ಆಗ 6, 2016

ಯಾರೂ ಅಷ್ಟು ಸುಲಭಾಗಿ ಅಪರಿಚಿತರನ್ನು ಸಾಯಿಸುವುದಿಲ್ಲ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಯಾರೂ ಅಷ್ಟು ಸುಲಭವಾಗಿ 
ಅಪರಿಚಿತರನ್ನು
ಸಾಯಿಸುವುದಿಲ್ಲ

ನಿಮ್ಮ ಹಾಗೆ!
ನೀವು ನಂಬಿದ ದೇವರೂ ನಿಮ್ಮನ್ನು
ಕ್ಷಮಿಸಲಾರ ನೆನಪಿಡಿ.
ಅಮಾಯಕರ ಗುಂಡಿಗೆಗೆ ಹೊಡೆದ ಪ್ರತಿ ಗುಂಡೂ
ತಾಯಿಯೊಬ್ಬಳ ಎದೆಗೇನೇ ತಗುಲುವುದು
ಅಸಂಖ್ಯಾತ ಅನಾಥ ಹಸುಗೂಸುಗಳನ್ನು ಬೀದಿಯಲ್ಲಿ ಬಿಡುವುದು
ನಿಮಗೂ ಗೊತ್ತಿದೆ ಯಾವ ಧರ್ಮವೂ ಕೊಲ್ಲುವುದ ಅನುಮತಿಸುವುದಿಲ್ಲ
ಯಾವ ಗ್ರಂಥವೂ ರಕ್ತದ ಶಾಯಿಯಲ್ಲಿ ಬರೆಯಲ್ಪಟ್ಟಿರುವುದಿಲ್ಲ
ನೀವು ಕೊಂದ ಪ್ರತಿಯೊಬ್ಬನಿಗೂ
ಒಂದು ಗೂಡು
ಅದರೊಳಗಷ್ಟು ಅವನ ನಂಬಿದ ಜನರು
ಇರುವರು
ಸತ್ತವನೆದೆಯಲ್ಲಿ ಉಕ್ಕಿದ ನೆತ್ತರು
ತರುತ್ತದೆ ಬದುಕಿದವರ ಕಣ್ಣೊಳಗೆ ಕಣ್ಣೀರು
ಯಾವ ಹತ್ಯೆಯೂ ನಿಮ್ಮನ್ನು ಸ್ವರ್ಗದತ್ತ ಕರೆದೊಯ್ಯುವುದಿಲ್ಲ
ಯಾವ ಪ್ರಾರ್ಥನೆಯೂ ನಿಮ್ಮನ್ನು ಕ್ಷಮಿಸುವುದಿಲ್ಲ
ನಡೆದ ಹತ್ಯೆಗಳಿಗೆ ಪ್ರತಿಯಾಗಿ ನಿಮ್ಮನ್ನು ಕೊಲ್ಲುವುದು ಕಷ್ಟವೇನಲ್ಲ
ವ್ಯತ್ಯಾಸವಿಷ್ಟೆ ಕೊಲ್ಲುವವನನ್ನೂ ಕ್ಷಮಿಸುವ ಧಾರಿಣಿಯ ಮೇಲೆ
ನಿಮ್ಮಂತವರ ರಕ್ತ ಚೆಲ್ಲುವುದು ಬೇಡ
ಹಾಗೆ ನೋಡಿದರೆ ನಿಮ್ಮನ್ನು ಮನುಷ್ಯರೆಂದೇ ನಾವು ತಿಳಿದಿಲ್ಲ!

2.

ಮೊನ್ನೆಯವರೆಗು ಸಹನೆಯ ಮಾತಾಡುತ್ತಿದ್ದವರಿಂದು
ಸ್ವರ್ಗದ ಮಾತಾಡುತ್ತಿದ್ದಾರೆ
ಮೊನ್ನೆಯವರೆಗು ಶಾಂತಿಯ ಮಾತಾಡುತ್ತಿದ್ದವರಿಂದು
ಯುದ್ದದ ಮಾತಾಡುತ್ತಿದ್ದಾರೆ
ಮೊನ್ನೆಯವರೆಗು ಬದುಕಿಸುವ ಮಾತಾಡುತ್ತಿದ್ದವರಿಂದು
ಮುಗಿಸುವ ಮಾತಾಡುತ್ತಿದ್ದಾರೆ
ಮೊನ್ನೆಯವರೆಗು ಮೌನವಾಗಿದ್ದ ಹುಡುಗನಿಂದು
ಬೀಕರ ಬಾಷಣಕೋರನಾಗಿದ್ದಾನೆ
ಮೊನ್ನೆವರೆಗು ರಕ್ತ ಕಂಡರೆ ಚೀರುತ್ತಿದ್ದವನಿಂದು
ರಕ್ತ ಪಿಪಾಸುವಾಗಿದ್ದಾನೆ.
ಮೊನ್ನೆವರೆಗು ಭೂಲೋಕವೇ ಸ್ವರ್ಗವೆಂದು ಹೆಮ್ಮೆಯಿಂದ ಹೇಳುತ್ತಿದ್ದವನಿಂದು
ನೆಲವ ನರಕ ಮಾಡಿ ಸ್ವರ್ಗ ಸೇರುವ ಮಾತಾಡುತ್ತಿದ್ದಾನೆ.
ಮೊನ್ನೆವರೆಗು ಮನೆ ಮಗನಂತಿದ್ದವನಿಂದು
ಮನೆಮುರುಕನಂತಾಗಿದ್ದಾನೆ. 

ಆಗ 5, 2016

ಮೇಕಿಂಗ್ ಹಿಸ್ಟರಿ: ಕ್ಞಾಮ, ಕಾಲರ ಮತ್ತು ಪ್ಲೇಗ್: ಬಿಳಿ ದೇವರ ಶಾಪ

ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
05/08/2016
ಕ್ಷಾಮವೆಂಬುದು ‘ಪ್ರಾಕೃತಿಕ’ ಸಂಗತಿ ಎಂಬುದು ನಮ್ಮಲ್ಲಿರುವ ಒಂದು ತಪ್ಪು ಗ್ರಹಿಕೆ. ಆದರೂ ಐತಿಹಾಸಿಕ ನೆನಪುಗಳು ತಿಳಿಸುವುದೇನೆಂದರೆ ಭಾರತದಲ್ಲಿ ಅತ್ಯಂತ ಹಳೆಯ ಕ್ಷಾಮ ಕಂಡುಬಂದದ್ದು ಬ್ರಿಟೀಷ್ ವಸಾಹತುಶಾಹಿಯ ದಿನಗಳಲ್ಲಿ. ಕರ್ನಾಟಕ ವಸಾಹತುಶಾಹಿಗೆ ಒಳಪಡುವ ಸಮಯದಲ್ಲಿ ಕರ್ನಾಟಕದ ಭೂಭಾಗ ಅರಣ್ಯವಾಗಿತ್ತು. ನೀರು ಕಡಿಮೆಯಿದ್ದ ಪ್ರದೇಶದಲ್ಲೂ ಸಹಿತ ಮರಗಳ ಸೂರು ಅಧಿಕವಾಗಿತ್ತು ಎನ್ನುವುದನ್ನು ಬುಚನನ್ನಿನ ವರದಿಗಳು ತಿಳಿಸುತ್ತವೆ. ಇದು ನದಿ ಮತ್ತು ಹೊಳೆಗಳರಿವನ್ನು ಧೀರ್ಘಕಾಲೀನವಾಗಿಸಿದ್ದವು. ಪರಿಣಾಮವಾಗಿ, ಅಂತರ್ಜಲ ಸಮೃದ್ಧವಾಗಿತ್ತು ಮತ್ತು ನೀರಾವರಿ ಕೆರೆಕಟ್ಟೆಗಳು ಹರಿದೋಡುತ್ತಿದ್ದ ನೀರಿಗೆ ತಡೆಯೊಡ್ಡಿ, ಭೂಮಿಗಿಂಗುವಂತೆ ಮಾಡಿ ಅಂತರ್ಜಲವನ್ನು ವೃದ್ಧಿಯಾಗಿಸುವುದಷ್ಟೇ ಅಲ್ಲದೇ ಭೂಮಿ ತೇವಾಂಶವನ್ನು ಹೆಚ್ಚಿಸುತ್ತಿತ್ತು; ಇದಕ್ಕೆ ಸಾಕ್ಷಿ ಎಂದರೆ ಮಳೆ ಕಡಿಮೆ ಬೀಳುವ ಪ್ರದೇಶದಲ್ಲೂ ಬಂಪರ್ ಬೆಳೆ ತೆಗೆಯುತ್ತಿದ್ದುದು ಮತ್ತು ಆರ್ದ್ರ ಬೆಳೆಗಳನ್ನೂ ಬೆಳೆಯುತ್ತಿದ್ದುದು. ಕರಾವಳಿ, ಮಲೆನಾಡು ಮತ್ತು ಅರೆ ಮಲೆನಾಡು ನೀರು ಹೆಚ್ಚಾಗಿದ್ದ ಪ್ರದೇಶಗಳು; ಕರಾವಳಿ ಮೂರು ಆರ್ದ್ರ ಬೆಳೆಗಳನ್ನು ವರುಷಕ್ಕೆ ಉತ್ಪಾದಿಸುತ್ತಿತ್ತು ಮತ್ತೀ ಪ್ರದೇಶ ಭಾರತ ಉಪಖಂಡದಲ್ಲಿ ಅತಿ ಹೆಚ್ಚು ಮಳೆ ಬೀಳುವ ಎರಡನೇ ಪ್ರದೇಶವಾಗಿತ್ತು. ಹಾಗಾಗಿ ಕರ್ನಾಟಕ ‘ಕಡಿಮೆ’ ಅಥವಾ ‘ಹೆಚ್ಚು’ ಮಳೆಯನ್ನನುಭವಿಸುತ್ತಿತ್ತೇ ಹೊರತು ಕ್ಷಾಮದ ದಿನಗಳಲ್ಲ. ಮಳೆ ಕಡಿಮೆಯಾದ ಬರದ ವರುಷಗಳಿದ್ದವೇ ಹೊರತು ಕ್ಞಾಮವಿರಲಿಲ್ಲ. ಈ ಬರವೂ ಕೂಡ ಅಲ್ಲಲ್ಲಿ ಕಂಡು ಬರುತ್ತಿತ್ತೇ ಹೊರತು ಇಡೀ ಕರ್ನಾಟಕದಲ್ಲಲ್ಲ, ಹೆಚ್ಚು ಆಹಾರಧಾನ್ಯ ಉತ್ಪಾದನೆಯಾದ ಪ್ರದೇಶದಿಂದ ಬರದ ಪ್ರದೇಶಕ್ಕೆ ಆಹಾರ ರವಾನೆಯಾಗುತ್ತಿತ್ತು. ಕ್ಷಾಮದ ಕಾರಣದಿಂದಾಗಿ ಹಸಿವಿನಿಂದ ಜನರು ಸಾಯುವುದನ್ನು ಮತ್ತು ರೋಗಪೀಡಿತರಾಗುವುದನ್ನು ಈ ರವಾನೆಯಾಗುವ ಆಹಾರ ತಡೆಯುತ್ತಿತ್ತು.

ಕರ್ನಾಟಕದಲ್ಲಿ ಕೃಷಿ ಕ್ಷೇತ್ರ ಉತ್ತುಂಗದಲ್ಲಿದ್ದಾಗ ಬಂದ ಮನ್ರೋ, ರಾಜ್ಯ ಕೃಷಿಯನ್ನು ಬಲವಂತವಾಗಿ ವಶಪಡಿಸಿಕೊಂಡಿರುವುದು ಮತ್ತು ಲೂಟಿ ಮಾಡುತ್ತಿರುವುದನ್ನು ಪರಿಶೀಲಿಸಿದರು. ಕ್ಷಾಮ ಹವಾಮಾನದಿಂದಾಗಿರುವುದಲ್ಲ, ಪ್ರಾಕೃತಿಕವಲ್ಲ ಬದಲಿಗೆ ಮನುಷ್ಯ ನಿರ್ಮಿತ ಎಂಬಂಶವನ್ನು ತಮ್ಮ ಬರಹದಲ್ಲಿ ಸಾದರಪಡಿಸಿದರು. ಕ್ಷಾಮ, ಅವರ ಬರಹಗಳಲ್ಲಿ ನಾವು ಓದಿದಂತೆ, ಸಾಮಾಜಿಕ ವ್ಯವಸ್ಥೆಯಲ್ಲಿನ ಹಸ್ತಕ್ಷೇಪದಿಂದುಂಟಾದದ್ದು, ಮತ್ತು ಈ ಹಸ್ತಕ್ಷೇಪವನ್ನು ಆ ಕಾಲಘಟ್ಟದಲ್ಲಿ ಮಾಡಿದ್ದು ವಸಾಹತುಶಾಹಿ.

1805ರಲ್ಲಿ ಮನ್ರೋ The course to be taken by government in dealing with the security of grainನಲ್ಲಿ ಬರೆಯುತ್ತಾರೆ: “ಕರ್ನಾಟಕದಲ್ಲಿ ಹವಾಮಾನ ವೈಪರೀತ್ಯ ಎಷ್ಟಾದರೂ ಇರಲಿ, ಸೇವಿಸಲೆಷ್ಟು ಆಹಾರ ಬೇಕೋ ಅಷ್ಟು ಬಹುಶಃ ಉತ್ಪಾದನೆಯಾಗುತ್ತದೆ; ಬೆಳೆಯ ಸಂಪೂರ್ಣ ವೈಫಲ್ಯವೆಂಬುದು ಇಲ್ಲಿ ಕೇಳಿಯೇ ಗೊತ್ತಿಲ್ಲ, ಕೆಲವೊಂದು ಸಣ್ಣ ಪುಟ್ಟ ಹಳ್ಳಿಗಳಲ್ಲಿ ಅಥವಾ ಚಿಕ್ಕ ಜಿಲ್ಲೆಗಳಲ್ಲಿ ಆಗಿರಬಹುದಷ್ಟೇ. ಎಲ್ಲೆಡೆಯೂ ಬೆಳೆ ಕಡಿಮೆಯಾಗಿಬಿಟ್ಟ ಮತ್ತು ಪೂರ್ತಿ ಹಳ್ಳಿಗಳೇ ನಾಶವಾಗಿಬಿಟ್ಟ ತೀರ ಕೆಟ್ಟ ವರ್ಷಗಳಲ್ಲೂ ಸಹ, ಉತ್ಪಾದನೆಯಾದ ಆಹಾರ ಎಂಟತ್ತು ತಿಂಗಳುವರೆಗೆ ಸಾಕಾಗುತ್ತೆ; ಕೊರತೆಯನ್ನು ಕೂಡಿಟ್ಟ ಕಳೆದ ವರುಷದ ಆಹಾರ ಧಾನ್ಯ ಪೂರೈಸುತ್ತಿತ್ತು ಮತ್ತು ಹವಾಮಾನ ಉತ್ತಮವಿದ್ದು ಆಹಾರಧಾನ್ಯ ಚೆನ್ನಾಗಿ ಬೆಳೆದ ನೆರೆಹೊರೆಯ ಪ್ರಾಂತ್ಯಗಳಿಂದ ಆಮದಾಗುತ್ತಿತ್ತು. ಬೀಜ ಸಮಯ ಭಾರತದಲ್ಲಿ ಎಷ್ಟು ಸುದೀರ್ಘವಾಗಿದೆಯೆಂದರೆ – ಒಂದು ರೀತಿಯ ಕಾಳು ಬೆಳೆಯದೇ ಹೋದರೆ, ಮತ್ತೊಮ್ಮೆ ಭೂಮಿಯನ್ನು ಉತ್ತು ಬೇರೊಂದು ಬೀಜವನ್ನು ನೆಡಬಹುದಿತ್ತು; ಸಾಮಾನ್ಯವಾಗಿ ಉತ್ಪಾದನೆ ಎಷ್ಟು ಸಮೃದ್ಧವಾಗಿ ಹೆಚ್ಚುವರಿ ಬೆಳೆಯನ್ನು ಕಳೆದ ವರುಷಗಳಲ್ಲಿ ರೈತರಿಗೆ ಮತ್ತು ವರ್ತಕರಿಗೆ ನೀಡಿರುತ್ತದೆಯೆಂದರೆ ಈ ದೇಶದಲ್ಲಿ ಹವಾಮಾನ ವೈಪರೀತ್ಯದ ಒಂದೇ ಕಾರಣಕ್ಕೆ ಕ್ಷಾಮ ಉಂಟಾಗುವುದು ಅಸಾಧ್ಯ. ಹವಾಮಾನ ವೈಪರೀತ್ಯದ ಕಾರಣದಿಂದ ಉಂಟಾಗುವ ಆಹಾರಧಾನ್ಯದ ಕೊರತೆಯನ್ನು ಕ್ಷಾಮವಾಗಿ ಪರಿವರ್ತಿಸುವುದು ಪ್ರಾಂತ್ಯಗಳ ನಡುವೆ ನಡೆಯುವ ಯುದ್ಧಗಳು, ಕಂದಾಯ ವಸೂಲು ಮಾಡಲು ಸರಕಾರ ತೋರುವ ಸುಲಿಗೆಯ ಸ್ವಭಾವ, ಬೆಲೆಯನ್ನು ನಿಯಂತ್ರಿಸಿ ದೊಡ್ಡ ಪಟ್ಟಣಗಳಿಗೆ ಪೂರೈಸುವ ನಿರ್ಧಾರಗಳು ಮತ್ತಿವೆಲ್ಲಕ್ಕಿಂತಲೂ ಹೆಚ್ಚಾಗಿ ಜಮೀನುದಾರರು ನಡೆಸುವ ದರೋಡೆ ಕ್ಷಾಮಕ್ಕೆ ಕಾರಣ”. (258)

ಮನ್ರೋ ಪಟ್ಟಿ ಮಾಡುವ ಈ ಎಲ್ಲಾ ಅಪರಾಧಗಳು ಕೊರತೆಯನ್ನು ಕ್ಷಾಮವನ್ನಾಗಿ ಪರಿವರ್ತಿಸುತ್ತವೆ; ಇವೆಲ್ಲವನ್ನೂ ಬ್ರಿಟೀಷ್ ವಸಾಹತುಶಾಹಿ ಮಾಡಿತು, ಪ್ರೋತ್ಸಾಹಿಸಿತು. ‘ಅನಾಗರೀಕ’ ಪ್ರಪಂಚಕ್ಕೆ ಬ್ರಿಟೀಷ್ ವಸಾಹತುಶಾಹಿ ಕ್ಷಾಮವನ್ನು ಉಡುಗೊರೆಯಾಗಿ ನೀಡಿತು.

ಬಳ್ಳಾರಿ ಮತ್ತು ನೆರೆಹೊರೆ ಜಿಲ್ಲೆಗಳು 1804ರಲ್ಲಿ ಕ್ಷಾಮದಿಂದ ತತ್ತರಿಸಿತು, ಇದಕ್ಕೆ ಮನ್ರೋ ಪ್ರತಿಕ್ರಯಿಸಿದ್ದನ್ನು ನಾವು ನೋಡಿದ್ದೇವೆ. ಈ ಕ್ಷಾಮದ ಉಪಟಳವನ್ನು ಮೈಸೂರು ಸಾಮ್ರಾಜ್ಯದಲ್ಲಿ ಕೈಯಳತೆ ದೂರದಲ್ಲಿರಿಸಿದ್ದಕ್ಕೆ ಕಾರಣ ವಸಾಹತುಶಾಹಿ ಆ ಸಮಯದಲ್ಲಿ ನೀರಾವರಿನ್ನಿನ್ನೂ ನಾಶ ಪಡಿಸಿರಲಿಲ್ಲ ಮತ್ತು ಬೇಳೆ ಕಾಳುಗಳ ವ್ಯಾಪಾರದಲ್ಲಿ ತನ್ನ ಕೈಯಾಡಿಸಿರಲಿಲ್ಲ. ಒಡೆಯರರಾಸ್ಥಾನದ ಇತಿಹಾಸಕಾರ ಶಾಮ ರಾವ್ ಹಿಗ್ಗಿನೊಂದಿಗೆ ನೆನಪಿಸಿಕೊಳ್ಳುತ್ತಾರೆ: “1804 ಕ್ಷಾಮದ ಸಂದರ್ಭದಲ್ಲಿ…… ಕ್ಷಾಮಪೀಡಿತ ಪ್ರದೇಶದ ಜನರು ದೊಡ್ಡ ಸಂಖೈಯಲ್ಲಿ ಮೈಸೂರಿಗೆ ವಲಸೆ ಬಂದರು. ಆ ಸಮಯದಲ್ಲಿ ಬೇಳೆ ಕಾಳುಗಳು ಎಷ್ಟು ಸಮೃದ್ಧವಾಗಿದ್ದವೆಂದರೆ, ವಲಸೆಗಾರರ ಹಸಿವನ್ನು ನೀಗಿಸುವುದಷ್ಟೇ ಅಲ್ಲದೆ ದೊಡ್ಡ ಪ್ರಮಾಣದ ಆಹಾರಧಾನ್ಯವನ್ನು ಬ್ರಿಟೀಷರಾಡಳಿತವಿದ್ದ ಜಿಲ್ಲೆಗಳಿಗೂ ರಫ್ತು ಮಾಡಲಾಯಿತು. ಆ ಸಮಯದಲ್ಲಿ ಮದ್ರಾಸಿನ ಗವರ್ನರ್ ಆಗಿದ್ದ ಲಾರ್ಡ್ ವಿಲಿಯಂ ಬೆಂಟಿಕ್ 4ನೇ ಜುಲೈ 1804ರಂದು ಪೂರ್ಣಯ್ಯನವರಿಗೆ ಬರೆದ ಪತ್ರದಲ್ಲಿ ಭಾರತದ ಇತರೆ ಭಾಗದಲ್ಲಿ ಕ್ಷಾಮದಿಂದಾದ ಆಹಾರ ಧಾನ್ಯ ಕೊರತೆಯಿಂದಾದ ಹಾನಿಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತ, ಮೈಸೂರು ರಾಜ್ಯ ಇಂತಹ ದುರಂತದಿಂದ ಪಾರಾಗುವಂತೆ ಮಾಡಿದ್ದಕ್ಕೆ ಧನ್ಯವಾದಗಳನ್ನರ್ಪಿಸುತ್ತಾನೆ. ಮೈಸೂರು ಮುಂದಕ್ಕೂ ಹೀಗೇ ಸಮೃದ್ಧವಾಗಿರಲಿ, ನೆರೆಯ ಜನರ ಅವಶ್ಯಕತೆಗಳನ್ನು ಪೂರೈಸುವಂತಾಗಿ ಮತ್ತು ಕ್ಷಾಮ ಪೀಡಿತ ಜನರಿಗೆ ಆಸರೆಯಾಗಲಿ ಎಂದು ಹಾರೈಸುತ್ತಾನೆ”. (259)

ಹೆಚ್ಚುವರಿ ಆಹಾರಧಾನ್ಯಗಳು ಕಡಿಮೆ ಸಮಯಾವಧಿಯದ್ದು. ಚಿನ್ನದ ಮೊಟ್ಟೆಯಿಡುವ ಬಾತುಕೋಳಿಯ ಕತೆಯಂತೆ, ವಸಾಹತುಶಾಹಿ ಮೈಸೂರಿನ ಕೃಷಿ ವ್ಯವಸ್ಥೆಯನ್ನು ಲೂಟಿ ಹೊಡೆಯಲಾರಂಭಿಸಿತು. ಮತ್ತು ಶಾಮ ರಾವ್ ಸ್ವತಃ ಒಪ್ಪಿಕೊಂಡಂತೆ, 1816-17ರಲ್ಲಿ ಮೈಸೂರಿಗೆ ಭೇಟಿ ಕೊಟ್ಟ ಬರಗಾಲ, 1823-24ರಷ್ಟರಲ್ಲಿ ಕ್ಷಾಮವಾಗಿ ಕಾಡಿತು. (260) ಮತ್ತೆ 1831 ಹಾಗೂ 1833ರಲ್ಲಿ ಕ್ಷಾಮ ಉಂಟಾಯಿತು. (261)

ಈ ಬಾರಿ ಸಾಮ್ರಾಜ್ಯದ ನೆರವಿಗೆ ಬರುವ ಯಾವ ಪ್ರದೇಶವೂ ಭಾರತದಲ್ಲಿ ಇರಲಿಲ್ಲ. ಬಹುಶಃ ಟಿಪ್ಪುವಿನ ಮೈಸೂರೇ ಕೊನೆಯ ಅನ್ನದ ಬಟ್ಟಲಾಗಿತ್ತು, ಡೆಕ್ಕನ್ನಿನ ಕೃಷಿ ವ್ಯವಸ್ಥೆಯನ್ನೀಗಾಗಲೇ ಅತ್ಯಾಚಾರ ಮಾಡಲಾಗಿತ್ತು ಮತ್ತು ಸಂಪೂರ್ಣ ನಾಶ ಮಾಡಿಬಿಡಲಾಗಿತ್ತು. ಕ್ಷಾಮ ಮೈಸೂರಿಗೆ ಭೇಟಿ ಕೊಟ್ಟಾಗ, ಒಬ್ಬಂಟಿಯಾಗಿ ಬಂದಿರಲಿಲ್ಲ; ರೋಗ ರುಜಿನಗಳನ್ನು, ಜೊತೆಗೂಡಿಸಿಕೊಂಡೇ ಭೇಟಿ ಕೊಟ್ಟಿತ್ತು. ಶಾಮ ರಾವ್ ಹೇಳುತ್ತಾರೆ: “ಹವಾಮಾನದ ಅನಿಶ್ಚಿತತೆಯನ್ನು ಹೊರತುಪಡಿಸಿ, ದೇಶದಲ್ಲೇ ಮೊದಲ ಬಾರಿಗೆ….. ಈಗ ಕಾಲರಾ ಎಂದು ಹೆಸರಿಸಲಾಗಿರುವ ಸಾಂಕ್ರಮಿಕ ರೋಗ ಜನರನ್ನು ಧೃತಿಗೆಡಿಸುತ್ತಿದೆ, ಕೃಷಿ ಕೆಲಸಕ್ಕೆ ಹೊಡೆತ ಕೊಡುತ್ತಿದೆ”. (262)

ಶಾಮ ರಾವ್ ಸಾಂಕ್ರಮಿಕ ರೋಗದ ಬಗ್ಗೆ “ಈಗ ಕಾಲರಾ ಎಂದು ಹೆಸರಿಸಲಾಗಿರುವ” ಎಂದು ಅವಲೋಕಿಸಿರುವುದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಕಾಲರಾ ಎಂಬ ಹೆಸರು ತೀರ ಇತ್ತೀಚೆನದು. ಇದು ಆ ಖಾಯಿಲೆಯೂ ಇತ್ತೀಚೆನದೇ ಎನ್ನುವುದನ್ನು ತೋರಿಸುತ್ತದೆಯಲ್ಲವೇ?

ಕಾರ್ಲ್ ಮಾರ್ಕ್ಸನ ಟಿಪ್ಪಣಿಗಳು ಈ ಸಂಗತಿಯನ್ನು ಸ್ಪಷ್ಟಪಡಿಸುತ್ತದೆ. ಆಗಷ್ಟ್ 1817ರಲ್ಲಿ ಆತ “the first outbreak of cholera with terrible vehemence in India” ನಲ್ಲಿ ಅವರಿದನ್ನು ತಿಳಿಸುತ್ತಾರೆ. “ಮೊದಲಿದಿದು ಕಲ್ಕತ್ತಾ ಸಮೀಪದ ಜೆಸ್ಸೋರ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿತು. ಇಡೀ ಏಷ್ಯಾಕ್ಕೆ ಹಬ್ಬಿ ಯುರೋಪ್ ಖಂಡವನ್ನು ತಲುಪಿತು, ಅಲ್ಲಿ ಬಲಿಯಾಕಿ ಇಂಗ್ಲೆಂಡಿಗೆ ಹೋಗಿ ನಂತರ ಅಮೆರಿಕಾಕ್ಕೆ ತಲುಪಿಕೊಂಡಿತು”. ಅಂದರೆ ಭಾರತದ ಕಾಲರಾ ಕಾಮನ್ ವೆಲ್ತ್ ದೇಶಗಳಿಗೆಲ್ಲ ಹೋಗಿ ರಾಣಿಯನ್ನು ಭೇಟಿಯಾಗಲು ಲಂಡನ್ನಿಗೂ ಭೇಟಿ ಕೊಟ್ಟಿತು. ಮಾರ್ಕ್ಸ್ ನಂತರ ನವೆಂಬರ್ 1817ರಲ್ಲಿ ಹ್ಯಾಸ್ಟಿಂಗ್ಸ್ ಸೈನ್ಯದ ಮೇಲೆ ದಾಳಿ ಮಾಡಿದ ಕಾಲರಾದ ಬಗ್ಗೆ ಹೇಳುತ್ತಾ, ಅದು ಬುಂದೇಲ್ ಖಂಡವನ್ನು ದಾಟುವಾಗ “ವಾರಗಟ್ಟಲೇ ದಾರಿಯಲ್ಲಿ ಸತ್ತ ಮತ್ತು ಸಾಯುತ್ತಿದ್ದ ಜನರ ದೇಹಗಳಿತ್ತು” ಎಂದು ತಿಳಿಸುತ್ತಾರೆ. (263) ಬ್ರಿಟೀಷ್ ಸೈನ್ಯ ಹೊಸ ಹೊಸ ಪ್ರದೇಶಗಳನ್ನು ಆಕ್ರಮಿಸುವ ಸಲುವಾಗಿ ಪ್ರದೇಶದಿಂದ ಪ್ರದೇಶಕ್ಕೆ ಹೋಗುತ್ತಿದ್ದಂತೆಯೇ ಅವರಲ್ಲಿದ್ದ ಖಾಯಿಲೆ ಪೀಡಿತರು ಈ ಮಾರಣಾಂತಿಕ ರೋಗವನ್ನು ಇಡೀ ಭೂಮಿಯ ತುಂಬೆಲ್ಲ ಹರಡಿಬಿಟ್ಟರು.

ಸಾಂಕ್ರಮಿಕ ರೋಗವಾದ ಪ್ಲೇಗಿಗೆ ಕನ್ನಡದಲ್ಲಿ ಸಮನಾರ್ಥಕ ಪದವೇ ಇರಲಿಲ್ಲವೆಂಬುದು ಅಚ್ಚರಿಯ ಸಂಗತಿಯೇನಲ್ಲ. ಕನ್ನಡೀಕರಣಗೊಂಡು ಪಿಲ್ಲೇಕಮ್ಮ ಎಂದು ಕರೆಸಿಕೊಂಡ ಪ್ಲೇಗ್ ಅಮ್ಮ, ಜನರರ್ಪಿಸುವ ಕಾಣಿಕೆಗಳನ್ನು ಸ್ವೀಕರಿಸಿ ತನ್ನ ಆಕ್ರಮಣವನ್ನು ನಿಲ್ಲಿಸುವ ತಾಯಿ ದೇವತೆ. ಬ್ರಿಟೀಷ್ ಆಳ್ವಿಕೆ ಕನ್ನಡ ನಿಘಂಟಿಗೆ ಹೊಸ ಹೊಸ ಪದಗಳನ್ನು ಸೇರಿಸಿದ್ದೇ ಅಲ್ಲದೆ, ಈಗಾಗಲೇ ದೈವಸಂದಣಿ ಹೆಚ್ಚಿರುವ ಹಿಂದೂ ಧರ್ಮದಲ್ಲಿ ಮತ್ತಷ್ಟು ಹೊಸ ಭೀತಿ ಮೂಡಿಸುವ ದೇವರನ್ನು ದೇವತೆಯರನ್ನು ಪರಿಚಯಿಸಿತು.

ಕ್ಷಾಮ, ಕಾಲರ ಮತ್ತು ಪ್ಲೇಗ್ ವಸಾಹತುಶಾಹಿ ಜನಸಮೂಹವನ್ನು ಬಿಕ್ಕಟ್ಟಿಗೆ ದೂಡಿಬಿಟ್ಟಿರುವ ಸ್ಪಷ್ಟ ಸೂಚನೆಗಳು. ಇದು ಲೂಟಿಕೋರ ಊಳಿಗಮಾನ್ಯ ದೊರೆಗಳ, ಹಣ ಬಾಕ ಬಡ್ಡಿವ್ಯಾಪಾರಿಗಳ ಮತ್ತು ದರೋಡೆ ಮಾಡುವ ಬಿಳಿ ವಸಾಹತುಶಾಹಿಗಳ ಒಟ್ಟಾರೆ ಪರಿಣಾಮ. ಸಾಮಾಜಿಕ ರಚನೆಯಲ್ಲಿ ಆಳವಾದ ಬಿಕ್ಕಟ್ಟನ್ನು ಪ್ರತಿಫಲಿಸುವ ಈ ಪರಿಣಾಮಗಳು ಶತ್ರುಗಳಲ್ಲಿ ಅಮಾನವೀಯತೆಯನ್ನು ಮತ್ತಷ್ಟು ಹೆಚ್ಚಿಸಿ ಅವರ ಕೋರೆ ಹಲ್ಲುಗಳು ಕರ್ನಾಟಕದ ಜನಸಮೂಹದ ಮಾಂಸದಾಳಕ್ಕೆ ಇಳಿಸಿ ಕ್ಷಾಮದಿಂದೆಷ್ಟು ಲಾಭವೋ ಅಷ್ಟನ್ನೂ ಮಾಡಿಕೊಳ್ಳಲು ಕಾರಣವಾಯಿತು. ಪರಿಣಾಮಗಳು ಮತ್ತಷ್ಟು ಬಿಕ್ಕಟ್ಟುಗಳುದ್ಭವವಾಗಲು ಕಾರಣವಾಯಿತು, ಜನರನ್ನು ದುಃಖಸಾಗರದಲ್ಲಿ ಮುಳುಗಿಸಿಬಿಟ್ಟಿತು.

ಮುಂದಿನ ವಾರ: ಬಲವಂತ ಮತ್ತು ಲೂಟಿ

ಆಗ 4, 2016

ದಲಿತ ದಂಪತಿಗಳ ಹತ್ಯೆಯೂ ಉತ್ತರ ಪ್ರದೇಶದ ರಾಜಕೀಯವೂ

ಹದಿನೈದು ರುಪಾಯಿಗೆ ಹತ್ಯೆಯಾದ ದಲಿತ ದಂಪತಿ
(ಚಿತ್ರ ಕೃಪೆ: ಎನ್ ಡಿ ಟಿ ವಿ)
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
04/08/2016
ಸ್ವಾತಂತ್ರ ದೊರೆತ ಎಪ್ಪತ್ತು ವರ್ಷಗಳ ನಂತರವೂ ಈ ದೇಶದಲ್ಲಿ ದಲಿತರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿವೆ ಮತ್ತು ಅವುಗಳನ್ನು ತಡೆಯಬೇಕಾದ ಪ್ರಭುತ್ವಗಳು ಮೊಸಳೆ ಕಣ್ಣೀರು ಸುರಿಸಿ ಮೇಲ್ಜಾತಿಯವರಿಗೆ ತೊಂದರೆಯಾಗದ ರೀತಿಯಲ್ಲಿ ಅಂತಹ ಪ್ರಕರಣಗಳನ್ನು ನಿಬಾಯಿಸುತ್ತಿವೆಯೆನ್ನುವು
ದೇ ನಮ್ಮ ನಾಡಿನ ಬಹು ದೊಡ್ಡ ದುರಂತ. ಎರಡು ದಿನದ ಹಿಂದೆ ಉತ್ತರಪ್ರದೇಶದಲ್ಲಿ ನಡೆದ ಈ ಘಟನೆಯನ್ನೇ ನೋಡಿ:

ಈ ತಿಂಗಳ 21ನೇ ತಾರೀಖು ಗುರುವಾರ ಉತ್ತರಪ್ರದೇಶದ ಕುರಾ ವ್ಯಾಪ್ತಿಯ ಲಕ್ಷ್ಮಿಪುರ ಎಂಬ ಹಳ್ಳಿಯಲ್ಲಿ ದಲಿತ ದಂಪತಿಗಳಾದ ಶ್ರೀಭರತ್ ನಾಥ್(48), ಮಮತಾ(45)ರವರನ್ನು ಮೇಲ್ಜಾತಿಯ ಅಂಗಡಿ ಮಾಲೀಕನೊಬ್ಬ ಕೊಡಲಿಯಿಂದ ಕತ್ತರಿಸಿ ಕೊಂದಿದ್ದಾನೆ. ಕೆಲ ದಿನಗಳ ಹಿಂದೆ ಈ ದಂಪತಿಗಳು ಬಿಸ್ಕೆಟ್ ಖರೀದಿಸಿದ 15 ರೂಪಾಯಿಗಳ ಸಾಲವನ್ನು ಹಿಂದಿರುಗಿಸಲು ಇನ್ನಷ್ಟು ಸಮಯಾವಕಾಶ ಕೇಳಿದ್ದೇ ಈ ಕೊಲೆಗೆ ಕಾರಣವೆನ್ನಲಾಗಿದೆ. ಹತ್ಯೆಯಾದ ದಂಪತಿಗಳು ನಾತ್ (ದೊಂಬರ ಜಾತಿ) ಸಮುದಾಯಕ್ಕೆ ಸೇರಿದ್ದು ಕೂಲಿ ಮಾಡಲು ಜಮೀನಿಗೆ ಹೋಗುತ್ತಿದ್ದ (ಬೆಳಗಿನ 6ಗಂಟೆ ಸುಮಾರಿಗೆ) ಸಂದರ್ಭದಲ್ಲಿ ಈ ಹತ್ಯೆ ನಡೆದಿದೆ. ಗಮನಿಸಬೇಕಾದ ಅಂಶವೆಂದರೆ ಉತ್ತರ ಪ್ರದೇಶದಲ್ಲಿರುವ ನಾತ್ ಸಮುದಾಯದವರು ಪಾರಂಪರಿಕವಾಗಿ ದೊಂಬರ ಆಟ ಆಡಿ ಜನರಿಗೆ ಮನೋರಂಜನೆ ಒದಗಿಸುವ ಕಸುಬಿನವರು ಮತ್ತು ಹೆಚ್ಚಿನ ಭಾಗದಲ್ಲಿ ಅಲೆಮಾರಿ ಪ್ರವೃತ್ತಿಯವರು. ಈ ಸಮುದಾಯದ ಶೇಕಡಾ 99ರಷ್ಟು ಜನರಿಗೆ ಉಳುಮೆ ಮಾಡಲು ಸ್ವಂತದ ಭೂಮಿಯಿಲ್ಲವಾಗಿದ್ದು ತಮ್ಮ ಕುಲಕಸುಬನ್ನೇ ನಂಬಿ ಕೊಂಡು ಬದುಕುವವರು. ಕೊಲೆಯಾದ ಈ ದಂಪತಿಗಳು ತಮ್ಮ ಕುಲಕಸುಬನ್ನು ಮುಂದುವರೆಸಲಾಗದೆ ಹಳ್ಳಿಯಲ್ಲಿ ನೆಲೆಸಿ ಭೂಮಾಲೀಕರ ಜಮೀನುಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರಾಗಿದ್ದರು. ಈ ಹತ್ಯೆ ನಡೆದ ಲಕ್ಷ್ಮಿಪುರ ಮಿಯಾಪುರ ಕ್ಷೇತ್ರಕ್ಕೆ ಸೇರಿದ್ದು ಇಲ್ಲಿ ಮುಲಾಯಂಸಿಂಗ್ ಯಾದವರ ಸೋದರ ಸಂಬಂದಿ ಸಂಸದರಾಗಿದ್ದಾರೆ. ಉತ್ತರ ಪ್ರದೇಶದ ಮಟ್ಟಿಗೆ ದಲಿತನೊಬ್ಬನ ಜೀವದ ಬೆಲೆ ಕೇವಲ 15 ರೂಪಾಯಿಗಳೆಂಬ ಕಠೋರ ಸತ್ಯವನ್ನು ಅರಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ.

ಕಳೆದ ಕೆಲ ವಾರಗಳಿಂದಲೂ ದೇಶದ ವಿವಿದ ಭಾಗಗಳಲ್ಲಿ, ಅದರಲ್ಲೂ ಹೆಚ್ಚಾಗಿ ಉತ್ತರಭಾರತದಲ್ಲಿ ದಲಿತರ ಮೇಲಿನ ಹಲ್ಲೆಗಳು ಸರಣಿ ರೂಪದಲ್ಲಿ ನಡೆಯುತ್ತಿವೆ 

ಈ ಘಟನೆಗೆ ಕೆಲದಿನಗಳ ಮೊದಲು ಮೇಲ್ವರ್ಗಕ್ಕೆ ಸೇರಿದ ಉತ್ತರಪ್ರದೇಶ ಬಾಜಪದ ಉಪಾದ್ಯಕ್ಷರಾದ ದಯಾಶಂಕರ್ ಎಂಬುವವರು ಬಹುಜನ ಪಕ್ಷದ ನಾಯಕಿ ಮಾಯಾವತಿಯವರನ್ನು (?)ಗೆ( ಸದರಿ ಪದವನ್ನು ಬಳಸಲು ನಾನು ಬಯಸುವುದಿಲ್ಲ) ಹೋಲಿಸಿ ಬಾಷಣ ಮಾಡಿ ದಲಿತರ ಮೇಲೆ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಹಲ್ಲೆ ಮಾಡುವ ತಮ್ಮ ಮೇಲ್ಜಾತಿಗಳ ಚಾಳಿಯನ್ನು ಬಹಿರಂಗಗೊಳಿಸಿದರು. ಉತ್ತರ ಪ್ರದೇಶದ ಮಟ್ಟಿಗೆ ದಲಿತರ ಮೇಲಿನ ಇಂತಹ ಹಲ್ಲೆಗಳು ಹೊಸವೇನು ಅಲ್ಲ. ಜೊತೆಗೆ ಅಪರೂಪಕ್ಕೊಮ್ಮೆ ಆಗುವಂತಹವು ಅಲ್ಲ. ನ್ಯಾಷನಲ್ ಕ್ರೈಂ ಬ್ಯೂರೊದ ವರದಿಗಳ ಪ್ರಕಾರ ಅಲ್ಲಿ ದಲಿತರ ಮೇಲಿನ ಹಲ್ಲೆಗಳು ಕನಿಷ್ಠ ವಾರಕ್ಕೊಂದಾದರು ನಡೆಯುತ್ತಿವೆಯಂತೆ. ಆದರೆ ಶೇಕಡಾ 50ರಷ್ಟು ಪ್ರಕರಣಗಳನ್ನು ಮೇಲ್ಜಾತಿಯವರ ಭಯದ ಕಾರಣದಿಂದಾಗಿ ದಲಿತರು ಹೊರಜಗತ್ತಿಗೆ ಬಾಯಿ ಬಿಡುವುದೇ ಇಲ್ಲ. ರಾಷ್ಟ್ರ ರಾಜದಾನಿಗೆ ಬಹಳ ಸಮೀಪವಿರುವ ರಾಜ್ಯದಲ್ಲೇ ದಲಿತರ ಮೇಲಿನ ಹಲ್ಲೆಗಳು ಸತತವಾಗಿ, ಯಾವ ಭಯವೂ ಇಲ್ಲದೆ ನಡೆಯುತ್ತಿರುವುದು ನಿಜಕ್ಕೂ ಖಂಡನೀಯ.

ಹಾಗಿದ್ದರೆ ಇಂತಹ ಹಲ್ಲೆಗಳನ್ನು ನಡೆಸುವಲ್ಲಿ ಮತ್ತು ನಿಲ್ಲಿಸುವಲ್ಲಿ ರಾಜಕಾರಣಿಗಳ ಪಾತ್ರವೇನೂ ಇಲ್ಲವೇ ಎನ್ನುವುದೇ ಅತ್ಯಂತ ಮುಖ್ಯ ಪ್ರಶ್ನೆಯಾಗಿದೆ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಸಿಗುವುದು ಹಲ್ಲೆಗಳ ಹಿಂದೆ ಮತ್ತು ಅದನ್ನು ತಡೆಯುವ ಯತ್ನದ ಹಿಂದೆ ಇರುವ ರಾಜಕೀಯದ ಚದುರಂಗದಾಟಗಳು. ತೀರಾ ಕ್ಷುಲ್ಲಕ ಕಾರಣಕ್ಕೂ ದಲಿತರ ಮೇಲೆ ಹಲ್ಲೆ ನಡೆಸುವ ಮೇಲ್ಜಾತಿಗಳ ಮನಸಿನಲ್ಲಿರುವ ಶ್ರೇಷ್ಠತೆಯನ್ನು ಬಡಿದೆಬ್ಬಿಸಿ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳುವಲ್ಲಿ ನಮ್ಮ ರಾಜಕೀಯ ಪಕ್ಷಗಳು ಅವುಗಳ ನಾಯಕರುಗಳು ಬಹುಮುಖ್ಯಪಾತ್ರ ವಹಿಸುತ್ತಿವೆ. ತಾವು ಬೆಂಬಲಿಸುವ ರಾಜಕಾರಣಿಗಳ ಅಭಯಹಸ್ತ ತಮಗಿದೆಯೆಂಬ ನಂಬಿಕೆಯೇ ಮೇಲ್ಜಾತಿಗಳ ಈ ಕ್ರೌರ್ಯಕ್ಕೆ ಮೂಲಭೂತ ಕಾರಣವಾಗಿವೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಸರಕಾರದ ವ್ಯವಸ್ಥೆಯೊಳಗಿರುವ ಮೇಲ್ಜಾತಿಗಳ ಪಟ್ಟಭದ್ರ ಹಿತಾಸಕ್ತಿಗಳು ತಮ್ಮನ್ನು ಕಾಪಾಡಬಲ್ಲವೆಂಬ ಆತ್ಮವಿಶ್ವಾಸದಿಂದಲೇ ಇವತ್ತು ದಲಿತರ ಮೇಲಿನ ಹಲ್ಲೆಗಳು ಹೆಚ್ಚುತ್ತಿವೆ. ಅದರಲ್ಲೂ ಜಾತಿ ಆಧಾರಿತ ರಾಜಕಾರಣವೇ ಪರಾಕಷ್ಠೆಯಲ್ಲಿರುವ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಇಂತಹವುಗಳು ಹೆಚ್ಚಿವೆ, ಇಂತಹ ಘಟನೆಗಳು ನಡೆದ ತಕ್ಷಣ ಸ್ಪರ್ದೆಗೆ ಬಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸುವ ರಾಜಕಾರಣಿಗಳು ತಮ್ಮ ವಿಷಾದದ ಹೇಳಿಕೆಗಳನ್ನು, ತಪ್ಪು ಮಾಡಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕೆಂಬ ಆಕ್ರೋಶಭರಿತ ಹೇಳಿಕೆಗಳನ್ನು, ತಕ್ಷಣಕ್ಕೆ ಒಂದಿಷ್ಟು ಪರಿಹಾರದ ಹಣವನ್ನು ನೀಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಬಹುತೇಕ ಪಕ್ಷಗಳ ರಾಜಕಾರಣಿಗಳು ಇಂತಹ ನಾಟಕಗಳಲ್ಲಿ ಪಳಗಿದವರಾಗಿದ್ದು, ಅವರಿಗೆ ಜಾತಿ ರಾಜಕಾರಣದ ಒಳಸುಳಿಗಳು ಗೊತ್ತಿರುವುದರಿಂದಲೇ ಯಾವ ಪ್ರಕರಣಕ್ಕೆ ಎಷ್ಟು ಕಣ್ಣೀರು ಸುರಿಸಬೇಕು, ಯಾವ ಪ್ರಕರಣಕ್ಕೆ ತಮ್ಮ ದನಿ ಎತ್ತರಿಸಬೇಕು ಎನ್ನುವ ಲೆಕ್ಕಾಚಾರದಲ್ಲಿ ಪಳಗಿ ಹೋಗಿದ್ದಾರೆ. ಬಹುಶ: ಇಂಡಿಯಾದ ವೃತ್ತಿಪರ ರಾಜಕಾರಣಿಗಳನ್ನು ಮೀರಿಸಲು ಬೇರಿನ್ಯಾವ ದೇಶದ ರಾಜಕಾರಣಿಗಳಿಂದಲೂ ಸಾದ್ಯವಿಲ್ಲವೇನೊ?

ಇವತ್ತು ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಘಟನೆಯ ಲಾಭವನ್ನು ಪಡೆಯಲು, ಮತ್ತು ಇದರಿಂದ ತನಗಾಗುವ ನಷ್ಟವನ್ನು ಸರಿದೂಗಿಸಲು ರಾಜಕೀಯ ಪಕ್ಷಗಳು ಪ್ರಯತ್ನ ನಡೆಸಿವೆ. ಯಾಕೆಂದರೆ ಇನ್ನೊಂದು ವರ್ಷದಲ್ಲಿ ಅಲ್ಲಿ ರಾಜ್ಯವಿದಾನಸಭಾ ಚುನಾವಣೆಗಳು ನಡೆಯಲಿದ್ದು ಚುನಾವಣೆ ಗೆಲ್ಲಲು ಎಲ್ಲ ಪಕ್ಷಗಳು ಒಂದೊಂದು ಜಾತಿಯನ್ನು ಅವಲಂಬಿಸಿವೆ. ಕೊಲೆಯಾದ ದಂಪತಿಗಳು ದಲಿತರಾಗಿದ್ದು ಶೇಕಡಾ 21ರಿಂದ 22ರಷ್ಟಿರುವ ದಲಿತ ಮತಗಳನ್ನು ಪಡೆಯಲು ಎಲ್ಲ ಪಕ್ಷಗಳೂ ಪ್ರಯತ್ನಿಸಿದರೆ, ಹಲ್ಲೆ ಮಾಡಿದವನು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು ಶೇಕಡಾ 13ರಷ್ಟಿರುವ ಬ್ರಾಹ್ಮಣ ಮತಗಳನ್ನು ಕಳೆದುಕೊಳ್ಳಲು ಉಳಿದ ಯಾವ ಪಕ್ಷಗಳೂ ತಯಾರಿರುವುದಿಲ್ಲ. ದಲಿತರ ಮತಗಳು ಬಹುಜನಪಕ್ಷಕ್ಕೆ ಹೋಗುತ್ತವೆಯೆಂಬ ಕಾರಣಕ್ಕೆ ಮತ್ತು ಬ್ರಾಹ್ಮಣ ಮತಗಳು ತಮ್ಮ ಕೈತಪ್ಪ ಬಹುದೆಂಬ ಕಾರಣಕ್ಕೆ ಕಾಂಗ್ರೆಸ್ ಮತ್ತು ಬಾಜಪಗಳು ಈ ಘಟನೆಯನ್ನು ತೀರಾ ಹೆಚ್ಚು ಪ್ರಸ್ತಾಪಿಸಲಾರವು. ಇನ್ನು ಸಮಾಜವಾದಿ ಪಕ್ಷ ಈ ಎರಡೂ ಸಮುದಾಯಗಳ ಮತ ತನಗೆ ದೊರೆಯಲಾರದೆಂಬ ನಂಬಿಕೆಯಿಂದ ಈ ಪ್ರಕರಣದ ಬಗ್ಗೆ ಹೆಚ್ಚು ಆಸಕಿ ವಹಿಸಲಾರದು. ಹೀಗಾಗಿ ಇದೂ ಕೂಡ ಮತ್ತೊಮದು ಪ್ರಕರಣವಾಗಿ ಮುಚ್ಚಿಹೋಗಬಲ್ಲದು. ಆದ್ದರಿಂದ ಈ ಘಟನೆಯನ್ನು ತೀವ್ರವಾಗಿ ಖಂಡಿಸುವಲ್ಲಿಯೂ ರಾಜಕೀಯ ಪಕ್ಷಗಳು ಅಗಾಧವಾದ ತಾಳ್ಮೆಯಿಂದಲೇ ಕೆಲಸ ಮಾಡುವುದು ನಿಶ್ಚಿತ. ಹೀಗಾಗಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ.

ಸಾಮಾಜಿಕ ಪರಿವರ್ತನೆ, ರಾಜಕೀಯ ಇಚ್ಚಾ ಶಕ್ತಿ, ದಲಿತರಿಗೆ ರಾಜಕೀಯ ಬಲ ನೀಡುವುದು ಮುಂತಾದ ಮಾತುಗಳೆಲ್ಲ ಸದ್ಯದ ಮಟ್ಟಿಗೆ ಬೊಗಳೆಗಳಂತೆ ಕಂಡರೆ ಅಚ್ಚರಿಯೇನಿಲ್ಲ. ಯಾಕೆಂದರೆ ಜಾತಿಯ ಆಧಾರದಲ್ಲಿ ಈಗಾಗಲೇ ಒಡೆದು ಹೋಗಿರುವ ಭಾರತೀಯ ಸಮಾಜವನ್ನು ಅಷ್ಟು ಸುಲಭವಾಗಿ ಬದಲಾಯಿಸುವುದು ಸಾದ್ಯವಿಲ್ಲ. ಹಾಗೆ ಬದಲಾಗಿಬಿಟ್ಟರೆ ರಾಜಕೀಯ ಮಾಡಲಾಗುವುದಿಲ್ಲವೆಂಬ ಸತ್ಯ ನಮ್ಮ ರಾಜಕೀಯ ಪಕ್ಷಗಳಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ಈ ಜಾತಿವ್ಯವಸ್ಥೆಯ ಕರಾಳ ಮುಖವನ್ನು, ಆಂತರೀಕವಾಗಿರುವ ದ್ವೇಷದ ದಳ್ಳುರಿಯನ್ನು ಯಥಾ ಸ್ಥಿತಿಯಲ್ಲಿಡಲು ಶಕ್ತಿಮೀರಿ ಪ್ರಯತ್ನ ನಡೆಸುತ್ತಿವೆ, ಮುಂದೆಯೂ ನಡೆಸುತ್ತಲಿರುತ್ತವೆ.

ರೈತರ ಆತ್ಮಹತ್ಯೆಯ ನೈಜ ಕಾರಣಗಳು ಮತ್ತು ಪರಿಹಾರಗಳು

ಸಾಂದರ್ಭಿಕ ಚಿತ್ರ
ಕು.ಸ.ಮಧುಸೂದನನಾಯರ್
04/08/2016
ನಮ್ಮ ಶಾಲಾಕಾಲೇಜುಗಳ ಪಠ್ಯಪುಸ್ತಕಗಳಿಂದ ಹಿಡಿದು, ಕತೆ ಕಾದಂಬರಿಗಳ ಯಾವುದೇ ಪುಸ್ತಕಗಳನ್ನು ತೆರೆದು ನೋಡಿದರೂ ನಿಮಗೆ ಮೊದಲಿಗೆ ಕಂಡು ಬರುವುದು, ಇಂಡಿಯಾ ಒಂದು ಕೃಷಿ ಪ್ರಧಾನ ರಾಷ್ಟ್ರವೆಂಬ ಹಳಸಲು ಮಾತೇ! ಅದನ್ನೇನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆಯೋ ಇಲ್ಲ ವಿಷಾದದಿಂದ ಹೇಳಿಕೊಳ್ಳುತ್ತೇವೆಯೊ ನನಗಂತು ತಿಳಿದಿಲ್ಲ. ಆದರೆ ಇತ್ತೀಚೆಗೆ ಯಾವತ್ತಿಗಾದರು ನಮ್ಮದು ಕೃಷಿ ಪ್ರಧಾನ ದೇಶವೆಂದು ಹೇಳಿಕೊಳ್ಳುವ ಸಂದರ್ಭ ಬಂದಾಗೆಲ್ಲ ನಾನು ವಿಷಾದ ಮತ್ತು ನೋವನ್ನು ಅನುಭವಿಸುತ್ತೇನೆ. ಅಂಕಿಸಂಖ್ಯೆಗಳ ದೃಷ್ಠಿಯಿಂದ ಇದು ನಿಜವೂ ಹೌದು: ಇವತ್ತಿಗೂ ಇಂಡಿಯಾದ ಪ್ರತಿಶತ ಶೇಕಡಾ 68ಕ್ಕಿಂತ ಹೆಚ್ಚು ಜನ ತಮ್ಮ ಜೀವನೋಪಾಯಕ್ಕೆ ಕೃಷಿಯನ್ನೇ ಅವಲಂಬಿಸಿದ್ದಾರೆ. ತೊಂಭತ್ತರ ದಶಕದ ಜಾಗತೀಕರಣದ ನಂತರ ದೇಶದಲ್ಲಿ ಕೈಗಾರಿಕೋದ್ಯಮಗಳು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದರೂ ಅವುಗಳು ತಮ್ಮ ಸರಕು ಸೇವೆಗಳನ್ನು ಗುರಿಯಾಗಿಸಿಕೊಂಡಿರುವುದು ಈ ಶೇಕಡಾ 68 ಮಂದಿಯನ್ನೇ.

ಸ್ವಾತಂತ್ರ ಸಿಕ್ಕ ನಂತರದ ಪಂಚವಾರ್ಷಿಕ ಯೋಜನೆಗಳ ಮುಖ್ಯ ಆಧ್ಯತಾ ಕ್ಷೇತ್ರ ಕೃಷಿಯಾಗಿದ್ದು, ಹಸಿರು ಕ್ರಾಂತಿಯ ದುಷ್ಪರಿಣಾಮಗಳೇನೇ ಇದ್ದರು ದೇಶ ಆಹಾರ ಸ್ವಾವಲಂಬನೆ ಸಾಧಿಸಲು ಸಾದ್ಯವಾಯಿತು. ಆದರೆ ಆ ಆಹಾರವನ್ನು ಉತ್ಪಾದಿಸುವ ರೈತನ ಬದುಕು ಸ್ವಾವಲಂಬನತೆಯತ್ತ ಸಾಗಿತೇ ಎಂದು ಕೇಳಿದರೆ ಸಿಗುವ ಉತ್ತರ: ಇಲ್ಲ! ನಂತರದ ದಶಕಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಒಂದಿಷ್ಟು ಬದಲಾವಣೆಗಳಾಗಿ ಆಧುನಿಕ ಯಂತ್ರಗಳ ಪ್ರವೇಶವಾದರೂ ಅದು ದೊಡ್ಡ ರೈತರಿಗೆ ಮಾತ್ರ ಸೀಮಿತವಾಗಿತ್ತು. ಬದಲಿಗೆ 1990ರ ನಂತರ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗ ತೊಡಗಿದವು. ಇತ್ತೀಚೆಗಂತು ಇದು ಸರಣಿ ಆತ್ಮಹತ್ಯೆಗಳ ದಾರಿಯನ್ನು ಹಿಡಿಯಿತು. ಈ ನಿಟ್ಟಿನಲ್ಲಿ ನಾವು ನಮ್ಮ ರೈತರ ಆತ್ಮಹತ್ಯೆಗಳಿಗಿರಬಹುದಾದ ಕಾರಣಗಳನ್ನೂ, ಕಂಡುಕೊಳ್ಳಬಹುದಾದ ಪರಿಹಾರ ಕ್ರಮಗಳ ಬಗ್ಗೆಯೂ ಒಂದಷ್ಟು ಗಂಬೀರವಾಗಿ ಚಿಂತಿಸಬೇಕಾದುದು ಅನಿವಾರ್ಯವೆನಿಸುತ್ತದೆ:

1.ನೀರಾವರಿ ಸೌಲಭ್ಯಗಳ ಕೊರತೆ:

ಸಾಂದರ್ಭಿಕ ಚಿತ್ರ
ನಾವು ಕೃಷಿಗೆ ನಿಜವಾಗಿಯೂ ಆಧ್ಯತೆ ನೀಡುವುದೇ ಆಗಿದ್ದರೆ ನಮ್ಮ ಮೊದಲ ಆಧ್ಯತೆಯಾಗಬೇಕಿದ್ದುದು ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವುದಾಗಿತ್ತು. 

ಈ ನಿಟ್ಟಿನಲ್ಲಿ ನಮ್ಮ ಪಂಚವಾರ್ಷಿಕ ಯೋಜನೆಗಳು ಹೆಜ್ಜೆ ಇಟ್ಟರೂ ಅದು ಕೂಡ ಇನ್ನೊಂದು ತಪ್ಪು ಹೆಜ್ಜೆಯಾಗಿತ್ತು. ಕೃಷಿಗೆ ನೀರಾವರಿ ಕಲ್ಪಿಸುವುದೆಂದರೆ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸುವುದು ಮಾತ್ರವೆಂದು ನಂಬಿಕೊಂಡಿದ್ದ ಅವತ್ತಿನ ರಾಜಕಾರಣಿಗಳು, ಯೋಜನಾ ತಜ್ಞರುಗಳು ಬಾರೀ ಅಣೆಕಟ್ಟುಗಳನ್ನು ನಿರ್ಮಿಸಿ ಕೈ ಬಿಟ್ಟರು. ಅವರುಗಳಿಗೆ ಸಣ್ಣ ನೀರಾವರಿ ಯೋಜನೆಗಳಾದ ಚೆಕ್ ಡ್ಯಾಂ ನಿರ್ಮಾಣ, ಹನಿ ನೀರಾವರಿ, ಏತ ನೀರಾವರಿ, ಕೆರೆಗಳ ಕಾಯಕಲ್ಪದಂತಹ ವಿಷಯಗಳು ಮುಖ್ಯವೆನಿಸಲೇ ಇಲ್ಲ. ಯಾಕೆಂದರೆ ಗುತ್ತಿಗೆದಾರರಿಗೆ ಮತ್ತು ರಾಜಕಾರಣಿಗಳಿಗೆ ಬಾರೀ ಯೋಜನೆಗಳು ತಂದು ಕೊಡುವ ಲಾಭದ ಪ್ರಮಾಣದ ಮುಂದೆ ಸಣ್ಣಪುಟ್ಟ ಯೋಜನೆಗಳು ನಿರುಪಯುಕ್ತವೆನಿಸಿದ್ದವು. ಹೀಗಾಗಿ ಬಾರೀ ನೀರಾವರಿ ಯೋಜನೆಗಳ ನಂತರವೂ ದೇಶದ ಶೇಕಡಾ 60 ಕ್ಕಿಂತ ಹೆಚ್ಚು ಕೃಷಿಭೂಮಿ ಮಳೆಯನ್ನೇ ಅವಲಂಬಿಸಿ ನಡೆಯಬೇಕಾಯಿತು. ಕಳೆದ ಮೂವತ್ತು ವರ್ಷಗಳಲ್ಲಿ ಮಳೆಯೆನ್ನುವುದು ಅದೃಷ್ಟದಾಟವಾದಂತಾಗಿದೆ. ಬದಲಾಗುತ್ತಿರುವ ಭೂಮಿಯ ಉಷ್ಣಾಂಶ, ಪರಿಸರದಲ್ಲಾಗುತ್ತಿರುವ ಏರುಪೇರುಗಳು ಮಳೆ ಬರುವ ಸಮಯ ಮತ್ತು ಪ್ರಮಾಣವನ್ನು ನಿಶ್ಚಯಿಸುವಂತಾಗಿ, ಒಂದು ವರ್ಷ ತೀವ್ರ ಅತಿವೃಷ್ಠಿಯಾದರೆ, ಇನ್ನೊಂದು ವರ್ಷ ತೀವ್ರ ಅನಾವೃಷ್ಠಿ ತಲೆದೋರುತ್ತಿದೆ. ಮಳೆಯನ್ನು ನಂಬಿ ಕೃಷಿ ಮಾಡುತ್ತಿರುವ ರೈತನಿಗೆ ಇದು ಬಹಳ ಮುಖ್ಯವಾದ ಸಮಸ್ಯೆಯಾಗಿದೆ. ಅದರಲ್ಲೂ ಕೃಷಿಯೇ ಬಹುಮುಖ್ಯ ಕಸುಬಾಗಿರುವ ಮದ್ಯಭಾರತದಲ್ಲಂತು ನೀರಾವರಿಯ ಸಮಸ್ಯೆ ತೀವ್ರವಾಗಿದೆ. ಇದರಿಂದಾಗಿ ನಿಗದಿತ ಸಮಯದಲ್ಲಿ ಬಿತ್ತನೆ ಮಾಡಲಾಗದೆ, ಸರಿಯಾದ ಸಮಯದಲ್ಲಿ ಕಟಾವು ಮಾಡಲಾಗದೆ ರೈತ ತೀವ್ರ ಸಂಕಷ್ಟಕ್ಕೀಡಾಗುತ್ತಿದ್ದಾನೆ.

