ಅಕ್ಟೋ 24, 2020

ಒಂದು ಬೊಗಸೆ ಪ್ರೀತಿ - 85 - ಕೊನೆಯ ಅಧ್ಯಾಯ.

ಡಾ. ಅಶೋಕ್.‌ ಕೆ. ಆರ್.
ರಾಜೀವ್‌ಗೆ ಡೈವೋರ್ಸ್‌ ಬಗ್ಗೆ ತಿಳಿಸಿ, ರಾಮ್‌ಪ್ರಸಾದ್‌ಗೂ ವಿಷಯ ತಿಳಿಸಿ ಸುಮಾ ಜೊತೆ ಹಂಚಿಕೊಂಡು ಮಾರನೇ ದಿನ ಸಾಗರನಿಗೂ ವಿಷಯ ತಿಳಿಸಿದ ಮೇಲೆ ಮನಸ್ಸಿಗೊಂದು ನಿರಾಳತೆ ಮೂಡಿತ್ತು. ಬಹಳ ದಿನಗಳ ನಂತರ ಮೂಡಿದ ನಿರಾಳತೆಯದು. ಈ ನಿರಾಳ ಮನಸ್ಸಿನೊಂದಿಗೆ ಒಂದು ದಿನದ ಮಟ್ಟಿಗಾದರೂ ನಾನು ನಾನಾಗಷ್ಟೇ ಉಳಿದುಕೊಳ್ಳಬೇಕು. ಡ್ಯೂಟಿಗೆ ರಜೆ ಹಾಕಿದೆ. ರಜಾ ಹಾಕಿದ ವಿಷಯ ಅಮ್ಮನಿಗೆ ತಿಳಿಸಿದರೆ ಮಗಳನ್ನು ಕೈಗೆ ಕೊಟ್ಟುಬಿಡುತ್ತಾರೆ. ಉಹ್ಞೂ, ಇವತ್ತಿನ ಮಟ್ಟಿಗೆ ಮಗಳೂ ಬೇಡ. ಮೊಬೈಲಂತೂ ಬೇಡವೇ ಬೇಡ ಎಂದುಕೊಂಡು ಮನೆಯಲ್ಲೇ ಮೊಬೈಲು ಬಿಟ್ಟು ಅಮ್ಮನ ಮನೆಗೋಗಿ ಮಗಳನ್ನು ಬಿಟ್ಟು ಮೊಬೈಲ್‌ ಮನೇಲೇ ಮರೆತೆ. ಸಂಜೆ ಬರೋದು ಸ್ವಲ್ಪ ತಡವಾಗ್ತದೆ ಅಂತೇಳಿ ಹೊರಟೆ. ಎಲ್ಲಿಗೆ ಹೋಗುವುದೆಂದು ತಿಳಿಯಲಿಲ್ಲ ಮೊದಲಿಗೆ. ಜೆ.ಎಸ್.ಎಸ್‌ ಹತ್ರ ಹೊಸ ಮಾಲ್‌ ಒಂದು ಶುರುವಾಗಿದೆಯಲ್ಲ, ಅಲ್ಲಿಗೇ ಹೋಗುವ ಎಂದುಕೊಂಡು ಹೊರಟೆ. ಜೆ.ಎಸ್.ಎಸ್‌ ದಾಟುತ್ತಿದ್ದಂತೆ ಚಾಮುಂಡವ್ವ ಕರೆದಂತಾಗಿ ಗಾಡಿಯನ್ನು ಸೀದಾ ಬೆಟ್ಟದ ಕಡೆಗೆ ಓಡಿಸಿದೆ. ಮೊದಲೆಲ್ಲ ಪ್ರಶಾಂತವಾಗಿರುತ್ತಿದ್ದ ಚಾಮುಂಡಿ ಬೆಟ್ಟದಲ್ಲೀಗ ಜನರ ಕಲರವ ಹೆಚ್ಚು. ಶನಿವಾರ, ಭಾನುವಾರ, ರಜಾ ದಿನಗಳಲ್ಲಂತೂ ಕಾಲಿಡಲೂ ಜಾಗವಿರುವುದಿಲ್ಲ. ಇವತ್ತೇನೋ ವಾರದ ಮಧ್ಯೆಯಾಗಿರುವುದರಿಂದ ಜನರ ಸಂಚಾರ ಕಮ್ಮಿ. ಮುಂಚೆಯೆಲ್ಲ ಭಾನುವಾರ ಎಷ್ಟು ಜನರಿರುತ್ತಿದ್ದರೋ ಇವತ್ತು ಅಷ್ಟಿದ್ದಾರೆ. ಹೆಚ್ಚಿನಂಶ ಕಾಲೇಜು ಬಂಕು ಮಾಡಿ ಜೋಡಿಯಾಗಿ ಬಂದವರೇ ಹೆಚ್ಚು. 

ದೇಗುಲದ ಒಳಗೋಗಿ ಕೈಮುಗಿದು ಹೊರಬಂದು ದೇವಸ್ಥಾನದ ಹಿಂದಿರುವ ಬೆಂಚುಗಳ ಮೇಲೆ ಕುಳಿತುಕೊಂಡೆ. ಎದುರಿಗೆ ವಿಶಾಲವಾಗಿ ಚಾಚಿಕೊಳ್ಳುತ್ತಿರುವ ಮೈಸೂರು. ಬೆಂಗಳೂರಿನ ಟ್ರಾಫಿಕ್ಕು ಜಂಜಾಟದಿಂದ ಬಂದವರು ಮೈಸೂರು ಚೆಂದವಪ್ಪ, ಎಷ್ಟು ಕಡಿಮೆ ಟ್ರಾಫಿಕ್ಕು ಅಂತ ಲೊಚಗುಟ್ಟುತ್ತಾರೆ. ಮೈಸೂರಲ್ಲೇ ಹುಟ್ಟಿ ಬೆಳೆದವಳಿಗೆ ಇಲ್ಲಿನ ಟ್ರಾಫಿಕ್ಕು ಎಷ್ಟೆಲ್ಲ ಜಾಸ್ತಿಯಾಗಿಬಿಟ್ಟಿದೆ ಅನ್ನುವುದು ಅರಿವಿಗೆ ಬರ್ತಿದೆ. ಎಷ್ಟೊಂದು ಕಡೆ ಹೊಸ ಹೊಸ ಟ್ರಾಫಿಕ್‌ ಸಿಗ್ನಲ್ಲುಗಳಾಗಿಬಿಟ್ಟಿದ್ದಾವಲ್ಲ ಈಗ. 

ಬೆಟ್ಟದ ಮೇಲೆ ಬಂದು ಕುಳಿತವಳಿಗೆ ಪುರುಷೋತ್ತಮನ ನೆನಪಾಗದೇ ಇರುವುದು ಸಾಧ್ಯವೇ? ಹೊಸ ಬಡಾವಣೆಗಳನ್ನು ಬಿಟ್ಟರೆ ಇನ್ನೆಲ್ಲ ರಸ್ತೆಗಳಲ್ಲೂ ಪುರುಷೋತ್ತಮನ ನೆನಪುಗಳಿವೆ. ನನ್ನಿವತ್ತಿನ ಪರಿಸ್ಥಿತಿಗೆ ಪುರುಷೋತ್ತಮನೇ ಕಾರಣನಲ್ಲವೇ? ಪುರುಷೋತ್ತಮ ಕಾರಣನೆಂದರೆ ನನ್ನ ತಪ್ಪುಗಳನ್ನೂ ಅವನ ಮೇಲೊರಸಿ ತಪ್ಪಿಸಿಕೊಳ್ಳುವ ನಡೆಯಾಗ್ತದೆ. ಅವನ ಪ್ರೀತಿಯನ್ನು ಒಪ್ಪಿದ್ದು ತಪ್ಪೋ, ಅವನು ನನ್ನ ಮೇಲೆ ಹೊರಿಸಿದ ಅಭಿಪ್ರಾಯಗಳನ್ನು ನಗುನಗುತ್ತಾ ಒಪ್ಪಿಕೊಂಡದ್ದು ತಪ್ಪೋ, ದೈಹಿಕ ದೌರ್ಜನ್ಯವನ್ನೂ ಪ್ರೀತಿಯ ಭಾಗ ಎಂದುಕೊಂಡದ್ದು ತಪ್ಪೋ, ಅವನು ಅಷ್ಟೆಲ್ಲ ಕೇಳಿಕೊಂಡರೂ ಓಡಿಹೋಗದೇ ಇದ್ದದ್ದು ತಪ್ಪೋ, ಅವನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿದ್ದು ತಪ್ಪೋ..... ಭೂತದಲ್ಲಿ ಮಾಡಿದ ತಪ್ಪುಗಳನ್ನು ಈ ರೀತಿ ನಿಕಷಕ್ಕೊಳಪಡಿಸುವುದು ಎಷ್ಟರಮಟ್ಟಿಗೆ ಸರಿ? ಪುರುಷೋತ್ತಮನ ನೆನಪುಗಳನ್ನು ದೂರ ಮಾಡಬೇಕೆಂದು ಅತ್ತಿತ್ತ ನೋಡಿದಷ್ಟೂ ಎಲ್ಲೆಡೆಯೂ ಜೋಡಿಗಳೇ ಕಂಡರು. ನೆನಪುಗಳು ಮತ್ತಷ್ಟು ಹೆಚ್ಚಾಯಿತಷ್ಟೇ! ಇಲ್ಲಿರೋ ಜೋಡಿಗಳಲ್ಲಿ ಇನ್ನೆಷ್ಟು ಜೋಡಿಗಳ ಕನಸುಗಳು ಮುರಿದು ಬೀಳ್ತವೋ ಏನೋ... ಜಾತಿ ಧರ್ಮ ಅಂತಸ್ತುಗಳ ಬೃಹತ್‌ ಗೋಡೆಗಳನ್ನು ಎಷ್ಟು ಮಂದಿ ದಾಟಲು ಸಾಧ್ಯವಿದೆಯೋ... ಅವನ್ನೆಲ್ಲ ದಾಟುವ ಉತ್ಸಾಹವಿದ್ದರೂ ಮಕ್ಕಳ ಮೇಲೆ ಪ್ರಭುತ್ವ ಸಾಧಿಸಲು ಹಾತೊರೆಯುವ ಅಪ್ಪ ಅಮ್ಮನನ್ನು ಎದುರು ಹಾಕಿಕೊಳ್ಳಲು ಎಷ್ಟು ಜನಕ್ಕೆ ಸಾಧ್ಯವಿದೆಯೋ... ದಾಟುವ ಉಮ್ಮಸ್ಸು ನನಗೂ ಇತ್ತು ಪುರುಷೋತ್ತಮನಿಗೂ ಇತ್ತು... ಸುಖಾಂತ್ಯಗೊಳಿಸುವಷ್ಟು ಉಮ್ಮಸ್ಸಿರಲಿಲ್ಲ... ಪುರುಷೋತ್ತಮನ ಪ್ರೀತಿ ಉಸಿರುಗಟ್ಟಿಸುವ ಹಂತ ತಲುಪದೇ ಹೋಗಿದ್ದರೆ ಓಡಿ ಹೋಗುತ್ತಿದ್ದೆನಾ? ಸ್ಪಷ್ಟ ಉತ್ತರ ನನ್ನಲ್ಲೇ ಇಲ್ಲ. 

ಅಕ್ಟೋ 17, 2020

ಒಂದು ಬೊಗಸೆ ಪ್ರೀತಿ - 84

ಬದುಕು ಬದಲಾಗಲು ತುಂಬ.... ತುಂಬ ಅಂದರೆ ತುಂಬಾ ಕಡಿಮೆ ಸಮಯ ಬೇಕು. ನಿನ್ನೆಯವರೆಗೂ ಜೊತೆಯಲ್ಲಿದ್ದವರು, ಜೊತೆಯಲ್ಲಿದ್ದು ಹರಟಿದವರು, ಹರಟಿ ಕಷ್ಟ ಸುಖಕ್ಕಾದವರು, ಕಷ್ಟ ಸುಖಕ್ಕಾಗುತ್ತಾ ಜೀವನ ಪೂರ್ತಿ ಜೊತೆಯಲ್ಲಿಯೇ ಇರುತ್ತೀವಿ ಅಂತ ನಂಬಿಕೆ ಚಿಗುರಿಸಿದವರು, ಚಿಗುರಿದ ನಂಬುಗೆಯನ್ನು ಮರವಾಗಿಸಿದವರು ಇದ್ದಕ್ಕಿದ್ದಂತೆ ದೊಡ್ಡದೊಂದು ಜೆ.ಸಿ.ಬಿ ಹೊತ್ತು ತಂದು ಮುಲಾಜೇ ಇಲ್ಲದೆ ಬೇರು ಸಮೇತ ಆ ಮರವನ್ನು ಉರುಳಿಸಿಬಿಟ್ಟರೆ ಅದನ್ನು ತಡೆದುಕೊಳ್ಳುವುದು ಮನುಷ್ಯ ಮಾತ್ರರಿಗೆ ಸಾಧ್ಯವೇ? ನಾ ತಡೆದುಕೊಂಡೆ. ಸಾಗರ ಹೇಳ್ತಾನೇ ಇರ್ತಾನಲ್ಲ ನೀ ದೇವತೆ ಅಂತ! ಇದ್ರೂ ಇರಬಹುದೇನೋ ಅಂತಂದುಕೊಂಡು ನಕ್ಕೆ. 

ಡೈವೋರ್ಸ್ ತೆಗೆದುಕೊಳ್ಳುವ ನಿರ್ಧಾರ ಸುಲಭದ್ದಾಗಿರಲಿಲ್ಲ. ಡೈವೋರ್ಸ್ ಬಗ್ಗೆ ಯೋಚನೆ ಮಾಡಿದಾಗೆಲ್ಲ ಮದುವೆಯ ದಿನಗಳ ನೆನಪಾಗುತ್ತಿತ್ತು. ಪುರುಷೋತ್ತಮ ಎಷ್ಟೆಲ್ಲ ತೊಂದರೆ ಕೊಟ್ಟರೂ ಅದನ್ನೆಲ್ಲ ಗಮನಕ್ಕೇ ತೆಗೆದುಕೊಳ್ಳದಂತೆ ಪ್ರಬುದ್ಧರಾಗಿ ವರ್ತಿಸಿದ್ದರು ರಾಜೀವ್. ಪುರುಷೋತ್ತಮನನ್ನು ಬಿಡುವುದು ಎಷ್ಟು ಕಷ್ಟದ ಸಂಗತಿಯಾಗಿತ್ತೋ ರಾಜೀವನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಅಷ್ಟೇ ಸಂತಸವಾಗಿತ್ತು. ತುಂಬಾ ಸರಿಯಾದ ಆಯ್ಕೆ ಅನ್ನಿಸಿತ್ತು. ಎಲ್ಲಾ ನಿರ್ಧಾರಗಳೂ ಹಿಂಗೇ ಒಂದಷ್ಟು ವರುಷಗಳ ನಂತರ ತಪ್ಪು ಅನ್ನಿಸಲು ಶುರುವಾಗಿಬಿಡುತ್ತಾ? ಯಪ್ಪ! ಆ ತರವಾಗಿಬಿಟ್ಟರೆ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳುವುದೇ ಸಾಧ್ಯವಿಲ್ಲ. ಅವತ್ತಿಗೆ ಆ ನಿರ್ಧಾರ ಸರಿ ಇವತ್ತಿಗೆ ಈ ನಿರ್ಧಾರ ಸರಿಯಾ? ಡೈವೋರ್ಸ್ ತೆಗೆದುಕೊಳ್ಳುತ್ತಿರುವುದು ರಾಜೀವ ನನ್ನ ಮೇಲೆ ಅನುಮಾನ ಪಟ್ಟ, ಅನುಮಾನ ಪಟ್ಟು ಮನೆಯಲ್ಲಿ ಅಸಹ್ಯದ ವಾತಾವರಣ ಸೃಷ್ಟಿಸಿದ ಅನ್ನುವುದು ಮಾತ್ರ ಕಾರಣವಾ? ಕ್ಷಮೆ ಕೇಳು, ಜೊತೆಯಲ್ಲಿರಿ ಅಂತೇಳಿದ್ರಲ್ಲ ಅವರ ಮನೆಯವರು. ಯಾರೋ ದೂರದವರಲ್ಲವಲ್ಲ ರಾಜೀವು, ಒಂದು ಕ್ಷಮೆ ಬಿಸಾಕಿ ಸರಿ ಮಾಡಿಕೊಳ್ಳಬಹುದಿತ್ತಲ್ಲ. ಯಾಕೆ ಕ್ಷಮೆಯ ದಾರಿಯನ್ನು ನಾ ಆಯ್ದುಕೊಳ್ಳಲಿಲ್ಲ? ಯಾಕೆ ಆಯ್ದುಕೊಳ್ಳಲಿಲ್ಲವೆಂದರೆ ಅದಕ್ಕೆ ಕಾರಣ ರಾಧ ಅಂದರೆ ತಪ್ಪಲ್ಲ. 

ಹೌದು. ರಾಜೀವ್ ದೊಡ್ಡ ಸಂಬಳದ ಕೆಲಸ ಹಿಡಿಯುವುದು ನನಗೆ ಬೇಕಿರಲಿಲ್ಲ, ನಾ ಅದನ್ನು ಯಾವತ್ತಿಗೂ ನಿರೀಕ್ಷೆಯೂ ಮಾಡಿರಲಿಲ್ಲ. ಹೋಗಲಿ ಅಪ್ಪನ ಮನೆಯಲ್ಲಿ ದಂಡಿಯಾಗಿ ದುಡ್ಡು ಬಿದ್ದಿದೆಯಲ್ಲ, ಹೋಗಿ ಈಸ್ಕೊಂಡು ಬನ್ನಿ ಅಂತ ಗೋಗರೆದಿರಲಿಲ್ಲ, ಅತ್ತು ರಂಪಾಟ ಮಾಡಿರಲಿಲ್ಲ. ಬರೋ ಸಂಬಳದಲ್ಲಿ ಆರಾಮಾಗಿ ಇರುವ ಬಿಡಿ ಅಂತ ಹೇಳುತ್ತಲೇ ಇದ್ದರೂ ಅವರಿಗೇ ವಾಸ್ತವದ ಜೀವನ ಶೈಲಿ ರುಚಿಸುತ್ತಿರಲಿಲ್ಲ. ಮತ್ತಾ ಜೀವನವನ್ನು ಸರಿಪಡಿಸುವ ಹೆಚ್ಚಿನ ಜವಾಬ್ದಾರಿ ನನ್ನ ಮೇಲೇ ಹೊರಿಸಿಬಿಟ್ಟಿದ್ದರು. ಅದನ್ನೂ ತಡೆದುಕೊಳ್ಳಬಹುದಿತ್ತು. ಆದರೆ ರಾಧಳೆಡೆಗೆ ಅವರು ತೋರುತ್ತಿದ್ದ ಅಸಡ್ಡೆ, ಅಸಡ್ಡೆ ವ್ಯಕ್ತಪಡಿಸಲು ಅವರು ಬಳಸುತ್ತಿದ್ದ ಕೀಳಾದ ಭಾಷೆ, ಆ ಕೀಳಾದ ಭಾಷೆಯನ್ನು ಶತ್ರುವಿನ ಮಕ್ಕಳಿಗೂ ಬಳಸಬಾರದು, ಬಳಸಬಾರದ ಭಾಷೆಯನ್ನು ಬಳಸಿ ಬಳಸಿ ನನ್ನಲ್ಲೂ ಅವರೆಡೆಗೊಂದು ಅಸಹ್ಯ ಮೂಡಿಸಿಬಿಟ್ಟರು. ಅವರ ಬಗ್ಗೆಯಿದ್ದ ಗೌರವ ದಿನೇ ದಿನೇ ಚೂರ್ಚೂರೇ ಕಮ್ಮಿಯಾಗಿದ್ದು ನನಗೂ ಗೊತ್ತಾಗಲಿಲ್ಲ. ರಾಮ್ ಮತ್ತು ನನ್ನ ಕಲ್ಪಿತ ಸಂಬಂಧದ ಬಗೆಗಿನ ಜಗಳ ನನ್ನೊಳ ಮನಸ್ಸಿನಲ್ಲಿದ್ದ ಡೈವೋರ್ಸ್ ತಗೊಂಡ್ ಹೋಗಿಬಿಟ್ಟರೆ ಹೇಗೆ ಅನ್ನೋ ದೂರದ ಬೆಟ್ಟವನ್ನು ಹತ್ತಿರವಾಗಿಸಿಬಿಟ್ಟಿತು. ಇದು ಹತ್ತಲಾರದ ಬೆಟ್ಟವೇನಲ್ಲ ಎಂದು ಅರಿವಾದ ಮೇಲೆ ತಿರುಗಿ ನೋಡುವ ಪ್ರಮೇಯ ಮೂಡಲಿಲ್ಲ. 

ಅಕ್ಟೋ 10, 2020

ಒಂದು ಬೊಗಸೆ ಪ್ರೀತಿ - 83

"ಅಲ್ಲಾ ನಾನೇನೋ ಗೂಬ್‌ ನನ್ಮಗ.... ಸರಿ ಇಲ್ಲ. ನೀ ಆದ್ರೂ ಸರಿ ಇದ್ದೀಯಲ್ಲ.... ಬದುಕಿದ್ದೀನೋ ಸತ್ತಿದ್ದೀನೋ ಅಂತಾದ್ರೂ ವಿಚಾರಿಸ್ಬೇಕು ಅಂತ ಕೂಡ ಅನ್ನಿಸಲಿಲ್ಲವಲ್ಲ ನಿನಗೆ..... ಯಾವ್ದೋ ಸಿಟ್ಟಲ್ಲಿ ಬೇಸರದಲ್ಲಿ ನಿನ್‌ ನಂಬರ್‌ ಕೂಡ ಡಿಲೀಟ್‌ ಮಾಡ್ಬಿಟ್ಟಿದ್ದೀನಿ ಕಣವ್ವ.... ಮುಚ್ಕಂಡ್‌ ಫೋನ್‌ ಮಾಡು ಬಿಡುವಾದಾಗ". ಸಾಗರನ ಮೆಸೇಜು. ಎಫ್.ಬಿ ಮೆಸೆಂಜರಿನಲ್ಲಿ. ಸಾಗರನ ಮೆಸೇಜು ಮುಖದ ಮೇಲೊಂದು ನಗು ಮೂಡಿಸದೇ ಇದ್ದೀತೆ. ಒಂಚೂರೇ ಚೂರು ನಗು ಮೂಡಿತು. ಬೇಸರದಿಂದಿದ್ದ ಮನಸ್ಸಿಗೆ ಸಾಗರನ ಮೆಸೇಜು ಒಂದಷ್ಟು ಲವಲವಿಕೆ ತರಿಸಿದ್ದು ಸುಳ್ಳಲ್ಲ. 

ʻಇಲ್ಲಪ್ಪ. ಅದ್ಯಾರೋ ಒಬ್ರು ನಾ ಸತ್ತಾಗ್ಲೂ ಮೆಸೇಜ್‌ ಮಾಡ್ಬೇಡ ಅಂದಿದ್ರುʼ ವ್ಯಂಗ್ಯ ಮಾತಾಡೋ ಅವಕಾಶ ಬಿಡುವುದು ಸಾಧುವೇ. 

"ಆಯ್ತಾಯ್ತು. ತಪ್‌ ನಂದೇ. ನಿಂದೂ ತಪ್ಪಿಲ್ಲ ಅಂತಲ್ಲ. ನಾ ತುಂಬಾ ಇಮೆಚ್ಯೂರ್‌ ಆಗಿ ವರ್ತಿಸಿದ್ದೌದು. ಫೋನ್‌ ಮಾಡ್ತೀಯಾ ಇಲ್ವಾ?" 

ʻಮಾಡ್ತೀನಿ ಕಣೋ. ಮಾಡ್ದೇ ಇರ್ತೀನಾ. ಎಷ್ಟ್‌ ಸಲ ಫೋನ್‌ ಮಾಡ್ಬೇಕು ಮಾಡ್ಬೇಕು ಅಂತಂದುಕೊಳ್ಳುತ್ತಲೇ ಇದ್ದೆ. ಅದರಲ್ಲೂ ಕಳೆದೊಂದು ತಿಂಗಳಿನಿಂದʼ 

"ಸುಮ್ನೆ ಡವ್‌ ಕಟ್ತಿ. ಅಷ್ಟೊಂದೆಲ್ಲ ಅಂದುಕೊಂಡಿದ್ರೆ ಮಾಡಿರ್ತಿದ್ದೆ ಬಿಡು" 

ʻಮ್.‌ ಹೋಗ್ಲಿ ಬಿಡು. ನಾ ಏನ್‌ ಹೇಳಿದ್ರೂ ನಂಬಲ್ಲ ನೀನು. ನಂಬಿಕೆ ಕಮ್ಮಿ ಆಗಿರುವ ದಿನಗಳಲ್ಲಿ ಮೌನವಾಗಿರೋದೇ ಒಳ್ಳೇದುʼ 

"ಇದ್ಯಾಕವ್ವ? ಏನೇನೋ ಮಾತಾಡ್ತಿದ್ದಿ. ಏನ್‌ ಆಯ್ತೇ. ಇಸ್‌ ಎವೆರಿತಿಂಗ್‌ ಆಲ್‌ರೈಟ್?"‌ 

ʻಬಿಡೋ. ಫೋನಲ್‌ ಹೇಳ್ತೀನಿ. ಈಗ ಒಪಿಡಿಗೆ ಹೋಗಬೇಕು. ಐದರಷ್ಟೊತ್ತಿಗೆ ಮುಗಿಯುತ್ತೆ. ಆಮೇಲ್‌ ಫೋನ್‌ ಮಾಡ್ತೀನಿ. ನೀ ಬಿಡುವಾಗಿರ್ತೀಯಲ್ಲ?ʼ 

"ನಿಂಗೋಸ್ಕರ ಯಾವಾಗ್ಲೂ ಬಿಡುವಾಗೇ ಇರ್ತೀನಿ ಬಿಡ" 

ಅಕ್ಟೋ 3, 2020

ಒಂದು ಬೊಗಸೆ ಪ್ರೀತಿ - 82

ರಾಮ್‌ಪ್ರಸಾದ್‌ ಮುಜುಗರದಿಂದ ಮುದುಡಿ ಕುಳಿತಿದ್ದರು. ಬಿಯರ್‌ ಬಾಟಲಿನ ಮುಚ್ಚಳದಂಚಿದ ಕೆಳಗೆ ಜಾರಿ ಬೀಳುತ್ತಿದ್ದ ನೀರ ಹನಿಗಳನ್ನೊಮ್ಮೆ ನೋಡ್ತಾರೆ, ಬಾಗಿಲ ಕಡೆಗೊಮ್ಮೆ ನೋಡ್ತಾರೆ, ನಂತರ ಟಿವಿಯ ಕಡೆ ಕಣ್ಣಾಡಿಸಿ ಮತ್ತೆ ಬಿಯರ್ರು ಬಾಟಲುಗಳೆಡೆಗೆ ಕಣ್ಣೋಟ ಹರಿಸಿಬಿಡುತ್ತಾರೆ. ಅವರಿಗೇನು! ಹಿಂದೂ ಗೊತ್ತಿಲ್ಲ, ಮುಂದೂ ಗೊತ್ತಿಲ್ಲ! ಮನೇಲ್ಯಾರೂ ಇಲ್ಲ, ಕುಡಿದೋಗುವ ಅಂತ ಬಂದಿದ್ದಾರೆ ಅಷ್ಟೇ! ಮೇಲ್ನೋಟಕ್ಕೆ ಶಾಂತವಾಗಿ ಕುಳಿತಿದ್ದವಳ ಮನದಲ್ಲಿದ್ದ ಚಿಂತೆಯ ಆಳ ಅಗಲವ್ಯಾವೂ ರಾಮ್‌ಗೆ ಗೊತ್ತೇ ಇಲ್ಲ! ಟೇಬಲ್‌ ಮೇಲೇನೋ ಎರಡೇ ಬಿಯರ್‌ ಇದೆ. ಇವರೊಂದು ಅವರೊಂದು ಕುಡಿದು ಅಲ್ಲಿಗೆ ಮುಗಿಸಿದರೆ ಸರಿ. ಇದರೊಟ್ಟಿಗೆ ಮತ್ತೊಂದಷ್ಟು ಬಿಯರನ್ನು ರಾಜೀವ ಗಂಟಲೊಳಗಿಳಿಸಿದರೆ ಮುಗೀತು ಕತೆ. ನಶೆಯೇರಿದ ಮೇಲೆ ಅವರ ಮಾತುಗಳು ಎತ್ತೆತ್ತಲಿಗೋ ಹೋಗುವುದು ಅಪರೂಪವೇನಲ್ಲ. ಏನಾಗ್ತದೋ ಏನಾಗ್ತದೋ ಅನ್ನೋ ಚಿಂತೆಯಲ್ಲೇ ನನ್ನ ನಿದ್ರೆ ಹಾರಿ ಹೋಗಿತ್ತು. ನಿಮಿಷಕ್ಕೆರಡೆರಡು ಬಾರಿ ರಾಮ್‌ ಕಡೆಗೊಮ್ಮೆ, ಬಾಗಿಲು ಕಡೆಗೊಮ್ಮೆ, ಟಿವಿ ಕಡೆಗೊಮ್ಮೆ ನೋಡುತ್ತಾ ಕುಳಿತೆ. 

ಕೊನೆಗೂ ರಾಜೀವ್‌ ಬಂದರು. ಅದೇನು ಎರಡೇ ನಿಮಿಷಕ್ಕೆ ಬಂದರೋ ಹತ್ತು ನಿಮಿಷಕ್ಕೆ ಬಂದರೋ ಅರ್ಧ ಘಂಟೆಯ ನಂತರ ಬಂದರೋ ಒಂದೂ ತಿಳಿಯಲಿಲ್ಲ ನನಗೆ. ಒಂದು ಯುಗವೇ ಕಳೆದುಹೋದಂತನ್ನಿಸಿತು. ಒಳಗೆ ಕಾಲಿಡುತ್ತಿದ್ದಂತೆಯೇ ನನ್ನನ್ನು ಕಂಡು ಮುಖ ಕಿವುಚಿಕೊಂಡರು. ಥೂ ಅನಿಷ್ಟವೇ ಯಾಕ್‌ ಬಂದೆ ಇವತ್ತು ಅಂದಂತಾಯಿತು. ಅಷ್ಟೆಲ್ಲ ಮುಖ ಕಿವುಚಿಕೊಂಡು ಸಿಟ್ಟು ತೋರಿಬಿಟ್ಟು ನಾ ಅವರಿಬ್ಬರಿಗೂ ಕುಡಿಯುವುದಕ್ಕೇ ಅವಕಾಶ ಕೊಡದಂತೆ ಓಡಿಸಿಬಿಟ್ಟರೆ! ಮುಳುಗುವ ಸೂರ್ಯ ಕೂಡ ಅಷ್ಟು ವೇಗವಾಗಿ ಮೋಡಗಳ ಮೇಲೆ ಬಣ್ಣವನ್ನೆರಚಿರಲಾರ. ಅಷ್ಟು ವೇಗವಾಗಿ ಮುಖದ ಮೇಲೊಂದು ನಗು ಎರಚಿಕೊಂಡು "ಅರೆರೆ... ಇದೇನ್‌ ಬಂದುಬಿಟ್ಟಿದ್ದಿ. ಸುಮಾರ್‌ ಲೇಟಾಯ್ತಲ್ಲ. ಬರೋಲ್ಲವೇನೋ ನೀನು ಅಂದುಕೊಂಡೆ" ಎಂದರು. 

ʻಅಂದುಕೊಳ್ಳೋ ಬದಲು ಫೋನ್‌ ಮಾಡಿದ್ರಾಗಿರೋದುʼ ಎಂದುಕೊಳ್ಳುತ್ತಾʼ ಪಾಪು ಮಲಗಿಬಿಟ್ಟಿದ್ದಳು. ಹಂಗಾಗಿ ತಡವಾಯ್ತುʼ ಎಂದೆ. 

"ಹೌದಾ.... ಹೋಗ್ಲಿ ಬಿಡು. ಒಳ್ಳೇದೇ ಆಯ್ತು. ರಾಮ್‌ ಸಿಕ್ಕಿ ಸುಮಾರು ದಿನಗಳಾಗಿದ್ದವಲ್ಲ. ಇವತ್ಯಾಕೋ ನೆನಪಾಯಿತು. ನೀನೂ ಬರೋ ಹಂಗೆ ಕಾಣಿಸಲಿಲ್ಲವಲ್ಲ. ಫೋನ್‌ ಮಾಡಿ ಕರೆಸಿಕೊಂಡೆ ಅಷ್ಟೇ" 

ʻಮ್.‌ ಏನೇನ್‌ ತಂದ್ರಿ ಪಾರ್ಸಲ್ಲುʼ 

"ಜಾಸ್ತಿ ಇಲ್ಲ. ಒಂದ್‌ ಪ್ಲೇಟ್‌ ಕಬಾಬು, ಒಂದ್‌ ಚಿಲ್ಲಿ ಪೋರ್ಕು, ಎರಡ್‌ ಬಿರಿಯಾನಿ ಅಷ್ಟೇ. ಹೋಗ್ಲಿ ಬಿಡು. ಫ್ರಿಜ್ಜಲ್ಲಿರ್ತದೆ. ನಾಳೆಗಾಗುತ್ತೆ" 

ʻಫ್ರಿಜ್ಜಲ್ಲಿ? ಯಾಕ್‌ ತಿನ್ನಲ್ವ ಈಗʼ 

"ಹೇ... ನೀ ಬರಲ್ಲ ಅಂದ್ಕಂಡು ಮನೇಲೇ ಕೂರೋಣ ಅಂದ್ಕಂಡಿದ್ದೆ. ನೀ ಬಂದುಬಿಟ್ಟಿದ್ದೀಯಲ್ಲ. ಹೊರಗೆ ಎಲ್ಲಾದ್ರೂ ಹೋಗಿ ಕೂರ್ತೀವಿ" 

ಸೆಪ್ಟೆಂ 26, 2020

ಒಂದು ಬೊಗಸೆ ಪ್ರೀತಿ - 81

ತಿಂಗಳು ಕಳೆಯಿತು ಜಗಳವಾಗಿ, ಅವಮಾನಿತಳಾಗಿ. ಎಲ್ಲ ಕಡೆಯಲ್ಲೂ ಒಂದಷ್ಟು ಶಾಂತಿ ನೆಲೆಸಿತ್ತು. ಅಮ್ಮ ನಿಧಾನಕ್ಕಾದರೂ ಮಾತಿಗೆ ತೊಡಗಿಕೊಂಡಿದ್ದಳು. ಅಮ್ಮನ ಮನೆಯೊಳಗೆ ನಾಲ್ಕೈದು ನಿಮಿಷ ಇದ್ದು ಬರುವುದನ್ನು ನಾನೂ ರೂಢಿಸಿಕೊಂಡೆ. ಎದುರಿಗೆ ಸಿಕ್ಕಾಗ ಮುಖ ತಿರುಗಿಸಿಕೊಳ್ಳುತ್ತಿದ್ದ ಸೋನಿಯಾ ಕಾಟಾಚಾರಕ್ಕಾದರೂ ಸರಿಯೇ ಒಂದು ನಗು ಬಿಸಾಕುವಷ್ಟು ಮೃದುವಾಗಿದ್ದಳು. ಶಶಿ ಅಪ್ಪ ಆರಾಮಾಗೇ ಇದ್ದರು ನನ್ನ ಜೊತೆ. ರಾಜೀವನದೇ ಭಯ ನನಗೆ. ಅಚ್ಚರಿಯೆಂಬಂತೆ ಎಲ್ಲರಿಗಿಂತ ಮುಂಚಿತವಾಗೆ ನನ್ನೊಂದಿಗೆ ರಾಜಿ ಮಾಡಿಕೊಂಡವರಂತೆ ಬದಲಾದದ್ದು ಅವರೇ. ಅಫ್‌ಕೋರ್ಸ್‌ ಒಂದದಿನೈದು ದಿನ ಮಾತುಕತೆಯೇನೂ ಇರಲಿಲ್ಲ. ಆ ಹೂ ಉಹ್ಞೂ ಅಂತ ಶುರುವಾದ ಮಾತುಗಳು ಮತ್ತೊಂದು ವಾರ ಕಳೆಯುವಷ್ಟರಲ್ಲಿ ತೀರ ಮೊದಲಿನಷ್ಟು ಅಲ್ಲವಾದರೂ ಮೊದಲಿದ್ದ ಮಾತುಗಳಲ್ಲಿ ಅರ್ಧಕ್ಕೆ ಬಂದು ನಿಂತಿತ್ತು. ಕಳೆದೆರಡು ದಿನಗಳಿಂದಂತೂ ವಿಪರೀತವೆನ್ನಿಸುವಷ್ಟೇ ಮಾತನಾಡುತ್ತಿದ್ದರು. ಅವರ ಮಾತುಗಳಲ್ಲೆಲ್ಲ ಬೆಂಗಳೂರಿಗೆ ಹೋಗಿದ ನಂತರದ ಜೀವನಗಳ ಕುರಿತೇ ಇರುತ್ತಿತ್ತು. ಇನ್ನೇನು ರಿಸಲ್ಟ್‌ ಬರ್ತದೆ ಈ ತಿಂಗಳೋ ಮುಂದಿನ ತಿಂಗಳೋ. ಹೆಚ್ಚು ಕಮ್ಮಿ ಪಾಸ್‌ ಆಗೋದ್ರಲ್ಲಿ ಅನುಮಾನವೇನಿಲ್ಲ. ಈಗಾಗಲೇ ಒಂದು ತಿಂಗಳ ಬಾಂಡ್‌ ಮುಗಿದೇ ಹೋಗಿದೆ. ಇನ್ನೊಂದು ಹತ್ತು ತಿಂಗಳು ಕಳೆದುಬಿಟ್ಟರೆ ಮುಗೀತು, ಆರಾಮು ಬೆಂಗಳೂರಿಗೆ ಹೋಗಿಬಿಡಬಹುದು. ಮಗಳ ನೋಡಿಕೊಳ್ಳುವುದೊಂದು ಸಮಸ್ಯೆಯಾಗಬಹುದು. ಅಷ್ಟರಲ್ಲಿ ಮಗಳೂ ದೊಡ್ಡವಳಾಗಿರ್ತಾಳಲ್ಲ? ನಡೀತದೆ. ಬೆಂಗಳೂರಿನಲ್ಲೇನು ಹೆಜ್ಜೆಗೊಂದು ಡೇ ಕೇರ್‌ಗಳಿವೆಯಂತೆ. ಒಂದಷ್ಟು ಖರ್ಚಾಗ್ತದೆ ಹೌದು, ಆದರೂ ಹೆಂಗೋ ನಿಭಾಯಿಸಬಹುದು. ರಾಜೀವ ಒಂದಷ್ಟು ನೆಮ್ಮದಿ ಕಂಡುಕೊಂಡರೆ ಮಿಕ್ಕಿದ್ದೆಲ್ಲ ಸಲೀಸಾಗಿ ನಡೆದು ಹೋಗ್ತದೆ. 

