ಆಗ 27, 2015
ಮೂಗಿನ ಸರ್ಜರಿಗೆ ಮೂವತ್ತು ದಿನ ಪೆರೋಲ್!
ಅಕ್ರಮ ಶಸ್ತ್ರಾಸ್ತ್ರವನ್ನು 'ಮನೆಯವರ ರಕ್ಷಣೆಯ' ನೆಪದಲ್ಲಿ ಶೇಖರಿಸಿಟ್ಟಿದ್ದ ಸಂಜಯ್ ದತ್ ಎಂಬ ನಟನಿಗೆ ಐದು ವರುಷಗಳ ಜೈಲು ಶಿಕ್ಷೆಯಾಗಿತ್ತು. ಜೈಲಿನಲ್ಲಿರುವುದಕ್ಕಿಂತ ಸಂಜಯ್ ದತ್ ಹೊರಗಿರುವುದೇ ಜಾಸ್ತಿ ಎಂಬಂತಾಗಿದೆ. ಕಳೆದ ವರುಷ 118 ದಿನಗಳನ್ನು ಜೈಲಿನಿಂದ ಹೊರಗಡೆ ಕಳೆದ ಸಂಜಯ್ ದತ್ ಮತ್ತೆ ಜೈಲು ಸೇರಿದ್ದು ಡಿಸೆಂಬರ್ 2014ರಂದು. ಈಗ ಮತ್ತೆ ಸಂಜಯ್ ದತ್ ಗೆ ಜೈಲಿನಿಂದ ಹೊರಬರುವ ಭಾಗ್ಯ! ಪೆರೋಲ್ ಹೆಸರಿನಲ್ಲಿ ಸಂಜಯ್ ದತ್ ಒಂದು ತಿಂಗಳು ಶಿಕ್ಷಾ ಅವಧಿಯನ್ನು ಯಾವುದೇ ರೀತಿಯಿಂದ ಹೆಚ್ಚಿಸಿಕೊಳ್ಳದೆ ಹೊರಬಂದು ತಿರುಗಾಡಿ ಸಂಭ್ರಮಿಸಲು ಅವಕಾಶ ನೀಡಲಾಗಿದೆ. Ofcourse ಪೆರೋಲ್ ಪಡೆದುಕೊಳ್ಳಲು ಸಂಭ್ರಮದ ಕಾರಣವನ್ನಂತೂ ನೀಡುವಂತಿಲ್ಲವಲ್ಲ! ಸಂಜಯ್ ದತ್ ನೀಡಿರುವ ಕಾರಣ ಆತನ ಮಗಳಿಗೆ ನಡೆಯುವ ಆಪರೇಷನ್.
ವಿಕಿಪೀಡಿಯಾದ ಪುಟದ ಪ್ರಕಾರ ಭಾರತದಲ್ಲಿ ಒಂದು ತಿಂಗಳ ಪೆರೋಲ್ ಪಡೆಯುವ ಅವಕಾಶವಿದೆ. ಮನೆಯವರು ಸತ್ತಾಗ, ಅತೀವ ಖಾಯಿಲೆಯಿಂದ ನರಳುತ್ತಿರುವಾಗ, ಮಗು ಜನಿಸಿದಲ್ಲಿ ಈ ರೀತಿಯ ಪೆರೋಲ್ ಪಡೆಯಬಹುದಾಗಿದೆ. ದೇಶದ ಭದ್ರತೆಗೆ ಧಕ್ಕೆ ತಂದವರಿಗೆ, ವಿದೇಶಿಗರಿಗೆ, ಮಕ್ಕಳ ಮೇಲೆ ಅತ್ಯಾಚಾರ ಎಸಗಿದವರಿಗೆ, ಒಂದಾದ ಮೇಲೊಂದರಂತೆ ಕೊಲೆ ಮಾಡಿದವರಿಗೆ ಪೆರೋಲ್ ನೀಡಲಾಗುವುದಿಲ್ಲ. ಸಂಜಯ್ ದತ್ ಅಕ್ರಮವಾಗಿ ಶಸ್ತ್ರಸ್ತ್ರ ಇಟ್ಟುಕೊಂಡಿದ್ದು ಮುಂಬೈ ಸ್ಪೋಟದ ಸಮಯದಲ್ಲಿ, ಆತನ ಮೇಲೆ ಟಾಡಾ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಕೊನೆಗಾತನಿಗೆ ಶಿಕ್ಷೆಯಾಗಿದ್ದು ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿದ್ದಕ್ಕಾಗಿ. ಸಂಜಯ್ ದತ್ ಗೆ ಪೆರೋಲ್ ಸಿಗುವುದು ಕಾನೂನುಬದ್ಧವೇ ಹೌದು. ಆದರೆ ಸಂಜಯ್ ದತ್ ನೀಡಿರುವ ಕಾರಣ ಮಗಳ ಮೂಗಿನ ಸರ್ಜರಿ. ಅದ್ಯಾವ ಮೂಗಿನ ಸರ್ಜರಿಗೆ ಒಂದು ತಿಂಗಳ ಸಮಯ ಹಿಡಿಯುತ್ತದೆ? ಸಂಜಯ್ ದತ್ ಎಂಬ ನಟನಿಗೆ ಸಿಗುವ ಈ ಸೌಲಭ್ಯ ನಿಜಕ್ಕೂ ಅವಶ್ಯಕತೆ ಇರುವ ಎಷ್ಟು ಜನ ಖೈದಿಗಳಿಗೆ ಸಿಗುತ್ತದೆ?
ನ್ಯಾಯದೇವತೆಗೆ ಕಪ್ಪು ಪಟ್ಟಿ ಕಟ್ಟಿರುವುದು ಎಲ್ಲರನ್ನೂ ಸಮಾನವಾಗಿ ಕಾಣಲೆಂದು. ಪೆರೋಲ್ ನೀಡುವ ಜನರ ಕಣ್ಣಿಗೇನೂ ಪಟ್ಟಿ ಕಟ್ಟಿರುವುದಿಲ್ಲವಲ್ಲ..... ಲಲಿತ್ ಮೋದಿಯಂತಯ ಆಪಾದಿತನಿಗೆ ಹೆಂಡತಿಯ ಖಾಯಿಲೆಯ ನೆಪದಲ್ಲಿ ವಿದೇಶಗಳಲ್ಲಿ ಅಡ್ಡಾಡುವುದಕ್ಕೆ 'ಮಾನವೀಯತೆ' ದೃಷ್ಟಿಯಿಂದ ದೇಶದ ವಿದೇಶಾಂಗ ಸಚಿವರೇ ಸಹಕರಿಸುವಾಗ ದೇಶದೊಳಗಡೆ ಸಂಜಯ್ ದತ್ ಗೆ ಪೆರೋಲ್ ಕೊಡುವ 'ಮಾನವೀಯ' ಕೆಲಸಗಳು ಅಚ್ಚರಿ ತರುವುದಿಲ್ಲ ಬಿಡಿ.
ಆಗ 26, 2015
ಹಲ್ಲೆಗೊಳಗಾದ ಶಾಕೀರನ ವಿರುದ್ಧ ಯುವತಿಯ ದೂರು.
ಎರಡು ದಿನದ ಹಿಂದೆ ಮಂಗಳೂರಿನಲ್ಲಿ ನಡೆದ ‘ಅನೈತಿಕ ಪೋಲೀಸ್ ಗಿರಿ’ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮುಸ್ಲಿಂ ಯುವಕ ಜೊತೆಗಿದ್ದ ಹುಡುಗಿ ಆ ಯುವಕನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ಶಾಕೀರನ (ಈಗವನು ಆರೋಪಿಯ ಸ್ಥಾನದಲ್ಲಿರುವುದರಿಂದ ಹೆಸರು ಬರೆಯಲಾಗಿದೆ) ಮೇಲೆ ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಲಾಗಿದೆ. ಕಲಂ 354 ಐಪಿಸಿಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂಸ್ಕೃತಿ ಭಕ್ಷಕರು ಪ್ರಕರಣ ನಡೆದ ದಿನ ಯುವಕನ ಜೊತೆಗೆ ಯುವತಿಗೂ ಎರಡೇಟು ಬಿಗಿದಿದ್ದರು. ಅದು ಎರಡು ಸೆಕೆಂಡಿನ ವೀಡಿಯೋದಲ್ಲೂ ಸೆರೆಯಾಗಿದೆ. ಹಿಂದೂ ಸಂಘಟನೆಗಳ ಹುಡುಗರನ್ನು ಪೋಲೀಸರು ಬಂಧಿಸಿದ್ದಾರೆ. ಹಿಂದೂ ಸಂಘಟನೆಗಳು ಯುವತಿಯ ಮೇಲೆ, ಅವರ ಮನೆಯವರ ಮೇಲೆ ಒತ್ತಡ ಹಾಕಿಸಿ ಈ ರೀತಿಯ ದೂರನ್ನು ನೀಡಿಸಿರಬಹುದು ಎಂದು ಶಂಕಿಸಬಹುದಾದರೂ ದೂರಿನಲ್ಲಿರುವ ದೌರ್ಜನ್ಯದ ಆರೋಪಗಳನ್ನು ಗಮನಿಸಿದಾಗ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆದು ತೊಂದರೆಗೀಡಾದ ಯುವತಿಗೆ ನ್ಯಾಯ ದೊರಕಲಿ ಎಂದು ಆಶಿಸಬೇಕು. ಮೊಬೈಲು ಮೆಸೇಜುಗಳ ಬಗ್ಗೆ, ವೀಡಿಯೋಗಳ ಬಗ್ಗೆ ಯುವತಿ ತಿಳಿಸಿರುವುದರಿಂದ ಸತ್ಯಾಂಶ ಹೊರಬರಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಯಾರ ಕಡೆಯ ಒತ್ತಡಗಳಿಗೂ ತಲೆಬಾಗದೆ ಮಂಗಳೂರಿನ ಪೋಲೀಸರು ಕಾರ್ಯನಿರ್ವಹಿಸದರದೇ ಪುಣ್ಯ.
ದೂರಿನ ಪ್ರತಿ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಪೋಲೀಸರೇ ದೂರಿನ ಪ್ರತಿಯ ಫೋಟೋ ತೆಗೆದು ವಾಟ್ಸಪ್ಪಿಗೆ ಬಿಟ್ಟರೋ ಅಥವಾ ಪತ್ರಕರ್ತರು ತಮ್ಮ informerಗಳ ಮೂಲಕ ಈ ಕೆಲಸ ಮಾಡಿಸಿದರೋ ಗೊತ್ತಿಲ್ಲ. ಆ ಹೆಣ್ಣುಮಗಳ ಹೆಸರು, ವಿಳಾಸ, ಫೋನ್ ನಂಬರುಗಳೆಲ್ಲವೂ ನಮೂದಾಗಿರುವ ಪತ್ರ ಸಾವಿರಾರು ಜನರನ್ನು ತಲುಪುತ್ತಿದೆ. ಆ ಫೋಟೋ ತೆಗೆದ ಅನಾಮಧೇಯರಿಗೆ ಕೊಂಚ ವಿವೇಕ ಬೇಡವೇ?
ಗೆ,
ಪೋಲೀಸ್ ಇನ್ಸ್ ಪೆಕ್ಟರ್,
ಮಹಿಳಾ ಪೋಲೀಸ್ ಠಾಣೆ,
ಮಂಗಳೂರು.
ಇಂದ,
ಕಲ್ಪನ (ಹೆಸರು ಬದಲಿಸಲಾಗಿದೆ),
ಮಂಗಳೂರು.
ವಿಷಯ:- ಶಾಕೀರ್ ಎಂಬುವವನು ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ.
ಮಾನ್ಯರೇ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕಲ್ಪನ ಆದ ನಾನು ನನ್ನ ವಿದ್ಯಾಭ್ಯಾಸವನ್ನು ನನ್ನ ಹುಟ್ಟೂರಾದ ಬೇಲೂರಿನಲ್ಲಿ ಮುಗಿಸಿ ಕೆಲಸಕ್ಕಾಗಿ ಮಂಗಳೂರಿಗೆ 2 ವರ್ಷದ ಹಿಂದೆ ಬಂದು ನನ್ನ ತಾಯಿಯ ಅಕ್ಕ ಲತಾ ಅವರ ಮನೆಯಲ್ಲಿ _ _ ನಗರದಲ್ಲಿ ವಾಸವಾಗಿದ್ದೇನೆ. ಈಗ ಸುಮಾರು 3 ತಿಂಗಳ ಹಿಂದೆ ಅತ್ತಾವರದ _ _ _ಯಲ್ಲಿ ಆಪೋರೇಷನ್ ಡಿಪಾರ್ಟ್ಮೆಂಟ್ (Recieving Grossary Products)ನಲ್ಲಿ ಕೆಲಸಕ್ಕೆ ಸೇರಿರುತ್ತೇನೆ. ಇಲ್ಲಿಯೇ ಕೆಲಸ ಮಾಡುತ್ತಿದ್ದ ಶಾಕೀರ್ ನನಗೆ ಪರಿಚಯನಾಗಿದ್ದ. ಕೆಲಸದ ವಿಚಾರದಲ್ಲಿ ನಾವು ಮಾತನಾಡುತ್ತಿದ್ದೆವು, ಆ ಸಂದರ್ಭದಲ್ಲಿ ನನ್ನ ಮೊಬೈಲ್ ನಂಬರನ್ನು ಅವನು ಕೇಳಿ ತೆಗೆದುಕೊಂಡಿದ್ದ. ನಂತರ ನನಗೆ ಸಂದೇಶಗಳನ್ನು ಕಳಿಸುತ್ತಿದ್ದ. ಅವಕ್ಕೆ ನಾನು ಸಹ Reply ಮಾಡಿರುತ್ತೇನೆ. ಯಾಕೆಂದರೆ ಅವನು ನನಗಿಂತಲೂ ಮೇಲಿನ ಹುದ್ದೆಯಲ್ಲಿದ್ದಾನೆ. ನಾನು ಬಡತನದ ಕುಟುಂಬದಿಂದ ಬಂದವಳಾಗಿದ್ದು ಕಷ್ಟಪಟ್ಟು ಕೆಲಸ ಹುಡುಕಿದ್ದೇನೆ. ಇವನಿಗೆ ಉತ್ತರ ಕೊಡದಿದ್ದರೆ ಅವನು ನನ್ನ ಕೆಲಸಕ್ಕೇನಾದರೂ ತೊಂದರೆ ಕೊಡುತ್ತಾನೆಂದು ಅವನ ಮೆಸೇಜ್ ಗಳಿಗೆ ಉತ್ತರ ನೀಡಿರುತ್ತೇನೆ. ಒಂದು ದಿನ ನಾನು ಆಫೀಸಿನಿಂದ ಮನೆಗೆ ಹೋಗುವಾಗ ನಂದಿಗುಳಿ ಬಸ್ ಸ್ಟ್ಯಾಂಡಿನವರೆಗೆ ಡ್ರಾಪ್ ಮಾಡುವುದಾಗಿ ಕರೆದ. ನಾನು ಅವನ ಕಾರಿನಲ್ಲಿ ಆಫೀಸಿನ ಸ್ವಲ್ಪ ಮುಂದೆ ಹತ್ತಿದೆ. ಹೋಗುವಾಗ ದಾರಿಯಲ್ಲಿ ಅವನ ವರ್ತನೆ ಅಸಹ್ಯಕರವಾಗಿದ್ದು ನಾನು ಹಾಗೆ ಮಾಡಬೇಡ ಎಂದು ಹೇಳಿದರೂ ಕೂಡ ಮೈಕೈಗೆ ಕೈ ಹಾಕುತ್ತಲೇ ಇದ್ದ. ಆಗ ನಾನು ಬಿಕರ್ನಕಟ್ಟೆಯಲ್ಲಿ ಇಳಿಸಲು ಹೇಳಿದೆ. ಇದಾದ ನಂತರ ಅವನು ನನಗೆ ಪದೇ ಪದೇ ಎದುರು ಸಿಕ್ಕಾಗಲೆಲ್ಲ ನನ್ನೊಟ್ಟಿಗೆ ಬಾ ಹಣ ಕೊಡುತ್ತೇನೆ ಎಂದು ಹೇಳುತ್ತಿದ್ದ. ಅದೇ ಪ್ರಕಾರ ಈ ದಿನ 24/08/2015ರಂದು ಸಂಜೆ 5 ಗಂಟೆಗೆ ನಾನು ಆಫೀಸಿನಲ್ಲಿರುವಾಗ ನನಗೆ ಡ್ರಾಪ್ ಕೊಡುವುದಾಗಿ ಮೆಸೇಜ್ ಮಾಡಿದ. ಕೆಲಸದ ಒತ್ತಡದಲ್ಲಿದ್ದ ನಾನು ಆಯ್ತು ಎಂದು Reply ಮಾಡಿದೆ. ನಾನು ಆಫೀಸಿನಿಂದ ಹೊರಗೆ ಬರುವಾಗ ಅವನು ಕೆ.ಎಂ.ಸಿಯ ಮುಂದೆ ಕಾರಿನಲ್ಲಿ ಕಾಯುತ್ತಿದ್ದ ನನ್ನನ್ನು ನೋಡಿ ಬಾ ಎಂದು ಬಲವಂತವಾಗಿ ಕೈಹಿಡಿದು ಎಳೆದ. ಆಗ ನಾನು ಕೂಗಿದೆ. ಆಗ ಅಲ್ಲಿ ಇದ್ದ ಕೆಲವರು ಬಂದು ಅವನಿಂದ ನನ್ನನ್ನು ಬಿಡಿಸಿದರು. ನಾನು ಆ ವಿಚಾರವನ್ನು ನನ್ನ ಅಣ್ಣನಿಗೆ ಕರೆ ಮಾಡಿ ತಿಳಿಸಿದೆ.
ಈ ಮೂಲಕ ನಾನು ನಿಮ್ಮಲ್ಲಿ ಮನವಿ ಮಾಡುವುದೇನೆಂದರೆ ಮುಂದೆ ನನಗೆ ಶಾಕೀರನಿಂದ ಯಾವುದೇ ರೀತಿಯ ತೊಂದರೆ ಬರದ ಹಾಗೆ ಹಾಗೂ ನನ್ನ ಜೊತೆ ಅಶ್ಲೀಲವಾಗಿ ವರ್ತಿಸಿದ ಶಾಕೀರನ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಂದು ನನಗೆ ನ್ಯಾಯ ಒದಗಿಸಿ ಜೀವ ರಕ್ಷಣೆ ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಹಾಗೂ ನಾನು ಅವನ ಕಾರಿನಲ್ಲಿ ಕುಳಿತ ವೀಡಿಯೋ ಇದೆ ಎಂದು ಹೆದರಿಸುತ್ತಾನೆ. ಅದನ್ನು ತಾವು ನಾಶ ಮಾಡಬೇಕಾಗಿ ವಿನಂತಿ.
ಇಂತಿ ನಿಮ್ಮ ವಿಧೇಯ,
ಕಲ್ಪನ.
ಕಚರನೇ ಸಿಕ್ಸರ್ ಹೊಡೆದಿದ್ದರೆ ‘ಲಗಾನ್’ಗೆ ಏನಾಗುತ್ತಿತ್ತು?
ಇದೇ ಆಗಸ್ಟ್ 30ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷತ್ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಜೆ 5:30ಕ್ಕೆ ಟಿ.ಎಸ್.ವಿವೇಕಾನಂದರು ಬರೆದಿರುವ "ಭೂಮಿಗೀತೆ" ಮತ್ತು "ಜೀವತಲ್ಲಣಗಳ ಆತ್ಮಕಥನ" ಪುಸ್ತಕಗಳು ಬಿಡುಗಡೆಯಾಗುತ್ತಿದೆ.
ಪುಸ್ತಕದ ಆಯ್ದ ಭಾಗ ಹಿಂಗ್ಯಾಕೆಯ ಓದುಗರಿಗಾಗಿ.
ಕಳೆದ ವಾರದ ಮನವಿಯಂತೆ ನೀವು ಅಶುತೋಷ್ ಗೌರೀಕರ್ರ ಮಹತ್ವದ ಚಿತ್ರಗಳಾದ ಲಗಾನ್ ಮತ್ತು ಸ್ವದೇಶ್ ಚಿತ್ರಗಳನ್ನು ನೋಡಿದ್ದರೆ ಈ ನಮ್ಮ ಚರ್ಚೆ ಸ್ವದೇಶ್ ಚಿತ್ರದ ನಾಯಕ ಮೋಹನ್ ಭಾರ್ಗವನ ಗ್ರಾಮೀಣಾಭಿವೃದ್ದಿ ಕಲ್ಪನೆಯಷ್ಟೇ ಸಲೀಸಾಗಿರುತ್ತದೆ. ಇಲ್ಲದಿದ್ದರೂ ಆತಂಕವೇನಿಲ್ಲ ನೀವು ಡಾ. ರಾಜ್ರ ಬಂಗಾರದ ಮನುಷ್ಯ ಸಿನೆಮಾ ನೋಡಿದ್ದರೂ ಸಾಕು. ಅದರ ಶಾರುಖ್ ಖಾನ್ ವಿಸ್ತರಣೆ ಈ ಸ್ವದೇಶ್. ಬಹುಶಃ ೫೦-೬೦ರ ದಶಕದಲ್ಲಿ ಮಂಡಿಸಬಹುದಾಗಿದ್ದ ಮೇಲ್ನೋಟದ ಹಳ್ಳಿಗಳ ಅಭಿವೃದ್ಧಿಯ ಹುಮ್ಮಸ್ಸನ್ನು ಹುಟ್ಟಿಸುವ ‘ಉಪ್ಪರಿಗೆ ದೃಷ್ಟಿಕೋನ’ದ ಸೆಲ್ಯುಲಾಯ್ಡ್ ರೂಪ.
ಈ ಜಗತ್ತಿನ ಪ್ರತಿಯೊಂದು ಜೀವಿಯೂ ಗ್ರಹಿಸುವುದು ತನ್ನ ನೆಲೆಯಿಂದ. ಕೆಲವರು ಕೆಳಗೆ ನಿಂತು ಮೇಲಕ್ಕೆ ನೋಡುತ್ತಾರೆ. ಬಹುತೇಕರು ಮೇಲಿನಿಂದ ಕೆಳಕ್ಕೆ ನೋಡುತ್ತಾರೆ. ಎತ್ತರದ ಕಟ್ಟಡದ ಮೇಲೆ ನಿಂತು ಮಾರುತಿ ಕಾರನ್ನು ನೋಡಿ, ಅದು ಬೆಂಝ್ ಕಾರಿನಷ್ಟು ಉದ್ದಕ್ಕೆ ಕಾಣುತ್ತದೆ. ಬೆಂಝ್ ಏರ್ ಬಸ್ಸಿನಷ್ಟು ದೊಡ್ಡದಾಗಿ. ಹಾಗೇ ಒಂದು ಗುಡಿಸಲುಗಳ ಸಮೂಹವನ್ನು ನೋಡಿ..., ಎಷ್ಟು ಕಲಾತ್ಮಕವಾಗಿ ಕಾಣುತ್ತವೆಂದರೆ, ಇದರಿಂದಲೇ ಅನೇಕ ‘ಉಪ್ಪರಿಗೆ ಕಲಾವಿದರು’ ಸ್ಫೂರ್ತಿವಂತರಾಗಿ ಅನೇಕ ಅಭಿಜಾತ ಕಲಾಕೃತಿಗಳನ್ನು ರಚಿಸಿ ಧನ್ಯರಾಗಿದ್ದಾರೆ. ವಿಮಾನದಲ್ಲಿ ಕುಳಿತು ರಾಗಿ, ಬತ್ತ, ಜೋಳದ ಹೊಲಗಳನ್ನು ಕಂಡು ವಿಶ್ವದ ವಿಸ್ಮಯಗಳಲ್ಲಿ ಒಂದನ್ನು ಕಂಡಷ್ಟು ಮೂಕ ವಿಸ್ಮಿತರಾಗಿದ್ದಾರೆ.
ಮೋಹನ್ ಭಾರ್ಗವ ಅಮೆರಿಕೆಯ ಮಹೋನ್ನತ ಅಂತರಿಕ್ಷ ಸಂಸ್ಥೆಯಾದ ನಾಸಾದಲ್ಲಿ ಒಬ್ಬ ವಿಜ್ಞಾನಿ. ಇವನು ಅಮೆರಿಕನ್ನರಿಗಿಂತ ಹೆಚ್ಚು ಬ್ರಿಲಿಯಂಟ್. ಇವನಿಗೆ ಹಿಂದಿಲ್ಲ ಮುಂದಿಲ್ಲ. ಮೀನ್ಸ್... ಇವನೊಬ್ಬ ಅನಾಥ. ಬಹುಶಃ ವಾರಾನ್ನ ತಿಂದು ಓದಿದ್ದರೂ ಇರಬಹುದು. ಇವನು ಅಷ್ಟು ಕಷ್ಟಪಟ್ಟು ಓದಿ, ತನ್ನ ಪ್ರತಿಭೆಯ ಮೂಲಕವೇ ನಾಸಾ ತಲುಪಿದವನು. ಇವನಿಗೆ ಸ್ವದೇಶದಲ್ಲಿ ಇರುವ ಏಕೈಕ ಸಂಬಂಧವೆಂದರೆ ಇವನನ್ನು ಸಾಕಿದ ಒಬ್ಬ ತಾಯಿ. ನಿಜಾರ್ಥದಲ್ಲಿ ಈಕೆ ಒಬ್ಬ ಆಯಾ. ಆಕೆಯೊಂದಿಗೆ ಇವನ ಸಂಬಂಧ- ನೆನಪುಗಳು ಅತ್ಯಂತ ಗಾಢವಾದವು. ಈಕೆಯನ್ನು ನೋಡುವುದು ಒಂದು ಹಂಬಲವಾಗಿ, ಕೊನೆಗೆ ಗೀಳಾಗಿ ಅವನು ತಾನು ಒಪ್ಪಿಕೊಂಡಿದ್ದ ಯೋಜನೆಯ ಪ್ರಕಾರ ಅತ್ತ ಉಪಗ್ರಹವನ್ನು ಆಕಾಶಕ್ಕೆ ಹಾರಿಸಿ ಇತ್ತ ಭಾರತಕ್ಕೆ ವಿಮಾನ ಏರುತ್ತಾನೆ. ಈತ ನಗರಕ್ಕೆ ಬಂದಾಗ ಆ ಅಮ್ಮ ಗುಜರಾತಿನ ಯಾವುದೋ ಒಂದು ಹಳ್ಳಿಯಲ್ಲಿರುವುದಾಗಿ ತಿಳಿಯುತ್ತದೆ. ಇದನ್ನು ಈತನಿಗೆ ಹೇಳಿದವಳು ಒಬ್ಬ ಹುಡುಗಿ.
ಈತ ಆಧುನಿಕ ಸೌಲಭ್ಯಗಳಿಂದ ಇಡಿಕಿರಿದಿದ್ದ ಒಂದು ಕಾರವಾನನ್ನು ಬಾಡಿಗೆ ಪಡೆದು ಆ ಹಳ್ಳಿಗೆ ಬರುತ್ತಾನೆ. ಯಥಾರೀತಿ ಅಲ್ಲಿನ ಅನಕ್ಷರತೆ, ಅಸ್ಪೃಶ್ಯತೆ, ಮೂಲಭೂತ ಸೌಕರ್ಯಗಳ ಕೊರತೆ, ಬಡತನ ಇದಕ್ಕೆಲ್ಲಾ ಕಾರಣವಾದ ಅಜ್ಞಾನ ಇವನನ್ನು ಕಾಡುತ್ತವೆ. ಈತ ತನ್ನ ದೇಶಕ್ಕಾಗಿ ಮರುಗಲು ಆರಂಭಿಸುತ್ತಾನೆ. ಮೊದಲು ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನ ನಡೆಯುತ್ತದೆ. ಕೇರಿ ಕೇರಿ-ಮನೆಮನೆಗೆ ಹೋಗಿ ಮಕ್ಕಳನ್ನು ಕಳಿಸುವಂತೆ ಕೇಳುತ್ತಾನೆ. ಅನೇಕರು ಅನೇಕ ಕಾರಣ ಹೇಳುತ್ತಾರೆ. ಆದರೆ ಕೆಲವರು ತಮ್ಮ ಅಸ್ಪೃಶ್ಯತೆಯ ಕಾರಣ ನಾವು ಮಕ್ಕಳನ್ನು ಶಾಲೆಗೆ ಕಳಿಸಲಾಗದು ಎಂದು ಹೇಳುತ್ತಾರೆ. ಕೊನೆಗೂ ಅವರೆಲ್ಲಾ ಶಾಲೆಗೆ ಬರುವಂತೆ ಮಾಡುತ್ತಾನೆ. ಈ ನಡುವೆ ಹಳ್ಳಿಯ ಮುಖಂಡರು ಇವನ ಕಾರ್ಯಕ್ಕೆ ಕ್ರಿಯಾಲೋಪ ಎತ್ತುತ್ತಾರೆ. ಅಸ್ಪೃಶ್ಯರನ್ನು ಸ್ಪೃಶ್ಯರ ನಡುವೆ ಕೂಡಿಸಿ ಅಕ್ಷರ ಕಲಿಸುವುದನ್ನು ವಿರೋಧಿಸುತ್ತಾರೆ. ಈ ನಡುವೆ ಊರಿನ ಮುಖಂಡರು ಇವನನ್ನು ಒಂದು ಪ್ರಶ್ನೆ ಕೇಳುತ್ತಾರೆ. ನೀನು ಯಾವ ಜಾತಿಯವನು?
![]() |
ಪುಸ್ತಕ ಬಿಡುಗಡೆ ಸಮಾರಂಭದ ವಿವರ |
ಇಲ್ಲಿನವರೆಗೂ ಸಿನೆಮಾ ಓಕೆ. ಹೆಸರಿನ ಮೂಲಕ ಜಾತಿಯನ್ನು ಗುರುತಿಸಲಾಗದ ಜನಕ್ಕೆ ಅದರಲ್ಲೂ ಆ ಪಾತ್ರ ಮಾಡಿರುವ ವ್ಯಕ್ತಿ ಶಾರುಖ್ ಖಾನ್ ಆದ್ದರಿಂದ ಈ ದೇಶದ ಜನ ಸಾಮಾನ್ಯ ಎಲ್ಲೂ ತಪ್ಪು ಭಾವಿಸುವ ಸಂದರ್ಭ ಬಂದಿರುವುದಿಲ್ಲ. ಆದರೆ ಈ ಭಾರ್ಗವ ಉತ್ತರಿಸುತ್ತಾನೆ. ನಾನು ಬ್ರಾಹ್ಮಣ!!. ಈ ಭಾರ್ಗವ ಅವರ ಅಜ್ಞಾನ, ಅಸ್ಪೃಶ್ಯತೆಯ ಆಚರಣೆಯ ಬಗ್ಗೆ ಕಿಡಿಗಾರುತ್ತಾನೆ. ಭಾಷಣ ಮಾಡುತ್ತಾನೆ. ಅಂತೂ ಊರವರಿಗೆ ಜ್ಞಾನೋದಯ ವಾಗುವಂತೆ ಮಾಡುತ್ತಾನೆ.
ನಿಜಕ್ಕೂ ಇದೊಂದು ಆದರ್ಶ. ಒಬ್ಬ ಬ್ರಾಹ್ಮಣನೇ ಬಂದು ಅಸ್ಪೃಶ್ಯತೆಯನ್ನು ವಿರೋಧಿಸಿ ಮಾತನಾಡುವುದು, ಅವರನ್ನೂ ಮುಖ್ಯವಾಹಿನಿ ಎಂದು ಇದೇ ಸ್ಪೃಶ್ಯರು ಹೇಳುವಂಥ ಜೀವನಧಾರೆಗೆ ಆಹ್ವಾನಿಸುವುದು... ಎಲ್ಲವೂ ಅಮೋಘಾದ್ಭುತವಾಗಿ ಕಾಣುತ್ತವೆ. ಆದರೆ ಇಡಿಯಾಗಿ ಭಾರತದ ವರ್ಣಾಶ್ರಮ ಧರ್ಮದ ಇತಿಹಾಸವನ್ನು ನೋಡಿದರೆ ಈ ಚಿತ್ರದ ಆದರ್ಶ ಸಹ ಅದರ ವಿಸ್ತರಣೆಯಾಗಿ ಕಾಣುತ್ತದೆ. ನಿಜವಾದ ಸತ್ಯು, ನಿಜವಾದ ಗೌರೀಕರ್ ಬಿಚ್ಚಿಕೊಳ್ಳುವುದು ಇಲ್ಲೇ!! ಇದನ್ನೇನು ಅವರು ಪ್ರಜ್ಞಾಪೂರ್ವಕವಾಗಿ ಮಾಡುತ್ತಿಲ್ಲ ಎಂದರೂ....!? ಇದೇ ಮೋಹನ ಭಾರ್ಗವನ ಜಾಗದಲ್ಲಿ ಒಬ್ಬ ಆದಿವಾಸಿ, ಒಬ್ಬ ದಲಿತ, ಒಬ್ಬ ಅಗಸ, ಒಬ್ಬ ಹಜಾಮ, ಒಬ್ಬ ಮೇದ, ಒಬ್ಬ ಲಂಬಾಣಿ... ಇವರೇ ಏಕೆ ಅದೇ ಚಿತ್ರದ ನಿಜ ನಾಯಕ ಶಾರುಖ್ ಖಾನನಂಥಾ ಒಬ್ಬ ಮುಸ್ಲೀಂ, ಒಬ್ಬ ಕ್ರಿಶ್ಚಿಯನ್ನನ್ನು ಏಕೆ ಈ ಮನಸ್ಸುಗಳು ಕಲ್ಪಿಸಿಕೊಳ್ಳುವುದಿಲ್ಲ? ಆ ಭಾರ್ಗವ ಮಾಡಿದ ಕೆಲಸವನ್ನು, ತೋರಿದ ದೇಶಪ್ರೇಮವನ್ನು ಒಬ್ಬ ದಲಿತ ಯಾ ಮುಸ್ಲಿಮನಲ್ಲಿ ಕಾಣಲು ಇವರಿಗೆ ಏಕೆ ಸಾಧ್ಯವಾಗುವುದಿಲ್ಲ? ಆ ಚಿತ್ರದ ನಾಯಕ ಸ್ವತಃ ಒಬ್ಬ ಮುಸ್ಲೀಂ ಆಗಿದ್ದಾಗ ಸಹ!!
ಇರಲಿ..., ಯಾರನ್ನೂ ದೂಷಿಸುವುದಾಗಲೀ, ಕಟಕಟೆಯಲ್ಲಿ ನಿಲ್ಲಿಸುವುದಾಗಲೀ ಇಲ್ಲಿನ ಉದ್ದೇಶವಲ್ಲ. ಬದಲಾಗಿ ಹೇಗೆ ‘ಉಪ್ಪರಿಗೆ ದೃಷ್ಟಿಕೋನ’ವೊಂದು ತನ್ನ ಗ್ರಹಿಕೆಯ ಮಿತಿಯಲ್ಲಿಯೇ ಇಡೀ ಜನ ಮಾನಸದ ಹೃದಯಗಳಲ್ಲಿ ತಪ್ಪುಗಳನ್ನು ತುಂಬುತ್ತದೆ ಎಂಬುದನ್ನು ಕಂಡುಕೊಳ್ಳಲು ಅಥವಾ... ಲಗಾನ್ ಚಿತ್ರದಲ್ಲಿ ‘ಕಚರಾ’ ನನ್ನು ಸಿಕ್ಸರ್ನಿಂದ ವಂಚಿಸುತ್ತದೆ ಎಂದು ಹೇಳಲು.
ಬಹುಶಃ ಇದು ಎಲ್ಲರಿಗೂ ಗೊತ್ತಿರುವ ಚಿತ್ರ. ತೆರಿಗೆಯಿಂದ ರಿಯಾಯತಿ ಪಡೆಯಲು ಒಂದು ಹಳ್ಳಿಯ ಜನ ಒಟ್ಟಾಗಿ ಒಂದು ಸಾಮ್ರಾಜ್ಯಶಾಹಿ ವ್ಯವಸ್ಥೆಯ ವಿರುದ್ಧ ಹೇಗೆ ಹೋರಾಡುತ್ತದೆ ಎಂಬುದನ್ನು ಹೇಳುವ ಕತೆ. ಈ ಸಿನೆಮಾದ ವಿಶೇಷವೆಂದರೆ ಇಲ್ಲಿನ ಹೋರಾಟದಲ್ಲಿ ಸೈನ್ಯಗಳಿಲ್ಲ, ಮದ್ದುಗುಂಡುಗಳಿಲ್ಲ, ಸಾವು ನೋವುಗಳಿಲ್ಲ ಇರುವುದೆಲ್ಲಾ ಬರೀ ಮರದ ಬ್ಯಾಟು ಮತ್ತು ಚರ್ಮದ ಚೆಂಡು. ಶ್ರೇಷ್ಟತೆಯ ತೆವಲು ಹತ್ತಿದ ದುಡುಕು ಸ್ವಭಾವದ ಒಬ್ಬ ಕಮ್ಯಾಂಡರನ ಕಾರಣದಿಂದ ತಮಗೆ ಗೊತ್ತಿಲ್ಲದ, ಸಾಮ್ರಾಜ್ಯಶಾಹಿ ಹಿರಿಮೆಯ ಆಟವಾದ ಕ್ರಿಕೆಟ್ಟನ್ನು ಒಂದು ನುರಿತ ತಂಡದ ಮೇಲೆ ಹಳ್ಳಿಗರು ಆಡಬೇಕಾಗಿ ಬಂದ ಸಂದರ್ಭವನ್ನು ಹೇಳುವ ಕತೆ.
ಸಿನೆಮಾದ ಕತೆ ಸರಳವಾಗಿದೆ. ಮಂಡನೆ ಮನೋಹರವಾಗಿದೆ. ಸ್ಕ್ರೀನ್ ಪ್ಲೇ, ಕ್ಯಾಮೆರಾ, ಸಂಗೀತ, ನಿರ್ದೇಶನ ಎಲ್ಲಾ ಚೆನ್ನಾಗಿದೆ. ಅದಕ್ಕಾಗಿಯೇ ಈ ಚಿತ್ರ ಆಸ್ಕರ್ ಮಟ್ಟಕ್ಕೆ ಹೋಗಿದ್ದು. ಅನಕ್ಷರಸ್ಥರ ಗುಂಪೊಂದು ತಮ್ಮ ಉಳಿವಿನ ದಾರಿಯನ್ನು ಉಳಿಸಿಕೊಳ್ಳುವ ಸಲುವಾಗಿ ಒಂದು ಸಾಮ್ರಾಜ್ಯಶಾಹಿ ಮನಸ್ಥಿತಿಯ ವಿರುದ್ದ ಹೋರಾಡುವ ಪಣ ತೊಟ್ಟು, ಅದನ್ನು ಗೆಲ್ಲುವುದನ್ನು ಸಾಂಕೇತಿಕವಾಗಿ ಇದು ಹೇಳುತ್ತದೆ. ಈ ಚಿತ್ರಕ್ಕೆ ಆಸ್ಕರ್ನಲ್ಲಿ ಎದುರಾಗಿದ್ದು ಇಡೀ ಮನುಕುಲದ ಇಂದಿನ ದುರಂತವನ್ನು ಲಗಾನ್ಗಿಂತಲೂ ಸರಳವಾದ ಘಟನೆಯೊಂದರ ಮೂಲಕ ನಿರೂಪಿಸುತ್ತಾ ಸಾಗುವ ಚಿತ್ರ ‘ನೋ ಮ್ಯಾನ್ಸ್ ಲ್ಯಾಂಡ್’. ಲಗಾನ್ ಈ ಚಿತ್ರದ ಮಂದೆ ಸೋಲಲು ಅನೇಕ ಕಾರಣಗಳಿದ್ದವು. ಸ್ವತಃ ಈ ಚಿತ್ರದ ನಾಯಕ ಹಾಗೂ ನಿರ್ಮಾಪಕ ಅಮೀರ್ಖಾನ್ ಇದನ್ನು ಒಪ್ಪಿಕೊಂಡಿದ್ದರು.
ಆದರೆ ಈ ಚಿತ್ರಕ್ಕೆ ಆಸ್ಕರ್ ನಿರೀಕ್ಷಿಸಿದ್ದ ಜನ ಗಮನಿಸದೇ ಹೋದ ಒಂದು ಮುಖ್ಯವಾದ ಸಂಗತಿ ಇತ್ತು. ನನಗನ್ನಿಸಿದಂತೆ ಈ ಸಂಗತಿಯನ್ನು ಆಸ್ಕರ್ ಜ್ಯೂರಿಗಳು ಖಂಡಿತ ಗಮನಿಸಿರುತ್ತಾರೆ. ಇಲ್ಲದಿದ್ದರೆ ಅವರು ನೋಮ್ಯಾನ್ಸ್ ಲ್ಯಾಂಡಿನ ಮಹತ್ವವನ್ನೂ ಸಹ ಗುರುತಿಸಲಾಗುತ್ತಿರಲಿಲ್ಲ. ಒಂದು ಪಕ್ಷ ಲಗಾನ್ ಈ ಸಂಗತಿಯಲ್ಲಿ ಒಂದಿಷ್ಟು ಉದಾತ್ತವಾಗಿದ್ದರೆ.....! ಇಂದಿನ ಜಾಗತಿಕ ಸಂದರ್ಭದಲ್ಲಿ ಅದು ನೋಮ್ಯಾನ್ಸ್ ಲ್ಯಾಂಡಿನ ಉದ್ದೇಶದಷ್ಟೇ ಉದಾತ್ತವಾಗುತ್ತಿತ್ತು. ಭಾರತದ ಸಂದರ್ಭದಲ್ಲಂತೂ ಬಹುದೊಡ್ಡ ಸಂದೇಶವನ್ನು ನೀಡುತ್ತಿತ್ತು.
ಅಲ್ಲಿ ಏನಾಗುತ್ತದೆ ಎಂದರೆ.....,
ತೆರಿಗೆ ನೆಪವಾಗಿ ಆರಂಭವಾಗುವ ಈ ವಿವಾದ ಬ್ರಿಟಿಷ್ ಕಮ್ಯಾಂಡನೊಬ್ಬನ ಹಠಮಾರಿ ನಡೆವಳಿಕೆಯ ಮೂಲಕ ಒಂದು ಮೂರ್ತರೂಪ ಪಡೆಯುತ್ತದೆ. ಭುವನ್ ಎಂಬ ಸ್ಥಳೀಯ ಯುವಕ ಒಂದೆರಡು ಸಾರಿ ಈ ಕಮ್ಯಾಂಡರನಿಗೆ ಕಿರಿಕಿರಿಯಾಗುವಂತೆ ಮಾಡಿರುತ್ತಾನೆ. ಇವನನ್ನೇ ಗುರಿಯಾಗಿಟ್ಟುಕೊಂಡು ಕ್ರಿಕೆಟ್ನಲ್ಲಿ ನಮ್ಮನ್ನು ಸೋಲಿಸಿದರೆ ನೀವು ಸಧ್ಯಕ್ಕೆ ರಿಯಾಯತಿ ಕೇಳಲು ಬಂದಿರುವ ತೆರಿಗೆಯಲ್ಲಿ ಒಂದಲ್ಲ, ಎರಡಲ್ಲ ಮೂರು ವರ್ಷ ರಿಯಾಯತಿ ಕೊಡುವುದಾಗಿ ಆ ಸಿಡುಕು ಮೂತಿಯ ಕಮ್ಯಾಂಡರ್ ಷರತ್ತು ಹಾಕುತ್ತಾನೆ. ಮೀನಮೇಷ ಎಣಿಸಿ ಅಂತೂ ಭುವನ್ ಅವನ ಪಂಥಾಹ್ವಾನವನ್ನು ಅಂಗೀಕರಿಸುತ್ತಾನೆ. ಊರವರ ಸಹಕಾರದ ನಡುವೆಯೂ ಭುವನನ ತಂಡಕಟ್ಟುವ ಪ್ರಯತ್ನ ಸಾಗುತ್ತಿರುತ್ತದೆ. ಈ ನಡುವೆ ಆ ಕಮ್ಯಾಂಡರನ ತಂಗಿಯೇ ಇವರಿಗೆ ಸಹಾಯಮಾಡಲು ಬರುತ್ತಾಳೆ. ಇಲ್ಲಿ ಈ ಭುವನನಿಗೆ ಈಗಾಗಲೇ ಇದ್ದ ಒಬ್ಬ ಪ್ರಿಯತಮೆಯ ಜೊತೆಗೆ ಈ ಕೆಂಪು ಹುಡುಗಿಯೂ ಕೂಡಿಕೊಳ್ಳುವ ಕಾರಣದಿಂದ ತ್ರಿಕೋನ ಪ್ರೇಮ ಆರಂಭವಾಗುವುದರೊಂದಿಗೆ ಚಿತ್ರಕ್ಕೊಂದು ಹೊಸ ಓಘ ಸೃಷ್ಟಿಯಾಗುತ್ತದೆ.
ಭುವನ ಒಬ್ಬೊಬ್ಬರದೇ ಮನಒಲಿಸಿ, ಪ್ರಚೋದಿಸಿ ತಂಡ ನಿರ್ಮಾದಲ್ಲಿ ತೊಡಗಿದ್ದಾಗ ಈ ಕೆಂಪು ಹುಡುಗಿಯ ಆಗಮನದಿಂದ ಊರವರಿಗೆ ಹೊಸ ಹುಮ್ಮಸ್ಸು ಬಂದು, ತಂಡ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ಬಂದಿರುತ್ತದೆ. ಈಗ ಪ್ರಾಕ್ಟೀಸ್ ನಡೆದಿರುತ್ತದೆ. ಒಬ್ಬ ಬ್ಯಾಟ್ ಮಾಡುತ್ತಾನೆ. ಚೆಂಡು ದೂರದ ಮೂಲೆಯಲ್ಲಿ ಕುಳಿತಿದ್ದ ಒಬ್ಬನ ಮುಂದೆ ಬೀಳುತ್ತದೆ. ಭುವನ ಚೆಂಡನ್ನು ಎಸೆಯುವಂತೆ ಹೇಳುತ್ತಾನೆ. ಅವನು ಹಿಂಜರಿಯುತ್ತಾನೆ. ಕೊನೆಗೆ ಎಸೆಯುತ್ತಾನೆ. ಭುವನ್ ಚಕಿತನಾಗಿ ‘ಕಚರಾ ಬಾ ಇಲ್ಲಿ, ಇನ್ನೊಮ್ಮೆ ಚೆಂಡು ಎಸಿ’ ಎನ್ನುತ್ತಾನೆ. ಕಚರಾ ಗಾಬರಿಯಾಗುತ್ತಾನೆ. ಆಗ ಭುವನನೇ ಅವನ್ನು ಕರೆತಂದು ಫೀಲ್ಡಿನ ಮಧ್ಯೆ ನಿಲ್ಲಿಸಿ ‘ಇವನದು ಸ್ಪಿನ್ ಬೌಲಿಂಗ್, ನೋಡಿ ಹೇಗೆ ಬಾಲು ಸುತ್ತಿ ತಿರುಗಿ ಪುಟಿಯುತ್ತದೆ!!’ ಎಂದು ಎಲ್ಲರಿಗೂ ಹೇಳುತ್ತಾನೆ.
ಅಷ್ಟರಲ್ಲಿ ಊರವರು ಈ ಕಚರನ ಸೇರ್ಪಡೆಯನ್ನು ವಿರೋಧಿಸುತ್ತಾರೆ. ಕಾರಣ ಅವನು ಅಸ್ಪೃಶ್ಯ ಎಂದು. ಆಗ ಭುವನ ಉದಾತ್ತ-ಧೀರೋದ್ಧಾತವಾದ ಒಂದು ಭಾಷಣ ಮಾಡುತ್ತಾನೆ. ಊರ ಜನ ಭುವನನ ಮಾನವೀಯ ಮಾತುಗಳನ್ನು ಒಪ್ಪುತ್ತಾರೆ. ಕಚರಾ ತಂಡಕ್ಕೆ ಸ್ಪಿನ್ ಬೌಲರ್ ಆಗಿ ಸೇರ್ಪಡೆಯಾಗುತ್ತಾನೆ. ಈತ ಒಬ್ಬ ಹೆಳವ. ಇವನ ಬಲಗೈ ಪೋಲಿಯೋ ಪೀಡಿತವಾದಂತೆ, ದುರ್ಬಲವಾಗಿ ಮುರುಟಿಕೊಂಡಿರುತ್ತದೆ.
ಇಂದಿನ ಸ್ಪಿನ್ ಬೌಲರ್ಗಳ ಬಗೆಗಿನ ಪ್ರಚಾರವನ್ನು ಕಂಡ ಯಾರಾದರೂ ಒಂದು ಕ್ಷಣ ರೋಮಾಂಚನಗೊಳ್ಳುವ ಸಂದರ್ಭ ಇದು. ಸ್ಪಿನ್ ಬೌಲರ್ ಎಂದರೆ ಅಂತಾ ಶ್ರೇಷ್ಠ...., ಇಂಥಾ ಶ್ರೇಷ್ಠ..., ಅದೂ ಇದೂ... ಲೊಟ್ಟೆ ಲೊಸ್ಗ.... ಎಂದೆಲ್ಲಾ ನಮ್ಮ ಮಾಧ್ಯಮಗಳು ಚಕ್ಕೆ ಕಟ್ಟುತ್ತಿರುವ ಹೊತ್ತಿನಲ್ಲಿ ಒಬ್ಬ ಹೆಳವನನ್ನು ಸ್ಪಿನ್ ಬೌಲರ್ ಎಂದು ಹೇಳುವ ಮೂಲಕ ಸ್ಪಿನ್ ಬೌಲಿಂಗಿನ ಚಕ್ಕೆಗಳನ್ನೆಲ್ಲಾ ಕಿತ್ತು ಬಿಸಾಕಿ, ಅದನ್ನು ಲೇವಡಿ ಮಾಡಿ ಸ್ಪಿನ್ ಬೌಲ್ ಮಾಡುವವರು ಹೆಳವರು ಎಂಬ ಅರ್ಥ ಬರುವಂಥ ಇಂಥಾ ದೃಶ್ಯವೊಂದನ್ನು ಕಟ್ಟಿಕೊಡುವುದು ನಿರ್ದೇಶಕನ ಮೆಚ್ಯೂರಿಟಿಯನ್ನು ಹೇಳುತ್ತದೆ ಎಂದು ಭಾವಿಸುವ ಸಂದರ್ಭ ಅದು. ಒಂದು ಸರಳ ಮಾದರಿಯ ಮೂಲಕ ಒಂದು ಬಹುದೊಡ್ಡ ಭ್ರಮೆಯನ್ನು ಒಡೆದು ಬಿಸಾಕುವಂತಹ ಎದೆಗಾರಿಕೆ ಅದು.
ಅಂತಿಮವಾಗಿ ತಂಡ ಸಿದ್ದವಾಗುತ್ತದೆ. ಮೂರು ದಿನಗಳ ಮ್ಯಾಚ್ ನಿರ್ಧಾರವಾಗುತ್ತದೆ. ಮೊದಲ ಒಂದೂವರೆ ದಿನ ಬ್ರಿಟಿಶ್ ತಂಡ ಬ್ಯಾಟ್ ಮಾಡುತ್ತದೆ. ಅಷ್ಟರಲ್ಲಿ ಗೌರವಾರ್ಹ ಮೊತ್ತವನ್ನು ಪೇರಿಸುತ್ತದೆ. ನಂತರದ ಬ್ಯಾಟಿಂಗ್ ಭುವನನ ತಂಡದ್ದು. ಹಾಗೂ ಹೀಗೂ ಈ ತಂಡ ಅಂತಿಮ ಹಂತಕ್ಕೆ ಬರುತ್ತದೆ. ಎಲ್ಲಾ ಆಟಗಾರರೂ ಪೆವಿಲಿಯನ್ಗೆ ಮರಳಿದ್ದಾರೆ. ನಾಯಕ ಭುವನ್ ಮಾತ್ರ ನಿನ್ನೆಯಿಂದಲೂ ಫೀಲ್ಡಿನಲ್ಲೇ ಉಳಿದಿದ್ದಾನೆ. ಕೊನೆಯ ಆಟಗಾರನಾಗಿ ಕಚರಾ ಬರುತ್ತಾನೆ. ಈಗ ಕೇವಲ ೧೧ ಬಾಲ್ಗಳಿವೆ, ೧೨ ರನ್ ಬೇಕು.
ಕೊನೆಗೆ ಒಂದೇ ಒಂದು ಬಾಲು ಉಳಿಯುತ್ತದೆ, ಬೇಕಿರುವುದು ೬ ರನ್. ನಾಯಕ ಆತಂಕದಿಂದ ಕಚರಾನ ಸಮೀಪಕ್ಕೆ ಬಂದು.... “ಕಚರಾ ಇದು ಕೊನೆಯ ಬಾಲು, ನಮಗೆ ೬ ರನ್ ಬೇಕು. ಈ ಬಾರಿ ನೀನು ಬಾಲು ಗಡಿಯಾಚೆಗೆ ಹೋಗುವಂತೆ ಹೊಡೆಯಲೇ ಬೇಕು. ಇಲ್ಲದಿದ್ದರೆ ಊರವರೆಲ್ಲಾ ಮೂರು ಪಟ್ಟು ತೆರಿಗೆ ಕೊಡಬೇಕಾಗುತ್ತದೆ. ಮೊದಲೇ ಬರಗಾಲ, ನಾವು ಎಲ್ಲಿಂದ ತರುವುದು. ಇದರ ಜೊತೆಗೆ ಸೋಲಿನ ಅಪಮಾನವನ್ನೂ ಸಹಿಸಬೇಕಾಗುತ್ತದೆ... ಏನಾದರೂ ಮಾಡು ಕಚರಾ.... ಏನಾದರೂ ಮಾಡು...." ಎಂದೆಲ್ಲಾ ಹೇಳುತ್ತಾನೆ.
ಕೊನೆಯ ಬಾಲು ಬರುತ್ತದೆ. ಕಚರಾ ಬ್ಯಾಟ್ ಬೀಸುತ್ತಾನೆ. ಬ್ಯಾಟು ಗಾಳಿಯಲ್ಲಿ ತೇಲಿ ಹಿಂತಿರುಗುತ್ತದೆ. ಬಾಲು ಎತ್ತ ಹೋಯಿತು? ಎಂದು ಇವರು ಗೊಂದಲಲ್ಲಿದ್ದಾಗಲೇ ಅವರು ವಿಜಯೋತ್ಸವ ಆಚರಿಸಲು ಆರಂಭಿಸುತ್ತಾರೆ. ನಾಯಕ ವಿಷಣ್ಣನಾಗುತ್ತಾನೆ. ಜನ ಗರಬಡಿದಂತಾಗುತ್ತಾರೆ. ಆದರೆ ಅಷ್ಟರಲ್ಲಿ ಒಂದು ಚಮತ್ಕಾರ ನಡೆಯುತ್ತದೆ. ಅಂಪೈರ್ ‘ನೋ ಬಾಲ್’ ಕೊಡುತ್ತಾನೆ. ಕ್ಯಾಮರಾ ಮತ್ತೆ ತಿರುಗಿದಾಗ ನಾಯಕ ಬ್ಯಾಟಿಂಗ್ನಲ್ಲಿರುತ್ತಾನೆ. ಬಾಲು ಬರುತ್ತದೆ. ನಾಯಕ ಘಟ್ಟಿಸುತ್ತಾನೆ. ಬಾಲು ದಿಗಂತದಲ್ಲಿ ಹಾರುತ್ತಿರುತ್ತದೆ. ಎದುರಾಳಿ ತಂಡದ ನಾಯಕ ಬಾಲನ್ನು ಕ್ಯಾಚ್ ಮಾಡುತ್ತಾನೆ. ಪರಿಸ್ಥಿತಿ ಗೊಂದಲದಲ್ಲಿದ್ದಾಗ ಅಂಪೈರ್ ತನ್ನ ನೊಟದಲ್ಲಿಯೇ ಅವನು ಬೌಂಡರಿಯ ಆಚೆ ಇರುವುದನ್ನು ಸೂಚಿಸುತ್ತಾನೆ. ಭುವನನ ತಂಡ ಗೆದ್ದಿರುತ್ತದೆ. ತೆರಿಗೆ ತಪ್ಪಿರುತ್ತದೆ.
ನಿರ್ದೇಶನ, ಕ್ಲೈಮ್ಯಾಕ್ಸ್ ಎಲ್ಲಾ ಸುಂದರವಾಗಿದೆ. ಸಿನೆಮಾದಲ್ಲಿ ಯಾವ ಸಮಸ್ಯೆಯೂ ಇಲ್ಲ. ಆದರೆ ಕಥೆಯ ಒಂದು ಸಮಸ್ಯೆ ಹಾಗೇ ಉಳಿಯುತ್ತದೆ. ಕಚರಾನೇ ಸಿಕ್ಸರ್ ಹೊಡೆದಿದ್ದರೆ ಏನಾಗುತ್ತಿತ್ತು? ಅಲ್ಲಿಗೆ ನೋ ಬಾಲಿನ ನೆಪದಲ್ಲಿ ನಾಯಕನೇ ಏಕೆ ಬರಬೇಕಿತ್ತು? ನೋ ಬಾಲ್ ಕೊಟ್ಟ ಮೇಲೂ ಅದೇ ಬ್ಯಾಟ್ಸ್ಮನ್ ಮತ್ತೆ ಹೊಡೆಯಬಹುದಿತ್ತಲ್ಲವೇ? ಈ ಗೆಲುವಿನ ಅವಕಾಶವನ್ನು ಕಚರಾನಿಗೇಕೆ ಕೊಡಲಿಲ್ಲ? ಅವನು ಅಸ್ಪೃಶ್ಯನೆಂದೇ? ಅಥವಾ....
ನೋಡಿ..., ಇವರಿಗೆ ತಂಡದಲ್ಲಿ ಸ್ಥಳ ಕೊಟ್ಟೆವು, ಊರಿಗಾಗಿ ಸೇವೆ ಸಲ್ಲಿಸಲು ಅವಕಾಶ ಕೊಟ್ಟೆವು. ಜಾತೀಯತೆಯನ್ನೆಲ್ಲಾ ಮರೆತು, ಸ್ಪೃಶ್ಯ-ಅಸ್ಪೃಶ್ಯಗಳನ್ನೆಲ್ಲಾ ಬದಿಗಿಟ್ಟು ಆಟದಲ್ಲಿ ಒಂದಾಗಿ ದುಡಿದೆವು. ಆದರೆ ನಿಜವಾದ ಪ್ರತಿಭೆ ತೋರುವಂತ ಅವಕಾಶ ಸಿಕ್ಕಿದಾಗ ಅವರು ಅಸಮರ್ಥರಾದರು. ಅವರಿಗೆ ಅಂಥಾ ಇಚ್ಛಾಶಕ್ತಿ-ಸಾಮರ್ಥ್ಯಗಳಿಲ್ಲ ಎಂದು ಈ ಜಗತ್ತಿಗೆ ಸಾರ್ವತ್ರಿಕ ಸಂದೇಶ ಕೊಡಲೆಂದೇ?
ಈ ‘ಉಪ್ಪರಿಗೆ ದೃಷ್ಟಿಕೋನ’ ಹೇಳಿದ್ದು, ಅನಿಸಿದ್ದು, ಗ್ರಹಿಸಿದ್ದು ಮಾತ್ರ ಕಲೆಯಾಗುವುದಾದರೆ.....! ಜಾಗತಿಕವಾದ ಮಾನವೀಯ ಮೌಲ್ಯ, ಉದಾತ್ತತೆಯ ಅರ್ಥವೇನು? ಇವನ್ನು ಹೊರತು ಪಡಿಸಿದ ಕಲೆ ಸುಂದರವಾಗಿದ್ದ ಮಾತ್ರಕ್ಕೆ ಕಲೆಯಾಗಬಲ್ಲದೇ. ಬಹುಶಃ ಆಸ್ಕರ್ ಜ್ಯೂರಿಗಳು ಕಲೆಯನ್ನು ಮಾನವೀಯ ಮೌಲ್ಯದಡಿಯಲ್ಲಿ ವಿಮರ್ಶಿಸುತ್ತಾರೆ ಎನಿಸುತ್ತದೆ. ಹಾಗಾಗಿಯೇ ಲಗಾನ್ ಸೋತಿತು, ನೋಮ್ಯಾನ್ಸ್ ಲ್ಯಾಂಡ್ ಗೆದ್ದಿತು ಅನಿಸುತ್ತದೆ.
ಇದು ಕಲೆಯ ಬಗ್ಗೆ ಮಾತನಾಡುವ ಎಲ್ಲರಿಗೂ ಅರ್ಥವಾಗಬೇಕು. ಅಶುತೋಷ್ ಗೌರೀಕರ್ಗೆ, ಇವರ ಯಶಸ್ವೀ ನಟರಾದ ಅಮೀರ್ ಖಾನ್ ಮತ್ತು ಶಾರುಖ್ ಖಾನ್ಗೆ. ಹೀಗಾಗಿಯೇ ಎಂ.ಎಸ್. ಸತ್ಯು ಮನಸ್ಸಿಗೆ ಬಂದಂತೆ ಮಾತನಾಡಿದಾಗ ಅದಕ್ಕೆ ಬೇರೊಂದು ಪ್ರಭಾವಳಿ ಸೃಷ್ಠಿಯಾಗುವುದು. ಮಾನವಂತರಾದರೆ ಇದನ್ನು ಸತ್ಯು ಸಹ ಅರಿಯಬೇಕು ಜೊತೆಗೆ ಇವರನ್ನು ಸಮರ್ಥಿಸುತ್ತಿರುವ ಮತ್ತು ವಿರೋಧಿಸುತ್ತಿರುವ ಜನಕ್ಕೆ ಸಹ.
ಪ್ಲಾಚಿಮಡದ ಜಲ ಪಿಶಾಚಿಗಳು ಮತ್ತು ಇಸ್ಲಾಮಿಕ್ ಪರಿಸರ ವಿವೇಕ.
ಇದೇ ಆಗಸ್ಟ್ 30ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷತ್ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಜೆ 5:30ಕ್ಕೆ ಟಿ.ಎಸ್.ವಿವೇಕಾನಂದರು ಬರೆದಿರುವ "ಭೂಮಿಗೀತೆ" ಮತ್ತು "ಜೀವತಲ್ಲಣಗಳ ಆತ್ಮಕಥನ" ಪುಸ್ತಕಗಳು ಬಿಡುಗಡೆಯಾಗುತ್ತಿದೆ.
ಪುಸ್ತಕದ ಆಯ್ದ ಭಾಗ ಹಿಂಗ್ಯಾಕೆಯ ಓದುಗರಿಗಾಗಿ.
