ಅಕ್ಟೋ 30, 2017

ಸುಡುಗಾಡು ಕವಿತೆಗಳು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಮರಣಪತ್ರವನ್ನೂ ಕೇಳುತ್ತಿಲ್ಲ
ಸುದೀರ್ಘ ಸಂಜೆಗಳ ಉದ್ದುದ್ದ ನೆರಳುಗಳು
ಅಂಗಳದ ತುಂಬಾ ಹರಡಿಕೊಂಡವು
ಎಲ್ಲಿಂದಲೋ ಸುಟ್ಟವಾಸನೆಯ ಘಮಲು
ಮಧುಬಟ್ಟಲಿಗೆ ಕಾತರಿಸುತಿಹ ಕೆಂಡದ ತುಟಿಗಳು

ಅಕ್ಟೋ 13, 2017

ಒಂದು ಟಾಯ್ಲೆಟ್ ಪ್ರಸಂಗ ಮತ್ತು ಹಿಂದಿ ಹೇರಿಕೆ.


ಡಾ. ಅಶೋಕ್. ಕೆ. ಆರ್

ಮೊನ್ನೆ ಮೊನ್ನೆ ರಾಹುಲ್ ಗಾಂಧಿ ಗುಜರಾತಿನಲ್ಲಿದ್ದಾಗ ಮೇಲ್ನೋಟಕ್ಕೆ ಅಪಹಾಸ್ಯವೆನ್ನಿಸುವ, ರಾಹುಲ್ ಗಾಂಧಿಯ ದಡ್ಡತನವನ್ನು ಎತ್ತಿ ತೋರಿಸುವಂತನ್ನಿಸುವ ಘಟನೆಯೊಂದು ಸಂಭವಿಸಿದೆ. ರಾಹುಲ್ ಗಾಂಧಿ ಮಹಿಳೆಯರ ಟಾಯ್ಲೆಟ್ಟಿನೊಳಗೋಗಿಬಿಟ್ಟಿದ್ದರಂತೆ. ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ಆ ಮಹಿಳೆಯರ ಟಾಯ್ಲೆಟ್ಟಿನಿಂದ ಹೊರಬರುತ್ತಿರುವ ಚಿತ್ರ ಪ್ರಕಟವಾಗಿದೆ. ಆ ಟಾಯ್ಲೆಟ್ಟಿನ ಬಾಗಿಲಿನ ಮೇಲೆ ‘ಮಹಿಳೆಯರಿಗೆ’ ಎಂದು ಬರೆಯಲಾಗಿದೆ. ರಾಹುಲ್ ಗಾಂಧಿ ಯಾಕದನ್ನು ಗಮನಿಸದೇ ಒಳಹೋದರು? ಯಾಕೆ ಒಳಹೋದರೆಂದರೆ ‘ಮಹಿಳೆಯರಿಗೆ’ ಎಂದು ಗುಜರಾತಿ ಭಾಷೆಯಲ್ಲಿ ಬರೆಯಲಾಗಿತ್ತು ಮತ್ತು ರಾಹುಲ್ ಗಾಂಧಿಗೆ ಗುಜರಾತಿ ಓದಲು ಬರುವುದಿಲ್ಲ. ಹೀಗಾಗಿ ಟಾಯ್ಲೆಟ್ಟಿನ ಒಳಹೊಕ್ಕು ಪೇಚಿಗೆ ಸಿಲುಕಿ ನಗೆಪಾಟಲಿಗೀಡಾಗಿದ್ದಾರೆ.

ಅಕ್ಟೋ 12, 2017

ಅವತ್ತೊಂದು ದಿನ.....

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ವರುಷಗಳಿಂದ ನಾನು ತಳವೂರಿದ್ದ ಭೂಮಿಯ ಕಿತ್ತುಕೊಂಡು 
ಏಳಿಸಿದ ನಿನ್ನರಮನೆಯ ಎತ್ತರದ ಪಾಗಾರದ ಗೋಡೆಯ ಮೇಲೆ ಚುಚ್ಚಲ್ಪಟ್ಟ ಗಾಜಿನ ಚೂರುಗಳು ಸಾಲದೆಂಬಂತೆ
ಖಡ್ಘಗಳ ಹಿಡಿದ ಕಾವಲು ಭಟರನ್ನಿಟ್ಟು ಕೊಂಡೆ
ಕೂತಾಗನಿಂತಾಗ ನಡೆಯುವಾಗ ಕೊನೆಗೆ
ಮಲಗುವಾಗಲೂ ಇರಲೆಂದು ಹೇಡಿಯಂತೆ
ಅಂಗರಕ್ಷಕರನ್ನಿಟ್ಟುಕೊಂಡು ಭೋಪರಾಕು ಹಾಕಿಸಿಕೊಂಡೆ.

