ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕಾಂಗ್ರೆಸ್ಸಿಗೆ ಬೇಕಾಗಿರುವುದು ಮ್ಯಾನೇಜರುಗಳು ಮಾತ್ರ, ನಾಯಕರುಗಳಲ್ಲ! ಮಾಜಿಮುಖ್ಯಮಂತ್ರಿಗಳಾದ ಶ್ರೀಎಸ್.ಎಂ.ಕೃಷ್ಣಾ ಎವರು ಹೇಳಿದ ಈ ಮಾತು ಕಾಂಗ್ರೆಸ್ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಅನ್ವಯವಾಗುತ್ತದೆಯೊ ಬಿಡುತ್ತದೆಯೊ ಗೊತ್ತಿಲ್ಲ. ಆದರೆ ಜನರಲ್ ಆಗಿ ನೋಡಿದರೆ ಈ ಮಾತು ಬಹುತೇಕ ಎಲ್ಲ ಪಕ್ಷಗಳಿಗೂ ಅನ್ವಯವಾಗುತ್ತದೆ. ಯಾಕೆಂದರೆ ಇವತ್ತು ಒಂದು ರಾಜಕೀಯ ಪಕ್ಷವನ್ನು ನಡೆಸಲು ನಾಯಕನಾಗಲಿ, ಸಿದ್ದಾಂತವಾಗಲಿ ಬೇಕಾಗಿರುವಂತೆ ಕಾಣುತ್ತಿಲ್ಲ. ಯಾಕೆಂದರೆ ನಾಯಕನೊಬ್ಬನ ಮರ್ಜಿಯಿಂದ, ಸಿದ್ದಾಂತಗಳ ಹಂಗಿನಿಂದಲೇ ಒಂದು ರಾಜಕೀಯ ಪಕ್ಷವೊಂದನ್ನು ಮುನ್ನಡೆಸುವ ಕಾಲ ಬದಲಾಗಿದೆ. ಈಗೇನಿದ್ದರೂ ಪಕ್ಷದ ಕಛೇರಿ ಮತ್ತು ಅದರ ದೈನಂದಿನ ಖರ್ಚುವೆಚ್ಚಗಳನ್ನು ನೋಡಿಕೊಳ್ಳಬಲ್ಲ, ಜಾತಿಜಾತಿಗಳ ಸಮಾವೇಶವನ್ನು ಸಂಘಟಿಸಬಲ್ಲ, ಚುನಾವಣಾ ಸಮಯದಲ್ಲಿ ಬೃಹತ್ ರ್ಯಾಲಿಗಳನ್ನು ಆಯೋಜಿಸಬಲ್ಲ, ಸ್ಪರ್ದಿಸಿದ ಅಭ್ಯರ್ಥಿಗಳ ಖರ್ಚುವೆಚ್ಚಗಳನ್ನು ಅಗತ್ಯವಿರುವ ಹಣವನ್ನು ಅಥವಾ ಪಕ್ಷದ ನಿದಿಯನ್ನು ಕ್ರೋಡೀಕರಿಸುವ ಮತ್ತು ವಿತರಿಸುವ ಸಾಮಥ್ರ್ಯವುಳ್ಳ ವ್ಯಕ್ತಿಯೊಬ್ಬ ಸಹಜವಾಗಿಯೇ ಪಕ್ಷದ ನಾಯಕನಾಗಿ ಬಿಡುವುದು ಇವತ್ತಿನ ರಾಜಕಾರಣದ ಶೈಲಿಯಾಗಿದೆ. ಇಂಡಿಯಾದ ರಾಜಕೀಯದಲ್ಲಿ ಇದಕ್ಕೆ ಹಲವು ಉದಾಹರಣೆಗಳನ್ನು ಕೊಡಬಹುದಾಗಿದೆ. ತೀರಾ ಇತ್ತೀಚಿನದೆ ಒಂದು ನಿದರ್ಶನವೆಂದರೆ, ತಮಿಳುನಾಡಿನ ರಾಜಕೀಯದಲ್ಲಿ ಶ್ರೀಮತಿ ಶಶಿಕಲಾ ನಟರಾಜನ್ ವಹಿಸಿದ ಪಾತ್ರ!