ಆಗ 2, 2015

ಯಾಕೂಬನ ಸಾವು ಮತ್ತು ನೇಣಿಗೆ ಬಿದ್ದ ಸಮಾಜದ ಮನಸ್ಥಿತಿ.

yakub memon funeral
Ashok K R
ಆತನ ಶವವನ್ನು ನಾಗಪುರದಿಂದ ಮುಂಬಯಿಗೆ ತಂದಾಗ ಶವವನ್ನು ‘ವೀಕ್ಷಿಸಲು’ ಸಾವಿರಾರು ಜನರು (ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿಯ ಪ್ರಕಾರ ಹದಿನೈದು ಸಾವಿರದಷ್ಟು ಜನರು) ನೆರೆದಿದ್ದರು. ನೆರೆದವರಲ್ಲಿ ಹೆಚ್ಚು ಕಡಿಮೆ ಎಲ್ಲರೂ ಮುಸ್ಲಿಮರು. ಸತ್ತವನು ಯಾರೋ ಪುಣ್ಯಾತ್ಮ ಮುಸ್ಲಿಂ ಜನಾಂಗದ ಜನರ ಓದಿಗೆ, ಬರಹಕ್ಕೆ, ಜೀವನಕ್ಕೆ ಹೊಡೆದಾಡಿದ ಮಹಾನುಭಾವ ಎಂದುಕೊಂಡಿರಾದರೆ ಅದು ಖಂಡಿತವಾಗಿಯೂ ತಪ್ಪು! ಸತ್ತ ವ್ಯಕ್ತಿ ಮುಂಬಿಯಯಲ್ಲಿ 1993ರಲ್ಲಿ ನಡೆದ ಪೈಶಾಚಿಕ ಸರಣಿ ಬಾಂಬ್ ಸ್ಪೋಟಕ್ಕೆ ಸಹಾಯ ಮಾಡಿದವನು ಎಂಬ ಆರೋಪ ಹೊತ್ತಾತ. ಯಾಕೂಬ್ ಮೆಮೊನ್ ಎಂಬ ವ್ಯಕ್ತಿಗೆ ಇಪ್ಪತ್ತಮೂರು ವರುಷಗಳ ವಿಚಾರಣೆಯ ನಂತರ, ಭಾರತದ ಕಾನೂನಿನ ಎಲ್ಲಾ ಹಂತಗಳನ್ನೂ ದಾಟಿದ ನಂತರ ಜುಲೈ ಮೂವತ್ತರಂದು ಗಲ್ಲಿಗೇರಿಸಲಾಯಿತು. ಆತನ ವಿರುದ್ಧದ ಅಪರಾಧಗಳು ಅದೇ ಬಾಂಬ್ ಸ್ಪೋಟದ ರುವಾರಿಗಳಾದ, ನಂತರದಲ್ಲಿ ತಲೆಮರೆಸಿಕೊಂಡಿರುವ ದಾವೂದ್ ಇಬ್ರಾಹಿಂ ಮತ್ತು ಯಾಕೂಬನ ಸಹೋದರ ಟೈಗರ್ ಮೆಮೊನ್ ನಷ್ಟು ಇರಲಿಲ್ಲ; ಆದರೆ ಇನ್ನೂರಕ್ಕೂ ಅಧಿಕ ಜನರು ಸಾಯುವುದರಲ್ಲಿ ಯಾಕೂಬ್ ಮೆಮನ್ನಿನ ಪಾತ್ರವನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ. ಬಾಂಬ್ ಸ್ಪೋಟದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿದ್ದ ಬಹುತೇಕರು ಯಾಕೂಬ್ ಮೆಮೊನ್ನಿನ ವಿರುದ್ಧ ಸಾಕ್ಷ್ಯ ನುಡಿದಿದ್ದರು. ಸರಣಿ ಸ್ಪೋಟದ ಪ್ರಮುಖ ರುವಾರಿ ಟೈಗರ್ ಮೆಮೊನನಿಗೆ ಹಣ ನೀಡಿದ ಆರೋಪ, ಇಂತಹುದೊಂದು ದುಷ್ಕೃತ್ಯವನ್ನೆಸಗಲು ತರಬೇತಿ ಪಡೆದುಕೊಳ್ಳುವ ಸಲುವಾಗಿ ಪಾಕಿಸ್ತಾನಕ್ಕೆ ತೆರಳಿದ ಹದಿನೈದು ಯುವಕರ ತಂಡಕ್ಕೆ ಹಣಕಾಸು ನೆರವು ನೀಡಿದ ಆರೋಪ, ಸ್ಪೋಟಕಗಳನ್ನು ಸಂಗ್ರಹಿಸಿಟ್ಟ ಆರೋಪಗಳೆಲ್ಲವೂ ಯಾಕೂಬ್ ಮೆಮೊನ್ ನ ಮೇಲಿದ್ದವು.
yakub memon
ಯಾಕೂಬ್ ಮೆಮೊನ್
ನ್ಯಾಯಾಲಯ ಕಾರ್ಯನಿರ್ವಹಿಸುವುದೇ ಸಾಕ್ಷ್ಯಾಧಾರಗಳ ಆಧಾರದಿಂದ, ಆ ಸಾಕ್ಷ್ಯಾಧಾರಕ್ಕನುಗುಣವಾಗಿ ಯಾಕೂಬ್ ಮೆಮನ್ನಿಗೆ ಭಾರತದ ಕಾನೂನಿನಲ್ಲಿರುವ ಅತ್ಯುಗ್ರ ಶಿಕ್ಷೆಯಾದ ಮರಣದಂಡನೆಯನ್ನು ವಿಧಿಸಿತು. ಇವತ್ತು ಮರಣದಂಡನೆ ವಿಧಿಸಿ ನಾಳೆ ನೇಣಿಗಾಕುವ ದಿಡೀರ್ ನ್ಯಾಯ ಭಾರತದಲ್ಲಿಲ್ಲ, ಇರಲೂಬಾರದು. ಉನ್ನತ ಕೋರ್ಟುಗಳು, ರಾಷ್ಟ್ರಪತಿ ಮತ್ತು ಸುಪ್ರೀಂಕೋರ್ಟಿನವರೆಗೆ ಯಾಕೂಬ್ ಮೆಮೊನ್ ಪರವಾಗಿ ವಕೀಲರು ದಾವೆ ಹೂಡಿದರು, ಎಲ್ಲೆಡೆಯೂ ದಾವೆಗೆ ಸೋಲಾಯಿತು; ಅರ್ಥಾತ್ ಸಾಕ್ಷ್ಯಾಧಾರಗಳು ಯಾಕೂಬನ ವಿರುದ್ಧವಾಗಿದ್ದವು. ನ್ಯಾಯಾಲಯದಲ್ಲೂ ತಪ್ಪುಗಳಾಗುತ್ತಾವಾದರೂ ನಮಗೆ ಅಪ್ರಿಯವೆನ್ನಿಸಿದ ತೀರ್ಪುಗಳು ಬಂದಾಗ ಸಾರಾಸಗಟಾಗಿ ನ್ಯಾಯಾಲಯವನ್ನು ಟೀಕಿಸುವುದು ವಿವೇಚನೆಯಲ್ಲ. ಈ ಪ್ರಕರಣದಲ್ಲಿರುವ ಅನೇಕ ಚರ್ಚಾಸ್ಪದ ವಿಷಯಗಳ ನಡುವೆ ಗಮನಿಸಲೇಬೇಕಾದ ವಿಷಯವೆಂದರೆ ಯಾಕೂಬನ ಶವಸಂಸ್ಕಾರದ ಸಮಯದಲ್ಲಿ ಸಹಸ್ರ ಜನರು ಹಾಜರಿದ್ದುದು. ಒಂದು ಮೂಲಭೂತವಾದಿ ಕೃತ್ಯಕ್ಕೆ ನೈತಿಕ ಬೆಂಬಲ ಕೊಡುವಂತಹ ಮನಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು.

ಕಾಕತಾಳೀಯವೆಂಬಂತೆ ಕಳೆದ ವಾರವಷ್ಟೇ ‘ನಡುರಾತ್ರಿಯಲ್ಲಿ ಸ್ವಾತಂತ್ರ್ಯ’ ಪುಸ್ತಕ ಓದಿ ಮುಗಿಸಿದ್ದೆ. ನಮ್ಮ ಭವ್ಯ ಭಾರತ ದೇಶದ ಬಗ್ಗೆ ಹೊಗಳಿಕೊಳ್ಳುವಾಗ ನಾವು ಶಾಂತಿ ಪ್ರಿಯರು, ಯಾವೊಂದು ದೇಶದ ಮೇಲೂ ದಂಡೆತ್ತಿ ಹೋದವರಲ್ಲ ಎನ್ನುವ ಸಾಲುಗಳನ್ನು ಸಾಮಾನ್ಯವಾಗಿ ಹೇಳುತ್ತಿರುತ್ತೇವೆ - ಕೇಳುತ್ತಿರುತ್ತೇವೆ. ಭಾರತದ ಸ್ವಾತಂತ್ರ್ಯ ಮತ್ತು ದೇಶವಿಭಜನೆಯ ಹಿಂಚುಮುಂಚಿನಲ್ಲಿ ನಡೆದ ಭೀಕರ ಹಿಂಸಾಕೃತ್ಯಗಳ ವಿವರಗಳನ್ನು ಓದುವಾಗ ಈ ಹಿಂದೂ – ಇಸ್ಲಾಂ – ಸಿಖ್ಖರ ‘ಶಾಂತಿ’ ಹೇಗಿತ್ತೆನ್ನುವುದು ತಿಳಿದು ಬಿಡುತ್ತದೆ. ಇವತ್ತಿನ ಭಾರತ ಮತ್ತು ಪಾಕಿಸ್ತಾನ ಹುಟ್ಟಿದ್ದೇ ಹಿಂಸೆಯ ಕೂಪದಿಂದ ಎಂಬ ಅಂಶ ಇವತ್ತಿನ ಮೂಲಭೂತವಾದಿ ಮನಸ್ಥಿತಿಯ ಹೆಚ್ಚಳಕ್ಕೆ ಇರುವ ಹತ್ತಲವು ಕಾರಣಗಳಲ್ಲಿ ಒಂದೆಂದು ಪರಿಗಣಿಸಬಹುದಾ? ವಿಭಜನೆಯ ಸಮಯದಲ್ಲಿ ಅಮಾಯಕರನ್ನು ಹತ್ಯೆ ಮಾಡಿದವರಿಗೆ, ಅತ್ಯಾಚಾರವೆಸಗಿದವರಿಗೆ, ಲೂಟಿ ಮಾಡಿದವರಿಗೆ ಭಾರತ ಅಥವಾ ಪಾಕಿಸ್ತಾನ ಸರಕಾರಗಳು ಶಿಕ್ಷೆ ವಿಧಿಸಿದ ಕುರಿತಾಗಿ ಯಾವುದಾದರೂ ದಾಖಲೆ – ಬರಹಗಳಿವೆಯಾ? ನನ್ನ ಓದಿನ ಪರಿಮಿತಿಯಲ್ಲಂತೂ ಅಂತಹದ್ದು ನಡೆದಿರುವ ಸೂಚನೆ ಸಿಕ್ಕಿಲ್ಲ. ಅಲ್ಲಿಗೆ ಎರಡು ದೇಶಗಳ ಜನ್ಮದೊಡನೆಯೇ ‘ಗಲಭೆ’ಗಳಲ್ಲಿ ನಡೆಸುವ ಹತ್ಯಾಕಾಂಡಕ್ಕೆ, ಅನಾಚಾರಕ್ಕೆ ಶಿಕ್ಷೆ ಕೊಡುವುದು ಕಷ್ಟ ಎಂಬ ಬಹುದೊಡ್ಡ ತಪ್ಪು ಸಂದೇಶವೊಂದು ಸೃಷ್ಟಿಯಾಗಿ ಹೋಯಿತು. 

gandhi and godhse
ಗಾಂಧಿ ಮತ್ತು ಗೋಡ್ಸೆ
ಬಿಡಿ, ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆಲ್ಲ ಕುತಂತ್ರಿ ಬ್ರಿಟೀಷರೇ ಕಾರಣ ಎಂದು ನೆಪ ಹೇಳಿಬಿಡಬಹುದು. ವಿಭಜನೆಯ ನಂತರ ನಡೆದ ಹಿಂಸಾಚಾರಗಳತ್ತ ಗಮನಹರಿಸೋಣ. ಸ್ವಾತಂತ್ರೋತ್ತರ ಭಾರತದಲ್ಲಿ ನಡೆದ ಮೊದಲ ಹಿಂಸಾಚಾರ ಅಹಿಂಸಾ ತತ್ವ ಭೋದಿಸಿದ ಗಾಂಧೀಜಿಯೊಂದಿಗೆ ತಳುಕುಹಾಕಿಕೊಂಡಿದೆ! ವೈರುಧ್ಯಗಳು ಹೇಗಿರುತ್ತವೆ ನೋಡಿ, ಜೀವನವಿಡೀ ಅಹಿಂಸಾ ಮಾರ್ಗದಲ್ಲಿ ನಡೆದ ಗಾಂಧೀಜಿಯ ಹತ್ಯೆ ಹಿಂಸಾ ಮಾರ್ಗದಲ್ಲಾಗುತ್ತದೆ. ನಾಥೂರಾಮ್ ಗೋಡ್ಸೆ ಎಂಬ ಹಿಂದೂ ಉಗ್ರವಾದಿ ಸಾರ್ವಜನಿಕವಾಗಿ ಗಾಂಧೀಜಿಯನ್ನು ಗುಂಡಿಟ್ಟು ಕೊಲ್ಲುತ್ತಾನೆ. ಬಹುಶಃ ಗಾಂಧೀಜಿ ಕೂಡ ನಾಥೂರಾಮ್ ಗೋಡ್ಸೆಗೆ ನೇಣಾಗುವುದನ್ನು ಒಪ್ಪುತ್ತಿರಲಿಲ್ಲವೇನೋ, ನೇಣಿಗಾಕುವುದು ಸರಕಾರಿ ಹಿಂಸೆ ಎಂಬ ಕಾರಣಕ್ಕೆ. ಗಾಂಧಿ ಹತ್ಯೆಯಲ್ಲಿ ಪಾಲ್ಗೊಂಡವರಲ್ಲಿ ಅನೇಕರು ಚಿತ್ಪಾವನ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು, ಗಾಂಧಿ ಹತ್ಯೆಯ ನಂತರ ದೇಶದ ವಿವಿದೆಡೆ ಚಿತ್ಪಾವನ ಬ್ರಾಹ್ಮಣರ ಮನೆಗಳ ಮೇಲೆ ದಾಳಿಗಳು ನಡೆದವು. ಅಹಿಂಸೆ ಭೋದಿಸಿದ ವ್ಯಕ್ತಿಯ ಸಾವಿನಿಂದ ಹಿಂಸೆ ಪ್ರಾರಂಭವಾಯಿತು! ಯಾರೋ ಒಬ್ಬ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ಗುರಿ ಮಾಡಿಕೊಂಡು ನಡೆಸಿದ ದುಷ್ಕ್ರತ್ಯ ಎಷ್ಟರಮಟ್ಟಿಗೆ ಸರಿ? ಸಾಮೂಹಿಕ ದಾಳಿ ನಡೆಸಿದವರ ಮೇಲೆ ಪ್ರಕರಣ ದಾಖಲಿಸಿಕೊಂಡು ಶಿಕ್ಷೆ ನೀಡಲಾಯಿತಾ? 

1984 sikh riots
1984ರ ಸಿಖ್ ಹತ್ಯಾಕಾಂಡ
ನಂತರದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ದಾಂಧಲೆ ನಡೆದದ್ದು ಇಂದಿರಾ ಗಾಂಧಿ ಹತ್ಯೆಯಾದ ನಂತರ. 1984ರಲ್ಲಿ ಇಂದಿರಾ ಗಾಂಧಿಯನ್ನು ಆಕೆಯ ಸಿಖ್ ಅಂಗರಕ್ಷಕರು ಹತ್ಯೆ ಮಾಡಿಬಿಡುತ್ತಾರೆ. ಇಂದಿರಾ ಬೆಂಬಲಿಗರಿಗೆ, ಕಾಂಗ್ರೆಸ್ಸರಿಗೆ ತಮ್ಮ ನಾಯಕಿಯನ್ನು ತಾವೆಷ್ಟು ಆರಾಧಿಸುತ್ತಿದ್ದೆವು ಎಂದು ತೋರ್ಪಡಿಸುವ ಹಪಾಹಪಿ. ಅದಕ್ಕೆ ಬಲಿಯಾಗಿದ್ದು ಮಾತ್ರ ಅಮಾಯಕ ಸಿಖ್ಖರು. ‘ಒಂದು ದೊಡ್ಡ ಆಲದ ಮರ ಬಿದ್ದಾಗ ಇಂತವೆಲ್ಲ ಸಹಜ’ ಎಂಬ ಬೇಜವಾಬ್ದಾರಿ ಮಾತುಗಳನ್ನಾಡಿದ್ದು ಇಂದಿರಾ ಗಾಂಧಿಯ ಮಗ ರಾಜೀವ್ ಗಾಂಧಿ. ಹತ್ತಾರು ತನಿಖೆಗಳು, ವಿಚಾರಣೆ ಆಯೋಗಗಳ ಪ್ರಹಸನಗಳೆಲ್ಲ ಮುಗಿದವಾದರೂ ಸಿಖ್ಖರನ್ನು ಮುಗಿಸಿಬಿಡಲು ನೇತೃತ್ವ ವಹಿಸಿದ ಕಾಂಗ್ರೆಸ್ ನಾಯಕರಾರಿಗೂ ಶಿಕ್ಷೆಯಾಗಲಿಲ್ಲ. ಸಾಕ್ಷ್ಯಾಧಾರದ ಕೊರತೆಯಿಂದಾಗಿ.

1992ರ ಡಿಸೆಂಬರ್ ತಿಂಗಳಿನಲ್ಲಿ ಭಾರತ ಮತ್ತೊಂದು ಸುತ್ತಿನ ಸಾಮೂಹಿಕ ಹಿಂಸೆಗೆ ಮೂಕಸಾಕ್ಷಿಯಾಯಿತು. ಹಿಂದೂ ಭಾವನೆಗಳನ್ನು ಉದ್ರೇಕಗೊಳಿಸುತ್ತ, ಹಿಂದೂಗಳ ರಕ್ಷಣೆ ನಮ್ಮಿಂದ ಮಾತ್ರ ಸಾಧ್ಯ ಎನ್ನುತ್ತಾ ರಥಯಾತ್ರೆ ಪ್ರಾರಂಭಿಸಿದ್ದು ಬಿಜೆಪಿ. ಅಡ್ವಾಣಿ ರಥಯಾತ್ರೆಯ ಮುಂದಾಳತ್ವ ವಹಿಸಿದ್ದರು. ರಥಯಾತ್ರೆ ನಡೆದ ವಿಷಯವನ್ನು ಜನರು ಮರೆತು ಬಿಡಬಾರದು ಎಂಬ ಕಾರಣಕ್ಕೆ ಒಂದು ದೊಡ್ಡ ಕ್ಲೈಮಾಕ್ಸ್ ಸಿದ್ಧಪಡಿಸಿದ್ದರು. ಅದು ಬಾಬರಿ ಮಸೀದಿಯ ಧ್ವಂಸ ಮತ್ತಾ ಜಾಗದಲ್ಲಿ ರಾಮಮಂದಿರ ನಿರ್ಮಿಸುವ ಪ್ರಮಾಣ. ಬಾಬರಿ ಮಸೀದಿಯ ಧ್ವಂಸದೊಂದಿಗೇ ದೇಶಾದ್ಯಂತ ಮುಸ್ಲಿಮರ ಮೇಲೆ ಹಲ್ಲೆಗಳು ಪ್ರಾರಂಭವಾದವು. ಬಾಬರನಿಗೂ ಬಾಬರಿ ಮಸೀದಿಗೂ ಸಂಬಂಧವೇ ಇರದ ಸಾವಿರಾರು ಮುಸ್ಲಿಮರು ಹತ್ಯೆಗೊಳಗಾದರು. ಈ ಘಟನೆಗಳಿಗೆಲ್ಲ ಕಾರಣಕರ್ತರಾದ ಬಿಜೆಪಿಯ ನಾಯಕರುಗಳಿಗೆ ಶಿಕ್ಷೆಯಾಯಿತಾ? ಅವರೆಲ್ಲರೂ ಆರಾಮವಾಗಿ ಓಡಾಡಿಕೊಂಡೇ ಇದ್ದಾರೆ.

2002 gujrat riots
2002ರ ಗುಜರಾಜ್ ಹತ್ಯಾಕಾಂಡ
ಇನ್ನು ತೀರ ಇತ್ತೀಚೆಗೆ ನಡೆದಿದ್ದು 2002ರ ಗುಜರಾತ್ ಹತ್ಯಾಕಾಂಡ. ಗೋದ್ರದ ರೈಲಿನಲ್ಲಿ ನಡೆದ ಹಿಂದೂ ಸನ್ಯಾಸಿಗಳ ಹತ್ಯೆಗೆ ಪ್ರತೀಕಾರವಾಗಿ ಇಡೀ ಗುಜರಾತಿನಲ್ಲಿ ಮುಸ್ಲಿಮರನ್ನು ಹತ್ಯೆ ಮಾಡಲಾಗುತ್ತದೆ. ಇಲ್ಲಿನ ಆರೋಪಿಗಳಿಗೆ ಶಿಕ್ಷೆಯಾಯಿತಾ? ಇನ್ನೂ ಅನೇಕವು ವಿಚಾರಣೆಯಲ್ಲಿವೆ, ಕೆಲವೊಂದರಲ್ಲಿ ಜೀವಾವಧಿ ಶಿಕ್ಷೆಯಾಗಿದೆ ಕೆಳ ಹಂತದ ನ್ಯಾಯಾಲಯದಲ್ಲಿ; ಆ ಶಿಕ್ಷೆಯಾದವರೂ ಕೂಡ ಜಾಮೀನಿನ ಮೇಲೆ ತಿರುಗಾಡಿಕೊಂಡಿದ್ದಾರೆ!

ಈ ಘಟನೆಗಳನ್ನೆಲ್ಲಾ ಏನನ್ನು ಸೂಚಿಸುತ್ತವೆ? ನಿಮಗೆ ಒಂದು ಸಮುದಾಯದ ಮೇಲೆ ಕೋಪವಿದ್ದರೆ ದ್ವೇಷವಿದ್ದರೆ ಅದನ್ನು ಸಾಮೂಹಿಕವಾಗಿ ತೀರಿಸಿಕೊಳ್ಳಿ, ವೈಯಕ್ತಿಕವಾಗಲ್ಲ. ಸಾಮೂಹಿಕ ಅಪರಾಧದಲ್ಲಿ ತಪ್ಪಿಸಕೊಳ್ಳುವುದು ಸುಲಭ. ಅದರಲ್ಲೂ ನೀವು ಬಹುಸಂಖ್ಯಾತರಾಗಿದ್ದು ನೀವು ಹತ್ಯೆ ಮಾಡಿದವರು ಅಲ್ಪಸಂಖ್ಯಾತರಾಗಿದ್ದರೆ ತಪ್ಪಿಸಿಕೊಳ್ಳುವುದು ಮತ್ತೂ ಸುಲಭ. ಭಾರತದ ಪ್ರಮುಖ ಸಾಮೂಹಿಕ ಹತ್ಯಾಕಾಂಡವನ್ನು ಗಮನಿಸಿ ನೋಡಿ, ಸಿಖ್, ಮುಸ್ಲಿಂ ಸಮುದಾಯ ಹೆಚ್ಚು ಹಾನಿ ಅನುಭವಿಸಿದೆ. ಹಾನಿ ಮಾಡಿದ್ದು ಹಿಂದೂ ಸಮುದಾಯ. ಆ ಪ್ರಕರಣಗಳಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಭಾಗಿಯಾದವರೆಲ್ಲಾ ನಂತರದ ದಿನಗಳಲ್ಲಿ ಏನಾದರು ಎಂಬುದನ್ನು ಗಮನಿಸಿದರೆ ಇಡೀ ಸಮಾಜದ ಮನಸ್ಥಿತಿಯ ಬಗ್ಗೆಯೇ ಮರುಕವುಂಟಾಗುತ್ತದೆ. ದೊಡ್ಡಾಲದ ಮರ ಬಿದ್ದಾಗ ಇಂತವೆಲ್ಲ ಸಹಜ ಎಂದು ಸಿಖ್ಖರ ಜೀವವನ್ನು ತುಚ್ಛವಾಗಿ ಕಂಡ ರಾಜೀವ್ ಗಾಂಧಿ ಅನುಕಂಪದ ಆಧಾರದಲ್ಲಿ ಅತಿ ಹೆಚ್ಚು ಸೀಟುಗಳನ್ನು ಪಡೆದ ಕಾಂಗ್ರೆಸ್ಸಿನ ಮೂಲಕ ಪ್ರಧಾನಿಯಾಗುತ್ತಾರೆ. ಕಾಂಗ್ರೆಸ್ಸಿನ ಬಕೆಟ್ ರಾಜಕೀಯದ ಕಾರಣದಿಂದಾಗಿ ದೇಶದೆಲ್ಲೆಡೆ ರಾಜೀವ್ ಗಾಂಧಿ ಹೆಸರು ಇವತ್ತಿಗೂ ರಾರಾಜಿಸುತ್ತಿದೆ. ಇನ್ನು 1992ರ ಗಲಭೆಗೆ ಕಾರಣಕರ್ತರಾದ ಬಿಜೆಪಿಯವರು ಲೋಕಸಭೆಯಲ್ಲಿ ಮತ್ತು ಅನೇಕ ರಾಜ್ಯಗಳಲ್ಲಿ ತಮ್ಮ ಅಧಿಕಾರವನ್ನು ಹೆಚ್ಚಿಸಿಕೊಳ್ಳುತ್ತಾರೆ. ಬಿಜೆಪಿಯ ಭಾಗವೇ ಆಗಿದ್ದ, ಬಿಜೆಪಿಯ ನಾಯಕನಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗುತ್ತಾರೆ. ನಂತರದ ದಿನಗಳಲ್ಲಿ ಅವರು ಮುತ್ಸದ್ಧಿ ನಾಯಕನಾಗಿ, ಅಜಾತ ಶತ್ರುವಾಗಿ ಬಿಂಬಿತವಾಗುತ್ತಾರೆ. ರಾಜೀವ್ ಗಾಂಧಿಗೆ ಸಿಕ್ಕ ಭಾರತ ರತ್ನ ಅಟಲ್ ಗೂ ಸಿಗುತ್ತದೆ! ಈಗ ಕೇಂದ್ರದಲ್ಲಿರುವುದು ಬಿಜೆಪಿ ಸರಕಾರವಾದ್ದರಿಂದ ಯೋಜನೆಗಳಿಗೆ ಅಟಲ್ ಹೆಸರು ಇಡುವ ಪರಿಪಾಟ ಪ್ರಾರಂಭವಾಗಿದೆ! ಇನ್ನು ರಥಯಾತ್ರೆಯ ನಾಯಕರಾಗಿದ್ದ ಅಡ್ವಾಣಿ ಉಪಪ್ರಧಾನಿಯಾಗುತ್ತಾರೆ. ಈಗ ಸದ್ಯಕ್ಕೆ ಅವರು ಮುತ್ಸದ್ಧಿ ನಾಯಕರಾಗಿದ್ದಾರೆ, ಅಜಾತ ಶತ್ರುವಾಗಿ ‘ಭಾರತ ರತ್ನ’ ಪಡೆದರೆ ಅಚ್ಚರಿಪಡಬೇಕಾಗಿಲ್ಲ. ಮುರಳಿ ಮನೋಹರ ಜೋಶಿ, ಉಮಾಭಾರತಿಯಂತಹ ನಾಯಕರೆಲ್ಲ ಅನೇಕ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇನ್ನು ಗುಜರಾತಿನ ಹತ್ಯಾಕಾಂಡಕ್ಕೆ ಪ್ರೇರಣೆ ನೀಡಿದವರು ಎಂದು ಆರೋಪಿಸಲಾದ (ನ್ಯಾಯಾಲಯದಲ್ಲೇನೂ ಸಾಬೀತಾಗಿಲ್ಲ) ನರೇಂದ್ರ ಮೋದಿ ಒಂದಾದ ಮೇಲೊಂದರಂತೆ ಚುನಾವಣೆಗಳನ್ನು ಗೆಲ್ಲುತ್ತಾರೆ. ಗುಜರಾತ್ ಹತ್ಯಾಕಾಂಡ ನಡೆದು ಹನ್ನೆರಡು ವರುಷಗಳ ನಂತರ ಪ್ರಧಾನಿಯಾಗುತ್ತಾರೆ. ಭಾರತ ಕಂಡ ಶಕ್ತಿಶಾಲಿ ಪ್ರಧಾನಿ ಎಂದು ಸದ್ಯಕ್ಕೆ ಹೇಳಲಾಗುತ್ತದೆ, ಇನ್ಯಾವ ಗುಣವಿಶೇಷಣಗಳು ಸೇರಿಕೊಳ್ಳುತ್ತವೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕು!

ಸಾಮೂಹಿಕ ಹತ್ಯಾಕಾಂಡಕ್ಕೆ ಪ್ರತಿಕ್ರಿಯಿಸುವ ನಮ್ಮ ಸಮಾಜದ ಮನಸ್ಥಿತಿಯ ಇತಿಹಾಸವನ್ನು ಸ್ವಲ್ಪ ನೋಡಿದ್ದಾಯಿತು. ಇನ್ನು ಮತ್ತೆ ಯಾಕೂಬ್ ಮೆಮೊನ್ ಶವಸಂಸ್ಕಾರದಲ್ಲಿ ಸೇರಿದ್ದ ಅಪಾರ ಜನಸಂಖ್ಯೆಯ ಮನಸ್ಥಿತಿ ಏನಿರಬಹುದು ಎಂದು ಯೋಚಿಸಿದಾಗ ತಟ್ಟನೆ ನೆನಪಾಗಿದ್ದು ನಾಥೂರಾಮ್ ಗೋಡ್ಸೆ. ಗಾಂಧಿಯನ್ನು ಹತ್ಯೆ ಮಾಡಿದ ಕಾರಣಕ್ಕೆ ಆತನನ್ನು ಆರಾಧಿಸುವ ಮನಸ್ಥಿತಿಗಳು ಮುಂಚಿನಿಂದಲೂ ಇದ್ದವು. ಕಾರಣ? ಗೋಡ್ಸೆ ಹಿಂದೂವಾದಿ, ಹಿಂದೂಗಳಿಗೆ ‘ದ್ರೋಹ’ ಮಾಡಿದ ಗಾಂಧೀಜಿಯನ್ನು ಕೊಂದದ್ದಕ್ಕಾಗಿ ಗೋಡ್ಸೆ ಹೀರೋ! ಮುಂಚೆ ಕದ್ದು ಮುಚ್ಚಿ ಆರಾಧಿಸುತ್ತಿದ್ದವರು ಈಗ ಬಹಿರಂಗವಾಗಿಯೇ ಗೋಡ್ಸೆಯನ್ನು ಆರಾಧಿಸುತ್ತಿದ್ದಾರೆ. ಗೋಡ್ಸೆ ಹೆಸರಿನಲ್ಲಿ ದೇವಸ್ಥಾನ ಕಟ್ಟಿಸುತ್ತೇವೆ, ರಸ್ತೆಗೆ ಹೆಸರಿಡುತ್ತೇವೆ ಎನ್ನುವವರ ಸಂಖೈ ದಿನೇ ದಿನೇ ಹೆಚ್ಚುತ್ತಿದೆ. ಗೋಡ್ಸೆ ನಂಬಿದ ಸಿದ್ಧಾಂತಗಳಿಂದಲೇ ಬೆಳೆದು ಬಂದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕೂ ಈ ಗೋಡ್ಸಾರಾಧನೆಗೂ ಸಂಬಂಧವಿಲ್ಲ ಎಂದರೆ ನಂಬಲಾದೀತೆ? ಗೋಡ್ಸೆ ಆರಾಧಕರಿಗೆ ಇರುವ ಒಂದು ಅನುಕೂಲವೆಂದರೆ ಅವರ್ಯಾರನ್ನೂ ಸಮಾಜ ರಾಷ್ಟ್ರದ್ರೋಹಿ ಉಗ್ರಗಾಮಿ ಭಯೋತ್ಪಾದಕ ಎಂಬ ವಿಶೇಷಣಗಳಿಂದ ಗುರುತಿಸುವುದಿಲ್ಲ. ಕಾರಣ ಈ ಆರಾಧಕರು ಹಿಂದೂಗಳು. ಹಿಂದೂ ಆಗಿ ಹುಟ್ಟಿದವನು ಆ ಕಾರಣಕ್ಕಾಗಿಯೇ ರಾಷ್ಟ್ರಪ್ರೇಮಿಯಾಗಿಬಿಡುತ್ತಾನೆ! ಭಯೋತ್ಪಾದಕನಾಗಲು ಸಾಧ್ಯವಿಲ್ಲ ಎಂಬ ಅಘೋಷಿತ ಕಾನೂನೊಂದು ನಮ್ಮಲ್ಲಿ ಜಾರಿಯಲ್ಲಿದೆ! ರಾಷ್ಟ್ರಪ್ರೇಮವನ್ನು ಸಾಬೀತುಪಡಿಸುವ ಕರ್ಮವೆಲ್ಲ ಮುಸ್ಲಿಮರಿಗೆ, ಸಿಖ್ಖರಿಗೆ, ಕ್ರಿಶ್ಚಿಯನ್ನರಿಗೆ ಸೀಮಿತ. ಇನ್ನು ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ ಎಲ್.ಟಿ.ಟಿ.ಐ ಉಗ್ರರಿಗೆ ತಮಿಳುನಾಡಿನಲ್ಲಿ ಸಿಗುವ ಬೆಂಬಲ ಕೂಡ ಆಘಾತ ಮೂಡಿಸುತ್ತದೆ. ಎಲ್.ಟಿ.ಟಿ.ಐ ಹೋರಾಟಕ್ಕೆ ಅನೇಕಾನೇಕ ಕಾರಣಗಳಿರಬಹುದು ಆದರೆ ಆ ಕಾರಣಗಳ್ಯಾವುವೂ ರಾಜೀವ್ ಗಾಂಧಿಯ ಹತ್ಯೆಯನ್ನು ಸಮರ್ಥಿಸುವಂತೆ ಮಾಡಬಾರದು. ಗೋಡ್ಸೆಯ ವಿಚಾರದಲ್ಲಿ ಯಾಕೂಬ್ ನ ವಿಚಾರದಲ್ಲಿ ಧರ್ಮ ಅಮಲೇರಿಸಿದರೆ, ಎಲ್.ಟಿ.ಟಿ.ಐ ವಿಷಯದಲ್ಲಿ ಪ್ರದೇಶಾಭಿಮಾನ, ಭಾಷಾಭಿಮಾನ ಹಂತಕರನ್ನು ಬೆಂಬಲಿಸುವಂತಹ, ಆರಾಧಿಸುವಂತಹ ವಾತಾವರಣವನ್ನು ಸೃಷ್ಟಿಸಿತು. ರಾಜೀವ್ ಗಾಂಧಿ ಹಂತಕರಿಗೆ ಕ್ಷಮಾದಾನ ನೀಡಬೇಕೆಂದು ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯಗಳಾಗುತ್ತವೆಂದರೆ ನಮ್ಮ ಜನರ ಹಂತಕ ಪ್ರೇಮತನ ಯಾವ ಮಟ್ಟಿಗಿರಬೇಕು ನೀವೇ ಲೆಕ್ಕಹಾಕಿ. ಹಂತಕರನ್ನು ಆರಾಧಿಸುವ ಗುಣ ದೇಶಾದ್ಯಂತ ಹರಡಿರುವಾಗ ಯಾಕೂಬನ ಶವಸಂಸ್ಕಾರದಲ್ಲಿ ಮುಸ್ಲಿಮರು ಭಾಗವಹಿಸಿದ್ದು ಅಚ್ಚರಿ ಮೂಡಿಸದೇ ಹೋಗುವ ಕೆಟ್ಟ ಮನಸ್ಥಿತಿಗೆ ದೂಡುತ್ತದೆ.
bal thackeray funeral
ಬಾಳಾ ಠಾಕ್ರೆ ಸತ್ತಾಗ ಸೇರಿದ ಜನತೆ
1992ರಲ್ಲಿ ನಡೆದ ಮುಸ್ಲಿಂ ಹತ್ಯೆಗಳಿಗೆ ಪ್ರತೀಕಾರದ ಹೆಸರಿನಲ್ಲಿ 1993ರಲ್ಲಿ ಮುಂಬಯಿಯಲ್ಲಿ ಸರಣಿ ಸ್ಪೋಟ ನಡೆಸಲು ನೆರವಾಗಿ ಅನೇಕ ಅಮಾಯಕರನ್ನು ಹತ್ಯೆ ಮಾಡಿದ ಯಾಕೂಬ್ ಮುಸ್ಲಿಮರಿಗೆ ಶಕ್ತಿಯ ಸಂಕೇತವಾಗಿ ಕಂಡುಬಿಡುತ್ತಾನಾ? ನಮ್ಮ ಮೇಲೆ ನಡೆದ ಅನ್ಯಾಯಕ್ಕೆ ಪ್ರತಿಯಾಗಿ ಅನ್ಯಾಯ ಮಾಡಿ ನ್ಯಾಯ ಕೊಡಿಸಿದವನಂತೆ ಕಂಡುಬಿಡುತ್ತಾನಾ? ಇಂತಹ ಅಪಾಯಕಾರಿ ಪ್ರಶ್ನೆಗಳಿಗೆ ಉತ್ತರ ಹೌದೆಂದು ಆಗಿಬಿಟ್ಟಿರುವುದೇ ನಮ್ಮ ಸಮಾಜದ ದುರಂತ. ಇಲ್ಲಿ ಭಾಗವಹಿಸಿದ್ದವರು ಮುಸ್ಲಿಮರಾದ್ದರಿಂದ ದೇಶದ್ರೋಹಿಗಳಂತೆ, ಉಗ್ರಗಾಮಿಗಳಂತೆ ಗೋಚರಿಸುತ್ತಾರಷ್ಟೇ. ಶ್ರೀಕೃಷ್ಣ ವರದಿಯಲ್ಲಿ ಅಪರಾಧಿಯಾಗಿ ಗುರುತಿಸಲ್ಪಟ್ಟ ಬಾಳ ಠಾಕ್ರೆಯ ಅಂತ್ಯಸಂಸ್ಕಾರದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು, ಠಾಕ್ರೆಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿರಲಿಲ್ಲ, ಹಾಗಾಗಿ ದ್ವೇಷವನ್ನೇ ಬಿತ್ತಿದ ಠಾಕ್ರೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಹಿಂದೂಗಳು ದೇಶಪ್ರೇಮಿಗಳಾಗಿ ಗುರುತಿಸಲ್ಪಡುತ್ತಾರೆಯೇ ಹೊರತು ದೇಶದ್ರೋಹಿಗಳಾಗಿ ಅಲ್ಲ!

ಇದನ್ನೂ ಓದಿ: ಸತ್ತ ನಂತರ ಒಳ್ಳೆಯವರಾಗಿಬಿಡುವ ಪರಿಗೆ ಅಚ್ಚರಿಗೊಳ್ಳುತ್ತಾ

ಯಾಕೂಬನ ವಿಚಾರಣೆ ಸರಿಯಾಗಿ ನಡೆಯಲಿಲ್ಲ ಎಂದು ಈಗ ಹೇಳಿದರೆ ಅದಕ್ಯಾವ ಅರ್ಥವೂ ಇರುವುದಿಲ್ಲ. ನ್ಯಾಯಲಯಗಳು ಸಾಕ್ಷ್ಯಾಧಾರಗಳ ಮೇಲೆ ಕಾರ್ಯನಿರ್ವಹಿಸುತ್ತವೆ, ಆ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕಾದ ಪೋಲೀಸರು ಧರ್ಮದಾಟಕ್ಕೆ, ರಾಜಕೀಯಕ್ಕೆ ಒಳಪಟ್ಟಿರುತ್ತಾರೆ ಎನ್ನುವುದು ಸುಳ್ಳಲ್ಲ. ಮುಸ್ಲಿಂ ಉಗ್ರರ ವಿಷಯವಾಗಿ ತೋರುವ ಉತ್ಸಾಹ ಹಿಂದೂ ಉಗ್ರರ ಬಗ್ಗೆ ತೋರಿಸುವುದಿಲ್ಲ ಎನ್ನುವುದು ಸತ್ಯ. ಯಾಕೂಬ್ ಗಲ್ಲಿಗೇರಿದ ದಿನವೇ ಗುಜರಾತ್ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಸಚಿವೆ ಮಾಯಾ ಕೊಡ್ನಾನಿ ಮತ್ತು ಬಾಬು ಭಜರಂಗಿ ಜಾಮೀನಿನ ಮೇಲೆ ಹೊರಬರುತ್ತಾರೆ. ಬಾಬು ಭಜರಂಗಿ ತೆಹೆಲ್ಕಾ ಸಂಸ್ಥೆಯ ಕಳ್ಳ ಕ್ಯಾಮೆರಾಗಳ ಮುಂದೆಯೇ ಹತ್ಯಾಕಾಂಡ ನಡೆಸಿದ್ದನ್ನು ಒಪ್ಪಿಕೊಂಡಿದ್ದ. ಆತನಿಗೆ ಸಿಕ್ಕಿದ್ದು ಜೀವಾವಧಿ ಶಿಕ್ಷೆಯೇ ಹೊರತು ಮರಣದಂಡನೆಯಲ್ಲ. ಸರಕಾರೀ ಯಂತ್ರ ಅಪರಾಧಿಗಳ ಪರ ವಹಿಸಿದರೆ ನ್ಯಾಯದಾನದಲ್ಲಿ ಏರುಪೇರಾಗುತ್ತವೆ ಎನ್ನುವುದಕ್ಕೆ ಉದಾಹರಣೆಯಾಗಿ ಮಲೇಗಾಂವ್, ಅಜ್ಮೀರದಲ್ಲಿ ಬಾಂಬ್ ಸ್ಪೋಟಿಸಿದ ಹಿಂದೂ ಉಗ್ರರಿದ್ದಾರೆ. ‘ನೋಡಿ ನೋಡಿ ಹಿಂದೂ ಉಗ್ರರಿಗೆ ಶಿಕ್ಷೆಯೇ ಆಗಿಲ್ಲ. ಯಾಕೂಬನಿಗೆ ಯಾಕೆ ಶಿಕ್ಷೆಯಾಗಬೇಕು?’ ಎಂಬ ಪ್ರಶ್ನೆ ಕೇಳುವುದು ಕೂಡ ಮೂರ್ಖತನ. ಯಾಕೂಬ್ ಅಪರಾಧಿ, ಅವನಿಗೆ ಶಿಕ್ಷೆಯಾಗಲಿ; ಉಳಿದ ಅಪರಾಧಿಗಳಿಗೂ ಶಿಕ್ಷೆಯಾಗಲಿ ಎನ್ನುವುದು ನ್ಯಾಯಪರ. ಆ ರೀತಿ ಆಗುತ್ತಿಲ್ಲ ಎನ್ನುವುದು ಸತ್ಯವೇ ಆದರೂ ಒಬ್ಬ ಅಪರಾಧಿಗೆ ಶಿಕ್ಷೆಯಾಗದ ಕಾರಣಕ್ಕೆ ಮತ್ತೊಬ್ಬನ ಅಪರಾಧವನ್ನು ಸಮರ್ಥಿಸುವುದು ಸಲ್ಲದು.

ಈ ಗೋಡ್ಸೆ, ಅಫ್ಜಲ್, ಯಾಕೂಬ್, ಸಾಧ್ವಿ ಪ್ರಜ್ಞಾ, ಲೆ. ಶ್ರೀಕಾಂತ್ ಕುಲಕರ್ಣಿಯಷ್ಟೇ ಅಪಾಯಕಾರಿಯಾದ ಜನರೆಂದರೆ ಇಂತಹ ಅಪರಾಧಿಗಳಲ್ಲಿ ಕೆಲವರನ್ನು ಬೆಂಬಲಿಸಿ ಕೆಲವರನ್ನು ವಿರೋಧಿಸಿ ಅತ್ಯುಗ್ರ ರೀತಿಯಲ್ಲಿ ಪ್ರಚಾರ ಕೊಡುವ ನೆಟ್ಟಿಗರು. ಸುಮ್ಮನೆ ಗಮನಿಸುತ್ತಾ ಹೋದರೆ ಯಾಕೂಬನನ್ನು ವಿರೋಧಿಸುವವರು, ಅವನ ಅಂತ್ಯಸಂಸ್ಕಾರದಲ್ಲಿ ಭಾಗಿಯಾದವರ ಫೋಟೋಗಳನ್ನು ಹಂಚಿಕೊಂಡು shame on them ಎಂದು ಅಬ್ಬರಿಸಿದವರು ಅಪ್ಪಟ ದೇಶಪ್ರೇಮಿಗಳಂತೆ ಪೋಸು ಕೊಡುತ್ತಾರೆ, ಅವರ ಹಿಂದಿನ ಪೋಸ್ಟುಗಳನ್ನು ನೋಡಿದರೆ ಗೋಡ್ಸೆ, ಸಾಧ್ವಿಯನ್ನು ಸಮರ್ಥಿಸಿಕೊಂಡಿರುತ್ತಾರೆ! ಇನ್ನು ಸಾಧ್ವಿಯಂತವರಿಗೆ ಶಿಕ್ಷೆಯಾಗಲೇಬೇಕು ಎಂದು ನ್ಯಾಯಪರವಾಗಿ ಕೂಗುತ್ತಿದ್ದವರು ಇದ್ದಕ್ಕಿದ್ದಂತೆ ಯಾಕೂಬನ ಪರವಾಗಿ ಮಾತನಾಡಿಬಿಡುತ್ತಾರೆ! ಗೋಡ್ಸೆ ಯಾಕೂಬನಂತಹ ಅಪರಾಧಿಗಳು ಹುಟ್ಟುವುದಕ್ಕೆ ಇಂತಹ ಎರಡಲಗಿನ ನಾಲಗೆಯ ಜನರೂ ಕಾರಣ ಎಂಬುದನ್ನು ಮರೆಯಬಾರದು.

