ಫೆಬ್ರ 14, 2019

ಚೀನಾದ ಏರ್‌ ಫಿಲ್ಟರ್ರೂ ಇಂಡಿಯಾದ ಪ್ರತಿಮೆಗಳೂ…….


ಚೀನಾದ ಏರ್‌ ಫಿಲ್ಟರ್;‌ ಚಿತ್ರಮೂಲ: ಸೌತ್‌ ಚೀನಾ ಪೋಸ್ಟ್.
ಡಾ. ಅಶೋಕ್.‌ ಕೆ. ಆರ್ 
ಮೊನ್ನೆ ಟೀ ಅಂಗಡಿಯ ಬಳಿ ಒಂದಷ್ಟು ಇಂಜಿನಿಯರ್‌ ಹುಡುಗರು ಹರಟುತ್ತಿದ್ದರು.
'ಅಲ್ಲಾ ಗುರು… ಆ ಚೀನಾದ್‌ ನನ್‌ ಮಕ್ಳು ದೊಡ್ ದೊಡ್‌ ಏರ್‌ ಫಿಲ್ಟರ್ರುಗಳನ್ನು ಕಟ್ತಾ ಇದ್ರೆ ಈ ನನ್‌ ಮಕ್ಳು ಅಷ್ಟುದ್ದದ್‌ ಸ್ಟಾಚ್ಯೂ ಕಟ್ಕಂಡ್‌ ಕುಂತವ್ರಲ್ಲ….ʼ
'ಕಾಗೆ ಹಿಕ್ಕೆ ಹಾಕೋಕೆʼ
ನಗು…
'ಹಂಗೂ ಕಟ್ಲೇ ಬೇಕೂಂತಿದ್ರೆ ಕರ್ನಾಟಕದಲ್ಲೇ ಕಟ್ಬೋದಿತ್ತಪ್ಪ….. ಗುಜರಾತ್ಗೇ ಮಾಡ್ಬೇಕಿತ್ತಾ….. ಇಲ್ಲೀನೋರೇನು ವೋಟ್‌ ಹಾಕಿರ್ನಿಲ್ವ…..ʼ
'ಎಲ್ಲಾದ್ರೂ ಸರೀನೇ…ಯಾಕ್‌ ಕಟ್ಬೇಕು….ʼ
ಸ್ಟ್ಯಾಚು ಆಫ್‌ ಯೂನಿಟಿ; 
ಚಿತ್ರಮೂಲ: ಫೈನ್ಯಾನ್ಶಿಯಲ್‌  
ಹೌದಲ್ಲ ನಮ್ಮಲ್ಲೇನು ಮಾಲಿನ್ಯಕ್ಕೆ ಕೊರತೆಯಿದೆಯೇ? ಇಲ್ಲವಲ್ಲ. ದೆಹಲಿ, ಬೆಂಗಳೂರು, ಕೊಲ್ಕೊತ್ತಾ, ಚೆನ್ನೈ, ಮುಂಬೈಯಂತಹ ಪ್ರದೇಶಗಳಲ್ಲಿ ನಮ್ಮೆಲ್ಲರ ಕೊಡುಗೆಯಾಗಿ ಅಪಾರ ಪ್ರಮಾಣದ ಗಾಳಿ ಮಲಿನಗೊಂಡಿದೆ. ಈಗಾಗಲೇ ಅನೇಕರು ಮನೆಗಳಲ್ಲಿ ಏರ್‌ ಫಿಲ್ಟರ್ರುಗಳನ್ನು ಬಳಸಲಾರಂಭಿಸುತ್ತಿದ್ದಾರೆ. ಮನೆಯಿಂದ ಹೊರಬಂದಾಗ, ರಸ್ತೆಯಲ್ಲಡ್ಡಾಡುವಾಗ ಕೂಡ ಏರ್‌ ಫಿಲ್ಟರ್ರುಗಳ ಅವಶ್ಯಕತೆ ಇದ್ದೇ ಇದೆಯಲ್ಲ. ಸಾರ್ವಜನಿಕ ಏರ್‌ ಫಿಲ್ಟರ್ರುಗಳನ್ನು ದೊಡ್ಡ ಮಟ್ಟದಲ್ಲಿ ಸ್ಥಾಪಿಸುವುದು ಅನಿವಾರ್ಯವಾಗುತ್ತಿರುವ ದಿನಗಳಲ್ಲೂ ನಮ್ಮಲ್ಲೇಕೆ ಇನ್ನೂ ವಿಶ್ವದ ದೊಡ್ಡ ಪ್ರತಿಮೆ, ರಾಮನ ದೊಡ್ಡ ಪ್ರತಿಮೆ, ಕಾವೇರಿ ಮಾತೆಯ ದೊಡ್ಡ ಪ್ರತಿಮೆಯ ಬಗ್ಗೆಯೇ ತಲೆಕೆಡಿಸಿಕೊಳ್ಳಲಾಗುತ್ತಿದೆ? ಸಾರ್ವಜನಿಕ ಏರ್‌ ಫಿಲ್ಟರ್ರುಗಳ ಪ್ರಾಯೋಗಿಕ ಬಳಕೆ ನಮ್ಮದೇ ಬೆಂಗಳೂರಿನ ಕಬ್ಬನ್‌ ಪಾರ್ಕಿನಲ್ಲಿ ನಡೆಯುತ್ತಿದೆ, ಅದರ ಗಾತ್ರ ಚೀನಾದ ನೂರು ಮೀಟರ್‌ ಎತ್ತರದ ಏರ್‌ ಫಿಲ್ಟರ್ಗೆ ಹೋಲಿಸಿದರೆ ತುಂಬಾ ತುಂಬಾ ಸಣ್ಣದು. ಪೂರ್ತಿ ಗಾಳಿ ಗಬ್ಬೆದ್ದು ಹೋಗಲಿ ಎಂದು ಕಾಯುತ್ತಿದ್ದೇವಾ? ಅಥವಾ ನಮಗೆ ಪ್ರತಿಮೆಗಳೇ ಮುಖ್ಯವಾ?

