ಡಾ. ಅಶೋಕ್. ಕೆ. ಆರ್.
ಬಹಳ ದಿನಗಳ ನಂತರ ನಮ್ಮ ಮೆಡಿಕಲ್ ಸೂಪರಿಂಟೆಂಡೆಂಟ್ ಫೋನು ಮಾಡಿದ್ದರು. ಬೆಳಗಿನ ಡ್ಯೂಟಿಯಲ್ಲಿದ್ದೆ ಅವರ ಫೋನು ಬಂದಾಗ. ಪುರುಷೋತ್ತಮನ ಜೊತೆ ಗಲಾಟೆ ನಡೆಯುವಾಗ ನನಗೆ ಬಹಳಷ್ಟು ಮಾನಸಿಕ ಬೆಂಬಲ ಕೊಟ್ಟು ಆರ್.ಬಿ.ಐಗೆ ವರ್ಗ ಮಾಡಿಕೊಟ್ಟಿದ್ದರವರು. ಹಿಂಗಾಗಿ ಒಂಚೂರು ಹೆಚ್ಚೇ ಗೌರವವೆಂದರೂ ತಪ್ಪಾಗಲಾರದು. ಸರ್ ಫೋನು ಮಾಡಿದವರೇ ನನಗೆ ಹಲೋ ಎನ್ನಲೂ ಪುರುಸೊತ್ತು ನೀಡದೆ "ನೋಡಮ್ಮ ಧರಣಿ. ನಮ್ಮಲ್ಲಿ ಒಂದ್ ಡಿ.ಎನ್.ಬಿ ಪೀಡಿಯಾಟ್ರಿಕ್ಸ್ ಸೀಟು ಖಾಲಿ ಉಳಿದುಕೊಂಡಿದೆ ಈ ವರ್ಷ. ನಾ ಮ್ಯಾನೇಜುಮೆಂಟಿನವರಿಗೆ ಹೇಳಿಟ್ಟಿದ್ದೀನಿ. ನಮ್ಮಲ್ಲೇ ಕೆಲಸ ಮಾಡೋ ಧರಣೀಗೇ ಆ ಸೀಟು ಕೊಡಬೇಕೆಂದು. ಇಲ್ಲೇ ಕೆಲಸ ಮಾಡ್ತಿರೋ ಒಳ್ಳೆ ಹುಡುಗಿ. ಫೀಸೆಲ್ಲಾ ಏನೂ ತಗೋಬೇಡಿ ಅಂತಾನೂ ಹೇಳಿದ್ದೀನಿ. ಒಪ್ಪಿಕೊಂಡಿದ್ದಾರೆ. ಈ ಸಲ ಯಾವುದೇ ನೆಪ ಹೇಳದೆ ಬಂದು ಸೇರ್ತಿದ್ದಿ ಅಷ್ಟೇ. ಇವತ್ತು ಸಂಜೆ ಐದರ ಸುಮಾರಿಗೆ ಆಸ್ಪತ್ರೆಯ ಹತ್ತಿರ ಬಂದು ಅದೇನೇನೋ ಫಾರಮ್ಮುಗಳಿದ್ದಾವೆ, ಅವನ್ನ ಫಿಲ್ ಮಾಡಿ ಹೋಗಬೇಕು ಅಷ್ಟೇ. ಆಯ್ತ. ಸರಿ ಇಡ್ತೀನಿ" ಎಂದವರೇ ಫೋನಿಟ್ಟೇ ಬಿಟ್ಟರು.
ಒಳ್ಳೆ ಕತೆಯಲ್ಲ ಇವರದು. ನನ್ನಭಿಪ್ರಾಯ ಏನೂ ಅಂತಾನೂ ಕೇಳದೆ ಫೋನಿಟ್ಟುಬಿಟ್ಟರಲ್ಲ. ನನ್ನ ಕಷ್ಟ ಇವರಿಗೆ ಹೇಗೆ ಅರ್ಥ ಮಾಡಿಸೋದು. ನಂಗೇನೋ ಈ ಡಿ.ಎನ್.ಬಿಗಿಂತ ಮೇಲ್ಮಟ್ಟದ್ದು ಅಂತಲೆ ಪರಿಗಣಿಸೋ ಎಂ.ಡಿ ಮಾಡೋಕೇ ಹೆಚ್ಚು ಆಸೆ. ಆದರೆ ಈಗಿರೋ ಪರಿಸ್ಥಿತಿಯಲ್ಲಿ ಎಂ.ಡಿಗೆ ಪರೀಕ್ಷೆ ಕಟ್ಟಿ, ಅದಕ್ಕೆ ಬಹಳಷ್ಟನ್ನು ಓದಿ, ಕೊನೆಗೆ ಸೀಟು ಗಿಟ್ಟಿಸಿದರೂ ವರುಷ ವರುಷ ಕಟ್ಟಬೇಕಾದ ಫೀಸಿನ ದುಡ್ಡಿಗೆ, ಬೇರೆ ಊರಿನಲ್ಲಿ ಸೀಟು ದೊರೆತರೆ ಹಾಸ್ಟಲ್ ಫೀಸು ಮತ್ತೊಂದಕ್ಕೆ ಪುನಃ ಅಪ್ಪ ಅಮ್ಮನ ಮುಂದೆ ಕೈಚಾಚಬೇಕಾಗ್ತದೆ. ಜೊತೆಗೆ ಪ್ರೈವೇಟ್ ಕಾಲೇಜಲ್ಲಿ ಸೀಟು ಸಿಕ್ಕಿದರೆ ಸ್ಟೈಪೆಂಡೂ ನಾಸ್ತಿ. ರಾಜೀವನ ಸಂಬಳ ನೆಚ್ಚಿಕೊಂಡು ಅಂತಹ ರಿಸ್ಕು ತೆಗೆದುಕೊಳ್ಳುವುದು ಅಸಾಧ್ಯದ ಮಾತೇ ಸರಿ. ಆ ಲೆಕ್ಕಕ್ಕೆ ಡಿ.ಎನ್.ಬಿ ವಾಸಿ. ನಮ್ಮ ಆಸ್ಪತ್ರೆಯಲ್ಲೇ ಇರೋದು. ಇದರ ಫೀಸೂ ವರುಷಕ್ಕೆ ಐವತ್ತು ಸಾವಿರದಷ್ಟಿರಬೇಕಷ್ಟೇ. ಅದನ್ನೂ ಮಾಫಿ ಮಾಡಿಸ್ತೀನಿ ಅಂದಿದ್ದಾರೆ ಸರ್ರು. ಮಾಫಿ ಅಂದರೆ ಬಹುಶಃ ಒಂದು ವರುಷಕ್ಕೋ ಎರಡು ವರುಷಕ್ಕೋ ಬಾಂಡ್ ಬರೆಸಿಕೊಳ್ಳಬಹುದು. ತೊಂದರೆಯಿಲ್ಲ. ಗೊತ್ತಿರೋ ಜಾಗವೇ ಅಲ್ಲವೇ ಇದು. ಕೆಲಸ ಮಾಡುವುದಕ್ಕೆ ತಕರಾರಿಲ್ಲ. ಎಲ್ಲ ಸರಿ ಕಾಣ್ತದೆ ಅನ್ನುವಾಗ ಹಣದ ಕೊರತೆಯದ್ದೇ ಚಿಂತೆ. ಈಗ ಬರುವ ಸಂಬಳದಲ್ಲಿ ಅರ್ಧದಷ್ಟು ಸ್ಟೈಪೆಂಡ್ ಬಂದರೆ ಅದೇ ಪುಣ್ಯ. ಎಲ್ಲಾ ಸೇರಿ ಇಪ್ಪತ್ತು ಇಪ್ಪತ್ತೈದು ಸಾವಿರ ಬರ್ತದೇನೋ ಅಷ್ಟೇ. ನಲವತ್ತೈದು ಸಾವಿರದಿಂದ ತಟ್ಟಂತ ತಿಂಗಳಾ ತಿಂಗಳು ಬರೋದ್ರಲ್ಲಿ ಇಪ್ಪತ್ತು ಸಾವಿರ ಕಡಿಮೆಯಾಗಿಬಿಟ್ಟರೆ? ಕಾರು ಲೋನು, ಮನೆ ಬಾಡಿಗೆ, ಮನೆ ಖರ್ಚು......ಇದನ್ನೆಲ್ಲ ಹೇಗೆ ಸರಿದೂಗಿಸೋದು? ಉಹ್ಞೂ. ಸದ್ಯಕ್ಕೆ ಯಾವ ಡಿ.ಎನ್.ಬಿ ಕೂಡ ಬೇಡ. ಸಂಜೆ ಸರ್ನ ಭೇಟಿಯಾಗಲು ಹೋಗಲೇಬೇಕು. ಅದನ್ನು ತಪ್ಪಿಸಿಕೊಳ್ಳುವಂತಿಲ್ಲ. ಅವರಿಗೊಂದು ಸಶಕ್ತ ಕಾರಣವನ್ನೇಳದೆ ಹೋದರೆ ಬೇಸರಿಸಿಕೊಳ್ಳುತ್ತಾರೆ. ಕಷ್ಟದ ದಿನಗಳಲ್ಲಿ ಸಹಾಯ ಮಾಡಿದವರಿಗೆ, ಈಗಲೂ ನನ್ನ ಭವಿತವ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡೆ ಸಹಾಯ ಮಾಡುತ್ತಿರುವವರಿಗೆ ಬೇಸರ ಮಾಡುವುದು ಕೂಡ ಸರಿಯಲ್ಲ. ಹಿಂಗಿಂಗೆ ಹಣದ ಸಮಸ್ಯೆಯ ಕಾರಣದಿಂದಾಗಿ ಸೇರಲಾಗುತ್ತಿಲ್ಲ ಅಂತ ನಿಜ ಹೇಳುವುದೇ ಒಳ್ಳೆಯದೇನೋ. ಯಾವೊಂದು ನಿರ್ಧಾರಕ್ಕೂ ಬರಲಾಗಲಿಲ್ಲ. ಇಂತಹ ಗೊಂದಲದ ಸಮಯದಲ್ಲಿ ಸಾಗರನಿಗಲ್ಲದೇ ಮತ್ಯಾರಿಗೆ ಫೋನು ಮಾಡುವುದು.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.