ ಮಟ್ಟಿಗೆ ಕ್ಯಾಂಪಸ್ಸಿನೊಳಗೆ ದೇಶದ್ರೋಹಿ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು. ಹತ್ತು ಸಾವಿರದ ಬಾಂಡ್ ಕಟ್ಟಿಸಿಕೊಂಡು ಆರು ತಿಂಗಳ ಜಾಮೀನು ನೀಡಲಾಗಿದೆ. ಇಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳೆಲ್ಲವೂ ಜಾಮೀನಿಗೆ ಸಂಬಂಧಪಟ್ಟಂತೆಯೇ ಹೊರತು ಇಡೀ ಪ್ರಕರಣಕ್ಕೆ ಸಂಬಂಧಿಸಿದಂತಲ್ಲ ಎಂದ್ಹೇಳಿದ ನ್ಯಾಯಾಧೀಶರು ಪ್ರತಿಯನ್ನು ಜೈಲಿನ ಅಧಿಕಾರಿಗಳಿಗೆ ತಲುಪಿಸುವಂತೆ ತಿಳಿಸಿ ತಮ್ಮ ಹೇಳಿಕೆಯನ್ನು ಮುಗಿಸಿದರು.

ಮೂಲ: http://indiankanoon.org/doc/77368780/

ಮಾರ್ಚ್ 2, 2016

ಕರೆಂಟು ಕೇಳುದ್ರೆ ಕೈಕೋಳ ಗ್ಯಾರಂಟಿ!

02/03/2016
ಎಲ್ಲಾ ಸರಕಾರಗಳಲ್ಲೂ ಸೂಪರ್ ಸಿಎಂ ಅಂತೊಬ್ಬರು ಇದ್ದೇ ಇರುತ್ತಾರೆ. ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರಕಾರದಲ್ಲಿ ಸೂಪರ್ ಸಿಎಂ ಪಟ್ಟಕ್ಕೆ ಏರುವುದಕ್ಕೆ ಡಿ.ಕೆ.ಶಿವಕುಮಾರ್ ತುಂಬಾನೇ ಕಷ್ಟಪಡುತ್ತಿದ್ದಾರೆ. ಸಿದ್ಧರಾಮಯ್ಯನವರಿಗೆ ಶಿವಕುಮಾರರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಇಷ್ಟವಿಲ್ಲದಿದ್ದರೂ ಹೈಕಮ್ಯಾಂಡಿನಿಂದಲೇ ಶಿವಕುಮಾರ್ ಸಚಿವರಾದವರು. ಇಂಧನವೆಂದರೆ ಪವರ್ರು, ನಾನು ಪವರ್ ಫುಲ್ಲಾಗಿರಬೇಕು ಎಂದು ಯಾರು ಅವರ ಕಿವಿಯೂದಿದರೋ ಇಂಧನ ಮೂಲಗಳನ್ನು ಹೆಚ್ಚಿಸುವುದರ ಕಡೆಗೆ ಗಮನ ಕೊಡದೆ ಪವರ್ರಿನ ಬಗ್ಗೆಯೇ ಅವರ ಗಮನವೆಲ್ಲಾ 'ಸೋರಿ' ಹೋಗುತ್ತಿದೆ. ವರುಷದ ಕೆಳಗೆ ಟಿವಿ 9 ವಾಹಿನಿಯ ವರದಿಗಾರರಿಬ್ಬರು ಕುಟುಕು ಕಾರ್ಯಾಚರಣೆ ನಡೆಸಲು ಡಿ.ಕೆ.ಶಿಯ ಬಳಿಗೆ ಹೋಗಿದ್ದಾಗ ಬೋಗಸ್ ಕಂಪನಿಯಿಂದ ಲಂಚ ಕೊಡಲು ಬಂದಿದ್ದಾರೆ ಎಂದು ದೂರು ನೀಡಿ ಅವರ ಬಂಧನವಾಗುವಂತೆ ನೋಡಿಕೊಂಡಿದ್ದರು ಶಿವಕುಮಾರ್. ಅಷ್ಟಕ್ಕೇ ಸುಮ್ಮನಾಗದೇ ಮತ್ತೆ ಕೇಬಲ್ ಆಪರೇಟುರಗಳ ಮೂಲಕ ಟಿವಿ 9 ವಾಹಿನಿ ಪ್ರಸಾರವಾಗದಂತೆ ಮಾಡಿದ್ದರು ಎಂಬ ವದಂತಿಯೂ ಹರಡಿತ್ತು. ರಾಮನಗರ, ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ರವರ ಪ್ರಾಬಲ್ಯ ಹೆಚ್ಚುತ್ತಿದ್ದಂತೆ 'ಪವರ್ರೂ' ಹೆಚ್ಚಿಸಿಕೊಳ್ಳಬೇಕೆಂದುಕೊಂಡುಬಿಟ್ಟರಾ? 
ಗಿರಿಧರ್ ರೈ
ದಕ್ಷಿಣ ಕನ್ನಡದ ಸುಳ್ಯ ತಾಲ್ಲೂಕಿನ ಬೆಳ್ಳಾರೆಯ ನಿವಾಸಿ ವರ್ತಕರ ಸಂಘದ ಮಾಜಿ ಅಧ್ಯಕ್ಷ ಸಾಯಿ ಗಿರಿಧರ್ ರೈ ಅಲ್ಲಿನ ವಿದ್ಯುತ್ ಸಮಸ್ಯೆಯಿಂದ ಬೇಸತ್ತು ಆಗಿದ್ದಾಗೋಗ್ಲೀ ಅಂತ ಇಂಧನ ಸಚಿವರಾದ ಪವರ್ ಫುಲ್ ಡಿ.ಕೆ.ಶಿವಕುಮಾರರಿಗೆ ಫೋನಾಯಿಸಿದ್ದಾರೆ. ಸಮಸ್ಯೆ ಕೇಳಿ ಬಗೆಹರಿಸುತ್ತೇವೆಂದು ಭರವಸೆ ಕೊಟ್ಟರೂ ಮುಗಿಯುತ್ತಿತ್ತು. 'ನನಗೆ ಅವಾಚ್ಯ ಶಬ್ದಗಳಿಂದ ಬಯ್ದರು. ಹಂಗಾಗಿ ಕಂಪ್ಲೇಂಟ್ ಕೊಟ್ಟೆ' ಎಂದು ಡಿ.ಕೆ.ಶಿ ಹೇಳಿದ್ದರೆ, 'ಮೊದಲು ಮಂತ್ರಿಗಳೇ ಕೆಟ್ಟ ಮಾತುಗಳಿಂದ ಬಯ್ದರು, ನನಗೂ ಸಿಟ್ಟು ಬಂದು ತಿರುಗಿಸಿ ಕೆಟ್ಟದಾಗಿ ಬಯ್ದೆ' ಎಂದು ಗಿರಿಧರ್ ರೈ ಹೇಳಿಕೆ ಕೊಟ್ಟಿದ್ದಾರೆ. ಹೋಕ್ಕೋಳ್ಳಿ ಡಿ.ಕೆ.ಶಿ ಪ್ರಕಾರ ಗಿರಿಧರ್ ರೈಯವರೇ ಬಯ್ದಿದ್ದು, ಮಂತ್ರಿಗಳು 'ಸಭ್ಯತೆ'ಯಿಂದಿದ್ದರು ಎಂದೇ ನಂಬೋಣ. ಡಿ.ಕೆ.ಶಿಯವರು ದೂರು ಕೊಟ್ಟಿದ್ದನ್ನೂ ಒಪ್ಪಿಬಿಡೋಣ. ಆದರೆ ಪೋಲೀಸರು ಮಧ್ಯರಾತ್ರಿ ಗಿರಿಧರ್ ರೈಯವರ ಮನೆಗೆ ಹೋಗಿ ಚಾವಣಿ ಹತ್ತಿ ಹೆಂಚು ತೆಗೆದು ಒಳಗಿಳಿದು ದೊಡ್ಡ ದರೋಡೆಕೋರನನ್ನು ಹಿಡಿಯುವಂತೆ ದೂರುದಾರರನ್ನು ಹಿಡಿಯುವ ಅವಶ್ಯಕತೆ ಇತ್ತಾ? ಇದು ಪವರ್ ಫುಲ್ಲೆನ್ನಿಸಿಕೊಳ್ಳಲು ಸೂಪರ್ ಸಿಎಂ ಆಗಲು ಡಿ.ಕೆ.ಶಿ ಮಾಡುತ್ತಿರುವ ಕಿತಾಪತಿಗಳಲ್ಲವೇ? ಪೋಲೀಸರ ಮೇಲೆ ಹಾಕುತ್ತಿರುವ ಒತ್ತಡವಲ್ಲವೇ? ಇಷ್ಟೇ ಅತ್ಯುತ್ಸಾಹವನ್ನು ಇಂಧನ ಮೂಲವನ್ನು ಹೆಚ್ಚಿಸಲು ಉಪಯೋಗಿಸಿದ್ದರೆ ಬೆಂಗಳೂರನ್ನು ಹೊರತುಪಡಿಸಿದ ಕರ್ನಾಟಕ ಕತ್ತಲಲ್ಲಿರುತ್ತಿರಲಿಲ್ಲ. ಸರ್ವಾಧಿಕಾರದ ಧೋರಣೆ ತಾತ್ಕಾಲಿಕವಾಗಿ ಯಶಸ್ಸಿನತ್ತ ಕೊಂಡೊಯ್ಯುತ್ತಿದೆ ಎನ್ನುವ ಭಾವನೆ ಮೂಡಿಸಬಹುದು ಆದರದು ಶಾಶ್ವತವಲ್ಲ ಎನ್ನುವುದು 'ಪವರ್' ಮಂತ್ರಿಗಳಿಗೆ ನೆನಪಿದ್ದರೆ ಒಳ್ಳೆಯದು. ಉದಾಹರಣೆಯಾಗಿ ಅವರದೇ ಪಕ್ಷದಲ್ಲಿ ಮೂಲೆಗುಂಪಾದ ಅನೇಕ ಧುರೀಣರಿದ್ದಾರೆ.

