ಕು.ಸ.ಮಧುಸೂದನ ರಂಗೇನಹಳ್ಳಿ
ತೆಲಂಗಾಣ ವಿದಾನಸಭೆ ವಿಸರ್ಜನೆಯಾದ ಕ್ಷಣದಿಂದಲೇ ಆ ರಾಜ್ಯದಲ್ಲಿ ನೀತಿಸಂಹಿತೆ ಜಾರಿಯಾಗಿದ್ದು, ತೆಲಂಗಾಣದ ಉಸ್ತುವಾರಿ ಸರಕಾರವಾಗಲಿ ಅಥವಾ ಆ ರಾಜ್ಯ ಕುರಿತಂತೆ ಕೇಂದ್ರ ಸರಕಾರವಾಗಲಿ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಬಾರದೆಂಬ ಆದೇಶವನ್ನು ಹೊರಡಿಸಿದೆ.
ಕೇಂದ್ರ ಸರಕಾರದ ಆಜ್ಞಾಪಾಲಕನಂತೆ ವರ್ತಿಸುವ ಸಾಂವಿಧಾನಿಕ ಸಂಸ್ಥೆಯೊಂದು ತೆಗೆದುಕೊಳ್ಳಬಹುದಾದ ಅವೈಜ್ಞಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ನಿರ್ದಾರವನ್ನು ನಮ್ಮ ಕೇಂದ್ರ ಚುನಾವಣಾ ಆಯೋಗ ಈಗ ತೆಗೆದುಕೊಂಡಿದೆ. ತೆಲಂಗಾಣದಲ್ಲಿ ಹಾಲಿ ಇರುವ ಕೆ.ಚಂದ್ರಶೇಖರ್ ರಾವ್ ಅವರ ಸರಕಾರವು ಉಸ್ತುವಾರಿ ಸರಕಾರವಾಗಿದ್ದು, ಜನಪರವಾದ ಯಾವುದೇ ಜನಪ್ರಿಯ ಯೋಜನೆಗಳನ್ನು ಹೊಸದಾಗಿ ಘೋಷಿಸಲು ಅದು ಅಧಿಕಾರ ಹೊಂದಿಲ್ಲವೆಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ತೆಲಂಗಾಣದ ಮುಖ್ಯಮಂತ್ರಿಗಳಾದ ಶ್ರೀ ಕೆ.ಚಂದ್ರಶೇಖರರಾವ್ ಇದೇ ಸೆಪ್ಟೆಂಬರ್ ಆರನೇ ತಾರೀಖು ವಿದಾನಸಭೆಯನ್ನು ಅವಧಿಗೆ ಮುನ್ನವೇ ವಿಸರ್ಜಿಸಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಹಾಗೆ ವಿದಾನಸಭೆಯನ್ನು ವಿಸರ್ಜಿಸಿದಾಗ ಶ್ರೀ ರಾವ್ ಅವರು ಬಹುಶ: ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆಗಳು ಘೋಷಣೆಯಾಗಬಹುದು ಮತ್ತು ಡಿಸೆಂಬರ್ ಮದ್ಯಭಾಗದ ಹೊತ್ತಿಗೆ ಚುನಾವಣೆಗಳು ನಡೆಯಬಹುದು. ಈ ಬಗ್ಗೆ ನಾನು ಚುನಾವಣಾ ಆಯೋಗದ ಜೊತೆ ಚರ್ಚಿಸಿದ್ದೇನೆಂದೂ ಹೇಳಿದ್ದರು.