ಇನ್ನು ಮರಣದಂಡನೆ ಎಷ್ಟರಮಟ್ಟಿಗೆ ಸರಿ ಎಂಬ ಚರ್ಚೆ ಒಂದು ಮರಣದಂಡನೆ ಜಾರಿಯಾದಾಗಲೆಲ್ಲ ಹುಟ್ಟುತ್ತದೆ. ಕಸಬ್ ನನ್ನು ನೇಣಿಗೇರಿಸಿದಾಗ ಮರಣದಂಡನೆಯೆಂಬ ಶಿಕ್ಷೆಯಿಂದ ಅಪರಾಧಗಳು ಕಡಿಮೆಯಾಗುತ್ತದೆಯಾ ಎಂದು ಬರೆದಿದ್ದ ನೆನಪು. ಅದು ಬರೆದು ಮುಗಿಸುತ್ತಿದ್ದಂತೆ ಆ ರೀತಿಯ ದಿಢೀರ್ ಬರವಣಿಗೆಯ ನಿರರ್ಥಕತೆಯ ಅರಿವಾಗಿತ್ತು. ಮರಣದಂಡನೆ ಜಾರಿಯಾಗುವಾಗ ಅದರ ಅನುಪಯೋಗದ ಬಗ್ಗೆ ಚರ್ಚೆ ಮಾಡಿ ನಂತರ ಮತ್ತೆ ಮರೆತುಬಿಡುವುದು ಯಾವ ಸಂಭ್ರಮಕ್ಕೆ? ಮರಣದಂಡನೆ ಬಗ್ಗೆ ಚರ್ಚೆಯಾಗಬೇಕಾಗಿರುವುದು ಯಾವ ಮರಣದಂಡನೆಯೂ ನಡೆಯದ ಸಂದರ್ಭದಲ್ಲಿ ಈಗಲ್ಲ ಅಲ್ಲವೇ?

ಕೊಂಚ ದೀರ್ಘವಾಗಿರುವ ಲೇಖನವನ್ನು ಕೊನೆಯವರೆಗೂ ಓದಿರುವಿರಾದರೆ ಧನ್ಯವಾದ. ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಜುಲೈ 31, 2015

ಏರಿಳಿದ ಕನ್ನಡ ಮಾಧ್ಯಮ ಲೋಕ.

ವಿಜಯ್ ಗ್ರೋವರ್, ತೆಹೆಲ್ಕಾ.
ಮೂವತ್ತನಾಲ್ಕು ವರುಷದ ಸುನಿಲ್ ಶಿರಸಂಗಿ ಒರ್ವ ಪತ್ರಕರ್ತ. ಕಳೆದ ಕೆಲವು ತಿಂಗಳುಗಳಿಂದ ಕಾರ್ಮಿಕ ನ್ಯಾಯಾಲಯ ಮತ್ತು ಕಾರ್ಮಿಕ ಅಧಿಕಾರಿಯ ಕಛೇರಿಗೆ ಅಲೆಯುತ್ತಲೇ ಸುಸ್ತಾಗಿ ಹೋಗಿದ್ದಾನೆ. ಐದು ವರುಷಗಳ ಹಿಂದೆ ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ಸುನಿಲ್ ಹೊರಳಿಕೊಂಡಾಗ ಈ ರೀತಿಯ ದಿನಮಾನಗಳನ್ನು ನೋಡಬೇಕಾಗಬಹುದೆಂದು ಊಹಿಸಿರಲಿಲ್ಲ. ಸುನಿಲ್ ತನ್ನೊಬ್ಬನ ಹಕ್ಕಿಗಾಗಿ ನ್ಯಾಯಾಲಯಕ್ಕೆ ಅಲೆಯುತ್ತಿಲ್ಲ, ಜನಶ್ರೀ ವಾಹಿನಿಯಲ್ಲಿ ತನ್ನೊಡನೆ ಕೆಲಸ ಹಂಚಿಕೊಳ್ಳುತ್ತಿದ್ದ ಅರವತ್ತು ಸಹೋದ್ಯೋಗಿಗಳಿಗಾಗಿ ಹೋರಾಡುತ್ತಿದ್ದಾನೆ.

ಸರಿಯಾಗಿ ಸಂಬಳ ಸಿಗುತ್ತಿಲ್ಲವೆಂದು ವಾಹಿನಿಯ ಮಾಲೀಕರ ಬಳಿ ಕೇಳಿದ್ದೇ ಸುನಿಲ್ ಮತ್ತವರ ಸಹೋದ್ಯೋಗಿಗಳ ಕೆಲಸಕ್ಕೆ ಎರವಾಯಿತು. ಸುನಿಲ್ ನೆನಪಿಸಿಕೊಳ್ಳುವಂತೆ ಡಿಸೆಂಬರ್ 2014ರ ಒಂದು ದುರ್ದಿನ ಅರವತ್ತೈದು ಜನರನ್ನು ಕಛೇರಿಯ ಒಳಗಡೆ ಕಾಲಿಡಲು ಬಿಡಲಿಲ್ಲ. “ಕೆಲಸ ನಿರ್ವಹಿಸಿದ್ದಕ್ಕೆ ಸಂಬಳ ಕೊಡಿ ಎಂಬುದಷ್ಟೇ ನಮ್ಮ ಬೇಡಿಕೆಯಾಗಿತ್ತು. ಗುಂಪಾಗಿ ಹೋಗಿ ಸಂಬಳ ಕೇಳಿದ್ದು ಮಾಲೀಕರ ತಂಡಕ್ಕೆ ಮೆಚ್ಚುಗೆಯಾಗಲಿಲ್ಲವಂತೆ” ಎನ್ನುತ್ತಾರೆ ಸುನಿಲ್.

ಏಳು ತಿಂಗಳ ನಂತರ ಕಾರ್ಮಿಕ ನ್ಯಾಯಾಲಯದಲ್ಲಿ ನೌಕರರ ಪರ ತೀರ್ಪು ಬರುವ ಸಂಭವ ಹೆಚ್ಚಿದೆ. ಬಾಕಿ ಇರುವ ಸಂಬಳವನ್ನು ನೀಡುವಂತೆ ನ್ಯಾಯಾಲಯ ಆದೇಶಿಸುವುದೆಂಬ ಆಶಯದಲ್ಲಿರುವ ಅರವತ್ತು ಜನ ಪತ್ರಕರ್ತರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ.

“ನ್ಯಾಯಕ್ಕಾಗಿ ಸವೆಸಿದ ಹಾದಿ ಕಠಿಣವಾಗಿತ್ತು. ಜೀವನ ಕಷ್ಟಕರವಾಗಿತ್ತು. ಏಳು ತಿಂಗಳು ಸಂಬಳವಿಲ್ಲದೆ ಮನೆ ಕಟ್ಟಲು ತೆಗೆದುಕೊಂಡ ಸಾಲ ತೀರಿಸಲು ಸಾಧ್ಯವಾಗಿಲ್ಲ; ಕಷ್ಟಗಳು ಹೆಂಡತಿಯ ಒಡವೆಗಳನ್ನು ಒತ್ತೆ ಇಡುವಂತೆ ಮಾಡಿಬಿಟ್ಟವು” ಹೆಸರು ಹೇಳಲಿಚ್ಛಿಸದ ದೃಶ್ಯ ವಾಹಿನಿಯ ಪತ್ರಕರ್ತರೊಬ್ಬರ ದುಗುಡವಿದು.

ಈ ರೀತಿಯ ದುರ್ವಿಧಿ ಜನಶ್ರೀ ವಾಹಿನಿಯಲ್ಲಿ ಕೆಲಸ ಮಾಡಿದ ಅರವತ್ತೂ ಚಿಲ್ಲರೆ ಪತ್ರಕರ್ತರದ್ದು ಮಾತ್ರವಲ್ಲ. ಕರ್ನಾಟಕದಾದ್ಯಂತ ನೂರೈವತ್ತಕ್ಕೂ ಹೆಚ್ಚು ದೃಶ್ಯ ವಾಹಿನಿ ಪತ್ರಕರ್ತರು ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಅನೇಕ ಕನ್ನಡ ವಾಹಿನಿಗಳ ಆರ್ಥಿಕ ಸ್ಥಿತಿ ದಯನೀಯವಾಗುತ್ತಿರುವುದು ಸಿಲಿಕಾನ್ ವ್ಯಾಲಿಯೆಂದೇ ಹೆಸರಾದ ಬೆಂಗಳೂರಿನ ಅನೇಕ ಪತ್ರಕರ್ತರ ಜೀವನವನ್ನು ದುರ್ಬರವಾಗಿಸಿದೆ; ಸಿಲಿಕಾನ್ ಸಿಟಿ ಏಷ್ಯಾದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಅಂಶ ಈ ಪತ್ರಕರ್ತರಿಗೆ ಅಪಹಾಸ್ಯದಂತೆ ಕಂಡರೆ ಅಚ್ಚರಿಯಿಲ್ಲ!

2007ರಲ್ಲಿ ಕನ್ನಡ ದೃಶ್ಯ ವಾಹಿನಿಗಳಲ್ಲಿದ್ದ ಉತ್ಸಾಹದ ಬೆಳವಣಿಗೆಗೆ ತದ್ವಿರುದ್ಧವಾದ ಪರಿಸ್ಥಿತಿಯನ್ನು ಇಂದು ಕಾಣುತ್ತಿದ್ದೇವೆ.

2007ರಲ್ಲಿ ಜೆಡಿಎಸ್ಸಿನ ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿಯ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಕರ್ನಾಟಕ ‘ಸುದ್ದಿಗ್ರಸ್ಥ’ ರಾಜ್ಯವಾಗಿ ಹೆಸರು ಮಾಡಿತು. ಇಪ್ಪತ್ತಿಪ್ಪತ್ತು ತಿಂಗಳ ಅಧಿಕಾರ ಹಂಚಿಕೆ, ತಂದೆಯ ಮಾತು ಕೇಳಿ ವಚನಭ್ರಷ್ಟರಾದ ಕುಮಾರಸ್ವಾಮಿ, ದಿನಕ್ಕತ್ತು ಸುದ್ದಿ ಕೊಡುತ್ತಿದ್ದ ಯಡಿಯೂರಪ್ಪನವರ ಆಡಳಿತಾವಧಿ, ಬಿಜೆಪಿಯ ಆಂತರಿಕ ಕಚ್ಚಾಟದಿಂದ ಮುಖ್ಯಮಂತ್ರಿಗಳು ಬದಲಾಗಿದ್ದು, ಬಳ್ಳಾರಿಯ ರೆಡ್ಡಿ ಸಹೋದರರ ಅನ್ಯಾಯದ ಗಣಿಗಾರಿಕೆ, ಆಗ ಲೋಕಾಯುಕ್ತದ ನ್ಯಾಯಮೂರ್ತಿಯಾಗಿದ್ದ ಸಂತೋಷ್ ಹೆಗ್ಡೆ ಗಣಿ ಮಾಫಿಯಾದ ವಿರುದ್ಧ ಅಂಜದೆ ಕಾರ್ಯನಿರ್ವಹಿಸಿದ್ದೆಲ್ಲವೂ ಕರ್ನಾಟಕದ ಪತ್ರಕರ್ತರಿಗೆ ಮತ್ತು ವೀಕ್ಷಕರಿಗೆ ಬಿಡುವನ್ನೇ ನೀಡಿರಲಿಲ್ಲ.

ಕನ್ನಡದ ಮಾಧ್ಯಮದ ದೃಷ್ಟಿಯಿಂದ 2007ರಿಂದ 2013ರವರೆಗೆ ಸುವರ್ಣ ಸಮಯ ನಡೆಯುತ್ತಿತ್ತು. ಬರೋಬ್ಬರಿ ಆರು ಹೊಸ ಕನ್ನಡ ಸುದ್ದಿವಾಹಿನಿಗಳು ಶುರುವಾಯಿತು. ಉದ್ದಿಮೆದಾರರು, ರಾಜಕಾರಣಿಗಳು ಕೋಟಿ ಕೋಟಿ ರುಪಾಯಿಯನ್ನು ದೃಶ್ಯ ಮಾಧ್ಯಮವೆಂಬ ಉದ್ದಿಮೆಗೆ ಸುರಿದರು. 2007ರಲ್ಲಿ ಆಂಧ್ರ ಮೂಲದ ಟಿವಿ 9 ಕನ್ನಡದಲ್ಲಿ ವಾಹಿನಿ ಪ್ರಾರಂಭಿಸಿದ ನಂತರ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸುವರ್ಣ ವಾಹಿನಿಯನ್ನು ಹುಟ್ಟು ಹಾಕಿದರು. ರೆಡ್ಡಿ ಸಹೋದರರು ಜನಶ್ರೀ ವಾಹಿನಿಯನ್ನು ಪ್ರಾರಂಭಿಸಿದರೆ ಜಾರಕಿಹೊಳಿ ಕುಟುಂಬ ಸಮಯ ವಾಹಿನಿಯನ್ನು ಶುರುಮಾಡಿದರು.

ಕಡಿಮೆ ಸಮಯದಲ್ಲಿ ಹೆಚ್ಚೆಚ್ಚು ವಾಹಿನಿಗಳು ಪ್ರಾರಂಭಗೊಂಡಿದ್ದೇ ತಡ, ದೃಶ್ಯ ಮಾಧ್ಯಮದಲ್ಲಿ ಅನುಭವ ಇದ್ದವರು, ಇಲ್ಲದವರಿಗೆಲ್ಲ ಅಲ್ಲಿಯವರೆಗೆ ಪತ್ರಿಕೋದ್ಯಮ ಕಂಡು ಕೇಳರಿಯದ ರೀತಿಯಲ್ಲಿ ಅವಕಾಶಗಳು ಸಿಗಲಾರಂಭಿಸಿತು. ಬೇಕಾಬಿಟ್ಟಿ ನೇಮಕಗಳಿಂದ, ತರಬೇತಿಯ ಕೊರತೆಯಿಂದ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಾರ್ತೆ, ಕಾರ್ಯಕ್ರಮಗಳ ಗುಣಮಟ್ಟ ಹೇಳಿಕೊಳ್ಳುವಂತಿರಲಿಲ್ಲ. ರಾಜಕೀಯ ನಾಟಕಗಳು ಪರಾಕಾಷ್ಟೆಯಲ್ಲಿದ್ದ ಸುದ್ದಿ ಹಸಿವಿನ ರಾಜ್ಯ ಇದಾವುದನ್ನೂ ಲೆಕ್ಕಕ್ಕಿಟ್ಟುಕೊಳ್ಳಲಿಲ್ಲ. ಮಾಧ್ಯಮಕ್ಕೆ ಹಣ ಹರಿಯುತ್ತಲೇ ಇತ್ತು, 2013ರ ವಿಧಾನಸಭಾ ಚುನಾವಣೆಯವರೆಗೆ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಾಜಕೀಯದ ನಾಟಕಗಳು ಪರದೆಯ ಹಿಂದೆ ಸರಿದವು. ರಾಜಕಾರಣಿಗಳ ನಾಟಕಾಭಿನಯ ಕಡಿಮೆಯಾಗುತ್ತಿದ್ದಂತೆ ಸುದ್ದಿ ವಾಹಿನಿಗಳೆಡೆಗೆ ಜನರಿಗಿದ್ದ ಆಸಕ್ತಿಯೂ ಕಡಿಮೆಯಾಯಿತು. ಕುಸಿಯುತ್ತಿದ್ದ ಆದಾಯ, ಟಿ.ಆರ್.ಪಿ ಅನೇಕ ವಾಹಿನಿಗಳ ಅಸ್ತಿತ್ವಕ್ಕೇ ಸಂಚಕಾರ ತಂದಿತು.