ಪರಿಹಾರ:

ಮಳೆಯ ವಿಚಾರದಲ್ಲಿ ಮಾನವ ಅಸಹಾಯಕನಾಗಿದ್ದು ಬೀಳುವ ಮಳೆಯ ನೀರನ್ನು ಸಂಗ್ರಹಿಸಿಟ್ಟುಕೊಂಡು ಬೇಕಾದಾಗ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವುದನ್ನೇ ನಾವು ಕೃಷಿ ನೀರಾವರಿ ಎನ್ನುತ್ತೇವೆ. ನಾನು ಮೊದಲಿಗೆ ಹೇಳಿದಂತೆ ಇಂಡಿಯಾದಂತಹ ವಿಶಾಲವಾದ ಕೃಷಿ ದೇಶದಲ್ಲಿ ಬಾರೀ ನೀರಾವರಿ ಯೋಜನೆಗಳು ಉಪಯೋಗಕ್ಕೆ ಬರುವುದಿಲ್ಲ. ಈಗಾಗಲೇ ಕಟ್ಟಲಾಗಿರುವ ದೊಡ್ಡ ಅಣೆಕಟ್ಟುಗಳ ಅನೇಕ ಕಾಲುವೆಗಳ ಕೊನೆಯವರೆಗು ನೀರು ತಲುಪದಿರುವುದನ್ನು ನಾವು ಗಮನಿಸುತ್ತಿದ್ದೇವೆ. ಹಾಗಾಗಿ ಸಣ್ಣ ನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದೊಂದೆ ನಮಗಿರುವ ದಾರಿ. ನದಿಗಳಿಗೆ ಸಣ್ಣಸಣ್ಣ ಚೆಕ್ ಡ್ಯಾಂಗಳನ್ನು ಕಟ್ಟುವುದು, ಏತ ನೀರಾವರಿ, ಹನಿ ನೀರಾವರಿಯಂತಹ ಯೋಜನೆಗಳನ್ನು ಜಾರಿಗೆ ತರುವುದು, ಕೆರೆಗಳಲ್ಲಿ ಹೂಳು ತೆಗೆದು ಅವುಗಳಲ್ಲಿ ಸಾಕಷ್ಟು ನೀರು ಸಂಗ್ರಹಿಸಿ ಕೆರೆ ಅಚ್ಚುಕಟ್ಟು ಪ್ರದೇಶಗಳನ್ನು ಗುರುತಿಸಿ ಅವು ಒತ್ತುವರಿಯಾಗದಂತೆ ನೋಡಿಕೊಳ್ಳುವುದನ್ನು ಮಾಡಬೇಕಾಗಿದೆ. ಇದರ ಜೊತೆಗೆ ಮಳೆ ನೀರು ಸಂಗ್ರಹಿಸುವ ವೈಜ್ಞಾನಿಕ ವಿಧಾನಗಳ ಬಗ್ಗೆ ರೈತರಿಗೆ ಶಿಕ್ಷಣ ನೀಡಬೇಕು. ಪ್ರತಿ ಹಳ್ಳಿಗಳಲ್ಲಿಯೂ ಸಾಮಾಜಿಕ ಅರಣ್ಯಗಳನ್ನು ಬೆಳೆಸುವುದು( ಈಗ ಇರುವ ಈ ಯೋಜನೆಯಲ್ಲಿ ಅರಣ್ಯ ಇಲಾಖೆಯವರು ಕೇವಲ ನೀಲಗಿರಿ ಅಕೇಶಿಯಾಗಳನ್ನು ಬೆಳೆಸಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿರುವುದನ್ನು ತಡೆಯಬೇಕಾಗಿದೆ)

2. ಗುಣಮಟ್ಟದ ಬೀಜ, ಗೊಬ್ಬರ, ನ್ಯಾಯಯುತ ಬೆಲೆಯಲ್ಲಿ ಲಭ್ಯವಾಗದೇ ಇರುವುದು:

ಸಾಂದರ್ಭಿಕ ಚಿತ್ರ
ನೀರಾವರಿಯ ನಂತರದಲ್ಲಿ ನಮ್ಮ ರೈತರು ಎದುರಿಸುತ್ತಿರುವ ಬಹುಮುಖ್ಯವಾದ ಸಮಸ್ಯೆಯೆಂದರೆ ಉತ್ತಮ ಗುಣಮಟ್ಟದ ಬೀಜ ಮತ್ತು ಗೊಬ್ಬರಗಳು ನಿಗದಿತ ಸಮಯಕ್ಕೆ ದೊರೆಯದೆ ಇರುವುದಾಗಿದೆ. ಇವತ್ತು ದೇಶದಲ್ಲಿ ಹಲವಾರು ಬೀಜೋತ್ಪಾದನೆಯ ಕಂಪನಿಗಳಿದ್ದು ಅವು ಒಳ್ಳೆಯ ಬೀಜಗಳನ್ನು ಸರಬರಾಜು ಮಾಡುವ ಯಾವ ಭರವಸೆಯೂ ಇಲ್ಲದಂತಾಗಿದೆ ಉತ್ತರ ಕರ್ನಾಟಕದಲ್ಲಿ ಕಳಪೆ ಬೀಜಗಳಿಂದಲೇ ನೂರಾರು ರೈತರು ಬೆಳೆನಷ್ಟ ಮಾಡಿಕೊಂಡು ಸಾಲಕ್ಕೆ ತುತ್ತಾಗಿರುವುದನ್ನು ನಾವು ಪ್ರತಿವರ್ಷವೂ ಕೇಳುತ್ತಿದ್ದೇವೆ. ನಮ್ಮ ಸರಕಾರಗಳು ಇಂತಹ ಬೀಜೋತ್ಪಾದಕ ಕಂಪನಿಗಳ ಮೇಲೆ ಯಾವ ನಿಯಂತ್ರಣವನ್ನು ಹೇರದೆ ಬೀಜ ಉತ್ಪಾದನೆಯಲ್ಲಿ ಯಾವ ಅನುಭವಗಳು ಇರದ ಕಂಪನಿಗಳೆಲ್ಲ ಬೀಜ ತಯಾರಿಸಿ ಬಾರಿ ಜಾಹಿರಾತುಗಳೊಂದಿಗೆ ಮಾರುಕಟ್ಟೆಗೆ ಬಿಡುತ್ತಿವೆ. ತೀರಾ ವಿದ್ಯಾವಂತರಲ್ಲದ ರೈತರು ಹಿಂದೆಮುಂದೆ ನೋಡದೆ ಇಂತಹ ಬೀಜಗಳನ್ನು ಖರೀದಿಸಿ ಮೂರ್ಖರಾಗುತ್ತಿದ್ದಾರೆ. ಅದೇ ರೀತಿ ಗೊಬ್ಬರದಲ್ಲೂ ಇತ್ತೀಚೆಗೆ ಗುಣಮಟ್ಟ ಕಡಿಮೆಯಾಗುತ್ತಿದೆ. ಇನ್ನೇನು ಬಿತ್ತನೆ ಮಾಡುವ ಸಮಯಕ್ಕೆ ಮಾರುಕಟ್ಟೆಯಲ್ಲಿ ಬೀಜಗಳ ಅಭಾವ ಸೃಷ್ಠಿಸುವ ಕಾಳಸಂತೇಕೋರರು ಹೆಚ್ಚಾಗಿದ್ದಾರೆ. ಬಿತ್ತನೆಗೆ ನೆಲ ಹದಗೊಳಿಸುವ ಕೆಲಸವನ್ನು ಬಿಟ್ಟು ರೈತ ಪೇಟೆಗಳಲ್ಲಿ ಬೀಜ ಮತ್ತು ಗೊಬ್ಬರಗಳಿಗಾಗಿ ದಿನಗಟ್ಟಲೆ ಅಲೆಯುವ ಸ್ಥಿತಿಯಿದೆ. ಇಂತಹ ಸನ್ನಿವೇಶದಲ್ಲಿ ವರ್ತಕರು ಒಂದಕ್ಕೆರಡು ಬೆಲೆಯಲ್ಲಿ ಕಾಳಸಂತೆಯ ದಂದೆ ನಡೆಸುವುದು ಸಾಮಾನ್ಯವಾಗಿ ಬಿಟ್ಟಿದೆ. ಇವನ್ನೆಲ್ಲ ನಿಯಂತ್ರಿಸಬೇಕಾದ ಸರಕಾರದ ಇಲಾಖೆಗಳು ಭ್ರಷ್ಟರಿಂದ ತುಂಬಿದ್ದು ಅವರ ತಿಜೋರಿಗಳು ಮಾತ್ರ ಭರ್ತಿಯಾಗುತ್ತಿವೆ.

ಪರಿಹಾರಗಳು:

ಸರಕಾರ ಬೀಜೋತ್ಪನ್ನ ಕಂಪನಿಗಳನ್ನು ನಿಯಂತ್ರಿಸುವ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು. ಅಕಸ್ಮಾತ್ ಕಳಪೆ ಬೀಜಗಳಿಂದ ಬೆಳೆನಷ್ಟ ಉಂಟಾದರೆ ಸದರಿ ಕಂಪನಿಗಳೇ ರೈತರಿಗೆ ಪರಿಹಾರ ಕೊಡಬಲ್ಲಂತಹ ಕಾನೂನುಗಳನ್ನು ಜಾರಿಗೆ ತರಬೇಕು. ಇಲ್ಲದೇ ಹೋದಲ್ಲಿ ಬೀಜ ಮತ್ತು ಗೊಬ್ಬರ ತಯಾರಿಕೆಗಳನ್ನು ರಾಷ್ಟ್ರೀಕರಣಗೊಳಿಸಿ ತಾನೇ ನೇರವಾಗಿ ರೈತರಿಗೆ ಸುಲಭದರದಲ್ಲಿ ತಲುಪಿಸುವ ಹೊಸ ವ್ಯವಸ್ಥೆಯೊಂದನ್ನು ರೂಪಿಸಬೇಕು. ಯಾವ ಪ್ರದೇಶ ಯಾವ ಬೆಳೆಗೆ ಅನುಕೂಲಕರವಾಗಿದೆಯೊ ಅಂತಹ ಬೆಳೆಯ ಬೀಜಗಳನ್ನು ಆಯಾ ಪ್ರದೇಶಗಳಲ್ಲಿ ಸರಕಾರವೇ ಒದಗಿಸುವ ವ್ಯವಸ್ಥೆಯೊಂದನ್ನು ಮಾಡಿದರೆ ರೈತರು ಖಾಸಗಿಯವರಿಂದ ಮೋಸ ಹೋಗುವ ಸಂದರ್ಭಗಳು ಕಡಿಮೆಯಾಗುತ್ತವೆ. ಕೃಷಿಬಜೆಟ್ ಎನ್ನುವ ನಾಟಕ ಮಾಡುತ್ತ ಲಕ್ಷಾಂತರ ರೂಪಾಯಿಗಳನ್ನು ಕೃಷಿಗೆ ನೀಡಲಾಗಿದೆಯೆಂದು ಜನರನ್ನು ನಂಬಿಸಿ ಕತ್ತು ಕುಯ್ಯುವ ನೀತಿಯನ್ನು ಬಿಟ್ಟು ಇಂತಹ ಕ್ರಮಗಳನ್ನು ಕೈಗೊಂಡರೆ ಮಾತ್ರ ನಮ್ಮ ರೈತರಿಗೆ ಉತ್ತಮ ಬೀಜ, ಗುಣಮಟ್ಟದ ಗೊಬ್ಬರಗಳು ದೊರೆಯಬಲ್ಲವು.

3.ಬೆಳೆದ ಬೆಳೆಗೆ ಸಿಗದ ನ್ಯಾಯಯುತ ಬೆಲೆ:

ಬಹುಶ: ನಮ್ಮ ರೈತರು ನಿಜವಾಗಿಯೂ ಎದುರಿಸುತ್ತಿರುವ ಬೀಕರ ಸಮಸ್ಯೆ ಎಂದರೆ ಇದೇ ಇರಬೇಕು. ಮೇಲೆ ನಾನು ಹೇಳಿದ ಎಲ್ಲ ಸಮಸ್ಯೆಗಳನ್ನು ಎದುರಿಸಿಯೂ ಒಂದಷ್ಟು ಬೆಳೆ ಕೈಗೆ ಬಂದರೆ ಅದನ್ನು ಮಾರುವಲ್ಲಿ ಆತ ಎದುರಿಸಬೇಕಾದ ತೊಂದರೆಗಳು ಅಗಾಧ ಮತ್ತು ಕ್ರೂರವೆನ್ನಬಹುದು. ಯಾಕೆಂದರೆ ಒಬ್ಬ ಸಣ್ಣ ಉದ್ಯಮಿ ಕೂಡ ತಾನು ಉತ್ಪಾದಿಸಿದ ಉತ್ಪನ್ನಕ್ಕೆ ತಾನೇ ಬೆಲೆ ಕಟ್ಟುವ ಕಾನೂನು ಬದ್ದ ಅಧಿಕಾರ ಹೊಂದಿದ್ದಾನೆ. ಇಡೀ ದೇಶದಲ್ಲಿ ಇಂತಹದೊಂದು ಹಕ್ಕು ಇಲ್ಲದಿರುವುದು ನಮ್ಮ ರೈತನಿಗೆ ಮಾತ್ರ.. ರೈತನೊಬ್ಬ ತಾನು ಬೆಳೆದ ಬೆಳೆಗೆ ತಾನು ಖರ್ಚು ಮಾಡಿರುವ ಹಣವನ್ನು, ತಾನು ನೀಡಿದ ಶ್ರಮವನ್ನು ಲೆಕ್ಕ ಹಾಕಿ ಬೆಲೆ ನಿಗದಿಪಡಿಸುವಷ್ಟು ವಿದ್ಯಾವಂತನು ಬುದ್ದಿವಂತನೂ ಆಗಿಲ್ಲ. ಹೋಗಲಿ ಆಯಾ ಪ್ರದೇಶಗಳ ಕೃಷಿ ಅಧಿಕಾರಿಗಳಾದರು ಇದನ್ನು ಮಾಡುತ್ತಾರೆ ಎಂದರೆ ಇಲ್ಲ. ಉದಾಹರಣೆಗೆ ಕಬ್ಬಿನ ಬೆಲೆ ನಿಗದಿ ಮಾಡುವವರು ಸಕ್ಕರೆ ಕಾರ್ಖಾನೆಯವರು ಇಲ್ಲ ಆಲೆಮನೆಯವರು. ಇನ್ನು ಬತ್ತದ ಬೆಲೆ ನಿಗದಿ ಮಾಡುವವರು ರೈಸ್ ಮಿಲ್ ಮಾಲೀಕರು ಇಲ್ಲ ಬತ್ತದ ವ್ಯಾಪಾರಿಗಳು. ಹೀಗೆ ರೈತ ಬೆಳೆಯುವ ಎಲ್ಲ ಬೆಳೆಗಳ ಬೆಲೆಯನ್ನೂ ಯಾವುದೇ ಶ್ರಮ ಹಾಕದ ಬಿಳಿ ಬಟ್ಟೆಯ ವರ್ತಕರು ನಿಗದಿ ಮಾಡುವುದರಿಂದ ರೈತನಿಗೆ ದೊರೆಯಬೇಕಾದ ನ್ಯಾಯಯುತ ಬೆಲೆ ದೊರೆಯುತ್ತಿಲ್ಲ. ಇನ್ನು ಸರಕಾರ ರಚಿಸಿರುವ ರೆಗ್ಯುಲೇಟೆಡ್ ಮಾರುಕಟ್ಟೆಗಳ ಹಣೇಬರಹವೂ ಇದೇ ಆಗಿದೆ. ಅಲ್ಲಿ ಠಳಾಯಿಸುವ ಮದ್ಯವರ್ತಿಗಳು ರೈತರ ಬೆಳೆಗೆ ಕಡಿಮೆ ಬೆಲೆ ಕಟ್ಟಿ ಖರೀಧಿಸಿ ದುಪ್ಪಟ್ಟು ಲಾಭ ಮಾಡಿಕೊಳ್ಳುತ್ತಾರೆ. ಒಬ್ಬ ದಲ್ಲಾಳಿ ಕಟ್ಟಿದ ಬೆಲೆಯನ್ನು ಮೀರಿ ಇನ್ನೊಬ್ಬ ದಲ್ಲಾಳಿ ಬೆಲೆ ಕಟ್ಟುವುದಿಲ್ಲ. ಅಂತಹದೊಂದು ಮಾಫಿಯಾ ರಚಿಸಿಕೊಂಡಿರುವ ವರ್ತಕರು ಮತ್ತು ದಲ್ಲಾಳಿಗಳು ರೈತರನ್ನು ನಿರಂತರವಾಗಿ ಸುಲಿಗೆಗೆ ಒಳಪಡಿಸುತ್ತಿದ್ದಾರೆ. ಹೀಗೆ ತಾನು ಕಷ್ಟಪಟ್ಟು ಬೆಳೆದ ಬೆಳೆಗೆ ತಾನೇ ಬೆಲೆ ಕಟ್ಟಿ ಮಾರಲಾಗದ ರೈತ ನಷ್ಟವನ್ನನುಭವಿಸುತ್ತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. 

ಪರಿಹಾರ:

ತಾನು ಬೆಳೆದ ಬೆಳೆಗೆ ತಾನೇ ಬೆಲೆ ಕಟ್ಟಿ ಮಾರುವ ಹಕ್ಕು ರೈತನಿಗೆ ದೊರೆಯುವವರೆಗೂ ರೈತನ ಈ ಬವಣೆ ತಪ್ಪಿದ್ದಲ್ಲ. ಆದ್ದರಿಂದ ರೈತನೊಬ್ಬ ಬೆಳೆದ ಬೆಳೆಗೆ ಆ ವರ್ಷದ ಮಾರುಕಟ್ಟೆಯ ಸೂಚ್ಯಂಕವನ್ನು ಆಧರಿಸಿ, ರೈತ ಖರ್ಚು ಮಾಡಿರಬಹುದಾದ ಹಣ ಮತ್ತು ಶ್ರಮವನ್ನು ಲೆಕ್ಕ ಹಾಕಿ ಸರಕಾರವೇ ಒಂದು ನ್ಯಾಯಯುತ ಬೆಲೆಯನ್ನು ನಿಗದಿಪಡಿಸುವ ವ್ಯವಸ್ಥೆ ರೂಪುಗೊಳ್ಳಬೇಕು. ಸರಕಾರ ತಾನೇ ಪ್ರಾರಂಭಿಸಿರುವ ರೆಗ್ಯುಲೇಟೆಡ್ ಮಾರುಕಟ್ಟೆಯಲ್ಲಿನ ದಲ್ಲಾಳಿಗಳನ್ನು ಹೊರ ಹಾಕಿ, ಇತ್ತೀಚೆಗೆ ಕೆಲವು ಕಡೆ ಜಾರಿಗೆ ತಂದಿರುವ ಆನ್ ಲೈನ್ ಮಾರುಕಟ್ಟೆಯ ವ್ಯವಸ್ಥೆಯನ್ನು ರೂಪಿಸಬೇಕು. ಹೀಗಾದಾಗ ಮಾತ್ರ ರೈತನಿಗೆ ನ್ಯಾಯಯುತ ಬೆಲೆ ದೊರೆಯುವ ಸಾದ್ಯತೆ ಇದೆ.

4. ದಾಸ್ತಾನುಗಾರಗಳ ಕೊರತೆ.

ಇನ್ನು ರೈತರು ಬೆಳೆದ ಹಲವು ಬೆಳೆಗಳು ಬೇಗನೇ ಹಾಳಾಗುವ ಸಾದ್ಯತೆಗಳಿದ್ದು( ಉದಾಹರಣೆಗೆ ತರಕಾರಿ,ಹಣ್ಣುಗಳು) ಅವನ್ನು ಸಂಗ್ರಹಿಸಿಡಲು ಶಾಶ್ವತವಾದ ಶೈತ್ಯಾಗಾರಗಳಾಗಲಿ ದಾಸ್ತಾನುಮಳಿಗೆಗಳಾಗಲಿ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿರುವುದರಿಂದ ರೈತರು ಬೆಳೆದ ಹೆಚ್ಚುವರಿ ಬೆಳೆಯನ್ನು ಅವನೇ ಸ್ವತ: ನಾಶ ಮಾಡಬೇಕಾದ ಪರಿಸ್ಥಿತಿ ಇದೆ. ಸರಕಾರದ ಅಂಕಿಅಂಶಗಳೇ ಹೇಳುವಂತೆ ರೈತರು ಬೆಳೆದ ಶೇಕಡಾ 40ರಿಂದ 45 ರಷ್ಟು ಬೆಳೆಗಳು ಸಾಕಷ್ಟು ಶೈತ್ಯಾಗಾರಗಳ ಕೊರತೆಯಿಂದಲೇ ನಾಶವಾಗುತ್ತಿವೆ.ಕೆಲವು ಹೆಚ್ಚು ಬತ್ತ ಬೆಳೆಯುವ ಪ್ರದೇಶಗಳಲ್ಲಿರುವ ಸರಕಾರಿ ಗೊಡೌನುಗಳು ವ್ಯಾಪಾರಿಗಳ ಮಾಲುಗಳ ಸಂಗ್ರಹಣೆಗಾಗಿ ಮಾತ್ರ ಬಳಕೆಯಾಗುತ್ತಿದ್ದು ಸಣ್ಣ ರೈತರ ಬೆಳೆಗಳನ್ನು ಸಂಗ್ರಹಿಸಿಡಲು ದೊರೆಯುತ್ತಿಲ್ಲ

ಪರಿಹಾರಗಳು:

ಸರಕಾರಗಳು ಪ್ರತಿ ತಾಲ್ಲೂಕಿನಲ್ಲೂ ಅಲ್ಲಿ ಬೆಳೆಯುವ ಬೆಳೆಗಳಿಗೆ ಅನುಗುಣವಾಗಿ ದಾಸ್ತಾನು ಮಳಿಗೆಗಳನ್ನೂ ಶೈತ್ಯಾಗಾರಗಳನ್ನೂ ಕಟ್ಟಿ ಕಡಿಮೆದರದಲ್ಲಿ ರೈತರಿಗೆ ನೀಡುವ ಕಾರ್ಯ ಮಾಡಬೇಕಿದೆ. ಉದಾಹರಣೆಗೆ ಹೆಚ್ಚಾಗಿ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುವ ತಾಲ್ಲೂಕುಗಳಲ್ಲಿ ಶೈತ್ಯಾಗಾರಗಳನ್ನು, ಕೊಳೆತುಹೋಗದ ಬೆಳೆಗಳನ್ನು ಬೆಳೆಯುವ ತಾಲ್ಲೂಕುಗಳಲ್ಲಿ ಗೋಡೌನುಗಳನ್ನು ನಿರ್ಮಾಣ ಮಾಡಬೇಕು.

4. ಕೃಷಿಗೆ ಪೂರಕವಾದ ಉದ್ದಿಮೆಗಳು:

ನಮ್ಮ ದೇಶದ ದೊಡ್ಡ ದುರಂತವೆಂದರೆ ಕೃಷಿಗೆ ಪೂರಕವಾದ ಉದ್ಯಮಗಳ ಸಂಖ್ಯೆ ತೀರಾ ಅಲ್ಪಪ್ರಮಾಣದಲ್ಲಿರುವುದು. ಡೆನ್ಮಾರ್ಕ ಅಂತಹ ದೇಶಗಳಲ್ಲಿ ಹಾಲು ಉತ್ಪಾದನೆಗೆ ಪೂರಕವಾದ ಹಲವಾರು ಡೈರಿ ಉದ್ಯಮಗಳಿದ್ದು, ಅದೇ ದೊಡ್ಡ ಉದ್ಯಮವಾಗಿ ಇಂದು ಬೆಳೆದು ನಿಂತಿದೆ. ಆದರೆ ಇಂಡಿಯಾದಲ್ಲಿ ವಿಮಾನ ತಯಾರಿಕಾ ಉದ್ಯಮಗಳಿಗೆ, ಕಂಪ್ಯೂಟರ್ ಉದ್ಯಮಗಳಿಗೆ ಆಧ್ಯತೆ ನೀಡಲಾಗಿದೆಯೇ ಹೊರತು ಕೃಷಿಗೆ ಪೂರಕವಾದ ಯಾವುದೇ ಉದ್ಯಮಗಳನ್ನು ಸ್ಥಾಪಿಸುವಲ್ಲಿ ಸರಕಾರಗಳು ವಿಫಲವಾಗಿವೆ.

ಪರಿಹಾರಗಳು:

ಸರಕಾರಗಳು ಇನ್ನಾದರು ಮನಸ್ಸು ಮಾಡಿ ನಮ್ಮ ಕೃಷಿಗೆ ಸಹಾಯಕವಾಗಬಲ್ಲಂತಹ ಉದ್ದಿಮೆಗಳನ್ನು ಸ್ಥಾಪಿಸಬೇಕಿದೆ. ಹೆಚ್ಚು ಟೊಮೋಟೊ ಬೆಳೆಯುವ ತಾಲ್ಲೂಕಿನಲ್ಲಿ ಜಾಮ್ ತಯಾರಿಸಬಲ್ಲಂತಹ ಘಟಕಗಳನ್ನೂ, ಹೆಚ್ಚು ಹಣ್ಣುಗಳನ್ನು ಬೆಳೆಯುವ ತಾಲ್ಲೂಕುಗಳಲ್ಲಿ ಹಣ್ಣಿನರಸ ತಯಾರಿಸುವ ಉದ್ದಿಮೆಗಳನ್ನು ಸ್ಥಾಪಿಸಬೇಕು. ತನ್ಮೂಲಕ ಹೆಚ್ಚುವರಿಯಾದ ಈ ಬೆಳೆಗಳನ್ನು ಕಾರ್ಖಾನೆಗಳು ಖರೀಧಿಸಿ ರೈತರಿಗೆ ಸಹಾಯಕವಾಗಬಲ್ಲವು. ಇಂತಹ ಉದ್ದಿಮೆಗಳನ್ನು ಪ್ರಾರಂಬಿಸಲು ಮುಂದೆ ಬರುವ ಖಾಸಗಿಯವರಿಗೆ ಪ್ರೋತ್ಸಾಹ ನೀಡಿ ಉತ್ತೇಜಿಸುವ ಕ್ರಮಗಳನ್ನು ಕೈಗೊಳ್ಳುವುದರಿಂದ ಸರಕಾರಕ್ಕೆ ತೆರಿಗೆ ಸಂಗ್ರಹವೂ ರೈತರಿಗೆ ಆರ್ಥಿಕ ಲಾಭವೂ ಆಗುವುದು ಖಚಿತ.

5. ರಿಯಲ್ ಎಸ್ಟೇಟ್ ಮಾಫಿಯ ಮತ್ತು ಕೃಷಿಭೂಮಿ:

ಇವತ್ತು ಜನಸಂಖ್ಯೆ ಜಾಸ್ತಿಯಾದಂತೆ ಭೂಮಿಗಾಗಿ ಬೇಡಿಕೆಯೂ ಜಾಸ್ತಿಯಾಗುತ್ತಿದೆ. ಹೀಗಾಗಿ ನಗರಗಳ ಸುತ್ತಮುತ್ತಲಿನ ಕೃಷಿ ಭೂಮಿಯನ್ನು ನಿವೇಶನಗಳನ್ನಾಗಿ ಪರಿವರ್ತಿಸಲು ರಿಯಲ್ ಎಸ್ಟೇಟ್ ದಂದೇ ಕೋರರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಇದರಿಂದಾಗಿ ತಾಲ್ಲೂಕು ಕೇಂದ್ರಗಳ ಸುತ್ತಮುತ್ತಲಿನ ಫಲವತ್ತಾದ ಕೃಷಿ ಭೂಮಿಗಳು ಅನ್ಯ ಉದ್ದೇಶಕ್ಕಾಗಿ ಬಳಕೆಯಾಗುತ್ತ ರೈತರು ಭೂರಹಿತರಾಗಿ ಕೃಷಿ ಉತ್ಪಾದನೆ ದಿನೇ ದಿನೇ ಕುಸಿಯುತ್ತಿದೆ. 

ಪರಿಹಾರ:

ಆದ್ದರಿಂದ ಪ್ರತಿ ನಗರ ಮತ್ತು ಪಟ್ಟಣಗಳಲ್ಲಿ ಹಸಿರು ಪಟ್ಟಿಯನ್ನು ಗುರುತಿಸಿ ಅದರಿಂದ ಹೊರಗಿರುವ ಕೃಷಿ ಭೂಮಿಯನ್ನು ಅನ್ಯ ಉದ್ದೇಶಗಳಿಗೆ ಬಳಸಲಾಗದಂತೆ ಕಾನೂನು ರಚಿಸಬೇಕು. ಇದರಿಂದ ವ್ಯಾಪ್ತಿ ಮೀರಿ ನಗರಗಳು ಬೆಳೆಯುವುದನ್ನು ಹಾಗು ಕೃಷಿ ಭೂಮಿಯ ದುರ್ಬಳಕೆಯನ್ನೂ ತಡೆದಂತಾಗುತ್ತದೆ. 

ರೈತರ ಸರಣಿ ಆತ್ಮಹತ್ಯೆಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಸರಕಾರಗಳು ಇಂತಹ ಯೋಜನೆಗಳನ್ನು ನಾಳೆ ಬೆಳಿಗ್ಗೆಯೇ ಜಾರಿಗೆ ತರುತ್ತವೆಯೆಂಬ ನಂಬಿಕೆ ನನಗಿಲ್ಲ. ಆದರೆ ಆ ದಿಕ್ಕಿನಲ್ಲಿ ಯೋಚಿಸಿ ಹೋರಾಟ ನಡೆಸಬಹುದಾದ ರೈತಪರ ಸಂಘಟನೆಗಳು ಇಂತಹ ನಿರ್ದಿಷ್ಟ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಡಲು ಇದು ಸಹಕಾರಿಯಾಗಬಲ್ಲೆದೆಂಬುದು ನನ್ನ ಆಶಯ.

ಆಗ 3, 2016

ಅಧಿಕಾರಿಯ ಪರ ವಕಾಲತ್ತು ವಹಿಸುವುದರಲ್ಲಿ ಯಾವ ಸುಧಾರಣೆ ಇದೆ?

