ಡಾ. ಅಶೋಕ್. ಕೆ. ಆರ್.
ನಾನೂ ಸಾಗರ ಲವ್ ಯು ಲವ್ ಯು ಟೂ ಅಂತೇಳಿಕೊಂಡ ಮೇಲೆ ಬರುತ್ತಿರುವ ಮೊದಲ ನೈಟ್ ಡ್ಯೂಟಿ ಇದು. ಬೆಳಿಗ್ಗೆ ಡ್ಯೂಟಿಯಿದ್ದಾಗ ಆಗೊಮ್ಮೆ ಈಗೊಮ್ಮೆ ಮೆಸೇಜು ಮಾಡಲಷ್ಟೇ ಸಾಧ್ಯವಾಗಿತ್ತು, ಸಾಗರನ ಮನವಿನ್ನೂ ಪೂರ್ಣ ತಿಳಿಯಾಗಿಲ್ಲವೇನೋ ಎಂದೇ ನನಗನ್ನಿಸುತ್ತಿತ್ತು. ಹಂಗೇನಿಲ್ವೇ, ಓದೋದ್ರಲ್ಲಿ ಸ್ವಲ್ಪ ಬ್ಯುಸಿ. ನೀ ಬಿಡುವಾದಾಗ ಫೋನ್ ಮಾಡು ಮಾತಾಡುವ ಅಂತೇಳಿದ್ದ. ಮಾತಿನಲ್ಲಿ ಉದಾಸೀನತೆಯಿರಲಿಲ್ಲವಾದರೂ ಹೊಸತಾಗಿ ಪ್ರೀತಿಗೆ ಬಿದ್ದವರಲ್ಲಿದ್ದ ಉತ್ಸಾಹವೂ ಇರಲಿಲ್ಲ. ಸರಿ ಅವನ ಮನದ ಗೊಂದಲಗಳೂ ಪೂರ್ಣ ತಪ್ಪೇನಲ್ಲವಲ್ಲ. ಎಷ್ಟು ಸಮಯ ಬೇಕೋ ಅಷ್ಟನ್ನು ಆತ ತೆಗೆದುಕೊಳ್ಳಲಿ ಎಂದುಕೊಂಡು ನಾನೂ ಹೆಚ್ಚು ಮೆಸೇಜು ಮಾಡುವುದಕ್ಕೆ ಹೋಗಲಿಲ್ಲ. ಡ್ಯೂಟಿ ಮುಗಿಸಿ ಮನೆಗೆ ಹೋದರೆ ಮನೆ ಕೆಲಸದ ಸುಸ್ತು. ಜೊತೆಗೆ ಅಪ್ಪ ಅಮ್ಮ ಶಶಿ ಒಂದೇ ಸಮ ಫೋನ್ ಮಾಡಿಕೊಂಡು ಏನಂದ್ರು ಏನಂದ್ರು ಒಪ್ತಾರಂತ ಒಪ್ಪಬಹುದು ಅಂತ ನಿನಗನ್ನಿಸುತ್ತ ಅಂತ ಪಟ್ಟು ಬಿಡದೆ ಪ್ರಶ್ನೆ ಕೇಳಿ ಕೇಳಿ ಮತ್ತಷ್ಟು ಸುಸ್ತು ಮಾಡಿಸೋರು.
ರಾತ್ರಿ ಹತ್ತರವರೆಗೆ ರೋಗಿಗಳಿದ್ದರು. ಹತ್ತಕ್ಕೆ ಬಿಡುವಾದಾಗ ಸಾಗರನಿಗೆ ಮೆಸೇಜು ಮಾಡಿದೆ.
'ಏನ್ ಮಾಡ್ತಿದ್ಯೋ'
"ಊಟ ಮುಗಿಸಿ ಸಿಗರೇಟು ಹಚ್ಚಿದ್ದೆ"
'ಅಷ್ಟೊಂದೆಲ್ಲ ಸಿಗರೇಟು ಸೇದಬೇಡ್ವೋ'