ಸಮಯ ವಾಹಿನಿ ಮಾಲೀಕತ್ವದಲ್ಲಿ ಎರಡಕ್ಕೂ ಹೆಚ್ಚು ಬಾರಿ ಬದಲಾವಣೆಗಳಾಗಿದ್ದರೆ, ಜನಶ್ರೀ ತನ್ನನ್ನು ಉಳಿಸಿಕೊಳ್ಳಬಲ್ಲ ಹಣವಂತರಿಗಾಗಿ ಕಾಯುತ್ತಿದೆ. ಸುವರ್ಣ ಮತ್ತು ಪಬ್ಲಿಕ್ ಟಿವಿ ಏದುಸಿರುಬಿಡುತ್ತಾ ವೆಚ್ಚಗಳನ್ನು ಕಡಿಮೆ ಮಾಡುವುದರತ್ತ ಗಮನಹರಿಸುತ್ತಿವೆ. ಇವುಗಳ ನಡುವೆ ಕನ್ನಡದ ಅತ್ಯಂತ ಹಳೆಯ ಸುದ್ದಿ ವಾಹಿನಿಯಾದ ಉದಯ ನ್ಯೂಸ್ ಕನಿಷ್ಟ ಬಂಡವಾಳ ಮತ್ತು ಕಡಿಮೆ ಉದ್ಯೋಗಿಗಳ ಕಾರಣದಿಂದಾಗಿ ಇನ್ನೂ ಉಳಿದುಕೊಂಡಿದೆ.

ಕಳೆದ ಕೆಲವು ತಿಂಗಳುಗಳಿಂದ ಮತ್ತೆ ಎರಡು ಹೊಸ ಕನ್ನಡ ಸುದ್ದಿ ವಾಹಿನಿಗಳು ಪ್ರಾರಂಭವಾಗಿವೆಯಾದರೂ ವೀಕ್ಷಕರ ಮೇಲಿನ್ನೂ ಪರಿಣಾಮ ಬೀರಲಾಗಿಲ್ಲ. ಈ ಎರಡೂ ವಾಹಿನಿಗಳಿಗೆ ರಿಯಲ್ ಎಸ್ಟೇಟಿನ ಹಣ ಹರಿದು ಬರುತ್ತಿದೆಯಾದರೂ ಅವುಗಳ ಗೆಲುವು ಸುಲಭವಲ್ಲ. “ತಮ್ಮ ರಾಜಕೀಯ ಮತ್ತು ಸಾಮಾಜಿಕ ಅಂತಸ್ತು ಹೆಚ್ಚಿಸುವಲ್ಲಿ ವಾಹಿನಿಗಳು ಸಹಾಯ ಮಾಡುತ್ತವೆ ಎನ್ನುವ ನಂಬುಗೆಯಿಂದ ಅನೇಕ ಬಂಡವಾಳಗಾರರು ಸುದ್ದಿವಾಹಿನಿಯಲ್ಲಿ ಹಣ ತೊಡಗಿಸುತ್ತಾರೆ. ಕೆಲವು ಸಮಯದ ನಂತರ ಸುದ್ದಿ ವಾಹಿನಿಯೆಂಬುದು 24 x 7 ದುಡ್ಡು ಸೆಳೆಯುವ ಸುಳಿಯೆಂದು ಅರಿವಾಗುತ್ತದೆ; ಬರುವ ಆದಾಯ ತುಂಬಾನೇ ಕಡಿಮೆ ಎಂದು ಅರಿತುಕೊಳ್ಳುತ್ತಾರೆ” ಎನ್ನುತ್ತಾರೆ ಮ್ಯಾನೇಜ್ ಮೆಂಟ್ ಕನ್ಸಲ್ಟೆಂಟ್ ನಜರ್ ಅಲಿ.

ಬಂಡವಾಳ ಹಾಕುವವರು ದೂರ ಸರಿಯುತ್ತ, ದೃಶ್ಯ ವಾಹಿನಿಗಳ ಬೆಳವಣಿಗೆಯೂ ಕುಂಠಿತಗೊಂಡಿರುವ ಸಂಗತಿ ಇನ್ನೂರೈವತ್ತು ಪತ್ರಕರ್ತರಿಗೆ ಎಷ್ಟು ತಲೆಬೇನೆ ತರುತ್ತಿದೆಯೋ 29 ಪತ್ರಿಕೋದ್ಯಮ ಕಾಲೇಜುಗಳಿಂದ ಪ್ರತೀ ವರುಷ ಹೊರಬರುವ ಏಳುನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೂ ಭವಿಷ್ಯದ ಭೀತಿ ಹುಟ್ಟಿಸುತ್ತಿದೆ. ಕನ್ನಡ ಸುದ್ದಿ ವಾಹಿನಿಗಳಿಗೆ ಮತ್ತೆ ಒಳ್ಳೆಯ ದಿನಗಳು ಬರುವವರೆಗೆ ಈ ಪ್ರತಿಭಾವಂತ ವಿದ್ಯಾರ್ಥಿಗಳು ಈಗಿನ ಸಂದರ್ಭದಲ್ಲಿ ಸಿಗುವ ಕೆಲವೇ ಕೆಲವು ಅವಕಾಶಗಳಿಗೆ ಬಡಿದಾಡಲೇಬೇಕಾಗಿದೆ.
ಕನ್ನಡಕ್ಕೆ: ಡಾ.ಅಶೋಕ್.ಕೆ.ಆರ್.

ಜುಲೈ 29, 2015

ಸಂಕಟದ ಸ್ವಾತಂತ್ರ್ಯ

Dr Ashok K R
ಕಾರಣವೇನೋ ಗೊತ್ತಿಲ್ಲ Freedom at Midnight ಪುಸ್ತಕ ನೆಹರೂ ಬರೆದ ಪುಸ್ತಕವೆಂದೇ ವರುಷಗಳಿಂದ ನಂಬಿದ್ದೆ. ಆಂಗ್ಲ ಪುಸ್ತಕವನ್ನು ‘ನಡುರಾತ್ರಿಯಲ್ಲಿ ಸ್ವಾತಂತ್ರ್ಯ’ದ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿರುವ ಎಚ್.ಆರ್.ಚಂದ್ರವದನ ರಾವರ ಪುಸ್ತಕವನ್ನು ಕೈಗೆತ್ತಿಕೊಂಡಾಗಲೇ ಅರಿವಾಗಿದ್ದು Freedom at Midnight ಬರೆದವರು ಎಲ್.ಕಾಲಿನ್ಸ್ ಮತ್ತು ಡಿ.ಲ್ಯಾಪೈರ್ ಎಂದು! ಇದು ಅನುವಾದದ ಪುಸ್ತಕವೆಂದು ತಿಳಿಯದಷ್ಟು ಸಶಕ್ತವಾಗಿದೆ. ಭಾರತದ ಸ್ವಾತಂತ್ರ್ಯದ ಮತ್ತು ವಿಭಜನೆಯ ಹಿಂದು ಮುಂದಿನ ಘಟನೆಗಳ ಪುಸ್ತಕವಿದು.

ಪುಸ್ತಕ ಪ್ರಾರಂಭವಾಗುವುದು ಇಂಗ್ಲೆಂಡಿನಲ್ಲಿ ಭಾರತಕ್ಕೆ ಹೊಸ ವೈಸ್ ರಾಯ್ ಆಗಿ ಮೌಂಟ್ ಬ್ಯಾಟನ್ ನೇಮಕವಾಗುವುದರೊಂದಿಗೆ. ಇಂಗ್ಲೆಂಡಿನವರ ಮನದಲ್ಲಿ ಅತಿ ದೊಡ್ಡ ದೇಶವಾದ ಭಾರತದ ವೈಸ್ ರಾಯ್ ಆಗುವುದೆಂದರೆ ಹೆಮ್ಮೆಯ, ಸಂತಸದ ಸಂಗತಿ. ಮೌಂಟ್ ಬ್ಯಾಟನ್ನಿನಲ್ಲಿ ಆ ಸಂಭ್ರಮವಿಲ್ಲ. ಕಾರಣ ಆತ ನಿಯತಿಗೊಂಡಿರುವುದು ಭಾರತವನ್ನು ಮತ್ತಷ್ಟು ವರುಷಗಳ ಕಾಲ ಆಳುವುದಕ್ಕಾಗಲ್ಲ; ಭಾರತವನ್ನು ಸ್ವತಂತ್ರಗೊಳಿಸಿ ಬ್ರಿಟೀಷ್ ಸಾಮ್ರಾಜ್ಯವನ್ನು ಕೊನೆ ಮಾಡಲು. ಬ್ರಿಟೀಷರ ಒಡೆದು ಆಳುವ ನೀತಿಯ ಕಾರಣದಿಂದಾಗಿ ಭಾರತವೆಂಬುದು ಒಂದೇ ದೇಶವಾಗಿ ಉಳಿಯುವ ಸಾಧ್ಯತೆಗಳು ಕ್ಷೀಣವಾಗಿತ್ತು. ಮುಸ್ಲಿಂ ನಾಯಕತ್ವ ಪ್ರತ್ಯೇಕ ದೇಶಕ್ಕಾಗಿ ಪಟ್ಟು ಹಿಡಿದರೆ ಮೊದಮೊದಲಿಗೆ ವಿಭಜನೆಯನ್ನು ಒಪ್ಪದ ಕಾಂಗ್ರೆಸ್ಸಿಗರು ಅನಿವಾರ್ಯವಾಗಿ ಒಪ್ಪಿಬಿಟ್ಟರು, ಒಬ್ಬ ಗಾಂಧಿಯ ಹೊರತಾಗಿ.

ಬೂಟಾಸಿಂಗನೆಂಬ ಅಮರ ಪ್ರೇಮಿ

ನಡುರಾತ್ರಿಯಲ್ಲಿ ಸ್ವಾತಂತ್ರ್ಯದಲ್ಲಿ ರಾಜಕೀಯ ನಾಟಕಗಳು, ಗಾಂಧಿ, ಜಿನ್ನಾ, ನೆಹರೂ, ಸರ್ದಾರ್ ಪಟೇಲರ ವ್ಯಕ್ತಿ ಚಿತ್ರಣಗಳು, ಸ್ವಲ್ಪ ಹೆಚ್ಚೇ ಎನ್ನಿಸುವಂತಹ ಮೌಂಟ್ ಬ್ಯಾಟನ್ ಮತ್ತಾತನ ಪತ್ನಿಯ ಹೊಗಳಿಕೆ, ರಾಜ ಮಹಾರಾಜರ ಚಿತ್ರ ವಿಚಿತ್ರವೆನ್ನಿಸುವ ಅಭ್ಯಾಸಗಳೆಲ್ಲವೂ ದಾಖಲಾಗಿವೆ. ರಾಂಪುರದ ನವಾಬ ವರುಷಕ್ಕಿಷ್ಟು ಕನ್ಯೆಯ ಕನ್ಯಾಪೊರೆ ಕಳಚುತ್ತೇನೆ ಎಂದು ಪಂದ್ಯ ಕಟ್ಟುತ್ತಿದ್ದನಂತೆ, ಕಾಶ್ಮೀರದ ಮಹಾರಾಜ ಹರಿಸಿಂಗ್ ಲಂಡನ್ನಿನ ಸ್ತ್ರೀ ಸಹವಾಸದಿಂದ ಬೊಕ್ಕಸದ ಹಣ ಖಾಲಿ ಮಾಡಿದನಂತೆ, ಮಾತು ಕೇಳದ ಕುದುರೆಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದು ಆಳ್ವರ್ ಮಹಾರಾ….. ಇಂತಹ ರಾಜಮಹಾರಾಜರಿದ್ದ ಭಾರತವನ್ನು ಕೆಲವು ಸಾವಿರ ಸಂಖೈಯ ಬ್ರಿಟೀಷರು ಶತಮಾನಗಳ ಕಾಲ ತಮ್ಮ ಅಧೀನದಲ್ಲಿ ಇಟ್ಟುಕೊಂಡಿದ್ದು ಅಚ್ಚರಿ ಪಡಬೇಕಾದ ವಿಷಯವೇನಲ್ಲ.

ಸ್ವಾತಂತ್ರ್ಯಕ್ಕೆ ಮುನ್ನವೇ ಉತ್ತರ ಭಾರತದಲ್ಲಿ ಹಿಂದೂ – ಮುಸ್ಲಿಂ ಕೋಮುದಳ್ಳುರಿ ಹಬ್ಬಲಾರಂಭಿಸಿತ್ತು. ಕಲ್ಕತ್ತಾದ ಕೋಮುಗಲಭೆಯನ್ನು ಶಮನಗೊಳಿಸಲು ಗಾಂಧಿ ಬರಬೇಕಾಯಿತು. ಗಾಂಧೀಜಿಯವರ ವ್ಯಕ್ತಿತ್ವದ ದಿಗ್ದರ್ಶನವಾಗುವುದು ಇಂತಹ ಸಂದರ್ಭದಲ್ಲೇ. ಯಾರಿಂದಲೂ ನಿಯಂತ್ರಿಸಲಾಗದು ಎನ್ನಿಸುವ ಸನ್ನಿವೇಶಗಳಲ್ಲೂ ತಮ್ಮ ಅಹಿಂಸೆಯ ತತ್ವದಿಂದಲೇ ನಿಯಂತ್ರಿಸಿಬಿಡುವ, ಜನರ ಮನಃಪರಿವರ್ತನೆ ಮಾಡುವ ಮತ್ತೊಬ್ಬ ನಾಯಕನನ್ನು ಕಾಣುವುದು ಕಷ್ಟ. ನಡುರಾತ್ರಿಯಲ್ಲಿ ಸ್ವಾತಂತ್ರ್ಯ ಪುಸ್ತಕ ಗಾಂಧೀಜಿಯವರ ಹುಳುಕುಗಳನ್ನು ತೋರಿಸುತ್ತದೆ, ಹಿರಿಮೆಯನ್ನೂ ಚಿತ್ರಿಸುತ್ತದೆ. ಈ ಪುಸ್ತಕ ಓದಿದ ನಂತರ ಗಾಂಧಿಯನ್ನು ಮತ್ತಷ್ಟು ಪ್ರೀತಿಸಲು ಕಾರಣ ಸಿಗುತ್ತದೆ, ಮಗದಷ್ಟು ದ್ವೇಷಿಸಲೂ ನೆಪಗಳು ಸಿಗುತ್ತವೆ!

