ಜನ 14, 2016

ಚಿತ್ರ ವಿಮರ್ಶೆ: The Day i became a woman

Dr Ashok K R
ಮಾರ್ಜಿಯೆ ಮೆಶ್ಕಿನ್ ನಿರ್ದೇಶನದ ಪರ್ಷಿಯನ್ ಭಾಷೆಯ ಚಿತ್ರ ‘ದಿ ಡೇ ಐ ಬಿಕೇಮ್ ಎ ವಿಮೆನ್’ (The day I became a woman). ಇರಾನ್ ದೇಶದ ಈ ಚಿತ್ರ ಹೆಣ್ಣಿನ ಸ್ವಂತಿಕೆಯನ್ನು ಕಿತ್ತುಕೊಳ್ಳಬಯಸುವ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಜೀವಂತಿಕೆ ಮೆರೆಯುವ ಮೂರು ನಾಯಕಿಯರ ಕತೆ. ಪುಟ್ಟ ಹುಡುಗಿ ಹವಾ, ಮದುವೆಯಾಗಿರುವ ಯುವತಿ ಆಹೂ ಮತ್ತು ಸಾಯಲು ಸಿದ್ಧವಾಗಿರುವ ವಯಸ್ಸಿನ ಹೂರಾ ಚಿತ್ರದ ನಾಯಕಿಯರು. ಮೂವರಿಗೂ ಚಿತ್ರದಲ್ಲಿ ನೇರಾನೇರ ಸಂಬಂಧವಿಲ್ಲ, ಕನ್ನಡದ ಕಥಾಸಂಗಮದಂತೆ ಮೂರು ಭಿನ್ನ ಕತೆಗಳಿವೆ; ಇಲ್ಲಿ ಮೂರು ಕತೆಗಳ ಆಶಯದಲ್ಲಿ ಸಾಮ್ಯತೆಯಿದೆ, ಚಿತ್ರದ ಕೊನೆಗೆ ಮೂರೂ ಕತೆಗಳು ಒಂದುಗೂಡಲು ಪ್ರಯತ್ನಿಸುತ್ತವೆ.

ಬಾಲಕಿ ಹವಾಗೊಬ್ಬ ಕರಿಯ ಅನಾಥ ಗೆಳೆಯ. ದಿನಾ ಬರುವಂತೆ ಅವತ್ತೂ ಅವನು ಹವಾಳ ಮನೆಯ ಬಳಿಗೆ ಬರುತ್ತಾನೆ. ಅವತ್ತವಳಿಗೆ ಒಂಭತ್ತು ವರ್ಷ ತುಂಬುತ್ತಿರುತ್ತದೆ. ದೊಡ್ಡವಳಾದ (ವಯಸ್ಸಿನಲ್ಲಿ) ಹುಡುಗಿ ಹುಡುಗರೊಟ್ಟಿಗೆ ಆಡುವಂತಿಲ್ಲ. ತಲೆಯ ಮೇಲೊಂದು ಹೊದಿಕೆ ಹಾಕಿಕೊಳ್ಳಬೇಕು. ಹವಾಳ ಅಮ್ಮ ಮತ್ತು ಅಜ್ಜಿ ಹೊಸ ಹೊದಿಕೆಯನ್ನು ತಯಾರು ಮಾಡುವುದರಲ್ಲಿ ನಿರತರು. ಗೆಳೆಯನೊಟ್ಟಿಗೆ ಆಡುವುದರ ಹೊರತಾಗಿ ಮತ್ತೇನೂ ಯೋಚನೆ ಬಾರದ ಹುಡುಗಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಈ ಹೊಸ ರೀತಿ ನೀತಿಗಳೆಲ್ಲ ಹನ್ನೆರಡು ಘಂಟೆಯ ನಂತರ ಎಂದು ತಿಳಿದುಕೊಂಡು ಅಲ್ಲಿಯವರೆಗಾದರೂ ಹೋಗಿ ಆಡಿ ಬರುತ್ತೇನೆ ಕೊನೆಯ ಸಲ ಎಂದು ಬೇಡಿಕೊಂಡು ತಲೆಯ ಮೇಲೊಂದು ಬಟ್ಟೆ ಹಾಕಿಕೊಂಡು ನೆರಳಿನ ಮೂಲಕ ಸಮಯ ತಿಳಿಯಲು ಕಡ್ಡಿಯೊಂದನ್ನು ತೆಗೆದುಕೊಂಡು ಕರಿಯ ಗೆಳೆಯನ ಮನೆಯ ಕಡೆಗೆ ಓಡಿ ಹೋಗುತ್ತಾಳೆ. ಕರಿಯ ಗೆಳೆಯನೀಗ ಬಂಧಿತನಾಗಿದ್ದಾನೆ! ಅವನ ಅಕ್ಕ ಓದಿಕೋ ಎಂದವನನ್ನು ಕೂಡಿ ಹಾಕಿರುತ್ತಾಳೆ. ಕಿಟಕಿಯ ಮೂಲಕ ಇಬ್ಬರ ಸಂಭಾಷಣೆ, ಚಾಕಲೇಟಿನ ವಿನಿಮಯ ನಡೆಯುತ್ತದೆ. ಕಿಟಕಿಯ ಒಂದು ಬದಿಯಲ್ಲಿ ಅವನು, ಮತ್ತೊಂದು ಬದಿಯಲ್ಲಿ ಇವಳು. ಒಂದು ಕಡೆಯಿಂದ ನೋಡಿದರೆ ಹುಡುಗ ಬಂಧಿತನಂತೆ ಕಾಣುತ್ತಾನೆ ಮತ್ತೊಂದು ಕಡೆಯಿಂದ ಹುಡುಗಿ ಬಂಧಿತಳಂತೆ ಕಾಣುತ್ತಾಳೆ. ಪುರುಷ ಪ್ರಧಾನ ವ್ಯವಸ್ಥೆ ಇಬ್ಬರನ್ನೂ ಬಂಧಿಸಿದೆಯಲ್ಲವೇ?

ಮದುವೆಯಾಗಿರುವ ಯುವತಿ ಆಹೂಗೆ ಸೈಕಲ್ ರೇಸಿನಲ್ಲಿ ಭಾಗವಹಿಸಿ ಜಯಗಳಿಸುವ ಆಸೆ. ರೇಸಿನಲ್ಲಿ ಭಾಗವಹಿಸುವುದು ಗಂಡನಿಗೆ ಇಷ್ಟವಿಲ್ಲ. ಕಣ್ತಪ್ಪಿಸಿ ಬಂದು ರೇಸಿನಲ್ಲಿ ಉತ್ಸುಕತೆಯಿಂದ ಸೈಕಲ್ಲು ತುಳಿಯುತ್ತಿರುತ್ತಾಳೆ. ಕುದುರೆಯೇರಿ ಇವಳನ್ನು ಹುಡುಕಿ ಬರುವ ಗಂಡ ರೇಸು ನಿಲ್ಲಿಸಿ ನಡಿ ಮನೆಗೆ ಎಂದು ಬೆದರಿಸುತ್ತಾನೆ. ಆಹೂ ನಿಲ್ಲುವುದಿಲ್ಲ. ವಾಪಸ್ಸು ಹೋದ ಗಂಡ ಹಿರೀಕರನ್ನು ಕರೆತರುತ್ತಾನೆ. ಆಹೂ ನಿಲ್ಲುವುದಿಲ್ಲ. ವಿಚ್ಛೇದನ ಕೊಟ್ಟುಬಿಡ್ತೀನಿ ಎಂಬ ಬೆದರಿಕೆಗೂ ಜಗ್ಗುವುದಿಲ್ಲ. ವಾಪಸ್ಸು ಹೋದ ಗಂಡ ಮೌಲ್ವಿಯನ್ನು ಕರೆತಂದು ವಿಚ್ಛೇದನ ಕೊಟ್ಟುಬಿಡುತ್ತಾನೆ. ಆಹೂಳ ಸೈಕಲ್ಲಿನ ವೇಗ ತಗ್ಗುವುದಿಲ್ಲ. ಆಹೂಳ ತವರು ಮನೆಯವರು ಬಂದು ಹೀಯಾಳಿಸುತ್ತಾರೆ, ರೇಸು ನಿಲ್ಲಿಸಿ ನಡಿ ಮನೆಗೆ ಎನ್ನುತ್ತಾರೆ. ಆಹೂ ನಿಲ್ಲುವುದಿಲ್ಲ. ಕೊನೆಗವಳ ಅಣ್ಣಂದಿರು ಬಂದು ಗೆಲುವಿನ ಹಂತದಲ್ಲಿದ್ದ ಆಹೂಳ ಸೈಕಲ್ ತಡೆದು ಹೊಡೆಯಲಾರಂಭಿಸುತ್ತಾರೆ. ಕ್ಯಾಮೆರಾ ನಿಧಾನಕ್ಕೆ ಹಿಂದಾಗುತ್ತದೆ. ಆಹೂ ಸೈಕಲ್ ರೇಸಿನಿಂದ ಹಿಂದೆ ಸರಿದುಬಿಟ್ಟಳಾ? 

ಹಣ್ಣು ಹಣ್ಣು ಮುದುಕಿ ಹೂರಾಳ ಪ್ರತೀ ಬೆರಳಿನಲ್ಲೂ ಬಣ್ಣ ಬಣ್ಣದ ಬಟ್ಟೆಯ ತುಂಡು. ಪ್ರತೀ ತುಂಡು ಖರೀದಿಸಬೇಕಾದ ಒಂದೊಂದು ವಸ್ತುವಿನ ಸಂಕೇತ. ಯಾವ ತುಂಡು ಯಾವುದಕ್ಕೆ ಎಂದು ಮರೆತುಹೋದರೆ ಎಂಬ ಕಾರಣಕ್ಕೆ ಮತ್ತೊಂದು ಚೀಟಿ! ಯೌವನದಲ್ಲಿ ಆಸೆಪಟ್ಟ, ಖರೀದಿಸಲಾಗದ ವಸ್ತುಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಸಾಮಾನು ಸಾಗಿಸುವ ಬಡ ಹುಡುಗರ ನೆರವಿನಿಂದ ಸಮುದ್ರ ತೀರಕ್ಕೆ ಬಂದು ಸಾಮಾನುಗಳನ್ನೆಲ್ಲ ಸ್ವಚ್ಛಂದ ಆಕಾಶದ ಕೆಳಗೆ ಜೋಡಿಸಿ ಸಂತಸಪಡುತ್ತಾಳೆ ಹೂರ. ಕರಿ ಹುಡುಗನೊಬ್ಬನನ್ನು ದತ್ತು ತೆಗೆದಿಕೊಳ್ತೀನಿ ಬರ್ತೀಯಾ ನನ್ನ ಜೊತೆಗೆ ಈ ಸಾಮಾನುಗಳೆಲ್ಲ ನಿನ್ನದೇ ಆಗುತ್ತೆ ಎಂದು ಕೇಳುತ್ತಾಳೆ, ಇಲ್ಲಪ್ಪ ನನಗೆ ಅಮ್ಮ ಇದ್ದಾಳೆ ಎಂದು ನಿರಾಕರಿಸುತ್ತಾನೆ ಹುಡುಗ. ಅಫ್ಘನ್ ಬಾಲಕನೊಬ್ಬನಿಗೆ ಅದೇ ಪ್ರಶ್ನೆ ಕೇಳುತ್ತಾಳೆ, ಅವನೂ ಇಲ್ಲವೆನ್ನುತ್ತಾನೆ. ಆ ಸಾಮಾನುಗಳನ್ನೆಲ್ಲ ಖಾಲಿ ಆಯಿಲ್ ಡ್ರಮ್ಮಿನಿಂದ ಮಾಡಿದ ದಿಡೀರ್ ದೋಣಿಗಳ ಮೇಲೆ ಹುಡುಗರು ಹೇರುತ್ತಿದ್ದಾಗ ಉಳಿದೆರಡು ಕತೆಗಳು ಸಂಧಿಸುತ್ತವೆ. ಮಧ್ಯಾಹ್ನವಾಗಿದ್ದರಿಂದ ‘ದೊಡ್ಡವಳಾಗಿ’ ಬಿಟ್ಟಿರುವ ಹವಾ ತಲೆಹೊದಿಕೆಯೊಂದಿಗೆ ಅಮ್ಮನ ಕೈಹಿಡಿದು ಹೂರಾಳನ್ನು ಆಸೆ ಕಂಗಳಿಂದ ನೋಡುತ್ತಿದ್ದಾಳೆ. ಸೈಕಲ್ ರೇಸಿನಲ್ಲಿ ಭಾಗವಹಿಸಿದ್ದ ಇಬ್ಬರು ಯುವತಿಯರು, ಇಷ್ಟೆಲ್ಲ ಆಸ್ತಿ ನಮ್ಮ ಬಳಿ ಇದ್ದಿದ್ದರೆ ಮದುವೆಯಾಗಿಬಿಡುತ್ತಿತ್ತು ಎಂದು ಹೂರಾಳ ಬಳಿ ನಗುತ್ತಾ ಹೇಳುತ್ತಾರೆ. ಮಾತಿನ ನಡುವೆ ಆಹೂಳ ವಿಷಯ ಪ್ರಸ್ತಾಪವಾಗುತ್ತದೆ. ಒಬ್ಬ ಯುವತಿ ಆಹೂ ರೇಸನ್ನು ಪೂರ್ಣಗೊಳಿಸಿದಳು ಎಂದರೆ ಮತ್ತೊಬ್ಬಳು ಇಲ್ಲ ವಾಪಸ್ಸು ಕರೆದುಕೊಂಡು ಹೋಗಿಬಿಟ್ಟರು ಎಂದಳು. ಆಹೂ ರೇಸನ್ನು ಪೂರೈಸಿದಳಾ? ದಿಡೀರ್ ದೋಣಿಗಳ ಮೇಲೆ ಕುಳಿತ ಹೂರಾ ಸಮುದ್ರದ ಮೇಲೆ ತೇಲುತ್ತಾ ಚೂರು ಚೂರೇ ಮುಂದೆ ಸಾಗುತ್ತಾಳೆ, ಹುಯ್ದಾಡುತ್ತಾಳೆ…..

ಓ! ಮೂರು ಕತೆಗಳಲ್ಲೂ ಪ್ರಮುಖವಾದ ಪಾತ್ರವೊಂದರ ಬಗ್ಗೆ ಹೇಳುವುದನ್ನೇ ಮರೆತಿದ್ದೆ. ಸಮುದ್ರವೇ ಮೂರು ಕತೆಗಳಲ್ಲಿನ ಬಂಧ, ಸಮುದ್ರವೇ ಇಲ್ಲಿ ಪ್ರಮುಖ ಪಾತ್ರ. ಬಾಲಕಿಯ ಕತೆ ನಡೆಯುವಾಗ ಸಮುದ್ರದ ಅಲೆಗಳು ದಡ ತಲುಪಿ ಮತ್ತೆ ವಾಪಸ್ಸಾಗುತ್ತಿರುವ ದೃಶ್ಯಗಳಿವೆ, ರೇಸು ನಡೆಯುವಾಗ ರಸ್ತೆ ಪಕ್ಕದಲ್ಲಿ ಮೈಚಾಚಿ ಮಲಗಿರುವ ಸಮುದ್ರ ಆಹೂಳ ಗಂಡ ವಿಚ್ಛೇದನ ಕೊಟ್ಟಾಗ ಮತ್ತವಳ ಅಣ್ಣಂದಿರು ಸಾಯ ಬಡಿಯುವಾಗ ರೊಚ್ಚಿಗೆದ್ದು ದಡಕ್ಕಪ್ಪಳಿಸುತ್ತದೆ – ದಡ ದಾಟುವುದಿಲ್ಲ ಮತ್ತು ಹೂರಾಳ ಕತೆ ಸಾಗುವಾಗ ಸಮುದ್ರ ಸಂಪೂರ್ಣ ಶಾಂತವಾಗಿದೆ. ಮೂರು ಕತೆಗಳಲ್ಲಿ ಮನಸ್ಸಿನ ಚಲನಶೀಲತೆಗೆ ಸಂಬಂಧಿಸಿದಂತೆ ಮೂರು ವಸ್ತುಗಳನ್ನು ಉಪಯೋಗಿಸಿಕೊಳ್ಳಲಾಗಿದೆ. ಮೊದಲ ಕತೆಯಲ್ಲಿ ಸಮುದ್ರ ತೀರದಲ್ಲಿರುವ ಹುಡುಗರು ಹವಾಳಿಗೊಂದು ಪ್ಲಾಸ್ಟಿಕ್ ಮೀನು ಕೊಡುತ್ತಾರೆ, ಸಮುದ್ರದ ನೀರಿನಲ್ಲಿ ಮೀನು ಬಿಟ್ಟರೆ ರವಷ್ಟು ದೂರ ಮುಂದೆ ಸಾಗಿ ಮತ್ತೆ ದಡಕ್ಕೇ ಬಂದುಬಿಡುತ್ತದೆ. ಚಲನಶೀಲತೆ ಇದೆ ಆದರೆ ಹಿಂದಕ್ಕೂ ಮುಂದಕ್ಕೂ ಸಾಗುತ್ತಿದೆಯಷ್ಟೆ. ಎರಡನೆಯ ಕತೆಯಲ್ಲಿ ಸೈಕಲ್ಲು ಚೈನಿನ ಶಬ್ದವೇ ಚಲನಶೀಲತೆ. ಕತೆ ಸಾಗುವ ಇಡೀ ಸಮಯ ಹಿನ್ನೆಲೆ ಸಂಗೀತದಲ್ಲಿ ಚೈನು ತಿರುಗುವ ಶಬ್ದವಿದೆ. ಅಡೆತಡೆಗಳು ಬಂದರೂ ಚಲನಶೀಲತೆ ಮುಂದಾಗಿಯೇ ಸಾಗುತ್ತಿದೆ. ಇನ್ನು ಮೂರನೇ ಕತೆಯಲ್ಲಿ ಹೂರಾಳ ಸ್ವತಂತ್ರ ಮನಸ್ಸಿನ ಚಲನಶೀಲತೆಯ ಸಂಕೇತವಾಗಿ ಶಾಂತ ಸಮುದ್ರದಲ್ಲಿ ಅತ್ತಿಂದಿತ್ತ ಭರ್ರನೆ ಓಡಾಡುವ ಸ್ಪೀಡು ಬೋಟುಗಳಿವೆ. 

ದೃಶ್ಯಗಳಲ್ಲೇ ಭಾವನೆಗಳನ್ನು ದಾಟಿಸುವ, ಸಮುದ್ರವನ್ನು ಪಾತ್ರವನ್ನಾಗಿ ಸೃಷ್ಟಿಸಿರುವ ಸೌಂದರ್ಯವನ್ನು ಕಾಣಲಿಕ್ಕೆ ಈ ಸಿನಿಮಾವನ್ನು ನೋಡಲೇಬೇಕು.

(ಈ ಸಿನಿಮಾ ನೋಡುವ ಅವಕಾಶ ಸಿಕ್ಕಿದ್ದು ಮನುಜಮತ ಮತ್ತು ಸಹಮತ, ಹಾಸನ ಆಯೋಜಿಸಿದ್ದ ‘ಸ್ತ್ರೀಮತ’ ಸಿನಿಮಾ ಹಬ್ಬದ ಸಂದರ್ಭದಲ್ಲಿ)

ಅಸಹಾಯಕ ಆತ್ಮಗಳು - ಅಲಮೇಲಮ್ಮನ ಮನೆಯೊಳಗಿನ ಅಬಲೆ!

madhusudan rangenahalli
ಕು.ಸ.ಮಧುಸೂದನ ರಂಗೇನಹಳ್ಳಿ
ನನಗೆ ಮದುವೆಯಾದಾಗ ಕೇವಲ ಹದಿನಾಲ್ಕು ವರ್ಷ ವಯಸ್ಸು. ಮೈನೆರೆದ ಆರೇ ತಿಂಗಳಿಗೆ ಮದುವೆ ಮಾಡಿದರು. ಮದುವೆ ಅಂದ್ರೇನು ಮನೆ ಮುಂದೆ ಚಪ್ಪರ ಹಾಕಿ ಊರಿಗೆಲ್ಲ ಊಟ ಹಾಕಿ ಮಾಡಿದ್ದಲ್ಲ. ಬಸ್ಸಿನಲ್ಲಿ ಧರ್ಮಸ್ಥಳಕ್ಕೆ ಹೋಗಿ ತಾಳಿಕಟ್ಟಿಸಿಕೊಂಡು ಬಂದಿದ್ದಷ್ಟೇ ನಮ್ಮ ಮದುವೆಯ ಸಂಭ್ರಮ. ಮದುವೆಯಾಗಿ ನೇರವಾಗಿ ಗಂಡನ ಮನೆಗೆ ಹೋದೆ. ನಮ್ಮೂರಿಂದ ಎಂಭತ್ತು ಮೈಲಿ ದೂರದ ಸಣ್ಣ ಊರದು. ಗಂಡನ ಮನೇಲಿ ಇದ್ದದ್ದು ಅಂದರೆ ನನ್ನ ಗಂಡ ಮತ್ತೆ ನಮ್ಮ ಅತ್ತೆ ಅಷ್ಟೇ. ಅತ್ತೆಗೂ ವಯಸ್ಸಾಗಿ ಕಣ್ಣು ಸರಿಯಾಗಿ ಕಾಣ್ತಿರಲಿಲ್ಲ. ಅಪ್ಪನ ಮನೆಯಂತೆ ಗಂಡನ ಮನೇಲೂ ಕಿತ್ತು ತಿನ್ನೊ ಬಡತನ. ಸಾಲಾಗಿ ಹುಟ್ಟಿದ ಏಳು ಹೆಣ್ಣು ಮಕ್ಕಳನ್ನು ದಾಟಿಸೋಕೆ ತುಂಬ ಕಷ್ಟ ಅಂತ ಗೊತ್ತಿದ್ದ ನಮ್ಮಪ್ಪ ಮೊದಲ ಮೂರೂ ಜನವನ್ನೂ ಅದೆಂಗೊ ಮಾಡಿ ನಮ್ಮಷ್ಟೇ ದರಿದ್ರರಾಗಿದ್ದ ಮನೆಗಳಿಗೆ ದಾಟಿಸಿದ್ದ. ಇನ್ನು ನಾಲ್ಕನೆಯವಳಾಗಿದ್ದ ನನಗೇನು ವಿಶೇಷವಾಗಿ ಮಾಡ್ತಾನೆ? ಕೈಗೆ ಸಿಕ್ಕ ಒಬ್ಬನಿಗೆ ಮದುವೆ ಮಾಡಿಕೊಟ್ಟು ಬಿಟ್ಟ. ನನ್ನ ಗಂಡನಿಗೆ ಪೋಲಿಯೊ ಆಗಿ ಕಾಲು ಎಳೆದು ನಡೆಯುತ್ತಿದ್ದ. ಹೇಳಿಕೊಳ್ಳೋ ಮಾತಲ್ಲ, ನಾನು ನೋಡೋಕೆ ಬೆಳ್ಳಗೆ ಮೈಕೈ ತುಂಬಿಕೊಂಡು ಲಕ್ಷಣವಾಗಿದ್ದೆ. ಇಷ್ಟು ಬೆಳ್ಳಗೆ ಚೆನ್ನಾಗಿರೊ ಹುಡುಗೀನಾ ಈ ಕುಂಟನಿಗೆ ಕೊಟ್ಟಿದಾರೆ ಅಂದರೆ ಹುಡುಗಿ ಏನೋ ಸರಿಯಿಲ್ಲ ಅನಿಸುತ್ತೆ ಅಂತ ಗಂಡನೂರಿನ ಜನ ಮಾತಾಡಿಕೊಳ್ಳಿದ್ದರು. ನಾನು ಅಂತಹುದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಇದ್ದೆ. ನಮ್ಮ ಮನೆಯಲ್ಲಿ ಬಡತನವಿದ್ದರು ನನ್ನ ಹೊರಗೆ ಕೂಲಿಗೆ ಅಂತ ಕಳಿಸ್ತಿರಲಿಲ್ಲ. ಹಾಗಾಗಿ ರೈತರ ಯಾವ ಕೆಲಸವು ಗೊತ್ತಿರಲಿಲ್ಲ. ಮೈ ನೆರೆಯೊತನಕ ಹಳ್ಳೀಲೆ ಇದ್ದ ಸ್ಕೂಲಲ್ಲಿ ಆರನೆ ಕ್ಲಾಸು ಮಾತ್ರ ಓದಿದ್ದೆ. 

ನನ್ನ ಗಂಡ ಅದೆ ಊರಲ್ಲಿದ್ದ ಒಂದು ಸಣ್ಣ ಹೋಟೆಲ್ಲಿನಲ್ಲಿ ಕೆಲಸ ಮಾಡ್ತಿದ್ದ. ಕೆಲಸ ಅಂದರೆ ಪಾತ್ರೆ ತೊಳೆಯೋದು, ಕ್ಲೀನ್ ಮಾಡೋದು ಹಿಟ್ಟು ರುಬ್ಬೋದು ಹೀಗೆ. ಅವರೇನು ಸಂಬಳ ಕೊಡ್ತಿದ್ದರು ನನಗಂತು ಗೊತ್ತಿರಲಿಲ್ಲ. ವಾರಕ್ಕೊಂದು ಸಾರಿ ಸಾಮಾನು ತಂದು ಹಾಕೋನು. ಬೆಳಿಗ್ಗೆ ಐದು ಗಂಟೆಗೆ ಎದ್ದು ಹೋಟೆಲಿಗೆ ಹೋದರೆ ರಾತ್ರಿ ಹನ್ನೆರಡು ಗಂಟೆಗೆ ಮನೆಗೆ ಬರೋನು. ಹಾಗೆ ಬರಬೇಕಾದರೆ ಹೊಟ್ಟೆ ತುಂಬ ಕುಡಿದೇ ಬರೋನು. ಇನ್ನು ಅತ್ತೆ ಪಾಪ ಯಾವಾಗಲು ಒಂದು ಮೂಲೇಲಿ ಕೂತು ಎಲೆ ಅಡಿಕೆ ಜಗೀತಾ ಗೊಣಗ್ತಾ ಕೂತಿರೋಳು. ಪಾಪ ಆಕೆ ಒಂದು ದಿನಾನು ದನಿಯೆತ್ತಿ ಮಾತಾಡಿದವಳಲ್ಲ. ಹೀಗೆ ಒಂದೂವರೆ ವರ್ಷ ಕಳೆದವು. ಅಷ್ಟರಲ್ಲಿ ಊರಿನ ಎಲ್ಲ ಗಂಡಸರ ಕಣ್ಣು ನನ್ನ ಮೇಲೆ ಬಿದ್ದಿರೋದು ನನಗೆ ಗೊತ್ತಾಗಿತ್ತು. ನನ್ನ ಗಂಡ ಅನಿಸಿಕೊಂಡ ಸೂಳೆಮಗನಿಗೆ ಕುಡಿಯೋದು ಮಾತ್ರವಲ್ಲ, ಓಸಿ ಆಡೋದು, ಅಂದರ್ ಬಾಹರ್ ಆಡೋದು ಸೇರಿದಂತೆ ಪ್ರಪಂಚದಾಗೆ ಇರೊ ಎಲ್ಲ ಚಟಗಳು ಇದ್ದವು. ಹಂಗಾಗಿ ಊರತುಂಬಾ ಸಾಲ ಮಾಡಿಕೊಂಡಿದ್ದ. ಅದರಲ್ಲೂ ಅವನ ದಾಯಾದಿಯೊಬ್ಬ ಇದ್ದ ಚನ್ನೇಗೌಡ ಅಂತ. ಅವನು ನಾವಿದ್ದ ಮನೆಯ ಪತ್ರ ಇಟ್ಟುಕೊಂಡು ಕೇಳಿದಾಗೆಲ್ಲ ಐವತ್ತು ನೂರು ಸಾಲ ಕೊಟ್ಟು ಹಾಳು ಮಾಡಿದ್ದ. 


ನಾನು ಮದುವೆಯಾಗಿ ಹೋದಮೇಲೆ ಅವನ ಕಣ್ಣು ನನ್ನ ಮೇಲೂ ಬಿತ್ತು. ಆ ಹಳ್ಳೀಲಿ ಒಬ್ಬಳು ಸಾವಿತ್ರಮ್ಮ ಅಂತ ಇದ್ದಳು. ಗಂಡ ಇದ್ದರು ಈ ಚನ್ನೇಗೌಡನ್ನ ಇಟ್ಟುಕೊಡಿದ್ದಳು. ಜೊತೆಗೆ ಮನೆಗೆಲಸಕ್ಕೆ ಅಂತ ಸುತ್ತಮುತ್ತ ಹತ್ತು ಹಳ್ಳಿಯ ಬಡಹುಡುಗಿಯರನ್ನು ಸಿಟಿಗಳಿಗೆ ಕಳಿಸೊ ದಲ್ಲಾಳಿ ಕೆಲಸ ಕೂಡಾ ಮಾಡ್ತಿದ್ದಳು. ನಾನು ಮದುವೆಯಾಗಿ ಹೋಗಿ ಮೂರೇ ತಿಂಗಳಿಗೆ ಆ ಸಾವಿತ್ರಮ್ಮ ಬಂದು ನೀನು ಹೂ ಅಂದರೆ ನಿನ್ನ ಗಂಡನ ಸಾಲಾನೆಲ್ಲ ವಜಾ ಮಾಡಿ ಮನೆ ಕಾಗದ ವಾಪಾಸು ಕೊಡ್ತಾನಂತೆ ಜೊತೆಗೆ ನಿನಗೇನು ಬೇಕಾದರು ಸಹಾಯ ಮಾಡ್ತಾನಂತೆ, ಏನು ಹೇಳ್ತೀಯಾ? ಅಂತ ಕೇಳಿ ನನ್ನ ಹತ್ತಿರ ಬಯಿಸ್ಕೊಂಡು ಹೋಗಿದ್ದಳು. ನಾನು ಥೂ ಅಂತ ಉಗಿದು ಕಳಿಸಿದ ಮೇಲೂ ಅವನು ಬಿಟ್ಟಿರಲಿಲ್ಲ. ಆಗಾಗ ಮನೆಗೆ ಬರೋದು ಆ ಕುಂಟನ ಜೊತೆ ಏನಿರ್ತಿಯಾ. ನನ್ನ ಜೊತೆ ಬಾ ತೋಟದ ಮನೇಲಿ ಇಟ್ಟು ಸಂಸಾರ ಮಾಡ್ತೀನಿ. ಅಂತೆಲ್ಲ ತಲೆ ಕೆಡಿಸೋಕೆ ನೋಡಿದ್ದ. ಆದರೆ ನಾನು ಅದಕ್ಕೆಲ್ಲ ಸೊಪ್ಪು ಹಾಕಿರಲಿಲ್ಲ.

ನಮ್ಮಪ್ಪನ ಮನೆಯಿಂದ ಯಾರೂ ಬರ್ತಿರಲಲ್ಲ. ಇಲ್ಲಿಗೆ ಬರೊ ಬಸ್ ಚಾರ್ಜ ದುಡ್ಡಿದ್ದರೆ ಮೂರು ದಿನದ ಊಟಕ್ಕಾಗುತ್ತೆ ಅನ್ನೋ ಸ್ಥಿತಿಲಿದ್ದ ಕುಟುಂಬ ಅದು. ಹಾಗಾಗಿ ಗಂಡನ ಮನೆಯ ಯಾವ ಸಂಕಟಾನು ಹೇಳಿಕೊಳ್ಳೋಕೆ ಅಂತ ನನಗ್ಯಾರು ಇರಲಿಲ್ಲ. ಬರ್ತಾ ಬರ್ತಾ ನನ್ನ ಗಂಡನ ಕುಡಿತ ಜಾಸ್ತಿಯಾಗ್ತಾ ಹೋಯ್ತು. ರಾತ್ರಿ ಕೆಲಸ ಮುಗಿದ ಮೇಲೆ ಯಾವುದಾದರು ತೋಟದಲ್ಲಿ ಕೂತು ಇಸ್ಪೀಟ್ ಆಡೋದು ಮಾಡ್ತಿದ್ದ. ವಾರಕ್ಕೊಮ್ಮೆ ಸಾಮಾನು ತಂದು ಹಾಕ್ತಾ ಇದ್ದವನು ಈಗ ತಿಂಗಳಾದರು ಸಾಮಾನು ತರ್ತಾ ಇರಲಿಲ್ಲ. ನಿದಾನಕ್ಕೆ ನಾನು ಮನೆ ಹೊಸಿಲು ದಾಟಬೇಕಾಯಿತು. ಹೋಟೆಲಿನ ಕೆಲಸದ ಟೈಮಲ್ಲೂ ಕುಡಿತಾನೆ ಅಂತ ಆ ಕೆಲಸದಿಂದ ಅವನನ್ನ ಬಿಡಿಸಿದರು. ಅಲ್ಲಿಗೆ ಅವನನ್ನು ನಂಬಿ ಕೂರೋ ಕಾಲ ಹೋಯ್ತು ಅಂತ ಗೊತ್ತಾಯ್ತು. ಒಂದೆರಡು ವಾರ ಕಳೆದ ಮೇಲೆ ಅವನು ಕೆಲಸ ಮಾಡ್ತಿದ್ದ ಹೋಟೆಲಿಗೆ ಹೋಗಿ ತೊಳೆಯೊ ಬಳಿಯೊ ಕೆಲಸ ಇದ್ರೆ ನನಗೆ ಕೊಡಿ ನಾನು ಮಾಡ್ತೀನಿ ಅಂದೆ. ಸರಿ ಅಂದರು. ಮಾರನೇ ದಿನದಿಂದ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಅಡಿಗೆ ಮಾಡಿಟ್ಟು ಹೋಟೆಲಿಗೆ ಹೋಗೋಕೆ ಶುರು ಮಾಡಿದೆ. ನಾನು ದುಡಿದು ತರ್ತಿದ್ದ ದುಡ್ಡಲ್ಲು ಗಂಡ ಪಾಲು ಕೇಳ ತೊಡಗಿದ. ನಾನು ಕೊಡದೆ ಹೋದಾಗ ಅವನ ಸಿಟ್ಟು ಜಾಸ್ತಿಯಾಗಿ ರಸ್ತೆಯಲ್ಲಿ ನಿಂತುಕೊಂಡು, “ಇವಳು ಪಾತ್ರೆ ತೊಳೆಯೊಕೆ ಹೋಗ್ತಿಲ್ಲ. ಅಲ್ಲಿಗೆ ಬರೊ ಗಿರಾಕಿಗಳ ಜೊತೆ ಮಲಗೋಕೆ ಹೋಗ್ತಿದಾಳೆ” ಅಂತ ಕೂಗಾಡ್ತಿದ್ದ. ಆ ಹಳ್ಳಿಯ ಜನ ಎಷ್ಟು ಕೆಟ್ಟವರಾಗಿದ್ರು ಅಂದರೆ ಒಬ್ಬರಾದರು ಬಂದು ಅವನಿಗೆ ಬುದ್ದಿ ಹೇಳ್ತಾ ಇರಲಿಲ್ಲ. ಹೀಗೇ ನಡೀತಾ ನಡೀತಾ ಇರಬೇಕಾದರೆ ಒಂದು ದಿನ ಹೋಟೆಲಿಗೆ ರಜಾ ಇತ್ತು. ಮದ್ಯಾಹ್ನದ ಹೊತ್ತಿಗೆ ಮನೇಲಿ ನಾನು ಅಡಿಗೆ ಮಾಡ್ತಿರುವಾಗ ಕುಡಿದು ಬಂದ ಗಂಡ ಜಗಳ ತೆಗೆದು ಹೊಡೆಯೋಕೆ ಶುರು ಮಾಡಿದ. ತಡೆಯುವಷ್ಟು ತಡೆದ ನಾನು ಅವನನ್ನು ರಸ್ತೆಗೆ ಎಳೆದು ಕೊಂಡು ಬಂದು ಬಿಟ್ಟು ಮನೆಯ ಬಾಗಿಲು ಹಾಕಿಕೊಂಡೆ. ಎಷ್ಟೊ ಹೊತ್ತಿನವರೆಗು ಅವನು ಕೂಗಾಡ್ತಲೇ ಇದ್ದ. ಒಳಗೆ ಬಂದೋಳು ಅಡಿಗೆ ಮುಗಿಸಿ ಅಳ್ತಾ ಕೂತಿದ್ದ ಮುದುಕಿಗೆ ಊಟ ಹಾಕಿ ಬಟ್ಟೆ ಒಗೆಯೋಕೆ ಅಂತ ಕೆರೆಗೆ ಹೊರಟೆ. ಬಾಗಿಲು ತೆಗೆದು ನೋಡಿದರೆ ಗಂಡ ಕಾಣಲಿಲ್ಲ. ಮತ್ತೆ ಕುಡಿಯೋಕೆ ಹೋಗಿರಬೇಕು ಅಂತನ್ನಿಸಿ ಬಾಗಿಲು ಮುಂದಕ್ಕೆಳೆದು ಕೊಂಡು ಕೆರೆಗೆಹೋದೆ. ಬಟ್ಟೆ ಒಗೆದು ಒಣಗಿಸಿಕೊಂಡು ಸಾಯಂಕಾಲ ಆರು ಗಂಟೆ ಹೊತ್ತಿಗೆ ಮನೆಗೆ ಬಂದೆ ಒಳಗೆ ಹೋಗಿ ನೋಡಿದರೆ ಅಡುಗೆಮನೆಯ ಸೂರಿಗೆ ನನ್ನ ಗಂಡ ನೇತಾಡ್ತಾ ಇದ್ದ. ನನಗೆ ಗಾಬರಿಯಾಗಿ ಹೊರಗೆ ಬಂದು ಬಾಯಿ ಬಾಯಿ ಬಡಿದುಕೊಂಡೆ. ಅಕ್ಕಪಕ್ಕದ ಜನ ಸೇರಿ ಹೆಣ ಇಳಿಸಿ ನೋಡಿದರೆ ಅವನಾಗಲೆ ಸತ್ತು ತುಂಬಾ ಹೊತ್ತಾಗಿತ್ತು. ಜಗುಲಿಯ ಮೇಲೆ ಹೆಣ ಮಲಗಿಸಿ ನೆಂಟರಿಷ್ಟರಿಗೆಲ್ಲ ಹೇಳಿಕಳಿಸಲಾಯಿತು. ಅವನ ದಾಯಾದಿ ಚನ್ನೇಗೌಡನೆ ಇದನ್ನೆಲ್ಲ ಮಾಡಿದ. ಅಷ್ಟೆಲ್ಲಾ ಮಾಡುತ್ತಿದ್ದರು ಅವನ ಕಣ್ಣೆಲ್ಲ ನನ್ನ ಮೇಲೇ ಇತ್ತು. ಸರಿ ಮಾರನೇ ದಿನ ಬೆಳಿಗ್ಗೆ ಮಣ್ಣು ಮಾಡೋದು ಅಂತ ತೀರ್ಮಾನ ಮಾಡಿದರು ಬೆಳಿಗ್ಗೆ ಆರು ಗಂಟೆಗೇನೆ ಪೋಲಿಸರು ಮನೆ ಮುಂದೆ ಬಂದು ನಿಂತು ಪಂಚನಾಮೆಯೆಲ್ಲ ಮಾಡಿದರು. ಮದ್ಯಾಹ್ನದೊತ್ತಿಗೆ ಮಣ್ಣು ಮುಗಿದರೂ ನನಗೆ ಮಾತ್ರ ಪೋಲಿಸರು ಪ್ರಶ್ನೆ ಮಾಡೋದು ನಿಲ್ಲಿಸಲಲ್ಲ. ಸಾಯಂಕಾಲದ ಹೊತ್ತಿಗೆ ಅವರು ನೀನೆ ಗಂಡನನ್ನು ನೇಣು ಹಾಕಿದಿಯಾ ಅಲ್ವಾ ಅಂತ ಕೇಳೋ ಮಟ್ಟಿಗೆ ಬಂದಿದ್ದರು. ನಾನು ಸತ್ಯ ಹೇಳಿದರು ಅವರು ಬಿಡಲಿಲ್ಲ. ನಿನ್ನ ಮೇಲೆ ನಮಗೆ ಕಂಪ್ಲೇಂಟ್ ಬಂದಿದೆ. ಅದಕ್ಕೇ ವಿಚಾರಣೆ ಮಾಡ್ತಾ ಇದೀವಿ. ಇವತ್ತು ನಿನ್ನ ಬಿಟ್ಟು ಹೋಗ್ತೀವಿ. ನಾಳೆ ಬೆಳಿಗ್ಗೆ ವಿಚಾರಣೆ ಮುಂದುವರೆಸ್ತೀವಿ ಅಂತ ಹೇಳಿ ಹೋದರು. ಮನುಷ್ಯರು ಎಷ್ಟು ಕ್ರೂರಿಗಳು ನೋಡಿ, ಮಣ್ಣಿಗೆ ಬಂದ ಅಪ್ಪ ಅಮ್ಮ ನನಗೂ ಹೇಳದೆ ವಾಪಾಸು ಹೋಗಿಬಿಟ್ಟಿದ್ದರು. ಅವತ್ತು ರಾತ್ರಿ ಹತ್ತುಗಂಟೆ ಸುಮಾರಿಗೆ ಸಾವಿತ್ರಮ್ಮ ಮನೆಗೆ ಬಂದವಳು, ನೋಡು ಈಗಲೇ ಹೇಳಿಬಿಡ್ತೀನಿ ನೀನು ಚನ್ನೇಗೌಡ ಹೇಳಿದ್ದಕ್ಕೆ ಹೂ ಅಂದರೆ ಯಾವ ಪೋಲಿಸಿನೋರು ಬೆಳಿಗ್ಗೆ ಬರಲ್ಲ. ಇಲ್ಲ ಅಂದರೆ ಕೊಲೆ ಕೇಸಲ್ಲಿ ನಿನ್ನ ಒಳಗೆ ಹಾಕ್ತಾರೆ ಅಂತ ಹೆದರಿಸಿದಳು. ಆಗ ನನಗೆ ಇದೆಲ್ಲ ಚನ್ನೇಗೌಡನದೇ ಕುತಂತ್ರ ಅನಿಸಿಬಿಟ್ಟಿತು. ಸಾವಿತ್ರಮ್ಮನನ್ನು ಇಲ್ಲ ಅಂತೇಳಿ ವಾಪಾಸು ಕಳಿಸಿ, ಮಾರನೆ ದಿನ ಪೋಲಿಸರಿಗೆ ನಿಜ ಹೇಳಿ ಬಿಟ್ರೆ ಆಯ್ತು. ಚನ್ನೇಗೌಡನ ಕಿತಾಪತಿಯನ್ನು ಹೇಳಿದರೆ ನನ್ನ ಕಷ್ಟ ಅರ್ಥವಾಗುತ್ತೆ ಅನಿಸಿ ಮಲಗಿದೆ. ಬೆಳಿಗ್ಗೆ ಬಂದ ಪೋಲಿಸನೊಬ್ಬ ನನ್ನನ್ನು ಮೂರುಮೈಲಿ ದೂರದ ಪಕ್ಕದೂರಿನ ಸ್ಟೇಷನ್ನಿಗೆ ಕರೆದುಕೊಂಡು ಹೋದ. ಅಲ್ಲಿದ್ದ ಸಬ್ ಇನ್ಸಫೆಕ್ಟರ್ ವಿಷಯವನ್ನೆಲ್ಲ ಕೇಳಿ ನನ್ನ ವಿಚಾರನೆ ಮಾಡಿ, ಆಯ್ತು ಎರಡು ದಿನ ನೀನಿಲ್ಲೆ ಇರು ನಾವು ನಿಮ್ಮ ಹಳ್ಳಿಗೆ ಹೋಗಿ ಸತ್ಯ ಏನು ಅಂತ ವಿಚಾರಿಸ್ತೀವಿ ಅಂದ. ಸಾಯಂಕಾಲದ ತನಕ ನಾನು ಅಲ್ಲೇ ಕೂತಿದ್ದೆ. ಅಲ್ಲಿದ್ದ ಇಬ್ಬರು ಮೂರು ಜನ ಪೋಲಿಸಿನವರು ನನ್ನ ನೋಡಿ ಕೆಟ್ಟದಾಗಿ ಮಾತಾಡೋದು ಕೇಳಿಸಿದರೂ ಏನೂ ಮಾಡೋಕಾಗದೆ ಸುಮ್ಮನಿದ್ದೆ. ಮದ್ಯಾಹ್ನ ಮಾತ್ರ ಪೋಲಿಸಿನವರೆ ಊಟ ತಂದುಕೊಟ್ಟಿದ್ದರು. ಸರಿ ಕತ್ತಲಾದ ಮೇಲೆ ಒಬ್ಬ ಪೋಲಿಸಿನವನು ಬಂದು, ನಡಿ ಸಾಹೇಬರು ನಿನ್ನ ವಿಚಾರಣೆ ಮಾಡಬೇಕಂತೆ ಅಂತ ಸ್ಟೇಷನ್ ಹಿಂದಿದ್ದ ಕ್ವಾಟ್ರಸ್ಸಿಗೆ ಕರೆದುಕೊಂಡು ಹೋದ. ನನ್ನ ಒಳಗೆ ಬಿಟ್ಟು ಅವನು ಮುಂದಿನಿಂದ ಬಾಗಿಲು ಹಾಕಿಕೊಂಡು ಹೋದ. ಅಲ್ಲಿದ್ದ ಇನ್ಸಪೆಕ್ಟರ್ ನನಗೆ ಕೂರೋಕೆ ಹೇಳಿ ಮತ್ತೊಂದು ಸಾರಿ ನೀನು ನಿಜ ಹೇಳಿದರೆ ನಾನು ಏನಾದರು ಸಹಾಯ ಮಾಡಬಹುದು, ಮಾಡಿರೋದನ್ನ ಒಪ್ಪಿಕೊಂಡು ಬಿಡು ಅಂತ ಹೆದರಿಸಿದ. ನಾನು ನಡೆದ ವಿಷಯವನ್ನೆಲ್ಲ ಬಿಡಿಸಿ ಬಿಡಿಸಿ ಹೇಳಿದರೂ ಅವನು ಕೇಳಲಿಲ್ಲ. ಹೀಗೆ ಸ್ವಲ್ಪ ಹೊತ್ತು ಆದಮೇಲೆ ಆಯಿತು ನಾನು ಹೇಳಿದ ಹಾಗೆ ಕೇಳಿದರೆ ನಿನ್ನ ಈ ಕೇಸಿಂದ ಬಿಡ್ತೀನಿ ಅಂತ ಹೇಳಿ ನನ್ನ ತೋಳುಹಿಡಿದು ಒಳಗಿನ ರೂಮಿಗೆ ಕರೆದುಕೊಂಡು ಹೋದ; ಅಲ್ಲಿದ್ದ ಮಂಚದ ಮೇಲೆ ಕೂರಿಸಿ ಇವತ್ತೊಂದು ರಾತ್ರಿ ಹೇಳಿದ ಹಾಗೆ ಕೇಳಿಕೊಂಡು ಸುಮ್ಮನಿದ್ದು ಬಿಡು ನಾಳೆಯಿಂದ ಆ ಚನ್ನೇಗೌಡ ನಿನ್ನ ಕಂಡರೆ ನಡುಗ ಬೇಕು ಹಾಗೆ ಮಾಡ್ತೀನಿ ಅಂದ. ಹಳ್ಳಿಯಲ್ಲಿ ಚನ್ನೇಗೌಡನಿಗೆ ತಿರುಗಿ ನಿಂತ ಹಾಗೆ ಇಲ್ಲಿ ನನಗೆ ನಿಲ್ಲೋಕೆ ಆಗಲಿಲ್ಲ. ಎಂದೂ ಸ್ಟೇಷನ್ನಿನ ಮುಖ ನೋಡದ ನಾನು ಗಡಗಡ ನಡುಗುತ್ತಲೇ ಅದೊಂದು ಬೇಡ ಅಂದೆ. ಆದರವನು ನನಗೆ ಅದೊಂದೇ ಸಾಕು ಅಂತ ನನ್ನ ಮೇಲೆ ಬಿದ್ದ. ಪೋಲಿಸ್ ಇನ್ಸಪೆಕ್ಟರೊಬ್ಬನನ್ನು ಎದುರಿಸಿನಿಲ್ಲುವ ದೈರ್ಯವಾಗಲಿ ಶಕ್ತಿಯಾಗಲಿ ನನಗಾಕ್ಷಣಕ್ಕೆ ಬರಲಿಲ್ಲ. ಸುಮ್ನಾಗಿಬಿಟ್ಟೆ. ಆ ಇಡೀರಾತ್ರಿ ಅವನು ನನ್ನನ್ನು ಪ್ರಾಣಿಗಿಂತ ಕಡೆಯಾಗಿ ಉಪಯೋಗಿಸಿಕೊಂಡ. ಬೆಳಿಗ್ಗೆ ಎದ್ದ ಮೇಲೆ ನನ್ನ ಕೈಗೆ ಒಂದಿಷ್ಟು ದುಡ್ಡು ಕೊಟ್ಟು ನೀನೀಗ ಊರಿಗೆ ಹೋಗು, ಯಾರಿಗೂ ಹೆದರಬೇಡ. ಆದರೆ ನಾನು ವಿಚಾರಣೆಗೆ ಕರೆಸಿದಾಗ ಬರಬೇಕು ಅಂತೇಳಿ ಕಳಿಸಿಕೊಟ್ಟ. ಹೊರಡುವ ಮುಂಚೆ ಖಾಲಿ ಬಿಳಿ ಹಾಳೆಯಲ್ಲಿ ನನ್ನ ಹತ್ತಿರ ಸೈನು ಮಾಡಿಸಿದ್ದಲ್ಲದೆ ಹೆಬ್ಬೆಟ್ಟನ್ನೂ ಹಾಕಿಸಿಕೊಂಡ.

ವಾಪಾಸು ಊರಿಗೆ ಬಂದವಳು ಯಾರ ಹತ್ತಿರಾನು ಮಾಡದೆ ಅಡುಗೆ ಮಾಡಿ ಅತ್ತೆಗೆ ಊಟ ಹಾಕಿ ಸುಮ್ಮನೆ ಕೂತುಕೊಂಡೆ. ರಾತ್ರಿಯಾದ ಘಟನೆ ಬಗ್ಗೆ ಯೋಚನೆ ಮಾಡೋಕೇ ಹೋಗಲಿಲ್ಲ. ಸದ್ಯ ಇಷ್ಟಕ್ಕೆ ಬಿಟ್ಟು ಕಳಿಸಿದನಲ್ಲ ಅನ್ನೋ ಸಮಾದಾನದಲ್ಲಿ ನಾನಿದ್ದೆ. ನೋಡೋದಿಕ್ಕೆ ಚೆನ್ನಾಗಿದ್ದು ಒಂಟಿ ಹೆಣ್ಣಾಗಿದ್ದೆ ನನ್ನ ತಪ್ಪಾಗಿತ್ತು. ಏನೊ ಒಂದು ದಿನದ ಹಿಂಸೆ ಅನ್ಕೊಂಡೇ ನಾನು ಸುಮ್ಮನಾಗಿ ಮತ್ತೆ ಕೆಲಸಕ್ಕೆ ಅಂತ ಹೋಟೆಲಿಗೆ ಹೋದರೆ ಅವರು ಬೇರೆಯವರು ಬಂದಿದಾರೆ ನೀನೇನು ಬರೋದು ಬೇಡ ಅಂತೇಳಿ ವಾಪಾಸು ಕಳಿಸಿಬಿಟ್ಟರು. ಮನೆಗೆ ವಾಪಾಸು ಬಂದವಳು ತಲೆ ಮೇಲೆ ಕೈ ಹೊತ್ತು ಕೂತುಬಿಟ್ಟೆ. ಮನೆಯಲ್ಲಿ ಏನೇನು ಇರಲಿಲ್ಲ. ಇನ್ಸಪೆಕ್ಟರ್ ಕೊಟ್ಟಿದ್ದ ದುಡ್ಡಲ್ಲಿ ಹದಿನೈದು ದಿನಕ್ಕಾಗುವಷ್ಟು ದಿನಸಿ ತಂದುಕೊಂಡೆ. ಇದಾದ ಮೂರನೇ ದಿನಕ್ಕೆ ಊರಲ್ಲಿ ಚನ್ನೇಗೌಡನಿಗು ಅವನಿಟ್ಟುಕೊಂಡಿದ್ದ ಸಾವಿತ್ರಮ್ಮನಿಗು ದೊಡ್ಡ ಗಲಾಟೆಯೊಂದು ನಡೆದು ಹೋಯಿತು. ಅದ್ಯಾವುದೊ ಆಸ್ತಿಯ ವಿಚಾರ ಅನ್ನೋದಷ್ಟೆ ಕಿವಿಗೆ ಬಿತ್ತು.

ಒಂದು ದಿನ ಪೋಲಿಸಿನವನೊಬ್ಬ ಬಂದು ಸಾಹೇಬರು ಕರೀತಾ ಇದಾರೆ ಸಾಯಂಕಾಲ ಬರಬೇಕಂತೆ ಅಂತ ಹೇಳಿ ಹೋದ. ಇದೇನಪ್ಪಾ ನನ್ನ ಗ್ರಹಚಾರ ಅಂದುಕೊಂಡು ವಿಧಿಯಿಲ್ಲದೆ ಸಾಯಂಕಾಲ ಹೋದರೆ. ಯತಾಪ್ರಕಾರ ರಾತ್ರಿ ಇನ್ಸಪೆಕ್ಟರ್ ಜೊತೆ ಮಲಗಬೇಕಾಯಿತು. ಏನೊ ಒಂದು ದಿನದ ನರಕ ಅಂದುಕೊಂಡಿದ್ದರೆ ಇದ್ಯಾಕೊ ಅಸಹ್ಯವೆನಿಸ ತೊಡಗಿತು. ಸರಿ ಬೆಳಗ್ಗೆ ಹೊರಟಾಗ ಸಾರ್, ಪದೇ ಪದೇ ಹೀಗೆ ಬಂದರೆ ಊರಲ್ಲಿ ಜನಕ್ಕೆ ಗೊತ್ತಾಗುತ್ತೆ. ದಯವಿಟ್ಟು ಬೇಡ ಸಾರ್. ಅಂತವನ ಕಾಲಿಗೆ ಬಿದ್ದು ಬೇಡಿಕೊಂಡೆ. ಆದರವನು ಕರಗಲಿಲ್ಲ. ಮುಚ್ಕೊಳ್ಳೇ ನಾನಿಲ್ಲ ಅಂದರೆ ಚನ್ನ ಗವಡನಂತ ಹಲ್ಕಟ್ಟ ಜೊತೆ ಮಲಗಬೇಕಾಗ್ತಿತ್ತು, ಸುಮ್ಮನೆ ಬರೋದು ಕಲಿ ಅಂತೇಳಿ ಒಂದಿಷ್ಟು ಕೊಟ್ಟು ಕಳಿಸಿದ. ಮತ್ತೆ ಸ್ಟೇಷನ್ನಿಗೆ ಹೋಗಿ ರಾತ್ರಿ ಇದ್ದು ಬಂದಿದ್ದು ಊರ ಜನಕ್ಕೆಲ್ಲ ಗೊತ್ತಾಗಿ ತಲೆ ಎತ್ತದಂತಾಗಿತ್ತು. ಹಲ್ಲು ಕಚ್ಚಕೊಂಡು ಮನೇಯಲ್ಲೇ ಇರೋಕೆ ತೊಡಗಿದೆ ಆದರೆ ಆ ರಾಕ್ಷಸ ಹಾಗಿರೋಕು ಬಿಡಲಿಲ್ಲ. ಪ್ರತಿ ಎರಡು ಮೂರು ದಿನಕ್ಕೆ ನನ್ನ ರಾತ್ರಿ ಹೊತ್ತು ಕರೆಸತೊಡಗಿದ. 

