ನವೆಂ 19, 2015

ಭೀಕರ

ಕು.ಸ.ಮಧುಸೂದನ್
ವರ್ತಮಾನ ಕಷ್ಟವಾದಾಗ
ಇತಿಹಾಸ ಇಷ್ಟವಾಗುತ್ತದೆ
ತಾಳೆಗರಿಗಳ ಮೇಲೆ ಬರೆಸಲ್ಪಟ್ಟ
ವಿಷಯಗಳೇ ಸಂವಿಧಾನದ ಪರಿಚ್ಛೇದಗಳಾಗಿ
ಅಳತೊಡಗುತ್ತವೆ
ಆಗಿನ್ನೂ ಹುಟ್ಟಿದ ಮಗುಕಿಟಾರನೆ ಕಿರುಚುತ್ತದೆ ಬೆಚ್ಚಿ!
ಕಗ್ಗಂತಲ ಖಂಡದ ಕನಸುಗಳೇ
ನಿಜವಾಗತೊಡಗಿ
ಪುರಾಣ ವರ್ತಮಾನವಾಗತೊಡಗುತ್ತದೆ
ಭವಿಷ್ಯ ಮಂಕಾಗುತ್ತದೆ!

ನವೆಂ 18, 2015

ಯಥಾ ಪ್ರಧಾನಿ ತಥಾ ವಿರೋಧಿ!

ಕಾಂಗ್ರೆಸ್ಸಿನ ಇಬ್ಬರು ಬೃಹಸ್ಪತಿಗಳು ಭಾರತದ ಮಾನವನ್ನು ವಿದೇಶದಲ್ಲಿ, ಅದೂ ಭಾರತದ ಕೆಡುಕನ್ನೇ ಸದಾ ಬಯಸುವ ಪಾಕಿಸ್ತಾನದಲ್ಲಿ ಕಳೆದು ಬಂದಿದ್ದಾರೆ. ಹೆಸರಿಗೆ ಅವರು ಕಳೆದುಹಾಕಿರುವುದು ನರೇಂದ್ರ ಮೋದಿಯವರ ಮಾನವನ್ನಾದರೂ ಮೋದಿಯವರು ಭಾರತದ ಪ್ರಧಾನಿಯಾಗಿರುವುದರಿಂದ ಇದು ಭಾರತದ ಮಾನಹಾನಿಯೇ ಅಲ್ಲವೇ?! ಇಸ್ಲಮಾಬಾದಿನ ಜಿನ್ನಾ ಸಂಸ್ಥೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರದ ಮಾಜಿ ಸಚಿವ ಸಲ್ಮಾನ್ ಖುರ್ಷಿದರಿಗೆ ಇದ್ದಕ್ಕಿದ್ದಂತೆ ನವಾಜ್ ಷರೀಫರ ಮೇಲೆ ಭಯಂಕರ ಪ್ರೀತಿ ಹುಟ್ಟಿ ಅವರನ್ನು ವಾಚಮಾಗೋಚರವಾಗಿ ಹೊಗಳಿ ನರೇಂದ್ರ ಮೋದಿಯವರನ್ನು ತೆಗಳಿದ್ದಾರೆ. ಏನೋ ಪಾಕಿಸ್ತಾನಕ್ಕೆ ಹೋಗಿದ್ದಾರೆ, ಅಲ್ಲಿಯೇ ಇದ್ದುಕೊಂಡು ಅಲ್ಲಿನ ಪ್ರಧಾನಿಯನ್ನು ತೆಗಳುವುದು ಸರಿಯಾಗುವುದಿಲ್ಲ ಎಂದು ನವಾಜ್ ಷರೀಫರನ್ನು ಹೊಗಳಿದ್ದರೆ ಸುಮ್ಮನಾಗಬಹುದಿತ್ತು. ವಿದೇಶಿ ನೆಲದಲ್ಲಿ ಭಾರತದ ಪ್ರಧಾನಮಂತ್ರಿಯನ್ನು ಹೀಗಳೆಯುವ ಕೆಲಸವನ್ಯಾಕೆ ಮಾಡಬೇಕು? ಮಂತ್ರಿ ಪದವಿಯ ಜೊತೆಗೆ ಬುದ್ಧಿಯನ್ನೂ ಮರಳಿಸಿಬಿಟ್ಟರೆ?

ಇನ್ನೂ ಸದಾ ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಕಾಂಗ್ರೆಸ್ಸಿನ ಮಣಿಶಂಕರ್ ಅಯ್ಯರ್ ಪಾಕಿಸ್ತಾನದ 'ದುನಿಯಾ ಟಿವಿ'ಗೆ ಕೊಟ್ಟ ಸಂದರ್ಶನದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬಾಂಧವ್ಯ ವೃದ್ಧಿಯಾಗಬೇಕಾದರೆ ಮೋದಿ ತೊಲಗಿ ಕಾಂಗ್ರೆಸ್ ಮರಳಿ ಬರಬೇಕು ಎಂದಿದ್ದಾರೆ. ಮೊದಲೇ ಭಾರತವನ್ನು ವೈರಿಯಾಗಿಯೇ ನೋಡುವ ಪಾಕಿಸ್ತಾನದಲ್ಲಿ ಮೋದಿ ನಿಮ್ಮ ಮೊದಲ ವೈರಿ ಎಂಬರ್ಥದ ಮಾತುಗಳನ್ನಾಡಿ ಬಂದಿದ್ದಾರೆ. ಇವರಿಗೇನ್ ಬುದ್ಧಿ ಇಲ್ಲವಾ? ಅಥವಾ ಇವರ ದ್ವೇಷವನ್ನು ತೋರ್ಪಡಿಸಲು ಭಾರತದಲ್ಲಿ ವಾಹಿನಿಗಳಿಲ್ಲವಾ? ನಮ್ಮಲ್ಲೇ 24x7 ವಾಹಿನಿಗಳು ಸುದ್ದಿಯಿಲ್ಲದೇ ಬಣಗುಟ್ಟುತ್ತಿರುವಾಗ ವಿದೇಶಿ ವಾಹಿನಿಗಳಲ್ಲಿ ದೇಶದ ಮರ್ಯಾದೆಯನ್ನು ಮೂರುಕಾಸಿಗೆ ಮಾರುವ ಪ್ರವೃತ್ತಿಯನ್ನು ವಿರೋಧಿಸಲೇಬೇಕು.

ಇವರಿಬ್ಬರು ಈ ರೀತಿಯೆಲ್ಲ ಮಾತನಾಡಿರುವುದಕ್ಕೆ ಸ್ಪೂರ್ತಿ ಯಾರಿರಬಹುದೆಂದು ಹುಡುಕಿದರೆ ಅದು ಮತ್ಯಾರೂ ಅಲ್ಲ ಭಕ್ತಾಸುಗಳನ್ನು ಬೆಳೆಸಿ ಪೋಷಿಸುತ್ತಿರುವ ನಮ್ಮಲ್ಲೆರ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು! ವಿರೋಧಿಗಳ ವಿರುದ್ಧ ಮೊನಚಿನ ಭಾಷಣ ಮಾಡುವುದರಲ್ಲಿ ಮೋದಿಯವರದು ಎತ್ತಿದ ಕೈ. ಅವರ ಭಾಷಣ ಕುಟ್ಟುವ ಉಮೇದಿ ಎಷ್ಟರವರೆಗಿದೆಯೆಂದರೆ ವಿದೇಶಿ ನೆಲದಲ್ಲಿ ನಿಂತಾಗಲೂ ಭಾರತದಲ್ಲಿನ ರಾಜಕೀಯ ವಿರೋಧಿಗಳ ಬಗ್ಗೆಯೇ ಮಾತನಾಡುತ್ತಾರೆ. ವಿದೇಶದಲ್ಲಿ ದೇಶದ ಮಾನ ತೆಗೆಯುತ್ತಿದ್ದೇನೆ ಎನ್ನುವುದರ ಅರಿವಿಲ್ಲದೆ ನೆಹರೂ ಬಗ್ಗೆ, ಅವರ ಕುಟುಂಬದ ಬಗ್ಗೆ, ರಾಹುಲ್ ಗಾಂಧಿಯ ಬಗ್ಗೆಯೆಲ್ಲ ಅನವಶ್ಯಕವಾಗಿ ಮಾತನಾಡಿ ಬಂದಿದ್ದಾರೆ. ಜಪಾನಿನಲ್ಲಿ ಭಗವದ್ಗೀತೆಯನ್ನು ಕೊಡುವಾಗ, ವಿದೇಶದಲ್ಲಿ ಸಂಸ್ಕೃತ ಶ್ಲೋಕ ಹಾಡಿದ ಮಕ್ಕಳನ್ನು ಹೊಗಳುವಾಗ ಭಾರತದ ಜಾತ್ಯತೀತರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ದೇಶದ ಮಾನ ತೆಗೆಯುವುದಕ್ಕೆ ಏನೆಲ್ಲ ಒದರಬೇಕೋ ಅದರ ಬಗ್ಗೆ ಒದರಿದ್ದಾರೆ. 

ಭಾರತವೀಗ 'ಸೂಪರ್ ಪವರ್' ಆಗುತ್ತಿರುವ ಕಾರಣ ದೇಶದೊಳಗಿನ ರಾಜಕೀಯ ದ್ವೇಷವನ್ನು ವಿದೇಶದಲ್ಲೂ ತೋರ್ಪಡಿಸಬೇಕು ಎಂದು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಕಿಕೊಟ್ಟ ಹಾದಿಯಲ್ಲೇ ಕಾಂಗ್ರೆಸ್ಸಿನ ಸಲ್ಮಾನ್ ಖುರ್ಷಿದ್ ಮತ್ತು ಮಣಿಶಂಕರ್ ಅಯ್ಯರ್ ಸಾಗುತ್ತಿದ್ದಾರೆ. ಭಾರತದ ಮಾನ? ಅಯ್ಯೋ ಬುಡಿ ಮಾನ ಮರ್ಯಾದೆ ಎಲ್ಲಾ ಕಟ್ಕೊಂಡು ಏನ್ ಮಾಡ್ತೀರ... ಪಬ್ಲಿಸಿಟಿ ಮುಖ್ಯ.

ನವೆಂ 17, 2015

ಮಾತು ಬೇಕಾಗಿಲ್ಲ

ಕು.ಸ.ಮಧುಸೂದನ್
ಮೌನವಾಗಿದ್ದ ಬುದ್ದ
ಮಾತಾಡಲಿಲ್ಲ
ನಾಲ್ಕು ಮನೆಗಳ ಬಗ್ಗೆ
ಎರಡು ದಾರಿಗಳ ಬಗ್ಗೆ
ಕಾಯುತ್ತಾ ಕೂತಿದ್ದರು ಶಿಷ್ಯರು
ಮಳೆಗೆ ಕಾದಿದ್ದ ಇಳೆಯ ಹಾಗೆ
ಮುಗುಳ್ನಕ್ಕ
ಬುದ್ದ
ಎದ್ದ
ಅರ್ಥವಾಯಿತೇ?
ಎಲ್ಲರಿಗೂ
ಎಂದ
ಎಲ್ಲ ಅಡಗಿರುವುದಿಲ್ಲಿ
ಹೂವು ಅರಳುವ ಗಳಿಗೆಯಲ್ಲಿ
ಎಲ್ಲವೂ ಚಣಮಾತ್ರ ಎನ್ನುವ ಸತ್ಯದಲ್ಲಿ
ಹೇಳಬೇಕಾದ್ದನ್ನು
ಹೇಳದೆಯೇ ಹೇಳಿದ
ಅರ್ಥ ಮಾಡಿಸಿದ.

ಅಸಹಿಷ್ಣುತೆಯ ವಿರುದ್ದ ಪ್ರಗತಿಪರರ ಗೆಲುವು!

ಕು.ಸ.ಮಧುಸೂದನ್
ಅಂತೂ ನರೇಂದ್ರಮೋದಿಯ ನಾಯಕತ್ವದಲ್ಲಿ ಮತಾಂಧತೆಯಿಂದ ಹೂಂಕರಿಸುತ್ತಿದ್ದ ಬಾಜಪ, ಬಿಹಾರದ ವಿದಾನಸಭಾ ಚುನಾವಣೆಯಲ್ಲಿ ಬಾರೀ ಸೋಲು ಕಂಡಿದೆ. ಬಿಹಾರದ ವಿದಾನಸಭಾ ಚುನಾವಣೆಯಲ್ಲಿನ ಬಾಜಪದ ಸೋಲು,ದೇಶದಾದ್ಯಂತ ತೀವ್ರಗೊಂಡಿದ್ದ ಅಸಹಿಷ್ಣುತೆಯ ವಿರುದದ್ದ ಚಳುವಳಿಗೆ ದೊರೆತ ದೊಡ್ಡ ಗೆಲುವು ಎಂದು ಬಣ್ಣಿಸಿದರೆ ತಪ್ಪೇನಿಲ್ಲವೆನಿಸುತ್ತೆ. ಬಿಹಾರದ ವಿದಾನಸಭೆಗೆ ಚುನಾವಣಾ ಪ್ರಕ್ರಿಯೆ ಶುರುವಾದ ಸಮಯಕ್ಕೆ ಸರಿಯಾಗಿ ಪ್ರಾರಂಭವಾದ ಅಸಹಿಷ್ಣುತೆಯ ವಿರುದ್ದದ ಚಳುವಳಿ ಚುನಾವಣಾ ಪಲಿತಾಂಶ ಬಂದ ದಿನಕ್ಕೆ ಸರಿಯಾಗಿ ಗೆಲುವಿನ ಮೊದಲ ಮೆಟ್ಟಿಲನ್ನು ಏರಿದೆ.

