ಡಾ. ಅಶೋಕ್. ಕೆ. ಆರ್.
ಗಾಂಧಿ ಜಯಂತಿಯ ದಿನ ಸಾಬರಮತಿ ಆಶ್ರಮದಲ್ಲಿ ನಡೆದ 'ಸ್ವಚ್ಛ ಭಾರತ ದಿನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿಯವರು ಭಾರತ ಈಗ ಬಯಲು ಶೌಚ ಮುಕ್ತ ರಾಷ್ಟ್ರವಾಗಿದೆ ಎಂದು ಹೇಳಿದ್ದಾರೆ. ೬೦ ತಿಂಗಳುಗಳಲ್ಲಿ ಹನ್ನೊಂದು ಕೋಟಿ ಶೌಚಾಲಯಗಳು ನಿರ್ಮಾಣವಾಗಿರುವುದನ್ನು ನೆಪವಾಗಿಟ್ಟುಕೊಂಡು ಪ್ರಧಾನಿಯವರು ಬಯಲು ಶೌಚ ಮುಕ್ತ ರಾಷ್ಟ್ರದ ಘೋಷಣೆ ಮಾಡಿದ್ದಾರೆ. ನಿಜಕ್ಕೂ ವಾಸ್ತವದಲ್ಲಿ, ಭಾರತ ಬಯಲು ಶೌಚ ಮುಕ್ತ ರಾಷ್ಟ್ರವಾಗಿದೆಯಾ?
ನಮ್ಮ ರಾಜಕಾರಣಿಗಳು - ಅದು ಮುಖ್ಯಮಂತ್ರಿಯಾದರೂ ಸರಿ, ಪ್ರಧಾನಮಂತ್ರಿಯಾದರೂ ಸರಿ - ಚುನಾವಣೆಯ ಸಂದರ್ಭದಲ್ಲಿ ಸುಳ್ಳುಗಳನ್ನೇಳುವುದು ಅಥವಾ ಇರುವ ಸತ್ಯವನ್ನೇ ಊಹಿಸಲಾರದಷ್ಟು ದೊಡ್ಡ ಮಟ್ಟದಲ್ಲಿ ವೈಭವೀಕರಿಸಿ ಹೇಳುವುದು ಸಹಜ ಸಂಗತಿಯಂತೇ ಆಗಿ ಹೋಗಿದೆ. My experiments with truth ಅನ್ನೋ ಹೆಸರಿನ ಆತ್ಮಚರಿತ್ರೆ ಬರೆದ, ಸತ್ಯಕ್ಕಾಗಿ ಆಗ್ರಹಿಸುವ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ ಗಾಂಧೀಜಿಯ ಜನ್ಮದಿನವೇ ಅನಾವಶ್ಯಕ ಸುಳ್ಳೇಳುವ ಅನಿವಾರ್ಯತೆಯಾದರೂ ಪ್ರಧಾನಿಗೇನಿತ್ತು? ಅಥವಾ ನಿಜಕ್ಕೂ ಯಾರೋ ಒಬ್ಬ ಅಧಿಕಾರಿಯೋ ಮತ್ತೊಬ್ಬರೋ ವೈಭವೀಕರಿಸಿ ಕೊಟ್ಟ ವರದಿಯನ್ನೇ ನಂಬಿಬಿಡುವಷ್ಟು ನಮ್ಮ ಪ್ರಧಾನಿ ಮುಗ್ದರೇ?
ಈ ಮುಂಚೆ ಇದ್ದ ನಿರ್ಮಲ ಭಾರತ ಯೋಜನೆಯಡಿ, ತದನಂತರ ಬಂದ ಸ್ವಚ್ಛ ಭಾರತ ಯೋಜನೆಯಡಿ ಬಹಳಷ್ಟು ಗ್ರಾಮಗಳಲ್ಲಿ ಮನೆಗೊಂದು ಶೌಚಾಲಯ ನಿರ್ಮಾಣಗೊಂಡಿರುವುದು ಎದ್ದು ಕಾಣಿಸುತ್ತದೆ (ಕೊನೇ ಪಕ್ಷ ಕರ್ನಾಟಕದ ಹಳ್ಳಿಗಳಲ್ಲಿ), ಅದರಲ್ಲೇನೂ ಅನುಮಾನವಿಲ್ಲ. ಅಷ್ಟಿದ್ದರೂ ಹಳ್ಳಿಯಂಚಿನ ಕೆರೆ ಬದಿಗಳಲ್ಲಿ, ಗದ್ದೆ ಹೊಲದ ಬದುವಿನಲ್ಲಿ, ಕಾಲುವೆಯಂಚಿನಲ್ಲಿ, ಹಳ್ಳಗಳತ್ತಿರ ಬಯಲು ಶೌಚ ಯಥಾಸ್ಥಿತಿಯಲ್ಲೇ ಮುಂದುವರೆದಿರುವುದಂತೂ ಹೌದು. ಶೌಚಾಲಯಗಳ ನಿರ್ಮಾಣ ನಡೆಯುತ್ತಿದ್ದರೂ ಬಯಲು ಶೌಚ ಯಾಕೆ ಮುಂದುವರೆಯುತ್ತಿದೆ?