ಕೇರಳದ ಕಾಡುಭಾಗದ ಹಳ್ಳಿಗಳ ಪೈಕಿ ಇದೊಂದು ಸಣ್ಣ ಹಳ್ಳಿ, ಹೆಸರು ಪ್ಲಾಚಿಮಡ. ಕೇರಳ-ತಮಿಳುನಾಡು ರಾಜ್ಯಗಳ ಗಡಿಯಲ್ಲಿರುವ ಪಾಲಕ್ಕಾಡ್ ಜಿಲ್ಲೆಯ ಚಿತ್ತೂರು ತಾಲ್ಲೂಕಿನಲ್ಲಿದೆ. ಎಲ್ಲರಿಗೂ ತಿಳಿದಂತೆ ಚಿತ್ತೂರು ಭತ್ತ/ಅಕ್ಕಿಗೆಪ್ರಸಿದ್ದಿ ಪಡೆದ ಪ್ರದೇಶ. ಈ ಪಾಲಕ್ಕಾಡಿನ ಸುತ್ತಮತ್ತ ಪಟ್ಟಂಚೇರಿ ಮತ್ತು ಮತ್ತಲಮಡ ಗ್ರಾಮ ಪಂಚಾಯ್ತಿಗಳಿವೆ. ಈ ಒಟ್ಟೂ ಪ್ರದೇಶ ಪಶ್ಚಿಮಘಟ್ಟ ಶ್ರೇಣಿಯು ಒಂದೆಡೆ ಸ್ವಲ್ಪ ತೆರವಾಗಿರುವ ಜಾಗದಲ್ಲಿದೆ. ಇಲ್ಲಿ ಸಾಮಾನ್ಯವಾಗಿ ಮಳೆ ಕಡಿಮೆ. ಕೇರಳದ ವಾರ್ಷಿಕ ಸರಾಸರಿ ಮಳೆಯಲ್ಲಿ ಅರ್ಧದಷ್ಟು ಮಳೆ ಬಂದರೆ ಹೆಚ್ಚು. ಹಾಗಾಗಿ ಇಲ್ಲಿನ ಎಲ್ಲ ಜೀವರಾಶಿ ಅಂತರ್ಜಲವನ್ನು ಆಧರಿಸಿದೆ. ಇಲ್ಲಿನ ಅಂತರ್ಜಲ ಸಮೃದ್ದವಾಗಿದ್ದು, ಇಲ್ಲಿನ ಜೀವಜಾಲದ ಪೋಷಣೆಗೆ ಅಗತ್ಯವಾದಷ್ಟಿದೆ. ಅಲ್ಲದೆ ಅಂತರ್ಜಲ ಪ್ರತಿವರ್ಷ ತಂತಾನೆ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ. ಕಾರಣ ಈ ಪ್ರದೇಶದಿಂದ ದೂರದಲ್ಲಿ ಎರಡು ಜಲಾಶಯಗಳಿವೆ. ಹೀಗಾಗಿ ಇಲ್ಲಿನ ಮುಖ್ಯ ಕಸುಬು ಬೇಸಾಯ ಮತ್ತು ಬೇಸಾಯ ಆಧಾರಿತ ಕೂಲಿ.
ಹೀಗೆ ನೂರಾರು ವರ್ಷಗಳಿಂದ ಬದುಕುತ್ತಾ ಬಂದ ಈ ಪಂಚಾಯತಿಗಳ ಪ್ರದೇಶಕ್ಕೆ ಒಮ್ಮೆ ಕೆಲವು ಜನ ಬಂದು ಸುಮಾರು ೩೬ ಎಕರೆ ಕೃಷಿ ಜಮೀನನ್ನು ಕೊಳ್ಳುತ್ತಾರೆ. ಇದಾದ ಕೆಲವೇ ದಿನಗಳಲ್ಲಿ ಅಲ್ಲಿಗೆ ಹಿಂದೂಸ್ತಾನ್ ಕೊಕೋ ಕೋಲಾ ಬೇವರೇಜಸ್ ಲಿ. ಎಂಬ ಕಂಪನಿ ಬರುವುದಾಗಿ ಜನಕ್ಕೆ ತಿಳಿಯುತ್ತದೆ. ಜನ ಪ್ರತಿರೋಧಿಸುತ್ತಾರೆ. ಇದಾದ ಕೆಲವು ದಿನಗಳಲ್ಲಿ ಕಂಪನಿಯ ಮಂದಿ ಬರುತ್ತಾರೆ, ಬಂದವರು “ನೀವು ಏಕೆ ಮನೆ ಬಾಗಿಲಿಗೆ ಬಂದ ಅದೃಷ್ಟವನ್ನು ಕಾಲಲ್ಲಿ ದೂಡುತ್ತಿದ್ದೀರಿ?! ನಾವು ಇಲ್ಲಿಗೆ ಬರುತ್ತಿದ್ದಂತೆ ನಿಮ್ಮೆಲ್ಲರ ಮನೆಯವರಿಗೆ ಕೆಲಸ ಕೊಡುತ್ತೇವೆ. ಕೈತುಂಬಾ ಸಂಬಳ ಕೊಡುತ್ತೇವೆ, ಇಲ್ಲಿನ ಎಲ್ಲಾ ಹಳ್ಳಿಗಳನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲ್ಮಟ್ಟಕ್ಕೆ ಎತ್ತುತ್ತೇವೆ, ನಾವು ಸದಾ ನಿಮ್ಮ ಹಳ್ಳಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತೇವೆ..." ಎಂದೆಲ್ಲಾ ಕನಸುಗಳ ಹೂ ಮಾಲೆ ಹಾಕುತ್ತಾರೆ. ಜನ ಅವರ ಮಾತುಗಳನ್ನು ನಂಬುತ್ತಾರೆ. ಇದಾದ ಕೆಲವೇ ದಿನಗಳಲ್ಲಿ ಕಾರ್ಖಾನೆ ಕೆಲಸ ಆರಂಭಿಸುತ್ತದೆ. ಸುತ್ತಮುತ್ತ ಒಟ್ಟು ಎರಡು ಲಕ್ಷಕ್ಕೂ ಮಿಗಿಲಾದ ಜನಸಂಖ್ಯೆಯಲ್ಲಿ ಸುಮಾರು ೨೦೦ ಜನಕ್ಕೆ ದಿನಗೂಲಿ ಕೆಲಸ ಸಿಗುತ್ತದೆ. ೧೭೦ ಮಂದಿ ಹೊರಗಿನವರಿಗೆ ಶಾಶ್ವತ ಉದ್ಯೋಗ ದೊರೆಯುತ್ತದೆ.
![]() |
ಪುಸ್ತಕ ಬಿಡುಗಡೆ ಸಮಾರಂಭದ ವಿವರಗಳು |
ಇಲ್ಲಿಂದ ಪ್ರತಿದಿನ ೮೫ ಲಾರಿಗಳು ಕುತ್ತಿಗೆಮಟ್ಟ ಲೋಡನ್ನು ತುಂಬಿಕೊಂಡು ಕೇರಳದ ನಗರಗಳತ್ತ ಸಾಗುತ್ತವೆ. ಪ್ರತಿಯೊಂದು ಲಾರಿಯಲ್ಲಿ ೫೫೦-೬೦೦ ಕೇಸುಗಳಿರುತ್ತವೆ. ಇಂಥಾ ಪ್ರತಿಯೊಂದು ಕೇಸಿನಲ್ಲಿ ೨೪ ಬಾಟಲಿಗಳು ತುಂಬಿರುತ್ತವೆ. ಈ ಲೆಕ್ಕದಲ್ಲಿ ದಿನಕ್ಕೆ ಇಂಥಾ ೧೨ ಲಕ್ಷ ಬಾಟಲಿ ಕೊಕೋ ಕೋಲಾ ನೀರು ಪ್ಲಾಚಿಮಡಾದಿಂದ ಹೊರಹೋಗಲಾರಂಭಿಸುತ್ತದೆ.
ಅತ್ತ ಅವರ ಲಾರಿಗಳ ಓಡಾಟ ಜಾಸ್ತಿಯಾದಂತೆ ಇತ್ತ ಸುತ್ತಮುತ್ತಲ ಮೂರೂ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಬರುವ ಹತ್ತಾರು ಹಳ್ಳಿಗಳ ಬಾವಿಗಳು ನಿಧಾನಕ್ಕೆ ತಳ ಕಾಣಲಾರಂಭಿಸುತ್ತವೆ. ಅಲ್ಲಲ್ಲಿ ಕೆಲವು ಬಾವಿಗಳಲ್ಲಿ ತಳದಲ್ಲಿ ಅಲ್ಪಸ್ವಲ್ಪ ನೀರಿದ್ದರೂ ಆ ನೀರು ಮೊದಲಿನಂತೆ ಕಾಣುವುದಿಲ್ಲ. ಕುಡಿಯಲು ಸಾಧ್ಯವಾಗುತ್ತಿಲ್ಲ. ಬಟ್ಟೆ ತೊಳೆಯಲು ಸಾಧ್ಯವಾಗುತ್ತಿಲ್ಲ. ಇದಾದ ಕೆಲವೇ ದಿನಗಳಲ್ಲಿ ಆ ವರ್ಷದ ಮೊದಲ ಬೆಳೆ ಬರುತ್ತದೆ. ಯಾರಿಗೂ ಸರಿಯಾದ ಇಳುವರಿಯಿಲ್ಲ. ಈ ನಡುವೆ ಕಾರ್ಖಾನೆಯು ಉಚಿತವಾಗಿ ಕೊಟ್ಟಿದ್ದ ಮಂದ ದ್ರವರೂಪದ ತ್ಯಾಜ್ಯವನ್ನು ಉತ್ತಮ ಗೊಬ್ಬರವೆಂದು ಹೇಳಿ ರೈತರ ಹೊಲಗಳಿಗೆ ಸಾಗಿಸಿದ್ದ ಕಂಪನಿಯ ಉದ್ದೇಶದ ಬಗ್ಗೆ ಜನಕ್ಕೆ ಗುಮಾನಿ ಆರಂಭವಾಗುತ್ತದೆ. ನೀರು ನಿಧಾನವಾಗಿ ಪಾತಾಳ ಸೇರುತ್ತಿರುತ್ತದೆ. ಬೇಸಾಯ ಅಸಾಧ್ಯವಾಗುತ್ತದೆ. ಅಲ್ಲಿನ ಬಾವಿ, ಕೆರೆ, ಹೊಂಡಗಳಲ್ಲಿ ನೀರಲ್ಲಿ ಸ್ನಾನ ಮಾಡಿದ ಜನ-ಜಾನುವಾರುಗಳ ಮೈಯಲ್ಲಿ ನಿಧಾನವಾಗಿ ಬೊಕ್ಕೆಗಳು ಕಾಣಿಸಿಕೊಳ್ಳುತ್ತವೆ. ಸಾವಿರಾರು ಜನ ಜೀವನೋಪಾಯಕ್ಕಾಗಿ ವಲಸೆ ಹೋಗಲು ಆರಂಭಿಸುತ್ತಾರೆ.
ಜನಕ್ಕೆ ತಮ್ಮ ಸಮಸ್ಯೆಗಳ ಮೂಲವನ್ನು ಹುಡುಕುವುದು ಅನಿವಾರ್ಯವಾಗುತ್ತದೆ. ನಿಜಸ್ಥಿತಿ ಅವರ ಗಮನಕ್ಕೆ ಬಂದಾಗ ಜನ ಬೆಚ್ಚಿಬೀಳುತ್ತಾರೆ. ಆ ಕಂಪನಿಯ ಆವರಣದಲ್ಲಿ ಯಮ ಸಾಮರ್ಥ್ಯದ ಆರು ಬೋರ್ವೆಲ್ಗಳಿರುತ್ತವೆ. ಇವುಗಳಿಂದ ಕಾರ್ಖಾನೆ ಪ್ರತಿನಿತ್ಯ ೧೫ ಲಕ್ಷ ಲೀ. ನೀರನ್ನು ನೆಲದಿಂದ ಹೀರಿ, ಅದಕ್ಕೆ ಪರಿಮಳ ಹಾಕಿ ರವಾನಿಸುತ್ತಿರುತ್ತದೆ. ಜನರ ಗಮನಕ್ಕೆ ಇದು ಬರುವ ಹೊತ್ತಿಗೆ ಕಂಪನಿಯ ಬೋರುಗಳೂ ಮುಷ್ಕರ ಹೂಡಿರುತ್ತವೆ. ಆಗ ಅವುಗಳಿಂದ ನಿತ್ಯ ಕೇವಲ ೮ ಲಕ್ಷ ಲೀ. ನೀರು ಮಾತ್ರ ಹೊರಬರುತ್ತಿರುತ್ತದೆ. ಈ ಕೊರತೆಯನ್ನು ಹೊಂದಿಸಿಕೊಳ್ಳಲು ಕಂಪನಿ ದೂರದೂರದ ರೈತರ ಹೊಲಗಳಿಂದ ನೀರನ್ನು ಖರೀದಿ ಮಾಡುತ್ತಿರುತ್ತದೆ. ಈ ನಡುವೆ ರೈತರು ಅವರ ಉಚಿತ ಗೊಬ್ಬರವನ್ನು ನಿರಾಕರಿಸಲಾರಂಭಿಸಿದ ಮೇಲೆ ಬೇಕಾಬಿಟ್ಟಿ ಸಿಕ್ಕಿದ ಕಡೆ ಎಸೆದ ಅಪಾಯಕಾರಿ ತ್ಯಾಜ್ಯದಿಂದ ಹೊರಬಿದ್ದ ಗಬ್ಬುನಾತ ಇಡೀ ಪ್ರದೇಶಕ್ಕೊಂದು ಹೊಸ ಹೆಸರನ್ನಿಡುವಂತೆ ಮಾಡುತ್ತದೆ.
ಜನ ಪ್ರತಿರೋಧಿಸುತ್ತಾರೆ, ಕಂಪನಿ ಕೇರೇ ಮಾಡುವುದಿಲ್ಲ. ಅವರ ಬಾವಿಗಳು ಪೂರ್ತಿ ಬತ್ತಿಹೋಗುತ್ತವೆ. ಸುತ್ತಮುತ್ತಲ ಜಮೀನುಗಳು ಸವುಳು ನೆಲಗಳಾಗಿ, ಕೃಷಿಗೆ ಅಯೋಗ್ಯವಾಗುತ್ತವೆ. ಸುತ್ತಮುತ್ತಲ ಹಳ್ಳಿಗಳ ಮಕ್ಕಳು ಮುದುಕರಾದಿಯಾಗಿ ಎಲ್ಲರಿಗೂ ಅನೇಕ ಖಾಯಿಲೆಗಳು ಸಾಮಾನ್ಯವೆಂಬಂತೆ ಕಾಡತೊಡಗುತ್ತವೆ. ಒಂದೆಡೆ ನಿಂತುಹೋಗಿರುವ ಕೃಷಿ, ಮತ್ತೊಂದೆಡೆ ಬೀದಿ ಪಾಲಾದ ಕೃಷಿ ಕಾರ್ಮಿಕರು, ಈ ನಡುವೆ ಕಂಡು ಕೇಳರಿಯದ ರೋಗಗಳು, ಔಷಧ ವೆಚ್ಚ , ಜೊತೆಗೆ ಗಬ್ಬು ವಾಸನೆ. ರೋಸಿಹೋದ ಜನ ಸರ್ಕಾರದ ಮೊರೆ ಹೋಗುತ್ತಾರೆ. ಸರ್ಕಾರ ಕಂಪನಿಯ ಪರವಾಗಿ ನಿಲ್ಲುತ್ತದೆ. ಜನ ಕಾರ್ಖಾನೆಯ ಮುಂದೆ ಪ್ರದರ್ಶನ ಪ್ರತಿಭಟನೆಗಿಳಿಯುತ್ತಾರೆ, ಪಿಕೆಟಿಂಗ್ ಮಾಡುತ್ತಾರೆ. ಪೋಲೀಸರು ನಿರ್ದಾಕ್ಷಿಣ್ಯವಾಗಿ ಲಾಠಿಬೀಸಿ ಜನರನ್ನು ಮಗ್ಗ ಮಲಗಿಸುತ್ತಾರೆ. ಪ್ರತಿಯೊಬ್ಬರ ಮೇಲೆ ಅಸಂಖ್ಯಾತ ಐಪಿಸಿ ಕೋಡುಗಳ ಮೂಲಕ ಸಾಧ್ಯವಾದ ಎಲ್ಲಾ ಮೊಕದ್ದಮೆಗಳನ್ನು ಹೂಡುತ್ತಾರೆ. ಕಾರ್ಖಾನೆಯ ಕಾವಲಿಗೆ ಪೋಲೀಸ್ ತುಕಡಿ ಬರುತ್ತದೆ. ಅನಿವಾರ್ಯವಾಗಿ ಸ್ಥಳೀಯರು ಬೀದಿಗಳಿಯುತ್ತಾರೆ.
ಈ ಹೋರಾಟ ಆರಂಭವಾಗಿದ್ದು ೨೨ ನೇ ಏಪ್ರಿಲ್ ೨೦೦೨ ರಂದು, ಉದ್ಘಾಟಿಸಿದ್ದು ಆದಿವಾಸಿ ಗೋತ್ರ ಮಹಾಸಭಾದ ನಾಯಕಿ ಸಿ.ಕೆ.ಜಾನು. ಈ ದುರಂತದ ಹೆಚ್ಚು ಬಲಿಪಶುಗಳು ಆದಿವಾಸಿಗಳು ಮತ್ತು ದಲಿತರು. ಈ ಹೋರಾಟಕ್ಕೆ ನಾಡಿದ್ದು ೧೫ ತಾರೀಖಿಗೆ ಒಂದು ಸಾವಿರ ದಿನಗಳು ತುಂಬಲಿವೆ.
ಈ ನಡುವೆ ಆ ಪ್ರದೇಶದ ಮಿಲಿಯಾನು ಲೀಟರ್ ನೀರು ಭೂಮಿಯಿಂದ ಹೊರಬಂದು ನಗರವಾಸಿ ಶೋಕಿಲಾಲರ ಹೊಟ್ಟೆಸೇರಿ, ಮೂತ್ರವಾಗಿ ಕೇರಳದ ಉದ್ದಗಲಕ್ಕೂ ಹರಿದಾಡುತ್ತಿದೆ. ಅಲ್ಲಿನ ಸಾವಿರಾರು ಆದಿವಾಸಿಗಳು, ದಲಿತರು ಹಸಿವು ಅಪಮಾನಗಳಿಂದ ಕಂಗೆಟ್ಟಿದ್ದಾರೆ. ಸರ್ಕಾರ ಕಂಪನಿಯ ರಕ್ಷಣೆಗೆ ಟೊಂಕಕಟ್ಟಿ ನಿಂತಿದೆ. ಇವುಗಳ ನಡುವೆ ಸ್ಥಳೀಯ ಗ್ರಾಮ ಪಂಚಾಯ್ತಿಗಳು ಕಾರ್ಖಾನೆಯ ಪರವಾನಗಿಯನ್ನು ರದ್ದುಪಡಿಸಿವೆ. ಇದನ್ನು ಪ್ರಶ್ನಿಸಿ ಕಂಪನಿ ಕೇರಳ ಹೈಕೋರ್ಟಿನ ಮೆಟ್ಟಿಲು ಹತ್ತಿದೆ. ಕೋರ್ಟು ಪಂಚಾಯತಿಯ ಆದೇಶಕ್ಕೆ ತಡೆಯಾಜ್ಞೆ ನೀಡಿ, ಇದಕ್ಕೆ ಸಂಬಂಧಿಸಿದ ಅಧಿಕಾರದ ಮುಂದೆ ಮನವಿ ಸಲ್ಲಿಸುವಂತೆ ಸೂಚಿಸಿದೆ. ಇದನ್ನು ಆಧರಿಸಿ ಕಂಪನಿ ರಾಜ್ಯದ ಸ್ಥಳೀಯ ಸ್ವಯಂ ಆಡಳಿತ ಇಲಾಖೆಯ ಮುಂದೆ ಮನವಿ ಸಲ್ಲಿಸಿದೆ. ಆ ಆಡಳಿತವು ತನ್ನ ಮಧ್ಯಂತರ ಆದೇಶದಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳೂ ಮಾಡುವಂತೆ ಈ ತೀರ್ಮಾನಕ್ಕೆ ಬರುವುದಕ್ಕೆ ಮುಂಚೆ ‘ತಜ್ಞರ ಸಮಿತಿಯನ್ನು’ ನೇಮಿಸಿ ಅದರಿಂದ ವರದಿ ಪಡೆಯಿರಿ ಎಂದು ಹೇಳಿದೆ. ಈ ಮಧ್ಯಂತರ ಆದೇಶವನ್ನು ಪ್ರಶ್ನಿಸುತ್ತಾ ಪಂಚಾಯ್ತಿಯು ಈ ರೀತಿ ತಜ್ಞರ ಸಮಿತಿಯನ್ನು ನೇಮಿಸುವುದಕ್ಕೆ ಮುಂಚೆ ಕಾರ್ಖಾನೆಯು ನಾವು ಈ ಕೆಳಗೆ ಮಂಡಿಸಿರುವ ೧೬ ಪ್ರಶ್ನೆಗಳಿಗೆ ಪಂಚಾಯ್ತಿಗೆ ಬಂದ ಉತ್ತರಿಸಲಿ ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಪಂಚಾಯ್ತಿಗೆ ಹೋದ ಕಂಪನಿಯ ಅಧಿಕಾರಿ ಬರಿಗೈಯಲ್ಲಿ ಹೋಗಿದ್ದಾನೆ. ಪ್ರಶ್ನೆಗಳಿಗೆ ಉತ್ತರಿಸಲು ಅವನಿಂದ ಸಾಧ್ಯವಾಗಿಲ್ಲ.
ಇದಾಗುವಷ್ಟರಲ್ಲಿ ಪೆರುಮಟ್ಟಿ ಗ್ರಾಮ ಪಂಚಾಯ್ತಿಯು ತನ್ನ ಪರವಾನಗಿ ರದ್ದು ಆದೇಶಕ್ಕೆ ಸರ್ಕಾರವು ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿ ಹೈಕೋರ್ಟಿನಲ್ಲಿ ವಿಚಾರಣೆಗೆ ಬಂದು, ಹೈಕೋರ್ಟು ಒಂದು ತಿಂಗಳೊಳಗೆ ಕಾರ್ಖಾನೆಯು ಬೋರಿನ ನೀರಿಗೆ ಬದಲಾಗಿ ಬೇರೊಂದು ಮಾರ್ಗವನ್ನು ಕಲ್ಪಿಸಿಕೊಳ್ಳುವಂತೆ ಸೂಚಿಸಿದೆ. ಹಾಗೊಂದು ಪಕ್ಷ ಕಾರ್ಖಾನೆ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡರೆ ಕಾರ್ಖಾನೆಯ ವ್ಯವಹಾರದಲ್ಲಿ ಪಂಚಾಯ್ತಿಯು ಮಧ್ಯಪ್ರವೇಶಿಸಬಾರದೆಂದೂ, ಅಲ್ಲಿಯವರೆಗೆ ಕಾರ್ಖಾನೆಯು ತನ್ನ ೩೬ ಎಕರೆ ಪ್ರದೇಶಕ್ಕೆ ಅನುಗುಣವಾಗಿ ಕೃಷಿಗೆ ಹಾಗೂ ದಿನಬಳಕೆಗೆ ಒಬ್ಬ ರೈತ ಎಷ್ಟು ನೀರನ್ನು ಬಳಸುತ್ತಾನೋ ಅಷ್ಟು ನೀರನ್ನು ಅಂತರ್ಜಲದಿಂದ ಎತ್ತಿ ಬಳಸಬಹುದೆಂದೂ, ಒಂದು ತಿಂಗಳ ನಂತರ ಅವರ ಕೊಳವೆ ಬಾವಿಗಳ ಬಳಕೆಯನ್ನು ನಿಲ್ಲಿಸಿರುವುದನ್ನು ಖಚಿತಪಡಿಸಬೇಕೆಂದೂ ಹೇಳಿದೆ. ಮುಂದುವರಿದು ಈ ರೀತಿ ಸರ್ಕಾರವು ಒಂದು ಕಂಪನಿಗೆ ಇಷ್ಟೊಂದು ಅಗಾಧ ಪ್ರಮಾಣದ ಅಂತರ್ಜಲವನ್ನು ಬಳಸಲು ಅನುಮತಿ ನೀಡಲು ಬರುವುದಿಲ್ಲ. ಹಾಗೊಂದು ಪಕ್ಷ ಇದೇ ಆಧಾರದ ಮೇಲೆ ಎಲ್ಲಾ ರೈತರೂ ಇದೇ ಪ್ರಮಾಣದಲ್ಲಿ ಅಂತರ್ಜಲವನ್ನು ಬಳಸಲು ಕೋರಿದರೆ ಅದಕ್ಕೆ ಸರ್ಕಾರ ಅನುಮತಿ ನೀಡಬೇಕಾಗುತ್ತದೆ, ಆಗ ಅಂತರ್ಜಲದ ಕಥೆ ಏನಾಗುತ್ತದೆ? ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದೆ.
ಏಕ ಪೀಠದ ಈ ಮೇಲಿನ ತೀರ್ಪನ್ನು ಪ್ರಶ್ನಿಸಿ ಡಿವಿಷನಲ್ ಬೆಂಚಿನ ಮುಂದೆ ಕಂಪನಿ ಮೇಲ್ಮನವಿಯನ್ನು ಸಲ್ಲಿಸಿದೆ. ಇದರಲ್ಲಿ ಕಂಪನಿ ‘ಒಂದು ಪಂಚಾಯ್ತಿಗೆ ಇಂಥಾ ಒಂದು ಕಂಪನಿಯ ಪರವಾನಗಿಯನ್ನು ರದ್ದುಪಡಿಸುವ ಅಥವಾ ಪ್ರಶ್ನಿಸುವ ಅಧಿಕಾರವಿಲ್ಲ’ ಎಂದು ಹೇಳಿದೆ. ವಿಚಾರಣೆ ಇನ್ನೂ ಬಾಕಿ ಇದೆ. ಈ ನಡುವೆ ನಡೆದಿರುವ ಎಲ್ಲಾ ಸಂಶೋದನೆಗಳೂ ಕಂಪನಿಯ ವಿರುದ್ದವಾಗಿವೆ. ಮನುಷ್ಯನ ಕೇಂದ್ರ ನರವ್ಯೂಹ, ಮೂತ್ರಕೋಶ ಹಾಗೂ ಮಿದುಳಿನ ಕ್ರಿಯೆಗಳ ಮೇಲೆ ಅಗಾಧ ಪರಿಣಾವನ್ನುಂಟುಮಾಡಿ, ಜೀವ ತಗೆಯಬಲ್ಲ ಕ್ಯಾಡ್ಮಿಯಂ ಮತ್ತು ಸೀಸದ ಧಾತುಗಳು ಅಲ್ಲಿನ ತ್ಯಾಜ್ಯದಲ್ಲಿ ನಿಗಧಿತ ಮಿತಿಗಿಂತ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿರುವುದನ್ನು ಸಂಶೋಧನೆಗಳು ಸ್ಥಿರಪಡಿಸಿವೆ.
ಈ ಹಿನ್ನೆಲೆಯಲ್ಲಿ ಭವಿಷ್ಯದ ವಿಚಾರಣೆ ಕೇವಲ ನೀರನ್ನು ಮಾತ್ರ ಕುರಿತು ಯೋಚಿಸುತ್ತದೋ ಇಲ್ಲಾ ಸಮಗ್ರವಾಗಿ ಹಳ್ಳಿಯ ವಿನಾಶವನ್ನು ಗಮನಿಸುತ್ತದೋ ಕಾದು ನೋಡಬೇಕಾಗಿದೆ. ಇದಕ್ಕಾಗಿ ಈ ಹೋರಾಟದ ಮುಂಚೂಣಿಯಲ್ಲಿರುವ ‘ಕೊಕೋ ಕೋಲಾ ವಿರುದ್ಧ ಸಮರ ಸಮಿತಿ’ ಹಾಗೂ ಇದನ್ನು ಬೆಂಬಲಿಸುತ್ತಿರುವ ಹಲವು ಜನಪರ ಸಂಘಟನೆಗಳು ಹಾಗೂ ವ್ಯಕ್ತಿಗಳು ಕುತೂಹಲದಿಂದ ಕಾದಿದ್ದಾರೆ. ಇದೊಂದು ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗಿರುವುದರಿಂದ ಅಂಥಾ ಮಾಧ್ಯಮಗಳೂ ಈ ನಿರೀಕ್ಷೆಯಲ್ಲಿವೆ.
ಈ ನಡುವೆ ಪಾಕಿಸ್ತಾನ ಸಿಂಧ್ ಪ್ರಾಂತ್ಯ ಹೈಕೋರ್ಟ್ ಇಂಥದ್ದೇ ಒಂದು ತಾಪತ್ರಯದಲ್ಲಿ ಸಿಕ್ಕಿಕೊಂಡು ಹೊರಬಂದ ಘಟನೆಯೊಂದು ವರದಿಯಾಗಿದೆ. ಕರಾಚಿಯ ಹೊರವಲಯದಲ್ಲಿ ಸಿಂಧ್ ಸರ್ಕಾರ ಒಂದೆಡೆ “ಶಿಕ್ಷಣ ನಗರ"ವನ್ನು ಸೃಷ್ಠಿಸಲು ಜಮೀನನ್ನು ಮಂಜೂರು ಮಾಡಿತ್ತು.ಇಲ್ಲಿ ಜಮೀನು ಪಡೆದ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಪಾಕಿಸ್ತಾನದ ಪ್ರಖ್ಯಾತ ‘ಸಿಂಧ್ ಇನ್ಸ್ಟಿಟ್ಯೂಟ್ ಆಫ್ ಯೂರಾಜಲಿ’, ಹಾಗೂ ‘ಜುಲ್ಫಿಕರ್ ಆಲಿ ಬುಟ್ಟೋ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ’ ಸಂಸ್ಥೆಗಳು ಸೇರಿದ್ದವು. ಈ ನಡುವೆ ಸಿಂಧ್ ಸರ್ಕಾರ ಅದೇ ಪ್ರದೇಶದಲ್ಲಿ ಇದೇ ಕೊಕೋ ಕೋಲಾ ಕಂಪನಿಯ ಸೋದರನಾದ ನೆಸ್ಲೆ ಕಂಪನಿಗೆ ಬಾಟಲಿ ನೀರನ್ನು ಉತ್ಪಾದಿಸುವ ಕಾರ್ಖಾನೆಗೆ ಸುಮಾರು ೮.೫ ಹೆಕ್ಟೇರ್ ನೆಲವನ್ನು ಕೊಟ್ಟಿತ್ತು.
ಈ ಕಾರ್ಖಾನೆಯು ಇಲ್ಲಿಂದ ಪ್ರತಿದಿನ ೩೦ ಕೋಟಿ ಲೀಟರ್ ನೀರನ್ನು ಭೂಮಿಯಿಂದ ತಗೆದು, ಅದನ್ನು ಸಂಸ್ಕರಿಸಿ, ಬಾಟಲಿಮಾಡಿ, ಸಧ್ಯಕ್ಕೆ ಅಮೆರಿಕಾದ ಸೇನೆಗಳು ಕಾರ್ಯಾಚರಣೆಯಲ್ಲಿರುವ ಅಪ್ಘಾನಿಸ್ಥಾನ ಮತ್ತು ಕೆಲವು ಅರಬ್ ದೇಶಗಳಿಗೆ ಸರಬರಾಜು ಮಾಡುವ ಯೋಜನೆ ಹೊಂದಿತ್ತು. ಇದಕ್ಕಾಗಿ ಹತ್ತು ಮಿಲಿಯಾನು ಡಾಲರ್ಗಳಷ್ಟು ಬಂಡವಾಳ ಹೂಡಲು ತೀರ್ಮಾನಿಸಿತ್ತು. ಆದರೆ ಈ ಕಾರ್ಖಾನೆ ಆರಂಭವಾಗುವುದಕ್ಕೆ ಮುಂಚೆಯೇ ಅಲ್ಲಿ ಜಾಗ ಪಡೆದಿದ್ದ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದವು. ಈ ಪ್ರದೇಶವು ಅಂತರ್ಜಲದ ದೃಷ್ಟಿಯಿಂದ ತೀರಾ ನಾಜೂಕಿನದಾಗಿದ್ದು. ಪ್ರತಿದಿನ ಇಷ್ಟೋಂದು ಅಗಾಧ ಪ್ರಮಾಣದ ನೀರನ್ನು ಹೊರತಗೆಯುವುದರಿಂದ ನಾಳೆ ಅಲ್ಲಿ ವಾಸಿಸುವ ಯಾರಿಗೂ ನೀರೇ ಇಲ್ಲದಂತಾಗುತ್ತದೆ. ಆದರೆ ಅಲ್ಲಿನ ಅಂತರ್ಜಲ ಮುಗಿದ ತಕ್ಷಣ ಈ ಕಾರ್ಖಾನೆ ಬೇರೊಂದು ನೀರು ಸಿಗುವ ಜಾಗಕ್ಕೆ ತನ್ನ ಟೆಂಟನ್ನು ಬದಲಾಯಿಸುತ್ತದೆ. ಆದರೆ ನಾವು ಹಾಗೆ ಮಾಡಲು ಬರುವುದಿಲ್ಲ. ಆದ್ದರಿಂದ ಈ ಕಾರ್ಖಾನೆಯು ಇಲ್ಲಿ ಸ್ಥಾಪನೆಯಾಗದಂತೆ ತಡೆಯಬೇಕು ಎಂದು ಕೋರಲಾಗಿತ್ತು.
ವಾದವಿವಾದಗಳು ನಡೆದವು ಶಿಕ್ಷಣ ಸಂಸ್ಥೆಗಳ ಪರವಾಗಿ ವಾದಿಸುತ್ತಿದ್ದ ವಕೀಲರು ಕಂಪನಿಯು ಹೂಡಿದ ಅನೇಕ ಕುತಂತ್ರಗಳನ್ನು ಬಯಲಿಗೆಳೆದರು ಅದರಲ್ಲಿ ಮುಖ್ಯವಾದದದ್ದು... “ಕಂಪನಿಯು ಸಲ್ಲಿಸಿರುವ ತನ್ನ ‘ಪರಿಸರ ಪರಿಣಾಮ ಅಧ್ಯಯನ’ವು ಅದರ ನಿಜವಾದ ಹೆಸರಿನಲ್ಲಿಲ್ಲ. ಆಧ್ಯಯನ ವರದಿ ಒಂದು ಪಕ್ಷ ಸತ್ಯವಾದದ್ದೇ ಆದರೆ ಅದು ಏಕೆ ಸುಳ್ಳು ಹೆಸರಿನಲ್ಲಿ ವರದಿಯನ್ನು ಮಂಡಿಸಿದೆ" ಎಂದರು. ಇದಕ್ಕೆ ಕಂಪನಿಯ ಬಳಿ ಉತ್ತರವಿರಲಿಲ್ಲ. ಈ ಕಂಪನಿಗಳು ಸ್ಥಳೀಯ ಆಡಳಿತಗಳ ಕಣ್ಣಿಗೆ ಮಣ್ಣೆರಚಲು ಇಂಥಾ ಆಟಗಳನ್ನು ವ್ಯವಸ್ಥಿತವಾಗಿ ಆಡುತ್ತವೆ ಎಂಬುದನ್ನು ಸಾಬೀತು ಪಡಿಸಿದರು.
ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಪ್ಲಾಚಿಮಡದ ಕೊಕೋ ಕೋಲಾ ಕಂಪನಿ ಜಮೀನುಗಳನ್ನು ಬೇರೆಯವರ ಹೆಸರಿನಲ್ಲಿ ಖರೀದಿಸಿತ್ತು. ತನ್ನ ಅಗತ್ಯಕ್ಕೆ ಮೀರಿದ ಅಥವಾ ತನಗೆ ಮಂಜೂರಾದ ಭೂಮಿಗಿಂತ ಹೆಚ್ಚು ಭೂಮಿಯನ್ನು ಖರೀದಿಸುವುದು ಇವುಗಳ ಇನ್ನೊಂದು ಕುತಂತ್ರವಾಗಿರುತ್ತದೆ.
ಈ ನಡುವೆ ಕಂಪನಿ ಸಾವಿರಾರು ನೆಪಗಳನ್ನು ಹೇಳಿತು. ಆದರೆ ಶಿಕ್ಷಣ ಸಂಸ್ಥೆಗಳ ವಕೀಲರು ವೈeನಿಕವಾಗಿ ಮಂಡಿಸಿದ ವಾದದ ಮುಂದೆ ಕಂಪನಿಗೆ ಉತ್ತರವಿರಲಿಲ್ಲ. ಕೊನೆಗೆ ಶಿಕ್ಷಣ ಸಂಸ್ಥೆಗಳ ವಕೀಲರು “ಈ ವರೆಗೂ ನಾನು ಹೇಳಿದ್ದು ವೈಜ್ಞಾನಿಕ ವಿವರಗಳನ್ನು ಆದರೆ ಈ ಕಂಪನಿಯು ಇಸ್ಲಾಮಿನ ಮೂಲಭೂತ ಸಿದ್ದಾಂತಗಳನ್ನೇ ಉಲ್ಲಂಘಿಸುತ್ತಿದೆ. ಇಸ್ಲಾಂ ಧರ್ಮದ ನೀತಿಯ ಪ್ರಕಾರ ಪರಿಸರ ಹಾಗೂ ಅದರ ಸಂರಕ್ಷಣೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮನುಷ್ಯ ಹೊಣೆ. ಹಾಗೂ ನೀರು ಸಾರ್ವಜನಿಕ ಸಂಪನ್ಮೂಲ ಇದನ್ನು ಹಂಚಿಕೊಂಡು ಬದುಕಬೇಕು. ಈ ನೀರಿನ ಮೇಲೆ ಹೀಗೆ ಯಾರೊಬ್ಬರೂ ಅಧಿಕಾರ ಹೊಂದಬಾರದು, ಹೀಗೆ ಹೊಂದಲು ಪ್ರಭುತ್ವಗಳು ಅನುಮತಿಯನ್ನೂ ನೀಡಬಾರದು, ಇದು ಇಸ್ಲಾಂ ತತ್ವಕ್ಕೆ ವಿರುದ್ಧ" ಎಂದು ಹೇಳಿದರು.
ಇದಕ್ಕೆ ಪ್ರತಿಯಾಗಿ ನೆಸ್ಲೆ ವಕೀಲರು “ ಆ ಪ್ರದೇಶದಲ್ಲಿ ಸಿಗುವ ನೀರು ಮನುಷ್ಯನ ಬಳಕೆಗೆ ಯೋಗ್ಯವಾಗಿಲ್ಲ. ಆದರೂ ನಾವು ಅದನ್ನು ಸಂಸ್ಕರಿಸಿ ನೀಡುವ ಶ್ರಮವಹಿಸುತ್ತೇವೆ" ಎಂದರು. ಆದರೆ ನ್ಯಾಯಾಧೀಶರು “ಈ ಕಂಪನಿ ಅಲ್ಲಿ ಯಾವುದೇ ಕಾರಣದಿಂದ ನೀರನ್ನು ತಗೆಯುವ ಪ್ರಯತ್ನಕ್ಕೆ ನೆರವಾಗುವಂತಹ ಯಾವ ಘಟಕಗಳನ್ನೂ ಸ್ಥಾಪಿಸಕೂಡದು. ಮತ್ತು ಆ ಜಾಗವನ್ನು ಸರ್ಕಾರ ವಹಿಸಿಕೊಂಡು ಶಿಕ್ಷಣ ಕಾರಣಗಳಿಗೆ ನೀಡಬೇಕು" ಎಂದು ಎಂದಿತು. ನೆಸ್ಲೆ ಬಾಲಮುದುರಿಕೊಂಡಿತು.
ಇದು ನೆರೆ ರಾಜ್ಯದ, ನೆರೆ ದೇಶದ ಕತೆಯಾಯಿತು. ಇನ್ನು ನಮ್ಮ ರಾಜ್ಯದ ಕತೆ? ನಮ್ಮಲ್ಲೂ ಇಂತಾ ಹಲವು ಕಂಪನಿಗಳು ಕಾರ್ಯಪ್ರವೃತ್ತವಾಗಿವೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಬಿಡದಿ ಬಳಿಯ ಕೊಕೋ ಕೋಲಾ ಕಾರ್ಖಾನೆ ಈಗಾಗಲೇ ಪ್ಲಾಚಿಮಡದ ದಾಖಲೆಗಳನ್ನೆಲ್ಲಾ ಮುರಿದು ಹಾಕಿದೆ. ಬೆಂಗಳೂರು-ತುಮಕೂರು ರಸ್ತೆಯಲ್ಲಿರುವ ಪೆಪ್ಸಿ ಕಂಪನಿ ಯಾವ ಪ್ರತಿಭಟನೆಯೂ ಇಲ್ಲದೆ ತಣ್ಣಗೆ ಸಾಗುತ್ತಿದೆ. ಅಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯರನ್ನು ಕೇಳುವ ಮಂದಿಯೇ ಇಲ್ಲದಂತಾಗಿದ್ದಾರೆ. ಅಂತಾ ಪ್ರಯತ್ನಕ್ಕೆ ಪ್ಲಾಚಿಮಡ ಮತ್ತು ಕರಾಚಿ ಸ್ಫೂರ್ತಿಯಾದರೆ ಅವರ ಹೋರಾಟಗಳು ಸಾರ್ಥಕವಾದಂತೆ.
೧೫ನೇ ಜುಲೈ-೨೦೦೫
ಆಗ 25, 2015
ಮಂಗಳೂರಿನ ಮತಿಗೆಟ್ಟ ಹುಡುಗರು.
Ashok K R
ದಕ್ಷಿಣ ಕನ್ನಡದಲ್ಲಿ ಬಿಜೆಪಿಯದೇ ಪಾರುಪತ್ಯವಿತ್ತು. ಬಿಜೆಪಿ ಬೆಂಬಲಿತ ಸಂಘಪರಿವಾರದ ವಿವಿಧ ಶಾಖೆಗಳ ಆಟೋಟಾಪಗಳು, ಸಾಮಾನ್ಯ ಜನರಿಗೆ ವಿನಾಕಾರಣವಾಗಿ ಅವರು ನೀಡಿದ ತೊಂದರೆ, ಅದರ ಜೊತೆಜೊತೆಗೇ ಬೆಳೆದ ಮುಸ್ಲಿಂ ಮೂಲಭೂತವಾದಿಗಳ ಕಾಟವೆಲ್ಲವೂ ಸೇರಿ ಜನರನ್ನು ಜಿಗುಪ್ಸೆಗೆ ತಳ್ಳಿತ್ತು. ಆ ಜಿಗುಪ್ಸೆಯ ಫಲವೆಂಬಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಡೀ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು, ಸುಳ್ಯ ಕ್ಷೇತ್ರವೊಂದನ್ನು ಹೊರತುಪಡಿಸಿ. ಓ! ಕಾಂಗ್ರೆಸ್ ಬಂತು, ಅದರಲ್ಲೂ ಸಿದ್ಧರಾಮಯ್ಯನಂತಹ 'ಸಮಾಜವಾದಿ' 'ಅಹಿಂದ' ನಾಯಕ ಈಗ ಮುಖ್ಯಮಂತ್ರಿ. ಇನ್ನೇನು ಇಡೀ ದಕ್ಷಿಣ ಕನ್ನಡ ಶಾಂತಿಯ ಬೀಡಾಗಿಬಿಡುತ್ತದೆ ಎಂದುಕೊಂಡಿರಾದರೆ ಅದು ಖಂಡಿತ ತಪ್ಪು. ತಪ್ಪೆಂದು ನಿರೂಪಿಸಲು ಮತ್ತೆ ಮತ್ತೆ ಅನೈತಿಕ ಪೋಲೀಸ್ ಗಿರಿಯಂತಹ ಕಾರ್ಯಗಳು ನಡೆಯುತ್ತಲೇ ಇವೆ.
