ಏಪ್ರಿ 18, 2023

ಕಾಡಿನ ನ್ಯಾಯಕ್ಕೆ ವಿರುದ್ಧವಾದ "ದಿ ಎಲಿಫೆಂಟ್ ವಿಸ್ಪರರ್ಸ್"

ಚಿತ್ರಮೂಲ: ಎಕನಾಮಿಕ್ ಟೈಮ್ಸ್
ಡಾ. ಅಶೋಕ್. ಕೆ. ಆರ್

ಕಾಡ ನಡುವಿನಲ್ಲಿ ಮರಿಯಾನೆಯೊಂದು ಹಿಂಡಿನಿಂದ ಬೇರ್ಪಟ್ಟು ಒಂಟಿಯಾಗುತ್ತದೆ. ಆಹಾರ ಹುಡುಕುವ, ನೀರನ್ನರಸುವ ಗುಣಗಳನ್ನು ಹಿಂಡಿನ ಹಿರಿಯರಿಂದ ಇನ್ನೂ ಕಲಿಯದ ಮರಿಯಾನೆಗೆ ಜೀವವುಳಿಸಿಕೊಳ್ಳುವುದು ಕಷ್ಟದ ಸಂಗತಿಯೇ ಸರಿ. ಮರಿಯಾನೆಯ ಕೂಗಾಟ ಅರಣ್ಯ ಇಲಾಖೆಯ ಕಿವಿಗೆ ತಲುಪುತ್ತದೆ. ಕಾಡಿನ ನಿಯಮಗಳಿಂದ ರಕ್ಷಿಸಲ್ಪಟ್ಟ ಈ ಮರಿಯಾನೆಯನ್ನು ಸಾಕುವ ಜವಾಬ್ದಾರಿಯನ್ನು ಇಲಾಖೆಯ ಕೆಲಸಗಾರರಾದ, ಮೂಲತಃ ಆದಿವಾಸಿಗಳಾದ ಇಬ್ಬರಿಗೆ ವಹಿಸಲಾಗುತ್ತದೆ. ಆ ಈರ್ವರ ನಡುವಿನ ವೈಯಕ್ತಿಕ ಸಂಬಂಧ, ಆನೆಯನ್ನು ಸಾಕಿ ಸಲಹುವ ಪರಿ, ಆನೆ ಜೊತೆಗಿನ ಮಮಕಾರದ ಸಂಬಂಧವೇ "ದಿ ಎಲಿಫೆಂಟ್ ವಿಸ್ಪರರ್ಸ್" ಸಾಕ್ಷ್ಯಚಿತ್ರದ ಹೂರಣ. 

ಆಸ್ಕರ್ರಿಗೆ ಭಾರತದಿಂದ ಕಳುಹಿಸಲ್ಪಟ್ಟ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮವೆಂಬ ಪ್ರಶಸ್ತಿಯೂ ದೊರೆತು ಖ್ಯಾತಿಗಳಿಸಿದ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ನೋಡಲು ಲಭ್ಯವಿದೆ. ಆಸ್ಕರ್ ದೊರೆಯುವ ಮುಂಚೆ ಈ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ್ದೆ. ನೋಡಿದ ಯಾರಿಗಾದರೂ ಕಣ್ಣಂಚಿನಲ್ಲಿ ನೀರು ತರಿಸುವ ಚಿತ್ರವಿದು. ನಾನೂ ಅದಕ್ಕೆ ಹೊರತಲ್ಲ.

ಆಗ 19, 2022

ಎಲ್ಲಕಿಂತ ಜೀವ ಮುಖ್ಯ…

- ಡಾ. ಅಶೋಕ್.‌ ಕೆ. ಆರ್‌

ಪೂರ್ವಿಕಾಳ ಹೆಸರಿನಿಂದ (ಹೆಸರು ಬದಲಿಸಲಾಗಿದೆ) ಫೇಸ್‌ಬುಕ್ಕಿನಲ್ಲಿ ಸ್ನೇಹದ ಕೋರಿಕೆ ಬಂದಿತ್ತು. ನಲವತ್ತು ಚಿಲ್ಲರೆ ಮಂದಿ ಪರಸ್ಪರ ಸ್ನೇಹಿತರ ಪಟ್ಟಿಯಲ್ಲಿದ್ದರು. ಮುಂಚಿನಂತೆ ಬಂದೆಲ್ಲ ಸ್ನೇಹಿತರ ಕೋರಿಕೆಯನ್ನು ಒಪ್ಪಿಕೊಳ್ಳುತ್ತಿರಲಿಲ್ಲವಾದ್ದರಿಂದ ಪೂರ್ವಿಕಾಳ ಪ್ರೊಫೈಲಿನ ಮೇಲೆ ಕ್ಲಿಕ್ಕಿಸಿದೆ. ಸುಳ್ಯದ ವಿದ್ಯಾರ್ಥಿನಿಯ ಫೋಟೋ ಇದ್ದ ಪ್ರೊಫೈಲದು. ಸುಳ್ಯದ ಹಳೆಯ ವಿದ್ಯಾರ್ಥಿಗಳೇ ಪರಸ್ಪರ ಸ್ನೇಹಿತರ ಪಟ್ಟಿಯಲ್ಲಿದ್ದರು. ಸ್ನೇಹದ ಕೋರಿಕೆಯನ್ನು ಒಪ್ಪಿಕೊಂಡ ದಿನದ ನಂತರ ಪೂರ್ವಿಕಾಳ ಪ್ರೊಫೈಲಿನಿಂದ ಮೆಸೆಂಜರ್‌ನಲ್ಲಿ ʻಹಾಯ್‌ʼ ಎಂದೊಂದು ಮೆಸೇಜು ಬಂದಿತ್ತು. ಮೆಸೇಜುಗಳನ್ನು ಆಗಾಗ್ಯೆ ನೋಡುವ ಅಭ್ಯಾಸವಿಲ್ಲದ ಕಾರಣ ಒಂದಷ್ಟು ಸಮಯದ ನಂತರ ʻಹಾಯ್‌ʼ ಎಂದು ಉತ್ತರಿಸಿ ʻಹೇಗಿದ್ದೀಯಪ್ಪ?ʼ ಎಂದು ಇಂಗ್ಲೀಷಿನಲ್ಲಿ ಕೇಳಿದೆ. ಪೂರ್ವಿಕಾ ಕೇರಳದ ಹುಡುಗಿ ಎಂದು ನೆನಪಿತ್ತು. ʻನಾನು ಚೆನ್ನಾಗಿದ್ದೀನಿ. ನೀವು ಹೇಗಿದ್ದೀರಿ?ʼ ಎಂದು ಕೇಳಿದವಳು ನನ್ನ ಮರುತ್ತರಕ್ಕೂ ಕಾಯದೆ ನಿಮ್ಮ ವಾಟ್ಸಪ್‌ ನಂಬರ್‌ ಕಳುಹಿಸಿ ಅಲ್ಲಿಯೇ ಚಾಟ್‌ ಮಾಡುವ ಎಂದು ಕೇಳಿದಳು. ಓಹ್!‌ ಇದು ಅಸಲಿ ಖಾತೆ ಇರಲಿಕ್ಕಿಲ್ಲ ಎಂದರಿವಾಯಿತಾಗ. ಹಳೆಯ ವಿದ್ಯಾರ್ಥಿಗಳು ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಕೇಳಲು, ಅಥವಾ ಬಹಳ ವರುಷಗಳ ನಂತರ ಮಾತನಾಡಲು ಫೋನ್‌ ನಂಬರ್‌ ಕೇಳುವುದು ಅಪರೂಪವೇನಲ್ಲ. ಆದರೆ ಚಾಟ್‌ ಮಾಡಲು ವಾಟ್ಸಪ್‌ ನಂಬರ್‌ ಕೇಳುವುದು ಸಾಮಾನ್ಯ ಸಂಗತಿಯೇನಲ್ಲ. ಪರಿಚಿತರ ಫೋಟೋ ಬಳಸಿಕೊಂಡು ನಕಲಿ ಖಾತೆ ಸೃಷ್ಟಿಸಿ ಸ್ನೇಹದ ಕೋರಿಕೆ ಕಳುಹಿಸಿ ಮೆಸೆಂಜರ್‌ನಲ್ಲಿ ʻತುರ್ತು ಅವಶ್ಯಕತೆ ಇದೆ. ಒಂದೈದು ಸಾವಿರ ಗೂಗಲ್‌ ಪೇ ಮಾಡಿʼ ಎಂದು ಬೇಡಿಕೆ ಇಡುವ ಸ್ಕ್ಯಾಮು ಹೆಚ್ಚಿದೆ. ಇಲ್ಲಿ ಹಣದ ಬೇಡಿಕೆಯೂ ಇಲ್ಲದೆ ವಾಟ್ಸಪ್‌ ನಂಬರ್‌ ಕೇಳುತ್ತಿದ್ದಾರಲ್ಲಾ? ಇದ್ಯಾವ ಹೊಸ ಮೋಸದ ಯೋಜನೆಯಿರಬಹುದು ಎಂಬ ಕುತೂಹಲವುಂಟಾಯಿತು. ನವಮೋಸದ ಪರಿ ಹೇಗಿರಬಹುದೆಂದು ತಿಳಿಯಬಯಸುವ ಆಸಕ್ತಿಯಿಂದ ವಾಟ್ಸಪ್‌ ನಂಬರ್‌ ಅನ್ನು ಕಳುಹಿಸಿದೆ. ಮೊದಲ ದಿನ ʻಹಾಯ್‌ʼʻಬಾಯ್‌ʼ ಮೆಸೇಜಿವೆ ಸಂವಹನ ಸೀಮಿತವಾಗಿತ್ತು. ಮಾರನೆಯ ದಿನ ಮತ್ತೇನೂ ಹೆಚ್ಚಿನ ಸಂವಾದಗಳಿಲ್ಲದೆ ಸೀದಾ ಸಾದಾ ವೀಡಿಯೋ ಕರೆ ಮಾಡುವ ಬೇಡಿಕೆ ಅತ್ತಲಿಂದ ಬಂತು. ಇವರ ಮೋಸದ ಹೊಸ ಯೋಜನೆಯ ರೂಪುರೇಷೆ ಸೂಕ್ಷ್ಮವಾಗಿ ಅರಿವಾಯಿತಾದರೂ ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳುವ ಉತ್ಸಾಹವಿನ್ನೂ ಕಡಿಮೆಯಾಗಿರಲಿಲ್ಲ! ʻವೀಡಿಯೋ ಕರೆ ಯಾಕೆ?ʼ ಎಂದು ಮುಗ್ಧನಂತೆ ಕೇಳಿದೆ. ಮೆಸೇಜುಗಳಲ್ಲಿ ನಾನಿನ್ನೂ ಅತ್ತಲಿನವರನ್ನು ನನ್ನ ಹಳೆಯ ವಿದ್ಯಾರ್ಥಿನಿಯೆಂದೇ ತಿಳಿದುಕೊಂಡಿರುವಂತೆ ನಂಬಿಸಿದೆ. ʻನಾನೊಬ್ಳೇ ಇದೀನಿ. ವೀಡಿಯೋ ಕರೆ ಮಾಡಿ. ಬಾತ್‌ರೂಮಿಗೆ ಹೋಗಿ ಕಾಲ್‌ ಮಾಡಿʼ ಎಂದು ನೇರಾನೇರ ಅಶ್ಲೀಲ ವೀಡಿಯೋ ಕರೆಗೆ ಬೇಡಿಕೆ ಬಂತು! ʻಸಾರಿ. ನನಗೆ ಆಸಕ್ತಿಯಿಲ್ಲʼ ಎಂದು ಟೈಪಿಸಿದ್ದನ್ನು ಕಳುಹಿಸುವುದಕ್ಕೆ ಮೊದಲೆಯೇ ವೀಡಿಯೋ ಕರೆ ಬಂದಿತು! ಕಾಲೇಜಿಗೆ ಹೊರಡುತ್ತಿದ್ದವನು ಇವರ ಆಟ ಪೂರ್ತಿಯೇ ನೋಡಿಬಿಡುವ ಎಂದು ಕರೆ ಸ್ವೀಕರಿಸಿದೆ. ಅತ್ತ ಕಡೆ ಹುಡುಗಿಯೊಬ್ಬಳಿದ್ದಳು. ಖಂಡಿತಾ ಸುಳ್ಯದ ವಿದ್ಯಾರ್ಥಿನಿ ಪೂರ್ವಿಕಾಳಲ್ಲ ಅವಳು. ಅತ್ತ ಕಡೆ ಹುಡುಗಿ ಇದ್ದಿದ್ದೂ ಅನುಮಾನವೇ, ಕಂಪ್ಯೂಟರಿನಲ್ಲಿದ್ದ ಹುಡುಗಿಯ ವೀಡಿಯೋ ಒಂದನ್ನು ಬಳಸಿಕೊಂಡಂತನ್ನಿಸಿತು. ಆರೇಳು ಸೆಕೆಂಡುಗಳಲ್ಲಿ ಕರೆ ತುಂಡಾಯಿತು. ʻಬಾತ್‌ರೂಮಿಗೆ ಹೋಗಿ. ಸೆಕ್ಸ್‌ ವೀಡಿಯೋ ಕರೆ ಮಾಡುವʼ ಎಂದು ಬಂದ ಮೆಸೇಜಿಗೆ ಈಗಾಗಲೇ ಟೈಪಿಸಿದ್ದ ʻಸಾರಿ. ನನಗೆ ಆಸಕ್ತಿಯಿಲ್ಲʼ ಎಂಬ ಮೆಸೇಜನ್ನು ಕಳುಹಿಸಿ ಕಾಲೇಜಿಗೆ ಹೊರಟೆ. ಸಂಜೆ ವಾಟ್ಸಪ್ಪಿನಲ್ಲಿ ಪುಟ್ಟ ವೀಡಿಯೋ ಒಂದನ್ನು ಕಳುಹಿಸಿದ್ದರು. ಆರು ಸೆಕೆಂಡಿನ ನನ್ನ ಬೆಳಗಿನ ವೀಡಿಯೋ ಕರೆ ರೆಕಾರ್ಡು ಮುಗಿದ ನಂತರ ಬಚ್ಚಲು ಮನೆಯಲ್ಲಿ ಪುರುಷನೊಬ್ಬ ಜನನಾಂಗ ತೋರಿಸಿರುವ ಮತ್ತೊಂದು ತುಣುಕನ್ನು ಸೇರಿಸಿ ಮಾಡಲಾಗಿದ್ದ ವೀಡಿಯೋ ಅದು. ವೀಡಿಯೋ ಹಿಂದೆಯೇ ಒಂದಷ್ಟು ಸ್ಕ್ರೀನ್‌ಶಾಟುಗಳನ್ನು ಕಳಿಸಿದರು. ಫೇಸ್‌ಬುಕ್ಕಿನ ನನ್ನ ಪ್ರೊಫೈಲಿನಲ್ಲಿದ್ದ ನನ್ನ ನೆಂಟರಿಷ್ಟರ ಕಸಿನ್ಸುಗಳ ಪಟ್ಟಿ ಅದು. ನಾವು ಕೇಳಿದಷ್ಟು ಹಣ ನೀಡದಿದ್ದರೆ ಈ ಪಟ್ಟಿಯಲ್ಲಿರುವ ನಿಮ್ಮ ಕಸಿನ್ಸುಗಳಿಗೆಲ್ಲ ಈ ವೀಡಿಯೋ ಕಳಿಸುತ್ತೀವಿ. ನಿಮ್ಮ ಮಾನ ಮರ್ಯಾದೆ ಹೋಗ್ತದೆ, ಯೋಚನೆ ಮಾಡಿ. ತುರ್ತು ಪ್ರತಿಕ್ರಿಯಿಸಿ ಎಂಬ ಮೆಸೇಜು ಹಿಂದಿ ಭಾಷೆಯಲ್ಲಿ ಬಂದಿತ್ತು. ʻಇದು ನನ್ನ ವೀಡಿಯೋನೆ ಅಲ್ಲ. ಯಾರಿಗಾದರೂ ಕಳಿಸಿಕೊಳ್ಳಿʼ ಎಂದುತ್ತರಿಸಿದೆ. ಕರೆ ಬಂತು. ಸ್ವೀಕರಿಸಿದೆ. ಜೋರು ಹಿಂದಿಯಲ್ಲಿ ಹಣದ ಬೇಡಿಕೆ ಇರಿಸಿದರು. ಪೋಲೀಸರಿಗೆ ದೂರು ನೀಡುವುದಾಗಿ ಬೆದರಿಸಿದೆ. ಯಾವ ಪೋಲೀಸರ ಬಳಿಯಾದರೂ ಹೋಗಿ. ನಮಗೇನೂ ಹೆದರಿಕೆ ಇಲ್ಲ ಎಂದರು. ಯಾರಿಗಾದರೂ ವೀಡಿಯೋ ಕಳಿಸಿಕೊಳ್ಳಿ, ನಿಮ್ಮ ಹಣೆಬರಹ ಎಂದೇಳಿ ಫೋನಿಟ್ಟೆ. ಪಟ್ಟಿಯಲ್ಲಿದ್ದ ಕೆಲವು ಕಸಿನ್ಸುಗಳಿಗೆ ಮೆಸೆಂಜರ್‌ನಲ್ಲಿ ವೀಡಿಯೋ ಕಳುಹಿಸಿದ ಸ್ಕ್ರೀನ್‌ ಶಾಟುಗಳನ್ನು ತೆಗೆದು ನನಗೆ ಕಳುಹಿಸಿ ʻಇನ್ನೂ ಅವರು ವೀಡಿಯೋ ನೋಡಿಲ್ಲ. ದುಡ್ಡು ಕಳುಹಿಸಿದರೆ ವೀಡಿಯೋ ಡಿಲೀಟ್‌ ಮಾಡ್ತೀನಿʼ ಎಂದವನಿಗೆ ಉತ್ತರಿಸುವ ಗೋಜಿಗೆ ಹೋಗದೆ ಫೇಸ್‌ಬುಕ್ಕಿನಲ್ಲಿ ಘಟನೆ ಕುರಿತಾಗಿ ವಿವರವಾಗಿ ಬರೆದು ʻಪೂರ್ವಿಕಾʼಳ ನಕಲಿ ಖಾತೆಯನ್ನು ಟ್ಯಾಗ್‌ ಮಾಡಿ ಫೋನ್‌ ನಂಬರ್‌ ಹಾಕಿ ʻಈ ರೀತಿಯೂ ಮೋಸ ಮಾಡುತ್ತಿದ್ದಾರೆ. ಎಚ್ಚರಿಕೆʼ ಎಂದು ಪೋಸ್ಟ್‌ ಮಾಡಿದೆ. ಒಂದಷ್ಟು ಸ್ನೇಹಿತರು, ವಿದ್ಯಾರ್ಥಿಗಳು ಅವರಿಗೂ ಈ ರೀತಿ ವೀಡಿಯೋ ಕಾಲ್‌ ಮಾಡುವಂತೆ ಮೆಸೇಜುಗಳು ಬಂದಿದ್ದರ ಬಗ್ಗೆ ತಿಳಿಸಿದರು. ಇನ್ನೊಂದಷ್ಟು ಜನರು ತಮ್ಮ ಪರಿಚಯಸ್ಥರು ಈ ರೀತಿಯ ವಂಚನೆಗೆ ಸಿಕ್ಕಿ ಫೇಸ್‌ಬುಕ್ಕನ್ನೇ ತೊರೆದ ಬಗ್ಗೆ ಮೆಸೇಜು ಮಾಡಿ ತಿಳಿಸಿದರು. ಇವ ಬಡಪಟ್ಟಿಗೆ ಸಿಗುವ ಆಳಲ್ಲ ಎಂದರಿವಾಗಿ ಪೂರ್ವಿಕಾಳ ನಕಲಿ ಖಾತೆಯವ ನನ್ನನ್ನು ಫೇಸ್‌ಬುಕ್ಕಿನಲ್ಲಿ, ವಾಟ್ಸಪ್ಪಿನಲ್ಲಿ ಬ್ಲಾಕ್‌ ಮಾಡಿಬಿಟ್ಟ.

ನವೆಂ 28, 2021

ನೀಟ್ ಪರೀಕ್ಷೆಯ ಸುತ್ತ.

ವರುಷಕ್ಕೊಂದು ಸಲ ನೀಟ್‌ ಪರೀಕ್ಷೆಯಿಂದಾಗುವ (ಯುಜಿ ನೀಟ್)‌ ʼಅನಾಹುತʼಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಈ ಚರ್ಚೆಗಳಲ್ಲಿ ಕಂಡುಬರುವ ಹೆಚ್ಚಿನ ವಿಚಾರಗಳೆಂದರೆ:

೧. ನೀಟ್‌ ಪರೀಕ್ಷೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ತೊಂದರೆಯಾಗುತ್ತಿದೆ. ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಸಿಗದಂತೆ ನೀಟ್‌ ಮಾಡಿಬಿಟ್ಟಿದೆ.

೨. ನೀಟ್‌ ಪರೀಕ್ಷೆಯಿಂದ ಹೊರರಾಜ್ಯದ ವಿದ್ಯಾರ್ಥಿಗಳು ಹೆಚ್ಚು ಸೀಟು ಕಬಳಿಸುತ್ತಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ.

೩. ಪರೀಕ್ಷೆಗಳು ರಾಜ್ಯಗಳ ನಿಯಂತ್ರಣದಲ್ಲಿರಬೇಕೆ ಹೊರತು ಒಕ್ಕೂಟ ಸರಕಾರದ ನಿಯಂತ್ರಣದಲ್ಲಿರಬಾರದು.

ಅಕ್ಟೋ 24, 2020

ಒಂದು ಬೊಗಸೆ ಪ್ರೀತಿ - 85 - ಕೊನೆಯ ಅಧ್ಯಾಯ.

ಡಾ. ಅಶೋಕ್.‌ ಕೆ. ಆರ್.
ರಾಜೀವ್‌ಗೆ ಡೈವೋರ್ಸ್‌ ಬಗ್ಗೆ ತಿಳಿಸಿ, ರಾಮ್‌ಪ್ರಸಾದ್‌ಗೂ ವಿಷಯ ತಿಳಿಸಿ ಸುಮಾ ಜೊತೆ ಹಂಚಿಕೊಂಡು ಮಾರನೇ ದಿನ ಸಾಗರನಿಗೂ ವಿಷಯ ತಿಳಿಸಿದ ಮೇಲೆ ಮನಸ್ಸಿಗೊಂದು ನಿರಾಳತೆ ಮೂಡಿತ್ತು. ಬಹಳ ದಿನಗಳ ನಂತರ ಮೂಡಿದ ನಿರಾಳತೆಯದು. ಈ ನಿರಾಳ ಮನಸ್ಸಿನೊಂದಿಗೆ ಒಂದು ದಿನದ ಮಟ್ಟಿಗಾದರೂ ನಾನು ನಾನಾಗಷ್ಟೇ ಉಳಿದುಕೊಳ್ಳಬೇಕು. ಡ್ಯೂಟಿಗೆ ರಜೆ ಹಾಕಿದೆ. ರಜಾ ಹಾಕಿದ ವಿಷಯ ಅಮ್ಮನಿಗೆ ತಿಳಿಸಿದರೆ ಮಗಳನ್ನು ಕೈಗೆ ಕೊಟ್ಟುಬಿಡುತ್ತಾರೆ. ಉಹ್ಞೂ, ಇವತ್ತಿನ ಮಟ್ಟಿಗೆ ಮಗಳೂ ಬೇಡ. ಮೊಬೈಲಂತೂ ಬೇಡವೇ ಬೇಡ ಎಂದುಕೊಂಡು ಮನೆಯಲ್ಲೇ ಮೊಬೈಲು ಬಿಟ್ಟು ಅಮ್ಮನ ಮನೆಗೋಗಿ ಮಗಳನ್ನು ಬಿಟ್ಟು ಮೊಬೈಲ್‌ ಮನೇಲೇ ಮರೆತೆ. ಸಂಜೆ ಬರೋದು ಸ್ವಲ್ಪ ತಡವಾಗ್ತದೆ ಅಂತೇಳಿ ಹೊರಟೆ. ಎಲ್ಲಿಗೆ ಹೋಗುವುದೆಂದು ತಿಳಿಯಲಿಲ್ಲ ಮೊದಲಿಗೆ. ಜೆ.ಎಸ್.ಎಸ್‌ ಹತ್ರ ಹೊಸ ಮಾಲ್‌ ಒಂದು ಶುರುವಾಗಿದೆಯಲ್ಲ, ಅಲ್ಲಿಗೇ ಹೋಗುವ ಎಂದುಕೊಂಡು ಹೊರಟೆ. ಜೆ.ಎಸ್.ಎಸ್‌ ದಾಟುತ್ತಿದ್ದಂತೆ ಚಾಮುಂಡವ್ವ ಕರೆದಂತಾಗಿ ಗಾಡಿಯನ್ನು ಸೀದಾ ಬೆಟ್ಟದ ಕಡೆಗೆ ಓಡಿಸಿದೆ. ಮೊದಲೆಲ್ಲ ಪ್ರಶಾಂತವಾಗಿರುತ್ತಿದ್ದ ಚಾಮುಂಡಿ ಬೆಟ್ಟದಲ್ಲೀಗ ಜನರ ಕಲರವ ಹೆಚ್ಚು. ಶನಿವಾರ, ಭಾನುವಾರ, ರಜಾ ದಿನಗಳಲ್ಲಂತೂ ಕಾಲಿಡಲೂ ಜಾಗವಿರುವುದಿಲ್ಲ. ಇವತ್ತೇನೋ ವಾರದ ಮಧ್ಯೆಯಾಗಿರುವುದರಿಂದ ಜನರ ಸಂಚಾರ ಕಮ್ಮಿ. ಮುಂಚೆಯೆಲ್ಲ ಭಾನುವಾರ ಎಷ್ಟು ಜನರಿರುತ್ತಿದ್ದರೋ ಇವತ್ತು ಅಷ್ಟಿದ್ದಾರೆ. ಹೆಚ್ಚಿನಂಶ ಕಾಲೇಜು ಬಂಕು ಮಾಡಿ ಜೋಡಿಯಾಗಿ ಬಂದವರೇ ಹೆಚ್ಚು. 

ದೇಗುಲದ ಒಳಗೋಗಿ ಕೈಮುಗಿದು ಹೊರಬಂದು ದೇವಸ್ಥಾನದ ಹಿಂದಿರುವ ಬೆಂಚುಗಳ ಮೇಲೆ ಕುಳಿತುಕೊಂಡೆ. ಎದುರಿಗೆ ವಿಶಾಲವಾಗಿ ಚಾಚಿಕೊಳ್ಳುತ್ತಿರುವ ಮೈಸೂರು. ಬೆಂಗಳೂರಿನ ಟ್ರಾಫಿಕ್ಕು ಜಂಜಾಟದಿಂದ ಬಂದವರು ಮೈಸೂರು ಚೆಂದವಪ್ಪ, ಎಷ್ಟು ಕಡಿಮೆ ಟ್ರಾಫಿಕ್ಕು ಅಂತ ಲೊಚಗುಟ್ಟುತ್ತಾರೆ. ಮೈಸೂರಲ್ಲೇ ಹುಟ್ಟಿ ಬೆಳೆದವಳಿಗೆ ಇಲ್ಲಿನ ಟ್ರಾಫಿಕ್ಕು ಎಷ್ಟೆಲ್ಲ ಜಾಸ್ತಿಯಾಗಿಬಿಟ್ಟಿದೆ ಅನ್ನುವುದು ಅರಿವಿಗೆ ಬರ್ತಿದೆ. ಎಷ್ಟೊಂದು ಕಡೆ ಹೊಸ ಹೊಸ ಟ್ರಾಫಿಕ್‌ ಸಿಗ್ನಲ್ಲುಗಳಾಗಿಬಿಟ್ಟಿದ್ದಾವಲ್ಲ ಈಗ. 

ಬೆಟ್ಟದ ಮೇಲೆ ಬಂದು ಕುಳಿತವಳಿಗೆ ಪುರುಷೋತ್ತಮನ ನೆನಪಾಗದೇ ಇರುವುದು ಸಾಧ್ಯವೇ? ಹೊಸ ಬಡಾವಣೆಗಳನ್ನು ಬಿಟ್ಟರೆ ಇನ್ನೆಲ್ಲ ರಸ್ತೆಗಳಲ್ಲೂ ಪುರುಷೋತ್ತಮನ ನೆನಪುಗಳಿವೆ. ನನ್ನಿವತ್ತಿನ ಪರಿಸ್ಥಿತಿಗೆ ಪುರುಷೋತ್ತಮನೇ ಕಾರಣನಲ್ಲವೇ? ಪುರುಷೋತ್ತಮ ಕಾರಣನೆಂದರೆ ನನ್ನ ತಪ್ಪುಗಳನ್ನೂ ಅವನ ಮೇಲೊರಸಿ ತಪ್ಪಿಸಿಕೊಳ್ಳುವ ನಡೆಯಾಗ್ತದೆ. ಅವನ ಪ್ರೀತಿಯನ್ನು ಒಪ್ಪಿದ್ದು ತಪ್ಪೋ, ಅವನು ನನ್ನ ಮೇಲೆ ಹೊರಿಸಿದ ಅಭಿಪ್ರಾಯಗಳನ್ನು ನಗುನಗುತ್ತಾ ಒಪ್ಪಿಕೊಂಡದ್ದು ತಪ್ಪೋ, ದೈಹಿಕ ದೌರ್ಜನ್ಯವನ್ನೂ ಪ್ರೀತಿಯ ಭಾಗ ಎಂದುಕೊಂಡದ್ದು ತಪ್ಪೋ, ಅವನು ಅಷ್ಟೆಲ್ಲ ಕೇಳಿಕೊಂಡರೂ ಓಡಿಹೋಗದೇ ಇದ್ದದ್ದು ತಪ್ಪೋ, ಅವನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿದ್ದು ತಪ್ಪೋ..... ಭೂತದಲ್ಲಿ ಮಾಡಿದ ತಪ್ಪುಗಳನ್ನು ಈ ರೀತಿ ನಿಕಷಕ್ಕೊಳಪಡಿಸುವುದು ಎಷ್ಟರಮಟ್ಟಿಗೆ ಸರಿ? ಪುರುಷೋತ್ತಮನ ನೆನಪುಗಳನ್ನು ದೂರ ಮಾಡಬೇಕೆಂದು ಅತ್ತಿತ್ತ ನೋಡಿದಷ್ಟೂ ಎಲ್ಲೆಡೆಯೂ ಜೋಡಿಗಳೇ ಕಂಡರು. ನೆನಪುಗಳು ಮತ್ತಷ್ಟು ಹೆಚ್ಚಾಯಿತಷ್ಟೇ! ಇಲ್ಲಿರೋ ಜೋಡಿಗಳಲ್ಲಿ ಇನ್ನೆಷ್ಟು ಜೋಡಿಗಳ ಕನಸುಗಳು ಮುರಿದು ಬೀಳ್ತವೋ ಏನೋ... ಜಾತಿ ಧರ್ಮ ಅಂತಸ್ತುಗಳ ಬೃಹತ್‌ ಗೋಡೆಗಳನ್ನು ಎಷ್ಟು ಮಂದಿ ದಾಟಲು ಸಾಧ್ಯವಿದೆಯೋ... ಅವನ್ನೆಲ್ಲ ದಾಟುವ ಉತ್ಸಾಹವಿದ್ದರೂ ಮಕ್ಕಳ ಮೇಲೆ ಪ್ರಭುತ್ವ ಸಾಧಿಸಲು ಹಾತೊರೆಯುವ ಅಪ್ಪ ಅಮ್ಮನನ್ನು ಎದುರು ಹಾಕಿಕೊಳ್ಳಲು ಎಷ್ಟು ಜನಕ್ಕೆ ಸಾಧ್ಯವಿದೆಯೋ... ದಾಟುವ ಉಮ್ಮಸ್ಸು ನನಗೂ ಇತ್ತು ಪುರುಷೋತ್ತಮನಿಗೂ ಇತ್ತು... ಸುಖಾಂತ್ಯಗೊಳಿಸುವಷ್ಟು ಉಮ್ಮಸ್ಸಿರಲಿಲ್ಲ... ಪುರುಷೋತ್ತಮನ ಪ್ರೀತಿ ಉಸಿರುಗಟ್ಟಿಸುವ ಹಂತ ತಲುಪದೇ ಹೋಗಿದ್ದರೆ ಓಡಿ ಹೋಗುತ್ತಿದ್ದೆನಾ? ಸ್ಪಷ್ಟ ಉತ್ತರ ನನ್ನಲ್ಲೇ ಇಲ್ಲ. 