ಹಾಗೆ ಒಂದು ದಿನ ಹೋದಾಗ ಕ್ವಾಟ್ರಸ್ಸಿನಲ್ಲಿ ಅವನ ಜೊತೆ ಮೂರು ಜನ ಸ್ನೇಹಿತರೂ ಇದ್ದರು. ನನ್ನ ಕರ್ಮ ನೋಡಿ, ಆ ರಾತ್ರಿ ಇನ್ಸಪೆಕ್ಟರ್ ಸೇರಿದಂತೆ ಒಟ್ಟು ನಾಲ್ಕು ಜನರೂ ನನ್ನ ಹರಿದು ಹಂಚಿಕೊಂಡು ತಿಂದರು. ಬೆಳಿಗ್ಗೆಯಾಗುವಷ್ಟರಲ್ಲಿ ನಾನೊಂದು ನಿರ್ದಾರಕ್ಕೆ ಬಂದುಬಿಟ್ಟಿದ್ದೆ. ಇದೇ ಕೊನೆಯ ದಿನ. ಅದು ಏನಾದರು ಆಗಲಿ ಮತ್ಯಾವತ್ತು ಇಲ್ಲಿಗೆ ಬರಬಾರದು ಅಂತ. ವಾಪಾಸು ಊರಿಗೆ ಹೋದವಳು ಮೊದಲ ಬಾರಿಗೆ ಸಾವಿತ್ರಮ್ಮನ ಮನೆಗೆ ನಾಚಿಕೆ ಬಿಟ್ಟು ಹೋದೆ. ಅವಳೂ ಯಾವುದು ಸಿಟ್ಟು ತೋರಿಸದೆ ನಗುನಗುತ್ತಲೇ ಮಾತಾಡಿದಳು. ಅಷ್ಟು ದಿನ ತಡೆದಿಟ್ಟುಕೊಂಡ ದು:ಖವನ್ನೆಲ್ಲ ಅವಳ ಎದುರು ತೋಡಿಕೊಂಡು ಅತ್ತು ಬಿಟ್ಟೆ. ಸುಮಾರು ಮೂರುವರೆ ವರ್ಷಗಳ ಕಾಲ ಯಾವುದನ್ನು ಯಾರ ಬಳಿಯೂ ಹೇಳಕೊಳ್ಳಲಾಗದ ಎಲ್ಲವನ್ನು ಅವಳೆದರು ಹೇಳಿಕೊಂಡು ಹಗುರಾಗಿಬಿಟ್ಟೆ. ಕೇಳಿಸಿಕೊಂಡ ಅವಳು ಸಮಾದಾನ ಮಾಡಿ ಮುಂದೇನು ಮಾಡಬೇಕು ಅಂತಿದಿಯಾ ಅಂತ ಕೇಳಿದಳು. ಮುಂದೇನು ಅನ್ನೊ ಬಗ್ಗೆ ನನಗೇನೂ ಹೊಳೆದಿರಲಿಲ್ಲ. ಅದನ್ನೇ ಅವಳ ಬಳಿ ಹೇಳಿದೆ. ಏನು ಹೆದರಬೇಡ, ದೇವರಿದ್ದಾನೆ ಹೇಗೊ ಆಗುತ್ತೆ. ನೀನು ಯಾವ ಸುಖಕ್ಕೆ ಅಂತ ಇಲ್ಲಿರ್ತೀಯಾ? ಸುಮ್ಮನೆ ಬೆಂಗಳೂರಿಗೆ ಹೋಗಿಬಿಡು. ನೀನು ಹೋಗೋದಾದರೆ ಅಲ್ಲಿ ನಾನು ನಿನಗೇನಾದರು ಕೆಲಸದ ವ್ಯವಸ್ಥೆ ಮಾಡ್ತೀನಿ. ಇಲ್ಲ ತವರುಮನೆಗೆ ಬೇಕಾದರೆ ಹೋಗು ಅಂದಳು. ತವರು ಮನಗೆ ಹೋದರೆ ಏನಾಗುತ್ತೆ ಅಂತ ನನಗೆ ಗೊತ್ತಿತ್ತು. ಗಂಡ ಸತ್ತಾಗಲೆ ಒಂದೂ ಮಾತಾಡದೇ ಹೋದವರು ಈಗ ಹೋದರೆ, ಅವರು ನನಗೆ ಸಾಕೋದು ಕಷ್ಟ ಅಂತ ಯೋಚಿಸಿದವಳು ಇಲ್ಲ ಸಾವಿತ್ರಕ್ಕ ನಾನು ಬೆಂಗಳೂರಿಗೆ ಹೋಗ್ತೀನಿ. ಆದರೆ ಅಲ್ಲೇನು ಕೆಲಸ ಅಂತ ಹೇಳು ಅಂದೆ. ಯೋಚನೆ ಮಾಡಿದ ಸಾವಿತ್ರಮ್ಮ ನನಗೆ ಒಬ್ಬಳು ಪರಿಚಯದವಳಿದ್ದಾಳೆ, ಅವರ ಮನೆಗೆ ಕಳಿಸ್ತೀನಿ. ಅಲ್ಲಿ ಹೋದ ಮೇಲೆ ಏನು ಕೆಲಸ ಕೊಡ್ತಾಳೋ ಅದನ್ನು ನಿಷ್ಠೆಯಿಂದ ಮಾಡು ಅಂದಳು. ಆದರೆ ಇಲ್ಲಿನ ಪೋಲಿಸಿನವರು ಬಿಡ್ತಾರಾ? ಎಂದೆ. ಅದಕ್ಕವಳು “ಅಯ್ಯೋ ದಡ್ಡಿ ಆ ಇನ್ಸಪೆಕ್ಟರ್ ಕತೆ ನಂಗೊತ್ತಿಲ್ವಾ. ನಿನ್ನ ಮೇಲೆ ಯಾರೂ ಕಂಪ್ಲೇಂಟು ಕೊಟ್ಟಿಲ್ಲ, ಯಾವ ಕೇಸೂ ಹಾಕಿಲ್ಲ. ನಿನ್ನ ಜೊತೆ ಮಲಗೋಕೆ ಅವನು ಆಡಿರೋ ನಾಟಕ ಅದು. ಅವನು ನಂಗೆ ಚೆನ್ನಾಗಿ ಗೊತ್ತು. ಅವನಿಗೆ ಬೇಕಾದಾಗೆಲ್ಲ ನಾನು ಸಹಾಯ ಮಾಡಿದೀನಿ. ಅವನು ಆಸೆ ಪಟ್ಟಿದ್ದನ್ನೆಲ್ಲ ನಾನು ಈಡೇರಿಸಿದ್ದೀನಿ. ಬಿಡು ಅವನಿಗೆ ನಾನು ಹೇಳ್ತೀನಿ” ಅಂದಳು. ಅವಳು ಅಷ್ಟು ಹೇಳಿದ ಮೇಲೆ ನನಗೆ ಸಮಾದಾನವಾದರೂ ಅತ್ತೆಯ ಗತಿಯೇನು ಅಂತ ಯೋಚಿಸಿ ಕೇಳಿದೆ. ಅಯ್ಯೊ ಮಂಕೆ ನೀನ್ಯಾಕೆ ಯೋಚನೆ ಮಾಡ್ತೀಯಾ ಏನೇ ದಾಯಾದಿಗಳಾದರು ಅವಳಿಗೆ ಚನ್ನೇಗೌಡನ ಮನೆಯವರು ಅನ್ನ ಹಾಕ್ತಾರೆ. ಇವತ್ತೊ ನಾಳೆ ಸಾಯೊ ವಯಸ್ಸು ಅವಳಿಗೆ. ಅವಳ ಚಿಂತೆ ಬಿಟ್ಟು ನೀನು ಹೊರಡು ಅಂದಳು.

ಸರಿ ಅವಳು ಹೇಳಿದಂತೆ ಕೇಳುವುದೆ ಒಳ್ಳೆಯದು ಅಂತ ಆ ಸಮಯಕ್ಕೆ ಅನಿಸಿತು. ಹಾಗಾಗಿ ಬೇರೇನು ಯೋಚಿಸದೆ ಹೊರಟುಬಿಟ್ಟೆ. ಒಟ್ಟಿನಲ್ಲಿ ಅವಳ ಸಹಾಯದಿಂದ ಬೆಂಗಳೂರಿನ ಅಲಮೇಲಮ್ಮನ ಮನೆಗೆ ತಲುಪಿದೆ. ಹೋಗಿ ಒಂದೆರಡು ದಿನ ಅವಳು ನನಗೇನೂ ಹೇಳಲಿಲ್ಲ. ನಾಲ್ಕನೆ ದಿನಕ್ಕೆ ನನ್ನ ಒಬ್ಬಳೇ ಕೂರಿಸಿಕೊಂಡು ಸಾವಿತ್ರಿ ನನಗೆ ನಿನ್ನ ಕಷ್ಟಾನೆಲ್ಲ ಹೇಳಿದಾಳೆ. ಪಾಪ ಈ ವಯಸ್ಸಿಗೆ ಇಷ್ಟೊಂದು ಅನುಭವಿಸದಿಯಾ ಅಂದರೆ ನಂಗೆ ಬೇಜಾರಾಗುತ್ತೆ. ಏನೂ ಗೊತ್ತಿರದ ಪಾಪದ ಹುಡುಗಿ, ನೀನು ಆ ಪೋಲಿಸಿನವನ ದಮಕಿಗೆ ಹೆದರಿ ಮಲಗಿದ್ದಕ್ಕೆ ನಿಂಗೇನು ಸಹಾಯವಾಗಲಿಲ್ಲವಲ್ಲ. ಯಾರದೊ ಹೆದರಿಕೆ, ಮುಲಾಜಿಗೆ ಮಲಗಿ ಕಷ್ಟ ಪಡೋದಿಕ್ಕಿಂತ ನಮ್ಮ ಖುಶಿಗೆ ನಮಗೆ ಬೇಕಾದ ದುಡ್ಡಿಗೆ ಬೇರೆಯವರ ಜೊತೆ ಮಲಗೋದು ವಾಸಿ ಅಂತ ಉಪದೇಶ ಮಾಡಿದಳು. “ನೋಡು ಈಗಾಗಲೆ ನಿನಗೀ ಮನೆಯ ವ್ಯವಹಾರ ಅರ್ಥವಾಗಿರಬಹುದು. ನಾನು ಜಾಸ್ತಿಯೇನು ಹೇಳಲ್ಲ. ನಿನಗಿಷ್ಟ ಬಂದಾಗ ನಿನಗೆ ಸರಿಯೆನಿಸದವನ ಜೊತೆ ಮಲಗು. ಅದನ್ನೇ ಇಷ್ಟಪಟ್ಟು ಮಾಡು, ದುಡ್ಡೂ ಸಿಗುತ್ತೆ ಸುಖಾನು ಸಿಗುತ್ತೆ ಅಂದಳು. ಇವತ್ತು ಸಾಯಂಕಾಲ ರೆಡಿಯಾಗಿರು. ಒಬ್ಬ ಒಳ್ಳೆ ಗಿರಾಕಿ ಬರ್ತಾನೆ. ತುಂಬ ಗೌರವಸ್ಥ. ಸಾಕಷ್ಟು ದುಡ್ಡು ಕೊಡ್ತಾನೆ. ಕಡೆಯದಾಗಿ ಹೇಳ್ತೀನಿ ನಿನಗೆ ನಾನು ಬಲವಂತ ಮಾಡ್ತಿಲ್ಲ. ನೀನಾಗೆ ಈ ಮನೆಗೆ ಬಂದಿದಿಯಾ. ನಿನಗಿಷ್ಟ ಬಂದ ತೀರ್ಮಾನ ತಗೊ. ಆದರೆ ಒಂದು ನನಪಿಡು. ನೀನೆಲ್ಲೇ ಹೋದರು ಯಾವನ ಜೊತೆಗೂ ಮಲಗದೆ ಜೀವನ ಮಾಡೋಕೆ ಬೇಕಾದ ದುಡ್ಡು ಸಿಗಲ್ಲ. ಆದರೆ ಅಲಮೇಲಮ್ಮನ ಮನೆಯಲ್ಲಿ ಸಿಗೊ ಮರ್ಯಾದೆಯಾಗಲಿ, ರಕ್ಷಣೆಯಾಗಲಿ ನಿನಗೆ ಬೇರೆಲ್ಲೂ ಸಿಗಲ್ಲ ಅಂತ ಹೇಳಿ ಎದ್ದು ಹೋದಳು. ಸಾಯಂಕಾಲದವರೆಗು ಕೂತು ಯೋಚಿಸಿದೆ. ಬೇರ್ಯಾವ ದಾರಿಯೂ ನನಗೆ ಕಾಣಲಿಲ್ಲ. ಇನ್ನು ಗಂಡಸಿನ ಜೊತ ಮಲಗುವ ಸುಖದ ಬಗ್ಗೆ ನನಗೆ ಆಸಕ್ತಿಯೇ ಹೊರಟು ಹೋಗಿತ್ತು. ಅದು ಆ ಪೋಲಿಸಿನವನ ಜೊತೆ ಬಲವಂತಕ್ಕೆ ಮಲಗಿದ ದಿನವೇ ಅಸಹ್ಯವೆನಿಸಿ ಬಟ್ಟಿತು.

ಗಟ್ಟಿ ಮನಸು ಮಾಡಿದವಳಂತೆ ಸಾಯಂಕಾಲದ ಹೊತ್ತಿಗೆ ಸಿದ್ದವಾಗಿ ನಿಂತಿದ್ದೆ. ಗಿರಾಕಿಯಾಗಿ ಬಂದವನು ಆ ಮನೆಗೆ ಹಳಬ ಅನಿಸುತ್ತೆ. ನನ್ನ ಹೊರಗೆ ಕರೆದುಕೊಂಡು ಹೋಗ್ತೀನಿ ಅಂದಾಗ ಅಲಮೇಲಮ್ಮ ಬೇಡವೆನ್ನಲಿಲ್ಲ. ಅವನು ಯಾವುದೊ ಲಾಡ್ಜಿಗೆ ನನ್ನ ಕರೆದುಕೊಂಡು ಹೋದ. ನಿಜ ಹೇಳಬೇಕೆಂದರೆ ಅವತ್ತು ರಾತ್ರಿ ನನಗೆ ಅಸಹ್ಯವೂ ಅನಿಸಲಿಲ್ಲ ಜೊತೆಗೆ ತಪ್ಪು ಮಾಡ್ತಿದಿನಿ ಅಂತಾನು ಅನಿಸಲಿಲ್ಲ. ಅವನೂ ಅಷ್ಟೆ ಬಹಳ ಒಳ್ಳೆ ಮನುಷ್ಯ .ನನ್ನ ಜೊತೆ ಒರಟಾಗಿ ನಡೆದುಕೊಳ್ಳಲಿಲ್ಲ. ಅವತ್ತು ಶುರುವಾದ ನನ್ನ ರಾತ್ರಿಯ ಜೀವನ ಸುಮಾರು ಹದಿನೆಂಟು ವರ್ಷಗಳು ಯಾವುದೇ ಅಡೆತಡೆಯಿಲ್ಲದೆ ನಡೆಯಿತು. ತಿಂಗಳು ಕಳೆಯುವಷ್ಟರಲ್ಲಿ ನಾನು ಪಕ್ಕಾ ಕಸುಬುದಾರಳಾಗಿಬಿಟ್ಟೆ. ಆ ಕೆಲಸಕ್ಕೆ ಬೇಕಾದ ನಾಜೂಕು ವಯ್ಯಾರ ಒರಟುತನ ಎಲ್ಲವನ್ನು ಕಲಿತು ಅಲಮೇಲಮ್ಮನ ಪ್ರೀತಿಗೆ ಪಾತ್ರವಾದೆ.

ಕಸುಬಲ್ಲಿ ನೋವೇ ಇರಲಿಲ್ಲ ಅಂತೇನೂ ಅಲ್ಲ. ಆದರೆ ಪ್ರತಿಕೆಲಸದಲ್ಲೂ ಇರುವಂತೆ ಅದರಲ್ಲು ಕಷ್ಟಗಳಿದ್ದವು. ಕುಡಿದು ಪ್ರಾಣಿಯ ಹಾಗೆಲ್ಲ ನಡೆಸಿಕೊಳ್ಳುತ್ತಿದ್ದ ಗಿರಾಕಿಗಳು, ಎಲ್ಲ ಮುಗಿದ ಮೇಲೆ ಕೊಟ್ಟ ದುಡ್ಡನ್ನೇ ಕಿತ್ತು ಕೊಂಡು ಹೋಗುವ ಚಂಡಾಲರು ಇವರನ್ನೆಲ್ಲ ಸಂಬಾಳಿಸಬೇಕಾಗುತ್ತಿತ್ತು. ಇದರ ಜೊತೆಗೆ ಬಹಳಷ್ಟು ದುರಭ್ಯಾಸಗಳು ಜೊತೆಯಾದವು. ಹೊಗೆಸೊಪ್ಪು ಹಾಕೋದು ಕುಡಿಯೋದು ಅಭ್ಯಾಸವಾಯಿತು. ಹನ್ನೆರಡು ವರ್ಷ ದಂದೆಯ ದೆಸೆಯಿಂದ ನನ್ನ ಮೈ ಬಣ್ಣ ಕಪ್ಪಾಗತೊಡಗಿ ಆರೋಗ್ಯ ಹಾಳಗೋಕ್ಕೆ ಶುರುವಾಯಿತು. ಇನ್ನು ಇದನ್ನು ಮಾಡಲಾಗುವುದಿಲ್ಲ ಅನಿಸಿದಾಗ ದಂದೆ ನಿಲ್ಲಿಸಿ ಎಲ್ಲಿ ಹೋಗೋದು ಅನಿಸಿ ಯೋಚಿಸಿದೆ. ಅಲಮೇಲಮ್ಮನ ಮನೆಗೆ ಬಂದ ಎರಡು ವರ್ಷಗಳ ನಂತರ ಒಂದು ಸಾರಿ ನನ್ನ ತವರು ಮನೆಗೆ ಹೋಗಿಬಂದೆ. ಎಲ್ಲ ಹೆಣ್ಣುಮಕ್ಕಳ ಮದುವೆ ಮಾಡಿಕೊಟ್ಟ ಅಪ್ಪ ಟಿ.ಬಿ ಕಾಯಿಲೆಯಿಂದ ಸತ್ತುಹೋಗಿದ್ದ. ಇದ್ದ ಅಮ್ಮನಿಗೆ ಬೆಂಗಳೂರಲ್ಲಿ ಮನೆಕೆಲಸ ಮಾಡಿಕೊಂಡು ಬದುಕುತ್ತಿರೋದಾಗಿ ಹೇಳಿದ್ದೆ. ಆಮೇಲೆ ವರ್ಷಕ್ಕೊಂದು ಸಾರಿ ಹೋಗಿ ಅಮ್ಮನಿಗೆ ಬೇಕಾದಷ್ಟು ದುಡ್ಡು ಕೊಟ್ಟು ಬರ್ತಿದ್ದೆ.ಹಾಗಾಗಿ ಈ ಕಸುಬು ನಿಲ್ಲಿಸಬೇಕೆಂದು ಅನಿಸಿದಾಗ ಅಲಮೇಲಮ್ಮನಿಗೆ ಹೇಳಿ ನಾನು ದುಡಿದು ಕೂಡಿಟ್ಟ ಹಣವನ್ನು ಅವಳ ಹತ್ತಿರ ಇಸಗೊಂಡು ತವರು ಮನಗೆ ಬಂದು ಬಿಟ್ಟೆ. ಈಗ ಇಲ್ಲಿ ಸಣ್ಣದೊಂದು ಪೆಟ್ಟಿಗೆ ಅಂಗಡಿ ಹಾಕಿಕೊಂಡಿದೀನಿ. ತಮಾಷೆ ನೋಡಿ ನನ್ನ ಅಂಗಡಿ ಇರೋದೇ ಪೋಲಿಸ್ ಸ್ಟೇಷನ್ ಮುಂದೆ. ಪೋಲಿಸರನ್ನು ನೋಡಿದಾಗೆಲ್ಲ ಸಾಯಿಸುವಷ್ಟು ಕೋಪ ಬರುತ್ತೆ. ಆದರೆ ಪಾಪ ಯಾವನೊ ಒಬ್ಬ ಮಾಡಿದ ತಪ್ಪಿಗೆ ಎಲ್ರನ್ನೂ ಯಾಕೆ ದ್ವೇಷಿಸಬೇಕೆಂದುಕೊಂಡು ಸುಮ್ಮನಾಗುತ್ತೇನೆ. ಕಷ್ಟದಲ್ಲಿರೊ ಹೆಂಗಸರನ್ನು ನೋಡಿದಾಗ ಬೇಜಾರಾಗುತ್ತೆ. ತೀರಾ ಏನೂ ಮಾಡೋಕಾಗದೆ ಇರೊ ಅಂತ ಹೆಣ್ಣುಮಕ್ಕಳಿಗೆ ಈ ಸಮಾಜ ಏನು ಮಾಡಲ್ಲ. ಎಲ್ಲ ಬೂಟಾಟಿಕೆಯ ಮಾತುಗಳು. ಇವತ್ತು ತೀರಾ ಕಷ್ಟದಲ್ಲಿದ್ದು, ಬೇರೇನು ದಾರೀನೇ ಇಲ್ಲ ಅಂದುಕೊಂಡ ಹೆಣ್ಣುಮಕ್ಕಳಿಗೆ, ಮೊದಲೇ ಇರೋ ವಿಷಯ ಹೇಳಿ ಅಲಮೇಲಮ್ಮನ ಮನೆ ಅಡ್ರೆಸ್ ಕೊಡ್ತೀನಿ. ನೀವು ತಪ್ಪು ಅನ್ನಬಹುದು ಸಾರ್, ಆದರೆ ತಪ್ಪು ಅನ್ನೋ ನೀವು ಅವರಿಗೆ ಅವಳ ಜೊತೆ ಮಲಗದೆ ಹತ್ತು ರೂಪಾಯಿ ಕೊಡೋಕೆ ತಯಾರಿದ್ದೀರಾ? ಇಲ್ಲಸಾರ್ ಏನೂ ಉಪಯೋಗವಿಲ್ಲದೆ ಈ ಪ್ರಪಂಚದಲ್ಲಿ ಯಾರು ಯಾರಿಗೂ ಸಹಾಯ ಮಾಡಲ್ಲ. ರಾತ್ರಿ ಪಕ್ಕದಲ್ಲಿ ಮಲಗಿದ್ರೇನೆ ಹೆಂಡತಿಗೆ ಅನ್ನ ಹಾಕೊ ಪ್ರಪಂಚ ಇದು. ಅದಕ್ಕೆ ನಾನು ತಪ್ಪು ಮಾಡ್ತೀನಿ ಅಂತ ಅನಿಸಿಲ್ಲ. ಆದರೆ ಯಾರಿಗು ಇವತ್ತನವರೆಗು ಬಲವಂತ ಮಾಡಿಲ್ಲ.

ನೀವು ಸಾವಿತ್ರಕ್ಕನಿಗೆ ಪರಿಚಯದೋರು ಅಂತ ಇಲ್ಲೀತನಕ ಬಂದು ನನ್ನ ಕಥೆ ಹೇಳಿದ್ದೀನಿ. ನಾನಿನ್ನು ಹೋಗ್ತೀನಿ ಸಾರ್ ಅಂತ ಎದ್ದವಳಿಗೆ ನಿನಗೇನಾದರು ಸಹಾಯ ಬೇಕಾದರೆ ನನಗೆ ಕೇಳಿ. ಆದರೆ ಯಾರಿಗೂ ಇನ್ನುಮುಂದೆ ಅಲಮೇಲಮ್ಮನ ಮನೆ ಅಡ್ರೆಸ್ ಕೊಡಬೇಡಿ ಅಂದೆ. ಕಿಸಕ್ಕನೆ ನಕ್ಕ ಅವಳು ನನ್ನ ಜೊತೆ ಮಲಗ್ದೇನೆ ಸಹಾಯ ಬೇಕಾದೆ ಕೇಳು ಅಂದ್ರಲ್ಲ ಅದೇದೊಡ್ಡ ಸಹಾಯ ಸಾರ್. ಅಲಮೇಲಮ್ಮನ ಬದಲಿಗೆ ನಿಮ್ಮ ಅಡ್ರೆಸ್ ಕೊಡಲಾ? ದಯವಿಟ್ಟು ಬೇಜಾರಾಗಬೇಡಿ ಸುಮ್ಮನೆ ತಮಾಷೆಗೆ ಅಂದೆ ಅಂತ ಹೊರಟು ಹೋದಳು. ಅವಳು ಮಾಡಿದ್ದು ತಮಾಷೆಯೇ ಆದರು ನನಗಂತು ಅದು ಹೃದಯಕ್ಕೆ ನಾಟಿದ್ದು ಸುಳ್ಳಲ್ಲ!

ಜನ 13, 2016

ಮತ್ತೆ ಮತ್ತೆ ಕೇಳಿಸಿಕೊಳ್ಳುವ ರಿಕ್ಕಿ ಚಿತ್ರದ ಹಾಡುಗಳು.

ರಿಷಬ್ ಶೆಟ್ಟಿ ನಿರ್ದೇಶನದ ರಕ್ಷಿತ್ ಶೆಟ್ಟಿ, ಹರಿಪ್ರಿಯಾ, ಅಚ್ಯುತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ರಿಕ್ಕಿ' ಚಿತ್ರ ಆಕರ್ಷಿಸುವ ಟ್ರೇಲರ್ರಿನಿಂದ ಗಮನ ಸೆಳೆದಿತ್ತು. ಒಂದಷ್ಟು ಪ್ರೀತಿ, ವಿರಹ, ಸರಕಾರೀ ಕ್ರೌರ್ಯ, ನಕ್ಸಲರ ಹಿಂಸೆ, ನಾಯಕನ ವಿರೋಧದ ತುಣುಕುಗಳಿದ್ದ ಟ್ರೇಲರ್ ಕನ್ನಡಕ್ಕೆ ಮತ್ತೊಂದು ಹೊಸ ಬಗೆಯ ಚಿತ್ರವನ್ನು ನೀಡುವ ಸೂಚನೆ ನೀಡಿತ್ತು. 

ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಹೊಸ ಕನ್ನಡ ಸಿನಿಮಾಗಳ ಹಾಡುಗಳೆಂದರೆ ಅಬ್ಬರವೇ ಅತಿಯಾಗಿ ಆ ಕ್ಷಣಕ್ಕೆ ಇಷ್ಟವಾದರೂ ಮೂರು ತಿಂಗಳ ನಂತರ ಕೇಳುವುದು ಕಷ್ಟ ಕಷ್ಟ ಎಂಬ ಪರಿಸ್ಥಿತಿ. ಮತ್ತೆ ಮತ್ತೆ ಕೇಳಬೇಕೆನ್ನಿಸುವ ಹಾಡುಗಳು ಅಲ್ಲೊಂದು ಇಲ್ಲೊಂದು ಇರುತ್ತದಷ್ಟೆ. ರಿಕ್ಕಿ ಚಿತ್ರಗಳ ಎಲ್ಲಾ ಹಾಡುಗಳು ಇಷ್ಟವಾಗುವುದರಲ್ಲಿ ಸಂದೇಹವಿಲ್ಲ. ಅರ್ಜುನ್ ಜನ್ಯರವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಗಮನಸೆಳೆಯಲು ಸಾಹಿತ್ಯವೂ ಕಾರಣ.

ಹರುಷ ತಾಳದೆ, ಓ ಬೇಬೆ, ಎಲೆ ಮರೆಯಲಿ, ಜೀವ ನೀನು ಹಾಡುಗಳು ಮತ್ತೆ ಮತ್ತೆ ಕೇಳುವಂತಿವೆ. ಇನ್ನು ಝೀ ವಾಹಿನಿಯ ಸಾರೆಗಾಮಪ ಕಾರ್ಯಕ್ರಮದಲ್ಲಿ ಗಮನ ಸೆಳೆದಿದ್ದ ಅಂಕಿತಾ ಕುಂದು ಹಾಡಿರುವ ಮಲಗೆ ಮಲಗೆ ಹಾಡು ಈಗಾಗಲೇ ಜನಪ್ರಿಯವಾಗಿದೆ. ಹಾಡಿನ ವೀಡಿಯೋ ಹಾಡಿನಷ್ಟು ಚೆನ್ನಾಗಿಲ್ಲ ಎನ್ನಿಸುವುದು ಹಾಡಿನ ಹೆಚ್ಚುಗಾರಿಕೆ! ಕೇಳಿ ಆನಂದಿಸಿ, ಗೆಳೆಯರಿಗೂ ಕೇಳಿಸಿ.

ಜನ 9, 2016

ಅಸಹಾಯಕ ಆತ್ಮಗಳು - ಮದುವೆಯ ಕನಸ ಮರೆತು ಮಾರಿಕೊಂಡವಳು....

ಕು. ಸ. ಮಧುಸೂದನ್ 
ಅಪ್ಪ ಅದೇನು ಕೆಲಸ ಮಾಡ್ತಿದ್ದ ಅಂತ ನನಗಾಗ ಗೊತ್ತಿರಲಿಲ್ಲ. ಅಮ್ಮ ಮಾತ್ರ ಅಕ್ಕಪಕ್ಕದವರ ಮನೇಲಿ ಕೆಲಸ ಮಾಡಿ ಸಂಸಾರ ಸಾಗಿಸ್ತಿದ್ದಳು. ನಾನು ಹತ್ತಿರದಲ್ಲೆ ಇದ್ದ ಗವರ್ನಮೆಂಟ್ ಶಾಲೆಗೆ ಒಂದು ಬಟ್ಟೆ ಚೀಲ ನೇತಾಕಿಕೊಂಡು ಹೋಗ್ತಿದ್ದೆ. ಒಂದು ದಿನ ಸ್ಕೂಲಿಂದ ಮನೆಗೆ ಬರೊ ಹೊತ್ತಿಗೆ ಅಮ್ಮ ಸತ್ತೋಗಿದ್ದಳು. ಬೆಳಿಗ್ಗೆ ಸ್ಕೂಲಿಗೆ ಹೋಗಬೇಕಾದರೆ ಚೆನ್ನಾಗೆ ಇದ್ದ ಅವಳಿಗೆ ಸಾಯೊ ಅಂತಾದ್ದು ಏನಾಗಿತ್ತು ಅನ್ನೋದು ಎಂಟು ವರ್ಷದ ನನಗೆ ಅರ್ಥವಾಗಿರಲಿಲ್ಲ. ಹಳ್ಳಿಯಿಂದ ಅಮ್ಮನ ಅಪ್ಪ ಅಮ್ಮ ಅಂದರೆ ನಮ್ಮ ಅಜ್ಜ ಅಜ್ಜಿ ಬಂದರು . ಮಣ್ಣು ಮುಗಿಸಿ ತಿಥಿ ಕಾರ್ಯವನ್ನೆಲ್ಲ ಮುಗಿಸಿದ ಮೇಲೆ ಮಗೂನ ನಾವೇ ಕರಕೊಂಡು ಹೋಗ್ತೀವಿ ಅಂದಾಗ ಅಪ್ಪ “ಹು ಹಂಗೇ ಮಾಡಿ ನಾನು ಅಗಾಗ ಹಳ್ಳಿಗೆ ಬಂದು ನೋಡ್ಕೊಂಡು ಹೋಗ್ತಾ ಇರ್ತೀನಿ” ಅಂದು ನನ್ನ ಕೈಗೆ ಒಂದಿಷ್ಟು ಚಿಲ್ಲರೆ ತುರುಕಿದ. ಅಲ್ಲಿಗೆ ನನ್ನ ಓದು ಕೂಡ ಮುಗಿದು ಹೋಯ್ತು. ಹಳ್ಳೀಲಿ ಅಜ್ಜ ಅಜ್ಜಿಗೆ ಇದ್ದ ಒಂದರ್ದ ಏಕರೆ ಹೊಲವನ್ನು ರಾಗಿ ಬೆಳೆಯೋಕೆ ಗುತ್ತಿಗೆ ನೀಡಿದ್ರು. ಅದರಿಂದ ಬರೋ ದುಡ್ಡಲ್ಲೇ ನಾವು ಮೂರು ಜನದ ಜೀವನ ಸಾಗ ಬೇಕಿತ್ತು. ಮನೇಲಿ ಒಂದೆರಡು ಕುರಿಗಳಿದ್ದವು. ನಾನು ಬೆಳಿಗ್ಗೆ ಊಟ ಮಾಡಿ ಕುರಿ ಹೊಡ್ಕೊಂಡು ಹೋಗ್ತಾ ಇದ್ದೆ. ಮದ್ಯಾಹ್ನದ ಊಟ ಇರ್ತಾ ಇರ್ಲಿಲ್ಲ.ಸಾಯಂಕಾಲ ಮನೆಗೆ ಬಂದು ಕುರಿ ಕಟ್ಟಿ ಹಾಕಿ ಮನೆಗೆಲಸ ಮಾಡಿ ರಾತ್ರಿ ಊಟ ಮಾಡಿ ಮಲಗ್ತಾ ಇದ್ದೆ.ವರ್ಷದಲ್ಲಿ ಒಂದೆರಡು ಸಾರಿ ಅಪ್ಪ ಬರೋನು. ಬೆಳಿಗ್ಗೆ ಬಸ್ಸಿಗೆ ಬಂದು ಸಾಯಂಕಾಲದ ಹೊತ್ತಿಗೆ ವಾಪಸು ಹೋಗಿಬಿಡೋನು. ಯಾವತ್ತಿಗು ಅವನು ನನ್ನ ಅಷ್ಟೇನು ಪ್ರೀತಿಯಿಂದ ಮಾತಾಡಿಸ್ತಾ ಇರಲಿಲ್ಲ.ಚೆನ್ನಾಗಿದಿಯಾ ಅಂತ ಕೇಳಿ ತಂದ ಒಂದಷ್ಟು ಮಿಠಾಯಿ ಕೈಗಿಟ್ಟರೆ ಅವನ ಕೆಲಸ ಮುಗೀತು ಅಂತಹೊರಟುಹೋಗೋನು. ಹಾಗಾಗಿ ನನಗೂ ಅವನ ಮೇಲೆ ಅಪ್ಪ ಅನ್ನೋ ಮಮಕಾರ ಬೆಳಿಲೇ ಇಲ್ಲ.

ಹಂಗೇ ಒಂದೆರಡು ವರ್ಷ ಆದಮೇಲೆ ಒಂದು ಸಾರಿ ಬಂದಾಗ ಒಬ್ಬ ಹೆಂಗಸನ್ನು ಕರೆದುಕೊಂಡು ಬಂದಿದ್ದ. ಅವನು ಅದಾಗಲೆ ಮತ್ತೆ ಮದುವೆಯಾಗಿದ್ದ. ಅವನು ಇವಳೇ ನಿನ್ನ ಚಿಕ್ಕಮ್ಮ ಅಂತ ಹೇಳಿದ್ದ. ಅವನು ಹಾಗೆ ಮದುವೆಯಾಗಿದ್ದು ಅಜ್ಜ ಅಜ್ಜಿಯರಿಗೆ ಇಷ್ಟವಾಗದಿದ್ದರು ಪಾಪ ಒಂಟಿ ಗಂಡಸು ಒಂದು ಹೆಣ್ಣು ದಿಕ್ಕು ಬೇಕಲ್ವ ಅಂತ ಅವರವರೇ ಮಾತಾಡಿಕೊಂಡು ಸಮಾದಾನ ಮಾಡಿಕೊಂಡಿದ್ದರು. ಅದಾಗಿ ವರ್ಷಕ್ಕೆ ನಾನು ಮೈನೆರೆದೆ. ಪೇಟೇಲಿದ್ದ ಅಪ್ಪನಿಗೆ ಅಜ್ಜ ಅಜ್ಜಿ ಹೇಳಿ ಕಳಿಸಿದರು. ಒಂಭತ್ತನೇ ದಿನದ ಆರತಿ ಶಾಸ್ತ್ರದ ದಿನ ಅಪ್ಪ ಮತ್ತೆ ಚಿಕ್ಕಮ್ಮ ಬಂದರು. ಬರೋವಾಗ ನನಗೆ ಹೊಸ ಬಟ್ಟೆ, ಹೂವು, ಹಣ್ಣು ಎಲ್ಲ ತಂದಿದ್ದರು. ಅಷ್ಟು ವರ್ಷದಲ್ಲಿ ಮೊದಲ ಬಾರಿಗೆ ಅಪ್ಪ ನನಗಾಗಿ ಅಷ್ಟು ಖರ್ಚು ಮಾಡಿದ್ದ. ಅವನೀಗ ಮೊದಲಿನಂತಿರಲಿಲ್ಲ. ಬದಲಿಗೆ ಸಾಕಷ್ಟು ದುಡ್ಡು ಮಾಡಿದವನ ಹಾಗೆ ಕಾಣ್ತಿದ್ದ. ಚಿಕ್ಕಮ್ಮನ ಮೈಮೇಲೂ ಒಡವೆಗಳು ತುಂಬಾ ಇದ್ದವು ಅವತ್ತು ಸಾಯಂಕಾಲ ಶಾಸ್ತ್ರ ಮುಗಿಸಿ ಮಾರನೇ ದಿನ ಬೆಳಿಗ್ಗೆ ಅವರು ಹೊರಟು ಹೋದರು. ಅದಾಗಿ ಒಂದು ವರ್ಷದ ತನಕ, ತಿಂಗಳು ಎರಡು ತಿಂಗಳಿಗೊಮ್ಮೆ ಚಿಕ್ಕಮ್ಮ ಮಾತ್ರ ಬಂದು ಹೋಗಿ ಮಾಡೋದಿಕ್ಕೆ ಶುರು ಮಾಡಿದಳು. ಕೇಳಿದರೆ ಅಪ್ಪನಿಗೆ ಹುಷಾರಿಲ್ಲ. ಹಾಗಾಗಿ ಅವನಿಗೆ ಇಷ್ಟು ದೂರ ಬಸ್ಸಲ್ಲಿ ಬರೋಕೆ ಕಷ್ಟವಾಗುತ್ತೆ ಅಂತ ಹೇಳೋಳು. ಕೊನೆಗೆ ನಾನು ಮೈನೆರೆದ ಎರಡನೇ ವರ್ಷಕ್ಕೆ ಅಪ್ಪ ಸತ್ತು ಹೋದ ಸುದ್ದಿ ಬಂತು. ನಾವು ಪೇಟೆಗೆ ಹೋಗೊ ಅಷ್ಟರಲ್ಲಿ ಮಣ್ಣಾಗಿಬಿಟ್ಟಿತ್ತು. ಆ ದು:ಖದಲ್ಲೂ ಚಿಕ್ಕಮ್ಮ ನನ್ನ ಮದುವೆ ಮಾತಾಡಿದಳು. ನಿಮ್ಮ ಅಳಿಯ ಇಲ್ಲ ಅಂತ ಕೊರಗಬೇಡಿ ಇವಳು ನನ್ನ ಮಗಳಿದ್ದ ಹಾಗೇನೆ, ಇವಳಿಗೊಂದು ಗಂಡು ನೋಡಿ ಮದುವೆ ಮಾಡೋದು ನನ್ನಕರ್ತವ್ಯ, ನೀವೇನು ಚಿಂತೆ ಮಾಡಬೇಡಿ ಅಂತೆಲ್ಲ ಹೇಳಿದಳು. ಮೂರನೆ ದಿನದ ಕಾರ್ಯ ಮುಗಿಸಿ ನಾವು ಊರಿಗೆ ಹೊರಟಾಗ ಮಾತ್ರ ಇವಳು ಇಲ್ಲೇ ಇರಲಿ, ಪೇಟೇಲಿದ್ದರೆ ನಾಲ್ಕು ಗಂಡುಗಳಿಗೆ ಇವಳನ್ನು ತೋರಿಸಬಹುದು. ಯಾರಾದರು ಒಳ್ಳೆ ಹುಡುಗ ಸಿಕ್ಕರೆ ಮದುವೆ ಮಾಡೋಣ. ಇವಳನ್ನು ಸದ್ಯಕ್ಕೆ ಇಲ್ಲೇ ಬಿಟ್ಟು ಹೋಗಿ ಅಂತ ಅಜ್ಜ ಅಜ್ಜಿನ ಕೇಳಿದಾಗ ಪಾಪ ಅವರಿಗೂ ಸರಿಯೆನಿಸಿರಬೇಕು. ಮಲತಾಯಿ ಆದೋಳೇ ಇಷ್ಟು ಪ್ರೀತಿ ತೋರಿಸ್ತಿರಬೇಕಾದ್ರೆ ನಮ್ಮ ಮೊಮ್ಮಗಳು ತುಂಬಾ ಅದೃಷ್ಟವಂತೆ ಅನ್ಕೊಂಡು ನಾವು ಆಗಾಗ ಬಂದು ನೋಡ್ಕೊಂಡು ಹೋಗ್ತೀವಿ ಅಂತ ಹೇಳಿ ನನಗೊಂದಿಷ್ಟು ಬುದ್ದಿಮಾತು ಹೇಳಿ ಹಳ್ಳಿಗೆ ವಾಪಾಸು ಹೋದರು. 

ಚಿಕ್ಕಮ್ಮ ಈಗಿದ್ದಮನೆ ತುಂಬಾ ದೊಡ್ಡದಾಗಿ, ಎರಡು ಮೂರು ರೂಮುಗಳಿದ್ದವು. ಇಷ್ಟು ವರ್ಷಗಳಲ್ಲಿ ಅಪ್ಪ ಸಾಕಷ್ಟು ದುಡಿಮೆ ಮಾಡಿದ್ದಾನೆ ಅನಿಸ್ತು. ಚಿಕ್ಕಮ್ಮನಿಗೆ ಹತ್ತುವರ್ಷದ ಮಗಳೊಬ್ಬಳಿದ್ದು, ಅವಳು ಬೇರೆ ಊರಿನ ಹಾಸ್ಟೆಲ್ಲಿನಲ್ಲಿದ್ದಾಳೆ ಅಂತ ಅಲ್ಲಿ ಹೋದ ಮೇಲೇನೆ ನನಗೆ ಗೊತ್ತಾಗಿದ್ದು. ಹೀಗೆ ಒಂದಷ್ಟು ವಾರ ಅಲ್ಲಿದ್ದಾಗ ನನಗ್ಯಾಕೊ ಆ ಮನೆಯ ವ್ಯವಹಾರಗಳು ವಿಚಿತ್ರ ಅನಿಸತೊಡಗಿತು. ಬೆಳಿಗ್ಗೆ ತಿಂಡಿ ತಿಂದಮೇಲೆ ನಾನು ಮನೆಯ ಹಿಂದಿದ್ದ ಕೊನೆ ರೂಮಲ್ಲೇ ಇರಬೇಕು. ಏನಾದ್ರು ಬೇಕಿದ್ದರೆ ಮಾತ್ರ ಹೊರಗೆ ಬರಬೇಕು. ಅದು ಇದು ವ್ಯವಹಾರ ಅಂತ ಗಂಡಸರು ಬರ್ತಿರ್ತಾರೆ, ನೀನು ಅವರೆದುರಲ್ಲಿ ಓಡಾಡೋದು ಸರಿಯಲ್ಲ ಅಂತ ಚಿಕ್ಕಮ್ಮ ಹೇಳಿದಾಗ ಅದರಲ್ಲಿ ನಂಗೇನು ತಪ್ಪು ಕಂಡಿರಲಿಲ್ಲ. ಆದರೆ ಹಾಗೆ ಬಂದ ಗಂಡಸರು ಮನೆಯ ಬೇರೆ ರೂಮುಗಳಿಗೆ ಹೋಗಿ ಬಾಗಿಲು ಹಾಕಿಕೊಂಡು ಗಂಟೆಗಟ್ಟಲೆ ಇರೋದು ನನಗೆ ಆಶ್ಚರ್ಯವಾಗುತ್ತಿತ್ತು. ಬರಿ ಗಂಡಸರಲ್ಲದೆ ಬಹಳ ಹುಡುಗಿಯರು ಹೆಂಗಸರು ಸಹ ಆ ಮನೆಗೆ ಬರ್ತಿದ್ದರು. ಹಾಗೆ ಬಂದ ಹೆಂಗಸರ ಜೊತೆ ಗಂಡಸರು ರೂಮಿಗೆ ಹೋಗೋದನ್ನು ನೋಡಿದ ಮೇಲೆ ಮನಸ್ಸಿಗೊಂದು ಥರಾ ಕಸಿವಿಸಿ ಆಗತೊಡಗಿತು. ಗಂಡುಹೆಣ್ಣಿನ ಸಂಬಂದವಾಗಲಿ, ಈ ಸೆಕ್ಸ್ ಆಗಲಿ ಗೊತ್ತಾಗದಷ್ಟು ನಾನು ದಡ್ಡಿಯಾಗಿದ್ದೆ, ಈ ನಡುವೆ ಆಗಾಗ ನನ್ನನ್ನ ಮಾತನಾಡಿಸುತ್ತಿದ್ದ ಚಿಕ್ಕಮ್ಮ ಚೆನ್ನಾಗೇ ನೋಡಿಕೊಳ್ತಾ ಇದ್ದಳು. ನಾನೂ ಅವಳಿಗೆ ಬೇಜಾರಾಗದಂತೆ ಯಾವ ಪ್ರಶ್ನೆಗಳನ್ನು ಕೇಳದೆ ಇರತೊಡಗಿದ್ದೆ. ಏನೇ ಆದರು ನಾನು ವಯಸ್ಸಿಗೆ ಬಂದಿದ್ದ ಹುಡುಗಿ ಅಲ್ವಾ ನಿದಾನಾಗಿ ಅಲ್ಲೇನು ನಡೀತಾ ಇದೆ ಅನ್ನೋದು ಅರ್ಥವಾಗತೊಡಗಿತು.

ಎರಡು ತಿಂಗಳಾದ ಮೇಲೊಂದು ದಿನ ನನ್ನ ರೂಮಿಗೆ ಬಂದ ಚಿಕ್ಕಮ್ಮ ನೋಡು ಇವತ್ತು ಮದ್ಯಾಹ್ನ ನಿನ್ನ ನೋಡೋಕೆ ಒಬ್ಬ ಹುಡುಗ ಬರ್ತಾನೆ. ಒಳ್ಳೆ ಕೆಲಸದಲ್ಲಿದ್ದಾನೆ. ನೀನು ಮದ್ಯಾಹ್ನದ ಹೊತ್ತಿಗೆ ರೆಡಿಯಾಗಿರು. ನೀನು ಹೊರಗೇನು ಬರೋದು ಬೇಡ. ನಿನ್ನ ರೂಮಿಗೆ ಅವನನ್ನು ಕರಕೊಂಡು ಬರ್ತೀನಿ. ನಾಚಿಕೆ ಪಡದೆ ಅವನ ಜೊತೆ ಮಾತಾಡು. ಅವನು ಹೇಳಿದ ಹಾಗೆ ಕೇಳು. ಅವನು ಒಪ್ಪಿದರೆ ನಿನ್ನ ಪುಣ್ಯ ಅಂತ ಹೇಳಿ ಹೊರಟು ಹೋದಳು. ಮದುವೆ ಅನ್ನೋ ಮಾತು ಕೇಳಿ ನನಗೂ ಸಂತೋಷವಾಯ್ತು. ಸರಿ ಅಂತ ಎದ್ದು ಹನ್ನೆರಡು ಗಂಟೆಗೆಲ್ಲ ಸ್ನಾನ ಮಾಡಿ ಕೂತೆ. ಮತ್ತೆ ಬಂದ ಚಿಕ್ಕಮ್ಮ ನಾನು ಹಾಕಿದ್ದ ಲಂಗ ಜಾಕೀಟು ನೋಡಿ ಥೂ ಇದೇನೆ ಇದನ್ನು ಹಾಕಿಕೊಂಡಿದಿಯಾ ಅಂತೇಳಿ ಒಂದು ಒಳ್ಳೆ ಸೀರೆತಂದು ಕೊಟ್ಟಳು. ನನಗೆ ಉಡೋದಿಕ್ಕೆ ಬರಲ್ಲ ಅಂದಾಗ ಅವಳೇ ಉಡಿಸಿ, ನೋಡು ಹುಡುಗ ತುಂಬಾ ಒಳ್ಳೇನು. ಅವನೇನೇ ಕೇಳಿದರು ಸರಿಯಾಗಿ ಉತ್ತರ ಕೊಡು ಪ್ರೀತಿಯಿಂದ ಮಾತಾಡು. ಹಳ್ಳಿ ಹುಡುಗಿತರಾ ನಾಚಿಕೆ ಪಡಬೇಡ ಅಂತ ಹೇಳಿ ಹೋದಳು. ಅದಾಗಿ ಒಂದು ಗಂಟೆ ಆದ ಮೇಲೆ ಸುಮಾರು ಸುಮಾರು ಮುವತ್ತು ವರ್ಷದ ಒಬ್ಬ ಗಂಡಸು ಒಳಗೆ ಬಂದ. ಬಂದವನು ಮಂಚದ ಮೇಲೆ ಕೂತುಕೊಂಡು ಹೆಸರು ಕೇಳಿದ. ನಾನು ಹೇಳಿದಾಗ ಬಾ ಇಲ್ಲೆ ಮಂಚದ ಮೇಲೆ ಕೂರು ಅಂತ ತನ್ನ ಪಕ್ಕ ಕೂರುವಂತೆ ಹೇಳಿದ. ಚಿಕ್ಕಮ್ಮ ಹೇಳಿದ ಮಾತಿನಂತೆ ನಾನು ಅವನ ಪಕ್ಕ ಕೂತುಕೊಂಡೆ. ಅವನು ಅದು ಇದು ಮಾತಾಡುತ್ತ ನನ್ನ ಹೆಗಲ ಮೇಲೆ ಕೈ ಹಾಕಿದ. ನನಗೆ ಒಂಥರಾ ನಾಚಿಕೆ ಆಗಿ ಅವನ ಕೈ ತೆಗಿಯೋಕೆ ಹೇಳಿದೆ. ಅದಕ್ಕವನು ನಿಮ್ಮ ಚಿಕ್ಕಮ್ಮ ನೀನು ತುಂಬಾ ಒಳ್ಳೆ ಹುಡುಗಿ ಅಂತ ಹೇಳಿದಾಳೆ ಅಂತ ಹೇಳುತ್ತಾ ನನ್ನ ತಬ್ಬಿಕೊಂಡ. ನಾನು ಅವನಿಂದ ಬಿಡಿಸಿಕೊಳ್ಳಲು ಕೊಸರಾಡಿದೆ. ಆದರವನ ಕೈನಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಏನಾಗುತ್ತಿದೆ ಅಂತ ನನಗರ್ಥವಾಗುವಷ್ಟರಲ್ಲಿ ನನ್ನೆಲ್ಲ ಬಟ್ಟೆಗಳ್ನು ಬಿಚ್ಚಿ ಬೆತ್ತಲು ಮಾಡಿಬಿಟಿದ್ದ. ಜೋರಾಗಿಕೂಗಲು ಚಿಕ್ಕಮ್ಮನ ಭಯ. ಹಾಗಾಗಿ ಇದೆಲ್ಲ ಬೇಡ ಅಂತೇಳಿ ದೂರ ಹೋಗಲು ನೋಡಿದೆ. ಆದರವನು ಬಲವಂತದಿಂದ ನನ್ನನ್ನು ಹಾಳು ಮಾಡಿಬಿಟ್ಟ. ರಾತ್ರಿ ಎಂಟುಗಂಟೆಯವರೆಗು ಅವನು ರೂಮಿಂದ ಆಚೆ ಹೋಗದೆ ನನ್ನ ಹರಿದು ಮುಕ್ಕಿಬಿಟ್ಟ. ರಾತ್ರಿ ಹೋಗುವಾಗ ಮತ್ತೆ ನಾಳೆ ಬರುತ್ತೇನೆ ಅಂತೇಳಿ ಹೋದ. ನಾನು ಏನೋ ಕಳೆದುಕೊಂಡಂತೆ ಅಳುತ್ತಾ ಕೂತೆ. ಆಮೇಲೆ ಬಂದ ಚಿಕ್ಕಮ್ಮ ನನ್ನನ್ನು ಸಮಾದಾನ ಮಾಡುತ್ತಾ ಅವನಿಗೆ ತುಂಬ ಅವಸರ ನೋಡು, ಮದುವೆಗೆ ಮುಂಚೇನೆ ಇದೆಲ್ಲ ಮಾಡಿಬಿಟ್ಟಿದ್ದಾನೆ. ಹೋಗಲಿ ಬಿಡು ಅಳಬೇಡ. ಸಮಾದಾನ ಮಾಡಿಕೊ ಅಂದು ಅಲ್ಲಿಗೇ ಊಟ ತಂದು ಕೊಟ್ಟಳು. ಮೊದಲ ದಿನವೇ ಅವನು ನನ್ನ ಹಿಂಡಿ ಹಿಪ್ಪೆಮಾಡಿದ್ದ. ಮೈಯೆಲ್ಲ ನೋವಾಗಿದ್ದು ಅವನು ಮದುವೆಯಾಗುವ ಹುಡುಗ ಅಂತ ಅನ್ನಿಸಿ ಒಂಥರಾ ಸಮಾದಾನವೂ ಆಗಿತ್ತು.

ಮಾರನೇ ದಿನ ರಾತ್ರಿಯಾದರು ಅವನು ಮತ್ತೆ ಬರಲಿಲ್ಲ. ಯಾಕೊ ಗೊತ್ತಿಲ್ಲ ಅವನು ಬರಲಿಲ್ಲವೆಂಬುದು ಮನಸ್ಸಿಗೆ ಬೇಜಾರೆನಿಸಿತು. ಅದಾಗಿ ಮೂರನೆ ದಿನಕ್ಕೆ ನನ್ನ ರೂಮಿಗೆ ಬಂದ ಚಿಕ್ಕಮ್ಮ ರಾತ್ರಿ ಎಂಟುಗಂಟೆ ಹೊತ್ತಿಗೆ ರೆಡಿಯಾಗಿರು ಹುಡುಗ ಬರ್ತಾನೆ ಅಂತ ಹೇಳಿದಾಗ ನಾನು ಅವನೇ ಬರ್ತಾನೆ ಅಂತ ಆಸೆಯಿಂದ ಕಾಯ್ತಿದ್ದೆ. ಆದರೆ ರಾತ್ರಿ ಬೇರೊಬ್ಬ ಗಂಡಸು ಬಂದು ನನ್ನ ರೂಮಿನ ಬಾಗಿಲು ಹಾಕಿದಾಗ ಮಾತ್ರ ದಿಗ್ಬ್ರಮೆಯಾಯಿತು. ಬಂದವನು ನನ್ನ ಮೇಲೆರಗಿದಾಗ ನಾನು ವಿರೋಧಿಸಿ ಕೂಗಾಡಿದಾಗ ರೂಮಿಗೆ ಬಂದ ಚಿಕ್ಕಮ್ಮ ಬಾಯಿ ಮಚ್ಚಿಕೊಂಡಿರೆ ಸಾಕು ಅಂತ ನನ್ನ ಕೆನ್ನಗೆ ಎರಡು ಹೊಡೆದಳು. ಆ ಮೇಲೆ ನಾನು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವತ್ತು ಎರಡನೆಯ ವ್ಯಕ್ತಿ ನನ್ನನ್ನು ಉಪಯೋಗಿಸಿಕೊಂಡ. ಅವತ್ತು ಇಡೀರಾತ್ರಿ ನಾನು ಊಟ ಮಾಡದೆ ಅಳುತ್ತಾ ಮಲಗಿದೆ. ಆದರೆ ಚಿಕ್ಕಮ್ಮ ನನ್ನ ಅಳುವಿಗೆಲ್ಲ ಕೇರ್ ಮಾಡೊ ಹೆಂಗಸಾಗಿರಲಿಲ್ಲ. ನಾನಾ ಹಿಂಸೆಗಳನ್ನು ಕೊಟ್ಟು, ಉಪವಾಸ ಹಾಕಿ ಅವಳ ಮಾತಿಗೆ ನಾನು ಹೂ ಅನ್ನುವಂತೆ ಮಾಡಿಬಿಟ್ಟಳು. ಆಮೇಲಾಮೇಲೆ ಅದು ಮಾಮೂಲಿಯಾಗತೊಡಗಿತು. ಎರಡು ಮೂರು ದಿನಕ್ಕೊಮೆ ಬರುತ್ತಿದ್ದವರು ಆಮೇಲೆ ದಿನಾ ಬರತೊಡಗಿದ್ದರು. ಒಟ್ಟಿನಲ್ಲಿ ಒಂದೇ ತಿಂಗಳಿಗೆ ನಾನು ಚಿಕ್ಕಮ್ಮನ ಅಡ್ಡೆಯೊಳಗೆ ಸೂಳೆಯಾಗಿ ಬದಲಾಗಿಬಿಟ್ಟಿದ್ದೆ. ಈ ನಡುವೆ ಒಂದು ಸಾರಿ ಅಜ್ಜ ಒಬ್ಬನೇ ಹಳ್ಳಿಯಿಂದ ನನ್ನ ನೋಡಲು ಬಂದಿದ್ದ. ಅವನು ಬಂದ ತಕ್ಷಣ ಚಿಕ್ಕಮ್ಮ ಏನೂ ಹೇಳಬಾರದೆಂಬಂತೆ ನನಗೆ ಪರೋಕ್ಷ ಎಚ್ಚರಿಕೆ ಕೊಟ್ಟಿದ್ದಳು. ಬಂದ ಅಜ್ಜನಿಗೆ ನಾನು ಚೆನ್ನಾಗಿರುವುದಾಗಿ ಹೇಳಿ ಕಳಿಸಿಕೊಟ್ಟೆ. ಅವನು ಹೋಗುವಾಗ ನನಗೆ ಗಿರಾಕಿಗಳು ಕೊಟ್ಟಿದ್ದ ಒಂದಿಷ್ಟು ದುಡ್ಡನ್ನೂ ಕೊಟ್ಟು ಕಳಿಸಿದೆ. ಇದ್ಯಾವ ದುಡ್ಡು ಅಂತ ಕೇಳಿದವನಿಗೆ ಚಿಕ್ಕಮ್ಮ ಕೊಟ್ಟಿದ್ದು ಅಂತೇಳಿದೆ.

ಮತ್ಯಾವತ್ತು ಚಿಕ್ಕಮ್ಮ ನನ್ನ ಮದುವೆಯ ಮಾತೆತ್ತಲಿಲ್ಲ. ನನಗೂ ಪರಿಸ್ಥಿತಿ ಅರ್ಥವಾಗಿತ್ತು. ನಿದಾನಕ್ಕೆ ಅವಳೊಂದಿಗೆ ಹೊಂದಿಕೊಂಡು ಬಿಟ್ಟೆ. ಹೀಗೇ ಮೂರು ವರ್ಷಗಳು ಕಳೆದು ಹೋದವು. ಹಾಸ್ಟೆಲ್ಲಿನಲಿದ್ದ ಚಿಕ್ಕಮ್ಮನ ಮಗಳು ವರ್ಷಕ್ಕೊಂದು ಸಾರಿ ಬಂದಾಗ ಮನೆಯ ಎಲ್ಲ ವ್ಯವಹಾರಗಳು ಬಂದ್ ಆಗುತ್ತಿದ್ದವು. ಆದರೆ ಆಕೆಗೆ ಇಲ್ಲಿಯ ಎಲ್ಲವೂ ಗೊತ್ತಿದ್ದವು ಅಂತ ಅವಳು ನನ್ನ ಹತ್ತಿರ ಮಾತನಾಡುವಾಗ ನನಗೆ ಗೊತ್ತಾಗುತ್ತಿತ್ತು. ಹೀಗಾಗಿಯೇ ಅವಳು ರಜಕ್ಕೆ ಅಂತ ಬಂದರೂ ಎರಡು ದಿನದ ಮೇಲೆ ಇರುತ್ತಿರಲಿಲ್ಲ. ಬರಬರುತ್ತ ಚಿಕ್ಕಮ್ಮನಿಗೆ ನನ್ನ ಮೇಲೆ ನಂಬಿಕೆ ಬರುತ್ತಿದ್ದಂತೆ ತಿಂಗಳಿಗೊಂದು ಸರಿ ಹಳ್ಳಿಗೆ ಹೋಗಿ ಅಜ್ಜ ಅಜ್ಜಿಯರನ್ನು ಮಾತಾಡಿಸಿಕೊಂಡು ಬರುತ್ತಿದ್ದೆ. ಅವರು ಮದುವೆಯ ಮಾತು ಎತ್ತಿದಾಗೆಲ್ಲ ಏನಾದರು ಒಂದು ಕಥೆ ಕಟ್ಟಿ ಮಾತು ಬದಲಾಯಿಸುತ್ತಿದ್ದೆ. ಅವರ ಜೀವನಕ್ಕಾಗುವಷ್ಟು ದುಡ್ಡನ್ನು ಕೊಟ್ಟು ಬರುತ್ತಿದ್ದೆ. 

ದಿನಗಳು ಉರುಳುತ್ತಾ ಹೋದವು ಈ ನಡುವೆ ಅಜ್ಜ ಅಜ್ಜಿ ಇಬ್ಬರು ತೀರಿಕೊಂಡರು. ಚಿಕ್ಕಮ್ಮನ ಮಗಳ ಓದು ಮುಗಿದು ಕಾಲೇಜಲ್ಲೇ ಯಾರನ್ನೊ ಪ್ರೀತಿಸಿ ಮದುವೆಯಾಗಿಬಿಟ್ಟಳು. ಮತ್ಯಾವತ್ತು ಆಕೆ ಮನೆ ಕಡೆ ತಲೆ ಹಾಕಲಿಲ್ಲ.. ಮೊದಲೆ ಕುಡಿಯುತ್ತಿದ್ದ ಚಿಕ್ಕಮ್ಮ ಮಗಳು ಕೈಬಿಟ್ಟು ಹೋದ ಮೇಲೆ ಬೆಳಿಗ್ಗೆ ಬೆಳಿಗ್ಗೆಯೇ ಕುಡಿಯೋಕೆ ಶುರು ಮಾಡಿದ್ದಳು. ಮಗಳ ಮದುವೆಯಾದ ಎರಡೇ ವರ್ಷಕ್ಕೆ ಚಿಕ್ಕಮ್ಮನಿಗೆ ಲಕ್ವಾ ಹೊಡೆದು ಹಾಸಿಗೆ ಹಿಡಿದಳು. ಮಲಗಿದಲ್ಲೆ ಮಲಗಿರುತ್ತಿದ್ದವಳು ಮನೆಯ ಎಲ್ಲ ವ್ಯವಹಾರವನ್ನೂ ನನಗೆ ಕೊಟ್ಟಿದ್ದಳು. ಚಿಕ್ಕಮ್ಮನ ದಂದೆಯ ವಾರಸುದಾರಳಾಗಿ ನಾನು ಗಿರಾಕಿಗಳನ್ನು ಸಂಬಾಳಿಸುವ, ಹೊಸ ಹುಡುಗಿಯರನ್ನು ಹೊಂದಿಸುವ ಕೆಲಸವನ್ನು ಮಾಡಬೇಕಾಗಿತ್ತು. ಇದರ ನಡುವೆ ಆಗಾಗ ಕಾಟ ಕೊಡುತ್ತಿದ್ದ ರೌಡಿಗಳನ್ನು, ಸ್ಥಳೀಯ ರಾಜಕಾರಣಿಗಳನ್ನು ಮಾಮೂಲಿ ಕೊಟ್ಟು ಸಮಾದಾನ ಮಾಡಬೇಕಾಗಿತ್ತು. ಇನ್ನು ಪೋಲಿಸರಿಗೆ ತಿಂಗಳು ತಿಂಗಳು ಮಾಮೂಲಿಕೊಟ್ಟರೂ ಅವಾಗವಾಗ ರೇಡು ಮಾಡುವುದನ್ನು ತಪ್ಪಿಸುತ್ತಿರಲಿಲ್ಲ. ಆಗೆಲ್ಲ ಪೋಲಿಸ್ ಸ್ಟೇಷನ್ನಿಗೆ ಹೋಗಿ ಅವರಿಗೆ ದುಡ್ಡು ಕೊಡಬೇಕಾಗಿತ್ತು. ಹೀಗೆ ಮನೆಯ ಎಲ್ಲ ವ್ಯವಹಾರಗಳನ್ನು ಕೈಗೆ ತೆಗೆದುಕೊಂಡ ಮೇಲೆ ತೀರಾ ಸುಸ್ತೆನಿಸುತ್ತಿತ್ತು. ಬರೋಬರಿ 21 ವರ್ಷ ಇದನ್ನೆಲ್ಲ ನಿಬಾಯಿಸಿದೆ. ಅಂದರೆ 16ನೇ ವಯಸ್ಸಿಗೆ ಶುರುವಾದ ಈ ಕಸುಬು ಮತ್ತು ಮನೆ ವ್ಯವಹಾರವನ್ನು ನನಗೆ ಮುವತ್ತೆಂಟು ಮುವತ್ತೊಂಭತ್ತು ವರ್ಷಗಳಾಗುವವರೆಗು ನೋಡಿಕೊಂಡೆ.

ನರಳಿ ನರಳಿ ಚಿಕ್ಕಮ್ಮ ಒಂದು ದಿನ ಸತ್ತು ಹೋದಳು. ಆದರೆ ಸಾಯುವ ಮುಂಚೆ ನಾವಿದ್ದ ಮನೆಯನ್ನು ತನ್ನ ಮಗಳ ಹೆಸರಿಗೆ ಬರೆದಿಟ್ಟು ಹೋಗಿದ್ದಳು. ತಾಯಿ ಸತ್ತಾಗಲು ಬರದ ಮಗಳು ಮನೆಯ ವಿಚಾರ ಗೊತ್ತದ ಕೂಡಲೆ ಬಂದು ನೀನಿದನ್ನು ಈ ಕೂಡಲೆ ಖಾಲಿಮಾಡಿ ಹೋಗು ನಾನಿದನ್ನು ಮಾರಬೇಕೆಂದು ಹಟ ಹಿಡಿದು ಕುಂತಳು. ಈ ವಿಷಯವಾಗಿ ನನಗೂ ಅವಳಿಗೂ ಜಗಳವಾಗಿ ಪೋಲಿಸ್ ಸ್ಟೇಷನ್ ಮೆಟ್ಟಿಲೂ ಹತ್ತಿದೆವು. ನಾನವಳಿಗೆ ಮನೆ ಕೊಡಲ್ಲ ಅಂತ ಹೇಳಿರಲಿಲ್ಲ. ಬದಲಿಗೆ ಬೇಕಾದರೆ ಬಾಡಿಗೆ ಕೊಡುತ್ತೇನೆ. ಮಾರಿದ ಮೇಲೆ ಅದನ್ನು ತಗೊಂಡೋರನ್ನು ಕೇಳಿಕೊಂಡು, ಅವರು ಹು ಅಂದರೆ ಮುಂದುವರೆಯುತ್ತೇನೆ ಇಲ್ಲವೆಂದರೆ ಬೇರೆ ಕಡೆ ಹೋಗುತ್ತೇನೆ ಅಂತ ಮಾತ್ರ ಹೇಳಿದ್ದೆ. ಆದರವಳಿಗೆ ನನ್ನ ಮೇಲೆ ಅದ್ಯಾವ ಸಿಟ್ಟೊ ಕಾಣೆ ನಿಂತ ಕಾಲಲ್ಲೇ ಮನೆ ಬಿಟ್ಟು ಹೋಗಲು ಹೇಳಿದಳು. ಪೋಲಿಸರು ಸಹ ಅವಳ ಪರವಾಗೇ ನಿಂತು ನನಗೆ ಹೆದರಿಸತೊಡಗಿದ್ದರು. ಆಯಿತು ಅಂತೇಳಿ ಎರಡು ತಿಂಗಳ ಟೈಮು ತಗೊಂಡೆ. 

ಪುಸ್ತಕ ಖರೀದಿಸಿ ವೆಬ್ ಸೈಟ್ ಬೆಂಬಲಿಸಿ! ಇಲ್ಲಿ ಕ್ಲಿಕ್ಕಿಸಿ
ಆದರೆ ವಿಧಿಯಾಟ ನೋಡಿ ಅವತ್ತೊಂದು ದಿನ ರಾತ್ರಿ ನನ್ನ ಮನೆಯಲ್ಲಿದ್ದ ಗಿರಾಕಿಗಳ ನಡುವೆ ಅದೇನೊ ಗಲಾಟೆಯಾಗಿ ಬಂದಿದ್ದ ಗಿರಾಕಿಯೊಬ್ಬ ಇನ್ನೊಬ್ಬನನ್ನು ಚಾಕುವಿನಿಂದ ತಿವಿದು ಸಾಯಿಸಿಬಿಟ್ಟ. ಇನ್ನೇನಾಗುತ್ತೆ? ಪೋಲಿಸರು ಬಂದು ನಮ್ಮನ್ನೆಲ್ಲ ಅರೆಸ್ಟ್ ಮಾಡಿದರು. ತಿಂಗಳುಗಟ್ಟಲೇ ಕೇಸು ನಡೆದು ನನಗೆ ಮೂರೂವರೆ ವರ್ಷಗಳ ಶಿಕ್ಷೆಯಾಯಿತು. 

ಶಿಕ್ಷೆಮಗಿಸಿಕೊಂಡು ಹೊರಗೆ ಬಂದಾಗ ನನಗೆ ಅಂತ ಯಾರೂ ಇರಲಿಲ್ಲ, ಏನೂ ಇರಲಿಲ್ಲ. ಇದ್ದಿದ್ದು ಹಳ್ಳಿಯಲಿದ್ದ ಅಜ್ಜನ ಒಂದು ಕರಿ ಹೆಂಚಿನ ಮುರುಕಲು ಮನೆ ಮತ್ತು ಅರ್ದ ಏಕರೆ ಹೊಲ. ಸರಿ, ಇನ್ನೇನು ವಯಸ್ಸಾಗುತ್ತಾ ಬಂತು ಅಂತ ಹಳ್ಳಿಗೇ ಹೋಗಿಬಿಡೋಣ ಅಂತ ಹಳ್ಳಿಗೆಹೋದೆ. ಪಾಳುಬಿದ್ದ ಮನೆಯನ್ನೆ ಒಂದಿಷ್ಟು ರಿಪೇರಿ ಮಾಡಿಕೊಂಡು ಇರೋಣವೆಂದರೆ ಹಳ್ಳಿಯವರಿಗೆಲ್ಲ ನನ್ನ ಕಥೆ ಗೊತ್ತಾಗಿತ್ತು. ಯಾರೂ ಅದಕ್ಕೆ ಅವಕಾಶ ಕೊಡಲಿಲ್ಲ. ಇನ್ನು ಹೊಲವನ್ನು ಗುತ್ತಿಗೆ ಮಾಡುತ್ತಿದ್ದವನೇ ಯಾವಾಗಲೊ ಅಜ್ಜನಿಂದ ಅದನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದ. ಹಾಗಾಗಿ ಆ ಹಳ್ಳಿಯು ನನಗೆ ಇಲ್ಲವಾಯಿತು. ಹಾಗಾಗಿ ಮತ್ತೆ ಅದೇ ಹಳೆಪೇಟೆಗೆ ಬಂದೆ. ಅಲ್ಲಿ ಎಲ್ಲವೂ ಬದಲಾಗಿ ಹೋಗಿತ್ತು. ದಂದೆಗೆ ಹೊಸ ಹೊಸ ಹೆಂಗಸರು ಇಳಿದಿದ್ದರು. ವಿದಿಯಿಲ್ಲದೆ ಅಂತಹ ದಂದೆ ಮಾಡುವ ಒಬ್ಬ ಹೆಂಗಸಿನ ಮನೆಗೆ ಹೋದೆ. ಅವಳಿಗೆ ನನ್ನ ಕತೆಯೆಲ್ಲ ಹೇಳಿ ಆಶ್ರಯ ಕೇಳಿದೆ. ಆಯಿತೆಂದ ಅವಳು ತನ್ನ ಮನೆಕೆಲಸ ಮಾಡಲು ನನ್ನನ್ನು ಇಟ್ಟುಕೊಂಡಳು. ಸರಿ ಅಲ್ಲಿಯೂ ಸುಮಾರು ಐದು ವರ್ಷ ಕೆಲಸ ಮಾಡಿದೆ. ಆದರೆ ಮಾಡಿದ ಪಾಪ ಬಿಡಬೇಕಲ್ಲ. ನನ್ನ ಆರೋಗ್ಯ ಕೆಟ್ಟಿತು. ಆ ಮನೆಯ ಯಜಮಾನಿ ಸರಕಾರಿ ಆಸ್ಪತ್ರೆಗೆ ಸೇರಿಸಿದಳು. ಅವಳು ಎಷ್ಟು ದಿನ ಅಂತ ನೋಡಿಕೊಳ್ತಾಳೆ. ತಿಂಗಳಾದರು ಗುಣವಾಗಲಿಲ್ಲ. ಸರಿ ಒಂದು ದಿನ ಡಾಕ್ಟರ್ ನಿನಗೆ ಏಡ್ಸ್ ಕಾಯಿಲೆ ಬಂದಿದೆ, ನಾವು ಏನು ಮಾಡಕಾಗಲ್ಲ ಅಂತೇಳಿ ಡಿಸ್ ಚಾರ್ಜ್ ಮಾಡಿದರು. ಹೊರಗೆ ಬಂದು ಮನೆಗೆ ಹೋದರೆ ನನಗೆ ಆ ಕಾಯಿಲೆ ಇರುವ ವಿಷಯ ಗೊತ್ತಾಗಿದ್ದವಳು ಮನೆಗೆ ಸೇರಿಸಲಿಲ್ಲ. ಸರಿ ಇನ್ನೇನು ಮಾಡೋದು ಅಂತ ಪೇಟೆಯ ಬೀದಿ ತಿರುಗ ತೊಡಗಿದೆ. ಮೈಲಿ ಶಕ್ತಿಯಿರಲಿಲ್ಲ ತೀರಾ ಗುರುತು ಹಿಡಿಯಲಾರದಷ್ಟು ಸಣ್ಣವಾಗಿದ್ದೆ. ಮುಖ ಕಪ್ಪಿಟ್ಟು ವಿಕಾರವಾಗ ತೊಡಗಿದ್ದೆ. ಹೀಗೆ ಪೇಟೆಯ ಬೀದಿಗಳನ್ನು ತಿರುಗುವಾಗ ಜನರು ತಾವೇನೆ ನನಗೆ ಬಿಕ್ಷುಕಿ ಅಂತ ಹೆಸರಿಟ್ಟು ಬಿಕ್ಷೆ ಹಾಕತೊಡಗಿದರು. ಹೀಗೆ ಪೇಟೆಯ ಎರಡು ಮಾರ್ಕೆಟ್ ಬೀದಿಗಳಲ್ಲಿ ಎರಡು ಬಾರಿ ಅಡ್ಡಾಡಿದರೆ ಮೂರು ಹೊತ್ತು ಊಟಕ್ಕಾಗುವಷ್ಟು ದುಡ್ಡು ಸಿಗುತ್ತಿದೆ. 

ಇವತ್ತಿಗೂ ಹಾಗೇನೆ ಜೀವನ ಕಳೆಯುತ್ತಿದ್ದೇನೆ. ವ್ಯತ್ಯಾಸ ಏನೆಂದರೆ ಈಗ ಬೀದಿಗಳಲ್ಲಿ ತಿರುಗೊವಷ್ಟು ಶಕ್ತಿಯಿಲ್ಲ. ಹಾಗಾಗಿ ಈ ಬಸ್ ಸ್ಟ್ಯಾಂಡನ್ನು ಖಾಯಂ ಮಾಡಿಕೊಂಡಿದ್ದೇನೆ. ಇಲ್ಲೇ ಬಿಕ್ಷೆ ಬೇಡಿ ಇಲ್ಲೆ ತಿಂದು ಇಲ್ಲೇ ಮಲಗುತ್ತೇನೆ. 

ಇಷ್ಟೇ ಸರ್ ನನ್ನ ಜೀವನದ ಕಥೆ. ಹಳೆಯದನೆಲ್ಲ ನೆನೆಸಿಕೊಂಡರೆ ಒಂದಂತು ಬೇಜಾರಾಗುತ್ತೆ. ಅದೇನೆಂದರೆ ಚಿಕ್ಕಮ್ಮನ ಮನೇಲಿ ಮೊದಲ ದಿನ ನಾನು ಹಾಳಾದ ಕೂಡಲೆ ಹೇಳದೆ ಕೇಳದೆ ಹಳ್ಳಿಗೆ ಓಡಿ ಹೋಗಬೇಕಿತ್ತು ಅನಿಸುತ್ತೆ. ಆದರವತ್ತು ಯಾವುದನ್ನು ಯೋಚಿಸೋ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಬಿಡಿ ಸರ್, ಈಗ ಯೋಚಿಸಿ ಏನೂ ಮಾಡೋಕ್ಕಾಗಲ್ಲ. ನಿಮ್ಮ ಹತ್ತಿರ ಎರಡು ಗಂಟೆ ಮಾತಾಡಿದ್ದಕ್ಕೆ ನನ್ನ ಮನಸ್ಸು ಹಗುರವಾಯ್ತು. ನಿಮಗೆ ಕೊಡಬೇಕೆನಿಸಿದರೆ ಒಂದು ನೂರುರೂಪಾಯಿ ಕೊಡಿ ಸರ್. ಯಾಕೊ ಹಳೆದೆಲ್ಲ ನೆನಪಾಗಿ ಬೇಜಾರಾಗ್ತಿದೆ. ಇವತ್ತು ಸಾಯಂಕಾಲ ಹೊಟ್ಟೆ ತುಂಬಾ ಕುಡಿಯಬೇಕು ಅನಿಸ್ತಿದೆ ಎಂದುಮಾತು ಮುಗಿಸಿದವಳ ದ್ವನಿಯಲ್ಲಿದ್ದ ಯಾತನೆ ನನಗರ್ಥವಾಯಿತು. ಪರ್ಸಿನಿಂದ ನೂರು ರೂಪಾಯಿಗಳ ಎರಡು ನೋಟುಗಳನ್ನು ಅವಳ ಕೈಲಿಟ್ಟು ಎದ್ದೆ.

ಸೀದಾ ಹೋಟೆಲಿನ ರೂಮಿಗೆ ಹೋಗಿ ಮಲಗಿದವನು ಮಾರನೆ ದಿನ ಬೆಳಿಗ್ಗೆ ಊರಿಗೆ ಹೋಗಲು ಬಸ್ ಸ್ಟ್ಯಾಂಡಿಗೆ ಬಂದೆ. ಒಂದು ಮೂಲೆಯಲ್ಲಿ ಸಾಕಷ್ಟು ಜನರ ಗುಂಪು ಸೇರಿದ್ದು, ಪೋಲಿಸರು ನಿಂತಿರುವುದನ್ನು ನೋಡಿ ಆ ಕಡೆ ನಡೆದೆ. ಗುಂಪನ್ನು ಸೀಳಿಕೊಂಡು ನೋಡಿದರೆ ಹಿಂದಿನ ದಿನ ಮದ್ಯಾಹ್ನ ನಾನು ಮಾತಾಡಿಸಿದ ಹೆಂಗಸು ಹೆಣವಾಗಿ ಬಿದ್ದಿದ್ದಳು. ಪಕ್ಕದಲ್ಲಿದ್ದವನಿಗೆ ಏನಾಯ್ತು ಅಂತ ಕೇಳಿದೆ. “ಯಾವಳೋ ಬೇವಾರ್ಸಿ ಸರ್. ಚೆನ್ನಾಗಿ ಶರಾಪು ಕುಡಿದು, ಜಾಸ್ತಿಯಾಗಿ ಸತ್ತಿದ್ದಾಳೆ” ಅಂದ. ಜಾಸ್ತಿ ದುಡ್ಡು ಕೊಟ್ಟು ಅವಳ ಸಾವಿಗೆ ನಾನೇ ಕಾರಣವಾಗಿಬಿಟ್ಟೆನಾ ಎಂಬ ಅಪರಾಧಿಪ್ರಜ್ಞೆ ಕಾಡತೊಡಗಿತು.ಹೊಟ್ಟೆ ತೊಳೆಸಿದಂತಾಗಿ ಅಲ್ಲಿಂದ ಬಾತ್ ರೂಮಿನ ಕಡೆಗೆ ಓಡಿದೆ.

ಜನ 8, 2016

ಮೇಕಿಂಗ್ ಹಿಸ್ಟರಿ: ಪರಿಚಯ.

Saketh Rajan

ಸಾಕೇತ್ ರಾಜನ್

ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

ಈ ಸಂಪುಟ ಕರ್ನಾಟಕದ ಹದಿನೆಂಟನೇ ಶತಮಾನದ ಆರಂಭದ ಇತಿಹಾಸದ ಬಗ್ಗೆಯಷ್ಟೇ. ವಸಾಹತುಶಾಹಿ ಶಕ್ತಿಗಳು ಕರ್ನಾಟಕವನ್ನು ಆಕ್ರಮಿಸುತ್ತಿದ್ದಂತೆ ಆಗಿನ ಸಾಮಾಜಿಕ ಜೀವನ ಆಘಾತಗೊಂಡ ಪರಿ ಮತ್ತು ವಸಾಹತು ಶಕ್ತಿಗೆ ಶರಣಾದ ದಿನಗಳ ಇತಿಹಾಸವಿದು.

‘ಪ್ರಗತಿಪರ’, ‘ದೇಶಪ್ರೇಮಿ’ ಇನ್ನೂ ಮುಂತಾದ ವಿಶೇಷಣಗಳಿಂದ ಸುಪ್ರಸಿದ್ಧರಾಗಿರುವ, ಬ್ರಿಟೀಷರ ಆಣತಿಯಂತೆ ಅರಸರಾದ ಮೈಸೂರು ರಾಜರ ಸುತ್ತಲಿನ ಪ್ರಭೆಯಲ್ಲಿನ ಕೃತಕತೆಯ ದರುಶನವೂ ಈ ಕಾಲಘಟ್ಟದಲ್ಲಿ ನಡೆಯಿತು. ಮೈಸೂರು ಅರಸ ಕುಟುಂಬದವರ ಹೇಳಿಕೆಗಳು ಮತ್ತು ಪತ್ರಗಳು, ಮೈಸೂರು ರಾಜರು ಹೇಗೆ ಬ್ರಿಟೀಷರ ಕೈಗೊಂಬೆಗಳಾಗಿದ್ದರು ಎನ್ನುವುದನ್ನು ತಿಳಿಸುತ್ತದೆ. ‘ಕಂಪನಿಯ ಮಕ್ಕಳು ನಾವು’ ಎಂದು ‘ಹೆಮ್ಮೆಯಿಂದ’ ಹೇಳಿಕೊಳ್ಳುತ್ತಿದ್ದವರೂ ಮೈಸೂರಿನ ರಾಜರಾಗಿದ್ದರು!

ಮೈಸೂರು ಅರಸರು ಮತ್ತು ಬ್ರಿಟೀಷರ ನಡುವಿನ ಒಪ್ಪಂದಗಳು ದೊಡ್ಡ ದೊಡ್ಡ ಜಮೀನ್ದಾರರ ಫ್ಯೂಡಲ್ ನೀತಿ ಮತ್ತು ಬ್ರಿಟೀಷರ ವಸಾಹತು ನೀತಿಯ ನಡುವೆ ನಡೆಯುತ್ತಿದ್ದ ಕೂಡಿಕೆಯ ಪ್ರತಿಬಿಂಬದಂತಿತ್ತು. ಜಮೀನ್ದಾರಿ ಪದ್ಧತಿಗೆ ಪ್ರೋತ್ಸಾಹ ನೀಡುತ್ತ, ಜಮೀನ್ದಾರರಿಗೆ ಮತ್ತು ತಮಗೆ ಅನುಕೂಲವಾಗುವಂತಹ ಒಪ್ಪಂದಗಳನ್ನು ಬ್ರಿಟೀಷರು ಆಕಸ್ಮಿಕವೆಂಬಂತೆ ಮಾಡಲಿಲ್ಲ; ಉದ್ದೇಶಪೂರ್ವಕವಾಗಿಯೇ ಮಾಡಿದರು. ಈ ಒಪ್ಪಂದಗಳು ಸಮಾಜದ ಭವಿಷ್ಯದ ಮೇಲುಂಟುಮಾಡಿದ ಪರಿಣಾಮಗಳನ್ನು ಸಮರ್ಪಕವಾಗಿ ದಾಖಲಿಸಲಾಗಿಲ್ಲ. ನವವಸಾಹತುಶಾಹಿಯ ಇಂದಿನ ದಿನಗಳಲ್ಲೂ ಕೂಡ ಅತ್ಯಂತ ಪುರಾತನವಾದ ಜಮೀನುದಾರಿ ಪದ್ಧತಿ ಮತ್ತು ಜಾತಿ ವ್ಯವಸ್ಥೆ ತನ್ನ ಕದಂಬ ಬಾಹುಗಳನ್ನು ಚಾಚುತ್ತಲೇ ಇದೆ. ಮೇಲ್ಜಾತಿ ಜಮೀನ್ದಾರರು ಕೆಳಜಾತಿಯ ಜನರ ಮೇಲಿನ ತಮ್ಮ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿಕೊಳ್ಳಲು ಬ್ರಿಟೀಷರ ಒಪ್ಪಂದಗಳೂ ಕಾಣ್ಕೆ ನೀಡಿದವು. ವಸಾಹತು ಖಡ್ಗ ಜಮೀನ್ದಾರಿ ಸೊಂಟದಲ್ಲಿ ಪ್ರತಿಷ್ಟಾಪನೆಗೊಂಡಿತು.

ಈ ನಿಟ್ಟಿನಲ್ಲಿ ಆ ಐದು ದಶಕಗಳು ಕರ್ನಾಟಕದ ಇತಿಹಾಸದ ಕರಾಳ ದಿನಗಳು. ಆ ಕತ್ತಲ ದಿನಗಳಲ್ಲೂ ಜನರ ನಡುವಿನಿಂದ ಚಿಮ್ಮಿ ಮುಗಿಲೆತ್ತರಕ್ಕೇರಿ ಬೆಳಕು ನೀಡಿದ ವೈಭವದ ಘಟನಾವಳಿಗಳು ನಡೆದವು. ಜನರಿಂದ ಮೂಡಿದ ಬೆಳಕು ಫ್ಯೂಡಲ್ – ವಸಾಹತು ವರ್ಗಕ್ಕೆ ಸುಡುವ ಕೆಂಡವಾಯಿತು.

“ಅಸ್ತಿತ್ವದಲ್ಲಿರುವ ಸಮಾಜದ ಇತಿಹಾಸವೆಂದರೆ ಅದು ವರ್ಗ ಹೋರಾಟದ ಇತಿಹಾಸ” – ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್.

ಈ ಸಂಪುಟವು ವರ್ಗ ಹೋರಾಟ ಅನಿವಾರ್ಯವಾಗಿ ಪಡೆದುಕೊಂಡ ಹಿಂಸಾರೂಪವನ್ನು ತಿಳಿಸುತ್ತದೆ. ಇತಿಹಾಸ ರಚನೆಯ ಮೇಲೆ ಗಾಂಧಿವಾದದ ಪರಿಣಾಮ ಹೆಚ್ಚಾದ ಕಾರಣ ಬಹಳಷ್ಟು ಇತಿಹಾಸಕಾರರು ಇತಿಹಾಸದಲ್ಲಿನ ಹಿಂಸಾ ಹೋರಾಟವನ್ನು ತಿಳಿಸದೆ ಮೌನ ವಹಿಸುತ್ತಾರೆ ಅಥವಾ ನಗಣ್ಯವೆಂಬಂತೆ ಚಿತ್ರಿಸುತ್ತಾರೆ. ಎಲ್ಲೋ ಕೆಲವರು ಮಾತ್ರ ಈ ಗಾಂಧಿವಾದದ ನೆರಳಿನ ಆಚೆ ನಿಂತು ಇತಿಹಾಸದೆಡೆಗೆ ನೋಡುತ್ತಾರೆ.

“ಮೊದಲು ಸೈನಿಕ ಹೋರಾಟ; ನಂತರ ರಾಜಕೀಯ ಬದಲಾವಣೆ. ಯುದ್ಧ ಕೂಡ ರಾಜಕಾರಣದ ಮುಂದುವರಿಕೆ” – ಡಾ. ಅಭಿಮೆಲ್ ಗಝ್ ಮನ್.

ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನನ ಸೈನ್ಯ ವಸಾಹತು ಶಕ್ತಿಗಳ ವಿರುದ್ಧ ನಡೆಸಿದ ನಾಲ್ಕು ಯುದ್ಧಗಳು “ಸೈನಿಕ ಹೋರಾಟವಲ್ಲವೇ?”. 1799ರಲ್ಲಿ ಟಿಪ್ಪು ಸೈನ್ಯದ ಸೋಲಿನ ನಂತರ ಕರ್ನಾಟಕದ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿ ಕರ್ನಾಟಕ ರಾಜ್ಯ ಬ್ರಿಟೀಷರ ವಸಾಹತಾದ ಸತ್ಯವನ್ನು ನಿರಾಕರಿಸಲಾದೀತೆ? ಸತತ ಯುದ್ಧಗಳಿಂದ ಬ್ರಿಟೀಷರು ನಮ್ಮ ನಾಡನ್ನು ಆಕ್ರಮಿಸಿದರು. ಹಿಂಸೆಯ ಮಾರ್ಗದ ಮೂಲಕ ಆಕ್ರಮಿಸಿ ನಮ್ಮನ್ನಾಳಿದರು.

ಪುಸ್ತಕ ಖರೀದಿಸಿ ವೆಬ್ ಸೈಟ್ ಬೆಂಬಲಿಸಿ! ಇಲ್ಲಿ ಕ್ಲಿಕ್ಕಿಸಿ

ವಸಾಹತು ಅನುಭವದಿಂದ ಬೆಚ್ಚಿ – ಎಚ್ಚೆತ್ತು, ಜಮೀನ್ದಾರರ ಒಂದು ವರ್ಗ ಮತ್ತು ಜನಸಮೂಹ ಕಳೆದುಹೋದ ಭೂಮಿ ಮತ್ತು ಪ್ರತಿಷ್ಟೆಯನ್ನು ಮರಳಿ ಪಡೆಯಲೆತ್ನಿಸಿತು. ಟಿಪ್ಪು ಸುಲ್ತಾನನ ಸೋಲಿನ ನಂತರದಿಂದಲೇ ಅನೇಕ ಚಳುವಳಿ – ಹೋರಾಟಗಳಾರಂಭವಾದವು. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಸ್ಥಾಪನೆಯ ರಾಜಕೀಯ ಬದಲಾವಣೆಗಾಗಿ ಸಶಸ್ತ್ರ ಸೈನಿಕ ಹೋರಾಟವನ್ನು ಜನರು ಆಯ್ದುಕೊಂಡಿದ್ದಕ್ಕೆ ಸಂಗೊಳ್ಳಿ ರಾಯಣ್ಣ ಮತ್ತು ಕಲ್ಯಾಣಸ್ವಾಮಿ ನಗರದಲ್ಲಾರಂಭಿಸಿದ ಸಶಸ್ತ್ರ ಹೋರಾಟವೇ ಸಾಕ್ಷಿ. 1760ರಿಂದ 1858ರ ಬಿಜಾಪುರದ ಹಲಗಳ್ಳಿಯ ಬೇಡರ ಸಶಸ್ತ್ರ ಹೋರಾಟದವರೆಗೂ ಕರ್ನಾಟಕ ಒಂದು ಬಹುದೊಡ್ಡ ರಣಾಂಗಣವಾಗಿತ್ತು. ಬ್ರಿಟೀಷರು ಮತ್ತವರ ಕೈಗೊಂಬೆಗಳು ಈ ಹೋರಾಟಗಳನ್ನು ಹತ್ತಿಕ್ಕಿದರು. ಆ ಶತಮಾನದಲ್ಲಿ ಬ್ರಿಟೀಷರ ಕೈಯಲ್ಲಿ ಲಕ್ಷ ಲಕ್ಷ ಜನ ಹತರಾದರು. ವಸಾಹತು ಶಕ್ತಿಗಳ ವಿರುದ್ಧ ನಡೆದ ಈ ಅಭೂತಪೂರ್ವ ಹೋರಾಟ ಮುಂದಿನ ದಿನಮಾನಗಳಲ್ಲಿ ಕಂಡು ಬರಲಿಲ್ಲ.

ಆಳುವ ವರ್ಗದವರು ಈ ಕ್ರಾಂತಿಗಳಿಗೆ ಸಂಪೂರ್ಣ ಕುರುಡಾಗಿ ವರ್ತಿಸಲಿಲ್ಲ. ತಮಗೆ ಬೇಕೆನ್ನಿಸಿದಷ್ಟನ್ನು ಮಾತ್ರ ವೈಭವೀಕರಿಸಿಕೊಂಡರು. ಏಕಪಕ್ಷೀಯವಾಗಿ ಕಿತ್ತೂರು ರಾಣಿ ಚೆನ್ನಮ್ಮಳನ್ನು ವೈಭವೀಕರಿಸಿದರು. ಚೆನ್ನಮ್ಮ ಆಳುವ ವರ್ಗಕ್ಕೆ ಸೇರಿದವಳು. ಆಕೆಯ ಪತಿ ಬ್ರಿಟೀಷರ ಕೈಗೊಂಬೆಯಾಗಿ ಮರಾಠ ಸಂಸ್ಥಾನದ ಅಂತ್ಯಕ್ಕೆ ಕೈಜೋಡಿಸಿದವನು. ಆಗಿನ ಕಾಲದ ಅನೇಕರು ಮಾಡಿದ ಹಾಗೆ ಚೆನ್ನಮ್ಮ ಗಂಡನ ಉದ್ದೇಶಗಳಿಂದ ದೂರಾಗಿ ಬ್ರಿಟೀಷರ ವಿರುದ್ಧ ಸ್ಪೂರ್ತಿದಾಯಕ ಯುದ್ಧಕ್ಕೆ ಜನರನ್ನು ಅಣಿಗೊಳಿಸಿದಳು. ಚೆನ್ನಮ್ಮ ಪ್ರಶಂಸಾರ್ಹ.

ಆದರೆ ಇತಿಹಾಸದ ತಕ್ಕಡಿ ಸರಿಯಾಗಿ ತೂಗಬೇಕಲ್ಲವೇ?

ಬ್ರಿಟೀಷರ ದಾಂಧಲೆಯಿಂದ ಹಾನಿಗೊಳಗಾದ ಕಿತ್ತೂರು ಅರಮನೆಯನ್ನು ರಕ್ಷಿಸಲಾಗಿದೆ. ಕೋಟೆಯ ಆವರಣದಲ್ಲಿ ಹುಲ್ಲು ಹಾಸು ಬೆಳೆಸಲಾಗಿದೆ. ಆ ದಿನಗಳ ಘಟನಾವಳಿಗಳನ್ನು ದಾಖಲಿಸುವುದಕ್ಕೆ ಸಂಗ್ರಹಾಲಯವಿದೆ. ಗೋಡೆಯ ಮೇಲಿನ ಬರಹ – ಚಿತ್ರಗಳನ್ನು ಗಮನಿಸಿದರೆ ವರ್ಗ ಜನರ ತಾರ್ಕಿಕತೆಗೆ ಬೆಕ್ಕಸಬೆರಗಾಗಿಬಿಡುತ್ತೀರಿ. ಯಾರೊಬ್ಬನ ಲೇಖನಿಯೂ ಸಂಗೊಳ್ಳಿ ರಾಯಣ್ಣನ ಬಗ್ಗೆ ತಿಳಿಸುವುದಿಲ್ಲ! ಚೆನ್ನಮ್ಮಳ ಸೋಲಿನ ನಂತರ ಬ್ರಿಟೀಷರ ವಿರುದ್ಧ ಯುದ್ಧ ಸಾರಿದ್ದು ಈತನೇ ಅಲ್ಲವೇ?! ನಂದಗಡದಲ್ಲಿ ನೇಣಿನ ಕುಣಿಕೆಗೆ ತಲೆಯೊಡ್ಡಿದ ಸಂಗೊಳ್ಳಿ ರಾಯಣ್ಣ ಕಿತ್ತೂರಿನ ರಾಣಿಗೆ ಮೋಸ ಮಾಡಲಿಲ್ಲ, ಕಿತ್ತೂರಿನ ಗೌರವಕ್ಕೆ ಮಸಿ ಬಳಿಯಲಿಲ್ಲ. ಬ್ರಿಟೀಷ್ ವಸಾಹತು ರಾಯಣ್ಣನನ್ನು ಕೊಂದರೆ ಭಾರತದ ಜಾತಿ – ಜಮೀನ್ದಾರಿ ಪದ್ಧತಿ ರಾಯಣ್ಣನ ದಫನು ನೆರವೇರಿಸಿತು.

ಆದರೇನಂತೆ? ಜನರ ನಡುವೆ ರಾಯಣ್ಣನಿನ್ನೂ ಬದುಕಿದ್ದಾನೆ.

ಕಿತ್ತೂರಿನ ಕೋಟೆಯಿಂದಾಚೆ ನಡೆದು ಜನರ ಬಳಿ ಬಂದರೆ ರಾಯಣ್ಣ ಸಿಗುತ್ತಾನೆ. ಇಲ್ಲಿನ ಜನರ ಸ್ಪೂರ್ತಿಯಾಗಿ, ದಂತಕತೆಯಾಗಿ, ಜಾನಪದ ಗೀತೆಗಳ ಪದವಾಗಿ. ರಾಯಣ್ಣ ಹುತಾತ್ಮನಾದ ದಿನ ಸಾವಿರಾರು ಸಂಖೈಯಲ್ಲಿ ನಂದಗಡದ ಆಲದ ಮರಕ್ಕೆ ಭೇಟಿ ನೀಡುತ್ತಾರೆ ಇಲ್ಲಿಯ ಜನ.

ರಾಣಿ ಚೆನ್ನಮ್ಮಳ ಹೋರಾಟವನ್ನು ಕೊಂಡಾಡುವ ಆಳುವ ವರ್ಗ ಒಟ್ಟಂದದಲ್ಲಿ ಬೇರೆ ರೀತಿಯದೇ ಯುದ್ಧ ಮಾಡಿದ ಸಂಗೊಳ್ಳಿ ರಾಯಣ್ಣನನ್ನು ಉದ್ದಿಶ್ಯಪೂರ್ವಕವಾಗಿ ಮರೆತುಬಿಡುತ್ತದೆ. ಶಸ್ತ್ರಗಳಿಲ್ಲದ ಜನರು ಸಶಸ್ತ್ರರಾಗಬಹುದು, ಸೈನ್ಯವಿಲ್ಲದೆಡೆ ಜನರೇ ಸೈನ್ಯ ನಿರ್ಮಿಸಬಹುದು ಮತ್ತು ಯುದ್ಧ ತರಬೇತಿಯಿಲ್ಲದ ಜನರು ಗೆರಿಲ್ಲಾ ತಂತ್ರಗಳ ಮೂಲಕ ಬಲಶಾಲಿ ಮತ್ತು ಅಧಿಕಾರ ಕೇಂದ್ರಿತ ಶತ್ರುವನ್ನೆದುರಿಸಬಹುದು ಎಂದು ತೋರಿಸಿಕೊಟ್ಟ ಖ್ಯಾತಿ ಸಂಗೊಳ್ಳಿ ರಾಯಣ್ಣನದು.

ವರ್ಗ ಹೋರಾಟದ ಮೂಲಕ ರಾಜಕೀಯ ಬದಲಾವಣೆಗಾಗಿ ಜನರು ಪ್ರಯತ್ನಿಸಲಾರಂಭಿಸಿದಾಗ ರಾಯಣ್ಣನ ಶಕ್ತಿಯ ಅರಿವಾಗುವುದು. ಸಶಸ್ತ್ರ ಸೈನಿಕ ಹೋರಾಟದ ಮಹತ್ವ ಕೂಡ ಇತಿಹಾಸದಲ್ಲಿ ದಾಖಲಾಗುವುದು. ಇತಿಹಾಸ ನಿರ್ಮಿಸಿದವರ ಒತ್ತಾಯಕ್ಕೆ ಇತಿಹಾಸ ಮಣಿಯಲೇಬೇಕು.

ಮುಂದಿನ ಅಧ್ಯಾಯ ಒಡೆಯರ್ – ಕರ್ನಾಟಕದಮೊದಲ ಕೈಗೊಂಬೆ

ಜನ 7, 2016

ಮಲ್ಡಾದ ಮತಿಗೆಟ್ಟ ಮುಸ್ಲಿಮರು…

Dr Ashok K R
ಈ ದೇಶದಲ್ಲಿ ಬೇಳೆ ಬೆಲೆ ಇನ್ನೂರು ದಾಟುದ್ರೂ ಪ್ರತಿಭಟನೆ ನಡೆಯೋಲ್ಲ, ತರಕಾರಿ ಬೆಲೆ ಗಗನ ಮುಟ್ಟಿದ್ರೂ ತಲೆ ಕೆಡಿಸಿಕೊಳ್ಳೋರಿಲ್ಲ, ಪಂಚಾಯತ್ ಚುನಾವಣೆಯ ಮೇಲೆ ಕಣ್ಣಿಟ್ಟು ಹಾಲು ಮೊಸರಿನ ದರವನ್ನು ಏಕಾಏಕಿ ಏರಿಸಿಬಿಟ್ಟರೂ ಕೇಳೋರಿಲ್ಲ ಅದೇ ದೇವರ ಬಗ್ಗೆ, ದೇವದೂತನ ಬಗ್ಗೆ ಯಾರೋ ಒಬ್ಬ ಮನಸ್ಸಿಗೆ ತೋಚಿದ ಹೊಲಸನ್ನು ಹೇಳಿಬಿಟ್ಟರೆ ಪ್ರಪಂಚವೇ ಮುಳುಗಿಹೋದಂತೆ ಪ್ರತಿಭಟಿಸೋದಕ್ಕೆ ನಾಮುಂದು ತಾಮುಂದು ಎಂದು ಓಡೋಡಿ ಬರುವ ಮತಿಗೆಟ್ಟ ಜನರ ಸಂಖೈಗಂತೂ ಇಲ್ಲಿ ಕೊರತೆಯಿಲ್ಲ. ಮತ್ತಿವರನ್ನು ಬೆಂಬಲಿಸುವುದಕ್ಕೆ ಮತಬ್ಯಾಂಕಿನ ಮೇಲೆ, ಹತ್ತಿರದಲ್ಲಿರುವ ಚುನಾವಣೆಗಳ ಮೇಲೆ ಕಣ್ಣಿಡುವ ರಾಜಕಾರಣಿಗಳ ಸಂಖೈಯಂತೂ ಭಾರತದಲ್ಲಿ ಬೇಕಾದಷ್ಟಿದೆ. 

ಅದೇನು ಈ ಅಜಂ ಖಾನೆಂಬ ಉತ್ತರಪ್ರದೇಶದ ಸಚಿವರೆಂಬ ಬ್ರಹಸ್ಪತಿಯ ನಾಲಿಗೆಯಲ್ಲೇ ಹೊಲಸಿದೆಯೋ ಗೊತ್ತಿಲ್ಲ, ಮಾತನಾಡಿದ್ದೆಲ್ಲವೂ ವಿವಾದಾತ್ಮಕವಾಗಿರುತ್ತದೆ; ಅಥವಾ ವಿವಾದಾತ್ಮಕವಾಗಿರಲೆಂದೇ ಮಾತನಾಡುತ್ತಾರೇನೋ. ಆರ್.ಎಸ್.ಎಸ್ಸಿನಲ್ಲಿರುವವರು ಬಹಳಷ್ಟು ಜನ ಮದುವೆಯಾಗುವುದಿಲ್ಲವಲ್ಲ, ಅದಕ್ಕೇ ಅವರು ಸಲಿಂಗಕಾಮಿಗಳಾಗಿರುತ್ತಾರೆ ಎಂದೊಂದು ಹೇಳಿಕೆಯನ್ನು ಒಗಾಯಿಸಿಬಿಟ್ಟರು. ಆರ್.ಎಸ್.ಎಸ್ಸಿನವರು ಸಲಿಂಗಕಾಮಿಗಳಾಗಿದ್ದರೇನು ಬಿಟ್ಟರೇನು? ಕಾಮವೆಂಬುದು ಅವರವರ ವೈಯಕ್ತಿಕ ಬದುಕು. ಉಳಿದವರಿಗೆ ತೊಂದರೆ ಕೊಡದಿದ್ದರಾಯಿತು. ಈ ಅಜಂ ಖಾನ್ ಹುಟ್ಟಿದಾರಾಭ್ಯ ಆರ್.ಎಸ್.ಎಸ್ ಕಾರ್ಯಕರ್ತರ ಬೆಡ್ ರೂಮಿನೊಳಗೆ ಕುಳಿತು ಎಲ್ಲವನ್ನೂ ನೋಡಿದ್ದಾರೆಯೇ? ಮತ್ತೇನಿಲ್ಲ, ಸುಮ್ನೆ ಸುದ್ದಿಯಲ್ಲಿರೋಕೆ ಒಂದು ಹೇಳಿಕೆಯದು ಅಷ್ಟೇ. ಇಲ್ಯಾರೋ ಸುದ್ದಿಯಲ್ಲಿದ್ದಾರೆಂದರೆ ಅಲ್ಲಿನ್ಯಾರೋ ಸುದ್ದಿ ಮಾಡುವುದು ತಪ್ಪಲ್ಲವಲ್ಲ. ಅಖಿಲ ಭಾರತ ಹಿಂದೂ ಮಹಾಸಭಾದ ಸದಸ್ಯ (ತದನಂತರ ಆ ಸಂಘಟನೆ ಈತ ನಮ್ಮ ಸದಸ್ಯನಲ್ಲ ಎಂದು ಕೈತೊಳೆದುಕೊಂಡಿತು) ಕಮಲೇಶ್ ತಿವಾರಿ ಎಂಬ ‘ಇತಿಹಾಸಕಾರ’ ಪ್ರಪಂಚದ ಮೊದಲ ಸಲಿಂಗಿ ಪ್ರವಾದಿ ಮೊಹಮ್ಮದ್ ಎಂದು ಪ್ರಚಾರಪ್ರಿಯ ಹೇಳಿಕೆ ನೀಡಿಬಿಟ್ಟರು. ಅದ್ಯಾವಾಗ ಈ ಪುಣ್ಯಾತ್ಮ ಸೌದಿ ಅರೇಬಿಯಾಗೆ ಹೋಗಿ ಸಂಶೋಧನೆ ನಡೆಸಿದರೋ, ಅಥವಾ ಪ್ರವಾದಿಗಳ ಬಗ್ಗೆ ಬಂದಿರುವ ಸಂಶೋಧನಾತ್ಮಕ ಲೇಖನಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಯಾವಾಗ ಓದಿದರೋ ಪ್ರವಾದಿಗಳೇ ಹೇಳಬೇಕು. ಪ್ರಚಾರಪ್ರಿಯರ ಅಸಂಬದ್ಧ ಮಾತುಗಳನ್ನು ವಿರೋಧಿಸಲು ಪ್ರಜಾಪ್ರಭುತ್ವದಲ್ಲಿ ಕಾನೂನಿನ ಮಾರ್ಗವಿದೆ. ಅಜಂ ಖಾನರ ವಿರುದ್ಧ, ಕಮಲೇಶ್ ತಿವಾರಿಯ ವಿರುದ್ಧ ಪೋಲೀಸರಲ್ಲಿ ದೂರು ನೀಡಬಹುದು. ಮಿಕ್ಕ ಕೆಲಸವನ್ನು ಪೋಲೀಸರು ಕಾನೂನಿನ ಪ್ರಕಾರ ಮಾಡುತ್ತಾರೆ. ಆ ಹೇಳಿಕೆಗಳನ್ನು ವಿರೋಧಿಸಲು ಪ್ರತಿಭಟನೆಯ ಮಾರ್ಗವೂ ಇದ್ದೇ ಇದೆ. ಪೋಲೀಸರು ತಮ್ಮ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ಪ್ರತಿಭಟನೆಯನ್ನು ಸತತವಾಗಿ ಮಾಡಿ ಒತ್ತಡ ಹಾಕುವ ಮಾರ್ಗವೂ ಉಂಟು. ತಲೆಕೆಟ್ಟವರ ಮಾತುಗಳನ್ನು ವಿರೋಧಿಸುವವರಿಗೆ ತಲೆ ಸರಿಯಿರಬೇಕೆಂದು ನಂಬಲಾದೀತೇ?

ಪಶ್ಚಿಮ ಬಂಗಾಳದ ಮಲ್ಡಾದಲ್ಲಿ ಕಮಲೇಶ್ ತಿವಾರಿಯ ಹೇಳಿಕೆಯನ್ನು ವಿರೋಧಿಸಿ ಲಕ್ಷದ ಲೆಕ್ಕದಲ್ಲಿ ಮುಸ್ಲಿಮರು ಬೀದಿಗಿಳಿದಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವುದು ಎಲ್ಲರ ಹಕ್ಕು ಸರಿ, ಆದರೆ ಕಮಲೇಶ್ ತಿವಾರಿಯನ್ನು ನೇಣಿಗಾಕಿ ಎಂದೆಲ್ಲ ಪ್ರತಿಭಟಿಸುವುದು ಯಾವ ಪುರುಷಾರ್ಥಕ್ಕೆ? ಅದು ಅತ್ಲಾಗಿರಲಿ, ಪ್ರತಿಭಟನೆಯ ನೆಪದಲ್ಲಿ ಈ ಮತಿಗೆಟ್ಟ ಮುಸ್ಲಿಮರು ಹಿಂದೂ ಅಂಗಡಿಗಳಿಗೆ, ವಾಹನಗಳಿಗೆ ಬೆಂಕಿ ಇಕ್ಕಿದ್ದಾರೆ; ಪೋಲೀಸರ ವಾಹನಗಳಿಗೆ ಕೊನೆಗೆ ನಮ್ಮ ಗಡಿ ಕಾಯುವ ಬಿ.ಎಸ್.ಎಫ್ ವಾಹನಗಳಿಗೂ ಬೆಂಕಿ ಹಚ್ಚಿ ಇಡೀ ಊರನ್ನು ಕೋಮುಗಲಭೆಗೆ ನೂಕಿಬಿಟ್ಟಿದ್ದಾರೆ. ಶತಮಾನಗಳ ಹಿಂದೆ ಸತ್ತ ಪ್ರವಾದಿಯ ಬಗ್ಗೆ ಪ್ರಚಾರಪ್ರಿಯನೊಬ್ಬ ನೀಡಿದ ಹೇಳಿಕೆಗೆ ಈ ಪಾಟಿ ಪ್ರತಿಭಟಿಸುವವರು ತಮ್ಮ ಸ್ಥಳೀಯ ಸಮಸ್ಯೆಗಳ ಬಗ್ಗೆ ಇದೇ ರೀತಿ ಬೀದಿಗಿಳಿಯುವ ಮನಸ್ಸು ಮಾಡಿದ್ದಿದ್ದರೆ ದೇಶ ಯಾವಾಗ್ಲೋ ಉದ್ಧಾರವಾಗಿಬಿಟ್ಟಿರೋದು. ಇಷ್ಟೆಲ್ಲ ಗಲಾಟೆಗಳಾದ ಮೇಲೆ ರಾಜಕೀಯವಿರದೆ ಇದ್ದರೆ ಹೇಗೆ? ಅದೂ ಈ ವರುಷವೇ ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾವಣೆಗಳು ನಡೆಯುವಾಗ ರಾಜಕೀಯವಿರಲೇಬೇಕಲ್ಲ. ಪಶ್ಚಿಮ ಬಂಗಾಳದಲ್ಲಿರುವುದು ತೃಣಮೂಲ ಕಾಂಗ್ರೆಸ್ಸಿನ ಸರಕಾರ; ಗಲಭೆಗೆ ಸಂಬಂಧಪಟ್ಟಂತೆ 130ಜನರ ಮೇಲೆ ಕೇಸುಗಳು ಬಿದ್ದಿವೆ. ಬಂಧನವಾಗಿರುವುದು ಕೇವಲ ಹತ್ತು ಜನರು, ಅದರಲ್ಲೂ ಕೆಲವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಮುಸ್ಲಿಮರ ಮತಗಳನ್ನು ಕಳೆದುಕೊಳ್ಳಲಿಚ್ಛಿಸದ ತೃಣಮೂಲ ಕಾಂಗ್ರೆಸ್ ಸರಕಾರ ಒಂದಷ್ಟು ಮೆದುವಾಗಿಬಿಟ್ಟಿದೆ ಈ ಮತಿಗೆಟ್ಟವರ ವಿರುದ್ಧ. ಇನ್ನು ಪಶ್ಚಿಮ ಬಂಗಾಳದಲ್ಲಿ ಅಸ್ತಿತ್ವ ಕಂಡುಕೊಳ್ಳುವ ದಾರಿಯಲ್ಲಿರುವ ಬಿಜೆಪಿಗೆ ಹಿಂದೂ ರಕ್ಷಕ ನಾನೊಬ್ಬನೇ ಎಂದು ತೋರಿಸಿಕೊಳ್ಳುವ ಹಪಾಹಪಿ, ಸಿಪಿಎಂ ಮತ್ತು ಅಸ್ತಿತ್ವನ್ನಾಗಲೇ ಕಳೆದುಕೊಂಡಿರುವ ಕಾಂಗ್ರೆಸ್ಸಿಗೆ ಮಲ್ಡಾದಲ್ಲಿ ಹೆಚ್ಚಿನ ಸಂಖೈಯಲ್ಲಿರುವ ಮುಸ್ಲಿಮರ ಮತಗಳನ್ನು ಸುಖಾಸುಮ್ಮನೆ ಅದೂ ಇದೂ ಹೇಳಿಕೆ ನೀಡಿ ಕಳೆದುಕೊಳ್ಳಬೇಕೆ ಎಂಬ ಚಿಂತೆ. ಒಟ್ನಲ್ಲಿ ಮತಿಗೆಟ್ಟ ಜನರನ್ನು ಆಳಲು ತಲೆಕೆಟ್ಟ ಜನರೇ ಸರಿ ಬಿಡಿ. ‘ಅದ್ಯಾರೋ ಏನೋ ಮಾತಾಡುದ್ರೆ ನಿಮ್ದೇನ್ರಯ್ಯಾ ಹಾಳಾಗಿದ್ದು, ಮುಚ್ಕೊಂಡು ನಿಮ್ ನಿಮ್ ಕೆಲ್ಸ ಮಾಡೋಗ್ರಯ್ಯ’ ಎಂದು ಈ ಮತಿಗೆಟ್ಟವರಿಗೆ ಹೇಳುವಂತಹ ನಾಯಕ ಧರ್ಮದೊಳಗಿನ ಸಮುದಾಯದಲ್ಲೂ ಇಲ್ಲ, ರಾಜಕಾರಣಿಗಳಲ್ಲೂ ಇಲ್ಲ. ಹೇಳಿದರೂ ಕೇಳುವಷ್ಟು ಬುದ್ಧಿವಂತರೇ ನಾವು? ‘ಧರ್ಮವೆಂಬುದು ಅಫೀಮಿದ್ದ ಹಾಗೆ’ ಎಂಬ ಕಾರ್ಲ್ ಮಾರ್ಕ್ಸನ ಮಾತುಗಳನ್ನು ಪದೇ ಪದೇ ನೆನಪಿಸಿಕೊಳ್ಳುತ್ತಲೇ ಇರಬೇಕು.

ಜನ 2, 2016

ದೆವ್ವದ ಮಡಿಲಲ್ಲಿ ನಗುತ್ತಾ ವಿಶ್ರಮಿಸಿ!

ಡಾ.ಅಶೋಕ್.ಕೆ.ಆರ್
ಕತೆಗಾಗಿ ನಟರಿರಬೇಕು, ನಟರಿಗಾಗಿ ಕತೆ ಸೃಷ್ಟಿಯಾಗಬಾರದು ಎನ್ನುವಂಶವನ್ನು ಮತ್ತೊಮ್ಮೆ ನಿರೂಪಿಸುವ ಚಿತ್ರ ಕತೆ-ಚಿತ್ರಕತೆ-ನಿರ್ದೇಶನ: ಪುಟ್ಟಣ್ಣ. ಸಿನಿಮಾದ ಹೆಸರಿಗೂ ಸಿನಿಮಾದೊಳಗಿನ ಕತೆಗೂ ಏನೂ ಸಂಬಂಧವಿಲ್ಲ. ‘ದಂಡುಪಾಳ್ಯ’ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ರಾಜು ಈ ಸಿನಿಮಾಕ್ಕೆ ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣರವರ ಹೆಸರಿಟ್ಟಿರುವುದು ಗಿಮಿಕ್ಕಿನ ಉದ್ದೇಶಕ್ಕೇ ಹೊರತು ಇನ್ಯಾವ ಕಾರಣಕ್ಕೂ ಅಲ್ಲ ಎನ್ನುವುದು ಚಿತ್ರ ಪ್ರಾರಂಭವಾದ ಹತ್ತು ನಿಮಿಷದೊಳಗೆ ಅರಿವಾಗಿಬಿಡುತ್ತದೆ! ಇದು ನಗಾಡಿಸುವ ದೆವ್ವದ ಚಿತ್ರ! ದೆವ್ವ ನಗಿಸುವುದಿಲ್ಲ, ದೆವ್ವದ ಸುತ್ತಲಿರುವ ಮನುಷ್ಯರು ಸಿಕ್ಕಾಪಟ್ಟೆ ನಗಿಸುತ್ತಾರೆ. ನಕ್ಕು ನಕ್ಕು ಹೊಟ್ಟೆ ನೊಂದರೆ ಯಾರು ಜವಾಬ್ದಾರಿ ಎಂಬ ಬಗ್ಗೆ ಟೈಟಲ್ ಕಾರ್ಡಿನಲ್ಲಿ ಸೂಚಿಸಿಲ್ಲ. ಎರಡೂವರೆ ಘಂಟೆ ಸಂಪೂರ್ಣ ಮನೋರಂಜನೆ ಅನುಭವಿಸಿದ ಮೇಲೆ ಇದು ತೆಲುಗಿನ ‘ಗೀತಾಂಜಲಿ’ ಎಂಬ ಚಿತ್ರದ ರೀಮೇಕಂತೆ ಎಂಬ ವಿಷಯ ಓದಿದ ನೆನಪಾಗಿ ರವಷ್ಟು ಬೇಸರವಾಗುತ್ತದೆ. ತೆಲುಗು ಚಿತ್ರ ನೋಡಿದ್ದವರು ಮತ್ತೊಮ್ಮೆ ನೋಡುವ ಅವಶ್ಯಕತೆಯಿಲ್ಲ. ಉಳಿದವರು ತಪ್ಪದೇ ನೋಡಿ, ದೆವ್ವದ ಜೊತೆ ನಗುತ್ತಾ ಕಾಲ ಕಳೆಯಿರಿ!

ಚಿತ್ರದ ನಾಯಕ ಸತ್ಯಹರೀಶ್ಚಂದ್ರ (ಕೋಮಲ್) ಪ್ರಶಸ್ತಿ ವಿಜೇತ ನಿರ್ದೇಶಕನಾಗಬೇಕೆಂಬ ಆಸೆಯಿಂದ ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಾನೆ. ನಿರ್ಮಾಪಕರನ್ನು ಹುಡುಕುತ್ತಿರುತ್ತಾನೆ. ಸಾಫ್ಟ್ ವೇರ್ ಕಂಪನಿಯ ಮಾಲೀಕ ರವಿಶಂಕರ್ ಗೆ ಸಿನಿಮಾ ನಿರ್ಮಿಸಿ ಪ್ರಶಸ್ತಿ ಗಳಿಸಿ ಹೆಸರು ಮಾಡಬೇಕೆಂಬ ಆಸೆ. ರವಿಶಂಕರರನ್ನು ಭೇಟಿ ಆಗಲು ಮೂರು ತಾಸು ತಡವಾಗಿ ಬರುವ ನಾಯಕ ಕತೆ ಹೇಳಲಾರಂಭಿಸುತ್ತಾನೆ. ಅದು ಸಿನಿಮಾ ಕತೆಯಾಗಿರದೆ ಬೆಂಗಳೂರಿಗೆ ಬರುವಾಗ ಬಸ್ಸಿನಲ್ಲಿ ಸಿಕ್ಕ ನಾಯಕಿ (ಪ್ರಿಯಾಮಣಿ), ಬೆಂಗಳೂರಿನ ಮನೆಯಲ್ಲಿ ಪ್ರಾರಂಭವಾದ ದೆವ್ವದ ಕಾಟವಾಗಿರುತ್ತದೆ. ಬಸ್ಸಿನಲ್ಲಿ ಸಿಕ್ಕವಳೇ ದೆವ್ವವಾ? ಅಥವಾ ಮನೆಯಲ್ಲಿ ಮತ್ತೊಂದು ದೆವ್ವವಿದೆಯಾ? ಎಂಬ ಕುತೂಹಲದಿಂದಲೇ ಚಿತ್ರ ಮುಂದುವರೆಯುತ್ತದೆ. ಮನೆಯಲ್ಲಿ ಹತ್ಯೆಯಾಗಿದ್ದ ಯುವತಿ ಯಾರು? ಅವಳನ್ನು ಕೊಂದವರಾರು? ಎಂಬ ಕುತೂಹಲವೆಲ್ಲವೂ ಎರಡನೆಯ ಅರ್ಧದ ಪ್ರಾರಂಭದಲ್ಲೇ ಗೊತ್ತಾಗಿಬಿಡುತ್ತದೆ. ಇನ್ನೇನು ಚಿತ್ರ ಬೋರು ಹೊಡೆಯುತ್ತೆ ಬಿಡಿ ಎಂದುಕೊಳ್ಳುವಷ್ಟರಲ್ಲಿ ಎರಡನೇ ಅರ್ಧದ ನಾಯಕ ಸಾಧು ಕೋಕಿಲ ಪ್ರವೇಶವಾಗುತ್ತದೆ! ಮತ್ತಷ್ಟು ನಕ್ಕು ಸುಸ್ತಾಗುವ ಸುಸಂದರ್ಭ!

ಹೆಸರಿಗೆ ಕೋಮಲ್ ನಾಯಕನಾದರೂ ನಿರ್ಮಾಪಕ ಸಿ.ಆರ್.ಮನೋಹರ್ ಹೆಸರೇಳಿಕೊಂಡು ದುಡ್ಡು ಪೀಕುವ ಡಿ.ಕೆ, ಪಿಕೆ (ಕುರಿ ಪ್ರತಾಪ್ ಮತ್ತು ಪ್ರಶಾಂತ್ ಸಿದ್ಧಿ), ಸ್ನೇಹಿತ ಮಧು, ಸಾಧು ಕೋಕಿಲ, ರವಿಶಂಕರ್, ಪ್ರಿಯಾಮಣಿಯ ಪಾತ್ರಗಳಿಗೆ ಅಷ್ಟೇ ಪ್ರಾಮುಖ್ಯತೆಯಿದೆ. ದೊಡ್ಡಣ್ಣ, ಪೂಜಾ ಗಾಂಧಿ ಸುಮ್ನೆ ಹಿಂಗೆ ಮುಖ ತೋರ್ಸಿ ಹೋಗಿಬಿಡುತ್ತಾರೆ. ದೆವ್ವವಿಲ್ಲ ಬಿಡ್ರಿ ಎಂದು ಒಂದು ಹಂತದಲ್ಲಿ ತೋರಿಸುವ ಚಿತ್ರ ಕೊನೆಯ ಭಾಗದಲ್ಲಿ ದೆವ್ವ ಇದೆ ಕಣ್ರೀ ಎಂದು ನಂಬಿಸಲು ಪ್ರಯತ್ನಿಸುತ್ತದೆ. ಚಿತ್ರದ ಕೊನೆಯಲ್ಲಿ ಬರುವ ಒಂದು ಪುಟ್ಟ ಹಾಡು ‘ಓ! ಚಿತ್ರದಲ್ಲಿ ಹಾಡುಗಳೇ ಇರಲಿಲ್ಲ ಅಲ್ವಾ’ ಎಂದು ನೆನಪಿಸುವುದು ಪ್ರೇಕ್ಷಕರು ಚಿತ್ರದ ಹಾಸ್ಯ ದೃಶ್ಯಗಳಲ್ಲಿ ಮಗ್ನವಾಗಿಬಿಟ್ಟಿರುವ ಸೂಚನೆ! ಹೀರೋಯಿಸಮ್ಮಿನ ಪಾತ್ರಗಳನ್ನು ‘ಹೀರೋ’ಗಳಿಗೆ ಬಿಟ್ಟು ತಮಗೆ ಸೂಕ್ತವಾಗುವ ಇಂತಹ ಶಕ್ತ ಪಾತ್ರಗಳಲ್ಲಿ ನಟಿಸುವುದನ್ನು ಕೋಮಲ್ ಮುಂದುವರೆಸಿದರೆ ನೋಡುವವರಿಗೂ ಅನುಕೂಲ. ರಾತ್ರಿಹೊತ್ತು ದೆವ್ವದ ನರ್ತನವಾಗುತ್ತಿದ್ದಾಗ ಕಿಟಕಿಯಿಂದ ಸೂರ್ಯನ ಬೆಳಕು ಬೀಳುವ ವಿಚಿತ್ರ ದೃಶ್ಯಗಳನ್ನು ಮುಂದಿನ ಚಿತ್ರಗಳಲ್ಲಿ ಚಿತ್ರೀಕರಿಸದಿರುವುದು ನಿರ್ದೇಶಕರಿಗೆ ಒಳಿತು! ಇಂತಹ ಚಿಕ್ಕ ಪುಟ್ಟ ಸಂಗತಿಗಳನ್ನು ಮರೆತು, ರೀಮೇಕ್ ಚಿತ್ರ ಅನ್ನೋ ಬೇಸರ ಮರೆತು ಸಿನಿಮಾ ಮಂದಿರಕ್ಕೆ ಹೋದರೆ ಕೊಟ್ಟ ದುಡ್ಡಿಗೆ ಮೋಸ ಮಾಡುವುದಿಲ್ಲ ಪುಟ್ಟಣ್ಣ.

1 ಜನವರಿ, 1818: ಭೀಮಾ ಕೊರೇಗಾಂವಿನ ಯುದ್ಧ

ಕೊರೇಗಾಂವಿನ 'ವಿಜಯ ಸ್ಥಂಭ'
ಮೂಲ: drambedkarbooks.com
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್.

ಭಾರತದ ಇತಿಹಾಸವೆಂದರೆ ಅಸ್ಪ್ರಶ್ಯರು ಮತ್ತು ಮೇಲ್ಜಾತಿಯರ ನಡುವಿನ ಸಂಘರ್ಷ. ಭಾರತದ ಇತಿಹಾಸದ ನಿಜ ಬಣ್ಣವನ್ನು ತೋರಿಸಲು ಇತಿಹಾಸಕಾರರು ಆಸಕ್ತರಾಗಿಲ್ಲ.

ಜನವರಿ 1, 1818ರಲ್ಲಿ ಸಂಖ್ಯಾಬಲದಲ್ಲಿ ಮೇಲುಗೈ ಸಾಧಿಸಿದ್ದ ಪೇಶ್ವೆಯ ಸೈನ್ಯದ ವಿರುದ್ಧ ಕೆಲವು ನೂರು ಅಸ್ಪ್ರಶ್ಯ ಸೈನಿಕರು ಕೊರೇಗಾಂವಿನ ಯುದ್ಧದಲ್ಲಿ ದಿಗ್ವಿಜಯ ಸಾಧಿಸಿದ ಮಹತ್ವದ ಸಂಗತಿಯನ್ನು ಬಹಳ ನಾಜೂಕಿನಿಂದ ಇತಿಹಾಸದ ಪುಟಗಳಲ್ಲಿ ಅಡಗಿಸಿಡಲಾಗಿದೆ.

ಬ್ರಿಟೀಷ್ ಸೈನ್ಯದಲ್ಲಿದ್ದ ಐದು ನೂರು ಮಹರ್ ಸೈನಿಕರು ಪುಣೆಯನ್ನಾಳುತ್ತಿದ್ದ ಬ್ರಾಹ್ಮಣ ಪೇಶ್ವೆಯರ ವಿರುದ್ಧ ನಡೆಸಬೇಕಿದ್ದ ಯುದ್ಧದ ತಯಾರಿಯಲ್ಲಿದ್ದರು. ಇತಿಹಾಸದ ಪುಸ್ತಕಗಳಲ್ಲಿ ಈ ಯುದ್ಧಕ್ಕೆ ಮಹತ್ವ ಕೊಡಲಾಗಿದೆ ಮತ್ತು ನಾವೆಲ್ಲರೂ ಇದನ್ನು ಪೇಶ್ವೆಯವರ ಸಾಮ್ರಾಜ್ಯವನ್ನು ಸಂಪೂರ್ಣವಾಗಿ ನಾಶಪಡಿಸಿದ ಮತ್ತು ಬ್ರಿಟೀಷ್ ಸಾಮ್ರಾಜ್ಯವನ್ನು ಭಾರತದಲ್ಲಿ ಭದ್ರವಾಗಿ ಸ್ಥಾಪಿಸಿದ ಎರಡನೇ ಆಂಗ್ಲ – ಮರಾಠ ಯುದ್ಧವೆಂದು ಓದಿದ್ದೇವೆ. ಈ ಯುದ್ಧಕ್ಕೆ ಮತ್ತೊಂದು ಐತಿಹಾಸಿಕ ಆಯಾಮವೂ ಇದೆ, ಅದರ ಅರಿವು ನಮಗಿರಬೇಕು.

ಈ ಯುದ್ಧ ಭಾರತದ ಅಸ್ಪ್ರಶ್ಯರ ಮತ್ತು ಬ್ರಾಹ್ಮಣ್ಯದ ನಡುವೆ ನಡೆದ ಯುದ್ಧ.

ಭೀಮಾ ಕೊರೇಗಾಂವಿನ ಬಗೆಗಿನ ಪುಟ್ಟ ಡಾಕ್ಯುಮೆಂಟರಿ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

ಮಹರ್ ಸೈನಿಕರಿಗೆ, ಇದು ಮತ್ತೊಂದು ಯುದ್ಧವಷ್ಟೇ ಆಗಿರಲಿಲ್ಲ. ತಮ್ಮ ಆತ್ಮಗೌರವವನ್ನು ಹೆಚ್ಚಿಸುವ, ಮನುಸ್ಮೃತಿಯ ಚಾತುರ್ವರ್ಣ್ಯದ ವಿರುದ್ಧದ ಹೋರಾಟವಾಗಿತ್ತು. ಕೇವಲ ಐನೂರರಷ್ಟು ಸಂಖೈಯಲ್ಲಿದ್ದ ಮಹರ್ ಸೈನಿಕರು ಮೂವತ್ತು ಸಾವಿರದಷ್ಟಿದ್ದ ಪೇಶ್ವೆಯವರ ಸೈನ್ಯವನ್ನು ಸೋಲಿಸಲು ತೆಗೆದುಕೊಂಡಿದ್ದ ಕೇವಲ ಒಂದು ದಿನ. ಇದಕ್ಕೆ ಸಮನಾದ ದಿಗ್ವಿಜಯ ಭಾರತದ ಇತಿಹಾಸದಲ್ಲಿ ಬಹುಶಃ ಯಾವುದೂ ಇಲ್ಲ.

ಬ್ರಾಹ್ಮಣರ ಆಡಳಿತವಿದ್ದ ಮಹಾರಾಷ್ಟ್ರದಲ್ಲಿ ಜಾತಿ ಆಧಾರಿತ ಅಸಮಾನತೆ ವಿಜ್ರಂಭಿಸುತ್ತಿತ್ತು; ಚಾತುರ್ವರ್ಣ್ಯದ ವ್ಯವಸ್ಥೆಯ ಹೊರಗಿದ್ದ ಅಸ್ಪ್ರಶ್ಯರು ಬ್ರಾಹ್ಮಣ್ಯದ ನೀತಿ ನಿಯಮಗಳ ಕಾರಣದಿಂದ ಅಭಿವೃದ್ಧಿ ವಂಚಿತರಾಗಿದ್ದರು.

ಅಸ್ಪ್ರಶ್ಯರು ಬೆನ್ನಿಗೊಂದು ಕಸಪೊರಕೆಯನ್ನು ಕಟ್ಟಿಕೊಂಡು ನಡೆಯಬೇಕಿತ್ತು. ಕಾರಣ? ಊರಿನೊಳಗೆ ನಡೆಯುವಾಗ ಮೂಡುವ ಅವರ ಹೆಜ್ಜೆಗುರುತುಗಳನ್ನು ಕಸಪೊರಕೆ ಅಳಿಸಿಹಾಕಬೇಕಿತ್ತು. ಮಹರರ ಹೆಜ್ಜೆ ಗುರುತು ಹಾದಿಯನ್ನು ಕಲುಷಿತಗೊಳಿಸಬಾರದೆಂದು ಮಾಡಿದ್ದ ನಿಯಮವಿದು! ಇಷ್ಟಕ್ಕೇ ಮುಗಿಯಲಿಲ್ಲ. ಉಗುಳಲು ಕತ್ತಿಗೊಂದು ಮಡಿಕೆಯನ್ನು ನೇತುಹಾಕಿಕೊಳ್ಳಬೇಕಿತ್ತು. ಮೇಲ್ಜಾತಿಯವರಿಗೆ ಎಲ್ಲೆಂದರಲ್ಲಿ ಉಗುಳುವ ಸ್ವಾತಂತ್ರ್ಯವಿತ್ತೆನಿಸುತ್ತೆ ಬಿಡಿ. ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಲು ಅವರಿಗೆ ಅನುಮತಿಯಿರಲಿಲ್ಲ ಮತ್ತು ಶಿಕ್ಷಣದಿಂದ ದೂರನಿಲ್ಲಬೇಕಿತ್ತು. ಈ ನಿಯಮಗಳನ್ನು ಪಾಲಿಸದ ಅಸ್ಪ್ರಶ್ಯರನ್ನು ಹತ್ಯೆ ಮಾಡಲಾಗುತ್ತಿತ್ತು. ಭೀಮಾ ಕೊರೇಗಾಂವಿನ ಯುದ್ಧ ಬ್ರಾಹ್ಮಣ ಹಿತಸಾಕ್ತಿಗೆ ಅಸ್ಪ್ರಶ್ಯರು ಕೊಟ್ಟ ಉತ್ತರವಾಗಿತ್ತು.

ಈ ಯುದ್ಧ ಜನವರಿ 1, 1818ರಂದು ಕೊರೇಗಾಂವಿನ ಭೀಮಾ ನದಿಯ ತೀರದಲ್ಲಿ ಬ್ರಿಟೀಷ್ ಸರಕಾರದ ಬಾಂಬೆ ನೇಟಿವ್ ಇನ್ಫೆಂಟ್ರಿಯ ಮಹರ್ ಸೈನಿಕರ ನಡುವೆ ಮತ್ತು ಪೇಶ್ವೆ ಸೈನಿಕರ ನಡುವೆ ನಡೆಯಿತು. ಶಿರೂರಿನಿಂದ ಭೀಮಾ ಕೊರೇಗಾಂವಿನವರೆಗೆ 27 ಕಿಲೋಮೀಟರುಗಳನ್ನು ಸರಿಯಾದ ಅನ್ನಾಹಾರವಿಲ್ಲದೆ ಕ್ರಮಿಸಿದ ಅಸ್ಪ್ರಶ್ಯ ಸೈನಿಕರು ಪೇಶ್ವೆಯ ಸೈನ್ಯದೊಂದಿಗೆ ಹನ್ನೆರಡು ತಾಸು ಕಾದಾಡಿ ದಿನದ ಕೊನೆಗೆ ಅವರನ್ನು ಸಂಪೂರ್ಣವಾಗಿ ಸೋಲಿಸಿಯೇ ಬಿಟ್ಟರು.

ಅನೇಕ ಕಾರಣಗಳಿಂದ ಈ ಯುದ್ಧ ಮಹತ್ವವುಳ್ಳದ್ದು. ಮೊದಲಿಗೆ, ಬ್ರಿಟೀಷರು ಒಂದು ಪುಟ್ಟ ಸೈನ್ಯದೊಂದಿಗೆ ಈ ಯುದ್ಧಕ್ಕೆ ಅಣಿಯಾಗಿದ್ದರು, ಅತ್ಯಂತ ಕೆಟ್ಟ ಸೋಲನ್ನು ಅವರು ನಿರೀಕ್ಷಿಸಿದ್ದರು. ಎರಡನೆಯದಾಗಿ, ಕೊರೇಗಾಂವಿನ ಈ ಯುದ್ಧ ಪೇಶ್ವೆಯವರನ್ನು ಹಣಿಯಲು ಮತ್ತವರನ್ನು ಶರಣಾಗತರನ್ನಾಗಿಸಲು ನೆರವಾಯಿತು. ಮೂರನೆಯ ಬಹುಮುಖ್ಯ ಮಹತ್ವ, ಈ ಯುದ್ಧ ಜಾತಿ ಬಂಧನದ ಸರಪಳಿಗಳನ್ನು ಒಡೆದು ಹಾಕಲು ಮಹಾರಾಷ್ಟ್ರದ ಅಸ್ಪ್ರಶ್ಯ ಮಹರರು ನಡೆಸಿದ ಪ್ರಯತ್ನ.

ಯುದ್ಧದಲ್ಲಿ ಭಾಗವಹಿಸಿದ್ದ ಬಾಂಬೆ ನೇಟಿವ್ ಇನ್ಫೆಂಟ್ರಿಯ ಸೈನಿಕರ ಶೌರ್ಯವನ್ನು ಗೌರವಿಸಲಾಯಿತು. ಅಧಿಕೃತ ವರದಿಯಲ್ಲಿ ಈ ಸೈನಿಕರ ಧೀರೋದ್ದಾತ ಮನೋಭಾವನೆ, ಶಿಸ್ತಿನ ಹೋರಾಟ, ಧೈರ್ಯವನ್ನು ನೆನಪು ಮಾಡಿಕೊಳ್ಳಲಾಗಿದೆ.

ಅತ್ಯಂತ ಕಠಿಣವಾಗಿದ್ದ ಶಿರೂರು – ಕೊರೇಗಾಂವ್ ನಡುವಿನ 27 ಕಿಲೋಮೀಟರುಗಳ ನಡುಗೆಯನ್ನು ಅನ್ನಾಹಾರದ ಕೊರತೆ, ಖಾಯಿಲೆಗಳ ನಡುವೆ ಯಶಸ್ವಿಯಾಗಿ ಪೂರೈಸಿ ಯುದ್ಧವನ್ನು ಗೆದ್ದ ಮಹರ್ ಸೈನಿಕರ ಕಾರ್ಯ ಪ್ರಶಂಸಾರ್ಹವಾಗಿತ್ತು. ಯುದ್ಧರಂಗದಲ್ಲಿ ಮುನ್ನಡೆಯುತ್ತಿದ್ದಾಗ, ಬಂಧನವಾದಾಗ, ಕೋಟೆಗೆ ಲಗ್ಗೆ ಇಡುತ್ತಿದ್ದಾಗ ಅಥವಾ ಕೆಲವೊಮ್ಮೆ ಗೆಲುವಿನ ಕಾರಣಕ್ಕಾಗಿ ಎರಡೆಜ್ಜೆ ಹಿಂದಿಡುತ್ತಿದ್ದಾಗ ಈ ಸೈನಿಕರು ತಮ್ಮ ಅಧಿಕಾರಿಗಳು ಮತ್ತು ಕಾಮ್ರೇಡುಗಳ ಜೊತೆ ಬದ್ಧತೆಯಿಂದ ನಿಂತಿದ್ದರು, ರೆಜಿಮೆಂಟಿನ ಗೌರವವನ್ನು ಮಣ್ಣುಪಾಲು ಮಾಡುವ ಯಾವ ಕೆಲಸವನ್ನೂ ಇವರು ಮಾಡಲಿಲ್ಲ.

ಮಹರ್ ಸೈನಿಕರ ಶೌರ್ಯವನ್ನು ನೆನಪಿನಲ್ಲಿಡುವ ಸಲುವಾಗಿ 1851ರಲ್ಲಿ ಕೊರೇಗಾಂವಿನಲ್ಲಿ ಬ್ರಿಟೀಷರು ವಿಜಯ ಸ್ಥಂಭವನ್ನು ಸ್ಥಾಪಿಸಿದರು. ಸ್ಥಂಭದ ಮೇಲೆ ಯುದ್ಧದಲ್ಲಿ ಹುತಾತ್ಮರಾದ 22 ಮಹರ್ ಸೈನಿಕರ ಹೆಸರುಗಳನ್ನು ಕೆತ್ತಲಾಗಿದೆ. ಭಾರತದ ಜಾತಿವ್ಯವಸ್ಥೆಯ ವಿರುದ್ಧ ಯುದ್ಧ ಸಾರಿದ ಮಹರರ ಶೌರ್ಯದ ವಿಜಯ ಸ್ಥಂಭ ನಮ್ಮ ಹೆಮ್ಮೆಯ ಪ್ರತೀಕವಾಗಿ ಇವತ್ತಿಗೂ ಕೊರೇಗಾಂವಿನಲ್ಲಿ ಘನತೆಯಿಂದ ನಿಂತಿದೆ.

ಡಾ. ಬಾಬಾಸಾಹೇಬ್ ಅಂಬೇಡ್ಕರರು ಪ್ರತಿ ವರ್ಷ ಜನವರಿ ಒಂದರಂದು ಕೊರೇಗಾಂವಿಗೆ ಭೇಟಿ ಕೊಡುತ್ತಿದ್ದರು, ಈಗಿನ ದಲಿತರು ಇದೇ ರೀತಿಯ ಶೌರ್ಯ ಮತ್ತು ಬದ್ಧತೆಯನ್ನು ತೋರಿಸಿ ಇಡೀ ದೇಶದಿಂದ ಬ್ರಾಹ್ಮಣ್ಯವನ್ನು ತೊಲಗಿಸಬೇಕೆಂದು ಹೇಳುತ್ತಿದ್ದರು. 1927ರ ಜನವರಿ ಒಂದರಂದು ಕೊರೇಗಾಂವಿನಲ್ಲಿ ದೊಡ್ಡ ಸಮಾವೇಶವನ್ನು ಆಯೋಜಿಸಿದ ಅಂಬೇಡ್ಕರರು ಅಸ್ಪ್ರಶ್ಯ ಸೈನಿಕರ ವೀರಗಾಥೆಯನ್ನು ಸಾರ್ವಜನಿಕರಿಗೆ ನೆನಪು ಮಾಡಿಕೊಟ್ಟರು.

ಪ್ರತಿ ವರ್ಷ ವರ್ಷದಾರಂಭದ ಹಿಂದಿನ ದಿನ ಅರ್ಥಹೀನ ಮೋಜು ಮಸ್ತಿಗಳಲ್ಲಿ ತೊಡಗುವ ಬದಲು ಪೇಶ್ವೆಗಳನ್ನು ಸೋಲಿಸಿ, ಮನುಸ್ಮ್ರತಿಯ ಆರಾಧಕರಾದ ಬ್ರಾಹ್ಮಣರ ಆಳ್ವಿಕೆಯಿಂದ ಅಸ್ಪ್ರಶ್ಯರಿಗೆ ಸ್ವತಂತ್ರ ತಂದುಕೊಟ್ಟ ನಮ್ಮ ಧೀರೋದ್ದಾತ ಹಿರೀಕರಿಗೆ ಗೌರವ ಸಲ್ಲಿಸೋಣ. ನಮ್ಮ ಭವ್ಯ ಇತಿಹಾಸವನ್ನು ಮತ್ತಷ್ಟು ಅರಿಯಲೂ ಇದು ಸುಸಂದರ್ಭ.

ಬಿ.ಆರ್.ಭಾಸ್ಕರ್ ಪ್ರಸಾದ್ ರವರು ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದ ಭೀಮಾ ಕೊರೇಗಾಂವಿನ ಬಗೆಗಿನ ಸಾಕ್ಷ್ಯಚಿತ್ರವನ್ನು ನೋಡಿದ ನಂತರ ಆ ಯುದ್ಧದ ಬಗ್ಗೆ ತಿಳಿದುಕೊಳ್ಳಲು ಒಂದಷ್ಟು ಅಂತರ್ಜಾಲ ಜಾಲಾಡುತ್ತಿದ್ದಾಗ drambedkarbooks.comನಲ್ಲಿ ಸಿಕ್ಕ ಲೇಖನದ ಕನ್ನಡ ಭಾವಾನುವಾದವಿದು.

ಜನ 1, 2016

ಮೇಕಿಂಗ್ ಹಿಸ್ಟರಿ: ಮುನ್ನುಡಿ.

Making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
‘ಮೇಕಿಂಗ್ ಹಿಸ್ಟರಿ’ ಮೊದಲ ಸಂಪುಟದ ಮುನ್ನುಡಿಯಲ್ಲಿ ಆ ಪುಸ್ತಕವನ್ನು ರಚಿಸುವ ಕಾರ್ಯದಲ್ಲಿ ಅನೇಕರ ಶ್ರಮವಿದೆ ಎಂದು ತಿಳಿಸಿದ್ದೆ. ಸಂಪುಟ – 2 ಬಿಡುಗಡೆಗೆ ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ಅನಾಮಿಕರಾಗಿಯೇ ಉಳಿದು ಹೋಗಿದ್ದ ಅಂತಹ ಒಬ್ಬ ಲೇಖಕರ ಪರಿಚಯ ಮಾಡಿಕೊಡಲೇಬೇಕಾದ ಅನಿವಾರ್ಯತೆ ಉಂಟಾಗಿದೆ. ಸಂತಸದ ಭಾವದೊಂದಿಗೆ ಮಾಡಿಕೊಡಬೇಕಾಗಿದ್ದ ಈ ಪರಿಚಯ ಸಂದರ್ಭಗಳು ಸೃಷ್ಟಿಸಿದ ವೈಪರೀತ್ಯಗಳಿಂದ ವಿಶಣ್ಣ ಭಾವನೆ ಪಡೆದುಕೊಂಡಿದೆ.

ಆಪ್ತ ಸಂಗಾತಿಗಳಿಂದ ‘ರಾಜಿ’ ಎಂದು ಕರೆಯಿಸಿಕೊಳ್ಳುತ್ತಿದ್ದಾಕೆ ಮಾರ್ಚ್ 20, 2001ರಂದು ಆಂಧ್ರದ ವಿಶಾಖಪಟ್ಟಣದ ಕೊತ್ತಪಲ್ಲಿ ಅರಣ್ಯಪ್ರದೇಶದಲ್ಲಿ ಪೋಲೀಸರ ಗುಂಡಿಗೆ ಬಲಿಯಾಗುತ್ತಾಳೆ. ಮಾರ್ಚ್ 20ರ ಮಧ್ಯಾಹ್ನ ವಿಶೇಷ ಪೋಲೀಸ್ ಪಡೆಯ 20 ಮಂದಿಯ ತಂಡ ರಾಜಿಯನ್ನು ಬಂಧಿಸಿ ನಾಲ್ಕು ಘಂಟೆಗಳಿಗೂ ಹೆಚ್ಚು ಕಾಲ ಹಿಂಸಿಸಿ ಕೊನೆಗೆ ತಲೆಯ ಹಿಂಭಾಗಕ್ಕೆ ಗುಂಡೊಡೆದುಬಿಡುತ್ತಾರೆ.

ಪೊದೆಯೊಂದರ ಹಿಂದೆ ಅಡಗಿ ಈ ದೃಶ್ಯವನ್ನು ನೋಡಿದ ಇಬ್ಬರು ಪುಟಾಣಿಗಳು ಬರ್ಬರತೆ ಸೃಷ್ಟಿಸಿದ ತಲ್ಲಣದಿಂದ ಮೂರು ದಿನ ಅನ್ನ ನೀರು ಮುಟ್ಟುವುದಿಲ್ಲ. ಆಘಾತದಿಂದ ಹೊರಬಂದ ಮಕ್ಕಳು ರಾಜಿಯ ಬಗೆಗಿನ ಗೌರವವನ್ನೆಚ್ಚಿಸುವ ಮಾತುಗಳನ್ನೇಳಿದರು. ಸಾಯುವ ಸಮಯದಲ್ಲಿ ‘ರಾಜಿ’ ರಾಜಿಯಾಗಲಿಲ್ಲ. ಕ್ರಾಂತಿಗೆ ಚಿರಾಯುವಾಗಲಿ ಎಂದು ಘೋಷಿಸುತ್ತಾ ಮರಣ ಹೊಂದಿದಳು.

ಕ್ರಾಂತಿಯ ಪರೀಕ್ಷೆಯಲ್ಲಿ ರಾಜಿ ಪೂರ್ಣಾಂಕದೊಂದಿಗೆ ಉತ್ತೀರ್ಣಳಾದಳು. ಗೋಧಿ ಬಣ್ಣದ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಾದ ಶೋಷಿತರ ನಾಯಕಿಗೆ ‘ಮೇಕಿಂಗ್ ಹಿಸ್ಟರಿ’ಯ ಈ ಸಂಪುಟ ಅರ್ಪಣೆ.

ಈ ಪುಸ್ತಕದ ಬರವಣಿಗೆಗೆ ಮತ್ತು ಪ್ರಕಟಣೆಗೆ ರಾಜಿ ನೀಡಿದ ಕೊಡುಗೆ ಅಪಾರ.

ಮೊದಲ ಮತ್ತು ಎರಡನೇ ಸಂಪುಟದ ಕರಡು ಪುಟಗಳನ್ನು ಮೊದಲು ಕೇಳುತ್ತಿದ್ದುದೇ ರಾಜಿ. ಚಳಿದಿನಗಳ ಅಪರಾತ್ರಿ ಸಮಯದಲ್ಲಾಗಲೀ, ಕಡು ಬಿಸಿಲಿನ ಮಧ್ಯಾಹ್ನವಾಗಿರಲಿ ರಾಜಿಯ ತನ್ಮಯತೆಯಲ್ಲಿ ಏರಿಳಿತಗಳಿರುತ್ತಿರಲಿಲ್ಲ. ಓದಿದ್ದನ್ನು ಕೇಳಿದ ಮೇಲೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡು, ಪ್ರಶ್ನೆಗಳನ್ನು ಕೇಳುತ್ತಿದ್ದಳು; ತಿದ್ದುತ್ತಿದ್ದಳು. ಹೆಸರು ಬಯಸದೆ ಮೌನವಾಗಿಯೇ ಈ ಪುಸ್ತಕದ ಪುಟಗಳಲ್ಲಿ ತನ್ನ ಛಾಪನ್ನು ಒತ್ತಿದ್ದಾಳೆ ರಾಜಿ.

ಮೊದಲ ಸಂಪುಟ ರಾಜಿಗೆ ಬಹಳಷ್ಟು ಋಣಿಯಾಗಿದೆ. ಬೋರು ಹೊಡೆಸುವ ತಾಂತ್ರಿಕ ಕೆಲಸಗಳನ್ನೆಲ್ಲ ರಾಜಿ ಮಾಡಿ ಮುಗಿಸಿದಳು. ಕಂಪ್ಯೂಟರಿನಲ್ಲಿ ಟೈಪಿಸಿ, ಪೇಜ್ ಸೆಟ್ ಮಾಡಿ ತಯಾರಿಸಿದ್ದು ರಾಜಿ. ಪುಸ್ತಕ ಹೊರಬರುವಷ್ಟರಲ್ಲಿ ರಾಜಿ ಡಿ.ಟಿ.ಪಿ ತಜ್ಞೆಯಾಗಿದ್ದಳು!


