ಜುಲೈ 3, 2015

ಉಗ್ರಾಂಧತೆ!

white supremacy
2001ರ ಸೆಪ್ಟೆಂಬರ್ 11ರಂದು ಅಮೆರಿಕಾದ ವರ್ಲ್ಡ್ ಟ್ರೇಡ್ ಕೇಂದ್ರದ ಮೇಲೆ ನಡೆದ ಉಗ್ರರ ಪೈಶಾಚಿಕ ದಾಳಿಯ ನಂತರ ಅಲ್ಲಿನ ಭದ್ರತಾ ವ್ಯವಸ್ಥೆ ತುಂಬಾ ಬಿಗಿಗೊಂಡಿದೆ. ಮುಸ್ಲಿಮರೆಲ್ಲರನ್ನು ಅನುಮಾನಸ್ಪದವಾಗಿ ನೋಡುವುದರಿಂದಲೇ ಅಲ್ಲೀಗ ಉಗ್ರರ ದಾಳಿ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿಬಿಟ್ಟಿದೆ ಎಂಬಂತಹ ಮಾತುಗಳನ್ನು ಪದೇ ಪದೇ ಭಾರತದಲ್ಲಿ ಪುನರುಚ್ಛಿಸಲಾಗುತ್ತದೆ.

ಅಮೆರಿಕಾ ಸಂಶೋಧನಾ ಕೇಂದ್ರ ಅಚ್ಚರಿಯ ವಿವರಗಳನ್ನು ಹೊರಹಾಕಿದೆ. ಉಗ್ರತೆ ತುಂಬಿದ ಘಟನೆಗಳು ಅಮೆರಿಕದಲ್ಲಿ ನಿಯಮಿತವಾಗಿ ನಡೆಯುತ್ತಲೇ ಇವೆ. ಜಿಹಾದಿಗಳೆಂದು ಹೇಳಿಕೊಳ್ಳುವ ಮುಸ್ಲಿಂ ಉಗ್ರರಿಂದ ಸೆಪ್ಟೆಂಬರ್ 2001ರ ನಂತರ ಹತರಾದವರ ಸಂಖೈ 26. ಇದೇ ಕಾಲಘಟ್ಟದಲ್ಲಿ ಉಗ್ರತೆಯಿಂದಾಗಿ 48 ಮಂದಿ ಬಲಿಯಾಗಿದ್ದಾರೆ. ಆದರಾ ಘಟನೆಗಳು ‘ಉಗ್ರರ ಅಟ್ಟಹಾಸ’ವಾಗಿ ಪ್ರಚುರವಾಗುವುದಿಲ್ಲ! ಕಾರಣ ಮುಸ್ಲಿಮೇತರರ ಕೃತ್ಯವದು!!

ಬಿಳಿ ತೊಗಲಿನ ಅಹಂ ತುಂಬಿಕೊಂಡಿರುವ ಉಗ್ರರ ಕೃತ್ಯದ ಬಗ್ಗೆ ಜಾಣಮೌನ ವಹಿಸುವುದರಲ್ಲಿ ಅಲ್ಲಿನ ಮಾಧ್ಯಮಗಳೂ ಭಾಗಿಯಾಗಿವೆ. ದೇಶೀ ಬಲಪಂಥೀಯ ಉಗ್ರತೆ ವಿದೇಶಿ ಮುಸ್ಲಿಂ ಬಲಪಂಥೀಯ ಉಗ್ರರಿಗಿಂತ ಹೆಚ್ಚಿದೆಯೆಂಬುದು ಈ ಅಧ್ಯಯನದಲ್ಲಿ ಭಾಗಿಯಾದವರ ಉವಾಚ. ಮುಸ್ಲಿಮನೋರ್ವ ಅಪರಾಧ ಕೃತ್ಯದಲ್ಲಿ, ಹತ್ಯೆಯಲ್ಲಿ ಭಾಗಿಯಾದಾಗ, ಧರ್ಮದ ಕಾರಣದಿಂದಾಗಿ ಅದನ್ನು ಭಯೋತ್ಪಾದಕ ಕೃತ್ಯ ಎಂದು ಹಿಂದುಮುಂದು ನೋಡದೆ ನಿರ್ಧರಿಸಿಬಿಡುವ ಮಾಧ್ಯಮಗಳು ಮತ್ತು ಮುಸ್ಲಿಮೇತರನೊಬ್ಬ ಉಗ್ರತೆ ತೋರಿದಾಗ ಆ ಅಪರಾಧಕ್ಕೆ ಹತ್ತಲವು ಕಾರಣಗಳನ್ನುಡುಕುವ ಚಾಳಿ ಭಾರತದಲ್ಲಿರುವಂತೆ ಅಮೆರಿಕಾದಲ್ಲೂ ಇದೆ. ಅಥವಾ ಅಮೆರಿಕಾದಿಂದ ಭಾರತಕ್ಕೆ ಆಮದಾಗಿದೆ! ದಸರೆಯ ಸಮಯದಲ್ಲಿ ವ್ಯಕ್ತಿಯೊಬ್ಬ ಇಂಡಿಯನ್ ಮುಜಾಹಿದೀನ್ ಹೆಸರಿನಲ್ಲಿ ಕರೆ ಮಾಡಿ ಬಾಂಬ್ ಸ್ಪೋಟಿಸುವ ಬೆದರಿಕೆ ಹಾಕಿದ್ದ. ಆತನನ್ನು ಬಂಧಿಸಿದ ತಕ್ಷಣ ಉಗ್ರಗಾಮಿ ಎಂದು ಘೋಷಿಸಲಿಲ್ಲ. ಜಿಹಾದಿ ಸಾಹಿತ್ಯ, ಭಯೋತ್ಪಾದಕ ನಾಯಕರ ವೀಡಿಯೋ ತುಣುಕುಗಳು ಸಿಕ್ಕಿದವು ಎಂದು ಪ್ರಚಾರವಾಗಲಿಲ್ಲ. ಆತ ಒಬ್ಬ ಮಾನಸಿಕ ಅಸ್ವಸ್ಥ್ಯ ಎಂದು ಹೇಳಲಾಯಿತು. ಕಾರಣ ಆತ ಮುಸ್ಲಿಮೇತರನಾಗಿದ್ದ. ನಿಜವಾಗಿಯೂ ಮಾನಸಿಕ ಅಸ್ವಸ್ಥ್ಯನಾಗಿರಲೂಬಹುದು. ಮುಸ್ಲಿಮನೊಬ್ಬ ಆ ರೀತಿ ಮಾಡಿದ್ದರೆ (ಮಾನಸಿಕ ಅಸ್ವಸ್ಥ್ಯನಾಗಿದ್ದುಕೊಂಡು) ನಮ್ಮಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು?

ಉಗ್ರರನ್ನು ಮಟ್ಟ ಹಾಕುವುದರಲ್ಲಿ ಹಿಂದೇಟು ಹಾಕಬಾರದು. ಜೊತೆಜೊತೆಗೆ ನಮ್ಮ ಸಮಾಜದ ಒಳಗಿಂದಲೇ ಹುಟ್ಟಿಕೊಂಡ ಬಲಪಂಥೀಯ ಕೋಮುವಾದವನ್ನು ತಡೆಗಟ್ಟದಿದ್ದರೆ ಅಮೆರಿಕಾದ ಪರಿಸ್ಥಿತಿಯೇ ಭಾರತದಲ್ಲೂ ಮೂಡಿಬಿಟ್ಟೀತು….


ಮೂಲ:www.nytimes.com

ಜುಲೈ 2, 2015

ನಾಳೆಯಿಂದ 'ಆರಂಭ'

ಬೆಂಗಳೂರಿಗೆ ಬಂದ ಹೊಸದರಲ್ಲಿ ಒಂದು ಕನ್ನಡ ಸಿನಿಮಾ ನೋಡಿ ರೂಮಿಗೆ ಬಂದಾಗ ಅಲ್ಲೇ ಇದ್ದ ಸಿನಿ ತಂತ್ರಜ್ಞ ಗೆಳೆಯನೊಬ್ಬ 'ಹೆಂಗಿದೆ ಸಿನಿಮಾ?' ಎಂದು ಕೇಳಿದ. 'ಚೆನ್ನಾಗಿಲ್ಲ ಗುರು. ತಲೆ ನೋವ್ ಬಂತು' ಎಂದೆ. 'ಎಷ್ಟು ಕಷ್ಟ ಪಟ್ಟು ಮಾಡಿರ್ತಾರೆ ಗೊತ್ತಾ ಒಂದು ಫಿಲಮ್ ನಾ? ಸುಮ್ನೆ ಒಂದೇ ಮಾತಲ್ಲಿ ಚೆನ್ನಾಗಿಲ್ಲ ಅಂದ್ಬುಟ್ರೆ' ಕೋಪ ಮಾಡ್ಕಂಡ. 'ಗುರುವೇ, ಎಂಬಿಬಿಎಸ್ ಓದೋರೆಲ್ಲ ಕಷ್ಟಪಟ್ಟೇ ಪಾಸಾಗಿರ್ತಾರೆ. ಹಂಗಂದ್ಬುಟ್ಟು ಟ್ರೀಟ್ ಮೆಂಟ್ ಸರಿಯಾಗಿ ಕೊಡದೇ ಇದ್ರೆ ಬಯ್ಯದೆ ಇರ್ತೀವಾ? ಹಂಗೆ ಫಿಲಮ್ಮು. ಎಷ್ಟಾದ್ರೂ ಕಷ್ಟಪಟ್ಟಿರ್ಲಿ ಕೊನೆಗೆ ಒಂದು ವರ್ಡ್ ರೆಸ್ಪಾನ್ಸೇ ಸಿಗೋದು' ಎಂದಾಗ ಗೆಳೆಯ ಸುಮ್ಮನಾದ. 
ಈ ಘಟನೆ ನೆನಪಾಗಿದ್ದು ಇವತ್ತು ಪಾಲಿಮರ್ ಕನ್ನಡದಲ್ಲಿ 'ಸಿನಿಮಾ ಚೆನ್ನಾಗಿತ್ತಾ ಹತ್ತು ಜನಕ್ಕೆ ಹೇಳಿ, ಚೆನ್ನಾಗಿಲ್ವಾ ಫಿಲಮ್ಮಿಗೆ ಹೋಗೋರನ್ನೂ ವಾಪಸ್ ಕಳಿಸಿ' ಎಂದು ಕಡ್ಡಿತುಂಡುಮಾಡಿದಂತೆ ಗೆಳೆಯ ಅಭಿ ಹನಕೆರೆ ಹೇಳಿದಾಗ.
ಚರ್ಚೆಗೆ ಕನಸಿಗೆ ಅಪರೂಪಕ್ಕೊಮ್ಮೆ ಸಣ್ಣ ಪುಟ್ಟ ಜಗಳಕ್ಕೆ S Abhi Hanakere ಜೊತೆಯಾಗಿ ವರುಷಗಳೇ ಕಳೆದಿವೆ. ಹೊಸಬರನ್ನೇ ಇಟ್ಟುಕೊಂಡು ತರಬೇತಿ ಕೊಟ್ಟು 'ಆರಂಭ' ಸಿನಿಮಾವನ್ನು ಮಾಡಲು ಪಟ್ಟ ಕಷ್ಟವನ್ನು ನೋಡಿದ್ದೇನೆ. 
ಪ್ರೀತಿ, ಜಾತಿ, ಜಾತಿ ಪ್ರೀತಿಯ ಅಭಿಯ ಕನಸಿನ ಒಂದು ಭಾಗವಾದ ಆರಂಭ ನಾಳೆ ತೆರೆಮೇಲೆ ಮೂಡಲಿದೆ.
ಅಭಿ ಕಷ್ಟಪಟ್ಟ ಕಾರಣಕ್ಕೆ ಸಿನಿಮಾ ನೋಡೋದು ಬೇಡ! ಹೊಸತನದ ಸಿನಿಮಾ ಎಂದು ನೋಡಿ, ಅವನ ಮಾತಿನಲ್ಲೇ ಹೇಳೋದಾದರೆ ಸಿನಿಮಾ ಚೆನ್ನಾಗಿದ್ದರೆ ಹತ್ತು ಜನಕ್ಕೆ ನೋಡಲು ಹೇಳಿ.
ಸಿನಿಮಾದ ಬಗ್ಗೆ ನಾಳೆ ಮಾತನಾಡೋಣ. 

ಜುಲೈ 1, 2015

ವಾಡಿ ಜಂಕ್ಷನ್ .... ಭಾಗ 13

wadi junction
Dr Ashok K R
ಜ್ಞಾನಿ ಎಂದರ್ಯಾರು? ಭಕ್ತರೊಬ್ಬರು ಪ್ರಶ್ನಿಸಿದರು. ಸ್ವಾಮಿಗಳು ಆವರಣದಲ್ಲಿ ಬೆಳೆಸಿದ್ದ ಗಿಡಗಳ ಮಧ್ಯೆ ಆಟವಾಡುತ್ತಿದ್ದ ಇಬ್ಬರು ಮಕ್ಕಳೆಡೆಗೆ ದೃಷ್ಟಿ ಹರಿಸಿದರು. ಸಂಪಿಗೆ ಮರದಿಂದ ಉದುರಿ ಬಿದ್ದಿದ್ದ ಹೂವುಗಳನ್ನು ಸಂಗ್ರಹಿಸಿ ನಂದಿ ವಿಗ್ರಹದ ಮುಂದೆ ಹಾಕುತ್ತಿದ್ದರು. ಬಿದ್ದಿದ್ದ ಹೂವುಗಳು ಖಾಲಿಯಾಯಿತು. ಹೂವಿಂದ ಹೂವಿಗೆ ಹಾರಿ ಆಹಾರ ಸಂಗ್ರಹಿಸುತ್ತಿದ್ದ ಚಿಟ್ಟೆಗಳ ಬೆನ್ನುಬಿದ್ದರು. ಅವರ ಆಟಗಳನ್ನು ನೋಡಿ ಮೆಲುನಗುತ್ತಾ ಪ್ರಶ್ನೆ ಕೇಳಿದ ಭಕ್ತರೆಡೆಗೆ ನೋಡಿದರು.

“ಜ್ಞಾನಿ ಎಂದರೆ ಮಕ್ಕಳ ಮನಸ್ಥಿತಿಯುಳ್ಳವನು”

“ಅಂದರೆ”
“ಒಂದು ಆಟ – ಘಟನೆಯಿಂದ ಮತ್ತೊಂದು ಆಟಕ್ಕೆ ಮುಂದುವರೆದಾಗ ಮಕ್ಕಳ ಮನದಲ್ಲಿ ಹಳೆಯ ಆಟದ ಭಾರವಿರುವುದಿಲ್ಲ. ಹಳೆಯ ಘಟನೆಯ ಭಾರವಿರುವುದಿಲ್ಲ. ಭೂತದಲ್ಲಿ ನಡೆದ ಘಟನೆಯ ಅಂತ್ಯದೊಂದಿಗೇ ಅದನ್ನವರು ಮರೆತುಬಿಡುವ ಕಾರಣ ವರ್ತಮಾನದಲ್ಲವರು ಸಂತಸದಿಂದಿರುತ್ತಾರೆ. ಬೇಸರ ಮೂಡಿಸಿದ, ಅಳು ತರಿಸಿದ ಘಟನೆಯನ್ನೂ ಮಕ್ಕಳು ಬಹು ಸುಲಭವಾಗಿ ಮರೆತುಬಿಡುತ್ತಾರೆ. ದೊಡ್ಡವರಾಗುತ್ತಿದ್ದ ಹಾಗೆ ಭೂತದ ಸಂಗತಿಗಳಿಗೆ ಮಹತ್ವಕೊಟ್ಟು, ಅವುಗಳ ಬಗೆಗೇ ಚಿಂತಿಸಿ ಮಂಥಿಸಿ ವರ್ತಮಾನದಲ್ಲಿನ ಸಂತೋಷವನ್ನು ಅನುಭವಿಸುವುದಕ್ಕೆ ಮರೆತುಬಿಡುತ್ತಾರೆ. ಸೇಡು, ದ್ವೇಷಗಳೆಲ್ಲ ಮನಸ್ಸಲ್ಲಿ ಉಳಿದು ಬೆಳೆಯುವುದಕ್ಕೆ ಭೂತದ ಮೇಲಿನ ಅತಿಯಾದ ಅವಲಂಬನೆಯೇ ಕಾರಣ. ದೊಡ್ಡವರಾದ ಮೇಲೂ ಯಾರು ಭೂತದ ಭಾರವಿಲ್ಲದೆ ವರ್ತಮಾನದಲ್ಲಿ ಖುಷಿಯಾಗಿರುವ ಮಕ್ಕಳ ಮನಸ್ಥಿತಿಯನ್ನುಳಿಸಿಕೊಳ್ಳುತ್ತಾರೋ ಅವರೇ ಜ್ಞಾನಿಗಳು” ಸ್ವಾಮಿಗಳ ಉತ್ತರ ಪ್ರಶ್ನೆ ಕೇಳಿದ ಭಕ್ತರಿಗೆ ತೃಪ್ತಿ ನೀಡಿತು. ಅವತ್ತಿನ ಪ್ರಶ್ನೋತ್ತರ ವೇಳೆ ಮುಗಿದ ಕಾರಣ ಸ್ವಾಮಿಗಳು ಅವರೇ ಆರೈಕೆ ಮಾಡುತ್ತಿದ್ದ ಕೈದೋಟದ ಕಡೆಗೆ ಹೊರಟರು. ಇದ್ದ ಹದಿನೈದು ಮಂದಿ ಭಕ್ತರಲ್ಲಿ ಎಲ್ಲರೂ ಹೊರಟರು, ಕ್ರಾಂತಿ ಸಂಭವನ ಹೊರತಾಗಿ. ಸಂತೋಷಾನಂದ ಸ್ವಾಮಿಗಳ ಆಶ್ರಮಕ್ಕೆ ಕ್ರಾಂತಿ ಬರುತ್ತಿದ್ದುದು ಇದು ಮೂರನೇ ಬಾರಿ. ಗೆಳೆಯರಿಗೆ ತಿಳಿಯದಂತೆ ಬೇಸರವಾದಾಗಲೆಲ್ಲ ಆತ ಮೈಸೂರಿನಲ್ಲಿರುವ ಆಶ್ರಮಗಳಿಗೆ ಭೇಟಿ ನೀಡುತ್ತಿದ್ದ. ಧ್ಯಾನದಲ್ಲಿ, ಸ್ವಾಮಿಗಳ ಭಾಷಣ, ಆಶೀರ್ವಚನಗಳಲ್ಲಿ ಭಾಗವಹಿಸುತ್ತಿದ್ದ. ತಿಂಗಳೊಪ್ಪತ್ತಿನಲ್ಲಿ ಧ್ಯಾನ – ಆಧ್ಯಾತ್ಮವೆಲ್ಲವೂ ವ್ಯಾಪಾರದ ಸರಕಾಗಿರುವುದನ್ನು ಅರಿತುಕೊಂಡ. ಶಾಂತಿ ದೊರಕಿಸಬೇಕಾದ ಆಶ್ರಮಗಳಲ್ಲಿ ವೈಭವಕ್ಕೇ ಹೆಚ್ಚು ಪ್ರಾಮುಖ್ಯತೆ. ಸರಳತೆ ಭೋದಿಸುವ ಆಶ್ರಮಗಳಲ್ಲಿ ನೆಲಹಾಸಿಗೆಗೆ ಮಾರ್ಬಲ್ಲು, ಗ್ರಾನೈಟು; ಬಾಗಿಲು, ಕಂಬಗಳಲ್ಲಿ ತೇಗ. ಮುಖ್ಯಮೂರುತಿಯ ಬಾಗಿಲಿಗೆ ಶ್ರೀಗಂಧದ ಉಪಯೋಗವೂ ಇದ್ದೀತು. ಶಾಂತಿ ಬೋಧಿಸುವ ಆಶ್ರಮಗಳಲ್ಲಿ ಸ್ವಾಮೀಜಿ ಎನ್ನಿಸಿಕೊಂಡವರಿಂದಲೇ ಕೇಳುಗರನ್ನು ಉದ್ವೇಗಕ್ಕೊಳಪಡಿಸಿ ಹಿಂಸೆಗೆ ಪ್ರಚೋದಿಸುವಂತಹ ಪರಧರ್ಮ ನಿಂದನೆ. ಭಾರತದ ಗತವೈಭವವನ್ನು ಅಗತ್ಯಕ್ಕಿಂತ ಹೆಚ್ಚಿಗೆ ಹೊಗಳುತ್ತಾ ಇಂದಿನ ಸರ್ವಸಂಕಷ್ಟಗಳಿಗೂ ಭಾರತದ ಮೇಲೆ ದಂಡೆತ್ತಿ ಬಂದ ಸಾಬರು ಮತ್ತು ಕ್ರೈಸ್ತರನ್ನೇ ಹೊಣೆಯಾಗಿಸುವ ಮಾತುಗಳನ್ನು ಹೆಣೆಯುವಲ್ಲಿ ಸಿದ್ಧ ಹಸ್ತರು. ಆಧ್ಯಾತ್ಮಕ್ಕೆ ಮನಶ್ಯಾಂತಿಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಿದರೆ ‘ಅದರ ಬಗ್ಗೆ ನಾನೊಂದು ಪುಸ್ತಕ ಬರೆದಿದ್ದೇನೆ. ನಮ್ಮ ಆಫೀಸಿನಲ್ಲೇ ದೊರೆಯುತ್ತದೆ. ಕೊಂಡು ಓದಿ’ ಎಂದು ಬಿಡುತ್ತಿದ್ದರು! ಪುಸ್ತಕದ ಬೆಲೆ ವಿದ್ಯಾರ್ಥಿಗಳ ಕೈಗೆಟುಕದಂತಿತ್ತು. ಕೆಲವರ ಮಾತುಗಳಲ್ಲಿ ಸತ್ವವಿದೆ ಎನ್ನಿಸುತ್ತಿತ್ತಾದರೂ ಸಂಸ್ಕೃತವನ್ನು ಜಾಸ್ತಿ ಬಳಸಿ ಪೂರ್ಣವಾಗಿ ಅರ್ಥವಾಗದಂತೆ ಮಾಡಿಬಿಡುತ್ತಿದ್ದರು. ಮನದ ಗೊಂದಲಗಳನ್ನು ನಿವಾರಿಸಿಕೊಂಡು ನೆಮ್ಮದಿಯನ್ನರಸಿ ಆಶ್ರಮದ ಕಡೆಗೆ ಮುಖಮಾಡಿದ ಕ್ರಾಂತಿಗೆ ಇರುವ ಗೊಂದಲಗಳ ಜೊತೆಜೊತೆಗೆ ಆಶ್ರಮ – ಸನ್ಯಾಸಿ – ಸ್ವಾಮೀಜಿ – ಆಧ್ಯಾತ್ಮದ ಬಗೆಗಿನ ಗೊಂದಲಗಳು ಸೇರಿಕೊಂಡವು. ಒಂದು ಘಂಟೆ ಆಶ್ರಮದಲ್ಲಿ ಕಳೆಯಬೇಕೆಂದು ಬಂದು ಐದತ್ತು ನಿಮಿಷಕ್ಕೇ ಎದ್ದು ಹೋಗಿಬಿಡುತ್ತಿದ್ದ. ಆಗಷ್ಟೇ ಕಲಿತಿದ್ದ ಸಿಗರೇಟನ್ನು ಹತ್ತಿರದ ಅಂಗಡಿಯಲ್ಲಿ ಸೇದಿ ಕಾಲುಗಳು ಕರೆದುಕೊಂಡು ಹೋದ ಕಡೆಗೆ ತಿರುಗುತ್ತಿದ್ದ. ಹಾಗೆ ಅಲೆಯುವಾಗೊಮ್ಮೆ ಸಂತೋಷಾನಂದ ಸ್ವಾಮಿಗಳ ಆಶ್ರಮ ಕಣ್ಣಿಗೆ ಬಿತ್ತು. ಒಂಟಿಕೊಪ್ಪಲಿನಿಂದ ಕೆ.ಆರ್.ಎಸ್ ಕಡೆಗೆ ಹೋಗುವ ರಸ್ತೆಯಲ್ಲಿ ಒಂದು ಕಿಮಿ ಸಾಗಿ ಎಡಕ್ಕೆ ತಿರುಗಿ ಇಳಿಜಾರು ರಸ್ತೆಯಲ್ಲಿ ಮತ್ತೆ ಅರ್ಧ ಕಿಮಿ ನಡೆದು ಬಲಕ್ಕಿರುವ ಮಣ್ಣಿನ ರಸ್ತೆಯಲ್ಲಿ ಸಾಗಿದರೆ ಕೊನೆಯಲ್ಲಿದೆ ಸಂತೋಷಾನಂದ ಸ್ವಾಮಿಗಳ ಆಶ್ರಮ. ಒಂದೂವರೆ ಎಕರೆ ಪ್ರದೇಶದಲ್ಲಿ ಆಶ್ರಮ ವಿಸ್ತರಿಸಿಕೊಂಡಿದೆ. ಗೇಟು ದಾಟಿ ಹತ್ತು ಹೆಜ್ಜೆ ಹಾಕಿದರೆ ಬಲಗಡೆಗೆ ಧ್ಯಾನ ಮಂದಿರವಿದೆ. ಬೆಳಿಗ್ಗೆ ಐದರಿಂದ ಆರು ಮತ್ತು ಸಂಜೆ ಆರರಿಂದ ಏಳರವರೆಗೆ ಸ್ವತಃ ಸ್ವಾಮೀಜಿಗಳು ಧ್ಯಾನದಲ್ಲಿ ಭಾಗವಹಿಸುತ್ತಾರೆ ದೀಕ್ಷೆ ಪಡೆದುಕೊಂಡ ಮತ್ತು ಪಡೆದುಕೊಳ್ಳದ ತಮ್ಮೈದು ಶಿಷ್ಯರೊಂದಿಗೆ. ಬೆಳಕಿನ ಕಿರಣಗಳು ನಿರ್ಗಮಿಸುವ ಮುನ್ನ ಧ್ಯಾನವೂ ಮುಗಿಯಬೇಕೆಂಬ ಉದ್ದೇಶದಿಂದ ಸಂಜೆಯ ಧ್ಯಾನದ ಸಮಯ ಐದರಿಂದ ಆರರವರೆಗಿತ್ತು. ನಗರದೊಳಗೆ ಕೆಲಸಕ್ಕೋಗುವ ಕೆಲವು ಭಕ್ತಾದಿಗಳಿಗೆ ಆ ಸಮಯ ಹೊಂದುತ್ತಿರಲಿಲ್ಲವಾದ ಕಾರಣ ಸಮಯ ಬದಲಿಸಿದ್ದರು. ಧ್ಯಾನ ಮಂದಿರದ ಹಿಂದೆಯೇ ಸ್ವಾಮಿಗಳ ಕೋಣೆಯಿತ್ತು. ಧ್ಯಾನಮಂದಿರದ ಎದುರಿಗಿರುವ ಆವರಣದಲ್ಲಿ ಭಕ್ತರೊಬ್ಬರು ಕೊಟ್ಟ ನಂದಿ ವಿಗ್ರಹವಿತ್ತು. ವಿಗ್ರಹಗಳನ್ನು ಕೊಡುಗೆಯಾಗಿ ಸ್ವಾಮಿಗಳು ಸ್ವೀಕರಿಸುತ್ತಿರಲಿಲ್ಲ; ಒಂದೂವರೆ ಎಕರೆಯನ್ನು ಆಶ್ರಮದ ಸಲುವಾಗಿ ಒಂದು ರುಪಾಯಿಗೆ ಬರೆದುಕೊಟ್ಟ ಭಕ್ತರು ಆ ವಿಗ್ರಹವನ್ನು ನೀಡಿದ್ದರಿಂದಾಗಿ ನಿರಾಕರಿಸಲು ಸಾಧ್ಯವಾಗಲಿಲ್ಲ. ಕಚ್ಚಾ ರಸ್ತೆಯಲ್ಲಿ ಮತ್ತಷ್ಟು ಒಳ ಸರಿದರೆ ದೇವಸ್ಥಾನವಿತ್ತು. ದೇವರಿಲ್ಲದ ದೇವಸ್ಥಾನವದು. ದೇವಾಲಯದ ಒಳಗೆ ಆಳೆತ್ತರದ ಏಕಶಿಲೆಯಿತ್ತು. ಯಾವುದೇ ಕೆತ್ತನೆಗಳಿರಲಿಲ್ಲ. ಆ ಶಿಲೆಗೆ ಅರಿಶಿಣ – ಕುಂಕುಮ ಹಚ್ಚುತ್ತಿರಲಿಲ್ಲ, ಹೂವು ಮುಡಿಸುತ್ತಿರಲಿಲ್ಲ. ಬೆಳಿಗ್ಗೆ ಮತ್ತು ಸಂಜೆ ಧ್ಯಾನದ ನಂತರ ಸ್ವಾಮಿಗಳ ಶಿಷ್ಯರೊಬ್ಬರು ಏಕಶಿಲೆಗೆ ಪೂಜೆ ಸಲ್ಲಿಸುತ್ತಿದ್ದರು, ಮಂಗಳಾರತಿ ಬೆಳಗುವುದರ ಮೂಲಕ ಮತ್ತು ನಾಲ್ಕು ಸುಗಂಧದ ಕಡ್ಡಿಯನ್ನು ಶಿಲೆಯ ಬುಡದಲ್ಲಿಡುವುದರ ಮೂಲಕ. ಸಂತೋಷಾನಂದ ಸ್ವಾಮಿಗಳು ವಿಗ್ರಹಾರಾಧಕರಲ್ಲ. ಪೂಜೆಯ ಅಂಶವಿರದಿದ್ದರೆ, ಪ್ರಸಾದದ ಆಕರ್ಷಣೆಯಿರದಿದ್ದರೆ ಭಕ್ತಾದಿಗಳನ್ನು ಸೆಳೆಯುವುದು ಕಷ್ಟ ಎಂಬ ಟ್ರಸ್ಟಿಗಳೆಂಬ ಹಿತೈಷಿಗಳ ಮಾತಿಗೆ ಕಟ್ಟುಬಿದ್ದು ದೇವಾಲಯವನ್ನು ಕಟ್ಟಿಸಿದರು. ಯಾವ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕೆಂದು ಟ್ರಸ್ಟಿಗಳ ಮಧ್ಯೆಯೇ ಜೋರು ಗಲಾಟೆಯಾಯಿತು. ವಿಗ್ರಹಾರಾಧನೆಯನ್ನು ಇಷ್ಟಪಡದ ಸ್ವಾಮಿಗಳಿಗೆ ಇದರಿಂದ ಅನುಕೂಲವೇ ಆಯಿತು. ಒಂದು ದೊಡ್ಡ ಏಕಶಿಲೆಯನ್ನು ಪ್ರತಿಷ್ಠಾಪಿಸೋಣ, ಯಾವ ಮೂರ್ತಿಯನ್ನು ಕೆತ್ತಬೇಕೆಂದು ನಂತರ ನಿರ್ಧರಿಸಿದರಾಯಿತು ಎಂದು ಹೇಳಿದರು. ಮೊದಲು ದೇವಾಲಯ ಪ್ರಾರಂಭವಾಗಲಿ ನಂತರ ಮಿಕ್ಕಿದ್ದು ಎಂದು ಟ್ರಸ್ಟಿಗಳೂ ಸಮಾಧಾನ ಪಟ್ಟುಕೊಂಡರು. ದೇವಾಲಯದ ಹಿಂದೆ ಇನ್ನುಳಿದ ಜಾಗದಲ್ಲಿ ಕೈತೋ ಮಾಡಿಕೊಂಡಿದ್ದರು. ಆಶ್ರಮದಲ್ಲಿರುವವರ ನಿತ್ಯಾಹಾರಕ್ಕೆ ಬೇಕಾದ ತರಕಾರಿಗಳನ್ನು ಅಲ್ಲೇ ಸ್ವಾಮಿಗಳ ಮುಂದಾಳತ್ವದಲ್ಲಿ ಬೆಳೆಯಲಾಗುತ್ತಿತ್ತು. ಸೀಮಿತ ಸ್ಥಳದಲ್ಲಿ ಬೆಳೆಯಲಾಗದ ವಸ್ತುಗಳನ್ನು ಮಾತ್ರ ಹೊರಗಿನಿಂದ ತರುತ್ತಿದ್ದರು. ಆಶ್ರಮ ಪ್ರಾರಂಭವಾಗಿ ಮೂರು ವರುಷಗಳಾಗಿತ್ತಷ್ಟೇ. ಭಕ್ತರ ಸಂಖ್ಯೆಯಲ್ಲಿ ತುಂಬಾ ಏರಿಕೆಯೇನೂ ಇರಲಿಲ್ಲ. ದೇವಾಲಯದಲ್ಲಿ ವಿಶೇಷ ಪೂಜಾ ದಿನಗಳು ಇರದಿದ್ದುದೂ ಜನರು ಬರದಿರಲು ಕಾರಣ. ಬರುವ ಭಕ್ತರು ಮತ್ತೆ ಬೇರೆ ಆಶ್ರಮದೆಡೆಗೆ ಹೋಗುತ್ತಿರಲಿಲ್ಲ ಎಂಬುದೂ ಸತ್ಯ.

ಜೂನ್ 27, 2015

ಜುಲೈ ಮೂರರಿಂದ 'ಅಭಿ'ಯ ಆರಂಭ!

ಹೊಸಬರ ತಂಡ ಕಟ್ಟಿ ಸತತ ಎರಡು ವರುಷ ಚಿತ್ರದ ನಟ ನಟಿಯರಿಗೆ ತರಬೇತಿ ನೀಡಿ ನೈಜತೆಗೆ ಒತ್ತು ನೀಡಿ ಚಿತ್ರೀಕರಿಸಿರುವ ಆರಂಭ ಚಿತ್ರ ಜುಲೈ ಮೂರರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಸೆನ್ಸಾರಿನ ಬಾಹು ಬಂಧನದಿಂದ ಹೊರಬರಲು ಕೊಂಚ ತಡವಾಯಿತು ಎಂಬುದು ಚಿತ್ರತಂಡದ ಮಾತು! 
'ಹಾರ್ಟ್ ಟಚಿಂಗ್' ಟೀಸರ್, ಕಣಗಾಲಿನಲ್ಲಿ ಪುಟ್ಟಣ್ಣರ ನೆನಪಿಗೊಂದು ಪ್ರದರ್ಶನ, 'ಇದುವರೆಗೆ ಇದ್ದಿಲ್ಲ' ಎಂಬ ನವೀನ ಮಾದರಿಯ ಹಾಡಿನ ಮೂಲಕ ಸದ್ದು - ಸುದ್ದಿ ಮಾಡಿದ್ದ 'ಆರಂಭ' ನಿನ್ನೆ 'ಹೆಣ್ಣಿಂದ ಹಾಳಾದ ಕುಮಾರ'ನ ಟ್ರೇಲರ್ ಬಿಡುಗಡೆ ಮಾಡಿದೆ. ಜಾತಿ, ಮಹಿಳಾ ದೌರ್ಜನ್ಯದ ಎಳೆಗಳು ಟ್ರೇಲರ್ರಿನಲ್ಲಿ ಕಾಣಿಸುತ್ತಿದೆ. 

ಗೆಳೆಯ ಎಸ್.ಅಭಿ ಹನಕೆರೆ ನಿರ್ದೇಶನದ ಚಿತ್ರವನ್ನು ನಿರ್ಮಿಸಿರುವುದು ಗಣೇಶ್ ವಿ ನಾಗೇನಹಳ್ಳಿ. ಗುರಕಿರಣ್ ಸಂಗೀತವಿರುವ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಥುನ್ ಪ್ರಕಾಶ್, ಅಭಿರಾಮಿ, ರಸಗವಳ ನಾರಾಯಣ, ಅಭಿರಾಜು, ಬಳ್ಳಾರಿ ರಾಘವೇಂದ್ರ, ನಂದೀಶ್, ರಾಜೇಗೌಡ, ಚಂದ್ರು, ಹಾಸಿನಿ, ಪ್ರಥ್ವಿ ಮತ್ತಿತರಿದ್ದಾರೆ.

ಜೂನ್ 24, 2015

ಫ್ಲಿಪ್ ಕಾರ್ಟಿನಿಂದ ನಾಯಿ ಖರೀದಿ!

