ಜನ 8, 2016

ಮೇಕಿಂಗ್ ಹಿಸ್ಟರಿ: ಪರಿಚಯ.

Saketh Rajan

ಸಾಕೇತ್ ರಾಜನ್

ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

ಈ ಸಂಪುಟ ಕರ್ನಾಟಕದ ಹದಿನೆಂಟನೇ ಶತಮಾನದ ಆರಂಭದ ಇತಿಹಾಸದ ಬಗ್ಗೆಯಷ್ಟೇ. ವಸಾಹತುಶಾಹಿ ಶಕ್ತಿಗಳು ಕರ್ನಾಟಕವನ್ನು ಆಕ್ರಮಿಸುತ್ತಿದ್ದಂತೆ ಆಗಿನ ಸಾಮಾಜಿಕ ಜೀವನ ಆಘಾತಗೊಂಡ ಪರಿ ಮತ್ತು ವಸಾಹತು ಶಕ್ತಿಗೆ ಶರಣಾದ ದಿನಗಳ ಇತಿಹಾಸವಿದು.

‘ಪ್ರಗತಿಪರ’, ‘ದೇಶಪ್ರೇಮಿ’ ಇನ್ನೂ ಮುಂತಾದ ವಿಶೇಷಣಗಳಿಂದ ಸುಪ್ರಸಿದ್ಧರಾಗಿರುವ, ಬ್ರಿಟೀಷರ ಆಣತಿಯಂತೆ ಅರಸರಾದ ಮೈಸೂರು ರಾಜರ ಸುತ್ತಲಿನ ಪ್ರಭೆಯಲ್ಲಿನ ಕೃತಕತೆಯ ದರುಶನವೂ ಈ ಕಾಲಘಟ್ಟದಲ್ಲಿ ನಡೆಯಿತು. ಮೈಸೂರು ಅರಸ ಕುಟುಂಬದವರ ಹೇಳಿಕೆಗಳು ಮತ್ತು ಪತ್ರಗಳು, ಮೈಸೂರು ರಾಜರು ಹೇಗೆ ಬ್ರಿಟೀಷರ ಕೈಗೊಂಬೆಗಳಾಗಿದ್ದರು ಎನ್ನುವುದನ್ನು ತಿಳಿಸುತ್ತದೆ. ‘ಕಂಪನಿಯ ಮಕ್ಕಳು ನಾವು’ ಎಂದು ‘ಹೆಮ್ಮೆಯಿಂದ’ ಹೇಳಿಕೊಳ್ಳುತ್ತಿದ್ದವರೂ ಮೈಸೂರಿನ ರಾಜರಾಗಿದ್ದರು!

ಮೈಸೂರು ಅರಸರು ಮತ್ತು ಬ್ರಿಟೀಷರ ನಡುವಿನ ಒಪ್ಪಂದಗಳು ದೊಡ್ಡ ದೊಡ್ಡ ಜಮೀನ್ದಾರರ ಫ್ಯೂಡಲ್ ನೀತಿ ಮತ್ತು ಬ್ರಿಟೀಷರ ವಸಾಹತು ನೀತಿಯ ನಡುವೆ ನಡೆಯುತ್ತಿದ್ದ ಕೂಡಿಕೆಯ ಪ್ರತಿಬಿಂಬದಂತಿತ್ತು. ಜಮೀನ್ದಾರಿ ಪದ್ಧತಿಗೆ ಪ್ರೋತ್ಸಾಹ ನೀಡುತ್ತ, ಜಮೀನ್ದಾರರಿಗೆ ಮತ್ತು ತಮಗೆ ಅನುಕೂಲವಾಗುವಂತಹ ಒಪ್ಪಂದಗಳನ್ನು ಬ್ರಿಟೀಷರು ಆಕಸ್ಮಿಕವೆಂಬಂತೆ ಮಾಡಲಿಲ್ಲ; ಉದ್ದೇಶಪೂರ್ವಕವಾಗಿಯೇ ಮಾಡಿದರು. ಈ ಒಪ್ಪಂದಗಳು ಸಮಾಜದ ಭವಿಷ್ಯದ ಮೇಲುಂಟುಮಾಡಿದ ಪರಿಣಾಮಗಳನ್ನು ಸಮರ್ಪಕವಾಗಿ ದಾಖಲಿಸಲಾಗಿಲ್ಲ. ನವವಸಾಹತುಶಾಹಿಯ ಇಂದಿನ ದಿನಗಳಲ್ಲೂ ಕೂಡ ಅತ್ಯಂತ ಪುರಾತನವಾದ ಜಮೀನುದಾರಿ ಪದ್ಧತಿ ಮತ್ತು ಜಾತಿ ವ್ಯವಸ್ಥೆ ತನ್ನ ಕದಂಬ ಬಾಹುಗಳನ್ನು ಚಾಚುತ್ತಲೇ ಇದೆ. ಮೇಲ್ಜಾತಿ ಜಮೀನ್ದಾರರು ಕೆಳಜಾತಿಯ ಜನರ ಮೇಲಿನ ತಮ್ಮ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿಕೊಳ್ಳಲು ಬ್ರಿಟೀಷರ ಒಪ್ಪಂದಗಳೂ ಕಾಣ್ಕೆ ನೀಡಿದವು. ವಸಾಹತು ಖಡ್ಗ ಜಮೀನ್ದಾರಿ ಸೊಂಟದಲ್ಲಿ ಪ್ರತಿಷ್ಟಾಪನೆಗೊಂಡಿತು.

ಈ ನಿಟ್ಟಿನಲ್ಲಿ ಆ ಐದು ದಶಕಗಳು ಕರ್ನಾಟಕದ ಇತಿಹಾಸದ ಕರಾಳ ದಿನಗಳು. ಆ ಕತ್ತಲ ದಿನಗಳಲ್ಲೂ ಜನರ ನಡುವಿನಿಂದ ಚಿಮ್ಮಿ ಮುಗಿಲೆತ್ತರಕ್ಕೇರಿ ಬೆಳಕು ನೀಡಿದ ವೈಭವದ ಘಟನಾವಳಿಗಳು ನಡೆದವು. ಜನರಿಂದ ಮೂಡಿದ ಬೆಳಕು ಫ್ಯೂಡಲ್ – ವಸಾಹತು ವರ್ಗಕ್ಕೆ ಸುಡುವ ಕೆಂಡವಾಯಿತು.

“ಅಸ್ತಿತ್ವದಲ್ಲಿರುವ ಸಮಾಜದ ಇತಿಹಾಸವೆಂದರೆ ಅದು ವರ್ಗ ಹೋರಾಟದ ಇತಿಹಾಸ” – ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್.

ಈ ಸಂಪುಟವು ವರ್ಗ ಹೋರಾಟ ಅನಿವಾರ್ಯವಾಗಿ ಪಡೆದುಕೊಂಡ ಹಿಂಸಾರೂಪವನ್ನು ತಿಳಿಸುತ್ತದೆ. ಇತಿಹಾಸ ರಚನೆಯ ಮೇಲೆ ಗಾಂಧಿವಾದದ ಪರಿಣಾಮ ಹೆಚ್ಚಾದ ಕಾರಣ ಬಹಳಷ್ಟು ಇತಿಹಾಸಕಾರರು ಇತಿಹಾಸದಲ್ಲಿನ ಹಿಂಸಾ ಹೋರಾಟವನ್ನು ತಿಳಿಸದೆ ಮೌನ ವಹಿಸುತ್ತಾರೆ ಅಥವಾ ನಗಣ್ಯವೆಂಬಂತೆ ಚಿತ್ರಿಸುತ್ತಾರೆ. ಎಲ್ಲೋ ಕೆಲವರು ಮಾತ್ರ ಈ ಗಾಂಧಿವಾದದ ನೆರಳಿನ ಆಚೆ ನಿಂತು ಇತಿಹಾಸದೆಡೆಗೆ ನೋಡುತ್ತಾರೆ.

“ಮೊದಲು ಸೈನಿಕ ಹೋರಾಟ; ನಂತರ ರಾಜಕೀಯ ಬದಲಾವಣೆ. ಯುದ್ಧ ಕೂಡ ರಾಜಕಾರಣದ ಮುಂದುವರಿಕೆ” – ಡಾ. ಅಭಿಮೆಲ್ ಗಝ್ ಮನ್.

ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನನ ಸೈನ್ಯ ವಸಾಹತು ಶಕ್ತಿಗಳ ವಿರುದ್ಧ ನಡೆಸಿದ ನಾಲ್ಕು ಯುದ್ಧಗಳು “ಸೈನಿಕ ಹೋರಾಟವಲ್ಲವೇ?”. 1799ರಲ್ಲಿ ಟಿಪ್ಪು ಸೈನ್ಯದ ಸೋಲಿನ ನಂತರ ಕರ್ನಾಟಕದ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿ ಕರ್ನಾಟಕ ರಾಜ್ಯ ಬ್ರಿಟೀಷರ ವಸಾಹತಾದ ಸತ್ಯವನ್ನು ನಿರಾಕರಿಸಲಾದೀತೆ? ಸತತ ಯುದ್ಧಗಳಿಂದ ಬ್ರಿಟೀಷರು ನಮ್ಮ ನಾಡನ್ನು ಆಕ್ರಮಿಸಿದರು. ಹಿಂಸೆಯ ಮಾರ್ಗದ ಮೂಲಕ ಆಕ್ರಮಿಸಿ ನಮ್ಮನ್ನಾಳಿದರು.

ಪುಸ್ತಕ ಖರೀದಿಸಿ ವೆಬ್ ಸೈಟ್ ಬೆಂಬಲಿಸಿ! ಇಲ್ಲಿ ಕ್ಲಿಕ್ಕಿಸಿ

ವಸಾಹತು ಅನುಭವದಿಂದ ಬೆಚ್ಚಿ – ಎಚ್ಚೆತ್ತು, ಜಮೀನ್ದಾರರ ಒಂದು ವರ್ಗ ಮತ್ತು ಜನಸಮೂಹ ಕಳೆದುಹೋದ ಭೂಮಿ ಮತ್ತು ಪ್ರತಿಷ್ಟೆಯನ್ನು ಮರಳಿ ಪಡೆಯಲೆತ್ನಿಸಿತು. ಟಿಪ್ಪು ಸುಲ್ತಾನನ ಸೋಲಿನ ನಂತರದಿಂದಲೇ ಅನೇಕ ಚಳುವಳಿ – ಹೋರಾಟಗಳಾರಂಭವಾದವು. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಸ್ಥಾಪನೆಯ ರಾಜಕೀಯ ಬದಲಾವಣೆಗಾಗಿ ಸಶಸ್ತ್ರ ಸೈನಿಕ ಹೋರಾಟವನ್ನು ಜನರು ಆಯ್ದುಕೊಂಡಿದ್ದಕ್ಕೆ ಸಂಗೊಳ್ಳಿ ರಾಯಣ್ಣ ಮತ್ತು ಕಲ್ಯಾಣಸ್ವಾಮಿ ನಗರದಲ್ಲಾರಂಭಿಸಿದ ಸಶಸ್ತ್ರ ಹೋರಾಟವೇ ಸಾಕ್ಷಿ. 1760ರಿಂದ 1858ರ ಬಿಜಾಪುರದ ಹಲಗಳ್ಳಿಯ ಬೇಡರ ಸಶಸ್ತ್ರ ಹೋರಾಟದವರೆಗೂ ಕರ್ನಾಟಕ ಒಂದು ಬಹುದೊಡ್ಡ ರಣಾಂಗಣವಾಗಿತ್ತು. ಬ್ರಿಟೀಷರು ಮತ್ತವರ ಕೈಗೊಂಬೆಗಳು ಈ ಹೋರಾಟಗಳನ್ನು ಹತ್ತಿಕ್ಕಿದರು. ಆ ಶತಮಾನದಲ್ಲಿ ಬ್ರಿಟೀಷರ ಕೈಯಲ್ಲಿ ಲಕ್ಷ ಲಕ್ಷ ಜನ ಹತರಾದರು. ವಸಾಹತು ಶಕ್ತಿಗಳ ವಿರುದ್ಧ ನಡೆದ ಈ ಅಭೂತಪೂರ್ವ ಹೋರಾಟ ಮುಂದಿನ ದಿನಮಾನಗಳಲ್ಲಿ ಕಂಡು ಬರಲಿಲ್ಲ.

ಆಳುವ ವರ್ಗದವರು ಈ ಕ್ರಾಂತಿಗಳಿಗೆ ಸಂಪೂರ್ಣ ಕುರುಡಾಗಿ ವರ್ತಿಸಲಿಲ್ಲ. ತಮಗೆ ಬೇಕೆನ್ನಿಸಿದಷ್ಟನ್ನು ಮಾತ್ರ ವೈಭವೀಕರಿಸಿಕೊಂಡರು. ಏಕಪಕ್ಷೀಯವಾಗಿ ಕಿತ್ತೂರು ರಾಣಿ ಚೆನ್ನಮ್ಮಳನ್ನು ವೈಭವೀಕರಿಸಿದರು. ಚೆನ್ನಮ್ಮ ಆಳುವ ವರ್ಗಕ್ಕೆ ಸೇರಿದವಳು. ಆಕೆಯ ಪತಿ ಬ್ರಿಟೀಷರ ಕೈಗೊಂಬೆಯಾಗಿ ಮರಾಠ ಸಂಸ್ಥಾನದ ಅಂತ್ಯಕ್ಕೆ ಕೈಜೋಡಿಸಿದವನು. ಆಗಿನ ಕಾಲದ ಅನೇಕರು ಮಾಡಿದ ಹಾಗೆ ಚೆನ್ನಮ್ಮ ಗಂಡನ ಉದ್ದೇಶಗಳಿಂದ ದೂರಾಗಿ ಬ್ರಿಟೀಷರ ವಿರುದ್ಧ ಸ್ಪೂರ್ತಿದಾಯಕ ಯುದ್ಧಕ್ಕೆ ಜನರನ್ನು ಅಣಿಗೊಳಿಸಿದಳು. ಚೆನ್ನಮ್ಮ ಪ್ರಶಂಸಾರ್ಹ.

ಆದರೆ ಇತಿಹಾಸದ ತಕ್ಕಡಿ ಸರಿಯಾಗಿ ತೂಗಬೇಕಲ್ಲವೇ?

ಬ್ರಿಟೀಷರ ದಾಂಧಲೆಯಿಂದ ಹಾನಿಗೊಳಗಾದ ಕಿತ್ತೂರು ಅರಮನೆಯನ್ನು ರಕ್ಷಿಸಲಾಗಿದೆ. ಕೋಟೆಯ ಆವರಣದಲ್ಲಿ ಹುಲ್ಲು ಹಾಸು ಬೆಳೆಸಲಾಗಿದೆ. ಆ ದಿನಗಳ ಘಟನಾವಳಿಗಳನ್ನು ದಾಖಲಿಸುವುದಕ್ಕೆ ಸಂಗ್ರಹಾಲಯವಿದೆ. ಗೋಡೆಯ ಮೇಲಿನ ಬರಹ – ಚಿತ್ರಗಳನ್ನು ಗಮನಿಸಿದರೆ ವರ್ಗ ಜನರ ತಾರ್ಕಿಕತೆಗೆ ಬೆಕ್ಕಸಬೆರಗಾಗಿಬಿಡುತ್ತೀರಿ. ಯಾರೊಬ್ಬನ ಲೇಖನಿಯೂ ಸಂಗೊಳ್ಳಿ ರಾಯಣ್ಣನ ಬಗ್ಗೆ ತಿಳಿಸುವುದಿಲ್ಲ! ಚೆನ್ನಮ್ಮಳ ಸೋಲಿನ ನಂತರ ಬ್ರಿಟೀಷರ ವಿರುದ್ಧ ಯುದ್ಧ ಸಾರಿದ್ದು ಈತನೇ ಅಲ್ಲವೇ?! ನಂದಗಡದಲ್ಲಿ ನೇಣಿನ ಕುಣಿಕೆಗೆ ತಲೆಯೊಡ್ಡಿದ ಸಂಗೊಳ್ಳಿ ರಾಯಣ್ಣ ಕಿತ್ತೂರಿನ ರಾಣಿಗೆ ಮೋಸ ಮಾಡಲಿಲ್ಲ, ಕಿತ್ತೂರಿನ ಗೌರವಕ್ಕೆ ಮಸಿ ಬಳಿಯಲಿಲ್ಲ. ಬ್ರಿಟೀಷ್ ವಸಾಹತು ರಾಯಣ್ಣನನ್ನು ಕೊಂದರೆ ಭಾರತದ ಜಾತಿ – ಜಮೀನ್ದಾರಿ ಪದ್ಧತಿ ರಾಯಣ್ಣನ ದಫನು ನೆರವೇರಿಸಿತು.

ಆದರೇನಂತೆ? ಜನರ ನಡುವೆ ರಾಯಣ್ಣನಿನ್ನೂ ಬದುಕಿದ್ದಾನೆ.

ಕಿತ್ತೂರಿನ ಕೋಟೆಯಿಂದಾಚೆ ನಡೆದು ಜನರ ಬಳಿ ಬಂದರೆ ರಾಯಣ್ಣ ಸಿಗುತ್ತಾನೆ. ಇಲ್ಲಿನ ಜನರ ಸ್ಪೂರ್ತಿಯಾಗಿ, ದಂತಕತೆಯಾಗಿ, ಜಾನಪದ ಗೀತೆಗಳ ಪದವಾಗಿ. ರಾಯಣ್ಣ ಹುತಾತ್ಮನಾದ ದಿನ ಸಾವಿರಾರು ಸಂಖೈಯಲ್ಲಿ ನಂದಗಡದ ಆಲದ ಮರಕ್ಕೆ ಭೇಟಿ ನೀಡುತ್ತಾರೆ ಇಲ್ಲಿಯ ಜನ.

ರಾಣಿ ಚೆನ್ನಮ್ಮಳ ಹೋರಾಟವನ್ನು ಕೊಂಡಾಡುವ ಆಳುವ ವರ್ಗ ಒಟ್ಟಂದದಲ್ಲಿ ಬೇರೆ ರೀತಿಯದೇ ಯುದ್ಧ ಮಾಡಿದ ಸಂಗೊಳ್ಳಿ ರಾಯಣ್ಣನನ್ನು ಉದ್ದಿಶ್ಯಪೂರ್ವಕವಾಗಿ ಮರೆತುಬಿಡುತ್ತದೆ. ಶಸ್ತ್ರಗಳಿಲ್ಲದ ಜನರು ಸಶಸ್ತ್ರರಾಗಬಹುದು, ಸೈನ್ಯವಿಲ್ಲದೆಡೆ ಜನರೇ ಸೈನ್ಯ ನಿರ್ಮಿಸಬಹುದು ಮತ್ತು ಯುದ್ಧ ತರಬೇತಿಯಿಲ್ಲದ ಜನರು ಗೆರಿಲ್ಲಾ ತಂತ್ರಗಳ ಮೂಲಕ ಬಲಶಾಲಿ ಮತ್ತು ಅಧಿಕಾರ ಕೇಂದ್ರಿತ ಶತ್ರುವನ್ನೆದುರಿಸಬಹುದು ಎಂದು ತೋರಿಸಿಕೊಟ್ಟ ಖ್ಯಾತಿ ಸಂಗೊಳ್ಳಿ ರಾಯಣ್ಣನದು.

ವರ್ಗ ಹೋರಾಟದ ಮೂಲಕ ರಾಜಕೀಯ ಬದಲಾವಣೆಗಾಗಿ ಜನರು ಪ್ರಯತ್ನಿಸಲಾರಂಭಿಸಿದಾಗ ರಾಯಣ್ಣನ ಶಕ್ತಿಯ ಅರಿವಾಗುವುದು. ಸಶಸ್ತ್ರ ಸೈನಿಕ ಹೋರಾಟದ ಮಹತ್ವ ಕೂಡ ಇತಿಹಾಸದಲ್ಲಿ ದಾಖಲಾಗುವುದು. ಇತಿಹಾಸ ನಿರ್ಮಿಸಿದವರ ಒತ್ತಾಯಕ್ಕೆ ಇತಿಹಾಸ ಮಣಿಯಲೇಬೇಕು.

ಮುಂದಿನ ಅಧ್ಯಾಯ ಒಡೆಯರ್ – ಕರ್ನಾಟಕದಮೊದಲ ಕೈಗೊಂಬೆ

ಜನ 7, 2016

ಮಲ್ಡಾದ ಮತಿಗೆಟ್ಟ ಮುಸ್ಲಿಮರು…

Dr Ashok K R
ಈ ದೇಶದಲ್ಲಿ ಬೇಳೆ ಬೆಲೆ ಇನ್ನೂರು ದಾಟುದ್ರೂ ಪ್ರತಿಭಟನೆ ನಡೆಯೋಲ್ಲ, ತರಕಾರಿ ಬೆಲೆ ಗಗನ ಮುಟ್ಟಿದ್ರೂ ತಲೆ ಕೆಡಿಸಿಕೊಳ್ಳೋರಿಲ್ಲ, ಪಂಚಾಯತ್ ಚುನಾವಣೆಯ ಮೇಲೆ ಕಣ್ಣಿಟ್ಟು ಹಾಲು ಮೊಸರಿನ ದರವನ್ನು ಏಕಾಏಕಿ ಏರಿಸಿಬಿಟ್ಟರೂ ಕೇಳೋರಿಲ್ಲ ಅದೇ ದೇವರ ಬಗ್ಗೆ, ದೇವದೂತನ ಬಗ್ಗೆ ಯಾರೋ ಒಬ್ಬ ಮನಸ್ಸಿಗೆ ತೋಚಿದ ಹೊಲಸನ್ನು ಹೇಳಿಬಿಟ್ಟರೆ ಪ್ರಪಂಚವೇ ಮುಳುಗಿಹೋದಂತೆ ಪ್ರತಿಭಟಿಸೋದಕ್ಕೆ ನಾಮುಂದು ತಾಮುಂದು ಎಂದು ಓಡೋಡಿ ಬರುವ ಮತಿಗೆಟ್ಟ ಜನರ ಸಂಖೈಗಂತೂ ಇಲ್ಲಿ ಕೊರತೆಯಿಲ್ಲ. ಮತ್ತಿವರನ್ನು ಬೆಂಬಲಿಸುವುದಕ್ಕೆ ಮತಬ್ಯಾಂಕಿನ ಮೇಲೆ, ಹತ್ತಿರದಲ್ಲಿರುವ ಚುನಾವಣೆಗಳ ಮೇಲೆ ಕಣ್ಣಿಡುವ ರಾಜಕಾರಣಿಗಳ ಸಂಖೈಯಂತೂ ಭಾರತದಲ್ಲಿ ಬೇಕಾದಷ್ಟಿದೆ. 

ಅದೇನು ಈ ಅಜಂ ಖಾನೆಂಬ ಉತ್ತರಪ್ರದೇಶದ ಸಚಿವರೆಂಬ ಬ್ರಹಸ್ಪತಿಯ ನಾಲಿಗೆಯಲ್ಲೇ ಹೊಲಸಿದೆಯೋ ಗೊತ್ತಿಲ್ಲ, ಮಾತನಾಡಿದ್ದೆಲ್ಲವೂ ವಿವಾದಾತ್ಮಕವಾಗಿರುತ್ತದೆ; ಅಥವಾ ವಿವಾದಾತ್ಮಕವಾಗಿರಲೆಂದೇ ಮಾತನಾಡುತ್ತಾರೇನೋ. ಆರ್.ಎಸ್.ಎಸ್ಸಿನಲ್ಲಿರುವವರು ಬಹಳಷ್ಟು ಜನ ಮದುವೆಯಾಗುವುದಿಲ್ಲವಲ್ಲ, ಅದಕ್ಕೇ ಅವರು ಸಲಿಂಗಕಾಮಿಗಳಾಗಿರುತ್ತಾರೆ ಎಂದೊಂದು ಹೇಳಿಕೆಯನ್ನು ಒಗಾಯಿಸಿಬಿಟ್ಟರು. ಆರ್.ಎಸ್.ಎಸ್ಸಿನವರು ಸಲಿಂಗಕಾಮಿಗಳಾಗಿದ್ದರೇನು ಬಿಟ್ಟರೇನು? ಕಾಮವೆಂಬುದು ಅವರವರ ವೈಯಕ್ತಿಕ ಬದುಕು. ಉಳಿದವರಿಗೆ ತೊಂದರೆ ಕೊಡದಿದ್ದರಾಯಿತು. ಈ ಅಜಂ ಖಾನ್ ಹುಟ್ಟಿದಾರಾಭ್ಯ ಆರ್.ಎಸ್.ಎಸ್ ಕಾರ್ಯಕರ್ತರ ಬೆಡ್ ರೂಮಿನೊಳಗೆ ಕುಳಿತು ಎಲ್ಲವನ್ನೂ ನೋಡಿದ್ದಾರೆಯೇ? ಮತ್ತೇನಿಲ್ಲ, ಸುಮ್ನೆ ಸುದ್ದಿಯಲ್ಲಿರೋಕೆ ಒಂದು ಹೇಳಿಕೆಯದು ಅಷ್ಟೇ. ಇಲ್ಯಾರೋ ಸುದ್ದಿಯಲ್ಲಿದ್ದಾರೆಂದರೆ ಅಲ್ಲಿನ್ಯಾರೋ ಸುದ್ದಿ ಮಾಡುವುದು ತಪ್ಪಲ್ಲವಲ್ಲ. ಅಖಿಲ ಭಾರತ ಹಿಂದೂ ಮಹಾಸಭಾದ ಸದಸ್ಯ (ತದನಂತರ ಆ ಸಂಘಟನೆ ಈತ ನಮ್ಮ ಸದಸ್ಯನಲ್ಲ ಎಂದು ಕೈತೊಳೆದುಕೊಂಡಿತು) ಕಮಲೇಶ್ ತಿವಾರಿ ಎಂಬ ‘ಇತಿಹಾಸಕಾರ’ ಪ್ರಪಂಚದ ಮೊದಲ ಸಲಿಂಗಿ ಪ್ರವಾದಿ ಮೊಹಮ್ಮದ್ ಎಂದು ಪ್ರಚಾರಪ್ರಿಯ ಹೇಳಿಕೆ ನೀಡಿಬಿಟ್ಟರು. ಅದ್ಯಾವಾಗ ಈ ಪುಣ್ಯಾತ್ಮ ಸೌದಿ ಅರೇಬಿಯಾಗೆ ಹೋಗಿ ಸಂಶೋಧನೆ ನಡೆಸಿದರೋ, ಅಥವಾ ಪ್ರವಾದಿಗಳ ಬಗ್ಗೆ ಬಂದಿರುವ ಸಂಶೋಧನಾತ್ಮಕ ಲೇಖನಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಯಾವಾಗ ಓದಿದರೋ ಪ್ರವಾದಿಗಳೇ ಹೇಳಬೇಕು. ಪ್ರಚಾರಪ್ರಿಯರ ಅಸಂಬದ್ಧ ಮಾತುಗಳನ್ನು ವಿರೋಧಿಸಲು ಪ್ರಜಾಪ್ರಭುತ್ವದಲ್ಲಿ ಕಾನೂನಿನ ಮಾರ್ಗವಿದೆ. ಅಜಂ ಖಾನರ ವಿರುದ್ಧ, ಕಮಲೇಶ್ ತಿವಾರಿಯ ವಿರುದ್ಧ ಪೋಲೀಸರಲ್ಲಿ ದೂರು ನೀಡಬಹುದು. ಮಿಕ್ಕ ಕೆಲಸವನ್ನು ಪೋಲೀಸರು ಕಾನೂನಿನ ಪ್ರಕಾರ ಮಾಡುತ್ತಾರೆ. ಆ ಹೇಳಿಕೆಗಳನ್ನು ವಿರೋಧಿಸಲು ಪ್ರತಿಭಟನೆಯ ಮಾರ್ಗವೂ ಇದ್ದೇ ಇದೆ. ಪೋಲೀಸರು ತಮ್ಮ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ಪ್ರತಿಭಟನೆಯನ್ನು ಸತತವಾಗಿ ಮಾಡಿ ಒತ್ತಡ ಹಾಕುವ ಮಾರ್ಗವೂ ಉಂಟು. ತಲೆಕೆಟ್ಟವರ ಮಾತುಗಳನ್ನು ವಿರೋಧಿಸುವವರಿಗೆ ತಲೆ ಸರಿಯಿರಬೇಕೆಂದು ನಂಬಲಾದೀತೇ?

ಪಶ್ಚಿಮ ಬಂಗಾಳದ ಮಲ್ಡಾದಲ್ಲಿ ಕಮಲೇಶ್ ತಿವಾರಿಯ ಹೇಳಿಕೆಯನ್ನು ವಿರೋಧಿಸಿ ಲಕ್ಷದ ಲೆಕ್ಕದಲ್ಲಿ ಮುಸ್ಲಿಮರು ಬೀದಿಗಿಳಿದಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವುದು ಎಲ್ಲರ ಹಕ್ಕು ಸರಿ, ಆದರೆ ಕಮಲೇಶ್ ತಿವಾರಿಯನ್ನು ನೇಣಿಗಾಕಿ ಎಂದೆಲ್ಲ ಪ್ರತಿಭಟಿಸುವುದು ಯಾವ ಪುರುಷಾರ್ಥಕ್ಕೆ? ಅದು ಅತ್ಲಾಗಿರಲಿ, ಪ್ರತಿಭಟನೆಯ ನೆಪದಲ್ಲಿ ಈ ಮತಿಗೆಟ್ಟ ಮುಸ್ಲಿಮರು ಹಿಂದೂ ಅಂಗಡಿಗಳಿಗೆ, ವಾಹನಗಳಿಗೆ ಬೆಂಕಿ ಇಕ್ಕಿದ್ದಾರೆ; ಪೋಲೀಸರ ವಾಹನಗಳಿಗೆ ಕೊನೆಗೆ ನಮ್ಮ ಗಡಿ ಕಾಯುವ ಬಿ.ಎಸ್.ಎಫ್ ವಾಹನಗಳಿಗೂ ಬೆಂಕಿ ಹಚ್ಚಿ ಇಡೀ ಊರನ್ನು ಕೋಮುಗಲಭೆಗೆ ನೂಕಿಬಿಟ್ಟಿದ್ದಾರೆ. ಶತಮಾನಗಳ ಹಿಂದೆ ಸತ್ತ ಪ್ರವಾದಿಯ ಬಗ್ಗೆ ಪ್ರಚಾರಪ್ರಿಯನೊಬ್ಬ ನೀಡಿದ ಹೇಳಿಕೆಗೆ ಈ ಪಾಟಿ ಪ್ರತಿಭಟಿಸುವವರು ತಮ್ಮ ಸ್ಥಳೀಯ ಸಮಸ್ಯೆಗಳ ಬಗ್ಗೆ ಇದೇ ರೀತಿ ಬೀದಿಗಿಳಿಯುವ ಮನಸ್ಸು ಮಾಡಿದ್ದಿದ್ದರೆ ದೇಶ ಯಾವಾಗ್ಲೋ ಉದ್ಧಾರವಾಗಿಬಿಟ್ಟಿರೋದು. ಇಷ್ಟೆಲ್ಲ ಗಲಾಟೆಗಳಾದ ಮೇಲೆ ರಾಜಕೀಯವಿರದೆ ಇದ್ದರೆ ಹೇಗೆ? ಅದೂ ಈ ವರುಷವೇ ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾವಣೆಗಳು ನಡೆಯುವಾಗ ರಾಜಕೀಯವಿರಲೇಬೇಕಲ್ಲ. ಪಶ್ಚಿಮ ಬಂಗಾಳದಲ್ಲಿರುವುದು ತೃಣಮೂಲ ಕಾಂಗ್ರೆಸ್ಸಿನ ಸರಕಾರ; ಗಲಭೆಗೆ ಸಂಬಂಧಪಟ್ಟಂತೆ 130ಜನರ ಮೇಲೆ ಕೇಸುಗಳು ಬಿದ್ದಿವೆ. ಬಂಧನವಾಗಿರುವುದು ಕೇವಲ ಹತ್ತು ಜನರು, ಅದರಲ್ಲೂ ಕೆಲವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಮುಸ್ಲಿಮರ ಮತಗಳನ್ನು ಕಳೆದುಕೊಳ್ಳಲಿಚ್ಛಿಸದ ತೃಣಮೂಲ ಕಾಂಗ್ರೆಸ್ ಸರಕಾರ ಒಂದಷ್ಟು ಮೆದುವಾಗಿಬಿಟ್ಟಿದೆ ಈ ಮತಿಗೆಟ್ಟವರ ವಿರುದ್ಧ. ಇನ್ನು ಪಶ್ಚಿಮ ಬಂಗಾಳದಲ್ಲಿ ಅಸ್ತಿತ್ವ ಕಂಡುಕೊಳ್ಳುವ ದಾರಿಯಲ್ಲಿರುವ ಬಿಜೆಪಿಗೆ ಹಿಂದೂ ರಕ್ಷಕ ನಾನೊಬ್ಬನೇ ಎಂದು ತೋರಿಸಿಕೊಳ್ಳುವ ಹಪಾಹಪಿ, ಸಿಪಿಎಂ ಮತ್ತು ಅಸ್ತಿತ್ವನ್ನಾಗಲೇ ಕಳೆದುಕೊಂಡಿರುವ ಕಾಂಗ್ರೆಸ್ಸಿಗೆ ಮಲ್ಡಾದಲ್ಲಿ ಹೆಚ್ಚಿನ ಸಂಖೈಯಲ್ಲಿರುವ ಮುಸ್ಲಿಮರ ಮತಗಳನ್ನು ಸುಖಾಸುಮ್ಮನೆ ಅದೂ ಇದೂ ಹೇಳಿಕೆ ನೀಡಿ ಕಳೆದುಕೊಳ್ಳಬೇಕೆ ಎಂಬ ಚಿಂತೆ. ಒಟ್ನಲ್ಲಿ ಮತಿಗೆಟ್ಟ ಜನರನ್ನು ಆಳಲು ತಲೆಕೆಟ್ಟ ಜನರೇ ಸರಿ ಬಿಡಿ. ‘ಅದ್ಯಾರೋ ಏನೋ ಮಾತಾಡುದ್ರೆ ನಿಮ್ದೇನ್ರಯ್ಯಾ ಹಾಳಾಗಿದ್ದು, ಮುಚ್ಕೊಂಡು ನಿಮ್ ನಿಮ್ ಕೆಲ್ಸ ಮಾಡೋಗ್ರಯ್ಯ’ ಎಂದು ಈ ಮತಿಗೆಟ್ಟವರಿಗೆ ಹೇಳುವಂತಹ ನಾಯಕ ಧರ್ಮದೊಳಗಿನ ಸಮುದಾಯದಲ್ಲೂ ಇಲ್ಲ, ರಾಜಕಾರಣಿಗಳಲ್ಲೂ ಇಲ್ಲ. ಹೇಳಿದರೂ ಕೇಳುವಷ್ಟು ಬುದ್ಧಿವಂತರೇ ನಾವು? ‘ಧರ್ಮವೆಂಬುದು ಅಫೀಮಿದ್ದ ಹಾಗೆ’ ಎಂಬ ಕಾರ್ಲ್ ಮಾರ್ಕ್ಸನ ಮಾತುಗಳನ್ನು ಪದೇ ಪದೇ ನೆನಪಿಸಿಕೊಳ್ಳುತ್ತಲೇ ಇರಬೇಕು.

ಜನ 2, 2016

ದೆವ್ವದ ಮಡಿಲಲ್ಲಿ ನಗುತ್ತಾ ವಿಶ್ರಮಿಸಿ!

ಡಾ.ಅಶೋಕ್.ಕೆ.ಆರ್
ಕತೆಗಾಗಿ ನಟರಿರಬೇಕು, ನಟರಿಗಾಗಿ ಕತೆ ಸೃಷ್ಟಿಯಾಗಬಾರದು ಎನ್ನುವಂಶವನ್ನು ಮತ್ತೊಮ್ಮೆ ನಿರೂಪಿಸುವ ಚಿತ್ರ ಕತೆ-ಚಿತ್ರಕತೆ-ನಿರ್ದೇಶನ: ಪುಟ್ಟಣ್ಣ. ಸಿನಿಮಾದ ಹೆಸರಿಗೂ ಸಿನಿಮಾದೊಳಗಿನ ಕತೆಗೂ ಏನೂ ಸಂಬಂಧವಿಲ್ಲ. ‘ದಂಡುಪಾಳ್ಯ’ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ರಾಜು ಈ ಸಿನಿಮಾಕ್ಕೆ ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣರವರ ಹೆಸರಿಟ್ಟಿರುವುದು ಗಿಮಿಕ್ಕಿನ ಉದ್ದೇಶಕ್ಕೇ ಹೊರತು ಇನ್ಯಾವ ಕಾರಣಕ್ಕೂ ಅಲ್ಲ ಎನ್ನುವುದು ಚಿತ್ರ ಪ್ರಾರಂಭವಾದ ಹತ್ತು ನಿಮಿಷದೊಳಗೆ ಅರಿವಾಗಿಬಿಡುತ್ತದೆ! ಇದು ನಗಾಡಿಸುವ ದೆವ್ವದ ಚಿತ್ರ! ದೆವ್ವ ನಗಿಸುವುದಿಲ್ಲ, ದೆವ್ವದ ಸುತ್ತಲಿರುವ ಮನುಷ್ಯರು ಸಿಕ್ಕಾಪಟ್ಟೆ ನಗಿಸುತ್ತಾರೆ. ನಕ್ಕು ನಕ್ಕು ಹೊಟ್ಟೆ ನೊಂದರೆ ಯಾರು ಜವಾಬ್ದಾರಿ ಎಂಬ ಬಗ್ಗೆ ಟೈಟಲ್ ಕಾರ್ಡಿನಲ್ಲಿ ಸೂಚಿಸಿಲ್ಲ. ಎರಡೂವರೆ ಘಂಟೆ ಸಂಪೂರ್ಣ ಮನೋರಂಜನೆ ಅನುಭವಿಸಿದ ಮೇಲೆ ಇದು ತೆಲುಗಿನ ‘ಗೀತಾಂಜಲಿ’ ಎಂಬ ಚಿತ್ರದ ರೀಮೇಕಂತೆ ಎಂಬ ವಿಷಯ ಓದಿದ ನೆನಪಾಗಿ ರವಷ್ಟು ಬೇಸರವಾಗುತ್ತದೆ. ತೆಲುಗು ಚಿತ್ರ ನೋಡಿದ್ದವರು ಮತ್ತೊಮ್ಮೆ ನೋಡುವ ಅವಶ್ಯಕತೆಯಿಲ್ಲ. ಉಳಿದವರು ತಪ್ಪದೇ ನೋಡಿ, ದೆವ್ವದ ಜೊತೆ ನಗುತ್ತಾ ಕಾಲ ಕಳೆಯಿರಿ!

ಚಿತ್ರದ ನಾಯಕ ಸತ್ಯಹರೀಶ್ಚಂದ್ರ (ಕೋಮಲ್) ಪ್ರಶಸ್ತಿ ವಿಜೇತ ನಿರ್ದೇಶಕನಾಗಬೇಕೆಂಬ ಆಸೆಯಿಂದ ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಾನೆ. ನಿರ್ಮಾಪಕರನ್ನು ಹುಡುಕುತ್ತಿರುತ್ತಾನೆ. ಸಾಫ್ಟ್ ವೇರ್ ಕಂಪನಿಯ ಮಾಲೀಕ ರವಿಶಂಕರ್ ಗೆ ಸಿನಿಮಾ ನಿರ್ಮಿಸಿ ಪ್ರಶಸ್ತಿ ಗಳಿಸಿ ಹೆಸರು ಮಾಡಬೇಕೆಂಬ ಆಸೆ. ರವಿಶಂಕರರನ್ನು ಭೇಟಿ ಆಗಲು ಮೂರು ತಾಸು ತಡವಾಗಿ ಬರುವ ನಾಯಕ ಕತೆ ಹೇಳಲಾರಂಭಿಸುತ್ತಾನೆ. ಅದು ಸಿನಿಮಾ ಕತೆಯಾಗಿರದೆ ಬೆಂಗಳೂರಿಗೆ ಬರುವಾಗ ಬಸ್ಸಿನಲ್ಲಿ ಸಿಕ್ಕ ನಾಯಕಿ (ಪ್ರಿಯಾಮಣಿ), ಬೆಂಗಳೂರಿನ ಮನೆಯಲ್ಲಿ ಪ್ರಾರಂಭವಾದ ದೆವ್ವದ ಕಾಟವಾಗಿರುತ್ತದೆ. ಬಸ್ಸಿನಲ್ಲಿ ಸಿಕ್ಕವಳೇ ದೆವ್ವವಾ? ಅಥವಾ ಮನೆಯಲ್ಲಿ ಮತ್ತೊಂದು ದೆವ್ವವಿದೆಯಾ? ಎಂಬ ಕುತೂಹಲದಿಂದಲೇ ಚಿತ್ರ ಮುಂದುವರೆಯುತ್ತದೆ. ಮನೆಯಲ್ಲಿ ಹತ್ಯೆಯಾಗಿದ್ದ ಯುವತಿ ಯಾರು? ಅವಳನ್ನು ಕೊಂದವರಾರು? ಎಂಬ ಕುತೂಹಲವೆಲ್ಲವೂ ಎರಡನೆಯ ಅರ್ಧದ ಪ್ರಾರಂಭದಲ್ಲೇ ಗೊತ್ತಾಗಿಬಿಡುತ್ತದೆ. ಇನ್ನೇನು ಚಿತ್ರ ಬೋರು ಹೊಡೆಯುತ್ತೆ ಬಿಡಿ ಎಂದುಕೊಳ್ಳುವಷ್ಟರಲ್ಲಿ ಎರಡನೇ ಅರ್ಧದ ನಾಯಕ ಸಾಧು ಕೋಕಿಲ ಪ್ರವೇಶವಾಗುತ್ತದೆ! ಮತ್ತಷ್ಟು ನಕ್ಕು ಸುಸ್ತಾಗುವ ಸುಸಂದರ್ಭ!

ಹೆಸರಿಗೆ ಕೋಮಲ್ ನಾಯಕನಾದರೂ ನಿರ್ಮಾಪಕ ಸಿ.ಆರ್.ಮನೋಹರ್ ಹೆಸರೇಳಿಕೊಂಡು ದುಡ್ಡು ಪೀಕುವ ಡಿ.ಕೆ, ಪಿಕೆ (ಕುರಿ ಪ್ರತಾಪ್ ಮತ್ತು ಪ್ರಶಾಂತ್ ಸಿದ್ಧಿ), ಸ್ನೇಹಿತ ಮಧು, ಸಾಧು ಕೋಕಿಲ, ರವಿಶಂಕರ್, ಪ್ರಿಯಾಮಣಿಯ ಪಾತ್ರಗಳಿಗೆ ಅಷ್ಟೇ ಪ್ರಾಮುಖ್ಯತೆಯಿದೆ. ದೊಡ್ಡಣ್ಣ, ಪೂಜಾ ಗಾಂಧಿ ಸುಮ್ನೆ ಹಿಂಗೆ ಮುಖ ತೋರ್ಸಿ ಹೋಗಿಬಿಡುತ್ತಾರೆ. ದೆವ್ವವಿಲ್ಲ ಬಿಡ್ರಿ ಎಂದು ಒಂದು ಹಂತದಲ್ಲಿ ತೋರಿಸುವ ಚಿತ್ರ ಕೊನೆಯ ಭಾಗದಲ್ಲಿ ದೆವ್ವ ಇದೆ ಕಣ್ರೀ ಎಂದು ನಂಬಿಸಲು ಪ್ರಯತ್ನಿಸುತ್ತದೆ. ಚಿತ್ರದ ಕೊನೆಯಲ್ಲಿ ಬರುವ ಒಂದು ಪುಟ್ಟ ಹಾಡು ‘ಓ! ಚಿತ್ರದಲ್ಲಿ ಹಾಡುಗಳೇ ಇರಲಿಲ್ಲ ಅಲ್ವಾ’ ಎಂದು ನೆನಪಿಸುವುದು ಪ್ರೇಕ್ಷಕರು ಚಿತ್ರದ ಹಾಸ್ಯ ದೃಶ್ಯಗಳಲ್ಲಿ ಮಗ್ನವಾಗಿಬಿಟ್ಟಿರುವ ಸೂಚನೆ! ಹೀರೋಯಿಸಮ್ಮಿನ ಪಾತ್ರಗಳನ್ನು ‘ಹೀರೋ’ಗಳಿಗೆ ಬಿಟ್ಟು ತಮಗೆ ಸೂಕ್ತವಾಗುವ ಇಂತಹ ಶಕ್ತ ಪಾತ್ರಗಳಲ್ಲಿ ನಟಿಸುವುದನ್ನು ಕೋಮಲ್ ಮುಂದುವರೆಸಿದರೆ ನೋಡುವವರಿಗೂ ಅನುಕೂಲ. ರಾತ್ರಿಹೊತ್ತು ದೆವ್ವದ ನರ್ತನವಾಗುತ್ತಿದ್ದಾಗ ಕಿಟಕಿಯಿಂದ ಸೂರ್ಯನ ಬೆಳಕು ಬೀಳುವ ವಿಚಿತ್ರ ದೃಶ್ಯಗಳನ್ನು ಮುಂದಿನ ಚಿತ್ರಗಳಲ್ಲಿ ಚಿತ್ರೀಕರಿಸದಿರುವುದು ನಿರ್ದೇಶಕರಿಗೆ ಒಳಿತು! ಇಂತಹ ಚಿಕ್ಕ ಪುಟ್ಟ ಸಂಗತಿಗಳನ್ನು ಮರೆತು, ರೀಮೇಕ್ ಚಿತ್ರ ಅನ್ನೋ ಬೇಸರ ಮರೆತು ಸಿನಿಮಾ ಮಂದಿರಕ್ಕೆ ಹೋದರೆ ಕೊಟ್ಟ ದುಡ್ಡಿಗೆ ಮೋಸ ಮಾಡುವುದಿಲ್ಲ ಪುಟ್ಟಣ್ಣ.

1 ಜನವರಿ, 1818: ಭೀಮಾ ಕೊರೇಗಾಂವಿನ ಯುದ್ಧ

ಕೊರೇಗಾಂವಿನ 'ವಿಜಯ ಸ್ಥಂಭ'
ಮೂಲ: drambedkarbooks.com
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್.

ಭಾರತದ ಇತಿಹಾಸವೆಂದರೆ ಅಸ್ಪ್ರಶ್ಯರು ಮತ್ತು ಮೇಲ್ಜಾತಿಯರ ನಡುವಿನ ಸಂಘರ್ಷ. ಭಾರತದ ಇತಿಹಾಸದ ನಿಜ ಬಣ್ಣವನ್ನು ತೋರಿಸಲು ಇತಿಹಾಸಕಾರರು ಆಸಕ್ತರಾಗಿಲ್ಲ.

ಜನವರಿ 1, 1818ರಲ್ಲಿ ಸಂಖ್ಯಾಬಲದಲ್ಲಿ ಮೇಲುಗೈ ಸಾಧಿಸಿದ್ದ ಪೇಶ್ವೆಯ ಸೈನ್ಯದ ವಿರುದ್ಧ ಕೆಲವು ನೂರು ಅಸ್ಪ್ರಶ್ಯ ಸೈನಿಕರು ಕೊರೇಗಾಂವಿನ ಯುದ್ಧದಲ್ಲಿ ದಿಗ್ವಿಜಯ ಸಾಧಿಸಿದ ಮಹತ್ವದ ಸಂಗತಿಯನ್ನು ಬಹಳ ನಾಜೂಕಿನಿಂದ ಇತಿಹಾಸದ ಪುಟಗಳಲ್ಲಿ ಅಡಗಿಸಿಡಲಾಗಿದೆ.

ಬ್ರಿಟೀಷ್ ಸೈನ್ಯದಲ್ಲಿದ್ದ ಐದು ನೂರು ಮಹರ್ ಸೈನಿಕರು ಪುಣೆಯನ್ನಾಳುತ್ತಿದ್ದ ಬ್ರಾಹ್ಮಣ ಪೇಶ್ವೆಯರ ವಿರುದ್ಧ ನಡೆಸಬೇಕಿದ್ದ ಯುದ್ಧದ ತಯಾರಿಯಲ್ಲಿದ್ದರು. ಇತಿಹಾಸದ ಪುಸ್ತಕಗಳಲ್ಲಿ ಈ ಯುದ್ಧಕ್ಕೆ ಮಹತ್ವ ಕೊಡಲಾಗಿದೆ ಮತ್ತು ನಾವೆಲ್ಲರೂ ಇದನ್ನು ಪೇಶ್ವೆಯವರ ಸಾಮ್ರಾಜ್ಯವನ್ನು ಸಂಪೂರ್ಣವಾಗಿ ನಾಶಪಡಿಸಿದ ಮತ್ತು ಬ್ರಿಟೀಷ್ ಸಾಮ್ರಾಜ್ಯವನ್ನು ಭಾರತದಲ್ಲಿ ಭದ್ರವಾಗಿ ಸ್ಥಾಪಿಸಿದ ಎರಡನೇ ಆಂಗ್ಲ – ಮರಾಠ ಯುದ್ಧವೆಂದು ಓದಿದ್ದೇವೆ. ಈ ಯುದ್ಧಕ್ಕೆ ಮತ್ತೊಂದು ಐತಿಹಾಸಿಕ ಆಯಾಮವೂ ಇದೆ, ಅದರ ಅರಿವು ನಮಗಿರಬೇಕು.

ಈ ಯುದ್ಧ ಭಾರತದ ಅಸ್ಪ್ರಶ್ಯರ ಮತ್ತು ಬ್ರಾಹ್ಮಣ್ಯದ ನಡುವೆ ನಡೆದ ಯುದ್ಧ.

ಭೀಮಾ ಕೊರೇಗಾಂವಿನ ಬಗೆಗಿನ ಪುಟ್ಟ ಡಾಕ್ಯುಮೆಂಟರಿ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

ಮಹರ್ ಸೈನಿಕರಿಗೆ, ಇದು ಮತ್ತೊಂದು ಯುದ್ಧವಷ್ಟೇ ಆಗಿರಲಿಲ್ಲ. ತಮ್ಮ ಆತ್ಮಗೌರವವನ್ನು ಹೆಚ್ಚಿಸುವ, ಮನುಸ್ಮೃತಿಯ ಚಾತುರ್ವರ್ಣ್ಯದ ವಿರುದ್ಧದ ಹೋರಾಟವಾಗಿತ್ತು. ಕೇವಲ ಐನೂರರಷ್ಟು ಸಂಖೈಯಲ್ಲಿದ್ದ ಮಹರ್ ಸೈನಿಕರು ಮೂವತ್ತು ಸಾವಿರದಷ್ಟಿದ್ದ ಪೇಶ್ವೆಯವರ ಸೈನ್ಯವನ್ನು ಸೋಲಿಸಲು ತೆಗೆದುಕೊಂಡಿದ್ದ ಕೇವಲ ಒಂದು ದಿನ. ಇದಕ್ಕೆ ಸಮನಾದ ದಿಗ್ವಿಜಯ ಭಾರತದ ಇತಿಹಾಸದಲ್ಲಿ ಬಹುಶಃ ಯಾವುದೂ ಇಲ್ಲ.

ಬ್ರಾಹ್ಮಣರ ಆಡಳಿತವಿದ್ದ ಮಹಾರಾಷ್ಟ್ರದಲ್ಲಿ ಜಾತಿ ಆಧಾರಿತ ಅಸಮಾನತೆ ವಿಜ್ರಂಭಿಸುತ್ತಿತ್ತು; ಚಾತುರ್ವರ್ಣ್ಯದ ವ್ಯವಸ್ಥೆಯ ಹೊರಗಿದ್ದ ಅಸ್ಪ್ರಶ್ಯರು ಬ್ರಾಹ್ಮಣ್ಯದ ನೀತಿ ನಿಯಮಗಳ ಕಾರಣದಿಂದ ಅಭಿವೃದ್ಧಿ ವಂಚಿತರಾಗಿದ್ದರು.

ಅಸ್ಪ್ರಶ್ಯರು ಬೆನ್ನಿಗೊಂದು ಕಸಪೊರಕೆಯನ್ನು ಕಟ್ಟಿಕೊಂಡು ನಡೆಯಬೇಕಿತ್ತು. ಕಾರಣ? ಊರಿನೊಳಗೆ ನಡೆಯುವಾಗ ಮೂಡುವ ಅವರ ಹೆಜ್ಜೆಗುರುತುಗಳನ್ನು ಕಸಪೊರಕೆ ಅಳಿಸಿಹಾಕಬೇಕಿತ್ತು. ಮಹರರ ಹೆಜ್ಜೆ ಗುರುತು ಹಾದಿಯನ್ನು ಕಲುಷಿತಗೊಳಿಸಬಾರದೆಂದು ಮಾಡಿದ್ದ ನಿಯಮವಿದು! ಇಷ್ಟಕ್ಕೇ ಮುಗಿಯಲಿಲ್ಲ. ಉಗುಳಲು ಕತ್ತಿಗೊಂದು ಮಡಿಕೆಯನ್ನು ನೇತುಹಾಕಿಕೊಳ್ಳಬೇಕಿತ್ತು. ಮೇಲ್ಜಾತಿಯವರಿಗೆ ಎಲ್ಲೆಂದರಲ್ಲಿ ಉಗುಳುವ ಸ್ವಾತಂತ್ರ್ಯವಿತ್ತೆನಿಸುತ್ತೆ ಬಿಡಿ. ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಲು ಅವರಿಗೆ ಅನುಮತಿಯಿರಲಿಲ್ಲ ಮತ್ತು ಶಿಕ್ಷಣದಿಂದ ದೂರನಿಲ್ಲಬೇಕಿತ್ತು. ಈ ನಿಯಮಗಳನ್ನು ಪಾಲಿಸದ ಅಸ್ಪ್ರಶ್ಯರನ್ನು ಹತ್ಯೆ ಮಾಡಲಾಗುತ್ತಿತ್ತು. ಭೀಮಾ ಕೊರೇಗಾಂವಿನ ಯುದ್ಧ ಬ್ರಾಹ್ಮಣ ಹಿತಸಾಕ್ತಿಗೆ ಅಸ್ಪ್ರಶ್ಯರು ಕೊಟ್ಟ ಉತ್ತರವಾಗಿತ್ತು.

ಈ ಯುದ್ಧ ಜನವರಿ 1, 1818ರಂದು ಕೊರೇಗಾಂವಿನ ಭೀಮಾ ನದಿಯ ತೀರದಲ್ಲಿ ಬ್ರಿಟೀಷ್ ಸರಕಾರದ ಬಾಂಬೆ ನೇಟಿವ್ ಇನ್ಫೆಂಟ್ರಿಯ ಮಹರ್ ಸೈನಿಕರ ನಡುವೆ ಮತ್ತು ಪೇಶ್ವೆ ಸೈನಿಕರ ನಡುವೆ ನಡೆಯಿತು. ಶಿರೂರಿನಿಂದ ಭೀಮಾ ಕೊರೇಗಾಂವಿನವರೆಗೆ 27 ಕಿಲೋಮೀಟರುಗಳನ್ನು ಸರಿಯಾದ ಅನ್ನಾಹಾರವಿಲ್ಲದೆ ಕ್ರಮಿಸಿದ ಅಸ್ಪ್ರಶ್ಯ ಸೈನಿಕರು ಪೇಶ್ವೆಯ ಸೈನ್ಯದೊಂದಿಗೆ ಹನ್ನೆರಡು ತಾಸು ಕಾದಾಡಿ ದಿನದ ಕೊನೆಗೆ ಅವರನ್ನು ಸಂಪೂರ್ಣವಾಗಿ ಸೋಲಿಸಿಯೇ ಬಿಟ್ಟರು.

ಅನೇಕ ಕಾರಣಗಳಿಂದ ಈ ಯುದ್ಧ ಮಹತ್ವವುಳ್ಳದ್ದು. ಮೊದಲಿಗೆ, ಬ್ರಿಟೀಷರು ಒಂದು ಪುಟ್ಟ ಸೈನ್ಯದೊಂದಿಗೆ ಈ ಯುದ್ಧಕ್ಕೆ ಅಣಿಯಾಗಿದ್ದರು, ಅತ್ಯಂತ ಕೆಟ್ಟ ಸೋಲನ್ನು ಅವರು ನಿರೀಕ್ಷಿಸಿದ್ದರು. ಎರಡನೆಯದಾಗಿ, ಕೊರೇಗಾಂವಿನ ಈ ಯುದ್ಧ ಪೇಶ್ವೆಯವರನ್ನು ಹಣಿಯಲು ಮತ್ತವರನ್ನು ಶರಣಾಗತರನ್ನಾಗಿಸಲು ನೆರವಾಯಿತು. ಮೂರನೆಯ ಬಹುಮುಖ್ಯ ಮಹತ್ವ, ಈ ಯುದ್ಧ ಜಾತಿ ಬಂಧನದ ಸರಪಳಿಗಳನ್ನು ಒಡೆದು ಹಾಕಲು ಮಹಾರಾಷ್ಟ್ರದ ಅಸ್ಪ್ರಶ್ಯ ಮಹರರು ನಡೆಸಿದ ಪ್ರಯತ್ನ.

ಯುದ್ಧದಲ್ಲಿ ಭಾಗವಹಿಸಿದ್ದ ಬಾಂಬೆ ನೇಟಿವ್ ಇನ್ಫೆಂಟ್ರಿಯ ಸೈನಿಕರ ಶೌರ್ಯವನ್ನು ಗೌರವಿಸಲಾಯಿತು. ಅಧಿಕೃತ ವರದಿಯಲ್ಲಿ ಈ ಸೈನಿಕರ ಧೀರೋದ್ದಾತ ಮನೋಭಾವನೆ, ಶಿಸ್ತಿನ ಹೋರಾಟ, ಧೈರ್ಯವನ್ನು ನೆನಪು ಮಾಡಿಕೊಳ್ಳಲಾಗಿದೆ.

ಅತ್ಯಂತ ಕಠಿಣವಾಗಿದ್ದ ಶಿರೂರು – ಕೊರೇಗಾಂವ್ ನಡುವಿನ 27 ಕಿಲೋಮೀಟರುಗಳ ನಡುಗೆಯನ್ನು ಅನ್ನಾಹಾರದ ಕೊರತೆ, ಖಾಯಿಲೆಗಳ ನಡುವೆ ಯಶಸ್ವಿಯಾಗಿ ಪೂರೈಸಿ ಯುದ್ಧವನ್ನು ಗೆದ್ದ ಮಹರ್ ಸೈನಿಕರ ಕಾರ್ಯ ಪ್ರಶಂಸಾರ್ಹವಾಗಿತ್ತು. ಯುದ್ಧರಂಗದಲ್ಲಿ ಮುನ್ನಡೆಯುತ್ತಿದ್ದಾಗ, ಬಂಧನವಾದಾಗ, ಕೋಟೆಗೆ ಲಗ್ಗೆ ಇಡುತ್ತಿದ್ದಾಗ ಅಥವಾ ಕೆಲವೊಮ್ಮೆ ಗೆಲುವಿನ ಕಾರಣಕ್ಕಾಗಿ ಎರಡೆಜ್ಜೆ ಹಿಂದಿಡುತ್ತಿದ್ದಾಗ ಈ ಸೈನಿಕರು ತಮ್ಮ ಅಧಿಕಾರಿಗಳು ಮತ್ತು ಕಾಮ್ರೇಡುಗಳ ಜೊತೆ ಬದ್ಧತೆಯಿಂದ ನಿಂತಿದ್ದರು, ರೆಜಿಮೆಂಟಿನ ಗೌರವವನ್ನು ಮಣ್ಣುಪಾಲು ಮಾಡುವ ಯಾವ ಕೆಲಸವನ್ನೂ ಇವರು ಮಾಡಲಿಲ್ಲ.

ಮಹರ್ ಸೈನಿಕರ ಶೌರ್ಯವನ್ನು ನೆನಪಿನಲ್ಲಿಡುವ ಸಲುವಾಗಿ 1851ರಲ್ಲಿ ಕೊರೇಗಾಂವಿನಲ್ಲಿ ಬ್ರಿಟೀಷರು ವಿಜಯ ಸ್ಥಂಭವನ್ನು ಸ್ಥಾಪಿಸಿದರು. ಸ್ಥಂಭದ ಮೇಲೆ ಯುದ್ಧದಲ್ಲಿ ಹುತಾತ್ಮರಾದ 22 ಮಹರ್ ಸೈನಿಕರ ಹೆಸರುಗಳನ್ನು ಕೆತ್ತಲಾಗಿದೆ. ಭಾರತದ ಜಾತಿವ್ಯವಸ್ಥೆಯ ವಿರುದ್ಧ ಯುದ್ಧ ಸಾರಿದ ಮಹರರ ಶೌರ್ಯದ ವಿಜಯ ಸ್ಥಂಭ ನಮ್ಮ ಹೆಮ್ಮೆಯ ಪ್ರತೀಕವಾಗಿ ಇವತ್ತಿಗೂ ಕೊರೇಗಾಂವಿನಲ್ಲಿ ಘನತೆಯಿಂದ ನಿಂತಿದೆ.

ಡಾ. ಬಾಬಾಸಾಹೇಬ್ ಅಂಬೇಡ್ಕರರು ಪ್ರತಿ ವರ್ಷ ಜನವರಿ ಒಂದರಂದು ಕೊರೇಗಾಂವಿಗೆ ಭೇಟಿ ಕೊಡುತ್ತಿದ್ದರು, ಈಗಿನ ದಲಿತರು ಇದೇ ರೀತಿಯ ಶೌರ್ಯ ಮತ್ತು ಬದ್ಧತೆಯನ್ನು ತೋರಿಸಿ ಇಡೀ ದೇಶದಿಂದ ಬ್ರಾಹ್ಮಣ್ಯವನ್ನು ತೊಲಗಿಸಬೇಕೆಂದು ಹೇಳುತ್ತಿದ್ದರು. 1927ರ ಜನವರಿ ಒಂದರಂದು ಕೊರೇಗಾಂವಿನಲ್ಲಿ ದೊಡ್ಡ ಸಮಾವೇಶವನ್ನು ಆಯೋಜಿಸಿದ ಅಂಬೇಡ್ಕರರು ಅಸ್ಪ್ರಶ್ಯ ಸೈನಿಕರ ವೀರಗಾಥೆಯನ್ನು ಸಾರ್ವಜನಿಕರಿಗೆ ನೆನಪು ಮಾಡಿಕೊಟ್ಟರು.

ಪ್ರತಿ ವರ್ಷ ವರ್ಷದಾರಂಭದ ಹಿಂದಿನ ದಿನ ಅರ್ಥಹೀನ ಮೋಜು ಮಸ್ತಿಗಳಲ್ಲಿ ತೊಡಗುವ ಬದಲು ಪೇಶ್ವೆಗಳನ್ನು ಸೋಲಿಸಿ, ಮನುಸ್ಮ್ರತಿಯ ಆರಾಧಕರಾದ ಬ್ರಾಹ್ಮಣರ ಆಳ್ವಿಕೆಯಿಂದ ಅಸ್ಪ್ರಶ್ಯರಿಗೆ ಸ್ವತಂತ್ರ ತಂದುಕೊಟ್ಟ ನಮ್ಮ ಧೀರೋದ್ದಾತ ಹಿರೀಕರಿಗೆ ಗೌರವ ಸಲ್ಲಿಸೋಣ. ನಮ್ಮ ಭವ್ಯ ಇತಿಹಾಸವನ್ನು ಮತ್ತಷ್ಟು ಅರಿಯಲೂ ಇದು ಸುಸಂದರ್ಭ.

ಬಿ.ಆರ್.ಭಾಸ್ಕರ್ ಪ್ರಸಾದ್ ರವರು ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದ ಭೀಮಾ ಕೊರೇಗಾಂವಿನ ಬಗೆಗಿನ ಸಾಕ್ಷ್ಯಚಿತ್ರವನ್ನು ನೋಡಿದ ನಂತರ ಆ ಯುದ್ಧದ ಬಗ್ಗೆ ತಿಳಿದುಕೊಳ್ಳಲು ಒಂದಷ್ಟು ಅಂತರ್ಜಾಲ ಜಾಲಾಡುತ್ತಿದ್ದಾಗ drambedkarbooks.comನಲ್ಲಿ ಸಿಕ್ಕ ಲೇಖನದ ಕನ್ನಡ ಭಾವಾನುವಾದವಿದು.

ಜನ 1, 2016

ಮೇಕಿಂಗ್ ಹಿಸ್ಟರಿ: ಮುನ್ನುಡಿ.

Making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
‘ಮೇಕಿಂಗ್ ಹಿಸ್ಟರಿ’ ಮೊದಲ ಸಂಪುಟದ ಮುನ್ನುಡಿಯಲ್ಲಿ ಆ ಪುಸ್ತಕವನ್ನು ರಚಿಸುವ ಕಾರ್ಯದಲ್ಲಿ ಅನೇಕರ ಶ್ರಮವಿದೆ ಎಂದು ತಿಳಿಸಿದ್ದೆ. ಸಂಪುಟ – 2 ಬಿಡುಗಡೆಗೆ ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ಅನಾಮಿಕರಾಗಿಯೇ ಉಳಿದು ಹೋಗಿದ್ದ ಅಂತಹ ಒಬ್ಬ ಲೇಖಕರ ಪರಿಚಯ ಮಾಡಿಕೊಡಲೇಬೇಕಾದ ಅನಿವಾರ್ಯತೆ ಉಂಟಾಗಿದೆ. ಸಂತಸದ ಭಾವದೊಂದಿಗೆ ಮಾಡಿಕೊಡಬೇಕಾಗಿದ್ದ ಈ ಪರಿಚಯ ಸಂದರ್ಭಗಳು ಸೃಷ್ಟಿಸಿದ ವೈಪರೀತ್ಯಗಳಿಂದ ವಿಶಣ್ಣ ಭಾವನೆ ಪಡೆದುಕೊಂಡಿದೆ.

ಆಪ್ತ ಸಂಗಾತಿಗಳಿಂದ ‘ರಾಜಿ’ ಎಂದು ಕರೆಯಿಸಿಕೊಳ್ಳುತ್ತಿದ್ದಾಕೆ ಮಾರ್ಚ್ 20, 2001ರಂದು ಆಂಧ್ರದ ವಿಶಾಖಪಟ್ಟಣದ ಕೊತ್ತಪಲ್ಲಿ ಅರಣ್ಯಪ್ರದೇಶದಲ್ಲಿ ಪೋಲೀಸರ ಗುಂಡಿಗೆ ಬಲಿಯಾಗುತ್ತಾಳೆ. ಮಾರ್ಚ್ 20ರ ಮಧ್ಯಾಹ್ನ ವಿಶೇಷ ಪೋಲೀಸ್ ಪಡೆಯ 20 ಮಂದಿಯ ತಂಡ ರಾಜಿಯನ್ನು ಬಂಧಿಸಿ ನಾಲ್ಕು ಘಂಟೆಗಳಿಗೂ ಹೆಚ್ಚು ಕಾಲ ಹಿಂಸಿಸಿ ಕೊನೆಗೆ ತಲೆಯ ಹಿಂಭಾಗಕ್ಕೆ ಗುಂಡೊಡೆದುಬಿಡುತ್ತಾರೆ.

ಪೊದೆಯೊಂದರ ಹಿಂದೆ ಅಡಗಿ ಈ ದೃಶ್ಯವನ್ನು ನೋಡಿದ ಇಬ್ಬರು ಪುಟಾಣಿಗಳು ಬರ್ಬರತೆ ಸೃಷ್ಟಿಸಿದ ತಲ್ಲಣದಿಂದ ಮೂರು ದಿನ ಅನ್ನ ನೀರು ಮುಟ್ಟುವುದಿಲ್ಲ. ಆಘಾತದಿಂದ ಹೊರಬಂದ ಮಕ್ಕಳು ರಾಜಿಯ ಬಗೆಗಿನ ಗೌರವವನ್ನೆಚ್ಚಿಸುವ ಮಾತುಗಳನ್ನೇಳಿದರು. ಸಾಯುವ ಸಮಯದಲ್ಲಿ ‘ರಾಜಿ’ ರಾಜಿಯಾಗಲಿಲ್ಲ. ಕ್ರಾಂತಿಗೆ ಚಿರಾಯುವಾಗಲಿ ಎಂದು ಘೋಷಿಸುತ್ತಾ ಮರಣ ಹೊಂದಿದಳು.

ಕ್ರಾಂತಿಯ ಪರೀಕ್ಷೆಯಲ್ಲಿ ರಾಜಿ ಪೂರ್ಣಾಂಕದೊಂದಿಗೆ ಉತ್ತೀರ್ಣಳಾದಳು. ಗೋಧಿ ಬಣ್ಣದ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಾದ ಶೋಷಿತರ ನಾಯಕಿಗೆ ‘ಮೇಕಿಂಗ್ ಹಿಸ್ಟರಿ’ಯ ಈ ಸಂಪುಟ ಅರ್ಪಣೆ.

ಈ ಪುಸ್ತಕದ ಬರವಣಿಗೆಗೆ ಮತ್ತು ಪ್ರಕಟಣೆಗೆ ರಾಜಿ ನೀಡಿದ ಕೊಡುಗೆ ಅಪಾರ.

ಮೊದಲ ಮತ್ತು ಎರಡನೇ ಸಂಪುಟದ ಕರಡು ಪುಟಗಳನ್ನು ಮೊದಲು ಕೇಳುತ್ತಿದ್ದುದೇ ರಾಜಿ. ಚಳಿದಿನಗಳ ಅಪರಾತ್ರಿ ಸಮಯದಲ್ಲಾಗಲೀ, ಕಡು ಬಿಸಿಲಿನ ಮಧ್ಯಾಹ್ನವಾಗಿರಲಿ ರಾಜಿಯ ತನ್ಮಯತೆಯಲ್ಲಿ ಏರಿಳಿತಗಳಿರುತ್ತಿರಲಿಲ್ಲ. ಓದಿದ್ದನ್ನು ಕೇಳಿದ ಮೇಲೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡು, ಪ್ರಶ್ನೆಗಳನ್ನು ಕೇಳುತ್ತಿದ್ದಳು; ತಿದ್ದುತ್ತಿದ್ದಳು. ಹೆಸರು ಬಯಸದೆ ಮೌನವಾಗಿಯೇ ಈ ಪುಸ್ತಕದ ಪುಟಗಳಲ್ಲಿ ತನ್ನ ಛಾಪನ್ನು ಒತ್ತಿದ್ದಾಳೆ ರಾಜಿ.

ಮೊದಲ ಸಂಪುಟ ರಾಜಿಗೆ ಬಹಳಷ್ಟು ಋಣಿಯಾಗಿದೆ. ಬೋರು ಹೊಡೆಸುವ ತಾಂತ್ರಿಕ ಕೆಲಸಗಳನ್ನೆಲ್ಲ ರಾಜಿ ಮಾಡಿ ಮುಗಿಸಿದಳು. ಕಂಪ್ಯೂಟರಿನಲ್ಲಿ ಟೈಪಿಸಿ, ಪೇಜ್ ಸೆಟ್ ಮಾಡಿ ತಯಾರಿಸಿದ್ದು ರಾಜಿ. ಪುಸ್ತಕ ಹೊರಬರುವಷ್ಟರಲ್ಲಿ ರಾಜಿ ಡಿ.ಟಿ.ಪಿ ತಜ್ಞೆಯಾಗಿದ್ದಳು!


ಎರಡನೇ ಸಂಪುಟ ಅವಳ ಕಲ್ಪನೆಯಾಗಿತ್ತು. ಹತ್ತೊಂಬತ್ತನೇ ಶತಮಾನದ ಆದಿಯಲ್ಲಿ ಕರ್ನಾಟಕದ ಜನತೆ ನಡೆಸಿದ ಸಶಸ್ತ್ರ ಹೋರಾಟದ ಬಗ್ಗೆ ರಾಜಿ ಆಗಾಗ್ಗೆ ಹೇಳುತ್ತಿದ್ದಳು. ನಮ್ಮ ಜನಪ್ರಿಯ ಇತಿಹಾಸದ ಅಮೂಲ್ಯ ಕ್ಷಣಗಳನ್ನು ಪುನರ್ ವೀಕ್ಷಿಸಿ ಸೃಷ್ಟಿಸುವ ಮಹತ್ವಾಕಾಂಕ್ಷೆಯಿಂದ ನಗರದ ಬಸ್ ಹಿಡಿದೆವು. ಐತಿಹಾಸಿಕ ನಗರ ರೈತ ಬಂಡಾಯಕ್ಕೆ ಸಾಕ್ಷಿಯಾದ ಕೋಟೆಯ ಪಳಯುಳಿಕೆಗಳನ್ನು ಅಲ್ಲಿ ಕಂಡೆವು. ಕೆಲವು ತಿಂಗಳ ನಂತರ ಸಮಯ ಹೊಂಚಿಕೊಂಡು ನಂದಗಡಕ್ಕೆ ಹೋದೆವು. ಜನರ ಬಳಿ ಸಂಗೊಳ್ಳಿ ರಾಯಣ್ಣನ ಬಗ್ಗೆ ಮಾತನಾಡಿದೆವು. ಅಲ್ಲಿನ ಶ್ರಮಜೀವಿಗಳ ಜೊತೆಗಿನ ಮಾತುಕತೆಯಲ್ಲಿ ಸಂಗೊಳ್ಳಿ ರಾಯಣ್ಣನ ಹೋರಾಟದ ಕಥೆಗಳನ್ನು ಕೇಳಿದೆವು. ರಾಯಣ್ಣ ತಪ್ಪಿಸಕೊಂಡ, ಹೋರಾಡಿದ ಜಾಗಗಳನ್ನು ನಮಗೆ ತೋರಿಸಿ ಅವರ ಗುಡಿಸಿಲಿಗೆ ಕರೆದೊಯ್ದು ಉಣಬಡಿಸಿದರು.

ಅವರ ಎದೆಯ ಉರಿಯುತ್ತಿದ್ದ ಬೂದಿ ಮುಚ್ಚಿದ ಕೆಂಡದ ಶಾಖ ರಾಜಿಗೆ ತಾಕಿತ್ತು.

‘ರಾಯಣ್ಣ ಈ ಜನಕ್ಕೆ ಅಂತರಾಳದಲ್ಲಿ ಸ್ಪೂರ್ತಿಯಾಗುತ್ತಿದ್ದಾನ?’ ರಾಜಿಗೆ ಕೇಳಿದೆ. ಶತಮಾನಗಳ ಬೂದಿಯನ್ನು ಆಕೆಯ ಬಿಸಿಯುಸಿರು ಹಾರಿಸಿತು. ಬೂದಿಯಾರಿದ ಮೇಲೆ ಕಂಡದ್ದು ಕೆಂಪಗೆ ನಿಗಿನಿಗಿ ಹೊಳೆಯುವ ಕೆಂಡದ ಬೆಳಕು. ರಾಜಿ ಹೇಳಿದಳು ‘ದಶಕಗಳ ನಂತರ ಹೊಸ ತಲೆಮಾರಿನ ಜನತೆ ಕ್ರಾಂತಿಗೀತೆಯನ್ನು ನಂದಗಡ ಮತ್ತು ನಗರದ ಕಾಡು ಮತ್ತು ಬಯಲಿನಲ್ಲಿ ಹಾಡುತ್ತಿದ್ದಾರೆ’.

ಜನವರಿ 2001ರಂದು ನೋಡಿದ್ದೇ ಕೊನೆ. ಹಸಿರು ಬಣ್ಣದ ಉಡುಪಿನಲ್ಲಿದ್ದಳು. ಬೆನ್ನಿನ ಮೇಲೊಂದು ಬ್ಯಾಗು. ಬ್ಯಾಗಿನಲ್ಲಿ ಕೆಲವು ಖಾಲಿ ಟೇಪುಗಳು, ನೋಟ್ ಪುಸ್ತಕಗಳು ಮತ್ತು ಫಿಲಮ್ಮುಗಳು. ಯಾವುದೇ ಶಸ್ತ್ರವಿರಲಿಲ್ಲ. ಮುಷ್ಟಿ ಮೇಲೆತ್ತಿ ಕೆಂಪು ವಂದನೆ ಸಲ್ಲಿಸಿ ಕಾಮ್ರೇಡ್ ರಾಜೇಶ್ವರಿ ಬೀಳ್ಗೊಂಡಿದ್ದಳು.

ಭಾರತದ ಚರಿತ್ರೆಯ ಇತಿಹಾಸ ಮತ್ತು ಭವಿಷ್ಯದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ಸಾಮ್ಯತೆಗಳಿವೆ. ಮಧ್ಯಮವರ್ಗದ ಪ್ರಜಾಪ್ರಭುತ್ವ ಕ್ರಾಂತಿಯನ್ನು ಅರಿಯಲು ಕರ್ನಾಟಕದ ಇತಿಹಾಸವನ್ನೊಮ್ಮೆ ಅವಲೋಕಿಸಬೇಕು. ಕ್ರಾಂತಿಯ ಹಾದಿಯನ್ನು ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಕಾಲದ ಮೈಸೂರು ರಾಜ್ಯದಲ್ಲಿ ನಿರ್ಮಿಸಲಾಯಿತು. ಊಳಿಗಮಾನ್ಯ ಜಮೀನ್ದಾರಿ ಪದ್ಧತಿಯ ವಿರುದ್ಧದ ಹೋರಾಟ ಪ್ರಬುದ್ಧವಾಗುತ್ತಿದ್ದುದನ್ನು ಆ ದಿನಗಳಲ್ಲೇ ಕಾಣಬಹುದು. ನಂತರ ಹೋರಾಟ ವೇಗ ಪಡೆದುಕೊಂಡಿದ್ದು ನಂದಗಡ ಮತ್ತು ನಗರಗಳಲ್ಲಿ. ಊಳಿಗಮಾನ್ಯ ಪದ್ಧತಿ ಮತ್ತು ವಸಾಹತುಶಾಹಿಯ ವಿರುದ್ಧ ನಡೆದ ಜನರ ಜನಪ್ರಿಯ ಯುದ್ಧ ಬಿಡುಗಡೆ ಮತ್ತು ಪ್ರಜಾಪ್ರಭುತ್ವದೆಡೆಗಿನ ಅವರ ಪ್ರೀತ್ಯಾಸೆಯನ್ನು ಎತ್ತಿ ತೋರಿತ್ತು. ಬೂದಿ ಮುಚ್ಚಿದ ಕೆಂಡದಂತಿದ್ದ ಈ ಘಟನಾವಳಿಗಳು ‘ಮೇಕಿಂಗ್ ಹಿಸ್ಟರಿ’ಯಲ್ಲಿ ಬಂದಿದ್ದರೆ ಅದರ ಶ್ರೇಯಸ್ಸು ರಾಜಿಗೆ ಸಲ್ಲಬೇಕು.

ಅವಳ ಗುರಿ ಧ್ಯೇಯ ದೊಡ್ಡದಿತ್ತು. ಇತಿಹಾಸದ ನೆನಹುಗಳು ಭವಿಷ್ಯವನ್ನು ರೂಪಿಸಬೇಕೆಂಬ ಆಸೆಯಿತ್ತು. ಮಧ್ಯಮವರ್ಗದ ಪ್ರಜಾಪ್ರಭುತ್ವ ಕ್ರಾಂತಿಯ ಘಟನಾವಳಿಗಳನ್ನು ಗಮನಿಸಿ ಸುಮ್ಮನಾಗಿ ಬಿಡುವುದು ಅವಳ ಉದ್ದಿಶ್ಯವಾಗಿರಲಿಲ್ಲ. ಅವಳ ಬುದ್ಧಿಮತ್ತೆ ಜಡವಾಗಿರಲಿಲ್ಲ. ಶ್ರಮಿಕರ ಕ್ರಾಂತಿಯನ್ನು ಕಣ್ಣಾರೆ ನೋಡಿ, ಅನುಭವಿಸಿ ಹಂಚಿಕೊಳ್ಳಬೇಕೆಂದು ಆಶಿಸಿದ್ದಳು ರಾಜಿ.

ಕರ್ನಾಟಕದ ಇತಿಹಾಸದ ಪುಟಗಳು ಹಳೆಯ ಪ್ರಜಾಪ್ರಭುತ್ವ ಕ್ರಾಂತಿಯ ಸಾಧ್ಯತೆಗಳನ್ನು ತೋರಿದ್ದರೆ, ಆಂಧ್ರಪ್ರದೇಶದ ಜನರ ಯುದ್ಧ ನವ ಪ್ರಜಾಪ್ರಭುತ್ವ ಕ್ರಾಂತಿಯ ಹೊಳಹುಗಳನ್ನು ತೋರುತ್ತಿತ್ತು.

ಇತಿಹಾಸ ನೋಡಿದ ರಾಜಿಗೆ ಭವಿಷ್ಯ ವೀಕ್ಷಿಸುವ ತವಕವಿತ್ತು. ನವ ಪ್ರಜಾಪ್ರಭುತ್ವದ ಸ್ಥಾಪನೆಗೆ ನಡೆಯುತ್ತಿದ್ದ ಜನರ ಯುದ್ಧವನ್ನು ಅಭ್ಯಸಿಸಲು ಆಂಧ್ರಪ್ರದೇಶದ ಹಳ್ಳಿಗಳಿಗೆ ತೆರಳಿದಳು. ಅಭ್ಯಸಿಸಿ, ಸಂಗ್ರಹಿಸಿ ಕರ್ನಾಟಕದ ಜನತೆಗೆ ಆ ಹೋರಾಟದ ಕಿಡಿಯನ್ನು ತಲುಪಿಸಬೇಕೆಂದಿದ್ದಳು.

ನೂರಾರು ಜನರನ್ನು ಸಂದರ್ಶಿಸಿದಳು. ಕ್ರಾಂತಿ ಗೀತೆಗಳನ್ನು ಸಂಗ್ರಹಿಸಿದಳು. ಓದಿದ್ದು, ಕೇಳಿದ್ದನ್ನೆಲ್ಲಾ ನೋಟ್ ಮಾಡಿಕೊಂಡಳು. ಶೋಷಿತ ಆದಿವಾಸಿಗಳ ಮತ್ತವರ ಆಶಾಕಿರಣದಂತಿದ್ದ ಹಸಿರು ಬಟ್ಟೆ ತೊಟ್ಟಿದ್ದ ಯುವ ಗೆರಿಲ್ಲಾ ಹೋರಾಟಗಾರರ ಫೋಟೋ ತೆಗೆದುಕೊಂಡಳು.

ಮಾರ್ಚ್ 20ರಂದು ಮರದ ಕೆಳಗೆ ಬರೆಯುತ್ತ ಕುಳಿತಿದ್ದಳು ರಾಜಿ. ಗುಂಡಿನ ಶಬ್ದ ಮೊರೆಯಿತು. ಪೊದೆಯೊಳಗೆ ಮರೆಯಾಗಲು ಯತ್ನಿಸಿದಳು. ಅವರ ಕೊಳಕು ಕೈಗಳು ಅವಳ ಮೇಲೆ ಬಿದ್ದವು. ನಂತರದ್ದಲ್ಲೆವೂ ಕ್ಷಣಾರ್ಧದಲ್ಲಿ ನಡೆದು ಹೋಯಿತು. ಅವಳ ಮೆದುಳಿನ ಮೂಲಕ ಗುಂಡುಗಳು ಸಾಗಿದವು. ಕೆನ್ನೆಯ ಮೇಲೆ ರಕ್ತ; ಬಾಯ ಮೂಲಕ ರಕ್ತ. ಸಂಗ್ರಹಿಸಿ ಬರೆದ ಪುಸ್ತಕಗಳನ್ನು ರಾಜಿ ರಕ್ಷಿಸಲಾಗಲಿಲ್ಲ. ಕಾಡಿನ ನಡುವೆ ರಾಜಿ ವಿಶ್ರಾಂತಿಯೆಡೆಗೆ ಸಾಗಿದಳು.

ಇಂದವಳು ಗಾಢ ನಿದ್ರೆಯಲ್ಲಿದ್ದಾಳೆ.

ಮೇಕಿಂಗ್ ಹಿಸ್ಟರಿಯ ಎರಡನೇ ಸಂಪುಟ ರಾಜಿಗೆ ಅರ್ಪಣೆ. ಓದು ಸಾಗಿದಂತೆ ಚಿರನಿದ್ರೆಯಲ್ಲಿರುವ ರಾಜೇಶ್ವರಿ ಓದುಗರನ್ನು ಎಚ್ಚರಿಸುತ್ತಾಳೆ. ಭವ್ಯ ಇತಿಹಾಸದ ಹೊಳಹುಗಳನ್ನು ಅವಳ ಮುಖಾಂತರ ಕಾಣುತ್ತೇವೆ. ಅಷ್ಟು ಮಾತ್ರವಲ್ಲ, ಭವಿಷ್ಯತ್ತಿನ ದರ್ಶನವನ್ನೂ ಮಾಡಿಸುತ್ತಾಳೆ ರಾಜಿ. ಕ್ರಾಂತಿಯ ಪತಾಕೆಗಳು ಹರಡಲಾರಂಭಿಸಿದಂತೆ ಸತ್ತವರ ನೆನಪುಗಳನ್ನು ಬದುಕಿರುವವರ ಹೃದಯ ಮತ್ತು ಮನಸ್ಸುಗಳಿಂದ ಅಳಿಸಿಹಾಕುವುದು ಎಷ್ಟು ಕಷ್ಟ ಎಂಬ ಸಂಗತಿ ಶೋಷಕ ವರ್ಗ ಮತ್ತವರ ಸರಕಾರಗಳಿಗೆ ಅರಿವಾಗುತ್ತದೆ. ಇದೇ ಇತಿಹಾಸ – ವರ್ಗ ಹೋರಾಟದ ಇತಿಹಾಸ.

ರಾಜಿಗೆ ಇದರ ಅರಿವಿತ್ತು. ತನ್ನ ಬಳಿ ಇದ್ದ ಅತ್ಯಮೂಲ್ಯವಾದ ಒಂದೇ ಒಂದು ವಸ್ತುವನ್ನು – ತನ್ನ ಜೀವವನ್ನು – ಕಾಲ ಕೇಳಿದಾಗ ಕೊಟ್ಟುಬಿಟ್ಟಳು, ಶೋಷಿತರ ಪರ ಹೋರಾಟಕ್ಕಾಗಿ.
ಸಾಕಿ
ನವೆಂಬರ್ 1, 2002.

ಮುಂದಿನ ಅಧ್ಯಾಯ ಓದಲು ಇಲ್ಲಿ ಕ್ಲಿಕ್ಕಿಸಿ 

ಮನೆ ತುಂಬ ಮಸಿ ಎದೆ ತುಂಬ ಹೊಗೆ ಹೊಟ್ಟೆ ತುಂಬ ವಿಷ......


ಚಿತ್ರ-ಮಾಹಿತಿ: ಮುನೀರ್ ಕಾಟಿಪಳ್ಳ.
Mrpl ನ ಕೋಕ್ ಸಲ್ಫರ್ ಘಟಕದ ವಿರುದ್ದ DYFI ಮಾರ್ಗದರ್ಶನದಲ್ಲಿ "ನಾಗರಿಕ ಹೋರಾಟ ಸಮಿತಿ" ಯ ನೇತೃತ್ವದಲ್ಲಿ ಜೋಕಟ್ಟೆ ನಾಗರಿಕರು 2014ರಲ್ಲಿ ಆರಂಭಿಸಿದ ಹೋರಾಟ ಈ ವರ್ಷವಿಡೀ ಸಂಘರ್ಷಮಯವಾಗಿ ಮುಂದುವರಿಯಿತು. 2015ನೇ ಇಸವಿಯ ಉದ್ದಕ್ಕೂ ಪ್ರತಿ ತಿಂಗಳು ಮಹತ್ವದ ಬೆಳವಣಿಗೆಗಳು ನಡೆದಿದ್ದು, ಅದರದೊಂದು ಹಿನ್ನೋಟ ಇಲ್ಲಿದೆ: 
ಜನವರಿ:
ಪುತ್ತೂರಿನಲ್ಲಿ, ಉಪ್ಪಿನಂಗಡಿಯಲ್ಲಿ ಪರಸ್ಪರ ಕಲ್ಲುತೂರಾಟ... ಮಂಗಳೂರಿನ ಜೋಕಟ್ಟೆಯಲ್ಲಿ sez ವಿರುದ್ದದ ಬದುಕಿನ ಹಕ್ಕಿನ ಹೋರಾಟದಲ್ಲಿ, ಪ್ರತಿಭಟನಾ ಸ್ಥಳದಲ್ಲೇ ಸಹಭೋಜನ. ಪೊಲೀಸರಿಂದ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ.
ಫೆಬ್ರವರಿ:
Mrpl ಪ್ರಧಾನ ದ್ವಾರದ ಮುಂದೆ ಬಿಳಿ ಬಟ್ಟೆ ಹೊದ್ದ ಸಾಲು ಸಾಲು ಹೆಣಗಳ ರಾಶಿಯ ಅಣಕು ಪ್ರದರ್ಶನ, mrpl ವಿರುದ್ದ ಘೋಷಣೆ. ಅಸಿಸ್ಟೆಂಟ್ ಕಮೀಷನರ್ ಅಧ್ಯಯನ ನಡೆಸಿ ಕೊಟ್ಟಿರುವ ವರದಿಯ ಪ್ರಕಾರವೂ ಅಪಾಯಕಾರಿ ಮಾಲಿನ್ಯದ ದೃಢೀಕರಣ.
ಮಾರ್ಚ್:
ಮಾಲಿನ್ಯ ನಿಯಂತ್ರಣ ಮಂಡಳಿಯ ಗೋಡೆಗೆ, ಅದರ ಸುತ್ತಮುತ್ತ ಪೋಸ್ಟರ್ ಅಂಟಿಸಿ ಹೋರಾಟಕ್ಕೆ ಚಾಲನೆ. ನೂರಾರು ಶಾಲಾ ಮಕ್ಕಳಿಂದ mrpl ಗೇಟ್ ಮುಂದೆ ಪ್ರತಿಭಟನೆ.
ಏಪ್ರಿಲ್:
Mrpl ಬಲವಂತದ ಕಾಮಗಾರಿಯ ವಿರುದ್ದ ಗೆರಿಲ್ಲಾ ಮಾದರಿ ಸಂಘರ್ಷ. ಬಂದೂಕುಧಾರಿ ಭದ್ರತಾ ಪಡೆಯ ಮೇಲೆ ಜೋಕಟ್ಟೆಯ ಮಹಿಳೆಯರು, ಮಕ್ಕಳ ಸಹಿತ ನೂರಾರು ನಾಗರಿಕರ ಕಲ್ಲು ತೂರಾಟ. 
ಕೇಂದ್ರ ಪೆಟ್ರೋಲಿಯಂ ಮಂತ್ರಿ ಧರ್ಮೇಂದ್ರ ಪ್ರಧಾನ್ ರಿಂದ mrpl ಭೇಟಿ, ತ್ರಿಪಕ್ಷೀಯ ಸಮಿತಿ ರಚಿಸಲು ಜಿಲ್ಲಾಧಿಕಾರಿಗೆ ಸೂಚನೆ. 
ಮೇ:
Mrpl ಚಲೋ ಘೋಷಣೆಯಡಿ ಹತ್ತು ಕಿ. ಮೀ ಉದ್ದದ ಪಾದಯಾತ್ರೆ. Mrpl ಎದುರು ನಡೆದ ಸಾರ್ವಜನಿಕ ಸಭೆಯಲ್ಲಿ ಕರಾವಳಿ ಭಾಗದ ಹೆಸರಾಂತ ಮೀನುಗಾರ ಮುಖಂಡರು, ರೈತನಾಯಕರು, ಪರಿಸರ ಹೋರಾಟಗಾರರು, ವಕೀಲರ ಉಪಸ್ಥಿತಿ. ಹೋರಾಟ ಮತ್ತಷ್ಟು ವಿಸ್ತಾರ. 
ಜೂನ್:
ಕೋಕ್ ಸಲ್ಫರ್ ಫಟಕದ ಸಮಸ್ಯೆ ಬಗೆ ಹರಿಸಲು ಸರಕಾರದ ಮಟ್ಟದಲ್ಲಿ ಜನಪ್ರತಿನಿಧಿಗಳು, ಉಸ್ತುವಾರಿ ಮಂತ್ರಿ, ಜಿಲ್ಲಾಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ, mrpl, sez ಮುಖ್ಯಸ್ಥರು, ನಾಗರಿಕರ ಪ್ರತಿನಿಧಿಗಳನ್ನೊಳಗಂಡ ಸಮಿತಿ ರಚನೆ. ಹಾಗೂ, "ಮಾಲಿನ್ಯ ನಿಯಂತ್ರಣ ಮಂಡಳಿ”ಯಿಂದ n i t k ಯ ಫ್ರೊಫೆಸರ್ ಡಾ ಶ್ರೀನಿಕೇತನ, ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತದ ಪ್ರತಿನಿಧಿ, mrpl ನಿರ್ದೇಶಕರು, ನಾಗರಿಕ ಹೋರಾಟ ಸಮಿತಿಯ ಪ್ರತಿನಿಧಿಗಳನ್ನೊಳಗೊಂಡ ತಜ್ಞರ ಸಮಿತಿಯ ರಚನೆ. ಈ ಎರಡು ಸಮಿತಿಗಳ ಮೂಲಕ ಸಮಸ್ಯೆಯ ಕಾರಣ, ಪರಿಹಾರದ ದಾರಿ ಹುಡುಕುವ ನಿಟ್ಟಿನಲ್ಲಿ ಅಧ್ಯಯನಕ್ಕೆ ಚಾಲನೆ. ಹತ್ತು ತಿಂಗಳ ಹೋರಾಟಕ್ಕೆ ಒಂದು ಹಂತದ ಗೆಲುವು. 
ಜುಲೈ:
ಹೋರಾಟದ ರಣರಂಗವಾಗಿ ಮಾರ್ಪಟ್ಟ ಜೋಕಟ್ಟೆ. ಪೊಲೀಸರ ಕೋಟೆ ನಿರ್ಮಿಸಿ ಕಾರಿಡಾರ್ ರಸ್ತೆ ಕಾಮಗಾರಿ ಶುರುಮಾಡಿದ್ದ sezಗೆ ಹೋರಾಟ ಸಮಿತಿಯಿಂದ ತಡೆ. ಅರ್ಧ ಗಂಟೆಯ ಸಂಘರ್ಷದ ನಂತರ ಪೊಲೀಸರಿಂದ ಹತ್ತು ಮಹಿಳೆಯರೂ ಸೇರಿದಂತೆ ಮೂವತ್ತೈದು ಜನರ ಬಂಧನ. ಇದನ್ನು ಖಂಡಿಸಿ ಸುರತ್ಕಲ್ ಠಾಣೆಯ ಮುಂದೆ ನೂರಾರು ಸಾರ್ವಜನಿಕರಿಂದ ಪ್ರತಿಭಟನೆ. ಜನಾಗ್ರಹಕ್ಕೆ ಮಣಿದ ಪೊಲೀಸರಿಂದ ಎಲ್ಲ 35 ಜನರ ಬೇಷರತ್ ಬಿಡುಗಡೆ. 
ಆಗಸ್ಟ್:
ಸ್ಥಳಕ್ಕೆ ಭೇಟಿ ನೀಡಿದ್ದ mrpl ಡೈರೆಕ್ಟರ್ ವೆಂಕಟೇಶ್ ಅವರ ಅಚ್ಚಬಿಳಿಯ ಅಂಗಿಯ ಬೆನ್ನ ಮೇಲೆ ಸ್ಥಳೀಯ ಮಹಿಳೆಯರಿಂದ ತಮ್ಮ ಕೈಗಂಟಿಕೊಂಡಿದ್ದ ಕೋಕ್ ಕಪ್ಪು ಮಸಿ ಹಚ್ಚಿ ಪರಿಣಾಮಕಾರಿ ಪ್ರತಿಭಟನೆ. 
ಹತ್ತು ತಿಂಗಳ ಪಟ್ಟು ಬಿಡದ ಹೋರಾಟಕ್ಕೆ ರಾಜ್ಯ ಸರಕಾರದ ಮಾನ್ಯತೆ - ಜಿಲ್ಲಾಧಿಕಾರಿ, mp, mla, ಕಂಪೆನಿಯ md ಗಳು ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ನಗರ ಪಾಲಿಕೆ, ಪೊಲೀಸ್ ಕಮೀಷನರ್ ಗಳು, ಜಿಲ್ಲಾ ಪಂಚಾಯತ್ ceo, ಗ್ರಾಮಸ್ಥರ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಿ ಸಮಸ್ಯೆ ಪರಿಶೀಲನೆ ಮತ್ತು ಪರಿಹಾರ ಮಾರ್ಗಗಳ ರಚನೆಗೆ ಸೂಚನೆ.
ಸೆಪ್ಟೆಂಬರ್:
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸೇರಿದಂತೆ ನಾಗರಿಕ ಹೋರಾಟ ಸಮಿತಿ, ಜೋಕಟ್ಟೆಯ 42 ಪ್ರತಿಭಟನಾಕಾರರ ಬಂಧನ. ಒಂದು ದಿನ ಸೆರೆವಾಸ, ಸಾರ್ವಜನಿಕರ ಆಕ್ರೋಶಭರಿತ ಪ್ರತಿಭಟನೆಗೆ ಮಣಿದು ಮಧ್ಯಂತರ ಜಾಮೀನು ನೀಡಿ ಬಿಡುಗಡೆ. 
ಹೋರಾಟನಿರತರ ಮೇಲೆ ದೌರ್ಜನ್ಯ ಎಸಗಿ, ಎರಡೆರಡು ಕೇಸು ಜಡಿದು ಜೈಲಿಗಟ್ಟಲು ಯತ್ನಿಸಿದ ಪೊಲೀಸರ ವಿರುದ್ದ ಕೈಕೋಳ ತೊಟ್ಟು ಪ್ರತಿಭಟನೆ, ಸುರತ್ಕಲ್ ಪೊಲೀಸ್ ಠಾಣೆಯ ಬೀದಿಯಲ್ಲಿ ಮೆರವಣಿಗೆ. 
ಅಕ್ಟೋಬರ್:
ಮಾಲಿನ್ಯ ಮಂಡಳಿಯ ಅಧಿಕಾರಿಗಳಿಂದ ನಾಗರಿಕ ಸಮಿತಿಯ ಉಪಸ್ಥಿತಿಯಲ್ಲಿ Mrpl ಆವರಣ ಪ್ರವೇಶ, ಪರಿಶೀಲನೆ. ಅಪಾಯ ಉಂಟುಮಾಡುವ ಮಾಲಿನ್ಯಕಾರಿ ಪತ್ತೆ. ಸಿಕ್ಕಿಬಿದ್ದ Mrpl ಗೆ ಭಾರೀ ಮುಖಭಂಗ, ತಪ್ಪೊಪ್ಪಿಗೆ.
Mrpl ವಿರುದ್ಧದ ನಾಗರಿಕ ಹೋರಾಟ ಸಮಿತಿಗೆ ಒಂದು ವರ್ಷ. 
ನವೆಂಬರ್:
ಒಂದೆಡೆ ಮಾಲಿನ್ಯದ ಕಾರಣಕ್ಕಾಗಿ mrpl ಗೆ ನೋಟೀಸ್ ಕೊಡುತ್ತಲೇ ಹಿಂಬಾಗಿಲಿನಿಂದ ತಡೆಹಿಡಿಯಲ್ಪಟ್ಟ ಪರವಾನಗಿಯನ್ನು ನವೀಕರಿಸಿದ ಸರ್ಕಾರ, ಮಾಲಿನ್ಯ ನಿಯಂತ್ರಣ ಮಂಡಳಿಗಳ ಡಬ್ಬಲ್ ಗೇಮ್ ವಿರುದ್ಧ ಪ್ರತಿಭಟನೆ. ವೃದ್ಧೆಯರು, ಮಕ್ಕಳೂ ಸೇರಿದಂತೆ ನೂರಾರು ನಾಗರಿಕರಿಂದ ಕೈಯಲ್ಲಿ ಪೊರಕೆ ಹಿಡಿದು ಪ್ರತಿಭಟನಾ ಮೆರವಣಿಗೆ. 
ಡಿಸೆಂಬರ್:
Mrpl Sez ವಿರುದ್ಧ ತೀವ್ರ ಹೋರಾಟಕ್ಕೆ ತಯಾರಿ. ತಳಮಟ್ಟದ ಸಂಘಟನೆಗೆ ಆದ್ಯತೆ. ಜೋಕಟ್ಟೆ ಸುತ್ತಮುತ್ತ ಪ್ರದೇಶದ ಬೀದಿ, ಗಲ್ಲಿಗಳ ಮಟ್ಟದಲ್ಲಿ ಹೋರಾಟ ಸಮಿತಿಯ ಘಟಕ ರಚನೆಗೆ ಚಾಲನೆ. ಧೀರ್ಘಾವದಿ ನಡೆಯಲಿರುವ ಹೋರಾಟಕ್ಕೆ ಜನರು ಮಾನಸಿಕವಾಗಿ ಸಜ್ಜು.

ಡಿಸೆಂ 31, 2015

2015ರ ರಾಜಕೀಯ ಪ್ರಮುಖಾಂಶ.

Dr Ashok K R
ಮತ್ತೊಂದು ಹೊಸ ವರ್ಷವನ್ನು ಬರಮಾಡಿಕೊಳ್ಳುವಾಗ ಹಳೆಯ ವರ್ಷದ ಆಗುಹೋಗುಗಳ ಬಗ್ಗೆ ಒಂದು ಪುಟ್ಟ ಅವಲೋಕನ. ಅಂತರಾಷ್ಟ್ರೀಯ ಮಟ್ಟದಲ್ಲಿ ನರೇಂದ್ರ ಮೋದಿಯ ವರ್ಚಸ್ಸು ಏರಿದರೆ ರಾಷ್ಟ್ರದೊಳಗಿನ ಚುನಾವಣೆಗಳಲ್ಲಿ ಬಿಜೆಪಿ ಸೋಲು ಕಂಡು ಮೋದಿ ಅಲೆಯೆಂಬುದು ಕ್ಷೀಣವಾಗುತ್ತಿದೆ ಎಂಬ ವಾದವನ್ನು ಬಲಗೊಳಿಸುತ್ತಿದೆ. ಇನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವರ್ಚಸ್ಸು ಆರಕ್ಕೇರದೆ ಮೂರಕ್ಕಿಳಿಯದೆ ಇದ್ದರೂ ಚುನಾವಣೆಗಳಲ್ಲಿ ಗೆಲುವು ಕಾಣುವುದರಲ್ಲಿ ಹಿಂದೆ ಬಿದ್ದಿಲ್ಲ. ಮನಸ್ಸು ಮಾಡಿದರೆ ಬಿಜೆಪಿಯನ್ನು ಸೋಲಿಸಬಹುದು ಎಂಬಂಶವನ್ನು ದೆಹಲಿ ಮತ್ತು ಬಿಹಾರದ ಚುನಾವಣೆಗಳು ತೋರಿಸಿಕೊಟ್ಟರೆ ಮುಳುಗುತ್ತಿರುವ ಹಡಗಾದ ಕಾಂಗ್ರೆಸ್ಸನ್ನು ಉಳಿಸಲು ನಾವಿಕ ಸ್ಥಾನದಲ್ಲಿ ಅಲುಗಾಡದಂತೆ ಕುಳಿತಿರುವ ಸೋನಿಯಾ ಗಾಂಧಿ ಮತ್ತು ಬಲವಂತವಾಗಿ ಕೂರಿಸಲ್ಪಟ್ಟಿರುವ ರಾಹುಲ್ ಗಾಂಧಿ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ, ಮಾಡುವ ಸೂಚನೆಗಳೂ ಇಲ್ಲ. ಪರ್ಯಾಯ ರಾಜಕೀಯ ಶಕ್ತಿಯೊಂದರ ಉದಯಕ್ಕಿದು ಸಕಾಲ ಎನ್ನುವಂತೆ ಕಂಡರೂ ಅಂತಹ ಶಕ್ತಿ ಸದ್ಯದ ಮಟ್ಟಿಗೆ ಗೋಚರವಾಗುತ್ತಿಲ್ಲ.

ಅಪಾರ ನಿರೀಕ್ಷೆಗಳನ್ನು ಮೂಡಿಸಿ ಅಧಿಕಾರವಿಡಿದ ಬಿಜೆಪಿ ನೇತೃತ್ವದ ಎನ್.ಡಿ.ಎ ಕಾರ್ಯವೈಖರಿ ಹೇಗಿದೆ ಎಂದರೆ ಉತ್ತರಕ್ಕೆ ಬಿಜೆಪಿಯ ಬೆಂಬಲಿಗರೂ ತಡವರಿಸಬಹುದು. ಎರಡನೇ ಅವಧಿಯ ಯು.ಪಿ.ಎ ಸರಕಾರಕ್ಕೆ ಹೋಲಿಸಿದರೆ ಈಗಿನ ಸರಕಾರ ಉತ್ತಮವಾಗಿದೆಯಾ? ಭ್ರಷ್ಟಾಚಾರದ ಲೆಕ್ಕಾಚಾರದಲ್ಲಿ ನೋಡಿದರೆ ಈಗಿನ ಸರಕಾರವೇ ಉತ್ತಮ. ಯಾವುದೇ ದೊಡ್ಡ ಭ್ರಷ್ಟಾಚಾರದ ಕಳಂಕ ಈಗಿನ ಸರಕಾರದವಧಿಯಲ್ಲಿ ನಡೆದಿಲ್ಲ. ಭ್ರಷ್ಟರಹಿತ ಸರಕಾರವೆಂಬ ಇಮೇಜಿಗೆ ಒಂದಷ್ಟು ಪೆಟ್ಟು ಕೊಟ್ಟಿದ್ದು ಡಿಡಿಸಿಎ ಹಗರಣ. ಅರುಣ್ ಜೇಟ್ಲಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಡಿಡಿಸಿಎಯಲ್ಲಿ ಭ್ರಷ್ಟತೆ ನಡೆಸಿದ್ದರು ಎಂದು ಅರವಿಂದ್ ಕೇಜ್ರಿವಾಲ್ ಅಬ್ಬರಿಸಲಾರಂಭಿಸಿದ್ದು ಬಿಜೆಪಿಯ ವರ್ಚಸ್ಸಿಗೆ ಒಂದಷ್ಟು ಧಕ್ಕೆ ತಂದಿತು. ಹಾಗೆ ನೋಡಿದರೆ ಅರವಿಂದ್ ಕೇಜ್ರಿವಾಲ್ ಇದರ ಬಗ್ಗೆ ಮಾತನಾಡಿದ್ದು ಅವರ ಮುಖ್ಯ ಕಾರ್ಯದರ್ಶಿಯ ಕಛೇರಿಯ ಮೇಲೆ ಸಿಬಿಐ ದಾಳಿ ನಡೆಸಿದ ನಂತರ. ಅರವಿಂದ್ ಕೇಜ್ರಿವಾಲ್ ಗೆ ಸಿಬಿಐ ಮೂಲಕ ಬುದ್ಧಿ ಕಲಿಸಲೋದ ಬಿಜೆಪಿಗೆ ಅರವಿಂದ್ ಕೇಜ್ರಿವಾಲ್ ಡಿಡಿಸಿಎ ಹಗರಣದ ಮೂಲಕ ಕೊಟ್ಟ ತಪರಾಕಿಯಿಂದ ಸುಧಾರಿಸಿಕೊಳ್ಳಲು ಸಮಯ ಬೇಕು. ಕೇವಲ ಕೇಜ್ರಿವಾಲ್ ಮಾತನಾಡಿದ್ದರೆ ಅದು ರಾಜಕೀಯ ವೈಷಮ್ಯವೆಂದು ಮುಚ್ಚಿಹೋಗುತ್ತಿತ್ತೋ ಏನೋ. ಮಾಜಿ ಕ್ರಿಕೇಟಿಗ ಮತ್ತು ಹಾಲಿ ಬಿಜೆಪಿ ಸಂಸದ ಕೀರ್ತಿ ಆಜಾದ್ ಕೂಡ ಕೇಜ್ರಿವಾಲ್ ಮಾತಿಗೆ ಸಹಮತ ವ್ಯಕ್ತಿಪಡಿಸಿ ನೇರವಾಗಿ ಅರುಣ್ ಜೇಟ್ಲಿಯವರ ವಿರುದ್ಧ ಮಾತನಾಡಲಾರಂಭಿಸಿದ್ದು ಬಿಜೆಪಿಗೆ ಇರುಸುಮುರುಸು ಉಂಟುಮಾಡಿತು. ಯುಪಿಎ ಅವಧಿಯ ಭ್ರಷ್ಟಾಚಾರವನ್ನೇ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿದ್ದ ಬಿಜೆಪಿಯ ವರ್ತನೆ ಯಾವ ರೀತಿ ಇರಬೇಕಿತ್ತು? ಅರುಣ್ ಜೇಟ್ಲಿಯವರ ರಾಜೀನಾಮೆ ಪಡೆದು ಅವರು ಆರೋಪ ಮುಕ್ತರಾದ ಪಕ್ಷದಲ್ಲಿ ಮತ್ತೆ ಸೇರಿಸಿಕೊಳ್ಳಬಹುದಿತ್ತು. ಭ್ರಷ್ಟರಹಿತ ಸರಕಾರ ಎಂಬ ಹೇಳಿಕೆಗೊಂದು ಅರ್ಥ ಸಿಗುತ್ತಿತ್ತು. ಅಂತಹದ್ದೇನನ್ನೂ ಮಾಡದ ಬಿಜೆಪಿ ತಾನೂ ಕೂಡ ಇತರ ಪಕ್ಷದಂತೆಯೇ ಭ್ರಷ್ಟತೆಯ ಆರೋಪ ಹೊತ್ತವರ ಪರ ಎಂದು ತೋರಿಸಿಬಿಟ್ಟಿತು. ಮಂತ್ರಿಯ ವಿರುದ್ಧ ಮಾತನಾಡಿದ ಕೀರ್ತಿ ಆಜಾದ್ ರನ್ನು ಪಕ್ಷದಿಂದ ಉಚ್ಛಾಟಿಸಲಾಯಿತು. ತಮಾಷೆಯೆಂದರೆ ತನ್ನ ವಿರುದ್ಧ ಮಾತನಾಡಿದವರನ್ನು ಪಕ್ಷದಿಂದ ಉಚ್ಛಾಟಿಸಿದ್ದ, ರಾಜೀನಾಮೆ ಕೊಟ್ಟು ತೊಲಗುವಂತೆ ಮಾಡಿದ್ದ ಅರವಿಂದ್ ಕೇಜ್ರಿವಾಲ್ ‘ಬಿಜೆಪಿಯಲ್ಲಿ ಪ್ರಜಾಪ್ರಭುತ್ವವೇ ಇಲ್ಲ ನೋಡ್ರಿ’ ಎಂದು ಟ್ವಿಟರಿನಲ್ಲಿ ಅಲವತ್ತುಕೊಂಡಿದ್ದು. ಭ್ರಷ್ಟರ ಗೂಡಾಗಿರುವ ಕಾಂಗ್ರೆಸ್ ಕೀರ್ತಿ ಆಜಾದ್ ಪಕ್ಷಕ್ಕೆ ಸೇರಬಯಸಿದರೆ ಸ್ವಾಗತಿಸುತ್ತೇವೆ ಎಂದು ಘೋಷಿಸಿದ್ದು! ನರೇಂದ್ರ ಮೋದಿ, ಅಮಿತ್ ಶಾ ಮತ್ತು ಅರುಣ್ ಜೇಟ್ಲಿಯವರ ವಿರುದ್ಧ ಮಾತನಾಡುವವರಿಗೆ ಪಕ್ಷದಲ್ಲಿ ಸ್ಥಾನವಿಲ್ಲ ಎನ್ನುವ ವದಂತಿ ಕೀರ್ತಿ ಆಜಾದರ ವಿಷಯದಲ್ಲಿ ಮತ್ತೆ ಸಾಬೀತಾಯಿತು. ಅವರ ವಿರುದ್ಧ ಬಹಿರಂಗವಾಗಿ ಮಾತನಾಡಿ, ಕೀರ್ತಿ ಆಜಾದರ ಬೆಂಬಲಕ್ಕೆ ನಿಂತು ದಕ್ಕಿಸಿಕೊಂಡಿದ್ದು ಮಾತ್ರ ಶತ್ರುಘ್ನ ಸಿನ್ಹ. ಬಿಹಾರ ಚುನಾವಣೆಯ ಸೋಲಿಗೆ ಸ್ಥಳೀಯರ ನಂಬುಗೆ ಗಳಿಸದಿರುವುದೂ ಕಾರಣ ಎಂದು ಗಟ್ಟಿ ದನಿಯಲ್ಲಿ ಹೇಳಿದವರವರು. 

ಬಿಹಾರ ಚುನಾವಣೆ ದೆಹಲಿ ಚುನಾವಣೆಯ ನಂತರ ರಾಜಕೀಯವಾಗಿ ಅತ್ಯಂತ ಪ್ರಮುಖವಾದುದು. ದೆಹಲಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ಮಧ್ಯೆ ಪ್ರಬಲ ಪೈಪೋಟಿ ನಿರೀಕ್ಷೆ ಮಾಡಲಾಗಿತ್ತು. ವರುಷಗಳ ಕಾಲ ಅಧಿಕಾರವಿಡಿದಿದ್ದ ಕಾಂಗ್ರೆಸ್ ಸ್ಪರ್ಧೆಯ ಲಿಸ್ಟಿನಲ್ಲೇ ಇರಲಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ, ಹಾಗಾಗಿ ಕೇಂದ್ರಸ್ಥಾನ ದೆಹಲಿಯಲ್ಲಿ ಬಿಜೆಪಿ ಸರಳ ಬಹುಮತದಿಂದ ಆರಿಸಿ ಬರುತ್ತದೆ ಎನ್ನುವುದೇ ಎಲ್ಲರ ನಿರೀಕ್ಷೆಯಾಗಿತ್ತು. ಚುನಾವಣಾ ಸಮೀಕ್ಷೆಗಳಲ್ಲಿ ಬಹಳಷ್ಟು ಬಿಜೆಪಿಗೆ ಬಹುಮತವೆಂದಿದ್ದರೆ, ಕೆಲವು ಆಮ್ ಆದ್ಮಿಗೆ ಸರಳ ಬಹುಮತ ಸಿಗುತ್ತದೆ ಎಂದು ತಿಳಿಸಿದ್ದವು. ಪ್ರಚಾರದ ಅಬ್ಬರವೂ ಬಿಜೆಪಯದ್ದೇ ಹೆಚ್ಚಿತ್ತು. ಮಾಧ್ಯಮಗಳ ಪ್ರಚಾರದ ಬಗ್ಗೆ ಹೆಚ್ಚು ಗಮನ ಕೊಡದ ಆಮ್ ಆದ್ಮಿ ಪಕ್ಷ ಸದ್ದೇ ಇಲ್ಲದೆ ಮನೆ ಮನೆಯನ್ನೂ ತಲುಪುವ ಕೆಲಸ ಮಾಡಿತ್ತು. ಇದರ ಫಲ ಗೊತ್ತಾಗಿದ್ದು ಫಲಿತಾಂಶ ಹೊರಬಂದಾಗ. ಎಪ್ಪತ್ತು ಸ್ಥಾನಗಳಲ್ಲಿ ಅರವತ್ತೇಳು ಸ್ಥಾನಗಳನ್ನು ಗೆದ್ದ ಆಮ್ ಆದ್ಮಿ ಪಕ್ಷ ತನ್ನ ಗೆಲುವಿಗೆ ತಾನೇ ಅಚ್ಚರಿಪಟ್ಟಿತು. ಉಳಿದ ಮೂರು ಸ್ಥಾನಗಳನ್ನು ಬಿಜೆಪಿ ಗೆದ್ದರೆ ಕಾಂಗ್ರೆಸ್ ಶೂನ್ಯ ಸಂಪಾದನೆಯ ಸಾಧನೆಯೊಂದಿಗೆ ಬೀಗಿತು! ದೆಹಲಿ ಚುನಾವಣೆಯಲ್ಲಿ ಬಿಜೆಪಿಯ ಪರವಾಗಿ ಪ್ರಧಾನ ಮಂತ್ರಿಯನ್ನೂ ಸೇರಿಸಿ ಕೇಂದ್ರ ಸಚಿವರೇ ಹೆಚ್ಚು ಪ್ರಚಾರ ಮಾಡಿದ್ದರು. ಸ್ಥಳೀಯ ನಾಯಕರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ, ಮುಖ್ಯಮಂತ್ರಿಯ ಹೆಸರನ್ನು ಘೋಷಿಸಲಿಲ್ಲ ಎಂಬ ಅಪಸ್ವರ ಕ್ಷೀಣ ದನಿಯಲ್ಲಿ ಕೇಳಿಬಂತಷ್ಟೇ. ಆಗಿನ್ನೂ ಮೋದಿ ಅಲೆ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿತ್ತು. ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಯ ಗೆಲುವಿನ ಮಾನದಂಡಗಳು ಬೇರೆ ಬೇರೆ ಎಂದು ಮರೆಯಲಾಗಿತ್ತು. ಜೊತೆಗೆ ದೆಹಲಿಯೆಂಬುದು ಪೂರ್ಣ ರಾಜ್ಯವೇನಲ್ಲವಲ್ಲ ಎಂಬ ಅಸಡ್ಡೆಯೂ ಸೇರಿತ್ತೇನೋ. ಇನ್ನು ದೆಹಲಿಯ ಮುಖ್ಯಮಂತ್ರಿಯಾದ ಅರವಿಂದ್ ಕೇಜ್ರಿವಾಲ್ ಸತತವಾಗಿ ಕೇಂದ್ರದೊಡನೆ, ಲೆಫ್ಟಿನೆಂಟ್ ಗವರ್ನರೊಡನೆ ಸಂಘರ್ಷಕ್ಕಿಳಿದರು. ಆಸ್ಪತ್ರೆ, ಶಿಕ್ಷಣಕ್ಕೆ ಅವರು ಕೊಟ್ಟ ಮಹತ್ವ ಪ್ರಶಂಸಾರ್ಹವಾದರೂ ಅವರ ರಾಜಕೀಯ ನಡೆಗಳು ಮತ್ತೊಬ್ಬ ರಾಜಕಾರಣಿಯ ಜನನವಾಗಿದೆಯಷ್ಟೇ ಎಂದು ಸಾಬೀತುಪಡಿಸಿದವು. ದೆಹಲಿಯಲ್ಲಿ ಮಾಡಿದ ತಪ್ಪುಗಳೇ ಬಿಹಾರದಲ್ಲೂ ಪುನರಾವರ್ತನೆಯಾದವು.

ಬಿಹಾರ ಚುನಾವಣೆಯ ಸಮಯದಲ್ಲೇ ದಾದ್ರಿಯಲ್ಲಿ ಇಖ್ಲಾಕನ ಹತ್ಯೆಯ ಘಟನೆಯೂ ನಡೆದುಹೋಯಿತು. ಮನೆಯಲ್ಲಿ ದನದ ಮಾಂಸವನ್ನಿಟ್ಟುಕೊಂಡಿದ್ದಾನೆ ಎಂಬ ‘ವದಂತಿಯೇ’ ಆತನ ಹತ್ಯೆಗೆ ಕಾರಣವಾಗಿಬಿಟ್ಟಿತು. ಇವತ್ತಿಗೂ ನಮ್ಮ ಮುಖ್ಯವಾಹಿನಿಯ ಕಾರ್ಯಕ್ರಮಗಳಲ್ಲಿ ‘ಅದು ದನದ ಮಾಂಸವಲ್ಲವಂತೆ ಕಣ್ರೀ’ ಎನ್ನುವ ಧಾಟಿಯ ಹೆಡ್ಡಿಂಗುಗಳು, ಚರ್ಚೆಗಳು ಚಾಲ್ತಿಯಲ್ಲಿವೆ. ದನದ ಮಾಂಸವೇ ಆಗಿದ್ದರೆ ಹತ್ಯೆ ಸಮರ್ಥನೀಯವಾಗುತ್ತಿತ್ತಾ? ದಾದ್ರಿಯ ಘಟನೆ ಹಿಂದುತ್ವದ ಅಪಾಯಕಾರಿ ಶಕ್ತಿಗಳ ಹೆಚ್ಚಳದ ಬಗ್ಗೆ ತಿಳಿಸಿ ಹೇಳಿತ್ತು. ತುಂಬಾನೇ ಮಾತನಾಡುವ ಪ್ರಧಾನಿ ಅನೇಕ ವಿಷಯಗಳಲ್ಲಿ ಜಾಣ ಮೌನ ವಹಿಸಿಬಿಡುವಂತೆ ಈ ವಿಷಯದಲ್ಲೂ ಮೌನ ವಹಿಸಿಬಿಟ್ಟರು. ಆದರಿದು ಬಿಹಾರ ಚುನಾವಣೆಯ ಮೇಲೆ ಪರಿಣಾಮ ಬೀರಿತು. ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ‘ಬಿಹಾರದಲ್ಲಿ ಬಿಜೆಪಿ ಸೋತರೆ ಪಾಕಿಸ್ತಾನದಲ್ಲಿ ಪಟಾಕಿ ಹೊಡೆಯುತ್ತಾರೆ’ ಎಂದು ಹೇಳಿದ್ದು, ಆರ್.ಎಸ್.ಎಸ್ ಮೀಸಲಾತಿಯನ್ನು ತೆಗೆದುಬಿಡಬೇಕು ಎಂಬರ್ಥದಲ್ಲಿ ಮಾತನಾಡಿದ್ದು, ನರೇಂದ್ರ ಮೋದಿ ನಿತೀಶ್ ಕುಮಾರರ ಡಿ.ಎನ್.ಎ ಸರಿಯಿಲ್ಲ ಎಂದು ಹೇಳಿದ್ದನ್ನು ನಿತೀಶ್ ಕುಮಾರ್ ಬುದ್ಧಿವಂತಿಕೆಯಿಂದ ಬಿಹಾರದ ಅಸ್ಮಿತೆಯ ಪ್ರಶ್ನೆಯನ್ನಾಗಿ ಮಾಡಿದ್ದೆಲ್ಲವೂ ಬಿಜೆಪಿಯ ಸೋಲಿಗೆ ಕಾರಣವಾಯಿತು. ಜೊತೆಗೆ ದೆಹಲಿಯಲ್ಲಾದಂತೆ ಬಿಹಾರದಲ್ಲೂ ಬಿಜೆಪಿ ಸ್ಥಳೀಯ ನಾಯಕರಿಗಿಂತ ಕೇಂದ್ರ ನಾಯಕರ ಮೇಲೆ ಹೆಚ್ಚಿನ ನಂಬುಗೆ ಇಟ್ಟಿತು, ಮುಖ್ಯಮಂತ್ರಿಯ ಹೆಸರನ್ನು ಘೋಷಿಸಲಿಲ್ಲ. ಎದುರಾಳಿಗಳು ಅಭಿವೃದ್ಧಿಯ ಹರಿಕಾರನೆಂದು ಪ್ರಸಿದ್ಧಿಯಾದ ನಿತೀಶ್ ಕುಮಾರರ ಹೆಸರನ್ನು ಘೋಷಿಸಿದ್ದಾಗಲೂ ಬಿಜೆಪಿ ಎಚ್ಚೆತ್ತುಕೊಳ್ಳಲಿಲ್ಲ. ಇವೆಲ್ಲಕ್ಕಿಂತಲೂ ಬಿಜೆಪಿಯ ಸೋಲಿಗೆ ಬಹುಮುಖ್ಯವಾದ ಕಾರಣ ಮಹಾಘಟಬಂಧನದ ಹೆಸರಿನಲ್ಲಿ ಜೆಡಿಯು, ಆರ್.ಜೆ.ಡಿ ಮತ್ತು ಕಾಂಗ್ರೆಸ್ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಿದ್ದು. ತಮ್ಮೊಳಗೆ ಹಂಚಿಹೋಗಬಹುದಿದ್ದ ಮತಗಳ ಕ್ರೋಡಿಕರಣವಾಗುತ್ತದೆಂಬ ಅವರ ನಂಬಿಕೆ ಹುಸಿಯಾಗಲಿಲ್ಲ. ಬಿಜೆಪಿ ಇದನ್ನು ಅರಿಯುವಲ್ಲಿ ವಿಫಲವಾಯಿತೆಂದೇ ಹೇಳಬಹುದು. ಜೊತೆಗೆ ಬಿಹಾರದ ಚುನಾವಣೆ ಭಾರತದಲ್ಯಾವ ಚುನಾವಣೆಯನ್ನೂ ಜಾತಿಯ ಬೆಂಬಲವಿಲ್ಲದೆ ಗೆಲ್ಲುವುದು ಕಷ್ಟ ಎನ್ನುವುದನ್ನೂ ತೋರಿಸಿಕೊಟ್ಟಿತು. ಬಿಜೆಪಿ ಸೋತಿತು ಎನ್ನುವುದರ ಜೊತೆಜೊತೆಗೇ ಈ ಚುನಾವಣೆ ಜನರ ಮರೆವನ್ನು ಸ್ಪಷ್ಟವಾಗಿ ತೋರಿಸಿತು. ಇಲ್ಲವಾದರೆ ಹಲವು ಹಗರಣಗಳ ಸರದಾರ, ಕುಟುಂಬಕ್ಕೆ ಪಕ್ಷವನ್ನು ಜೀತವನ್ನಾಗಿಸಿದ ಲಾಲೂ ಪ್ರಸಾದ್ ಯಾದವರ ಆರ್.ಜೆ.ಡಿ ಪಕ್ಷ ಮತ್ತೆ ಗೆಲ್ಲುವುದೇಗೆ ಸಾಧ್ಯವಿತ್ತು?

ಇನ್ನು ಕರ್ನಾಟಕದಲ್ಲಿ ಆರಕ್ಕೇರದ ಮೂರಕ್ಕಿಳಿಯದ ಸಿದ್ಧರಾಮಯ್ಯ ಕಾಂಗ್ರೆಸ್ಸಿನಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುವುದಕ್ಕೆ ಕೊಟ್ಟ ಗಮನವನ್ನು ಆಡಳಿತದ ಕಡೆಗೂ ಕೊಟ್ಟಿದ್ದರೆ ಮತ್ತಷ್ಟು ಹೆಸರು ಮಾಡುತ್ತಿದ್ದರು. ‘ಭಾಗ್ಯ’ ಹೆಸರಿನ ಯೋಜನೆಗಳು ಮಾತ್ರ ಹೆಸರು ತಂದುಕೊಡುತ್ತವೆ ಎಂಬವರ ನಂಬಿಕೆ ಈ ವರ್ಷವೂ ಮುಂದುವರೆಯಿತು. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಕೊಡುತ್ತಿದ್ದ ಅಕ್ಕಿಯ ಪ್ರಮಾಣವನ್ನು ಇಳಿಸುತ್ತಲೇ ಇರುವ ಸರಕಾರ ಶೂ ಭಾಗ್ಯದಂತಹ ಹೊಸ ಹೊಸ ಯೋಜನೆಗಳನ್ನು ಘೋಷಿಸುವುದ್ಯಾಕೆ? ಹಳೆಯ ಯೋಜನೆಯನ್ನೇ ಸರಿಯಾಗಿ ನಿಭಾಯಿಸಲಾಗದೆ ಹೊಸ ಯೋಜನೆಗಳನ್ನು ಘೋಷಿಸುವುದು ಪ್ರಚಾರಕ್ಕಾಗಿಯಷ್ಟೇ ಎಂದು ಕಾಣುತ್ತದೆ. ಡಿ.ಕೆ.ರವಿಯವರ ಸಾವಿನ ಪ್ರಕರಣದಲ್ಲಿ ಅತ್ಯಂತ ಅಸಮರ್ಥವಾಗಿ ಕಾರ್ಯನಿರ್ವಹಿಸಿತು. ತನ್ನ ತಪ್ಪಿಲ್ಲದಿದ್ದರೂ ಕಾರಣವಿಲ್ಲದೆ ಹೆಸರನ್ನೆಲ್ಲಾ ಹಾಳುಮಾಡಿಕೊಂಡ ಮೇಲೆ ಸಿಬಿಐಗೆ ಪ್ರಕರಣವನ್ನು ವರ್ಗಾಯಿಸಿತು. ಸಿಬಿಐ ಕೂಡ ನಮ್ಮ ಪೋಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದ ಅಂಶಗಳನ್ನೇ ಹೇಳಿದರು. ಡಿ.ಕೆ.ರವಿಯವರದ್ದು ಕೊಲೆ ಕೊಲೆ ಎಂದು ಅಬ್ಬರಿಸಿದ್ದ ಮಾಧ್ಯಮಗಳು ಕೊನೆಗದು ಆತ್ಮಹತ್ಯೆ ಎಂದು ತನಿಖಾ ವರದಿ ಬಂದ ಮೇಲಾದರೂ ಒಂದು ಕ್ಷಮಾಪಣೆ ಕೇಳುವ ನೈತಿಕತೆ ಪ್ರದರ್ಶಿಸಲಿಲ್ಲ. ಕರ್ನಾಟಕ ಮತ್ತು ದೇಶದ ಸಾಹಿತ್ಯಕ ವಲಯವನ್ನು ಬೆಚ್ಚಿ ಬೀಳಿಸಿದ್ದು ಎಂ.ಎಂ.ಕಲಬುರ್ಗಿಯವರ ಹತ್ಯೆ. ವೈಚಾರಿಕ ಸಂಘರ್ಷವನ್ನು ಬಂದೂಕಿನಿಂದ ಎದುರಿಸಬೇಕು ಎಂಬಂತಹ ಸಂಸ್ಕೃತಿ ಹೆಚ್ಚುತ್ತಿರುವುದು ಗೋವಿಂದ ಪನ್ಸಾರೆ, ದಾಬೋಲ್ಕರ್ ರವರ ಹತ್ಯೆಯ ಸಂದರ್ಭದಲ್ಲೇ ಬೆಳಕಿಗೆ ಬಂದಿತ್ತು. ಕಲಬುರ್ಗಿಯವರಿಗೂ ಬೆದರಿಕೆಯಿತ್ತು. ರಕ್ಷಣೆಯನ್ನೂ ನೀಡಲಾಗಿತ್ತು. ಕಲಬುರ್ಗಿಯವರೇ ಹತ್ಯೆಯ ಕೆಲವು ದಿನಗಳ ಮೊದಲು ಪೋಲೀಸ್ ರಕ್ಷಣೆಯನ್ನು ವಾಪಸ್ಸು ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದರು. ರಕ್ಷಣೆ ಹಿಂದೆಗೆದುಕೊಂಡಮೇಲೂ ಪೋಲೀಸರು ಒಂದಷ್ಟು ನಿಗಾ ವಹಿಸಿದ್ದರೆ ಹಿರಿಯ ಸಂಶೋಧಕರೊಬ್ಬರು ಗುಂಡಿಗೆ ತಲೆಯೊಡ್ಡುವ ದುರಂತ ಸಂಭವಿಸುತ್ತಿರಲಿಲ್ಲ. ಹತ್ಯೆ ನಡೆದು ಹಲವು ತಿಂಗಳು ಕಳೆದುಹೋಗಿದ್ದರೂ ಹಂತಕರ ಪತ್ತೆಯಾಗಿಲ್ಲದಿರುವುದು ಸಿದ್ಧರಾಮಯ್ಯ ಸರಕಾರದ ವೈಫಲ್ಯ. ಕಲಬುರ್ಗಿಯವರ ಹತ್ಯೆ ದೇಶದಲ್ಲಿ ಸಹಿಷ್ಣುತೆ – ಅಸಹಿಷ್ಣುತೆಯ ಬಗೆಗಿನ ಚರ್ಚೆಯನ್ನು ತೀರ್ವಗೊಳಿಸಿತು, ಪ್ರಶಸ್ತಿ ವಾಪಸ್ ಚಳುವಳಿ ನಡೆದು ಕೇಂದ್ರ ಸರಕಾರಕ್ಕೆ ಮುಜುಗರ ಉಂಟುಮಾಡಿತು.

ಭ್ರಷ್ಟತೆಯ ವಿಷಯದಲ್ಲಿ ಸಿದ್ಧು ಸರಕಾರ ತುಂಬಾ ಹೆಸರು ಕೆಡಿಸಿಕೊಂಡಿಲ್ಲ ಎನ್ನುವುದು ಸತ್ಯ. ಮಂತ್ರಿ ಆಂಜನೇಯರವರ ಪತ್ನಿ ಲಕ್ಷ ಲಕ್ಷ ರುಪಾಯಿಗಳನ್ನು ತೆಗೆದುಕೊಳ್ಳುವುದು ದೃಶ್ಯಮಾಧ್ಯಮದ ಕುಟುಕು ಕಾರ್ಯಾಚರಣೆಯಲ್ಲಿ ಸೆರೆಯಾಯಿತಾದರೂ ಅದು ತನಿಖೆಯ ಹಂತದಲ್ಲಿದೆ ಎಂದು ಸರಕಾರ ಮೌನವಾಗಿಬಿಟ್ಟಿತು. ಯಾಕೋ ವಿರೋಧ ಪಕ್ಷಗಳೂ ಇದರ ಬಗ್ಗೆ ಹೆಚ್ಚು ವಿರೋಧ ವ್ಯಕ್ತಪಡಿಸಲಿಲ್ಲ. ಸಿದ್ಧರಾಮಯ್ಯನವರ ಖುರ್ಚಿ ಅಲುಗಾಡಿದಂತೆ ಕಾಣಿಸಿದ್ದು, ಮೂಲ ಕಾಂಗ್ರೆಸ್ಸಿನ ಹಿರಿಯರು ಸಿದ್ಧರಾಮಯ್ಯನವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಬಿಬಿಎಂಪಿ ಚುನಾವಣೆಯ ನಂತರ ಕಾಂಗ್ರೆಸ್ಸಿನಲ್ಲಿ ದೊಡ್ಡ ಬದಲಾವಣೆ ನಡೆದುಬಿಡುತ್ತದೆ ಎಂದು ನಂಬಿದ್ದವರೆಲ್ಲರಿಗೂ ನಿರಾಸೆಯಾಯಿತು. ಬಿಬಿಎಂಪಿಯಲ್ಲಿ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟು, ಬಿಜೆಪಿ ಅತ್ಯಧಿಕ ಸ್ಥಾನ ಪಡೆದರೆ ಜೆಡಿಎಸ್ ಎಂದಿನಂತೆ ಮೂರನೇ ಸ್ಥಾನದಲ್ಲಿತ್ತು. ನೈತಿಕವಾಗಿ ನೋಡಿದರೆ ಬಿಜೆಪಿ ಅಧಿಕಾರವಿಡಿಯಬೇಕಿತ್ತು. ಅಧಿಕರಾವಿಡಿಯುವ ಖುಷಿಯಲ್ಲಿ ಬಿಜೆಪಿ ಬಿಬಿಎಂಪಿಯ ಗೆಲುವನ್ನು ಸಂಭ್ರಮಿಸಿತ್ತು. ತೆರೆಯ ಹಿಂದೆ ನಡೆದ ಹೀನ ರಾಜಕೀಯದ ಸುಳಿವು ಬಿಜೆಪಿಗೆ ಸಿಗುವಷ್ಟರಲ್ಲಿ ಕಾಲ ಮಿಂಚಿತ್ತು. ಶರಂಪರ ಕಿತ್ತಾಡುತ್ತಿದ್ದ ಸಿದ್ಧರಾಮಯ್ಯ ಮತ್ತು ಜೆ.ಡಿ.ಎಸ್ ನಡುವೆ ಮೈತ್ರಿ ನಡೆದುಬಿಟ್ಟಿತ್ತು. ಯಾವ ಸಂಧಾನದ ಮಾತುಕತೆಯಲ್ಲೂ ಸಿದ್ಧರಾಮಯ್ಯ ನೇರವಾಗಿ ಪಾಲ್ಗೊಳ್ಳದಿರುವ ಬುದ್ಧಿವಂತಿಕೆಯನ್ನು ತೋರಿಸಿದ್ದರೂ ಹೀಗೆ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಮೂಲಕ ಅವರು ಸಾಧಿಸಿದ್ದೇನು? ಹಿಂಬಾಗಿಲ ಮೂಲಕ ಅಧಿಕಾರವಿಡಿಯುವ ಮೂಲಕ ರಾಜಕೀಯ ಅಧಿಕಾರಕ್ಕಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧ ಎಂದವರು ತೋರಿಸಿದರು. ಆಪರೇಷನ್ ಕಮಲವನ್ನು ವಿರೋಧಿಸಿದ್ದ ಸಿದ್ಧರಾಮಯ್ಯ ಇಲ್ಲಿ ಮಾಡಿದ್ದೇನನ್ನು? ಅನೈತಿಕತೆಯೆಂಬುದು ರಾಜಕೀಯದ ಬಿಡಿಸಲಾಗದ ಭಾಗವಾಗಿಬಿಟ್ಟಿದೆಯಾ? 

ವರುಷದ ಕೊನೆಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ಸಿನ ಸ್ಥಾನ ಕರ್ನಾಟಕದಲ್ಲಿ ಇನ್ನು ಭದ್ರವಾಗಿದೆ ಎಂದು ತೋರಿಸಿಕೊಟ್ಟಿತು. ಇಪ್ಪತ್ತೈದು ಸ್ಥಾನಗಳಲ್ಲಿ ಹದಿಮೂರರಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಈ ಚುನಾವಣೆಯಲ್ಲಿ ಯಾರು ಗೆದ್ದರೋ ಬಿಟ್ಟರೋ ಸೋತಿದ್ದು ಮಾತ್ರ ವಿಧಾನ ಪರಿಷತ್. ವಿಧಾನ ಪರಿಷತ್ ಅಸ್ತಿತ್ವಕ್ಕೆ ಬಂದ ಮುಖ್ಯ ಕಾರಣ ವಿಧಾನಸಭೆಯ ಚುನಾವಣಾ ರಾಜಕೀಯದಲ್ಲಿ ಗೆಲ್ಲಲಾಗದ ವಿವಿಧ ಕ್ಷೇತ್ರಗಳ ಪ್ರತಿಭಾವಂತರು ಪರಿಷತ್ತಿಗೆ ಆಯ್ಕೆ ಆಗಿ ರಾಜ್ಯದ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂಬ ಸದುದ್ದೇಶದಿಂದ. ಆದರೆ ಈಗ ಆಗುತ್ತಿರುವುದೇನು? ಕೋಟಿ ಕೋಟಿ ಹಣ ಚೆಲ್ಲುವವರಿಗೆ ಮಾತ್ರ ಪರಿಷತ್ ಸ್ಥಾನ ಎನ್ನುವಂತಾಗಿದೆ. ಅಲ್ಲಿಗೆ ವಿಧಾನಸಭೆಗೂ ಪರಿಷತ್ತಿಗೂ ಏನು ವ್ಯತ್ಯಾಸ ಉಳಿಯಿತು? ಇಂತಹುದೊಂದು ಸಂಭ್ರಮಕ್ಕೆ ಪರಿಷತ್ತಿನ ಅವಶ್ಯಕತೆಯಾದರೂ ಏನಿದೆ? 

ಅಧಿಕಾರದಲ್ಲಿದ್ದವರು ಒಂದಷ್ಟು ಒಳ್ಳೆಯ ಕೆಲಸ ಮಾಡಿ ಒಂದಷ್ಟು ಕೆಟ್ಟ ಕೆಲಸ ಮಾಡಿ ಬಹಳಷ್ಟು ಬಾರಿ ಏನೂ ಮಾಡದೆ ಉಳಿದುಬಿಟ್ಟರು. ಅಧಿಕಾರಸ್ಥರಿಗಿಂತ ಹೆಚ್ಚು ವೈಫಲ್ಯಕಂಡಿದ್ದು ವಿರೋಧ ಪಕ್ಷಗಳು. ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ಸಿಗೆ ವಿರೋಧ ಪಕ್ಷವೊಂದು ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದರ ಅರಿವೇ ಇಲ್ಲವೇನೋ. ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವುದೇ ವಿರೋಧ ಪಕ್ಷದ ಕೆಲಸ ಎಂದು ನಂಬಿದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕಲಾಪ ನಡೆಯದಂತೆ ಮಾಡುವುದೂ ಕೂಡ ಪ್ರಜಾಪ್ರಭುತ್ವದ ಒಂದು ಲಕ್ಷಣವೇ ಆದರೂ ಯಾವುದೂ ಅತಿಯಾಗಬಾರದಲ್ಲವೇ? ಹೋಗಲಿ ಇವರು ಕಲಾಪಕ್ಕೆ ಅಡ್ಡಿಪಡಿಸುವುದಕ್ಕೆ ಸರಿಯಾದ ಕಾರಣವಾದರೂ ಇದೆಯಾ? ತಮ್ಮ ಕೊರಳಿನ ಹಾರವಾದ ನ್ಯಾಷನಲ್ ಹೆರಾಲ್ಡ್ ಕೇಸಿನ ಸಂಬಂಧ ಕಲಾಪವನ್ಯಾಕೆ ಅಡ್ಡಿಪಡಿಸಬೇಕು? ಇನ್ನು ಜಿ.ಎಸ್.ಟಿ ಜಾರಿಯಾಗಲು ಬಿಡದಿರುವುದಕ್ಕೆ ರಾಜಕೀಯವನ್ನೊರತುಪಡಿಸಿದ ಕಾರಣಗಳಿವೆಯಾ ಕಾಂಗ್ರೆಸ್ಸಿಗೆ? ಜಿ.ಎಸ್.ಟಿ ಜಾರಿಯಾಗಬೇಕೆಂದು ಕನಸಿದ್ದೇ ಅವರ ಯು.ಪಿ.ಎ ಸರಕಾರ. ಆಗ ವಿರೋಧ ವ್ಯಕ್ತಪಡಿಸಿದ್ದು ಬಿಜೆಪಿ. ಈಗ ಸ್ಥಾನಪಲ್ಲಟವಾಗಿರುವುದರಿಂದ ಬಿಜೆಪಿ ಜಿ.ಎಸ್.ಟಿ ಪರವಾಗಿ ಮಾತನಾಡುತ್ತಿದ್ದರೆ, ಕಾಂಗ್ರೆಸ್ ನೇರ ವಿರೋಧ ವ್ಯಕ್ತಪಡಿಸದಿದ್ದರೂ ಅದು ಜಾರಿಯಾಗಲು ಅವಕಾಶ ನೀಡಲಿಲ್ಲ. ರಾಜಕೀಯ ಪಕ್ಷದವರ ಮಾತುಗಳು ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿದ್ದಾಗ ಹೇಗೆಲ್ಲಾ ಬದಲಾಗುತ್ತವೆ ಎನ್ನುವುದಕ್ಕೆ ಇದು ಮತ್ತೊಂದು ನಿದರ್ಶನ. ಹೆಚ್ಚುತ್ತಿರುವ ಬೇಳೆ ತರಕಾರಿಗಳ ಬೆಲೆಗಿಂತ ಒಳ್ಳೆಯ ವಿಷಯ ಬೇಕಿತ್ತೇ ಕಾಂಗ್ರೆಸ್ಸಿಗೆ ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯ ತೋರಿಸಲು? ಇದೇ ರೀತಿಯ ನಿಷ್ಕ್ರಿಯತೆ ಕರ್ನಾಟಕದ ವಿರೋಧ ಪಕ್ಷಗಳಲ್ಲೂ ಕಂಡು ಬಂತು. ಧಾರ್ಮಿಕ ವಿಚಾರಗಳನ್ನೊರತುಪಡಿಸಿ ಮತ್ಯಾವ ವಿಷಯದಲ್ಲೂ ಬಿಜೆಪಿ ಶಕ್ತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸದಿರುವುದು ಕರ್ನಾಟಕದ ದುರಂತ. ಟಿಪ್ಪು ಜಯಂತಿಯನ್ನು ಸರಕಾರ ಘೋಷಿಸಿದಾಗ ಅದನ್ನವರು ವಿರೋಧಿಸಿದ ರೀತಿಯಿಂದ ಸರಿಯಾದ ಕಾರಣಕ್ಕೆ ವಿರೋಧಿಸಿದ್ದರೆ ಒಂದು ಗೌರವವನ್ನಾದರೂ ಗಳಿಸುತ್ತಿತ್ತು. ಟಿಪ್ಪು ಜಯಂತಿಯ ಹೆಸರಿನಲ್ಲಿ ವಿನಾಕಾರಣದ ರಾಜಕೀಯ ಮಾಡಿದ ಕಾಂಗ್ರೆಸ್ ಮತ್ತು ಬಿಜೆಪಿ ಮೂರು ಜನರ ಹತ್ಯೆ ಮಾಡಿದವು. ಬಿಜೆಪಿಯ ಆಡಳಿತಾವಧಿಯಲ್ಲಿ ಉತ್ತಮ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿದ್ದ ಜೆ.ಡಿ.ಎಸ್ಸಿನ ಕುಮಾರಸ್ವಾಮಿಯವರ್ಯಾಕೋ ಈಗ ಸುಮ್ಮನಾಗಿಹೋಗಿದ್ದಾರೆ. ಒಂದು ಚುನಾವಣೆಯಲ್ಲಿ ಬಿಜೆಪಿಯ ಜೊತೆಗೆ ಮೈತ್ರಿ ಮತ್ತೊಂದು ಕಡೆ ಕಾಂಗ್ರೆಸ್ಸಿನ ಚುಂಗು ಹಿಡಿಯುವುದು, ಜೆ.ಡಿ.ಎಸ್ ತನ್ನ ಸಾವನ್ನು ತಾನೇ ತೋಡಿಕೊಳ್ಳುತ್ತಿದೆ. ಪಕ್ಷವನ್ನು ಬಲಪಡಿಸುವ ಉದ್ದೇಶ ಯಾರಿಗೂ ಇದ್ದಂತಿಲ್ಲ. ಇಪ್ಪತ್ತು ತಿಂಗಳಿನ ಮುಖ್ಯಮಂತ್ರಿಯ ಅವಧಿಯಲ್ಲಿ ಗಳಿಸಿದ್ದ ಜನಪ್ರಿಯತೆಯನ್ನು ಜನರು ಮರೆತಿದ್ದಾರೆ ಎನ್ನುವುದರ ಅರಿವು ಕುಮಾರಸ್ವಾಮಿಯವರಿಗಾಗಬೇಕು ಮತ್ತು ದೇವೇಗೌಡರ ಕುಟುಂಬದ ಬಿಗಿಹಿಡಿತದಿಂದ ಪಕ್ಷವನ್ನು ಬಿಡಿಸದೆ ಇದ್ದರೆ ಭವಿಷ್ಯತ್ತಿನಲ್ಲಿ ಕಷ್ಟವಿದೆ ಎನ್ನುವುದನ್ನು ತಿಳಿಯಬೇಕು. ಸದ್ಯಕ್ಕಂತೂ ಅದನ್ನೆಲ್ಲ ತಿಳಿಯುವ ಸಾಧ್ಯತೆ ಕಾಣುತ್ತಿಲ್ಲ.

ಪಾಕಿಸ್ತಾನದ ಜೊತೆ ಯಾವುದೇ ಮಾತುಕತೆ ನಡೆಸುವುದನ್ನು ನಖಶಿಖಾಂತ ವಿರೋಧಿಸುತ್ತಿದ್ದ ಬಿಜೆಪಿ ಮತ್ತದರ ಬೆಂಬಲಿಗರಿಗೆ ವರುಷದ ಕೊನೆಯಲ್ಲಿ ಬಹುದೊಡ್ಡ ಆಘಾತ ಕೊಟ್ಟಿದ್ದು ಇದ್ದಕ್ಕಿದ್ದಂತೆ ದಾರಿ ಮಧ್ಯೆ ಪಾಕಿಸ್ತಾನಕ್ಕೆ ಭೇಟಿ ಕೊಟ್ಟ ನರೇಂದ್ರ ಮೋದಿ. ಇದು ನರೇಂದ್ರ ಮೋದಿಯವರ ಚಾಣಾಕ್ಷ ನಡೆಯಾಗಿತ್ತು ಮತ್ತು ಸರಿಯಾದ ಹೆಜ್ಜೆಯಾಗಿತ್ತು. ನೆರೆಹೊರೆಯೊಂದಿಗೆ ಎಷ್ಟೇ ಕಷ್ಟನಷ್ಟವಾದರೂ ಸಹಬಾಳ್ವೆ ನಡೆಸುವ ಪ್ರಯತ್ನವನ್ನಾದರೂ ಮಾಡಬೇಕು. ಪಾಕಿಸ್ತಾನದೆಡೆಗೆ ಸ್ನೇಹದ ಹಸ್ತ ಚಾಚುತ್ತಲೇ ಅವರ ಕುತಂತ್ರಗಳ ಬಗ್ಗೆ ಎಚ್ಚರಿಕೆಯೂ ಇರಬೇಕು. ಜೊತೆಗೆ ಭಾರತ ಮತ್ತು ಪಾಕಿಸ್ತಾನ ಸ್ನೇಹದಿಂದಿರಬಾರದು ಎಂದು ಬಯಸುವವರ ಸಂಖೈ ಎರಡೂ ದೇಶಗಳಲ್ಲಿ ದಂಡಿಯಾಗಿದೆ. ಅಂತವರ ಕಿತಾಪತಿಯನ್ನು ತಡೆಯುವ ಪ್ರಯತ್ನವನ್ನು ನಿಲ್ಲಿಸಲೇಬಾರದು. ಪ್ರಧಾನಿಯವರ ಬಹಳಷ್ಟು ವಿದೇಶಿ ಪ್ರವಾಸಗಳಿಂದ ಆ ದೇಶಗಳ ಬಂಡವಾಳಶಾಹಿಗಳಿಗೆ ನೇರ ಅನುಕೂಲವಿದೆ. ಮೇಕ್ ಇನ್ ಇಂಡಿಯಾ ಎಂಬುದು ಭಾರತವನ್ನು ಮತ್ತೊಂದು ಚೀನಾವಾಗಿ ಪರಿವರ್ತಿಸುವ, ಉಸಿರಾಡಲೂ ಆಗದಷ್ಟು ಪರಿಸರವನ್ನು ಮಲಿನಗೊಳಿಸುವ ಯೋಜನೆ. ಕೇಂದ್ರ ಸರಕಾರದ ಹನಿಮೂನ್ ಸಮಯ ಮುಗಿದಿದೆ. ನೀಡಿದ ಭರವಸೆಗಳಲ್ಲಿ ಕೆಲವನ್ನಾದರೂ ಈಡೇರಿಸುವ ಜವಾಬ್ದಾರಿಯಿದೆ. ಕಾಂಗ್ರೆಸ್ ಪಕ್ಷವನ್ನು, ಹಿಂದಿನ ಸರಕಾರಗಳನ್ನು ಟೀಕಿಸುತ್ತ ಇನ್ನೂ ಸ್ವಲ್ಪ ಸಮಯ ಕೊಡಿ ಸಮಯ ಕೊಡಿ ಎಂದು ಹೇಳುವುದು ಇನ್ನು ಕರ್ಣಾನಂದಕರವಾಗಿರದು. ಬಂಡವಾಳಶಾಹಿತನಕ್ಕೆ ಕೆಂಪು ಹಾಸು ಹಾಕುವ ಸರಕಾರದ ನಿರ್ಧಾರಗಳು ಎಷ್ಟರಮಟ್ಟಿಗೆ ಎಲ್ಲರ ಅಭಿವೃದ್ಧಿಗೆ ಪೂರಕವಾಗುತ್ತವೆ? ಭಾರತವನ್ನು ಚೀನಾದ ರೀತಿ ಅಮೆರಿಕಾದ ರೀತಿ ಬೆಳೆಸುವ ಬದಲು ಭಾರತದ ರೀತಿಯಲ್ಲೇ ಉತ್ತಮಗೊಳಿಸಬಹುದಿತ್ತಾ? ಭವಿಷ್ಯವೇ ಉತ್ತರ ಹೇಳಬೇಕು. ಕರ್ನಾಟಕದಲ್ಲಿ ಸಿದ್ಧರಾಮಯ್ಯ ಸರಕಾರ ಈಗ ಕೆಲಸ ಮಾಡುತ್ತಿರುವ ರೀತಿಯಲ್ಲೇ ಕೆಲಸ ಮಾಡಿದರೆ ಸಾಕು, ಮುಂದಿನ ಚುನಾವಣೆಯನ್ನು ಸಲೀಸಾಗಿ ಸೋತುಬಿಡಬಹುದು…. ಕ್ಯಾಲೆಂಡರ್ ಬದಲಾದರೆ ಭವಿಷ್ಯ ಬದಲಾಗುವುದಿಲ್ಲ, ಇರಲಿ, ಹೊಸ ವರುಷದ ಶುಭಾಷಯಗಳು.

ಡಿಸೆಂ 26, 2015

'ಹಿಂದೂ ಹೃದಯ ಸಾಮ್ರಾಟ್' ಮೋದಿ ಇಂತ ಕೆಲ್ಸ ಮಾಡ್ಬೋದಾ?!

modi shariff
ಭಾರತದ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ದೊಡ್ಡ ಅಚ್ಚರಿಯನ್ನು ಭಾರತೀಯರೆಲ್ಲರಿಗೂ ನೀಡಿಬಿಟ್ಟಿದ್ದಾರೆ. ಯಾವೊಂದು ಸುಳಿವೂ ನೀಡದೆ ಪಾಕಿಸ್ತಾನಕ್ಕೆ ಒಂದು ಚಿಕ್ಕ ಭೇಟಿ ಕೊಟ್ಟು ಬಂದಿದ್ದಾರೆ. ಕಾಬೂಲಿನಿಂದ ಬರುವ ದಾರಿಯಲ್ಲಿ ಲಾಹೋರಿಗೂ ಭೇಟಿ ನೀಡಿ ಅಲ್ಲಿನ ಪ್ರಧಾನಿ ನವಾಜ್ ಷರೀಫರೊಡನೆ ಒಂದು ಚಿಕ್ಕ ಚರ್ಚೆ ನಡೆಸಿ ಬಂದಿದ್ದಾರೆ. ಕೊನೆಯ ಕ್ಷಣದಲ್ಲಿ ನಿರ್ಧಾರ ಮಾಡಲಾಗಿತ್ತಂತೆ. ಪ್ರಧಾನಿಯವರ ಈ ದಿಡೀರ್ ಭೇಟಿ ಹಲವರಿಗೆ ನುಂಗಲಾರದ ತುತ್ತಾಗಿಬಿಟ್ಟಿದೆ! ಅದರಲ್ಲೂ ಬಿಜೆಪಿ ಮತ್ತು ನರೇಂದ್ರ ಮೋದಿಯವರನ್ನು ಅಖಂಡ ಭಾರತದ ಪುನರ್ ನಿರ್ಮಾತೃರು ಎಂದು ನಂಬಿಕೊಂಡಿದ್ದವರಿಗೆ ಆಘಾತ ಸಹಿಸಿಕೊಳ್ಳಲಾಗುತ್ತಿಲ್ಲ! ಆಘಾತ ಮೂಡಿಸಿದ ಕೋಪದಿಂದ ಮೋದಿಯವರಿಗೆ ಬಯ್ಯುವಂತೆಯೂ ಇಲ್ಲ, ಕಾರಣ ಮೋದಿ 'ಹಿಂದೂ ಹೃದಯ ಸಾಮ್ರಾಟ್' ಎಂದೇ ಮೆಚ್ಚಿದ್ದರವರು! ಅವರಿವರು ಬಿಡಿ ಸ್ವತಃ ಮೋದಿ ಮತ್ತು ಬಿಜೆಪಿಯೇ ಹಿಂದಿನ ಸರಕಾರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸುವುದನ್ನು ಶತಾಯಗತಾಯ ವಿರೋಧಿಸುತ್ತಿತ್ತು. ಕುಹಕವಾಡುತ್ತಿತ್ತು. ಇನ್ನವರ ಬೆಂಬಲಿಗರೋ ಉಗ್ರರನ್ನು ಕಳುಹಿಸುವ ಶತ್ರುದೇಶದೊಂದಿಗೆ ಎಂತಹ ಮಾತುಕತೆ? ಯುದ್ಧ ಮಾಡಿ ಅವರನ್ನು ತರಿದು ಬಿಸಾಕಬೇಕು ಎಂದು ಅಬ್ಬರಿಸಿದ್ದೋ ಅಬ್ಬರಿಸಿದ್ದು. ಒಂದು ತಲೆಗೆ ಎರಡು ತಲೆ ತರಬೇಕೆಂದು ಅರಚಿದ ಕೂಗುಮಾರಿಗಳಿಗೂ ಬರವಿರಲಿಲ್ಲ. ಇನ್ನೇನು ಮೋದಿ ಪ್ರಧಾನಿಯಾದರು, ಪಾಕಿಸ್ತಾನದ ಕತೆ ಮುಗಿಯಿತು ಎಂದು ನಂಬಿಕೊಂಡಿದ್ದವರಿಗೆಲ್ಲ ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಭೇಟಿ ಕೊಟ್ಟಿದ್ದೇ ತಳಮಳ ಶುರುವಾಗಿಬಿಟ್ಟಿತು. ಮುಂಚೆ ಏನೋ ಕಾಂಗ್ರೆಸ್ ಸರಕಾರವಿತ್ತು. ಅವರನ್ನು ಖಾನ್ ಗ್ರೇಸ್ ಎಂದು ಟೀಕಿಸಿ, ಮನಮೋಹನಸಿಂಗರನ್ನು ಮೌನಮೋಹನಸಿಂಗ್ ಎಂದು ಜರೆದು, ಸೋನಿಯಾರನ್ನು ಇಟಲಿಯ ಏಜೆಂಟ್ ಎಂದು ಕರೆದು 'ದೇಶಭಕ್ತಿ'ಯ ಪ್ರದರ್ಶನ ಮಾಡಿದವರಿಗೆಲ್ಲ ಅಪ್ಪಟ ಭಾರತೀಯ ಸಂಸ್ಕೃತಿಯ ಹೆಣ್ಣುಮಗಳಾದ ಸುಷ್ಮಾ ಸ್ವರಾಜರನ್ನು ಟೀಕಿಸುವುದು ಹೇಗೆ ಎಂದೇ ತಿಳಿಯಲಿಲ್ಲ! 
ಸುಷ್ಮಾ ಸ್ವರಾಜರನ್ನು ಟೀಕಿಸುವುದಕ್ಕೆ ಪದಗಳನ್ನು ಹುಡುಕುತ್ತಿದ್ದವರಿಗೆ ಈಗ ಮೋದಿ ಅತಿ ದೊಡ್ಡ ಅಚ್ಚರಿ ನೀಡಿಬಿಟ್ಟಿದ್ದಾರೆ. ಹೋಗುವ ಕ್ಷಣಗಳ ಮುಂಚೆ ಟ್ವಿಟರಿನಲ್ಲಿ ಬರೆದುಕೊಂಡಾಗಷ್ಟೇ ಮೋದಿಯವರ ಪಾಕಿಸ್ತಾನ ಭೇಟಿ ಎಲ್ಲರಿಗೂ ತಿಳಿದಿದ್ದು. ಯುದ್ಧೋತ್ಸಾಹದಲ್ಲಿದ್ದವರಿಗೆ ನಿರಾಸೆಯಾಗಿರಬೇಕು! ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ನಡೆಯಬಾರದೆಂದವರು, ಪಾಕಿಸ್ತಾನಿ ಕಲಾವಿದರ, ಲೇಖಕರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದವರಿಗೆಲ್ಲ ಈ ಭೇಟಿಯಿಂದ ಎಷ್ಟೆಲ್ಲ ತಳಮಳಗಳು ಸೃಷ್ಟಿಯಾಗಿರಬಹುದು! ಮೋದಿ ವಿರುದ್ಧ, ಬಿಜೆಪಿಯ ವಿರುದ್ಧ ಮಾತನಾಡಿದವರನ್ನೆಲ್ಲ ಪಾಕಿಸ್ತಾನಕ್ಕೆ ಹೋಗಿ, ಪಾಕಿಸ್ತಾನದ ಟಿಕೆಟ್ ಕೊಡಿ ಎಂದು ಅಬ್ಬರಿಸಿದವರಿಗೆ ಸ್ವತಃ ಮೋದಿಯೇ ಪಾಕಿಸ್ತಾನಕ್ಕೆ ಹೋಗಿಬಿಟ್ಟಿರುವುದು ಎಷ್ಟೆಲ್ಲ ಯಾತನೆ ಕೊಟ್ಟಿರಬಹುದು. ಸುಳ್ಸುದ್ದಿ ಮೂಲದ ಪ್ರಕಾರ ತನ್ನ ಭಕ್ತರು ಅಸಂಖ್ಯಾತ ಜನರನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿರುವುದರಿಂದ 'ಹಾಗೆ ಯಾರಾದರೂ ಬಂದುಬಿಟ್ಟರೆ ಅವರ ಬಗ್ಗೆ ಎಚ್ಚರಿಕೆಯಿಂದಿರಿ. ಆಡಳಿತದಲ್ಲಿನ ಹುಳುಕುಗಳನ್ನೆಲ್ಲ ಎತ್ತಿ ತೋರಿಸುವ ಡೇಂಜರಸ್ ಗ್ಯಾಂಗ್ ಅದು' ಎಂದು ಹೇಳಲೆಂದೇ ಹೋಗಿದ್ದರಂತೆ.
ಭಕ್ತರ ಸುದ್ದಿ ಅತ್ಲಾಗಿರಲಿ, ಪ್ರಧಾನಿಯಾಗುವುದಕ್ಕೆ ಮುಂಚೆ ಸ್ವತಃ ಮೋದಿಯೇ ಇಂತಹುದ್ದನ್ನು ವಿರೋಧಿಸುತ್ತಿದ್ದರೇನೋ. ಈಗ ಕಾಂಗ್ರೆಸ್ ಅಪಸ್ವರ ಎತ್ತುತ್ತಿರುವಂತೆ. ಅದೆಲ್ಲ ದೇಶದೊಳಗಡೆ ಮತವನ್ನರಸುವ ರಾಜಕೀಯ. ಪ್ರಧಾನಿ ಸ್ಥಾನಕ್ಕೆ ಬಂದ ಮೇಲೆ ಈ ಆಧುನಿಕ ಕಾಲದಲ್ಲಿ ಯಾವ ಯುದ್ಧಗಳನ್ನೂ ಗೆಲ್ಲಲಾಗುವುದಿಲ್ಲ, ಶಾಂತಿ ಉಳಿಸಿಕೊಳ್ಳಲು ಸಾಧ್ಯವಾಗುವುದು ಮಾತುಕತೆಯಿಂದಲೇ ಹೊರತು ಯುದ್ಧದಿಂದಲ್ಲ ಎನ್ನುವುದರ ಅರಿವೂ ಆಗಲೇಬೇಕು. ಸುಷ್ಮಾ ಸ್ವರಾಜರ ಪಾಕಿಸ್ತಾನ ಭೇಟಿ, ಈಗ ಮೋದಿಯವರ ಪಾಕಿಸ್ತಾನ ಭೇಟಿಯೆಲ್ಲವೂ ಇದಕ್ಕೆ ಪೂರಕವಾಗಿಯೇ ಇದೆ. ಈ ಭೇಟಿಯಿಂದ ಪಾಕಿಸ್ತಾನ ಶಾಂತಿ ಪ್ರೇಮ ರಾಷ್ಟ್ರವಾಗಿಬಿಡುತ್ತದೆ ಎಂದೆಲ್ಲ ನಂಬಿಬಿಟ್ಟರೆ ವಾಜಪೇಯಿ ಪಾಕಿಗೆ ಭೇಟಿ ಕೊಟ್ಟ ನಂತರ ಪಾಕಿಗಳು ಉಡುಗೊರೆಯಾಗಿ ಕೊಟ್ಟ ಕಾರ್ಗಿಲ್ ಯುದ್ಧದ ಮರುಕಳಿಸಿಬಿಡುತ್ತದೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸದಾ ಕಾಲ ದ್ವೇಷವಷ್ಟೇ ಇರಬೇಕು ಎಂದು ಬಯಸುವವರ ಸಂಖೈ ಎರಡೂ ದೇಶದಲ್ಲಿ ದೊಡ್ಡದಿದೆ. ಒಂದಷ್ಟು ಶಾಂತಿಯ ಕೆಲಸ ನಡೆಯುತ್ತಿರುವಂತೆಯೇ ಆ ಶಾಂತಿ ಕದಡಲು ನಡೆಯುವ ಪ್ರಯತ್ನಗಳು ಹೆಚ್ಚಾಗುವ ಅಪಾಯವನ್ನು ಎರಡೂ ದೇಶದವರು ಗ್ರಹಿಸಿದರಷ್ಟೇ ಇಂತಹ ಸೌಹಾರ್ದಯುತ ಭೇಟಿಗಳಿಗೆ ಮಹತ್ವ.

ಡಿಸೆಂ 25, 2015

ಧರ್ಮ ರಕ್ಷಕರ ಅಮೋಘ 'ಸಂಸ್ಕ್ರತಿ'!

ಈ ಯಮ್ಮನ ಫೋಟೋ ಎರಡು ಮೂರು ದಿನದಿಂದ ಫೇಸ್ ಬುಕ್ಕಿನ ಸ್ನೇಹಿತರ ಗೋಡೆಯಲ್ಲೆಲ್ಲಾ ಕಾಣಿಸಿಕೊಂಡಾಗ ಎಲ್ಲೋ ನೋಡಿದ ನೆನಪು ಕಾಡುತ್ತಿತ್ತು. ಕೊನೆಗೆ ಹೊಳೆಯಿತು. ಪತ್ರಕರ್ತ ನವೀನ್ ಸೂರಿಂಜೆ ಬಂಧನವಾಗಿದ್ದಾಗ ಮಂಗಳೂರು ನ್ಯಾಯಾಲಯದ ಬಳಿ ವಕೀಲರೊಂದಿಗೆ ಕೇಸಿನ ಬಗ್ಗೆ ಚರ್ಚಿಸುತ್ತ ಲವಲವಿಕೆಯಿಂದ ಓಡಾಡುತ್ತಿದ್ದರು ವಿದ್ಯಾ ದಿನಕರ್. ಫೇಸ್ ಬುಕ್ಕಿನಲ್ಲಿ ಹಲವು ಜನರ ಅವಹೇಳನಕಾರಿ ಹೇಳಿಕೆಗಳಿಗೆ, ಅತ್ಯಾಚಾರ ಮತ್ತು ಕೊಲೆ ಬೆದರಿಕೆಗೆ ಒಳಗಾಗಿದ್ದಾರೆ ವಿದ್ಯಾ ದಿನಕರ್. ಕಾರಣ? ದಿಲ್ವಾಲೆ ಸಿನಿಮಾದ ಪ್ರದರ್ಶನಕ್ಕೆ ಮಂಗಳೂರಿನ 'ದೇಶಪ್ರೇಮಿ'ಗಳು ಅಡ್ಡಿಪಡಿಸಿದ್ದರ ಬಗ್ಗೆ ದೂರು ದಾಖಲಿಸಿದ್ದು. ವಿದ್ಯಾ ದಿನಕರ್ ಹಿನ್ನೆಲೆಯೇನು, ಅವರ ಹೋರಾಟದ ಹಾದಿಯೇನು ಎನ್ನುವುದರ ಬಗ್ಗೆ ಕಿಂಚಿತ್ತೂ ಗೊತ್ತಿರದ (ಅಥವಾ ಗೊತ್ತಿದ್ದರೂ ಮಾಡುತ್ತಾರೋ?) ವೀರ ಕೇಸರಿ ಎಂಬ ಫೇಸ್ ಬುಕ್ ಗೋಡೆಯಲ್ಲಿ ವಿದ್ಯಾ ದಿನಕರ್ ರನ್ನು ಟೀಕಿಸಿ ಒಂದು ಪೋಸ್ಟ್ ಹಾಕಲಾಗುತ್ತದೆ. (ಚಿತ್ರ ನೋಡಿ) ಆ ಪೋಸ್ಟಿನಲ್ಲಿ ಟೀಕೆಯಿತ್ತು, ಅದು ಸತ್ಯವೋ ಅಸತ್ಯವೋ ಬಿಟ್ಟು ಬಿಡಿ ಟೀಕಿಸುವ ಹಕ್ಕು ಎಲ್ಲರಿಗೂ ಇರುತ್ತದೆ. 'ದೇಶಪ್ರೇಮಿ' ಭಜರಂಗದಳದವರ ಘನಂದಾರಿ ಕೆಲಸದ ಬಗ್ಗೆ ದೂರು ನೀಡಿದ ಕಾರಣಕ್ಕೆ ಪಾಕಿಸ್ತಾನದವಳು ಎಂದೆಲ್ಲ ಟೀಕಿಸುವುದು ಯಾವ ಕಾರಣಕ್ಕೋ? ಅದಕ್ಕೆ ಬಂದ ಕಮೆಂಟುಗಳು ನಾಗರೀಕವೆನ್ನಿಸಿಕೊಳ್ಳುವ ಸಮಾಜ ಬೆಚ್ಚಿ ಬೀಳುವಂತಿತ್ತು. ಕಮೆಂಟುಗಳನ್ನು ನೋಡಿದ ಮೇಲೆ ಹೋಗ್ಲಿ ಬಿಡಿ ಪೋಸ್ಟೇ ವಾಸಿ ಎನ್ನಿಸಿದರೆ ಸುಳ್ಳಲ್ಲ!
ಬೇವರ್ಸಿ, ನಾಯಿ, ಪಾಕಿಸ್ತಾನದವರಿಗೆ ಹುಟ್ಟಿದೋಳು, ಬಿಚ್ ತರಹದ ಸಾಮನ್ಯ ಪದಪುಂಜಗಳು 'ದೇಶಪ್ರೇಮಿ'ಗಳ ಕಮೆಂಟುಗಳಲ್ಲಿ ಎದ್ದು ಕಾಣಿಸುವುದು ಅಚ್ಚರಿಯ ವಿಷಯವೇನಲ್ಲ. ಈ ಕಮೆಂಟುಗಳ ನಡುವೆ ಮಧುಪ್ರಸಾದ್ ಎಂಬ ವ್ಯಕ್ತಿ 'ಇಂತವಳನ್ನು ರೇಪ್ ಮಾಡಿ ಕೊಲೆ ಮಾಡಬೇಕು' ಎಂದು ಉದ್ಗರಿಸಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟಿಸುವುದನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಏನೋ ಹುಡುಗ ಬಾಯಿಗೆ ಬಂದಂತೆ ಬೊಗಳುತ್ತಿದ್ದಾನೆ ಎಂದು ಸುಮ್ಮನಿದ್ದುಬಿಡಬಹುದಿತ್ತೋ ಏನೋ. ಆದರೆ ಇತ್ತೀಚಿನ ವಿದ್ಯಮಾನಗಳು ಸುಮ್ಮನಿರುವುದು ಎಷ್ಟರಮಟ್ಟಿಗೆ ಅಪಾಯಕಾರಿ ಎಂದು ತಿಳಿಸಿ ಹೇಳುತ್ತಿವೆ. ಕಲಬುರ್ಗಿಯವರ ಹತ್ಯೆಯಾದಾಗ ಭುವಿತ್ ಶೆಟ್ಟಿ ಎಂಬ ಯುವಕ ಹತ್ಯೆಯನ್ನು ಸಂಭ್ರಮಿಸುವ ಪೋಸ್ಟ್ ಹಾಕಿ ಮುಂದಿನ ಸರದಿ ನಿನ್ನದೇ ಕಣೋ ಭಗವಾನ್ ಎಂದು ಬರೆದುಕೊಂಡಿದ್ದ. ದೂರು ದಾಖಲಾಗಿ ಅವನನ್ನು ಬಂಧಿಸಲಾಯಿತು. ಏನೋ ಬಾಯಿಗೆ ಬಂದಿದ್ದು ಬರ್ಕೊಂಡಿದ್ದಾನೆ ಎಂದು ಪೋಲೀಸರು ಅವನ ಬಗ್ಗೆ ತುಂಬ ತಲೆಕೆಡಿಸಿಕೊಳ್ಳಲಿಲ್ಲವಾ? ಬಂಧನವಾದಷ್ಟೇ ವೇಗದಲ್ಲಿ ಬಿಡುಗಡೆಯೂ ಆಯಿತು. ಕೆಲವು ದಿನಗಳ ನಂತರ ಟಿಪ್ಪು ಜಯಂತಿಯ ಸಂದರ್ಭದಲ್ಲಿ ಸೃಷ್ಟಿಸಲಾದ ಕೋಮು ಗಲಭೆಯ ಸಂದರ್ಭದಲ್ಲಿ ಹರೀಶ್ ಎಂಬ ಯುವಕನ ಹತ್ಯೆಗೆ ಸಂಬಂಧಪಟ್ಟಂತೆ ಭುವಿತ್ ಶೆಟ್ಟಿ ಬಂಧಿತನಾದ. ಮುಸ್ಲಿಮನನ್ನು ಕೊಲ್ಲಲು ಹೋಗಿ 'ಮಿಸ್ಟೇಕಿ'ನಿಂದ ಹರೀಶನನ್ನು ಕೊಂದುಹಾಕಿದ್ದರು ಭುವಿತ್ ಮತ್ತು ಗೆಳೆಯರು. ಸಾಮಾಜಿಕ ಜಾಲತಾಣದ ಬೆದರಿಕೆಗಳು ನಿಜವಾಗುತ್ತಿರುವ ಸಂದರ್ಭದಲ್ಲಿ ವಿದ್ಯಾ ದಿನಕರ್ ರವರನ್ನು ರೇಪ್ ಮಾಡಿ ಕೊಲೆ ಮಾಡಬೇಕು ಎಂಬ ಕಮೆಂಟಿನ ಬಗ್ಗೆ ನಕ್ಕು ಸುಮ್ಮನಾಗುವುದು ಸಾಧ್ಯವೇ? 
ಇಂದು ಸಂಜೆ 4.30ಕ್ಕೆ ಬೆಂಗಳೂರಿನ ಟೌನ್ ಹಾಲಿನ ಎದುರು ವಿದ್ಯಾ ದಿನಕರ್ ರವರಿಗೆ ಬೆಂಬಲ ಸೂಚಿಸುತ್ತ ಬೆದರಿಕೆ ಹಾಕಿದವರನ್ನು ಬಂಧಿಸಲು ಒತ್ತಾಯಿಸಿ ಪ್ರತಿಭಟನೆಯಿದೆ.

ಅಬ್ಬರದ ವೈಭವಕ್ಕೆ ಬೆದರಿದ ಕತೆ

ಯಶ್ ಅಭಿನಯದ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ‘ಮಾಸ್ಟರ್ ಪೀಸ್’ ಚಿತ್ರ ಇಂದು ತೆರೆಕಂಡಿದೆ. ಬುಕ್ ಮೈ ಶೋನಲ್ಲಿ ಒಂದು ದಿನ ಮೊದಲೇ ಏಳು ಸಾವಿರ ಟಿಕೇಟುಗಳು ಮಾರಾಟವಾದ ದಾಖಲೆ, ಕರ್ನಾಟಕದಾದ್ಯಂತ ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿರುವ, ಸಂಭಾಷಣೆಕಾರನಾಗಿ ಖ್ಯಾತಿ ಪಡೆದಿದ್ದ ಮಂಜು ಮಾಂಡವ್ಯ ನಿರ್ದೇಶನದ ಮೊದಲ ಚಿತ್ರವೆಂಬ ಹೆಗ್ಗಳಿಕೆಯ ಮಾಸ್ಟರ್ ಪೀಸ್ ಹೇಗಿದೆ? ಚಿತ್ರದ ನಿರೀಕ್ಷೆ ಹೆಚ್ಚಲು ಯಶ್ ಅಭಿನಯದ ಚಿತ್ರಗಳು ಸಾಲು ಸಾಲು ಗೆದ್ದಿದ್ದು, ಮಾಸ್ಟರ್ ಪೀಸ್ ಚಿತ್ರದ ಮೊದಲ ಟ್ರೇಲರಿನಲ್ಲಿ ಭಗತ್ ಸಿಂಗ್ ವೇಷದಲ್ಲಿ ಯಶ್ ಮಿಂಚಿದ್ದು, ಮಾಸ್ಟರ್ ಪೀಸ್ ಚಿತ್ರದ ಅಣ್ಣಂಗೇ ಲವ್ ಆಗಿದೆ ಹಾಡಿನ ಯಶಸ್ಸು ಕಾರಣ. ಚಿತ್ರ ನಿರೀಕ್ಷಿತ ಮಟ್ಟ ಮುಟ್ಟುತ್ತದೆಯಾ?

ಹೊಸ ನಿರ್ದೇಶಕನ ಮೊದಲ ಸಿನಿಮಾದಲ್ಲಿ ಕತೆಯಲ್ಲಿ ಹೊಸತನವನ್ನು ನಿರೀಕ್ಷಿಸುವುದು ಸಹಜ. ತುಂಬ ಹೊಸತನವಿಲ್ಲದ ಕತೆಯನ್ನು ಆಯ್ದುಕೊಂಡಿದ್ದಾರೆ ನಿರ್ದೇಶಕರು. ಒಬ್ಬ ಉಡಾಳ ಹುಡುಗ, ರೌಡಿ ಎಲಿಮೆಂಟೆಂದು ಕರೆಸಿಕೊಳ್ಳಬೇಕೆಂಬ ಹಪಾಹಪಿ ಇರುವಾತ. ಬಹಳಷ್ಟು ಹುಡುಗರಿಗೆ ಒಂದು ಹಂತದಲ್ಲಿ ರೌಡಿ ಎಲಿಮೆಂಟು, ಅಣ್ಣ, ಭಾಯ್ ಅಂತೆಲ್ಲ ಕರೆಸಿಕೊಳ್ಳುವ ಚಟವಿರುತ್ತದೆ. ಕೆಲವರಿಗೆ ಆ ಚಟ ಶಾಲೆ ಮುಗಿಸುವಷ್ಟರಲ್ಲಿ ಮುಗಿದರೆ ಹಲವರಿಗೆ ಪಿಯುಸಿಯಲ್ಲಿ ಮುಗಿಯುತ್ತದೆ. ಎಲ್ಲೋ ಕೆಲವರಿಗೆ ಡಿಗ್ರಿಗೆ ಸೇರಿದರೂ ರೌಡಿಯಾಗುವ ಆಸೆ ಬತ್ತಿರುವುದಿಲ್ಲ. ಅಂತಹ ವ್ಯಕ್ತಿತ್ವ ಚಿತ್ರದ ನಾಯಕ ‘ಯುವ’ನದ್ದು. ಅಣ್ಣನೆನ್ನಿಸಿಕೊಳ್ಳುವ ಭರದಲ್ಲಿ ನಾಯಕನೆದುರಿಸುವ ಸವಾಲುಗಳು, ಮಗನನ್ನು ದೇಶಪ್ರೇಮಿ ಮಾಡಬೇಕೆನ್ನುವ ನ್ಯಾಯಾಲಯದಲ್ಲಿ ಕೆಲಸ ಮಾಡುವ ತಾಯಿ (ಸುಹಾಸಿನಿ) ರೌಡಿ ಮಗನ ಬಗ್ಗೆ ಬೆಳೆಸಿಕೊಳ್ಳುವ ದ್ವೇಷ ಮತ್ತು ಆ ದ್ವೇಷ ಹೇಗೆ ಪ್ರೀತಿಯಾಗಿ ಪರಿವರ್ತನೆಯಾಗುತ್ತದೆ ಎನ್ನುವುದೇ ಚಿತ್ರದ ಪ್ರಮುಖ ಕತೆ. ಹಲವು ಸಾಧ್ಯತೆಗಳಿದ್ದ ಕತೆ ಹೀರೋಯಿಸಮ್ಮಿನ ಸೂತ್ರಕ್ಕೆ ಸಿಲುಕಿ ನಲುಗಿ ಹೋಗಿದೆ. ಒಂದು ಲವ್ ಸ್ಟೋರಿ ಇಲ್ಲದಿದ್ದರೆ ಸಿನಿಮಾ ಪೂರ್ಣವಾಗುವುದಿಲ್ಲ ಎನ್ನುವ ಕಾರಣಕ್ಕೆ ಹೀರೋಯಿನ್ ಇದ್ದಾಳೆ, ಚಿಕ್ಕ ಪಾತ್ರವಾದರೂ ಚೊಕ್ಕವಾಗಿ ಅಭಿನಯಿಸಿ ಮನಗೆಲ್ಲುತ್ತಾಳೆ ನಾಯಕಿ ಶಾನ್ವಿ ಶ್ರೀವಾಸ್ತವ್. ಯಶ್ ನ ಪ್ರಭಾವಳಿಯನ್ನು ಮೀರಿ ಬೆಳೆವ ಪಾತ್ರದಲ್ಲಿ ಚಿಕ್ಕಣ್ಣ. ರೌಡಿ ಎಲಿಮೆಂಟಿನ ಸಹಾಯದಿಂದ ಗೆಲ್ಲುವ ನೂರ್ ಅಹಮದ್ ಪಾತ್ರದಲ್ಲಿ ಅಚ್ಯುತ್; ಅಚ್ಯುತ್ ಅಭಿನಯದ ಬಗ್ಗೆ ಕಮೆಂಟಿಸುವ ಅಗತ್ಯವಿಲ್ಲ. ಮೊದಲಾರ್ಧವಿಡೀ ನಾಯಕನೊಳಗಿನ ರೌಡಿ ಎಲಿಮೆಂಟನ್ನು ವಿಜ್ರಂಭಿಸುವ ಕೆಲಸ. ನನ್ನ ಫೋಟೋ ದೊಡ್ಡದಾಗಿ ಹಾಕಿಲ್ಲ ಎಂದು ಸಂಪಾದಕನ ಕೈಚುಚ್ಚುವ ನಾಯಕ, ರಾಜಕಾರಣಿಯೊಬ್ಬನ ಗೆಲುವಿಗೆ ಹಣ ಹಂಚುವ ಐಡಿಯಾ ಕೊಡವ ನಾಯಕ, ಹಣ ಮಾಡಲು ಶಾರ್ಟು ಕಟ್ಟುಗಳನ್ನುಡುಕುವ ನಾಯಕ – ಒಟ್ಟಾರೆ ಮೊದಲಾರ್ಧದಲ್ಲಿ ಯಶ್ ನೇ ಖಳನಾಯಕ! ಮೊದಲಾರ್ಧದ ಖಳನಾಯಕನನ್ನು ಎರಡನೇ ಅರ್ಧದಲ್ಲಿ ನಾಯಕನನ್ನಾಗಿ ಮಾಡಲು ಡ್ರಗ್ ಮಾಫಿಯಾದ ಬಾಸ್ ರವಿಶಂಕರ್ ಪ್ರವೇಶವಾಗುತ್ತದೆ. 

ರವಿಶಂಕರನ ಸಾಮ್ರಾಜ್ಯವನ್ನು ಮಟ್ಟ ಹಾಕಲು ನಂತರದ ಚಿತ್ರ ಮೀಸಲು. ಮಾಸ್ ಪಿಚ್ಚರುಗಳಲ್ಲೂ ಮೊದಲರ್ಧ ಬಿಲ್ಡಪ್ಪು ನಂತರ ಕತೆ ಎನ್ನುವ ಸೂತ್ರವಿರುತ್ತದೆ. ಇಲ್ಲಿ ಎರಡನೇ ಅರ್ಧವೂ ಬಿಲ್ಡಪ್ಪುಗಳಿಂದಲೇ ತುಂಬಿ ಹೋಗಿದೆ. ಫೈಟಿನ ಮೇಲೆ ಫೈಟುಗಳಿವೆ, ಒಂದೆರಡು ವಿಭಿನ್ನವಾಗಿವೆ. ಆದರೂ ಎಷ್ಟೂಂತ ಬಿಲ್ಡಪ್ಪುಗಳನ್ನು ನೋಡುವುದು. ಚಿಕ್ಕಣ್ಣ ಇಲ್ಲದಿದ್ದರೆ ಯಶ್ ನನ್ನು ತಡೆದುಕೊಳ್ಳುವುದು ಕಷ್ಟವಾಗಿಬಿಡುತ್ತಿತ್ತು! ರೌಡಿ ಎಲಿಮೆಂಟು ಬದಲಾಗುವುದಿಲ್ಲ, ತನ್ನ ರೌಡಿ ಎಲಿಮೆಂಟಿನಿಂದಲೇ ಒಳ್ಳೆಯವನೆಂಬ ಹೆಸರು ಗಳಿಸಿಬಿಡುತ್ತಾನೆ! ರೌಡಿಯ ಬೆಂಬಲಿಗರನ್ನು ಕಂಡ ತಾಯಿ ಅದನ್ನು ಭಗತ್ ಸಿಂಗ್ ಗೆ ಸಿಕ್ಕ ಬೆಂಬಲ ಎಂಬಂತೆ ಕಲ್ಪಿಸಿಕೊಳ್ಳುವುದು ಕಾಮಿಡಿಯಾ ಟ್ರ್ಯಾಜಿಡಿಯಾ ಗೊತ್ತಾಗುವುದಿಲ್ಲ. ಹಾಡುಗಳು ಚಿತ್ರದ ವೇಗಕ್ಕೆ ಪೂರಕವಾಗಿವೆ, ಮೂರು ತಿಂಗಳುಗಳಿಗಿಂತ ಹೆಚ್ಚಾಗಿ ತಲೆಯಲ್ಲುಳಿಯುವುದಿಲ್ಲ. ಚಿತ್ರದ ವೈಭವಕ್ಕೆ ಯಾವುದೇ ಕೊರತೆಯುಂಟುಮಾಡಿಲ್ಲ ನಿರ್ಮಾಪಕರಾದ ವಿಜಯ್ ಕಿರಗಂದೂರು. ಸಂಭಾಷಣೆಕಾರ ನಿರ್ದೇಶಕನಾಗಿರುವುದರಿಂದ ಪಂಚಿಂಗ್ ಡೈಲಾಗುಗಳು ಬಹಳಷ್ಟಿವೆ, ಕೆಲವೊಂದೆಡೆ ಮೌನದ ಜಾಗವನ್ನೂ ಮಾತು ಆವರಿಸಿಕೊಂಡುಬಿಟ್ಟಿದೆ. ಮೌನಕ್ಕಿರುವ ಬೆಲೆ ಚಿತ್ರದ ಪ್ರಾರಂಭದಲ್ಲಿ ಒಂದು ಪುಟ್ಟ ತುಣುಕಾಗಿ ಬರುವ ಭಗತ್ ಸಿಂಗ್ ನ ಕತೆಯಲ್ಲಿ ಗೋಚರವಾಗುತ್ತದೆ. ನಂತರ ಮಾತಿನದ್ದೇ ಅಬ್ಬರ.

ಚಿತ್ರದ ಬಹುಮುಖ್ಯ ಕೊರತೆಯೆಂದರೆ ಬಿಲ್ಡಪ್ಪುಗಳು! ಚಿತ್ರಕ್ಕೆ ಸಂಬಂಧಪಟ್ಟಂತ ಅನೇಕ ಸಂದರ್ಶನಗಳಲ್ಲಿ ಯಶ್ ಪದೇ ಪದೇ Involvementನ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಮಾಸ್ಟರ್ ಪೀಸ್ ಚಿತ್ರದಲ್ಲಿ ಯಶ್ ನ ‘ಇನ್ವಾಲ್ವ್ ಮೆಂಟ್’ ಎದ್ದು ಕಾಣುತ್ತದೆ. ಮೊದಲರ್ಧದ ಅನೇಕ ದೃಶ್ಯಗಳು ಅವರ ಹಿಂದಿನ ಚಿತ್ರ ರಾಮಾಚಾರಿಯನ್ನು ನೆನಪಿಸುತ್ತದೆ! ಮಾಧ್ಯಮವನ್ನು ಅವಹೇಳನ ಮಾಡಲು ಆ ಚಿತ್ರದಲ್ಲಿ ಕಾವೇರಿ – ಸುವರ್ಣ ಎಂಬ ಪಾತ್ರವಿತ್ತು. ಈ ಚಿತ್ರದಲ್ಲಿ ಮಾಧ್ಯಮವನ್ನು ಹೀಗಳೆಯುವ ಹತ್ತಲವು ಡೈಲಾಗುಗಳು ಬಂದು ಹೋಗುತ್ತವೆ. ಇಡೀ ಚಿತ್ರವನ್ನು ಯಶ್ ಆವರಿಸಿಕೊಂಡುಬಿಟ್ಟಿರುವುದೇ ಚಿತ್ರಕ್ಕೆ ದೊಡ್ಡ ಶಾಪ. ಬಹುಶಃ ಇದು ಅವರ ಇನ್ವಾಲ್ವ್ ಮೆಂಟಿನ ಕಾರಣಕ್ಕಾಯಿತಾ? ನಟನ ಇನ್ವಾಲ್ವ್ ಮೆಂಟ್ ನಟನೆಯಲ್ಲಿರಬೇಕು, ನೃತ್ಯ ನಿರ್ದೇಶಕನ ಇನ್ವಾಲ್ವ್ ಮೆಂಟ್ ನೃತ್ಯದಲ್ಲಿರಬೇಕು, ಎಲ್ಲದರಲ್ಲೂ ಇನ್ವಾಲ್ವ್ ಆಗುವ ಹಕ್ಕಿರುವುದು ನಿರ್ದೇಶಕರಿಗೆ ಮಾತ್ರ ಎನ್ನುವ ಅಂಶ ಯಶ್ ನ ನೆನಪಿನಲ್ಲಿರದಿದ್ದರೆ ಮುಂದೆ ಅವರು ನಟಿಸುವ ಚಿತ್ರಗಳನ್ನು ನೋಡುವ ಪ್ರೇಕ್ಷಕರಲ್ಲಿ ಅವರ ಅಭಿಮಾನಿಗಳು ಮಾತ್ರ ಇರುತ್ತಾರೆ. ಉಳಿದ ಪ್ರೇಕ್ಷಕರು ಇನ್ ವಾಲ್ವ್ ಆಗುವುದಿಲ್ಲ!
Masterpiece (Kannada movie)
Direction: Manju Mandavya
Starcast: Yash, Shanvi srivastav, chikkanna, suhasini, achyut, avinash, ravishankar
Producer: Vijay kiragandur