ಈ ಚಳುವಳಿಯ ಭಾಗವಾಗಿ ಪ್ರಾರಂಭವಾದ ಪ್ರಶಸ್ತಿ ವಾಪಾಸು ಮಾಡುವ ನಮ್ಮ ಲೇಖಕರ, ಕಲಾವಿದರ, ವಿಜ್ಞಾನಿಗಳ ಮತ್ತು ಜಾತ್ಯಾತೀತ ತತ್ವದಲ್ಲಿ ನಂಬಿಕೆಯಿಟ್ಟ ಬಹುತೇಕ ಪ್ರಗತಿಪರರ ನಿಲುವುಗಳು, ವಿಚಾರಗಳು ಬಿಹಾರದ ಜನರನ್ನು ತಲುಪಿರುವುದರಲ್ಲಿ ಅನುಮಾನವೇನಿಲ್ಲ. ಕರ್ನಾಟಕದ ಕಲಬುರ್ಗಿಯವರ ಹತ್ಯೆಯಿಂದ ಶುರುವಾದ ಅಸಹಿಷ್ಣುತೆಯ ಘಟನೆಗಳಲ್ಲಿ ಬಹಳಷ್ಟು ಬಿಹಾರಕ್ಕೆ ತುಂಬಾ ಹತ್ತಿರದಲ್ಲ್ಲಿಯೇ ನಡೆದವು. ದಾದ್ರಿಯ ಹತ್ಯೆ, ಹರಿಯಾಣದಲ್ಲಿ ದಲಿತ ಮಕ್ಕಳನ್ನು ಜೀವಂತ ಸುಟ್ಟ ಪ್ರಕರಣಗಳನ್ನು ಬಿಹಾರದ ಜನ ತುಂಬಾ ಆಸಕ್ತಿಯಿಂದ, ಆತಂಕದಿಂದ ಗಮನಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾಜಪ ಅಧಿಕಾರಕ್ಕೇರಿದ ಮರುಗಳಿಗೆಯಿಂದಲೇ ಆರಂಭಗೊಂಡ ಅಸಹಿಷ್ಣುತೆಯ ಘಟನಾವಳಿಗಳು ಆರ್ಥಿಕವಾಗಿ ತೀರಾ ಹಿಂದುಳಿದ ಬಿಹಾರದ ಜನತೆಯನ್ನು ಕಂಗೆಡಿಸಿದ್ದರೆ ಅಚ್ಚರಿಯೇನಿಲ್ಲ. ಯಾಕೆಂದರೆ ಈ ಪ್ರಶಸ್ತಿಯ ವಾಪಸಾತಿ ಚಳುವಳಿಯ ಜೊತೆಗೆ ಚುನಾವಣಾ ಪ್ರಚಾರದಲ್ಲಿ ಬಾಜಪದ ನಿಜವಾದ ಮುಖವಾದ ಸಂಘಪರಿವಾರವು ಮೀಸಲಾತಿಯನ್ನು ಪುನರ್ ಪರಿಶೀಲನೆಗೊಳಿಸುವ ಬಗ್ಗೆ ಮಾತಾಡಿತ್ತು. ಅತ್ಯಂತ ಹಿಂದುಳಿದ ಜಾತಿಗಳಿರುವ ಬಿಹಾರದ ಜನತೆಯ ಮಟ್ಟಿಗೆ ಮೀಸಲಾತಿಯ ಹಿಂತೆಗೆತ ಎಂದರೆ ಅದು ಅವರ ಇತಿಶ್ರೀ ಇದ್ದಂತೆ ಎನ್ನುವುದು ಬಿಹಾರದ ಜನತೆಗೆ ಮನವರಿಕೆಯಾಗಿತ್ತು. ಇದರ ಜೊತೆಗೆ ಚುನಾವಣೆಯ ಪ್ರಚಾರದಲ್ಲಿ ಬಾಜಪ ಅನವಶ್ಯಕವಾಗಿ ಹಿಂದುಳಿದ ಜಾತಿಯವರನ್ನು, ಮುಸ್ಲಿಮರನ್ನು ಓಲೈಸುವ ನಾಟಕವಾಡುತ್ತ ಮೇಲ್ಜಾತಿಯ ಮತಗಳನ್ನು ದ್ರುವೀಕರಿಸುವ ಕೆಲಸಕ್ಕೆ ಕೈ ಹಾಕಿತ್ತು. 

ಬಹುಶ: ಇಂತಹದೊಂದು ಸನ್ನಿವೇಶದಲ್ಲಿ ಬಿಹಾರದ ಮತದಾರರು ಸಂಪೂರ್ಣವಾಗಿಯಲ್ಲದಿದ್ದರೂ ಒಂದಿಷ್ಟಾದರು, ಪ್ರಶಸ್ತಿ ವಾಪಸಾತಿ ಚಳುವಳಿಯ ಹಿಂದಿನ ವಿಚಾರವಾದಿಗಳ ನೈಜ ಕಾಳಜಿಯ ಬಗ್ಗೆ ಅರ್ಥ ಮಾಡಿಕೊಂಡು ಬಾಜಪದ ವಿರುದ್ದ ತಮ್ಮ ಮತ ಚಲಾಯಿಸಿದ್ದಾರೆ ಅನಿಸುತ್ತೆ.

ಏನೇ ಆಗಲಿ ಒಂದಂತೂ ಈ ಚುನಾವಣೆಯ ಪಲಿತಾಂಶ ಸ್ಪಷ್ಟ ಪಡಿಸಿದೆ: ಅದೆಂದರೆ ಅಸಹಿಷ್ಣುತೆಯ ವಿರುದದ್ದ ಚಳುವಳಿಯ ಭಾಗವಾಗಿ, ಲೇಖಕರು ತಮ್ಮ ಪ್ರಶಸ್ತಿಯನ್ನು ವಾಪಾಸು ಮಾಡಲು ತೊಡಗಿದಾಗ ವಿರೋಧಿಸಿದ ಬಲಪಂಥೀಯ ಶಕ್ತಿಗಳಿಗೆ ಈ ಚಳುವಳಿಯ ಪರಿಣಾಮ ಎಷ್ಟು ತೀವ್ರವಾಗಿರಬಹುದೆಂಬುದು ಅರ್ಥವಾಗಿರುತ್ತದೆಯೆಂದು ನಂಬಿರುತ್ತೇನೆ. 

ನವೆಂ 14, 2015

ಈ ಸಾವಿನ ಹೊಣೆಯನ್ನು ಯಾರು ಹೊತ್ತುಕೊಳ್ಳುತ್ತಾರೆ?

ಸಾಬಿ ಸತ್ತರೆ ಹಿಂದೂ ಸಂಘಟನೆಗಳ ಕೃತ್ಯ, ಹಿಂದೂ ಸತ್ತರೆ ಮುಸ್ಲಿಂ ಸಂಘಟನೆಗಳ ಕೃತ್ಯ ಎಂದು ಕಣ್ಣುಮುಚ್ಚಿ ಶರಾ ಬರೆದುಬಿಡುವವರಿಗೆ ಈ ಪ್ರಕರಣವೊಂದು ಒಗಟಾಗಿಬಿಟ್ಟಿದೆ. ಸಮೀವುಲ್ಲಾ ಮತ್ತು ಹರೀಶ್ ಕ್ರಿಕೆಟ್ ಆಡಿ ವಾಪಸ್ಸಾಗುವಾಗ ಅಂಗಡಿಯೊಂದರ ಬಳಿ ಕೂಲ್ ಡ್ರಿಂಕ್ಸ್ ಕುಡಿಯುವಾಗ ಗುಂಪೊಂದು ಬಂದು ಸಮೀವುಲ್ಲಾನ ಮೇಲೆ ದಾಳಿ ನಡೆಸುತ್ತಾರೆ, ತಡೆಯಲು ಬಂದ ಹರೀಶನ ಮೇಲೆಯೂ ದಾಳಿ ನಡೆಸುತ್ತಾರೆ. ಹರೀಶ ಹತನಾಗುತ್ತಾನೆ. 
ಮುಸ್ಲಿಂ ಮತ್ತು ಹಿಂದೂಗಳಿಬ್ಬರ ಮೇಲೆಯೂ ಹಲ್ಲೆಯಾಗಿಬಿಟ್ಟಿದೆ. ಹಲ್ಲೆ ನಡೆಸಿದ್ದು ಹಿಂದೂ ಸಂಘಟನೆಯೋ ಮುಸ್ಲಿಂ ಸಂಘಟನೆಯೋ ಇನ್ನೂ ಗೊತ್ತಾಗಿಲ್ಲ. ಹರೀಶನ ಮನೆಯೀಗ ಅನಾಥವಾಗಿದೆ. 
ಅಂದಹಾಗೆ ಉಳಿದೆಲ್ಲೆಡೆ ಟಿಪ್ಪು ಸಂಬಂಧಿತ ಗಲಭೆಗಳು ಕಡಿಮೆಯಾಗುತ್ತಿದ್ದರೆ ದಕ್ಷಿಣ ಕನ್ನಡದಲ್ಲಿ ಬಿಗುವಿನ ವಾತಾವರಣವೇ ಇದೆಯಂತೆ. ನೆನಪಿರಲಿ ದಕ್ಷಿಣ ಕನ್ನಡದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರವೊಂದನ್ನು ಬಿಟ್ಟು ಬೇರೆಲ್ಲ ಕಡೆಯೂ ಬಿಜೆಪಿ ಸೋಲನ್ನನುಭವಿಸಿತ್ತು. ಅವರಿಗಿದು ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ಮಾರ್ಗ. ಮೃದು ಹಿಂದುತ್ವವನ್ನಾಚರಿಸುವ ಕಾಂಗ್ರೆಸ್ಸಿಗರು ಮೌನವಾಗೇ ಈ ಘಟನೆಗಳನ್ನು ಒಪ್ಪಿಬಿಡುತ್ತಾರೆ. ಇವರ ಜೊತೆಗೆ ಇವರಿಗಿಂತಲೂ ಹೀನವಾಗಿ ವರ್ತಿಸುವುದಕ್ಕೆ ಪಿ.ಎಫ್.ಐನಂತಹ ಮುಸ್ಲಿಂ ಸಂಘಟನೆಗಳಿವೆ. ಅವರಿಗೆ ಮುಸ್ಲಿಂ ಮತಗಳನ್ನು ಒಟ್ಟುಗೂಡಿಸುವ ಕೆಲಸ. ಮತಗಳ ಒಟ್ಟುಗೂಡುವಿಕೆಯ ಸಮಯದಲ್ಲಿ ಮಾನವೀಯತೆ ಮೂರಾಬಟ್ಟೆಯಾದರೆ ಯಾರಿಗೇನಾಗಬೇಕು ಹೇಳಿ.

ನವೆಂ 12, 2015

ಕುಂವಿ ಮತ್ತು ಬಂಜಗೆರೆಯವರ ಪ್ರತಿಕ್ರಿಯೆ.

ನವೀನ್ ನಿಮ್ಮಂಥ ಪ್ರಗತಿಪರ ಯುವಮನಸ್ಸುಗಳ ಆತಂಕ ಅರ್ಥಾಗುತ್ತೆ, ನಾನು ಅಕಸ್ಮಾತ್ ಆ ದಿವಸ ಉಪನ್ಯಾಸ ನೀಡಿದರೆ ಅದು ನಾಡಿನ ಸಹಸ್ರ ವಿವಿಧ ಜಾಯಮಾನದ ಹಾಗೂ ಅಭಿರುಚಿಯ ಜನರನ್ನುದ್ದೇಶಿಸಿ, ಆದರೆ ಮೋಹನ್ ಆಳ್ವಾ ಕುಟುಂಬ ಸದಸ್ಯರನ್ನುದ್ದೇಶಿಸಿ ಖಂಡಿತ ಅಲ್ಲ, ಅದು ಮಾತಾಡಲು.ತಿದ್ದಲು. ಪ್ರತಿಭಟಿಸಲು ಸೂಕ್ತ ಜಾಗ, ನನ್ನಂಥೋರು ಭಾಗವಹಿಸದಿದ್ದಲ್ಲಿ ಮೂಲಭೂತವಾದಿಗಳಾದ ಬೇರೆಯವರು ಮಾತಾಡ್ತಾರೆ. ಆತ್ಮಸಾಕ್ಷಿ ಕಳೆದುಕೊಳ್ಳುವುದಿಲ್ಲ, ರಾಜಿಯಾಗೋದಿಲ್ಲ, ನೇರ ದಿಟ್ಟ ನಿರಂತರ, ಆತಂಕ ಬೇಡ.
- ಕುಂವೀ

ಇದನ್ನೂ ಓದಿ: ಬಂಜಗೆರೆ ಮತ್ತು ಕುಂವೀಯವರಿಗೊಂದು ಬಹಿರಂಗ ಪತ್ರ


ಸಾಕಷ್ಟು ಪರ್ಯಾಲೋಚಿಸದೆ, ಸಾಮಾಜಿಕ ನ್ಯಾಯದ ಹೊಸ ಹುಡುಕಾಟಗಳು ಎಂಬ ವಿಷಯವನ್ನಷ್ಟೆ ನೋಡಿಕೊಂಡು ಒಪ್ಪಿಕೊಂಡಿದ್ದೆ. ಈಗ ನಮ್ಮ ಬಂಧು-ಬಳಗಕ್ಕೆ ನಾನು ಹಾಗೇ ಹೋಗುವುದು ಸರಿಯಲ್ಲ ಅನಿಸಿದರೆ ನಾನು 'ನುಡಿಸಿರಿ'ಗೆ ಹೋಗುವುದಿಲ್ಲ. ಸಂಗಾತಿಗಳ ಮನಸ್ಸಿಗೆ ಕಸಿವಿಸಿ ಉಂಟು ಮಾಡಿದ್ದಕ್ಕೆ ನಾನು ನಿಮ್ಮೆಲ್ಲರ ಕ್ಷಮೆ ಕೇಳುತ್ತಿದ್ದೆನೆ. ನಾವೆಲ್ಲರೂ ಒಂದೇ. ನಾವೆಲ್ಲರೂ ಕೈಗೆ ಕೈಜೋಡಿಸಿ ಸಾಂಸ್ಕೃತಿಕ ಯುದ್ಧವನ್ನು ಗೆಲ್ಲಬೇಕಾದ ಸಂಗಾತಿಗಳು. ನಾನು ನಿಮ್ಮೊಡನೆ ಇರುತ್ತೇನೆ, ಎಲ್ಲರಿಗೂ ವಂದನೆಗಳು.
-ಬಂಜಗೆರೆ ಜಯಪ್ರಕಾಶ.