ಮುಸ್ಲಿಮನೊಬ್ಬ ಪರಿಚಯದ ಹಿಂದೂ ಹುಡುಗಿಯೊಂದಿಗೆ ಹೋಗುವುದು, ಹಿಂದೂವೊಬ್ಬ ಪರಿಚಯದ ಮುಸ್ಲಿಂ ಹುಡುಗಿಯೊಟ್ಟಿಗೆ ಹೋಗುವುದು ಇಲ್ಲಿ ಧರ್ಮದ್ರೋಹದ ಅಪರಾಧ! ಇಂತವರ ವಿರುದ್ಧ ಮಾತನಾಡಿದರೆ ಅದು ದೇಶದ್ರೋಹಕ್ಕೆ ಸಮ! ನಿನ್ನೆ ದಿನ ಮುಸ್ಲಿಂ ಯುವಕೊನೊಬ್ಬನನ್ನು ನಡುಬೀದಿಯಲ್ಲಿ ಬಟ್ಟೆ ಕಳಚಿ ಕಂಬಕ್ಕೆ ಕಟ್ಟಿ ಹೊಡೆಯಲಾಗಿದೆ. ಕಾರಣ ಆತ ಹಿಂದೂ ಹುಡುಗಿಯೊಟ್ಟಿಗೆ ಹೋಗುತ್ತಿದ್ದ. ಲವ್ ಜಿಹಾದ್ ಎಂಬ ಅದೃಶ್ಯ ಭೀತಿಯನ್ನು ನೈಜವಾಗಿಸಲು ಹಿಂದೂ ಮೂಲಭೂತವಾದಿಗಳು ಇಂತಹ ಕೃತ್ಯಕ್ಕೆ ಕೈಹಾಕುತ್ತಾರಾ? ಸಹಪಾಠಿಗಳೂ ಮಾತನಾಡದಂತಹ ಸ್ಥಿತಿಗೆ ಮಂಗಳೂರು ತಲುಪಿರುವುದಾದರೂ ಯಾಕೆ?
ಮೇಲಿನ ಚಿತ್ರ ಗಮನಿಸಿ, ಆ ಮುಸಲ್ಮಾನನನ್ನು ಹಿಡಿದುಕೊಂಡಿರುವ ವ್ಯಕ್ತಿ ಮತ್ತವನ ಹಿಂದೆ ನಿಂತು ಮೊಬೈಲಿನಲ್ಲಿ ಅದನ್ನು ಸೆರೆಹಿಡಿಯುತ್ತಿರುವ ವ್ಯಕ್ತಿಯನ್ನು ನೋಡಿ. ಸರಿಯಾಗಿ ಮೀಸೆಯೂ ಚಿಗುರದ ಎಳೆಯ ಹುಡುಗರವರು. ಅಬ್ಬಬ್ಬಾ ಎಂದರೆ ಯಾವುದೋ ಕಾಲೇಜಿನಲ್ಲಿ ಓದುತ್ತಿರುವವರು. ಇಂತಹ ಹುಡುಗರಿಗೆ ಕೋಮುನಂಜನ್ನು ತುಂಬುತ್ತಿರುವವರಾರು? ಆ ಕೋಮು ವಿಷವನ್ನು ತುಂಬುವ ವ್ಯಕ್ತಿಗಳು ದೊಡ್ಡ ದೊಡ್ಡ ಭಾಷಣ ಬಿಗಿದು ಬೆಚ್ಚಗೆ ಮನೆ ಸೇರುತ್ತಾರೆ. ವಿಷದ ನಂಜೇರಿದ ಈ ಯುವಕರು - ಯುವಕರೂ ಅಲ್ಲ ಹುಡುಗರು - ಬೀದಿಯಲ್ಲಿ ಓಡಾಡುತ್ತಿದ್ದ ಗೆಳೆಯರಿಬ್ಬರನ್ನೂ ಹಿಡಿದು ಚಚ್ಚುತ್ತಾರೆ. ಕೊನೆಗೆ ಜೈಲು ಪಾಲಾಗುವ ಸಂದರ್ಭ ಬಂದರೆ ಅದು ಈ ಹುಡುಗರಿಗೇ ಹೊರತು ಭೀಕರ ಭಾಷಣ ಕುಟ್ಟುವವರಿಗಲ್ಲ.
ಅಂದಹಾಗೆ ಕಾಂಗ್ರೆಸ್ ಸರಕಾರ ಬಂದ ಮೇಲೂ ಇದು ಯಾಕೆ ನಡೆಯುತ್ತಿದೆ ಎಂದಿರಾ? ಬಿಜೆಪಿ ಮಂಗಳೂರಿನಲ್ಲಿ ಉಗ್ರ ಹಿಂದೂ ಮೂಲಭೂತವಾದ ನಡೆಸಿದರೆ ಕಾಂಗ್ರೆಸ್ ನಡೆಸುವುದು ಸೌಮ್ಯ ಹಿಂದೂ ಮೂಲಭೂತವಾದ.... ತನ್ನಲ್ಲಿರುವ ಅಪಾರ ಪ್ರಮಾಣದ ನೈಸರ್ಗಿಕ ಸೌಂದರ್ಯದಿಂದ ಗಮನ ಸೆಳೆಯಬೇಕಿದ್ದ ಮಂಗಳೂರು ಮತಿಗೆಟ್ಟವರ ಕಾರಣದಿಂದಲೇ ಸುದ್ದಿಯಾಗುತ್ತಿರುವುದು ಬೇಸರದ ಸಂಗತಿ.
ಆಗ 24, 2015
ಆಗಸ್ಟ್ 30ರಂದು ಟಿ.ಎಸ್.ವಿವೇಕಾನಂದರ ಪುಸ್ತಕಗಳ ಬಿಡುಗಡೆ
ಇದೇ ಆಗಸ್ಟ್ 30ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷತ್ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಜೆ 5:30ಕ್ಕೆ ಟಿ.ಎಸ್.ವಿವೇಕಾನಂದರು ಬರೆದಿರುವ "ಭೂಮಿಗೀತೆ" ಮತ್ತು "ಜೀವತಲ್ಲಣಗಳ ಆತ್ಮಕಥನ" ಪುಸ್ತಕಗಳು ಬಿಡುಗಡೆಯಾಗುತ್ತಿದೆ. ಅಗ್ರಹಾರ ಕೃಷ್ಣಮೂರ್ತಿ, ದಿನೇಶ್ ಅಮೀನ್ ಮಟ್ಟು ಮತ್ತು ಕೋಟಗಾನಹಳ್ಳಿ ರಾಮಯ್ಯ ಮುಖ್ಯ ಅತಿಥಿಗಳಾಗಿರುವ ಸಮಾರಂಭದ ಅಧ್ಯಕ್ಷತೆ ಡಾ.ಎಲ್.ಹನುಮಂತಯ್ಯರವರದು.
ಆಗ 23, 2015
ಅಂಬೇಡ್ಕರ್ ಎಂಬ ವಿದ್ರೋಹಿ!
"ಪ್ರೈಮರಿ ಶಾಲೆಯ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವಂತಹ ಕೆಲವು ಸಂಗತಿಗಳನ್ನು ಪ್ರಕಾಶಕರು ಪುಸ್ತಕದಲ್ಲಿ ಸೇರಿಸಿದ್ದರು. ಅಂಬೇಡ್ಕರರ 22 ಪ್ರತಿಜ್ಞಾ ವಿಧಿಗಳು ಮತಾಂತರದಂತಹ ಸೂಕ್ಷ್ಮ ವಿಚಾರಗಳಿಗೆ ಸಂಬಂಧಪಟ್ಟಿವೆ, ಅವುಗಳನ್ನು ಪುಸ್ತಕದಲ್ಲಿ ಸೇರಿಸುವುದರಿಂದ ದೇಶದ ಏಕತೆಗೆ ದಕ್ಕೆಯಾಗುತ್ತದೆಂಬ ಕಾರಣಕ್ಕೆ ಪುಸ್ತಕವನ್ನು ವಾಪಸ್ಸು ಪಡೆಯಲು ನಿರ್ಧರಿಸಲಾಗಿದೆ" ಎಂದು ಹೇಳಿರುವುದು ಗುಜರಾತಿನ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಡಿ.ಕಪಾಡಿಯ!
ಗುಜರಾತಿನಲ್ಲಿ ಅಂಬೇಡ್ಕರರ 125ನೇ ವರ್ಷಾಚರಣೆಯ ಸಲುವಾಗಿ ಆರರಿಂದ ಎಂಟರ ನಡುವಿನ ವಿದ್ಯಾರ್ಥಿಗಳಿಗೆ "ರಾಷ್ಟ್ರೀಯ ಮಹಾಪುರುಷ ಭಾರತ ರತ್ನ ಡಾ.ಬಾಬಾ ಸಾಹೇಬ ಅಂಬೇಡ್ಕರ್" ಹೆಸರಿನ ಪುಸ್ತಕವನ್ನು ನೀಡಲು ನಿರ್ಧರಿಸಲಾಗುತ್ತದೆ. ನಾಲ್ಕು ಲಕ್ಷದಷ್ಟು ಪುಸ್ತಕಗಳು ಮುದ್ರಣಗೊಳ್ಳುತ್ತವೆ. ಮುದ್ರಣಗೊಂಡ ಪುಸ್ತಕಗಳನ್ನು ಮಕ್ಕಳಿಗೆ ಹಂಚುವುದೂ ಪ್ರಾರಂಭವಾಗುತ್ತದೆ. ದುತ್ತನೆ ಹಿಂದೂ ಧರ್ಮ ಪ್ರೇಮಿಯೊಬ್ಬನಿಗೆ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಸಂದರ್ಭದಲ್ಲಿ ತೆಗೆದುಕೊಂಡ ಪ್ರತಿಜ್ಞಾವಿಧಿ 'ಹಿಂದೂ ಧರ್ಮ' ವಿರೋಧದಂತೆ ಭಾಸವಾಗಿ 'ದೇಶದ ಏಕತೆ'ಗೆ ದಕ್ಕೆ ತರುವ ಕೆಲಸದಂತೆ ಕಾಣಿಸುತ್ತದೆ! ಎಲ್ಲಾ ಪುಸ್ತಕಗಳನ್ನು ವಾಪಸ್ಸು ಪಡೆದುಕೊಳ್ಳುವ ಆದೇಶ ಹೊರಬೀಳುತ್ತದೆ. ಅಂಬೇಡ್ಕರ್ರವರು ದಲಿತರಾಗಿ ಹಿಂದೂ ಧರ್ಮದಲ್ಲಿ ಹುಟ್ಟಿದ್ದು ಎಷ್ಟು ಸತ್ಯವೋ ಆ ಹಿಂದೂ ಧರ್ಮದ ರೀತಿ ರಿವಾಜುಗಳನ್ನು ವಿರೋಧಿಸಿ, ಹಿಂದೂ ಧರ್ಮ ತೊರೆಯುವವರೆಗೂ ದಲಿತರಿಗೆ, ಅಸ್ಪ್ರಶ್ಯರಿಗೆ ಅವಮಾನಗಳಿಂದ ಮುಕ್ತಿ ದೊರೆಯುವುದಿಲ್ಲ ಎಂದಿದ್ದರು. ಅಂಬೇಡ್ಕರ್ ಹಿಂದೂ ಧರ್ಮದ ವಿರುದ್ಧ ಗುಡುಗಿದ್ಯಾಕೆ, ಆ 22 ಪ್ರತಿಜ್ಞೆಗಳಲ್ಲಿ ಹಿಂದೂ ಧರ್ಮವನ್ನು ಟೀಕಿಸಿದ್ಯಾಕೆ, ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ಯಾಕೆ ಎಂಬುದು ಚರ್ಚೆಯ ಸಂಗತಿಯಾಗಬೇಕಿತ್ತು, ಹಿಂದೂ ಧರ್ಮದ 'ಶುದ್ಧೀಕರಣಕ್ಕೆ' ಕಾರಣವಾಗಬೇಕಿತ್ತು. ಧರ್ಮದ ಶುದ್ಧೀಕರಣದ ಕಠಿಣ ಹಾದಿಯನ್ನು ಬಿಟ್ಟು 'ನಿಷೇಧ'ದ ಸುಲಭ ಹಾದಿಗೆ ಗುಜರಾತಿನ ಸರಕಾರ ಹೊರಳಿಬಿಟ್ಟಿದೆ. ಒಟ್ಟಿನಲ್ಲಿ ಭಾರತವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಂಬೇಡ್ಕರರ ಮಾತುಗಳೀಗ ದೇಶದ ಏಕತೆಗೆ ಭಂಗ ತರುವ ಸಾಧ್ಯತೆಯಿದೆ. ಮುಂದೊಂದು ದಿನ ಹಿಂದೂ ಧರ್ಮ ತ್ಯಜಿಸಿದ ಅಂಬೇಡ್ಕರ್ ವಿದ್ರೋಹಿಯಾಗಿ ಚಿತ್ರಿತವಾದರೂ ಅಚ್ಚರಿ ಪಡಬೇಕಾಗಿಲ್ಲ.
ಇಷ್ಟಕ್ಕೂ ಆ 22 ಪ್ರತಿಜ್ಞೆಗಳಲ್ಲೇನಿದೆ?
1. ಬ್ರಹ್ಮ, ವಿಷ್ಣು, ಮಹೇಶ್ವರನಲ್ಲಿ ನನಗೆ ನಂಬಿಕೆಯಿಲ್ಲ, ಅವರನ್ನು ನಾನು ಪೂಜಿಸುವುದಿಲ್ಲ.
2. ದೇವರ ರೂಪವೆಂದು ಪರಿಗಣಿತವಾದ ರಾಮ ಮತ್ತು ಕೃಷ್ಣನಲ್ಲಿ ನನಗೆ ನಂಬಿಕೆಯಿಲ್ಲ, ಪೂಜಿಸುವುದಿಲ್ಲ.
3. ಗೌರಿ, ಗಣಪತಿ ಮತ್ತಿತರ ಹಿಂದೂ ದೇವ - ದೇವತೆಗಳಲ್ಲಿ ನನಗೆ ನಂಬಿಕೆಯಿಲ್ಲ, ನಾನವರನ್ನು ಪೂಜಿಸುವುದಿಲ್ಲ.
4. ದೇವರ ಅವತಾರಗಳಲ್ಲಿ ನನಗೆ ನಂಬಿಕೆಯಿಲ್ಲ.
5. ಬುದ್ಧ ವಿಷ್ಣುವಿನ ಅವತಾರವೆಂಬುದನ್ನು ನಾನು ನಂಬುವುದಿಲ್ಲ. ಅದು ತಪ್ಪು ಮತ್ತು ಹುಚ್ಚುತನದ ಪ್ರಚಾರ.
6. ಶ್ರಾದ್ಧದಂತಹ ಆಚರಣೆಗಳನ್ನು ನಾನು ಮಾಡುವುದಿಲ್ಲ.
7. ಬುದ್ಧನ ನೀತಿ ಮತ್ತು ಪಾಠಗಳಿಗೆ ಧಕ್ಕೆ ತರುವಂತಹ ಕೆಲಸಗಳನ್ನು ನಾನು ಮಾಡುವುದಿಲ್ಲ.
8. ಸಮಾರಂಭಗಳನ್ನು ಬ್ರಾಹ್ಮಣರು ನೆರವೇರಿಸುವುದಕ್ಕೆ ನಾನು ಬಿಡುವುದಿಲ್ಲ.
9. ಮನುಷ್ಯರು ಸಮಾನರು ಎನ್ನುವುದನ್ನು ನಾನು ನಂಬುತ್ತೇನೆ.
10. ಸಮಾನತೆಗಾಗಿ ಹೋರಾಡುತ್ತೇನೆ.
11. ಬುದ್ಧನ ಎಂಟು ದಮ್ಮಗಳನ್ನು ನಾನು ಪಾಲಿಸುತ್ತೇನೆ.
12. ಬುದ್ಧನ 'ಪರಮಿತ'ವನ್ನು ನಾನು ಪಾಲಿಸುತ್ತೇನೆ.
13. ಎಲ್ಲಾ ಜೀವಿಗಳ ಬಗೆಗೂ ಪ್ರೀತಿ ಮತ್ತು ಅನುಕಂಪವನ್ನು ತೋರಿಸುತ್ತೇನೆ, ಅವರ ರಕ್ಷಣೆ ಮಾಡುತ್ತೇನೆ.
14. ನಾನು ಕದಿಯುವುದಿಲ್ಲ.
15. ನಾನು ಸುಳ್ಳು ಹೇಳುವುದಿಲ್ಲ.
16. ನಾನು ಪಾಪವನ್ನು ಮಾಡುವುದಿಲ್ಲ.
17. ಮದ್ಯಪಾನವನ್ನಾಗಲೀ, ಡ್ರಗ್ಸ್ ತೆಗೆದುಕೊಳ್ಳುವುದನ್ನಾಗಲೀ ನಾನು ಮಾಡುವುದಿಲ್ಲ.
18. ದಮ್ಮವನ್ನು ಪಾಲಿಸುತ್ತಾ ಪ್ರೀತಿಯಿಂದ ಪ್ರತಿ ದಿನವನ್ನು ಕಳೆಯಬಯಸುತ್ತೇನೆ.
19. ಹಿಂದೂ ಧರ್ಮ ಮಾನವೀಯತೆಯ ವಿರೋಧಿ. ಅದು ಮಾನವೀಯತೆಯ ಬೆಳವಣಿಗೆಯನ್ನೂ ಸಹಿಸುವುದಿಲ್ಲ. ಕಾರಣ ಹಿಂದೂ ಧರ್ಮ ಅಸಹಾಯಕತೆಯ ಸೌಧದ ಮೇಲೆ ನಿಂತಿದೆ. ಹಾಗಾಗಿ ನಾನು ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದೇನೆ.
20. ಬುದ್ಧನ ಧಮ್ಮವೇ ನಿಜವಾದ ಧರ್ಮವೆಂದು ನಾನು ನಂಬುತ್ತೇನೆ.
21. ಇದು ನನ್ನ ಪುನರ್ಜನ್ಮವೆಂದೇ ನನ್ನ ನಂಬುಗೆ.
22. ನನ್ನಿಡೀ ಜೀವನವನ್ನು ಬುದ್ಧನ ತತ್ವಾದರ್ಶಗಳಿಗೆ ಅನುಗುಣವಾಗಿ ಜೀವಿಸುತ್ತೇನೆಂದು ಈ ಮೂಲಕ ನಾನು ಘೋಷಿಸುತ್ತೇನೆ.
ಆಕರ:
ಆಗ 22, 2015
Reply to Crisis of Sugarcane farmers.
Narasimhan Khadri
This was the reply to the article ಜೀವೆ ಅರೆಯುತ್ತಿರುವ ಕಬ್ಬು
Sugar industry has posed serious livelihood problems not just in Karnataka but also in uttar Pradesh. Reasons are
1. The failure of cooperative movement in sugar sector. It has gradually lost the democratic nature and in turn cultivated dictatorial tendencies. AMUL model of Anand should be emulated. Cooperative movements has failed even in Karnataka is a sad thing.
2. Ownership patterns of sugar factories has been permanently skewed in favour of powerful politicians. This has resulted in opacity and goondagiri. There are vested interests on the corridors of power as far as sugar sector sector is concerned. They bear direct consequence from this sector and hence resist any attempts of reforms.
3. Integration with global market hasn't benefited either farmers or factories. There has been surplus sugar production in countries like Brazil and Cuba which has resulted in the fall of prices. This means less profit for factories . Two things can be done. A) Increasing import duty to protect from external shock B) Ensuring that ethanol blending is increased from the current 3 p.c to at least 10 p.c . This will make the factorys' bottom line healthy. But will it lead to better payments for farmers ? Can't say . This move has environmental significance as well.
4. Factories have been demanding that government should buy the surplus sugar to improve their financial position. This should be resisted as it is only a short term measure and will lead to further distrust as this benefit will never be transferred to farmers. Instead long term reforms like improving the governance of sugar factories on the one hand and setting up farmer producer organisation on the other should be stressed. Such FPO s gives the farmers a voice.
5. One can't deny the sociological aspect to these suicides. Much of the suicides are happening on the fringes of a urban centre. There may be a life style pressure on these farmers . Such pressure to become super rich in very less time exists also among urban youth and hence there is high suicide rates in this section as well. This can only be collectively addressed by media , teachers and more importantly families.
6. Improving psychiatric facilities in public hospitals is sine qua non in this modern society. Psychiatric care has been cold shouldered by both governments and the public. It has not received help from the films as well which has stigmatized psychiatric care and that only mad people receive such treatments and electric shocks. Quickly identifying suicidal tendencies and giving proper medication goes a long way in addressing this social malady.
There always is a hooplah that surrounds a farmers suicide. But every suicide ,whether it be a model's or a sslc student's , should create the same stir in our mind as each life is as precious as the other.
I also want to add what Prof Ashok Gulati said in a recent interview in rajya sabha tv(its on YouTube)
He mentions about the dismal picture of agricultural insurance in india. Only 10 per cent or so of the net sown area are insured where as in China it is almost 90 per cent. The reason for such pathetic coverage is as Prof Gulati says, due to the high premium rate.