ನಾಯಿ ಖರೀದಿ!
ಫ್ಲಿಪ್ ಕಾರ್ಟ್ ಬೆಂಗಳೂರನ್ನು ಮುಖ್ಯಕಛೇರಿ ಮಾಡಿಕೊಂಡಿರುವ ಬಹುದೊಡ್ಡ ಇ-ಕಾಮರ್ಸ್ ಕಂಪನಿ. ಫ್ಲಿಪ್ ಕಾರ್ಟ್ ಮೊದಮೊದಲು ಪುಸ್ತಕಗಳನ್ನಷ್ಟೇ ಮಾರುವ ಸಂಸ್ಥೆಯಾಗಿತ್ತು. ಫ್ಲಿಪ್ ಕಾರ್ಟಿನ ಅಂತರ್ಜಾಲ ಪುಟವನ್ನು ತೆರೆದರೆ ಪುಸ್ತಕಗಳ ರಾಶಿಯೇ ಕಾಣಿಸುತ್ತಿತ್ತು. ನಿಧನಿಧಾನವಾಗಿ ಮೊಬೈಲು, ಕ್ಯಾಮೆರಾ ಎಂದು ವ್ಯಾಪಾರ ವಿಸ್ತಾರಗೊಳ್ಳುತ್ತಾ ಈಗ ಫ್ಲಿಪ್ ಕಾರ್ಟಿನಲ್ಲಿ ಸಿಗದ ವಸ್ತುವೇ ಇಲ್ಲ ಎಂದು ಹೇಳಬಹುದು. ಅಮೆಜಾನ್, ಸ್ನ್ಯಾಪ್ ಡೀಲ್, ಶಾಪ್ ಕ್ಲೂಸ್, ಇಬೇನಂತಹ ಹತ್ತಲವು ಇ-ಕಾಮರ್ಸ್ ಕಂಪನಿಗಳು ಈಗ ಕಾರ್ಯನಿರ್ವಹಿಸುತ್ತಿದೆಯಾದರೂ ಫ್ಲಿಪ್ ಕಾರ್ಟ್ ಮುಂಚೂಣಿಯಲ್ಲಿರುವುದು ಸುಳ್ಳಲ್ಲ.
ತಿಂಗಳಿಗೆರಡು ಮೂರು ದಿವಸ 'ವಿಶೇಷ ದಿನ'ಗಳನ್ನಾಗಿ ಮಾಡಿ ವಿಪರೀತವೆನ್ನುವಷ್ಟು ರಿಯಾಯತಿಯನ್ನು ಘೋಷಿಸುವುದು ಈಗ ಸಾಮಾನ್ಯವಾಗಿದೆ. ಅನೇಕ ಬಾರಿ ಹೆಚ್ಚಿನ ಬೆಲೆ ನಮೂದಿಸಿ ರಿಯಾಯತಿ ಘೋಷಿಸುವುದೂ ಇದೆ. ಈ ತಿಂಗಳ ಇಪ್ಪತ್ತೆರಡರಿಂದ ಇಪ್ಪತ್ತನಾಲ್ಕರವರೆಗೆ ಫ್ಲಿಪ್ ಕಾರ್ಟ್ ಈ ರೀತಿಯೊಂದು ರಿಯಾಯತಿ ಹಬ್ಬ ಘೋಷಿಸಿದೆ. ಅದಕ್ಕೆ ಸಂಬಂಧಪಟ್ಟ ಜಾಹೀರಾತಿನಲ್ಲಿ "ನಹೀ ಕರೀದಾ" ಎಂಬ ಹಿಂದಿ ವಾಕ್ಯವನ್ನು ಉಪಯೋಗಿಸಲಾಗಿದೆ. ಸರಿ, ಹಿಂದಿ ಭಾಷಿಕರಿರುವ ರಾಜ್ಯಗಳಲ್ಲಿ ಹಿಂದಿ ವಾಕ್ಯವನ್ನು ಉಪಯೋಗಿಸಿಕೊಳ್ಳಲಿ ಆದರೆ ಕರ್ನಾಟಕದ ರಾಜಧಾನಿಯಲ್ಲೇ ಮುಖ್ಯ ಕಛೇರಿ ಮಾಡಿಕೊಂಡಿರುವ ಸಂಸ್ಥೆಯೊಂದು ಬೆಂಗಳೂರಿನಲ್ಲಿ ಹಾಕುವ ಜಾಹೀರಾತಿನಲ್ಲಾದರೂ ಕನ್ನಡವನ್ನು ಉಪಯೋಗಿಸಬೇಕಿತ್ತಲ್ಲವೇ? ಅದು ಬಿಟ್ಟು Nahee karidaa? ಎಂದು ಹಿಂದಿಯನ್ನು ಆಂಗ್ಲದಲ್ಲಿ ಹಾಕಿ ಅಪಸವ್ಯ ಸೃಷ್ಟಿಸಿದೆ. ಕನ್ನಡದಲ್ಲದು 'ನಾಯಿ ಖರೀದ' ಎಂದು ವಿಚಿತ್ರವಾಗಿ ಧ್ವನಿಸುತ್ತದಲ್ಲವೇ?
ಅಂಗಡಿಯಲ್ಲಿ ಕನ್ನಡ ನುಡಿಯ ಗೆಳೆಯರು ಫೇಸ್ ಬುಕ್ ಪುಟದ ಮೂಲಕ ಈ ನಾಯಿ ಖರೀದಿಯ ವ್ಯವಹಾರವನ್ನು ಪ್ರಚುರಪಡಿಸಲಾಯಿತು. ಫ್ಲಿಪ್ ಕಾರ್ಟಿನ ಫೇಸ್ ಬುಕ್ ಪುಟ, ಟ್ವಿಟರ್ ಪುಟಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಕೇಳಿಕೊಂಡರು ಅಂಗಡಿಯ ಗೆಳೆಯರು. 
ಇದಕ್ಕೆ ಪೂರಕವೆಂಬಂತೆ ನಿಶಾಂತ್ ಶೆಟ್ಟಿ ಎಂಬುವರು ಯೂಟ್ಯೂಬಿನಲ್ಲಿ ಕನ್ನಡ ಉಪಯೋಗಿಸದ ಕಾರಣಕ್ಕಾಗಿ ಖರೀದಿಸಿದ ವಸ್ತುವನ್ನು ವಾಪಸ್ಸು ಮಾಡುತ್ತಿರುವುದಾಗಿ ಫ್ಲಿಪ್ ಕಾರ್ಟಿಗೆ ಹೇಳುವ ವೀಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಅದರ ಸತ್ಯಾಸತ್ಯತೆಗಳನ್ನು ಪಕ್ಕಕ್ಕಿಟ್ಟರೂ ಉದ್ದೇಶದ ಬಗ್ಗೆ ಎರಡು ಮಾತಿಲ್ಲ. ಈ ಚರ್ಚೆಗಳ ನಡುವೆ ನಾರಾಯಣ್ ಎಂಬುವರು ಫ್ಲಿಪ್ ಕಾರ್ಟಿನಿಂದ ಲ್ಯಾಪ್ ಟಾಪನ್ನು ಖರೀದಿಸಿದ್ದಾರೆ; ಕನ್ನಡ ಉಪಯೋಗಿಸುತ್ತಿಲ್ಲವೆಂಬ ಕಾರಣ ನೀಡಿ ವಾಪಸ್ಸು ಮಾಡುವುದಕ್ಕೆ! ಒಟ್ಟಿನಲ್ಲಿ ಇರುವ ನಾಡಿನ ಭಾಷೆಗೆ ಗೌರವ ನೀಡದ ಸಂಸ್ಥೆಯೊಂದಕ್ಕೆ ಕನ್ನಡ ಗ್ರಾಹಕರು ಸರಿಯಾಗಿಯೇ ಚುರುಕು ಮುಟ್ಟಿಸುತ್ತಿದ್ದಾರೆ.
ಫ್ಲಿಪ್ ಕಾರ್ಟಿನ ವಿರುದ್ಧ ನಿಮ್ಮ ದೂರನ್ನು ದಾಖಲಿಸಲು
https://twitter.com/Flipkart 
ಚಿತ್ರಗಳು: ಫೇಸ್ ಬುಕ್.

ಜೂನ್ 23, 2015

ಒಂದು ಪುನರ್ವಸತಿಯ ಕಥೆ....

ನಾಗರಾಜ್ ಹೆತ್ತೂರ್
ಬಹುಶಃ ಇಂತಹ ಕೆಲಸಗಳಿಗಿಂತ ಖುಷಿ ಕೊಡುವ ಕೆಲಸಗಳು ಬೇರೊಂದಿಲ್ಲ. 
ಮದ್ಯಾಹ್ನ ಮನೆಯಿಂದ ಹೊರಟವನು ನಮ್ಮ ಹಾಸನದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪುರುಶೋತ್ತಮ್ ಅವರಿಗೆ ಕರೆ ಮಾಡಿದೆ. ಹೊಸ ಬಸ್ ನಿಲ್ದಾಣದ ಹತ್ತಿರ ಬನ್ನಿ ಎಂದರು. ಅವರು ಅಲ್ಲಿಗೆ ಹೋಗುವಷ್ಟರಲ್ಲಿ ನಾನು ಸೇರಿಕೊಂಡೆ . ಕಳೆದ 8 ತಿಂಗಳಿಂದ ಅಲ್ಲೊಬ್ಬ ರಸ್ತೆ ಬದಿ ಬಿದ್ದುಕೊಂಡಿದ್ದ. ಅದು ಯಾವ ಮಟ್ಟಕ್ಕೆ ಎಂದರೆ ಆತ ಬದುಕಿರುವುದೇ ಹೆಚ್ಚು. ಅವನನ್ನು ಗಮನಿಸಿದ್ದವರು ಹುಚ್ಚನಿರಬಹುದೆಂದು ಕೊಂಡಿದ್ದರು. ಕೆಲವರು ಒಂದಷ್ಟು ಅನ್ನ ರೂಪಾಯಿ ದುಡ್ಡು ಕೊಟ್ಟು ಹೋಗುತ್ತಿದ್ದರು. ಇದನ್ನು ಗಮನಿಸಿದ್ದ ರವಿ ಕುಮಾರ್ ಎಂಬುವರು ಮೊನ್ನೆ ಹೋಗಿ ಮಾತನಾಡಿಸಿದಾಗ ಆತ ಹುಚ್ಚನಲ್ಲ ಎಂದು ಗೊತ್ತಾಗಿದೆ. ತಕ್ಷಣವೇ ಪತ್ರಕರ್ತ ಗೆಳೆಯ ಗಿರೀಶ್ ಗೆ ತಿಳಿಸಿದ್ದಾರೆ. ಗಿರೀಶ್ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪುರುಶೋತ್ತಮ್ ಅವರಿಗೆ ಪೋನ್ ಮಾಡಿ ವಿಚಾರ ತಿಳಿಸಿದ್ದಾರೆ. ತಕ್ಷಣವೇ ಕಾರ್ಯಪೃವೃತ್ತರಾದ ಪುರುಶೋತ್ತಮ್ ಇವರತ್ತು ಅವನಿಗೆ ಪುನರ್ ವಸತಿ ಕಲ್ಪಿಸುವ ಕೆಲಸಕ್ಕೆ ಮುಂದಾದರು. 
ಆತನ ಹೆಸರು ಸುರೇಶ್ , ಹಾಸನದವನು. ಒಂದು ಕಾಲಕ್ಕೆ ಸಾಕಷ್ಟು ಆಸ್ತಿ ಹೊಂದಿದ್ದವನು. ಮಕ್ಕಳಿಂದ ಅಲಕ್ಷ್ಯಕ್ಕೆ ಒಳಗಾದವನು ಮಕ್ಕಳೇ ಬೀದಿ ಪಾಲು ಮಾಡಿದರೆಂದು ಹೇಳುತ್ತಾನೆ. ಚೆನ್ನಾಗಿಯೇ ಮಾತನಾಡುವ ಆತನನ್ನು ಅಲ್ಲಿಂದ ಎಬ್ಬಿಸುವಷ್ಟರಲ್ಲಿ ಸಾಹಸವೇ ನಡೆಯಿತು. 
ಹಾಸನದ ಸ್ಕೌಡ್ಸ್ ಮತ್ತು ಗೌಡ್ಸ್ ನ ಗೆಳೆಯರು ಮತ್ತು ಸ್ಥಳೀಯರ ಸಹಕಾರದಿಂದ ಆತನನ್ನು ಎಬ್ಬಿಸಿ ಸೋಪು ಹಾಕಿ ತೊಳೆದು ಬಿಸಿ ನೀರು ಸ್ನಾನ ಮಾಡಿಸಿ ಹೊಸ ಬಟ್ಟೆ ಹಾಕಿದಾಗ ನಿಜಕ್ಕೂ ನಾವೇ ನಂಬದಷ್ಟು ಬದಲಾಗಿ ಹೋದ. ಮಳೆಯ ನಡುವೆಯೂ ಆ ಕ್ಷಣಕ್ಕೆ ಆತನನ್ನು ಮನುಷ್ಯನನ್ನಾಗಿ ಮಾಡಲು ಯಶಸ್ವಿಯಾದೆವು. 
ಆತನಿಗೆ ಬ್ರೆಡ್ಡು ಟೀ ಕೊಟ್ಟಾಗಲಂತೂ ಆತನ ಕಣ್ಣು ನೋಡಬೇಕಿತ್ತು. ನಂತರ ಸಮಾಜ ಕಲ್ಯಾಣ ಇಲಾಖೆಯ ಸಹಕಾರದಿಂದ ಆತನನ್ನು ತುಮಕೂರಿನ ಪುನರ್ ವಸತಿ ಕೆಂದ್ರಕ್ಕೆ ಕಳಿಸಲಾಯಿತು. ಹಾಸನ ಜಿಲ್ಲೆಯಲ್ಲಿ ತಮ್ಮ ಕೆಲಸದ ಮೂಲಕ ಹೆಸರು ಮಾಡಿರುವ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮತ್ತು ಸಹೋದ್ಯೋಗಿಗಳು, ಸಿಬ್ಬಂದಿವರ್ಗ ಈ ಅಮೂಲ್ಯ ಕೆಲಸ ಮಾಡುವ ಮೂಲಕ ಜನತೆಯ ಪ್ರಶಂಸೆಗೆ ಒಳಗಾದರು.... ಇಂತಹ ಕಾರ್ಯಗಳು ಎಲ್ಲೆಡೆ ನಡೆಯಲಿ...... 

ಪುರುಶೋತ್ತಮ್, ಗಿರೀಶ್ ಮತ್ತು ರವಿ ಕುಮಾರ್ ಅವರ ಕಾರ್ಯಕ್ಕೆ ಒಂದು ಹ್ಯಾಟ್ಸ್ ಆಫ್ ಹೇಳೋಣ
(ಇಂತಹವರು ನಿಮ್ಮ ಕಣ್ಣೆದುರೂ ಇರಬಹುದು ಅಲಕ್ಷ್ಯ ವಹಿಸದಿರಿ)
(ನಾಗರಾಜ್ ಹೆತ್ತೂರರ ಫೇಸ್ ಬುಕ್ ಪುಟದಿಂದ)

ಕಣ್ವ ಜಲಾಶಯವನ್ನು ತುಂಬಿಸುವ ಸಂಭ್ರಮ!

ರಾಮನಗರ ಜಿಲ್ಲೆಯ ಕೆಂಗಲ್ ಬಳಿಯ ಕಣ್ವ ಜಲಾಶಯ ಸಂಪೂರ್ಣ ಬರಿದಾಗಿತ್ತು. ದೊಡ್ಡ ಗಾತ್ರದ ಪೈಪುಗಳಿಂದ ಕಣ್ವಕ್ಕೆ ನೀರನ್ನು ಹರಿಸಲಾಗುತ್ತಿದೆ. ಅದರ ವೀಡಿಯೋ ನಿಮ್ಮ ಹಿಂಗ್ಯಾಕೆಯಲ್ಲಿ. ಮೋಡ ಕವಿದ ವಾತಾವರಣದ ಕಾರಣ ವೀಡಿಯೋ ಗುಣಮಟ್ಟ ಕಡಿಮೆಯಾಗಿದೆ, ಕ್ಷಮೆಯಿರಲಿ.
ಇದನ್ನೂ ಓದಿ: ಯೋಗೇಶ್ವರನೆಂಬ ಭಗೀರಥನೂ ಚನ್ನಪಟ್ಟಣದ ಕೆರೆಗಳು!

ಜೂನ್ 19, 2015

ಸರ್ಕಾರಕ್ಕೆ ರೈತನೊಬ್ಬನ ಡೆತ್ ನೋಟ್.

ಸರ್ಕಾರಕ್ಕೆ,
ಶ್ರೀರಂಗಪಟ್ಟಣ ತಾಲ್ಲೂಕ್ ಚೆನ್ನೇನಹಳ್ಳಿ ಗ್ರಾಮದ ಸಿ.ರಾಜೇಂದ್ರನಾದ ನಾನು ವ್ಯವಸಾಯಗಾರನಾಗಿ ಅನೇಕ ಬೆಳೆಗಳನ್ನು ಮಾಡಿದ್ದೇನೆ. ಈಗ ಹಾಲಿ ಕಬ್ಬು, ಬಾಳೆ ಮತ್ತು ತರಕಾರಿ ಬೆಳೆಗಳನ್ನು ಮಾಡಿರುತ್ತೇನೆ. ಯಾವ ಬೆಳೆಗೂ ಬೆಲೆ ಇಲ್ಲದೆ ವಿಪರೀತ ನಷ್ಟ ಹೊಂದಿರುತ್ತೇನೆ. ಆದ್ದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.
ಸಿ.ರಾಜೇಂದ್ರ
ಚೆನ್ನೇನಹಳ್ಳಿ
18/06/2015

ಜೂನ್ 18, 2015

ಅನ್ನವೆಂಬ "ಭಾಗ್ಯ"ವೂ ಮನುಜನೆಂಬ "ಆಲಸಿ"ಯೂ

annabhagya
Dr Ashok K R
ಸಿದ್ಧರಾಮಯ್ಯ ಸರಕಾರದ ಅನ್ನಭಾಗ್ಯ ಯೋಜನೆ ಮತ್ತೆ ಚರ್ಚೆಯ ವಿಷಯವಾಗಿದೆ. ಕಾರಣ ಎಸ್.ಎಲ್.ಭೈರಪ್ಪ, ಕುಂ.ವೀರಭದ್ರಪ್ಪ ಮತ್ತು ದೇಜಗೌ ಅದನ್ನು ವಿರೋಧಿಸುವ ಮಾತುಗಳನ್ನಾಡಿದ್ದಾರೆ. ಭೈರಪ್ಪನವರು ಅನ್ನಭಾಗ್ಯ ಸೋಮಾರಿಗಳನ್ನು ಹುಟ್ಟುಹಾಕುತ್ತಿದೆ, ಇದು ದೇಶ ನಾಶದ ಕೆಲಸ ಎಂದು ಗುಡುಗಿರುವ ಬಗ್ಗೆ ವರದಿಗಳು ಬಂದಿವೆ. ಇಲ್ಲಿ ಮೇಲೆ ಹೆಸರಿಸಿರುವ ಲೇಖಕರು ನಿಮಿತ್ತ ಮಾತ್ರ. ಅನ್ನಭಾಗ್ಯವೆಂಬುದು ಸೋಮಾರಿಗಳನ್ನು ತಯಾರಿಸುವ ಯೋಜನೆ ಎಂಬ ಭಾವನೆ ಅನೇಕರಲ್ಲಿದೆ. ಜನರ ದಿನವಹೀ ಮಾತುಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಸಿದ್ಧು ಸರಕಾರದ ಈ ಯೋಜನೆ ಟೀಕೆಗೆ ಗ್ರಾಸವಾಗಿದೆ. ಮತ್ತೀ ಟೀಕೆಯನ್ನು ಮಾಡುತ್ತಿರುವವರ ಆರ್ಥಿಕ ಸ್ಥಿತಿಗತಿಗಳನ್ನು ಗಮನಿಸಿದರೆ ಹೆಚ್ಚಿನಂಶ ಅವರು ಮಧ್ಯಮವರ್ಗದವರೇ ಆಗಿರುತ್ತಾರೆ. ಕೆಳ ಮಧ್ಯಮವರ್ಗದಿಂದ ಉಚ್ಛ ಮಧ್ಯಮವರ್ಗದೆಡೆಗೆ ಸಾಗುತ್ತಿರುವವರು, ಮಧ್ಯಮವರ್ಗದಿಂದ ಶ್ರೀಮಂತ ವರ್ಗಕ್ಕೆ ಸಾಗುತ್ತಿರುವವರ ಸಂಖೈ ಈ ಟೀಕಾಕಾರರಲ್ಲಿ ಹೆಚ್ಚಿದೆ.. ಈ ಅನ್ನಭಾಗ್ಯ ಯೋಜನೆ ನಿಜಕ್ಕೂ ಇಷ್ಟೊಂದು ಟೀಕೆಗೆ ಅರ್ಹವೇ?

ಮೊದಲಿಗೆ ಈ ಯೋಜನೆಗೆ ಇಟ್ಟ ಹೆಸರು ಟೀಕೆಗೆ ಅರ್ಹ. ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಆಹಾರವಿಲ್ಲದೆ ಕಂಗೆಟ್ಟು ಪ್ರಾಣಿ / ಮನುಷ್ಯ ಹಸಿವಿನಿಂದ ಸಾಯುವುದು ಪ್ರಕೃತಿ ರೂಪಿಸಿದ ಜನಸಂಖ್ಯಾ ನಿಯಂತ್ರಣ ನಿಯಮ. ಮಾನವ ಪ್ರಕೃತಿಯಿಂದ ದೂರ ಸರಿದು, ಪ್ರಕೃತಿಯೊಡ್ಡಿದ ಸವಾಲುಗಳನ್ನು ಎದುರಿಸಲಾರಂಭಿಸಿದ. ಬಹಳಷ್ಟು ಬಾರಿ ಸೋತ, ಕೆಲವೊಮ್ಮೆ ಗೆದ್ದ. ಇದಕ್ಕಿಂತಲೂ ಹೆಚ್ಚಾಗಿ Survival of the fittest ಎಂಬ ಪ್ರಕೃತಿಯ ನಿಯಮವನ್ನು ಮೀರುವುದಕ್ಕಾಗಿ ಮಾನವೀಯತೆಯ ಮೊರೆಹೊಕ್ಕ. ಈ ಮಾನವೀಯತೆಯ ಕಾರಣದಿಂದಲೇ ಅಲ್ಲವೇ ಅನ್ಯ ಮನುಷ್ಯನೊಬ್ಬ ಹಸಿವಿನಿಂದ ಸತ್ತರೆ, ಆಹಾರ ಸಿಗದೆ ಸತ್ತರೆ ‘ಕರುಳು ಚುರುಕ್’ ಎನ್ನುವುದು? ಮನುಷ್ಯ ನಿರ್ಮಿತ ಗಡಿಗಳು ದೇಶವನ್ನು ರಚಿಸಿ, ದೇಶದೊಳಗೊಂದಷ್ಟು ರಾಜ್ಯಗಳನ್ನು ಸೃಷ್ಟಿಸಿ ಮನುಷ್ಯನ ಸ್ವೇಚ್ಛೆಗಳಿಗೆ ಕಡಿವಾಣ ವಿಧಿಸಲು ಸಮಾಜ – ಸರಕಾರಗಳೆಲ್ಲ ರಚಿತವಾದ ನಂತರ ಸರಕಾರದ ಭಾಗವಾಗಿರುವ ಮನುಷ್ಯರಿಗೂ ಒಂದಷ್ಟು ಮಾನವೀಯತೆ ಇರಬೇಕೆಂದು ನಿರೀಕ್ಷಿಸಬಹುದು. ನೆರೆಯವನೊಬ್ಬ ಹಸಿವಿನಿಂದ ಸತ್ತಂತಾದರೆ ಅದರ ಹೊಣೆ ಸರಕಾರದ್ದಾಗುತ್ತದೆ. ಪ್ರಜೆಗಳ ಅಪೌಷ್ಟಿಕತೆಯನ್ನು, ಹಸಿವನ್ನು ಹೋಗಲಾಡಿಸುವುದು ಸರಕಾರದ ಆದ್ಯ ಕರ್ತವ್ಯವಾಗುತ್ತದೆ. ಇಷ್ಟೆಲ್ಲ ಯೋಚಿಸಿ ಯೋಜನೆಗಳನ್ನು ಸರಕಾರಗಳು ರೂಪಿಸುವುದು ಅಪರೂಪ, ರಾಜಕಾರಣಿಗಳ ಮುಖ್ಯ ದೃಷ್ಟಿ ಮುಂದಿನ ಚುನಾವಣೆಯಲ್ಲಿ ಒಂದಷ್ಟು ಹೆಚ್ಚಿನ ಮತಗಳು ಬೀಳಲು ಈ ಯೋಜನೆಯಿಂದ ಸಹಾಯವಾಗುತ್ತದಾ ಎನ್ನುವುದೇ ಆಗಿದೆ. ಓಟಿಗಾಗಿ ರಾಜಕೀಯ ಮಾಡುವುದು ತಪ್ಪೆಂದು ತೋರುತ್ತದಾದರೂ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಯ ಗುರಿಯೇ ಚುನಾವಣೆಯಲ್ಲಿ ಗೆಲ್ಲುವುದಾಗಿರುವಾಗ ಅವರು ಮಾಡುವ ಪ್ರತೀ ಕೆಲಸವೂ ಮತಬ್ಯಾಂಕಿಗಾಗಿ ಅಲ್ಲವೇ? ಕೆಟ್ಟದು ಮಾಡಿಯೂ ಓಟುಗಳನ್ನು ಹೆಚ್ಚಿಸಿಕೊಳ್ಳಬಹುದು, ಒಳ್ಳೆಯದನ್ನು ಮಾಡಿಯೂ ಹೆಚ್ಚಿಸಿಕೊಳ್ಳಬಹುದು, ಆಯ್ಕೆ ಅವರವರಿಗೆ ಬಿಟ್ಟಿದ್ದು. ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಿ.ಪಿ.ಎಲ್ ಕಾರ್ಡುದಾರರಿಗೆ ಉಚಿತ / ಅತಿ ಕಡಿಮೆ ದರಕ್ಕೆ ಅಕ್ಕಿ, ಬೇಳೆ, ಜೋಳ, ರಾಗಿ ನೀಡುವುದು ಒಪ್ಪತಕ್ಕ ವಿಚಾರವಾದರೂ ಅದಕ್ಕೆ ‘ಭಾಗ್ಯ’ ಎಂದು ಹೆಸರಿಸುವ ಅನಿವಾರ್ಯತೆ ಏನಿದೆ? ಅಪೌಷ್ಟಿಕತೆ ಹೋಗಲಾಡಿಸುವುದು ಸರಕಾರದ ಕರ್ತವ್ಯ ಮತ್ತು ಪೌಷ್ಟಿಕ ಆಹಾರವನ್ನು ಬಯಸುವುದು ಪ್ರತಿಯೊಬ್ಬ ನಾಗರೀಕನ ಹಕ್ಕು. ‘ಭಾಗ್ಯ’ ಎಂದು ಹೆಸರಿಡುವಲ್ಲಿ ವರ್ಗ ತಾರತಮ್ಯದ ದರುಶನವಾಗುತ್ತದೆ. ಸಬ್ಸಿಡಿ ಇರುವ ಗ್ಯಾಸ್ ಸಿಲಿಂಡರಿಗೆ ಅನಿಲ ಭಾಗ್ಯ ಎಂಬ ಹೆಸರಿದೆಯೇ? ಮಧ್ಯಮವರ್ಗದವರು ಪಡೆದುಕೊಳ್ಳುವ ಸೌಲತ್ತುಗಳಿಗೆ ಇಲ್ಲದ ‘ಭಾಗ್ಯ’ವೆಂಬ ನಾಮಧೇಯ ಬಡವರ ಯೋಜನೆಗಳಿಗೆ ಮಾತ್ರ ಇರುವುದ್ಯಾಕೆ? ನಮ್ಮ ಕೃಪೆಯಿಂದ ನೀವು ಬದುಕಿದ್ದೀರಿ ಎಂಬ ದಾರ್ಷ್ಟ್ಯವಿಲ್ಲದೆ ಹೋದರೆ ಈ ರೀತಿಯ ಹೆಸರಿಡಲು ಸಾಧ್ಯವೇ?

ಹೆಸರಿನಲ್ಲೇನಿದೆ ಬಿಡಿ ಎನ್ನುತ್ತೀರೇನೋ! ಸರಕಾರದ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುವವರು ಆ ವಿರೋಧಕ್ಕೆ ಸಮರ್ಥನೆಯಾಗಿ ಈ ಅಂಶಗಳನ್ನು ಪಟ್ಟಿ ಮಾಡುತ್ತಾರೆ.