ಸತ್ತವರ ಹೆಸರಲ್ಲಿ ಸಾವಿನ ಆಚರಣೆ.

Dr Ashok K R
ಟಿಪ್ಪು ಬಗೆಗಿನ ಚರ್ಚೆ ಅನವಶ್ಯಕ ಎಂದೇ ನಂಬಿದ್ದವನು ನಾನು. ನಾವು ದಿನನಿತ್ಯ ವ್ಯವಹರಿಸುವ, ಸಂವಹಿಸುವ ಜನರ ಒಳ್ಳೆಯತನದ ಬಗ್ಗೆಯೇ ನಮಗೆ ಅರಿವಾಗದಿರುವಾಗ ಇನ್ನೂರು ಮುನ್ನೂರು ವರ್ಷದ ಹಿಂದೆ ಸತ್ತು ಹೋದ ವ್ಯಕ್ತಿಯೊಬ್ಬ ದೇವರಷ್ಟೇ ಒಳ್ಳೆಯವನು ದೆವ್ವದಷ್ಟೇ ಕೆಟ್ಟವನು ಎಂದು ವಾದಿಸುವುದು ಇವತ್ತಿನ ವರ್ತಮಾನಕ್ಕೆ ಎಷ್ಟರ ಮಟ್ಟಿಗೆ ಅವಶ್ಯಕ? ಟಿಪ್ಪುವಿನ ಹೆಸರಲ್ಲಿ ಸಾವು ನಡೆದುಹೋಗಿದೆ. ಸಾವಿನ ನೆಪದಲ್ಲಿ ಪೊಲಿಟಿಕಲ್ ಮೈಲೇಜ್ ತೆಗೆದುಕೊಳ್ಳುವವರ ಸಂಖೈಯೂ ಹೆಚ್ಚಾಗಿಬಿಟ್ಟಿದೆ. ಜನರನ್ನು ಉದ್ರೇಕಗೊಳಿಸುವಂತಹ ಬರಹಗಳು ಫೇಸ್ ಬುಕ್ ತುಂಬ ರಾರಾಜಿಸುತ್ತಿವೆ. ಈಗಲೂ ಮನಸ್ಸಿಗೆ ಅನ್ನಿಸಿದ್ದನ್ನು ಬರೆಯದಿರುವುದು ಸರಿಯಲ್ಲ ಎಂಬ ಕಾರಣಕ್ಕೆ ಈ ಬರಹ. ಮೊದಲು ಟಿಪ್ಪು ಜಯಂತಿಯ ವಿರೋಧಿಗಳ ವಾದದಲ್ಲಿರುವ ದ್ವಂದ್ವಗಳನ್ನು ಗುರುತಿಸೋಣ.

ಇದನ್ನೂ ಓದಿ: ಟಿಪ್ಪು ಎಂಬ ಅನವಶ್ಯಕ ಚರ್ಚೆ

ಟಿಪ್ಪು ಒಬ್ಬ ಧರ್ಮದ್ರೋಹಿ, ಸಾವಿರಾರು ಹಿಂದೂಗಳನ್ನು ಕೊಂದು ಸಾವಿರಾರು ಜನರನ್ನು ಮತಾಂತರಿಸಿದ, ಅವನ ಕೈಯೆಲ್ಲ ರಕ್ತಮಯ: ಟಿಪ್ಪು ವಿರೋಧಿಗಳು ಹೇಳಿರುವುದೆಲ್ಲವೂ ಸತ್ಯ. ಆತ ಸಾವಿರಾರು ಜನರನ್ನು ಕೊಂದಿರುವುದೂ ಹೌದು, ಮತಾಂತರಿಸಿರುವುದೂ ಹೌದು. ಟಿಪ್ಪು ಪ್ರಜಾಪ್ರಭುತ್ವ ರೀತಿಯಿಂದ ಆಯ್ಕೆಯಾದ ‘ರಾಜ’ನಲ್ಲ ಎನ್ನುವುದನ್ನು ನೆನಪಿಡಬೇಕು. ಆತ ಅರಮನೆಯ ಸುಖದೊಳಗೆ ಬಂಧಿಯಾಗಿದ್ದ ರಾಜನೂ ಅಲ್ಲ. ಹೆಚ್ಚಿನ ದಿನಗಳನ್ನು ಯುದ್ಧಗಳಲ್ಲೇ ಕಳೆದ; ಯುದ್ಧದ ಉದ್ದೇಶ ಸಾಮ್ರಾಜ್ಯ ವಿಸ್ತರಣೆ ಮತ್ತು ಸಾಮ್ರಾಜ್ಯ ರಕ್ಷಣೆ. ಯುದ್ಧವೆಂದ ಮೇಲೆ ಸಾವಿರುವುದು ಸತ್ಯವಲ್ಲವೇ. ಇಡೀ ದೇಶದ ರಾಜರೆಲ್ಲ ಯುದ್ಧವನ್ನು ‘ಶಾಂತಿ’ಯಿಂದ ನಡೆಸಿಬಿಟ್ಟಿದ್ದರೆ ಟಿಪ್ಪು ಅಪರಾಧಿಯಾಗಿಬಿಡುತ್ತಿದ್ದ. ಯುದ್ಧದಲ್ಲಿದ್ದ ಯಾವ ರಾಜ ಶಾಂತಿಯಿಂದ ಕಾರ್ಯನಿರ್ವಹಿಸಿದ? ನಮ್ ದೇಶದ ಬಾವುಟದಲ್ಲಿ ಮಧ್ಯದಲ್ಲೊಂದು ನೀಲಿ ಚಕ್ರವಿದೆಯಲ್ಲ, ಅಶೋಕ ಚಕ್ರ, ಆ ಅಶೋಕನೇನು ಶಾಂತಿಯ ದೂತನೇ? ಸಾವಿರಾರು ಜನರನ್ನು ಕಳಿಂಗ ಯುದ್ಧದಲ್ಲಿ ಕೊಂದ ನಂತರವಷ್ಟೇ ಆತ ಬೌದ್ಧ ಧರ್ಮ ಸ್ವೀಕರಿಸಿದ್ದು ಅಲ್ಲವೇ. ಅವನಿಂದ ಹತರಾದ ಜನರ ವಂಶಜರು ಅಶೋಕ ಚಕ್ರವನ್ನು ಬಾವುಟದಿಂದ ಕಿತ್ತು ಹಾಕಿ ಎಂದರದು ಒಪ್ಪಿತವೇ? ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳೇ ಹಿಂಸೆಯನ್ನು ಬೆಂಬಲಿಸಿದ ಅನೇಕ ನಿದರ್ಶನಗಳನ್ನು ಸ್ವತಂತ್ರ ಭಾರತದಲ್ಲಿ ನಾವು ಕಂಡಿರುವಾಗ ರಾಜರು ಶಾಂತಿ ಪಾಲಿಸಿದರೆಂದರೆ ನಂಬಲು ಸಾಧ್ಯವೇ?

ಇನ್ನು ಟಿಪ್ಪು ಮತಾಂತರ ಮಾಡಿದ ಎನ್ನುವುದರ ಬಗ್ಗೆ. ಅದು ರಾಜರ ಕಾಲ. ರಾಜನ ಧರ್ಮವನ್ನು ಜನರ ಮೇಲೆ ‘ಹೇರುತ್ತಿದ್ದ’ ಕಾಲ. ಹಿಂದೂ ಧರ್ಮದ ಜಾತಿ ಪದ್ಧತಿಯೂ ಮತಾಂತರಕ್ಕೆ ಪೂರಕವಾಗಿ ಕೆಲಸ ಮಾಡುತ್ತಿತ್ತು. ಕೇರಳದಲ್ಲಿ ಟಿಪ್ಪು ಮತಾಂತರಿಸಿದ ಎಂದು ಅರ್ಧ ಸತ್ಯ ಹೇಳುವವರೆಲ್ಲ ಮತ್ತರ್ಧವನ್ನು ಉದ್ದೇಶಪೂರ್ವಕವಾಗಿ ಮರೆತುಬಿಡುತ್ತಾರೆ. ಕೇರಳದಲ್ಲಿ ದಲಿತರು ಮೊಳಕಾಲಿನ ಕೆಳಗೆ ಮತ್ತು ಸೊಂಟದ ಮೇಲೆ ಬಟ್ಟೆಯನ್ನೇ ಧರಿಸುವಂತಿರಲಿಲ್ಲ. ದಲಿತ ಮಹಿಳೆಯರು ತಮ್ಮ ಎದೆಯನ್ನು ಮುಚ್ಚಿಕೊಳ್ಳುವಂತಿರಲಿಲ್ಲ. ದಲಿತ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದಾಗ ಮಗುವಿಗೆ ಹಾಲು ಕುಡಿಸುವ ಮೊದಲು ಮೇಲ್ಜಾತಿಯ ಜನರ ಮುಂದೆ ಬಂದು ನಿಲ್ಲಬೇಕಿತ್ತು. ಮೇಲ್ಜಾತಿಯ ಬ್ರಹಸ್ಪತಿಗಳು ಆಕೆಯ ಮೊಲೆಯನ್ನು ಅಳೆದು ‘ಮೊಲೆ ತೆರಿಗೆ’ ವಿಧಿಸುತ್ತಿದ್ದರು. ಮೊಲೆ ತೆರಿಗೆ ಕಟ್ಟಿದ ನಂತರವಷ್ಟೆ ಮಗುವಿಗೆ ಹಾಲು ಕುಡಿಸುವ ಅನುಮತಿ ಸಿಕ್ಕುತ್ತಿತ್ತು. ಒಬ್ಬ ದಲಿತ ಹೆಣ್ಣುಮಗಳು ಪ್ರತಿಭಟನೆಯ ರೂಪದಲ್ಲಿ ತನ್ನೆರಡೂ ಮೊಲೆಗಳನ್ನೇ ಕಡಿದು ಇದನ್ನೇ ನಿಮ್ಮ ತೆರಿಗೆಗೆ ವಜಾ ಮಾಡಿಕೊಳ್ಳಿ ಎಂದು ಹೇಳಿಬಿಟ್ಟಳು. ಮತಾಂತರಕ್ಕೆ ಟಿಪ್ಪು ಎಷ್ಟು ಕಾರಣನೋ ಈ ಶೋಷಣೆಯೂ ಅಷ್ಟೇ ಕಾರಣವಲ್ಲವೇ? ವಾದಕ್ಕೆ ಕೇಳ್ತೀನಿ, ಮತಾಂತರ ನಡೆಸಿದ ಟಿಪ್ಪುವಿನ ಜಯಂತಿಯನ್ನು ಸರಕಾರ ಆಚರಿಸಬಾರದು ಎನ್ನುತ್ತೀರಲ್ಲ ಬ್ರಾಹ್ಮಣ, ಕುರುಬ, ದಲಿತ ಸಮುದಾಯದಿಂದ ಲಿಂಗಾಯತ ಧರ್ಮಕ್ಕೆ ಮತಾಂತರಿಸಿದ ಬಸವಣ್ಣನ ಜಯಂತಿಯನ್ನು ಸರಕಾರವೇ ಆಚರಿಸುತ್ತದೆಯಲ್ಲವೇ? ಅದು ಸರಿಯಾದರೆ ಇದು ಹೇಗೆ ತಪ್ಪಾಯಿತು?

ಇನ್ನು ಟಿಪ್ಪು ಕನ್ನಡ ವಿರೋಧಿ ಎಂಬ ವಾದ. ಹೌದು ಆತ ಪಾರ್ಸಿ ಭಾಷೆಯನ್ನೋ ಮತ್ತೊಂದು ಭಾಷೆಯನ್ನೋ ಉಪಯೋಗಿಸುತ್ತಿದ್ದ. ರಾಜನ ಆಳ್ವಿಕೆಯ ಕಾನೂನುಗಳನ್ನು ಇವತ್ತಿನ ದೃಷ್ಟಿಯಿಂದ ಅಳೆಯುವುದೇ ತಪ್ಪಲ್ಲವೇ? ಶ್ರೀ ಕೃಷ್ಣದೇವರಾಯ ತೆಲುಗಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದ ಅನ್ನುವುದು ಇತಿಹಾಸದಲ್ಲಿದೆ. ಆ ಕಾರಣಕ್ಕೆ ಹಂಪಿ ಉತ್ಸವವನ್ನು ವಿರೋಧಿಸಬೇಕೆ? ಹಿಂದಿ ಹೇರಿಕೆಯನ್ನು ಕಂಡೂ ಕಾಣದಂತಿರುವ, ಹಿಂದಿ ಹೇರಿಕೆಯನ್ನು ಸಮರ್ಥಿಸುವ, ಹಿಂದಿ ರಾಷ್ಟ್ರಭಾಷೆಯೆಂದು ಸುಳ್ಳು ಸುಳ್ಳೇ ಜನರನ್ನು ನಂಬಿಸುವ ಜನರಿಗೆಲ್ಲ ಇದ್ದಕ್ಕಿದ್ದಂತೆ ಕನ್ನಡ ಪ್ರೇಮ ಮೂಡಿಬಿಟ್ಟಿರುವುದು ಸೋಜಿಗ! 

