ಫೆಬ್ರ 11, 2016

ಸೂಟು ವಾಚಿನ ಗದ್ದಲದಲ್ಲಿ ಚರ್ಚೆಯಾಗದ ಸಂಗತಿಗಳು

Dr Ashok K R
ಒಂದಂಶವಂತೂ ನಿಕ್ಕಿಯಾಗಿದೆ, ಆಕರ್ಷಣೀಯವಲ್ಲದ, ಮನೋರಂಜನೆಯ ಅಂಶವಿಲ್ಲದ ಯಾವುದೇ ಚರ್ಚೆಗಳ ಬಗೆಗಿನ ಆಸಕ್ತಿ ಸತ್ತು ಹೋಗಿದೆ. ನರೇಂದ್ರ ಮೋದಿ ಹತ್ತು ಲಕ್ಷದ ಬಟ್ಟೆಯ, ಪೂರ್ತಿ ತಮ್ಮ ಹೆಸರನ್ನೇ ಬರೆದಿರುವ ಸೂಟನ್ನು ಧರಿಸಿದ್ದು ಎಷ್ಟು ತಪ್ಪೋ ಸಿದ್ಧರಾಮಯ್ಯ ಐವತ್ತು ಲಕ್ಷದ್ದೋ ಎಪ್ಪತ್ತು ಲಕ್ಷದ್ದೋ ಬೆಲೆಯ ಕೈಗಡಿಯಾರವನ್ನು ಧರಿಸಿದ್ದೂ ಅಷ್ಟೇ ತಪ್ಪು. ಇಬ್ಬರೂ ಅದು ಉಡುಗೊರೆಯಾಗಿ ಸಿಕ್ಕಿದ್ದು ಎಂದು ಹೇಳಿದ್ದಾರಾದರೂ ಸಿಕ್ಕ ಉಡುಗೊರೆಯನ್ನು ತಿರಸ್ಕರಿಸುವ ಹಕ್ಕು ಇಬ್ಬರಿಗೂ ಇತ್ತು ಎನ್ನುವುದು ಸುಳ್ಳಲ್ಲವಲ್ಲ. ಉಡುಗೊರೆ ಸಿಕ್ಕಿದ್ಯಾಕೆ, ಒಂದು ಉನ್ನತ ಸ್ಥಾನದಲ್ಲಿರುವವರು ಹೀಗೆ ಬೆಲೆಬಾಳುವ ಉಡುಗೊರೆಗಳನ್ನು ಪಡೆಯುವುದು ಕೂಡ ಭ್ರಷ್ಟಾಚಾರದ ಮತ್ತೊಂದು ರೂಪವಲ್ಲವೇ ಎನ್ನುವ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರ ಪಡೆಯುವ ರೀತಿಯಲ್ಲೂ ಚರ್ಚೆಗಳು ನಡೆಯುವುದಿಲ್ಲ. ಕಾಂಗ್ರೆಸ್ ಬೆಂಬಲಿಗರಿಗೆ ಮತ್ತು ಮೋದಿ ವಿರೋಧಿಗಳಿಗೆ ಹತ್ತು ಲಕ್ಷದ ಸೂಟು ಮೋದಿಯನ್ನು ಆಡಿಕೊಳ್ಳುವ ವಿಷಯವಾಗಿತ್ತು; ಈಗ ಮೋದಿ ಬೆಂಬಲಿಗರಿಗೆ ಮತ್ತು ಕಾಂಗ್ರೆಸ್ ವಿರೋಧಿಗಳಿಗೆ ನೋಡಿ ನಿಮ್ ಸಿಎಮ್ಮು ದುಬಾರಿ ವಾಚು ಧರಿಸಿದ್ದಾರೆ ಈಗೇನಂತೀರಾ? ಎಂದು ಮೋದಿ ಸೂಟಿಗೆ ಪ್ರತಿಕ್ರಿಯೆಯಾಗಿ ಕೇಳಲೊಂದು ಪ್ರಶ್ನೆ ಸಿಕ್ಕಿತಲ್ಲ ಎಂಬ ಸಮಾಧಾನ! ಪ್ರಶ್ನೆ ಕೇಳಿದ ಕುಮಾರಸ್ವಾಮಿಗೆ ಉತ್ತರ ಹೇಳುವ ಬದಲು ನಿಮ್ ಮಗ ಐದು ಕೋಟಿಯ ಕಾರು ಖರೀದಿಸಿಲ್ಲವಾ? ಎಂಬ ಮಕ್ಕಳಾಟದ ಪ್ರಶ್ನೆಯನ್ನು ನಮ್ಮ ಮುಖ್ಯಮಂತ್ರಿಗಳು ಕೇಳುತ್ತಿದ್ದಾರೆ! ಈ ಎಲ್ಲಾ ಮನೋರಂಜನಾತ್ಮಕ ಚರ್ಚೆಗಳ ನಡುವೆ ಕರ್ನಾಟಕದಲ್ಲೊಂದು ಇನ್ವೆಸ್ಟ್ ಕರ್ನಾಟಕ ಸಮಾವೇಶ ನಡೆದಿದೆ, ಬರೋಬ್ಬರಿ ಮೂರು ಲಕ್ಷ ಕೋಟಿಗಳಷ್ಟು ಹಣ ಕರ್ನಾಟಕಕ್ಕೆ ಹರಿದರಿದು ಬರಲಿದೆ ಎಂದು ಭರವಸೆ ನೀಡಲಾಗಿದೆ. ಅಷ್ಟೆಲ್ಲ ದುಡ್ಡು ನಿಜಕ್ಕೂ ಬಂದೇ ಬಿಟ್ಟರೆ ಕರ್ನಾಟಕದ ಕೃಷಿ ಕ್ಷೇತ್ರ ಹರಿದು ಹೋಗಲಿದೆ ಎನ್ನುವುದೂ ಸತ್ಯವೇ!

ಇನ್ವೆಸ್ಟ್ ಕರ್ನಾಟಕದಂತಹ ಸಮಾವೇಶದಿಂದ ಉಪಯೋಗವಾಗುವುದ್ಯಾರಿಗೆ, ಅನಾನುಕೂಲವಾಗುವುದ್ಯಾರಿಗೆ ಎನ್ನುವುದನ್ನು ಗಮನಿಸಲು ಆ ಹಣ ಬಂದಾಗ ವಶಪಡಿಸಿಕೊಳ್ಳುವ ಭೂಮಿ ಯಾರದು, ಅಲ್ಲಿ ಕೆಲಸ ಸಿಗುವುದ್ಯಾರಿಗೆ ಎಂದೆಲ್ಲಾ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಕರ್ನಾಟಕ ಸರಕಾರ ಇನ್ವೆಸ್ಟ್ ಕರ್ನಾಟಕಕ್ಕೆ ಮಾಡಿಕೊಂಡ ತಯಾರಿಯನ್ನು ನೋಡಿಯೇ ಇದು ಯಾರ ಅನುಕೂಲತೆಗೆ ನಡೆಯುತ್ತಿರುವ ಸಮಾವೇಶ ಎನ್ನುವುದು ಅರ್ಥವಾಗಿಬಿಡುತ್ತದೆ. ದಿನನಿತ್ಯದ ಪ್ರಯಾಣಿಕರಿಗೆ ರಸ್ತೆ ಸರಿ ಮಾಡಲು ಹಣದ ಕೊರತೆ, ಮತ್ತೊಂದು ಮಗದೊಂದು ನೆಪ ಹೇಳುವ ಅಧಿಕಾರಸ್ಥರು ಇಂತಹ ಸಮಾವೇಶ ನಡೆದಾಗ ರಪ್ಪಂತ ಎಲ್ಲಾ ರಸ್ತೆಗಳನ್ನೂ ಲಕ ಲಕ ಎಂದು ಹೊಳೆಯುವಂತೆ ಮಾಡಿಬಿಡಲ್ಲರು. ಜೊತೆಗೆ ರಸ್ತೆಯ ಮಧ್ಯೆ ರಸ್ತೆಯ ಇಕ್ಕೆಲಗಳಲ್ಲೆಲ್ಲಾ ಚೆಂದ ಚೆಂದದ ಹೂವಿನ ಗಿಡಗಳು. ರಸ್ತೆ ಮೇಲೆ ಧೂಳಿರಬಾರದೆಂದು ಲಕ್ಷಗಟ್ಟಲೆ ನೀರನ್ನು ಉಪಯೋಗಿಸಿ ತಿಕ್ಕಿ ತಿಕ್ಕಿ ತೊಳೆಯುವುದು ಬೇರೆ. ಇವೆಲ್ಲ ಬಿಡಿ, ಮನೆಗೆ ನೆಂಟ್ರು ಬರ್ತಾರೆಂದಾಗ ಒಂದಷ್ಟು ಹೆಚ್ಚು ಮುತುವರ್ಜಿಯಿಂದ ಮನೆ ಕಿಲೀನು ಮಾಡಿ, ಶೋಕೇಸಿನಲ್ಲಿ ಧೂಳಿಡಿದು ಕೂತಿದ್ದ ಕಪ್ಪು ಸಾಸರುಗಳನ್ನೆಲ್ಲ ಹೊರಗೆ ತೆಗೆಯುವುದಿಲ್ಲವೇ! ಇದನ್ನೂ ಹಾಗೇ ಎಂದುಕೊಳ್ಳೋಣ. ಆದರೆ ಟ್ರಾಫಿಕ್ಕನ್ನು ನಿಯಂತ್ರಿಸಲು ಮತ್ತು ಮಾಲಿನ್ಯವನ್ನು ತಡೆಗಟ್ಟಲು ಬಸ್ಸುಗಳನ್ನು ಊರ ಹೊರಗೇ ನಿಲ್ಲಿಸಿದ್ದು ಯಾವ ಪುರುಷಾರ್ಥಕ್ಕೆ? ಈ ನಿರ್ಧಾರದಿಂದ ತೊಂದರೆಯಾಗಿದ್ಯಾರಿಗೆ?

ಮೊದಲು ಸರಕಾರಿ ಮತ್ತು ಖಾಸಗಿ ಬಸ್ಸುಗಳೆರಡನ್ನೂ ವಾರದ ಮಟ್ಟಿಗೆ ಊರ ಹೊರಗೆ ನಿಲ್ಲಿಸಿಬಿಡುವ ನಿರ್ಧಾರ ಮಾಡುತ್ತಾರೆ. ಒಂದಷ್ಟು ವಿರೋಧ ವ್ಯಕ್ತವಾದಾಗ ಖಾಸಗಿ ಬಸ್ಸುಗಳನ್ನು ಮಾತ್ರ ಮೂರು ದಿನದ ಮಟ್ಟಿಗೆ ಊರ ಹೊರಗೆ ನಿಲ್ಲಿಸುವ ನಿರ್ಧಾರ ಮಾಡುತ್ತಾರೆ. ಈ ಖಾಸಗಿ ಬಸ್ಸಿನ ಪ್ರಯಾಣಿಕರಾರು ಎಂದು ಗಮನಿಸಿದರೆ ತೊಂದರೆಗೊಳಗಾಗಿದ್ಯಾರು ಎಂದು ಅರಿವಾಗುತ್ತದೆ. ನಮ್ಮ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಉಳಿದ ರಾಜ್ಯದ ಸರಕಾರಿ ಬಸ್ಸುಗಳಿಗೆ ಹೋಲಿಸಿದರೆ ಅತ್ಯುತ್ತಮ ಸೇವೆ ನೀಡುತ್ತಿರುವುದು ಹೌದಾದರೂ ದರ ಮಾತ್ರ ಆಕಾಶದಲ್ಲೇ ಇರುತ್ತದೆ. ಇವಕ್ಕೆ ಹೋಲಿಸಿದರೆ ಖಾಸಗಿ ಬಸ್ಸುಗಳಲ್ಲಿ ದರ ಅತ್ಯಂತ ಕಡಿಮೆ. ಜೊತೆಗೆ ಹೆದ್ದಾರಿಗಳಲ್ಲಿ ಸಿಗುವ ಚಿಕ್ಕಪುಟ್ಟ ಹಳ್ಳಿಗಳಲ್ಲೂ ನಿಲ್ಲಿಸಿ ಜನರ ಜೊತೆಗೆ ಕೋಳಿ ಪಿಳ್ಳೆ, ಕೃಷಿ ಉತ್ಪನ್ನವನ್ನೂ ಹತ್ತಿಸಿಕೊಂಡು ಬರುತ್ತವೆ. ಹಣ ಕಡಿಮೆಯಿರುವವರು, ಸರಕಾರೀ ಎಕ್ಸ್ ಪ್ರೆಸ್ ಬಸ್ಸುಗಳು ಕ್ಯಾರೇ ಎನ್ನದ ಹಳ್ಳಿಗಳ ಜನರು ಹತ್ತುವ ಖಾಸಗಿ ಬಸ್ಸುಗಳನ್ನು ತಡೆದು ನಿಲ್ಲಿಸಿಬಿಟ್ಟಿತು ಸರಕಾರ. ಮಾಲಿನ್ಯದ ಹೆಸರು, ಟ್ರಾಫಿಕ್ ಜಾಮಿನ ಹೆಸರಿನಲ್ಲಿ ಯಾವ ಕೆಲಸ ಮಾಡಿದರೂ ತುಂಬಾ ವಿರೋಧವೇನು ಬರುವುದಿಲ್ಲ ಎನ್ನುವುದವರಿಗೆ ಗೊತ್ತಿತ್ತಲ್ಲ. ಜೊತೆಗೆ ಈ ಬಸ್ಸುಗಳ ಪ್ರಯಾಣಿಕರು ಪತ್ರಿಕೆಗಳಿಗೆ ಬರೆದು, ಟಿವಿಯೊಳಗೆ ಕುಳಿತು, ಸಾಮಾಜಿಕ ಮಾಧ್ಯಮಗಳಲ್ಲಿ ಗುಲ್ಲೆಬ್ಬಿಸಿ ಸರಕಾರವನ್ನು ಮುಜುಗರಪಡಿಸುವುದಿಲ್ಲ ಎನ್ನುವುದರ ಅರಿವೂ ಅವರಿಗಿತ್ತಲ್ಲ. ಮೆಜೆಸ್ಟಿಕ್ಕಿನಿಂದ ಇಪ್ಪತ್ತು ಮೂವತ್ತು ಕಿಲೋಮೀಟರು ದೂರದಲ್ಲಿ ಎಲ್ಲಾ ಖಾಸಗಿ ಬಸ್ಸುಗಳನ್ನೂ ತಡೆದು ನಿಲ್ಲಿಸಿಯೇ ಬಿಟ್ಟರು. ‘ಬದಲಿ ವ್ಯವಸ್ಥೆ’ಯನ್ನು ಮಾಡಿದ್ದೇವೆ ಎಂಬ ಸಮಾಧಾನ ಬೇರೆ. ಮಾರನೇ ದಿನ ಬಹಳಷ್ಟು ಪತ್ರಿಕೆಗಳಲ್ಲಿ ಖಾಸಗಿ ಬಸ್ಸುಗಳು ನಗರ ಪ್ರವೇಶಿಸದ್ದಕ್ಕೆ ಟ್ರಾಫಿಕ್ ಜಾಮೇ ಇರಲಿಲ್ಲ ಕಣ್ರೀ ಅನ್ನುವ ವರದಿಗಳು ಬೇರೆ. ಟ್ರಾಫಿಕ್ಕು ತಡೆಯುವುದೇ ಸರಕಾರದ ಉದ್ದೇಶವಾಗಿದ್ದರೆ, ಮಾಲಿನ್ಯ ನಿಯಂತ್ರಿಸುವುದೇ ಅದರ ಗುರಿಯಾಗಿದ್ದರೆ ಕಾರುಗಳ್ಯಾವೂ ರಸ್ತೆಗಿಳಿಯಕೂಡದು, ಎಲ್ಲರೂ ಬಸ್ಸಿನಲ್ಲೇ ಪಯಣಿಸಿ, ಅದಕ್ಕಾಗಿ ‘ಬದಲಿ ವ್ಯವಸ್ಥೆಯನ್ನು’ ಮಾಡಿದ್ದೇವೆ ಎಂದು ನಿರ್ಧಾರ ತೆಗೆದುಕೊಳ್ಳಬಹುದಿತ್ತಲ್ಲ? ಅರವತ್ತು ಕಾರುಗಳಲ್ಲಿ ಅರವತ್ತರಿಂದ ನೂರು ಜನರು ಪಯಣಿಸುವುದು ಟ್ರಾಫಿಕ್ಕು ಹೆಚ್ಚಿಸುತ್ತದೋ ಅಥವಾ ಅದೇ ಅರವತ್ತರಿಂದ ನೂರು ಜನರು ಎರಡು ಬಸ್ಸುಗಳಲ್ಲಿ ಹೋಗುವುದು ಟ್ರಾಫಿಕ್ಕು ಹೆಚ್ಚಿಸುತ್ತದೋ? ಹಾಗೆ ಮಾಡಿಬಿಟ್ಟರೆ ಸ್ಮಾರ್ಟ್ ಫೋನ್ ಧಾರಿಗಳೆಲ್ಲರೂ ಹ್ಯಾಷ್ ಟ್ಯಾಗು, ಟ್ವಿಟರ್ ಟ್ರೆಂಡು, ಆನ್ ಲೈನ್ ಪಿಟಿಷನ್ನು ಅಂತೆಲ್ಲ ಶುರುಮಾಡಿ ಸರಕಾರದ ಮರ್ಯಾದೆ ತೆಗೆದುಬಿಟ್ಟರೆ? ಹಾಗಾಗಿ ಅಂತಹ ಯಾವ ಅಪಾಯವನ್ನು ಒಡ್ಡದ ಖಾಸಗಿ ಬಸ್ಸಿನ ಪ್ರಯಾಣಿಕರ ಮೇಲೆ ಸರಕಾರದ ಕಣ್ಣು. ಇನ್ವೆಸ್ಟ್ ಕರ್ನಾಟಕ ಯಾರಿಗಾಗಿ ಎನ್ನುವುದು ಈ ಒಂದು ಸಣ್ಣ ನಿರ್ಧಾರದಿಂದಲೇ ತಿಳಿದುಬಿಡಬಹುದಲ್ಲವೇ? ಇನ್ನು ಮೂರು ಲಕ್ಷ ಕೋಟಿಗಳೂ ಹರಿದು ಬಂದು ಬಿಟ್ಟರೆ ಎಪ್ಪತ್ತೈದು ಸಾವಿರ ಎಕರೆಗಳಷ್ಟು ಭೂಮಿಯ ಜೊತೆಗೆ ಎಷ್ಟು ಲಕ್ಷ ಜನರ ಬದುಕು ಮೂರಾಬಟ್ಟೆಯಾದೀತೋ?

ಫೆಬ್ರ 10, 2016

ದೇವರ ನಾಡಲ್ಲಿ ಪ್ರತಿಯೊಬ್ಬರೂ ಕತೆ ಹೆಣೆಯುವವರೇ!

