ಫೆಬ್ರ 1, 2016

ಅನಿಕೇತನ ತಾಯಿ ರೋಹಿತನ ಕುಟುಂಬಕ್ಕೆ, ಸ್ನೇಹಿತರಿಗೆ ಬರೆದ ಪತ್ರ.



ಅದು ರೋಹಿತ್ ವೇಮುಲನಿರಬಹುದು, ಡಿ.ಕೆ.ರವಿ ಇರಬಹುದು ಮತ್ತೊಬ್ಬರಿರಬಹುದು ಆತ್ಮಹತ್ಯೆ ಮಾಡಿಕೊಳ್ಳುವವರನ್ನು ಕಂಡರೆ ನನಗೆ ಮುಂಚಿನಿಂದಲೂ ಒಂದಷ್ಟು ಅಸಹ್ಯವೇ. ರೋಹಿತ್ ವೇಮುಲನ ಸಾವಿಗೆ ಪೂರ್ವಾಗ್ರಹಪೀಡಿತ ವ್ಯವಸ್ಥೆಯ ಕಾರಣವೂ ಇದ್ದಿದ್ದರಿಂದ ವ್ಯವಸ್ಥೆಯ ಬಗ್ಗೆ ಒಂದಷ್ಟು ಸಿಟ್ಟಿತ್ತು. ಅವನ ಕೊನೆಯ ಪತ್ರ ಬಹಳವಾಗಿ ಕಾಡಿದ್ದೂ ಹೌದು. ರೋಹಿತನ ಸಾವಿಗೊಂದು ಸಂತಾಪ – ಪ್ರತಿಭಟನೆಯಲ್ಲಿ ಭಾಗವಹಿಸಿದಾಗಲೂ ಗೆಳೆಯರೊಂದಿಗೆ ಆತ್ಮಹತ್ಯೆಗೆ ಹತ್ತಾರು ಕಾರಣಗಳು ಇದ್ದಿರಬಹುದು, ಆದರೆ Instigating factor ಅಂತ ಇದ್ದರೆ ಅದು ವಿಶ್ವವಿದ್ಯಾಲಯದ ನಿರ್ಧಾರಗಳು ಎಂದು ಚರ್ಚಿಸಿದ್ದೆ. ಬಿಜೆಪಿ ಕೂಡ ‘ಇದು ವೈಯಕ್ತಿಕ ಕಾರಣಕ್ಕಾದ ಸಾವು’ ಎಂದು ತಿಪ್ಪೆ ಸಾರಿಸುವ ಮಾತುಗಳಾನ್ನಡುತ್ತಾರೆ ಎಂದೇ ನಿರೀಕ್ಷಿಸಿದ್ದೆ. ಆದರೆ ಯಾವಾಗ ರೋಹಿತನ ವ್ಯಕ್ತಿತ್ವಹರಣ, ಅವನು ದಲಿತನಲ್ಲ(ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಸದಸ್ಯನಾದವನೊಬ್ಬ ದಲಿತನೇ ಆಗಿರಬೇಕು ಎಂದುಕೊಳ್ಳುವ ನಮ್ಮೆಲ್ಲರ ಮನಸ್ಥಿತಿಯೂ ಒಂದು ರೀತಿಯಲ್ಲಿ ದುರಂತವೇ), ಅವನು ದೇಶದ್ರೋಹಿ, ವಿದ್ರೋಹಿ ಎಂದೆಲ್ಲ ಬಿಜೆಪಿಯ ವಕ್ತಾರರು, ಅವರ ಹಿಂಬಾಲಕರು, ದಲಿತ ಚಿಂತನೆಯ, ಮೀಸಲಾತಿಯ ವಿರೋಧಿಗಳು ಆಕ್ರಮಣಕಾರೀ ರೀತಿಯಲ್ಲಿ ಬೊಬ್ಬೆಯೊಡೆಯಲಾರಂಭಿಸಿದರೋ ಆಗ ರಾಜಕೀಯ ಕಾರಣ ಹೊರತು ಪಡಿಸಿ ಮತ್ಯಾವ ಕಾರಣವೂ ರೋಹಿತನನ್ನು ಆತ್ಮಹತ್ಯೆಗೆ ಪ್ರಚೋದಿಸಿಲ್ಲ ಎಂದು ಸ್ಪಷ್ಟವಾಯಿತು. ರೋಹಿತನ ಕೊನೆಯ ಪತ್ರ ಮೂಡಿಸಿದ ಬೇಸರದಿಂದ ಹೊರಬರುವಷ್ಟರಲ್ಲಿ 2014ರ ಸೆಪ್ಟೆಂಬರ್ ನಾಲ್ಕರಂದು ಐಐಟಿ ಬಾಂಬೆಯಲ್ಲಿ ಸತ್ತ ಅನಿಕೇತ್ ಅಂಬ್ಹೋರ್ ಎಂಬ ವಿದ್ಯಾರ್ಥಿಯ ತಾಯಿ ರೋಹಿತನ ಕುಟುಂಬಸ್ಥರಿಗೆ ಮತ್ತು ಗೆಳೆಯರಿಗೆ ಬರೆದ ಪತ್ರ ಮತ್ತಷ್ಟು ಬೇಸರ ಮೂಡಲು ಕಾರಣವಾಗಿದೆ. ಆ ತಾಯಿಯ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಡುವ ಸಾಮರ್ಥ್ಯ ನಮ್ಮ ಸಮಾಜಕ್ಕೆ ಬಂದೇ ಇಲ್ಲ. ಜೀವನದಲ್ಲಿ ಮಾಡಿದ ಹತ್ತಲವು ತಪ್ಪುಗಳಲ್ಲಿ ಎಂಬಿಬಿಎಸ್ ಮಾಡುವಾಗ ಜಾತಿಯಾಧಾರಿತ ಮೀಸಲಾತಿ ಅಳಿಯಬೇಕು ಎಂಬ ಅಸಂಬದ್ಧ ಹೋರಾಟದಲ್ಲಿ ಭಾಗಿಯಾಗಿದ್ದೂ ಒಂದು. ಜಾತಿ ವ್ಯವಸ್ಥೆಯ ಕ್ರೂರ ಮುಖಗಳ ಪರಿಚಯವೇ ಇಲ್ಲದೆ ಭಾಗವಹಿಸಿಬಿಟ್ಟಿದ್ದ ದಿನಗಳವು. ಆ ಪ್ರತಿಭಟನೆಯಲ್ಲಿ ಮೈಸೂರು ಮೆಡಿಕಲ್ ಕಾಲೇಜಿನ ದಲಿತ ಹುಡುಗನೂ ಭಾಗವಹಿಸಿದ್ದಾನಂತೆ ಎನ್ನುವ ಸುದ್ದಿ ಮೀಸಲಾತಿ ತಪ್ಪು ಎನ್ನುವ ನಂಬಿಕೆಗೆ ಮತ್ತಷ್ಟು ಬಲ ತಂದಿತ್ತು. ಅನಿಕೇತನ ತಾಯಿಯ ಪತ್ರ ಓದುತ್ತಿದ್ದಂತೆ ಆ ಹುಡುಗ ಆ ಚಳುವಳಿಯಲ್ಲಿ ಭಾಗವಹಿಸುವುದರ ಹಿಂದೆ ಎಷ್ಟೆಲ್ಲ ಮಾತುಗಳನ್ನು, ಸಲಹೆಗಳನ್ನು, ಸವರ್ಣೀಯರ ಚರ್ಚೆಯನ್ನು ಕೇಳಿರಬೇಕು, ಅವನ ಮನದಲ್ಯಾವ ಭಾವನೆಗಳೆಲ್ಲ ಹರಿದಿರಬೇಕು ಎಂಬ ಯೋಚನೆ ಬಂತು. ನನ್ನ ಗೆಳತಿಯೊಬ್ಬಳಿದ್ದಳು, ಅವಳು ಹೇಳ್ತಿದ್ದಳು ಪ್ರತೀ ವರ್ಷ ಎಪ್ಪತ್ತು ಪರ್ಸೆಂಟ್ ತೆಗುದ್ರೂ ನೀನ್ ಬಿಡಮ್ಮ ರಿಸರ್ವೇಷನ್ನು ಅಂತ ಕೆಲವರು ಬೆನ್ನ ಹಿಂದೆ ಆಡಿಕೊಂಡರೆ, ಹಲವರು ನೇರವಾಗಿಯೇ ಹೇಳಿಬಿಡುತ್ತಿದ್ದರು, ಮೀಸಲಾತಿಯಿಂದ ಬಂದ ದಲಿತ ಹುಡುಗಿಯೊಬ್ಬಳು ನಮಗಿಂತ ಹೆಚ್ಚು ಅಂಕಗಳನ್ನು ತೆಗೆಯಬಲ್ಲಳು ಎನ್ನುವುದೇ ಅವರಿಗೆ ಅಪಥ್ಯದ ಸಂಗತಿಯಾಗಿತ್ತು ಅಂತ. 
ನಮ್ಮ ಸಮಾಜಕ್ಕೆ ದಲಿತತ್ವದಿಂದ, ಅಂಬೇಡ್ಕರ್ ವಿದ್ಯಾರ್ಥಿ ಸಂಘದಿಂದ, ಪೆರಿಯಾರ್ ಸ್ಟಡಿ ಸರ್ಕಲ್ಲಿನಿಂದ ಯಾವ ಆಪತ್ತೂ ಇಲ್ಲ. ಬ್ರಾಹ್ಮಣ್ಯ ಪಾಲಿಸುವ ಬ್ರಾಹ್ಮಣರ ನೀಚತನ, ಬ್ರಾಹ್ಮಣ್ಯದ ಪಾದ ನೆಕ್ಕುತ್ತ ಬ್ರಾಹ್ಮಣರಿಗಿಂತ ಕೀಳಾದರೇನು, ದಲಿತರಿಗಿಂತ ನಾವು ಮೇಲಲ್ಲವೇ ಎನ್ನುವ ಭ್ರಮೆ ತುಂಬಿಕೊಂಡ ಶೂದ್ರರ ದೂರ್ತತನ, ಶೈಕ್ಷಣಿಕವಾಗಿ ಮೇಲೆ ಬಂದು ಆರ್ಥಿಕ ಉನ್ನತಿ ಕಾಣುತ್ತಿದ್ದಂತೆ ಬೇರುಗಳನ್ನು ಮರೆತು ಬ್ರಾಹ್ಮಣ್ಯದ ಹಿಂದೆ ನಾ ಮುಂದು ತಾಮುಂದು ಎಂದು ಓಡುತ್ತ ಬೆಳವಣಿಗೆಯ ಮೆಟ್ಟಿಲ ಮೇಲೆ ಮೊದಲ ಹೆಜ್ಜೆಯನ್ನೂ ಇಡದ ಇತರೆ ದಲಿತರನ್ನು ಕೀಳಾಗಿ ಕಾಣಲಾರಂಭಿಸಿರುವ ದಲಿತರಿಂದ ನಮ್ಮ ಸಮಾಜಕ್ಕೆ ನಿಜವಾದ ಅಪಾಯವಿದೆ. ‘ನಮ್ಮ ಮಕ್ಕಳು ಈ ಜಾತಿ ವ್ಯವಸ್ಥೆಯ ವಿರುದ್ಧ ಇನ್ನೂ ಎಲ್ಲಿಯವರೆಗೆ ಹೋರಾಡಬೇಕೋ ಗೊತ್ತಿಲ್ಲ’ ಎಂದು ಬೇಸರದಿಂದ ಹೇಳುವ ಅನಿಕೇತನ ಅಮ್ಮನ ಮಾತುಗಳಿಗೆ ಸಮಂಜಸ ಪ್ರತ್ಯುತ್ತರ ನಮ್ಮಲಿದೆಯೇ? - ಡಾ. ಅಶೋಕ್. ಕೆ. ಆರ್



ಐಐಟಿ, ಮುಂಬೈನಲ್ಲಿ ನಾಲ್ಕನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಅನಿಕೇತ್ ಅಂಬ್ಹೋರ್ ಸಂಶಯಾಸ್ಪದ ರೀತಿಯಲ್ಲಿ ಕ್ಯಾಂಪಸ್ಸಿನೊಳಗೆ ನಾಲ್ಕನೇ ಸೆಪ್ಟೆಂಬರ್ 2014ರಂದು ಸಾವನ್ನಪ್ಪುತ್ತಾನೆ. ಮರಣದ ನಂತರ ಅನಿಕೇತನ ಹೆತ್ತವರಾದ ಸುನಿತಾ ಮತ್ತು ಸಂಜಯ್ ಐಐಟಿಯ ನಿರ್ದೇಶಕರಿಗೆ ಹತ್ತು ಪುಟದ ಪತ್ರ ಬರೆದು ಅನಿಕೇತ್ ಕ್ಯಾಂಪಸ್ಸಿನೊಳಗೆ ಅನುಭವಿಸಿದ ಜಾತಿ ತಾರತಮ್ಯವನ್ನು ವಿವರಿಸುತ್ತಾರೆ. ಇದರ ನಂತರ ಸಾವಿನ ಕುರಿತು ತನಿಖೆ ನಡೆಸಲೊಂದು ಸಮಿತಿ ರಚನೆಯಾಗುತ್ತದೆ. ಅನಿಕೇತನ ಕುಟುಂಬ ಮತ್ತು ಸ್ನೇಹಿತರ ಸತತ ಒತ್ತಾಯದ ನಂತರವೂ ಸಮಿತಿಯ ವರದಿಯನ್ನು ಬಹಿರಂಗಗೊಳಿಸುವುದಿಲ್ಲ. ಅನಿಕೇತನ ತಾಯಿ ಸುನಿತ ರೋಹಿತ್ ವೇಮುಲನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೊಂದು ಪತ್ರ ಬರೆದಿದ್ದಾರೆ. 



23, ಜನವರಿ 2015.
ರೋಹಿತ್ ವೇಮುಲನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ,


ರೋಹಿತ್ ವೇಮುಲನ ಕೊನೆಯ ಪತ್ರವನ್ನು ಓದಿದ ಮೇಲೆ ಉಸಿರು ಕಟ್ಟಿದಂತಾಗುತ್ತಿದೆ, ಆರಾಮಿಲ್ಲವೆನ್ನಿಸುತ್ತಿದೆ. ಶಿಕ್ಷೆಯ ಹೆಸರಿನಲ್ಲಿ ಸಂಶೋಧಕನೊಬ್ಬನಿಗೆ ಏಳು ತಿಂಗಳಿಂದ ಸ್ಕಾಲರ್ ಶಿಪ್ ಸಿಗುವುದಿಲ್ಲ, ಹಾಸ್ಟೆಲ್ಲಿನಿಂದ ಹೊರದಬ್ಬಲಾಗುತ್ತದೆ, ಎಲ್ಲವೂ ಆತನನ್ನು ಒಳಗಿನಿಂದ ಮುರಿದುಹಾಕುವ ಯತ್ನ. ರೋಹಿತ್ ಪತ್ರದಲ್ಲಿ ಯಾರನ್ನೂ ದೂಷಿಸಿಲ್ಲವಾದರೂ ಹೃದಯ ಹಿಂಡುವ ಪತ್ರವದು. ನನಗೆ ರೋಹಿತ್ ಮತ್ತು ಅನಿಕೇತನ ಯೋಚನೆಗಳಲ್ಲಿರುವ ಸಾಮ್ಯತೆ ಎದ್ದುಕಾಣಿಸುತ್ತಿದೆ ಮತ್ತು ಅವರಿಬ್ಬರೂ ಅನುಭವಿಸಿದ ನೋವೆಂತಹದಿರಬಹುದೆಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಅನಿಕೇತ್ ಯಾವುದೇ ಪತ್ರ ಬಿಟ್ಟು ಹೋಗಲಿಲ್ಲ, ಆದರೆ ಅವನ ಡೈರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿರುವ ವಾಕ್ಯಗಳಿಂದ, ಅವನ ಕವಿತಗಳಿಂದ ಜೀವ ತೆಗೆದುಕೊಳ್ಳುವ ಹಂತದಲ್ಲಿದ್ದ ಇಬ್ಬರ ಮನಸ್ಥಿತಿಯೂ ಒಂದೇ ತೆರನಾಗಿತ್ತು ಎಂದು ಕಂಡುಕೊಂಡಿದ್ದೇನೆ.

ಅನಿಕೇತನೂ ಸಮಾನತೆಯ ಬಗ್ಗೆ ಮಾತನಾಡುತ್ತಿದ್ದ, ಮತ್ತು ಸಂಪೂರ್ಣ ಮನಸ್ಸಿನೊಂದಿಗೆ ತೃತೀಯ ಲಿಂಗಿಗಳ ಹೋರಾಟಕ್ಕೆ ಬೆಂಬಲಿಸುತ್ತಿದ್ದ. ಹೆತ್ತವರ ಬಗ್ಗೆ ಅವನಿಗೆ ಬಹಳಷ್ಟು ಯೋಚನೆಯಿತ್ತು. ಜಾತಿ, ಮೀಸಲಾತಿ, ದೇವರ ಬಗೆಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದ. ಐಐಟಿಯ ಪೂರ್ವಭಾವಿ ಪರೀಕ್ಷೆಗೆ ತಯಾರಿ ನಡೆಸುವ ದಿನಗಳಿಂದಲೂ ಅನುಭವಿಸುತ್ತಿದ್ದ ತಾರತಮ್ಯದ ಹಿಂದಿನ ಮನಸ್ಸುಗಳನ್ನು ಎದುರಿಸುತ್ತಿದ್ದ.

ಯಾವಾಗ ಸಶಕ್ತರ ವಿರುದ್ಧದ ಹೋರಾಟದಲ್ಲಿ ವ್ಯಕ್ತಿಯೊಬ್ಬ ದಣಿದುಬಿಡುತ್ತಾನೋ, ಆಗಷ್ಟೇ ಅವನಿಗೆ ಖಾಲಿತನ ಕಾಡುತ್ತದೆ, ನನ್ನ ಮಗನ ಮತ್ತು ರೋಹಿತನ ಜೀವನದಲ್ಲಿ ಕಂಡಂತೆ. ಈ ಖಾಲಿತನ ಸೂಕ್ಷ್ಮಮತಿಗಳಿಗೆ, ಹೆಚ್ಚು ಯೋಚಿಸುವವರಿಗೆ ಮತ್ತು ತಮ್ಮ ಕನಸನ್ನು ನನಸಾಗಿಸಿಕೊಳ್ಳಬಯಸುವವರಿಗೆ ಭಯ ಮೂಡಿಸುತ್ತದೆ. ಈ ರೀತಿಯ ಜನರು ತಮ್ಮ ಸ್ವಭಾವದಿಂದಾಗಿ ಇತರರನ್ನು ದೂಷಿಸುವುದಿಲ್ಲ, ಮುಂದೆ ಸಾಗಲಾಗದಂತಹ ಒಂದು ಹಂತವನ್ನು ತಲುಪಿಬಿಡುತ್ತಾರೆ. ಅನಿಕೇತನ್ಯಾಕೆ ಅಷ್ಟೊಂದು ಯೋಚಿಸುತ್ತಿದ್ದ? ನಾವವನು ನಗುವುದನ್ನು, ಮಿಮಿಕ್ರಿ ಮಾಡುವುದನ್ನು, ಹಾಡುವುದನ್ನು ನೋಡಿದ್ದೆವು. ನನ್ನ ಮಗ ನಗು ಮರೆಯುವಂತಹದ್ದು ಐಐಟಿಯಲ್ಲೇನಿತ್ತು? ಅವನ ಮರಣದ ನಂತರ ವೈದ್ಯರು ಹೇಳಿದರು, ಅನಿಕೇತ್ ಗೊಂದಲದಲ್ಲಿದ್ದ ಎಂದು. ಆದರೆ ವಿಜ್ಞಾನ ಮತ್ತು ಗಣಿತ ಮೊದಲಿನಿಂದಲೂ ಅವನ ಮೆಚ್ಚಿನ ವಿಷಯಗಳು, ಅವನು ಗೊಂದಲಕ್ಕೇಕೆ ಈಡಾದ?

ಐಐಟಿಯಲ್ಲಿ ಅನಿಕೇತ್ ಅಪಮಾನಗಳನ್ನೆದುರಿಸಿರಬೇಕು, ಖಾಲಿತನ ಮೂಡಿರಬೇಕು. ಇದು ಪ್ರತ್ಯಕ್ಷವಾಗಲ್ಲದಿದ್ದರೂ ಪರೋಕ್ಷವಾಗಿತ್ತು, ದಿನನಿತ್ಯದ ಚರ್ಚೆಗಳಲ್ಲಿ, ಗುರುಗಳು ಕೊಡುವ ಸಲಹೆಗಳೆಲ್ಲ ಇದನ್ನವನು ಅನುಭವಿಸಿರಬೇಕು. ಐಐಟಿ ಮಾತ್ರವಲ್ಲ, ಇತರೆ ಪ್ರತಿಷ್ಟಾರ್ಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಈ ಅಹಂಭಾವದ ಯೋಚನಾ ಲಹರಿಯಿದೆ. ಮೀಸಲಾತಿಯ ಮೂಲಕ ಈ ಸಂಸ್ಥೆಗಳಿಗೆ ಬಂದ ವಿದ್ಯಾರ್ಥಿಗಳಿಗೆ ಪದೇ ಪದೇ “ನೋಡು, ನೀನು ಮತ್ತು ನಾನು ಒಂದೇ ಆರ್ಥಿಕ ಪರಿಸ್ಥಿತಿಯಿಂದ ಬಂದಿದ್ದೇವೆ, ಆದರೂ ನಿನಗೆ ನಿನ್ನ ಜಾತಿಯ ಕಾರಣದಿಂದ ವಿಶೇಷ ಸೌಲತ್ತುಗಳು ಲಭಿಸಿವೆ…. ಮೀಸಲಾತಿ ತಪ್ಪು” ಹೇಳಲಾಗುತ್ತದೆ. ಇನ್ನಿತರೆ ಅದೇ ರೀತಿಯ ಸಂಗತಿಗಳನ್ನು ಹೇಳುತ್ತಾರೆ.

