ಕು.ಸ.ಮಧುಸೂದನ ರಂಗೇನಹಳ್ಳಿ
ದೇಶ ಮತ್ತು ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ತೀವ್ರ ಆರ್ಥಿಕ ಹಿಂಜರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳ ನಡುವೆಯೇ ರಾಜ್ಯದ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಮತ್ತೊಂದು ಸುತ್ತಿನ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುವುದಾಗಿ ಘೋಷಿಸಿದ್ದಾರೆ.
2013ರಿಂದ 2018ರವರೆಗು ಅಂದಿನ ಕಾಂಗ್ರೆಸ್ ಸರಕಾರ ನಡೆಸಿದ್ದ ಬಂಡವಾಳ ಹೂಡಿಕೆಯ ಸಮಾವೇಶಗಳು ಪಡದುಕೊಂಡಿದ್ದ ಪ್ರಚಾರವನ್ನು, ತಂದುಕೊಟ್ಟ ಪಲಿತಾಂಶವನ್ನು ವಿಶ್ಲೇಷಿಸಿದರೆ ಈ ಸಮಾವೇಶಗಳ ನಿಜಬಣ್ಣ ಬಯಲಾಗುತ್ತ ಹೋಗುತ್ತದೆ. ಈ ಹಿಂದಿನ ಕೈಗಾರಿಕಾ ಮಂತ್ರಿಗಳು ರಾಜ್ಯದಲ್ಲಿ ಸಮಾವೇಶಗಳನ್ನು ನಡೆಸುವುದರ ಜೊತೆಜೊತೆಗೆ ವಿದೇಶಗಳಲ್ಲಿಯೂ ರೋಡ್ ಶೋಗಳನ್ನು ನಡೆಸಿ ತಮ್ಮ ಪ್ರಯತ್ನ ಶೇಕಡಾ ನೂರರಷ್ಟು ಫಲಪ್ರದವಾಗಿದೆಯೆಂದು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ ವಸ್ತು ಸ್ಥಿತಿ ಬೇರೆಯದೆ ಇದೆ!
ಕಳೆದ ಐದು ವರ್ಷಗಳಲ್ಲಿ ಸರಿ ಸುಮಾರು ಎಪ್ಪತ್ತು ಸಾವಿರ ಕೋಟಿ ಮೊತ್ತದ ಒಂದು ಸಾವಿರದ ನೂರೈವತ್ತು ಯೋಜನೆಗಳಿಗೆ ಸರಕಾರದ ಉನ್ನತಾಧಿಕಾರದ ಸಮಿತಿ ಮಂಜೂರಾತಿ ನೀಡಿತ್ತು. ಆದರೆ ಈವರೆಗು ಕೇವಲ ನೂರಾ ನಲವತ್ತೆರಡು ಯೋಜನೆಗಳು ಮಾತ್ರ ಅನುಷ್ಠಾನಗೊಂಡಿದ್ದು, ಹೂಡಿಕೆಯಾದ ಬಂಡವಾಳ ಕೇವಲ ಒಂಭತ್ತು ಸಾವಿರ ಕೋಟಿಯಷ್ಟು ಮಾತ್ರ..ಇನ್ನುಳಿದ ಹಣ ಹೂಡಿಕೆಯಾಗುವ ಭರವಸೆಯಂತು ಸದ್ಯಕ್ಕೆ ಯಾರಿಗೂ ಇಲ್ಲ. ಯಾಕೆಂದರೆ ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆಯಲ್ಲಿ ನಿರಾಶಾದಾಯಕ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಬಂಡವಾಳ ಹೂಡಲು ಯಾರೂ ಮುಂದೆಬರುವುದಿಲ್ಲವೆಂಬುದು ಸತ್ಯ.