Dr Ashok K R
ದೃಶ್ಯ 1: ಪ್ರಮುಖ ಪಾತ್ರಧಾರಿ ಶರತ್ ಶೆಟ್ಟಿ ತನ್ನ ಸಹಪಾಠಿ ಶಬ್ಬೀರ್ ಮನೆಯ ಕಡೆಗೆ ಹೋಗುತ್ತಾನೆ. ಅಲ್ಲಿರುವ ಬಾವಿಯ ಬಳಿಗೆ ನೀರು ಸೇದಿಕೊಳ್ಳಲು ಬರುವ ಸವಿತಾಳ ಜೊತೆಗೆ ಬಳಿಯಿದ್ದ ಮುಸ್ಲಿಂ ಮಹಿಳೆ ಹರಟುತ್ತಾಳೆ. ಮುಂದೊಂದು ದೃಶ್ಯದಲ್ಲಿ ಸವಿತಾ ‘ಕೆಳ ಜಾತಿಯ’ ಹುಡುಗಿ ಎಂದು ನಿರ್ದೇಶಕರು ತೋರಿಸುತ್ತಾರಾದರೂ ಮುಸ್ಲಿಮರ ಜೊತೆ ಜೊತೆಗೆ ಬದುಕುತ್ತಿರುವವರು ನಮ್ಮ ದೇಶದ ದಲಿತರು ಎಂದು ನೀರ ಬಾವಿಯ ಮೂಲಕ ತೋರಿಸಿಕೊಡುತ್ತಾರೆ. ಚಿತ್ರದಲ್ಲಿ ಈ ಮಟ್ಟಿಗಿನ ವಾಸ್ತವಿಕ ಸೂಕ್ಷ್ಮತೆಗಳಿವೆ.

ದೃಶ್ಯ 2: ರಿಚರ್ಡ್ ಸಂಗಡಿಗರೊಂದಿಗೆ ವಿಶೇಷ ಆರ್ಥಿಕ ವಲಯದ (SEZ) ವಿರುದ್ಧ ಸಚಿವರು ಮತ್ತು ಉದ್ಯಮಪತಿಗಳ ನಡುವೆ ನಡೆಯುತ್ತಿದ್ದ ಮೀಟಿಂಗಿನ ಕಟ್ಟಡದ ವಿರುದ್ಧ ಪ್ರತಿಭಟಿಸುತ್ತಿರುತ್ತಾರೆ. ಸಭೆ ಮುಗಿದ ನಂತರ ಸಚಿವ ಸಿ.ಎಂ.ನಾಯ್ಕ ಹೊರಬಂದು ಪ್ರತಿಭಟನಕಾರರೊಂದಿಗೆ ಮಾತನಾಡುತ್ತಿರುವಾಗ ಉದ್ಯಮಪತಿ ಪದ್ಮನಾಭ ಶೆಟ್ಟಿ ಎಲ್ಲರ ಮುಂದೆಯೇ ತನ್ನ ಕಡೆಯ ಗೂಂಡಾಗಳನ್ನು ಕರೆದು ಹೋಗಿ ಗಲಾಟೆ ಮಾಡಿ ಎಂದು ಕಣ್ಸನ್ನೆ ಮಾಡುತ್ತಾನೆ. ಅವನ ಮುಂದೆ ತಲೆಯಾಡಿಸಿ ಹೋದ ಗೂಂಡಾಗಳು ಜನರ ನಡುವೆ ಸೇರಿ ಮಂತ್ರಿಗಳ ಕಡೆಗೆ ಚಪ್ಪಲಿ ಮೊಟ್ಟೆ ಎಸೆಯುತ್ತಾರೆ. ಎಲ್ಲರ ಮುಂದೆಯೇ ಪದ್ಮನಾಭ ಶೆಟ್ಟಿ ಇದನ್ನು ಮಾಡಿದರು ಪ್ರತಿಭಟನಕಾರರಲ್ಲಿ ಒಬ್ಬರಿಗೂ ಇದು ಶೆಟ್ಟಿ ಮಾಡಿದ ಕೆಲಸ ಎನ್ನುವ ಅನುಮಾನ ಬರುವುದಿಲ್ಲ! ಚಿತ್ರದಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಇಂತಹ ಅವಾಸ್ತವಿಕ ಅಸೂಕ್ಷ್ಮತೆಗಳೂ ಇವೆ!

ಇಡೀ ಚಿತ್ರ ನಡೆಯುವುದು ಒಂದೂವರೆ ದಿನ. ಪೂರಕವಾಗಿ ಒಂದಷ್ಟು ಫ್ಲ್ಯಾಷ್ ಬ್ಯಾಕುಗಳು, ಮತ್ತು ಕತೆ ಕಟ್ಟುವವರ ಕತೆಗಳು! ಒಟ್ಟಾರೆ ಒಂದು ಸರಳ ಕತೆಯನ್ನು ಉತ್ತಮವೆನ್ನಿಸುವಂತೆ ಮಾಡಿರುವುದು ಚಿತ್ರಕತೆ. ಚಿತ್ರಕತೆಯ ಶೈಲಿಯಲ್ಲಿ ಹೊಸತನವಿದೆ. ಬರುವ ಯಾವೊಂದು ಪಾತ್ರವೂ ಒಂದು ದೃಶ್ಯಕ್ಕೆ ಸೀಮಿತವಾಗದೆ ಮುಂದೊಂದು ದೃಶ್ಯದಲ್ಲಿ ಕತೆಯನ್ನು ಮುಂದಕ್ಕೋಡಿಸುವ ಚಾಲಕ ಶಕ್ತಿಯಾಗುತ್ತಾರೆ. ಸಚಿವ ಸಿ.ಎಂ.ನಾಯ್ಕರು ಕಾಲೇಜಿನ ಕಾರ್ಯಕ್ರಮಕ್ಕೆ ಬರಬೇಕಿದ್ದ ದಿನವೇ ಕ್ಲಾಸ್ ರೂಮಿನಲ್ಲಿ ಸ್ಪೋಟವಾಗುತ್ತದೆ. ಕೆಳ ಜಾತಿಯ ಪ್ರಾಧ್ಯಾಪಕ ಸಿದ್ದು ಗಾಯಗೊಳ್ಳುತ್ತಾನೆ. ಈ ಸ್ಪೋಟ ಸಿ.ಎಂ.ನಾಯ್ಕರ ವಿರುದ್ಧದ ಸಂಚಾ ಅಥವಾ ಕೋಮು ದಳ್ಳುರಿಗೆ ಕಾರಣವೇ ಬೇಕಿಲ್ಲದ ಊರೊಂದರಲ್ಲಿ ನಡೆದ ವಿದ್ವಂಸಕ ಕೃತ್ಯವಾ? ಎನ್ನುವುದರ ಸುತ್ತಲೇ ಕತೆ ಸಾಗುತ್ತದೆ. ಸ್ಪೋಟದ ಹಿಂದಿನ ಸಂಚನ್ನು ಹುಡುಕುವ ಹೊಣೆ ಎಸ್.ಪಿ ಪಾತ್ರದಲ್ಲಭಿನಯಿಸಿರುವ ಪ್ರಕಾಶ್ ರೈರವರದು. ಒಬ್ಬೊಬ್ಬ ಪ್ರಾಧ್ಯಾಪಕರೂ ಒಂದೊಂದು ಕತೆ ಹೇಳುತ್ತಾರೆ. ಕೆಲವರ ಪ್ರಕಾರ ಇದು ಕಮ್ಯುನಿಷ್ಟರ ಕೆಲಸ, ಹಲವರಿದನ್ನು ಮುಸ್ಲಿಂ ಮೂಲಭೂತವಾದಕ್ಕೆ ಅಂಟಿಸಿದರೆ ಮತ್ತೆ ಕೆಲವರು ಇದು ಹಿಂದೂ ಮೂಲಭೂತವಾದ ಸಿದ್ದು ಎಂಬ ಕೆಳಜಾತಿಯ ಪ್ರಾದ್ಯಾಪಕನನ್ನು ಮುಗಿಸಲು ಮಾಡಿದ ಯತ್ನ ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಆಗಿದ್ದರೆ ಬಾಂಬ್ ಸಿಡಿಸಿದ್ದು ಯಾರು? ಎನ್ನುವ ತನಿಖೆಯಲ್ಲಿ ತೆರೆದುಕೊಳ್ಳುವುದು ಶರತ್ ಶೆಟ್ಟಿ, ಮ್ಯಾಡಿ ಮತ್ತು ರಾಮಚಂದ್ರ ಭಟ್ಟರ ನಡುವಿನ ಗೆಳೆತನ.

ಶರತ್ ಶೆಟ್ಟಿ ಉದ್ಯಮಪತಿ ಪದ್ಮನಾಭ ಶೆಟ್ಟಿಯವರ ಮಗ, ಬಂಡವಾಳಶಾಹಿತನದ ಪ್ರತೀಕ; ಮ್ಯಾಡಿ ಅಲಿಯಾಸ್ ಮೈಖೆಲ್ ಮಡಗಾಸ್ಕರ್ ಕಮ್ಯುನಿಷ್ಟ್ ಹೋರಾಟಗಾರ ರಿಚರ್ಡ್ ಮಗ, ಇವರ ಹೋರಾಟವಿರುವುದು ಪದ್ಮನಾಭ ಶೆಟ್ಟಿಯವರ ವಿರುದ್ಧ!; ಇನ್ನು ರಾಮಚಂದ್ರ ಭಟ್ಟ ಆರೆಸ್ಸೆಸ್ಸಿನ ಕಟ್ಟಾಳು, ಹಿಂದೂ ಮೂಲಭೂತವಾದತನದ ಪ್ರತೀಕ! ಸೈದ್ಧಾಂತಿಕವಾಗಿ ಒಂದೊಂದು ದಿಕ್ಕಿನಲ್ಲಿರುವ ಈ ಮೂವರನ್ನೂ ಜೊತೆಯಾಗಿಸಿರುವುದು ಗೆಳೆತನವೆಂಬ ಬಂಧ! ಗೆಳೆತನಕ್ಕೂ ಸಿದ್ಧಾಂತಗಳಿಗೂ ಸಂಬಂಧವಿಲ್ಲ ಎನ್ನುವ ಅಂಶವನ್ನು ನಿರ್ದೇಶಕರು ಬಹಳ ಸ್ಪಷ್ಟವಾಗಿ ತೋರಿಸಿದ್ದಾರೆ. ಆದರೆ ಮುಂದೆ ಸಾಗುತ್ತಿದ್ದಂತೆ ಹೇಗೆ ಬಂಡವಾಳಶಾಹಿತನ ತನ್ನ ಅನುಕೂಲಕ್ಕೆ ಧರ್ಮ ಮತ್ತು ಹೋರಾಟಗಳನ್ನು ಬಳಸಿಕೊಳ್ಳುತ್ತದೆ ಎನ್ನುವುದನ್ನೂ ತೋರಿಸಿದ್ದಾರೆ. ಪದ್ಮನಾಭ ಶೆಟ್ಟರು ರಾಮಚಂದ್ರನ ಭಟ್ಟನ ಗುರು ಅತ್ರಾಡಿ ಗೋವಿಂದನ ಸಿದ್ಧಾಂತಗಳ ಬಗ್ಗೆ ಚೂರೂ ಗೌರವ ಕೊಡದಿದ್ದರೂ ಹಣ ಸಹಾಯ ಮಾಡುತ್ತಾನೆ. ತನ್ನನುಕೂಲಕ್ಕೆ ರಾಜಕಾರಣಿಗಳನ್ನು ಉಪಯೋಗಿಸಿಕೊಳ್ಳುತ್ತಾನೆ. ಗೆಳೆತನದ ಬಂಧವಿದ್ದರೂ ಚಿತ್ರ ಸಾಗಿದಂತೆ ಶರತ್ ಶೆಟ್ಟಿ ತನ್ನನುಕೂಲಕ್ಕೆ ರಾಮಚಂದ್ರ ಭಟ್ಟ ಮತ್ತು ಮ್ಯಾಡಿಯನ್ನು ಉಪಯೋಗಿಸಿಕೊಳ್ಳುತ್ತಾನೆ. ಚಿತ್ರದ ಓಘದಲ್ಲಿ ಸವಿತಾಳೊಡನೆ ಪ್ರೀತಿಯಲ್ಲಿ ಬಿದ್ದ ಶರತ್ ಶೆಟ್ಟಿ ಆ ಪ್ರೀತಿ ಸಫಲವಾಗಲು ತನ್ನ ಗೆಳೆಯರಿಂದ ನೆರವು ಪಡೆದುಕೊಳ್ಳುತ್ತಿದ್ದಾನೆ ಎಂದಷ್ಟೇ ಅಂದುಕೊಂಡರೂ ನಡೆದುಬಿಡುತ್ತೆ. ಆದರೆ ಪ್ರತಿಯೊಬ್ಬನಿಗೂ ಒಂದು ಸೈದ್ಧಾಂತಿಕ ಹಿನ್ನೆಲೆಯಿರುವ ಕಾರಣ ಅರ್ಥವ್ಯಾಪ್ತಿಯನ್ನು ಕೊಂಚ ಹಿಗ್ಗಿಸಿಕೊಂಡರೆ ಒಳ್ಳೆಯದೇನೋ? ಪ್ರಾರಂಭದಲ್ಲಿ ವಿರುದ್ಧ ದಿಕ್ಕಿನ ರಾಮಚಂದ್ರ ಭಟ್ಟ (ಹಿಂದೂ ಮೂಲಭೂತವಾದ) ಮತ್ತು ಮ್ಯಾಡಿಯನ್ನು (ಕಮ್ಯುನಿಷ್ಟ್) ಜೊತೆಗೂಡಿಸುವುದು ಶರತ್ ಶೆಟ್ಟಿ (ಬಂಡವಾಳಶಾಹಿ). ಕೊನೆಗೆ ಎಲ್ಲವನ್ನೂ ಛಿದ್ರಛಿದ್ರವಾಗಿಸುವುದೂ ಕೂಡ ಅದೇ ಬಂಡವಾಳಶಾಹಿತನ. ತುಂಬ ಗೆಳೆಯನಲ್ಲದ ಆದರೆ ಸಹಪಾಠಿಯಾದ ಶಬ್ಬೀರ್ ಮತ್ತವನ ತಂದೆ ಕೂಡ ಶರತ್ ಶೆಟ್ಟಿಯ ಕಾರಣಕ್ಕೆ ಸಿಕ್ಕಿಬೀಳುತ್ತಾರೆ. ಒಂದು ಪಟಾಕಿ ಹೊಡೆದ್ರೂ ನಮ್ಮೋರನ್ನೇ ಹಿಡಿದುಕೊಳ್ತಾರೆ ಎಂದು ಟೀ ಅಂಗಡಿಯ ಸಾಬಿ ಸಹಜವಾಗಿ ಹೇಳಿಬಿಡುವುದು ಮುಸ್ಲಿಮರೊಳಗೆ ಸ್ಪೋಟದ ನಂತರದ ವಿಚಾರಣೆಗಳ ಕುರಿತು ಬೆಳೆದು ಬಿಟ್ಟಿರುವ ಜಡತೆಯ ಸಂಕೇತವಾ? ಟೀ ಅಂಗಡಿಯೊಳಗೆ, ಪಾನ್ ಶಾಪಿನೊಳಗೆ, ಕಾಲೇಜಿನ ಪ್ರಾದ್ಯಾಪಕ ಮಂಡ್ಯ ರಮೇಶ್, ಪ್ರಾದ್ಯಾಪಕಿ ಮಂಜು ಭಾಷಿಣಿ ತಮ್ಮನುಕೂಲಕ್ಕೆ ತಕ್ಕಂತಹ ಕತೆಗಳನ್ನು ಹೆಣೆಯುತ್ತಾರೆ. ಮತ್ತಾ ಕತೆಗೆ ಪೂರಕವಾದ ಸಾಕ್ಷಿಗಳನ್ನು ಸೃಷ್ಟಿಸಿಕೊಳ್ಳುತ್ತಾರೆ.

ಈ ಬಾಂಬ್ ಸ್ಪೋಟ, ಸೈದ್ಧಾಂತಿಕ ತಾಕಲಾಟಗಳನ್ನೆಲ್ಲ ಒಂದು ಕ್ಷಣ ಮರೆತು ನಿಂತರೆ ಒಂದು ನವಿರಾದ ಪ್ರೇಮ ಕತೆಯಿದೆ. ಪ್ರೀತಿ ಪ್ರೇಮವೆಂಬುದು ಕೂಡ ಪೌರುಷದ ಸಂಕೇತದಂತೆಯೇ ಹೆಚ್ಚೆಚ್ಚು ಚಿತ್ರಿತವಾಗುವಾಗ ದೊಡ್ಡ ತೆರೆಯಲ್ಲಿ ಹದಿಹರೆಯದ ನವಿರು ಪ್ರೀತಿಯ ಮುದ್ದು ದೃಶ್ಯಗಳನ್ನು ಕಣ್ತುಂಬಿಕೊಳ್ಳುವುದು ಖುಷಿ ಕೊಡುತ್ತದೆ. ಕೊನೆಗೀ ಪ್ರೀತಿಯೂ ಜಾತಿಯ ಬಲೆಗೆ ಸಿಕ್ಕಿಕೊಳ್ಳುತ್ತದೆ. ಶೆಟ್ಟಿ, ಭಟ್ಟ, ರಿಚರ್ಡ್, ನಾಯರ್, ಶಬ್ಬೀರ್ ಎಂದೆಲ್ಲ ಜಾತಿ ಮತ್ತು ಧರ್ಮದ ಐಡೆಂಟಿಟಿಯನ್ನು ಖಡಕ್ಕಾಗಿ ಗುರುತಿಸುವಂತೆ ಮಾಡುವ ನಿರ್ದೇಶಕರು (ಬಿ.ಸುರೇಶ್) ಸಿದ್ದು ಮತ್ತು ಸವಿತಾಳ ವಿಷಯಕ್ಕೆ ಬಂದಾಗ ಮಾತ್ರ ಕೆಳಜಾತಿ ಎಂದಷ್ಟೇ ಹೇಳಿ ಸುಮ್ಮನಾಗಿಬಿಡುತ್ತಾರೆ. ಅವರ ಜಾತಿಯ ಐಡೆಂಟಿಟಿ ತಿಳಿಯುವುದಿಲ್ಲ. ತುಂಬಾ ವಿಷಯಗಳನ್ನು ಎರಡು ಘಂಟೆಯಲ್ಲೇ ಹೇಳಿ ಮುಗಿಸುವುದು ಸಾಧ್ಯವಾ ಎಂಬ ಪ್ರಶ್ನೆಗೆ ಉತ್ತರವಾಗಿಯೂ ಈ ಚಿತ್ರವಿದೆ. ಕರಾವಳಿಯ ಕೋಮುವಾದದ ಮುಖಗಳ ಪರಿಚಯ, ಬಂಡವಾಳಶಾಹಿತನ ಹೇಗೆ ಪ್ರತಿಯೊಂದನ್ನೂ ನಿಯಂತ್ರಿಸಬಯಸುತ್ತಿದೆ ಎಂಬುದರ ಅರಿವಿದ್ದರೆ ಚಿತ್ರದ ಸೂಕ್ಷ್ಮಗಳು ಹೆಚ್ಚು ಸ್ಪಷ್ಟವಾಗಿ ಅರ್ಥವಾಗುತ್ತವೆ. ಈ ಸೂಕ್ಷ್ಮಗಳ ಗೊಡವೆ ಮರೆತರೂ ಚಿತ್ರವನ್ನು ಒಮ್ಮೆ ನೋಡಲಡ್ಡಿಯೇನಿಲ್ಲ. 