ಅಕ್ಟೋ 17, 2020

ಒಂದು ಬೊಗಸೆ ಪ್ರೀತಿ - 84

ಬದುಕು ಬದಲಾಗಲು ತುಂಬ.... ತುಂಬ ಅಂದರೆ ತುಂಬಾ ಕಡಿಮೆ ಸಮಯ ಬೇಕು. ನಿನ್ನೆಯವರೆಗೂ ಜೊತೆಯಲ್ಲಿದ್ದವರು, ಜೊತೆಯಲ್ಲಿದ್ದು ಹರಟಿದವರು, ಹರಟಿ ಕಷ್ಟ ಸುಖಕ್ಕಾದವರು, ಕಷ್ಟ ಸುಖಕ್ಕಾಗುತ್ತಾ ಜೀವನ ಪೂರ್ತಿ ಜೊತೆಯಲ್ಲಿಯೇ ಇರುತ್ತೀವಿ ಅಂತ ನಂಬಿಕೆ ಚಿಗುರಿಸಿದವರು, ಚಿಗುರಿದ ನಂಬುಗೆಯನ್ನು ಮರವಾಗಿಸಿದವರು ಇದ್ದಕ್ಕಿದ್ದಂತೆ ದೊಡ್ಡದೊಂದು ಜೆ.ಸಿ.ಬಿ ಹೊತ್ತು ತಂದು ಮುಲಾಜೇ ಇಲ್ಲದೆ ಬೇರು ಸಮೇತ ಆ ಮರವನ್ನು ಉರುಳಿಸಿಬಿಟ್ಟರೆ ಅದನ್ನು ತಡೆದುಕೊಳ್ಳುವುದು ಮನುಷ್ಯ ಮಾತ್ರರಿಗೆ ಸಾಧ್ಯವೇ? ನಾ ತಡೆದುಕೊಂಡೆ. ಸಾಗರ ಹೇಳ್ತಾನೇ ಇರ್ತಾನಲ್ಲ ನೀ ದೇವತೆ ಅಂತ! ಇದ್ರೂ ಇರಬಹುದೇನೋ ಅಂತಂದುಕೊಂಡು ನಕ್ಕೆ. 

ಡೈವೋರ್ಸ್ ತೆಗೆದುಕೊಳ್ಳುವ ನಿರ್ಧಾರ ಸುಲಭದ್ದಾಗಿರಲಿಲ್ಲ. ಡೈವೋರ್ಸ್ ಬಗ್ಗೆ ಯೋಚನೆ ಮಾಡಿದಾಗೆಲ್ಲ ಮದುವೆಯ ದಿನಗಳ ನೆನಪಾಗುತ್ತಿತ್ತು. ಪುರುಷೋತ್ತಮ ಎಷ್ಟೆಲ್ಲ ತೊಂದರೆ ಕೊಟ್ಟರೂ ಅದನ್ನೆಲ್ಲ ಗಮನಕ್ಕೇ ತೆಗೆದುಕೊಳ್ಳದಂತೆ ಪ್ರಬುದ್ಧರಾಗಿ ವರ್ತಿಸಿದ್ದರು ರಾಜೀವ್. ಪುರುಷೋತ್ತಮನನ್ನು ಬಿಡುವುದು ಎಷ್ಟು ಕಷ್ಟದ ಸಂಗತಿಯಾಗಿತ್ತೋ ರಾಜೀವನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಅಷ್ಟೇ ಸಂತಸವಾಗಿತ್ತು. ತುಂಬಾ ಸರಿಯಾದ ಆಯ್ಕೆ ಅನ್ನಿಸಿತ್ತು. ಎಲ್ಲಾ ನಿರ್ಧಾರಗಳೂ ಹಿಂಗೇ ಒಂದಷ್ಟು ವರುಷಗಳ ನಂತರ ತಪ್ಪು ಅನ್ನಿಸಲು ಶುರುವಾಗಿಬಿಡುತ್ತಾ? ಯಪ್ಪ! ಆ ತರವಾಗಿಬಿಟ್ಟರೆ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳುವುದೇ ಸಾಧ್ಯವಿಲ್ಲ. ಅವತ್ತಿಗೆ ಆ ನಿರ್ಧಾರ ಸರಿ ಇವತ್ತಿಗೆ ಈ ನಿರ್ಧಾರ ಸರಿಯಾ? ಡೈವೋರ್ಸ್ ತೆಗೆದುಕೊಳ್ಳುತ್ತಿರುವುದು ರಾಜೀವ ನನ್ನ ಮೇಲೆ ಅನುಮಾನ ಪಟ್ಟ, ಅನುಮಾನ ಪಟ್ಟು ಮನೆಯಲ್ಲಿ ಅಸಹ್ಯದ ವಾತಾವರಣ ಸೃಷ್ಟಿಸಿದ ಅನ್ನುವುದು ಮಾತ್ರ ಕಾರಣವಾ? ಕ್ಷಮೆ ಕೇಳು, ಜೊತೆಯಲ್ಲಿರಿ ಅಂತೇಳಿದ್ರಲ್ಲ ಅವರ ಮನೆಯವರು. ಯಾರೋ ದೂರದವರಲ್ಲವಲ್ಲ ರಾಜೀವು, ಒಂದು ಕ್ಷಮೆ ಬಿಸಾಕಿ ಸರಿ ಮಾಡಿಕೊಳ್ಳಬಹುದಿತ್ತಲ್ಲ. ಯಾಕೆ ಕ್ಷಮೆಯ ದಾರಿಯನ್ನು ನಾ ಆಯ್ದುಕೊಳ್ಳಲಿಲ್ಲ? ಯಾಕೆ ಆಯ್ದುಕೊಳ್ಳಲಿಲ್ಲವೆಂದರೆ ಅದಕ್ಕೆ ಕಾರಣ ರಾಧ ಅಂದರೆ ತಪ್ಪಲ್ಲ. 

ಹೌದು. ರಾಜೀವ್ ದೊಡ್ಡ ಸಂಬಳದ ಕೆಲಸ ಹಿಡಿಯುವುದು ನನಗೆ ಬೇಕಿರಲಿಲ್ಲ, ನಾ ಅದನ್ನು ಯಾವತ್ತಿಗೂ ನಿರೀಕ್ಷೆಯೂ ಮಾಡಿರಲಿಲ್ಲ. ಹೋಗಲಿ ಅಪ್ಪನ ಮನೆಯಲ್ಲಿ ದಂಡಿಯಾಗಿ ದುಡ್ಡು ಬಿದ್ದಿದೆಯಲ್ಲ, ಹೋಗಿ ಈಸ್ಕೊಂಡು ಬನ್ನಿ ಅಂತ ಗೋಗರೆದಿರಲಿಲ್ಲ, ಅತ್ತು ರಂಪಾಟ ಮಾಡಿರಲಿಲ್ಲ. ಬರೋ ಸಂಬಳದಲ್ಲಿ ಆರಾಮಾಗಿ ಇರುವ ಬಿಡಿ ಅಂತ ಹೇಳುತ್ತಲೇ ಇದ್ದರೂ ಅವರಿಗೇ ವಾಸ್ತವದ ಜೀವನ ಶೈಲಿ ರುಚಿಸುತ್ತಿರಲಿಲ್ಲ. ಮತ್ತಾ ಜೀವನವನ್ನು ಸರಿಪಡಿಸುವ ಹೆಚ್ಚಿನ ಜವಾಬ್ದಾರಿ ನನ್ನ ಮೇಲೇ ಹೊರಿಸಿಬಿಟ್ಟಿದ್ದರು. ಅದನ್ನೂ ತಡೆದುಕೊಳ್ಳಬಹುದಿತ್ತು. ಆದರೆ ರಾಧಳೆಡೆಗೆ ಅವರು ತೋರುತ್ತಿದ್ದ ಅಸಡ್ಡೆ, ಅಸಡ್ಡೆ ವ್ಯಕ್ತಪಡಿಸಲು ಅವರು ಬಳಸುತ್ತಿದ್ದ ಕೀಳಾದ ಭಾಷೆ, ಆ ಕೀಳಾದ ಭಾಷೆಯನ್ನು ಶತ್ರುವಿನ ಮಕ್ಕಳಿಗೂ ಬಳಸಬಾರದು, ಬಳಸಬಾರದ ಭಾಷೆಯನ್ನು ಬಳಸಿ ಬಳಸಿ ನನ್ನಲ್ಲೂ ಅವರೆಡೆಗೊಂದು ಅಸಹ್ಯ ಮೂಡಿಸಿಬಿಟ್ಟರು. ಅವರ ಬಗ್ಗೆಯಿದ್ದ ಗೌರವ ದಿನೇ ದಿನೇ ಚೂರ್ಚೂರೇ ಕಮ್ಮಿಯಾಗಿದ್ದು ನನಗೂ ಗೊತ್ತಾಗಲಿಲ್ಲ. ರಾಮ್ ಮತ್ತು ನನ್ನ ಕಲ್ಪಿತ ಸಂಬಂಧದ ಬಗೆಗಿನ ಜಗಳ ನನ್ನೊಳ ಮನಸ್ಸಿನಲ್ಲಿದ್ದ ಡೈವೋರ್ಸ್ ತಗೊಂಡ್ ಹೋಗಿಬಿಟ್ಟರೆ ಹೇಗೆ ಅನ್ನೋ ದೂರದ ಬೆಟ್ಟವನ್ನು ಹತ್ತಿರವಾಗಿಸಿಬಿಟ್ಟಿತು. ಇದು ಹತ್ತಲಾರದ ಬೆಟ್ಟವೇನಲ್ಲ ಎಂದು ಅರಿವಾದ ಮೇಲೆ ತಿರುಗಿ ನೋಡುವ ಪ್ರಮೇಯ ಮೂಡಲಿಲ್ಲ. 

ಅಕ್ಟೋ 10, 2020

ಒಂದು ಬೊಗಸೆ ಪ್ರೀತಿ - 83

"ಅಲ್ಲಾ ನಾನೇನೋ ಗೂಬ್‌ ನನ್ಮಗ.... ಸರಿ ಇಲ್ಲ. ನೀ ಆದ್ರೂ ಸರಿ ಇದ್ದೀಯಲ್ಲ.... ಬದುಕಿದ್ದೀನೋ ಸತ್ತಿದ್ದೀನೋ ಅಂತಾದ್ರೂ ವಿಚಾರಿಸ್ಬೇಕು ಅಂತ ಕೂಡ ಅನ್ನಿಸಲಿಲ್ಲವಲ್ಲ ನಿನಗೆ..... ಯಾವ್ದೋ ಸಿಟ್ಟಲ್ಲಿ ಬೇಸರದಲ್ಲಿ ನಿನ್‌ ನಂಬರ್‌ ಕೂಡ ಡಿಲೀಟ್‌ ಮಾಡ್ಬಿಟ್ಟಿದ್ದೀನಿ ಕಣವ್ವ.... ಮುಚ್ಕಂಡ್‌ ಫೋನ್‌ ಮಾಡು ಬಿಡುವಾದಾಗ". ಸಾಗರನ ಮೆಸೇಜು. ಎಫ್.ಬಿ ಮೆಸೆಂಜರಿನಲ್ಲಿ. ಸಾಗರನ ಮೆಸೇಜು ಮುಖದ ಮೇಲೊಂದು ನಗು ಮೂಡಿಸದೇ ಇದ್ದೀತೆ. ಒಂಚೂರೇ ಚೂರು ನಗು ಮೂಡಿತು. ಬೇಸರದಿಂದಿದ್ದ ಮನಸ್ಸಿಗೆ ಸಾಗರನ ಮೆಸೇಜು ಒಂದಷ್ಟು ಲವಲವಿಕೆ ತರಿಸಿದ್ದು ಸುಳ್ಳಲ್ಲ. 

ʻಇಲ್ಲಪ್ಪ. ಅದ್ಯಾರೋ ಒಬ್ರು ನಾ ಸತ್ತಾಗ್ಲೂ ಮೆಸೇಜ್‌ ಮಾಡ್ಬೇಡ ಅಂದಿದ್ರುʼ ವ್ಯಂಗ್ಯ ಮಾತಾಡೋ ಅವಕಾಶ ಬಿಡುವುದು ಸಾಧುವೇ. 

"ಆಯ್ತಾಯ್ತು. ತಪ್‌ ನಂದೇ. ನಿಂದೂ ತಪ್ಪಿಲ್ಲ ಅಂತಲ್ಲ. ನಾ ತುಂಬಾ ಇಮೆಚ್ಯೂರ್‌ ಆಗಿ ವರ್ತಿಸಿದ್ದೌದು. ಫೋನ್‌ ಮಾಡ್ತೀಯಾ ಇಲ್ವಾ?" 

ʻಮಾಡ್ತೀನಿ ಕಣೋ. ಮಾಡ್ದೇ ಇರ್ತೀನಾ. ಎಷ್ಟ್‌ ಸಲ ಫೋನ್‌ ಮಾಡ್ಬೇಕು ಮಾಡ್ಬೇಕು ಅಂತಂದುಕೊಳ್ಳುತ್ತಲೇ ಇದ್ದೆ. ಅದರಲ್ಲೂ ಕಳೆದೊಂದು ತಿಂಗಳಿನಿಂದʼ 

"ಸುಮ್ನೆ ಡವ್‌ ಕಟ್ತಿ. ಅಷ್ಟೊಂದೆಲ್ಲ ಅಂದುಕೊಂಡಿದ್ರೆ ಮಾಡಿರ್ತಿದ್ದೆ ಬಿಡು" 

ʻಮ್.‌ ಹೋಗ್ಲಿ ಬಿಡು. ನಾ ಏನ್‌ ಹೇಳಿದ್ರೂ ನಂಬಲ್ಲ ನೀನು. ನಂಬಿಕೆ ಕಮ್ಮಿ ಆಗಿರುವ ದಿನಗಳಲ್ಲಿ ಮೌನವಾಗಿರೋದೇ ಒಳ್ಳೇದುʼ 

"ಇದ್ಯಾಕವ್ವ? ಏನೇನೋ ಮಾತಾಡ್ತಿದ್ದಿ. ಏನ್‌ ಆಯ್ತೇ. ಇಸ್‌ ಎವೆರಿತಿಂಗ್‌ ಆಲ್‌ರೈಟ್?"‌ 

ʻಬಿಡೋ. ಫೋನಲ್‌ ಹೇಳ್ತೀನಿ. ಈಗ ಒಪಿಡಿಗೆ ಹೋಗಬೇಕು. ಐದರಷ್ಟೊತ್ತಿಗೆ ಮುಗಿಯುತ್ತೆ. ಆಮೇಲ್‌ ಫೋನ್‌ ಮಾಡ್ತೀನಿ. ನೀ ಬಿಡುವಾಗಿರ್ತೀಯಲ್ಲ?ʼ 

"ನಿಂಗೋಸ್ಕರ ಯಾವಾಗ್ಲೂ ಬಿಡುವಾಗೇ ಇರ್ತೀನಿ ಬಿಡ" 

ಅಕ್ಟೋ 3, 2020

ಒಂದು ಬೊಗಸೆ ಪ್ರೀತಿ - 82

ರಾಮ್‌ಪ್ರಸಾದ್‌ ಮುಜುಗರದಿಂದ ಮುದುಡಿ ಕುಳಿತಿದ್ದರು. ಬಿಯರ್‌ ಬಾಟಲಿನ ಮುಚ್ಚಳದಂಚಿದ ಕೆಳಗೆ ಜಾರಿ ಬೀಳುತ್ತಿದ್ದ ನೀರ ಹನಿಗಳನ್ನೊಮ್ಮೆ ನೋಡ್ತಾರೆ, ಬಾಗಿಲ ಕಡೆಗೊಮ್ಮೆ ನೋಡ್ತಾರೆ, ನಂತರ ಟಿವಿಯ ಕಡೆ ಕಣ್ಣಾಡಿಸಿ ಮತ್ತೆ ಬಿಯರ್ರು ಬಾಟಲುಗಳೆಡೆಗೆ ಕಣ್ಣೋಟ ಹರಿಸಿಬಿಡುತ್ತಾರೆ. ಅವರಿಗೇನು! ಹಿಂದೂ ಗೊತ್ತಿಲ್ಲ, ಮುಂದೂ ಗೊತ್ತಿಲ್ಲ! ಮನೇಲ್ಯಾರೂ ಇಲ್ಲ, ಕುಡಿದೋಗುವ ಅಂತ ಬಂದಿದ್ದಾರೆ ಅಷ್ಟೇ! ಮೇಲ್ನೋಟಕ್ಕೆ ಶಾಂತವಾಗಿ ಕುಳಿತಿದ್ದವಳ ಮನದಲ್ಲಿದ್ದ ಚಿಂತೆಯ ಆಳ ಅಗಲವ್ಯಾವೂ ರಾಮ್‌ಗೆ ಗೊತ್ತೇ ಇಲ್ಲ! ಟೇಬಲ್‌ ಮೇಲೇನೋ ಎರಡೇ ಬಿಯರ್‌ ಇದೆ. ಇವರೊಂದು ಅವರೊಂದು ಕುಡಿದು ಅಲ್ಲಿಗೆ ಮುಗಿಸಿದರೆ ಸರಿ. ಇದರೊಟ್ಟಿಗೆ ಮತ್ತೊಂದಷ್ಟು ಬಿಯರನ್ನು ರಾಜೀವ ಗಂಟಲೊಳಗಿಳಿಸಿದರೆ ಮುಗೀತು ಕತೆ. ನಶೆಯೇರಿದ ಮೇಲೆ ಅವರ ಮಾತುಗಳು ಎತ್ತೆತ್ತಲಿಗೋ ಹೋಗುವುದು ಅಪರೂಪವೇನಲ್ಲ. ಏನಾಗ್ತದೋ ಏನಾಗ್ತದೋ ಅನ್ನೋ ಚಿಂತೆಯಲ್ಲೇ ನನ್ನ ನಿದ್ರೆ ಹಾರಿ ಹೋಗಿತ್ತು. ನಿಮಿಷಕ್ಕೆರಡೆರಡು ಬಾರಿ ರಾಮ್‌ ಕಡೆಗೊಮ್ಮೆ, ಬಾಗಿಲು ಕಡೆಗೊಮ್ಮೆ, ಟಿವಿ ಕಡೆಗೊಮ್ಮೆ ನೋಡುತ್ತಾ ಕುಳಿತೆ. 

ಕೊನೆಗೂ ರಾಜೀವ್‌ ಬಂದರು. ಅದೇನು ಎರಡೇ ನಿಮಿಷಕ್ಕೆ ಬಂದರೋ ಹತ್ತು ನಿಮಿಷಕ್ಕೆ ಬಂದರೋ ಅರ್ಧ ಘಂಟೆಯ ನಂತರ ಬಂದರೋ ಒಂದೂ ತಿಳಿಯಲಿಲ್ಲ ನನಗೆ. ಒಂದು ಯುಗವೇ ಕಳೆದುಹೋದಂತನ್ನಿಸಿತು. ಒಳಗೆ ಕಾಲಿಡುತ್ತಿದ್ದಂತೆಯೇ ನನ್ನನ್ನು ಕಂಡು ಮುಖ ಕಿವುಚಿಕೊಂಡರು. ಥೂ ಅನಿಷ್ಟವೇ ಯಾಕ್‌ ಬಂದೆ ಇವತ್ತು ಅಂದಂತಾಯಿತು. ಅಷ್ಟೆಲ್ಲ ಮುಖ ಕಿವುಚಿಕೊಂಡು ಸಿಟ್ಟು ತೋರಿಬಿಟ್ಟು ನಾ ಅವರಿಬ್ಬರಿಗೂ ಕುಡಿಯುವುದಕ್ಕೇ ಅವಕಾಶ ಕೊಡದಂತೆ ಓಡಿಸಿಬಿಟ್ಟರೆ! ಮುಳುಗುವ ಸೂರ್ಯ ಕೂಡ ಅಷ್ಟು ವೇಗವಾಗಿ ಮೋಡಗಳ ಮೇಲೆ ಬಣ್ಣವನ್ನೆರಚಿರಲಾರ. ಅಷ್ಟು ವೇಗವಾಗಿ ಮುಖದ ಮೇಲೊಂದು ನಗು ಎರಚಿಕೊಂಡು "ಅರೆರೆ... ಇದೇನ್‌ ಬಂದುಬಿಟ್ಟಿದ್ದಿ. ಸುಮಾರ್‌ ಲೇಟಾಯ್ತಲ್ಲ. ಬರೋಲ್ಲವೇನೋ ನೀನು ಅಂದುಕೊಂಡೆ" ಎಂದರು. 

ʻಅಂದುಕೊಳ್ಳೋ ಬದಲು ಫೋನ್‌ ಮಾಡಿದ್ರಾಗಿರೋದುʼ ಎಂದುಕೊಳ್ಳುತ್ತಾʼ ಪಾಪು ಮಲಗಿಬಿಟ್ಟಿದ್ದಳು. ಹಂಗಾಗಿ ತಡವಾಯ್ತುʼ ಎಂದೆ. 

"ಹೌದಾ.... ಹೋಗ್ಲಿ ಬಿಡು. ಒಳ್ಳೇದೇ ಆಯ್ತು. ರಾಮ್‌ ಸಿಕ್ಕಿ ಸುಮಾರು ದಿನಗಳಾಗಿದ್ದವಲ್ಲ. ಇವತ್ಯಾಕೋ ನೆನಪಾಯಿತು. ನೀನೂ ಬರೋ ಹಂಗೆ ಕಾಣಿಸಲಿಲ್ಲವಲ್ಲ. ಫೋನ್‌ ಮಾಡಿ ಕರೆಸಿಕೊಂಡೆ ಅಷ್ಟೇ" 

ʻಮ್.‌ ಏನೇನ್‌ ತಂದ್ರಿ ಪಾರ್ಸಲ್ಲುʼ 

"ಜಾಸ್ತಿ ಇಲ್ಲ. ಒಂದ್‌ ಪ್ಲೇಟ್‌ ಕಬಾಬು, ಒಂದ್‌ ಚಿಲ್ಲಿ ಪೋರ್ಕು, ಎರಡ್‌ ಬಿರಿಯಾನಿ ಅಷ್ಟೇ. ಹೋಗ್ಲಿ ಬಿಡು. ಫ್ರಿಜ್ಜಲ್ಲಿರ್ತದೆ. ನಾಳೆಗಾಗುತ್ತೆ" 

ʻಫ್ರಿಜ್ಜಲ್ಲಿ? ಯಾಕ್‌ ತಿನ್ನಲ್ವ ಈಗʼ 

"ಹೇ... ನೀ ಬರಲ್ಲ ಅಂದ್ಕಂಡು ಮನೇಲೇ ಕೂರೋಣ ಅಂದ್ಕಂಡಿದ್ದೆ. ನೀ ಬಂದುಬಿಟ್ಟಿದ್ದೀಯಲ್ಲ. ಹೊರಗೆ ಎಲ್ಲಾದ್ರೂ ಹೋಗಿ ಕೂರ್ತೀವಿ" 