ವಿಭಜನೆಯೇ ಕೊನೆಯ ತೀರ್ಮಾನವಾದ ನಂತರ ಅದು ಶಾಂತಿಯುತವಾಗಿ ನಡೆಯಬೇಕಿತ್ತು. ಆದರೆ ಗಡಿಯ ಭಾಗದಲ್ಲಿ ನಡೆದಿದ್ದು ಹಿಂಸೆ ಹಿಂಸೆ ಮತ್ತು ಹಿಂಸೆ. ರೈಲುಗಳು ನಿರಾಶ್ರಿತರ ದುಃಖ ದುಮ್ಮಾನಗಳನ್ನು ಹೊತ್ತು ತರುತ್ತಿದ್ದಂತೆ ಗಡಿಯಿಂದ ದೂರವಿದ್ದ ಪಟ್ಟಣಗಳಲ್ಲೂ ಹಿಂಸೆ ತಾಂಡವವಾಡತೊಡಗಿತು. ನಿರಾಶ್ರಿತರ ಶಿಬಿರದಲ್ಲಿ ಸಂಬಂಧಿಕರನ್ನು ಕಳೆದುಕೊಂಡವರ ನಡುವೆ ನಿಂತು ಅಹಿಂಸಾಧರ್ಮದ ಬಗ್ಗೆ ತಿಳಿಹೇಳುವ ಆತ್ಮಸ್ಥೈರ್ಯ ಗಾಂಧೀಜಿಗಷ್ಟೇ ಇರಲು ಸಾಧ್ಯ. ನಿರಾಶ್ರಿತರ, ದೇಶವಾಸಿಗಳ ಟೀಕಾಸ್ತ್ರಗಳು ಅವರ ಸತ್ಯವನ್ನು ಮಾರ್ಪಡಿಸಲಿಲ್ಲ.

ವಿಭಜನೆಯ ಸಮಯದಲ್ಲಿ ಮನುಷ್ಯರೆಂಬುದನ್ನೇ ಮರೆತು ವರ್ತಿಸಿದ ಜನರ ನಡುವೆ ಪ್ರಾಣದ ಹಂಗು ತೊರೆದು ಅನ್ಯಧರ್ಮದವರನ್ನು ಕಾಪಾಡಿದವರ ಕಥೆಯಿದೆ. ಅಂತಹವರ ಸಂಖೈ ಕಡಿಮೆಯಿತ್ತಷ್ಟೇ. ಹುಟ್ಟುತ್ತಲೇ ಭಾರತದ ಮೇಲೆ ದ್ವೇಷ ಸಾಧಿಸಲಾರಂಭಿಸಿದ ಪಾಕಿಸ್ತಾನದ ಕುತಂತ್ರಗಳು, ಇಸ್ಲಾಂ ಮೂಲಭೂತವಾದಿಗಳ ಮತಿಗೇಡಿತನ ಇಂದಿಗೂ ಕೊನೆಗೊಂಡಿಲ್ಲ. ಹಿಂದೂ ಮೂಲಭೂತವಾದಿಗಳು ಜಿನ್ನಾನನ್ನು ಕೊಲ್ಲಲು ಪಾಕಿಸ್ತಾನಕ್ಕೆ ತೆರಳಿ ಕಾರ್ಯ ಸಫಲವಾಗದೇ ವಾಪಸ್ಸಾಗುವ ಘಟನೆಯ ವಿವರಗಳಿವೆ. ಕೊನಗೆ ಅದೇ ಮೂಲಭೂತವಾದಿ ಮನಸ್ಸುಗಳು ಗಾಂಧಿಯನ್ನು ಹತ್ಯೆಗೈಯ್ಯಲು ನಡೆಸಿದ ಸಿದ್ಧತೆಯ ವಿವರಗಳೆಲ್ಲವೂ ಪುಸ್ತಕದಲ್ಲಿದೆ. ಗಾಂಧಿ ಸತ್ತು ಅರವತ್ತೇಳು ವರುಷಗಳಾಗುವಷ್ಟರಲ್ಲಿ ಗಾಂಧಿ ಹಂತಕರನ್ನೇ ಪೂಜಿಸುವ ಹಂತಕ್ಕೆ ನಾವು ತಲುಪಿದ್ದೇವೆ! ವಿಭಜನೆಯ ಸಮಯದ ಘಟನೆಗಳನ್ನು ಮನಕಲುಕುವಂತಹ, ಚಿಂತನೆಗೆ ಹಚ್ಚುವಂತಹ, ಅಳಿದುಳಿದ ಮಾನವೀಯತೆಯನ್ನು ಬಡಿದೆಬ್ಬಿಸುವಂತಹ ಕತೆಯ ರೂಪದಲ್ಲಿ ಬರೆದಿದ್ದು ಸದತ್ ಹಸನ್ ಮಾಂಟೋ. ಅಷ್ಟೇ ಸಶಕ್ತವಾಗಿ ನಡುರಾತ್ರಿಯಲ್ಲಿ ಸ್ವಾತಂತ್ರ್ಯ ಪುಸ್ತಕ ವಿಭಜನೆಯ ನೋವುಗಳನ್ನು ನಮಗೆ ದಾಟಿಸುತ್ತದೆ. ಪುಸ್ತಕ ಓದಿ ಮುಗಿಸುವಾಗ ಸ್ವತಂತ್ರಗೊಂಡ ಭಾರತದ ಸಂಭ್ರಮದ ನೆನಪಿಗಿಂತ ಸಂಕಟಗಳೇ ಕಾಡುತ್ತವೆ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿ ಹದಿನಾಲ್ಕರ ಮಧ್ಯರಾತ್ರಿ ಯಾವುದೇ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿರಲಿಲ್ಲವಂತೆ. ಸಂಕಟದ ಸ್ವಾತಂತ್ರ್ಯದಲ್ಲಿ ಸಂಭ್ರಮವೆಲ್ಲಿ?

ಭೂಮಿಗೀತ ತಂಡದ ಹಾಡುಗಳು.

ಜುಲೈ 25 2015ರಂದು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ 'ಪತ್ರಕರ್ತರ ಅಧ್ಯಯನ ಕೇಂದ್ರ' ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಭೂಮಿಗೀತ ತಂಡದ ಹಾಡುಗಳು






ಜುಲೈ 27, 2015

ಲಕ್ಷ್ಮಣ್ ಹೂಗಾರ್ ಮಾತುಗಳು.

ಜುಲೈ 25 2015ರಂದು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ 'ಪತ್ರಕರ್ತರ ಅಧ್ಯಯನ ಕೇಂದ್ರ' ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಲಕ್ಷ್ಮಣ್ ಹೂಗಾರ್ ಮಾತುಗಳು.


ಎಂ.ಎಸ್.ಆಶಾದೇವಿಯವರ ಮಾತುಗಳು.

ಜುಲೈ 25 2015ರಂದು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ 'ಪತ್ರಕರ್ತರ ಅಧ್ಯಯನ ಕೇಂದ್ರ' ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಎಂ.ಎಸ್.ಆಶಾದೇವಿಯವರ ಮಾತುಗಳು.

ಕೋಟಗಾನಹಳ್ಳಿ ರಾಮಯ್ಯನವರ ಮಾತುಗಳು.

ಜುಲೈ 25 2015ರಂದು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ 'ಪತ್ರಕರ್ತರ ಅಧ್ಯಯನ ಕೇಂದ್ರ' ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಕೋಟಗಾನಹಳ್ಳಿ ರಾಮಯ್ಯನವರ ಮಾತುಗಳು.

ಜುಲೈ 24, 2015

ಪತ್ರಕರ್ತರ ಅಧ್ಯಯನ ಕೇಂದ್ರದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ.

ಇದೇ ಜುಲೈ 25 2015ರಂದು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ವಿವರಗಳನ್ನು ಕೆಳಗಿನ ಪಟಗಳಲ್ಲಿ ನೀಡಲಾಗಿದೆ.



ಜುಲೈ 21, 2015

Learn Photography in Facebook!

Ashok K R
With the advent of Digital SLR's 'photography' became much cheaper when compared to the good old 'film' photography days. The competition between the makers made entry level equipment affordable. Social platforms like facebook, flickr, 500px provided opportunity for the photographers to publicize and share their work with friends and general public. Now in facebook you can see even a novice who has still not understood the basics of photography starting a “XYZ Photography” page! There are many professionals with their “Photography” page where they put their best photos, which can help amateurs to understand the basics. If not all most of these pages restrict themselves to exhibit their best pictures and the photographers use these pages as advertisement for their workshops, lectures. Very few of them share their knowledge of photography, technicality involved in the image making, post processing, equipment in free platforms like facebook. And still very few of them will reply to the questions asked by the viewers. Most commonly the photographers response to the questions of the viewers is to just like that without replying! 

Here is a photography page with a difference. “Sudhir Shivaram Nature and Wildlife Photography” page gives a rare opportunity for the viewers to enjoy the beauty of photography and at the same time it teaches a lot many things of photography! Sudhir Shivaram conducts various workshops, lectures, phototour workshops. Sudhir could have easily restricted his photography page to publicize his photos to get more and more people for workshops. But surprisingly he shares each and every detail of the photography technique in almost all the photos that he regularly adds to the page. He replies to most of the questions asked by the viewers, silly to serious! I have not attended his workshop because by the time I liked his page I was aware of some of the basics of photography, thanks to my photography friends Akshara Raxidi, Pramod Pailoor, Vinyasa Ubaradka and various websites. 

Just a year back Sudhir Shivaram’s photography page had less likes. Now it is increased to a hopping 9,37,000! Recently he has given a rare opportunity for those who can’t afford his workshops to learn the basics of photography from the comfort of home in facebook. Sudhir Shivaram has beautifully rearranged all his photographs under various subheadings. Just go to his photography page, click photos – albums, you will appreciate the different topics shown in the images below. 

You can learn most of the basic things from those posts and enjoy the images of Sudhir Shivaram. Have a question? Just search his other posts as he has covered most of the topics related to photography. Didn’t find an answer? Ask him and chances of getting an answer is 100%!

Disclaimer: I don’t know him personally, and this post is not to promote his paid workshops (though I recommend a novice who wants to be professional photographer to join his workshop!). I admire his work and more than that as a teacher I admire his way of teaching photography.

ಜುಲೈ 20, 2015

ವ್ಯಾಪಕ ವ್ಯಾಪಂ

vyapam scam
Ashok K R
ಭಾರತದಲ್ಲಿ ಹಗರಣಗಳೇನೂ ಹೊಸದಲ್ಲ. ವರುಷಕ್ಕೊಂದೂ ದೊಡ್ಡ ಹಗರಣಗಳಿಲ್ಲದೇ ಹೋಗುವುದು ಅಪರೂಪ. ಹಾಗೆ ನೋಡಿದರೆ 2014ರಲ್ಲಿ ಹಗರಣಗಳ ಸಂಖೈ ಒಂದಷ್ಟು ಕಡಿಮೆಯಿತ್ತು. 2015 ಅರ್ಧ ಮುಗಿಯುತ್ತಿದ್ದಂತೆಯೇ ಹಗರಣಗಳ ಮೇಲೆ ಹಗರಣಗಳು ಕೇಂದ್ರದಲ್ಲಿ, ರಾಜ್ಯದಲ್ಲಿ ಹೊರಬರುತ್ತಿವೆ. ಹಾಸಿಗೆ ದಿಂಬು ಖರೀದಿ ಹಗರಣ ರಾಜ್ಯದಲ್ಲಿ ಒಂದಷ್ಟು ಸದ್ದು ಮಾಡಿದರೆ, ಹೆಚ್ಚು ಸುದ್ದಿ ಮಾಡುತ್ತಿರುವುದು ಲೋಕಾಯುಕ್ತ ಹಗರಣ. ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ರ ಪುತ್ರ ಅಶ್ವಿನ್ ರಾವ್ ಲೋಕಾಯುಕ್ತ ಕಛೇರಿಯಲ್ಲಿ ವಿಪರೀತ ಭ್ರಷ್ಟಾಚಾರ ನಡೆಸಿರುವ ಬಗ್ಗೆ ದೂರುಗಳಿವೆ. ನೈತಿಕತೆಯ ಹೊಣೆ ಹೊತ್ತು ಭಾಸ್ಕರರಾವ್ ರಾಜೀನಾಮೆ ನೀಡಬೇಕಿತ್ತು. ಅದಾಗಿಲ್ಲ. ಪ್ರತಿಭಟನೆ ಜೋರಾಗುತ್ತಿದೆ. ದಿನಕ್ಕೊಂದು ಹೊಸ ವಿಷಯಗಳು ಹೊರಬರುತ್ತಲೇ ಇವೆ. ಭ್ರಷ್ಟನಲ್ಲ ಎಂದು ತೋರ್ಪಡಿಸಿಕೊಳ್ಳುವ ಸಿದ್ಧರಾಮಯ್ಯ ಲೋಕಾಯುಕ್ತದ ವಿಷಯದಲ್ಲಿ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಪರಸ್ಪರ ಸಹಕಾರವಿರುವಂತೆ ತೋರುತ್ತದೆ. ಇನ್ನು ಕೇಂದ್ರದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅನೇಕ ಅಪರಾಧಗಳಲ್ಲಿ ಹೆಸರಿಸಲಾದ ಲಲಿತ್ ಮೋದಿಗೆ ಪಾಸ್ ಪೋರ್ಟ್ ದೊರಕಲು ಸಹಾಯ ಮಾಡಿರುವುದು ಸುದ್ದಿಯಾಯಿತು. ಲಲಿತ್ ಮೋದಿಯವರ ಅನಿಯಮಿತ ಟ್ವೀಟುಗಳ ಪರಿಣಾಮದಿಂದ ಸುಷ್ಮಾ ಸ್ವರಾಜರಿಂದ ಸಹಾಯ ಮಾಡಿದ ಆರೋಪ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇಯವರ ಕೊರಳಿಗೂ ಸುತ್ತಿಕೊಂಡಿತು. ಈ ಈರ್ವರು ಮಹಿಳಾ ರಾಜಕಾರಣಿಗಳ ಸಂಬಂಧಿಕರು ಲಲಿತ್ ಮೋದಿಯ ಜೊತೆಗೆ ವ್ಯಾಪಾರ ಸಂಬಂಧ ಹೊಂದಿರುವುದೆಲ್ಲ ಬಹಿರಂಗವಾಯಿತು. ವಿಪರೀತ ಮಾತನಾಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಹಗರಣದ ಬಗ್ಗೆ ಸಂಪೂರ್ಣ ಮೌನಕ್ಕೆ ಶರಣಾದರು. ಜಾಣ ಮೌನವಿದು. ಇಂಥ ಹಗರಣಗಳ ಬಗ್ಗೆ ಪ್ರತಿಕ್ರಿಯೆ ನೀಡಿದಷ್ಟೂ ಚರ್ಚೆ ಹೆಚ್ಚಾಗಿ ಜನರ ಮನಸ್ಸಲ್ಲಿ ಹಗರಣಗಳು ಉಳಿದು ಬಿಡುತ್ತವೆ; ನಿರ್ಲಕ್ಷ್ಯ ಮಾಡಿದರೆ ಕೆಲವು ದಿನಗಳ ನಂತರ ಮಾಧ್ಯಮಗಳು ಮತ್ತೊಂದು ಚರ್ಚೆಗೆ ತೊಡಗಿಕೊಳ್ಳುತ್ತಾರೆ, ಈ ಹಗರಣ ಮರೆಯಾಗಿ ಹೋಗುತ್ತದೆ ಎಂಬ ಕಾರಣದಿಂದ ಪ್ರಧಾನಿಗಳು ಮೌನ ವಹಿಸಿದ್ದಾರೆ. ಒಂದು ರೀತಿಯಲ್ಲಿ ಇದು ಚಾಣಾಕ್ಷತನವೇ. ಆದರೆ ಹಗರಣಗಳ ಬಗ್ಗೆ ಮಾತನಾಡದೆ ಮೌನವಾಗಿ ಉಳಿದು ಹೋಗಿದ್ದಕ್ಕೆ ಕಳೆದ ಯು.ಪಿ.ಎ ಸರಕಾರ ತೆತ್ತ ಬೆಲೆಯೆಷ್ಟು ಎಂಬುದರರಿವು ಪ್ರಧಾನಿಗಳಿಗಿದ್ದರೆ ಸಾಕು! ಈ ಎಲ್ಲಾ ಹಗರಣಗಳಿಗಿಂತ ದೇಶವನ್ನು ಬೆಚ್ಚಿ ಬೀಳಿಸಿದ್ದು ಮಧ್ಯ ಪ್ರದೇಶದ ವ್ಯಾಪಂ ಹಗರಣ. ಹಗರಣದ ವ್ಯಾಪ್ತಿಯಿಂದ ಇದು ಬೆಚ್ಚಿ ಬೀಳಿಸಲಿಲ್ಲ. ಇದಕ್ಕಿಂತ ದೊಡ್ಡ ಪ್ರಮಾಣದ ಹಗರಣಗಳನ್ನು ದೇಶ ಕಂಡಿದೆ. ಆದರೆ ಹಗರಣಕ್ಕೆ ಸಂಬಂಧಪಟ್ಟಂತಹ ವ್ಯಕ್ತಿಗಳು ಒಬ್ಬರಾದ ನಂತರ ಒಬ್ಬರು ಅಸಹಜ ರೀತಿಯಿಂದ, ಅನುಮಾನಾಸ್ಪದ ರೀತಿಯಲ್ಲಿ ಸಾಯುತ್ತಿರುವುದು ಆಘಾತ ಮೂಡಿಸಿದೆ. ವ್ಯಾಪಂ ಹಗರಣಕ್ಕೆ ಸಂಬಂಧಪಟ್ಟ, ಅದರ ತನಿಖೆ ಮಾಡಿದ, ಅದರಲ್ಲಿ ಸಾಕ್ಷಿಯಾಗಿದ್ದ, ಅದನ್ನು ವರದಿ ಮಾಡಲು ಹೋದ ಪತ್ರಕರ್ತ- ಹೀಗೆ ಸಾಯುತ್ತಿರುವವರ ಸಂಖೈ ಹೆಚ್ಚಾಗುತ್ತಲೇ ಇದೆ.