ಆದ್ರೂ ಮೈಸೂರು ಬಿಟ್ಟು ಬೆಂಗಳೂರಿಗೆ ಸೆಟಲ್‌ ಆಗಲು ಹೋಗುವುದು ಬಾಲಿಶ ನಿರ್ಧಾರದಂತೇ ತೋರ್ತದೆ. ಅದೂ ಮೈಸೂರಿನಲ್ಲೇ ಕೈ ತುಂಬಾ ಸಂಬಳ ಸಿಗುವ ಕೆಲಸ ದಕ್ಕುವಾಗ. ಮಗಳನ್ನು ನೋಡಿಕೊಳ್ಳಲು ಅಪ್ಪ ಅಮ್ಮ ಇದ್ದಾರೆ. ಜೊತೆಗೆ ಫಸ್ಟ್‌ ಹೆಲ್ತ್‌ ಒಂಥರಾ ಎರಡನೇ ಮನೆಯಂತೆಯೇ ಆಗಿ ಹೋಗಿದೆ. ಎಲ್ಲರೊಡನೆಯೂ ಒಗ್ಗಿ ಹೋಗಿದ್ದೇನೆ. ಕಷ್ಟ ಸುಖ ಹಂಚಿಕೊಂಡು ಕಿತ್ತಾಡೋಕೆ ಸುಮ ಇದ್ದಾಳೆ. ರಾಮ್‌ನಂತಹ ಒಳ್ಳೆ ಗೆಳೆಯ ಕೂಡ ಇದ್ದಾನೆ. ಇರೋದ್ರಲ್ಲಿ ನಮ್‌ ಡಿಪಾರ್ಟ್‌ಮೆಂಟೇ ಕಿರಿಕಿರಿ ಇಲ್ಲದೆ ನಡೀತಿರೋದು. ಇಷ್ಟೆಲ್ಲ ಸೌಕರ್ಯಗಳಿರುವಾಗ ಮೈಸೂರು ಬಿಟ್ಟು ಹೋಗಲು ಮನಸ್ಸಾಗುವುದಾದರೂ ಹೇಗೆ? ಸುಮ್ಮನೆ ಕ್ಲಿನಿಕ್‌ ಮಾಡಿಕೊಂಡು ಇವರಿಗೊಂದು ಫಾರ್ಮಸಿ ಇಟ್ಟುಕೊಟ್ಟರೆ ಆಗ್ತದೋ ಏನೋ? ಅಂತನ್ನಿಸ್ತದೆ. ಆದರೆ ಕ್ಲಿನಿಕ್‌ ಇಡೋದಂದ್ರೆ ಭಯ. ಕ್ಲಿನಿಕ್ಕು ಚೆನ್ನಾಗಿ ನಡೆಯುವಂತಾಗಲು ವರುಷ ಎರಡು ವರುಷವಾದರೂ ಕಾಯಬೇಕು. ಅಷ್ಟು ಕಾದರೂ ಕ್ಲಿಕ್‌ ಆಗೇ ಆಗ್ತದೆ ಅಂತೇನೂ ಇಲ್ಲ. ಕ್ಲಿಕ್‌ ಆದರೂ ಬೇರೆಯವರು ಎಲ್ಲಿ ಹೊಸ ಕ್ಲಿನಿಕ್‌ ತೆಗೆದು ಸ್ಪರ್ಧೆ ನೀಡಿಬಿಡ್ತಾರೋ ಅನ್ನೋ ಭಯ ಇದ್ದೇ ಇದೆ. ಇನ್ನು, ಕ್ಲಿನಿಕ್‌ ನಿರೀಕ್ಷೆಗೂ ಮೀರಿ ಗೆದ್ದು ಬಿಟ್ಟರೆ ಮನೆಯ ಕಡೆಗೆ, ಮಗಳ ಕಡೆಗೆ ಗಮನವೇ ಕೊಡದಷ್ಟು ಕೆಲಸವಾಗಿಬಿಡ್ತದೆ. ರಜಾ ಹಾಕೋಕಾಗಲ್ಲ, ಅಯ್ಯೋ ಇವತ್‌ ಯಾಕೋ ಬೋರು ಮನೇಲೇ ಇದ್ದು ಬಿಡುವ ಅನ್ನುವಂಗಿಲ್ಲ, ಜನ ಬರಲಿ ಬರದೇ ಹೋಗಲಿ ಘಂಟೆ ಹೊಡೀತಿದ್ದಂಗೇ ಹೋಗಿ ಕ್ಲಿನಿಕ್ಕಿನ ಬಾಗಿಲು ತೆರೆದು ಕುಳಿತುಕೊಳ್ಳಲೇಬೇಕು. ಯಪ್ಪ! ಬೆಂಗಳೂರಿಗೆ ಹೋಗಿ ಯಾವುದಾದರೂ ಆಸ್ಪತ್ರೆಯಲ್ಲಿ ನೆಲೆ ಕಂಡುಕೊಳ್ಳುವುದು ಉತ್ತಮ, ಕ್ಲಿನಿಕ್‌ ಗ್ಲಿನಿಕ್‌ ಆಟ ನನಗಲ್ಲ. 

ಸೆಪ್ಟೆಂ 19, 2020

ಒಂದು ಬೊಗಸೆ ಪ್ರೀತಿ - 80

"ಇದ್ಯಾಕೆ? ಪರೀಕ್ಷೆ ಮುಗಿದ ಮೇಲೆ ಓದೋಕೇನೂ ಇಲ್ಲ ಅಂತ ತುಂಬಾ ಬೇಸರಕ್‌ ಹೋಗ್ಬಿಟ್ಟಂಗಿದ್ದಿ" ಬೆಳಗಿನ ರೌಂಡ್ಸು ಮುಗಿಸಿ ಕ್ಯಾಂಟೀನಿನಲ್ಲಿ ಕಾಫಿ ಕುಡಿಯುತ್ತ ಕುಳಿತಿದ್ದಾಗ ಒಳಬಂದ ಸುಮಾ ಕೇಳಿದ ಪ್ರಶ್ನೆಗೆ ಮುಗುಳ್ನಕ್ಕೆ, ಉತ್ತರಿಸಲಿಲ್ಲ. ಇವತ್ತಿಗೆ ಇಪ್ಪತ್ತು ದಿನವೇ ಆಯಿತು ಮನೆಯಲ್ಲಿ ಗಲಾಟೆ ನಡೆದು. ಅವತ್ತಿನಿಂದ ಇವತ್ತಿನವರೆಗೂ ಮನಸ್ಸು ಸರಿ ಹೋಗಿಲ್ಲ. ಯಾಂತ್ರಿಕವಾಗಿ ಬೆಳಿಗ್ಗೆ ಮಗಳನ್ನು ಅಪ್ಪನ ಮನೆಗೆ ಬಿಟ್ಟು ಕೆಲಸಕ್ಕೆ ಬಂದು ಸಂಜೆ ಹೋಗುವಾಗ ಮಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದೀನಷ್ಟೇ. ಅಪ್ಪನ ಮನೆಯೊಳಗೂ ಕಾಲಿಟ್ಟಿಲ್ಲ ಅಷ್ಟು ದಿನದಿಂದ. ಬೆಳಿಗ್ಗೆ ಹೋಗಿ ಮನೆ ಮುಂದೆ ನಿಂತು ಹಾರ್ನ್‌ ಹೊಡೆದ್ರೆ ಅಪ್ಪನೋ ಅಮ್ಮನೋ ಶಶೀನೋ ಹೊರಬಂದು ಮಗಳನ್ನು ಕರೆದುಕೊಂಡು ಹೋಗುತ್ತಾರೆ, ಸಂಜೆ ಮತ್ತೊಂದು ಸುತ್ತು ಹಾರ್ನ್‌ ಹೊಡೆದ್ರೆ ಅಮ್ಮ ಒಳಗಡೆ ಬಾಗಿಲು ತೆರೆಯುತ್ತಾರೆ. ರಾಧ ಹೊರಬರುತ್ತಾಳೆ. ಅಮ್ಮ ಹೊರಬಂದು ನನ್ನನ್ನು ಮಾತನಾಡಿಸುವುದಿಲ್ಲ, ನಾನು ಒಳಗೋಗಿ ಅವರನ್ನು ವಿಚಾರಿಸಿಕೊಳ್ಳುವುದಿಲ್ಲ. ಅಪರೂಪಕ್ಕೆ ಸಂಜೆ ಅಪ್ಪ ಮನೆಯಲ್ಲೇ ಇದ್ದರೆ "ಬಾ ಒಳಗೆ" ಎನ್ನುತ್ತಾರೆ. ʻಇರ್ಲಿ ಪರವಾಗಿಲ್ಲ ಕೆಲಸವಿದೆʼ ಎಂದ್ಹೇಳಿ ನಾ ಹೊರಟುಬಿಡುತ್ತೇನೆ. ಅಪ್ಪನಿಗೂ ನನ್ನ ಮನಸ್ಥಿತಿಯ ಅರಿವಿದೆಯಲ್ಲ, ಬಲವಂತಿಸುವುದಿಲ್ಲ. ಇನ್ನು ಮನೆಗೆ ಬಂದು ಅಡುಗೆ ಪಾತ್ರೆ ಕ್ಲೀನಿಂಗು ಅಂತ ಸಮಯ ಹೋಗುವುದು ತಿಳಿಯುವುದಿಲ್ಲ. ರಾಜೀವ ಬರೋದು ತಡವಾಗಿ, ಹತ್ತು ಹತ್ತೂವರೆಯ ಸುಮಾರಿಗೆ. ಅಷ್ಟೊತ್ತಿಗೆ ಹೆಚ್ಚಿನ ದಿನ ನಾನೂ ಮಗಳು ಮಲಗಿ ಬಿಟ್ಟಿರುತ್ತೇವೆ. ಅವರ ಬಳಿ ಇರುವ ಕೀಯಿಂದ ಬಾಗಿಲು ತೆಗೆದುಕೊಂಡು ಒಳಬಂದು ಹಾಲಿನಲ್ಲೇ ಮಲಗಿಬಿಡುತ್ತಾರೆ. ಬೆಳಿಗ್ಗೆ ನಾ ಎದ್ದ ಮೇಲೆ ರೂಮಿನೊಳಗೆ ಬಂದು ಮಗಳ ಪಕ್ಕ ಮಲಗಿದರೆ ನಾನೂ ಮಗಳು ಹೊರಗೆ ಕಾಲಿಡುವವರೆಗೂ ಎದ್ದೇಳುವ ಯಾವ ಸೂಚನೆಯನ್ನೂ ತೋರಿಸುವುದಿಲ್ಲ. ಅವರಿಗೇನೋ ಮುಂಚೆಯಿಂದಾನೂ ಹೆಚ್ಚು ಮಲಗುವ ಅಭ್ಯಾಸವಿರುವುದು ಹೌದು. ಆದರೆ ತೀರ ಇಷ್ಟೊಂದೆಲ್ಲ ಅಲ್ಲ. ನನ್ನ ಜೊತೆ ಯಾವುದೇ ಮಾತುಕತೆ ನಡೆಸಬಾರದೆಂಬ ಕಾರಣಕ್ಕಷ್ಟೇ ಈ ರೀತಿಯ ವರ್ತನೆ. ನಾನೂ ಪ್ರಶ್ನಿಸಲೋಗಲಿಲ್ಲ. "ನಿನಗೆ ಬೇಕಾಗುವವರೆಗೆ, ನಿನಗೆ ಅವಶ್ಯಕತೆ ಇರುವವರೆಗೆ ನೀನು ನಾ ಕೋಪಗೊಂಡರೂ, ಸಿಟ್ಟುಗೊಂಡರೂ, ನಿನ್ನನ್ನು ಹಿಗ್ಗಾಮುಗ್ಗಾ ಬಯ್ದರೂ ಮತ್ತೆ ಮೆಸೇಜು ಮಾಡಿಕೊಂಡು ಫೋನ್‌ ಮಾಡಿಕೊಂಡು ಗೋಳಾಡಿ ಮುದ್ದಾಡಿ ಸಮಾಧಾನ ಪಡಿಸುತ್ತಿದ್ದೆ. ಇವಾಗ ನಾ ನಿನಗೆ ಬೇಡ, ಹಂಗಾಗಿ ನಾ ಚೂರು ಸಿಡುಕಿದರೂ ಸುಮ್ಮನಾಗಿಬಿಡುತ್ತಿ. ನನ್ನನ್ನು ಸಮಾಧಾನ ಪಡಿಸುವ ಅನಿವಾರ್ಯತೆ ನಿನಗೀಗಿಲ್ಲ" ಎಂದಿದ್ದ ಸಾಗರ. ಒಟ್ರಾಸಿ, ನೀ ಮನುಷ್ಯರನ್ನು ಬಳಸಿ ಬಿಸಾಡುವುದರಲ್ಲಿ ಪ್ರವೀಣೆ ಎಂದು ತಿಳಿಸಿಕೊಟ್ಟಿದ್ದ. ಇರಬಹುದು. ನನ್ನನ್ನು ಸಾಗರನಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡವರು ಯಾರಿದ್ದಾರೆ. ಅವನ ಸ್ನೇಹವನ್ನೂ ಉಳಿಸಿಕೊಳ್ಳಲಿಲ್ಲ ನಾನು. ಇವತ್ತಿನ ಪರಿಸ್ಥಿತಿಯಲ್ಲಿ ಅವನ ಜೊತೆ ಮಾತನಾಡಿದ್ದರೆ, ಕಷ್ಟ ಹಂಚಿಕೊಂಡಿದ್ದರೆ ಅರ್ಧಕ್ಕರ್ಧ ಸಮಾಧಾನವಾಗಿಬಿಡುತ್ತಿತ್ತು. ಯಾವ ಮುಚ್ಚುಮರೆಯಿಲ್ಲದೆಯೇ ಇದ್ದುದೆಲ್ಲವನ್ನೂ ಇದ್ದಂತೆಯೇ ಹೇಳಿಕೊಳ್ಳಲು ಸಾಧ್ಯವಾಗೋದು ಅವನ ಜೊತೆ ಮಾತ್ರ. ಒಂದು ಫೋನ್‌ ಮಾಡೇಬಿಡಲಾ? ಅಥವಾ ಅದಕ್ಕೂ ಮುಂಚೆ ಒಂದು ಮೆಸೇಜ್‌ ಕಳಿಸಿಯೇಬಿಡಲಾ? ಎಂದಂದುಕೊಂಡು ಕೈಗೆ ಫೋನೆತ್ತಿಕೊಂಡಿದ್ದಕ್ಕೆ ಲೆಕ್ಕವಿಲ್ಲ. "ನಿನಗೆ ಬೇಸಿಕಲಿ ನಿನ್ನ ದುಃಖ ಹಂಚಿಕೊಳ್ಳೋಕೆ ಒಂದು ಜೊತೆ ಕಿವಿಗಳು ಬೇಕಿತ್ತಷ್ಟೇ. ಬೇರೆಯವರ ದುಃಖ ಕೇಳಿಸಿಕೊಳ್ಳೋ ತಾಳ್ಮೆ ನಿನ್ನಲ್ಲಿಲ್ಲ. ತುಂಬಾ ಸೆಲ್ಫ್‌ ಸೆಂಟರ್ಡ್‌ ಪರ್ಸನ್‌ ನೀನು" "ನನ್ನ ಹುಟ್ಟಿದಹಬ್ಬಕ್ಕಲ್ಲ, ನಾನು ಸತ್ತರೂ ನನಗೆ ಮೆಸೇಜು ಮಾಡಬೇಡ" ಅವನ ಮಾತುಗಳು ನೆನಪಾಗುತ್ತಿತ್ತು. ಫೋನನ್ನು ಪಕ್ಕಕ್ಕಿಡುತ್ತಿದ್ದೆ. ಕಾಲೇಜು ದಿನಗಳೇ ಚೆಂದಿದ್ದವಪ್ಪ. ಇನ್ನೇನಿಲ್ಲ ಅಂದ್ರೂ ಕಷ್ಟ ಸುಖ ಹಂಚಿಕೊಳ್ಳೋಕೆ ಅಂತಾನೇ ಗೆಳತಿಯರಿದ್ದರು. ದುಃಖಕ್ಕೆ ಹೆಗಲು ಬೇಡೋ, ಹೆಗಲಾಗೋ ಗೆಳೆಯರೂ ಇರ್ತಿದ್ರೇನೋ, ಪುರುಷೋತ್ತಮ ನನ್ನ ಜೀವನದಲ್ಲಿ ಇಲ್ಲದೇ ಹೋಗಿದ್ದರೆ. ಈಗ್ಯಾರಿದ್ದಾರೆ? ಈಗಿರಲಿ ನಾ ಮೆಡಿಕಲ್‌ ಮುಗಿಸಿದ ಮೇಲೆ ಯಾರೊಬ್ಬರಾದರೂ ನನ್ನ ಗೆಳೆಯರಾಗಿದ್ದಾರಾ? ಸಾಗರ ಗೆಳೆಯನ ಗಡಿಗಳನ್ನು ದಾಟಿ ಹತ್ತಿರಾದವನು. ಸುಮ ಒಬ್ಬಳಿದ್ದಳು, ನನ್ನ ರಾಮ್‌ಪ್ರಸಾದ್‌ ಬಗ್ಗೆ ಕೇಳಿದ ವದಂತಿಗಳನ್ನೇ ಬಳಸಿಕೊಂಡು ನೋವುಂಟು ಮಾಡಿದಳು. ಅವತ್ತಿನ ನಂತರ ಸುಮಾಳೊಂದಿಗೆ ಎಷ್ಟು ಬೇಕೋ ಅಷ್ಟೇ ಮಾತು. ಅವಳೇನೋ ಪಾಪ ರೇಗಿಸಲೇ ಹೇಳಿರಬಹುದು, ಆದರದು ಮನಸ್ಸು ಮುರಿದು ಹಾಕಿತು. ರಾಜೀವನ ಗೆಳೆಯರನೇಕರು ಪರಿಚಯ, ಅದು ಪರಿಚಯದ ಮಿತಿ ದಾಟಲಿಲ್ಲ. ರಾಮ್‌ಪ್ರಸಾದ್‌ ಒಬ್ಬನನ್ನು ಹೊರತುಪಡಿಸಿ. ತೀರ ಖಾಸಗಿ ವಿಷಯಗಳನ್ನೇನೂ ರಾಮ್‌ ಜೊತೆಗೆ ಇಲ್ಲಿಯವರೆಗೆ ಹಂಚಿಕೊಂಡವಳಲ್ಲ ನಾನು, ಆದರೆ ಗೆಳೆತನ ದೃಡವಾಗುತ್ತಿದ್ದ ಎಲ್ಲಾ ಸೂಚನೆಗಳು ಸ್ಪಷ್ಟವಾಗಿದ್ದವು. ಈ ವಿಷಯದಲ್ಲಿ ರಾಮ್‌ಪ್ರಸಾದ್‌ ಕೂಡ ನನ್ನ ಜೊತೆಗೆ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಬೇರೆ ಯಾರೋ ಆಗಿದ್ದರೂ ರಾಮ್‌ ಜೊತೆ ಒಮ್ಮೆ ಚರ್ಚಿಸಬಹುದಿತ್ತೋ ಏನೋ. ಹೇಗೆ ಇದನ್ನು ಸರಿ ಮಾಡೋದು, ಹೇಗೆ ರಾಜೀವನಿಗೆ ನಮ್ಮ ಮನೆಯವರಿಗೆ ನನ್ನ ಅವರ ಮಧ್ಯೆ ಸಂಬಂಧ ಇಲ್ಲ ಅಂತ ವಿವರಿಸೋದು ಅಂತಲಾದರೂ ಸಲಹೆ ಪಡೆಯಬಹುದಿತ್ತು. ಅದೀಗ ಸಾ‍ಧ್ಯವಿಲ್ಲ. ಎಷ್ಟೇ ಆದ್ರೂ ಸುಮಾ ಗುಡ್‌ ಫ್ರೆಂಡು. ಅವಳ ಹತ್ತಿರವೇ ಹೇಳಿಕೊಂಡುಬಿಡಲಾ ಅನ್ನೋ ಯೋಚನೆಯೂ ಸುಳಿಯದೆ ಇರಲಿಲ್ಲ. ಅವಳತ್ತಿರ ಹೇಳುವುದೋ ಬೇಡವೋ ತಿಳಿಯುತ್ತಿಲ್ಲ. ಒಟ್ಟಾರೆ ಯಾವ ಸಣ್ಣ ಪುಟ್ಟ ನಿರ್ಧಾರಗಳನ್ನೂ ಖಚಿತವಾಗಿ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ನಾನಿಲ್ಲ. 

