ಜನ 27, 2019

ನಾನೂ-ನೀನೂ! ಎಂಬೋ ಎರಡು ಕವಿತೆಗಳು

ಕು.ಸ.ಮಧುಸೂದನರಂಗೇನಹಳ್ಳಿ
ಕವಿತೆ ಒಂದು-ನನ್ನದು!
ನಮ್ಮವಾಗಬೇಕಿದ್ದ ಅದೆಷ್ಟೋ ಇರುಳುಗಳು
ಅರಳದೆಯೇ ಇತಿಹಾಸವಾದವು
ಅರಸಿಹೊರಟ ಬೆಳಕಿನ ಕಿರಣಗಳು
ಬೆಳಗದೆಯೇ ಒರಗಿದವು.

ನಮ್ಮದೆಂದುಕೊಂಡ ಅದೆಷ್ಟೋ ಹಗಲುಗಳು
ಬೆಳಗಾಗುವ ಮೊದಲೇ ನೇಣಿಗೇರಿದವು
ಈಗ ಹುಡುಕಿ ಹೊರಟಿಹೆವು ನನ್ನ ನೀನು
ನಿನ್ನ ನಾನೂ
ಆರಿಹೋದ ದೊಂದಿ ಹಿಡಿದು
ಬೆಳಕಾಗಿ ಬರುವ ಮಿಂಚುಹುಳುಗಳ ನಂಬಿ
ನಡುವೆ ಹರಡಿದ ಕತ್ತಲ
ತೊಲಗಿಸುವಂತಹ ಮಾತೊಂದನಾಡಲು
ಕಾಯುತ್ತಿದ್ದೇವೆ