ಟಿಪ್ಪುವನ್ನು ವಿರೋಧಿಸಲು ಇವ್ಯಾವುದೂ ನೈಜ ಕಾರಣವಲ್ಲ. ಇವೆಲ್ಲ ಜನರನ್ನು ಮೂರ್ಖರನ್ನಾಗಿಸಲು ಬಿಜೆಪಿ ಮತ್ತದರ ಬೆಂಬಲಿತ ಸಂಘಟನೆಗಳು ಉಪಯೋಗಿಸುತ್ತಿರುವ ನೆಪಗಳಷ್ಟೆ. ಟಿಪ್ಪು ಸುಲ್ತಾನ್ ಮುಸ್ಲಿಂ ಅದಕ್ಕೆ ನಮಗವನನ್ನ ಕಂಡರೆ ಆಗಲ್ಲ ಎಂದು ಬಹಿರಂಗವಾಗಿ ಹೇಳಲಾಗದವರು ಹುಡುಕುವ ನೆಪಗಳಷ್ಟೇ. 

ವೈಯಕ್ತಿಕವಾಗಿ ನನಗೆ ಈ ಯಾವ ಜಯಂತಿ, ಉತ್ಸವಗಳಲ್ಲಿಯೂ ನಂಬಿಕೆಯಿಲ್ಲ. ಸುಖಾಸುಮ್ಮನೆ ನಮ್ಮ ನಿಮ್ಮಂತೆಯೇ ಒಳಿತು ಕೆಡುಕುಗಳಿದ್ದ ಮನುಷ್ಯರನ್ನು ಆಕಾಶದೆತ್ತರಕ್ಕೆ ಏರಿಸುವ, ರಣಭಯಂಕರವಾಗಿ ಹೊಗಳುವ ಇಂತಹ ಜಯಂತಿಗಳು ಇರದಿದ್ದರೆ ಪ್ರಪಂಚವೇನು ಮುಳುಗಲಾರದು. ಇದರ ಜೊತೆಜೊತೆಗೆ ವ್ಯಕ್ತಿ ಮತ್ತು ಮೂರ್ತಿ ಪೂಜೆಯಿಂದ ಹೊರಬರಲಾರದ ನಮ್ಮ ಜನರಿಗೆ ಇಂತಹ ಜಯಂತಿಗಳು ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತವೆ ಎನ್ನುವುದೂ ಸತ್ಯ. ಅಂಬೇಡ್ಕರ್ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿ, ಕನಕದಾಸ ಜಯಂತಿಗಳೆಲ್ಲವೂ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಿಬಿಡುವ ಕೆಟ್ಟ ಕೆಲಸವನ್ನು ಮಾಡುತ್ತಲೇ ಆ ಸಮುದಾಯದ ಜನರ ಮನೋಸ್ಥೈರ್ಯವನ್ನು ಹಿಗ್ಗಿಸುವ ಕೆಲಸವನ್ನು ಮಾಡುತ್ತಿರುವುದು ಸುಳ್ಳಲ್ಲ. ಟಿಪ್ಪು ಜಯಂತಿ ಕೂಡ ಮುಸ್ಲಿಮರಲ್ಲಿ ಅಂತದೊಂದು ಸ್ಥೈರ್ಯ ತುಂಬುತ್ತಿತ್ತೋ ಏನೋ? ತುಂಬಬಾರದು ಎನ್ನುವುದು ವಿರೋಧಿಗಳ ಉದ್ದೇಶ. ಇಂತಹುದೊಂದು ಸರಕಾರ ಪ್ರಾಯೋಜಿತ ಜಯಂತಿಯ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ವಿ.ಎಚ್.ಪಿಯ ಮುಖಂಡ ಕುಟ್ಟಪ್ಪ, ರಾಜು ಮತ್ತು ಸಾವುಲ್ ಹಮೀದ್ ಎಂಬ ಯುವಕ ಸಾವನ್ನಪ್ಪಿದ್ದಾರೆ. ಕುಟ್ಟಪ್ಪ ಮತ್ತು ರಾಜುನನ್ನು ಸಾಬರು ಕಲ್ಲು ಹೊಡೆದು ಕೊಂದರು ಎನ್ನುವುದು ಹಿಂದೂ ಸಂಘಟನೆಗಳ ವಾದವಾದರೆ ಸಾವುಲ್ ಹಮೀದನನ್ನು ಹಿಂದೂಗಳು ಗುಂಡಿಟ್ಟು ಕೊಂದಿದ್ದಾರೆ ಎನ್ನುವುದು ಮುಸ್ಲಿಂ ಸಂಘಟನೆಗಳ ವಾದ. ಪೋಲೀಸರ ಪ್ರಕಾರ ಕುಟ್ಟಪ್ಪ ಓಡುವಾಗ ಹತ್ತಡಿ ಎತ್ತರದ ಕಾಂಪೌಂಡು ಗೋಡೆಯಿಂದ ಬಿದ್ದು ಸತ್ತಿದ್ದು. ಇನ್ನು ರಾಜು ಆಸ್ಪತ್ರೆಯಲ್ಲಿದ್ದ ರೋಗಿ. ಗಲಭೆಯನ್ನು ವೀಕ್ಷಿಸುವಾಗ ಮೇಲಿನಿಂದ ಕೆಳಗೆ ಬಿದ್ದಿದ್ದು ಸತ್ತಿದ್ದು. ಸಾವುಲ್ ಹಮೀದನ ಮೇಲೆ ಯಾರೂ ಗುಂಡು ಹಾರಿಸಿಲ್ಲ. ಲಾಠಿ ಚಾರ್ಜಿನ ಸಮಯದಲ್ಲಿ ಬಿದ್ದ ಪೆಟ್ಟಿನಿಂದ ಸತ್ತಿದ್ದು. ಸಾವು ಯಾವ ರೀತಿಯಿಂದಲೇ ಆಗಿರಲಿ, ಪರೋಕ್ಷವಾಗಿ ಎಲ್ಲಾ ಸಾವುಗಳು ಟಿಪ್ಪು ಜಯಂತಿಯ ಕಾರಣಕ್ಕೇ ಆಗಿದೆ. 

ಪೋಲೀಸ್ ಚಾರ್ಜ್ ಶೀಟು ರೀತಿಯಲ್ಲೇ ಈ ಸಾವುಗಳಿಗೆ ಯಾರು ಹೊಣೆ ಎಂದರೆ ಎ1 ಸ್ಥಾನದಲ್ಲಿ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್, ಎ2 ಆಗಿ ಪ್ರತಾಪಸಿಂಹ ಮತ್ತು ಬಿಜೆಪಿ, ಎ3 ಆಗಿ ಪೋಲೀಸರನ್ನು ನಿಲ್ಲಿಸಬಹುದು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸುವುದಕ್ಕೆ ವೋಟ್ ಬ್ಯಾಂಕ್ ರಾಜಕೀಯದ ಹೊರತಾಗಿ ಮತ್ಯಾವ ಕಾರಣವೂ ಇರಲಿಲ್ಲ. ಎಲ್ಲರೂ ಮಾಡುವುದು ವೋಟ್ ಬ್ಯಾಂಕ್ ರಾಜಕೀಯ ಇದರಲ್ಲೇನು ತಪ್ಪು ಎಂಬ ಪ್ರಶ್ನೆಯನ್ನು ಖಂಡಿತವಾಗಿ ಕಾಂಗ್ರೆಸ್ಸಿನವರ ಕೇಳುತ್ತಾರೆ. ವೋಟಿನ ನೆಪದಲ್ಲಿ ಮೂವರ ಹತ್ಯೆಯ ಹೊಣೆಯನ್ನು ಹೊತ್ತಿಕೊಳ್ಳುತ್ತಾರ? ಮುಸ್ಲಿಮರ ಮತಕ್ಕಾಗಿಯಷ್ಟೇ ಈ ಜಯಂತಿ ಮಾಡಿದ್ದು ಎಂದು ಸರಕಾರ ಎಷ್ಟು ನಿಖರವಾಗಿ ಹೇಳಿದೆ ಗೊತ್ತೆ? ಟಿಪ್ಪು ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದಲೋ ಪ್ರವಾಸೋದ್ಯಮ ಖಾತೆಯ ವತಿಯಿಂದಲೋ ಮಾಡಿಸಿಲ್ಲ ಮಾಡಿಸಿರುವುದು ಅಲ್ಪಸಂಖ್ಯಾತ ಇಲಾಖೆಯ ವತಿಯಿಂದ. ಅದರಲ್ಲೇ ಗೊತ್ತಾಗುವುದಿಲ್ಲವೇ ಇವರ ಯೋಗ್ಯತೆ. ಟಿಪ್ಪು ಜಯಂತಿಯನ್ನು ಘೋಷಿಸಿದರೆ ಅದಕ್ಕೆ ಮತ್ತದೆ ವೋಟ್ ಬ್ಯಾಂಕ್ ರಾಜಕೀಯದ ಕಾರಣದಿಂದ ಬಿಜೆಪಿಯವರು ವಿರೋಧಿಸುತ್ತಾರೆ ಎನ್ನುವುದನ್ನು ತಿಳಿಯದಷ್ಟು ಅಮಯಾಕರೇನಲ್ಲವಲ್ಲ ಸಿದ್ಧರಾಮಯ್ಯನವರು. ವಿರೋಧ ವ್ಯಕ್ತವಾಗಲಿ ಎನ್ನುವುದೇ ಅವರ ಉದ್ದೇಶವಾಗಿತ್ತು. ಬಿಜೆಪಿಯವರು ವಿರೋಧಿಸಿದಷ್ಟೂ ಮುಸ್ಲಿಮರ ವೋಟುಗಳು ಕಾಂಗ್ರೆಸ್ ತೆಕ್ಕೆಗೆ ಬರುತ್ತದೆ ಎನ್ನುವುದರ ಅರಿವೂ ಇತ್ತು. ಎಲ್ಲವೂ ಅವರಂದುಕೊಂಡಂತೆಯೇ ಆಯಿತು; ಮೂವರ ಹೆಣದ ಮೇಲೆ. 

ಇನ್ನು ಎ2 ಸ್ಥಾನದಲ್ಲಿರುವ ಪ್ರತಾಪಸಿಂಹ ಮತ್ತು ಬಿಜೆಪಿ ಕೂಡ ಎ1 ಆರೋಪಿಗಳಷ್ಟೇ ಅಪಾಯಕಾರಿಯಾಗಿ ದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಾತಿ ಪ್ರಜ್ಞೆ ಜಾಗ್ರತವಾಗಿ ಗೌಡ ಗೌಡ ಎಂದುಕೊಂಡು ಓಟು ಗಿಟ್ಟಿಸಿಕೊಂಡ ಪ್ರತಾಪಸಿಂಹರಿಗೆ ಈಗ ಧರ್ಮದ್ವೇಷದ ಆಧಾರದಲ್ಲಿ ‘ಹಿಂದೂ ಹೃದಯ ಸಾಮ್ರಾಟ್’ ಎಂದು ಕರೆಸಿಕೊಳ್ಳುವ ಹಪಾಹಪಿ. ಟಿಪ್ಪು ಜಯಂತಿಯನ್ನು ನಖಶಿಖಾಂತ ವಿರೋಧಿಸಲು ಅವರು ಆಯ್ಕೆ ಮಾಡಿಕೊಂಡಿದ್ದು ಮಡಿಕೇರಿ. ಕಾರಣ ಅಲ್ಲಿ ಬಿಜೆಪಿಗೆ ಬೆಂಬಲವೂ ಇದೆ, ಟಿಪ್ಪುವನ್ನು ದ್ವೇಷಿಸಲು ಕಾರಣವೂ ಇದೆ. ಲೋಕಸಭಾ ಸದಸ್ಯರ ಘನತೆಗೆ ತಕ್ಕದಲ್ಲದ ‘ಟಿಪ್ಪು ಸುಲ್ತಾನ್ ಕುರುಬರನ್ನು ಕೊಂದಿದ್ರೂ ಸಿದ್ಧರಾಮಯ್ಯ ಟಿಪ್ಪು ಜಯಂತಿ ಮಾಡುತ್ತಿದ್ದರಾ?’ ಎಂಬಂತಹ ವಿಚ್ಛಿದ್ರಕಾರಿ ಹೇಳಿಕೆಗಳೂ ಅವರ ಬಾಯಿಂದ ಉದುರಿದವು. ಜನರನ್ನು ಧರ್ಮದ ಹೆಸರಿನಲ್ಲಿ ಉದ್ರಿಕ್ತಗೊಳಿಸಿ ಪ್ರತಿಭಟಿಸುವಂತೆ ಮಾಡಿ, ಸಾಯುವಂತೆ ಮಾಡಿ ಅವರು ಬಹುಶಃ ಮೈಸೂರಿನ ತಮ್ಮ ಮನೆಯಲ್ಲಿ ಬೆಚ್ಚಗೆ ಕುಳಿತಿರಬೇಕು. ಚಳಿಗಾಲ ಬೇರೆ ಶುರುವಾಗಿದೆಯಲ್ಲ.