ಸೆಪ್ಟೆಂ 12, 2020

ಒಂದು ಬೊಗಸೆ ಪ್ರೀತಿ - 79

ಒಂದರ್ಧ ಘಂಟೆ ಕಾಲ ಮಾತ್ರ ಯೋಚನೆಗಳು ಬಿಡುವು ಕೊಟ್ಟಿತ್ತು. 

ನನ್ನ ರಾಮ್‌ಪ್ರಸಾದ್‌ ಮಧ್ಯೆ ಯಾವುದೇ ಸಂಬಂಧವಿಲ್ಲವೆಂದು ರಾಜೀವನಲ್ಲಿ ನಂಬುಗೆ ಮೂಡಿಸುವುದೇಗೆ? ಯಾರೋ ಯಾವ ಕಾರಣಕ್ಕೋ ನಮ್ಮಿಬ್ಬರ ಮಧ್ಯೆ ಸಂಬಂಧವಿದೆ ಎಂದು ಸುಳ್ಳುಸುಳ್ಳೇ ಆರೋಪ ಮಾಡಿಬಿಟ್ಟರು. ಅದು ನಿಜವಲ್ಲ ಎಂದು ಸಾಬೀತುಪಡಿಸುವ ಅನಿವಾರ್ಯ ಕರ್ಮ ನನ್ನ ಹೆಗಲೇರಿಬಿಟ್ಟಿದೆ. ರಾಮ್‌ಪ್ರಸಾದ್‌ ಜೊತೆ ಹಿಂಗಿಂಗೆ ಅಂತೇಳಿ ಅವರೇ ಸಮಜಾಯಿಷಿ ಕೊಡುವಂತೆ ಹೇಳಲಾ? ಪಾಪ! ಅವರಿಗಾದರೂ ಈ ರೀತಿಯೆಲ್ಲ ನಮ್ಮ ಬಗ್ಗೆ ಆಸ್ಪತ್ರೆಯಲ್ಲಿ ಮಾತನಾಡಿಕೊಳ್ಳುತ್ತಾರೆ ಎನ್ನುವುದು ಗೊತ್ತೋ ಇಲ್ಲವೋ.... ಒಂದು ವೇಳೆ ಗೊತ್ತಿದ್ದರೂ ಸುಮ್ಮನಿದ್ದುಬಿಟ್ಟಿದ್ದರೆ? ಆ ಮಾತುಗಳೇ ಅವರಿಗೂ ಪ್ರಿಯವಾಗಿಬಿಟ್ಟಿದ್ದರೆ? ಅವರೇ ಈ ಗಾಳಿ ಸುದ್ದಿಗಳನ್ನು ಹಬ್ಬಿಸಿದ್ದರೆ? ಇಲ್ಲಿಲ್ಲ. ಅವರ ವರ್ತನೆ ಒಂದು ದಿನಕ್ಕೂ ನನಗೆ ಅನುಮಾನ ಮೂಡಿಸಿಲ್ಲ. ಆದರೂ ಅವರ ಮೂಲಕ ರಾಜೀವನಿಗೆ ಸಮಜಾಯಿಷಿ ಕೊಡುವುದು ಸರಿಯಾಗಲಾರದು. ನಮ್ಮಿಬ್ಬರ ನಡುವಿನ ವಿಷಯ, ನಮ್ಮ ಮನೆಯಲ್ಲಿ ನಡೆದ ವಿಷಯಗಳನ್ನೆಲ್ಲ ಅವನತ್ರ ತಗೊಂಡು ಹೋಗಿ ಹೇಳ್ಕೋತೀಯ ಅಂತ ಮತ್ತೊಂದು ಸುತ್ತು ಜಗಳ ಶುರುವಾಗಿಬಿಡಬಹುದು. ಅಲ್ಲ, ನನಗೆ ನಿಜಕ್ಕೂ ಒಂದು ಅನೈತಿಕ.... ಅನೈತಿಕವಲ್ಲ.... ಮದುವೆಯಾಚೆಗಿನ ಸಂಬಂಧ ಅಂಥ ಇದ್ದದ್ದು ಸಾಗರನೊಟ್ಟಿಗೆ ಮಾತ್ರ. ಸಾಗರ ನಮ್ಮ ಮನೆಗೆ ಬಂದು ರಾಜೀವನನ್ನು ಭೇಟಿಯಾದಾಗ, ನಾವವನ ಮದುವೆಗೆಂದು ಹೋಗಿದ್ದಾಗ ನಮ್ಮಿಬ್ಬರ ಮುಖಚರ್ಯೆಯನ್ನು ಗಮನಿಸಿಬಿಟ್ಟಿದ್ದರೇ ಸಾಕಿತ್ತು ಇಬ್ಬರ ನಡುವೆ ಸಂಬಂಧವಿದೆ ಎನ್ನುವುದು ತಿಳಿದು ಹೋಗುತ್ತಿತ್ತು. ನನ್ನ ಸಾಗರನ ಸಂಬಂಧವನ್ನು ಸ್ನೇಹವೆಂದೇ ಇವತ್ತಿಗೂ ನಂಬಿರುವ - ಆ ಸ್ನೇಹ ಸತ್ತು ಎಷ್ಟು ತಿಂಗಳುಗಳಾಯಿತು? - ರಾಜೀವ ನನ್ನ ರಾಮ್‌ನ ಸ್ನೇಹವನ್ನು, ಅದೂ ಅವರಿಂದಾಗಿಯೇ ಬಲವಂತವಾಗೆಂಬಂತೆ ಹುಟ್ಟಿದ ಸ್ನೇಹವನ್ನು ಅನುಮಾನಿಸುತ್ತಿದ್ದಾರಲ್ಲ? ಸಾಗರನ ಜೊತೆಗಿದ್ದಾಗಲೇ ಈ ಅನುಮಾನ ಇವರಲ್ಲಿ ಬಂದುಬಿಟ್ಟಿದ್ದರೆ ಅಚ್ಚುಕಟ್ಟಾಗಿ ಡೈವೋರ್ಸ್‌ ತೆಗೆದುಕೊಂಡು ಸಾಗರನನ್ನು ಮದುವೆಯಾಗಿಬಿಡಬಹುದಿತ್ತು. ಸಾಗರ ಕೂಡ ಒಂದಷ್ಟು ಪೊಸೆಸಿವ್ವೇ ಹೌದು. ತೀರ ಪುರುಷೋತ್ತಮನಷ್ಟಲ್ಲ, ಆದರೂ ಪೊಸೆಸಿವ್ವೇ. ಜೊತೆಗೆ ನನ್ನ ಮೇಲೆ ಬೆಟ್ಟದಷ್ಟು ಅನುಮಾನ ಬೇರೆ ಇದೆ ಅವನಿಗೆ. ಮದುವೆಯಾಗಿ ಬೇರೆ ಕಡೆ ಸಂಬಂಧ ಬೆಳೆಸುವವರ ಮೇಲೆ ಇಂತಹ ಅನುಮಾನ ಸಹಜವೋ ಏನೋ. ಯೋಚನೆಗಳಿಗೆ ತಡೆಹಾಕಿದ್ದು ಶಶಿಯ ಆಗಮನ. ಮನೆಯಲ್ಲಿನ ಮೌನದಲ್ಲಿದ್ದ ಅಸಹಜತೆಯ ವಾಸನೆ ಅವನಿಗೂ ಬಡಿಯಲೇಬೇಕಲ್ಲ. 

"ಏನಾಯ್ತು? ಎಲ್ಲಿ ಎಲ್ಲ" 

ʻಎಲ್ರೂ ಅವರವರ ರೂಮುಗಳಲ್ಲಿ ಸೇರಿಕೊಂಡಿದ್ದಾರೆʼ 

ಆಗ 29, 2020

ಒಂದು ಬೊಗಸೆ ಪ್ರೀತಿ - 77

"ಯಾಕ್ ನಿಂಗೂ ಸೋನಿಯಾಗೂ ಏನಾದ್ರೂ ಜಗಳ ಆಯ್ತಾ ಅವಳು ಆಸ್ಪತ್ರೆಯಲ್ಲಿದ್ದಾಗ?" ಬೆಳಿಗ್ಗೆ ಶೇವ್ ಮಾಡಿಕೊಳ್ಳುವಾಗ ರಾಜೀವ್ ಕೇಳಿದ ಪ್ರಶ್ನೆ ಕೈಲ್ಲಿದ್ದ ಕಾಫಿ ಲೋಟ ಕೆಳಕ್ಕೆ ಬೀಳುವಂತೆ ಮಾಡಿತು. ಪುಣ್ಯಕ್ಕೆ ನಿನ್ನೆ ಸಂಜೆಯ ಪಾತ್ರೆಗಳನ್ನು ತೊಳೆದಿರದ ಕಾರಣ ಗಾಜಿನ ಲೋಟ ಸಿಂಕಿನಲ್ಲೇ ಇತ್ತು, ಕೈಯಲ್ಲಿದ್ದ ಸ್ಟೀಲಿನ ಲೋಟದ ಕಾಫಿ ಚೆಲ್ಲಿತಷ್ಟೆ. ʻಹೇಳೇಬಿಟ್ಟಳಾ ಸೋನಿಯಾ?' ಎಂಬ ಅನುಮಾನ ಮೂಡದೆ ಇರಲಿಲ್ಲ. ರಾಜೀವ ತುಂಬಾ ಸಹಜವಾಗಿ ಕೇಳಿದಂತಿತ್ತೇ ಹೊರತು ಅವರ ದನಿಯಲ್ಲಿ ಕೋಪ ಅಸಹನೆಗಳು ಕಾಣಲಿಲ್ಲ. ಯಾರಿಗೆ ಗೊತ್ತು ನಿಧಾನಕ್ಕೆ ತಮಾಷೆಯಾಗೇ ಕೇಳಿ ಜಗಳಕ್ಕೊಂದು ಬುನಾದಿ ಹಾಕುತ್ತಿದ್ದಾರೋ ಏನೋ? 

ʻಹಂಗೇನಿಲ್ಲವಲ್ಲ ಯಾಕೆ?' ಮನದ ಉದ್ವೇಗ ಆದಷ್ಟು ದನಿಯಲ್ಲಿ ಪ್ರತಿಫಲನಗೊಳ್ಳದಂತೆ ಪ್ರಯತ್ನಿಸಿದೆ. 

"ಓ ಓ! ಏನ್ ದಡ್ಡನ ತರ ಕಾಣಿಸ್ತೀನೇನು! ನನ್ ಕಣ್ಣಿಗ್ ಏನೂ ಗೊತ್ತಾಗೋದಿಲ್ಲ ಅಂತ ಎಣಿಸಿದ್ದೀಯೇನು?" 

ಕನ್ಫರ್ಮ್! ಹೇಳಿಬಿಟ್ಟಿದ್ದಾಳೆ ಸೋನಿಯಾ...ಅನುಮಾನವೇ ಇಲ್ಲ. 

ʻಅಂತದ್ದೇನ್‌ ಕಾಣಿಸ್ತು ನಿಮಗೆʼ ಆದಷ್ಟು ನಗುಮುಖವನ್ನು ಆರೋಪಿಸಿಕೊಳ್ಳುವ ಪ್ರಯತ್ನ ಮುಂದುವರೆದಿತ್ತು. 

"ಕಾಣೋದಿಲ್ಲೇನು! ನಾನೂ ನೋಡ್ತಾನೇ ಇದ್ದೀನಲ್ಲ ಕಳೆದ ಹದಿನೈದು ದಿನದಿಂದ. ಬೆಳಿಗ್ಗೆಯಿಂದ ನನ್ನ ಜೊತೆ, ರಾಧ ಜೊತೆ, ನಿಮ್ಮಮ್ಮನ ಜೊತೆ ಅಚ್ಚುಕಟ್ಟಾಗೇ ಮಾತಾಡಿಕೊಂಡು ಇರ್ತಾಳೆ. ನಿಮ್ಮಪ್ಪನ ಜೊತೆ ಮಾತು ಕಮ್ಮೀನೇ ಅನ್ನು. ಸಂಜೆ ನೀ ಬರ್ತಿದ್ದ ಹಾಗೆ ಮುಗುಮ್ಮಾಗಿಬಿಡ್ತಾಳೆ. ಅದೂ ನೀ ಅಲ್ಲೇ ಹಾಲಲ್ಲೇ ಕುಳಿತುಬಿಟ್ಟರಂತೂ ನಮ್ಮಗಳ ಜೊತೆಗೂ ಮಾತಾಡಲ್ಲಪ್ಪ" 

ಉಫ್‌! ಸೋನಿಯಾ ಇನ್ನೂ ಹೇಳಿಲ್ಲ ಅನ್ನೋದು ತಿಳಿದೇ ಅರ್ಧ ಜೀವ ವಾಪಸ್ಸಾದಂತಾಯ್ತು. 

ʻಹೌದಾ? ನನಗೇನು ಹಂಗ್‌ ಅನ್ನಿಸಿಲ್ಲಪ್ಪʼ 

"ನಿನಗ್‌ ಅನ್ನಿಸಿರೋಲ್ವ? ಮುಂಚೆಯಿಂದಾನೂ ಇಬ್ಬರ ನಡುವೆ ಮಾತು ಕಡಿಮೆ ಅಂದ್ರೆ ಬೇರೆ ಪ್ರಶ್ನೆ. ಮುಂಚೆ ತಲೆಚಿಟ್ಟಿಡಿಯುವಷ್ಟು ಮಾತನಾಡುತ್ತಿದ್ದವರು ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿಬಿಟ್ಟಂತೆ ಕಾಣಿಸ್ತದೆ ನಂಗೆ. ಅದೂ ಕರೆಕ್ಟಾಗಿ ಅವಳು ಆಸ್ಪತ್ರೆಯಲ್ಲಿ ಸೇರಿದ ಮೇಲೆ" 

ʻಹೌದಾ? ನನಗೇನು ಹಂಗ್‌ ಅನ್ನಿಸಿಲ್ಲಪ್ಪʼ 

"ಹೋಗ್ಲಿ ಬಿಡು. ನಿನಗ್‌ ಹೇಳೋಕ್‌ ಇಷ್ಟವಿಲ್ವೋ ಏನೋ" 

ಆಗ 22, 2020

ಒಂದು ಬೊಗಸೆ ಪ್ರೀತಿ - 76

ರಾತ್ರಿಯೆಲ್ಲ ಕನಸುಗಳು. ಪರಶು, ಸಾಗರ ಕನಸುಗಳನ್ನಾಳಿಬಿಟ್ಟರು. ನನ್ನವೇ ಮಾತುಗಳನ್ನು ತಿರುಗಿಸಿ ಮುರುಗಿಸಿ ನನಗೇ ಹೇಳುತ್ತಿದ್ದುದನ್ನು ಬಿಟ್ಟರೆ ಅವರವೇ ಮಾತುಗಳನ್ನು ಹೇಳಲೇ ಇಲ್ಲ. ಹೇಳಿದ್ದೆಲ್ಲವೂ ನನ್ನದೇ ದನಿಯಲ್ಲಿ ಕೇಳಿ ಮತ್ತಷ್ಟು ಹಿಂಸೆ. ನೀನ್‌ ಸರಿಯಿಲ್ಲ ಅಂತ ಹೇಳಿದವರೇ ಸರಿಯಾ? ನನ್ನ ಮನಸ್ಸು ಅಷ್ಟೊಂದು ಚಂಚಲವಾ? ನನಗೇ ಅನುಮಾನ ಮೂಡಿಸಿಬಿಟ್ಟ ಶಶಿ. ಎಷ್ಟೇ ವಿಶ್ಲೇಷಿಸಿದರೂ ರಾಮ್‌ ಬಗ್ಗೆ ನನ್ನಲ್ಲಿ ಯಾವತ್ತಿಗೂ ಸ್ನೇಹದ ಭಾವನೆ ಬಿಟ್ಟು ಮತ್ತೊಂದು ಮೂಡಲಿಲ್ಲ. ಸರಿಯಾಗಿ ನೆನಪಿಗೆ ತಂದುಕೊಂಡರೆ ಅವರ ಕುರಿತು ಸ್ನೇಹದ ಭಾವನೆ ಹುಟ್ಟಿದ್ದು ಕೂಡ ಅನಿವಾರ್ಯ ಕಾರಣಗಳಿಂದಾಗಿ. ರಾಜೀವ್‌ ಮನೆಯಿಂದ ದೂರವಿದ್ದಾಗ, ನಮ್ಮ ಮನೆಯವರೆಲ್ಲರೂ ಟ್ರಿಪ್ಪಿಗೆ ಹೋಗಿದ್ದಾಗ ಮಗಳು ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ರಾಮ್‌ ಮಾಡಿದ ಸಹಾಯದಿಂದಲ್ಲವೇ ಅವರೊಡನೆ ಸ್ನೇಹ ಹಸ್ತ ಚಾಚಿದ್ದು. ಆ ಘಟನೆ ನಡೆಯದೇ ಹೋಗಿದ್ದಲ್ಲಿ ನಾ ರಾಮ್‌ ಜೊತೆಗೆ ಇನ್ನೂ ಅವರು ನಮ್ಮ ಮನೆಯಲ್ಲಿ ಬಂದು ಕುಡಿದ ಕಾರಣವನ್ನಿಟ್ಟುಕೊಂಡೇ ಮುನಿಸು ಸಾಧಿಸುತ್ತಿದ್ದುದೌದು. ರಾಮ್‌ ಇಸ್‌ ಸ್ಮಾರ್ಟ್‌, ಹ್ಯಾಂಡ್ಸಮ್....‌ ಇಲ್ಲ ಅನ್ನಲ್ಲ. ಆದರೆ ಅವರೊಟ್ಟಿಗೆ ಸಂಬಂಧ ಬೆಳೆಸಬೇಕು ಅಂತೆಲ್ಲ ಯಾವತ್ತೂ ಯೋಚನೆಯೂ ಸುಳಿದಿಲ್ಲ. ಇನ್ನೂ..... ಈಗಲ್ಲ...... ರಾಧ ಹುಟ್ಟುವ ಮುನ್ನ..... ಸಾಗರ ಪರಿಚಯವಾಗುವುದಕ್ಕೆ ಮೊದಲು......ಅಲ್ಲೆಲ್ಲೋ ಒಬ್ಬ ಅಪರಿಚಿತ ಕಂಡಾಗ ಪಟ್ಟಂತ ಇಷ್ಟವಾಗಿಬಿಟ್ಟರೆ...... ಅವನೊಡನೆ ಕಾಮಿಸಿದಂತೆ ಕಲ್ಪನೆ ಮೂಡುತ್ತಿತ್ತು......ಆ ಕಲ್ಪನೆ ಕೂಡ ನಿಜವಾಗಬೇಕೆಂಬ ಅನ್ನಿಸಿಕೆಯೇನೂ ಇರುತ್ತಿರಲಿಲ್ಲ.....ರಾಜೀವನೊಡನೆ ಮಲಗುವಾಗಲೂ ಆ ಅಪರಿಚಿತ ವ್ಯಕ್ತಿ ಸ್ಮೃತಿಪಟಲದಲ್ಲಿ ಮೂಡುತ್ತಿರಲಿಲ್ಲ. ಅದು ಸಹಜವಾಗಿ ಎಲ್ಲರಲ್ಲೂ ಮೂಡುವ ಭಾವನೆಗಳೇ ಹೌದು ಎಂದು ನಂಬಿದ್ದೆ. ಅಂತ ಯಾವ ಕಲ್ಪನೆ ಕೂಡ ರಾಮ್‌ ಬಗ್ಗೆ ನನಗಿದುವರೆಗೂ ಬಂದಿಲ್ಲ. ಆತನಿಗೆ ಬಂದಿರಬಹುದಾ? ಬಂದಿರಬಹುದು. ಬಂದಿದ್ದರೂ ಅದೇನೂ ತಪ್ಪಲ್ಲವಲ್ಲ. ಅವರೇ ಏನಾದರೂ ಆಸ್ಪತ್ರೆಯಲ್ಲಿ ಗುಲ್ಲೆಬ್ಬಿಸಲು ಸಹಕರಿಸಿಬಿಟ್ಟರಾ? ಗೆಳೆಯರ ಬಳಿ ಮಾತನಾಡುತ್ತಾ "ನಾನೂ ಅವ್ಳೂ ತುಂಬಾ ಕ್ಲೋಸು" ಅಂತೇಳಿ ಕಣ್ಣು ಹೊಡೆದುಬಿಟ್ಟರೂ ಸಾಕು.....ದೊಡ್ಡ ಸುದ್ದಿಯಾಗ್ತದೆ. ಆದರೆ ನನಗೆ ಗೊತ್ತಿರುವಂತೆ ರಾಮ್‌ ಅಂತಹ ಕೆಲಸ ಮಾಡುವವರಲ್ಲ. ಕಲ್ಪನೆಯಲ್ಲಿ ನನ್ನೊಡನೆ ಕಾಮಿಸಿದ್ದರೂ ಇರಬಹುದೇನೋ ಆದರೆ ಆ ಕಲ್ಪನೆ ನಿಜವಾಗಲಿ ಎಂಬುದ್ದೇಶ ಅವರಿಗೂ ಇದ್ದಿರಲಾರದು. ಮತ್ಯಾಕೆ ಜನರೀ ರೀತಿ ಸುಳ್ಳು ಸುಳ್ಳೇ ಸುದ್ದಿ ಹಬ್ಬಿಸುತ್ತಾರೆ? ನಾ ಸುಮಾಳೊಡನೆ ಹೋಗಿ ಕಾಫಿ ಕುಡಿದು ಹರಟೋದು ಎಷ್ಟು ಸಹಜವೋ ರಾಮ್‌ ಜೊತೆಗೆ ಹೋಗಿ ಕಾಫಿ ಕುಡಿದು ಹರಟೋದು ಕೂಡ ಅಷ್ಟೇ ಸಹಜ ಅಂತ ಇವರ್ಯಾಕೆ ಅರ್ಥೈಸಿಕೊಳ್ಳುವುದಿಲ್ಲ? ಕೆಲಸಕ್ಕೆ ಹೋಗಲೇ ಮನಸ್ಸು ಬಾರದಷ್ಟು ತಲೆ ನೋವು. ಕೆಲಸಕ್ಕೆ ಹೋಗಲಲ್ಲ ತಲೆ ನೋವು, ಕೆಲಸಕ್ಕೆ ಹೋದರೆ ಸೋನಿಯಾಳನ್ನು ಕಾಣಬೇಕಾಗುತ್ತದೆ ಎನ್ನುವ ಕಾರಣಕ್ಕೆ ತಲೆ ನೋವು. ಅವಳ ಮನದಲ್ಲೀಗ ನಾ ಕೆಟ್ಟವಳಾಗಿ ಹೋಗಿದ್ದೀನಿ. ಇವತ್ತಲ್ಲದಿದ್ದರೆ ನಾಳೆ, ನಾಳೆಯಲ್ಲದಿದ್ದರೆ ಮತ್ತೊಂದು ದಿನ ಅವಳನ್ನು ಎದುರಿಸಲೇಬೇಕಲ್ಲ ಎಂದು ಧೈರ್ಯ ತಂದುಕೊಳ್ಳುತ್ತಾ ಮೇಲೆದ್ದು ತಯಾರಾದೆ. 

ಆಸ್ಪತ್ರೆಗೆ ಹೋಗಿ ನನ್ನ ಬೆಳಗಿನ ವಾರ್ಡ್‌ ಕೆಲಸಗಳನ್ನೆಲ್ಲ ಮುಗಿಸಿ ಸೋನಿಯಾಳ ರೂಮಿನ ಬಳಿ ಹೋದೆ. ನಿನ್ನೆಯ ಮುನಿಸು ಇವತ್ತಿಗೂ ಮುಂದುವರೆದಿತ್ತು. ಶಶಿಯ ಕಡೆಗೆ ನೋಡಿದೆ. ಅವನ ಕಣ್ಣುಗಳಲ್ಲೂ ನಾನು ಚಿಕ್ಕವಳಾಗಿ, ಎಲ್ಲಾ ರೀತಿಯ ಅನುಮಾನಗಳಿಗೆ ಅರ್ಹಳಾದ ರೀತಿಯಲ್ಲಿ ಕಂಡು ಕಸಿವಿಸಿಯಾಯಿತು. ಕೊನೇಪಕ್ಷ ಅವನಿಗಾದರೂ ನಾ ಯಾಕೆ ಪರಶುನನ್ನು ಬಿಟ್ಟು ರಾಜೀವನನ್ನು ಮದುವೆಯಾದೆ ಎನ್ನುವುದರ್ಥವಾಗಿದೆ ಎಂದುಕೊಂಡಿದ್ದೆ. ನಾವು ನಂಬಿದ್ದೆಲ್ಲವೂ ಸುಳ್ಳೆಂದು ಸಾಬೀತಾಗುವವರೆಗಷ್ಟೇ ಅದು ಸತ್ಯ. ನಮ್ಮ ಮೂವರ ನಡುವೆ ಉಸಿರುಕಟ್ಟಿಸುವಂತಿದ್ದ ಮೌನಕ್ಕೆ ಪರಿಹಾರವೆಂಬಂತೆ ಅಂದು ಜಯಂತಿ ಮೇಡಂ ಎಂದಿಗಿಂತ ಮುಂಚಿತವಾಗಿಯೇ ರೌಂಡ್ಸಿಗೆ ಬಂದರು. ಮೇಡಂ ಆಗಮನದೊಂದಿಗೆ ಸ್ಮಶಾನ ಕಳೆಯನ್ನೊತ್ತುಕೊಂಡಿದ್ದ ಮೂವರ ಮುಖದಲ್ಲೂ ಕಪಟ ನಗು ವಿಜೃಂಭಿಸಿತು. 

ಆಗ 15, 2020

ಒಂದು ಬೊಗಸೆ ಪ್ರೀತಿ - 75

"ನೀವ್‌ ಹೋಗಿ ಅಕ್ಕ. ಇವರಿರ್ತಾರೆ ರಾತ್ರಿಗೆ" ಸೋನಿಯಾಳ ದನಿ ಎಂದಿನಂತಿರಲಿಲ್ಲ ಎನ್ನುವುದೇನೋ ಅರಿವಿಗೆ ಬಂತು. ಆಸ್ಪತ್ರೆ ವಾಸ, ಅದರಲ್ಲೂ ಗರ್ಭ ನಿಲ್ಲದೇ ಹೋದರೆ ಅನ್ನೋ ಟೆನ್ಶನ್ನು ಎಲ್ಲಾ ಸೇರಿದಾಗ ದನಿ ಮಾಮೂಲಿನಂತಿರಲು ಸಾಧ್ಯವಿಲ್ಲವಲ್ಲ. ಗಂಡ ಇದ್ರೆ ಧೈರ್ಯ ಜಾಸ್ತಿಯಿರ್ತದೋ ಏನೋ. 

ʻಪರವಾಗಿಲ್ಲ ಬಿಡು ಸೋನಿಯಾ. ನಾನೇ ಇರ್ತೀನಿʼ 

"ಹೇಳಿದ್ನಲ್ಲಕ್ಕ. ಇವರಿರ್ತಾರೆ ಅಂತ. ನೀವಿದ್ದು ನನ್ನ ನೋಡೋದೇನು ಬೇಡ. ನೀವ್‌ ದಯವಿಟ್ಟು ಹೋಗಿ" ಎಂದವಳು ಖಂಡತುಂಡವಾಗಿ ಹೇಳಿದಾಗ ಎಲ್ಲೋ ಏನೋ ತಪ್ಪಾಗಿದೆ, ಏನಂತ ಗೊತ್ತಾಗದ ಪರಿಸ್ಥಿತಿಯಲ್ಲಿ ನಾನಿದ್ದೀನಿ ಅನ್ನುವುದರ ಅರಿವಾಯಿತು. ಅವಳಿಷ್ಟು ಕಟುವಾಗಿ ಹೇಳಿದ ಮೇಲೆ ಮತ್ತೆ ಅಲ್ಲಿ ನಿಲ್ಲುವ ಮನಸ್ಸಾಗಲಿಲ್ಲ ನನಗೆ. ʻಟೇಕ್‌ ಕೇರ್‌ʼ ಎಂದ್ಹೇಳಿದಾಗಲೂ ಅವಳ ಮುಖದಲ್ಲೊಂದು ನಗು ಮೂಡಲಿಲ್ಲ. ಹೊರಬಿದ್ದೆ. ನಿನ್ನೆ ರಾತ್ರಿಯೆಲ್ಲ ಚೆಂದವಾಗಿ ಮಾತನಾಡುತ್ತಾ ಗರ್ಭದ ದಿನಗಳ ಭಯ ಸಂತಸ ಖುಷಿ ಆತಂಕದ ಬಗ್ಗೆಯೆಲ್ಲ ಲವಲವಿಕೆಯಿಂದ ಮಾತನಾಡುತ್ತಿದ್ದವಳಿಗೆ ಒಂದೇ ದಿನದಲ್ಲಿ ನನ್ನ ಮೇಲೆ ಸಿಟ್ಟು ಮಾಡಿಕೊಳ್ಳುವಂತದ್ದೇನಾಯಿತು? ತಿಳಿಯಲಿಲ್ಲ. ನನ್ನಿಂದೇನಾದರೂ ತಪ್ಪಾಯಿತಾ? ನನ್ನ ಪ್ರಜ್ಞೆಗೆ ಬಂದಂತೆ ಯಾವ ತಪ್ಪೂ ಆಗಿಲ್ಲ. ರಾತ್ರಿ ಮಾತನಾಡುತ್ತಾ ಮಲಗಿದ್ದು ಹನ್ನೊಂದೂವರೆಯ ಮೇಲಾಗಿತ್ತು. ಬೆಳಿಗ್ಗೆ ಎದ್ದಾಗ ಮತ್ತೊಂದಷ್ಟು ರಕ್ತಸ್ರಾವವಾಗಿತ್ತು. ಜಯಂತಿ ಮೇಡಮ್ಮಿಗೆ ಫೋನ್‌ ಮಾಡಿದ್ದೆ. "ತೊಂದರೆಯೇನಿರಲ್ಲಮ್ಮ. ಕೆಲವರಿಗೆ ವಾರದವರೆಗೆ ರಕ್ತ ಹೋಗ್ತದೆ. ಬಂದು ನೋಡ್ತೀನಿ. ನೋಡುವ. ಬೇಕಿದ್ರೆ ನಿಮ್ಮ ಸಮಾಧಾನಕ್ಕೆ ಮತ್ತೊಂದು ಸ್ಕ್ಯಾನ್‌ ಮಾಡಿಸುವ" ಎಂದರು. 

ಆಗ 8, 2020

ಒಂದು ಬೊಗಸೆ ಪ್ರೀತಿ - 74

“ಹೇಳಿದ್ನಪ್ಪ. ಬರಲಿಲ್ಲ ನಿಮ್ಮಮ್ಮ” ಮೂರು ಪದ ಜೊತೆಗೂಡಿಸಲು ಮೂರು ನಿಮಿಷದಷ್ಟು ಸಮಯ ತೆಗೆದುಕೊಂಡು ರಾಮೇಗೌಡ ಅಂಕಲ್‌ ಹೇಳುವಾಗ ಆಸ್ಪತ್ರೆಯ ರೂಮಿನೊಳಗಿದ್ದವರೆಲ್ಲರ ಕಣ್ಣಲ್ಲಿ ನೀರಾಡಿತ್ತು. ಸೋನಿಯಾಳನ್ನೊಬ್ಬಳನ್ನ ಹೊರತುಪಡಿಸಿ. 

"ಆ ಪಾಪಿ ಪಿಂಡ ಹೋದ್ರೆ ಹೋಗ್ಲಿ ಬಿಡಿ" ಅಂದಿರಬೇಕಲ್ಲ ಎಂದು ವ್ಯಂಗ್ಯದಿಂದ ಕೇಳಿದ್ದಕ್ಕೆ ಅಂಕಲ್‌ ಪ್ರತಿಯಾಡಲಿಲ್ಲ. ಸೋನಿಯಾಳ ವ್ಯಂಗ್ಯದಲ್ಲಿ ಸತ್ಯವಿದ್ದಿರಲೇಬೇಕು. ಅಲ್ಲ, ತೀರ ತಾಯಿ ಆದವಳಿಗೆ ಇಷ್ಟರಮಟ್ಟಿಗೆ ದ್ವೇಷ ಇರೋದಕ್ಕಾದರೂ ಹೇಗೆ ಸಾಧ್ಯ? ಮಗಳೂ ತಾಯಿಯಾಗುವುದರಲ್ಲಿದ್ದಾಳೆ. ಅದೇನೋ ರಕ್ತ ಹೋಗ್ತಿದ್ಯಂತೆ. ಅಬಾರ್ಷನ್‌ ಆದರೂ ಆಗಿಬಿಡಬಹುದು. ಮಗಳೂ ಅಂತ ಬೇಡ, ಗೊತ್ತಿರೋ ಒಬ್ಬ ಹೆಣ್ಣುಮಗಳು ಅಂತಾದರೂ ಮನ ಕರಗಲಾರದಾ? ಕರಗಬಾರದಾ? ಸೋನಿಯಾಳ ಕಣ್ಣಲ್ಲಿ ಮೂಡದ ಕಣ್ಣೀರು ಮುಂದಿನ ದಿನಗಳಲ್ಲಿ ಅವಳು ಅವರಮ್ಮನ ಜೊತೆ ನಡೆದುಕೊಳ್ಳುವ ರೀತಿಯನ್ನು ವಿವರಿಸುತ್ತಿತ್ತು. 

ಅಂಕಲ್‌ ಮತ್ತು ಸೋನಿಯಾಳನ್ನು ಮಾತನಾಡಿಕೊಳ್ಳಲು ಬಿಟ್ಟು ನಾನೂ, ಶಶಿ, ಅಪ್ಪ, ಅಮ್ಮ ಹೊರಬಂದೆವು. ಮೌನ ಅಸಹನೀಯವಾಗಿತ್ತು. ಮೌನ ಮುರಿಯುತ್ತ ಅಮ್ಮ "ರಾತ್ರಿ ನಾನೇ ಉಳಿದುಕೊಳ್ಳಲಾ ಇಲ್ಲಿ?" ಎಂದು ಕೇಳಿದರು. 

"ಏನ್‌ ಬೇಡ. ನಾನೇ ಇರ್ತೀನಿ ಬಿಡಿ" ಎಂದ ಶಶಿ. 

"ಹಂಗಲ್ವೋ.... ನಾವ್ಯಾರಾದ್ರೂ ಹೆಂಗಸ್ರು ಇದ್ರೆ ಉತ್ತಮ ಅಲ್ವ" 

"ಯಾಕ್‌ ಗಂಡಸ್ರು ಇಂಥ ವಿಷಯ ಎಲ್ಲಾ ನೋಡ್ಕೋಬಾರ್ದು ಅಂತಾನಾ?" 

ಆಗ 1, 2020

ಒಂದು ಬೊಗಸೆ ಪ್ರೀತಿ - 73

ಮೆಸೇಜ್ ಮಾಡ್ಲೋ ಬೇಡ್ವೋ ಮಾಡ್ಲೋ ಬೇಡ್ವೋ ಅನ್ನೋ ಆಲೋಚನೆಗಳಲ್ಲೇ ಅರ್ಧ ದಿನ ಕಳೆದು ಹೋಯಿತು. ಎಫ್.ಬೀಲಿ ಅನ್ ಫ್ರೆಂಡ್ ಮಾಡಿದ್ದ, ಬ್ಲಾಕ್ ಮಾಡಿರಲಿಲ್ಲ. ವಾಟ್ಸಪ್ ಅಲ್ಲೇನೂ ಬ್ಲಾಕ್ ಮಾಡಿರಲಿಲ್ಲ. ಮೆಸೇಜ್ ಗಿಸೇಜ್ ಬೇಡ ಒಟ್ಗೇ ಫೋನೇ ಮಾಡಿಬಿಟ್ಟರೆ? ಧೈರ್ಯ ಸಾಲಲಿಲ್ಲ. ಪೂರ್ತಿ ದಿನ ಹೀಗೇ ಕಳೆದುಹೋದರೆ ಎಂದು ದಿಗಿಲಾಯಿತು. ಏನಾಗಿಬಿಡ್ತದೆ? ಎಂತದೂ ಆಗೋದಿಲ್ಲ. ಸುಮ್ಮನೆ ನಾ ಅನಾವಶ್ಯಕ ಗಾಬರಿ ಬಿಳ್ತಿದೀನಿ ಅಷ್ಟೇ ಎಂದುಕೊಂಡು ಮೊಬೈಲ್ ಕೈಗೆತ್ತಿಕೊಂಡು ವಾಟ್ಸಪ್ ತೆರೆದೆ. ಉಹ್ಞೂ... ವಾಟ್ಸಪ್ ಅಲ್ ಬೇಡ. ಅವ ಯಾವಾಗಲೋ ನೋಡಿ ಏನೇನೋ ರಿಪ್ಲೈ ಮಾಡಿಬಿಟ್ಟರೆ? ಮನೆಗೋದ ಮೇಲೆ ಮಗಳ ದೇಖರೇಖಿಯಲ್ಲಿ ಮೊಬೈಲು ನೋಡುವುದ್ಯಾವಾಗಲೋ. ರಾಜೀವನೋ ನಮ್ಮಮ್ಮನಿಗೋ ಮೆಸೇಜು ಕಂಡು ಗಬ್ಬೆಬ್ಬಿಬಿಟ್ಟರೆ? ಎಫ್.ಬಿ ಮೆಸೆಂಜರ್ ಆದ್ರೆ ಪರವಾಗಿಲ್ಲ.‌ ಹೆಂಗಿದ್ರೂ ನೋಟಿಫಿಕೇಶನ್ ಆಫ್ ಮಾಡಿಟ್ಟಿದ್ದೀನಿ. ಪಟ್ಟಂತ ಮೆಸೇಜು ಯಾರ ಕಣ್ಣಿಗೂ ಕಾಣೋದಿಲ್ಲ. ಥೂ! ಇದೇನಾಗಿದೆ ನಂಗೆ. ಸಾಗರನ ಹುಟ್ಟುಹಬ್ಬಕ್ಕೊಂದು ವಿಶಸ್ ಕಳಿಸೋದಿಕ್ಕೆ ಇಷ್ಟೆಲ್ಲ ಅತಿರೇಕದಿಂದ ಯೋಚಿಸೋ ಅಗತ್ಯವಾದರೂ ಏನಿದೆ? ಯಾಕೀ ರೇ ಪ್ರಪಂಚದಲ್ಲಿ ಇಲ್ಲದಿರುವುದನ್ನೆಲ್ಲ ಯೋಚಿಸುತ್ತಾ ಕುಳಿತಿದ್ದೀನಿ. ಎಫ್.ಬಿ ತೆರೆದು ಸಾಗರನ ಪ್ರೊಫೈಲ್ ತೆರೆದು ʻಹ್ಯಾಪಿ ಬರ್ತ್ ಡೇ ಕಣೋ' ಎಂದು ಮೆಸೇಜು ಕಳುಹಿಸಿದೆ. ಅವನ ಮೆಸೆಂಜರ್ನಲ್ಲಿ ಅದರ್ಸ್ ಫೋಲ್ಡರಿಗೆ ಹೋಗಿರ್ತದೆ ಮೆಸೇಜು. ಇನ್ಯಾವಾಗ ನೋಡ್ತಾನೋ ಏನೋ ಎಂದುಕೊಂಡವಳಿಗೆ ಸಾಗರ್ ಇಸ್ ಟೈಪಿಂಗ್ ಅನ್ನೋದು ಕಾಣಿಸಿ ಖುಷಿಯಾಯಿತು. ಏನ್ ಟೈಪಿಸುತ್ತಿರಬಹುದು? ಸದ್ಯ, ಇನ್ನೂ ಮರೆತಿಲ್ಲವಲ್ಲ ನನ್ನ ಅಂತ ಕಾಲೆಳಿಯಬಹುದು.... ಯಾರಿದು ಅಂತ ರೇಗಿಸಬಹುದು ಅಥವಾ ಎಂತದೂ ಬೇಡ ಅಂತ ಸುಮ್ಮನೊಂದು ಥ್ಯಾಂಕ್ಯು ಹೇಳಿ ಮಾತುಕತೆ ಮುಗಿಸಬಹುದು ಎಂಬ ನಿರೀಕ್ಷೆಯಲ್ಲೇ ಕಣ್ಣನ್ನು ಮೊಬೈಲಿನ ಸ್ಕ್ರೀನಿಗೆ ನೆಟ್ಟು ಕುಳಿತಿದ್ದೆ. ಒಂದಷ್ಟೇನೋ ಟೈಪ್ ಮಾಡಿದವನು ಮತ್ತೆ ಡಿಲೀಟು ಮಾಡಿದನೇನೋ.... ಕ್ಷಣ ಕಾಲ ಸುಮ್ಮನಿದ್ದ ಆ್ಯಪು ಮತ್ತೊಮ್ಮೆ ಸಾಗರ್ ಇಸ್ ಟೈಪಿಂಗ್ ಅಂತ ತೋರಿಸಿತು. ಒಂದು ನಿಮಿಷದ ಟೈಪಿಂಗಿನ ನಂತರ ಮೆಸೇಜು ಕಾಣಿಸಿತು "ನನ್ನ ಹುಟ್ಟುಹಬ್ಬಕ್ಕಲ್ಲ, ನಾ ಸತ್ರೂ ಮೆಸೇಜು ಮಾಡಬೇಡ. ಅಪ್ಪಿತಪ್ಪಿ ನಾ ಸತ್ತ ವಿಷ್ಯ ಗೊತ್ತಾದ್ರೂ ನೋಡೋಕ್ ಬರಬೇಡ. ಅಷ್ಟು ನಡೆಸಿಕೊಡು ಸಾಕು". 

ನಿಟ್ಟುಸಿರುಬಿಡುವುದನ್ನೊರತುಪಡಿಸಿದರೆ ಮತ್ತೇನು ತಾನೇ ಮಾಡಲು ಸಾಧ್ಯವಿತ್ತು ನನಗೆ. ಸಾಮಾನ್ಯವಾಗಿ ಈ ರೀತಿ ಮೆಸೇಜು ಮಾಡಿದ ತಕ್ಷಣವೇ ಸಾರಿ ಯಾವ್ದೋ ಮೂಡಲ್ಲಿದ್ದೆ, ಎಷ್ಟೆಲ್ಲ ಕಾಟ ಕೊಡ್ತಿ ನನಗೆ ಅಂತಂದು ಒಂದಷ್ಟಾದರೂ ಮಾತನಾಡುತ್ತಿದ್ದ. ಕೊನೇಪಕ್ಷ ವ್ಯಂಗ್ಯವನ್ನಾಡುತ್ತ ಚುಚ್ಚು ಮಾತುಗಳನ್ನಾದರೂ ಆಡುತ್ತಿದ್ದ. ಇವತ್ತೂ ಹಂಗೇ ಆಗಬಹುದೇನೋ ಅಂದುಕೊಂಡು ಕಾದೆ. ಉಹ್ಞೂ. ಯಾವ ಮೆಸೇಜೂ ಬರಲಿಲ್ಲ. ನಾನೇ ಮೆಸೇಜು ಮಾಡಲಾ? ಸತ್ರೂ ಮೆಸೇಜು ಮಾಡಬೇಡ ಅಂದುಬಿಟ್ಟಿದ್ದಾನಲ್ಲ. ಆದರೇನಂತೆ? ಮುಂಚೆ ಎಷ್ಟು ಸಲ ಈ ರೀತಿಯಾಗಿ ಮೆಸೇಜು ಮಾಡಿದ ಮೇಲೆ ನಾನೇ ದುಃಖ ತೋಡಿಕೊಂಡಿಲ್ಲ. ಮತ್ತೇನಿಲ್ಲದಿದ್ದರೂ ನನ್ನ ದುಃಖಕ್ಕಂತೂ ಹುಡುಗ ಕರಗಿಬಿಡ್ತಾನೆ. ನಿನ್ನ ದುಃಖದ ಕತೆಗಳನ್ನು ಕೇಳೋಕೊಂದು ಕಿವಿ ಬೇಕಷ್ಟೇ ನಿನಗೆ ಅಂತ ಎಷ್ಟು ಸಲ ಆಡಿಕೊಂಡಿದ್ದಾನೆ.‌ ಕೇಳುವದಕ್ಕೊಂದಷ್ಟು ಕಿವಿಗಳು ಎಲ್ಲರಿಗೂ ಬೇಕೇ ಬೇಕಲ್ಲ. ಮತ್ತೊಂದು ರೌಂಡು ಬಯ್ದರೂ ಪರವಾಗಿಲ್ಲ ಮೆಸೇಜು ಮಾಡೇಬಿಡುವ ಎಂದು ಧೃಡ ನಿರ್ಧಾರ ಮಾಡಿ ಫೋನ್ ಕೈಗೆತ್ತಿಕೊಂಡರೆ ಅಮ್ಮನ ಫೋನು ಬಂತು.‌ ನಂತರ ಮೆಸೇಜಿಸುವ ಅಂದುಕೊಂಡು ಫೋನೆತ್ತಿಕೊಂಡೆ. 

ಜುಲೈ 25, 2020

ಒಂದು ಬೊಗಸೆ ಪ್ರೀತಿ - 72

ಭಾನುವಾರ ಹತ್ತೂವರೆಗೆಲ್ಲ ರೆಡಿಯಾಗಿರಲು ಹೇಳಿದ್ದರು ರಾಮ್.‌ ಅವರ ಕಾರಿನಲ್ಲೇ ಹುಡುಗಿ ಮನೆಗೆ ಹೊರಟೆವು. ನಮ್ಮ ಮನೆಯಿಂದ ಒಂದಿಪ್ಪತ್ತು ನಿಮಿಷದ ಹಾದಿ ಹುಡುಗಿಯ ಮನೆ. ಟೆರಿಶಿಯನ್‌ ಕಾಲೇಜಿನ ಬಳಿಯಿತ್ತು ಅವರ ಮನೆ. ಸ್ವಂತ ಮನೆ; ಮೊದಲ ಫ್ಲೋರಿನಲ್ಲಿ ಅವರಿದ್ದರು, ಕೆಳಗೊಂದು ಮನೆ ಬಾಡಿಗೆಗೆ ಕೊಟ್ಟಿದ್ದರು. 

ʻಇನ್ನೇನು ಮದುವೆಯಾದ ಮೇಲೆ ಕೆಳ್ಗಡೆ ಮನೇಲೇ ಇರ್ಬೋದು ಬಿಡ್ರಿʼ ಅಂತ ರೇಗಿಸಿದೆ ಮನೆಯೊಳಗೋಗುವಾಗ. 

"ಸುಮ್ನಿರಿ. ಮೊದಲು ಹುಡುಗಿ ನೋಡೋ ಶಾಸ್ತ್ರ ಮುಗಿಸಿ ಪಟ್ಟಂತ ಹೊರಟುಬಿಡುವ. ಫುಲ್‌ ಟೆನ್ಶನ್‌ ಆಗ್ತಿದೆ. ಯಾರಿಗ್‌ ಬೇಕ್‌ ಈ ಕರ್ಮವೆಲ್ಲ" ಎಂದೇಳುತ್ತಾ ಪ್ಯಾಂಟಿನ ಎಡಜೇಬಿನಲ್ಲಿದ್ದ ಕರ್ಚೀಫು ಹೊರತೆಗೆದು ಹಣೆ ಒರೆಸಿಕೊಂಡು ಬೆವೆತುಹೋಗಿದ್ದ ಹಸ್ತ ಒರೆಸಿಕೊಂಡರು. ನಮ್ಮಿಂದೆಯೇ ರಾಜೀವ್‌ ರಾಧಳನ್ನು ಎತ್ತಿಕೊಂಡು ಒಳಬಂದರು. ಬನ್ನಿ ಬನ್ನಿ ಕೂತ್ಕೊಳ್ಳಿ ಕೂತ್ಕೊಳ್ಳಿ ಅನ್ನೋ ಶಾಸ್ತ್ರವೆಲ್ಲ ಮುಗಿದು ನಾವು ಕುಳಿತುಕೊಂಡ ನಂತರ ಇವರ್ಯಾರು ಅನ್ನುವಂತ ಪ್ರಶ್ನೆಯನ್ನು ರಾಮ್‌ ಕಡೆಗೆಸೆದರು. ನನ್ನೆಡೆಗೆ ಕೈತೋರುತ್ತಾ "ಇವರು ನನ್‌ ಫ್ರೆಂಡ್ಸು. ಇವ್ರು ಧರಣಿ ಅಂತ, ನಮ್‌ ಆಸ್ಪತ್ರೆಯಲ್ಲೇ ಮಕ್ಕಳ ಡಾಕ್ಟರ್ರು. ಇವರವರ ಹಸ್ಬೆಂಡು, ರಾಜೀವ್‌ ಅಂತ. ಅವರ ಮಗಳು ರಾಧ ಪುಟ್ಟಿ". ಸರಿ ಸರಿಯೆಂಬಂತೆ ತಲೆಯಾಡಿಸಿದರು ಎಲ್ಲರೂ. 

"ನೀವೆಲ್ಲಿ ಕೆಲಸ ಮಾಡೋದು" ಎಂದವರು ಹುಡುಗಿಯ ಚಿಕ್ಕಪ್ಪನೋ ಮಾವನೋ ಇರಬೇಕು. 

ʻನಾನು ಇಲ್ಲೇ ಫಸ್ಟ್‌ ಹೆಲ್ತ್‌ನಲ್ಲಿದ್ದೀನಿʼ ಮಕ್ಕಳ ಡಾಕ್ಟರ್‌ ಆಗಿಲ್ಲ ಇನ್ನೂ ಓದ್ತಿದ್ದೀನಿ ಅಂತೆಲ್ಲ ಹೇಳಬೇಕೆಂದುಕೊಂಡವಳು ಅಷ್ಟೆಲ್ಲ ಪುರಾಣ ಇಲ್ಯಾಕೆ ಎಂದು ಸುಮ್ಮನಾದೆ. 

ಜುಲೈ 15, 2020

ಒಂದು ಬೊಗಸೆ ಪ್ರೀತಿ - 71

ಸುಮ ಮೂಡಿಸಿದ ಬೇಸರವನ್ನು ಮರೆಯಲನುವು ಮಾಡಿಕೊಟ್ಟದ್ದು ಮಗಳೊಂದಿಗಿನ ಒಡನಾಟ. ಮಗಳೊಂದಿಗೆ ನೆಟ್ಟಗೆ ಮಾತನಾಡಿ, ಆಟವಾಡಿ ತಿಂಗಳ ಮೇಲಾಗಿತ್ತು. ತಿಂಗಳ್ಯಾಕೆ, ಎರಡು ತಿಂಗಳೇ ಆಗಿಹೋಯಿತು. ಮಾತನಾಡಿ ಆಟವಾಡಿದರೂ ಅದೆಲ್ಲಾ ಯಾಂತ್ರಿಕತೆಯಿಂದ ಕೂಡಿತ್ತಷ್ಟೆ. ಎರಡ್ ತಿಂಗಳಲ್ಲಿ ಮಗಳು ಎಷ್ಟೊಂದೆಲ್ಲ ಹೊಸ ಹೊಸ ಪದ ಕಲಿತುಬಿಟ್ಟಿದ್ದಾಳೆ ಅಂತ ಅಚ್ಚರಿ. ಅಮ್ಮ, ಅಪ್ಪ, ಪಪ್ಪ, ಮಮ್ಮ, ತಾತ, ಅಜ್ಜಿ, ಮಾಮ, ಅತ್ತೆ ಎಲ್ಲಾ ಸಲೀಸು ಪದಗಳೀಗ. ಇಷ್ಟು ದಿನ ಅವಳನ್ನು ನೋಡಿಕೊಂಡಿದ್ದೇ ಒಂದು ತೂಕವಾದರೆ ಈಗ ಪುಟಪುಟನೆ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಚಿಮ್ಮುವ ಅವಳ ಉತ್ಸಾಹದ ಸರಿಸಮಕ್ಕೆ ನಾವು ದೊಡ್ಡವರು ನಿಲ್ಲುವುದಕ್ಕೆಲ್ಲಿ ಸಾಧ್ಯ! ಮಗಳ ಆಟೋಟಗಳನ್ನು ನೋಡುತ್ತಾ ಒಂದು ಒಂದೂವರೆ ಘಂಟೆ ಕಳೆದಿದ್ದೇ ತಿಳಿಯಲಿಲ್ಲ. ಫೋನು ರಿಂಗಣಿಸಿತು. ರಾಮ್ ಫೋನ್ ಮಾಡಿದ್ರು. ಮಗಳನ್ನು ಅವರಪ್ಪನ ಕೈಗೊಪ್ಪಿಸಿ ಫೋನ್ ಎತ್ತಿಕೊಂಡು ಹೊರಬಂದೆ. 

ʻಹೇಳಿ ರಾಮ್' 

"ಏನ್ರೀ ಹೇಗಾಯ್ತು ಎಕ್ಸಾಮ್ಸ್ ಎಲ್ಲ?" 

ʻಏನೋ ತಕ್ಕಮಟ್ಟಿಗೆ ಆಗಿದೆ. ನೋಡ್ಬೇಕು ರಿಸಲ್ಟ್ಸ್ ಏನಾಗುತ್ತೋ' 

"ನಿಮ್ಮಂತೋರೇ ಪಾಸಾಗದಿದ್ದರೆ ಇನ್ಯಾರು ಪಾಸಾಗ್ತಾರೆ ಹೇಳಿ...." 

ʻಬೇರೆ ಡೈಲಾಗ್ ಹೇಳೀಪ. ಈ ಡೈಲಾಗ್ ಕೇಳಿ ಕೇಳಿ ಸಾಕಾಗಿದೆ' 

"ಹ ಹ.... ಹೊಸ ಕಾರ್ ತಗಂಡೆ ರೀ" 

ʻಓ ಸೂಪರ್ ಅಲ್ಲ…. ಕಂಗ್ರಾಟ್ಸ್' 

"ಥ್ಯಾಂಕ್ಯು ಥ್ಯಾಂಕ್ಯು" 

ʻಬರೀ ಥ್ಯಾಂಕ್ಸ್ ಹೇಳಿಬಿಟ್ರೆ! ಪಾರ್ಟಿ ಗೀರ್ಟಿ ಕೊಡ್ಸಿ' 

"ನಿಜ ಹೇಳ್ಬೇಕು ಅಂದ್ರೆ ಅದಿಕ್ಕೇ ಫೋನ್ ಮಾಡಿದ್ದು" 

ʻಆಹಾ! ಪಟ್ಟಂತ ಚೆನ್ನಾಗಿ ಸುಳ್ಳೇಳ್ತೀರ' 

"ಇಲ್ಲ ರೀ ನಿಜವಾಗ್ಲೂ. ರಾಜೀವ್ ಹೇಳಲಿಲ್ವ?" 

ʻಇಲ್ವಲ್ಲ' 

ಜುಲೈ 8, 2020

ಒಂದು ಬೊಗಸೆ ಪ್ರೀತಿ - 70

ಕೊನೆಯ ಪರೀಕ್ಷೆ ಮುಗಿಸಿ ಹೊರಬರುವ ಸಂತಸ ವರ್ಣಿಸುವುದು ಕಡು ಕಷ್ಟದ ಕೆಲಸ. ಥಿಯರಿ ಪಾಸಾಗೋದು ಗ್ಯಾರಂಟಿ ಅನ್ನೋ ಖುಷಿಯಲ್ಲಿ ಹೊರಬಂದವಳಿಗೆ ಕಿವಿಯಿಂದ ಕಿವಿಯವರೆಗೆ ನಗು ಹರಡಿಕೊಂಡು ಬಂದ ಸುಮಾ ಜೊತೆಯಾದಳು. 

ಹತ್ತಿರ ಬಂದು ಕೈ ಹಿಡಿದುಕೊಂಡವಳು "ಹೆಂಗಾಯ್ತೆ" ಎಂದು ಕೇಳಿದವಳು ನಾ ಉತ್ತರಿಸುವ ಮೊದಲೇ "ನೀ ಬಿಡು ಚೆನ್ನಾಗೇ ಮಾಡಿರ್ತಿ" ಎಂದು ಅವಳೇ ಉತ್ತರಿಸಿಕೊಂಡಳು. 