ಒಂದು ಬೊಗಸೆ ಪ್ರೀತಿ - 3

ondu bogase preethi
ಡಾ. ಅಶೋಕ್. ಕೆ. ಆರ್. 
ಕಾದಂಬರಿಯ ಹಿಂದಿನ ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 
ಡ್ಯುಟಿಯ ನಡುವೆ ಬಿಡುವಾದಾಗ ಕಂಪ್ಯೂಟರ್ ಆನ್ ಮಾಡಿ ಮೇಲ್ ತೆರೆದೆ. ಕ್ರೆಡಿಟ್ ಕಾರ್ಡ ತಗೊಳ್ಳಿ, ಸೈಟು ತಗೊಳ್ಳಿ, ಲೋನ್ ತಗೊಳ್ಳಿ, ನಿಮಗೆ ಇಪ್ಪತ್ತು ಕೋಟಿ ಡಾಲರ್ ಬಹುಮಾನ ಬಂದಿದೆ ತಕ್ಷಣ ಈ ಮೇಲಿಗೆ ಪ್ರತಿಕ್ರಿಯಿಸಿ – ಇಂತವೇ ಬೇಡದ ಮೇಲುಗಳು ತುಂಬಿತ್ತು. ಲಾಗ್ ಔಟ್ ಮಾಡಿ ಫೇಸ್ ಬುಕ್ ತೆರೆದೆ. ಪಿಯುಸಿಯಲ್ಲಿ ದಡ್ಡರೆಂದು ಬಯ್ಯಿಸಿಕೊಂಡ ಎಷ್ಟೋ ಜನ ವಿದೇಶದಲ್ಲಿ ಕೆಲಸ ಮಾಡುತ್ತಿರುವ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಮೆಡಿಕಲ್ಲಿನಲ್ಲಿ ವೇಸ್ಟ್ ಬಾಡಿಗಳೆನ್ನಿಸಿಕೊಂಡವರು ಒಳ್ಳೊಳ್ಳೆ ಪಿ.ಜಿ ಸೀಟ್ ತೆಗೆದುಕೊಂಡಿದ್ದಾರೆ. ಎಲ್ಲಾ ಕಡೆ ಬುದ್ಧಿವಂತೆ ಅನ್ನಿಸಿಕೊಂಡ ನಾನು ಇದ್ಯಾವುದೋ ಕಂಪನಿ ಆಸ್ಪತ್ರೆಯಲ್ಲಿ ದುಡೀತಾ ಇದ್ದೀನಿ. ನನ್ನೀ ಪರಿಸ್ಥಿತಿಗೆ ನಾನೇ ಅಲ್ವಾ ಕಾರಣ ಎಂದು ಸ್ವಲ್ಪ ಸಮಾಧಾನ ಮಾಡಿಕೊಂಡೆ. ಈ ಫೇಸ್ ಬುಕ್ಕಿಗೂ ಗ್ಯಾಸ್ಟ್ರೈಟಿಸ್ಸಿಗೂ ಏನಾದ್ರೂ ಸಂಬಂಧವಿರಬಹುದಲ್ವಾ ಅನ್ನಿಸಿತು. ಕ್ಲಾಸ್ ಮೇಟ್ಸು, ನೆಂಟ್ರು, ಫ್ರೆಂಡ್ಸು ಅವರವರ ಸಾಧನೆಗಳ ಬಗ್ಗೆ ವಿದೇಶಿ ಟ್ರಿಪ್ಪುಗಳ ಬಗ್ಗೆ ಕೊಚ್ಕೊಂಡಿದ್ದನ್ನು ನೋಡಿದಷ್ಟೂ ಹೊಟ್ಟೆಉರಿ ಜಾಸ್ತಿಯಾಗುತ್ತೆ. ಗೆಳೆಯರ ಸಾಧನೆ ಬಗ್ಗೆ ಖುಷಿಯಾಗೋದು ಅಪರೂಪ. ಲೈಕ್ ಒತ್ತಿ ಕಮೆಂಟ್ ಕೊಟ್ಟು ಹೊಟ್ಟೆ ಉರ್ಕೊಳ್ಳೋದು ಸಾಮಾನ್ಯವಾಗಿಬಿಟ್ಟಿದೆ! ಹಂಗೇ ಫೇಸ್ಬುಕ್ ಸ್ಕ್ರಾಲ್ ಮಾಡ್ತಿರಬೇಕಾದರೆ “If you are not a marxist at 20 then you don’t have heart; if you are a marxist at 25 then you don’t have brain” ಎಂಬ ಸ್ಟೇಟಸ್ ಕಾಣಿಸಿತು. ಹಾಕಿದ್ದು ಸಾಗರ್, ಸಾಗರ್ ವಿಶಾಲ್. ಮೂರು ದಿನದ ಹಿಂದೆ ಅವನು ಕಳುಹಿಸಿದ್ದ ಫ್ರೆಂಡ್ ರಿಕ್ವೆಸ್ಟ್ ನೆನಪಾಯಿತು. ಹುಟ್ಟಿದ ಹಬ್ಬಕ್ಕೆ ವಿಷ್ ಮಾಡಲಿಲ್ಲ ಎನ್ನುವುದೂ ನೆನಪಾಯಿತು. ಇವತ್ತಾದರೂ ಇವನಿಗೊಂದು ‘ಹಾಯ್’ ಹೇಳೋಣ ಎಂದುಕೊಂಡು ಮೆಸೇಜು ಟೈಪಿಸಿ ಕಳುಹಿಸಿದೆ. ಎರಡು ನಿಮಿಷದ ನಂತರ ‘ಹಾಯ್' ಎಂದು ಕಳುಹಿಸಿದ. ಏನಾದ್ರೂ ಕೇಳ್ತಾನೇನೋ ಅವನೇ ಎಂದು ಸುಮ್ಮನಾದೆ. ಏನೂ ಕೇಳಲಿಲ್ಲ. ಇರಲಿ ನಾನೇ ಕೇಳ್ತೀನಿ ಎಂದುಕೊಂಡು ‘ಹೇಗಿದ್ದೀಯ’ ಎಂದು ಕಳುಹಿಸಿದೆ. ಅಷ್ಟರಲ್ಲಿ ರೋಗಿಯೊಬ್ಬರು ಬಂದರು. ಅವರನ್ನು ನೋಡಿ ಕಳುಹಿಸಿ ಫೇಸ್ ಬುಕ್ ನೋಡಿದೆ. ಏನೂ ಉತ್ತರ ಬಂದಿರಲಿಲ್ಲ. ಸಾಗರ್ ಆಫ್ ಲೈನ್ ಆಗಿದ್ದ. ಮೆಸೇಜು ಮಾಡಲು ಇಷ್ಟವಿರಲಿಲ್ಲವೋ ಏನೋ. ನಾನಾಗೇ ಮೆಸೇಜು ಕಳುಹಿಸಬಾರದಿತ್ತು. ‘ಡಿಸ್ಟರ್ಬ್ ಆಗಿದ್ರೆ ಸಾರಿ’ ಎಂದು ಮೆಸೇಜಿಸಿದೆ. ಲಾಗ್ ಔಟ್ ಮಾಡಿದೆ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಜನ 20, 2019

ಹೆಜ್ಜೆ

ನವೀನ ಸುರೇಶ್
ಅರೆಘಳಿಗೆಯೂ ನಿಲ್ಲದೆ
ಬಿರಬಿರನೆ ಹೋದ ಬಿರುಸಾದ
ಅವನ ಹೆಜ್ಜೆಗುರುತಿಗೆ
ಮರೆಗುಳಿಗೆ ಹಾಕಿ ಮುಚ್ಚಿದ್ದೇನೆ
ಹೋದರೆ ಹೋಗಲಿ ಬಿಡು
ನಿಡುಸುಯ್ದು
ಮೌನಕ್ಕೆ ಶರಣಾಗಿ
ಕತ್ತಲೆಯ ಗರ್ಭದೊಳಗೆ
ಏಕಾಂತ ತಬ್ಬಿ
ಮಲಗುತ್ತೇನೆ

ಒಂದು ಬೊಗಸೆ ಪ್ರೀತಿ - 2

ಡಾ. ಅಶೋಕ್. ಕೆ. ಅರ್. 
ಒಂದು ಬೊಗಸೆ ಪ್ರೀತಿ ಭಾಗ ೧ ಅನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 
ಸತ್ಯನಾರಾಯಣ ಸ್ವಾಮಿ ಪೂಜೆಯ ಸಂಭ್ರಮಗಳನ್ನೆಲ್ಲ ಮುಗಿಸಿ ಮನೆ ತಲುಪುವಷ್ಟರಲ್ಲಿ ಸಂಜೆ ಆರಾಗಿತ್ತು. ದೇಹಕ್ಕೇನು ದಣಿವಾಗಿರಲಿಲ್ಲ; ಅಡುಗೆ ಮಾಡೋದು, ಬಡಿಸೋದು ರೇಷ್ಮೆ ಸೀರೆ ಉಟ್ಟು ಮನೆಯಲ್ಲೆಲ್ಲಾ ಸುತ್ತಾಡಿ ಬಂದವರನ್ನೆಲ್ಲಾ ನಗುನಗುತ್ತಾ ಮಾತನಾಡಿಸುವ ಕೆಲಸವೆಂದರೆ ನನಗೆ ತುಂಬಾ ಇಷ್ಟ. ಸುಸ್ತೆಲ್ಲ ಮನಸ್ಸಿಗೆ. ಗಂಡನಿಗೂ ಅದು ಗೊತ್ತಾಗಿತ್ತು. ಮನೆಗೆ ಬಂದವಳೇ ಸೀರೆ ಬಿಚ್ಚಿ ಲಂಗ ಬ್ಲೌಸಿನಲ್ಲೇ ಹಾಸಿಗೆಯ ಮೇಲೆ ಅಡ್ಡಾದೆ. ಕಿವಿಗೆ ಹಿಯರ್ ಫೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ ಮಲಗಿದೆ. ಒಂದು ಘಂಟೆ ಅದೂ ಇದೂ ಓದ್ಕೊಂಡು ಟಿವಿ ನೋಡ್ಕೊಂಡು ಇದ್ದ ರಾಜಿ. ಘಂಟೆ ಏಳಾದರೂ ನಾನು ಎದ್ದು ಬರದಿದ್ದುದನ್ನು ನೋಡಿ ರೂಮಿಗೆ ಬಂದು ಪಕ್ಕದಲ್ಲಿ ಮಲಗಿದ. ನಿದ್ರಿಸುವವಳಂತೆ ಬೋರಲು ಬಿದ್ದು ಮಲಗಿದ್ದ ನನ್ನ ನಟನೆ ಕೂಡ ಅವನಿಗೆ ಗೊತ್ತು. ಸೊಂಟದ ಮೇಲೆ ಕಚಗುಳಿಯಿಟ್ಟ; ಅವನ ಕೈಹಿಡಿದು ಪಕ್ಕಕ್ಕೆಸೆದೆ. ಎಡಗಿವಿಯ ಹಿಯರ್ ಫೋನ್ ತೆಗೆದ.

“ಕೋಪ ಇನ್ನೂ ಕಡಿಮೆಯಾಗಲಿಲ್ವ"

‘ಕೋಪ ಯಾಕೆ. ಹಾಗೇನೂ ಇಲ್ಲ. ಸುಸ್ತು ಅಷ್ಟೇ’

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಜನ 14, 2019

ಬಾಜಪದ ಬಲ ಕುಗ್ಗಿಸಬಲ್ಲ ಮೈತ್ರಿ

ಕು.ಸ.ಮಧುಸೂದನ ರಂಗೇನಹಳ್ಳಿ
ಇಂಡಿಯಾದ ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯಲ್ಲಿ ಶಾಶ್ವತ ಶತ್ರುಗಳಾಗಲಿ, ಶಾಶ್ವತ ಮಿತ್ರರುಗಳಾಗಲಿ ಇರಲು ಸಾದ್ಯವಿಲ್ಲವೆಂಬ ಮಾತು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗುವ ಮುನ್ನವೇ ಉತ್ತರ ಪ್ರದೇಶದ ಎರಡು ಬಲಿಷ್ಠ ಪ್ರಾದೇಶಿಕ ಪಕ್ಷಗಳಾದ ಶ್ರೀಅಖಿಲೇಶಯಾದವರ ಸಮಾಜವಾದಿ ಪಕ್ಷ ಮತ್ತು ಕುಮಾರಿ ಮಾಯಾವತಿಯವರ ಬಹುಜನ ಪಕ್ಷ ಚುನಾವಣಾಪೂರ್ವ ಮೈತ್ರಿಯನ್ನು ಮಾಡಿಕೊಂಡಿರುವುದೇ ಇದಕ್ಕೆ ಸಾಕ್ಷಿ! ತೊಂಭತ್ತರ ದಶಕದಲ್ಲಿ ಮಿತ್ರರಾಗಿದ್ದ ಈ ಎರಡೂ ಪಕ್ಷಗಳು ತದನಂತರ ವ್ಯಕ್ತಿಗತ ಪ್ರತಿಷ್ಠೆಯ ಪ್ರತಿಷ್ಠಾಪನೆಯಿಂದ ದೂರವಾಗಿ, ಸರದಿಯಂತೆ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತ ಬಂದಿದ್ದವು. ಆದರೆ 2017ರ ಹೊತ್ತಿಗೆ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ವರ್ಚಸ್ಸು ಮತ್ತು ರಾಮಮಂದಿರದ ವಿಷಯಗಳಿಂದಾಗಿ ಬಾಜಪ ಈ ಎರಡೂ ಪಕ್ಷಗಳನ್ನು ಸೋಲಿಸಿ ಉತ್ತರ ಪ್ರದೇಶದ ಗದ್ದುಗೆ ಹಿಡಿಯಿತು. ಆ ಸೋಲಿನ ಕಾರಣಗಳನ್ನು ಅರ್ಥಮಾಡಿಕೊಂಡಂತೆ ಇದೀಗ ಬಾಜಪವನ್ನು ಸೋಲಿಸಲೇಬೇಕೆಂಬ ಕಾರಣದಿಂದ, ಸುಮಾರು ಎರಡು ದಶಕಗಳ ತಮ್ಮ ವೈಮನಸ್ಸನ್ನು ಹಿನ್ನೆಲೆಗೆ ನೂಕಿ ಮೈತ್ರಿಕೂಟವನ್ನು ರಚಿಸಿಕೊಂಡಿವೆ.