ಎ3 ಸ್ಥಾನದಲ್ಲಿರುವ ಪೋಲೀಸರನ್ನು ಬಯ್ಯುವುದಾದರೂ ಹೇಗೆ? ಒಂದು ಕಡೆ ಆಡಳಿತ ಪಕ್ಷ, ಇನ್ನೊಂದು ಕಡೆ ಮುಂದೆ ಆಡಳಿತಕ್ಕೆ ಬರಬಹುದಾದ ವಿರೋಧ ಪಕ್ಷ, ಈ ಪಕ್ಷಗಳ ತಾಳಕ್ಕೆ ಕುಣಿಯುವುದೇ ಕಸುಬಾಗಿಬಿಟ್ಟಿರುವಾಗ ಅವರು ಸರಿಯಾಗಿ ಕಾರ್ಯನಿರ್ವಹಿಸುವುದಾದರೂ ಹೇಗೆ? ಮಡಿಕೇರಿಯಲ್ಲಿ ನಡೆಯುವ ಗಲಭೆಯ ಬಗ್ಗೆ ಅವರಿಗೆ ಮಾಹಿತಿಯಿತ್ತು. ಗುಪ್ತಚರ ಮಾಹಿತಿಯೇನು ಬೇಕಿರಲಿಲ್ಲ, ಸಂಘಟನೆಗಳ ಮುಖಂಡರ ಮಾತುಗಳೇ ಸಾಕಿತ್ತು ಗಲಭೆಗೆ ಹೇಗೆ ಎರಡೂ ಗುಂಪುಗಳು ತಯಾರಾಗಿವೆ ಎಂದು ಅರಿಯುವುದಕ್ಕೆ. ಕೆಲವು ದಿನಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಹಿಂದೂ ಸಂಘಟನೆಗಳು ಟಿಪ್ಪು ಸಮಾಧಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಮಾಹಿತಿಯೂ ಅವರಲ್ಲಿತ್ತು (ಈ ಘಟನೆ ಯಾವ ಮಾಧ್ಯಮದಲ್ಲೂ ಪ್ರಸಾರವೇ ಆಗಲಿಲ್ಲ). ಶ್ರೀರಂಗಪಟ್ಟಣ ಮತ್ತು ಮಂಡ್ಯದಲ್ಲಿ ಶಾಂತಿಯುತವಾಗಿ ಜಯಂತೋತ್ಸವ ನಡೆದಿರುವಾಗ ಮಡಿಕೇರಿಯಲ್ಲಿ ಶಾಂತಿಯುತವಾಗಿ ನಡೆಸುವ ಸ್ಥೈರ್ಯವನ್ನು ಪೋಲೀಸರು ತೋರಿಸಬೇಕಿತ್ತು. ದುರದೃಷ್ಟವಶಾತ್ ಇವರ ಈ ವೈಫಲ್ಯಕ್ಕೆ ಮೂರು ಹೆಣಗಳುರುಳಿವೆ.

ಒಂದು ಗಮನಿಸಿದಿರೋ ಇಲ್ಲವೋ. ಈ ರೀತಿಯ ಗಲಭೆ ನಡೆಯಬಹುದೆನ್ನುವ ಅನುಮಾನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡಕ್ಕೂ ಇತ್ತು. ಕುಳಿತು ಮಾತನಾಡಿ ಶಾಂತಿ ಕಾಪಿಡುವಂತೆ ಮಾಡಬೇಕಿದ್ದ ಮುಖಂಡರು ಗಲಭೆ ಮತ್ತಷ್ಟು ಹೆಚ್ಚಾಗುವಂತಹ ಮೂರ್ಖತನದ ಹೇಳಿಕೆ ನೀಡುವುದರಲ್ಲಿಯೇ ಬ್ಯುಸಿಯಾಗಿಬಿಟ್ಟರು. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡಕ್ಕೂ ತಮ್ಮ ತಮ್ಮ ವೋಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಗಲಭೆ ಮತ್ತು ಹತ್ಯೆಗಳು ಅವಶ್ಯಕವೆನ್ನಿಸಿರಬೇಕು. ಇಬ್ಬರೂ ತಮ್ಮ ತಮ್ಮ ಉದ್ದೇಶ ಈಡೇರಿಸಿಕೊಂಡಿದ್ದಾರೆ ಮೂವರ ಹೆಣದ ಮೇಲೆ.

ನವೆಂ 9, 2015

ಬಂಜಗೆರೆ ಮತ್ತು ಕುಂವೀಯವರಿಗೊಂದು ಬಹಿರಂಗ ಪತ್ರ.

kum veerabhadrappa
ಹಿರಿಯರೂ, ಮಾರ್ಗದರ್ಶಕರೂ ಆಗಿರುವ ಡಾ ಬಂಜಗೆರೆ ಜಯಪ್ರಕಾಶ್ ಮತ್ತು ಕುಂ ವೀರಭದ್ರಪ್ಪನವರಿಗೆ,

ಆಳ್ವಾಸ್ ನುಡಿಸಿರಿಯ ಆಹ್ವಾನ ಪತ್ರಿಕೆ ನೋಡಿದ ಬಳಿಕ ತಮಗೆ ಪತ್ರ ಬರೆಯುತ್ತಿದ್ದೇವೆ. ತಾವು ಈ ನೆಲದಲ್ಲಿ ಎಷ್ಟೋ ಕಾಲದಿಂದ ಜಾತ್ಯಾತೀತತೆ ಕೋಮುಸೌಹಾರ್ಧತೆ, ಸಾಮಾಜಿಕ ಸಮಾನತೆ ಮತ್ತು ಸಮಾನ ಅವಕಾಶದ ಸ್ವಾಭಿಮಾನಿ ಬದುಕಿಗಾಗಿ ತಮ್ಮ ಮಾತು-ಕೃತಿಗಳ ಮೂಲಕ ಹೋರಾಟ ಮಾಡುತ್ತಾ ಬಂದವರು. ಈ ಮೂಲಕ ಯುವಪೀಳಿಗೆಗೆ ಆದರ್ಶಪ್ರಾಯರಾಗಿರುವವರು. 

ನೀವು ಹೀಗೆ ಎಡವಬಹುದೇ? ಅದೂ ಈ ಕಾಲದಲ್ಲಿ. ಇದೀಗ ದೇಶಾದ್ಯಂತ ಸಾಹಿತ್ಯ ವಲಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಚಳುವಳಿಯಲ್ಲಿ ತೊಡಗಿದೆ. ಹೆಚ್ಚುತ್ತಿರುವ ಅಸೈರಣೆಯ ವಾತಾವರಣದ ವಿರುದ್ಧ ಸಿಡಿದೆದ್ದಿದೆ. ದೇಶದಲ್ಲೆಡೆ ಭುಗಿಲೆದ್ದಿರುವ ಅಸಹಿಷ್ಣುತೆಯ ವಾತಾವರಣದ ವಿರುದ್ದ ಸಾಹಿತಿಗಳು, ನಟ-ನಟಿಯರು, ವಿಜ್ಞಾನಿಗಳು ಹೋರಾಟಕ್ಕಿಳಿದಿದ್ದಾರೆ. ದೇಶದಾದ್ಯಂತ ಪ್ರಶಸ್ತಿ ವಾಪ್ಸಿ ಚಳುವಳಿ ನಡೆಯುತ್ತಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಾಪಸು ಮಾಡುವ ಮೂಲಕ ಕುಂ.ವೀರಭದ್ರಪ್ಪ ಅವರೇ ಈ ಹೋರಾಟವನ್ನು ರಾಜ್ಯದಲ್ಲಿ ಮುನ್ನಡೆಸಿದ್ದಾರೆ. ನುಡಿಸಿರಿಯಲ್ಲಿ ಪಾಲ್ಗೊಳ್ಳುವ ನಿಮ್ಮ ನಿರ್ಧಾರವನ್ನು ಈ ಹಿನ್ನೆಲೆಯಲ್ಲಿ ಪುನರ್ ಪರಿಶೀಲಿಸುವುದು ಸೂಕ್ರವಲ್ಲವೇ? 

ದಕ್ಷಿಣ ಕನ್ನಡ ಜಿಲ್ಲೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಹಿಂದುತ್ವದ ಪ್ರಯೋಗಶಾಲೆಯಾಗಿ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಗಳಿಸಿರುವುದು ನಿಮಗೆ ತಿಳಿದಿದೆ. ಆದರೆ ಇಂತಹ ಬೆಳವಣಿಗೆಗೆ ಕಾರಣಗಳೇನು ಎಂಬ ಬಗ್ಗೆ ಆಳವಾದ ಅಧ್ಯಯನ ನಡೆದಿಲ್ಲ. ಮೇಲ್ನೋಟಕ್ಕೆ ಬಜರಂಗಿಗಳು ಸೇರಿದಂತೆ ಒಂದಿಷ್ಟು ಕೇಸರಿಪಡೆಯ ಸದಸ್ಯರು ಈ ಗಲಭೆಗಳ ರೂವಾರಿಗಳಂತೆ ಕಾಣುತ್ತಾರೆ. ಆದರೊ ಹಿಂದುಳಿದ ಮತ್ತು ದಲಿತ ವರ್ಗಕ್ಕೆ ಸೇರಿರುವ ಅಮಾಯಕ ಯುವಕರನ್ನು ದಾಳಗಳಂತೆ ಬಳಸಿಕೊಂಡು ರಾಜಕೀಯದ ಆಟವನ್ನು ಆಡುತ್ತಿರುವ ಸೂತ್ರಧಾರಿಗಳು ಯಾರ ಕಣ್ಣಿಗೂ ಕಾಣಿಸುತ್ತಿಲ್ಲ. ಇಂತಹ ಸೂತ್ರಧಾರರನ್ನು ಗುರುತಿಸುವ ವೈಚಾರಿಕ ಸ್ಪಷ್ಟತೆಯನ್ನು ನಿಮ್ಮಂತಹವರ ಬರವಣಿಗೆಗಳಿಂದಲೇ ನಾವು ಗಳಿಸಿಕೊಂಡದ್ದು. ಅದಕ್ಕಾಗಿ ನಿಮಗೆ ಋಣಿಯಾಗಿದ್ದೇವೆ.

banjagere jayaprakash
ವಿಶ್ವ ಹಿಂದೂ ಪರಿಷತ್ 50 ವರ್ಷಗಳನ್ನು ಈ ನೆಲದಲ್ಲಿ ಪೂರೈಸುತ್ತಿರುವುದಕ್ಕೂ ಈ ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿರುವ ಅಸಹಿಷ್ಣುತೆಗೂ ಸಂಬಂಧವಿದೆ ಎಂದು ನಿಮಗೆ ಅನಿಸುವುದಿಲ್ಲವೇ? ನೀವು ಗಮನಿಸದೆ ಇರಬಹುದಾದ ಕೆಲವು ಸಂಗತಿಗಳ ಕಡೆ ಗಮನ ಸೆಳೆಯುವ ಪ್ರಯತ್ನ ನಮ್ಮದು. ವಿಶ್ವಹಿಂದೂ ಪರಿಷತ್ತಿನ ಸುವರ್ಣ ಮಹೋತ್ಸವ ಸಮಿತಿಯ ರಾಜ್ಯ ಅಧ್ಯಕ್ಷರಾಗಿರುವವರು ನುಡಿಸಿರಿಯ ರೂವಾರಿಯಾಗಿರುವ ಡಾ ಎಂ ಮೋಹನ ಆಳ್ವರು. ಆ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವವರು ಡಾ ಡಿ ವೀರೇಂದ್ರ ಹೆಗ್ಗಡೆಯವರು. ಇತ್ತೀಚೆಗಷ್ಟೇ ಸುವರ್ಣ ಮಹೋತ್ಸವದ ಹೆಸರಿನಲ್ಲಿ ಮೂರು ತಿಂಗಳು ದೇಶದಾದ್ಯಂತ ಸಮಾವೇಶಗಳನ್ನು ವಿಶ್ವ ಹಿಂದೂ ಪರಿಷತ್ ನಡೆಸಿತ್ತು. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಮಾಜೋತ್ಸವಗಳನ್ನು ಆಯೋಜಿಸಲಾಗಿತ್ತು.

ಕರ್ನಾಟಕದಲ್ಲಿ ನಡೆದ ಎಲ್ಲಾ ಸಮಾವೇಶಗಳ ಯಜಮಾನಿಕೆ ಡಾ ಎಂ ಮೋಹನ ಆಳ್ವರದ್ದಾದರೆ, ರಾಷ್ಟ್ರಮಟ್ಟದ ಸಮಾವೇಶಗಳ ಯಜಮಾನಿಕೆ ಡಾ ಡಿ ವೀರೇಂದ್ರ ಹೆಗ್ಗಡೆಯವರದ್ದು. ಇದರ ನಂತರ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಕೋಮುದ್ವೇಷದ ವಿಷಮಯ ವಾತಾವರಣ ನಿರ್ಮಾಣವಾಗಿರುವುದನ್ನು ತಾವು ಅಲ್ಲಗಳೆಯಲಾರಿರಿ ಎಂದು ನಂಬಿದ್ದೇವೆ. ದೇಶದಾದ್ಯಂತ ನಡೆಯುತ್ತಿರುವ ಕೋಮುಗಲಭೆ ಮತ್ತು ಧಾರ್ಮಿಕ ಅಸಹಿಷ್ಣುತೆಯ ಘಟನೆಗಳಿಗೂ ಈ ಸಮಾವೇಶಗಳಿಗೂ ಸಂಬಂಧವಿದೆ ಎಂದು ನಿಮಗೆ ಅನಿಸುವುದಿಲ್ಲವೇ? ಹೆಸರೇ ಸೂಚಿಸುವಂತೆ ಆಳ್ವಾಸ್ ನುಡಿಸಿರಿಯ ಯಜಮಾನಿಕೆ ಡಾ ಎಂ ಮೋಹನ ಆಳ್ವ ಅವರದ್ದು. ಈ ವ್ಯಕ್ತಿ ಕೇಂದ್ರಿತ ಸಾಹಿತ್ಯದ ಜಾತ್ರೆಗೆ ಡಾ ಡಿ ವೀರೇಂದ್ರ ಹೆಗ್ಗಡೆಯವರದ್ದೇ ಆಶೀರ್ವಚನ. ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಫೋಟೋ ಕೂಡಾ ಅಚ್ಚು ಹಾಕಲಾಗಿದೆ.

ಸತ್ಯ ಇಷ್ಟೊಂದು ಸ್ಪಷ್ಟವಾಗಿ ನಮ್ಮ ಕಣ್ಣೆದುರು ಇರುವಾಗ ಕೋಮುವಾದದ ಸೂತ್ರಧಾರರ ಯಜಮಾನಿಕೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯಲ್ಲಿ ನೀವು ಹೇಗೆ ಭಾಗವಹಿಸಲು ಸಾಧ್ಯ? ಇದು ನಮ್ಮನ್ನು ಕಾಡುತ್ತಿರುವ ಪ್ರಶ್ನೆ. ಆಮಂತ್ರಣ ಪತ್ರಿಕೆಯಲ್ಲಿ ಡಾ ಬಂಜಗೆರೆ ಜಯಪ್ರಕಾಶ ಸರ್ ``ಸಾಮಾಜಿಕ ನ್ಯಾಯ-ಹೊಸತನದ ಹುಡುಕಾಟ’’ ಎಂಬ ವಿಚಾರದ ಬಗ್ಗೆ ವಿಶೇಷೋಪನ್ಯಾಸ ನೀಡಿಲಿದ್ದಾರೆ ಎಂದಿದೆ. ಊಳಿಗಮಾನ್ಯ ಪದ್ದತಿ, ವ್ಯಕ್ತಿಪೂಜೆ ಮತ್ತು ಧರ್ಮದ ಹೆಸರಲ್ಲಿ ನಡೆಯುತ್ತಿರುವ ಶೋಷಣೆಯನ್ನು ವಿರೋಧಿಸಿಕೊಂಡು ಬಂದ ಈ ಆಹ್ಹಾನವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ? 