ಸೆಪ್ಟೆಂ 26, 2020

ಒಂದು ಬೊಗಸೆ ಪ್ರೀತಿ - 81

ತಿಂಗಳು ಕಳೆಯಿತು ಜಗಳವಾಗಿ, ಅವಮಾನಿತಳಾಗಿ. ಎಲ್ಲ ಕಡೆಯಲ್ಲೂ ಒಂದಷ್ಟು ಶಾಂತಿ ನೆಲೆಸಿತ್ತು. ಅಮ್ಮ ನಿಧಾನಕ್ಕಾದರೂ ಮಾತಿಗೆ ತೊಡಗಿಕೊಂಡಿದ್ದಳು. ಅಮ್ಮನ ಮನೆಯೊಳಗೆ ನಾಲ್ಕೈದು ನಿಮಿಷ ಇದ್ದು ಬರುವುದನ್ನು ನಾನೂ ರೂಢಿಸಿಕೊಂಡೆ. ಎದುರಿಗೆ ಸಿಕ್ಕಾಗ ಮುಖ ತಿರುಗಿಸಿಕೊಳ್ಳುತ್ತಿದ್ದ ಸೋನಿಯಾ ಕಾಟಾಚಾರಕ್ಕಾದರೂ ಸರಿಯೇ ಒಂದು ನಗು ಬಿಸಾಕುವಷ್ಟು ಮೃದುವಾಗಿದ್ದಳು. ಶಶಿ ಅಪ್ಪ ಆರಾಮಾಗೇ ಇದ್ದರು ನನ್ನ ಜೊತೆ. ರಾಜೀವನದೇ ಭಯ ನನಗೆ. ಅಚ್ಚರಿಯೆಂಬಂತೆ ಎಲ್ಲರಿಗಿಂತ ಮುಂಚಿತವಾಗೆ ನನ್ನೊಂದಿಗೆ ರಾಜಿ ಮಾಡಿಕೊಂಡವರಂತೆ ಬದಲಾದದ್ದು ಅವರೇ. ಅಫ್‌ಕೋರ್ಸ್‌ ಒಂದದಿನೈದು ದಿನ ಮಾತುಕತೆಯೇನೂ ಇರಲಿಲ್ಲ. ಆ ಹೂ ಉಹ್ಞೂ ಅಂತ ಶುರುವಾದ ಮಾತುಗಳು ಮತ್ತೊಂದು ವಾರ ಕಳೆಯುವಷ್ಟರಲ್ಲಿ ತೀರ ಮೊದಲಿನಷ್ಟು ಅಲ್ಲವಾದರೂ ಮೊದಲಿದ್ದ ಮಾತುಗಳಲ್ಲಿ ಅರ್ಧಕ್ಕೆ ಬಂದು ನಿಂತಿತ್ತು. ಕಳೆದೆರಡು ದಿನಗಳಿಂದಂತೂ ವಿಪರೀತವೆನ್ನಿಸುವಷ್ಟೇ ಮಾತನಾಡುತ್ತಿದ್ದರು. ಅವರ ಮಾತುಗಳಲ್ಲೆಲ್ಲ ಬೆಂಗಳೂರಿಗೆ ಹೋಗಿದ ನಂತರದ ಜೀವನಗಳ ಕುರಿತೇ ಇರುತ್ತಿತ್ತು. ಇನ್ನೇನು ರಿಸಲ್ಟ್‌ ಬರ್ತದೆ ಈ ತಿಂಗಳೋ ಮುಂದಿನ ತಿಂಗಳೋ. ಹೆಚ್ಚು ಕಮ್ಮಿ ಪಾಸ್‌ ಆಗೋದ್ರಲ್ಲಿ ಅನುಮಾನವೇನಿಲ್ಲ. ಈಗಾಗಲೇ ಒಂದು ತಿಂಗಳ ಬಾಂಡ್‌ ಮುಗಿದೇ ಹೋಗಿದೆ. ಇನ್ನೊಂದು ಹತ್ತು ತಿಂಗಳು ಕಳೆದುಬಿಟ್ಟರೆ ಮುಗೀತು, ಆರಾಮು ಬೆಂಗಳೂರಿಗೆ ಹೋಗಿಬಿಡಬಹುದು. ಮಗಳ ನೋಡಿಕೊಳ್ಳುವುದೊಂದು ಸಮಸ್ಯೆಯಾಗಬಹುದು. ಅಷ್ಟರಲ್ಲಿ ಮಗಳೂ ದೊಡ್ಡವಳಾಗಿರ್ತಾಳಲ್ಲ? ನಡೀತದೆ. ಬೆಂಗಳೂರಿನಲ್ಲೇನು ಹೆಜ್ಜೆಗೊಂದು ಡೇ ಕೇರ್‌ಗಳಿವೆಯಂತೆ. ಒಂದಷ್ಟು ಖರ್ಚಾಗ್ತದೆ ಹೌದು, ಆದರೂ ಹೆಂಗೋ ನಿಭಾಯಿಸಬಹುದು. ರಾಜೀವ ಒಂದಷ್ಟು ನೆಮ್ಮದಿ ಕಂಡುಕೊಂಡರೆ ಮಿಕ್ಕಿದ್ದೆಲ್ಲ ಸಲೀಸಾಗಿ ನಡೆದು ಹೋಗ್ತದೆ. 

ಆದ್ರೂ ಮೈಸೂರು ಬಿಟ್ಟು ಬೆಂಗಳೂರಿಗೆ ಸೆಟಲ್‌ ಆಗಲು ಹೋಗುವುದು ಬಾಲಿಶ ನಿರ್ಧಾರದಂತೇ ತೋರ್ತದೆ. ಅದೂ ಮೈಸೂರಿನಲ್ಲೇ ಕೈ ತುಂಬಾ ಸಂಬಳ ಸಿಗುವ ಕೆಲಸ ದಕ್ಕುವಾಗ. ಮಗಳನ್ನು ನೋಡಿಕೊಳ್ಳಲು ಅಪ್ಪ ಅಮ್ಮ ಇದ್ದಾರೆ. ಜೊತೆಗೆ ಫಸ್ಟ್‌ ಹೆಲ್ತ್‌ ಒಂಥರಾ ಎರಡನೇ ಮನೆಯಂತೆಯೇ ಆಗಿ ಹೋಗಿದೆ. ಎಲ್ಲರೊಡನೆಯೂ ಒಗ್ಗಿ ಹೋಗಿದ್ದೇನೆ. ಕಷ್ಟ ಸುಖ ಹಂಚಿಕೊಂಡು ಕಿತ್ತಾಡೋಕೆ ಸುಮ ಇದ್ದಾಳೆ. ರಾಮ್‌ನಂತಹ ಒಳ್ಳೆ ಗೆಳೆಯ ಕೂಡ ಇದ್ದಾನೆ. ಇರೋದ್ರಲ್ಲಿ ನಮ್‌ ಡಿಪಾರ್ಟ್‌ಮೆಂಟೇ ಕಿರಿಕಿರಿ ಇಲ್ಲದೆ ನಡೀತಿರೋದು. ಇಷ್ಟೆಲ್ಲ ಸೌಕರ್ಯಗಳಿರುವಾಗ ಮೈಸೂರು ಬಿಟ್ಟು ಹೋಗಲು ಮನಸ್ಸಾಗುವುದಾದರೂ ಹೇಗೆ? ಸುಮ್ಮನೆ ಕ್ಲಿನಿಕ್‌ ಮಾಡಿಕೊಂಡು ಇವರಿಗೊಂದು ಫಾರ್ಮಸಿ ಇಟ್ಟುಕೊಟ್ಟರೆ ಆಗ್ತದೋ ಏನೋ? ಅಂತನ್ನಿಸ್ತದೆ. ಆದರೆ ಕ್ಲಿನಿಕ್‌ ಇಡೋದಂದ್ರೆ ಭಯ. ಕ್ಲಿನಿಕ್ಕು ಚೆನ್ನಾಗಿ ನಡೆಯುವಂತಾಗಲು ವರುಷ ಎರಡು ವರುಷವಾದರೂ ಕಾಯಬೇಕು. ಅಷ್ಟು ಕಾದರೂ ಕ್ಲಿಕ್‌ ಆಗೇ ಆಗ್ತದೆ ಅಂತೇನೂ ಇಲ್ಲ. ಕ್ಲಿಕ್‌ ಆದರೂ ಬೇರೆಯವರು ಎಲ್ಲಿ ಹೊಸ ಕ್ಲಿನಿಕ್‌ ತೆಗೆದು ಸ್ಪರ್ಧೆ ನೀಡಿಬಿಡ್ತಾರೋ ಅನ್ನೋ ಭಯ ಇದ್ದೇ ಇದೆ. ಇನ್ನು, ಕ್ಲಿನಿಕ್‌ ನಿರೀಕ್ಷೆಗೂ ಮೀರಿ ಗೆದ್ದು ಬಿಟ್ಟರೆ ಮನೆಯ ಕಡೆಗೆ, ಮಗಳ ಕಡೆಗೆ ಗಮನವೇ ಕೊಡದಷ್ಟು ಕೆಲಸವಾಗಿಬಿಡ್ತದೆ. ರಜಾ ಹಾಕೋಕಾಗಲ್ಲ, ಅಯ್ಯೋ ಇವತ್‌ ಯಾಕೋ ಬೋರು ಮನೇಲೇ ಇದ್ದು ಬಿಡುವ ಅನ್ನುವಂಗಿಲ್ಲ, ಜನ ಬರಲಿ ಬರದೇ ಹೋಗಲಿ ಘಂಟೆ ಹೊಡೀತಿದ್ದಂಗೇ ಹೋಗಿ ಕ್ಲಿನಿಕ್ಕಿನ ಬಾಗಿಲು ತೆರೆದು ಕುಳಿತುಕೊಳ್ಳಲೇಬೇಕು. ಯಪ್ಪ! ಬೆಂಗಳೂರಿಗೆ ಹೋಗಿ ಯಾವುದಾದರೂ ಆಸ್ಪತ್ರೆಯಲ್ಲಿ ನೆಲೆ ಕಂಡುಕೊಳ್ಳುವುದು ಉತ್ತಮ, ಕ್ಲಿನಿಕ್‌ ಗ್ಲಿನಿಕ್‌ ಆಟ ನನಗಲ್ಲ. 

