ಡಿಸೆಂ 25, 2015

ಅಬ್ಬರದ ವೈಭವಕ್ಕೆ ಬೆದರಿದ ಕತೆ

ಯಶ್ ಅಭಿನಯದ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ‘ಮಾಸ್ಟರ್ ಪೀಸ್’ ಚಿತ್ರ ಇಂದು ತೆರೆಕಂಡಿದೆ. ಬುಕ್ ಮೈ ಶೋನಲ್ಲಿ ಒಂದು ದಿನ ಮೊದಲೇ ಏಳು ಸಾವಿರ ಟಿಕೇಟುಗಳು ಮಾರಾಟವಾದ ದಾಖಲೆ, ಕರ್ನಾಟಕದಾದ್ಯಂತ ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿರುವ, ಸಂಭಾಷಣೆಕಾರನಾಗಿ ಖ್ಯಾತಿ ಪಡೆದಿದ್ದ ಮಂಜು ಮಾಂಡವ್ಯ ನಿರ್ದೇಶನದ ಮೊದಲ ಚಿತ್ರವೆಂಬ ಹೆಗ್ಗಳಿಕೆಯ ಮಾಸ್ಟರ್ ಪೀಸ್ ಹೇಗಿದೆ? ಚಿತ್ರದ ನಿರೀಕ್ಷೆ ಹೆಚ್ಚಲು ಯಶ್ ಅಭಿನಯದ ಚಿತ್ರಗಳು ಸಾಲು ಸಾಲು ಗೆದ್ದಿದ್ದು, ಮಾಸ್ಟರ್ ಪೀಸ್ ಚಿತ್ರದ ಮೊದಲ ಟ್ರೇಲರಿನಲ್ಲಿ ಭಗತ್ ಸಿಂಗ್ ವೇಷದಲ್ಲಿ ಯಶ್ ಮಿಂಚಿದ್ದು, ಮಾಸ್ಟರ್ ಪೀಸ್ ಚಿತ್ರದ ಅಣ್ಣಂಗೇ ಲವ್ ಆಗಿದೆ ಹಾಡಿನ ಯಶಸ್ಸು ಕಾರಣ. ಚಿತ್ರ ನಿರೀಕ್ಷಿತ ಮಟ್ಟ ಮುಟ್ಟುತ್ತದೆಯಾ?

ಹೊಸ ನಿರ್ದೇಶಕನ ಮೊದಲ ಸಿನಿಮಾದಲ್ಲಿ ಕತೆಯಲ್ಲಿ ಹೊಸತನವನ್ನು ನಿರೀಕ್ಷಿಸುವುದು ಸಹಜ. ತುಂಬ ಹೊಸತನವಿಲ್ಲದ ಕತೆಯನ್ನು ಆಯ್ದುಕೊಂಡಿದ್ದಾರೆ ನಿರ್ದೇಶಕರು. ಒಬ್ಬ ಉಡಾಳ ಹುಡುಗ, ರೌಡಿ ಎಲಿಮೆಂಟೆಂದು ಕರೆಸಿಕೊಳ್ಳಬೇಕೆಂಬ ಹಪಾಹಪಿ ಇರುವಾತ. ಬಹಳಷ್ಟು ಹುಡುಗರಿಗೆ ಒಂದು ಹಂತದಲ್ಲಿ ರೌಡಿ ಎಲಿಮೆಂಟು, ಅಣ್ಣ, ಭಾಯ್ ಅಂತೆಲ್ಲ ಕರೆಸಿಕೊಳ್ಳುವ ಚಟವಿರುತ್ತದೆ. ಕೆಲವರಿಗೆ ಆ ಚಟ ಶಾಲೆ ಮುಗಿಸುವಷ್ಟರಲ್ಲಿ ಮುಗಿದರೆ ಹಲವರಿಗೆ ಪಿಯುಸಿಯಲ್ಲಿ ಮುಗಿಯುತ್ತದೆ. ಎಲ್ಲೋ ಕೆಲವರಿಗೆ ಡಿಗ್ರಿಗೆ ಸೇರಿದರೂ ರೌಡಿಯಾಗುವ ಆಸೆ ಬತ್ತಿರುವುದಿಲ್ಲ. ಅಂತಹ ವ್ಯಕ್ತಿತ್ವ ಚಿತ್ರದ ನಾಯಕ ‘ಯುವ’ನದ್ದು. ಅಣ್ಣನೆನ್ನಿಸಿಕೊಳ್ಳುವ ಭರದಲ್ಲಿ ನಾಯಕನೆದುರಿಸುವ ಸವಾಲುಗಳು, ಮಗನನ್ನು ದೇಶಪ್ರೇಮಿ ಮಾಡಬೇಕೆನ್ನುವ ನ್ಯಾಯಾಲಯದಲ್ಲಿ ಕೆಲಸ ಮಾಡುವ ತಾಯಿ (ಸುಹಾಸಿನಿ) ರೌಡಿ ಮಗನ ಬಗ್ಗೆ ಬೆಳೆಸಿಕೊಳ್ಳುವ ದ್ವೇಷ ಮತ್ತು ಆ ದ್ವೇಷ ಹೇಗೆ ಪ್ರೀತಿಯಾಗಿ ಪರಿವರ್ತನೆಯಾಗುತ್ತದೆ ಎನ್ನುವುದೇ ಚಿತ್ರದ ಪ್ರಮುಖ ಕತೆ. ಹಲವು ಸಾಧ್ಯತೆಗಳಿದ್ದ ಕತೆ ಹೀರೋಯಿಸಮ್ಮಿನ ಸೂತ್ರಕ್ಕೆ ಸಿಲುಕಿ ನಲುಗಿ ಹೋಗಿದೆ. ಒಂದು ಲವ್ ಸ್ಟೋರಿ ಇಲ್ಲದಿದ್ದರೆ ಸಿನಿಮಾ ಪೂರ್ಣವಾಗುವುದಿಲ್ಲ ಎನ್ನುವ ಕಾರಣಕ್ಕೆ ಹೀರೋಯಿನ್ ಇದ್ದಾಳೆ, ಚಿಕ್ಕ ಪಾತ್ರವಾದರೂ ಚೊಕ್ಕವಾಗಿ ಅಭಿನಯಿಸಿ ಮನಗೆಲ್ಲುತ್ತಾಳೆ ನಾಯಕಿ ಶಾನ್ವಿ ಶ್ರೀವಾಸ್ತವ್. ಯಶ್ ನ ಪ್ರಭಾವಳಿಯನ್ನು ಮೀರಿ ಬೆಳೆವ ಪಾತ್ರದಲ್ಲಿ ಚಿಕ್ಕಣ್ಣ. ರೌಡಿ ಎಲಿಮೆಂಟಿನ ಸಹಾಯದಿಂದ ಗೆಲ್ಲುವ ನೂರ್ ಅಹಮದ್ ಪಾತ್ರದಲ್ಲಿ ಅಚ್ಯುತ್; ಅಚ್ಯುತ್ ಅಭಿನಯದ ಬಗ್ಗೆ ಕಮೆಂಟಿಸುವ ಅಗತ್ಯವಿಲ್ಲ. ಮೊದಲಾರ್ಧವಿಡೀ ನಾಯಕನೊಳಗಿನ ರೌಡಿ ಎಲಿಮೆಂಟನ್ನು ವಿಜ್ರಂಭಿಸುವ ಕೆಲಸ. ನನ್ನ ಫೋಟೋ ದೊಡ್ಡದಾಗಿ ಹಾಕಿಲ್ಲ ಎಂದು ಸಂಪಾದಕನ ಕೈಚುಚ್ಚುವ ನಾಯಕ, ರಾಜಕಾರಣಿಯೊಬ್ಬನ ಗೆಲುವಿಗೆ ಹಣ ಹಂಚುವ ಐಡಿಯಾ ಕೊಡವ ನಾಯಕ, ಹಣ ಮಾಡಲು ಶಾರ್ಟು ಕಟ್ಟುಗಳನ್ನುಡುಕುವ ನಾಯಕ – ಒಟ್ಟಾರೆ ಮೊದಲಾರ್ಧದಲ್ಲಿ ಯಶ್ ನೇ ಖಳನಾಯಕ! ಮೊದಲಾರ್ಧದ ಖಳನಾಯಕನನ್ನು ಎರಡನೇ ಅರ್ಧದಲ್ಲಿ ನಾಯಕನನ್ನಾಗಿ ಮಾಡಲು ಡ್ರಗ್ ಮಾಫಿಯಾದ ಬಾಸ್ ರವಿಶಂಕರ್ ಪ್ರವೇಶವಾಗುತ್ತದೆ. 

ರವಿಶಂಕರನ ಸಾಮ್ರಾಜ್ಯವನ್ನು ಮಟ್ಟ ಹಾಕಲು ನಂತರದ ಚಿತ್ರ ಮೀಸಲು. ಮಾಸ್ ಪಿಚ್ಚರುಗಳಲ್ಲೂ ಮೊದಲರ್ಧ ಬಿಲ್ಡಪ್ಪು ನಂತರ ಕತೆ ಎನ್ನುವ ಸೂತ್ರವಿರುತ್ತದೆ. ಇಲ್ಲಿ ಎರಡನೇ ಅರ್ಧವೂ ಬಿಲ್ಡಪ್ಪುಗಳಿಂದಲೇ ತುಂಬಿ ಹೋಗಿದೆ. ಫೈಟಿನ ಮೇಲೆ ಫೈಟುಗಳಿವೆ, ಒಂದೆರಡು ವಿಭಿನ್ನವಾಗಿವೆ. ಆದರೂ ಎಷ್ಟೂಂತ ಬಿಲ್ಡಪ್ಪುಗಳನ್ನು ನೋಡುವುದು. ಚಿಕ್ಕಣ್ಣ ಇಲ್ಲದಿದ್ದರೆ ಯಶ್ ನನ್ನು ತಡೆದುಕೊಳ್ಳುವುದು ಕಷ್ಟವಾಗಿಬಿಡುತ್ತಿತ್ತು! ರೌಡಿ ಎಲಿಮೆಂಟು ಬದಲಾಗುವುದಿಲ್ಲ, ತನ್ನ ರೌಡಿ ಎಲಿಮೆಂಟಿನಿಂದಲೇ ಒಳ್ಳೆಯವನೆಂಬ ಹೆಸರು ಗಳಿಸಿಬಿಡುತ್ತಾನೆ! ರೌಡಿಯ ಬೆಂಬಲಿಗರನ್ನು ಕಂಡ ತಾಯಿ ಅದನ್ನು ಭಗತ್ ಸಿಂಗ್ ಗೆ ಸಿಕ್ಕ ಬೆಂಬಲ ಎಂಬಂತೆ ಕಲ್ಪಿಸಿಕೊಳ್ಳುವುದು ಕಾಮಿಡಿಯಾ ಟ್ರ್ಯಾಜಿಡಿಯಾ ಗೊತ್ತಾಗುವುದಿಲ್ಲ. ಹಾಡುಗಳು ಚಿತ್ರದ ವೇಗಕ್ಕೆ ಪೂರಕವಾಗಿವೆ, ಮೂರು ತಿಂಗಳುಗಳಿಗಿಂತ ಹೆಚ್ಚಾಗಿ ತಲೆಯಲ್ಲುಳಿಯುವುದಿಲ್ಲ. ಚಿತ್ರದ ವೈಭವಕ್ಕೆ ಯಾವುದೇ ಕೊರತೆಯುಂಟುಮಾಡಿಲ್ಲ ನಿರ್ಮಾಪಕರಾದ ವಿಜಯ್ ಕಿರಗಂದೂರು. ಸಂಭಾಷಣೆಕಾರ ನಿರ್ದೇಶಕನಾಗಿರುವುದರಿಂದ ಪಂಚಿಂಗ್ ಡೈಲಾಗುಗಳು ಬಹಳಷ್ಟಿವೆ, ಕೆಲವೊಂದೆಡೆ ಮೌನದ ಜಾಗವನ್ನೂ ಮಾತು ಆವರಿಸಿಕೊಂಡುಬಿಟ್ಟಿದೆ. ಮೌನಕ್ಕಿರುವ ಬೆಲೆ ಚಿತ್ರದ ಪ್ರಾರಂಭದಲ್ಲಿ ಒಂದು ಪುಟ್ಟ ತುಣುಕಾಗಿ ಬರುವ ಭಗತ್ ಸಿಂಗ್ ನ ಕತೆಯಲ್ಲಿ ಗೋಚರವಾಗುತ್ತದೆ. ನಂತರ ಮಾತಿನದ್ದೇ ಅಬ್ಬರ.