ʻಹು. ಕಣವ್ವ. ಪೇಪರ್ ಸೆಟ್ ಮಾಡಿದ್ದು ನಮ್ ಸಂಬಂಧಿಕರೇ ನೋಡು. ಎಲ್ಲಾ ಗೊತ್ತಿರೋದೇ ಕೊಟ್ಬಿಟ್ಟಿದ್ರು' 

"ಹ ಹ. ನಿಂಗ್ ಗೊತ್ತಿಲ್ಲದಿರೋದು ಏನಾದ್ರೂ ಇತ್ತಾ" 

ʻಹೆ ಹೆ. ಇಲ್ಲ. ಎಲ್ಲಾ ಗೊತ್ತಿತ್ತು!' 

"ಹಂಗಾದ್ರೆ ನಿನ್ ಸಂಬಂಧಿಕರೇ ಸೆಟ್ ಮಾಡಿರ್ಬೇಕು ಬಿಡು" 

ʻಸರಿ ಕಣವ್ವ. ನಾನೇ ಸೋತೆ. ಥಿಯರಿ ಪಾಸಾಗೋದ್ರಲ್ಲಿ ಅನುಮಾನ ಇಲ್ಲ ಬಿಡೆ. ಇನ್ ಕ್ಲಿನಿಕ್ಸ್ ಹೆಂಗ್ ಆಗ್ತದೋ ನೋಡ್ಬೇಕು' 

"ನೀ ಓದಿರೋದಿಕ್ಕೆ ಫೇಲಾಗೋದಿಕ್ಕೆ ಸಾಧ್ಯವೇ ಇಲ್ಲ ಬಿಡು" 

ʻಡಿ.ಎನ್.ಬಿ ಕ್ಲಿನಿಕ್ಸಿನಲ್ಲಿ ಪಾಸಾಗೋದಿಕ್ಕೆ ಓದಿರೋದ್ರ ಜೊತೆಗೆ ಅದೃಷ್ಟ ಕೂಡ ಇರ್ಬೇಕಲ್ಲ' 

"ನಿನಗಿಂತ ಅದೃಷ್ಟವಂತೆ ಯಾರಿದ್ದಾರೆ ಬಿಡವ್ವ. ಪ್ರತೀ ಸಲ ಥಿಯರಿ ಎಕ್ಸಾಮು ಬೆಂಗಳೂರಲ್ಲೋ ಚೆನ್ನೈಯಲ್ಲೋ ಮುಂಬೈಯಲ್ಲೋ ಇರೋದಪ್ಪ. ಇದೇ ಮೊದಲ ಸಲ ಮೈಸೂರಲ್ಲಿ ಆಗಿರೋದು. ಅದೃಷ್ಟ ಅಲ್ಲದೇ ಮತ್ತೇನಿದು?" 

ಜುಲೈ 1, 2020

ಒಂದು ಬೊಗಸೆ ಪ್ರೀತಿ - 69

"ಇಲ್ಲೇ ಇದ್ದು ಓದ್ಕೋಬಾರ್ದಾ? ಪಾಪು ನನ್ಜೊತೆ ಮಲಗಿರುತ್ತಪ್ಪ, ನಿನ್ನ ಪಾಡಿಗೆ ನೀನು ಓದ್ಕೊಂಡ್ರಾಗದಾ?" ಅಮ್ಮ ಹೇಳುವಾಗ ಬಾಯಲ್ಲಿದ್ದದ್ದನ್ನು ಗಬಗಬನೆ ತಿನ್ನುತ್ತಾ ತೊಡೆಯಮೇಲಿಟ್ಟುಕೊಂಡಿದ್ದ ಪುಸ್ತಕವನ್ನು ತಿರುವಿಹಾಕುತ್ತಿದ್ದೆ. ಅಮ್ಮನ ಮಾತು ಕೇಳಿಸಿದ್ದೌದು. ಉತ್ತರಿಸಿದರೆಲ್ಲಿ ಎರಡು ಸಾಲು ಓದುವುದು ತಪ್ಪಿಹೋಗ್ತದೋ ಅಂತ ಸುಮ್ಮನಿದ್ದೆ. 

"ನಾನೇಳಿದ್ದು ಕೇಳಿಸ್ತಾ ಇಲ್ವಾ?" ನನ್ನ ಮೌನಕ್ಕೆ ಅಮ್ಮನ ಜೋರಿನ ಮಾತುಗಳು. 

"ಶ್.‌ ಮೆಲ್ಲಗೆ. ಪಾಪು ನಿದ್ರೆ ಮಾಡ್ತಿದೆ" ಅಪ್ಪನ ಗದರಿಕೆ. 

"ನನಗೆ ಮಾತ್ರ ರೇಗಿ. ಅವಳು ನಾ ಕೇಳಿದ್ರೆ ಬದಲೂ ಹೇಳ್ತಿಲ್ಲ. ಕಾಣಲ್ವ ನಿಮಗೆ" ಅಮ್ಮನ ಗೋಳಾಟ. 

ʻಅಯ್ಯೋ ಅಮ್ಮ. ಸುಮ್ನಿರಿ. ಇಲ್ಲೇನೋ ಓದ್ತಿಲ್ವ! ಇಷ್ಟು ದಿನ ಮಗಳನ್ನೂ ಜೊತೆಗೇ ಕರೆದುಕೊಂಡು ಹೋಗ್ತಿರಲಿಲ್ವ? ಇನ್ನೊಂದೇ ವಾರ ಇರೋದು. ಈಗಷ್ಟೇ ರಿವಿಷನ್‌ ಶುರು ಹಚ್ಕೊಂಡಿದ್ದೀನಿ. ಓದೋಕೆ ಇನ್ನೂ ಬೆಟ್ಟದಷ್ಟಿದೆ. ಎರಡ್‌ ತಿಂಗಳಿಂದ ಓದಿರೋದು ಅದೆಷ್ಟು ನೆನಪಿದೆಯೋ ಏನೋ ಅನ್ನೋದು ಗೊತ್ತಿಲ್ಲ. ಸುಮ್ನೆ ಟೆನ್ಶನ್‌ ಕೊಡ್ಬೇಡಿ ಈಗ. ನಾ ಪಾಸಾಗ್ಬೇಕೋ ಬೇಡ್ವೋ?ʼ 

"ಪಾಸಾಗ್ದೇ ಫೇಲ್‌ ಆಗ್ಲಿ ಅಂತ ಬಯಸ್ತೀನಾ? ಇಲ್ಲೆ ಇನ್ನೊಂದ್‌ ರೂಮಲ್‌ ಓದ್ಕೋ. ನಿನ್ನತ್ರ ಮಗಳನ್ನ ಮಲಗಿಸಿಕೋ ಅಂತೇನೂ ಹೇಳ್ತಿಲ್ಲವಲ್ಲ ನಾನು" ಅಮ್ಮನದೂ ಮತ್ತದೇ ಸಾಲುಗಳು. ಏನಾದ್ರೂ ಮಾತಾಡ್ಕೊಳ್ಳಲಿ, ನನ್ನ ಪಾಡಿಗೆ ನಾ ತಿಂದು ಮುಗಿಸಿ ಎದ್ದು ಹೋಗ್ತೀನಿ ಅಂತ ಸುಮ್ಮನಾದೆ. 

ಜೂನ್ 23, 2020

ಒಂದು ಬೊಗಸೆ ಪ್ರೀತಿ - 68

ಬೆಳಿಗ್ಗೆಯಿಂದ ಓದು ಚೆಂದ ಸಾಗ್ತಿತ್ತು. ಮಧ್ಯಾಹ್ನ ರಾಮ್ ಜೊತೆ ಊಟ ಮುಗಿಸಿ ಮತ್ತೆ ಓದಲು ಕುಳಿತವಳಿಗೆ ಹಿಂದಿನ ವಾರವಷ್ಟೇ ಓದಿದ್ದ ಪಾಠ ಮನಸ್ಸಲ್ಲಿ ಮೂಡಿತು. ಕಳೆದ ವಾರವಷ್ಟೇ ಓದಿದ್ದ ಸಂಗತಿಗಳು ಹೆಚ್ಚು ಕಡಿಮೆ ಮರೆತೇ ಹೋದಂತಾಗಿಬಿಟ್ಟಿತ್ತು! ಇಲ್ಲ ಇಲ್ಲ ನೆನಪಿರ್ತದೆ, ಸುಮ್ನೆ ಹಂಗೆ ಮರೆತಂಗಾಗಿದೆ ಅಷ್ಟೇ ಅಂದಕೊಂಡು ಪುಸ್ತಕ ಮುಚ್ಚಿ ಕಣ್ಣು ಮುಚ್ಚಿ ಓದಿದ್ದ ಪಾಠವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದೆ. ಉಹ್ಞೂ... ನೆನಪಾಗಲೊಲ್ಲದು! ನೂರರಷ್ಟು ಬೇಡ, ಐವತ್ತು ಪರ್ಸೆಂಟ್ ಹೋಕ್ಕೊಳ್ಳಿ ಹತ್ತು ಪರ್ಸೆಂಟ್, ಬೇಡ ಐದು ಪರ್ಸೆಂಟ್... ಉಹ್ಞೂ... ಪಾಠದ ಹೆಸರು ಬಿಟ್ಟು ಮತ್ತೇನೂ ನೆನಪಾಗುತ್ತಿಲ್ಲ. ಸಬ್ ಹೆಡ್ಡಿಂಗ್ಸ್ ನೋಡ್ಕಂಡರೆ ಎಲ್ಲಾ ಪಟ್ಟಂತ ನೆನಪಾಗಿಬಿಡ್ತದೆ ಅಂತ ಧೈರ್ಯ ತಂದುಕೊಂಡು ನಿಧಾನಕ್ಕೆ ಭಯದಿಂದಲೇ ಪಾಠದ ಪುಟ ತಿರುವಿ ಬೇರ್ಯಾವುದರ ಮೇಲೂ ಕಣ್ಣಾಡಿಸದೆ ಇದ್ದ ಆರು ಸಬ್ ಹೆಡ್ಡಿಂಗಿನ ಮೇಲೆ ಕಣ್ಣಾಡಿಸಿದೆ. ಉಹ್ಞೂ.... ಸಬ್ ಹೆಡ್ಡಿಂಗುಗಳಿಗೆ ಕೂಡ ತಲೆಯಲ್ಲಿನ ಬಲ್ಬು ಉರಿಸುವ ಶಕ್ತಿ ಇರಲಿಲ್ಲ. ಅಳುವೇ ಬಂದಂತಾಯಿತು. ಇದು ಹೊಸ ಟಾಪಿಕ್, ಪರೀಕ್ಷೆಗಷ್ಟೇ ಮುಖ್ಯವಾದ ಟಾಪಿಕ್ಕೇನೋ ಹೌದು. ಆದರೆ ಕಳೆದ ವಾರವಷ್ಟೇ ಓದಿದ್ದ ಪಾಠದ ಗತಿಯೇ ಈ ರೀತಿಯಾದರೆ ಇನ್ನೊಂದದಿನೈದು ದಿನದಲ್ಲಿರುವ ಪರೀಕ್ಷೆಯಲ್ಲಿ ಏನು ಬರೆಯುವುದು? ಕಳೆದ ತಿಂಗಳು ಓದಿದ ಪಾಠಗಳ ಗತಿಯೇನು? ಕಳೆದ ತಿಂಗಳು ಓದಿದ ಪಾಠಗಳೆಲ್ಲವೂ ಸ್ಮೃತಿ ಪಟಲದಲ್ಲಿ ಮಿಂಚಿತು, ಪಾಠದೊಳಗಿನ ವಿಷಯಗಳೆಲ್ಲ ಮರೆಯಾಗಿತ್ತು. ಅಳು ಬಂದಂತಾಗುವುದೇನು, ಬಂದೇಬಿಟ್ಟಿತು. ಪುಸ್ತಕವನ್ನು ಬದಿಗೆ ಸರಿಸಿ ಮೇಜಿಗೆ ಹಣೆಕೊಟ್ಟು ಮೇಜನ್ನೊಂದಷ್ಟು ತೇವವಾಗಿಸಿದೆ. ʻಪರವಾಗಿಲ್ಲ ಧರಣಿ, ಇದು ಪರೀಕ್ಷೆ ಸಮಯದಲ್ಲಿ ಮಾಮೂಲಿ. ಎಂಬಿಬಿಎಸ್‌ನಲ್ಲೂ ಇಂತದ್ದು ಎಷ್ಟು ಸಲ ಆಗಿಲ್ಲ. ಕೊನೆಗೆ ಪರೀಕ್ಷೆಯ ದಿನ ಎಲ್ಲವೂ ನೆನಪಾಗೇ ಆಗ್ತದೆ ಅನ್ನೋದನ್ನ ಮರೀಬೇಡ. ಇಲ್ಲೂ ಅಷ್ಟೇ ಆಗಿರೋದು. ಮತ್ತೇನೂ ಅಲ್ಲ. ಗಾಬರಿ ಆಗೋದೇನೂ ಇಲ್ಲ. ಗಾಬರಿ ಆದರೆ ಮುಂದಕ್ಕೆ ಓದಲಾಗುವುದಿಲ್ಲ. ಓದದೇ ಹೋದರೆ ಮತ್ತಷ್ಟು ಗಾಬರಿ ಆಗ್ತದೆ. ಮತ್ತೆ ಓದೋದಿಕ್ಕಾಗುವುದಿಲ್ಲ. ಮತ್ತಷ್ಟು ಗಾಬರಿ. ಅಂತ್ಯವಾಗದ ವೃತ್ತದ ಸುಳಿಗೆ ಸಿಲುಕಬೇಡ. ಒಂದಷ್ಟು ಪಾಠಗಳು ಮರೆತರೇನು, ಇನ್ನೊಂದಷ್ಟು ಪಾಠ ಓದಿ ನಾಳೆ ಹಳೇ ಪಾಠಗಳ ಮೇಲೊಮ್ಮೆ ಕಣ್ಣಾಡಿಸಿದರಾಯಿತು. ಹಳೇದೇ ನೆನಪಿಲ್ಲ, ಹೊಸತು ಮತ್ತೆಲ್ಲಿ ನೆನಪಾಗ್ತದೆ? ಇಲ್ಲಿಲ್ಲ ಇಂತ ಆಲೋಚನೆಗಳನ್ನು ದೂರಕ್ಕೆ ತಳ್ಳುವುದೇ ಸರಿ. ಇಲ್ಲಾಂದ್ರೆ ಮುಗೀತು ಕತೆ. ಫೇಲಾಗ್ತೀನಿ. ಫೇಲಾದ್ರೆ ಮನೇಲಿ ರಾಜೀವನ ಕಿರಿಕಿರಿ! ಹಣದ ಸಮಸ್ಯೆ! ಅಯ್ಯಪ್ಪ... ಅದನ್ನೆಲ್ಲಾ ನೆನೆಸಿಕೊಂಡರೇನೇ ಭಯವಾಗ್ತದೆ. ಸಮಸ್ಯೆಗಳಿಗೊಂದಷ್ಟು ಪರಿಹಾರ ಸಿಗಬೇಕೆಂದರೆ ನಾ ಪಾಸಾಗಲೇಬೇಕು. ಅದಕ್ಕೋಸ್ಕರನಾದರೂ ಓದು ಮುಂದುವರಿಸಲೇಬೇಕು. ಇನ್ನದಿನೈದು ದಿನವಿರುವಾಗ ಅರ್ಧ ದಿನವನ್ನು ಕಳೆದುಕೊಳ್ಳುವುದು ಯುಕ್ತಿಯ ಕೆಲಸವಲ್ಲ. ಕಮಾನ್ ಧರಣಿ ಯು ಕ್ಯಾನ್ ಡು ಇಟ್. ಕಮಾನ್' ಅಂತ ನನಗೆ ನಾನೇ ಹುರಿದುಂಬಿಸಿಕೊಂಡು ತಲೆ ಮೇಲೆತ್ತುವಷ್ಟರಲ್ಲಿ ಅಳು ನಿಂತಿತ್ತು. ಬಿಡದಂತೆ ಒಂದು ಪುಟ ಓದಿ ಮುಗಿಸಿದೆ, ಅದಕ್ಕಿಂತ ಮುಂದಕ್ಕೋಗಲಾಗಲಿಲ್ಲ. ಮನದಲ್ಲಿ ವಿವರಿಸಲಾಗದ ಭೀತಿ. ʻಏನ್ ಅಬ್ಬಬ್ಬಾ ಅಂದ್ರೆ ಆರು ತಿಂಗಳು ಹೋಗ್ತದೆ ಅಷ್ಟೇ. ಅದಕ್ಯಾಕೆ ಇಷ್ಟೊಂದು ಚಿಂತೆ' ಸುಳ್ಳು ಸುಳ್ಳೇ ವೈರಾಗ್ಯದ ಮೊರೆ ಹೊಕ್ಕು ನೋಡಿದೆ. ಉಪಯೋಗವಾಗಲಿಲ್ಲ. ಒಂದ್ ಕಾಫಿ ಕುಡಿದ್ರೆ ಎಲ್ಲಾ ಸರಿ ಹೋಗಿಬಿಡ್ತದೆ ಅನ್ನೋ ಸಂಗತಿ ಹೊಳೆದು ಲವಲವಿಕೆಯಿಂದ ಎದ್ದು ಟಾಯ್ಲೆಟ್ಟಿಗೆ ಹೋಗಿ ಹೊಟ್ಟೆ ಹಗುರಾಗಿಸಿಕೊಂಡು ಕ್ಯಾಂಟೀನಿನಲ್ಲಿ ಒಂದು ಸ್ಟ್ರಾಂಗ್ ಫಿಲ್ಟರ್ ಕಾಫಿ ಮಾಡಿಸಿಕೊಂಡು ಕುಡಿದೆ. ಓದುವ ಉತ್ಸಾಹ ಮೂಡಿತು. ಲೈಬ್ರರಿಗೆ ಹಿಂದಿರುಗಿದೆ. ಮತ್ತರ್ಧ ಘಂಟೆ ಹಂಗೂ ಹಿಂಗೂ ಕಷ್ಟ ಪಟ್ಟು ಓದಿದೆ. ಮತ್ತದೇ ಹೇಳತೀರದ ಗೋಳು. 

