ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇದೀಗ ಚುನಾವಣೆ ಘೋಷಣೆಯಾಗಿರುವ ಐದು ರಾಜ್ಯಗಳ ಪೈಕಿ ಮಣಿಪುರ ರಾಜ್ಯ ವಿದಾನಸಭಾ ಚುನಾವಣೆಗಳು ಯಾವುದೇ ಮಾನದಂಡದಿಂದ ನೋಡಿದರು ರಾಷ್ಟ್ರದ ಸಾಮಾನ್ಯಜನರ ಗಮನ ಸೆಳೆಯುವಲ್ಲಿ ವಿಫಲವಾಗಿವೆ ಎನ್ನಬಹುದು. ಯಾಕೆಂದರೆ ಇಂಡಿಯಾದ ಉಳಿದ ಭಾಗಗಳ ಜನರಿಗೆ ಈಶಾನ್ಯರಾಜ್ಯಗಳ ಬಗ್ಗೆ ಅಷ್ಟೇನು ಅರಿವು, ಕಾಳಜಿ ಇದ್ದಂತಿಲ್ಲ. ಸ್ವಾತಂತ್ರ ಬಂದ ದಿನದಿಂದಲೂ ಅವು ತೀರಾ ನಿರ್ಲಕ್ಷಿತ ಪ್ರದೇಶಗಳಾಗಿಯೇ ಉಳಿದಿವೆ. ಇದಕ್ಕೆ ಇರಬಹುದಾದ ಕೆಲವು ಕಾರಣಗಳೆಂದರೆ, ಈಶಾನ್ಯದಲ್ಲಿರುವ ರಾಜ್ಯಗಳು ಬೌಗೋಳಿಕವಾಗಿ ಮತ್ತು ಜನಸಂಖ್ಯೆಯ ದೃಷ್ಠಿಯಿಂದ ಬಹಳ ಸಣ್ಣವಾಗಿದ್ದು, ಅಲ್ಲಿಯ ಜನರ ಚಹರೆ ವೇಷಭೂಷಣಗಳು ಭಿನ್ನವಾಗಿರುವುದು. ಜೊತೆಗೆ ಮೊದಲಿನಿಂದಲೂ ಅಲ್ಲಿ ಜನಾಂಗೀಯ ಮತ್ತು ಸ್ವಾತಂತ್ರದ ಸಂಘರ್ಷಗಳು ನಡೆಯುತ್ತಲೇ ಇರುವುದು.