ಅಕ್ಟೋ 11, 2017

ಈ ಸರ್ಕಾರಿ ಹತ್ಯೆಗಳಿಗೆ ಕೊನೆ ಎಂದು?

ಬೆಂಗಳೂರಿನ ಗುಂಡಿಗಳು.
ಚಿತ್ರ: ರವಿಸೂರ್ಯ ಈಶ್ವರ 
ಡಾ. ಅಶೋಕ್. ಕೆ. ಆರ್.
ಬೆಂಗಳೂರಿನ ರಸ್ತೆ ಗುಂಡಿಗಳು ಮತ್ತಷ್ಟು ಬಲಿ ಪಡೆದುಕೊಂಡಿವೆ. ಹುಷಾರು ತಪ್ಪಿದ್ದ ಮೊಮ್ಮಗಳನ್ನು ಆಸ್ಪತ್ರೆಯಲ್ಲಿ ತೋರಿಸಿಕೊಂಡು ವಾಪಸ್ಸಾಗುತ್ತಿದ್ದ ದಂಪತಿಗಳು ರಸ್ತೆ ಗುಂಡಿಯ ಸಮೀಪ ವಾಹನದ ವೇಗವನ್ನು ಕಡಿಮೆ ಮಾಡಿದ್ದಷ್ಟೇ, ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬಸ್ಸೊಂದು ಅವರ ವಾಹನದ ಮೇಲರಿದು ಇಬ್ಬರೂ ದಂಪತಿಗಳನ್ನು ಬಲಿ ತೆಗೆದುಕೊಂಡಿದೆ. ಅದೃಷ್ಟವಶಾತ್ ಮೊಮ್ಮಗಳು ಬದುಕುಳಿದಿದ್ದಾಳೆ. ಈ ಸಾವಿಗೆ ಹೊಣೆ ಯಾರು? ಪೋಲೀಸರ ಡೈರಿಗಳಲ್ಲಿ, ನ್ಯಾಷನಲ್ ಕ್ರೈಮ್ ಬ್ಯೂರೋದ ದಾಖಲೆಗಳಲ್ಲಿ ಬಸ್ಸು ಚಾಲಕನ ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣ ಎಂದು ಶರಾ ಬರೆಯಲಾಗುತ್ತದೆ. ಬಸ್ಸು ಚಾಲಕನ ಕೆಲಸ ಹೋಗುತ್ತದೆ, ವಿಚಾರಣೆಯ ನಂತರ ಆತನಿಗೊಂದಷ್ಟು ಶಿಕ್ಷೆಯೂ ಆಗಬಹುದು. ಅಥವಾ ಸ್ಕೂಟರಿನವರ ಅಜಾಗರೂಕ ಚಾಲನೆಯಿಂದ ಇದಾಯಿತೇ ಹೊರತು ಬಸ್ಸು ಚಾಲಕನ ತಪ್ಪೇನಿರಲಿಲ್ಲ ಎಂದು ಆತನಿಗೆ ಬಿಡುಗಡೆಯೂ ಸಿಕ್ಕಬಹುದು. ಒಟ್ಟಿನಲ್ಲಿ ಇಬ್ಬರಲ್ಲಿ ಒಬ್ಬ ಚಾಲಕನ ಅಜಾಗರೂಕತೆ ಈ ಅಪಘಾತಕ್ಕೆ ಕಾರಣ ಎಂಬ ಅಭಿಪ್ರಾಯದೊಂದಿಗೆ ವಿಚಾರಣೆ ಮುಗಿಯುತ್ತದೆ. ಆದರದು ಪೂರ್ಣ ಸತ್ಯವೇ?