ಎಸ್. ಅಭಿ ಹನಕೆರೆ
03/08/2016
ಮೊನ್ನೆ ನಿರಂತರವಾಗಿ ಚಾನೆಲ್ ಛೇಂಜ್ ಮಾಡುತ್ತಾ ಇರುವಾಗ ಕೆಲವು ಮಕ್ಕಳು ತಮ್ಮ ಮೇಷ್ಟ್ರು ವರ್ಗಾವಣೆಯನ್ನು ಅಳುತ್ತಾ ವಿರೋಧಿಸುತ್ತಿದ್ದರು. ಸೂಪರ್! ಮೇಷ್ಟ್ರು ಈ ರೀತಿಯ ಪ್ರಭಾವವನ್ನು ಮಕ್ಕಳ ಮೇಲೆ ಬೀರಿದ್ದಾರಲ್ಲ ಎಂದು ಆಶ್ಚರ್ಯಪಟ್ಟೆ. ಹಾಗೆ ಚಾನೆಲ್ ಛೇಂಜ್ ಮಾಡುತ್ತಿರುವಾಗ ಹಾಸನದ ಮಹಿಳಾ ಅಧಿಕಾರಿಯೊಬ್ಬರು ತಮ್ಮನ್ನು ವರ್ಗಾವಣೆ ಮಾಡಿರುವುದನ್ನು ತಪ್ಪಿಸಿಕೊಳ್ಳುವ ಭಾಗವಾಗಿ ಆತ್ಮಹತ್ಯೆ ಪ್ರಯತ್ನ ಮಾಡಿರುವ ಸುದ್ದಿ ಪ್ರಕಟವಾಗುತ್ತಿತ್ತು. ಅಷ್ಟರಲ್ಲಾಗಲೇ ಪ್ರಮುಖ ರಾಜಕೀಯ ಪಕ್ಷದ ಮುಖಂಡರು ಆತ್ಮಹತ್ಯೆಗೆ ತಮ್ಮ ಎದುರಾಳಿ ಪಕ್ಷದ ದುರೀಣರೇ ಕಾರಣರೆಂದು ಟಿವಿ ಚಾನೆಲ್ ಗಳಿಗೆ ಬೈಟ್ ಕೊಡುತ್ತಿದ್ದರು. ಆ ಧುರೀಣರ ಹೇಳಿಕೆಯನ್ನೇ ಆಧರಿಸಿಕೊಂಡು ಟಿವಿ ಚಾನೆಲ್ ಗಳು ಅಧಿಕಾರಿಗೆ ಕಿರುಕುಳ, ಆತ್ಮಹತ್ಯೆಗೆ ಯತ್ನ ಎಂದು ಸುದ್ದಿ ಬಿತ್ತರಿಸುತ್ತಿದ್ದವು. ಇದೇನು ಈಗ ಇದ್ದಕ್ಕಿದ್ದಂತೆ ರಾಜ್ಯದಲ್ಲಿ ಅಧಿಕಾರಿಗಳ ಆತ್ಮಹತ್ಯೆ ಸರಣಿ ಸುರುವಾದಂತಿದೆಯಲ್ಲ ಎನ್ನಿಸಿತು. (ಅದು ಎಷ್ಟೇ ಅನುಕಂಪದಿಂದ ನೋಡಿದರೂ ಈ ಚಾನೆಲ್ಲುಗಳನ್ನು ಹತ್ತು ನಿಮಿಷಕ್ಕಿಂತ ಹೆಚ್ಚು ಕಾಲ ನೋಡುವುದಕ್ಕಾಗುವುದಿಲ್ಲ ಎಂಬುದು ಬೇರೆ ಮಾತು!) ಸದರಿ ಅಧಿಕಾರಿ ಹಾಸನದ ಎಸಿ ಆಗಿದ್ದವರು. ಸರ್ಕಾರ ತನ್ನಷ್ಟಕ್ಕೇ ಅವರನ್ನು ವರ್ಗಾವಣೆ ಮಾಡಿದೆ. ಆ ಸ್ಥಾನಕ್ಕೆ ದಕ್ಷ ಎಂದೇ ಖ್ಯಾತವಾಗಿರುವ ನಾಗರಾಜ್ ರನ್ನು ನಿಯೋಜಿಸಿದೆ. ಆದರೆ ಆ ಮಹಿಳಾ ಅಧಿಕಾರಿಗೆ ಸ್ಥಾನೊಪಲ್ಲಟ ಇಷ್ಟವಿಲ್ಲದ ಸಂಗತಿ. ಇನ್ನು ಅದಾಗಲೇ ಸಂಘಟನೆಗಳು ಬೀದಿಗಿಳಿದಿವೆ. ಆ ಅಧಿಕಾರಿಯ ಅಧಿಕಾರವನ್ನು ಹಸ್ತಾಂತರಿಸಲೆಂದು. ಮಹಿಳಾ ಅಧಿಕಾರಿಯು ಸುಮ್ಮನೆ ಕುಳಿತಿಲ್ಲ. ಕೆಎಟಿ ಮೊರೆ ಹೋಗಿ ವರ್ಗಾವಣೆ ರದ್ದು ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸಂಘಟನೆಗಳು ಸುಮ್ಮನಿರುತ್ತಿಲ್ಲ. ಕಡೆಗೆ ಕಡೆ ಅಸ್ತ್ರವಾಗಿ ಆಕೆ ಆತ್ಮಹತ್ಯೆಯ ಮೂಲಕ ಎದುರಿಸಲು ಹೊರಟಿದ್ದಾರೆ. ಇದಿಷ್ಟು ಕಥೆಯ ಹೂರಣ. 
ಆದರೆ ನಮ್ಮ ಜನರು ಯಾರೋ ಒಬ್ಬ ಅಧಿಕಾರಿ ದಕ್ಷ ಎಂದ ಮಾತ್ರಕ್ಕೆ ನಮ್ಮ ಜಿಲ್ಲೆಗೇ ಇರಲಿ ಎಂದು ಹಠಕ್ಕೆ ಬೀಳುವುದು ಯಾಕೆ? ಅವರ ಜಾಗಕ್ಕೆ ಬರುವ ಮತ್ತೊಬ್ಬ ಅಧಿಕಾರಿಯನ್ನು ಈ ಹಿಂದಿನ ಅಧಿಕಾರಿಯಂತೆ ದಕ್ಷತೆಯಿಂದ ಕೆಲಸ ಮಾಡುವಂತಹ ಸಾಮಾಜಿಕ ಒತ್ತಡ ಸೃಷ್ಟಿಸಲು ಯಾಕೆ ಸಾಧ್ಯವಿಲ್ಲ ಎನ್ನಿಸಿತು. ಯಾವುದೇ ಸಂಘಟನೆಯಾಗಲೀ ಅಥವಾ ಜನಸಾಮಾನ್ಯರಾಗಲೀ ನಮ್ಮ ಸುತ್ತಲಿನ ಸಾಮಾಜಿಕ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳುವ ಅಧಿಕಾರ ನಮ್ಮಲ್ಲಿಯೇ ಇದೆ. ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ದಕ್ಷತೆಯಿಂದ ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸಲೇಬೇಕಾದ ಅನಿವಾರ್ಯತೆಯನ್ನು ನಾವುಗಳೇ ಸೃಷ್ಟಿಸಬಹುದಾಗಿದೆ. ಆದರೆ ನಮ್ಮ ಆಲೋಚನೆಗಳು ವ್ಯಕ್ತಿ ಕೇಂದ್ರಿತವಾಗಿರುವುದರಿಂದ, ಕುಟುಂಬ ಕೇಂದ್ರಿತವಾಗಿರುವುದರಿಂದ, ಹೆಚ್ಚೆಂದರೆ ಗುಂಪು ಕೇಂದ್ರಿತವಾಗಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ. ಯಾವುದೋ ಪಕ್ಷಕ್ಕೊ ಎಮ್ಮೆಲ್ಲೆಗೋ ನಮ್ಮ ನಿಷ್ಠೆ ಮುಡಿಪಾಗಿರುತ್ತದೆ. ಆದ್ದರಿಂದ ಜನರಿಗೆ ಎಲ್ಲಾ ಸರಕಾರೀ ಅಧಿಕಾರಿಗಳು ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕೆಲಸ ಮಾಡಲೇಬೇಕು ಎಂದೆನ್ನಿಸುವುದಿಲ್ಲ. ನನ್ನ ಸ್ನೇಹಿತನೊಬ್ಬ ರಾಯಚೂರಿನಲ್ಲಿ ಸರಕಾರೀ ಕೆಲಸದಲ್ಲಿದ್ದಾನೆ. 'ಯಾವಾಗಪ್ಪ ನೀನು ಮಂಡ್ಯಕ್ಕೆ ಅಧಿಕಾರಿಯಾಗಿ ಬರೋದು' ಅಂದರೆ 'ಸುಮ್ನಿರಪ್ಪ ನೀನು. ಅಲ್ಲಿ ಹಾದೀ ಬೀದೀಲಿ ಹೋಗೋರೆಲ್ಲ ಅದು ಏನಾಯಿತು ಇದು ಏನಾಯಿತು ಎಂದು ಸರಕಾರೀ ಯೋಜನೆಗಳ ಬಗ್ಗೆ ಪ್ರಶ್ನೆ ಮಾಡ್ತಾರಂತೆ. ಆದರೆ ಇಲ್ಲಿ ಜನಪ್ರತಿನಿಧಿಗಳು ಮಾತ್ರ ಪ್ರಶ್ನೆ ಮಾಡೋದು' ಎಂದು ಹೇಳಿದ! ನಿಜವಾದ ಪರಿಸ್ಥಿತಿ ಮಂಡ್ಯದಲ್ಲಿ ಆ ಪ್ರಮಾಣಕ್ಕೆ ಇಲ್ಲವಾದರೂ ಹೊರ ಜಿಲ್ಲೆಗಳಲ್ಲಿ ಮಂಡ್ಯ ಜಿಲ್ಲೆಯ ಬಗ್ಗೆ ಇರುವ ಬಿಲ್ಡಪ್ ನೋಡಿ ಖುಸಿಯಾಯಿತು. ಎಲ್ಲಿ ದುಡ್ಡು ಹರಿದಾಡುತ್ತೋ ಅಲ್ಲಿ ಭ್ರಷ್ಟಾಚಾರ ಮಾಡಲು ಮನುಷ್ಯ ಮುಂದಾಗುತ್ತಾನೆ. ಏಕೆಂದರೆ ಮನುಷ್ಯ ಮೊದಲು ಅಗತ್ಯಕ್ಕೆ ನಂತರ ಲಾಭಕ್ಕೆ ಆಮೇಲೆ ದೋಚುವುದಕ್ಕಾಗಿಯೇ ಬದುಕಲು ಶುರು ಮಾಡುತ್ತಾನೆ. ಕಂಟ್ರೋಲ್ ಆಗಿ ಬದುಕಲೆಂದೇ ಮನುಷ್ಯರಾದ ನಾವುಗಳು ಕೆಲವು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದಕ್ಕೆ ನೈತಿಕತೆ, ಮಾನವೀಯತೆಯನ್ನು ಆಧಾರವಾಗಿಸಿಕೊಂಡಿದ್ದೇವೆ. ಮನುಷ್ಯ ಹೊಸ ಹೊಸ ವ್ಯವಸ್ಥೆಗೆ ಹೋದಂತೆ ಇನ್ನಷ್ಟು ಪ್ರಬುದ್ಧನಾಗಬೇಕು, ಬದಲಿಗೆ ನಾವು ವ್ಯತಿರಿಕ್ತ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಒಬ್ಬ ಸರಕಾರಿ ಅಧಿಕಾರಿ ವರ್ಗವಾದರೆ, ಆತನಿಗಾಗಿ ನಾವು ಧರಣಿ ಕೂರಬೇಕಿಲ್ಲ. ಬದಲಿಗೆ ಬರುವ ಮತ್ತೊಬ್ಬ ದಕ್ಷತೆಯಿಂದ ಕೆಲಸ ಮಾಡಬೇಕಾದ ಅನಿವಾರ್ಯತೆಯನ್ನು ನಾವು ಸೃಷ್ಟಿಸಬೇಕಿದೆ. ಆ ಅಧಿಕಾರಿಗಳ ವರ್ಗಾವರ್ಗಿ ವಿಚಾರದಲ್ಲೂ ನನ್ನದು ಇದೇ ಅಭಿಮತ. ಶಾಲಾ ಮಕ್ಕಳು ಮೇಷ್ಟರಿಗಾಗಿ ಅಳುವುದರಲ್ಲಿ ಮುಗ್ದತೆ ಇದೆ. ಮಮಕಾರವಿದೆ. ಕೆಲವರು ಸಂಘಟನೆಗಳ ಹೆಸರಿನಲ್ಲಿ ಅಧಿಕಾರಿಗಳ ವರ್ಗಾವಣೆ ತಡೆಯುವುದರಲ್ಲಿ ಯಾವು ಮುಗ್ಧತೆಯಿದೆ? ಸಮಾಜವನ್ನು ಸರಿಪಡಿಸುವವರು, ಅದಕ್ಕಾಗಿ ಸಂಘಟನೆ ಕಟ್ಟಿಕೊಂಡಿರುವವರು ಒಬ್ಬ ಅಧಿಕಾರಿಯ ವರ್ಗಾವಣೆ ತಡೆಯುವುದರಿಂದ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವೇ? ಅದರಲ್ಲೂ ಇಂತಹ ಘಟನೆಗಳು ಜರುಗಲಿ ಎಂದು ಕಾಯುವ ನಮ್ಮ ರಾಜಕೀಯ ಪಕ್ಷಗಳ ಮುಖಂಡರು, ಈ ಪುಡಾರಿಗಳ ಹೇಳಿಕೆಗಳನ್ನೇ ಮುಂದಿಟ್ಟುಕೊಂಡು ಸುದ್ದಿ ಪಸಾರ ಮಾಡುವ ಮಾಧ್ಯಮಗಳು ಸಮಾಜಕ್ಕೆ ಇನ್ನಷ್ಟು ಅಪಾಯಕಾರಿಯಾಗುತ್ತಿರುವ ಸನ್ನಿವೇಶದಲ್ಲಿ ನಾವು ಬದುಕುತ್ತಿದ್ದೇವೆ. ಇಂತಹ ಅಧಿಕಾರಿಗಳ ಪರ ವಿರೋಧವಾಗಿ ಪ್ರತಿಭಟನೆ ಮಾಡುವವರನ್ನೇ ಕರೆದು ಕರೆದು ಪ್ರಚಾರ ನೀಡುವ ವ್ಯವಸ್ಥೆ ಎಲ್ಲವೂ ಸೇರಿ ಸಮಾಜವನ್ನು ಇನ್ನಷ್ಟು ಕಲುಷಿತಗೊಳಿಸುವ ಮುನ್ನಾ ಜನರದ್ದೇ ಆದ ಪರ್ಯಾಯ ರಾಜಕಾರಣದ ನಿರ್ಮಾಣಕ್ಕೆ ಮುಂದಡಿ ಇಡೋಣ.

ಆಗ 2, 2016

ನೀರು ತಿರುಗಿಸುವುದು ತಪ್ಪಾಗಲಾರದು - ಒಂದು ಪ್ರತಿಕ್ರಿಯೆ

'ಕೆಸರೆರಚಾಟದ ಮಧ್ಯೆ ಕೇಳಿಕೊಳ್ಳದ ಪ್ರಶ್ನೆಗಳು' ಲೇಖನಕ್ಕೆ ಬಂದಿರುವ ಒಂದು ಪ್ರತಿಕ್ರಿಯೆ. 
ಆನಂದ ಪ್ರಸಾದ್ 
02/08/2016
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯ ಬದಲು ಅದೇ ಮೊತ್ತದ ಹಣವನ್ನು (12,000 ಕೋಟಿಗೂ ಮೇಲ್ಪಟ್ಟು) ಬಳಸಿ ಆ ಜಿಲ್ಲೆಗಳಲ್ಲಿ ಬೀಳುವ ಮಳೆಯ ನೀರನ್ನು ಹಿಡಿದಿಡುವ ಹಾಗೂ ನೀರಿಂಗಿಸುವ ಕೆರೆಗಳು, ಹೊಂಡಗಳು, ಬದುಗಳು, ತಡೆಗಟ್ಟಗಳನ್ನು ನಿರ್ಮಿಸಿ ಮಳೆಯ ನೀರು ಹರಿದು ಹೋಗದಂತೆ ಮಾಡಿದರೆ ಕುಡಿಯುವ ನೀರಿನ ಕೊರತೆ ಉಂಟಾಗಲಾರದು. ಇದರ ಜೊತೆಗೆ ಬರಡು ಭೂಮಿಯಲ್ಲಿ ಕಾಡು ಬೆಳೆಸುವ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದರೆ ಮಳೆಯ ಪ್ರಮಾಣ ಹೆಚ್ಚುವ ಸಂಭವ ಇದೆ. ಹೀಗೆ ಮಾಡಿದರೆ ದೂರದಿಂದ ನೀರು ತರುವ ಯೋಜನೆಗಳ ಅಗತ್ಯ ಬೀಳಲಾರದು. ಇಂಥ ಯೋಜನೆ ಹಾಗೂ ಚಿಂತನೆಯನ್ನು ನೀರಾವರಿ ತಜ್ಞರು, ರಾಜಕಾರಣಿಗಳು ಬೆಳೆಸದೆ ಕೋಲಾರ, ಚಿಕ್ಕಬಳ್ಳಾಪುರ ಇತ್ಯಾದಿ ಜಿಲ್ಲೆಗಳ ಜನರಲ್ಲಿ ದೂರದಿಂದ ನೀರು ತರುವುದೇ ಪರಿಹಾರ ಎಂಬ ಕಲ್ಪನೆಯನ್ನು ಹುಟ್ಟುಹಾಕಿ ಬೆಳೆಸಿದ್ದಾರೆ. ಇದರಿಂದಾಗಿ ಸ್ಥಳೀಯ ನೀರಿಂಗಿಸುವ ಯೋಜನೆಗಳು, ಪರಿಹಾರಗಳಿಗಾಗಿ ಜನರಾಗಲೀ, ಸಂಘಟನೆಗಳಾಗಲೀ ಒತ್ತಾಯಿಸುತ್ತಿಲ್ಲ. ಅವರ ಒತ್ತಾಯವೇನಿದ್ದರೂ ದೂರದಿಂದ ನೀರು ತರುವ ತೀರಾ ತ್ರಾಸದಾಯಕ ಎತ್ತಿನಹೊಳೆಯಂಥ ಯೋಜನೆಗಳ ಕಡೆಗೇ ಇದೆ.

ಎತ್ತಿನ ಹೊಳೆ ಯೋಜನೆಯನ್ನು ಜಾರಿಗೊಳಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನರ ವಿರೋಧ ವೈಚಾರಿಕ ನೆಲೆಗಿಂತ ಹೆಚ್ಚು ಭಾವನಾತ್ಮಕವಾದದ್ದು. ದಕ್ಷಿಣ ಕನ್ನಡ ಜಿಲ್ಲೆಯು ಸಾಕಷ್ಟು ಮಳೆ ಬೀಳುವ ಪ್ರದೇಶ. ಇದು ಸಾಕಷ್ಟು ಹಸುರಿನಿಂದ ಕೂಡಿರುವ ಹಾಗೂ ಘಟ್ಟದ ಹಾಗೂ ಕರಾವಳಿಯ ನಡುವೆ ಇರುವ ಕಾರಣ ಇಲ್ಲಿ ಬರಗಾಲ (ಘಟ್ಟದ ಮೇಲಣ ಜಿಲ್ಲೆಗಳಂತೆ) ಬಂದ ಅಥವಾ ಬರುವ ಸಂಭವ ಇಲ್ಲ. ನೇತ್ರಾವತಿಯ ಅಥವಾ ಅದರ ಉಪನದಿಯಾದ ಎತ್ತಿನಹೊಳೆ ಹಳ್ಳದ ನೀರನ್ನು ಮಳೆಗಾಲದಲ್ಲಿ ಅಥವಾ ಡಿಸೆಂಬರ್ ಕೊನೆಯವರೆಗೂ ಬೇರೆ ಕಡೆ ತಿರುಗಿಸಿದರೂ ಅದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಯಾವ ತೊಂದರೆಯೂ ಆಗುವ ಸಂಭವ ಇಲ್ಲವೇ ಇಲ್ಲ. ಏಕೆಂದರೆ ಈ ಸಮಯದಲ್ಲಿ ನದಿಯಲ್ಲಿ ಸಾಕಷ್ಟು ನೀರು ಹರಿದು ಸಮುದ್ರ ಸೇರುತ್ತಿರುತ್ತದೆ. ನೇತ್ರಾವತಿಯ ನೀರು ಪುತ್ತೂರು ಹಾಗೂ ಉಪ್ಪಿನಂಗಡಿ ಪೇಟೆ ವ್ಯಾಪ್ತಿಯ ಜನತೆಗೆ ಕುಡಿಯುವ ನೀರು ಹಾಗೂ ಮಂಗಳೂರು ನಗರದ ಕುಡಿಯುವ ನೀರು ಹಾಗೂ ಮಂಗಳೂರಿನ ಕೆಲವು ಬೃಹತ್ ಕೈಗಾರಿಕೆಗಳಿಗೆ ಬೇಕಾದ ನೀರನ್ನು ಒದಗಿಸುವ ಮೂಲ. ಇದನ್ನು ಬಿಟ್ಟರೆ ನೇತ್ರಾವತಿ ನದಿಯ ನೀರು ಪುತ್ತೂರು, ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗಗಳಿಗೆ, ಬೆಳ್ತಂಗಡಿ ತಾಲೂಕಿನ ಪೇಟೆ ಅಥವಾ ಗ್ರಾಮೀಣ ಭಾಗಗಳಿಗೆ ಹಾಗೂ ಸುಳ್ಯ ತಾಲೂಕಿನ ಪೇಟೆ ಹಾಗೂ ಗ್ರಾಮೀಣ ಭಾಗಗಳಿಗೆ ಬಳಕೆ ಆಗುವುದಿಲ್ಲ. ಸುಳ್ಯ ತಾಲೂಕಿನ ಜನರಿಗಂತೂ ನೇತ್ರಾವತಿಯ ಸಂಬಂಧವೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಮಳೆ ಬೀಳುವ ಕಾರಣ ಪೇಟೆ ಹಾಗೂ ಕೈಗಾರಿಕೆಗಳಿಗೆ ಹೊರತುಪಡಿಸಿ ಗ್ರಾಮೀಣ ದಕ್ಷಿಣ ಕನ್ನಡ ಭಾಗಗಳಲ್ಲಿ ನೇತ್ರಾವತಿ ನದಿ ನೀರಿನ ಅವಶ್ಯಕತೆ ಕೂಡ ಇಲ್ಲ. ಹೀಗಾಗಿ ದಕ್ಷಿಣ ಕನ್ನಡದ ಜನ ಈ ಯೋಜನೆಯ ಬಗ್ಗೆ ವಿರೋಧ ವ್ಯಕ್ತಪಡಿಸಬೇಕಾದ ಅಗತ್ಯ ಇಲ್ಲ. ಇಲ್ಲಿ ಜನರನ್ನು ಈ ಯೋಜನೆಯ ವಿಷಯದಲ್ಲಿ ಭಾವನಾತ್ಮಕವಾಗಿ ಅಪಪ್ರಚಾರ ಮಾಡಿ ಎತ್ತಿ ಕಟ್ಟಲಾಗುತ್ತಿದೆಯೇ ಹೊರತು ಈ ವಿರೋಧಕ್ಕೆ ವೈಜ್ಞಾನಿಕ ನೆಲೆಗಟ್ಟು ಇಲ್ಲ. ಕೋಲಾರ, ಚಿಕ್ಕಬಳ್ಳಾಪುರ ಇತ್ಯಾದಿ ಬಯಲುಸೀಮೆಗೆ ಹೋಲಿಸಿದರೆ ದಕ್ಷಿಣ ಕನ್ನಡದ ಜನ ಪ್ರಾಕೃತಿಕವಾಗಿ ಪುಣ್ಯವಂತರು ಏಕೆಂದರೆ ಇಲ್ಲಿ ಎಂದೂ ಬರಗಾಲ ಎಂಬ ಪರಿಸ್ಥಿತಿ ಬರುವುದಿಲ್ಲ. ಎಲ್ಲಿ ಎಷ್ಟೇ ಕಡಿಮೆ ಎಂದರೂ 200 ಸೆ.ಮೀ.ಗಿಂಥ ಹೆಚ್ಚು ಮಳೆ ಬಂದೇ ಬರುತ್ತದೆ. ಇಷ್ಟು ಮಳೆಯನ್ನು ಪ್ರಾಕೃತಿಕವಾಗಿ ಪಡೆದೂ ಎತ್ತಿನಹೊಳೆಯ ನೀರನ್ನು ಮಳೆಗಾಲದಲ್ಲಿ ಮಳೆ ಹಾಗೂನೀರಿನ ಕೊರತೆ ಇರುವ ಬೇರೆ ಕಡೆ ಕೊಂಡೊಯ್ಯಲು ದಕ್ಷಿಣ ಕನ್ನಡದ ಜನ ವಿರೋಧಿಸುತ್ತಾರೆ ಎಂದರೆ ಅದು ಸಮಂಜಸ ಆಗಲಾರದು.

ಎತ್ತಿನ ಹೊಳೆ ಪರಿಸರದಲ್ಲಿ ನೀರನ್ನು ಶೇಖರಿಸಲು ಕಟ್ಟುವ ಸಣ್ಣ ಅಣೆಕಟ್ಟುಗಳಿಂದ ಸ್ವಲ್ಪ ಮಟ್ಟಿಗೆ ಕಾಡು ಹಾಗೂ ಪರಿಸರ ನಾಶ ಆಗಬಹುದು ಆದರೆ ದೊಡ್ಡ ಮಟ್ಟದ ನಾಶ ಸಣ್ಣ ಸಣ್ಣ ಆಣೆಕಟ್ಟು ಕಟ್ಟುವುದರಿಂದ ಆಗಲಿಕ್ಕಿಲ್ಲ. ನೀರು ಸಾಗಿಸುವ ಕೊಳವೆ ಮಾರ್ಗಕ್ಕೆ ಒಂದು ರಾಷ್ಟ್ರೀಯ ಹೆದ್ದಾರಿಗೆ ಬೇಕಾಗುವುದಕ್ಕಿಂತ ಹೆಚ್ಚು ಜಾಗ ಬೇಕಾಗಲಿಕ್ಕಿಲ್ಲ. ಹೀಗಾಗಿ ಎತ್ತಿನ ಹೊಳೆ ಯೋಜನೆ ಜಾರಿಗೊಳಿಸುವುದರಿಂದ ದೊಡ್ಡ ಮಟ್ಟದ ಪರಿಸರ ನಾಶ ಆಗುವ ಸಂಭವ ಕಾಣುವುದಿಲ್ಲ. ಎತ್ತಿನಹೊಳೆ ಯೋಜನೆ ಕುಡಿಯುವ ನೀರಿಗೆ ಮಾತ್ರ ಮತ್ತು ಎತ್ತಿನಹೊಳೆ ಪರಿಸರದ ಮಳೆಗಾಲದ ನೀರನ್ನು ಮಾತ್ರ ಕೊಂಡೊಯ್ಯುವ ಯೋಜನೆ ಆದ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಜನರ ವಿರೋಧ ಕೂಡ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಇಲ್ಲ ಎಂದು ಹೇಳಬೇಕಾಗಿದೆ. ಕುಡಿಯುವ ನೀರಿನ ಯೋಜನೆಗೆ ಒಂದೇ ರಾಜ್ಯದಲ್ಲಿ ಇದ್ದುಕೊಂಡು ಇನ್ನೊಂದು ಭಾಗದ ಜನರಿಗೆ ವಿರೋಧ ವ್ಯಕ್ತಪಡಿಸುವುದು ಅದೂ ತಮ್ಮ ಜಿಲ್ಲೆಗೆ ಯಾವುದೇ ಹಾನಿ ಆಗದೇ ಇರುವ ಸಂದರ್ಭದಲ್ಲಿ ಸರಿ ಎಂದು ಅನಿಸುವುದಿಲ್ಲ. 

ಇನ್ನು ಸಾಗರ ಸೇರುವ ನೀರು ವ್ಯರ್ಥ ಅಲ್ಲ ಎಂಬ ಒಂದು ವಾದ ಕೂಡ ಇದೆ. ಇದರಿಂದ ನೀರಿನ ಜೊತೆಗೆ ಪೋಷಕಾಂಶಗಳು ಸಾಗರ ಸೇರಿ ಮೀನುಗಳ ಸಂತತಿ ಬೆಳೆಯಲು ಸಹಕಾರಿ ಎಂಬುದು ವಾದ. ನೇತ್ರಾವತಿಯ ವಿಷಯದಲ್ಲಿ ಈ ವಾದ ಕೂಡ ಅಪ್ರಸುಸ್ತುತ ಏಕೆಂದರೆ ಎತ್ತಿನ ಹೊಳೆಗಿಂಥ ಕೆಳಗಿನ ಭಾಗದಲ್ಲಿ ಭಾರೀ ಮಳೆಯಾಗುತ್ತದೆ. ಹೀಗಾಗಿ ಸಾಗರ ಸೇರುವ ನೀರಿನ ಪ್ರಮಾಣದಲ್ಲಿ ಎತ್ತಿನಹೊಳೆಯಿಂದ ನೀರನ್ನು ಮಳೆಗಾಲದಲ್ಲಿ ತೆಗೆದು ಬೇರೆ ಕಡೆ ತಿರುಗಿಸಿದರೂ ದೊಡ್ಡ ಮಟ್ಟದ ಇಳಿಕೆ ಆಗುವ ಸಾಧ್ಯತೆ ಇಲ್ಲ. ಇನ್ನು ಜಲಚಕ್ರದ ಬಗ್ಗೆ ಹೇಳುವುದಾದರೆ ನದಿಯ ನೀರು ಸಮುದ್ರ ಸೇರದೆ ಇದ್ದರೂ ಜಲಚಕ್ರ ಪೂರ್ತಿ ಆಗಿಯೇ ಆಗುತ್ತದೆ. ನೀರು ಎಲ್ಲಿದ್ದರೂ ಸೂರ್ಯನ ಬಿಸಿಲಿಗೆ ಆವಿ ಆಗಲೇಬೇಕು. ಇದನ್ನು ತಡೆಯಲು ಸಾಧ್ಯವಿಲ್ಲ. ಹೀಗೆ ಆವಿಯಾದ ನೀರು ಮತ್ತೆ ಮಳೆಯಾಗಿ ಭುವಿಗೆ ಬೀಳಲೇ ಬೇಕು. ಇದನ್ನು ಕೂಡ ತಡೆಯಲು ಸಾಧ್ಯವಿಲ್ಲ.

ಕಳಸಾ ಬಂಡೂರಿ ವಿಷಯದಲ್ಲಿ ಕೂಡ ಗೋವಾದ ವಾದ ಹುರುಳಿಲ್ಲದ್ದು. ಗೋವಾದ ಪರಿಸರ ಕೂಡ ಹೆಚ್ಚು ಕಡಿಮೆ ದಕ್ಷಿಣ ಕನ್ನಡದ ಪರಿಸರದಂತೆಯೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯಂತೆಯೇ ಅಲ್ಲಿ ಕೂಡ ಸಾಕಷ್ಟು ಮಳೆಯಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ವಿಸ್ತೀರ್ಣ 4559 ಚದರ ಕಿ.ಮೀ. ಆದರೆ ಗೋವಾ ರಾಜ್ಯದ ವಿಸ್ತೀರ್ಣ 3702 ಚದರ ಕಿ.ಮೀ. . ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ 2011 ಜನಗಣತಿ ಪ್ರಕಾರ 20,83,625; ಗೋವಾ ರಾಜ್ಯದ ಜನಸಂಖ್ಯೆ 14,57,723. ಹಾಗೆ ನೋಡಿದರೆ ಗೋವಾ ರಾಜ್ಯ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗಿಂಥ ಜನಸಂಖ್ಯೆ ಹಾಗೂ ವಿಸ್ತೀರ್ಣ ಎರಡರಲ್ಲಿಯೂ ಸಣ್ಣದು. ಗೋವಾ ರಾಜ್ಯದಲ್ಲಿ ಬೀಳುವ ಮಳೆ ನೀರು ಗೋವಾ ರಾಜ್ಯಕ್ಕೆ ಧಾರಾಳ ಸಾಕು. ಕಳಸಾ ಬಂಡೂರಿಯಿಂದ 7 ಟಿಎಂಸಿ ನೀರನ್ನು ಮಳೆಗಾಲದಲ್ಲಿ ತೆಗೆದು ಬೇರೆ ಕಡೆ ತಿರುಗಿಸುವುದರಿಂದ ಗೋವಾದ ಮೇಲೆ ಯಾವ ತೊಂದರೆಯೂ ಆಗಲಾರದು. ಗೋವಾದ ವಿರೋಧ ಕೂಡ ಭಾವನಾತ್ಮಕ ಹಿನ್ನೆಲೆಯ ರಾಜಕಾರಣಿಗಳಿಂದ ಪ್ರಚೋದಿಸಲ್ಪಟ್ಟ ವಿರೋಧವೇ ಹೊರತು ಅದಕ್ಕೆ ವೈಜ್ಞಾನಿಕ ಕಾರಣಗಳು ಇಲ್ಲ. ನ್ಯಾಯಾಲಯವು ತನ್ನ ಮಧ್ಯಂತರ ತೀರ್ಪಿನಲ್ಲಿ ಜಲಚಕ್ರದ ಬಗ್ಗೆ ಪಾಠ ಮಾಡಿದೆ. ಆದರೆ ಅದು ಸಮಂಜಸವೇನೂ ಅಲ್ಲ. ನದಿಯ ನೀರು 7 ಟಿಎಂಸಿ ಪ್ರಮಾಣದಲ್ಲಿ ಬೇರೆ ಕಡೆ ತಿರುಗಿಸುವುದರಿಂದ ಜಲಚಕ್ರದ ಮೇಲೆ ಒಂದು ಎಳ್ಳುಕಾಳಿನಷ್ಟು ಕೂಡ ಪರಿಣಾಮ ಆಗುವುದಿಲ್ಲ ಏಕೆಂದರೆ ಸಮುದ್ರದ ನೀರಿನ ಮಟ್ಟ ಎಂದೂ ಇಳಿಯಲಾರದು. ವಾಸ್ತವವಾಗಿ ಪಳೆಯುಳಿಕೆ ಇಂಧನ ದಹನದಿಂದ ಭೂತಾಪಮಾನ ಏರಿಕೆಯ ಪರಿಣಾಮವಾಗಿ ಧ್ರುವ ಪ್ರದೇಶದ ಹಿಮ ಕರಗಿ ಸಮುದ್ರದ ಮಟ್ಟ ಹೆಚ್ಚುತ್ತಿದೆ ಎಂದು ವಿಜ್ಞಾನಿಗಳು ಬೊಬ್ಬೆ ಹಾಕುತ್ತಿದ್ದಾರೆ. ಇದು ನ್ಯಾಯಾಧೀಶರಿಗೆ ತಿಳಿಯದೆ ಇರುವುದು ಆಶ್ಚರ್ಯವೇ ಸರಿ.