ಸೆಪ್ಟೆಂ 19, 2020

ಒಂದು ಬೊಗಸೆ ಪ್ರೀತಿ - 80

"ಇದ್ಯಾಕೆ? ಪರೀಕ್ಷೆ ಮುಗಿದ ಮೇಲೆ ಓದೋಕೇನೂ ಇಲ್ಲ ಅಂತ ತುಂಬಾ ಬೇಸರಕ್‌ ಹೋಗ್ಬಿಟ್ಟಂಗಿದ್ದಿ" ಬೆಳಗಿನ ರೌಂಡ್ಸು ಮುಗಿಸಿ ಕ್ಯಾಂಟೀನಿನಲ್ಲಿ ಕಾಫಿ ಕುಡಿಯುತ್ತ ಕುಳಿತಿದ್ದಾಗ ಒಳಬಂದ ಸುಮಾ ಕೇಳಿದ ಪ್ರಶ್ನೆಗೆ ಮುಗುಳ್ನಕ್ಕೆ, ಉತ್ತರಿಸಲಿಲ್ಲ. ಇವತ್ತಿಗೆ ಇಪ್ಪತ್ತು ದಿನವೇ ಆಯಿತು ಮನೆಯಲ್ಲಿ ಗಲಾಟೆ ನಡೆದು. ಅವತ್ತಿನಿಂದ ಇವತ್ತಿನವರೆಗೂ ಮನಸ್ಸು ಸರಿ ಹೋಗಿಲ್ಲ. ಯಾಂತ್ರಿಕವಾಗಿ ಬೆಳಿಗ್ಗೆ ಮಗಳನ್ನು ಅಪ್ಪನ ಮನೆಗೆ ಬಿಟ್ಟು ಕೆಲಸಕ್ಕೆ ಬಂದು ಸಂಜೆ ಹೋಗುವಾಗ ಮಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದೀನಷ್ಟೇ. ಅಪ್ಪನ ಮನೆಯೊಳಗೂ ಕಾಲಿಟ್ಟಿಲ್ಲ ಅಷ್ಟು ದಿನದಿಂದ. ಬೆಳಿಗ್ಗೆ ಹೋಗಿ ಮನೆ ಮುಂದೆ ನಿಂತು ಹಾರ್ನ್‌ ಹೊಡೆದ್ರೆ ಅಪ್ಪನೋ ಅಮ್ಮನೋ ಶಶೀನೋ ಹೊರಬಂದು ಮಗಳನ್ನು ಕರೆದುಕೊಂಡು ಹೋಗುತ್ತಾರೆ, ಸಂಜೆ ಮತ್ತೊಂದು ಸುತ್ತು ಹಾರ್ನ್‌ ಹೊಡೆದ್ರೆ ಅಮ್ಮ ಒಳಗಡೆ ಬಾಗಿಲು ತೆರೆಯುತ್ತಾರೆ. ರಾಧ ಹೊರಬರುತ್ತಾಳೆ. ಅಮ್ಮ ಹೊರಬಂದು ನನ್ನನ್ನು ಮಾತನಾಡಿಸುವುದಿಲ್ಲ, ನಾನು ಒಳಗೋಗಿ ಅವರನ್ನು ವಿಚಾರಿಸಿಕೊಳ್ಳುವುದಿಲ್ಲ. ಅಪರೂಪಕ್ಕೆ ಸಂಜೆ ಅಪ್ಪ ಮನೆಯಲ್ಲೇ ಇದ್ದರೆ "ಬಾ ಒಳಗೆ" ಎನ್ನುತ್ತಾರೆ. ʻಇರ್ಲಿ ಪರವಾಗಿಲ್ಲ ಕೆಲಸವಿದೆʼ ಎಂದ್ಹೇಳಿ ನಾ ಹೊರಟುಬಿಡುತ್ತೇನೆ. ಅಪ್ಪನಿಗೂ ನನ್ನ ಮನಸ್ಥಿತಿಯ ಅರಿವಿದೆಯಲ್ಲ, ಬಲವಂತಿಸುವುದಿಲ್ಲ. ಇನ್ನು ಮನೆಗೆ ಬಂದು ಅಡುಗೆ ಪಾತ್ರೆ ಕ್ಲೀನಿಂಗು ಅಂತ ಸಮಯ ಹೋಗುವುದು ತಿಳಿಯುವುದಿಲ್ಲ. ರಾಜೀವ ಬರೋದು ತಡವಾಗಿ, ಹತ್ತು ಹತ್ತೂವರೆಯ ಸುಮಾರಿಗೆ. ಅಷ್ಟೊತ್ತಿಗೆ ಹೆಚ್ಚಿನ ದಿನ ನಾನೂ ಮಗಳು ಮಲಗಿ ಬಿಟ್ಟಿರುತ್ತೇವೆ. ಅವರ ಬಳಿ ಇರುವ ಕೀಯಿಂದ ಬಾಗಿಲು ತೆಗೆದುಕೊಂಡು ಒಳಬಂದು ಹಾಲಿನಲ್ಲೇ ಮಲಗಿಬಿಡುತ್ತಾರೆ. ಬೆಳಿಗ್ಗೆ ನಾ ಎದ್ದ ಮೇಲೆ ರೂಮಿನೊಳಗೆ ಬಂದು ಮಗಳ ಪಕ್ಕ ಮಲಗಿದರೆ ನಾನೂ ಮಗಳು ಹೊರಗೆ ಕಾಲಿಡುವವರೆಗೂ ಎದ್ದೇಳುವ ಯಾವ ಸೂಚನೆಯನ್ನೂ ತೋರಿಸುವುದಿಲ್ಲ. ಅವರಿಗೇನೋ ಮುಂಚೆಯಿಂದಾನೂ ಹೆಚ್ಚು ಮಲಗುವ ಅಭ್ಯಾಸವಿರುವುದು ಹೌದು. ಆದರೆ ತೀರ ಇಷ್ಟೊಂದೆಲ್ಲ ಅಲ್ಲ. ನನ್ನ ಜೊತೆ ಯಾವುದೇ ಮಾತುಕತೆ ನಡೆಸಬಾರದೆಂಬ ಕಾರಣಕ್ಕಷ್ಟೇ ಈ ರೀತಿಯ ವರ್ತನೆ. ನಾನೂ ಪ್ರಶ್ನಿಸಲೋಗಲಿಲ್ಲ. "ನಿನಗೆ ಬೇಕಾಗುವವರೆಗೆ, ನಿನಗೆ ಅವಶ್ಯಕತೆ ಇರುವವರೆಗೆ ನೀನು ನಾ ಕೋಪಗೊಂಡರೂ, ಸಿಟ್ಟುಗೊಂಡರೂ, ನಿನ್ನನ್ನು ಹಿಗ್ಗಾಮುಗ್ಗಾ ಬಯ್ದರೂ ಮತ್ತೆ ಮೆಸೇಜು ಮಾಡಿಕೊಂಡು ಫೋನ್‌ ಮಾಡಿಕೊಂಡು ಗೋಳಾಡಿ ಮುದ್ದಾಡಿ ಸಮಾಧಾನ ಪಡಿಸುತ್ತಿದ್ದೆ. ಇವಾಗ ನಾ ನಿನಗೆ ಬೇಡ, ಹಂಗಾಗಿ ನಾ ಚೂರು ಸಿಡುಕಿದರೂ ಸುಮ್ಮನಾಗಿಬಿಡುತ್ತಿ. ನನ್ನನ್ನು ಸಮಾಧಾನ ಪಡಿಸುವ ಅನಿವಾರ್ಯತೆ ನಿನಗೀಗಿಲ್ಲ" ಎಂದಿದ್ದ ಸಾಗರ. ಒಟ್ರಾಸಿ, ನೀ ಮನುಷ್ಯರನ್ನು ಬಳಸಿ ಬಿಸಾಡುವುದರಲ್ಲಿ ಪ್ರವೀಣೆ ಎಂದು ತಿಳಿಸಿಕೊಟ್ಟಿದ್ದ. ಇರಬಹುದು. ನನ್ನನ್ನು ಸಾಗರನಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡವರು ಯಾರಿದ್ದಾರೆ. ಅವನ ಸ್ನೇಹವನ್ನೂ ಉಳಿಸಿಕೊಳ್ಳಲಿಲ್ಲ ನಾನು. ಇವತ್ತಿನ ಪರಿಸ್ಥಿತಿಯಲ್ಲಿ ಅವನ ಜೊತೆ ಮಾತನಾಡಿದ್ದರೆ, ಕಷ್ಟ ಹಂಚಿಕೊಂಡಿದ್ದರೆ ಅರ್ಧಕ್ಕರ್ಧ ಸಮಾಧಾನವಾಗಿಬಿಡುತ್ತಿತ್ತು. ಯಾವ ಮುಚ್ಚುಮರೆಯಿಲ್ಲದೆಯೇ ಇದ್ದುದೆಲ್ಲವನ್ನೂ ಇದ್ದಂತೆಯೇ ಹೇಳಿಕೊಳ್ಳಲು ಸಾಧ್ಯವಾಗೋದು ಅವನ ಜೊತೆ ಮಾತ್ರ. ಒಂದು ಫೋನ್‌ ಮಾಡೇಬಿಡಲಾ? ಅಥವಾ ಅದಕ್ಕೂ ಮುಂಚೆ ಒಂದು ಮೆಸೇಜ್‌ ಕಳಿಸಿಯೇಬಿಡಲಾ? ಎಂದಂದುಕೊಂಡು ಕೈಗೆ ಫೋನೆತ್ತಿಕೊಂಡಿದ್ದಕ್ಕೆ ಲೆಕ್ಕವಿಲ್ಲ. "ನಿನಗೆ ಬೇಸಿಕಲಿ ನಿನ್ನ ದುಃಖ ಹಂಚಿಕೊಳ್ಳೋಕೆ ಒಂದು ಜೊತೆ ಕಿವಿಗಳು ಬೇಕಿತ್ತಷ್ಟೇ. ಬೇರೆಯವರ ದುಃಖ ಕೇಳಿಸಿಕೊಳ್ಳೋ ತಾಳ್ಮೆ ನಿನ್ನಲ್ಲಿಲ್ಲ. ತುಂಬಾ ಸೆಲ್ಫ್‌ ಸೆಂಟರ್ಡ್‌ ಪರ್ಸನ್‌ ನೀನು" "ನನ್ನ ಹುಟ್ಟಿದಹಬ್ಬಕ್ಕಲ್ಲ, ನಾನು ಸತ್ತರೂ ನನಗೆ ಮೆಸೇಜು ಮಾಡಬೇಡ" ಅವನ ಮಾತುಗಳು ನೆನಪಾಗುತ್ತಿತ್ತು. ಫೋನನ್ನು ಪಕ್ಕಕ್ಕಿಡುತ್ತಿದ್ದೆ. ಕಾಲೇಜು ದಿನಗಳೇ ಚೆಂದಿದ್ದವಪ್ಪ. ಇನ್ನೇನಿಲ್ಲ ಅಂದ್ರೂ ಕಷ್ಟ ಸುಖ ಹಂಚಿಕೊಳ್ಳೋಕೆ ಅಂತಾನೇ ಗೆಳತಿಯರಿದ್ದರು. ದುಃಖಕ್ಕೆ ಹೆಗಲು ಬೇಡೋ, ಹೆಗಲಾಗೋ ಗೆಳೆಯರೂ ಇರ್ತಿದ್ರೇನೋ, ಪುರುಷೋತ್ತಮ ನನ್ನ ಜೀವನದಲ್ಲಿ ಇಲ್ಲದೇ ಹೋಗಿದ್ದರೆ. ಈಗ್ಯಾರಿದ್ದಾರೆ? ಈಗಿರಲಿ ನಾ ಮೆಡಿಕಲ್‌ ಮುಗಿಸಿದ ಮೇಲೆ ಯಾರೊಬ್ಬರಾದರೂ ನನ್ನ ಗೆಳೆಯರಾಗಿದ್ದಾರಾ? ಸಾಗರ ಗೆಳೆಯನ ಗಡಿಗಳನ್ನು ದಾಟಿ ಹತ್ತಿರಾದವನು. ಸುಮ ಒಬ್ಬಳಿದ್ದಳು, ನನ್ನ ರಾಮ್‌ಪ್ರಸಾದ್‌ ಬಗ್ಗೆ ಕೇಳಿದ ವದಂತಿಗಳನ್ನೇ ಬಳಸಿಕೊಂಡು ನೋವುಂಟು ಮಾಡಿದಳು. ಅವತ್ತಿನ ನಂತರ ಸುಮಾಳೊಂದಿಗೆ ಎಷ್ಟು ಬೇಕೋ ಅಷ್ಟೇ ಮಾತು. ಅವಳೇನೋ ಪಾಪ ರೇಗಿಸಲೇ ಹೇಳಿರಬಹುದು, ಆದರದು ಮನಸ್ಸು ಮುರಿದು ಹಾಕಿತು. ರಾಜೀವನ ಗೆಳೆಯರನೇಕರು ಪರಿಚಯ, ಅದು ಪರಿಚಯದ ಮಿತಿ ದಾಟಲಿಲ್ಲ. ರಾಮ್‌ಪ್ರಸಾದ್‌ ಒಬ್ಬನನ್ನು ಹೊರತುಪಡಿಸಿ. ತೀರ ಖಾಸಗಿ ವಿಷಯಗಳನ್ನೇನೂ ರಾಮ್‌ ಜೊತೆಗೆ ಇಲ್ಲಿಯವರೆಗೆ ಹಂಚಿಕೊಂಡವಳಲ್ಲ ನಾನು, ಆದರೆ ಗೆಳೆತನ ದೃಡವಾಗುತ್ತಿದ್ದ ಎಲ್ಲಾ ಸೂಚನೆಗಳು ಸ್ಪಷ್ಟವಾಗಿದ್ದವು. ಈ ವಿಷಯದಲ್ಲಿ ರಾಮ್‌ಪ್ರಸಾದ್‌ ಕೂಡ ನನ್ನ ಜೊತೆಗೆ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಬೇರೆ ಯಾರೋ ಆಗಿದ್ದರೂ ರಾಮ್‌ ಜೊತೆ ಒಮ್ಮೆ ಚರ್ಚಿಸಬಹುದಿತ್ತೋ ಏನೋ. ಹೇಗೆ ಇದನ್ನು ಸರಿ ಮಾಡೋದು, ಹೇಗೆ ರಾಜೀವನಿಗೆ ನಮ್ಮ ಮನೆಯವರಿಗೆ ನನ್ನ ಅವರ ಮಧ್ಯೆ ಸಂಬಂಧ ಇಲ್ಲ ಅಂತ ವಿವರಿಸೋದು ಅಂತಲಾದರೂ ಸಲಹೆ ಪಡೆಯಬಹುದಿತ್ತು. ಅದೀಗ ಸಾ‍ಧ್ಯವಿಲ್ಲ. ಎಷ್ಟೇ ಆದ್ರೂ ಸುಮಾ ಗುಡ್‌ ಫ್ರೆಂಡು. ಅವಳ ಹತ್ತಿರವೇ ಹೇಳಿಕೊಂಡುಬಿಡಲಾ ಅನ್ನೋ ಯೋಚನೆಯೂ ಸುಳಿಯದೆ ಇರಲಿಲ್ಲ. ಅವಳತ್ತಿರ ಹೇಳುವುದೋ ಬೇಡವೋ ತಿಳಿಯುತ್ತಿಲ್ಲ. ಒಟ್ಟಾರೆ ಯಾವ ಸಣ್ಣ ಪುಟ್ಟ ನಿರ್ಧಾರಗಳನ್ನೂ ಖಚಿತವಾಗಿ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ನಾನಿಲ್ಲ. 