ಕಳೆದ ಎರಡು ವರ್ಷ ಆಳ್ವಾಸ್ ನುಡಿಸಿರಿಯಲ್ಲಿ ದಲಿತರ ಅವಹೇಳನ ಮಾಡಲಾಗಿತ್ತು. ಈ ಬಗ್ಗೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿರುವುದು ತಮ್ಮ ಗಮನಕ್ಕೆ ಬಂದಿರುವಂತಿಲ್ಲ. ತಾವು ಈಗಲೂ ಗೂಗಲ್ ಮೂಲಕ ಹುಡುಕಿದರೆ ಈ ಬಗ್ಗೆ ಮಾಹಿತಿ ದೊರೆಯುತ್ತದೆ. ಪಕ್ಕಾ ಶಿಕ್ಷಣದ ವ್ಯಾಪಾರಿಯಾಗಿರುವ ಡಾ ಎಂ ಮೋಹನ ಆಳ್ವರು ಇದೀಗ ಬಿಲ್ಡರ್ ಆಗಿಯೂ ಬೆಳೆದಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ರೆಸಾರ್ಟ್ ಸ್ಥಾಪಿಸಲು ಹೊರಟಿರುವ ಆಳ್ವರ ವಿರುದ್ಧ ಈಗಾಗಲೇ ಪರಿಸರ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದೆ. ಜಮೀನ್ದಾರಿ ಪಳಿಯುಳಿಕೆಯಾಗಿರೋ ಡಾ ಎಂ ಮೋಹನ ಅಳ್ವರು ತಮ್ಮ ಶಿಕ್ಷಣ ವ್ಯಾಪಾರಕ್ಕಾಗಿ ಇಂತಹ ಸುಂದರವಾದ ವರ್ಣರಂಜಿತ ವಿಷಯಗಳನ್ನು ಇಟ್ಟುಕೊಂಡು ನುಡಿಸಿರಿ ಜಾತ್ರೆ ನಡೆಸುತ್ತಿದ್ದಾರೆ.

ಈ ಬಾರಿಯ ನುಡಿಸಿರಿಯಲ್ಲಿ ಸಾಮರಸ್ಯ- ಹೊಸತನದ ಹುಡುಕಾಟ ಎಂಬ ವಿಷಯದ ಬಗ್ಗೆ ನಮ್ಮ ನೆಚ್ಚಿನ ಮೇಷ್ಟ್ರಾಗಿರುವ ಕುಂ ವೀರಭದ್ರಪ್ಪನವರು ಮಾತನಾಡಲಿದ್ದಾರೆ ಎಂದು ತಿಳಿದು ಆಘಾತವಾಯಿತು. ಈ ಬಾರಿ 12 ನೇ ನುಡಿಸಿರಿ ನಡೆಯುತ್ತಿದೆ. ಕಳೆದ 11 ವರ್ಷಗಳಿಂದಲೂ ನುಡಿಸಿರಿಯಲ್ಲಿ ಇಂತಹ ಪ್ರಗತಿಪರ ವಿಷಯಗಳ ಮೇಲೆ ಆಳ್ವರು ಭಾಷಣ ಮಾಡಿಸಿದ್ದಾರೆ. ಆದರೆ ಇದರಿಂದ ಸಾಮಾಜಿಕ ಸಾಮರಸ್ಯ ಇನ್ನಷ್ಟು ಹಾಳಾಗುತ್ತಾ ಹೋಯಿತೇ ಹೊರತು ಸುಧಾರಣೆಯಾಗಲಿಲ್ಲ. ನಿಮ್ಮಂತಹ ಗೌರವಾನ್ವಿತ ಸಾಹಿತಿಗಳು ನುಡಿಸಿರಿಯ ವೇದಿಕೆ ಹತ್ತಿ ಭಾಷಣ ಮಾಡುವುದರಿಂದ ಆಳ್ವರಿಗೆ ವಿಶ್ವಾಸಾರ್ಹತೆ ತಂದುಕೊಂಡುತ್ತಿದ್ದಾರೆ. ಈ ರೀತಿ ಗಳಿಸಿಕೊಂಡ ವಿಶ್ವಾಸಾರ್ಹ ನಾಯಕತ್ವದ ಲಾಭವನ್ನು ಅವರು ಹಿಂದೂ ಸಂಘಟನೆಗಳಿಗೆ ಧಾರೆ ಎರೆಯುತ್ತಿದ್ದಾರೆ. ಸರ್, ದಯವಿಟ್ಟು ಯೋಚನೆ ಮಾಡಿ.

ದಕ್ಷಿಣ ಕನ್ನಡದ ಇತಿಹಾಸದಲ್ಲೇ ಕೋಮುಗಲಭೆ ನಡೆಯದ ಏಕೈಕ ವಿಧಾನಸಭಾ ಕ್ಷೇತ್ರವೆಂದರೆ ಅದು ಮೂಡಬಿದ್ರೆ. ಜೊತೆಗೆ ಕರಾವಳಿಯ ಇತಿಹಾಸದಲ್ಲೇ ಒಂದೇ ಒಂದು ಬಾರಿಯೂ ಬಿಜೆಪಿ ಗೆಲ್ಲಲಾಗದ ಕ್ಷೇತ್ರವಿದ್ದರೆ ಅದೂ ಮೂಡಬಿದ್ರೆಯೇ. ಇಂತಹ ಮೂಡಬಿದ್ರೆಯಲ್ಲಿ ಇತ್ತೀಚೆಗೆ ಕೋಮುಗಲಭೆಗಳು ನಡೆದುಹೋಯಿತು. ದನ ಸಾಗಾಟದ ಹೆಸರಿನಲ್ಲಿ ಹಲ್ಲೆಗಳಾಯಿತು. ಕೊಲೆ ನಡೆಯಿತು. ಇದನ್ನೇ ಬಳಸಿಕೊಂಡು ಮುಸ್ಲಿಮರ ಅಂಗಡಿ ಮನೆಗಳ ದ್ವಂಸ ಮಾಡಲಾಯಿತು. ಈ ಎಲ್ಲಾ ಸಾಮರಸ್ಯ ಕದಡುವ ಘಟನೆಗಳಿಗೂ ಹಿಂದೂ ಸಮಾಜೋತ್ಸವಗಳಿಗೂ, ವಿಶ್ವ ಹಿಂದೂ ಪರಿಷತ್ ಸುವರ್ಣ ಮಹೋತ್ಸವಕ್ಕೂ, ಅದರ ಸಂಘಟಕರ ತೆರೆಯಮರೆಯ ನೆರವು-ಬೆಂಬಲಕ್ಕೂ ಸಂಬಂಧವಿಲ್ಲ ಎನ್ನುವಿರಾ ಸರ್ ? 

"ನಮ್ಮ ಪ್ರಗತಿಪರ ವಿಚಾರಧಾರೆಗಳನ್ನು ಅವರ ವೇದಿಕೆಯಲ್ಲೇ ಹೋಗಿ ಹೇಳ್ತೀವಿ’’ ಎಂದು ಕಳೆದ ಹತ್ತು ವರ್ಷಗಳಲ್ಲಿ ಅಲ್ಲಿ ಹೋಗಿ ಭಾಷಣ ಮಾಡಿದವರು ಹೇಳುತ್ತಲೇ ಇದ್ದಾರೆ. ಇದರಿಂದ ಛದ್ಮವೇಷಧಾರಿಗಳಾದ ಬಲಪಂಥೀಯರು ಲಾಭ ಮಾಡಿಕೊಂಡರೇ ಹೊರತು ಪ್ರಗತಿಪರ ಹೋರಾಟಗಳಿಗೆ ಯಾವ ಲಾಭಗಳೂ ಆಗಿಲ್ಲ. ಶಿಕ್ಷಣದ ವ್ಯಾಪಾರಿಗಳಿಗೆ, ಧರ್ಮಾಧಿಕಾರಿಗಳಿಗೆ, ರಿಯಲ್ ಎಸ್ಟೇಟ್ ಮಾಫೀಯಾಕ್ಕೆ ಇದರಿಂದ ಸಮಾಜದಲ್ಲಿ ಗೌರವ ದೊರೆಯುತ್ತಿದೆಯೇ ಹೊರತು ಬೇರಾವ ಸಾಧನೆಯೂ ಆಗಿಲ್ಲ ಎಂಬುದು ನಾವು ಕಂಡುಕೊಂಡ ಸತ್ಯ.

ನಮ್ಮೆಲ್ಲರ ಗುರುಗಳಂತಿದ್ದ ಯು.ಆರ್. ಅನಂತಮೂರ್ತಿಯವರು ತೀರಿಕೊಂಡ ದಿನವನ್ನು ನಾವು ಮರೆಯುವಂತಿಲ್ಲ. ಇಡೀ ರಾಜ್ಯದ ಶಾಲಾ ಕಾಲೇಜುಗಳಿಗೆ ಮರುದಿನ ರಜೆ ಘೋಷಿಸಲಾಗಿತ್ತು. ರಾಜ್ಯದಲ್ಲಿ ಒಂದು ರೀತಿಯ ಸೂತಕದ ವಾತಾವರಣ ಇತ್ತು. ಆದರೆ ಕರಾವಳಿ ಮತ್ತ್ತು ಮಲೆನಾಡು ಭಾಗದಲ್ಲಿ ಕೋಮುವಾದಿಗಳು ಪಟಾಕಿ ಸಿಡಿಸಿದರು. ಈ ಪಟಾಕಿ ಸಿಡಿಸಿದ ಕೋಮುವಾದಿಗಳ ಪೋಷಕರು ಯಾರೆಂದು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಇರಲಿ. ರಾಜ್ಯಾಧ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಿಸಿದ್ದರೂ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ರಜೆ ಘೋಷಿಸಿರಲಿಲ್ಲ. ರಜೆ ಕೊಟ್ಟೇ ಸಂತಾಪ ಸೂಚಿಸಬೇಕು ಎಂದೇನಿಲ್ಲ ಎನ್ನುವುದು ನಿಜ, ಆದರೆ ಅಂತಹದ್ದೊಂದು ರಜೆ ಕೋಮುವಾದಿಗಳ ಆರ್ಭಟಕ್ಕೆ ಒಂದು ಸಣ್ಣ ಪ್ರತಿರೋಧ ವ್ಯಕ್ತಪಡಿಸಿದಂತಾಗುತ್ತಿತ್ತು. ಸಾಹಿತಿಗಳನ್ನು ಪಲ್ಲಕ್ಕಿ ಮೇಲೆ ಕೂರಿಸಿ ಮೆರವಣಿಗೆ ಮಾಡುವ ಆಳ್ವಾರ ಮನಸ್ಸನ್ನು ಒಬ್ಬ ಹಿರಿಯ ಸಾಹಿತಿಯ ಸಾವು ಮತ್ತು ಅದನ್ನು ಸಂಭ್ರಮಿಸಿದ ದುಷ್ಟರ ಅಟ್ಟಹಾಸ ಕಲಕಲಿಲ್ಲ ಎನ್ನುವುದು ಎಷ್ಟೊಂದು ವಿಚಿತ್ರ ಅಲ್ಲವೇ? 

ಇದೆಲ್ಲದರ ಹೊರತಾಗಿಯೂ ಡಾ ಎಂ ಮೋಹನ ಆಳ್ವರು ತಾವು ಸಾಹಿತ್ಯದ ಪೋಷಕರು ಹೇಳಿಕೊಳ್ಳುತ್ತಾರೆ. ಅನಂತ ಮೂರ್ತಿಯವರ ಸಾವಿನ ನಂತರ ನಮ್ಮನ್ನೆಲ್ಲ ಆಘಾಥಕ್ಕೀಡುಮಾಡಿರುವುದು ಡಾ ಎಂ ಎಂ ಕಲ್ಬುರ್ಗಿ ಕೊಲೆ. ಆದರೆ ಸಾಹಿತ್ಯ ಪ್ರೇಮಿಗಳು, ಪೋಷಕರೂ ಆಗಿರುವ ಡಾ.ಆಳ್ವರು ಕನಿಷ್ಠ ನೂರು ಜನರನ್ನು ಸೇರಿಸಿ ಕಲ್ಪುರ್ಗಿಯವರ ಹತ್ಯೆಂiÀiನ್ನು ಖಂಡಿಸಲು ಮುಂದಾಗದಿರುವುದು ಏನನ್ನೂ ಸೂಚಿಸುತ್ತದೆ. ಹಾಗೆ ಮಾಡಿದರೆ ವಿಶ್ವಹಿಂದು ಪರಿಷತ್ ನಾಯಕರನ್ನು ಎದುರುಹಾಕಿಕೊಂಡಂತಾಗುತ್ತದೆ ಎಂದು ಅವರು ಭಯಪಟ್ಟಿರಬಹುದೇ? 

