ಕು.ಸ.ಮಧುಸೂದನರಂಗೇನಹಳ್ಳಿ
ಎಲ್ಲ ನಿರೀಕ್ಷೆಗಳನ್ನೂ ಮೀರಿ ಕೆ.ಚಂದ್ರಶೇಖರ್ ರಾವ್ ಅವರ ಟಿ.ಆರ್.ಎಸ್. ತೆಲಂಗಾಣ ವಿದಾನಸಭಾ ಚುನಾವಣೆಗಳಲ್ಲಿ ಅಭೂತಪೂರ್ವ ಜಯಗಳಿಸಿದೆ.ಚುನಾವಣೆ ನಡೆದ 119ಸ್ಥಾನಗಳ ಪೈಕಿ 88ಸ್ಥಾನಗಳನ್ನು ಗೆಲ್ಲುವ ಮೂಲಕ ವಿರೋಧಪಕ್ಷಗಳು ದೂಳಿಪಟವಾಗುವಂತೆ ಮಾಡಿದೆ.ಟಿ.ಆರ್.ಎಸ್.ಗೆಲ್ಲಬಹುದೆಂದು ಭವಿಷ್ಯ ನುಡಿದಿದ್ದವರಿಗೂ ಅಚ್ಚರಿಯಾಗುವಂತೆ ಅದು ಜಯಗಳಿಸಿರುವುದರ ಹಿಂದೆ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರರಾವ್ ಅವರ ಚುನಾವಣಾ ತಂತ್ರಗಾರಿಕೆ ಕೆಲಸ ಮಾಡಿದೆ.
ಹಾಗೆ ನೋಡಿದರೆ ತೆಲಂಗಾಣ ವಿದಾನಸಭಾ ಚುನಾವಣೆಗಳು 2019ರ ಮೇ ತಿಂಗಳ ಲೋಕಸಭಾ ಚುನಾವಣೆಗಳ ಜೊತೆಗೆ ನಡೆಯಬೇಕಿತ್ತು. ಆದರೆ ಲೋಕಸಭಾ ಚುನಾವಣೆಗಳಲ್ಲಿ ಬೀಸಬಹುದಾದ ಪ್ರದಾನಮಂತ್ರಿ ಶ್ರೀನರೇಂದ್ರ ಮೋದಿಯವರ ಅಲೆಯಿಂದ ತಪ್ಪಿಸಿಕೊಳ್ಳಲೆಂಬಂತೆ ಕೆ.ಸಿ.ಆರ್. ಅವಧಿಗೆ ಮುನ್ನವೇ ವಿದಾನಸಭೆ ವಿಸರ್ಜಿಸಿ ರಾಜ್ಯಕ್ಕೆ ಪ್ರತ್ಯೇಕವಾಗಿ ಚುನಾವಣೆ ನಡೆಯುವಂತೆ ನೋಡಿಕೊಂಡರು. ಅವರ ಈ ನಿರ್ದಾರವನ್ನು ವಿರೋಧಪಕ್ಷಗಳು ಟೀಕಿಸಿ, ರಾಜಕೀಯ ಪಂಡಿತರು ಅವರ ಈ ಲೆಕ್ಕಾಚಾರ ಉಲ್ಟಾ ಹೊಡೆಯಲಿದೆಯೆಂದು ನಕ್ಕಿದ್ದರು. ಆದರೆ ಅಂತಿಮವಾಗಿ ಕೆ.ಸಿ.ರಾವ್ ಗೆಲುವಿನ ನಗೆ ಬೀರಿದ್ದಾರೆ. ಆದರೆ ಇಂತಹ ಅಭೂತಪೂರ್ವ ಗೆಲುವು ತಮ್ಮದಾಗಬಹುದೆಂದು ಸ್ವತ: ಅವರೇ ನಿರೀಕ್ಷಿಸಿದ್ದರೆಂದು ಹೇಳುವುದು ತಪ್ಪಾಗುತ್ತದೆ.