ಅಕ್ಟೋ 16, 2015

ಕ್ರಾಂತಿವೀರ ಖೇಣಿ ಕಣಿಯಲ್ಲಿ ಸುಳ್ಳೆಲ್ಲಿದೆ!

ಬೀದರಿನ ಶಾಸಕರಾದ ಮಾನ್ಯ ಅಶೋಕ್ ಖೇಣಿಯವರು ಒಂದು ಅಮೋಘ ಅಧ್ಯಯನ ಕೈಗೊಂಡು ರೈತರ ಆತ್ಮಹತ್ಯೆಗೆ ಕಾರಣಗಳನ್ನು ಕಂಡುಹಿಡಿದಿದ್ದಾರೆ. ಸನ್ಮಾನ್ಯ ಅಶೋಕ್ ಖೇಣಿಯವರನ್ನು ರೈತ ಸಮುದಾಯ ತಮ್ಮ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡು ಉದ್ಧಾರವಾಗುವ ದಾರಿಯನ್ನು ಹಿಡಿಯುವುದನ್ನು ಬಿಟ್ಟು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸನ್ಮಾನ್ಯರ ಅತ್ಯಮೋಘ ಕೊಡುಗೆಯಾದ ನೈಸಲ್ಲದ ನೈಸ್ ರಸ್ತೆಯ 'ಅಭಿರುದ್ಧಿ'ಗೆಂದು ಕಟ್ಟಲಾಗಿದ್ದ ಟೋಲ್ ಬೂತನ್ನು 'ಕಿಡಿಗೇಡಿಗಳು' ಧ್ವಂಸ ಮಾಡಿ ಅಶೋಕ್ ಖೇಣಿಯವರ ಮನ ನೋಯಿಸುವಂತಹ ಕೃತ್ಯವನ್ನೆಸಗಿರುವುದು ಅಕ್ಷಮ್ಯವೇ ಸರಿ. ಇಷ್ಟಕ್ಕೂ ಅಶೋಕ್ ಖೇಣಿ ಅಧ್ಯಯನದಲ್ಲಿದ್ದದಾದರೂ ಏನು?
ಜೂನ್ ಜುಲೈ ತಿಂಗಳಲ್ಲಿ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದ್ಯಾಕೆ ಎಂದು ನಮ್ಮ ನಾಡಿನ ಮುಖ್ಯಮಂತ್ರಿಗಳೇ ತಲೆ ಕೆರೆದುಕೊಂಡಿದ್ದರು. ತಲೆ ಕೆರೆದುಕೊಳ್ಳುವುದರ ಬದಲು ಖೇಣಿಯವರನ್ನು ಕರೆಸಿ ಕೇಳಿದ್ದರೆ ಎಲ್ಲವೂ ಪರಿಹಾರವಾಗಿಬಿಡುತ್ತಿತ್ತು. ಇರಲಿ, ಖೇಣಿ ಅಧ್ಯಯನ ಸಂಸ್ಥೆಯ ವರದಿಯ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ 700 ರೈತರಲ್ಲಿ 500 ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಅವರ ಜೂಜು ಪ್ರವೃತ್ತಿ ಕಾರಣವಂತೆ. ಬೆಳೆ ಬೆಳೆಯುತ್ತೀನೆಂದು ಬ್ಯಾಂಕುಗಳಿಗೆ, ಬಡ್ಡಿ ಸಾಲ ನೀಡುವವರಿಗೆ ನಂಬಿಸಿ ಹಣ ಪಡೆದು ಆ ಹಣವನ್ನೆಲ್ಲಾ ಜೂಜಿನಲ್ಲಿ ಕಳೆದು ಸಾಲ ತೀರಿಸಲಾಗದೆ ನೇಣಿಗೆ, ವಿಷಕ್ಕೆ ಶರಣಾಗಿದ್ದಾರಂತೆ. ರೈತ ಬಂಧು ಖೇಣಿ ಹೇಳಿರುವುದರಲ್ಲಿ ಸುಳ್ಳೆಲ್ಲಿದೆ? ಇದನ್ನರಿಯದವರು ಅನಾವಶ್ಯಕವಾಗಿ ಖೇಣಿಯವರ ಮಾನ ಹರಾಜಾಕುತ್ತಿರುವುದನ್ನು ಭಯಾನಕ ಮಾತುಗಳಲ್ಲಿ ಖಂಡಿಸಬೇಕೆಂದು ಹೊಟ್ಟೆಗೆ ಅನ್ನ ತಿನ್ನದವರೆಲ್ಲರನ್ನೂ ಈ ಮೂಲಕ ಕೇಳಿಕೊಳ್ಳುತ್ತೇವೆ.
Freedictionary ವೆಬ್ ಪುಟದ ಪ್ರಕಾರ ಜೂಜು ಅಂದರೆ gamblingಗೆ ಈ ಕೆಳಗಿನ ಅರ್ಥಗಳನ್ನು ನೀಡಲಾಗಿದೆ
1. To bet on an uncertain outcome, as of a contest
2. To play a game of chance for stakes.
3. To take a risk in the hope of gaining an advantage or a benefit.

ಪ್ರತಿಫಲದ ಬಗ್ಗೆ ಚಿಂತಿಸದೆ ಹಣವನ್ನೂಡುವುದು, ಅದೃಷ್ಟ ನಂಬಿ ದುಡ್ಡು ಸುರಿಯುವುದು, ಲಾಭವಾಗಬಹುದೆಂಬ ನಿರೀಕ್ಷೆಯಿಂದ ಅಪಾಯಕ್ಕೆದುರಾಗುವುದು ಜೂಜುಗಾರನ ಪ್ರಮುಖ ಲಕ್ಷಣಗಳು. ಹೂಡಿದ ದುಡ್ಡು ಮರಳುವುದು ನಿರ್ಧಾರವಾಗುವುದು ಹೂಡಿಕೆದಾರನಿಂದಲ್ಲ, ಬೇರೊಬ್ಬನಿಂದ. ನಮ್ಮ ರೈತರಲ್ಲೂ ಈ ಎಲ್ಲಾ ಲಕ್ಷಣಗಳು ಇದೆಯಲ್ಲ? ಬೆಳೆ ಬರುತ್ತೋ ಇಲ್ಲವೋ ಎಂದು ಯೋಚಿಸದೆ ಬೀಜ ಬಿತ್ತುತ್ತಾನೆ, ಮಳೆಯೆಂಬ ಅದೃಷ್ಟವನ್ನು ನಂಬಿ ದುಡ್ಡು ಸುರಿಯುತ್ತಾನೆ, ಲಾಭವಾಗಬಹುದೆಂಬ ನಿರೀಕ್ಷೆಯಿಂದ ಎಲ್ಲಾ ರೀತಿಯ ಅಪಾಯಗಳನ್ನೂ ಎದುರುಗೊಳ್ಳುತ್ತಾನೆ; ಕೊನೆಗೆ ಕೈಹತ್ತಿದ ಬೆಳೆಗೆ ಬೆಲೆ ನಿರ್ಧರಿಸುವುದು ದಲ್ಲಾಳಿ/ವರ್ತಕ/ಸರಕಾರ. ರೈತರಿಗಿಂತ ದೊಡ್ಡ ಜೂಜುಕೋರ ಯಾರಿದ್ದಾರೋ ತೋರಿಸಿ. ಸನ್ಮಾನ್ಯ ಅಶೋಕ್ ಖೇಣಿಯವರನ್ನು ವಿರೋಧಿಸುವವರು ಇಂತಹ ಒಳಾರ್ಥಗಳನ್ನೆಲ್ಲ ಯೋಚಿಸಬೇಕು. ಯೋಚಿಸಿದ ನಂತರ ಇಂತಹ ಸನ್ಮಾನ್ಯರನ್ನು ಶಾಸಕರನ್ನಾಗಿ ಆಯ್ಕೆ ಮಾಡುವ ನಮ್ಮ ಮುಟ್ಟಾಳತನಕ್ಕೆ ನಾವೇ ನಮ್ಮ ಕೆನ್ನೆಗೆರಡು ಬಾರಿಸಿಕೊಳ್ಳಬೇಕು.

ಮುಹಮ್ಮದರನ್ನು ಜನಪದವಾಗಿಸುವ ‘ಓದಿರಿ’

odiri
Dr Ashok K R
ಸ್ನಾತಕೋತ್ತರ ಪದವಿ ಓದುತ್ತಿದ್ದ ದಿನಗಳಲ್ಲಿ ಒಂದು ಸುತ್ತು ಭಗವದ್ಗೀತೆ ಓದಿ ಮುಗಿಸಿದ್ದೆ. ಕುರಾನ್ ಓದೋಣವೆನ್ನಿಸಿತ್ತು. ಇಂಗ್ಲೀಷಿನಲ್ಲಿ ಓದೋ ಕಷ್ಟವ್ಯಾಕೆ ಎಂದುಕೊಂಡು ಕನ್ನಡ ಕುರಾನ್ ಹುಡುಕಿದವನಿಗೆ ಪುಸ್ತಕ ಸಿಕ್ಕಿತ್ತಾದರೂ ಮುನ್ನೂರು ರುಪಾಯಿ ಜೇಬಿನಲ್ಲಿರಲಿಲ್ಲ! ಮುಂದೆ ಯಾವಾಗಲಾದರೂ ಓದಿದರಾಯಿತು ಎಂದುಕೊಂಡೆ. ಓದಲಿಲ್ಲ. ರಂಜಾನ್ ಮಾಸದಲ್ಲಿ ಕಲಬುರಗಿಯ ವಿದ್ಯಾರ್ಥಿಗಳು ಇಫ್ತಿಯಾರ್ ಕೂಟ ಏರ್ಪಡಿಸುತ್ತಿದ್ದರು. ಆ ಸಮಯದಲ್ಲಿ ಇಸ್ಲಾಮಿನ ಬಗೆಗಿನ ಪುಸ್ತಕಗಳನ್ನು ಉಚಿತವಾಗಿ ಹಂಚುತ್ತಿದ್ದರು. ಆಂಗ್ಲದಲ್ಲಿದ್ದ ಆ ಪುಸ್ತಕಗಳನ್ನು ಓದುವುದಕ್ಕೆ ಯಮಹಿಂಸೆಯಾಗುತ್ತಿತ್ತು. ಕಾರಣ ಎಲ್ಲೆಲ್ಲಿ Prophet ಎಂದು ಬರೆಯುತ್ತಾರೋ ಅಲ್ಲೆಲ್ಲಾ Peace be upon him ಅಥವಾ ಅದರ ಸಂಕ್ಷಿಪ್ತ ರೂಪವಾದ pbuh ಎಂಬ ಅಕ್ಷರಗಳು. ಸರಾಗ ಓದಿಗೆ ಅಡ್ಡಿಯುಂಟಾದರೆ ಪುಸ್ತಕ ಓದುವ ಆಸಕ್ತಿ ಉಳಿಯುವುದಾದರೂ ಹೇಗೆ? ಪ್ರವಾದಿ/ ಇಸ್ಲಾಮಿನ ಬಗ್ಗೆ ಇರುವ ಪುಸ್ತಕಗಳು/ಲೇಖನಗಳು ಒಂದೋ ಅತಿಯಾದ ಧಾರ್ಮಿಕ ಪ್ರಜ್ಞೆಯ ಭಾರದಿಂದ ನಲುಗಿರುತ್ತವೆ, ಇಲ್ಲ ಇಸ್ಲಾಮೋಫೋಬಿಯಾದ ಪ್ರಭಾವಕ್ಕೆ ಒಳಗಾದವರ ಸುಳ್ಳಿನ ಕಂತೆಯಾಗಿರುತ್ತದೆ. ಎರಡೂ ರೀತಿಯ ಬರಹಗಳು ಧಾರ್ಮಿಕ ನಂಬುಗೆಯಿರದ ದ್ವೇಷದ ಮನಸ್ಥಿತಿಯಿರದ ಓದುವ ಕುತೂಹಲವಷ್ಟೇ ಇರುವ ವ್ಯಕ್ತಿಗೆ ರುಚಿಸಲಾರದು. ಇಂತವರ ಓದಿಗೆ ಅನುಕೂಲಕರವಾಗಲೆಂದೇ ಬೋಳೂವಾರ ಮಹಮದ್ ಕುಂಞಿ ‘ಓದಿರಿ’ ಪುಸ್ತಕವನ್ನು ಬರೆದಿದ್ದಾರೆ. ಪೂರ್ಣವಾಗಲ್ಲದಿದ್ದರೂ ಪ್ರವಾದಿಯನ್ನು ರವಷ್ಟು ಮಟ್ಟಿಗಾದರೂ ಕನ್ನಡದ ಓದುಗರಿಗೆ ಪರಿಚಯಿಸುವ ಹತ್ತಿರವಾಗಿಸುವ ಕೆಲಸವನ್ನು ಓದಿರಿ ಮಾಡುತ್ತದೆ. ಯಾವ ಕಾಲದ ಯಾವ ಪ್ರವಾದಿಯಾದರೂ ಆಗ ಪ್ರಚಲಿತದಲ್ಲಿದ್ದ ಅಂಧಾಚರಣೆಗಳ ವಿರುದ್ಧ ಹೋರಾಡುತ್ತ ಹೊಸ ಧರ್ಮವನ್ನು ಹುಟ್ಟುಹಾಕುತ್ತಾರೆ. ಕಾಲ ಸವೆದಂತೆ ಆ ಹೊಸ ಧರ್ಮವೂ ಕೂಡ ಅಂಧಾಚರಣೆಯ ಕೂಪದಲ್ಲಿ ಬಿದ್ದು ಬಿಡುವುದು ಕೂಡ ಕಾಲ ತಿಳಿಸಿದ ಸತ್ಯವೇ!

ಪ್ರವಾದಿಯನ್ನು ಚಿತ್ರ ರೂಪದಲ್ಲಿ ಮೂಡಿಸುವುದು ಬಿಡಿ ಮಾತನಾಡುವುದು, ಚರ್ಚಿಸುವುದು, ಬರೆಯುವುದು ಕೂಡ ಅಪರಾಧವೆಂದು ನಂಬುವ ಅನೇಕ ಮುಸ್ಲಿಮರಿದ್ದಾರೆ. ಇಸ್ಲಾಮಿನ ವಿಚಾರಗಳನ್ನು ಪ್ರಶ್ನಿಸಿದವರ ಕೈಕತ್ತರಿಸುವವರು, ಕೊಲೆಗೈಯ್ಯುವವರು ಮತ್ತವರನ್ನು ಬೆಂಬಲಿಸುವವರ ಸಂಖೈಯೇನೂ ಕಡಿಮೆಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೋಳುವಾರು ಮಹಮದ್ ಕುಂಞಿಯವರ ‘ಓದಿರಿ’ ಕಾದಂಬರಿ ಯಾವ ರೀತಿಯಾಗಿ ಪ್ರವಾದಿ ಮುಹಮ್ಮದರನ್ನು ಚಿತ್ರಿಸಿರಬಹುದು ಎನ್ನುವ ಕುತೂಹಲದಿಂದಲೇ ಪುಸ್ತಕವನ್ನು ಕೈಗೆತ್ತಿಕೊಂಡೆ. ಮೊದಲ ನೆಮ್ಮದಿ ಮುಹಮ್ಮದರ ಹೆಸರು ಬಂದಲ್ಲೆಲ್ಲ peace be upon him ಎಂಬ ಸಾಲುಗಳಿಲ್ಲದಿರುವುದು! ಇದು ಶುದ್ಧಾನುಶುದ್ಧ ಕಾದಂಬರಿಯೇ ಹೊರತು ಧಾರ್ಮಿಕ ಪ್ರಜ್ಞೆಯ ಭಾರದಿಂದ ರೂಪಿತವಾಗಿರುವ ಪುಸ್ತಕವಲ್ಲ. ಬೋಳುವಾರರ ಕಥೆಗಳು ಯಾವ ರೀತಿಯಿಂದ ಓದಿಸಿಕೊಳ್ಳುವ ಗುಣವನ್ನಳವಡಿಸಿಕೊಂಡಿವೆಯೋ ‘ಓದಿರಿ’ ಕೂಡ ಸರಾಗವಾಗಿ ಓದಿಸಿಕೊಳ್ಳುತ್ತದೆ ಅಲ್ಲೊಂದು ಇಲ್ಲೊಂದು ಅಡೆತಡೆಗಳನ್ನೊರತುಪಡಿಸಿ. ಅಂತರಂಗ, ಬಹಿರಂಗ ಮತ್ತು ಚದುರಂಗದಲ್ಲಿ ಪ್ರವಾದಿಯವರ ವಿವಿಧ ಕಾಲಘಟ್ಟದ ಕಥೆಗಳನ್ನು ಹೆಣೆಯಲಾಗಿದೆ. ಅಂತರಂಗ ಬಾಲಕ ಮುಹಮ್ಮದರಲ್ಲಿ ನಿಧನಿಧಾನಕ್ಕೆ ರೂಪುಗೊಳ್ಳುವ ಪ್ರವಾದಿತನದ ಬಗೆಗಿದ್ದರೆ ಬಹಿರಂಗ ಮುಹಮ್ಮದರು ಕೊನೆಯ ಪ್ರವಾದಿಯೆಂಬ ಘೋಷಣೆಯೊಂದಿಗೆ ಇಸ್ಲಾಂ ಧರ್ಮ ಸ್ಥಾಪನೆಯಾಗಿ ಆಗ ಅಸ್ತಿತ್ವದಲ್ಲಿದ್ದ ಇನ್ನಿತರೆ ಧರ್ಮಗಳು ಇಸ್ಲಾಂ ಅನ್ನು ನಾಶಪಡಿಸಬೇಕೆಂದು ನಿರ್ಧರಿಸುವ ಬಗ್ಗೆ. ಸುಳ್ಳು ಹೇಳದ, ಕೆಡಕು ಬಯಸದ, ಕೆಟ್ಟತನವನ್ನೇನೂ ಚಟವಾಗಿಸಿಕೊಳ್ಳದ ಮುಹಮ್ಮದ್ ಮಕ್ಕಾದ ಎಲ್ಲರಿಗೂ ಪ್ರೀತಿ ಪಾತ್ರ ಹುಡುಗ. ಬಡ್ಡಿ ವ್ಯವಹಾರದ ವಿರುದ್ಧ, ವ್ಯಭಿಚಾರದ ವಿರುದ್ಧ, ಮದ್ಯಸೇವನೆಯ ವಿರುದ್ಧದ ಆತನ ನಿಲುವುಗಳನ್ನು ಯಾರೂ ಪಾಲಿಸದಿದ್ದರೂ ಎಲ್ಲರಿಗೂ ಈ ಸತ್ಯಸಂಧನನ್ನು ಕಂಡರೆ ಗೌರವ – ಆದರ. ಈ ಗೌರವಾದರಗಳೆಲ್ಲವೂ ಮಣ್ಣುಪಾಲಾಗುವುದು ಬಹಿರಂಗದಲ್ಲಿ. ದೇವರ ದರ್ಶನವಾಗಿ ಹಿಂದಿನ ಧರ್ಮಗ್ರಂಥಗಳಲ್ಲಿ ಹೇಳಿರುವ ಕೊನೆಯ ಪ್ರವಾದಿ ನಾನೇ ಎಂಬ ಸಂಗತಿ ಮುಹಮ್ಮದರಿಗೆ ತಿಳಿದ ನಂತರ ಅಲ್ಲಿಯವರೆಗೆ ಪಾಲಿಸಿದ ಧರ್ಮಾಚರಣಗೆಗಳನ್ನು ತೊರೆದು ದಿನಕ್ಕೈದು ಬಾರಿ ನಮಾಜು ಮಾಡುವ ಮೂಲಕ ಅಲ್ಲಾಹು ಕೊಟ್ಟ ಸಂದೇಶಗಳನ್ನು ಜನರಿಗೆ ತಲುಪಿಸುವ ಮೂಲಕ ಹೊಸ ಧರ್ಮದ ಹುಟ್ಟಿಗೆ ಕಾರಣರಾಗುತ್ತಾರೆ. ಕೆಲವರು ಈ ಹೊಸ ಧರ್ಮವನ್ನು ಅಪ್ಪಿದರೆ, ಹಲವರು ಅಪ್ಪದಿದ್ದರೂ ಒಪ್ಪಿ ದೂರವುಳಿಯುತ್ತಾರೆ, ಬಹುತೇಕರು ಅಲ್ಲಿಯವರೆಗೆ ಗೌರವಿಸುತ್ತಿದ್ದ ಮುಹಮ್ಮದರನ್ನು ದ್ವೇಷಿಸಲಾರಂಭಿಸುತ್ತಾರೆ.

ಈ ದ್ವೇಷ, ಅನಾದಾರ, ಅಪಹಾಸ್ಯಗಳನ್ನೆಲ್ಲಾ ಎದುರಿಸಿ ಮುಹಮ್ಮದರು ಹೇಗೆ ಇಸ್ಲಾಂ ಧರ್ಮ ಹಬ್ಬಲು ಕಾರಣವಾದರು ಎನ್ನುವುದು ಚದುರಂಗದ ಭಾಗ. ಅಂತರಂಗ ಮತ್ತು ಬಹಿರಂಗದಲ್ಲಿ ಮುಗ್ಧರಂತೆ, ಕೆಲವು ಕಡೆ ದಡ್ಡರಂತೆಯೂ ಕಾಣಿಸಿಬಿಡುವ ಮುಹಮ್ಮದ್ ಚದುರಂಗದಲ್ಲಿ ಚಾಣಾಕ್ಷ್ಯ ಧಾರ್ಮಿಕ ನಾಯಕರಾಗಿ ರೂಪುಗೊಳ್ಳುತ್ತಾರೆ. ಈಗ ಮುಸ್ಲಿಮರ ಪವಿತ್ರ ಸ್ಥಳವೆನ್ನಿಸಿಕೊಳ್ಳುವ ಮಕ್ಕಾದಲ್ಲಿಯೇ ಪ್ರವಾದಿಗೆ ಮತ್ತವರ ಹೊಸ ಧರ್ಮದ ಹಿಂಬಾಲಕರಿಗೆ ರಕ್ಷಣೆಯಿರುವುದಿಲ್ಲ. ತಾತ್ಕಾಲಿಕವಾಗಿ ಮಕ್ಕಾ ತೊರೆದು ಮದೀನಾ ಸೇರುತ್ತಾರೆ. ಇಸ್ಲಾಂ ಧರ್ಮ ವ್ಯಾಪಕವಾಗಿಸಲು ಪ್ರವಾದಿ ವಿರೋಧಿಸುವವರ ಮೇಲಿನ ಯುದ್ಧಗಳಲ್ಲಿ ಗೆದ್ದಿದ್ದಕ್ಕಿಂತ ಆ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿದ್ದ ಗುಲಾಮಗಿರಿ ಪದ್ಧತಿ ಮತ್ತು ಶ್ರೇಷ್ಟ ಗೋತ್ರದ ವ್ಯಸನ ಪ್ರಮುಖ ಕಾರಣವಿರಬೇಕು. ಗುಲಾಮರಿಗೆ ಸ್ವಂತಿಕೆಯ ಧರ್ಮವಿರಲಿಲ್ಲ. ತಮ್ಮ ಒಡೆಯರ ಧರ್ಮವನ್ನೇ ಪಾಲಿಸಬೇಕಾದ ಅನಿವಾರ್ಯತೆ. ಗುಲಾಮಗಿರಿಯೇ ತಪ್ಪೆಂದು ಸಾರಿದ ಪ್ರವಾದಿಯ ಧರ್ಮ ಅವರನ್ನು ಸೆಳೆದಿದ್ದರೆ ಅಚ್ಚರಿಯಿಲ್ಲ. 

ಅಂತರಂಗ ಮತ್ತು ಬಹಿರಂಗದಲ್ಲಿ ಕಾಣುವ ಮುಹಮ್ಮದರ ವಿಮರ್ಶೆ ಚದುರಂಗದಲ್ಲಿ ನಿಧಾನಕ್ಕೆ ಕಣ್ಮರೆಯಾಗಿಬಿಟ್ಟಿದೆ. ಘೋಷಿತ ಪ್ರವಾದಿಯ ಬಗ್ಗೆ ವಿಮರ್ಶಾತ್ಮಕ ಅಂಶಗಳು ಕಡಿಮೆಯಿರಬೇಕು ಎಂದು ಲೇಖಕರು ಬಯಸಿರಬೇಕು ಅಥವಾ ಕಾದಂಬರಿಯ ಪಾತ್ರಗಳು ಬಯಸಿರಬೇಕು! ಪ್ರವಾದಿಯನ್ನು ಸಂಪೂರ್ಣ ಸರಿಯಾಗಿಸಿಬಿಡುವ ಪ್ರಯತ್ನದಲ್ಲಿ ಅಲ್ಲಿಯವರೆಗೂ ಇದ್ದ ಧರ್ಮದ ಜನರನ್ನು ಸಂಪೂರ್ಣ ತಪ್ಪೆಂದು ಬಿಂಬಿಸುವುದೂ ನಡೆದಿದೆ. ಒಂದೇ ಒಂದು ಕಡೆ ಇಸ್ಲಾಮಿಗೆ ಪರಿವರ್ತನೆಗೊಂಡ ಮಗನ ಮನೆಯನ್ನು ತೊರೆದು ಹೋಗುವ ವಯಸ್ಸಾದ ತಾಯಿ ನನ್ನ ಧರ್ಮ ನನಗೆ ಎಂದು ಸೆಡ್ಡುಹೊಡೆಯುವ ಧೈರ್ಯ ತೋರುತ್ತಾಳೆ. ಪ್ರವಾದಿ ಮುಹಮ್ಮದರ ಪ್ರಕಾರ ಕುರ್ ಆನ್ ಅಂತಿಮ ಸತ್ಯವಿರಬಹುದು. ಆದರೆ ಅಂತಿಮ ಸತ್ಯವೆಂಬುದಿದೆಯೇ? ‘ಪ್ರವಾದಿಯ ಅಲ್ಲಾ ದಿನಕ್ಕೆ ಐವತ್ತು ಸಲ ನಮಾಜು ಮಾಡಲು ಹೇಳಿದ್ದನಂತೆ. ಅಷ್ಟೊಂದು ಸಲ ನಮಾಜು ಮಾಡಿದರೆ ಉಳಿದ ಕೆಲಸಗಳಿಗೆ ಸಮಯವಿರುವುದಿಲ್ಲ ಎಂದು ಐದು ಸಲಕ್ಕೆ ಇಳಿಸಲು ಕೇಳಿಕೊಂಡರಂತೆ’ ಎಂಬಂತಹ ಹಾಸ್ಯಾತ್ಮಕ ವಿಮರ್ಶೆಗಳು ಬಹಿರಂಗದ ನಂತರದ ಭಾಗದಲ್ಲಿ ಕಾಣಿಸುವುದಿಲ್ಲ. ಪುಸ್ತಕದ ಕೊನೆಯಲ್ಲಿ ಮುಗಿಯಿತು ಎನ್ನುವುದರ ಬದಲಾಗಿ ‘ಸಶೇಷ’ ಎಂದು ಬೋಳುವಾರರು ಬರೆದಿರುವುದರಿಂದ ‘ನಿರೀಕ್ಷಿಸಬಹುದು’! 

ನಮಗೆ ಪರಿಚಿತವೇ ಇಲ್ಲದ ಪರಿಸರ ಸಂಸ್ಕೃತಿಯನ್ನು ಸರಾಗವಾಗಿ ಓದುವಂತೆ ಮಾಡಿದೆ ಬೋಳುವಾರರ ಲೇಖನಿ. ಪ್ರವಾದಿಯ ಕತೆ ಓದುತ್ತಿದ್ದರೆ ನಮ್ಮ ದೇಶದ ಬುದ್ಧ, ಬಸವಣ್ಣ ನೆನಪಾಗದೆ ಇರಲಾರರು. ಅಂಧಾಚರಣೆಯ ವಿರುದ್ಧದ ಹೋರಾಟದಲ್ಲಿ ಇವರೆಲ್ಲರೂ ಪ್ರಮುಖರೇ ಅಲ್ಲವೇ? ಕಾಲ ಸರಿದಂತೆಲ್ಲ ಇವರು ಪ್ರಾರಂಭಿಸಿದ ಧರ್ಮ ಯಾವ ರೂಪ ಪಡೆದಿದೆ? ಅಂಧಾಚರಣೆಗಳಿಂದ ಮುಕ್ತವಾಗಿದೆಯಾ ಎಂದು ನೋಡಿದರೆ ನಿರಾಶೆಯೇ ಆಗುತ್ತದೆ. ಬಹುದೈವತ್ವವನ್ನು, ಮನುಷ್ಯ ರೂಪಿತ ದೇವಾರಾಧನೆಯನ್ನು ವಿರೋಧಿಸಿದ ಪ್ರವಾದಿ ಮುಹಮ್ಮದ್ ಮಕ್ಕಾದ ಕಅಬಾವನ್ನು, ಮದೀನಾವನ್ನು ಪವಿತ್ರ ಸ್ಥಳ ಮಾಡಿಬಿಡುತ್ತಾರೆ. ಮನುಷ್ಯ ರೂಪಿತ ದೈವದ ಜಾಗವನ್ನು ಮನುಷ್ಯ ನಿರ್ಮಿತ ದುಬಾರಿ ಮಸೀದಿಗಳು ಆಕ್ರಮಿಸಿಕೊಳ್ಳುತ್ತವೆ. ತಮ್ಮ ದೇವ ಮೂರ್ತಿಯನ್ನು ಘಾಸಿಗೊಳಿಸಿದವರ ಮೇಲೆ ಕೋಪಗೊಳ್ಳುತ್ತಿದ್ದ ಕುರೈಶರು ಮುಹಮ್ಮದರನ್ನು ವಿರೋಧಿಸಿದವರಲ್ಲಿ ಪ್ರಮುಖರು. ರೂಪವಿಲ್ಲದ ದೇವರನ್ನು ಮುಹಮ್ಮದರು ಸ್ಥಾಪಿಸಿದರು. ಮಸೀದಿಯನ್ನು ಹಾನಿಗೊಳಿಸಿದವರ ಮೇಲೆ, ‘ಅಪವಿತ್ರ’ಗೊಳಿಸಿದವರ ಮೇಲೆ ಇವತ್ತಿನ ಮುಸ್ಲಿಮರಿಗೂ ಕೋಪವುಕ್ಕುತ್ತದೆ. ಅಲ್ಲಿಗೆ ಬದಲಾದದ್ದೇನು? ಎಂಬಂತಹ ಪ್ರಶ್ನೆಗಳನ್ನು ನಮ್ಮೊಳಗೆ ಮೂಡಿಸುವುದರಲ್ಲಿಯೇ ‘ಓದಿರಿ’ಯ ಯಶಸ್ಸಿದೆ. ಇನ್ನೇನು ಹೇಳುವುದಕ್ಕಿಲ್ಲ. ಒಮ್ಮೆ ಓದಿರಿ!
ಬೆಲೆ: 220/- ನವಕರ್ನಾಟಕದ ಮೂಲಕ ಆನ್ ಲೈನಿನಲ್ಲಿ 176 ರುಪಾಯಿಗೆ ತರಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ

ಅಕ್ಟೋ 15, 2015

ಬ್ರಾಹ್ಮಣರಿಗೆ 'ಬೈಲ್' ಕೊಡಿಸುವ ಈ ಸಂಪ್ರದಾಯವಾದಿ ವಾದ ಸರಿಯಲ್ಲ: ಶ್ರೀಧರ್ ಪ್ರಭು.

ನಿನ್ನೆ ಪ್ರಕಟಿಸಲಾಗಿದ್ದ ಚಂದ್ರಶೇಖರ್ ಐಜೂರರ ಲೇಖನಕ್ಕೆ (ಶೂದ್ರರೆ ಅಲ್ಲವೇ ಹಿಂದೂತ್ವದ ಬ್ರಾಹ್ಮಣ್ಯದ ನಿಜವಾದ ಬಾಡಿಗಾರ್ಡುಗಳು? ) ಶ್ರೀದರ್ ಪ್ರಭುರವರು ಈ ಕೆಳಗಿನಂತೆ ಪ್ರತಿಕ್ರಿಯಿಸಿದ್ದರು. ಪ್ರತಿಕ್ರಿಯೆ ಐಜೂರರ ಲೇಖನದ ಆಶಯಕ್ಕೆ ಪೂರಕವಾಗಿಯೂ ಇರುತ್ತಾ ಆ ಲೇಖನದ ಕೆಲವು ವಿಚಾರಗಳು ಯಾಕೆ ಸರಿಯಿಲ್ಲ ಎಂದು ತಿಳಿಸುತ್ತಿವೆ. ಹಾಗಾಗಿ ಪ್ರತಿಕ್ರಿಯೆಯನ್ನು ಹೆಚ್ಚು ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ಲೇಖನವಾಗಿ ಪ್ರಕಟಿಸಲಾಗುತ್ತಿದೆ. 

ಪ್ರಿಯ ಚಂದ್ರು,

ದಲಿತ ಮತ್ತು ಶೂದ್ರರ ನಡುವೆ ಇಲ್ಲದ ಕಂದಕ ನಿರ್ಮಿಸಿ ಶುದ್ರರೇ ದಲಿತರ ಶತ್ರುಗಳು ಎಂದು ಬಿಂಬಿಸಿ ಬ್ರಾಹ್ಮಣರಿಗೆ 'ಬೈಲ್' ಕೊಡಿಸುವ ಈ ಸಂಪ್ರದಾಯವಾದಿ ವಾದಕ್ಕೆ ನನ್ನ ಸಂಪೂರ್ಣ ವಿರೋಧವಿದೆ.

ಮಹಾತ್ಮಾ ಫುಲೆ ಈ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಅಪ್ರತಿಮ ಚಿಂತಕ. ಹೀಗಾಗಿಯೇ ತಮ್ಮ ಚಳುವಳಿಯ ಪ್ರಣಾಳಿಕೆಯಾದ "ಚಮಚ ಏಜ್" ಪುಸ್ತಕವನ್ನು ಮಾನ್ಯವರ ಕಾನ್ಶಿರಾಂ ಮಹಾತ್ಮಾ ಫುಲೆಯವರಿಗೆ ಸಮರ್ಪಿಸುತ್ತಾರೆ. ಅಷ್ಟೇ ಅಲ್ಲ, ಬುದ್ಧ, ಫುಲೆ, ಅಂಬೇಡ್ಕರ್ ಹಾದಿಯಲ್ಲೇ ಸಾಗಿ ತಮ್ಮ ಚಳುವಳಿಯನ್ನು ವೈದಿಕರ ಮೂರು ವರ್ಣಗಳನ್ನು ಬಿಟ್ಟು ಉಳಿದವರ ಮಧ್ಯೆ ಕಟ್ಟಿ ಅದನ್ನು ಬಹುಜನ ಸಮಾಜದ ಸಮಷ್ಥಿ ಆಶಯಗಳಿಗೆ ಮುಡಿಪಿಡುತ್ತಾರೆ.

ಶೂದ್ರ ರು ನಮ್ಮ ದೇಶದಲ್ಲಿ ಬೌದ್ಧಿಕವಾಗಿ (ಗಮನಿಸಿ- ಬೌದ್ಧಿಕವಾಗಿ ಮಾತ್ರ) ಅತ್ಯಂತ ಹೆಚ್ಚು ಶೋಷಣೆಗೊಳಗಾದ ವರ್ಗ. ಇವರನ್ನು ಅನೇಕಾನೇಕ ವರ್ಷಗಳಿಂದ ಅನೇಕಾನೇಕ 'ಮಹಾತ್ಮರು' ಹಾದಿ ತಪ್ಪಿಸಿದ್ದಾರೆ. ಶೂದ್ರರು ಬಹುಜನ ಚಳುವಳಿಯ ಟ್ರಂಪ್ ಕಾರ್ಡ್ ಇದ್ದ ಹಾಗೆ, ಇವರನ್ನು ಬಿಟ್ಟರೆ ನಾವು ಮುಳುಗಿದ ಲೆಕ್ಕವೇ!

ಶೂದ್ರರ ಮತ್ತು ದಲಿತರ ಸಾಂಸ್ಕೃತಿಕ ಐಕ್ಯತೆ ಮತ್ತು ತಾದಾತ್ಮ್ಯವನ್ನು ಕಾಂಚ ಐಲಯ್ಯ ತಮ್ಮ "Why I am not a Hindu" ಎಂಬ ಐತಿಹಾಸಿಕ ಪುಸ್ತಕದಲ್ಲಿ ಅತ್ಯಂತ ಸ್ಫುಟವಾಗಿ ದಾಖಲಿಸುತ್ತಾರೆ. ತಮ್ಮ ಕುರುಬ ಸಮಾಜಕ್ಕೂ ಮಾದಿಗರ ಸಮಾಜಕ್ಕೂ (ಒಂದು ಉದಾಹರೆಣೆಗಾಗಿ ಈ ನಿದರ್ಶನ) ಇರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಾಮ್ಯತೆಗಳನ್ನು ಹೇಳುತ್ತಾ, ನಾವೆಲ್ಲರೂ ಹೇಗೆ ಒಂದೇ ವರ್ಗ ಎಂಬುದನ್ನು ಬಹು ಚೆನ್ನಾಗಿ ಸಾಬೀತು ಪಡಿಸುತ್ತಾರೆ.

ನಾವು ಸಂಘಟಿಸಬೇಕಿರುವ ವರ್ಗವನ್ನು ಬೇರೆಯವರ ತೆಕ್ಕೆಗೆ ನಾವು ಬಿಟ್ಟಿದ್ದರಿಂದ ನಮಗೆ ಈ ಸ್ಥಿತಿ ಬಂದಿದೆ. ನೋಡಿ, ಉತ್ತರ ಪ್ರದೇಶದಲ್ಲಿ ಶೂದ್ರರು ನಮ್ಮೊಂದಿಗೆ ಬರದಿರುವ ಕಾರಣದಿಂದ ಬ್ರಾಹ್ಮಣರನ್ನು ಸೇರಿಸಿಕೊಳ್ಳುವ ರಾಜಕೀಯ ಅನಿವಾರ್ಯತೆ ಸೃಷ್ಟಿಯಾಯಿತು. ಇದನ್ನು ಕೇವಲ ರಾಜಕೀಯ ಅನಿವಾರ್ಯವಾಗಿ ನೋಡಬೇಕೇ ವಿನಃ ಮೂಲ ತತ್ವಕ್ಕೆ ಚ್ಯುತಿಯಾಗಿ ಅಲ್ಲ.

ಇಂದು ಶುದ್ರರಿಗೆ ನಾವು ಹೊರಗಿಟ್ಟ ಕಾರಣ ಅವರು ನಮ್ಮ ವಿರೋಧಿ ಪಾಳಯದಲ್ಲಿದ್ದಾರೆ. ಅದರಿಂದ ತಾತ್ಕಾಲಿಕ ಅಧಿಕಾರ ಸಿಕ್ಕಿರಬಹುದು ಆದರೆ ಮತ್ತಷ್ಟು ಸಾಂಸ್ಕೃತಿಕವಾಗಿ ಮತ್ತು ಬೌದ್ಧಿಕವಾಗಿ ಶೋಷಣೆಗೆ ಗುರಿಯಾಗಿದ್ದಾರೆ. ಇವರ ಚಮಚಾ ಯುಗ ಬಹುದಿನ ಸಾಗದು. ಹಾಗೆಯೇ ಶುದ್ರರನ್ನು ತಬ್ಬದ ನಮ್ಮ ಅಸ್ಪ್ರುಶ್ಯತೆಯೂ ಕೊನೆಯಾಗಲೇ ಬೇಕು.

ಪೆರಿಯಾರ್, ಶಾಹು ಮಹಾರಾಜ್, ನಾಲ್ವಡಿ ಯಂಥಹ ಆದರಣೀಯರನ್ನು ಹೊರಗಿಟ್ಟ ಬಹುಜನ ಪರ ಚಿಂತನೆ ಇದೆಯೇ? ಬಹುಜನ ಚಳುವಳಿಯ ಮುಂಚೂಣಿಯಲ್ಲಿ ದಲಿತರು ಇರಬೇಕು ಎಂಬುದು ಎಷ್ಟು ಅನಿವಾರ್ಯವೋ ಅಷ್ಟೇ ಮುಖ್ಯ ಶೂದ್ರರ ನೇತೃತ್ವ ಮತ್ತು ಅಧಿಕಾರ ಹಂಚಿಕೆ.

ಉತ್ತರ ಪ್ರದೇಶದ ಶುದ್ರರಿಗಿಂತ ನಮ್ಮವರು ಎಷ್ಟೋ ಮೇಲು. ಹಾಗಿದ್ದೂ,
'ಜಿಸ್ ಕಿ ಜಿತ್ನಿ ಸಂಖ್ಯಾ ಭಾರಿ ಉಸ್ಕಿ ಉತನಿ ಭಾಗೇದಾರಿ' (ಅವರವರ ಸಂಖ್ಯೆಯಷ್ಟು ಅವರವರ ಅಧಿಕಾರ ಸಹಭಾಗಿತ್ವ) ಎಂದು ದಾರಿ ತೋರಿಸಿದ ಮಾನ್ಯವರರ ವಾಣಿ ನಾವು ಮರೆಯದಿರೋಣ.

ಅಕ್ಟೋ 14, 2015

ಯಾಕೆ ಕಾಡುತಿದೆ ಸುಮ್ಮನೆ ನನ್ನನು: ಪುಸ್ತಕ ಬಿಡುಗಡೆ.

ಅವಧಿ ವೆಬ್ ಪತ್ರಿಕೆಯಲ್ಲಿ ಪ್ರಕಟವಾದ ಸಂಧ್ಯಾ ರಾಣಿಯವರ ಆಯ್ದ ಬರಹಗಳ ಸಂಗ್ರಹ "ಯಾಕೆ ಕಾಡುತಿದೆ ಸುಮ್ಮನೆ ನನ್ನನು" ಇದೇ ಭಾನುವಾರ (18, ಅಕ್ಟೋಬರ್) ಬಿಡುಗಡೆಗೊಳ್ಳಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಹತ್ತು ಘಂಟೆಗೆ ಕಾರ್ಯಕ್ರಮ ನಡೆಯಲಿದೆ. ಪುಸ್ತಕ ಪಲ್ಲವ ಪ್ರಕಾಶನದಿಂದ ಪ್ರಕಟಿತವಾಗಿದೆ.

ಶೂದ್ರರೆ ಅಲ್ಲವೇ ಹಿಂದೂತ್ವದ ಬ್ರಾಹ್ಮಣ್ಯದ ನಿಜವಾದ ಬಾಡಿಗಾರ್ಡುಗಳು? ಚಂದ್ರಶೇಖರ್ ಐಜೂರ್

ಚಂದ್ರಶೇಖರ್ ಐಜೂರ್.
ತುಂಬಾ ದಿನಗಳಿಂದ ನನ್ನೊಳಗೆ ಅವಿತು ಕೂತು ಮಿದುಳು ಸೇರಿ ತೂತು ಕೊರೆಯುತ್ತಿದ್ದ ಒಂದೆರಡು ಮಾತುಗಳನ್ನು ಈಗ ಹೇಳಬೇಕಿದೆ.

ದಲಿತರ ಬಗ್ಗೆ, ದಲಿತರ ಹೃದಯವಂತಿಕೆಯ ಬಗ್ಗೆ ಎರಡು ಮಾತು ಹೇಳಬೇಕಿದೆ:
ದಲಿತ ಸಂಘರ್ಷ ಸಮಿತಿ ಆಯೋಜಿಸುವ ಅಧ್ಯಯನ ಶಿಬಿರವನ್ನು ಜಿ.ಕೆ.ಗೋವಿಂದರಾವ್ ಉದ್ಘಾಟಿಸುತ್ತಾರೆ; ಬಹುಜನ ವಿದ್ಯಾರ್ಥಿ ಸಂಘದ ಅನೇಕ ಕಾರ್ಯಕ್ರಮಗಳ ಜೊತೆ ದಿನೇಶ್ ಅಮಿನ್ ಮಟ್ಟು, ಡಾ.ಸಿ.ಎಸ್.ದ್ವಾರಕಾನಾಥ್ ಹೆಜ್ಜೆ ಹಾಕುತ್ತಾರೆ; ಮೇಲ್ಜಾತಿಯ ಸತೀಶ್ ಚಂದ್ರ ಮಿಶ್ರಾ ಇವತ್ತಿನ ಬಿ.ಎಸ್.ಪಿ. ಜನರಲ್ ಸೆಕ್ರೆಟರಿ; ಕುರುಬ ಸಮುದಾಯದ ಕಾಂಚ ಐಲಯ್ಯನವರಿಲ್ಲದ ದಲಿತಪರ ಹೋರಾಟಗಳನ್ನು ಆಂಧ್ರ ಪ್ರದೇಶದಲ್ಲಿ ಕಾಣಲು ಸಾಧ್ಯವೇ ಇಲ್ಲ; ಸಂತ ಕಬೀರ್ ಮತ್ತು ಜ್ಯೋತಿಬಾ ಫುಲೆ ಅಂಬೇಡ್ಕರರ ಮಾನಸ ಗುರುಗಳು; ದ್ರಾವಿಡ ಸಮುದಾಯದ ಪೆರಿಯಾರ್, ಶೂದ್ರ ದೊರೆ ಶಾಹು ಮಹಾರಾಜ್, ಯಾದವ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್, ಬ್ರಾಹ್ಮಣ ಸಮುದಾಯದ ಕುದ್ಮುಲ್ ರಂಗರಾವ್ ಇವತ್ತಿಗೂ ದಲಿತರ ಪ್ರಾತಃಸ್ಮರಣೀಯರು…

ಆದರೆ…

ಈ ಹಿಂದುಳಿದ, ಒಕ್ಕಲಿಗ, ಲಿಂಗಾಯತ… ಎಂಬಿತ್ಯಾದಿ ಹೆಸರುಗಳಲ್ಲಿ ಕರೆಸಿಕೊಳ್ಳುವ ಶೂದ್ರರ ಸಾರ್ವಜನಿಕ (ಸಾಹಿತ್ಯಕ, ಸಾಂಸ್ಕೃತಿಕ, ಸಾಮುದಾಯಿಕ, ರಾಜಕೀಯ) ವೇದಿಕೆಗಳಲ್ಲಿ ಮಾತ್ರ ಇವತ್ತಿಗೂ ದಲಿತರ ಪ್ರವೇಶ ನಿಷಿದ್ಧ. ಯಾಕಿಂಥ ದುಸ್ಥಿತಿಗೆ ಈ ಶೂದ್ರರು ತಲುಪಿದ್ದಾರೆ? ಇದು ಬ್ರಾಹ್ಮಣ್ಯದ ಇನ್ನೊಂದು ವರಸೆಯೇ ಅಲ್ಲವೇ?

ಒಕ್ಕಲಿಗರ ಸಂಘದಲ್ಲಿ ಒಕ್ಕಲಿಗನೇ ಶ್ರೇಷ್ಠ 
ಲಿಂಗಾಯತರ ಸಂಘದಲ್ಲಿ ಲಿಂಗಾಯತನೇ ಶ್ರೇಷ್ಠ 
ಕುರುಬರ ಸಂಘದಲ್ಲಿ ಕುರುಬನೇ ಶ್ರೇಷ್ಠ

ಕಡೆಗೆ ಈ ವಿಶ್ವಬ್ಯಾಂಕ್ನೋರೇನಾದ್ರೂ ‘ವಿಶ್ವ ಸುಂದರಿ’ ಸ್ಪರ್ಧೆ ನಡೆಸಿ ಅಂಥ ಇವರುಗಳ ಕೈಗೆ ಒಂದಿಷ್ಟು ಇಡುಗಂಟೇನಾದ್ರೂ ಕೊಟ್ರೆ… ಒಂದು ಕ್ಷಣವೂ, ಒಂದು ನಯಾ ಪೈಸೆಯೂ ವೇಸ್ಟಾಗದಂತೆ ತಮ್ಮತಮ್ಮ ಜಾತಿಯೊಳಗೆಯೇ ‘ಸುಂದ್ರಿ’ಯೊಬ್ಬಳನ್ನು ಆಯ್ಕೆಮಾಡಿ ಇವಳೇ ಜಗತ್ತಿನ ಏಕಮಾತ್ರ ‘ವಿಶ್ವಸುಂದರಿ’ ಎಂದು ಹೇಳಿ ಈ ಶೂದ್ರರು ಬೀಗಬಲ್ಲರು.

ಕರ್ನಾಟಕದಲ್ಲಿ ಆರ್ಥಿಕವಾಗಿ ಹಿಂದುಳಿದ ಜಾತಿಗಳ್ಯಾವುವು ಕೈಯೆತ್ತಿ ಅಂದ್ರೆ ಕ್ಷಣಕೂಡ ತಡಮಾಡದೆ ಕೈಯೆತ್ತುವುದು ಶೂದ್ರ ಜಾತಿಗಳೇ. ಹಾಗೇ, ಕರ್ನಾಟಕದಲ್ಲಿ ಸಾಮಾಜಿಕವಾಗಿ ಬಲಿಷ್ಠ ಜಾತಿಗಳ್ಯಾವುವು ಕೈಯೆತ್ತಿ ಅಂದ್ರೆ ಒಂದೇ ಒಂದು ಸೆಕೆಂಡ್ ಕೂಡ ತಡಮಾಡದೆ ಕೈಯೆತ್ತುವುದು ಇದೇ ಶೂದ್ರ ಜಾತಿಗಳು.

ಇಂಥ ಶೂದ್ರರೆ ಅಲ್ಲವೇ ಹಿಂದೂತ್ವದ ಬ್ರಾಹ್ಮಣ್ಯದ ನಿಜವಾದ ಬಾಡಿಗಾರ್ಡ್ ಗಳು. ಇಂಥ ಶೂದ್ರರಿಂದಲೇ ಅಲ್ಲವೇ ಬ್ರಾಹ್ಮಣ್ಯ ಉಸಿರಾಡುತ್ತಿರುವುದು? ಕರ್ನಾಟಕದಲ್ಲಿ ಇವತ್ತು ಕೋಮುಶಕ್ತಿಗಳು ಇಷ್ಟೊಂದು ಕೊಬ್ಬಲು ಲಿಂಗಾಯತರು ನೇರ ಕಾರಣ. ಅವರ ಸೊಂಟದ ಲಿಂಗ ಬ್ರಾಹ್ಮಣ್ಯದ ಜನಿವಾರದೊಳಗೆ ಬಿಗಿಯಾಗಿ ಬಿಗಿದುಕೊಂಡಿದೆ.

ಕರ್ನಾಟಕದಲ್ಲಿ ಕೋಮುವಾದ ಇನ್ನಷ್ಟು ಕೊಬ್ಬಬಹುದೇ ಹೊರತು ಶೂದ್ರರು ಬದಲಾಗುವುದಿಲ್ಲ. ಅವರು ಬದಲಾಗುವರು ಎಂಬ ನಂಬಿಕೆ ನನ್ನಲ್ಲಿ ಸಾಸಿವೆ ಕಾಳಿನಷ್ಟು ಇಲ್ಲ.
(ಚಂದ್ರಶೇಖರ್ ಐಜೂರರ ಫೇಸ್ ಬುಕ್ ಪುಟದಿಂದ ಹೆಕ್ಕಿ ತಂದದ್ದು)

ಅಕ್ಟೋ 11, 2015

ಒಗ್ಗಟ್ಟಿನಲ್ಲಿ ಬಲವಿದೆ!

ant raft south carolina
ದಕ್ಷಿಣ ಕೆರೋಲೀನಾದಲ್ಲಿ ಒಂದೇ ಸಮನೆ ಸುರಿದ ಮಳೆಗೆ ಪ್ರವಾಹ ಪರಿಸ್ಥಿತಿ. ಪ್ರವಾಹವೆಂದರೆ ಮನುಷ್ಯನನ್ನೂ ಸೇರಿಸಿ ಸಕಲ ಪಕ್ಷಿ – ಪ್ರಾಣಿ ಸಂಕುಲಕ್ಕೂ ಭಯವೇ. ಈ ಭಯದಿಂದ ಇರುವೆಗಳೂ ಹೊರತಲ್ಲ. ಪ್ರವಾಹಕ್ಕೆ ಸಿಲುಕಿದ ಮನುಷ್ಯನನ್ನೇನೋ ಇತರರು ದೋಣಿಗಳ ಮೂಲಕ, ಹೆಲಿಕಾಪ್ಟರಿನ ಮೂಲಕ ಬಚಾವು ಮಾಡಿಬಿಡುತ್ತಾರೆ. ಕೆಂಪು ಇರುವೆಗಳು ಈ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಿದ ಬಗೆ ಸ್ಪೂರ್ತಿಯಾಗುವಂತಹುದು.
ಇರುವೆ ನೀರಿನಲ್ಲಿ ಬಿದ್ದಾಗ ಸ್ವಲ್ಪ ಮಟ್ಟಿಗೆ ತೇಲಿ ಸ್ವಲ್ಪ ಮಟ್ಟಿಗೆ ಈಜಬಲ್ಲದು. ಈ ತೇಲುವಿಕೆ ಈಜುವಿಕೆಯೆಲ್ಲ ಸ್ವಲ್ಪ ಹೊತ್ತು ನಡೆದು ಇರುವೆ ಮುಳುಗಿ ಬಿಡುತ್ತದೆ. ಒಂಟಿಯಾಗಿ ಮುಳುಗಿಹೋಗುವುದನ್ನು ತಪ್ಪಿಸಲು ಸಾವಿರಾರು ಇರುವೆಗಳ ಸೈನ್ಯ ಒಂದೂವರೆ ನಿಮಿಷದ ಒಳಗೆ ಒಬ್ಬರಿಗೊಬ್ಬರು ಅಂಟಿಕೊಂಡು ತೆಪ್ಪ ನಿರ್ಮಿಸಿ ಪ್ರವಾಹದಲ್ಲಿ ಮುಳುಗುವುದರಿಂದ ಬಚಾವಾಗಿವೆ. ಈ ರೀತಿ ತೆಪ್ಪ ನಿರ್ಮಿಸಿಕೊಂಡರೆ ವಾರಗಟ್ಟಲೆ ತೇಲಿಕೊಂಡೇ ಇರುವಷ್ಟು ಚೈತನ್ಯ ಇರುವೆಗಳಿಗೆ ದಕ್ಕುತ್ತದೆಯಂತೆ.
ವೀಡೀಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ
ಒಂಟಿಯಾಗಿದ್ದರೆ ಶೀಘ್ರ ಸಾವು; ಜೊತೆಯಲ್ಲಿದ್ದರೆ ಪ್ರವಾಹವನ್ನೇ ಎದುರಿಸಬಹುದು ಎಂಬ ಪಾಠ ಕಲಿಸಿಕೊಟ್ಟಿವೆ ಈ ಕೆಂಪು ಇರುವೆಗಳು.

ಅಕ್ಟೋ 10, 2015

ನಾವೇಕೆ ಪ್ರಶಸ್ತಿಗಳನ್ನು ಹಿಂದಿರುಗಿಸಿದೆವು? - ಅಶೋಕ್ ವಾಜಪೇಯಿ

ಅಶೋಕ್ ವಾಜಪೇಯಿ.
ಮೂಲ ಲೇಖನ: ದಿ ಹಿಂದೂ.
ಕನ್ನಡಕ್ಕೆ: ಡಾ.ಅಶೋಕ್.ಕೆ.ಆರ್.
ಹಿಂದಿ, ಉರ್ದು ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯುವ ನಾಲ್ಕು ತಲೆಮಾರಿಗೆ ಸೇರಿದ ನಾವು ನಾಲ್ವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪ್ರತಿಭಟನೆಯ ಸಂಕೇತವಾಗಿ ಹಿಂದಿರುಗಿಸಿದೆವು. ನಾವು ಒಂಟಿಯಾಗುಳಿದಿಲ್ಲ; ಇತರೆ ಭಾಷೆಗಳ ಅನೇಕರು, ಉಳಿದ ಕಲಾ ಪ್ರಕಾರದವರು ನಮ್ಮಷ್ಟೇ ಕ್ರುದ್ಧರಾಗಿದ್ದಾರೆ, ಕೋಪಗೊಂಡಿದ್ದಾರೆ ಮತ್ತು ಭೀತರಾಗಿದ್ದಾರೆ. ನಮ್ಮದೇ ಆದ ರಾಜಕೀಯ ದೃಷ್ಟಿಕೋನಗಳಿರುವುದು ಹೌದಾದರೂ ನಾವ್ಯಾರೂ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಆದರೆ ಭಾರತದ ರಾಜಕೀಯ ಸಾಗುತ್ತಿರುವ ಹಾದಿಯ ಬಗ್ಗೆ ನಮಗೆ ಚಿಂತೆಯಾಗುತ್ತಿದೆ. ವೈಚಾರಿಕ ಚಿಂತನೆ ಮತ್ತು ಮೌಲ್ಯಗಳು, ಪ್ರತಿಭಟನೆಗಳು, ಪರಸ್ಪರ ನಂಬುಗೆಗಳೆಲ್ಲದರ ಮೇಲೆ ದಿನದ ಲೆಕ್ಕದಲ್ಲಿ ಹಲ್ಲೆಯಾಗುತ್ತಿದೆ. ಎಲ್ಲಾ ರೀತಿಯ ಹಿಂಸಾಕೃತ್ಯಗಳು ಹೆಚ್ಚುತ್ತಿವೆ. ಅದಕ್ಕೆ ಧರ್ಮ ಮತ್ತು ಕೋಮುವಾದ, ಕೊಳ್ಳುಬಾಕತನ ಮತ್ತು ಜಾಗತೀಕರಣ, ಜಾತಿ ಮತ್ತು ಸಂಸ್ಕೃತಿ, ಸಾಮಾಜಿಕ ಮತ್ತು ವೈಯಕ್ತಿಕ – ಹೀಗೆ ಎಲ್ಲವೂ ಹಿಂಸೆಯ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ನಿಷೇಧ, ಅನುಮಾನ, ಭಾವನೆಗಳನ್ನು ಘಾಸಿಗೊಳಿಸುವ ಕೆಲಸವನ್ನು ಶಕ್ತಿ ಕೇಂದ್ರಗಳು ಕಾನೂನಿನ ಬಗ್ಗೆ ಕೊಂಚವೂ ಭಯವಿಲ್ಲದೆ ಮಾಡುತ್ತಿವೆ. ಪ್ರಜಾಪ್ರಭುತ್ವ ನೀಡುವ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯ, ನಂಬುಗೆ, ವೈಯಕ್ತಿಕತೆಯನ್ನು ಕೀಳಾಗಿ ಕಂಡು ಅದರಲ್ಲಿ ವಿನಾಕಾರಣ ತಲೆತೂರಿಸುವವರ ಸಂಖೈ ಹೆಚ್ಚುತ್ತಿದೆ.

ಹೊಸ ರೀತಿಯ ರಾಜಕೀಯ ಬೂಟಾಟಿಕೆ ಕೇಂದ್ರದಲ್ಲಿ ನೆಲೆ ಕಾಣುತ್ತಿದೆ. ಸ್ವಾತಂತ್ರ್ಯ, ಜಾತ್ಯತೀತತೆ, ಸಹನೆಯ ಬಗ್ಗೆ ಸಂವಿಧಾನಾತ್ಮಕವಾಗಿ ಸರಿಯಾದ ಹೇಳಿಕೆಗಳನ್ನು ನೀಡುತ್ತ ಸಂವಿಧಾನ ಮತ್ತು ಕಾನೂನನ್ನು ಮುರಿದು ವರ್ತಿಸುವವರ ಬಗ್ಗೆ ಸಂಪೂರ್ಣ ಮೌನದಿಂದಿರುವ ಪ್ರವೃತ್ತಿ ಕಾಣುತ್ತಿದೆ. ಸ್ವತಂತ್ರವಾಗಿ ಜೀವಿಸುವುದಕ್ಕೆ ನಾಗರೀಕರನಿಗಿಂದು ಹಕ್ಕಿಲ್ಲ. ಅವರು ಅನುಮತಿ ಕೊಟ್ಟರೆ ನೀವು ಜೀವಿಸಬಹುದು, ಅವರು ಒಪ್ಪಿದರೆ ನೀವು ಸ್ವತಂತ್ರವಾಗಿರಬಹುದು.

ಇವೆಲ್ಲವನ್ನೂ ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ಮಾಡಲಾಗುತ್ತಿದೆ. ಭಾರತೀಯ ಪರಂಪರೆಗೆ ಇದಕ್ಕಿಂತ ದೊಡ್ಡ ಹಾನಿ ಅಥವಾ ಅನುಮಾನ ಮತ್ತೊಂದಿರಲಾರದು. ಪ್ರಪಂಚದ ಅತಿ ಪುರಾತನ ಪರಂಪರೆಯಲ್ಲೊಂದಾಗಿರುವ ಇದು ನಾಗರೀಕ ಭಾರತಕ್ಕೆ ಸೇರಿದೆ. ಬಹುಶಃ ಪ್ರಪಂಚದ ಅತಿ ದೊಡ್ಡ ಪರಂಪರೆ ಇದು. ಭಾಷೆ, ಧರ್ಮ, ವೇಷಭೂಷಣ, ಆಚಾರ ವಿಚಾರ, ಆಹಾರ, ಕಲೆ ಇನ್ನೂ ಇತ್ಯಾದಿ ಇತ್ಯಾದಿಗಳೆಲ್ಲದರಲ್ಲೂ ಇಲ್ಲಿ ಬಹುತ್ವವಿದೆ. ಭಾರತದಲ್ಯಾವುದೂ ಏಕತ್ವವಾಗಿ ಉಳಿದಿಲ್ಲ. ಎಲ್ಲವೂ ಬಹುತ್ವವಾಗಿ ಪರಿವರ್ತನೆಯಾಗಿಬಿಡುತ್ತದೆ ಅಥವಾ ಬಹುತ್ವದ ಭಾಗವಾಗುತ್ತದೆ. ದೇವರಾಗಲಿ, ಭಾಷೆಯಾಗಲಿ, ತತ್ವಜ್ಞಾನವಾಗಲೀ, ಭಕ್ತಿ ಪೂಜೆಯಾಗಲೀ, ನಂಬಿಕೆ – ಮೌಲ್ಯಗಳಾಗಲೀ ಇಲ್ಲಿ ಏಕತ್ವವನ್ನು ಉಳಿಸಿಕೊಂಡಿಲ್ಲ, ಕಾಲ ಸರಿದಂತೆ ಬಹುತ್ವವನ್ನು ಆಲಂಗಿಸಿಕೊಂಡಿವೆ. ಈ ಬಹುತ್ವವನ್ನು ವಿರೋಧಿಸುವ, ಅದನ್ನು ಏಕವಾಗಿ ಪರಿವರ್ತಿಸಿದರೆ  ಸಮಾಜವನ್ನು ನಿಯಂತ್ರಿಸುವುದು ಸುಲಭ ಎಂದು ನಂಬುವ ಶಕ್ತಿಗಳು ಯಾವಾಗಲೂ ನಮ್ಮ ನಡುವೆ ಇದ್ದೇ ಇವೆ. ಚರ್ಚೆ, ಅಸಮ್ಮತಿ, ವಾದ ವಿವಾದ, ಪರಿಶೀಲನೆ, ಹೊಸ ಅನ್ವೇಷಣೆಯಲ್ಲವೂ ನಮ್ಮ ಪರಂಪರೆಯ ಭಾಗ. ಭಾರತೀಯರು ಚರ್ಚೆಗೆ, ಅಸಮ್ಮತಿಗೆ, ಅಸಹನೆಗೆ ಯಾವತ್ತೂ ಭಯಪಟ್ಟವರಲ್ಲ.

ನೈತಿಕತೆಯನ್ನು ಮೀರಿದಾಗ ದೇವರನ್ನೂ ಪ್ರಶ್ನಿಸಿ ಶಿಕ್ಷಿಸಲಾಗಿದೆ. ಸ್ವಾತಂತ್ರೋತ್ತರ ಭಾರತದಲ್ಲೂ ಭಾರತೀಯ ಸಾಹಿತ್ಯ ಹೆಚ್ಚಾಗಿ ಪ್ರಭುತ್ವದ ವಿರುದ್ಧವೇ ನಿಂತಿದೆ. ಎಮರ್ಜೆನ್ಸಿ, ಸಿಖ್ ದಂಗೆ, ಬಾಬರಿ ಮಸೀದಿಯ ಧ್ವಂಸ, ಪಂಜಾಬ್ ಭಯೋತ್ಪಾದನೆ, ನಂದಿಗ್ರಾಮ ಹಿಂಸಾಚಾರ, ಆದಿವಾಸಿ ಪ್ರದೇಶಗಳಲ್ಲಿ ನಕ್ಸಲ್ ಮತ್ತು ಸರಕಾರೀ ಹಿಂಸಾಚಾರ, ಗುಜರಾತ್ ಹಿಂಸಾಚಾರಗಳೆಲ್ಲವೂ ಬರಹಗಾರರನ್ನು, ಕಲಾವಿದರನ್ನು ಪ್ರಭುತ್ವದ ವಿರುದ್ಧ ಪ್ರತಿಭಟನೆಗೆ ಇಳಿಯುವಂತೆ ಮಾಡಿದೆ; ಸಾಮಾಜಿಕ ಚೌಕಟ್ಟಿಗೆ, ಕೋಮುಸಾಮರಸ್ಯಕ್ಕೆ, ಕ್ರಿಯಾಶೀಲ ಬದುಕಿಗೆ ಆಗಿರುವ ಹಾನಿಯನ್ನು ಖಂಡಿಸುವಂತೆ ಮಾಡಿದೆ. ಪ್ರತಿಭಟನೆಗಿಳಿದು ಖಂಡಿಸದಿರುವುದು ಕರ್ತವ್ಯವನ್ನು ಮರೆತಂತೆ. ಒಳ್ಳೆಯದಕ್ಕೋ ಕೆಟ್ಟದಕ್ಕೋ ಈ ಕ್ರಿಯಾಶೀಲ ಸಮುದಾಯವನ್ನು ಸಮಾಜದ ಆತ್ಮಸಾಕ್ಷಿಯನ್ನು ಕಾಪಿಡುವರೆಂದು ನಂಬಿದ್ದೇವೆ. ನಮ್ಮಲ್ಲಿ ಕೆಲವರು ಶಕ್ತಿಕೇಂದ್ರ ಎದುರಿಗೆ ಸತ್ಯವನ್ನೇ ನುಡಿಯುವ ಉನ್ನತ ಪರಂಪರೆಗೆ ಅಂಟಿಕೊಂಡಿದ್ದೇವೆ. ಮತ್ತು ಆ ಕಾರಣಕ್ಕಾಗಿಯೇ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪ್ರತಿಭಟನೆಯ ಸಂಕೇತವಾಗಿ ಹಿಂದಿರುಗಿಸುತ್ತಿದ್ದೇವೆ. ಸ್ವಾತಂತ್ರ್ಯಹರಣ ಹೆಚ್ಚುತ್ತಿದೆ ಎಂದು ಸಾರ್ವಜನಿಕರ ಗಮನಕ್ಕೆ ತರುವ ಸಲುವಾಗಿ ಈ ಪ್ರತಿಭಟನೆ; ಬರಹಗಾರರಾದ, ಕಲಾವಿದರಾದ, ಪ್ರಗತಿಪರರಾದ ನಾವು ಇದರ ಬಗ್ಗೆ ಚಿಂತಿತರಾಗಿದ್ದೇವೆ.

ಅಕ್ಟೋ 9, 2015

ಡಿಜಿಟಲೀಕರಣ ಒಳ್ಳೆಯದು …. ಆದರೀ ಪ್ರಚಾರವಲ್ಲ…..

digital india
Dr Ashok K R
ದಶಕದ ಹಿಂದೆ ಮೊಬೈಲ್ ಫೋನೆಂದರೆ ನೋಕಿಯಾ ಎಂದೇ ಜನಜನಿತ. ನೋಕಿಯಾ ಫೋನಿನ ತಯಾರಕರ ಹೆಸರು ನಮಗ್ಯಾರಿಗಾದರೂ ಗೊತ್ತಿದೆಯಾ? ವಾಕ್ಮನ್ ತಯಾರಿಸುವಲ್ಲಿ, ಸಂಗೀತ ಕೇಳುವ ಸಾಧನಗಳನ್ನು ತಯಾರಿಸುವಲ್ಲಿ ಸೋನಿ ಕಂಪನಿ ಅಗ್ರಗಣ್ಯ, ಅದರ ನಿರ್ಮಾತೃವಿನ ಹೆಸರು ಎಷ್ಟು ಜನಕ್ಕೆ ಗೊತ್ತಿದೆ? ಇತ್ತೀಚೆಗೆ ದೇಶದಲ್ಲಿ ಸದ್ದು ಮಾಡುತ್ತಿರುವುದು ಶಿಯೋಮಿ ಮೊಬೈಲು ಫೋನುಗಳು, ಅದನ್ನು ತಯಾರಿಸಿದವರ್ಯಾರು? ಸ್ಮಾರ್ಟ್ ಫೋನುಗಳ ಬೆಲೆಯನ್ನು ಭಾರತದಲ್ಲಿ ತುಂಬ ಕಡಿಮೆ ದರಕ್ಕೆ ಸಿಗುವಂತೆ ಮಾಡಿದ್ದು ಮೈಕ್ರೋಮ್ಯಾಕ್ಸ್ ಮತ್ತು ಕಾರ್ಬನ್ ಕಂಪನಿಗಳು. ಅದರ ಮಾಲೀಕರ್ಯಾರು? ಮೇಲಿನ ಬಹುತೇಕ ಪ್ರಶ್ನೆಗೆ ನಿಮ್ಮ ಉತ್ತರ ‘ಗೊತ್ತಿಲ್ಲ’ ಎಂದೇ ಅಲ್ಲವೇ. ನನಗೂ ಗೊತ್ತಿಲ್ಲ ಬಿಡಿ. ಫೇಸ್ ಬುಕ್ಕಿನ ಸಂಸ್ಥಾಪಕನ್ಯಾರು? ಮೈಕ್ರೊಸಾಫ್ಟಿನ ಒಡೆಯನ್ಯಾರು? ಆ್ಯಪಲ್ ಕಂಡುಹಿಡಿದಿದ್ದ್ಯಾರು? ಗೂಗಲ್ಲಿನ ಈಗಿನ ಸಿಇಒ ಹೆಸರೇನು? ಮಾರ್ಕ್ ಝುಕರ್ ಬರ್ಗ್, ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ಸತ್ಯ ನಾದೆಲ್ಲ….. ನಿಯಮಿತವಾಗಿ ಪತ್ರಿಕೆ ಓದುವವರಾದರೆ ನಿಮಗೂ ಈ ನಾಲ್ಕೂ ಹೆಸರುಗಳು ಗೊತ್ತಿರುತ್ತವೆ. ಇವುಗಳಷ್ಟೇ ಜನಪ್ರಿಯ ಬ್ರ್ಯಾಂಡುಗಳಾದ ನೋಕಿಯಾ, ಸೋನಿ, ಶಿಯೋಮಿಯ ಹೆಸರು ಪತ್ರಿಕೆಗಳಲ್ಲಿ ಮುಳುಗಿ ಹೋಗುವವರಿಗೂ ತಿಳಿಯುವುದಿಲ್ಲ ಆದರೆ ಫೇಸ್ ಬುಕ್, ಮೈಕ್ರೋಸಾಫ್ಟ್, ಆ್ಯಪಲ್ಲಿನ ವಿಷಯದಲ್ಲಿ ಪತ್ರಿಕೆ ಮೇಲೆ ಕಣ್ಣಾಡಿಸುವವರಿಗೂ ತಿಳಿದಿರುತ್ತದೆ. ಕಾರಣವೇನಿರಬಹುದು? ನಿಮಗೆ ಹೆಸರು ಗೊತ್ತಿರುವ ಅಷ್ಟೂ ಕಂಪನಿಗಳು ಅಮೆರಿಕಾ ಮೂಲದ್ದಾದರೆ ನೋಕಿಯಾ ಫಿನ್ ಲ್ಯಾಂಡಿನದು, ಸೋನಿ ಜಪಾನಿನದು, ಶಿಯೋಮಿ ಚೀನಾದ್ದು ಮತ್ತು ಮೈಕ್ರೋಮ್ಯಾಕ್ಸ್ , ಕಾರ್ಬನ್ ಬಿಡಿ ಅವು ನಮ್ಮದೇ ಭಾರತದ್ದು. ಫೇಸ್ ಬುಕ್, ಮೈಕ್ರೋಸಾಫ್ಟ್, ಆ್ಯಪಲ್ಲುಗಳೆಲ್ಲವೂ ಶ್ರೇಷ್ಟವಾಗಿವೆ ಎನ್ನುವುದು ಎಷ್ಟು ಸತ್ಯವೋ ಸೋನಿ, ನೋಕಿಯಾ ಕೂಡ ಅಷ್ಟೇ ಶ್ರೇಷ್ಟ ಗುಣಮುಟ್ಟದ ಉತ್ಪನ್ನಗಳನ್ನು ತಯಾರಿಸುತ್ತಿದ್ದವಲ್ಲವೇ? ಒಂದು ದೇಶದ ಕಂಪನಿಗಳ ನಿರ್ಮಾತೃಗಳ ಹೆಸರುಗಳೇ ಎಲ್ಲರ ಬಾಯಲ್ಲಿ ನಲಿಯುವಂತೆ ಮಾಡಲು ಆ ಕಂಪನಿಗಳ ಮಾರ್ಕೆಟಿಂಗ್ ಜಾಣ್ಮೆ ಎಷ್ಟು ಕಾರಣವೋ ಅಮೆರಿಕಾದ ಉಗುಳೂ ಶ್ರೇಷ್ಟ ಎಂಬಂತೆ ವರದಿ ಮಾಡುವ ಮಾಧ್ಯಮಗಳೂ ಕಾರಣ. ಅಮೆರಿಕಾದ ಈ ಲಾಬಿಗೆ ಪೂರಕವಾಗಿ ಬಹುದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿಯೂ ವರ್ತಿಸುತ್ತಾರೆಂದರೆ ಅದು ನಮ್ಮ ದೇಶದ ಅಭಿವೃದ್ಧಿ ಮಾದರಿಯ ದುರಂತ.

ಪ್ರಧಾನಿಯಾದ ಎರಡು ವರುಷದೊಳಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ಅಮೆರಿಕಾಕ್ಕೆ ಕಾಲಿಟ್ಟಿದ್ದಾರೆ. ಮೊದಲ ಭೇಟಿ ಅಬ್ಬರದಲ್ಲೇ ಕಳೆದುಹೋಗಿತ್ತು. ಈ ಬಾರಿಯ ಭೇಟಿ ವ್ಯವಹಾರಕ್ಕೆ ಎಂದು ಪ್ರಚಾರವಾಗಿತ್ತು. ಸಿಲಿಕಾನ್ ವ್ಯಾಲಿಯಲ್ಲಿ ನಮ್ಮ ದೇಶದ ಪ್ರಧಾನಿ ಅನೇಕ ಕಂಪನಿಗಳ ಸಿ.ಇ.ಒಗಳ ಜೊತೆಗೆ ಕುಳಿತು ಚರ್ಚಿಸಿದರು. ಬನ್ನಿ. ನಮ್ಮ ದೇಶಕ್ಕೆ ದುಡ್ಡು ತಗಂಡು ಬನ್ನಿ, ನಿಮಗೆ ಬೇಕಾದ ಸೌಲತ್ತುಗಳನ್ನೆಲ್ಲ ನಾವು ಕೊಡುತ್ತೇವೆ. ಮೇಕ್ ಇನ್ ಇಂಡಿಯಾ ಎಂದು ನಗೆಯಾಡಿದರು. ಮೋದಿಯವರ ಗೆಲುವಿನಲ್ಲಿ ಸಾಮಾಜಿಕ ಜಾಲತಾಣಗಳ ಕೊಡುಗೆ ಬಹಳ. ಅಂತಹ ಸಾಮಾಜಿಕ ಜಾಲತಾಣಗಳ ಪೈಕಿ ಫೇಸ್ ಬುಕ್ ಪ್ರಮುಖವಾದುದು. ಫೇಸ್ ಬುಕ್ಕಿನ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗರನ್ನು ಭೇಟಿಯಾಗಿ ಅಪ್ಪಿಕೊಂಡರು ನಮ್ಮ ಪ್ರಧಾನಿ. ಇಡೀ ಭಾರತವನ್ನು ಡಿಜಿಟಲ್ ಇಂಡಿಯಾ ಮಾಡಿಕೊಡಿ ಎಂದು ಫೇಸ್ ಬುಕ್ ಮತ್ತು ಗೂಗಲ್ಲಿಗೆ ಕೇಳಿಕೊಂಡರು ನಮ್ಮ ಪ್ರಧಾನಿ. ಡಿಜಿಟಲ್ ಇಂಡಿಯಾಕ್ಕೆ ಬೆಂಬಲ ಕೊಡುವಂತೆ ಮಾರ್ಕ್ ಝುಕರ್ ಬರ್ಗ್ ಫೇಸಬುಕ್ಕಿನ ತಮ್ಮ ಪ್ರೊಫೈಲ್ ಚಿತ್ರಕ್ಕೆ ಭಾರತ ದೇಶದ ಧ್ವಜವನ್ನು ವಿಲೀನಗೊಳಿಸಿದರು! ಆ ರೀತಿ ವಿಲೀನಗೊಳಿಸುವುದಕ್ಕೆ ಒಂದು ಆ್ಯಪನ್ನು ತಯಾರಿಸಿ ಲಕ್ಷಾಂತರ ಭಾರತೀಯರು ತಮ್ಮ ಪ್ರೊಫೈಲ್ ಚಿತ್ರ ಬದಲಿಸಲು ‘ನೆರವಾದರು’. ವಿದೇಶಿಗನೊಬ್ಬನಿಗೆ ಭಾರತದ ‘ಅಭಿವೃದ್ಧಿ’ಯ ಬಗ್ಗೆ ಎಷ್ಟೊಂದು ಪ್ರೀತಿ! Support Digital India ಅಭಿಯಾನಕ್ಕೆ ವಿರುದ್ಧವಾಗಿ ಮಾತನಾಡಿದವರು ದೇಶದ್ರೋಹಿಗಳಲ್ಲದೇ ಮತ್ತೇನು?!

ಡಿಜಿಟಲ್ ಇಂಡಿಯಾ 2014ರಲ್ಲಿ ಶುರುವಾಯಿತೇ?

ನಮ್ಮ ಪ್ರಚಾರ ಪ್ರಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ನೀವು ಯಾವ ಕಾರಣಕ್ಕಾಗಿಯಾದರೂ ಟೀಕಿಸಬಹುದು ಆದರೆ ಅವರ ಮಾರ್ಕೆಟಿಂಗ್ ಬುದ್ಧಿಯನ್ನು ಮಾತ್ರ ಹೊಗಳದೇ ಇರಲಾಗದು. ಯಾವ ವಿಷಯಕ್ಕೆ ಹೇಗೆ ಪ್ರಚಾರ ಪಡೆದುಕೊಳ್ಳಬೇಕೆಂದು ಅವರಿಗಿಂತ ಚೆನ್ನಾಗಿ ಅರಿತವರು ಮತ್ತೊಬ್ಬರು ಸದ್ಯದಲ್ಲಿ ಕಾಣಿಸುತ್ತಿಲ್ಲ. ಒಂದು ಕೆಲಸ ಮಾಡಿ ಹತ್ತು ಕೆಲಸದ ಪ್ರಚಾರ ಪಡೆದುಕೊಳ್ಳುವುದು ಅವರಿಗೆ ನೀರು ಕುಡಿದಷ್ಟೇ ಸಲೀಸು! ಇದರ ಅರಿವಾಗಿದ್ದು ಈ ಸರಕಾರದಿಂದ ಅತಿ ಹೆಚ್ಚು ಪ್ರಚಾರ ಪಡೆದ ಕೆಲವು ಯೋಜನೆಗಳ ಅಸಲಿಯತ್ತನ್ನು ಗಮನಿಸಿದಾಗ. ತಿಂಗಳುಗಳ ಹಿಂದೆ ಸರಕಾರದ ವತಿಯಿಂದ ರಾಷ್ಟ್ರೀಯ ಬ್ಯಾಂಕುಗಳಲ್ಲಿ ವಿಮಾ ಯೋಜನೆ ಜಾರಿಗೊಂಡಿತು. 12 ರುಪಾಯಿಯ ಅಪಘಾತ ವಿಮೆ, 330 ರುಪಾಯಿಯ ಸಾಮಾನ್ಯ ವಿಮೆ. ಎರಡೂ ಅತ್ಯುತ್ತಮ ಯೋಜನೆಗಳೇ. ಸಾಮಾನ್ಯ ವಿಮೆಯ ನೀತಿ ನಿಯಮಗಳು ಇನ್ನೂ ಅಷ್ಟು ಸ್ಪಷ್ಟವಾಗಿ ಅರಿವಾಗುವುದಿಲ್ಲವಾದರೂ ಇರುವುದರಲ್ಲಿ ಜನರಿಗೆ ಉಪಯುಕ್ತವಾಗುವ ವಿಮೆಗಳು ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಇದರ ಜೊತೆಜೊತೆಗೆ ಅಟಲ್ ಬಿಹಾರಿ ವಾಜಪೇಯಿಯವರ ಹೆಸರಿನಲ್ಲೊಂದು ಪಿಂಚಣಿ ಯೋಜನೆಯನ್ನು ಘೋಷಿಸಲಾಯಿತು. ಈ ಪಿಂಚಣಿ ಯೋಜನೆ ತೆರಿಗೆ ಕಟ್ಟದ ಅಸಂಘಟಿತ ವಲಯಕ್ಕೆ ಅನುಕೂಲಕರವೆಂದು ಪರಿಚಯಿಸಲಾಯಿತು. ಇತ್ತೀಚೆಗೆ ನನಗೆ ಅಂಟಿಕೊಂಡಿರುವ ಒಂದು ‘ಜಾಡ್ಯ’ವೆಂದರೆ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಏನೇ ಸುದ್ದಿ ಬಂದಿದ್ದರೂ ಅದರ ಮೂಲ ಲೇಖನವನ್ನು ಹುಡುಕಿ ಪೂರ್ತಿಯಾಗಿ ಓದುವುದು. ವೆಬ್ ಸೈಟಿನಲ್ಲಿ ಆ ಪಿಂಚಣಿ ಯೋಜನೆಯ ವಿವರಗಳನ್ನು ಸರಕಾರೀ ವೆಬ್ ಸೈಟಿನಲ್ಲೇ ನೋಡಿದೆ. ವಿವರಗಳನ್ನೆಲ್ಲಾ ಸರಿಯಾಗಿ ಓದಿಕೊಂಡ ನಂತರ ತಿಳಿದಿದ್ದು ಇದು ಹಿಂದಿನ ಸರಕಾರವೇ ಜಾರಿ ಮಾಡಿದ್ದ ರಾಷ್ಟ್ರೀಯ ಪಿಂಚಣಿ ಯೋಜನೆಯ ಚೂರುಪಾರು ತಿದ್ದುಪಡಿಯಾದ ಯೋಜನೆಯೆಂದು! ಹಳೆಯ ಮದ್ಯವನ್ನು ಹೊಸ ಬಾಟಲಿಯಲ್ಲಾಕಿದಂತೆಯೇ ಈ ಸರಕಾರದ ಅನೇಕ ಕಾರ್ಯಗಳಿವೆ ಎಂದರದು ಉತ್ಪ್ರೇಕ್ಷೆಯ ಮಾತಲ್ಲ.

‘ಡಿಜಿಟಲ್ ಇಂಡಿಯಾ’ ಎನ್ನುವುದು ಯಾವಾಗ ಪ್ರಾರಂಭವಾಯಿತು? ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ನಂತರವಾ? ಖಂಡಿತ ಅಲ್ಲ. ಇಪತ್ತು ವರುಷಗಳ ಹಿಂದೆ ಒಂದು ಲ್ಯಾಂಡ್ ಲೈನ್ ಫೋನ್ ಬೇಕೆನ್ನಿಸಿದರೆ ಬಿ.ಎಸ್.ಎನ್.ಎಲ್ ಗೆ ಅರ್ಜಿ ಹಾಕಿ ವರುಷಗಟ್ಟಲೇ ಕಾಯಬೇಕಿತ್ತು. ಕ್ರಮೇಣ ಲ್ಯಾಂಡ್ ಲೈನ್ ಫೋನುಗಳು ವೇಗ ಪಡೆದುಕೊಂಡಿತು. ಹದಿನೈದು ವರುಷಗಳ ಹಿಂದೆ ಮೊಬೈಲೆಂಬುದು ದುಬಾರಿ ವಸ್ತುವಾಗಿತ್ತು. ಮೊಬೈಲ್ ಕೊಂಡುಕೊಳ್ಳುವುದಕ್ಕೆ ಹಣ ವೆಚ್ಚ ಮಾಡುವುದರ ಜೊತೆಜೊತೆಗೆ ಒಳಬರುವ – ಹೊರಹೋಗುವ ಕರೆಗಳಿಗೆಲ್ಲ ಹೆಚ್ಚೆಚ್ಚು ಹಣ ತೆರಬೇಕಿತ್ತು. ಐದೇ ವರ್ಷದ ಅಂತರದಲ್ಲಿ ಒಳಬರುವ ಕರೆಗಳು ಉಚಿತವಾಗಿ, ಹೊರಹೋಗುವ ಕರೆಗಳ ವೆಚ್ಚ ವಿಪರೀತವಾಗಿ ತಗ್ಗಿದ ಪರಿಣಾಮ ಎಲ್ಲರ ಕೈಯಲ್ಲೂ ಮೊಬೈಲು ರಿಂಗಣಿಸಲಾರಂಭಿಸಿತು. ಇನ್ನೈದು ವರುಷಗಳಲ್ಲಿ ಮಾಮೂಲಿ ಫೋನುಗಳ ಜಾಗವನ್ನು ಸ್ಮಾರ್ಟ್ ಫೋನುಗಳು ಆಕ್ರಮಿಸಿಕೊಂಡುಬಿಟ್ಟವು. ದರಕಡಿತದ ಜೊತೆಜೊತೆಗೆ ಅತಿ ಕಡಿಮೆ ದುಡ್ಡಿನಲ್ಲಿ ಅಂತರ್ಜಾಲ ಸಿಗಲಾರಂಭಿಸಿದ್ದು ಕೂಡ ಸ್ಮಾರ್ಟ್ ಫೋನುಗಳ ಸಂಖೈ ಹೆಚ್ಚಲು ಕಾರಣವಾಗಿದೆ. ಕಳೆದ ಹದಿನೈದು ಇಪ್ಪತ್ತು ವರುಷಗಳಿಂದ ನಿರಂತರವಾಗಿ ನಡೆಯುತ್ತಿರುವ ತಂತ್ರಜ್ಞಾನದ ಬೆಳವಣಿಗೆಯ ‘ಪ್ರಕ್ರಿಯೆ’ಯಿದು. ನೆನಪಿರಲಿ ಇದು ಅಭಿವೃದ್ಧಿಯಲ್ಲ, ಪ್ರಕ್ರಿಯೆಯಷ್ಟೇ. ಲ್ಯಾಂಡ್ ಲೈನ್ ಫೋನುಗಳು ಬಂದಿದ್ದು, ಮೊಬೈಲುಗಳು ಕಡಿಮೆ ಬೆಲೆಗೆ ದಕ್ಕಲಾರಂಭಿಸಿದ್ದು, ಸ್ಮಾರ್ಟ್ ಫೋನುಗಳ ಯುಗ ಪ್ರಾರಂಭವಾಗಿದ್ದು ಯಾರ ಯಾರ ಆಡಳಿತಾವಧಿಯಲ್ಲಿ ಎಂದೇನಾದರೂ ನಿಮಗೆ ನೆನಪಿದೆಯಾ? I support Digital India ಎಂದು ಬೊಬ್ಬೆ ಹೊಡೆದವರಿಗೂ ಅದರ ನೆನಪಿರಲಿಕ್ಕಿಲ್ಲ. ಯಾಕೆ ನೆನಪಿಲ್ಲವೆಂದರೆ ನಮಗಾಗಲೀ ಆಡಳಿತದಲ್ಲಿರುವವರಿಗಾಗಲೀ ತಂತ್ರಜ್ಞಾನದ ಬೆಳವಣಿಗೆ ‘ಅಭಿವೃದ್ಧಿಯ ಮಾಪಕ’ ಎಂಬ ಭ್ರಮೆಗಳಿರಲಿಲ್ಲ. ಆ ಭ್ರಮೆಯನ್ನು ಜನರಲ್ಲಿ ತುಂಬಲು ಕಳೆದಲವು ವರುಷಗಳಿಂದ ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ನರೇಂದ್ರ ಮೋದಿಯವರು ಪ್ರಯತ್ನಿಸುತ್ತಿದ್ದಾರೆ, ಮತ್ತದರಲ್ಲಿ ಅವರು ಯಶಸ್ಸನ್ನೂ ಕಂಡಿದ್ದಾರೆ. ಆದರೀ ಪ್ರಚಾರ, ಯಶಸ್ಸಿನಿಂದ ದೇಶಕ್ಕೆ ನಿಜಕ್ಕೂ ಉಪಯೋಗವಾಗುತ್ತದೆಯಾ?

ಮೊಬೈಲು, ಅಂತರ್ಜಾಲ, ಸಾಮಾಜಿಕ ಜಾಲತಾಣಗಳಿಂದ ಅಗಾಧವೆನ್ನಿಸುವಷ್ಟು ಉಪಯೋಗಗಳಿವೆ. ದೂರದ ಗೆಳೆಯರನ್ನು ಹತ್ತಿರವಾಗಿಸುತ್ತೆ, ನಮ್ಮ ಭಾವನೆಗಳನ್ನು ಪರಿಚಯವೇ ಇಲ್ಲದವರೊಡನೆ, ಗೆಳೆಯರೊಡನೆ ಹಂಚಿಕೊಳ್ಳಲು ನೆರವಾಗುತ್ತದೆ, ಒಂದು ಅಭಿಪ್ರಾಯ ರೂಪಿಸಲು, ಮಧ್ಯಪ್ರಾಚ್ಯದ ದೇಶಗಳಲ್ಲಿ ಕ್ರಾಂತಿಯನ್ನೇ ಪ್ರಾರಂಭಿಸಲು ಕೂಡ ಈ ತಂತ್ರಜ್ಞಾನಗಳು ನೆರವಾಗಿವೆ. ಅದರಲ್ಲಿ ಎರಡು ಮಾತಿಲ್ಲ. ಇದರ ಜೊತೆಜೊತೆಗೆ ಒಂದು ಭ್ರಮಾ ಲೋಕವನ್ನು ಸೃಷ್ಟಿಸಿ ನೈಜ ಪ್ರಪಂಚದಿಂದ ವಿಮುಖರನ್ನಾಗಿಸುವುದರಲ್ಲಿಯೂ ಇವುಗಳ ಪಾತ್ರ ದೊಡ್ಡದಾಗುತ್ತಲೇ ಇದೆ. ತಂತ್ರಜ್ಞಾನವನ್ನು ನಾವು ಉಪಯೋಗಿಸಬೇಕೆ ಹೊರತು ತಂತ್ರಜ್ಞಾನ ನಮ್ಮನ್ನು ಉಪಯೋಗಿಸುವಂತೆ ಮಾಡಬಾರದಲ್ಲವೇ? ಡಿಜಿಟಲ್ ಇಂಡಿಯಾ ಅವಶ್ಯಕ, ದಿನನಿತ್ಯದ ಅನೇಕ ಕೆಲಸಗಳನ್ನು ಸಲೀಸಾಗುವಂತೆ ಮಾಡುತ್ತದೆ. ಯಾವ ಪ್ರಚಾರವೂ ಇಲ್ಲದೆ ನಮ್ಮ ಬ್ಯಾಂಕುಗಳು, ಅನೇಕ ಕಛೇರಿಗಳು ಸಂಪೂರ್ಣ ಕಂಪ್ಯೂಟರ್ ಮಯವಾಗಿಬಿಟ್ಟಿರುವುದು ಸುಳ್ಳಲ್ಲವಲ್ಲ. ಈ ಸೌಲಭ್ಯ ದೇಶದ ಎಲ್ಲಾ ಪ್ರಜೆಗಳಿಗೂ ತಲುಪಿದರೆ ಅದು ಸಂತಸದ ಸಂಗತಿಯೇ. ಸಲೀಸಾಗುವಂತೆ ಮಾಡುವುದಕ್ಕೆ ನಮ್ಮ ದೇಶದ ಪ್ರಧಾನ ಮಂತ್ರಿ ವಿದೇಶಿ ಕಂಪನಿಗಳ ಸಿ.ಇ.ಒಗಳ ಜೊತೆ ಹಲ್ಲುಕಿರಿಯುತ್ತ ಮಾತನಾಡುವ ಅವಶ್ಯಕತೆ ಇದೆಯೇ? ಡಿಜಿಟಲ್ ಇಂಡಿಯಾದ ಅತಿ ಪ್ರಚಾರದ ವಿರುದ್ಧ ಮಾತನಾಡಿದರೆ, ಇಲ್ಲಿನ ಸಮಸ್ಯೆಗಳನ್ನು ಮೊದಲು ಸರಿಮಾಡಿ ಅಂದರೆ ‘ನೋಡಿ ನೋಡಿ ನೀವು ಇದನ್ನು ಹೇಳೋದಕ್ಕೂ ಫೇಸ್ ಬುಕ್ಕೇ ಬೇಕಾಯಿತು. ಗೂಗಲ್ಲೇ ಬೇಕಾಯಿತು’ ಎಂದು ಹೇಳುವ ತಂತ್ರಜ್ಞಾನದ ಕುರುಡು ಭಕ್ತರಿದ್ದಾರೆ. ಇವೆಲ್ಲವೂ ನಮ್ಮ ಅಭಿವ್ಯಕ್ತಿಗೆ ಒಂದು ಮಾಧ್ಯಮವಷ್ಟೇ, ಈ ಮಾಧ್ಯಮವಿಲ್ಲದಿದ್ದರೆ ಬೇರೆ ಮಾಧ್ಯಮದ ಮೂಲಕ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇವೆ ಎನ್ನುವುದನ್ನವರು ಮರೆತೇ ಬಿಡುತ್ತಾರೆ. ಫೇಸ್ ಬುಕ್ ಬರುವುದಕ್ಕೆ ಮುಂಚೆ ಆರ್ಕುಟ್ ಉಪಯೋಗಿಸುತ್ತಿದ್ದೋ. ಅದಕ್ಕೂ ಮುಂಚೆ ಪತ್ರಿಕೆಗಳ ‘ನಿಮ್ಮ ಅಂಕಣ’ ‘ವಾಚಕರ ವಾಣಿ’ಗೆ ಪತ್ರ ಬರೆಯುತ್ತಿದ್ದೋ, ಫೇಸ್ ಬುಕ್ ಮುಚ್ಚಿ ಹೋದರೆ ಮತ್ತೊಂದು ಮಾಧ್ಯಮದ ಮೂಲಕ ಅಭಿವ್ಯಕ್ತಿ ವ್ಯಕ್ತಪಡಿಸುತ್ತೇವೆ ಎನ್ನುವುದನ್ನವರು ಮರೆತೇ ಬಿಡುತ್ತಾರೆ! ಒಂದು ಕಡೆಯಿಂದ ಮತ್ತೊಂದೆಡೆಗೆ ನಮ್ಮನ್ನು ಶೀಘ್ರವಾಗಿ ಹೋಗುವಂತೆ ಅನುಕೂಲ ಮಾಡಿಕೊಡುತ್ತದೆ ಎಂಬ ಕಾರಣಕ್ಕೆ ಕಾರು, ಬೈಕು, ಬಸ್ಸುಗಳನ್ನು ತಲೆ ಮೇಲೆ ಹೊತ್ತಿಕೊಳ್ಳಲಾದೀತೆ? ನಮ್ಮ ಪ್ರಧಾನ ಮಂತ್ರಿಯವರು ಮಾಡುತ್ತಿರುವುದು ಅದೇ ಕೆಲಸ ಎನ್ನುವುದು ವಿಪರ್ಯಾಸದ ಸಂಗತಿ. ಮಾಹಿತಿ ತಂತ್ರಜ್ಞಾನ ಖಾತೆಯ ಮಂತ್ರಿಯೊಬ್ಬ ಮಾಡಬೇಕಾದ ಕೆಲಸವನ್ನು ಪ್ರಧಾನಿ ಮಾಡುವುದು ಅವಶ್ಯಕವೇ?

ಹೋಗ್ಲಿ ಬಿಡಿ. ನಮ್ಮ ಪ್ರಧಾನ ಮಂತ್ರಿಯವರದು ವಿಪರೀತ ಉತ್ಸಾಹದ ಪ್ರಕೃತಿ, ಎಲ್ಲಾ ಕೆಲಸವನ್ನೂ ಅಚ್ಚುಕಟ್ಟಾಗಿ ತಾನು ಮಾತ್ರ ಮಾಡಬಲ್ಲೆ ಎಂಬ ನಂಬಿಕೆ ಅವರದು ಎಂದು ಸದ್ಯಕ್ಕೆ ಅಂದುಕೊಳ್ಳೋಣ. ‘ನಮ್ಮ ದೇಶದ ಯುವಕರು ಆ್ಯಂಡ್ರಾಯ್ಡ್, ಐಒಎಸ್, ವಿಂಡೋಸ್ ಮೊಬೈಲುಗಳಲ್ಲಿ ಯಾವುದನ್ನು ಖರೀದಿಸಬೇಕು ಎಂಬುದರ ಬಗ್ಗೆಯೇ ಹೆಚ್ಚು ಚರ್ಚಿಸುತ್ತಾರೆ’ ಎಂದು ಆಡಿಕೊಂಡು ಹೊಗಳಿದ್ದನ್ನೋ ಹೊಗಳಿ ಆಡಿಕೊಂಡಿದ್ದನ್ನೋ ಮರೆತೇ ಬಿಡೋಣ. ಡಿಜಿಟಲ್ ಇಂಡಿಯಾ ಎಂಬ ಯೋಜನೆಗೆ ಗೂಗಲ್, ಫೇಸ್ ಬುಕ್ ಹೇಗೆ ಸಹಕಾರ ಕೊಡುತ್ತವೆ ಎಂದು ನೋಡಿದರೆ ನಿರಾಶೆಯಲ್ಲ, ಭಯವಾಗುತ್ತದೆ. ಮೈಕ್ರೋಸಾಫ್ಟ್ ಅಂತರ್ಜಾಲದ ಲೆಕ್ಕದಲ್ಲಿ ಅಷ್ಟು ಪ್ರಚಲಿತವಲ್ಲವಾದ್ದರಿಂದ ಸದ್ಯಕ್ಕೆ ಅದನ್ನು ಮರೆಯಬಹುದು. ಗೂಗಲ್ ಭಾರತದ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಕೊಡುವುದಾಗಿ ಭರವಸೆ ಕೊಟ್ಟಿದೆ. ಫೇಸ್ ಬುಕ್ ಮೂಲೆಮೂಲೆಯಲ್ಲಿರುವ ವ್ಯಕ್ತಿಗೂ ಉಚಿತ ಅಂತರ್ಜಾಲ ಸೌಲಭ್ಯ ಸಿಕ್ಕಿ ಅವನ ಜೀವನ ಸಂತಸಮಯವಾಗಿರುವಂತೆ ಮಾಡುವುದೇ ನಮ್ಮ ಗುರಿ ಎಂದು ಹೇಳುತ್ತದೆ. ಎಷ್ಟು ಕರ್ಣಾನಂದಕರವಾಗಿದೆಯಲ್ಲವೇ? ಹೀಗೆ ಉಚಿತವಾಗಿ ನೀಡುವ ಭರವಸೆ ಕೊಡುತ್ತಿರುವ ಗೂಗಲ್ ಮತ್ತು ಫೇಸ್ ಬುಕ್ ಸಮಾಜ ಸೇವಾ ಸಂಸ್ಥೆಗಳೂ ಅಲ್ಲ, ನಮ್ಮನ್ನಾಳುತ್ತಿರುವ ಸರಕಾರಗಳೂ ಅಲ್ಲ. ಅವರಿಗೆ ವ್ಯವಹಾರಿಕವಾಗಿ ಲಾಭವಿಲ್ಲದೇ ಯಾಕೆ ಈ ರೀತಿ ಉಚಿತ ಉಚಿತ ಎಂದು ಬೊಬ್ಬೆ ಹೊಡೆಯುತ್ತಿವೆ ಎಂದು ಯೋಚಿಸಬೇಕಲ್ಲವೇ? ಕೊನೇ ಪಕ್ಷ ನಮ್ಮ ಪ್ರಧಾನಿಯಾದರೂ ಯೋಚಿಸಬೇಕಿತ್ತಲ್ಲವೇ?

ಉಚಿತ ಅಂತರ್ಜಾಲದ ಹಿಂದಿನ ಸತ್ಯವೇನು?

ಈ ಫೇಸ್ ಬುಕ್ ಮತ್ತು ಗೂಗಲ್ಲುಗಳು ಹೇಗೆ ನಾವು ದಿನನಿತ್ಯ ಉಪಯೋಗಿಸುವ ಅಂತರ್ಜಾಲದ ಮಾಹಿತಿಯನ್ನು ಕಳ್ಳಗಣ್ಣಿನಿಂದ ನೋಡುತ್ತವೆ ಎನ್ನುವುದನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಅಂತರ್ಜಾಲದಲ್ಲಿ ನೀವು ಒಂದು ಮೊಬೈಲನ್ನೋ, ಸೆಕೆಂಡ್ ಹ್ಯಾಂಡ್ ಬೈಕನ್ನೋ ಕೊಂಡುಕೊಳ್ಳಲು ಗೂಗಲ್ಲಿನಲ್ಲಿ ಹುಡುಕಿರುತ್ತೀರಿ ಎಂದುಕೊಳ್ಳಿ. ಹುಡುಕಿ ಮುಗಿಸಿದ ನಂತರ ನೀವು ಫೇಸ್ ಬುಕ್ ತೆಗೆಯಿರಿ, ಜಿಮೇಲ್ ತೆರೆಯಿರಿ ಆ ಮೊಬೈಲು, ಬೈಕಿನ ಜಾಹೀರಾತುಗಳೇ ಕಾಣಿಸಿಕೊಳ್ಳುತ್ತವೆ. ಜಾಹೀರಾತುಗಳೇನು ತಪ್ಪಲ್ಲ. ಅದು ಆ ವಸ್ತು ಮಾರುವ ಕಂಪನಿಗೂ ಗೂಗಲ್ಲೂ ಫೇಸ್ ಬುಕ್ಕಿಗೂ ಅನಿವಾರ್ಯ. ಅದನ್ನು ಒಪ್ಪೋಣ. ಆದರೆ ಯಾವ ಜಾಹೀರಾತು ಮೊದಲು ಕಾಣಬೇಕೆಂದು ನಿರ್ಧರಿಸುವುದರಲ್ಲಿ ಅಂತರ್ಜಾಲವನ್ನು ಕೆಲವೇ ಕಂಪನಿಗಳ ಏಕಸ್ವಾಮ್ಯಕ್ಕೆ ಒಳಪಡಿಸುವುದರ ಅಪಾಯ ಕಾಣಿಸುತ್ತದೆ. ಉದಾಹರಣೆಗೆ ಒಂದು ಕಂಪನಿಯವರು ಹೆಚ್ಚು ದುಡ್ಡು ಕೊಟ್ಟರೆ ಅವರ ಜಾಹೀರಾತಷ್ಟೇ ಕಾಣಿಸುವಂತೆ, ಅವರ ವೆಬ್ ಪುಟವಷ್ಟೇ ಗೂಗಲ್ ಹುಡುಕಾಟದಲ್ಲಿ ಸಿಗುವಂತೆ ಮಾಡಿಬಿಡುವುದು ದೊಡ್ಡ ಕೆಲಸವಲ್ಲ. ಒಮ್ಮೆ ಇದು ನಡೆದುಹೋದರೆ ಜಾಹೀರಾತುಗಳಿಗೆ ಹೆಚ್ಚು ಹಣ ವೆಚ್ಚ ಮಾಡಿ ಕಳಪೆ ವಸ್ತುಗಳನ್ನು ನೀಡುವ ವೆಬ್ ಪುಟಗಳಿಗೇ ಜನರು ಶರಣಾಗಿಬಿಡಬೇಕಾದ ಪರಿಸ್ಥಿತಿ ಉಂಟಾಗಬಹುದು. ವಸ್ತುಗಳ ವಿಷಯ ಬಿಡಿ. ಇದೇ ಮಾದರಿಯಲ್ಲಿ ಸುದ್ದಿ – ಅಭಿಪ್ರಾಯಗಳನ್ನು ಜನರ ಮೇಲೆ ಹೇರಲಾಗುವುದಿಲ್ಲ ಎಂದು ಯಾರಾದರೂ ಪ್ರಮಾಣ ಮಾಡಿ ಹೇಳಬಲ್ಲರೇ? ಈಗಿರುವ ದೃಶ್ಯ, ಮುದ್ರಣ ಮಾಧ್ಯಮಗಳು ಪೇಯ್ಡ್ ನ್ಯೂಸ್ ಭೂತಕ್ಕೆ ಸಿಲುಕಿದಾಗ ಯಾವ ನಿರ್ಬಂಧವೂ ಇಲ್ಲದ ಅಂತರ್ಜಾಲ ನೈಜ ಸುದ್ದಿಗೆ ಅನುಕೂಲಕರ ಎಂದು ಭಾವಿಸಲಾಗಿತ್ತು. ನಿಧಾನಕ್ಕೆ ಅಂತರ್ಜಾಲ ಕೂಡ ಪೇಯ್ಡ್ ನ್ಯೂಸಿನ ಮತ್ತೊಂದು ರೂಪಕ್ಕೆ ಒಳಗಾಗುತ್ತಿರುವ ಪ್ರಕ್ರಿಯೆಯನ್ನು ನಾವಿಂದು ಕಾಣಬಹುದು. ಹಣ ಕೊಟ್ಟು ಅಂತರ್ಜಾಲವನ್ನು ಉಪಯೋಗಿಸುತ್ತಿರುವಾಗಲೇ ಗೂಗಲ್ ಫೇಸ್ ಬುಕ್ ಈ ರೀತಿ ನಡೆದುಕೊಳ್ಳುತ್ತದೆಯೆಂದರೆ ಇನ್ನೂ ಅವುಗಳಿಗೇ ವೈಫೈ ಜಾಲವನ್ನು ಉಚಿತವಾಗಿ ಜನರಿಗೆ ನೀಡುವಂತೆ ಮಾಡಿಬಿಟ್ಟರೆ ಅವರು ಎಷ್ಟೆಲ್ಲ ರೀತಿಯಲ್ಲಿ ನಮ್ಮನ್ನು ವಂಚಿಸಬಹುದು? ಕಂಪನಿಗಳಿಗೆ ಶರಣಾದ ಸರಕಾರಗಳು ಆ ಕಂಪನಿಗಳ ಉಚಿತ ಅಂತರ್ಜಾಲದ ಮುಖಾಂತರ ಹೇಗೆಲ್ಲ ನಮ್ಮನ್ನು ಮೂರ್ಖರನ್ನಾಗಿಸಬಹುದು? ಒಮ್ಮೆ ಅವಶ್ಯಕತೆ ಇದ್ದವರಿಗೆ ಇಲ್ಲದವರಿಗೆಲ್ಲ ಅಂತರ್ಜಾಲವನ್ನು ಚಟವಾಗಿಸಿಬಿಟ್ಟ ಮೇಲೂ ಉಚಿತವಾಗಿಯೇ ನೀಡುತ್ತಾರಾ? ಅನುಮಾನವೇ. ಏಳು ವರುಷಗಳ ಕೆಳಗೆ ಮೊಬೈಲುಗಳಲ್ಲಿ ಅನಿಯಮಿತ ಅಂತರ್ಜಾಲ 49ರುಪಾಯಿಗೆ ಸಿಗುತ್ತಿತ್ತು. ವೇಗ ಈಗಿನಷ್ಟಲ್ಲದಿದ್ದರೂ ತಕ್ಕಮಟ್ಟಿಗೆಯೇ ಇತ್ತು. ಈಗ 250 ರುಪಾಯಿಗೆ ಒಂದು ಜಿಬಿ ಮಾತ್ರ ಸಿಗುತ್ತಿದೆ. ಮೊಬೈಲುಗಳನ್ನು, ಅಂತರ್ಜಾಲವನ್ನು ಉಪಯೋಗಿಸುವವರ ಸಂಖೈ ಹೆಚ್ಚಾಗುತ್ತಿದ್ದಂತೆ ಬೆಲೆಯೂ ಕಡಿಮೆಯಾಗಬೇಕಿತ್ತಲ್ಲವೇ? ಆಗುತ್ತಿರುವುದು ಮಾತ್ರ ಸಂಪೂರ್ಣ ವಿರುದ್ಧವಾಗಿ.

ಮೇಕ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎನ್ನುತ್ತಾ ಎಲ್ಲವನ್ನೂ ಮಾರಿಬಿಡಲು ಹವಣಿಸುವ ಈ ಸರ್ಕಾರಕ್ಕೆ ನಮ್ಮ ದೇಶದ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ನೀಡಲು ಒಂದು ಸಶಕ್ತ ಕಂಪನಿ ತನ್ನ ಅಧೀನದಲ್ಲೇ ಇರುವುದು ಕಾಣಿಸುವುದಿಲ್ಲವೇ? ಕೆಟ್ಟ ನಿರ್ವಹಣೆಯಿಂದ ಗ್ರಾಹಕರನ್ನು ಕಳೆದುಕೊಂಡಿರುವ ಬಿ.ಎಸ್.ಎನ್.ಎಲ್ಲಿಗೆ ಮರುಜೀವ ನೀಡುವ ಕೆಲಸವಾದರೆ ಈ ಖಾಸಗಿಯವರ ಹಾವಳಿ ಯಾಕೆ ಬೇಕು? ನಾವ್ಯಾಕೆ ಖಾಸಗಿ ಕಂಪನಿಗಳ ಸಿಮ್ಮುಗಳನ್ನು ಉಪಯೋಗಿಸಬೇಕು? ಸರಕಾರೀ ಉತ್ಪನ್ನವೆಂದರೆ ಕಳಪೆ, ಖಾಸಗಿಯದ್ದೆಂದರೆ ಶ್ರೇಷ್ಟ ಎಂಬ ಭ್ರಮೆಯನ್ನು ನೈಜವಾಗಿಸುವಲ್ಲಿ ನಮ್ಮ ಅಧಿಕಾರಿ ಶಾಹಿ, ರಾಜಕಾರಣಿಗಳ ಪಾತ್ರ ದೊಡ್ಡದು. ಅಂತಹ ಭ್ರಮೆಯನ್ನು ಕಡೆಗಣಿಸುವ ಕೆಲಸವನ್ನಾದರೂ ಭಾರತದ ಶಕ್ತಿಶಾಲಿ ಪ್ರಧಾನಿ ಮಾಡಬಹುದಿತ್ತಲ್ಲಾ? ದೇಶೀ ಅಧಿಕಾರಿಗಳ ಜೊತೆಗೆ ಚರ್ಚಿಸಿ ಇಲ್ಲೇ ಡಿಜಿಟಲ್ ಇಂಡಿಯಾ ರೂಪುಗೊಂಡುಬಿಟ್ಟರೆ ಫಾರಿನ್ ಸಿಇಓಗಳ ಜೊತೆ ದೇಶ ವಿದೇಶದ ಮಾಧ್ಯಮಗಳಲ್ಲಿ ಮಿಂಚುವ ಅವಕಾಶ ತಪ್ಪುತ್ತದೆಯೆನ್ನುವ ಕೊರಗಿರಬೇಕು. ಅಭಿವೃದ್ಧಿಗೂ ತಂತ್ರಜ್ಞಾನಕ್ಕೂ ಇರುವ ವ್ಯತ್ಯಾಸವನ್ನು ಅರಿಯದ ಪ್ರಧಾನಿಯೊಬ್ಬರು ತಂತ್ರಜ್ಞಾನವನ್ನೇ ಅಭಿವೃದ್ಧಿಗೆ ಸಮೀಕರಿಸುತ್ತಿರುವುದು ದೇಶದ ಮುಂದಿರುವ ಅಪಾಯದ ದಿನಗಳ ದಿಕ್ಸೂಚಿ ಎಂದರೆ ತಪ್ಪಲ್ಲ. ಮತ್ತು ಆ ಅಪಾಯದಿಂದ ತಂತ್ರಜ್ಞಾನವನ್ನು ಉಪಯೋಗಿಸುತ್ತಿರುವ ನನಗಾಗಲೀ ತಂತ್ರಜ್ಞಾನದ ಸಹಾಯದಿಂದ ಇದನ್ನು ಓದುತ್ತಿರುವ ನಿಮಗಾಗಲೀ ತೊಂದರೆಯಾಗುವುದಿಲ್ಲ ಮತ್ತು ಈ ದಿಕ್ಕುತಪ್ಪಿದ ಅಭಿವೃದ್ಧಿಯಿಂದ ತೊಂದರೆಗೊಳಗಾದವರ ಸುದ್ದಿಯೂ ನಮಗೆ ತಲುಪುವುದಿಲ್ಲ. ಕಾರಣ ತಂತ್ರಜ್ಞಾನ ಕೆಲವರ ಕಪಿಮುಷ್ಟಿಗೆ ಸಿಲುಕಿ ಏಕಸ್ವಾಮ್ಯಕ್ಕೆ ಒಳಪಡಲಿದೆ. “ಮೇಕ್ ಇನ್ ಇಂಡಿಯಾ ಅಲ್ಲ, ಮೇಕ್ ಇಂಡಿಯಾ ಎನ್ನುವುದು ನಮ್ಮ ಉದ್ದೇಶವಾಗಬೇಕು. ಚೀನಾ ದೇಶವೇನೂ ನಮ್ಮಲ್ಲಿ ಬನ್ನಿ ನಮ್ಮಲ್ಲಿ ಬನ್ನಿ ಎಂದು ಗೋಗರೆಯಲಿಲ್ಲ. ಚೀನಾವನ್ನು ಕಟ್ಟಿದರು, ವ್ಯಾಪಾರ ಮಾಡಬಯಸುವ ಕಂಪನಿಗಳು ಓಡೋಡಿ ಬಂದರು” ಎಂಬರ್ಥದ ಅರವಿಂದ್ ಕೇಜ್ರಿವಾಲರ ಮಾತುಗಳು ಇಲ್ಲಿ ಪ್ರಸ್ತುತ. PM ಪದದ ಅರ್ಥ Prime Minister ಎಂದಿದೆಯೇ ಹೊರತು Perfect Marketing ಎನ್ನುವುದಲ್ಲ ಎಂಬ ಸತ್ಯವನ್ನು ನಮ್ಮ ನರೇಂದ್ರ ಮೋದಿಯವರಿಗೆ ಮೊದಲು ಅರ್ಥ ಮಾಡಿಸಬೇಕಿದೆ.

ಅಕ್ಟೋ 6, 2015

ಎಲ್.ಇ.ಡಿ ಲೈಟ್ ಎಂಬ ಕಿವಿ ಮೇಲೆ ಹೂ!

ರಾಜ್ಯ ಸರಕಾರ ಕರ್ನಾಟಕದಲ್ಲಿರುವ 1.32 ಕೋಟಿ ಕುಟುಂಬಗಳಿಗೆ ಕಡಿಮೆ ದರದಲ್ಲಿ ಎಲ್.ಇ.ಡಿ ಬಲ್ಬುಗಳನ್ನು ಹಂಚಲು ಉದ್ದೇಶಿಸಿದೆ. ಇಂತಹ ಹೊಸ ಯೋಜನೆಗಳಿಗೆ 'ಪರಿಸರ'ಕ್ಕೆ ಪೂರಕ ಎಂಬ ಹೆಸರಿಟ್ಟುಬಿಟ್ಟರೆ ಸಾರ್ವಜನಿಕವಾಗಿ ಒಪ್ಪಿತವಾಗಿಬಿಡುತ್ತದೆಯೆನ್ನುವುದು 'ಆಳುವವರಿಗೆ' ತಿಳಿದುಬಿಟ್ಟಿದೆ. ಇಡೀ ಕರ್ನಾಟಕದ ತುಂಬೆಲ್ಲ ಎಲ್.ಇ.ಡಿ ಬಲ್ಬುಗಳು ಜಗಮಗಿಸಲು ಪ್ರಾರಂಭಿಸಿದರೆ ಒಟ್ಟು ಸಾವಿರ ಮೆಗಾವ್ಯಾಟ್ ವಿದ್ಯುತ್ ಉಳಿತಾಯವಾಗಿಬಿಡುತ್ತದೆ, ನೋಡಿ ನೋಡಿ ಎಷ್ಟೆಲ್ಲ ಪರಿಸರ ಉಳಿಸಿಬಿಡಬಹುದು ಎಂದು ಪತ್ರಿಕಾ ಹೇಳಿಕೆ ಕೊಡುತ್ತಿದ್ದಾರೆ. ನಿಜಕ್ಕೂ ಇದು ಪರಿಸರ ಪೂರಕ ಕೆಲಸವಾ ಅಥವಾ ಎಲ್.ಇ.ಡಿ ತಯಾರಕ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಯೋಜನೆಯಾ?
ಸದ್ಯಕ್ಕೆ ಎಲ್.ಇ.ಡಿ ಬಲ್ಬಿನ ಬೆಲೆ ಮುನ್ನೂರು ನಾನೂರು ರುಪಾಯಿಗಳಷ್ಟಿದೆ. ಕಂಪನಿಯ ಹೆಸರಿಲ್ಲದ ಬ್ರ್ಯಾಂಡುಗಳು ನೂರು ನೂರೈವತ್ತು ರುಪಾಯಿಗೆ ಸಿಗುತ್ತವಾದರೂ ಅವುಗಳ ಬಾಳಿಕೆಯ ಬಗ್ಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಸರಕಾರ ಹೇಳುತ್ತಿರುವಂತೆ ಎಲ್.ಇ.ಡಿ ಬಲ್ಬುಗಳು ಹಳೆಯ ಇನ್ ಕ್ಯಾಂಡಿಸೆಂಟ್ ಮತ್ತು ಸಿ.ಎಫ್.ಎಲ್ ಬಲ್ಬುಗಳಿಗಿಂತ ಕಡಿಮೆ ವಿದ್ಯುತ್ ಉಪಯೋಗಿಸುತ್ತದೆ ಎನ್ನುವುದು ಸತ್ಯ. ಈ ಎಲ್.ಇ.ಡಿ ಬಲ್ಬುಗಳು ಉಳಿದ ಬಲ್ಬುಗಳಿಗಿಂತ ಹೆಚ್ಚು ಬಾಳಿಕೆ ಬರುತ್ತದೆಯೆನ್ನುವುದು ಕೂಡ ಸತ್ಯ. ಒಂಭತ್ತು ವ್ಯಾಟಿನ ಎಲ್.ಇ.ಡಿ ಬಲ್ಬ್ ಇಪ್ಪತ್ತು ವ್ಯಾಟಿನ ಸಿ.ಎಫ್.ಎಲ್ ಬಲ್ಬಿಗೆ ಸಮ, ಅರವತ್ತು ವ್ಯಾಟಿನ ಇನ್ ಕ್ಯಾಂಡಿಸೆಂಟ್ ಬಲ್ಬಿಗೆ ಸಮ. ಇಷ್ಟೆಲ್ಲ ಪರಿಸರ ಸ್ನೇಹಿಯಾಗಿರುವ ಎಲ್.ಇ.ಡಿ ಬಲ್ಬನ್ನು ಎಲ್ಲರ ಮನೆಗೂ ಕೊಟ್ಟುಬಿಟ್ಟರೆ ಏನು ತಪ್ಪು ಎನ್ನುವ ಪ್ರಶ್ನೆ ಮೂಡದೇ ಇರದು.
ಸದ್ಯದ ಯೋಜನೆಯ ಪ್ರಕಾರ ಸರಕಾರ 6 ಕೋಟಿ ಬಲ್ಬುಗಳನ್ನು ರಿಯಾಯತಿ ದರದಲ್ಲಿ ಕೊಡಲು ಉದ್ದೇಶಿಸಿದೆ. ಕಂಪನಿಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಒಂದು ಬಲ್ಬಿಗೆ ನೂರು ರುಪಾಯಿ ನಿಗದಿಗೊಳಿಸುತ್ತದಂತೆ. ಅಲ್ಲಿಗೆ ಇದು ಒಟ್ಟು ಆರು ನೂರು ಕೋಟಿ ರುಪಾಯಿಗಳ ವ್ಯವಹಾರ. ಬೀದಿ ದೀಪಗಳನ್ನೆಲ್ಲ ಬದಲಿಸುತ್ತಾರಂತೆ. ಬೀದಿ ದೀಪಗಳಿಗೆ ಹೆಚ್ಚಿನ ಸಾಮರ್ಥ್ಯದ ಬಲ್ಬುಗಳು ಬೇಕಿರುವುದರಿಂದ ಅವುಗಳ ವೆಚ್ಚ ಮತ್ತಷ್ಟು ಹೆಚ್ಚಿದ್ದೀತು. ಒಂದು ಮನೆಗೆ ರಿಯಾಯತಿ ದರದಲ್ಲಿ ಗರಿಷ್ಟ ಹತ್ತು ಬಲ್ಬುಗಳನ್ನು ನೀಡುತ್ತಾರಂತೆ. ಆ ಲೆಕ್ಕದಲ್ಲಿ 1.32 ಕೋಟಿ ಮನೆಗಳು x 100 ಎಂದರೆ ಸಾವಿರದ ಮುನ್ನೂರ ಇಪ್ಪತ್ತು ಕೋಟಿ ಖರ್ಚಾಗುತ್ತದೆ.  ಇಷ್ಟೆಲ್ಲ ಖರ್ಚು ಮಾಡಿದ ನಂತರ ಉಳಿಯುವುದು ಸಾವಿರ ಮೆಗಾವ್ಯಾಟ್ ವಿದ್ಯುತ್.
ಆರು ಕೋಟಿ ಎಲ್.ಇ.ಡಿ ಬಲ್ಬುಗಳನ್ನು ಮನೆಗಳಿಗೆ ಕೊಟ್ಟ ನಂತರ ಹಳೆಯ ಆರು ಕೋಟಿ ಬಲ್ಬುಗಳು ಕಸ ಸೇರುತ್ತದೆ. ಅವುಗಳನ್ನು ಹೇಗೆ ನಿರ್ವಹಿಸಲಾಗುತ್ತದೆ? ದಿಡೀರ್ ಅಂತ ಎಸೆಯಲ್ಪಟ್ಟ ಆರು ಕೋಟಿ ಬಲ್ಬುಗಳು ಪರಿಸರಕ್ಕೆ ಯಾವ ರೀತಿಯಿಂದ ಪೂರಕ? ಈ ಆರು ಕೋಟಿ ಬಲ್ಬುಗಳನ್ನು ಮರುಉಪಯೋಗಿಸುವಂತೆ ಮಾಡುವ, ಈ ಬಲ್ಬು ಕಸವನ್ನು ನಿರ್ವಹಿಸುವ ಯಾವ ಯೋಚನೆಯನ್ನೂ ಮಾಡದೆ ಆರು ಕೋಟಿ ಎಲ್.ಇ.ಡಿ ಬಲ್ಬುಗಳನ್ನು ರಿಯಾಯತಿ ದರದಲ್ಲಿ ನೀಡುವ ಹಿಂದಿನ ಮರ್ಮವೇನು? ಹೋಗಲಿ ಈ ಬಲ್ಬೆಂಬ ತಂತ್ರಜ್ಞಾನ ಎಲ್.ಇ.ಡಿ ಬಲ್ಬುಗಳೊಂದಿಗೆ ನಿಂತುಹೋಗುತ್ತದಾ? ನಿಮಗೆ ನೆನಪಿರಬೇಕು ನಾಲ್ಕೈದು ವರುಷಗಳ ಹಿಂದೆ ಸಿ.ಎಫ್.ಎಲ್ ಬಲ್ಬುಗಳ 'ಹವೆ' ಜೋರಾಗಿತ್ತು. ಸಿ.ಎಫ್.ಎಲ್ ಬಲ್ಬುಗಳು ಕಡಿಮೆ ವಿದ್ಯುತ್ ಉಪಯೋಗಿಸುತ್ತದೆ, ಎಲ್ಲೆಲ್ಲೂ ಸಿ.ಎಫ್.ಎಲ್ ಬಲ್ಬುಗಳೇ ರಾರಾಜಿಸಬೇಕು ಎಂದು ಹೇಳಲಾಗುತ್ತಿತ್ತು. ಎಲ್ಲೆಡೆ ಸಿ.ಎಫ್.ಎಲ್ ಬಲ್ಬುಗಳು ರಾರಾಜಿಸುವುದಕ್ಕೆ ಮುಂಚೆಯೇ ಮತ್ತಷ್ಟು ಕಡಿಮೆ ವಿದ್ಯುತ್ ಉಪಯೋಗಿಸುವ ಎಲ್.ಇ.ಡಿ ಬಲ್ಬುಗಳು ಕಾಲಿಟ್ಟಿವೆ. ಇನ್ನೈದು ವರುಷಕ್ಕೆ ಇನ್ನಷ್ಟು ಉನ್ನತ ತಂತ್ಜಜ್ಞಾನದ ಬಲ್ಬುಗಳು ಬರುವುದಿಲ್ಲವೆಂದು ಏನು ಗ್ಯಾರಂಟಿ? ಮತ್ತಷ್ಟು ವಿದ್ಯುತ್ ಉಳಿಸುವ ಬಲ್ಬುಗಳು ಬಂದರೆ ಈ ಆರು ಕೋಟಿ ಎಲ್.ಇ.ಡಿ ಬಲ್ಬುಗಳನ್ನು ಏನು ಮಾಡಬೇಕು? ಮತ್ತಷ್ಟು ಕಸ ಸೇರಿಸಿ ಪರಿಸರಕ್ಕೆ ಪೂರಕ ಎಂಬ ಹಣೆಪಟ್ಟಿ ಕಟ್ಟಬೇಕಾ?
ಹೊಸದಾಗಿ ಮನೆ ಕಟ್ಟುವವರು ಎಲ್.ಇ.ಡಿ ಬಲ್ಬುಗಳನ್ನೇ ಹೆಚ್ಚು ಉಪಯೋಗಿಸುತ್ತಿದ್ದಾರೆ; ಮನೆಯಲ್ಲಿರುವ ಹಳೆಯ ಬಲ್ಬುಗಳು ಹಾಳಾದಾಗ ಅದರ ಜಾಗಕ್ಕೆ ಎಲ್.ಇ.ಡಿ ಬಲ್ಬುಗಳ ಬರಲಿ. ಹೆಚ್ಚು ವಿದ್ಯುತ್ ಬೇಡುವ ಹಳೆಯ ಬಲ್ಬುಗಳ ಉತ್ಪಾದನೆಯೇ ನಿಂತುಬಿಟ್ಟರೆ ಮತ್ತಷ್ಟು ಒಳ್ಳೆಯದು. ಹಳೆಯ ಬಲ್ಬು ಹಾಳಾಗುವಷ್ಟರಲ್ಲಿ ಹೊಸ ತಂತ್ರಜ್ಞಾನದ ಬಲ್ಬು ಬಂದರೆ ಜನರು ಅದನ್ನು ಉಪಯೋಗಿಸುವಂತಾಗಲಿ. ಅದು ಬಿಟ್ಟು ಆರು ಕೋಟಿ ಬಲ್ಬುಗಳನ್ನು ಹಂಚುವುದು ಪರಿಸರಕ್ಕೆ ಪೂರಕ ಎನ್ನುವುದೆಲ್ಲ ಒಪ್ಪುವಂತಹ ಮಾತಲ್ಲ. ಪರಿಸರಕ್ಕೆ ಇದರಿಂದ ಹಾನಿಯೇ ಹೆಚ್ಚು.

ಅಕ್ಟೋ 1, 2015

ದನ ತಿಂದ್ರೆ ತಪ್ಪು ಜನಾನ್ ಬೇಕಾದ್ರೆ ತಿವ್ಕೊಳ್ಳಿ...

mohammad akhlaq
ಈ ಲೇಖನದ ಹೆಡ್ಡಿಂಗು ಇವತ್ತಿನದಲ್ಲ. ಬರೋಬ್ಬರಿ ಮೂರು ವರುಷದ ಹಿಂದೆ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ನಡೆಯುವ ಬೀಫ್ ಫೆಸ್ಟಿವಲ್ ಎಂಬ ಊಟದ ಹಬ್ಬದ ಸಂದರ್ಭದಲ್ಲಿ ಆ ಫೆಸ್ಟಿವಲ್ಲಿನ ಪರವಾಗಿದ್ದ ಹುಡುಗನೊಬ್ಬನಿಗೆ ಹಬ್ಬವನ್ನು ವಿರೋಧಿಸುವವರು ಚೂರಿ ಹಾಕಿಬಿಟ್ಟಿದ್ದರು. ಆಗ ಬರೆದ ಲೇಖನ ಇವತ್ತು ಮತ್ತೆ ನೆನಪಾಗಿದ್ದು ಉತ್ತರಪ್ರದೇಶದ ದಾದ್ರಿಯ ಬಿಸಾರ ಎಂಬಲ್ಲಿ 'ಬೀಫ್' ತಿಂದರು ಎಂಬ ಅನುಮಾನದ ಮೇಲೆ ಒಂದಿಡೀ ಕುಟುಂಬವನ್ನು ಥಳಿಸಲಾಗಿದೆ. ಮನೆಯ ಹಿರಿಯ ಮೊಹಮದ್ ಅಕ್ಲಾಖನನ್ನು ಹೊಡೆದು ಬಡಿದು ಸಾಯಿಸಲಾಗಿದೆ. ಅವರ ಮಗ ಡ್ಯಾನಿಷ್ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾನೆ. ಮೂರು ವರ್ಷದ ಕೆಳಗೆ ಚೂರಿ ಚುಚ್ಚುವವರೆಗಿದ್ದ ಮನಸ್ಥಿತಿ ಈಗ ಸಾಯಿಸಿಯೇಬಿಡುವಷ್ಟು ಹಾಳಾಗಿಬಿಟ್ಟಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಕೆಲವು ಹಿಂದೂ ಉಗ್ರರನ್ನು ಬಂಧಿಸಲಾಗಿದೆ. ಯಾವ ಉಗ್ರಗಾಮಿ ಸಂಘಟನೆಗೂ ಅಧಿಕೃತವಾಗಿ ಸೇರಿದವರಲ್ಲ ಎಂದು ಪೋಲೀಸರು ಹೇಳಿದ್ದಾರೆ.


ಒಂದು ಕರು ಕಾಣೆಯಾಗುತ್ತದೆ. ಅದರ ಮಾಂಸವನ್ನು ಮೊಹಮದ್ ಅಕ್ಲಾಖ್ ತೆಗೆದುಕೊಂಡು ಹೋಗುತ್ತಿದ್ದ'ನಂತೆ' ಎಂದು ಸುದ್ದಿಯಾಗುತ್ತದೆ. ಅವರ ಮನೆಯವರು ದನದ ಮಾಂಸವನ್ನು ತಿಂದ'ರಂತೆ' ಎಂದು ಸ್ಥಳೀಯ ದೇವಸ್ಥಾನದಲ್ಲಿ 'ಘೋಷಿಸಲಾಗುತ್ತದೆ'. ಧರ್ಮರಕ್ಷಣೆಯ ಹೊಣೆ ಹೊತ್ತ ಹಿಂದೂ ಉಗ್ರರು ಅಕ್ಲಾಖನ ಮನೆಗೆ ನುಗ್ಗಿ ಸಾಯುವವರೆಗೂ ಬಡಿಯುತ್ತಾರೆ. ಫ್ರಿಜ್ಜಿನಲ್ಲಿದ್ದ ಮಾಂಸವನ್ನು ಪೋಲೀಸರು ಪರೀಕ್ಷೆಗೆ ಲ್ಯಾಬಿಗೆ ಕಳುಹಿಸುತ್ತಾರೆ! ಅಕ್ಲಾಖನ ಮಗಳು ಸಾಜ್ದಾಳ 'ಅದು ದನದ ಮಾಂಸವೇ ಅಲ್ಲ. ದನದ ಮಾಂಸ ಅಲ್ಲವೆಂದು ಲ್ಯಾಬ್ ರಿಪೋರ್ಟ್ ಹೇಳಿದರೆ ನನ್ನ ತಂದೆಯನ್ನು ವಾಪಸ್ಸು ಕೊಡುತ್ತಾರೆಯೇ?' ಎಂಬ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಅದು ದನದ ಮಾಂಸವೋ ಮತ್ತೊಂದೋ ಮನೆಗೆ ನುಗ್ಗಿ ಸಾಯ ಬಡಿಯುವಂತಹ 'ಹಕ್ಕನ್ನು' ಈ ಉಗ್ರರಿಗೆ ನೀಡಿದ್ದಾದರೂ ಯಾರು? ಮೊಹಮದ್ ಅಕ್ಲಾಖ್ ಕರುವನ್ನು ಕದ್ದಿದ್ದೇ ಹೌದಾದರೆ ಅದನ್ನು ವಿಚಾರಿಸಲು ಪೋಲೀಸರಿಲ್ಲವೇ? ಏನು ಊಟ ಮಾಡಬೇಕೆಂದು ಆದೇಶಿಸಲು ಇವರ್ಯಾರು? ಇವತ್ತು ದನದ ಮಾಂಸದ ಹೆಸರಿನಲ್ಲಿ ಹಿಂದೂ ಉಗ್ರರು ಸಾಬರ ಮನೆಗೆ ನುಗ್ಗಿದ್ದಾರೆ, ಸಾಬರ ಮನೆಗೆ ತಾನೇ ಎಂದು ನಾವು ಸುಮ್ಮನಿರುತ್ತೀವಿ; ನಾಳೆ ಮಾಂಸ ತಿನ್ನುವ ಹಿಂದೂಗಳ ಮನೆಗೆ ನುಗ್ಗಿ ಬಡಿಯುತ್ತಾರೆ.... ಈಗ ಸುಮ್ಮನಿದ್ದವರು ಆಗ ಮಾತನಾಡುತ್ತೀವಾ?
ದನಕ್ಕಿರುವ ಬೆಲೆ ಮನುಷ್ಯನಿಗಿಲ್ಲವೇ? ಅಂದಹಾಗೆ ಬಿಹಾರ ಚುನಾವಣೆ ಹತ್ತಿರದಲ್ಲಿದೆ....