ಅಕ್ಟೋ 6, 2017

ಕವಿತೆಗಳ ಕೊಂದವರು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಹಗಲಿಡೀ ಧೇನಿಸಿ ಬರೆದ ಕವಿತೆಗಳು
ನೋವಿನಿಂದ ನರಳಿದ ಸದ್ದು ಕೇಳಿ ಎಚ್ಚರವಾಯಿತು
ನಡುರಾತ್ರಿ ಬರೆಯುವ ಮೇಜಿಗೆ ಬಂದು ಬರೆದಷ್ಟೂ ಹಾಳೆಗಳ
ಕತ್ತಲಲೆ ಸ್ಪರ್ಶಿಸಿದೆ

ಸೆಪ್ಟೆಂ 28, 2017

ತುತ್ತು...

ಈ ಕವಿತೆಯನ್ನು ಈ ಮುಂಚೆ ರಘು ಮಾಗಡಿಯವರು ಹಿಂಗ್ಯಾಕೆಯ ಮಿಂಚೆಗೆ ಕಳುಹಿಸಿದ್ದರು. ಅವರು ಈ ಮುಂಚೆಯೂ ಕೆಲವು ಕವಿತೆಗಳನ್ನು ಕಳುಹಿಸಿದ್ದರು, ಅದನ್ನು ಹಿಂಗ್ಯಾಕೆಯಲ್ಲಿ ಪ್ರಕಟಿಸಲಾಗಿತ್ತೂ ಕೂಡ. ಇತ್ತೀಚೆಗೆ ಗೀತಾ ಹೆಗ್ಡೆಯವರು ಫೇಸ್ಬುಕ್ಕಿನಲ್ಲಿ ಈ 'ತುತ್ತು' ಕವಿತೆಯು ತಮ್ಮದೆಂದು ಹಾಗೂ ರಘು ಮಾಗಡಿಯವರು ತಮ್ಮ ಕವಿತೆಯನ್ನು ಕದ್ದು ಬಳಸಿಕೊಂಡಿದ್ದರೆಂದು ಆರೋಪಿಸಿದ್ದರು. ಗೀತಾರವರ ಆರೋಪದ ಬಗ್ಗೆ ರಘು ಮಾಗಡಿಯವರಲ್ಲಿ ವಿಚಾರಿಸಲಾಗಿ 'ನಾನು ಅವರಲ್ಲಿ ಕ್ಷಮೆ ಕೇಳಿದ್ದೇನೆ, ಆದರೂ ಅವರು ನನ್ನನ್ನು ಆರೋಪಿ ಸ್ಥಾನದಲ್ಲಿ ನೋಡುತ್ತಿದ್ದಾರೆ' ಎಂದು ಹೇಳಿದರೇ ಹೊರತು ಕವಿತೆ ಅವರದ್ದಾ ಅಥವಾ ತಾವೇ ರಚಿಸಿದ್ದಾ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟನೆ ಕೊಡಲೇ ಇಲ್ಲ. ಕದ್ದ ಕವಿತೆಯೊಂದನ್ನು ಪ್ರಕಟಿಸಿದ್ದಕ್ಕೆ ಹಿಂಗ್ಯಾಕೆ ವಿಷಾದಿಸುತ್ತದೆ. ಈ ಕವಿತೆಯ ಲೇಖಕಿಯ ಕ್ಷಮೆ ಕೇಳುತ್ತದೆ. ಹಿಂಗ್ಯಾಕೆಯಲ್ಲಿ ಪ್ರಕಟವಾಗಿರುವ ರಘು ಮಾಗಡಿಯವರ ಇನ್ನಿತರೆ ಕವಿತೆಗಳನ್ನು ತೆಗೆದುಹಾಕಲಾಗುತ್ತದೆ. ಇದೊಂದು ಕವಿತೆಯನ್ನು ಗೀತಾ ಹೆಗ್ಡೆಯವರ ಕ್ಷಮೆ ಕೇಳುವ ಸಲುವಾಗಿ ಉಳಿಸಿಕೊಳ್ಳಲಾಗಿದೆ. ಅಂತರ್ಜಾಲದ ಯುಗದಲ್ಲಿ ಕದಿಯುವಿಕೆ ಸುಲಭದ ಕೆಲಸ. ಆದರೆ ಮನಸ್ಸಾಕ್ಷಿ ಇರುವ ಬರಹಗಾರರ್ಯಾರು ಆ ಕೆಲಸವನ್ನು ಮಾಡಬಾರದು. ಕದ್ದ ಲೇಖಕರದು ಎಷ್ಟು ತಪ್ಪೋ ಕದ್ದ ಕವಿತೆಯನ್ನು ಪ್ರಕಟಿಸಿದ್ದು ಅಷ್ಟೇ ದೊಡ್ಡ ತಪ್ಪು. ಇನ್ನೊಮ್ಮೆ ಇಂಥಹ ತಪ್ಪುಗಳಾಗದಂತೆ ಸಾಧ್ಯವಾದಷ್ಟು ಎಚ್ಚರಿಕೆ ವಹಿಸಲಾಗುವುದು - ಹಿಂಗ್ಯಾಕೆ. 
ಗೀತಾ ಹೆಗ್ಡೆ.
ಬೀದಿ ಬದಿ ಆಯ್ದ ಹೊಲಿದ ದೊಡ್ಡ ಚೀಲ
ತನಗಿಂತ ದೊಡ್ಡದೆಂಬ ಪರಿವೆ
ಎಂದೂ ಕಂಡಿಲ್ಲ ಅವರಿಗಿಲ್ಲದರ ಚಿಂತೆ.

