Jun 2, 2015

ಯೋಗೇಶ್ವರನೆಂಬ ಭಗೀರಥನೂ ಚನ್ನಪಟ್ಟಣದ ಕೆರೆಗಳು!

malur lake, channapatna
ಮಳೂರು ಕೆರೆಗೆ ನೀರು ಹರಿಸುತ್ತಿರುವ ದೃಶ್ಯ
ಸಿ.ಪಿ. ಯೋಗೇಶ್ವರ್ ಮೊದಲು ಖ್ಯಾತಿಗೆ ಬಂದಿದ್ದು ಸಿನಿಮಾ ತಾರೆಯಾಗಿ. ಉತ್ತರ ಧ್ರುವದಿಂ ದಕ್ಷಿಣ ದ್ರುವಕೂ, ಸೈನಿಕ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಅದ್ಭುತ ನಟರೇನಲ್ಲ! ನಂತರ ರಾಜಕಾರಣಿಯಾಗಿ ಶಾಸಕರಾಗಿ ಚನ್ನಪಟ್ಟಣದಿಂದ ಆಯ್ಕೆಯಾಗುತ್ತಲೇ ಇದ್ದಾರೆ. ಬಹುತೇಕ ಕರ್ನಾಟಕದ ಎಲ್ಲಾ ಪಕ್ಷಗಳಿಂದಲೂ ಸ್ಪರ್ಧಿಸಿಬಿಟ್ಟಿದ್ದಾರೆ! ಕರ್ನಾಟಕದಲ್ಲಿ ಅಸ್ತಿತ್ವದಲ್ಲೇ ಇಲ್ಲದಿದ್ದ ಸಮಾಜವಾದಿ ಪಕ್ಷದ ಸೈಕಲ್ಲನ್ನೂ ಒಮ್ಮೆ ಏರಿ ಇಳಿದಿದ್ದಾರೆ! ಮತ್ತು ಯಾವ ಪಕ್ಷದಲ್ಲಿ ನಿಂತರೂ ಗೆಲುವು ಸಾಧಿಸಿದ್ದಾರೆ, ಸಮಾಜವಾದಿ ಪಕ್ಷದಿಂದ ನಿಂತಾಗಲೂ ಗೆಲುವು ಅವರದ್ದೇ! ಭ್ರಷ್ಟಾತೀತ ವ್ಯಕ್ತಿಯಾ ಎಂದು ನೋಡಿದರೆ ಅದೂ ಇಲ್ಲ. ಸಿನಿಮಾಗಳಿಗಿಂತ ಹೆಚ್ಚು 'ಖ್ಯಾತಿ'ಯನ್ನು ಯೋಗೇಶ್ವರ್ ಪಡೆದದ್ದು ಮೆಗಾ ಸಿಟಿಯೆಂಬ ರಿಯಲ್ ಎಸ್ಟೇಟ್ ವಂಚನೆಯ ಮುಖಾಂತರ. ಕನ್ನಡದ ಟ್ಯಾಬ್ಲಾಯ್ಡ್ ಪತ್ರಿಕೆಗಳ ಮೂಲಕ ಮೆಗಾಸಿಟಿಯ ದಗಾಕೋರ ಎಂದೇ ಯೋಗೇಶ್ವರ್ ಖ್ಯಾತ! ವರುಷವಿಡೀ ಪತ್ರಿಕೆ, ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳದೆಯೇ, ಇಷ್ಟೆಲ್ಲ ಭ್ರಷ್ಟಾಚಾರದ ಆರೋಪ ಹೊತ್ತ ಯೋಗೇಶ್ವರ್, ಪಕ್ಷದಿಂದ ಪಕ್ಷಕ್ಕೆ ಚಂಗನೆ ಹಾರುತ್ತಿದ್ದರೂ ಗೆಲುವು ಕಾಣುವುದು ಹಿಂದಿನ ಕಾರಣವೇನು? 'ನಮ್ ಜನ ಸರೀ ಇಲ್ಲ ಕಣ್ರೀ. ಇಂಥೋರ್ನೆಲ್ಲ ಗೆಲ್ಲುಸ್ತಾರೆ ನೋಡಿ' ಎಂದು ತೀರ್ಪು ಕೊಡುವ ಮೊದಲು ಚನ್ನಪಟ್ಟಣವನ್ನು ಬೇಸಿಗೆಯಲ್ಲೊಮ್ಮೆ ಸುತ್ತಬೇಕು. ಯೋಗೇಶ್ವರ್ ಗೆಲುವಿನ ರಹಸ್ಯ ತಿಳಿಯುತ್ತದೆ.
cp yogeshwar
ಸಿ.ಪಿ.ಯೋಗೇಶ್ವರ್