ಜೂನ್ 11, 2020

ಒಂದು ಬೊಗಸೆ ಪ್ರೀತಿ - 67

ಮೊದಲಿಂದಾನೂ ಚೆನ್ನಾಗಿ ಕೆಲ್ಸ ಮಾಡಿದ್ದಾಳೆ ಅನ್ನೋ ಕಾರಣಕ್ಕೋ, ನಮ್ ಆಸ್ಪತ್ರೆಯಲ್ಲೇ ಇದ್ದೋಳಲ್ವ ಅನ್ನೋ ಕಾರಣಕ್ಕೋ ಅಥವಾ ಪಾಪ ಚಿಕ್ ಮಗು ಇಟ್ಕಂಡು ಇಷ್ಟೊಂದ್ ದುಡ್ದಿದ್ದಾಳೆ, ಓದೋಕ್ ಟೈಮ್ ಕೊಡೋದ್ ಬೇಡ್ವೇ ಅನ್ನೋ ಅನುಕಂಪದಿಂದಲೋ ಒಟ್ನಲ್ಲಿ ಥಿಯರಿ ಪರೀಕ್ಷೆಗೆ ಇನ್ನೂ ಎರಡು ತಿಂಗಳು ಇರುವಾಗಲೇ ಡ್ಯೂಟಿಯಿಂದ ರಿಲೀವ್ ಮಾಡಿದ್ರು. "ಅಯ್ಯೋ ಹೆಣ್ಮಕ್ಳಿಗೆ ಬಿಡಪ್ಪ ಸಲೀಸು' ಅಂತ ಜೂನಿಯರ್ ಹುಡುಗ್ರು ಪಿಜಿಗಳು, ʻಅವಳೇನ್ ಕಿಸ್ಕಂಡ್ ಮಾತಾಡ್ತಾಳಲ್ಲ ಅದ್ಕೆ ' ಅಂತ ಜೂನಿಯರ್ ಹುಡ್ಗೀರ್ ಪೀಜಿಗಳು ನಾನಿಲ್ಲದಾಗ ಮಾತಾಡಿಕೊಂಡಿದ್ದು ಸುಮಾಳ ಮೂಲಕ ಕಿವಿಗೆ ಬಿತ್ತು. ಯಾರ್ ಏನ್ ಮಾತಾಡ್ಕಂಡ್ರೇನು, ನನಗೆ ಓದೋಕೆ ಸಮಯ ಸಿಕ್ತಲ್ಲ ಅಷ್ಟು ಸಾಕಿತ್ತು ನನಗೆ. ಡಿ.ಎನ್.ಬಿಯಲ್ಲಿ ಥಿಯರಿ ಪಾಸೋಗೋದ್ ಸಲೀಸು, ಪ್ರ್ಯಾಕ್ಟಿಕಲ್ಸೇ ತಲೆನೋವು ಅಂತ ಎಲ್ರೂ ಹೇಳ್ತಾರೆ. ನಾನೀಗ ಓದಿರೋ ಮಟ್ಟಕ್ಕೆ ಪ್ರ್ಯಾಕ್ಟಿಕಲ್ಸ್ ಇರಲಿ ಥಿಯರಿ ಪಾಸಾಗೋದು ಕೂಡ ಅನುಮಾನವೇ ಸರಿ. ಇನ್ನೆರಡು ತಿಂಗಳು ಬಿಡದೆ ಓದಿದರೆ ತೊಂದರೆಯಿಲ್ಲ ಅನ್ಕೋತೀನಿ. ಆದರೆ ಓದೋದೆಲ್ಲಿ? ಮನೇಲಿ ಕುಳಿತು ಓದಲು ಕಷ್ಟ ಕಷ್ಟ. ಮನೇಲೇ ಇದ್ದೀಯಲ್ಲ, ಮಗಳನ್ನು ಸ್ವಲ್ಪ ಹೊತ್ತು ನೋಡ್ಕೋ ಅಂತ ಅಮ್ಮ ಹೇಳದೆ ಇರಲಾರರು. ಇನ್ನು ರಾಜೀವನಿಗೆ ತಿಂಡಿ ಊಟ ಕಾಫಿ ಟೀ ಅಂತ ಒಂದಷ್ಟು ಸಮಯ ಹಾಳಾಗೋದು ಖಂಡಿತ. ಇಲ್ಲಿ ಆಸ್ಪತ್ರೆಯಲ್ಲಿರೋ ಲೈಬ್ರರಿಗೇ ಬಂದು ಓದಬೇಕು. ಇನ್ನೆಲ್ಲಿ ಕುಳಿತರೂ ಕೆಲಸ ಕೆಡ್ತದೆ ಅಂದುಕೊಂಡೆ. ರಾಜೀವನಿಗೂ ಅದನ್ನೇ ಹೇಳಿದೆ. "ಅದೇ ಸರಿ. ಇಲ್ಲಾಂದ್ರೆ ಎಲ್ಲಿ ಓದೋಕಾಗುತ್ತೆ ಬಿಡು" ಅಂದರು. ಇತ್ತೀಚಿನ ದಿನಗಳಲ್ಲಿ ನಾನು ಅವರು ಯಾವ ಕಿತ್ತಾಟವೂ ಇಲ್ಲದೆ ಒಪ್ಪಿಕೊಂಡ ಸಂಗತಿಯಿದು! "ಸದ್ಯಕ್ಕೆ ನಿಮ್ಮ ಅಮ್ಮನಿಗೆ ಡ್ಯೂಟಿ ರಿಲೀವ್ ಮಾಡಿದ ಬಗ್ಗೆ ಹೇಳಬೇಡ. ಬಿಡುವಾಗಿದ್ರೂ ಬಂದು ಮಗಳನ್ನ ನೋಡದೆ ಓದ್ತಾ ಕೂತಿದ್ದಾಳೆ ಅಂತಂದ್ರೂ ಅಂದ್ರೆ" ಎಂದು ನಕ್ಕರು. ಪರವಾಗಿಲ್ಲ ಚೆನ್ನಾಗೇ ಅರ್ಥ ಮಾಡಿಕೊಂಡಿದ್ದಾರೆ ಅತ್ತೇನ! 

ರಾಜೀವ ಹೇಳಿದಂತೆಯೇ ಅಮ್ಮನಿಗೆ ಹೇಳಲೋಗಲಿಲ್ಲ. ʻಇನ್ನು ಮೇಲೆ ನೈಟ್ ಡ್ಯೂಟಿ ಇರಲ್ಲ. ಸಂಜೆ ಕೆಲಸ ಮುಗಿದ ಮೇಲೆ ಒಂದಷ್ಟು ಸಮಯ ಓದಿಕೊಂಡು ರಾತ್ರಿ ಎಂಟರಷ್ಟೊತ್ತಿಗೆ ಬರ್ತೀನಿ' ಎಂದಿದ್ದಕ್ಕೇ ಅಮ್ಮ ಉರ ಉರ ಅಂದು ಸುಮ್ಮನಾದರು. ಅಮ್ಮ ಏನಂದ್ರೂ ಏನ್ ಬಿಟ್ರು ಸುಮ್ಮನಿರಲೇಬೇಕಾಗಿತ್ತು, ನನ್ನ ಅನಿವಾರ್ಯತೆ. ಲೈಬ್ರರಿಯಲ್ಲಿ ಕುಳಿತು ಓದಿ ಅಭ್ಯಾಸವೇ ಇರಲಿಲ್ಲ ನನಗೆ. ಮುಂಚೆಯಿಂದ ಓದಿದ್ದೆಲ್ಲ ಮನೆಯಲ್ಲೇ. ಈಗ ವಿಧಿಯಿಲ್ಲ, ಹೊಸ ಜಾಗದಲ್ಲಿನ ಓದಿಗೆ ಹೊಂದಿಕೊಳ್ಳಲೇಬೇಕು. ಬೆಳಿಗ್ಗೆ ಐದಕ್ಕೆಲ್ಲ ಎದ್ದು ಒಂದು ಘಂಟೆ ಕಾಲ ಓದಿ, ಕಸ ಗುಡಿಸಿ, ಮನೆ ಒರಸಿ, ಬೆಳಗಿನ ತಿಂಡಿ ಮಾಡಿ ತಿಂದು ನನಗೂ ರಾಜೀವನಿಗೂ ಬಾಕ್ಸಿಗೆ ಹಾಕುವಷ್ಟರಲ್ಲಿ ಎದ್ದಿರುತ್ತಿದ್ದ ಮಗಳಿಗೆ ಸ್ನಾನ ಮಾಡಿಸಿ ಅವಳು ತಿಂದರೊಂದಷ್ಟು ತಿನ್ನಿಸಿ ಅಮ್ಮನ ಮನೆಗೋಗಿ ಮಗಳನ್ನು ಬಿಟ್ಟು ಆಸ್ಪತ್ರೆಯ ಲೈಬ್ರರಿಯನ್ನು ಒಂಭತ್ತಕ್ಕೆ ಮುಂಚೆ ಸೇರಿದರೆ ಮತ್ತೆ ಮೇಲೇಳುತ್ತಿದ್ದದ್ದು ಹನ್ನೊಂದೂವರೆಗೆ ಒಂದು ಕಾಫಿ ಕುಡಿಯುವ ನೆಪದಿಂದ. ಅಪರೂಪಕ್ಕೆ ಸುಮಾ ಜೊತೆಯಗುತ್ತಿದ್ದಳು. ಹೆಚ್ಚಿನ ದಿನ ಅವಳು ಮನೆಯಲ್ಲೇ ಓದಿಕೊಳ್ಳುತ್ತಿದ್ದಳು. ಕೆಲವೊಮ್ಮೆ ರಾಮ್ ಪ್ರಸಾದ್ ದಾರಿಯಲ್ಲಿ ಸಿಕ್ಕರೆ ಜೊತೆಗೆ ಬರುತ್ತಿದ್ದರು. ಲೋಕಾಭಿರಾಮ ಒಂದಷ್ಟು ಮಾತಾಡಿ ಕಾಫಿ ಕುಡಿದು ಮತ್ತೆ ಲೈಬ್ರರಿ ಸೇರಿ ಪುಸ್ತಕದೊಳಗೆ ತಲೆ ತೂರಿಸಿದರೆ ಮತ್ತೆ ತಲೆಯೆತ್ತುತ್ತಿದ್ದದ್ದು ಮಧ್ಯಾಹ್ನ ಒಂದೂವರೆಗೆ ಊಟಕ್ಕೆಂದು ಎದ್ದಾಗ. ತಂದಿದ್ದ ಒಂದು ಪುಟ್ಟ ಬಾಕ್ಸಿನ ತಿಂಡಿ ಸಾಲುತ್ತಿರಲಿಲ್ಲ, ಜೊತೆಗೊಂದು ಬೋಂಡಾನೋ ಮಂಗಳೂರು ಗೋಳಿಬಜ್ಜೀನೊ ತೆಗೆದುಕೊಳ್ಳಲೇಬೇಕು. ಹೆಚ್ಚು ಕಮ್ಮಿ ಪ್ರತಿ ಮಧ್ಯಾಹ್ನ ರಾಮ್ ಪ್ರಸಾದ್ ಅದೇ ಸಮಯಕ್ಕೆ ಕ್ಯಾಂಟೀನಿಗೆ ಬರೋರು, ಜೊತೆಯಾಗೋರು. ಲೈಬ್ರರಿಗೆ ಬಂದರೂ ಹೆಚ್ಚಿನ ಸಮಯ ಮನೆಗೆ ಊಟಕ್ಕೆ ಹೋಗಿಬಿಡುತ್ತಿದ್ದ ಸುಮಾ ಅಪರೂಪಕ್ಕೆ ನನ್ನ ಜೊತೆ ಕ್ಯಾಂಟೀನಿಗೆ ಬಂದಾಗೆಲ್ಲ ರಾಮ್ ಪ್ರಸಾದ್ ಇರೋದನ್ನ ನೋಡಿ "ಅದೇನ್ ನೀ ಊಟಕ್ ಬರೋ ಟೈಮಿಗೇ ಬರ್ತಾರಲ್ಲ ಅವರೂನು" ಅಂತ ಕಾಲೆಳೆಯೋಳು. ʻಅಯ್ಯೋ ಗೂಬೆ. ಕೊ ಇನ್ಸಿಡೆನ್ಸ್ ಅಷ್ಟೆ' ಅಂದರೆ "ಬರೀ ಕೋ ಇನ್ಸಿಡೆನ್ಸಾ...." ಅಂತ ರೇಗಿಸದೆ ಸುಮ್ಮನಿರುತ್ತಿರಲಿಲ್ಲ. 

ಜೂನ್ 4, 2020

ಒಂದು ಬೊಗಸೆ ಪ್ರೀತಿ - 66

ಡಾ. ಅಶೋಕ್.‌ ಕೆ. ಆರ್.‌
ಸದ್ಯ ರಾಧ ಯಾವುದೇ ಹೆಚ್ಚು ತೊಂದರೆಗಳಿಲ್ಲದೆ ಎರಡು ದಿನದಲ್ಲಿ ಗೆಲುವಾಗಿಬಿಟ್ಟಳು. ಅಷ್ಟರಮಟ್ಟಿಗೆ ನನಗೂ ನಿರಾಳ. ಇಲ್ಲವಾದರೆ ಆಸ್ಪತ್ರೆಗೆ ರಜೆ ಹಾಕಿ ಮಗಳನ್ನು ನೋಡಿಕೊಳ್ಳುವುದು ಕಷ್ಟವಾಗಿಬಿಡುತ್ತಿತ್ತು. ರಾಜೀವ ನೆಪಕ್ಕೆ ನಿನ್ನೆ ಬಂದು ಹೋಗಿದ್ದ. ನನ್ನೊಡನೆ ಮಾತುಕತೆಯಿರಲಿಲ್ಲ. ಅಮ್ಮನೊಡನೆ ಹು ಉಹ್ಞೂ ಎಂದಷ್ಟೇ ಮಾತನಾಡಿ ಹೊರಟುಬಿಟ್ಟ. ಏನಕ್ಕೆ ಈ ರೀತಿಯಾಗ್ತಿದೆಯೋ ಗೊತ್ತಿಲ್ಲ. ತೀರ ಜಗಳವಾಗುವಂತದ್ದೇನೂ ಇತ್ತೀಚೆಗೆ ನಡೆದೂ ಇಲ್ಲ. ಆದರೂ ಯಾಕೋ ನನ್ನ ಕಂಡರೆ ಅವರಿಗೆ ಮುನಿಸು, ಮಗಳನ್ನು ಕಂಡರಂತೂ ಬೇಡದ ಸಿಟ್ಟು. ಅವರಿಗೆ ಓದಿಗೆ ತಕ್ಕ ಕೆಲಸ ಸಿಗದಿದ್ದರೆ ನಾ ಹೇಗೆ ಹೊಣೆಯಾಗ್ತೀನಿ? ಅನ್ನೋ ಪ್ರಶ್ನೆಗೆ ಮದುವೆಯಾದಂದಿನಿಂದ ಉತ್ತರ ಹುಡುಕಲೆತ್ನಿಸುತ್ತಿದ್ದೀನಿ, ಇನ್ನೂ ಸಿಕ್ಕಿಲ್ಲ. ಒಂದು ವೇಳೆ ಅವರ ಓದಿಗೆ ತಕ್ಕ ಕೆಲಸ ಸಿಕ್ಕಿ, ನನ್ನ ಓದಿಗೆ ತಕ್ಕ ಕೆಲಸ ಸಿಗದೇ ʻನಡೀರಿ ಈ ಊರು ಬೇಡ. ಬೇರೆ ಊರಿಗೆ, ನನಗೆ ಸರಿಯಾದ ಕೆಲಸ ಸಿಗುವ ಊರಿಗೆ ಹೋಗುವʼ ಎಂದೇನಾದರೂ ನಾ ಹೇಳಿದ್ದರೆ ಅವರು ಒಪ್ಪಿ ಬಿಡುತ್ತಿದ್ದರಾ? ಖಂಡಿತ ಇಲ್ಲ. "ನಾ ದುಡೀತಿಲ್ವ. ಮುಚ್ಕಂಡ್‌ ಮನೇಲ್‌ ಬಿದ್ದಿರು, ಮಗು ನೋಡ್ಕಂಡು" ಅಂತಾನೋ ಅಥವಾ ಮೂಡು ಚೆನ್ನಾಗಿದ್ದಾಗ "ನಾ ದುಡೀತಿದ್ದೀನಲ್ಲ ಡಾರ್ಲಿಂಗ್.‌ ನೀ ಆರಾಮಿರು ಮನೇಲಿ" ಅಂತಾನೋ ಹೇಳಿ ಪುಸಲಾಯಿಸುತ್ತಿದ್ದರು. 

ಹೊಕ್ಕೊಳ್ಲಿ ನನಗೇನೂ ತೀರ ಮೈಸೂರಲ್ಲೇ ಇರಬೇಕು, ಬೆಂಗಳೂರಿಗೆ ಯಾವುದೇ ಕಾರಣಕ್ಕೂ ಹೋಗಲೇಬಾರದು ಅಂತೇನೂ ಇಲ್ಲ. ಒಳ್ಳೆ ಕೆಲಸ ಸಿಕ್ಕಿದರೆ ಮೈಸೂರಾದರೇನು, ಬೆಂಗಳೂರಾದರೇನು? ಎರಡೂ ಕಡೆ ನಡೀತದೆ. ಬರೀ ಎಂ.ಬಿ.ಬಿ.ಎಸ್‌ ಇಟ್ಕಂಡು ಬೆಂಗಳೂರಿಗೆ ಹೋಗೋ ಯೋಚನೆ ನನ್ನಲಿರಲಿಲ್ಲ. ಈ ಡಿ.ಎನ್.ಬಿಗೆ ಸೇರುವಾಗಲಾದರೂ ಪೂರ್ತಿ ಫೀಸು ಕಟ್ಟಿಬಿಟ್ಟಿದ್ದರೆ ಮುಗಿಸಿದ ತಕ್ಷಣ ಹೊರಡಬಹುದಿತ್ತೇನೋ, ಪೂರ್ತಿ ಫೀಸು ಕಟ್ಟಲು ಹಣವಿರಲಿಲ್ಲ, ಅವರಪ್ಪನ ಮನೇಲಿ ಹಣ ತರುವ ಮನಸ್ಸು ಇವರಿಗೂ ಇರಲಿಲ್ಲ. ಈಗ ವಿಧಿಯಿಲ್ಲ, ಇದೇ ಆಸ್ಪತ್ರೆಯಲ್ಲಿ ಬಾಂಡ್‌ ಪೂರೈಸಲೇಬೇಕು. ಒಂದ್‌ ವೇಳೆ ಪೂರ್ತಿ ಫೀಸು ಕಟ್ಟಿದ್ರೆ ತಾನೇ ಮೈಸೂರು ಬಿಟ್ಟೋಗಲು ಸಾಧ್ಯವಾಗ್ತಿತ್ತಾ? ಚಿಕ್ಕ ಮಗಳನ್ನು ಕಟ್ಟಿಕೊಂಡು. ಹೆಂಗೋ ಅಮ್ಮನ ಮನೆ ಹತ್ತಿರವಿದೆ, ಮಗಳನ್ನು ನೋಡಿಕೊಳ್ತಾರೆ. ಈ ಕಾರಣದಿಂದಲೇ ಅಲ್ಲವೇ ನಾನು ಓದಿಕೊಂಡು ಆಸ್ಪತ್ರೆಗೆ ಹೋಕ್ಕೊಂಡು ಇರೋಕೆ ಆಗಿರೋದು. ಅಮ್ಮನ ಮನೆ ಬೇರೆ ಕಡೆಯಿದ್ದಿದ್ದರೆ ಇದು ತಾನೇ ಎಲ್ಲಿ ಸಾಧ್ಯವಾಗುತ್ತಿತ್ತು. ರಾಜೀವನ ಮನೆಯವರಂತೂ ಮೊಮ್ಮಗಳನ್ನು ನೋಡಲು ಬರುವುದು ಅಪರೂಪದಲ್ಲಿ ಅಪರೂಪ. ಮಗಳಿಗಿಂಗೆ ಹುಷಾರಿಲ್ಲ ಅಂತ ರಾಜೀವ ಅವರ ಮನೆಯವರಿಗೆ ಹೇಳದೇ ಇರ್ತಾರಾ? ಹೇಳೇ ಇರ್ತಾರೆ. ಆದರೂ ನೋಡಲೊಬ್ಬರೂ ಬಂದಿಲ್ಲ. ಅಥವಾ ಇವರೇ ಹೇಳಿಲ್ಲವೋ? ತಿಳಿದುಕೊಳ್ಳುವುದೇಗೆ? ತಿಳಿದು ಆಗಬೇಕಾಗಿರುವುದಾದರೂ ಏನು.