ಈ ಕಾರಣದಿಂದ ಅನಿಕೇತ್ ಜಾತಿಯ ಬೇರುಗಳನ್ನು ಹುಡುಕಲು ಶುರುಮಾಡಿದ. ವೈದಿಕ ಧರ್ಮ, ಅದರ ಪುಸ್ತಕಗಳು ಮತ್ತು ಅವುಗಳಲ್ಲಿನ ಜ್ಞಾನವೆಲ್ಲವೂ ಸತ್ಯವೆಂದು ಹೇಳುತ್ತ ಅದಕ್ಕೊಂದು ವೈಜ್ಞಾನಿಕ ರೂಪ ಕೊಟ್ಟು ಹುಡುಗರ ತಲೆಗೆ ಅಂತಹ ವಿಚಾರಗಳನ್ನು ತುಂಬುವ ಕೆಲಸ ಪ್ರತಿಷ್ಟಿತ ಸಂಸ್ಥೆಗಳಲ್ಲಿ ನಡೆಯುತ್ತಿದೆ. ಆದರೆ ಜಾತಿ ತಾರತಮ್ಯದಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರೆ ಸಂಸ್ಥೆಯ ವತಿಯಿಂದ ಯಾವುದೇ ನೆರವು ಸಿಗುವುದಿಲ್ಲ. ಈ ಸಮಸ್ಯೆಗಳ ಬಗ್ಗೆ ಸಮಾಲೋಚಿಸುವುದಿಲ್ಲ, ಇವನ್ನು ಸಮಸ್ಯೆ ಎಂದೇ ಪರಿಗಣಿಸುವುದಿಲ್ಲ, ಒಂದು ವರ್ಗದ ವಿದ್ಯಾರ್ಥಿ ಇದನ್ನು ಎದುರಿಸಬೇಕಾಗಿರುವುದು ವಾಸ್ತವ ಎಂದು ಬಿಂಬಿಸಿಬಿಡುತ್ತಾರೆ. ಮೀಸಲಾತಿ ಪಡೆಯುವುದನ್ನು ಅಪರಾಧದಂತೆ ನೋಡಲಾಗುತ್ತದೆ. ನೀವು ಮೀಸಲಾತಿ ಪಡೆದಿದ್ದರೆ ಜನರ ವಾದ ಮತ್ತು ತೀರ್ಪುಗಳನ್ನು ನೀವು ಎದುರಿಸಬೇಕೆಂದು ನಿರೀಕ್ಷಿಸುವುದು ಸವರ್ಣೀಯರ ಮನಸ್ಥಿತಿಯಾಗಿದೆ. ಅನಿಕೇತ್ ಮತ್ತು ಇತರೆ ಮಕ್ಕಳ ಸ್ಥಿತಿಯನ್ನು ಅನುಭೂತಿಯಿಂದ ನೋಡದೆ, ಅವರ ಸಾಮರ್ಥ್ಯದಲ್ಲಿನ ಕೊರತೆಯಾಗಿ, ಹೆತ್ತವರ ಒತ್ತಡದಂತೆ, ಜಾಸ್ತಿ ನಿರೀಕ್ಷೆಯಂತೆ ನೋಡುತ್ತಾರೆ, ಕಾರಣ? ನಿಜವಾದ ಸಮಸ್ಯೆಯ ಬಗ್ಗೆ ಸವರ್ಣೀಯರಾಗ ತಲೆ ಕೆಡಿಸಿಕೊಳ್ಳಬೇಕಿಲ್ಲ.

ತನ್ನ ಗುರುತನ್ನು ಅನಿಕೇತ್ ಕಳೆದುಕೊಂಡುಬಿಟ್ಟಿದ್ದ. “ನಾನ್ಯಾರು?” – ಇಂತಹ ಪ್ರಶ್ನೆ ಯಾಕೆ ಅವನನ್ನು ಕಾಡಬೇಕಿತ್ತು? ಐಐಟಿಗೆ ಬಂದ ಮೇಲೆ ಅನಿಕೇತ್ ಗ್ರಹ, ನಕ್ಷತ್ರ, ಆತ್ಮ, ಉನ್ನತಾತ್ಮ ಅಥವಾ ಇತರೆ ಪ್ರಪಂಚದ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕಿತ್ತು? ಅವನ ಸ್ಪಷ್ಟ ಯೋಚನೆಗಳು, ಕ್ರಿಯಾತ್ಮಕ ಬುದ್ಧಿ ಮತ್ತವನ ನಗು ಎಲ್ಲಿ ಕಳೆದುಹೋಯಿತೆಂದು ನಮಗೆ ಗೊತ್ತಿಲ್ಲ. ನಮ್ಮ ಒಂದೇ ಒಂದು ಅಪರಾಧವೆಂದರೆ ಅವನನ್ನು ಐಐಟಿಗೆ ಜಾತಿ ಸರ್ಟಿಫಿಕೇಟಿನೊಡನೆ ಕಳುಹಿಸಿದ್ದು. ಅವನನ್ನು ಸಾಮಾನ್ಯ ಸಂಸ್ಥೆಗೆ ಸೇರಿಸಿದ್ದರೆ ಅವನ ಮನಸ್ಸನ್ನು ದುರ್ಬಲಗೊಳಿಸಿದ ಅಷ್ಟೊಂದು ಚರ್ಚೆ ಮತ್ತು ಸಲಹೆಗಳನ್ನವನು ಕೇಳಬೇಕಿರಲಿಲ್ಲ. ನೀನು ಅಸಾಮರ್ಥ್ಯ ಎನ್ನುವ ಭಾವನೆಯನ್ನು ಸಮರ್ಥ, ವಿವೇಕವುಳ್ಳ, ನಗುವಿನ ಹುಡುಗ ಅನಿಕೇತನಲ್ಲಿ ತುಂಬಿದ್ಯಾರು?

ಮಾನವ ಸಂಪನ್ಮೂಲ ಇಲಾಖೆಗೆ, ಪರಿಶಿಷ್ಟ ಜಾತಿಗಳ ಕಮಿಷನ್ನಿಗೆ ಬರೆದ ಯಾವ ಪತ್ರಕ್ಕೂ ನಮಗೆ ಪ್ರತಿಕ್ರಿಯೆ ಸಿಕ್ಕಿಲ್ಲ. ನಮ್ಮ ಮನವಿಯ ನಂತರ ಐಐಟಿ ಬಾಂಬೆ ತನಿಖಾ ಸಮಿತಿಯನ್ನೇನೋ ನೇಮಿಸಿತು ಆದರೆ ಸಂಸ್ಥೆಯ ಕಾರ್ಯವೈಖರಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ, ಸಮಿತಿಯ ವರದಿಯ ಬಗ್ಗೆ ನಮಗ್ಯಾವುದೇ ಮಾಹಿತಿಯಿಲ್ಲ. ಬಹುಶಃ ಉತ್ತರ ಕೊಡುವುದು ಅನವಶ್ಯಕ ಎಂದವರು ತಿಳಿದರೇನೋ…….

ನಮ್ಮ ಕಣ್ಣಲ್ಲಿ ನಾವು ತುಂಬ ಚಿಕ್ಕವಾರಾಗಿಬಿಟ್ಟಿದ್ದೀವಿ. ರೋಹಿತನ ಘಟನೆ ಮತ್ತೊಮ್ಮೆ ಈ ವಿಷಯವನ್ನು ಮುನ್ನೆಲೆಗೆ ತಂದಿದೆ. ಅನಿಕೇತ್ ಮತ್ತು ರೋಹಿತ್ ಎದುರಿಸಿದ ಸಂದರ್ಭಗಳು ಬೇರೆ ಬೇರೆ ಇದ್ದವು ಆದರೆ ಹೋರಾಟಕ್ಕಿದ್ದ ಕಾರಣ ಒಂದೇ ಆಗಿತ್ತು. ನಮ್ಮ ಮಕ್ಕಳು ಈ ಅವಿತು ಕುಳಿತ ಜಾತಿವ್ಯವಸ್ಥೆಯ ವಿರುದ್ಧ ಎಲ್ಲಿಯವರೆಗೆ ಹೋರಾಡಬೇಕೋ ಗೊತ್ತಿಲ್ಲ. ನಾವೂ ಹೋರಾಡುತ್ತಿದ್ದೇವೆ…..

ವಿದ್ಯಾರ್ಥಿಗಳ ಹೋರಾಟವಷ್ಟೇ ಈಗ ಉಳಿದಿರುವ ಆಶಾಕಿರಣ. ಬಹುಶಃ ವಿದ್ಯಾರ್ಥಿಗಳಿಗಷ್ಟೇ ನಿದ್ರಾವಸ್ಥೆಯಲ್ಲಿರುವ ವ್ಯವಸ್ಥೆಯನ್ನು ಬಡಿದೆಬ್ಬಿಸುವ ಶಕ್ತಿಯಿರುವುದು. ರೋಹಿತನ ಕುಟುಂಬ ಮತ್ತು ದಲಿತ ಸಮುದಾಯ ಅನುಭವಿಸುತ್ತಿರುವ ನೋವಿಗೆ ಒಂದಷ್ಟು ಶಾಂತಿ ದೊರಕುವುದೆಂಬ ನಿರೀಕ್ಷೆಯಲ್ಲಿದ್ದೀವಿ.

ಅನಿಕೇತನ ತಾಯಿ,
ಸುನಿತ ಅಂಬ್ಹೋರ್.
(ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್)

ಜನ 31, 2016

ಹುಡುಕಿಕೊಡಿ

ಪ್ರವೀಣಕುಮಾರ್ .ವೀ.ಗೋಣಿ, ಹುಬ್ಬಳ್ಳಿ
ದೈನ್ಯದಿಂದ ಕೇಳುತಿರುವೆ ದೀನನಾಗಿ
ದಾನವನಾಗಿ ಕಳೆದು
ಹೋಗಿರುವವನ ಹುಡುಕಿಕೊಡಿ ದಯಮಾಡಿ .

ಸರಿವ ಕಾಲದ ತೊರೆಯಲಿ
ಬಿಡದೆ ಕಾಡುವ ಜಂಜಡಗಳ ಅಡಿಗೆ
ಸಿಲುಕಿ ನರಳುವವನ ಹುಡುಕಿಕೊಡಿ .

ತನ್ನ ಇರುವನೇ ಮರೆತು ಜಗದ
ಗದ್ದಲದ ಅಡಿಗೆ ಸಿಕ್ಕಿ ಬೇಕುಗಳ
ಬೆನ್ನತ್ತಿ ಕಳೆದು ಹೋಗಿರುವವನ ಹುಡುಕಿಕೊಡಿ .

ಪ್ರೀತಿ ,ವಾತ್ಸಲ್ಯಗಳ ತೊರೆದು
ಬರಿ ಸ್ವಾರ್ಥ ಸಾಧನೆಯ ದಂಡಕಾರಣ್ಯದೊಳು
ಕಳೆದು ಹೋಗಿರುವವನ ಹುಡುಕಿಕೊಡಿ .

ರೋಹಿತ್ ವೇಮುಲನ ಆತ್ಮಹತ್ಯೆಯನ್ನು ರಾಜಕೀಯಗೊಳಿಸುತ್ತಿರುವವರಾರು?

ರೋಹಿತ್ ವೇಮುಲನ ಸಾವನ್ನು ಪ್ರತಿಭಟಿಸಿದ ವಿರೋಧ ಪಕ್ಷದವರಲ್ಲಿ ಅವಕಾಶವಾದಿತನದ ಒಂದಂಶವಿತ್ತು. ಆದರೆ ಬಿಜೆಪಿಗೆ ಹೋಲಿಸಿದರೆ ಅವರು ಬಂದಿದ್ದು ತುಂಬ ತಡವಾಗಿ.
ಅಂಜಲಿ ಮೋದಿ, scroll.in
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

ರೋಹಿತ್ ವೇಮುಲನ ಗೆಳೆಯರು ಮತ್ತು ಸಂಗಾತಿಗಳು ಅವನ ಆತ್ಮಹತ್ಯೆಗಿದ್ದ ನೈಜ ಕಾರಣವನ್ನು ತಿಳಿಸಲು ಪ್ರಯತ್ನಪಡುವಾಗ, ರೋಹಿತನ ಸಾರ್ವಜನಿಕ ಜೀವನ ಮತ್ತು ವೈಯಕ್ತಿಕ ಹತಾಶೆ ಮತ್ತು ಏಕಾಂಗಿ ಸಾವನ್ನು ಬೇರೆಬೇರೆಯಾಗಿ ನೋಡುವುದು ಸಾಧ್ಯವೇ ಇಲ್ಲ. ಸಂದರ್ಶನವೊಂದರಲ್ಲಿ ಅವನ ರೂಮ್ ಮೇಟ್: “ಬಹುಶಃ ವಸ್ತುಸ್ಥಿತಿ ಬದಲಾಗಲು ಒಬ್ಬರ್ಯಾರಾದರೂ ಸಾಯಬೇಕು ಎಂದವನು ಯೋಚಿಸಿರಬೇಕು. ಮತ್ತವನು ಹೀಗೆ ಮಾಡಿಕೊಂಡುಬಿಟ್ಟ.”

ಆದರೆ, ಜೀವ ತೆಗೆದುಕೊಂಡುಬಿಡುವ ರೋಹಿತನ ನಿರ್ಧಾರ ಸಮಾಜವನ್ನು ಬದಲಿಸಲು ತೆಗೆದುಕೊಂಡ ಕೊನೆಯ ರಾಜಕೀಯ ನಡೆಯಾ? ರಾಜಕೀಯ ಶಕ್ತಿಗಳ ದುರುಪಯೋಗದಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡನಾ? ಶೂನ್ಯದಾಚೆಗೆ ಮತ್ತೇನನ್ನು ನೋಡದ ಯುವಕನೊಬ್ಬನ ವಿವೇಚನಾರಹಿತ ಕಾರ್ಯವಾ?

ಅವನ ಕಾವ್ಯಾತ್ಮಾಕ ಕೊನೆಯ ಪತ್ರವನ್ನು ನೂರು ರೀತಿಯಲ್ಲಿ ಓದಿಕೊಳ್ಳಬಹುದು, ಪ್ರತಿ ಓದುಗ ತನಗನುಕೂಲವಾದ ಅರ್ಥವನ್ನು ಕಂಡುಕೊಳ್ಳುತ್ತಾಳೆ.

ಬಿಜೆಪಿ ರೋಹಿತನ ಪತ್ರವನ್ನು ಕ್ಲೀನ್ ಚಿಟ್ ನಂತೆ ನೋಡುವ ನಿರ್ಧಾರ ಮಾಡಿಬಿಟ್ಟಿದೆ. ಬಿಜೆಪಿಯ ವಿದ್ಯಾರ್ಥಿ ಪಡೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪರವಾಗಿ ಹೈದರಾಬಾದ್ ವಿಶ್ವವಿದ್ಯಾಲಯದ ಮೇಲೆ ಒತ್ತಡ ಹೇರಿದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಘೋಷಿಸುತ್ತಾರೆ: 

“ಈ ಪತ್ರದಲ್ಲಿ ವಿಶ್ವವಿದ್ಯಾಲಯದ ಯಾವ ಅಧಿಕಾರಿಯ ಹೆಸರಿಲ್ಲ, ಯಾವುದೇ ರಾಷ್ಟ್ರೀಯ ರಾಜಕೀಯ ಪಕ್ಷವನ್ನು ಹೆಸರಿಸಿಲ್ಲ, ಯಾವ ಸಂಸದನ ಹೆಸರಿಲ್ಲ”

ಎಬಿವಿಪಿಯ ಮುಖಂಡ ಸುಶೀಲ್ ಕುಮಾರ ಹಲ್ಲೆಯ ದೂರು ನೀಡಿದ್ದು (ಪೋಲೀಸರ ಪ್ರಕಾರ ದೂರನ್ನು ಉತ್ಪ್ರೇಕ್ಷಿಸಲಾಗಿತ್ತು) ರೋಹಿತ್ ವೇಮುಲ ರಾಜಕೀಯ ಸುಳಿಯಲ್ಲಿ ಸಿಲುಕುವ ಮುನ್ನುಡಿಯಾಗಿತ್ತು. ಸುಶೀಲ್ ಕುಮಾರ್ ಕೂಡ ಸ್ಮೃತಿ ಇರಾನಿಯವರೆಂತೆಯೇ ಪತ್ರವನ್ನು ವಿಶ್ಲೇಷಿಸುತ್ತಾರೆ:

“ಆ ಆತ್ಮಹತ್ಯಾ ಪತ್ರವನ್ನು ನೂರರಿಂದ ಇನ್ನೂರು ಸಲ ಓದಿದ್ದೇನೆ. ಯಾರ ಹೆಸರನ್ನೂ ಆತ ಉಲ್ಲೇಖಿಸುವುದಿಲ್ಲ; ಇಂತಿಂತವರು ಜವಾಬ್ದಾರರು ಎಂದು ಹೇಳುವುದಿಲ್ಲ”

ಬಿಜೆಪಿ ಈ ಸಾವಿನ ಆರೋಪದಿಂದ ಮುಕ್ತವಾಗುವುದಷ್ಟೇ ಬೇಕಾಗಿಲ್ಲ, ರೋಹಿತ್ ವೇಮುಲನ ಸಾವು ನಡೆದದ್ದೇಗೆ ಎನ್ನುವುದರ ನಿರೂಪಣೆಯನ್ನು ಅವರೇ ನಿಯಂತ್ರಿಸಬೇಕೆಂದಿದ್ದಾರೆ. ಜನರು ರೋಹಿತನ ಪತ್ರವನ್ನು ಜಾತಿ ವ್ಯವಸ್ಥೆಯ ಅಸಮಾನತೆಗಳ ಕುರಿತ ಪತ್ರ, ಅಂಚಿನ ಸಮುದಾಯದ ಜನರು ಎದುರಿಸುತ್ತಿರುವ ಪಕ್ಷಪಾತದ ಕುರಿತ ಪತ್ರದಂತೆ ಓದಿಕೊಂಡಿದ್ದು ಬಿಜೆಪಿಗೆ ಇರುಸುಮುರುಸು ಉಂಟುಮಾಡಿತು. ರೋಹಿತ್ ಬರೆಯುತ್ತಾನೆ, 

“ಮನುಷ್ಯನ ಮೌಲ್ಯ ಅವನ ತತ್ ಕ್ಷಣದ ಗುರುತು ಮತ್ತು ಸಾಧ್ಯತೆಗಳಿಗೆ ಇಳಿದುಬಿಟ್ಟಿದೆ. ಒಂದು ವೋಟಿಗೆ. ಒಂದು ನಂಬರ್ರಿಗೆ. ಒಂದು ವಸ್ತುವಿಗೆ. ನಕ್ಷತ್ರದ ಧೂಳಿನಿಂದ ಉದ್ಭವವಾದ ಅತ್ಯದ್ಭುತ ವಸ್ತುವಿನಂತಹ ಬುದ್ಧಿವಂತಿಕೆ ಮೂಲಕ ಎಂದೂ ಮನುಷ್ಯನನ್ನು ಗುರುತಿಸಲಿಲ್ಲ. ಬೀದಿಯಲ್ಲಿ, ಓದಿನಲ್ಲಿ, ರಾಜಕೀಯದಲ್ಲಿ, ಸಾವಿನಲ್ಲಿ, ಬದುಕಿನಲ್ಲಿ.”

ಜನರು ಈ ಪ್ರಕರಣವನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆಂದು ಹೇಳುವ ಇರಾನಿ “ಇದನ್ನು ಜಾತಿ ಕದನವಾಗಿ ಮಾರ್ಪಡಿಸಿ ಕೆರಳಿಸುವ ದುರುದ್ದೇಶದಿಂದ ಕೂಡಿದ ಪ್ರಯತ್ನ” ಎಂದು ಹೇಳುತ್ತಾರೆ.

ಯಾವುದೇ ಅನುಭೂತಿಯಿಲ್ಲ.