ಮರೆತಿದ್ದೆ, ಚಿತ್ರದಲ್ಲಿನ ಅನೇಕ ಘಟನೆಗಳಿಗೆ ಸಾಕ್ಷಿಯಾಗಿ ಗಾಂಧಿಯ ಮೂಕ ಪ್ರತಿಮೆ ಮತ್ತು ನವಿಲುಗರಿ ಸಿಕ್ಕಿಸಿಕೊಂಡು ಕೆಟ್ಟು ಹೋದ ಟ್ಯೂಬ್ ಲೈಟಿನಲ್ಲಿ ಕೊಳಲು ನುಡಿಸುವ ಹುಚ್ಚನ ಪಾತ್ರಕ್ಕೂ ಉಳಿದವರಿಗಿರುವಷ್ಟೇ ಮಹತ್ವವಿದೆ. ಬಿಗಿ ಚಿತ್ರಕತೆಗೆ ಪೂರಕವಾಗಿ ಛಾಯಾಗ್ರಹಣವಿದೆ. ದೇವರ ನಾಡಲ್ಲಿ ‘ಕಲಾತ್ಮಕ’ ಚಿತ್ರವೆಂಬ ಬ್ರ್ಯಾಂಡಿಗೆ ಸಿಕ್ಕಿ ಹಾಕಿಕೊಳ್ಳದಿರುವುದಕ್ಕೆ ಛಾಯಾಗ್ರಹಣದ ಪಾತ್ರ ಬಹಳವಿದೆ; ‘ಕಲಾತ್ಮಕ’ವೆಂಬ ಚಿತ್ರದಲ್ಲಿ ಅದೊಂದು ಅಘೋಷಿತ ನಿಯಮವೆಂಬಂತೆ ಕ್ಯಾಮೆರಾ ಚಲಿಸುವುದೇ ಇಲ್ಲ, ಚಲಿಸಿದರೂ ಭಯಂಕರ ನಿಧಾನ. ಕೆಲವೊಂದು ದೃಶ್ಯಕ್ಕೆ ನಿಧಾನಗತಿಯ ನಿಂತೇ ಹೋಗಿರುವ ಕ್ಯಾಮೆರಾ ಚೆಂದವಾದರೂ ಚಿತ್ರದ ತುಂಬ ಅಂತಹುದೇ ದೃಶ್ಯಗಳು ಅವಶ್ಯಕತೆಯಿಲ್ಲದಿದ್ದರೂ ಇದ್ದುಬಿಟ್ಟರೆ ನೋಡಲು ಬೇಸರವೇ. ಕರಾವಳಿಯ ಸುಂದರ ತಾಣಗಳನ್ನು ಛಾಯಾಗ್ರಹಕರು ಸೊಬಗಿನೊಂದಿಗೆ ಖುಷಿ ಮೂಡಿಸುವಂತೆ ಸೆರೆಹಿಡಿದಿದ್ದಾರೆ. ಹಾಡುಗಳಲ್ಲಿ ಸಾಹಿತ್ಯ ಚೆನ್ನಾಗಿದೆ, ಇದೇ ಮಾತನ್ನು ಸಂಗೀತದ ಬಗ್ಗೆ ಹೇಳುವಂತಿಲ್ಲ. ಹಾಡುಗಳು ನೆನಪಲ್ಲುಳಿಯದಂತೆ ಮಾಡಲು ಸಂಗೀತದ ಕೊಡುಗೆ ಜಾಸ್ತಿ. ಜೊತೆಗೆ ಇಂತಹ ಚಿತ್ರಗಳಲ್ಲಿ ಒಂದು ಮೂಡು ಸೃಷ್ಟಿಸಬೇಕಾದ ಅನಿವಾರ್ಯತೆ ಹಿನ್ನೆಲೆ ಸಂಗೀತಕ್ಕಿರುತ್ತದೆ. ಅಲ್ಲಲ್ಲಿ ಬಿಟ್ಟರೆ ಉಳಿದೆಡೆಯೆಲ್ಲ ಹಿನ್ನೆಲೆ ಸಂಗೀತ ಸಾಧಾರಣವೇ.

ಫೆಬ್ರ 7, 2016

ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಚುನಾವಣಾ ಸ್ಪರ್ದಿಗಳಿಗೊಂದಿಷ್ಟು ಪ್ರಶ್ನೆಗಳು

ಕು.ಸ.ಮಧುಸೂದನ್
1.ಸಾಹಿತ್ಯ ಪರಿಷತ್ತಿನ ಚುನಾವಣೆಗೆ ನಿಂತಿರೊ ಸ್ಪರ್ದಿಗಳಿಗೆ ವೆಚ್ಚ ಮಾಡುವ ಹಣದ ಮಿತಿಯೇನಾದರು ಇದೆಯೇ?
2.ಹೋಗಲಿ ನಾಮಪತ್ರ ಹಾಕುವ ಮುಂಚೆ ರಾಜಕಾರಣಿಗಳಂತೆ ತಮ್ಮ ಸ್ಥಿರ-ಚರಾಸ್ತಿಗಳನ್ನು ಘೋಷಿಸಿಕೊಳ್ಳಬೇಕೆ?
3. ಗೆದ್ದಮೇಲೆ ಲೋಕಾಯುಕ್ತಕ್ಕೂ ಆಸ್ತಿ ವಿವರ ಸಲ್ಲಿಸಬೇಕೇ?
4.ಇವ್ಯಾವು ಇಲ್ಲವೆಂದಾದರೆ ತಾವುಗಳು ಈ ವಿಚಾರದಲ್ಲಿ ಯಾರಿಗೆ ಹೊಣೆಗಾರರಾಗಿರುತ್ತೀರಿ?
5.ಇನ್ನು ಮತದಾರರ ಸಂಖ್ಯೆ ಕನಿಷ್ಠ ಒಂದು ಲಕ್ಷವಿದ್ದರೆ, ನೀವು ಅವರಿಗೆ ಪತ್ರ ಬರೆಯಲೇ ಸುಮಾರು 5 ಲಕ್ಷ ರೂಪಾಯಿ ಬೇಕಾಗುತ್ತದೆ. ಅಷ್ಟು ದುಡ್ಡನ್ನು ಎಲ್ಲಿಂದ ತರುತ್ತೀರಿ?
6. ಪ್ರತಿ ತಾಲೂಕಿಗೂ ನಿಮ್ಮ ಕಾರಲ್ಲಿ ಬೇಟಿ ಕೊಡುವುದೇ ಆದಲ್ಲಿ ಕನಿಷ್ಠ 5 ಲಕ್ಷ ರೂಪಾಯಿ ಖರ್ಚಾಗುತ್ತದೆ. ಈ ದುಡ್ಡಿಗೇನು ಮಾಡುತ್ತೀರಿ?
7.ಹೋಗಲಿ ಚುನಾವಣೆ ಖರ್ಚಿಗೆಂದು ನೀವುಗಳೇನಾದರು ಪಾರ್ಟಿ ಫಂಡ್ ತರಾ ಹಣ ಸಂಗ್ರಹಿಸುತ್ತೀರಾ? ಹಾಗೆ ಸಂಗ್ರಹಿಸಿದರೆ ಕೊಟ್ಟವರ ಹೆಸರುಗಳನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತೀರಾ?
8.ಯಾವುದಾದರು ರಾಜಕೀಯ ಪಕ್ಷಗಳ ಬೆಂಬಲ ನಿಮಗೆ ಇದೆಯಾ? ಇದ್ದರೆ ಯಾವ ಪಕ್ಷ ಯಾವ ಕಾರಣ ವಿವರಿಸುತ್ತೀರಾ?
9. ಇಷ್ಟೆಲ್ಲಾ ಖರ್ಚುಮಾಡಿ ಗೆದ್ದ ಮೇಲೆ ಕಳೆದುಕೊಂಡ ಹಣವನ್ನು ಮರಳಿ ಗಳಿಸಲು ಏನೆಲ್ಲಾ ಮಾಡುತ್ತೀರಿ
ಕೊನೆಯ ಪ್ರಶ್ನೆಗೆ ಕ್ಷಮೆಯಿರಲಿ: ಯಾಕೆಂದರೆ ನೀವು ಚುನಾವಣೆಗೆ ಖರ್ಚು ಮಾಡುತ್ತಿರುವು ಕಡಲೆಬೀಜಗಳಲ್ಲ ಲಕ್ಷಲಕ್ಷ ರೂಪಾಯಿಗಳು!
ಉತ್ತರ ಕೊಡಲೇ ಬೇಕೆಂಬ ಕಡ್ಡಾಯವೇನಿಲ್ಲ. ಇಂತಹ ಪ್ರಶ್ನೆಗಳನ್ನು ರಾಜಕಾರಣಿಗಳಿಗೆ ಕೇಳಿಕೇಳಿ ನಮಗೆ ಅಭ್ಯಾಸವಾಗಿ ಹೋಗಿದೆ........

ಫೆಬ್ರ 6, 2016

ಇದು ಜನಾಂಗೀಯ ನಿಂದನೆಯಲ್ಲದೆ ಮತ್ತೇನು?

ಡಾ. ಅಶೋಕ್. ಕೆ. ಆರ್
ಒಂದು ನಿರ್ದಿಷ್ಟ ಜಾತಿಯ ಹುಡುಗನೊಬ್ಬ ಮಾಡಿದ ಸಣ್ಣದೊಂದು ತಪ್ಪಿಗೆ ಆ ಹುಡುಗನಿಗೆ ಶಿಕ್ಷೆ ನೀಡುವುದಕ್ಕಷ್ಟೇ ತೃಪ್ತಿ ಪಡದೆ ಆ ಇಡೀ ಜಾತಿಯ ಜನರನ್ನು ಅಟ್ಟಾಡಿಸಿ ಹೊಡೆಯುವ ಹತ್ತಲವು ಪ್ರಕರಣಗಳು ಹಲವಾರು ನಡೆಯುತ್ತಲೇ ಇರುತ್ತವೆ. ಅದು ಜಾತಿ ತಾರತಮ್ಯದಿಂದ ನಡೆದ ಕೃತ್ಯವೆಂದು ಸಲೀಸಾಗಿ ಒಪ್ಪಿಬಿಡುತ್ತೇವೆ. ಬೆಂಗಳೂರಿನ ಪ್ರಕರಣದಲ್ಲಿ ಆಫ್ರಿಕಾ ಖಂಡದ ಕಪ್ಪು ಹುಡುಗನೊಬ್ಬ ಕುಡಿದ ಅಮಲಿನಲ್ಲಿ ಶಬಾನಾ ಎಂಬ ಮಹಿಳೆ ಮೇಲೆ ಕಾರು ಚಲಾಯಿಸಿ ಆಕೆಯ ಸಾವಿಗೆ ಕಾರಣವಾಗಿಬಿಡುತ್ತಾನೆ. ಕಾರು ಚಲಾಯಿಸಿದವನಿಗೆ ಹೊಡೆದು ಪೋಲೀಸರಿಗೆ ಕೊಟ್ಟಿದ್ದರೆ ಅದು ಆ ಕ್ಷಣದ ಕೋಪದ ಪರಿಣಾಮವಾಗುತ್ತಿತ್ತು. ಅದಾಗಿ ಅರ್ಧ ಮುಕ್ಕಾಲು ಘಂಟೆಯ ನಂತರ ಅದೇ ದಾರಿಯಲ್ಲಿ ಬಂದ ಮತ್ತೊಂದು ಕಾರಿನಲ್ಲಿದ್ದ, ಆ ಅಪಘಾತಕ್ಕೆ ಸಂಬಂಧವೇ ಇಲ್ಲದ ತಾಂಜೇನಿಯಾದ ಮಹಿಳೆಯೊಬ್ಬಳನ್ನು ಎಳೆದಾಡಿದ್ದಾರೆ, ಹೊಡೆದಿದ್ದಾರೆ (ಮೊದಮೊದಲು ನಗ್ನವಾಗಿಸಿ ಪೆರೇಡ್ ಮಾಡಿದ್ದಾರೆ ಎಂಬಂತಹ ವರದಿಗಳು ಬಂದವಾದರೂ ದೂರಿನಲ್ಲಿ ಆ ಮಹಿಳೆ ಹೊಡೆದು ಎಳೆದಾಡಿದ್ದಾರೆ ಎಂದಷ್ಟೇ ತಿಳಿಸಿದ್ದಾರೆ). ಘಟನೆಗೆ ಸಂಬಂಧವಿರದಿದ್ದರೂ ಆಕೆಯನ್ನು ಎಳೆದು ಹೊಡೆದದ್ದು ಆಕೆಯ ಮೈಬಣ್ಣದ ಕಾರಣಕ್ಕೇ ಎಂದ ಮೇಲೆ ಇದು ಜನಾಂಗೀಯ ನಿಂದನೆ ಆಗದಿರಲು ಹೇಗೆ ಸಾಧ್ಯ? ಕೆಲವೊಮ್ಮೆ ಕಹಿ ಸತ್ಯಗಳನ್ನು ಒಪ್ಪಿಕೊಳ್ಳುವುದರಲ್ಲೇ ದೊಡ್ಡತನವಿದೆ.

ರಾಷ್ಟ್ರೀಯ ಹೆಸರಿನ ಆಂಗ್ಲ ಸ್ಥಳೀಯ ಮಾಧ್ಯಮಗಳು ಪ್ರಕರಣಕ್ಕೆ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ಕೊಟ್ಟು ‘ಶೇಮ್ ಆನ್ ಬೆಂಗಳೂರು’ ಎಂದೆಲ್ಲ ಕೂಗೆಬ್ಬಿಸಿರುವುದನ್ನು ಖಂಡಿಸುವ ಭರದಲ್ಲಿ ವಿದೇಶಿ ವಿದ್ಯಾರ್ಥಿಗಳು ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದಾರೆ, ಕುಡಿದು ಮೂರೊತ್ತು ಗಲಾಟೆ ಮಾಡುತ್ತಾರೆ ಅದನ್ನೆಲ್ಲ ಯಾಕೆ ಹೇಳುವುದಿಲ್ಲ ಎಂದು ವಾದಿಸುವುದು ಎಷ್ಟರ ಮಟ್ಟಿಗೆ ಸರಿ? ಹೌದು ಅವರು ಡ್ರಗ್ಸ್ ಜಾಲದಲ್ಲಿದ್ದಾರೆ, ಮನೆಯಿಂದ ದೂರವಿರುವ ಬಹಳಷ್ಟು ವಿದ್ಯಾರ್ಥಿಗಳು ಮಾಡುವಂತೆ ಅವರೂ ಮನಬಂದಂತೆ ಇರುತ್ತಾರೆ ಎನ್ನುವುದೆಲ್ಲವೂ ಸತ್ಯವೇ, ಆದರದನ್ನು ಈ ಹಲ್ಲೆಗೆ ಸಮರ್ಥನೆಯಂತೆ ಉಪಯೋಗಿಸಿಕೊಳ್ಳುವುದು ತಪ್ಪು. ಅವರು ಅಷ್ಟೆಲ್ಲ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ನಾವು ಮೊದಲು ಪ್ರಶ್ನಿಸಬೇಕಾದದ್ದು ನಮ್ಮದೇ ಪೋಲೀಸರ ನಿಷ್ಕ್ರಿಯತೆಯನ್ನು. ಯಾರೋ ಯಾವತ್ತೋ ಮಾಡಿದ ತಪ್ಪಿಗೆ ಮತ್ತೆಲ್ಲೋ ಮತ್ಯಾರನ್ನೋ ಅವರ ಬಣ್ಣದ ಕಾರಣಕ್ಕೆ, ಜನಾಂಗೀಯವಾಗಿ ಸಾಮ್ಯತೆ ಇರುವ ಕಾರಣಕ್ಕೆ ಹಿಡಿದು ಬಡಿದು ಬಿಡುವ ಪ್ರವೃತ್ತಿಯನ್ನು ಜನಾಂಗೀಯ ನಿಂದನೆಯೆಂದು ಒಪ್ಪಿಕೊಳ್ಳದೆ ಏನೇನೋ ಸಬೂಬುಗಳನ್ನು ಹೇಳಿಬಿಡುವುದು ನಮ್ಮೊಳಗಿರುವ ಜನಾಂಗೀಯ ಮೇಲ್ಮೆಯ ಸಂಕೇತವೇ ಹೊರತು ಮತ್ತೇನಲ್ಲ.

ತಾಂಜೇನಿಯಾದ ಮಹಿಳೆ ಪೋಲೀಸರಿಗೆ ಮೊದಲು ದೂರು ನೀಡಲು ಹೋದಾಗ ದೂರು ಸ್ವೀಕರಿಸಲೂ ಪೋಲೀಸರು ನಿರಾಕರಿಸಿದರೆಂಬ ಸುದ್ದಿ ಮತ್ತೆ ಪೋಲೀಸರ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತಿದೆ. ಶಬಾನಾಳ ಸಾವಿಗೆ ಕಾರಣವಾದವನನ್ನೂ ಬಂಧಿಸಿರುವ ಸುದ್ದಿ ವರದಿಯಾಗಿಲ್ಲ; ಮತ್ತಿಲ್ಲಿ ಪೋಲೀಸರ ನಿಷ್ಕ್ರಿಯತೆಯನ್ನೇ ನಾವು ಪ್ರಶ್ನಿಸಬೇಕು. ಘಟನೆಗೆ ಸಂಬಂಧಿಸಿದಂತೆ ತಡವಾಗಿಯಾದರೂ ಪೋಲೀಸರು ಒಂದಷ್ಟು ಸಕ್ರಿಯವಾಗಿ ಸಿಸಿಟಿವಿಯ ಆಧಾರದಲ್ಲಿ ಕೆಲವರ ಬಂಧನವಾಗಿದೆ. ಗೃಹ ಸಚಿವ ಪರಮೇಶ್ವರ್ ತಾಂಜೇನಿಯಾದ ಹುಡುಗಿಯನ್ನೂ ಭೇಟಿಯಾಗಿದ್ದಾರೆ, ಶಬಾನಾಳ ಮನೆಯವರನ್ನೂ ಭೇಟಿಯಾಗಿದ್ದಾರೆ. ಅವರ ಮಟ್ಟದಲ್ಲಿ ದೇಶದ ಮಾನ ಕಾಪಾಡಲೋ ವಿದೇಶಿ ವ್ಯವಹಾರಗಳ ಸಲುವಾಗೋ ಇದು ಜನಾಂಗೀಯ ನಿಂದನೆಯಲ್ಲ ಎಂದು ಹೇಳಿಕೊಳ್ಳುವುದು ಅನಿವಾರ್ಯವೇನೋ. ಆಂಗ್ಲ ಮಾಧ್ಯಮಗಳ ಅತ್ಯುತ್ಸಾಹವನ್ನು ವಿರೋಧಿಸುತ್ತಲೇ ಇದು ಜನಾಂಗೀಯ ನಿಂದನೆಯಲ್ಲ ಎಂದು ವಾದಿಸುವುದಕ್ಕೆ ಸಬೂಬುಗಳನ್ನು ಹುಡುಕುವುದನ್ನು ನಾವಾದರೂ ನಿಲ್ಲಿಸೋಣ. ತಪ್ಪಿಗೊಂದು ಕ್ಷಮೆ ಕೇಳುವುದರಲ್ಲಿ ತಪ್ಪಿದೆಯೇ?

ಫೆಬ್ರ 5, 2016

ಚಿತ್ರೋತ್ಸವ ಕರ್ನಾಟಕದ್ದಾಗಲಿ: ಅಭಿ ಹನಕೆರೆ.

ಪತ್ರಿಕಾ ಪ್ರಕಟಣೆ
ಗೆ,
1. ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ.
2. ವಾರ್ತಾ ಸಚಿವರು, ಕರ್ನಾಟಕ ಸರ್ಕಾರ.
3. ಕಾರ್ಯದರ್ಶಿಗಳು, ವಾರ್ತಾ ಇಲಾಖೆ, ಕರ್ನಾಟಕ ಸರ್ಕಾರ.
4. ನಿರ್ದೇಶಕರು, ವಾರ್ತಾ ಇಲಾಖೆ, ಕರ್ನಾಟಕ ಸರ್ಕಾರ.
5. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.
6. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡಮಿ.
ಮಾನ್ಯರೇ,

ಮೈಸೂರು ರಾಜ್ಯ ಅಂತ ಇದ್ದಿದ್ನ ಕರ್ನಾಟಕ ರಾಜ್ಯ ಅಂತ ಮಾಡಿರುವ ವಿಚಾರವನ್ನು ಮರೆತು ಬೆಂಗಳೂರು ರಾಜ್ಯ ಮಾಡಲು ಹೊರಟಂತಿದೆ, ಅಂತರರಾಷ್ಟ್ರೀಯ ಚಿತ್ರೋತ್ಸವದ ವಿಷಯದಲ್ಲಿ, ಇಡೀ ಕರ್ನಾಟಕಕ್ಕೆ ಸಂಬಂಧಪಟ್ಟ ಚಿತ್ರ್ಸೋತ್ಸವಕ್ಕೆ ಇಲ್ಲಿಯವರೆಗು, “ಬೆಂಗಳೂರು ಅಂತರ ರಾಷ್ಟ್ರೀಯ ಚಿತ್ರ್ಸೋತ್ಸವ” ಅಂತಲೇ ಆಚರಿಸಿಕೊಂಡು ಬಂದಿದ್ದೀರಿ, ಬೆಂಗಳೂರು ಕರ್ನಾಟಕಕ್ಕಿಂತ ದೊಡ್ಡದೇ? ಇದರ ಜೊತೆಗೆ ಬೆಂಗಳೂರಿನ ಹೆಸರಿನ ಉತ್ಸವವನ್ನು ಮೈಸೂರಿನಲ್ಲಿ ಆಯೋಜಿಸಿದ್ದೀರಿ! ಈ ಕ್ರಮ ಸರಿಯಿಲ್ಲ. ಆದ್ದರಿಂದ ಇನ್ನುಮುಂದೆ “ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ” ಎಂದು ಆಚರಿಸುವ ಕಾರ್ಯಕ್ರಮಕ್ಕೆ “ಕರ್ನಾಟಕ ಅಂತರರಾಷ್ಟ್ರೀಯ ಚಿತ್ರೋತ್ಸವ” ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸುತ್ತಿದ್ದೇವೆ.

• ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವ ಪ್ರತಿಚಿತ್ರವು ಬಹು ಮುಖ್ಯವಾಗಿರುವುದರಿಂದ ಒಂದು ಸಮಯಕ್ಕೆ ಒಂದೇ ಸಿನಿಮಾ ಪ್ರದರ್ಶನ ಮಾಡುವಂತಾಗಲೀ (ಹಲವು ಸ್ಕ್ರೀನ್ ಗಳಿದ್ದರೆ ಎಲ್ಲದರಲ್ಲೂ ಒಂದು ಸಮಯಕ್ಕೆ ಒಂದೇ ಸಿನಿಮಾ ಪ್ರದರ್ಶನವಿರಲಿ)

• ಕಲಾವಿದರು ಮತ್ತು ಜನ ಸಾಮಾನ್ಯರು ಒಟ್ಟುಗೂಡುವ ಇಂತ ಸುಸಂದರ್ಭವನ್ನು ಒಂದಕ್ಕಿಂತ ಹೆಚ್ಚು ಊರಿಗೆ ಭಾಗ ಮಾಡದೇ ಒಂದೇ ಊರಿನಲ್ಲಿ ನಡೆಸುವಂತಾಗಬೇಕು. 

• ಈ ಬಾರಿಯಂತೆ ಮುಂದೆಂದು ಮಾಲ್ ಗಳಲ್ಲಿ ಆಯೋಜಿಸಿ ಶಾಪಿಂಗ್ ಮಾಲ್ ಗಳು ಜನರಿಂದ ಹಣ ಸುಲಿಯುವ ಸಂಸ್ಕೃತಿಗೆ ಸಹಾಯ ಮಾಡಬೇಡಿ.

• ತಾಲ್ಲೂಕು-ಹೋಬಳಿ ಮಟ್ಟದಲ್ಲಿ ಸಿನಿಮಾ ಮಂದಿರಗಳ ಸ್ಥಿತಿ ಶೋಚನೀಯವಾಗಿ ಬಾಗಿಲು ಮುಚ್ಚುತ್ತಿರುವ ಸಂದರ್ಭದಲ್ಲಿ, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿಯ ದೃಷ್ಟಿಯಿಂದ ತಾಲ್ಲೂಕು-ಹೋಬಳಿ ಮಟ್ಟದಲ್ಲಿ “ ಕರ್ನಾಟಕ ಅಂತರರಾಷ್ಟ್ರೀಯ ಚಿತ್ರೋತ್ಸವ” ನಡೆಯುವಂತಾಗಲೀ.

• ಮುಂದಿನ ವರ್ಷದಿಂದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ, “ಕರ್ನಾಟಕ ಅಂತರರಾಷ್ಟ್ರೀಯ ಚಿತ್ರೋತ್ಸವ” ಎಂದು ಮರುನಾಮಕರಣ ಮಾಡಿ, ಪ್ರತಿ ವರ್ಷವೂ ಒಂದೊಂದು ಊರಿನಲ್ಲಿ “ಕರ್ನಾಟಕ ಸಾಹಿತ್ಯ ಸಮ್ಮೇಳನ”ದ ಮಾದರಿಯಲ್ಲಿ ಆಯೋಜಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ. 

• ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಕೂಡ ಬೆಂಗಳೂರು ಹೆಸರನ್ನು ಪ್ರಾಮುಖ್ಯತೆ ಮಾಡಿ ವಿದೇಶದಿಂದ ಬೆಂಗಳೂರಿಗೆ ಮಾತ್ರ ಬಂಡವಾಳ ತರುವ ಹುನ್ನಾರ ಮಾಡಬೇಡಿ. ಮತ್ತು ಬೆಂಗಳೂರಿನ ಹೊರಗಿನ ಕರ್ನಾಟಕದವರಿಗೆ ಬೆಂಗಳೂರೇ ದೊಡ್ಡದ್ದು ಎನ್ನುವ ಮನಸ್ಥಿತಿಯನ್ನು ತರಬೇಡಿ.

• ಹಳ್ಳಿಗಳು, ಸಣ್ಣಪುಟ್ಟ ನಗರಗಳಲ್ಲಿ ಕರೆಂಟಿಲ್ಲದೇ, ರಸ್ತೆಗಳಿಲ್ಲದೇ, ಕುಡಿಯುವ ನೀರಿಲ್ಲದೇ, ಗಂಡುಮಕ್ಕಳಿಗೆ ಮದುವೆಯಾಗಲು ಹೆಣ್ಣು ಕೊಡದಂತಹ ಪರಿಸ್ಥಿತಿ ಯಲ್ಲಿ ವಾಸಿಸುತ್ತಿರುವ ನಮಗೆ ಚಿತ್ರೋತ್ಸವಗಳಾದರೂ ಕೊಡಿ.

• ಮಾಡೋದು ಕರ್ನಾಟಕದಲ್ಲಿ ಚಿತ್ರೋತ್ಸವ. ಆದರೆ ಮೊದಲಿನಿಂದ ಕೊನೆಯವರೆಗೂ ಎಲ್ಲಾ ಹಂತದಲ್ಲೂ ಇಂಗ್ಲೀಷನ್ನೇ ಬಳಸಿದ್ದೀರಿ, ಚಿತ್ರೋತ್ಸವದ ಹೆಸರು, ಗುರುತಿನ ಚೀಟಿ, ಸಿನಿಮೋತ್ಸವದ ಕೈಪಿಡಿ ಮುಂತಾದವುಗಳಲ್ಲಿ ಕೇವಲ ಆಂಗ್ಲ ಭಾಷೆಯನ್ನೇ ಬಳಸಿದ್ದೀರಿ, ಪ್ರತ್ಯೇಕ್ಷವಾಗಿ, ಬಲವಂತವಾಗಿ ಆಂಗ್ಲ ಭಾಷೆಯನ್ನು ಕನ್ನಡಿಗರ ಮೇಲೆ ಏರಿದ್ದೀರಿ. ಬೆಂಗಳೂರು ಕರ್ನಾಟಕದಲ್ಲಿದೆಯೋ ಅಥವಾ ಬ್ರಿಟನ್ ದೇಶದಲ್ಲಿದೆಯೋ! ಬ್ರಿಟಿಷರ ಗುಲಾಮಗಿರಿಯಿಂದ ಆಚೆ ಬಂದಿರುವವರನ್ನು ಚಿತ್ರೋತ್ಸವಕ್ಕೆ ಆಯೋಜಕರನ್ನಾಗಿ ಮಾಡಿ, ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬನಿಗೂ ಕನ್ನಡ ಭಾಷೆಯು ಅನಿವಾರ್ಯವಾಗುವಂತೆ ಮಾಡಲು ಒತ್ತಾಯಿಸುತ್ತಿದ್ದೇವೆ. 
ಇಂತಿ,
ಎಸ್.ಅಭಿಹನಕೆರೆ(9886756172)

ಮೇಕಿಂಗ್ ಹಿಸ್ಟರಿ: ವಸಾಹತುಶಾಹಿಯ ನಿಯತ್ತಿನ ಸೇವಕ

making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

ಅಧಿಕಾರದಲ್ಲಿದ್ದ ಕೈಗೊಂಬೆ ರಾಜರು ಬ್ರಿಟೀಷ್ ಸಾಮ್ರಾಜ್ಯದ ವಿಸ್ತರಣೆಗೆ ಎಲ್ಲಾ ರೀತಿಯ ಸಹಕಾರವನ್ನೂ ನೀಡಿದರು. 1803ರಲ್ಲಿ ಮೈಸೂರಿನ ದಿವಾನರಾಗಿದ್ದ ಪೂರ್ಣಯ್ಯ ಸೆಂಟ್ ಜಾರ್ಜಿನ ಆದೇಶದಂತೆ 2245 ಕುದುರೆಗಳು ಮತ್ತು 4026 ಸೈನಿಕರನ್ನು ಬ್ರಿಟೀಷರ ಯುದ್ಧದಾಹಕ್ಕೆ ಸೇವೆ ನೀಡಲು ಕಳುಹಿಸುತ್ತಾರೆ. ಅರವತ್ತು ಸಾವಿರ ಎತ್ತಿನ ಗಾಡಿಯಷ್ಟು ದವಸ ಧಾನ್ಯ ಮತ್ತು ಅರವತ್ತು ಸಾವಿರ ಕುರಿಗಳನ್ನು ಬ್ರಿಟೀಷರಿಗೆ ಕಳುಹಿಸಿದರು ಎನ್ನುವ ಶಾಮರಾವ್ ಮುಂದುವರೆಸುತ್ತಾ “ಯುದ್ಧ ಭೂಮಿಯಲ್ಲಿದ್ದ ಬ್ರಿಟೀಷ್ ಕಮಾಂಡರುಗಳಿಗೆ ಲಂಬಾಣಿಗಳು ಎಷ್ಟು ವೇಗವಾಗಿ ತೆಗೆದುಕೊಂಡು ಹೋಗಲು ಸಾಧ್ಯವೋ ಅಷ್ಟು ವೇಗವಾಗಿ ಸಾಮಗ್ರಿಗಳನ್ನು ಒದಗಿಸುತ್ತಿದ್ದರು ಪೂರ್ಣಯ್ಯ. ಜೊತೆಗೆ ಕೆನರಾದ ಕಲೆಕ್ಟರುಗಳಿಗೂ ಸಾಮಾನು ಸರಂಜಾಮುಗಳನ್ನು ಕಳುಹಿಸಿ ಬೇರೆಡೆ ಇದ್ದ ಬ್ರಿಟೀಷ್ ಸೈನ್ಯಕ್ಕೆ ರಫ್ತು ಮಾಡಿಸುತ್ತಿದ್ದರು. ಯುದ್ಧ ಭೂಮಿಯಲ್ಲಿದ್ದ ಮೈಸೂರು ಸೈನಿಕರ ಬ್ರಿಟೀಷ್ ಸೇವೆಯಲ್ಲಿ ಯಾವುದೇ ಕುಂದುಕೊರತೆ ಬಾರದಿರಲೆಂಬ ಉದ್ದೇಶದಿಂದ ಅವರ ಸಂಬಳ ಮತ್ತು ಬಡ್ತಿ ಕಾಲಕಾಲಕ್ಕೆ ಸಿಗುವಂತೆ ಮುತುವರ್ಜಿ ವಹಿಸಿದರು ದಿವಾನರು.” (26)

ಮುಂದುವರೆಸುತ್ತಾ “1804ರಲ್ಲಿ ಮರಾಠ ಕ್ಯಾಂಪೇನಿಗೆ ಸಂಬಂಧಪಟ್ಟಂತೆ ಉಡುಗೊರೆ, ಬಹುಮಾನ, ಸಂಬಳ ಮತ್ತು ಸೈನ್ಯ ವಾಪಸ್ಸಾಗುವವರೆಗೆ ಆದ ಒಟ್ಟು ಖರ್ಚು ಹತ್ತಿರತ್ತಿರ 4,10,000 ಪಗೋಡಾ (12,30,000 ರುಪಾಯಿ).” (27)

ಮೂರನೇ ಕೃಷ್ಣರಾಜ ಒಡೆಯರ್ ಪರವಾಗಿ ಪೂರ್ಣಯ್ಯ 1807ರ ತನಕ ಆಡಳಿತ ನಡೆಸಿದರು. ರಾಜನಿಗೆ ಆ ವರುಷ ಹದಿನಾಲ್ಕು ತುಂಬಿತು; ಆಡಳಿತದ ಚುಕ್ಕಾಣಿ ರಾಜನಿಗೆ ಸಿಕ್ಕಿತು. ಗೌರವಾದರ, ಸಂಪತ್ತು ಮತ್ತು ಕೊಂಡಾಡುವಿಕೆಯೊಂದಿಗೆ ಬ್ರಿಟೀಷರು ಪೂರ್ಣಯ್ಯನವರನ್ನು ಬೀಳ್ಕೊಟ್ಟರು. ಪೂರ್ಣಯ್ಯನವರು ನಿವೃತ್ತಿಯಾದಾಗ ವೆಲ್ಲೆಸ್ಲಿ ಬರೆಯುತ್ತಾರೆ: “ದಿವಾನರ ಕೆಲಸ ಕಾರ್ಯದ ರೀತಿ ಪ್ರಶಂಸಾರ್ಹ; ಅದರಲ್ಲೂ ಮರಾಠ ಯುದ್ಧದಲ್ಲಿ ಬುದ್ಧಿವಂತಿಕೆಯಿಂದ ಒಂಚೂರೂ ತಡಮಾಡದೆ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಕಳುಹಿಸಿಕೊಟ್ಟರು. ಪೂರ್ಣಯ್ಯನವರನ್ನು ನೇಮಿಸುವಾಗ ಅವರ ಕುರಿತು ನಮಗಿದ್ದ ನಿರೀಕ್ಷೆಗಳಿಗೆ ತಮ್ಮ ಅಸಾಧಾರಣ ಆಡಳಿತ ವೈಖರಿಯಿಂದ ನ್ಯಾಯ ಒದಗಿಸಿದ್ದಾರೆ.” (28)

1810ರಲ್ಲಿ ಮೈಸೂರಿನ 1500 ಕುದುರೆ ಸವಾರರನ್ನು ನಾಗಪುರ ಮತ್ತು ಮಲ್ವಾದ ಯುದ್ಧಭೂಮಿಗೆ ಕಳುಹಿಸಲಾಯಿತು. 1817ರಲ್ಲಿ ಸಾವಿರ ಕುದುರೆ ಸವಾರರು ನಿಜಾಮರೊಂದಿಗಿನ ಕದನದಲ್ಲಿ ಭಾಗಿಯಾಗಿದ್ದರು. 1817 – 18ರಲ್ಲಿ ಮರಾಠ ಸಾಮ್ರಾಜ್ಯವನ್ನು ಕಬಳಿಸುವಾಗ ಮೈಸೂರಿನ ನೂರಾರು ಸೈನಿಕರು ಮತ್ತು ಕಾಲಾಳುಗಳನ್ನು ಉಪಯೋಗಿಸಿಕೊಳ್ಳಲಾಯಿತು, ಬಾಜಿರಾವ್ ಪೇಶ್ವೆ ಓಡಿಹೋಗುವವರೆಗೆ. (29)

ಮೂರನೇ ಕೃಷ್ಣರಾಜ ಒಡೆಯರ್ ರೀತಿಯ ನಿಯತ್ತಿನ ಸೇವಕರು ತಮ್ಮ ಬ್ರಿಟೀಷ್ ದೊರೆಗಳಿಗೆ, ಜನ – ಧನ – ವಸ್ತುಗಳನ್ನು ಪೂರೈಸಿದ ಕಾರಣಕ್ಕೆ ಕರ್ನಾಟಕ ಅತಿಕ್ರಮಣಕ್ಕೊಳಗಾಯಿತು ಮತ್ತು ಭಾರತ ಬ್ರಿಟೀಷ್ ಸಾಮ್ರಾಜ್ಯದ ಅಡಿಯಾಳಾಯಿತು. ಬಿಳಿ ಜನರ ಹೊರೆ ಹೊತ್ತವರು ಬಿಳಿ ಜನರ ಯುದ್ಧದಲ್ಲಿ ಕಾದಾಡಿದರು. ವಸಾಹತುಶಾಹಿತನ ವಿಶ್ವವನ್ನಾಕ್ರಮಿಸುವುದಕ್ಕೆ ಇದು ಎಷ್ಟು ಮುಖ್ಯವಾಗಿತ್ತು ಎನ್ನುವುದರ ಕುರಿತು ಥಾಮಸ್ ಮನ್ರೋ ಹೀಗೆ ಹೇಳುತ್ತಾನೆ: “ಪ್ರಪಂಚದಲ್ಲಿದುವರೆಗೂ ಮಾಡಿರದ ಪ್ರಯೋಗವನ್ನು ನಾವಿಲ್ಲಿ ಮಾಡುತ್ತಿದ್ದೇವೆ; ದೇಶೀ ಸೈನ್ಯವನ್ನು ಉಪಯೋಗಿಸಿ ವಿದೇಶಿ ಆಕ್ರಮಣವನ್ನು ಬಲಪಡಿಸುವ ಪ್ರಯೋಗ…….” (30)

ಕಾರ್ಲ್ ಮಾರ್ಕ್ಸ್ ಇದನ್ನೇ ತನ್ನ ವೈಶಿಷ್ಟ್ಯದಲ್ಲಿ ಹೇಳಿದ್ದಾನೆ. “ಭಾರತವನ್ನು ಆಂಗ್ಲ ಶಕ್ತಿ ವಶದಲ್ಲಿಟ್ಟುಕೊಂಡಿರುವುದು ಭಾರತೀಯರು ಖರ್ಚು ಮಾಡಿ ನಿರ್ವಹಿಸುತ್ತಿರುವ ಭಾರತೀಯ ಸೈನ್ಯದಿಂದ.” (31)

ಇತಿಹಾಸದ ಈ ದ್ರೋಹ ಕಪಾಲಕ್ಕೆ ಹೊಡೆದಾಗ ಖಿನ್ನತೆ ಮೂಡದಿದ್ದೀತೆ?

ಬಹುತೇಕ ಇತಿಹಾಸಕಾರರು ಕರ್ನಾಟಕದ ಬಗ್ಗೆ ಬರೆಯುವಾಗ ಬ್ರಿಟೀಷರ ವಿರುದ್ಧ ನಿಂತ ರಾಣಿ ಚೆನ್ನಮ್ಮರನ್ನು ಬೆಂಬಲಿಸುತ್ತಾರೆ. ಸಾಮಾಜಿಕ ಹೋರಾಟಕ್ಕೆ ಇತಿಹಾಸಕಾರರ ಬೆಂಬಲ ಶ್ಲಾಘನೀಯ. ಇತಿಹಾಸಕಾರರಲ್ಲಿನ ವಸಾಹತುಶಾಹಿ ವಿರೋಧಿ ರಾಷ್ಟ್ರೀಯತೆ ಪ್ರಜ್ಞೆಯ ಪ್ರತಿಫಲನವಿದು. ಆದರಿದೇ ಸಮಯದಲ್ಲಿ ಬಹುತೇಕರು ಮೈಸೂರಿನ ಕೈಗೊಂಬೆ ರಾಜರನ್ನೂ ಬೆಂಬಲಿಸಿಬಿಡುತ್ತಾರೆ. ಇದು ದ್ವಂದ್ವ ನೀತಿ. ದ್ವಂದ್ವಕ್ಕಿಂತಲೂ ಹೆಚ್ಚಾಗಿ ಅವಕಾಶವಾದಿತನದಿಂದ ಇತಿಹಾಸವನ್ನು ಅಪಮಾನಿತಗೊಳಿಸುವ ನಡೆ. ಮೂರನೇ ಕೃಷ್ಣರಾಜ ಒಡೆಯರ್ ನಿಯತ್ತಿನಿಂದ ಎರಡು ಬಂದೂಕು, ಏಳು ನೂರು ಸೈನಿಕರು, 2000 ಕಾಲಾಳುಗಳನ್ನು ಚೆನ್ನಮ್ಮಳ ಹೋರಾಟವನ್ನು ಹತ್ತಿಕ್ಕಲು 1824ರಲ್ಲಿ ಕಿತ್ತೂರಿಗೆ ಕಳುಹಿಸಿದ್ದರ ಕುರಿತಾಗಿ ಇತಿಹಾಸಕಾರರು ಏನನ್ನುತ್ತಾರೆ? ಕಿತ್ತೂರಿನ ಕೋಟೆಯನ್ನು ಮೈಸೂರಿನ ಬಂದೂಕುಗಳು ಸೀಳಿಹಾಕಲಿಲ್ಲವೇ? ರಾಜನ ಕುದುರೆ ಸವಾರರು ರಾಣಿಯ ಕಾಲಾಳುಗಳ ಶಿರಚ್ಛೇದನ ನಡೆಸಲಿಲ್ಲವಾ? ರಾಜನ ರೈಫಲ್ಲುಗಳು ರಾಣಿಯ ಸೈನಿಕರ ಮಾಂಸ ಮಜ್ಜೆಯೊಳಗೆ ಉಕ್ಕಿನ ಗುಂಡುಗಳನ್ನು ತೂರಿಸಲಿಲ್ಲವಾ? ಈ ರಾಜ ಬ್ರಿಟೀಷರ ನಿಯತ್ತಿನ ಗುಲಾಮನಲ್ಲದೆ ಮತ್ತಿನ್ನೇನು?

ಮುಂದಿನ ಅಧ್ಯಾಯ: ಬ್ರಿಟೀಷರ ವಿದೂಷಕ

ಫೆಬ್ರ 3, 2016

ಬುದ್ಧಿ

ಪ್ರವೀಣಕುಮಾರ್ .ವೀ .ಗೋಣಿವಂಚಿಸಿತು ಬುದ್ಧಿ
ಇಚ್ಚೆಗಳ ಹೆಚ್ಚಿಸುತ
ಪರರೊಟ್ಟಿಗೆ ತನ್ನ ಹೋಲಿಸಿಕೊಳ್ಳುತ್ತ
ಇರುವ ಸೊಗಸ ಮರೆಸುತ್ತ .

ಅಂಡಲೆಯಿಸಿತಿ ಬುದ್ಧಿ
ಭೂತದ ಹತಾಷೆಯಾ ನೆನಿಸಿ
ಭವಿತವ್ಯದ ಭಯವ ಕಲ್ಪಿಸಿ ಸಾಗಿತೀ
ಬುದ್ಧಿ ಕೊಲ್ಲುತ್ತ ವರ್ತದ ಸಿರಿ ಶೃಂಗಾರವ .

ಬುದ್ಧಿಯಿದು ಬೀಗಿತು
ಬರೀ ಲೆಕ್ಕಾಚಾರದ ಅಹಮಿಕೆಯಿಂದ
ತಾನೇ ಮೇಲೆನ್ನುವ ಬಲೆಯಲಿ
ಸಿಕ್ಕಿ ನರಳುತಲೇ ಇಹುದು ಬಿಂಕದಿಂದ .

ಫೆಬ್ರ 2, 2016

ಜಾತಿ ಪದ್ಧತಿಯ ಬಗ್ಗೆ ಚರ್ಚಿಸಲು ದಲಿತೇತರಿಗೆ ಒಂಭತ್ತು ಸೂತ್ರಗಳು

ಯಾಶಿಕಾ ದತ್, ಹಫಿಂಗ್ಟನ್ ಪೋಸ್ಟ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಸಾಮಾಜಿಕ ಮಾಧ್ಯಮಗಳ ಉನ್ನತಿಯ ನಂತರ ಮೊಟ್ಟ ಮೊದಲ ಬಾರಿಗೆ ಜಾತಿ ಸಂಕಥನದ ಚರ್ಚೆಯಾಗುತ್ತಿದೆ. ಜಾತಿ, ತಾರತಮ್ಯ ಮತ್ತು ಅವಕಾಶಗಳು ಬಗ್ಗೆ ಫೇಸ್ ಬುಕ್, ಟ್ವಿಟರ್, ರೆಡಿಟ್, ಕ್ಯುರಾ ಮತ್ತು ಇನ್ಸ್ಟಾಗ್ರಾಮಿನಲ್ಲಿ ಕೂಡ ಚರ್ಚೆಗಳಾಗುತ್ತಿದೆ. ದುಃಖದ ಸಂಗತಿಯೆಂದರೆ ಇಂತಹ ಚರ್ಚೆಗಳು ನಡೆಯಲು ರೋಹಿತ್ ವೇಮುಲನೆಂಬ ಪ್ರತಿಭಾವಂತ ಯುವಕ ನೇಣಿಗೆ ಶರಣಾಗಬೇಕಾಯಿತು. ನೀವು ದಲಿತರಾಗದಿದ್ದಲ್ಲಿ ವಾದ ವಿವಾದಗಳಲ್ಲಿ ಮುಳುಗಿಹೋಗುವ ಮೊದಲು ಇದನ್ನೊಮ್ಮೆ ಓದಿಕೊಳ್ಳಿ.

1. ಪೂರ್ವಾಗ್ರಹಗಳ ಬಗ್ಗೆ ಎಚ್ಚರಿಕೆಯಿರಲಿ

ನೀವು ಯಾವತ್ತೂ ಜಾತಿಯಾಧಾರಿತ ತಾರತಮ್ಯವನ್ನು ನೇರವಾಗಿ ಎದುರಿಸದೆ ಇದ್ದರೆ, ಜಾತಿ ತಾರತಮ್ಯವೇ ಇಲ್ಲ ಎಂದಂದುಕೊಳ್ಳುವುದು ಸಹಜ. ಯಾಕೆಂದರೆ ಅದು ನಿಮಗೆ ಅನುಭವಕ್ಕೇ ಬಂದಿಲ್ಲ. ಆದರೆ ಲಕ್ಷಾಂತರ ದಲಿತರಿಗೆ ಅದು ದಿನನಿತ್ಯದ ವಾಸ್ತವ. ಹಾಗಾಗಿ, “ಜಾತಿಯೆಂಬುದು ಪುರಾತನ ದಿನಗಳ ಕತೆ”ಯೆಂದೋ ಅಥವಾ “ಅದೀಗ ದೊಡ್ಡ ವಿಷಯವೇನಲ್ಲ” ಎಂದೋ ಹೇಳುವ ಮುಂಚೆ ಅವರ ಮಾತುಗಳನ್ನು ಕೇಳಿ, ತಾರತಮ್ಯದ ಕತೆಗಳನ್ನು ಕೇಳಿ.

2. ಇತಿಹಾಸವನ್ನರಿಯಿರಿ

ಚರ್ಚೆಯಾಗುತ್ತಿರುವ ಜಾತಿ ಆಧಾರಿತ ಶೋಷಣೆಯ ಸ್ವರೂಪಗಳನ್ನು ಸರಿಯಾಗಿ ತಿಳಿದುಕೊಳ್ಳಿ, ನಮ್ಮ ಪಠ್ಯಪುಸ್ತಕಗಳು ಅವುಗಳ ಕುರಿತು ಸರಿಯಾಗಿ ತಿಳಿಸಿಕೊಡುವುದಿಲ್ಲ. ಮೀಸಲಾತಿ ವ್ಯವಸ್ಥೆ ಜಾರಿಗೆ ಬಂದಿದ್ದೇಕೆ ಎನ್ನುವುದನ್ನು ಮೊದಲು ಅರಿತುಕೊಳ್ಳಿ. ಕೆಲವು ನಿರ್ದಿಷ್ಟ ಜಾತಿಗಳ ಹೆಸರನ್ನು ಕಳಂಕದಂತೆ ಉಪಯೋಗಿಸುವುದ್ಯಾಕೆ ಎನ್ನುವ ಪ್ರಶ್ನೆ ಕೇಳಿಕೊಳ್ಳಿ; ಆ ಜಾತಿಯ ಜನರ ಮೇಲೆ ಉಂಟಾಗುವ ಮಾನಸಿಕ ಪರಿಣಾಮಗಳ ಬಗ್ಗೆ ಯೋಚಿಸಿ. ಡಾ. ಬಿ. ಆರ್. ಅಂಬೇಡ್ಕರರ Annihilation of caste ಅಥವಾ ಇತ್ತೀಚೆನ Hatred in the belly ಓದುವುದುತ್ತಮ. Dalitdiscrimination.tumblr.com ಕೂಡ ಚೆನ್ನಾಗಿದೆ.

3. ನಿಮಗೆ ಸಿಕ್ಕಿರುವ ಸವಲತ್ತುಗಳನ್ನು ಅರಿತುಕೊಳ್ಳಿ

ಜಾತಿ ವ್ಯವಸ್ಥೆ ಪ್ರತ್ಯೇಕವಾಗಿ ಅಸ್ತಿತ್ವದಲ್ಲಿಲ್ಲ. ಒಬ್ಬನ್ಯಾರೋ ಶೋಷಣೆಗೊಳಪಟ್ಟಿದ್ದರೆ ಅದರಿಂದ ಇನ್ನೊಬ್ಬನಿಗ್ಯಾರಿಗೋ ನ್ಯಾಯಬದ್ಧವಲ್ಲದ ಅನುಕೂಲಗಳಾಗಿರಬೇಕು. ನೀವು ದಲಿತರಾಗಿಲ್ಲದೆ ಇದ್ದರೆ ಆ ‘ಇನ್ನೊಬ್ಬ’ ನೀವೇ ಇರುವ ಸಾಧ್ಯತೆ ಅಧಿಕ. ನಿಮ್ಮ ಪೂರ್ವಜರಿಗೆ ಶಿಕ್ಷಣ ಮತ್ತು ಸಂಪತ್ತು ಸುಲಭಕ್ಕೆ ಸಿಗುವ ಸಮಯದಲ್ಲೇ ದಲಿತರನ್ನು ಆ ಎಲ್ಲಾ ಸವಲತ್ತುಗಳಿಂದ ವಂಚಿತರನ್ನಾಗಿ ಮಾಡಲಾಯಿತು, ಆ ಸವಲತ್ತುಗಳನ್ನು ನೀವು ಇನ್ನೂ ಅನುಭವಿಸುತ್ತಿದ್ದೀರಿ. ನೀವು ಮಾಡಿದ ಅಥವಾ ಮಾಡದ ಕಾರ್ಯವೊಂದರಿಂದ ಅದು ಮರೆಯಾಗಿ ಹೋಗುವುದಿಲ್ಲ. ನೀವು ಆ ವಂಶಪಾರಂಪರ್ಯದ ಸವಲತ್ತಿನೊಂದಿಗೆ ಹುಟ್ಟಿದ್ದರೆ ದಲಿತರು ವಂಶಪಾರಂಪರ್ಯದ ಶೋಷಣೆಯೊಂದಿಗೆ ಹುಟ್ಟಿದ್ದಾರೆ. ಮತ್ತು ನೀವದರ ಅಸ್ತಿತ್ವವನ್ನು ಬದಲಿಸಲು ಸಾಧ್ಯವಿಲ್ಲವಾದರೂ ಅದನ್ನು ಒಪ್ಪುವ ಮನಸ್ಸಾದರೂ ಮಾಡಬಹುದು.

4. ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ

ನಿಮ್ಮನ್ಯಾರೂ ವೈಯಕ್ತಿಕವಾಗಿ ದೂಷಿಸುತ್ತಿಲ್ಲ. ನೀವು ಜಾತಿವಾದಿ ಮನಸ್ಥಿತಿಯೊಂದಿಗೆ ಗುರುತಿಸಿಕೊಳ್ಳದಿದ್ದರೆ, ಪೂರ್ವಾಗ್ರಹಪೀಡಿತರಾಗಿಲ್ಲದೇ ಹೋದರೆ ಮತ್ತು ಜಾತಿ ವ್ಯವಸ್ಥೆಯ ಸಂಕೀರ್ಣತೆಯ ಬಗ್ಗೆ ನಿಮಗೆ ಸಂಪೂರ್ಣ ಅರಿವಿದ್ದರೆ ನೀವು ನಿಯಮಗಳಿಗೆ ಅಪವಾದ. ಎಲ್ಲಾ ಮೇಲ್ಜಾತಿಯವರು ತಾರತಮ್ಯ ಮಾಡುವುದಿಲ್ಲ ಎನ್ನುವುದು ನಿಮ್ಮ ವಾದವಾಗಿದ್ದರೆ ‘ದಲಿತರ ವಿರುದ್ಧದ ತಾರತಮ್ಯ’ವೆನ್ನುವ ವಾಸ್ತವ ಸಂಗತಿಗೆ ಬೆನ್ನು ತೋರಿಸಿದಂತೆ. ಒಂದು ಕಾರು ಒಬ್ಬನಿಗೆ ಗುದ್ದಿದ ಸಂದರ್ಭದಲ್ಲಿ ನೀವು ಎಲ್ಲಾ ಡ್ರೈವರುಗಳು ಕೊಲೆಗೈಯುವುದಿಲ್ಲ ಎಂದು ಹೇಳುತ್ತಾ ನಿಂತರೆ ಆ ವ್ಯಕ್ತಿಯನ್ನು ಸಾಯಲು ಬಿಡುತ್ತ ನಿಮ್ಮನ್ನು ನೀವೇ ‘ಬಲಿಪಶು’ವಾಗಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ ಎಂದರ್ಥ.

5. ದನಿಯ ಶೈಲಿಯಿಂದ ಅಳೆಯಬೇಡಿ

ಕಾಲದಿಂದಲೂ ಅವಮಾನದ ಸುತ್ತ ಕಟ್ಟಲಾಗಿದ್ದ ದಲಿತರೆಂಬ ಗುರುತು ನಿಧಾನಕ್ಕೆ ಹೆಮ್ಮೆಯೆನ್ನಿಸಿಕೊಳ್ಳಲಾರಂಭಿಸಿದೆ. ಈ ಹೆಮ್ಮೆಯ ಪತನಗೊಳಿಸುವಂತಹ ಕೆಲಸವಾಗಬಾರದು. ನಮ್ಮ ದಲಿತ ಹೆಮ್ಮೆ ನಿಮ್ಮನ್ನು ಹೆದರಿಸಲಲ್ಲ, ಬದಲಿಗೆ ನಾವಾ ಹೆಮ್ಮೆಯನ್ನು ಮತ್ತೆ ಮತ್ತೆ ಅನುಭವಿಸಲು. ಪುನಃ, ಇದು ನಿಮ್ಮ ಬಗ್ಗೆ ಅಲ್ಲ.

6. ನಿಮಗೂ ಒಂದು ಜಾತಿಯಿದೆ ಎನ್ನುವುದನ್ನು ಒಪ್ಪಿಕೊಳ್ಳಿ

ಜಾತಿ ಕಾಣಿಸುತ್ತಿಲ್ಲವೆನ್ನುವುದು ನಿಮ್ಮ ಜೀವನ ಪರ್ಯಂತ ನಡೆದು ಬಂದ ಹೂವಿನ ಹಾಸಿಗೆಯನ್ನು ಇಲ್ಲವೆಂದಂತೆ; ಕೆಲವರನ್ನು ಬರಿಗಾಲಿನಲ್ಲಿ ನಡೆಯುವಂತೆ ಬಲವಂತ ಮಾಡಲಾಗಿತ್ತು. ನಿಮಗಾಗಲೀ, ನಿಮ್ಮ ಪೂರ್ವಜರಿಗಾಗಲೀ ಓದುವುದನ್ನು ನಿಷೇಧಿಸಲಾಗಿರಲಿಲ್ಲ, ನಿಮ್ಮ ಹೆಸರಿನ ಕಾರಣದಿಂದ ವಿಶ್ವವಿದ್ಯಾನಿಲಯಗಳಿಂದ ಹೊರಹಾಕಲಾಗಿರಲಿಲ್ಲ ಅಥವಾ ಸುಮ್ಮನೆ ನಿಮ್ಮ ಅಸ್ತಿತ್ವವನ್ನೇ ಅವಮಾನದ ವಿಷಯದಂತೆ ಮಾಡಿರಲಿಲ್ಲ. ಲಕ್ಷಾಂತರ ದಲಿತರಿಗೆ ಹೀಗೆ ಮಾಡಲಾಗಿತ್ತು, ಈಗಲೂ ಮಾಡಲಾಗುತ್ತಿದೆ. ಜಾತಿಯಿಲ್ಲವೆನ್ನುವುದನ್ನು ನೀವು ಸುಲಭವಾಗಿ ಹೇಳುವ ಸಮಯದಲ್ಲೇ, ಹಲವರಿಗೆ ಆ ಗುರುತಿನ ಕಾರಣದಿಂದ ಕಿರುಕುಳ ನೀಡಲಾಗುತ್ತಿದೆ, ಆ ಗುರುತನ್ನು ಕಳಚಿಕೊಳ್ಳುವ ಆಯ್ಕೆಯೂ ಅವರ ಬಳಿ ಇಲ್ಲ. ನಿಮ್ಮಂತಲ್ಲದೆ, ಪೂರ್ವಾಗ್ರಹಗಳು ಅವರನ್ನು ಬೇಟೆಯಾಡುತ್ತಿವೆ ಮತ್ತು ಅವರನ್ನು ಶರಣಾಗಲು ಬಲವಂತಪಡಿಸುತ್ತಿವೆ. ನಿಮ್ಮ ಜಾತಿ ಅಸ್ತಿತ್ವದಲ್ಲಿದೆ, ನಮ್ಮದ್ದಿದ್ದಂತೆ. ಅದನ್ನು ಅಂಗೀಕರಿಸದಿದ್ದರೆ ಅದು ಮರೆಯಾಗಿಬಿಡುವುದಿಲ್ಲ.

7. ನೀವು ಕಾರುಣ್ಯದಿಂದಿಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಿ

ನಿಮಗೆ ಸಿಕ್ಕ ಅನುಕೂಲಗಳನ್ನು ಅರಿತುಕೊಂಡು ಮತ್ತು ದಲಿತರ ಮೇಲೆ ನಡೆಯುವ ಶೋಷಣೆಯನ್ನು ಅರ್ಥಮಾಡಿಕೊಂಡಾಕ್ಷಣ ನೀವು ಯಾವುದೇ ಅನುಗ್ರಹ ಮಾಡಿದಂತಲ್ಲ, ಕೊನೇ ಪಕ್ಷ ಜಾತಿಯ ಸಂಕಥನದಲ್ಲಿ ಎನ್ನುವುದನ್ನು ಅರಿತುಕೊಳ್ಳಲು ಪ್ರಯತ್ನಿಸಿ. ಜವಾಬ್ದಾರಿಯುತ ನಾಗರೀಕನಾಗಿ, ರಾಷ್ಟ್ರದ ಪ್ರಜೆಯಾಗಿ ನಮ್ಮ ಇತಿಹಾಸವನ್ನು ಕಲಿತು ಅರ್ಥೈಸಿಕೊಳ್ಳುವುದು ನಿಮ್ಮ ಕರ್ತವ್ಯ. ನಮ್ಮನುಕೂಲಕ್ಕಾಗಿ ಸಂಕೀರ್ಣ ಚರ್ಚೆಯನ್ನು ಅರ್ಥಮಾಡಿಕೊಂಡು ‘ಒಳ್ಳೆಯವ’ನಾಗಿದ್ದೀನಿ ಎಂದು ನೀವು ಯೋಚಿಸುವುದು ಸಹ ಜಾತಿವಾದವೇ. ಯಾಕೆಂದರೆ ನಮಗೆ ನಿಮ್ಮ ಕರುಣೆಗಿಂತ ಸಮಾನರಾಗಿ ಇರುವುದಕ್ಕೆ ನಾವು ಹೆಚ್ಚು ಅರ್ಹರು.

ಗಮನಿಸಿ: ನೀವು ಅಸಮಾನ ಜಾಗದಲ್ಲಿ ನಿಂತು ‘ಕರುಣೆ’ಯಿಂದ ನಮ್ಮನ್ನು ನೋಡಲು ಕೆಳಗಿಣುಕುವುದು ಕೂಡ ನಿಮಗೆ ದಕ್ಕಿರುವ ಒಂದು ಸೌಲತ್ತಿಗೆ ಉದಾಹರಣೆ.

8. ನಿಮ್ಮನ್ನು ‘ರಾಕ್ಷಸರನ್ನಾಗಿಸುತ್ತಿಲ್ಲ’ ಎನ್ನುವುದನ್ನು ತಿಳಿದುಕೊಳ್ಳಿ

ಚರ್ಚೆಯ ವೇಳೆ ಮೇಲ್ಜಾತಿಗೆ ಸಿಕ್ಕಿರುವ ಸೌಲತ್ತಿನ ಬಗ್ಗೆ ಗಮನ ಸೆಳೆದಾಗ, “ನನ್ನ ಜನನವನ್ನು ನಾನು ದೂರುವುದಿಲ್ಲ” ಎಂದು ಹೇಳಬೇಡಿ. ಇದು ನಿಮ್ಮ ಜನನವನ್ನು ದೂರುವುದರ ಬಗೆಗಲ್ಲ. ನೀವು ಎಷ್ಟು “ಅದೃಷ್ಟ”ವಂತರಾಗಿದ್ದೀರಿ ಎನ್ನುವುದನ್ನು ಮತ್ತು ನಾವು ಆ “ಅದೃಷ್ಟ”ದಿಂದ ವಂಚಿತರಾಗಿದ್ದನ್ನು ನಿಮಗೆ ನೆನಪಿಸುವುದಷ್ಟೇ ಇದರ ಉದ್ದೇಶ. ಪ್ರಸ್ತುತ ಚರ್ಚೆಗಳೆಲ್ಲವೂ ತಾರತಮ್ಯದ ಸವಲತ್ತಿನ ಮನಸ್ಥಿತಿಯ ವಿರುದ್ಧವೇ ಹೊರತು ವ್ಯಕ್ತಿಯ ವಿರುದ್ಧವಲ್ಲ.

9. ಇಷ್ಟೇಕೆ ಕೋಪಗೊಂಡಿದ್ದೇನೆ? ಎಂದು ನೀವೇ ಕೇಳಿಕೊಳ್ಳಿ

ಒಂದು ವೈಚಾರಿಕ ಅಭಿಪ್ರಾಯದ ಬಗ್ಗೆ ನಿಮಗೆ ಪದೇ ಪದೇ ಕೋಪವುಕ್ಕಿದರೆ, ಹಿಂಗ್ಯಾಕೆ? ಎಂದು ಕೇಳಿಕೊಳ್ಳುವ ಸಮಯವಿದು. ನಿಮಗಿಂತ ಕೆಳಮಟ್ಟದಲ್ಲಿರುವವರು ಎಂದು ನೀವು ಯಾರ ಬಗ್ಗೆ ಅಂದುಕೊಂಡಿದ್ದೀರೋ ಅವರಿವತ್ತು ನಿಮಗೆ ಸಮಾನವಾಗಿ ಮಾತನಾಡುತ್ತಿದ್ದಾರೆಂಬ ಕಾರಣಕ್ಕೆ ನಿಮಗೆ ಈ ಕೋಪವಾ? ತಾರತಮ್ಯದ ದೃಷ್ಟಿ ಇರುವುದೇ ಹೀಗೆ.

ಇರಲಿ, ಒಂದು ಆರೋಗ್ಯಪೂರ್ಣ ಚರ್ಚೆಗಾಗಿ ನೀವಿರದಿದ್ದರೆ ಮೇಲೆ ಹೇಳಿದ ಯಾವುದೂ ನಿಮಗನ್ವಯಿಸುವುದಿಲ್ಲ. ಜೊತೆಗೆ ಆಗ ನಿಮ್ಮ ಮಾತು ಕೇಳುವವರಾರೂ ಇರುವುದಿಲ್ಲ.

ರೋಹಿತ್ ವೇಮುಲನನ್ನು ಸಾಯಿಸಿದ್ಯಾರು?

ಬ್ರಾಹ್ಮಣ್ಯದ ಆಳ್ವಿಕೆಯನ್ನು ಮತ್ತೆ ಮುನ್ನೆಲೆಗೆ ತರಲು ನಡೆಯುತ್ತಿರುವ ಪ್ರಯತ್ನಗಳನ್ನು ನೋಡಿಕೊಂಡು ಮೌನ ಪ್ರೇಕ್ಷಕರಾಗುಳಿದವರೆಲ್ಲರೂ ರೋಹಿತನ ಸಾವಿಗೆ ಕಾರಣ.
ಆನಂದ್ ತೇಲ್ತುಂಬೆ
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್.

ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾನಿಲಯದ 26 ವರ್ಷದ ದಲಿತ ಪಿ.ಎಚ್.ಡಿ ಸ್ಕಾಲರ್ ರೋಹಿತ್ ವೇಮುಲ, ತನ್ನ ಕೊನೆಯ ಪತ್ರದಲ್ಲಿ ಯಾರನ್ನೂ ದೂಷಿಸಿಲ್ಲ, ಗೆಳೆಯರನ್ನು ಅಥವಾ ಶತ್ರುಗಳನ್ನು; ಅವನ ಕೊಲೆಮಾಡಿದವರಿಗೆ ಮುಗ್ಧತೆಯನ್ನು ಸಾಬೀತುಪಡಿಸಲು ಈ ಪತ್ರ ಆಹಾರವಾಯಿತು. ಕಾರ್ಲ್ ಸೆಗಾನನಂತೆ ವಿಶ್ವವನ್ನು ಅನ್ವೇಷಿಸಬೇಕೆಂದು ತನ್ನ ಕಲ್ಪನೆಗಳನ್ನು ತೇಲಿಬಿಡುವ ಪತ್ರ ಬರೆದ ಆಕಾಂಕ್ಷಿಯೊಬ್ಬ, ತನ್ನೊಳಗಿನ ಹುಡುಕಾಟದಲ್ಲಿ, ಛೇದಗೊಂಡ ದಲಿತಾತ್ಮದಲ್ಲಿ, ಜಾತಿ ವ್ಯವಸ್ಥೆಯ ನಾಡಿನಲ್ಲಿ, ಶೋಷಕರ ಶೋಷಣೆಯಿಂದ ನಿರರ್ಥಕತೆಯ ಅಸ್ತಿತ್ವವನ್ನು ಕೊನೆಗಾಣಿಸಿಕೊಂಡುಬಿಡುತ್ತಾನೆ. ಅವನ ಸಾವು ಒಂದಂಶವಂವನ್ನು ಸ್ಪಷ್ಟಪಡಿಸುತ್ತದೆ, ಆತ್ಮಹತ್ಯೆಯೆಂದರೆ ತಮ್ಮನ್ನು ತಾವೇ ಕೊಂದುಕೊಳ್ಳುವುದಲ್ಲ; ಪರಿಸ್ಥಿತಿ ಸೃಷ್ಟಿಸಿದ ಸಾವದು, ಸಂಸ್ಕೃತಿ, ಪದ್ಧತಿ ಮತ್ತು ಸಂಸ್ಥೆಗಳು ಕೊಲೆಗಾರರಿಗೆ ರಕ್ಷಣೆ ನೀಡುವ ಪರಿಸ್ಥಿತಿ.

ಹಾಸ್ಟೆಲ್ಲಿನಿಂದ ಹೊರಹಾಕಿದ ನಂತರ ರೋಹಿತ್ ವಿಶ್ವವಿದ್ಯಾನಿಲಯದ ತೆರೆದ ಜಾಗದಲ್ಲಿ ಹೂಡಿದ ತಾತ್ಕಾಲಿಕ ಟೆಂಟಿನಲ್ಲಿ ತನ್ನ ನಾಲ್ಕು ಸಹವರ್ತಿ ಕಾಮ್ರೇಡುಗಳ ಜೊತೆಗೆ ಹನ್ನೆರಡು ದಿನಗಳ ಕಾಲ ಇದ್ದಿದ್ದು ಆತ್ಮಾಭಿಮಾನಕ್ಕಾಗಿ ನಡೆದ ಹೋರಾಟ. ಡಿಸೆಂಬರ್ ಹದಿನೆಂಟರಂದು ವಿಶ್ವವಿದ್ಯಾನಿಲಯದ ಉಪಕುಲಪತಿಗಳಿಗೆ ಬರೆದ ಕುಟುಕುವ ಪತ್ರ, ಇಪ್ಪತ್ತೇಳನೇ ಹುಟ್ಟುಹಬ್ಬಕ್ಕೆ ತನ್ನ ಸ್ನೇಹಿತರಿಗೊಂದು ಪಾರ್ಟಿ ಕೊಡಲು ದುಡ್ಡಿಲ್ಲದ್ದಕ್ಕೆ ಗೆಳೆಯರೊಟ್ಟಿಗೆ ವ್ಯಕ್ತಪಡಿಸಿದ ಬೇಸರ, ತನ್ನ ತಾಯಿಗೆ ಮಾಡಿದ ಕೊನೆಯ ಕರೆಯನ್ನು ಮಧ್ಯದಲ್ಲೇ ತುಂಡರಿಸಿದ್ದು, ಇದಿಷ್ಟು ಸಾಕಲ್ಲವೇ ಹತ್ಯಾ ಪರಿಸ್ಥಿತಿ ಮತ್ತು ಸಂಭಾವ್ಯ ಕೊಲೆಗಾರರ ಮೇಲಿರುವ ಪರದೆಯನ್ನು ಹರಿದು ಹಾಕಲು?

ಕೇಸಿನ ವಿವರಗಳೆಲ್ಲವೂ ಸಾರ್ವಜನಿಕರಿಗೀಗ ಲಭ್ಯವಿದೆ. ಎಬಿವಿಪಿಯ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಅಧ್ಯಕ್ಷ ನಂದನಂ ಸುಶೀಲ್ ಕುಮಾರ್ ಮೇಲೆ ನಡೆಯಿತೆನ್ನಲಾದ ಹಲ್ಲೆಯಿಂದ ರೋಹಿತನನ್ನೂ ಸೇರಿಸಿ ಐವರಿಗೆ ಶಿಕ್ಷೆ ವಿಧಿಸಿದರಲ್ಲ; ಆ ಹಲ್ಲೆ ನಡೆಯಿತೆನ್ನುವುದೇ ಇನ್ನೂ ಸಾಬೀತಾಗಿಲ್ಲ. ಬದಲಿಗೆ ಎಲ್ಲಾ ತನಿಖೆಗಳು, ವೈದ್ಯರ ಹೇಳಿಕೆ ಮತ್ತು ಸಾಕ್ಷಿಗಳು ಅದು ನಡೆದಿಲ್ಲ ಎಂದೇ ಧೃಡಪಡಿಸುತ್ತಾರೆ. ಆಗಿದ್ದರೂ ದಲಿತ ವಿದ್ಯಾರ್ಥಿಗಳನ್ನು ಶಿಕ್ಷಿಸುತ್ತಾರೆ. ವಿಶ್ವವಿದ್ಯಾನಿಲಯದ ಆಡಳಿತ ಉಲ್ಟಂಪಲ್ಟ ನಿರ್ಣಯಗಳನ್ನು ತೆಗೆದುಕೊಂಡದ್ದು ಜಾತಿ ತಾರತಮ್ಯ ಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದುದರ ಬಗ್ಗೆ ಸೂಚಿಸುವುದರ ಜೊತೆಗೆ ಹೊರಗಿನ ಶಕ್ತಿಗಳ ಪ್ರಭಾವ ಮತ್ತು ಅಸಮಂಜಸ ಆಡಳಿತ ರೀತಿಯನ್ನು ತೋರಿಸುತ್ತದೆ.

ಇಡೀ ಘಟನೆಗೊಂದು ಪ್ರಮುಖ ತಿರುವಾಗಿದ್ದು ನರೇಂದ್ರ ಮೋದಿ ಸರಕಾರದ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಮಾನವ ಸಂಪನ್ಮೂಲ ಇಲಾಖೆಯ ಸ್ಮ್ರತಿ ಇರಾನಿಗೆ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯ “ಜಾತಿವಾದಿಗಳ, ತೀವ್ರಗಾಮಿಗಳ ಮತ್ತು ದೇಶದ್ರೋಹಿ ರಾಜಕಾರಣದ ಗೂಡಾಗಿದೆ” ಎಂದು ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು. ಇದಕ್ಕೆ ಪೂರಕವೆಂಬಂತೆ ಅಂಬೇಡ್ಕರ್ ವಿದ್ಯಾರ್ಥಿ ಸಂಘದವರು ಯಾಕೂಬ್ ಮೆಮನನಿಗೆ ವಿಧಿಸಿದ ನೇಣನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯನ್ನು ಉಲ್ಲೇಖಿಸಿದ್ದರು. ವಿವಾದಾತ್ಮಕ ಹೆಚ್.ಆರ್.ಡಿ ಸಚಿವೆ, ಬಹುಶಃ ಹೆಚ್.ಆರ್.ಡಿಯನ್ನು Hindutva resource development ಎಂದು ಭಾವಿಸಿಕೊಂಡಿರುವ ಸಚಿವೆ ಇಲಾಖೆಯಿಂದ ಉಪಕುಲಪತಿಗಳಿಗೆ ಪತ್ರ ಬರೆಯಲಾಗುತ್ತದೆ, ಒಂದು ಅನಾಮಧೇಯ ದೂರಿನ ಕಾರಣದಿಂದ ಐಐಟಿ ಮದ್ರಾಸಿನಲ್ಲಿ ಅಂಬೇಡ್ಕರ್ ಪೆರಿಯಾರ್ ಸ್ಟಡಿ ಸರ್ಕಲ್ಲನ್ನು ನಿಷೇಧಿಸಲು ಬರೆದಂತೆ, ದೇಶವ್ಯಾಪಿ ಪ್ರತಿಭಟನೆಗದು ಕಾರಣವಾಗಿತ್ತು. ಮೊದಲ ಪತ್ರದ ಬೆನ್ನ ಹಿಂದೆಯೇ ವಿವಿಧ ಮಟ್ಟದ ಸೆಕ್ರೆಟರಿಗಳು ಒಂದರ ಹಿಂದೊಂದರಂತೆ ನಾಲ್ಕು ಪತ್ರಗಳನ್ನು ಬರೆದದ್ದು ಆ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹಾಕಲಾದ ಒತ್ತಡ ಎಷ್ಟಿತ್ತೆಂಬುದನ್ನು ತಿಳಿಸುತ್ತದೆ. ಮಂತ್ರಿಗಳಿಂದ ಜಾತಿವಾದಿ ಆಡಳಿತಕ್ಕೆ ಸಿಕ್ಕ ಈ ಭಾರೀ ಬೆಂಬಲದಿಂದಲೇ ವಿದ್ಯಾರ್ಥಿಗಳಿಗೆ ಆ ಶಿಕ್ಷೆಯಾಯಿತು, ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಇದು ಗಲ್ಲು ಶಿಕ್ಷೆಗಿಂತಲೂ ಕಡಿಮೆಯೇನಲ್ಲ. ಹಾಸ್ಟೆಲ್ಲು, ಆಡಳಿತ ಕಟ್ಟಡಗಳು, ಸಾರ್ವಜನಿಕ ಸ್ಥಳಕ್ಕೆ ಹೋಗದೆ, ಸಹಪಾಟಿ ವಿದ್ಯಾರ್ಥಿಗಳ ಜೊತೆಗೆ ಮಾತನಾಡದೆ ಸಂಶೋಧನಾ ವಿದ್ಯಾರ್ಥಿಗಳು ಈ ಭೂಮಿಯ ಮೇಲೆ ಅಸ್ತಿತ್ವದಲ್ಲಿರುವುದಾದರೂ ಹೇಗೆ? ಸಂಶೋಧನೆಗೆ ಸಾವಲ್ಲವೇ ಇದು?