ಏನಿದು ವ್ಯಾಪಂ ಹಗರಣ?

akshay singh vyapam
ಪತ್ರಕರ್ತ ಅಕ್ಷಯ್ ಸಿಂಗ್
ಆತನ ಹೆಸರು ಅಕ್ಷಯ್ ಸಿಂಗ್. ಆಜ್ ತಕ್ ವಾಹಿನಿಯ ವರದಿಗಾರ. ಸರಿಸುಮಾರು ಐದಾರು ವರುಷಗಳಿಂದ ತನಿಖೆಯಲ್ಲಿರುವ ವ್ಯಾಪಂ ಹಗರಣದ ಸತ್ಯಾಸತ್ಯತೆಯ ಬೆನ್ನು ಬಿದ್ದವನು. ಜನವರಿ 2012ರಲ್ಲಿ ನಮ್ರತಾ ದಾಮೋರ್ ಎಂಬ ಪ್ರಥಮ ವರುಷದ ವೈದ್ಯಕೀಯ ವಿದ್ಯಾರ್ಥಿನಿ ರೈಲಿನಡಿ ಬಿದ್ದು ಸತ್ತು ಹೋಗಿರುತ್ತಾಳೆ. ಮರಣೋತ್ತರ ವರದಿಯಲ್ಲಿ ರೈಲಿನಡಿ ನಜ್ಜುಗುಜ್ಜಾಗುವುದಕ್ಕೆ ಮುಂಚೆ ನಮ್ರತಾಳನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂದು ನಮೂದಿಸಲಾಗುತ್ತದೆ. ಪೋಲೀಸರು ಅಂತಹ ಸಾಧ್ಯತೆಗಳನ್ನು ತಳ್ಳಿಹಾಕಿ, ಇಲ್ಲ ಇದು ಆತ್ಮಹತ್ಯಾ ಪ್ರಕರಣ, ನಮ್ರತಾ ರೈಲಿಗೆ ಸಿಲುಕಿ ಸತ್ತಿದ್ದಾಳೆ ಎಂದು ಶರಾ ಬರೆಯುತ್ತಾರೆ. ಮೂರು ವರುಷದ ನಂತರ ನಮ್ರತಾಳ ತಂದೆ ಮೆಹ್ತಾಬ್ ಸಿಂಗ್ ರನ್ನು ಸಂದರ್ಶಿಸಲು ಅಕ್ಷಯ್ ಸಿಂಗ್ ಅವರ ಮನೆಗೆ ಹೋಗುತ್ತಾರೆ. ಮೂವತ್ತೆಂಟು ವರುಷದ ಅಕ್ಷಯ್ ಮೆಹ್ತಾಬ್ ಸಿಂಗರ ಮನೆಯಲ್ಲೇ ಕೆಮ್ಮುತ್ತಾ ಬಾಯಲ್ಲಿ ನೊರೆ ಸೂಸುತ್ತಾ ತೀವ್ರವಾಗಿ ಅಸ್ವಸ್ಥ್ಯನಾಗುತ್ತಾನೆ. ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪುತ್ತಾನೆ. ನಮ್ರತಾ ದಾಮೋರ್ ವ್ಯಾಪಂ ಹಗರಣದಿಂದ ಲಾಭ ಮಾಡಿಕೊಂಡಿದ್ದಾಕೆ. ಅಸಹಜ ಸಾವನ್ನಪ್ಪುತ್ತಾಳೆ. ಅದರ ಬಗ್ಗೆ ತನಿಖಾ ವರದಿ ಮಾಡಲೊರಟ ಅಕ್ಷಯ್ ಸಿಂಗ್ ಅಸಹಜ ಸಾವನ್ನಪ್ಪುತ್ತಾನೆ. ಅಕ್ಷಯ್ ಸಿಂಗ್ ನ ಸಾವು ವೈದ್ಯಕೀಯ ಪ್ರಾಥಮಿಕ ವರದಿಗಳ ಪ್ರಕಾರ ಅದು ಹೃದಯ ಸಂಬಂಧಿ ಖಾಯಿಲೆಯಿಂದ ಆದ ಸಾವು. ದೇಹದ ಅಂಗಾಂಗಗಳ ಮಾದರಿಯನ್ನು ಉನ್ನತ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ನಿರೀಕ್ಷಿಸಲಾಗುತ್ತಿದೆ. ಅಕ್ಷಯ್ ಸಿಂಗ್ ನ ಸಾವು ಈ ಹಗರಣವನ್ನು ಮತ್ತೆ ಚರ್ಚೆಯ ಮುನ್ನೆಲೆಗೆ ತಂದಿತು. ಸಹೋದ್ಯೋಗಿಯೊಬ್ಬನ ಸಾವು ಮಾಧ್ಯಮಗಳು ಈ ವಿಷಯವನ್ನು ಮತ್ತೆ ಚರ್ಚೆಗೆ ತೆಗೆದುಕೊಳ್ಳುವಂತೆ ಮಾಡಿತು. ಮಾಧ್ಯಮಗಳ ವರದಿಗಳ ಪ್ರಕಾರ ನಲವತ್ತಕ್ಕೂ ಹೆಚ್ಚು ಜನರು ಈ ಹಗರಣದ ಕಾರಣದಿಂದ ಅಸಹಜ ಸಾವನ್ನಪ್ಪಿದ್ದಾರೆ. ಒಂದಷ್ಟು ಜನರು ಕುಡಿತದ ಕಾರಣದಿಂದ, ಕ್ಯಾನ್ಸರಿನ ಕಾರಣದಿಂದ ಮರಣವನ್ನಪ್ಪಿದ್ದಾರೆ ಎಂಬುದು ಸತ್ಯವಾದರೂ ಹಗರಣಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಪಟ್ಟ ಯುವಕ – ಯುವತಿಯರು ಅಸಹಜ ರೀತಿಯಲ್ಲಿ ಸಾಯುತ್ತಿರುವುದು ವ್ಯವಸ್ಥೆಯ ಬಗ್ಗೆ ಭೀತಿ ಹುಟ್ಟಿಸುತ್ತದೆ. ಹಗರಣದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಒಳಗಾಗಿರುವ ಮಧ್ಯಪ್ರದೇಶದ ರಾಜ್ಯಪಾಲರಾದ ರಾಮ್ ನರೇಶ್ ಯಾದವರ ಮಗ ಶೈಲೇಶ್ ಯಾದವ್ ಕೂಡ ಅಸಹಜವಾಗಿ, ಇಂತದ್ದೇ ನಿರ್ದಿಷ್ಟ ಕಾರಣದಿಂದ ಸತ್ತರು ಎಂದು ಅರಿಯಲಾಗದ ರೀತಿಯಿಂದ ಸಾವನ್ನಪ್ಪಿರುವುದು ಹಗರಣದ ವ್ಯಾಪ್ತಿಯ ಸಂಕೇತ.

MadhyaPradesh Professional Examination Boardನ ಹಿಂದಿ ರೂಪ ವ್ಯಾಪಂ, ಮಧ್ಯಪ್ರದೇಶ ವ್ಯವಸಾಯಿಕ್ ಪರೀಕ್ಷಾ ಮಂಡಳಿ. ವಿವಿಧ ಸರಕಾರಿ ಇಲಾಖೆಗಳ ನೇಮಕಾತಿಯ ಪರೀಕ್ಷೆಗಳನ್ನು ಈ ವ್ಯಾಪಂ ನಡೆಸುತ್ತದೆ. ಜೊತೆ ಜೊತೆಗೆ ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆ ಕೂಡ ವ್ಯಾಪಂ ಮುಂದಾಳತ್ವದಲ್ಲಿ ನಡೆಯುತ್ತದೆ. ಒಂದು ರೀತಿಯಲ್ಲಿ ನಮ್ಮ ಕರ್ನಾಟಕದ ಕೆ.ಪಿ.ಎಸ್.ಸಿ ಮತ್ತು ಸಿಇಟಿ ಕೇಂದ್ರಗಳೆರಡನ್ನೂ ಸೇರಿಸಿದರೆ ಮಧ್ಯಪ್ರದೇಶದ ವ್ಯಾಪಂ ಸೃಷ್ಟಿಯಾಗುತ್ತದೆ. ಕೆ.ಪಿ.ಎಸ್.ಸಿ ಮತ್ತು ಸಿಇಟಿಗಳೆರಡರ ಹಗರಣಗಳನ್ನು ಸೇರಿಸಿದರೆ ಎಷ್ಟಾಗುತ್ತದೋ ಅಷ್ಟನ್ನೂ ವ್ಯಾಪಂ ಮಾಡುತ್ತಿದೆ, ವ್ಯಾಪಕವಾಗಿ ಮಾಡುತ್ತಿದೆ. ಸಬ್ ಇನ್ಸ್ ಪೆಕ್ಟರ್, ಪೋಲೀಸ್ ಪೇದೆ, ಫುಡ್ ಇನ್ಸ್ ಪೆಕ್ಟರ್ ಹುದ್ದೆಗಳ ಪರೀಕ್ಷೆಗಳಲ್ಲೂ ಅಕ್ರಮ ನಡೆದಿದೆ. ಎಲ್ಲಕ್ಕಿಂತ ಹೆಚ್ಚು ಹಗರಣಗಳಾಗಿರುವುದು ವೈದ್ಯಕೀಯ ಪದವಿ ಮತ್ತು ಸ್ನಾತಕ್ಕೋತ್ತರ ವೈದ್ಯ ಪದವಿಗೆ ಸಂಬಂಧಪಟ್ಟ ಪರೀಕ್ಷೆಗಳಲ್ಲಿ. 

ಹಾಗೆ ನೋಡಿದರೆ ವೈದ್ಯ ಪರೀಕ್ಷೆಗಳಲ್ಲಿ ನಡೆಯುವ ಹಗರಣಗಳು ಹೊಸದೇನಲ್ಲ. ಕರ್ನಾಟಕದ್ದೇ ಉದಾಹರಣೆಗಳನ್ನು ನೋಡುವುದಾದರೆ ಇಂತಹ ಪರೀಕ್ಷೆಗಳಲ್ಲಿ, ಅದರಲ್ಲೂ ಸ್ನಾತಕ್ಕೋತ್ತರ ವೈದ್ಯ ಪರೀಕ್ಷೆಗಳಲ್ಲಿ ಮೋಸ ನಡೆಯುತ್ತಲೇ ಇದೆ. ಮೊದಮೊದಲು ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವ ಹಳೆಯ ವಿಧಾನ ಚಾಲ್ತಿಯಲ್ಲಿತ್ತು. ಅದನ್ನು ತಡೆದ ನಂತರ ನಕಲಿ ಅಭ್ಯರ್ಥಿಯನ್ನು ಕರೆತಂದು ಪರೀಕ್ಷೆ ಬರೆಸುವ ಪರಿಪಾಟವಿತ್ತು. ಪಕ್ಕದಲ್ಲಿ ಜಾಣ ವಿದ್ಯಾರ್ಥಿಯನ್ನು ಕೂರಿಸಿಕೊಳ್ಳಲು ದುಡ್ಡು ಚೆಲ್ಲಲಾಗುತ್ತಿತ್ತು. ಈ ಪರೀಕ್ಷೆಗಳಲ್ಲಿ ಎಲ್ಲರಿಗೂ ಒಂದೇ ಪ್ರಶ್ನೆಗಳಿದ್ದರು ಪ್ರಶ್ನೆಗಳ ಕ್ರಮಸಂಖೈಯಲ್ಲಿ ವ್ಯತ್ಯಾಸವಿರುತ್ತದೆ. ಒಬ್ಬಾತನಿಗೆ ಮೊದಲ ಕ್ರಮಸಂಖೈಯಲ್ಲಿರುವ ಪ್ರಶ್ನೆ ಅವನ ಪಕ್ಕದಲ್ಲಿ ಕುಳಿತವನಿಗೆ ಇಪ್ಪತ್ತೊಂದನೇ ಕ್ರಮಸಂಖೈಯಲ್ಲಿರುತ್ತದೆ, ಅವನ ಹಿಂದೆ ಕುಳಿತವನಿಗೆ ನಲವತ್ತೊಂದನೇ ಕ್ರಮಸಂಖೈಯಲ್ಲಿರುತ್ತದೆ. ನಂತರದ ಪ್ರಶ್ನೆಗಳು ಅದೇ ಆರ್ಡರ್ರಿನಲ್ಲಿರುತ್ತವೆ. ಈ ಸಂಗತಿ ತಿಳಿದುಕೊಂಡ ನಂತರ ನಕಲು ಮಾಡುವುದು ಸುಲಭವಾಗಿಬಿಡುತ್ತದೆ. ಇದಕ್ಕಿಂತಲೂ ಸುಲಭ ಮೋಸದ ಮಾರ್ಗವೆಂದರೆ ಪರೀಕ್ಷೆಯಲ್ಲಿ ಒ.ಎಮ್.ಆರ್ ಉತ್ತರ ಪತ್ರಿಕೆಯ ಮೇಲೆ ಏನನ್ನೂ ಬರೆಯದೆ ಖಾಲಿ ಹಾಳೆಯನ್ನು ವಾಪಸ್ಸು ಕೊಟ್ಟು ನಂತರದಲ್ಲಿ ಸರಿ ಉತ್ತರಗಳನ್ನು ತುಂಬಿಸುವುದು. ಇಷ್ಟೆಲ್ಲ ಕಷ್ಟಪಟ್ಟು ಏತಕ್ಕೆ ನಕಲು ಮಾಡುತ್ತಾರೆಂದರೆ ಮ್ಯಾನೇಜ್ ಮೆಂಟ್ ಪಿ.ಜಿ ಸೀಟುಗಳು ಕೋಟಿ ಕೋಟಿ ಲೆಕ್ಕಕ್ಕೆ ಹರಾಜಾಗುತ್ತವೆ. ನಕಲು ಮಾಡಲು ಲಕ್ಷಗಳ ಲೆಕ್ಕದಲ್ಲಿ ಹಣ ಖರ್ಚು ಮಾಡಿದರೆ ಸಾಕು. ಇನ್ನು ಎಂ.ಬಿ.ಬಿ.ಎಸ್ ಸೀಟುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಾಮೆಡ್ ಕೆ ಕೌನ್ಸಲಿಂಗ್ನಲ್ಲಿ ಸೀಟುಗಳನ್ನು ಬ್ಲಾಕ್ ಮಾಡಿ ಅದನ್ನು ಹೆಚ್ಚು ದುಡ್ಡಿಗೆ ಮಾರಿಕೊಳ್ಳಲಾಗುತ್ತದೆ. ಇಂತಹ ನಕಲು ಪ್ರಕರಣಗಳು ಕರ್ನಾಟಕದಲ್ಲಿ ಅಲ್ಲೊಂದು ಇಲ್ಲೊಂದರಂತೆ ನಡೆದು, ಅಪರೂಪಕ್ಕೆ ಪತ್ತೆಯಾದರೆ ಮಧ್ಯಪ್ರದೇಶದಲ್ಲಿ ಇದು ಹೆಚ್ಚಿನ ಸಂಖೈಯಲ್ಲಿ ನಡೆಯಲಾರಂಭಿಸಿತ್ತು. 1995ರಿಂದಲೇ ಮಧ್ಯಪ್ರದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುತ್ತಿದ್ದ ಬಗ್ಗೆ ವರದಿಗಳಾಗುತ್ತಿದ್ದವಾದರೂ ಮೊದಲ ಎಫ್.ಐ.ಆರ್ ದಾಖಲಾಗಿದ್ದು 2000 ಇಸವಿಯಲ್ಲಿ. ಕರ್ನಾಟಕದಲ್ಲಾಗುವಂತೆ ಅಲ್ಲೊಂದು ಇಲ್ಲೊಂದು ಎಂದು ವರದಿಯಾಗುತ್ತಿದ್ದ ಅಕ್ರಮಗಳವು. ಇಂದೋರಿನ ವೈದ್ಯ ಡಾ. ಆನಂದ್ ರಾಯ್ ವ್ಯಾಪಂ ಮೂಲಕ ಅಕ್ರಮವಾಗಿ ವೈದ್ಯಕೀಯಕ್ಕೆ ಪ್ರವೇಶ ಪಡೆದವರ ಬಗ್ಗೆ ವಿಸ್ತೃತವಾದ ತನಿಖೆಯಾಗಬೇಕು ಎಂದು ಕೋರ್ಟಿನ ಮೊರೆ ಹೋಗುತ್ತಾರೆ. 2009ರಲ್ಲಿ ಆಗಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತನಿಖೆಗೆ ಆದೇಶಿಸುತ್ತಾರೆ.