ಫೆಬ್ರ 12, 2019

ಉತ್ತರವೆಲ್ಲಿಂದ ತರುವುದು?

ಕು.ಸ.ಮಧುಸೂದನ ರಂಗೇನಹಳ್ಳಿ
ಮೊನ್ನೆಯಿನ್ನೂ ಆ ಊರ ತಿರುವಿನಲ್ಲಿ
ಬೇಟಿಯಾಗಿದ್ದೆವು
ಹಗಲಿನಿಂದ ಒದೆಸಿಕೊಂಡ ಸಂಜೆ
ಮುನಿಸಿಕೊಂಡು
ಮಬ್ಬುಗತ್ತಲ ಜೊತೆ ಜಗಳವಾಡುತ್ತ
ಇರುಳ ಕಪ್ಪನ್ನು ತಾನು ಮೆತ್ತಿಕೊಂಡಿದ್ದಲ್ಲದೆ
ನಮಗೂ ಮೆತ್ತಿ
ಮೌನ ಮೀರಿ ಬರಲಾಗದ ಶಬುದಗಳು

ಫೆಬ್ರ 11, 2019

ಮತ್ತೆ ಮತ್ತೆ ಬೇಕೆನಿಸುತ್ತದೆ

ಪ್ರವೀಣಕುಮಾರ್ ಗೋಣಿ
ಸುಖಾಸುಮ್ಮನೆ ಕಾಲವಲ್ಲದ
ಕಾಲದೊಳಗೆ ಸುರಿದು
ಸುಮ್ಮನಾಗುವ ಮಳೆಯಂತೆ
ವಿನಾಕಾರಣ ಕಂಗಳೊದ್ದೆಯಾಗುವಾಗ
ನಿನ್ನ ಅಂಗೈಯ ಬಿಸಿಯನ್ನ ಕೆನ್ನೆ ಬಯಸುತ್ತದೆ .

ಜಿಗಿ ಜಿಗಿಯೆನಿಸುವ ನಗರವೆನ್ನುವ
ನಾಗಾಲೋಟದ ಜಾತ್ರೆಯು
ಸಾಕೆನಿಸಿ ಒಬ್ಬಂಟಿಯಾಗಿ
ತಿರುಗಿ ಬರಲು ದಾರಿಯೇ ಇರದ
ದುರ್ಗಮ ಕಾಡೊಳಗೆ ಕಳೆದುಹೋಗಿಬಿಡಬೇಕೆನ್ನುವ
ಕಾಂಕ್ಷೆ ಕಾಡಿದಾಗಲೆಲ್ಲ ನನ್ನಯ
ಕಿರುಬೆರಳು ನಿನ್ನ ಹಸ್ತದ ಕೊಂಡಿಗೆ ಕಾತರಿಸುತ್ತದೆ .

ಫೆಬ್ರ 10, 2019

ಒಂದು ಬೊಗಸೆ ಪ್ರೀತಿ - 5

ಡಾ. ಅಶೋಕ್. ಕೆ. ಆರ್
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಮೀನು ಸಾರು ತಿನ್ನದೆ ಮನೆಗೆ ವಾಪಸ್ಸಾದೆ. ತಿನ್ನಮ್ಮ ಎಂದು ಹೇಳುವ ಮನಸ್ಸು ಯಾರಿಗೂ ಇರಲಿಲ್ಲ. ತಿನ್ನುವ ಮನಸ್ಸು ನನಗೂ ಇರಲಿಲ್ಲ. ರಾಜೀವ್ ಹೊರಗೆ ಸಿಗರೇಟ್ ಸುಡಲು ಹೋಗಿದ್ದರು. ಬಾಗಿಲು ತೆರೆದು ಸೋಫಾ ಮೇಲೆ ಮಲಗಿದೆ. ರಾಜೀವ್ ಫೋನಿನಲ್ಲಿ ಯಾರೊಡನೆಯೋ ಖುಷಿಖುಷಿಯಾಗಿ ಮಾತನಾಡುತ್ತಾ ಬರುತ್ತಿದ್ದರು. ಮನೆ ಬಾಗಿಲು ತೆಗೆದಿದ್ದನ್ನು ಕಂಡು ‘ಆಮೇಲೆ ಮಾಡ್ತೀನಿ’ ಅಂತ್ಹೇಳಿ ಫೋನ್ ಕಟ್ ಮಾಡಿದರು. ನನ್ನ ಮುಂದೆ ಅವರು ಮಾತನಾಡದೇ ಇರುವುದು ಅಶ್ವಿನಿಯೊಂದಿಗೆ ಮಾತ್ರ. ಅದು ನನಗೂ ಗೊತ್ತಿತ್ತು. ಎಲ್ಲರ ವಿಷಯಾನೂ ನನ್ನ ಬಳಿ ಹೇಳ್ತಾರೆ ಆದರೆ ಅಶ್ವಿನಿ ವಿಷಯ ಮಾತ್ರ ಯಾವೊತ್ತಿಗೂ ಮಾತನಾಡುವುದಿಲ್ಲ. ಹಂಗಂತ ಅವರ ಮೇಲೆ ಅನುಮಾನವೇನೂ ಇಲ್ಲ ನನಗೆ. ಸ್ವಲ್ಪ ಜಾಸ್ತೀನೇ ಕ್ಲೋಸ್ ಫ್ರೆಂಡ್, ಬಹುಶಃ ನಮ್ಮಿಬ್ಬರ ನಡುವಿನ ಜಗಳವನ್ನೂ ಹೇಳಿಕೊಳ್ಳುವಷ್ಟು ಕ್ಲೋಸ್. ಹಾಗಾಗಿ ನನ್ನ ಮುಂದೆ ಮಾತನಾಡುವುದಿಲ್ಲವೇನೋ ಎಂದುಕೊಂಡು ಸುಮ್ಮನಾಗಿದ್ದೆ. ಕೆಣಕಲು ಹೋಗಿರಲಿಲ್ಲ. ಸೋಫಾದ ಮೇಲೆ ಮಲಗಿ ತಾರಸಿ ನೋಡುತ್ತಿದ್ದವಳನ್ನು ಗಮನಿಸಿಯೇ ಅವರಿಗೆ ವಿಷಯದ ಅರಿವಾಗಿರಬೇಕು.

“ಬಯ್ಯಿಸಿಕೊಂಡು ಬಂದ”

‘ನಿಮಗೇಗ್ ಗೊತ್ತು’

“ನಿಮ್ಮಪ್ಪ ಬಯ್ದಾಗ ಉಪ್ ಅಂತಿರೋ ನಿನ್ನ ಮುಖ ನೋಡಿದ್ರೆ ಗೊತ್ತಾಗಿಬಿಡುತ್ತೆ ಡಾರ್ಲಿಂಗ್. ಯಾವ ವಿಷಯಕ್ಕೆ ಬಯ್ದರು”

‘ಶಶಿ – ಸೋನಿಯಾ ವಿಷಯ’
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಫೆಬ್ರ 3, 2019

ಒಂದು ಬೊಗಸೆ ಪ್ರೀತಿ - 4

ಡಾ. ಅಶೋಕ್. ಕೆ. ಆರ್ . 
ನಾನ್ ಸ್ವಲ್ಪ ಅಪ್ಪನ ಮನೆಗೆ ಹೋಗಿ ಬರ್ತೀನಿ ಅಂದಾಗ ಇವರು ‘ನಾನು ಬರ್ತೀನಿರು. ಒಬ್ಬನೇ ಏನ್ ಮಾಡ್ಲಿ’ ಅಂದ್ರು. ಬೇಡಾರೀ ಸ್ವಲ್ಪೇನೋ ಮಾತನಾಡೋದಿದೆ, ನಾನು ಬಂದು ನಿಮಗೆ ಎಲ್ಲ ವಿವರಿಸಿ ಹೇಳ್ತೀನಿ ಎಂದು ಸುಮ್ಮನಾಗಿಸಿ ಹೊರಟೆ. ಶಶಿ ಏನೂ ಆಗುತ್ತಿಲ್ಲವೆಂಬಂತೆ ಗಡದ್ದಾಗಿ ತಿಂದು ಟಿವಿ ನೋಡುತ್ತ ಕುಳಿತಿದ್ದ.

“ಇದೇನಮ್ಮ. ಏನೂ ಹೇಳದೆ ಬಂದುಬಿಟ್ಟೆ. ರಾಜೀವ್ ಬರಲಿಲ್ಲವಾ?” ಟಿವಿ ನೋಡುತ್ತ ಕುಳಿತಿದ್ದ ಅಮ್ಮ ಕೇಳಿದರು.

‘ಎಲ್ಲೋ ಫ್ರೆಂಡ್ಸ್ ನೋಡೋದಿಕ್ಕೆ ಹೋಗಿದ್ದರು. ಮನೇಲಿ ಒಬ್ಳಿಗೇ ಬೇಜಾರಾಗ್ತಿತ್ತು. ಹೊರಟು ಬಂದೆ’ ಎಂದು ಬಾಯಿಗೆ ಹೊಳೆದ ಸುಳ್ಳನ್ನು ಹೇಳಿದೆ.

“ಸರಿ. ಊಟ ಮಾಡ್ ನಡಿ”

‘ಇಲ್ಲಮ್ಮ. ಊಟ ಆಯ್ತು’

“ಮೀನ್ ಸಾರು ಮಾಡಿದ್ದೆ. ಸ್ವಲ್ಪ ತಿನ್ನು”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಫೆಬ್ರ 1, 2019

ತಮಿಳುನಾಡಿನ ರಾಜಕಾರಣದಲ್ಲಿ ಹೊಸ ಮೈತ್ರಿಕೂಟ ರಚನೆಯಾಗುತ್ತದೆಯೇ?