ಎರಡನೇ ಸಂಪುಟ ಅವಳ ಕಲ್ಪನೆಯಾಗಿತ್ತು. ಹತ್ತೊಂಬತ್ತನೇ ಶತಮಾನದ ಆದಿಯಲ್ಲಿ ಕರ್ನಾಟಕದ ಜನತೆ ನಡೆಸಿದ ಸಶಸ್ತ್ರ ಹೋರಾಟದ ಬಗ್ಗೆ ರಾಜಿ ಆಗಾಗ್ಗೆ ಹೇಳುತ್ತಿದ್ದಳು. ನಮ್ಮ ಜನಪ್ರಿಯ ಇತಿಹಾಸದ ಅಮೂಲ್ಯ ಕ್ಷಣಗಳನ್ನು ಪುನರ್ ವೀಕ್ಷಿಸಿ ಸೃಷ್ಟಿಸುವ ಮಹತ್ವಾಕಾಂಕ್ಷೆಯಿಂದ ನಗರದ ಬಸ್ ಹಿಡಿದೆವು. ಐತಿಹಾಸಿಕ ನಗರ ರೈತ ಬಂಡಾಯಕ್ಕೆ ಸಾಕ್ಷಿಯಾದ ಕೋಟೆಯ ಪಳಯುಳಿಕೆಗಳನ್ನು ಅಲ್ಲಿ ಕಂಡೆವು. ಕೆಲವು ತಿಂಗಳ ನಂತರ ಸಮಯ ಹೊಂಚಿಕೊಂಡು ನಂದಗಡಕ್ಕೆ ಹೋದೆವು. ಜನರ ಬಳಿ ಸಂಗೊಳ್ಳಿ ರಾಯಣ್ಣನ ಬಗ್ಗೆ ಮಾತನಾಡಿದೆವು. ಅಲ್ಲಿನ ಶ್ರಮಜೀವಿಗಳ ಜೊತೆಗಿನ ಮಾತುಕತೆಯಲ್ಲಿ ಸಂಗೊಳ್ಳಿ ರಾಯಣ್ಣನ ಹೋರಾಟದ ಕಥೆಗಳನ್ನು ಕೇಳಿದೆವು. ರಾಯಣ್ಣ ತಪ್ಪಿಸಕೊಂಡ, ಹೋರಾಡಿದ ಜಾಗಗಳನ್ನು ನಮಗೆ ತೋರಿಸಿ ಅವರ ಗುಡಿಸಿಲಿಗೆ ಕರೆದೊಯ್ದು ಉಣಬಡಿಸಿದರು.

ಅವರ ಎದೆಯ ಉರಿಯುತ್ತಿದ್ದ ಬೂದಿ ಮುಚ್ಚಿದ ಕೆಂಡದ ಶಾಖ ರಾಜಿಗೆ ತಾಕಿತ್ತು.

‘ರಾಯಣ್ಣ ಈ ಜನಕ್ಕೆ ಅಂತರಾಳದಲ್ಲಿ ಸ್ಪೂರ್ತಿಯಾಗುತ್ತಿದ್ದಾನ?’ ರಾಜಿಗೆ ಕೇಳಿದೆ. ಶತಮಾನಗಳ ಬೂದಿಯನ್ನು ಆಕೆಯ ಬಿಸಿಯುಸಿರು ಹಾರಿಸಿತು. ಬೂದಿಯಾರಿದ ಮೇಲೆ ಕಂಡದ್ದು ಕೆಂಪಗೆ ನಿಗಿನಿಗಿ ಹೊಳೆಯುವ ಕೆಂಡದ ಬೆಳಕು. ರಾಜಿ ಹೇಳಿದಳು ‘ದಶಕಗಳ ನಂತರ ಹೊಸ ತಲೆಮಾರಿನ ಜನತೆ ಕ್ರಾಂತಿಗೀತೆಯನ್ನು ನಂದಗಡ ಮತ್ತು ನಗರದ ಕಾಡು ಮತ್ತು ಬಯಲಿನಲ್ಲಿ ಹಾಡುತ್ತಿದ್ದಾರೆ’.

ಜನವರಿ 2001ರಂದು ನೋಡಿದ್ದೇ ಕೊನೆ. ಹಸಿರು ಬಣ್ಣದ ಉಡುಪಿನಲ್ಲಿದ್ದಳು. ಬೆನ್ನಿನ ಮೇಲೊಂದು ಬ್ಯಾಗು. ಬ್ಯಾಗಿನಲ್ಲಿ ಕೆಲವು ಖಾಲಿ ಟೇಪುಗಳು, ನೋಟ್ ಪುಸ್ತಕಗಳು ಮತ್ತು ಫಿಲಮ್ಮುಗಳು. ಯಾವುದೇ ಶಸ್ತ್ರವಿರಲಿಲ್ಲ. ಮುಷ್ಟಿ ಮೇಲೆತ್ತಿ ಕೆಂಪು ವಂದನೆ ಸಲ್ಲಿಸಿ ಕಾಮ್ರೇಡ್ ರಾಜೇಶ್ವರಿ ಬೀಳ್ಗೊಂಡಿದ್ದಳು.

ಭಾರತದ ಚರಿತ್ರೆಯ ಇತಿಹಾಸ ಮತ್ತು ಭವಿಷ್ಯದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ಸಾಮ್ಯತೆಗಳಿವೆ. ಮಧ್ಯಮವರ್ಗದ ಪ್ರಜಾಪ್ರಭುತ್ವ ಕ್ರಾಂತಿಯನ್ನು ಅರಿಯಲು ಕರ್ನಾಟಕದ ಇತಿಹಾಸವನ್ನೊಮ್ಮೆ ಅವಲೋಕಿಸಬೇಕು. ಕ್ರಾಂತಿಯ ಹಾದಿಯನ್ನು ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಕಾಲದ ಮೈಸೂರು ರಾಜ್ಯದಲ್ಲಿ ನಿರ್ಮಿಸಲಾಯಿತು. ಊಳಿಗಮಾನ್ಯ ಜಮೀನ್ದಾರಿ ಪದ್ಧತಿಯ ವಿರುದ್ಧದ ಹೋರಾಟ ಪ್ರಬುದ್ಧವಾಗುತ್ತಿದ್ದುದನ್ನು ಆ ದಿನಗಳಲ್ಲೇ ಕಾಣಬಹುದು. ನಂತರ ಹೋರಾಟ ವೇಗ ಪಡೆದುಕೊಂಡಿದ್ದು ನಂದಗಡ ಮತ್ತು ನಗರಗಳಲ್ಲಿ. ಊಳಿಗಮಾನ್ಯ ಪದ್ಧತಿ ಮತ್ತು ವಸಾಹತುಶಾಹಿಯ ವಿರುದ್ಧ ನಡೆದ ಜನರ ಜನಪ್ರಿಯ ಯುದ್ಧ ಬಿಡುಗಡೆ ಮತ್ತು ಪ್ರಜಾಪ್ರಭುತ್ವದೆಡೆಗಿನ ಅವರ ಪ್ರೀತ್ಯಾಸೆಯನ್ನು ಎತ್ತಿ ತೋರಿತ್ತು. ಬೂದಿ ಮುಚ್ಚಿದ ಕೆಂಡದಂತಿದ್ದ ಈ ಘಟನಾವಳಿಗಳು ‘ಮೇಕಿಂಗ್ ಹಿಸ್ಟರಿ’ಯಲ್ಲಿ ಬಂದಿದ್ದರೆ ಅದರ ಶ್ರೇಯಸ್ಸು ರಾಜಿಗೆ ಸಲ್ಲಬೇಕು.

ಅವಳ ಗುರಿ ಧ್ಯೇಯ ದೊಡ್ಡದಿತ್ತು. ಇತಿಹಾಸದ ನೆನಹುಗಳು ಭವಿಷ್ಯವನ್ನು ರೂಪಿಸಬೇಕೆಂಬ ಆಸೆಯಿತ್ತು. ಮಧ್ಯಮವರ್ಗದ ಪ್ರಜಾಪ್ರಭುತ್ವ ಕ್ರಾಂತಿಯ ಘಟನಾವಳಿಗಳನ್ನು ಗಮನಿಸಿ ಸುಮ್ಮನಾಗಿ ಬಿಡುವುದು ಅವಳ ಉದ್ದಿಶ್ಯವಾಗಿರಲಿಲ್ಲ. ಅವಳ ಬುದ್ಧಿಮತ್ತೆ ಜಡವಾಗಿರಲಿಲ್ಲ. ಶ್ರಮಿಕರ ಕ್ರಾಂತಿಯನ್ನು ಕಣ್ಣಾರೆ ನೋಡಿ, ಅನುಭವಿಸಿ ಹಂಚಿಕೊಳ್ಳಬೇಕೆಂದು ಆಶಿಸಿದ್ದಳು ರಾಜಿ.

ಕರ್ನಾಟಕದ ಇತಿಹಾಸದ ಪುಟಗಳು ಹಳೆಯ ಪ್ರಜಾಪ್ರಭುತ್ವ ಕ್ರಾಂತಿಯ ಸಾಧ್ಯತೆಗಳನ್ನು ತೋರಿದ್ದರೆ, ಆಂಧ್ರಪ್ರದೇಶದ ಜನರ ಯುದ್ಧ ನವ ಪ್ರಜಾಪ್ರಭುತ್ವ ಕ್ರಾಂತಿಯ ಹೊಳಹುಗಳನ್ನು ತೋರುತ್ತಿತ್ತು.

ಇತಿಹಾಸ ನೋಡಿದ ರಾಜಿಗೆ ಭವಿಷ್ಯ ವೀಕ್ಷಿಸುವ ತವಕವಿತ್ತು. ನವ ಪ್ರಜಾಪ್ರಭುತ್ವದ ಸ್ಥಾಪನೆಗೆ ನಡೆಯುತ್ತಿದ್ದ ಜನರ ಯುದ್ಧವನ್ನು ಅಭ್ಯಸಿಸಲು ಆಂಧ್ರಪ್ರದೇಶದ ಹಳ್ಳಿಗಳಿಗೆ ತೆರಳಿದಳು. ಅಭ್ಯಸಿಸಿ, ಸಂಗ್ರಹಿಸಿ ಕರ್ನಾಟಕದ ಜನತೆಗೆ ಆ ಹೋರಾಟದ ಕಿಡಿಯನ್ನು ತಲುಪಿಸಬೇಕೆಂದಿದ್ದಳು.

ನೂರಾರು ಜನರನ್ನು ಸಂದರ್ಶಿಸಿದಳು. ಕ್ರಾಂತಿ ಗೀತೆಗಳನ್ನು ಸಂಗ್ರಹಿಸಿದಳು. ಓದಿದ್ದು, ಕೇಳಿದ್ದನ್ನೆಲ್ಲಾ ನೋಟ್ ಮಾಡಿಕೊಂಡಳು. ಶೋಷಿತ ಆದಿವಾಸಿಗಳ ಮತ್ತವರ ಆಶಾಕಿರಣದಂತಿದ್ದ ಹಸಿರು ಬಟ್ಟೆ ತೊಟ್ಟಿದ್ದ ಯುವ ಗೆರಿಲ್ಲಾ ಹೋರಾಟಗಾರರ ಫೋಟೋ ತೆಗೆದುಕೊಂಡಳು.

ಮಾರ್ಚ್ 20ರಂದು ಮರದ ಕೆಳಗೆ ಬರೆಯುತ್ತ ಕುಳಿತಿದ್ದಳು ರಾಜಿ. ಗುಂಡಿನ ಶಬ್ದ ಮೊರೆಯಿತು. ಪೊದೆಯೊಳಗೆ ಮರೆಯಾಗಲು ಯತ್ನಿಸಿದಳು. ಅವರ ಕೊಳಕು ಕೈಗಳು ಅವಳ ಮೇಲೆ ಬಿದ್ದವು. ನಂತರದ್ದಲ್ಲೆವೂ ಕ್ಷಣಾರ್ಧದಲ್ಲಿ ನಡೆದು ಹೋಯಿತು. ಅವಳ ಮೆದುಳಿನ ಮೂಲಕ ಗುಂಡುಗಳು ಸಾಗಿದವು. ಕೆನ್ನೆಯ ಮೇಲೆ ರಕ್ತ; ಬಾಯ ಮೂಲಕ ರಕ್ತ. ಸಂಗ್ರಹಿಸಿ ಬರೆದ ಪುಸ್ತಕಗಳನ್ನು ರಾಜಿ ರಕ್ಷಿಸಲಾಗಲಿಲ್ಲ. ಕಾಡಿನ ನಡುವೆ ರಾಜಿ ವಿಶ್ರಾಂತಿಯೆಡೆಗೆ ಸಾಗಿದಳು.

ಇಂದವಳು ಗಾಢ ನಿದ್ರೆಯಲ್ಲಿದ್ದಾಳೆ.

ಮೇಕಿಂಗ್ ಹಿಸ್ಟರಿಯ ಎರಡನೇ ಸಂಪುಟ ರಾಜಿಗೆ ಅರ್ಪಣೆ. ಓದು ಸಾಗಿದಂತೆ ಚಿರನಿದ್ರೆಯಲ್ಲಿರುವ ರಾಜೇಶ್ವರಿ ಓದುಗರನ್ನು ಎಚ್ಚರಿಸುತ್ತಾಳೆ. ಭವ್ಯ ಇತಿಹಾಸದ ಹೊಳಹುಗಳನ್ನು ಅವಳ ಮುಖಾಂತರ ಕಾಣುತ್ತೇವೆ. ಅಷ್ಟು ಮಾತ್ರವಲ್ಲ, ಭವಿಷ್ಯತ್ತಿನ ದರ್ಶನವನ್ನೂ ಮಾಡಿಸುತ್ತಾಳೆ ರಾಜಿ. ಕ್ರಾಂತಿಯ ಪತಾಕೆಗಳು ಹರಡಲಾರಂಭಿಸಿದಂತೆ ಸತ್ತವರ ನೆನಪುಗಳನ್ನು ಬದುಕಿರುವವರ ಹೃದಯ ಮತ್ತು ಮನಸ್ಸುಗಳಿಂದ ಅಳಿಸಿಹಾಕುವುದು ಎಷ್ಟು ಕಷ್ಟ ಎಂಬ ಸಂಗತಿ ಶೋಷಕ ವರ್ಗ ಮತ್ತವರ ಸರಕಾರಗಳಿಗೆ ಅರಿವಾಗುತ್ತದೆ. ಇದೇ ಇತಿಹಾಸ – ವರ್ಗ ಹೋರಾಟದ ಇತಿಹಾಸ.

ರಾಜಿಗೆ ಇದರ ಅರಿವಿತ್ತು. ತನ್ನ ಬಳಿ ಇದ್ದ ಅತ್ಯಮೂಲ್ಯವಾದ ಒಂದೇ ಒಂದು ವಸ್ತುವನ್ನು – ತನ್ನ ಜೀವವನ್ನು – ಕಾಲ ಕೇಳಿದಾಗ ಕೊಟ್ಟುಬಿಟ್ಟಳು, ಶೋಷಿತರ ಪರ ಹೋರಾಟಕ್ಕಾಗಿ.
ಸಾಕಿ
ನವೆಂಬರ್ 1, 2002.

ಮುಂದಿನ ಅಧ್ಯಾಯ ಓದಲು ಇಲ್ಲಿ ಕ್ಲಿಕ್ಕಿಸಿ 

ಮನೆ ತುಂಬ ಮಸಿ ಎದೆ ತುಂಬ ಹೊಗೆ ಹೊಟ್ಟೆ ತುಂಬ ವಿಷ......


ಚಿತ್ರ-ಮಾಹಿತಿ: ಮುನೀರ್ ಕಾಟಿಪಳ್ಳ.
Mrpl ನ ಕೋಕ್ ಸಲ್ಫರ್ ಘಟಕದ ವಿರುದ್ದ DYFI ಮಾರ್ಗದರ್ಶನದಲ್ಲಿ "ನಾಗರಿಕ ಹೋರಾಟ ಸಮಿತಿ" ಯ ನೇತೃತ್ವದಲ್ಲಿ ಜೋಕಟ್ಟೆ ನಾಗರಿಕರು 2014ರಲ್ಲಿ ಆರಂಭಿಸಿದ ಹೋರಾಟ ಈ ವರ್ಷವಿಡೀ ಸಂಘರ್ಷಮಯವಾಗಿ ಮುಂದುವರಿಯಿತು. 2015ನೇ ಇಸವಿಯ ಉದ್ದಕ್ಕೂ ಪ್ರತಿ ತಿಂಗಳು ಮಹತ್ವದ ಬೆಳವಣಿಗೆಗಳು ನಡೆದಿದ್ದು, ಅದರದೊಂದು ಹಿನ್ನೋಟ ಇಲ್ಲಿದೆ: 
ಜನವರಿ:
ಪುತ್ತೂರಿನಲ್ಲಿ, ಉಪ್ಪಿನಂಗಡಿಯಲ್ಲಿ ಪರಸ್ಪರ ಕಲ್ಲುತೂರಾಟ... ಮಂಗಳೂರಿನ ಜೋಕಟ್ಟೆಯಲ್ಲಿ sez ವಿರುದ್ದದ ಬದುಕಿನ ಹಕ್ಕಿನ ಹೋರಾಟದಲ್ಲಿ, ಪ್ರತಿಭಟನಾ ಸ್ಥಳದಲ್ಲೇ ಸಹಭೋಜನ. ಪೊಲೀಸರಿಂದ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ.
ಫೆಬ್ರವರಿ:
Mrpl ಪ್ರಧಾನ ದ್ವಾರದ ಮುಂದೆ ಬಿಳಿ ಬಟ್ಟೆ ಹೊದ್ದ ಸಾಲು ಸಾಲು ಹೆಣಗಳ ರಾಶಿಯ ಅಣಕು ಪ್ರದರ್ಶನ, mrpl ವಿರುದ್ದ ಘೋಷಣೆ. ಅಸಿಸ್ಟೆಂಟ್ ಕಮೀಷನರ್ ಅಧ್ಯಯನ ನಡೆಸಿ ಕೊಟ್ಟಿರುವ ವರದಿಯ ಪ್ರಕಾರವೂ ಅಪಾಯಕಾರಿ ಮಾಲಿನ್ಯದ ದೃಢೀಕರಣ.
ಮಾರ್ಚ್:
ಮಾಲಿನ್ಯ ನಿಯಂತ್ರಣ ಮಂಡಳಿಯ ಗೋಡೆಗೆ, ಅದರ ಸುತ್ತಮುತ್ತ ಪೋಸ್ಟರ್ ಅಂಟಿಸಿ ಹೋರಾಟಕ್ಕೆ ಚಾಲನೆ. ನೂರಾರು ಶಾಲಾ ಮಕ್ಕಳಿಂದ mrpl ಗೇಟ್ ಮುಂದೆ ಪ್ರತಿಭಟನೆ.
ಏಪ್ರಿಲ್:
Mrpl ಬಲವಂತದ ಕಾಮಗಾರಿಯ ವಿರುದ್ದ ಗೆರಿಲ್ಲಾ ಮಾದರಿ ಸಂಘರ್ಷ. ಬಂದೂಕುಧಾರಿ ಭದ್ರತಾ ಪಡೆಯ ಮೇಲೆ ಜೋಕಟ್ಟೆಯ ಮಹಿಳೆಯರು, ಮಕ್ಕಳ ಸಹಿತ ನೂರಾರು ನಾಗರಿಕರ ಕಲ್ಲು ತೂರಾಟ. 
ಕೇಂದ್ರ ಪೆಟ್ರೋಲಿಯಂ ಮಂತ್ರಿ ಧರ್ಮೇಂದ್ರ ಪ್ರಧಾನ್ ರಿಂದ mrpl ಭೇಟಿ, ತ್ರಿಪಕ್ಷೀಯ ಸಮಿತಿ ರಚಿಸಲು ಜಿಲ್ಲಾಧಿಕಾರಿಗೆ ಸೂಚನೆ. 
ಮೇ:
Mrpl ಚಲೋ ಘೋಷಣೆಯಡಿ ಹತ್ತು ಕಿ. ಮೀ ಉದ್ದದ ಪಾದಯಾತ್ರೆ. Mrpl ಎದುರು ನಡೆದ ಸಾರ್ವಜನಿಕ ಸಭೆಯಲ್ಲಿ ಕರಾವಳಿ ಭಾಗದ ಹೆಸರಾಂತ ಮೀನುಗಾರ ಮುಖಂಡರು, ರೈತನಾಯಕರು, ಪರಿಸರ ಹೋರಾಟಗಾರರು, ವಕೀಲರ ಉಪಸ್ಥಿತಿ. ಹೋರಾಟ ಮತ್ತಷ್ಟು ವಿಸ್ತಾರ. 
ಜೂನ್:
ಕೋಕ್ ಸಲ್ಫರ್ ಫಟಕದ ಸಮಸ್ಯೆ ಬಗೆ ಹರಿಸಲು ಸರಕಾರದ ಮಟ್ಟದಲ್ಲಿ ಜನಪ್ರತಿನಿಧಿಗಳು, ಉಸ್ತುವಾರಿ ಮಂತ್ರಿ, ಜಿಲ್ಲಾಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ, mrpl, sez ಮುಖ್ಯಸ್ಥರು, ನಾಗರಿಕರ ಪ್ರತಿನಿಧಿಗಳನ್ನೊಳಗಂಡ ಸಮಿತಿ ರಚನೆ. ಹಾಗೂ, "ಮಾಲಿನ್ಯ ನಿಯಂತ್ರಣ ಮಂಡಳಿ”ಯಿಂದ n i t k ಯ ಫ್ರೊಫೆಸರ್ ಡಾ ಶ್ರೀನಿಕೇತನ, ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತದ ಪ್ರತಿನಿಧಿ, mrpl ನಿರ್ದೇಶಕರು, ನಾಗರಿಕ ಹೋರಾಟ ಸಮಿತಿಯ ಪ್ರತಿನಿಧಿಗಳನ್ನೊಳಗೊಂಡ ತಜ್ಞರ ಸಮಿತಿಯ ರಚನೆ. ಈ ಎರಡು ಸಮಿತಿಗಳ ಮೂಲಕ ಸಮಸ್ಯೆಯ ಕಾರಣ, ಪರಿಹಾರದ ದಾರಿ ಹುಡುಕುವ ನಿಟ್ಟಿನಲ್ಲಿ ಅಧ್ಯಯನಕ್ಕೆ ಚಾಲನೆ. ಹತ್ತು ತಿಂಗಳ ಹೋರಾಟಕ್ಕೆ ಒಂದು ಹಂತದ ಗೆಲುವು. 
ಜುಲೈ:
ಹೋರಾಟದ ರಣರಂಗವಾಗಿ ಮಾರ್ಪಟ್ಟ ಜೋಕಟ್ಟೆ. ಪೊಲೀಸರ ಕೋಟೆ ನಿರ್ಮಿಸಿ ಕಾರಿಡಾರ್ ರಸ್ತೆ ಕಾಮಗಾರಿ ಶುರುಮಾಡಿದ್ದ sezಗೆ ಹೋರಾಟ ಸಮಿತಿಯಿಂದ ತಡೆ. ಅರ್ಧ ಗಂಟೆಯ ಸಂಘರ್ಷದ ನಂತರ ಪೊಲೀಸರಿಂದ ಹತ್ತು ಮಹಿಳೆಯರೂ ಸೇರಿದಂತೆ ಮೂವತ್ತೈದು ಜನರ ಬಂಧನ. ಇದನ್ನು ಖಂಡಿಸಿ ಸುರತ್ಕಲ್ ಠಾಣೆಯ ಮುಂದೆ ನೂರಾರು ಸಾರ್ವಜನಿಕರಿಂದ ಪ್ರತಿಭಟನೆ. ಜನಾಗ್ರಹಕ್ಕೆ ಮಣಿದ ಪೊಲೀಸರಿಂದ ಎಲ್ಲ 35 ಜನರ ಬೇಷರತ್ ಬಿಡುಗಡೆ. 
ಆಗಸ್ಟ್:
ಸ್ಥಳಕ್ಕೆ ಭೇಟಿ ನೀಡಿದ್ದ mrpl ಡೈರೆಕ್ಟರ್ ವೆಂಕಟೇಶ್ ಅವರ ಅಚ್ಚಬಿಳಿಯ ಅಂಗಿಯ ಬೆನ್ನ ಮೇಲೆ ಸ್ಥಳೀಯ ಮಹಿಳೆಯರಿಂದ ತಮ್ಮ ಕೈಗಂಟಿಕೊಂಡಿದ್ದ ಕೋಕ್ ಕಪ್ಪು ಮಸಿ ಹಚ್ಚಿ ಪರಿಣಾಮಕಾರಿ ಪ್ರತಿಭಟನೆ. 
ಹತ್ತು ತಿಂಗಳ ಪಟ್ಟು ಬಿಡದ ಹೋರಾಟಕ್ಕೆ ರಾಜ್ಯ ಸರಕಾರದ ಮಾನ್ಯತೆ - ಜಿಲ್ಲಾಧಿಕಾರಿ, mp, mla, ಕಂಪೆನಿಯ md ಗಳು ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ನಗರ ಪಾಲಿಕೆ, ಪೊಲೀಸ್ ಕಮೀಷನರ್ ಗಳು, ಜಿಲ್ಲಾ ಪಂಚಾಯತ್ ceo, ಗ್ರಾಮಸ್ಥರ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಿ ಸಮಸ್ಯೆ ಪರಿಶೀಲನೆ ಮತ್ತು ಪರಿಹಾರ ಮಾರ್ಗಗಳ ರಚನೆಗೆ ಸೂಚನೆ.
ಸೆಪ್ಟೆಂಬರ್:
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸೇರಿದಂತೆ ನಾಗರಿಕ ಹೋರಾಟ ಸಮಿತಿ, ಜೋಕಟ್ಟೆಯ 42 ಪ್ರತಿಭಟನಾಕಾರರ ಬಂಧನ. ಒಂದು ದಿನ ಸೆರೆವಾಸ, ಸಾರ್ವಜನಿಕರ ಆಕ್ರೋಶಭರಿತ ಪ್ರತಿಭಟನೆಗೆ ಮಣಿದು ಮಧ್ಯಂತರ ಜಾಮೀನು ನೀಡಿ ಬಿಡುಗಡೆ. 
ಹೋರಾಟನಿರತರ ಮೇಲೆ ದೌರ್ಜನ್ಯ ಎಸಗಿ, ಎರಡೆರಡು ಕೇಸು ಜಡಿದು ಜೈಲಿಗಟ್ಟಲು ಯತ್ನಿಸಿದ ಪೊಲೀಸರ ವಿರುದ್ದ ಕೈಕೋಳ ತೊಟ್ಟು ಪ್ರತಿಭಟನೆ, ಸುರತ್ಕಲ್ ಪೊಲೀಸ್ ಠಾಣೆಯ ಬೀದಿಯಲ್ಲಿ ಮೆರವಣಿಗೆ. 
ಅಕ್ಟೋಬರ್:
ಮಾಲಿನ್ಯ ಮಂಡಳಿಯ ಅಧಿಕಾರಿಗಳಿಂದ ನಾಗರಿಕ ಸಮಿತಿಯ ಉಪಸ್ಥಿತಿಯಲ್ಲಿ Mrpl ಆವರಣ ಪ್ರವೇಶ, ಪರಿಶೀಲನೆ. ಅಪಾಯ ಉಂಟುಮಾಡುವ ಮಾಲಿನ್ಯಕಾರಿ ಪತ್ತೆ. ಸಿಕ್ಕಿಬಿದ್ದ Mrpl ಗೆ ಭಾರೀ ಮುಖಭಂಗ, ತಪ್ಪೊಪ್ಪಿಗೆ.
Mrpl ವಿರುದ್ಧದ ನಾಗರಿಕ ಹೋರಾಟ ಸಮಿತಿಗೆ ಒಂದು ವರ್ಷ. 
ನವೆಂಬರ್:
ಒಂದೆಡೆ ಮಾಲಿನ್ಯದ ಕಾರಣಕ್ಕಾಗಿ mrpl ಗೆ ನೋಟೀಸ್ ಕೊಡುತ್ತಲೇ ಹಿಂಬಾಗಿಲಿನಿಂದ ತಡೆಹಿಡಿಯಲ್ಪಟ್ಟ ಪರವಾನಗಿಯನ್ನು ನವೀಕರಿಸಿದ ಸರ್ಕಾರ, ಮಾಲಿನ್ಯ ನಿಯಂತ್ರಣ ಮಂಡಳಿಗಳ ಡಬ್ಬಲ್ ಗೇಮ್ ವಿರುದ್ಧ ಪ್ರತಿಭಟನೆ. ವೃದ್ಧೆಯರು, ಮಕ್ಕಳೂ ಸೇರಿದಂತೆ ನೂರಾರು ನಾಗರಿಕರಿಂದ ಕೈಯಲ್ಲಿ ಪೊರಕೆ ಹಿಡಿದು ಪ್ರತಿಭಟನಾ ಮೆರವಣಿಗೆ. 
ಡಿಸೆಂಬರ್:
Mrpl Sez ವಿರುದ್ಧ ತೀವ್ರ ಹೋರಾಟಕ್ಕೆ ತಯಾರಿ. ತಳಮಟ್ಟದ ಸಂಘಟನೆಗೆ ಆದ್ಯತೆ. ಜೋಕಟ್ಟೆ ಸುತ್ತಮುತ್ತ ಪ್ರದೇಶದ ಬೀದಿ, ಗಲ್ಲಿಗಳ ಮಟ್ಟದಲ್ಲಿ ಹೋರಾಟ ಸಮಿತಿಯ ಘಟಕ ರಚನೆಗೆ ಚಾಲನೆ. ಧೀರ್ಘಾವದಿ ನಡೆಯಲಿರುವ ಹೋರಾಟಕ್ಕೆ ಜನರು ಮಾನಸಿಕವಾಗಿ ಸಜ್ಜು.