ಪ್ರೀತಿಯ ಸುಮಲತಾ ಅಂಬರೀಷ್ ರವರಿಗೆ,
ದಶಕಗಳ ಕಾಲದಿಂದ ಜೊತೆಗಿದ್ೲದ ಸಂಗಾತಿಯನ್ನು ಇತ್ತೀಚೆಗಷ್ಟೇ ಕಳೆದುಕೊಂಡಿರುವವರಿಗೆ ಹೇಗಿದ್ದೀರಿ ಅಂತೆಲ್ಲ ಕೇಳಿ ಮುಜುಗರಕ್ಕೊಳಪಡಿಸಬಾರದೆಂಬ ಅರಿವಿದೆ. ಅಂಬರೀಷ್ ಎಂಬ ಚಿತ್ರ ನಟನ ಸಾವು ಅಭಿಮಾನಿ ಜನರ ನೆನಪಿನಿಂದ ದೂರಾಗುವ ಹೊತ್ತಿನಲ್ಲೇ ‘ಸುಮಲತಾ ಅಂಬರೀಷ್' ಎಂಬ ಹೆಸರು ಪತ್ರಿಕೆಗಳಲ್ಲಿ - ಮಾಧ್ಯಮಗಳಲ್ಲಿ ಪದೇ ಪದೇ ಪ್ರಸ್ತಾಪವಾಗುವುದರ ಮೂಲಕ ಅಂಬರೀಷ್ ಎಂಬ ರಾಜಕಾರಣಿ ಮತ್ತೆ ಮತ್ತೆ ನೆನಪಾಗುವಂತೆ ಮಾಡುತ್ತಿದ್ದೀರಿ. ಇನ್ನೇನು ಬರಲಿರುವ ಲೋಕಸಭಾ ಚುನಾವಣೆಗೆ ನಿಲ್ಲಲು ತಾವು ತಯಾರಿ ನಡೆಸುತ್ತಿದ್ದೀರಿ ಎಂಬ ಮಾಹಿತಿ ಪತ್ರಿಕೆಗಳ ಮೂಲಕ ಅರಿವಾಯಿತು.
ಸುತ್ತಿಬಳಸಿ ಮಾತನಾಡುವ ಬದಲು ನೇರವಾಗಿ ಮುಖ್ಯ ವಿಷಯಕ್ಕೇ ಬರುವುದಾದರೆ ಅಂಬರೀಷ್ ರ ಮಡದಿ ಎಂಬುದೊಂದು ಅಂಶದ ಹೊರತಾಗಿ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುವ ಬೇರಾವ ಅರ್ಹತೆ ನಿಮ್ಮಲ್ಲಿದೆ? ಹೌದು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಚುನಾವಣೆಗೆ ಸ್ಪರ್ಧಿಸುವ ಹಕ್ಕಿದೆ, ಸಹಜವಾಗಿಯೇ ಆ ಹಕ್ಕು ನಿಮಗೂ ಇದೆ. ಅಂಬರೀಷ್ ರ ಮಡದಿಯಾಗಿರದೆ ಹೋಗಿದ್ದರೂ ನೀವು ಚುನಾವಣೆಗೆ ಸ್ಪರ್ಧಿಸುವ ಮನಸ್ಸು ಮಾಡುತ್ತಿದ್ದಿರಾ? ಅಂಬರೀಷ್ ಬದುಕಿದ್ದರೆ ಚುನಾವಣೆಗೆ ನೀವು ನಿಲ್ಲುತ್ತಿದ್ದಿರಾ? ಅಂಬರೀಷ್ ಸಾವಿನ ಸೂತಕದ ಸಂತಾಪದ ಲಾಭ ಪಡೆದು ಗೆಲುವು ಪಡೆಯುವುದಷ್ಟೇ ನಿಮ್ಮ ಉದ್ದೇಶವಾಗಿದೆ ಎಂಬ ಭಾವನೆ ಮೂಡಿದರದು ತಪ್ಪೇ?