ಹಾಸ್ಟೆಲ್ಲಿನಿಂದ ಹೊರಹಾಕಿದ ಮೇಲೆ, ವಿದ್ಯಾರ್ಥಿಗಳು ಹೈದರಾಬಾದಿನ ಥಂಡಿಯಲ್ಲಿ ತೆರೆದ ಜಾಗದಲ್ಲಿ ಇದ್ದರು, ಆಗಲೂ ಉಪಕುಲಪತಿಗಳಿಗೆ ತಮ್ಮ ತಪ್ಪು ನಿರ್ಧಾರವನ್ನು ಗ್ರಹಿಸಲಾಗಲಿಲ್ಲ. ಡಿಸೆಂಬರ್ ಹದಿನೆಂಟರು ಉಪಕುಲಪತಿಗಳಿಗೆ ಬರೆದ ಪತ್ರದಲ್ಲಿ ರೋಹಿತ್ ದಲಿತ ವಿದ್ಯಾರ್ಥಿಗಳು ಮತ್ತು ಎಬಿವಿಪಿ ನಡುವಿನ ಗಲಾಟೆಯನ್ನು ತೀರ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದೀರಿ ಎಂದು ಆರೋಪಿಸಿದ್ದರು. ವಿಶ್ವವಿದ್ಯಾನಿಲಯದಲ್ಲಿ ದಲಿತ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ವ್ಯಂಗ್ಯವಾಗಿ ಬರೆಯುತ್ತಾ ಎಲ್ಲಾ ದಲಿತ ವಿದ್ಯಾರ್ಥಿಗಳಿಗೂ ಪ್ರವೇಶಾತಿಯ ಸಮಯದಲ್ಲೇ ಒಂದಷ್ಟು ವಿಷ ಮತ್ತೊಂದು ಹಗ್ಗ ಕೊಟ್ಟುಬಿಡಬೇಕು ಎಂದು ಕೇಳಿಕೊಳ್ಳುತ್ತಾನೆ ಮತ್ತು ತನ್ನಂಥಹ ವಿದ್ಯಾರ್ಥಿಗಳಿಗೆ ದಯಾಮರಣದ ಸೌಕರ್ಯವನ್ನು ಒದಗಿಸಬೇಕು ಎಂದು ಬರೆಯುತ್ತಾನೆ. ಒಬ್ಬ ಜವಾಬುದಾರಿಯುತ ವ್ಯಕ್ತಿಗೆ ವಿದ್ಯಾರ್ಥಿಯ ಮನಸ್ಥಿತಿಯನ್ನರಿಯಲು ಇದೊಂದು ಪತ್ರವೇ ಸಾಕಿತ್ತು. ಗುಂಟೂರಿನ ಮನೆಯಲ್ಲಿರುವ ಅಮ್ಮ ಮತ್ತು ತಮ್ಮನನ್ನು ನೋಡಿಕೊಳ್ಳಲು ಕಳುಹಿಸುತ್ತಿದ್ದ ಸ್ಟೈಪಂಡ್ ಹಣ ಕಳೆದಾರು ತಿಂಗಳಿಂದ ನಿಂತು ಹೋಗಿತ್ತು.

ಕುತೂಹಲವೆಂದರೆ, ಒಂದೆಡೆ ಸರಕಾರ ಬಾಬಾಸಾಹೇಬ್ ಅಂಬೇಡ್ಕರರ 125ನೇ ಜನ್ಮೋತ್ಸವವನ್ನು ಅತ್ಯದ್ಭುತವಾಗಿ ಆಚರಿಸಿ ದಲಿತ ಮತಗಳನ್ನು ಸೆಳೆಯಲು ಕಾಂಗ್ರೆಸ್ಸಿಗೆ ಪೈಪೋಟಿ ಕೊಡುತ್ತದೆ. ಮತ್ತೊಂದೆಡೆ, ಅಂಬೇಡ್ಕರ್ ಬೆಂಬಲಿಸಿದ ದಲಿತ ಪ್ರತಿಭಟನೆಯ ದನಿಗಳನ್ನು ಹತ್ತಿಕ್ಕಲು ಆಶಿಸುತ್ತದೆ. ಪ್ರಾಥಮಿಕ ಶಿಕ್ಷಣಕ್ಕಿಂತ ಉನ್ನತ ಶಿಕ್ಷಣಕ್ಕೆ ಅಂಬೇಡ್ಕರ್ ಹೆಚ್ಚು ಮಹತ್ವ ಕೊಟ್ಟಿದ್ದರು, ಕಾರಣ ಉನ್ನತ ಶಿಕ್ಷಣವಷ್ಟೇ ಜನರಲ್ಲಿ ಸರಿಯಾದ ಯೋಚನೆಯನ್ನು ರೂಪಸುತ್ತದೆ ಮತ್ತು ಜಾತಿ ತಾರತಮ್ಯದ ಶಕ್ತಿಗಳ ಎದುರು ಎದ್ದು ನಿಲ್ಲುವ ನೈತಿಕತೆಯನ್ನು ಕೊಡುತ್ತದೆ ಎಂದವರು ಕಂಡುಕೊಂಡಿದ್ದರು. ಅಂಬೇಡ್ಕರರನ್ನು ಹಾಡಿ ಹೊಗಳುವ ಸರಕಾರ ಅಂಬೇಡ್ಕರರ ಜ್ಞಾನದೀವಿಗೆಯನ್ನು ಮುನ್ನಡೆಸಲು ಶಕ್ತರಾಗಿರುವವರನ್ನು ಎಲ್ಲಾ ವಿಧದಿಂದಲೂ ಹತ್ತಿಕ್ಕುತ್ತಿದೆ.

ಪ್ರಪಂಚದಾದ್ಯಂತ ಪ್ರತಿಭಟಿಸುವ ಮುಸ್ಲಿಂ ಯುವಕರನ್ನು ಸುಲಭವಾಗಿ ಉಗ್ರಗಾಮಿ ಎಂದು ಹೇಗೆ ಕರೆದುಬಿಡಲಾಗುವುದೋ, ದಲಿತ – ಆದಿವಾಸಿ ಯುವಕರನ್ನು ತೀವ್ರಗಾಮಿ, ಜಾತಿವಾದಿ ಮತ್ತು ದೇಶದ್ರೋಹಿಗಳೆಂದು ಬಿಂಬಿಸಿಬಿಡಲಾಗುತ್ತಿದೆ. ಭಾರತದ ಜೈಲುಗಳಲ್ಲಿ ಇಂತಹ ಮುಗ್ಧ ಯುವಕರನ್ನು ದೇಶದ್ರೋಹದ ನೆಪದಲ್ಲಿ, ಕಾನೂನುಭಂಗ ಚಟುವಟಿಕೆಯ ನೆಪದಲ್ಲಿ ತುಂಬಿಸಲಾಗಿದೆ. ಬಿಜೆಪಿ ಸಂಸ್ಥೆಗಳನ್ನು ಅದರಲ್ಲೂ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕೇಸರೀಕರಣಗೊಳಿಸಲು ತೋರಿಸುತ್ತಿರುವ ಆಕ್ರಮಣಕಾರಿ ಪ್ರವೃತ್ತಿ, ಮತ್ತಷ್ಟು ರೋಹಿತರನ್ನು ಮುಂಬರುವ ವರುಷಗಳಲ್ಲಿ ಸೃಷ್ಟಿಸಿಬಿಡಬಹುದು.

ಭಾರತದ ಬಹುತ್ವವನ್ನು ನಾಶಪಡಿಸಿ, ಬ್ರಾಹ್ಮಣ್ಯದ ಆಳ್ವಿಕೆಯನ್ನು ಮತ್ತೆ ಮುನ್ನೆಲೆಗೆ ತರಲು ನಡೆಯುತ್ತಿರುವ ಪ್ರಯತ್ನಗಳನ್ನು ನೋಡಿಕೊಂಡು ಮೌನ ಪ್ರೇಕ್ಷಕರಾಗುಳಿದವರೆಲ್ಲರೂ ನೇರವಾಗಿ ಈ ಪ್ರಕರಣಕ್ಕೆ ಸಂಬಂಧಿಸಿದವರ ಜೊತೆಗೆ ರೋಹಿತನ ಸಾವಿಗೆ ಕಾರಣ.

Teltumbde is a writer and civil rights activist with the Committee for Protection of Democratic Rights, Mumbai

ಫೆಬ್ರ 1, 2016

ಅನಿಕೇತನ ತಾಯಿ ರೋಹಿತನ ಕುಟುಂಬಕ್ಕೆ, ಸ್ನೇಹಿತರಿಗೆ ಬರೆದ ಪತ್ರ.



ಅದು ರೋಹಿತ್ ವೇಮುಲನಿರಬಹುದು, ಡಿ.ಕೆ.ರವಿ ಇರಬಹುದು ಮತ್ತೊಬ್ಬರಿರಬಹುದು ಆತ್ಮಹತ್ಯೆ ಮಾಡಿಕೊಳ್ಳುವವರನ್ನು ಕಂಡರೆ ನನಗೆ ಮುಂಚಿನಿಂದಲೂ ಒಂದಷ್ಟು ಅಸಹ್ಯವೇ. ರೋಹಿತ್ ವೇಮುಲನ ಸಾವಿಗೆ ಪೂರ್ವಾಗ್ರಹಪೀಡಿತ ವ್ಯವಸ್ಥೆಯ ಕಾರಣವೂ ಇದ್ದಿದ್ದರಿಂದ ವ್ಯವಸ್ಥೆಯ ಬಗ್ಗೆ ಒಂದಷ್ಟು ಸಿಟ್ಟಿತ್ತು. ಅವನ ಕೊನೆಯ ಪತ್ರ ಬಹಳವಾಗಿ ಕಾಡಿದ್ದೂ ಹೌದು. ರೋಹಿತನ ಸಾವಿಗೊಂದು ಸಂತಾಪ – ಪ್ರತಿಭಟನೆಯಲ್ಲಿ ಭಾಗವಹಿಸಿದಾಗಲೂ ಗೆಳೆಯರೊಂದಿಗೆ ಆತ್ಮಹತ್ಯೆಗೆ ಹತ್ತಾರು ಕಾರಣಗಳು ಇದ್ದಿರಬಹುದು, ಆದರೆ Instigating factor ಅಂತ ಇದ್ದರೆ ಅದು ವಿಶ್ವವಿದ್ಯಾಲಯದ ನಿರ್ಧಾರಗಳು ಎಂದು ಚರ್ಚಿಸಿದ್ದೆ. ಬಿಜೆಪಿ ಕೂಡ ‘ಇದು ವೈಯಕ್ತಿಕ ಕಾರಣಕ್ಕಾದ ಸಾವು’ ಎಂದು ತಿಪ್ಪೆ ಸಾರಿಸುವ ಮಾತುಗಳಾನ್ನಡುತ್ತಾರೆ ಎಂದೇ ನಿರೀಕ್ಷಿಸಿದ್ದೆ. ಆದರೆ ಯಾವಾಗ ರೋಹಿತನ ವ್ಯಕ್ತಿತ್ವಹರಣ, ಅವನು ದಲಿತನಲ್ಲ(ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಸದಸ್ಯನಾದವನೊಬ್ಬ ದಲಿತನೇ ಆಗಿರಬೇಕು ಎಂದುಕೊಳ್ಳುವ ನಮ್ಮೆಲ್ಲರ ಮನಸ್ಥಿತಿಯೂ ಒಂದು ರೀತಿಯಲ್ಲಿ ದುರಂತವೇ), ಅವನು ದೇಶದ್ರೋಹಿ, ವಿದ್ರೋಹಿ ಎಂದೆಲ್ಲ ಬಿಜೆಪಿಯ ವಕ್ತಾರರು, ಅವರ ಹಿಂಬಾಲಕರು, ದಲಿತ ಚಿಂತನೆಯ, ಮೀಸಲಾತಿಯ ವಿರೋಧಿಗಳು ಆಕ್ರಮಣಕಾರೀ ರೀತಿಯಲ್ಲಿ ಬೊಬ್ಬೆಯೊಡೆಯಲಾರಂಭಿಸಿದರೋ ಆಗ ರಾಜಕೀಯ ಕಾರಣ ಹೊರತು ಪಡಿಸಿ ಮತ್ಯಾವ ಕಾರಣವೂ ರೋಹಿತನನ್ನು ಆತ್ಮಹತ್ಯೆಗೆ ಪ್ರಚೋದಿಸಿಲ್ಲ ಎಂದು ಸ್ಪಷ್ಟವಾಯಿತು. ರೋಹಿತನ ಕೊನೆಯ ಪತ್ರ ಮೂಡಿಸಿದ ಬೇಸರದಿಂದ ಹೊರಬರುವಷ್ಟರಲ್ಲಿ 2014ರ ಸೆಪ್ಟೆಂಬರ್ ನಾಲ್ಕರಂದು ಐಐಟಿ ಬಾಂಬೆಯಲ್ಲಿ ಸತ್ತ ಅನಿಕೇತ್ ಅಂಬ್ಹೋರ್ ಎಂಬ ವಿದ್ಯಾರ್ಥಿಯ ತಾಯಿ ರೋಹಿತನ ಕುಟುಂಬಸ್ಥರಿಗೆ ಮತ್ತು ಗೆಳೆಯರಿಗೆ ಬರೆದ ಪತ್ರ ಮತ್ತಷ್ಟು ಬೇಸರ ಮೂಡಲು ಕಾರಣವಾಗಿದೆ. ಆ ತಾಯಿಯ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಡುವ ಸಾಮರ್ಥ್ಯ ನಮ್ಮ ಸಮಾಜಕ್ಕೆ ಬಂದೇ ಇಲ್ಲ. ಜೀವನದಲ್ಲಿ ಮಾಡಿದ ಹತ್ತಲವು ತಪ್ಪುಗಳಲ್ಲಿ ಎಂಬಿಬಿಎಸ್ ಮಾಡುವಾಗ ಜಾತಿಯಾಧಾರಿತ ಮೀಸಲಾತಿ ಅಳಿಯಬೇಕು ಎಂಬ ಅಸಂಬದ್ಧ ಹೋರಾಟದಲ್ಲಿ ಭಾಗಿಯಾಗಿದ್ದೂ ಒಂದು. ಜಾತಿ ವ್ಯವಸ್ಥೆಯ ಕ್ರೂರ ಮುಖಗಳ ಪರಿಚಯವೇ ಇಲ್ಲದೆ ಭಾಗವಹಿಸಿಬಿಟ್ಟಿದ್ದ ದಿನಗಳವು. ಆ ಪ್ರತಿಭಟನೆಯಲ್ಲಿ ಮೈಸೂರು ಮೆಡಿಕಲ್ ಕಾಲೇಜಿನ ದಲಿತ ಹುಡುಗನೂ ಭಾಗವಹಿಸಿದ್ದಾನಂತೆ ಎನ್ನುವ ಸುದ್ದಿ ಮೀಸಲಾತಿ ತಪ್ಪು ಎನ್ನುವ ನಂಬಿಕೆಗೆ ಮತ್ತಷ್ಟು ಬಲ ತಂದಿತ್ತು. ಅನಿಕೇತನ ತಾಯಿಯ ಪತ್ರ ಓದುತ್ತಿದ್ದಂತೆ ಆ ಹುಡುಗ ಆ ಚಳುವಳಿಯಲ್ಲಿ ಭಾಗವಹಿಸುವುದರ ಹಿಂದೆ ಎಷ್ಟೆಲ್ಲ ಮಾತುಗಳನ್ನು, ಸಲಹೆಗಳನ್ನು, ಸವರ್ಣೀಯರ ಚರ್ಚೆಯನ್ನು ಕೇಳಿರಬೇಕು, ಅವನ ಮನದಲ್ಯಾವ ಭಾವನೆಗಳೆಲ್ಲ ಹರಿದಿರಬೇಕು ಎಂಬ ಯೋಚನೆ ಬಂತು. ನನ್ನ ಗೆಳತಿಯೊಬ್ಬಳಿದ್ದಳು, ಅವಳು ಹೇಳ್ತಿದ್ದಳು ಪ್ರತೀ ವರ್ಷ ಎಪ್ಪತ್ತು ಪರ್ಸೆಂಟ್ ತೆಗುದ್ರೂ ನೀನ್ ಬಿಡಮ್ಮ ರಿಸರ್ವೇಷನ್ನು ಅಂತ ಕೆಲವರು ಬೆನ್ನ ಹಿಂದೆ ಆಡಿಕೊಂಡರೆ, ಹಲವರು ನೇರವಾಗಿಯೇ ಹೇಳಿಬಿಡುತ್ತಿದ್ದರು, ಮೀಸಲಾತಿಯಿಂದ ಬಂದ ದಲಿತ ಹುಡುಗಿಯೊಬ್ಬಳು ನಮಗಿಂತ ಹೆಚ್ಚು ಅಂಕಗಳನ್ನು ತೆಗೆಯಬಲ್ಲಳು ಎನ್ನುವುದೇ ಅವರಿಗೆ ಅಪಥ್ಯದ ಸಂಗತಿಯಾಗಿತ್ತು ಅಂತ. 
ನಮ್ಮ ಸಮಾಜಕ್ಕೆ ದಲಿತತ್ವದಿಂದ, ಅಂಬೇಡ್ಕರ್ ವಿದ್ಯಾರ್ಥಿ ಸಂಘದಿಂದ, ಪೆರಿಯಾರ್ ಸ್ಟಡಿ ಸರ್ಕಲ್ಲಿನಿಂದ ಯಾವ ಆಪತ್ತೂ ಇಲ್ಲ. ಬ್ರಾಹ್ಮಣ್ಯ ಪಾಲಿಸುವ ಬ್ರಾಹ್ಮಣರ ನೀಚತನ, ಬ್ರಾಹ್ಮಣ್ಯದ ಪಾದ ನೆಕ್ಕುತ್ತ ಬ್ರಾಹ್ಮಣರಿಗಿಂತ ಕೀಳಾದರೇನು, ದಲಿತರಿಗಿಂತ ನಾವು ಮೇಲಲ್ಲವೇ ಎನ್ನುವ ಭ್ರಮೆ ತುಂಬಿಕೊಂಡ ಶೂದ್ರರ ದೂರ್ತತನ, ಶೈಕ್ಷಣಿಕವಾಗಿ ಮೇಲೆ ಬಂದು ಆರ್ಥಿಕ ಉನ್ನತಿ ಕಾಣುತ್ತಿದ್ದಂತೆ ಬೇರುಗಳನ್ನು ಮರೆತು ಬ್ರಾಹ್ಮಣ್ಯದ ಹಿಂದೆ ನಾ ಮುಂದು ತಾಮುಂದು ಎಂದು ಓಡುತ್ತ ಬೆಳವಣಿಗೆಯ ಮೆಟ್ಟಿಲ ಮೇಲೆ ಮೊದಲ ಹೆಜ್ಜೆಯನ್ನೂ ಇಡದ ಇತರೆ ದಲಿತರನ್ನು ಕೀಳಾಗಿ ಕಾಣಲಾರಂಭಿಸಿರುವ ದಲಿತರಿಂದ ನಮ್ಮ ಸಮಾಜಕ್ಕೆ ನಿಜವಾದ ಅಪಾಯವಿದೆ. ‘ನಮ್ಮ ಮಕ್ಕಳು ಈ ಜಾತಿ ವ್ಯವಸ್ಥೆಯ ವಿರುದ್ಧ ಇನ್ನೂ ಎಲ್ಲಿಯವರೆಗೆ ಹೋರಾಡಬೇಕೋ ಗೊತ್ತಿಲ್ಲ’ ಎಂದು ಬೇಸರದಿಂದ ಹೇಳುವ ಅನಿಕೇತನ ಅಮ್ಮನ ಮಾತುಗಳಿಗೆ ಸಮಂಜಸ ಪ್ರತ್ಯುತ್ತರ ನಮ್ಮಲಿದೆಯೇ? - ಡಾ. ಅಶೋಕ್. ಕೆ. ಆರ್



ಐಐಟಿ, ಮುಂಬೈನಲ್ಲಿ ನಾಲ್ಕನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಅನಿಕೇತ್ ಅಂಬ್ಹೋರ್ ಸಂಶಯಾಸ್ಪದ ರೀತಿಯಲ್ಲಿ ಕ್ಯಾಂಪಸ್ಸಿನೊಳಗೆ ನಾಲ್ಕನೇ ಸೆಪ್ಟೆಂಬರ್ 2014ರಂದು ಸಾವನ್ನಪ್ಪುತ್ತಾನೆ. ಮರಣದ ನಂತರ ಅನಿಕೇತನ ಹೆತ್ತವರಾದ ಸುನಿತಾ ಮತ್ತು ಸಂಜಯ್ ಐಐಟಿಯ ನಿರ್ದೇಶಕರಿಗೆ ಹತ್ತು ಪುಟದ ಪತ್ರ ಬರೆದು ಅನಿಕೇತ್ ಕ್ಯಾಂಪಸ್ಸಿನೊಳಗೆ ಅನುಭವಿಸಿದ ಜಾತಿ ತಾರತಮ್ಯವನ್ನು ವಿವರಿಸುತ್ತಾರೆ. ಇದರ ನಂತರ ಸಾವಿನ ಕುರಿತು ತನಿಖೆ ನಡೆಸಲೊಂದು ಸಮಿತಿ ರಚನೆಯಾಗುತ್ತದೆ. ಅನಿಕೇತನ ಕುಟುಂಬ ಮತ್ತು ಸ್ನೇಹಿತರ ಸತತ ಒತ್ತಾಯದ ನಂತರವೂ ಸಮಿತಿಯ ವರದಿಯನ್ನು ಬಹಿರಂಗಗೊಳಿಸುವುದಿಲ್ಲ. ಅನಿಕೇತನ ತಾಯಿ ಸುನಿತ ರೋಹಿತ್ ವೇಮುಲನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೊಂದು ಪತ್ರ ಬರೆದಿದ್ದಾರೆ. 



