ಡಿಸೆಂ 9, 2019

ಒಂದು ಬೊಗಸೆ ಪ್ರೀತಿ - 43

ಡಾ. ಅಶೋಕ್.‌ ಕೆ. ಆರ್.‌
“ಎಷ್ಟೊಂದ್‌ ಬದಲಾಗಿಬಿಟ್ಯೆ” ಎಂದವನ ದನಿಯಲ್ಲಿ ನಿಜಕ್ಕೂ ನೋವಿತ್ತು. ಬದಲಾಗಿಯೇ ಇಲ್ಲ ಎಂದು ಸುಳ್ಳಾಡುವಂತೆಯೂ ಇರಲಿಲ್ಲ. ನನ್ನಲ್ಲಿನ ಬದಲಾವಣೆ ನನ್ನ ಆತ್ಮ ಸಂಗಾತಿಗಲ್ಲದೇ ಇನ್ಯಾರಿಗೆ ತಿಳಿಯಲು ಸಾಧ್ಯ? ಬಯಸಿ ಬಯಸಿ ಬದಲಾಗಿದ್ದೇನಲ್ಲ. ಗೆಟ್‌ ಟುಗೆದರ್‌ನಲ್ಲಿ ಅವನಾಡಿದ ಮಾತುಗಳೇ ಅವನೊಡನೆ ಹರಟುವಾಗ ಮಾತನಾಡುವಾಗ ನೆನಪಿಗೆ ಬರುತ್ತಿತ್ತು. ನಮ್ಮಪ್ಪ ಅಮ್ಮನ ಪ್ರಕಾರ ನಾ ಕೆಟ್ಟ ಹುಡುಗಿ, ಪರಶುವಿನ ಪ್ರಕಾರ ನಾ ಮೋಸ ಮಾಡಿದ ಹುಡುಗಿ, ರಾಜೀವೆಂಗೊ ನನ್ನ ಒಪ್ಪಿ ಮೆಚ್ಚಿ ಮದುವೆಯಾಗಿದ್ದಾರೆ. ನನಗೆ ಹಿಂಗೆ ಸಾಗರನ ಜೊತೆಗೆ ಸಂಬಂಧವಿದೆ ಎಂದು ತಿಳಿದರೆ ಅವರಿಗೂ ನಾ ದೂರದವಳಾಗುತ್ತೇನೆ. ಸಾಗರನ ಹತ್ತಿರವಾಗುವುದಕ್ಕೆ ನಾ ರಾಜೀವನಿಂದ ದೂರಾದರೂ ನಡಿದೀತು…. ನಾಳೆ ಹುಟ್ಟುವ ಮಗುವಿನ ಕಣ್ಣಲ್ಲಾದರೂ ನಾ ರವಷ್ಟು ಒಳ್ಳೆಯವಳಂತೆ ತೋರಬೇಕಲ್ಲವೇ? ನೀ ಸರಿ ಇಲ್ಲ ಅಂತ ಆ ಮಗುವಿನ ಬಾಯಲ್ಲಿ ಕೇಳುವಂತ ದಿನ ಬರಬಾರದಲ್ಲವೇ? ನಿಧಾನಕ್ಕೆ ನಿಧನಿಧಾನಕ್ಕೆ ಸಾಗರನಿಂದ ದೂರಾಗುತ್ತಿದ್ದೆ. ಬಿಡುವಿದ್ದರೂ ಅವನ ಬಹಳಷ್ಟು ಮೆಸೇಜುಗಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಕೇಳಿದರೆ ಬ್ಯುಸಿ ಕಣೋ ಎಂದುಬಿಡುತ್ತಿದ್ದೆ. ಕೆಲಸ ಮುಗಿಸಿ ಲೈಬ್ರರಿಯಲ್ಲಿ ಒಂದಷ್ಟು ಓದಿ ಮನೆಗೆ ಬಂದರೆ ಅಗಾಧ ಸುಸ್ತು. ಹಸಿವು. ಅಡುಗೆ ಮಾಡಿ ತಿಂದು ಪಾತ್ರೆ ತೊಳೆದು ಮಲಗಿದರೆ ಸಾಕು ಎನ್ನುವಷ್ಟು ಸುಸ್ತು. ಸುಸ್ತು ಕಣೋ ಎಂದ್ಹೇಳಿದಾಗ ಮುನಿಸೆಲ್ಲವನ್ನೂ ಬಿಟ್ಟು ಹೌದೇನೋ ರೆಸ್ಟ್‌ ಮಾಡು ಎಂದನ್ನುತ್ತಿದ್ದ. 

