ಕು.ಸ.ಮಧುಸೂದನರಂಗೇನಹಳ್ಳಿ
ಮತೀಯವಾದಿ ಬಾಜಪವನ್ನು ಅಧಿಕಾರದಿಂದ ದೂರ ಇಡುವ ಏಕೈಕ ಕಾರಣದಿಂದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳಗಳು ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿ ಮೊದಲ ಬಜೆಟ್ಟನ್ನೂ ಮಂಡಿಸಿಯಾಗಿದೆ.104 ಸ್ಥಾನಗಳನ್ನು ಗೆದ್ದೂ ಅದಿಕಾರ ಹಿಡಿಯಲಾಗದ ಹತಾಶೆಯಲ್ಲಿರುವ ಬಾಜಪ ಈ ಮೈತ್ರಿಯನ್ನು ಅಪವಿತ್ರ ಮೈತ್ರಿ ಎಂದು ಕರೆಯುತ್ತಿದೆ. ಹಾಗೆ ನೋಡಿದರೆ ಚುನಾವಣೋತ್ತರ ಮೈತ್ರಿಗಳ ಹಿಂದಿರುವುದು ಕೇವಲ ಅಧಿಕಾರದಾಹ ಮಾತ್ರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ!. 2006ರಲ್ಲಿ ಕಾಂಗ್ರೆಸ್ ಜೊತೆ ಸೇರಿ ಸರಕಾರ ರಚಿಸಿದ್ದ ಜನತಾದಳ ಮದ್ಯರಾತ್ರಿಯ ರಕ್ತರಹಿತ ಕ್ರಾಂತಿಯಲ್ಲಿ(ಅವತ್ತಿನ ಮಟ್ಟಿಗೆ ಕುಮಾರಸ್ವಾಮಿ ಮತ್ತು ಅವರ ಗೆಳೆಯರ ದೃಷ್ಠಿಯಲ್ಲಿ ಅದು ಕ್ರಾಂತಿಯೇ ಆಗಿತ್ತೆನ್ನಬಹುದು) ಬಾಜಪದ ಜೊತೆ ಸೇರಿ ಅಧಿಕಾರ ಹಿಡಿದಿದ್ದು ಸಹ ಅಪವಿತ್ರ ಮೈತ್ರಿಯ ಫಲವೇ ಆಗಿತ್ತೆಂಬುದನ್ನು ಬಾಜಪದ ನಾಯಕರುಗಳು ಮರೆತಂತಿದೆ. ಶಕ್ತಿ ರಾಜಕಾರಣವೇ ವಿಜೃಂಭಿಸುತ್ತಿರುವ ಇವತ್ತಿನೀ ಕಾಲಘಟ್ಟದಲ್ಲಿ ಪವಿತ್ರ ಎನ್ನುವ ಶಬ್ದ ತನ್ನ ನಿಜಾರ್ಥ ಕಳೆದುಕೊಂಡಾಗಿದೆ. ಕಳೆದ ವರ್ಷ ಗೋವಾದಲ್ಲಿ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ಸ್ವತ: ಬಾಜಪವೇ ಇಂತಹ ಹಲವು ಅಪವಿತ್ರ ಮೈತ್ರಿಗಳ ರೂವಾರಿಯಾಗಿದ್ದನ್ನು ಬಾಜಪದ ನಾಯಕರಿಗೆ ನಾವೇನು ನೆನಪು ಮಾಡಿಕೊಡುವ ಅಗತ್ಯವಿಲ್ಲ.
ಇರಲಿ, ಈ ಮೈತ್ರಿ ಇಲ್ಲಿಗೆ ಮುಗಿಯುವುದಿಲ್ಲ, ಬದಲಿಗೆ ಮುಂದಿನ 2019ರ ಲೋಕಸಭಾ ಚುನಾವಣೆಗಳಿಗೂ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ಸರಕಾರದಲ್ಲಿ ಆಂತರಿಕವಾಗಿ ಮತ್ತು ಬಹಿರಂಗವಾಗಿ ಭಿನ್ನಮತೀಯ ಚಟುವಟಿಕೆಗಳು ನಡೆಯ ತೊಡಗಿದ್ದು ಸರಕಾರದ ಸ್ಥಿರತೆಯ ಬಗ್ಗೆಯೇ ಅನುಮಾನ ಹುಟ್ಟಿದೆ. ಸಚಿವ ಸ್ಥಾನ ಹಂಚಿಕೆ, ಖಾತಿಗಳ ಹಂಚಿಕೆ, ನಿಗಮ ಮಂಡಳಿಗಳಿಗೆ ಮಾಡಬೇಕಿರುವ ನೇಮಕಾತಿಗಳು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ. ಬಹುಶ: ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ದಿಗೆ ಕಂಟಕವಾಗಬಹುದಾದಷ್ಟು ಭಿನ್ನಮತೀಯ ಚಟುವಟಿಕೆಗಳು ತಲೆ ಎತ್ತುವುದರಲ್ಲಿ ಸಂಶಯವಿಲ್ಲ.