23, ಜನವರಿ 2015.
ರೋಹಿತ್ ವೇಮುಲನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ,


ರೋಹಿತ್ ವೇಮುಲನ ಕೊನೆಯ ಪತ್ರವನ್ನು ಓದಿದ ಮೇಲೆ ಉಸಿರು ಕಟ್ಟಿದಂತಾಗುತ್ತಿದೆ, ಆರಾಮಿಲ್ಲವೆನ್ನಿಸುತ್ತಿದೆ. ಶಿಕ್ಷೆಯ ಹೆಸರಿನಲ್ಲಿ ಸಂಶೋಧಕನೊಬ್ಬನಿಗೆ ಏಳು ತಿಂಗಳಿಂದ ಸ್ಕಾಲರ್ ಶಿಪ್ ಸಿಗುವುದಿಲ್ಲ, ಹಾಸ್ಟೆಲ್ಲಿನಿಂದ ಹೊರದಬ್ಬಲಾಗುತ್ತದೆ, ಎಲ್ಲವೂ ಆತನನ್ನು ಒಳಗಿನಿಂದ ಮುರಿದುಹಾಕುವ ಯತ್ನ. ರೋಹಿತ್ ಪತ್ರದಲ್ಲಿ ಯಾರನ್ನೂ ದೂಷಿಸಿಲ್ಲವಾದರೂ ಹೃದಯ ಹಿಂಡುವ ಪತ್ರವದು. ನನಗೆ ರೋಹಿತ್ ಮತ್ತು ಅನಿಕೇತನ ಯೋಚನೆಗಳಲ್ಲಿರುವ ಸಾಮ್ಯತೆ ಎದ್ದುಕಾಣಿಸುತ್ತಿದೆ ಮತ್ತು ಅವರಿಬ್ಬರೂ ಅನುಭವಿಸಿದ ನೋವೆಂತಹದಿರಬಹುದೆಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಅನಿಕೇತ್ ಯಾವುದೇ ಪತ್ರ ಬಿಟ್ಟು ಹೋಗಲಿಲ್ಲ, ಆದರೆ ಅವನ ಡೈರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿರುವ ವಾಕ್ಯಗಳಿಂದ, ಅವನ ಕವಿತಗಳಿಂದ ಜೀವ ತೆಗೆದುಕೊಳ್ಳುವ ಹಂತದಲ್ಲಿದ್ದ ಇಬ್ಬರ ಮನಸ್ಥಿತಿಯೂ ಒಂದೇ ತೆರನಾಗಿತ್ತು ಎಂದು ಕಂಡುಕೊಂಡಿದ್ದೇನೆ.

ಅನಿಕೇತನೂ ಸಮಾನತೆಯ ಬಗ್ಗೆ ಮಾತನಾಡುತ್ತಿದ್ದ, ಮತ್ತು ಸಂಪೂರ್ಣ ಮನಸ್ಸಿನೊಂದಿಗೆ ತೃತೀಯ ಲಿಂಗಿಗಳ ಹೋರಾಟಕ್ಕೆ ಬೆಂಬಲಿಸುತ್ತಿದ್ದ. ಹೆತ್ತವರ ಬಗ್ಗೆ ಅವನಿಗೆ ಬಹಳಷ್ಟು ಯೋಚನೆಯಿತ್ತು. ಜಾತಿ, ಮೀಸಲಾತಿ, ದೇವರ ಬಗೆಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದ. ಐಐಟಿಯ ಪೂರ್ವಭಾವಿ ಪರೀಕ್ಷೆಗೆ ತಯಾರಿ ನಡೆಸುವ ದಿನಗಳಿಂದಲೂ ಅನುಭವಿಸುತ್ತಿದ್ದ ತಾರತಮ್ಯದ ಹಿಂದಿನ ಮನಸ್ಸುಗಳನ್ನು ಎದುರಿಸುತ್ತಿದ್ದ.

ಯಾವಾಗ ಸಶಕ್ತರ ವಿರುದ್ಧದ ಹೋರಾಟದಲ್ಲಿ ವ್ಯಕ್ತಿಯೊಬ್ಬ ದಣಿದುಬಿಡುತ್ತಾನೋ, ಆಗಷ್ಟೇ ಅವನಿಗೆ ಖಾಲಿತನ ಕಾಡುತ್ತದೆ, ನನ್ನ ಮಗನ ಮತ್ತು ರೋಹಿತನ ಜೀವನದಲ್ಲಿ ಕಂಡಂತೆ. ಈ ಖಾಲಿತನ ಸೂಕ್ಷ್ಮಮತಿಗಳಿಗೆ, ಹೆಚ್ಚು ಯೋಚಿಸುವವರಿಗೆ ಮತ್ತು ತಮ್ಮ ಕನಸನ್ನು ನನಸಾಗಿಸಿಕೊಳ್ಳಬಯಸುವವರಿಗೆ ಭಯ ಮೂಡಿಸುತ್ತದೆ. ಈ ರೀತಿಯ ಜನರು ತಮ್ಮ ಸ್ವಭಾವದಿಂದಾಗಿ ಇತರರನ್ನು ದೂಷಿಸುವುದಿಲ್ಲ, ಮುಂದೆ ಸಾಗಲಾಗದಂತಹ ಒಂದು ಹಂತವನ್ನು ತಲುಪಿಬಿಡುತ್ತಾರೆ. ಅನಿಕೇತನ್ಯಾಕೆ ಅಷ್ಟೊಂದು ಯೋಚಿಸುತ್ತಿದ್ದ? ನಾವವನು ನಗುವುದನ್ನು, ಮಿಮಿಕ್ರಿ ಮಾಡುವುದನ್ನು, ಹಾಡುವುದನ್ನು ನೋಡಿದ್ದೆವು. ನನ್ನ ಮಗ ನಗು ಮರೆಯುವಂತಹದ್ದು ಐಐಟಿಯಲ್ಲೇನಿತ್ತು? ಅವನ ಮರಣದ ನಂತರ ವೈದ್ಯರು ಹೇಳಿದರು, ಅನಿಕೇತ್ ಗೊಂದಲದಲ್ಲಿದ್ದ ಎಂದು. ಆದರೆ ವಿಜ್ಞಾನ ಮತ್ತು ಗಣಿತ ಮೊದಲಿನಿಂದಲೂ ಅವನ ಮೆಚ್ಚಿನ ವಿಷಯಗಳು, ಅವನು ಗೊಂದಲಕ್ಕೇಕೆ ಈಡಾದ?

ಐಐಟಿಯಲ್ಲಿ ಅನಿಕೇತ್ ಅಪಮಾನಗಳನ್ನೆದುರಿಸಿರಬೇಕು, ಖಾಲಿತನ ಮೂಡಿರಬೇಕು. ಇದು ಪ್ರತ್ಯಕ್ಷವಾಗಲ್ಲದಿದ್ದರೂ ಪರೋಕ್ಷವಾಗಿತ್ತು, ದಿನನಿತ್ಯದ ಚರ್ಚೆಗಳಲ್ಲಿ, ಗುರುಗಳು ಕೊಡುವ ಸಲಹೆಗಳೆಲ್ಲ ಇದನ್ನವನು ಅನುಭವಿಸಿರಬೇಕು. ಐಐಟಿ ಮಾತ್ರವಲ್ಲ, ಇತರೆ ಪ್ರತಿಷ್ಟಾರ್ಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಈ ಅಹಂಭಾವದ ಯೋಚನಾ ಲಹರಿಯಿದೆ. ಮೀಸಲಾತಿಯ ಮೂಲಕ ಈ ಸಂಸ್ಥೆಗಳಿಗೆ ಬಂದ ವಿದ್ಯಾರ್ಥಿಗಳಿಗೆ ಪದೇ ಪದೇ “ನೋಡು, ನೀನು ಮತ್ತು ನಾನು ಒಂದೇ ಆರ್ಥಿಕ ಪರಿಸ್ಥಿತಿಯಿಂದ ಬಂದಿದ್ದೇವೆ, ಆದರೂ ನಿನಗೆ ನಿನ್ನ ಜಾತಿಯ ಕಾರಣದಿಂದ ವಿಶೇಷ ಸೌಲತ್ತುಗಳು ಲಭಿಸಿವೆ…. ಮೀಸಲಾತಿ ತಪ್ಪು” ಹೇಳಲಾಗುತ್ತದೆ. ಇನ್ನಿತರೆ ಅದೇ ರೀತಿಯ ಸಂಗತಿಗಳನ್ನು ಹೇಳುತ್ತಾರೆ.

ಈ ಕಾರಣದಿಂದ ಅನಿಕೇತ್ ಜಾತಿಯ ಬೇರುಗಳನ್ನು ಹುಡುಕಲು ಶುರುಮಾಡಿದ. ವೈದಿಕ ಧರ್ಮ, ಅದರ ಪುಸ್ತಕಗಳು ಮತ್ತು ಅವುಗಳಲ್ಲಿನ ಜ್ಞಾನವೆಲ್ಲವೂ ಸತ್ಯವೆಂದು ಹೇಳುತ್ತ ಅದಕ್ಕೊಂದು ವೈಜ್ಞಾನಿಕ ರೂಪ ಕೊಟ್ಟು ಹುಡುಗರ ತಲೆಗೆ ಅಂತಹ ವಿಚಾರಗಳನ್ನು ತುಂಬುವ ಕೆಲಸ ಪ್ರತಿಷ್ಟಿತ ಸಂಸ್ಥೆಗಳಲ್ಲಿ ನಡೆಯುತ್ತಿದೆ. ಆದರೆ ಜಾತಿ ತಾರತಮ್ಯದಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರೆ ಸಂಸ್ಥೆಯ ವತಿಯಿಂದ ಯಾವುದೇ ನೆರವು ಸಿಗುವುದಿಲ್ಲ. ಈ ಸಮಸ್ಯೆಗಳ ಬಗ್ಗೆ ಸಮಾಲೋಚಿಸುವುದಿಲ್ಲ, ಇವನ್ನು ಸಮಸ್ಯೆ ಎಂದೇ ಪರಿಗಣಿಸುವುದಿಲ್ಲ, ಒಂದು ವರ್ಗದ ವಿದ್ಯಾರ್ಥಿ ಇದನ್ನು ಎದುರಿಸಬೇಕಾಗಿರುವುದು ವಾಸ್ತವ ಎಂದು ಬಿಂಬಿಸಿಬಿಡುತ್ತಾರೆ. ಮೀಸಲಾತಿ ಪಡೆಯುವುದನ್ನು ಅಪರಾಧದಂತೆ ನೋಡಲಾಗುತ್ತದೆ. ನೀವು ಮೀಸಲಾತಿ ಪಡೆದಿದ್ದರೆ ಜನರ ವಾದ ಮತ್ತು ತೀರ್ಪುಗಳನ್ನು ನೀವು ಎದುರಿಸಬೇಕೆಂದು ನಿರೀಕ್ಷಿಸುವುದು ಸವರ್ಣೀಯರ ಮನಸ್ಥಿತಿಯಾಗಿದೆ. ಅನಿಕೇತ್ ಮತ್ತು ಇತರೆ ಮಕ್ಕಳ ಸ್ಥಿತಿಯನ್ನು ಅನುಭೂತಿಯಿಂದ ನೋಡದೆ, ಅವರ ಸಾಮರ್ಥ್ಯದಲ್ಲಿನ ಕೊರತೆಯಾಗಿ, ಹೆತ್ತವರ ಒತ್ತಡದಂತೆ, ಜಾಸ್ತಿ ನಿರೀಕ್ಷೆಯಂತೆ ನೋಡುತ್ತಾರೆ, ಕಾರಣ? ನಿಜವಾದ ಸಮಸ್ಯೆಯ ಬಗ್ಗೆ ಸವರ್ಣೀಯರಾಗ ತಲೆ ಕೆಡಿಸಿಕೊಳ್ಳಬೇಕಿಲ್ಲ.

ತನ್ನ ಗುರುತನ್ನು ಅನಿಕೇತ್ ಕಳೆದುಕೊಂಡುಬಿಟ್ಟಿದ್ದ. “ನಾನ್ಯಾರು?” – ಇಂತಹ ಪ್ರಶ್ನೆ ಯಾಕೆ ಅವನನ್ನು ಕಾಡಬೇಕಿತ್ತು? ಐಐಟಿಗೆ ಬಂದ ಮೇಲೆ ಅನಿಕೇತ್ ಗ್ರಹ, ನಕ್ಷತ್ರ, ಆತ್ಮ, ಉನ್ನತಾತ್ಮ ಅಥವಾ ಇತರೆ ಪ್ರಪಂಚದ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕಿತ್ತು? ಅವನ ಸ್ಪಷ್ಟ ಯೋಚನೆಗಳು, ಕ್ರಿಯಾತ್ಮಕ ಬುದ್ಧಿ ಮತ್ತವನ ನಗು ಎಲ್ಲಿ ಕಳೆದುಹೋಯಿತೆಂದು ನಮಗೆ ಗೊತ್ತಿಲ್ಲ. ನಮ್ಮ ಒಂದೇ ಒಂದು ಅಪರಾಧವೆಂದರೆ ಅವನನ್ನು ಐಐಟಿಗೆ ಜಾತಿ ಸರ್ಟಿಫಿಕೇಟಿನೊಡನೆ ಕಳುಹಿಸಿದ್ದು. ಅವನನ್ನು ಸಾಮಾನ್ಯ ಸಂಸ್ಥೆಗೆ ಸೇರಿಸಿದ್ದರೆ ಅವನ ಮನಸ್ಸನ್ನು ದುರ್ಬಲಗೊಳಿಸಿದ ಅಷ್ಟೊಂದು ಚರ್ಚೆ ಮತ್ತು ಸಲಹೆಗಳನ್ನವನು ಕೇಳಬೇಕಿರಲಿಲ್ಲ. ನೀನು ಅಸಾಮರ್ಥ್ಯ ಎನ್ನುವ ಭಾವನೆಯನ್ನು ಸಮರ್ಥ, ವಿವೇಕವುಳ್ಳ, ನಗುವಿನ ಹುಡುಗ ಅನಿಕೇತನಲ್ಲಿ ತುಂಬಿದ್ಯಾರು?

ಮಾನವ ಸಂಪನ್ಮೂಲ ಇಲಾಖೆಗೆ, ಪರಿಶಿಷ್ಟ ಜಾತಿಗಳ ಕಮಿಷನ್ನಿಗೆ ಬರೆದ ಯಾವ ಪತ್ರಕ್ಕೂ ನಮಗೆ ಪ್ರತಿಕ್ರಿಯೆ ಸಿಕ್ಕಿಲ್ಲ. ನಮ್ಮ ಮನವಿಯ ನಂತರ ಐಐಟಿ ಬಾಂಬೆ ತನಿಖಾ ಸಮಿತಿಯನ್ನೇನೋ ನೇಮಿಸಿತು ಆದರೆ ಸಂಸ್ಥೆಯ ಕಾರ್ಯವೈಖರಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ, ಸಮಿತಿಯ ವರದಿಯ ಬಗ್ಗೆ ನಮಗ್ಯಾವುದೇ ಮಾಹಿತಿಯಿಲ್ಲ. ಬಹುಶಃ ಉತ್ತರ ಕೊಡುವುದು ಅನವಶ್ಯಕ ಎಂದವರು ತಿಳಿದರೇನೋ…….

ನಮ್ಮ ಕಣ್ಣಲ್ಲಿ ನಾವು ತುಂಬ ಚಿಕ್ಕವಾರಾಗಿಬಿಟ್ಟಿದ್ದೀವಿ. ರೋಹಿತನ ಘಟನೆ ಮತ್ತೊಮ್ಮೆ ಈ ವಿಷಯವನ್ನು ಮುನ್ನೆಲೆಗೆ ತಂದಿದೆ. ಅನಿಕೇತ್ ಮತ್ತು ರೋಹಿತ್ ಎದುರಿಸಿದ ಸಂದರ್ಭಗಳು ಬೇರೆ ಬೇರೆ ಇದ್ದವು ಆದರೆ ಹೋರಾಟಕ್ಕಿದ್ದ ಕಾರಣ ಒಂದೇ ಆಗಿತ್ತು. ನಮ್ಮ ಮಕ್ಕಳು ಈ ಅವಿತು ಕುಳಿತ ಜಾತಿವ್ಯವಸ್ಥೆಯ ವಿರುದ್ಧ ಎಲ್ಲಿಯವರೆಗೆ ಹೋರಾಡಬೇಕೋ ಗೊತ್ತಿಲ್ಲ. ನಾವೂ ಹೋರಾಡುತ್ತಿದ್ದೇವೆ…..

ವಿದ್ಯಾರ್ಥಿಗಳ ಹೋರಾಟವಷ್ಟೇ ಈಗ ಉಳಿದಿರುವ ಆಶಾಕಿರಣ. ಬಹುಶಃ ವಿದ್ಯಾರ್ಥಿಗಳಿಗಷ್ಟೇ ನಿದ್ರಾವಸ್ಥೆಯಲ್ಲಿರುವ ವ್ಯವಸ್ಥೆಯನ್ನು ಬಡಿದೆಬ್ಬಿಸುವ ಶಕ್ತಿಯಿರುವುದು. ರೋಹಿತನ ಕುಟುಂಬ ಮತ್ತು ದಲಿತ ಸಮುದಾಯ ಅನುಭವಿಸುತ್ತಿರುವ ನೋವಿಗೆ ಒಂದಷ್ಟು ಶಾಂತಿ ದೊರಕುವುದೆಂಬ ನಿರೀಕ್ಷೆಯಲ್ಲಿದ್ದೀವಿ.

ಅನಿಕೇತನ ತಾಯಿ,
ಸುನಿತ ಅಂಬ್ಹೋರ್.
(ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್)