ಆದರೆ, ರೋಹಿತನ ಪತ್ರವನ್ನು ಓದಿದ ಜನರದನ್ನು ಜಾತಿ ತಾರತಮ್ಯ ಎಂದು ಭಾವಿಸುವುದಕ್ಕೆ ಬಹಳ ಮೊದಲೇ, ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ರೋಹಿತ್ ಭಾಗಿಯಾಗಿದ್ದ ಅಂಬೇಡ್ಕರ್ ವಿದ್ಯಾರ್ಥಿ ಸಂಘವನ್ನು “ಜಾತಿವಾದಿ” ಎಂದು ಕರೆದು “ಒಳಿತಿಗಾಗಿ ಕ್ಯಾಂಪಸ್ಸನ್ನು ಬದಲಿಸಿ” ಎಂದು ಇರಾನಿಗೆ ಕೇಳಿಕೊಂಡಿದ್ದರು.

ಬಂಡಾರು ದತ್ತಾತ್ರೇಯ ಪತ್ರ ಬರೆಯಲಿದ್ದ ಏಕೈಕ ಪ್ರಚೋದನೆಯೆಂದರೆ ಎಬಿವಿಪಿಯ ವಿರುದ್ಧ ಅಂಬೇಡ್ಕರ್ ವಿದ್ಯಾರ್ಥಿ ಸಂಘದವರು ಮುಜಾಫರ್ ನಗರದ ಕೋಮುಗಲಭೆಯ ಬಗೆಗಿನ ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಏರ್ಪಡಿಸಿದ್ದ ಪ್ರತಿಭಟನೆ. ಇಲ್ಲಿ ದತ್ತಾತ್ರೇಯರವರಿಗೆ ಜಾತಿ ಎಲ್ಲಿಂದ ಕಾಣಿಸಿತು, ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಹೆಸರಿನಲ್ಲಿರುವ ‘ಅಂಬೇಡ್ಕರ್’ ಅವರಿಗೆ ಜಾತಿ ಸೂಚಕವಾಗಿ ಕಂಡರಾ?

ಬಿಜೆಪಿಗೆ ರೋಹಿತ್ ವೇಮುಲನ ಸಾವಿನಿಂದಿನ ಘಟನಾವಳಿಗಳನ್ನು ನಿಯಂತ್ರಿಸುವ ಮನಸ್ಸಿರಬಹುದು ಆದರದು ಸಾಧ್ಯವಿಲ್ಲ, ಕಾರಣ ಅದಕ್ಕೆ ಅನುಭೂತಿಯ ಕೊರತೆಯಿದೆ – ಅದರ ಸಿದ್ಧಾಂತ ಮತ್ತು ಸಂಘಗಳಲ್ಲಿ ಸಾಮಾನ್ಯ ಮನುಷ್ಯತ್ವಕ್ಕೆ ಆಸ್ಪದವಿಲ್ಲ. ಆತ್ಮಹತ್ಯೆಯ ಸುದ್ದಿ ಹರಡುತ್ತಿದ್ದಂತೆ, ಯುವ ಪ್ರಾಯದಲ್ಲಿ ಜೀವ ಕಳೆದುಕೊಂಡವನ ಬಗ್ಗೆ ಹೆಸರಿಗೊಂದಷ್ಟು ದುಃಖ ಸೂಚಿಸಿದ ಮರುಕ್ಷಣವೇ ಬಿಜೆಪಿ ಆಕ್ರಮಶೀಲವಾಗಿ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಬಗೆಗಿನ ದತ್ತಾತ್ರೇಯರ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳುತ್ತದೆ ಮತ್ತು ಅದರ ಮುಂದುವರಿಕೆಯಂತೆ ರೋಹಿತ ವೇಮುಲ ಜಾತಿವಾದಿ, ತೀವ್ರಗಾಮಿ ಮತ್ತು ದೇಶದ್ರೋಹಿ, ಹಾಗಾಗಿ ಅವನ ಸಾವಿಗೆ ಸಹಾನುಭೂತಿ ತೋರಬೇಕಿಲ್ಲ ಎಂದು ವಾದಿಸುತ್ತದೆ. ಬಿಜೆಪಿಯ ವಕ್ತಾರರು ಮತ್ತು ಎಬಿವಿಪಿ ಅಂಬೇಡ್ಕರ್ ವಿದ್ಯಾರ್ಥಿ ಸಂಘವು ಯಾಕೂಬ್ ಮೆಮನನ ನೇಣು ಶಿಕ್ಷೆಯನ್ನು ವಿರೋಧಿಸಿದ್ದನ್ನು – ವಿರೋಧವಿದ್ದದ್ದು ಗಲ್ಲು ಶಿಕ್ಷೆಯ ವಿರುದ್ಧ – ಅವರ ದೇಶದ್ರೋಹಿ ಚಟುವಟಿಕೆಗೆ ಆಧಾರದಂತೆ ನೀಡುತ್ತಾರೆ.

ಆತ್ಮಹತ್ಯೆಯ ರಾಜಕೀಯಗೊಳಿಸುವಿಕೆ.

ಯಾವುದೇ ಅಚ್ಚರಿ ಬೇಡ, ಬಿಜೆಪಿ ತನ್ನ ರಾಜಕೀಯ ವಿರೋಧಿಗಳು ರೋಹಿತನ ಆತ್ಮಹತ್ಯೆಯನ್ನು ಬಂಡಾರು ದತ್ತಾತ್ರೇಯರ ಪತ್ರಕ್ಕೆ ಮತ್ತು ಮಾನವ ಸಂಪನ್ಮೂಲ ಇಲಾಖೆ ಹಲವು ಸಲ ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ಈ ವಿಷಯವನ್ನು ನೆನಪಿಸಿದ್ದಕ್ಕೆ ಜೋಡಿಸಿದ್ದನ್ನು ‘ರಾಜಕೀಯ’ ಎಂದು ಆರೋಪಿಸಿತು. ವಿರೋಧ ಪಕ್ಷದ ರಾಷ್ಟ್ರ ಮಟ್ಟದ ನಾಯಕರು ರೋಹಿತ್ ವೇಮುಲನ ಸಾವಿಗೆ ಸಂತಾಪ ಸೂಚಿಸಿ ಪ್ರತಿಭಟನೆಗೆ ಇಳಿದಿದ್ದರಲ್ಲಿ ರಾಜಕೀಯದ ಒಂದಂಶವಿದ್ದೇ ಇದೆ. ಆದರವರು ಎಬಿವಿಪಿಯ ಆಪಾದನೆಯನ್ನು ಪರಿಶೀಲಿಸದೆ ವಿದ್ಯಾರ್ಥಿ ಸಂಘಟನೆಯನ್ನು “ಜಾತಿವಾದಿ, ತೀವ್ರಗಾಮಿ ಮತ್ತು ದೇಶವಿರೋಧಿ” ಎಂದು ಬರೆದು, ಯಾವೊಂದು ಆಧಾರವಿಲ್ಲದೆ ಎಬಿವಿಪಿಯ ಸದಸ್ಯ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದೆ ಎಂದು ಹೇಳಿದ್ದನ್ನು ಪತ್ರದಲ್ಲಿ ಪುನರುಚ್ಛರಿಸಿದ ಬಿಜೆಪಿಯ ಮಂತ್ರಿಗಳಿಗೆ ಹೋಲಿಸಿದರೆ ನಿಧಾನಕ್ಕೆ ಬಂದರು.

ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಗಳು ವಿರೋಧ ಪಕ್ಷಗಳ ಈ ಬೆಂಬಲವನ್ನು ಸ್ವಾಗತಿಸುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಹಗೆಯುಳ್ಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ತಮ್ಮ ವಿರುದ್ಧದ ದುರುದ್ದೇಶಪೂರಿತ ದೂರುಗಳಿಗೂ ಪ್ರೋತ್ಸಾಹ ನೀಡುವ ಕೇಂದ್ರ ಸರಕಾರದ ವಿರುದ್ಧ ಹೋರಾಡಲು ಈ ಬೆಂಬಲ ಬೇಕೆನ್ನಿಸಿದ್ದರೆ ಅಚ್ಚರಿಯಿಲ್ಲ.

ರೋಹಿತ್ ವೇಮುಲ ತನ್ನ ಕೊನೆಯ ದಿನಗಳನ್ನು ಹಾಸ್ಟೆಲಿನ ರೂಮಿನ ಬದಲಾಗಿ ತಾತ್ಕಾಲಿಕ ಶೆಡ್ಡಿನಲ್ಲಿ ಕಳೆದ; ಸಂಶೋಧನೆಯನ್ನು ಮುಂದುವರೆಸಲಾಗದ, ಲ್ಯಾಬ್ ಕೆಲಸವನ್ನು ಮುಗಿಸಲಾಗದ ರೋಹಿತ್ ಪೋಲೀಸ್ ದೂರುಗಳು ಮತ್ತು ಮಾತ್ಸರ್ಯದಿಂದ ಎಬಿವಿಪಿಯ ಸದಸ್ಯ ಹಾಕಿದ್ದ ಕೇಸುಗಳು ತನ್ನ ಭವಿಷ್ಯವನ್ನು ನಿರ್ಧರಿಸುವುದನ್ನು ಕಾಯುತ್ತಿದ್ದ. ರೋಹಿತ ವೇಮುಲ ಆಯ್ದುಕೊಂಡ ದಾರಿಯನ್ನು ಅರ್ಥಮಾಡಿಕೊಳ್ಳಬಯಸುವವರು ತಮ್ಮ ಗಮನವನ್ನು ರೋಹಿತನ ಸಾವಿನಿಂದಾರಂಭವಾದ ದೊಡ್ಡ ರಾಜಕೀಯ ನಾಟಕದಿಂದ ಸರಿಸಿ, ಮನುಷ್ಯನನ್ನು ಒಂದು ವೋಟು, ಒಂದು ಸಂಖೈ, ಒಂದು ವಸ್ತುವಾಗಿ ಮಾರ್ಪಡಿಸಿಬಿಟ್ಟ ಸಂಕುಚಿತ ಭಾವ ಮತ್ತು ಭ್ರಷ್ಟತೆಯಿಂದ ಕೂಡಿದ ಮುಖ್ಯವಾಹಿನಿ ರಾಜಕೀಯದ ಪ್ರತಿಬಿಂಬದಂತಿರುವ ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿಗಳ ರಾಜಕೀಯದತ್ತ ಹರಿಸಬೇಕು.

ಅಖಂಡತೆಯ ಅರ್ಥ

ಕು.ಸ.ಮಧುಸೂದನ
ಮುಂಚೆ ಈಗಿರಲಿಲ್ಲ
ಅಖಂಡತೆಯ ಕಲ್ಪನೆ ಕಂಡಿರಲಿಲ್ಲ
ತುಂಡು ತುಂಡಾಗಿ ಬೇರೆಯಾಗಿದ್ದರೂ
ಪರಸ್ಪರರ ಕಷ್ಟಸುಖಕ್ಕೆ ಆಗುತ್ತಾ
ಅವರತ್ತಾಗ ನಾವು
ನಾವತ್ತಾಗ ಅವರೂ
ಸಮಾದಾನ ಹೇಳುತ್ತ
ಇದ್ದೆವು ಇಷ್ಟೂ ದಿನ
ಅವರ ಮನೆಯ ಮಾಂಸದ ಸಾರಿಗೆ
ನಾವು ಮೂಗರಳಿಸುತ್ತ
ನಮ್ಮ ಮನೆಯ ಮೀನೂಟಕ್ಕೆ
ಅವರನ್ನು ಕರೆಯುತ್ತ
ಶ್ರೀನಗರದ ಜಮಖಾನವ ನಮ್ಮ ನಡೂ ಮನೆಗೆ ಹಾಸಿ
ನಮ್ಮ ತಾಳಕಟ್ಟೆ ಕಂಬಳಿಗಳನವರ ಚಳಿಗಾಲಕ್ಕೆ ಕೊಟ್ಟು
ಈಶಾನ್ಯದವರ ಬಿಗು ನೃತ್ಯಕ್ಕೆ ನಮ್ಮ ಕಾಲು ಕುಣಿಸುತ್ತ
ನಮ್ಮ ಭರತನಾಟ್ಯಕ್ಕವರು ತಲೆದೂಗುತ್ತ
ಅವರ ಬೇಲ್ ಪೂರಿಗೆ ನಮ್ಮ ಇಡ್ಲಿ ಸಾಂಬಾರನ್ನು ವಿನಿಮಯಿಸಿಕೊಳ್ಳುತ್ತ
ಬದುಕುತ್ತಿದ್ದೆವು ಅಖಂಡತೆಯ
ಅರ್ಥವೇ ಗೊತ್ತಿಲ್ಲದೆ!
ಇದೀಗ ತಿಳಿದವರು
ಅಖಂಡತೆಯ ಬಗ್ಗೆ ಮಾತಾಡುತ್ತಿದ್ದಾರೆ
ಅಸಹಿಷ್ಣುತೆಯ ಹೊಗೆಹಾಕುತ್ತಿದ್ದಾರೆ!

ಜನ 30, 2016

ಹಿಂದಿ ಹೇರಿಕೆ ನಿಲ್ಬೇಕ್!

ದಿನೇ ದಿನೇ ಹೆಚ್ಚುತ್ತಲೇ ಇರುವ ಹಿಂದಿ ಹೇರಿಕೆಯ ವಿರುದ್ಧ ಹೋರಾಟಗಳು ನಾನಾ ರೂಪ ಪಡೆದುಕೊಳ್ಳುತ್ತಿವೆ, ಸರಕಾರಗಳು ಎಚ್ಚೆತ್ತುಕೊಳ್ಳದಿದ್ದರೆ ಒಂದೋ ಹೋರಾಟಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತವೆ ಇಲ್ಲಾ ಕುರಿಮಂದೆಯಂತಹ ಕನ್ನಡಿಗರು ‘ರಾಷ್ಟ್ರಭಾಷೆ’ ‘ಏಕತೆ’ ‘ಭಾರತ ದೇಶ’ ಎಂಬ ರಾಷ್ಟ್ರೀಯ ಪಕ್ಷಗಳ ಘೋಷಣೆಗಳ ಭ್ರಮೆಯಲ್ಲಿ ಮುಳುಗಿಹೋಗಿ ಕನ್ನಡವನ್ನೂ ಮುಳುಗಿಸಿಬಿಡುತ್ತಾರೆ. ರತೀಶ್ ರತ್ನಾಕರ ಇಂಥಹ ಕನ್ನಡಿಗರನ್ನು ಬಡಿದೆಬ್ಬಿಸಲು ‘ಪರಪಂಚ’ ಚಿತ್ರದ “ಹುಟ್ಟಿದ ಊರನ್ನು ಬಿಟ್ಟು ಬಂದ ಮೇಲೆ” ಹಾಡಿನ ದಾಟಿಯಲ್ಲಿ “ಹುಟ್ಟಿದ ಊರಿಗೆ ಹಿಂದಿ ಬಂದ ಮೇಲೆ” ಎಂಬ ಗೀತೆ ರಚಿಸಿದ್ದಾರೆ. ಪರಪಂಚ ಚಿತ್ರದ ಹಾಡು ಎಲ್ಲರ ಬಾಯಲ್ಲಿ ನಲಿಯಲಾರಂಭಿಸಿದ್ದು ಅನವಶ್ಯಕ ಕಾರಣಗಳಿಂದ ಪ್ರಸಿದ್ಧಿಗೆ ಬಂದಿದ್ದ ವೆಂಕಟ್ ಬಾಯಲ್ಲಿ ಅದನ್ನು ಮತ್ತೆ ಹಾಡಿಸಿದಾಗ. ರತೀಶ್ ರತ್ನಾಕರರ ಹಾಡನ್ನೊಮ್ಮೆ ಓದಿಬಿಡಿ, ಹಂಚಿಕೊಳ್ಳಿ, ಸಾಧ್ಯವಾದರೆ ಅದೇ ರಾಗದಲ್ಲಿ ಹಾಡಿ ವೀಡಿಯೋ ಅಪ್ ಲೋಡ್ ಮಾಡಿ, ಎಲ್ಲದಕ್ಕಿಂತ ಮುಖ್ಯವಾಗಿ ಹಿಂದಿ ಹೇರಿಕೆಯ ವಿರುದ್ಧ ದನಿಎತ್ತಿ.

‘ಹುಟ್ಟಿದ ಊರಿಗೆ ಹಿಂದಿ ಬಂದ ಮೇಲೆ ಇನ್ನೇನು ಬರುವುದು ಬಾಕಿ ಇದೆ
ನಿನ್ನೂರಲ್ಲೇ ನೀನು ಆಗ್ಬೇಡ ಪರದೇಸಿ ಎದ್ದೇಳು ಕಾಲ ಮಿಂಚಿ ಹೋಗೋದ್ರೊಳ್ಗೆ
ಹಿಂದೆ ಹೇರಿಕೆ ಊರ ತುಂಬಿದೆ ನಿನ್ನ ಇರುವನು ಅಳಿಸಲು
ತಾಯ್ನುಡಿಗಿಂತ ಇನ್ನೇನು ಬೇಕು ನಿನ್ನಯ ಬದುಕು ಬೆಳಗಲು
ನಿದ್ದೆಯಿಂದೇಳೋ ಮಗನೆ ಮೈಕೊಡ್ವಿ ನಿಲ್ಲೋ ಸಿವನೆ
ಕಣ್ಣುಬಿಡು ಎಲ್ಲಾ ನೋಡು ಕೈಯನ್ನೆತ್ತಿ ಕೂಗಿಬಿಡು || ಹುಟ್ಟಿದ ಊರಿಗೆ ||

ನಿನ್ನುಡಿ ಒಟ್ಟಿಗೆ ಹಿಂದಿಯೂ ಇದ್ದರು ಅಲ್ಲೇನೋ ಮಾಟ ಅಡಗಿದೆ
ಕನ್ನಡ ಅಳಿಸಿ ಹಿಂದಿಯೇ ಸಾಕು ಅನ್ನುವ ಕಾಲ ಬರಲಿದೆ
ಆಸೆಯ ತೋರಿಸಿ ಒತ್ತಾಯ ಮಾಡಿಸಿ ಹಿಂದಿಯ ಒಪ್ಪ ಬೇಕಂತಾರೊ
ಒಪ್ಪಿದರೆ ಅಲ್ಲಿ ಗುಂಡಿಯ ತೆಗೆದು ಇದ್ದಂತೆ ಮಣ್ಣು ಮಾಡ್ತಾರೊ

ಅಂಚೆಲಿ ಹಿಂದಿಯೇ ಮೊದಲಂತೆ ರೈಲಲ್ಲಿ ಕನ್ನಡ ಇಲ್ವಂತೆ
ಬ್ಯಾಂಕಲ್ಲಿ ಕೇಳೋದ್ ಬ್ಯಾಡ್ವಂತೆ ಕನ್ನಡ ಮಾಯ ಆಯ್ತಂತೆ
ಆಳೋರು ಕೈಯ ಕೊಟ್ರಂತೆ ಹಿಂದಿಯ ದಾಸರಾಗ್ ಬಿಟ್ರಂತೆ
ವಲಸೆಯೆ ಎಲ್ಲಾ ಹೆಚ್ಚಾಯ್ತು, ಕೆಲಸಾನೆ ನಿಂಗೆ ದೂರಾಯ್ತು
ನಿಂಗು ತಾಕತ್ತಿದೆ ಮಗನೆ, ತಲೆಯೆತ್ತಿ ನಿಲ್ಲೋ ಸಿವನೆ
ನಿದ್ದೆ ಬಿಡು ಎದ್ದು ನೋಡು ಹೆಜ್ಜೆಯಿಟ್ಟು ನುಗ್ಗಿಬಿಡು || ಹುಟ್ಟಿದ ಊರಿಗೆ ||

ಜನ 29, 2016

ಕು ಸ ಮಧುಸೂದನ್: ಮೂರು ಪದ್ಯಗಳು.

ಕು.ಸ. ಮಧುಸೂದನ್
ಮೂರು ಪದ್ಯಗಳು
ಯಾವುದೂ ಹೊಸತೇನಲ್ಲ!
ಹೊಸಬಾಟಲಿಯಲ್ಲಿ ಹಳೆ ಮದ್ಯ
ಹೊಸದ್ವನಿಯಲ್ಲಿ ಹಳೆ ಘೋಷಣೆಗಳು
ಹೊಸನಾಯಕರ ಬಾಯಲ್ಲಿ ಹಳೆಯ ಘರ್ಜನೆಗಳು
ಹೊಸ ದಾರಿಯಲ್ಲಿ ಹಳೆ ಹೆಜ್ಜೆಗಳು
ತಟ್ಟೆ ಹೊಸತಾದರು ಊಟ ಹಳೆಯದೆ
ಬಟ್ಟೆ ಹೊಸತಾದರು ದೇಹ ಹಳೆಯದೆ
ನಾಯಕ ಹೊಸಬನಾದರು ಭಟ್ಟಂಗಿ ಹಳಬನೇ!
ಹಳೆ ಪ್ರಪಂಚದಲ್ಲಿ ಹೊಸ ಶೋಷಕರು
ಹಳೆ ಹೋರಾಟದಲ್ಲಿ ಹೊಸ ಕ್ರಾಂತಿಕಾರಿಗಳು
ಹೊಸ ಕವಿತೆಗೆ ಜೋತುಬಿದ್ದ ಅದೇ ಹಳೆ ಕವಿಗೆ
ತೆರೆದುಕೊಂಡದ್ದು ಮಾತ್ರ ಹೊಸ ಕಿವಿಗಳು!

**************
ಒಳ್ಳೆಯ ಮನುಷ್ಯ!
ಒಳ್ಳೆಯ ಮನುಷ್ಯನನ್ನು ಎಲ್ಲರೂ ಇಷ್ಟಪಡುತ್ತಾರೆ!
ಆದರೆ ಒಳ್ಳೆ ಮನುಷ್ಯನಾಗಲು ಯಾರೂ ತಯಾರಿರೋದಿಲ್ಲ
ಅನ್ನೋದೆ ವಿಷಾದನೀಯ!
ನೋಡಿ:
ಯಾವನೊ ಒಬ್ಬ ದಾರಿಹೋಕ
ನಡೆದು ಹೋಗುವಾಗ ಸುಮ್ಮನೇ ಸುರಿದು ಹೋಗುತ್ತಿದ್ದ
ಬೀದಿ ನಲ್ಲಿಯ ನಿಲ್ಲಿಸಿದಾಗ ಜನ ಅವನನ್ನು
ಅಚ್ಚರಿ ಚಕಿತನನ್ನಾಗಿ ನೋಡುತ್ತಾರೆ
ನೀರು ವೃಥಾ ಸೋರಿ ಹೋಗುವುದನ್ನು ನೋಡುವ ಜನ
ಕಾರ್ಪೋರೇಷನ್ನಿಗೆ ಪೋನ್ ಮಾಡುತ್ತಾರೆಯೇ ಹೊರತು
ನಲ್ಲಿ ನಿಲ್ಲಿಸಲು ತಯಾರಿರುವುದಿಲ್ಲ!
ಒಳ್ಳೆಯ ಮನುಷ್ಯ ಮೆಚ್ಚಲಷ್ಟೇ ಬೇಕು!
*****************
ಬನ್ನಿ ಮಾತಾಡೋಣ:
ಬನ್ನಿ ಮಾತಾಡೋಣ
ಗೋರಿಗಳಾದ ಊರುಗಳ ಬಗ್ಗೆ
ಕಾರ್ಖಾನೆಗಳಾದ ಗದ್ದೆಗಳ ಬಗ್ಗೆ
ಬಯಲಾದ ಕಾಡುಗಳ ಬಗ್ಗೆ
ನೀರಿರದೆ ಸೊರಗದ ನದಿಗಳ ಬಗ್ಗೆ
ಬನ್ನಿ ಇವತ್ತೊಂದು ದಿನವಾದರೂ ಮಾತಾಡೋಣ:
ದರವೇಸಿಗಳೆಲ್ಲ ಪ್ರಭುಗಳಾದ ಬಗ್ಗೆ
ಮಾಲೀಕರೆಲ್ಲ ಕೂಲಿಗಳಾದ ಬಗ್ಗೆ
ಕೂಲಿಗಳೆಲ್ಲ ಬಿಕಾರಿಗಳಾದ ಬಗ್ಗೆ
ಬಿಕಾರಿಗಳೆಲ್ಲ ಸತ್ತುಹೋದ ಬಗ್ಗೆ
ಬನ್ನಿ ಮಾತಾಡಿಬಿಡೋಣ ಕೊನೆಯದಾಗಿ
ನಿಮ್ಮ ಕೈ ಮುಗಿಯುತ್ತೇನೆ!

ಮೇಕಿಂಗ್ ಹಿಸ್ಟರಿ: ಕಂಪನಿಯ ಹೊಗಳುಭಟ್ಟ ಮಕ್ಕಳು

making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಬ್ರಿಟೀಷರೆಡೆಗೆ ಒಡೆಯರ್ ಕುಟುಂಬ ತೋರಿದ ನಿಷ್ಠೆ ರಾಜವಂಶದ ಆಡಳಿತದ ಉಳಿದ ಅವಧಿಯಲ್ಲೂ ಬದಲಾಗಲಿಲ್ಲ. ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದ ಕೆಲವು ದಿನಗಳ ನಂತರ ಲಕ್ಷ್ಮಿ ಅಮ್ಮಣ್ಣಿ ಮತ್ತವರ ಅತ್ತೆ ದೇವಜಮ್ಮಣ್ಣಿ ಗವರ್ನರ್ ಜೆನರಲ್ ಗೆ ಕೃತಜ್ಞತಾಪತ್ರ ಬರೆಯುತ್ತಾರೆ. “ನಮ್ಮ ಮಕ್ಕಳಿಗೆ ಮೈಸೂರು, ನಗರ ಮತ್ತು ಚಿತ್ರದುರ್ಗವನ್ನು ನೀವು ದಯಪಾಲಿಸಿರುವುದು ಮತ್ತು ಪೂರ್ಣಯ್ಯನವರನ್ನು ದಿವಾನರನ್ನಾಗಿ ನೇಮಿಸಿರುವುದು ನಮಗೆ ಅತೀವ ಸಂತಸವನ್ನುಂಟುಮಾಡಿದೆ. ನಮ್ಮ ಸರಕಾರ ಅಧಿಕಾರವಂಚಿತವಾಗಿ ನಲವತ್ತು ವರುಷಗಳಾಗಿತ್ತು. ಈಗ ನಮ್ಮ ಮಕ್ಕಳಿಗೆ ಸರಕಾರದಲ್ಲಿರುವ ಅವಕಾಶವನ್ನು ನೀಡುವ ಕೃಪೆ ತೋರಿದ್ದೀರಿ ಮತ್ತು ದಿವಾನರಾಗಿ ಪೂರ್ಣಯ್ಯನವರನ್ನು ನೇಮಿಸಿದ್ದೀರಿ. ಸೂರ್ಯ ಚಂದ್ರರಿರುವವರೆಗೆ ನಾವು ನಿಮಗೆ ಎದುರಾಡುವುದಿಲ್ಲ. ಯಾವಾಗಲೂ ನಾವು ನಿಮ್ಮ ರಕ್ಷಣೆಯಲ್ಲಿರುತ್ತೀವಿ, ಆಜ್ಞಾಪಾಲಕರಾಗಿರುತ್ತೀವಿ. ನೀವು ನಮಗೆ ಮಾಡಿದ ಈ ಸಹಾಯದ ನೆನಪು ಮುಂದಿನ ಎಲ್ಲಾ ತಲೆಮಾರಿನವರಲ್ಲೂ ಇರುತ್ತದೆ. ನಿಮ್ಮ ಸರಕಾರದ ಮೇಲಿನ ನಮ್ಮ ಅವಲಂಬನೆಯನ್ನು ನಮ್ಮ ವಂಶಾವಳಿಯಲ್ಲಾರೂ ಮರೆಯುವುದಿಲ್ಲ”. (17)

ಮೈಸೂರು ಮತ್ತು ಕರ್ನಾಟಕದಲ್ಲಿ ಗೆರಿಲ್ಲಾ ಯುದ್ಧದ ಲಕ್ಷಣಗಳು 1831ರಲ್ಲಿ ಕಾಣಿಸಿಕೊಂಡಾಗ ಮದ್ರಾಸಿನ ಗವರ್ನರ್ ಲಷಿಂಗ್ಟನ್ ಗೆ ರಾಜ ಪತ್ರ ಬರೆಯುತ್ತಾರೆ: “ನಿಮ್ಮ ದೃಡ ನಿಶ್ಚಯ ಮತ್ತು ಕಾರುಣ್ಯದಿಂದ ನನಗೆ ಅತ್ಯಂತ ಉನ್ನತ ಪದವಿ ಸಿಕ್ಕಿದೆ; ನಾನು ಹುಟ್ಟಿದ ಶ್ರೀರಂಗಪಟ್ಟಣದ ಮುಖ್ಯಸ್ಥನಾಗುವ ಅವಕಾಶ ಲಭಿಸಿದೆ. ದಯಾಮಯನಾದ ದೇವರು ನಿಮ್ಮ ಪ್ರೀತಿ – ಕರುಣೆಯ ನೆರಳನ್ನು ನಮ್ಮ ಮೇಲೆ ಸದಾ ಇರುವಂತೆ ನೋಡಿಕೊಳ್ಳಲಿ. ನಿಮ್ಮ ನಿರ್ದೇಶನದ ಪ್ರಕಾರವೇ ಶ್ರೀರಂಗಪಟ್ಟಣದ ವ್ಯವಹಾರಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ನನ್ನನ್ನು ಬೆಳೆಸಿ ಪೋಷಿಸಿ ರಕ್ಷಿಸುತ್ತಿರುವವರು ನೀವು. ನನ್ನಾಸೆಗಳು ಈಡೇರಲು ನಿಮ್ಮ ಕರುಣೆಯನ್ನು ನಿರೀಕ್ಷಿಸುವೆ. ನೀವು ನಮ್ಮೆಡೆಗೆ ತೋರಿದ ಕೃಪೆಗಳಲ್ಲಿ ಹಾಲಿ ರೆಸೆಡೆಂಟರ ನೇಮಕ ಪ್ರಮುಖವಾದುದು. ಅತ್ಯಂತ ಅರ್ಹರಾದ ಈ ರೆಸಿಡೆಂಟರು ತಮ್ಮ ನ್ಯಾಯಪರತೆಯ ಸಲಹೆಗಳಿಂದ ನಮ್ಮ ಸರಕಾರದ ವ್ಯವಹಾರಗಳನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುತ್ತಾರೆ. ನನ್ನ ವ್ಯವಹಾರದ ನಿರ್ವಹಣೆಯಲ್ಲಿ ಮತ್ತು ನನ್ನ ಏಳಿಗೆಯಲ್ಲಿ ರೆಸಿಡೆಂಟರು ವಹಿಸುವ ಪಾತ್ರವನ್ನು ಲೇಖನಿಯಿಂದಾಗಲೀ, ಮಾತಿನಿಂದಾಗಲೀ ವರ್ಣಿಸುವುದು ಅಸಾಧ್ಯ. ನಿಮಗೆ ಸರಿಯಾದ ರೀತಿಯಿಂದ ಧನ್ಯವಾದಗಳನ್ನೇಳುವುದೂ ನನಗೆ ಶಕ್ಯವಿಲ್ಲ.

ಮತ್ತಿನ್ನೇನು ಹೇಳಲಿ” (18)

ಮತ್ತೇನೂ ಬೇಡ! ಅಯ್ಯೋ ವಿಧಿಯೇ! ಹೇಳುವುದಕ್ಕೇನು ಉಳಿದಿದೆ?

ಅದೇ ವರುಷ ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆಯ ನೆಪವೊಡ್ಡಿ ಬ್ರಿಟೀಷರು ಮೈಸೂರಿನ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಂಡರು. ಬ್ರಿಟೀಷ್ ಸರಕಾರದ ಈ ನಿರ್ಧಾರವನ್ನು ಕೇಳಿ ಬೇಸರಗೊಂಡ ರಾಜ ಕ್ಷೀಣ ಅಳುವಿನ ಮೂಲಕ ಅಸಹನೆ ತೋರಿದ; ರಾಜನ ಪ್ರತಿಕ್ರಿಯೆಯನ್ನು ಫೋರ್ಟ್ ಸೇಂಟ್ ಜಾರ್ಜಿಗೆ ಬರೆದ ಪತ್ರದಲ್ಲಿ ರೆಸೆಡೆಂಟ್ ಕ್ಯಾರಾಮೇಯರ್ ವಿವರಿಸುತ್ತಾ “……ನಿನ್ನೆ ಸಂಜೆ ರಾಜನ ಜೊತೆ ಚರ್ಚೆ ನಡೆಸಿದೆ…..ರಾಜನ ಸುತ್ತ ಅವನ ಕುಟುಂಬದವರಿದ್ದರು – ಮಾನಸಿಕವಾಗಿ ಜರ್ಜರಿತರಾಗಿದ್ದರು. ಸಂಧಾನ ನಡೆಸಲು ರಾಜ ನನ್ನ ಸಹಾಯ ಕೇಳಿದ. ಸಾಮ್ರಾಜ್ಯದಾದ್ಯಂತ ರಾಜನ ವ್ಯಕ್ತಿತ್ವಕ್ಕೆ ಅಪಮಾನವುಂಟಾಗುವುದನ್ನು ತಡೆಯುವುದು ಆತನ ಪ್ರಮುಖ ಉದ್ದೇಶವಾಗಿತ್ತು. ….. ಇಡೀ ಮೈಸೂರು ಸಂಸ್ಥಾನವನ್ನು ನೇರ ಆಡಳಿತಕ್ಕೆ ಒಳಪಡಿಸುವ ಗವರ್ನರ್ ಜೆನರಲ್ ನ ನಿರ್ಧಾರದಲ್ಲಿ ರವಷ್ಟು ಬದಲಾವಣೆ ಮಾಡಬೇಕೆನ್ನುವುದು ರಾಜನ ಕೋರಿಕೆಯಾಗಿತ್ತು. ಮೈಸೂರಿನ ಎಂಟು ಗ್ರಾಮಗಳನ್ನು ಬಿಟ್ಟುಕೊಟ್ಟರೆ ಸಾಕು ನಾನು ‘ರಾಜ’ನಾಗಿಯೇ ಉಳಿಯುತ್ತೇನೆ ಎಂಬುದಾತನ ಕೋರಿಕೆ”. (19)

ತನ್ನ ವಯಸ್ಸಾದ ಮೂಳೆಗಳಿಗೆ ಕಚಗುಳಿ ಇಟ್ಟುಕೊಂಡು ನಗುತ್ತಾ ವೆಲ್ಲೆಸ್ಲಿ ಮರಣಗುಂಡಿಯೊಳಗೆ ಮಗ್ಗಲು ಬದಲಿಸಿರಬೇಕು. ತುಣುಕು ಚೂರಿಗೆ ಅರ್ಹನೆಂದು ಸ್ವತಃ ನಂಬಿದ್ದ ರಾಜನಿಗೆ ಪೂರ್ತಿ ಪೌಂಡ್ ಬ್ರೆಡ್ಡೇ ಲಭಿಸಿತ್ತು!

ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದಾಗ ರಾಜನಿನ್ನೂ ಅಂಬೆಗಾಲಿಡುತ್ತಿದ್ದ ಹಸುಗೂಸು. ಈಗ ಮೂವತ್ತೈದು ವರ್ಷದ ಗಂಡಸು. ಮೂರು ವಾರದ ನಂತರ ಈ ಕೈಗೊಂಬೆ ರಾಜ ಗವರ್ನರ್ ಜೆನರಲ್ ವಿಲಿಯಂ ಬೆಂಟಿಕ್ ಗೆ ಒಂದು ಪತ್ರ ಬರೆಯುತ್ತಾನೆ. “ನನ್ನನ್ನು ಎತ್ತರಕ್ಕೇರಿಸುವ ಸಾಮರ್ಥ್ಯವಿರುವ ನಿಮ್ಮ ಅಮೂಲ್ಯ ಸಲಹೆಗಳಿಗಾಗಿ ಎದುರು ನೋಡುತ್ತಿದ್ದೀನಿ. ಕಾರಣ ನನ್ನನ್ನು ಸಾಕಿ ರಕ್ಷಿಸಿ ಪೋಷಿಸಿದ ಘನ ಸರಕಾರಕ್ಕೆ ನನ್ನ ಜೀವ ಮುಡಿಪು……

ಸೋಲರಿಯದ ಬ್ರಿಟೀಷ್ ಸರಕಾರದ ಕಾಂತಿಯಿಂದ ಹೈದರಾಲಿ ಎಂಬ ಶಕ್ತ ನಕ್ಷತ್ರ ಮುಳುಗಲಾರಂಭಿಸಿದಾಗಷ್ಟೇ ನನ್ನ ಮನೆಯ ಮೇಲೆ ಏಳಿಗೆಯ ಸೂರ್ಯೋದಯವಾಗಿದ್ದು; ಸರಕಾರದ ಕೃಪೆಯ ಅಂಚಿನಿಂದ.

ಆ ಸಂದರ್ಭದಲ್ಲಿ ಘನ ಸರಕಾರ ಈ ದಿಕ್ಕುಗೆಟ್ಟ ಕುಟುಂಬಕ್ಕೆ ಜೀವ ಕೊಟ್ಟು ಶಕ್ತಿ ನೀಡಿತು. ಪ್ರಾರ್ಥಿಸುವುದರ ಹೊರತಾಗಿ ನಮ್ಮ ಕುಟುಂಬ ಬ್ರಿಟೀಷ್ ಸರಕಾರಕ್ಕೆ ಯಾವ ಸೇವೆಯನ್ನೂ ನೀಡಲಾಗಲಿಲ್ಲ. ಯುದ್ಧದಲ್ಲೂ ಭಾಗಿಯಾಗಲಿಲ್ಲ. ಆಕ್ರಮಿಸಿದ ರಾಜ್ಯವನ್ನಾಳುವ ಹಕ್ಕು ಸರಕಾರದ್ದು. ಏನೇನೂ ಅಲ್ಲದ ನನ್ನನ್ನು ಕಂಪನಿಯು ಮಗನಂತೆ ಕಂಡಿತು….. ಈ ರಾಜ್ಯದ ಪೀಠದ ಮೇಲೆ ನನ್ನನ್ನು ಕುಳ್ಳಿರಿಸಿದರು. ನಾನಿನ್ನೂ ಮಗುವಾಗಿದ್ದಾಗಲೇ ಪಿತೃ ವಾತ್ಸಲ್ಯದಿಂದ ನನಗೀ ಸ್ಥಾನ ನೀಡಿದರು.

ಕಂಪನಿ ಸರಕಾರದ ದತ್ತು ಪುತ್ರ ನಾನೆಂದು ಎಣಿಸಿದ್ದೇನೆ.

ನನ್ನ ನಿಷ್ಠೆಭರಿತ ಸೇವೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ಶಕ್ತಿಯುತ ಸರಕಾರಕ್ಕೆ ನನ್ನ ನಿಷ್ಠೆಯನ್ನು ತೋರಿಸಿ ನಿಮ್ಮ ಕರುಣೆ ಭವಿಷ್ಯದಲ್ಲೂ ಮುಂದುವರೆಯಲಿ ಎಂದು ಆಶಿಸುತ್ತೇನೆಯೇ ಹೊರತು ಉಳಿದ ರಾಜರಂತೆ ಸಾಮ್ರಾಜ್ಯವನ್ನು ವಿಸ್ತರಿಸುವ, ಸಂಪತ್ತೆಚ್ಚಿಸಿಕೊಳ್ಳುವ ಆಸೆಗಳು ನನಗಿಲ್ಲ.