ಕೆಲವೊಮ್ಮೆ ದಿನಗಟ್ಟಲೆ ನನ್ನಿಂದ ಸರಿಯಾದ ಪ್ರತಿಕ್ರಿಯೆ ಸಿಗದಿದ್ದಾಗ ಮುನಿಯುತ್ತಿದ್ದ. “ನಿನಗೆ ಬೇಕಿದ್ದಾಗ ಬ್ಯುಸಿ ಇರ್ತಿರಲಿಲ್ಲ. ನಿನಗೆ ನನ್ನ ಅವಶ್ಯಕತೆ ಇದ್ದಾಗ ಸುಸ್ತಿರುತ್ತಿರಲಿಲ್ಲ. ಈಗ ನನ್ನ ಅವಶ್ಯಕತೆ ಅಷ್ಟಾಗಿ ಇಲ್ಲವೇನೋ ಅಲ್ಲವಾ. ಅದಿಕ್ಕೆ ಬ್ಯುಸಿ, ದಿನದ ಇಪ್ಪತ್ತನಾಲ್ಕು ಘಂಟೆಯೂ ಸುಸ್ತು. ಈ ಬ್ಯುಸಿ ಸುಸ್ತಿನ ನಡುವೆ ಫೇಸ್‌ ಬುಕ್ಕಲ್ಲಿ ದಿನಕ್ಕತ್ತು ಪೋಸ್ಟು ಹಾಕಲು ಮಾತ್ರ ಭಯಂಕರ ಪುರುಸೊತ್ತಿರುತ್ತೆ” ಎಂದು ಹಂಗಿಸುತ್ತಿದ್ದ. ಮಗುವಿಗೋಸ್ಕರ ಸೆಕ್ಸಿಗೋಸ್ಕರ ನನ್ನನ್ನು ಬಳಸಿಕೊಂಡಳಿವಳು ಎಂಬ ಭಾವನೆ ಅವನಲ್ಲಿ ನೆಲೆಸಲಾರಂಭಿಸಿತ್ತು. ಮೊದಲಾಗಿದ್ದರೆ ಹಂಗಲ್ವೋ ಹಿಂಗೆ ಎಂದು ಸಮಾಧಾನ ಪಡಿಸುತ್ತಿದ್ದೆ, ಈಗ್ಯಾಕೋ ಸಮಾಧಾನಿಸಿ ಏನಾಗಬೇಕು ಎಂದು ಸುಮ್ಮನಾಗುತ್ತಿದ್ದೆ. ಇದ್ಯಾಕ್‌ ಹಿಂಗ್‌ ಮಾಡ್ದೆ, ಇದ್ಯಾಕ್‌ ಹಂಗ್‌ ಮಾಡ್ದೆ, ನನ್ನನ್ಯಾಕೆ ಇಷ್ಟೊಂದು ಅವಾಯ್ಡ್‌ ಮಾಡ್ತಿದ್ದೀಯ ಅಂತ ಪ್ರಶ್ನೆಗಳ ಸುರಿಮಳೆ ಬರಲಾರಂಭಿಸುತ್ತಿದ್ದಂತೆ ಮೌನದ ಮೊರೆ ಹೋಗಿಬಿಡುತ್ತಿದ್ದೆ. ಅದವನಿಗೆ ಮತ್ತಷ್ಟು ಕಿರಿಕಿರಿ ಉಂಟುಮಾಡುತ್ತಿತ್ತು, “ನನ್ನನ್ನು ಬಳಸಿ ಬಿಸಾಡಿದ್ದಕ್ಕೆ ಥ್ಯಾಂಕ್ಸ್‌” ಅಂತೊಂದು ಮೆಸೇಜು ಕಳಿಸಿ ಸುಮ್ಮನಾಗುತ್ತಿದ್ದ. ಒಂದು ದಿನದ ಮಟ್ಟಿಗೆ. ಮತ್ತೆ ಮೆಸೇಜು ಮಾಡುತ್ತಿದ್ದ. ಅಥವಾ ಕೆಲವೊಮ್ಮೆ ನನಗೇ ತುಂಬಾ ಸುಸ್ತಾದಾಗ, ಮನಸ್ಸಲ್ಲಿ ಮಗುವಿನ ಕುರಿತು, ಡೆಲಿವರಿಯ ಕುರಿತು ವಿನಾಕಾರಣ ದಿಗಿಲುಗೊಂಡಾಗ ಅವನಿಗೆ ಮೆಸೇಜಾಕುತ್ತಿದ್ದೆ. ನನ್ನ ಮೇಲಿನ ಅಷ್ಟೂ ಬೇಸರ ಕೋಪ ನುಂಗಿಕೊಂಡವನಂತೆ ಸಮಾಧಾನಿಸುತ್ತಿದ್ದ. ಎರಡು ಮೂರು ತಿಂಗಳಿಂದ ಇದೇ ಪುನರಾವರ್ತನೆ. ಕೆಲವೊಮ್ಮೆ ನನ್ನ ವರ್ತನೆಗೆ ನನಗೇ ಬೇಸರವಾಗುತ್ತಿತ್ತು, ನಿಜಕ್ಕೂ ಇವನನ್ನು ಬಳಸಿಕೊಂಡುಬಿಟ್ಟೆನಾ ಅಂತ ಅನುಮಾನ ಮೂಡುತ್ತಿತ್ತು. ಅದರ ಬಗ್ಗೆ ಹೆಚ್ಚು ಯೋಚಿಸದಂತೆ ಮಾಡಿದ್ದು ಗರ್ಭದೊಳಗೆ ಕೈಕಾಲು ಮೂಡಿಸಿಕೊಂಡು ಆಟವಾಡುತ್ತಿದ್ದ ಮಗು. ಮನೆಯಲ್ಲಿರಲಿ, ಕೆಲಸದಲ್ಲಿರಲಿ ನನ್ನ ಯೋಚನೆಯ ಬಹುಭಾಗವನ್ನು ಆವರಿಸಿಕೊಂಡಿದ್ದು ನನ್ನ ಮಗು. ಒಂದು ರಾತ್ರಿ ಮಲಗಿದ್ದ ಹೊತ್ತಿನಲ್ಲಿ ಹೊಟ್ಟೆಯ ಮೇಲೊಂದು ಬಲವಾದ ಏಟು ಬಿದ್ದಂತಾಯಿತು. ಇದೇನ್‌ ರಾಜೀವ್‌ ಯಾವತ್ತೂ ಹಿಂಗ್‌ ಒದೆಯದವರು ಇವತ್ತಿಂಗೆ ಅನ್ಕೊಂಡು ಅವರತ್ತ ತಿರುಗಿ ನೋಡಿದರೆ ಅವರು ನನ್ನ ಕಡೆಗೆ ಬೆನ್ನು ಮಾಡಿಕೊಂಡು ಮಲಗಿದ್ದಾರೆ, ಗೊರಕೆಯ ಸದ್ದು ಜೋರು ಕೇಳ್ತಿದೆ. ಏನೋ ಕನಸು ಬಿದ್ದಿರಬೇಕು ಎಂದುಕೊಂಡು ಮತ್ತೆ ನಿದ್ರೆಗೆ ಜಾರುವಷ್ಟರಲ್ಲಿ ಮತ್ತೊಂದು ಒದೆತ! ಓ ಇದು ಮಗೂದು ಅಂತ ಗೊತ್ತಾಗಿದ್ದೇ ಖುಷಿ ತಡೆಯಲಾಗಲಿಲ್ಲ. ರಾಜೀವನಿಗೆ ಬಲವಂತದಿಂದ ಎಬ್ಬಿಸಿ ವಿಷಯ ತಿಳಿಸಿದರೆ “ಬೆಳೆಯೋ ಮಗು ಒದೀದೆ ಇನ್ನೇನು? ಅದನ್‌ ಹೇಳೋಕ್‌ ನಿದ್ರೆಯಿಂದ ಎಬ್ಬಿಸಬೇಕಿತ್ತಾ” ಎಂದು ಬಯ್ದು ತಿರುಗಿ ಮಲಗಿದರು. ಸಾಗರನಿಗೆ ಮೆಸೇಜಿಸೋಣವೆಂದು ಫೋನ್‌ ಕೈಗೆತ್ತಿಕೊಂಡು ಟೈಪು ಮಾಡಿ ಸೆಂಡ್‌ ಬಟನ್‌ ಒತ್ತದೆ ಡಿಲೀಟ್‌ ಮಾಡಿ ಮಲಗಿದೆ. ಇವೆಲ್ಲ ಹಿಂಗಿಂಗೇ ನಡೀತದೆ ಅಂತ ಮೆಡಿಕಲ್‌ ಅಲ್ಲಿ ಓದಿದ್ರೂ ಮನದಲ್ಲಿ ಪುಳಕ ಮೂಡದೇ ಇರಲಿಲ್ಲ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಡಿಸೆಂ 1, 2019

ಒಂದು ಬೊಗಸೆ ಪ್ರೀತಿ - 42

ಡಾ. ಅಶೋಕ್.‌ ಕೆ. ಆರ್.‌
ತೋರಿಸ್ಕೊಂಡು ಮಾತ್ರೆ ನುಂಗಲಾರಂಭಿಸಿದ ಮೇಲೆ ವಾಂತಿ ಹೆಚ್ಚು ಕಡಿಮೆ ನಿಂತೇ ಹೋಯಿತು ಅನ್ನುವಷ್ಟು ಕಡಿಮೆಯಾಯಿತು. ಊಟ ಇನ್ನೂ ಸರಿ ಸೇರುತ್ತಿರಲಿಲ್ಲ, ಆದರೂ ಮುಂಚಿಗಿಂತ ವಾಸಿ. ಸಂಜೆ ಮನೆಗೆ ಬಂದವಳೇ ಸಾಗರನಿಗೆ ಫೋನ್‌ ಮಾಡಿದೆ. 

ʼಎಷ್ಟೊತ್ಗೋ ಬರ್ತಿ ನಾಳೆʼ ನಾಳೆ ಹುಣಸೂರು ರಸ್ತೆಯಲ್ಲಿರೋ ಸೈಲೆಂಟ್‌ ಶೋರ್ಸ್‌ನಲ್ಲಿ ಗೆಟ್‌ ಟುಗೆದರ್ರು. ಎಪ್ಪತ್ತೆಂಭತ್ತು ಜನ ಬರುವವರಿದ್ದರು. ಮೈಸೂರಲ್ಲಿರುವವರು ಸ್ವಲ್ಪ ಚಟುವಟಿಕೆಯಿಂದ ತೊಡಗಿಸಿಕೊಳ್ಳಬೇಕು ಎಂದಿದ್ದರು. ಈ ಸಲ ಬಿಟ್ಟು ಬಿಡ್ರಪ್ಪ ನನ್ನ, ಹುಷಾರಿಲ್ಲ. ಮುಂದಿನ ಸಲ ಪೂರ್ತಿ ನಾನೇ ನೋಡ್ಕೋತೀನಿ ಬೇಕಿದ್ದರೆ ಎಂದು ಅದೂ ಇದೂ ಜವಾಬ್ದಾರಿ ಒಪ್ಪಿಸಲು ಫೋನಾಯಿಸಿದ್ದ ಗೆಳೆಯರಿಗೆ ತಿಳಿಸಿದ್ದ. 

“ನೀ ಎಷ್ಟೊತ್ತಿಗೆ ಬರ್ತಿ ಅಂತೀಯೋ ಅಷ್ಟೊತ್ತಿಗೆ ಬರ್ತೀನಿ” 

ʼನಾ ಏನ್‌ ಹೇಳೋದು. ಹನ್ನೊಂದರಷ್ಟೊತ್ತಿಗೆ ರೆಸಾರ್ಟಿಗೆ ಬರಬೇಕಂತ ಗ್ರೂಪಲ್ಲಿ ಹಾಕಿದ್ದಾರಲ್ಲ. ಅಷ್ಟೊತ್ತಿಗೆ ಬಾ ರೆಸಾರ್ಟಿಗೆʼ ನಗುತ್ತಾ ಹೇಳಿದೆ. 

“ಹೇ ಹೋಗೇ ಗೂಬೆ. ಎಷ್ಟೊತ್ತಿಗೆ ಸಿಗ್ತಿ ಹೇಳು” 

ʼನಾ ರಜೆ ಹಾಕಿದ್ದೀನಿ. ಬೆಳಿಗ್ಗೆ ಮನೆಗೇ ಬಾ. ಇಲ್ಲೇ ತಿಂಡಿ ತಿನ್ಕೊಂಡು ಅದೂ ಇದೂ ಮಾಡ್ಕಂಡು ಜೊತೇಲೇ ಹೋದರಾಯಿತುʼ 

“ಬರ್ತೀನಿ ಮನೆಗೆ ತಿಂಡಿಗೆ. ಜೊತೇಲೆಲ್ಲ ಬರೋಕಾಗಲ್ಲಪ್ಪ, ನನ್‌ ಫ್ರೆಂಡ್ಸು ಕಾಯ್ತಿರ್ತಾರೆ. ಅವರ ಜೊತೆಗೆ ಒಂದಷ್ಟು ಹರಟೆ ಕೊಚ್ಕಂಡು ಹನ್ನೆರಡರಷ್ಟೊತ್ತಿಗೆ ಬರ್ತೀವಿ ರೆಸಾರ್ಟಿಗೆ” 

ʼಓ. ಹಂಗೆ. ಸರಿ ಬಾ ಎಂಟೂವರೆ ಒಂಭತ್ತರಷ್ಟೊತ್ತಿಗೆʼ 

“ರಾಜೀವ್‌ ಇರ್ತಾರಾ?"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ನವೆಂ 24, 2019

ಒಂದು ಬೊಗಸೆ ಪ್ರೀತಿ - 41

ಡಾ. ಅಶೋಕ್.‌ ಕೆ. ಆರ್.‌
"ಇದು ನನ್ನ ಕೈಲಾಗೋ ಕೆಲಸವಲ್ಲ" ರಾಜೀವನ ಬಾಯಲ್ಲೀ ಮಾತುಗಳು ಬರೋಕೆ ಒಂದು ತಿಂಗಳ ಸಮಯವಾಗಿದ್ದು ಅಚ್ಚರಿಯೇ ಹೊರತು ಅವರ ಮಾತುಗಳಲ್ಲ. ಇಷ್ಟೊಂದ್ ದಿನ ತುರ್ತಿನಲ್ಲಿ ಹಣ ಬರದ ಯೋಜನೆಯೊಂದರಲ್ಲಿ ಅವರು ಶ್ರದ್ಧೆಯಿಂದ ಕೆಲಸ ಮಾಡಿದ್ದೇ ಅಪನಂಬುಗೆ ಮೂಡಿಸುವ ಸಂಗತಿ. ನನ್ನ ನಿರೀಕ್ಷೆಯನ್ನು ಮೀರಿ ಅವರು ನಡೆದುಕೊಳ್ಳಲಿಲ್ಲ ಎಂದು ಸಂಭ್ರಮಿಸಬೇಕೋ, ಯಾವ ಕೆಲಸವನ್ನೂ ಗಮನಕೊಟ್ಟು ಮಾಡದ ಅವರ ಬೇಜವಾಬ್ದಾರಿತನಕ್ಕೆ ಕನಿಕರಿಸಬೇಕೋ ತಿಳಿಯಲಿಲ್ಲ. ತೀರ ಕೆಟ್ಟಾನುಕೆಟ್ಟ ಪದಗಳನ್ನು ಬಳಸಿಕೊಂಡು ಅವರನ್ನು ಹೀಯಾಳಿಸಬೇಕೆಂದು ಹಾತೊರೆಯುತ್ತಿದ್ದ ಮನಸ್ಸಿಗೆ ಸುಳ್ಳು ಸುಳ್ಳೇ ಸಮಾಧಾನ ಮಾಡಿ 'ಹೋಗ್ಲಿ ಬಿಡಿ. ಇದಾಗಲಿಲ್ಲ ಅಂದ್ರೆ ಮತ್ತೇನಾದರೂ ಮಾಡಿದರಾಯಿತು. ಪ್ರಯತ್ನವನ್ನಂತೂ ಮಾಡಿದ್ರಲ್ಲ' 

“ನೀ ಬಂದ್ ಸಂಜೆ ಎರಡ್ ಘಂಟೆ ಕ್ಲಿನಿಕ್ಕಿನಲ್ಲಿ ಕುಳಿತಿದ್ದರೆ ಅದರ ಕತೆಯೇ ಬೇರೆಯಿರ್ತಿತ್ತು" ಇದವರ ಎಂದಿನ ಶೈಲಿ, ಸುತ್ತಿಬಳಸಿ ಕೊನೆಗೆ ಅವರ ವೈಫಲ್ಯಕ್ಕೆ ನಾ ಹೊಣೆಯೇ ಹೊರತು ಅವರಲ್ಲ ಎಂದನ್ನಿಸಿಬಿಡುವುದು. ಸಂಸಾರ ಹಳತಾಗುತ್ತಿದ್ದಂತೆ ಹೇಗೆ ಇಬ್ಬರ ವರ್ತನೆಯೂ ನಿರೀಕ್ಷಿತವಾಗಿಬಿಡ್ತದಲ್ಲ. ಆದರೆ ದೊಡ್ಡ ಜಗಳಗಳಾಗಬೇಕೆ ಹೊರತು ಸಣ್ಣ ಪುಟ್ಟ ಕಿರಿಪಿರಿಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿಬಿಡ್ತದೆ. ನಾ ಏನ್ ಮಾಡಿದಾಗ ಅವರು ಕೋಪಗೊಳ್ಳುತ್ತಾರೆಂದು ನನಗೆ, ಅವರು ಏನು ಮಾಡಿದಾಗ ನನಗೆ ಕೋಪ ಬರ್ತದೆಂದು ಅವರಿಗೆ ತಿಳಿದುಬಿಟ್ಟಿದೆ. ಏನೋ ಜೊತೆಯಲ್ಲಿದ್ದೀವಿ ಅಷ್ಟೇ ಅನ್ನುವ ಭಾವನೆ ನನ್ನಲ್ಲಿ ಬಂದು ಎಷ್ಟು ತಿಂಗಳಾಯಿತು? 

'ಮ್. ಅದ್ ಆಗ್ತಿರಲಿಲ್ಲವಲ್ಲ. ಏನೋ ಪಿಜಿ ಮುಗಿದ ಮೇಲೆ ನೋಡಬಹುದು ಅಷ್ಟೇ'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ನವೆಂ 20, 2019

ಪಕ್ಷಿ ಪ್ರಪಂಚ: ಕೆಂಪು ಟಿಟ್ಟಿಭ.

ಚಿತ್ರ ೧: ಎರೆಹುಳುವಿನ ಬೇಟೆಯಲ್ಲಿ ಕೆಂಪು ಟಿಟ್ಟಿಭ.
ಡಾ. ಅಶೋಕ್. ಕೆ. ಆರ್. 
ನಿನಗಾಗದೇ ಇರೋ ಪಕ್ಷಿ ಯಾವ್ದು ಅಂತ ಯಾರಾದ್ರೂ ಕೇಳಿದ್ರೆ, ನನ್ನ ಮನಸಲ್ಲಿ ಪಟ್ಟಂತ ಮೂಡೋ ಪಕ್ಷಿ ಹೆಸರು ಕೆಂಪು ಟಿಟ್ಟಿಭ! ನನಗೆ ಈ ಪಕ್ಷಿ ಕಂಡರಾಗೋದಿಲ್ಲ ಅನ್ನುವುದಕ್ಕಿಂತಲೂ ಈ ಟಿಟ್ಟಿಭಗಳಿಗೆ ನಮ್ಮನ್ನು ಕಂಡರಾಗೋದಿಲ್ಲ ಅನ್ನೋದು ಸತ್ಯ. ಮನುಷ್ಯರನ್ನು ಕಂಡಾಗ ಪಕ್ಷಿಗಳಿಗೆ ಭಯವಾಗೋದು ಸಹಜವೇ, ಭಯ ಆದರೆ ದೂರ ಹಾರಿ ಹೋಗಲಿ ಬೇಕಿದ್ರೆ! ಆದರೀ ಟಿಟ್ಟಿಭಗಳು ಜೋರು ದನಿಯಲ್ಲಿ ಗಲಾಟೆ ಎಬ್ಬಿಸುತ್ತಾ ಸುತ್ತಮುತ್ತಲಿರುವ ಇನ್ನಿತರೆ ಪಕ್ಷಿಗಳೂ ದೂರ ದೂರಕ್ಕೆ ಹಾರುವಂತೆ ಮಾಡಿಬಿಡುತ್ತವೆ. ಅದಕ್ಕೂ ಕಾರಣವಿದೆ ಅನ್ನಿ.

ಆಂಗ್ಲ ಹೆಸರು: Red wattled lapwing (ರೆಡ್ ವ್ಯಾಟಲ್ಡ್ ಲ್ಯಾಪ್ ವಿಂಗ್)

ವೈಜ್ಞಾನಿಕ ಹೆಸರು: Vanellu Indicus (ವ್ಯಾನೆಲಸ್ ಇಂಡಿಕಸ್)

ಉದ್ದ ನೀಳ ಹಳದಿ ಕಾಲುಗಳನ್ನು ಹೊಂದಿರುವ ಟಿಟ್ಟಿಭಗಳು ಕೆರೆ, ನದಿಯಂಚಿನಲ್ಲಿ, ಗದ್ದೆಯಂಚಿನಲ್ಲಿ ಹೆಚ್ಚಿನ ಸಮಯ ಕಾಣಿಸಿಕೊಳ್ಳುತ್ತವೆ. ಕಂದು ಬಣ್ಣದ ರೆಕ್ಕೆಗಳು ಹರಡಿಕೊಂಡಾಗ ಬಿಳಿ - ಕಪ್ಪು ಬಣ್ಣಗಳನ್ನೂ ಕಾಣಬಹುದು. ಕೆಂಪು ಕೊಕ್ಕು, ಕಣ್ಣಿನ ಮುಂದಿನ ಕೆಂಪಿನ ಸಹಾಯದಿಂದ ಪಕ್ಷಿಯನ್ನು ಸುಲಭವಾಗಿ ಗುರುತಿಸಬಹುದು. ಕೊಕ್ಕಿನಿಂದ ಕೆಳಗೆ ಶುರುವಾಗುವ ಕಪ್ಪು ಬಣ್ಣ ಎದೆಯವರೆಗೂ ಚಾಚಿಕೊಳ್ಳುತ್ತದೆ. ಟೋಪಿ ಹಾಕಿದಂತೆ ತಲೆಯ ಮೇಲಷ್ಟು ಕಪ್ಪು ಬಣ್ಣ, ಅದರ ಎರಡು ಬದಿಯಲ್ಲಿ ಬಿಳಿ ಪಟ್ಟಿ. ಹೆಣ್ಣು ಮತ್ತು ಗಂಡಿನ ನಡುವೆ ವ್ಯತ್ಯಾಸಗಳಿಲ್ಲ.

ನವೆಂ 17, 2019

ಒಂದು ಬೊಗಸೆ ಪ್ರೀತಿ - 40

ಡಾ. ಅಶೋಕ್.‌ ಕೆ. ಆರ್.‌
ಹಿಂಗಿಂಗಾಯ್ತು ಅಂತ ಮೆಸೇಜ್ ಮಾಡಿದೆ. “ಮ್" ಎಂದೊಂದು ಪ್ರತಿಕ್ರಿಯೆ ಕಳಿಸಿದನಷ್ಟೇ. ಅವನಾದರೂ ಏನು ಹೇಳಿಯಾನು? ಏನು ಹೇಳಿದರೂ ಅದರಿಂದ ನನಗುಪಯೋಗವಾಗುವುದು ಅಷ್ಟರಲ್ಲೇ ಇದೆ. ಮೆಸೇಜುಗಳಿಂದ ಸುಳ್ಳು ಸುಳ್ಳೇ ಸಮಾಧಾನ ಆಗಬಹುದೇನೋ ಅಷ್ಟೇ. “ಜಾಸ್ತಿ ತಲೆ ಕೆಡಿಸಿಕೊಳ್ಳಬೇಡವೇ. ಆದಂಗ್ ಆಗ್ತದೆ. ಒಂದೆರಡು ತಿಂಗಳು ಹೆಂಗೋ ನಿಮ್ಮ ಮನೆಯಲ್ಲೋ ನಿನ್ನ ತಮ್ಮನ ಹತ್ತಿರವೋ ಒಂದಷ್ಟು ದುಡ್ಡು ತೆಗೆದುಕೊಂಡು ಸಂಭಾಳಿಸು. ನೋಡುವ, ಅಷ್ಟರಲ್ಲಿ ನಿನ್ ಗಂಡನ ಫಾರ್ಮಸಿಯಿಂದ ಲಾಭ ಬರ್ತದೆ ಅನ್ಸುತ್ತೆ. ಅಷ್ಟರೊಳಗೆ ನಾನೂ ಕೆಲಸಕ್ಕೆ ಸೇರಿರ್ತೀನಿ. ಕೊಡ್ತೀನಿ" ಎಂದು ಮೆಸೇಜ್ ಮಾಡಿದ. 

'ಇಲ್ವೋ. ನಮ್ಮಿಬ್ಬರ ಸಂಬಂಧದಲ್ಲಿ ಹಣ ಬರೋದು ನನಗಿಷ್ಟವಿಲ್ಲ. ದುಡ್ಡು ಹೆಂಗೋ ಹೊಂಚಿಕೊಳ್ಳಬಹುದು ಬಿಡು. ನೀನೇ ಹೇಳಿದಂಗೆ ಅವರ ಮನೆಯವರು ನಮ್ಮ ಮನೆಯವರು ಇದ್ದೇ ಇದ್ದಾರಲ್ಲ. ಬೇಜಾರ್ ಅಂದ್ರೆ ಕೆಲಸ ಬಿಡೋ ದೊಡ್ಡ ನಿರ್ಧಾರವನ್ನು ಕೂಡ ನನಗೆ ತಿಳಿಸದೇ ಹೋದರಿವರು. ಅಷ್ಟೊಂದು ದೂರದವಳಾಗಿಬಿಟ್ಟೆ ನೋಡು. ನೀ ಇವರಂಗೆ ಆಗಬೇಡ್ವೋ. ನಿನ್ನ ಹೆಂಡತಿ ಒಪ್ತಾಳೋ ಬಿಡ್ತಾಳೋ ಅವಳಿಗೊಂದು ಮಾತು ಎಲ್ಲದರ ಬಗ್ಗೆಯೂ ಹೇಳು... ನೀ ಹೇಳ್ತಿ ಬಿಡು' 

“ಹ ಹ. ಅದೆಂಗೆ ಅಷ್ಟು ಖಡಕ್ಕಾಗಿ ಹೇಳ್ತಿ" 

'ಮ್. ನೀ ಚೆಂದ ಅರ್ಥ ಮಾಡ್ಕೋತಿ ಅದಿಕ್ಕೆ ಹೇಳ್ದೆ' 

“ಏನೋ ನೋಡುವ ಬಿಡು. ನೀ ಜಾಸ್ತಿ ಬೇಸರ ಮಾಡಬೇಡ್ವೆ. ನಂಗೂ ದುಃಖವಾಗ್ತದೆ" 

'ಹು ಕಣೋ. ಅದ್ಸರಿ ಪರೀಕ್ಷೆ ಹೆಂಗ್ ಆಯ್ತು. ನನ್ನ ಚಿಂತೆಯಲ್ಲೇ ಪರೀಕ್ಷೆ ಕೆಟ್ಟದಾಗಿ ಮಾಡಲಿಲ್ಲ ತಾನೆ'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ನವೆಂ 10, 2019

ಒಂದು ಬೊಗಸೆ ಪ್ರೀತಿ - 39

ಡಾ. ಅಶೋಕ್.‌ ಕೆ. ಆರ್.‌
ಬಹಳ ದಿನಗಳ ನಂತರ ನಮ್ಮ ಮೆಡಿಕಲ್ ಸೂಪರಿಂಟೆಂಡೆಂಟ್ ಫೋನು ಮಾಡಿದ್ದರು. ಬೆಳಗಿನ ಡ್ಯೂಟಿಯಲ್ಲಿದ್ದೆ ಅವರ ಫೋನು ಬಂದಾಗ. ಪುರುಷೋತ್ತಮನ ಜೊತೆ ಗಲಾಟೆ ನಡೆಯುವಾಗ ನನಗೆ ಬಹಳಷ್ಟು ಮಾನಸಿಕ ಬೆಂಬಲ ಕೊಟ್ಟು ಆರ್.ಬಿ.ಐಗೆ ವರ್ಗ ಮಾಡಿಕೊಟ್ಟಿದ್ದರವರು. ಹಿಂಗಾಗಿ ಒಂಚೂರು ಹೆಚ್ಚೇ ಗೌರವವೆಂದರೂ ತಪ್ಪಾಗಲಾರದು. ಸರ್ ಫೋನು ಮಾಡಿದವರೇ ನನಗೆ ಹಲೋ ಎನ್ನಲೂ ಪುರುಸೊತ್ತು ನೀಡದೆ "ನೋಡಮ್ಮ ಧರಣಿ. ನಮ್ಮಲ್ಲಿ ಒಂದ್ ಡಿ.ಎನ್.ಬಿ ಪೀಡಿಯಾಟ್ರಿಕ್ಸ್ ಸೀಟು ಖಾಲಿ ಉಳಿದುಕೊಂಡಿದೆ ಈ ವರ್ಷ. ನಾ ಮ್ಯಾನೇಜುಮೆಂಟಿನವರಿಗೆ ಹೇಳಿಟ್ಟಿದ್ದೀನಿ. ನಮ್ಮಲ್ಲೇ ಕೆಲಸ ಮಾಡೋ ಧರಣೀಗೇ ಆ ಸೀಟು ಕೊಡಬೇಕೆಂದು. ಇಲ್ಲೇ ಕೆಲಸ ಮಾಡ್ತಿರೋ ಒಳ್ಳೆ ಹುಡುಗಿ. ಫೀಸೆಲ್ಲಾ ಏನೂ ತಗೋಬೇಡಿ ಅಂತಾನೂ ಹೇಳಿದ್ದೀನಿ. ಒಪ್ಪಿಕೊಂಡಿದ್ದಾರೆ. ಈ ಸಲ ಯಾವುದೇ ನೆಪ ಹೇಳದೆ ಬಂದು ಸೇರ್ತಿದ್ದಿ ಅಷ್ಟೇ. ಇವತ್ತು ಸಂಜೆ ಐದರ ಸುಮಾರಿಗೆ ಆಸ್ಪತ್ರೆಯ ಹತ್ತಿರ ಬಂದು ಅದೇನೇನೋ ಫಾರಮ್ಮುಗಳಿದ್ದಾವೆ, ಅವನ್ನ ಫಿಲ್ ಮಾಡಿ ಹೋಗಬೇಕು ಅಷ್ಟೇ. ಆಯ್ತ. ಸರಿ ಇಡ್ತೀನಿ" ಎಂದವರೇ ಫೋನಿಟ್ಟೇ ಬಿಟ್ಟರು. 

ಒಳ್ಳೆ ಕತೆಯಲ್ಲ ಇವರದು. ನನ್ನಭಿಪ್ರಾಯ ಏನೂ ಅಂತಾನೂ ಕೇಳದೆ ಫೋನಿಟ್ಟುಬಿಟ್ಟರಲ್ಲ. ನನ್ನ ಕಷ್ಟ ಇವರಿಗೆ ಹೇಗೆ ಅರ್ಥ ಮಾಡಿಸೋದು. ನಂಗೇನೋ ಈ ಡಿ.ಎನ್.ಬಿಗಿಂತ ಮೇಲ್ಮಟ್ಟದ್ದು ಅಂತಲೆ ಪರಿಗಣಿಸೋ ಎಂ.ಡಿ ಮಾಡೋಕೇ ಹೆಚ್ಚು ಆಸೆ. ಆದರೆ ಈಗಿರೋ ಪರಿಸ್ಥಿತಿಯಲ್ಲಿ ಎಂ.ಡಿಗೆ ಪರೀಕ್ಷೆ ಕಟ್ಟಿ, ಅದಕ್ಕೆ ಬಹಳಷ್ಟನ್ನು ಓದಿ, ಕೊನೆಗೆ ಸೀಟು ಗಿಟ್ಟಿಸಿದರೂ ವರುಷ ವರುಷ ಕಟ್ಟಬೇಕಾದ ಫೀಸಿನ ದುಡ್ಡಿಗೆ, ಬೇರೆ ಊರಿನಲ್ಲಿ ಸೀಟು ದೊರೆತರೆ ಹಾಸ್ಟಲ್ ಫೀಸು ಮತ್ತೊಂದಕ್ಕೆ ಪುನಃ ಅಪ್ಪ ಅಮ್ಮನ ಮುಂದೆ ಕೈಚಾಚಬೇಕಾಗ್ತದೆ. ಜೊತೆಗೆ ಪ್ರೈವೇಟ್ ಕಾಲೇಜಲ್ಲಿ ಸೀಟು ಸಿಕ್ಕಿದರೆ ಸ್ಟೈಪೆಂಡೂ ನಾಸ್ತಿ. ರಾಜೀವನ ಸಂಬಳ ನೆಚ್ಚಿಕೊಂಡು ಅಂತಹ ರಿಸ್ಕು ತೆಗೆದುಕೊಳ್ಳುವುದು ಅಸಾಧ್ಯದ ಮಾತೇ ಸರಿ. ಆ ಲೆಕ್ಕಕ್ಕೆ ಡಿ.ಎನ್.ಬಿ ವಾಸಿ. ನಮ್ಮ ಆಸ್ಪತ್ರೆಯಲ್ಲೇ ಇರೋದು. ಇದರ ಫೀಸೂ ವರುಷಕ್ಕೆ ಐವತ್ತು ಸಾವಿರದಷ್ಟಿರಬೇಕಷ್ಟೇ. ಅದನ್ನೂ ಮಾಫಿ ಮಾಡಿಸ್ತೀನಿ ಅಂದಿದ್ದಾರೆ ಸರ್ರು. ಮಾಫಿ ಅಂದರೆ ಬಹುಶಃ ಒಂದು ವರುಷಕ್ಕೋ ಎರಡು ವರುಷಕ್ಕೋ ಬಾಂಡ್ ಬರೆಸಿಕೊಳ್ಳಬಹುದು. ತೊಂದರೆಯಿಲ್ಲ. ಗೊತ್ತಿರೋ ಜಾಗವೇ ಅಲ್ಲವೇ ಇದು. ಕೆಲಸ ಮಾಡುವುದಕ್ಕೆ ತಕರಾರಿಲ್ಲ. ಎಲ್ಲ ಸರಿ ಕಾಣ್ತದೆ ಅನ್ನುವಾಗ ಹಣದ ಕೊರತೆಯದ್ದೇ ಚಿಂತೆ. ಈಗ ಬರುವ ಸಂಬಳದಲ್ಲಿ ಅರ್ಧದಷ್ಟು ಸ್ಟೈಪೆಂಡ್ ಬಂದರೆ ಅದೇ ಪುಣ್ಯ. ಎಲ್ಲಾ ಸೇರಿ ಇಪ್ಪತ್ತು ಇಪ್ಪತ್ತೈದು ಸಾವಿರ ಬರ್ತದೇನೋ ಅಷ್ಟೇ. ನಲವತ್ತೈದು ಸಾವಿರದಿಂದ ತಟ್ಟಂತ ತಿಂಗಳಾ ತಿಂಗಳು ಬರೋದ್ರಲ್ಲಿ ಇಪ್ಪತ್ತು ಸಾವಿರ ಕಡಿಮೆಯಾಗಿಬಿಟ್ಟರೆ? ಕಾರು ಲೋನು, ಮನೆ ಬಾಡಿಗೆ, ಮನೆ ಖರ್ಚು......ಇದನ್ನೆಲ್ಲ ಹೇಗೆ ಸರಿದೂಗಿಸೋದು? ಉಹ್ಞೂ. ಸದ್ಯಕ್ಕೆ ಯಾವ ಡಿ.ಎನ್.ಬಿ ಕೂಡ ಬೇಡ. ಸಂಜೆ ಸರ್‍‍ನ ಭೇಟಿಯಾಗಲು ಹೋಗಲೇಬೇಕು. ಅದನ್ನು ತಪ್ಪಿಸಿಕೊಳ್ಳುವಂತಿಲ್ಲ. ಅವರಿಗೊಂದು ಸಶಕ್ತ ಕಾರಣವನ್ನೇಳದೆ ಹೋದರೆ ಬೇಸರಿಸಿಕೊಳ್ಳುತ್ತಾರೆ. ಕಷ್ಟದ ದಿನಗಳಲ್ಲಿ ಸಹಾಯ ಮಾಡಿದವರಿಗೆ, ಈಗಲೂ ನನ್ನ ಭವಿತವ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡೆ ಸಹಾಯ ಮಾಡುತ್ತಿರುವವರಿಗೆ ಬೇಸರ ಮಾಡುವುದು ಕೂಡ ಸರಿಯಲ್ಲ. ಹಿಂಗಿಂಗೆ ಹಣದ ಸಮಸ್ಯೆಯ ಕಾರಣದಿಂದಾಗಿ ಸೇರಲಾಗುತ್ತಿಲ್ಲ ಅಂತ ನಿಜ ಹೇಳುವುದೇ ಒಳ್ಳೆಯದೇನೋ. ಯಾವೊಂದು ನಿರ್ಧಾರಕ್ಕೂ ಬರಲಾಗಲಿಲ್ಲ. ಇಂತಹ ಗೊಂದಲದ ಸಮಯದಲ್ಲಿ ಸಾಗರನಿಗಲ್ಲದೇ ಮತ್ಯಾರಿಗೆ ಫೋನು ಮಾಡುವುದು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ನವೆಂ 3, 2019

ಒಂದು ಬೊಗಸೆ ಪ್ರೀತಿ - 38

ಡಾ. ಅಶೋಕ್.‌ ಕೆ. ಆರ್.‌
“ಹೇಳಪ್ಪ ಏನ್ ಬಂದಿದ್ದು ಇಷ್ಟೊತ್ತಿನಲ್ಲಿ" ಅಪ್ಪನ ದನಿಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ತಾಳ್ಮೆಯಿತ್ತು. 

“ಅದೇ ಅಂಕಲ್. ಧರಣಿಗೆ ಮದುವೆ ಗೊತ್ತು ಮಾಡಿದ್ರಿ ಅಂತ ಗೊತ್ತಾಯ್ತು....” 

“ಯಾರ್ ಹೇಳಿದ್ರು?” ಪುರುಷೋತ್ತಮ ನನ್ನ ಕಡೆಗೆ ನೋಡಿದ. ಅಪ್ಪ ಅಮ್ಮನ ಸಿಟ್ಟಿನ ಕಣ್ಣುಗಳು, ತಮ್ಮನ ಅಸಹಾಯಕ ಕಣ್ಣುಗಳು ನನ್ನತ್ತ ಚಲಿಸಿದವು. 

“ಹೂನಪ್ಪ. ಗೊತ್ತು ಮಾಡಿದ್ವಿ. ನಮ್ಮ ಬಲವಂತವೇನೂ ಇಲ್ಲ. ಅವಳು ಒಪ್ಪಿಗೆ ನೀಡಿದ ಮೇಲೆಯೇ ಗೊತ್ತು ಮಾಡಿದ್ದು" 

“ಅದೂ ಗೊತ್ತಿದೆ ಅಂಕಲ್. ನಿಮ್ಮದೂ ಲವ್ ಮ್ಯಾರೇಜೇ ಅಂತಿದ್ಲು ಧರಣಿ. ಆರು ವರ್ಷದ ಲವ್ ಅಂಕಲ್....ಕಷ್ಟವಾಗ್ತದೆ" 

“ನನ್ನ ನಿರ್ಧಾರ ನಿಂಗೆ ಗೊತ್ತೇ ಇರಬೇಕಲ್ಲಪ್ಪ. ನಿಮ್ಮಮ್ಮನನ್ನು ಒಪ್ಪಿಸಿ ಕರೆದುಕೊಂಡು ಬಾ. ಧಾಂ ಧೂಂ ಅಂತ ಮದುವೆ ಮಾಡಿಕೊಡೋ ಜವಾಬ್ದಾರಿ ನಂದು. ನಮ್ಮ ಮನೆಯಲ್ಲಿ ಇನ್ಯಾರೂ ಒಪ್ಪದಿದ್ರೂ ಚಿಂತೆಯಿಲ್ಲ" 

“಻ಅಪ್ಪ ಮಗಳು ಅದೇ ಕಿತ್ತೋದ ಡೈಲಾಗ್ ಹೇಳಿ ಹೇಳಿ ನನ್ನ ಸಾಯಿಸ್ತೀರ. ನಿಮ್ಮ ಮಗಳಿಗೆ ನನ್ನ ಜೊತೆ ಲವ್ ಮಾಡ್ಬೇಕಾದ್ರೆ ಇದೆಲ್ಲ ನೆನಪಾಗಲಿಲ್ಲವಾ? ನನ್ನ ಕೈಲಿ ಪಾರ್ಟಿ ಕೊಡಿಸ್ಕೊಂಡು, ಚಾಕಲೇಟು ಐಸ್ಕ್ರೀಮು ಕೊಡಿಸ್ಕೊಂಡು ದುಡ್ಡು ಖರ್ಚು ಮಾಡಬೇಕಾದ್ರೆ ಇದೆಲ್ಲ ನೆನಪಾಗಲಿಲ್ಲವಾ? ಆವಾಗ ನಿಮ್ಮಮ್ಮನ್ನ ಕೇಳ್ಕೊಂಡು ಬಾ ಅಂತ ಕಳಿಸಿದ್ಲಾ ಇವ್ಳು.....” ಕತ್ತೆತ್ತಿ ನನ್ನ ಕಡೆಗೆ ನೋಡಿದ. ಮನಸಲ್ಲೇ ಚಿನಾಲಿ ಎಂದು ಉಗಿದ. ಕಣ್ಣು ನನ್ನ ಬೆನ್ನ ಹಿಂದಿದ್ದ ಶೋಕೇಸಿನತ್ತ ಸರಿಯಿತು. ಅದರೆಡೆಗೆ ಕೈ ತೋರುತ್ತಾ "ಆ ನಿಮ್ ಶೋಕೇಸಿನಲ್ಲಿರೋ ಮುಕ್ಕಾಲು ಗಿಫ್ಟುಗಳು ನಾ ಕೊಟ್ಟಿರೋದು. ಅದನ್ನೆಲ್ಲ ತೆಗೆದುಕೋಬೇಕಾದ್ರೆ ನಿಮ್ಮಮ್ಮನ್ನ ಕೇಳ್ಕೊಂಡು ಬಾ ಅಂತ ಕಳಿಸಿದ್ಲಾ .....” ಅವನ ಮಾತು ಮುಗಿಯುವ ಮುನ್ನವೇ ಅಪ್ಪ ದಡಕ್ಕನೆ ಮೇಲೆದ್ದು ನನ್ನ ಕಡೆಗೆ ನಡೆದು ಬಂದರು. ಬಿತ್ತು ಏಟು ಕೆನ್ನೆಗೆ ಎಂದುಕೊಂಡೆ. ನನ್ನನ್ನು ಬದಿಗೆ ತಳ್ಳಿ ಶೋಕೇಸಿನ ಬಾಗಿಲು ತೆಗೆದು "ಅದ್ಯಾವ್ಯಾವ ಗಿಫ್ಟು ಕೊಡಿಸಿದ್ದೆ ತಗಳಪ್ಪ. ಲೋ ಶಶಿ ಒಳಗೋಗಿ ಒಂದು ದೊಡ್ಡ ಕವರ್ ತಗಂಡ್ ಬಾ" ಅಂದುಬಿಟ್ಟರು. ನಮ್ಮೆಲ್ಲರಿಗಿಂತ ಹೆಚ್ಚು ಆಘಾತಕ್ಕೊಳಗಾದವನು ಪುರುಷೋತ್ತಮ. ಅಪ್ಪ ಹಿಂಗೆಲ್ಲ ವರ್ತಿಸಬಹುದು ಎಂದು ನಿರೀಕ್ಷೆ ಮಾಡಿರಲಿಲ್ಲ. ಹೇಳಿದ್ದಾಗೋಗಿದೆ. ಇನ್ನೇನು ಮಾಡೋದು ಎನ್ನುವವನಂತೆ ಎದ್ದು ಬಂದು ಒಂದೊಂದಾಗಿ ಗಿಫ್ಟುಗಳನ್ನೆಲ್ಲ ಎತ್ತಿಕೊಳ್ಳುತ್ತಿದ್ದ. ಐದು ವ್ಯಾಲೆಂಟೈನ್ಸ್ ಡೇಗೆ ಕೊಟ್ಟಿದ್ದು, ಆರು ನನ್ನುಟಿದಬ್ಬಕ್ಕೆ ಕೊಟ್ಟಿದ್ದು, ಎರಡು ಅವನ ಹುಟ್ಟಿದ ಹಬ್ಬದಂದು ಕೊಡಿಸಿದ್ದು, ಹೊಸ ವರ್ಷದಂದು ಕೊಡಿಸಿದ್ದ ನಾಲಕ್ಕು, ಯುಗಾದಿಗೆ ಕೊಡಿಸಿದ್ದ ಎರಡು, ಸುಮ್ಮನೆ ನನಗಿಷ್ಟವಾಯ್ತು ಅಂತ ಕೊಡಿಸಿದ್ದ ಐದು ಗಿಫ್ಟುಗಳನ್ನೂ ನೆನಪಿಟ್ಟುಕೊಂಡು ಎತ್ತಿಕೊಂಡ. ಅಂತಹ ಗಂಭೀರ ಸನ್ನಿವೇಶದಲ್ಲೂ ನನಗಿವರ ಮಕ್ಕಳಾಟ ನಗು ಮೂಡಿಸುತ್ತಿತ್ತು. ಜೋರು ನಗಲಿಲ್ಲ ಅಷ್ಟೇ. ಕವರ್ರಿಗಾಕಿಕೊಂಡವನಿಗೆ ಇನ್ನೇನು ಮಾತನಾಡಬೇಕೆಂದು ತೋಚಲಿಲ್ಲ. ಅಪ್ಪನೇ ಮಾತನಾಡಿದರು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಅಕ್ಟೋ 27, 2019

ಒಂದು ಬೊಗಸೆ ಪ್ರೀತಿ - 37

ಡಾ. ಅಶೋಕ್.‌ ಕೆ. ಆರ್.‌
“ಎಲ್ಲಿಗೆದ್ದೋಗ್ತಿ.....ಮುಚ್ಕಂಡ್ ಕೂತ್ಕೊಳ್ಳೇ ಚಿನಾಲಿ" ಪುರುಷೋತ್ತಮನ ದನಿಗೆ ಬೆಚ್ಚಿ ಬಿದ್ದೆ. ಪುರುಷೋತ್ತಮನ ಪೊಸೆಸಿವ್ನೆಸ್ ಅನುಭವಿಸಿದ್ದೀನಿ. ಅವನು ಸಿಟ್ಟಿಗೆ ಬಂದು ನನಗೆ ಹೊಡೆದಿದ್ದೂ ಇದೆ. ಆದರೆ ಇವತ್ತಿನ ದನಿಯಲ್ಲವನು ಹಿಂದೆಂದೂ ಮಾತನಾಡಿರಲಿಲ್ಲ. ಇಲ್ಲಿ ಕುಳಿತಿರುವವನು ನಿಜ್ಜ ಅವನೇನಾ ಅಂತೆಲ್ಲ ಅನುಮಾನ ಮೂಡಿಬಿಟ್ಟಿತು. ಎದ್ದೋಗುವ ಮನಸ್ಸಾಗಲಿಲ್ಲ ಈ ಚಿನಾಲಿಗೆ. ಕುಳಿತುಕೊಂಡೆ. ಜೋರಾಗಿ ಉಸಿರು ಬಿಡುತ್ತಿದ್ದ. ಸಿಗರೇಟಿನ ಘಮದ ಜೊತೆಗೆ ಮತ್ತೊಂದು ದುರ್ವಾಸನೆಯೂ ಸೇರಿಕೊಂಡಿತ್ತು. ಮೊದಲಿಗದು ಏನೆಂದು ತಿಳಿಯಲಿಲ್ಲ. ತೀರ ಅಪರಿಚಿತ ವಾಸನೆಯೂ ಆಗಿರಲಿಲ್ಲ. ಕ್ಷಣದ ನಂತರ ಮನೆಯಲ್ಲಿ ಅಪ್ಪ ಕುಡಿಯುವಾಗ ಬರುತ್ತಿದ್ದ ವಾಸನೆಯದು ಎಂದು ತಿಳಿಯಿತು. ಅಲ್ಲಿಯವರೆಗೂ ಒಂದು ತೊಟ್ಟನ್ನೂ ಬಾಯಿಗೆ ಬಿಟ್ಟುಕೊಳ್ಳದ ನನ್ನ ಪುರುಷೋತ್ತಮ ಕುಡಿದು ಬಂದಿದ್ದ.... ಅವನು ಕುಡಿದಿರೋದಕ್ಕೆ ನಾನೇ ಕಾರಣ.....ಪಾಪವೆನ್ನಿಸಿತ್ತು ಅವನ ಬಗ್ಗೆ. ಆದರೆ ನಿಜ ಹೇಳ್ತೀನಿ ಸಾಗರ ಅಷ್ಟೆಲ್ಲ ಪಾಪವೆಂಬ ಭಾವ ಅವನ ಬಗ್ಗೆ ಮೂಡಿದ ಕ್ಷಣದಲ್ಲೂ ನಾ ಬೇರೆಯವರನ್ನ ಮದುವೆಯಾಗೋ ನಿರ್ಧಾರ ತೆಗೆದುಕೊಂಡಿರೋದು ತಪ್ಪು.... ನಾ ಪ್ರೀತಿಸಿರೋದು ಪುರುಷೋತ್ತಮನನ್ನು..... ಅವನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಬಾರದು ನಾನು..... ಇವನಲ್ಲೀಗ ಕ್ಷಮೆ ಕೇಳಿ ಇವನನ್ನೇ ಮದುವೆಯಾಗಬೇಕು..... ಉಹ್ಞೂ.... ಈ ರೀತಿಯ ಒಂದೇ ಒಂದು ಯೋಚನೆಯೂ ನನ್ನಲ್ಲಿ ತೇಲಿಹೋಗುವ ಮೋಡದಂತೆಯೂ ಮೂಡಲಿಲ್ಲ. ಅವನ ಮೇಲಿನ ಪ್ರೀತಿ ಸತ್ತೋಯ್ತ..... ಇಲ್ಲ..... ಇವತ್ತಿಗೂ ಅವನ ಮೇಲೆ ನನಗೆ ಪ್ರೀತಿ ಇದ್ದೇ ಇದೆ. ಅವನಷ್ಟು ಉತ್ಕಟವಾಗಿ ನನ್ನನ್ನು ಪ್ರೀತಿಸೋಕೆ ಯಾರಿಂದಲೂ ಸಾಧ್ಯವಿಲ್ಲ....... ಆ ಕ್ಷಣದಲ್ಲಿ..... ನನ್ನ ಪುರುಷೋತ್ತಮ ನನ್ನಿಂದಾಗಿ ಕುಡಿದು ಬಂದಿದ್ದಾನೆ ಅನ್ನೋ ಸತ್ಯ ಅರಿವಾದ ಸಂದರ್ಭದಲ್ಲಿ ಅವನ ಮೇಲಿನ ಪ್ರೀತಿ ಹೆಚ್ಚಾಗಲಿಲ್ಲ..... ನನ್ನ ನಿರ್ಧಾರವನ್ನು ಪುನರ್ ಪರಿಶೀಲಿಸುವ ಯೋಚನೆಯೂ ಹತ್ತಿರದಲ್ಲಿ ಸುಳಿಯಲಿಲ್ಲ.... ಅವನು ಇನ್ನೂ ಏನೇನು ಮಾಡಬಹುದು ಎನ್ನುವುದನ್ನು ಕಲ್ಪನೆಯೂ ಮಾಡಿಕೊಳ್ಳದ ನಾನು ಇನ್ನೂ ಅನೇಕನೇಕ ತಪ್ಪುಗಳನ್ನು ಅವತ್ತು ಮಾಡಿದೆ. ಅದನ್ನೆಲ್ಲ ಕೇಳಿ ನೀ ನಗದೇ ಹೋದರೆ ಹೇಳ್ತೀನಿ....' 

“ಪಾಪ ಇಷ್ಟೊಂದು ಗಂಭೀರದ ವಿಷಯಗಳನ್ನೇಳುವಾಗ ನಗೋಕಾಗ್ತದಾ? ಹೇಳು"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಅಕ್ಟೋ 20, 2019

ಒಂದು ಬೊಗಸೆ ಪ್ರೀತಿ - 36

ಡಾ. ಅಶೋಕ್.‌ ಕೆ. ಆರ್.‌
'ರಾಜೀವನ ಜೊತೆ ಮೆಸೇಜ್ ಮಾಡಿದ್ದನ್ನು. ನಮ್ಮ ಮನೆಯವರನ್ನು ಒಪ್ಪಿಸು ಅಂತ ಕಾಲೆಳೆದಿದ್ದನ್ನು ಹೇಳಿದ್ದೆ ಅಲ್ವ'

“ಹು" ನನ್ನೆದೆಯ ಮೇಲೆ ಕೈಯಾಡಿಸುತ್ತಾ ಹೇಳಿದ ಸಾಗರ.

'ನಾ ಏನೋ ತಮಾಷೆಗೆ ಅನ್ನುವಂತೆ ಹೇಳಿದ್ದು. ಅವನೂ ತಮಾಷೆಯಾಗೇ ತಗೊಂಡಿರ್ತಾನೆ ಅಂತಂದುಕೊಂಡಿದ್ದೆ. ನನ್ನೆಣಿಕೆ ಸುಳ್ಳಾಗಿತ್ತು. ಸರೀ ಒಂದು ವಾರಕ್ಕೆ ಮತ್ತೊಮ್ಮೆ ಅವನಿಂದ ಮೆಸೇಜು ಬಂತು. ನಮ್ಮ ಮನೆಯಲ್ಲಿ ಮಾತನಾಡಿ ಒಪ್ಪಿಸಿದ್ದೀನಿ. ಇದೇ ಭಾನುವಾರ ನಿಮ್ಮ ಮನೆಗೆ ಬರ್ತೇವೆ. ಇವತ್ತೋ ನಾಳೆಯೋ ನಮ್ಮಮ್ಮ ನಿಮ್ಮಮ್ಮನಿಗೆ ಫೋನ್ ಮಾಡಬಹುದು ಎಂದಿದ್ದ. ಅವತ್ತು ನನ್ನ ಮನಸ್ಸಲ್ಲಿ ಗೊಂದಲವಿತ್ತಾ, ಗಾಬರಿಯಿತ್ತಾ, ಸಂತಸವಿತ್ತಾ ಅಥವಾ ಇವೆಲ್ಲದರ ಮಿಶ್ರಭಾವವಿತ್ತಾ? ಒಂದೂ ನೆನಪಾಗ್ತಿಲ್ಲ ಈಗ. ಅವತ್ತೇ ಅವರಮ್ಮ ನಮ್ಮಮ್ಮನಿಗೆ ಫೋನ್ ಮಾಡಿದ್ದರು. ಅಪ್ಪ ಅಮ್ಮ ಈ ವಿಷಯವನ್ನು ಗುಟ್ಟು ಗುಟ್ಟಲ್ಲಿ ಚರ್ಚಿಸಿದ್ದು ನನ್ನರಿವಿಗೂ ಬಂದಿತ್ತು. ರಾತ್ರಿ ಊಟಕ್ಕೆ ಕುಳಿತಾಗ ಅಪ್ಪ "ನೋಡಮ್ಮ. ರಾಜೀವನ ಮನೆಯವರು ಫೋನ್ ಮಾಡಿದ್ರು. ಧರಣೀನ ನಮ್ಮ ರಾಜೀವನಿಗೆ ತೋರಿಸುತ್ತೀರಾ ಅಂತ. ಒಳ್ಳೆ ಮನೆತನ. ಆಸ್ತಿಗೆಲ್ಲ ಏನೂ ತೊಂದರೆ ಇಲ್ಲದ ಮನೆ. ಜೊತೆಗೆ ರಾಜೀವ ನಾವು ಕಂಡಂತೆ ಒಳ್ಳೆ ಹುಡುಗ. ಆದರೆ ಡಾಕ್ಟರಲ್ಲ. ಇಷ್ಟೆಲ್ಲ ತಲೇಲಿ ಯೋಚನೆ ಬಂದ್ರೂ ಹೆಣ್ಣು ತೋರಿಸೋದಿಲ್ಲ ಅಂತೇಳೋದಿಕ್ಕೆ ಮನಸ್ಸಾಗಲಿಲ್ಲ. ತೋರಿಸ್ತೀವಿ ಅಂತ ಹೇಳಿದ್ದೀವಿ. ಮುಂಚೆ ಬಂದ ಗಂಡುಗಳತ್ರ ನೀ ಕೆಟ್ಟದಾಗಿ ನಡ್ಕೊಂಡಿದ್ದಿದೆ....”

'ಇವಾಗೆಲ್ಲಿ ಹಂಗಿದ್ದೀನಿ?'

“ಹು. ಇತ್ತೀಚೆಗೆ ಹಂಗೆಲ್ಲ ಮಾಡಿಲ್ಲ ನೀನು. ಅಂದ್ರೂ ನೆನಪಿಸಬೇಕು ಅನ್ನಿಸಿತು. ಇಷ್ಟು ದಿನ ಬಂದಿದ್ದವರು ಅಪರಿಚಿತರು. ನೀ ಆಡಿದ್ದೆಲ್ಲ ನಡೀತು. ಇವರು ಪರಿಚಿತರು. ನೀ ಒಪ್ತೀಯೋ ಬಿಡ್ತೀಯೋ ನಂತರದ ಪ್ರಶ್ನೆ. ನಮಗಾಗಲೀ ಅವರಿಗಾಗಲೀ ಅವಮಾನವಾಗುವಂತೆ ಮಾತ್ರ ನಡೆದುಕೊಳ್ಳಬೇಡ" ಎಂದು ಬೇಡುವ ದನಿಯಲ್ಲಿ ಕೇಳಿಕೊಂಡರು. ಇವರಿಗೆ ನಾನು ರಾಜೀವ ಮಾತಾಡಿಕೊಂಡಿದ್ದರ ಅರಿವಿದ್ದಂತಿರಲಿಲ್ಲ. ರಾಜೀವನೂ ಅವರ ಮನೆಯಲ್ಲಿ ಹೇಳಿಲ್ಲವೋ ಏನೋ. ನಾನು ಅದರ ಬಗ್ಗೆ ಸೊಲ್ಲೆತ್ತಲಿಲ್ಲ. ಯಾವಾಗ ಬರ್ತಾರಂತೆ ಅಂತ ಕೇಳಿದೆ. ಭಾನುವಾರ ಻ಅಂತ ತಿಳಿಸಿದರು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಅಕ್ಟೋ 15, 2019

‘ಅಸುರನ್’: ಸಹಜತೆಗೆ ಹತ್ತಿರವಿರುವ ಒಳ್ಳೆಯ ಪ್ರಯತ್ನದ ಚಲನಚಿತ್ರ

ನಂದಕುಮಾರ್ ಕೆ ಎನ್. ಕುಂಬ್ರಿಉಬ್ಬು
ಅಸುರನ್ ಇಂದಿನ ದಿನಗಳಲ್ಲಿ ಬಂದಿರುವ ವಿರಳ ಚಿತ್ರಕಥೆ ಹೊಂದಿರುವ ಸಿನಿಮಾ. ವೆಟ್ರಿಮಾರನ್ ಇದರ ನಿರ್ದೇಶಕ. ಒಳ್ಳೆಯ ಛಾಯಾಗ್ರಹಣ, ಒಳ್ಳೆಯ ದೃಶ್ಯಸಂಯೋಜನೆ. ಚಿತ್ರದಲ್ಲಿ ಸಹಜತೆ ಹೆಚ್ಚು ಇದೆ.. ಪರವಾಗಿಲ್ಲ ಎನ್ನಬಹುದಾದ ಸಂಗೀತವಿದೆ.

ತಮಿಳಿನ ಧನುಷ್ ಹಾಗೂ ಮಲೆಯಾಳಂ ನ ಮಂಜು ವಾರಿಯರ್ ಮುಖ್ಯ ತಾರಾಗಣದಲ್ಲಿರುವ ಈ ಸಿನಿಮಾ ಜಾತೀಯತೆಯ ಮನಸುಗಳು ಹಾಗೂ ಕ್ರೌರ್ಯಗಳ ಕೆಲವು ಮುಖಗಳನ್ನು ಅನಾವರಣಗೊಳಿಸುತ್ತದೆ. ಕಥಾನಾಯಕನ ಕುಟುಂಬದ ಸುತ್ತಾ ಈ ಕಥೆಯನ್ನು ಹೆಣೆಯಲಾಗಿದೆ. ತಮಿಳಿನ ಪೂಮಣಿ ಬರೆದ ವೆಕೈ ಎಂಬ ಕಾದಂಬರಿ ಆದಾರಿತ ಚಿತ್ರವಿದು.

ಧನುಷ್ ರ ಅಭಿನಯ ಚೆನ್ನಾಗಿದೆ. ಎಲ್ಲಾ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ.

ಆರಂಭದ ಅಂದರೆ ಫ್ಲಾಶ್ ಬ್ಯಾಕ್ ಬರುವವರೆಗೂ ಚಿತ್ರದಲ್ಲಿ ಬಿಗಿತನ ಕಾಣುವುದಿಲ್ಲ. ಆ ಸನ್ನಿವೇಶಗಳಿಗೆ ತಕ್ಕಂತಹ ಭಾವಗಳನ್ನು, ಗಾಢತೆಗಳನ್ನು ವೀಕ್ಷಕರಿಗೆ ಮೂಡಿಸುವಲ್ಲಿ ಯಶಸ್ಸು ಕಾಣುವುದಿಲ್ಲ. ನಂತರದ ಚಿತ್ರ ನಿರ್ದೇಶಕರ ಹಿಡಿತ, ಪಾತ್ರಧಾರಿಗಳ ಅಭಿನಯ ಗಾಢತೆಯನ್ನು ಸನ್ನಿವೇಶಗಳನ್ನು ವೀಕ್ಷಕರಿಗೆ ಗಾಢವಾಗಿ ತಟ್ಟುವಂತೆ ಕಥೆಯನ್ನು ನಿರೂಪಿಸುತ್ತಾ ಹೋಗುತ್ತದೆ.