ರಣ ಹದ್ದಿನ ತೆರದಿ ಬಿಟ್ಟ ಕಣ್ಣೆರಡು
ಬೀದಿ ಬದಿ ಹುಡುಕುತ್ತ ಸಾಗುವರು
ನಾಳಿನ ಆಗು ಹೋಗುಗಳ ಮರೆತು
ದಿಕ್ಕು ದೆಸೆಯಿಲ್ಲದೆ ನಡೆಯುವವರು.

ನಾನೀಗ ಮಾತನಾಡಲೇಬೇಕಿದೆ: ಯಶವಂತ್ ಸಿನ್ಹಾ

ಯಶವಂತ್ ಸಿನ್ಹಾ
ಬಿಜೆಪಿ ಸದಸ್ಯ, ಮಾಜಿ ಹಣಕಾಸು ಸಚಿವ. 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್ 
ನಮ್ಮ ಹಣಕಾಸು ಸಚಿವರು ದೇಶದ ಆರ್ಥಿಕತೆಯನ್ನು ಗಬ್ಬೆಬ್ಬಿಸಿಬಿಟ್ಟಿರುವುದರ ಬಗ್ಗೆ ನಾನು ಈಗಲೂ ಮಾತನಾಡದೇ ಹೋದರೆ ದೇಶದೆಡೆಗಿನ ನನ್ನ ಕರ್ತವ್ಯಕ್ಕೆ ದ್ರೋಹ ಬಗೆದಂತೆ. ನಾನೀಗ ಹೇಳಲೊರಟಿರುವ ವಿಷಯವು ಬಿಜೆಪಿಯ ಬಹಳಷ್ಟು ಜನರ ಅಭಿಪ್ರಾಯವು ಹೌದು, ಆದರವರು ಭೀತಿಯ ಕಾರಣದಿಂದಾಗಿ ಮಾತನಾಡುತ್ತಿಲ್ಲ ಅಷ್ಟೇ.