1. ಉಚಿತವಾಗಿ ಅಕ್ಕಿ ನೀಡುವುದರಿಂದ ಜನರ (ಅರ್ಥಾತ್ ಬಡಜನರ) ಹೊಟ್ಟೆ ತುಂಬಿ ಅವರು ಕೆಲಸ ಕಾರ್ಯ ಮಾಡದೇ ಸೋಮಾರಿಗಳಾಗಿಬಿಡುತ್ತಾರೆ. 

2. ಉಚಿತ ಅಕ್ಕಿ ಪಡೆದುಕೊಂಡ ಜನರು ಅದನ್ನು ಕಾಳಸಂತೆಯಲ್ಲಿ ಕೆಜಿಗೆ ಹತ್ತು ರುಪಾಯಿಯಂತೆಯೋ ಹದಿನೈದು ರುಪಾಯಿಯಂತೆಯೋ ಮಾರಾಟ ಮಾಡಿಬಿಡುತ್ತಾರೆ. ತೆರಿಗೆ ಕಟ್ಟುವ ನಮ್ಮ ಹಣದಿಂದ ಸರಕಾರ ನೀಡುವ ಅಕ್ಕಿಯನ್ನು ಮಾರಿ ‘ಶೋಕಿ’ ಮಾಡುತ್ತಾರೆ. 

3. ಬಿಪಿಎಲ್ ಕಾರ್ಡುದಾರರೆಲ್ಲರೂ ಬಡವರಲ್ಲ, ನಕಲಿ ಕಾರ್ಡುದಾರರಿಗೂ ಉಚಿತವಾಗಿ ಅಕ್ಕಿ ತಲುಪಿ ಸರಕಾರದ ಅಂದರೆ ನಮ್ಮ (ಮಧ್ಯಮ ಮತ್ತು ಶ್ರೀಮಂತ ವರ್ಗದ) ಹಣ ಪೋಲಾಗುತ್ತಿದೆ.

4. ಸರಕಾರದ ಈ ಯೋಜನೆಗಳಿಂದ ಹಳ್ಳಿಗಳಲ್ಲಿ ಕೂಲಿ ಕೆಲಸಕ್ಕೆ ಜನರೇ ಸಿಗುತ್ತಿಲ್ಲ.

5. ಸರಕಾರ ಜನರಿಗೆ ಕೆಲಸ ಕೊಡುವ ಕಾರ್ಯನೀತಿ ರೂಪಿಸಬೇಕೆ ಹೊರತು ಜನರನ್ನು ಸೋಮಾರಿಗಳನ್ನಾಗಿ ಮಾಡಬಾರದು.

ಈ ಮಧ್ಯಮವರ್ಗದವರ ಮನಸ್ಥಿತಿ ಮತ್ತವರನ್ನು ಪ್ರೇರೇಪಿಸುವವರ ಮಾತುಗಳು ಕರ್ಣಾನಂದಕರವಾಗಿರುತ್ತವೆ. ಮೇಲ್ನೋಟಕ್ಕೆ ಹೌದಲ್ಲವೇ? ಇದೇ ಸತ್ಯವಲ್ಲವೇ ಎಂಬ ಭಾವನೆ ಮೂಡಿಸುವಂತಿರುತ್ತವೆ. ಮೇಲಿನ ಐದಂಶಗಳನ್ನು ಗಮನಿಸಿದರೆ ಸತ್ಯವೆಂದೇ ತೋರುತ್ತದೆಯಲ್ಲವೇ? ಕಾಳಸಂತೆಯಲ್ಲಿ ಅನ್ನಭಾಗ್ಯದ ಅಕ್ಕಿ ಮಾರಾಟವಾಗುತ್ತಿರುವುದು, ನಕಲಿ ಬಿಪಿಎಲ್ ಕಾರ್ಡುದಾರರ ಸಂಖೈ ಅಧಿಕವಾಗಿರುವುದು, ಹಳ್ಳಿಗಳಲ್ಲಿ ಕೂಲಿ ಕೆಲಸಕ್ಕೆ ಜನರು ಸಿಗದಿರುವುದು, ಸರಕಾರ ಜನರ ಕೈಗಳಿಗೆ ಕೆಲಸ ಕೊಡುವ ನೀತಿ ರೂಪಿಸಬೇಕೆನ್ನುವುದು ಸತ್ಯವೇ ಅಲ್ಲವೇ? ಆದರದು ಸಂಪೂರ್ಣ ಸತ್ಯವೇ ಎನ್ನುವುದನ್ನು ಪರಿಶೀಲಿಸುವವರ ಸಂಖೈ ತುಂಬಾನೇ ಕಡಿಮೆ.

ಅಪೌಷ್ಟಿಕತೆಯ ಪಟ್ಟಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಮತ್ತೇನೂ ಬೇಡ, ಆಸ್ಪತ್ರೆಗಳಲ್ಲಿ ಗರ್ಭಿಣಿ ಹೆಂಗಸರ ಮತ್ತು ಚಿಕ್ಕಮಕ್ಕಳ ರಕ್ತದ ಅಂಶ ಎಷ್ಟಿದೆ ಎಂದು ಗಮನಿಸಿದರೆ ಸಾಕು ಭಾರತದ ಅಪೌಷ್ಟಿಕತೆಯ ದರುಶನವಾಗುತ್ತದೆ. ಅಪೌಷ್ಟಿಕತೆಯಿಂದ ಜನರ ದುಡಿಯುವ ಶಕ್ತಿಯೂ ಕುಂದುತ್ತದೆ, ದುಡಿಮೆ ಕಡಿಮೆಯಾದಾಗ ಆದಾಯದಲ್ಲಿ ಕಡಿತವಾಗುತ್ತದೆ, ಆದಾಯ ಕಡಿಮೆಯಾದಾಗ ಸಹಜವಾಗಿ ಆಹಾರಧಾನ್ಯ ಖರೀದಿಸುವಿಕೆ ಕಡಿಮೆಯಾಗಿ ಅಪೌಷ್ಟಿಕತೆ ಹೆಚ್ಚುತ್ತದೆ. ವಿಷವರ್ತುಲವಿದು. ಮರಣ ಹೊಂದಿದ ನಿರ್ಗತಿಕರ ಶವವನ್ನು ಪೋಸ್ಟ್ ಮಾರ್ಟಮ್ಮಿಗೋ, ಕಾಲೇಜಿನ ಅನಾಟಮಿ ವಿಭಾಗಕ್ಕೋ ತಂದಾಗ ದೇಹದ ಹೊಟ್ಟೆಯ ಭಾಗವನ್ನು ಗಮನಿಸಿಯೇ ಅವರ ಹಸಿವನ್ನು ಅಂದಾಜಿಸಬಹುದು. ಹೊಟ್ಟೆ ಬೆನ್ನಿಗೆ ಅಂಟಿಕೊಂಡಿರುವುದನ್ನಲ್ಲಿ ಗಮನಿಸಬಹುದು. ತಾಂತ್ರಿಕ ಕಾರಣಗಳಿಂದ ಹಸಿವಿನಿಂದ ಮರಣ ಎಂದು ಬರೆಯಲಾಗುವುದಿಲ್ಲ ಅಷ್ಟೇ. ಇಂಥ ಅಪೌಷ್ಟಿಕತೆಯನ್ನು ನೀಗಿಸಲು ಒಂದಷ್ಟು ಅಕ್ಕಿಯಿಂದ ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಪೌಷ್ಟಿಕತೆಯನ್ನು ಕಾಪಾಡಲು ಅಕ್ಕಿಯ ಜೊತೆಜೊತೆಗೆ ಇನ್ನೂ ಅನೇಕ ದವಸಧಾನ್ಯಗಳು ಬೇಕು. ಒಂದಷ್ಟು ಅಕ್ಕಿ/ರಾಗಿ/ಗೋಧಿಯನ್ನು ಉಚಿತವಾಗಿ ನೀಡಿದಾಗ ಅಕ್ಕಿಗೆಂದು ವೆಚ್ಚ ಮಾಡುತ್ತಿದ್ದ ದುಡ್ಡಿನಲ್ಲಿ ಮತ್ತೇನಾದರೂ ಕೊಳ್ಳಬಹುದಲ್ಲವೇ? ಅಲ್ಲಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉಚಿತ ಅಕ್ಕಿಯಿಂದ ಅಪೌಷ್ಟಿಕತೆ ದೂರಾಗುತ್ತದೆ. ಅಪೌಷ್ಟಿಕತೆ ದೂರಾದಾಗ ಮಾಡುವ ಕೆಲಸಕ್ಕೂ ವೇಗ ಮತ್ತು ಶಕ್ತಿ ದೊರೆಯುತ್ತದೆ. ಅಲ್ಲಿಗೆ ಅಕ್ಕಿಯನ್ನು ಉಚಿತವಾಗೋ ಅತಿ ಕಡಿಮೆ ಬೆಲೆಗೋ ನೀಡುವುದು ಕೊನೇ ಪಕ್ಷ ಜನರ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಲ್ಲ.

ಉಚಿತ ಅಕ್ಕಿಯಿಂದ ಜನರ ಹೊಟ್ಟೆ ತುಂಬಿ ಅವರು ಸೋಮಾರಿಗಳಾಗಿಬಿಡುತ್ತಾರೆ ಎಂಬ ಆರೋಪ ನಗು ಬರಿಸುತ್ತದೆ. ಯಾವಾಗ ಮನುಷ್ಯ ಗುಡ್ಡಗಾಡು ಅಲೆಯುವುದನ್ನು ಬಿಟ್ಟು ಒಂದು ಕಡೆ ನೆಲೆನಿಂತನೋ ಅವತ್ತಿನಿಂದಲೇ ಮನುಷ್ಯ ಆಲಸಿ. ಮನುಷ್ಯನನ್ನು ಸೋಮಾರಿಗಳನ್ನಾಗಿ ಮಾಡುತ್ತದೆಂದು ನಮ್ಮ ಕಾರು, ಬೈಕು, ಸೈಕಲ್ಲು, ವಾಷಿಂಗ್ ಮಿಷಿನ್ನುಗಳನ್ನು ಮನೆಯಿಂದ ಎಸೆದು ಬಿಡುತ್ತೀವಾ? ಇಲ್ಲವಲ್ಲ. ಹೊಟ್ಟೆ ತುಂಬಿದ ಮನುಷ್ಯ ಸೋಮಾರಿಯಾಗುತ್ತಾನೆ ಎಂದರೆ ಉತ್ತಮ ಸಂಬಳ ಪಡೆಯುವ ಮಧ್ಯಮವರ್ಗದವರು ವರುಷಕ್ಕೆ ಒಂದೋ ಎರಡೋ ತಿಂಗಳು ಕೆಲಸ ಮಾಡಿ ಉಳಿದ ತಿಂಗಳುಗಳೆಲ್ಲ ಸೋಮಾರಿಗಳಾಗಿ ಬಿದ್ದಿರಬೇಕಿತ್ತಲ್ಲ? ಯಾಕೆ ನಾಲ್ಕಂಕಿಯಿಂದ ಐದಂಕಿಗೆ, ಐದಂಕಿಯಿಂದ ಆರಂಕಿಯ ಸಂಬಳಕ್ಕೆ ಜಿಗಿಯಲು ಹಾತೊರೆಯುತ್ತಲೇ ಇರುತ್ತಾರೆ? ಮನುಷ್ಯನ ಹಸಿವು ಹೊಟ್ಟೆಗೆ ಮಾತ್ರ ಸಂಬಂಧಿಸಿದ್ದಲ್ಲ. ಹೊಟ್ಟೆ ತುಂಬಿದ ಮನುಷ್ಯನಿಗೆ ಮತ್ತ್ಯಾವುದರಲ್ಲೋ ಆಸಕ್ತಿ ಕೆರಳಿ ಹಸಿವುಂಟಾಗುತ್ತದೆ. ಆ ಹಸಿವು ತೀರಿಸಿಕೊಳ್ಳಲು ಕೆಲಸ ಮಾಡುತ್ತಲೇ ಇರುತ್ತಾನೆ. ಜನರ ಸೋಮಾರಿತನಕ್ಕೆ ಉದಾಹರಣೆಯಾಗಿ ಕೃಷಿ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ ಎಂಬ ಅಂಶವನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗುತ್ತಿದೆ. ಸ್ವಾಮಿ, ಈ ಅನ್ನಭಾಗ್ಯವೆಂಬ ಹಕ್ಕಿನ ಯೋಜನೆ ಜಾರಿಯಾಗುವುದಕ್ಕೆ ಮುಂಚಿನಿಂದಲೇ ಕೃಷಿ ಕೆಲಸಕ್ಕೆ ಕಾರ್ಮಿಕರ ಅಭಾವವಿದೆ. ಅದಕ್ಕೆ ಕೃಷಿಯೆಂಬುದು ಆಕರ್ಷಕ, ಲಾಭ ತರುವ ವೃತ್ತಿಯಾಗಿ ಉಳಿದಿಲ್ಲ ಎಂಬುದು ಎಷ್ಟು ಸತ್ಯವೋ ಬಿಸಿಲು ಮಳೆ ಚಳಿ ಗಾಳಿಯಲ್ಲಿ ದುಡಿಯುವುದಕ್ಕಿಂತ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲೋ ಮತ್ತೊಂದು ಕಾರ್ಖಾನೆಯಲ್ಲೋ ಸೂರಿನಡಿಯಲ್ಲಿ ದುಡಿಯುವುದು ಉತ್ತಮವೆಂಬ ಭಾವನೆಯೂ ಕಾರಣ. ಓದಿ ಕೆಲಸ ಗಿಟ್ಟಿಸಿಕೊಂಡು ತಣ್ಣಗೆ ಫ್ಯಾನಿನಡಿಯಲ್ಲೋ ಎಸಿಯ ಕೆಳಗೋ ದುಡಿಯುವುದು ನಮ್ಮಲ್ಲನೇಕರ ಆಯ್ಕೆಯೂ ಆಗಿತ್ತಲ್ಲವೇ? ಕೂಲಿ ನಾಲಿ ಮಾಡಿಕೊಂಡವರಿಗೂ ಅದೇ ಭಾವನೆ ಬಂದರದು ತಪ್ಪೇ? ಯೋಗ, ಜಿಮ್ಮು, ಸೈಕ್ಲಿಂಗೂ, ವಾಕಿಂಗೂ, ರನ್ನಿಂಗೂ ಅಂಥ ಮಾಡ್ಕೊಂಡು ಬೊಜ್ಜು ಇಳಿಸಲು ಬಡಿದಾಡುತ್ತಿರುವ ನಮಗೆ ಸೋಮಾರಿತನದ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ?