anand rai vyapam
ಡಾ. ಆನಂದ್ ರಾಯ್
ತನಿಖೆ ಪ್ರಾರಂಭವಾದ ನಂತರ ಒಬ್ಬರ ನಂತರ ಒಬ್ಬರು ಈ ಹಗರಣದಲ್ಲಿ ಸಿಕ್ಕಿಹಾಕಿಕೊಳ್ಳತೊಡಗುತ್ತಾರೆ. ವ್ಯಾಪಂನ ಅಧಿಕಾರಿಗಳು, ರಾಜಕಾರಣಿಗಳು, ವಿದ್ಯಾರ್ಥಿಗಳು, ಪೋಷಕರು, ಮತ್ತಿವರ ಮಧ್ಯೆ ಕಾರ್ಯನಿರ್ವಹಿಸುವ ದಲ್ಲಾಳಿಗಳ ಹೆಸರುಗಳೆಲ್ಲ ಹಗರಣದ ವ್ಯಾಪ್ತಿಗೆ ಬರತೊಡಗುತ್ತಾರೆ. ವ್ಯಾಪಂ ಹಗರಣಕ್ಕೆ ಸಂಬಂಧಪಟ್ಟಂತೆ ನಡೆದ ತನಿಖೆಯಲ್ಲಿ ಮೇಲ್ನೋಟಕ್ಕೆ ಲೋಪಗಳಿವೆ ಎಂದೆನ್ನಿಸುವುದಿಲ್ಲ, ಕಾರಣ ಆರು ವರುಷಗಳ ಅವಧಿಯಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿಯನ್ನು ತನಿಖಾ ತಂಡಗಳು ಹಗರಣದಲ್ಲಿ ಭಾಗಿಯಾದ ಕಾರಣಕ್ಕಾಗಿ ಬಂಧಿಸಿವೆ! ಬಂಧಿತರಲ್ಲಿ ಬಿಜೆಪಿಯ ಶಿಕ್ಷಣ ಮಂತ್ರಿಯಾಗಿದ್ದ ಲಕ್ಷ್ಮಿಕಾಂತ್ ಶರ್ಮಾ ಕೂಡ ಇದ್ದರು ಎಂಬ ಸಂಗತಿ ಮಧ್ಯಪ್ರದೇಶದ ಬಿಜೆಪಿ ಸರಕಾರ ಇದ್ದುದರಲ್ಲಿ ನಿಷ್ಪಕ್ಷಪಾತವಾಗಿಯೇ ತನಿಖೆಯನ್ನು ನಡೆಸುತ್ತಿದೆ ಎಂದೆನ್ನಿಸುವಂತೆ ಮಾಡಿತ್ತು. ಆದರೂ ಸರಕಾರಕ್ಕೆ ವ್ಯಾಪಂ ಹಗರಣ ಮಸಿ ಬಳಿದಿದ್ಯಾಕೆ?

ಮೇಲ್ನೋಟಕ್ಕೆ ಸರ್ಕಾರದ ಕ್ರಮಗಳು ಸರಿದಿಕ್ಕಿನಲ್ಲಿವೆ ಎನ್ನಿಸಿದರೂ ಹಗರಣ ಕೊನೆಗೆ ಮುಖ್ಯಮಂತ್ರಿ ಶಿವರಾಜ್ ಚೌಹಾಣರನ್ನು ಕಾಡಿದ್ದ್ಯಾಕೆ ಎಂದು ನೋಡಿದಾಗ ಸಾಲು ಸಾಲು ಹೆಣಗಳು ಕಾಣಿಸುತ್ತವೆ. ಒಂದಷ್ಟು ಸ್ವಾಭಾವಿಕ ಮೃತ್ಯುಗಳು, ಕುಡಿತದ ದುಷ್ಪರಿಣಾಮದಿಂದಾದ ಸಾವುಗಳನ್ನು ಹೊರತುಪಡಿಸಿದರೂ ವ್ಯಾಪಂ ಹಗರಣಕ್ಕೆ ಸಂಬಂಧಿಸಿದವರ ಅನಿರೀಕ್ಷಿತ, ಅಸ್ವಾಭಾವಿಕ ಮರಣ ಆಘಾತ ಮೂಡಿಸುತ್ತದೆ. ಮೂವತ್ತು ವರುಷವೂ ದಾಟದ ಅನೇಕರು ಹೃದಯಾಘಾತದಿಂದ ಸಾವನ್ನಪ್ಪುವುದು ಸಹಜವೆನ್ನಿಸುವುದಿಲ್ಲ. ಇದೇ ಜುಲೈ ಆರರಂದು ವ್ಯಾಪಂ ಹಗರಣದ ಮೂಲಕ ಕೆಲಸ ಗಿಟ್ಟಿಸಿಕೊಂಡ ಸಬ್ ಇನ್ಸ್ ಪೆಕ್ಟರ್ ಅನಾಮಿಕ ಕುಶ್ವಾಹ ಮೃತದೇಹ ಕೆರೆಯೊಂದರ ಬಳಿ ಪತ್ತೆಯಾಗಿತ್ತು. ವಿಚಾರಣೆಗೊಳಪಟ್ಟಿದ್ದ ಪೇದೆ ರಮಾಕಾಂತ್ ಪಾಂಡೆ ಅದೇ ಆರನೇ ತಾರೀಖಿನಂದು ಡೆತ್ ನೋಟುಗಳನ್ನೇನೂ ಬರೆಯದೆ ನೇಣು ಬಿಗಿದುಕೊಳ್ಳುತ್ತಾನೆ. ಒಂದು ದಿನಕ್ಕೆ ಮುಂಚೆ ಜಬಲ್ಪುರದ ನೇತಾಜಿ ಸುಭಾಷ್ ಚಂದ್ರ ಬೋಸ್ ಮೆಡಿಕಲ್ ಕಾಲೇಜಿನ ಡೀನ್ ಅರುಣ್ ಶರ್ಮ ದೆಹಲಿಯ ಹೋಟೆಲೊಂದರಲ್ಲಿ ಹೆಣವಾಗಿ ಸಿಗುತ್ತಾರೆ, ತನಿಖೆಗೆ ಸಹಕರಿಸುತ್ತಿದ್ದ ವ್ಯಕ್ತಿ ಅರುಣ್ ಶರ್ಮ. ಅದೇ ಕಾಲೇಜಿನಲ್ಲಿ ಅರುಣ್ ಶರ್ಮರವರಿಗೆ ಮುಂಚೆ ಡೀನ್ ಆಗಿದ್ದ ಡಿ.ಕೆ.ಸಾಕಲೆ ಬೆಂಕಿ ಹಚ್ಚಿಕೊಂಡು ಸತ್ತರು. ಅದು ಆತ್ಮಹತ್ಯೆಯೋ ಹತ್ಯೆಯೋ ಎಂಬುದು ಇನ್ನೂ ನಿಕ್ಕಿಯಾಗಿಲ್ಲ. ಹೀಗೆ ಒಂದಾದ ನಂತರ ಒಂದು ‘ಹತ್ಯೆ’ಗಳೆಂದು ಅನುಮಾನಿಸಬಹುದಾದ ಸಾವುಗಳು ವ್ಯಾಪಂ ಹಗರಣದ ವ್ಯಾಪ್ತಿಯಲ್ಲಿ ನಡೆಯುತ್ತಿವೆ. ಇವೆಲ್ಲದರ ಮಧ್ಯೆ ಹಗರಣ ಹೊರಬರಲು ಕಾರಣರಾದ ಡಾ. ಆನಂದ್ ರಾಯ್ ತಮಗೆ ಜೀವ ಬೆದರಿಕೆ ಇದೆ, ರಕ್ಷಣೆ ಬೇಕು ಎಂದು ಸರಕಾರದ ಮೊರೆ ಹೋದರೆ ಐವತ್ತು ಸಾವಿರ ಪ್ರತೀ ತಿಂಗಳು ಕಟ್ಟಿದರೆ ಪೋಲೀಸ್ ರಕ್ಷಣೆ ಕೊಡುವುದಾಗಿ ಹೇಳುತ್ತದೆ. ಆಗ ಡಾ.ಆನಂದ್ ರಾಯರ ಮಾಸಿಕ ಆದಾಯ ಮೂವತ್ತೆಂಟು ಸಾವಿರ! ಕೊನೆಗೆ ಕೋರ್ಟಿನ ನಿರ್ದೇಶನದ ಮೇರೆಗೆ ಡಾ.ಆನಂದ್ ರಾಯ್ ಗೆ ಪೋಲೀಸ್ ಸೆಕ್ಯುರಿಟಿ ನೀಡಲಾಗುತ್ತದೆ. ಸ್ವತಃ ಕಣ್ಣಿನ ತಜ್ಞರಾದ ಆನಂದ್ ರಾಯ್ ತಮಗೆ ರಕ್ಷಣೆ ಕೊಡಲು ಬಂದಿದ್ದ ಪೋಲೀಸಪ್ಪನ ಕಣ್ಣು ಪರೀಕ್ಷಿಸಿದಾಗ ಅಚ್ಚರಿಯಾಗುತ್ತದೆ. ಕೊಲೆ ಬೆದರಿಕೆ ಇರುವ ವ್ಯಕ್ತಿಯ ರಕ್ಷಣೆಗೆಂದು ನೇಮಕಗೊಂಡಿದ್ದ ಪೋಲೀಸಪ್ಪನಿಗೆ ಸರಿಯಾಗಿ ಕಣ್ಣೇ ಕಾಣಿಸುವುದಿಲ್ಲ! 

ಸರಕಾರ ಹತ್ಯೆಗಳ ವಿಚಾರದಲ್ಲಿ ತೋರಿದ ನಿರ್ಲಕ್ಷ್ಯ, ಸೀಟಿಯೂದುಗರ ಬಗ್ಗೆ ತೋರಿದ ಅನಾದಾರ ಅವರ ನಡೆಯ ಬಗ್ಗೆ ಸಂಶಯ ಮೂಡಿಸುತ್ತದೆ. ಮಧ್ಯಪ್ರದೇಶದ ಪೋಲೀಸರಲ್ಲನೇಕರು ಕೂಡ ವ್ಯಾಪಂ ಮೂಲಕವೇ ನೇಮಕಗೊಂಡಿರುವ ಕಾರಣ ಅವರೇ ತನಿಖೆ ನಡೆಸಿದರೆ ಉಪಯೋಗವಾದೀತೆ? ಕಿಂಗ್ ಪಿನ್ನುಗಳನ್ನು ಬಂಧಿಸಿದ್ದೇವೆ ಎಂದವರು ಹೇಳುತ್ತಿದ್ದರೂ ನಡೆಯುತ್ತಿರುವ ಸಾವಿನ ಸರಣಿಯನ್ನು ನೋಡಿದರೆ ಕಿಂಗ್ ಪಿನ್ನುಗಳನ್ನು ನಿಯಂತ್ರಿಸುತ್ತಿದ್ದವರು ಇನ್ನೂ ಉನ್ನತ ಸ್ಥಾನದಲ್ಲಿರುವ ಅನುಮಾನ ಮೂಡಿಸುತ್ತದೆ. ಮಧ್ಯಪ್ರದೇಶದ ಹೈಕೋರ್ಟ್ ಸಿಬಿಐ ನಿರ್ದೇಶನಕ್ಕೆ ಆದೇಶಿಸಿಲ್ಲ ಎಂಬ ನೆಪವನ್ನೇ ಇಷ್ಟು ದಿವಸ ಸರಕಾರ ಬಳಸಿಕೊಳ್ಳುತ್ತಿತ್ತು. ಈಗ ಸುಪ್ರೀಂ ಕೋರ್ಟ್ ಆದೇಶದ ಮೂಲಕ ಸಿಬಿಐ ತನಿಖೆ ಪ್ರಾರಂಭವಾಗಿದೆ. ಇನ್ನಾದರೂ ನಿಜವಾದ ಸತ್ಯಗಳು ಹೊರಬರಲಿ ಎಂದು ಆಶಿಸೋಣ.
ಆಧಾರ: ವಿಕಿಪೀಡಿಯಾ, ಟೈಮ್ಸ್ ಆಫ್ ಇಂಡಿಯಾ, ದಿ ಹಿಂದೂ.