ಆಗ 11, 2015

ಲಜ್ಜೆಗೆಟ್ಟ ಕಾಂಗ್ರೆಸ್ಸಿನಿಂದ ಪಂಚ ಭಾಷಾ ಪ್ರಣಾಳಿಕೆ.

Dr Ashok K R
ಬಿಬಿಎಂಪಿ ಚುನಾವಣೆಯನ್ನು ಮುಂದಕ್ಕಾಕುವ ಸರಕಾರದ ಎಲ್ಲಾ ಪ್ರಯತ್ನಗಳನ್ನೂ ನ್ಯಾಯಾಲಯಗಳು ತಳ್ಳಿಹಾಕಿದ ಪರಿಣಾಮವಾಗಿ ಈ ತಿಂಗಳಾಂತ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಪಕ್ಷಗಳ ರಾಜಕೀಯ ಚಟುವಟಿಕೆಯೂ ಹೆಚ್ಚಾಗಿದೆ. ನಿನ್ನೆ ಕಾಂಗ್ರೆಸ್ ಪಕ್ಷವು ಬಿಬಿಎಂಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಬಿಬಿಎಂಪಿಯನ್ನು ಮೂರಾಗಿ ಐದಾಗಿ ವಿಭಜಿಸಲು ವಿಪರೀತವಾಗಿ ಪ್ರಯತ್ನಪಟ್ಟು ಸದ್ಯಕ್ಕೆ ವಿಫಲವಾಗಿರುವ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯನ್ನು ಕನ್ನಡ, ಇಂಗ್ಲೀಷ್, ಉರ್ದು, ತಮಿಳು, ತೆಲುಗು ಭಾಷೆಗಳಲ್ಲಿ ಪ್ರಕಟಮಾಡಿ ವೋಟುಗಳಿಗೋಸ್ಕರ ಬೆಂಗಳೂರಿನಲ್ಲಿ ಕನ್ನಡವನ್ನು ಇಲ್ಲವಾಗಿಸುವುದಕ್ಕೂ ತಾನು ಹೇಸುವುದಿಲ್ಲ ಎಂದು ತೋರಿಸಿಕೊಟ್ಟಿದೆ. ಸಾಮಾನ್ಯವಾಗಿ ಪ್ರಣಾಳಿಕೆಯನ್ನು ಕನ್ನಡದಲ್ಲಿ ಮತ್ತು ನಮಗೆ ಬೇಕೋ ಬೇಡವೋ ಅನಿವಾರ್ಯವಾಗಿಬಿಟ್ಟಿರುವ ಇಂಗ್ಲೀಷಿನಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಸಿಲಿಕಾನ್ ವ್ಯಾಲಿ ಎಂದು ಹೆಸರು ಗಳಿಸಿಕೊಂಡ ಕರ್ನಾಟಕದಲ್ಲಿ ಅನ್ಯಭಾಷಿಕರ ಸಂಖೈ ಹೆಚ್ಚುತ್ತಲೇ ಇರುವುದು ಸತ್ಯ. ಜೊತೆಗೆ ಬೆಂಗಳೂರು ತಮಿಳುನಾಡು ಮತ್ತು ಆಂಧ್ರ ಗಡಿಗಳಿಗೆ ಹೊಂದಿಕೊಂಡಂತೆಯೇ ಇರುವುದರಿಂದ ಸಹಜವಾಗಿ ಅನೇಕ ಪ್ರದೇಶಗಳಲ್ಲಿ ತೆಲುಗು ಮತ್ತು ತಮಿಳು ಭಾಷಿಕರು ನೆಲೆಸಿದ್ದಾರೆ. ಅನ್ಯ ರಾಜ್ಯಗಳಿಂದ ಬಂದವರು ಕನ್ನಡ ಕಲಿಯುವಂತೆ ಪ್ರೇರೇಪಿಸಬೇಕಾದ ಕರ್ನಾಟಕ ಸರಕಾರ ಅವರ ವೋಟುಗಳನ್ನು ಪಡೆಯಲೋಸುಗ ಅವರ ಭಾಷೆಯಲ್ಲಿಯೇ ಪ್ರಣಾಳಿಕೆ ಬಿಡುಗಡೆ ಮಾಡುವಂತಹ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿರುವುದು ಸರಿಯೇ? 
ಆಂಧ್ರದ ಒವೈಸಿ, ಚಂದ್ರಬಾಬು ನಾಯ್ಡು ತಮಿಳುನಾಡಿನ ಜಯಲಲಿತಾ ತಮ್ಮ ತಮ್ಮ ಪಕ್ಷವನ್ನು ಬಿಬಿಎಂಪಿ ಚುನಾವಣೆಗೆ ಅಣಿಗೊಳಿಸುತ್ತಿದೆಯಂತೆ ಎಂಬ ಸುದ್ದಿಗಳು ಕಾಂಗ್ರೆಸ್ಸಿನ ಈ ನಿರ್ಧಾರಕ್ಕೆ ಕಾರಣವಾಯಿತಾ? ಕನ್ನಡಿಗರ ರಾಷ್ಟ್ರೀಯ ಪಕ್ಷಗಳ ಮೇಲಿನ ಪ್ರೇಮದಿಂದ ಹಿಂದಿ ಹೇರಿಕೆಯೆಂಬುದು ನಿರಂತರವಾಗಿಬಿಟ್ಟಿದೆ. ಈಗ ಬೆಂಗಳೂರಿನಲ್ಲಿ ಅನ್ಯಭಾಷಾ ಪ್ರಣಾಳಿಕೆಯನ್ನು ಕಣ್ಣು ಕಣ್ಣು ಬಿಟ್ಟು ನೋಡುವ ಸರದಿ ಬೆಂಗಳೂರಿಗರದು. ಬಿಬಿಎಂಪಿ ವಿಭಜನೆಯಾಗುವ ಮುನ್ನವೇ ಭಾಷಾ ವಿರೋಧಿಯಾಗಿ ವರ್ತಿಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಪ್ಪಿತಪ್ಪಿ 'ಆಡಳಿತದ' ಹೆಸರಿನಲ್ಲಿ ಬಿಬಿಎಂಪಿಯನ್ನು ವಿಭಜನಗೊಳಿಸಿಬಿಟ್ಟರೆ ಯಾವ ರೀತಿ ವರ್ತಿಸಬಹುದು? ತೆಲುಗು ಭಾಷಿಕರು ಹೆಚ್ಚಿರುವ ಪ್ರದೇಶದಲ್ಲಿ ಕೇವಲ ತೆಲುಗು ಪ್ರಣಾಳಿಕೆ, ತಮಿಳರು ಹೆಚ್ಚಿರುವ ಕಡೆ ತಮಿಳು ಪ್ರಣಾಳಿಕೆ, ಉರ್ದು ಭಾಷಿಕರಿರುವ ಕಡೆ (ಇಲ್ಲಿರುವ ಮುಸ್ಲಿಮರು ಮಾತನಾಡುವುದು ಉರ್ದುವಾ?) ಉರ್ದು ಪ್ರಣಾಳಿಕೆಯನ್ನಷ್ಟೇ ಪ್ರಕಟಿಸಿ ಕನ್ನಡವನ್ನೇ ಮೂಲೆಗುಂಪು ಮಾಡಿಬಿಡುವ ದಿನಗಳು ದೂರವಿಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮರಾಠಿ ಪಕ್ಷಗಳು ನಗರಸಭೆಗಳಲ್ಲಿ ನಿರ್ಣಯ ತೆಗೆದುಕೊಂಡಂತೆ ಮುಂದೊಂದು ದಿನ ಬೆಂಗಳೂರಿನ ಈ ಭಾಗವನ್ನು ಆಂಧ್ರಕ್ಕೆ ತಮಿಳುನಾಡಿಗೆ ಸೇರಿಸಿಬಿಡಿ ಎಂಬ ನಿರ್ಣಯಗಳೂ ಕೇಳಿ ಬರಬಹುದು. 
ಒಟ್ಟಿನಲ್ಲಿ ಕನ್ನಡ, ಕರ್ನಾಟಕ ಎಂದು ಎದೆತಟ್ಟಿ ಹೇಳುತ್ತಾ ದೇಶವನ್ನೇ ಎದುರುಹಾಕಿಕೊಳ್ಳುವ ಪಕ್ಷವೊಂದು ಕರ್ನಾಟಕದಲ್ಲಿ ಇಲ್ಲದ ಫಲಗಳನ್ನು ನಾವೀಗ ನೋಡುತ್ತಿದ್ದೇವೆ. ದೇಶ ಮೊದಲು ಎಂಬ 'ವಿಶಾಲ ಮನೋಭಾವವನ್ನು' ತೊರೆದು ರಾಜ್ಯ ಮೊದಲು ಭಾಷೆ ಮೊದಲು ಎಂಬ 'ಸಂಕುಚಿತ ಮನೋಭಾವವನ್ನು' ಬೆಳೆಸಿಕೊಳ್ಳದಿದ್ದರೆ ಈ ರಾಜಕಾರಣಿಗಳ ಸೋಗಲಾಡಿತನದಿಂದ ಕನ್ನಡಕ್ಕೆ ಚೇತರಿಸಿಕೊಳ್ಳಲಾಗದ ಪೆಟ್ಟು ಬೀಳುತ್ತದೆ.

4 ಕಾಮೆಂಟ್‌ಗಳು: