ಜೂನ್ 5, 2015

ಐ.ಎ.ಎಸ್ ಮಾಫಿಯ .... ಭಾಗ 3

ಎಂ.ಎನ್.ವಿಜಯಕುಮಾರ್
ಕನ್ನಡಕ್ಕೆ: ಡಾ.ಅಶೋಕ್.ಕೆ.ಆರ್
ಭ್ರಷ್ಟ ಐ.ಎ.ಎಸ್ ಮಾಫಿಯ ನನ್ನನ್ನು ಗುರಿಯಾಗಿಸಿ, ನನ್ನ ಸಾವನ್ನು ಬಯಸುತ್ತಿದುದ್ಯಾಕೆ? 
ಒಬ್ಬ ಭ್ರಷ್ಟ ಐ.ಎ.ಎಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂಬ ಬೇಡಿಕೆಯಿಟ್ಟಾಗ ಅದರ ಗುರಿ ಇಡೀ ಐ.ಎ.ಎಸ್ ಮಾಫಿಯ ಆಗಿರುತ್ತದೆ. ತನ್ನ ಗುಂಪಿನ ಸದಸ್ಯನೊಬ್ಬ ಚಟುವಟಿಕೆಗಳ ಬಗ್ಗೆ ಬಾಯಿ ಬಿಡುವುದು ಮಾಫಿಯಾಗೆ ಒಪ್ಪಿತವಲ್ಲ. ಮಾಫಿಯಾದ ಸದಸ್ಯನೊಬ್ಬನ ಭ್ರಷ್ಟಾಚಾರವನ್ನು ಯಾರಾದರೂ ಬಯಲಿಗೆಳೆದರೆ ಅಂಥವರ ಜೀವನವನ್ನು ಮಾಫಿಯ ಕಷ್ಟಕರವಾಗಿಸುತ್ತದೆ, ಅಷ್ಟೇ ಅಲ್ಲ ಯಾವ ಮಟ್ಟದ ತೊಂದರೆಯನ್ನು ನೀಡಲೂ ತಯಾರಾಗಿಬಿಡುತ್ತದೆ; ಒಮ್ಮೊಮ್ಮೆ ಜೀವವನ್ನೇ ತೆಗೆದುಬಿಡುತ್ತದೆ. 
ನನ್ನ ಮೇಲೆ ನಡೆದ ಹಲ್ಲೆಗಳ ವಿರುದ್ಧ ಕೊಟ್ಟ ದೂರುಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಯಿತು. ಕೆಲವೊಂದು ವಿವರಗಳು ಈ ಕೆಳಗಿನ ಕೊಂಡಿಗಳಲ್ಲಿದೆ: 

http://depenq.com/PRESSRELEASE/MAFIAS.pdf 
http://depenq.com/PRESSRELEASE/MONNAPPA/SENGUPTA122JAN07.pdf 
http://depenq.com/PRESSRELEASE/MONNAPPA/SENGUPTA15may07.pdf 
http://depenq.com/PRESSRELEASE/SENGUPTA19JUn07.pdf 
http://depenq.com/PRESSRELEASE/MONNAPPA/SENGUPTA28SEP07.pdf 
http://depenq.com/PRESSRELEASE/MONNAPPA/SENGUPTA19DECEMBER07.pdf 
http://depenq.com/PRESSRELEASE/MONNAPPA/SENGUPTA4FEB08.pdf 
http://depenq.com/PRESSRELEASE/MONNAPPA/SENGUPTA5FEB11.pdf 
http://depenq.com/PRESSRELEASE/MNVtoPRESIDENT6MAR12.pdf 

ಸರಕಾರದ ಭ್ರಷ್ಟತೆ ವಿರುದ್ಧ ನಡೆಸಿದ ಹೋರಾಟದ ಅನುಭವಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸಲು 2009ರಲ್ಲಿ ಸರಕಾರದಿಂದ ಅನುಮತಿ ದೊರೆಯಿತು. 

2007ರಲ್ಲಿ ಪಿ.ಬಿ.ಮಹಿಷಿಯವರ ವಿರುದ್ಧ ಲೋಕಾಯುಕ್ತರಲ್ಲಿ ದೂರು ನೀಡಿದ್ದೆ. ತಿರುಗೇಟು ನೀಡುವವರಂತೆ ನನಗೆ ನೋಟೀಸಿನ ಮೇಲೆ ನೋಟೀಸು ನೀಡಲಾಯಿತು, ಬೆಳಗಾವಿಗೆ ಹೋಗುವಂತೆ ಒತ್ತಾಯಿಸಲಾಯಿತು. ನನ್ನ ಯಾವ ವಿವರಣೆಯನ್ನೂ ಅವರು ಒಪ್ಪಲಿಲ್ಲ. ಡಿಸೆಂಬರ್ 2007ರ ಐದನೇ ತಾರೀಖಿನಂದು, ರಾಷ್ಟ್ರಪತಿ ಆಡಳಿತದಲ್ಲಿದ್ದ ಕರ್ನಾಟಕದ ರಾಜ್ಯಪಾಲರಿಗೆ ಸಲಹೆಗಾರರಾಗಿದ್ದ ಎಸ್. ಕೃಷ್ಣ ಕುಮಾರ್ ಈ ರೀತಿ ಬರೆದರು: 

"ಕ್ರಮ ತೆಗೆದುಕೊಳ್ಳುವುದು (ವಿಜಯಕುಮಾರರ ವಿರುದ್ಧ) ಸರಿಯಾದ ಮಾರ್ಗವೆಂದು ನನಗನ್ನಿಸುವುದಿಲ್ಲ. ವಿವರಗಳು ಜಾಳುಜಾಳಾಗಿದ್ದು ಇಂಥದ್ದೇ ಒಂದು ತೀರ್ಪಿಗೆ ಬಂದು ಕ್ರಮ ತೆಗೆದುಕೊಳ್ಳುವುದು ಕಷ್ಟ. ಅಧಿಕಾರಿಯನ್ನು ವರ್ಗ ಮಾಡುವುದೇ ಉತ್ತಮ ಕ್ರಮ ಮತ್ತವರಿಗೆ ಇನ್ನೂ ಸೂಕ್ತವಾದ ಕೆಲಸ ನೀಡಬೇಕು. "

ಮಾಫಿಯಾದ ಅರ್ಥಕ್ಕನುಗುಣವಾಗಿ, ಭ್ರಷ್ಟ ಅಧಿಕಾರಿಗಳು ಕಾನೂನಿನ ಹಿರಿಯ ಅಧಿಕಾರಿಯ ನಿರ್ಧಾರವನ್ನು ಮೂಲೆಗುಂಪು ಮಾಡಿದರು. ಪಿ.ಬಿ.ಮಹಿಷಿಯವರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಅವರೇ ನ್ಯಾಯಾಧೀಶನ ಸ್ಥಾನದಲ್ಲಿದ್ದ ಕೇಸಿನಲ್ಲಿ ಅವರೇ ಸಾಕ್ಷಿದಾರರಾಗಿಬಿಟ್ಟರು! ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಲು ನಿರ್ಧರಿಸಿರುವವರು ಮಾತ್ರ ನನ್ನ ಮೇಲೆ ಕೇಸು ಹಾಕಲು ಸಾಧ್ಯ ಎಂದು ಖಡಾಖಂಡಿತವಾಗಿ ತಿಳಿಸಿದೆ. ಈ ಮಧ್ಯೆ ನನ್ನ ಪತ್ನಿಯಿಂದ ಪಿ.ಬಿ.ಮಹಿಷಿಯವರ ಭ್ರಷ್ಟ ಚಟುವಟಿಕೆಗಳು ಸಾರ್ವಜನಿಕವಾಗಿದ್ದವು. ಮಹಿಷಿಯವರನ್ನು ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ತೆಗೆಯಲಾಯಿತು. ಮಹಿಷಿಯವರ ವಿಚಾರಣೆಯನ್ನಾಧರಿಸಿ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಕಾರ್ಯಸಾಧುವಲ್ಲ ಎಂದು ನಂತರ ಮುಖ್ಯ ಕಾರ್ಯದರ್ಶಿಯಾದ ಸುಧಾಕರ್ ರಾವ್ ರವರಿಗೆ ತಿಳಿದಿತ್ತು. ಡಿ.ಪಿ.ಎ.ಆರ್ ನಲ್ಲಿದ್ದ ಪಿ.ಬಿ.ಮಹಿಷಿಯವರಿಗೆ ವಿಧೇಯರಾಗಿದ್ದ ಅಧಿಕಾರಿಗಳು ನನ್ನ ವಿರುದ್ಧ ವಿಚಾರಣೆ ನಡೆಸಬಲ್ಲ ಅಧಿಕಾರಿಯ ಹುಡುಕಾಟದಲ್ಲಿದ್ದರು; ಒಬ್ಬರೂ ಸಿಗಲಿಲ್ಲ. ಅಹಮದಾಬಾದಿನ ಐ.ಐ.ಎಮ್ ನಲ್ಲಿ ‘ಆಡಳಿತದಲ್ಲಿ ಸೀಟಿಯೂದುಗರ ಪಾತ್ರದ’ ಬಗ್ಗೆ ದೇಶದ ವಿವಿದೆಡೆಯಿಂದ ಬಂದಿದ್ದ ನೂರಕ್ಕೂ ಹೆಚ್ಚು ಐ.ಎ.ಎಸ್ ಅಧಿಕಾರಿಗಳಿಗೆ ವಿವರ ನೀಡಿದೆ. ಆಗ ಅನೇಕರು ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟವನ್ನು ಪುಸ್ತಕರೂಪದಲ್ಲಿ ತರುವಂತೆ ಒತ್ತಾಯಿಸಿದರು. ಸರಕಾರಕ್ಕೆ ಅನುಮತಿಗಾಗಿ ಕೇಳಿಕೊಂಡಾಗ, ಸುಧಾಕರ್ ರಾವ್ ಪುಸ್ತಕ ಬರೆಯಲು ಅನುಮತಿ ನೀಡಿದರು. 

http://depenq.com/PRESSRELEASE/bookpermission17mar09.pdf 

ಭ್ರಷ್ಟ ಐ.ಎ.ಎಸ್ ಮಾಫಿಯಾದ ಭಾಗವಾದವರಿಗಿರುವ ಲಾಭಗಳು. 

1. ಸಾರ್ವಜನಿಕ ಆಸ್ತಿ ಮತ್ತು ಹಣವನ್ನು ಲೂಟಿ ಮಾಡುವವರಿಗೆ ಎಲ್ಲಾ ಹಂತದಲ್ಲೂ ರಕ್ಷಣೆ. 

2. ಇತರೆ ರಾಜ್ಯಗಳಲ್ಲಿ ಪ್ರಾಮಾಣಿಕತೆಯ ಮುಖವಾಡ ಧರಿಸಿರುವ ಅಧಿಕಾರಿಗಳು ನಿಮ್ಮ ಪರವಾಗಿ ಲಂಚವನ್ನು ಸ್ವೀಕರಿಸುತ್ತಾರೆ. ನೀವೂ ಕೂಡ ಪ್ರಾಮಾಣಿಕತೆಯ ಸೋಗು ಧರಿಸಿ ಅವರ ಪರವಾಗಿ ಲಂಚ ಸ್ವೀಕರಿಸಬಹುದು. 

3. ಇತರೆ ರಾಜ್ಯದ ಅಧಿಕಾರಿಗಳು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಲು ನಿಮಗೆ ಸಹಕರಿಸುತ್ತಾರೆ. 

4. ಐ.ಎ.ಎಸ್ ಅಧಿಕಾರಿಯೊಬ್ಬರ ಭ್ರಷ್ಟತೆ ಹೊರಬಿದ್ದಾಗ, ಐ.ಎ.ಎಸ್ ಅಧಿಕಾರಿಗಳ ಸಂಘವು ಸಾಧ್ಯವಾದ ಎಲ್ಲಾ ರೀತಿಯಲ್ಲೂ ಭ್ರಷ್ಟರಿಗೆ ಸಹಕಾರ ನೀಡುತ್ತದೆ. ಭ್ರಷ್ಟರ ಪರವಾಗಿ ಪತ್ರಿಕಾ ಹೇಳಿಕೆಗಳನ್ನು ನೀಡುತ್ತದೆ. ಅದೇ ಒಬ್ಬ ಪ್ರಾಮಾಣಿಕ ಅಧಿಕಾರಿ ಸತ್ಯವನ್ನು ಜನರ ಮುಂದಿಡಲು ತಾನೇ ಮಾಧ್ಯಮದ ಮುಂದೆ ಬರಬೇಕು. 

5. ಪ್ರಾಮಾಣಿಕ ಅಧಿಕಾರಿಯೊಬ್ಬರ ಮೇಲೆ ದೈಹಿಕ ಹಲ್ಲೆ ನಡೆದಾಗ ಅಥವಾ ಹತ್ಯೆಯೇ ನಡೆದಾಗಲೂ ಕೂಡ ಐ.ಎ.ಎಸ್ ಅಧಿಕಾರಿಗಳ ಸಂಘ ಅಂಥ ಘಟನೆಗಳನ್ನು ಖಂಡಿಸುವ ನಿರ್ಣಯ ತೆಗೆದುಕೊಳ್ಳುವುದಿಲ್ಲ. 

ನಮ್ಮನ್ನು ಪ್ರಶ್ನಿಸದೆ ನಮ್ಮ ಜೊತೆ ಹೆಜ್ಜೆ ಹಾಕಲು ಒಪ್ಪಿದರೆ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತೇವೆ! 

ಭಾರತದ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಮತ್ತನೇಕ ಪ್ರಮುಖರ ಹೆಸರುಗಳನ್ನು ಉಪಯೋಗಿಸಿ ಹಣವನ್ನು ದರೋಡೆ ಮಾಡಲಾಗುತ್ತಿದೆ. ಅದಕ್ಕೆ ಸಂಬಂಧಪಟ್ಟ ಒಂದು ಪತ್ರಿಕಾ ಹೇಳಿಕೆಯಿದು 

http://depenq.com/PRESSRELEASE/MENTOR.pdf 

ಮಾಫಿಯ ದುರುಪಯೋಗಪಡಿಸಿಕೊಂಡ ಕೆಲವು ಹೆಸರುಗಳನ್ನು ಕೆಳಗೆ ನೀಡುತ್ತಿದ್ದೇನೆ 

ಕನಕಸೇನ್ ದೇಕ, ಸುನಿಲ್ ಭಾರತಿ ಮಿಟ್ಟಲ್, ಡಾ.ಎಂ.ವೀರಪ್ಪ ಮೊಯ್ಲಿ, ಭ್ರಜೇಶ್ ಮಿಶ್ರಾ, ಡಾ.ಸಿ.ರಂಗರಾಜನ್, ಮೇಧಾ ಪಾಟ್ಕರ್, ಪಿ.ಟಿ.ಉಷಾ, ಡಾ.ಪವನ್.ಕೆ.ಚಾಮ್ಲಿಂಗ್, ಪು ಲಾಲ್ ಥಾನ್ಹವಾಲ, ಕಿರೇಣ್ ರಿಜಿಜು, ಸುಂದರ್ ಲಾಲ್ ಬಹುಗುಣ, ಯಶೆ ದೋರ್ಜೆ ಥಾಂಗ್ ಚಿ, ಒಮರ್ ಅಬ್ದುಲ್ಲ, ಡಾ.ಕಿರಣ್ ಬೇಡಿ, ಜಸ್ಟೀಸ್ ಜೆ.ಎಸ್.ವರ್ಮ, ನಿತೀಶ್ ಕುಮಾರ್, ಎಂ.ಎನ್. ವಿಜಯಕುಮಾರ್, ಅಸಾಉದ್ದಿನ್ ಒವೈಸಿ, ರಾಹುಲ್ ಗಾಂಧಿ, ಮಣಿಪುರದ ಮಹಿಳೆಯರು, ಡಾ.ಪಿ.ಕೆ.ಅಯ್ಯಂಗಾರ್, ಡಾ.ಜಿ.ಮಾಧವನ್ ನಾಯರ್, ಪ್ರೊ. ಆಂಡ್ರೆ ಬೆಟೈಲಿ, ಜಿ.ಜೆ.ಜೆ.ಸಿಂಗ್, ಎನ್.ಆರ್.ನಾರಾಯಣ ಮೂರ್ತಿ.

ಮೇ 29, 2015

ಐ.ಎ.ಎಸ್ ಮಾಫಿಯ .... ಭಾಗ 2

ಎಂ.ಎನ್.ವಿಜಯಕುಮಾರ್
ಕನ್ನಡಕ್ಕೆ: ಡಾ.ಅಶೋಕ್.ಕೆ.ಆರ್
ಪ್ರಬಲವಾಗುವತ್ತ ಐ.ಎ.ಎಸ್ ಮಾಫಿಯ

2005 ಮತ್ತು 2007ರ ನಡುವೆ ಇಂಧನ ಇಲಾಖೆಯಲ್ಲಿನ ಹಗರಣಗಳು, ಭೂಕಬಳಿಕೆ, ಮೈಸೂರು ಮಿನರಲ್ಸ್ ಸೇರಿ ಇತರೆ ಸಂಸ್ಥೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ವರದಿಗಳನ್ನು ನೀಡಿದ್ದೆ. ಅವೆಲ್ಲಾ ವರದಿಗಳನ್ನು ಒಟ್ಟುಗೂಡಿಸಿದರೆ ನಡೆದ ಭ್ರಷ್ಟಾಚಾರದ ಮೊತ್ತ ಮೂವತ್ತು ಸಾವಿರ ಕೋಟಿಗಳನ್ನು ದಾಟುತ್ತದೆ. 2007ರಲ್ಲಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದ್ದಾಗ ಹಗರಣಗಳ ಸಂಖೈಯಲ್ಲಿ ಬಹಳವಾಗಿ ಹೆಚ್ಚಳವಾಯಿತು. ಎಷ್ಟರಮಟ್ಟಿಗೆಂದರೆ ಚುನಾವಣೆಯಲ್ಲಿ ತಮಗೆ ಅನುಕೂಲಕರವಾದ ಅಭ್ಯರ್ಥಿಯ ಗೆಲುವಿಗಾಗಿ ಹಣ ಕೊಡುವಷ್ಟರ ಮಟ್ಟಿಗೆ ಐ.ಎ.ಎಸ್ ಅಧಿಕಾರಿಗಳ ಭ್ರಷ್ಟಾಚಾರ ಹೆಚ್ಚಾಗಿತ್ತು. ಭ್ರಷ್ಟ ಐ.ಎ.ಎಸ್ ಅಧಿಕಾರಿಗಳು ನಿಯಮಬಾಹಿರ ಗಣಿಗಾರಿಕೆಯನ್ನು ಮತ್ತು ಭೂಕಬಳಿಕೆಯನ್ನು ಪ್ರೋತ್ಸಾಹಿಸಿದರು. ಇವೆರಡೇ ಹಗರಣಗಳ ಮೊತ್ತ ನಾಲ್ಕು ಲಕ್ಷ ಕೋಟಿ ದಾಟುತ್ತದೆ. ಇಂತ ಎಲ್ಲಾ ಅನ್ಯಾಯದ ಹಗರಣಗಳಲ್ಲೂ ಐ.ಎ.ಎಸ್ ಮಾಫಿಯಾದ ಒಬ್ಬ ವ್ಯಕ್ತಿಯಾದರೂ ಇದ್ದೇ ಇರುತ್ತಾನೆ.
ಭಾರತದಾದ್ಯಂತ ವಿಸ್ತರಿಸಿದ ಐ.ಎ.ಎಸ್ ಮಾಫಿಯ

ಅನೈತಿಕ ಮಾರ್ಗದಲ್ಲಿ ಗಳಿಸಿದ ಸಂಪತ್ತು ತನಿಖಾ ತಂಡಗಳ ಕಣ್ಣಿಗೆ ಬೀಳದಿರಬೇಕಾದರೆ ವಿವಿಧ ರಾಜ್ಯಗಳ ಭ್ರಷ್ಟ ಅಧಿಕಾರಿಗಳು ಜೊತೆ ಜೊತೆಯಾಗಿ ಕಾರ್ಯನಿರ್ವಹಿಸಿದರೆ ಒಳ್ಳೆಯದು ಎಂಬಂಶವನ್ನು ಐ.ಎ.ಎಸ್ ಮಾಫಿಯ ಕಂಡುಕೊಂಡಿತ್ತು. ಕರ್ನಾಟಕದ ಭ್ರಷ್ಟ ಐ.ಎ.ಎಸ್ ಅಧಿಕಾರಿಗಳು ಆಂಧ್ರಪ್ರದೇಶದಲ್ಲಿ ಭೂಮಿಯನ್ನು ಖರೀದಿಸಿದ್ದರ ಬಗ್ಗೆ ಸರಕಾರಕ್ಕೆ ವರದಿ ಮಾಡಿದ್ದೆ. ಮೂರು ವಾರಗಳ ಕಾಲ ಬೆಂಗಳೂರಿನ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ, ಬಿಹಾರದ ಐ.ಎ.ಎಸ್ ಅಧಿಕಾರಿಯೊಬ್ಬ ಕಛೇರಿಯಲ್ಲಿ ಹಳೆಯ ಅಧಿಕಾರಿಯೇ ಇದ್ದಾರೆಂದುಕೊಂಡು ಫೋನಿನಲ್ಲಿ ‘ಹಣ ರವಾನೆಯಾಗಿದೆ. ಕೆಲಸ ಮುಗಿಸಿಕೊಡಬಹುದು’ ಎಂದು ಹೇಳಿದ್ದರು! ಲೋಕಾಯುಕ್ತ ಸಂಸ್ಥೆಗಳ ಅಧಿಕಾರ ರಾಜ್ಯದ ಗಡಿಯೊಳಗೆ ಮೀಸಲಾಗಿಬಿಟ್ಟಿರುವುದರಿಂದ ಮತ್ತು ಸಿ.ಬಿ.ಐನಂತಹ ಸಂಸ್ಥೆಗಳ ವ್ಯಾಪ್ತಿಗೆ ರಾಜ್ಯದ ಅಧಿಕಾರಿಗಳು ಬರುವುದಿಲ್ಲವಾದ್ದರಿಂದ ಈ ಐ.ಎ.ಎಸ್ ಮಾಫಿಯ ಬಹುಬೇಗನೆ ದೇಶಾದ್ಯಂತ ಹರಡಿತು. 2010ರಿಂದೀಚೆಗೆ ಕಳ್ಳ ಮಾರ್ಗದಲ್ಲಿ ಗಳಿಸಿದ ಹಣ ಐ.ಎ.ಎಸ್ ಮಾಫಿಯಾದ ನೆರವಿನಿಂದ ದೇಶಾದ್ಯಂತ ಹರಡಿತು ಮತ್ತು ವಿದೇಶಗಳಿಗೂ ತಲುಪಿತು. ಸಾಮಾನ್ಯ ಜನರಷ್ಟೇ ಅಲ್ಲ, ಕೆಲವು ಐ.ಎ.ಎಸ್ ಅಧಿಕಾರಿಗಳು ಕೂಡ ಪ್ರಾಮಾಣಿಕತೆಯ ಸೋಗಿನಲ್ಲಿರುವ ಭ್ರಷ್ಟರ ಮುಖವಾಡ ಕಳಚಿಬಿದ್ದರೆ ಅಚ್ಚರಿ ಪಡುತ್ತಾರೆ.

1981ರಲ್ಲಿ ಐ.ಎ.ಎಸ್ ಸೇರಿದಾಗಿನಿಂದ ಇಲ್ಲಿಯವರೆಗೆ ನನ್ನ ಕಾರ್ಯವಿಧಾನದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಆದರೆ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದವರ ನೈತಿಕತೆಯಲ್ಲಿ ಪತನವಾಗಿದೆ, ಕಳೆದ ಹತ್ತು ವರುಷಗಳಿಂದ ಮೂಗು ತೂರಿಸುವಿಕೆ ಹೆಚ್ಚಾಗಿದೆ.

ಬಾಬಾ ಅಣು ಸಂಶೋಧನಾ ಕೇಂದ್ರದಲ್ಲಿ 1976ರಿಂದ 1982ರವರೆಗೆ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. 1981ರಲ್ಲಿ ಐ.ಎ.ಎಸ್ಸಿಗೆ ಆಯ್ಕೆಯಾದೆ. 1982ರಲ್ಲಿ ನಾನು ಮುಸ್ಸೋರಿಯ ಐ.ಎ.ಎಸ್ ಅಧಿಕಾರಿಗಳ ತರಬೇತಿ ಕೇಂದ್ರದಲ್ಲಿದ್ದಾಗ ಆಗಿನ ನಿರ್ದೇಶಕ ದಿ. ಪಿ.ಎಸ್. ಅಪ್ಪುರವರು ತಪ್ಪು ಮಾಡುತ್ತಿದ್ದ ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿಗಳನ್ನು ಡಿ.ಒ.ಪಿ.ಟಿ (department of personnel and training)ಯವರು ರಕ್ಷಿಸುತ್ತಿದ್ದುದನ್ನು ಕಂಡು ರಾಜೀನಾಮೆ ನೀಡಿಬಿಟ್ಟರು. ಆಗಿನಿಂದಲೇ ಭ್ರಷ್ಟ ವ್ಯವಸ್ಥೆ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಲಾರಂಭಿಸಿದೆ. ಇಲಾಖೆಯವರು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದನ್ನು ಬಿಟ್ಟು ಅವರನ್ನು ರಕ್ಷಿಸಲು ಟೊಂಕ ಕಟ್ಟಿ ನಿಂತು ಪಿ.ಎಸ್.ಅಪ್ಪುರವರ ಸಲಹೆಗಳನ್ನು ಸಾರಸಗಾಟಾಗಿ ತಿರಸ್ಕರಿಸಿದರು. ಭ್ರಷ್ಟ ಅನೈತಿಕ ಕೆಲಸ ಮಾಡುವ ಅಧಿಕಾರಿಗಳನ್ನು ಕಂಡೂ ಕಾಣದಂತೆ ಇರುವುದಿಲ್ಲ ಎಂದು ಪ್ರಮಾಣ ಮಾಡಿಕೊಂಡೆ, ನನ್ನ ಪ್ರಮಾಣದಿಂದ ಯಾವಾಗಲಾದರೂ ನನ್ನ ಕೆಲಸ ಹೋಗುತ್ತದೆ ಎಂಬ ಸತ್ಯ ಮೂವತ್ತನಾಲ್ಕು ವರುಷಗಳ ಹಿಂದೆಯೇ ತಿಳಿದಿತ್ತು.

ಹಿರಿಯ ಐ.ಎ.ಎಸ್ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ 1986ರಿಂದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರಗಳಲ್ಲನೇಕವನ್ನು ನಾನು ಇಟ್ಟಿಲ್ಲವಾದರೂ ಸರಕಾರದ ಫೈಲುಗಳಲ್ಲಿ ಅವುಗಳಿವತ್ತಿಗೂ ಲಭ್ಯವೆಂದು ಆಶಿಸುತ್ತೇನೆ. 1997ರಿಂದ 2013ರವರೆಗೆ ಬರೆದ ಕೆಲವು ಪತ್ರಗಳ ಲಿಂಕುಗಳನ್ನು ಕೆಳಗೆ ನೀಡಿದ್ದೇನೆ. ನನ್ನ ಕಾರ್ಯವೈಖರಿಯಲ್ಲಿ ಬದಲಾವಣೆಗಳಾಗಿಲ್ಲವೆಂಬುದು ಆ ಪತ್ರಗಳಿಂದ ನಿಮಗೆ ತಿಳಿಯುತ್ತದೆ. ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳನ್ನು ಆಗ್ರಹಿಸುತ್ತಲೇ ಬಂದಿದ್ದೇನೆ. ಇದೇ ಸಮಯದಲ್ಲಿ ಐ.ಎ.ಎಸ್ ಅಧಿಕಾರಿಗಳ ನೈತಿಕತೆ ಪಾತಾಳ ತಲುಪುತ್ತಿತ್ತು. 2005ರಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ.ಕೆ.ಮಿಶ್ರಾ ನಾನವರಿಗೆ ಕೊಟ್ಟ ವರದಿಯನ್ನು ಆಧರಿಸಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಅವರಿಗಾಗುತ್ತಿದ್ದ ಭಯದ ಬಗ್ಗೆ ಹೇಳಿದರು. 2006ರಲ್ಲಿ ನಾನು ನೀಡಿದ ಭ್ರಷ್ಟರ ವರದಿಯ ಬಗ್ಗೆ ಮೌನವಾಗಿದ್ದ ಬಿ.ಕೆ.ದಾಸ್ ನನ್ನನ್ನು ತತ್ ಕ್ಷಣವೇ ವರ್ಗ ಮಾಡಲು ಮಾತ್ರ ಹೇಸಲಿಲ್ಲ. 2006ರ ಕೊನೆಗೆ ಕೆಲವು ಸಮಯದ ಕಾಲ ಡಾ ಮಾಲತಿ ದಾಸ್ ಮುಖ್ಯ ಕಾರ್ಯದರ್ಶಿಯಾಗಿದ್ದರು. ಭ್ರಷ್ಟರ ಬಗೆಗಿನ ನನ್ನ ವರದಿಗಳ ಕಾರಣದಿಂದ ನನಗೆ ಜೀವ ಭಯವಿದೆ ಎಂದು ಹೇಳಿಕೊಂಡಿದ್ದೆ. ಲಿಖಿತ ಹೇಳಿಕೆಯನ್ನು ಬರೆಸಿಕೊಂಡಿದ್ದರು. ಅದನ್ನಾಧರಿಸಿ ಆಗಿನ ಮುಖ್ಯಮಂತ್ರಿ ನನ್ನ ವರ್ಗಾವಣೆಯನ್ನು ಬದಲಿಸಿದ್ದರು. ಆದರದು ಕಾರ್ಯರೂಪಕ್ಕೆ ಬರಲಿಲ್ಲ. ಕಾರಣ? ಡಾ. ಮಾಲತಿ ದಾಸ್ ರವರ ಸ್ವಂತ ತಮ್ಮ ಕೂಡ ನನ್ನ ವರದಿಯಲ್ಲಿದ್ದ ಭ್ರಷ್ಟ ಅಧಿಕಾರಿಗಳಲ್ಲೊಬ್ಬನಾಗಿದ್ದ! ಮಾಲತಿ ದಾಸರ ನಂತರ ಮುಖ್ಯ ಕಾರ್ಯದರ್ಶಿಯಾಗಿ ಬಂದ ಪಿ.ಬಿ.ಮಹಿಷಿಯವರೇ ಭ್ರಷ್ಟರಾಗಿದ್ದರು, ಯಾವೊಂದು ಹಿಂಜರಿಕೆಯೂ ಇಲ್ಲದೆ ಭ್ರಷ್ಟರನ್ನು ನಾನು ರಕ್ಷಿಸುತ್ತೇನೆ ಎಂದು ಹೇಳಿದ್ದರವರು! ಪಿ.ಬಿ.ಮಹಿಷಿಯವರ ಭ್ರಷ್ಟತೆಯನ್ನು ನನ್ನ ಪತ್ನಿ ಸಾರ್ವಜನಿಕಗೊಳಿಸಿದಾಗ ಮಹಿಷಿಯವರನ್ನು ಕೆಳಗಿಳಿಸಿ ಸುಧಾಕರ್ ರಾವ್ ರವರನ್ನು ಮುಖ್ಯಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ಭ್ರಷ್ಟ ಐ.ಎ.ಎಸ್ ಅಧಿಕಾರಿಗಳ ವಿರುದ್ಧದ ವರದಿಗಳನ್ನು ಮುಂದುವರೆಸಿದರೆ, ನಿಮಗೆ ಬೆಂಬಲ ಕೊಡುತ್ತಿರುವ ಪ್ರಾಮಾಣಿಕ ಅಧಿಕಾರಿಗಳನ್ನು ತೊಂದರೆಗೀಡುಮಾಡಬೇಕಾಗುತ್ತದೆ ಎಂಬ ಬೆದರಿಕೆಯ ಮಿಂಚೆ ಕಳುಹಿಸಿದ್ದರು ನನ್ನ ಪತ್ನಿಗೆ. ಸುಧಾಕರ್ ರಾವ್ ನಂತರ ಮುಖ್ಯ ಕಾರ್ಯದರ್ಶಿಯಾದ ಎಸ್.ವಿ.ರಂಗನಾಥ್ ರದು ಮತ್ತಷ್ಟು ತೆರೆದ ವ್ಯಕ್ತಿತ್ವ! ‘ನಿಮಗೆ ಯಾವುದಾದರೂ ಹುದ್ದೆ ದೊರಕಬೇಕೆಂದರೆ ನೀವಿಲ್ಲಿಯವರೆಗೆ ಸರಕಾರಕ್ಕೆ ಭ್ರಷ್ಟರ ವಿರುದ್ಧ ಸಲ್ಲಿಸಿರುವ ವರದಿಗಳನ್ನು ಮರೆತುಬಿಡಬೇಕು ಮತ್ತು ಇನ್ನು ಮುಂದೆ ಭ್ರಷ್ಟಾಚಾರದ ಬಗ್ಗೆ ಕಣ್ಣು ಮುಚ್ಚಿಕೊಂಡಿರಬೇಕು’ ಎಂದು ಹೇಳಿಬಿಟ್ಟರು. ನಂತರ ಬಂದ ಕೌಶಿಕ್ ಮುಖರ್ಜಿ ಐ.ಎ.ಎಸ್ ಮಾಫಿಯ ಕಾರ್ಯನಿರ್ವಹಿಸುವ ರೀತಿಯನ್ನು ಪದೇಪದೇ ತೋರಿಸುತ್ತಿದ್ದಾರೆ!

http://depenq.com/PRESSRELEASE/CS1997.pdf 
http://depenq.com/PRESSRELEASE/BKdas25SEP06.pdf 
http://depenq.com/PRESSRELEASE/BKDASshieldedCORRUPT.pdf
http://depenq.com/PRESSRELEASE/MalatiDAS.pdf
http://depenq.com/PRESSRELEASE/MAHISHIIignoringLOKAYUKTA.pdf
http://depenq.com/PRESSRELEASE/sudhakarrao.pdf
http://depenq.com/PRESSRELEASE/SVR.pdf
http://depenq.com/PRESSRELEASE/MNVtoKM6NOV14.pdf

ಹಿರಿಯ ಐ.ಎ.ಎಸ್ ಅಧಿಕಾರಿಗಳು whistleblowersಗಳನ್ನು ಯಾಕೆ ದ್ವೇಷಿಸುತ್ತಾರೆ?

ಕಾನೂನು ಮತ್ತು ನೈತಿಕತೆಯ ಗಡಿಯಲ್ಲಿ ನಿಂತು whistleblowers ಕಾರ್ಯನಿರ್ವಹಿಸುತ್ತಾರೆ ಎಂದು ಕಾನೂನು ಆಯೋಗ ಗುರುತಿಸಿದೆ. ಆಯಕಟ್ಟಿನ ಜಾಗದಲ್ಲಿರುವ, ವೈಯಕ್ತಿಕ ಹಿತಾಸಕ್ತಿಗಳಿರುವ ಅಧಿಕಾರಿಗಳು ಸೀಟಿ ಹೊಡೆಯುವ ನನ್ನಂತವರ ಕಾಯಕವನ್ನು ಕೆಟ್ಟ ಕೆಲಸವೆಂದು ಪರಿಗಣಿಸುತ್ತಾರೆ, ಸಾರ್ವಜನಿಕ ಹಿತಾಸಕ್ತಿಯನ್ನು ಎತ್ತಿ ಹಿಡಿಯಲಿಕ್ಕಾಗಿ ನಾವಿಂಥ ಕೆಲಸಗಳನ್ನು ಮಾಡುತ್ತಿದ್ದೀವೆಂಬ ಸತ್ಯವನ್ನು ಬೇಕೆಂದೆ ಕಡೆಗಣಿಸುತ್ತಾರೆ. ಸಾರ್ವಜನಿಕ ಹಿತಾಸಕ್ತಿಗಾಗಿ ಸೀಟಿ ಹೊಡೆಯುವವರನ್ನು ಯಾವಾಗಲೂ ಆಜ್ಞಾಭಂಜಕರೆಂದೇ ಗುರುತಿಸುವುದಕ್ಕೆ ಕಾರಣ ಅವರ ಭ್ರಷ್ಟ ಕೆಲಸಗಳು ಹೊರಬಂದುಬಿಡಬಹುದೆಂಬ ಭಯ. ಐ.ಎ.ಎಸ್ಸಿನ ನೀತಿ ನಿಯಮಗಳು ಹಿರಿಯ ಅಧಿಕಾರಿಗಳೆಲ್ಲ ಪ್ರಾಮಾಣಿಕರು ಎಂದು ನಂಬಿದರೆ, ಪ್ರಪಂಚದಾದ್ಯಂತ ಸೀಟಿದಾರರಿಗಾಗಿ ಇರುವ ಕಾಯ್ದೆಗಳು ಹಿರಿಯ ಅಧಿಕಾರಿಗಳು ಅಪ್ರಾಮಾಣಿಕರು ಮತ್ತು ಭ್ರಷ್ಟರಾಗಿರಲು ಸಾಧ್ಯ ಎಂಬ ಸತ್ಯವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಭಾರತದಲ್ಲಿ ಸೀಟಿದಾರರನ್ನು ರಕ್ಷಿಸಲು ಕಾಯ್ದೆಯಿದೆ, ಅದರ ನೀತಿ ನಿಯಮಗಳು ಇನ್ನೂ ರೂಪಿತವಾಗಿಲ್ಲ. ಆ ಕಾಯ್ದೆ ಆಚರಣೆಗೆ ಬರುವುದಕ್ಕೆ ಮುಂಚೆಯೇ ಸೀಟಿ ಹೊಡೆಯುವುದನ್ನೇ ತಡೆಯಲು ಬೇಕಾದ ಮಾರ್ಪಾಡುಗಳನ್ನು ಡಿ.ಒ.ಪಿ.ಟಿ ಮಾಡುತ್ತಿದೆ. ಕಾಯ್ದೆಯ ಅನುಸಾರ ಎಲ್ಲಾ ಸರಕಾರಿ ಸೇವಕರು ಭ್ರಷ್ಟರ ವಿರುದ್ಧ ಸೀಟಿ ಹೊಡೆಯಬೇಕು, ಆದರೆ ಡಿ.ಒ.ಪಿ.ಟಿ ಇದನ್ನು ಬಲವಾಗಿ ವಿರೋಧಿಸುತ್ತಿರುವುದಕ್ಕೆ ಕಾರಣ ಅನೇಕ ಹಿರಿಯ ಅಧಿಕಾರಿಗಳು ಮತ್ತೀಗಾಗಲೇ ನಿವೃತ್ತಿ ಹೊಂದಿದ ಅಧಿಕಾರಿಗಳ ಜೀವನ ಈ ಕಾಯ್ದೆ ಜಾರಿಯಾಗಿಬಿಟ್ಟರೆ ಶೋಚನೀಯವಾಗಿಬಿಡುತ್ತದೆ ಎಂದು. ಸೀಟಿದಾರ ಸತ್ಯೇಂದ್ರ ದುಬೆಯ ಹತ್ಯೆಯ ನಂತರ ಸುಪ್ರೀಂ ಕೋರ್ಟಿನ ನಿರ್ದೇಶನದ ಪ್ರಕಾರ ಸಂಸತ್ತು ಜುಲೈ 2004ರಂದು ಸೀಟಿದಾರರನ್ನು ರಕ್ಷಿಸುವ ಬಗ್ಗೆ ಸುತ್ತೋಲೆ ಹೊರಡಿಸಿತ್ತು. ಆದರೆ ಪ್ರಾಮಾಣಿಕರನ್ನು ರಕ್ಷಿಸುವ ಕೆಲಸ ಇಂದಿಗೂ ನಡೆಯುತ್ತಿಲ್ಲ.
http://depenq.com/PRESSRELEASE/MNV16APRL2015.pdf

ಮೇ 19, 2015

ಐ.ಎ.ಎಸ್ ಮಾಫಿಯ

M N Vijayakumar
ಅವರು ಮಾಡಿದ ಏಕೈಕ ತಪ್ಪೆಂದರೆ ಐ.ಎ.ಎಸ್ ಅಧಿಕಾರಿಯಾಗಿದ್ದುಕೊಂಡು ಭ್ರಷ್ಟ ಐ.ಎ.ಎಸ್ ಅಧಿಕಾರಿಗಳ ವಿರುದ್ಧ ಸಮರ ಸಾರಿದ್ದು. ಆಧಾರ ಸಹಿತ ದೂರುಗಳನ್ನು ನೀಡಿದ್ದು. ಐ.ಎ.ಎಸ್ ಅಧಿಕಾರಿಗಳ ಕೃಪಾಕಟಾಕ್ಷಕ್ಕೆ ಒಳಪಟ್ಟ ಸರಕಾರಗಳು ಎಂ.ಎನ್.ವಿಜಯಕುಮಾರರಿಗೆ ಮಾನ ಸಮ್ಮಾನಗಳನ್ನು ನೀಡಲಿಲ್ಲ. ಪದೇ ಪದೇ ವರ್ಗಾವಣೆ ಮಾಡಿದರು. ಸಾಧ್ಯವಾದ ಎಲ್ಲಾ ರೀತಿಗಳಿಂದಲೂ ಅವರಿಗೆ ತೊಂದರೆ ಕೊಟ್ಟರು. ಕೊನೆಗೆ ನಿವೃತ್ತಿಗೆ ಇನ್ನೊಂದು ದಿನವಿರುವಾಗ ಬಲವಂತದಿಂದ ನಿವೃತ್ತರನ್ನಾಗಿಸಿದರು. ನಿವೃತ್ತ ಜೀವನದಲ್ಲಿ ಅವರಿಗೆ ಲಭಿಸಬೇಕಿದ್ದ ಸೌಲಭ್ಯಗಳನ್ನು ಮೊಟಕುಗೊಳಿಸಿ ಮಾನಸಿಕ ಮತ್ತು ಆರ್ಥಿಕ ಹಿಂಸೆಗೆ ಒಳಪಡಿಸಿದರು. ಜೀವನ ಪರ್ಯಂತ ಭ್ರಷ್ಟತೆ ವಿರುದ್ಧ ಹೋರಾಡುತ್ತಲೇ ಬಂದ ವಿಜಯಕುಮಾರವರನ್ನು ಬಲವಂತದಿಂದ ನಿವೃತ್ತಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದು ಭ್ರಷ್ಟತೆಯ ವಿರುದ್ಧ ಕೂಗು ಹಾಕುತ್ತಲೇ ಅಧಿಕಾರವಿಡಿದ ಮೋದಿ ಸರಕಾರ. ನಮ್ಮದು ಹಗರಣರಹಿತ ಸರಕಾರ ಎಂದು ಕೊಚ್ಚಿಕೊಳ್ಳುವ ಸಿದ್ಧರಾಮಯ್ಯ ‘ನಮಗೂ ಇದಕ್ಕೂ ಸಂಬಂಧವಿಲ್ಲ’ ಎಂದು ಕೈತೊಳೆದುಕೊಳ್ಳುವ ಮಾತನಾಡಿದ್ದು ನಿಷ್ಠಾವಂತರ ಬಗೆಗಿನ ಅವರ ಪ್ರೀತಿಗೆ ಸಾಕ್ಷಿ. ಕೇಂದ್ರದ ನಿರ್ಧಾರದಲ್ಲಿ ರಾಜ್ಯ ಸರಕಾರದ ಪಾತ್ರವಿಲ್ಲದೇ ಇರಬಹುದು, ಆದರೆ ನೈತಿಕ ಬೆಂಬಲ ಕೊಟ್ಟು ಕೇಂದ್ರಕ್ಕೊಂದು ಪತ್ರವನ್ನಾದರೂ ಬರೆದು ನಿಷ್ಠಾವಂತ ಅಧಿಕಾರಿಗಳಿಗೊಂದು ಸಂದೇಶ ನೀಡಬಹುದಿತ್ತಲ್ಲವೇ? ಎಂ. ಎನ್. ವಿಜಯಕುಮಾರ್ ರವರು ಕೇಂದ್ರಕ್ಕೆ, ರಾಜ್ಯಕ್ಕೆ ಬರೆದಿರುವ ಮನವಿ ಪತ್ರದ ಈ ಕನ್ನಡಾನುವಾದ ಹಿಂಗ್ಯಾಕೆಯ ಓದುಗರಿಗೆ ಐ.ಎ.ಎಸ್ ಮಾಫಿಯಾದ ಬಗ್ಗೆ ಪರಿಚಯಿಸಿಕೊಡಲಿದೆ. 
ಎಂ.ಎನ್. ವಿಜಯ್ ಕುಮಾರ್
ಕನ್ನಡಕ್ಕೆ: ಡಾ ಅಶೋಕ್.ಕೆ.ಆರ್

ಇದೇ 2015ರ ಎಪ್ರಿಲ್ 28ಕ್ಕೆ ನಿವೃತ್ತನಾಗಬೇಕಿದ್ದ ನನ್ನನ್ನು ಒಂದು ದಿನ ಮೊದಲು ಬಲವಂತದಿಂದ ನಿವೃತ್ತನಾಗುವಂತೆ ಮಾಡಿದ ಹಿಂದಿನ ಕಾರಣಗಳನ್ನು ಅರಿಯಬೇಕಾದರೆ ಭಾರತದ ಐ.ಎ.ಎಸ್ ಮಾಫಿಯ ಕಾರ್ಯನಿರ್ವಹಿಸುವ ರೀತಿಯನ್ನು ಮತ್ತು ಈ ಮಾಫಿಯ ದೇಶದ ಸಂವಿಧಾನಾತ್ಮಕ ಸಂಸ್ಥೆಗಳನ್ನು ತಪ್ಪುದಾರಿಗೆಳೆಯುವ ವಿಧಾನವನ್ನು ತಿಳಿಯಬೇಕು. 2010ರಲ್ಲಿ ಐ.ಎ.ಎಸ್ ಮಾಫಿಯ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಮತ್ತಲವು ಖ್ಯಾತನಾಮರ ಹೆಸರನ್ನು ಬಳಸಿಕೊಂಡು ಕಾನೂನು ಬಾಹಿರ ಕೆಲಸಗಳನ್ನು ಮಾಡಿದ ಬಗ್ಗೆ ನನ್ನಲ್ಲಿ ದಾಖಲೆಗಳಿವೆ. ಈ ಐ.ಎ.ಎಸ್ ಮಾಫಿಯಾಗೆ ನಾನು ಮಗ್ಗಲು ಮುಳ್ಳಾಗಿದ್ದ ಕಾರಣ ಇರುವ ಎಲ್ಲಾ ಕಾನೂನು ಕಟ್ಟಳೆಗಳನ್ನು ಗಾಳಿಗೆ ತೂರಿ ನನ್ನನ್ನು ಬಲವಂತದಿಂದ ನಿವೃತ್ತನಾಗುವಂತೆ ಮಾಡುವುದು ಕಷ್ಟವಾಗಲಿಲ್ಲ. ಈ ಮಾಫಿಯಾದ ಸುಳ್ಳುಗಳಿಂದ ವಿಚಲಿತರಾಗದೆ ಉನ್ನತ ಸಂಸ್ಥೆಗಳು ನನಗೆ ನ್ಯಾಯ ದೊರಕಿಸಿಕೊಡಬಲ್ಲವೇ ಎಂಬುದೇ ಈಗ ನನ್ನೆದುರಿಗಿರುವ ಪ್ರಶ್ನೆ. ನನಗನ್ಯಾಯ ಮಾಡಿದವರಿಗೆ ಶಿಕ್ಷೆಯಾಗಿ, ನನಗೆ ನ್ಯಾಯ ದೊರಕಲಿ ಎಂಬ ಆಶಯದಿಂದ ಗೌಪ್ಯವಾಗಿರಬೇಕಿದ್ದ ಈ ಪತ್ರವನ್ನು ಸಾರ್ವಜನಿಕ ಓದಿಗೆ ತೆರೆದಿದ್ದೇನೆ. ಐ.ಎ.ಎಸ್ ಸಂಸ್ಥೆಯ ಇತಿಹಾಸದಲ್ಲಿ ನನ್ನ ಬಲವಂತದ ನಿವೃತ್ತಿ ಹೇಗೆ ಅಪರೂಪವೋ ಹಾಗೆಯೇ ಈ ರೀತಿಯ ಸಾರ್ವತ್ರಿಕ ಸಾರ್ವಜನಿಕ ಮನವಿ ಕೂಡ ಅಷ್ಟೇ ಅಪರೂಪ. ಐ.ಎ.ಎಸ್ ಮಾಫಿಯ ಕಟ್ಟಿರುವ ಬೃಹತ್ ಗೋಡೆಯನ್ನು ಕೆಡವುವುದಕ್ಕೆ ನನಗಿನ್ಯಾವ ದಾರಿಯೂ ತೋಚುತ್ತಿಲ್ಲ.

ಕರ್ನಾಟಕದಲ್ಲಿ ಐ.ಎ.ಎಸ್ ಮಾಫಿಯಾದ ಜನನ

ಅಧಿಕಾರ ಭ್ರಷ್ಟಾಚಾರವನ್ನುಟ್ಟು ಹಾಕುತ್ತದೆ ಎಂಬ ಸತ್ಯ ಎಲ್ಲರಿಗೂ ಗೊತ್ತಿರುವಂತದ್ದೇ. ದೀರ್ಘ ಅವಧಿಯವರೆಗೆ ಅಧಿಕಾರದ ರುಚಿ ಹತ್ತಿಸಿಕೊಂಡ ಒಂದು ಗುಂಪಿನ ಜನರು ಮಾಫಿಯಾದ ಹುಟ್ಟಿಗೆ ಕಾರಣಕರ್ತರಾಗುತ್ತಾರೆ ಎಂಬ ಸಂಗತಿ ಬಹಳ ಜನರಿಗೆ ತಿಳಿದಿರಲಾರದು. ಮಾಫಿಯಾದ ಹುಟ್ಟಿಗೆ ದುರ್ಬಲ ಸರಕಾರವಿರಬೇಕಷ್ಟೇ. ಮೊದಲ ಪೋಸ್ಟಿಂಗ್ಸಿನಿಂದ ನಿವೃತ್ತರಾಗುವ ತನಕ ಅಧಿಕಾರದ ರುಚಿ ಹತ್ತಿಸಿಕೊಳ್ಳುವ ಐ.ಎ.ಎಸ್ ಅಧಿಕಾರಿಗಳಿಗೆ ಇಂತಹುದೊಂದು ಅವಕಾಶ ಕರ್ನಾಟಕದಲ್ಲಿ ಲಭಿಸಿದ್ದು 2005ರ ಈಚೆಗೆ. ಭ್ರಷ್ಟ ಅಧಿಕಾರಿಗಳೆಲ್ಲ ಸಂಘಟಿತರಾಗಲು ಪ್ರಾರಂಭಿಸಿದರು. ನೀತಿ ನಿಯಮಗಳನ್ನು ಮೀರಲು ಪ್ರಾರಂಭಿಸುವುದರ ಜೊತೆಜೊತೆಗೆ ಭ್ರಷ್ಟಾಚಾರವನ್ನು ತಡೆಯಲೆಂದಿರುವ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸಲು ಶುರುಮಾಡಿದರು. ಜುಲೈ 4 2005ರಂದು ಅಂದಿನ ಮುಖ್ಯ ಕಾರ್ಯದರ್ಶಿ ಶ್ರೀ ಕೆ.ಕೆ. ಮಿಶ್ರಾರವರಿಗೆ ವ್ಯಾಪಕಗೊಳ್ಳುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ತೆಗೆದುಕೊಳ್ಳಬೇಕಾದ ಸಂಭಾವ್ಯ ನಿರ್ಧಾರಗಳ ಕುರಿತು ಪತ್ರ ಬರೆದೆ. ನಂತರ ನಡೆದಿದ್ದು ಆಹ್ಲಾದ ಕೊಡುವಂತದ್ದಾಗಿರಲಿಲ್ಲ.

ಇಂಧನ ಇಲಾಖೆಯಲ್ಲಿದ್ದು ಕೆಲವು ಐ.ಎ.ಎಸ್. ಅಧಿಕಾರಿಗಳು ಜನರ ಹಣವನ್ನು ದೋಚುವುದರ ಕುರಿತಂತೆ ಮುಖ್ಯ ಕಾರ್ಯದರ್ಶಿ ಕೆ.ಕೆ.ಮಿಶ್ರಾರವರಿಗೆ 2005ರಲ್ಲಿ ವಿಸ್ತೃತ ವರದಿ ನೀಡಿದೆ. ನನ್ನ ವರದಿಯನ್ನು ಮಿಶ್ರಾರವರು ಮೆಚ್ಚಿಕೊಂಡರಾದರೂ ವರದಿಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಭಯ ವ್ಯಕ್ತಪಡಿಸಿದರು ಮತ್ತು ಈ ಭ್ರಷ್ಟ ಅಧಿಕಾರಿಗಳು ನಿಮ್ಮ ಹೆಸರನ್ನು ಹಾಳು ಮಾಡಿ ನಿಮಗೆ ತೊಂದರೆ ಕೊಡುವ ಉದ್ದೇಶದಿಂದ ಯಾವ ನೀಚ ಮಟ್ಟಕ್ಕಾದರೂ ಇಳಿಯಬಹುದು ಎಂದು ಎಚ್ಚರಿಕೆ ನೀಡಿದರು. ನಿವೃತ್ತರಾಗುವುದಕ್ಕೆ ಸ್ವಲ್ಪ ದಿನದ ಮೊದಲು ಕೆ.ಕೆ.ಮಿಶ್ರಾರವರು ನನಗೆ ಕರೆ ಮಾಡಿ ಲೋಕಾಯುಕ್ತ ಸಂಸ್ಥೆಗೆ ಸೇರಲು ನಿಮಗೆ ಇಚ್ಛೆಯಿದೆಯೇ ಎಂದು ಕೇಳಿದರು. ಭ್ರಷ್ಟರ ಬಗ್ಗೆ ನಾನೇ ಕೊಟ್ಟ ವರದಿ ಮತ್ತು ಇತರೆ ಭ್ರಷ್ಟ ಐ.ಎ.ಎಸ್ ಅಧಿಕಾರಿಗಳ ವಿರುದ್ಧ ನಿಂತೇ ಹೋಗಿರುವ ಕೇಸುಗಳ ಬಗ್ಗೆ ನೀವು ವಿಚಾರಣೆ ನಡೆಸಿ ಒಂದು ಹಂತಕ್ಕೆ ತರಬಹುದು ಎಂದು ತಿಳಿಸಿದರು. ಅವರ ಮಾತಿಗೆ ಒಪ್ಪಿ ಅಂದಿನ ಲೋಕಾಯುಕ್ತ ಎನ್.ವೆಂಕಟಾಚಲರವರನ್ನು ಭೇಟಿ ಮಾಡಿ ಲೋಕಾಯುಕ್ತ ಸಂಸ್ಥೆಯಲ್ಲಿ ರಿಜಿಸ್ಟ್ರಾರ್ ಆಗಿ ಕೆಲಸ ಮಾಡಲಿಕ್ಕಿರುವ ಇಚ್ಛೆಯನ್ನು ಹೇಳಿಕೊಂಡೆ. ಆಗ ಲೋಕಾಯುಕ್ತ ವೆಂಕಟಾಚಲ ಒಪ್ಪಿಗೆಯನ್ನು ಪತ್ರದಲ್ಲಿ ಕೊಟ್ಟು ಮುಖ್ಯಕಾರ್ಯದರ್ಶಿಗೆ ಅಗತ್ಯ ಕಾರ್ಯಗಳನ್ನು ಕೈಗೊಳ್ಳುವಂತೆ ತಿಳಿಸಿ ಎಂದರು. ಇಷ್ಟೊತ್ತಿಗೆ ಮಿಶ್ರಾ ನಿವೃತ್ತರಾಗಿ ಬಿ.ಕೆ.ದಾಸ್ ಮುಖ್ಯ ಕಾರ್ಯದರ್ಶಿ ಸ್ಥಾನದಲ್ಲಿದ್ದರು. ಮುಖ್ಯಕಾರ್ಯದರ್ಶಿಯಾಗುವುದಕ್ಕೆ ಮುಂಚೆ ಬಿಕೆ.ದಾಸ್ ಸಾರ್ವಜನಿಕ ಉದ್ದಿಮೆಯ ಇಲಾಖೆಯಲ್ಲಿ ನನ್ನ ಸೀನಿಯರ್ ಆಗಿದ್ದರು. ಆ ಇಲಾಖೆಯಲ್ಲಿದ್ದಾಗ ಬಿಕೆ.ದಾಸ್ ರವರ ಕಾರ್ಯವೈಖರಿಲ್ಲಿದ್ದ ಹುಳುಕುಗಳನ್ನು ಅವರ ಗಮನಕ್ಕೆ ತಂದಿದ್ದೆ. ಎನ್.ವೆಂಕಟಾಚಲರವರು ಸಾರ್ವಜನಿಕವಾಗಿಯೇ ಬಿಕೆ.ದಾಸ್ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದ್ದರು. ಇಂತ ಬಿಕೆ.ದಾಸ್ ನನ್ನನ್ನು ಲೋಕಾಯುಕ್ತಕ್ಕೆ ನೇಮಿಸುತ್ತಾರೆ ಎನ್ನುವುದು ಹಗಲುಗನಸೇ ಸರಿ. ನಂತರದ ದಿನಗಳಲ್ಲಿ ನನಗೆ ತಿಳಿದು ಬಂದಂತೆ ಬಿಕೆ.ದಾಸ್ ರವರ ಸೂಚನೆಯ ಮೇರೆಗೆ ಕೆಲವು ಹಿರಿಯ ಭ್ರಷ್ಟ ಐ.ಎ.ಎಸ್ ಅಧಿಕಾರಿಗಳು ಗುಂಪುಗೂಡಿ ಜಿಲ್ಲಾಮಟ್ಟದ ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲೆ ಒತ್ತಡ ಹೇರಿ ಅವರೆಲ್ಲರೂ ನನ್ನನ್ನು ಲೋಕಾಯುಕ್ತ ಕಛೇರಿಗೆ ನಿಯೋಜಿಸುವುದನ್ನು ವಿರೋಧಿಸುವಂತೆ ಮಾಡಿದ್ದರು. ವೆಂಕಟಾಚಲರವರು ನನಗೆ ಕರೆ ಮಾಡಿ ನಿಮ್ಮನ್ನು ಲೋಕಾಯುಕ್ತಕ್ಕೆ ತೆಗೆದುಕೊಳ್ಳುವುದು ಕಷ್ಟಸಾಧ್ಯ, ತೆಗೆದುಕೊಳ್ಳದಂತೆ ಕಟ್ಟಿಹಾಕಿದ್ದಾರೆ, ಕೆ.ಕೆ.ಮಿಶ್ರಾರವರಿಗೂ ಈ ಸಂದಿಗ್ಧತೆಯನ್ನು ವಿವರಿಸಿದ್ದೇನೆ ಎಂದರು (ಕೆ.ಕೆ.ಮಿಶ್ರಾ ನಿವೃತ್ತರಾದ ನಂತರ ಮಾಹಿತಿ ಆಯೋಗದ ಅಧ್ಯಕ್ಷರಾದರು). ಇದು ಐ.ಎ.ಎಸ್ ಮಾಫಿಯಾದ ಜನನ. 
http://depenq.com/PRESSRELEASE/14aug06.pdf 

ಕರ್ನಾಟಕದ ಐ.ಎ.ಎಸ್ ಮಾಫಿಯಾ ಬೆಳೆದ ಬಗೆ

ಆಗಸ್ಟ್ 28, 2006ರಂದು, ಕರ್ನಾಟಕ ಲೋಕಾಯುಕ್ತರಾಗಿ ಸಂತೋಷ್ ಹೆಗ್ಡೆ ನೇಮಕಗೊಂಡ ಕೆಲವು ದಿನಗಳ ತರುವಾಯ ನಡೆದ ಐ.ಎ.ಎಸ್ ಅಧಿಕಾರಿಗಳ ಸಭೆಯಲ್ಲಿ ಐ.ಎ.ಎಸ್ ಅಧಿಕಾರಿಗಳ ಸಹಕಾರವನ್ನು ಕೋರುತ್ತಾ ತಮ್ಮ ಮತ್ತು ತಮ್ಮ ಕುಟುಂಬದ ಸ್ಥಿರ ಮತ್ತು ಚರಾಸ್ತಿಯನ್ನು ಸಾರ್ವಜನಿಕರ ಮುಂದೆ ತೆರೆದಿಡುವಂತೆ ಹಿರಿಯ ಐ.ಎ.ಎಸ್ ಅಧಿಕಾರಿಗಳಿಗೆ ಕೇಳಿಕೊಂಡರು. ನಾನು ಮತ್ತು ಇತರೆ ಇಬ್ಬರು ಅಧಿಕಾರಿಗಳು ಈ ಆಸ್ತಿ ಘೋಷಣೆಯ ಸಲಹೆಗೆ ಸಭೆಯಲ್ಲಿಯೇ ಒಪ್ಪಿಗೆ ಸೂಚಿಸಿದೆವು. ಸಭೆ ನಡೆದ ಮರುದಿನವೇ ಅಂದರೆ ಆಗಸ್ಟ್ 29, 2006ರಂದು ನನ್ನ ಮತ್ತು ಕುಟುಂಬ ಸದಸ್ಯರ ಆಸ್ತಿಯ ಸಂಪೂರ್ಣ ವಿವರಗಳನ್ನು ಲೋಕಾಯುಕ್ತ ಸಂಸ್ಥೆಗೆ ನೀಡಿದೆ. ಲೋಕಾಯುಕ್ತ ಅದೇ ದಿನ ಮೆಚ್ಚುಗೆಯ ಪತ್ರ ಕಳುಹಿಸಿತು. ದುರದೃಷ್ಟವಶಾತ್, ಅಂದಿನ ಸಭೆಯಲ್ಲಿ ಆಸ್ತಿ ಘೋಷಿಸುವುದಾಗಿ ಹೇಳಿದ್ದ ಈರ್ವರು ನಿವೃತ್ತರಾಗುವವರೆಗೂ ಆ ಕೆಲಸ ಮಾಡಲಿಲ್ಲ. ಲೋಕಾಯುಕ್ತಕ್ಕೆ ಆಸ್ತಿ ವಿವರಗಳನ್ನು ನೀಡಿ ಅದನ್ನು ಸಾರ್ವಜನಿಕಗೊಳಿಸುವುದಕ್ಕೆ ಒಪ್ಪಿಗೆ ಕೊಟ್ಟ ದೇಶದ ಮೊದಲ ಐ.ಎ.ಎಸ್ ಅಧಿಕಾರಿ ನಾನು. ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಹೆಚ್ಚೆಚ್ಚು ಜನರು ಐ.ಎ.ಎಸ್ ಅಧಿಕಾರಿಗಳ ಆಸ್ತಿ ವಿವರಗಳನ್ನು ಕೇಳಲಾರಂಭಿಸಿದಾಗ ಕರ್ನಾಟಕ ಮಾಹಿತಿ ಆಯೋಗ ಐ.ಎ.ಎಸ್ ಅಧಿಕಾರಿಗಳಿಗೆ ಆಸ್ತಿ ಘೋಷಿಸುವಂತೆ ಸೂಚಿಸಿತ್ತು. ಆದರೆ ಅನೇಕ ಐ.ಎ.ಎಸ್ ಅಧಿಕಾರಿಗಳ ಒತ್ತಡಕ್ಕೆ ಮಣಿದು ಈ ಸೂಚನೆಯನ್ನು ಹಿಂಪಡೆದುಬಿಟ್ಟಿತು. ಅಕ್ರಮ ಆಸ್ತಿ ಹೊಂದಿದ ದೊಡ್ಡ ಸಂಖೈಯ ಐ.ಎ.ಎಸ್ ಅಧಿಕಾರಿಗಳಿಗೆ ಆಗಷ್ಟೇ ಕಣ್ಣುಬಿಡುತ್ತಿದ್ದ ಐ.ಎ.ಎಸ್ ಮಾಫಿಯಾವನ್ನು ಸೇರುವುದರಿಂದ ಬಹಳಷ್ಟು ಪ್ರಯೋಜನಗಳಿವೆ ಎಂಬ ಸತ್ಯ ತಿಳಿಯಿತು. ಲೋಕಾಯುಕ್ತ ಮನವಿ ಐ.ಎ.ಎಸ್ ಅಧಿಕಾರಿಗಳನ್ನು ಆಸ್ತಿ ಘೋಷಣೆಗೆ ಉತ್ಸುಕರನ್ನಾಗಿಸುವ ಬದಲು ಸಂಪೂರ್ಣ ವಿರೋಧಾಭಾಸದ ಕಾರ್ಯಗಳನ್ನು ಮಾಡುವಂತೆ ಪ್ರೇರೇಪಿಸಿದ್ದು ವಿಪರ್ಯಾಸ.
http://depenq.com/PRESSRELEASE/Loka30AUG06.pdf