ಉಚಿತ ಅಕ್ಕಿ ಪಡೆದುಕೊಳ್ಳುತ್ತಿರುವವರು ಅದನ್ನು ಮಾರಿಕೊಳ್ಳುತ್ತಿರುವುದು ಮತ್ತು ನಕಲಿ ಬಿ.ಪಿ.ಎಲ್ ಕಾರ್ಡುದಾರರ ಸಂಖೈ ಹೆಚ್ಚಿರುವುದು ಖಂಡಿತವಾಗಿಯೂ ಸತ್ಯ. ಸರಕಾರದ ಯಾವುದೇ ಜನಪರ ಯೋಜನೆ ಕಡೇಪಕ್ಷ ಐವತ್ತರಷ್ಟು ನಿಜವಾದ ಫಲಾನುಭವಿಗಳಿಗೆ ದಕ್ಕಿದರೆ ಯಶಸ್ಸು ಕಂಡಂತೆ. ಅಕ್ಕಿ ಮಾರಿಕೊಳ್ಳುತ್ತಿರುವವರ ಸಂಖೈ ಇರುವಂತೆ ಅದನ್ನು ಉಪಯೋಗಿಸುವವರ ಸಂಖೈಯೂ ಇದೆಯಲ್ಲವೇ? ಈ ರೀತಿ ಮಾರಾಟಗೊಂಡ ಅಕ್ಕಿ ಕೊನೆಗೆ ಸೇರುವುದು ಕೂಡ ಅದೇ ಮಧ್ಯಮವರ್ಗದವರ ಮನೆಗೆ! ಅಕ್ಕಿ ಮಾರುವವರನ್ನು ಮತ್ತದನ್ನು ಕೊಳ್ಳುವವರಿಗೆ ದಂಡ ವಿಧಿಸುವ ಹಾಗಾದರೆ? ಇನ್ನು ಬಿ.ಪಿ.ಎಲ್ ಕಾರ್ಡುದಾರರ ಪಟ್ಟಿಯಲ್ಲಿ ಮಧ್ಯಮವರ್ಗದವರು, ಸಣ್ಣ ರೈತರು, ದೊಡ್ಡ ರೈತರು ಎಲ್ಲರ ಹೆಸರೂ ಸೇರಿಕೊಂಡಿದೆ. ನಕಲಿಗಳನ್ನು ತೆಗೆದುಹಾಕುವ ಪ್ರಕ್ರಿಯೆ ನಿರಂತರವಾಗಿರಬೇಕು. ಆಗ ಯೋಜನೆ ಮತ್ತಷ್ಟು ಫಲಕಾರಿಯಾಗಿ ಅರ್ಹ ಫಲಾನುಭಾವಿಗಳಿಗೆ ಉಪಯೋಗವಾಗುತ್ತದೆ.

ಜನರ ಪೌಷ್ಟಿಕತೆಯನ್ನು ದೂರ ಮಾಡುವಲ್ಲಿ ಇಂಥಹ ಕೆಲಸಗಳನ್ನು ರೂಪಿಸುವ ಸರಕಾರಗಳು ಜೊತೆಜೊತೆಗೇ ದುಡಿವ ಕೈಗಳಿಗೆ ಕೆಲಸವನ್ನೆಚ್ಚಿಸುವ ಹಾದಿಯನ್ನೂ ಹುಡುಕಬೇಕು. ಇಂತಹ ಯೋಜನೆಗಳು ಎಷ್ಟು ದಿನ – ತಿಂಗಳು – ವರುಷಗಳವರೆಗೆ ಮುಂದುವರೆಯಬೇಕು ಎಂಬ ಪ್ರಶ್ನೆಗೆ ಉತ್ತರ ದೊರಕುವುದು ಕಷ್ಟ. ಜನಸಂಖ್ಯೆ ಹೆಚ್ಚಿದೆ ನಮ್ಮಲ್ಲಿ, ಇರುವ ಜಾಗ ಕಡಿಮೆ; ಇಷ್ಟೊಂದು ದೊಡ್ಡ ಜನಸಂಖೈಯ ದೇಶದಲ್ಲಿ ಯಾರೊಬ್ಬರಲ್ಲೂ ಅಪೌಷ್ಟಿಕತೆ ಇರದ ದಿನ ಬರುವುದು ಅನೇಕನೇಕ ದಶಕಗಳ ನಂತರವೇ. ಅಲ್ಲಿಯವರೆಗೂ ಇಂತಹ ಯೋಜನೆಗಳಿರಲೇಬೇಕು – ಜನರ ಆರೋಗ್ಯಕ್ಕೆ, ಗರ್ಭಿಣಿಯ ಆರೋಗ್ಯಕ್ಕೆ, ಹುಟ್ಟುವ ಕೂಸುಗಳ ಆರೋಗ್ಯಕ್ಕೆ. ಸಮಾಜ ನಮಗೊಂದು ಬದುಕು ರೂಪಿಸಿಕೊಟ್ಟ ಕಾರಣಕ್ಕಾಗಿಯೇ ಅಲ್ಲವೇ ನಾವು ತೆರಿಗೆ ಕಟ್ಟುತ್ತಿರುವುದು? ಆ ತೆರಿಗೆ ಹಣದಲ್ಲಿ ದೊಡ್ಡ ಪಾಲು ಪರೋಕ್ಷವಾಗಿ ನಮ್ಮ ಅನುಕೂಲಕ್ಕೇ ಖರ್ಚಾಗುತ್ತದೆ. ಆ ತೆರಿಗೆ ಹಣದ ಒಂದು ಚಿಕ್ಕ ಪಾಲಿನಿಂದ ಮತ್ತೊಂದಷ್ಟು ಮಗದೊಂದಷ್ಟು ಜನರ ಏಳ್ಗೆಯಾಗಿ ಅವರೂ ತೆರಿಗೆ ಕಟ್ಟುವಂತಾಗಲೀ ಎಂದು ಆಶಿಸಬೇಕು. 

‘ಭಾಗ್ಯ’ವೆಂಬ ಹಣೆಪಟ್ಟಿಯಿಲ್ಲದೆ ಅನೇಕ ಸೌಲತ್ತುಗಳನ್ನನುಭವಿಸಿ ಸುಖಿಸುತ್ತಾ ಉದ್ದಿಮೆದಾರರಿಗೆ ನೀಡುವ ಭಾರೀ ಭಾರೀ ರಿಯಾಯಿತಿಗಳನ್ನು ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಾ ಅಕ್ಕಿ ನೀಡುವ ಕ್ರಿಯೆಯನ್ನು ವಿರೋಧಿಸುವುದನ್ನು ಮಾನವತಾ ವಿರೋಧಿ ನಿಲುವೆಂದೇ ಪರಿಗಣಿಸಬೇಕಾಗುತ್ತದೆ.

ಜೂನ್ 11, 2015

ಜಾಗತೀಕರಣದ ಮುಖವಾಡಗಳನ್ನು ಕಳಚುವ “ಕಾಕ ಮೊಟ್ಟೈ”

Dr Ashok K R
ಇದು ಮಕ್ಕಳು ಮುಖ್ಯ ಭೂಮಿಕೆಯಲ್ಲಿರುವ ದೊಡ್ಡವರ ಚಿತ್ರ. ಜೈಲು ಸೇರಿರುವ ಅಪ್ಪ, ಅಪ್ಪನನ್ನು ಜೈಲಿನಿಂದ ಹೊರತರುವುದಕ್ಕಾಗಿಯೇ ದುಡ್ಡು ಕೂಡಿಡುವ ಅಮ್ಮ. ಹಣದ ಕೊರತೆಯಿಂದ ಇರುವ ಇಬ್ಬರು ಮಕ್ಕಳನ್ನು ಶಾಲೆಯಿಂದ ಬಿಡಿಸಿ ರೈಲ್ವೆ ಹಳಿಯ ಮೇಲೆ ಬಿದ್ದ ಕಲ್ಲಿದ್ದಿಲನ್ನು ಸಂಗ್ರಹಿಸುವ ಕೆಲಸಕ್ಕೆ ಹಚ್ಚುತ್ತಾಳೆ. ದೊಡ್ಡದೊಂದು ಮೇಲ್ಸೇತುವೆ ಪಕ್ಕವಿರುವ ಕೊಳಗೇರಿಯಲ್ಲಿ ವಾಸ. ಮನೆಯಲ್ಲೊಬ್ಬಳು ವಯಸ್ಸಾದ ಅಜ್ಜಿ, ತಿನ್ನೋದು, ಮಲಗೋದು ಬಿಟ್ಟರೆ ನನ್ನಿಂದ ಮತ್ತೇನು ಆಗುತ್ತಿಲ್ಲವಲ್ಲ ಎಂದು ಕೊರಗುವ ಅಜ್ಜಿ. ಆ ಎರಡು ಮಕ್ಕಳೇ ಚಿತ್ರದ ಜೀವಾಳ. ಕಾಗೆಗೊಂದಷ್ಟು ಅನ್ನ ಹಾಕಿ, ಅವುಗಳು ಅನ್ನ ತಿನ್ನಲು ಬಂದಾಗ ಅವುಗಳ ಗೂಡಿಗೆ ಕನ್ನ ಹಾಕಿ ಮೊಟ್ಟೆ ಕದಿಯುತ್ತಾರೆ; ಹಸಿ ಹಸಿ ಕುಡಿಯುತ್ತಾರೆ. ಅವರ ನಿಜ ಹೆಸರೇ ಮರೆತುಹೋಗಿ ಸಣ್ಣವ ಚಿಕ್ಕ ಕಾಕಮೊಟ್ಟೈಯಾದರೆ (ಕಾಗೆಮೊಟ್ಟೆ) ದೊಡ್ಡವ ದೊಡ್ಡ ಕಾಕಮೊಟ್ಟೈಯಾಗುತ್ತಾನೆ! ‘ಕೋಳಿ ಮೊಟ್ಟೆ ಖರೀದಿಸುವ ಶಕ್ತಿಯಿಲ್ಲ, ಕಾಗೆ ಮೊಟ್ಟೆಯಾದರೇನು? ಅದೂ ಪಕ್ಷೀನೆ ಅಲ್ಲವೇ’ ಎನ್ನುವ ಅಜ್ಜಿ ಕೆಲವೊಂದು ಆಹಾರ ಶ್ರೇಷ್ಠ ಕೆಲವೊಂದು ನಿಕೃಷ್ಠ ಎಂದು ತೀರ್ಮಾನಿಸಿಬಿಡುವ ಜನರಿಗೆ ಉತ್ತರವಾಗುತ್ತಾಳೆ.

