ನವೆಂ 22, 2015

ತುಂಬೆ ಗಿಡದ ಕನಸ ಕಾಣುತ್ತ..........

ಕು.ಸ.ಮಧುಸೂದನ್‍ ರಂಗೇನಹಳ್ಳಿದಶದಿಕ್ಕುಗಳಲ್ಲಿಯೂ
ದಂಡುಗಟ್ಟಿದ ಮೋಡಗಳ
ಮರೆಯೊಳಗವಿತ ಸೂರ್ಯನ
ಕಂಡು ನಾಚಿದ
ಪೂರ್ವ ಪಶ್ಚಿಮ
ಉತ್ತರ ದಕ್ಷಿಣಗಳೆಲ್ಲ
ಅಡ್ಡಾದಿಡ್ಡಿಯಾಗಿ
ಜಾಗ ಬದಲಿಸಿ ದೆಸೆ ಬದಲಿಸುವವರ ನಾಲಿಗೆಗಳ
ಕತ್ತರಿಸಿದವು
ಹಿಮಚ್ಛಾದಿತ ಕಾಶ್ಮೀರದ ಕಣಿವೆಗಳಲ್ಲಿ ಚೆಲ್ಲಿದ ರಕ್ತ
ಕಲೆಗಳನೊರೆಸಲು ಸಮವಸ್ತ್ರದಾರಿಗಳು
ಕೋವಿ ಹಿಡಿದು ಅಡ್ಡಾಡಿದರು
ಜಾರ್ಖಂಡಿನ ಕಾಡಿನೊಳಗಿನ ಕಚ್ಚಾ ದಾರಿಯಲಿ
ನೆಲಬಾಂಬನಿಟ್ಟು ಸ್ಪೋಟಿಸಿದ ನಕ್ಸಲರ ಕಣ್ಣುಗಳಲ್ಲಿ
ದಿಗ್ವಿಜಯದ ಉನ್ಮಾದ
ಸತ್ತ ಪೋಲಿಸರ ಮನೆಯೊಳಗೆ
ಹಚ್ಚಿಟ್ಟ ದೀಪ ಆರಿ ಸುಟ್ಟ ಬತ್ತಿಯ ಕಮಟು ವಾಸನೆಯ ನಡುವೆ
ಸೂತಕದ ಛಾಯೆ
ಸಿಕ್ಕ ಪರಿಹಾರವನು ಹಂಚಿಕೊಳ್ಳುವ ವ್ಯಾಜ್ಯಕೆ
ಸಾಲು ನಿಂತ ವಕೀಲರುಗಳ ದಂಡು
ಸಿರಿಯಾದ ಬಂಡುಕೋರರ ಬಂದೂಕುಗಳಿಗೆ ಎದೆಯೊಡ್ಡಿ
ಸತ್ತವರ ನೆತ್ತರು ಸೇರಿದ ಸಾಗರದಾಳದೊಳಗೆ ಉಕ್ಕುವ
ತೈಲ ಸಂಪತ್ತನ್ನು ದೋಚಲು ನಿಂತ ಆಧುನಿಕ ಕಡಲ್ಗಳ್ಳರ ಸಾಲಲ್ಲಿ ಪಶ್ಚಿಮದ ದೊಡ್ಡಣ್ಣನ
ಆಜ್ಞೆಯ ಪಾಲಿಸಲು ಕಾದು ಕೂತ ನಮ್ಮ ನೆಲದ ನೆಂಟರು
ತೆರೆಗಳಬ್ಬರಕ್ಕೆ ದಡಕೆ ತೇಲಿಬಂದ ಅಯ್ಲಾನನ ಹೆಣದ
ಪೋಟೊಶಾಪ್ ಚಿತ್ರದಡಿಯಲಿ ಕವಿಗಳು ಬರೆದ ನೂರಾರು ಕವಿತೆಗಳು
ಮೆಚ್ಚುಗೆ ಪಡೆದು
ಧನ್ಯವಾದವು!
ಜಗದಷ್ಟೂ ಘನಘೋರ ಪಾತಕಗಳಿಗೆ
ಬಲಿಪಶುವಾಗಿ ನಿಂತ ನನ್ನ
ಕಾಲುಗಳು ನಡೆದವು ಊರ ಹೊರಗಿನ ಕಲ್ಲು ಮಾರಮ್ಮನ ಗುಡಿಯಂಗಳಕೆ
ಬಿದ್ದು ಬೊಕ್ಕಬೋರಲು
ಬೇಡಿಕೊಂಡೆ
ಕೊಡೆನಗೆ ಅವ್ವ ಒಂದಿಷ್ಟಾದರು ತಾವ ನಿನ್ನ ಮಡಿಲೊಳಗೆ
ಹಾಗೇನೆ ಕೇಳಿಸು ಹೆತ್ತವಳು ಹಾಡುತಿದ್ದ ಹಳೆಯ ಜೋಗುಳವನ್ನ
ತಟ್ಟು ನೆತ್ತಿಯ ಮೇಲೆ ಸದ್ದಾಗದಂತೆ
ಕಣ್ಮುಚ್ಚಿ ಮಲಗಿ ಬಿಡುತ್ತೇನೆ
ಒಂದು ಯುಗದ ಕಾಲ ಜಗದರಿವಿರದ ಹಾಗೆ
ಪಾಪಿಗಳ ಅಂತ್ಯವಾಗಿ
ಪಾಪಗಳು ಇಲ್ಲವಾಗಿ
ಕತ್ತರಿಸಿ ಬಿಸಾಕಿದ ಕಣಗಿಲೆ ಗಿಡಗಳ ಜಾಗದೊಳು
ಮುಕ್ಕಣ್ಣನಿಗೆ ಪ್ರಿಯವಾದ ತುಂಬೆ ಹೂವಿನ
ಗಿಡ ಚಿಗುರೊಡೆಯುವವರೆಗೂ!

ನವೆಂ 21, 2015

ಬೊಗಸೆ ಎಣ್ಣೆ

ಕು.ಸ.ಮಧುಸೂದನ್
ಒಳ್ಳೆಯದನೆಲ್ಲಿ ಹುಡುಕುವುದು?
ನದಿಗಳು ಮಲೀನವಾಗಿವೆ
ಬೆಟ್ಟಗಳು ಕೊರೆಯಲ್ಪಟ್ಟಿವೆ
ಭೂಭಾಗಗಳು ತೂತು ಮಾಡಲ್ಪಟ್ಟಿವೆ
ಕಾಡುಗಳು ಬಯಲಾಗಿವೆ
ಮರುಭೂಮಿಗಳು ಮಸಣಗಳಾಗಿವೆ
ದೀಪ ಹಚ್ಚುವವರು ಸಿಕ್ಕರೂ
ಸಿಗುತಿಲ್ಲ ಮಣ್ಣ ಹಣತೆ
ಬೊಗಸೆಯಷ್ಟು ಎಣ್ಣೆ!


ನವೆಂ 20, 2015

ಮಿಸ್ಟೇಕ್!

harish mangalore
ಕತೆಗಳ ಪುಸ್ತಕವನ್ನು ನೂರಾರು ಓದಿದ್ದೇನೆ. ನನ್ನನ್ನು ತುಂಬಾ ಕಾಡಿದ ಕತೆಗಳನ್ನು ಬರೆದಿದ್ದು ಸದತ್ ಹಸನ್ ಮಾಂಟೋ. ದೇಶ ವಿಭಜನೆಯ ಸಂದರ್ಭದಲ್ಲಿ ಧರ್ಮದ ಕಾರಣದಿಂದ, ಮನೆಯವರ ಒತ್ತಡದ ಕಾರಣದಿಂದ ಭಾರತದಿಂದ ಪಾಕಿಸ್ತಾನಕ್ಕೆ ಹೋಗಿ ದಾರಿಯುದ್ದಕ್ಕೂ ಕಂಡ ಧರ್ಮಾಧಾರಿತ ಹಿಂಸಾಚಾರ ಸದತ್ ಹಸನ್ ಮಾಂಟೋನನ್ನು ಹುಚ್ಚನನ್ನಾಗಿ ಮಾಡಿಬಿಡುತ್ತದೆ. ಆ ಹುಚ್ಚುತನದಲ್ಲೇ ಆತ ಬರೆದ ಕತೆಗಳನ್ನು ಓದುತ್ತಿದ್ದರೆ ಮನುಷ್ಯ ಇಷ್ಟೊಂದು ಅಮಾನವೀಯವಾಗಿ ವರ್ತಿಸಬಲ್ಲನಾ ಎಂಬ ಅನುಮಾನ ಮೂಡುತ್ತಿತ್ತು. ಆ ಕತೆಗಳಲ್ಲಿನ ಅಮಾನವೀಯತೆಯನ್ನು ಮೀರಿಸುವಂತಹ ಘಟನೆಗಳು ವರ್ತಮಾನದಲ್ಲಿ ನಡೆಯುತ್ತಿರುವಾಗ ಸ್ವತಂತ್ರ ಬಂದು ಇಷ್ಟೆಲ್ಲ ವರ್ಷಗಳಾಗಿದ್ದರೂ ತಾಂತ್ರಿಕವಾಗಿ ಮೇಲ್ಮೆ ಸಾಧಿಸಿ, ಮಂಗಳನ ಅಂಗಳಕ್ಕೆ ಉಪಗ್ರಹ ಕಳಿಸಿ ಮನುಷ್ಯನ ಕ್ರೂರಿ ಮನಸ್ಸನ್ನು ಅಲ್ಲೇ ನಿಲ್ಲಿಸಿಬಿಟ್ಟಿದ್ದೇವೆಯಾ? ಎಂಬ ಪ್ರಶ್ನೆ ಮೂಡುತ್ತದೆ. ಕೋಮುಗಲಭೆಯ ಸಂದರ್ಭದಲ್ಲೆಲ್ಲ ಸದತ್ ಹಸನ್ ಮಾಂಟೋನ ಪುಟ್ಟ ಕತೆಯೊಂದು ನನ್ನನ್ನು ಬಹಳವಾಗಿ ಕಾಡುತ್ತದೆ. ಕತೆಯ ಹೆಸರು ಮಿಸ್ಟೇಕ್. ಗಲಭೆಯ ಸಂದರ್ಭ. ಕತ್ತಿ ಹಿಡಿದು ಬಂದವರು ದಾರಿಯಲ್ಲಿ ಸಿಕ್ಕ ವ್ಯಕ್ತಿಯೊಬ್ಬನ ಹೊಟ್ಟೆಗೆ ತಿವಿಯುತ್ತಾರೆ. ತಿವಿಯುವಾಗ ಕತ್ತಿ ಆತನ ಲಾಡಿಯನ್ನು ಕತ್ತರಿಸಿಹಾಕುತ್ತದೆ. ಪ್ಯಾಂಟು ಕೆಳಗೆ ಜಾರುತ್ತದೆ. ಸತ್ತ ವ್ಯಕ್ತಿಯ ಶಿಶ್ನ ನೋಡಿದ ಕತ್ತಿವೀರ 'ಮಿಸ್ಟೇಕ್' ಎಂದುದ್ಗರಿಸಿ ಮತ್ತೊಬ್ಬನನ್ನು ಕೊಲ್ಲಲು ಹೊರಡುತ್ತಾನೆ. ಸದತ್ ನ ಮೂರು ಸಾಲಿನ ಈ ಕತೆ ಧರ್ಮಾಂಧರಲ್ಲಿನ ಕ್ರೌರ್ಯ, ಅವರಿಗೆ ಅಂತಿಮ ಸುಖ ಸಿಗುವುದು ಕೊಲ್ಲುವ ಹಿಂಸೆಯಿಂದಷ್ಟೇ ಎನ್ನುವ ವಾಸ್ತವವನ್ನು ತಿಳಿಸಿ ಹೇಳುತ್ತದೆ. 
ಮಿಸ್ಟೇಕ್ ಕತೆಯ ರೀತಿಯ ಘಟನೆಯೇ ಮಂಗಳೂರಿನಲ್ಲಿ ನಡೆದುಹೋಗಿದೆ. ಸ್ನೇಹಿತರಾದ ಸಮೀವುಲ್ಲಾ ಮತ್ತು ಹರೀಶ್ ಕ್ರಿಕೆಟ್ ಆಡಿ ವಾಪಸ್ಸಾಗುವಾಗ ಅಂಗಡಿಯೊಂದರ ಬಳಿ ಕೂಲ್ ಡ್ರಿಂಕ್ಸ್ ಕುಡಿಯುವಾಗ ಗುಂಪೊಂದು ಬಂದು ಸಮೀವುಲ್ಲಾನ ಮೇಲೆ ದಾಳಿ ನಡೆಸುತ್ತಾರೆ, ತಡೆಯಲು ಬಂದ ಹರೀಶನ ಮೇಲೆಯೂ ದಾಳಿ ನಡೆಸುತ್ತಾರೆ. ಹರೀಶ ಹತನಾಗುತ್ತಾನೆ. ಈ ಕೊಲೆಗೆ ಸಂಬಂಧಪಟ್ಟಂತೆ ಮಂಗಳೂರು ಪೋಲೀಸರು ಭುವಿತ್ ಶೆಟ್ಟಿ ಮತ್ತು ಅಚ್ಯುತ್ ಎನ್ನುವವರನ್ನು ಬಂಧಿಸಿದ್ದಾರೆ. ಈ ಭುವಿತ್ ಶೆಟ್ಟಿ ಕಲಬುರಗಿಯ ಹತ್ಯೆಯಾದ ಸಂದರ್ಭದಲ್ಲಿ ಹತ್ಯೆಯನ್ನು ಸಮರ್ಥಿಸಿ ಹಾಕಿದ ಟ್ವೀಟುಗಳ ಕಾರಣದಿಂದ ಬಂಧಿತನಾಗಿದ್ದ. ಭುವಿತನಿಗೆ ಇಪ್ಪತ್ತೈದು ವರ್ಷ, ಅಚ್ಯುತನಿಗೆ ಇಪ್ಪತ್ತೆಂಟು ವರುಷವಷ್ಟೇ. ಇನ್ನು ಸತ್ತ ಹರೀಶನೂ ಅದೇ ವಯಸ್ಸಿನವನು. ಬಡ ಕುಟುಂಬದಿಂದ ಬಂದವನು. ಕುಟುಂಬಕ್ಕೆ ಆಸರೆಯಾಗಿದ್ದವನು. ಧರ್ಮಾಂಧರ ಕ್ರೌರ್ಯ ಒಂದಿಡೀ ಕುಟುಂಬದ ಸರ್ವನಾಶಕ್ಕೆ ಕಾರಣವಾಗಿದೆ. ಧರ್ಮಾಂದತೆಯನ್ನು ತುಂಬಿದವರ ತಣ್ಣನೆಯ ಕ್ರೌರ್ಯದಿಂದ ಭುವಿತ್ ಅಚ್ಯುತನಂತಹ ಸಾವಿರ ಕುಟುಂಬಗಳು ನಾಶವಾಗುತ್ತಿವೆ. ಹಿಂದೂ ಸಂಘಟನೆಯ ಭುವಿತ್ ಮತ್ತು ಅಚ್ಯುತ್ ಗುರಿ ಹರೀಶನಾಗಿರಲಿಲ್ಲ. ಸಮೀವುಲ್ಲಾ ಎಂಬ ಸಾಬಿಯಾಗಿದ್ದ. ಸಾಬಿಗೊಬ್ಬ ಹಿಂದೂ ಗೆಳೆಯನಿರುವುದು ಸಾಧ್ಯವಿಲ್ಲ, ಸಾಧುವೂ ಅಲ್ಲ ಎಂದು ಈ ಯುವಕರ ತಲೆಗೆ ತುಂಬಿಬಿಟ್ಟಿರುತ್ತಾರೆ. ಸಮೀವುಲ್ಲಾನನ್ನು ರಕ್ಷಿಸಲು ಬಂದ ಹುಡುಗ ಕೂಡ ಮುಸಲ್ಮಾನನೇ ಎಂದು ಹತ್ಯೆ ಮಾಡಿದ್ದಾರೆ. ಸದತ್ ಹಸನ್ ಮಾಂಟೋನ ಕತೆಯ ಲೆಕ್ಕದಲ್ಲಿ ಮಿಸ್ಟೇಕಾಗಿದೆ. ಹತ್ಯೆ ಮಾಡಿದವರು ಕತ್ತಿ ಹಿಡಿದು ಮತ್ತೊಬ್ಬನನ್ನು ಮಗದೊಬ್ಬನನ್ನು ಕೊಲ್ಲಲು ಹೊರಟುಬಿಡುತ್ತಾರೆ.

ಮೀಸಲಾತಿಯ ಬಗೆಗಿನ ಪ್ರಶ್ನೆಗಳು ಮತ್ತು ಉತ್ತರಗಳು.

ಇಂಗ್ಲೀಷ್ ಮೂಲ:  ದ್ವಾರಕನಾಥ್ ಚೊಕ್ಕ
ಕನ್ನಡಕ್ಕೆ: ಕು.ಸ.ಮಧುಸೂದನ್ 
1. ಮೀಸಲಾತಿ ಎಂದರೇನು?
ಮೀಸಲಾತಿ ಎಂಬ ಪದಪ್ರಯೋಗವೇ ತಪ್ಪು! ಸಂವಿದಾನದಲ್ಲಿ ಇದಕ್ಕಾಗಿ ಬಳಸಿರುವ ಪದ ಪ್ರಾತಿನಿದ್ಯ. ವೈಯುಕ್ತಿಕ ನೆಲೆಗಟ್ಟಿನಲ್ಲಿ ಇದನ್ಯಾರಿಗು ನೀಡಲಾಗಿಲ್ಲ. ವೈಯುಕ್ತಿಕವಾಗಿ ನೀಡಿರುವುದು ಸಹ ಅವರು ಪ್ರತಿನಿಧಿಸುವ ಶೋಷಿತ ಸಮುದಾಯಗಳ ಕಾರಣದಿಂದ. ಈ ಅವಕಾಶವನ್ನು ಪಡೆದವರು ತಮ್ಮ ಸಮುದಾಯದ ಇತರೇ ಜನರಿಗೆ ಸಹಾಯಕವಾಗಲೆಂಬ ಕಾರಣದಿಂದ.

2. ಮೀಸಲಾತಿ ಏಕೆ?
ಸಮುದಾಯಗಳ ನಡುವಿನ ತಾರತಮ್ಯ ಹೋಗಲಾಡಿಸಿ,ಅವಕಾಶ ವಂಚಿತ ಸಮುದಾಯಗಳಿಗೆ ಸಹಾಯ ಮಾಡುವುದು ಮೀಸಲಾತಿಯ ಉದ್ದೇಶ. ಸಮಾಜದ ಹಲವಾರು ಸಮುದಾಯಗಳು ಅಸ್ಪ್ರ್ಯಶ್ಯತೆಯ ಕಾರಣದಿಂದಾಗಿ ಶಿಕ್ಷಣದ ಹಕ್ಕು, ಸಂಪತ್ತಿನ ಹಕ್ಕು, ವ್ಯಾಪಾರದ ಹಕ್ಕು ಸೇರಿದಂತೆ ಅನೇಕ ನಾಗರೀಕ ಹಕ್ಕುಗಳಿಂದ ವಂಚಿತವಾಗಿವೆ. ಇತಿಹಾಸದಲ್ಲಿನ ಇಂತಹ ತಾರತಮ್ಯಗಳನ್ನು ನಿವಾರಿಸಿ ಭವಿಷ್ಯದಲ್ಲಿ ಅವರ ಹಕ್ಕುಗಳನ್ನು ಸಂರಕ್ಷಿಸಲು ಈ ಮೀಸಲಾತಿಯನ್ನು ಕಲ್ಪಿಸಲಾಗಿದೆ.

3.ಸಂವಿದಾನಕರ್ತರು ಮೀಸಲಾತಿಯನ್ನು ಕೇವಲ ಹತ್ತು ವರ್ಷಗಳಿಗೆ ಮಾತ್ರ ಸೀಮಿತಗೊಳಿಸಿರಲಿಲ್ಲವೆ?
ಕೇವಲ ರಾಜಕೀಯ ಮೀಸಲಾತಿಯನ್ನು ಮಾತ್ರ ಹತ್ತು ವರ್ಷಗಳವರೆಗೆ ನಿಗದಿ ಪಡಿಸಲಾಗಿದ್ದು, ತದನಂತರ ಅದನ್ನು ಪುನರ್ ಪರಿಶೀಲಿಸಲಾಯಿತು. ಹಾಗಾಗಿಯೇ ಎಲ್ಲ ರಾಜಕೀಯ ಮೀಸಲಾತಿಗಳನ್ನು ಪ್ರತಿ ಹತ್ತು ವರ್ಷಕ್ಕೊಮ್ಮೆ ಪುನರ್ ನಿಗದಿ ಪಡಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಗೆ ಹತ್ತು ವರ್ಷಗಳ ಮಿತಿ ಹಾಕಲಾಗಿಲ್ಲ. ಆದ್ದರಿಂದ ರಾಜಕೀಯ ಮೀಸಲಾತಿಯ ರೀತಿಯಲ್ಲಿ ನಾವು ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಯನ್ನು ಪುನರ್ ಪರಿಶೀಲಿಸುವ ಅಗತ್ಯವಿಲ್ಲ.

4. ಜಾತಿಯ ಆಧಾರದ ಮೇಲೆ ಮೀಸಲಾತಿ ಏಕೆ?
ಇದಕ್ಕೆ ಉತ್ತರಿಸುವ ಮುಂಚೆ ನಾವು ಮೀಸಲಾತಿಯ ಅನಿವಾರ್ಯತೆಯ ಬಗ್ಗೆ ತಿಳಿದುಕೊಳ್ಳಬೇಕಾಗಿದೆ.ಸಾವಿರಾರು ವರ್ಷಗಳಿಂದ ಜಾತಿಯ ಕಾರಣಕ್ಕೆ ಹಲವು ಹಕ್ಕುಗಳನ್ನು,ಅವಕಾಶಗಳನ್ನು ಧರ್ಮದ ಹೆಸರಿನಲ್ಲಿ ಕೆಳವರ್ಗಗಳಿಗೆ ನಿರಾಕರಿಸುತ್ತ ಬರಲಾಗಿದೆ. ಆದ್ದರಿಂದ ಕೆಳಜಾತಿಗಳ ಮೇಲೆ ನಡೆಯುತ್ತಿರುವ ಎಲ್ಲ ರೀತಿಯ ಅನ್ಯಾಯ, ಶೋಷಣೆ, ತಾರತಮ್ಯ ವಂಚನೆಗಳಿಗೆ ಮುಖ್ಯ ಕಾರಣ ಜಾತಿಪದ್ದತಿಯೇ ಆಗಿದೆ. ಜಾತಿಯ ಕಾರಣಕ್ಕೆ ಅವಕಾಶಗಳಿಂದ ವಂಚಿತರಾದ ಬಹುಜನ ಸಮಾಜಕ್ಕೆ ಅದೇ ಜಾತಿಯ ಆಧಾರದಲ್ಲೆ ಅವಕಾಶಗಳನ್ನು ಕಲ್ಪಿಸುವುದು ಅನಿವಾರ್ಯವಾಗಿದೆ.

5. ಆರ್ಥಿಕ ಸ್ಥಿತಿಗತಿಯ ಮೇಲೆ ಮೀಸಲಾತಿ ಏಕಿಲ್ಲ?
ಯಾವತ್ತಿಗು ಆರ್ಥಿಕ ಆಧಾರದ ಮೇಲೆ ಮೀಸಲಾತಿ ನೀಡುವುದು ಸಾದ್ಯವಿಲ್ಲ. ಯಾಕೆಂದರೆ:
(ಅ) ಬಹುಜನಸಮಾಜದ ಇವತ್ತಿನ ಬಡತನಕ್ಕೆ ಮೂಲಕಾರಣವಾಗಿರುವುದೇ ಅವರ ಜಾತಿಯಾಗಿದೆ. ಬಡತನ ಒಂದು ಪರಿಣಾಮವಾದರೆ, ಜಾತಿ ಒಂದು ಕಾರಣವಾಗಿದೆ. ಆದ್ದರಿಂದ ನಾವು ಪರಿಣಾಮದ ಬಗ್ಗೆ ನೋಡದೆ ಕಾರಣವನ್ನು ಇಲ್ಲವಾಗಿಸಬೇಕಿದೆ.

(ಆ)ವೈಯುಕ್ತಿಕವಾಗಿ ಒಬ್ಬನ ಆದಾಯ ಬದಲಾಗಬಹುದು.ಆದರೆ ಹಣದ ಕೊಳ್ಳುವ ಶಕ್ತಿ ಇಂಡಿಯಾದಲ್ಲಿ ಅವನ ಜಾತಿಯನ್ನು ಆಧರಿಸಿರುತ್ತದೆ. ಉದಾಹರಣೆಗೆ ಬಹಳ ಕಡೆ ದಲಿತನೊಬ್ಬ ದುಡ್ಡಿದ್ದರೂ ಒಂದು ಕಪ್ ಚಹಾವನ್ನು ಕೊಳ್ಳಲಾಗದ ಪರಿಸ್ಥಿತಿಯಿದೆ.

(ಇ) ತನ್ನ ಆರ್ಥಿಕ ಸ್ಥಿತಿಯನ್ನು ಸಾಬೀತು ಪಡಿಸುವುದು ನಮ್ಮ ವ್ಯವಸ್ಥೆಯ ಲೋಪದೋಷಗಳಿಂದಾಗಿ ನಿಖರವಾಗಿರಲು ಸಾದ್ಯವಿಲ್ಲ. ಇದರಿಂದಾಗಿ ಮತ್ತೆ ವಂಚಿತರೇ ವಂಚನೆಗೊಳಗಾಗುತ್ತಾರೆ.

(ಈ) ಜಾತೀಯತೆಯಿಂದ ನರಳುತ್ತಿರುವ ಇಂಡಿಯಾದಲ್ಲಿ ಬದಲಾಗದೆ ಇರುವ ಒಂದು ವಿಷಯವೆಂದರೆ ಅದು ಜಾತಿಯಾಗಿದೆ. ಇಲ್ಲಿನ ಭ್ರಷ್ಟ ವ್ಯವಸ್ಥೆಯಲ್ಲಿ ಹಣ ನೀಡಿ ಜಾತಿಯ ಪ್ರಮಾಣಪತ್ರವನ್ನು ಪಡೆಯಬಹುದಾಗಿದ್ದು, ವರಮಾನದ ಪ್ರಮಾಣ ಪತ್ರವನ್ನು ಪಡೆಯುವುದು ಇನ್ನೂ ಸುಲಭವಾದ ವಿಷಯವಾಗಿದೆ. ಹಾಗಾಗಿ ಆರ್ಥಿಕ ಸ್ಥಿತಿಗತಿಯ ಮೇಲೆ ಮೀಸಲಾತಿಯನ್ನು ನೀಡುವುದು ವ್ಯಾವಹಾರಿಕವಾಗಿ ಆಗದ ಮಾತು. ಹಣ ಕೊಟ್ಟು ಪಡೆಯಬಲ್ಲಂತಹ ಎರಡು ಪ್ರಮಾಣಪತ್ರಗಳನ್ನಿಟ್ಟುಕೊಂಡು ಮೀಸಲಾತಿಯ ಬಗ್ಗೆ ಚರ್ಚೆ ನಡೆಸುದು ಅನಗತ್ಯವೆನಿಸುತ್ತೆ. ಅದೂ ಅಲ್ಲದೆ ಈ ನೆಲದಲ್ಲಿ ಹಣ ಕೊಟ್ಟು ಆದಾಯ ಪ್ರಮಾಣಪತ್ರ ಪಡೆಯುವುದು ಬಹಳ ಸುಲಭ, ಆದರೆ ಜಾತಿಯ ಪ್ರಮಾಣಪತ್ರ ಪಡೆಯುವುದು ಕಷ್ಟಕರ.

(ಉ) ಮೀಸಲಾತಿಯೇ ಅಂತಿಮ ಗುರಿಯಲ್ಲ. ಬದಲಿಗೆ ಅಂತ್ಯದತ್ತ ಒಂದು ದಾರಿಯಷ್ಟೆ! ಮೀಸಲಾತಿಯ ಮುಖ್ಯ ಉದ್ದೇಶ: ಮುಖ್ಯವಾಹಿನಿಯಿಂದ ಹೊರಗಿರುವವರಿಗೆ ಸರ್ವಕ್ಷೇತ್ರಗಳಲ್ಲಿಯು ಅವಕಾಶಗಳ ಬಾಗಿಲುಗಳನ್ನು ತೆರೆಯುವುದಾಗಿದೆ. ಆದ್ದರಿಂದಲೆ ಮೀಸಲಾತಿ ಶಾಶ್ವತವೂ ಅಲ್ಲ ಜಾತಿ ಪದ್ದತಿಗೆ ದಿವ್ಯೌಷದಿಯೂ ಅಲ್ಲ. ಎಲ್ಲಯವರೆಗು ರಾಷ್ಟ್ರದ ಪತ್ರಿಕೆಗಳ ಜಾಹಿರಾತುಗಳಲ್ಲಿ ಜಾತಿಯ ಪ್ರಸ್ತಾಪವಿರುತ್ತದೆಯೊ ಅಲ್ಲಿಯವರೆಗು ಇದು ಸಾಗಬೇಕಾಗುತ್ತದೆ.

6. ಮೀಸಲಾತಿಯಲ್ಲಿ ಕೆನೆಪದರ ಇರಬೇಕೇ ಬೇಡವೇ?
ಮೀಸಲಾತಿಯಲ್ಲಿ ಕೆನೆಪದರದ ಅಗತ್ಯವನ್ನು ಎತ್ತಿ ಹೇಳುತ್ತಿರುವವರ ಮುಖ್ಯ ಉದ್ದೇಶವೇ ಮೀಸಲಾತಿಯ ಮೂಲ ಗುರಿಯನ್ನು ಮಣ್ಣುಪಾಲು ಮಾಡುವುದಾಗಿದೆ.ಉದಾಹರಣೆಗೆ ಈಗಲೂ ಐ.ಐ.ಟಿ.ಯಂತಹ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ/ಪಂಗಡಗಳಿಗೆ ಮೀಸಲಿಟ್ಟ ಸ್ಥಾನಗಳಲ್ಲಿ ಶೇಕಡ 25 ಕ್ಕಿಂತ ಹೆಚ್ಚು ಸ್ಥಾನಗಳು ಸೂಕ್ತ ಅಭ್ಯರ್ಥಿಗಳಿಲ್ಲದ ಕಾರಣಕ್ಕೆ ಖಾಲಿ ಉಳಿದಿವೆ.ಅಕಸ್ಮಾತ್ ನೀವು ಕೆನೆಪದರವನ್ನು ಜಾರಿಗೆ ತಂದರೆ ಆರ್ಥಿಕವಾಗಿ ಪರಿಶಿಷ್ಟರಿಗಿಂತ ಸ್ವಲ್ಪ ಬಲಾಢ್ಯವಾಗಿರುವ ಕೆಳ ಮತ್ತು ಮದ್ಯವರ್ಗದವರು ಪರಿಶಿಷ್ಟರ ಎಲ್ಲ ಸ್ಥಾನಗಳನ್ನು ಸುಲಭವಾಗಿ ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಾರೆ.ಹೀಗೆ ಕೆನೆಪದರದ ವಿದ್ಯಾರ್ಥಿಗಳ ಜೊತೆ ಸ್ಪರ್ದೆ ಮಾಡಲು ಪರಿಶಿಷ್ಟರಿಗೆ ಸಾದ್ಯವಾಗುವುದಿಲ್ಲ.

7.ಮೀಸಲಾತಿ ಎಷ್ಟು ಕಾಲ ಮುಂದುವರೆಯಬೇಕು?
ಮೀಸಲಾತಿಯನ್ನು ವಿರೋಧಿಸುವ ಎಲ್ಲರೂ ಸಹಜವಾಗಿ ಕೇಳುವ ಪ್ರಶ್ನೆ ಇದು. ಎಲ್ಲಿಯವರೆಗು ನಮ್ಮ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಎಲ್ಲ ವಿಭಾಶಗಗಳಲ್ಲಿಯೂ ಮೇಲ್ಜಾತಿಯವರೇ ತುಂಬಿಕೊಂಡಿದ್ದು ,ಎಲ್ಲವನ್ನು ನಿಯಂತ್ರಿಸುತ್ತಿರುತ್ತಾರೊ ಅಲ್ಲಿಯವರಗು ಇದು ಮುಂದುವರೆಯುತ್ತದೆ. ನಮ್ಮ ಮೇಲ್ಜಾತಿಗಳು ಸುಮಾರು ಮೂರುಸಾವಿರ ವರ್ಷಗಳಿಂದಲೂ ಎಲ್ಲ ಸವಲತ್ತುಗಳನ್ನು ಅನುಭವಿಸುತ್ತ ಬಂದಿದ್ದು,ಇದೀಗ ಇಪ್ಪತ್ತನೆಯ ಶತಮಾನದಲ್ಲಿಯು ಎಲ್ಲ ಧಾರ್ಮಿಕ ಸ್ಥಾನಗಳಲ್ಲಿಯು ತನ್ನದೇ ಪಾರುಪತ್ಯವನ್ನು ನಡೆಸುತ್ತಿದೆ. ಇದೀಗ ಅವರೇ ಮೀಸಲಾತಿ ಎಲ್ಲಿಯವರೆಗೆ ಎನ್ನು ಪ್ರಶ್ನೆ ಕೇಳುತ್ತಿದ್ದಾರೆ.ಅವರು ತಮ್ಮನ್ನು ತಾವೇ ಕೇಳಿಕೊಳ್ಳಲಿ: ಇನ್ನು ಎಷ್ಟು ವರ್ಷಗಳ ಕಾಲ ಅವರೇ ಎಲ್ಲ ಧಾರ್ಮಿಕ ಸ್ಥಾನಗಳಲ್ಲಿ ಇರುತ್ತಾರೆಂದು?ಮೂರು ಸಾವಿರ ವರ್ಷಗಳ ತಾರತಮ್ಮವನ್ನು ನಿವಾರಸಲು ಎಪ್ಪತ್ತು ವರ್ಷಗಳು ಸಾಕಾಗಿಬಿಡುತ್ತದೆಯೇ ಎಂದು ಅವರೇ ಕೇಳಿಕೊಳ್ಳಲಿ?

8.ಮೀಸಲಾತಿ ವ್ಯವಸ್ಥೆ ಸಮಾಜನ್ನು ಒಡೆಯುವುದಿಲ್ಲವೆ?
ಈ ಪ್ರಶ್ನೆಯೇ ಅಸಂಬದ್ದವಾದುದು. ಈಗಾಗಲೇ ಚಾಲ್ತಿಯಲ್ಲಿಯಲಿರುವ ಜಾತಿ ಪದ್ದತಿ ಸಮಾಜವನ್ನು ಛಿದ್ರಗೊಳಿಸಿಯಾಗಿದೆ. ಆದರೆ ಮೀಸಲಾತಿ ಅದನ್ನು ಸರಿಪಡಿಸುವ ದಿಸೆಯಲ್ಲಿ ಸಾಗಿದೆ. ನಮ್ಮ ಪರಿಶಿಷ್ಠ ಜಾತಿ,ಪಂಗಡ ಮತ್ತು ಹಿಂದುಳಿದ ವರ್ಗಗಳಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಜಾತಿಗಳಿವೆ, ಅವನ್ನೆಲ್ಲ ಸೇರಿಸಿ ಎಸ್.ಸಿ, ಎಸ್.ಟಿ.ಮತ್ತು ಓಬಿಸಿ ಎಂಬ ಕೊಡೆಯ ಅಡಿಯಲ್ಲಿ ತಂದಿರುವುದು ಜಾತಿ ವಿನಾಶದತ್ತ ದೊಡ್ಡ ಹೆಜ್ಜೆಯಾಗಿದೆ. ಆದ್ದರಿಂದ ಮೀಸಲಾತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಜಾತಿಪದ್ದತಿಯನ್ನು ನಿವಾರಿಸಲು ಮೇಲ್ಜಾತಿಗಳು ಪ್ರಾಮಾಣಿಕ ಪ್ರಯತ್ಮ ನಡೆಸಬೇಕಿದೆ. ಮೀಸಲಾತಿಯನ್ನು ವಿರೋಧಿಸುವವರು ಈ ದಿಸೆಯಲ್ಲಿ ಕೆಲಸ ಮಾಡುತ್ತಿದ್ದಾರೆಯೆ? ಎಂದರೆ ಅದಕ್ಕೆ ಉತ್ತರ: ಇಲ್ಲ! ಇವತ್ತು ಮೀಸಲಾತಿಯನ್ನು ವಿರೋಧಿಸುತ್ತಿರುವವರೆಲ್ಲ. ಜಾತಿ ತಮಗೆ ನೀಡಿರುವ ಎಲ್ಲ ಸವಲತ್ತುಗಳನ್ನು ಅನುಭವಿಸುತ್ತಿರುವವರೇ ಆಗಿದ್ದಾರೆ. ಜಾತಿಯ ಸವಲತ್ತುಗಳನ್ನು ಉಪಯೋಗಿಸಿಕೊಳ್ಳುತ್ತಲೆ ಜಾತಿಯಾಧಾರಿತ ಮೀಸಲಾತಿಯನ್ನು ವಿರೋಧಿಸುವವರ ಆತ್ಮವಂಚನೆ ಇದರಿಂದ ಗೊತ್ತಾಗುತ್ತದೆ.

9.ಮೀಸಲಾತಿಯು ಅರ್ಹತೆಯನ್ನು ನಾಶ ಮಾಡುತ್ತಿಲ್ಲವೆ?
ನಾವು ಅರ್ಹತೆ ಎಂಬುದರ ವ್ಯಾಖ್ಯೆಯನ್ನೆ ಸರಿಯಾಗಿ ಅರ್ಥೈಸಿಕೊಂಡಿಲ್ಲವೆನಿಸುತ್ತೆ. ಕಾನ್ಪುರದ ಐ.ಐ.ಟಿ.ಯ ಪ್ರೊಫೆಸರ್ ರಾಹುಲ್ ಬರ್ಮನ್ ರವರ ಪ್ರಕಾರ: ಮೆರಿಟ್ ಎಂದರೇನು? ಕೇವಲ ಪರೀಕ್ಷೆಗಳನ್ನು ಪಾಸು ಮಾಡುವುದೇ? ಪಾಸ್ ಎನ್ನುವುದು ಒಂದು ದಾರಿಯೆ ಹೊರತು ಅದೇ ಅಂತ್ಯವಲ್ಲ. ಪರೀಕ್ಷೆಗಳು ಒಬ್ಬ ವೈದ್ಯನನ್ನೊ ಒಬ್ಬ ಎಂಜಿನಿಯರ್‍ನನ್ನೊ ಮಾಡುವುದಷ್ಟೇ ಆಗಿದ್ದರೆ, ಹಾಗೆ ಮಾಡಲು ಪರೀಕ್ಷೆಗಳಿಗಿಂತ ಉತ್ತಮ ಮಾರ್ಗಗಳು ಇವೆ. ನನ್ನ ಕಾಲೇಜಿನ ದಿನಗಳಲ್ಲಿಹೀಗೆ ಹೇಳಲಾಗುತ್ತಿತ್ತು: ಒಬ್ಬ ಒಳ್ಳೆಯ ಇಂಜಿನಿಯರ್ ಅಂದರೆ ಕಡಿಮೆ ಸಂಪನ್ಮೂಲಗಳಲ್ಲಿ ಉತ್ತಮವಾದುದ್ದನ್ನು ಮಾಡುವವನು. ಮ್ಯಾನೇಜ್ ಮೆಂಟ್ ಕೂಡ ಅಷ್ಟೆ ಇರುವ ಸಂಪನ್ಮೂಲಗಳನ್ನೇ ಬಳಸಿ, ಕ್ಲಿಷ್ಟಕರ ಪರಿಸ್ಥಿತಿಯಲ್ಲಯೂ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಬಲ್ಲವನು ಎಂದು!. ಆದರೆ ನಾನು ನೋಡಿದ ಹಾಗೆ ಬಹುತೇಕ ಆದಿವಾಸಿಗಳು, ದಲಿತರು,ಹಿಂದುಳಿದವರೆ ನಡೆಸುವ ಮೊರಾದಾಬಾದಿನ ಹಿತ್ತಾಳೆ, ವಾರಣಾಸಿಯ ರೇಶ್ಮೆ, ಕಾನ್ಪುರದ ಚರ್ಮದ ಸಣ್ಣ ಕೈಗಾರಿಕೆಗಳು ತಮ್ಮ ಸೀಮಿತ ಸಂಪನ್ಮೂಲಗಳನ್ನೇ ಬಳಿಸಿ ಅತ್ಯತ್ತಮವಾದ ಉತ್ಪನ್ನಗಳನ್ನು ತಯಾರಿಸುತ್ತಿವೆ. ಅವು ನಿಮ್ಮ ಐ.ಟ. ಬಿ.ಟಿ. ಕೈಗಾರಿಕೆಗಳಿಗಿಂತ ಹೆಚ್ಚು ಸಂಖ್ಯೆಯಲ್ಲಿ ಉದ್ಯೋಗವಕಾಶಗಳನ್ನು ಒದಗಿಸಿವೆ ಮತ್ತು ಹೆಚ್ಚು ರಫ್ತು ವ್ಯವಹಾರವನ್ನೂ ಸಹ ಮಾಡುತ್ತಿವೆ. ಇವರುಗಳು ಅತ್ಯಂತ ಕಡಿಮೆ ಬಂಡವಾಳ ಹೂಡಿದ್ದು,ಸಮರ್ಪಕವಾದ ಶಿಕ್ಷಣವಿಲ್ಲದೆ, ಸಾಕಷ್ಟು ವಿದ್ಯುತ್ ಇಲ್ಲದೆ, ಸರಿಯಾದ ಸಾರಿಗೆ ವ್ಯವಸ್ಥೆಯಿರದೆ ತುಂಬಾ ಸೀಮಿತ ಸಂಪನ್ಮೂಲಗಳ ಸಹಾಯದಿಂದ ಇಂತಹ ಅದ್ಬುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಯಾರೂ ನಿಮ್ಮ ಸಾಂಪ್ರದಾಯಿಕ ಶಿಕ್ಷಣ ಪಡೆದು ಇಂಜಿನಿಯರುಗಳಾದವರು ಇಲ್ಲ. ಇದರ ನಿರ್ವಹಣೆ ಮಾಡುತ್ತಿರುವವರ್ಯಾರು ಎಂ.ಬಿ.ಎ. ಪದವಿ ಪಡೆದವರಲ್ಲ.ಅದೂ ಅಲ್ಲದೇ ಇವ್ಯಾವ ಕೈಗಾರಿಗೆಳು ದೊಡ್ಡ ಕೈಗಾರಿಕೆಗಳೊಂದಿಗೆ ಯಾವ ಸಮಪರ್ಕವನ್ನು ಹೊಂದಿಲ್ಲ.

ದಕ್ಷಿಣದ ನಾಲ್ಕು ರಾಜ್ಯಗಳು ಮಾತ್ರ ಶೇಕಡಾ 60ರಷ್ಟು ಮೀಸಲಾತಿಯನ್ನು ಕಲ್ಪಿಸಿವೆ. ಇನ್ನು ಉತ್ತರದ ಬಹುತೇಕ ರಾಜ್ಯಗಳು ಕೇವಲ ಶೇಕಡಾ15 ರಷ್ಟು ಮಾತ್ರ ಮೀಸಲಾತಿಯನ್ನು ಕಲ್ಪಿಸಿ ಉಳಿದೆಲ್ಲವನ್ನು ಮೇಲ್ವರ್ಗಗಳಿಗೆ ಬಿಟ್ಟು ಕೊಟ್ಟಿವೆ. ಹೀಗಾಗಿಯೆ ಇವತ್ತು ದಕ್ಷಿಣದ ರಾಜ್ಯಗಳು ಬಹುತೇಕ ಕ್ಷೇತ್ರಗಳಲ್ಲ್ಲಿ ಪ್ರಗತಿ ಸಾದಿಸಿವೆಯೆಂದು ವಿಶ್ವ ಬ್ಯಾಂಕಿನ ಅದ್ಯಯನವೇ ಹೇಳಿದೆ. ಸಾಮಾಜಿಕ ಕಳಕಳಿಯ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ದಕ್ಷಿಣದ ರಾಜ್ಯಗಳು ಸಾಕಷ್ಟು ಅಭಿವೃದ್ದಿಯನ್ನು ಸಾದಿಸಿವೆ.

10. ಈಗಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗಿರುವ ಮೀಸಲಾತಿ ಪರಿಣಾಮಕಾರಿಯಾಗಿದೆಯೆ?
ಸಾರ್ವಜನಿಕ ಉದ್ದಿಮೆಗಳಲ್ಲಿರುವ ಮೀಸಲಾತಿಯಿಂದ ಸಾಕಷ್ಟು ಅನುಕೂಲವಾಗಿದೆ. ಕೇಂದ್ರ ಸರಕಾರದಲ್ಲಿಯೆ 14 ಲಕ್ಷ ಉದ್ಯೋಗಿಗಳಿದ್ದಾರೆ. ಆದರೆ ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ಮೂರು ಮತ್ತು ನಾಲ್ಕನೇ ದರ್ಜೆಯ ನೌಕರರ ಹೊರತಾಗಿ ಒಂದನೇ ಮತ್ತು ಎರಡನೆ ದರ್ಜೆಯ ನೌಕರರರಲ್ಲಿ ಕೇವಲ ಶೇಕಡಾ 8ರಿಂದ 10 ರಷ್ಟು ಮಾತ್ರ ಎಸ್.ಸಿ. ಮತ್ತು ಎಸ್.ಟಿ.ಗಳಿದ್ದಾರೆ. ಇವತ್ತು ಬಹುಜನ ಸಮಾಜವೇನಾದರು ದೆಹಲಿಯನ್ನು ಮುಟ್ಟಲು ಸ್ವಲ್ಪವಾದರು ಸಾದ್ಯವಾಗಿದ್ದರೆ ಅದು ಮೀಸಲಾತಿಯ ಸೌಲಭ್ಯದಿಂದ ಮಾತ್ರ. ಮೀಸಲಾತಿಯೇ ಇಲ್ಲದಿದ್ದರೆ ಉದ್ಯೊಗಗಳಿರಲಿ, ಶಿಕ್ಷಣ ಕ್ಷೇತ್ರಕ್ಕೂ ಬಹುಜನರು ಪ್ರವೇಶಿಸಲು ಸಾದ್ಯವಿರುತ್ತಿರಲಿಲ್ಲ.

ಆದ್ದರಿಂದ ಮೀಸಲಾತಿ ಇವತ್ತಿಗೂ ಪ್ರಸ್ತುತವಾಗಿದೆ.

ನವೆಂ 19, 2015

ಅಸ್ವಸ್ಥ ಸಮಾಜದ ಹುಚ್ಚು ಮುಖಗಳು

Dr Ashok K R
ನಾನಾಗ ಪಿಯುಸಿ ಓದುತ್ತಿದ್ದೆ. ಗುರುಶ್ರೀ ಥಿಯೇಟರಿನ ಎದುರಿಗಿದ್ದ ಪಿ.ಇ.ಎಸ್ ಕಾಲೇಜಿನಿಂದ ಸಂಜಯ ಥಿಯೇಟರ್ ಸರ್ಕಲ್ಲಿನಲ್ಲಿ ಬಲಕ್ಕೆ ತಿರುಗಿ ನಾಲ್ಕೆಜ್ಜೆ ನಡೆದರೆ ಬಲಕ್ಕೆ ಸಿದ್ಧಾರ್ಥ ಥಿಯೇಟರ್ರಿದೆ. ಅದರ ಎದುರುಗಡೆ ಪೋಲೀಸ್ ಠಾಣೆ. ಒಮ್ಮೊಮ್ಮೆ ಸೈಕಲ್ ತಳ್ಕೊಂಡು ನಡ್ಕೊಂಡು ಹೋಗುವಾಗ ಸಿದ್ದಾರ್ಥ ಥಿಯೇಟರಿನ ಬಳಿಯೋ ಅಥವಾ ಅದರ ಹಿಂದೆಯೋ ಒಬ್ಬ ವ್ಯಕ್ತಿ ಎದುರಾಗುತ್ತಿದ್ದ. ತಲೆಗೆ ಎಣ್ಣೆ ಹಾಕಿ ಕ್ರಾಪು, ಕಣ್ಣಿಗೊಂದು ಕಪ್ಪು ಚೌಕಟ್ಟಿನ ಸೋಡಾ ಗ್ಲಾಸು, ಇಸ್ತ್ರಿ ಮಾಡಿದ್ದ ಕೆಂಚಗಾಗಿದ್ದ ಬಿಳಿ ಶರ್ಟು, ಕಪ್ಪು ಪ್ಯಾಂಟು, ಹೊಳಪು ಮಾಸಿದ ಚಪ್ಪಲಿ ಧರಿಸಿರುತ್ತಿದ್ದ ವ್ಯಕ್ತಿ ಎರಡು ಹೆಜ್ಜೆಗೊಮ್ಮೆ ನಿಂತು ನೆನಪಾದವರಿಗೆಲ್ಲ ಬಯ್ದು ಮತ್ತೆರಡು ಹೆಜ್ಜೆ ಹಾಕಿ ಇನ್ನೊಂದಷ್ಟು ಬಯ್ದು ಮತ್ತೆರಡು ಹೆಜ್ಜೆ ಹಾಕುತ್ತಿದ್ದ. ಬಯ್ಯಿಸಿಕೊಳ್ಳುವವರ ಲಿಸ್ಟಿನಲ್ಲಿ ಮುಖ್ಯಮಂತ್ರಿ, ಪ್ರಧಾನಮಂತ್ರಿಯಿಂದ ಹಿಡಿದು ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗರಿಂದ ಹಿಡಿದು ಪಕ್ಕದ ಮನೆಯವರು, ಮಕ್ಕಳು, ಪೋಲೀಸರೆಲ್ಲರೂ ಇದ್ದರು. ಯಾರಾದರೂ ಆತನನ್ನು ಗಮನಿಸುತ್ತಾ ಹತ್ತಿರದಲ್ಲೇ ನಿಂತುಬಿಟ್ಟರೆ ದನಿಯೇರುತ್ತಿತ್ತು ಬಯ್ಯುವ ಅವಧಿಯೂ ಜಾಸ್ತಿಯಾಗುತ್ತಿತ್ತು. ಯಾರೂ ಗಮನಿಸದಿದ್ದರೆ ಎರಡು ಹೆಜ್ಜೆಗೆ ಒಂದು ಬಯ್ಗುಳ. ಮುಂದೆ ಮೆಡಿಕಲ್ ಓದಲು ಮೈಸೂರಿಗೆ ತೆರಳಿದ ಮೇಲೆ ಆ ವ್ಯಕ್ತಿಯ ಕತೆ ಏನಾಯಿತೋ ತಿಳಿಯಲಿಲ್ಲ. ಕಳೆದೊಂದು ವಾರದಿಂದ 'ರಾಷ್ಟ್ರೀಯ ದುರಂತವಾದ' ವೆಂಕಟನ ಸುತ್ತಲಿನ ಸಂಕಟಗಳ ಬಗ್ಗೆ ಆಗೀಗ ಚೂರು ಚೂರು ನೋಡಿ ಕೇಳಿ ತಿಳಿದುಕೊಂಡಾಗ ನನಗೆ ನೆನಪಾಗಿದ್ದು ಮಂಡ್ಯದ ಆ ವ್ಯಕ್ತಿ.

ಒಬ್ಬ ಮಾನಸಿಕ ಅಸ್ವಸ್ಥನನ್ನು (ಆತ ನಟನೆಯನ್ನೂ ಮಾಡುತ್ತಿರಬಹುದು) ಹೇಗೆ ನಡೆಸಿಕೊಳ್ಳಬೇಕೆಂದು ಮರೆತುಹೋದ ಸಮಾಜವನ್ನು ಯಾವ ಕೋನದಿಂದ ನಾಗರೀಕವೆಂದು ಕರೆಯಬಹುದು? ಆದಿವಾಸಿಗಳನ್ನು ಅವರ ರೀತಿ ನೀತಿಗಳನ್ನು ಅನಾಗರೀಕವೆಂದು ಕರೆದುಬಿಡುವ ನಾವಿರುವ ನಾಗರೀಕತೆ ಇಷ್ಟೊಂದು ವಿಷಮಯವಾಗಿದೆಯೆಂದರೆ ಅನಾಗರೀಕರಾಗುವುದೇ ಉತ್ತಮವಲ್ಲವೇ? ಅದೆಷ್ಟೇ ವೈಯಕ್ತಿಕವೆಂದರೂ ಸುದೀಪ್ ವಿಚ್ಛೇದನ ಪಡೆದುಕೊಂಡಿರುವುದು ಸತ್ಯ. ವಿಚ್ಛೇದನ ಪಡೆದುಕೊಂಡಿರುವ ವ್ಯಕ್ತಿಯೊಬ್ಬ ‘ರಿಯಾಲಿಟಿ ಶೋ’ ಒಂದರಲ್ಲಿ ಕೌಟುಂಬಿಕ ಮೌಲ್ಯಗಳ ಬಗ್ಗೆ ಮಾತನಾಡುವುದನ್ನು ನಮ್ಮ ಕರ್ನಾಟಕದ ಕುಟುಂಬಗಳು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತವೆ! ಮಾನಸಿಕ ಅಸ್ವಸ್ಥನೆಂದೇ ಹೆಸರುವಾಸಿಯಾದ ವೆಂಕಟೇಶನನ್ನು ರಿಯಾಲಿಟಿ ಶೋಗೆ ಸೇರಿಸಿಕೊಳ್ಳುವ ವಾಹಿನಿಯವರು ಅವನಿಂದ ಎಷ್ಟು ಟಿ.ಆರ್.ಪಿ ಪಡೆಯಬೇಕೋ ಅಷ್ಟನ್ನು ಪಡೆದುಬಿಟ್ಟರು. ಆತನ ಹುಚ್ಚಾಟದಿಂದ ವೆಂಕಟನನ್ನು ಬಿಗ್ ಬಾಸ್ ರಿಯಾಲಿಟಿ ಶೋದಿಂದ ಹೊರಹಾಕಿದ್ದೂ ಆಯಿತು. ಅಲ್ಲಿಗಾದರೂ ವೆಂಕಟೇಶನ ಮಹಿಮೆ ಮುಗಿಯಬೇಕಿತ್ತು. ಮುಗಿಯುವುದಕ್ಕೆ ಸುದ್ದಿ ವಾಹಿನಿಗಳು ಬಿಡಲಿಲ್ಲ.

ದಿನದ ಇಪ್ಪತ್ತನಾಲ್ಕು ತಾಸು ತೋರಿಸುವುದಕ್ಕೆ ಸುದ್ದಿಯಾದರೂ ಎಲ್ಲಿರುತ್ತದೆ? ಸುದ್ದಿಯಲ್ಲದ ಇಂತವುಗಳನ್ನು ಮಾಡದಿದ್ದರೆ ವಾಹಿನಿಯವರ ಹೊಟ್ಟೆ ತುಂಬಬೇಕಲ್ಲ. ನೂರಿನ್ನೂರು ಜನರ ಹೊಟ್ಟೆ ತುಂಬಿಸುವುದಕ್ಕೆ ಟಿವಿ ವೀಕ್ಷಕರ ಮನಸ್ಥಿತಿಯನ್ನೇ ಹಾಳುಗೆಡವುವ ಕೆಲಸವನ್ನು ಮಾಡುವುದನ್ನು ವಾಹಿನಿಗಳು ಯಾವಾಗಲೋ ಪ್ರಾರಂಭಿಸಿಬಿಟ್ಟಿವೆ. ಕನ್ನಡಪ್ರಭದಲ್ಲಿ ಸುವರ್ಣ ವಾಹಿನಿಯ ಸುಗುಣ ಎನ್ನುವವರು ಹೇಗೆ ತಾವು ರಾತ್ರಿ ಹನ್ನೊಂದು ಘಂಟೆಯಿಂದ ಬೆಳಗಿನ ಜಾವ ನಾಲ್ಕರವರೆಗೆ ವೆಂಕಟನ ಮನೆಯ ಬಳಿಯೇ ಕಾದು ಕುಳಿತಿದ್ದೆ ಎನ್ನುವುದರ ‘ರೋಚಕ’ ವಿವರಗಳನ್ನು ಬರೆದುಕೊಳ್ಳುತ್ತಾರೆ! ವಾಹಿನಿಯಲ್ಲಿ ಲೈವ್ ಆಗಿ ಕೂರಿಸಿ ವೆಂಕಟನನ್ನು ಕಿಚಾಯಿಸಿ ಥೇಟ್ ಮಂಡ್ಯದ ಆ ವ್ಯಕ್ತಿಯಂತೆ ಬಡಬಡಿಸುವಂತೆ ಮಾಡಿ ಅವನ ನೆನಪಿಗೆ ಬಂದವರಿಗೆಲ್ಲ ಬಯ್ಯುವಂತೆ ಮಾಡಿಬಿಟ್ಟರು. ಕೊನೆಗೆ ಪಬ್ಲಿಕ್ ಟಿವಿಯಲ್ಲಿ ಆತ ಯಾರ ಮೇಲೋ ಕೈ ಮಾಡಲು ಹೋಗಿ ಪಬ್ಲಿಕ್ ವಾಹಿನಿಯ ಪತ್ರಕರ್ತರು ಸ್ಟುಡಿಯೋದಲ್ಲಿನ ಜಗಳ ಬಿಡಿಸಿದರು. ವಾಹಿನಿಯಲ್ಲಿ ಯಾರಾದರೂ ಪರಿಚಯವಿದ್ದರೆ ಕೇಳಿ ನೋಡಿ ‘ನಾವೇನ್ ಮಾಡಾಣ? ಇಂತ ಕಾರ್ಯಕ್ರಮಕ್ಕೇ ಟಿ.ಆರ್.ಪಿ ಜಾಸ್ತಿ. ಟಿ.ಆರ್.ಪಿ ಬರುತ್ತೆ ಮಾಡ್ತೀವಿ’ ಎಂದೇ ಹೇಳುತ್ತಾರೆ. ಆಗ ತಪ್ಪು ಇಂತಹ ಕಾರ್ಯಕ್ರಮಗಳನ್ನು ಮಾಡುವ ವಾಹಿನಿಗಳದ್ದಾ ಅಥವಾ ಇಂತಹ ಕಾರ್ಯಕ್ರಮಗಳನ್ನು ನೋಡುವ ಜನರದ್ದಾ? ಎಂಬ ಪ್ರಶ್ನೆ ಮೂಡದೇ ಇರದು. 

ಮಾಲ್ಗುಡಿ ಡೇಸ್, ಗುಡ್ಡದ ಭೂತದಂತಹ ಉತ್ತಮ ಧಾರವಾಹಿಗಳನ್ನು ನೋಡಿದ ಜನರೇ ಇವತ್ತು ದ್ವೇಷ ತುಂಬಿದ ಹೆಂಗಸರ ಕಿತ್ತಾಟದ ಧಾರವಾಹಿಗಳನ್ನು ನೋಡುತ್ತಿದ್ದಾರೆ, ಅರ್ಥವಿಲ್ಲದ ರಿಯಾಲಿಟಿ ಶೋಗಳನ್ನು ನೋಡುತ್ತಿದ್ದಾರೆ. ಅಂದಿನ ನಿರ್ದೇಶಕರಿಗೆ ಯಾರೂ ಉತ್ತಮ ಅಭಿರುಚಿಯ ಧಾರವಾಹಿಗಳನ್ನು ಮಾಡಿ ಎಂದು ಬೇಡಿಕೆ ಇಟ್ಟಿರಲಿಲ್ಲ, ಇಂದಿನ ನಿರ್ದೇಶಕರಿಗೂ ಯಾರೂ ಕಿತ್ತಾಟದ ಕಾರ್ಯಕ್ರಮಗಳನ್ನು ಮಾಡಿ ಎಂದು ಬೇಡಿಕೆ ಇಟ್ಟಿಲ್ಲ. ಕಲಾವಿದನಿಗೆ, ನಿರ್ದೇಶಕನಿಗೆ, ವಾಹಿನಿಯ ಮುಖ್ಯಸ್ಥನಿಗೆ ಡಿಫಾಲ್ಟಾಗಿ ಒಂದು ಸಾಮಾಜಿಕ ಬದ್ಧತೆ ಕಾಳಜಿ ಇರಲೇಬೇಕು. ಅದಿಲ್ಲವಾಗಿರುವುದೇ ಇಂದಿನ ಪರಿಸ್ಥಿತಿಗೆ ಮುಖ್ಯ ಕಾರಣ. ಬಿಗ್ ಬಾಸಿನ ಮೊದಲನೇ ಸರಣಿ ಮುಗಿದ ಮೇಲೆ ಎರಡನೇ ಸರಣಿ ಮಾಡಿ ಮೂರನೇ ಸರಣಿ ಮಾಡಿ ಎಂದೇನಾದರೂ ಜನರು ವಾಹಿನಿಯ ಮುಂದೆ ಅಲವತ್ತುಕೊಂಡಿದ್ದರೆ? 

ಇನ್ನು ಈ ಎಲ್ಲಾ ಸಂಭ್ರಮದ ನಡುವೆ ದಲಿತ ಸೇನೆಯವರು ದರಿದ್ರ ಕೆಲಸ ಮಾಡಿದ್ದಾರೆ. ಅಂಬೇಡ್ಕರ್ ಬಗ್ಗೆ ಅವಮಾನಕರವಾಗಿ ಮಾತನಾಡಿದ ಎಂಬ ಕಾರಣಕ್ಕೆ ವೆಂಕಟನ ಮೇಲೆ ಮಸಿ ಬಳಿದಿದ್ದಾರೆ. ಆತನ ಮಾನಸಿಕ ಸ್ಥಿತಿಯನ್ನು ಗಮನಿಸಿದ ಮೇಲೂ ಈ ಕೆಲಸ ಮಾಡಬೇಕಿತ್ತಾ? ವಾಹಿನಿಗಳಿಗೇನೋ ಟಿ.ಆರ್.ಪಿ ಹುಚ್ಚು. ವೆಂಕಟನ ಪಟದ ಮೇಲೆ ಹಾಲು ಸುರಿಯುವ ‘ಅಭಿಮಾನಿ’ಗಳು ಮತ್ತು ಮಸಿ ಬಳಿದ ದಲಿತ ಸೇನೆಯವರಿಗೆ ಸುದ್ದಿಯಾಗುವ ಹುಚ್ಚಷ್ಟೇ ಇಲ್ಲಿ ಕಾಣಿಸುತ್ತಿದೆ. ಒಬ್ಬ ಮಾನಸಿಕ ಅಸ್ವಸ್ಥನಿಗೆ ಅಗತ್ಯವಾಗಿ ಬೇಕಾಗಿರುವುದು ಚಿಕಿತ್ಸೆ. ಅಂತಹ ವ್ಯಕ್ತಿಯನ್ನು ಕೂರಿಸಿಕೊಂಡು ಇಲ್ಲಸಲ್ಲದ ಚೇಷ್ಟೆಗಳನ್ನು ಮಾಡುತ್ತ ಕುಳಿತಿರುವ ವಾಹಿನಿಗಳು ಮತ್ತದಕ್ಕೆ ಪೂರಕವಾಗಿ ಸ್ಪಂದಿಸುತ್ತ ವಿಕೃತ ಆನಂದವನ್ನನುಭವಿಸುತ್ತ ಹಾಲು ಸುರಿದು ಮಸಿ ಬಳಿದು ಸಂಭ್ರಮಿಸುತ್ತಿರುವ ಸಮಾಜ! ಇಲ್ಲಿ ನಿಜಕ್ಕೂ ಮಾನಸಿಕ ಅಸ್ವಸ್ಥತೆ ಇರುವುದು ಯಾರಿಗೆ?

ಭೀಕರ

ಕು.ಸ.ಮಧುಸೂದನ್
ವರ್ತಮಾನ ಕಷ್ಟವಾದಾಗ
ಇತಿಹಾಸ ಇಷ್ಟವಾಗುತ್ತದೆ
ತಾಳೆಗರಿಗಳ ಮೇಲೆ ಬರೆಸಲ್ಪಟ್ಟ
ವಿಷಯಗಳೇ ಸಂವಿಧಾನದ ಪರಿಚ್ಛೇದಗಳಾಗಿ
ಅಳತೊಡಗುತ್ತವೆ
ಆಗಿನ್ನೂ ಹುಟ್ಟಿದ ಮಗುಕಿಟಾರನೆ ಕಿರುಚುತ್ತದೆ ಬೆಚ್ಚಿ!
ಕಗ್ಗಂತಲ ಖಂಡದ ಕನಸುಗಳೇ
ನಿಜವಾಗತೊಡಗಿ
ಪುರಾಣ ವರ್ತಮಾನವಾಗತೊಡಗುತ್ತದೆ
ಭವಿಷ್ಯ ಮಂಕಾಗುತ್ತದೆ!

ನವೆಂ 18, 2015

ಯಥಾ ಪ್ರಧಾನಿ ತಥಾ ವಿರೋಧಿ!

ಕಾಂಗ್ರೆಸ್ಸಿನ ಇಬ್ಬರು ಬೃಹಸ್ಪತಿಗಳು ಭಾರತದ ಮಾನವನ್ನು ವಿದೇಶದಲ್ಲಿ, ಅದೂ ಭಾರತದ ಕೆಡುಕನ್ನೇ ಸದಾ ಬಯಸುವ ಪಾಕಿಸ್ತಾನದಲ್ಲಿ ಕಳೆದು ಬಂದಿದ್ದಾರೆ. ಹೆಸರಿಗೆ ಅವರು ಕಳೆದುಹಾಕಿರುವುದು ನರೇಂದ್ರ ಮೋದಿಯವರ ಮಾನವನ್ನಾದರೂ ಮೋದಿಯವರು ಭಾರತದ ಪ್ರಧಾನಿಯಾಗಿರುವುದರಿಂದ ಇದು ಭಾರತದ ಮಾನಹಾನಿಯೇ ಅಲ್ಲವೇ?! ಇಸ್ಲಮಾಬಾದಿನ ಜಿನ್ನಾ ಸಂಸ್ಥೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರದ ಮಾಜಿ ಸಚಿವ ಸಲ್ಮಾನ್ ಖುರ್ಷಿದರಿಗೆ ಇದ್ದಕ್ಕಿದ್ದಂತೆ ನವಾಜ್ ಷರೀಫರ ಮೇಲೆ ಭಯಂಕರ ಪ್ರೀತಿ ಹುಟ್ಟಿ ಅವರನ್ನು ವಾಚಮಾಗೋಚರವಾಗಿ ಹೊಗಳಿ ನರೇಂದ್ರ ಮೋದಿಯವರನ್ನು ತೆಗಳಿದ್ದಾರೆ. ಏನೋ ಪಾಕಿಸ್ತಾನಕ್ಕೆ ಹೋಗಿದ್ದಾರೆ, ಅಲ್ಲಿಯೇ ಇದ್ದುಕೊಂಡು ಅಲ್ಲಿನ ಪ್ರಧಾನಿಯನ್ನು ತೆಗಳುವುದು ಸರಿಯಾಗುವುದಿಲ್ಲ ಎಂದು ನವಾಜ್ ಷರೀಫರನ್ನು ಹೊಗಳಿದ್ದರೆ ಸುಮ್ಮನಾಗಬಹುದಿತ್ತು. ವಿದೇಶಿ ನೆಲದಲ್ಲಿ ಭಾರತದ ಪ್ರಧಾನಮಂತ್ರಿಯನ್ನು ಹೀಗಳೆಯುವ ಕೆಲಸವನ್ಯಾಕೆ ಮಾಡಬೇಕು? ಮಂತ್ರಿ ಪದವಿಯ ಜೊತೆಗೆ ಬುದ್ಧಿಯನ್ನೂ ಮರಳಿಸಿಬಿಟ್ಟರೆ?

ಇನ್ನೂ ಸದಾ ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಕಾಂಗ್ರೆಸ್ಸಿನ ಮಣಿಶಂಕರ್ ಅಯ್ಯರ್ ಪಾಕಿಸ್ತಾನದ 'ದುನಿಯಾ ಟಿವಿ'ಗೆ ಕೊಟ್ಟ ಸಂದರ್ಶನದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬಾಂಧವ್ಯ ವೃದ್ಧಿಯಾಗಬೇಕಾದರೆ ಮೋದಿ ತೊಲಗಿ ಕಾಂಗ್ರೆಸ್ ಮರಳಿ ಬರಬೇಕು ಎಂದಿದ್ದಾರೆ. ಮೊದಲೇ ಭಾರತವನ್ನು ವೈರಿಯಾಗಿಯೇ ನೋಡುವ ಪಾಕಿಸ್ತಾನದಲ್ಲಿ ಮೋದಿ ನಿಮ್ಮ ಮೊದಲ ವೈರಿ ಎಂಬರ್ಥದ ಮಾತುಗಳನ್ನಾಡಿ ಬಂದಿದ್ದಾರೆ. ಇವರಿಗೇನ್ ಬುದ್ಧಿ ಇಲ್ಲವಾ? ಅಥವಾ ಇವರ ದ್ವೇಷವನ್ನು ತೋರ್ಪಡಿಸಲು ಭಾರತದಲ್ಲಿ ವಾಹಿನಿಗಳಿಲ್ಲವಾ? ನಮ್ಮಲ್ಲೇ 24x7 ವಾಹಿನಿಗಳು ಸುದ್ದಿಯಿಲ್ಲದೇ ಬಣಗುಟ್ಟುತ್ತಿರುವಾಗ ವಿದೇಶಿ ವಾಹಿನಿಗಳಲ್ಲಿ ದೇಶದ ಮರ್ಯಾದೆಯನ್ನು ಮೂರುಕಾಸಿಗೆ ಮಾರುವ ಪ್ರವೃತ್ತಿಯನ್ನು ವಿರೋಧಿಸಲೇಬೇಕು.

ಇವರಿಬ್ಬರು ಈ ರೀತಿಯೆಲ್ಲ ಮಾತನಾಡಿರುವುದಕ್ಕೆ ಸ್ಪೂರ್ತಿ ಯಾರಿರಬಹುದೆಂದು ಹುಡುಕಿದರೆ ಅದು ಮತ್ಯಾರೂ ಅಲ್ಲ ಭಕ್ತಾಸುಗಳನ್ನು ಬೆಳೆಸಿ ಪೋಷಿಸುತ್ತಿರುವ ನಮ್ಮಲ್ಲೆರ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು! ವಿರೋಧಿಗಳ ವಿರುದ್ಧ ಮೊನಚಿನ ಭಾಷಣ ಮಾಡುವುದರಲ್ಲಿ ಮೋದಿಯವರದು ಎತ್ತಿದ ಕೈ. ಅವರ ಭಾಷಣ ಕುಟ್ಟುವ ಉಮೇದಿ ಎಷ್ಟರವರೆಗಿದೆಯೆಂದರೆ ವಿದೇಶಿ ನೆಲದಲ್ಲಿ ನಿಂತಾಗಲೂ ಭಾರತದಲ್ಲಿನ ರಾಜಕೀಯ ವಿರೋಧಿಗಳ ಬಗ್ಗೆಯೇ ಮಾತನಾಡುತ್ತಾರೆ. ವಿದೇಶದಲ್ಲಿ ದೇಶದ ಮಾನ ತೆಗೆಯುತ್ತಿದ್ದೇನೆ ಎನ್ನುವುದರ ಅರಿವಿಲ್ಲದೆ ನೆಹರೂ ಬಗ್ಗೆ, ಅವರ ಕುಟುಂಬದ ಬಗ್ಗೆ, ರಾಹುಲ್ ಗಾಂಧಿಯ ಬಗ್ಗೆಯೆಲ್ಲ ಅನವಶ್ಯಕವಾಗಿ ಮಾತನಾಡಿ ಬಂದಿದ್ದಾರೆ. ಜಪಾನಿನಲ್ಲಿ ಭಗವದ್ಗೀತೆಯನ್ನು ಕೊಡುವಾಗ, ವಿದೇಶದಲ್ಲಿ ಸಂಸ್ಕೃತ ಶ್ಲೋಕ ಹಾಡಿದ ಮಕ್ಕಳನ್ನು ಹೊಗಳುವಾಗ ಭಾರತದ ಜಾತ್ಯತೀತರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ದೇಶದ ಮಾನ ತೆಗೆಯುವುದಕ್ಕೆ ಏನೆಲ್ಲ ಒದರಬೇಕೋ ಅದರ ಬಗ್ಗೆ ಒದರಿದ್ದಾರೆ. 

ಭಾರತವೀಗ 'ಸೂಪರ್ ಪವರ್' ಆಗುತ್ತಿರುವ ಕಾರಣ ದೇಶದೊಳಗಿನ ರಾಜಕೀಯ ದ್ವೇಷವನ್ನು ವಿದೇಶದಲ್ಲೂ ತೋರ್ಪಡಿಸಬೇಕು ಎಂದು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಕಿಕೊಟ್ಟ ಹಾದಿಯಲ್ಲೇ ಕಾಂಗ್ರೆಸ್ಸಿನ ಸಲ್ಮಾನ್ ಖುರ್ಷಿದ್ ಮತ್ತು ಮಣಿಶಂಕರ್ ಅಯ್ಯರ್ ಸಾಗುತ್ತಿದ್ದಾರೆ. ಭಾರತದ ಮಾನ? ಅಯ್ಯೋ ಬುಡಿ ಮಾನ ಮರ್ಯಾದೆ ಎಲ್ಲಾ ಕಟ್ಕೊಂಡು ಏನ್ ಮಾಡ್ತೀರ... ಪಬ್ಲಿಸಿಟಿ ಮುಖ್ಯ.

ನವೆಂ 17, 2015

ಮಾತು ಬೇಕಾಗಿಲ್ಲ

ಕು.ಸ.ಮಧುಸೂದನ್
ಮೌನವಾಗಿದ್ದ ಬುದ್ದ
ಮಾತಾಡಲಿಲ್ಲ
ನಾಲ್ಕು ಮನೆಗಳ ಬಗ್ಗೆ
ಎರಡು ದಾರಿಗಳ ಬಗ್ಗೆ
ಕಾಯುತ್ತಾ ಕೂತಿದ್ದರು ಶಿಷ್ಯರು
ಮಳೆಗೆ ಕಾದಿದ್ದ ಇಳೆಯ ಹಾಗೆ
ಮುಗುಳ್ನಕ್ಕ
ಬುದ್ದ
ಎದ್ದ
ಅರ್ಥವಾಯಿತೇ?
ಎಲ್ಲರಿಗೂ
ಎಂದ
ಎಲ್ಲ ಅಡಗಿರುವುದಿಲ್ಲಿ
ಹೂವು ಅರಳುವ ಗಳಿಗೆಯಲ್ಲಿ
ಎಲ್ಲವೂ ಚಣಮಾತ್ರ ಎನ್ನುವ ಸತ್ಯದಲ್ಲಿ
ಹೇಳಬೇಕಾದ್ದನ್ನು
ಹೇಳದೆಯೇ ಹೇಳಿದ
ಅರ್ಥ ಮಾಡಿಸಿದ.

ಅಸಹಿಷ್ಣುತೆಯ ವಿರುದ್ದ ಪ್ರಗತಿಪರರ ಗೆಲುವು!

ಕು.ಸ.ಮಧುಸೂದನ್
ಅಂತೂ ನರೇಂದ್ರಮೋದಿಯ ನಾಯಕತ್ವದಲ್ಲಿ ಮತಾಂಧತೆಯಿಂದ ಹೂಂಕರಿಸುತ್ತಿದ್ದ ಬಾಜಪ, ಬಿಹಾರದ ವಿದಾನಸಭಾ ಚುನಾವಣೆಯಲ್ಲಿ ಬಾರೀ ಸೋಲು ಕಂಡಿದೆ. ಬಿಹಾರದ ವಿದಾನಸಭಾ ಚುನಾವಣೆಯಲ್ಲಿನ ಬಾಜಪದ ಸೋಲು,ದೇಶದಾದ್ಯಂತ ತೀವ್ರಗೊಂಡಿದ್ದ ಅಸಹಿಷ್ಣುತೆಯ ವಿರುದದ್ದ ಚಳುವಳಿಗೆ ದೊರೆತ ದೊಡ್ಡ ಗೆಲುವು ಎಂದು ಬಣ್ಣಿಸಿದರೆ ತಪ್ಪೇನಿಲ್ಲವೆನಿಸುತ್ತೆ. ಬಿಹಾರದ ವಿದಾನಸಭೆಗೆ ಚುನಾವಣಾ ಪ್ರಕ್ರಿಯೆ ಶುರುವಾದ ಸಮಯಕ್ಕೆ ಸರಿಯಾಗಿ ಪ್ರಾರಂಭವಾದ ಅಸಹಿಷ್ಣುತೆಯ ವಿರುದ್ದದ ಚಳುವಳಿ ಚುನಾವಣಾ ಪಲಿತಾಂಶ ಬಂದ ದಿನಕ್ಕೆ ಸರಿಯಾಗಿ ಗೆಲುವಿನ ಮೊದಲ ಮೆಟ್ಟಿಲನ್ನು ಏರಿದೆ.

ಈ ಚಳುವಳಿಯ ಭಾಗವಾಗಿ ಪ್ರಾರಂಭವಾದ ಪ್ರಶಸ್ತಿ ವಾಪಾಸು ಮಾಡುವ ನಮ್ಮ ಲೇಖಕರ, ಕಲಾವಿದರ, ವಿಜ್ಞಾನಿಗಳ ಮತ್ತು ಜಾತ್ಯಾತೀತ ತತ್ವದಲ್ಲಿ ನಂಬಿಕೆಯಿಟ್ಟ ಬಹುತೇಕ ಪ್ರಗತಿಪರರ ನಿಲುವುಗಳು, ವಿಚಾರಗಳು ಬಿಹಾರದ ಜನರನ್ನು ತಲುಪಿರುವುದರಲ್ಲಿ ಅನುಮಾನವೇನಿಲ್ಲ. ಕರ್ನಾಟಕದ ಕಲಬುರ್ಗಿಯವರ ಹತ್ಯೆಯಿಂದ ಶುರುವಾದ ಅಸಹಿಷ್ಣುತೆಯ ಘಟನೆಗಳಲ್ಲಿ ಬಹಳಷ್ಟು ಬಿಹಾರಕ್ಕೆ ತುಂಬಾ ಹತ್ತಿರದಲ್ಲ್ಲಿಯೇ ನಡೆದವು. ದಾದ್ರಿಯ ಹತ್ಯೆ, ಹರಿಯಾಣದಲ್ಲಿ ದಲಿತ ಮಕ್ಕಳನ್ನು ಜೀವಂತ ಸುಟ್ಟ ಪ್ರಕರಣಗಳನ್ನು ಬಿಹಾರದ ಜನ ತುಂಬಾ ಆಸಕ್ತಿಯಿಂದ, ಆತಂಕದಿಂದ ಗಮನಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾಜಪ ಅಧಿಕಾರಕ್ಕೇರಿದ ಮರುಗಳಿಗೆಯಿಂದಲೇ ಆರಂಭಗೊಂಡ ಅಸಹಿಷ್ಣುತೆಯ ಘಟನಾವಳಿಗಳು ಆರ್ಥಿಕವಾಗಿ ತೀರಾ ಹಿಂದುಳಿದ ಬಿಹಾರದ ಜನತೆಯನ್ನು ಕಂಗೆಡಿಸಿದ್ದರೆ ಅಚ್ಚರಿಯೇನಿಲ್ಲ. ಯಾಕೆಂದರೆ ಈ ಪ್ರಶಸ್ತಿಯ ವಾಪಸಾತಿ ಚಳುವಳಿಯ ಜೊತೆಗೆ ಚುನಾವಣಾ ಪ್ರಚಾರದಲ್ಲಿ ಬಾಜಪದ ನಿಜವಾದ ಮುಖವಾದ ಸಂಘಪರಿವಾರವು ಮೀಸಲಾತಿಯನ್ನು ಪುನರ್ ಪರಿಶೀಲನೆಗೊಳಿಸುವ ಬಗ್ಗೆ ಮಾತಾಡಿತ್ತು. ಅತ್ಯಂತ ಹಿಂದುಳಿದ ಜಾತಿಗಳಿರುವ ಬಿಹಾರದ ಜನತೆಯ ಮಟ್ಟಿಗೆ ಮೀಸಲಾತಿಯ ಹಿಂತೆಗೆತ ಎಂದರೆ ಅದು ಅವರ ಇತಿಶ್ರೀ ಇದ್ದಂತೆ ಎನ್ನುವುದು ಬಿಹಾರದ ಜನತೆಗೆ ಮನವರಿಕೆಯಾಗಿತ್ತು. ಇದರ ಜೊತೆಗೆ ಚುನಾವಣೆಯ ಪ್ರಚಾರದಲ್ಲಿ ಬಾಜಪ ಅನವಶ್ಯಕವಾಗಿ ಹಿಂದುಳಿದ ಜಾತಿಯವರನ್ನು, ಮುಸ್ಲಿಮರನ್ನು ಓಲೈಸುವ ನಾಟಕವಾಡುತ್ತ ಮೇಲ್ಜಾತಿಯ ಮತಗಳನ್ನು ದ್ರುವೀಕರಿಸುವ ಕೆಲಸಕ್ಕೆ ಕೈ ಹಾಕಿತ್ತು. 

ಬಹುಶ: ಇಂತಹದೊಂದು ಸನ್ನಿವೇಶದಲ್ಲಿ ಬಿಹಾರದ ಮತದಾರರು ಸಂಪೂರ್ಣವಾಗಿಯಲ್ಲದಿದ್ದರೂ ಒಂದಿಷ್ಟಾದರು, ಪ್ರಶಸ್ತಿ ವಾಪಸಾತಿ ಚಳುವಳಿಯ ಹಿಂದಿನ ವಿಚಾರವಾದಿಗಳ ನೈಜ ಕಾಳಜಿಯ ಬಗ್ಗೆ ಅರ್ಥ ಮಾಡಿಕೊಂಡು ಬಾಜಪದ ವಿರುದ್ದ ತಮ್ಮ ಮತ ಚಲಾಯಿಸಿದ್ದಾರೆ ಅನಿಸುತ್ತೆ.

ಏನೇ ಆಗಲಿ ಒಂದಂತೂ ಈ ಚುನಾವಣೆಯ ಪಲಿತಾಂಶ ಸ್ಪಷ್ಟ ಪಡಿಸಿದೆ: ಅದೆಂದರೆ ಅಸಹಿಷ್ಣುತೆಯ ವಿರುದದ್ದ ಚಳುವಳಿಯ ಭಾಗವಾಗಿ, ಲೇಖಕರು ತಮ್ಮ ಪ್ರಶಸ್ತಿಯನ್ನು ವಾಪಾಸು ಮಾಡಲು ತೊಡಗಿದಾಗ ವಿರೋಧಿಸಿದ ಬಲಪಂಥೀಯ ಶಕ್ತಿಗಳಿಗೆ ಈ ಚಳುವಳಿಯ ಪರಿಣಾಮ ಎಷ್ಟು ತೀವ್ರವಾಗಿರಬಹುದೆಂಬುದು ಅರ್ಥವಾಗಿರುತ್ತದೆಯೆಂದು ನಂಬಿರುತ್ತೇನೆ. 

ನವೆಂ 14, 2015

ಈ ಸಾವಿನ ಹೊಣೆಯನ್ನು ಯಾರು ಹೊತ್ತುಕೊಳ್ಳುತ್ತಾರೆ?

ಸಾಬಿ ಸತ್ತರೆ ಹಿಂದೂ ಸಂಘಟನೆಗಳ ಕೃತ್ಯ, ಹಿಂದೂ ಸತ್ತರೆ ಮುಸ್ಲಿಂ ಸಂಘಟನೆಗಳ ಕೃತ್ಯ ಎಂದು ಕಣ್ಣುಮುಚ್ಚಿ ಶರಾ ಬರೆದುಬಿಡುವವರಿಗೆ ಈ ಪ್ರಕರಣವೊಂದು ಒಗಟಾಗಿಬಿಟ್ಟಿದೆ. ಸಮೀವುಲ್ಲಾ ಮತ್ತು ಹರೀಶ್ ಕ್ರಿಕೆಟ್ ಆಡಿ ವಾಪಸ್ಸಾಗುವಾಗ ಅಂಗಡಿಯೊಂದರ ಬಳಿ ಕೂಲ್ ಡ್ರಿಂಕ್ಸ್ ಕುಡಿಯುವಾಗ ಗುಂಪೊಂದು ಬಂದು ಸಮೀವುಲ್ಲಾನ ಮೇಲೆ ದಾಳಿ ನಡೆಸುತ್ತಾರೆ, ತಡೆಯಲು ಬಂದ ಹರೀಶನ ಮೇಲೆಯೂ ದಾಳಿ ನಡೆಸುತ್ತಾರೆ. ಹರೀಶ ಹತನಾಗುತ್ತಾನೆ. 
ಮುಸ್ಲಿಂ ಮತ್ತು ಹಿಂದೂಗಳಿಬ್ಬರ ಮೇಲೆಯೂ ಹಲ್ಲೆಯಾಗಿಬಿಟ್ಟಿದೆ. ಹಲ್ಲೆ ನಡೆಸಿದ್ದು ಹಿಂದೂ ಸಂಘಟನೆಯೋ ಮುಸ್ಲಿಂ ಸಂಘಟನೆಯೋ ಇನ್ನೂ ಗೊತ್ತಾಗಿಲ್ಲ. ಹರೀಶನ ಮನೆಯೀಗ ಅನಾಥವಾಗಿದೆ. 
ಅಂದಹಾಗೆ ಉಳಿದೆಲ್ಲೆಡೆ ಟಿಪ್ಪು ಸಂಬಂಧಿತ ಗಲಭೆಗಳು ಕಡಿಮೆಯಾಗುತ್ತಿದ್ದರೆ ದಕ್ಷಿಣ ಕನ್ನಡದಲ್ಲಿ ಬಿಗುವಿನ ವಾತಾವರಣವೇ ಇದೆಯಂತೆ. ನೆನಪಿರಲಿ ದಕ್ಷಿಣ ಕನ್ನಡದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರವೊಂದನ್ನು ಬಿಟ್ಟು ಬೇರೆಲ್ಲ ಕಡೆಯೂ ಬಿಜೆಪಿ ಸೋಲನ್ನನುಭವಿಸಿತ್ತು. ಅವರಿಗಿದು ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ಮಾರ್ಗ. ಮೃದು ಹಿಂದುತ್ವವನ್ನಾಚರಿಸುವ ಕಾಂಗ್ರೆಸ್ಸಿಗರು ಮೌನವಾಗೇ ಈ ಘಟನೆಗಳನ್ನು ಒಪ್ಪಿಬಿಡುತ್ತಾರೆ. ಇವರ ಜೊತೆಗೆ ಇವರಿಗಿಂತಲೂ ಹೀನವಾಗಿ ವರ್ತಿಸುವುದಕ್ಕೆ ಪಿ.ಎಫ್.ಐನಂತಹ ಮುಸ್ಲಿಂ ಸಂಘಟನೆಗಳಿವೆ. ಅವರಿಗೆ ಮುಸ್ಲಿಂ ಮತಗಳನ್ನು ಒಟ್ಟುಗೂಡಿಸುವ ಕೆಲಸ. ಮತಗಳ ಒಟ್ಟುಗೂಡುವಿಕೆಯ ಸಮಯದಲ್ಲಿ ಮಾನವೀಯತೆ ಮೂರಾಬಟ್ಟೆಯಾದರೆ ಯಾರಿಗೇನಾಗಬೇಕು ಹೇಳಿ.