ಕು.ಸ.ಮಧುಸೂದನರಂಗೇನಹಳ್ಳಿ
ತಮಿಳುನಾಡಿನ ಅಧಿಕಾರರೂಢಪಕ್ಷ ಎ.ಐ.ಎ.ಡಿ.ಎಂ.ಕೆ. ನಿದಾನವಾಗಿ ಬಾಜಪ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟದತ್ತ ಸರಿಯುತ್ತಿರುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿ ಗೋಚರವಾಗುತ್ತಿವೆ. ಬಾಜಪ ಸಹ ಇದಕ್ಕೆ ಪೂರಕವಾಗಿಯೇ ತನ್ನ ರಾಜಕಾರಣದ ದಾಳಗಳನ್ನು ಉರುಳಿಸುತ್ತಿದೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರುವುದು ಕಷ್ಟವೆಂಬುದು ಬಾಜಪಕ್ಕೆ ಮನವರಿಕೆಯಾಗಿದೆ. ಕೆಲತಿಂಗಳ ಹಿಂದೆ ನಡೆದ ಮದ್ಯಪ್ರದೇಶ, ರಾಜಾಸ್ಥಾನ, ಚತ್ತೀಸಗಡ ಮೂರು ರಾಜ್ಯಗಳ ವ್ಯತಿರಿಕ್ತ ಪಲಿತಾಂಶ, ದಿನದಿಂದ ದಿನಕ್ಕೆ ಗಟ್ಟಿಯಾಗುವತ್ತ ನಡೆದಿರುವ ವಿರೋಧಪಕ್ಷಗಳ ಮಹಾಮೈತ್ರಿಯ ಮಾತುಗಳು, ಉತ್ತರಪ್ರದೇಶದಲ್ಲಿ ಬಹುಜನಪಕ್ಷ ಮತ್ತು ಸಮಾಜವಾದಿ ಪಕ್ಷಗಳ ನಡುವೆ ನಡೆದ ಸ್ಥಾನ ಹೊಂದಾಣಿಕೆಯ ಅಂತಿಮ ಪ್ರಕ್ರಿಯೆ, ಕೊಲ್ಕೊತ್ತಾದಲ್ಲಿ ತೃಣಮೂಲ ಕಾಂಗ್ರೇಸ್ಸಿನ ನಾಯಕಿ ಕುಮಾರಿ ಮಮತಾ ಬ್ಯಾನರ್ಜಿ ಆಯೋಜಿಸಿದ್ದ ವಿರೋಧಪಕ್ಷಗಳ ಬೃಹತ್ ರ್ಯಾಲಿ, ಉತ್ತರ ಪ್ರದೇಶದ ರಾಜಕಾರಣಕ್ಕೆ ಕಾಂಗ್ರೇಸ್ಸಿನ ಪ್ರಿಯಾಂಕಗಾಂದಿ ಪ್ರವೇಶಿಸಿರುವುದು ಬಾಜಪ ನಾಯಕರುಗಳ ನಿದ್ದೆಗೆಡಿಸಿರುವುದು ನಿಜ. ಇದರ ಜೊತೆಗೆ ಅದರ ಕೆಲವು ಮಿತ್ರಪಕ್ಷಗಳು ದೂರವಾಗಿವೆ. ಆಂದ್ರಪ್ರದೇಶದ ತೆಲುಗುದೇಶಂ ಹಾಗು ಜಮ್ಮು ಕಾಶ್ಮೀರದ ಪಿ.ಡಿ.ಪಿ. ಪಕ್ಷಗಳು ಈಗಾಗಲೇ ಎನ್.ಡಿ.ಎ. ಮೈತ್ರಿಕೂಟದಿಂದ ಹೊರಬಂದಿವೆ.ಮಹಾರಾಷ್ಟ್ರದಲ್ಲಿ ಶಿವಸೇನೆ ಬಾಜಪದ ವಿರುದ್ದ ಸ್ವತಂತ್ರವಾಗಿ ಸ್ಪರ್ದಿಸುವುದಾಗಿ ಹೇಳಿಕೊಂಡಿದೆ. ಈ ನಡುವೆ ಬಿಹಾರದ ಮುಖ್ಯಮಂತ್ರಿಗಳಾದ ಸಂಯುಕ್ತ ಜನತಾದಳದ ಶ್ರೀ ನಿತೀಶ್ ಕುಮಾರ್ ತ್ರಿವಳಿ ತಲಾಖ್ ಮತ್ತು ಪೌರತ್ವ ಮಸೂದೆಗಳ ಬಗೆಗಿನ ಕೇಂದ್ರ ಸರಕಾರದ ನೀತಿಗಳನ್ನು ನೇರವಾಗಿಯೇ ಟೀಕಿಸುತ್ತಿದ್ದಾರೆ. ಈಗಾಗಲೇ ಬಾಜಪದೊಂದಿಗೆ ಮಾಡಿಕೊಂಡಿರುವ ಸ್ಥಾನ ಹೊಂದಾಣಿಕೆಯ ಕರಾರನ್ನು ಕೊನೆಗಳಿಗೆಯಲ್ಲಿ ಅವರು ಮುರಿದರೂ ಅಚ್ಚರಿಯೇನೂ ಇಲ್ಲ.