Instead of ad hoc compensation and debt waiver schemes, which puts serious burdens on our RRB 's and PSB's , govts should seriously look towards reducing premium amounts and also making this model viable for insurance companies.
This type of institutionalised 'compensation' mechanisms reduces shock factor among farmers.
Prof Gulati also suggests taking ISRO's help in surveying crop losses using GIS(geographic information system) so that compensation is delivered instantly without any delay. We do have satellites which can help us in this regard.
Once the concept of agricultural insurance becomes a hit among our farmers, there is no turning back.
Please watch his videos on YouTube for an in-depth analysis about our ailing agricultural sector.
ಆಗ 21, 2015
ಜೀವ ಅರೆಯುತ್ತಿರುವ ಕಬ್ಬು....

Ashok K R
ರೈತರ ಆತ್ಮಹತ್ಯೆಯ ವಿಷಯದಲ್ಲಿ ಮೊದಲಿನಿಂದಲೂ ಮೊದಲ ಐದು ಅಥವಾ ಹತ್ತು ಸ್ಥಾನದೊಳಗೇ ಇರುವ ಕರ್ನಾಟಕದಲ್ಲಿ ಕಳೆದ ಎರಡು ತಿಂಗಳಿನಿಂದ ಆತ್ಮಹತ್ಯೆಯ ಸಂಖೈಯಲ್ಲಿ ಅಪಾರ ಏರಿಕೆಯಾಗಿದೆ. ನಗರಗಳ ಸೌಖ್ಯದೊಳಗೆ ಕುಳಿತು ರೈತರ ಆತ್ಮಹತ್ಯೆಯ ಬಗ್ಗೆ ಅನುಕಂಪದಿಂದ ಬರೆಯುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬ ಗೊಂದಲದೊಂದಿಗೇ ಈ ಲೇಖನ ಬರೆಯುತ್ತಿದ್ದೇನೆ. ರೈತರ ಆತ್ಮಹತ್ಯೆಯೆಂಬುದು ಸಂಖೈಯ ದೃಷ್ಟಿಗೆ ಮಾತ್ರ ಸೀಮಿತವಾಗುತ್ತಿದೆಯಾ? ರೈತರದು ನಿಜಕ್ಕೂ ಆತ್ಮಹತ್ಯೆಯಾ ಎಂಬ ಪ್ರಶ್ನೆ ಕೇಳಿಕೊಂಡರೆ ಇಲ್ಲ, ಅದು ಸರಕಾರೀ ಕೊಲೆ, ಇನ್ನೂ ನಿಷ್ಟವಾಗಿ ಹೇಳಬೇಕೆಂದರೆ ಸಾಮಾಜಿಕ ಕೊಲೆ. ಈ ಕೊಲೆಯೆಂಬ ಆತ್ಮಹತ್ಯೆಗೆ ಯಾರು ಯಾರು ಕಾರಣರು ಎಂದು ಗಮನಿಸುತ್ತಾ ಹೋದರೆ ರೈತನನ್ನೂ ಸೇರಿಸಿಕೊಂಡು ಪ್ರಧಾನಿಯವರೆಗೆ ಎಲ್ಲರನ್ನೂ ಹೊಣೆಯಾಗಿಸಬಹುದು. ತತ್ ಕ್ಷಣಕ್ಕೆ ಕರ್ನಾಟಕದ ಪರಿಸ್ಥಿತಿಯನ್ನು ಸಿದ್ಧರಾಮಯ್ಯ ಸರಕಾರದ ವೈಫಲ್ಯವೆಂದು ಪರಿಗಣಿಸಬಹುದಾದರೂ ಒಟ್ಟಾರೆಯಾಗಿ ನೋಡಿದಾಗ ನಾವೆಲ್ಲರೂ ಅಪರಾಧಿ ಸ್ಥಾನದಲ್ಲಿ ನಿಂತು ಬಿಡುತ್ತೇವೆ.
ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಅತಿ ಹೆಚ್ಚಾಗಿ ನಡೆದಿರುವುದು ಮಂಡ್ಯದಲ್ಲಿ; ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿರುವುದೇ ಹೆಚ್ಚು. ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಬಹಳಷ್ಟು ಕಡೆ ರೈತರ ಆತ್ಮಹತ್ಯೆ ಕಬ್ಬು ಬೆಳೆಯ ಸುತ್ತಲೇ ಇದೆ. ಅಲ್ಲಿಗೆ ಸದ್ಯದ ಸಂದರ್ಭದಲ್ಲಿ ರೈತರ ಆತ್ಮಹತ್ಯೆಗೆ ನೇರವಾಗಿ ಕಬ್ಬು ಬೆಳೆಯೇ ಕಾರಣ ಎಂದು ನಿಸ್ಸಂಶಯವಾಗಿ ಹೇಳಬಹುದು. ಪ್ರತ್ಯಕ್ಷ ಕಾರಣವನ್ನು ಪರಿಹರಿಸುವುದರತ್ತ ಗಮನ ಹರಿಸುತ್ತಲೇ ಪರೋಕ್ಷ ಕಾರಣಗಳತ್ತಲೂ ಗಮನಹರಿಸಬೇಕು. ಸಕ್ಕರೆ ನಾಡೆಂದು ಹೆಸರಾದ ಮಂಡ್ಯ ಜಿಲ್ಲೆಯ ಹೆಚ್ಚು ಭಾಗ ಮಳೆಯಾಧಾರಿತ ಪ್ರದೇಶವಾಗಷ್ಟೇ ಉಳಿದಿತ್ತು. ಮಂಡ್ಯ ಎಂದರೆ ಮುದ್ದೆ – ಹುರುಳಿಕಟ್ಟು ಸಾರು.... ರಾಗಿ ಬೆಳೆಯೇ ಪ್ರಮುಖವಾಗಿದ್ದ ಮಂಡ್ಯದ ಇಂದಿನ ಅವಸ್ಥೆಗೆ ಕನ್ನಂಬಾಡಿ ಕಟ್ಟೆಯೂ ಒಂದು ಕಾರಣವೆಂದರೆ ತಪ್ಪಲ್ಲ. ಕನ್ನಂಬಾಡಿ ಕಟ್ಟೆಯ ಮೂಲಕ ಪ್ರಮುಖವಾಗಿ ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ, ಮದ್ದೂರು ತಾಲ್ಲೂಕಿನ ಹಳ್ಳಿಗಳು ನೀರಾವರಿ ಸೌಕರ್ಯಕ್ಕೊಳಪಟ್ಟು ಹಸಿರಿನಿಂದ ನಳನಳಿಸಿದ್ದು ಹೌದು, ಅಲ್ಲಿನ ಜನರ ಆರ್ಥಿಕ ಜೀವನಮಟ್ಟದಲ್ಲಿ ಏರಿಕೆಯಾಗಿದ್ದೂ ಸತ್ಯ. ಅಣೆಕಟ್ಟೆಗಳು ಆಧುನಿಕ ಭಾರತದ ದೇವಸ್ಥಾನಗಳು ಎಂದು ನೆಹರೂ ಹೇಳಿದ ಮಾತನ್ನು ಭಾರತ ಅಕ್ಷರಶಃ ಪಾಲಿಸಿತು. ಅಣೆಕಟ್ಟಿನಿಂದಲೇ ಸಮೃದ್ಧಿ ಎಂಬ ಭಾವನೆ ಎಲ್ಲೆಡೆಯೂ ಮೂಡಿತು. ಅದು ಸತ್ಯದಂತೆಯೇ ತೋರಿತು. ಆದರೆ ಈಗಲೂ ಆ ಪರಿಸ್ಥಿತಿಯಿದೆಯೇ ಎಂದು ನೋಡಿದರೆ ಜನರ ಮನಸ್ಸಿನಲ್ಲಾಗಿರುವ ಬದಲಾವಣೆಗಳು ಗೋಚರವಾಗುತ್ತವೆ. “ಅಣೆಕಟ್ಟೆ ಬರದಿದ್ದರೆ, ಇಷ್ಟು ನೀರಾವರಿ ಇರದಿದ್ದರೆ ಕೆ.ಆರ್.ಪೇಟೆ, ನಾಗಮಂಗಲದ ಮಳೆಯಾಧಾರಿತ ಕೃಷಿಯನ್ನು ನೆಚ್ಚಿಕೊಂಡ ಜನರ ರೀತಿ ಗುಳೆ ಹೋಗಿ ಮತ್ತೊಂದು ಮಗದೊಂದೋ ಕೆಲಸವನ್ನು ಮಾಡಿ ಜೀವನ ಕಟ್ಟುಕೊಳ್ಳುತ್ತಿದ್ದೆವೇನೋ. ಇಷ್ಟೊಂದು ನೀರಾವರಿ ಇರೋ ಜಮೀನಿಗೆ ಅಂಟಿಕೊಂಡು ನಿಂತ ಕಾರಣಕ್ಕೇ ನಾವು ಈ ಕೆಟ್ಟ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೀವಿ. ಭೂಮಿಯ ಸತ್ವವನ್ನೂ ಈ ನೀರಾವರಿ ಹಾಳು ಮಾಡಿದೆ” ಎಂದಿದ್ದು ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯ ರೈತ ಹರೀಶ್.
ಕಬ್ಬಿನತ್ತ ರೈತರು ವಾಲಿದ್ಯಾಕೆ?:
ನನ್ನ ಸ್ವಂತ ಊರು ಬೆಸಗರಹಳ್ಳಿ ಬಳಿಯ ಕೋಣಸಾಲೆ. ಇಲ್ಲಿಗೂ ಕಾವೇರಿ ನೀರು ಬರುತ್ತದಾದರೂ ನಾಲೆಯ ಕೊನೆಯಲ್ಲಿರುವ ಊರಾದ್ದರಿಂದ ಮದ್ದೂರು ತಾಲ್ಲೂಕಿನವರೆಲ್ಲ ಉಪಯೋಗಿಸಿದ ನಂತರ ಉಳಿದ ನೀರಷ್ಟೇ ಇಲ್ಲಿಗೆ ಬರುತ್ತದೆ. ನನ್ನ ತಂದೆಯವರ ಕಾಲದಲ್ಲಿ ಆಗ ಗದ್ದೆಗಳಲ್ಲಿ ರಾಗಿ ಭತ್ತದಿಂದ ಹಿಡಿದು, ತೊಗರಿ, ಹೆಸರು ಇತರೆ ಕಾಳುಗಳು, ಮನೆಯಳತೆಗೆ ಬೇಕಾದ ಸೊಪ್ಪು – ತರಕಾರಿಗಳನ್ನು ಬೆಳೆದುಕೊಳ್ಳುತ್ತಿದ್ದರಂತೆ. ಈಗ ಬಹುತೇಕ ಕಡೆ ಕಬ್ಬು, ಕೆಲವೆಡೆ ಭತ್ತ, ಹೊಲಗಳಲ್ಲಿ ತೆಂಗಷ್ಟೇ ಕಾಣುವ ಪರಿಸ್ಥಿತಿ. ಮಳೆ ಕಡಿಮೆಯಿದ್ದು, ನೀರಾವರಿ ಇಲ್ಲದ ಪ್ರದೇಶದಲ್ಲಷ್ಟೇ ರಾಗಿ ಸೀಮಿತವಾಗಿಬಡುತ್ತಿದೆ. ಭತ್ತವನ್ನು ಮುಂಚೆ ಹೆಚ್ಚು ಬೆಳೆಯುತ್ತಿದ್ದರಾದರೂ ಈಗ ಕಬ್ಬು ಬೆಳೆಯುವವರೇ ಜಾಸ್ತಿ. ಇದಕ್ಕೆ ಕಾರಣಗಳನ್ನು ಅರಸಿದರೆ ಕಬ್ಬು ಬೆಳೆ ಬೇಡುವ ಶ್ರಮ ಉಳಿದವುಕ್ಕಿಂತಲೂ ಕಡಿಮೆ. ನಗರೀಕರಣ, ಕೆಲಸಕ್ಕಾಗಿ ಓದುವಿಕೆ ಹೆಚ್ಚಾಗುತ್ತಿದ್ದಂತೆ ಶುರುವಾದ ವಲಸೆ ಪ್ರಕ್ರಿಯೆ ರೈತರ ಸಂಖೈಯನ್ನೂ ಕಡಿಮೆಗೊಳಿಸಿತು, ಕೃಷಿ ಕಾರ್ಮಿಕರ ಸಂಖೈಯನ್ನೂ ಕಡಿಮೆ ಮಾಡಿತು. ‘ನಗರೀಕರಣವೇ ನಮ್ಮ ಗುರಿ’ ಎಂದು ಹೇಳುತ್ತಿದ್ದ ಪಿ.ಚಿದಂಬರಂ, ಸ್ಮಾರ್ಟ್ ಸಿಟಿಗಳ ಬಗ್ಗೆಯೇ ಮಾತನಾಡುವ ನರೇಂದ್ರ ಮೋದಿಯಂತವರು ದೇಶ ನಡೆಯುವ ದಿಕ್ಕನ್ನು ನಿರ್ಧರಿಸುವವರಾಗಿರುವಾಗ ವಲಸೆಯನ್ನು ತಪ್ಪೆಂದು ಹೇಳಲಾದೀತೇ? ಹೆಚ್ಚು ಕೆಲಸ ಬೇಡುವ ಫಸಲನಿಂದ ವಿಮುಖನಾಗಿ ಕಬ್ಬಿನಂತಹ ಇದ್ದುದರಲ್ಲಿ ಕಡಿಮೆ ಶ್ರಮ ಬೇಡುವ ಫಸಲಿನೆಡೆಗೆ ರೈತರು ಆಕರ್ಷಿತರಾಗಿದ್ದು ಸರಿಯಾದ ನಿರ್ಧಾರವೂ ಆಗಿತ್ತು, ಕೃಷಿಯನ್ನೇ ಮುಂದುವರಿಸಲು ನಿರ್ಧರಿಸಿದವರಿಗದು ಅನಿವಾರ್ಯವೂ ಆಗಿತ್ತು. ಹೆಚ್ಚುತ್ತಿದ್ದ ಸಕ್ಕರೆ ಕಾರ್ಖಾನೆಗಳು ಹೆಚ್ಚೆಚ್ಚು ಕಬ್ಬು ಬೆಳೆಯುವಂತೆ ಪ್ರೇರೇಪಿಸುತ್ತಿದ್ದವು. ಶ್ರಮಕ್ಕೆ ತಕ್ಕ ಪ್ರತಿಫಲವನ್ನೂ ಕಬ್ಬು ರೈತರಿಗೆ ನೀಡಿತು. ಒಬ್ಬನಿಗೆ ದುಡ್ಡು ಬಂತೆಂದು ಮತ್ತೊಬ್ಬ ಮತ್ತೊಬ್ಬನಿಗೆ ಕಬ್ಬಿನಿಂದ ಹಣ ಬಂತೆಂದು ಇನ್ನೊಬ್ಬ ಕಬ್ಬು ಬೆಳೆಯಲು ಪ್ರಾರಂಭಿಸಿ ಕೊನೆಗೆ ಬೆಳೆದ ರಾಶಿ ರಾಶಿ ಫಸಲನ್ನು ಯಾರೂ ಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ವಿಫಲವಾಗಿದ್ದು ರೈತನಾ? ಕಾರ್ಖಾನೆಗಳಾ? ಅಥವಾ ಮುನ್ಸೂಚನೆಯನ್ನು ಅಂದಾಜು ಮಾಡಿ ರೈತರಿಗೆ ಎಚ್ಚರಿಕೆಯನ್ನು ನೀಡದ ಕೃಷಿ ಇಲಾಖೆಯಾ?
![]() |
ಸಾಂದರ್ಭಿಕ ಚಿತ್ರ |
ಕಬ್ಬು ಕಾರ್ಖಾನೆಗಳತ್ತ ಕಣ್ಣು ಹಾಯಿಸಿದರೆ ಟನ್ನುಗಟ್ಟಲೇ ಸಕ್ಕರೆ ದಾಸ್ತಾನಾಗಿದೆ. ಪತ್ರಿಕೆಗಳಲ್ಲಿ ಬಂದ ವರದಿಯ ಪ್ರಕಾರ ಕೆಜಿಗೆ ಹತ್ತೊಂಬತ್ತು ರುಪಾಯಿಗಳಿಗೆ ಮಾರುತ್ತೇವೆಂದರೂ ಕೊಳ್ಳಲು ಯಾರು ಮುಂದೆ ಬರಲಿಲ್ಲವಂತೆ. ವ್ಯಾಪಾರಿಗಳು ಕೇಳಿದ್ದು ಹದಿನೇಳು ರುಪಾಯಿಗೆ. ಪ್ರತಿ ಟನ್ನು ಕಬ್ಬಿಗೆ ಎರಡು ಸಾವಿರದಷ್ಟು ಹಣ ನೀಡಿ, ಸಕ್ಕರೆ ತಯಾರಿಸಲು ಮತ್ತೊಂದಷ್ಟನ್ನು ಖರ್ಚು ಮಾಡಿ ಒಂದು ಕೆಜಿ ಸಕ್ಕರೆಯನ್ನು ಹದಿನೇಳು ರುಪಾಯಿಗೆ ಮಾರಿದರೆ ಸಕ್ಕರೆ ಕಾರ್ಖಾನೆಗಳು ನಷ್ಟ ಅನುಭವಿಸುವುದು ಖಚಿತವೆಂದೆನ್ನಿಸುತ್ತದೆ. ಈ ನಷ್ಟದ ಮಧ್ಯೆಯೂ ಬಾಗಲಕೋಟೆ, ಬೆಳಗಾವಿಯಲ್ಲಿ ಹೊಸ ಹೊಸ ಸಕ್ಕರೆ ಕಾರ್ಖಾನೆ ತಲೆಯೆತ್ತುತ್ತಿರುವುದ್ಯಾಕೆ? ಸಕ್ಕರೆ ಮಾಡಿದ ನಂತರ ಉಳಿಯುವ ಮೊಲ್ಯಾಸಸ್, ಅದರಿಂದ ಉತ್ಪತ್ತಿಯಾಗುವ ಸ್ಪಿರಿಟ್ ಸಕ್ಕರೆ ಕಾರ್ಖಾನೆಗಳ ಪ್ರಮುಖ ಆದಾಯ. ಜೊತೆಗೆ ಕೋ-ಜೆನ್ ಮಾಡಿ ವಿದ್ಯುತ್ ಉತ್ಪಾದಿಸಿದರೆ ಮತ್ತಷ್ಟು ಲಾಭ. ಈ ಎಲ್ಲಾ ಲಾಭಗಳ ಲೆಕ್ಕಾಚಾರದಿಂದ ಹೊಸ ಕಾರ್ಖಾನೆಗಳು ತಲೆ ಎತ್ತುತ್ತವೆ. ಕಬ್ಬು ಬೆಳೆಯನ್ನು ವಿಸ್ತರಿಸಲು ಪ್ರೋತ್ಸಾಹಿಸುತ್ತವೆ, ಕೊನಗೆ ಕಟಾವಾದ ಕಬ್ಬಿಗೆ ಬೆಲೆ ಇಲ್ಲವೆಂದು ಹೇಳುತ್ತಾ ಸಕ್ಕರೆಯ ದಾಸ್ತಾನನ್ನು ತೋರಿಸುತ್ತವೆ. ಅಲ್ಲಲ್ಲಿ ಸರಕಾರ ದಾಸ್ತಾನಾದ ಕಬ್ಬನ್ನು ವಶಪಡಿಸಿಕೊಳ್ಳುವ ಕೆಲಸ ಮಾಡಿತಾದರೂ ಸ್ಪಿರಿಟ್ಟಿನಿಂದ ಬಂದ ಆದಾಯವೆಷ್ಟು ಎಂದು ಪರಿಶೀಲಿಸುವಲ್ಲಿ ಎಡವಿದೆ. ಖಾಸಗಿ ಕಾರ್ಖಾನೆಗಳಿಂದ ಹಣವನ್ನು ರೈತರಿಗೆ ಕೊಡಿಸುವಲ್ಲಿ ಸರಕಾರ ಯಾಕೆ ವಿಫಲವಾಗುತ್ತದೆ ಎಂದರೆ ಅನೇಕ ಸಕ್ಕರೆ ಕಾರ್ಖಾನೆಗಳು ಇರುವುದೇ ರಾಜಕಾರಣಿಗಳ ಮಾಲೀಕತ್ವದಲ್ಲಿ. ಈ ರಾಜಕಾರಣಿಗಳು ಆಡಳಿತ, ವಿರೋಧ ಪಕ್ಷಗಳೆಲ್ಲದರಲ್ಲೂ ಇದ್ದಾರೆ. ಅವರಿಗೆ ಅವರೇ ನಷ್ಟ ಮಾಡಿಕೊಳ್ಳುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದರದು ನಂಬುವ ಮಾತಲ್ಲ.
ವಾಣಿಜ್ಯ ಬೆಳೆಗಳಿಂದ ಅಪಾರ ಪ್ರಮಾಣದ ಲಾಭವೂ ಸಿಗುತ್ತದೆ, ಅಷ್ಟೇ ಪ್ರಮಾಣದ ನಷ್ಟವೂ ಆಗುತ್ತದೆ. ಅಡಿಕೆ, ಕಾಫಿ ತೋಟಗಳು, ಕಬ್ಬಿನ ಗದ್ದೆಗಳು ಒಂದಷ್ಟು ವರ್ಷ ನಂಬಲಾರದಷ್ಟು ಲಾಭ ತಂದರೆ ಮತ್ತೊಂದಷ್ಟು ವರ್ಷ ನಂಬಿಕೆ ಬರದಷ್ಟು ನಷ್ಟವನ್ನೂ ಹೊತ್ತು ತರುತ್ತದೆ. ನಷ್ಟವೆಂಬ ಕಾರಣಕ್ಕೆ ಹೊಸ ರೀತಿಯ ಪದ್ಧತಿಗೆ, ಹೊಸ ಬೆಳೆಗೆ, ಬಹುವಿಧ ಬೆಳೆಗೆ ಹೊರಳಿಕೊಳ್ಳುವವರ ಸಂಖೈ ತುಂಬಾನೇ ಕಡಿಮೆ. ಮಂಡ್ಯದಲ್ಲಿ ಕಬ್ಬಿನಿಂದ ಇಷ್ಟೆಲ್ಲಾ ನಷ್ಟವಾಗಿದೆ. ಬೆಳೆದ ಕಬ್ಬನ್ನು ಕಟಾವು ಮಾಡಿಸದೆ ಹಾಗೆಯೇ ಬಿಟ್ಟ ರೈತ, ಸಿಟ್ಟಿನಿಂದ ಇಡೀ ಗದ್ದೆಗೆ ಬೆಂಕಿ ಕೊಟ್ಟ ರೈತರಲ್ಲನೇಕರು ಮುಂದಿನ ಬೆಳೆಯಾಗಿಯೂ ಕಬ್ಬನ್ನೇ ಬಿತ್ತನೆ ಮಾಡಿಸುತ್ತಾರೆ. ಬಹುಶಃ ಮುಂದಿನ ವರುಷ ಮಂಡ್ಯದಲ್ಲಿ ಸಂಚರಿಸಿದರೆ ಕಬ್ಬಿನಿಂದಾದ ನಷ್ಟವನ್ನು ಕಬ್ಬಿನಿಂದಲೇ ಪಡೆಯಬೇಕೆನ್ನುವ ಪರಿಸ್ಥಿತಿಯನ್ನು ಕಾಣಬಹುದೇ ಹೊರತು ಹೊಸತಾಗಿ ಬೇರೇನನ್ನಾದರೂ ಬೆಳೆಯುವ ಕಷ್ಟ ತೆಗೆದುಕೊಳ್ಳುವವರನ್ನು ಕಾಣುವುದು ಕಷ್ಟ. ಕಬ್ಬಿನಿಂದಾದ ನಷ್ಟಕ್ಕೆ ಕಾರ್ಖಾನೆಗಳಷ್ಟೇ ಕಾರಣ ಕೃಷಿ ಕಾರ್ಮಿಕರ ಅಭಾವ. ಕೃಷಿ ಕಾರ್ಮಿಕರ ಕೊರತೆಗೆ ಅನ್ನಭಾಗ್ಯದಂತಹ ಯೋಜನೆಗಳು ಕಾರಣವೆಂದು ಮೇಲ್ನೋಟಕ್ಕೆ ಅನ್ನಿಸಬಹುದಾದರೂ ಈ ಯೋಜನೆಗಳು ಬರುವುದಕ್ಕೆ ಮುಂಚಿತವಾಗಿಯೇ ಕೃಷಿ ಕಾರ್ಮಿಕರ ಸಮಸ್ಯೆಯಿತ್ತು, ಮೈಸೂರು ಭಾಗದಲ್ಲಿ ಈ ಸಮಸ್ಯೆ ಹುಟ್ಟಲು ಬೆಂಗಳೂರು ಮೈಸೂರು ರೈಲೂ ಕಾರಣ! ಮುಂಚೆ ವಲಸೆ ಹಳ್ಳಿಗಳಿಂದ ನಗರಕ್ಕೆ ಸೀಮಿತವಾಗಿತ್ತು, ಈಗದು ನಗರದಿಂದ ದೊಡ್ಡ ನಗರಕ್ಕೂ ವ್ಯಾಪಿಸಿದೆ. ಮಂಡ್ಯ, ಮೈಸೂರು ಜಿಲ್ಲೆಗಳ ಅನೇಕರು (ನನ್ನನ್ನೂ ಸೇರಿಸಿ) ಇವತ್ತು ಬೆಂಗಳೂರು ಸೇರಿದ್ದಾರೆ. ಈ ವಲಸೆ ಪ್ರಕ್ರಿಯೆಯಿಂದ ರೈತರೂ ಹೊರತಾಗಿಲ್ಲ, ಕೃಷಿ ಕಾರ್ಮಿಕರೂ ಹೊರತಾಗಿಲ್ಲ. ಊರಿನಲ್ಲಿ ಬಿಸಿಲಿನಲ್ಲಿ ದುಡಿದು ಮಾಡುವ ಸಂಪಾದನೆಯಷ್ಟನ್ನೇ ನಗರದಲ್ಲಿ ತಂಪಿನಲ್ಲಿ ಮಾಡಬಹುದೆಂಬ ಕಲ್ಪನೆ ಎಂಥವರನ್ನಾದರೂ ಸೆಳೆಯುತ್ತದೆ. ಅತಿ ಕಡಿಮೆ ದರದಲ್ಲಿ ರೈಲು ಪಾಸು ಸಿಗುವಾಗ ಬೆಳಿಗ್ಗೆ ಕೆಲಸಕ್ಕೆ ಬಂದು ಸಂಜೆ ಮತ್ತೆ ಮನೆಗೆ ಮರಳುವ ಅವಕಾಶ ಮಂಡ್ಯ, ಮೈಸೂರಿನ ಜನತೆಗೆ ಇರುವುದು ಇಲ್ಲಿನ ಕೃಷಿ ಕಾರ್ಮಿಕರ ಸಮಸ್ಯೆಗೊಂದು ಕಾರಣ. ಫ್ಯಾನಿನ ಕೆಳಗೆ ಕುಳಿತು ನಾಲ್ಕು ಗೋಡೆಯ ಮಧ್ಯೆಯಿಂದ ಕೂಲಿ ಮಾಡ್ತಿರೋರೆಲ್ಲಾ ಹಳ್ಳಿಗೋಗ್ರಿ, ಅಲ್ಲಿ ಕೆಲಸಕ್ಕೆ ಜನರಿಲ್ಲ ಎನ್ನುವುದು ಕ್ರೌರ್ಯವಷ್ಟೇ. ಹಾಗಾದರೆ ಕಬ್ಬು ಕಟಾವು ಮಾಡಲು ಕೃಷಿ ಕಾರ್ಮಿಕರು ಎಲ್ಲಿಂದ ಬರುತ್ತಿದ್ದರು?
![]() |
ಸಾಂದರ್ಭಿಕ ಚಿತ್ರ |
ಬಿರುಬೇಸಿಗೆಯ ಬಳ್ಳಾರಿಯಿಂದ ಕಟಾವಿನ ಸಮಯಕ್ಕೆ ಸರಿಯಾಗಿ ಕಾರ್ಮಿಕರು ಬರುತ್ತಿದ್ದರು. ನೀರಾವರಿ ಭಾಗದ ರೈತರನ್ನು ಈ ಕೃಷಿ ಕಾರ್ಮಿಕರ ಮುಂದೆ ಸೋಮಾರಿಗಳೆಂದೇ ಹೇಳಬಹುದು. ಆ ಕಾರ್ಮಿಕರ ಶ್ರಮ ದೊಡ್ಡದು. ಒಂದು ಟನ್ ಕಬ್ಬು ಕಟಾವು ಮಾಡಲು ಇನ್ನೂರೈವತ್ತು ರುಪಾಯಿ ನಿಗದಿಯಾಗಿತ್ತು, ಕ್ರಮೇಣ ಅದು ಎಂಟುನೂರರಿಂದ ಸಾವಿರ ರುಪಾಯಿಗೆ ಬಂದು ನಿಂತಿದೆ. ಕೃಷಿ ಕಾರ್ಮಿಕರು ಮತ್ತವರಿಗಿಂತ ಹೆಚ್ಚಾಗಿ ಅವರನ್ನು ಕರೆದುಕೊಂಡು ಬರುವ ಮೇಸ್ತ್ರಿಗಳು ವರುಷದಿಂದ ವರುಷಕ್ಕೆ ಸಿರಿವಂತರಾಗಿದ್ದಾರೆ. ಲಾರಿಗಳನ್ನೂ ಕೊಂಡುಕೊಂಡು ಬಳ್ಳಾರಿಯಿಂದಲೇ ತರುವ ಮೇಸ್ತ್ರಿಗಳೂ ಈಗ ಕಾಣಸಿಗುತ್ತಾರೆ. ದೈಹಿಕ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಅವರು ಪಡೆಯುತ್ತಿದ್ದಾರೆ. ಹಸಿರು ಕ್ರಾಂತಿಯ ದೆಸೆಯಿಂದ ರಸಗೊಬ್ಬರ ಬಳಸದೆ ಬೆಳೆ ಬೆಳೆಯಲಾಗದ ಸಂದರ್ಭದಲ್ಲಿ ಕಬ್ಬು ಬೆಳೆಯುವುದಕ್ಕೂ ಹೆಚ್ಚು ಖರ್ಚು ಮಾಡಿ ಕೃಷಿ ಕಾರ್ಮಿಕರಿಗೂ ಹೆಚ್ಚು ಹಣ ನೀಡಿ ಕೊನೆಗೆ ಕಾರ್ಖಾನೆಗಳಿಂದ, ದಲ್ಲಾಳಿ ನಿಯಂತ್ರಿತ ಮಾರುಕಟ್ಟೆಯಿಂದ ನಷ್ಟವನ್ನನುಭವಿಸಬೇಕಾದ ರೈತ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಯ ಮೊರೆಹೋಗದೆ ಬದುಕುವುದೇ ಕಷ್ಟದ ಕೆಲಸವಾಗಿಬಿಟ್ಟಿದೆ.
ಈ ಲೇಖನ ಮೂಡಲು ಹಲವು ವಿಷಯಗಳನ್ನು ವಿಸ್ತಾರವಾಗಿ ತಿಳಿಸಿದ್ದು ಕಳೆದ ಇಪ್ಪತ್ತು ವರುಷಗಳಿಂದ ಇದ್ದುದರಲ್ಲಿ ಹೊಸತೇನನ್ನೋ ಮಾಡುತ್ತಾ ಕೃಷಿ ಮಾಡುತ್ತಿರುವ ಹರಳಹಳ್ಳಿಯ ಹರೀಶ್. ಅವರು ತಿಳಿಸಿದ ಒಂದಷ್ಟು ಅಂಶಗಳನ್ನು ಅವರ ಮಾತುಗಳಲ್ಲೇ ಓದಿಕೊಳ್ಳಿ: “ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ರೈತರೇ ಕಾರಣ ಅನ್ನಿಸುತ್ತೆ. ಇವೊತ್ತು ಯಾವ ರೈತನೂ ರೈತನಾಗಿ ಬದುಕುತ್ತಿಲ್ಲ. ಬದುಕಲು ಇಷ್ಟಪಡುತ್ತಿಲ್ಲ. ಅವರವರ ಗದ್ದೆಗೆ ಹೋಗೋಕೆ ರೈತರೇ ಎಷ್ಟೋ ಕಡೆ ಸಿದ್ಧರಿಲ್ಲ. ಕೂಲಿಗೆ ಬರೋರಿಗೆ ಮನೆಯಿಂದ ಬುತ್ತಿ ಕಟ್ಟಿಸ್ಕೊಂಡು ಹೋಗೋದಕ್ಕೂ ಎಷ್ಟೋ ಜನ ರೆಡಿ ಇಲ್ಲ. ಹೋಟ್ಲಿಂದ ಇಪ್ಪತ್ತು ರುಪಾಯಿಗೆ ಊಟ ಕಟ್ಟುಸ್ಕೊಂಡು ಹೋಗಿ ಕೊಡ್ತಾರೆ. ಹೋಟ್ಲೂಟ ತಿಂದ ಕೆಲಸದೋನು ಹನ್ನೆರಡು ಘಂಟೆಗೆ ಜಾಗ ಖಾಲಿ ಮಾಡ್ತಾನೆ. ಕಬ್ಬು, ಭತ್ತಕ್ಕೆ ಹೊಂದಿಕೊಂಡುಬಿಟ್ಟೋರು ಹೊಸದೇನನ್ನಾದರೂ ಮಾಡೋಣ ಅಂತ ಯೋಚಿಸೋದೆ ಕಮ್ಮಿ. ದೇವ್ರು ನೋಡ್ಕೋತಾನೆ ಅಂತ ಮತ್ತೆ ಕಬ್ಬು ಹಾಕೋರೇ ಜಾಸ್ತಿ. ನಮ್ ಕೃಷಿ ಇಲಾಖೇನೂ ಬಿಟಿ, ಹೈಬ್ರಿಡ್ ಹೈಬ್ರಿಡ್ ಅಂತ ಅದನ್ನೇ ಬೆಳೆಯೋಕೆ ಪ್ರೋತ್ಸಾಹ ಕೊಡ್ತಾರೆ. ಚೂರು ಪಾರು ಭತ್ತ ಬೆಳೀತಿದ್ದೋರು, ರಾಗಿ ಬೆಳೀತಿದ್ದೋರು ಅನ್ನಭಾಗ್ಯ ಬಂದ ಮೇಲೆ ನಿಲ್ಲಿಸಿಬಿಟ್ರು. ರಾಗಿ ಬೆಳೆಯೋ ಹೊಲದಲ್ಲೆಲ್ಲಾ ಸಾಲ ಮಾಡಿ ಬೋರ್ ತೆಗ್ಸಿ ಕಬ್ಬು ಬೆಳೀತಾವ್ರೆ. ಎಲ್ಲಿಂದ ರೇಟ್ ಸಿಗುತ್ತೆ? ಈಗ ಗ್ಯಾಸಿಗೆ ಮಾಡ್ತಿರೋ ಹಾಗೆ ನಾಳೆದಿನ ಸೊಸೈಟೀಲಿ ಅಕ್ಕಿ ಕೊಡಲ್ಲ ಬ್ಯಾಂಕಿಗೆ ದುಡ್ ಹಾಕ್ತೀವಿ, ಅಕ್ಕಿ ತಗೊಳ್ಳಿ ಅಂದ್ರೆ ಇನ್ನೂ ಕಷ್ಟ. ಗೊಬ್ಬರಕ್ಕೆ ಕೊಡೋ ಸಬ್ಸಿಡಿ ನಿಧಾನಕ್ಕೆ ನಿಂತೋಗ್ತಿದೆ. ಮುನ್ನೂರು ರುಪಾಯಿ ಇದ್ದ ಗೊಬ್ರ ಈಗ ಒಂದೂಕಾಲು ಸಾವಿರ. ಅದರ ಸಬ್ಸೀಡೀನೂ ಬ್ಯಾಂಕಿಗೇ ಹಾಕ್ತಾರಂತೆ. ಕೊಂಡ್ಕೊಳ್ಳೋಕೆ ಮತ್ತೆ ಸಾಲ ಮಾಡ್ಬೇಕು, ಬ್ಯಾಂಕಿಗೆ ಯಾವಾಗ ಹಾಕ್ತಾರೆ ಗೊತ್ತಿಲ್ಲ. ಶೋಕಿಗಾಗಿ ಸಾಲ ಮಾಡೋದು ಹೆಚ್ಚಾಗ್ತಾ ಇದೆ. ಅವರಿವರದ್ದು ಬೇಡ ನನ್ದೇ ಉದಾಹರಣೆ ಹೇಳಿದ್ರೆ ಹಳೇ ಮನೆ ಚೆನ್ನಾಗೇ ಇತ್ತು. ರಿಪೇರಿ ಮಾಡ್ಸಿ ಗ್ರಾನೈಟು, ಮಾರ್ಬೆಲ್ಲು ಹಾಕ್ಸೋದು ಬೇಕಿರಲಿಲ್ಲ. ಕಬ್ಬು ದುಡ್ಡು ಬರುತ್ತಲ್ಲ ಅಂತ ಎರಡು ವರ್ಷದ ಹಿಂದೆ ಅಡ ಇಟ್ಟು ಸಾಲ ಮಾಡಿ ಮನೆಕೆಲಸ ಮಾಡಿಸ್ದೆ. ಕಬ್ಬಿನ ರೇಟು ಬಿತ್ತು, ಸಾಲ ಇನ್ನೂ ಇದೆ. ಯಾವ ಹಳ್ಳಿಯ ಯಾವ ಮನೆಗೆ ಹೋದ್ರೂ ಐದು ಟಚ್ ಸ್ಕ್ರೀನ್ ಮೊಬೈಲು.
ತಿಂಗ್ಳು ತಿಂಗ್ಳು ಅದಕ್ಕೆ ಸಾವಿರದವರೆಗೆ ಖರ್ಚು. ಹತ್ತದಿನೈದು ವರುಷದ ಹಿಂದಕ್ಕೆ ಹೋಲಿಸಿದರೆ ತಿಥಿ, ಬೀಗರೂಟ, ಮದುವೆ ಆಡಂಬರ ಈಗಲೇ ಜಾಸ್ತಿ. ಕಬ್ಬು ಬೆಳೆದೋರಿಗೆಲ್ಲಾ ನಷ್ಟವಾಗಿ ಇಷ್ಟೊಂದು ಜನ ಸತ್ತರಲ್ಲ ನಮ್ಮಲ್ಲೇನು ತಿಥಿ, ಬೀಗರೂಟ ನಿಂತೋಗಿದೆಯಾ? ಜೋರಾಗೇ ನಡೀತಿದೆ. ನಮ್ ಮೋದಿ ಪ್ರಧಾನಿ ಥರ ಇರ್ದೆ ಒಂದು ಮಲ್ಟಿನ್ಯಾಷನಲ್ ಕಂಪನಿ ಸಿ.ಇ.ಒ ಥರ ಮಾತಾಡ್ತಾರೆ. ಯಾವ ದೇಶಕ್ಕೆ ಹೋದ್ರೂ ನಮ್ಮಲ್ಲಿ ಬಂದು ದುಡ್ಡು ಹಾಕಿ ದುಡ್ಡು ಹಾಕಿ ಅಂತಾರೆ. ಚೈನಾದಿಂದ ರೇಷ್ಮೆ ಬಂದು ನಮ್ ರೇಷ್ಮೆ ಮಾರ್ಕೆಟ್ಟೇ ಬಿದ್ದೋಯ್ತು. ಇನ್ನು ಬೇರೆ ಕಡೆ ದುಡ್ಡೆಲ್ಲಾ ಬಂದ್ರೆ ಇಲ್ಲೇನುಳಿಯುತ್ತೆ? ಇದೇ ವ್ಯವಸ್ಥೆ ಮುಂದುವರೆದ್ರೆ ಇದೇ ಮೋದಿ ಗವರ್ನ್ ಮೆಂಟ್ ತರಬೇಕು ಅಂತಿದ್ದ ಭೂಮಸೂದೇನಾ ಯಾವ್ಯಾವ ರೈತರು ವಿರೋಧಿಸಿದ್ರೋ ಅವರೇ ನಾಳೆ ದಿನ ನನ್ ಜಮೀನ್ ತಗೊಳ್ಳಿ ನನ್ ಜಮೀನ್ ತಗೊಳ್ಳಿ ಅಂತ ಮೋದಿ ಹಿಂದೆ ಬಿಳ್ತಾರೆ. ಆ ದಿನ ಬರ್ಲಿ ಅಂತಾನೇ ಹಿಂಗೆಲ್ಲಾ ಮಾಡ್ತಾರೋ ಏನೋ? ಇದೆಲ್ಲದರ ಜೊತೆಗೆ ರೈತ ಸತ್ತಾಗ ಪಾರ್ಟಿಗಳೆಲ್ಲ ಬಂದು 25 ಸಾವಿರ, ಐವತ್ತು ಸಾವಿರ ಅಂತ ದುಡ್ಡು ಕೊಡೋದು ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದೆ. ಒಬ್ಬ ರೈತ ಸತ್ರೆ ಮತ್ತೊಬ್ಬ ರೈತ ಬರೋದು ಸರಿ. ಈ ಪಾರ್ಟಿಗಳೆಲ್ಲ ಯಾಕೆ ಬಂದು ದುಡ್ಡು ಕೊಡಬೇಕು. ನಾನು ಸತ್ತರೆ ಮನೆಯವರಿಗಾದರೂ ನೆಮ್ಮದಿ ಸಿಗುತ್ತೆ ಅನ್ನೋ ಭಾವನೇಲಿ ಸೂಸೈಡ್ ಮಾಡ್ಕೊಳ್ಳೋರು ಇರ್ತಾರೆ. ಆ ಟಿವಿಯವ್ರು ಜೋರು ದನೀಲಿ ಇವತ್ತು ಇಷ್ಟು ರೈತ್ರು ಸತ್ರು ಅನ್ನೋದೂ ನಿಲ್ಬೇಕು. ಒಟ್ನಲ್ಲಿ ಇಡೀ ವ್ಯವಸ್ಥೆಯಲ್ಲೇ ತಪ್ಪಿದೆ. ಯಾರನ್ನ ದೂಷಿಸೋದೋ ಗೊತ್ತಿಲ್ಲ”
ನನ್ನನೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತಲೇ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟಿಹಾಕಿಸಿದ ಮಾತುಗಳಿವು. ಹೆಚ್ಚೇನು ಬರೆಯಲು ಉಳಿದಿಲ್ಲ.