ಈ ಬಾರಿಯ ಆಳ್ವಾಸ್ ನುಡಿಸಿರಿಯನ್ನು ಉದ್ಘಾಟನೆ ಮಾಡಬೇಕು ಎಂದು ಹಿರಿಯ ರೈತ ಚಳುವಳಿಗಾರ ಕಡಿದಾಳು ಶ್ಯಾಮಣ್ಣರನ್ನು ಮೋಹನ ಆಳ್ವರು ಆಮಂತ್ರಿಸಿದ್ದರಂತೆ. ಶ್ಯಾಮಣ್ಣ ಅದನ್ನು ನಿರಾಕರಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಹೊಸತನದ ಹುಡುಕಾಟದ ಬಗ್ಗೆ ಮಾತನಾಡಲು ಡಾ ಸಿ ಎಸ್ ದ್ವಾರಕನಾಥ್ ಅವರನ್ನು ಕೇಳಿದ್ದರು. ಅವರೂ ಕೂಡಾ ಆಳ್ವರ ವಿಹಿಂಪ, ಆರ್ ಎಸ್ ಎಸ್ ನಂಟಿನ ಕಾರಣ ನೀಡಿ ಆಹ್ವಾನವನ್ನು ನೇರವಾಗಿಯೇ ನಿರಾಕರಿಸಿದ್ದಾರೆ. 

ಕಳೆದ ಕೆಲವು ವರ್ಷಗಳಿಂದ ನುಡಿಸಿರಿಯ ಬಣ್ಣ ಬಯಲಾಗುತ್ತಿರುವುದರಿಂದ ಎಚ್ಚೆತ್ತಿರುವ ನಮ್ಮ ಬಹುತೇಕ ಸಾಹಿತಿಗಳು, ಚಿಂತಕರು ಡಾ.ಆಳ್ವ ಅವರ ಆಹ್ಹಾನವನ್ನು ತಿರಸ್ಕರಿಸಿ ದೂರ ಉಳಿದಿದ್ದಾರೆ. ಇದರಿಂದಾಗಿ ಬಲಪಂಥೀಯ ಗುಂಪು ಬೌದ್ದಿಕ ಅಪೌಷ್ಠಿಕತೆಯಿಂದ ನರಳುವಂತಾಗಿದೆ. ಈ ಎಲ್ಲ ಸಂಗತಿಗಳು ನಿಮ್ಮ ಗಮನಕ್ಕೆ ಬಾರದೆಯೂ ಇರಬಹುದು. ಇದಕ್ಕಾಗಿ ಈ ಪತ್ರ ಬರೆಯುತ್ತಿದ್ದೇವೆ. ಕೊನೆಗೂ ನಿರ್ಧಾರ ನಿಮ್ಮದು. ನಿಮ್ಮನ್ನು ಅಪಾರ ಗೌರವದಿಂದ ಕಾಣುತ್ತಿರುವ ನಮ್ಮ ಮನಸ್ಸಿಗೆ ನೀವು ನೋವುಂಟುಮಾಡುವ ನಿರ್ಧಾರ ಕೈಗೊಳ್ಳಲಾರಿರಿ ಎಂದು ನಂಬಿದ್ದೇವೆ.

ವಿಶ್ವಾಸದಿಂದ,

ಅಕ್ಷತಾ ಹುಂಚದಕಟ್ಟೆ, ಡಾ ಅರುಣ್ ಜೋಳದಕೂಡ್ಲಿಗಿ, ಬಿ ಶ್ರೀಪಾದ ಭಟ್, ಟಿ ಕೆ ದಯಾನಂದ, ನವೀನ್ ಸೂರಿಂಜೆ, ಮುನೀರ್ ಕಾಟಿಪಳ್ಳ, ಅನಂತ್ ನಾಯಕ್, ಮುದ್ದು ತೀರ್ಥಹಳ್ಳಿ, ಇರ್ಷಾದ್ ಉಪ್ಪಿನಂಗಡಿ, ಲಿಂಗರಾಜ್ ಪ್ರಜಾಸಮರ, ಪೀರ್ ಬಾಷಾ, ಕಾವ್ಯಾ ಅಚ್ಯುತ್, ಜೀವನ್ ರಾಜ್ ಕುತ್ತಾರ್, ಟಿ ಎಸ್ ಗೊರವರ, ಜಯಶಂಕರ್ ಅಲಗೂರು, ಅಬ್ಬಾಸ್ ಕಿಗ್ಗ, ಕೈದಾಳ ಕೃಷ್ಣಮೂರ್ತಿ, ಸೈಫ್ ಜಾನ್ಸೆ ಕೊಟ್ಟೂರು, ಬಿ ಶ್ರೀನಿವಾಸ, ಪಂಪರೆಡ್ಡಿ ಅರಳಹಳ್ಳಿ, ಅಭಿನಂದನ್ ಬಳ್ಳಾರಿ, ಬಸವರಾಜ್ ಪೂಜಾರ್.

ಟಿಪ್ಪು ಎಂಬ ಅನವಶ್ಯಕ ಚರ್ಚೆ

Dr Ashok K R
ಹೆಚ್ಚು ಕಡಿಮೆ ಪ್ರತಿ ವರುಷವೂ ಟಿಪ್ಪುವಿನ ಪರ ವಿರೋಧದ ಚರ್ಚೆ ಪ್ರಾರಂಭವಾಗುತ್ತದೆ. ಚರ್ಚೆಯ ಎರಡೂ ಬದಿಯಿರುವವರ ಮಾತು – ಹೇಳಿಕೆ – ಬರಹಗಳು ಒಂದು ಅತಿಯಲ್ಲಿಯೇ ಇರುತ್ತವೆ. ಒಂದೆಡೆ ಟಿಪ್ಪು ಅಪ್ರತಿಮ ದೇಶಪ್ರೇಮಿ, ಬ್ರಿಟೀಷರ ವಿರುದ್ಧ ಹೋರಾಡಿದಾತ, ಹಿಂದೂ ದೇವಾಲಯಗಳಿಗೆ ದಾನ ಧರ್ಮ ನೀಡಿದ ಧರ್ಮ ಸಹಿಷ್ಣು ಎಂಬ ವಾದಗಳು ಕೇಳಿಬಂದರೆ ಮತ್ತೊಂದೆಡೆ ಟಿಪ್ಪು ದೇಶದ್ರೋಹಿ, ನೂರಾರು ಹಿಂದೂ ದೇವಾಲಯಗಳನ್ನು ಕೆಡವಿದಾತ, ಸಾವಿರಾರು ಹಿಂದೂಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಿಸಿದಾತ ಎಂಬ ವಾದಗಳು ಚಾಲ್ತಿಯಲ್ಲಿವೆ. ನೋಡಿದರೆ ಎರಡೂ ವಾದಗಳಲ್ಲೂ ಸತ್ಯಗಳಿವೆ. ಈ ಬಾರಿ ಕರ್ನಾಟಕದಲ್ಲಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಟಿಪ್ಪುವಿನ ಜಯಂತಿಯನ್ನು ಸರಕಾರದ ವತಿಯಿಂದ ನಡೆಸಲು ನಿರ್ಧರಿಸಿರುವುದು ಮತ್ತೊಂದು ರೌಂಡು ಟಿಪ್ಪು ಪರ ವಿರೋಧದ ಚರ್ಚೆಗೆ ಸರಕು ಒದಗಿಸಿದೆ. ಈ ಚರ್ಚೆಗಳು ಅವಶ್ಯಕವೇ?

ಟಿಪ್ಪು ಸಾಹಸಿ, ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದಾತ, ಬ್ರಿಟೀಷರ ಬೆದರಿಕೆಗೆ ಮಣಿಯದೆ ಹೋರಾಡಿ ಸತ್ತವನು ಎನ್ನುವುದೆಲ್ಲ ಸತ್ಯವೇ ಆದರೆ ಅಷ್ಟಕ್ಕೆ ಟಿಪ್ಪುವನ್ನು ದೇಶಪ್ರೇಮಿ ಎಂದೆಲ್ಲ ಹೊಗಳುವ ಅವಶ್ಯಕತೆಯೇನಿದೆ? ಅದು ಟಿಪ್ಪುಯಿರಬಹುದು ಮತ್ತೊಬ್ಬ ಮಗದೊಬ್ಬ ರಾಜರಿರಬಹುದು. ಅವರ್ಯಾರು ದೇಶಪ್ರೇಮಿಗಳಲ್ಲ, ದೇಶದ್ರೋಹಿಗಳಲ್ಲ; ಅವರೆಲ್ಲ ಅವರವರ ಸಾಮ್ರಾಜ್ಯಪ್ರೇಮಿಗಳಷ್ಟೇ. ಅವರ ಸಾಮ್ರಾಜ್ಯಕ್ಕೆ ಧಕ್ಕೆ ತರುವಂತಹ ವೈರಿಯನ್ನು ಎದುರಿಸಿ ನಿಲ್ಲುತ್ತಿದ್ದರು, ಕೆಲವೊಮ್ಮೆ ಗೆಲ್ಲುತ್ತಿದ್ದರು ಕೆಲವೊಮ್ಮೆ ಸೋಲುತ್ತಿದ್ದರು. ಇಷ್ಟಕ್ಕೂ ಟಿಪ್ಪುವನ್ನು ದೇಶಪ್ರೇಮಿಯೆಂದು ಕರೆಯಲು ಅವನ ಕಾಲಘಟ್ಟದಲ್ಲಿ ‘ಭಾರತ’ವೆಂಬ ದೇಶವಾದರೂ ಎಲ್ಲಿತ್ತು. ನೂರಾರು ರಾಜರ ನಡುವ ಹಂಚಿಹೋಗಿದ್ದ ದೇಶವನ್ನು ಒಗ್ಗೂಡಿಸಿ ನಂತರ ಮತ್ತೆ ಒಡೆದ ಖ್ಯಾತಿ ಬ್ರಿಟೀಷರದ್ದು, ಮತ್ಯಾರದೂ ಅಲ್ಲ. ಇಷ್ಟು ಕಾಮನ್ ಸೆನ್ಸ್ ಇಟ್ಕೊಳ್ಳದೆ ನೂರಿನ್ನೂರು ವರುಷಗಳ ಹಿಂದೆ ಸತ್ತು ಹೋದವರ ನೆನಪಿನಲ್ಲಿ ‘ಚರ್ಚೆ’ ಮಾಡುವುದು ಯಾವ ಸಂಭ್ರಮಕ್ಕೆ. ಬ್ರಿಟೀಷರ ವಿರುದ್ಧ ಹೋರಾಡಿದವರನ್ನು ದೇಶಪ್ರೇಮಿ ಎಂದು ಗುರುತಿಸುವುದಾದರೆ ಟಿಪ್ಪುವನ್ನೂ ದೇಶಪ್ರೇಮಿಯೆಂದು ಹೊಗಳಲು ಅಡ್ಡಿಯಿಲ್ಲ.

ಮೊನ್ನೆ ಗೆಳೆಯನೊಬ್ಬ ಮೆಸೇಜು ಕಳಿಸಿದ್ದ. ಟಿಪ್ಪು ಜಯಂತಿ ಸರಕಾರ ಆಚರಿಸೋದು ತಪ್ಪು ಅಂತ. ಮೈಸೂರು ಸಂಸ್ಥಾನದ ಕುರುಹಾದ ದಸರಾವನ್ನು ಸರಕಾರ ಪ್ರತೀ ವರ್ಷ ಆಚರಿಸುತ್ತದೆ, ‘ರಾಜ’ ಕುಟುಂಬಕ್ಕೆ ಲಕ್ಷ ಲಕ್ಷ ಎಣಿಸಿ ಕೊಡುತ್ತದೆ, ಹಂಪಿ ಉತ್ಸವ ಆಚರಿಸುತ್ತದೆ ಇನ್ನೂ ಹತ್ತಲವು ಜಯಂತಿಗಳನ್ನು ಆಚರಿಸುತ್ತದೆ ಆಗೆಲ್ಲ ಸರಕಾರದ ವತಿಯಿಂದ ಜಯಂತಿಗಳನ್ನು ನಡೆಸುವುದು ತಪ್ಪು ಎನ್ನಿಸದೆ ಈಗ ಟಿಪ್ಪು ಜಯಂತಿಯ ವಿಷಯಕ್ಕೆ ಮಾತ್ರ ವಿರೋಧ ವ್ಯಕ್ತವಾಗುವುದು ಯಾಕೆ? ಟಿಪ್ಪು ಸುಲ್ತಾನ್ ಮುಸ್ಲಿಮನೆಂಬ ಕಾರಣಕ್ಕೆ ತಾನೇ ಈ ವಿರೋಧ. ಟಿಪ್ಪು ಸುಲ್ತಾನ್ ಕೇರಳದಲ್ಲಿ, ಮಲೆನಾಡಿನಲ್ಲಿ ಬಲವಂತದ ಮತಾಂತರ ನಡೆಸಿದ್ದಾನೆ ಎಂದು ಬೊಬ್ಬೆಯೊಡೆಯುವವರು ಕೇರಳದಲ್ಲಿ ದಲಿತರ ಮೇಲಿದ್ದ ‘ತಲೆ ತೆರಿಗೆ’ ‘ದೇಹ ತೆರಿಗೆ’ ‘ಮೊಲೆ ತೆರಿಗೆ’ಯ ಬಗ್ಗೆ ಚಕಾರವೆತ್ತುವುದಿಲ್ಲ. ಬಲವಂತದಿಂದಲೂ ಮತಾಂತರ ನಡೆದಿರುವುದನ್ನು ನಿರಾಕರಿಸದೆಯೇ ಹಿಂದೂ ಧರ್ಮದೊಳಗಿನ ಜಾತಿ ಪದ್ಧತಿ ಕೂಡ ಈ ಮತಾಂತರಕ್ಕೆ ಪೂರಕವಾಯಿತು ಎನ್ನುವುದನ್ನು ಮರೆಯಬಾರದು. 