ಕಾಗೆ ಗೂಡಿರುವ ಮರವನ್ನು ವಾಣಿಜ್ಯ ಸಂಕೀರ್ಣ ಕಟ್ಟುವ ಉದ್ದೇಶದಿಂದ ಕೆಡವುದರೊಂದಿಗೆ ಚಿತ್ರ ಮಗ್ಗಲು ಬದಲಿಸುತ್ತದೆ. ಇದೇ ಸಮಯಕ್ಕೆ ನ್ಯಾಯ ಬೆಲೆ ಅಂಗಡಿಯಿಂದ ಎಲ್ಲರಿಗೂ ಉಚಿತ ಟಿ.ವಿ ಹಂಚಲಾಗುತ್ತದೆ. ಅಮ್ಮ ಟಿ.ವಿ ತರುತ್ತಾಳೆ, ಮತ್ತೊಂದು ಟಿ.ವಿ ಅಜ್ಜಿಯ ಕೋಟಾದಲ್ಲಿ ಬಂದು ಬಿದ್ದಿರುತ್ತದೆ! ‘ಅಕ್ಕಿ ಸಿಗಲಿಲ್ಲವೇನಮ್ಮ’ ಎಂಬ ಪ್ರಶ್ನೆಗೆ ‘ಸ್ಟಾಕ್ ಇಲ್ಲವಂತೆ’ ಎಂಬ ಉತ್ತರ ಸಿಗುತ್ತದೆ! ನಮ್ಮ ಪ್ರಾಮುಖ್ಯತೆಗಳೇ ಬದಲಾಗಿಬಿಡುತ್ತಿರುವುದನ್ನು ಒಂದು ನಿಮಿಷದ ಚಿಕ್ಕ ದೃಶ್ಯದ ಮುಖಾಂತರ ನಿರ್ದೇಶಕ ಮಣಿಕಂಠನ್ ತಿಳಿಸಿಕೊಡುತ್ತಾರೆ. ಚಿತ್ರದುದ್ದಕ್ಕೂ ಇಂತಹ ದೃಶ್ಯಗಳು ಹೇರಳವಾಗಿವೆ. ನಿರ್ದೇಶಕನ ಸೂಕ್ಷ್ಮತೆ ತೋರ್ಪಡಿಸುವ ದೃಶ್ಯಗಳಿವು. ಮತ್ತೊಂದು ದೃಶ್ಯದಲ್ಲಿ ಕುಡಿಯುವ ನೀರಿನ ಸಲುವಾಗಿ ಬಿಂದಿಗೆ ಎತ್ತಿಕೊಂಡು ಹೊರಹೋಗುತ್ತಾಳೆ. ಬಿಂದಿಗೆಯಲ್ಲಿ ಚೂರೇ ಚೂರು ನೀರಿರುತ್ತದೆ. ನೀರು ಅಧಿಕವಿರುವ ನಮ್ಮ ಮನೆಗಳಲ್ಲಾದರೆ ಬಿಂದಿಗೆಯಲ್ಲುಳಿದ ಚೂರು ನೀರನ್ನು ಚೆಲ್ಲಿ ಬಿಡುತ್ತೇವೆ. ನೀರು ಕೂಡ ಲಕ್ಷುರಿಯಾದ ಕೊಳಗೇರಿಯಲ್ಲಿ ಆ ಚುಟುಕು ನೀರನ್ನು ಕೈ ತೊಳೆಯಲುಪಯೋಗಿಸುವ ಬಕೇಟಿಗೆ ಹಾಕುತ್ತಾಳೆ. ಚಿತ್ರಕಥೆ ಮಾಡಲು ಶ್ರಮ ಪಡದಿದ್ದರೆ ಇಂತಹ ಸೂಕ್ಷ್ಮಗಳನ್ನು ತೋರಿಸಲಾದೀತೆ?

ಕಾಗೆ ಗೂಡಿದ್ದ ಮರದ ಜಾಗದಲ್ಲಿ ಪಿಜ್ಜಾ ಅಂಗಡಿಯೊಂದು ಪ್ರಾರಂಭವಾಗುತ್ತದೆ. ಖ್ಯಾತ ಚಿತ್ರನಟ ಸಿಂಬು ಅದನ್ನು ಉದ್ಘಾಟಿಸುತ್ತಾನೆ. ಬಾಯಿ ಚಪ್ಪರಿಸಿ ತಿನ್ನುತ್ತಾನೆ. ಕೊಳಗೇರಿಯ ಮಕ್ಕಳಿದನ್ನು ಗಮನಿಸುತ್ತಾರೆ, ಖುಷಿ ಪಡುತ್ತಾರೆ ಮತ್ತು ಹೊರಟುಹೋಗುತ್ತಾರೆ. ಆದರೆ ನಮ್ಮ ನಾಯಕರಿಗೆ ಅದನ್ನು ತಿನ್ನಲೇಬೇಕೆಂಬ ಮನಸ್ಸಾಗುತ್ತದೆ. ಮುನ್ನೂರು ರುಪಾಯಿ ಬೆಲೆಯ ಪಿಜ್ಜಾ ಖರೀದಿಸಬೇಕೆಂಬುದೇ ಅವರಿಬ್ಬರ ಗುರಿಯಾಗಿಬಿಡುತ್ತದೆ. ಚಿತ್ರದಲ್ಲಿ ಪಿಜ್ಜಾ ನೋಡಿಕೊಂಡು ದೋಸೆ ಪಿಜ್ಜಾ ತಯಾರಿಸುತ್ತಾಳೆ ಅಜ್ಜಿ, ಮಕ್ಕಳಿಗೆ ರುಚಿಸುವುದಿಲ್ಲ. ಹೆಚ್ಚೆಚ್ಚು ಕಲ್ಲಿದ್ದಲ್ಲು ಸಿಗುವ ಜಾಗವನ್ನು ಗ್ಯಾಂಗ್ ಮನ್ ‘ಫ್ರೂಟ್ ಜ್ಯೂಸ್’ ತೋರಿಸುತ್ತಾನೆ. ಅಂತೂ ಇಂತೂ ಮುನ್ನೂರು ರುಪಾಯಿ ಕಲೆ ಹಾಕಿ ಅಂಗಡಿಗೆ ಹೋದರೆ ಕೊಳಗೇರಿಯ ಮಕ್ಕಳನ್ನು ಸೆಕ್ಯುರಿಟಿ ಒಳಗೇ ಸೇರಿಸುವುದಿಲ್ಲ. ಒಳ್ಳೆ ಬಟ್ಟೆ ಹಾಕಿಕೊಂಡರೆ ಬಿಡುತ್ತಾರೆ ಎಂಬ ಫ್ರೂಟ್ ಜ್ಯೂಸ್ ಮಾತು ಕೇಳಿ ಬಟ್ಟೆ ಖರೀದಿಸಲು ದುಡಿಯತೊಡಗುತ್ತಾರೆ. ಜಾಣ್ಮೆಯಿಂದ ಹೊಸ ಬಟ್ಟೆ ಖರೀದಿಸಿ ಅಂಗಡಿಯ ಬಳಿ ಹೋದರೆ ಮತ್ತೆ ಸೆಕ್ಯುರಿಟಿ ತಡೆಯುತ್ತಾನೆ. ಅಂಗಡಿಯ ಮ್ಯಾನೇಜರ್ ಬಂದು ದೊಡ್ಡ ಕಾಗೆಮೊಟ್ಟೆಗೆ ರಪ್ಪಂತ ಕೆನ್ನೆಗೆ ಹೊಡೆಯುತ್ತಾನೆ. ಕೊಳಗೇರಿಯ ಇತರೆ ಹುಡುಗರು ಅದನ್ನು ವೀಡಿಯೋ ಮಾಡಿಕೊಂಡುಬಿಡುತ್ತಾರೆ. ಇದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆ. ಸುದ್ದಿ ಪ್ರತಿಭಟನೆಯ ಸದ್ದಾಗುವ ಮೊದಲು ಪಿಜ್ಜಾ ಅಂಗಡಿಯವರೇ ಹುಡುಗರಿಬ್ಬರನ್ನೂ ಸತ್ಕರಿಸಿ ಪಿಜ್ಜಾ ತಿನ್ನಿಸುತ್ತಾರೆ!

ಇಡೀ ಚಿತ್ರದಲ್ಲಿ ಜಾಗತೀಕರಣದ ವಿವಿಧ ಮುಖವಾಡಗಳ ದರುಶನವಾಗುತ್ತದೆ. ಪ್ರಕೃತಿಯನ್ನು ಬದಿಗೆ ಸರಿಸಿ ಪ್ರತಿಯೊಂದನ್ನು ವ್ಯಾವಹಾರಿಕ ಮಾಡಿಬಿಡುವುದು ಮೊದಲ ಹೆಜ್ಜೆ. ನಮಗೆ ಬೇಡವಾದ ವಸ್ತುವನ್ನು ಜಗಮಗಿಸುವ ಬೆಳಕಿನಲ್ಲಿಟ್ಟು, ಖ್ಯಾತಿ ಪಡೆದ ವ್ಯಕ್ತಿಗಳಿಂದ ಅದಕ್ಕೆ ಪ್ರಚಾರ ಗಿಟ್ಟಿಸಿ (ಇತ್ತೀಚಿನ ಮ್ಯಾಗಿ ಮತ್ತದರ ರೂಪದರ್ಶಿಗಳ ವಿಚಾರ ನಿಮಗೆ ನೆನಪಿರಬೇಕು) ನಮ್ಮನ್ನು ಪ್ರಚೋದನೆಗೆ ಒಳಪಡಿಸುವುದು ಎರಡನೆಯ ಹೆಜ್ಜೆ. ಆ ಪ್ರಚೋದನೆ ಯಾವ ಮಟ್ಟಕ್ಕಿರುತ್ತದೆ ಎಂದರೆ ನಮ್ಮಿಡೀ ಜೀವನದ ಗುರಿಯೇ ಆ ಬೇಡದ ವಸ್ತುವನ್ನು ಪಡೆಯುವುದಾಗಿ ಬಿಡುತ್ತದೆ, ಹೆಚ್ಚೆಚ್ಚು ಹಣ ದುಡಿಯುವುದಕ್ಕೂ ಅದೇ ಕಾರಣವಾಗುತ್ತದೆ. ಕೊಳಗೇರಿಯ ಇತರ ಮಕ್ಕಳು ಆಟವಾಡುತ್ತಾ ತರಲೆ ಮಾಡುತ್ತಾ ಕಾಲ ಕಳೆದರೆ ಪಿಜ್ಜಾದ ಆಸೆಗೆ ಬಿದ್ದವರು ಹಣದ ಹಿಂದೆ ಬೀಳುತ್ತಾರೆ. ತಮ್ಮ ಬಾಲ್ಯತನವನ್ನೇ ಕಳೆದುಕೊಳ್ಳುತ್ತಾರೆ. ಸಂಬಂಧಗಳ ಮೌಲ್ಯಗಳನ್ನು ಕಳೆದುಕೊಳ್ಳುತ್ತಾರೆ. ಜೈಲಿನಲ್ಲಿರುವ ಅಪ್ಪ ಬರದೇ ಇದ್ದರೆ ಅಷ್ಟೇ ಹೋಯ್ತು, ನಮಗೆ ಪಿಜ್ಜಾ ಮುಖ್ಯ ಎಂಬ ಮಾತನ್ನಾಡುತ್ತಾರೆ! ಕಾರು, ಬಂಗಲೆ, ಸೈಟು, ಆಸ್ತಿಯೇ ಗುರಿಯಾಗಿಸಿಕೊಂಡ ದೊಡ್ಡವರು ಮಾಡುತ್ತಿರುವುದು ಇದನ್ನೇ ಅಲ್ಲವೇ? ನೀವು ಒಳಗೆ ಹೇಗಾದರೂ ಇರಿ Outlook ಮುಖ್ಯ ಎನ್ನುವುದು ಮೂರನೆಯ ಹೆಜ್ಜೆ. Outlook ಬದಲಿಸಿಕೊಂಡು ಹೋದಾಗ ಜಾಗತೀಕರಣ ಶ್ರೀಮಂತರ ಪರವೋ ಬಡವರ ಪರವೋ ಎಂಬುದು ವೇದ್ಯವಾಗುತ್ತದೆ. ಮತ್ತಿಲ್ಲಿ ಬಡವರನ್ನು ತಡೆಯುವುದು ಶ್ರೀಮಂತರಲ್ಲ, ಬದಲಾಗಿ ಶ್ರೀಮಂತರೇ ಸಂಬಳ ಕೊಟ್ಟು ಕೆಲಸಕ್ಕಿಟ್ಟುಕೊಂಡಿರುವ ಬಡವರೇ ಬಡವರನ್ನು ತಡೆಯುತ್ತಾರೆ, ವಿರೋಧಿಸುತ್ತಾರೆ. ಈ ಚಿತ್ರದಲ್ಲಿ ಸೆಕ್ಯುರಿಟಿಯವನು ಮಕ್ಕಳನ್ನು ತಡೆದಂತೆ, ಮಧ್ಯಮ ವರ್ಗದ ಮ್ಯಾನೇಜರ್ ಕಪಾಳಕ್ಕೆ ಬಿಗಿದಂತೆ. ಸಿರಿವಂತ ಒಳ್ಳೆಯವನಾಗಿಯೇ ಉಳಿದುಬಿಡುತ್ತಾನೆ! ಜನರು ತಮ್ಮ ವಿರುದ್ಧ ಪ್ರತಿಭಟಿಸುತ್ತಾರೆ ಎಂದರಿವಾದ ತಕ್ಷಣ ನಯವಂತಿಕೆಯ ಮುಖವಾಡವನ್ನು ದಿಢೀರನೆ ಧರಿಸಿ ಮತ್ತೆ ಒಳ್ಳೆಯವರಾಗಿಬಿಡುವುದು ಜಾಗತೀಕರಣದ ವಕ್ತಾರರ ಜಾಣ್ಮೆ! ಇಡೀ ಚಿತ್ರ ಜಾಗತೀಕರಣದ ಪರವಾಗಿ, ಪಿಜ್ಜಾದ ಪರವಾಗಿ, ಕೊಳ್ಳುಬಾಕ ಸಂಸ್ಕೃತಿಯ ಪರವಾಗಿ ಉಳಿದುಬಿಡುವ ಅಪಾಯವನ್ನು ಕೊನೆಯದೊಂದು ದೃಶ್ಯ ದೂರಮಾಡಿದೆ! ಅದನ್ನು ಚಿತ್ರದಲ್ಲಿಯೇ ನೋಡಿ!