ಸೆಪ್ಟೆಂ 12, 2020

ಒಂದು ಬೊಗಸೆ ಪ್ರೀತಿ - 79

ಒಂದರ್ಧ ಘಂಟೆ ಕಾಲ ಮಾತ್ರ ಯೋಚನೆಗಳು ಬಿಡುವು ಕೊಟ್ಟಿತ್ತು. 

ನನ್ನ ರಾಮ್‌ಪ್ರಸಾದ್‌ ಮಧ್ಯೆ ಯಾವುದೇ ಸಂಬಂಧವಿಲ್ಲವೆಂದು ರಾಜೀವನಲ್ಲಿ ನಂಬುಗೆ ಮೂಡಿಸುವುದೇಗೆ? ಯಾರೋ ಯಾವ ಕಾರಣಕ್ಕೋ ನಮ್ಮಿಬ್ಬರ ಮಧ್ಯೆ ಸಂಬಂಧವಿದೆ ಎಂದು ಸುಳ್ಳುಸುಳ್ಳೇ ಆರೋಪ ಮಾಡಿಬಿಟ್ಟರು. ಅದು ನಿಜವಲ್ಲ ಎಂದು ಸಾಬೀತುಪಡಿಸುವ ಅನಿವಾರ್ಯ ಕರ್ಮ ನನ್ನ ಹೆಗಲೇರಿಬಿಟ್ಟಿದೆ. ರಾಮ್‌ಪ್ರಸಾದ್‌ ಜೊತೆ ಹಿಂಗಿಂಗೆ ಅಂತೇಳಿ ಅವರೇ ಸಮಜಾಯಿಷಿ ಕೊಡುವಂತೆ ಹೇಳಲಾ? ಪಾಪ! ಅವರಿಗಾದರೂ ಈ ರೀತಿಯೆಲ್ಲ ನಮ್ಮ ಬಗ್ಗೆ ಆಸ್ಪತ್ರೆಯಲ್ಲಿ ಮಾತನಾಡಿಕೊಳ್ಳುತ್ತಾರೆ ಎನ್ನುವುದು ಗೊತ್ತೋ ಇಲ್ಲವೋ.... ಒಂದು ವೇಳೆ ಗೊತ್ತಿದ್ದರೂ ಸುಮ್ಮನಿದ್ದುಬಿಟ್ಟಿದ್ದರೆ? ಆ ಮಾತುಗಳೇ ಅವರಿಗೂ ಪ್ರಿಯವಾಗಿಬಿಟ್ಟಿದ್ದರೆ? ಅವರೇ ಈ ಗಾಳಿ ಸುದ್ದಿಗಳನ್ನು ಹಬ್ಬಿಸಿದ್ದರೆ? ಇಲ್ಲಿಲ್ಲ. ಅವರ ವರ್ತನೆ ಒಂದು ದಿನಕ್ಕೂ ನನಗೆ ಅನುಮಾನ ಮೂಡಿಸಿಲ್ಲ. ಆದರೂ ಅವರ ಮೂಲಕ ರಾಜೀವನಿಗೆ ಸಮಜಾಯಿಷಿ ಕೊಡುವುದು ಸರಿಯಾಗಲಾರದು. ನಮ್ಮಿಬ್ಬರ ನಡುವಿನ ವಿಷಯ, ನಮ್ಮ ಮನೆಯಲ್ಲಿ ನಡೆದ ವಿಷಯಗಳನ್ನೆಲ್ಲ ಅವನತ್ರ ತಗೊಂಡು ಹೋಗಿ ಹೇಳ್ಕೋತೀಯ ಅಂತ ಮತ್ತೊಂದು ಸುತ್ತು ಜಗಳ ಶುರುವಾಗಿಬಿಡಬಹುದು. ಅಲ್ಲ, ನನಗೆ ನಿಜಕ್ಕೂ ಒಂದು ಅನೈತಿಕ.... ಅನೈತಿಕವಲ್ಲ.... ಮದುವೆಯಾಚೆಗಿನ ಸಂಬಂಧ ಅಂಥ ಇದ್ದದ್ದು ಸಾಗರನೊಟ್ಟಿಗೆ ಮಾತ್ರ. ಸಾಗರ ನಮ್ಮ ಮನೆಗೆ ಬಂದು ರಾಜೀವನನ್ನು ಭೇಟಿಯಾದಾಗ, ನಾವವನ ಮದುವೆಗೆಂದು ಹೋಗಿದ್ದಾಗ ನಮ್ಮಿಬ್ಬರ ಮುಖಚರ್ಯೆಯನ್ನು ಗಮನಿಸಿಬಿಟ್ಟಿದ್ದರೇ ಸಾಕಿತ್ತು ಇಬ್ಬರ ನಡುವೆ ಸಂಬಂಧವಿದೆ ಎನ್ನುವುದು ತಿಳಿದು ಹೋಗುತ್ತಿತ್ತು. ನನ್ನ ಸಾಗರನ ಸಂಬಂಧವನ್ನು ಸ್ನೇಹವೆಂದೇ ಇವತ್ತಿಗೂ ನಂಬಿರುವ - ಆ ಸ್ನೇಹ ಸತ್ತು ಎಷ್ಟು ತಿಂಗಳುಗಳಾಯಿತು? - ರಾಜೀವ ನನ್ನ ರಾಮ್‌ನ ಸ್ನೇಹವನ್ನು, ಅದೂ ಅವರಿಂದಾಗಿಯೇ ಬಲವಂತವಾಗೆಂಬಂತೆ ಹುಟ್ಟಿದ ಸ್ನೇಹವನ್ನು ಅನುಮಾನಿಸುತ್ತಿದ್ದಾರಲ್ಲ? ಸಾಗರನ ಜೊತೆಗಿದ್ದಾಗಲೇ ಈ ಅನುಮಾನ ಇವರಲ್ಲಿ ಬಂದುಬಿಟ್ಟಿದ್ದರೆ ಅಚ್ಚುಕಟ್ಟಾಗಿ ಡೈವೋರ್ಸ್‌ ತೆಗೆದುಕೊಂಡು ಸಾಗರನನ್ನು ಮದುವೆಯಾಗಿಬಿಡಬಹುದಿತ್ತು. ಸಾಗರ ಕೂಡ ಒಂದಷ್ಟು ಪೊಸೆಸಿವ್ವೇ ಹೌದು. ತೀರ ಪುರುಷೋತ್ತಮನಷ್ಟಲ್ಲ, ಆದರೂ ಪೊಸೆಸಿವ್ವೇ. ಜೊತೆಗೆ ನನ್ನ ಮೇಲೆ ಬೆಟ್ಟದಷ್ಟು ಅನುಮಾನ ಬೇರೆ ಇದೆ ಅವನಿಗೆ. ಮದುವೆಯಾಗಿ ಬೇರೆ ಕಡೆ ಸಂಬಂಧ ಬೆಳೆಸುವವರ ಮೇಲೆ ಇಂತಹ ಅನುಮಾನ ಸಹಜವೋ ಏನೋ. ಯೋಚನೆಗಳಿಗೆ ತಡೆಹಾಕಿದ್ದು ಶಶಿಯ ಆಗಮನ. ಮನೆಯಲ್ಲಿನ ಮೌನದಲ್ಲಿದ್ದ ಅಸಹಜತೆಯ ವಾಸನೆ ಅವನಿಗೂ ಬಡಿಯಲೇಬೇಕಲ್ಲ. 

"ಏನಾಯ್ತು? ಎಲ್ಲಿ ಎಲ್ಲ" 

ʻಎಲ್ರೂ ಅವರವರ ರೂಮುಗಳಲ್ಲಿ ಸೇರಿಕೊಂಡಿದ್ದಾರೆʼ