ಈ ಸರಕಾರದಲ್ಲಿ ಅರುಣ್ ಜೇಟ್ಲಿಯವರನ್ನು ಅತ್ಯುತ್ತಮ ಮಂತ್ರಿ ಎಂದು ಪರಿಗಣಿಸಲಾಗಿದೆ. ೨೦೧೪ರ ಚುನಾವಣೆ ನಡೆಯುವುದಕ್ಕೆ ಮೊದಲೇ ಹೊಸ ಸರ್ಕಾರದಲ್ಲಿ ಅರುಣ್ ಜೇಟ್ಲಿ ಹಣಕಾಸು ಸಚಿವರಾಗುತ್ತಾರೆನ್ನುವುದು ನಿರ್ಧಾರವಾಗಿಬಿಟ್ಟಿತ್ತು. ಅವರು ಅಮೃತಸರದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದು ಅವರ ಮಂತ್ರಿ ಪದವಿಗೆ ಅಡ್ಡಿಯಾಗಲಿಲ್ಲ. ಇದೆ ರೀತಿಯ ಪರಿಸ್ಥಿತಿ ೧೯೯೮ರಲ್ಲೂ ಉಂಟಾಗಿತ್ತು. ಆಗ ಚುನಾವಣೆ ಸೋತಿದ್ದ ಜಸ್ವಂತ್ ಸಿಂಗ್ ಮತ್ತು ಪ್ರಮೋದ್ ಮಹಾಜನ್ ಅಟಲ್ ಬಿಹಾರಿ ವಾಜಪೇಯಿಯವರಿಗೆ ಹತ್ತಿರದವರಾಗಿದ್ದರೂ ಕೂಡ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದರು. ಆದರೆ ಅರುಣ್ ಜೇಟ್ಲಿಯವರ ವಿಷಯದಲ್ಲಿ ಇದಾಗಲಿಲ್ಲ. ಬದಲಿಗೆ ಪ್ರಧಾನ ಮಂತ್ರಿಯವರು ಅರುಣ್ ಜೇಟ್ಲಿಯವರಿಗೆ ಹಣಕಾಸು ಸಚಿವಾಲಯದ ಜೊತೆಗೆ, ಡಿಸ್ ಇನ್ವೆಸ್ಟ್ಮೆಂಟ್, ರಕ್ಷಣೆ ಮತ್ತು ಕಾರ್ಪೊರೇಟ್ ಕಾರುಬಾರಿನ ಸಚಿವಾಲಯವನ್ನೂ ನೀಡಿದರು. ಒಂದೇ ಏಟಿಗೆ ಒಟ್ಟು ನಾಲ್ಕು ಸಚಿವಾಲಯಗಳನ್ನು ಪಡೆದುಕೊಂಡರು. ಈಗಲೂ ಅವರ ಬಳಿ ಮೂರೂ ಖಾತೆಗಳಿವೆ. ನಾನೂ ಕೂಡ ಹಣಕಾಸು ಸಚಿವನಾಗಿದ್ದವನು. ಆ ಸಚಿವಾಲಯದಲ್ಲಿ ಎಷ್ಟು ಶ್ರಮ ಬೀಳಬೇಕೆನ್ನುವುದು ನನಗೆ ಗೊತ್ತಿದೆ. ಹಣಕಾಸು ಸಚಿವಾಲಯ ಸರಿಯಾಗಿ ಕಾರ್ಯನಿರ್ವಹಿಸಲು ಅದರ ಸಚಿವರು ತಮ್ಮೆಲ್ಲ ಗಮನವನ್ನು ಅತ್ತಲೇ ಕೇಂದ್ರೀಕರಿಸಬೇಕಾದ ಅವಶ್ಯಕತೆಯಿದೆ. ಸವಾಲಿನ ಸಮಯದಲ್ಲಿ ಇಲ್ಲಿನದು ೨೪/೭ ಗಿಂತಲೂ ಹೆಚ್ಚಿನ ಕೆಲಸ ಮಾಡಬೇಕಾಗುತ್ತದೆ ಎಂದರದು ಅತಿಶಯೋಕ್ತಿಯೇನಲ್ಲ. ಸಹಜವಾಗಿ, ಜೇಟ್ಲಿಯಂತಹ ಸೂಪರ್ ಮ್ಯಾನ್ ಕೂಡ ಈ ಕಾರ್ಯದಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. 

ಸೆಪ್ಟೆಂ 22, 2017

ಸಾಕಾಗುವುದಿಲ್ಲ ಮೂರು ಗುಂಡುಗಳು!

ಕು.ಸ.ಮಧುಸೂದನ್
ಮೊದಲ ಗುಂಡು ಬಿದ್ದಾಗ
ಅದರ ಶಬ್ದಕ್ಕೆ ಎದೆ ನಡುಗಿತು!

ಎರಡನೆ ಗುಂಡು ಬಿದ್ದಾಗ
ಹೃದಯದಿಂದ ರಕ್ತ ಹೊರಚಿಮ್ಮಿತು!