ನೋಡೊಮ್ಮೆ ನಿನ್ನೊಳಗೇ

 ಪ್ರವೀಣಕುಮಾರ್ .ಗೋಣಿ
ಮನಸು ಬೇಸತ್ತು ಹೋದಾಗ
ತನುವ ಸತುವೆಲ್ಲ
ಆವಿಯಾದಂತಾಗಿ ಬಳಲಿದಾಗ
ಬತ್ತದಂತಿರುವ ಉಲ್ಲಾಸದ
ನಿನ್ನದೇ ಅಂತರ್ಯವನ್ನೊಮ್ಮೆ ಇಣುಕಿ ನೋಡು .

ದಾರಿಗಳೇ ಕಾಣದಾಗಿ
ಕಣ್ಣಿಗೆ ಕಗ್ಗತ್ತಲಾವರಿಸಿ ನಿಂತು
ಸಾಕೆಂದು ಕೈಚೆಲ್ಲಿ ಕೂತಾಗ
ತಗ್ಗಿಸಿದ ನೆತ್ತಿ ಇಟ್ಟುಕೊಂಡೆ
ಒಂದು ಕ್ಷಣಕ್ಕೆ ಅಂತರ್ಯವನ್ನೊಮ್ಮೆ
ಇಣುಕಿ ನೋಡು .

ಜನ 31, 2019

ಒಂದಿಷ್ಟು ಸಾಲುಗಳು.

ಶೀಲಾ ಭಂಡಾರ್ಕರ್.
ದೀಪ ಹಚ್ಚಿಡಬೇಕು
ಕನಸುಗಳನರಸಲು,
ಕತ್ತಲೆಯೇ ಬೇಕು
ನೆನಪುಗಳ ಕರಗಿಸಲು!

ಸಂಬಂದ ಯಾವುದೇ ಇರಲಿ
ಮನಸು ಬಯಸುವುದು
ನಿರಾಳತೆಯ ಮಾತ್ರ!

ಪಶ್ಚಿಮ ಪೂರ್ವದತ್ತ ಮುಖ ಮಾಡಿದಾಗ

ಕು.ಸ.ಮಧುಸೂದನರಂಗೇನಹಳ್ಳಿ
ಬೆಳಕಿನಲಿ ಬೆತ್ತಲಾಗಲು ನಾಚಿದವರೆಲ್ಲ
ಕಾಯುತ್ತಿದ್ದಾರೆ ಕತ್ತಲಿಗಾಗಿ
ಕಟ್ಟಿದ ಕೋಟೆಗಳ ಕೆಡವಿ
ಎತ್ತರಿಸಿದ್ದ ಗೋಡೆಗಳ ಒಡೆದು
ಇದ್ದಬದ್ದಬಾಗಿಲು ಕಿಟಿಕಿಗಳನ್ನು ತೆಗೆದೆಸೆದರು
ಬೆಳಗುತ್ತಿದ್ದ ಸೂರ್ಯನಿಗೆ ಠಾರು ಬಳಿದರು

ಜನ 27, 2019

ನಾನೂ-ನೀನೂ! ಎಂಬೋ ಎರಡು ಕವಿತೆಗಳು

ಕು.ಸ.ಮಧುಸೂದನರಂಗೇನಹಳ್ಳಿ
ಕವಿತೆ ಒಂದು-ನನ್ನದು!
ನಮ್ಮವಾಗಬೇಕಿದ್ದ ಅದೆಷ್ಟೋ ಇರುಳುಗಳು
ಅರಳದೆಯೇ ಇತಿಹಾಸವಾದವು
ಅರಸಿಹೊರಟ ಬೆಳಕಿನ ಕಿರಣಗಳು
ಬೆಳಗದೆಯೇ ಒರಗಿದವು.

ನಮ್ಮದೆಂದುಕೊಂಡ ಅದೆಷ್ಟೋ ಹಗಲುಗಳು
ಬೆಳಗಾಗುವ ಮೊದಲೇ ನೇಣಿಗೇರಿದವು
ಈಗ ಹುಡುಕಿ ಹೊರಟಿಹೆವು ನನ್ನ ನೀನು
ನಿನ್ನ ನಾನೂ
ಆರಿಹೋದ ದೊಂದಿ ಹಿಡಿದು
ಬೆಳಕಾಗಿ ಬರುವ ಮಿಂಚುಹುಳುಗಳ ನಂಬಿ
ನಡುವೆ ಹರಡಿದ ಕತ್ತಲ
ತೊಲಗಿಸುವಂತಹ ಮಾತೊಂದನಾಡಲು
ಕಾಯುತ್ತಿದ್ದೇವೆ