ಕೊನೆಯದಾಗಿ ಪ್ರಧಾನಿ ಮೋದಿ ಈ ವಿಷಯದಲ್ಲಿ ಸಂಬಂಧಿತ ರಾಜ್ಯಗಳ ರಾಜಕಾರಣಿಗಳನ್ನು ಕರೆದು ಈ ವಿಚಾರವನ್ನು ಪರಿಹರಿಸುವುದು ದೊಡ್ಡ ವಿಷಯವೇ ಅಲ್ಲ. ಪ್ರಧಾನಿ ಮೋದಿ ಹಾಗೂ ಸಂಘ ಪರಿವಾರದವರು ಮಾತಿನಲ್ಲಿ ರಾಷ್ಟ್ರೀಯತೆ ಎಂದು ಬುರುಡೆ ಬಿಡುತ್ತಾರೆ, ಆದರೆ ಪಾಲನೆಯಲ್ಲಿ ಅದನ್ನು ತೋರಿಸುವುದಿಲ್ಲ. ರಾಷ್ಟ್ರೀಯತೆ ಬಗ್ಗೆ ನಿಜವಾಗಿ ಕಾಳಜಿ ಇದ್ದರೆ ಕುಡಿಯುವ ನೀರಿನ ಯೋಜನೆಗೆ ಉದ್ಧೇಶಿಸಿದ ಕಳಸ ಬಂಡೂರಿ ಯೋಜನೆಗೆ ಇರುವ ತೊಡಕನ್ನು ಪ್ರಧಾನಿ ಮೋದಿ ಹಾಗೂ ಸಂಘ ಪರಿವಾರದವರು ಸಂಬಂಧಿತ ರಾಜ್ಯಗಳ ಎಲ್ಲ ರಾಜ್ಯಗಳ ರಾಜಕೀಯ ಪಕ್ಷಗಳ ಸಭೆಯನ್ನು ಕರೆದು ಗೋವಾದ ವಿರೋಧ ಅರ್ಥಹೀನ ಹಾಗೂ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ನಿಂತ ವಿರೋಧ ಅಲ್ಲ ಎಂದು ಮನವರಿಕೆ ಮಾಡಿಕೊಡಲು ಸಾಧ್ಯವಿದೆ. ಇದು ಒಬ್ಬ ರಾಜಕೀಯ ಮುತ್ಸದ್ಧಿ ಹಾಗೂ ರಾಷ್ಟ್ರೀಯ ಸಂಘಟನೆ ಮಾಡಬೇಕಾದ ಕೆಲಸ. ಮೋದಿ ಸಂಬಂಧಿತ ರಾಜ್ಯಗಳ ಎಲ್ಲ ಪಕ್ಷಗಳ ರಾಜಕಾರಣಿಗಳ ಸಭೆ ಕರೆಯದೆ ತೆಪ್ಪಗೆ ಕುಳಿತಿರುವುದು ಅವರಿಗೆ ನಿಜವಾಗಿ ರಾಷ್ಟ್ರೀಯತೆಯ ಬಗ್ಗೆ ಕಾಳಜಿ ಇಲ್ಲ ಎಂಬುದನ್ನು ತೋರಿಸುತ್ತದೆ. ಅದೇ ರೀತಿ ಸಂಘ ಪರಿವಾರವು ಕೂಡ ಈ ವಿಷಯದಲ್ಲಿ ಗೋವಾ ಜನರಿಗೆ ಅವರ ವಿರೋಧ ಅರ್ಥಹೀನ ಎಂದು ಮನವರಿಕೆ ಮಾಡಿಕೊಡದೆ ಇರುವುದು ಕೂಡ ಒಂದು ಲೋಪವೇ ಸರಿ.

ಆಗ 1, 2016

ಸಾವೂ ಸಂಭ್ರಮದ ಸಂಗತಿಯಾದಾಗ…………..

ಕು.ಸ.ಮಧುಸೂದನನಾಯರ್
ಮುಖ್ಯಮಂತ್ರಿಯವರ ಮಗ ಸತ್ತ ಸುದ್ದಿ ಕೇಳಿ ಸಂಭ್ರಮಿಸುವ ಮನಸ್ಸುಗಳನ್ನು ನೋಡಿ ಈ ಹಿಂದೆ ಬರೆದ ಲೇಖನವೊಂದು ನೆನಪಾಗಿ ನಿಮ್ಮ ಓದಿಗಾಗಿ ಇಲ್ಲಿ ಮತ್ತೆ ಹಾಕಿರುವೆ:

ಧರ್ಮಗಳ ನಡುವಿನ ಅಸಹನೆ, ಕೋಮುವಾದ ಹುಟ್ಟು ಹಾಕಿದ ಭಯೋತ್ಪಾದಕತೆ, ಮಾನವೀಯ ಮೌಲ್ಯಗಳನ್ನೆಲ್ಲ ಗುಡಿಸಿ ಗುಂಡಿಗೆ ಹಾಕಿರುವ ಜಾಗತೀಕರಣದೀ ಸಮಯದಲ್ಲಿ ವ್ಯಕ್ತಿಯೊಬ್ಬನ ಸಾವಿಗೆ ಮಿಡಿಯಬಲ್ಲ ಅಂತ:ಕರಣ ಮನುಷ್ಯನಲ್ಲಿನ್ನೂ ಉಳಿದಿರಬಹುದೆಂಬ ನನ್ನ ನಂಬಿಕೆ ಹುಸಿಯಾಗತೊಡಗಿದೆ.

ಅದಕ್ಕೆ ಕಾರಣ ಮೊನ್ನಿನ ಕೆಲವು ಘಟನೆಗಳು: ಜಾಗತಿಕ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಅಮೇರಿಕಾ ಸೇನೆಯಿಂದ ಹತನಾದ ನಂತರ ಆ ದೇಶದ ಜನತೆ ತಡರಾತ್ರಿಯವರೆಗು ಕುಡಿದು-ಕುಪ್ಪಳಿಸಿ ವಿಶ್ವವನ್ನೇ ಗೆದ್ದಂತೆ ವಿಜಯೋತ್ಸವ ಆಚರಿಸಿದರು. ಸರಿ ಸುಮಾರು ಅದೇ ಸಮಯದಲ್ಲಿ ಬೆಂಗಳೂರಿನ ಶ್ರೀರಾಮಸೇನೆಯ ಕೆಲ ಕಾರ್ಯಕರ್ತರು ಉದ್ದುದ್ದನೆಯ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಮ್ಮ ಗೌರವಾನ್ವಿತ ಮಠಾಧೀಶರೊಬ್ಬರು ತಮ್ಮ ಕೈಯಾರೆ ಭಕ್ತರಿಗೆ ಸಿಹಿ ಹಂಚಿ ,ಅವನ ಸಾವಿನಸಂತಸಹಂಚಿಕೊಂಡರು.

ವ್ಯಕ್ತಿಯೊಬ್ಬನ ಸಾವನ್ನು (ಅವನು ಸಂತನಾಗಿರಲಿ - ಹಂತಕನಾಗಿರಲಿ, ನಕ್ಸಲನಾಗಿರಲಿ-ಪೋಲಿಸನಾಗಿರಲಿ, ರಾಜನಾಗಿರಲಿ - ರಾಜದ್ರೋಹಿಯಾಗಿರಲಿ) ಸಿಹಿ ತಿಂದು ಸಂಭ್ರಮಿಸುವುದಿದೆಯಲ್ಲ ಅದಕ್ಕಿಂತ ಅಮಾನವೀಯವಾದ್ದು ಬೇರೊಂದಿದೆ ಅಂತನ್ನಿಸುವುದಿಲ್ಲ. ಹಾಗಾದರೆ ಅಮಾಯಕರನ್ನು ಹತ್ಯೆಗೆಯ್ಯುತ್ತ,ಭಯೋತ್ಪಾದಕತೆಯ ಬೀಜಗಳನ್ನು ಭೂಮಿಯೆಲ್ಲೆಡೆ ಬಿತ್ತುತ್ತಿದ್ದ ಲಾಡೆನ್ನಿನ ಸಾವನ್ನು ನಾವು ಹೇಗೆ ಸ್ವೀಕರಿಸ ಬಹುದಿತ್ತು?

" ಅಬ್ಬಾ! ಇನ್ನು ಮೇಲಾದರು ಬಯೋತ್ಪಾದಕನೊಬ್ಬನ ಹಾಳಿ ನಿಂತು, ಜಗತ್ತಿನಲ್ಲಿ ಶಾಂತಿ ನೆಲೆಸಲಿ" ಎಂದು ಹಾರೈಸುತ್ತ ನಿರಾಳತೆಯ ನಿಟ್ಟುಸಿರು ಬಿಡಬಹುದಿತ್ತು.

ಇಲ್ಲಿ ಇನ್ನೊಂದು ವಿಷಯದತ್ತ ನೋಡೋಣ: ಹಾಗೆ ನೋಡಿದರೆ ಅಮೇರಿಕಾಕ್ಕೆ ಈ ಹತ್ಯೆ ವಿಷಯದಲ್ಲಿ ಸಂತೋಷ ಪಡುವ ಯಾವ ಅಧಿಕಾರವೂ ಇರಲಿಲ್ಲ! ಯಾಕೆಂದರೆ: ಆಧುನಿಕ ಜಗತ್ತಿನ ಮೊದಲ ಮತ್ತು ಅತಿ ದೊಡ್ಡ ಭಯೋತ್ಪಾದಕನೆಂದರೆ ಅದು ಸ್ವತ: ಅಮೇರಿಕಾ ಆಗಿದೆ.

ಎರಡನೇ ಮಹಾ ಯುದ್ದದಲ್ಲಿ ಸೋತು ಸುಣ್ಣವಾಗಿದ್ದ ಜಪಾನಿನ ಹಿರೋಷಿಮಾ ನಾಗಸಾಕಿಗಳ ಮೇಲೆ ಅಣು ಬಾಂಬುಗಳನ್ನು ಹಾಕಿ ಮಿಲಿಯನ್ ಗಟ್ಟಲೆ ಮುಗ್ದ ಜನರನ್ನು ಕ್ಷಣಾರ್ದದಲ್ಲಿ ಇನ್ನಿಲ್ಲವಾಗಿಸಿದ ಅಮೇರಿಕಾದ ಕೃತ್ಯ ಭಯೋತ್ಪಾದಕತೆಯಲ್ಲದಿದ್ದರೆ ಇನ್ಯಾವುದು? ಅರವತ್ತರ ದಶಕದಲ್ಲಿ ಅದು ವಿಯೆಟ್ನಾಂನಂತ ಪುಟ್ಟ ರಾಷ್ಟ್ರದ ಮೇಲೆ ನಡೆಸಿದ ದೌರ್ಜನ್ಯ,ಪ್ರಜಾಪ್ರಬುತ್ವ ಸ್ಥಾಪನೆಯ ಹೆಸರಲ್ಲಿ ಇರಾಕ್ ಮುಂತಾದ ದೇಶಗಳ ಮೇಲೆ ನಡೆಸಿದ ಯುದ್ದಗಳು ಅಮೇರಿಕಾದ ಕರಾಳ ಮುಖಕ್ಕೆ ಸಾಕ್ಷಿಯಾಗಿವೆ.ಸೋವಿಯತ್ ಯೂನಿಯನ್ ಹಿಡಿತದಿಂದ ಆಫ್ಗಘಾನಿಸ್ಥಾನವನ್ನು ಮುಕ್ತಗೊಳಿಸುವ ನೆಪದಲ್ಲಿಅಲ್ಲಿನ ಬುಡಕಟ್ಟು ಜನರಿಗೆಹಣ-ಆಯುಧಗಳನ್ನು ಪೂರೈಸುತ್ತ,ಅವರನ್ನು ಉಗ್ರಗಾಮಿಗಳನ್ನಾಗಿ ಮಾಡಿದ ಕುಖ್ಯಾತಿ ಅಮೇರಿಕಾದ್ದು. ಇಸ್ರೇಲ್ ಎಂಬ ರಾಜ್ಯವನ್ನು ರಾತ್ರೋರಾತ್ರಿ ಸೃಷ್ಠಿಸಿ,ಮದ್ಯಪ್ರಾಚ್ಯದಲ್ಲಿ ನಿರಂತರವಾಗಿ ರಕ್ತ ಹರಿಯುವಂತೆ ಮಾಡಿದ್ದು ಸಹ ಇದೇ ಅಮೇರಿಕ.

ಇಷ್ಟಲ್ಲದೆ ಇವತ್ತು ಲಾಡೆನ್ ಹತ್ಯೆ ಮಾಡಿ ತಾನೇನೋ ಮಹಾಸಾಧನೆ ಮಾಡಿದ್ದೇನೆಂದು ಬಿಂಬಿಸಿಕೊಳ್ಳುತ್ತಿರುವ ಅಮೇರಿಕಾ,ಬಿನ್ ಲಾಡೆನ್ ಅಂತಹ ಭಯೋತ್ಪಾದಕನನ್ನು ತಾನೇ ಸೃಷ್ಠಿಸಿದ ಭೂತವೆಂಬುದನ್ನು ಒಪ್ಪಿಕೊಳ್ಳಲು ಸಹ ತಯಾರಿಲ್ಲ.

ಇವೆಲ್ಲವನ್ನೂ ಅರ್ಥಮಾಡಿಕೊಳ್ಳಲಾಗದಷ್ಟು ಮುಗ್ದರೇನಲ್ಲ ಅಮೇರಿಕನ್ನರು.ಸಾಮ್ರಾಜ್ಯಶಾಹಿ ಮನೋಬಾವನೆಯ ಅವರಿಗೆ ತಮ್ಮ ದೇಶ ಮಾಡಿದ ನರಮೇಧಗಳ ಬಗ್ಗೆ ,ಅದು ಹುಟ್ಟು ಹಾಕಿದ ಬಯೋತ್ಪಾದಕತೆಯ ಬಗ್ಗೆ ನಾಚಿಕೆಯಾಗ ಬೇಕಿತ್ತೆ ಹೊರತು ಸಂಭ್ರಮಾಚರಣೆಯ ಅಗತ್ಯವಿರಲಿಲ್ಲ.
ಇನ್ನು ನಮ್ಮ ಶ್ರೀರಾಮ ಸೇನೆಯ ಮತ್ತು ಗೌರವಾನ್ವಿತ ಮಠಾಧೀಶರು ಸಂಭ್ರಮಿಸಿದ್ದರ ಹಿಂದೆ ಇರುವ ಮನಸ್ಥಿತಿಯಾದರು ಲಾಡೆನ್ ಒಬ್ಬ ಮುಸ್ಲಿಂ ಎಂಬುದೇ ಹೊರತು ಅವನೊಬ್ಬ ಜೀವ ವಿರೋಧಿ ಭಯೋತ್ಪಾಕ ಎಂದೇನು ಅಲ್ಲ.

ನಕ್ಸಲರ ನೆಲಬಾಂಬಿಗೆ ಬಲಿಯಾಗುವ ಪೋಲಿಸರ ಸಾವುಗಳಿಗೆ, ಪೋಲಿಸರ ಗುಂಡಿಗೆ ಬಲಿಯಾಗುವ ನಕ್ಸಲರ ಸಾವುಗಳಿಗೆ, ಮನುಷ್ಯರು ಸಂಭ್ರಮಿಸುತ್ತ ಹೋದರೆ ಮಾನವೀಯತೆ ಎಲ್ಲಿ ಉಳಿಯುತ್ತದೆ?

ಸಾವನ್ನು ಸಂಭ್ರಮಿಸುವ ಮನಸ್ಸುಗಳ ಹಿಂದಿರುವ ಕ್ರೌರ್ಯವನ್ನು ನೆನೆಸಿಕೊಂಡರೆ ನಾಳೆಗಳ ಬಗ್ಗೆ ಭಯವಾಗುತ್ತದೆ!

ಹುಟ್ಟಿನ ಮನೆಯಲ್ಲಿ ಅಳುವ-ಸಾವಿನ ಮನೆಯಲ್ಲಿ ನಗುವ ಮನುಷ್ಯನೊಳಗಿನ ರಾಕ್ಷಸತ್ವದ ಮುಂದೆ ಜಗತ್ತಿನೆಲ್ಲ ಆಯುಧಗಳೂ ಹರಿತವಾದವೇನಲ್ಲ ಅನಿಸುತ್ತಿದೆ. 

ಜುಲೈ 30, 2016

ಕೆಸರೆರಚಾಟದ ಮಧ್ಯೆ ಕೇಳಿಕೊಳ್ಳದ ಪ್ರಶ್ನೆಗಳು.

ಡಾ. ಅಶೋಕ್. ಕೆ. ಆರ್
30/07/2016
ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ, 7.56 ಟಿ.ಎಂ.ಸಿ ನೀರನ್ನು ಕುಡಿಯಲು ಮಾತ್ರ ಬಳಸಿಕೊಳ್ಳಬೇಕೆಂದಿದ್ದ ಕರ್ನಾಟಕದ ಆಸೆಗೆ ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪು ತಣ್ಣೀರೆರಚಿದೆ. ಮಧ್ಯಂತರ ತೀರ್ಪು ಕರ್ನಾಟಕದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಬಂದಿರುವುದಕ್ಕೆ ಅಚ್ಚರಿ ಪಡುವ ಅವಶ್ಯಕತೆಯಿದೆಯಾ? ಈ ತೀರ್ಪಿಗೆ ಕಾಂಗ್ರೆಸ್ ಕಾರಣವಾ? ಬಿಜೆಪಿ ಕಾರಣವಾ? ‘ನಿಮ್ಮ ತಪ್ಪು, ನಿಮ್ದೇ ತಪ್ಪು’ ಎಂದು ಎರಡೂ ರಾಷ್ಟ್ರೀಯ ಪಕ್ಷಗಳು ಕೆಸರೆರಚಾಡುತ್ತಿವೆ. ನಿಜವಾಗಿ ತಪ್ಪು ಯಾರದ್ದು?

ಜಲದ ವಿಷಯದಲ್ಲಿ ನಮ್ಮಲ್ಲಿರುವ ರಾಜಕೀಯ ಪಕ್ಷಗಳಷ್ಟೇ ಅಲ್ಲ ಜನರಿಗೂ ಭರ್ಜರಿ ಆಲಸ್ಯ. ಜನರ ಆಲಸ್ಯ ರಾಜಕೀಯದಲ್ಲಿ ಪ್ರತಿಫಲಿಸುತ್ತಿದೆಯೋ ರಾಜಕಾರಣಿಗಳ ಆಲಸ್ಯ ಜನರಲ್ಲಿ ಪ್ರತಿಫಲಿಸುತ್ತಿದೆಯೋ ಹೇಳುವುದು ಕಷ್ಟ. ಪರರಾಜ್ಯಗಳ ರಾಜಕಾರಣಿಗಳು ಕೇಂದ್ರದಲ್ಲಿ ‘ಪವರ್ಫುಲ್’ ಎಂದು ಉದ್ಗರಿಸುವ ನಾವು ನಮ್ಮ ಸಂಸದರ್ಯಾಕೆ ಕೇಂದ್ರದಲ್ಲಿ ‘ವೀಕು’ ಎಂಬ ಪ್ರಶ್ನೆಯನ್ನೇ ಕೇಳುವುದಿಲ್ಲ. ನಮ್ಮ ಸಂಸದರು ಕರ್ನಾಟಕದ ವಿಷಯವಾಗಿ ಅದೆಷ್ಟು ಸಲ ಪಕ್ಷಭೇದ ಮರೆತು ಸಂಸತ್ತಿನಲ್ಲಿ ದನಿಯೆತ್ತಿದ್ದಾರೆ ಎಂದು ಗಮನಿಸುವುದಿಲ್ಲ. ಕರ್ನಾಟಕದಲ್ಲೊಂದು ಸಶಕ್ತ ಪ್ರಾದೇಶಿಕ ರಾಜಕೀಯ ಪಕ್ಷವಿಲ್ಲದಿರುವುದು ಇದಕ್ಕೊಂದು ಕಾರಣ. ಗೋವಾದಲ್ಲೂ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಇರುವುದರಿಂದ ಪ್ರಾದೇಶಿಕ ಪಕ್ಷದ ಕೊರತೆಯಷ್ಟೇ ಕಾರಣವೆಂದೂ ಹೇಳಲಾಗದು. ಇರುವ ರಾಷ್ಟ್ರೀಯ ಪಕ್ಷಗಳ ನಾಯಕರಿಗೂ ಇಚ್ಛಾಶಕ್ತಿ ಕಡಿಮೆ. ನಮ್ಮಲ್ಲಿರುವ ರಾಜಕೀಯ ನೇತಾರರು / ಸರಕಾರಗಳು ಬೀದಿಯಲ್ಲಿ ನಿಂತು ಕರ್ನಾಟಕದ ಪರವಾಗಿ, ಇಲ್ಲಿನ ನದಿಗಳ ಪರವಾಗಿ ವೀರಾವೇಷದ ಮಾತುಗಳನ್ನಾಡುವ ಅವಶ್ಯಕತೆಯೇನೂ ಇಲ್ಲ. ಕಾರಣ ಕಾವೇರಿಯಿರಲಿ, ಕಳಸಾ ಬಂಡೂರಿಯಿರಲಿ ಬೀದಿಯಲ್ಲಿ ನಿಂತು ಗೆಲ್ಲುವ ಸಂಗತಿಗಳಲ್ಲ. ಈ ಸಂಗತಿಗಳನ್ನು ಗೆಲ್ಲುವುದಕ್ಕಿರುವುದು ಎರಡೇ ದಾರಿ, ಒಂದು ನಮ್ಮ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರುವುದು; ರಾಜಕೀಯ ಕಾರಣಗಳಿಗಾಗಿ ಅದನ್ನಂತೂ ನಮ್ಮ ಸಂಸದರಿಂದ ನಿರೀಕ್ಷಿಸುವುದು ಬೇಡ. ಎರಡು ನ್ಯಾಯಾಧೀಕರಣದ ಮೆಟ್ಟಿಲೇರಿದ ಪ್ರಕರಣಗಳಲ್ಲಿ ಕರ್ನಾಟಕದ ವಾದವನ್ನು ಸಮರ್ಥವಾಗಿ ಮಂಡಿಸುವಂತೆ ಮಾಡುವುದು. ನ್ಯಾಯಾಲಯಗಳಲ್ಲಿ ಕರ್ನಾಟಕದ ಹಿತಾಸಕ್ತಿಯ ವಿರುದ್ಧ ತೀರ್ಪು ಬರುವುದು ನಮ್ಮ ವಕೀಲರು ಸಮರ್ಪಕವಾಗಿ ವಾದ ಮಂಡಿಸದೇ ಇರುವುದರಿಂದ, ಸರಕಾರಗಳು ನ್ಯಾಯಾಲಯ ಕೇಳಿದ ದಾಖಲೆಗಳನ್ನು ಸರಿಯಾಗಿ ನೀಡದೇ ಇರುವುದರಿಂದ ಎಂದು ತಮ್ಮ ಎಫ್.ಬಿ ಪೋಸ್ಟಿನಲ್ಲಿ ಬರೆದಿದ್ದಾರೆ ಸಿ.ಎಸ್.ದ್ವಾರಕಾನಾಥ್. ಕರ್ನಾಟಕದ ನೆಲ ಜಲದ ವಿಷಯದಲ್ಲಿ ಪರರಾಜ್ಯದ ವಕೀಲರನ್ನೇ ಎಲ್ಲಾ ಸರಕಾರಗಳೂ ನೇಮಿಸುವುದ್ಯಾಕೆ ಎಂದವರು ಪ್ರಶ್ನಿಸುತ್ತಾರೆ. ಮಹದಾಯಿಯ ಸಂದರ್ಭದಲ್ಲೂ ನಮ್ಮ ವಾದಕ್ಕೆ ಸೋಲಾಗಿದ್ದಕ್ಕೆ ದಾಖಲೆಗಳನ್ನು ಸರಿಯಾಗಿ ಮಂಡಿಸದೇ ಇರುವುದು ಕಾರಣ, ನಮ್ಮ ಹುಳುಕುಗಳನ್ನು ಮರೆತು ನ್ಯಾಯಾಧೀಕರಣವನ್ನು ದೂರುವುದರಲ್ಲಿ ಪ್ರಯೋಜನವಿದೆಯೇ? ಕರ್ನಾಟಕ ಸರಕಾರಗಳ ನಡೆಗಳು, ಸರಕಾರ ನೇಮಿಸುವ ವಕೀಲರು, ನ್ಯಾಯಾಲಯದಲ್ಲಿ ನಮ್ಮವರು ನಡೆಸುವ ದುರ್ಬಲ ವಾದಗಳಿಗೆಲ್ಲ ದೊಡ್ಡ ಇತಿಹಾಸವೇ ಇರುವಾಗ ಕಳಸಾ ಬಂಡೂರಿ ನಾಲೆಯ ವಿಷಯದಲ್ಲಿ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ತೀರ್ಪು ಬಂದಿರುವುದರ ಬಗ್ಗೆ ಅಚ್ಚರಿ ಪಡುವ ಅವಶ್ಯಕತೆ ಖಂಡಿತ ಇಲ್ಲ.

ಇನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರು ‘ನಿಮ್ಮಿಂದಾಯ್ತು’ ‘ನಿಮ್ಮಿಂದಾಯ್ತು’ ಎಂದು ಕೆಸರೆರಚಾಟದಲ್ಲಿ ತೊಡಗಿರುವುದು ಮುಂದಿನ ಚುನಾವಣೆಗಳ ದೃಷ್ಟಿಯಿಂದಷ್ಟೇ ಹೊರತು ಮತ್ತೇನಕ್ಕೂ ಅಲ್ಲ. ‘ನೀವು ಗೋವಾದ ಕಾಂಗ್ರೆಸ್ಸಿಗರನ್ನು ಒಪ್ಪಿಸಿ, ನಾವು ಬಿಜೆಪಿಯವರನ್ನು ಒಪ್ಪಿಸುತ್ತೇವೆ’ ‘ನೀವು ಗೋವಾದ ಬಿಜೆಪಿಯವರನ್ನು ಒಪ್ಪಿಸಿ, ನಾವು ಕಾಂಗ್ರೆಸ್ಸಿಗರನ್ನು ಒಪ್ಪಿಸುತ್ತೇವೆ’ ಎಂಬ ಬೂಟಾಟಿಕೆಯ ಮಾತುಗಳೂ ಕೂಡ ಇವರ ರಾಜಕಾರಣದ ಭಾಗವಷ್ಟೇ. ಎರಡೂ ಪಕ್ಷದವರ ರಾಜಕಾರಣ ನಮಗರ್ಥವಾಗಿಬಿಟ್ಟಿದೆ, ಮುಂದಿನ ಸಲ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬ ಆವೇಶದ ಮಾತುಗಳು ಚುನಾವಣೆ ಬರುತ್ತಿದ್ದಂತೆಯೇ ನಮ್ಮೆಲ್ಲರಿಗೂ ಖಂಡಿತವಾಗಿ ಮರೆತುಹೋಗಿರುತ್ತದೆ, ಮತ್ತದೇ ಜಾತಿಯ ಮುಖ ನೋಡಿಕೊಂಡು ಹೈಕಮ್ಯಾಂಡಿನಲ್ಲಿರುವ ನಾಯಕರ ಮುಖ ನೋಡಿಕೊಂಡು ಮತ ಹಾಕುತ್ತೇವೆ, ಆಮೇಲೆ ಕೈಕೈ ಹಿಸುಕಿಕೊಳ್ಳೋಣ ಬಿಡಿ.

ಇವೆಲ್ಲಾ ರಾಜಕೀಯ ಪ್ರಶ್ನೆಗಳನ್ನು ಪಕ್ಕಕ್ಕೆ ಸರಿಸಿ ನೋಡಿದರೆ ‘ಕಳಸಾ ಬಂಡೂರಿಯ’ ಹೆಸರಿನಲ್ಲಿ ಭಾವನಾತ್ಮಕವಾಗಿ ನಮ್ಮನ್ನು ಮೂರ್ಖರನ್ನಾಗಿಸುತ್ತಿದ್ದಾರೆಯೇ ಎಂಬ ಅನುಮಾನ ಬರುತ್ತದೆ. (ಕಳಸಾ ಬಂಡೂರಿಯ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಮುನ್ನೋಟದಲ್ಲಿ ಓದಿ). ಕಳಸಾ ಬಂಡೂರಿ ಯೋಜನೆ 1978ರಲ್ಲೇ ರೂಪುಗೊಂಡಿತ್ತು, 2002ರಲ್ಲಿ ಅದಕ್ಕೆ ಚಾಲನೆ ಕೊಡಬೇಕೆಂದು ನಿರ್ಧರಿಸಲಾಯಿತು. ಈಗ 2016ರಲ್ಲಿದ್ದೇವೆ. ಅಂದರೆ ಹತ್ತಿರತ್ತಿರ ನಲವತ್ತು ವರುಷಗಳಿಂದ ಕಳಸಾ ಬಂಡೂರಿ ಯೋಜನೆ ಕಾರ್ಯಗತವಾಗದೆಯೇ ಉಳಿದಿದೆ. ಇಷ್ಟು ದೀರ್ಘ ವರುಷಗಳಿಂದ ನಿದ್ರಾವಸ್ಥೆಯಲ್ಲಿರುವ ಯೋಜನೆಯಿಂದಷ್ಟೇ ಕುಡಿಯುವ ನೀರು ಸಿಗಲು ಸಾಧ್ಯ ಎಂದ್ಯಾಕೆ ಜನರನ್ನು ನಂಬಿಸಲಾಗಿದೆ. ಸ್ಥಳೀಯ ಮಟ್ಟದ ಯೋಜನೆಗಳನ್ಯಾಕೆ ನಮ್ಮ ಸರಕಾರ ರೂಪಿಸಲಿಲ್ಲ? ಅಥವಾ ರೂಪಿಸಿ ಅವುಗಳು ವಿಫಲವಾದವೇ? ಒಂದೆಡೆ ಕರ್ನಾಟಕದೊಳಗೇ ಎರಡು ಪ್ರದೇಶಗಳ ನಡುವೆ ನೀರಿಗಾಗಿ ಮುನಿಸು ಶುರುವಾಗಿದೆ. ನೇತ್ರಾವತಿ ನದಿ ಸೇರುವ ಎತ್ತಿನಹೊಳೆಯನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ‘ಕುಡಿಯುವ ನೀರಿನ’ ಸಲುವಾಗಿ ತಿರುಗಿಸುವ ಸಾಹಸಕ್ಕೆ ಕರ್ನಾಟಕ ಸರಕಾರ ಕೈ ಹಾಕಿದೆ. ಈ ರೀತಿ ಹಳ್ಳವೊಂದನ್ನು ತಿರುಗಿಸುವುದು ಪ್ರಕೃತಿಗೆ ಮಾರಕ, ಪಶ್ಚಿಮಘಟ್ಟಕ್ಕೆ ಮಾರಕ ಎಂದು ದಕ್ಷಿಣ ಕನ್ನಡದಲ್ಲಿ ವಿರೋಧಗಳೆದ್ದವು. ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಮಳೆಗೇನು ತುಂಬಾ ಕೊರತೆಯಿಲ್ಲ, ಮಳೆನೀರಿನ ನಿರ್ವಹಣೆ ಸರಿಯಾಗಿ ಮಾಡಿದರೆ, ಕೆರೆ ಕಟ್ಟೆಗಳನ್ನು ತುಂಬಿಸುವತ್ತ ಆಸಕ್ತಿ ತೋರಿಸಿದರೆ ನದಿ ತಿರುಗಿಸುವ ದುಸ್ಸಾಹಸ ಮಾಡುವುದೇ ಬೇಕಿಲ್ಲ ಎಂಬ ವಾದಗಳಿವೆ. ಕೆರೆ ಕಟ್ಟೆಗಳನ್ನು ನುಂಗಲಷ್ಟೇ ಆಸಕ್ತಿ ತೋರಿಸುವ ನಮಗೆ ಸ್ಥಳೀಯ ಮಟ್ಟದ ಪರಿಹಾರಗಳೆಡೆಗೆ ತುಂಬಾ ಆಸಕ್ತಿಯೇನಿಲ್ಲ. ಮಂಡ್ಯ ಮದ್ದೂರಿನ ಕೆರೆಗಳೆಲ್ಲ ನೀರಿಲ್ಲದೇ ಭಣಗುಡುತ್ತಿರುವಾಗ, ನೀರಿಲ್ಲದ ಕೆರೆಗಳು ಚಿಕ್ಕದಾಗುತ್ತಿರುವಾಗ ಅದು ಹೇಗೆ ಚನ್ನಪಟ್ಟಣದ ಕೆರೆಗಳಲ್ಲಿ ನೀರಿರುತ್ತದೆ ಎಂದು ನಾವು ಯೋಚಿಸುವುದಿಲ್ಲ. ಚನ್ನಪಟ್ಟಣದ ಶಾಸಕ ಯೋಗೇಶ್ವರ್ ಅದೇನು ಮಾಡಿದರೋ ಬಿಟ್ಟರೋ ಅವರಿಗೆ ನೀರಿನ ಮಹತ್ವದ ಅರಿವಾಗಿದೆ, ಕೆರೆಗಳು ತುಂಬುವುದರಿಂದ ಅಂತರ್ಜಲದ ವೃದ್ಧಿಯಾಗುತ್ತದೆ ಎಂದರಿವಾಗಿದೆ. ಬೆಂಗಳೂರಿನ ಉದಾಹರಣೆಯನ್ನೇ ನೋಡಿ. ಇಲ್ಲಿ ನೀರು ಬರುವುದಕ್ಕಿಂತ ವೇಗವಾಗಿ ಜನರು ಬಂದು ಸೇರುತ್ತಿದ್ದೇವೆ. ನಮಗೆಲ್ಲರಿಗೂ ನೀರು ಒದಗಿಸಲು ಕಾವೇರಿಯೇ ಬೇಕಾಗಿದೆ. ಇಲ್ಲಿನ ಕೆರೆ ಕಟ್ಟೆಗಳು ಜೀವಂತವಾಗಿದ್ದರೆ ಅಂತರ್ಜಲದಿಂದಾದರೂ ನಗರದ ಕುಡಿಯುವ ನೀರಿನ ಅಗತ್ಯತೆಯನ್ನು ಪೂರೈಸಬಹುದಿತ್ತು. ಆದರಿಲ್ಲಿ ಆಗುವುದೇನು? ಮೊದಲು ‘ಲೇಕ್ ವ್ಯೀವ್ ಅಪಾರ್ಟ್ ಮೆಂಟ್’ ತಲೆಯೆತ್ತುತ್ತೆ, ಕೆರೆಗೆ ತಲುಪಬೇಕಾದ ನೀರಿನ ಹಾದಿಗಳನ್ನೆಲ್ಲ ಮುಚ್ಚಲಾಗುತ್ತೆ. ನೀರು ಖಾಲಿಯಾದ ಕೆರೆಗೆ ಮಣ್ಣು ಸುರಿದು ಮತ್ತೊಂದು ಕಟ್ಟಡ ನಿರ್ಮಾಣವಾಗುತ್ತೆ. ಹೀಗೇ ಆದರೆ ಈಗ ಕಾವೇರಿ ನದಿಯಿಂದ ಪೈಪಿನಲ್ಲಿ ಬೆಂಗಳೂರಿಗೆ ನೀರು ಸಾಗಿಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ಇಡೀ ಕಾವೇರಿ ನದಿಯನ್ನೇ ಬೆಂಗಳೂರಿನ ಕಡೆಗೆ ತಿರುಗಿಸಿದರೂ ಬೆಂಗಳೂರು ವಾಸಿಗಳ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಲಾಗುವುದಿಲ್ಲ. 

ಎತ್ತಿನಹೊಳೆ ಯೋಜನೆಯ ವಿರೋಧಕ್ಕೆ ಸಹಮತ ವ್ಯಕ್ತಪಡಿಸುತ್ತಾ ನದಿಗೆ ಸೇರುವ ಹೊಳೆಯನ್ನು ತಿರುಗಿಸುವ ಕಳಸಾ ಬಂಡೂರಿ ಯೋಜನೆಗೆ ಬೆಂಬಲ ವ್ಯಕ್ತಪಡಿಸುವುದು ಸರಿಯಾಗುವುದಾದರೂ ಹೇಗೆ ಎನ್ನುವ ಪ್ರಶ್ನೆ ಅನೇಕ ಸಲ ನನ್ನನ್ನು ಕಾಡಿದೆ. ಈ ಯೋಜನೆಯಿಂದ ‘ಕುಡಿಯುವ ನೀರು’ ತಲುಪುವ ಜಿಲ್ಲೆಗಳಲ್ಲಿ ನಾನು ಓಡಾಡಿಲ್ಲ. ಎತ್ತಿನಹೊಳೆ ಮತ್ತು ಕಳಸಾ ಬಂಡೂರಿ ಯೋಜನೆಗಳ ರೂಪುರೇಷೆಗಳು ಬೇರೆಯೇ ಇರಬಹುದು, ಅದು ನನ್ನರಿವಿಗೆ ಬಾರದೇ ಹೋಗಿರಬಹುದು. ಆದರೆ ನನ್ನ ಪ್ರಶ್ನೆಯೆಂದರೆ ಕಳೆದ ನಲವತ್ತು ವರುಷಗಳಿಂದ ಈ ಯೋಜನೆಗೆ ಬದಲಿಯಾಗಿ ಮತ್ತೊಂದು ಕುಡಿಯುವ ನೀರಿನ ಯೋಜನೆಯನ್ನು ಯಾಕೆ ನಮ್ಮ ಘನ ಸರಕಾರಗಳು ರೂಪಿಸಿಲ್ಲ? ಕುಡಿಯುವ ನೀರು ತಲುಪುತ್ತದೆ ಎನ್ನಲಾದ ಹುಬ್ಬಳ್ಳಿ, ಬೆಳಗಾವಿ ಮತ್ತು ಗದಗ ಜಿಲ್ಲೆಗಳಲ್ಲಿ ಕಳೆದ ನಲವತ್ತು ವರುಷಗಳಲ್ಲಿ ಎಷ್ಟು ಕೆರೆಗಳು ನಿರ್ಮಾಣಗೊಂಡಿವೆ? ಇದು ಮಳೆಯೇ ಆಗದ ಮರುಭೂಮಿ ಪ್ರದೇಶವಾ? ಬೀಳುತ್ತಿರುವ ಮಳೆಯನ್ನು ಹಿಡಿದಿಡಲಾಗದೇ ಈ ತಾಪತ್ರಯವಾ? ಎತ್ತಿನಹೊಳೆಯನ್ನು ತಿರುಗಿಸಿದರೂ ಸರಕಾರಗಳು ಹೇಳುವಷ್ಟು ನೀರು ಸಿಗುವುದಿಲ್ಲ ಎನ್ನಲಾಗುತ್ತದೆ, ಮುಂದೆ ನ್ಯಾಯಾಧೀಕರಣದ ಅಂತಿಮ ತೀರ್ಪು ನಮ್ಮ ಪರವಾಗಿ ಬಂದು ಕಳಸಾ ಬಂಡೂರಿ ಯೋಜನೆ ಕಾರ್ಯರೂಪಕ್ಕೆ ಬಂದಾಗ ಸರಕಾರ ಹೇಳುವಷ್ಟು ನೀರು ಸಿಗುತ್ತದಾ? ಹಳ್ಳದ ನೀರನ್ನು ಇತ್ಲಾಕಡೆ ತಿರುಗಿಸಿದ ನಂತರ ಅತ್ಲಾಕಡೆ ಮಳೆಯೇ ಆಗದಿದ್ದರೆ ಗತಿಯೇನು? ಈ ಪ್ರಶ್ನೆಗಳನ್ಯಾಕೆ ನಾವು ಕೇಳಿಕೊಳ್ಳುತ್ತಿಲ್ಲ? ‘ಕುಡಿಯುವ ನೀರೆಂಬುದು’ ಭಾವನಾತ್ಮಕ ವಿಚಾರ, ಮಾನವೀಯತೆಯ ವಿಷಯ. ‘ಮನುಷ್ಯರಿಗೇ ಕುಡಿಯಲು ನೀರಿಲ್ಲದಾಗ ಯಾವ ಪ್ರಕೃತಿಯ ಬಗ್ಗೆ ಮಾತಾಡ್ತಿ ಎದ್ದು ನಡಿಯಯ್ಯಾ’ ಎಂದು ಬಯ್ಯಸಿಕೊಳ್ಳುವ ಸಾಧ್ಯತೆಗಳು ಇಂತಹ ಪ್ರಶ್ನೆಗಳನ್ನು ಕೇಳಿದಾಗ ಹೆಚ್ಚಿರುತ್ತವೆ. ಬೆಂಗಳೂರಿನಲ್ಲಿ ಕುಳಿತು ದೂರದ ಕಾವೇರಿ ನದಿಯಿಂದ ಬರುವ ನೀರನ್ನು ಕುಡಿದು ಇಂತಹ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸುಲಭವಲ್ಲವೇ ಎಂಬ ಪಾಪಪ್ರಜ್ಞೆಯೂ ನನ್ನನ್ನು ಕಾಡುತ್ತದೆ. ಭಾವನಾತ್ಮಕ ವಿಚಾರದಲ್ಲಿ ಸ್ಥಳೀಯ ಪರಿಹಾರಗಳ ಬಗ್ಗೆ ಜನರಿಗೆ ಪ್ರಶ್ನೆಗಳು ಮೂಡದಿದ್ದರೂ ಬೇಡ, ಯೋಜನೆ ರೂಪಿಸುವ ಅಧಿಕಾರಿಗಳಿಗೆ, ಸರಕಾರದವರಿಗಾದರೂ ಈ ಪ್ರಶ್ನೆಗಳು ಮೂಡಬೇಕಲ್ಲವೇ? ಕಳಸಾ ಬಂಡೂರಿ ಯೋಜನೆಯ ತೀರ್ಪು ನಮ್ಮ ಪರವಾಗಿ ಬರದೇ ಹೋದ್ರೆ ಅಷ್ಟೇ ಹೋಯ್ತು, ಅದರ ಹತ್ತರಷ್ಟು ನೀರನ್ನು ಸ್ಥಳೀಯವಾಗಿ ಉಳಿಸಿಕೊಳ್ಳುವ ನೂರು ಯೋಜನೆಗಳು ನಮ್ಮಲ್ಲಿವೆ, ಬನ್ನಿ ಮೊದ್ಲು ಕೆರೆ ಕಟ್ಟೋಣ ಎಂದು ಒಬ್ಬನಾದರೂ ರಾಜಕಾರಣಿ ಕನಿಷ್ಟ ಪಕ್ಷ 2002ರಲ್ಲಿ ಹೇಳಿದ್ದರೂ ಕಳಸಾ ಬಂಡೂರಿಯ ವಿಚಾರವಾಗಿ ನಮ್ಮ ಜನರು ತಿಂಗಳುಗಟ್ಟಲೇ ಪ್ರತಿಭಟನೆ ನಡೆಸಬೇಕಿರಲಿಲ್ಲ ಎಂದನ್ನಿಸುವುದು ತಪ್ಪೇ?

ಬಾಜಪದ ಓಟಕ್ಕೆ ಕಡಿವಾಣ ಹಾಕಲಿರುವ ಕಾಂಗ್ರೆಸ್ಸೇತರ ಪಕ್ಷಗಳು

ಕು.ಸ.ಮಧುಸೂದನರಂಗೇನಹಳ್ಳಿ
30/07/2016
ರಾಜಕಾರಣದಲ್ಲಿ ಸತತ ಗೆಲುವೆಂಬುದಾಗಲಿ, ಸೋಲೆಂಬುದಾಗಲಿ ಇರುವುದಿಲ್ಲ. ಅದರಲ್ಲೂ ಇಂಡಿಯಾದಂತಹ ಬಹುಸಂಸ್ಕೃತಿಯ, ಬಹುಬಾಷೆಯ, ವಿಶಾಲ ರಾಷ್ಟ್ರದಲ್ಲಿ ಕಾಲದಿಂದ ಕಾಲಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಜನರ ರಾಜಕೀಯ ಒಲವುಗಳು ಬದಲಾಗುತ್ತಲೇ ಇರುತ್ತವೆ. ಇಲ್ಲಿ ಒಬ್ಬ ರಾಜಕಾರಣಿಯನ್ನು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಲು ಜನ ರಾಜಕಾರಣದ ಒಂದೇ ಮಾನದಂಡವನ್ನು ಅನುಸರಿಸುವುದಿಲ್ಲ. ಬದಲಿಗೆ ಜನಪ್ರತಿನಿದಿಯೊಬ್ಬನ ಆಯ್ಕೆಯ ಮೆಲೆ ಆತನ ಜಾತಿ, ಧರ್ಮ, ಆರ್ಥಿಕ ಹಿನ್ನೆಲೆಗಳೂ ಪ್ರಬಾವ ಬೀರುವುದರಿಂದ ಎಲ್ಲವೂ ಪೂರ್ವನಿರ್ದಾರಿತವಾಗಿ ನಡೆಯುವುದು ಕಷ್ಟ. ಹಾಗಾಗಿಯೇ ಗೆಲ್ಲುವ ಆತ್ಮವಿಶ್ವಾಸದಿಂದ ಬೀಗುವ ಪಕ್ಷಗಳು ಅವಮಾನಕಾರಿಯಗಿ ಸೋಲನ್ನಪ್ಪುವುದು, ಸೋಲುತ್ತವೆಯೆಂದು ನಾವು ತೀರ್ಮಾನಿಸಿದ ಪಕ್ಷಗಳು ಬಾರಿ ಗೆಲುವು ಸಾದಿಸುವುದು ಇಂಡಿಯಾದ ಪ್ರಜಾಸತ್ತೆಯಲ್ಲಿ ಮಾಮೂಲಾಗಿದೆ. ಅದರ ಎಲ್ಲ ದೌರ್ಬಲ್ಯಗಳ ಹೊರತಾಗಿಯೂ ಇಂಡಿಯಾದ ಪ್ರಜಾಪ್ರಭುತ್ವದ ಸೌಂದರ್ಯ ಅಡಗಿರುವುದೆ ಇಂತಹ ಆಕಸ್ಮಿಕಗಳಲ್ಲಿ. 2015ರ ಮೊದಲಿಗೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಗಳಿಸಿದ ಅಭೂತಪೂರ್ವ ಗೆಲುವು ಅಂತಹ ಅಚ್ಚರಿಗಳಲ್ಲಿ ಒಂದು, ಇರಲಿ.

2014ರ ಲೋಕಸಭಾ ಚುನಾವಣೆಯ ಹೊತ್ತಿಗೆ ಇಡೀ ದೇಶ ನರೇಂದ್ರ ಮೋದಿಯವರ ಜಪ ಮಾಡುವಷ್ಟರ ಮಟ್ಟಿಗೆ ಅವರ ಜನಪ್ರಿಯತೆ ಉತ್ತುಂಗದಲ್ಲಿತ್ತು. ಬಾಜಪೇತರ ಪಕ್ಷಗಳ ನಾಯಕರುಗಳು ಸಹ ಮೋದಿ ಅಲೆಯ ಪ್ರಬಾವವನ್ನು ತಳ್ಳಿ ಹಾಕಲಾಗದಷ್ಟು ಬಲವಾಗಿ ಮೋದಿ ಪರ ಗಾಳಿ ಬೀಸ ತೊಡಗಿತ್ತು. ಆದರೆ ಚುನಾವಣೆಯ ಪಲಿತಾಂಶ ಬಂದಾಗ ಚಿತ್ರಣವೇ ಬೇರೆಯಾಗಿತ್ತು. ಕಾರಣ, ಸುಮಾರು 200 ರಿಂದ 240 ಸ್ಥಾನಗಳನ್ನು ಗೆಲ್ಲಬುದೆಂದು ಅಂದಾಜು ಮಾಡಲಾಗಿದ್ದ ಬಾಜಪ ಸ್ಪಷ್ಟ ಬಹುಮತ ಪಡೆದು ಒಂದು ರೀತಿಯ ಅಚ್ಚರಿಗೆ ಕಾರಣವಾಗಿತ್ತು. ಇನ್ನೊಂದೆಡೆ ದೇಶದಾದ್ಯಂತ ಬಾಜಪದ ಪರ ಒಲವಿದೆಯೆಂದು ಊಹಿಸಿದ್ದವರಿಗೆ ಅಚ್ಚರಿಯಾಗುವಂತೆ ಬಾಜಪ ದೇಶದ ಕೆಲವು ಪ್ರದೇಶಗಳಲ್ಲಿ ಶೂನ್ಯ ಸಾಧನೆ ಮಾಡಿ ಇನ್ನೊಂದು ತೆರನಾದ ಅಚ್ಚರಿಗೆ ಕಾರಣವಾಯಿತು. ದೇಶದ ಉತ್ತರ ಮತ್ತು ಪಶ್ಚಿಮದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರ ಮೂಲಕ ಬಹುಮತ ಪಡೆದಿದ್ದ ಬಾಜಪ ದೇಶದ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ-ಕರ್ನಾಟಕ ಹೊರತು ಪಡಿಸಿ ಹೇಳಿಕೊಳ್ಳುವಂತಹ ಸಾಧನೆಯನ್ನೇನು ಮಾಡಲಿಲ್ಲ. ಬಾಜಪದ ಬೆಂಬಲಿಗರು ಏನೇ ಹೇಳಿಕೊಂಡರೂ ಬಾಜಪ ಪಕ್ಷ ಹಿಂದಿ ಮಾತನಾಡುವ ಹೃದಯ ಭಾಗದಲ್ಲಿ ಮಾತ್ರವೇ ಮನ್ನಣೆ ಪಡೆದ ಪಕ್ಷವೆಂಬುದನ್ನು ಸದರಿ ಚುನಾವಣೆ ಸಾಬೀತು ಮಾಡಿತು.

ಇದಕ್ಕೆ ಪೂರಕವೆಂಬಂತೆ ದಕ್ಷಿಣದ ಕೇರಳ, ತಮಿಳುನಾಡು, ಪುದುಚೇರಿ, ತೆಲಂಗಾಣ, ಆಂದ್ರ ಪ್ರದೇಶಗಳಲ್ಲಿ ಬಾಜಪದ ಸಾಧನೆಯೇನು ಹೇಳಿ ಕೊಳ್ಳುವಂತಿರಲಿಲ್ಲ. ಅದೇ ರೀತಿ ಪೂರ್ವದ ಪಶ್ಚಿಮ ಬಂಗಾಳ, ಒಡಿಸ್ಸಾ, ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮುಂತಾದೆಡೆಗಳಲ್ಲಿ ಬಾಜಪ ಯಾವ ಪ್ರಬಾವವನ್ನೂ ಬೀರಲಾಗಿರಲಿಲ್ಲ. ಇದರಿಂದ ಅರ್ಥವಾಗುವುದೇನೆಂದರೆ ಲೋಕಸಭೆಯಲ್ಲಿ ಬಹುಮತ ಪಡೆದ ಬಾಜಪ ಒಂದು ರಾಷ್ಟ್ರೀಯ ಪಕ್ಷವಾಗಿ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ತನ್ನ ಅಸ್ಥಿತ್ವವನ್ನು ತೋರಿಸುವಲ್ಲಿಯಂತು ವಿಫಲವಾಯಿತು.

ಬಾಜಪದ ಈ ಭಾಗಶ: ಯಶಸ್ಸಿಗೆ ಕಾರಣವೇನೇ ಇದ್ದರೂ ಅದು 2019ರ ಚುನಾವಣೆಯ ವೇಳೆಗೆ ರಾಷ್ಟ್ರದಾದ್ಯಂತ ವ್ಯಾಪಿಸಿ ಎಲ್ಲ ರಾಜ್ಯಗಳಲ್ಲಿಯೂ ಗೆಲುವು ಸಾಧಿಸುತ್ತದೆಯೆಂಬ ಅಭಿಪ್ರಾಯವನ್ನು ಅದರ ರಾಷ್ಟ್ರಾದ್ಯಕ್ಚರಾದಿಯಾಗಿ ಬಹುತೇಕ ನಾಯಕರುಗಳು ವ್ಯಕ್ತ ಪಡಿಸಿದರೂ ಅದು ಅಷ್ಟು ಸುಲಭದ ಕೆಲಸವೇನು ಅಲ್ಲ. ಬಾಜಪದ ಯಶಸ್ಸಿನಲ್ಲಿಯೇ ಅದರ ವಿಫಲತೆಯ ಕಾರಣಗಳೂ ಇವೆಯೆಂಬುದನ್ನು ನಾವು ಮರೆಯಬಾರದು. ಬಾಜಪದ ಗೆಲುವಿನ ಓಟ ಶಾಶ್ವತವೂ ಅಲ್ಲ, ನಿರಂತರವೂ ಅಲ್ಲ ಎಂಬುದನ್ನು ಕಳೆದ ಎರಡು ವರ್ಷಗಳಲ್ಲಿ ನಡೆದ ರಾಜ್ಯಗಳ ವಿದಾನಸಭೆಯ ಚುನಾವಣೆಗಳು ತೋರಿಸಿಕೊಟ್ಟಿವೆ, ಬಾಜಪ ಮಾತೆತ್ತಿದರೆ ಕಾಂಗ್ರೆಸ್ ಮುಕ್ತ ಭಾರತದ ಅಹಮ್ಮಿನ ಮಾತುಗಳನ್ನಾಡುತ್ತಲೇ ಕಾಂಗ್ರೆಸ್ಸನ್ನು ಜೀವಂತವಾಗಿಡುತ್ತಿದೆ. ಯಾಕೆಂದರೆ ಅಧಿಕಾರದಲ್ಲಿರುವ ಪಕ್ಷವೊಂದು ಇನ್ನೊಂದು ಪಕ್ಷವನ್ನು ಮುಗಿಸಿ ಬಿಡುವ ಮಾತಾಡತೊಡಗಿದೊಡನೆ ಮತದಾರರ ಮನಸಿನಲ್ಲಿ ಅನುಮಾನವೊಂದು ಹೆಡೆಯೆತ್ತುದೆ. ಸರ್ವಾಧಿಕಾರಿ ಧೋರಣೆಯನ್ನು ಸಹಿಸಿಕೊಳ್ಳದ ಭಾರತೀಯ ಮನಸ್ಥಿತಿ ಇಂತಹ ಹೇಳಿಕೆಗಳನ್ನು ನೀಡುವ ಪಕ್ಷವನ್ನು ದೀರ್ಘಕಾಲದಲ್ಲಿ ತಿರಸ್ಕರಿಸಲು ಪ್ರಯತ್ನಿಸುತ್ತದೆ. ಕಾಂಗ್ರೆಸ್ ಮುಕ್ತ ಭಾರತದ ಮಾತಾಡುವ ಬಾಜಪದ ಬಗ್ಗೆ ಪ್ರಾದೇಶಿಕ ಪಕ್ಷಗಳಿಗೂ ಸಹಜವಾದ ಭಯ ಪ್ರಾರಂಭವಾಗಿ ಅವು ಇನ್ನಷ್ಟು ಗಟ್ಟಿಯಾಗಿ ಬೆಳೆಯಲು ತಯಾರಾಗತೊಡಗುತ್ತವೆ. ಯಾಕೆಂದರೆ ಇವತ್ತು ಒಂದು ರಾಷ್ಟ್ರೀಯ ಪಕ್ಷವನ್ನೇ ಇಲ್ಲವಾಗಿಸಲು ಪ್ರಯತ್ನಿಸುವ ಪಕ್ಷವೊಂದು ಪ್ರಾದೇಶಿಕ ಪಕ್ಷಗಳನ್ನು ಉಳಿಯಲು ಬಿಡುವುದಿಲ್ಲ ಎಂಬ ಸತ್ಯ ಅವುಗಳಿಗೂ ಮನವರಿಕೆಯಾಗುತ್ತ ಹೋಗುತ್ತದೆ. ಇಂತಹ ಅಹಮ್ಮಿನ ಮಾತುಗಳ ಪ್ರಬಾವ ಈಗಾಗಲೇ ಆಗತೊಡಗಿರುವುದನ್ನು ಕೆಲವು ರಾಜ್ಯಗಳಲ್ಲಿ ನಾವು ನೋಡಿಯಾಗಿದೆ. ಸ್ವಲ್ಪ ಅವುಗಳತ್ತ ಗಮನ ಹರಿಸೋಣ:

2014ರ ಲೋಕಸಭಾ ಚುನಾವಣೆಗಳು ಮುಗಿದ ಕೆಲವೇ ತಿಂಗಳುಗಳಲ್ಲಿ ದೆಹಲಿ ವಿದಾನಸಭೆಗೆ ನಡೆದ ಚುನಾವಣೆಗಳು ಮೊಟ್ಟ ಮೊದಲಬಾರಿಗೆ ಮೋದಿಯ ಅಲೆಗೆ, ಬಾಜಪದ ನಾಗಾಲೋಟಕ್ಕೆ ಕಡಿವಾಣ ಹಾಕಿದವು. ಅರವಿಂದ್ ಕೇಜ್ರೀವಾಲಾರ ಆಮ್ ಆದ್ಮಿ ಪಕ್ಷ ಒಟ್ಟು 70ಸ್ಥಾನಗಳ ಪೈಕಿ 67ನ್ನು ಗೆಲ್ಲುವ ಮೂಲಕ ಮೋದಿ ಅಲೆಯ ಮಿಥ್ಯೆಯನ್ನು ಜಗಜ್ಜಾಹೀರು ಮಾಡಿತು. ಕೇವಲ 3 ಸ್ಥಾನಗಳನ್ನು ಗೆಲ್ಲುವ ಮೂಲಕ ಬಾಜಪ ದೆಹಲಿಯಲ್ಲಿ ಸೋಲು ಕಾಣುವುದರ ಮೂಲಕ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕಾಗಿತ್ತು.

ಆದರೆ ಹಾಗಾಗಲಿಲ್ಲ, ನಂತರ ನಡೆದ ಬಿಹಾರ ವಿದಾನಸಭಾ ಚುನಾವಣೆಯಲ್ಲಿಯೂ ಬಾಜಪ ಮೈತ್ರಿಕೂಟ, ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ಕಾಂಗ್ರೆಸ್ಸಿನ ಜೊತೆ ಸೇರಿ ರಚಿಸಿಕೊಂಡ ಮಹಾಘಟಬಂದನ್ ವಿರುದ್ದ ಸೋಲನ್ನಪ್ಪಬೇಕಾಯಿತು. ಖುದ್ದು ಮೋದಿಯವರೇ ಅಖಾಡಕ್ಕಿಳಿದು ಪ್ರಚಾರ ಮಾಡಿದರೂ ಅಲ್ಲಿ ತೀವ್ರವಾದ ಮುಖಭಂಗ ಅನುಭವಿಸಿತು. ಅಲ್ಲಿಗೆ ಮೋದಿಯ ಅಲೆಯೆಂಬುದು ಬಾಜಪವು ಮಾಧ್ಯಮಗಳನ್ನು ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸೃಷ್ಠಿಸಿದ ಹುಸಿ ಅಲೆಯೆಂಬುದು ಕಣ್ಣಿಗೆ ರಾಚ ತೊಡಗಿತ್ತು. ಇದಾದ ನಂತರ ಮೋದಿಯವರ ತವರು ರಾಜ್ಯವಾದ ಗುಜರಾತಿನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳಲ್ಲಿಯೂ ಬಾಜಪ ಸೋಲು ಕಂಡಿತು.

ಇನ್ನು ಮೊನ್ನೆಮೊನ್ನೆ ನಡೆದ ಐದು ರಾಜ್ಯಗಳ ವಿದಾನಸಭೆಯ ಚುನಾವಣೆಯಲ್ಲಿಯೂ ವೈಯುಕ್ತಿಕವಾಗಿ ಬಾಜಪದ ಸಾಧನೆ ಮಹತ್ತರವಾದುದೇನಲ್ಲ. ಐದು ರಾಜ್ಯಗಳ ಪೈಕಿ ಅಸ್ಸಾಮಿನಲ್ಲಿ ಅದು ಅಧಿಕಾರಕ್ಕೆ ಬಂದರೂ ಅದೇನು ಅದರ ಸ್ವಂತ ಬಲದಿಂದಲ್ಲ. ಬದಲಿಗೆ ಅಸ್ಸಾಂ ಗಣಪರಿಷತ್ ಮತ್ತು ಬೋಡೋ ಪೀಪಲ್ಸ್ ಪಕ್ಷಗಳ ಮೈತ್ರಿಯಿಂದಾಗಿ ಅದು ಅಧಿಕಾರ ಪಡೆಯುವಲ್ಲಿ ಸಫಲತೆ ಸಾದಿಸಿತು. ಅಲ್ಲಿ ಅದು ಕಾಂಗ್ರೆಸ್ಸಿಗಿಂತ ಕಡಿಮೆ ಮತಗಳನ್ನು ಪಡೆದಿತ್ತು. ಅಕಸ್ಮಾತ್ ಕಾಂಗ್ರೆಸ್ ಏ.ಐ.ಯು.ಡಿ.ಎಫ್. ಜೊತೆ ಮೈತ್ರಿ ಮಾಡಿಕೊಂಡಿದ್ದರೆ ಬಾಜಪ ಇವತ್ತು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಿತ್ತು. ಇನ್ನು ಪಶ್ಚಿಮ ಬಂಗಾಳ, ಕೇರಳ, ಪುದುಚೇರಿ, ತಮಿಳುನಾಡುಗಳಲ್ಲಿ ಗಣನೀಯ ಸಾಧನೆಯನ್ನೇನು ಬಾಜಪ ಮಾಡಲಗಲಿಲ್ಲ. ಹಾಗೆ ನೋಡಿದರೆ ಐದೂ ರಾಜ್ಯಗಳಿಂದ ಅದು ಪಡೆದ ಒಟ್ಟು ಸ್ಥಾನಗಳು ಕೇವಲ 66 ಮಾತ್ರ, ಆದರೆ ಕಾಂಗ್ರೆಸ್ 145 ಸ್ಥಾನಗಳನ್ನು ಪಡೆದು ಎಲ್ಲ ರಾಜ್ಯಗಳಲ್ಲಿಯೂ ತನ್ನ ಅಸ್ಥಿತ್ವವನ್ನು ತೋರಿಸಿಕೊಟ್ಟಿದೆ.

ಇದರಿಂದ ಅರ್ಥವಾಗುವುದೇನೆಂದರೆ ಬಾಜಪವನ್ನು ಎದುರಿಸುವಲ್ಲಿ ಕಾಂಗ್ರೆಸ್ ವಿಫಲವಾದರೂ ಪ್ರಾದೇಶಿಕ ಪಕ್ಷಗಳು ಮಾತ್ರ ಗಟ್ಟಿಯಾಗಿ ನೆಲೆ ನಿಂತು ಬಾಜಪವನ್ನು ಹಿಮ್ಮೆಟ್ಟಿಸುತ್ತಿವೆ. ಕಾಂಗ್ರೆಸ್ ಬಾಜಪದ ಮತಾಂಧ ರಾಜಕಾರಣದ ಮತ್ತು ಸಾಂಸ್ಕೃತಿಕ ರಾಜಕಾರಣದ ತಂತ್ರಗಾರಿಕೆಗೆ ಉತ್ತರ ನೀಡುವಲ್ಲಿ ಸೋತ ಕಡೆ ಪ್ರಾದೇಶಿಕ ಪಕ್ಷಗಳು ಖಡಕ್ಕಾಗಿ ಉತ್ತರ ನೀಡುತ್ತಿವೆ.. ಸ್ಥಳೀಯವಾಗಿ ಬಿಹಾರದ ನಿತೀಶ್ ಕುಮಾರ್ ರಾಷ್ಟ್ರೀಯ ನಾಯಕರಾಗಿ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅದೇ ರೀತಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯವರು ಸಹ ಹಿಂದೆ ರೈಲ್ವೇ ಮಂತ್ರಿಯಾಗಿ ರಾಷ್ಟ್ರೀಯ ಐಡೆಂಟಿಟಿಯನ್ನು ಪಡೆದವರಾಗಿದ್ದಾರೆ. ಹಾಗೆಯೇ ತಮಿಳುನಾಡಿನ ಕುಮಾರಿ ಜಯಲಲಿತಾರವರು ಸಹ ರಾಷ್ಟ್ರದ ರಾಜಕಾರಣದಲ್ಲಿ ಚಿರಪರಿಚಿತರೇ ಆಗಿದ್ದಾರೆ. ಇನ್ನು ದೆಹಲಿಯ ಅರವಿಂದ್ ಕೇಜ್ರೀವಾಲ್ ಸಹ ರಾಷ್ಟ್ರ ಮಟ್ಟದ ನಾಯಕರಾಗಿ ಗುರುತಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಕಾಂಗ್ರೆಸ್ಸನ್ನು ಹೊರತು ಪಡಿಸಿಯೂ ಪ್ರಾದೇಶಿಕ ಪಕ್ಷಗಳು ಬಾಜಪವನ್ನು ಎದುರಿಸುವ ಬಹುದೊಡ್ಡ ಶಕ್ತಿಯನ್ನು ಹೊಂದಿವೆ. ಇನ್ನುಳಿದ ರಾಜ್ಯಗಳಲ್ಲಿಯೂ ಪ್ರಾದೇಶಿಕ ನಾಯಕರುಗಳು ಇದ್ದು ಮುಂದಿನ ದಿನಗಳಲ್ಲಿ ಅವರ ರಾಜ್ಯಗಳ್ಲಿ ನಡೆಯುವ ವಿದಾನಸಭೆಯ ಚುನಾವಣೆಗಳು ಅವರ ಬಲಪ್ರದರ್ಶನಕ್ಕೆ ಸಾಕ್ಷಿಯಾಗಲಿವೆ.

ಈ ಸಾಲಿನಲ್ಲಿ 2017ಕ್ಕೆ ಉತ್ತರಪ್ರದೇಶ, ಉತ್ತರಾಕಾಂಡ್, ಪಂಜಾಬ್, ಗೋವಾ, ಮಣಿಪುರಗಳಲ್ಲಿ ಚುನಾವಣೆಗಳು ನಡೆಯ ಬೇಕಾಗಿದ್ದು ಬಾಜಪದ ಶಕ್ತಿಯನ್ನು ಅವು ಮತ್ತೊಮ್ಮೆ ಒರೆಹಚ್ಚಲಿವೆ. ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶದ ವಿದಾನಸಭಾ ಚುನಾವಣೆಗಳು ತೀವ್ರ ಕುತೂಹಲ ಮೂಡಿಸಿವೆ. ಕಾರಣ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಜಪ ಬಾರಿ ಜಯಗಳಿಸಿದ್ದು, ಅಲ್ಲೀಗ ಸಮಾಜವಾದಿ ಪಕ್ಷ ಅಧಿಕಾರದಲ್ಲಿರುವುದು. ಜೊತೆಗೆ ಮುಲಾಯಂಸಿಂಗ್ ಯಾದವ್ ಮತ್ತು ಮಾಯಾವತಿಯವರಂತಹ ಘಟಾನುಘಟಿ ನಾಯಕರುಗಳು ಎರಡು ಪ್ರಾದೇಶಿಕ ಪಕ್ಷಗಳನ್ನು ಮುನ್ನಡೆಸುತ್ತಿರುವುದಾಗಿದೆ. ಬಹುಜನಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಬಾಜಪವನ್ನು ಹೇಗೆ ಎದುರಿಸಿ ನಿಲ್ಲುತ್ತವೆಯೆಂಬುದೇ ಸದ್ಯಕ್ಕಿರುವ ಪ್ರಶ್ನೆ. ಬಾಜಪದ ಮತಾಂಧ ರಾಜಕಾರಣದ ವಿರುದ್ದ ಈ ಎರಡೂ ಪಕ್ಷಗಳ ಜಾತಿ ಸಮೀಕರಣದ ರಾಜಕೀಯ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ನೋಡಬೇಕಿದೆ.

ಇನ್ನು ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷ ಆಳವಾಗಿ ಬೇರು ಬಿಡುತ್ತಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿತ್ತು. ಇದೀಗ ಅಲ್ಲಿನ ಅಕಾಲಿದಳ ಮತ್ತು ಬಾಜಪ ಮೈತ್ರಿಕೂಟಕ್ಕೆ ಗೆಲುವು ಸುಲಭ ಸಾದ್ಯವೇನಲ್ಲ. ಇದುವರೆಗು ಕಾಂಗ್ರೆಸ್ ಮತ್ತು ಅಕಾಲಿದಳ ಮೈತ್ರಿಕೂಟದ ನಡುವೆ ನಡೆಯುತ್ತಿದ್ದ ನೇರ ಹಣಾಹಣಿಯ ಬದಲು ತ್ರಿಕೋನ ಸ್ಪರ್ದೆ ಏರ್ಪಡಲಿದ್ದು ಅಕಾಲಿದಳದ ಮೈತ್ರಿಕೂಟ ಗೆಲ್ಲಲು ಕಷ್ಟಪಡಬೇಕಾಗಿದೆ.

ಇನ್ನು ಉತ್ತರಕಾಂಡದಲ್ಲಿ ಸದ್ಯ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿದ್ದು ಇತ್ತೀಚೆಗೆ ಬಾಜಪ ಅಲ್ಲಿ ಕಾಂಗ್ರೆಸ್ ಶಾಸಕರನ್ನು ಪಕ್ಷಾಂತರಕ್ಕೆ ಪ್ರಚೋದಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಿದ್ದನ್ನು ನ್ಯಾಯಾಲಯ ಅನೂರ್ಜಿತಗೊಳಿಸಿದ ಪ್ರಕರಣ ಮತದಾರರ ಮನಸಿನಲ್ಲಿ ಬಾಜಪದ ಬಗ್ಗೆ ಬೇಸರವುಂಟು ಮಾಡಿದ್ದು. ಕಾಂಗ್ರೆಸ್ಸಿಗೆ ಅನುಕಂಪದ ಆಸರೆ ದೊರೆಯಬಹುದಾಗಿದೆ. ಇನ್ನು ಗೋವಾದಲ್ಲಿ ಬಾಜಪ ಅಧಿಕಾರದಲ್ಲಿದ್ದರೂ ಮನೋಹರ್ ಪಣಿಕ್ಕರ್ ರಾಷ್ಟ್ರ ರಾಜಕೀಯಕ್ಕೆ ಬಂದ ನಂತರ ಅಲ್ಲಿನ ಬಾಜಪ ಶಕ್ತಿಕಳೆದುಕೊಂಡಂತೆ ಕಾಣುತ್ತದೆ. ಆಡಳಿತ ವಿರೋಧಿ ಅಲೆಯೇನಾದರು ಅಲ್ಲಿ ಬೀಸಿದರೆ ಬಾಜಪ ಗೆಲ್ಲುವುದು ಕಷ್ಟವಾಗಲಿದೆ. ಮಣಿಪುರದಲ್ಲಿ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿದ್ದು ಸ್ಥಳೀಯ ಪಕ್ಷಗಳು ಸಹ ಬಲಾಡ್ಯವಾಗಿವೆ. ಅಲ್ಲಿ ಬಾಜಪ ಏನಾದರು ಮಾಡಬೇಕಿದ್ದಲ್ಲಿ ಸ್ಥಳೀಯ ಪಕ್ಷಗಳ ನೆರವನ್ನು ಪಡೆಯ ಬೇಕಾಗುತ್ತದೆ.

ಇವೆಲ್ಲವನ್ನೂ ಸೂಕ್ಷ್ಮವಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ನೋಡಿದರೆ ಮುಂದಿನ ದಿನಗಳಲ್ಲಿ ಬಾಜಪ ತಾನಂದು ಕೊಂಡಂತೆ ಸಲೀಸಾಗಿ ಗೆಲ್ಲುತ್ತಾ ಹೋಗುವುದು ಅಸಾದ್ಯದ ಮಾತು. ಮುಂದೆ ನಡೆಯಲಿರುವ ವಿದಾನಸಭಾ ಚುನಾವಣೆಗಳ ಪಲಿತಾಂಶಗಳೇನೇ ಆಗಿರಲಿ, ಪ್ರಾದೇಶಿಕ ಪಕ್ಷಗಳ ಕಾರ್ಯತಂತ್ರದ ಆಧಾರದ ಮೇಲೆ 2019ರ ಲೋಕಸಭಾ ಚುನಾವಣೆಯಲ್ಲಿ ಬಾಜಪದ ಸೋಲು ಗೆಲುವು ನಿರ್ದಾರವಾಗಲಿದೆ.

ಬಿಹಾರದಲ್ಲಿ ನಡೆದ ಮಹಾಘಟಬಂದನ್ ರಾಷ್ಟ್ರ ಮಟ್ಟದಲ್ಲೇನಾದರು ನಡೆದರೆ ಮುಂದಿನ ಚುನಾವಣೆಯ ದಿಕ್ಕೇ ಬದಲಾಗುವ ಸಂಭವವಿದೆ. ಆದರೆ ಈ ಮೈತ್ರಿ ಬಾಜಪ ಮತ್ತು ಕಾಂಗ್ರೆಸ್ ಎರಡರಿಂದಲೂ ಸಮಾನಾಂತರ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಏಕೆಂದರೆ ತಮ್ಮನ್ನು ಕಳೆದ ವಿದಾನಸಭೆ ಚುನಾವಣೆಯಲ್ಲಿ ಶತಾಯ ಗತಾಯ ವಿರೋದಿಸಿದ ಕಾಂಗ್ರೆಸ್ಸನ್ನು ಮಮತಾ ಬ್ಯಾನರ್ಜಿಯಾಗಲಿ ಜಯಲಲಿತಾ ಆಗಲಿ ಒಪ್ಪಿಕೊಳ್ಳಲಾರರು. ಈ ದಿಸೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗನ್ನು ದೂರವಿಟ್ಟು ಪ್ರಾದೇಶಿಕ ಪಕ್ಷಗಳು ಒಂದು ಮಹಾಮೈತ್ರಿಕೂಟವನ್ನು ರಚಿಸಿಕೊಂಡದ್ದೇ ಆದಲ್ಲಿ ಪ್ರದಾನಮಂತ್ರಿ ನರೇಂದ್ರ ಮೋದಿಯವರ ಮುಂದಿನ ಹಾದಿ ಕಠಿಣವಾಗಲಿದೆ.

ನಿತೀಶ್ ಕುಮಾರ್, ಜಯಲಲಿತಾ ಹಾಗು ಮಮತಾ ಬ್ಯಾನರ್ಜಿಯವರು ಸದ್ಯದ ಮಟ್ಟಿಗೆ ತಮ್ಮ ರಾಜ್ಯಗಳಲ್ಲಿ ಬಾಜಪ ಮತ್ತು ಕಾಂಗ್ರೆಸ್ ಎನ್ನುವ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿಯೂ ಅವರುಗಳು ಒಂದಾಗಿ ಕಾರ್ಯನಿರ್ವಹಿಸುವ ಸಾದ್ಯತೆ ಹೆಚ್ಚಿದೆ. ಯಾಕೆಂದರೆ ಎಲ್ಲಿಯವರಗು ಈ ರಾಷ್ಟ್ರೀಯ ಪಕ್ಷಗಳು ಬಲಾಢ್ಯವಾಗಿರುತ್ತವೆಯೊ ಅಲ್ಲಿಯವರೆಗು ಪ್ರಾದೇಶಿಕ ಪಕ್ಷಗಳನ್ನು ನೆಮ್ಮದಿಯಾಗಿರಲು ಅವು ಬಿಡಲಾರವು ಎನ್ನುವ ಸತ್ಯ ಅವರಿಗೆ ಗೊತ್ತಿದೆ. ಇದರಲ್ಲಿ ಬಹಳ ಮುಖ್ಯವಾಗಿ ನಿತೀಶ್‍ಕುಮಾರ್ ಬಹಳ ಆಕ್ರಮಣಕಾರಿಯಾಗಿ ಎರಡೂ ಪಕ್ಷಗಳನ್ನು ಎದುರಿಸಿ ನಿಂತು ರಾಷ್ಟ್ರ ಮಟ್ಟದಲ್ಲಿ ಬೆಳೆಯುವ ಇರಾದೆ ಹೊದಿದ್ದಾರೆ. ಬಿಹಾರದ ಆಚೆಗೂ ಅವರ ಆಸಕ್ತಿ ಇರುವುದರಿಂದಲೇ ಅವು ಮೊನ್ನೆ ನಡೆದ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗಳಲ್ಲಿ ತಮ್ಮ ಉಮೇದುವಾರರನ್ನು ಹಾಕಿದ್ದರು. ಇನ್ನು ಸಮಯ ಸರಿಯೆನ್ನಿಸಿದರೆ ಜಯಲಲಿತಾ ಸಹ ರಾಷ್ಟ್ರ ರಾಜಕಾರಣಕ್ಕೆ ದುಮುಕಲು ಸಿದ್ದರಾಗಿದ್ದಾರೆ. ಇನ್ನು ಮಮತಾ ಬ್ಯಾನರ್ಜಿ ಕೇಂದ್ರ ಸಚಿವೆಯಾಗಿದ್ದು ಇಡೀ ರಾಷ್ಟ್ರವನ್ನೇ ಸುತ್ತಿದವರು, ಅವರಿಗೂ ರಾಷ್ಟ್ರ ರಾಜಕಾರಣ ಹೊಸದೇನಲ್ಲ. ಇನ್ನು ಉತ್ತರ ಪ್ರದೇಶದಲ್ಲಿ ಮುಂದಿನ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದೇ ಆದರೆ ಮಾಯಾವತಿಯವರೂ ಸಹ ಇವರೊಂದಿಗೆ ಕೈ ಜೋಡಿಸಬಹುದಾಗಿದೆ. ಈ ಪಟ್ಟಿಗೆ ನಾನು ಮುಲಾಯಂಸಿಂಗವರನ್ನು ಸೇರಿಸಲು ಹಿಂಜರಿಯುತ್ತೇನೆ. ಏಕೆಂದರೆ ಅವರ ಇತ್ತೀಚೆಗಿನ ನಡವಳಿಕೆ ಚಂಚಲವಾಗಿದೆ. ಬಾಜಪವನ್ನು ವಿರೋಧಿಸುವ ಮಾತಾಡುತ್ತಲೇ ಜಾತ್ಯಾತೀತ ಶಕ್ತಿಗಳ ಒಗ್ಗೂಡುವಿಕೆಗೆ ಅಡ್ಡಗಾಲು ಹಾಕುತ್ತಾರೆ. ಬಿಹಾರದ ಮಹಾಘಟಬಂದನ್ ಸಮಯದಲ್ಲಿ ನಿತೀಶರಿಗೆ ಕೊನೆ ಗಳಿಗೆಯಲ್ಲಿ ಕೈಕೊಟ್ಟು ನಡೆದದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

ಇಂತಹದೊಂದು ಮೈತ್ರಿಕೂಟ ಸೃಷ್ಠಿಯಾಗುವುದೇ ಆದಲ್ಲಿ ಅದಕ್ಕೆ ರಾಷ್ಟ್ರದ ಇತರೇ ರಾಜ್ಯಗಳ ಹಲವಾರು ಬಲಾಢ್ಯ ನಾಯಕರುಗಳ ಪ್ರದೇಶಿಕ ಪಕ್ಷಗಳೂ ಸೇರಬಹುದಾದ ಸಾದ್ಯತೆಯಿದೆ. ಅವು ಯಾವುವೆಂದರೆ ಒಡಿಸ್ಸಾದ ಬಿಜುಜನತಾದಳ (ನವೀನ್‍ಪಟ್ನಾಯಕ್), ಜನತಾದಳ ಜಾತ್ಯಾತೀತ (ಹೆಚ್.ಡಿ.ದೇವೇಗೌಡ), ವೈ.ಎಸ್.ಆರ್. ಕಾಂಗ್ರೆಸ್(ಜಗನ್ಮೋಹನ ರೆಡ್ಡಿ), ತೆಲಂಗಾಣ ರಾಷ್ಟ್ರೀಯ ಸಮಿತಿ (ಚಂದ್ರಶೇಖರ ರಾವ್), ನ್ಯಾಷನಲ್ ಕಾನ್ಫರೆನ್ಸ್ (ಉಮರ್ ಅಬ್ದುಲ್ಲಾ), ಆಮ್ ಆದ್ಮಿ (ಅರವಿಂದ್‍ಕೇಜ್ರೀವಾಲ್), ಎನ್.ಸಿ.ಪಿ (ಶರದ್‍ಪವಾರ್), ರಾಷ್ಟ್ರೀಯ ಜನತಾದಳ್(ಲಾಲೂಪ್ರಸಾದ್ ಯಾದವ್) ಬಹುಜನಪಕ್ಷ( ಮಾಯಾವತಿ), ಅಸ್ಸಾಮಿನ ಏ.ಐ.ಯು.ಡಿ.ಎಫ್ ಹಾಗು ಕೇರಳದ ಕೆಲವು ಸಣ್ಣಪುಟ್ಟ ಪಕ್ಷಗಳು ಇಂತಹದೊಂದು ಮೈತ್ರಿಯಾಗುವುದಾದರೆ ಅದರ ಪಾಲುದಾರರಾಗಬಹುದಾದ ಸಾದ್ಯತೆಗಳಿವೆ.

ಅಕಸ್ಮಾತ್ ಇಂತಹ ಮಹಾಮೈತ್ರಿ ಸಾಕಾರಗೊಳ್ಳುವುದಾದಲ್ಲಿ ಅದರ ಪ್ರದಾನಮಂತ್ರಿ ಅಭ್ಯರ್ಥಿ ಯಾರಾಗಬೇಕೆಂಬುದು ತೀವ್ರವಾಗಿ ಚರ್ಚೆಯಾಗುವ ವಿಷಯವಾಗಿದೆ. ಈ ಸಾಲಿನಲ್ಲಿ ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ, ಜಯಲಲಿತಾ, ಮಾಯಾವತಿಯವರ ಹೆಸರುಗಳು ಬಹುಮುಖ್ಯವಾಗಿ ಕೇಳಿ ಬರಲಿವೆ. ಈ ನಾಲ್ವರಲ್ಲಿ ರಾಷ್ಟ್ರವ್ಯಾಪಿಯಾಗಿ ಜನ ಸ್ವೀಕರಿಸಬಹುದಾದ ಹೆಸರ್ಯಾವುದು ಎಂಬುದೇ ಕುತೂಹಲಕಾರಿಯಾದುದು. ಈ ನಾಲ್ಕೂ ಜನಗಳ ಬಗ್ಗೆ ಒಂದಿಷ್ಟು ನೋಡುವುದಾದರೆ:

ನಿತೀಶ್ ಕುಮಾರ್ ಬಿಹಾರದಲ್ಲಿ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ನಡೆಸಿದ ಸ್ವಚ್ಚ ಮತ್ತು ಪಾರದರ್ಶಕ ಆಡಳಿತದ ಬಗ್ಗೆ ಇಡೀ ದೇಶ ಮೆಚ್ಚುಗೆ ವ್ಯಕ್ತಪಡಿಸಿದೆ. ಜೊತೆಗೆ ನಿತೀಶರ ಸರಳತೆ ಮತ್ತು ಪ್ರಾಮಾಣಿಕತೆಯನ್ನು ಅವರ ವಿರೋಧಿಗಳೂ ಅಲ್ಲಗೆಳೆಯುವುದಿಲ್ಲ. ಉಳಿದಂತೆ ಕೇಂದ್ರದ ರೈಲ್ವೆ ಮಂತ್ರಿಯಾಗಿ ಜನರಿಗೆ ಚಿರಪರಿಚಿತರಾಗಿದ್ದಾರೆ. 2014ರ ಚುನಾವಣಾ ಪ್ರಚಾರಕ್ಕೆ ಬಿಹಾರಕ್ಕೆ ನರೇಂದ್ರ ಮೋದಿಯವರು ಬರುವ ಅಗತ್ಯವಿಲ್ಲವೆಂದು ನೇರವಾಗಿ ಬಾಜಪಕ್ಕೆ ಹೇಳಿದ್ದು ಅವರ ಜಾತ್ಯಾತೀತ ನಿಲುವಿಗೆ ಸಾಕ್ಷಿಯಾಗಿದೆ ಮತ್ತು ಕೋಮುವಾದವನ್ನು ವಿರೋಧಿಸುವ ಜನರ ದೃಷ್ಠಿಯಲ್ಲಿ ಗಟ್ಟಿನಾಯಕರಾಗಿ ಹೊರಹೊಮ್ಮಿದವರು. ಇವೆಲ್ಲವೂ ಅವರನ್ನು ಮುಂದಿನ ಪ್ರದಾನಿ ಎಂದು ಬಿಂಬಿಸವುದಕ್ಕೆ ಪೂರಕವಿಷಯಗಳಾಗಿವೆ.

ಇನ್ನು ಮಮತಾಬ್ಯಾನರ್ಜಿಯ ವಿಷಯಕ್ಕೆ ಬಂದರೆ ಅವರು ಕಾಂಗ್ರೆಸ್ ನಲ್ಲಿದ್ದಾಗಿನಿಂದಲೂ ತಮ್ಮ ಬಂಡಾಯದ ಗುಣಕ್ಕೆ, ನೇರಾನೇರಾ ಮಾತುಗಳಿಗೆ ಹೆಸರಾದವರು. ಕೆಲವು ಕಪ್ಪು ಚುಕ್ಕಿಗಳ ಹೊರತಾಗಿಯೂ ಎಡರಂಗದವರೆದುರು ಶಕ್ತಿಯುತವಾಗಿ ನಿಂತು ಐದು ವರ್ಷಗಳ ಕಾಲ ಬಂಗಾಳವನ್ನು ಮುನ್ನಡೆಸಿದ ಕೀರ್ತಿ ಆಕೆಗಿದೆ. ಅವರೂ ಕೇಂದ್ರದಲ್ಲಿ ಸಚಿವೆಯಾಗಿ ಕೆಲಸ ಮಾಡಿದ್ದು ರಾಷ್ಟ್ರವ್ಯಾಪಿಯಾಗಿ ಪರಿಚಿತವಾದ ಹೆಸರಾಗಿದೆ. ಆಕೆಗಿರುವ ಒಂದು ಹಿನ್ನಡೆಯ ವಿಷಯವೆಂದರೆ ಕೆಲವೊಮ್ಮೆ ಆಕೆ ತೀರಾ ಹಟಮಾರಿಯಂತೆ ವರ್ತಿಸಿ, ಮಿತ್ರ ಪಕ್ಷಗಳಿಗೆ ಕಿರಿಕಿರಿ ಉಂಟುಮಾಡುತ್ತಾರೆಂಬುದಾಗಿದೆ.

ಜಯಲಲಿತಾರವರು ಒಬ್ಬಂಟಿ ಹೆಣ್ಣುಮಗಳಾಗಿ ರಾಜಕೀಯ ಮಾಡುತ್ತಾ ಒಂದಿಡೀ ಪಕ್ಷವನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡು ತಮಿಳುನಾಡಂತಹ ರಾಜ್ಯವನ್ನು ಎರಡನೇ ಅವಧಿಯಲ್ಲೂ ಮುನ್ನಡೆಸುವ ಎದೆಗಾರಿಕೆಯುಳ್ಳ ಹೆಣ್ಣುಮಗಳು. ರಾಷ್ಟ್ರಮಟ್ಟದಲ್ಲಿ ಯಾವ ಅಧಿಕಾರವನ್ನೂ ಹೊಂದಿ ಕೆಲಸ ಮಾಡದೇ ಇದ್ದರೂ ನಿಪುಣ ಆಡಳಿತಗಾರ್ತಿಯೆಂದು ಹೆಸರು ಮಾಡಿರುವ ಜನಪ್ರಿಯ ನಾಯಕಿ. ಅವರಿಗಿರುವ ಒಂದು ಕೊರತೆಯೆಂದರೆ ರಾಷ್ಟ್ರ ಮಟ್ಟದಲ್ಲಿ ಅವರ ಹೆಸರನ್ನು ಜನತೆ ಕೇಳದೇ ಇರುವುದಾಗಿದೆ.

ದಲಿತ ಸಮುದಾಯಕ್ಕೆ ಸೇರಿದ ಮಾಯಾವತಿಯವರು ಸಹ ಏಕಾಂಗಿಯಾಗಿ ಒಂದು ಪಕ್ಷವನ್ನು ಮುನ್ನಡೆಸುತ್ತಿದ್ದು ಗಟ್ಟಿ ನಾಯಕತ್ವದ ಹೆಣ್ಣು ಮಗಳು. ದಲಿತೆಯಾಗಿರುವುದರಿಂದ ಇಡೀ ರಾಷ್ಟ್ರದ ದಲಿತರ ಒಲವು ಅವರಿಗೆ ಸಿಗುವ ಸಾದ್ಯತೆಯಿದೆ. ಉಳಿದಂತೆ ಈಗಾಗಲೇ ಬಹುಜನ ಪಕ್ಷ ಅನೇಕ ರಾಜ್ಯಗಳಲ್ಲಿ ಚುನಾವಣಾ ರಾಜಕೀಯ ಮಾಡುತ್ತ ಸಾಕಷ್ಟು ಬೆಂಬಲಿಗರನ್ನು ಹೊಂದಿದೆ. ಆದರೆ ಅವರ ಮೇಲಿರವ ಸಿ.ಬಿ.ಐ ಕೇಸುಗಳು ಅವರ ಪ್ರದಾನಿಯ ಕನಸಿಗೆ ಸಂಚಕಾರ ತರಬಲ್ಲವು ಎಂಬುದಂತು ಸತ್ಯ.

ಈ ಪಟ್ಟಿಗೆ ಸೇರಿಸಬಹುದಾದ ಇನ್ನೊಂದು ಹೆಸರು ಒಡಿಸ್ಸಾದ ಬಿಜು ಜನತಾಪಕ್ಷದ ನವೀನ್ ಪಟ್ನಾಯಿಕ್ ಅವರದು. ಉತ್ತಮ ಆಡಳಿತಗಾರರಾಗಿ ಹೆಸರು ಮಾಡಿ ಯಾವುದೇ ವಿವಾದಗಳಿಂದ ದೂರವಿದ್ದು ರಾಜ್ಯಬಾರ ನಡೆಸುತ್ತಿರುವ ನವೀನ್ ಪಟ್ನಾಯಿಕ್ ಸೂಕ್ತ ವ್ಯಕ್ತಿಯಾದರೂ ಅಖಿಲ ಭಾರತ ಮಟ್ಟದಲ್ಲಿ ಅವರ ಪರಿಚಯವಿಲ್ಲದಿರುವುದು ಅವರ ಹಿನ್ನಡೆಗೆ ಕಾರಣವಾಗುವುದು ನಿಜ.

ಇಲ್ಲಿಯವರೆಗೂ ನಾನು ಹೇಳಿದ್ದೆಲ್ಲ ಒಂದು ರಾಜಕೀಯ ಬದಲಾವಣೆಯ, ದೃವೀಕರಣದ ಸಾದ್ಯತೆಯ ಬಗ್ಗೆಯೇ ಹೊರತು ಬೇರೇನಲ್ಲ. ಯಾಕೆಂದರೆ ಇದುವರೆಗೂ ಅಧಿಕೃತವಾಗಿ ಯಾವೊಂದು ಪಕ್ಷವೂ, ಯಾರೊಬ್ಬ ನಾಯಕರೂ ಈ ಬಗ್ಗೆ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ. ಆದರೆ ತಮ್ಮಗಳ ಪಕ್ಷಗಳನ್ನು ಉಳಿಸಿಕೊಳ್ಳುವ ಮತ್ತು ತಮ್ಮ ರಾಜ್ಯಗಳಲ್ಲಿ ತಮಗಿರುವ ನೆಲೆಯನ್ನು ಉಳಿಸಿಕೊಳ್ಳುವ ದಿಕ್ಕಿನಲ್ಲಿ ಪ್ರಾದೇಶಿಕ ಪಕ್ಷಗಳು ಇಂದಲ್ಲಾ ನಾಳೆ ಇಂತಹದೊಂದು ಪ್ರಯೋಗಕ್ಕೆ ಮುಂದಾದರೆ ಅಚ್ಚರಿಯೇನಿಲ್ಲ. ಇಂತಹದೊಂದು ಮಾತುಕತೆ ಶುರುವಾದರೆ ಪ್ರದಾನಿ ಹುದ್ದೆಯ ಅಭ್ಯರ್ಥಿಯ ಹೆಸರು ಬಂದಾಗ ನಾನು ಉಲ್ಲೇಖಿಸಿದವರನ್ನು ಬಿಟ್ಟು ಸರ್ವಸಮ್ಮತವಾದ ವ್ಯಕ್ತಿಯೊಬ್ಬರ ಹೆಸರು ಕಂಡು ಬಂದರೂ ಆಶ್ಚರ್ಯವೇನಿಲ್ಲ. ಇಂತಹದೊಂದು ಮೈತ್ರಿಯೇನಾದರು ಉಂಟಾದರೆ ಕಾಂಗ್ರೆಸ್ ಇರಲಿ ಬಾಜಪ ಮತ್ತು ಮೋದಿಯವರಿಗೆ ಬಹಳಷ್ಟು ಹಿನ್ನಡೆಯುಂಟಾಗುವುದು ಖಚಿತ. ಏಕೆಂದರೆ ಬಾಜಪ ನಡೆಸುತ್ತಿರುವ ಸಾಂಸ್ಕೃತಿಕ ಮತ್ತು ಮತಾಂಧ ರಾಜಕಾರಣಕ್ಕೆ ಪರ್ಯಾಯವಾದ ರಾಜಕೀಯ ಮಾಡುವ ಶಕ್ತಿಯೊಂದನ್ನು ಜನತೆ ಬಯಸುತ್ತಿದೆ. ಆದರೆ ಮೋದಿ ಮತ್ತು ಅಮಿತ್ ಷಾರವರ ತಂತ್ರಗಾರಿಕೆಗಳನ್ನು, ಸಂಘಪರಿವಾರದ ರಹಸ್ಯ ಕಾರ್ಯಸೂಚಿಗಳನ್ನೂ ಎದುರಿಸಲು ಬೇಕಾದ ತನ್ನದೇ ಆದ ಕಾರ್ಯತಂತ್ರವನ್ನು ರೂಪಿಸಲು ಇಲ್ಲಿಯವರೆಗು ಕಾಂಗ್ರೆಸ್ ವಿಫಲವಾಗಿದ್ದು ಜನರಿಗೆ ಅದರ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತಿದೆ. ಹೀಗಾಗಿ ಪ್ರಾದೇಶಿಕ ಪಕ್ಷಗಳು ಎಲ್ಲಿಯವರೆಗು ಬಲವಾದ ರಾಜಕೀಯ ಶಕ್ತಿಗಳಾಗಿರುತ್ತವೆಯೊ ಅಲ್ಲಿಯವರೆಗೂ ಬಾಜಪ ರಾಷ್ಟ್ರದಾದ್ಯಂದ ಬೆಳೆಯುವುದು ಕಷ್ಟದ ಕೆಲಸ.

ಆದರೆ ಅಧಿಕಾರದ ರುಚಿ ಕಂಡಿರುವ ಕಾಂಗ್ರೆಸ್ಸಾಗಲಿ, ಬಾಜಪವಾಗಲಿ ಇಂತಹದೊಂದು ಮೈತ್ರಿಕೂಟ ರಚನೆಯಾಗದಂತೆ ನೋಡಿಕೊಳ್ಳಲು ತಾವು ಕಲಿತ ವಿದ್ಯೆಯನ್ನೆಲ್ಲ ಖರ್ಚು ಮಾಡುವುದು ಖಂಡಿತಾ.

ಮೂರನೇ ರಾಜಕೀಯ ರಂಗದ ಅನಿವಾರ್ಯತೆಯ ಹಿಂದಿರುವ

ನೈಜ ಕಾರಣಗಳು!

ಕಾಂಗ್ರೆಸ್ ಮತ್ತು ಬಾಜಪಗಳ ಹೊರತಾಗಿ ರಚನೆಯಾಗಬಹುದಾದ ಒಂದು ವಿಶಾಲ ರಾಜಕೀಯ ವೇದಿಕೆಯ ಸಾದ್ಯತೆಗಳ ಕುರಿತಾಗಿ ಮಾತನಾಡಿದ ಮೇಲೂ ನಮ್ಮಲ್ಲಿ ಉಳಿಯುವ ಪ್ರಶ್ನೆ: ಇಂತಹದೊಂದು ರಾಜಕೀಯ ಶಕ್ತಿಯ ಅಗತ್ಯವೇನಿದೆ? ಎಂಬುದಾಗಿದೆ. ಈ ಪ್ರಶ್ನೆಗೆ ಸ್ಪಷ್ಟವಾದ ಮತ್ತು ನಿಖರವಾದ ಉತ್ತರ ಕಂಡುಕೊಂಡು ಜನರಿಗೆ ತಲುಪಿಸದ ಹೊರತು ಇಂತಹ ನಡೆ ಯಶಸ್ವಿಯಾಗಲಾರದು!