ಆಗ 27, 2017

ಕೃಷಿ-ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಿಕ್ಷಣಸಂಸ್ಥೆಗಳ ಪ್ರವೇಶ ಬೇಡ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕೃಷಿಕ್ಷೇತ್ರ ತೀವ್ರವಾದ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಸದರಿ ಬಿಕ್ಕಟ್ಟುಗಳಿಗೆ ಕಾರಣವಾದ ಅಂಶಗಳನ್ನು ವೈಜ್ಞಾನಿಕವಾಗಿ ಅದ್ಯಯನ ಮಾಡಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಾದ ಸರಕಾರಗಳು ತಮ್ಮ ಖಾಸಗೀಕರಣದ ನೀತಿಯನ್ನುಕೃಷಿಕ್ಷೇತ್ರಕ್ಕೂ ಅನ್ವಯಿಸುವ ಭರದಲ್ಲಿ, ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಲು ಹೊರಟಿರುವಂತೆ ಕಾಣುತ್ತಿದೆ. ಇದುವರೆಗೂ ಸರಕಾರದ ಉನ್ನತ ಶಿಕ್ಷಣ ಸಂಸ್ಥೆಗಳು ನೀಡುತ್ತಿದ್ದ ಕೃಷಿ ಶಿಕ್ಷಣವನ್ನು ನೀಡುವ ಕಾಲೇಜುಗಳನ್ನು ಪ್ರಾರಂಭಿಸಲು ಖಾಸಗಿ ಕ್ಯಾಪಿಟೇಶನ್ ಕುಳಗಳಿಗೆ ಅನುಮತಿ ನೀಡುವಬಗ್ಗೆ ಚಿಂತನೆ ನಡೆಸುತ್ತಿದೆ. ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣ ಈಗಾಗಲೆ ಬಡವರ ಕೈಗೆಟುಕದಷ್ಟು ದುಬಾರಿಯಾಗಿರುವಾಗ ಬಹುತೇಕ ಗ್ರಾಮೀಣ ಭಾಗದ ರೈತರ ಮಕ್ಕಳು ಕಡಿಮೆವೆಚ್ಚದಲ್ಲಿ ಪಡೆಯುತ್ತಿದ್ದ ಕೃಷಿಸಂಬಂದಿತ ಶಿಕ್ಷಣವೂ ಈಗ ಅದೇ ಸಾಲಿಗೆ ಸೇರುವತ್ತ ಸಾಗಿದೆ.

ಆಗ 16, 2017

ಸ್ಪಷ್ಟ ನಿಲುವೊಂದನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಜಾತ್ಯಾತೀತ ಜನತಾದಳ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಬಿಹಾರದಲ್ಲಿನ ಮಹಾಮೈತ್ರಿಕೂಟದಿಂದ ಹೊರಬಂದ ನಿತೀಶ್ ಕುಮಾರ್ ಬಾಜಪ ನೇತೃತ್ವದ ಎನ್.ಡಿ.ಎ.ಜೊತೆ ಸೇರಿ ಸರಕಾರ ರಚಿಸಿದ ಮೇಲೆ ರಾಷ್ಟ್ರಮಟ್ಟದಲ್ಲಿ ವಿರೋಧಪಕ್ಷಗಳ ಮಹಾಮೈತ್ರಿಕೂಟವೊಂದರ ರಚನೆಯ ಕನಸು ಮೇಲ್ನೋಟಕ್ಕಂತು ಕರಗಿಹೋಗಿದೆ. ಇಂತಹ ಗಾಡಾಂಧಕಾರದಲ್ಲಿ ಮುಳುಗಿರುವ ಕಾಂಗ್ರೇಸ್ಸೇತರ ವಿರೋಧಪಕ್ಷಗಳ ಸ್ಥಿತಿ ಕರುಣಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಕನರ್ಾಟಕದಲ್ಲಿನ ಶ್ರೀ ದೇವೇಗೌಡರ ನೇತೃತ್ವದ 'ಜಾತ್ಯಾತೀತಜನತಾದಳ' ಒಂದೇ ಕನಿಷ್ಠ ನಮ್ಮ ರಾಜ್ಯದ ಮಟ್ಟಗಾದರೂ ಬಾಜಪವನ್ನು ದೃಢವಾಗಿ ನಿಂತು ಎದುರಿಸಬಲ್ಲಂತಹ ಶಕ್ತಿಯನ್ನು ಹೊಂದಿರುವಂತೆ ಕಾಣುತ್ತಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ನಾವು ಉಳಿದ ವಿರೋಧಪಕ್ಷಗಳ ಪರಿಸ್ಥಿತಿಯನ್ನು ವಿಶ್ಲೇಷಿಸಿನೋಡಬೇಕಾಗಿದೆ: