ಡಾ. ಅಶೋಕ್. ಕೆ. ಆರ್.
ಮದುವೆಯಾದ ಮೇಲೆ ಲವ್ವಾಗಲ್ವ ಅಂತ ಸುಮ ಕೇಳಿದ ಪ್ರಶ್ನೆಯಿಂದ ಸಾಗರನ ನೆನಪು ಬಹಳ ದಿನಗಳ ನಂತರ ಕಾಡುತ್ತಿತ್ತು. ಮನೆಗೆ ಹೊರಡುವ ಮುನ್ನ ʼಹೇಗಿದ್ದೀಯೋʼ ಅಂತೊಂದು ಮೆಸೇಜು ಹಾಕಿದೆ. ಇನ್ನೇನು, ಇಷ್ಟು ದಿನದ ನಂತರ ಮೆಸೇಜು ಮಾಡಿದ್ದಕ್ಕೆ ವಿಪರೀತದಷ್ಟು ವ್ಯಂಗ್ಯ ಮಾಡಿ ನನಗೆ ಬಯ್ದು ಅವನನ್ನೂ ಬಯ್ದುಕೊಂಡು ಇಬ್ಬರಿಗೂ ನೋವುಂಟುಮಾಡುವಂತಹ ಕೆಟ್ಟ ಕೆಟ್ಟ ಪದಗಳನ್ನು ಬಳಸಿಯೇ ಬಳಸುತ್ತಾನೆ. ಮೆಸೇಜೇ ಮಾಡ್ಬಾರ್ದಿತ್ತೋ ಏನೋ ಅಂತಂದುಕೊಳ್ಳುತ್ತಾ ಮನೆ ತಲುಪಿದೆ.
ಅಮ್ಮ ಮತ್ತೊಂದು ಸುತ್ತು ಸುಸ್ತಾಗಿ ಕುಳಿತಿದ್ದಳು. ರಾಧಳಿಗಲ್ಲ, ಅಮ್ಮನಿಗೇ ಈಗ ಆರೈಕೆಯ ಅಗತ್ಯವಿದೆ. ಮಲಗೋಗಿ ಅಂತವರಿಗೆ ಹೇಳಿ ಮಗಳನ್ನೂ ಮಲಗಿಸಿ ಅಡುಗೆ ಕೆಲಸ ಮಾಡಿ ಮುಗಿಸಿದೆ. ಒಂದಾದರೂ ಅಮ್ಮ ಎದ್ದೇಳಲಿಲ್ಲ. ಎದ್ದಾಗ ಊಟ ಮಾಡ್ತಾರೆ ಬಿಡು ಅಂದ್ಕೊಂಡು ನಾ ಒಂದಷ್ಟು ತಿಂದು ರೂಮಿಗೆ ಬಂದು ಅಡ್ಡಾದೆ. ರಾತ್ರಿ ಸರಿ ನಿದ್ರೆ ಮಾಡಿರಲಿಲ್ಲವೋ ಏನೋ ರಾಧ ಅತ್ತಿತ್ತ ಮಿಸುಕಾಡದಂತೆ ನಿದ್ರೆ ಹೋಗಿದ್ದಳು. ನಿನ್ನೆ ಆಸ್ಪತ್ರೆಯಲ್ಲಿ ಎಚ್ಚರವಿಲ್ಲದೆ ಮಲಗಿದ್ದಕ್ಕೊ ಏನೋ ನನಗೆ ನಿದ್ರೆ ಹತ್ತಲಿಲ್ಲ. ಫೋನೆಲ್ಲ ನೋಡಿ ಎಷ್ಟು ದಿನಗಳಾಗಿ ಹೋಯ್ತಲ್ಲ ಅಂತ ಫೋನೆತ್ತಿಕೊಂಡು ಎಫ್.ಬಿ ತೆರೆದೆ. ಒಂದೈವತ್ತು ಫ್ರೆಂಡ್ ರಿಕ್ವೆಷ್ಟ್ಗಳಿದ್ದವು. ಅದರಲ್ಲಿ ಗೊತ್ತಿರೋರನ್ನ ಒಪ್ಪಿಕೊಳ್ತಿರಬೇಕಾದರೆ ಮತ್ತೊಂದು ರಿಕ್ವೆಷ್ಟ್ ಬಂತು. ರಾಮ್ಪ್ರಸಾದ್ದು. ʼಓಯ್! ಆಗ್ಲೇ ನನ್ನೆಸ್ರು ಹುಡುಕಿ ರಿಕ್ವೆಷ್ಟ್ ಕಳಿಸಿಬಿಟ್ರಾ? ಅಥವಾ ಫ್ರೆಂಡ್ ಸಜೆಷನ್ಸ್ ಅಲ್ಲಿ ತೋರಿಸಿರಬೇಕು. ಅಥವಾ ಸುಮ ಹೇಳಿದಂಗೆ ನನ್ ಫ್ಯಾನೇ ಇರಬಹುದೇನೋಪʼ ಅಂತಂದುಕೊಂಡು ಒಪ್ಪಿಕೊಂಡೆ. ಎಫ್.ಬಿ ಸ್ಕ್ರಾಲ್ ಮಾಡ್ತಾ ಒಂದಷ್ಟು ಲೈಕುಗಳನ್ನೊತ್ತುತ್ತಿರಬೇಕಾದರೆ ಸಾಗರನ ಮೆಸೇಜು ಬಂದ ನೋಟಿಫೀಕೇಷನ್ ಕಾಣಿಸಿತು. ಒಟ್ಟೊಟ್ಟಿಗೇ ಮೂರು ಮೆಸೇಜು ಕಳಿಸಿದ್ದ. ತೆರೆಯಲು ಕೌತುಕ, ಜೊತೆಗೊಂದಷ್ಟು ಭಯ. ತೆರೆಯದೇ ಇರಲಾದೀತೆ! ತೆರೆದೆ.
“ನಂದೇನಿದೆಯೇ. ಮಾಮೂಲಿ ನಡೀತಿದೆ”
“ನೀ ಹೇಗಿದ್ದಿ”
“ಮಗಳೇಗಿದ್ದಾಳೆ”
ಕುಹಕವಿಲ್ಲದೆ, ವ್ಯಂಗ್ಯವಿಲ್ಲದೆ ಸಾಗರ ಮೆಸೇಜು ಮಾಡಬಲ್ಲ ಎನ್ನುವುದೇ ಮರೆತು ಹೋಗಿತ್ತು.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.