ಸರಕಾರ ಹಿಂಗೆ ಇರೋ ಬರೋ ರಾಜರ ಹೆಸರಿನಲ್ಲೆಲ್ಲಾ ಜಯಂತಿ ಉತ್ಸವಗಳನ್ನು ಆಚರಿಸಬೇಕೆ ಎಂಬ ಪ್ರಶ್ನೆಗೆ ಉತ್ತರ ಹೌದು ಮತ್ತು ಇಲ್ಲ. ಇಂತಹ ಉತ್ಸವಗಳನ್ನೆಲ್ಲ ಆಚರಿಸೋದು ಸರಕಾರದ ಕೆಲಸವಲ್ಲ ಇನ್ನು ಮುಂದೆ ಸರಕಾರದ ವತಿಯಿಂದ ಮೈಸೂರು ದಸರವನ್ನು ನಡೆಸಲಾಗುವುದಿಲ್ಲ ಎಂದು ಹೇಳುವ ಧೈರ್ಯವಂತ ಸರಕಾರವನ್ನು ಕರ್ನಾಟಕದಲ್ಲಿ ಕಾಣಬಹುದೆ? ಹಾಗೆ ಹೇಳಿದರೆ ಇದೇ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿರುವವರು ಹೇಗೆ ಪ್ರತಿಕ್ರಿಯೆ ನೀಡಬಹುದು? ಹಾಗೆ ನೋಡಿದರೆ ಮೈಸೂರು ಸಂಸ್ಥಾನ ಬ್ರಿಟೀಷರ ವಿರುದ್ಧ ಗಟ್ಟಿ ನೆಲೆಯಲ್ಲಿ ಹೋರಾಡಿದ್ದೇ ಇಲ್ಲ. ‘ದೇಶದ್ರೋಹಿ’ ಕುಟುಂಬಕ್ಕೆ ವರುಷ ವರುಷ ಜನರ ತೆರಿಗೆ ದುಡ್ಡಿನಿಂದ ಲಕ್ಷ ಲಕ್ಷ ಎಣಿಸುತ್ತಾರಲ್ಲ ಅದನ್ನೂ ನಿಲ್ಲಿಸಬೇಕಲ್ಲವೇ? ಸರಕಾರಗಳಿಗೆ ಈ ಉತ್ಸವ, ಜಯಂತಿಗಳೆಲ್ಲವೂ ಮತ ಬ್ಯಾಂಕ್ ಮತ್ತು ಹಣ ಮಾಡುವ ದಂಧೆಗಳಷ್ಟೇ. ದಸರೆಯ ನೆಪದಲ್ಲಿ ಟಾರು ಬಳಿಯಲು, ರಸ್ತೆಗಳನ್ನು ಸಿಂಗರಿಸಲು ಪ್ರತೀ ವರುಷ ಹಣ ಬಿಡುಗಡೆಯಾಗುತ್ತದೆ. ವರುಷ ಮುಗಿಯುವದರೊಳಗೆ ಕೀಳುವಂತಹ ಟಾರನ್ನು ಹಾಕುವುದು ದುಡ್ಡು ಮಾಡುವ ಉದ್ದೇಶದಿಂದಲೇ ಅಲ್ಲವೇ? ಈ ಮತ ಬ್ಯಾಂಕ್, ಭ್ರಷ್ಟಾಚಾರದ ಲೆಕ್ಕದಲ್ಲಿ ನೋಡಿದರೆ ಸರಕಾರ ಎಲ್ಲ ಉತ್ಸವ ಜಯಂತಿಗಳನ್ನೂ ನಿಲ್ಲಿಸಿಬಿಡಬೇಕು. ಆದರೆ ಈ ಉತ್ಸವಗಳಿಂದ ಒಂದು ಅನುಕೂಲವೂ ಇದೆ. ಅದು ಪಾರಂಪರಿಕ ತಾಣಗಳ ಕಟ್ಟುನಿಟ್ಟು ನಿರ್ವಹಣೆ, ಕಾಲಕಾಲಕ್ಕೆ ನಡೆಯುವ ನವೀಕರಣ ಮತ್ತು ಪ್ರವಾಸೋದ್ಯಮಕ್ಕೆ ಅಪಾರ ಪ್ರೋತ್ಸಾಹ. ಮೈಸೂರಿಗೆ ವರುಷದಿಂದ ವರುಷಕ್ಕೆ ಪ್ರವಾಸಿಗರ ಸಂಖೈ ಹೆಚ್ಚುವುದಕ್ಕೆ ದಸರಾ ಮೆರವಣಿಗೆಯ ಕೊಡುಗೆಯನ್ನು ಕಡೆಗಣಿಸಲಾಗದು. ಅದೇ ಲೆಕ್ಕದಲ್ಲಿ ಟಿಪ್ಪು ಜಯಂತಿಯಿಂದ ಶ್ರೀರಂಗಪಟ್ಟಣ ಒಂದಷ್ಟು ಸಿಂಗಾರಗೊಂಡು ಪ್ರವಾಸಿಗರ ಸಂಖೈ ಹೆಚ್ಚಿ ವ್ಯಾಪಾರ ವಹಿವಾಟು ಹೆಚ್ಚಿದರೆ ಯಾಕೆ ಬೇಡವೆನ್ನಬೇಕು? ಟಿಪ್ಪು ಜಯಂತಿಯ ಹೆಸರಿನಲ್ಲಿ ಎಲ್ಲಾ ಜಿಲ್ಲೆ ತಾಲ್ಲೂಕುಗಳಿಗೆ ದುಡ್ಡು ಹಂಚುವುದನ್ನು ಬಿಟ್ಟು ಅಷ್ಟೂ ದುಡ್ಡನ್ನು ಶ್ರೀರಂಗಪಟ್ಟಣದ ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಬಳಸಿದರೆ ಪ್ರವಾಸೋದ್ಯಮ ಬೆಳೆಯುತ್ತದೆಯೆನ್ನುವುದನ್ನು ಮರೆಯಬಾರದು.

ನವೆಂ 7, 2015

ಇಲ್ಲಿ ಎಲ್ಲರೂ ಸಮಾನರು; ದಲಿತರು ಮಾತ್ರ ನಿಕೃಷ್ಟರು....

ಮೀಸಲಾತಿಯ ವಿರುದ್ಧದ ಮೇಲಿನ ಚಿತ್ರವನ್ನು ನಿಮ್ಮಲ್ಲಿ ಬಹಳಷ್ಟು ಜನರು ಫೇಸ್ ಬುಕ್ಕಿನಲ್ಲೋ ಮತ್ತೊಂದು ಕಡೆಯೋ ಗಮನಿಸಿರುತ್ತೀರಿ. ಒಂದು ಲೈಕನ್ನೂ ಒತ್ತಿರುತ್ತೀರಿ, ಶೇರ್ ಕೂಡ ಮಾಡಿರುತ್ತೀರಿ. 'ನೋಡ್ರಿ ನೋಡ್ರಿ ಮೀಸಲಾತಿ ಇಲ್ಲದ ಅಮೆರಿಕಾದಲ್ಲಿ ಹೇಗೆಲ್ಲ ಅಭಿರುದ್ಧಿಯಾಗಿದೆ, ನಾವು ನೋಡಿ ಎಷ್ಟು ಹಿಂದುಳಿದಿದ್ದೀವಿ' ಎಂದು ನೊಂದುಕೊಂಡಿರುತ್ತೀರಿ. ಆ ಚಿತ್ರವನ್ನು ಸೃಷ್ಟಿಸಿದವನಿಗೆ ಮತ್ತು ಅದನ್ನು ಮೆಚ್ಚಿ ಹಂಚಿಕೊಂಡವರಿಗೆಲ್ಲ ಭಾರತದಲ್ಲಿನ್ನೂ ಇರುವ ಸಾಮಾಜಿಕ ಅಸಮಾನತೆಯ ಸಂಪೂರ್ಣ ಅರಿವಿದೆ. ಬಹಿರಂಗವಾಗಿ ತೋರಿಸಿಕೊಳ್ಳದಿದ್ದರೂ ಅಂತರಂಗದಲ್ಲಿ ದಲಿತರನ್ನು ಕೀಳಾಗಿ ಕಾಣಬೇಕೆಂದು ಕಲಿಸಿರುವ ಚಾತುರ್ವರ್ಣ್ಯದ ಕುರಿತಾಗಿ ಅಪಾರ ಗೌರವವಿದೆ. ಅಂತದ್ದೇ ಗೌರವಾನ್ವಿತ ಊರಿನಿಂದ ಬಂದಿರುವ ಥರ್ಡ್ ಕ್ಲಾಸ್ ಸುದ್ದಿಯಿದು.
ಸರಕಾರೀ ಕೆಲಸದಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೂ ಪ್ರತಿ ದಿನ ಏನೇನು ಕೆಲಸ ಮಾಡಿದರೆಂದು ಬರೆದಿಡುವುದನ್ನು ಮಾತ್ರ ಮರೆಯಬಾರದು. ಕೋಲಾರದ ಕಗ್ಗನಹಳ್ಳಿಯ ಸರಕಾರಿ ಶಾಲೆಯ ಅಡುಗೆ ಕೆಲಸದ ಮುಖ್ಯಸ್ಥೆ ರಾಧಮ್ಮನಿಗೂ ಒಂದು ನೋಟ್ ಪುಸ್ತಕ ನೀಡಲಾಗಿದೆ. ತಪ್ಪದೇ ಪ್ರತೀ ದಿನ ರಾಧಮ್ಮಳೂ ಒಂದು ಸಾಲು ಬರೆಯುತ್ತಾಳೆ. 'ಇವತ್ತು ಯಾರೂ ಊಟ ಮಾಡಿಲ್ಲ' ಎಂಬ ಸಾಲು ಇಡೀ ಡೈರಿಯನ್ನು ತುಂಬಿಹೋಗಿದೆ. ಸರಕಾರೀ ಶಾಲೆಯೆಂದು ಊರಿನವರು ಮಕ್ಕಳನ್ನು ಕಳುಹಿಸುತ್ತಿಲ್ಲವೇನೋ, ಅಕ್ಕಪಕ್ಕದ ಖಾಸಗಿ ಶಾಲೆಗೆ ಕಳುಹಿಸುತ್ತಿರಬೇಕೆಂದುಕೊಂಡರೆ ಅದೂ ಸುಳ್ಳು. ಊರಿನ ಮಕ್ಕಳು ಹೋಗುವುದು ಪಕ್ಕದ ಹಳ್ಳಿಯ ಸರಕಾರೀ ಶಾಲೆಗೆ. ಊರಿನಲ್ಲೇ ಉತ್ತಮವಾದ ಶಾಲೆಯಿದ್ದರೂ ಪಕ್ಕದ ಶಾಲೆಗೆ ಮಕ್ಕಳು ಹೋಗುವುದ್ಯಾಕೆ?
ಕಗ್ಗನಹಳ್ಳಿಯ ರಾಧಮ್ಮ
ಯಾಕೆಂದರೆ ರಾಧಮ್ಮ ಚಾತುರ್ವಣ್ಯದ ಒಳಗೂ ಪ್ರವೇಶ ಪಡೆಯದ 'ನಿಕೃಷ್ಟ' ದಲಿತ ಜಾತಿಗೆ ಸೇರಿದ ಹೆಣ್ಣುಮಗಳು. 2014ರಲ್ಲಿ ರಾಧಮ್ಮಳನ್ನು ಅಡುಗೆಯ ಕೆಲಸಕ್ಕೆ ನೇಮಿಸಿದ ನಂತರ ಇದುವರೆಗೆ ಒಟ್ಟು ನೂರು ವಿದ್ಯಾರ್ಥಿಗಳನ್ನು ಅವರ ಹೆತ್ತವರು ಶಾಲೆಯಿಂದ ಬಿಡಿಸಿಬಿಟ್ಟಿದ್ದಾರೆ. 'ಆದಿ ಕರ್ನಾಟಕ ಜಾತಿಗೆ ಸೇರಿದ ಮಹಿಳೆ ಮಾಡಿದ ಅಡುಗೆಯನ್ನು ನಮ್ಮ ಮಕ್ಕಳು ತಿನ್ನುವುದು ಹೇಗೆ ಸಾಧ್ಯ?' ಎಂಬ ಜಾತಿ ಶ್ರೇಷ್ಟತೆಯೇ ಇದಕ್ಕೆಲ್ಲ ಕಾರಣ. ಚೆನ್ನಾಗಿದ್ದ ಶಾಲೆಯನ್ನು ಹಾಳು ಮಾಡಿದ್ದೇ ಈ ರಾಧಮ್ಮ ಎಂದು ದೂಷಿಸುವ ಮಟ್ಟಿಗೆ ಅಲ್ಲಿನ ಊರಿನವರು ಮಾತನಾಡುತ್ತಿದ್ದಾರೆ ಎಂದು ವರದಿ ಮಾಡಿದೆ ಇಂಡಿಯನ್ ಎಕ್ಸ್ ಪ್ರೆಸ್.
ಈಗಲ್ಲಿರುವ ವಿದ್ಯಾರ್ಥಿಗಳ ಸಂಖೈ ಹದಿನೆಂಟು ಮಾತ್ರ. ಇನ್ನೊಂದು ಎಂಟು ಜನರು ಶಾಲೆ ಬಿಟ್ಟರೆ ಶಾಲೆಯನ್ನೇ ಮುಚ್ಚುವ ಪರಿಸ್ಥಿತಿ ಸೃಷ್ಟಿಯಾಗುತ್ತೆ. 'ಥೂ ಈ ಹಾಳಾದ್ ರಾಧಮ್ಮನಿಂದ ಇರೋ ಒಂದು ಶಾಲೇನೂ ಮುಚ್ಚೋಯ್ತು' ಅಂತ ಬಿಟ್ಟಿಯಾಗಿ ಸಿಗುವ ದಲಿತರನ್ನು ಬಯ್ದಾಡುತ್ತಾ ಊರವರೆಲ್ಲ ಕುಸಿ ಪಡಬಹುದು. ಹಿಂದೂ ಧರ್ಮ ನಾಶವಾಗುವವರೆಗೆ ದಲಿತರಿಗೆ ಮುಕ್ತಿಯಿಲ್ಲ ಎಂದ್ಹೇಳಿದ್ದು ಅಂಬೇಡ್ಕರ್ ಅಲ್ಲವೇ?