ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
23/09/2016
ಕಿತ್ತೂರನ್ನು ಬ್ರಿಟೀಷ್ ವಸಾಹತುಶಾಹಿಯ ಕೈಗೊಂಬೆ ರಾಜ್ಯವನ್ನಾಗಿ ಉಳಿಸಿಕೊಳ್ಳುವ ಚೆನ್ನಮ್ಮಳ ಹೋರಾಟ, ವಿವಿಧ ಊಳಿಗಮಾನ್ಯ ದೊರೆಗಳ ಪ್ರಕರಣಗಳಲ್ಲಾದಂತೆಯೇ, ಬ್ರಿಟೀಷರೊಂದಿಗೆ ಸಶಸ್ತ್ರ ಕದನಕ್ಕೆ ದಾರಿ ಮಾಡಿತು.
ನಾವೀಗಾಗಲೇ ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದ ಕೊನೆಯ ಅಧ್ಯಾಯದಲ್ಲಿ ಗಮನಿಸಿದಂತೆ, ಕಿತ್ತೂರಿನ ದೇಸಾಯಿ, ಮಲ್ಲಾಸರ್ಜಾರ ಮಗ ಶಿವಲಿಂಗ ರುದ್ರ ಸರ್ಜಾ ಬ್ರಿಟೀಷರ ಸಲುವಾಗಿ ಪೇಶ್ವೆಗಳನ್ನು ತೊರೆದುಬಿಟ್ಟ, 1818ರಲ್ಲಿ. ಮರಾಠ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವ ಹೋರಾಟದಲ್ಲಿ ಅವನು ಬ್ರಿಟೀಷರ ಕೈ ಜೋಡಿಸಿದ. (36) ಈ ಸೇವೆಯನ್ನು ಪರಿಗಣಿಸುತ್ತಾ, ಮುನ್ನೂರ ಐವತ್ತು ಹಳ್ಳಿಗಳಷ್ಟಿದ್ದ ಅವನ ಪ್ರಾಂತ್ಯವನ್ನು ಉಳಿಸಿಕೊಳ್ಳುವ ಅವಧಿಯನ್ನು ಬ್ರಿಟೀಷರು ವಿಸ್ತರಿಸಿದರು, ಮೈಸೂರಿನ ನಂತರ ಕರ್ನಾಟಕದಲ್ಲಿದ್ದ ಅತಿ ದೊಡ್ಡ ಪ್ರಾಂತ್ಯವಿದು. ಮಲ್ಲಸರ್ಜವನ್ನು ಟಿಪ್ಪು ಸುಲ್ತಾನ್ 1785ರಲ್ಲಿ ಸೋಲಿಸಿ, ವಶಪಡಿಸಿಕೊಂಡು ಬಂಧನದಲ್ಲಿಟ್ಟಿದ್ದ. ಅವನ ಸಂಸ್ಥಾನ ಕೊನೆಗೊಂಡಿತ್ತು. ಕಿತ್ತೂರು ದೇಶಗತಿಗಳಿಗೆ, ಇತಿಹಾಸ ಒಂದು ಪೂರ್ಣ ಸುತ್ತು ಹೊಡೆದಿತ್ತು. ಆದರೆ 1787ರಲ್ಲಿ, ಮರಾಠರ ಸಂಚು ಟಿಪ್ಪು ಸುಲ್ತಾನನನ್ನು ಸೋಲಿಸಿದಾಗ, ಮಲ್ಲಸರ್ಜ ಮತ್ತೆ ಸ್ಥಾಪಿತನಾಗಿದ್ದ. ವಿಜಯಿಗಳು ಗಡಿಯಾರದ ಮುಳ್ಳನ್ನು ಮತ್ತೆ ತಿರುಗಿಸಿದ್ದರು ಮತ್ತು ಮಲ್ಲಸರ್ಜನಿಗೆ ಅವನ ಅಧಿಕಾರ ಕ್ಷೇತ್ರವಿದ್ದ ಹನ್ನೊಂದು ಹಳ್ಳಿಗಳನ್ನು ಕಾಣ್ಕೆಯಾಗಿ ನೀಡಿದ್ದರು. (37) 1800ರಲ್ಲಿ, ದೊಂಡಿಯಾ ವಾಗ್ ಕರ್ನಾಟಕದ ಉತ್ತರ ಭಾಗಗಳಲ್ಲಿ ಸಂಚರಿಸುತ್ತಿದ್ದಾಗ, ಕಿತ್ತೂರು ದೇಸಾಯಿಗಳು ದೊಂಡಿಯಾನನ್ನು ಹುಡುಕುತ್ತಿದ್ದ ಬ್ರಿಟೀಷರಿಗೆ ನೂರು ಕುದುರೆಸವಾರರನ್ನು ಮತ್ತು ನೂರು ಕಾಲಾಳು ಸೈನಿಕರನ್ನು ಕೊಟ್ಟರು. ಸಂಗೊಳ್ಳಿಯ ಕೋಟೆಯನ್ನೂ ವಸಾಹತುಶಾಹಿಗಳು ಸೇವೆಗೆ ಮೀಸಲಿಟ್ಟರು. (38) ಮನ್ರೋ ಬಹಿರಂಗಪಡಿಸಿದಂತೆ, ಬ್ರಿಟೀಷರು ಕಳೆದೆರಡು ದಶಕಗಳಿಂದ ದೇಸಾಯಿಗಳನ್ನು ಪೋಷಿಸಿ ಬೆಳೆಸಿದ್ದರು. ಬ್ರಿಟೀಷರ ಉದಾರತನ ಅಂತಿಮವಾಗಿ ಶಿವಲಿಂಗ ರುದ್ರ ಸರ್ಜನನ್ನು ಅವರೆಡೆಗೆ ಬರುವಂತೆ ಮಾಡಿತು ಮತ್ತು ಅವನು ತನ್ನ ಕಡೆಯಿಂದ ಮುನ್ನೂರೈವತ್ತು ಹಳ್ಳಿಗಳನ್ನು ಪಡೆದುಕೊಂಡು, ಪೇಶ್ವೆಗಳ ಸಾಮ್ರಾಜ್ಯದ ದಕ್ಷಿಣಕ್ಕಿರುವ ಪ್ರಮುಖ ಆಸರೆಯಾಗಿದ್ದ.