ಜನ 13, 2019

ಒಂದು ಬೊಗಸೆ ಪ್ರೀತಿ - 1

ಡಾ. ಅಶೋಕ್. ಕೆ. ಅರ್. 
ಅವತ್ತು ಏಪ್ರಿಲ್ ಹದಿನಾಲ್ಕು. ನನ್ನ ಹುಟ್ಟಿದ ದಿನ. ಗಂಡ ಬೆಳಿಗ್ಗೆ ಬೆಳಿಗ್ಗೆ ಕೇಕ್ ತಂದಿದ್ದ, ಜೊತೆಗೆ ಹನುಮಂತು ಹೋಟೆಲ್ಲಿನಿಂದ ನಾಟಿ ಕೋಳಿ ಪಲಾವ್. ಒಂದು ಚಿಕ್ಕ ತುಂಡು ಕೇಕ್ ತಿಂದು ಒಂದೂವರೆ ಪ್ಲೇಟ್ ನಾಟಿ ಕೋಳಿ ಪಲಾವ್ ಮುಗಿಸಿ ಉಳಿದ ಕೇಕನ್ನು ಫ್ರಿಜ್ಜಿನಲ್ಲಿಟ್ಟು ಆಸ್ಪತ್ರೆಗೆ ಹೊರಟೆ. ಅವತ್ತು ಬೆಳಗಿನ ಡ್ಯೂಟಿಯಿತ್ತು. ಭಾನುವಾರವಾದ್ದರಿಂದ ಹೆಚ್ಚೇನೂ ಕೆಲಸವಿರಲಿಲ್ಲ. ಮೈಸೂರಿನ ಆರ್.ಬಿ.ಐ ಒಳಗಿರುವ ಪುಟ್ಟ ಆಸ್ಪತ್ರೆಯದು. ಆರ್.ಬಿ.ಐ ನಿವಾಸಿಗಳಷ್ಟೇ ಬರುತ್ತಿದ್ದುದು. ಶಿಫ್ಟಿನ ಮೇಲೆ ಮೂರು ಜನ ವೈದ್ಯರು ಕೆಲಸ ಮಾಡುತ್ತಿದ್ದೆವು. ಭಾನುವಾರ ಕೆಲಸ ಮಾಡುವುದೆಂದರೆ ಯಮಹಿಂಸೆ. ಸಾಮಾನ್ಯವಾಗಿ ನಾನು ಭಾನುವಾರ ರಜೆ ತೆಗೆದುಕೊಂಡುಬಿಡುತ್ತಿದ್ದೆ. ನಾಳೆ ಅತ್ತೆ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಇಟ್ಕೊಂಡಿದ್ದಾರೆ, ಹಾಗಾಗಿ ಭಾನುವಾರ ಬಂದಿದ್ದೆ. ಹನ್ನೊಂದರವರೆಗೆ ಒಂದಷ್ಟು ರೋಗಿಗಳಿದ್ದರು. ಮಾಮೂಲಿ ಜ್ವರ, ನೆಗಡಿ, ಕೆಮ್ಮು ಇತ್ಯಾದಿ. ಹನ್ನೊಂದರಿಂದ ಹನ್ನೆರಡರವರೆಗೆ ಯಾರೂ ಬರಲಿಲ್ಲ. ಹುಟ್ಟುಹಬ್ಬದ ಶುಭಾಷಯಗಳ ಮೆಸೇಜುಗಳು ಮೊಬೈಲು ತುಂಬಿಸಿತ್ತು. ಅವರಿಗೆಲ್ಲಾ ಒಂದು ಧನ್ಯವಾದ ಹೇಳಿದೆ. ತೀರ ಫೋನು ಮಾಡಿ ಶುಭಾಶಯ ಹೇಳುವಂತಹ ಗೆಳೆಯರ್ಯಾರು ಇರಲಿಲ್ಲ. ಅಪ್ಪ, ಅಮ್ಮ, ತಮ್ಮ ಬೆಳಿಗ್ಗೆಯೇ ಫೋನ್ ಮಾಡಿದ್ದರು. ಮಧ್ಯಾಹ್ನ ಅಲ್ಲಿಗೇ ಊಟಕ್ಕೆ ಹೋಗಬೇಕು. ಊಟ ಮುಗಿಸಿ ಅತ್ತೆ ಮನೆಗೆ. ಮೆಸೇಜು ಕಳುಹಿಸಿದವರಲ್ಲಿ ಅನೇಕರು ನಮ್ಮ ಮೇನ್ ಆಸ್ಪತ್ರೆಯವರು. ಒಂದು ವರುಷ ಅಲ್ಲಿ ಕೆಲಸ ಮಾಡಿದ್ದಾಗ ಪರಿಚಿತರಾಗಿದ್ದವರು. ಮೆಸೇಜು ಕಳುಹಿಸಿದ್ದೆಲ್ಲ ಮುಗಿದ ಮೇಲೆ ಆನ್ ಆಗಿದ್ದ ಕಂಪ್ಯೂಟರಿನಲ್ಲಿ ಒಪೆರಾ ಬ್ರೌಸರ್ ತೆರೆದು ಫೇಸ್ ಬುಕ್ ಪುಟವನ್ನು ತೆರೆದೆ. ಒಂದು ಮೂವತ್ತು ಜನ ಶುಭಾಶಕೋರಿದ್ದರು! ಬಹುತೇಕರು ಎಂಬಿಬಿಎಸ್ ಓದುವಾಗ ಸಹಪಾಠಿಗಳಾಗಿದ್ದವರು. ಲೈಕ್ ಒತ್ತಿ, ಥ್ಯಾಂಕ್ ಯೂ ಎಂದು ಕಮೆಂಟಿಸಿದೆ. ಶುಭಾಶಕೋರಿದವರಲ್ಲಿ ಅನೇಕರೊಡನೆ ಕಾಲೇಜು ದಿನಗಳಲ್ಲಿ ಮಾತನಾಡಿಯೇ ಇರಲಿಲ್ಲ. ನಿಟ್ಟುಸಿರುಬಿಟ್ಟು ಇನ್ನೇನು ಫೇಸ್ ಬುಕ್ಕಿನಿಂದ ಲಾಗ್ ಔಟ್ ಆಗಬೇಕೆಂದುಕೊಳ್ಳುವಷ್ಟರಲ್ಲಿ ಪರದೆಯ ಎಡಭಾಗದಲ್ಲಿ Sagar ವಿಶಾಲ sent you a friend request ಎಂದು ಕಾಣಿಸಿತು. ಯಾರಿದು ಸಾಗರ್ ವಿಶಾಲ್? ನನ್ನ ಎಂಬಿಬಿಎಸ್ ಕ್ಲಾಸ್ ಮೇಟ್ ಅಲ್ಲಾ ತಾನೇ? ಎಂದು ಸಂಶಯಿಸುತ್ತಾ ಆ ಹೆಸರಿನ ಮೇಲೆ ಕ್ಲಿಕ್ಕಿಸಿದೆ. ಓದಿದ್ದು ಜೆಎಸ್ಎಸ್ ಊರು ಬೆಂಗಳೂರು ಎಂದಿತ್ತು. ಓ ಅವನೇ ಇರಬೇಕು ಎಂದುಕೊಂಡೆ; ಆದರೆ ಅವನ ಹೆಸರು ಬರೀ ಸಾಗರ್ ಅಲ್ಲವಾ? ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ಕಿಸಿದೆ. ಸಮುದ್ರ ತೀರದಲ್ಲಿ ಅಲೆಗಳಿಗೆ ಮುಖವೊಡ್ಡಿ ಕುಳಿತಿದ್ದಾನೆ, ಎದುರಿಗಿನ ಸೂರ್ಯದೋಯ ನೋಡುತ್ತ. ಇಂಥಹ ಫೋಟೋನ ಪ್ರೊಫೈಲಿಗೆ ಹಾಕಿಕೊಂಡಿದ್ದಾನೆಂದರೆ ಇದು ಅವನೇ ಎಂದು ನಗು ಬಂತು. ಮನಸಾರೆ ನಕ್ಕೆ. ‘ರಿಕ್ವೆಸ್ಟ್ ಕಳುಹಿಸಿದ್ದಕ್ಕೆ ಥ್ಯಾಂಕ್ಸ್’ ಎಂದು ಮೆಸೇಜ್ ಟೈಪು ಮಾಡಿದೆ; ಕಳುಹಿಸಲಿಲ್ಲ. ಹುಟ್ಟಿದ ಹಬ್ಬಕ್ಕೆ ಶುಭಾಷಯ ತಿಳಿಸುತ್ತಾನೇನೋ ನೋಡೋಣ ಅಂದುಕೊಂಡು ಟೈಪಿಸಿದ್ದನ್ನು ಅಳಿಸಿಹಾಕಿದೆ. ಕಳೆದ ವಾರದಿಂದ ಚಿಕನ್ ಗುನ್ಯಾದಿಂದ ನರಳುತ್ತಿದ್ದ ರೋಗಿಯೊಬ್ಬರು ಒಳಬಂದರು. ಮೆಸೇಜು ಕಳುಹಿಸುತ್ತಾನೇನೋ ನೋಡೋಣ ಅಂದುಕೊಂಡು ಲಾಗ್ ಔಟ್ ಮಾಡದೆ ರೋಗಿಯ ಕಡೆ ಗಮನಕೊಟ್ಟೆ. ಎರಡು ಘಂಟೆಯವರೆಗೆ ರೋಗಿಗಳು ಬರುತ್ತಲೇ ಇದ್ದರು. ಭಾನುವಾರ ಡಾಕ್ಟರ್ ಇರ್ತಾರಲ್ಲ ಸುಮ್ನೆ ತೋರಿಸಿಕೊಂಡು ಹೋಗೋಣ ಎಂದು ಬಂದವರೇ ಹೆಚ್ಚು. ಎರಡು ಘಂಟೆಗೆ ಬರಬೇಕಿದ್ದ ಡಾ. ರವಿ ಎರಡೂ ಕಾಲಾದರೂ ಬರಲಿಲ್ಲ. ಈ ರವೀದು ಯಾವಾಗ್ಲೂ ಇದೇ ಗೋಳು. ಬರೋದು ಲೇಟು ಹೋಗೋದು ಬೇಗ. ನಾವೇನಾದರೂ ಐದು ನಿಮಿಷ ಲೇಟ್ ಬಂದುಬಿಟ್ರೆ ಆಕಾಶ ಭೂಮಿ ಒಂದು ಮಾಡ್ಬಿಡ್ತಾನೆ. ಹೆಚ್ ಆರ್ ಮ್ಯಾನೇಜರ್ರಿಗೆ ಫೋನು ಮಾಡಿ ದೂರು ನೀಡಿಬಿಡ್ತಾನೆ. ಇವತ್ತು ನಾನೂ ದೂರು ಕೊಟ್ಟುಬಿಡಬೇಕು ಎಂದುಕೊಂಡು ಕಂಪ್ಯೂಟರ್ ನೋಡಿದೆ. ಸಾಗರ್ ಆನ್ ಲೈನ್ ಇದ್ದ. ಯಾವ ಮೆಸೇಜೂ ಕಳುಹಿಸಿರಲಿಲ್ಲ. ಲಾಗ್ ಔಟ್ ಮಾಡಿದೆ. ಡಾ. ರವಿ ಒಳಬಂದ. “ಸಾರಿ ಧರಣಿ. ಸ್ವಲ್ಪ ಲೇಟ್ ಆಗೋಯ್ತು. ಮೆನಿ ಮೆನಿ ಹ್ಯಾಪಿ ರಿಟರ್ನ್ಸ್ ಆಫ್ ದಿ ಡೇ. ಇದನ್ನು ತರೋದಿಕ್ಕೆ ಲೇಟ್ ಆಗಿದ್ದು” ಎಂದ್ಹೇಳಿ ಹೂವಿನ ಬೊಕ್ಕೆ ಕೊಟ್ಟ. ಇವತ್ತು ಕಂಪ್ಲೇಂಟ್ ಮಾಡೋದು ಬೇಡ ಎಂದುಕೊಳ್ಳುತ್ತಾ ‘ಥ್ಯಾಂಕ್ಸ್ ರವಿ ಸರ್’ ಎಂದ್ಹೇಳಿ ಬೊಕ್ಕೆ ತೆಗೆದುಕೊಂಡು ಹೊರಟೆ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಎನಿತು ದಕ್ಯಾವು ?