…….ನನ್ನ ಬಾಲ್ಯದ ಸಮಯದಲ್ಲಿದ್ದ ‘ಗೌರವ’ವನ್ನು, ಅಸಹಾಯಕ ಪರಿಸ್ಥಿಯನ್ನು ಈಗ ವರುಷಗಳ ನಂತರ ಪ್ರಬುದ್ಧತೆಯ ದೃಷ್ಟಿಯಿಂದ ನೆನಪಿಸಿಕೊಂಡಾಗ ನಾಚಿಕೆಯಾಗುತ್ತದೆ. ದುಃಖಭರಿತ ಆತ್ಮ ಅಸ್ತಿತ್ವದಲ್ಲಿರುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದೇ ಲೇಸು. ದೈವಾಂಶಸಂಭೂತರಾದ ದೊರೆಯ ದೃಷ್ಟಿ ನನ್ನ ಮೇಲೆ ಬಿದ್ದು ನನ್ನ ವಿಧಿಯನ್ನೇ ಬದಲಿಸಿಬಿಟ್ಟಿತು. ನಿರ್ಗತಿಕನ ಮೇಲೆ ನಿಮ್ಮ ಕೃಪಾ ದೃಷ್ಟಿ ಬಿದ್ದರೆ ಅವನ ಅವಶ್ಯಕತೆಗಳೆಲ್ಲವೂ ಸಾಕೆನ್ನುವವರೆಗೆ ಪೂರೈಸುತ್ತದೆ, ಅವನ ದೌರ್ಬಲ್ಯಗಳೇ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ದೊರೆಯ ಒಂದು ತೀಕ್ಷ್ಣದೃಷ್ಟಿಗೆ ತಾಮ್ರದಂತಿರುವ ನನ್ನನ್ನು ಶುದ್ಧ ಚಿನ್ನವನ್ನಾಗಿ ಪರಿವರ್ತಿಸುವ ಶಕ್ತಿಯಿದೆ.” (20)

ಇಷ್ಟು ಮಾತುಗಳನ್ನು ಲೇಖನಿಯಿಂದ ಹರಿಯಬಿಟ್ಟ ವಸಾಹತುಶಾಹಿಯ ಮಧ್ಯವರ್ತಿ ಕೊನೆಗೆ ವಿಷಯಕ್ಕೆ ಬಂದ. “ಈ ಸಂದರ್ಭದಲ್ಲಿ ನನ್ನ ಕೋರಿಕೆ ಮತ್ತು ಮೊದಲ ಆಸೆಯನ್ನು ನಿಮ್ಮಲ್ಲಿ ಹೇಳಬಯಸುತ್ತೇನೆ…..ಈ ಸರಕಾರದ ಬಗ್ಗೆ ನೀವು ಮಾಡಿರುವ ಹೊಸ ಯೋಜನೆಯಲ್ಲಿ ನನ್ನ ಹೆಸರಾಗಲೀ, ಕುಟುಂಬದ ಪ್ರತಿಷ್ಟೆಯಾಗಲಿ ಪ್ರಸ್ತಾಪವಾಗಿಲ್ಲ. ಗೌರವ ಮತ್ತು ಪ್ರತಿಷ್ಠೆಗೆ ಮುಕ್ಕಾಗುವುದು ಜೀವ ಕಳೆದುಕೊಳ್ಳುವುದಕ್ಕಿಂತ ಹೆಚ್ಚಿನ ಭೀತಿ ಮೂಡಿಸುತ್ತದೆ. ದೊರೆಯಲ್ಲಿ ನನ್ನ ಕೋರಿಕೆಯೆಂದರೆ ಹೊಸ ನೀತಿಯಲ್ಲಿ ನನ್ನ ಹೆಸರು ಮುಂದುವರೆಸಬೇಕು ಮತ್ತು ಪ್ರತಿಷ್ಟೆಯನ್ನು ಕಾಪಿಡಬೇಕು. ನನ್ನ ಬಹುತೇಕ ವ್ಯವಹಾರಗಳು ಮೈಸೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ನಡೆಯುತ್ತಾದ್ದರಿಂದ ಆ ತಾಲ್ಲೂಕಿನ ಆಳ್ವಿಕೆ ಕೈತಪ್ಪಿಹೋದರೆ ಕಷ್ಟವಾಗುತ್ತದೆ.” (21)

ಮಂಡಿಯೂರಿ ಬೇಡಿಕೊಂಡಂತಿದ್ದ ರಾಜನ ಪತ್ರಕ್ಕೆ ಬೆಂಟಿಕ್ ಕಾಟಾಚಾರಕ್ಕೊಂದು ಪ್ರತಿಕ್ರಿಯೆ ಕೊಟ್ಟ. ರಾಜನ ಹಳಹಳಿಕೆಗಳನ್ನು ಲೆಕ್ಕಕ್ಕಿಟ್ಟುಕೊಳ್ಳದ ಬ್ರಿಟೀಷರು 1881ರವರೆಗೂ ತಮ್ಮ ನಿರ್ಣಯವನ್ನು ಜಾರಿಯಲ್ಲಿಟ್ಟಿದ್ದರು. ಪ್ರತಿಷ್ಟೆ ಮತ್ತು ಗೌರವ ಮಣ್ಣುಪಾಲಾದ ಮೇಲೂ ಮೂರನೇ ಕೃಷ್ಣರಾಜ ಒಡೆಯರ್ ತುಂಬು ಜೀವನವನ್ನು ಪೂರೈಸಿದರು, ಬ್ರಿಟೀಷರಿಗೆ ಸಂಪೂರ್ಣ ನಿಷ್ಠರಾಗಿ. ಒಂದಿನಿತೂ ಪಶ್ಚಾತ್ತಾಪದ ಮನೋಭಾವವಿಲ್ಲದೆ ಸುಖದ ಸುಪ್ಪತ್ತಿಗೆಯಲ್ಲಿ ರಾಜ ಕೊನೆಯ ಉಸಿರೆಳೆದ.

ಶಾಮ ರಾವ್ ಬರೆಯುತ್ತಾರೆ: “1846ರ ಜನವರಿ ತಿಂಗಳಿನಲ್ಲಿ ಬ್ರಿಟೀಷರು ಸಟ್ಲೆಜ್ ನದಿದಂಡೆಯಲ್ಲಿ ಸಿಖ್ ಪಡೆಗಳನ್ನು ಸೋಲಿಸಿದ ಸುದ್ದಿ ಗವರ್ನರ್ ಜನರಲ್ ಮುಖಾಂತರ ಮಾರ್ಚಿನಲ್ಲಿ ಮೈಸೂರು ಮಹಾರಾಜರಿಗೆ ತಲುಪುತ್ತದೆ. ವಿಜಯಕ್ಕೆ ಅಭಿನಂದನೆಗಳನ್ನು ಕಳುಹಿಸಿದ ಮಹಾರಾಜ ಕೋಟೆಯೊಳಗಿಂದ ಆಕಾಶಕ್ಕೆ 21 ಸುತ್ತು ಗುಂಡು ಹಾರಿಸುವ (ರಾಯಲ್ ಸೆಲ್ಯೂಟ್) ಮೂಲಕ ಬ್ರಿಟೀಷರ ಗೆಲುವನ್ನು ಸಂಭ್ರಮಿಸುತ್ತಾರೆ. ಬ್ರಿಟೀಷ್ ಸೈನ್ಯದ ಗೆಲುವಿನ ಸುದ್ದಿಗಳು ತಲುಪಿದಾಗಲೆಲ್ಲ ಇಂತಹ ಗೌರವಾನ್ವಿತ ಕೆಲಸಗಳು ನಡೆಯುತ್ತಲೇ ಇದ್ದವು. ಲಾರ್ಡ್ ದಾಲ್ ಹೌಸಿ ಭಾರತ ಸರಕಾರದ ಉನ್ನತ ಹುದ್ದೆ ಅಲಂಕರಿಸಿದಾಗ ಮಹಾರಾಜ ಏಪ್ರಿಲ್ 1848ರಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತಾ ಕಳೆದ ನಲವತ್ತೊಂಭತ್ತು ವರುಷಗಳಿಂದ ಬ್ರಿಟೀಷ್ ಸರಕಾರದೊಂದಿಗಿರುವ ಸ್ನೇಹ ಮತ್ತು ಗೌರವವನ್ನು ಮುಂದೆಯೂ ಕಾಪಿಡುವುದು ನನ್ನ ಕರ್ತವ್ಯ ಎಂದು ಬರೆಯುತ್ತಾರೆ.” (22)

ಕೈಗೊಂಬೆ ರಾಜ ಬ್ರಿಟೀಷರ ಮುಂದೆ ಮತ್ತಷ್ಟು ಮಗದಷ್ಟು ಶರಣಾದರು. ಫೆಬ್ರವರಿ 1854ರಲ್ಲಿ ತನ್ನ ಅರವತ್ತನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗವಹಿಸುವಂತೆ ಕೋರಿ ಗವರ್ನರ್ ಜನರಲ್ ದಾಲ್ ಹೌಸಿಗೊಂದು ಆಮಂತ್ರಣ ಪತ್ರ ಬರೆಯುತ್ತಾರೆ: “ನನ್ನ ಏಳಿಗೆಗೆ ನನಗೇ ಮುಜುಗರವಾಗುವ ರೀತಿಯಲ್ಲಿ ಆಸಕ್ತಿ ತೋರುವ ದೊರೆಗಳಿಗೆ, ನನಗೆ ಅರವತ್ತು ವರುಷ ತುಂಬಿದ ಸಂದರ್ಭದಲ್ಲಿ ಶಾಸ್ತ್ರರೀತ್ಯ ಕೆಲವು ವಿಧಿವಿಧಾನದ ಸಮಾರಂಭವನ್ನು ಆಯೋಜಿಸಿದ್ದೇನೆ ಎಂದು ತಿಳಿಸಬಯಸುತ್ತೇನೆ. ದೊರೆಗಳ ಅಮೂಲ್ಯ ಸಮಯ ವ್ಯರ್ಥ ಪಡಿಸುವ ಉದ್ದೇಶ ನನಗಿಲ್ಲ. ನಮ್ಮಲ್ಲಿ ಅರವತ್ತು ವರುಷವಾಗುವುದು ತುಂಬ ಸಂಭ್ರಮದ ಸಂಗತಿ. ನಮ್ಮ ಕುಟುಂಬಕ್ಕೆ ಈ ವಿಷಯ ಮತ್ತಷ್ಟು ಮಹತ್ವದ್ದಾಗಿರುವುದಕ್ಕೆ ಕಾರಣ ಕಳೆದ ಇಪ್ಪತ್ತು ತಲೆಮಾರಿನಿಂದ ನಮ್ಮ ವಂಶದಲ್ಯಾರೂ ಅರವತ್ತರ ಪ್ರಾಯ ಮುಟ್ಟಿಲ್ಲ. ನನ್ನನ್ನು ಉಳಿಸಿ ಬೆಳೆಸಿದ ನೀವು ಆ ದಿನದಂದು ನಮ್ಮ ಜೊತೆ ಇರಬೇಕೆಂದು ಆಶಿಸುತ್ತೇನೆ. ನನ್ನ ಸುವಿಧಿಗೆ ಬ್ರಿಟೀಷ್ ಸರಕಾರದ ರಕ್ಷಣೆಯೇ ಕಾರಣ. ಬ್ರಿಟೀಷ್ ಸರಕಾರವೆಂದರೆ ನನ್ನ ಹೆತ್ತವರ ಸಮಾನ…..” (23)

ವಯಸ್ಸಿನ ಜೊತೆಜೊತೆಗೆ ರಾಜನ ನಾಯಿ ನಿಯತ್ತು ಮತ್ತು ಹೊಗಳುಭಟ್ಟತನವೂ ಹೆಚ್ಚುತ್ತಿದ್ದುದಕ್ಕೆ ಶಾಮರಾಯರ ಈ ಹೇಳಿಕೆಯೇ ಸಾಕ್ಷಿ: “ಬ್ರಿಟೀಷ್ ಸೈನ್ಯ ಸೆಬಾಸ್ಟಪೋಲ್ ನಲ್ಲಿ ರಷ್ಯನ್ನರ ವಿರುದ್ಧ ಜಯಗಳಿಸಿದ ಸುದ್ದಿ ದಾಲ್ ಹೌಸಿಯ ಪತ್ರದ ಮೂಲಕ ತಿಳಿದಾಗ ಮಹಾರಾಜ ಅಭಿನಂದಿಸುತ್ತಾ ದೊರೆಗಳ ಪತ್ರದಲ್ಲಿದ್ದ ವಿಜಯದಲೆಗಳನ್ನು ಸಂಭ್ರಮಿಸುವ ಉದ್ದೇಶದಿಂದ ಭಾರತದ ಸಂಪ್ರದಾಯದಲ್ಲಿ ಮಾಡುತ್ತಿದ್ದಂತೆ ಬೀದಿ ಬೀದಿಯಲ್ಲಿ ಸಿಹಿ ಹಂಚಲು ಮತ್ತು ರಾಯಲ್ ಸೆಲ್ಯೂಟ್ ಮೂಲಕ ಗೌರವ ಸಲ್ಲಿಸುವಂತೆ ಆದೇಶ ನೀಡಿದ್ದೇನೆ ಎಂದು ಬರೆಯುತ್ತಾರೆ.

1856ರ ಫೆಬ್ರವರಿ 29ರಂದು ಕ್ಯಾನಿಂಗ್ ಕಲ್ಕತ್ತಾಗೆ ಆಗಮಿಸಿ ಗವರ್ನರ್ ಜನರಲ್ ಹುದ್ದೆಯನ್ನಲಂಕರಿಸಿದರು. ಪತ್ರ ಮುಖೇನ ಮಹಾರಾಜರಿಗೆ ಈ ವಿಷಯ ತಿಳಿದಾಗ ನಿಮ್ಮ ಆಗಮನ ರಾಜ್ಯಗಳಿಗೆ ಮತ್ತು ಒಟ್ಟಾರೆಯಾಗಿ ಭಾರತದ ಜನರಿಗೆ ಹೆಚ್ಚು ಸಂತಸ ಮತ್ತು ಸಮೃದ್ಧಿ ತರಲಿದೆಯೆಂದು ನಂಬಿದ್ದೇವೆ ಎಂದು ಬರೆಯುತ್ತಾರೆ. ಲಾರ್ಡ್ ಕ್ಯಾನಿಂಗರಿಂದ ರಷ್ಯಾದ ಜೊತೆಗಾದ ಶಾಂತಿಯ ಒಪ್ಪಂದದ ಬಗ್ಗೆ ಮಹಾರಾಜರಿಗೆ ತಿಳಿದಾಗ, ವಿಷಯ ತಿಳಿಯುತ್ತಿದ್ದಂತೆಯೇ ರಾಯಲ್ ಸೆಲ್ಯೂಟಿಗೆ ಆದೇಶಿಸಿದ್ದಾಗಿ ತಿಳಿಸುತ್ತಾ ‘ದೊರೆಗಳ ಪತ್ರದಿಂದ ಬ್ರಿಟೀಷ್ ಮಹಾರಾಣಿಯವರ ಸೈನ್ಯ ಕ್ರಿಮಿಯಾದಲ್ಲಿ ರಷ್ಯನ್ನರ ವಿರುದ್ಧ ವಿಜಯದುಂಧುಬಿ ಮೊಳಗಿಸಿದ ವಿಷಯ ತಿಳಿದು ಅಪಾರ ಸಂತಸವಾಯಿತು. ಶೌರ್ಯ, ಸಾಹಸ, ಯುದ್ಧ ಕಾಲದ ಸಂಕಷ್ಟಗಳನ್ನು ತಾಳ್ಮೆಯಿಂದ ಎದುರಿಸಿದ ರೀತಿಯೆಲ್ಲವೂ ಪ್ರತಿಷ್ಟೆ ಮತ್ತು ವ್ಯಕ್ತಿತ್ವನ್ನು ಎತ್ತಿ ಹಿಡಿಯುವಂತವು. ಯುರೋಪಿನ ಶಾಂತಿ ಒಳ್ಳೆಯದನ್ನೇ ಮಾಡುತ್ತದೆ. ಇಂಗ್ಲೆಂಡಿನಲ್ಲಿ ಶಾಂತಿಯ ಮರುಸ್ಥಾಪನೆಯಾಗಿರುವುದಕ್ಕೆ ದೊರೆಗಳಿಗೆ ಮತ್ತು ಬ್ರಿಟೀಷ್ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತಾ ಮಹಾರಾಣಿಯವರು ನೂರ್ಕಾಲ ಸಮೃದ್ಧಿಯಾಗಿ ಬಾಳಲಿ ಎಂದು ಪ್ರಾರ್ಥಿಸುತ್ತೇನೆ. ವ್ಯಾಪಾರ ಮತ್ತು ವ್ಯವಹಾರ ಹೆಚ್ಚಲಿ, ಪ್ರಪಂಚದ ಎಲ್ಲಾ ಭಾಗಗಳಿಗೂ ತಲುಪಲಿ’.”(24)

ಕಂಪನಿಯ ದತ್ತು ಪುತ್ರರ ಬಂದೂಕಿನಿಂದ ಗುಂಡು ಹಾರಿದ್ದು ವಸಾಹತುಶಾಹಿಯ ನಿರ್ನಾಮಕ್ಕಲ್ಲ ಬದಲಿಗೆ ಅವರ ಕುಟಿಲ ವಿಜಯಗಳಿಗೆ. ಇದನ್ನು ರಾಜರ ಶಾಂತಿಪ್ರಿಯತೆ ಎಂದು ತಪ್ಪಾಗಿ ಅರ್ಥೈಸಿಬಿಡಬಾರದು. ಕೈಗೊಂಬೆ ರಾಜ ಮುಠ್ಠಾಳನೇನಲ್ಲ. ಬ್ರಿಟೀಷ್ ರಕ್ಷಣೆಯ ಫ್ಯೂಡಲ್ ದೊರೆಯಾತ. ಜನಪ್ರತಿರೋಧವನ್ನು ಹತ್ತಿಕ್ಕುವುದರಲ್ಲಿ ಯಾವತ್ತಿಗೂ ಹಿಂದೆ ಬೀಳಲಿಲ್ಲ. ಆತನ ಬಂದೂಕು ಮೈಸೂರನ್ನು ಬ್ರಿಟೀಷ್ ಇಂಡಿಯಾದ ಆಭರಣವನ್ನಾಗಿ ಮಾಡಿತು; ರಾಣಿ ತೊಟ್ಟಿದ್ದ ಭಾರತವೆಂಬ ನೆಕ್ಲೇಸಿನಲ್ಲಿದ್ದ ಅಮೂಲ್ಯವಾದ ಮುತ್ತು.

ಕೃಷ್ಣರಾಜ ಒಡೆಯರ್ ಯಾವಾಗಲೂ ಇಟ್ಟುಕೊಳ್ಳುತ್ತಿದ್ದ ಖಡ್ಗದ ಹಿಡಿಯಲ್ಲಿ ಇಂಗ್ಲೆಂಡಿನ ರಾಣಿ ದಯಪಾಲಿಸಿದ ‘ಪದಕ’ವಿತ್ತು. (25)

ಜನ 28, 2016

ಪಿ. ಸಾಯಿನಾಥ್: ಇದು ಹಿಂದೂ ಮೇಲ್ಜಾತಿ ಮೂಲಭೂತವಾದಿಗಳು ಮತ್ತು ದಲಿತ, ದಲಿತೇತರರು, ಮನುಷ್ಯತ್ವವುಳ್ಳ ಮನುಷ್ಯರ ನಡುವಿನ ಸಂಘರ್ಷ

ಸಾಂದರ್ಭಿಕ ಚಿತ್ರ
ರೋಹಿತ್ ವೇಮುಲ ಆತ್ಮಹತ್ಯೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಉದ್ದೇಶಿಸಿ ನಮ್ಮ ನಡುವಿನ ಖ್ಯಾತ ಪತ್ರಕರ್ತ ಮತ್ತು ಚಿಂತಕ ಪಿ. ಸಾಯಿನಾಥ್ ಮಾಡಿದ ಭಾಷಣದ ಕನ್ನಡ ಭಾವಾನುವಾದ. . . 
ಕನ್ನಡಕ್ಕೆ: ಡಾ. ಕಿರಣ್ ಎಂ ಗಾಜನೂರು
ಭಾರತದ ತಳವರ್ಗದ, ತುಳಿತಕ್ಕೊಳಗಾದವರ, ಅಂಚಿಗೆ ತಳ್ಳಲ್ಪಟ್ಟವರ ನೆಲೆಯಲ್ಲಿ ಯೋಚಿಸಿದರೆ ರೋಹಿತ್ ಬಹಳ ದೊಡ್ಡ ಸಾಧನೆ ಮಾಡಿದ್ದಾನೆ! ಆತ ಮಾಡಿದ ಸಾಧನೆಯನ್ನು ನೀವು ತಿಳಿದುಕೊಳ್ಳಬೇಕಾದರೆ ಈ ದೇಶದ ಜನಗಣತಿಯ ವರದಿಗಳನ್ನು, ಸಮುದಾಯಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆಗಳನ್ನು, ನ್ಯಾಷನಲ್ ಸ್ಯಾಂಪೆಲ್ ಸರ್ವೇ (National Sample Survey) ಇಲಾಖೆಯ ಅಂಕಿ-ಅಂಶಗಳನ್ನು ಗಮನಿಸಬೇಕು. ಆಗ ಆತ ಮಾಡಿರುವ ಸಾಧನೆ ಏನು ಎಂಬುದು ಅರ್ಥವಾಗುತ್ತದೆ.
1.28 ಬಿಲಿಯನ್ ಜನಸಂಖ್ಯೆಯುಳ್ಳ ಭಾರತದಲ್ಲಿ ಕೇವಲ 3 ಶೇಕಡಾ, ಕೇವಲ ಮೂರೇ ಮೂರು ಶೇಕಡಾ ಗ್ರಾಮೀಣ ಕುಟುಂಬಗಳಲ್ಲಿ ಮಾತ್ರ ಪದವೀಧರರಿದ್ದಾರೆ. ಇದು ಭಾರತದ ಒಟ್ಟು ಜನಸಂಖ್ಯೆಯ ಸರಾಸರಿ. ಇದನ್ನು ಆದಿವಾಸಿ ಮತ್ತು ದಲಿತರ ಹಿನ್ನಲೆಯಲ್ಲಿ ನೋಡಿದರೆ ಆ ಸಂಖ್ಯೆ ಇನ್ನೂ ಕೆಳಹಂತದಲ್ಲಿದೆ. ಭಾರತದ ಜನಗಣತಿಯ ವರದಿಗಳು ತೋರಿಸುವಂತೆ ಈ ದೇಶದಲ್ಲಿ ಸುಮಾರು 400 ಮಿಲಿಯನ್ ಜನರು ಇದುವರೆಗೂ ಯಾವುದೇ ಹಂತದ ಶಿಕ್ಷಣ ಸಂಸ್ಥೆಗಳ ಒಳಭಾಗವನ್ನು ನೋಡಿಯೇ ಇಲ್ಲ ! ಆ ಹಿನ್ನಲೆಯಿಂದ ಬಂದ ರೋಹಿತ್ ಮೆರಿಟ್ ಕೋಟಾದಲ್ಲಿ ಪಿ.ಹೆಚ್.ಡಿ ಹಂತಕ್ಕೆ ಬರುತ್ತಾನೆ ಎಂದರೆ ಅದಕ್ಕಿಂತ ಸಾಧನೆ ಏನಿದೆ! ಇದು ಸಾಧನೆ ಎಂದರೆ.
ಆದರೆ ದುರಂತ ಎಂದರೆ ಇಂದು ಈ ಸಮಾಜದ ನಿರಂತರ ಶೋಷಣೆಯನ್ನು, ತಾರತಮ್ಯವನ್ನು ಜಯಿಸಿ ಮೆರಿಟ್ ಆಧಾರದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಪಿ.ಹಚ್.ಡಿ ಹಂತಕ್ಕೆ ಬಂದ ರೋಹಿತನ ವಿರುದ್ಧ ನಿಂತಿರುವುದು ಕಾಲೇಜು ಡ್ರಾಪ್ ಔಟ್ ಆದ ಶಿಕ್ಷಣ ಸಚಿವರು! ನನಗೆ ತಿಳಿದಿರುವಂತೆ ಇವರು ಭಾರತದ ರಾಜಕೀಯ ಇತಿಹಾಸದಲ್ಲಿನ ಅತ್ಯಂತ ಕಳಪೆ ಶಿಕ್ಷಣ ಸಚಿವರು. ಇದರಲ್ಲಿ ನನಗೆ ಯಾವ ಸಂಶಯವೂ ಇಲ್ಲ! ನಾನು ರೋಹಿತ್ ನನ್ನು ಅವರೊಂದಿಗೆ ಹೋಲಿಸುವುದಿಲ್ಲ, ಏಕೆಂದರೆ ನಮಗೆ ಅವರ ಶೈಕ್ಷಣಿಕ ಅರ್ಹತೆಗಳೇನು ಎಂಬುದೇ ಗೊತ್ತಿಲ್ಲ! ಅವರು ಪ್ರತಿಬಾರಿ ಪ್ರಮಾಣ ಪತ್ರಗಳನ್ನು ಸಲ್ಲಿಸುವಾಗ ಅವರ ಪದವಿ ಬದಲಾಗುತ್ತಿರುತ್ತವೆ, ಕಳೆದ ಚುನಾವಣೆಯ ನಂತರ ಅವರು ಎ.ಎಲ್ ವಿಶ್ವವಿದ್ಯಾನಿಲಯದ ಪ್ರಮಾಣ ಪತ್ರ ಪ್ರದರ್ಶಿಸಿದ್ದರು. . . 
sainath speech on rohit vemula
ಆ ಹುಡುಗನನ್ನು ನೋಡಿ, ಅವನು ಶಾಲೆಗಳ ಮುಖವನ್ನೇ ನೋಡದ ಆ ೪೦೦ ಮಿಲಿಯನ್ ಜನರ ನಡುವಿನಿಂದ ಬಂದಿದ್ದಾನೆ, ಈ ದೇಶದ ಶೋಷಿತ ಇತಿಹಾಸದ ಮಧ್ಯದಿಂದ ಎದ್ದು ಬಂದಿದ್ದಾನೆ. ಈ ಸಮಾಜದ ಶೋಷಣೆಯಿಂದ ನಲುಗಿ, ಜೀತ ಕಾರ್ಮಿಕನಾಗಿ ದುಡಿದು ಪಿ.ಹೆಚ್.ಡಿ ಅಧ್ಯಯನಕ್ಕೆಂದು ಬಂದಿದ್ದಾನೆ.
ಆದರೆ ಏನಾಗುತ್ತಿದೆ ನೋಡಿ? ಕೇಂದ್ರ ಮಂತ್ರಿ ನಾನು ಎರಡು ಪತ್ರ ಬರೆದೆ ಎನ್ನುತ್ತಾರೆ! ಶಿಕ್ಷಣ ಸಚಿವರು ನಾನು ಐದು ಪತ್ರ ಬರೆದೆ ಎಂದು ಹೇಳುತ್ತಿದ್ದಾರೆ. ಆಶ್ಚರ್ಯದ ವಿಷಯ ಎಂದರೆ ಆ ಹುಡುಗರ ಮೇಲೆ ಏನು ಕ್ರಮ ಜರುಗಿಸಲಾಗಿದೆ ಎಂದು ಐದು ಪತ್ರ ಬರೆಯುವ ಶಿಕ್ಷಣ ಸಚಿವರು ಆ ಮಕ್ಕಳಿಗೆ ಕಳೆದ ಏಳು ತಿಂಗಳಿಂದ ಶಿಷ್ಯವೇತನ ಏಕೆ ಕೊಟ್ಟಿಲ್ಲ ಎಂದು ಒಂದೇ ಒಂದು ಸಾಲು ಬರೆಯುವುದಿಲ್ಲ. . .
ಆ ಮಕ್ಕಳ ಕುರಿತು ತೆಗೆದುಕೊಂಡ ಕ್ರಮವನ್ನು ತಿಳಿಯಲು ಐದು ಪತ್ರ ಬರೆಯುವ ನೀವು ಪತ್ರದಲ್ಲಿ ಆ ಹುಡುಗನ ಕುಟುಂಬ ಆಧರಿಸಿದ್ದ, ಆತ ಸರಳವಾಗಿ ಬದುಕು ನಡೆಸಿ ಉಳಿಸಿ ಕುಟುಂಬಕ್ಕೆ ಕಳುಹಿಸುತ್ತಿದ್ದ ಶಿಷ್ಯವೇತನವನ್ನು ತಡೆದ ವ್ಯವಸ್ಥೆಯ ಕುರಿತು ಒಂದು ಪ್ಯಾರ, ಒಂದು ಸಾಲು, ಒಂದೇ ಒಂದು ಪದವನ್ನು ಬರೆಯುವುದಿಲ್ಲ. ಆತನ ಮೇಲೆ ತೆಗೆದುಕೊಂಡ ಕ್ರಮದ ಮೇಲಿನ ನಿಮ್ಮ ಆಸಕ್ತಿ ಆತನ ಶಿಷ್ಯವೇತನ ನಿಲ್ಲಿಸಿರುವುದರ ಕುರಿತು, ಅದನ್ನೇ ನಂಬಿಕೊಂಡ ಆತನ ಕುಟುಂಬದ ಪರಿಸ್ಥಿತಿಯ ಮೇಲೆ ಇರುವುದಿಲ್ಲ!
ನಾವು ಇಂದು ರಾಜಕೀಯ, ಅಕಾಡೆಮಿಕ್ ಮತ್ತು ರಾಷ್ಟ್ರ ಎಂಬ ಮೂರು ಮುಖ್ಯ ವಿಷಯಗಳನ್ನು ಗಮನಿಸುವ ಹಂತಕ್ಕೆ ಬಂದಿದ್ದೇನೆ. ನಾನು ಈ ವಿಷಯಗಳ ಕುರಿತ ಪತ್ರಿಕಾ ವರದಿಗಳನ್ನು ಗಮನಿಸುತ್ತಿದ್ದೇನೆ, ಇಲ್ಲಿ ಆತ ಬರೆದ ಆತ್ಮಹತ್ಯಾ ಪತ್ರವನ್ನು ಆತ್ಮಹತ್ಯೆಯಿಂದ ಪ್ರತ್ಯೇಕಿಸಿ ನೋಡುವ ಪ್ರಯತ್ನ ನಡೆಯುತ್ತಿದೆ, ಆತ್ಮಹತ್ಯಾ ಪತ್ರವನ್ನು ಆತನ ಬದುಕಿನಿಂದ ಪ್ರತ್ಯೇಕಿಸಿ ನೋಡುವ ಪ್ರಯತ್ನಗಳು ನಡೆಯುತ್ತಿವೆ. ನಾವು ರೋಹಿತನ ಸಾವನ್ನಷ್ಟೆ ನೋಡಿದರೆ ಸಾಲದು, ಬದಲಾಗಿ ಆತ ಬದುಕಿದ ಬದುಕಿನ ರೀತಿಯನ್ನು ಗಮನಿಸಬೇಕು. ರೋಹಿತನ ಬದುಕನ್ನು, ಸಂಘಟನೆಯನ್ನು, ಸ್ನೇಹಿತರನ್ನು ಸಂಗಾತಿಗಳನ್ನು ಆತ ಬರೆದ ಪತ್ರದಿಂದ ಪ್ರತ್ಯೇಕಿಸಿ ಓಹೋ ಇದು ಒಂದು ದುಖ: ತರುವ ಆತ್ಮಹತ್ಯೆ ಅಷ್ಟೆ, ಇದಕ್ಕೂ ಶೋಷಣೆಗೂ, ಇದಕ್ಕೂ ಈ ಸಮಾಜದಲ್ಲಿನ ರಚನಾತ್ಮಕ ತಾರಮತ್ಯಕ್ಕೂ ಸಂಬಂದವಿಲ್ಲ ಎಂದು ಮಾತನಾಡುವ ಶುಷ್ಕ ಮನಸ್ಸಿನವರು ನಮ್ಮ ನಡುವೆ ಬರೆಯುತ್ತಿದ್ದಾರೆ. . . . 
ಇನ್ನೂ ಮುಖ್ಯವಾದ ವಿಚಾರ ಇಂದು ಹಿಂದೂಸ್ಥಾನ್ ಟೈಮ್ಸ್ ನಲ್ಲಿ ಒಬ್ಬ ಪತ್ರಕರ್ತ ಇದು ಒತ್ತಡದಿಂದ ಸಂಬವಿಸಿದ ಆತ್ಮಹತ್ಯೆ ಎಂದು ಬರೆಯುತ್ತಾರೆ. ಇದೇ ವ್ಯಕ್ತಿ ಹಿಂದೆ ರೈತರ ಆತ್ಮಹತ್ಯೆಗಳು ಒತ್ತಡದಿಂದ ಸಂಬವಿಸಿರುವುದು ಇದಕ್ಕೂ ಆರ್ಥಿಕತೆಗೂ ಯಾವುದೇ ಸಂಬಂದವಿಲ್ಲ ಎಂದು ಬರೆದಿದ್ದರು. ಇಂದು ರೋಹಿತನ ಆತ್ಮಹತ್ಯೆ ಒತ್ತಡದಿಂದ ಸಂಬವಿಸಿದೆ ಇದು ಶೋಷಣೆಯ ಕಾರಣಕ್ಕೆ ನಡೆದ ಘಟನೆ ಅಲ್ಲ ಎಂದು ಬರೆಯುತ್ತಾರೆ. ನಾವು ಇವರಿಗೆ 27ರ ಆ ಹುಡುಗ ಸಾಯುವ ಒತ್ತಡ ಎಲ್ಲಿಂದ ಬಂತು? ನಿಮ್ಮ ತರ್ಕವೆ ಸರಿ ಎಂದಾದರೆ ಈ ಸಮಾಜದ ಕೆಲವೇ ವರ್ಗ ಮತ್ತು ಜಾತಿಯವರು ಯಾಕೆ ಒತ್ತಡಕ್ಕೆ ಒಳಗಾಗುತ್ತಾರೆ? ಎಂಬ ಪ್ರಶ್ನೆಗಳನ್ನು ಕೇಳಬೇಕಿದೆ. . .
ಇಲ್ಲಿ ಇನ್ನೊಂದು ವಿಷಪೂರಿತ ತರ್ಕವೊಂದಿದೆ. ಈ ಲೇಖಕ ವಿವರಿಸುವಂತೆ ಇದು ಭಾವಾನಾತ್ಮಕ ಒತ್ತಡದಿಂದ ಸಂಬವಿಸಿದ ಆತ್ಮಹತ್ಯೆ ಅಲ್ಲ! ಬದಲಾಗಿ ಇದು ಮನೋವೈಜ್ಞಾನಿಕ , ಮಾನಸಿಕ ಸ್ಥಿಮಿತಕ್ಕೆ ಸಂಬಂಧಿಸಿ ಆತನೊಳಗೆ ಸಂಬವಿಸಿರುವ ಸಂಗತಿಯೆಂದು ಅವರು ಬರೆಯುತ್ತಾರೆ. ರೋಹಿತ್ ನ ಆತ್ಮಹತ್ಯಾ ಪತ್ರ ಎಲ್ಲಿಯೂ ನಮಗೆ ಬೇರೆ ಕಾರಣಗಳನ್ನು ತೋರಿಸುವುದಿಲ್ಲ ಅದು ಆತನೊಳಗೆ ಹುಟ್ಟಿರುವ ಜೀಗುಪ್ಸೆಯ ಕಾರಣದಿಂದ ಸಂಬವಿಸಿರುವ ಕ್ರಿಯೆ, ಇದಕ್ಕೂ ಹೊರಗಿನ ಸಂಗತಿಗಳಿಗೂ ಸಂಬಂಧವಿಲ್ಲ ಎಂದು ಬರೆಯುತ್ತಾರೆ. ಇಂತಹ ಮಂದಿ ನಮ್ಮ ನಡುವೆ ಇದ್ದಾರೆ. ಸದ್ಯಕ್ಕೆ ದೇಶದ ವಿದ್ಯಾರ್ಥಿಗಳ ಈ ಎಲ್ಲಾ ಹೋರಾಟವನ್ನು ಒಂದು ಪಿತೂರಿ ಎಂದು ಕರೆಯುತ್ತಿರುವ ಬರಹಗಾರರನ್ನು ಮರೆತು ಬಿಡೋಣ.... 
ಅದಕ್ಕೆ ಬದಲಾಗಿ ವಿಶಾಲ ದೃಷ್ಟಿಯಲ್ಲಿ ಈ ಸಮಾಜವನ್ನು ಅರ್ಥಮಾಡಿಕೊಳ್ಳಲು, ಸಮಸ್ಯೆಯನ್ನು ಗುರುತಿಸಲು ಈ ಸಮಾಜದಲ್ಲಿ ರೋಹಿತ್ ಎಲ್ಲಿದ್ದಾನೆ, ದಲಿತರು ಎಲ್ಲಿದ್ದಾರೆ, ಎಲ್ಲಿ ಶೋಷಣೆ ನಡೆಯುತ್ತಿದೆ ಎಂಬುದನ್ನು ನೋಡೋಣ. 3 ದಿನಗಳ ಹಿಂದೆ ನಾನು ರಾಜಸ್ಥಾನದಲ್ಲಿ ಇದ್ದೆ. ಅಲ್ಲಿನ ಹೈಕೋರ್ಟ್ “ರಾಜಸ್ಥಾನ್ ಪಂಚಾಯಿತಿ ಕಾಯ್ದೆಯನ್ನು” ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅನೂರ್ಜಿತಗೊಳಿಸಿದೆ. ನಿಮಗೆ ಗೊತ್ತಿರಲಿ ಪ್ರಸ್ತಾಪಿತ ರಾಜಸ್ಥಾನ್ ಪಂಚಾಯಿತಿ ಕಾಯ್ದೆ ಶೈಕ್ಷಣಿಕ ಅರ್ಹತೆಯನ್ನು ಒಂದು ಮಾನದಂಡ ಎಂದು ಪರಿಗಣಿಸಿರುವುದರಿಂದ ಇದು ಶೇ ತೊಂಭತ್ತರಷ್ಟು ಮಹಿಳೆಯರು ಗ್ರಾಮೀಣ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ನಿರಾಕರಿಸುತ್ತದೆ. ಇದು ಜಾರಿಯಾದರೆ ಶೇ75 ದಲಿತ ಮಹಿಳೆಯರು ಗ್ರಾಮೀಣ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳಲಿದ್ದಾರೆ.
ವಿವರವಾಗಿ ನೋಡುವುದಾದರೆ ಈ ಕಾಯ್ದೆಯ ಪ್ರಕಾರ 21 ವರ್ಷಕ್ಕೆ ಮೇಲ್ಪಟ್ಟ ಪ್ರಾಥಮಿಕ ಶಿಕ್ಷಣ ಪೂರೈಸಿದ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಬಹುದು. 21ರ ವಯಸ್ಕರ ಗುಂಪಿನಲ್ಲಿ ಕೇವಲ 11.1 ಶೇ ಜನರು ಮಾತ್ರ ಶಾಲೆಯಲ್ಲಿ ಕಲಿತಿದ್ದಾರೆ. ಆ ಕಾರಣಕ್ಕೆ ಮಿಕ್ಕ 89.9 ಶೇ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೆ ಕಳೆದುಕೊಳ್ಳಲಿದ್ದಾರೆ. ಇನ್ನೂ ಪಂಚಾಯಿತಿ ಅಧ್ಯಕ್ಷರಾಗಲು 8ನೇ ತರಗತಿಗಿಂತ ಮೇಲಿನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು ಎನ್ನುತ್ತದೆ ಈ ಕಾಯ್ದೆ. ಇದರಿಂದ 90.4 ಶೇ ದಲಿತ ಮಹಿಳೆಯರು ಮತ್ತು 62 ಶೇ ಪುರುಷರು ಪಂಚಾಯಿತಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.
ನಿಮಗೆ ಒಂದು ಆಸಕ್ತಿಕರ ಅಂಶ ತಿಳಿಸಬೇಕು ದೇಶದ ಎಲ್ಲಾ ನ್ಯಾಯಾಲಯಗಳಿಗೆ ಹೋಲಿಸಿದರೆ ರಾಜಸ್ತಾನ್ ಹೈಕೊರ್ಟ್ ಗೆ ಒಂದು ವಿಷೇಷತೆ ಇದೆ. ಅಲ್ಲಿ ಸಂವಿಧಾನ ಕರ್ತೃ ಡಾ. ಅಂಬೇಡ್ಕರ್ ಪ್ರತಿಮೆ ನ್ಯಾಯಾಲಯದ ಹೊರಗೆ ಟ್ರಾಫಿಕ್ ಕಡೆ ಮುಖ ಮಾಡಿಕೊಂಡು ನಿಂತಿದ್ದರೆ ನ್ಯಾಯಾಲಯದ ಒಳಗೆ ಮನುವಿನ 20 ಅಡಿ ಪ್ರತಿಮೆ ನಿಲ್ಲಿಸಲಾಗಿದೆ. ದೇಶದ ಯಾವ ನ್ಯಾಯಾಲಯದಲ್ಲಿಯೂ ಇಂತಹ ಅಸಂಗತಿ ಕಾಣಲು ಸಿಗಲಾರದು! ಇರಲಿ, ವಿಷಯ ಅದಲ್ಲ. ಈ ರೀತಿಯ ಅನ್ಯಾಯಯುತ ಕಾಯ್ದೆಯನ್ನು ಸುಪ್ರಿಂ ಕೊರ್ಟ್‌ನ ಸಂವಿಧಾನಿಕ ಪೀಠ ಪರಿಶಿಲನೆಗೆ ಒಳಪಡಿಸುತ್ತದೆ ಎಂಬ ಭರವಸೆಯನ್ನು ನಾವು ಉಳಿಸಿಕೊಳ್ಳೊಣ. ಆದರೆ ಈ ಕಾಯ್ದೆ ನಿಜಕ್ಕೂ ಅನ್ಯಾಯ ಮತ್ತು ಶೋಷಣೆಯ ಪ್ರತೀಕವಾಗಿದೆ ಇದರ ವಿರುದ್ಧ ನಾವು ಹೋರಾಟವನ್ನು ರೂಪಿಸಬೇಕಿದೆ. . . .