ದೆಹಲಿ ಸರಕಾರವೇಕೆ ಕರ್ನಾಟಕದಲ್ಲಿ ಜಾಹೀರಾತು ನೀಡಬೇಕು?

delhi government ad in karnataka
02/03/2016
ದೆಹಲಿಯಲ್ಲಿನ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರಕಾರ ಒಂದು ವರ್ಷ ಪೂರೈಸಿದೆಯಂತೆ. ಸಂತೋಷ. ಒಂದಷ್ಟು ಒಳ್ಳೆಯ ಕೆಲಸಗಳನ್ನೂ ಮಾಡಿದ್ದಾರೆ ಒಂದಷ್ಟು ಬೇಡದ ಕೆಲಸಗಳನ್ನೂ ಮಾಡಿದ್ದಾರೆ. ಉಳಿದ ರಾಜಕಾರಣಿಗಳಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಮತ್ತವರ ಸಹೋದ್ಯೋಗಿಗಳು ಹತ್ತಲವು ಸಲ ತೋರಿಸಿದ್ದಾರೆ. ಅವೆಲ್ಲ ಹೇಗಾದರೂ ಇರಲಿ ಅರವಿಂದರು ಕೇಜ್ರಿವಾಲಾರದು ದೆಹಲಿಯ ಸ್ಥಳೀಯ ಸರಕಾರ. ದೆಹಲಿಗೆ ರಾಜ್ಯದ ಸ್ಥಾನಮಾನವಿಲ್ಲದೇ ಹೋದರೂ ಭಾರತದ ರಾಜಧಾನಿಯಾಗಿರುವುದರಿಂದ ಒಂದಷ್ಟು ಹೆಚ್ಚು ಸುದ್ದಿಯಾಗುತ್ತದೆ. ಎಎಪಿ ರಾಜಕೀಯಕ್ಕೆ ಬಂದ ನಂತರ ಸುದ್ದಿಗಳು ಮತ್ತಷ್ಟು ಹೆಚ್ಚಾಗಿವೆ. 

ಒಂದು ವರುಷ ತುಂಬಿದ ಸಂಭ್ರಮಕ್ಕೆ ಸ್ಥಳೀಯವಾಗಿ ಜಾಹೀರಾತು ಕೊಡುವುದನ್ನೇನೋ ಒಪ್ಪಬಹುದು. ಅವರ ಸರಕಾರದ ಕೆಲಸಗಳನ್ನು ಜನರಿಗೆ ನೆನಪಿಸಲು, ನಾವೂ ಕೆಲಸ ಮಾಡುತ್ತಿದ್ದೇವೆಂದು ತೋರಿಸಲು ಅದು ಅವಶ್ಯಕ. ಆದರೆ ದೆಹಲಿಯ ಸರಕಾರವೊಂದು ಲಕ್ಷಾಂತರ, ಕೋಟ್ಯಾಂತರ ಹಣ ಖರ್ಚು ಮಾಡಿ ದೂರದ ಕರ್ನಾಟಕದ ವಾಹಿನಿಗಳಲ್ಲಿ ಜಾಹೀರಾತು ನೀಡುವ ಅನಿವಾರ್ಯತೆ ಏನಿದೆ? ದೆಹಲಿಯ ಆಪ್ ಸರಕಾರದ ಈ ನಡೆ ನಾಳೆ ದಿನ ಎಲ್ಲ ರಾಜ್ಯ ಸರಕಾರಗಳಿಗೂ ವ್ಯಾಪಿಸಿಬಿಟ್ಟರೆ ಜನರ ಹಣದ ಗತಿಯೇನು? ಸರಕಾರಕ್ಕೆ, ಪಕ್ಷಕ್ಕೆ ಒಂದಷ್ಟು ಪ್ರಚಾರ ಬೇಕೇ ಬೇಕು. ಆದರೆ ದೂರದ ರಾಜ್ಯದಲ್ಲೂ ಪ್ರಚಾರ ನಡೆಸುವ ಸಂಪ್ರದಾಯ ಖಂಡಿತ ಒಳ್ಳೆಯದಲ್ಲ. ಆಪ್ ಸರಕಾರ ಏನು ಒಳ್ಳೆಯದನ್ನು ಮಾಡಿತೋ ಬಿಟ್ಟಿತೋ, ಜನರ ಹಣವನ್ನು ಪೋಲು ಮಾಡಲು ಹೊಸ ಹೊಸ ವಿಧಾನಗಳನ್ನಂತು ಕಂಡುಹಿಡಿದಿದೆ.  

ಎಎಪಿ ಎಂದರೆ ಆಮ್ ಆದ್ಮಿ ಪಕ್ಷವೋ ಅಥವಾ Always advertising partyಯೋ?

ಫೆಬ್ರ 29, 2016

ಇಲ್ಲಿ ಕಾರು ತೊಳೆದರೆ ಕಟಕಟೆ ಹತ್ತಬೇಕಾದೀತು

29/02/2016
ಜಾಟರು ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಹಿಂಸೆಯ ಮಡಿಲಿಗೆ ಜಾರಿ ಹೋಗಿದೆ. ದಲಿತ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವಂತಹ ಗಂಭೀರ ಆರೋಪಗಳೂ ಕೇಳಿ ಬಂದಿವೆ. ಮೀಸಲಾತಿಯ ಹೋರಾಟಗಾರರು ಪ್ರಮುಖ ನಗರಗಳಿಗೆ ನೀರು ಪೂರೈಸುವ ಪೈಪುಗಳನ್ನು ಒಡೆದು ಹಾಕಿದ್ದಾರೆ. ಈ ಬೇಸಿಗೆ ಸಮಯಕ್ಕೆ ಮುಂಚೆಯೇ ಆಗಮಿಸುತ್ತಿರುವಾಗ ಪೈಪುಗಳನ್ನು ಒಡೆದು ಹಾಕಿರುವುದು ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ದೆಹಲಿ ಗುರಗಾಂವ್ ನಂತಹ ನಗರಗಳಲ್ಲಿ ನೀರಿಗೆ ಹಾಹಾಕಾರ ಎದ್ದಿದೆ. ನೀರನ್ನು ಮಿತವಾಗಿ ಬಳಸಲು ಅನುವಾಗುವಂತೆ ಗುರಗಾಂವ್ ಆಡಳಿತ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.
ಈ ಹೊಸ ನಿಯಮಗಳ ಅನುಸಾರ ಕಾರು ತೊಳೆಯುವುದು ಕೂಡ ಕಾನೂನುಬಾಹಿರ! ಕುಡಿಯಲು ನೀರಿಗೆ ತತ್ವಾರವಾಗಿರುವಾಗ ಕಾರು ತೊಳೆಯುವುದಕ್ಕೆಲ್ಲ ನೀರು ಪೋಲು ಮಾಡುವುದನ್ನು ತಡೆಗಟ್ಟಲು ಅಲ್ಲಿನ ಆಡಳಿತ ಈ ಕ್ರಮಕ್ಕೆ ಮುಂದಾಗಿದೆ. ಇದರ ಜೊತೆಜೊತೆಗೆ ಮನೆಯಲ್ಲಿ ಕುಂಡಗಳಲ್ಲಿ ಬೆಳೆಸಿದ ಗಿಡಗಳಿಗೆ ನೀರಾಕುವುದು ಕೂಡ ಅಪರಾಧವಾಗಿಬಿಡುತ್ತದೆ. ಮೂರನೇ ವಿಶ್ವಯುದ್ಧ ನಡೆಯುವುದು ನೀರಿಗಾಗಿ ಎಂಬ ಮಾತನ್ನು ನೆನಪಿಸುತ್ತದೆ ನೀರು ಉಳಿಸುವ ಈ ಕ್ರಮಗಳು. 
Image source: indiatoday