ಇವತ್ತು ಶತಮಾನಗಳಷ್ಟು ಹಳೆಯದಾದ ಕಾಂಗ್ರೆಸ್ ಪಕ್ಷ ತನ್ನ ಅಗಾಧಪ್ರಮಾಣದ ಭ್ರಷ್ಟಾಚಾರ ಪ್ರಕರಣಗಳಿಂದ, ಜಡಗಟ್ಟಿದ ನಾಯಕರುಗಳಿಂದ, ತಳ ಮಟ್ಟದಲ್ಲಿ ಜನಸಂಪರ್ಕ ಹೊಂದಿರದ ಭಟ್ಟಂಗಿ ರಾಜಕಾರಣಿಗಳ ಕಾರಣದಿಂದಾಗಿ ದಿನೇದಿನೇ ದುರ್ಬಲಗೊಳ್ಳುತ್ತ ಬರುತ್ತಿದೆ. ಇವೆಲ್ಲದರಿಂದ ಅದು ಬಾಜಪಕ್ಕೆ ಪರ್ಯಾಯವಾಗಿ ನಿಲ್ಲುವ ತ್ರಾಣ ಕಳೆದುಕೊಂಡಂತೆ ಕಾಣುತ್ತಿದೆ. ಅದರ ಅದ್ಯಕ್ಷರಾದ ಶ್ರೀಮತಿ ಸೋನಿಯಾಗಾಂದಿಯವರು ಸಹ ಆಯಾಸಗೊಂಡವರಂತೆ ಕಾಣುತ್ತಿದ್ದಾರೆ. ಅವರ ಸ್ಥಾನ ತುಂಬಲು ಸಿದ್ದವಾಗಿರುವ ಕಾಂಗ್ರೆಸ್ಸಿನ ಉಪಾದ್ಯಕ್ಷರಾದ ರಾಹುಲ್ ಗಾಂದಿಯವರಿಗೆ ಕಾಂಗ್ರೆಸ್ಸನ್ನು ಸಶಕ್ತವಾಗಿ ಮುನ್ನಡೆಸಬಲ್ಲ ಸಾಮರ್ಥ್ಯವಿದೆಯೆಂಬುದನ್ನು ಅವರು ತೋರಿಸಿಕೊಟ್ಟಿಲ್ಲ. ಸೋನಿಯಾರ ತಂತ್ರಗಾರಿಕೆಯಾಗಲಿ, ಖಡಕ್ ನಿರ್ದಾರ ತೆಗದುಕೊಳ್ಳಬಹುದಾದ ಪ್ರಬುದ್ದತೆಯನ್ನು ಅವರಿಲ್ಲಿಯವರೆಗೂ ತೋರಿಸಿಲ್ಲ. ಅಕಸ್ಮಾತ್ ಸೋನಿಯಾರವರೇನಾದರು ರಾಹುಲರ ಕೈಗೆ ಪಕ್ಷವನ್ನು ನೀಡಿದರೆ ಇವತ್ತಿರುವ ಕಾಂಗ್ರೆಸ್ ಇನ್ನಷ್ಟು ದುರ್ಬಲಗೊಳ್ಳಬಹುದಾದ ಸಾದ್ಯತೆಯೇ ಹೆಚ್ಚು. ಇಂತಹ ಸನ್ನಿವೇಶವೊಂದು ಎದುರಾದರೆ ಬಾಜಪದ ಮುಂದಿನ ಹಾದಿ ಸುಗಮವಾಗಲಿದ್ದು, ಅದಕ್ಕೆ ರಾಷ್ಟ್ರ ಮಟ್ಟದಲ್ಲಿ ಎದುರಾಳಿಯೇ ಇಲ್ಲದಂತಾಗಿ ಬಿಡುತ್ತದೆ. ಇದು ಬಾಜಪ ನಾಯಕತ್ವವನ್ನು ಸರ್ವಾಧಿಕಾರದತ್ತ ಕರೆದೊಯ್ದರೆ ಅಚ್ಚರಿಯೇನಿಲ್ಲ. ಸದ್ಯದಲ್ಲಿ ಪ್ರದಾನಿ ನರೇಂದ್ರ ಮೋದಿಯವರ ನಡವಳಿಕೆಗಳು ಅಂತಹದೊಂದು ಅನುಮಾನಕ್ಕೆ ಪುಷ್ಠಿ ಕೊಡುವಂತೆಯೇ ಇವೆ.

ಮತಾಂಧ ರಾಜಕಾರಣದ ಚುಂಗು ಹಿಡಿದು ಕೊಂಡು, ಸಂಘಪರಿವಾರದ ಗುಪ್ತ ಕಾರ್ಯಸೂಚಿಯ ಆಣತಿಯಂತೆ ರಾಜಕಾರಣ ಮಾಡುತ್ತ ಬಂದಿರುವ ಬಾಜಪದ ಸಿದ್ದಾಂತಗಳು ನಮ್ಮ ಬಹು ಸಂಸ್ಕೃತಿಯ ಸಮಾಜದ ಮಟ್ಟಿಗೆ ಪ್ರತಿಗಾಮಿಯಾಗಿರುತ್ತವೆ. ಪಶ್ಚಿಮದ ಏಕಧರ್ಮ, ಏಕಬಾಷೆ, ಏಕರಾಷ್ಟ ಎಂಬ ಸಿದ್ದಾಂತಗಳಿಗೆ ಪೂರಕವಾಗಿ ತನ್ನ ಮತಾಂಧ ರಾಜಕಾರಣವನ್ನು ಮಾಡುತ್ತಿರುವ ಬಾಜಪ ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಇಂತಹ ಸನ್ನಿವೇಶವನ್ನು ಸೂಕ್ತವಾಗಿ ಬಳಸಿಕೊಳ್ಳಲು ಯತ್ನಿಸುವುದು ಖಚಿತ. ಯಾವುದೇ ಬಲಪಂಥೀಯ ರಾಜಕೀಯ ಕೂಟವೂ ವಿರೋಧಿಗಳ ಇರುವಿಕೆಯನ್ನು ಬಯಸುವುದಿಲ್ಲ. ಆದರಿಂದ ಅದು ದುರ್ಬಲಗೊಂಡ ಕಾಂಗ್ರೆಸ್ಸಿನ ಜೊತೆಜೊತೆಗೆ ಪ್ರಾದೇಶಿಕ ಪಕ್ಷಗಳನ್ನೂ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತ ಹೋಗುತ್ತದೆ. ಅದರ ಇಂತಹ ಸಂಚಿಗೆ ಬಲಿಯಾದ ಪ್ರಾದೇಶಿಕ ಪಕ್ಷಗಳು ಅನಿವಾರ್ಯವಾಗಿ ರಾಷ್ಟ್ರ ಮಟ್ಟದಲ್ಲಿ ಅದರ ನೇತೃತ್ವವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇಂತಹ ಬೆಳವಣಿಗೆಯಿಂದ ಪ್ರಾದೇಶಿಕ ಹಿತಾಸಕ್ತಿಗಳು ನಗಣ್ಯವಾಗಿ ಐಕ್ಯತೆ ಮತ್ತು ಬಲಿಷ್ಠ ರಾಷ್ಟ್ರದ ಹೆಸರಲ್ಲಿ ಸ್ಥಳೀಯವಾದ ಎಲ್ಲ ಪ್ರಜಾತಂತ್ರದ ವ್ಯವಸ್ಥೆಗಳನ್ನು ಅದು ನಾಶಪಡಿಸುತ್ತ ಹೋಗುತ್ತದೆ. ಇಂತಹದೊಂದು ಅಪಾಯ ಒಂದೆರಡು ದಿನಗಳಲ್ಲಿ ವರ್ಷಗಳಲ್ಲಿ ಆಗದಿvರಬಹುದು. ಆದರೆ ಒಂದು ರಾಷ್ಟ್ರದ ಇತಿಹಾಸದಲ್ಲಿ ತೀರಾ ದೀರ್ಘವೆನಿಸದ ಐದರಿಂದ ಹತ್ತು ವರ್ಷಗಳಲ್ಲಿ ಈ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ನಡೆದು ಬಿಡಬಹುದು.

ಆದ್ದರಿಂದ ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು, ಇಂಡಿಯಾದ ಎಲ್ಲ ಸಮುದಾಯ -ಸಂಸ್ಕೃತಿಗಳ ಉಳಿವಿಗಾಗಿ ಬಾಜಪಕ್ಕೆ ಸವಾಲೊಡ್ಡಬಲ್ಲ ಒಂದು ಪ್ರಬಲ ಶಕ್ತಿಯ ಅಗತ್ಯ ಇವತ್ತು ಹಿಂದೆಂದಿಗಿಂತಲೂ ಹೆಚ್ಚಿದೆ. ಹೀಗಾಗಿಯೇ ಇವತ್ತು ಪ್ರಾದೇಶಿಕ ಪಕ್ಷಗಳು ಸಮಾನಮನಸ್ಕ ರಾಜಕೀಯ ವೇದಿಕೆಯೊಂದನ್ನು ರಚಿಸಿಕೊಂಡು ತಮ್ಮತಮ್ಮ ರಾಜ್ಯಗಳಲ್ಲಿ ಬಾಜಪವನ್ನು ಎದುರಿಸಿ ನಿಲ್ಲುವ ಸವಾಲನ್ನು ಸ್ವೀಕರಿಸಬೇಕಾಗಿದೆ. ಬಾಜಪ ಸಹ ಪ್ರಜಾಪ್ರಭತ್ವದಲ್ಲಿ ನಂಬಿಕೆಯನ್ನಿಟ್ಟುಕೊಂಡ ಒಂದು ರಾಷ್ಟ್ರೀಯ ಪಕ್ಷವಾಗಿ ಉಳಿಯಲು ಸಹ ಇದು ಸಹಕಾರಿಯಾಗುತ್ತದೆ.

ಆದರೆ ಇದು ಸಾದ್ಯವಾಗಲು ಪ್ರಾದೇಶಿಕ ಪಕ್ಷಗಳ ನಾಯಕರುಗಳು ತಮ್ಮ ಪಾಳೆಗಾರಿಕೆಯ ಅಹಮ್ಮನ್ನು ಬದಿಗೊತ್ತಿ, ಒಳಜಗಳಗಳನ್ನು ಕೈಬಿಟ್ಟು ಮುಕ್ತ ಮನಸ್ಸಿನಿಂದ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ.

ಜುಲೈ 29, 2016

ಮೇಕಿಂಗ್ ಹಿಸ್ಟರಿ: ಪರಾವಲಂಬಿ ಖರ್ಚುಗಳು, ಅಸ್ತವ್ಯಸ್ತಗೊಂಡ ಆರ್ಥಿಕತೆ

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
29/07/2016
ಬಿಕ್ಕಟ್ಟಿಗೆ ಕಾರಣವಾದ ಮತ್ತೊಂದು ಪ್ರಮುಖ ಅಂಶವೆಂದರೆ ಗೊತ್ತುಗುರಿಯಿಲ್ಲದೆ ನಡೆಯುತ್ತಿದ್ದ ರಾಜ್ಯದ ಖರ್ಚುಗಳು. ಹತ್ತೊಂಭತ್ತನೇ ಶತಮಾನದ ಮೊದಲರ್ಧದಲ್ಲಿ, ಹತ್ತಿರತ್ತಿರ ಮೈಸೂರು ಸರಕಾರದ ಅರ್ಧದಷ್ಟು ಆದಾಯ ಬ್ರಿಟೀಷ್ ರಾಜ್ ಗೆ ಕೊಡಬೇಕಿದ್ದ ಕಪ್ಪ ಕಾಣಿಕೆಗೇ ಹೋಗಿಬಿಡುತ್ತಿತ್ತು. ಮತ್ತವರು ಮೈಸೂರಿನ ತೆಗೆದುಕೊಂಡದ್ದನ್ನು ಮತ್ತೆ ವಾಪಸ್ಸು ತಂದದ್ದಿಲ್ಲ. ಹಾಗಾಗಿ ಅರ್ಧದಷ್ಟು ಮೊತ್ತ ಪರಿಗಣನೆಗೇ ಬರುವುದಿಲ್ಲ. ರಾಜನಿಗೆ ಐದು ಪ್ರತಿಶತಃದಷ್ಟು ಮತ್ತು ದಿವಾನನಿಗೆ ಒಂದು ಪ್ರತಿಶತಃದಷ್ಟು ನೀಡುವ ಕಮಿಷನ್ನಿನಿಂದ ಕೆಲವು ಲಕ್ಷ ರುಪಾಯಿಗಳು ಸಾರ್ವಜನಿಕ ಉಪಯೋಗಕ್ಕೆ ಬರದೇ ಹೋಗಿಬಿಡುತ್ತಿತ್ತು. ಇನ್ನುಳಿದ ನಲವತ್ತು ಚಿಲ್ಲರೆ ಪ್ರತಿಶತಃದಷ್ಟು ಹಣದಲ್ಲಿ, ಒಂದು ದೊಡ್ಡ ಮೊತ್ತ ಕೆ.ಆರ್.ಒಡೆಯರರ ರಾಜಸ್ವವನ್ನು ಉಳಿಸಲಿಕ್ಕೆ ಸುಟ್ಟು ಹೋಗುತ್ತಿತ್ತು, ಅದರಲ್ಲಲವನ್ನು ಹಿಂದಿನ ಪುಟಗಳಲ್ಲಿ ಹೀಗಾಗಲೇ ನಾವು ನೋಡಿದ್ದೇವೆ. ಮೈಸೂರಿನ ರೆಸೆಡೆಂಟಾಗಿದ್ದ ಕಾಸಾಮೈಯೂರ್, ಫೋರ್ಟ್ ಸೆಂಟ್ ಜಾರ್ಜಿನ ಕಾರ್ಯದರ್ಶಿಯಾಗಿದ್ದ ರಿಚರ್ಡ್ ಕ್ಲೈವ್ ಗೆ 1831ರಲ್ಲಿ ಬರೆದ ಪತ್ರದಲ್ಲಿ ರಾಜನ ಈ ವೈಭವೋಪೇತ ಖರ್ಚುಗಳ ಬಗ್ಗೆ ಬರೆಯುತ್ತಾನೆ. ರಾಜ ರಾಜ್ಯದ ಹಣವನ್ನು ಉಪಯೋಗಿಸುವುದರ ಜೊತೆಗೆ ವಿಪರೀತವಾಗಿ ಸಾಲ ಮಾಡಿಕೊಂಡು “ಅನಗತ್ಯ ಮತ್ತು ದುಬಾರಿ ವಸ್ತುಗಳನ್ನು ಸಾಹುಕಾರರಿಂದ ಖರೀದಿಸಿ ಬ್ರಾಹ್ಮಣ ವಿಧಿವಿಧಾನಗಳಲ್ಲಿ ಪೋಲುಮಾಡಿಬಿಡುತ್ತಾನೆ….ರಾಜ ಮತ್ತೆ ತನ್ನ ಹಿಂದಿನ ಅಭ್ಯಾಸವಾದ ಅನವಶ್ಯಕ ಪ್ರದರ್ಶನಕಾರಕ ವೈಭವಕ್ಕೆ ಮರಳುತ್ತಿದ್ದಾನೆ” ಎಂದು ಬರೆಯುತ್ತಾನೆ ಕಾಸಾಮೈಯೂರ್. (252) 

ಮತ್ತೆ, ಕೆಲವು ದಿನಗಳ ನಂತರ, ಮೈಸೂರು ಸಾಮ್ರಾಜ್ಯದಲ್ಲಿ ಕಂಪನಿಯ ನೇರ ಆಡಳಿತವನ್ನು ಹೇರಿದಾಗ, ಮದ್ರಾಸಿನ ಗವರ್ನರ್ ಲಷಿಂಗ್ಟನ್, ಕೈಗೊಂಬೆ ರಾಜನಿಗೆ ಬರೆದ ಪತ್ರದಲ್ಲಿ ಅವನ ತಪ್ಪುಗಳನ್ನು ತೋರಿಸುತ್ತ ಎಚ್ಚರಿಸುತ್ತಾನೆ: “ಘನತೆವೆತ್ತ ನಿಮ್ಮ ಸಮಸ್ಯೆಯ ಮೂಲವೆಂದರೆ ನೀವು ಹೊಂದಿರುವ ಖಜಾನೆಯ ಹಣವನ್ನು ಪೋಲು ಮಾಡುತ್ತಿರುವ ನಿಮ್ಮ ದುಬಾರಿ ಖರ್ಚುವೆಚ್ಚಗಳು; ಸರಿಯಾದ ಅಧಿಕಾರಿಗಳನ್ನು ನೇಮಿಸಿ ಖಜಾನೆಯ ಹಣವನ್ನು ದೇಶದ ಒಳಿತಿಗಾಗಿ ಉಪಯೋಗಿಸದ ನಿಮ್ಮ ನಿರ್ಧಾರಗಳು…. 

….ನೀವು ಸಾಹುಕಾರರ ಬಳಿ ಮಾಡಿರುವ ಸಾಲದ ಮೊತ್ತವನ್ನು ಸರಿಪಡಿಸಲಿಕ್ಕಾಗಿ, ನನಗೆ ತಿಳಿದಂತೆ ನಿಮ್ಮ ಆದಾಯವನ್ನು ಬಹಳಷ್ಟು ಸಂದರ್ಭದಲ್ಲಿ ಅದರ ಮೂಲ ಉದ್ದೇಶದಿಂದ ತಿರುಗಿಸಿಬಿಡುತ್ತೀರಿ. ನಿಮ್ಮ ಸೈನ್ಯಕ್ಕೆ ಕೊಡಬೇಕಾಗಿರುವ ಹಣಕ್ಕೆ, ನಿಮ್ಮ ಖಾಸಗಿ ಖರ್ಚುವೆಚ್ಚಗಳಿಗೆ ಯಾವಾಗೆಲ್ಲ ಹಣದ ಅಭಾವ ಉಂಟಾಗುತ್ತದೋ ಆಗೆಲ್ಲ ನೀವು ಸಾಹುಕಾರರಿಗೆ ಭೂಮಿಯನ್ನು ದಾನವಾಗಿ ನೀಡೋ ಮತ್ತೊಂದು ಮಾಡಿಯೋ ಹಣ ಪಡೆದುಬಿಡುತ್ತೀರಿ. ನಿಮ್ಮಾದಾಯದ ಹೆಚ್ಚಿನ ಭಾಗವನ್ನು ವಿಪರೀತವಾಗಿ ಇನಾಮು ಕೊಡುತ್ತ ಕಳೆದಿದ್ದೀರಿ, ಬಹಳಷ್ಟು ಸಂದರ್ಭದಲ್ಲಿ ಇಂತಹ ಇನಾಮು ಪಡೆದ ವ್ಯಕ್ತಿ ನಿಮ್ಮಿಂದ ಅದನ್ನು ಪಡೆಯಲು ಯೋಗ್ಯನಾಗಿಯೇ ಇರುವುದಿಲ್ಲ. 

ವಿಪರೀತವಾಗಿ ಇನಾಮು ಭೂಮಿಯನ್ನು ಕೊಟ್ಟಿದ್ದು ಘನತೆವೆತ್ತವರ ಆರ್ಥಿಕ ಬಿಕ್ಕಟ್ಟಿಗೆ ಮತ್ತೊಂದು ಕಾರಣ; ಇದು ಹೆಚ್ಚು ಎಚ್ಚರಿಕೆಯ ವಿಷಯ ಯಾಕೆಂದರೆ ವಾರ್ಷಿಕ ಆದಾಯದಲ್ಲಾಗುವ ಕುಸಿತವನ್ನು ಇದು ಹೆಚ್ಚು ಮಾಡುತ್ತದೆ. ದಿವಾನ್ ಪೂರ್ಣಯ್ಯನವರ ಸಮಯದಲ್ಲಿ ಇನಾಮಿನ ಮೊತ್ತ 1,84,766, 3.14 3/4 ಕಾಂತರೇಯ ಪಗೋಡಾದಷ್ಟಿತ್ತು. 1828ರಲ್ಲಿ ಅದು 3,53,165 ರಷ್ಟಾಗಿದೆ, ಪೂರ್ಣಯ್ಯನವರ ಸಮಯಕ್ಕೆ ಹೋಲಿಸಿದರೆ 1,68,998, 3.9 ಜಾಸ್ತಿಯಾಗಿದೆ. 1828 ಮತ್ತು 1830 ನಡುವೆ ಇದು ಮತ್ತಷ್ಟು ಹೆಚ್ಚಾಗಿ 4,34,346, 5.4 ಕಾಂತರೇಯ ಪಗೋಡಾದಷ್ಟಾಗಿದೆ. ಇದು ರಾಜ್ಯದ ಸಂಪತ್ತಿನಿಂದ ತೆಗೆದುಕೊಂಡ ಸಂಪತ್ತು. 

ಭೂಮಿಯನ್ನು ದಾನ ನೀಡುವುದರಿಂದ ನಿಮ್ಮಾದಾಯದಲ್ಲಾದ ಕುಸಿತ, ನಿಮ್ಮ ಮತ್ತು ಕಂಪನಿಯ ಸರಕಾರದ ನಡುವೆ ನಡೆದ ಪರಸ್ಪರ ಒಪ್ಪಂದಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ ಎಂದು ನಿಮಗೆ ತುಂಬ ನೋವಿನೊಡನೆ ತಿಳಿಸಬೇಕಾಗಿದೆ ಮತ್ತು ನಾನು ಘನತೆವೆತ್ತವರಿಗೆ ನೀಡುವ ಸಲಹೆಯಂದರೆ……ಭವಿಷ್ಯದಲ್ಲಿ ಇಂತಹ ಅನುದಾನ ನೀಡುವುದರಿಂದ ದೂರವಿದ್ದುಬಿಡಿ….” (253) 

ಮತ್ತು ಕೊನೆಯಲ್ಲಿ ಲಷಿಂಗ್ಟನ್ ಬ್ರಿಟೀಷರು ದತ್ತು ಪಡೆದ ಮಗನಿಗೆ ತಂದೆ ನೀಡುವ ಸಲಹೆಯನ್ನು ಕಾಠಿಣ್ಯದಿಂದ ತಿಳಿಸುತ್ತಾರೆ: “…..ನೀವು ನಿಮ್ಮ ದಿನದ ಒಂದಷ್ಟು ಸಮಯವನ್ನು ನಿಗದಿತವಾಗಿ ನಿಮ್ಮ ಕರ್ತವ್ಯಗಳನ್ನು ಪೂರೈಸಲು ಮೀಸಲಿಡಬೇಕಾಗಿರುವುದು ಅತ್ಯವಶ್ಯಕವಾಗಿದೆ, ಆಗ ನಿಮ್ಮ ಆರ್ಥಿಕತೆ ಒಂದು ಉತ್ತಮ ರೂಪಕ್ಕೆ ಮರಳುತ್ತದೆ….” (254) 

ಮೈಸೂರು ಸಾಮ್ರಾಜ್ಯದ ಪ್ರಮುಖ ಖರ್ಚುಗಳಲ್ಲಿ ವಸಾಹತು ದೊರೆಯ ಸೈನ್ಯದ ನಿರ್ವಹಣೆಯೂ ಒಂದು ಎಂದು ಮೀರಾ ನಮಗೆ ತಿಳಿಸುತ್ತಾರೆ. 1830ರಲ್ಲೇ, ಮೈಸೂರಿನಲ್ಲಿ ಬೀಡುಬಿಟ್ಟಿದ್ದ ಚಿಕ್ಕ ಸೈನ್ಯದ ನಿರ್ವಹಣೆಗೆ 1,50,156 ರುಪಾಯಿಗಳು ಬೇಕಾಗಿತ್ತು. ಹೀಗಾಗಿ “ರಾಜನಿಗೆ ಹತ್ತಲವು ರೂಪದ ಜವಾಬ್ದಾರಿಗಳಿತ್ತು, ಮತ್ತಿದರಿಂದ ದೇಶ ಅಭಿವೃದ್ಧಿವಂಚಿತವಾಯಿತು”. (255) 

ಇಡೀ ಮೂವತ್ತು ವರುಷಗಳ ಅವಧಿಯಲ್ಲಿ ಬ್ರಿಟೀಷರು ಅತ್ಯಮೂಲ್ಯ ಸಂಪತ್ತನ್ನು ದೋಚಿದರು, ಇಡೀ ಭಾರತವನ್ನು ಆಕ್ರಮಿಸುವ ಸಲುವಾಗಿ ಇಲ್ಲಿಂದಲೇ ಹತ್ತಾರು ಲಕ್ಷ ರುಪಾಯಿಗಳನ್ನು ಲೂಟಿ ಹೊಡೆದರು. ಮೀರಾ ಸೆಬಾಸ್ಟಿಯನ್ ಹೇಳುತ್ತಾರೆ: “ವೆಲ್ಲೆಸ್ಲಿ ನಡೆಸಿದ ಸತತ ಯುದ್ಧಗಳಲ್ಲಿ ಮೈಸೂರು ಸಾಮ್ರಾಜ್ಯವನ್ನು ಎಳೆದ ಕಾರಣದಿಂದಾಗಿ ರಾಜ್ಯದ ಬೊಕ್ಕಸದ ಹಣ ಪೋಲಾಯಿತು. ಹಾಗಾಗಿ ದಿವಾನ್ ಪೂರ್ಣಯ್ಯನವರ ಆಡಳಿತಾವಧಿಯಲ್ಲಿ, ಆರ್ಥಿಕತೆಯನ್ನುಳಿಸುವ ಅವರ ತೀವ್ರವಾದ ಪ್ರಯತ್ನಗಳ ನಡುವೆಯೂ ಸೈನ್ಯದ ಖರ್ಚಿಗೆ 1809-10ರಲ್ಲಿ 20.7 ಲಕ್ಷ ರುಪಾಯಿಗಳಷ್ಟು ಖರ್ಚಾಗಿತ್ತು. ಈ ದುಬಾರಿ ನಿರ್ವಹಣೆಯ ಕಾರಣದಿಂದಾಗಿ ಮಹಾರಾಜರ ನೇರ ಆಳ್ವಿಕೆಯ ಸಮಯದಲ್ಲಿ ಸೈನ್ಯಕ್ಕೆ ಕೊಡಬೇಕಾದ ಮೊತ್ತ ಬಾಕಿ ಉಳಿಯುತ್ತಿತ್ತು ಎನ್ನುವುದರ ಕುರಿತು ಯಾವುದೇ ಅನುಮಾನಗಳಿಲ್ಲ. ಕಂದಾಚಾರದ ಗುಮಾಸ್ತರಿಗೆ 1824-25ರಲ್ಲಿ ಕೊಡಬೇಕಿದ್ದ ಮೊತ್ತವೇ 7,03,181 ರುಪಾಯಿಗಳಷ್ಟಿತ್ತು. ಈ ನಿರಂತರ ಯುದ್ಧಗಳ ಕಾರಣದಿಂದಾಗಿ ಸೊವಾರ್ ಕಛೇರಿಗಳಿಗೆ ಮತ್ತು ಬರ್ಗೀರಿಗೆ 10.5 ಲಕ್ಷ ರುಪಾಯಿ ವೆಚ್ಚವಾಗಿತ್ತು, 1824-25ರಲ್ಲಿ”. (256) 

ಮೈಸೂರಿಗೆ ಭೇಟಿ ಕೊಟ್ಟ ಬ್ರಿಟೀಷ್ ವರ್ತಕರು ಮತ್ತು ಅಧಿಕಾರಿಗಳ ಹತ್ತಿರ ತನ್ನ ಉದಾರತನ ತೋರಿದ ಮೈಸೂರು ರಾಜ. ಬ್ರಿಟಿಷ್ ಕಮಿಷನರ್ರುಗಳು ಲೆಕ್ಕಹಾಕಿದಂತೆ 1830ರ ದಶಕದಲ್ಲಿ ಬ್ರಿಟನ್ನಿಗೆ ವಾರ್ಷಿಕವಾಗಿ 20 ಲಕ್ಷ ರುಪಾಯಿಗಳಷ್ಟು ಮೌಲ್ಯದ ಉಡುಗೊರೆಗಳು ಮೈಸೂರಿನ ವಿದೂಷಕನಿಂದ ತಲುಪುತ್ತಿದ್ದವು. (257) 

ಆ ಕಾಲದಲ್ಲಿದ್ದ ಪ್ರಮುಖ ಖರ್ಚುಗಳೆಂದರೆ, ಬ್ರಿಟೀಷ್ ರಾಜ್ ಗೆ ಕೊಡಬೇಕಿದ್ದ ಕಪ್ಪಕಾಣಿಕೆ, ಕೈಗೊಂಬೆ ರಾಜ ಮತ್ತವನ ದಿವಾನನಿಗೆ ಕೊಡಬೇಕಿದ್ದ ಕಮಿಷನ್, ತಿಕ್ಕಲು ರಾಜನ ಊಳಿಗಮಾನ್ಯ ಖರ್ಚುಗಳಾದ ಬ್ರಿಟೀಷ್ ವರ್ತಕರಿಗೆ, ಅಧಿಕಾರಿಗಳಿಗೆ, ಮಠಗಳಿಗೆ, ದೇವಸ್ಥಾನಗಳಿಗೆ ಕೊಡುವ ಉಡುಗೊರೆ ಮತ್ತು ಕೊನೆಯದಾಗಿ ಭಾರತವನ್ನು ಮತ್ತಷ್ಟು ದುರ್ಬಲಗೊಳಿಸಲು ಬ್ರಿಟೀಷ್ ಸೈನ್ಯಕ್ಕೆ ನೀಡುವ ಮೊತ್ತ. ಪ್ರತಿ ಆರ್ಥಿಕ ವರ್ಷದ ಕೊನೆಯಲ್ಲೂ ಈ ನಾಲ್ಕು ತಲೆಗಳಿಗೆ ಮತ್ತಷ್ಟು ಮಗದಷ್ಟು ಹಣದ ಅವಶ್ಯಕತೆ ಬೀಳುತ್ತಿತ್ತು. ಪರಿಣಾಮವಾಗಿ, 1822ರಲ್ಲಿ, ತಿಂಗಳು ತಿಂಗಳು ಕಟ್ಟಬೇಕಿದ್ದ ಕಪ್ಪಕಾಣಿಕೆಯಲ್ಲಿ ವ್ಯತ್ಯಾಸವಾಗುತ್ತಿತ್ತು, ಮತ್ತು ಹಲವು ಸಂದರ್ಭದಲ್ಲಿ, ಮೈಸೂರು ರಾಜನಡಿಯಿದ್ದ ಸೈನಿಕರ ಸಂಬಳ ಬಾಕಿಯುಳಿಯುತ್ತಿತ್ತು, ಇದು ಸೈನಿಕರಲ್ಲೂ ಬಿಕ್ಕಟ್ಟನ್ನು ಹೆಚ್ಚಿಸಿತು. 

ರಾಜ್ಯದ ಖರ್ಚು ವೆಚ್ಚಗಳನ್ನು ಗಮನಿಸುವುದು ಅಂತಿಮವಾಗಿ ಒಂದಷ್ಟು ಆಘಾತಕಾರಿ ಮಾಹಿತಿಗಳನ್ನು ಹೊರಹಾಕುತ್ತದೆ. ಅರೆ ಊಳಿಗಮಾನ್ಯ ಮತ್ತು ವಸಾಹತು ಅಚ್ಚಿನಿಂದ ತಯಾರಾದ ಅಸಹ್ಯ ಮೂಡಿಸುವ ಕೈಗೊಂಬೆ ರಾಜನ ಸರಕಾರ ಸಾಮಾಜಿಕ ಕಾರ್ಯಗಳಿಗೆ ಮಾಡಬೇಕಾದ ಖರ್ಚುಗಳೆಡೆಗೆ ಅಪಾರ ನಿರ್ಲಕ್ಷ್ಯ ತೋರಿಸುತ್ತದೆ. ಈ ದಿಕ್ಕಿನಲ್ಲಿ ಖರ್ಚು ಮಾಡಿದ ಚಿಕ್ಕ ಪುಟ್ಟ ಮೊತ್ತ ಕೂಡ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನನ ಕಾಲದಲ್ಲಿದ್ದ ಪರಂಪರೆಯ ಮುಂದುವರಿಕೆಯಷ್ಟೇ. ಹೈದರ್ ಮತ್ತು ಟಿಪ್ಪು ಸರಕಾರ ಸಂಪನ್ಮೂಲ ಮತ್ತು ಸಾಮಾಜಿಕ ಆಸ್ತಿಯನ್ನು ಸೃಷ್ಟಿಸುವ ಸಲುವಾಗಿ ಹೂಡಿದ ದೊಡ್ಡ ಮೊತ್ತದ ಬಂಡವಾಳವನ್ನು ಕಾಪಿಡುವ ಸಲುವಾಗಿ ಅದನ್ನು ಮುಂದುವರೆಸಲೇಬೇಕಿತ್ತು. ಹಿಂದಿನ ಕಾಲದ ಊಳಿಗಮಾನ್ಯ ಸರಕಾರದಲ್ಲಿದ್ದಂತೆ, ವಸಾಹತುಶಾಹಿ ಮಧ್ಯಯುಗದ ಕಾಲಕ್ಕೆ ಸಮಾಜ ಜಾರಿಹೋಗಲು ಅನುವು ಮಾಡಿಕೊಟ್ಟಿತು. ಬ್ರಿಟೀಷ್ ಕೈಗೊಂಬೆ ಪರಾವಲಂಬತನ ಒರಟಾಗಿತ್ತು, ಪರಿಪೂರ್ಣವಾಗಿತ್ತು.

ಮುಂದಿನ ವಾರ
ಕ್ಞಾಮ, ಕಾಲರ ಮತ್ತು ಪ್ಲೇಗ್: ಬಿಳಿ ದೇವರ ಶಾಪ