ಚಿತ್ರದ ಬಹುಮುಖ್ಯ ಕೊರತೆಯೆಂದರೆ ಬಿಲ್ಡಪ್ಪುಗಳು! ಚಿತ್ರಕ್ಕೆ ಸಂಬಂಧಪಟ್ಟಂತ ಅನೇಕ ಸಂದರ್ಶನಗಳಲ್ಲಿ ಯಶ್ ಪದೇ ಪದೇ Involvementನ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಮಾಸ್ಟರ್ ಪೀಸ್ ಚಿತ್ರದಲ್ಲಿ ಯಶ್ ನ ‘ಇನ್ವಾಲ್ವ್ ಮೆಂಟ್’ ಎದ್ದು ಕಾಣುತ್ತದೆ. ಮೊದಲರ್ಧದ ಅನೇಕ ದೃಶ್ಯಗಳು ಅವರ ಹಿಂದಿನ ಚಿತ್ರ ರಾಮಾಚಾರಿಯನ್ನು ನೆನಪಿಸುತ್ತದೆ! ಮಾಧ್ಯಮವನ್ನು ಅವಹೇಳನ ಮಾಡಲು ಆ ಚಿತ್ರದಲ್ಲಿ ಕಾವೇರಿ – ಸುವರ್ಣ ಎಂಬ ಪಾತ್ರವಿತ್ತು. ಈ ಚಿತ್ರದಲ್ಲಿ ಮಾಧ್ಯಮವನ್ನು ಹೀಗಳೆಯುವ ಹತ್ತಲವು ಡೈಲಾಗುಗಳು ಬಂದು ಹೋಗುತ್ತವೆ. ಇಡೀ ಚಿತ್ರವನ್ನು ಯಶ್ ಆವರಿಸಿಕೊಂಡುಬಿಟ್ಟಿರುವುದೇ ಚಿತ್ರಕ್ಕೆ ದೊಡ್ಡ ಶಾಪ. ಬಹುಶಃ ಇದು ಅವರ ಇನ್ವಾಲ್ವ್ ಮೆಂಟಿನ ಕಾರಣಕ್ಕಾಯಿತಾ? ನಟನ ಇನ್ವಾಲ್ವ್ ಮೆಂಟ್ ನಟನೆಯಲ್ಲಿರಬೇಕು, ನೃತ್ಯ ನಿರ್ದೇಶಕನ ಇನ್ವಾಲ್ವ್ ಮೆಂಟ್ ನೃತ್ಯದಲ್ಲಿರಬೇಕು, ಎಲ್ಲದರಲ್ಲೂ ಇನ್ವಾಲ್ವ್ ಆಗುವ ಹಕ್ಕಿರುವುದು ನಿರ್ದೇಶಕರಿಗೆ ಮಾತ್ರ ಎನ್ನುವ ಅಂಶ ಯಶ್ ನ ನೆನಪಿನಲ್ಲಿರದಿದ್ದರೆ ಮುಂದೆ ಅವರು ನಟಿಸುವ ಚಿತ್ರಗಳನ್ನು ನೋಡುವ ಪ್ರೇಕ್ಷಕರಲ್ಲಿ ಅವರ ಅಭಿಮಾನಿಗಳು ಮಾತ್ರ ಇರುತ್ತಾರೆ. ಉಳಿದ ಪ್ರೇಕ್ಷಕರು ಇನ್ ವಾಲ್ವ್ ಆಗುವುದಿಲ್ಲ!
Masterpiece (Kannada movie)
Direction: Manju Mandavya
Starcast: Yash, Shanvi srivastav, chikkanna, suhasini, achyut, avinash, ravishankar
Producer: Vijay kiragandur

ಡಿಸೆಂ 22, 2015

ಪ್ರಭುತ್ವದ ಅಸಹಿಷ್ಣುತೆ!

ಕು.ಸ.ಮಧುಸೂದನ ರಂಗೇನಹಳ್ಳಿ
ಈ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ವಿರುದ್ದ ದಿನೇದಿನೇ ಪ್ರತಿಭಟನೆ ಹೆಚ್ಚಾಗುತ್ತಿದೆ. ಸಾಹಿತಿಗಳು,ಕಲಾವಿದರು,ವಿಜ್ಞಾನಿಗಳು ಮತ್ತು ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಅಸಹಿಷ್ಣುತೆಯ ವಾತಾವರಣದ ಬಗ್ಗೆ ಆತಂಕ ವ್ಯಕ್ತಪಡಿಸಿ ತಮ್ಮ ಪ್ರತಿಭಟನೆಯನ್ನು ಹಲವು ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇಂತಹ ಪ್ರತಿಭಟನೆಗೆ ಎರಡು ನೆಲೆಯಲ್ಲಿ ವಿರೋಧ ವ್ಯಕ್ತವಾಗುತ್ತಿವೆ. ಮೊದಲನೆಯದರ ಪ್ರಕಾರ ಇಂಡಿಯಾದಲ್ಲಿ ಅಸಹಿಷ್ಣುತೆಯೆನ್ನುವುದೇ ಇಲ್ಲ, ಇದ್ದರೂ ಅದು ಹಿಂದೂ ಧರ್ಮದ ವಿರುದ್ದ ಇತರೇ ಧರ್ಮದವರ ಮತ್ತು ಪ್ರಗತಿಪರರ ಅನಗತ್ಯ ಅಹನೆಯಷ್ಟೆ ಅನ್ನುವುದಾಗಿದೆ. ಇನ್ನು ಎರಡನೇಯದರ ಪ್ರಕಾರ ಇಂಡಿಯಾದಲ್ಲಿ ಅಸಹನೆಯಿರುವುದು ಹೊಸದೇನಲ್ಲ. ಸಾವಿರಾರು ವರ್ಷಗಳಿಂದಲೂ ಇಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ. ಆದರೆ ಇಷ್ಟು ವರ್ಷಗಳÀ ಕಾಲ ಅದನ್ನು ವಿರೋಧಿಸದೇ ಸುಮ್ಮನಿದ್ದವರು ಈಗ ಬಾಜಪ ಅಧಿಕಾರಕ್ಕೆ ಬಂದ ತಕ್ಷಣ ಅದನ್ನು ವಿರೋಧಿಸುವುದು ಬಾಜಪದ ಬಗ್ಗೆ ಮತ್ತು ಅದರ ನೀತಿಗಳ ಬಗ್ಗೆ ಅವರಿಗಿರುವ ಅಸಹನೆಯನ್ನು ತೋರುತ್ತದೆ ಅನ್ನುವುದಾಗಿದೆ!

ಈ ಎರಡೂ ವಾದಗಳನ್ನು ಆಲಿಸಿದಾಗ ಒಂದಂತು ಸ್ಪಷ್ಟವಾಗುತ್ತದೆ. ಅದು ಅಸಹಿಷ್ಣುತೆಯ ವಿರುದ್ದದ ಪ್ರತಿಭಟನೆ ಎಂದಾಕ್ಷಣ ಯಾರು ಹೇಳದಿದ್ದರೂ ಅದು ತನ್ನ ವಿರುದ್ದವೇ ಎಂದು ಬಾಜಪ ಮತ್ತದರ ಸಂಘಪರಿವಾರ ಅರ್ಥಮಾಡಿಕೊಳ್ಳುವ ಮಟ್ಟಿಗಾದರು ಅದಕ್ಕೆ ತನ್ನ ಅಸಹನೆಯ ಬಗ್ಗೆ ಅರಿವಿದೆಯೆನ್ನುವುದು. 

ನಾನು ಎರಡನೆಯ ವಾದವನ್ನು ಭಾಗಶ: ಒಪ್ಪುತ್ತೇನೆ: ಯಾಕೆಂದರೆ ಐದು ಸಾವಿರ ವರ್ಷಗಳ ಇತಿಹಾಸವಿರುವ ಈ ನಾಡಿಗೆ ಅಸಹಿಷ್ಣುತೆ ಹೊಸತೇನಲ್ಲ! ಆದರದು ಸಾಂಪ್ರದಾಯಿಕ ಭಾರತೀಯ ಸಮಾಜದ ಕೊಡುಗೆಯಾಗಿತ್ತು. ಸನಾತನವೇ ಶ್ರೇಷ್ಠವೆಂದು ನಂಬಿಕೊಂಡು ಬಂದ ಸಮಾಜವೊಂದು ಅದೇ ಸಮಾಜದ ಕೆಳಸ್ತರದ ಜಾತಿ-ಜನಾಂಗಗಳ ಮೇಲೆ ತೋರಿಸುತ್ತಲೇ ಬಂದ ಅಸಹನೆಯದು. ಭಾರತೀಯ ಸಮಾಜದ ನ್ಯಾಯದ ಪರಿಕಲ್ಪನೆಯಲ್ಲೇ ಇದ್ದ ತಾರತಮ್ಯಗಳು, ಮೇಲುಕೀಳುಗಳು ಸಮಾಜದೊಳಗಿನ ಅಸಹಿಷ್ಣುತೆಗೆ ಕಾರಣವಾಗಿದ್ದವು. ಸನಾತನ ಸಮಾಜ ಒಪ್ಪಿಕೊಂಡ ಮೌಲ್ಯಗಳೇ ಶ್ರೇಷ್ಠವೆಂದು ಬಾವಿಸಿದಾಗ ಅದನ್ನು ಮೀರಲು ಯಾರೂ ಪ್ರಯತ್ನಿಸಬಾರದೆಂಬ ದೂರಾಲೋಚನೆಯಿಂದ ಹುಟ್ಟಿಕೊಂಡ ಅಸಹನೆ ಹಾಗೆ ಮೀರಬಹುದೆಂದು ಬಾವಿಸಿದ ವರ್ಗಗಳ ಮೇಲೆ ಮೇಲು ವರ್ಗಗಳು ಸಾಮಾಜಿಕ ಬಹಿಷ್ಕಾರದಂತಹ ಶಿಕ್ಷೆಗಳನ್ನು ಹೇರತೊಡಗಿದ್ದವು. ಜೊತೆಗೆ ದೈಹಿಕವಾಗಿ ಹಲ್ಲೆಗಳೂ ನಡೆಯುತ್ತಿದ್ದವು. ಸಾಂಪ್ರದಾಯಿಕ ಭಾರತೀಯ ಸಮಾಜದಲ್ಲಿ ನ್ಯಾಯದ ಕಲ್ಪನೆಯೆನ್ನುವದು ಯಾವತ್ತಿಗೂ ಮೇಲ್ವರ್ಗಗಳ ಸ್ವತ್ತಾಗಿತ್ತು. ಹಾಗಾಗಿ ಮೇಲ್ಜಾತಿಗಳು ಸದಾ ದಲಿತರ ವಿರುದ್ದ ಒಂದು ಅಸಹನೆಯನ್ನು ತೋರುತ್ತಲೇ ಬಂದಿದ್ದವು. ಭಾರತೀಯ ಸಮಾಜ ಒಪ್ಪಿಕೊಂಡ ನ್ಯಾಯವ್ಯವಸ್ಥೆಯಲ್ಲಿ ಈ ನೆಲದ ಕೆಳಜಾತಿÀಗಳಿಗೆ ಯಾವುದೇ ಹಕ್ಕಾಗಲಿ ಅವಕಾಶವಾಗಲಿ ಇರಲಿಲ್ಲ. ಆದರೆ ಇಂತಹ ಅಸಹನೆಯಿಂದಾಗುತ್ತಿದ್ದ ಹಲ್ಲೆಗಳು ತೀರಾ ವೈಯುಕ್ತಿಕ ನಲೆಗಟ್ಟಿನಲ್ಲಿ ನಡೆಯುತ್ತಿದ್ದವು.

ಹೀಗಾಗಿಯೇ ಸಾಂಪ್ರದಾಯಿಕ ಭಾರತೀಯ ಸಮಾಜ ಒಪ್ಪಿಕೊಂಡ ಮೌಲ್ಯಗಳು ಯಾವತ್ತಿಗೂ ಕೆಳಜಾತಿಗಳ ಮತ್ತು ಅಲ್ಪಸಂಖ್ಯಾತರ ಮಟ್ಟಿಗೆ ಅನ್ಯವಾಗಿದ್ದವು ಮತ್ತು ಅವು ಅಂತಹ ಅಸಹಿಷ್ಣುತೆಯನ್ನು ವ್ಯಕ್ತಿಗತವಾಗಿಯೇ ಎದುರಿಸಬೇಕಾಗಿತ್ತು. ಎಲ್ಲಿಯವರೆಗು ಅಸಹಿಷ್ಣುತೆಯೆನ್ನುವುದು ವೈಯುಕ್ತಿಕ ನೆಲೆಯಲ್ಲಿ ನಡೆಯುತ್ತಿತ್ತೋ ಅಲ್ಲಿಯವರೆಗು ಅದನ್ನು ವೈಯಕ್ತಿಕ ನೆಲೆಗಟ್ಟಿಲ್ಲಿಯೇ ವಿರೋಧಿಸಲಾಗುತ್ತಿತ್ತು. ಹಾಗಾಗಿಯೇ ಬಲಪಂಥೀಯರು ಹೇಳುವಂತೆ ಹಿಂದೆಯೂ ಅಸಹಿಷ್ಣುತೆ ಇದ್ದರೂ ಜನರು ವೈಯುಕ್ತಿಕ ಮಟ್ಟದಲ್ಲಿ ಮಾತ್ರ ತೆಗೆದುಕೊಳ್ಳುತ್ತಿದ್ದರು ಅನಿಸುತ್ತೆ. ಹಾಗಾಗಿಯೇ ವೈಯುಕ್ತಿಕ ನೆಲೆಯಲ್ಲಿನ ಹಲ್ಲೆ ಅವಮಾನಗಳನ್ನು ನಾವಗಳು ಕೂಡ ವೈಯುಕ್ತಿಕವಾಗಿಯೇ ತೆಗೆದುಕೊಂಡು ಸಹಿಸಿಕೊಳ್ಳುತ್ತಿದ್ದೆವು.

ಆದರೆ ಇವತ್ತಿನ ಅಸಹಿಷ್ಣುತೆಯ ಬಗೆಯಗಲಿ ಹಗೆಯಾಗಲಿ ಬೇರೆ ತೆರನಾದ್ದು. ಸಾಂಪ್ರದಾಯಿಕ ಸಮಾಜದ ಮೇಲೆ ತನ್ನ ಹಿಡಿತ ಕಳೆದುಕೊಳ್ಳುತ್ತಿರುವ ಧರ್ಮವೊಂದು ಹೇಗೆಲ್ಲ ತನ್ನ ಅಸಹನೆ ತೋರಬಹುದೊ ಅಂತಹದೊಂದು ಅಸಹಿಷ್ಣುತೆ ಇವತ್ತು ಇಂಡಿಯಾದಲ್ಲಿ ಗೋಚರಿಸುತ್ತಿದೆ. ಜೊತೆಗೆ ತನ್ನ ಮೂಲ ಸಿದ್ದಾಂತಗಳನ್ನು ಮತ್ತು ತಾನು ಯಾವುದನ್ನು ಶ್ರದ್ದೆ ಎನ್ನುತ್ತೇನೆಯೊ ಅದನ್ನು ಮೂಢನಂಬಿಕೆಯೆಂದು ಪ್ರತಿರೋಧಿಸುವ ಮನಸುಗಳ ವಿರುದ್ದವೂ ಅದು ಇನ್ನಿಲ್ಲದ ಅಸಹಿಷ್ಣುತೆ ಹೊರಹಾಕುತ್ತಿದೆ. ಧರ್ಮವೊಂದು ಪ್ರಭುತ್ವವಾಗುವಾಗ ತನ್ನ ಹಾದಿಗೆ ಅಡ್ಡಬಂದವರನ್ನು ಇನ್ನಿಲ್ಲವಾಗಿಸಿ ಭಯವನ್ನು ಸೃಷ್ಠಿಸುವ ರೀತಿ ಇದಾಗಿದೆ. ತಾನು ಪ್ರಭುತ್ವವಾಗದಿದ್ದರೂ ತನ್ನ ಹಿತ ಕಾಯುವ ಪ್ರಭುತ್ವವೊಂದು ಇದೆಯೆಂಬ ಅದರ ನಂಬಿಕೆಯೇ ಇವತ್ತು ಇಂಂಡಿಯಾದಲ್ಲಿ ಇಷ್ಟೊಂದು ಅಸಹಿಷ್ಣುತೆ ಹುಟ್ಟು ಹಾಕಲು ಕಾರಣವಾಗಿದೆ

ಪ್ರಭುತ್ವದ ಬೆಂಬಲವಿದ್ದಾಗ ನಡೆಯುವ ಹಲ್ಲೆಗಳು ಮಾರಣಾಂತಿಕವಾಗಿರುತ್ತವೆ. ಹೀಗಾಗಿಯೇ ದಾಬೋಲ್ಕರ್ ಮತ್ತು ಕಲಬುರ್ಗಿಯವರ ಹತ್ಯೆಗಳು ಬಹಳ ಸುಲಭವಾಗಿ ನಡೆದು ಹೋಗುತ್ತವೆ. ಯಾವಾಗ ಪ್ರಭುತ್ವದ ಪ್ರಾಯೋಜಿತ ಅಹಿಷ್ಣುತೆ ಜಾಸ್ತಿಯಗುತ್ತದೆಯೊ ಆಗದನ್ನು ವಿರೋಧಿಸುವುದು ಸಾಮೂಹಿಕವಾಗಿಯೇ ಅನಿವಾರ್ಯವಾಗುತ್ತದೆ. ಮತ್ತು ಇಂತಹ ವಿರೋಧ ಸಮಾಜದ ಎಲ್ಲ ವರ್ಗದ ಜನರನ್ನು ಒಳಗೊಂಡು ತೀವ್ರವಾಗುತ್ತದೆ. ಇವತ್ತು ಇಂಡಿಯಾದಲ್ಲಿ ಹೆಚ್ಚಾಗುತ್ತಿರುವ ಅಸಹಿಷ್ಣುತೆಯ ವಿರುದ್ದದ ಹೋರಾಟ ತೀವ್ರವಾಗಿರುವುದು ಈ ಕಾರಣಕ್ಕೇನೆ. ಹಿಂದೆ ಇದ್ದ ಅಸಹಿಷ್ಣುತೆಯ ವಿರುದ್ದ ಯಾಕೆ ಪ್ರತಿಭಟಿಸಲಿಲ್ಲ ಎಂದು ಕೇಳುವವರಿಗೆ ಇದು ಸಮಂಜಸ ಉತ್ತರವೆಂದು ನಾನಂತು ಬಾವಿಸುತ್ತೇನೆ.

ಡಿಸೆಂ 21, 2015

ಮಹಾದೇವರು ಹೇಳಿದ ಮೇಕೆಯ ಕತೆ

devanooru mahadeva
ಜನನುಡಿ 2015ರ ಮೊದಲ ದಿನ ರಾತ್ರಿ ಊಟವಾದ ಮೇಲೆ ‘ಅಭಿಮತ’ ತಂಡದ ದಿಡೀರ್ ವಿಮರ್ಶಾತ್ಮಕ ಸಭೆ ನಡೆಯುತ್ತಿದ್ದಾಗ ಅವತ್ತು ರಾತ್ರಿಯೇ ಮೈಸೂರಿಗೆ ಹೊರಟಿದ್ದ ದೇವನೂರು ಮಹಾದೇವರವರು ಬಂದರು. ಜನನುಡಿಯನ್ನು ವ್ಯವಸ್ಥಿತವಾಗಿ ಆಯೋಜಿಸಿದ ಕಿರಿಯರನ್ನುದ್ದೇಶಿಸಿ ನೀವೆರಡು ಮಾತುಗಳನ್ನಾಡಬೇಕು ಎಂದು ದಿನೇಶ್ ಅಮೀನ್ ಮಟ್ಟು ಹೇಳಿದಾಗ ‘ಓ ಮತ್ತೆ ಮತ್ತೆ ನನ್ನನ್ನು ನೀವು ಹಿರಿಯರು ಮಾಡಿಬಿಡ್ತಿದ್ದೀರಿ’ ಎಂದು ನಗುತ್ತ ಮಾತುಗಳನ್ನಾರಂಭಿಸಿದ ದೇವನೂರು ‘ಇಲ್ಲಿ ನಿಮಗೆಲ್ಲ ಧನ್ಯವಾದ ಹೇಳೋ ಅವಶ್ಯಕತೆಯೆಲ್ಲಾ ಇಲ್ಲವೇ ಇಲ್ಲ. ಇದನ್ನು ನೀವು ನಿಮಗಾಗಿ ಮಾಡಿದ್ದೀರಿ. ಯಾವಾಗಲೂ ನಾನು ನನಗಾಗಿ ಈ ಕೆಲಸ ಮಾಡ್ತಿದ್ದೀನಿ ಅಂದ್ಕೊಂಡೇ ಮಾಡಬೇಕು. ಸಮಾಜಕ್ಕಾಗಿ, ಉದ್ಧಾರಕ್ಕಾಗಿ ಮಾಡ್ತಿದ್ದೀನಿ ಅನ್ನೋ ಮಾತುಗಳನ್ನೆಲ್ಲಾ ಮರೆತು ನನಗಾಗಿ ಮಾಡ್ತಿದ್ದೀನಿ ಅಂದ್ಕೊಂಡು ಮಾಡಬೇಕು. ಇದಕ್ಕೆ ಸಂಬಂಧಪಟ್ಟಂತೆ ಒಂದು ಮೇಕೆಯ ಕತೆ ಹೇಳ್ತೀನಿ ಕೇಳಿ. ಅಬ್ರಹಾಂ ಲಿಂಕನ್ ತನ್ನ ಗೆಳೆಯ ಸಚಿವನೊಂದಿಗೆ ಪಯಣಿಸುತ್ತಿರುತ್ತಾನೆ. ಜೋರು ಮಳೆ ಬರುತ್ತಿರುತ್ತೆ. ಚರ್ಚೆಯ ಸಂದರ್ಭದಲ್ಲಿ ಗೆಳೆಯನಿಗೆ ‘ನಾನು ಎಲ್ಲಾ ಕೆಲಸವನ್ನೂ ನನಗಾಗಿ ನನ್ನ ನೆಮ್ಮದಿ ಸುಖಕ್ಕಾಗಿಯಷ್ಟೇ ಮಾಡ್ತೇನೆ’ ಎನ್ನುತ್ತಾರೆ. ಇವರ ಮಾತುಗಳನ್ನು ಒಪ್ಪದ ಗೆಳೆಯ ಬಹಳಷ್ಟು ಕೆಲಸಗಳನ್ನು ನಾವು ಇತರರ ಖುಷಿಗಾಗಿ ಮಾಡುತ್ತೇವೆ ಎಂದೇ ವಾದಿಸುತ್ತಾರೆ. ದಾರಿಯಲ್ಲಿ ಮೇಕೆಯೊಂದು ಕೆಸರಿನ ಹಳ್ಳದಲ್ಲಿ ಸಿಲುಕಿ ಹೊರಬರಲಾರದೆ ಮ್ಯಾ ಮ್ಯಾ ಎಂದು ಕಿರುಚಾಡುತ್ತಿರುತ್ತದೆ. ಇದನ್ನು ನೋಡಿದ ಲಿಂಕನ್ನರು ಮತ್ತೊಂದು ಕ್ಷಣ ಯೋಚಿಸದೆ ಬಿರುಸು ಮಳೆಯಲ್ಲಿ ನಡೆದು ಹೋಗಿ ಕೆಸರಿನಲ್ಲಿ ಸಿಲುಕಿದ್ದ ಮೇಕೆಯನ್ನು ಎತ್ತಿ ತಮ್ಮ ಎದೆಗೆ ಒತ್ತಿ ಹಿಡಿದು ಮೂತಿ ಮೇಲಿನ ಕೆಸರು ಒರೆಸಿ ನೆಲಕ್ಕೆ ಬಿಟ್ಟು ಅಂಡಿನ ಮೇಲೊಂದು ಒಡೆದು ಕಳುಹಿಸುತ್ತಾರೆ. ಲಿಂಕನ್ನರ ಶರ್ಟು ಸೂಟುಗಳೆಲ್ಲ ಕೆಸರುಮಯ. ಪಯಣ ಮತ್ತೆ ಪ್ರಾರಂಭವಾದಾಗ ಗೆಳೆಯ ನಗುತ್ತಿರುತ್ತಾನೆ. ‘ನೋಡಿದ್ರಾ ನನ್ನ ವಾದವೇ ಗೆದ್ದಿತು. ಮೇಕೆಯನ್ನು ನೀವು ಬದುಕಿಸಿಬಿಟ್ಟಿರಿ. ಇದನ್ನು ನೀವು ಮೇಕೆಗಾಗಿ ಮಾಡಿದಿರೇ ಹೊರತು ನಿಮಗಾಗಿ ಅಲ್ಲ’. ಲಿಂಕನ್ ‘ಖಂಡಿತವಾಗಿ ಈ ಕಾರ್ಯವನ್ನು ನಾನು ಮಾಡಿದ್ದು ನನಗಾಗಿ, ಮೇಕೆಗಾಗಿ ಅಲ್ಲ’ ಎಂದ್ಹೇಳಿ ಮುಗುಳ್ನಗುತ್ತಾರೆ. ಅದು ಹೇಗೆ ಎಂಬ ಪ್ರಶ್ನೆಗೆ ‘ನೋಡಿ ನಾನದನ್ನು ಬದುಕಿಸದಿದ್ದರೆ ಅದರ ಮ್ಯಾ ಮ್ಯಾ ಎಂಬ ಕೂಗು ನನ್ನ ಕಿವಿಯಲ್ಲಿ, ತಲೆಯಲ್ಲಿ ಉಳಿದುಹೋಗುತ್ತಿತ್ತು. ಆ ಕೂಗಿನ ನೆನಪಿನಿಂದ ನನಗೆ ಹತ್ತಲವು ರಾತ್ರಿಗಳು ನಿದ್ರೆ ಬರುತ್ತಿರಲಿಲ್ಲ. ನನ್ನ ನೆಮ್ಮದಿಯ ನಿದ್ರೆಗಾಗಿ ಅದನ್ನು ಬದುಕಿಸಿದೆ. ನನಗಾಗಿ ಅದನ್ನು ಬದುಕಿಸಿದೆ’!
ನಿರೂಪಣೆ: ಡಾ. ಅಶೋಕ್. ಕೆ. ಆರ್

ಡಿಸೆಂ 17, 2015

ಈಗ ಗಾಳಿಗೂ ಭರ್ಜರಿ ಬೆಲೆ!

vitality air
ಚೀನಾದ ಬೀಜಿಂಗಿನಲ್ಲಿ ಈ ಬಾರಿಯೂ 'ರೆಡ್ ಅಲರ್ಟ್' ಘೋಷಿಸಲಾಗಿತ್ತು. ಕಾರಣ ಹೊಗೆ ಮತ್ತು ಮಂಜು (ಹೊಂಜು) ವಿಪರೀತವೆನ್ನಿಸುವಷ್ಟು ಜಾಸ್ತಿಯಾಗಿ ಜನರ ಉಸಿರಾಟಕ್ಕೆ ಓಡಾಟಕ್ಕೆ ತೊಂದರೆಯುಂಟುಮಾಡಿತ್ತು. ಮಂಜು ಪ್ರಾಕೃತಿಕವಾದರೆ ಹೊಂಜು ಮನುಷ್ಯ ನಿರ್ಮಿತ. ಇಡೀ ಪರಿಸರದ ಉಸಿರುಗಟ್ಟಿಸುವಲ್ಲಿ ಮನುಷ್ಯ ಹೆಸರುವಾಸಿಯಲ್ಲವೇ. ಬರ ಇರಲಿ ನೆರೆ ಬರಲಿ ಹೊಂಜು ಮುಸುಕಲಿ ಹಣ ಮಾಡುವ ನವನವೀನ ವಿಧಾನಗಳ ಆವಿಷ್ಕಾರ ಮಾಡುವುದು ವ್ಯಾಪಾರಿಗಳು. ಕೆನಡಾದ ವ್ಯಾಪಾರಿಗಳು ಮತ್ತು ಚೀನಾದ ವ್ಯಾಪಾರಿಗಳು ಈ ಹೊಂಜಿನ ನಡುವೆ ಯಾವ ವ್ಯಾಪಾರ ಮಾಡುವುದೆಂದು ತಲೆಕೆರೆದುಕೊಂಡಾಗ ಹೊಳೆದಿದ್ದು ಶುದ್ಧ ಗಾಳಿ! ಹೌದು ಹೊಂಜಿನ ವಾತಾವರಣದಲ್ಲಿ ಉಸಿರಾಡುವುದೇ ಕಷ್ಟಕರವಾದಾಗ ಒಂದಷ್ಟು ಶುದ್ಧ ಗಾಳಿ ನೀಡುವ ಕಂಪನಿಗಳಿಗೆ ವಿಪರೀತವೆನ್ನಿಸುವಷ್ಟು ಬೇಡಿಕೆ ಇದೆ.

ಗಾಳಿ ಮಾರುವ ಕಂಪನಿಗಳು ಹೇಳಿಕೊಳ್ಳುವ ಪ್ರಕಾರ ಶಿಖರ ಪರ್ವತಗಳನ್ನು ಏರಿ ಶುದ್ಧ ಗಾಳಿಯನ್ನು ತುಂಬಿಸಿಕೊಂಡು ಬಂದು ಚಿಕ್ಕ ಚಿಕ್ಕ ಕ್ಯಾನುಗಳೊಳಗೆ ತುಂಬಿ ಮಾರಲಾಗುತ್ತಿದೆ. ಗಾಳಿಯ ಪರಿಶುದ್ಧತೆಯ ಲೆಕ್ಕಾಚಾರದಲ್ಲಿ ಒಂದು ಕ್ಯಾನಿಗೆ 19ರಿಂದ 32 ಕೆನಡಾ ಡಾಲರ್ರುಗಳವರೆಗೆ ಬೆಲೆಯಿದೆ (ಅಂದಾಜು 750 ರಿಂದ 1500 ರುಪಾಯಿ!). ಎರಡೆರಡು ಬಾಟಲುಗಳನ್ನು ಜೊತೆಗೆ ಖರೀದಿಸಿದರೆ ಡಿಸ್ಕೌಂಟ್ ಕೂಡ ಸಿಗುತ್ತೆ! ಚೀನಾದಲ್ಲೀಗ ಇಂತಹ ಕ್ಯಾನುಗಳಿಗೆ ವಿಪರೀತವೆನ್ನಿಸುವಷ್ಟು ಬೇಡಿಕೆ ಸೃಷ್ಟಿಯಾಗಿದೆ. ಇದರ ಜೊತೆಗೆ ಕೆಲವು ಹೋಟೆಲ್ಲುಗಳಲ್ಲಿ 'ಗಾಳಿ ಶುದ್ಧಗೊಳಿಸಲು' ತೆರಿಗೆ ವಿಧಿಸಲು ಪ್ರಾರಂಭಿಸಿದ್ದಾರಂತೆ! ಒಟ್ಟಿನಲ್ಲಿ ಮನುಷ್ಯನ 'ಅಭಿವೃದ್ಧಿ' ಮಾದರಿಯಿಂದ ಶೇಖರಣೆಗೊಂಡ ಹಣವನ್ನು ವ್ಯಯಿಸಲು ನಾನಾ ರೀತಿಯ ದಾರಿಗಳು ಸೃಷ್ಟಿಯಾಗುತ್ತಿವೆ. ಭಾರತ 'ಅಭಿವೃದ್ಧಿ'ಯ ಪಥದಲ್ಲಿ ಮುನ್ನುಗ್ಗಿ ನುಗ್ಗುವ ಬಗ್ಗೆಯೇ ನಮ್ಮ ನಾಯಕರು ಮತ್ತು ಜನಸಾಮಾನ್ಯರು ಮಾತನಾಡುತ್ತಿರುವ ಈ ದಿನಗಳಲ್ಲಿ ಚೀನಾದ 'ಅಭಿವೃದ್ಧಿ' ಮಾದರಿ ನಮಗೆ ಪಾಠವಾಗಬೇಕಲ್ಲವೇ? ಅಯ್ಯೋ ಚೀನಾದಲ್ಲಾಗಿದೆ ಅಷ್ಟೇ, ನಾವು ಇನ್ನೂ ಸೇಫು ಬುಡ್ರಿ ಎನ್ನುವ ಸ್ಥಿತಿಯಲ್ಲಿ ನಾವಿದ್ದೇವೆಯೇ?

ದೆಹಲಿಯಲ್ಲಾಗಲೇ ಹೊಂಜಿನ ಅಟ್ಟಹಾಸ ಶುರುವಾಗಿದೆ. ದೆಹಲಿ ಸರಕಾರ ಜನವರಿ ಒಂದರಿಂದ ಸಮ - ಬೆಸ ಸಂಖೈಯ ವಾಹನಗಳು ದಿನ ಬಿಟ್ಟು ದಿನ ರೋಡಿಗಿಳಿಯುವಂತೆ ಮಾಡುವಲ್ಲಿ ಉತ್ಸುಕವಾಗಿದೆ. ಟೀಕೆಗಳೇನೇ ಇದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಇದು ಒಂದು ಉತ್ತಮ ನಡೆಯೇ ಹೌದು. ಅನುಷ್ಟಾನ ಕಷ್ಟವೆಂಬುದೂ ಸತ್ಯ. ನ್ಯಾಯಾಲಯ ಇನ್ನೂ ಮೂರು ತಿಂಗಳವರೆಗೆ 2000 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಡೀಸೆಲ್ ವಾಹನಗಳನ್ನು ದೆಹಲಿಯಲ್ಲಿ ನೋಂದಾಯಿಸುವಂತಿಲ್ಲ ಎಂದು ಆದೇಶಿಸಿದೆ. ಈ ನಿರ್ಧಾರಗಳೆಲ್ಲವೂ ಭಾರತದ ದೆಹಲಿ ಕೂಡ ಬೀಜಿಂಗ್ ಆಗುವತ್ತ ಸಾಗಿದೆ ಎನ್ನುವುದನ್ನೇ ಸೂಚಿಸುತ್ತಿದೆ. ಎರಡು ಮೂರು ಕಿಲೋಮೀಟರ್ ಮೈಲೇಜು ಕೊಡುವ ಕಾರಿನಲ್ಲಿ ದಿನವಿಡೀ ತಿರುಗಿ ಹೊಗೆಯುಗುಳುವವರೇನೋ ಮನೆಯಲ್ಲಿ 'ಗಾಳಿ ಶುದ್ಧ'ಗೊಳಿಸುವ ಮಿಷೀನನ್ನು ಖರೀದಿಸಿಬಿಡಬಹುದು ಕಾರೂ ಇಡದೆ ಬೈಕೂ ತೆಗೆದುಕೊಳ್ಳದೆ ಸಾರ್ವಜನಿಕ ಸಾರಿಗೆಯನ್ನಷ್ಟೇ ಉಪಯೋಗಿಸುವವರ್ಯಾಕೆ ವಿಷಗಾಳಿಯನ್ನು ಸೇವಿಸಬೇಕು? ಹತ್ತಕ್ಕಿಂತ, ಹದಿನೈದಕ್ಕಿಂತ ಕಡಿಮೆ ಮೈಲೇಜ್ ಕೊಡುವ ಕಾರುಗಳನ್ನು, ನಲವತ್ತಕ್ಕಿಂತ ಕಡಿಮೆ ಮೈಲೇಜು ಕೊಡುವ ಬೈಕು - ಸ್ಕೂಟರುಗಳನ್ನು ಭಾರತದಲ್ಲಿ ಉತ್ಪಾದಿಸಬಾರದು, ಮಾರಬಾರದು ಎಂದೊಂದು ನಿರ್ಣಯ ತೆಗೆದುಕೊಳ್ಳುವುದು ಅಷ್ಟೊಂದು ಕಷ್ಟವೇ? ಅಭಿವೃದ್ಧಿಯ ವೇಗದ ಭರದಲ್ಲಿ ಪರಿಸರಕ್ಕೇನಾದರೇನು ಬಿಡಿ.

ಹೆಚ್ಚೇನಲ್ಲ ಹತ್ತು ವರುಷದ ಹಿಂದೆ ಹೋಟೆಲ್ಲಿಗೋ ಡಾಬಾಗೋ ಹೋದಾಗ ಗೆಳೆಯರ್ಯಾರಾದೂ ಬಾಟಲ್ ನೀರು ಕೇಳಿದರೆ ಆಡಿಕೊಳ್ಳುತ್ತಿದ್ದೋ. 'ನೋಡ್ದಾ ಇವನ ಕೊಬ್ಬಾ. ಮಿನರಲ್ ವಾಟರ್ ಬೇಕಂತೆ' ಎಂದು ರೇಗಿಸುತ್ತಿದ್ದೊ. ನೀರಿಗೆ ದುಡ್ಡು ಕೊಟ್ಟು ಖರೀದಿಸಿ ಕುಡಿಯುವುದು ನಗೆಪಾಟಲಿನ ಸಂಗತಿಯಾಗಿತ್ತು. ಈಗ? ಬಾಟಲ್ ನೀರು ಖರೀದಿಸುವುದು ಸಹಜವಾಗಿಬಿಟ್ಟಿದೆ. ಭಾರತದ ಅತ್ಯುತ್ತಮ ಬ್ಯುಸಿನೆಸ್ಸುಗಳಲ್ಲಿ ಅದೂ ಒಂದು. ಇನ್ನತ್ತು ವರುಷದಲ್ಲಿ ಭಾರತದ ಮುಖ್ಯ ನಗರಗಳಲ್ಲಿ ಚೀನಾದ ಬೀಜಿಂಗಿನಲ್ಲಾದಂತೆಯೇ ಗಾಳಿಯ ಬ್ಯುಸಿನೆಸ್ಸು ಪ್ರಾರಂಭವಾದರೆ ಅಚ್ಚರಿಯಿಲ್ಲ. ನಮ್ಮ ಅಭಿವೃದ್ಧಿಯ ಮಾದರಿಗಳು ಹೇಗಿರುತ್ತವೋ ನೋಡಿ. ಶುದ್ಧ ನೀರನ್ನು ಪ್ಲಾಸ್ಟಿಕ್ ಬಾಟಲುಗಳಲ್ಲಿ, ಶುದ್ಧ ಗಾಳಿಯನ್ನು ಮೆಟಲ್ ಕ್ಯಾನುಗಳಲ್ಲಿ ತುಂಬಿಸುತ್ತೇವೆ. ಪ್ಲಾಸ್ಟಿಕ್ ಬಾಟಲುಗಳನ್ನು ಮೆಟಲ್ ಕ್ಯಾನುಗಳನ್ನು ತಯಾರಿಸಲು ಮತ್ತಷ್ಟು ಪರಿಸರ ನಾಶವಾಗುತ್ತದೆ, ಆ ನಾಶದ ಪರಿಣಾಮಗಳಿಂದ ಜನರನ್ನು - ಹಣವಂತ ಜನರನ್ನು 'ರಕ್ಷಿಸಲು' ಮತ್ತೊಂದು ಹೊಸ ವ್ಯಾಪಾರ ಶುರುವಾಗುತ್ತದೆ, ಆ ವ್ಯಾಪಾರದಿಂದ ಉಂಟಾಗುವ ಪರಿಸರ ನಾಶದಿಂದ........ ಅಭಿವೃದ್ಧಿಯ ಸಮಯದಲ್ಲಿ ಪರಿಸರದ ಬಗ್ಗೆ ಮಾತನಾಡುವುದೇ ಪಾಪ.

ಡಿಸೆಂ 16, 2015

ಹೊಸ ವರ್ಷದಿಂದ ಸ್ನ್ಯಾಪ್ ಡೀಲಿನಲ್ಲಿ ಕನ್ನಡದಲ್ಲೇ ವ್ಯವಹರಿಸಿ!

snapdeal in 12 languages
ಭಾರತದ ಭಾಷಾ ವೈವಿಧ್ಯತೆಯನ್ನು ಕಡೆಗಣಿಸುವ ಕಂಪನಿಗಳೇ ಅಧಿಕ. ಕಂಪನಿಗಳ ಲೆಕ್ಕದಲ್ಲಿ ಭಾರತವೆಂದರೆ ಇಂಗ್ಲೀಷ್ ತಪ್ಪಿದರೆ ಹಿಂದಿ. ಬೆಂಗಳೂರಲ್ಲೇ ನೆಲೆಯೂರಿರುವ ಫ್ಲಿಪ್ ಕಾರ್ಟಿನಂತಹ ಸಂಸ್ಥೆ ಕೂಡ ಬೆಂಗಳೂರಿನಲ್ಲಿ ಹಾಕುವ ಬ್ಯಾನರುಗಳಲ್ಲಿ ಹಿಂದಿ ಬಳಸಿಬಿಡುತ್ತದೆ. ತೆಗೆದುಕೊಂಡಿರುವ ವಸ್ತುವಿನಲ್ಲಿ ಏನಾದರೂ ದೋಷವಿದ್ದು ಇ-ಕಾಮರ್ಸ್ ಸಂಸ್ಥೆಗಳಿಗೆ ದೂರವಾಣಿ ಕರೆ ಮಾಡಿದಾಗಲೂ ಇಂಗ್ಲೀಷ್ ಅಥವಾ ಹಿಂದಿಯಲ್ಲೇ ಮಾತನಾಡಬೇಕಾದ ಕರ್ಮ. ಇನ್ನು ಅಂತರ್ಜಾಲ ಪುಟಗಳಂತೂ ಸಂಪೂರ್ಣ ಆಂಗ್ಲಮಯವೇ ಆಗಿರುತ್ತದೆ. ಅಂತರ್ಜಾಲದಲ್ಲಿ ಇಂಗ್ಲೀಷ್ ಅನಿವಾರ್ಯವೆಂಬುದು ಎಷ್ಟು ಸತ್ಯವೋ ಗೂಗಲ್, ಫೇಸ್ ಬುಕ್ಕಿನಂತಹ ಸಾಮಾಜಿಕ ಜಾಲತಾಣಗಳು ಭಾರತದ ವಿವಿಧ ಭಾಷೆಗಳಲ್ಲಿ ಸೌಲಭ್ಯಗಳನ್ನು ನೀಡುತ್ತಿರುವುದನ್ನು ಮರೆಯಬಾರದು. ಇ-ಕಾಮರ್ಸ್ ಕಂಪನಿಗಳು ನಿಧಾನಕ್ಕಾದರೂ ವಿವಿಧ ಭಾರತೀಯ ಭಾಷೆಗಳಲ್ಲಿ ಸೇವೆಗಳನ್ನು ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ. ಸದ್ಯಕ್ಕೆ ಸ್ನ್ಯಾಪ್ ಡೀಲ್ ತನ್ನ ಮೊಬೈಲ್ ಆ್ಯಪ್ ಗಳನ್ನು ಬಹುಭಾಷೆಯಲ್ಲಿ ನೀಡಲು ತೀರ್ಮಾನಿಸಿದೆ. 
ಸದ್ಯಕ್ಕೆ ಸ್ನ್ಯಾಪ್ ಡೀಲನ್ನು ಇಂಗ್ಲೀಷಿನ ಜೊತೆಗೆ ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ನೀಡಲಾರಂಭಿಸಿದೆ. 2016ರ ಜನವರಿ 26ರಿಂದ ಕನ್ನಡ, ತಮಿಳು, ಗುಜರಾತಿ, ಮರಾಠಿ, ಬೆಂಗಾಲಿ, ಮಲಯಾಳಂ, ಒರಿಯಾ, ಅಸ್ಸಾಮಿ ಮತ್ತು ಪಂಜಾಬಿ ಭಾಷೆಯಲ್ಲಿ ಸ್ನ್ಯಾಪ್ ಡೀಲ್ ಲಭ್ಯವಿರುತ್ತದೆ. ಮಾರಾಟಗಾರರು ಮತ್ತು ಗ್ರಾಹಕರ ನಿರಂತರ ಒತ್ತಾಯದ ಕಾರಣದಿಂದ ಮತ್ತು ಸ್ಥಳೀಯ ಭಾಷೆ ಉಪಯೋಗಿಸುವವರಿಗೆ ಮತ್ತಷ್ಟು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಇಂತಹ ನಿರ್ಧಾರವನ್ನು ಕೈಗೊಂಡಿರುವುದಾಗಿ ಸ್ನ್ಯಾಪ್ ಡೀಲ್ ತಿಳಿಸಿದೆ. ಕನ್ನಡದಲ್ಲಿ ಸೇವೆ ಕೊಡಿ ಎಂದು ನಿರಂತರವಾಗಿ ಒತ್ತಾಯಿಸುವುದರಿಂದ ಖಂಡಿತವಾಗಿಯೂ ಉಳಿದ ಕಂಪನಿಗಳೂ ಸ್ನ್ಯಾಪ್ ಡೀಲ್ ನ ಹಾದಿ ಹಿಡಿದು ಭಾರತದ ಎಲ್ಲಾ ಭಾಷೆಗಳಿಗೂ ಪ್ರಾಮುಖ್ಯತೆ ಕೊಡುವ ದಿನಗಳು ದೂರವಿಲ್ಲ.

ಈ ನಿಯತ್ತಿಗೆ ಮೂವತ್ತು ಸಾವಿರ ವರ್ಷ!

ನಿಯತ್ತಿಗೆ ಮತ್ತೊಂದು ಹೆಸರು ನಾಯಿ! ತೋಳಗಳ ಪ್ರಪಂಚದಿಂದ ಹೊರಜಿಗಿದು ಮನುಷ್ಯನ ಸಹವಾಸಕ್ಕೆ ನಾಯಿಗಳು ಬಿದ್ದು ಎಷ್ಟು ವರುಷಗಳಾಗಿರಬಹುದು, ನಾಯಿಗಳ ಜನನ ಮೊದಲು ಪ್ರಾರಂಭವಾದದ್ದೆಲ್ಲಿ ಎನ್ನುವುದನ್ನು ತಿಳಿಯಲು ಚೀನಾದ ವಿಜ್ಞಾನಿಗಳು ಶ್ರಮಿಸಿದ್ದಾರೆ. ಇದಮಿತ್ಥಮಂ ಇಂತಹ ಜಾಗವೇ ನಾಯಿಗಳ ಉಗಮಸ್ಥಾನ ಎಂದು ಹೇಳಲು ಸಂಪೂರ್ಣ ಸಾಧ್ಯವಾಗಿಲ್ಲವಾದರೂ ತಳಿಶಾಸ್ತ್ರದ ಅಧ್ಯಯನದ ಮೂಲಕ ದಕ್ಷಿಣ ಏಷ್ಯಾ ಖಂಡದಲ್ಲಿ ಮನುಷ್ಯ ಮತ್ತು ನಾಯಿಯ ಸಹಬಾಳ್ವೆ ಪ್ರಾರಂಭವಾಯಿತು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಹನ್ನೆರಡು ತೋಳ, ಏಷ್ಯಾ ಮತ್ತು ಆಫ್ರಿಕಾದ ಇಪ್ಪತ್ತೇಳು ಪುರಾತನ ನಾಯಿಗಳು, ಈಗ ಪ್ರಸ್ತುತದಲ್ಲಿ ಇರುವ ಹತ್ತೊಂಭತ್ತು ವಿವಿಧ ತಳಿಯ ನಾಯಿಗಳ ತಳಿ ಅಧ್ಯಯನ ನಡೆಸಿರುವ ವಿಜ್ಞಾನಿಗಳ ತಂಡದ ಪ್ರಕಾರ ದಕ್ಷಿಣ ಏಷ್ಯಾದಲ್ಲಿ ಮೂವತ್ತು ಸಾವಿರ ವರುಷಗಳ ಹಿಂದೆ ತೋಳದಿಂದ ನಾಯಿ ಬೇರ್ಪಟ್ಟಿತು.

ಈ ನಾಯಿಯ ಉಗಮದ ಹಿಂದಿನ ಸ್ವಾರಸ್ಯಕರ ಕತೆಯನ್ನು ಡಿಸ್ಕವರಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ತೋರಿಸಿದ್ದರು. ಬೇಟೆಯಾಡಲು ಶಕ್ತವಲ್ಲದ ಕೆಲವು ತೋಳಗಳು ಮನುಷ್ಯ ವಾಸವಿದ್ದ ಜಾಗದ ಸುತ್ತಮುತ್ತ ತಿರುಗುತ್ತಿದ್ದವಂತೆ. ಮನುಷ್ಯ ಎಸೆದಿದ್ದ ಆಹಾರ ಪದಾರ್ಥವನ್ನು ತಿನ್ನುತ್ತ ಜೀವ ಉಳಿಸಿಕೊಳ್ಳುತ್ತಿದ್ದವಂತೆ. ದಿನವಿಡೀ ತಮ್ಮ ಸುತ್ತಲೇ ಸುತ್ತುತ್ತಿದ್ದ ನಿರುಪದ್ರವಿ ತೋಳಗಳ ಬಗ್ಗೆ ಮನುಷ್ಯನಿಗೂ ಅನುಕಂಪ ಮೂಡಿರಬೇಕು. ತಾನು ತಿನ್ನುತ್ತಿದ್ದ ಆಹಾರದಲ್ಲೇ ಒಂದು ತುಣುಕನ್ನು ನಾಯಿಯ ಕಡೆಗೆ ಎಸೆಯುತ್ತಿದ್ದ. ಸೌಮ್ಯ ತೋಳಗಳಿಗೆ ಒರಟು ತೋಳಗಳಿಗಿಂತ ಹೆಚ್ಚಿನ ಆಹಾರ ಸಿಗುತ್ತಿತ್ತು. ಆಹಾರಕ್ಕೋಸ್ಕರ ತೋಳಗಳು ಸೌಮ್ಯವಾದವು. ನೋಡಲು ಮುದ್ದುಮುದ್ದಾಗಿದ್ದ ತೋಳಗಳಿಗೆ ಹೆಚ್ಚು ಆಹಾರ ದಕ್ಕುತ್ತಿತ್ತು. ಮುದ್ದುಮುದ್ದಾಗಿದ್ದ ತೋಳಗಳು ಪುಷ್ಕಳ ಭೋಜನದ ಪ್ರಭಾವದಿಂದ ಚೆನ್ನಾಗಿ ಬೆಳೆದು ನಿಂತವು. ಉಳಿದ ತೋಳಗಳು ಅಪೌಷ್ಟಿಕತೆಯಿಂದ ಬಳಲಿದವು. ಪರಿಸರ ಕೂಡ ತಳಿಯ ಮೇಲೆ ಪ್ರಭಾವ ಬೀರುವುದರಿಂದ ಸಹಜವಾಗಿ ಮುಂದಿನ ತಲೆಮಾರಿನ ತೋಳಗಳು ಮತ್ತಷ್ಟು ಸೌಮ್ಯವಾಗಿ ಸುಂದರವಾಗಿ ನಾಯಿಗಳಾಗಿ ಪರಿವರ್ತನೆಗೊಂಡವು! 

ಚೀನಾದ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯ ಪ್ರಕಾರ ದಕ್ಷಿಣ ಏಷ್ಯಾದ ಪುರಾತನ ನಾಯಿಗಳ ತಳಿ ತೋಳಕ್ಕೆ ಅತ್ಯಂತ ಸಮೀಪದಲ್ಲಿದೆ, ಸಾಮ್ಯತೆಗಳು ಹೆಚ್ಚಿವೆ. ಇವುಗಳ ಆಧಾರದ ಮೇಲೆ ಪ್ರಪಂಚದ ಮೊದಲ ನಾಯಿಗಳ ಉಗಮ ಮೂವತ್ತು ವರುಷಗಳ ಹಿಂದೆ ನಡೆದಿದೆ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಹದಿನೈದು ಸಾವಿರ ವರುಷಗಳ ತನಕ ದಕ್ಷಿಣ ಏಷ್ಯಾದಲ್ಲೇ ಮೊಕ್ಕಾಮು ಹೂಡಿದ್ದ ನಾಯಿಗಳು ನಂತರದಲ್ಲಿ ಮಧ್ಯ ಪ್ರಾಚ್ಯ ಏಷ್ಯಾದ ಕಡೆಗೆ ಹೆಜ್ಜೆ ಹಾಕಿದವು. ಜನರ ವಲಸೆಯ ಜೊತೆಗೆ ನಾಯಿಗಳೂ ವಲಸೆ ಪ್ರಾರಂಭಿಸಿದವು. ಹತ್ತು ಸಾವಿರ ವರುಷಗಳ ಕೆಳಗೆ ಯುರೋಪು ಖಂಡಕ್ಕೆ ಭೇಟಿ ನೀಡಿ ಮತ್ತಷ್ಟು ತಳಿ ಸಂಕರವಾಗಿ ಮತ್ತೆ ಉತ್ತರ ಚೀನಾದ ಕಡೆಗೆ ನಡೆದವು ಎನ್ನುತ್ತದೆ ಈ ಸಂಶೋಧನೆ. ನೇಚರ್ ಜರ್ನಲ್ಲಿನಲ್ಲಿ ಪ್ರಕಟವಾಗಿರುವ ಈ ಸಂಶೋಧನೆಯ ಲೇಖನವು ಮನುಷ್ಯ ಮತ್ತು ನಾಯಿಯ ನಡುವಿನ ಬಾಂಧವ್ಯದ ಇತಿಹಾಸವನ್ನು ಅರಿಯಲು ಸಹಕಾರಿಯಾಗಿದೆ.

ನಮ್ಮ ಮೆಟ್ರೋಗೆ ವ್ಯಕ್ತಿಯ ಹೆಸರೇಕೆ?

ನಾಯಂಡನಹಳ್ಳಿ ಮತ್ತು ಮಾಗಡಿ ರಸ್ತೆಯ ಮಧ್ಯದ ಮೆಟ್ರೋ ರೈಲಿನ ಉದ್ಘಾಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೆಟ್ರೋಗೆ ಕೆಂಪೇಗೌಡರ ಹೆಸರಿಡುವ ಬಗ್ಗೆ ಯೋಚಿಸುತ್ತಿದ್ದೀವಿ ಎಂದು ಹೇಳಿದರು. ನಂತರದ ದಿನಗಳಲ್ಲಿ ಬೆಂಗಳೂರಿನ ಮೆಟ್ರೋಗೆ ವಿಶ್ವೇಶ್ವರಯ್ಯನವರ ಹೆಸರನ್ಯಾಕೆ ಇಡಬಾರದು ಎಂಬ ಚರ್ಚೆಯಾಯಿತು. ಲಿಂಗಾಯತ ಸಂಘಟನೆಗಳು ಬಸವಣ್ಣನ ಹೆಸರನ್ನು ಮೆಟ್ರೋಗೆ ಇಡಬೇಕು ಎಂದು ಮನವಿ ಸಲ್ಲಿಸಿದರು. ಇವುಗಳ ಮಧ್ಯೆ ಮೆಟ್ರೋ ಯೋಜನೆಯ ಬಗ್ಗೆ ದಶಕಗಳ ಹಿಂದೆ ರೂಪುರೇಷೆ ನಿರ್ಮಿಸಿ ಕನಸು ಕಂಡಿದ್ದು ಶಂಕರ್ ನಾಗ್ ಆದ್ದರಿಂದ ಬೆಂಗಳೂರು ಮೆಟ್ರೋಗೆ ಶಂಕರನಾಗರ ಹೆಸರನ್ಯಾಕೆ ಇಡಬಾರದು ಎಂಬ ಪ್ರಶ್ನೆಯೂ ಕೇಳಿಬಂತು. ಇಂತಹುದೊಂದು ಅನವಶ್ಯಕ ಚರ್ಚೆಯನ್ನು ಹುಟ್ಟುಹಾಕಿದ ಸಿದ್ಧರಾಮಯ್ಯನವರು ನಂತರ ಮೌನವಾಗಿದ್ದುಬಿಟ್ಟರು. 
ಸಿದ್ಧರಾಮಯ್ಯ ಮೆಟ್ರೋಗೆ ಕೆಂಪೇಗೌಡರ ಹೆಸರನ್ನಿಡುವ ಬಗ್ಗೆ ಯೋಚಿಸುತ್ತಿದ್ದೀವಿ ಎಂದು ಹೇಳಿದ್ದಕ್ಕೂ ಕಾರಣವಿತ್ತು. ಕೆಲವು ದಿನಗಳ ಹಿಂದೆ ಸರಕಾರ ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಗಿರೀಶ್ ಕಾರ್ನಾಡ್ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿನ ಬದಲು ಟಿಪ್ಪುವಿನ ಹೆಸರನ್ನಿಡಬಹುದಿತ್ತು ಎಂದಿದ್ದು ವಿವಾದವಾಗಿ ಒಕ್ಕಲಿಗರ ಸಂಘಟನೆಗಳು ಕೆಂಪೇಗೌಡರಿಗೆ ಮಹಾನ್ ಅವಮಾನವಾದವರಂತೆ ಬೀದಿಗಿಳಿದು ಪ್ರತಿಭಟಿಸಿದ್ದರು. ಸಿದ್ಧರಾಮಯ್ಯನವರನ್ನು ಕಂಡರೆ ಒಕ್ಕಲಿಗರಿಗೆ ಮೊದಲೇ ಆಗುವುದಿಲ್ಲ, ಅಂತಹದ್ದರಲ್ಲಿ ಗಿರೀಶ್ ಕಾರ್ನಾಡರ ಹೇಳಿಕೆ ಒಕ್ಕಲಿಗರಲ್ಲಿ ಸಿದ್ಧು ಬಗ್ಗೆ ಇರುವ ಅಸಹನೆಯನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಅನುಮಾನವಿರಲಿಲ್ಲ. ಮೂರು ದಿನದ ನಂತರ ಸಿದ್ಧು ಏನೋ ಸಮಜಾಯಿಷಿ ಕೊಟ್ಟರಾದರೂ ಅದು ಸಾಕಾಗಲಿಲ್ಲ. ಈ ಕಾರಣಕ್ಕಾಗಿಯೇ ಸಿದ್ಧರಾಮಯ್ಯ ಕೆಂಪೇಗೌಡ ಮೆಟ್ರೋ ಎಂಬ ಹೆಸರನ್ನು ತೇಲಿಬಿಟ್ಟರು. ಬೇರೆ ಹೆಸರುಗಳ ಚರ್ಚೆಯನ್ನು ಪ್ರಾರಂಭಿಸಿಬಿಟ್ಟರು!
ಅವರಿವರ ಹೆಸರ್ಯಾಕೆ ಬೇಕು? ಸದ್ಯಕ್ಕೆ ಅದಕ್ಕೆ 'ನಮ್ಮ ಮೆಟ್ರೋ' ಎಂದು ಹೆಸರಿಸಲಾಗಿದೆ. ನಮ್ಮದು ಅಂದರೆ ಎಲ್ಲರದೂ ಆಯಿತಲ್ಲ? ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ಎಂದು ಹೆಸರಿಸಿದಂತೆ ಬೆಂಗಳೂರು ಮೆಟ್ರೋ ಅಂದಿದ್ದರೂ ಸಾಕಾಗಿತ್ತು. ಯಾವುದೋ ಸಮುದಾಯವನ್ನು 'ತೃಪ್ತಿ'ಪಡಿಸುವ ಸಲುವಾಗಿ ಒಂದು ಹೆಸರಿಡುವುದು, ಮತ್ತೊಂದು ಸಮುದಾಯ ನಮ್ಮ ನಾಯಕನ ಹೆಸರನ್ಯಾಕೆ ಇಡಲಿಲ್ಲ ಎಂದು ಮುನಿಸಿಕೊಳ್ಳುವುದು ಹೆಸರಿಟ್ಟು ವರುಷಗಳು ಕಳೆದ ನಂತರ 'ಈ ಹೆಸರು ಬದಲು ಆ ಹೆಸರು ಇಡಬಹುದಿತ್ತು ಕಣ್ರೀ' ಎಂದು ಪ್ರಚಾರಪ್ರಿಯರು ವಿನಾಕಾರಣ ವಿವಾದವೆಬ್ಬಿಸುವುದು. ಇವೆಲ್ಲ ಬೇಕಾ? ತೆವಳುತ್ತ ಸಾಗುತ್ತಿರುವ ಮೆಟ್ರೋ ಕಾಮಗಾರಿಯನ್ನು ಚುರುಕುಗೊಳಿಸಿದ್ದರೆ ಜನರಿಗಾದರೂ ಅನುಕೂಲವಾಗುತ್ತಿತ್ತು. ಒಂದೇ ಪುಣ್ಯ ಅಂದರೆ ಇಂದಿರಾ ಹೆಸರನ್ನೋ ರಾಜೀವ್ ಹೆಸರನ್ನೋ ಇಡುವ ಬಗ್ಗೆ ಸಿದ್ಧು ಹೇಳಲಿಲ್ಲ! ಓಹ್, ಅವರು ವಲಸಿಗರಲ್ಲವೇ!

ನವೆಂ 30, 2015

ಜನತಾದಳವೆಂಬ ದಿಕ್ಕೆಟ್ಟ ಪಕ್ಷ

JDS Logo
ಕು.ಸ.ಮಧುಸೂದನ್‍ ರಂಗೇನಹಳ್ಳಿ 
ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಬಹುಶ: ಜನತಾದಳ(ಜಾತ್ಯಾತೀತ)ದಷ್ಟು ಗೊಂದಲದಲ್ಲಿರುವ ಪಕ್ಷ ಇನ್ನೊಂದಿರಲಾರದು. ರಾಷ್ಟ್ರ ರಾಜಕಾರಣದಲ್ಲಾಗಲಿ ಇಲ್ಲ ರಾಜ್ಯ ರಾಜಕಾರಣದಲ್ಲಾಗಲಿ ಅದಕ್ಕೊಂದು ನಿಶ್ಚಿತವಾದ ಗುರಿಯೆಂಬುದಿಲ್ಲದೆ ಅವಕಾಶವಾದಿ ರಾಜಕಾರಣದ ಅತ್ಯುತ್ತಮ ಉದಾಹರಣೆಯಾಗಿ ಪರಿಣಮಿಸಿದೆ. ಹಾಗೆ ನೋಡಿದರೆ ಕಾಂಗ್ರೆಸ್ಸಿನ ವಂಶಪಾರಂಪರ್ಯ ರಾಜಕಾರಣವನ್ನು ವಿರೋಧಿಸುತ್ತಲೇ ಹುಟ್ಟಿದ ಎಪ್ಪತ್ತರ ದಶಕದ ಜನತಾಪಕ್ಷದ ಪಳೆಯುಳಿಕೆಯಾಗಿರುವ ಜನತಾದಳವಿಂದು ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ತನ್ನ ನೈತಿಕ ಶಕ್ತಿಯನ್ನು ಕಳೆದುಕೊಂಡು ಬಹಳ ವರ್ಷಗಳೇ ಆದವು. ತೊಂಭತ್ತರ ದಶಕದ ನಂತರ ಬಾಜಪದ ಕೋಮುವಾದವನ್ನು ವಿರೋಧಿಸುತ್ತ ಜಾತ್ಯಾತೀತ ತತ್ವದಡಿ ರಾಜಕೀಯ ಮಾಡುವ ಭರವಸೆಯನ್ನು ನೀಡಿದ್ದು ಸಹ ದೊಡ್ಡ ಸುಳ್ಳೆಂದು ಇವತ್ತು ಸಾಬೀತಾಗಿದೆ. ಹೀಗೆ ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ಕೋಮುವಾದದ ವಿರುದ್ದ ಮಾತಾಡುತ್ತಲೇ ತಾನೂ ಅದರ ಒಂದು ಭಾಗವಾಗಿ ತನ್ನೆಲ್ಲ ಮೌಲ್ಯಗಳನ್ನು ಗಾಳಿಗೆ ತೂರಿ ದಿಕ್ಕೆಟ್ಟು ನಿಂತಿರುವಂತೆ ಕಾಣುತ್ತಿರುವ ಜನತಾದಳದ ಮುಂದಿನ ನಡೆಗಳ ಬಗೆ ಜನತೆಗೆ ಮುಖ್ಯವಾಗಿ ಕರ್ನಾಟಕದ ಜನರಿಗೆ ಕುತೂಹಲವಿರುವುದು ಸಹಜವಾದರೂ ಇದೀಗ ಅದರ ಪಾಳಯದಲ್ಲಿ ನಡೆಯುತ್ತಿರುವ ಆಂತರೀಕ ವಿದ್ಯಾಮಾನಗಳನ್ನು ಮತ್ತು ಅದರ ರಾಜ್ಯಾದ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿಯವರ ಮತ್ತು ಮಾಜ ಪ್ರಧಾನಿಗಳು ಮತ್ತು ರಾಷ್ಟ್ರಾದ್ಯಕ್ಷರೂ ಆದ ಶ್ರೀ ದೇವೇಗೌಡರ ಒಗಟಿನಂತ ಮಾತುಗಳನ್ನು ಕೇಳುತ್ತಿದ್ದರೆ ಜನತಾದಳ ತನ್ನ ಹಿಂದಿನ ಎಲ್ಲ ಸಿದ್ದಾಂತಗಳನ್ನೂ ಗಾಳಿಗೆ ತೂರಿ ಅಧಿಕಾರದ ಹಪಾಹಪಿಗೆ ಬಿದ್ದಿರುವುದು ಸ್ಪಷ್ಟವಾಗುತ್ತದೆ. 

ಈ ಹಿನ್ನೆಲೆಯಲ್ಲಿ ಜನತಾದಳದ ಹುಟ್ಟಿನ ಮೂಲದ ಬಗ್ಗೆ ಒಂದಿಷ್ಟು ನೋಡಬೇಕಾಗುತ್ತದೆ. ಎಪ್ಪತ್ತರ ದಶಕದಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂದಿಯವರು ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಹುಟ್ಟಿದ್ದೇ ಅವತ್ತಿನ ಜನತಾ ಪಕ್ಷ. ಅದರ ಜನ್ಮದಲ್ಲಿಯೇ ವಿಪರ್ಯಾಸಗಳಿದ್ದವು. ಯಾಕೆಂದರೆ ಅಂದಿನ ದಿನಮಾನದ ಸಮಾಜವಾದಿಗಳು, ಜನಸಂಘದ ಬಲಪಂಥೀಯರು ಮತ್ತು ಕಾಂಗ್ರೆಸ್ಸನ್ನು ವಿರೋಧಿಸುತ್ತಿದ್ದ ಉದಾರವಾದಿಗಳೆಲ್ಲ ಸೇರಿ ಸೃಷ್ಠಿಯಾಗಿದ್ದೇ ಈ ಜನತಾ ಪಕ್ಷ! ಇಂದಿರಾರವರ ಕುಟುಂಬ ರಾಜಕಾರಣವನ್ನು ಶತಾಯಗತಾಯ ವಿರೋಧಿಸುತ್ತ ಚುನಾವಣೆಯಲ್ಲಿ ಅಧಿಕಾರಕ್ಕೇರಿದ ಪಕ್ಷ ಬಹಳ ಕಾಲ ಉಳಿಯಲಿಲ್ಲ. ತನ್ನ ಆಂತರಿಕ ವೈರುದ್ಯಗಳ ಸುಳಿಗೆ ಸಿಲುಕಿದ ಪಕ್ಷ ಹೋಳಾಯಿತು. ಮೊದಲಿಗೆ ಜನತಾಪಕ್ಷದೊಳಗೆ ಸೇರಿ ಹೋಗಿದ್ದ ಜನಸಂಘ ತನ್ನ ಸಂಘಪರಿವಾರದ ಸೆಳೆತವನ್ನು ಬಿಡಲಾರದೆ ಅದರಿಂದ ಹೊರಬಂದು ಇವತ್ತಿನ ಭಾರತೀಯ ಜನತಾಪಕ್ಷವಾಗಿ ರೂಪುಗೊಂಡಿತು. ತರುವಾಯ 1980ರ ಚುನಾವಣೆಯಲ್ಲಿ ಇಂದಿರಾಗಾಂದಿಯವರು ಮರಳಿ ಅಧಿಕಾರ ಪಡೆಯುವುದರೊಂದಗೆ ಜನತಾ ಪಕ್ಷ ಅನೇಕ ಹೋಳುಗಳಾಗಿ ಒಡೆದು ಹೋಯತು. ಸಮಾಜವಾದಿ ಹಿನ್ನೆಲೆಯಿಂದ ಬಂದವರೆಂದು ಹೇಳಿಕೊಳ್ಳುತ್ತಾ ಬಂದ ಪ್ರಾದೇಶಿಕ ನಾಯಕರುಗಳ ಅಹಂಕಾರ ಮತ್ತು ಅಧಿಕಾರದ ಆಸೆ ಹೆಚ್ಚಾಗುತ್ತ, ವಿ.ಪಿ.ಸಿಂಗ್ ನೇತೃತ್ವದಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದರೂ ಅದಕ್ಕಾಗಿ ಅದು ಮತ್ತೆ ಮತೀಯವಾದಿ ಬಾಜಪದ ಬೆಂಬಲ ಪಡೆಯಬೇಕಾಯಿತು. ನಂತರ ನಡೆದದ್ದು ಇತಿಹಾಸ. ಕಾಂಗ್ರೆಸ್ಸಿನ ವಂಶಪಾರಂಪರ್ಯ ರಾಜಕೀಯದ ಬಗ್ಗೆ ಅಪಹಾಸ್ಯ ಮಾಡುತ್ತಲೇ ರಾಜಕಾರಣ ಮಾಡುತ್ತ ಬಂದ ಜನತಾಪಕ್ಷದ ನಾಯಕರುಗಳಿಗೆ ಹೊಸದೊಂದು ಶತ್ರು ಹುಟ್ಟಿಕೊಂಡಿದ್ದು ಬಾಜಪದ ರೂಪದಲ್ಲಿ. ಹಿಂದೂ ಮತಗಳ ದೃವೀಕರಣಕ್ಕಾಗಿ ಅದು ಎಲ್.ಕೆ.ಅದ್ವಾನಿಯವರ ನೇತೃತ್ವದಲ್ಲಿ ಬಾಬರಿ ಮಸೀದಿಯ ವಿವಾದವನ್ನು ಕೈಗೆತ್ತಿಕೊಂಡು ದೇಶದಾದ್ಯಂತ ರಥಯಾತ್ರೆ ನಡೆಸಿತು. ತದನಂತರ ಅದರ ಕರಸೇವಕರು ಬಾಬರಿ ಮಸೀದಿಯನ್ನು ದ್ವಂಸ ಮಾಡುವುದರ ಮೂಲಕ ತಾನೂ ಒಂದು ಬಲಾಢ್ಯ ರಾಷ್ಟ್ರೀಯ ಪಕ್ಷವಾಗುವತ್ತ ಹೆಜ್ಜೆ ಹಾಕತೊಡಗಿತು. ಆಗ ಕಾಂಗ್ರೆಸ್ ಮತ್ತು ಬಾಜಪವನ್ನು ಸಮಾನವಾಗಿ ವಿರೋಧಿಸುತ್ತ ಬಂದ ಜನತಾಪಕ್ಷದ ಹಲವು ಹೋಳುಗಳು ಸೇರಿ ತೃತೀಯ ವೇದಿಕೆ ರಚಿಸಿಕೊಂಡ ಜನತಾಪಕ್ಷದ ನಾಯಕರುಗಳು ಅಧಿಕಾರ ಹಿಡಿಯುವುದರಲ್ಲಿ ಯಶಸ್ವಿಯೂ ಆದರು. ಆದರೆ ತಮ್ಮ ಅವಧಿಯಲ್ಲಿ ಅವರುಗಳು ನಡೆದುಕೊಂಡ ರೀತಿಯಿಂದಾಗಿ ಮುಂದೆ ಶಾಶ್ವತವಾಗಿ ಅಧಕಾರವಂಚಿತರಾಗಬೇಕಾಗಿ ಬಂತು. ಈ ತೃತೀಯರಂಗ ಅಧಿಕಾರಕ್ಕೆ ಬಂದಾಗಲೇ ಶ್ರೀದೇವೇಗೌಡರು ಪ್ರದಾನಿಯಾಗಿದ್ದು. ನಂತರದ ದಿನಗಳಲ್ಲಿ ತಮ್ಮ ಆಂತರಿಕ ಕಚ್ಚಾಟ, ಮೇಲಾಟಗಳಿಂದಾಗಿ ಬಲಿಷ್ಠ ಪ್ರಾದೇಶಿಕ ನಾಯಕರುಗಳು ಜನತಾಪಕ್ಷವನ್ನು ಒಡೆದು ಚೂರು ಚೂರು ಮಾಡಿದರು. ಹಾಗೆ ಅಂದು ಒಡೆದ ಒಂದು ಚೂರೇ ಕರ್ನಾಟಕದಲ್ಲಿ ದೇವೇಗೌಡರ ನೇತೃತ್ವದಲ್ಲಿ ಅನೇಕ ಹೆಸರುಗಳನ್ನು ಬದಲಾಯಿಸುತ್ತ, ಕೊನೆಗಿವತ್ತು ಜಾತ್ಯಾತೀತ ಜನತಾದಳವಾಗಿ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ಮಟ್ಟಕ್ಕೆ ಬೆಳೆದುನಿಂತಿದೆ.

2004ರವರೆಗೂ ಕಾಂಗ್ರೆಸ್ ಮತ್ತು ಬಾಜಪವನ್ನು ಸಮಾನ ಶತೃಗಳೆಂದು ಪರಿಗಣಿಸಿ ರಾಜಕಾರಣ ಮಾಡುತ್ತಾ ಬಂದ ಜನತಾದಳ 2004ರಲ್ಲಿ ಕೋಮುವಾದಿ ಬಾಜಪವನ್ನು ಅಧಿಕಾರದಿಂದ ದೂರವಿಡುವ ಅನಿವಾರ್ಯತೆಯ ಹೆಸರಲ್ಲಿ ಮೊದಲಬಾರಿ ಕಾಂಗ್ರೆಸ್ಸಿನ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಅಧಿಕಾರ ಹಿಡಿಯಿತು. ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟು ತನ್ನ ಪಕ್ಷದ ಸಿದ್ದರಾಮಯ್ಯನವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿತು. ಆದರೆ 2006 ರಲ್ಲಿ ದೇವೇಗೌಡರ ಪುತ್ರ ಹೆಚ್,ಡಿ.ಕುಮಾರಸ್ವಾಮಿಯವರು ರಹಸ್ಯವಾಗಿ ಬಾಜಪದ ಯಡಿಯೂರಪ್ಪನವರ ಜೊತೆ ಮೈತ್ರಿಮಾಡಿಕೊಂಡು ಮುಖ್ಯಮಂತ್ರಿ ಪಟ್ಟಕ್ಕೇರಿದರು. ಜೊತೆಗೆ ಅಲ್ಲಿಯವರೆಗು ಅಧಿಕಾರದ ಹತ್ತಿರಕ್ಕೂ ಬರಲಾಗದೆ ಹತಾಶವಾಗಿದ್ದ ಬಾಜಪಕ್ಕೆ ಅಧಿಕಾರದ ರುಚಿಯನ್ನು ಹತ್ತಿಸಿದರು. ಈ ಮೈತ್ರಿಯ ಬಗ್ಗೆ ತನಗೇನು ಗೊತ್ತಿಲ್ಲ ಮತ್ತು ತನ್ನ ಸಮ್ಮತಿಯಿಲ್ಲವೆನ್ನುತ್ತಲೇ ಬಂದ ದೇವೇಗೌಡರು ತದನಂತರದಲ್ಲಿ ಮೌನಕ್ಕೆ ಶರಣಾದರು. ಇಪ್ಪತ್ತು ತಿಂಗಳ ನಂತರ ಅಧಿಕಾರ ಹಂಚಿಕೆಯ ಸೂತ್ರದಂತೆ ಬಾಜಪಕ್ಕೆ ಅಧಿಕಾರ ಬಿಟ್ಟು ಕೊಡದ ಜನತಾದಳ ರಾಜ್ಯದ ಜನತೆಯ ದೃಷ್ಠಿಯಲ್ಲಿ ವಚನಭಂಗ ಮಾಡಿದ ಖಳನಾಯಕನ ಪಟ್ಟಗಿಟ್ಟಿಸಿಕೊಂಡಿತು..

ಇದನ್ನೇ ಬಂಡವಾಳ ಮಾಡಿಕೊಂಡ ಬಾಜಪದ ಯಡಿಯೂರಪ್ಪನವರು ದಳ ಮಾಡಿದ ವಚನಭಂಗ ಮತ್ತು ಲಿಂಗಾಯಿತ ಸಮುದಾಯಕ್ಕೆ ಅದು ಎಸಗಿದ ದ್ರೋಹವನ್ನು ಚುನಾವಣೆಯ ವಿಷಯವನ್ನಾಗಿಸಿ ಅಧಿಕಾರಕ್ಕೇರುವಲ್ಲಿ ಸಫಲರಾದರು. ಹೀಗೆ ಜನತಾದಳದ ತಪ್ಪಿನಿಂದಾಗಿ ಕರ್ನಾಟಕದ ಮಟ್ಟಿಗೆ ನಗಣ್ಯವಾಗಿದ್ದ ಬಾಜಪ ಇವತ್ತು ಕಾಂಗ್ರೆಸ್ ಮತ್ತು ಜನತಾದಳವನ್ನು ಮೀರಿಸುವಂತೆ ಬಳೆದು ನಿಂತಿದೆ. ಜಾತ್ಯಾತೀತ ರಾಜಕಾರಣಕ್ಕೆ ಹೆಸರಾಗಿದ್ದ ಕರ್ನಾಟಕವನ್ನು ಮತೀಯ ಶಕ್ತಿಗಳ ಕೈಗೊಪ್ಪಿಸಿದ ಜನತಾದಳವನ್ನು ಇತಿಹಾಸವೆಂದು ಕ್ಷಮಿಸುವುದಿಲ್ಲ.

ಇವತ್ತು ಕಾಂಗ್ರೆಸ್ ಮತ್ತು ಬಾಜಪದ ನಂತರ ಮೂರನೇ ಸ್ಥಾನದಲ್ಲಿರುವ ಜನತಾದಳ ಕವಲುದಾರಿಯಲ್ಲಿ ನಿಂತಿದೆ. ಅದರೊಳಗಿನ ಗೊಂದಲಗಳಿಂದಾಗಿ ಅದು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಕಾಂಗ್ರೆಸ್ಸಿನ ಕುಟುಂಬ ರಾಜಕಾರಣವನ್ನು ವಿರೋಧಿಸುವ ತನ್ನ ನೈತಿಕ ಶಕ್ತಿಯನ್ನು ಕಳೆದುಕೊಂಡಿರುವ ಅದೀಗ ಇತ್ತ ಬಾಜಪದ ಕೋಮುವಾದದ ಬಗ್ಗೆ ಮಾತಾಡುವ ಅರ್ಹತೆಯನ್ನು ಕಳೆದುಕೊಡಿದೆ

ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಎರಡು ತಿಂಗಳ ಹಿಂದೆ ನಡೆದ ಬೆಂಗಳೂರಿನ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಾಜಪವನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ಸಿನ ಜೊತೆ ಮೈತ್ರಿ ಮಾಡಿಕೊಂಡ ಅದು, ಇದೀಗ ಕೆಲ ದಿನಗಳ ಹಿಂದೆಯಷ್ಟೇ ಮೈಸೂರು ನಗರಪಾಲಿಕೆಯಲ್ಲಿ ಕಾಂಗ್ರೆಸ್ಸನ್ನು ದೂರವಿಡಲು ಬಾಜಪದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ವಿಷಯದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿಯವರ ನಡುವೆ ಭಿನ್ನಾಭಿಪ್ರಾಯವಿರಬಹುದಾದರೂ ಕಾರ್ಯಕರ್ತರಿಗೆ ಗೊಂದಲ ಉಂಟಾಗಿರುವುದು ಸುಳ್ಳಲ್ಲ. ಇದೆಲ್ಲದರ ಜೊತೆಗೆ ಬಿಹಾರಕ್ಕೆ ಹೋಗುವ ದೇವೇಗೌಡರು ಬಾಜಪವನ್ನು ಮಣಿಸಲು ಬಿಹಾರದ ಮಾದರಿಯಲ್ಲೇ ಮಹಾಮೈತ್ರಿ ಮಾಡಿಕೊಳ್ಳುವ ಬಗ್ಗೆಯೂ ಮಾತಾಡುತ್ತಾರೆ. ಇದನ್ನು ಬರೆಯುತ್ತಿರುವಾಗಲೇ ದೇವೇಗೌಡರ ಆಣತಿಯಂತೆ ಪರಿಷತ್ತಿನ ಚನಾವಣೆಗಾಗಿ ಕಾಂಗ್ರೆಸ್ಸಿನ ಜೊತೆ ಮೈತ್ರಿ ಮಾಡಿಕೊಳ್ಳಲು ದಳದ ಎರಡನೇ ಸಾಲಿನ ನಾಯಕರುಗಳು ಮಾತುಕತೆ ನಡೆಸುತ್ತಿದ್ದಾರೆ. ತನಗಿದು ಗೊತ್ತಿಲ್ಲವೆಂದು ಕುಮಾರಸ್ವಾಮಿ ಹೇಳಿಕೆ ನೀಡುತ್ತಾರೆ. 

ನನಗನ್ನಿಸುವಂತೆ ಜನತಾದಳವಿಂದು ದ್ವಂದ್ವಮಯವಾದ ಕವಲುದಾರಿಯಲ್ಲಿ ನಿಂತಿದೆ. ಸಾಂಪ್ರದಾಯಿಕ ಎದುರಾಳಿಯಾದ ಕಾಂಗ್ರೆಸ್ಸಿನ ಜೊತೆ ಹೋಗುವುದೋ, ಇಲ್ಲ ಕೋಮುವಾದಿ ಬಾಜಪದೊಂದಿಗೆ ಮೈತ್ರಿ ಮಾಡಿಕೊಳ್ಳುವುದೋ ಇಲ್ಲ ಎರಡೂ ಪಕ್ಷಗಳನ್ನು ಸಮಾನ ಅಂತರದಲ್ಲಿಟ್ಟು ತನ್ನ ರಾಜಕೀಯ ಐಡೆಂಟಿಟಿಯನ್ನು ಉಳಿಸಿಕೊಳ್ಳುವುದೊ ಎಂಬ ಗೊಂದಲದ ಪರಿಸ್ಥಿತಿಯಲ್ಲಿ ನಿಂತಿದೆ. ದೇವೇಗೌಡರಿಗೆ ಕಾಂಗ್ರೆಸ್ಸಿನ ಜೊತೆ ಹೆಜ್ಜೆ ಹಾಕುವ ಮನಸ್ಸಿರುವಂತೆ ಕಂಡರೆ, ಕುಮಾರಸ್ವಾಮಿಯವರಿಗೆ ಬಾಜಪದ ಮೇಲೆ ಒಲವಿರುವಂತೆ ತೋರುತ್ತದೆ. ಹೀಗೇ ಜನತಾದಳವಿಂದು ಸ್ಪಷ್ಟವಾಗಿ ಯಾವ ನಿರ್ದಾರವನ್ನೂ ತೆಗೆದುಕೊಳ್ಳಲಾರದೆ ದಿಕ್ಕೆಟ್ಟ ಸ್ಥಿತಿಯಲ್ಲಿ ನಿಂತಿದೆ.

ರಾಜ್ಯದ ಅಭಿವೃದ್ದಿಯ ಬಗ್ಗೆ ಸ್ಪಷ್ಟವಾದ ನಿಲುವನ್ನು ತೋರಿಸದ ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಬೇಸರಗೊಂಡಿರುವ ಕರ್ನಾಟಕದ ಜನತೆಗೆ ಇದುವರೆಗೂ ಇದ್ದ ಭರವಸೆಯೆಂದರೆ ಜನತಾದಳ ಮಾತ್ರ. ಜನತೆಯ ಆ ನಂಬುಗೆಯನ್ನು ಉಳಿಸಿಕೊಳ್ಳುವುದು ಬಿಡುವುದೂ ಸದ್ಯಕ್ಕೆ ಜನತಾದಳದ ನಾಯಕರುಗಳ ಕೈಲಿದೆ. ಸಮಾಜವಾದಿ ನೆಲೆಯಿಂದ ಬಂದ ದೇವೇಗೌಡರು ಇದನ್ನು ಅರ್ಥ ಮಾಡಿಕೊಂಡರೂ ಶಕ್ತಿರಾಜಕಾರಣದ ನಡೆಗಳನ್ನು ಮಾತ್ರ ನಂಬಿಕೊಂಡ ಕುಮಾರಸ್ವಾಮಿಯವರಿಗೆ ಇದು ಸುಲಭವಾಗಿ ಅರ್ಥವಾಗುವಂತಹುದ್ದಲ್ಲ!

ಇದೀಗ ತಮ್ಮ ಪಕ್ಷದ ರಾಜಕೀಯ ನಿಲುವುಗಳ ಬಗ್ಗೆ ಗಟ್ಟಿಯಾದ ನಿಲುವೊಂದನ್ನ ತೆಗೆದುಕೊಂಡು ಜನರ ಮುಂದೆ ಬರುವುದು ಜನತಾದಳಕ್ಕೆ ಅನಿವಾರ್ಯವಾಗಿದೆ. ಕಾಂಗ್ರೆಸ್ಸಿನ ಜಡತೆಯಿಂದ ಹಾಗು ಬಾಜಪದ ಮತೀಯವಾದದಿಂದ ಜಿಗುಪ್ಸೆಗೊಂಡಿರುವ ಕರ್ನಾಟಕದ ಜನರ ಹಿತದೃಷ್ಠಿಯಿಂದ ಸ್ಪಷ್ಟವಾದ ರಾಜಕೀಯ ನಿಲುವೊಂದನ್ನು ತಳೆಯುವುದು ಜನತಾದಳದ ರಾಜಕೀಯ ಭವಿಷ್ಯದ ದೃಷ್ಠಿಯಿಂದಲೂ ಅಗತ್ಯವಾಗಿದೆ. ಇದನ್ನು ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಅರ್ಥಮಾಡಿಕೊಳ್ಳಬೇಕಾಗಿದೆ.

ನವೆಂ 27, 2015

ಪತ್ರಕರ್ತೆಯ ವಿರುದ್ಧ ಮುಸ್ಲಿಂ ಮತಾಂಧರ ಅಟ್ಟಹಾಸ.

ಕೇರಳದ ಮಾಧ್ಯಮಂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪತ್ರಕರ್ತೆ ವಿ.ಪಿ.ರಜೀನಾ ಕೆಲವು ದಿನಗಳ ಕೆಳಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಮದರಾಸಾಗಳ ಬಗ್ಗೆ ಒಂದು ಪೋಸ್ಟನ್ನು ಹಾಕುತ್ತಾರೆ. ಸುಮಾರು ಇಪ್ಪತ್ತು ವರುಷಗಳ ಹಿಂದೆ ಮದರಾಸದಲ್ಲಿದ್ದಾಗ ನೋಡಿದ್ದ ಸಂಗತಿಗಳನ್ನು ಹಾಕುತ್ತಾರೆ. ಫೇಸ್ ಬುಕ್ಕಿನ ಮುಸ್ಲಿಂ ಮತಾಂಧರು ಆ ಪೋಸ್ಟಿಗೆ ರಣಭಯಂಕರವಾಗಿ ಕಮೆಂಟು ಮಾಡಿ, ಎಂದಿನಂತೆ ಪತ್ರಕರ್ತೆಯನ್ನು ನೀಚಾತಿ ನೀಚ ಭಾಷೆಯಲ್ಲೆಲ್ಲ ನಿಂದಿಸಿ ವಿ.ಪಿ.ರಜೀನಾರವರ ಫೇಸ್ ಬುಕ್ ಖಾತೆಯನ್ನೇ ಬ್ಲಾಕ್ ಮಾಡಿಸಿಬಿಡುತ್ತಾರೆ. ಒಂದಷ್ಟು ಪ್ರಯತ್ನದ ನಂತರ ವಿ.ಪಿ.ರಜೀನಾರವರ ಫೇಸ್ ಬುಕ್ ಖಾತೆ ಮತ್ತೆ ಚಾಲ್ತಿಗೆ ಬಂದಿದೆ. ಇಷ್ಟಕ್ಕೂ ರಜೀನಾ ಬರೆದಿದ್ದಾದರೂ ಏನನ್ನು?
ಒಂದನೇ ತರಗತಿಯ ಮೊದಲ ದಿನದಂದು ಉಸ್ತಾದ್ ಶಾಲೆಯ ಹುಡುಗರನ್ನೆಲ್ಲ ಒಬ್ಬೊಬ್ಬರನ್ನಾಗಿ ಕರೆದು ಮುಟ್ಟಬಾರದ ಜಾಗದಲ್ಲೆಲ್ಲಾ ಮುಟ್ಟಿ ಕಳುಹಿಸುತ್ತಿದ್ದುದರ ಬಗ್ಗೆ ರಜೀನಾ ಬರೆದುಕೊಂಡಿದ್ದರು. ಅದರ ಜೊತೆಗೆ ನಾಲ್ಕನೇ ತರಗತಿಯಲ್ಲಿದ್ದ ರಾತ್ರಿ ಶಾಲೆಯ ಮಾಸ್ತರು ಹುಡುಗಿಯರನ್ನು ಸವರುತ್ತಿದ್ದ, ಒಂದು ಹುಡುಗಿ ಜೋರಾಗಿ ಕಿರುಚಿ ದೊಡ್ಡ ಮಾಸ್ತರರಿಗೆ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದ ನಂತರ ಆ ನೀಚ ಕೆಲಸವನ್ನು ನಿಲ್ಲಿಸಿಬಿಟ್ಟಿದ್ದರಂತೆ. ಇದಿಷ್ಟು ರಜೀನಾ ಬರೆದ ಪೋಸ್ಟಿನ ಸಾರಾಂಶ. ಇದು ನಡೆದಿದ್ದು ರಜೀನಾ ಓದುತ್ತಿದ್ದಾಗ, ಹೆಚ್ಚು ಕಡಿಮೆ ಇಪ್ಪತ್ತು ವರುಷಗಳ ಕೆಳಗೆ. ಇವತ್ತಿನ ಮದರಾಸಗಳಲ್ಲೂ ಈ ರೀತಿಯ ಘಟನೆಗಳು ನಡೆಯುತ್ತಿವೆಯಾ? ನಡೆಯುತ್ತಿದ್ದರೆ ಸ್ವಸ್ಥ ಸಮಾಜದ ನಾಗರೀಕರು ಯಾವ ರೀತಿಯಿಂದ ಇದನ್ನು ತಡೆಯಬೇಕು? ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯಬೇಕಿತ್ತು. ಆದರೆ ಫೇಸ್ ಬುಕ್ಕಿನ ಅವರ ಪೋಸ್ಟುಗಳಲ್ಲಿರುವ ಕಮೆಂಟುಗಳನ್ನು ನೋಡಿದರೆ ಸಮಾಜದ ಅಸ್ವಸ್ಥ ಮುಖಗಳ ದರ್ಶನವಾಗುತ್ತದೆ. ಮೂರ್ತಿ ಪೂಜೆಯನ್ನು ಒಪ್ಪದ ಮುಸ್ಲಿಮರಿಗೆ ಮದರಾಸ ಕಟ್ಟಡವೇ ಮೂರ್ತಿಯಂತೆ ಕಂಡುಬಿಟ್ಟಿತೋ ಏನೋ?! ಮದರಾಸಾದ ಬಗ್ಗೆ ಬರೆದ ರಜೀನಾರವರನ್ನು ಇಲ್ಲಸಲ್ಲದ ಮಾತುಗಳಿಂದೆಲ್ಲ ಟೀಕಿಸಲಾಗಿದೆ. ಬೆದರಿಕೆ ಹಾಕಲಾಗಿದೆ. ಚಿಕ್ಕಂದಿನ ಅನುಭವವನ್ನು ಬರೆದುದಕ್ಕೆ 'ಅದಕ್ಕೆ ಪುರಾವೆ ಏನು?' ಎಂದು ಕೇಳುವ ಮುತ್ಸದ್ಧಿಗಳೂ ಇದ್ದಾರೆ! ಬಹಳಷ್ಟು ಮತಾಂಧರು ರಜೀನಾರವರ ಖಾತೆಯನ್ನು ಬ್ಲಾಕ್ ಮಾಡಲು ಸಲಹೆ ನೀಡಿದ ಕಾರಣ ಫೇಸ್ ಬುಕ್ ಅವರ ಖಾತೆಯನ್ನು ಬ್ಲಾಕ್ ಮಾಡಿಬಿಟ್ಟಿತ್ತು. ಈಗ ಮತ್ತೆ ರಜೀನಾರವರ ಖಾತೆ ಚಾಲ್ತಿಯಲ್ಲಿದೆ. ನನ್ನ ಮಾತುಗಳಿಗೆ ನಾನು ಬದ್ಧ ಎಂಬ ಅವರ ಪೋಸ್ಟಿಗೂ ಕೆಟ್ಟ ಕಮೆಂಟುಗಳ ಸುರಿಮಳೆಯಾಗಿದೆ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು 'ನೀವೇಳಿದ್ದು ನಿಜ. ಮದರಾಸಾಗೆ ಮಕ್ಕಳನ್ನು ಕಳಿಸಬಾರದು' ಎಂದು ಬರೆದಿದ್ದಾರಷ್ಟೇ.