ಇದೊಂದೇ ಸಮಸ್ಯೆಯಲ್ಲ. ನಾವು ಜಾತಿಗಳ ಸಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶಗಳನ್ನು ನೋಡಿದರೆ ಈ ದೇಶದಲ್ಲಿ ಬಡವರ ಬದುಕು ಏನಾಗಿದೆ ಎಂಬುದು ಅರ್ಥವಾಗುತ್ತದೆ. ಒಂದು ವಿಷಯದಲ್ಲಿ ನಾನು ಸ್ಮೃತಿ ಇರಾನಿಯವರ “ಇದು ದಲಿತ ಮತ್ತು ದಲಿತೇತರರ ನಡುವಿನ ಸಂಘರ್ಷವಲ್ಲ” ಎಂಬ ಹೇಳಿಕೆಯನ್ನು ಸಮರ್ಥಿಸುತ್ತೇನೆ. ಖಂಡಿತ ಅದು ಸತ್ಯ. ಇದು ದಲಿತ ಮತ್ತು ದಲಿತೇತರರ ನಡುವಿನ ಹೋರಾಟವಲ್ಲ ಬದಲಾಗಿ ಇದು “ಹಿಂದೂ ಮೇಲ್ಜಾತಿ ಮೂಲಭೂತವಾದಿಗಳು ಮತ್ತು ದಲಿತ, ದಲಿತೇತರರ ಹಾಗೂ ಮನುಷ್ಯತ್ವವುಳ್ಳ ಮನುಷ್ಯರ ನಡುವಿನ ಸಂಘರ್ಷ”. ನಾವು ಮೊದಲೇ ಗುರುತಿಸಿದಂತೆ ಈ ದೇಶದಲ್ಲಿ 400 ಮಿಲಿಯನ್ ಜನರು ಇದುವರೆಗೂ ಯಾವ ಮಾದರಿಯ ಶಿಕ್ಷಣ ಸಂಸ್ಥೆಗಳ ಒಳಗೂ ಕಾಲಿಡಲಾಗಿಲ್ಲ ಈ ದೇಶಧ ಒಟ್ಟು ಜನಸಂಖ್ಯೆಯ ಮೂರನೆ ಒಂದು ಭಾಗದಷ್ಟು ಜನರಿಗೆ ಶಿಕ್ಷಣವನ್ನು ನಿರಾಕರಿಸಲಾಗಿದೆ ಇವರಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ವಂಚನೆಗೆ ಒಳಪಟ್ಟವರು ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಬಡ ಹಿಂದುಳಿದ ಸಮುದಾಯಗಳ ವಿಧ್ಯಾರ್ಥಿಗಳು 
ಇಂದು ಭಾರತ 68 ಮಿಲಿಯನ್ ಪದವೀಧರರನ್ನು ಹೊಂದಿದೆ. ಆದರೆ ಇದರ ಆರು ಪಟ್ಟು ಜನರು ಅನಕ್ಷರಸ್ತರಾಗಿದ್ದಾರೆ. ಈ ದೇಶದಲ್ಲಿ ಅಸಮಾನತೆ ಎಷ್ಟು ಹೆಚ್ಚಿದೆ ಎಂದರೆ ಎಲ್ಲಾ ಮಾದರಿಯ ತಾರತಮ್ಯಗಳನ್ನು ಮರುಹೇರಿಕೆ ಮಾಡಲಾಗುತ್ತಿದೆ. ಇಂದು ಸಮೀಕ್ಷೆಗಳನ್ನು ನೋಡಿದರೆ ಈ 1.28 ಬಿಲಿಯನ್ ಜನಸಂಖ್ಯೆಯ ದೇಶದಲ್ಲಿ 100 ಜನ ಭಾರತೀಯರು ಒಟ್ಟು ಜನಸಂಖ್ಯೆಯ ಎರಡನೇ ಒಂದು ಭಾಗದಷ್ಟು ಸಂಪತ್ತನ್ನು ಹೊಂದಿದ್ದಾರೆ. ಅದರಲ್ಲಿ 15 ಜನ ಭಾರತೀಯರು ಈ ದೇಶದ ಅರ್ಧದಷ್ಟು ಜನಸಂಖ್ಯೆಯ ಸಂಪತ್ತನ್ನು ಹೊಂದಿದ್ದಾರೆ. ಈ ಎಲ್ಲಾ ಪ್ರಕರಣಗಳ ಪರಿಣಾಮ ಅನುಭವಿಸುತ್ತಿರುವವರು ಈ ದೇಶದ ದಲಿತ, ಆದಿವಾಸಿ, ಮಹಿಳೆ ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳು. . . 
ಇನ್ನು ಈ ದೇಶದ ಜನಸಂಖ್ಯೆಯ ಉಗ್ರಾಣವಾದ ಗ್ರಾಮೀಣ ಭಾರತವನ್ನು ನೋಡಿದರೆ ನಿಮಗೆ ಆಶ್ಚರ್ಯವಾಗಬಹದು. ಈ ದೇಶದ ಪ್ರತಿಶತಃ ಒಂದರಷ್ಟು ಜನರು ಈ ದೇಶದ ಶೇ 46 ರಷ್ಟು ಸಂಪನ್ಮೂಲಗಳ ಮೇಲಿನ ಒಡೆತನ ಹೊಂದಿದ್ದಾರೆ. ಇದು ಅಮೇರಿಕಾಕ್ಕಿಂತ ಕೆಟ್ಟ ಸ್ಥಿತಿ. ಅಲ್ಲಿ ಶೇ1 ಜನರು ಆ ದೇಶದ 39ಶೇ ಸಂಪತ್ತಿನ ಒಡೆತನ ಹೊಂದಿದ್ದಾರೆ. ಈ ಎಲ್ಲಾ ಘಟನೆಗಳು ಕಳೆದು 15-20 ವರ್ಷಗಳಿಂದ ಈಚೆಗೆ ನವ ಉದಾರಿಕರಣದ ಹೆಸರಿನಲ್ಲಿ ಘಟಿಸಲ್ಪಟ್ಟಿವೆ.
ನೀವು ಒಪ್ಪಿ ಬಿಡಿ, ನಿಜವಾದ ಅರ್ಥದಲ್ಲಿ ಇಂದು ನಿಮ್ಮ ದೇಶ ಅಳಲ್ಪಡುತ್ತಿರುವುದು “ಸಾಮಾಜಿಕ ಮತ್ತು ಆರ್ಥಿಕ ಮೂಲಭೂತವಾದಿಗಳ ಒಕ್ಕೂಟ" ಮತ್ತು ಮಾರುಕಟ್ಟೆ ಆರ್ಥಿಕತೆಯ ಮೂಲಭೂತವಾದಿಗಳಿಂದ ಇದು ಭಾರತಕ್ಕೆ ಸೀಮಿತವಾದ ಮೈತ್ರಿಕೂಟವಲ್ಲ ಬದಲಾಗಿ ಇದು ವಿಶ್ವವ್ಯಾಪಿಯಾಗಿದೆ. ನಿಮಗೆ ಆಶ್ಚರ್ಯವಾಗಬಹದು ಜಗತ್ತಿನ ಅತ್ಯಂತ ಅಪಾಯಕಾರಿ ಬಂಡವಾಳಶಾಹಿ ಆರ್ಥಿಕತೆಯ ಜನಕ ಯುನೈಟೆಡ್ ಸ್ಟೇಟ್ಸ್ ಜಗತ್ತಿನ ಅತಿ ಅಪಾಯಕಾರಿಯಾದ ಎರಡು ಧಾರ್ಮಿಕ ಮೂಲಭೂತವಾದಿಗಳಾದ ಇಸ್ರೇಲ್ ಮತ್ತು ಸೌದಿ ಅರೇಬಿಯಾಗಳನ್ನು ತನ್ನ ಯುದ್ಧಗಳಿಗಾಗಿ ಆಶ್ರಯಿಸಿದೆ. ಹಾಗೆ ನೊಡಿದರೆ ನಾವೀಗ ಅತ್ಯಂತ ಶಕ್ತಿಶಾಲಿ, ಒಗ್ಗೂಡಿದ ಶತ್ರುವಿನ ವಿರುದ್ದ ಹೋರಾಡಬೇಕಿದೆ. . . . 
ನಾವು ಇಂದು ನಮ್ಮ ನಡುವಿನ ರಚನಾತ್ಮಕ, ಸಾಮಾಜಿಕ, ಆರ್ಥಿಕ, ಕಾನೂನಾತ್ಮಕ ತಾರತಮ್ಯಗಳ ಕುರಿತು ಧ್ವನಿ ಎತ್ತಬೇಕಿದೆ ಈ ದೇಶದಲ್ಲಿನ 75ಶೇ ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ಹೆಚ್ಚೆಂದರೆ ತಿಂಗಳಿಗೆ 5000 ಸಂಪಾದನೆ ಮಾಡುತ್ತಿದ್ದಾನೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ಇದು ದೇಶದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ದೊರೆಯುವ ಚಿತ್ರಣ. ಇದನ್ನು ನೀವು ಅದಿವಾಸಿ ಮತ್ತು ದಲಿತರಿಗೆ ಅನ್ವಯಿಸಿ ನೋಡಿದರೆ ಪರಿಸ್ಥಿತಿ ಇನ್ನೂ ಭೀಕರವಾಗಿದೆ, ಇದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. . .
ಪ್ರಮುಖವಾಗಿ academic institutionಗಳಿಗೆ ಸಂಬಂಧಿಸಿದ ಇತ್ತೀಚಿನ ಈ ಹೋರಾಟಗಳನ್ನು ಕೆಲವು ಜನರು ಓಹೋ ಇದು ಹೈದರಾಬಾದ್ ಪ್ರಕರಣವಾ, ಅಯ್ಯೋ ಅಲ್ಲಿನ ಸ್ಥಿತಿಯೇ ಹಾಗಿದೆ ಬಿಡಿ ಈ ತರಹದ ಘಟನೆಗಳು ಅಲ್ಲಿ ನಡೆಯುತ್ತಲೇ ಇರುತ್ತವೆ ನಮಗ್ಯಾಕೆ ಎಂಬ ಮಾತುಗಳನ್ನು ಹೇಳುತ್ತಾರೆ. ಆದರೆ ನಿಮಗೆ ನಾನು ಒಂದು ವಿಷಯ ಹೇಳಬೇಕು ನಾನು ದೇಶದ ಪ್ರತಿಷ್ಟಿತ ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಒಬ್ಬ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿ ನನ್ನ ಅವಧಿಯ ಶೇ 80ರಷ್ಟು ಸಮಯ ಮಿಸಲಾತಿ ವಿರೋಧಿಸುವ ಮನಸ್ಸುಗಳನ್ನು ಎದುರಿಸುವುದರಲ್ಲಿಯೇ ಕಳೆದು ಹೋಗಿದೆ ಎಂಬ ಸತ್ಯವನ್ನು ನಿಮ್ಮೆದುರು ಇಡುತ್ತಿದ್ದೇನೆ. ಆ ಎಲ್ಲಾ ಹೋರಾಟಗಳು ಇಂದು ದಾಖಲೆಗಳಲ್ಲಿವೆ. ಆ ಸಮಯದಲ್ಲಿ ಸುಪ್ರಿಂ ಕೊರ್ಟ್ ಅದೇಶವನ್ನು ಧಿಕ್ಕರಿಸಿ ಹಿಂದುಳಿದ ವರ್ಗದ 27ಶೇ ಮಿಸಲಾತಿಯನ್ನು ಕಡಿತಗೊಳಿಸುವ ಪ್ರಯತ್ನಗಳು ನಡೆದವು. ಆದ್ದರಿಂದ ದಯಮಾಡಿ ಇದು ಹೈದಾರಾಬದ್ ನಲ್ಲಿ ಮಾತ್ರ ನಡೆಯುತ್ತಿರುವ ಸಂಗತಿ ಎಂಬ ಮೂರ್ಖತನದ ಹೇಳಿಕೆಗಳನ್ನು ನಂಬಬೇಡಿ. ಇಂದು ತಾರತಮ್ಯ ಎಂಬುದು ದೇಶದ ಪ್ರತಿಷ್ಟಿತ ಸಂಸ್ಥೆಗಳಲ್ಲಿಯೇ ನಡೆಯುತ್ತಿದೆ . . .
ಈ ಹಂತದಲ್ಲಿ ನಾವು ವಿಶ್ವವಿದ್ಯಾನಿಲಯಗಳ ಉಳಿವಿಗೆ ಏನು ಮಾಡಬೇಕು? ಎಂಬುದರ ಕುರಿತು ನನ್ನ ಸ್ನೇಹಿತ ಪ್ರೊ. ಸುಖ್ದೇವ್ ಥೋರಟ್ ಒಂದು ನೀಲನಕ್ಷೆಯನ್ನು ಒದಗಿಸಿದ್ದಾರೆ. ನಾನು ಅವರು ನೀಡಿದ ಆ ವರದಿಯನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ನಾವು ಬದಲಾವಣೆ ಆರಂಭಿಸುವುದಿದ್ದರೆ ಅದು ಈ ವರದಿಯಿಂದಲೇ ಆರಂಭವಾಗಲಿ, ನಮಗಿರುವ ಉತ್ತಮ ಆರಂಭ ಅದೆ ಆಗಲಿದೆ . . .
ಇದರ ಮುಂದೆ ನಾವು ಹಲವು ರಾಜಕೀಯ ಹೋರಾಟಗಳನ್ನು ನಡೆಸಬೇಕಿದೆ. ಹೊರಗೆ ಇನ್ನೂ ಹಲವು ಹೋರಾಟಗಳು ನಮ್ಮನ್ನು ಎದಿರು ನೋಡುತ್ತಿವೆ. ದಯಮಾಡಿ ಅರ್ಥಮಾಡಿಕೊಳ್ಳಿ, ಇದು ಹೈದರಾಬಾದ್ ಗೆ ಮಾತ್ರ ಸೀಮಿತವಾಗಿಲ್ಲ. ಅಲಹಬಾದ್ ವಿಶ್ವವಿದ್ಯಾನಿಲಯದಲ್ಲಿ ನನ್ನ ಸ್ನೇಹಿತ ಸಿದ್ಧಾರ್ಥ್ ವರದರಾಜ್ ಅವರನ್ನು ಇದೇ ಎಬಿವಿಪಿ ಗುಂಪು ಕುಲಪತಿಗಳ ಕಟ್ಟಡದಲ್ಲಿ ಬಂಧನಕ್ಕೆ ಒಳಪಡಿಸಿತ್ತು. ಅವರ ಭಾಷಣವನ್ನು ಕ್ಯಾಂಪಸ್ ನಲ್ಲಿ ನಿಷೇಧಿಸಲಾಯಿತು. ನೀವು ಹೊರಕ್ಕೆ ಬಂದರೆ ದಾಳಿ ನಡೆಸುತ್ತೇವೆ ಎಂದು ಬೆದರಿಕೆಯನ್ನು ಒಡ್ಡಲಾಗಿತ್ತು! ಜನ ಮರೆತಿರಬಹದು, ಮಧ್ಯಪ್ರದೇಶದ ಒಬ್ಬರು ಕುಲಪತಿಗಳನ್ನು ಮನಬಂದಂತೆ ಧಳಿಸಲಾಗಿತ್ತು, ಬಿದ್ದ ಹೊಡೆತಗಳನ್ನು ತಾಳಲಾರದೆ ಅವರು ಅಸುನೀಗಿದ್ದರು. ಇದು ಈ ವಿವಿ ಯಲ್ಲಿ ನಡೆಯುತ್ತಿರುವ ಘಟನೆ ಮಾತ್ರ ಅಲ್ಲ. ಇನ್ನೂ ನಿಮ್ಮ ಉಪಕುಲಪತಿಗಳ ವಿಷಯ ಅವರು ಧೀರ್ಘ ರಜೆಯ ಮೇಲೆ ತೆರಳಿದ್ದಾರೆ ಅವರ ರಜೆ ಹಾಗೆ ದೀರ್ಘವಾಗಲಿ ಎಂದು ಆಶಿಸುತ್ತೇನೆ . . .
ನನಗೆ ಅನ್ನಿಸುವಂತೆ ರೋಹಿತ್ ಸಾವು/ಆತ್ಮಹತ್ಯೆ ನಮ್ಮನ್ನು ಒಂದಾಗಿಸಬೇಕಿದೆಯೇ ಹೊರತು ನಮ್ಮಲ್ಲೆ ಒಡಕು ಮೂಡಿಸಬಾರದು! ಅವನು ಅವನ ಸಂಘಟನೆಯ ವಿರೋಧವನ್ನು ಮಾಡುತ್ತಿದ್ದ, ಅವನು ತನ್ನದೆ ಸ್ನೇಹಿತರನ್ನು ವಿರೋಧಿಸುತ್ತಿದ್ದ, ಎಂಬ ಹೇಳಿಕೆಗಳನ್ನು ನೀಡುವ, ಆ ಮೂಲಕ ನಮ್ಮನ್ನು ಒಡೆಯುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆತನ ನೆನಪನ್ನು ನಮ್ಮಿಂದ ಅಳಿಸುವ ಕ್ರೌರ್ಯಕ್ಕೆ, ಅನ್ಯಾಯಕ್ಕೆ ಜನ ಮುಂದಾಗುತ್ತಿದ್ದಾರೆ. ಆದರೆ ಒಂದು ಶ್ಲಾಘನೀಯ ಅಂಶ ಎಂದರೆ ಈ ಎಲ್ಲಾ ವಿರೋಧ, ತಂತ್ರ, ಕುತಂತ್ರಗಳನ್ನು ಎದುರಿಸಿ ಪ್ರತಿರೋಧ ಎಂಬುದು ದೇಶದ ಮೂಲೆ ಮೂಲೆಗಳಿಂದ ಹರಿದು ಬರುತ್ತಿದೆ ಮತ್ತು ಅದು ವಿಧ್ಯಾರ್ಥಿಗಳ ಕಡೆಯಿಂದ ಹರಿದು ಬರುತ್ತಿದೆ . . . . 
ನಿಮಗೆ ನೆನಪಿರಲಿ ಕಳೆದ 105 ದಿನಗಳಿಂದ “ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟೀಟ್ಯೋಟ್” ಪುಣೆ ವಿಧ್ಯಾರ್ಥಿಗಳು ಈ ಸರ್ಕಾರದ ವಿರುದ್ಧ ವಿಶ್ವವಿದ್ಯಾನಿಲಯದ ಮೇಲೆ ಯುಧಿಷ್ಟರನ ಹೇರಿಕೆಯನ್ನು ವಿರೋಧಿಸಿ ಹೋರಾಡುತ್ತಿದ್ದಾರೆ. ನಿಮಗೆ ಗೊತ್ತಾ ನೈಜವಾದ ಮಹಾಭಾರತದಲ್ಲಿ ಯುಧಿಷ್ಟಿರ ಎಷ್ಟು ಪರಿಶುಧ್ಧ ಆತ್ಮ ಎಂದರೆ ಅವನು ಎಂದೂ ಸುಳ್ಳನ್ನೆ ಹೇಳಿರಲಿಲ್ಲ! ಆ ಕಾರಣಕ್ಕೆ ಆತನ ರಥ ಭೂಮಿಯಿಂದ 6 ಇಂಚು ಮೇಲಕ್ಕೆ ಚಲಿಸುತ್ತಿತ್ತು. ಇದೊಂದು ಆಸಕ್ತಿಕರ ಪವಿತ್ರತೆಯ ಉದಾಹರಣೆ ಯುಧಿಷ್ಟರ ಒಬ್ಬ ಕುಡುಕ, ಜೂಜುಕೋರ, ಜೂಜಿನಲ್ಲಿ ತನ್ನ ಹೆಂಡತಿಯನ್ನೆ ಪಣವಾಗಿ ಸೋತವನು ಆದರೆ ಅವನು ಸುಳ್ಳನ್ನು ಮಾತ್ರ ಹೇಳಿರಲಿಲ್ಲ ಆ ಕಾರಣಕ್ಕೆ ಅವನು ಪವಿತ್ರ. . .! ಅವನು ದ್ರೋಣರಿಗೆ “ಅಶ್ವಥಾಮ ಸತ್ತ” ಎಂದು ಸುಳ್ಳು ಹೇಳಿದ ದಿನ ಅವನ ರಥ ನೆಲವನ್ನು ತಾಕಿತಂತೆ ಆದರೆ “ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟೀಟ್ಯೋಟ್” ನ ಯುಧಿಷ್ಟರರ ರಥ ಭೂಮಿಯಿಂದ ಮೇಲೆ ಎದ್ದೆ ಇಲ್ಲ! ಅದು ಕೆಸರಿನಲ್ಲಿ ಹೂತು ಹೋಗಿದೆ. ಆ ಕಾರಣಕ್ಕೆ ಅವರನ್ನು ಯಾರು ಗೌರವಿಸುತ್ತಿಲ್ಲ. . .. 
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿಧ್ಯಾರ್ಥಿಗಳೆ, ನೀವು ಈ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕಿದೆ. ಈ ಹೋರಾಟದ ಜೊತೆಗೆ ಇನ್ನು ಮುಖ್ಯವಾದ ಸಂಗತಿಗಳನ್ನು ನೀವು ಮುಂಚೂಣಿಗೆ ತರಬೇಕಿದೆ. ಇದನ್ನು ನಾವು ರೋಹಿತ್ ವೇಮುಲ ಎಂಬ ಚೇತನದ ಆತ್ಮಹತ್ಯೆಯ ಪರಿಣಾಮ ಎಂದು ನಾನು ಗುರುತಿಸುತ್ತೇನೆ, ಜಗತ್ತು ಓದಿಕೊಳ್ಳುತ್ತದೆ . . .
ಬಹಳ ಹಿಂದೆ ಒಬ್ಬ ಫ್ರೆಂಚ್ ಬರಹಗಾರ ವಿಕ್ಟರ್ ಹ್ಯೂಗೋ ಬರೆಯುತ್ತಾನೆ All the forces in the world are not so powerful as an idea whose time has come.. . .ನನಗೆ ಅನ್ನಿಸುವಂತೆ 2016 ರಲ್ಲಿ ಭಾರತಕ್ಕೆ ಆ ಸಮಯ ಬಂದಿದೆ. ಆ ಅಲೋಚನೆ ಹಿಂದಿನ ಬೇಡಿಕೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಲಿಂಗಾಧಾರಿತ ನ್ಯಾಯದ ಹಕ್ಕೊತ್ತಾಯವಾಗಿದೆ. ಜೊತೆಗೆ ರೋಹಿತ್ ಮತ್ತು ಲಕ್ಷಾಂತರ ರೋಹಿತರುಗಳ ನ್ಯಾಯಯುತ ಹಕ್ಕಾಗಿದೆ. ನಮ್ಮ ಹೋರಾಟದ ಮಾದರಿಗಳು ಭಿನ್ನ ಇರಬಹದು ಆದರೆ ಉದ್ದೇಶ ಅಂಬೇಡ್ಕರ್ ಹೇಳಿದ ಶಿಕ್ಷಣ , ಸಂಘಟನೆ, ಹೋರಾಟದ ಹಕ್ಕುಗಳಿಗಾಗಿದೆ ಎಂಬುದನ್ನು ಮರೆಯದಿರೋಣ. . . 
ಧನ್ಯವಾದಗಳು. . . .

ಸೆನ್ಸಾರ್ ಬೋರ್ಡಿನ ಮೇಲೆ ಕೋಪವಿದ್ದರೆ ಹೀಗೂ ಮಾಡಬಹುದು!

ಸಿನಿಮಾ ಮಂದಿಗೆಲ್ಲ ಸೆನ್ಸಾರು ಬೋರ್ಡಿನ ಮೇಲೆ ಕೋಪವಿದ್ದೇ ಇರುತ್ತದೆ. ತಮಿಳಲ್ಲಿ ಬುಟ್ರು ಕನ್ನಡದಲ್ಲಿ ಬುಡ್ಲಿಲ್ಲ, ಹಿಂದೀಲಿ ಮಾತ್ರ ಕ್ಯಾರೆ ಅನ್ನಲ್ಲ ನಮಗೆ ಮಾತ್ರ ಟಾರ್ಚರ್ರು ಕೊಡ್ತಾರೆ ಅನ್ನೋ ಮಾತುಗಳು ಗಾಂಧಿನಗರದಲ್ಲಿ ಚಿತ್ರವೊಂದು ಸೆನ್ಸಾರಿಗೆ ಹೋದಾಗಿನಿಂದಲೂ ಹರಿದಾಡುತ್ತಲೇ ಇರುತ್ತವೆ. ಇನ್ನು ಟಿವಿಗಿಲ್ಲದ, ನಾಟಕಕ್ಕಿಲ್ಲದ, ಬೇರ್ಯಾವ ಕಲೆಗೂ ಇಲ್ಲದ ಸೆನ್ಸಾರು ಬೋರ್ಡು ನಮಗೆ ಮಾತ್ರ ಯಾಕೆ? ತೀರ ಅಷ್ಟೊಂದು ಕೆಟ್ಟ ಸಂಗತಿಗಳನ್ನು ತೋರಿಸಿಬಿಟ್ಟರೆ ನಂತರ ಕೇಸು ಹಾಕಿಕೊಳ್ಳಲಿ ಬಿಡಿ ಮುಂಚೇನೆ ಕಷ್ಟಪಟ್ಟು ತೆಗೆದಿದ್ದನ್ನೆಲ್ಲ ಕಟ್ ಮಾಡಿ ಬಿಸಾಕಲು ಹೇಳೋಕೆ ಅವರೆಲ್ಲ ಯಾರು? ಎಂದು ವಾದಿಸುವವರ ಸಂಖೈಯೂ ಕಮ್ಮಿಯೇನಿಲ್ಲ. ಸೆನ್ಸಾರು ಮಂಡಳಿಯ ಕಾಟಗಳು ನಮಲ್ಲಷ್ಟೇ ಸೀಮಿತವಾಗಿಲ್ಲ. British Board of Film classification ಕೂಡ ಇದೇ ರೀತಿಯ ತೊಂದರೆ ಕೊಡುತ್ತಿತ್ತಂತೆ. ಸೆನ್ಸಾರ್ ಮಂಡಳಿಯ ವಿರುದ್ಧ ಪ್ರತಿಭಟಿಸಬೇಕೆನ್ನುವವರು ಬಿ.ಬಿ.ಎಫ್.ಸಿಯ ವಿರುದ್ಧ ಪ್ರತಿಭಟಿಸಿದ ಚಾರ್ಲ್ಸ್ ಲೈನಿಯಿಂದ ಕಲಿಯುವುದು ಸಾಕಷ್ಟಿದೆ!
ಅಂದಹಾಗೆ ಚಾರ್ಲ್ಸ್ ಲೈನಿ 'ಪೈಂಟ್ ಡ್ರೈಯಿಂಗ್' (Paint drying) ಹೆಸರಿನ ಚಿತ್ರ ತೆಗೆಯುತ್ತಾನೆ. ಬಿ.ಬಿ.ಎಫ್.ಸಿಯಲ್ಲಿ ಒಂದು ಚಿತ್ರವನ್ನು ಸೆನ್ಸಾರಿಗೆ ತಂದರೆ ಮೊದಲು 145 ಡಾಲರ್ ಹಣವನ್ನು ಕಟ್ಟಿಸಿಕೊಳ್ಳಲಾಗುತ್ತದೆ, ನಂತರ ಸಿನಿಮಾದ ಪ್ರತೀ ನಿಮಿಷಕ್ಕೆ ಹತ್ತು ಡಾಲರಿನಷ್ಟು ಹಣವನ್ನು ಕಟ್ಟಬೇಕಾಗುತ್ತದೆ. ಸೆನ್ಸಾರು ಮಂಡಳಿಗೆ ದುಡ್ಡು ಕಟ್ಟಲು ಹಣವೆತ್ತಲು ಪ್ರಾರಂಭಿಸುತ್ತಾನೆ ಚಾರ್ಲ್ಸ್. ಒಟ್ಟಾದ ಹಣದ ಮೊತ್ತ ಚಿತ್ರದ ಸಮಯವನ್ನು ನಿರ್ಧರಿಸುತ್ತೆ! ಅದ್ಹೇಗೆ ಅಂತೀರಾ? ಚಿತ್ರದ ಹೆಸರು ಸೂಚಿಸುವಂತೆ ಗೋಡೆಯೊಂದಕ್ಕೆ ಪೈಂಟು ಬಳಿದಿರಲಾಗುತ್ತದೆ. ಕ್ಯಾಮೆರಾದ ತುಂಬ ಬಣ್ಣ ಬಳಿಸಿಕೊಂಡ ಗೋಡೆ. ಇಡೀ ಚಿತ್ರದಲ್ಲಿ ಬಳಿದ ಬಣ್ಣ ಒಣಗುವುದನ್ನಷ್ಟೇ ತೋರಿಸಲಾಗಿದೆ! ಮೊದಲ ನಿಮಿಷದಿಂದ ಕೊನೆಯ ನಿಮಿಷದವರೆಗೂ ಕ್ಯಾಮೆರಾ ಚೂರೂ ಮಿಸುಕದೆ ಬಣ್ಣ ಒಣಗುವ 'ಪ್ರಕ್ರಿಯೆ'ಯನ್ನು ತೋರಿಸಲಾಗಿದೆ! ಬಣ್ಣ ಒಣಗುವುದನ್ನು ಹತ್ತು ನಿಮಿಷವೂ ತೋರಿಸಬಹುದು ಒಂದು ಘಂಟೆಯೂ ತೋರಿಸಬಹುದು, ನಿಮಿಷಕ್ಕಿಷ್ಟು ಹಣ ಕಟ್ಟುವ ಚೈತನ್ಯವಿರಬೇಕಷ್ಟೇ! ಚಾರ್ಲ್ಸ್ ನ ಉದ್ದೇಶವರಿತ ಮಂದಿ ಹೆಚ್ಚಾಗೇ ಹಣ ನೀಡಿದ ಪರಿಣಾಮ 'ಪೈಂಟ್ ಡ್ರೈಯಿಂಗ್'ನ ಒಟ್ಟು ಸಮಯ ಹತ್ತು ಘಂಟೆಗಳಾಗಿಬಿಟ್ಟಿತು! ಸೆನ್ಸಾರು ಮಂಡಳಿಯವರ ಕರ್ಮ ನೋಡಿ, ಒಣಗುವ ಪೈಂಟಿನ ಚಿತ್ರವನ್ನು ಒಂದು ನಿಮಿಷವೂ ತಪ್ಪಿಸದೇ ನೋಡಲೇಬೇಕು! ಇನ್ನೂ ತಮಾಷೆಯೆಂದರೆ ಬಿ.ಬಿ.ಎಫ್.ಸಿ ಸದಸ್ಯರಿಗೆ ದಿನಕ್ಕೆ ಒಂಭತ್ತು ಘಂಟೆ ಮಾತ್ರ ಸಿನಿಮಾ ನೋಡುವ ಅವಕಾಶವಿರುವುದು! ಮೊದಲ ದಿನ ಒಂಭತ್ತು ಘಂಟೆ ಬಣ್ಣ ಒಣಗುವುದನ್ನು ಕಂಡು ಮಾರನೇ ದಿನ ಮತ್ತೆ ಒಂದು ಘಂಟೆ ಬಣ್ಣವನ್ನು ಒಣಗಿಸಿ ಮುಗಿಸಿದ ನಂತರ ಸೆನ್ಸಾರ್ ಸರ್ಟಿಫಿಕೇಟು ಕೊಡುವ ಸೌಭಾಗ್ಯ! 
ಇದು ಎಷ್ಟು ಸರಿಯೋ ಎಷ್ಟು ತಪ್ಪೋ ಪ್ರತಿಭಟನೆಯ ನವೀನ ಮಾದರಿ ಎಂಬುದಂತೂ ದಿಟ!

ಜನ 24, 2016

ದಯೆಯಿರುವ ಜೂಜ್ಯಾವುದಯ್ಯಾ?

Dr Ashok K R
ಈ ಮೂರೂ ಕಡೆ ಮನುಷ್ಯನ ಮನೋರಂಜನೆಗೆ ಪ್ರಾಣಿಗಳನ್ನು ಉಪಯೋಗಿಸಲಾಗುತ್ತದೆ. ವರುಷಕ್ಕೆ ಮೂರ್ನಾಲ್ಕು ಬಾರಿ ಮನೋರಂಜನೆಗೆಂದು ಉಪಯೋಗಿಸಲ್ಪಡುವ ಪ್ರಾಣಿಗಳನ್ನು ವರುಷ ಪೂರ್ತಿ ಕಣ್ಣಲ್ಲಿ ಕಣ್ಣಿಟ್ಟು ಸಾಕಲಾಗುತ್ತದೆ. ಅದನ್ನು ಸಾಕಿದವರು ಅಷ್ಟು ಚೆಂದ ತಿಂದುಂಡಿರುತ್ತಾರೋ ಗೊತ್ತಿಲ್ಲ ಆ ಪ್ರಾಣಿಗಳಿಗಂತೂ ಭರ್ಜರಿ ಆಹಾರ ನೀಡಿ ಬೆಳಿಗ್ಗೆ ಸಂಜೆ ಮಸಾಜು ಮಾಡಿ, ಬಿಸಿಲಿಗೆಲ್ಲ ಹೋಗಿ ಬಳಲದಂತೆ ನೋಡಿಕೊಂಡು ಮನೆಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ. ದಕ್ಷಿಣ ಕನ್ನಡದ ಕಡೆ ಕೋಣಗಳನ್ನು ಈ ರೀತಿ ಸಾಕಿ ಕಂಬಳಕ್ಕೆ ಅಣಿಗೊಳಿಸಿದರೆ, ತಮಿಳುನಾಡಿನಲ್ಲಿ ಹೋರಿಗಳನ್ನು ಸಾಕಿ ಬೆಳೆಸಿ ಜಲ್ಲಿಕಟ್ಟುವಿಗೆ ಅಣಿಗೊಳಿಸುತ್ತಾರೆ, ಇನ್ನೂ ದೇಶಾದ್ಯಂತ (ಅಥವಾ ವಿಶ್ವದಾದ್ಯಂತ) ಕುದುರೆಗಳನ್ನು ಮನೆಮಕ್ಕಳಂತೆ ಸಾಕಿ ಕುದುರೆ ರೇಸುಗಳಿಗೆ ಅಣಿಗೊಳಿಸಲಾಗುತ್ತದೆ. ಈ ಮೂರೂ ಆಟಗಳೇ, ಜಲ್ಲಿಕಟ್ಟುವಿನಲ್ಲಿ ಜೂಜಿರುತ್ತದಾ ಗೊತ್ತಿಲ್ಲ ಕಂಬಳದಲ್ಲಿ ಸ್ಥಳೀಯರ ಮಟ್ಟಿಗೆ ಜೂಜಾಟ ನಡೆದರೆ ಕುದುರೆ ರೇಸಿನಲ್ಲಿ ಕೋಟಿಗಳ ಲೆಕ್ಕದಲ್ಲಿ ಜೂಜು ನಡೆಯುತ್ತದೆ. 

ಜಲ್ಲಿಕಟ್ಟು ಹೋರಿ ‘ಹಿಡಿಯುವ’ ಸ್ಪರ್ಧೆ, ಅಲ್ಲಿ ಜನರ ಕೂಗಾಟ ಹಾರಾಟ, ಹೋರಿಯನ್ನು ಹಿಡಿದು ನೆಲಕ್ಕೆ ಒತ್ತುವ ಉದ್ವೇಗವೆಲ್ಲವೂ ಹೋರಿಗೆ ಹಿಂಸೆ ನೀಡುತ್ತದೆ ಎಂದುಕೊಳ್ಳೋಣ; ಕಂಬಳದಲ್ಲಿ ಕೋಣಗಳನ್ನು ಕೆಸರು ಗದ್ದೆಯಲ್ಲಿ ಓಡಿಸುವಾತ ಕೈಯಲ್ಲೊಂದು ಬೆತ್ತ ಹಿಡಿದು ಅವು ವೇಗವಾಗಿ ಓಡಲೆಂದು ಮಧ್ಯೆ ಮಧ್ಯೆ ಕೋಣಗಳ ಬೆನ್ನ ಮೇಲೆ ಬಾರಿಸುವುದು, ಗದ್ದೆಯ ಸುತ್ತ ನಿಂತ ಜನರು ‘ಓ’ ಎಂದು ಕೂಗೆಬ್ಬಿಸುವುದೆಲ್ಲವೂ ಕೋಣಗಳಿಗೆ ಹಿಂಸೆ ನೀಡುತ್ತದೆ ಎಂದುಕೊಳ್ಳೋಣ; ಕುದುರೆ ರೇಸಿನಲ್ಲಿ ಕುದುರೆಗಳು ಓಡುವಾಗ ಸುತ್ತಲೂ ನಿಂತ ಜನರ ಕೂಗಾಟ ಹಾರಾಟವೇನು ಕಮ್ಮಿಯಿರುವುದಿಲ್ಲ, ಕುದುರೆಯ ಬೆನ್ನ ಮೇಲೆಯೇ ಕುಳಿತುಕೊಳ್ಳುವ ಜಾಕಿ ಕೈಯಲ್ಲೊಂದು ಕೋಲು ಹಿಡಿದುಕೊಂಡು ಕುದುರೆ ವೇಗವಾಗಿ ಓಡಲೆಂದು ಮಧ್ಯೆ ಮಧ್ಯೆ ಬಾರಿಸುತ್ತಾನೆ – ಕಂಬಳ ಮತ್ತು ಜಲ್ಲಿಕಟ್ಟಿನಲ್ಲಿ ನಡೆಯುವಂತದ್ದೇ ಕುದುರೆ ರೇಸಿನಲ್ಲೂ ನಡೆದರೂ ಅದ್ಯಾಕೆ ಹಿಂಸೆ ರೂಪದಲ್ಲಿ ಕಾಣುವುದಿಲ್ಲ? ಕುದುರೆಗಳೇನು ಪ್ರಾಣಿಗಳಲ್ಲವೇ? ಹಾಗೆ ನೋಡಿದರೆ ಉಳಿದೆರಡು ಆಟಗಳಲ್ಲಿಲ್ಲದ ‘ಸವಾರಿ’ ಈ ಆಟದಲ್ಲಿದೆ ಆದರೂ ಇದು ಹಿಂಸೆಯಾಗಿ ಕಾಣುವುದಿಲ್ಲ. ರೇಸು ಓಡುವ ಪ್ರಾಯ ಮುಗಿಸಿದ ಕುದುರೆಯನ್ನು ಕಡಿಮೆ ಬೆಲೆಗೆ ಕೊಟ್ಟುಬಿಡುತ್ತಾರೆ, ಹಲವು ಸಲ ಸಾಯಿಸಿಬಿಡುತ್ತಾರೆ ಎನ್ನುವ ಮಾತೂ ಕೇಳಿಬರುತ್ತದೆ. ಜಲ್ಲಿಕಟ್ಟು – ಕಂಬಳ – ಕುದುರೆ ರೇಸಿನ ನಡುವೆ ಇಷ್ಟೆಲ್ಲ ಸಾಮ್ಯತೆಗಳಿದ್ದರೂ ಕುದುರೆ ರೇಸು ಯಾಕೆ ಪ್ರಾಣಿ ಹಿಂಸೆಯಂತೆ ಕಾಣುವುದಿಲ್ಲವೆಂದರೆ…..

ಯಾಕೆ ಕಾಣುವುದಿಲ್ಲವೆನ್ನುವುದಕ್ಕೆ ಗೂಗಲ್ ಇಮೇಜ್ ಸರ್ಚ್ ಒಂದು ಉತ್ತಮ ಉದಾಹರಣೆ ನೀಡುತ್ತದೆ. ಗೂಗಲ್ ಇಮೇಜ್ ಸರ್ಚಿಗೆ ಹೋಗಿ ಕಂಬಳ ಎಂದು ಟೈಪಿಸಿ, ಜಲ್ಲಿಕಟ್ಟು ಎಂದು ಟೈಪಿಸಿ, ಬೆಂಗಳೂರು ಡರ್ಬಿ ಎಂದು ಟೈಪಿಸಿ ಬರುವ ಚಿತ್ರಗಳನ್ನು ನೋಡಿ! 
ಹಿಂಸೆ

ಹಿಂಸೆ
ಸಂಭ್ರಮ!

ಜಲ್ಲಿಕಟ್ಟು ಮತ್ತು ಕಂಬಳದಲ್ಲಿ ಪ್ರಾಣಿ ಹಿಂಸೆಯಂತೆ ತೋರುವ, ಮನುಷ್ಯ ಕೋಪೋದ್ರೇಕವಾಗಿರುವಂತೆ ಕಾಣಿಸುವ ಚಿತ್ರಗಳು ಮೊದಲು ಬಂದರೆ, ಬೆಂಗಳೂರು ಡರ್ಬಿಯಲ್ಲಿ ಕುದರೆಯಿರುವ ಮೂರೇ ಮೂರು ಫೋಟೋ! ಉಳಿದವೆಲ್ಲದರಲ್ಲೂ ನಗುನಗುತ್ತಾ ನಿಂತಿರುವ ಜನರ ಫೋಟೋಗಳು ಮಾತ್ರ! ನಗುವಿನ ಹಿಂದಿರುವ ‘ಹಿಂಸೆ’ಯ ಚಿತ್ರಗಳು ಮಾತ್ರ ಸಿಗುವುದಿಲ್ಲ. ಕುದುರೆ ರೇಸಿಗೂ ಪ್ರಾಣಿ ಹಿಂಸೆಗೂ ಸಂಬಂಧವೇ ಇಲ್ಲ ಎನ್ನುವ ಅಭಿಪ್ರಾಯ ಮೂಡುವುದಕ್ಕೆ ಪತ್ರಿಕೆಗಳೂ ಕಾರಣವಾಗಿವೆ. ನಿನ್ನೆಯಿಂದ ಬೆಂಗಳೂರು ಡರ್ಬಿ ಪ್ರಾರಂಭವಾಗಿದೆ. ಪತ್ರಿಕೆಗಳಲ್ಲಿ ಸುಂದರ ತರುಣ – ತರುಣಿಯರ (ಹೆಚ್ಚಾಗಿ ತರುಣಿಯರು) ಫೋಟೋಗಳು ರಾರಾಜಿಸುತ್ತಿವೆ. ಜಲ್ಲಿಕಟ್ಟು ಮತ್ತು ಕಂಬಳದಲ್ಲಿ ಇದೇ ಪತ್ರಿಕೆಗಳು ಹಾಕುವ ಫೋಟೋಗಳನ್ನೊಮ್ಮೆ ನೆನಪಿಸಿಕೊಳ್ಳಿ.

ಪ್ರಾಣಿಗಳ ಮೇಲೆ ಅಪಾರವಾದ ದಯೆಯನ್ನೊಂದಿರುವ ನಮ್ಮ ಘನ ನ್ಯಾಯಾಲಯವು ಜಲ್ಲಿಕಟ್ಟು ಮತ್ತು ಕಂಬಳವನ್ನು ನಿಷೇಧಿಸಿ ಆದೇಶ ಹೊರಡಿಸಿದರೆ ಕುದುರೆ ರೇಸಿನ ಬಗ್ಗೆ ಚಕಾರವೆತ್ತುವುದಿಲ್ಲ, ನ್ಯಾಯಾಲಯಕ್ಕೂ ಅತ್ತಿತ್ತ ನೋಡದಂತೆ ಜೀನು ತೊಡಿಸಲಾಗಿದೆಯಾ? ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯನ್ನೂ ಪ್ರಶ್ನಿಸಬಹುದು ಆದರೆ ನ್ಯಾಯಾಲಯವನ್ನು ಪ್ರಶ್ನಿಸಿಬಿಟ್ಟರೆ ನ್ಯಾಯಾಲಯದ ತೀರ್ಪನ್ನು ವಿಮರ್ಶಿಸಿಬಿಟ್ಟರೆ ನ್ಯಾಯಾಂಗ ನಿಂದನೆ! ಪ್ರಜಾಪ್ರಭುತ್ವದ ಎಲ್ಲಾ ಅಂಗಗಳೂ ಪ್ರಶ್ನಾರ್ಹವಾಗಿದ್ದರಷ್ಟೇ ಸೊಗಸು.