ಉತ್ತಮ ರಸ್ತೆ, ಅತ್ಯುತ್ತಮ ಯೋಜನೆ, ಅದೂ ಇದೂ ಎಲ್ಲವೂ ಸರಿಯೇ, ಆದರೆ ಇವೆಲ್ಲಕ್ಕಿಂತ ಮುಖ್ಯವಾದದ್ದು ಮೂಲಭೂತವಾದ ಅಂಶಗೊಳಲ್ಲೊಂದಾದ ನೀರು. ಕೈಗಾರಿಕೆಗಳ ಹೆಚ್ಚಳದ ಮಧ್ಯೆಯೂ ಕೃಷಿ ಮುಖ್ಯವಾಗಿರುವ ದೇಶವಾದ್ದರಿಂದ ನೀರಿನ ಮಹತ್ವ ಮತ್ತಷ್ಟು ಹೆಚ್ಚು. ಕಡು ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾದಾಗ ಕೆರೆಗಳೆಲ್ಲ ಬತ್ತಿ ಹೋದಾಗ ಅದನ್ನು ತುಂಬಿಸುವ ವ್ಯಕ್ತಿಯನ್ನು ಭಗೀರಥನೆಂದು ತಿಳಿಯುವುದು ತಪ್ಪಲ್ಲ. ಯೋಗೇಶ್ವರ್ ಗೆಲುವಿನ ರಹಸ್ಯವೇ ಇದು. ಬೇಸಿಗೆಯ ಪ್ರಾರಂಭವಾಗುತ್ತಿದ್ದಂತೆ ಹತ್ತಿರದ ನದಿಗಳಿಂದ ಕೆರೆಗಳಿಗೆ ನೂರಿಪ್ಪತ್ತು ಹೆಚ್.ಪಿಯ ಮೋಟಾರಿನ ಸಹಾಯದೊಂದಿಗೆ ನೀರು ತುಂಬಿಸಲಾಗುತ್ತದೆ. ಊರಿನವರಿಗೆ ಕುಡಿಯುವ ನೀರು ದೊರೆಯುತ್ತದೆ, ಬೇಸಿಗೆ ಕೃಷಿಗೂ ಸಹಾಯವಾಗುತ್ತದೆ ಮತ್ತು ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗುತ್ತದೆ. 
kanva reservoir
ಕಣ್ವಾ ಜಲಾಶಯಕ್ಕೆ ನೀರು ಹರಿದಾಗ
ಕೆರೆಗಳನ್ನೇ ತುಂಬಿಸುತ್ತಿದ್ದವರು ಈ ಸಲ ಮತ್ತಷ್ಟು ಆಸಕ್ತಿ ತೋರಿ ಬಳಲಿ ಬರಡಾಗಿ ಬೆಂಡಾಗಿ ಹೋಗಿದ್ದ ಕಣ್ವ ಜಲಾಶಯವನ್ನೂ ತುಂಬಿಸಲು ಶ್ರಮಿಸಿದ್ದಾರೆ! ಕಾವೇರಿ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ಕಣ್ವಾ ಜಲಾಶಯವನ್ನು ತುಂಬಿಸಿದ್ದಾರೆ. ನೈಸರ್ಗಿಕವಾಗಿ ಬರಡಾಗುವ ನೀರಿನ ಮೂಲವನ್ನು ಕೃತಕವಾಗಿ ತುಂಬಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಮನುಷ್ಯ ಮಾಡುವ ಬಹುತೇಕ ಯಾವ ಕೆಲಸವೂ ಪರಿಸರಕ್ಕೆ ಪ್ರಕೃತಿಗೆ ಪೂರಕವಾಗಿರುವುದಿಲ್ಲ. ಕೃತಕವಾಗಿ ನೀರು ತುಂಬಿಸುವ ಪ್ರಕ್ರಿಯೆ ಕೂಡ ಪ್ರಕೃತಿಗೆ ತನ್ನದೇ ರೀತಿಯಲ್ಲಿ ಹಾನಿಯುಂಟುಮಾಡುತ್ತದೆ. ಇತರೆ ಹಾನಿಕಾರಕ ಕೆಲಸಗಳಿಗೆ ಹೋಲಿಸಿದರೆ ಇದು ಇದ್ದುದರಲ್ಲಿ ವಾಸಿ! ನೀರು ತುಂಬಿಸುವುದಕ್ಕೆ ತೋರುವ ಆಸಕ್ತಿಯನ್ನು ವರುಷದ ಇನ್ನಿತರೆ ತಿಂಗಳುಗಳಲ್ಲಿ ಅನ್ಯ ಕೆಲಸಗಳಿಗೂ ಯೋಗೇಶ್ವರ್ ತೋರಿಸಲಿ ಎನ್ನುವುದು ಜನರ ಆಶಯ.
kanva reservoir
ನೀರ್ದುಂಬಿದ ಕಣ್ವ

No comments:

Post a Comment