ಪ್ರವೀಣಕುಮಾರ್ ಗೋಣಿ
ಅರ್ಪಣೆ ಈಡಿಯಾಗಿ
ಇರದಿರಲು ಅರಿವಿಗೆ 
ಬಂದೀತೆ ಅವನಿರುವಿನ ಅನುಭಾವ ?

ಅಣು ಅಣುವು ಬಿಸಿಗೆ 
ತನುವೊಡ್ಡಿ ಕೊಳ್ಳದಿರಲು 
ಕೆನೆಗಟ್ಟಿ ಹೋದೀತೇ ಹಾಲು ?

ಜನ 5, 2019

ಒಂದು ಬೊಗಸೆ ಪ್ರೀತಿ: ಪ್ರವೇಶ.

ಡಾ. ಅಶೋಕ್. ಕೆ. ಆರ್
“ಉಹ್ಞೂ. ಅವಳೆಡೆಗೆ ನನ್ನಲ್ಲಿರುವ ಪ್ರೀತಿ, ಪ್ರೇಮದ ಭಾವನೆಗಳನ್ನು ಸುಳ್ಳೆಂದು ಹೇಳಲಾರೆ, ತಿರಸ್ಕರಿಸಲಾರೆ, ಪದಗಳನ್ನು ಸುಂದರವಾಗಿ ಜೋಡಿಸಿ – ಪೋಣಿಸಿ ಭಾವನೆಗಳನ್ನು ತೇಲಿಬಿಡಲಾರೆ. ಹೌದು, ಅವಳೆಂದರೆ ನನಗಿಷ್ಟ, ಅವಳ ಮಾತು, ನಗು, ವ್ಯಕ್ತಿತ್ವ, ಬುದ್ಧಿಮತ್ತೆ, ಯೋಚನಾಶಕ್ತಿ, ಆತ್ಮ, ದೇಹ ಎಲ್ಲವೂ ನನಗಿಷ್ಟ. ಆದರೆ ನಮ್ಮಿಬ್ಬರ ಮನಸ್ಸಿನ ಹಸಿವು ಮತ್ತೊಬ್ಬರಿಗೆ ನೋವುಂಟುಮಾಡುವ ಹಸಿವಾಗಿಬಿಟ್ಟರೆ ನನ್ನ, ಅವಳ, ಅವನ ಜೀವನದ ನೆಮ್ಮದಿ ಹಾಳಾಗುವುದು. ಒಪ್ತೀನಿ, ಅವಳನ್ನು ಸಂಪೂರ್ಣವಾಗಿ ಮರೆಯುವುದು ಅಸಾಧ್ಯ, ಮನಸ್ಸಿನ ಮೂಲೆ ಮೂಲೆಯಲ್ಲೂ ವ್ಯಾಪಿಸಿರುವ, ಆಳಕ್ಕೆ ಇಳಿದಿರುವ ಅವಳನ್ನು ಹೊರದಬ್ಬುವುದು ಕಷ್ಟದ ಕೆಲಸ ಮಾತ್ರವಲ್ಲ ಅಸಾಧ್ಯವೂ ಹೌದು. ಆದರದು ಸಾಧುವಾದ, ಅನಿವಾರ್ಯವಾದ ಕೆಲಸ. ಅವನಿಗೋಸ್ಕರ ನನಗೆ ಮತ್ತು ಅವಳಿಗೆ ನೋವಾಗುವುದಾದರೆ ಆಗಲಿ. ನಮ್ಮಿಬ್ಬರಿಗೂ ಆ ನೋವನ್ನು ತಡೆದುಕೊಳ್ಳುವ ಶಕ್ತಿಯಿದೆ ಎಂಬುದು ಉತ್ಪ್ರೇಕ್ಷೆಯ ಮಾತಾಗದಿರಲಿ ಎನ್ನುವುದೇ ನನ್ನ ಆಸೆ ಆಶಯ.

ಇಷ್ಟು ದಿನದ ಗೊಂದಲಗಳಿಗೆ ತೆರೆಬೀಳಿಸಲು ಇವತ್ತಿನಿಂದಾದರೂ ಕಾರ್ಯ ಶುರುವಾಗಲಿ. ಮನಸ್ಸಿನ ಹಸಿವು ನೀಗಿಸಿದ ಈ ನಾಲ್ಕು ತಿಂಗಳು ನಿಜಕ್ಕೂ ಮರೆಯಲಾಗದಂಥಹುದು. ಮನಸ್ಸಿನ ಹಸಿವನ್ನು ಮೀರಿ ನಿಲ್ಲುವುದು ಮೇಲ್ನೋಟಕ್ಕೆ ತ್ರಾಸದಾಯಕವೆಂಬ ಭಾವನೆ ಇದೆಯಾದರೂ ಜೀವನದ ವ್ಯಾಪ್ತಿ ಈ ಮನಸ್ಸಿನ ಹಸಿವು, ಪ್ರೀತಿ, ಪ್ರೇಮದಿಂದಾಚೆಗೂ ವ್ಯಾಪಿಸಿದೆ ಎಂಬ ಸತ್ಯ (ಕೊನೇಪಕ್ಷ ನನಗೆ ಅರಿವಾಗಿರುವ ಸತ್ಯ) ನನ್ನನ್ನು ಈ ಒಂದು ಹೆಸರಿಡದ, ಹೆಸರಿಡಲಾಗದ ನಿಷ್ಕಾಮ, ಶುದ್ಧ ಸಂಬಂಧದಿಂದ ಹೊರಬರಲು ಸಹಕರಿಸುತ್ತದೆಂಬ ನಂಬಿಕೆಯಿದೆ. Soulmate ಎಂಬ ಈ ಆತ್ಮದ ಗೆಳೆತನದಿಂದ ಹೊರಬರಲು ನನಗೆ ಅತ್ಯಗತ್ಯವಾಗಿ ಬೇಕಾಗಿರುವ ಶಕ್ತಿ ನನ್ನ ಮನಸ್ಸಿನಾಳದಿಂದ ಉದ್ಭವಿಸಿ ಆತ್ಮ ದೇಹ ಮನಸ್ಸಿನಲ್ಲೆಲ್ಲ ಸಂಚರಿಸಲೆಂದು ಆಶಿಸುತ್ತೇನೆ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಜನ 3, 2019

ಅದೆಷ್ಟೋ ಸಲ !

ಪ್ರವೀಣಕುಮಾರ್ ಗೋಣಿ
ನಿಗಿ ನಿಗಿ ನಿಡುಸೊಯ್ಯುವ 
ಸಂಕಟಕ್ಕೆ ಮೌನವೊಂದೇ 
ಸಾಂತ್ವನದ ಸಾನಿಧ್ಯ 
ಕೊಡುವಾಗ ಮತ್ಯಾಕೆ 
ಬೇಕಾಗಿತು ಮಾತಿನಾ ಗೊಡವೆ ?

ಎದೆಯ ಹೊಲದ ಮೇಲೆ 
ನರಳಿಕೆಯ ಗರಿಕೆಯೇ
ಪೊಗಸ್ತಾಗಿ ಹಬ್ಬಿರಲು 
ಹರುಷದ ಹೂವರಳಿಸುವ 
ಕಾಯಕವದು ಅದೆಷ್ಟು ಯಾತನೆಯದು 
ಬಲ್ಲವರಷ್ಟೇ ಬಲ್ಲರು ! 

ಡಿಸೆಂ 25, 2018

ಆಧುನಿಕತೆಯಲ್ಲಿ ಹೆಣ್ಣಿನ ಸ್ಥಾನಮಾನ

ಪದ್ಮಜಾಜೋಯ್ಸ್ ದರಲಗೋಡು
ಆಧುನಿಕತೆಯಲ್ಲಿ ಹೆಣ್ಣಿನ ಸ್ಥಾನಮಾನ ಅಂದರೇ ಆಚಾರ ವಿಚಾರಗಳನ್ನು ದೂಷಿಸುವುದಲ್ಲ, ಸ಼ಂಪ್ರದಾಯದ ಸಂಕೋಲೆಯ ಧಿಕ್ಕಾರವಲ್ಲ, ಪದ್ಧತಿಗಳ ರದ್ಧತಿಯಲ್ಲ, ಉಡುಗೆ ತೊಡುಗೆಗಳ ಬದಲಾವಣೆಯೂ ಅಲ್ಲ, ರೀತಿನೀತಿಗಳ ಮಿತಿ ಮೀರುವುದೂ ಅಲ್ಲ ಸಾಂಸಾರಿಕ ಕೌಟುಂಬಿಕ ಚೌಕಟ್ಟುಗಳ ನಿರಾಕರಣೆಯೂ ಅಲ್ಲ.....

ಇಂದು ಆಧುನಿಕತೆ ಮಹಿಳೆಯರಿಗೂ ಅತ್ಯಗತ್ಯ , ಅದು ಸಕಾರಣವಾಗಿದ್ದಲ್ಲಿ ಹಾಗೂ ಸಂಧರ್ಭಗಳ ಸಮಯೋಚಿತತೆಯಲ್ಲಿ, ಅಂದರೇ ನಮ್ಮ ಆಲೋಚನೆಯಲ್ಲಿ ಆಧುನಿಕತೆ ಇರಲೀ ಆಚಾರ ವಿಚಾರಗಳ ನಿರಾಕರಣೆಯಲ್ಲಲ್ಲ....

ಇಂದು ಮಹಿಳೆಯೊಬ್ಬಳು ಮೌಢ್ಯವನ್ನು ಮೀರಿ ಹೊಸ್ತಿಲಾಚೆ ಕಾಲಿಟ್ಟು ಶಿಕ್ಷಣದ ವಿಚಾರಪರತೆಯ ಜ್ಞಾನದ ವಿಜ್ಞಾನದ ಬೆನ್ನೇರಿ

ಭಾಗಶಃ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರ ಮೀರಿ ಯಶೋಗಾಥೆ ಹಾಡುವಂತಹ ಆಧುನಿಕತೆಯ ಅಳವಡಿಕೆಯಲ್ಲಿ ಮಹಿಳೆಯ ಪಾತ್ರ ಅಮೋಘವಾಗಿದೆ,

ಈ ಮೊದಲು ಮಹಿಳೆಯ ಜೀವನವು ಅವಳ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿತ್ತು, ಮಕ್ಕಳನ್ನು ಹೆರುವುದು ಅವುಗಳ ಲಾಲನೆ ಪಾಲನೆ, ಕುಟುಂಬ ನಿರ್ವಹಣೆ, ಮಾತ್ರ ಅವಳ ಕೆಲಸವಾಗಿತ್ತು, ಈಗ ಕಾಲ ಬದಲಾಗುತ್ತಿದೆ ಮಹಿಳೆಯರ ಅರಿವಿನ ಪರಿ ವಿಸ್ತರಿಸುತ್ತಿದೆ, ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದಾಳೆ. ಅವಳ ಈ ಸಾಧನೆಗೆ ಸಹಾಯಕವಾದ ಶಿಕ್ಷಣ ಮಾಧ್ಯಮಗಳಿಗೆ ಧನ್ಯವಾಧ ಅರ್ಪಿಸಬೇಕಿದೆ,